ವಿಜ್ಞಾನ ಸಂವಹನ, ಅದರಲ್ಲೂ ಮೌಖಿಕ ರೂಪದ ವಿಜ್ಞಾನ ಸಂವಹನವನ್ನು ತಮ್ಮ ಬದುಕಿನ ಗುರಿಯಾಗಿಸಿಕೊಂಡ ಅಪರೂಪದ ವಿದ್ವಾಂಸರು ಪ್ರೊ. ಎಂ. ಆರ್. ನಾಗರಾಜು. ವಿಜ್ಞಾನ ಸಂವಹನದಲ್ಲಿ ಸಾಹಿತ್ಯದ ಸ್ಪರ್ಶವಿರಬೇಕು ಎಂದು ನಂಬಿರುವ ಕೆಲವೇ ಲೇಖಕರಲ್ಲಿ ಅವರೂ ಒಬ್ಬರು. ತಮ್ಮ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಮೇಷ್ಟರಾದ ಎಂಆರ್ಎನ್ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಪ್ರಕಟಣೆ 'ಬಾಲವಿಜ್ಞಾನ'ದ ಮೂಲಕ ರಾಜ್ಯದ ಮೂಲೆಮೂಲೆಗಳ ವಿದ್ಯಾರ್ಥಿಗಳನ್ನು ತಲುಪಿದ್ದಾರೆ. ೧೫,೦೦೦ಕ್ಕೂ ಹೆಚ್ಚು ಮಕ್ಕಳು ಕೇಳಿದ ಪ್ರಶ್ನೆಗಳಿಗೆ ವೈಯಕ್ತಿಕ ಉತ್ತರಗಳನ್ನು ಕಳುಹಿಸಿಕೊಟ್ಟಿರುವ ಅಪರೂಪದ ಸಾಧನೆ ಅವರದ್ದು. 'ತಾಪ ಪ್ರತಾಪ', 'ರಸಸ್ವಾರಸ್ಯ' ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿರುವ ಎಂಆರ್ಎನ್ ಪತ್ರಿಕಾ ಲೇಖನಗಳ ಮೂಲಕವೂ ಕನ್ನಡದ ಓದುಗರಿಗೆ ಪರಿಚಿತರಾಗಿದ್ದಾರೆ. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ...ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ವಿಜ್ಞಾನ ಮತ್ತು ಪ್ರಕೃತಿ ಕುರಿತ ಅದಮ್ಯ ಕುತೂಹಲವನ್ನು ಜನರಲ್ಲಿ ರೂಪಿಸಿ ತಣಿಸುವುದು ಅಗತ್ಯ ಎಂದು ಭಾವಿಸಿ ನಾನು ವಿಜ್ಞಾನ ಸಂವಹನಕಾರನಾಗಿರಬೇಕು. ಕಲಿತ ವಿಜ್ಞಾನಕ್ಕೂ ಪರಿಚಿತ ಅನುಭವಕ್ಕೂ ಸೇತುವೆ ನಿರ್ಮಿಸಿ ಕೊಟ್ಟಾಗ ಆನಂದಿಸಿ ನನ್ನ ಕೆಲಸ ಮುಂದುವರೆಸಲು ಪ್ರೇರೇಪಿಸುತ್ತಿರುವ ಅಭಿಮಾನಿಗಳು ಬರೆಸುತ್ತಿರುವದೂ ನನ್ನ ಸಂವಹನ ಮುಂದುವರಿಕೆಗೆ ಕಾರಣ. ತಾನು ಕಲಿತದ್ದನ್ನು, ಸಂವಹನ ಮಾಡಿದ್ದನ್ನು ಜನ ಪ್ರೋತ್ಸಾಹಿಸಿದಾಗ ಅದು ಸಹಜ.
ಸಮಾಜದ - ಸಾಮಾಜಿಕರ ಶುದ್ಧೀಕರಣ ವಿಜ್ಞಾನದ ಸಾಮಾಜೀಕರಣದಿಂದ ಮಾತ್ರ ಸಾಧ್ಯ ಎಂದು ಈಗಲೂ ನನ್ನ ಬಲವಾದ ನಂಬಿಕೆ. ಉಳಿದ ಕಾರಣಗಳೂ ಇರಬಹುದು. ಅದನ್ನೆಲ್ಲ ಹೇಳತೊಡಗಿದರೆ ಅದೇ ಒಂದು ಪುಸ್ತಕ ಆದೀತು.