ಮಂಗಳವಾರ, ಡಿಸೆಂಬರ್ 27, 2011

ಮುಗಿಯುತ್ತಿರುವ ವರ್ಷಕ್ಕೆ ಬೈಬೈ ಹೇಳುವ ಮುನ್ನ...

ಟಿ. ಜಿ. ಶ್ರೀನಿಧಿ

ಇನ್ನೇನು ನಾಲ್ಕೇ ದಿನ, ೨೦೧೧ ಮುಗಿಸಿ ನಾವೆಲ್ಲ ೨೦೧೨ರ ಹೊಸವರ್ಷವನ್ನು ಸ್ವಾಗತಿಸಲು ಸಜ್ಜಾಗಿದ್ದೇವೆ. ಮುಗಿಯುತ್ತಿರುವ ಈ ವರ್ಷದಲ್ಲಿ ಏನೇನೆಲ್ಲ ಆಗಿದೆ ಎಂದು ನೋಡಲು ಹೊರಟರೆ ಸಾಕಷ್ಟು ದೊಡ್ಡ ಪಟ್ಟಿಯೇ ನಮ್ಮೆದುರು ನಿಲ್ಲುತ್ತದೆ; ವೈಯಕ್ತಿಕ ಸಾಧನೆಗಳು, ರಾಜಕೀಯ ಬದಲಾವಣೆಗಳು, ಆಂದೋಲನಗಳು, ಹೆಸರುಮಾಡಿದ/ಮಾಡದ ಸಿನಿಮಾಗಳು, ಹವಾಮಾನ ಬದಲಾವಣೆ - ಹೀಗೆ ಒಂದಕ್ಕೊಂದು ಸಂಬಂಧವೇ ಇಲ್ಲದ ನೂರೆಂಟು ಸಂಗತಿಗಳ ನೆನಪನ್ನು ಈ ವರ್ಷ ಕಟ್ಟಿಕೊಟ್ಟಿದೆ.

೨೦೧೧ರಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲೂ ಬೇಕಾದಷ್ಟು ಸಾಧನೆಗಳಾದವು, ತಂತ್ರಜ್ಞಾನದ ಸಹಾಯದಿಂದ ಬೇರೆ ಕ್ಷೇತ್ರಗಳಲ್ಲಿ ಆದ ಸಾಧನೆಗಳೂ ಕಡಿಮೆಯೇನಿಲ್ಲ. ೨೦೧೧ಕ್ಕೆ ಬೈಬೈ ಹೇಳುವ ಮುನ್ನ ಈ ವರ್ಷ ತಂತ್ರಜ್ಞಾನ ಜಗತ್ತಿನಲ್ಲಿ ಆದ ಕೆಲವು ಮಹತ್ವದ ಸಂಗತಿಗಳತ್ತ ಇಗೋ ಇಲ್ಲಿದೆ ಒಂದು ಹಿನ್ನೋಟ.

ಸೋಮವಾರ, ಡಿಸೆಂಬರ್ 26, 2011

ಕನ್ನಡದಲ್ಲಿ ವಿಜ್ಞಾನ ಸಂವಹನೆ

ವಿಜ್ಞಾನ-ತಂತ್ರಜ್ಞಾನಗಳ ಅರಿವು ಎಷ್ಟು ಮುಖ್ಯವೋ ನಮಗೆ ಅರ್ಥವಾಗುವ ಭಾಷೆಯಲ್ಲಿ ಅದರ ಸಂವಹನ ಆಗಬೇಕಾದ್ದೂ ಅಷ್ಟೇ ಮುಖ್ಯ. ಈ ಕುರಿತ ಅಪರೂಪದ ಪುಸ್ತಕವೊಂದು ಕಳೆದ ವಾರಾಂತ್ಯ ಬಿಡುಗಡೆಯಾಗಿದೆ. ಉದಯಭಾನು ಉನ್ನತ ಅಧ್ಯಯನ ಕೇಂದ್ರ ಪ್ರಕಟಿಸಿರುವ 'ಕನ್ನಡದಲ್ಲಿ ವಿಜ್ಞಾನ ಸಂವಹನೆ' ಎಂಬ ಈ ಕೃತಿಯ ಸಂಪಾದಕರು ಪ್ರೊ. ಎಚ್ ಆರ್ ರಾಮಕೃಷ್ಣರಾವ್ ಹಾಗೂ ಶ್ರೀ ಟಿ ಆರ್ ಅನಂತರಾಮುರವರು.

ಅವರ ಮಾತುಗಳಲ್ಲೇ ಹೇಳುವುದಾದರೆ "ಪ್ರಸ್ತುತ ಬದುಕಿನ ಎಲ್ಲ ರಂಗವನ್ನೂ ಪ್ರಭಾವಿಸುತ್ತಿರುವ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಸರಿಯಾದ ತಿಳಿವು ಸಮಾಜದ ಎಲ್ಲ ವರ್ಗದವರಿಗೂ ಅನಿವಾರ್ಯವಾಗಿದೆ. ಇದರ ಸಂವಹನೆಗೆ ವಿವಿಧ ವಿಜ್ಞಾನ ಕ್ಷೇತ್ರಗಳಲ್ಲಿ ಅನುಭವ ಪಡೆದಿರುವ ಸಮರ್ಥರು ಬೇಕಾಗುತ್ತದೆ. ಅಂತಹ ಸಂವಹನಕಾರರಿಂದ ರಚಿತವಾಗಿರುವ ಈ ಪ್ರಬಂಧ ಸಂಗ್ರಹ ಮುಂದೆ ವಿಜ್ಞಾನ ಸಾಹಿತ್ಯ ಸಂವಹನಕಾರರಿಗೆ ಈ ಜ್ಞಾನ ಶಾಖೆಯನ್ನು ಯಾವ ದಿಶೆಯಲ್ಲಿ ವಿಸ್ತರಿಸಬೇಕೆಂಬ ರೂಪುರೇಖೆಯನ್ನು ಪ್ರತಿಬಿಂಬಿಸುತ್ತದೆ".

ಮಂಗಳವಾರ, ಡಿಸೆಂಬರ್ 20, 2011

ಐಟಿ ಕ್ರಾಂತಿಯ ಬಟ್ಟೆ ನೇಯ್ದ ಫ್ರಾನ್ಸಿನ ಮಗ್ಗ

ಟಿ ಜಿ ಶ್ರೀನಿಧಿ

ಒಂದಾನೊಂದು ಕಾಲದಲ್ಲಿ, ಇವತ್ತಿಗೆ ಸುಮಾರು ಇನ್ನೂರು ವರ್ಷಗಳಿಗೂ ಹಿಂದೆ, ಫ್ರಾನ್ಸಿನಲ್ಲಿ ಜೋಸೆಫ್ ಜಾಕಾರ್ಡ್ ಎಂಬ ವ್ಯಕ್ತಿಯೊಬ್ಬನಿದ್ದ. ಆತ ಒಂದು ವಿಶಿಷ್ಟ ರೀತಿಯ ಮಗ್ಗವನ್ನು ತಯಾರಿಸಿದ್ದ. ಆ ಮಗ್ಗ ಉದ್ದನೆಯ ದಾರದಲ್ಲಿ ಪೋಣಿಸಿದ್ದ ಮರದ ಪಟ್ಟಿಗಳನ್ನು 'ಓದಿಕೊಂಡು' ಬಟ್ಟೆಯ ವಿನ್ಯಾಸವನ್ನು ರೂಪಿಸಿಕೊಳ್ಳುತ್ತಿತ್ತು. ಅಂದರೆ, ಆ ಪಟ್ಟಿಗಳಲ್ಲಿದ್ದ ರಂಧ್ರಗಳ ಆಧಾರದ ಮೇಲೆ ಯಾವ ಬಣ್ಣದ ದಾರ ಎಲ್ಲಿ ಬರಬೇಕು ಎಲ್ಲಿ ಬರಬಾರದು ಎನ್ನುವುದನ್ನು ಅದು ಅರಿತುಕೊಳ್ಳುತ್ತಿತ್ತು.

ಈ ತಂತ್ರಜ್ಞಾನದ ಸಹಾಯದಿಂದ ಬಟ್ಟೆಯ ನೇಯ್ಗೆ ಬಹಳ ಸುಲಭವಾಯಿತು. ಅಷ್ಟೇ ಅಲ್ಲ, ಬಟ್ಟೆಯನ್ನು ನೇಯುವಾಗ ಕ್ಲಿಷ್ಟ ವಿನ್ಯಾಸಗಳನ್ನು ಅಳವಡಿಸಿಕೊಳ್ಳುವುದೂ ಸಾಧ್ಯವಾಯಿತು - ಈ ತಂತ್ರಜ್ಞಾನ ಬಳಸಿ ಜೋಸೆಫ್ ಜಾಕಾರ್ಡ್ ತನ್ನ ಕೊಠಡಿಯಲ್ಲಿ ಕುಳಿತಿರುವಂತೆ ಚಿತ್ರಿಸಲಾದ ವಿನ್ಯಾಸವನ್ನೇ ರೇಷ್ಮೆ ಬಟ್ಟೆಯಲ್ಲಿ ಮೂಡಿಸಲಾಗಿತ್ತು! ಮಿಲ್ ಮಾಲೀಕರೆಲ್ಲ ಇದರಿಂದ ಬಹಳ ಖುಷಿಯಾದರೇನೋ ಸರಿ, ಆದರೆ ಈ ಆವಿಷ್ಕಾರದಿಂದ ಆವರೆಗೂ ಮನುಷ್ಯರು ಮಾಡುತ್ತಿದ್ದ ಕೆಲಸ ಕಡಿಮೆಯಾಗಿ ಅನೇಕ ಕಾರ್ಮಿಕರು ನಿರುದ್ಯೋಗಿಗಳಾದರು. ಹಲವೆಡೆ ಈ ಮಗ್ಗಗಳನ್ನು ಒಡೆದುಹಾಕಿದ ಘಟನೆಗಳು ನಡೆದವು; ಸ್ವತಃ ಜಾಕಾರ್ಡ್ ಮೇಲೂ ಹಲ್ಲೆಗೆ ಯತ್ನ ನಡೆಯಿತು.

ಸೋಮವಾರ, ಡಿಸೆಂಬರ್ 19, 2011

ಡಿಸೆಂಬರ್ ೨೪,೨೫ರಂದು 'ಕನ್ನಡದಲ್ಲಿ ವಿಜ್ಞಾನದ ಬೆಳವಣಿಗೆ' ವಿಚಾರಗೋಷ್ಠಿ

ಇಜ್ಞಾನ ವಾರ್ತೆ

ಬೆಂಗಳೂರಿನ ಉದಯಭಾನು ಕಲಾಸಂಘ ಈ ವಾರಾಂತ್ಯದಲ್ಲಿ (೨೦೧೧ರ ಡಿಸೆಂಬರ್ ೨೪, ೨೫) 'ಕನ್ನಡದಲ್ಲಿ ವಿಜ್ಞಾನದ ಬೆಳವಣಿಗೆ' ಕುರಿತ ವಿಚಾರಗೋಷ್ಠಿಯನ್ನು ಆಯೋಜಿಸಿದೆ. ಬಸವನಗುಡಿ ನ್ಯಾಷನಲ್ ಕಾಲೇಜಿನ ಡಾ. ಎಚ್. ಎನ್. ಮಲ್ಟೀಮೀಡಿಯಾ ಹಾಲ್‌ನಲ್ಲಿ ಈ ಕಾರ್ಯಕ್ರಮ ಶನಿವಾರ ಬೆಳಿಗ್ಗೆ ೧೦ ಗಂಟೆಗೆ ಪ್ರಾರಂಭವಾಗಲಿದೆ.

ಪ್ರೊ. ಎಚ್. ಆರ್. ರಾಮಕೃಷ್ಣರಾವ್, ಪ್ರೊ. ಎಂ. ಆರ್. ನಾಗರಾಜು, ಡಾ| ಪಿ. ಎಸ್. ಶಂಕರ್, ಡಾ| ಕೆ. ಎನ್. ಗಣೇಶಯ್ಯ, ಶ್ರೀ ಕೊಳ್ಳೇಗಾಲ ಶರ್ಮ, ಶ್ರೀ ಹಾಲ್ದೊಡ್ಡೇರಿ ಸುಧೀಂದ್ರ, ಡಾ| ನಾ. ಸೋಮೇಶ್ವರ ಸೇರಿದಂತೆ ಅನೇಕ ತಜ್ಞರ ಮಾತುಗಳನ್ನು ಕೇಳುವ ಅವಕಾಶ ಈ ಸಂದರ್ಭದಲ್ಲಿ ಒದಗಿಬರಲಿದೆ. ಚರ್ಚೆಯ ಪ್ರವರ್ತನೆಯನ್ನು ಶ್ರೀ ಟಿ. ಆರ್. ಅನಂತರಾಮು ಹಾಗೂ ಶ್ರೀ ನಾಗೇಶ ಹೆಗಡೆಯವರು ಮಾಡಲಿದ್ದಾರೆ. ವಿಚಾರಗೋಷ್ಠಿಯ ಪ್ರಬಂಧಗಳ ಸಂಗ್ರಹವನ್ನು ಪುಸ್ತಕರೂಪದಲ್ಲೂ ಬಿಡುಗಡೆ ಮಾಡಲಾಗುವುದು.

ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಇಲ್ಲಿದೆ.

ಮಂಗಳವಾರ, ಡಿಸೆಂಬರ್ 13, 2011

ತಂತ್ರಜ್ಞಾನ, ಕನ್ನಡ ಮತ್ತು ನಾವು

ಇನ್ನೊಂದು ಸಾಹಿತ್ಯ ಸಮ್ಮೇಳನ ಈಗಷ್ಟೆ ಮುಗಿದಿದೆ. ಆಧುನಿಕ ಜಗತ್ತಿನಲ್ಲಿ ಕನ್ನಡದ ಸ್ಥಿತಿಗತಿಗಳ ಕುರಿತು ಅಲ್ಲಿ ಮಂಡಿಸಲಾದ ಪ್ರಬಂಧದ ಸಂಗ್ರಹರೂಪ ಇಲ್ಲಿದೆ.
ಟಿ. ಜಿ. ಶ್ರೀನಿಧಿ

ತಂತ್ರಜ್ಞಾನ ಮತ್ತು ಕನ್ನಡ ಎಂಬ ಎರಡು ಪದಗಳನ್ನು ಒಟ್ಟಿಗೆ ಕೇಳಿದಾಕ್ಷಣ ಅದು ಕಂಪ್ಯೂಟರಿನಲ್ಲಿ ಕನ್ನಡ ಅಕ್ಷರಗಳನ್ನು ಮೂಡಿಸುವುದರ ಬಗೆಗಷ್ಟೆ ಇರಬೇಕಿಲ್ಲ. ಕನ್ನಡ ಮತ್ತು ತಂತ್ರಜ್ಞಾನದ ಸಂಬಂಧ ಈಗ ಬರಿಯ ಡಿಟಿಪಿ ಮಾಡುವುದಕ್ಕಷ್ಟೆ ಸೀಮಿತವಾಗಿ ಉಳಿದಿಲ್ಲ.

ಅಷ್ಟೇ ಅಲ್ಲ, ಕನ್ನಡ ಮತ್ತು ತಂತ್ರಜ್ಞಾನದ ವಿಷಯ ಬಂದಾಗಲೆಲ್ಲ ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಕುಳಿತುಕೊಳ್ಳುವುದೂ ತಪ್ಪು. ಈ ಕ್ಷೇತ್ರದಲ್ಲಿ ನಾವು ಮಾಡಬಹುದಾದದ್ದೂ ಬೇಕಾದಷ್ಟಿದೆ.

ಯಾಂತ್ರೀಕೃತ ಅನುವಾದ
ವಿಶ್ವವ್ಯಾಪಿ ಜಾಲದಲ್ಲಿ ಓಡಾಡುವಾಗ ನಮ್ಮ ಸುತ್ತ ಮಾಹಿತಿಯ ಮಹಾಪೂರವೇ ಇರುತ್ತದೆ. ಈ ಮಾಹಿತಿ ಇಂಗ್ಲಿಷಿನಲ್ಲೇ ಇರಬೇಕು ಎಂದೇನೂ ಇಲ್ಲ. ಫ್ರೆಂಚ್‌ನಲ್ಲೋ ಜರ್ಮನ್‌ನಲ್ಲೋ ಇರುವ ತಾಣದಲ್ಲೂ ನಮಗೆ ಬೇಕಾದ ಮಾಹಿತಿ ಇರಬಹುದು. ಇಂತಹ ಯಾವುದೇ ಮಾಹಿತಿಯನ್ನು ಆ ಕ್ಷಣದಲ್ಲೇ ನಮಗೆ ಅರ್ಥವಾಗುವ ಭಾಷೆಗೆ ಅನುವಾದಿಸಿಕೊಂಡು ಓದುವ ಸೌಲಭ್ಯ ಬಹಳ ಉಪಯುಕ್ತ.

ಕನ್ನಡಕ್ಕೂ ಈ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ಮತ್ತು ಕನ್ನಡದಿಂದ ಇಂಗ್ಲಿಷ್‌ಗೆ ಪಠ್ಯವನ್ನು ಅನುವಾದಿಸುವ ತಂತ್ರಾಂಶ ಸೇವೆಯನ್ನು ಗೂಗಲ್ ಸಂಸ್ಥೆ ಪರಿಚಯಿಸಿದ್ದು ನಿಮಗೆ ನೆನಪಿರಬಹುದು. ಅನುವಾದದಲ್ಲಿನ ತಪ್ಪುಗಳಿಂದಾಗಿ ಈ ತಂತ್ರಾಂಶ ಮಾಧ್ಯಮಗಳಲ್ಲಿ ಸಾಕಷ್ಟು ಟೀಕೆಗೊಳಗಾದದ್ದೂ ಗೊತ್ತಿರಬಹುದು.

ಇಂತಹ ಯಾಂತ್ರೀಕೃತ ಅನುವಾದಗಳಲ್ಲಿ ತಪ್ಪುಗಳು ಕಾಣಸಿಗುವುದು ಅಪರೂಪವೇನಲ್ಲ. ಹೀಗೆ ತಪ್ಪಾದಾಗ ನಾವು ಆ ತಪ್ಪನ್ನು ಸರಿಪಡಿಸುವುದು ಸಾಧ್ಯ. ಒಮ್ಮೆ ನಾವು ಸರಿಯಾದ ಅನುವಾದ ಹೇಳಿಕೊಟ್ಟೆವೆಂದರೆ ತಂತ್ರಾಂಶ ಅದನ್ನು ತನ್ನ ಸಂಗ್ರಹಕ್ಕೆ ಸೇರಿಸಿಕೊಂಡು ಮಂದೆ ಅದೇ ತಪ್ಪು ಮರುಕಳಿಸದಂತೆ ನೋಡಿಕೊಳ್ಳುತ್ತದೆ. ನಾವೆಲ್ಲ ಇಂತಹ ಸೇವೆಗಳನ್ನು ಆಗಿಂದಾಗ್ಗೆ ಬಳಸುತ್ತ ಅದರಲ್ಲಿರುವ ತಪ್ಪುಗಳನ್ನು ತಿದ್ದಿದರೆ ಅದರ ಅನುವಾದದ ಗುಣಮಟ್ಟ ತಾನಾಗಿಯೇ ಮೇಲೇರುತ್ತದೆ.

ಮಂಗಳವಾರ, ಡಿಸೆಂಬರ್ 6, 2011

ಕೆಮಿಸ್ಟ್ರಿ ಸಂಚಿಕೆ ಬಂದಿದೆ!

೨೦೧೧, ಅಂತಾರಾಷ್ಟ್ರೀಯ ರಸಾಯನ ವಿಜ್ಞಾನ ವರ್ಷ. ಇನ್ನೇನು ಮುಗಿಯುತ್ತಿರುವ ಈ ವರ್ಷದ ನೆನಪಿನಲ್ಲಿ ಇಜ್ಞಾನ ವಿದ್ಯುನ್ಮಾನ ಪತ್ರಿಕೆಯ ರಸಾಯನ ವಿಜ್ಞಾನ ಸಂಚಿಕೆ ಇದೀಗ ನಿಮ್ಮ ಮುಂದಿದೆ. ಈ ಹೊಸ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ.

ಈ ಸಂಚಿಕೆಯೊಡನೆ ಇಜ್ಞಾನ ವಿದ್ಯುನ್ಮಾನ ಪತ್ರಿಕೆಯ ನಾಲ್ಕು ಪ್ರಾಯೋಗಿಕ ಸಂಚಿಕೆಗಳು ಸಂಪೂರ್ಣವಾದವು. ನಮ್ಮ ಪತ್ರಿಕೆ ಮುಂದಿನ ವರ್ಷದಿಂದ ಹೊಸ ರೂಪದಲ್ಲಿ ಮೂಡಿಬರಲಿದೆ.

ಪತ್ರಿಕೆಯ ಹೊಸ ಸಂಚಿಕೆ ೨೦೧೨ರ ಏಪ್ರಿಲ್ ೧ರಂದು ನಿಮ್ಮ ಮುಂದೆ ಬರಲಿದೆ. ಸೀರಿಯಸ್‌ಲಿ!

ಸೋಮವಾರ, ಡಿಸೆಂಬರ್ 5, 2011

ಪುಟಾಣಿಮನುಷ್ಯರ ನ್ಯಾನೋಪ್ರಪಂಚ

ಟಿ. ಜಿ. ಶ್ರೀನಿಧಿ
೨೦೧೧, ಅಂತಾರಾಷ್ಟ್ರೀಯ ರಸಾಯನವಿಜ್ಞಾನ ವರ್ಷ. ವರ್ಷ ಇನ್ನೇನು ಮುಗಿಯುತ್ತ ಬಂದರೂ ಕೆಮಿಸ್ಟ್ರಿ ಬಗ್ಗೆ ಏನೂ ಬರೆದಿಲ್ಲವಲ್ಲ ಅಂತ ಮೊನ್ನೆತಾನೇ ನೆನಪಾಯಿತು. ಹಾಗೆ ಬರೆಯುವುದೇ ಆದರೆ ಕೆಮಿಸ್ಟ್ರಿ ಮತ್ತು ಮಾಹಿತಿ ತಂತ್ರಜ್ಞಾನ ಎರಡಕ್ಕೂ ಸಂಬಂಧಪಟ್ಟ ಯಾವುದಾದರೂ ವಿಷಯವನ್ನೇ ಆಯ್ದುಕೊಳ್ಳೋಣ ಎಂಬ ಯೋಚನೆಯೂ ಬಂತು. ಆಗ ನೆನಪಾದದ್ದೇ ಈ ಕತೆ.
ಶಾಲೆ-ಕಾಲೇಜುಗಳಲ್ಲಿ ವಿಜ್ಞಾನದ ಪಾಠ ಅದೆಷ್ಟೋ ಜನಕ್ಕೆ ಕಬ್ಬಿಣದ ಕಡಲೆ. ರಸಾಯನ ವಿಜ್ಞಾನದ ಅಧ್ಯಯನ ಕೆಲ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ವಿಷಯವಾದರೂ ಬಹುತೇಕರಿಗೆ ಅದು ತಲೆನೋವು ತರುವ ಸಂಗತಿಯೆಂದೇ ಹೇಳಬೇಕು.

ಆದರೆ ಅಣುಗಳೇ ನಿಮ್ಮ ಮುಂದೆ ಬಂದು ಕೆಮಿಸ್ಟ್ರಿ ಪಾಠ ಹೇಳುವಂತಿದ್ದರೆ? ಎಂಥಾ ಮಜ ಅಲ್ಲವೆ?

ಈ ರೋಚಕ ಕನಸನ್ನು ನನಸಾಗಿಸಿದವರು ಅಮೆರಿಕಾದ ರೈಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳು. ಅದೂ ಈಗಲ್ಲ, ಸುಮಾರು ಏಳೆಂಟು ವರ್ಷಗಳಷ್ಟು ಹಿಂದೆಯೇ. 'ನ್ಯಾನೋಕಿಡ್'ಗಳೆಂಬ ಪುಟಾಣಿ ವಿಸ್ಮಯಗಳನ್ನು ಸೃಷ್ಟಿಸಿದ ಅವರು ಅವನ್ನು ವಿಜ್ಞಾನ ಸಂವಹನದಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದರು. ಈ ಪ್ರಯತ್ನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂದಿಗೂ ವಿಜ್ಞಾನ ಸಂವಹನದ ಒಂದು ಉತ್ತಮ ಉದಾಹರಣೆಯಾಗಿ ನಿಂತಿದೆ.

ನಿಮಗೆ ಗೊತ್ತಿರಬಹುದು, 'ನ್ಯಾನೋ' ಅನ್ನುವುದು ಅತಿಸೂಕ್ಷ್ಮ ವಸ್ತುಗಳ ವಿವರಣೆಯಲ್ಲಿ ಬಳಸಲಾಗುವ ಪದ. ಸ್ಪಷ್ಟವಾಗಿ ಹೇಳಬೇಕಾದರೆ 'ನ್ಯಾನೋ' ಪದ ೧೦−೯ ಎಂಬ ಸಂಖ್ಯೆಯನ್ನು ಗುರುತಿಸಲು ಬಳಕೆಯಾಗುತ್ತದೆ. ಗ್ರೀಕ್ ಭಾಷೆಯಲ್ಲಿ ನ್ಯಾನೋಸ್ ಎಂದರೆ ಕುಬ್ಜ ಎಂದರ್ಥ.

ಈ ನ್ಯಾನೋಕಿಡ್‌ಗಳೂ ಕುಬ್ಜರೇ - ಅಷ್ಟಿಷ್ಟಲ್ಲ, ಬರಿಗಣ್ಣಿಗೆ ಕಾಣಿಸದಷ್ಟು!

ಮಂಗಳವಾರ, ನವೆಂಬರ್ 29, 2011

ಎತ್ತ ಹೊರಟಿದೆ ಗೂಗಲ್ ಪ್ಲಸ್?

ಟಿ. ಜಿ. ಶ್ರೀನಿಧಿ

ಕಳೆದ ಜೂನ್ ತಿಂಗಳಿನಲ್ಲಿ ಗೂಗಲ್ ಪ್ಲಸ್ ಲೋಕಾರ್ಪಣೆಯಾದಾಗ ಮಾಧ್ಯಮಗಳಲ್ಲೆಲ್ಲ ಅದೇ ಸುದ್ದಿ ಹರಿದಾಡುತ್ತಿತ್ತು. ಸಮಾಜ ಜಾಲಗಳನ್ನು ಸೃಷ್ಟಿಸುವ ಪ್ರಯತ್ನದಲ್ಲಿ ಪದೇ ಪದೇ ಏಟುತಿಂದಿದ್ದ ಗೂಗಲ್ ಈ ಬಾರಿ ಹೊಸತೇನನ್ನು ಕೊಡುತ್ತದೋ ನೋಡೋಣ ಎಂಬ ನಿರೀಕ್ಷೆ ಎಲ್ಲರಲ್ಲೂ ಇತ್ತು.

ಹೀಗೆ ಕಾಯುತ್ತಿದ್ದವರಿಗೆ ಗೂಗಲ್ ಪ್ಲಸ್ ನಿರಾಸೆಯನ್ನೇನೂ ಮಾಡಲಿಲ್ಲ. ಅನೇಕ ಉತ್ತಮ ಸೌಲಭ್ಯಗಳೊಡನೆ ಬಂದ ಈ ಉತ್ಪನ್ನ ನೋಡಿ "ಇದೇ ನೋಡಿ ಫೇಸ್‌ಬುಕ್‌ಗೆ ಪರ್ಯಾಯ" ಅಂದವರು ಅದೆಷ್ಟೋ ಜನ.

ಪರಿಚಯವಾದ ಹದಿನಾರೇ ದಿನಗಳಲ್ಲಿ ಒಂದು ಕೋಟಿ ಬಳಕೆದಾರರನ್ನು ಸಂಪಾದಿಸಿದ ಗೂಗಲ್ ಪ್ಲಸ್ ಸದಸ್ಯರ ಸಂಖ್ಯೆ ನೂರು ದಿನಗಳೊಳಗೆ ನಾಲ್ಕು ಕೋಟಿ ಮುಟ್ಟಿತು. ಇಂಥದ್ದೊಂದು ಸಾಧನೆಯನ್ನು ಈವರೆಗೆ ಯಾವ ಜಾಲತಾಣವೂ ಮಾಡಿರಲಿಲ್ಲ. ಅಷ್ಟೇ ಏಕೆ, ಸಮಾಜ ಜಾಲಗಳ ಲೋಕದಲ್ಲಿ ಅಗ್ರಗಣ್ಯ ತಾಣಗಳೆಂದು ಗುರುತಿಸಿಕೊಳ್ಳುವ ಫೇಸ್‌ಬುಕ್, ಟ್ವೀಟರ್‌ಗಳೆಲ್ಲ ಒಂದು ಕೋಟಿ ಸದಸ್ಯರ ಸಂಖ್ಯೆ ತಲುಪಲು ಎರಡು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡಿದ್ದವು.

ಆದರೆ ಗೂಗಲ್ ಪ್ಲಸ್ ಬಗೆಗೆ ಸೃಷ್ಟಿಯಾದ ಕುತೂಹಲ ಹೆಚ್ಚು ಸಮಯ ಉಳಿದುಕೊಳ್ಳಲಿಲ್ಲ. ಇದರಲ್ಲಿ ಏನಿದೆ ನೋಡೋಣ ಎಂದು ಗೂಗಲ್ ಪ್ಲಸ್‌ನೊಳಗೆ ಇಣುಕಿದವರಲ್ಲಿ ಅನೇಕರು ಮರಳಿ ಫೇಸ್‌ಬುಕ್ ಅನ್ನೇ ಲೈಕ್ ಮಾಡುತ್ತಿದ್ದಾರೆ; ಟ್ವೀಟರಿನ ಟ್ವೀಟುಗಳನ್ನೇ ಕೇಳುತ್ತಿದ್ದಾರೆ.

ಮಂಗಳವಾರ, ನವೆಂಬರ್ 22, 2011

ಥಾಯ್‌ಲ್ಯಾಂಡ್‌ನಲ್ಲಿ ಮಳೆ, ಐಟಿ ಜಗತ್ತಿಗೆ ಜ್ವರ!

ಟಿ. ಜಿ. ಶ್ರೀನಿಧಿ

ಥಾಯ್‌ಲ್ಯಾಂಡ್‌ನಲ್ಲಿ ಮಳೆಯ ಹಾವಳಿ ವಿಪರೀತವಾಗಿ ಅಲ್ಲಿ ವ್ಯಾಪಕ ಸಮಸ್ಯೆ ಸೃಷ್ಟಿಯಾಗಿರುವ ಸುದ್ದಿ ಈಚೆಗೆ ಮಾಧ್ಯಮಗಳಲ್ಲೆಲ್ಲ ಕಾಣಿಸಿಕೊಳ್ಳುತ್ತಿದೆ. ಮೊನ್ನೆ ಬೆಳಿಗ್ಗೆಯೂ ಪೇಪರಿನಲ್ಲಿ ಈ ಸುದ್ದಿ ಓದಿದ್ದೆ. ಅದೇ ದಿನ ಮಧ್ಯಾಹ್ನ ಕಂಪ್ಯೂಟರ್ ಬಿಡಿಭಾಗಗಳ ವಿತರಕನಾದ ನನ್ನ ಗೆಳೆಯ ಚೇತನ್‌ಗೆ ಕರೆಮಾಡಿದ್ದೆ; ನನ್ನ ಪಿ.ಸಿ.ಗೊಂದು ಹೊಸ ಹಾರ್ಡ್‌ಡಿಸ್ಕ್ ಬೇಕು ಕಣಪ್ಪ ಅಂದೆ.

"ಥಾಯ್‌ಲ್ಯಾಂಡ್‌ನಲ್ಲಿ ಮಳೆ ಜಾಸ್ತಿಯಾಗಿ ತುಂಬಾ ತೊಂದರೆಯಾಗಿದೆ" ಅಂತ ಉತ್ತರ ಬಂತು. ಇದೇನಪ್ಪ ಇವನು ನನ್ನ ಕಂಪ್ಯೂಟರ್‌ಗೆ ಹಾರ್ಡ್‌ಡಿಸ್ಕ್ ಬೇಕು ಅಂದರೆ ಥಾಯ್‌ಲ್ಯಾಂಡ್‌ನಲ್ಲಿ ಮಳೆ ಅಂತಾನಲ್ಲ ಅಂತ ಒಂದು ನಿಮಿಷ ಗೊಂದಲವಾಯಿತು. ಅದಕ್ಕೂ ಇದಕ್ಕೂ ಏನಪ್ಪ ಸಂಬಂಧ ಅಂತ ಕೇಳಿದಾಗಲೇ ಗೊತ್ತಾದದ್ದು - ಥಾಯ್‌ಲ್ಯಾಂಡ್ ಮಳೆಯ ಪರಿಣಾಮವಾಗಿ ಹಾರ್ಡ್‌ಡಿಸ್ಕ್‌ಗಳ ಬೆಲೆ ವಿಪರೀತವಾಗಿ ಏರಿರುವ ವಿಷಯ!

ಪ್ರವಾಹವೋ ಬರಗಾಲವೋ ಬಂದಾಗ ಆಹಾರ ಧಾನ್ಯಗಳ ಉತ್ಪಾದನೆ - ಪೂರೈಕೆಯಲ್ಲಿ ವ್ಯತ್ಯಯವಾಗುವುದು, ಮಾರುಕಟ್ಟೆಯಲ್ಲಿ ಬೆಲೆ ಜಾಸ್ತಿಯಾಗುವುದು - ಇವೆಲ್ಲ ನಮಗೆ ಗೊತ್ತಿರುವ ವಿಷಯ. ಆದರೆ ಥಾಯ್‌ಲ್ಯಾಂಡ್‌ನಲ್ಲಿ ಮಳೆ ಬಂದರೆ ಹಾರ್ಡ್‌ಡಿಸ್ಕ್ ಬೆಲೆ ಯಾಕೆ ಜಾಸ್ತಿಯಾಗಬೇಕು?

ಮಂಗಳವಾರ, ನವೆಂಬರ್ 15, 2011

ಮನೆಯೇ ಆಫೀಸು!

ಟಿ. ಜಿ. ಶ್ರೀನಿಧಿ
ನೆನಪಿಡಿ - ಈ ಲೇಖನದಲ್ಲಿ ಪ್ರಸ್ತಾಪಿಸಿರುವ ವಿವರಗಳು ಪೂರ್ಣಕಾಲಿಕ ಉದ್ಯೋಗದಲ್ಲಿರುವವರಿಗೆ ಮನೆಯಿಂದಲೂ ಕೆಲಸಮಾಡಲು ಸಂಸ್ಥೆಗಳು ಒದಗಿಸುವ ಸೌಲಭ್ಯದ ಕುರಿತು ಮಾತ್ರ. ಪತ್ರಿಕೆಯಲ್ಲೋ ಅಂತರಜಾಲದಲ್ಲೋ ಮನೆಯಿಂದಲೇ ಕೆಲಸಮಾಡುವ ಬಗೆಗೆ ಜಾಹೀರಾತು ಕಂಡರೆ ಆ ನಿಟ್ಟಿನಲ್ಲಿ ಮುಂದುವರೆಯುವ ಮುನ್ನ ಅದರ ಸತ್ಯಾಸತ್ಯತೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ.
ನನ್ನ ಮಿತ್ರ ಬೆಂಗಳೂರಿನ ಸಾಫ್ಟ್‌ವೇರ್ ಸಂಸ್ಥೆಯೊಂದರಲ್ಲಿ ಉದ್ಯೋಗಿ. ಶನಿವಾರ ಭಾನುವಾರದ ವೀಕೆಂಡು ಹೋಗಲಿ, ವಾರದ ಮಧ್ಯೆ ಫೋನುಮಾಡಿ ಎಲ್ಲಿದ್ದೀಯೋ ಅಂದರೆ ಹತ್ತರಲ್ಲಿ ಎಂಟು ಸಲ ಮನೆಯಲ್ಲಿದ್ದೀನಿ ಅಂತಲೋ ಮೈಸೂರಲ್ಲಿದ್ದೀನಿ ಅಂತಲೋ ಉತ್ತರ ಬರುತ್ತದೆ. ಆಫೀಸಿನಲ್ಲಿದ್ದೀನಿ ಅನ್ನುವ ಉತ್ತರ ತಿಂಗಳಿಗೋ ಎರಡು ತಿಂಗಳಿಗೋ ಒಮ್ಮೆಯಾದರೂ ಬಂದರೆ ಅದೇ ವಿಶೇಷ. ಅವನ ಮದುವೆಯ ಸಿದ್ಧತೆಯಾಗುತ್ತಿದ್ದ ಸಂದರ್ಭದಲ್ಲಿ ಅವನ ಭಾವಿ ಅತ್ತೆ-ಮಾವನಿಗೆ ಅವನು ನಿಜವಾಗಿಯೂ ಕೆಲಸದಲ್ಲಿದ್ದಾನೋ ಇಲ್ಲವೋ ಅನ್ನುವ ಸಂಶಯ ಬಂದಿತ್ತಂತೆ!

ಈವರೆಗೆ ಕೊಟ್ಟಿರುವ ವಿವರಣೆ ಕೇಳಿ ನಿಮಗೂ ಅದೇ ಸಂಶಯ ಬಂದಿದ್ದರೆ ಅದರಲ್ಲೂ ತಪ್ಪೇನಿಲ್ಲ ಬಿಡಿ. ಇನ್ನು ನನ್ನ ಮಿತ್ರನಿಗಂತೂ ಇದೇ ಪ್ರಶ್ನೆ ಪದೇ ಪದೆ ಎದುರಾಗುತ್ತಲೇ ಇರುತ್ತದೆ. "ನೀನು ಸಾಫ್ಟ್‌ವೇರ್ ಕಂಪನೀಲಿ ಕೆಲಸ ಮಾಡ್ತೀನಿ ಅಂತೀಯ, ಆಫೀಸಿಗೆ ಹೋಗಿದ್ದನ್ನೇ ನೋಡಿಲ್ಲ ಅದೇನು ಕೆಲಸ ನಿಂದು?" ಅಂತ ಅದೆಷ್ಟೋ ಜನ ಅವನನ್ನು ಕೇಳಿದ್ದಾರೆ.

ಅವನು ಅಷ್ಟೆಲ್ಲ ಪ್ರಶ್ನೆಗಳನ್ನು ಎದುರಿಸುವಂತೆ ಮಾಡುತ್ತಿರುವುದು 'ವರ್ಕ್ ಫ್ರಮ್ ಹೋಮ್' ಎಂಬ ಪರಿಕಲ್ಪನೆ.

ಮಂಗಳವಾರ, ನವೆಂಬರ್ 8, 2011

ಲೈಟ್ರೋ ಜಾದೂ!

ಟಿ. ಜಿ. ಶ್ರೀನಿಧಿ

ಡಿಜಿಟಲ್ ಕ್ಯಾಮೆರಾ ಬಂದ ಮೇಲೆ ಫೋಟೋಗ್ರಫಿ ಅದೆಷ್ಟು ಸುಲಭವಾಗಿದೆಯಲ್ಲ! ಬೇರೆಬೇರೆ ರೀತಿಯ ಚಿತ್ರಗಳನ್ನು ತೆಗೆಯಲು ಹತ್ತಾರು ಸುಲಭ ಆಯ್ಕೆಗಳು, ಸ್ವಯಂಚಾಲಿತ ಆಯ್ಕೆ ಬೇಡ ಎನ್ನುವುದಾದರೆ ಮ್ಯಾನ್ಯುಯಲ್ ಸೆಟ್ಟಿಂಗುಗಳು, ಚಿತ್ರದ ಗುಣಮಟ್ಟ ಹೇಗಿರಬೇಕು ಎಂದು ತೀರ್ಮಾನಿಸುವ ಸ್ವಾತಂತ್ರ್ಯ, ಹೈ ಡೆಫನಿಷನ್ ವೀಡಿಯೋ ಚಿತ್ರೀಕರಿಸುವ ಸೌಕರ್ಯ, ದೂರದೂರದ ದೃಶ್ಯಗಳನ್ನೂ ಕಣ್ಣೆದುರಿಗೆ ತಂದುನಿಲ್ಲಿಸುವ ಮೆಗಾಜೂಮ್ - ಹೀಗೆ ಆಧುನಿಕ ಕ್ಯಾಮೆರಾಗಳಲ್ಲಿರುವ ವೈಶಿಷ್ಟ್ಯಗಳ ಪಟ್ಟಿಗೆ ಕೊನೆಯೇ ಇಲ್ಲ.

ಕ್ಯಾಮೆರಾಗಳ ವೈಶಿಷ್ಟ್ಯ ಮಾತ್ರವಲ್ಲ, ಅವುಗಳ ವೈವಿಧ್ಯವೂ ಕಡಿಮೆಯೇನಲ್ಲ. ಮೊಬೈಲಿನಲ್ಲಿ, ಟ್ಯಾಬ್ಲೆಟ್ ಗಣಕಗಳಲ್ಲಿ, ಲ್ಯಾಪ್‌ಟಾಪಿನಲ್ಲಿ, ಪೆನ್ನಿನಲ್ಲಿ, ಕೊನೆಗೆ ಅಂಗಿಯ ಗುಂಡಿಯಲ್ಲೂ ಅಡಗಿ ಕೂರಬಲ್ಲ ಕ್ಯಾಮೆರಾಗಳಿವೆ.

ಆದರೆ ಕ್ಯಾಮೆರಾಗಳಲ್ಲಿ ಅದೇನೇ ವೈಶಿಷ್ಟ್ಯ-ವೈವಿಧ್ಯ ಇದ್ದರೂ ಒಂದು ವಿಷಯ ಮಾತ್ರ ಎಲ್ಲ ಬಗೆಯ ಕ್ಯಾಮೆರಾಗಳನ್ನೂ ಸಮಾನವಾಗಿ ಕಾಡುತ್ತದೆ. ಆ ವಿಷಯವೇ ಫೋಕಸ್.

ಬಾಲ್ಕನಿ ಕೈದೋಟದಲ್ಲಿ ಅರಳಿರುವ ಹೂವಿನ ಚಿತ್ರ ತೆಗೆಯಲು ಹೋದಾಗ ಆ ಹೂವಿಗಿಂತ ಸ್ಪಷ್ಟವಾಗಿ ಪಕ್ಕದಲ್ಲಿ ಒಣಗುತ್ತಿರುವ ಒರೆಸುವ ಬಟ್ಟೆ ಕಾಣುತ್ತಿರುತ್ತದೆ. ಯಾವುದೋ ಪ್ರವಾಸಿ ತಾಣದಲ್ಲಿ ಪ್ರೇಯಸಿಯ ಚಿತ್ರ ಕ್ಲಿಕ್ಕಿಸಿದ್ದೇನೆ ಎಂದು ನೀವು ಅಂದುಕೊಂಡರೆ ನಿಮ್ಮ ಕ್ಯಾಮೆರಾ ಅವಳ ಹಿಂದಿರುವ ಅಜ್ಜಿಯ ಕಡೆ ಹೆಚ್ಚಿನ ಗಮನ ಕೊಟ್ಟಿರುತ್ತದೆ. ಇನ್ನು ಕೆರೆ ದಡದಲ್ಲಿರುವ ಮರದ ಬೊಡ್ಡೆಯ ಮೇಲೆ ಕುಳಿತು ಬಿಸಿಲು ಕಾಯಿಸುತ್ತಿರುವ ಬೆಳ್ಳಕ್ಕಿಯ ಚಿತ್ರ ತೆಗೆಯಲು ಹೋದಿರೋ, ಅನುಮಾನವೇ ಬೇಡ, ಅತ್ಯಂತ ಸ್ಪಷ್ಟವಾಗಿ ಬಂದಿರುತ್ತದೆ - ಮರದ ಬೊಡ್ಡೆ!

ಮಂಗಳವಾರ, ನವೆಂಬರ್ 1, 2011

ಇಬ್ಬರು ದಿಗ್ಗಜರ ನೆನಪಿನಲ್ಲಿ...

ಕಳೆದೊಂದು ತಿಂಗಳಲ್ಲಿ ಗಣಕ ವಿಜ್ಞಾನ ಕ್ಷೇತ್ರ ಇಬ್ಬರು ದಿಗ್ಗಜರನ್ನು ಕಳೆದುಕೊಂಡಿದೆ. ಈ ಬರೆಹ ಅವರಿಬ್ಬರ ನೆನಪಿಗೆ ಸಮರ್ಪಿತ.
ಸಿ ಸೃಷ್ಟಿಕರ್ತ ಇನ್ನಿಲ್ಲ
ಡಾ. ಡೆನ್ನಿಸ್ ರಿಚಿ - ವಿಶ್ವದೆಲ್ಲೆಡೆಯ ಗಣಕ ವಿಜ್ಞಾನ ವಿದ್ಯಾರ್ಥಿಗಳಿಗೆಲ್ಲ ಇದು ಚಿರಪರಿಚಿತ ಹೆಸರು. ಬಹುತೇಕ ವಿದ್ಯಾರ್ಥಿಗಳೆಲ್ಲ ಮೊದಲಿಗೆ ಕಲಿಯುವ 'ಸಿ' ಪ್ರೋಗ್ರಾಮಿಂಗ್ ಭಾಷೆಯನ್ನು ರೂಪಿಸುವುದರಲ್ಲಿ ಅವರ ಕೊಡುಗೆ ಅಪಾರವಾದದ್ದು. ಸಿ ಬಗ್ಗೆ ಅವರು ಬರೆದ ಪುಸ್ತಕವಂತೂ ಎಲ್ಲ ವಿದ್ಯಾರ್ಥಿಗಳ ಕೈಯಲ್ಲೂ ಕಾಣಸಿಗುತ್ತದೆ! ಅಷ್ಟೇ ಅಲ್ಲ, ಅತ್ಯಂತ ಜನಪ್ರಿಯ ಕಾರ್ಯಾಚರಣ ವ್ಯವಸ್ಥೆ 'ಯುನಿಕ್ಸ್' ಸೃಷ್ಟಿಸಿದ ತಂಡದಲ್ಲೂ ಡೆನ್ನಿಸ್ ಮಹತ್ವದ ಪಾತ್ರ ವಹಿಸಿದ್ದರು.

ತಮ್ಮ ಜೀವಮಾನದುದ್ದಕ್ಕೂ ಪ್ರಚಾರದಿಂದ ದೂರವೇ ಉಳಿದಿದ್ದ ಅವರ ನಿಧನದ ಸುದ್ದಿ ಹೊರಜಗತ್ತಿಗೆ ಗೊತ್ತಾದದ್ದೂ ತಡವಾಗಿಯೇ ಎನ್ನುವುದು ವಿಪರ್ಯಾಸ. ಅಕ್ಟೋಬರ್ ೧೩ರಂದು ಅವರ ಮಾಜಿ ಸಹೋದ್ಯೋಗಿಯೊಬ್ಬರು ಗೂಗಲ್ ಪ್ಲಸ್‌ನಲ್ಲಿ ಸೇರಿಸಿದ ಸಂದೇಶದಿಂದಾಗಿ ಈ ಸುದ್ದಿ ಹರಡುವಷ್ಟರಲ್ಲಿ ಡೆನ್ನಿಸ್ ನಿಧನರಾಗಿ ದಿನಗಳೇ ಕಳೆದಿದ್ದವು.

ಮಂಗಳವಾರ, ಅಕ್ಟೋಬರ್ 25, 2011

ಗೂಗಲ್ ಬಜ್‌ಗೆ ಬೈ ಬೈ!

ಟಿ. ಜಿ. ಶ್ರೀನಿಧಿ

"ಜನರ ಬದುಕನ್ನೇ ಬದಲಿಸುವಂತಹ, ಅವರು ದಿನಕ್ಕೆ ಎರಡು ಮೂರು ಬಾರಿಯಾದರೂ ಬಳಸುವಂತಹ ಉತ್ಪನ್ನಗಳನ್ನು ರೂಪಿಸುವುದು ನಮ್ಮ ಆಶಯ. ಈ ಪ್ರಯತ್ನದಲ್ಲಿ ಯಶಸ್ವಿಯಾಗಲು ಏಕಾಗ್ರತೆ ಬೇಕು; ನಾವು ಏನೆಲ್ಲ ಕೆಲಸ ಮಾಡುತ್ತೇವೆ ಎಂದು ಯೋಚಿಸಿಕೊಳ್ಳುವಂತೆಯೇ ನಾವು ಏನೆಲ್ಲ ಮಾಡುವುದಿಲ್ಲ ಎನ್ನುವುದನ್ನೂ ಗುರುತಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ನಮ್ಮ ಕೆಲ ಉತ್ಪನ್ನಗಳನ್ನು ಮುಚ್ಚಲು ನಿರ್ಧರಿಸಿದ್ದೇವೆ"

ಸರಿಸುಮಾರು ಇದೇ ಅರ್ಥ ಹೊಂದಿದ್ದ ಹೇಳಿಕೆ ಕಂಡುಬಂದದ್ದು ಈಗ ಕೆಲದಿನಗಳ ಹಿಂದೆ, ಗೂಗಲ್ ಸಂಸ್ಥೆಯ ಅಧಿಕೃತ ಬ್ಲಾಗ್‌ನಲ್ಲಿ. ಕಳೆದ ಸಪ್ಟೆಂಬರ್ ತಿಂಗಳಿನಲ್ಲಿ ಪ್ರಾರಂಭವಾದ 'ಮನೆ ಕ್ಲೀನಿಂಗ್' ಕೆಲಸದ ಮುಂದುವರೆದ ಭಾಗವಾಗಿ ಈ ಹೇಳಿಕೆ ಹೊರಬಿದ್ದಿದೆ.

ಸೆಪ್ಟೆಂಬರ್‌ನ ಘೋಷಣೆಯಲ್ಲಿ ಸಾಕಷ್ಟು ಉತ್ಪನ್ನಗಳ ನಿವೃತ್ತಿ ಪ್ರಸ್ತಾಪ ಇತ್ತಾದರೂ ಅವುಗಳಲ್ಲಿ ಹೆಸರಾಂತ ಎನ್ನಬಹುದಾದ ಯಾವ ಉತ್ಪನ್ನವೂ ಇಲ್ಲದ್ದರಿಂದ ಅದು ಅಷ್ಟೇನೂ ಸುದ್ದಿಯಾಗಿರಲಿಲ್ಲ. ಸೋಶಿಯಲ್ ಸರ್ಚ್ ಕ್ಷೇತ್ರದ ಮಹತ್ವದ ತಾಣವಾಗಲಿದೆ ಎಂಬ ಹಣೆಪಟ್ಟಿ ಹೊತ್ತಿದ್ದ 'ಆರ್ಡ್‌ವರ್ಕ್' ಹಾಗೂ ಕೆಲ ವರ್ಷಗಳ ಹಿಂದೆ ನಮ್ಮಲ್ಲಿ ಅನೇಕರು ಬಳಸಿದ್ದ 'ಗೂಗಲ್ ಡೆಸ್ಕ್‌ಟಾಪ್' - ಇವು ಆಗ ನಿವೃತ್ತಿಯತ್ತ ಮುಖಮಾಡಿದ ಉತ್ಪನ್ನಗಳಲ್ಲಿ ಪ್ರಮುಖವಾದವು.

ಅಕ್ಟೋಬರ್ ೧೪ರ ಘೋಷಣೆಯಲ್ಲಿ 'ಕೋಡ್ ಸರ್ಚ್', 'ಜೈಕು' ಮುಂತಾದ ಹೆಸರುಗಳಿವೆ. ಆದರೆ ಇವುಗಳ ಜೊತೆ ಒಂದು ಪರಿಚಿತ ಹೆಸರೂ ಸೇರಿಕೊಂಡಿರುವುದು ಈ ಬಾರಿಯ ಘೋಷಣೆ ಕೊಂಚಮಟ್ಟಿಗೆ ಸುದ್ದಿಮಾಡಲು ಕಾರಣವಾಗಿದೆ.

ಗುರುವಾರ, ಅಕ್ಟೋಬರ್ 20, 2011

ತಿನ್ನಲಾಗದ ಬಿಸ್ಕತ್ತು, ನುಂಗಲಾಗದ ಟ್ಯಾಬ್ಲೆಟ್ಟು


ಟಿ. ಜಿ, ಶ್ರೀನಿಧಿಯವರ ಹೊಸ ಪುಸ್ತಕ 'ತಿನ್ನಲಾಗದ ಬಿಸ್ಕತ್ತು, ನುಂಗಲಾಗದ ಟ್ಯಾಬ್ಲೆಟ್ಟು' ಬರುವ ನವೆಂಬರ್ ೬ರ ಸಂಜೆ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ನಿಮಗೆ ಆದರದ ಸ್ವಾಗತ. ಹಿರಿಯ ಭಾಷಾತಜ್ಞರಾದ ಪ್ರೊ. ಜಿ. ವೆಂಕಟಸುಬ್ಬಯ್ಯ ಹಾಗೂ ಖ್ಯಾತ ಚಲನಚಿತ್ರ ನಿರ್ದೇಶಕ ಶ್ರೀ ಗುರುಪ್ರಸಾದ್ ಅಂದು ನಮ್ಮೊಡನೆ ಇರಲಿದ್ದಾರೆ.

ಪುಸ್ತಕದ ಮುಂಗಡ ಬುಕಿಂಗ್ www.akrutibooks.com ತಾಣದಲ್ಲಿ ಪ್ರಾರಂಭವಾಗಿದೆ. ಬುಕಿಂಗ್ ದೃಢೀಕರಣ ಇಮೇಲ್‌ನ ಮುದ್ರಿತ ಪ್ರತಿ ತಂದು ಕಾರ್ಯಕ್ರಮದ ದಿನ ನಿಮ್ಮ ಪ್ರತಿಯನ್ನು ಪಡೆದುಕೊಳ್ಳಬಹುದು. ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗದವರ ಪ್ರತಿಗಳನ್ನು ಅಂಚೆ/ಕೊರಿಯರ್ ಮೂಲಕ ಕಳುಹಿಸಿಕೊಡಲಾಗುವುದು. ಅಂಚೆ ವೆಚ್ಚ ನಮ್ಮದೇ!

ಸರಳ ಶೈಲಿಯ ಬರೆವಣಿಗೆ ಜೊತೆಗೆ ಜಿ. ಎಸ್. ನಾಗನಾಥ್ ಅವರ ಕಾರ್ಟೂನುಗಳು ಈ ಪುಸ್ತಕವನ್ನು ಇನ್ನಷ್ಟು ಆಕರ್ಷಕಗೊಳಿಸಿವೆ.

ಬುಧವಾರ, ಅಕ್ಟೋಬರ್ 19, 2011

ಕೈಕೊಟ್ಟ ಬ್ಲ್ಯಾಕ್‌ಬೆರಿ, ಕಂಗೆಟ್ಟ ಬಳಕೆದಾರ

ಟಿ. ಜಿ. ಶ್ರೀನಿಧಿ

ಕಳೆದ ವಾರದಲ್ಲಿ ಬೆಂಗಳೂರಿನ ಬಿಸಿನೆಸ್‌ಮನ್ ಚೇತನ್‌ಗೆ ಕೈಕಾಲು ಕಟ್ಟಿಹಾಕಿದ ಅನುಭವ. ಕೆಲಸದ ಮೇಲೆ ಹೊರಗಡೆ ಹೋಗಿದ್ದಾಗ ಆಫೀಸಿನಿಂದ ಇಮೇಲ್ ಇಲ್ಲ, ಗ್ರಾಹಕರಿಗೆ ಅರ್ಜೆಂಟಾಗಿ ಕೊಟೇಶನ್ ಕಳುಹಿಸೋಣ ಎಂದರೆ ಅದೂ ಆಗುತ್ತಿಲ್ಲ, ಯಾವ ವೆಬ್‌ಸೈಟೂ ತೆರೆಯಲಾಗುತ್ತಿಲ್ಲ, ಅದೆಲ್ಲ ಹೋಗಲಿ ಎಂದರೆ ಗರ್ಲ್‌ಫ್ರೆಂಡ್ ಜೊತೆ ಚಾಟ್ ಮಾಡುವಂತೆಯೂ ಇಲ್ಲ!

ಇಷ್ಟೆಲ್ಲ ಫಜೀತಿಗೆ ಕಾರಣವಾಗಿದ್ದು ಅವರ ಬ್ಲ್ಯಾಕ್‌ಬೆರಿ.

ದಿನದ ಬಹುಪಾಲು ಸಮಯ ಕೆಲಸದ ಮೇಲೆ ಬಿಜಿಯಾಗಿರುವ ಚೇತನ್ ಒಂದು ಕಡೆ ಕುಳಿತುಕೊಳ್ಳುವುದೇ ಅಪರೂಪ. ಆದರೆ ಅವರ ಕೆಲಸಕ್ಕೆ ಸದಾಕಾಲ ಅಂತರಜಾಲ ಸಂಪರ್ಕ, ಇಮೇಲ್ ವ್ಯವಸ್ಥೆ ಎಲ್ಲವೂ ಬೇಕೇಬೇಕು. ಹೋದ ಕಡೆಗೆಲ್ಲ ಲ್ಯಾಪ್‌ಟಾಪ್ ತೆಗೆದುಕೊಂಡು ಹೋಗುವುದೂ ಸಮಸ್ಯೆಯೇ. ಹಾಗಾಗಿಯೇ ಅವರು ಬ್ಲ್ಯಾಕ್‌ಬೆರಿ ಬಳಸುತ್ತಾರೆ. ಎಸ್ಸೆಮ್ಮೆಸ್ ಕಳುಹಿಸಿದಷ್ಟೇ ಸುಲಭವಾಗಿ ಇಮೇಲ್ ಕಳುಹಿಸಲು ಅನುವುಮಾಡಿಕೊಡುವ ಬ್ಲ್ಯಾಕ್‌ಬೆರಿಯಲ್ಲಿ ಅಂತರಜಾಲಾಟ ಕೂಡ ಸುಲಭ. ಬ್ಲ್ಯಾಕ್‌ಬೆರಿ ಮೆಸೆಂಜರ್ (ಬಿಬಿಎಂ) ಬಳಸಿ ಗರ್ಲ್‌ಫ್ರೆಂಡ್ ಜೊತೆ ಹರಟೆಹೊಡೆಯುವುದೂ ಸುಲಭವೇ! ಬರಿಯ ಚಾಟಿಂಗ್ ಅಷ್ಟೇ ಅಲ್ಲ, ಚಿತ್ರ-ವಿಡಿಯೋ-ಧ್ವನಿರೂಪದ ಕಡತಗಳನ್ನೂ ಕಳುಹಿಸಬಹುದು.

ಆದರೆ ಹೋದವಾರ ಆದದ್ದೇ ಬೇರೆ.

ಶುಕ್ರವಾರ, ಅಕ್ಟೋಬರ್ 14, 2011

ಗ್ಯಾಡ್ಜೆಟ್ ಲೋಕ

ಡಾ. ಯು. ಬಿ. ಪವನಜ
ಈ ಬಾರಿಯ ಪ್ರಜಾವಾಣಿ ದೀಪಾವಳಿ ವಿಶೇಷಾಂಕದ ಜೊತೆಗೆ ಉಚಿತ ಕೊಡುಗೆಯಾಗಿ 'ಗ್ಯಾಡ್ಜೆಟ್ ಲೋಕ' ಎಂಬ ಪುಸ್ತಕ ಇದೆ. ಅದರಿಂದ ಆಯ್ದ ಕೆಲ ಸಾಲುಗಳು ಇಲ್ಲಿವೆ.
ಲೇಖಕರು: ಡಾ. ಯು. ಬಿ. ಪವನಜ
ಪಠ್ಯ ನೆರವು: ಟಿ. ಜಿ. ಶ್ರೀನಿಧಿ ಹಾಗೂ ಪ್ರಜಾವಾಣಿ ಸಂಪಾದಕೀಯ ತಂಡ

ಸುಮಾರು ಸಾಯಂಕಾಲ ೬:೩೦ರ ಸಮಯ. ಬೆಂಗಳೂರು ತಲುಪಲು ಇನ್ನೂ ಒಂದೂವರೆ ಗಂಟೆ ಸಮಯವಿತ್ತು. ಆ ಸಮಯಕ್ಕೆ ಸರಿಯಾಗಿ ಬೆಂಗಳೂರಿನ ದಿನಪತ್ರಿಕೆಯೊಂದರಿಂದ ಫೋನು ಬಂತು. ಪ್ರೂಫ್ ಕಳುಹಿಸಿದ್ದೇವೆ, ಪರಿಶೀಲಿಸಿ, ಎಂದು. ಆ ಪತ್ರಿಕೆಯಲ್ಲಿ ಪ್ರತಿ ಸೋಮವಾರ ನನ್ನ ಅಂಕಣ ಪ್ರಕಟವಾಗುತ್ತದೆ. ಸಾಮಾನ್ಯವಾಗಿ ನಾನು ಪ್ರತಿ ಸಂಚಿಕೆಯಲ್ಲೂ ಒಂದೆರಡು ಜಾಲತಾಣಗಳ ವಿಳಾಸ ನೀಡುತ್ತೇನೆ. ಈ ವಿಳಾಸಗಳಲ್ಲಿ, ಸ್ವಲ್ಪ ಹೆಚ್ಚು ಕಡಿಮೆಯಾದರೂ ಆ ಜಾಲತಾಣವನ್ನು ತೆರೆಯಲು ಪ್ರಯತ್ನಿಸುವವರಿಗೆ ತೊಂದರೆಯಾಗುತ್ತದೆ. ಬೇರೆ ವಿಷಯದಲ್ಲಿ ಸ್ವಲ್ಪ ಎಡವಟ್ಟಾದರೂ ಓದುಗರು ಅದು ಮುದ್ರಾರಾಕ್ಷಸನ ಹಾವಳಿ ಎಂದುಕೊಂಡು ಮನಸ್ಸಿನಲ್ಲೇ ತಪ್ಪನ್ನು ತಿದ್ದಿಕೊಂಡು ಓದುತ್ತಾರೆ. ಆದರೆ ಜಾಲತಾಣದ ವಿಳಾಸದಲ್ಲಿ ತಪ್ಪು ಆಗಲೇ ಬಾರದು. ಅದುದರಿಂದ ನಾನು ಮುಂಚಿತವಾಗಿಯೇ ಲೇಖನದ ಕರಡನ್ನು ಪಿಡಿಎಫ್ ರೂಪದಲ್ಲಿ ಇಮೈಲ್ ಮೂಲಕ ತರಿಸಿಕೊಳ್ಳುತ್ತೇನೆ. ಪತ್ರಿಕೆಯವರಿಗೆ ಆದಷ್ಟು ಬೇಗನೆ ನಾನು ಅವರು ಕಳುಹಿಸಿದ ಕರಡನ್ನು ಓದಿ ಅದು ಸರಿಯಿದೆಯೇ ಎಂದು ತಿಳಿಸಬೇಕಿತ್ತು. ಅದರೆ ನಾನು ಬೆಂಗಳೂರು ತಲುಪಲು ಇನ್ನೂ ಒಂದೂವರೆ ಗಂಟೆ ಸಮಯವಿತ್ತು. ಮತ್ತೆ ನನ್ನ ಸ್ಮಾರ್ಟ್‌ಫೋನ್ ಹೊರಬಂತು. ಅದರಲ್ಲಿ ಇಮೈಲ್ ಮೂಲಕ ಬಂದ ಕರಡು ಪಿಡಿಎಫ್ ಫೈಲನ್ನು ಡೌನ್‌ಲೋಡ್ ಮಾಡಿಕೊಂಡೆ. ಆ ಫೋನಿನಲ್ಲೇ ಇರುವ ತಂತ್ರಾಂಶ ಬಳಸಿ ಪಿಡಿಎಫ್ ಕಡತವನ್ನು ತೆರೆದು ಓದಿದೆ. ಅದರಲ್ಲಿ ನೀಡಿದ ಜಾಲತಾಣಗಳ ವಿಳಾಸ ಸರಿಯಿದೆಯೇ ಎಂದು ಪರಿಶೀಲಿಸಲೂ ಮತ್ತೆ ಅದೇ ಫೋನಿನಲ್ಲಿರುವ ಜಾಲತಾಣ ವೀಕ್ಷಕ ತಂತ್ರಾಂಶದ ಬಳಕೆ ಮಾಡಿದೆ. ಇಮೈಲ್ ಮೂಲಕವೇ ಉತ್ತರವನ್ನೂ ನೀಡಿದೆ.

ಗುರುವಾರ, ಅಕ್ಟೋಬರ್ 13, 2011

ಮರ್ಫಿ ಲಾ: ಏಕೆ ಎಲ್ಲವೂ ಉಲ್ಟಾಪಲ್ಟ?

"If anything can go wrong, it will."

ಮರ್ಫಿ ಲಾ ಹೆಸರನ್ನು ಕೇಳದವರು ಬೇಕಾದಷ್ಟು ಜನ ಇರಬಹುದು. ಆದರೆ ಅದರ ಅನುಭವವಾಗದವರು ಇರಲಿಕ್ಕಿಲ್ಲವೇನೋ.

ನಾಲ್ಕಾರು ಕ್ಯೂ‌ಗಳಿದ್ದ ಕಡೆ ನಾವು ನಿಂತ ಕ್ಯೂ ಮಾತ್ರ ಎಷ್ಟು ಹೊತ್ತಿಗೂ ಮುಂದಕ್ಕೆ ಹೋಗುವುದೇ ಇಲ್ಲ, ಕೈಗೇನೋ ಕೊಳೆ ಮೆತ್ತಿಕೊಂಡಾಗಲೇ ಮೂಗಿನ ತುದಿ ಕೆರೆಯಲು ಶುರುವಾಗುತ್ತದೆ... ಹೀಗೆ ಮರ್ಫಿಯ ನಿಯಮ ಬೇಕಾದಷ್ಟು ರೀತಿಯಲ್ಲಿ ನಮ್ಮ ಅನುಭವಕ್ಕೆ ಬಂದಿರುತ್ತದೆ.

ಈ ಮರ್ಫಿ ಲಾ ಬಗ್ಗೆ ಚೆಂದದ ಪುಸ್ತಕವೊಂದು ಇದೀಗ ಕನ್ನಡದಲ್ಲೂ ಬಂದಿದೆ.

ಮರ್ಫಿ ಲಾ: ಏಕೆ ಎಲ್ಲವೂ ಉಲ್ಟಾಪಲ್ಟ?
ಲೇಖಕರು: ಶ್ರೀ ಟಿ. ಆರ್. ಅನಂತರಾಮು
ಪ್ರಕಾಶಕರು: ಅಂಕಿತ ಪುಸ್ತಕ
ಮೊದಲ ಆವೃತ್ತಿ: ೨೦೧೧
ಬೆಲೆ: ರೂ. ೭೦

ಮಂಗಳವಾರ, ಅಕ್ಟೋಬರ್ 11, 2011

'ಸಿರಿ' ಬಂದ ಸಮಯ

ಟಿ. ಜಿ. ಶ್ರೀನಿಧಿ


ಕಳೆದ ವಾರದಲ್ಲಿ ಆಪಲ್ ಸಂಸ್ಥೆ ಸತತವಾಗಿ ಸುದ್ದಿಯಲ್ಲಿತ್ತು. ವಾರದ ಶುರುವಿನಲ್ಲಿ ಇದಕ್ಕೆ ಕಾರಣವಾದದ್ದು ಐಫೋನ್ ೫ರ ನಿರೀಕ್ಷೆ. ಕಳೆದ ಮಂಗಳವಾರದ "ಲೆಟ್ಸ್ ಟಾಕ್ ಐಫೋನ್" ಕಾರ್ಯಕ್ರಮದಲ್ಲಿ ಐಫೋನ್‌ನ ಈ ಹೊಸ ಅವತಾರದ ಪರಿಚಯವಾಗಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು.

ಐಫೋನ್ ೫ ಹೇಗಿರಬಹುದು, ಅದರಲ್ಲಿ ಆಪಲ್ ಏನೇನು ಹೊಸ ವೈಶಿಷ್ಟ್ಯಗಳನ್ನು ಸೇರಿಸಿರಬಹುದು ಎಂಬ ಪ್ರಶ್ನೆಗಳು ಎಲ್ಲ ದಿಕ್ಕುಗಳಿಂದಲೂ ಕೇಳಿಬಂದು ಸಾಕಷ್ಟು ಆಸಕ್ತಿ ಸೃಷ್ಟಿಯಾಗಿತ್ತು. ಸ್ಟೀವ್ ಜಾಬ್ಸ್ ನಿವೃತ್ತಿಯ ನಂತರ ಆಪಲ್‌ನ ನೇತೃತ್ವ ವಹಿಸಿಕೊಂಡಿರುವ ಟಿಮ್ ಕುಕ್ ಈ ಕಾರ್ಯಕ್ರಮವನ್ನು ಹೇಗೆ ನಡೆಸಿಕೊಡಬಹುದು ಎನ್ನುವ ಕುತೂಹಲವೂ ಇತ್ತು. ಕಾರ್ಯಕ್ರಮಕ್ಕೆ ಸ್ಟೀವ್ ಜಾಬ್ಸ್ ಬಂದರೂ ಬರಬಹುದು ಎಂಬ ವದಂತಿ ಬಿಬಿಸಿಯಲ್ಲೂ ಕಾಣಿಸಿಕೊಂಡಿತ್ತು!

ಆದರೆ ಕಾರ್ಯಕ್ರಮ ಶುರುವಾಗಿ ಸ್ವಲ್ಪಹೊತ್ತಿನಲ್ಲೇ ಕುತೂಹಲವೆಲ್ಲ ತಣ್ಣಗಾಗಿಹೋಯಿತು. ಏಕೆಂದರೆ ಅಲ್ಲಿ ಐಫೋನ್ ೫ರ ಸುದ್ದಿಯೇ ಇರಲಿಲ್ಲ!

ಬುಧವಾರ, ಅಕ್ಟೋಬರ್ 5, 2011

ವಿಜ್ಞಾನ ಸಂವಹನ ಸಂಚಿಕೆ ಬಂದಿದೆ!

ಇಜ್ಞಾನ ವಿದ್ಯುನ್ಮಾನ ಪತ್ರಿಕೆಯ 'ವಿಜ್ಞಾನ ಸಂವಹನ ಸಂಚಿಕೆ' ಇದೀಗ ಹೊರಬಂದಿದೆ. ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಇಜ್ಞಾನ ವಿದ್ಯುನ್ಮಾನ ಪತ್ರಿಕೆಯ ಕುರಿತು ನಿಮ್ಮ ಅನಿಸಿಕೆಗಳನ್ನು ತಿಳಿಯುವ ಕುತೂಹಲ ನಮಗಿದೆ. ದಯಮಾಡಿ ಕಮೆಂಟಿಸಿ!

ಈ ಸಂಚಿಕೆಯ ಸಂಪಾದನೆಯಲ್ಲಿ ನೆರವುನೀಡಿ, ಅದರ ವಿನ್ಯಾಸದ ಜವಾಬ್ದಾರಿಯನ್ನೂ ಹೊತ್ತ ಶ್ರೀ ಬೇಳೂರು ಸುದರ್ಶನರಿಗೆ ಕೃತಜ್ಞತೆಗಳು.

ಮಂಗಳವಾರ, ಅಕ್ಟೋಬರ್ 4, 2011

ಟ್ಯಾಬ್ಲೆಟ್ ಲೋಕದಲ್ಲೊಂದು ಹೊಸ ಕಿಚ್ಚು

ಟಿ. ಜಿ. ಶ್ರೀನಿಧಿ

ಸ್ಯಾಮ್‌ಸಂಗ್ ಗೆಲಾಕ್ಸಿ ಟ್ಯಾಬ್, ಬ್ಲ್ಯಾಕ್‌ಬೆರಿ ಪ್ಲೇಬುಕ್, ಮೋಟರೋಲಾ ಕ್ಸೂಮ್, ಡೆಲ್ ಸ್ಟ್ರೀಕ್ - ಒಂದರ ಹಿಂದೊಂದರಂತೆ ಹೊಸಹೊಸ ಟ್ಯಾಬ್ಲೆಟ್ ಗಣಕಗಳು ಮಾರುಕಟ್ಟೆಗೆ ಬರುತ್ತಲೇ ಇದ್ದರೂ ಟ್ಯಾಬ್ಲೆಟ್ ಲೋಕದಲ್ಲಿ ಆಪಲ್ ಐಟ್ಯಾಬ್‌ನ ಆಧಿಪತ್ಯ ಬಹುತೇಕ ಅಬಾಧಿತವಾಗಿಯೇ ಇದೆ. ಈ ವರ್ಷದ ಅಂತ್ಯಕ್ಕೂ ವಿಶ್ವದ ಟ್ಯಾಬ್ಲೆಟ್ ಮಾರುಕಟ್ಟೆಯ ಮುಕ್ಕಾಲು ಭಾಗ ಆಪಲ್ ಹಿಡಿತದಲ್ಲೇ ಮುಂದುವರೆಯಲಿದೆ ಎಂಬ ಸುದ್ದಿ ಇತ್ತೀಚೆಗಷ್ಟೆ ಕೇಳಿಬಂದಿತ್ತಲ್ಲ!

ಆದರೆ ಕಳೆದ ವರ್ಷಾಂತ್ಯಕ್ಕೆ ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿನ ಆಪಲ್ ಪಾಲು ಇದಕ್ಕಿಂತ ಶೇಕಡಾ ಹತ್ತರಷ್ಟು ಜಾಸ್ತಿಯಿತ್ತು ಎನ್ನುವುದು ಗಮನಾರ್ಹ. ಅಷ್ಟೇ ಅಲ್ಲ, ಈಗಷ್ಟೇ ಬೆಳೆಯುತ್ತಿರುವ ಕೆಲ ಮಾರುಕಟ್ಟೆಗಳಲ್ಲಿ (ವಿಶೇಷವಾಗಿ ನಮ್ಮ ದೇಶದಲ್ಲಿ) ಅಗ್ರಸ್ಥಾನ ತಲುಪಲು ಆಪಲ್ ಐಟ್ಯಾಬ್‌ಗೆ ಸಾಧ್ಯವಾಗಿಲ್ಲ ಎಂಬ ಸುದ್ದಿ ಕೂಡ ಇದೆ.

ಇಂತಹ ಸಂದರ್ಭದಲ್ಲಿ ಅಮೆಜಾನ್ ಡಾಟ್ ಕಾಮ್‌ನ ಹೊಸ ಉತ್ಪನ್ನ 'ಕಿಂಡ್ಲ್ ಫೈರ್' ಅನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಅಷ್ಟೇ ಅಲ್ಲ, ಈವರೆಗೂ ಬ್ರ್ಯಾಂಡ್ ನೇಮ್ ಹಾಗೂ ಟ್ಯಾಬ್ಲೆಟ್‌ನಲ್ಲಿರುವ ಸೌಲಭ್ಯಗಳ ಆಧಾರದ ಮೇಲೆ ಸ್ಪರ್ಧೆ ನಡೆಯುತ್ತಿದ್ದ ಟ್ಯಾಬ್ಲೆಟ್ ಪ್ರಪಂಚದಲ್ಲಿ ಕಿಂಡ್ಲ್ ಫೈರ್ ಪ್ರವೇಶದಿಂದಾಗಿ ದರಸಮರವೂ ಶುರುವಾಗಿದೆ!

ಶುಕ್ರವಾರ, ಸೆಪ್ಟೆಂಬರ್ 30, 2011

ಇಜ್ಞಾನ ವಿಶೇಷ: ಜೀವನಶೈಲಿ ಮತ್ತು ಆರೋಗ್ಯ

ಡಾ. ಪಿ.ಎಸ್. ಶಂಕರ್

ಇಜ್ಞಾನದ ಓದುಗರಿಗಾಗಿ ಈ ವಿಶೇಷ ಲೇಖನ ನೀಡಿರುವ ಡಾ| ಪಿ. ಎಸ್. ಶಂಕರ್ ಹೆಸರಾಂತ ವೈದ್ಯರು ಹಾಗೂ ವೈದ್ಯಕೀಯ ಲೇಖಕರು. ಗುಲಬರ್ಗಾದ ಎಂ ಆರ್ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕರಾಗಿ ಸೇವೆಸಲ್ಲಿಸುತ್ತಿರುವ ಶ್ರೀಯುತರು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸದಸ್ಯರು ಹಾಗೂ 'ವಿಜ್ಞಾನ ಲೋಕ' ಪತ್ರಿಕೆಯ ಸಂಪಾದಕರೂ ಹೌದು.

ಆರೋಗ್ಯ ಪ್ರತಿಯೊಬ್ಬ ವ್ಯಕ್ತಿಯ ದೈಹಿಕ, ಮಾನಸಿಕ, ಸಾಮಾಜಿಕ ಬೌದ್ಧಿಕ ಮತ್ತು ಆಧ್ಯಾತ್ಮಿಕ ಸುಸ್ಥಿತಿಯಾಗಿದೆ. ಆರೋಗ್ಯ ನಮ್ಮ ಎಲ್ಲ ಸಾಮಾಜಿಕ ಗುಣಧರ್ಮಗಳಿಗೆ ಮತ್ತು ಜೀವನದ ಸುಖ-ಸಂತೋಷಕ್ಕೆ ಬುನಾದಿಯಾಗಿದೆ. ಆರೋಗ್ಯ ಕೇವಲ ನಿರೋಗಿಯಾಗಿರುವುದಾಗಲೀ ಇಲ್ಲವೆ ದೌರ್ಬಲ್ಯವನ್ನು ಹೊಂದಿರುವುದಿಲ್ಲವಾಗಲೀ ಅಲ್ಲ.

ಆರೋಗ್ಯ - ಅನಾರೋಗ್ಯ, ರೋಗ-ನಿರೋಗ ಒಟ್ಟಿಗೆ ಸಾಗುವ ಸ್ಥಿತಿಗಳು. ಅವುಗಳನ್ನು ಬೇರ್ಪಡಿಸುವ ತಾಣವಾವುದೂ ಇಲ್ಲ. ನಾವು ಸದಾ ಆರೋಗ್ಯ - ಅನಾರೋಗ್ಯದ ನಡುವೆ ಬದುಕು ನಡೆಸುತ್ತಿದ್ದೇವೆ. ಈ ಸ್ಥಿತಿಗಳನ್ನು ತೋರಿಸುವ ರೇಖೆಯಲ್ಲಿ ಅತ್ಯಂತ ಕೆಳಗೆ ಗೋಚರಿಸುವುದು ಸಾವು ಮತ್ತು ಆ ರೇಖೆಯಲ್ಲಿ ಅತ್ಯಂತ ಉನ್ನತ ಸ್ಥಾನದಲ್ಲಿರುವುದು ಆರೋಗ್ಯ. ಹೀಗೆ ಅರೋಗ ಅಲೆಯಂತೆ ಆ ರೇಖೆಯ ಮೇಲೆ ಕೆಳಗೆ ಸಾಗುತ್ತಿದ್ದು ಅವುಗಳ ಬೇರೆ ಬೇರೆ ಮಟ್ಟ ವ್ಯಕ್ತಿಯ ಆರೋಗ್ಯ ಸ್ಥಿತಿಯಲ್ಲಿ ತೋರಿಬರುತ್ತಿರುವ ಬದಲಾವಣೆಗಳನ್ನು ಪ್ರತಿಫಲಿಸುತ್ತದೆ. ವ್ಯಕ್ತಿ ನಿರೋಗವನ್ನು ಆಯ್ದುಕೊಳ್ಳಬೇಕೇ ವಿನಃ ರೋಗವನ್ನಲ್ಲ.

ಹೀಗಾಗಿ ಆರೋಗ್ಯವೆಂಬುದು ಸ್ಥಾಯಿಯಲ್ಲ. ಅದು ನಿರಂತರವಾಗಿ ಬದಲುಗೊಳ್ಳುತ್ತರುವ ಸ್ಥಿತಿ ಇಂದು ತೋರಿಬರುವ ಆರೋಗ್ಯ ನಾಳೆ ಇರಲಿಕ್ಕಿಲ್ಲ. ನಾಡಿದ್ದು ಅದು ಮತ್ತೆ ಬದಲಾವಣೆಯನ್ನು ತೋರಿಸಬಹುದು. ನಾವು ಬದುಕಿರುವಷ್ಟು ಕಾಲ ಆರೋಗ್ಯದಿಂದ ಬದುಕಿರಬೇಕಾಗಿದೆ.

ಮಂಗಳವಾರ, ಸೆಪ್ಟೆಂಬರ್ 27, 2011

ಕಿರಿಯರ ಸಮಾಜಜಾಲಗಳು

ಟಿ. ಜಿ. ಶ್ರೀನಿಧಿ

ತಂತ್ರಜ್ಞಾನ ಎಂದತಕ್ಷಣ ಅದನ್ನು ಯುವಜನತೆಗೆ ಸಂಬಂಧಪಟ್ಟ ವಿಷಯ ಎನ್ನುವಂತೆ ನೋಡುವ ಪರಿಪಾಠವೇ ಜಾಸ್ತಿ. ಜಾಲಲೋಕದ ವಿಷಯ ಬಂದಾಗಲಂತೂ ಈ ಅಭಿಪ್ರಾಯ ಇನ್ನೂ ವ್ಯಾಪಕವಾಗಿದೆ. ಸೋಶಿಯಲ್ ನೆಟ್‌ವರ್ಕ್ ಅಥವಾ ಸಮಾಜ ಜಾಲಗಳನ್ನೇ ತೆಗೆದುಕೊಳ್ಳಿ; ಇದೆಲ್ಲ ನೀವು ಯುವಕರು ಬಳಸಿಕೊಳ್ರಪ್ಪ, ನಮಗೆ ಇದೊಂದೂ ಅರ್ಥವಾಗಲ್ಲ ಎನ್ನುವ ಅನೇಕ ಜನ ಕಾಣಸಿಗುತ್ತಾರೆ.

ಆದರೆ ಈಚಿನ ವರ್ಷಗಳಲ್ಲಿ ಸಮಾಜ ಜಾಲಗಳ ಜನಪ್ರಿಯತೆ ಅದೆಷ್ಟರ ಮಟ್ಟಿಗೆ ಹೆಚ್ಚಿದೆ ಎಂದರೆ ಚಿಕ್ಕ ಮಕ್ಕಳಿಂದ ಹಿಡಿದು ಅವರ ಅಜ್ಜ-ಅಜ್ಜಿಯರವರೆಗೆ ಎಲ್ಲ ವಯಸ್ಸಿನವರೂ ಸಮಾಜ ಜಾಲಗಳಲ್ಲಿ ಕಾಣಸಿಗುತ್ತಿದ್ದಾರೆ.

ಅಜ್ಜ-ಅಜ್ಜಿಯರು ವಿಶ್ವವ್ಯಾಪಿ ಜಾಲದತ್ತ ಮುಖಮಾಡಿದರೆ ಒಳ್ಳೆಯದೇ ಆಯಿತು ಬಿಡಿ; ಆದರೆ ಚಿಕ್ಕ ಮಕ್ಕಳೂ ಟ್ವೀಟರ್, ಫೇಸ್‌ಬುಕ್, ಮೈಸ್ಪೇಸ್ ಇತ್ಯಾದಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರಲ್ಲ!

ಮಂಗಳವಾರ, ಸೆಪ್ಟೆಂಬರ್ 20, 2011

ಇದು ಕ್ಯೂಆರ್ ಕೋಡ್

ಟಿ. ಜಿ. ಶ್ರೀನಿಧಿ

ಈಚೆಗೆ ಅನೇಕ ಜಾಹೀರಾತುಗಳಲ್ಲಿ, ಜಾಲತಾಣಗಳಲ್ಲಿ ಚಿತ್ರವಿಚಿತ್ರ ವಿನ್ಯಾಸದ ಕಪ್ಪನೆಯ ಚೌಕಗಳು ಕಾಣಿಸಿಕೊಳ್ಳುತ್ತಿರುವುದನ್ನು ನೀವು ಗಮನಿಸಿರಬಹುದು; ಇಂತಹ ಚೌಕಗಳ ಪಕ್ಕದಲ್ಲೇ ಪ್ರಕಟವಾಗುವ "ಈ ಕ್ಯೂಆರ್ ಸಂಕೇತವನ್ನು ಸ್ಕ್ಯಾನ್ ಮಾಡಿ" ಎಂಬ ಸಂದೇಶವನ್ನೂ ನೋಡಿರಬಹುದು. ಇದೆಂತಹ ಸಂಕೇತ? ಇದನ್ನು ಸ್ಕ್ಯಾನ್ ಮಾಡುವುದು ಹೇಗೆ? ಸ್ಕ್ಯಾನ್ ಮಾಡಿದಾಗ ಏನಾಗುತ್ತದೆ? - ಇಂತಹ ಅನೇಕ ಪ್ರಶ್ನೆಗಳೂ ನಿಮ್ಮ ಮನಸ್ಸಿಗೆ ಬಂದಿರಬಹುದು.

ಹೌದು, ಈ ಕ್ಯೂಆರ್ ಕೋಡ್ ಅಂದರೇನು? ನೋಡೋಣ ಬನ್ನಿ.

ಮಂಗಳವಾರ, ಸೆಪ್ಟೆಂಬರ್ 13, 2011

ಹಳೆಯ ಗಣಕದ ಹಳತಾಗದ ನೆನಪು

ಟಿ. ಜಿ. ಶ್ರೀನಿಧಿ

'ಫೋರ್ಡ್ ಮಾಡೆಲ್ ಟಿ' ಹೆಸರು ಕೇಳಿದ್ದೀರಾ? ಆಟೊಮೊಬೈಲ್ ಕ್ಷೇತ್ರದ ಚಿತ್ರಣವನ್ನು ಸಂಪೂರ್ಣವಾಗಿ ಬದಲಿಸಿದ ಕಾರು ಅದು. "ಕಾರುಗಳೆಂದರೆ ಐಷಾರಾಮಿ ವಸ್ತುಗಳು, ಅವು ಏನಿದ್ದರೂ ಶ್ರೀಮಂತರಿಗೆ ಮಾತ್ರ ಮೀಸಲು" ಎನ್ನುವ ಪರಿಸ್ಥಿತಿಯಿದ್ದ ಕಾಲದಲ್ಲಿ 'ಫೋರ್ಡ್ ಮಾಡೆಲ್ ಟಿ' ಕಾರು ಜನಸಾಮಾನ್ಯರಿಗೂ ಎಟುಕುವ ಬೆಲೆಯಲ್ಲಿ ಮಾರುಕಟ್ಟೆಗೆ ಬಂತು. ಕಾರುಗಳನ್ನು ಮಧ್ಯಮವರ್ಗದ ಜನತೆಯ ನಿಲುಕಿಗೂ ತಂದದ್ದು ಈ ಕಾರಿನ ಸಾಧನೆ.

ಹೀಗೆ ಯಾವುದೇ ಕ್ಷೇತ್ರ ತೆಗೆದುಕೊಂಡರೂ ಅದರಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದ ಕೆಲ ಘಟನೆಗಳು ಇತಿಹಾಸದಲ್ಲಿ ಕಾಣಸಿಗುತ್ತವೆ.

ವೈಯಕ್ತಿಕ ಗಣಕಗಳನ್ನು (ಪರ್ಸನಲ್ ಕಂಪ್ಯೂಟರ್; ಪಿಸಿ) ಸಾಮಾನ್ಯ ಜನರಿಗೂ ಎಟುಕುವಂತೆ ಮಾಡಿದ ಕಮಡೋರ್ ೬೪ ಗಣಕಗಳ ಸೃಷ್ಟಿಯನ್ನು ಇಂತಹ ಘಟನೆಗಳ ಸಾಲಿಗೆ ಧಾರಾಳವಾಗಿ ಸೇರಿಸಬಹುದು.

ಮಂಗಳವಾರ, ಸೆಪ್ಟೆಂಬರ್ 6, 2011

ಬ್ರಾಡ್‌ಬ್ಯಾಂಡ್ ಭಾಷೆ

ಟಿ. ಜಿ. ಶ್ರೀನಿಧಿ

ಅಂತರಜಾಲ ಸಂಪರ್ಕ ಬಂದ ಹೊಸತು. ವಿಶ್ವವ್ಯಾಪಿ ಜಾಲದಲ್ಲಿ ವಿಹರಿಸಬೇಕೆಂದರೆ ಆಗ ಲಭ್ಯವಿದ್ದದ್ದು ಡಯಲ್ ಅಪ್ ಸಂಪರ್ಕ ಮಾತ್ರ. ದೂರವಾಣಿ ಬಳಸಿ ಕೆಲಸಮಾಡುತ್ತಿದ್ದ ಆ ಬಗೆಯ ಸಂಪರ್ಕ ಬಳಸುವವರಿಗೆ ಅಪಾರ ತಾಳ್ಮೆಯಿರಬೇಕಿದ್ದು ಅನಿವಾರ್ಯವಾಗಿತ್ತು. ಯಾವುದೋ ಜಾಲತಾಣ ನೋಡಬೇಕೆಂದು ಹೊರಟರೆ ಪುಟಗಳು ತೀರಾ ನಿಧಾನವಾಗಿ ತೆರೆದುಕೊಳ್ಳುತ್ತಿದ್ದವು. ಇನ್ನು ಯಾವುದಾದರೂ ಕಡತವನ್ನು ಡೌನ್‌ಲೋಡ್ ಅಥವಾ ಅಪ್‌ಲೋಡ್ ಮಾಡಬೇಕಾದರಂತೂ ಅದರ ಆಮೆವೇಗ ಬೇಸರಬರಿಸಿಬಿಡುತ್ತಿತ್ತು. ಅಂತರಜಾಲ ಸಂಪರ್ಕದಲ್ಲಿರುವಾಗ ಯಾರಿಗಾದರೂ ಕರೆಮಾಡಬೇಕೆಂದರೆ ಅದೂ ಸಾಧ್ಯವಾಗುತ್ತಿರಲಿಲ್ಲ.

ಈ ಅನುಭವವನ್ನು ಥಟ್ ಅಂತ ಬದಲಿಸಿ ವಿಶ್ವವ್ಯಾಪಿ ಜಾಲದ ಜೊತೆಗಿನ ನಮ್ಮ ಅನುಭವದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದದ್ದು ಬ್ರಾಡ್‌ಬ್ಯಾಂಡ್ ಸಂಪರ್ಕ.

ಮಂಗಳವಾರ, ಆಗಸ್ಟ್ 30, 2011

ಫಿಶಿಂಗ್ ಅಲ್ಲ, ಇದು ವಿಶಿಂಗ್!

ಟಿ. ಜಿ. ಶ್ರೀನಿಧಿ

ಫಿಶಿಂಗ್ ಸಮಸ್ಯೆಯ ಅನೇಕ ಮುಖಗಳ ಪರಿಚಯ ನಮ್ಮಲ್ಲಿ ಅನೇಕರಿಗೆ ಇದೆ. ಬ್ಯಾಂಕಿನ ಹೆಸರಿನಲ್ಲಿ ಇಮೇಲ್ ಕಳುಹಿಸಿ ಬ್ಯಾಂಕ್ ಖಾತೆಯದೋ ಕ್ರೆಡಿಟ್ ಕಾರ್ಡಿನದೋ ವಿವರ ಕೇಳುವುದು, ಅರ್ಜಿಯನ್ನೇ ಹಾಕದಿದ್ದಾಗಲೂ ಕೆಲಸಕೊಡುವುದಾಗಿ ಸಂದೇಶ ಕಳಿಸುವುದು, ಲಕ್ಷಾಂತರ ರೂಪಾಯಿ ಬಹುಮಾನ ಬಂದಿದೆ ಎಂದು ಎಸ್ಸೆಮ್ಮೆಸ್ ಮಾಡಿ ಬಹುಮಾನ ತಲುಪಿಸಲು ಹಣ ಕೇಳುವುದು - ಇವೆಲ್ಲವುದರ ಬಗೆಗೆ ನಾವೆಲ್ಲ ಈಚೆಗೆ ಸಾಕಷ್ಟು ಎಚ್ಚರದಿಂದಿರುತ್ತೇವೆ.

ಎಲ್ಲರೂ ಹೀಗೆಯೇ ಎಚ್ಚರದಿಂದಿರಲು ಪ್ರಾರಂಭಿಸಿಬಿಟ್ಟರೆ ಕುತಂತ್ರಿಗಳ ಬೇಳೆ ಬೇಯುವುದಿಲ್ಲವಲ್ಲ! ಹಾಗಾಗಿಯೇ ಅವರು ಜನರಿಗೆ ಟೋಪಿಹಾಕುವ ಬೇರೆಬೇರೆ ತಂತ್ರಗಳನ್ನು ಹೆಣೆಯುತ್ತಿರುತ್ತಾರೆ.

ವಿಶಿಂಗ್ ಎನ್ನುವುದು ಇಂಥದ್ದೇ ಒಂದು ತಂತ್ರದ ಹೆಸರು.

ಮಂಗಳವಾರ, ಆಗಸ್ಟ್ 23, 2011

ಬಗ್ ಬ್ಯಾಂಗ್

ಟಿ. ಜಿ. ಶ್ರೀನಿಧಿ

ಗಣಕಗಳನ್ನು ಬಳಸಿ ಅನೇಕ ಕೆಲಸಗಳನ್ನು ಮಾಡಬಹುದು ಎನ್ನುವ ಹೇಳಿಕೆಯಲ್ಲಿ ಹೊಸತೇನೂ ಇಲ್ಲ. ಅವು ಒಂದು+ಒಂದು ಎಷ್ಟು ಎಂಬ ಲೆಕ್ಕವನ್ನು ಬೇಕಿದ್ದರೂ ಬಿಡಿಸಬಲ್ಲವು, ಮಂಗಳಗ್ರಹದತ್ತ ಹೊರಟ ಗಗನನೌಕೆಯ ಉಡಾವಣೆಯನ್ನು ನಿಯಂತ್ರಿಸಲೂ ಬಲ್ಲವು.

ಆದರೆ ಇಂತಹ ಯಾವುದೇ ಕೆಲಸ ಮಾಡಬೇಕಾದರೂ ಗಣಕಕ್ಕೆ ಸಂಪೂರ್ಣ ಮಾರ್ಗದರ್ಶನ ಬೇಕು. ಲೆಕ್ಕಾಚಾರ ಹೇಗೆ ಮಾಡಬೇಕು, ಅದಕ್ಕಾಗಿ ಯಾವ ದತ್ತಾಂಶ ಬಳಸಬೇಕು ಮುಂತಾದ ಎಲ್ಲ ವಿವರಗಳನ್ನೂ ಲೆಕ್ಕಾಚಾರ ಮಾಡುವಂತೆ ಹೇಳುವ ಮೊದಲೇ ನಾವು ಗಣಕಕ್ಕೆ ಹೇಳಿಕೊಟ್ಟಿರಬೇಕಾಗುತ್ತದೆ.

ಹೀಗೆ ಪ್ರತಿಯೊಂದು ಕೆಲಸವನ್ನೂ ಹೆಜ್ಜೆಹೆಜ್ಜೆಯಾಗಿ ವಿವರಿಸುವುದು ಕ್ರಮವಿಧಿ ಅಥವಾ ಪ್ರೋಗ್ರಾಮುಗಳ ಕೆಲಸ. ಗಣಕ ಯಾವುದೇ ಕೆಲಸ ಮಾಡುವಾಗಲೂ ಅದಕ್ಕೆ ಸಂಬಂಧಪಟ್ಟ ಕ್ರಮವಿಧಿಯಲ್ಲಿರುವ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸುತ್ತದೆ. ಉದಾಹರಣೆಗೆ ಒಂದು + ಒಂದು = ಎರಡು ಎನ್ನುವ ಬದಲು ಒಂದು + ಒಂದು = ಹನ್ನೊಂದು ಎಂದು ಕ್ರಮವಿಧಿಯಲ್ಲಿ ಹೇಳಿದ್ದರೆ ನೀವು ಒಂದು + ಒಂದು ಎಷ್ಟು ಎಂದಾಗ ಉತ್ತರ ಹನ್ನೊಂದು ಎಂದೇ ಬರುತ್ತದೆ.

ಗಣಕ ಮಾಡುವ ಲೆಕ್ಕಾಚಾರದಲ್ಲಿ ಆಗುವ ಎಡವಟ್ಟುಗಳಿಗೆ ಇಂತಹ ತಪ್ಪುಗಳೇ ಕಾರಣ. ಕ್ರಮವಿಧಿಗಳನ್ನು ಸರಿಯಾಗಿ ಪರೀಕ್ಷಿಸದೆ ಬಳಕೆದಾರರಿಗೆ ಕೊಟ್ಟಾಗ ಇಂತಹ ತಪ್ಪುಗಳು ಅವರಿಗೆ ಸಾಕಷ್ಟು ತೊಂದರೆಕೊಡುತ್ತವೆ, ಹೆಚ್ಚೂಕಡಿಮೆ ತಿಗಣೆಕಾಟದ ಹಾಗೆ. ಇದರಿಂದಲೇ ಈ ತಪ್ಪುಗಳನ್ನು 'ಬಗ್' ಎಂದು ಕರೆಯುತ್ತಾರೆ.

ಮಂಗಳವಾರ, ಆಗಸ್ಟ್ 16, 2011

ಲಂಡನ್ ರಂಪದ ಹೈಟೆಕ್ ರೂಪ

ಟಿ ಜಿ ಶ್ರೀನಿಧಿ

ಇಜ್ಞಾನ ವಿದ್ಯುನ್ಮಾನ ಪತ್ರಿಕೆಯ ಮಾಹಿತಿ ತಂತ್ರಜ್ಞಾನ ಸಂಚಿಕೆ ಇದೀಗ ಲಭ್ಯವಿದೆ. ಓದಲು ಇಲ್ಲಿ ಕ್ಲಿಕ್ ಮಾಡಿ!
ಕಳೆದ ವಾರದ ಮಾಧ್ಯಮಗಳಲ್ಲೆಲ್ಲ ಲಂಡನ್ ಗಲಭೆಗಳದೇ ಸುದ್ದಿ. ಊರತುಂಬ ಸುತ್ತುತ್ತಿದ್ದ ಗಲಭೆಕೋರ ಗುಂಪುಗಳ ಕಣ್ಣಿಗೆ ಬಿದ್ದ ಅಂಗಡಿಗಳೆಲ್ಲ ಧ್ವಂಸವಾದವು, ಪೋಲೀಸರಿಗೇ ಪೆಟ್ಟುಬಿದ್ದವು, ಕಟ್ಟಡಗಳು ಬೆಂಕಿಗೆ ಆಹುತಿಯಾದವು. ದುಬಾರಿ ವಸ್ತುಗಳನ್ನು ಮಾರುತ್ತಿದ್ದ ಅಂಗಡಿಗಳಿಗೆ ನುಗ್ಗಿದವರು ಕೈಗೆ ಸಿಕ್ಕಿದ್ದನ್ನೆಲ್ಲ ಹೊತ್ತೊಯ್ದರು; ವಿಶ್ವಸಮರಗಳಿಗೂ ಬಗ್ಗದೆ ನಿಂತಿದ್ದ ಶತಮಾನದಷ್ಟು ಹಳೆಯ ಅಂಗಡಿಯನ್ನೂ ಬಿಡದೆ ಸುಟ್ಟುಹಾಕಿದರು.

ಅಪರಾಧಿಯೆಂದು ಶಂಕಿಸಲಾದ ವ್ಯಕ್ತಿಯೊಬ್ಬ ಪೋಲೀಸರ ಗುಂಡಿಗೆ ಬಲಿಯಾದಾಗ ಶುರುವಾದದ್ದು ಈ ಗಲಭೆ. ಆದರೆ ಗಲಭೆಯ ಸ್ವರೂಪ ಅದೆಷ್ಟು ಬೇಗ ಬದಲಾಯಿತೆಂದರೆ ಕಂಡ ಅಂಗಡಿಗಳಿಗೆಲ್ಲ ನುಗ್ಗಿ ಕೈಗೆ ಸಿಕ್ಕಿದ್ದನ್ನೆಲ್ಲ ಲೂಟಿಮಾಡುವುದಷ್ಟೆ ಗಲಭೆಕೋರರ ಏಕಮಾತ್ರ ಉದ್ದೇಶವಾಗಿಹೋಯಿತು. ಅವರ್‍ಯಾರೋ ಲೂಟಿಮಾಡುತ್ತಿದ್ದಾರೆ, ನಾವೇನು ಕಮ್ಮಿ ಎಂದು ಇನ್ನಷ್ಟು ಗುಂಪುಗಳು ಲೂಟಿಗಿಳಿದವು, ಪ್ರತಿಭಟನೆಯ ರೂಪದಲ್ಲಿ ಶುರುವಾದ ಗಲಾಟೆಯ ಸುದ್ದಿ ಕೇಳಿದವರು ಊರಿನ ತುಂಬ ದರೋಡೆ ಶುರುಮಾಡಿಬಿಟ್ಟರು.

ಈ ಗಲಭೆಯ ಸ್ವರೂಪ, ಹಾಗೂ ಅದು ಊರತುಂಬ ಹರಡಿದ ವೇಗ ಅಚ್ಚರಿಮೂಡಿಸುವಂತಿತ್ತು. ಇತರ ಸಂದರ್ಭಗಳಲ್ಲಿ ಕಂಡುಬಂದಿದ್ದ ಹಾಗೆ ಯಾವುದೋ ಒಂದು ಗುಂಪು ಮಾತ್ರ ಗಲಭೆಯಲ್ಲಿ ತೊಡಗಿರಲಿಲ್ಲ; ಅಥವಾ ಒಂದೇ ಗುಂಪು ಪ್ರದೇಶದಿಂದ ಪ್ರದೇಶಕ್ಕೆ ಓಡಾಡುತ್ತಲೂ ಇರಲಿಲ್ಲ. ಇದ್ದಕ್ಕಿದ್ದ ಹಾಗೆ ಎಲ್ಲೆಂದರಲ್ಲಿ ಗುಂಪುಗಳು ಸೇರುತ್ತಿದ್ದವು, ಅಂಗಡಿಮುಂಗಟ್ಟುಗಳನ್ನು ಲೂಟಿಮಾಡಿ ಕೈಗೆ ಸಿಕ್ಕಷ್ಟನ್ನು ದೋಚಿಕೊಂಡು ನಾಪತ್ತೆಯಾಗಿಬಿಡುತ್ತಿದ್ದವು, ಒಂದು ಕಡೆ ಗಲಾಟೆಯಾದ ಸುದ್ದಿ ಕೇಳಿ ಪೋಲೀಸರು ಅಲ್ಲಿಗೆ ಧಾವಿಸುವಷ್ಟರಲ್ಲಿ ಅಲ್ಲಿಂದ ಎಷ್ಟೋ ದೂರದ ಇನ್ನೊಂದು ಪ್ರದೇಶದಲ್ಲಿ ಬೇರೆಯದೇ ಗುಂಪು ಗಲಭೆ ಪ್ರಾರಂಭಿಸುತ್ತಿತ್ತು.

ಪೋಲೀಸರ ಚಲನವಲನ ಗಮನಿಸಿ ಬಹಳ ಕಡಿಮೆ ಅವಧಿಯಲ್ಲಿ ಯೋಜನೆ ರೂಪಿಸುತ್ತಿದ್ದ ಈ ಗುಂಪುಗಳು ಅತ್ಯಂತ ವ್ಯವಸ್ಥಿತವಾಗಿ ಸೇರುತ್ತಿದ್ದ ಬಗೆ ಬಹಳ ಕುತೂಹಲಕರವಾಗಿತ್ತು, ಪೋಲೀಸರು ಎಷ್ಟೇ ಪರದಾಡಿದರೂ ಅವರಿಗೆ ಗಲಭೆಕೋರರ ಪ್ಲಾನು ಗೊತ್ತಾಗುತ್ತಲೇ ಇರಲಿಲ್ಲ.

ಏಕೆಂದರೆ, ಅನೇಕ ತಜ್ಞರು ಹೇಳುವಂತೆ, ಗಲಭೆಕೋರರು ತಮ್ಮ ನಡುವೆ ಸಂವಹನಕ್ಕಾಗಿ ಬ್ಲ್ಯಾಕ್‌ಬೆರಿ ಮೆಸೆಂಜರ್ ಸೇವೆಯನ್ನು ಬಳಸುತ್ತಿದ್ದರು!

ಮಂಗಳವಾರ, ಆಗಸ್ಟ್ 9, 2011

ವೆಬ್ ವಿಹಾರದ ಎರಡು ದಶಕ

ವಿಶ್ವವ್ಯಾಪಿ ಜಾಲ ಸಾರ್ವಜನಿಕ ಬಳಕೆಗಾಗಿ ಲಭ್ಯವಾಗಿ ಇದೀಗ ಇಪ್ಪತ್ತು ವರ್ಷ ಕಳೆದಿದೆ. ಈ ಸಂದರ್ಭದಲ್ಲಿ ವೆಬ್ ಬಗೆಗೆ ಹೀಗೊಂದು ಯೋಚನಾಲಹರಿ...

ಟಿ. ಜಿ. ಶ್ರೀನಿಧಿ

ಆಗಸ್ಟ್ ೬, ೧೯೯೧ - ವಿಶ್ವವ್ಯಾಪಿ ಜಾಲದ (ವರ್ಲ್ಡ್‌ವೈಡ್ ವೆಬ್) ಸೃಷ್ಟಿಕರ್ತ ಟಿಮ್ ಬರ್ನರ್ಸ್-ಲೀ ವಿಚಾರಜಾಲವೊಂದರಲ್ಲಿ (ನ್ಯೂಸ್‌ಗ್ರೂಪ್) ತಮ್ಮ ಸೃಷ್ಟಿಯನ್ನು ಹೊರಜಗತ್ತಿಗೆ ಪರಿಚಯಿಸಿದ ದಿನ. ವಿಶ್ವವ್ಯಾಪಿ ಜಾಲ ಸಾರ್ವಜನಿಕ ಬಳಕೆಗೆ ಸಿಗುವಂತಾಗಿ ನಿಜ ಅರ್ಥದಲ್ಲಿ ವಿಶ್ವವ್ಯಾಪಿಯಾದದ್ದೂ ಅದೇ ದಿನದಿಂದ. ಈ ಮಹತ್ವದ ಘಟನೆ ಸಂಭವಿಸಿ ಕಳೆದ ಶನಿವಾರಕ್ಕೆ ಇಪ್ಪತ್ತು ವರ್ಷ.

ಈ ಎರಡು ದಶಕಗಳಲ್ಲಿ ವಿಶ್ವವ್ಯಾಪಿ ಜಾಲ ನಮ್ಮ ಬದುಕನ್ನು ಅಪಾರವಾಗಿ ಬದಲಿಸಿಬಿಟ್ಟಿದೆ; ನಮ್ಮಲ್ಲಿ ಅನೇಕರ ಅದೆಷ್ಟೋ ಕೆಲಸಗಳು ಸಂಪೂರ್ಣವಾಗಿ ವಿಶ್ವವ್ಯಾಪಿ ಜಾಲದ ಮೇಲೆಯೇ ಅವಲಂಬಿತವಾಗಿ ಈಗಾಗಲೇ ಬಹಳ ಸಮಯ ಕಳೆದಿದೆ. ಬೆಡ್‌ರೂಮಲ್ಲಿ ಹೆಗ್ಗಣ ಬಂದರೆ ನಾವು ವಿಶ್ವವ್ಯಾಪಿ ಜಾಲದಲ್ಲಿ ದೊಣ್ಣೆ ಹುಡುಕುವುದಿಲ್ಲ, ನಿಜ. ಆದರೆ ಮಕ್ಕಳ ಹೋಮ್‌ವರ್ಕ್‌ನಿಂದ ದೊಡ್ಡವರ ಆಫೀಸ್‌ವರ್ಕ್‌ವರೆಗೆ ಅದೆಷ್ಟೋ ಸಂದರ್ಭಗಳಲ್ಲಿ ವಿಶ್ವವ್ಯಾಪಿ ಜಾಲದ ಮೊರೆಹೋಗುವುದು ಸಾಮಾನ್ಯ ಅಭ್ಯಾಸ. ಹಲವು ಸಂದರ್ಭಗಳಲ್ಲಿ ನಮ್ಮ ಜ್ಞಾಪಕಶಕ್ತಿಗಿಂತ ಹೆಚ್ಚಾಗಿ ಜಾಲತಾಣಗಳನ್ನು (ವಿಶೇಷವಾಗಿ ಗೂಗಲ್) ಅವಲಂಬಿಸುವುದೂ ಇದೆ.

ಶುಕ್ರವಾರ, ಆಗಸ್ಟ್ 5, 2011

ಇಗೋ ಇಲ್ಲಿದೆ ಮಾಹಿತಿ ತಂತ್ರಜ್ಞಾನ ಸಂಚಿಕೆ...

ಇಜ್ಞಾನ ವಿದ್ಯುನ್ಮಾನ ಪತ್ರಿಕೆಯ ಮೊದಲ ಸಂಚಿಕೆಗೆ ಒಳ್ಳೆಯ ಪ್ರತಿಕ್ರಿಯೆ ದೊರಕಿರುವುದು ತುಂಬಾ ಖುಷಿಕೊಟ್ಟಿದೆ. ಈ ಪ್ರಯತ್ನವನ್ನು ತಮ್ಮ ಓದುಗರಿಗೆ ಪರಿಚಯಿಸಿದ ಪ್ರಜಾವಾಣಿ ಹಾಗೂ ವಿಜಯ ಕರ್ನಾಟಕ ಪತ್ರಿಕೆಗಳಿಗೆ, ಪ್ರಚಾರ ದೊರಕಿಸಿಕೊಟ್ಟ ವಿಶ್ವವ್ಯಾಪಿಜಾಲದ ಮಿತ್ರರಿಗೆ, ಪ್ರತಿಕ್ರಿಯೆ ನೀಡಿದ ಸಹೃದಯರಿಗೆ ಹಾಗೂ ಇಜ್ಞಾನ ಡಾಟ್ ಕಾಮ್‌ನತ್ತ ಬಂದುಹೋದ ಎಲ್ಲ ಓದುಗರಿಗೂ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು.

ಇದೇ ಖುಷಿಯಲ್ಲಿ ಇಜ್ಞಾನ ಮಾಹಿತಿ ತಂತ್ರಜ್ಞಾನ ಸಂಚಿಕೆಯನ್ನು ನಿಮ್ಮ ಮುಂದಿಡುತ್ತಿದ್ದೇವೆ.

ನಿಮ್ಮ ಅನಿಸಿಕೆ ಅಭಿಪ್ರಾಯಗಳಿಗೆ ಹಾರ್ದಿಕ ಸ್ವಾಗತ.

ಮಂಗಳವಾರ, ಆಗಸ್ಟ್ 2, 2011

Oh! Yes, ಇದು ಓಎಸ್!

ಟಿ. ಜಿ. ಶ್ರೀನಿಧಿ

ವಿಂಡೋಸ್ ಎನ್ನುವ ಹೆಸರು ಕೇಳಿದ್ದೀರಾ?

ಓ, ಕೇಳಿಲ್ಲದೆ ಏನು! ಎಷ್ಟೇ ಆದರೂ ಗಣಕದ ಕೆಲಸ ಪ್ರಾರಂಭವಾಗುತ್ತಿದ್ದಂತೆ ಕಾಣುವ ಹೆಸರಲ್ಲವೇ ಅದು!

ಅದೇನೋ ಸರಿ, ಈ ವಿಂಡೋಸ್ ಅಂದರೆ ಏನು ಹೇಳ್ತೀರಾ?

ವಿಂಡೋಸ್ ಒಂದು ತಂತ್ರಾಂಶ.

ಅದೂ ಸರಿ, ಎಂತಹ ತಂತ್ರಾಂಶ ಅಂತ ಸ್ವಲ್ಪ ಹೇಳ್ತೀರಾ?

ನನಗೇನು ಅಷ್ಟೂ ಗೊತ್ತಿಲ್ವೇನ್ರಿ, ಅದೊಂದು ಆಪರೇಟಿಂಗ್ ಸಿಸ್ಟಂ!

ಆಪರೇಟಿಂಗ್ ಸಿಸ್ಟಂ
ಗಣಕದ ಪ್ರಾಥಮಿಕ ಚಟುವಟಿಕೆಗಳನ್ನು ನಿಯಂತ್ರಿಸುವ ಜೊತೆಗೆ ಅದರ ವಿವಿಧ ಸೌಲಭ್ಯಗಳನ್ನು ಬಳಸಿಕೊಳ್ಳಲು ನಮಗೆ ಸಹಾಯಮಾಡುವ ತಂತ್ರಾಂಶವೇ ಆಪರೇಟಿಂಗ್ ಸಿಸ್ಟಂ ಅಥವಾ ಕಾರ್ಯಾಚರಣ ವ್ಯವಸ್ಥೆ. ನಮಗೆಲ್ಲ ಚಿರಪರಿಚಿತವಾದ ಮೈಕ್ರೋಸಾಫ್ಟ್ ವಿಂಡೋಸ್, ಲಿನಕ್ಸ್ ಮುಂತಾದವು ಕಾರ್ಯಾಚರಣ ವ್ಯವಸ್ಥೆಗೆ ಕೆಲ ಉದಾಹರಣೆಗಳು.

ಮಂಗಳವಾರ, ಜುಲೈ 26, 2011

ಗುಂಪುಗುತ್ತಿಗೆಯ ಗುಟ್ಟು ಗೊತ್ತೆ?

ಟಿ. ಜಿ. ಶ್ರೀನಿಧಿ

ಗೂಗಲ್‌ನ ಅನುವಾದ ಸೇವೆ ಇತ್ತೀಚೆಗಷ್ಟೆ ಕನ್ನಡದಲ್ಲೂ ಲಭ್ಯವಾದದ್ದು, ಹಾಗೂ ವಿಚಿತ್ರ ಅನುವಾದಗಳಿಂದಾಗಿ ಸಾಕಷ್ಟು ಟೀಕೆಗೊಳಗಾದದ್ದು ನಿಮಗೆಲ್ಲ ಗೊತ್ತೇ ಇದೆ. ಎಲ್ಲೆಡೆಯಿಂದಲೂ ಬಂದ ಟೀಕೆಗಳಿಗೆ ಕಾರಣವೂ ಇಲ್ಲದಿರಲಿಲ್ಲ; ಏಕೆಂದರೆ ಬಹಳಷ್ಟು ಸನ್ನಿವೇಶಗಳಲ್ಲಿ ತೀರಾ ಸರಳ ಪದಪುಂಜಗಳಿಗೂ ಸರಿಯಾದ ಅನುವಾದ ಸಿಗುತ್ತಿರಲಿಲ್ಲ. ಇಷ್ಟೆಲ್ಲ ಟೀಕೆಗಳನ್ನು ಮುಂಚಿತವಾಗಿಯೇ ನಿರೀಕ್ಷಿಸಿದ್ದ ಗೂಗಲ್ ಸಂಸ್ಥೆ "ಕನ್ನಡ ಅನುವಾದ ಸೇವೆ ಇನ್ನೂ ಪ್ರಾಯೋಗಿಕ ಹಂತದಲ್ಲಿದೆ; ಹೀಗಾಗಿ ಯಾವುದೇ ಅನುವಾದ ಸರಿಯಾಗಿಲ್ಲ ಎನ್ನಿಸಿದರೆ ಅದನ್ನು ನೀವೇ ಉತ್ತಮಪಡಿಸುವ ಸೌಲಭ್ಯವಿದೆ" ಎಂದು ಹೇಳಿಬಿಟ್ಟಿತ್ತು.

ಉದಾಹರಣೆಗೆ 'Visit our website to read this article' ಎಂಬ ಸಾಲಿನ ಅನುವಾದ 'ಈ ಲೇಖನ ಓದಲು ನಮ್ಮ ವೆಬ್‌ಸೈಟ್ ಭೇಟಿ' ಎಂದು ಕಾಣಿಸಿಕೊಂಡರೆ ಅದನ್ನು ನಾವೇ 'ಈ ಲೇಖನ ಓದಲು ನಮ್ಮ ಜಾಲತಾಣಕ್ಕೆ ಭೇಟಿ ನೀಡಿ' ಎಂದು ತಿದ್ದಬಹುದು. ಬಳಕೆದಾರರೇ ಇಂತಹ ತಪ್ಪುಗಳನ್ನೆಲ್ಲ ಸರಿಪಡಿಸುತ್ತ ಹೋದಂತೆ ಅನುವಾದದ ಗುಣಮಟ್ಟವೂ ಉತ್ತಮಗೊಳ್ಳುತ್ತದೆ ಎನ್ನುವುದು ಈ ಸೌಲಭ್ಯ ಒದಗಿಸಿರುವುದರ ಹಿಂದಿನ ಉದ್ದೇಶ.

ಅಷ್ಟೇ ಅಲ್ಲ, ಹೀಗೆ ಬಳಕೆದಾರರೆಲ್ಲರ ನೆರವನ್ನು ಏಕಕಾಲದಲ್ಲೇ ಪಡೆದುಕೊಳ್ಳುವುದರಿಂದ ಕೆಲಸವೂ ಬೇಗ ಆಗುತ್ತದೆ. ಅವರಲ್ಲಿ ಯಾರಿಗೂ ಸಂಭಾವನೆ ಪಾವತಿಸುವ ಪ್ರಶ್ನೆಯೇ ಇಲ್ಲದ್ದರಿಂದ ಗೂಗಲ್‌ಗೆ ಇದರಿಂದ ಯಾವ ಖರ್ಚೂ ಆಗುವುದಿಲ್ಲ!

ಮಂಗಳವಾರ, ಜುಲೈ 19, 2011

ಮರೆತುಹೋದ ಮಿತ್ರ ಫ್ಲಾಪಿ

ಟಿ. ಜಿ. ಶ್ರೀನಿಧಿ

ಕೆಲವು ವರ್ಷಗಳ ಹಿಂದಿನ ಮಾತು. ಆಗಿನ್ನೂ ಥಂಬ್‌ಡ್ರೈವ್ ಪೆನ್‌ಡ್ರೈವ್ ಇತ್ಯಾದಿಗಳಲ್ಲ ಅಷ್ಟಾಗಿ ಬಳಕೆಗೆ ಬಂದಿರಲಿಲ್ಲ. ಸಿ.ಡಿ.ಗಳು ಇದ್ದವಾದರೂ ಅವುಗಳ ಬೆಲೆ ಈಗಿನಷ್ಟು ಕಡಿಮೆಯಿರಲಿಲ್ಲ. ಅಷ್ಟೇ ಅಲ್ಲ, ಅವುಗಳಿಗೆ ಮಾಹಿತಿ ತುಂಬಲು ಬೇಕಾದ ಸಿ.ಡಿ. ರೈಟರ್‌ಗಳು ಎಲ್ಲ ಗಣಕಗಳಲ್ಲೂ ಇರುತ್ತಿರಲಿಲ್ಲ. ಯಾವುದೋ ಸೈಬರ್ ಕೆಫೆಗೆ ಹೋಗಿ ನಮಗೆ ಬೇಕಾದ ಮಾಹಿತಿಯನ್ನು ಒಂದು ಸಿ.ಡಿ.ಗೆ ತುಂಬಿಸಿಕೊಂಡು ಬರಲು ಸಿ.ಡಿ. ಬೆಲೆಯ ಮೂರು ಪಟ್ಟು ಹಣ ಕೊಡಬೇಕಾದ ಪರಿಸ್ಥಿತಿಯಿತ್ತು.

ಆಗ ಸಹಾಯಕ್ಕೇ ಬರುತ್ತಿದ್ದದ್ದೇ ಫ್ಲಾಪಿ ಡಿಸ್ಕ್ ("ನಮ್ಯ ಮುದ್ರಿಕೆ"). ಸೈಬರ್ ಕೆಫೆಯಲ್ಲಿ ಅಂತರಜಾಲದಿಂದ ಪಡೆದ ಮಾಹಿತಿಯನ್ನು ಮನೆಗೆ ತರಲು, ಮನೆಯಲ್ಲೋ ಕಾಲೇಜಿನಲ್ಲೋ ಸಿದ್ಧಪಡಿಸಿದ ಕಡತವನ್ನು ಬೇರೊಬ್ಬರೊಡನೆ ಹಂಚಿಕೊಳ್ಳಲು - ಹೀಗೆ ಎಲ್ಲ ಕೆಲಸಕ್ಕೂ ಫ್ಲಾಪಿಯೇ ಬೇಕಾಗಿತ್ತು. ಮನೆಯಲ್ಲಿ ಡಜನ್‌ಗಟ್ಟಲೆ ಫ್ಲಾಪಿಗಳನ್ನು ತಂದಿಟ್ಟುಕೊಳ್ಳುವ ಅಭ್ಯಾಸ ಬಹುತೇಕ ಗಣಕ ಬಳಕೆದಾರರಲ್ಲಿ ಇತ್ತು.

ಫ್ಲಾಪಿ ಡಿಸ್ಕ್‌ಗಳು ಮಾರುಕಟ್ಟೆಗೆ ಪರಿಚಯವಾಗಿ ಇದೀಗ ನಲವತ್ತು ವರ್ಷಗಳು ಕಳೆದಿವೆ. ಆದರೆ ನಲವತ್ತರ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಾದ ಫ್ಲಾಪಿ ಡಿಸ್ಕ್‌ಗಳೇ ಕಾಣುತ್ತಿಲ್ಲ. ಹೌದಲ್ಲ, ಎಲ್ಲಿ ಹೋದವು ಮನೆಯಲ್ಲಿದ್ದ ಡಜನ್‌ಗಟ್ಟಲೆ ಫ್ಲಾಪಿಗಳು?

ಬುಧವಾರ, ಜುಲೈ 13, 2011

ಬೆದರು ತಂತ್ರಾಂಶಗಳಿಗೆ ಹೆದರಬೇಡಿ!

ಟಿ ಜಿ ಶ್ರೀನಿಧಿ

ಈ ಸನ್ನಿವೇಶವನ್ನು ಗಮನಿಸಿ: ವಿಶ್ವವ್ಯಾಪಿ ಜಾಲದಲ್ಲಿ ವಿಹರಿಸುವಾಗ ನಿಮ್ಮ ಗಣಕದ ಪರದೆಯ ಮೇಲೆ ಇದ್ದಕ್ಕಿದ್ದಂತೆ ಒಂದು ಜಾಹೀರಾತು ಕಾಣಿಸಿಕೊಳ್ಳುತ್ತದೆ. ನಿಮ್ಮ ಗಣಕಕ್ಕೆ ಅದ್ಯಾವುದೋ ವೈರಸ್ ತಗುಲಿಕೊಂಡಿದೆ ಎನ್ನುವುದು ಈ ಜಾಹೀರಾತಿನ ಸಾರಾಂಶ. ಆ ವೈರಸ್ ಕಾಟದಿಂದ ಮುಕ್ತರಾಗಲು ಏನುಮಾಡಬೇಕು ಎನ್ನುವುದೂ ಅದೇ ಜಾಹೀರಾತಿನಲ್ಲಿರುತ್ತದೆ: "ಇಲ್ಲಿ ಕ್ಲಿಕ್ ಮಾಡಿ, ನಮ್ಮ ಆಂಟಿವೈರಸ್ ತಂತ್ರಾಂಶ ಕೊಂಡು ಇನ್‌ಸ್ಟಾಲ್ ಮಾಡಿಕೊಳ್ಳಿ, ವೈರಸ್ ಕಾಟದಿಂದ ಮುಕ್ತರಾಗಿ!"

ಆದರೆ ನಿಜ ವಿಷಯವೇ ಬೇರೆ. ನಿಮ್ಮ ಗಣಕಕ್ಕೆ ಪ್ರಾಯಶಃ ವೈರಸ್ ಬಂದಿರುವುದೂ ಇಲ್ಲ, ಅವರು ಕೊಡುವ ತಂತ್ರಾಂಶ ಅದನ್ನು ಹೋಗಿಸುವುದೂ ಇಲ್ಲ. ವೈರಸ್ ಹೋಗಿಸುವುದಿರಲಿ, ಅದು ಇನ್ನೇನಾದರೂ ಕೆಟ್ಟ ಕೆಲಸ ಮಾಡದಿದ್ದರೆ ಅದೇ ನಿಮ್ಮ ಅದೃಷ್ಟ.

ಮಂಗಳವಾರ, ಜುಲೈ 12, 2011

ಹಕ್ಕಿಗಳಿಗೆ ಕೋಪ ಬಂದಾಗ...

ಟಿ ಜಿ ಶ್ರೀನಿಧಿ


ಹಂದಿಗಳ ಗುಂಪು ಹಕ್ಕಿಗಳ ಮೊಟ್ಟೆ ಕದ್ದೊಯ್ದರೆ ಏನಾಗುತ್ತದೆ?

ಹಕ್ಕಿಗಳಿಗೆ ಕೋಪ ಬರುತ್ತದೆ. ಸಿಂಪಲ್!

ಹಕ್ಕಿಗಳಿಗೆ ಕೋಪಬಂದರೆ ಏನಾಗುತ್ತದೆ?

ಪ್ರಪಂಚದಾದ್ಯಂತ ಕೋಟ್ಯಂತರ ಜನಕ್ಕೆ ಹೊಸತೊಂದು ಹವ್ಯಾಸ ಸಿಗುತ್ತದೆ; ಅವರಲ್ಲಿ ಅನೇಕರಿಗೆ ಈ ಹೊಸ ಹವ್ಯಾಸ ಚಟವೇ ಆಗಿಬಿಡುತ್ತದೆ; ಇದಕ್ಕೆಲ್ಲ ಕಾರಣವಾದ ಫಿನ್ಲೆಂಡಿನ ಸಂಸ್ಥೆಯೊಂದು ವಿಶ್ವವಿಖ್ಯಾತವಾಗುತ್ತದೆ!

ಆ ಸಂಸ್ಥೆಯ ಹೆಸರು ರೋವಿಯೋ ಮೊಬೈಲ್, ಹಾಗೂ ಆ ಸಂಸ್ಥೆ ಹುಟ್ಟುಹಾಕಿರುವ ವಿಶ್ವವಿಖ್ಯಾತ ಹವ್ಯಾಸದ ಹೆಸರು - ಆಂಗ್ರಿ ಬರ್ಡ್ಸ್.

ಮಂಗಳವಾರ, ಜುಲೈ 5, 2011

ಸಮಾಜ ಜಾಲಗಳ ಲೋಕದಲ್ಲಿ

ಟಿ ಜಿ ಶ್ರೀನಿಧಿ

ಅಂತರಜಾಲ ಲೋಕದ ಸುದ್ದಿಮನೆಗೆ ಕಳೆದ ಕೆಲದಿನಗಳಿಂದ ಬಿಡುವೇ ಇಲ್ಲ; ಒಂದರ ಮೇಲೊಂದರಂತೆ ಹೊಸಹೊಸ ಸುದ್ದಿಗಳು ಬರುತ್ತಲೇ ಇವೆ.

ಇಂತಹ ಸುದ್ದಿಗಳಲ್ಲಿ ಅತ್ಯಂತ ಹೆಚ್ಚು ಸದ್ದು ಮಾಡಿದ್ದು ಪ್ರಾಯಶಃ ಗೂಗಲ್ ಪ್ಲಸ್ ಅನಾವರಣದ ವಿಷಯ. ಅದೇ ಸಮಯದಲ್ಲಿ ಕಾಣಿಸಿಕೊಂಡ, ಆದರೆ ಅಷ್ಟಾಗಿ ಪ್ರಚಾರಪಡೆಯದ, ಇನ್ನೊಂದು ಸುದ್ದಿ ಮೈಸ್ಪೇಸ್ ಡಾಟ್ ಕಾಮ್ ಮಾರಾಟದ ಕುರಿತದ್ದು. ಈವರೆಗೆ ಅತ್ಯಂತ ಕ್ಷಿಪ್ರಗತಿಯ ಬೆಳೆವಣಿಗೆ ಕಂಡಿರುವ ಫೇಸ್‌ಬುಕ್ ಜನಪ್ರಿಯತೆ ನಿಧಾನಕ್ಕೆ ಕಡಿಮೆಯಾಗುತ್ತಿರಬಹುದು ಎಂದು ಸಂದೇಹ ವ್ಯಕ್ತಪಡಿಸಿದ ಅಧ್ಯಯನವೊಂದರ ಸುದ್ದಿಯೂ ಅಲ್ಲಲ್ಲಿ ಕಾಣಿಸಿಕೊಂಡಿದೆ.

ಇವೆಲ್ಲವೂ ಸೋಷಿಯಲ್ ನೆಟ್‌ವರ್ಕ್ ಅಥವಾ ಸಮಾಜ ಜಾಲಗಳಿಗೆ ಸಂಬಂಧಪಟ್ಟ ಸುದ್ದಿಗಳು ಎನ್ನುವುದು ವಿಶೇಷ.

ಶನಿವಾರ, ಜುಲೈ 2, 2011

ಇಜ್ಞಾನ ಡಾಟ್ ಕಾಮ್‌ಗೆ ಇಪ್ಪತ್ತೈದು ಸಾವಿರದ ಖುಷಿ


ಇಜ್ಞಾನ ಡಾಟ್‌ ಕಾಮ್‌ನಲ್ಲಿ ದಾಖಲಾಗಿರುವ ಪೇಜ್‌ವ್ಯೂ‌ಗಳ ಸಂಖ್ಯೆ ಇದೀಗ ೨೫,೦೦೦ ದಾಟಿದೆ. ಇಲ್ಲಿಗೆ ಭೇಟಿನೀಡಿದವರ ಸಂಖ್ಯೆ ಅದಾಗಲೇ ೧೦,೦೦೦ ದಾಟಿ ಮುಂದೆ ಹೋಗಿದೆ. ನನ್ನ ಈ ಪ್ರಯತ್ನದಲ್ಲಿ ಬೆಂಬಲಕ್ಕೆ ನಿಂತಿರುವ, ಹಾಗೂ ಮೆಚ್ಚಿ ಪ್ರೋತ್ಸಾಹಿಸುತ್ತಿರುವ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.

ವಿಶ್ವಾಸದಿಂದ,
ಟಿ ಜಿ ಶ್ರೀನಿಧಿ

ಮಂಗಳವಾರ, ಜೂನ್ 28, 2011

ಜಾಲತಾಣದ ಬಾಲದ ಕುರಿತು

ಟಿ ಜಿ ಶ್ರೀನಿಧಿ

ವಿಶ್ವವ್ಯಾಪಿ ಜಾಲದಲ್ಲಿ ಯಾವುದೋ ಮಾಹಿತಿ ಹುಡುಕಬೇಕೇ, ಗೂಗಲ್ ಡಾಟ್ ಕಾಮ್‌ಗೆ ಹೋಗಿ; ಇವತ್ತಿನ ಉದಯವಾಣಿ ಪತ್ರಿಕೆ ನೋಡಬೇಕೇ, ಉದಯವಾಣಿ ಡಾಟ್ ಕಾಮ್ ನೋಡಿ; 'ವಿಜ್ಞಾಪನೆ' ಅಂಕಣದ ಹಳೆಯ ಬರೆಹಗಳನ್ನು ಓದಬೇಕೇ, ಇಜ್ಞಾನ ಡಾಟ್ ಕಾಮ್ ನೋಡಿ...

ವಿಶ್ವವ್ಯಾಪಿ ಜಾಲಕ್ಕೂ ಡಾಟ್ ಕಾಮ್‌ಗಳಿಗೂ ಇರುವ ಅವಿನಾಭಾವ ಸಂಬಂಧ ಸುಲಭವಾಗಿ ಹೇಳಿ ಮುಗಿಸುವಂಥದ್ದಲ್ಲ. ವಿಶ್ವವ್ಯಾಪಿ ಜಾಲದಲ್ಲಿರುವ ತಾಣಗಳನ್ನು (ವೆಬ್‌ಸೈಟ್) ಬಹಳಷ್ಟು ಜನ ಗುರುತಿಸುವುದು ಡಾಟ್‌ಕಾಮ್‌ಗಳೆಂದೇ.

ಜಾಲತಾಣ, ಮತ್ತದರ ವಿಳಾಸ
ವಿಶ್ವವ್ಯಾಪಿ ಜಾಲದ ಮೂಲಕ ಲಭ್ಯವಿರುವ ಮಾಹಿತಿ ನಮಗೆ ದೊರಕುವುದು ವೆಬ್‌ಸೈಟ್ ಅಥವಾ ಜಾಲತಾಣಗಳ ಮೂಲಕ. ಮೇಲಿನ ಉದಾಹರಣೆಯಲ್ಲಿ ಹೇಳಿದ ಗೂಗಲ್ ಡಾಟ್ ಕಾಮ್, ಉದಯವಾಣಿ ಡಾಟ್ ಕಾಮ್, ಇಜ್ಞಾನ ಡಾಟ್ ಕಾಮ್ ಇವೆಲ್ಲ ಜಾಲತಾಣಕ್ಕೆ ಉದಾಹರಣೆಗಳು.

ಜಾಲತಾಣಗಳ ವಿಳಾಸಕ್ಕೆ ಡಾಟ್ ಕಾಮ್ ಎಂಬ ಪ್ರತ್ಯಯ ಸೇರಿದಂದಿನಿಂದ ಇಂದಿನವರೆಗಿನ ಕಾಲು ಶತಮಾನದ ಅವಧಿಯಲ್ಲಿ ಡಾಟ್ ಕಾಮ್ ಎನ್ನುವುದು ಜಾಲತಾಣದ ಹೆಸರಿಗೆ ಪರ್ಯಾಯವಾಗಿ ಬೆಳೆದುಬಿಟ್ಟಿದೆ, ನಿಜ. ಆದರೆ ವಾಸ್ತವದಲ್ಲಿ ಈ ಡಾಟ್ ಕಾಮ್ ಎನ್ನುವುದು ಜಾಲತಾಣಗಳ ವಿಳಾಸದ ಒಂದು ಭಾಗ ಮಾತ್ರ.

ವಿಶ್ವವ್ಯಾಪಿ ಜಾಲದಲ್ಲಿ ಲಭ್ಯವಿರುವ ಕೋಟ್ಯಂತರ ಜಾಲತಾಣಗಳನ್ನು ಪ್ರತ್ಯೇಕವಾಗಿ ಗುರುತಿಸಲು ಅನುವುಮಾಡಿಕೊಡುವ ವಿಳಾಸವನ್ನು ಯೂನಿಫಾರ್ಮ್ ರಿಸೋರ್ಸ್ ಲೊಕೇಟರ್ ಅಥವಾ ಯುಆರ್‌ಎಲ್ ಎಂದು ಹೆಸರು.

www.ejnana.com - ಇದು ಯುಆರ್‌ಎಲ್‌ಗೊಂದು ಉದಾಹರಣೆ. ಈ ವಿಳಾಸದ ಪ್ರಾರಂಭದಲ್ಲಿರುವ www ಎಂಬ ಸಂಕೇತ ಈ ತಾಣ ವಿಶ್ವವ್ಯಾಪಿ ಜಾಲದ ಮುಖಾಂತರ ಲಭ್ಯವಿದೆ ಎನ್ನುವುದನ್ನು ಸೂಚಿಸುತ್ತದೆ. ಇನ್ನು ejnana ಎನ್ನುವುದು ಜಾಲತಾಣದ ಹೆಸರು. ಕೊನೆಯ ಬಾಲಂಗೋಚಿಯೇ ಡಾಟ್ ಕಾಮ್.

ಸೋಮವಾರ, ಜೂನ್ 27, 2011

ಏನ್ಮಾಡ್ತೀರಾ ತರಲೆ, ಬದುಕುಳಿಯೋದೇ ಜಿರಲೆ!

ಬೇಳೂರು ಸುದರ್ಶನ

ಇದು ಲೀಪ್ರೋಚ್!
2006ರ ಒಂದು ದಿನ. ಕೇಪ್ ಟೌನ್ ವಿಶ್ವವಿದ್ಯಾಲಯದ ಜೀವಶಾಸ್ತ್ರ ವಿಭಾಗದ ಮೈಕ್ ಪಿಕರ್ ಮತ್ತು ಡಾ|| ಜೊನಾಥನ್ ಕೋಲ್ವಿಲ್ಲೆ ಹತ್ತಿರದ ಸಿಲ್ವರ್ ಮೈನ್ ಪ್ರಾಕೃತಿಕ ಮೀಸಲು ಪ್ರದೇಶದಲ್ಲಿ ಬಲೆ ಬೀಸುತ್ತಿದ್ದರು. ಯಾವುದಾದರೂ ಹಾರುವ ಕೀಟ ಸಿಗಬಹುದೇ ಎಂದು ಕಾಯುತ್ತಿದ್ದರು. ಹೀಗೇ ಸುಮ್ಮನೇ ಅವರ ಬಲೆಗೆ ಸಿಕ್ಕಿದ್ದು... ಜಿಗಿಯುವ ಜಿರಲೆ!

ಮೊದಲು ಇದೇನು ಮಿಡತೆಯೇ ಎಂದು ನೋಡಿದ ಅವರಿಗೆ, ಅದು ಜಿರಲೆ ಎಂದು ಗೊತ್ತಾದಾಗ ಅಚ್ಚರಿ. ಸರಿ, ಅದನ್ನು ಪ್ರಯೋಗಾಲಯಕ್ಕೆ ತಂದು ನಿಕಟ ಪರೀಕ್ಷೆಗೆ ಒಡ್ಡಿದಾಗ ಅದು ಈವರೆಗೂ ನೋಡಿರದ ಜಿರಲೆಯ ಜೀವಜಾತಿ ಎಂಬುದು ಖಚಿತವಾಯಿತು. ಆಮೇಲಿನ ನಾಲ್ಕು ವರ್ಷಗಳ ಕಾಲ ಅವರಿಬ್ಬರ ಸಂಶೋಧನಾ ಸಮಯವೆಲ್ಲ ಹಾರುವ ಜಿರಲೆಗೇ ಮೀಸಲಾಯಿತು. 2010ರಲ್ಲಿ ಅವರು ಈ ಜಿರಲೆಯ ಬಗ್ಗೆ ಸಂಶೋಧನಾ ಲೇಖನವನ್ನು ಪ್ರಕಟಿಸಿದರು. `ಸಾಲ್ಟೋಬ್ಲಾಟೆಲ್ಲಾ (ಹಾರುವ ಚಿಕ್ಕ ಜಿರಲೆ) ಮಾಂಟಿಸ್ ಟ್ಯಾಬುಲಾರಿಸ್ (ಟೇಬಲ್ ಮೌಂಟನ್ ರಾಷ್ಟ್ರೀಯ ಉದ್ಯಾನದಲ್ಲಿ ಸಿಕ್ಕಿದ್ದಕ್ಕಾಗಿ)' ಎಂಬ ನಾಮಕರಣದೊಂದಿಗೆ ವಸುಂಧರೆ ಜೀವಜಾಲದ ಇನ್ನೊಂದು ಕೌತುಕ ಪ್ರಕಟವಾಯಿತು. ಕಪ್ಪೆಯಂತೆ ಜಿಗಿಯುವ ಈ ಜಿರಲೆಗೆ ಲೀಪ್ರೋಚ್ (ಲೀಪ್ – ಕುಪ್ಪಳಿಸು) ಎಂಬ ಹೆಸರನ್ನೂ ಇಡಲಾಗಿದೆ.

ಬುಧವಾರ, ಜೂನ್ 22, 2011

'ಆಗಸದ ಅಲೆಮಾರಿಗಳು' ಕೃತಿಗೆ ಅಕಾಡೆಮಿ ಗೌರವ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ೨೦೦೯ನೇ ಸಾಲಿನ ಪುಸ್ತಕ ಬಹುಮಾನ ವಿತರಣಾ ಸಮಾರಂಭ ಜೂನ್ ೨೯, ೨೦೧೧ರಂದು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆಯಲಿದೆ.

ಡಾ| ಬಿ. ಎಸ್. ಶೈಲಜಾ ಅವರು ಈ ಸಂದರ್ಭದಲ್ಲಿ ವಿಜ್ಞಾನ ಸಾಹಿತ್ಯ ಪ್ರಕಾರದ ಬಹುಮಾನ ಸ್ವೀಕರಿಸಲಿದ್ದಾರೆ. ಅವರ 'ಆಗಸದ ಅಲೆಮಾರಿಗಳು' ಕೃತಿಗಾಗಿ ಈ ಗೌರವ ಲಭಿಸಿದೆ.

ಡಾ| ಶೈಲಜಾ ಅವರಿಗೆ ಇಜ್ಞಾನ ಡಾಟ್ ಕಾಮ್ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.

ಮಂಗಳವಾರ, ಜೂನ್ 21, 2011

ಹ್ಯಾಕಿಂಗ್ ಹಾವಳಿ

ಟಿ ಜಿ ಶ್ರೀನಿಧಿ

ಈಚಿನ ಕೆಲದಿನಗಳಿಂದ ಗಣಕ ಲೋಕದಲ್ಲೆಲ್ಲ ಹ್ಯಾಕಿಂಗ್‌ನದೇ ಸುದ್ದಿ. ಸೋನಿ, ಲಾಕ್‌ಹೀಡ್ ಮಾರ್ಟಿನ್, ಹೋಂಡಾ, ನಿಂಟೆಂಡೋ, ಸಿಟಿಬ್ಯಾಂಕ್ - ಹೀಗೆ ದೊಡ್ಡದೊಡ್ಡ ಸಂಸ್ಥೆಗಳೆಲ್ಲ ಒಂದರ ಹಿಂದೊಂದರಂತೆ ಹ್ಯಾಕರ್‌ಗಳ ದಾಳಿಗೆ ತುತ್ತಾಗುತ್ತಿವೆ. ತನ್ನ ಪ್ಲೇಸ್ಟೇಷನ್ ಜಾಲದ ಲಕ್ಷಾಂತರ ಬಳಕೆದಾರರಿಗೆ ಸಂಬಂಧಿಸಿದ ಮಾಹಿತಿ ಹ್ಯಾಕರ್‌ಗಳ ಕೈಸೇರಿದ್ದನ್ನು ಒಪ್ಪಿಕೊಂಡು ಬಹಿರಂಗವಾಗಿ ಕ್ಷಮೆಯಾಚಿಸುವಂತಹ ಪರಿಸ್ಥಿತಿ ಸೋನಿಯಂತಹ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಸಂಸ್ಥೆಗೂ ಬಂದಿದೆ. ಅಷ್ಟೇ ಏಕೆ, ಗಣಕಗಳಲ್ಲಿರುವ ಮಾಹಿತಿಯನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಬೇರೆ ಸಂಸ್ಥೆಗಳಿಗೆಲ್ಲ ನೆರವುನೀಡುವ ಆರ್‌ಎಸ್‌ಎ ಸಂಸ್ಥೆಗೂ ಹ್ಯಾಕರ್‌ಗಳ ಕಾಟ ತಪ್ಪಿಲ್ಲ.

ಈ ಎಲ್ಲ ಹ್ಯಾಕಿಂಗ್ ದಾಳಿಗಳಿಂದಾಗಿ ರಹಸ್ಯ ಕಡತಗಳು, ಹಣಕಾಸು ವ್ಯವಹಾರಕ್ಕೆ ಸಂಬಂಧಪಟ್ಟ ಮಾಹಿತಿ, ಬಳಕೆದಾರರ ವೈಯಕ್ತಿಕ ವಿವರಗಳು ಸೇರಿದಂತೆ ಅಪಾರ ಪ್ರಮಾಣದ ಮಾಹಿತಿ ಈಗಾಗಲೇ ಅಪಾತ್ರರ ಕೈಸೇರಿದೆ ಎನ್ನಲಾಗಿದೆ. ಹೀಗೆ ಕಳುವಾದ ಮಾಹಿತಿಯನ್ನು ಬಳಸಿಕೊಂಡು ದುಷ್ಕರ್ಮಿಗಳು ಯಾವಾಗ ಏನು ಮಾಡುತ್ತಾರೋ ಎಂದು ಗಾಬರಿಯಿಂದ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇಷ್ಟಕ್ಕೂ ಈ ಹ್ಯಾಕಿಂಗ್ ಎಂದರೇನು?

ಸೋಮವಾರ, ಜೂನ್ 20, 2011

ಪುಸ್ತಕ ಬಿಡುಗಡೆ - "ಭೂಮಿಗುದುರಿತೆ ಜೀವ?"


ಶ್ರೀ ಕೊಳ್ಳೇಗಾಲ ಶರ್ಮ ಅವರ "ಭೂಮಿಗುದುರಿತೆ ಜೀವ? ಮತ್ತು ಇತರ ಪ್ರಶ್ನೆಗಳು" ಕೃತಿ ಜೂನ್ ೨೫ರಂದು ಸಂಜೆ ಲೋಕಾರ್ಪಣೆಗೊಳ್ಳಲಿದೆ. ಬೆಂಗಳೂರಿನ ಜೆ. ಸಿ. ರಸ್ತೆಯಲ್ಲಿರುವ ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮ ಓದುಗರಿಗೆ ತಮ್ಮ ನೆಚ್ಚಿನ ವಿಜ್ಞಾನ ಬರಹಗಾರರನ್ನೆಲ್ಲ ಒಟ್ಟಿಗೆ ಭೇಟಿಯಾಗುವ ಅವಕಾಶ ಒದಗಿಸಲಿದೆ. ಇದೇ ಸಂದರ್ಭದಲ್ಲಿ ಹಿರಿಯ ವಿಜ್ಞಾನ ಬರಹಗಾರರಾದ ಪ್ರೊ. ಅಡ್ಯನಡ್ಕ ಕೃಷ್ಣಭಟ್, ಪ್ರೊ. ಜೆ. ಆರ್. ಲಕ್ಷ್ಮಣರಾವ್ ಹಾಗೂ ನವಕರ್ನಾಟಕ ಪ್ರಕಾಶನದ ಶ್ರೀ ಆರ್. ಎಸ್. ರಾಜಾರಾಮ್ ಅವರನ್ನು ಪೆನ್ ಸರ್ಕಲ್ ಅಂತರಜಾಲ ಬಳಗದ ವತಿಯಿಂದ ಗೌರವಿಸಲಾಗುವುದು.

ಹೆಚ್ಚಿನ ವಿವರಗಳಿಗಾಗಿ ಆಹ್ವಾನ ಪತ್ರಿಕೆಯ ಮೇಲೆ ಕ್ಲಿಕ್ ಮಾಡಿ.

ಶುಕ್ರವಾರ, ಜೂನ್ 17, 2011

ಮಳೆಗಾಡಿನ ಬಿರುಗಾಳಿ

ಪಶ್ಚಿಮಘಟ್ಟದ ಅರಣ್ಯ ಪ್ರದೇಶವನ್ನು ವಿಶ್ವಪರಂಪರೆಯ ತಾಣಗಳ ಪಟ್ಟಿಗೆ ಸೇರಿಸಲು ಒಪ್ಪದ ರಾಜ್ಯ ಸರಕಾರದ ನಿಲುವು ಸಾಕಷ್ಟು ವಾದವಿವಾದಗಳನ್ನು ಹುಟ್ಟುಹಾಕಿದೆ. ಈ ಕುರಿತು ಹಿರಿಯ ವಿಜ್ಞಾನ ಲೇಖಕ ಶ್ರೀ ಟಿ. ಆರ್. ಅನಂತರಾಮುರವರ ಅಭಿಪ್ರಾಯಗಳು ಇಲ್ಲಿವೆ...
ವಿಶ್ವಪರಂಪರಾ ತಾಣಗಳ ಪಟ್ಟಿಯಲ್ಲಿ ಪಶ್ಚಿಮಘಟ್ಟದಲ್ಲಿ ಗುರುತಿಸಿರುವ ಹತ್ತು ತಾಣಗಳನ್ನು ಕೈಬಿಡಿ ಎಂದು ಕರ್ನಾಟಕ ಸರ್ಕಾರ ಯುನೆಸ್ಕೋಗೆ ಒತ್ತಾಯ ಮಾಡಿರುವುದನ್ನು ನೋಡಿದರೆ ಬಹುಶಃ ಸರ್ಕಾರದ ಯಾರೊಬ್ಬರಿಗೂ ವಿಶ್ವಪರಂಪರಾತಾಣದ ಬಗ್ಗೆ ಮೂಲ ಪರಿಕಲ್ಪನೆಯೇ ಇಲ್ಲ ಎನ್ನಿಸುತ್ತದೆ.

ಇದಕ್ಕಿಂತ ಹೆಚ್ಚಿನ ಅಚ್ಚರಿ ಮೂಡಿಸಿರುವುದು ೧೯೮೬ರಲ್ಲಿ ಯುನೆಸ್ಕೋ `ಮನುಷ್ಯ ಮತ್ತು ಜೀವಿಗೋಳ' (ಮ್ಯಾನ್ ಅಂಡ್ ಬಯೋಸ್ಪಿಯರ್) ಯೋಜನೆಯಡಿ ಈಗಾಗಲೇ ಭಾರತದಲ್ಲಿ ೧೭ ತಾಣಗಳನ್ನು ಗುರುತಿಸಿ, ಆ ಪೈಕಿ ನಮ್ಮ ನೀಲಗಿರಿಯ ೫,೫೨೦ ಚದರ ಕಿಲೋ ಮೀಟರ್ ಪ್ರದೇಶವನ್ನು (ಬಂಡೀಪುರ, ನಾಗರಹೊಳೆ, ವೈನಾಡು, ಸಿರೂರು ಪರ್ವತ ಸೇರಿದಂತೆ) ಜೀವಿಗೋಳದ ರಕ್ಷಿತಪ್ರದೇಶವೆಂದು ಸಾರಿದೆ. ಇಲ್ಲೂ ಕೇಂದ್ರ ಸರ್ಕಾರವೇ ಯುನೆಸ್ಕೋ ಗಮನ ಸೆಳೆದಿತ್ತು. ಈಗ ಈ ತಾಣಗಳಲ್ಲಿ ವ್ಯಾಪಕ ಕಾರ್ಯಕ್ರಮಗಳನ್ನು ಯುನೆಸ್ಕೋ ಭಾರತದ ನೆರವಿನೊಂದಿಗೆ ಕೈಗೊಂಡಿದೆ. ಈ ಕಾರ್ಯಕ್ರಮದಡಿ ಮನುಷ್ಯ ಮತ್ತು ನಿಸರ್ಗದ ಮಧ್ಯೆ ಎರಡಕ್ಕೂ ಗಾಸಿಯಾಗದಂತೆ ನಾವು ಜೀವಿ ಪರಿಸ್ಥಿತಿಯನ್ನು ಹೇಗೆ ಉಳಿಸಿಕೊಳ್ಳಬಹುದು ಎಂಬುದೂ ಒಂದು. ಇನ್ನೊಂದು ಇಂದಿನ ನಮ್ಮ ಚಟುವಟಿಕೆಗಳಿಗೆ ನಾಳೆ ನಿಸರ್ಗ ಹೇಗೆ ಸ್ಪಂದಿಸುತ್ತದೆ ಎಂಬ ಎಚ್ಚರ ತಳೆಯುವುದು.

ಬುಧವಾರ, ಜೂನ್ 8, 2011

ವಿಶ್ವವ್ಯಾಪಿ ಜಾಲ ಹುಟ್ಟಿದ ಕಥೆ

ಟಿ ಜಿ ಶ್ರೀನಿಧಿ

ಈಚಿನ ವರ್ಷಗಳಲ್ಲಿ ವಿಶ್ವವ್ಯಾಪಿ ಜಾಲ (ವರ್ಲ್ಡ್‌ವೈಡ್ ವೆಬ್) ನಮ್ಮ ಬದುಕುಗಳ ಭಾಗವೇ ಆಗಿಹೋಗಿದೆ. ಅಂತರಜಾಲದಲ್ಲಿ (ಇಂಟರ್‌ನೆಟ್) ಲಭ್ಯವಿರುವ ಮಾಹಿತಿಯನ್ನು ನಮಗೆ ಸುಲಭವಾಗಿ ದೊರಕುವಂತೆ ಮಾಡುವ ಅತ್ಯಂತ ಜನಪ್ರಿಯ ವ್ಯವಸ್ಥೆ ಇದು.

ವಿಶ್ವವ್ಯಾಪಿ ಜಾಲದಲ್ಲಿ ವಿಹರಿಸುವಾಗ ಅದರ ಅಗಾಧತೆ ಹಾಗೂ ವೈವಿಧ್ಯಮಯ ಸಾಧ್ಯತೆಗಳು ನಮ್ಮಲ್ಲಿ ಬೆರುಗು ಹುಟ್ಟಿಸುತ್ತವೆ. ಕೆಲವೊಂದು ಸಲ ಇಷ್ಟೊಂದು ಸಂಕೀರ್ಣವಾದ ಈ ವ್ಯವಸ್ಥೆಯನ್ನು ಅದ್ಯಾರು ರೂಪಿಸಿದರಪ್ಪ ಎಂಬ ಪ್ರಶ್ನೆಯೂ ಮೂಡುತ್ತದೆ.

ಆ ಪ್ರಶ್ನೆಗೆ ಉತ್ತರರೂಪವಾಗಿ ನಿಲ್ಲುವ ಹೆಸರು ಸರ್ ಟಿಮ್ ಬರ್ನರ್ಸ್-ಲೀ ಅವರದು.

ಭಾನುವಾರ, ಜೂನ್ 5, 2011

ಇಜ್ಞಾನ ವಿಶೇಷ: ಪರಿಸರ ದಿನ ಮತ್ತೆ ಬಂದಿದೆ...

ನಾಗೇಶ ಹೆಗಡೆ
ಇಜ್ಞಾನ ಪರಿಸರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ. ಪರಿಸರ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ.
ಈ ಬಾರಿಯ ವಿಶ್ವ ಪರಿಸರ ದಿನಾಚರಣೆಗೆ ವಿಶೇಷ ಮಹತ್ವ ಇದೆ. ಇದೇ ಮೊದಲ ಬಾರಿಗೆ ಭಾರತವನ್ನು 'ಆತಿಥೇಯ ರಾಷ್ಟ್ರ' ಎಂದು ವಿಶ್ವಸಂಸ್ಥೆ ಘೋಷಿಸಿದೆ. ದಿಲ್ಲಿ ಮತ್ತು ಮುಂಬೈಗಳಲ್ಲಿ ವಿಶ್ವಸಂಸ್ಥೆಯೇ ಭಾರತದೊಂದಿಗೆ ಜಂಟಿಯಾಗಿ ಜೂನ್ ೫ರಂದು ಕಾರ್ಯಕ್ರಮಗಳನ್ನು ಆಯೋಜಿಸಲಿದೆ ಮತ್ತು ಅದು ಜಗತ್ತಿಗೆಲ್ಲ ಟಾಮ್ ಟಾಮ್ ಆಗುವಂತೆ ನೋಡಿಕೊಳ್ಳುತ್ತದೆ.

೨೦೧೧ರ ಇಡೀ ವರ್ಷವನ್ನು 'ಅರಣ್ಯಗಳ ಅಂತರರಾಷ್ಟ್ರೀಯ ವರ್ಷ' ಎಂದು ವಿಶ್ವಸಂಸ್ಥೆ ಘೋಷಣೆ ಮಾಡಿರುವುದರಿಂದ ಸಹಜವಾಗಿಯೇ ಜಾಗತಿಕ ಮಟ್ಟದ ಎಲ್ಲ ಕಾರ್ಯಕ್ರಮಗಳಲ್ಲೂ ಅರಣ್ಯವೇ ಒತ್ತುಗುರಿ ಆಗಿರುತ್ತದೆ. ಅದಕ್ಕೇ ಈ ಬಾರಿಯ ವಿಶ್ವ ಪರಿಸರ ದಿನಕ್ಕೂ ಅರಣ್ಯವನ್ನೇ ಮುಖ್ಯ ವಿಷಯವನ್ನಾಗಿ ಮಾಡಿಕೊಳ್ಳಲು ಎಲ್ಲ ರಾಷ್ಟ್ರಗಳಿಗೆ ಸೂಚಿಸಲಾಗಿದೆ. ಅದರಲ್ಲೂ ಈ ವರ್ಷ 'ಅರಣ್ಯ: ನಿಮ್ಮ ಸೇವೆಯಲ್ಲಿ ನಿಸರ್ಗ' ಎಂಬ ಧ್ಯೇಯವಾಕ್ಯವನ್ನೇ ಮುಂದಿಟ್ಟುಕೊಂಡು ಜೂನ್ ೫ರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಇ-ಜ್ಞಾನ ಪರಿಸರ ಸಂಚಿಕೆ

ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ಕನ್ನಡ ವಿದ್ಯುನ್ಮಾನ ಪತ್ರಿಕೆಯ ಮೊದಲ ಸಂಚಿಕೆಯನ್ನು ಜ್ಞಾನ ನಿಮ್ಮ ಮುಂದಿಡುತ್ತಿದೆ.

'ಪರಿಸರ ಸಂಚಿಕೆ'ಯಾಗಿ ಮೂಡಿಬಂದಿರುವ ನಮ್ಮ ಮೊದಲ ಪ್ರಯತ್ನ ಇದೀಗ ಜ್ಞಾನ ಡಾಟ್ ಕಾಮ್‌ನಲ್ಲಿ ಲಭ್ಯವಿದೆ. ನಿಮ್ಮ ಅನಿಸಿಕೆ ಅಭಿಪ್ರಾಯಗಳಿಗೆ ಆದರದ ಸ್ವಾಗತ.

ಜ್ಞಾನ ಪರಿಸರ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶನಿವಾರ, ಜೂನ್ 4, 2011

ಪರಿಸರ ದಿನ ವಿಶೇಷ: ವನ್ಯಜೀವಿ ಪ್ರೇಮ - ನಮ್ಮ ನಿಮ್ಮಲ್ಲಿ!?

ಟಿ. ಎಸ್. ಗೋಪಾಲ್

ನಾಳೆ (ಜೂನ್ ೫) ವಿಶ್ವ ಪರಿಸರ ದಿನ. ಈ ಸಂದರ್ಭದಲ್ಲಿ ಇಜ್ಞಾನ ವಿದ್ಯುನ್ಮಾನ ಪತ್ರಿಕೆಯ ಮೊದಲ ಸಂಚಿಕೆ 'ಪರಿಸರ ಸಂಚಿಕೆ'ಯಾಗಿ ಲಭ್ಯವಾಗಲಿದೆ. ನಿರೀಕ್ಷಿಸಿ!!!

"ಬದುಕನ್ನು ಕುರಿತು ನಿಜವಾದ ಪ್ರೀತಿಯಿದ್ದವನಿಗೆ ಮಾತ್ರ ಅದರ ಸಮೃದ್ಧಿಯಲ್ಲಿ, ವೈವಿಧ್ಯತೆಯಲ್ಲಿ ಆಸಕ್ತಿ ಹುಟ್ಟೀತು. ಅದಿಲ್ಲದೆ, ಬದುಕನ್ನು ಕೇವಲ ವ್ಯಾವಹಾರಿಕವಾಗಿ ಹಾಗೂ ಪ್ರಾಯೋಜನಿಕ ದೃಷ್ಟಿಯಿಂದ ನೋಡುವವನಿಗೆ ಅದರೊಳಗಿನ ಚಟುವಟಿಕೆಯಾಗಲೀ ಜೀವಂತಿಕೆಯಾಗಲೀ ಕಂಡೀತು ಹೇಗೆ?" - ಡಾ|| ಜಿ. ಎಸ್. ಶಿವರುದ್ರಪ್ಪ

ಕಾಡನ್ನು ಉಳಿಸಬೇಕು, ವನ್ಯಪ್ರಾಣಿಗಳನ್ನು ಕಾಪಾಡಬೇಕು ಎಂದು ಮಂತ್ರಿಗಳಿಂದ ಹಿಡಿದು ಶ್ರೀಸಾಮಾನ್ಯನವರೆಗೆ ಎಲ್ಲರೂ ಹೇಳುತ್ತಾರೆ. ಆದರೆ ಅದು ಹೇಗೆಂದು ಯಾರೂ ಯೋಚಿಸುವ ಗೋಜಿಗೆ ಹೋಗುವುದಿಲ್ಲ. ಹೇಗಿದ್ದರೂ ಅದು ಅರಣ್ಯ ಇಲಾಖೆಯವರ ಕೆಲಸ, ನೋಡಿಕೊಳ್ಳಲಿ - ಎಂಬುದೇ ಬಹುಜನರ ಆಲೋಚನೆ.

ಅಣೆಕಟ್ಟೆಗಳಿಂದ ಹಿಡಿದು ಬೃಹದಾಕಾರದ ವಿದ್ಯುತ್ ಕಂಬಗಳವರೆಗೆ ಸಕಲವೂ ಅರಣ್ಯಪ್ರದೇಶಗಳಲ್ಲೇ ಸ್ಥಾಪಿತವಾಗುವಂತೆ ಯೋಜನೆಗಳನ್ನು ರೂಪಿಸುವ ತಜ್ಞರು, ವೋಟುಗಳು ಮಾತ್ರವೇ ಶಾಶ್ವತ ಸತ್ಯವೆಂದು ಭ್ರಮಿಸಿರುವ ರಾಜಕಾರಣಿಗಳು, ಜನಪರ ಕಾರ್ಯಗಳ ನೆಪದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಕಾತರರಾಗಿರುವ ಅರಣ್ಯ ಇಲಾಖೆಯ ಅಧಿಕಾರಿಗಳು, ಕಾಡನ್ನೇ ನೋಡದೆ ವನ್ಯಜೀವಿ ಹಾಗೂ ಮಾನವನ ಸಹಜೀವನದ ಬಗೆಗೆ ಭಾಷಣಬಿಗಿಯುವ ಪರಿಸರವಾದಿ ಮಹಾಶಯರು ಮೊದಲಾಗಿ ಸಕಲರೂ ಅರಣ್ಯನಾಶದ ಪಾಲುದಾರರಾಗಿದ್ದಾರೆ.

ಗುರುವಾರ, ಜೂನ್ 2, 2011

ಏಳುನೂರು ಕೋಟಿ ತಲುಪಲಿದೆ ಭೂಮಿಯ ಜನಸಂಖ್ಯೆ: ಆಹಾರ-ಇಂಧನ ಸಮತೋಲನ ಹೇಗೆ?

ಟಿ ಜಿ ಶ್ರೀನಿಧಿ

೨೦೧೧ - ಭೂಗ್ರಹದ ಇತಿಹಾಸದ ಮಹತ್ವದ ಮೈಲಿಗಲ್ಲುಗಳಲ್ಲೊಂದು. ಭೂಮಿಯ ಜನಸಂಖ್ಯೆ ಈ ವರ್ಷದಲ್ಲಿ ಏಳುನೂರು ಕೋಟಿ ತಲುಪಲಿದೆ.

ಈಚಿನ ವರ್ಷಗಳಲ್ಲಿ ಜನರ ಜೀವನಮಟ್ಟ ಕೊಂಚ ಸುಧಾರಿಸಿದೆ, ನಿಜ. ಆದರೆ ಇಂದಿಗೂ ಜಗತ್ತಿನಲ್ಲಿರುವ ಸಂಪತ್ತಿನ ಅರ್ಧಭಾಗವನ್ನು ಶೇಕಡಾ ಎರಡರಷ್ಟು ಸಂಖ್ಯೆಯ ಜನರೇ ನಿಯಂತ್ರಿಸುತ್ತಿದ್ದಾರೆ.

ಬಡವರು ಹಾಗೂ ಶ್ರೀಮಂತರ ನಡುವಿನ ಈ ಭಾರೀ ಕಂದರವನ್ನು ಮಧ್ಯಮವರ್ಗದ ಜನ ನಿಧಾನವಾಗಿ ಮುಚ್ಚುತ್ತಿದ್ದಾರೆ. ಬಡವರನ್ನು ಮಧ್ಯಮವರ್ಗದತ್ತ, ಮಧ್ಯಮವರ್ಗದವರನ್ನು ಸಿರಿವಂತಿಕೆಯತ್ತ ಕೊಂಡೊಯ್ಯುವ ಪ್ರಕ್ರಿಯೆ, ನಿಧಾನವಾಗಿಯಾದರೂ, ನಡೆಯುತ್ತಿದೆ.

ಹಿಂದುಳಿದ ರಾಷ್ಟ್ರಗಳು ತಮ್ಮ ಹಣೆಪಟ್ಟಿ ಕಳಚಿಕೊಳ್ಳುವ ಉದ್ದೇಶದಿಂದ ಅಭಿವೃದ್ಧಿಹೊಂದಿದ ರಾಷ್ಟ್ರಗಳ ಜೀವನಶೈಲಿ ಅನುಕರಿಸಲು ಪ್ರಯತ್ನಿಸುತ್ತಿವೆ. ಇನ್ನು ಅಭಿವೃದ್ಧಿಹೊಂದಿದ ದೇಶಗಳಿಗೆ ತಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳುವ ಯಾವ ಉದ್ದೇಶವೂ ಇದ್ದಂತಿಲ್ಲ. ಹೀಗಾಗಿ ವಿಶ್ವದ ಸಂಪನ್ಮೂಲಗಳಿಗೆ ಬೇಡಿಕೆ ತೀವ್ರವಾಗಿ ಹೆಚ್ಚುತ್ತಿದೆ.

'ಬೇಕು'ಗಳ ಪಟ್ಟಿ ದೊಡ್ಡದಾಗುತ್ತಿದ್ದಂತೆ ಅದರ ಪರಿಣಾಮ ಅಂತಿಮವಾಗಿ ಆಗುವುದು ಇಂಧನಗಳ ಮೇಲೆಯೇ. ವಿದ್ಯುತ್ತು, ಸಂಚಾರ ವ್ಯವಸ್ಥೆ, ಆಹಾರ, ಬಟ್ಟೆಬರೆ, ಸಂವಹನ ವ್ಯವಸ್ಥೆ - ಹೀಗೆ ಯಾವುದನ್ನೇ ಗಮನಿಸಿದರೂ ಅದರ ಉತ್ಪಾದನೆಯಾಗುವಲ್ಲಿಂದ ಪ್ರಾರಂಭಿಸಿ ನಾವು ಅದನ್ನು ಬಳಸುವವರೆಗೆ ಎಲ್ಲ ಹಂತಗಳಲ್ಲೂ ಒಂದಲ್ಲ ಒಂದು ಬಗೆಯ ಇಂಧನ ಬೇಕು. ಕೃಷಿಯ ಉದಾಹರಣೆಯನ್ನೇ ನೋಡಿ - ರಸಗೊಬ್ಬರ ತಯಾರಿಕೆಗೆ, ಅದರ ಸಾಗಾಣಿಕೆಗೆ, ಕೃಷಿಭೂಮಿಯಲ್ಲಿ ಟ್ರಾಕ್ಟರ್ ನಡೆಸಲು, ಬೆಳೆಯನ್ನು ಸಂಸ್ಕರಿಸಲು ಎಲ್ಲದಕ್ಕೂ ಇಂಧನ ಬೇಕು. ಆಮೇಲೂ ಅಷ್ಟೆ - ಕೃಷಿ ಉತ್ಪನ್ನವನ್ನು ಮಾರುಕಟ್ಟೆಗೆ ತಲುಪಿಸಲು, ಅಲ್ಲಿ ಕೊಂಡ ವಸ್ತುಗಳನ್ನು ಮನೆಗೆ ಒಯ್ಯಲು, ಕಡೆಗೆ ಬೇಯಿಸಿ ತಿನ್ನಲಿಕ್ಕೂ ಇಂಧನ ಬೇಕೇ ಬೇಕು. ಹೀಗಾಗಿ ಪೆಟ್ರೋಲ್, ಡೀಸಲ್ ಮುಂತಾದ ಪಳೆಯುಳಿಕೆ ಇಂಧನಗಳಿಲ್ಲದೆ ಯಾವ ಕೆಲಸವೂ ಸಾಗುವುದೇ ಕಷ್ಟ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಆದರೆ ಒಂದಲ್ಲ ಒಂದುದಿನ ಮುಗಿದುಹೋಗಲಿರುವ ಈ ಇಂಧನಮೂಲಗಳನ್ನು ನೆಚ್ಚಿಕೊಳ್ಳುವುದು ಎಷ್ಟು ಸರಿ? ಹೆಚ್ಚುತ್ತಿರುವ ಜನಸಂಖ್ಯೆ, ಏರುತ್ತಿರುವ ಬೇಡಿಕೆಗಳಿಗೆ ಸರಿಸಮಾನವಾಗಿ ಇಂಧನ ಪೂರೈಕೆ ವ್ಯವಸ್ಥೆಮಾಡಿಕೊಳ್ಳುವುದು ಹೇಗೆ?

ಮಂಗಳವಾರ, ಮೇ 31, 2011

ಇಆರ್‌ಪಿ ಅಂದ್ರೆ ಇಷ್ಟೇನೇ...

ಟಿ ಜಿ ಶ್ರೀನಿಧಿ

ದಿನಕ್ಕೆ ನೂರಿನ್ನೂರು ರೂಪಾಯಿ ಸಂಪಾದಿಸುವ ಪುಟ್ಟ ದಿನಸಿ ಅಂಗಡಿಗೂ ನಡೆಸುವುದಕ್ಕೂ ನೂರಾರು ಕೋಟಿ ವ್ಯವಹಾರ ನಡೆಸುವ ದೊಡ್ಡದೊಂದು ಕಾರ್ಖಾನೆ ನಡೆಸುವುದಕ್ಕೂ ಏನೇನು ಸಾಮ್ಯತೆಗಳಿವೆ ಹೇಳುತ್ತೀರಾ?

ಏನೇನೂ ಇಲ್ಲ ಎಂದಿರಾದರೆ ನಿಮ್ಮ ಉತ್ತರ ಖಂಡಿತಾ ತಪ್ಪು.

ಅಂಗಡಿಯಲ್ಲಿ ಬೇರೆಬೇರೆ ವಸ್ತುಗಳ ದಾಸ್ತಾನು ಎಷ್ಟಿದೆ, ಯಾವುದೆಲ್ಲ ಮುಗಿಯುತ್ತ ಬಂದಿದೆ, ನಾಳೆ ಪಕ್ಕದಮನೆಯವರಿಗೆ ತಿಂಗಳ ದಿನಸಿ ಪೂರೈಸಬೇಕಾದರೆ ಏನನ್ನೆಲ್ಲ ಕೊಂಡುತರಬೇಕು ಎನ್ನುವುದನ್ನೆಲ್ಲ ಅಂಗಡಿಯ ಮಾಲೀಕ ಗಮನಿಸುತ್ತಿರಬೇಕಾಗುತ್ತದೆ. ಖರ್ಚುವೆಚ್ಚ, ಲಾಭನಷ್ಟಗಳ ಲೆಕ್ಕವನ್ನೂ ಇಟ್ಟಿರಬೇಕಾಗುತ್ತದೆ. ಇದನ್ನೆಲ್ಲ ಬರೆದಿಟ್ಟುಕೊಳ್ಳಲು ಆತ ಹತ್ತಾರು ಚೀಟಿಗಳನ್ನೋ ಪುಟ್ಟದೊಂದು ಪುಸ್ತಕವನ್ನೋ ಇಟ್ಟುಕೊಂಡಿರುತ್ತಾನೆ.

ದೊಡ್ಡ ಕಾರ್ಖಾನೆಯಲ್ಲಿಯೂ ಹೀಗೆಯೇ - ಕಚ್ಚಾವಸ್ತುಗಳ ದಾಸ್ತಾನು, ಉತ್ಪಾದನೆಯ ಪ್ರಮಾಣ, ಮುಂದಿನ ದಿನಗಳಲ್ಲಿ ಬರಬಹುದಾದ ಬೇಡಿಕೆಯ ಅಂದಾಜು, ಉದ್ಯೋಗಿಗಳ ಸಂಬಳ, ಲಾಭನಷ್ಟಗಳ ಲೆಕ್ಕಾಚಾರ ಇವೆಲ್ಲವನ್ನು ಅಲ್ಲಿಯೂ ಸದಾಕಾಲ ಗಮನಿಸುತ್ತಲೇ ಇರಬೇಕಾಗುತ್ತದೆ.

ಇದನ್ನೆಲ್ಲ ಗಮನಿಸಿಕೊಳ್ಳಲು ಅವರು ಇಆರ್‌ಪಿ ತಂತ್ರಾಂಶ ಬಳಸುತ್ತಾರೆ ಎನ್ನುವುದೊಂದೇ ವ್ಯತ್ಯಾಸ.

ಭಾನುವಾರ, ಮೇ 29, 2011

ಲಿಂಕ್ಡ್‌ಇನ್ ಲಂಘನ

ಟಿ ಜಿ ಶ್ರೀನಿಧಿ

ಕಳೆದ ವಾರ ನ್ಯೂಯಾರ್ಕ್ ಷೇರು ವಿನಿಮಯ ಕೇಂದ್ರದಲ್ಲಿ ಲಿಂಕ್ಡ್‌ಇನ್ ಎನ್ನುವ ಸಂಸ್ಥೆಯ ಷೇರುಗಳ ವಹಿವಾಟು ಪ್ರಾರಂಭವಾಯಿತು. ಅದೂ ಅಂತಿಂತಹ ಪ್ರಾರಂಭವೇನಲ್ಲ, ತಲಾ ನಲವತ್ತೈದು ಡಾಲರುಗಳ ಬೆಲೆಯಲ್ಲಿ ವಿತರಣೆಯಾಗಿದ್ದ ಈ ಷೇರಿನ ಬೆಲೆ ಎರಡನೆಯ ದಿನದ ವೇಳೆಗಾಗಲೇ ನೂರು ಡಾಲರುಗಳ ಆಸುಪಾಸಿಗೆ ತಲುಪಿಬಿಟ್ಟಿತ್ತು. ನಮ್ಮ ಲೆಕ್ಕದಲ್ಲಿ ಹೇಳುವುದಾದರೆ ಈ ಬೆಲೆಯಲ್ಲಿ ಲಿಂಕ್ಡ್‌ಇನ್ ಸಂಸ್ಥೆಯ ಮೌಲ್ಯ ಸುಮಾರು ನಲವತ್ತು ಸಾವಿರ ಕೋಟಿ ರೂಪಾಯಿಗಳಷ್ಟಾಗುತ್ತದೆ!

ಇದನ್ನೆಲ್ಲ ನೋಡಿದ, ಕೇಳಿದ ಅನೇಕರ ಮನಸ್ಸಿನಲ್ಲಿ ಹುಟ್ಟಿಕೊಂಡದ್ದು ಒಂದೇ ಪ್ರಶ್ನೆ - "ಇಷ್ಟೆಲ್ಲ ಭರ್ಜರಿಯಾಗಿ ಮಾರುಕಟ್ಟೆ ಪ್ರವೇಶಿಸಿದೆಯಲ್ಲ, ಇಷ್ಟಕ್ಕೂ ಈ ಸಂಸ್ಥೆ ಏನು ಮಾಡುತ್ತದೆ?"

ಬುಧವಾರ, ಮೇ 18, 2011

ಸ್ಕೈಪ್ ಸಮಾಚಾರ

ಟಿ ಜಿ ಶ್ರೀನಿಧಿ

ಅಂತರಜಾಲದ ಜನಪ್ರಿಯ ಉಪಯೋಗಗಳಲ್ಲಿ ಇನ್ಸ್‌ಟಂಟ್ ಮೆಸೇಜಿಂಗ್ ಅಥವಾ ಚಾಟಿಂಗ್ ಕೂಡ ಒಂದು. ಹರಟೆ ಅಥವಾ ಚಾಟ್ ಎಂದು ಕರೆಸಿಕೊಳ್ಳುವ ಈ ಮಾಧ್ಯಮದಲ್ಲಿ ಸಂದೇಶವಾಹಕ ತಂತ್ರಾಂಶದ ಸಂಪರ್ಕ ಹೊಂದಿರುವ ಯಾರು ಬೇಕಿದ್ದರೂ ಮತ್ತೊಬ್ಬರಿಗೆ ಸಂದೇಶಗಳನ್ನು ಕಳುಹಿಸುವುದು ಹಾಗೂ ಅವರ ಉತ್ತರಗಳನ್ನು ಪಡೆದುಕೊಳ್ಳಬಹುದು. ಪಠ್ಯ, ಧ್ವನಿ ಅಥವಾ ವೀಡಿಯೋ - ಈ ಯಾವುದೇ ರೂಪದಲ್ಲಿ ಹರಟೆ ಸಾಧ್ಯ.

ಅಂತರಜಾಲ ಸಂಪರ್ಕದಲ್ಲಿರುವಾಗ ಮಿತ್ರರ ಗಣಕಕ್ಕೆ ಕರೆ ಮಾಡಿ ಮಾತನಾಡುವುದು ಅಥವಾ 'ವಾಯ್ಸ್ ಚಾಟ್' ಮಾಡುವುದು ಜಾಲಿಗರಲ್ಲಿ ಬಹುತೇಕರ ಅಚ್ಚುಮೆಚ್ಚಿನ ಹವ್ಯಾಸ. ಗೆಳೆಯರೊಡನೆ ಮುಖಾಮುಖಿ ಮಾತನಾಡಲು ಅವಕಾಶಮಾಡಿಕೊಡುವ ವೀಡಿಯೋ ಚಾಟ್ ಕೂಡ ಸಾಕಷ್ಟು ಜನಪ್ರಿಯ. ನಮಗೆ ಬೇಕಾದವರೊಡನೆ ನೇರವಾಗಿ ಮಾತನಾಡಲು ಸಹಾಯಮಾಡುವ ಈ ಮಾಧ್ಯಮಗಳದ್ದು ಸಾಂಪ್ರದಾಯಿಕ ದೂರವಾಣಿಗಿಂತ ಬಹಳ ಕಡಿಮೆ ವೆಚ್ಚ; ಅಷ್ಟೇ ಅಲ್ಲ, ಹೇಳಬೇಕಾದ್ದನ್ನೆಲ್ಲ ಕೀಲಿಮಣೆಯಲ್ಲಿ ಕುಟ್ಟಬೇಕಾದ ಪಠ್ಯರೂಪದ ಚಾಟಿಂಗ್‌ಗಿಂತ ಇದು ಸುಲಭವೂ ಹೌದು!

ಈ ಬಗೆಯ ಸೇವೆಗಳನ್ನು ಒದಗಿಸುವ ಅನೇಕ ಸಂಸ್ಥೆಗಳು ಜಾಲಲೋಕದಲ್ಲಿ ಸಕ್ರಿಯವಾಗಿವೆ; ಗೂಗಲ್, ಯಾಹೂ ಮುಂತಾದ ಅನೇಕ ಜನಪ್ರಿಯ ತಾಣಗಳ ಮೂಲಕ ವಾಯ್ಸ್ ಹಾಗೂ ವೀಡಿಯೋ ಚಾಟಿಂಗ್ ಸೌಲಭ್ಯ ದೊರಕುತ್ತದೆ.

ಇಂತಹ ತಾಣಗಳ ಸಾಲಿನಲ್ಲಿ ಅಗ್ರಗಣ್ಯವಾಗಿ ನಿಲ್ಲುವುದು ಸ್ಕೈಪ್‌ನ ಹೆಸರು.

ಮಂಗಳವಾರ, ಮೇ 10, 2011

ವಿಶ್ವವ್ಯಾಪಿ ಜಾಲದಲ್ಲಿ ಮಾಹಿತಿಯ ಸಂಚಾರ

ಟಿ ಜಿ ಶ್ರೀನಿಧಿ

ಹೀಗೊಂದು ದಿನ ಬೆಳಗ್ಗೆ, ಯಾವುದೋ ಕಾರಣಕ್ಕಾಗಿ, ನಿಮ್ಮ ಮನೆಗೆ ದಿನಪತ್ರಿಕೆ ತಲುಪಲಿಲ್ಲ ಎಂದಿಟ್ಟುಕೊಳ್ಳೋಣ. ಪಕ್ಕದ ಮನೆಯವರನ್ನು ಕೇಳೋಣ ಎಂದುಕೊಂಡರೆ ಅವರ ಮನೆಗೂ ಪತ್ರಿಕೆ ಬಂದಿಲ್ಲ. ಹೀಗಿರುವಾಗ ಆ ದಿನ ಪತ್ರಿಕೆ ಓದಬೇಕಾದರೆ ಅಂತರಜಾಲದ ಮೊರೆಹೋಗುವುದೊಂದೇ ನಿಮ್ಮ ಮುಂದಿರುವ ಆಯ್ಕೆ.

ಸರಿ, ಈಗ ನೀವು ಉದಯವಾಣಿಯ ಜಾಲತಾಣವನ್ನು ಸಂದರ್ಶಿಸಲು ಹೊರಟಿದ್ದೀರಿ ಎಂದುಕೊಳ್ಳೋಣ. ಇದಕ್ಕಾಗಿ ಮೊದಲು ನಿಮ್ಮ ಗಣಕದಲ್ಲಿರುವ ಬ್ರೌಸರ್ ತಂತ್ರಾಂಶವನ್ನು ತೆರೆದು ಅಲ್ಲಿರುವ ವಿಳಾಸ ಪಟ್ಟಿಯಲ್ಲಿ (ಅಡ್ರೆಸ್ ಬಾರ್) ಉದಯವಾಣಿ ಡಾಟ್ ಕಾಮ್ ಎಂದು ದಾಖಲಿಸಿ ಎಂಟರ್ ಕೀಲಿ ಒತ್ತುತ್ತೀರಿ.

ಮುಂದೆ?

ಮಂಗಳವಾರ, ಮೇ 3, 2011

ಡೇಟಾ ವೇರ್‌ಹೌಸ್ ಎಂಬ ಮಾಹಿತಿ ಗೋದಾಮು


ಟಿ ಜಿ ಶ್ರೀನಿಧಿ

ಪಕ್ಕದ ರಸ್ತೆಯ ಬ್ಯಾಂಕಿಗೆ ಹೋಗಿ ಒಂದು ಲಕ್ಷ ಸಾಲ ತೆಗೆದುಕೊಂಡಿದ್ದ ವ್ಯಕ್ತಿ ಆ ಸಾಲ ತೀರಿಸದೆ ತಲೆಮರೆಸಿಕೊಂಡನಂತೆ. ಸ್ವಲ್ಪದಿನ ಬಿಟ್ಟು ದೂರದ ಇನ್ನೊಂದು ಊರಿಗೆ ಹೋಗಿ ಅಲ್ಲಿನ ಬ್ಯಾಂಕಿನಲ್ಲಿ ಐದು ಲಕ್ಷದ ಸಾಲ ಕೇಳಿದನಂತೆ, ನಮ್ಮ ಊರಿನಲ್ಲಿ ಸಾಲ ತೆಗೆದುಕೊಂಡು ಓಡಿಬಂದಿರುವ ವಿಷಯ ಇವರಿಗೇನು ಗೊತ್ತು ಎಂಬ ಧೈರ್ಯದಿಂದ.

ತನ್ನ ಹಣಕಾಸು ವ್ಯವಹಾರಕ್ಕೆ ಸಂಬಂಧಪಟ್ಟ ಎಲ್ಲ ವಿವರಗಳು ಎಲ್ಲ ಬ್ಯಾಂಕುಗಳಿಗೂ ಗೊತ್ತಿರುತ್ತವೆ ಎಂಬ ವಿಷಯ ಮಾತ್ರ ಅವನಿಗೆ  ಗೊತ್ತೇ ಇರಲಿಲ್ಲ, ಪಾಪ!

ಗುರುವಾರ, ಏಪ್ರಿಲ್ 28, 2011

ಮಲಿನ ಗಾಳಿಯ ಮರುಚೇತನ ಸಾಧ್ಯ

ಕೊಳ್ಳೇಗಾಲ ಶರ್ಮ

ಬೆಂಗಳೂರಿನ ಉಸಿರುಗಟ್ಟಿಸುವ ಹೊಗೆಗಾಳಿಯಿಂದ ತಪ್ಪಿಸಿಕೊಂಡು ತುಸು ಆರಾಮ ಪಡೆಯಲು ಪ್ರತಿ ವಾರವೂ ವಾಹನದಲ್ಲಿ ಬೇರಾವುದೋ ಊರಿಗೆ ಓಟಕೀಳುವವರಲ್ಲಿ ನೀವೂ ಒಬ್ಬರಾಗಿದ್ದರೆ ಇದೋ ಇಲ್ಲೊಂದು ಸಮಾಧಾನಕರವಾದ ಸುದ್ದಿ. ನವದೆಹಲಿಯಲ್ಲಿ ಕೆಲವು ವರ್ಷಗಳ ಹಿಂದೆ ಅನುಷ್ಠಾನಕ್ಕೆ ಬಂದ ವಾಯುಮಾಲಿನ್ಯವನ್ನು ನಿಯಂತ್ರಿಸುವ ಕ್ರಮಗಳು ಮಲಿನವಾಗಿರುವ ಗಾಳಿಯ ದುಷ್ಪ್ರಭಾವವನ್ನು ಕಡಿಮೆ ಮಾಡುತ್ತವೆ ಎನ್ನುವ ಸುದ್ದಿಯನ್ನು ಅಟ್ಮಾಸ್ಫೆರಿಕ್ ಎನ್‌ವಿರಾನ್‌ಮೆಂಟ್ ಪತ್ರಿಕೆ ಪ್ರಕಟಿಸಿದೆ. ಅಮೆರಿಕೆಯ ಅಯೋವಾ ವಿಶ್ವವಿದ್ಯಾನಿಲಯದ ಭೂಗೋಳವಿಜ್ಞಾನಿ ಭಾರತ ಸಂಜಾತ ನರೇಶ್ ಕುಮಾರ್ ಬ್ರೌನ್ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರಜ್ಞ ಆಂಡ್ರ್ಯೂ ಫಾಸ್ಟರ್ ಜೊತೆಗೂಡಿ ಪ್ರಕಟಿಸಿರುವ ಒಂದು ವಿಶ್ಲೇಷಣಾ ಪ್ರಬಂಧವೊಂದು ಈ ತೀರ್ಮಾನಕ್ಕೆ ಬಂದಿದೆ.

ಮಂಗಳವಾರ, ಏಪ್ರಿಲ್ 26, 2011

ಇದು ಸೋಶಿಯಲ್ ನ್ಯೂಸ್

ಟಿ ಜಿ ಶ್ರೀನಿಧಿ

೨೦೦೮ರಲ್ಲೇ ಪ್ರಾರಂಭವಾಗಿದ್ದರೂ ನಿರೀಕ್ಷಿತ ಜನಪ್ರಿಯತೆ ಗಳಿಸುವಲ್ಲಿ ವಿಫಲವಾದ ಯಾಹೂ ಬಜ್ ಸೇವೆ ಏಪ್ರಿಲ್ ೨೧, ೨೦೧೧ರಿಂದ ಸ್ಥಗಿತಗೊಳ್ಳಲಿದೆ ಎಂಬ ಸುದ್ದಿ ಈಚೆಗೆ ಕೆಲ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿತ್ತು. ಯಾಹೂ ಡಾಟ್ ಕಾಮ್‌ನಲ್ಲಿ ಅಂಥದ್ದೊಂದು ಸೇವೆ ಲಭ್ಯವಿತ್ತು ಎನ್ನುವುದೇ ಬಹಳಷ್ಟು ಜನಕ್ಕೆ ಗೊತ್ತಿರಲಿಲ್ಲ; ಹೀಗಾಗಿ ಅದು ನಿಂತುಹೋದ ಸುದ್ದಿ ಓದಿದವರಲ್ಲಿ ಅನೇಕರು ಕೇಳಿದ ಪ್ರಶ್ನೆ - "ಯಾಹೂ ಬಜ್ ಅಂದರೇನು?"

ಸೋಶಿಯಲ್ ನ್ಯೂಸ್ ವಿಶ್ವವ್ಯಾಪಿ ಜಾಲದ ಬಳಕೆದಾರರು ಬೇರೆಬೇರೆ ತಾಣಗಳಲ್ಲಿ ನೋಡಿ, ಓದಿ, ಮೆಚ್ಚಿದ ಮಾಹಿತಿಯನ್ನು ಇತರರೊಡನೆ ಒಂದೇ ವೇದಿಕೆಯಲ್ಲಿ ಹಂಚಿಕೊಳ್ಳಲು ಸಹಾಯಮಾಡುವ ತಾಣಗಳನ್ನು ಸೋಶಿಯಲ್ ನ್ಯೂಸ್ ಅಥವಾ ಸಾಮಾಜಿಕ ಸುದ್ದಿತಾಣಗಳು ಎಂದು ಕರೆಯುತ್ತಾರೆ.

ಈಗಷ್ಟೆ ಕಣ್ಣುಮುಚ್ಚಿದ ಯಾಹೂ ಬಜ್ ಕೂಡ ಇಂತಹುದೇ ಒಂದು ತಾಣ.

ಮಂಗಳವಾರ, ಏಪ್ರಿಲ್ 19, 2011

ಇಮೇಲ್ ಕ್ರಾಂತಿಯ ನಾಲ್ಕು ದಶಕ

ಟಿ ಜಿ ಶ್ರೀನಿಧಿ

ಇಮೇಲ್ ಕಂಡುಹಿಡಿದದ್ದು ಯಾರು? ಗಣಕಲೋಕದಲ್ಲಿ ಕೇಳಿಬರುವ ಅನೇಕ ಉತ್ತರವಿಲ್ಲದ ಪ್ರಶ್ನೆಗಳಲ್ಲಿ ಇದೂ ಒಂದು.

ಹೌದು, ಇಮೇಲ್ ತಂತ್ರಜ್ಞಾನವನ್ನು ಯಾರೋ ಒಬ್ಬ ವಿಜ್ಞಾನಿ ಯಾವುದೋ ಒಂದು ದಿನ ಇದ್ದಕ್ಕಿದ್ದಂತೆ ಕಂಡುಹಿಡಿಯಲಿಲ್ಲ; ಗಣಕಲೋಕದ ಅದೆಷ್ಟೋ ಆವಿಷ್ಕಾರಗಳಂತೆ ಸಾಕಷ್ಟು ದೀರ್ಘವಾದ ಅವಧಿಯಲ್ಲಿ ಅನೇಕ ತಂತ್ರಜ್ಞರ ಶ್ರಮದಿಂದ ವಿಕಾಸವಾದ ತಂತ್ರಜ್ಞಾನ ಅದು.

ಆದರೆ ಇಮೇಲ್ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದ ಅನೇಕ ಸಂಗತಿಗಳಿವೆ - ಇಮೇಲ್ ವಿಳಾಸಗಳಲ್ಲಿ @ ಚಿಹ್ನೆಯ ಬಳಕೆ ಪ್ರಾರಂಭವಾದದ್ದು ಇಂತಹ ಮೈಲಿಗಲ್ಲುಗಳಲ್ಲಿ ಅತ್ಯಂತ ಮಹತ್ವಪೂರ್ಣವಾದದ್ದು.

ಆ ಸಾಧನೆಗೆ ಈಗ ನಲವತ್ತು ವರ್ಷ.

ಸೋಮವಾರ, ಏಪ್ರಿಲ್ 18, 2011

ಗಣಕಿಂಡಿ ಅಂಕಣಕ್ಕೆ ನೂರರ ಸಂಭ್ರಮ

ಕನ್ನಡಪ್ರಭದಲ್ಲಿ ಪ್ರಕಟವಾಗುತ್ತಿರುವ ಡಾ| ಯು ಬಿ ಪವನಜ ಅವರ 'ಗಣಕಿಂಡಿ' ಅಂಕಣಕ್ಕೆ ಈಗ ನೂರು ವಾರದ ಸಂಭ್ರಮ. ನೂರು ಎಂಬ ವಿಷಯದ ಸುತ್ತಲೇ ರಚಿಸಲಾಗಿರುವ ಗಣಕಿಂಡಿಯ ಈ ವಾರದ ಕಂತು ಇಲ್ಲಿದೆ.

ಗುರುವಾರ, ಏಪ್ರಿಲ್ 14, 2011

ನೀರಸ ವಿಷಯದ ಅದ್ಭುತ ಪತ್ರಿಕೆಗಳು

ಕೊಳ್ಳೇಗಾಲ ಶರ್ಮ

ಏನು ಮಾರಾಯರೇ! ನಿಮ್ಮ ಹೆಸರು ಓದಿ ನೀವೆಲ್ಲೋ ಬಹಳ ವಯಸ್ಸಾದವರಿರಬೇಕು ಅಂದುಕೊಂಡಿದ್ದೆ. ಈಗ ನಮ್ಮ ಜೊತೆಯಿಲ್ಲದ ಹಿರಿಯ ಸಂಪಾದಕ ಸಂತೋಷ ಕುಮಾರ್ ಗುಲ್ವಾಡಿ ಇಪ್ಪತ್ತೈದು ವರ್ಷಗಳ ಹಿಂದೆ ಮೊತ್ತ ಮೊದಲು ಭೇಟಿಯಾದಾಗ ನನ್ನನ್ನು ಕುರಿತು ಹೇಳಿದ ಮಾತು ಇದು. ಲೇಖನವನ್ನು ಓದಿಯೇ ಲೇಖಕರ ಸ್ವರೂಪವನ್ನು ಊಹಿಸಿಕೊಳ್ಳುತ್ತಿದ್ದ ಕಾಲ ಅದು. ಗುಲ್ವಾಡಿಯವರಾದರೂ ಕೇವಲ ವಯಸ್ಸು ಹೆಚ್ಚಿಸಿದ್ದರು. ನನಗೆ ಪರಿಚಿತರಾದ ಪ್ರಖ್ಯಾತ ಹಾಸ್ಯ ಸಾಹಿತಿಗಳೊಬ್ಬರಿದ್ದಾರೆ. ಮುಖತಃ ಭೇಟಿ ಮಾಡಿದಾಗ ಅವರ ಮುಖದ ಮೇಲೆ ಮುಗುಳ್ನಗುವೂ ಕಾಣಿಸಲಿಕ್ಕಿಲ್ಲ. ಆದರೆ ಬಾಯಿ ಬಿಟ್ಟರೋ, ನೀವು ನಗುತ್ತಲೇ ಇರುತ್ತೀರಿ. ಅಷ್ಟು ಹಾಸ್ಯ! ಹೀಗಾಗಿ ಬರೆಹಕ್ಕೂ, ಲೇಖಕರ ಸ್ವರೂಪಕ್ಕೂ ಏನಕೇನ ಸಂಬಂಧವಿರಲಿಕ್ಕಿಲ್ಲ.

ಬುಧವಾರ, ಏಪ್ರಿಲ್ 13, 2011

ಪ್ರಜಾವಾಣಿಯಲ್ಲಿ ಇ-ಜ್ಞಾನ ಡಾಟ್ ಕಾಮ್

ಪ್ರಜಾವಾಣಿ ಏಪ್ರಿಲ್ ೧೩, ೨೦೧೧ರ ಸಂಚಿಕೆಯ ತಂತ್ರಜ್ಞಾನ ಪುರವಣಿಯಲ್ಲಿ ಇ-ಜ್ಞಾನ ಡಾಟ್ ಕಾಮ್ ಪರಿಚಯ ಪ್ರಕಟವಾಗಿದೆ. ಇದಕ್ಕೆ ಕಾರಣರಾದವರಿಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು.

ಮಂಗಳವಾರ, ಏಪ್ರಿಲ್ 12, 2011

ಸುರಕ್ಷಿತ ಜಾಲತಾಣಗಳ ಸುತ್ತ

ಟಿ ಜಿ ಶ್ರೀನಿಧಿ

ಆನ್‌ಲೈನ್ ಬ್ಯಾಂಕಿಂಗ್ - ವಿಶ್ವವ್ಯಾಪಿ ಜಾಲದ ಅತ್ಯಂತ ಜನಪ್ರಿಯ ಉಪಯೋಗಗಳಲ್ಲೊಂದು. ಪಕ್ಕದ ಬೀದಿಯ ಬ್ಯಾಂಕಿಗೆ ಹೋಗಿ ಮಾಡಬಹುದಾದ ಬಹುತೇಕ ಕೆಲಸಗಳನ್ನೆಲ್ಲ ನಮ್ಮ ಗಣಕದ ಮುಂದೆಯೇ ಕುಳಿತು ಮಾಡುವ ಸೌಲಭ್ಯವನ್ನು ಈ ವ್ಯವಸ್ಥೆ ನಮಗೆ ಒದಗಿಸಿಕೊಟ್ಟಿದೆ.

ನೀವು ಆನ್‌ಲೈನ್ ಬ್ಯಾಂಕಿಂಗ್ ವ್ಯವಸ್ಥೆ ಬಳಸಿದ್ದರೆ ಅಂತಹ ಸೇವೆ ಒದಗಿಸುವ ತಾಣ ಇತರ ಸಾಮಾನ್ಯ ತಾಣಗಳಿಗಿಂತ ಕೊಂಚ ಬೇರೆ ರೀತಿ ಇರುವುದನ್ನು ನೋಡಿರಬಹುದು - ಅವುಗಳ ವಿಳಾಸ ಇತರ ತಾಣಗಳಂತೆ 'http://' ಎಂದು ಪ್ರಾರಂಭವಾಗುವ ಬದಲು 'https://' ಎಂದು ಪ್ರಾರಂಭವಾಗಿರುತ್ತದೆ; ಜೊತೆಗೆ ನೀವು ಆ ತಾಣ ತೆರೆದಾಗ ಪರದೆಯ ಮೇಲೆ ಪುಟ್ಟದೊಂದು ಬೀಗದ ಚಿತ್ರವೂ ಕಾಣಿಸಿಕೊಂಡಿರುತ್ತದೆ.

ನೀವು ತೆರೆದಿರುವ ತಾಣ ನಿಮ್ಮ ವಹಿವಾಟು ನಡೆಸಲು ಸಾಕಷ್ಟು ಸುರಕ್ಷಿತವಾಗಿದೆ ಎಂದು ತಿಳಿಸುವ ಅಂಶಗಳು ಇವು.

ಸೋಮವಾರ, ಏಪ್ರಿಲ್ 11, 2011

ರೈಲುಗಳ ಲೋಕ

ರೈಲು ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ? ಅದರ ಚುಕುಬುಕು ಸದ್ದಂತೂ ಮಕ್ಕಳಿಗೆ ಅಚ್ಚುಮೆಚ್ಚು. ರೈಲು ಪ್ರಯಾಣವೂ ಅಷ್ಟೆ; ನಿಲ್ದಾಣದಲ್ಲಿನ ಗಡಿಬಿಡಿ, ತಿಂಡಿತಿನಿಸು ಮಾರಾಟಗಾರರ ಕೂಗು, ಸೇತುವೆ ಮೇಲೆ ಸುರಂಗದ ಒಳಗೆ ರೈಲಿನ ಓಟ - ಪ್ರತಿಯೊಂದೂ ವಿಶಿಷ್ಟ ಅನುಭವವೇ.

ರೈಲುಗಳಲ್ಲಿ ಅದೆಷ್ಟೋ ವಿಧಗಳಿವೆ. ಹಿಂದಿನ ಕಾಲದಲ್ಲಿ ಎಲ್ಲ ರೈಲುಗಳೂ ಕಲ್ಲಿದ್ದಲನ್ನು ಉರಿಸಿ ನೀರಿನ ಹಬೆಯನ್ನು ಉತ್ಪಾದಿಸಿಕೊಂಡು ಅದರ ಶಕ್ತಿಯಿಂದ ಚಲಿಸುತ್ತಿದ್ದವು. ಹೀಗಾಗಿಯೇ ರೈಲುಗಳಿಗೆ ಉಗಿಬಂಡಿ ಎಂಬ ಹೆಸರು ಬಂದದ್ದು.

ಮಂಗಳವಾರ, ಏಪ್ರಿಲ್ 5, 2011

ಮತ್ತೆ ಸುದ್ದಿಮಾಡಿದ ಸ್ಪೇಸ್ ಟೂರಿಸಂ

ಟಿ ಜಿ ಶ್ರೀನಿಧಿ

ಮನುಕುಲದ ಇತಿಹಾಸದಲ್ಲಿ ಪ್ರತಿಯೊಂದು ಹೊಸ ಆವಿಷ್ಕಾರ ನಡೆದಾಗಲೂ ಅದಕ್ಕೆ ವ್ಯಾಪಕವಾದ ಪ್ರತಿರೋಧಗಳು ವ್ಯಕ್ತವಾಗುತ್ತಲೇ ಬಂದಿವೆ. ಬೆಂಕಿಯ ಬಳಕೆಯಿಂದ ಪ್ರಾರಂಭಿಸಿ ವಿದ್ಯುತ್ತಿನ ಬಳಕೆಯವರೆಗೆ, ಕಾರು-ಬಸ್ಸು-ರೈಲುಗಳಿಂದ ವಿಮಾನದವರೆಗೆ, ಅಲೆಗ್ಸಾಂಡರ್ ಗ್ರಹಾಂಬೆಲ್‌ನ ದೂರವಾಣಿಯಿಂದ ಹಿಡಿದು ಇತ್ತೀಚಿನ ಮೊಬೈಲ್ ದೂರವಾಣಿಗಳವರೆಗೆ ಎಲ್ಲ ಹೊಸ ಉಪಕರಣ-ಸಲಕರಣೆಗಳೂ ಜನಪ್ರಿಯವಾಗುವ ಮುನ್ನ ಸಾಕಷ್ಟು ಉಪೇಕ್ಷೆ-ತಾತ್ಸಾರಕ್ಕೆ ತುತ್ತಾಗಿವೆ.

ಸೋಮವಾರ, ಏಪ್ರಿಲ್ 4, 2011

ಹೊಸ ಕಣಜ ಬಂದಿದೆ!

ಇ-ಜ್ಞಾನ ವಾರ್ತೆ 

'ಕಣಜ' ಅಂತರಜಾಲ ಕನ್ನಡ ಜ್ಞಾನಕೋಶದ ಹೊಸ ಆವೃತ್ತಿ ಇದೀಗ ಅನಾವರಣಗೊಂಡಿದೆ. ಈ ಜಾಲತಾಣವು ಈಗ ಪರೀಕ್ಷಾರ್ಥವಾಗಿ ಹಲವು ಲೇಖನಗಳನ್ನು / ಪುಸ್ತಕ ಭಾಗಗಳನ್ನು ಪ್ರಕಟಿಸಿದ್ದು ಎಲ್ಲವೂ ಸಂಪಾದನೆಯ ವಿವಿಧ ಹಂತದಲ್ಲಿವೆ. ಕಣಜಕ್ಕೆ ಭೇಟಿನೀಡಲು ಇಲ್ಲಿ ಕ್ಲಿಕ್ ಮಾಡಿ.   

ಮಂಗಳವಾರ, ಮಾರ್ಚ್ 29, 2011

ಟ್ವೀಟರ್ ಚಿಲಿಪಿಲಿಗೆ ಹ್ಯಾಪಿ ಬರ್ತ್‌ಡೇ

ಟಿ ಜಿ ಶ್ರೀನಿಧಿ

ಭಾರತ - ಆಸ್ಟ್ರೇಲಿಯಾ ಮ್ಯಾಚು ನೋಡ್ತಾ ಇದೀನಿ

ನಾನೂ ಅಷ್ಟೆ, ಸಖತ್ತಾಗಿದೆ ಮ್ಯಾಚು!

ಛೆ, ನಾನು ಮಿಸ್ ಮಾಡ್ಕೊತಿದೀನಿ, ಆಫೀಸಲ್ಲಿ ತುಂಬಾ ಕೆಲ್ಸ

ಬುಧವಾರ, ಮಾರ್ಚ್ 23, 2011

ಜಪಾನ್‌ಗಾಗಿ ಮಿಡಿದ ಜಾಲಲೋಕದ ಹೃದಯ

ಟಿ ಜಿ ಶ್ರೀನಿಧಿ

ಭೂಕಂಪ, ಸುನಾಮಿ, ವಿಕಿರಣ ಸೋರಿಕೆ, ಜ್ವಾಲಾಮುಖಿ ಸ್ಫೋಟ - ಒಂದರ ಹಿಂದೆ ಒಂದರಂತೆ ಬಂದೆರಗುತ್ತಿರುವ ಸಮಸ್ಯೆಗಳಿಂದ ಜಪಾನ್ ದೇಶ ತತ್ತರಿಸಿಹೋಗಿದೆ. ಈ ಸಮಸ್ಯೆಗಳ ಗಂಭೀರತೆ ಎಷ್ಟಿದೆಯೆಂದರೆ ವಿಶ್ವದ ಎಲ್ಲ ಮಾಧ್ಯಮಗಳೂ ಜಪಾನಿನ ಸುದ್ದಿಗಳನ್ನು ನಮಗೆ ನಿರಂತರವಾಗಿ ತಲುಪಿಸುತ್ತಿವೆ. ಸಾಲುಸಾಲು ದುರಂತಗಳ ಸಂತ್ರಸ್ತರಿಗಾಗಿ ಇಡೀ ಪ್ರಪಂಚವೇ ಮರುಗುತ್ತಿದೆ.

ಹೀಗಿರುವಾಗ ಅಂತರಜಾಲ ಲೋಕ ಸುಮ್ಮನಿರುವುದು ಸಾಧ್ಯವೆ?

ಮಂಗಳವಾರ, ಮಾರ್ಚ್ 22, 2011

ವಿಜ್ಞಾನ ಜಗತ್ತು ೨೦೧೦

ಪ್ರತಿವರ್ಷ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುವ ಸಾಧನೆಗಳನ್ನು ಆಯಾ ವರ್ಷದ ಕೊನೆಯಲ್ಲಿ ಇಯರ್ ಬುಕ್ ರೂಪದಲ್ಲಿ ಪ್ರಕಟಿಸುವ ಅಭ್ಯಾಸ ಇಂಗ್ಲಿಷಿನಲ್ಲಿದೆ. ಆದರೆ ಈ ಕೆಲಸ ಈವರೆಗೆ ಕನ್ನಡದಲ್ಲಿ ಆಗಿರಲಿಲ್ಲ. ಗುಲ್ಬರ್ಗಾದ ಡಾ. ಪಿ. ಎಸ್. ಶಂಕರ್ ಪ್ರತಿಷ್ಠಾನ ಇತ್ತೀಚೆಗೆ ಪ್ರಕಟಿಸಿರುವ 'ವಿಜ್ಞಾನ ಜಗತ್ತು ೨೦೧೦' ಕೃತಿ ಕನ್ನಡದಲ್ಲಿ ಈ ಬಗೆಯ ಪುಸ್ತಕಗಳ ಕೊರತೆಯನ್ನು ತುಂಬಿಕೊಡುವತ್ತ ಮೊದಲ ಹೆಜ್ಜೆ ಇಟ್ಟಿದೆ.

ಮಂಗಳವಾರ, ಮಾರ್ಚ್ 15, 2011

ಕುಕಿ ಕರಾಮತ್ತು

ಟಿ ಜಿ ಶ್ರೀನಿಧಿ

ಗಣಕಲೋಕದಲ್ಲಿ ವಿಚಿತ್ರವಾದುದೊಂದು ಅಭ್ಯಾಸ ಇದೆ. ನಿತ್ಯದ ಬಳಕೆಯಲ್ಲಿರುವ ಪರಿಚಿತ ಹೆಸರುಗಳನ್ನು ಅನೇಕ ಸಂದರ್ಭಗಳಲ್ಲಿ ಗಣಕವಿಜ್ಞಾನಿಗಳು ತಮ್ಮ ಕೆಲಸದಲ್ಲೂ ಬಳಸಿಕೊಂಡುಬಿಡುತ್ತಾರೆ. ಮೌಸ್, ವೈರಸ್, ಶೆಲ್, ಥ್ರೆಡ್, ಬಗ್ - ಹೀಗೆ ಅದೆಷ್ಟೋ ಪರಿಚಿತ ಹೆಸರುಗಳು ನಮಗೆ ಗೊತ್ತಿರುವ ಅರ್ಥಕ್ಕೆ ಕೊಂಚವೂ ಸಂಬಂಧವಿಲ್ಲದ ರೀತಿಯಲ್ಲಿ ಗಣಕಲೋಕದಲ್ಲಿ ಬಳಕೆಯಾಗುತ್ತಿವೆ.

ಮಂಗಳವಾರ, ಮಾರ್ಚ್ 8, 2011

ಕಾಪಿ ಪೇಸ್ಟ್ ಕತೆ

ಟಿ ಜಿ ಶ್ರೀನಿಧಿ

ಇತ್ತೀಚೆಗೆ ಜರ್ಮನಿಯ ಮಂತ್ರಿಯೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾದ ಪರಿಸ್ಥಿತಿ ಬಂತು. ಆತನ ಮೇಲಿದ್ದದ್ದು ತನ್ನ ಡಾಕ್ಟರೇಟ್ ಪ್ರಬಂಧದಲ್ಲಿ ಕೃತಿಚೌರ್ಯ ಮಾಡಿದ ಆರೋಪ. ಲಿಬಿಯಾದ ಕುಖ್ಯಾತ ಸರ್ವಾಧಿಕಾರಿ ಕರ್ನಲ್ ಗಡಾಫಿಯ ಮಗನ ಮೇಲೂ ಇದೀಗ ಇಂತಹುದೇ ಅರೋಪ ಬಂದಿದೆ. ಆತನಿಗೆ ಡಾಕ್ಟರೇಟ್ ಕೊಟ್ಟಿದ್ದ ಪ್ರತಿಷ್ಠಿತ ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್ ಈ ಅರೋಪ ಕುರಿತ ತನಿಖೆ ಪ್ರಾರಂಭಿಸಿದೆ.

ಗಣಕ ಜಗತ್ತಿನಲ್ಲಿ ಸರ್ವಾಂತರ್ಯಾಮಿಯಾಗಿರುವ ಕಾಪಿ-ಪೇಸ್ಟ್ ತಂತ್ರ ಎಷ್ಟು ಪ್ರಭಾವಶಾಲಿ ಎನ್ನುವುದಕ್ಕೆ ಇವು ಕೇವಲ ಉದಾಹರಣೆಗಳಷ್ಟೆ.

ಸೋಮವಾರ, ಮಾರ್ಚ್ 7, 2011

ವಿಶ್ವಕನ್ನಡ ಸಮ್ಮೇಳನದಲ್ಲಿ ವಿಜ್ಞಾನ-ತಂತ್ರಜ್ಞಾನ

ಇ-ಜ್ಞಾನ ವಾರ್ತೆ

ಮಾರ್ಚ್ ಹನ್ನೊಂದರಿಂದ ಮೂರು ದಿನಗಳ ಕಾಲ ಬೆಳಗಾವಿಯಲ್ಲಿ ನಡೆಯಲಿರುವ ವಿಶ್ವಕನ್ನಡ ಸಮ್ಮೇಳನದಲ್ಲಿ 'ಜ್ಞಾನ - ವಿಜ್ಞಾನ - ತಂತ್ರಜ್ಞಾನ - ಕರ್ನಾಟಕ' ಎಂಬ ವಿಚಾರಸಂಕಿರಣವನ್ನು ಆಯೋಜಿಸಲಾಗಿದೆ.

ಮಂಗಳವಾರ, ಮಾರ್ಚ್ 1, 2011

ಇದು ಸೋಷಿಯಲ್ ಶಾಪಿಂಗ್

ಟಿ ಜಿ ಶ್ರೀನಿಧಿ

ಸ್ನ್ಯಾಪ್‌ಡೀಲ್, ಕೂವ್ಸ್, ಡೀಲಿವೋರ್, ಡೀಲ್ಸ್ ಆಂಡ್ ಯೂ, ಟ್ಯಾಗಲ್, ಮಸ್ತಿ ಡೀಲ್ಸ್, ಸಿಟಿಆಫರ್ಸ್ - ಇವು ಭಾರತದ ಜಾಲಲೋಕದಲ್ಲಿ ಇತ್ತೀಚೆಗೆ ಕೇಳಿಬರುತ್ತಿರುವ ಹೊಸ ಹೆಸರುಗಳಲ್ಲಿ ಕೆಲವು. "ಇಪ್ಪತ್ತೈದು ರೂಪಾಯಿ ಕೊಡಿ, ಪುಸ್ತಕಗಳ ಖರೀದಿ ಮೇಲೆ ಇನ್ನೂರು ರೂಪಾಯಿ ರಿಯಾಯಿತಿ ಪಡೆಯಿರಿ", "ನಾನ್ನೂರು ರೂಪಾಯಿ ಬೆಲೆಯ ತಿಂಡಿತೀರ್ಥ ಸೇವಿಸಿ, ನೂರಾ ತೊಂಬತ್ತು ರೂಪಾಯಿ ಮಾತ್ರ ಬಿಲ್ ಪಾವತಿಸಿ", "ವೈನಾಡಿನ ಕಾಡಿನಲ್ಲಿರುವ ರೆಸಾರ್ಟಿನಲ್ಲಿ ತಂಗಲು ಅರ್ಧಬೆಲೆ ಮಾತ್ರ ಕೊಟ್ಟರೆ ಸಾಕು" ಎನ್ನುವಂತಹ 'ಡೀಲು'ಗಳನ್ನು ಮಾರುವುದು ಈ ತಾಣಗಳ ಕೆಲಸ. ಆನ್‌ಲೈನ್ ವ್ಯಾಪಾರಕ್ಕೆ ಹೊಸ ಮೆರುಗು ತಂದುಕೊಟ್ಟಿರುವ ಈ ತಾಣಗಳೆಲ್ಲ ಸೋಷಿಯಲ್ ಶಾಪಿಂಗ್‌ನ ಪರಿಕಲ್ಪನೆ ಆಧರಿಸಿ ಕೆಲಸಮಾಡುತ್ತಿವೆ.

ಸೋಮವಾರ, ಫೆಬ್ರವರಿ 28, 2011

ಹಂಪಿಯಲ್ಲಿ ರಾಷ್ಟ್ರೀಯ ವಿಚಾರಸಂಕಿರಣ

ಇ-ಜ್ಞಾನ ವಾರ್ತೆ


'ಕನ್ನಡದಲ್ಲಿ ಜ್ಞಾನಾಧಾರಿತ ಪಠ್ಯಗಳ ಭಾಷಾಂತರ' ಕುರಿತ ರಾಷ್ಟ್ರೀಯ ವಿಚಾರಸಂಕಿರಣ ಕಳೆದ ಫೆಬ್ರುವರಿ ೨೫ ಹಾಗೂ ೨೬ರಂದು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆಯಿತು. ಭಾರತ ಸರಕಾರದ ರಾಷ್ಟ್ರೀಯ ಅನುವಾದ ಮಿಷನ್, ಮೈಸೂರಿನ ಸಿಐಐಎಲ್ ಹಾಗೂ ಹಂಪಿ ವಿವಿಯ ಭಾಷಾಂತರ ಅಧ್ಯಯನ ವಿಭಾಗ ಈ ಕಾರ್ಯಕ್ರಮವನ್ನು ಆಯೋಜಿಸಿದ್ದವು.

ಒಟ್ಟಾರೆಯಾಗಿ ಜ್ಞಾನಾಧಾರಿತ ಪಠ್ಯಗಳ ಭಾಷಾಂತರದ ಬಗ್ಗೆ ಗಮನಹರಿಸಿದ ಈ ಕಾರ್ಯಕ್ರಮದಲ್ಲಿ ವಿಜ್ಞಾನ ಬರೆವಣಿಗೆ ವಿಷಯದ ಕಡೆಗೂ ಸಾಕಷ್ಟು ಮಹತ್ವ ನೀಡಲಾಗಿತ್ತು. ಡಾ|ಯು ಬಿ ಪವನಜ, ಶ್ರೀ ಟಿ ಆರ್  ಅನಂತರಾಮು, ಶ್ರೀ ಕೊಳ್ಳೇಗಾಲ ಶರ್ಮ, ಶ್ರೀ ಎ ಪಿ ರಾಧಾಕೃಷ್ಣ - ಇವರು ಈ ವಿಚಾರಸಂಕಿರಣದಲ್ಲಿ ಭಾಗವಹಿಸಿದ್ದ ವಿಜ್ಞಾನ-ತಂತ್ರಜ್ಞಾನ ಬರೆಹಗಾರರು.

ಈ ವಿಚಾರಸಂಕಿರಣದಲ್ಲಿ ನಾನೂ ಭಾಗವಹಿಸಿದ್ದೆ. 'ಕನ್ನಡದಲ್ಲಿ ಮಾಹಿತಿ ತಂತ್ರಜ್ಞಾನ ಬರೆವಣಿಗೆ - ಸವಾಲುಗಳು' ಇದು ನಾನು ಮಂಡಿಸಿದ ಪ್ರಬಂಧದ ವಿಷಯ. - ಶ್ರೀನಿಧಿ

ಮಂಗಳವಾರ, ಫೆಬ್ರವರಿ 22, 2011

ಬಿಟ್‌ನಿಂದ ಎಕ್ಸಾಬೈಟ್‌ವರೆಗೆ

ಟಿ ಜಿ ಶ್ರೀನಿಧಿ

೧೮-೧೯ನೇ ಶತಮಾನದ ಕೈಗಾರಿಕಾ ಕ್ರಾಂತಿಯ ನಂತರ ಮನುಕುಲದ ಮೇಲೆ ಅಷ್ಟೇ ದೊಡ್ಡ ಪ್ರಭಾವ ಬೀರಿರುವುದು ಮಾಹಿತಿ ಕ್ರಾಂತಿ. ಆಧುನಿಕ ಗಣಕಗಳ ಬೆಳೆವಣಿಗೆಯೊಡನೆ ಪ್ರಾರಂಭವಾದದ್ದು ಈ ಕ್ರಾಂತಿ. ಅಂತರಜಾಲದ ವಿಕಾಸ, ವಿಶ್ವವ್ಯಾಪಿ ಜಾಲದ ಹುಟ್ಟು, ಅತ್ಯಾಧುನಿಕ ಸಂವಹನ ಮಾಧ್ಯಮಗಳ ಉಗಮ ಮುಂತಾದ ಎಲ್ಲ ಹೆಜ್ಜೆಗಳೂ ನಮ್ಮ ಬದುಕನ್ನು ಅಪಾರವಾಗಿ ಬದಲಿಸಿವೆ. ವಿಶ್ವವ್ಯಾಪಿ ಜಾಲದಲ್ಲಿ, ಮೊಬೈಲ್ ಮೂಲಕ, ದೂರದರ್ಶನ-ಆಕಾಶವಾಣಿಗಳಲ್ಲಿ, ಪತ್ರಿಕೆಗಳಲ್ಲಿ - ಹೀಗೆ ಎಲ್ಲೆಲ್ಲಿ ನೋಡಿದರೂ ಮಾಹಿತಿಯ ಮಹಾಪೂರವೇ ನಮ್ಮನ್ನು ಆವರಿಸಿಕೊಂಡಿದೆ.

ಮಂಗಳವಾರ, ಫೆಬ್ರವರಿ 15, 2011

ಗಣಕಲೋಕಕ್ಕೆ ಪವರ್‌ಕಟ್ ಭೀತಿ

ಟಿ ಜಿ ಶ್ರೀನಿಧಿ

ದೈನಂದಿನ ಬದುಕಿನ ಎಲ್ಲ ಕ್ಷೇತ್ರಗಳಲ್ಲೂ ಆಗಿರುವ ವ್ಯಾಪಕ ಗಣಕೀಕರಣದ ಪರಿಚಯ ನಮ್ಮೆಲ್ಲರಿಗೂ ಚೆನ್ನಾಗಿಯೇ ಇದೆ. ಅತ್ಯಂತ ಹೆಚ್ಚು ಗಣಕೀಕರಣವಾಗಿರುವ ಇಂತಹ ಕ್ಷೇತ್ರಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರ ಪ್ರಮುಖವಾದದ್ದು. ಒಂದು ಶಾಖೆಯಲ್ಲಿರುವ ಖಾತೆಯನ್ನು ಬೇರೆ ಯಾವ ಖಾತೆಯಿಂದಲಾದರೂ ನಿರ್ವಹಿಸುವುದು, ಖಾತೆಗಳ ನಡುವೆ ಬಹಳ ಸುಲಭವಾಗಿ ಹಣ ವರ್ಗಾವಣೆ ಮಾಡುವುದು - ಇಂತಹ ಸೌಲಭ್ಯಗಳಿಗೆಲ್ಲ ಗಣಕೀಕರಣವೇ ಕಾರಣ.

ಗಣಕೀಕರಣದ ಇನ್ನೊಂದು ಪರಿಣಾಮವೆಂದರೆ ಬ್ಯಾಂಕಿಂಗ್ ಚಟುವಟಿಕೆಗಳಲ್ಲಿ ಗಣಕಗಳ ಮೇಲಿನ ಅವಲಂಬನೆ ತೀವ್ರವಾಗಿ ಹೆಚ್ಚಿದೆ. ಕೋಟ್ಯಂತರ ರೂಪಾಯಿಗಳ ವ್ಯವಹಾರವನ್ನು ನಿರ್ವಹಿಸುವ ಈ ಗಣಕಗಳು ಸದಾಕಾಲ ಕೆಲಸಮಾಡುತ್ತಲೇ ಇರಬೇಕಾಗುತ್ತದೆ; ತಪ್ಪುಗಳಾಗುವ ಅಥವಾ ಯಾಂತ್ರಿಕ ವೈಫಲ್ಯದ ಸಾಧ್ಯತೆಯಂತೂ ಇಲ್ಲವೇ ಇಲ್ಲದಂತೆ ನೋಡಿಕೊಳ್ಳಬೇಕಾಗುತ್ತದೆ.

ಸೋಮವಾರ, ಫೆಬ್ರವರಿ 14, 2011

ಕನ್ನಡ ವಿಜ್ಞಾನ ಸಾಹಿತಿಗಳ ಸಮಾವೇಶ

ಇ-ಜ್ಞಾನ ವಾರ್ತೆ

ಕನ್ನಡ ಜನಪ್ರಿಯ ವಿಜ್ಞಾನ ಸಾಹಿತಿಗಳ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ವಿಜ್ಞಾನ ಸಾಹಿತಿಗಳ ನಾಲ್ಕನೇ ಸಮಾವೇಶ ಕಳೆದ ವಾರಾಂತ್ಯ (ಫೆಬ್ರುವರಿ ೧೨-೧೩) ಹಾಸನ ಜಿಲ್ಲೆ ಆಲೂರಿನ ಸಮೀಪದ ಪುಣ್ಯಭೂಮಿಯಲ್ಲಿ ನಡೆಯಿತು. ಹಸಿರು ತೋಟದ ಪರಿಸರದಲ್ಲಿ ನಡೆದ ಈ ಸಮಾವೇಶದಲ್ಲಿ ಡಾ| ಪಿ ಎಸ್ ಶಂಕರ್, ಡಾ| ಪ್ರಧಾನ್ ಗುರುದತ್ತ, ಪ್ರೊ| ಎಚ್ ಬಿ ದೇವರಾಜ ಸರ್ಕಾರ್, ಶ್ರೀ ಟಿ ಆರ್ ಅನಂತರಾಮು, ಡಾ| ನಾ ಸೋಮೇಶ್ವರ, ಡಾ| ಲೀಲಾವತಿ ದೇವದಾಸ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಆರೋಗ್ಯ-ಕೃಷಿ-ವಿಜ್ಞಾನ ಸಾಹಿತ್ಯ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ನಾಲ್ವರು ಹಿರಿಯರನ್ನು ಸಮಾವೇಶದ ಮೊದಲ ದಿನದಂದು ಸನ್ಮಾನಿಸಲಾಯಿತು.

ಈ ಸಮಾರಂಭದ ಕೆಲವು ಚಿತ್ರಗಳು ಇಲ್ಲಿವೆ.








badge