ಸೋಮವಾರ, ಡಿಸೆಂಬರ್ 22, 2014

ಇದು 'ಅಲ್ಟ್ರಾ ಎಚ್‌ಡಿ' ಸಮಯ!

ಟಿ. ಜಿ. ಶ್ರೀನಿಧಿ

ಟೀವಿ ಕೊಳ್ಳಲು ಹೊರಟಾಗ ಅದು ಎಚ್‌ಡಿ ಚಿತ್ರಗಳನ್ನು ಪ್ರದರ್ಶಿಸಬಲ್ಲದೋ ಇಲ್ಲವೋ ಎಂಬ ಪ್ರಶ್ನೆ ಏಳುವುದು ಇಂದಿನ ತಂತ್ರಜ್ಞಾನ ಲೋಕದಲ್ಲಿ ಅತ್ಯಂತ ಸಾಮಾನ್ಯವಾಗಿರುವ ಸಂಗತಿ. 'ಎಚ್‌ಡಿ ರೆಡಿ', 'ಫುಲ್ ಎಚ್‌ಡಿ'ಗಳಿಂದ ಪ್ರಾರಂಭವಾದ ಈ ಎಚ್‌ಡಿ ಯಾನ ಇದೀಗ '೪ಕೆ', 'ಅಲ್ಟ್ರಾ ಎಚ್‌ಡಿ'ಗಳವರೆಗೂ ತಲುಪಿಬಿಟ್ಟಿದೆ.

ಇಷ್ಟೆಲ್ಲ ಸದ್ದುಮಾಡುತ್ತಿರುವ 'ಎಚ್‌ಡಿ' ಎನ್ನುವ ಈ ಹೆಸರು 'ಹೈ ಡೆಫನಿಷನ್' ಎನ್ನುವುದರ ಹ್ರಸ್ವರೂಪ. ಉತ್ತಮ ಗುಣಮಟ್ಟದ, ಹೆಚ್ಚು ಸ್ಪಷ್ಟವಾದ ವೀಡಿಯೋಗಳನ್ನು ಎಚ್‌ಡಿ ವೀಡಿಯೋ ಎಂದೇ ಗುರುತಿಸುವ ಅಭ್ಯಾಸ ಈಗ ವ್ಯಾಪಕವಾಗಿದೆ.

ಹಾಗೆಂದಮಾತ್ರಕ್ಕೆ ಸ್ಪಷ್ಟ ವೀಡಿಯೋಗಳೆಲ್ಲ ಎಚ್‌ಡಿ ಏನಲ್ಲ. ತಾಂತ್ರಿಕವಾಗಿ ಯಾವುದೇ ವೀಡಿಯೋ 'ಎಚ್‌ಡಿ' ಎಂದು ಕರೆಸಿಕೊಳ್ಳಬೇಕಾದರೆ ಅದಕ್ಕೆ ಕೆಲವು ನಿರ್ದಿಷ್ಟ ಅರ್ಹತೆಗಳು ಇರಬೇಕಾಗುತ್ತದೆ.

ಅವುಗಳಲ್ಲಿ ಮೊದಲನೆಯದು ರೆಸಲ್ಯೂಶನ್. ಯಾವುದೇ ವೀಡಿಯೋದ ಉದಾಹರಣೆ ತೆಗೆದುಕೊಂಡರೆ ಅದರ ಪ್ರತಿ ಫ್ರೇಮಿನಲ್ಲೂ ಒಂದಷ್ಟು 'ಪಿಕ್ಚರ್ ಎಲಿಮೆಂಟ್'ಗಳಿರುತ್ತವೆ; ಡಿಜಿಟಲ್ ಛಾಯಾಚಿತ್ರಗಳಲ್ಲಿ ಪಿಕ್ಸೆಲ್‌ಗಳಿರುತ್ತವಲ್ಲ, ಹಾಗೆಯೇ ಇಲ್ಲಿಯೂ ಪಿಕ್ಸೆಲ್‌ಗಳು ಅಥವಾ ಸಾಲುಗಳು ('ಲೈನ್') ವೀಡಿಯೋದ ಸ್ಪಷ್ಟತೆಯನ್ನು ತೀರ್ಮಾನಿಸುತ್ತವೆ.

ಗುರುವಾರ, ಡಿಸೆಂಬರ್ 11, 2014

ವಿಜ್ಞಾನಲೋಕದ ವಿದ್ಯಾಲಂಕಾರ

ಟಿ. ಆರ್. ಅನಂತರಾಮು 
ರೋಹಿತ್ ಚಕ್ರತೀರ್ಥ

"ತುಂಬ ಬೋರು ಹೊಡೆಯುತ್ತದೆ ಎನ್ನುವ ಕಾರಣಕ್ಕೆ ಮಿಸ್ಟರ್ ಟಾಂಪ್ಕಿನ್ಸ್ ಹತ್ತಿರದ ಕಟ್ಟಡವೊಂದರಲ್ಲಿ ನಡೆಯುತ್ತಿದ್ದ ಉಪನ್ಯಾಸ ಕೇಳಲು ಹೋದ. ಅದು ಹೇಳಿಕೇಳಿ ಸಾಪೇಕ್ಷ ಸಿದ್ಧಾಂತದ ಮೇಲೆ ನಡೆಯುತ್ತಿದ್ದ ಭೀಕರಭಾಷಣ! ಬಿಸಿಲುಗಾಲಕ್ಕೆ ಕಪ್ಪೆ ಬಂಡೆಯೇರಿ ಕೂತ ಹಾಗಾಯಿತು! ಈಗಾಗಲೇ ಬೋರಾಗಿದ್ದ ಟಾಂಪ್ಕಿನ್ಸ್ ಬೋರಲುಬಿದ್ದು ನಿದ್ದೆಗೆ ಜಾರಿದ. ಆಗ ಅವನಿಗೊಂದು ಕನಸು ಬಿತ್ತು. ಕನಸಿನಲ್ಲಿ ಅವನೊಂದು ಹೊಸಲೋಕಕ್ಕೆ ಪ್ರವೇಶ ಪಡೆದಿದ್ದ. ಸೆಕೆಂಡಿಗೆ ಮೂರುಲಕ್ಷ ಕಿಮೀಗಳನ್ನು ಕ್ರಮಿಸುತ್ತ ಯಮವೇಗದಲ್ಲಿ ಓಡಬೇಕಿದ್ದ ಬೆಳಕು ಈ ವಿಚಿತ್ರ ಜಗತ್ತಿನಲ್ಲಿ ಸೆಕೆಂಡಿಗೆ ಕೇವಲ ಹತ್ತು ಕಿಮೀ ಮಾತ್ರ ಸಾಗುತ್ತಿತ್ತು! ಇನ್ನೂ ಸ್ವಾರಸ್ಯದ ಸಂಗತಿಯೆಂದರೆ, ಅಲ್ಲಿನ ವಸ್ತುಗಳ ಗಾತ್ರ, ರಾಶಿ, ಗುರುತ್ವಗಳೆಲ್ಲ ಭೂಮಿಯ ಲೆಕ್ಕಾಚಾರಕ್ಕಿಂತ ಸಂಪೂರ್ಣ ಭಿನ್ನವಾಗಿದ್ದವು.." - ಹೀಗೆ ಶುರುವಾಗುತ್ತದೆ ಜಾರ್ಜ್ ಗ್ಯಾಮೋ ಎಂಬ ಜಗತ್ಪ್ರಸಿದ್ಧ ಭೌತವಿಜ್ಞಾನಿ, ಪ್ರೊಫೆಸರ್ ಮತ್ತು ವಿಜ್ಞಾನಲೇಖಕ ಬರೆದ ಕತೆ "ಮಿಸ್ಟರ್ ಟಾಂಪ್ಕಿನ್ಸ್ ಇನ್ ವಂಡರ್‌ಲ್ಯಾಂಡ್".

ವಿಜ್ಞಾನಾಸಕ್ತರ - ಅದರಲ್ಲೂ ಮುಖ್ಯವಾಗಿ ಸಾಪೇಕ್ಷ ಸಿದ್ಧಾಂತವೆಂಬ ಆ ಕಾಲದ ಕಬ್ಬಿಣದ ಕಡಲೆಯನ್ನು ಜಗಿದು ಹಲ್ಲು ಮುರಿದುಕೊಳ್ಳುತ್ತಿದ್ದವರನ್ನು ಆಕರ್ಷಿಸಿದ್ದ ಈ ಪುಸ್ತಕ ಹೋಗಿಹೋಗಿ ಒಬ್ಬರು ಕನ್ನಡಪಂಡಿತರ ಕೈಗೆ ಬಿತ್ತು. ಬೇರೆಯವರ ಉಡಿಗೆ ಬಿದ್ದಿದ್ದರೆ ಅದೆಲ್ಲಿ ಪಂಪಕುಮಾರವ್ಯಾಸರ ನಡುವೆ ಕಳೆದುಹೋಗುತ್ತಿತ್ತೋ. ಆದರೆ ಇವರು ಆಸಕ್ತಿಯಿಂದ ಓದತೊಡಗಿದ್ದೇ, ಸಾಲುಸಾಲುಗಳನ್ನು ಆಸ್ವಾದಿಸುತ್ತ ವಿಜ್ಞಾನಸಾಹಿತ್ಯದ ಕಚಗುಳಿರುಚಿಯನ್ನು ಚಪ್ಪರಿಸತೊಡಗಿದರು! "ಅಯ್ಯೋ, ಇಂತಹ ಪುಸ್ತಕ ಇದೆಯೆನ್ನುವುದೇ ಗೊತ್ತಿಲ್ಲದೆ ಕನ್ನಡಿಗ ಕೈಕಟ್ಟಿ ಕೂತಿದ್ದಾನಲ್ಲ!" ಎಂದು ಪಂಡಿತರ ಹೊಟ್ಟೆ ಚುರ್ ಅಂದಿತು. ತನ್ನ ಕಿರಿಯ ಮಿತ್ರರೊಬ್ಬರನ್ನು ಕರೆದು ದೀಕ್ಷೆ ಕೊಟ್ಟೇಬಿಟ್ಟರು. "ಈ ಪುಸ್ತಕ ಕನ್ನಡದಲ್ಲಿ ಬರಲಿಕ್ಕೇಬೇಕು. ವಿಚಿತ್ರ ಲೋಕದಲ್ಲಿ ವಿದ್ಯಾಲಂಕಾರ - ಅಂತ ಟೈಟಲ್ ಇಟ್ಟುಕೋ. ಪ್ರಕಟಿಸುವ ಜವಾಬ್ದಾರಿ ನನ್ನದು" ಎಂಬ ಆಗ್ರಹಪೂರ್ವಕ ಬಿನ್ನಹ ಮಾಡಿದರು.

ಇದು ೧೯೫೧ರ ಮಾತು. ಬಡಮೇಸ್ಟ್ರ ತಿಂಗಳ ಸಂಬಳ ಹೆಚ್ಚೆಂದರೆ ಅರುವತ್ತೆಪ್ಪತ್ತು ಇದ್ದ ಸಮಯ. ಹಾಗಿರುವಾಗ, ಗೆಳೆಯ ಬರೆದ ಪುಸ್ತಕ ಪ್ರಕಟಿಸಲು ೮೦೦ ರುಪಾಯಿ ತೊಡಗಿಸಿ ಕೈಸುಟ್ಟುಕೊಳ್ಳುವುದುಂಟೆ? "ಹಾಗೆ ಹಿಮ್ಮೆಟ್ಟುತ್ತ ಕೂತರೆ ಕನ್ನಡಕ್ಕೆ ವಿಜ್ಞಾನ ತರುವವರು ಯಾರು? ಈ ಸಹಾಯವನ್ನು ನಾನು ಮಾಡಿಲ್ಲವಾದರೆ ಬೇರಾರು ಮಾಡಬೇಕು?" ಎಂದ ಮೇಸ್ಟ್ರು ಎರಡನೇ ಯೋಚನೆಯನ್ನೇ ಮಾಡಲಿಲ್ಲ. ಪುಸ್ತಕ ಪ್ರಕಟವಾಯಿತು.

ಸೋಮವಾರ, ಡಿಸೆಂಬರ್ 8, 2014

ಜಿಪಿಎಸ್ ಎಂಬ ಮಾರ್ಗದರ್ಶಕ

ಟಿ. ಜಿ. ಶ್ರೀನಿಧಿ

ಸಿನಿಮಾಗೆ ಹೋದದ್ದು ಗೆಳೆಯರಿಗೆಲ್ಲ ಗೊತ್ತಾಗಲಿ ಎಂದು ಫೇಸ್‌ಬುಕ್‌ನಲ್ಲಿ 'ಚೆಕ್ ಇನ್' ಮಾಡಲು ಹೋದರೆ ನಾವು ಯಾವ ಮಲ್ಟಿಪ್ಲೆಕ್ಸಿನಲ್ಲಿದ್ದೇವೆ ಎಂದು ಅದೇ ತೋರಿಸಿಬಿಡುತ್ತದೆ. ಸಿನಿಮಾ ಮುಗಿದ ಮೇಲೆ ಊಟಕ್ಕೆಂದು ಹೋಟಲಿಗೆ ಹೋಗಬೇಕೆ? ಅದಕ್ಕೆ ಟ್ಯಾಕ್ಸಿ ಸಂಸ್ಥೆಯ ಮೊಬೈಲ್ ಆಪ್ ಬಳಸಿದರೆ ಸಾಕು - ಹತ್ತಿರದಲ್ಲಿ ಯಾವುದಾದರೂ ಟ್ಯಾಕ್ಸಿ ಇದೆಯೇ ಎನ್ನುವುದು ನಮಗೆ ಗೊತ್ತಾಗುತ್ತದೆ, ನಮ್ಮ ಸಾರಥಿಯಾಗಲಿರುವ ಟ್ಯಾಕ್ಸಿ ಚಾಲಕನಿಗೆ ನಾವೆಲ್ಲಿದ್ದೇವೆ ಎನ್ನುವುದೂ ತಿಳಿದುಬಿಡುತ್ತದೆ. ಇನ್ನು ಟ್ಯಾಕ್ಸಿ ಹತ್ತಿ ಹೊರಟಮೇಲೂ ಅಷ್ಟೆ, ಚಾಲಕನ ಮುಂದಿರುವ ಪರದೆಯಲ್ಲಿ ಟ್ಯಾಕ್ಸಿ ಸಾಗುತ್ತಿರುವ ದಾರಿಯ ಮ್ಯಾಪು ಸ್ಪಷ್ಟವಾಗಿ ಮೂಡಿಬರುತ್ತದೆ. ಆತನಿಗೆ ಸರಿಯಾದ ದಾರಿ ಗೊತ್ತಿಲ್ಲದಿದ್ದರೂ ಚಿಂತೆಯಿಲ್ಲ, ಏಕೆಂದರೆ ಮ್ಯಾಪ್ ತೋರಿಸುತ್ತಿರುವ ತಂತ್ರಾಂಶ ಆ ಹೋಟಲಿಗೆ ತಲುಪುವುದು ಹೇಗೆ ಎನ್ನುವುದನ್ನೂ ಹೇಳಿಕೊಡುತ್ತದೆ!

ಹೊಸ ಊರಿಗೆ ಪ್ರವಾಸ ಹೋದಾಗ, ಹಳೆಯ ಊರಿನಲ್ಲಿ ಅಡ್ರೆಸ್ ಸಿಗದೆ ಪರದಾಡುವಾಗಲೆಲ್ಲ ನಾವು ಈ ಹಿಂದೆಯೂ ಮೊಬೈಲ್ ಬಳಸುತ್ತಿದ್ದದ್ದುಂಟು. ಆದರೆ ಅದು ಆ ಪ್ರದೇಶದ ಪರಿಚಯವಿರುವವರಿಂದ ಸಹಾಯ ಕೇಳಲು ಮಾತ್ರವೇ ಆಗಿರುತ್ತಿತ್ತು. ಈಗಿನ ಪರಿಸ್ಥಿತಿ ಹಾಗಿಲ್ಲ, ಯಾವ ಹೋಟಲಿನಲ್ಲಿದ್ದೇವೆ ಎಂದು ಫೇಸ್‌ಬುಕ್ ಅಪ್‌ಡೇಟ್ ಹಾಕುವುದರಿಂದ ಹಿಡಿದು ನಾವು ತಲುಪಬೇಕಿರುವ ವಿಳಾಸಕ್ಕೆ ಹೋಗಬೇಕಾದ ಮಾರ್ಗ ತಿಳಿದುಕೊಳ್ಳುವವರೆಗೆ ಅದೆಷ್ಟೋ ಸಂದರ್ಭಗಳಲ್ಲಿ ಮೊಬೈಲ್ ಫೋನ್ ನಮ್ಮ ನೆರವಿಗೆ ಬರುತ್ತದೆ. ಅಷ್ಟೇ ಅಲ್ಲ, ಆ ಎಲ್ಲ ಸಂದರ್ಭಗಳಲ್ಲೂ ನಾವು ಇರುವ ಸ್ಥಳವನ್ನು ಅದು ಬಹುತೇಕ ಸರಿಯಾಗಿಯೇ ಗುರುತಿಸಿರುತ್ತದೆ.

ಮೊಬೈಲ್ ಫೋನ್ ಇರುವ ಜಾಗವನ್ನು ಗುರುತಿಸಿ ಅದರ ಆಧಾರದ ಮೇಲೆ ಇಷ್ಟೆಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಲು ನೆರವಾಗುವ ತಂತ್ರಜ್ಞಾನವೇ ಜಿಪಿಎಸ್, ಅಂದರೆ ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ.

ಶುಕ್ರವಾರ, ಡಿಸೆಂಬರ್ 5, 2014

ಯಂತ್ರಮಾನವ ಮಾನವಯಂತ್ರ

ಟಿ. ಜಿ. ಶ್ರೀನಿಧಿ

ಇಪ್ಪತ್ತನೇ ಶತಮಾನದ ಪ್ರಾರಂಭದ ಕಾಲವನ್ನು ಯಂತ್ರಯುಗವೆಂದು ಕರೆಯುವ ಅಭ್ಯಾಸವಿದೆ. ಬೃಹತ್ ಕಾರ್ಖಾನೆಗಳು ವಸ್ತುಗಳ ತಯಾರಿಕೆಯನ್ನು ಸುಲಭವಾಗಿಸಿದ್ದು, ಹೊಸ ಯಂತ್ರಗಳು ಮನುಷ್ಯನ ದೈಹಿಕ ಶ್ರಮವನ್ನು ಕಡಿಮೆಮಾಡಿದ್ದು, ಕಲ್ಪಿಸಿಕೊಳ್ಳಲೂ ಕಷ್ಟವಾಗಿದ್ದ ಸಂಗತಿಗಳು ತಂತ್ರಜ್ಞಾನದ ನೆರವಿನಿಂದ ಸಾಕಾರಗೊಳ್ಳಲು ಪ್ರಾರಂಭವಾದದ್ದು ಇದೇ ಅವಧಿಯಲ್ಲಿ. ಇಂದು ತಂತ್ರಜ್ಞಾನ ನಮ್ಮ ಜೀವನದ ಎಲ್ಲ ಆಯಾಮಗಳನ್ನೂ ಪ್ರಭಾವಿಸಿದೆಯಲ್ಲ, ಆ ಅದ್ಭುತ ಬೆಳವಣಿಗೆಯ ಮೂಲವನ್ನು ನಾವು ಈ ಯಂತ್ರಯುಗದಲ್ಲಿ ಕಾಣಬಹುದು.

ಮನುಷ್ಯ ಹಾಗೂ ಯಂತ್ರಗಳ ನಡುವಿನ ಒಡನಾಟ ಹೆಚ್ಚಲು ಶುರುವಾದದ್ದೂ ಇದೇ ಸಮಯದಲ್ಲಿ. ಯಂತ್ರಗಳ ನೆರವಿನಿಂದ ಮನುಷ್ಯನ ಬದುಕಿನ ಗುಣಮಟ್ಟ ಗಮನಾರ್ಹವಾಗಿ ಹೆಚ್ಚಿತು; ಅದರ ಜೊತೆಗೆ "ಯಂತ್ರಗಳು ಮನುಷ್ಯನ ಕೆಲಸವನ್ನು ತಾವೇ ಮಾಡಿ ಕೆಲಸಗಾರರನ್ನು ಬೀದಿಗೆ ತರುತ್ತವೆ", "ತಂತ್ರಜ್ಞಾನ ಹೀಗೆಯೇ ಬೆಳೆಯುತ್ತ ಹೋದರೆ ಮುಂದೊಂದು ದಿನ ಯಂತ್ರಗಳೇ ನಮ್ಮನ್ನು ಆಳಬಹುದು" ಮುಂತಾದ ಭಾವನೆಗಳೂ ವ್ಯಾಪಕವಾಗಿ ಕಾಣಿಸಿಕೊಂಡವು. ಮನುಷ್ಯ ಹಾಗೂ ಯಂತ್ರಗಳ ನಡುವೆ ಒಂದು ರೀತಿಯ ಸ್ಪರ್ಧೆಯೇ ಉಂಟಾಯಿತು ಎಂದರೂ ಸರಿಯೇ.

ಅಲ್ಲಿಂದ ಮುಂದಕ್ಕೆ ತಂತ್ರಜ್ಞಾನ ಬೆಳೆದುಬಂದಿರುವ ಪರಿ ನಮಗೆಲ್ಲ ಗೊತ್ತೇ ಇದೆ. ನಮ್ಮ ಕೆಲಸಗಳನ್ನು ಸುಲಭಗೊಳಿಸುವುದಿರಲಿ, ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕ್ಷೇತ್ರದಲ್ಲಿ ನಡೆದಿರುವ ಬೆಳವಣಿಗೆಗಳು ಯಂತ್ರಗಳಿಗೆ ಸ್ವತಃ ಯೋಚಿಸುವ - ಆ ಯೋಚನೆಗಳಿಗೆ ತಕ್ಕಂತೆ ಕೆಲಸಮಾಡುವ ಶಕ್ತಿಯನ್ನೂ ನೀಡಲು ಪ್ರಯತ್ನಿಸುತ್ತಿವೆ.

ಯಂತ್ರಗಳು ಇಷ್ಟೆಲ್ಲ ಅಭಿವೃದ್ಧಿಯಾಗಿ ಮಾನವರಂತೆಯೇ ಆಗುವುದಾದರೆ ಮನುಷ್ಯರು ಕೊಂಚಮಟ್ಟಿಗಾದರೂ ಯಂತ್ರಗಳಾಗುವುದರಲ್ಲಿ ಏನು ತಪ್ಪು?

ಮಂಗಳವಾರ, ಡಿಸೆಂಬರ್ 2, 2014

ಕನ್ನಡನಾಡಿನ ಐಟಿ ಜಗತ್ತು

ಕನ್ನಡನಾಡಿನ ಇತಿಹಾಸದಿಂದ ಪರಿಸರದವರೆಗೆ, ಕನ್ನಡದ ಸಾಹಿತ್ಯ-ಸಂಸ್ಕೃತಿಯಿಂದ ಆಹಾರ ವೈವಿಧ್ಯದವರೆಗೆ ಪ್ರತಿಯೊಂದು ಅಂಶವೂ ವಿಶಿಷ್ಟವೇ. ಹಿಂದಿನ ಕಾಲದಿಂದಲೂ ನಮ್ಮ ನಾಡಿನೊಡನೆ ಬಂದಿರುವ ಈ ಹೆಚ್ಚುಗಾರಿಕೆಗಳ ಸಾಲಿಗೆ ಕಳೆದ ಕೆಲ ದಶಕಗಳಲ್ಲಿ ಸೇರಿದ್ದು ಮಾಹಿತಿ ತಂತ್ರಜ್ಞಾನದ ತವರು ಎನ್ನುವ ಇನ್ನೊಂದು ಹಿರಿಮೆ. ಈ ಸಂಗತಿ ಅದೆಷ್ಟು ಜನಪ್ರಿಯ ಎಂದರೆ ಪ್ರಪಂಚದ ಯಾವುದೋ ಮೂಲೆಯಲ್ಲಿ, ಹೆಸರು ಹೇಳಲೂ ಕಷ್ಟವಾಗುವಂತಹ ಊರಿನಲ್ಲಿರುವವರಿಗೂ ಬೆಂಗಳೂರಿನ ಪರಿಚಯವಿರುತ್ತದೆ. ಕನ್ನಡನಾಡಿನೊಳಗೊಂದು ಐಟಿ ಜಗತ್ತು ರೂಪುಗೊಂಡ, ಬೆಳೆದುನಿಂತ ಈ ಪ್ರಕ್ರಿಯೆಯ ಒಂದು ಸಿಂಹಾವಲೋಕನ ಇಲ್ಲಿದೆ.

ಟಿ. ಜಿ. ಶ್ರೀನಿಧಿ

ಚಿತ್ರಕೃಪೆ: bangaloreitbt.in
ನಮ್ಮ ದೇಶದಲ್ಲಿ ಐಟಿ ಉದ್ದಿಮೆಯ ಪ್ರಾರಂಭವಾದದ್ದು ಸುಮಾರು ಎಪ್ಪತ್ತರ ದಶಕದಲ್ಲಿರಬೇಕು. ಆಗಿನ ಕಾಲದಲ್ಲಿ ಹೆಚ್ಚೂಕಡಿಮೆ ಎಲ್ಲ ಸಂಸ್ಥೆಗಳೂ ಮುಂಬಯಿಯಿಂದಲೇ ಕಾರ್ಯನಿರ್ವಹಿಸುತ್ತಿದ್ದವು ಎಂದು ತೋರುತ್ತದೆ. ತಂತ್ರಜ್ಞಾನದಲ್ಲಿ ಪರಿಣತರಾದವರನ್ನು ಅಂತಹವರ ಅಗತ್ಯವಿದ್ದ ಸಂಸ್ಥೆಗಳಿಗೆ ಕಳುಹಿಸಿಕೊಡುವುದು, ಹಾಗೂ ಆ ಸೇವೆಯನ್ನು ಒದಗಿಸಿಕೊಟ್ಟದ್ದಕ್ಕೆ ತಮ್ಮ ಶುಲ್ಕ ಪಡೆದುಕೊಳ್ಳುವುದು - ಇದು ಇಂತಹ ಬಹಳಷ್ಟು ಸಂಸ್ಥೆಗಳ ಪ್ರಾಥಮಿಕ ಚಟುವಟಿಕೆಯಾಗಿತ್ತು ಎನ್ನಬಹುದು.

ಮೊದಲಿಗೆ ಸೀಮಿತ ಪ್ರಮಾಣದಲ್ಲೇ ನಡೆಯುತ್ತಿದ್ದ ಈ ಸಂಸ್ಥೆಗಳ ವಹಿವಾಟು ಕಂಪ್ಯೂಟರ್ ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಜಾಸ್ತಿಯಾಗುತ್ತ ಬಂತು. ಹೆಚ್ಚುಹೆಚ್ಚು ಸಂಸ್ಥೆಗಳು ಐಟಿ ಕ್ಷೇತ್ರ ಪ್ರವೇಶಿಸಿ ಅಲ್ಲಿ ಸ್ಪರ್ಧೆ ಹೆಚ್ಚುತ್ತಿದ್ದಂತೆ ಮುಂಬಯಿಯಷ್ಟೇ ಉತ್ತಮವಾದ ಸೌಕರ್ಯಗಳನ್ನು ಹೊಂದಿರುವ, ಸಾಧ್ಯವಾದರೆ ಅದಕ್ಕಿಂತ ಹೆಚ್ಚೇ ಅನುಕೂಲಕರವಾದ ಊರಿಗಾಗಿ ಹುಡುಕಾಟ ಪ್ರಾರಂಭವಾಯಿತು.

ಆಗ ಆಯ್ಕೆಯಾದದ್ದೇ ನಮ್ಮ ಬೆಂಗಳೂರು.

ಗುರುವಾರ, ನವೆಂಬರ್ 27, 2014

ಪಾಸ್‌ವರ್ಡ್: ಕಂಪ್ಯೂಟರ್ ಲೋಕದ ಕೀಲಿಕೈ

ಡಿಜಿಟಲ್ ಪ್ರಪಂಚದಲ್ಲಿ ನಮ್ಮ ಮಾಹಿತಿಯನ್ನೆಲ್ಲ ಸುರಕ್ಷಿತವಾಗಿಡಲು, ಅದು ಅಪಾತ್ರರ ಕೈಗೆ ಸಿಗದಂತೆ ನೋಡಿಕೊಳ್ಳಲು, ನಮ್ಮ ಮಾಹಿತಿ ನಮಗಷ್ಟೆ ಗೊತ್ತು ಎಂಬ ಸಮಾಧಾನದ ಭಾವನೆ ಮೂಡಿಸಲು ಪಾಸ್‌ವರ್ಡ್ ಬೇಕೇಬೇಕು. ಇಷ್ಟೆಲ್ಲ ಶಕ್ತಿಶಾಲಿಯಾದ ಈ ಪಾಸ್‌ವರ್ಡ್‌ನ ಕುರಿತು ಡಿಸೆಂಬರ್ ೨೦೧೪ರ 'ಉತ್ಥಾನ' ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ ಇಲ್ಲಿದೆ. 
ಟಿ. ಜಿ. ಶ್ರೀನಿಧಿ

ಆಲಿಬಾಬನ ಕತೆ ಗೊತ್ತಲ್ಲ, ಅದರಲ್ಲಿ ನಲವತ್ತು ಮಂದಿ ಕಳ್ಳರು ತಾವು ಕದ್ದು ತಂದ ಸಂಪತ್ತನ್ನೆಲ್ಲ ಒಂದು ಗುಹೆಯಲ್ಲಿ ಅವಿಸಿಡುತ್ತಿರುತ್ತಾರೆ. ಮತ್ತೆ ಕಳ್ಳತನಕ್ಕೆ ಹೋದಾಗ ಬೇರೆ ಕಳ್ಳರು ಬಂದು ಇವರ ಸಂಪತ್ತನ್ನೇ ಕದ್ದುಬಿಡಬಾರದಲ್ಲ, ಅದಕ್ಕಾಗಿ 'ಬಾಗಿಲು ತೆರೆಯೇ ಸೇಸಮ್ಮ' ಎಂದು ಹೇಳದ ಹೊರತು ಗುಹೆಯೊಳಕ್ಕೆ ಯಾರೂ ಹೋಗಲಾಗದಂತಹ ವ್ಯವಸ್ಥೆಯನ್ನೂ ರೂಪಿಸಿಕೊಂಡಿರುತ್ತಾರೆ.

ಕಳ್ಳರ ಬಂದೋಬಸ್ತು ಜೋರಾಗಿಯೇ ಇತ್ತು ನಿಜ. ಆದರೆ ಆಲಿಬಾಬ ಯಾವಾಗ ಅವರ ಗುಪ್ತಸಂಕೇತವನ್ನು ಕೇಳಿಸಿಕೊಂಡನೋ ಅಲ್ಲಿಂದ ಸೇಸಮ್ಮ ಆಲಿಬಾಬನಿಗೂ ಬಾಗಿಲು ತೆರೆಯಲು ಶುರುಮಾಡಿದಳು!

ಆಲಿಬಾಬನ ಈ ಕತೆ ಕಲ್ಪನೆಯದೇ ಇರಬಹುದು. ಆದರೆ ಅಂತರಜಾಲದ ಪ್ರಪಂಚದಲ್ಲಿ ಈ ಕತೆಯಲ್ಲಿ ನಡೆದಂತಹ ಸನ್ನಿವೇಶಗಳು ಈಗ ತೀರಾ ಸಾಮಾನ್ಯವಾಗಿಬಿಟ್ಟಿವೆ. ಕತೆಯ ಆಲಿಬಾಬ ಕಳ್ಳರಿಂದ ಕದ್ದರೆ ಅಂತರಜಾಲದ ಖದೀಮರು ಸಿಕ್ಕಸಿಕ್ಕವರನ್ನೆಲ್ಲ ದೋಚಲು ಹೊರಟಿದ್ದಾರೆ.

ಇಂತಹ ಪರಿಸ್ಥಿತಿಯನ್ನು ತಂದಿಟ್ಟಿರುವುದು ಕೇವಲ ಒಂದು ಪದ ಎಂದರೆ ನಮಗೆ ಆಶ್ಚರ್ಯವೇನೂ ಆಗಲಿಕ್ಕಿಲ್ಲ. ಏಕೆಂದರೆ ಜಾಲಜಗತ್ತಿನ ಅದೆಷ್ಟೋ ಬಾಗಿಲುಗಳನ್ನು ತೆರೆಯುವ ಪಾಸ್‌ವರ್ಡ್ ಎಂಬ ಶಕ್ತಿಶಾಲಿ ಶಬ್ದ ಆಲಿಬಾಬ ಕತೆಯ ಸೇಸಮ್ಮನಂತೆಯೇ ತಾನೆ!

ನಿಜ, ಡಿಜಿಟಲ್ ಪ್ರಪಂಚದಲ್ಲಿ ನಮ್ಮ ಮಾಹಿತಿಯನ್ನೆಲ್ಲ ಸುರಕ್ಷಿತವಾಗಿಡಲು, ಅದು ಅಪಾತ್ರರ ಕೈಗೆ ಸಿಗದಂತೆ ನೋಡಿಕೊಳ್ಳಲು, ನಮ್ಮ ಮಾಹಿತಿ ನಮಗಷ್ಟೆ ಗೊತ್ತು ಎಂಬ ಸಮಾಧಾನದ ಭಾವನೆ ಮೂಡಿಸಲು ಪಾಸ್‌ವರ್ಡ್ ಬೇಕೇ ಬೇಕು.

ಕಂಪ್ಯೂಟರ್ ಪ್ರಪಂಚಕ್ಕೆ ಪಾಸ್‌ವರ್ಡುಗಳು ಪಾದಾರ್ಪಣೆ ಮಾಡಿದ್ದು ಸುಮಾರು ೧೯೬೦ರ ಆಸುಪಾಸಿನಲ್ಲಿ.

ಬುಧವಾರ, ನವೆಂಬರ್ 26, 2014

ಐಟಿ ಜಗದಲ್ಲಿ ಕನ್ನಡದ ಬಾವುಟ

ಕಂಪ್ಯೂಟರಿನಲ್ಲಿ ಕನ್ನಡವೆಂದರೆ ಟೈಪಿಂಗ್ ಅಷ್ಟೇ ಅಲ್ಲ. ಇಂಗ್ಲಿಷಿನಲ್ಲೋ ಬೇರೊಂದು ಭಾಷೆಯಲ್ಲೋ ಕಂಪ್ಯೂಟರ್ ಬಳಸಿ ಏನೆಲ್ಲ ಸಾಧಿಸಬಹುದೋ ಅವನ್ನೆಲ್ಲ ಕನ್ನಡದಲ್ಲೂ ಸಾಧ್ಯವಾಗಿಸುವ ದಿನ ದೂರವಿಲ್ಲ. ಈ ನಿಟ್ಟಿನಲ್ಲಿ ನಡೆಯುತ್ತಿರುವ ಕೆಲವು ಬೆಳವಣಿಗೆಗಳನ್ನು ಪರಿಚಯಿಸುವ ಲೇಖನ ಇಲ್ಲಿದೆ. ಇಂತಹ ಇನ್ನೂ ಹಲವಾರು ಪ್ರಯತ್ನಗಳನ್ನು ಮುಂದಿನ ದಿನಗಳಲ್ಲಿ ಕನ್ನಡದ ಓದುಗರಿಗೆ ಪರಿಚಯಿಸುವ ಉದ್ದೇಶ ಇಜ್ಞಾನ ಡಾಟ್ ಕಾಮ್‌ ತಾಣಕ್ಕಿದೆ. ನಿಮ್ಮ ಗಮನಕ್ಕೆ ಬಂದ ಕನ್ನಡ ತಂತ್ರಾಂಶಗಳನ್ನು (ಕಂಪ್ಯೂಟರಿನ ತಂತ್ರಾಂಶಗಳು - ಮೊಬೈಲ್ ಆಪ್‌ಗಳೆರಡೂ ಸೇರಿದಂತೆ) ಇಜ್ಞಾನ ಫೇಸ್‌ಬುಕ್ ಪುಟದ ಮೂಲಕ ನಮಗೂ ಪರಿಚಯಿಸಿ!
ಟಿ. ಜಿ. ಶ್ರೀನಿಧಿ

ಹಿರಿಯ ವಿದ್ವಾಂಸ ಪ್ರೊ. ಜಿ. ವೆಂಕಟಸುಬ್ಬಯ್ಯನವರು ಯಾವುದೋ ಸಂದರ್ಭದಲ್ಲಿ ನಿರ್ದಿಷ್ಟ ಪದ್ಯವೊಂದನ್ನು ಉದಾಹರಿಸಬೇಕಾಗಿ ಬಂದಿತ್ತು. ಆಗ ಅದರ ಪೂರ್ಣಪಾಠವನ್ನು ಒಮ್ಮೆ ನೋಡಿಬಿಡೋಣ ಎಂದು ಅವರು ತಮ್ಮ ಪುಸ್ತಕ ಸಂಗ್ರಹದಲ್ಲಿ ಹುಡುಕುತ್ತಿದ್ದರು. ಅಷ್ಟರಲ್ಲಿ ಅಲ್ಲಿಗೆ ಬಂದ ಅವರ ಮೊಮ್ಮಗಳು ಆ ಪದ್ಯವನ್ನು ಅಂತರಜಾಲದ ಮೂಲಕ ಕೆಲವೇ ಕ್ಷಣಗಳಲ್ಲಿ ಹುಡುಕಿಕೊಟ್ಟರಂತೆ!

ನಮ್ಮ ಬದುಕನ್ನು ಮಾಹಿತಿ ತಂತ್ರಜ್ಞಾನ ಹೇಗೆ ಬದಲಿಸುತ್ತಿದೆ ಎನ್ನುವ ಕುರಿತು ಮಾತನಾಡುವಾಗ ಜೀವಿಯವರು ಹೇಳಿದ ಉದಾಹರಣೆ ಇದು. ನಿಜ, ಕೆಲವೇ ವರ್ಷಗಳ ಹಿಂದೆ ಯೋಚಿಸಿಕೊಳ್ಳಲೂ ಕಷ್ಟವಾಗುವಂತಿದ್ದ ಕೆಲಸಗಳು ಇಂದು ಮಾಹಿತಿ ತಂತ್ರಜ್ಞಾನದಿಂದಾಗಿ ಬಹಳ ಸುಲಭವಾಗಿಬಿಟ್ಟಿವೆ. ಅಷ್ಟೇ ಅಲ್ಲ, ಮಾಹಿತಿ ತಂತ್ರಜ್ಞಾನದ ಅನುಕೂಲಗಳನ್ನು ಪಡೆಯಲು ಇದ್ದ ಭಾಷೆಯ - ತಾಂತ್ರಿಕ ಜ್ಞಾನದ ಅಡೆತಡೆಗಳೂ ನಿಧಾನಕ್ಕೆ ದೂರವಾಗುತ್ತಿವೆ.

ಸೋಮವಾರ, ನವೆಂಬರ್ 24, 2014

ಎಲ್ಲೆಲ್ಲೂ ಎಲ್‌ಇಡಿ

ಟಿ. ಜಿ. ಶ್ರೀನಿಧಿ

೨೦೧೪ನೇ ಸಾಲಿನ ಭೌತವಿಜ್ಞಾನ ನೊಬೆಲ್ ಪ್ರಶಸ್ತಿಯನ್ನು ಮೂವರು ವಿಜ್ಞಾನಿಗಳಿಗೆ ನೀಡಲಾಗಿದೆ. ಅವರಿಗೆ ಈ ಗೌರವ ದೊರೆತದ್ದು ನೀಲಿ ಬಣ್ಣದ ಎಲ್‌ಇಡಿಗಳನ್ನು ರೂಪಿಸಿದ್ದಕ್ಕಾಗಿ.

ಎಲ್‌ಇಡಿ, ಅಂದರೆ ಲೈಟ್ ಎಮಿಟಿಂಗ್ ಡಯೋಡ್‌ಗಳ ಪರಿಚಯ ನಮ್ಮೆಲ್ಲರಿಗೂ ಇದೆ. ಮಕ್ಕಳ ಆಟಿಕೆ - ಅಲಂಕಾರದ ಸೀರಿಯಲ್ ಸೆಟ್ - ಬಸ್ಸು, ರೈಲಿನ ಬೋರ್ಡು ಇತ್ಯಾದಿಗಳಿಂದ ಪ್ರಾರಂಭಿಸಿ ಅತ್ಯಾಧುನಿಕ ಟೀವಿ - ಮೊಬೈಲುಗಳವರೆಗೆ ಎಲ್‌ಇಡಿಗಳು ಎಲ್ಲೆಲ್ಲೂ ಬಳಕೆಯಾಗುತ್ತಿರುವುದೂ ನಮಗೆ ಗೊತ್ತು.

ವಿವಿಧ ಸಾಧನಗಳಲ್ಲಿ ಬೇರೆಬೇರೆ ಬಣ್ಣದ ಎಲ್‌ಇಡಿಗಳು ಬಳಕೆಯಾಗುತ್ತವೆ. ಕೆಂಪು ಹಾಗೂ ಹಸಿರು ಬಣ್ಣದ ಎಲ್‌ಇಡಿಗಳಂತೂ ಹಲವು ದಶಕಗಳಿಂದಲೇ ನಮಗೆಲ್ಲ ಪರಿಚಿತವಾಗಿವೆ. ಬಲ್ಬು-ಟ್ಯೂಬ್‌ಲೈಟ್-ಸಿಎಫ್‌ಎಲ್‌ಗಳಿಗೆಲ್ಲ ಪರ್ಯಾಯವಾಗಿ ಬಳಸಬಹುದಾದ ಬಿಳಿಯ ಎಲ್‌ಇಡಿಗಳೂ ಇದೀಗ ಮಾರುಕಟ್ಟೆಗೆ ಬಂದಿವೆ.

ಮಿಕ್ಕ ಬಣ್ಣಗಳ ಎಲ್‌ಇಡಿಗಳಿಗೆ ಹೋಲಿಸಿದರೆ  ಬಿಳಿಯ ಬಣ್ಣದವುಗಳಿಗೆ ಹೆಚ್ಚಿನ ಮಹತ್ವವಿದೆ. ಅವನ್ನು ಬೆಳಕಿನ ಮೂಲಗಳಾಗಿ ಬಳಸಬಹುದಾದ ಸಾಧ್ಯತೆಯೇ ಈ ಮಹತ್ವಕ್ಕೆ ಕಾರಣ. ಅದೂ ಸರಿಯೇ ಅನ್ನಿ, ಮನೆಯನ್ನು ಬೆಳಗುವ ದೀಪ ಬಿಳಿಯ ಬಣ್ಣದ್ದಾಗಿರದೆ ಕೆಂಪನೆಯದೋ ಹಸಿರು ಬಣ್ಣದ್ದೋ ಆಗಿರಲು ಸಾಧ್ಯವೆ?

ಇರಲಿ, ವಿಷಯ ಅದಲ್ಲ. ಹಿಂದಿನಿಂದಲೇ ನಮಗೆ ಪರಿಚಿತವಾಗಿರುವ ಕೆಂಪು-ಹಸಿರು ಎಲ್‌ಇಡಿಗಳಿಗೋ ಇದೀಗ ಮಾರುಕಟ್ಟೆಯಲ್ಲಿ ವಿಜೃಂಭಿಸುತ್ತಿರುವ ಬಿಳಿ ಎಲ್‌ಇಡಿಗಳಿಗೋ ದೊರೆಯದ ನೊಬೆಲ್ ನೀಲಿಯ ಎಲ್‌ಇಡಿಗಳಿಗೆ ದೊರೆಯಲು ಕಾರಣವೇನು?

ಶುಕ್ರವಾರ, ನವೆಂಬರ್ 7, 2014

ಜಿ. ವಿ. ನಿರ್ಮಲ ಹೇಳುತ್ತಾರೆ... "ವಿಷಯಗಳನ್ನು ನೀರಸವಾಗಿ ಓದುಗರ ಮುಂದಿರಿಸಿದರೆ ಸಾಲದು"

ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗ ಶಾಲೆಯಲ್ಲಿ ವಿಜ್ಞಾನಿಯಾಗಿ ಸೇವೆಸಲ್ಲಿಸಿ ನಿವೃತ್ತರಾಗಿರುವ ಶ್ರೀಮತಿ ಜಿ. ವಿ. ನಿರ್ಮಲ ವಿಜ್ಞಾನ ಹಾಗೂ ತಂತ್ರಜ್ಞಾನ ವಿಷಯಗಳ ಕುರಿತು ಕನ್ನಡದಲ್ಲಿ ಬರೆಯುತ್ತಿರುವ ಲೇಖಕಿಯರಲ್ಲೊಬ್ಬರು. ಮೈಸೂರು ವಿವಿಯಿಂದ ಭೌತವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಿರ್ಮಲರ ಲೇಖನಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 'ಕಂಪ್ಯೂಟರ್ ಪದವಿವರಣ ಕೋಶ'ದ ತಯಾರಿಕೆಯಲ್ಲಿ ಸಹಸಂಪಾದಕಿಯಾಗಿ, 'ಇತಿಹಾಸದಲ್ಲಿ ವಿಜ್ಞಾನ' ಮಾಲಿಕೆಯ ಅನುವಾದಕರಲ್ಲೊಬ್ಬರಾಗಿ, 'ವಿಜ್ಞಾನ ಸಿರಿ' ಸಂಕಲನದ ಸಂಪಾದಕರಲ್ಲೊಬ್ಬರಾಗಿ ಕೆಲಸಮಾಡಿದ್ದಾರೆ. 'ಮಾಹಿತಿ ಸಂಪತ್ತು ಡಿಜಿಟಲ್ ಜಗತ್ತು' ಕೃತಿಯ ಲೇಖಕರು. 'ಅದ್ಭುತ ಯಂತ್ರ ಗಣಕ', 'ಗಣಕ ಲೋಕದೊಳಗೆ ಒಂದು ಪಯಣ' ಮುಂತಾದ ಕೃತಿಗಳ ಸಹಲೇಖಕರು. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ..  
ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ಮೈಸೂರು ವಿಶ್ವವಿದ್ಯಾಲಯದಿಂದ ಭೌತ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ನಂತರ ಕೆಲವು ವರ್ಷ ಅಧ್ಯಾಪಕಿಯಾಗಿಯೂ, ಆನಂತರ ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗ ಶಾಲೆಯಲ್ಲಿ ವಿಜ್ಞಾನಿಯಾಗಿಯೂ ಸೇವೆ ಸಲ್ಲಿಸಿದೆ. ನಮ್ಮ ತಂದೆ ದಿವಂಗತ ಡಾ.ಜಿ.ವರದರಾಜರಾವ್‌ರವರು ದಾಸ ಸಾಹಿತ್ಯದಲ್ಲಿ ವಿದ್ವಾಂಸರು ಹಾಗೂ ಸಾಹಿತಿಗಳು. ಆದ್ದರಿಂದ ಮನೆಯಲ್ಲಿ ಸಾಹಿತ್ಯಿಕ ವಾತಾವರಣವಿತ್ತು. ಕಾಲೇಜು ಪತ್ರಿಕೆಗಳಲ್ಲಿ ಬರೆಯುತ್ತಿದ್ದೆ. ನನ್ನ ವೃತ್ತಿ ಜೀವನದುದ್ದಕ್ಕೂ ವೈಜ್ಞಾನಿಕ ವಿಷಯಗಳನ್ನು ತಿಳಿದುಕೊಳ್ಳುವ ಅನೇಕ ಸಂದರ್ಭಗಳು ಮತ್ತು ಅವಕಾಶಗಳಿದ್ದವು. ವಿಶೇಷವಾಗಿ ರಾ.ವೈ.ಪ್ರ ಕನ್ನಡ ಸಂಘದಿಂದ ಪ್ರಕಟವಾಗುವ 'ಕಣಾದ' ವಿಜ್ಞಾನ ಪತ್ರಿಕೆ ವಿಜ್ಞಾನ ಲೇಖನಗಳನ್ನು ಬರೆಯಬೇಕೆಂಬ ಆಸೆಯನ್ನು ನನ್ನಲ್ಲಿ ಜಾಗೃತಗೊಳಿಸಿತು.

ಸೋಮವಾರ, ನವೆಂಬರ್ 3, 2014

ಡ್ರೋನ್ ಡೆಲಿವರಿ!

ಟಿ. ಜಿ. ಶ್ರೀನಿಧಿ

ಈಚೆಗೆ ಒಂದೆರಡು ವರ್ಷಗಳಿಂದ 'ಡ್ರೋನ್' ಎಂಬ ಹೆಸರು ಸಾಕಷ್ಟು ಸುದ್ದಿಮಾಡುತ್ತಿದೆ. ಪಾಕಿಸ್ತಾನದಲ್ಲೋ ಅಫಘಾನಿಸ್ಥಾನದಲ್ಲೋ ಭಯೋತ್ಪಾದಕರ ಅಡಗುದಾಣಗಳ ಮೇಲೆ ಡ್ರೋನ್ ದಾಳಿ ಆಯಿತಂತೆ ಎನ್ನುವಂತಹ ಸುದ್ದಿಗಳನ್ನು ನಾವು ಆಗಿಂದಾಗ್ಗೆ ನೋಡುತ್ತಿರುತ್ತೇವೆ.

ಚಾಲಕರ ಅಗತ್ಯವಿಲ್ಲದ, ದೂರದಿಂದಲೇ ನಿಯಂತ್ರಿಸಬಹುದಾದ ಈ ಸಣ್ಣ ವಿಮಾನಗಳು ಮಿಲಿಟರಿ ಕ್ಷೇತ್ರದಲ್ಲಿ ಸಾಕಷ್ಟು ಸಮಯದಿಂದ ಬಳಕೆಯಲ್ಲಿವೆ.  ಆಧುನಿಕ ಯುದ್ಧವಿಮಾನಗಳಲ್ಲಿರುವ ಬಹುತೇಕ ಸೌಲಭ್ಯಗಳು ಈ ಡ್ರೋನ್‌ಗಳಲ್ಲೂ ಇವೆಯಂತೆ.

ಯುದ್ಧರಂಗದಲ್ಲಿ, ಸಂಶೋಧನಾ ಕ್ಷೇತ್ರದಲ್ಲೆಲ್ಲ ಕೆಲಸ ಮಾಡಿರುವ ಡ್ರೋನ್‌ಗಳು ಇದೀಗ ನಮ್ಮ ಮನೆಗಳತ್ತ ಹೊರಡಲು ತಯಾರಾಗುತ್ತಿವೆ ಎನ್ನುವುದು ಇತ್ತೀಚಿನ ಸುದ್ದಿ. ಹಾಗೆಂದ ತಕ್ಷಣ ಗಾಬರಿಯಾಗಬೇಕಾದ ಅಗತ್ಯವೇನೂ ಇಲ್ಲ. ಡ್ರೋನ್‌ಗಳು ಬರುತ್ತಿರುವುದು ನಮ್ಮ ಮೇಲೆ ಬಾಂಬ್ ಹಾಕಲಿಕ್ಕಲ್ಲ, ಆನ್‌ಲೈನ್ ಶಾಪಿಂಗ್ ತಾಣದಲ್ಲಿ ನಾವು ಕೊಂಡ ವಸ್ತುಗಳನ್ನು ತಲುಪಿಸಲಿಕ್ಕೆ!

'ಥ್ರೀ ಇಡಿಯಟ್ಸ್' ಚಿತ್ರದಲ್ಲಿ ಅಮೀರ್ ಖಾನ್ ಹಾರಿಸುತ್ತಾನಲ್ಲ, ಅಂತಹವೇ ಹಾರುವ ಯಂತ್ರಗಳು ಇವು. ಆನ್‌ಲೈನ್ ಅಂಗಡಿಯಲ್ಲಿ ಕೊಂಡ ಮೊಬೈಲ್ ಫೋನ್ ಇರಲಿ, ಪಕ್ಕದ ರಸ್ತೆಯ ಅಂಗಡಿಯಿಂದ ಬರಬೇಕಿರುವ ಪಿಜ್ಜಾ ಇರಲಿ - ಅದನ್ನೆಲ್ಲ ಇವು ನೇರಾನೇರ ನಮ್ಮ ಕೈಗೇ ತಂದೊಪ್ಪಿಸಲಿವೆಯಂತೆ.

ಶನಿವಾರ, ನವೆಂಬರ್ 1, 2014

ಶಿಕ್ಷಣ ಮಿತ್ರ

'ಕಂಪ್ಯೂಟರ್ ಮತ್ತು ಕನ್ನಡ' ಕೃತಿಯ ಆನ್‌ಲೈನ್ ಆವೃತ್ತಿಯನ್ನು ಪ್ರಕಟಿಸುವ ಮೂಲಕ ಇಜ್ಞಾನ ಶಿಕ್ಷಣ ಮಿತ್ರ ಜಾಲತಾಣ ಇದೀಗ ನಿಮ್ಮ ಮುಂದೆ ಬಂದಿದೆ. ಓದಿ, ಪ್ರತಿಕ್ರಿಯೆ ನೀಡಿ, ನಿಮ್ಮ ಆಪ್ತರಿಗೂ ತಿಳಿಸಿ. ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

ಇಜ್ಞಾನ ಶಿಕ್ಷಣ ಮಿತ್ರ ಜಾಲತಾಣಕ್ಕೆ ಭೇಟಿನೀಡಲು ಇಲ್ಲಿ ಕ್ಲಿಕ್ ಮಾಡಿ

ಬುಧವಾರ, ಅಕ್ಟೋಬರ್ 29, 2014

ಸೈಬರ್ ಯುದ್ಧ

ಇನ್ನೊಂದು ವಿಶ್ವಸಮರವೇನಾದರೂ ಪ್ರಾರಂಭವಾದರೆ ಅಂತಹುದೊಂದು ಯುದ್ಧದಲ್ಲಿ ವಿಮಾನಗಳು-ಟ್ಯಾಂಕುಗಳು ಬಂದು ಬಾಂಬು ಸಿಡಿಸುವುದಿಲ್ಲ, ಸೈನಿಕರು ಮುಖಾಮುಖಿಯಾಗಿ ಹೋರಾಡುವುದೂ ಇಲ್ಲ ಎಂದು ತಜ್ಞರು ಹೇಳುತ್ತಾರೆ. ಹೀಗಿದ್ದರೂ ಯುದ್ಧ ನಡೆಯುತ್ತದೆ - ರಣರಂಗದಲ್ಲಲ್ಲ, ಕಂಪ್ಯೂಟರಿನಲ್ಲಿ! 'ಸೈಬರ್ ಯುದ್ಧ' ಕುರಿತು ನವೆಂಬರ್ ೨೦೧೪ರ 'ಉತ್ಥಾನ' ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ ಇಲ್ಲಿದೆ.
ಟಿ. ಜಿ. ಶ್ರೀನಿಧಿ

ಮೊದಲ ವಿಶ್ವಯುದ್ಧ ಪ್ರಾರಂಭವಾಗಿ ಒಂದು ಶತಮಾನ ಕಳೆದ ನೆನಪಿಗೆ ಈ ವರ್ಷ (೨೦೧೪) ಸಾಕ್ಷಿಯಾಗಿದೆ. ಅದರೊಡನೆ ಮಹಾಯುದ್ಧದ ಕಹಿನೆನಪುಗಳೂ ಮರಳಿಬಂದಿವೆ. ಕಳೆದ ನೂರು ವರ್ಷಗಳಲ್ಲಿ ವಿಜ್ಞಾನ-ತಂತ್ರಜ್ಞಾನಗಳ ಬೆಳೆದಿರುವ ಪರಿಯನ್ನು ನೆನಪಿಸಿಕೊಂಡರಂತೂ ಇನ್ನೊಂದು ಮಹಾಯುದ್ಧದ ಸಾಧ್ಯತೆಯೇ ನಮ್ಮನ್ನು ಬೆಚ್ಚಿಬೀಳಿಸುತ್ತಿದೆ.

ಹೌದಲ್ಲ, ಈಗ ಇನ್ನೊಂದು ಮಹಾಯುದ್ಧವೇನಾದರೂ ಶುರುವಾದರೆ ಹೇಗಿರಬಹುದು? ಅಣುಬಾಂಬುಗಳು ಸಿಡಿದು, ವಿಷಾನಿಲಗಳು ಎಲ್ಲೆಲ್ಲೂ ಆವರಿಸಿಕೊಂಡು, ಭೂಮಿಯೆಲ್ಲ ಮರಳುಗಾಡಾಗಿ... ಯಾಕೆ ಕೇಳುತ್ತೀರಿ ಆ ಕತೆ? ಎನ್ನುತ್ತೀರಾ?

ಇದೆಲ್ಲ ಹಳೆಯ ಕಲ್ಪನೆ ಎನ್ನುತ್ತಾರೆ ತಜ್ಞರು. ಈಗ ಇನ್ನೊಂದು ವಿಶ್ವಸಮರವೇನಾದರೂ ಪ್ರಾರಂಭವಾದರೆ ಅಂತಹುದೊಂದು ಯುದ್ಧದಲ್ಲಿ ವಿಮಾನಗಳು-ಟ್ಯಾಂಕುಗಳು ಬಂದು ಬಾಂಬು ಸಿಡಿಸುವುದಿಲ್ಲ, ಸೈನಿಕರು ಮುಖಾಮುಖಿಯಾಗಿ ಹೋರಾಡುವುದೂ ಇಲ್ಲ ಎನ್ನುವುದು ಅವರ ಅಭಿಪ್ರಾಯ.

ಹೀಗಿದ್ದರೂ ಯುದ್ಧ ನಡೆಯುತ್ತದೆ ಎಂದು ಅವರು ಹೇಳುತ್ತಾರೆ. ಆದರೆ ಆ ಯುದ್ಧ ನಡೆಯುವುದು ರಣರಂಗದಲ್ಲಲ್ಲ, ಕಂಪ್ಯೂಟರಿನಲ್ಲಿ!

ಶುಕ್ರವಾರ, ಅಕ್ಟೋಬರ್ 17, 2014

ಗಾಯತ್ರಿ ಮೂರ್ತಿ ಹೇಳುತ್ತಾರೆ... "ಯಾವುದೇ ಕಾರ್ಯವನ್ನು ಪ್ರತಿಫಲಾಪೇಕ್ಷೆಯಿಲ್ಲದೆ ಮಾಡಿದಾಗಲೇ ಅದು ಉತ್ತಮವಾಗಿ ನಡೆಯಲು ಸಾಧ್ಯ"

ನಾವೆಲ್ಲ ಕ್ಲಿಷ್ಟವೆಂದು ಭಾವಿಸುವ ಭೌತವಿಜ್ಞಾನದಂತಹ ವಿಷಯವನ್ನೂ ಸರಳವಾಗಿ ಹೇಳಬಹುದೆಂದು ತೋರಿಸಿಕೊಟ್ಟವರಲ್ಲಿ ಶ್ರೀಮತಿ ಗಾಯತ್ರಿ ಮೂರ್ತಿಯವರು  ಒಬ್ಬರು. ಮೈಸೂರು ವಿವಿಯಿಂದ ಭೌತವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಗಾಯತ್ರಿಯವರು ಮೂರು ದಶಕಗಳ ಅಧ್ಯಾಪನದ ನಂತರ ನಿವೃತ್ತರಾಗಿದ್ದಾರೆ. ಗಾಳಿ, ಶಾಖ, ನೀರು, ಬೆಳಕು ಹಾಗೂ ಶಬ್ದಲೋಕ ಎನ್ನುವ ಕೃತಿಗಳು ಹತ್ತಕ್ಕೂ ಹೆಚ್ಚು ಮುದ್ರಣ ಕಂಡಿವೆ. ನಿಶ್ಶಬ್ದದೊಳಗಿನ ಶಬ್ದ, ದೀಪಗಳು, ಎಕ್ಸ್ ಕಿರಣಗಳ ಅದೃಶ್ಯಲೋಕ - ಇವು ಗಾಯತ್ರಿ ಮೂರ್ತಿಯವರ ಇತರ ಕೃತಿಗಳಲ್ಲಿ ಕೆಲವು. ವಿಜ್ಞಾನ ಸಂವಹನದ ಜೊತೆಗೆ ಮಕ್ಕಳ ಸಾಹಿತ್ಯ ಹಾಗೂ ಲಲಿತಪ್ರಬಂಧಗಳ ರಚನೆಯಲ್ಲೂ ಗಾಯತ್ರಿಯವರಿಗೆ ಆಸಕ್ತಿಯಿದೆ. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ..  

ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ನಾನು ಕಾಲೇಜಿನಲ್ಲಿ ಭೌತವಿಜ್ಞಾನದ ಅಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದೆ. ವಿಜ್ಞಾನ ಬೋಧನೆ ಕೂಡ ವಿಜ್ಞಾನ ಸಂವಹನ ಅಲ್ಲವೇ? ಮಕ್ಕಳಿಗಾಗಿ ಬರೆಯಲಾದ ವಿಜ್ಞಾನದ ಪುಸ್ತಕಗಳನ್ನು ಪರಿಶೀಲಿಸಿದಾಗ ಅನೇಕ ಪುಸ್ತಕಗಳಲ್ಲಿ ಮಕ್ಕಳಿಗೆ ಮಾಹಿತಿ ತಿಳಿಸುವ ಕಾತರ ಕಂಡು ಬಂತೇ ಹೊರತು ಮಾಹಿತಿ ತಿಳಿಸುವಲ್ಲಿ ಇರಬೇಕಾದ ವಿವೇಚನೆ, ಶಿಸ್ತು, ಭಾಷೆಯ ಸರಳತೆಗಳೆಲ್ಲ ಇಲ್ಲದಿರುವುದನ್ನು ಗಮನಿಸಿದೆ. ಆಗ ಮಕ್ಕಳಿಗೆ ಸುಲಭವಾಗಿ ಅರಿವಾಗುವಂತಹ ಸರಳ ಭಾಷೆಯಲ್ಲಿ ವಿಜ್ಞಾನ ಪುಸ್ತಕಗಳನ್ನು ಬರೆಯಬೇಕೆಂಬ ನಿರ್ಧಾರ ಮಾಡಿದೆ.

ಶನಿವಾರ, ಅಕ್ಟೋಬರ್ 11, 2014

ಡಾ. ಶೈಲಜಾ ಹೇಳುತ್ತಾರೆ... "ಬಾಲ್ಯದಲ್ಲಿ ಓದಿದ್ದ ಅನೇಕ ಪುಸ್ತಕಗಳ ಪ್ರಭಾವ ನನ್ನನ್ನು ಬರೆಯುವಂತೆ ಪ್ರೇರೇಪಿಸಿತು"

ಕನ್ನಡದಲ್ಲಿ ಬಹುಸಮಯದಿಂದ ವಿಜ್ಞಾನದ ಕುರಿತ ಲೇಖನ-ಪುಸ್ತಕಗಳನ್ನು ಬರೆಯುತ್ತಿರುವ ಅಪರೂಪದ ಸಂವಹನಕಾರರು ಡಾ. ಬಿ. ಎಸ್. ಶೈಲಜಾ. ಪ್ರಸ್ತುತ ಇವರು ಬೆಂಗಳೂರಿನ ಜವಾಹರಲಾಲ್ ನೆಹರೂ ತಾರಾಲಯದ ನಿರ್ದೇಶಕಿಯಾಗಿದ್ದಾರೆ. ಪ್ರಮುಖ ಪತ್ರಿಕೆಗಳಲ್ಲಿ ಲೇಖನ-ಅಂಕಣಗಳಷ್ಟೇ ಅಲ್ಲದೆ ‘ಬಾನಿಗೊಂದು ಕೈಪಿಡಿ’, ‘ಸಫಾರಿ ಎಂಬ ಲಕ್ಷುರಿ’, ‘ಶುಕ್ರಗ್ರಹದ ಸಂಕ್ರಮಣ’, ‘ಆಗಸದ ಅಲೆಮಾರಿಗಳು’, ‘ಏನು...? ಗಣಿತ ಅಂದ್ರಾ...?’ ಮುಂತಾದ ಹಲವು ಪುಸ್ತಕಗಳನ್ನೂ ರಚಿಸಿದ್ದರೆ. ಇವರ ‘ಶುಕ್ರಗ್ರಹದ ಸಂಕ್ರಮಣ’ ಹಾಗೂ ‘ಆಗಸದ ಅಲೆಮಾರಿಗಳು’ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ. ೨೦೧೩ರಲ್ಲಿ ಬಿಡುಗಡೆಯಾದ 'ಬಾಲಂಕೃತ ಚುಕ್ಕಿ: ಧೂಮಕೇತು' ಕೃತಿಗೆ ಶಿವಮೊಗ್ಗ ಕರ್ನಾಟಕ ಸಂಘದ ‘ಹಸೂಡಿ ವೆಂಕಟಾಚಲಶಾಸ್ತ್ರಿ ವಿಜ್ಞಾನ ಸಾಹಿತ್ಯ ಪ್ರಶಸ್ತಿ’ ದೊರೆತಿದೆ. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ...
ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ನಾನು ಮೂಲತಃ ವಿಜ್ಞಾನಿ; ಸಂವಹನ ನನ್ನ ಕ್ಷೇತ್ರವಲ್ಲ. ಆದರೆ ಕನ್ನಡದ ಮಕ್ಕಳ ಬಗ್ಗೆ ಕಾಳಜಿ, ಅವರಿಗೆ ಅತ್ಯುತ್ತಮ ಪುಸ್ತಕಗಳನ್ನು ತಲುಪಿಸಬೇಕು ಎಂಬ ಆಸಕ್ತಿ ಮತ್ತು ಬಾಲ್ಯದಲ್ಲಿ ಓದಿದ್ದ ಅನೇಕ ಪುಸ್ತಕಗಳ ಪ್ರಭಾವ ನನ್ನನ್ನು ಬರೆಯುವಂತೆ ಪ್ರೇರೇಪಿಸಿತು.

ನೀವು ಮೆಚ್ಚುವ / ನಿಮ್ಮ ಮೇಲೆ ಪ್ರಭಾವ ಬೀರಿದ ಇತರ ವಿಜ್ಞಾನ ಸಂವಹನಕಾರರು ಯಾರು?
ಕನ್ನಡದಲ್ಲಿ ಪಾ ವೆಂ ಆಚಾರ್ಯ, ಜಿ ಟಿ ನಾರಾಯಣರಾಯರು, ಶಿವರಾಮ ಕಾರಂತರು,  ಬೆಳ್ಳಾವೆ ವೆಂಕಟನಾರಣಪ್ಪನವರು ಮತ್ತು ಈಚೆಗೆ ಟಿ. ಆರ್. ಅನಂತರಾಮು ಹಾಗೂ ನಾಗೇಶ ಹೆಗಡೆ. ಅಲ್ಲದೆ ನೀವು ಕೇಳಿರದ ಹೆಸರುಗಳೂ ಇವೆ - ಆನಂದ ವರ್ಟಿ, ವೆಲ್ಲಾಲ ಸತ್ಯಂ, ಹೀಗೆ.

ಭಾನುವಾರ, ಅಕ್ಟೋಬರ್ 5, 2014

ನಾರಾಯಣ ಬಾಬಾನಗರ ಹೇಳುತ್ತಾರೆ... "ವಿಜ್ಞಾನ ಸಂಘದಿಂದ ನಡೆಸಿದ ಚಟುವಟಿಕೆಗಳು ವಿಜ್ಞಾನ ಸಂವಹನದಲ್ಲಿ ಆಸಕ್ತಿ ಮೂಡಿಸಿದವು"

ವಿಜ್ಞಾನದ ಕಲಿಕೆ ಕಬ್ಬಿಣದ ಕಡಲೆಯಾಗದೆ ಖುಷಿಕೊಡುವ ಕೆಲಸವಾಗಬೇಕೆಂದು ನಂಬಿರುವ, ತಮ್ಮ ವಿದ್ಯಾರ್ಥಿಗಳಿಗೆ ಅದೇ ಅನುಭವವನ್ನು ಕಟ್ಟಿಕೊಡುತ್ತಿರುವ ಅಪರೂಪದ ಶಿಕ್ಷಕರಲ್ಲಿ ಶ್ರೀ ನಾರಾಯಣ ಬಾಬಾನಗರ ಕೂಡ ಒಬ್ಬರು. ವಿಜಾಪುರ ಸಮೀಪದ ಕಾಖಂಡಕಿಯವರಾದ ನಾರಾಯಣರು ಪ್ರಾಣಿಶಾಸ್ತ್ರ ಹಾಗೂ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವೀಧರರು. ಪ್ರೌಢಶಾಲಾ ವಿಜ್ಞಾನ ಶಿಕ್ಷಕರಾಗಿರುವ ಅವರು ಆಟಿಕೆಗಳ ಮೂಲಕ ಪಾಠ ಹೇಳುವ ವಿನೂತನ ಪ್ರಯೋಗ ಮಾಡಿದ್ದಾರೆ, ಹಲವೆಡೆಗಳಲ್ಲಿ ಪ್ರಾತ್ಯಕ್ಷಿಕೆಗಳನ್ನೂ ನೀಡಿದ್ದಾರೆ. ಪತ್ರಿಕಾ ಲೇಖನಗಳಷ್ಟೇ ಅಲ್ಲದೆ 'ಕುಂಟಾಬಿಲ್ಲೆ', 'ವಿಜ್ಞಾನ ವಿಹಾರ', 'ಬಣ್ಣದ ಬಾಲಂಗೋಚಿ', 'ಕೌತುಕದ ಚುಚ್ಚುಮದ್ದು! ...ಸೋಜಿಗದ ಸೂಜಿಮದ್ದು', 'ಆಹಾ! ಆಟಿಕೆಗಳು' ಮುಂತಾದ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಸಿ. ಎನ್. ಆರ್. ರಾವ್ ಶಿಕ್ಷಣ ಪ್ರತಿಷ್ಠಾನದ 'ಉತ್ತಮ ವಿಜ್ಞಾನ ಶಿಕ್ಷಕ' ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಭಾಜನರಾಗಿದ್ದಾರೆ. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ...
ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ನಾನು ಕಲಿತಿದ್ದು ಒಂದು ಚಿಕ್ಕ ಹಳ್ಳಿಯ ಸರಕಾರಿ ಶಾಲೆಯಲ್ಲಿ. ಅಲ್ಲಿ ಪರಿಸರದ ಬೆರಗುಗಳಿಗೆ ಉತ್ತರಗಳು ಅಂತ ಸಿಕ್ಕಿದ್ದು ತುಂಬಾ ಅಪರೂಪ. ಉತ್ತರ ಕೇಳಿದಾಗ ಹೇಳಬೇಕಾದವರಿಂದ ನಿರಾಶೆ ಸಿಕ್ಕಿದ್ದೇ ಹೆಚ್ಚು ಸಲ. ಪ್ರೌಢ ಶಿಕ್ಷಣ ಮುಗಿಸಿ ನಗರದ ಕಾಲೇಜಿಗೆ ಸೇರಿದಾಗ ಕೀಳರಿಮೆಯೇ ತುಂಬಿ ತುಳುಕಾಡಿತು. ಪಠ್ಯದ ಆಚೆಗಿನ ವಿಜ್ಞಾನ ಸಂಬಂಧಿ ಪ್ರಶ್ನೆಗಳನ್ನು ಕೇಳಿದಾಗ ಉಡಾಫೆಯ ಉತ್ತರಗಳೇ ದೊರಕಿದವು. ಏಕೆ?ಹೇಗೆ? ಎಂಬ ಪ್ರಶ್ನೆಗಳಿಗೆ ಸಮಾಧಾನದ ಉತ್ತರಗಳು ಅಂತ ಸಿಕ್ಕದ್ದು ಪದವಿ ಓದುವಾಗ.

ಶನಿವಾರ, ಸೆಪ್ಟೆಂಬರ್ 27, 2014

ಪ್ರೊ. ನಾಗರಾಜು ಹೇಳುತ್ತಾರೆ... "ಹೀಗೆಯೇ ಸಂವಹನ ಮಾಡಬೇಕೆಂದು, ಹೀಗೆ ಸಂವಹನ ಮಾಡಲೇಬಾರದೆಂದು ತೋರಿಸಿಕೊಟ್ಟ ಎಲ್ಲರೂ ನನ್ನ ಗುರುಗಳು"

ವಿಜ್ಞಾನ ಸಂವಹನ, ಅದರಲ್ಲೂ ಮೌಖಿಕ ರೂಪದ ವಿಜ್ಞಾನ ಸಂವಹನವನ್ನು ತಮ್ಮ ಬದುಕಿನ ಗುರಿಯಾಗಿಸಿಕೊಂಡ ಅಪರೂಪದ ವಿದ್ವಾಂಸರು ಪ್ರೊ. ಎಂ. ಆರ್. ನಾಗರಾಜು. ವಿಜ್ಞಾನ ಸಂವಹನದಲ್ಲಿ ಸಾಹಿತ್ಯದ ಸ್ಪರ್ಶವಿರಬೇಕು ಎಂದು ನಂಬಿರುವ ಕೆಲವೇ ಲೇಖಕರಲ್ಲಿ ಅವರೂ ಒಬ್ಬರು. ತಮ್ಮ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಮೇಷ್ಟರಾದ ಎಂಆರ್‌ಎನ್ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಪ್ರಕಟಣೆ 'ಬಾಲವಿಜ್ಞಾನ'ದ ಮೂಲಕ ರಾಜ್ಯದ ಮೂಲೆಮೂಲೆಗಳ ವಿದ್ಯಾರ್ಥಿಗಳನ್ನು ತಲುಪಿದ್ದಾರೆ. ೧೫,೦೦೦ಕ್ಕೂ ಹೆಚ್ಚು ಮಕ್ಕಳು ಕೇಳಿದ ಪ್ರಶ್ನೆಗಳಿಗೆ ವೈಯಕ್ತಿಕ ಉತ್ತರಗಳನ್ನು ಕಳುಹಿಸಿಕೊಟ್ಟಿರುವ ಅಪರೂಪದ ಸಾಧನೆ ಅವರದ್ದು. 'ತಾಪ ಪ್ರತಾಪ', 'ರಸಸ್ವಾರಸ್ಯ' ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿರುವ ಎಂಆರ್‌ಎನ್ ಪತ್ರಿಕಾ ಲೇಖನಗಳ ಮೂಲಕವೂ ಕನ್ನಡದ ಓದುಗರಿಗೆ ಪರಿಚಿತರಾಗಿದ್ದಾರೆ. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ...
ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ವಿಜ್ಞಾನ ಮತ್ತು ಪ್ರಕೃತಿ ಕುರಿತ ಅದಮ್ಯ ಕುತೂಹಲವನ್ನು ಜನರಲ್ಲಿ ರೂಪಿಸಿ ತಣಿಸುವುದು ಅಗತ್ಯ ಎಂದು ಭಾವಿಸಿ ನಾನು ವಿಜ್ಞಾನ ಸಂವಹನಕಾರನಾಗಿರಬೇಕು. ಕಲಿತ ವಿಜ್ಞಾನಕ್ಕೂ ಪರಿಚಿತ ಅನುಭವಕ್ಕೂ ಸೇತುವೆ ನಿರ್ಮಿಸಿ ಕೊಟ್ಟಾಗ ಆನಂದಿಸಿ ನನ್ನ ಕೆಲಸ ಮುಂದುವರೆಸಲು ಪ್ರೇರೇಪಿಸುತ್ತಿರುವ ಅಭಿಮಾನಿಗಳು ಬರೆಸುತ್ತಿರುವದೂ ನನ್ನ ಸಂವಹನ ಮುಂದುವರಿಕೆಗೆ ಕಾರಣ. ತಾನು ಕಲಿತದ್ದನ್ನು, ಸಂವಹನ ಮಾಡಿದ್ದನ್ನು ಜನ ಪ್ರೋತ್ಸಾಹಿಸಿದಾಗ ಅದು ಸಹಜ.

ಸಮಾಜದ - ಸಾಮಾಜಿಕರ ಶುದ್ಧೀಕರಣ ವಿಜ್ಞಾನದ ಸಾಮಾಜೀಕರಣದಿಂದ ಮಾತ್ರ ಸಾಧ್ಯ ಎಂದು ಈಗಲೂ ನನ್ನ ಬಲವಾದ ನಂಬಿಕೆ. ಉಳಿದ ಕಾರಣಗಳೂ ಇರಬಹುದು. ಅದನ್ನೆಲ್ಲ ಹೇಳತೊಡಗಿದರೆ ಅದೇ ಒಂದು ಪುಸ್ತಕ ಆದೀತು.

ಶುಕ್ರವಾರ, ಸೆಪ್ಟೆಂಬರ್ 12, 2014

ಡಾ. ರಾಧಾಕೃಷ್ಣ ಹೇಳುತ್ತಾರೆ... "ಓದಿಗಿಂತ ಪರಮ ಸುಖ ಬೇರಿಲ್ಲ"

ಮೂಲವಿಜ್ಞಾನದ ವಿಷಯಗಳ ಕುರಿತು ಕನ್ನಡದಲ್ಲಿ ಬರೆಯುವ ಅಪರೂಪದ ಸಂವಹನಕಾರ ಡಾ. ಎ. ಪಿ. ರಾಧಾಕೃಷ್ಣ. ಪುತ್ತೂರಿನ ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿರುವ ರಾಧಾಕೃಷ್ಣರ ಲೇಖನಗಳು ಉದಯವಾಣಿ, ಸುಧಾ, ಕಸ್ತೂರಿ, ತರಂಗ, ಪುಸ್ತಕ ಪ್ರಪಂಚ, ವಿಜ್ಞಾನ ಲೋಕ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವಿಶ್ವಕಿರಣಗಳ ಮಾಯಾಲೋಕ (ಕನ್ನಡ ಪುಸ್ತಕ ಪ್ರಾಧಿಕಾರ), ಮನೆಯಂಗಳದಲ್ಲಿ ಕೃಷ್ಣ ವಿವರ (ಪ್ರಸಾರಾಂಗ ಮಂಗಳೂರು ವಿವಿ) ಸೇರಿದಂತೆ ಈವರೆಗೆ ಪ್ರಕಟವಾಗಿರುವ ಪುಸ್ತಕಗಳ ಸಂಖ್ಯೆ ಮೂರು. ನೊಬೆಲ್ ವಿಜ್ಞಾನಿಗಳು (ಉದಯವಾಣಿ) ಹಾಗೂ ಜ್ಞಾನವಿಜ್ಞಾನ (ವಿಜಯ ಕರ್ನಾಟಕ) ಎಂಬ ಅಂಕಣಗಳನ್ನು ಬರೆದದ್ದೂ ಉಂಟು. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ...
ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ಕವನ- ಪ್ರಬಂಧ ಬರೆಯುವ ಹುಚ್ಚು ಶಾಲಾ ದಿನಗಳಲ್ಲೇ ಇತ್ತು. ನಾನು ಹತ್ತನೇ ತರಗತಿಯಲ್ಲಿದ್ದೆ (೧೯೭೯). ಬೆಂಗಳೂರಿನ ವೈಮಾಂತರಿಕ್ಷ ಪ್ರಯೋಗಾಲಯದ ಕನ್ನಡ ಸಾಂಸ್ಕೃತಿಕ ಸಂಘ ತನ್ನ ಕಣಾದ ವಾರ್ಷಿಕ ಸಂಚಿಕೆಗಾಗಿ  ಕನ್ನಡ ವಿಜ್ಞಾನ ಪ್ರಬಂಧ ಸ್ಪರ್ಧೆ ಏರ್ಪಡಿಸಿರುವುದನ್ನು ಪತ್ರಿಕೆಯಲ್ಲಿ ನೋಡಿದಾಗ ನಾನೇಕೆ ಬರೆಯಬಾರದು ಎಂಬ ಪ್ರಶ್ನೆ ಮೂಡಿತು. ಶಕ್ತಿ ಸಮಸ್ಯೆಗಳು ಎಂಬ ಪ್ರಬಂಧ ಕಳುಹಿಸಿದೆ.  ಶಾಲಾ ವಿಭಾಗದಲ್ಲಿ ಪ್ರಥಮ ಬಹುಮಾನ ದೊರೆಯುವುದರೊಂದಿಗೆ ಕನ್ನಡದಲ್ಲಿ ವಿಜ್ಞಾನ ಲೇಖನ ಬರೆಯುವ ಉತ್ಸಾಹ ಮೊಳೆಯಿತು. ಸ್ಪರ್ಧೆಯಲ್ಲಿ ಪ್ರತಿವರ್ಷ ಭಾಗವಹಿಸುತ್ತ ಬಂದಂತೆ ಕನ್ನಡದಲ್ಲಿ ವಿಜ್ಞಾನ ಬರವಣಿಗೆಯ ಆಸಕ್ತಿ ಇನ್ನಷ್ಟು ಬಲವಾಯಿತು.

ಕಥೆ -ಕಾದಂಬರಿಗಳನ್ನು ಬರೆಯುತ್ತಿದ್ದ ಅಮ್ಮ ಎ. ಪಿ. ಮಾಲತಿ ನನ್ನ ಬರವಣಿಗೆಗೆ ಸದಾ ಸ್ಫೂರ್ತಿ. ನನ್ನ ತಂದೆಯ ಸೋದರ ಭಾವ - ಅಂದರೆ ನನ್ನ ಮಾವ ದಿವಂಗತ ಜಿ. ಟಿ. ನಾರಾಯಣರಾವ್ ಕೂಡ ತಮ್ಮ ಬರವಣಿಗೆ, ಉಪನ್ಯಾಸಗಳಿಂದ ನನ್ನ ಮೇಲೆ ಗಾಢ ಪ್ರಭಾವ ಬೀರಿದರು.

ಶನಿವಾರ, ಸೆಪ್ಟೆಂಬರ್ 6, 2014

ಖುಷಿಪಡಲು ೧೦೦,೦೦೦+ ಕಾರಣಗಳು


ಇಜ್ಞಾನ ಡಾಟ್ ಕಾಮ್‌ನಲ್ಲಿ ದಾಖಲಾಗಿರುವ ಪುಟವೀಕ್ಷಣೆಗಳ (ಪೇಜ್ ವ್ಯೂ) ಸಂಖ್ಯೆ ಇದೀಗ ಒಂದು ಲಕ್ಷದ ಗಡಿ ದಾಟಿದೆ. ಖುಷಿಗೆಂದು ಮಾಡುವ ಕೆಲಸ ಇಷ್ಟೆಲ್ಲ ಓದುಗರನ್ನು ಮುಟ್ಟಿರುವುದು ಅತ್ಯಂತ ಸಂತೋಷದ ಸಂಗತಿ. ನಿಮ್ಮ ಅಭಿಮಾನ ಹೀಗೆಯೇ ಇರಲಿ!

ಶುಕ್ರವಾರ, ಸೆಪ್ಟೆಂಬರ್ 5, 2014

ನಾಗೇಶ ಹೆಗಡೆ ಹೇಳುತ್ತಾರೆ... "ವಿಜ್ಞಾನ ಸಂವಹನ ಅನ್ನೋದು ನನ್ನ ಆಸಕ್ತಿಯ ವಿಷಯ ಅಲ್ಲವೇ ಅಲ್ಲ!"

ಕನ್ನಡದ ವಿಜ್ಞಾನ-ತಂತ್ರಜ್ಞಾನ ಸಂವಹನಕಾರರ ಸಾಲಿನಲ್ಲಿ ಪ್ರಮುಖ ಹೆಸರು ಶ್ರೀ ನಾಗೇಶ ಹೆಗಡೆಯವರದ್ದು. ಪರಿಸರಪ್ರೇಮಿ ಎನ್ನಿ, ವಿಜ್ಞಾನ ಲೇಖಕರೆನ್ನಿ, ಪತ್ರಕರ್ತರೆನ್ನಿ, ತಂತ್ರಜ್ಞಾನ ಆಸಕ್ತರೆನ್ನಿ - ಎಲ್ಲ ವಿಶೇಷಣಗಳೂ ಹೆಗಡೆಯವರಿಗೆ ಅನ್ವಯಿಸುತ್ತವೆ. ಹೊಸ ಬರಹಗಾರರನ್ನು ತಿದ್ದಿ ಬೆಳೆಸುವಲ್ಲಿ ಅಪಾರ ಆಸಕ್ತಿಯಿರುವ ನಾಗೇಶ ಹೆಗಡೆಯವರು ಕಿರಿಯ ಬರಹಗಾರರ ಮಟ್ಟಿಗಂತೂ ಮೇಷ್ಟರೇ ಸರಿ. ಬರಹಗಾರರಿಗಷ್ಟೇ ಏಕೆ, ಪತ್ರಿಕೋದ್ಯಮದ ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ಪ್ರಾರಂಭಿಸಿ ಪ್ರಾಥಮಿಕ ಶಾಲೆಯ ಪುಟ್ಟಮಕ್ಕಳವರೆಗೆ ನಾಗೇಶ ಹೆಗಡೆಯವರ ಪಾಠ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಹಲವು ದಶಕಗಳಿಂದ ತಮ್ಮ ಪುಸ್ತಕಗಳ, ಲೇಖನಗಳ ಮೂಲಕ ಪರಿಸರ-ವಿಜ್ಞಾನ-ತಂತ್ರಜ್ಞಾನಗಳ ಕುರಿತು ಸಾಮಾಜಿಕ ಜಾಗೃತಿ ಮೂಡಿಸುತ್ತಿರುವ ನಾಗೇಶ ಹೆಗಡೆ ಮೇಷ್ಟ್ರು ಶಿಕ್ಷಕರ ದಿನದಂದು ನಮ್ಮ ವಿಶೇಷ ಅತಿಥಿ. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ..
ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ಆಗಿನ ಕಾಲದಲ್ಲಿ (1970ರಲ್ಲಿ) ಎಲ್ಲರೂ ಕತೆ, ಕಾದಂಬರಿ, ನಾಟಕ, ಕವನಗಳಂಥ ಊಹಾತ್ಮಕ ಬರವಣಿಗೆಗೆ ಬಿದ್ದವರೇ ಆಗಿದ್ದರು. ನಮ್ಮ ಪಠ್ಯಪುಸ್ತಕಗಳಲ್ಲೂ ಬರೀ ಅವೇ ತುಂಬಿಕೊಂಡಿದ್ದವು. ಬಿಟ್ಟರೆ ಇತಿಹಾಸದ ಪಾಠಗಳಿದ್ದವು. ನೈಜ ಸಂಗತಿಯನ್ನು ಹೇಳುವವರು ಬಿಜಿಎಲ್ ಸ್ವಾಮಿ, ಜಿ. ಟಿ. ನಾರಾಯಣರಾವ್ ಮತ್ತು ಅಪರೂಪಕ್ಕೆ ಡಾ. ಶಿವರಾಮ ಕಾರಂತ ಇಷ್ಟೇ. ಇಲ್ಲಿ ಸ್ಪರ್ಧೆಯೇ ಇರಲಿಲ್ಲ! ಅದಕ್ಕೇ ಇರಬೇಕು, ನಾನು ಹೊಸದಾಗಿ ಬರವಣಿಗೆ ಆರಂಭಿಸಿ, 'ಅಂತರ್ಗ್ರಹ ಯಾತ್ರೆ' ಹೆಸರಿನ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಂಡಾಗ ನನಗೇ ಮೊದಲ ಬಹುಮಾನ ಸಿಕ್ಕಿತ್ತು. ಸಾಕಲ್ಲ ಈ ಎರಡು ಮೂರು ಕಾರಣಗಳು?

ಶುಕ್ರವಾರ, ಆಗಸ್ಟ್ 29, 2014

ಉದಯಶಂಕರ ಪುರಾಣಿಕ ಹೇಳುತ್ತಾರೆ... "ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಅನುಭವವಿರುವ ವಿಮರ್ಶಕರ ಕೊರತೆಯಿದೆ"

ತಂತ್ರಜ್ಞಾನ ಕ್ಷೇತ್ರದ ಹೊಸ ಮಾಹಿತಿಯನ್ನು ಕನ್ನಡದ ಲೋಕಕ್ಕೆ ಪರಿಚಯಿಸುತ್ತಿರುವವರಲ್ಲಿ ಶ್ರೀ ಉದಯಶಂಕರ ಪುರಾಣಿಕರದು ಪ್ರಮುಖ ಹೆಸರು. ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಕನ್ನಡಮ್ಮ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಅವರ ಅಂಕಣಗಳು ಬೆಳಕು ಕಂಡಿವೆ. ಮಾಹಿತಿ ತಂತ್ರಜ್ಞಾನ ಕುರಿತ ಅವರ ಹಲವಾರು ಬರಹಗಳು ಅನೇಕ ಸಂಕಲನಗಳಲ್ಲಿ, ವಿಶ್ವಕೋಶಗಳಲ್ಲಿಯೂ ಪ್ರಕಟವಾಗಿವೆ. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ..
ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಗಳಿಸಿರುವ ಇಪ್ಪತ್ತನಾಲ್ಕು ವರ್ಷಗಳ ಅನುಭವ, ಹೆಸರಾಂತ ಸಂಸ್ಥೆಗಳು ಮತ್ತು ತಂತ್ರಜ್ಞರ ಜೊತೆ ಕೆಲಸ ಮಾಡಿ ಪಡೆದಿರುವ ಪರಿಣಿತಿಯನ್ನು ಜನಸಾಮಾನ್ಯರೊಂದಿಗೆ ಹಂಚಿಕೊಳ್ಳಲು ಮತ್ತು ವೈಜ್ಞಾನಿಕ ಮನೋಭಾವ ಬೆಳೆಸಲು, ಸಂವಹನ ಮಾಧ್ಯಮವನ್ನು ಆರಿಸಿಕೊಂಡಿದ್ದೇನೆ.

ನೀವು ಮೆಚ್ಚುವ / ನಿಮ್ಮ ಮೇಲೆ ಪ್ರಭಾವ ಬೀರಿದ ಇತರ ವಿಜ್ಞಾನ ಸಂವಹನಕಾರರು ಯಾರು?
ಕಾರ್ಲ್ ಸಗಾನ್‍ರವರು ಪುಸ್ತಕ, ಲೇಖನಗಳ ಜೊತೆಯಲ್ಲಿ ಟಿವಿ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿದವರು.

ಗುರುವಾರ, ಆಗಸ್ಟ್ 21, 2014

ಡಾ. ಪಾಲಹಳ್ಳಿ ವಿಶ್ವನಾಥ್ ಹೇಳುತ್ತಾರೆ... "ವಿಜ್ಞಾನ ಸಾಮಾನ್ಯ ಜನತೆಯನ್ನು ಮುಟ್ಟದೇ ಹೋದರೆ ಸಮಾಜದಲ್ಲಿ ಬದಲಾವಣೆಗಳು ಬರುವುದಿಲ್ಲ"

ವಿಜ್ಞಾನಿಗಳು ಸಾಮಾನ್ಯ ಜನರಿಗೋಸ್ಕರ ಬರೆಯುವುದು ಅಪರೂಪ ಎಂಬ ಆಪಾದನೆಗೆ ಅಪವಾದದಂತೆ ನಮಗೆ ಸಿಗುವವರು ಬಹಳ ಕಡಿಮೆ ಜನ. ಅಂತಹವರಲ್ಲೊಬ್ಬರು ಡಾ. ಪಾಲಹಳ್ಳಿ ವಿಶ್ವನಾಥ್. ಮೈಸೂರು ಮತ್ತು ಮಿಶಿಗನ್ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನಮಾಡಿ ಮುಂಬಯಿಯ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ (ಟಿ. ಐ. ಎಫ್. ಆರ್) ಮತ್ತು ಬೆಂಗಳೂರಿನ ಭಾರತೀಯ ಜ್ಯೋತಿರ್ವಿಜ್ಞಾನ ಸಂಸ್ಥೆಯಲ್ಲಿ (ಐ. ಐ. ಎ)  ಸೇವೆಸಲ್ಲಿಸಿರುವ ಡಾ. ವಿಶ್ವನಾಥ್ ಭಾರತ ಮತ್ತು ಅಮೆರಿಕದಲ್ಲಿ ಹಲವಾರು ಭೌತವಿಜ್ಞಾನ ಮತ್ತು ಖಗೋಳ ವಿಜ್ಞಾನದ ಪ್ರಯೋಗಗಳಲ್ಲಿ ಭಾಗಿಯಾಗಿದ್ದರು. ಕಳೆದ ಕೆಲವು ವರ್ಷಗಳಿಂದ ಕನ್ನಡದಲ್ಲಿ ವಿಜ್ಞಾನ ಬರವಣಿಗೆಯಲ್ಲಿ ತೊಡಗಿರುವ ಅವರ ಲೇಖನಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 'ಭೂಮಿಯಿಂದ ಬಾನಿನತ್ತ', 'ಕಣ ಕಣ ದೇವಕಣ', 'ಖಗೋಳ ವಿಜ್ಞಾನದ ಕಥೆ' ಮೊದಲಾದವು ಅವರ ಪುಸ್ತಕಗಳು. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ...
ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ನಾನು ಸುಮಾರು ೫೦ ವರ್ಷಗಳಷ್ಟು ಸಮಯ ಭೌತ ಮತ್ತು ಖಗೋಳವಿಜ್ಞಾನ ಕ್ಷೇತ್ರದಲ್ಲಿ ಸಂಶೋಧಕನಾಗಿ ಕೆಲಸಮಾಡಿದ್ದೇನೆ. ಮೂಲಭೂತ ವಿಜ್ಞಾನ ಕ್ಷೇತ್ರಗಳಿಗೆ ಹೆಚ್ಚು ವಿದ್ಯಾರ್ಥಿಗಳು ಬರದಿರುವ ಅಂಶವನ್ನು ಗಮನಿಸಿದಾಗ ನನಗೆ ವಿಜ್ಞಾನ ಸಂವಹನದ ಅಗತ್ಯ ಕಂಡುಬಂತು. ಯಾವ ಭಾಷೆಯಲ್ಲಿ ಬರೆಯುವುದು ಎನ್ನುವುದು ಮುಂದಿನ ಪ್ರಶ್ನೆಯಾಯಿತು. ಹೇಗೂ ದೇಶದ ಮಹಾನಗರಗಳಲ್ಲಿ ವಿದ್ಯಾರ್ಥಿಗಳು ಮಾಹಿತಿ ತಂತ್ರಜ್ಞಾನ , ಮ್ಯಾನೇಜ್‌ಮೆಂಟ್ ಇತ್ಯಾದಿ ಕ್ಷೇತ್ರಗಳಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಿದ್ದು, ಮೂಲವಿಜ್ಞಾನವನ್ನು ನಿರ್ಲಕ್ಷಿಸುತ್ತಿದ್ದಾರೆ. ಹಾಗೊಮ್ಮೆ ಆಸಕ್ತಿ ಇದ್ದರೂ ಅವರಿಗೆ ಇಂಗ್ಲಿಷಿನಲ್ಲಿ ಪರಿಣಿತಿಯಿದ್ದು ಆ ಭಾಷೆಯಲ್ಲಿ ಅನೇಕ ಪುಸ್ತಕಗಳಿರುವುದರಿಂದ ಯಾವ ತೊಂದರೆಯೂ ಇಲ್ಲ. ಈ ಹಿನ್ನೆಲೆಯಲ್ಲಿ ಯೋಚಿಸಿದಾಗ ನನಗೆ ಇಂಗ್ಲಿಷಿನಲ್ಲಿ ಬರೆಯುವ ಅವಶ್ಯಕತೆ ಕಂಡುಬರಲಿಲ್ಲ.  ಆದರೆ ಗ್ರಾಮೀಣ ಪ್ರದೇಶಗಳು ಮತ್ತು ಚಿಕ್ಕ ಊರುಗಳ ವಿದ್ಯಾರ್ಥಿಗಳು ಪ್ರಾದೇಶಿಕ ಭಾಷೆಯಲ್ಲೇ‌ ಹೆಚ್ಚು ಸಂಪರ್ಕ ಇಟ್ಟುಕೊಂಡಿದ್ದಾರೆ. ಈ ವಿದ್ಯಾರ್ಥಿಗಳು ತಮ್ಮ ಭಾಷೆಯಲ್ಲೇ ಓದಲು ವಿಜ್ಞಾನದ ಹೆಚ್ಚು ಪುಸ್ತಕಗಳಿಲ್ಲ. ಆದ್ದರಿಂದ ಪ್ರಾದೇಶಿಕ ಭಾಷೆಯಲ್ಲಿ ವಿಜ್ಞಾನ ಸಂವಹನೆಯ ಅವಶ್ಯಕತೆ ಬಹಳವಿದೆ.

ಭಾನುವಾರ, ಆಗಸ್ಟ್ 17, 2014

ವಿಶ್ವ ಛಾಯಾಗ್ರಹಣ ದಿನ ವಿಶೇಷ: ಛಾಯಾಗ್ರಹಣಕ್ಕೆ ೧೭೫ ವರ್ಷ

ಕಂಪ್ಯೂಟರ್ ಕ್ಷೇತ್ರದಲ್ಲಿ ಜನಪ್ರಿಯವಾಗಿರುವ 'ಓಪನ್ ಸೋರ್ಸ್' ಪರಿಕಲ್ಪನೆಯ ರೂಪವೊಂದನ್ನು ೧೭೫ ವರ್ಷಗಳ ಹಿಂದೆಯೇ ಪರಿಚಯಿಸಿದ್ದು ಡಿಗೇರೋಟೈಪ್ ತಂತ್ರಜ್ಞಾನ. ಲೂಯಿ ಡಿಗೇರ್ ರೂಪಿಸಿದ ಈ ತಂತ್ರಜ್ಞಾನದ ಹಕ್ಕುಸ್ವಾಮ್ಯವನ್ನು ೧೮೩೯ರಲ್ಲಿ ಫ್ರೆಂಚ್ ಸರಕಾರ ಕೊಂಡು ಅದನ್ನು "ಮನುಕುಲಕ್ಕೆ ಕೊಡುಗೆ"ಯಾಗಿ ಸಮರ್ಪಿಸಿದ ದಿನವೇ ಆಗಸ್ಟ್ ೧೯. ಇದೀಗ ವಿಶ್ವ ಛಾಯಾಗ್ರಹಣ ದಿನವೆಂದು ನಾವು ಗುರುತಿಸುವುದು ಇದೇ ದಿನವನ್ನು. ಈ ಸಂದರ್ಭದಲ್ಲಿ ಛಾಯಾಗ್ರಹಣದ ವಿಕಾಸದತ್ತ ಹೀಗೊಂದು ನೋಟ...
ಟಿ. ಜಿ. ಶ್ರೀನಿಧಿ

ಮನುಷ್ಯ ತನ್ನ ಕಣ್ಣಮುಂದಿನ ದೃಶ್ಯವನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಉದ್ದೇಶದಿಂದ ಮಾಡದ ಪ್ರಯತ್ನವೇ ಇಲ್ಲ ಎನ್ನಬಹುದೇನೋ. ಶಿಲಾಯುಗದ ರೇಖಾಚಿತ್ರಗಳಿಂದ ಪರಿಣತರ ಕಲಾಕೃತಿಗಳವರೆಗೆ ಅನೇಕ ಸೃಷ್ಟಿಗಳ ಉದ್ದೇಶ ಇದೇ ಆಗಿರುವುದನ್ನು ನಾವು ಗಮನಿಸಬಹುದು.

ಆದರೆ ಇಂತಹ ಪ್ರಯತ್ನಗಳಿಗೆ ಒಂದು ದೊಡ್ಡ ಸಮಸ್ಯೆ ಅಡ್ಡಬರುತ್ತಿತ್ತು - ಕಂಡದ್ದನ್ನು ಕಂಡಂತೆ ಚಿತ್ರಿಸಲು ಎಲ್ಲರಿಗೂ ಬರುವುದಿಲ್ಲ, ಹಾಗೂ ನಮಗೆ ಬಂದಂತೆ ಚಿತ್ರಿಸಿದರೆ ಅದು ನಾವು ಕಂಡದ್ದನ್ನು ನಿಖರವಾಗಿ ಪ್ರತಿನಿಧಿಸುವುದಿಲ್ಲ!

ಹಾಗಾದರೆ ನಾವು ಕಂಡದ್ದನ್ನು ಕಂಡಹಾಗೆಯೇ ದಾಖಲಿಸಿಟ್ಟುಕೊಳ್ಳುವುದು ಹೇಗೆ? ಈ ನಿಟ್ಟಿನಲ್ಲಿ ನಡೆದ ಪ್ರಯತ್ನಗಳು ಒಂದೆರಡಲ್ಲ.

ಇಂತಹ ಪ್ರಯತ್ನಗಳಲ್ಲೊಂದಾದ 'ಕ್ಯಾಮೆರಾ ಅಬ್ಸ್‌ಕ್ಯೂರಾ' (Camera Obscura, ಪಿನ್‌ಹೋಲ್ ಕ್ಯಾಮೆರಾ ಎಂದೂ ಪರಿಚಿತ) ನಮ್ಮ ಎದುರಿನ ದೃಶ್ಯದ ತಲೆಕೆಳಗಾದ ರೂಪವನ್ನು ಪರದೆಯ ಮೇಲೆ ಚಿಕ್ಕದಾಗಿ ಮೂಡಿಸಿ ಚಿತ್ರಕಾರರಿಗೆ ಅದನ್ನು ನಕಲು ಮಾಡಿಕೊಳ್ಳಲು ನೆರವಾಗುತ್ತಿತ್ತು. ಬೇಕಾದ ದೃಶ್ಯವನ್ನು ಕ್ಷಿಪ್ರವಾಗಿ ಬರೆದುಕೊಳ್ಳುವ ಕಲಾವಿದರಿಗೇನೋ ಸರಿ, ಆದರೆ ಚಿತ್ರಬಿಡಿಸಲು ಬಾರದವರಿಗೆ ಇದರಿಂದ ಯಾವ ಉಪಯೋಗವೂ ಆಗುತ್ತಿರಲಿಲ್ಲ.

ಚಿತ್ರಬಿಡಿಸಲು ಬಾರದವರೂ ಈ ತಂತ್ರ ಬಳಸಬೇಕೆಂದರೆ ಪರದೆಯ ಮೇಲೆ ಮೂಡುವ ಚಿತ್ರ ತನ್ನಷ್ಟಕ್ಕೆ ತಾನೇ ಒಂದೆಡೆ ದಾಖಲಾಗುವಂತಿರಬೇಕು. ಹಾಗೆಂದು ಯೋಚಿಸಿ ಕಾರ್ಯಪ್ರವೃತ್ತನಾದವನು ಫ್ರಾನ್ಸಿನ ನಿಸೆಫೋರ್ ನಿಯಪ್ಸ್ ಎಂಬ ವ್ಯಕ್ತಿ. ಕ್ಯಾಮೆರಾ ಅಬ್ಸ್‌ಕೂರಾದಲ್ಲಿ ಚಿತ್ರಕಾರರಿಗಾಗಿ ಇದ್ದ ಪರದೆಯ ಜಾಗದಲ್ಲಿ ರಾಸಾಯನಿಕವಾಗಿ ಸಂಸ್ಕರಿಸಿದ ಲೋಹದ ಫಲಕವನ್ನು ತಂದು ಕೂರಿಸಿ 'ಹೀಲಿಯೋಗ್ರಫಿ' ಎಂಬ ತಂತ್ರಜ್ಞಾನವನ್ನು ರೂಪಿಸಿದ್ದು ಇವನ ಸಾಧನೆ.

ಶನಿವಾರ, ಆಗಸ್ಟ್ 16, 2014

ಡಾ. ರವಿಕುಮಾರ್ ಹೇಳುತ್ತಾರೆ... "ಕನ್ನಡದಲ್ಲಿ ಸಂಶೋಧನಾ ಪ್ರಬಂಧಗಳನ್ನು ಬರೆಯುವುದು, ಮಂಡಿಸುವುದು ಸಾಧ್ಯವಾಗಬೇಕು"

ಜನಪ್ರಿಯ ವಿಜ್ಞಾನದ ಮಟ್ಟವನ್ನು ಮೀರಿದ ವಿಜ್ಞಾನ-ತಂತ್ರಜ್ಞಾನದ ಬರಹಗಳು, ಕನ್ನಡದ ಮಟ್ಟಿಗಂತೂ, ಕೊಂಚ ಅಪರೂಪವೇ ಎನ್ನಬೇಕು. ಇಂತಹ ಅಪರೂಪದ ಬರಹಗಳ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವವರು ಡಾ. ಸಿ. ಪಿ. ರವಿಕುಮಾರ್. ಕಂಪ್ಯೂಟರ್ ವಿಜ್ಞಾನದಲ್ಲಿ ಪಿಎಚ್‌ಡಿ ಮಾಡಿರುವ ರವಿಕುಮಾರ್ ಐಐಟಿ ದೆಹಲಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಟೆಕ್ಸಾಸ್ ಇನ್ಸ್‌ಟ್ರುಮೆಂಟ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಂಪ್ಯೂಟರ್ ವಿಜ್ಞಾನ ಕುರಿತು ಕನ್ನಡದಲ್ಲಿ ವಿಶಿಷ್ಟ ಲೇಖನಗಳನ್ನು ಬರೆದಿರುವ ರವಿಕುಮಾರ್ ಅವರ ಹೊಸ ಬರಹಗಳು ಅವರ ಬ್ಲಾಗ್ 'ಸಿ.ಪಿ. ಸಂಪದ'ದಲ್ಲಿ ನಿಯಮಿತವಾಗಿ ಪ್ರಕಟವಾಗುತ್ತವೆ. ವಿಜಯ ಕರ್ನಾಟಕದಲ್ಲಿ ಅವರು 'ಜನಮುಖಿ ತಂತ್ರಲೋಕ' ಅಂಕಣವನ್ನೂ ಬರೆಯುತ್ತಿದ್ದಾರೆ. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ...
ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ನಾನು ಪಿಎಚ್.ಡಿ. ಮಾಡುತ್ತಿದ್ದ ಕಾಲದಲ್ಲಿ ಇಂಟರ್‌ನೆಟ್ ಮೊದಲಾದ ಬೆಳವಣಿಗೆಗಳು ಜಗತ್ತನ್ನು ಮಾರ್ಪಡಿಸುವುದನ್ನು ಕಂಡು ಅದನ್ನು ಕನ್ನಡಿಗರ ಜೊತೆ ಹಂಚಿಕೊಳ್ಳಬೇಕು ಎನ್ನುವ ಹಂಬಲದಿಂದ ಕನ್ನಡಪ್ರಭ ಪತ್ರಿಕೆಯಲ್ಲಿ ಕೆಲವು ಲೇಖನಗಳನ್ನು ಬರೆದೆ (1990). ಈ ಲೇಖನಗಳನ್ನು ಮುಂದೆ ಅಭಿನವ ಪ್ರಕಾಶನದವರು 'ಕಂಪ್ಯೂಟರ್‌ಗೊಂದು ಕನ್ನಡಿ' ಎಂಬ ಪುಸ್ತಕದಲ್ಲಿ ಅಚ್ಚುಮಾಡಿದರು. ನಂತರ ದಿವಂಗತ  ಚಿ. ಶ್ರೀನಿವಾಸರಾಜು ಅವರು ನನ್ನನ್ನು 2001 ನಲ್ಲಿ ಸಂಪರ್ಕಿಸಿ ಹಂಪಿ ವಿಶ್ವವಿದ್ಯಾಲಯಕ್ಕಾಗಿ 'ಮಾಹಿತಿ ತಂತ್ರಜ್ಞಾನ' ವಿಷಯ ಒಂದು ಪುಸ್ತಕ ಬರೆದುಕೊಡಲು ಕೇಳಿದರು. ಕಾರಣಾಂತರಗಳಿಂದ ಅದು ಪ್ರಕಟವಾಗದೆ ಹಸ್ತಪ್ರತಿಯಾಗಿ ನನ್ನ ಬಳಿಯೇ ಉಳಿಯಿತು! ಹಾಗೆಯೇ ಒಂದು ಕನ್ನಡ ವಿಶ್ವಕೋಶದ ಯೋಜನೆಗೆ ನನ್ನಿಂದ ಕೆಲವು ಬರಹಗಳನ್ನು ಬರೆಸಿಕೊಂಡರೂ ಆ ಯೋಜನೆ ಕಾರ್ಯರೂಪಕ್ಕೆ ಇಳಿದಂತೆ ಕಾಣೆ!  ಇತ್ತೀಚೆಗೆ ಬ್ಲಾಗ್ ಮಾಧ್ಯಮದ ಮೂಲಕ ಆತ್ಮಸಂತೋಷಕ್ಕಾಗಿ ಕಂಪ್ಯೂಟರ್ ಕುರಿತು ಕೆಲವು ಬರಹಗಳನ್ನು ಪ್ರಕಟಿಸಿದ್ದೇನೆ.

ಶುಕ್ರವಾರ, ಆಗಸ್ಟ್ 8, 2014

ಡಾ. ಸೋಮೇಶ್ವರ ಹೇಳುತ್ತಾರೆ... "ಬದುಕ ಬದಲಿಸಬಹುದಾದ ಅರಿವನ್ನು ಹಂಚುವುದು ನಾಗರಿಕನೊಬ್ಬನ ಕರ್ತವ್ಯ"

ದೂರದರ್ಶನ ಚಂದನ ವಾಹಿನಿಯ ಜನಪ್ರಿಯ ಕ್ವಿಜ್ ಕಾರ್ಯಕ್ರಮ 'ಥಟ್ ಅಂತ ಹೇಳಿ!' ಮೂಲಕ ಜನಪ್ರಿಯರಾಗಿರುವ ಡಾ. ನಾ. ಸೋಮೇಶ್ವರ ಕನ್ನಡದ ಹೆಸರಾಂತ ವಿಜ್ಞಾನ ಸಂವಹನಕಾರರಲ್ಲೊಬ್ಬರು. ಆರೋಗ್ಯ ಸಂಬಂಧಿ ಕೃತಿಗಳ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಹಲವು ಜನಪ್ರಿಯ ಪುಸ್ತಕಗಳನ್ನೂ ರಚಿಸಿರುವ ಸೋಮೇಶ್ವರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಪ್ರಶಸ್ತಿ, ಡಾ. ಪಿ. ಎಸ್. ಶಂಕರ್ ಶ್ರೇಷ್ಠ ವೈದ್ಯ ಸಾಹಿತಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದಾರೆ. 'ಥಟ್ ಅಂತ ಹೇಳಿ!' ಕಾರ್ಯಕ್ರಮದ ೨೫೦೦ಕ್ಕೂ ಹೆಚ್ಚು ಕಂತುಗಳನ್ನು ನಡೆಸಿಕೊಟ್ಟಿರುವ ಅಪರೂಪದ ದಾಖಲೆಯೂ ಅವರ ಹೆಸರಿನಲ್ಲಿದೆ. ಈ ದಾಖಲೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲೂ ಸ್ಥಾನಪಡೆದಿರುವುದು ವಿಶೇಷ. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ...

ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ಸಮಾಜದ ಋಣ ಸಂದಾಯ ಮಾಡಬೇಕೆನ್ನುವ ಬಯಕೆ, ಹಾಗೂ ಕುತೂಹಲಕರವಾದುದನ್ನು ಹಂಚಿಕೊಳ್ಳುವ ಮನೋಭಾವ - ಇವು ನಾನು ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ಬರಲು ಕಾರಣವಾದ ಅಂಶಗಳು ಎನ್ನಬಹುದು. ನನ್ನ ವಿದ್ಯಾಭ್ಯಾಸದ ಹಿನ್ನೆಲೆಯಲ್ಲಿ ನೋಡಿದರೂ ಸಾರ್ವಜನಿಕ ಆರೋಗ್ಯ ಶಿಕ್ಷಣ ವೈದ್ಯಕೀಯ ನೀತಿ ಸಂಹಿತೆಯ ಒಂದು ಭಾಗ. ಇದರ ಜೊತೆಗೆ ಬದುಕ ಬದಲಿಸಬಹುದಾದ ಅರಿವನ್ನು ಹಂಚುವುದು ನಾಗರಿಕನೊಬ್ಬನ ಕರ್ತವ್ಯ ಎನ್ನುವ ಅನಿಸಿಕೆ, ಹಾಗೂ ಸಾರ್ವಜನಿಕರಲ್ಲಿ ವಿಶಿಷ್ಠ ಲೇಖಕ ಎಂದು ಗುರುತಿಸಿಕೊಳ್ಳುವ ಬಯಕೆ ಕೂಡ ನನ್ನನ್ನು ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ಕರೆತಂದಿದೆ.

ನೀವು ಮೆಚ್ಚುವ / ನಿಮ್ಮ ಮೇಲೆ ಪ್ರಭಾವ ಬೀರಿದ ಇತರ ವಿಜ್ಞಾನ ಸಂವಹನಕಾರರು ಯಾರು?
ಡಾ. ಶಿವರಾಂ (ರಾಶಿ) ಹಾಗೂ ಡಾ. ಬಿ.ಜಿ.ಎಲ್. ಸ್ವಾಮಿ

ಬುಧವಾರ, ಆಗಸ್ಟ್ 6, 2014

ಮೊಬೈಲ್ ಲೋಕದ ಹೊಸ ತಲೆಮಾರು: 4G

ಟಿ ಜಿ ಶ್ರೀನಿಧಿ

ಅದೇನೋ ಮೊಬೈಲ್ ಅಂತೆ, ಜೇಬಿನಲ್ಲಿ ಇಟ್ಟುಕೊಳ್ಳುವ ಫೋನು. ಒಂದು ನಿಮಿಷ ಮಾತಾಡಿದರೆ ಹದಿನೈದೋ ಇಪ್ಪತ್ತೋ ರೂಪಾಯಿ ಕೊಡಬೇಕಂತೆ; ಅಷ್ಟೇ ಅಲ್ಲ, ನಮಗೆ ಬೇರೆಯವರು ಫೋನ್ ಮಾಡಿದಾಗ ಅವರ ಜೊತೆ ಮಾತಾಡುವುದಕ್ಕೂ ನಾವೇ ದುಡ್ಡು ಕೊಡಬೇಕಂತೆ! ಎನ್ನುವುದರೊಡನೆ ಶುರುವಾದದ್ದು ಮೊಬೈಲ್ ಜೊತೆಗಿನ ನಮ್ಮ ಒಡನಾಟ. ಈಗ ಅದು ಎಲ್ಲಿಗೆ ತಲುಪಿದೆ ಅಂದರೆ ತಣ್ಣನೆಯ ಕೋಣೆಯಲ್ಲಿ ಕೂತು ಕೆಲಸಮಾಡುವವನಿಂದ ಹಿಡಿದು ರಸ್ತೆಯಲ್ಲಿ ತರಕಾರಿ ಮಾರುವಾತನವರೆಗೆ ಎಲ್ಲರ ಕೈಯಲ್ಲೂ ಇದೀಗ ಒಂದೊಂದು ಮೊಬೈಲ್ ಇದೆ. ಯುವಜನತೆಯ ಮಟ್ಟಿಗಂತೂ ಮೊಬೈಲ್ ಎನ್ನುವುದು ಊಟ-ಬಟ್ಟೆ-ಸೂರಿನಷ್ಟೇ ಮುಖ್ಯವಾಗಿಬಿಟ್ಟಿದೆ.

ಇದರ ಜತೆಗೇ ಮೊಬೈಲ್ ದೂರವಾಣಿಗಳ ಅವತಾರವೂ ಕಾಲಕಾಲಕ್ಕೆ ಬದಲಾಗುತ್ತ ಬಂದಿದೆ. 'ಇನ್‌ಕಮಿಂಗ್ ಮೂರು ರೂಪಾಯಿ, ಔಟ್‌ಗೋಯಿಂಗ್ ಆರು ರೂಪಾಯಿ' ಕಾಲದಿಂದ 'ಇನ್‌ಕಮಿಂಗ್ ಫ್ರೀ, ಔಟ್‌ಗೋಯಿಂಗ್ ಅರ್ಧ ಪೈಸಾ!' ಕಾಲದವರೆಗೆ, ಎಸ್ಸೆಮ್ಮೆಸ್‌ನಿಂದ ವಾಟ್ಸ್‌ಆಪ್‌ವರೆಗೆ ಈ ಪುಟ್ಟ ಸಾಧನ ಕ್ರಮಿಸಿರುವ ಹಾದಿ ಸಣ್ಣದೇನೂ ಅಲ್ಲ.

ಮೊಬೈಲಿನಲ್ಲಿ ಕಂಡುಬಂದಿರುವ ಇಷ್ಟೆಲ್ಲ ಬದಲಾವಣೆಗಳನ್ನು ನಾವು ಹಲವು ವಿಧಗಳಾಗಿ ವಿಂಗಡಿಸುವುದು ಸಾಧ್ಯ. ಮೊಬೈಲ್ ಮೂಲಕ ದೊರಕುವ ಸೌಲಭ್ಯಗಳಲ್ಲಿನ ಬದಲಾವಣೆ ಈ ಪೈಕಿ ನಮಗೆ ಹೆಚ್ಚು ಪರಿಚಿತವಾದದ್ದು ಎನ್ನಬಹುದು. ಮೊಬೈಲ್ ದೂರವಾಣಿ ಉಪಕರಣಗಳಲ್ಲಿ (ಹ್ಯಾಂಡ್‌ಸೆಟ್) ಕಂಡುಬಂದಿರುವ ಕ್ರಾಂತಿಕಾರಕ ಬದಲಾವಣೆಗಳದ್ದು, ಬಹುಶಃ, ಎರಡನೆಯ ಸ್ಥಾನ.

ಭಾನುವಾರ, ಆಗಸ್ಟ್ 3, 2014

ಡಾ. ಪವನಜ ಹೇಳುತ್ತಾರೆ... "ನನಗೆ ವಿಜ್ಞಾನದಲ್ಲಿ ಆಸಕ್ತಿ ಮೂಡಿದ್ದೇ ಶಿವರಾಮ ಕಾರಂತರ ಪುಸ್ತಕಗಳಿಂದ"

ಕನ್ನಡ ಮತ್ತು ಕಂಪ್ಯೂಟರ್ ಎಂದಾಕ್ಷಣ ನಮಗೆ ನೆನಪಿಗೆ ಬರುವವರಲ್ಲಿ ಡಾ. ಯು. ಬಿ. ಪವನಜರದು ಪ್ರಮುಖ ಹೆಸರು. ವೈಜ್ಞಾನಿಕ ಸಂಶೋಧನೆ, ತಂತ್ರಾಂಶ ತಯಾರಿಕೆ, ತಂತ್ರಜ್ಞಾನ ಸಂವಹನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಮ್ಮ ಛಾಪುಮೂಡಿಸಿರುವ ಪವನಜರು ಪ್ರಸ್ತುತ ಬೆಂಗಳೂರಿನ ಸೆಂಟರ್ ಫಾರ್ ಇಂಟರ್‌ನೆಟ್ ಆಂಡ್ ಸೊಸೈಟಿಯಲ್ಲಿ ಕೆಲಸಮಾಡುತ್ತಿದ್ದಾರೆ. ಕರ್ನಾಟಕ ಸರಕಾರದ ತಂತ್ರಾಂಶ ಸಮಿತಿಯ ಸದಸ್ಯರೂ ಆಗಿರುವ ಡಾ. ಪವನಜ ತಮ್ಮ ಅಂಕಣಗಳಿಂದ ಜನಪ್ರಿಯರು. ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ 'eಳೆ', 'ಒಂದು ಸೊನ್ನೆ', 'ಗಣಕಿಂಡಿ' ಮುಂತಾದ ಅಂಕಣಗಳಲ್ಲದೆ ಪ್ರಸ್ತುತ 'ಗ್ಯಾಜೆಟ್ ಲೋಕ' ಅಂಕಣ ಪ್ರಜಾವಾಣಿಯಲ್ಲಿ ಪ್ರಕಟವಾಗುತ್ತಿದೆ. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ...

ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ನಾನು ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗ ಡಾ| ಶಿವರಾಮ ಕಾರಂತರ ವಿಜ್ಞಾನ ಪ್ರಪಂಚದ ನಾಲ್ಕೂ ಸಂಪುಟಗಳನ್ನು ಓದಿದ್ದೆ. ನನಗೆ ವಿಜ್ಞಾನದಲ್ಲಿ ಆಸಕ್ತಿ ಮೂಡಿದ್ದೇ ಆ ಪುಸ್ತಕಗಳನ್ನು ಓದಿದ್ದರಿಂದ. ಅನಂತರ ಕಸ್ತೂರಿಯಲ್ಲಿ ಪಾವೆಂ ಅವರ ವಿಶೇಷ ಆಸಕ್ತಿಯಿಂದ ಬರುತ್ತಿದ್ದ ವಿಜ್ಞಾನದ ವಿಷಯಗಳಿಗೆ ಸಂಬಂಧಿಸಿದ ಲೇಖನಗಳನ್ನೂ ಓದುತ್ತಿದ್ದೆ. ರಾಜಶೇಖರ ಭೂಸನೂರಮಠ ಅವರು ಬರೆಯುತ್ತಿದ್ದ ವೈಜ್ಞಾನಿಕ ಕಥೆಗಳೂ ನನ್ನ ವಿಜ್ಞಾನದ ಆಸಕ್ತಿಗೆ ನೀರೆರೆದವು. ವಿಜ್ಞಾನವನ್ನು ಓದಿ ಅದರಲ್ಲಿ ಸ್ನಾತಕೋತ್ತರ ಪದವಿ ಪಡೆದು ಮುಂಬಯಿಯ ಭಾಭಾ ಪರಮಾಣು ಸಂಶೋಧನಾ ಕೇಂದ್ರವನ್ನು ವಿಜ್ಞಾನಿಯಾಗಿ ಸೇರಲು - ಮತ್ತು ವಿಜ್ಞಾನ ಸಂವಹನದಲ್ಲಿ ತೊಡಗಿಕೊಳ್ಳಲು ಕೂಡ - ಇವೆಲ್ಲ ಪೂರಕವಾದವು.

ನೀವು ಮೆಚ್ಚುವ / ನಿಮ್ಮ ಮೇಲೆ ಪ್ರಭಾವ ಬೀರಿದ ಇತರ ವಿಜ್ಞಾನ ಸಂವಹನಕಾರರು ಯಾರು?
ಶಿವರಾಮ ಕಾರಂತ, ಬಿ.ಜಿ.ಎಲ್. ಸ್ವಾಮಿ, ನಾಗೇಶ ಹೆಗಡೆ, ಅನುಪಮಾ ನಿರಂಜನ, ಸಿ.ಆರ್. ಚಂದ್ರಶೇಖರ, ಟಿ. ಆರ್. ಅನಂತರಾಮು - ಈ ಪಟ್ಟಿ ಸಾಕಷ್ಟು ದೊಡ್ಡದೇ!

ಶುಕ್ರವಾರ, ಜುಲೈ 25, 2014

ರೋಹಿತ್ ಚಕ್ರತೀರ್ಥ ಹೇಳುತ್ತಾರೆ... "ನನಗೆ ಅರ್ಥವಾದದ್ದನ್ನಷ್ಟೇ ನನ್ನೆದುರು ಕೂತ ಅದೃಶ್ಯ ಓದುಗರಿಗೆ ಹೇಳುತ್ತಾ ಹೋಗುತ್ತೇನೆ"

ಕನ್ನಡದಲ್ಲಿ ವಿಜ್ಞಾನವನ್ನು ಬರೆಯುತ್ತಿರುವ ಲೇಖಕರ ಸಾಲಿನಲ್ಲಿ ರೋಹಿತ್ ಚಕ್ರತೀರ್ಥರದ್ದು ಹೊಸ ಹೆಸರು. ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರೋಹಿತ್, ಬೆಂಗಳೂರಿನ ಬೇಸ್ ಮತ್ತು ಟೈಮ್ ಸಂಸ್ಥೆಗಳಲ್ಲಿ ಶಿಕ್ಷಕರಾಗಿ; ಈಗ ಪಿಯರ್ಸನ್ ಎಜುಕೇಶನ್ ಸಂಸ್ಥೆಯಲ್ಲಿ ಮುಖ್ಯ ಕನ್ಸಲ್ಟೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿರುವ-ಆಗುತ್ತಿರುವ ಲೇಖನಗಳ ಜೊತೆಗೆ 'ಮನಸುಗಳ ನಡುವೆ ಪುಷ್ಪಕ ವಿಮಾನ', 'ಏಳುಸಾವಿರ ವರ್ಷ ಬದುಕಿದ ಮನುಷ್ಯ', 'ದೇವಕೀಟದ ರತಿರಹಸ್ಯ' ಮುಂತಾದ ಪುಸ್ತಕಗಳೂ ಬೆಳಕುಕಂಡಿವೆ. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ...
ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ಶಾಲೆ-ಕಾಲೇಜುಗಳಲ್ಲಿದ್ದಾಗ ಓರಗೆಯ ಗೆಳೆಯರಿಗೆ ವಿಜ್ಞಾನ ಮತ್ತು ಗಣಿತವನ್ನು ಅರ್ಥವಾಗುವಂತೆ, ಮುಖ್ಯವಾಗಿ ಪರೀಕ್ಷೆಯಲ್ಲಿ ಬರೆಯಲು ನಾಲ್ಕು ಸಾಲು ನೆನಪಲ್ಲುಳಿಯುವಂತೆ ಹೇಳಿಕೊಡುವ ಜವಾಬ್ದಾರಿ ನನ್ನ ತಲೆಮೇಲೆ ಬರುತ್ತಿತ್ತು. ಪದವಿ ಪೂರೈಸಿದ ಮೇಲೆ ಐದಾರು ವರ್ಷ ಅಧ್ಯಾಪನವೃತ್ತಿ ಮಾಡಿದಾಗಲೂ, ಕ್ಲಾಸಿನಲ್ಲಿ ಕತೆ-ಇತಿಹಾಸ-ಪುರಾಣ ಹೇಳುತ್ತೇನೆಂಬ ಕೀರ್ತಿಯೂ ಅಪಕೀರ್ತಿಯೂ ನನಗೆ ಮೆತ್ತಿಕೊಂಡದ್ದಿದೆ. ವಿಜ್ಞಾನವನ್ನು ನನ್ನ ಮುಂದಿನ ತಲೆಮಾರಿಗೆ ದಾಟಿಸಬಲ್ಲೆ ಎನ್ನುವ ವಿಶ್ವಾಸ ಬರಲು ಹೀಗೆ ಹರಟುವ ನನ್ನ ವಾಚಾಳಿತನವೇ ಕಾರಣ ಅಂತ ಅನಿಸುತ್ತದೆ.

ನೀವು ಮೆಚ್ಚುವ / ನಿಮ್ಮ ಮೇಲೆ ಪ್ರಭಾವ ಬೀರಿದ ಇತರ ವಿಜ್ಞಾನ ಸಂವಹನಕಾರರು ಯಾರು?
ಸಾಹಿತ್ಯದ ಎಲ್ಲ ಪ್ರಕಾರಗಳನ್ನೂ ಓದುವ 'ಜಾಕ್ ಆಫ್ ಆಲ್' ಆದ ನನಗೆ ವಿಜ್ಞಾನಸಾಹಿತ್ಯದಲ್ಲಿ ಪ್ರವೇಶ ಕಡಿಮೆ. ಯಾರನ್ನೂ ಪೂರ್ತಿಯಾಗಿ ಸಮಗ್ರವಾಗಿ ಓದಿಕೊಂಡಿಲ್ಲ. ತೇಜಸ್ವಿಯ ಹೆಸರೆತ್ತುವಾಗಲೂ ಅವರ ಕತೆ-ಕಾದಂಬರಿಗಳನ್ನು ಓದಿದಷ್ಟು ತೀವ್ರವಾಗಿ ವಿಜ್ಞಾನಸಾಹಿತ್ಯವನ್ನು ಓದಿಲ್ಲ. ಇದು ತುಂಬ ನಾಚಿಕೆಯ ವಿಷಯ.

ಸೋಮವಾರ, ಜುಲೈ 21, 2014

ಡಾ. ಪಿ. ಎಸ್. ಶಂಕರ್ ಹೇಳುತ್ತಾರೆ... "ಕೆಲಸ ಚಿಕ್ಕದಿರಲಿ, ದೊಡ್ಡದಿರಲಿ ಅದನ್ನು ಆಸಕ್ತಿಯಿಂದ ನಿರ್ವಹಿಸುವ ಮನೋಧರ್ಮ ನನ್ನದು"

ಕನ್ನಡದ ವೈದ್ಯವಿಜ್ಞಾನ ಸಂವಹನಕಾರರಲ್ಲಿ ಡಾ. ಪಿ. ಎಸ್. ಶಂಕರ್ ಅವರದ್ದು ಪ್ರಮುಖ ಹೆಸರು. ಇಂಗ್ಲಿಷ್ ಮತ್ತು ಕನ್ನಡದಲ್ಲಿ ನೂರಕ್ಕೂ ಹೆಚ್ಚು ಕೃತಿಗಳನ್ನು ಹಾಗೂ ಸಾವಿರಕ್ಕೂ ಹೆಚ್ಚು ಲೇಖನಗಳನ್ನು ರಚಿಸಿರುವ ಅವರು 'ವಿಜ್ಞಾನ ಲೋಕ' ಸೇರಿದಂತೆ ಹಲವು ಪತ್ರಿಕೆಗಳ ಸಂಪಾದಕರಾಗಿಯೂ ಕೆಲಸಮಾಡುತ್ತಿದ್ದಾರೆ. ವೈದ್ಯ ವಿಶ್ವಕೋಶ - ನಿಘಂಟುಗಳನ್ನು ರಚಿಸಿರುವುದು ಅವರ ಇನ್ನೊಂದು ಹೆಗ್ಗಳಿಕೆ. ಸುದೀರ್ಘ ಅವಧಿಯಿಂದ ವೈದ್ಯವಿಜ್ಞಾನ ಬೋಧನೆಯಲ್ಲಿ ತೊಡಗಿಸಿಕೊಂಡಿರುವ ಡಾ. ಶಂಕರ್ ಅವರು ರಾಜ್ಯೋತ್ಸವ ಪ್ರಶಸ್ತಿ, ಸರ್. ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ; ಹಲವು ವಿಶ್ವವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್ ಪದವಿಯನ್ನೂ ಸ್ವೀಕರಿಸಿದ್ದಾರೆ.  ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ...
ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ನಾನು ಹೈಸ್ಕೂಲು ಓದುತ್ತಿದ್ದಾಗಲೇ ಲೇಖನಗಳನ್ನು, ಕತೆ, ನಾಟಕಗಳನ್ನು ಬರೆಯುತ್ತಿದ್ದೆ. ಮುಂದೆ ಕಾಲೇಜು ಸೇರಿದ ನಂತರ ಬರವಣಿಗೆ ಹಿಂದಿನ ಸ್ಥಾನ ಪಡೆಯಿತು. ನನ್ನ ವೈದ್ಯ ವಿದ್ಯಾಭ್ಯಾಸ ಮುಗಿದು ಕೆಲಸಕ್ಕೆ ಸೇರಿಕೊಂಡಮೇಲೆ ಬರವಣಿಗೆಯನ್ನು ಮತ್ತೆ ಪ್ರಾರಂಭಿಸಿದೆ. ಕತೆ-ಕಾದಂಬರಿ ಬರೆಯುವ ಜನ ಬೇಕಾದಷ್ಟಿದ್ದಾರೆ, ನೀನು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಲೇಖನಗಳನ್ನು ಬರೆಯಬಹುದಲ್ಲ ಎಂದು ನನ್ನ ಅಣ್ಣ (ಶ್ರೀ ಪಾಟೀಲ ಪುಟ್ಟಪ್ಪ) ಸೂಚಿಸಿದ ಮೇಲೆ ನನ್ನ ಬರವಣಿಗೆ ವೈದ್ಯವಿಜ್ಞಾನ ಕ್ಷೇತ್ರದತ್ತ ಹೊರಳಿತು.

ನೀವು ಮೆಚ್ಚುವ / ನಿಮ್ಮ ಮೇಲೆ ಪ್ರಭಾವ ಬೀರಿದ ಇತರ ವಿಜ್ಞಾನ ಸಂವಹನಕಾರರು ಯಾರು?
ಬೇರೆ ಸಂವಹನಕಾರರ ಬರವಣಿಗೆಯನ್ನು ನಾನು ಮೆಚ್ಚುತ್ತೇನೆ. ಆದರೆ ನನ್ನ ಮೇಲೆ ಪ್ರಭಾವ ಬೀರಿದ ಸಂವಹನಕಾರರು ಯಾರೂ ಇಲ್ಲ. ನನಗೆ ನಾನೇ ಗುರು. ನಾನು ರಚಿಸಿದ ಪದಕೋಶವಾಗಲಿ, ವಿಶ್ವಕೋಶವೇ ಅಗಲಿ ಎಲ್ಲವೂ ನನ್ನ ಓದು, ಅನುಭವ ಮತ್ತು ಸ್ವಂತ ಚಿಂತನದ ಫಲ. ನನ್ನ ಓದು, ಬರವಣಿಗೆ ನಿರಂತರವಾಗಿ ಜರುಗುತ್ತಿರುವ ಕ್ರಿಯೆ. ನನ್ನ ವೃತ್ತಿಯ ಭಾರ - ಜವಾಬ್ದಾರಿ ಇದ್ದರೂ ಬರವಣಿಗೆಯನ್ನು ನಾನು ಎಂದೂ ಕಡೆಗಣಿಸಿಲ್ಲ.

ಶುಕ್ರವಾರ, ಜುಲೈ 11, 2014

ಕೊಳ್ಳೇಗಾಲ ಶರ್ಮ ಹೇಳುತ್ತಾರೆ... "ವಿಜ್ಞಾನದ ವಿಷಯಗಳು ಎಲ್ಲವೂ ನಮ್ಮ ಇಂದ್ರಿಯಗಳಿಗೆ ನೇರವಾಗಿ ನಿಲುಕುವಂತಹವಲ್ಲ"

ಕನ್ನಡ ವಿಜ್ಞಾನ ಸಂವಹನಕಾರರಲ್ಲಿ ಕೊಳ್ಳೇಗಾಲ ಶರ್ಮರದು ಪ್ರಮುಖ ಹೆಸರು. ಸಾವಿರಕ್ಕೂ ಹೆಚ್ಚು ಲೇಖನ, ಅಂಕಣಬರಹಗಳನ್ನು ಬರೆದಿರುವ ಶರ್ಮರ 'ವಿಜ್ಞಾನ' ಅಂಕಣ ಕನ್ನಡಪ್ರಭ ಪತ್ರಿಕೆಯಲ್ಲಿ ಸುದೀರ್ಘಕಾಲ ಪ್ರಕಟವಾಗಿತ್ತು. 'ಸೈನ್ಸ್ ರಿಪೋರ್ಟರ್' ಸಂಪಾದಕ ಮಂಡಲಿಯ ಸದಸ್ಯರಾಗಿ, ಹಂಪಿ ವಿವಿ ಪ್ರಕಟಣೆ 'ವಿಜ್ಞಾನ ಸಂಗಾತಿ'ಯ ಆರಂಭದ ಸಂಚಿಕೆಗಳಿಗೆ ಗೌರವ ಸಂಪಾದಕರಾಗಿಯೂ ಸೇವೆ ಸಲ್ಲಿಸಿರುವ ಶರ್ಮ ಮೈಸೂರಿನ ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ ಪ್ರಚಾರ ವಿಭಾಗದಲ್ಲಿ ಕೆಲಸಮಾಡುತ್ತಿದ್ದಾರೆ. 'ಮರಳ ಮೇಲಿನ ಹೆಜ್ಜೆಗಳು', 'ಭೂಮಿಗುದುರಿತೆ ಜೀವ? ಮತ್ತು ಇತರ ಪ್ರಶ್ನೆಗಳು' ಮೊದಲಾದ ಕೃತಿಗಳನ್ನು ರಚಿಸಿರುವ ಇವರಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ 'ಶ್ರೇಷ್ಠ ಲೇಖಕ' ಗೌರವ ಲಭಿಸಿದೆ. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ...

ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ನನ್ನನ್ನು ವಿಶೇಷವಾಗಿ ಆಕರ್ಷಿಸಿದ ಸಂಗತಿಗಳನ್ನು ಇತರರ ಜೊತೆಗೆ ಹಂಚಿಕೊಳ್ಳಬೇಕು ಎನ್ನುವ ಹಂಬಲ. ವಿಜ್ಞಾನದ ವಿಷಯಗಳು ಎಲ್ಲವೂ ನಮ್ಮ ಇಂದ್ರಿಯಗಳಿಗೆ ನೇರವಾಗಿ ನಿಲುಕುವಂತಹವಲ್ಲ. ಹೀಗಾಗಿ ನಾನು ಅರಿತುಕೊಂಡದ್ದನ್ನು ಬೇರೆಯವರಿಗೆ ತಿಳಿಸುವಾಗ ಸಂವಹನದ ಹಲವು ಸೂತ್ರಗಳನ್ನು ಬಳಸಬೇಕಾಗುತ್ತದೆ ಎನ್ನುವುದು ಅರ್ಥವಾಯಿತು. ಕೆಲವು ಹಿರಿಯ ಲೇಖಕರ ಬರಹಗಳನ್ನು ಓದಿ ಪ್ರೇರಣೆಯೂ ಆಗಿತ್ತು. ಇದು ವಿಜ್ಞಾನ ಸಂವಹನ ಕ್ಷೇತ್ರಕ್ಕೆ ಬರಲು ಮುಖ್ಯ ಕಾರಣ.

ನೀವು ಮೆಚ್ಚುವ / ನಿಮ್ಮ ಮೇಲೆ ಪ್ರಭಾವ ಬೀರಿದ ಇತರ ವಿಜ್ಞಾನ ಸಂವಹನಕಾರರು ಯಾರು?
ಬಾಲ್ಯದಲ್ಲಿ ನಾನು ಓದಿದ ಜಿ. ಟಿ. ನಾರಾಯಣರಾಯರ ಕೃತಿ - ನಕ್ಷತ್ರಗಳನ್ನು ಕುರಿತದ್ದು - ಈ ವಿಶ್ವದ ವಿಸ್ತಾರ, ನಕ್ಷತ್ರಗಳ ಅಗಣಿತ ಸಂಖ್ಯೆಯನ್ನು ಮನಸ್ಸಿಗೆ ಮುಟ್ಟಿಸಿ ವಿಜ್ಞಾನದಲ್ಲಿ ಆಸಕ್ತಿ ಹುಟ್ಟಿಸಿತು.

ಶುಕ್ರವಾರ, ಜುಲೈ 4, 2014

ಅನಂತರಾಮು ಹೇಳುತ್ತಾರೆ... "ನನ್ನ ಮೊದಲ ಆದ್ಯತೆ ಭಾವಗೀತೆಗಳ ಕಡೆಗೆ"

ಶ್ರೀ ಟಿ. ಆರ್. ಅನಂತರಾಮುರವರು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣ ಸಂಸ್ಥೆಯಲ್ಲಿ ಹಿರಿಯ ಭೂ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದವರು, ಕನ್ನಡದ ಅತ್ಯಂತ ಜನಪ್ರಿಯ ವಿಜ್ಞಾನ ಸಂವಹನಕಾರರಲ್ಲೊಬ್ಬರು. ನಾಲ್ಕು ದಶಕಗಳಿಂದ ಕನ್ನಡದಲ್ಲಿ ಜನಪ್ರಿಯ ವಿಜ್ಞಾನ ಸಾಹಿತ್ಯ ರಚನೆಯಲ್ಲಿ ತೊಡಗಿರುವ ಅನಂತರಾಮುರವರ ೬೦ಕ್ಕೂ ಹೆಚ್ಚು ಕೃತಿಗಳು ಈವರೆಗೆ ಪ್ರಕಟವಾಗಿವೆ. ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನಕ್ಕೆ ಪಾತ್ರರಾಗಿರುವ ಅನಂತರಾಮುರವರಿಗೆ ಕರ್ನಾಟಕ ಸರ್ಕಾರದ ವಿಶನ್ ಗ್ರೂಪ್ ನೀಡುವ ‘ಅತ್ಯುತ್ತಮ ವಿಜ್ಞಾನ ಸಂವಹನಕಾರ’ ಪ್ರಶಸ್ತಿ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ 'ಶ್ರೇಷ್ಠ ಲೇಖಕ' ಪ್ರಶಸ್ತಿಗಳ ಗೌರವವೂ ದೊರೆತಿದೆ. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ...

ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ಎಂ. ಎಸ್ಸಿ. ಮುಗಿದೊಡನೆ 1972ರಲ್ಲಿ ಬೆಂಗಳೂರಿನ ಸರ್ಕಾರಿ ಕಾಲೇಜಿನ ಭೂವಿಜ್ಞಾನ ವಿಭಾಗದಲ್ಲಿ ಅಧ್ಯಾಪಕನಾದೆ. ಕವಿಯಾಗಬೇಕೆಂಬ ಹಂಬಲವಿತ್ತು. ಮಾನಸಿಕವಾಗಿ ಅದೇ ಗುಂಗಿನಲ್ಲಿದ್ದೆ. ಸಹೋದ್ಯೋಗಿಯಾಗಿದ್ದ ಕವಿ ನಿಸಾರ್ ಅಹಮದ್ ಅವರು ಬಿಲ್ ಕುಲ್ ಒಪ್ಪಲಿಲ್ಲ. ಬದಲು ವಿಜ್ಞಾನದ ವಿಚಾರವಾಗಿ ಬರೆಯಲು ಶುರುಮಾಡು ಎಂದರು. ಭೂವಿಜ್ಞಾನ ಬದುಕಿಗೆ ಬಹು ಹತ್ತಿರ. ಬರೆಯಲು ಸಾಕಷ್ಟು ವಿಚಾರವಿತ್ತು. 'ಸುಧಾ'ಕ್ಕೆ 'ವಸುಂಧರೆ ಬಂಜೆಯಾದಾಳೆ?' ಎಂಬ ಲೇಖನ ಬರೆದೆ. ಅಲ್ಲಿಗೆ ನನ್ನ ಮತಾಂತರ ಮುಗಿದಿತ್ತು. ವಿಜ್ಞಾನಕ್ಕೆ ಅಂಟಿಕೊಂಡೆ. ಸುಧಾದ ಸಂಪಾದಕ ಎಂ. ಬಿ. ಸಿಂಗ್ ನಿರಂತರವಾಗಿ ಪ್ರೋತ್ಸಾಹ ಕೊಡುತ್ತಲೇ ಹೋದರು.

ಸೋಮವಾರ, ಜೂನ್ 30, 2014

'ಕಾಡು ಕಲಿಸುವ ಪಾಠ' - ಪ್ರಕೃತಿಶಿಬಿರಕ್ಕೊಂದು ಕೈಪಿಡಿ

ಕೃತಿಪರಿಚಯ: ಡಾ. ಎಸ್. ವಿ. ನರಸಿಂಹನ್

ಪುಸ್ತಕ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
ಉಳಿದ ಪ್ರಾಣಿಗಳೆಲ್ಲ ತಾವು ಇರುವ ಪರಿಸರಕ್ಕೆ ಹೊಂದಿಕೊಂಡು ಬದುಕಲು ಯತ್ನಿಸುತ್ತವೆ. ಆದರೆ ತನ್ನ ಅನುಕೂಲಕ್ಕೆ ತಕ್ಕಂತೆ ಪರಿಸರವನ್ನು ಬದಲಿಸಿಕೊಳ್ಳುವ ಶಕ್ತಿ ಇರುವುದು ಮಾನವನಿಗೆ ಮಾತ್ರ. ಈ ಶಕ್ತಿ ಏಕಕಾಲಕ್ಕೆ ಅವನ ಉನ್ನತಿಯನ್ನೂ ಅವನತಿಯನ್ನೂ ಸಂಕೇತಿಸುತ್ತದೆ. ಮನುಷ್ಯನ ಈ ಸಾಮರ್ಥ್ಯದ ಪರಿಣಾಮವಾಗಿ ಪ್ರಕೃತಿಯ ಮೂಲರೂಪವೇ ಅಸ್ತವ್ಯಸ್ತವಾಗಿಬಿಟ್ಟಿದೆ.

ಹಿರಿಯರು ನಮ್ಮ ತಲೆಮಾರಿಗೆ ಬಿಟ್ಟುಕೊಟ್ಟ ಪ್ರಕೃತಿ ಪರಿಸರಗಳನ್ನು ಸುಸ್ಥಿತಿಯಲ್ಲಿ ಮುಂದಿನ ತಲೆಮಾರಿಗೆ ಒಪ್ಪಿಸುವ ಜವಾಬ್ದಾರಿ ನಮ್ಮದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಈ ವಿಷಯದಲ್ಲಿ ಸೂಕ್ತ ತಿಳಿವಳಿಕೆಯನ್ನು ನೀಡುವುದು ಅವಶ್ಯಕ. - ಇದು ಶ್ರೀ ಟಿ. ಎಸ್. ಗೋಪಾಲ್‌ರವರು ಇತ್ತೀಚೆಗೆ ಹೊರತಂದ 'ಕಾಡು ಕಲಿಸುವ ಪಾಠ' ಪುಸ್ತಕದ ಒಟ್ಟು ಸಾರಾಂಶ.

ಗೋಪಾಲ್‌ರವರು ಸ್ವತಃ ಉಪನ್ಯಾಸಕರು. ಅದರಲ್ಲಿ ಅವರಿಗೆ ಮೂವತ್ತೈದಕ್ಕೂ ಹೆಚ್ಚು ವರ್ಷಗಳ ಅನುಭವ. ಅವರಿಗೆ ವಿದ್ಯಾರ್ಥಿಗಳ ಹಣೆಬರಹ, ಕಲಿಕೆಯ ಗುಣಮಟ್ಟ ಎಲ್ಲರಿಗಿಂತ ಚೆನ್ನಾಗಿ ಗೊತ್ತು. ಅವರು ಬರೆದದ್ದು ಕನ್ನಡ ಭಾಷಾಶಾಸ್ತ್ರದ ಪುಸ್ತಕವೇ ಆಗಿರಲಿ (ಕನ್ನಡ ವ್ಯಾಕರಣ ಪ್ರವೇಶ), ಅನುಭವ ಕಥನವೇ ಆಗಿರಲಿ (ಕಾಡಿನೊಳಗೊಂದು ಜೀವ), ವಿಜ್ಞಾನದ ವಿಷಯವೇ ಆಗಿರಲಿ (ಹುಲಿರಾಯನ ಆಕಾಶವಾಣಿ) ವಿಷಯ ನಿರೂಪಣೆಯಲ್ಲಿ ಶ್ರೀ ಗೋಪಾಲ್‌ರವರದ್ದು ಎತ್ತಿದ ಕೈ.

'ಕಾಡು ಕಲಿಸುವ ಪಾಠ'ದಲ್ಲಿ ನಾಗರಹೊಳೆಯ ನಿವೃತ್ತ ಅರಣ್ಯಾಧಿಕಾರಿ ಶ್ರೀ ಕೆ. ಎಂ. ಚಿಣ್ಣಪ್ಪನವರೇ ಸೂತ್ರಧಾರ. ವಿದ್ಯಾರ್ಥಿಗಳಿಗಾಗಿ ಅವರು ರಾಜ್ಯದ ವಿವಿಧ ಅಭಯಾರಣ್ಯಗಳಲ್ಲಿ ನಡೆಸಿಕೊಟ್ಟ ಹೆಚ್ಚಿನ ಪ್ರಕೃತಿಶಿಬಿರಗಳಲ್ಲಿ ಶ್ರೀ ಗೋಪಾಲ್‌ರವರದ್ದೇ ಮೇಲುಸ್ತುವಾರಿ, ಅವರದ್ದೇ ನಿರೂಪಣೆ. ಅಲ್ಲಿ ಅವರು ತೋರುವ ಶಿಸ್ತುಬದ್ಧತೆ, ಅಚ್ಚುಕಟ್ಟುತನ ಅವರ ಪುಸ್ತಕದಲ್ಲೂ ಪ್ರತಿಫಲಿತಗೊಂಡಿದೆ.

ಭಾನುವಾರ, ಜೂನ್ 29, 2014

ಛಾಯಾಗ್ರಹಣ ಲೋಕದ ಪಕ್ಷಿನೋಟ

ಕೃತಿಪರಿಚಯ: ಕೆ. ಎಸ್. ರಾಜಾರಾಮ್, AFIAP

ಪುಸ್ತಕ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
ನಾನು ಕ್ಯಾಮೆರಾ ಕಂಡದ್ದು ಸುಮಾರು ನಲವತ್ತರಿಂದ ನಲವತ್ತೈದು ವರ್ಷ ಹಿಂದೆ. ಅಪರ್ಚರ್, ಶಟರ್ ಸ್ಪೀಡ್, ಫಿಲ್ಮಿನ ಐಎಸ್‌ಓ ಸೆನ್ಸಿಟಿವಿಟಿ, ಲೆನ್ಸ್ ಕ್ವಾಲಿಟಿ, ಫೋಕಸ್ ಇತ್ಯಾದಿ ಅಂಶಗಳನ್ನು ಅಲ್ಪಸ್ವಲ್ಪ ಅರ್ಥಮಾಡಿಕೊಂಡು ಕ್ಲಿಕ್ ಮಾಡಿದಾಗ ಸುಮಾರಾದ ಚಿತ್ರ ಮೂಡಿಬರುತ್ತಿದ್ದ ಕಾಲ ಅದು. ಹಲವಾರು ತಿಂಗಳು-ವರ್ಷ ಎದ್ದು ಬಿದ್ದು, ಕೈ-ಕಿಸೆ ಸುಟ್ಟ ಮೇಲೆ ಸಾಧನೆಯ ಮೆಟ್ಟಿಲು ಹತ್ತಿದ ಸಮಾಧಾನ ಪಡೆಯುತ್ತಿದ್ದ ದಿನಗಳವು.

ಆದರೆ ಈಚೆಗೆ ಡಿಜಿಟಲ್ ಮಹಾಶಯ ಬೃಹದಾಕಾರ ತಳೆದು ಎಲ್ಲ ರಂಗಗಳಲ್ಲೂ ವಿಜೃಂಭಿಸುತ್ತಿದ್ದಾನಲ್ಲ. ಹಾಗಾಗಿ ಬೇರೆಲ್ಲ ಕಡೆಗಳಂತೆ ಛಾಯಾಗ್ರಹಣದಲ್ಲೂ ಡಿಜಿಟಲ್ ಇಂದಿನ ಜೀವನ ಕ್ರಮವಾಗಿದೆ. ವಿವಿಧ ಮಾದರಿಯ ಡಿಜಿಟಲ್ ಕ್ಯಾಮೆರಾಗಳು ಈಗ ಸುಲಭ ಬೆಲೆಗೆ ಲಭ್ಯ. ಅಷ್ಟೇ ಅಲ್ಲ, ಹೊಸಹೊಸ ಬಗೆಯ ಅತ್ಯಾಧುನಿಕ ಕ್ಯಾಮೆರಾಗಳನ್ನು ಬಳಸಿ ಫೋಟೋ ತೆಗೆಯುವುದೂ ಬಲು ಸುಲಭ!

ಆದರೆ ಇಷ್ಟರಿಂದಲೇ ನಮಗೆ ಛಾಯಾಗ್ರಹಣ ಗೊತ್ತು ಎಂದುಕೊಳ್ಳುವಂತಿಲ್ಲವಲ್ಲ. ಹೀಗಿರುವಾಗ ಸ್ವಲ್ಪ ಉತ್ತಮ ಮಾದರಿಯ ಕ್ಯಾಮೆರಾ ಇರುವ, ಛಾಯಾಗ್ರಹಣದಲ್ಲಿ ತಮ್ಮ ಕೈಚಳಕ ತೋರಿಸಲು ಇಚ್ಛೆ ಪಡುವ ಕೆಲವರಾದರೂ ಈ ದಿಸೆಯಲ್ಲಿ ಅಲ್ಪಸ್ವಲ್ಪ ಓದಿಕೊಂಡರೆ ಉತ್ತಮ ಅಲ್ಲವೇ?

ಸೋಮವಾರ, ಜೂನ್ 23, 2014

ವಿಜ್ಞಾನ ಬರಹಗಾರರ ಸಂದರ್ಶನ ಸರಣಿ


ಕನ್ನಡದ ವಿಜ್ಞಾನ - ತಂತ್ರಜ್ಞಾನ ಸಂವಹನಕಾರರು ಅವರ ಬರವಣಿಗೆಯ ಮೂಲಕ ಬಹಳಷ್ಟು ಓದುಗರಿಗೆ ಪರಿಚಿತರು. ಆದರೆ ವೈಯಕ್ತಿಕವಾಗಿ ಅವರ ಪರಿಚಯ ಬಹಳಷ್ಟು ಓದುಗರಿಗೆ ಇರುವುದಿಲ್ಲ. ಈ ಕೊರತೆ ಹೋಗಲಾಡಿಸುವ ದೃಷ್ಟಿಯಿಂದ ವಿಜ್ಞಾನ ಬರಹಗಾರರನ್ನು ಓದುಗರಿಗೆ ಪರಿಚಯಿಸುವ ಸಂದರ್ಶನ ಸರಣಿ ಇಜ್ಞಾನ ಡಾಟ್ ಕಾಮ್‌ನಲ್ಲಿ ಮೂಡಿಬರಲಿದೆ. ಶೀಘ್ರದಲ್ಲೇ!

ಯಾವ ಲೇಖಕರನ್ನು ಮಾತನಾಡಿಸಬೇಕು, ಅವರನ್ನು ಏನೆಲ್ಲ ಕೇಳಬೇಕು ಎನ್ನುವ ಕುರಿತು ನಿಮ್ಮ ಸಲಹೆಗಳಿಗೂ ಸ್ವಾಗತವಿದೆ.

ಸೋಮವಾರ, ಜೂನ್ 16, 2014

ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶಸ್ತಿ ಪ್ರದಾನ ಸಮಾರಂಭ

ಇಜ್ಞಾನ ವಾರ್ತೆ

ಡಾ. ಪಿ. ಎಸ್. ಶಂಕರ್
ಇಂದು (ಜೂನ್ ೧೬) ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿಯ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನಮಾಡಲಾಗುವುದು. ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹದ ಕಳೆದೆರಡು ಸಾಲಿನ ಪ್ರಶಸ್ತಿಗಳನ್ನೂ ಇದೇ ಸಂದರ್ಭದಲ್ಲಿ ನೀಡಲಾಗುತ್ತಿದೆ.

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿ ನೀಡುವ ಸರ್. ಎಂ. ವಿಶ್ವೇಶ್ವರಯ್ಯ ಪ್ರಶಸ್ತಿಗೆ ಹಿರಿಯ ವೈದ್ಯವಿಜ್ಞಾನಿ, ವಿಜ್ಞಾನ ಸಂವಹನಕಾರ ಡಾ. ಪಿ. ಎಸ್. ಶಂಕರ್ ಹಾಗೂ ಡಾ. ರಾಜಾರಾಮಣ್ಣ ಪ್ರಶಸ್ತಿಗೆ ಪ್ರೊ. ಕೆ. ಚಿದಾನಂದಗೌಡ ಭಾಜನರಾಗಿದ್ದಾರೆ. ಅವರಿಗೆ ಹಾಗೂ ಇಂದು ಪ್ರಶಸ್ತಿ ಸ್ವೀಕರಿಸುತ್ತಿರುವ ಇತರ ಎಲ್ಲರಿಗೂ ಇಜ್ಞಾನ ಡಾಟ್ ಕಾಮ್ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.

ಶುಕ್ರವಾರ, ಜೂನ್ 6, 2014

ಪ್ರೋಗ್ರಾಮ್ ಬರೆಯುವುದು ಹೇಗೆ?

ಟಿ. ಜಿ. ಶ್ರೀನಿಧಿ

ಕಂಪ್ಯೂಟರಿಗೆ ಯಾವ ಕೆಲಸ ಮಾಡುವಂತೆ ಹೇಳಬೇಕಾದರೂ ಅದಕ್ಕೊಂದು ಪ್ರೋಗ್ರಾಮ್ ಬರೆಯಬೇಕು ತಾನೆ? ಪ್ರೋಗ್ರಾಮ್ ಬರೆಯಲು ಹೊರಟಾಗ ಅದರಲ್ಲಿ ಏನೆಲ್ಲ ಇರಬೇಕು (ಉದಾ: ಎರಡು ಸಂಖ್ಯೆಗಳನ್ನು ಕೂಡಿಸು ಎನ್ನುವ ಆದೇಶ) ಹಾಗೂ ಅದೆಲ್ಲ ಯಾವ ಅನುಕ್ರಮದಲ್ಲಿರಬೇಕು (ಉದಾ: ಮೊದಲು ಎರಡು ಅಂಕಿಗಳನ್ನು ಓದು, ಅವನ್ನು ಕೂಡಿಸು, ಉತ್ತರವನ್ನು ಪ್ರದರ್ಶಿಸು) ಎನ್ನುವುದನ್ನು ತೀರ್ಮಾನಿಸುವುದು ಮೊದಲ ಕೆಲಸ.

ಈ ಕೆಲಸದಷ್ಟೇ ಮುಖ್ಯವಾದ ಇನ್ನೊಂದು ಕೆಲಸವೆಂದರೆ ಇದನ್ನೆಲ್ಲ ಕಂಪ್ಯೂಟರಿಗೆ ಅರ್ಥವಾಗುವಂತೆ ಹೇಳುವುದು. ಸಹಜವಾಗಿಯೇ, ಈ ಕೆಲಸಕ್ಕೆ ಬೇಕಿರುವುದು ಒಂದು ಭಾಷೆ. ನಮ್ಮ ಪ್ರಪಂಚದಲ್ಲಿ ಕನ್ನಡ ಇಂಗ್ಲಿಷ್‌ಗಳೆಲ್ಲ ಇರುವಂತೆ ಕಂಪ್ಯೂಟರಿನ ಲೋಕದಲ್ಲೂ ಒಂದಷ್ಟು ಭಾಷೆಗಳಿವೆ. ಪ್ರೋಗ್ರಾಮಿಂಗ್ ಭಾಷೆಗಳೆಂದು ಕರೆಯುವುದು ಇದನ್ನೇ.

ನಾವು ಹೇಳಿದ್ದೆಲ್ಲ ಕಂಪ್ಯೂಟರಿಗೆ ಅರ್ಥವಾಗಬೇಕಾದರೆ ಅದು ಇಂತಹ ಯಾವುದೋ ಒಂದು ಪ್ರೋಗ್ರಾಮಿಂಗ್ ಭಾಷೆಯಲ್ಲೇ ಇರಬೇಕು. ಬೇಸಿಕ್, ಸಿ, ಸಿ++, ಜಾವಾ... ಹೀಗೆ ಸಾಗುವ ಪ್ರೋಗ್ರಾಮಿಂಗ್ ಭಾಷೆಗಳ ಪಟ್ಟಿಯಲ್ಲಿ ಒಂದೊಂದು ಭಾಷೆ ಒಂದೊಂದು ಕೆಲಸಕ್ಕೆ ಅನುಕೂಲಕರ. ಕೆಲವು ಬಗೆಯ ಪ್ರೋಗ್ರಾಮುಗಳನ್ನು ಕೆಲ ಭಾಷೆಗಳಲ್ಲಿ ಬರೆಯುವುದು ಸುಲಭ. ವೈಯಕ್ತಿಕವಾಗಿಯೂ ಅಷ್ಟೆ, ಒಂದೊಂದು ಭಾಷೆ ಒಬ್ಬೊಬ್ಬರಿಗೆ ಇಷ್ಟ.

ಪ್ರೋಗ್ರಾಮ್ ಸೃಷ್ಟಿಗೆ ಎಲ್ಲವೂ ಸಜ್ಜಾದ ಮೇಲೆ ಇಂತಹ ಯಾವುದೋ ಒಂದು ಭಾಷೆಯನ್ನು ಆಯ್ದುಕೊಂಡು ನಾವು ಪ್ರೋಗ್ರಾಮನ್ನು ಬರೆಯಬಹುದು. ಆದರೆ ಈಗಿನ್ನೂ ಕಲಿಕೆಯ ಹಂತದಲ್ಲಿರುವ ನಮಗೆ ಯಾವ ಪ್ರೋಗ್ರಾಮಿಂಗ್ ಭಾಷೆಯೂ ಗೊತ್ತಿರದಿದ್ದರೆ ಏನು ಮಾಡುವುದು?

ಶುಕ್ರವಾರ, ಮೇ 30, 2014

ಇ-ಕಸ

ಟಿ. ಜಿ. ಶ್ರೀನಿಧಿ

ಈಚಿನ ಕೆಲ ವರ್ಷಗಳಲ್ಲಿ ಇಲೆಕ್ಟ್ರಾನಿಕ್ ಉತ್ಪನ್ನಗಳು ನಮ್ಮ ಬದುಕಿನ ಅವಿಭಾಜ್ಯ ಅಂಗಗಳೇ ಆಗಿಬಿಟ್ಟಿವೆ. ಅವು ನಮ್ಮ ಬದುಕಿನ ಮೇಲೆ ಬೀರುವ ಪ್ರಭಾವಕ್ಕೆ ಮಾರುಹೋಗಿರುವ ನಾವು ಪ್ರತಿಕ್ಷಣವೂ ಒಂದಲ್ಲ ಒಂದು ಇಲೆಕ್ಟ್ರಾನಿಕ್ ಉತ್ಪನ್ನವನ್ನು - ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ - ಬಳಸುತ್ತಿರುತ್ತೇವೆ.

ಇಲೆಕ್ಟ್ರಾನಿಕ್ ಉತ್ಪನ್ನಗಳ ಜಗತ್ತಿನಲ್ಲಿ ಬದಲಾವಣೆಯೂ ಬಹು ಕ್ಷಿಪ್ರ. ಈ ವೇಗಕ್ಕೆ ಹೊಂದಿಕೊಳ್ಳಲು ನಾವೂ ಹೊಸಹೊಸ ಉಪಕರಣಗಳ ಹಿಂದೆಬೀಳುತ್ತೇವೆ, ಬಳಸಿ ಹಳೆಯದಾದದ್ದನ್ನು ಹೊರಗೆಸೆಯುತ್ತೇವೆ.

ಈ ಪ್ರಕ್ರಿಯೆಯಲ್ಲಿ ಪರಿಸರದ ಮೇಲೆ ಭಾರೀ ದುಷ್ಪರಿಣಾಮವನ್ನೂ ಉಂಟುಮಾಡುತ್ತೇವೆ!

ನಿಜ, ಮನೆಯಿಂದಾಚೆ ಹೋಗುವ ಇಲೆಕ್ಟ್ರಾನಿಕ್ ಉತ್ಪನ್ನಗಳು ಮುಂದೆ ಏನಾಗುತ್ತವೆ ಎನ್ನುವುದರ ಬಗ್ಗೆ ನಾವು ಯಾರೂ ತಲೆಕೆಡಿಸಿಕೊಳ್ಳುವುದೇ ಇಲ್ಲ. ನನ್ನ-ನಿಮ್ಮಂತಹ ಸಾಮಾನ್ಯರಷ್ಟೇ ಅಲ್ಲ, ಇಂತಹ ಉಪಕರಣಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಸುವ-ಬಿಸಾಡುವ ಸಂಸ್ಥೆಗಳೂ ಈ ಬಗ್ಗೆ ವಹಿಸುವ ಕಾಳಜಿ ಅಷ್ಟಕ್ಕಷ್ಟೇ.

ಹೀಗಾಗಿಯೇ ಇಂತಹ ಹಳೆಯ, ನಿರುಪಯುಕ್ತ ಇಲೆಕ್ಟ್ರಾನಿಕ್ ಉತ್ಪನ್ನಗಳು ಈಗೊಂದು ದೊಡ್ಡ ಸಮಸ್ಯೆಯಾಗಿ ಬೆಳೆದುನಿಂತಿವೆ: ಅನೇಕರ ಆರೋಗ್ಯ ಹಾಳುಮಾಡುತ್ತಿವೆ, ನಮ್ಮ ಭೂಮಿಗೇ ದೊಡ್ಡದೊಂದು ತಲೆನೋವು ತಂದಿಟ್ಟಿವೆ.

ಸೋಮವಾರ, ಮೇ 26, 2014

ಆನ್‌ಲೈನ್ ಶಾಪಿಂಗ್‌ನ ಹಿಂದೆಮುಂದೆ

ಟಿ. ಜಿ. ಶ್ರೀನಿಧಿ


ಪುಸ್ತಕ-ಪೆನ್‌ಡ್ರೈವ್‌ಗಳಿಂದ ಪ್ರಾರಂಭಿಸಿ ಸೋಪು-ಪೌಡರ್-ಶಾಂಪೂಗಳವರೆಗೆ, ಚಪ್ಪಲಿ-ಟೀಶರ್ಟ್-ಕೂಲಿಂಗ್ ಗ್ಲಾಸ್‌ನಿಂದ ಟೀವಿ-ಕಂಪ್ಯೂಟರುಗಳವರೆಗೆ ಸಮಸ್ತವನ್ನೂ ನಮ್ಮ ಕಂಪ್ಯೂಟರಿನ ಮುಂದೆಯೇ ಕುಳಿತು ಖರೀದಿಸುವುದನ್ನು ಸಾಧ್ಯವಾಗಿಸಿದ್ದು ಆನ್‌ಲೈನ್ ಶಾಪಿಂಗ್ ಎಂಬ ಪರಿಕಲ್ಪನೆ.

ತೊಂಬತ್ತರ ದಶಕದ ಕೊನೆಯ ವೇಳೆಗೆ ಡಾಟ್‌ಕಾಂ ಗಾಳಿ ಜೋರಾಗಿ ಬೀಸುತ್ತಿದ್ದ ಕಾಲದಲ್ಲಿ ರೂಪುಗೊಂಡ ಮಹತ್ವಾಕಾಂಕ್ಷಿ ಕಲ್ಪನೆ ಇದು. ಹೊಸದಾಗಿ ವ್ಯಾಪಾರಕ್ಕಿಳಿದಿರುವ ಸ್ಟಾರ್ಟ್‌ಅಪ್‌ಗಳಷ್ಟೇ ಅಲ್ಲದೆ ದೊಡ್ಡದೊಡ್ಡ ಸಂಸ್ಥೆಗಳೂ ಆನ್‌ಲೈನ್ ಶಾಪಿಂಗ್ ಕ್ಷೇತ್ರದತ್ತ ಮುಖಮಾಡಿರುವುದನ್ನು ನಾವಿಂದು ವ್ಯಾಪಕವಾಗಿ ಕಾಣಬಹುದು.

ಪ್ರಸ್ತುತ ನಮ್ಮ ದೇಶದಲ್ಲಿ ಹತ್ತು ಕೋಟಿಗಿಂತ ಹೆಚ್ಚಿನ ಅಂತರಜಾಲ ಬಳಕೆದಾರರಿದ್ದಾರೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಈ ಸಂಖ್ಯೆ ಬೆಳೆಯುತ್ತಿದ್ದಂತೆಯೇ ಆನ್‌ಲೈನ್ ಶಾಪಿಂಗ್‌ನತ್ತ ಆಸಕ್ತಿಯೂ ಹೆಚ್ಚುತ್ತಿದೆ. ಮಹಾನಗರಗಳಷ್ಟೇ ಅಲ್ಲ, ಸಣ್ಣ ಪಟ್ಟಣಗಳ ನಿವಾಸಿಗಳೂ ತಮ್ಮ ಖರೀದಿಗಳಿಗಾಗಿ ಅಂತರಜಾಲದತ್ತ ಮುಖಮಾಡುತ್ತಿದ್ದಾರೆ.

ಮಂಗಳವಾರ, ಮೇ 20, 2014

ನಿಮಗೂ ಒಂದು ವೆಬ್‌ಸೈಟ್ ಬೇಕೆ?

ಟಿ. ಜಿ. ಶ್ರೀನಿಧಿ

ವಿಶ್ವವ್ಯಾಪಿ ಜಾಲ (WWW) ಎಂದಾಕ್ಷಣ ಒಂದಲ್ಲ ಒಂದು ಜಾಲತಾಣದ (ವೆಬ್‌ಸೈಟ್) ಚಿತ್ರ ನಮ್ಮ ಕಣ್ಮುಂದೆ ಬರುತ್ತದೆ. ವಿಶ್ವವ್ಯಾಪಿ ಜಾಲಕ್ಕೂ ಜಾಲತಾಣಗಳಿಗೂ ಇರುವ ಸಂಬಂಧ ಅಂತಹುದು. ವಿಶ್ವವ್ಯಾಪಿ ಜಾಲದಲ್ಲಿರುವ ಮಾಹಿತಿಯೆಲ್ಲ ನಮಗೆ ದೊರಕುವುದು ಜಾಲತಾಣಗಳ ಮೂಲಕವೇ ತಾನೆ!

ಬೇರೆಯವರು ರೂಪಿಸಿದ ಜಾಲತಾಣಗಳನ್ನು ನೋಡುವಾಗ ನಾವೂ ಒಂದು ಜಾಲತಾಣ ರೂಪಿಸಿಕೊಂಡರೆ ಹೇಗೆ ಎನ್ನಿಸುವುದು ಸಹಜ. ನಮ್ಮ ವ್ಯಾಪಾರ-ವಹಿವಾಟುಗಳ ಜಾಹೀರಾತಿಗೆ, ಉದ್ದಿಮೆಯ ಅಭಿವೃದ್ಧಿಗೆ, ಅನಿಸಿಕೆ-ಅಭಿಪ್ರಾಯಗಳ ವಿನಿಮಯಕ್ಕೆ, ಹವ್ಯಾಸದ ಬೆಳವಣಿಗೆಗೆ ನಮ್ಮದೇ ಆದ ಜಾಲತಾಣ ಖಂಡಿತಾ ನೆರವಾಗಬಲ್ಲದು; ಹೊಸ ಅವಕಾಶಗಳ ಬಾಗಿಲನ್ನೂ ತೆರೆಯಬಲ್ಲದು.

ಹಾಗಾದರೆ ನಮ್ಮದೇ ಜಾಲತಾಣವನ್ನು ರೂಪಿಸಿಕೊಳ್ಳುವುದು ಹೇಗೆ?

ನಮ್ಮದೇ ಆದ ಜಾಲತಾಣವೊಂದನ್ನು ರೂಪಿಸಿಕೊಳ್ಳಲು ಹೊರಡುವವರ ಮುಂದೆ ಎರಡು ಆಯ್ಕೆಗಳಿರುತ್ತವೆ: ದುಡ್ಡು ಕೊಟ್ಟು ತಮ್ಮದೇ ಆದ ಯುಆರ್‌ಎಲ್ ಒಂದನ್ನು ಪಡೆದುಕೊಳ್ಳುವುದು, ಅಥವಾ ಉಚಿತ ಜಾಲತಾಣಗಳನ್ನು ಒದಗಿಸುವ ಸಂಸ್ಥೆಗಳ ಸೇವೆಯನ್ನು ಪಡೆದುಕೊಳ್ಳುವುದು.

www.ejnana.com, www.srinidhi.net.in ಮೊದಲಾದ ನಿಮ್ಮದೇ ಸ್ವಂತ ಡೊಮೈನ್ ಬೇಕು ಎನ್ನುವುದಾದರೆ ಮೊದಲಿಗೆ ನಿಮ್ಮ ಆಯ್ಕೆಯ ವಿಳಾಸಕ್ಕಾಗಿ (ಯುಆರ್‌ಎಲ್) ವಾರ್ಷಿಕ ಬಾಡಿಗೆ ನೀಡಬೇಕಾಗುತ್ತದೆ.

ಯುಆರ್‌ಎಲ್‌ಗಳನ್ನು ಒದಗಿಸುವ ಹಾಗೂ ಡೊಮೈನ್ ನೇಮ್ ಸರ್ವರ್‌ಗಳನ್ನು ನಿಭಾಯಿಸುವ ಕೆಲಸ ಮಾಡುವ ಸಂಸ್ಥೆಗಳಿಗೆ ರಿಜಿಸ್ಟ್ರಾರ್‌ಗಳೆಂದು ಹೆಸರು.

ಶುಕ್ರವಾರ, ಮೇ 9, 2014

ಪರ್‌ಫಾರ್ಮೆನ್ಸ್ ಇಂಜಿನಿಯರಿಂಗ್

ಟಿ. ಜಿ. ಶ್ರೀನಿಧಿ

ಯಾವುದೇ ತಂತ್ರಾಂಶದ ಉದ್ದೇಶವೇನು ಎಂದು ಕೇಳಿದರೆ "ಆ ತಂತ್ರಾಂಶವನ್ನು ಯಾವ ಕೆಲಸಕ್ಕೆಂದು ತಯಾರಿಸಲಾಗಿದೆಯೋ ಆ ಕೆಲಸವನ್ನು ಮಾಡುವುದು" ಎನ್ನಬಹುದೆ?

ಈ ಪ್ರಶ್ನೆಗೆ ಉತ್ತರವಾಗಿ "ಹೌದು ಮತ್ತು ಇಲ್ಲ" ಎಂದು ಹೇಳಬಹುದು. "ಹೌದು" ಏಕೆಂದರೆ ತಂತ್ರಾಂಶವನ್ನು ಯಾವ ಕೆಲಸಕ್ಕೆಂದು ತಯಾರಿಸಲಾಗಿದೆಯೋ ಆ ಕೆಲಸವನ್ನು ಮಾಡುವುದು ಅದರ ಮುಖ್ಯ ಉದ್ದೇಶ. "ಇಲ್ಲ" ಏಕೆಂದರೆ ತಂತ್ರಾಂಶದ ಉದ್ದೇಶ ಇಷ್ಟು ಮಾತ್ರವೇ ಅಲ್ಲ.

ಹಾಗಾದರೆ ತಂತ್ರಾಂಶಗಳು ಇನ್ನೇನೆಲ್ಲ ಮಾಡಬೇಕು?

ಒಂದು ಉದಾಹರಣೆ ನೋಡೋಣ. ನಿಮ್ಮ ಖಾತೆಯಲ್ಲಿ ಹಣವಿದೆಯೋ ಇಲ್ಲವೋ ಪರಿಶೀಲಿಸಿ, ನೀವು ಕೇಳಿದಷ್ಟು ಹಣ ಇದ್ದರೆ ಅದನ್ನು ನಿಮಗೆ ಕೊಟ್ಟು ನಿಮ್ಮ ಖಾತೆಯಿಂದ ಅಷ್ಟು ಮೊತ್ತವನ್ನು ಕಳೆಯುವುದು ಬ್ಯಾಂಕಿನ ಎಟಿಎಂನಲ್ಲಿರುವ ತಂತ್ರಾಂಶದ ಕೆಲಸ ನಿಜ. ಆದರೆ ಇದಿಷ್ಟು ಕೆಲಸವನ್ನು ಮುಗಿಸಲು ಆ ತಂತ್ರಾಂಶ ಮೂವತ್ತು ಸೆಕೆಂಡಿನ ಬದಲು ಮೂವತ್ತು ನಿಮಿಷ ತೆಗೆದುಕೊಂಡರೆ? ನಿಮ್ಮ ಪಿನ್ ಸಂಖ್ಯೆ ತಪ್ಪು ಎಂದು ಹೇಳಲು ಐದು ನಿಮಿಷ ಕಾಯಿಸಿದರೆ?

ಮೂವತ್ತು ಸೆಕೆಂಡೋ ಮೂವತ್ತು ನಿಮಿಷವೋ, ಅದು ಮಾಡಬೇಕಾದ ಕೆಲಸ ಮಾಡುತ್ತಿದೆಯಲ್ಲ ಎನ್ನಲು ಸಾಧ್ಯವೇ?

ಶುಕ್ರವಾರ, ಮೇ 2, 2014

ಕಪ್ಪು ಚೌಕಗಳ ಕ್ಯೂಆರ್ ಕೋಡ್

ಟಿ. ಜಿ. ಶ್ರೀನಿಧಿ

ಈಚೆಗೆ ಅನೇಕ ಜಾಹೀರಾತುಗಳಲ್ಲಿ, ಜಾಲತಾಣಗಳಲ್ಲಿ ನಮಗೊಂದು ವಿಶೇಷ ಅಂಶ ಕಾಣಸಿಗುತ್ತದೆ: ಹೆಚ್ಚಿನ ಮಾಹಿತಿಗಾಗಿ ಈ ಸಂಕೇತವನ್ನು ಸ್ಕ್ಯಾನ್ ಮಾಡಿ ಎನ್ನುವ ಸಂದೇಶದ ಜೊತೆಗೆ ಅಲ್ಲೊಂದು ಚಿತ್ರವಿಚಿತ್ರ ವಿನ್ಯಾಸದ ಕಪ್ಪನೆಯ ಚೌಕ ಇರುತ್ತದೆ. ಇಜ್ಞಾನ ಡಾಟ್ ಕಾಮ್‌ನಲ್ಲೇ ನೋಡಿ, ಪುಟದ ಬಲಭಾಗದಲ್ಲಿ "ನಿಮ್ಮ ಆಂಡ್ರಾಯ್ಡ್ ಮೊಬೈಲ್ ಅಥವಾ ಟ್ಯಾಬ್ಲೆಟ್‌ನಲ್ಲಿ ಇಜ್ಞಾನ ಆಪ್ ಇನ್‌ಸ್ಟಾಲ್ ಮಾಡಲು ಮೇಲಿನ ಕೋಡ್ ಸ್ಕ್ಯಾನ್ ಮಾಡಿ!" ಎನ್ನುವ ಸಂದೇಶ ಇದೆ!

ಅರೆ, ಇದೆಂತಹ ಸಂಕೇತ? ಇದನ್ನು ಸ್ಕ್ಯಾನ್ ಮಾಡುವುದು ಹೇಗೆ? ಸ್ಕ್ಯಾನ್ ಮಾಡಿದಾಗ ಏನಾಗುತ್ತದೆ? ಎನ್ನುವ ಪ್ರಶ್ನೆ ನಮ್ಮಲ್ಲಿ ಅನೇಕರನ್ನು ಕಾಡಿರಬಹುದು.

ಈ ಸಂಕೇತದ ಹೆಸರು ಕ್ಯೂಆರ್ ಕೋಡ್ ಎಂದು. ಇಲ್ಲಿ ಕ್ಯೂಆರ್ ಎನ್ನುವುದು 'ಕ್ವಿಕ್ ರೆಸ್ಪಾನ್ಸ್' ಎಂಬ ಹೆಸರಿನ ಹ್ರಸ್ವರೂಪ. ಅಂಗಡಿಯಲ್ಲಿರುವ ಪದಾರ್ಥಗಳ ಮೇಲೆ ನಾವೆಲ್ಲ ಬಾರ್‌ಕೋಡ್‌ಗಳನ್ನು ನೋಡುತ್ತೇವಲ್ಲ, ಕ್ಯೂಆರ್ ಕೋಡ್ ಅದರದೇ ಬೇರೆಯದೊಂದು ರೂಪ.

ಶನಿವಾರ, ಏಪ್ರಿಲ್ 26, 2014

ಇಜ್ಞಾನ ಎಂಬ ಏಳು ವರ್ಷಗಳ ಪಯಣ...

ಏಳು ವರ್ಷದ ವಿಶೇಷ: ಉಚಿತ ಇ-ಪುಸ್ತಕ 'ಸಪ್ತವರ್ಣ' ಓದಲು ಇಲ್ಲಿ ಕ್ಲಿಕ್ ಮಾಡಿ!


ಇಜ್ಞಾನ ಡಾಟ್ ಕಾಮ್ ಕತೆ ಶುರುವಾದದ್ದು ಏಳು ವರ್ಷಗಳ ಹಿಂದೆ, ೨೦೦೭ರ ಏಪ್ರಿಲ್‌ನಲ್ಲಿ. ಒಮ್ಮೆ ಹೀಗೆಯೇ ಮಾತನಾಡುತ್ತಿದ್ದಾಗ ವಿಜ್ಞಾನದ ಬರಹಗಳಿಗೇ ಒಂದು ಬ್ಲಾಗ್ ಮಾಡಬಹುದಲ್ಲ ಎಂದು ಐಡಿಯಾ ಕೊಟ್ಟವರು ಲೇಖಕ ಶ್ರೀ ಕೊಳ್ಳೇಗಾಲ ಶರ್ಮ. ಈ ಐಡಿಯಾ ಕುರಿತು ಯೋಚಿಸುತ್ತ ಬ್ಲಾಗಿನ ಹೆಸರೇನಿರಬೇಕು ಎಂದು ಕೇಳಿದಾಗ 'ಇಜ್ಞಾನ'ವೆಂಬ ನಾಮಕರಣ ಮಾಡಿದ್ದು ಗೆಳೆಯ ನಂದಕಿಶೋರ್.

ಅಲ್ಲಿಂದ ಇಲ್ಲಿಯವರೆಗೆ, ಕಳೆದ ಏಳು ವರ್ಷಗಳ ಇಜ್ಞಾನದ ಹಾದಿಯಲ್ಲಿ ಹಲವು ಮೈಲಿಗಲ್ಲುಗಳು ಹಾದುಹೋಗಿವೆ: ಇಜ್ಞಾನ 'ಡಾಟ್ ಕಾಮ್' ಆದದ್ದು, ವಿದ್ಯುನ್ಮಾನ ಪತ್ರಿಕೆಯೊಂದನ್ನು ಪ್ರಾಯೋಗಿಕವಾಗಿ ಪ್ರಕಟಿಸಿದ್ದು, 'ತಿನ್ನಲಾಗದ ಬಿಸ್ಕತ್ತು...' ಕೃತಿಯ ಮೂಲಕ ಪ್ರಕಾಶನವನ್ನೂ ಪ್ರಯತ್ನಿಸಿದ್ದು, ಓದುಗರಿಗಾಗಿ ಒಂದೆರಡು ಸ್ಪರ್ಧೆ ಏರ್ಪಡಿಸಿದ್ದು, 'ಶಾಪಿಂಗ್ ಸಂಗಾತಿ' ಪ್ರಾರಂಭಿಸಿದ್ದು... ಹೀಗೆ.

ಇಷ್ಟೆಲ್ಲ ಪ್ರಯತ್ನಗಳಲ್ಲಿ ಇಜ್ಞಾನ ಡಾಟ್ ಕಾಮ್ ಜೊತೆಯಲ್ಲಿ ನಿಂತವರು ಅನೇಕ ಮಂದಿ. ಈ ಅವಧಿಯಲ್ಲಿ ಡಾ. ಪಿ. ಎಸ್. ಶಂಕರ್, ಶ್ರೀ ನಾಗೇಶ ಹೆಗಡೆ, ಶ್ರೀ ಟಿ. ಆರ್. ಅನಂತರಾಮು, ಡಾ. ಯು. ಬಿ. ಪವನಜ, ಶ್ರೀ ಶ್ರೀವತ್ಸ ಜೋಶಿ, ಶ್ರೀ ಬೇಳೂರು ಸುದರ್ಶನ, ಶ್ರೀ ಕೊಳ್ಳೇಗಾಲ ಶರ್ಮ, ಶ್ರೀ ಟಿ. ಎಸ್. ಗೋಪಾಲ್ ಸೇರಿದಂತೆ ಅನೇಕ ಮಹನೀಯರ ಲೇಖನಗಳನ್ನು ಪ್ರಕಟಿಸುವ - ಹಲವು ಲೇಖಕರ ಪುಸ್ತಕಗಳನ್ನು ಪರಿಚಯಿಸುವ ಅವಕಾಶ ಇಜ್ಞಾನಕ್ಕೆ ದೊರಕಿತು. ಇಜ್ಞಾನದ ಪ್ರಯೋಗಗಳಿಗೆ ಓದುಗರ - ಪತ್ರಿಕೆಗಳ - ಕನ್ನಡ ಜಾಲತಾಣಗಳ ಬೆಂಬಲವೂ ಒದಗಿಬಂತು.

ಇಂದು, ಇಜ್ಞಾನ ಪ್ರಾರಂಭವಾಗಿ ಏಳು ವರ್ಷ. ನಮ್ಮ ಈ ಪಯಣದಲ್ಲಿ ನಿಮ್ಮ ಬೆಂಬಲ ಸದಾ ನಮ್ಮ ಜೊತೆಯಲ್ಲಿದೆ, ಮುಂದೆಯೂ ಹಾಗೆಯೇ ಇರಲಿ.

ಹುಟ್ಟುಹಬ್ಬದ ಈ ಖುಷಿಯಲ್ಲಿ ನಿಮಗೆ ನಮ್ಮ ಉಡುಗೊರೆಯಾಗಿ 'ಸಪ್ತವರ್ಣ' ಎಂಬ ಇ-ಪುಸ್ತಕವನ್ನು ಉಚಿತವಾಗಿ ನೀಡುತ್ತಿದ್ದೇವೆ. ಕಳೆದ ಏಳು ವರ್ಷಗಳಲ್ಲಿ ಹೆಚ್ಚು ಜನರನ್ನು ತಲುಪಿದ ಏಳು ಲೇಖನಗಳ ಈ ಸಂಕಲನವನ್ನು ಇಂದು ಪ್ರಕಟಿಸಲು ನಾವು ಹರ್ಷಿಸುತ್ತೇವೆ.

ಈ ಪುಸ್ತಕದಲ್ಲಿ ಪ್ರಕಟಿಸಲು ತಮ್ಮ ಅನಿಸಿಕೆಗಳನ್ನು ನೀಡಿರುವ ಶ್ರೀ ವಸುಧೇಂದ್ರ, ಶ್ರೀ ಬೇಳೂರು ಸುದರ್ಶನ, ಶ್ರೀ ನಂದಕಿಶೋರ್ ಹಾಗೂ ಶ್ರೀ ವಿಕಾಸ್ ಹೆಗಡೆಯವರಿಗೆ ನಮ್ಮ ವಿಶೇಷ ಕೃತಜ್ಞತೆಗಳು.

ನಿಮ್ಮ ಪ್ರೋತ್ಸಾಹಕ್ಕೆ ಮತ್ತೊಮ್ಮೆ ಧನ್ಯವಾದಗಳು!

ಶುಕ್ರವಾರ, ಏಪ್ರಿಲ್ 25, 2014

ಸಾಫ್ಟ್‌ವೇರ್ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್

ಟಿ. ಜಿ. ಶ್ರೀನಿಧಿ

ತಂತ್ರಾಂಶವನ್ನು ಸಿದ್ಧಪಡಿಸುವ ಕೆಲಸವೆಂದರೆ ಬರಿಯ ಪ್ರೋಗ್ರಾಮಿಂಗ್ ಅಷ್ಟೇ ಅಲ್ಲವೆಂದು ಸಾಫ್ಟ್‌ವೇರ್ ಇಂಜಿನಿಯರಿಂಗ್ ಪರಿಕಲ್ಪನೆ ನಮಗೆ ತಿಳಿಸಿಕೊಡುತ್ತದೆ. ತಂತ್ರಾಂಶ ಅಭಿವೃದ್ಧಿಯ ಈ ಪೂರ್ಣ ಪ್ರಕ್ರಿಯೆ ಸಾಕಷ್ಟು ಕ್ಲಿಷ್ಟವೇ ಸರಿ.

ಮಹತ್ವದ ಕೆಲಸಗಳಲ್ಲಿ ಬಳಕೆಗೆಂದು ತಂತ್ರಾಂಶಗಳನ್ನು ರೂಪಿಸುವಾಗ ಕೆಲಸದ ಅಗಾಧತೆ, ಸಂಕೀರ್ಣ ವಿನ್ಯಾಸ ಇವೆಲ್ಲ ಸೇರಿ ತಂತ್ರಾಂಶ ಅಭಿವೃದ್ಧಿಯ ಕೆಲಸ ಇನ್ನಷ್ಟು ಕ್ಲಿಷ್ಟವಾಗಿಬಿಡುತ್ತದೆ. ನಿಗದಿತ ಅವಧಿಯೊಳಗೆ ನಿರ್ದಿಷ್ಟ ವೆಚ್ಚದಲ್ಲಿ ಬಳಕೆದಾರರ ಅಗತ್ಯಗಳಿಗೆ ಸರಿಹೊಂದುವಂತಹ ತಂತ್ರಾಂಶವನ್ನು ಅಭಿವೃದ್ಧಿಪಡಿಸಬೇಕಾದ ಸವಾಲನ್ನು ಎದುರಿಸುವ ಈ ಕೆಲಸ ಸುಲಭವೇನಲ್ಲ.

ಇಂತಹ ಸನ್ನಿವೇಶಗಳಲ್ಲಿ ತಂತ್ರಾಂಶ ಅಭಿವೃದ್ಧಿಯ ಕೆಲಸ ಒಂದು ನಿರ್ದಿಷ್ಟ ಯೋಜನೆಗೆ ಅನುಗುಣವಾಗಿ ನಡೆದರೆ ಮಾತ್ರ ಅದು ಯಶಸ್ವಿಯಾಗುವುದು ಸಾಧ್ಯ. ಹಾಗೊಂದು ಯೋಜನೆಯನ್ನು ರೂಪಿಸಿ ಅದರಂತೆ ತಂತ್ರಾಂಶ ಅಭಿವೃದ್ಧಿಯ ಕೆಲಸ ಕೈಗೊಳ್ಳಲು ನೆರವಾಗುವುದು 'ಸಾಫ್ಟ್‌ವೇರ್ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್' ಎಂಬ ಪರಿಕಲ್ಪನೆ.

ಗುರುವಾರ, ಏಪ್ರಿಲ್ 24, 2014

ಆಕಾಶದಲ್ಲೊ೦ದು ಮನೆ

ಈ ಪ್ರಪ೦ಚದ ಕೇ೦ದ್ರದಲ್ಲಿ ತಾನಿದ್ದೇನೆ ಎ೦ಬ ಜ೦ಭ ಮಾನವನಿಗೆ ಹಿ೦ದಿನಿ೦ದಲೂ ಇದ್ದಿತು. ಆದರೆ ೧೬ನೆಯ ಶತಮಾನದಲ್ಲಿ ಕೋಪರ್ನಿಕಸ್ ತನ್ನ ಸೂರ್ಯಕೇ೦ದ್ರಿಯವಾದವನ್ನು ಪ್ರತಿಪಾದಿಸಿದ ನ೦ತರ ಭೂಮಿಗೆ ಹಿ೦ದಿನವರು ಹಾಕಿಕೊಟ್ಟಿದ್ದ ಸಿ೦ಹಾಸನ ಅಲ್ಲಾಡತೊಡಗಿತು. ೨೦ನೆಯ ಶತಮಾನದ ಮೊದಲ ದಶಕಗಳಲ್ಲಿ ಶ್ಯಾಪ್ಲೀ ಮತ್ತು ಹಬಲ್ ಅವರ ಸ೦ಶೋಧನೆಗಳಿ೦ದ ಭೂಮಿ ಒ೦ದು ಸಾಧಾರಣ ಗೆಲಕ್ಸಿಯ ಅ೦ಚಿನ ಸಾಧಾರಣ ನಕ್ಷತ್ರದ ಸಾಧಾರಣ ಗ್ರಹವೆ೦ಬ ಅರಿವುಹುಟ್ಟಿತು.

ಇದರ ಪರಿಣಾಮವಾಗಿ ಈ ಪ್ರಪ೦ಚದಲ್ಲಿ ನಾನು ಒಬ್ಬನೇ ಇದ್ದೇನೆಯೋ ಎನ್ನುವ ಅನುಮಾನ ಮನುಷ್ಯನಲ್ಲಿ ಮೂಡಿತು. ಹಿ೦ದಿನ ಶತಮಾನದ ಅನೇಕ ಆವಿಷ್ಕಾರಗಳ ನ೦ತರ ಎಲ್ಲೋ ಆಚೆ ನಮ್ಮ ಭೂಮಿಯ ತರಹವೇ ಗ್ರಹಗಳು ಇರಬಹುದು ಮತ್ತು ನಮ್ಮ೦ತೆಯೋ ಅಥವಾ ಇನ್ನು ಯಾವ ರೂಪದಲ್ಲೋ ಜನರು ಇರಬಹುದು ಎನ್ನುವ ಊಹೆಗೆ ಹೆಚ್ಚಿನ ಬಲ ಸಿಗುತ್ತಿದೆ. ಇದಕ್ಕೆ ಸ೦ಬ೦ಧ ಪಟ್ಟ೦ತೆ ಅನ್ಯಗ್ರಹ ಜೀವಿಗಳು, ಹಾರಾಡುವ ತಟ್ಟೆಗಳು ಇತ್ಯಾದಿ ವರದಿಗಳು ಪತ್ರಿಕೆಗಳಲ್ಲಿ ಬರುತಲೇ ಇರುತ್ತವೆ; ಅವುಗಳ ಬಗ್ಗೆ ಅನೇಕ ವೈಜ್ಞಾನಿಕ ಕಥಾ ಕಾದ೦ಬರಿಗಳು ರಚಿಸಲ್ಪಟ್ಟಿರುವುದಲ್ಲದೆ ಚಲನಚಿತ್ರಗಳೂ ಮನುಷ್ಯನ ಕುತೂಹಲವನ್ನು ಹೆಚ್ಚಿಸಿವೆ. ಹಾಗಾಗಿಯೇ ಈ ವಿಷಯಗಳು ವಿಜ್ಞಾನಿಗಳನ್ನಲ್ಲದೆ ಸಾಮಾನ್ಯ ಜನತೆಯನ್ನೂ ತಮ್ಮತ್ತ ಸೆಳೆಯುತ್ತವೆ.

ಈ ವಿಷಯದ ಕುರಿತು ಗಮನಹರಿಸುವ ಹೊಸ ಪುಸ್ತಕವೊಂದು ಇದೀಗ ಮಾರುಕಟ್ಟೆಯಲ್ಲಿದೆ.

ಶುಕ್ರವಾರ, ಏಪ್ರಿಲ್ 18, 2014

ಕಮೆಂಟ್ ಮಾಡಿ!

ಟಿ. ಜಿ. ಶ್ರೀನಿಧಿ

ಪ್ರೋಗ್ರಾಮಿಂಗ್ ಮುಗಿದ ತಕ್ಷಣ ತಂತ್ರಾಂಶ ಅಭಿವೃದ್ಧಿಯ ಕೆಲಸವೇನೂ ಮುಗಿಯುವುದಿಲ್ಲ. ತಂತ್ರಾಂಶ ಪರೀಕ್ಷೆಯ (ಟೆಸ್ಟಿಂಗ್) ಕಾರಣದಿಂದಲೋ, ನಂತರದ ದಿನಗಳಲ್ಲಿ ನಿರ್ವಹಣೆಗಾಗಿಯೋ (ಮೇಂಟೆನೆನ್ಸ್) ಪ್ರೋಗ್ರಾಮುಗಳನ್ನು ಬದಲಾಯಿಸುವ ಕೆಲಸ ನಡೆದೇ ಇರುತ್ತದೆ. ಈ ಪ್ರಕ್ರಿಯೆ ಸಾಕಷ್ಟು ದೀರ್ಘಕಾಲ ನಡೆಯುವಂಥದ್ದು: ಏಕೆಂದರೆ ತಂತ್ರಾಂಶಗಳು ದಶಕಗಳ ಕಾಲ ಬಳಕೆಯಲ್ಲಿ ಉಳಿದುಕೊಳ್ಳುವುದು ಕಂಪ್ಯೂಟರ್ ಪ್ರಪಂಚದಲ್ಲಿ ಅಪರೂಪದ ಸಂಗತಿಯೇನಲ್ಲ.

ಇಷ್ಟೆಲ್ಲ ದೀರ್ಘಕಾಲ ತಂತ್ರಾಂಶಗಳು ಬಳಕೆಯಾಗುತ್ತವೆ ಎಂದರೆ ಆ ಅವಧಿಯಲ್ಲಿ ಯಾವಾಗ ಬೇಕಾದರೂ ತಂತ್ರಾಂಶದಲ್ಲಿನ ಪ್ರೋಗ್ರಾಮುಗಳನ್ನು ಬದಲಿಸಬೇಕಾಗಿ ಬರಬಹುದು. ಆದರೆ ಇಷ್ಟೆಲ್ಲ ದೀರ್ಘಕಾಲ ಒಬ್ಬನೇ ವ್ಯಕ್ತಿ ಆ ಬದಲಾವಣೆಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಾನೆ ಎನ್ನುವಂತಿಲ್ಲ.

ಅರೆ, ಪ್ರೋಗ್ರಾಮನ್ನು ಬದಲಿಸಬೇಕಾದ ಅಗತ್ಯಕ್ಕೂ ಆ ಬದಲಾವಣೆಗಳನ್ನು ಯಾರು ಮಾಡುತ್ತಾರೆ ಎನ್ನುವುದಕ್ಕೂ ಏನು ಸಂಬಂಧ?

ಸಂಬಂಧ ಬಹಳ ಸರಳವಾದದ್ದು.

ಶನಿವಾರ, ಏಪ್ರಿಲ್ 12, 2014

ತಂತ್ರಾಂಶ ನಿರ್ವಹಣೆಯೂ ಬಹುಮುಖ್ಯ!

ಟಿ. ಜಿ. ಶ್ರೀನಿಧಿ

ಕಂಪ್ಯೂಟರ್ ವ್ಯವಸ್ಥೆಗಳೆಂದಮೇಲೆ ಅವುಗಳ ನಿರ್ವಹಣೆಗೂ ಸಾಕಷ್ಟು ಸಮಯ-ಹಣ ಬೇಕು ಎನ್ನುವ ವಿಷಯ ನಮಗೆ ಗೊತ್ತೇ ಇದೆ. ಆದರೆ ಕಂಪ್ಯೂಟರಿನ ನಿರ್ವಹಣೆಯೆಂದ ತಕ್ಷಣ ಹೆಚ್ಚಾಗಿ ನಮ್ಮ ಮನಸ್ಸಿಗೆ ಬರುವುದು ಯಂತ್ರಾಂಶದ (ಹಾರ್ಡ್‌ವೇರ್) ನಿರ್ವಹಣೆಯ ವಿಷಯವೇ. ಮೌಸ್ ಕೆಲಸಮಾಡುತ್ತಿಲ್ಲವೆಂದೋ ಮೋಡೆಮ್ ಕೆಟ್ಟಿದೆಯೆಂದೋ ಇನ್ನಾವುದೋ ಭಾಗ ಹಳೆಯದಾಗಿದೆಯೆಂದೋ ಸಾಕಷ್ಟು ಖರ್ಚುಮಾಡಿರುವ ವಿಷಯ ನಮ್ಮೆಲ್ಲರ ನೆನಪಿನಲ್ಲೂ ಇರುತ್ತದಲ್ಲ!

ಆದರೆ ನಿರ್ವಹಣೆ ಬೇಕಿರುವುದು ಕೇವಲ ಯಂತ್ರಾಂಶಕ್ಕೆ ಮಾತ್ರವಲ್ಲ, ನಾವು ಬರೆಯುವ ತಂತ್ರಾಂಶವನ್ನು (ಸಾಫ್ಟ್‌ವೇರ್) ನಿರ್ವಹಿಸುವುದೂ ಸಾಕಷ್ಟು ದೊಡ್ಡ ಕೆಲಸವೇ.

ಯಂತ್ರಾಂಶದಲ್ಲೇನೋ ಸರಿ, ಬೇಕಾದಷ್ಟು ಬಿಡಿಭಾಗಗಳಿರುತ್ತವೆ - ಉಪಯೋಗಿಸುತ್ತ ಹೋದಂತೆ ಹಾಳಾಗುವ ಸಾಧ್ಯತೆಯೂ ಇರುತ್ತದೆ. ಆದರೆ ತಂತ್ರಾಂಶದ ನಿರ್ವಹಣೆ ಎಂದರೇನು?

ಕೇಳಲು ವಿಚಿತ್ರವೆಂದು ತೋರಿದರೂ ತಂತ್ರಾಂಶಕ್ಕೆ ನಿರ್ವಹಣೆಯ (ಮೇಂಟೆನೆನ್ಸ್) ಅಗತ್ಯ ಬರುವುದು ಅಪರೂಪವೇನಲ್ಲ.

ಶುಕ್ರವಾರ, ಏಪ್ರಿಲ್ 4, 2014

ತಂತ್ರಜ್ಞಾನದ ಒಗ್ಗರಣೆ - ಅಕ್ಷರಗಳ ಚಿತ್ರಾನ್ನ!

ಟಿ. ಜಿ. ಶ್ರೀನಿಧಿ


ಹೊಸ ಇಮೇಲ್ ಖಾತೆ ತೆರೆಯುವಾಗ, ಬ್ಲಾಗ್ ಬರಹಕ್ಕೆ ಕಮೆಂಟ್ ಮಾಡುವಾಗ, ಬ್ಯಾಂಕಿನ ಆನ್‌ಲೈನ್ ವ್ಯವಹಾರದಲ್ಲಿ, ಕಡೆಗೆ ರೈಲಿನ ಟಿಕೇಟು ಬುಕ್ ಮಾಡುವಾಗಲೂ ನಮ್ಮ ಮುಂದೆ ಅಕ್ಷರಗಳ ಕಲಸುಮೇಲೋಗರದಂತೆ ಕಾಣುವ ವಿಚಿತ್ರ ಚಿತ್ರವೊಂದು ಕಾಣಿಸಿಕೊಳ್ಳುತ್ತದೆ. ಜೊತೆಗೆ "ನೀವು ರೋಬಾಟ್ ಅಲ್ಲ ಎಂಬುದನ್ನು ಸಾಬೀತುಪಡಿಸಲು ಈ ಪಠ್ಯವನ್ನು ಟೈಪ್ ಮಾಡಿ" ಎಂಬ ಸಂದೇಶವೂ! ಆ ಅಕ್ಷರಗಳನ್ನೆಲ್ಲ ಸರಿಯಾಗಿ ಗುರುತಿಸಿ ಟೈಪಿಸಿದಾಗಷ್ಟೇ ನಾವು ಮಾಡುತ್ತಿರುವ ಕೆಲಸದಲ್ಲಿ ಮುಂದುವರೆಯುವುದು ಸಾಧ್ಯ.

ದುರುದ್ದೇಶಪೂರಿತ ತಂತ್ರಾಂಶಗಳ ಅನಗತ್ಯ ಹಸ್ತಕ್ಷೇಪ ತಪ್ಪಿಸಿ ಸೌಲಭ್ಯಗಳ ದುರುಪಯೋಗವನ್ನು ತಡೆಯುತ್ತದಲ್ಲ ಈ ವಿಧಾನ, ಇದಕ್ಕೆ 'ಕ್ಯಾಪ್ಚಾ' ಎಂದು ಹೆಸರು. ಕ್ಯಾಪ್ಚಾ ಎನ್ನುವ ಹೆಸರು 'ಕಂಪ್ಲೀಟ್‌ಲಿ ಆಟೋಮೇಟೆಡ್ ಪಬ್ಲಿಕ್ ಟ್ಯೂರಿಂಗ್ ಟೆಸ್ಟ್ ಟು ಟೆಲ್ ಕಂಪ್ಯೂಟರ್ಸ್ ಆಂಡ್ ಹ್ಯೂಮನ್ಸ್ ಅಪಾರ್ಟ್' ಎಂಬುದರ ಹ್ರಸ್ವರೂಪ. ಈ ನಾಮಕರಣವಾದದ್ದು ೨೦೦೦ದಲ್ಲಿ. ಯಾವುದೇ ಪ್ರಶ್ನೆಗೆ ಉತ್ತರಿಸುತ್ತಿರುವುದು ಸ್ವಯಂಚಾಲಿತ ತಂತ್ರಾಂಶವಲ್ಲ, ಮಾನವ ಬಳಕೆದಾರರೇ ಎಂದು ಖಾತರಿಪಡಿಸಿಕೊಳ್ಳುವ ಉದ್ದೇಶದಿಂದ ಕ್ಯಾಪ್ಚಾಗಳ ಬಳಕೆ ಪ್ರಾರಂಭವಾಯ್ತು.

ಪರದೆಯ ಮೇಲೆ ತೋರಿಸುವ ಚಿತ್ರದಲ್ಲಿನ ಅಕ್ಷರ ಅಥವಾ ಅಂಕಿಗಳನ್ನು ಗುರುತಿಸುವಂತೆ, ಅಥವಾ ಸರಳ ಪ್ರಶ್ನೆಗಳಿಗೆ ಉತ್ತರಿಸುವಂತೆ ಬಳಕೆದಾರರನ್ನು ಕೇಳುವುದು ಕ್ಯಾಪ್ಚಾಗಳ ಲಕ್ಷಣ.

ಬುಧವಾರ, ಏಪ್ರಿಲ್ 2, 2014

ರಜೆಯಲ್ಲಿ ಕಂಪ್ಯೂಟರಿನ ಗೆಳೆತನ ಬೆಳೆಸಿ!

ಟಿ. ಜಿ. ಶ್ರೀನಿಧಿ

ಕಳೆದ ಶತಮಾನದ ಅತ್ಯಂತ ಮಹತ್ವದ ಆವಿಷ್ಕಾರಗಳಲ್ಲಿ ಕಂಪ್ಯೂಟರಿನದು ಪ್ರಮುಖ ಸ್ಥಾನ. ಬಹುಶಃ ನಾವೆಲ್ಲ ಈ ಮಾತನ್ನು ಬೇಜಾರು ಬರುವಷ್ಟು ಬಾರಿ ಕೇಳಿಬಿಟ್ಟಿದ್ದೇವೆ. ಬಹಳ ಕಡಿಮೆ ಅವಧಿಯಲ್ಲಿ ಮಾಹಿತಿ ತಂತ್ರಜ್ಞಾನ ನಮ್ಮ ಬದುಕನ್ನೆಲ್ಲ ಆವರಿಸಿಕೊಂಡಿರುವ ಪರಿಯ ಬಗೆಗೆ ಕೇಳುವುದು-ಓದುವುದು ಹಾಗಿರಲಿ, ಅದರ ಅನುಭವವನ್ನೇ ನಾವೆಲ್ಲರೂ ಪಡೆದಾಗಿದೆ.

ನಿಜ, ಉದ್ಯೋಗದಿಂದ ಮನರಂಜನೆಯವರೆಗೆ ಎಲ್ಲೆಲ್ಲೂ ಕಂಪ್ಯೂಟರಿನದೇ ಭರಾಟೆ. ಕಚೇರಿಯ ಕೆಲಸ ಮಾಡಲು, ಪ್ರವಾಸಕ್ಕೆ ಟಿಕೇಟು ಕಾದಿರಿಸಲು, ಬ್ಯಾಂಕಿನದೋ ಶೇರು ಮಾರುಕಟ್ಟೆಯದೋ ವ್ಯವಹಾರ ನಡೆಸಲು, ಗೆಳೆಯರೊಡನೆ ಹರಟೆಹೊಡೆಯಲು, ಕಡೆಗೆ ಆಟವಾಡಲೂ ನಮಗೆ ಕಂಪ್ಯೂಟರ್ ಬೇಕು.

ಶಾಲೆ ಕಾಲೇಜಿನ ರಜಾದಿನಗಳ ಮಾತನ್ನಂತೂ ಕೇಳುವುದೇ ಬೇಡ, ಹೊರಗಿನ ಬಿರುಬಿಸಿಲನ್ನು ತಪ್ಪಿಸಿಕೊಳ್ಳಲು ಮನೆಯೊಳಗೆ ಕಂಪ್ಯೂಟರ್ ಇದೆಯಲ್ಲ! ಪರೀಕ್ಷೆಮುಗಿಸಿದ ವಿದ್ಯಾರ್ಥಿಗಳಿಗೆ ಕಂಪ್ಯೂಟರೇ ಈಗ ಆಪ್ತಮಿತ್ರ.

ಆದರೆ ಕಂಪ್ಯೂಟರೆಂಬ ಈ ಮಿತ್ರನ ಒಡನಾಟ ಯಾವಾಗಲೂ ನಮಗೆ ಒಳ್ಳೆಯದನ್ನೇ ಮಾಡಬೇಕು ಎಂದೇನೂ ಇಲ್ಲ. ಒಳಿತಿನ ಪ್ರಮಾಣದಷ್ಟೇ ಕೆಡುಕನ್ನೂ ಮಾಡಬಲ್ಲ ಈ ಯಂತ್ರದ ಒಡನಾಟದಿಂದ ಗರಿಷ್ಠ ಪ್ರಮಾಣದ ಲಾಭ ಪಡೆದುಕೊಳ್ಳುವುದು, ಮತ್ತು ಅದೇ ಸಮಯದಲ್ಲಿ ಕೆಟ್ಟದುದರಿಂದ ದೂರವಿರುವುದು ಸಂಪೂರ್ಣವಾಗಿ ನಮ್ಮ ವಿವೇಚನೆಯನ್ನೇ ಅವಲಂಬಿಸಿರುತ್ತದೆ.

ಹಾಗೆಂದಮಾತ್ರಕ್ಕೆ ಈ ಕಂಪ್ಯೂಟರ್-ಇಂಟರ್‌ನೆಟ್ ಇತ್ಯಾದಿಗಳ ಸಹವಾಸವೇ ಬೇಡ, ಅದರಿಂದ ದೂರವೇ ಉಳಿದುಬಿಡೋಣ ಎನ್ನುವುದು ಖಂಡಿತಾ ತಪ್ಪಾಗುತ್ತದೆ.

ಶುಕ್ರವಾರ, ಮಾರ್ಚ್ 28, 2014

ರಿಕ್ವೈರ್‌ಮೆಂಟ್ಸ್ ಇಂಜಿನಿಯರಿಂಗ್

ಟಿ. ಜಿ. ಶ್ರೀನಿಧಿ

ತಂತ್ರಾಂಶ ಸಿದ್ಧಪಡಿಸಲು ಹೊರಡುವವರ ಮುಂದಿನ ಅತಿದೊಡ್ಡ ಸವಾಲು ಯಾವುದು ಎಂದು ಕೇಳಿದರೆ ಅದಕ್ಕೆ ನಿಮ್ಮ ಉತ್ತರ ಏನಿರಬಹುದು? ಪ್ರೋಗ್ರಾಮಿಂಗ್ ಭಾಷೆಯಲ್ಲಿನ ಪರಿಣತಿಯೆ? ಸಾಫ್ಟ್‌ವೇರ್ ಇಂಜಿನಿಯರಿಂಗ್ ಜ್ಞಾನವೆ? ಅಥವಾ ತಪ್ಪುಗಳಾಗದಂತೆ ಎಚ್ಚರವಹಿಸಬೇಕಾದ ಅಗತ್ಯವೆ?

ಇವೆಲ್ಲವೂ ಸವಾಲುಗಳೇ ನಿಜ. ಆದರೆ ಬಳಕೆದಾರರ ಅಗತ್ಯಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದಿದೆಯಲ್ಲ, ಆ ಕೆಲಸ ಇವೆಲ್ಲವುದಕ್ಕಿಂತ ಅದೆಷ್ಟೋ ಪಾಲು ಹೆಚ್ಚು ಕಷ್ಟಕರವಾದದ್ದು.

ಮೇಲ್ನೋಟಕ್ಕೆ ಈ ಕೆಲಸ ಅಷ್ಟೇನೂ ಕ್ಲಿಷ್ಟವೆಂದು ತೋರುವುದಿಲ್ಲ. ತಂತ್ರಾಂಶದ ಅಗತ್ಯವಿರುವುದು ಬಳಕೆದಾರರಿಗೆ; ಆ ತಂತ್ರಾಂಶ ಏನು ಮಾಡಬೇಕು, ಅದರ ಕಾರ್ಯಾಚರಣೆ ಹೇಗಿರಬೇಕು ಎಂದೆಲ್ಲ ತಿಳಿದಿರಬೇಕಾದ್ದೂ ಅವರಿಗೇ. ಅಷ್ಟನ್ನು ಅವರು ಹೇಳಿದರೆ ಅದನ್ನು ಅರ್ಥಮಾಡಿಕೊಳ್ಳಲು ನಾವೇಕೆ ಕಷ್ಟಪಡಬೇಕು?

ಭಾನುವಾರ, ಮಾರ್ಚ್ 23, 2014

ಪದಗಳ ಆಟದ ಒಂದು ಶತಮಾನ

ಪದಗಳ ಆಟ ಪದಬಂಧ ಈಗಷ್ಟೆ ತನ್ನ ಅಸ್ತಿತ್ವದ ಒಂದು ಶತಮಾನ ಮುಗಿಸಿ ಮುಂದಡಿಯಿಟ್ಟಿದೆ. ಈ ಸುದೀರ್ಘ ಅವಧಿಯಲ್ಲಿ ಪದಬಂಧದ ಸ್ವರೂಪ ಹೆಚ್ಚು ಬದಲಾಗದಿದ್ದರೂ ಬದಲಾದ ಕಾಲಮಾನಕ್ಕೆ ಅದು ಹೊಂದಿಕೊಂಡಿರುವ ರೀತಿ ಅನನ್ಯವಾದದ್ದು. ಆ ಕುರಿತ ಒಂದು ಪರಿಚಯ ಇಲ್ಲಿದೆ.
ಟಿ. ಜಿ. ಶ್ರೀನಿಧಿ

ವಿಕಿಪೀಡಿಯ ಚಿತ್ರ
ಇಂದಿಗೂ ಜನಪ್ರಿಯವಾಗಿರುವ ನೂರು ವರ್ಷ ಹಳೆಯ ಆಟದ, ನಾಲ್ಕಕ್ಷರದ, ಹೆಸರೇನು? ಬಹುಶಃ ಈ ಪ್ರಶ್ನೆ ಕೇಳಿ ಮುಗಿಸುವಷ್ಟರಲ್ಲೇ 'ಪದಬಂಧ' ಎಂಬ ಹೆಸರು ನಿಮ್ಮ ಮನಸ್ಸಿನಲ್ಲಿ ಮೂಡಿಬಿಟ್ಟಿರುತ್ತದೆ.

ನಿಜ, ಪದಬಂಧದ ಜನಪ್ರಿಯತೆಯೇ ಅಂಥದ್ದು. ಹಿರಿಯರು-ಕಿರಿಯರೆಂಬ ಭೇದಭಾವವಿಲ್ಲದೆ ಎಲ್ಲ ವಯಸ್ಸಿನವರಿಗೂ ಅಚ್ಚುಮೆಚ್ಚಿನ ಈ ಆಟ ಜಗತ್ತಿನ ಬಹುತೇಕ ಎಲ್ಲ ಪತ್ರಿಕೆಗಳಲ್ಲೂ ಪ್ರಕಟವಾಗುತ್ತದೆ.

ಪದಬಂಧದ ಕತೆ ಶುರುವಾದದ್ದು ಅಮೆರಿಕಾದಲ್ಲಿ, ನಿಖರವಾಗಿ ಹೇಳಬೇಕಾದರೆ ಈಗ ನೂರು ವರ್ಷಗಳ ಹಿಂದೆ, ೧೯೧೩ರ ಡಿಸೆಂಬರ್ ೨೧ರಂದು. ಆ ದಿನದ 'ನ್ಯೂಯಾರ್ಕ್ ವರ್ಲ್ಡ್' ಪತ್ರಿಕೆಯಲ್ಲಿ 'ವರ್ಡ್-ಕ್ರಾಸ್' ಎನ್ನುವ ವಿಶೇಷವೊಂದು ಪ್ರಕಟವಾಗಿತ್ತು. ಕೊಟ್ಟಿದ್ದ ಸುಳಿವುಗಳಿಗೆ ಅನುಸಾರವಾಗಿ ವಜ್ರಾಕೃತಿಯ ವಿನ್ಯಾಸವೊಂದರಲ್ಲಿ ಪದಗಳನ್ನು ಜೋಡಿಸಬೇಕಿದ್ದ ಈ ಆಟವನ್ನು ರೂಪಿಸಿದ್ದ ವ್ಯಕ್ತಿಯ ಹೆಸರು ಆರ್ಥರ್ ವಿನ್ ಎಂದು.

ಕೆಲ ಸಮಯದ ನಂತರ, ಬಹುಶಃ ಮೊಳೆಜೋಡಿಸುವವರ ತಪ್ಪಿನಿಂದ, 'ವರ್ಡ್-ಕ್ರಾಸ್' ಎನ್ನುವ ಹೆಸರು 'ಕ್ರಾಸ್-ವರ್ಡ್' ಎಂದು ಬದಲಾಯಿತು ಎನ್ನಲಾಗಿದೆ. ಮುಂದೆ ಈ ಹೆಸರು ಗಳಿಸಿಕೊಂಡ ಜನಪ್ರಿಯತೆ ಅಭೂತಪೂರ್ವವಾದದ್ದು.

೧೯೨೦ರ ದಶಕದಲ್ಲಿ ಬೇರೆ ದೇಶಗಳ ಪತ್ರಿಕೆಗಳಲ್ಲೂ ಪದಬಂಧಗಳು ಕಾಣಿಸಿಕೊಂಡವು.

ಶನಿವಾರ, ಮಾರ್ಚ್ 22, 2014

ಜಾಲಲೋಕದ ಸಿಲ್ವರ್ ಜ್ಯೂಬಿಲಿ!

ಟಿ. ಜಿ. ಶ್ರೀನಿಧಿ

ಈ ತಿಂಗಳು ವಿಶ್ವವ್ಯಾಪಿ ಜಾಲಕ್ಕೆ (ವರ್ಲ್ಡ್‌ವೈಡ್ ವೆಬ್) ಇಪ್ಪತ್ತೈದು ವರ್ಷ ತುಂಬಿದ ಸಂಭ್ರಮ. ನಮ್ಮ ಬದುಕಿನಲ್ಲಿ ಮಹತ್ವದ ಬದಲಾವಣೆಗಳನ್ನು ತಂದ ಈ ವ್ಯವಸ್ಥೆಯ ಹೆಸರು ನಮಗೆಲ್ಲರಿಗೂ ಡಬ್ಲ್ಯೂಡಬ್ಲ್ಯೂಡಬ್ಲ್ಯೂ ಅಂತಲೇ ಹೆಚ್ಚು ಪರಿಚಯ ಎನ್ನಬೇಕು.

ಈ ಡಬ್ಲ್ಯೂಡಬ್ಲ್ಯೂಡಬ್ಲ್ಯೂ ಎಂದರೇನು ಎಂದು ಕೇಳಿದಾಗ ಮಾತ್ರ ನಮ್ಮಲ್ಲಿ ಅನೇಕರಿಗೆ ಕೊಂಚ ಗೊಂದಲವಾಗುತ್ತದೆ. "ಡಬ್ಲ್ಯೂಡಬ್ಲ್ಯೂಡಬ್ಲ್ಯೂ ಎಂದರೆ ಇಂಟರ್‌ನೆಟ್ ತಾನೆ?" ಎನ್ನುವುದು ಅವರಲ್ಲಿ ಬಹಳಷ್ಟು ಜನ ಕೇಳುವ ಪ್ರಶ್ನೆ.

ಅಲ್ಲ, ಈ ವಿಶ್ವವ್ಯಾಪಿ ಜಾಲ ಅಂತರಜಾಲದ ಒಂದು ಅಂಗ ಮಾತ್ರ. ವಿಶ್ವವ್ಯಾಪಿ ಜಾಲ ಹುಟ್ಟುವ ಮೊದಲೇ ಅಂತರಜಾಲ ಇತ್ತು. ಆದರೆ ಅದು ಆಗ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ಮಾತ್ರವೇ ಹೆಚ್ಚಾಗಿ ಬಳಕೆಯಲ್ಲಿತ್ತು. ಸಾಮಾನ್ಯ ಜನತೆಗೆ ಆಗಿನ್ನೂ ಅದು ಅಷ್ಟಾಗಿ ಪರಿಚಿತವಾಗಿರಲಿಲ್ಲ.

ಇಂತಹ ಪರಿಸ್ಥಿತಿಯಿದ್ದಾಗ, ೧೯೮೦ರ ದಶಕದ ಪ್ರಾರಂಭದಲ್ಲಿ, ಟಿಮ್ ಬರ್ನರ್ಸ್ ಲೀ ಎಂಬ ತಂತ್ರಜ್ಞ ಸ್ವಿಟ್ಜರ್‌ಲೆಂಡಿನ ಜಿನೀವಾದಲ್ಲಿರುವ ಯೂರೋಪಿಯನ್ ಪಾರ್ಟಿಕಲ್ ಫಿಸಿಕ್ಸ್ ಲ್ಯಾಬೊರೇಟರಿಯಲ್ಲಿ (ಸರ್ನ್) ತಾತ್ಕಾಲಿಕವಾಗಿ ಕೆಲಸಕ್ಕೆ ಸೇರಿದರು.

ಸೋಮವಾರ, ಮಾರ್ಚ್ 17, 2014

ಸಮರತಂತ್ರದ ಹೈಟೆಕ್ ಮಂತ್ರ

ಟಿ. ಜಿ. ಶ್ರೀನಿಧಿ

ಉಕ್ರೇನಿನ ಪ್ರಕ್ಷುಬ್ಧ ವಾತಾವರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸುತ್ತಿರುವ ವಿಷಯ ನಮಗೆಲ್ಲ ಗೊತ್ತೇ ಇದೆ. ಯುರೋಪಿಯನ್ ಒಕ್ಕೂಟ ಸೇರುವುದೋ ಅಥವಾ ರಷ್ಯಾವನ್ನು ಬೆಂಬಲಿಸುವುದೋ ಎನ್ನುವ ಗೊಂದಲ ಇಡೀ ದೇಶವನ್ನೇ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.

ಈ ನಡುವೆ ಉಕ್ರೇನಿನ ಕಂಪ್ಯೂಟರ್ ಜಾಲಗಳು ಹಾಗೂ ದೂರಸಂಪರ್ಕ ವ್ಯವಸ್ಥೆಯನ್ನು ಬೇರೆಯದೇ ಒಂದು ಬಗೆಯ ಸಮಸ್ಯೆ ಕಾಡುತ್ತಿದೆ ಎಂದು ಪತ್ರಿಕಾವರದಿಗಳು ಹೇಳುತ್ತಿವೆ. ಉಕ್ರೇನಿನ ಮೊಬೈಲ್ ಹಾಗೂ ಕಂಪ್ಯೂಟರ್ ಜಾಲಗಳ ಮೇಲೆ ಹೊರಗಿನ ಯಾವುದೋ ಶಕ್ತಿ ದಾಳಿಮಾಡುತ್ತಿದೆ ಎನ್ನುವುದು ಈ ವರದಿಗಳ ಸಾರಾಂಶ. ಬಿಬಿಸಿ ವರದಿಯ ಪ್ರಕಾರ ಈ ದಾಳಿಗಳ ಹಿಂದೆ ರಷ್ಯಾದ ಕೈವಾಡವಿದೆ ಎನ್ನುವುದು ಉಕ್ರೇನಿನ ರಕ್ಷಣಾಪಡೆಗಳ ಆರೋಪವಂತೆ.

ಈ ಆರೋಪ ನಿಜವೋ ಸುಳ್ಳೋ ಅದು ನಮಗೆ ಬೇಕಿಲ್ಲ. ಆದರೆ ಅದು ದೇಶದೇಶಗಳ ನಡುವಿನ ಸಮರದ ಹೊಸ ಮುಖವೊಂದನ್ನಂತೂ ಜಗತ್ತಿಗೆ ಪರಿಚಯಿಸುತ್ತಿದೆ.

ಶುಕ್ರವಾರ, ಮಾರ್ಚ್ 7, 2014

ಟೆಸ್ಟಿಂಗ್: ಏನು, ಏಕೆ, ಹೇಗೆ?

ಟಿ. ಜಿ. ಶ್ರೀನಿಧಿ

ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ತಂತ್ರಾಂಶ ಸಿದ್ಧಪಡಿಸುವುದು ಎಷ್ಟು ಮುಖ್ಯವೋ ಹಾಗೆ ಸಿದ್ಧವಾದ ತಂತ್ರಾಂಶ ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ರೂಪುಗೊಂಡಿದೆಯೋ ಇಲ್ಲವೋ ಎಂದು ಪರೀಕ್ಷಿಸುವುದೂ ಅಷ್ಟೇ ಮುಖ್ಯ. ಎಷ್ಟಾದರೂ ತಂತ್ರಾಂಶ ಹೇಗಿರಬೇಕು ಎಂದು ನಿರ್ಧರಿಸುವವರು ಅದರ ಬಳಕೆದಾರರೇ ಆದ್ದರಿಂದ ನಾವು ರೂಪಿಸುವ ತಂತ್ರಾಂಶ ಅವರ ನಿರೀಕ್ಷೆಗಳನ್ನು ಪೂರೈಸುವಂತಿರಬೇಕು. ತಂತ್ರಾಂಶ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಟೆಸ್ಟಿಂಗ್ ಹಂತಕ್ಕೆ ಎಲ್ಲಿಲ್ಲದ ಮಹತ್ವ ದೊರಕುವುದು ಇದೇ ಕಾರಣಕ್ಕಾಗಿ.

ಟೆಸ್ಟಿಂಗ್ ಮಾಡುವುದೇನೋ ಸರಿ, ಆದರೆ ತಂತ್ರಾಂಶದಲ್ಲಿ ನಾವು ಪರೀಕ್ಷಿಸಬೇಕಾದ್ದು ಏನನ್ನು? ಅದನ್ನೆಲ್ಲ ಸೂಕ್ತವಾಗಿ ಪರೀಕ್ಷಿಸುವ ವಿಧಾನ ಯಾವುದು? ಈ ವಿಷಯದ ಕುರಿತು ತಂತ್ರಾಂಶ ಅಭಿವೃದ್ಧಿಪಡಿಸುವ ಪ್ರತಿಯೊಬ್ಬರೂ ಯೋಚಿಸಲೇಬೇಕು. ಏಕೆಂದರೆ ತಂತ್ರಾಂಶದ ಪರೀಕ್ಷೆ ಕ್ರಮಬದ್ಧವಾಗಿ ಆಗದಿದ್ದರೆ ಅದರಿಂದ ಅನೇಕ ಅನೇಕ ಬಗೆಯ ತೊಂದರೆಗಳಾಗಬಹುದು: ನಂತರದ ಹಂತಗಳಲ್ಲಿ ತಪ್ಪು ಸರಿಪಡಿಸಲು ಸಮಯ ವ್ಯರ್ಥವಾಗಬಹುದು, ಅನಗತ್ಯವಾಗಿ ಹಣ ವೆಚ್ಚವಾಗಬಹುದು ಅಥವಾ ತಂತ್ರಾಂಶದಲ್ಲಿ ತಪ್ಪುಗಳು ಹಾಗೆಯೇ ಉಳಿದುಕೊಂಡು ಬಳಕೆದಾರರಿಗೆ ದೊಡ್ಡ ತೊಂದರೆಯೂ ಆಗಬಹುದು.

ಇಂತಹ ತೊಂದರೆಗಳನ್ನೆಲ್ಲ ತಪ್ಪಿಸಿಕೊಳ್ಳಲು ನೆರವಾಗುವಂತಹ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಸಾಫ್ಟ್‌ವೇರ್ ಇಂಜಿನಿಯರಿಂಗ್ ಪರಿಕಲ್ಪನೆಯಲ್ಲಿ ನಾವು ಕಾಣಬಹುದು.

ಶುಕ್ರವಾರ, ಫೆಬ್ರವರಿ 28, 2014

ಸೋಶಿಯಲ್ ರೀಡಿಂಗ್: ಒಟ್ಟಿಗೆ ಓದೋಣ!

ಟಿ. ಜಿ. ಶ್ರೀನಿಧಿ

ಪತ್ರಿಕೆಗಳಲ್ಲಿ ಬರುವ ಧಾರಾವಾಹಿಗಳನ್ನು ಓದಿ ಮಿತ್ರರೆಲ್ಲ ಸೇರಿದಾಗ ಅದರ ಬಗ್ಗೆ ಚರ್ಚಿಸುವ ಹವ್ಯಾಸ ಅನೇಕರಲ್ಲಿತ್ತು. ತಮ್ಮ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸವನ್ನು ಬೆಳೆಸಲು ಡಾ. ಬಿ. ಜಿ. ಎಲ್. ಸ್ವಾಮಿಯವರು ಒಂದೇ ಕೃತಿಯ ಹಲವು ಪ್ರತಿಗಳನ್ನು ಖರೀದಿಸಿ ಅವರಿಗೆಲ್ಲ ಕೊಡುತ್ತಿದ್ದರಂತೆ; ಓದಿದ ಮೇಲೆ ಎಲ್ಲರೂ ಸೇರಿ ಆ ಕೃತಿಯ ಬಗ್ಗೆ ವಿಚಾರವಿನಿಮಯ ಮಾಡಿಕೊಳ್ಳಬೇಕು ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಇಂದಿನ ಡಿಜಿಟಲ್ ಯುಗದಲ್ಲೂ ಇಂತಹ ಅಭ್ಯಾಸ ಇಟ್ಟುಕೊಳ್ಳುವುದನ್ನು ಸಾಧ್ಯವಾಗಿಸಿರುವುದು 'ಸೋಶಿಯಲ್ ರೀಡಿಂಗ್'ನ  ಪರಿಕಲ್ಪನೆ.

ನಾವು ಯಾವ ಪುಸ್ತಕ ಓದುತ್ತಿದ್ದೇವೆ, ಅದರ ಬಗ್ಗೆ ನಮ್ಮ ಅನಿಸಿಕೆ ಏನು ಎನ್ನುವುದರಿಂದ ಪ್ರಾರಂಭಿಸಿ ಎಷ್ಟು ಪುಟ ಓದಿಯಾಗಿದೆ, ಯಾವ ಪುಟದಲ್ಲಿ ಏನು ಇಷ್ಟವಾಯಿತು-ಇಷ್ಟವಾಗಲಿಲ್ಲ ಎನ್ನುವವರೆಗೆ ಹಲವು ವಿಷಯಗಳನ್ನು ಸಮಾಜ ಜಾಲಗಳಲ್ಲಿನ ನಮ್ಮ ಸ್ನೇಹಿತರೊಡನೆ ಹಂಚಿಕೊಳ್ಳಲು ಈ ಪರಿಕಲ್ಪನೆ ಸಹಾಯ ಮಾಡುತ್ತದೆ.

ಮುಂದೆ ಯಾವ ಪುಸ್ತಕ ಓದಬಹುದು ಎಂದು ನಮ್ಮ ಸ್ನೇಹಿತರಿಂದ ತಿಳಿದುಕೊಳ್ಳಲೂ ಸೋಶಿಯಲ್ ರೀಡಿಂಗ್ ಅಭ್ಯಾಸ ನೆರವಾಗಬಲ್ಲದು.

ಶುಕ್ರವಾರ, ಫೆಬ್ರವರಿ 21, 2014

ನಾವು, ನಮ್ಮ ತಂತ್ರಾಂಶ ಮತ್ತು ಬಳಕೆದಾರ

ಟಿ. ಜಿ. ಶ್ರೀನಿಧಿ

ನಾವು ಬರೆಯುವ ತಂತ್ರಾಂಶದ ಉದ್ದೇಶ ಏನೇ ಇರಬಹುದು, ಆದರೆ ಅದನ್ನು ಸಿದ್ಧಪಡಿಸುವುದರ ಹಿಂದೆ ತಂತ್ರಾಂಶದ ಬಳಕೆದಾರರಿಗೆ ಒಂದಲ್ಲ ಒಂದು ರೀತಿಯಲ್ಲಿ ನೆರವಾಗುವ ಸದುದ್ದೇಶವಂತೂ ಇರುತ್ತದೆ ಎನ್ನಬಹುದು (ಇತರರಿಗೆ ತೊಂದರೆಮಾಡುವ ವೈರಸ್‌ನಂತಹ ಕುತಂತ್ರಾಂಶಗಳ ಮಾತು ಇಲ್ಲಿ ಬೇಡ; ಅಂತಹ ತಂತ್ರಾಂಶಗಳ ರಚನೆ ತಪ್ಪು ಮಾತ್ರವೇ ಅಲ್ಲ, ಅಪರಾಧವೂ ಹೌದು!).

ಬಳಕೆದಾರರಿಗೆ ಉಪಯುಕ್ತವಾಗುವಂತಹ ತಂತ್ರಾಂಶ ಸಿದ್ಧಪಡಿಸುವಲ್ಲಿ ಅನೇಕ ಹೆಜ್ಜೆಗಳಿವೆ: ತಂತ್ರಾಂಶದ ಅಗತ್ಯಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು, ಆ ಅಗತ್ಯಗಳಿಗೆ ತಕ್ಕಂತೆ ಕ್ರಮವಿಧಿಗಳನ್ನು (ಪ್ರೋಗ್ರಾಮ್) ರಚಿಸುವುದು, ಹಾಗೆ ರಚಿಸಿದ ಕ್ರಮವಿಧಿಗಳಲ್ಲಿ ಯಾವುದೇ ತಪ್ಪುಗಳಿಲ್ಲದಂತೆ ನೋಡಿಕೊಳ್ಳುವುದು, ತಂತ್ರಾಂಶದ ಒಟ್ಟಾರೆ ಕಾರ್ಯವಿಧಾನ ಸಮರ್ಪಕವಾಗಿದೆಯೇ ಎಂದು ಪರೀಕ್ಷಿಸುವುದು - ಹೀಗೆ.

ಈ ಎಲ್ಲ ಹೆಜ್ಜೆಗಳಷ್ಟೇ ಮಹತ್ವದ ಇನ್ನೊಂದು ಭಾಗ, ಬಳಕೆದಾರನ ಮಟ್ಟಿಗೆ ತಂತ್ರಾಂಶದ ಬಳಕೆ ಸರಾಗವಾಗಿರುವಂತೆ ನೋಡಿಕೊಳ್ಳುವುದು. ನಾವು ರೂಪಿಸಿರುವ ತಂತ್ರಾಂಶ ಎಷ್ಟೇ ಸಮರ್ಥವಾಗಿದ್ದರೂ ಬಳಕೆದಾರರ ಮಟ್ಟಿಗೆ ಉಪಯೋಗಿಸಲು ಕಷ್ಟವಾಗುವಂತಿದ್ದರೆ ಆ ತಂತ್ರಾಂಶವನ್ನು ರೂಪಿಸಿದ ಮೂಲ ಉದ್ದೇಶವೇ ವಿಫಲವಾದಂತೆ.

ಹಾಗಾಗಿ ತಂತ್ರಾಂಶದ ತಾಂತ್ರಿಕ ವಿವರಗಳಷ್ಟೇ ಅದರ ಅಂತರ ಸಂಪರ್ಕ ಸಾಧನ (ಯೂಸರ್ ಇಂಟರ್‌ಫೇಸ್, ಯುಐ) ಕೂಡ ಮುಖ್ಯವಾಗುತ್ತದೆ. ಈ ಅಂತರ ಸಂಪರ್ಕ ಸಾಧನದ ವಿನ್ಯಾಸ (ಯುಐ ಡಿಸೈನ್), ಹಾಗಾಗಿಯೇ, ತಂತ್ರಾಂಶ ಅಭಿವೃದ್ಧಿಯ ಪ್ರಮುಖ ಭಾಗಗಳಲ್ಲೊಂದು.

ಭಾನುವಾರ, ಫೆಬ್ರವರಿ 16, 2014

ಡಾಟ್ ಕಾಮ್ ಕತೆಗೆ ಹೊಸದೊಂದು ತಿರುವು

ಟಿ. ಜಿ. ಶ್ರೀನಿಧಿ

ವಿಶ್ವವ್ಯಾಪಿ ಜಾಲ (ವರ್ಲ್ಡ್‌ವೈಡ್ ವೆಬ್) ನಮ್ಮ ಕಣ್ಣಮುಂದೆ ಮಾಹಿತಿಯ ಮಹಾಸಾಗರವನ್ನೇ ತಂದಿಟ್ಟಿದೆಯಲ್ಲ, ಅಷ್ಟೆಲ್ಲ ಮಾಹಿತಿ ನಮಗೆ ದೊರಕುವುದು ವೆಬ್‌ಸೈಟ್, ಅಂದರೆ ಜಾಲತಾಣಗಳ ಮೂಲಕ. ಈ ಜಾಲತಾಣಗಳನ್ನು ಬಹಳಷ್ಟು ಜನ ಗುರುತಿಸುವುದು ಡಾಟ್ ಕಾಮ್‌ಗಳೆಂದೇ.

'ಡಾಟ್ ಕಾಮ್' ಎನ್ನುವುದು ಜಾಲತಾಣಗಳ ಹೆಸರಿಗೆ ಪರ್ಯಾಯವಾಗಿ ಬೆಳೆದುಬಿಟ್ಟಿದ್ದರೂ ವಾಸ್ತವದಲ್ಲಿ ಅದು ಜಾಲತಾಣಗಳ ವಿಳಾಸದ ಒಂದು ಭಾಗವಷ್ಟೇ.

ವಿಶ್ವವ್ಯಾಪಿ ಜಾಲದಲ್ಲಿರುವ ಕೋಟ್ಯಂತರ ತಾಣಗಳನ್ನು ಪ್ರತ್ಯೇಕವಾಗಿ ಗುರುತಿಸುವ ವಿಳಾಸ - ಯೂನಿಫಾರ್ಮ್ ರಿಸೋರ್ಸ್ ಲೊಕೇಟರ್ (ಯುಆರ್‌ಎಲ್) - ಇರುತ್ತದಲ್ಲ, ಅದರ ಕೊನೆಯ ಭಾಗವನ್ನು ಜೆನೆರಿಕ್ ಟಾಪ್ ಲೆವೆಲ್ ಡೊಮೈನ್ (ಜಿಟಿಎಲ್‌ಡಿ) ಎಂದು ಕರೆಯುತ್ತಾರೆ.

ಡಾಟ್ ಕಾಮ್ ಎನ್ನುವುದು ಇಂತಹ ಜಿಟಿಎಲ್‌ಡಿಗಳಲ್ಲೊಂದು. ಡಾಟ್ ಕಾಮ್ ಅಲ್ಲದೆ .net, .org, .biz, .edu ಮುಂತಾದ ಇನ್ನೂ ಅನೇಕ ಜಿಟಿಎಲ್‌ಡಿಗಳು ಬಳಕೆಯಲ್ಲಿವೆ. ಇವಷ್ಟರ ಜೊತೆಗೆ ಜಾಲತಾಣ ಯಾವ ದೇಶದ್ದು ಎಂದು ಸೂಚಿಸುವ ಕಂಟ್ರಿ ಕೋಡ್ ಟಾಪ್ ಲೆವೆಲ್ ಡೊಮೈನ್(ಸಿಸಿಟಿಎಲ್‌ಡಿ)ಗಳೂ ಇವೆ - ಭಾರತಕ್ಕೆ .in, ಫ್ರಾನ್ಸಿನ ತಾಣಗಳಿಗೆ .fr, ಇಟಲಿಗೆ .it - ಹೀಗೆ.

ನಮ್ಮ ಜಾಲತಾಣದ ಹೆಸರು ಏನೇ ಇದ್ದರೂ ವಿಳಾಸದ ಕೊನೆಯ ಭಾಗಕ್ಕೆ ಮೇಲೆ ಹೇಳಿದ ಯಾವುದೋ ಒಂದು ವಿಸ್ತರಣೆಯನ್ನು ಬಳಸಬೇಕಾದ್ದು ಇಲ್ಲಿಯವರೆಗೂ ಅನಿವಾರ್ಯವಾಗಿತ್ತು. ಹಲವಾರು ವರ್ಷಗಳಿಂದ ಹೆಚ್ಚು ಬದಲಾವಣೆಗಳಿಲ್ಲದೆ ನಡೆದುಕೊಂಡುಬಂದಿದ್ದ ಈ ವ್ಯವಸ್ಥೆಗೆ ಇದೀಗ ಬದಲಾವಣೆಯ ಸಮಯ ಬಂದಿದೆ.

ಶುಕ್ರವಾರ, ಫೆಬ್ರವರಿ 7, 2014

ತಂತ್ರಾಂಶ ಮತ್ತು ತಪ್ಪು!

ಟಿ. ಜಿ. ಶ್ರೀನಿಧಿ

ತಂತ್ರಾಂಶಗಳ ತಯಾರಿ ಹೆಚ್ಚುತ್ತ ಹೋದಂತೆ ಅವುಗಳ ಬಳಕೆಯೂ ಹೆಚ್ಚುವುದು ಸಹಜ. ಹೀಗೆ ತಂತ್ರಾಂಶಗಳ ಬಳಕೆ ಎಲ್ಲ ಕ್ಷೇತ್ರಗಳಲ್ಲೂ ಹೆಚ್ಚುತ್ತಿದ್ದಂತೆ ಅವು ಮಾಡುವ ಕೆಲಸಗಳ ಪ್ರಮಾಣವೂ ಜಾಸ್ತಿಯಾಗುತ್ತದೆ.

ಈಗ ಆಗಿರುವುದೂ ಅದೇ. ಶಾಲೆಯ ಹೋಮ್‌ವರ್ಕ್‌ನಿಂದ ದೇಶದ ಸುರಕ್ಷತೆಯವರೆಗೆ, ಬ್ಯಾಂಕ್ ವ್ಯವಹಾರದಿಂದ ವೈಜ್ಞಾನಿಕ ಸಂಶೋಧನೆಯವರೆಗೆ ಅದೆಷ್ಟೋ ಕ್ಷೇತ್ರಗಳಲ್ಲಿ ಅದೆಷ್ಟೋ ಕೆಲಸಗಳಿಗಾಗಿ ತಂತ್ರಾಂಶಗಳು ಬಳಕೆಯಾಗುತ್ತವೆ. ಅನೇಕ ಕಡೆಗಳಲ್ಲಂತೂ ಕಂಪ್ಯೂಟರ್ ಇಲ್ಲದೆ ಕೆಲಸವೇ ನಡೆಯದ ಪರಿಸ್ಥಿತಿ ಬಂದುಬಿಟ್ಟಿದೆ; ಆನ್‌ಲೈನ್ ಬ್ಯಾಂಕಿಂಗ್ ಬೇಡ, ಮನಿಯಾರ್ಡರ್ ಕಳುಹಿಸುತ್ತೇನೆಂದರೂ ಪೋಸ್ಟ್ ಆಫೀಸಿನ ಕಂಪ್ಯೂಟರ್ ನೆಚ್ಚಿಕೊಳ್ಳಬೇಕಾದ ಕಾಲ ಇದು!

ಪರಿಸ್ಥಿತಿ ಹೀಗಿರುವಾಗ ನಾವು ಬಳಸುವ ತಂತ್ರಾಂಶಗಳು ಅತ್ಯಂತ ಕರಾರುವಾಕ್ಕಾಗಿ ಕೆಲಸಮಾಡಬೇಕಾದ್ದು ಅನಿವಾರ್ಯವಾಗಿಬಿಡುತ್ತದೆ. ಆದರೆ ತಂತ್ರಾಂಶ ಸಿದ್ಧಪಡಿಸುವವರೂ ಮನುಷ್ಯರೇ ತಾನೆ, ಹಾಗಾಗಿ ಹಲವಾರು ಬಾರಿ ಅವರ ಕೆಲಸದಲ್ಲಿ ತಪ್ಪುಗಳು ನುಸುಳಿಬಿಡುತ್ತವೆ. ಉದಾಹರಣೆಗೆ ಒಂದು + ಒಂದು = ಎರಡು ಎನ್ನುವ ಬದಲು ಒಂದು + ಒಂದು = ಹನ್ನೊಂದು ಎಂದು ತಂತ್ರಾಂಶದಲ್ಲಿ ಹೇಳಿದ್ದರೆ ನಾವು ಒಂದು + ಒಂದು ಎಷ್ಟು ಎಂದಾಗ ಉತ್ತರ ಹನ್ನೊಂದು ಎಂದೇ ಬರುತ್ತದೆ.

ಕಂಪ್ಯೂಟರಿನ ಲೆಕ್ಕಾಚಾರದಲ್ಲಿ ಆಗುವ ಎಡವಟ್ಟುಗಳಿಗೆ ಇಂತಹ ತಪ್ಪುಗಳೇ ಕಾರಣ. ಕ್ರಮವಿಧಿಗಳನ್ನು ಸರಿಯಾಗಿ ಪರೀಕ್ಷಿಸದೆ ತಂತ್ರಾಂಶ ರೂಪಿಸಿ ಬಳಕೆದಾರರಿಗೆ ಕೊಟ್ಟಾಗ ಇಂತಹ ತಪ್ಪುಗಳು ಅವರಿಗೆ ಸಾಕಷ್ಟು ತೊಂದರೆಕೊಡುತ್ತವೆ, ಹೆಚ್ಚೂಕಡಿಮೆ ತಿಗಣೆಕಾಟದ ಹಾಗೆ. ಇದರಿಂದಲೇ ಈ ತಪ್ಪುಗಳನ್ನು 'ಬಗ್' ಎಂದು ಕರೆಯುತ್ತಾರೆ.

ಗುರುವಾರ, ಫೆಬ್ರವರಿ 6, 2014

ಆ ಕಸ ಇ ಕಸ!

ಟಿ. ಜಿ. ಶ್ರೀನಿಧಿ

ತಂತ್ರಜ್ಞಾನ ನಮ್ಮ ಬದುಕನ್ನು ಆವರಿಸಿಕೊಂಡಿರುವ ಪರಿ ಎಂಥದ್ದು ಎಂದು ತಿಳಿದುಕೊಳ್ಳಬೇಕಾದರೆ ಒಮ್ಮೆ ನಮ್ಮ ಸುತ್ತಮುತ್ತ ಕಣ್ಣಾಡಿಸಿದರೆ ಸಾಕು. ದಿವಾನಖಾನೆಯಲ್ಲಿ ಎಲ್‌ಇಡಿ ಟಿವಿ, ಒಳಗಿನ ಕೋಣೆಯಲ್ಲೊಂದು ಡೆಸ್ಕ್‌ಟಾಪ್ ಕಂಪ್ಯೂಟರ್, ಮೂಲೆಯಲ್ಲೊಂದು ಲ್ಯಾಪ್‌ಟಾಪ್, ಪಕ್ಕದಲ್ಲಿ ಟ್ಯಾಬ್ಲೆಟ್ಟು-ಇಬುಕ್ ರೀಡರ್, ಜೇಬಿನೊಳಗೊಂದು ಮೊಬೈಲು - ನಮ್ಮ ಮನೆಗಳಲ್ಲಿರುವ ಇಲೆಕ್ಟ್ರಾನಿಕ್ ಉಪಕರಣಗಳು ಒಂದೇ ಎರಡೇ!   

ಇದನ್ನೆಲ್ಲ ಒಂದುಸಾರಿ ಕೊಂಡು ತಂದಿಟ್ಟುಕೊಂಡರೆ ಮುಗಿಯುವುದಿಲ್ಲವಲ್ಲ, ಆರುತಿಂಗಳಿಗೋ ವರ್ಷಕ್ಕೋ ಎರಡುವರ್ಷಕ್ಕೋ ಮನೆಯಲ್ಲಿರುವ ಇಲೆಕ್ಟ್ರಾನಿಕ್ ಉಪಕರಣಗಳೆಲ್ಲ ಬದಲಾಗುವುದು ಈಗ ಟ್ರೆಂಡ್ ಅನಿಸಿಕೊಂಡುಬಿಟ್ಟಿದೆ.  ಇರುವುದರ ಜಾಗಕ್ಕೆ ಹೊಸದು ಬರುವುದಷ್ಟೇ ಅಲ್ಲ, ಹೊಸ ಉಪಕರಣಗಳೂ ಆಗಿಂದಾಗ್ಗೆ ಮನೆಯೊಳಕ್ಕೆ ಬರುತ್ತಲೇ ಇರುತ್ತವೆ.

ಹೊಸ ಉಪಕರಣ ಬಂದಮೇಲೆ ಹಳೆಯದಕ್ಕೇನು ಕೆಲಸ? ಎಕ್ಸ್‌ಚೇಂಜೋ, ಸೆಕೆಂಡ್ ಹ್ಯಾಂಡ್ ಮಾರಾಟವೋ ಯಾವುದೋ ಒಂದು ಮಾರ್ಗದಲ್ಲಿ ಹಳೆಯದನ್ನು ನಾವು ಮನೆಯಿಂದ ಆಚೆಹಾಕುತ್ತೇವೆ. ಉಪಯೋಗಿಸಿ ಬೇಸರವಾದ, ಆದರೆ 'ರೀಸೇಲ್ ವ್ಯಾಲ್ಯೂ' ಇಲ್ಲದ ಉಪಕರಣಗಳನ್ನು ಬೇರೆಯವರಿಗೆ ಕೊಟ್ಟು ಕೈತೊಳೆದುಕೊಳ್ಳುವುದೂ ಉಂಟು. ಹಾಗೊಮ್ಮೆ ಯಾವುದಾದರೂ ಹಳೆಯ ಉಪಕರಣ ಮನೆಯಲ್ಲೇ ಉಳಿದುಕೊಂಡರೂ ಶೀಘ್ರದಲ್ಲೇ ಅದಕ್ಕೆ ಗೇಟ್‌ಪಾಸ್ ಸಿಗುವುದು ಗ್ಯಾರಂಟಿ! 

ಹೇಗಾದರೂ ಮಾಡಿ ಹಳೆಯ ಇಲೆಕ್ಟ್ರಾನಿಕ್ ಉಪಕರಣಗಳನ್ನು ಒಮ್ಮೆ ಮನೆಯಿಂದಾಚೆಗೆ ಕಳುಹಿಸುತ್ತಿದ್ದಂತೆ ನಮಗೆ ನೆಮ್ಮದಿ. ಬೇಡದ ವಸ್ತು ಆಚೆಹೋದ ಸಮಾಧಾನ ಅಷ್ಟೇ ಅಲ್ಲ, ಔಟ್‌ಡೇಟೆಡ್ ವಸ್ತು ಮನೆಯಲ್ಲಿದ್ದದ್ದನ್ನು ನೋಡಿದರೆ ಯಾರೇನು ಅಂದುಕೊಳ್ಳುವರೋ ಎಂಬ ಅಂಜಿಕೆಯಿಂದಲೂ ಮುಕ್ತಿ ಸಿಗುತ್ತದಲ್ಲ! 

ಅಷ್ಟೇ ಅಲ್ಲ, ನಾವು ಉಪಯೋಗಿಸುತ್ತಿರುವ ಉಪಕರಣಗಳ ಕೆಟ್ಟುಹೋದ ಬಿಡಿಭಾಗಗಳೂ ಮನೆಯಿಂದಾಚೆ ಹೋಗಲೇಬೇಕು. ಇನ್ನು ಕೆಲಸಮಾಡದ ಬಲ್ಬು - ಟ್ಯೂಬ್‌ಲೈಟು, ಬೇಡದ ಸಿಡಿ - ಡಿವಿಡಿ ಇತ್ಯಾದಿ ಸಣ್ಣಪುಟ್ಟ ವಸ್ತುಗಳಂತೂ ಆಗಿಂದಾಗ್ಗೆ ಕಸದಬುಟ್ಟಿ ಸೇರುತ್ತಲೇ ಇರುತ್ತವೆ.

ಆದರೆ ಹೀಗೆ ಮನೆಯಿಂದಾಚೆ ಹೋಗುವ ಇಲೆಕ್ಟ್ರಾನಿಕ್ ಉತ್ಪನ್ನಗಳು ಮುಂದೆ ಏನಾಗುತ್ತವೆ ಎನ್ನುವುದರ ಬಗ್ಗೆ ನಾವು ಯಾರೂ ತಲೆಕೆಡಿಸಿಕೊಳ್ಳುವುದೇ ಇಲ್ಲ. ನನ್ನ-ನಿಮ್ಮಂತಹ ಸಾಮಾನ್ಯರಷ್ಟೇ ಅಲ್ಲ, ಇಂತಹ ಉಪಕರಣಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಸುವ-ಬಿಸಾಡುವ ಸಂಸ್ಥೆಗಳೂ ಈ ಬಗ್ಗೆ ವಹಿಸುವ ಕಾಳಜಿ ಅಷ್ಟಕ್ಕಷ್ಟೇ.

ಹೀಗಾಗಿಯೇ ಇಂತಹ ಹಳೆಯ, ನಿರುಪಯುಕ್ತ ಇಲೆಕ್ಟ್ರಾನಿಕ್ ಉತ್ಪನ್ನಗಳು ಈಗೊಂದು ದೊಡ್ಡ ಸಮಸ್ಯೆಯಾಗಿ ಬೆಳೆದುನಿಂತಿವೆ: ಅನೇಕರ ಆರೋಗ್ಯ ಹಾಳುಮಾಡುತ್ತಿವೆ, ನಮ್ಮ ಭೂಮಿಗೇ ದೊಡ್ಡದೊಂದು ತಲೆನೋವು ತಂದಿಟ್ಟಿವೆ.

ಇದು ಇಲೆಕ್ಟ್ರಾನಿಕ್ ವೇಸ್ಟ್, ಅಂದರೆ ಇ-ಕಸದ ಕತೆ.

ಶುಕ್ರವಾರ, ಜನವರಿ 31, 2014

ಸಾಫ್ಟ್‌ವೇರ್ ಜಗದ ಜೀವನಚಕ್ರ

ಟಿ. ಜಿ. ಶ್ರೀನಿಧಿ

ತಂತ್ರಾಂಶ ರಚನೆಯಲ್ಲಿ ಪಾಲಿಸಬೇಕಾದ ಕ್ರಮ, ನಿಯಮ-ನಿಬಂಧನೆಗಳ ರೂಪುರೇಷೆಯನ್ನು ಸಾಫ್ಟ್‌ವೇರ್ ಇಂಜಿನಿಯರಿಂಗ್ ಪರಿಕಲ್ಪನೆ ಮುಂದಿಡುತ್ತದೇನೋ ಸರಿ, ಆದರೆ ಆ ನಿಯಮ ನಿಬಂಧನೆಗಳು ಯಾವುವು, ಹಾಗೂ ಅವನ್ನು ಪಾಲಿಸುವುದು ಹೇಗೆ?

ಈ ಉದ್ದೇಶಕ್ಕಾಗಿ ಸಾಫ್ಟ್‌ವೇರ್ ಜಗತ್ತಿನಲ್ಲಿ ಹಲವು ಕಾರ್ಯವಿಧಾನ ಮಾದರಿಗಳನ್ನು (ಪ್ರಾಸೆಸ್ ಮಾಡೆಲ್) ಬಳಸಲಾಗುತ್ತದೆ. ಈ ಮಾದರಿಗಳು ತಂತ್ರಾಂಶ ರಚನೆಯ ವಿವಿಧ ಹಂತಗಳನ್ನು ಹಾಗೂ ಅಂತಹ ಪ್ರತಿಯೊಂದು ಹಂತದಲ್ಲೂ ಕೈಗೊಳ್ಳಬೇಕಾದ ನಿರ್ದಿಷ್ಟ ಚಟುವಟಿಕೆಗಳನ್ನು ನಮ್ಮ ಮುಂದಿಡುತ್ತವೆ. ಸರಳವಾಗಿ ಹೇಳುವುದಾದರೆ ತಂತ್ರಾಂಶ ರಚನೆ ಪ್ರಕ್ರಿಯೆಯ ಜೀವನ ಚಕ್ರವನ್ನೇ ನಿರ್ದೇಶಿಸುತ್ತವೆ.

ಮೂಲತಃ ಈ ಎಲ್ಲ ಮಾದರಿಗಳಲ್ಲೂ ಸಾಫ್ಟ್‌ವೇರ್ ಇಂಜಿನಿಯರಿಂಗ್ ಪರಿಕಲ್ಪನೆಯಲ್ಲಿರುವ ಮೂಲ ಹೆಜ್ಜೆಗಳೇ (ರಿಕ್ವೈರ್‌ಮೆಂಟ್ಸ್ ಅನಾಲಿಸಿಸ್, ಡಿಸೈನ್, ಡೆವೆಲಪ್‌ಮೆಂಟ್, ಟೆಸ್ಟಿಂಗ್ ಇತ್ಯಾದಿ) ಬಳಕೆಯಾಗುತ್ತವೆ. ಆದರೆ ಪ್ರತಿಯೊಂದು ಮಾದರಿಯಲ್ಲೂ ಈ ಹೆಜ್ಜೆಗಳ ಅನುಷ್ಠಾನ ಮಾತ್ರ ಭಿನ್ನವಾಗಿರುತ್ತದೆ.

ಒಂದು ಉದಾಹರಣೆ ನೋಡೋಣ.

ಬುಧವಾರ, ಜನವರಿ 29, 2014

ಸೋಶಿಯಲ್ ನೆಟ್‌ವರ್ಕ್‌ನಲ್ಲಿ ನೆಟ್ಟಗಿರೋಣ!

ಟಿ. ಜಿ. ಶ್ರೀನಿಧಿ


ಸೋಶಿಯಲ್ ನೆಟ್‌ವರ್ಕ್ ಅಥವಾ ಸಮಾಜಜಾಲಗಳು ಯಾರಿಗೆ ತಾನೆ ಗೊತ್ತಿಲ್ಲ? ಪುಟ್ಟಮಕ್ಕಳಿಂದ ಅಜ್ಜಿತಾತನವರೆಗೆ ಎಲ್ಲರೂ ಇಂದು ಫೇಸ್‌ಬುಕ್, ಟ್ವಿಟ್ಟರ್ ಮುಂತಾದ ಸಮಾಜಜಾಲಗಳಲ್ಲಿ ಕಾಣಸಿಗುತ್ತಾರೆ. ಚಾಟಿಂಗ್, ಫೋಟೋ-ವೀಡಿಯೋ ಹಂಚಿಕೆ, ಮಾಹಿತಿ ವಿತರಣೆ ಇವೆಲ್ಲ ಈ ತಾಣಗಳ ಮುಖ್ಯ ಉಪಯೋಗ.

ಸಮಾಜಜಾಲಗಳಿಂದ ಇನ್ನೂ ಬೇಕಾದಷ್ಟು ಪ್ರಯೋಜನಗಳಿವೆ. ಹೊಸಬರ ಪರಿಚಯ ಮಾಡಿಕೊಂಡು ನಮ್ಮ ನೆಟ್‌ವರ್ಕ್ ವಿಸ್ತರಿಸಿಕೊಳ್ಳುವುದು ಇಂತಹ ಪ್ರಯೋಜನಗಳಲ್ಲೊಂದು. ಲಿಂಕ್ಡ್‌ಇನ್‌ನಂತಹ ತಾಣಗಳಲ್ಲಿ ರೂಪುಗೊಳ್ಳುವ ಇಂತಹ ನೆಟ್‌ವರ್ಕ್ ನಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ನೆರವು ನೀಡಬಲ್ಲದು. ಇದಲ್ಲದೆ ನಮ್ಮ ಪ್ರಶ್ನೆಗಳಿಗೆ ಉತ್ತರ ಹುಡುಕುವುದರಿಂದ ಪ್ರಾರಂಭಿಸಿ ಯಾವುದೋ ಕೆಲಸಕ್ಕೆ ಅಗತ್ಯವಾದ ಮಾಹಿತಿ ಅಥವಾ ನೆರವು ಪಡೆದುಕೊಳ್ಳುವವರೆಗೆ ಅನೇಕ ಕೆಲಸಗಳಲ್ಲಿ ಸಮಾಜಜಾಲಗಳು ನೆರವಾಗುತ್ತವೆ. ನಮ್ಮ ಬಿಸಿನೆಸ್ ಬೆಳವಣಿಗೆಗೆ - ನಮ್ಮ ಗ್ರಾಹಕರೊಡನೆ ಸಂಪರ್ಕ ಬೆಳೆಸಿಕೊಳ್ಳುವುದಕ್ಕೂ ಸಮಾಜಜಾಲಗಳನ್ನು ಬಳಸಿಕೊಳ್ಳಬಹುದು. ಸಮಾಜಜಾಲಗಳನ್ನು ಸೂಕ್ತವಾಗಿ ಬಳಸಿಕೊಂಡರೆ ಹಣಕಾಸಿನ ಲಾಭ ಮಾಡಿಕೊಳ್ಳುವುದೂ ಸಾಧ್ಯ.

ಅಷ್ಟೇ ಏಕೆ, ಹೊಸ ವಿಷಯಗಳ ಹಾಗೂ ಹಳೆಯ ವಿಷಯದ ಹೊಸ ಆಯಾಮಗಳನ್ನು ಪರಿಚಯಿಸಿಕೊಳ್ಳಲೂ ಸಮಾಜಜಾಲಗಳು ಸಹಾಯಮಾಡುತ್ತವೆ. ನೂರೆಂಟು ವಿಷಯಗಳ ಬಗ್ಗೆ ಆರೋಗ್ಯಕರ ಚರ್ಚೆ ಕೂಡ ಇಲ್ಲಿ ಸಾಧ್ಯ. ಅದೆಷ್ಟೋ ಸಂದರ್ಭಗಳಲ್ಲಿ ಸುದ್ದಿಗಳು ಬೇರೆಲ್ಲ ಮಾಧ್ಯಮಗಳಿಗೆ ಮೊದಲು ಸಮಾಜಜಾಲಗಳಲ್ಲೇ ಕಾಣಿಸಿಕೊಳ್ಳುವುದೂ ಉಂಟು.

ಹೀಗಿದ್ದರೂ ನಮ್ಮಂತಹ ಅದೆಷ್ಟೋ ಬಳಕೆದಾರರ ಪಾಲಿಗೆ ಸಮಾಜಜಾಲಗಳು ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವ ವೇದಿಕೆಗಳಾಗಿಯೇ ಮುಂದುವರೆದಿವೆ. ಗೆಳೆಯರೊಂದಿಗೆ ಸದಾಕಾಲ ಸಂಪರ್ಕದಲ್ಲಿರಲು, ಹೊಸಹೊಸ ಜನರನ್ನು ಪರಿಚಯ ಮಾಡಿಕೊಳ್ಳಲು, ನಮ್ಮ ಚಟುವಟಿಕೆಗಳ ಬಗೆಗೆ ಮಿತ್ರರಿಗೆಲ್ಲ ಹೇಳಲು, ಛಾಯಾಚಿತ್ರ-ವೀಡಿಯೋಗಳನ್ನು ಹಂಚಿಕೊಳ್ಳಲು, ಪಠ್ಯ-ಧ್ವನಿ-ವೀಡಿಯೋ ರೂಪದಲ್ಲಿ ಚಾಟ್ ಮಾಡಲು ಈ ತಾಣಗಳು ನೆರವಾಗುತ್ತಿವೆ.

ಈ ಸಹಾಯದ ಬೆನ್ನಹಿಂದೆಯೇ ಅವು ನಮ್ಮ ಮೇಲೊಂದು ಮಹತ್ವದ ಜವಾಬ್ದಾರಿಯನ್ನೂ ಹೊರೆಸುತ್ತಿವೆ. ಸಮಾಜಜಾಲಗಳಲ್ಲಿ ಇಷ್ಟೆಲ್ಲ ಬಗೆಯ ವೈಯಕ್ತಿಕ ಮಾಹಿತಿ ಹಂಚಿಕೊಳ್ಳುತ್ತೇವಲ್ಲ, ಅದರಮೇಲೆ ಒಂದಷ್ಟು ಮಟ್ಟದ ಸ್ವಯಂನಿಯಂತ್ರಣ ಇಟ್ಟುಕೊಳ್ಳಬೇಕಾದ್ದೇ ಈ ಜವಾಬ್ದಾರಿ.

ಶುಕ್ರವಾರ, ಜನವರಿ 24, 2014

ಆಪರೇಟಿಂಗ್ ಸಿಸ್ಟಂ

ಟಿ. ಜಿ. ಶ್ರೀನಿಧಿ

ಪ್ರೋಗ್ರಾಮ್ ಬರೆದು ಕಂಪ್ಯೂಟರಿಗೆ ಪಾಠಹೇಳುವುದೇನೋ ಸರಿ, ಆದರೆ ನಾವು ಪ್ರೋಗ್ರಾಮ್ ಬರೆಯಲಿಕ್ಕಾದರೂ ಒಂದು ಕಂಪ್ಯೂಟರ್ ಬೇಕಲ್ಲ. ಮೊದಲಿಗೆ ಅದು ಕೆಲಸಮಾಡುತ್ತಿದ್ದರೆ ತಾನೇ ನಾವು ಪ್ರೋಗ್ರಾಮ್ ಬರೆಯುವುದು?

ನಿಜ, ಯಾವ ಕಂಪ್ಯೂಟರೇ ಆದರೂ ಅದು ನಾವು ಹೇಳಿದ ಮಾತು ಕೇಳುವಂತೆ ಮಾಡುವ ವ್ಯವಸ್ಥೆಯೊಂದು ಬೇಕೇಬೇಕು. ಕೆಲವರು ತಮ್ಮ ಪ್ರೋಗ್ರಾಮುಗಳ ಮೂಲಕ ಅಂತಹ ವ್ಯವಸ್ಥೆಯನ್ನೇ ರೂಪಿಸುತ್ತಾರೆ ಬಿಡಿ, ಆದರೆ ಮಿಕ್ಕವರ ಕ್ರಮವಿಧಿಗಳು ಕೆಲಸಮಾಡಲು ಇಂತಹುದೊಂದು ವ್ಯವಸ್ಥೆ ಅತ್ಯಗತ್ಯ.

ಅಂತಹ ವ್ಯವಸ್ಥೆಯೇ ಆಪರೇಟಿಂಗ್ ಸಿಸ್ಟಂ, ಅಂದರೆ ಕಾರ್ಯಾಚರಣ ವ್ಯವಸ್ಥೆ. ಕಂಪ್ಯೂಟರಿನ ಪ್ರಾಥಮಿಕ ಚಟುವಟಿಕೆಗಳನ್ನು ನಿಯಂತ್ರಿಸುವ, ಅದರ ವಿವಿಧ ಸೌಲಭ್ಯಗಳನ್ನು ಬಳಸಿಕೊಳ್ಳಲು ನಮಗೆ ಸಹಾಯಮಾಡುವ, ನಮ್ಮ ಕ್ರಮವಿಧಿಗಳು ಕೆಲಸಮಾಡಲು ಅನುವುಮಾಡಿಕೊಡುವ ಈ ವ್ಯವಸ್ಥೆಯೂ ಒಂದು ತಂತ್ರಾಂಶವೇ. ನಮಗೆಲ್ಲ ಚಿರಪರಿಚಿತವಾದ ಮೈಕ್ರೋಸಾಫ್ಟ್ ವಿಂಡೋಸ್, ಲಿನಕ್ಸ್ ಮುಂತಾದವು ಕಾರ್ಯಾಚರಣ ವ್ಯವಸ್ಥೆಗೆ ಕೆಲ ಉದಾಹರಣೆಗಳು.

ಶುಕ್ರವಾರ, ಜನವರಿ 17, 2014

ಕಣ್ಣಮುಂದಿನ ಅದ್ಭುತಲೋಕ: ಆಗ್‌ಮೆಂಟೆಡ್ ರಿಯಾಲಿಟಿ

ಟಿ. ಜಿ. ಶ್ರೀನಿಧಿ
ಇದು 'ಸ್ವ-ತಂತ್ರ' ಅಂಕಣದ ಐವತ್ತನೇ ಸಂಚಿಕೆ. ಇಂದು ಪ್ರಕಟವಾಗಿರುವ ಅಂಕಣಬರಹದ ವಿಷಯವನ್ನು ಅಂತರಜಾಲದಲ್ಲಿ ನಡೆದ ಸ್ಪರ್ಧೆಯೊಂದರ ಮೂಲಕ ಓದುಗರೇ ಸೂಚಿಸಿರುವುದು ವಿಶೇಷ. ಈ ವಿಷಯ ಸೂಚಿಸಿ ಇಜ್ಞಾನ ಡಾಟ್ ಕಾಮ್‌ನಿಂದ ಬಹುಮಾನ ಗೆದ್ದಿರುವ ಶ್ರೀ ಅಶ್ವತ್ಥ್ ಸಂಪಾಜೆಯವರಿಗೆ ಅಭಿನಂದನೆಗಳು.
ಅಪರಿಚಿತ ಸ್ಥಳದಲ್ಲಿ ಹೋಟಲೊಂದರ ಮುಂದೆ ನಿಂತಾಗ ನಮ್ಮ ಕಣ್ಣಿಗೆ ಅದರ ಬೋರ್ಡಿನ ಬದಲು ಅಲ್ಲಿ ದೊರಕುವ ಊಟೋಪಚಾರದ ವಿಮರ್ಶೆ ಕಂಡರೆ ಹೇಗಿರುತ್ತದೆ? ಒಳಕ್ಕೆ ಹೋಗಿಬಂದು ಆಮೇಲೆ ಊಟ ಕೆಟ್ಟದಾಗಿತ್ತೆಂದು ಬೈದುಕೊಳ್ಳುವುದಾದರೂ ತಪ್ಪುತ್ತದಲ್ಲ! ಅದೇರೀತಿ ಪಠ್ಯಪುಸ್ತಕ ಓದಿ ಬೇಜಾರಾದಾಗ ಪುಟದಲ್ಲಿನ ಅಕ್ಷರಗಳ ಬದಲು ಪಾಠಕ್ಕೆ ಸಂಬಂಧಪಟ್ಟ ವೀಡಿಯೋ ಕಾಣಿಸಿಕೊಂಡರೆ? ಇತಿಹಾಸದ್ದೋ ವಿಜ್ಞಾನದ್ದೋ ಪುಟಗಟ್ಟಲೆ ಶುಷ್ಕ ನಿರೂಪಣೆ ಓದುವ ಬದಲು ಅದೆಲ್ಲ ಚಿತ್ರ ಮತ್ತು ಧ್ವನಿಯ ರೂಪದಲ್ಲಿ ಮೂಡಿಬರುವಂತಿದ್ದರೆ?

ಇದೊಳ್ಳೆ ಸಿನಿಮಾ ಕತೆ ಆಯಿತಲ್ಲ ಎನ್ನಬೇಡಿ. ಮೇಲ್ನೋಟಕ್ಕೆ ಕಾಲ್ಪನಿಕ ಕತೆಯಂತೆ ತೋರುವ ಈ ವಿಷಯಗಳೆಲ್ಲ ಈಗಾಗಲೇ ಸಾಧ್ಯವಾಗಿವೆ. ಇದನ್ನೆಲ್ಲ ಸಾಧ್ಯವಾಗಿಸಿರುವ ತಂತ್ರಜ್ಞಾನದ ಹೆಸರು ಆಗ್‌ಮೆಂಟೆಡ್ ರಿಯಾಲಿಟಿ, ಹ್ರಸ್ವವಾಗಿ 'ಎಆರ್'.

ತಂತ್ರಜ್ಞಾನದ ನೆರವಿನಿಂದ ನಮ್ಮ ಕಣ್ಣಮುಂದಿನ ವಾಸ್ತವ ದೃಶ್ಯಕ್ಕೆ ವರ್ಚುಯಲ್ ಅಂಶಗಳನ್ನು ಹೆಚ್ಚುವರಿಯಾಗಿ ಸೇರಿಸುವುದು ಈ 'ಎಆರ್'ನ ಹೆಚ್ಚುಗಾರಿಕೆ.

ಶುಕ್ರವಾರ, ಜನವರಿ 10, 2014

ಸಾಫ್ಟ್‌ವೇರ್ ಇಂಜಿನಿಯರಿಂಗ್

ಟಿ. ಜಿ. ಶ್ರೀನಿಧಿ

ಎರಡು ಸಂಖ್ಯೆಗಳನ್ನು ಕೂಡುವುದಕ್ಕೋ ಅವುಗಳ ಪೈಕಿ ದೊಡ್ಡ ಸಂಖ್ಯೆಯನ್ನು ಗುರುತಿಸುವುದಕ್ಕೋ ಪ್ರೋಗ್ರಾಮ್, ಅಂದರೆ ಕ್ರಮವಿಧಿ ಬರೆಯುವುದು ಸುಲಭದ ಕೆಲಸ. ಕೊಂಚ ತರಬೇತಿಯೊಡನೆ ಇಷ್ಟು ಕೆಲಸವನ್ನು ಯಾರು ಬೇಕಿದ್ದರೂ ಮಾಡಬಹುದು.

ಆದರೆ ಎಲ್ಲ ಕ್ರಮವಿಧಿಗಳೂ ಇಷ್ಟು ಸರಳವಾಗಿರುವುದಿಲ್ಲ. ಬ್ಯಾಂಕಿನ ಹಣಕಾಸು ವ್ಯವಹಾರಗಳನ್ನು ನಿರ್ವಹಿಸುವಾಗ, ಕಚೇರಿಯಲ್ಲಿ ಸಂಬಳ ವಿತರಿಸುವಾಗ, ಆಸ್ಪತ್ರೆಯಲ್ಲಿ ವೈದ್ಯಕೀಯ ಯಂತ್ರೋಪಕರಣಗಳನ್ನು ನಿರ್ವಹಿಸುವಾಗ, ವಿಮಾನ ಹಾರಾಟವನ್ನು ನಿಯಂತ್ರಿಸುವಾಗೆಲ್ಲ ಬಹಳ ಸಂಕೀರ್ಣವಾದ ತಂತ್ರಾಂಶಗಳು ಬಳಕೆಯಾಗುತ್ತವೆ.

ಆ ತಂತ್ರಾಂಶಗಳಲ್ಲಿ ಬಹಳ ದೊಡ್ಡ ಸಂಖ್ಯೆಯ ಕ್ರಮವಿಧಿಗಳು ಅಲ್ಪಸ್ವಲ್ಪ ತಪ್ಪಿಗೂ ಜಾಗವಿಲ್ಲದಂತೆ ಒಟ್ಟಾಗಿ ಕೆಲಸಮಾಡಬೇಕಾದ್ದು ಅನಿವಾರ್ಯ. ವಿಮಾನ ಹಾರಾಟದ ಸಂದರ್ಭದಲ್ಲಿ ಅದನ್ನು ನಿಯಂತ್ರಿಸುವ ತಂತ್ರಾಂಶವೇನಾದರೂ ತಪ್ಪುಮಾಡಿದರೆ ಪರಿಣಾಮ ಏನಾಗಬಹುದು?

ಸಾಫ್ಟ್‌ವೇರ್ ಡೆವೆಲಪ್‌ಮೆಂಟ್ (ತಂತ್ರಾಂಶ ಅಭಿವೃದ್ಧಿ) ಕೆಲಸ ಮಹತ್ವ ಪಡೆದುಕೊಳ್ಳುವುದು ಇದೇ ಕಾರಣಕ್ಕಾಗಿ. ತಂತ್ರಾಂಶ ಅಭಿವೃದ್ಧಿಯೆಂದರೆ ಕ್ರಮವಿಧಿ ರಚನೆಯಷ್ಟೇ ಅಲ್ಲ ಎನ್ನುವುದೂ ಇದರಿಂದಾಗಿಯೇ.

'ಸಾಫ್ಟ್‌ವೇರ್ ಇಂಜಿನಿಯರಿಂಗ್'ನ ಪರಿಕಲ್ಪನೆ ಹುಟ್ಟುವುದೇ ಇಲ್ಲಿ.

ಗುರುವಾರ, ಜನವರಿ 9, 2014

ಪಾಠದಲ್ಲಿ ಆಟದ ವಿನೋದ ಕಾಣಬೇಕಾದರೆ...

ವಿಜ್ಞಾನದ ಕಲಿಕೆಯಲ್ಲಿ ಆಟಿಕೆಗಳನ್ನು ಬಳಸಬಹುದೆ? ಒಂದಷ್ಟು ಉದಾಹರಣೆಗಳ ಮೂಲಕ 'ಹೌದು!' ಎನ್ನುವ ಪುಸ್ತಕವೊಂದು ಇದೀಗ ಪ್ರಕಟವಾಗಿದೆ. ಶ್ರೀ ನಾರಾಯಣ ಬಾಬಾನಗರ ಅವರ 'ಆಹಾ! ಆಟಿಕೆಗಳು' ಕೃತಿಗೆ ಹಿರಿಯ ವಿಜ್ಞಾನ ಸಂವಹನಕಾರ ಪ್ರೊ. ಎಮ್. ಆರ್. ನಾಗರಾಜುರವರು ಬರೆದಿರುವ ಬೆನ್ನುಡಿ ಇಲ್ಲಿದೆ.

ಪಾಠ ಮತ್ತು ಆಟ ಎರಡೂ ತದ್ವಿರುದ್ಧ ಪದಗಳಾಗಿರುವುದು ಶಿಕ್ಷಣ ವ್ಯವಸ್ಥೆಯ ದುರಂತ. ಪಾಠದಲ್ಲಿ ಆಟದ ವಿನೋದ ಕಾಣಬೇಕಾದರೆ ಆಟಿಕೆಗಳು ಬೋಧನಾ ಸಾಮಗ್ರಿಗಳಾಗಬೇಕು. ಹಾಗೆಯೇ ಬೋಧನಾ ಸಾಮಗ್ರಿಗಳನ್ನು ಮಾರ್ಪಡಿಸಿ ಆಟಿಕೆಗಳಾಗಿಸಬೇಕು. ಆಗ ಆಟದ ಆನಂದ ಕಲಿಕೆಯ ಆನಂದ ಕೂಡಿ ಆಯಾಸವಿಲ್ಲದ ಸಂವಹನಕ್ಕೆ ದಾರಿಮಾಡಿಕೊಡುತ್ತದೆ.

ಹಾಗಾದರೆ ಮಾಡಬೇಕಾದ್ದಾದರೂ ಏನು? ಆಟಿಕೆಗಳನ್ನು ಗಮನಿಸುತ್ತಾ ಏಕ ಪರಿಕಲ್ಪನೆ ಲಕ್ಷಿತವಾಗುವಂತೆ ಅದನ್ನು ಮಾರ್ಪಡಿಸುವುದು. ಹಾಗೆಯೇ ಬೋಧನಾ ಸಾಮಗ್ರಿಗಳನ್ನು ಸ್ಥಳೀಯ ಲಭ್ಯ ಪರ್ಯಾಯಗಳೊಂದಿಗೆ ರೂಪಿಸಿ ಅದಕ್ಕೆ ರಂಜನೆಯ ಲೇಪವನ್ನು ಕೊಡುವುದು. ಈ ಕೆಲಸ, ಹೇಳಿದಷ್ಟು ಸುಲಭವಲ್ಲ. ಹಾಗೆ ಮಾಡಿ ಯಶಸ್ವಿಯಾದ ಮಾದರಿಗಳು ಇಲ್ಲಿವೆ. ಸಮಾನಾಂತರವಾಗಿ, ಸಾಹಸ ಕೈಗೊಳ್ಳುವವರಿಗೆ ಇವು ಪೂರಕ ಸಾಮಗ್ರಿಯಾಗಬಲ್ಲವು. ಇಂತಹ ಮಾದರಿಗಳ, ಆಟಿಕೆಗಳ ಬೆಳವಣಿಗೆಗೆ ಈ ಪುಸ್ತಕ ವೇಗವರ್ಧಕವಾಗಬಲ್ಲದು.

ಅರ್ಥಪೂರ್ಣ ವಿಜ್ಞಾನದ ಕಲಿಕೆಗೆ... ಆಹಾ! ಆಟಿಕೆಗಳು
ಲೇಖಕರು: ನಾರಾಯಣ ಬಾಬಾನಗರ
೫೨ ಪುಟಗಳು, ಬೆಲೆ ರೂ. ೪೦/-
ಪ್ರಕಾಶಕರು: ಬೆನಕ ಬುಕ್ಸ್ ಬ್ಯಾಂಕ್

ಶುಕ್ರವಾರ, ಜನವರಿ 3, 2014

ಆಲ್ಗರಿದಮ್ ಅಂದರೇನು?

ಟಿ. ಜಿ. ಶ್ರೀನಿಧಿ

ಕಂಪ್ಯೂಟರ್ ವಿಜ್ಞಾನದ ಪ್ರಾಥಮಿಕ ಪಾಠಗಳನ್ನು ಕಲಿಯಲು ಹೊರಟವರು ಮೊದಲಿಗೆ ಕೇಳುವ ಹೆಸರುಗಳಲ್ಲಿ 'ಆಲ್ಗರಿದಮ್' ಪ್ರಮುಖವಾದದ್ದು. ಇದನ್ನು ಕನ್ನಡದಲ್ಲಿ 'ಕ್ರಮಾವಳಿ' ಎನ್ನೋಣ.

ನಾವೀಗ ಯಾವುದೋ ಒಂದು ಪ್ರೋಗ್ರಾಮ್ (ಕ್ರಮವಿಧಿ) ಬರೆಯುತ್ತಿದ್ದೇವೆ ಎನ್ನುವುದಾದರೆ ಅದರಲ್ಲಿ ಪ್ರತಿಯೊಂದು ಹೆಜ್ಜೆಯನ್ನೂ ಪ್ರತ್ಯೇಕವಾಗಿ ವಿವರಿಸಬೇಕು ತಾನೆ, ಅಷ್ಟೆಲ್ಲ ಹೆಜ್ಜೆಗಳ ಸರಣಿಯೇ ಆಲ್ಗರಿದಮ್, ಅಂದರೆ ಕ್ರಮಾವಳಿ. ಆಲ್ಗರಿದಮ್ ಎನ್ನುವ ಪದ ಕ್ರಿ.ಶ. ೮೨೫ರ ಸುಮಾರಿಗೆ ಪರ್ಶಿಯಾದಲ್ಲಿದ್ದ ಅಲ್-ಖೋವಾರಿಜ್ಮಿ (al Khowarizmi) ಎನ್ನುವ ಗಣಿತಜ್ಞನ ಹೆಸರಿನಿಂದ ರೂಪುಗೊಂಡಿತು ಎಂದು ಇತಿಹಾಸ ಹೇಳುತ್ತದೆ.

ಕಂಪ್ಯೂಟರಿಗೆ ನೀಡುವ ಇನ್‌ಪುಟ್ ಅನ್ನು ಸೂಕ್ತವಾಗಿ ಸಂಸ್ಕರಿಸಿ ನಮಗೆ ಬೇಕಾದ ರೂಪದ ಔಟ್‌ಪುಟ್ ನೀಡುವಂತೆ ನಿರ್ದೇಶಿಸುವುದು ಆಲ್ಗರಿದಮ್, ಅಂದರೆ ಕ್ರಮಾವಳಿಯ ಕೆಲಸ. ಇದು ಪ್ರೋಗ್ರಾಮಿಂಗ್ ಕ್ಷೇತ್ರದ ಪ್ರಾಥಮಿಕ ಪಾಠ ಎಂದರೂ ಸರಿಯೇ.

ಕ್ರಮಾವಳಿಯ ಪ್ರಾಮುಖ್ಯ ಏನು ಎಂದು ವಿವರಿಸುವುದು ಬಹಳ ಸುಲಭ. ಏಕೆಂದರೆ ನಮ್ಮ ಬದುಕಿನ ಬಹುತೇಕ ಕೆಲಸಗಳೆಲ್ಲ ಒಂದಲ್ಲ ಒಂದು ಕ್ರಮಾವಳಿಯನ್ನು ಆಧರಿಸಿರುತ್ತವೆ. ಮನೆಗೆ ಇನ್ಸ್‌ಟಂಟ್ ನೂಡಲ್ಸ್ ತಂದಿರುತ್ತೇವಲ್ಲ, ಆ ಪೊಟ್ಟಣದ ಹಿಂಭಾಗ ನೋಡಿ: ಎಷ್ಟು ನೀರು ಹಾಕಬೇಕು, ಎಷ್ಟು ಹೊತ್ತು ಬೇಯಿಸಬೇಕು, ಮಸಾಲೆ ಯಾವಾಗ ಹಾಕಬೇಕು ಎಂಬ ಪ್ರತಿಯೊಂದು ವಿವರವನ್ನೂ ಅದರಲ್ಲಿ ಒಂದಾದಮೇಲೆ ಒಂದರಂತೆ ಪಟ್ಟಿಮಾಡಿರುತ್ತಾರೆ.
badge