ಮಂಗಳವಾರ, ಡಿಸೆಂಬರ್ 31, 2013

ಹೊಸವರ್ಷಕ್ಕೊಂದು ಹೊಸ ತಾಣ

ಶಾಪಿಂಗ್ - ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗ. ಇಷ್ಟವೋ ಕಷ್ಟವೋ, ಅದು ಅನಿವಾರ್ಯವೂ ಹೌದು.

ಅನಿವಾರ್ಯ ಎಂದಮಾತ್ರಕ್ಕೆ ಶಾಪಿಂಗ್ ಸುಲಭದ ಕೆಲಸವೇನೂ ಅಲ್ಲ. ಯಾವುದೇ ವಸ್ತುವಿಗಾಗಿ ಶಾಪಿಂಗ್ ಮಾಡಲು ಹೊರಟಾಗ ಮಾರುಕಟ್ಟೆಯಲ್ಲಿ ಕಾಣಸಿಗುವ ಆಯ್ಕೆಗಳು ನಮ್ಮ ಮನಸಿನಲ್ಲಿ ಹುಟ್ಟುಹಾಕುವ ಗೊಂದಲವೇನು ಸಾಮಾನ್ಯದ್ದೇ?

ಇಂತಹ ಗೊಂದಲದ ಕೆಲವು ಕ್ಷಣಗಳಲ್ಲಿ ನಿಮಗೆ ನೆರವಾಗುವ ಸಣ್ಣದೊಂದು ಪ್ರಯತ್ನವನ್ನು ಇಜ್ಞಾನ ಡಾಟ್ ಕಾಮ್ ಮಾಡುತ್ತಿದೆ. ೨೦೧೪ರ ಮೊದಲ ದಿನ, ಹೊಸವರ್ಷದ ಶುಭಾಶಯಗಳೊಂದಿಗೆ, 'ಇಜ್ಞಾನ ಶಾಪಿಂಗ್ ಸಂಗಾತಿ'ಯ ಪ್ರಾಯೋಗಿಕ ಆವೃತ್ತಿ ಇಗೊಳ್ಳಿ ನಿಮ್ಮ ಮುಂದಿದೆ.

ಸೋಮವಾರ, ಡಿಸೆಂಬರ್ 30, 2013

ನಿಮ್ಮ ಅನಿಸಿಕೆ ನಮ್ಮ ಬಹುಮಾನ!

ಪ್ರತಿ ವಾರದ ಕೊನೆಗೆ ಇಜ್ಞಾನ ಡಾಟ್ ಕಾಮ್‌ನಲ್ಲಿ ಪ್ರಕಟವಾಗುವ ತಂತ್ರಜ್ಞಾನ ಲೇಖನಗಳನ್ನು ನೀವು ಗಮನಿಸಿದ್ದೀರಿ. ಪ್ರತಿ ಶುಕ್ರವಾರ ಉದಯವಾಣಿ ಮಂಗಳೂರು ಆವೃತ್ತಿಯ 'ಯುವ ಸಂಪದ' ಪುರವಣಿಯಲ್ಲಿ, 'ಸ್ವ-ತಂತ್ರ' ಎನ್ನುವ ಹೆಸರಿನಲ್ಲಿ ಮೂಡಿಬರುವ ಈ ಅಂಕಣದ ಐವತ್ತನೆಯ ಕಂತು ಇನ್ನು ಕೆಲವೇ ವಾರಗಳಲ್ಲಿ ಪ್ರಕಟವಾಗಲಿದೆ.

ಈ ಸರಣಿಯ ಐವತ್ತನೇ ಕಂತಿನಲ್ಲಿ ನೀವು ಯಾವ ವಿಷಯದ ಕುರಿತು ಓದಲು ಇಷ್ಟಪಡುತ್ತೀರಿ?

ನಿಮ್ಮ ಅನಿಸಿಕೆಯನ್ನು ಜನವರಿ ೫, ೨೦೧೪ರೊಳಗೆ ನಮಗೆ ತಿಳಿಸಿ.

ಶುಕ್ರವಾರ, ಡಿಸೆಂಬರ್ 27, 2013

ದಾರಿತೋರುವ ತಂತ್ರಜ್ಞಾನ ಜಿಪಿಎಸ್

ಟಿ. ಜಿ. ಶ್ರೀನಿಧಿ

ಹೀಗೊಂದು ಸನ್ನಿವೇಶ ಕಲ್ಪಿಸಿಕೊಳ್ಳಿ: ಹವಾನಿಯಂತ್ರಿತ ರೈಲಿನಲ್ಲಿ, ಮೇಲಿನ ಬರ್ತ್‌ನಲ್ಲಿ ಮಲಗಿ ಪ್ರಯಾಣಿಸುತ್ತಿದ್ದೀರಿ. ರೈಲು ಮಧ್ಯರಾತ್ರಿ ಯಾವುದೋ ನಿಲ್ದಾಣದಲ್ಲಿ ನಿಲ್ಲುತ್ತದೆ, ನಿಮಗೆ ಎಚ್ಚರವೂ ಆಗುತ್ತದೆ. ಇದ್ಯಾವ ನಿಲ್ದಾಣವೋ ತಿಳಿದುಕೊಳ್ಳುವ ಕುತೂಹಲ ಒಂದುಕಡೆ, ಬೆಚ್ಚನೆಯ ಹೊದಿಕೆ ತೆಗೆದು ಇಳಿಯಲು ಸೋಮಾರಿತನ ಇನ್ನೊಂದು ಕಡೆ.

ಕಡೆಗೆ ಸೋಮಾರಿತನವೇ ಗೆದ್ದಾಗ ಮೊಬೈಲ್ ಫೋನ್ ಕೈಗೆತ್ತಿಕೊಂಡು ಗೂಗಲ್ ಮ್ಯಾಪ್ಸ್ ತೆರೆಯುತ್ತೇವೆ, ನಾನೆಲ್ಲಿದ್ದೇನೆ ಎಂದು ಅದನ್ನು ಕೇಳುತ್ತಿದ್ದಂತೆ ಫೋನಿನಲ್ಲಿರುವ ಭೂಪಟದಲ್ಲಿ ನಾವು ಇರುವ ಊರು ಕಾಣಿಸಿಕೊಳ್ಳುತ್ತದೆ!

ಇದನ್ನು ಸಾಧ್ಯವಾಗಿಸುವುದು ಜಿಪಿಎಸ್, ಅಂದರೆ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ. ಅಪರಿಚಿತ ಜಾಗಗಳಲ್ಲಿದ್ದಾಗ ಆ ಸ್ಥಳದ ಕುರಿತ ಮಾಹಿತಿಯನ್ನು ಪಡೆದುಕೊಳ್ಳಲಷ್ಟೇ ಅಲ್ಲ, ವಾಹನ ಚಲಾಯಿಸುವಾಗ ನಮಗೆ ಮಾರ್ಗದರ್ಶನ ನೀಡುವ ಯಂತ್ರಗಳಲ್ಲಿ ಬಳಕೆಯಾಗುವುದೂ ಇದೇ ತಂತ್ರಜ್ಞಾನ. ಬಹುತೇಕ ಮೊಬೈಲ್ ಫೋನುಗಳಲ್ಲಿ ಲಭ್ಯವಿರುವ ಸೌಲಭ್ಯವಂತೂ ಈ ತಂತ್ರಜ್ಞಾನವನ್ನು ನಮ್ಮ ಅಂಗೈಗೇ ತಂದಿಟ್ಟುಬಿಟ್ಟಿದೆ!

ಅಂದಹಾಗೆ ನಾವೆಲ್ಲಿದ್ದೇವೆ ಎಂದು ಈ ತಂತ್ರಜ್ಞಾನಕ್ಕೆ ಗೊತ್ತಾಗುವುದು ಹೇಗೆ?

ಮಂಗಳವಾರ, ಡಿಸೆಂಬರ್ 24, 2013

ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ -ಅಂದು, ಇಂದು, ಮುಂದು

ಡಿಸೆಂಬರ್ ೨೧, ೨೦೧೩ರಂದು ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ೨೦೧೩ರ 'ಕನ್ನಡ ಮತ್ತು ಅವಕಾಶ' ಗೋಷ್ಠಿಯಲ್ಲಿ ಡಾ. ಯು. ಬಿ. ಪವನಜ ಮಾಡಿದ ಭಾಷಣದ ಪೂರ್ಣಪಾಠ.

ಡಾ| ಯು. ಬಿ. ಪವನಜ

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಎಂಬುದು ಆರಂಭದ ದಿನಗಳಲ್ಲಿ ಗಣಕಗಳಲ್ಲಿ ಕನ್ನಡದ ಬಳಕೆಯಿಂದ ಪ್ರಾರಂಭವಾಯಿತು. ಇದು  ಸುಮಾರು ಮೂರು ದಶಕಗಳ ಹಿಂದಿನ ಕಥೆ. ಪದಸಂಸ್ಕರಣವು ಇದರಲ್ಲಿಯ ಮೊದಲನೆಯದು. ಪತ್ರ, ಲೇಖನ, ದಾಖಲೆಗಳನ್ನು ಬರೆಯಲು, ತಿದ್ದಲು ಇವುಗಳ ಬಳಕೆ ಆಗುತ್ತಿದೆ. ಪದಸಂಸ್ಕರಣದ ಮುಂದುವರೆದ ಸೌಕರ್ಯವೇ ಡಿ.ಟಿ.ಪಿ. ಅಂದರೆ ಪಠ್ಯದ ಜೊತೆ ಚಿತ್ರಗಳನ್ನು ಸೇರಿಸಿ ಪುಟವಿನ್ಯಾಸ ಮಾಡುವುದು. ಈಗ ಎಲ್ಲ ಪುಸ್ತಕಗಳು ಮತ್ತು ಪತ್ರಿಕೆಗಳು ಇದೇ ವಿಧಾನದಿಂದ ತಯಾರಾಗುತ್ತಿವೆ.

ಕೆ.ಪಿ. ರಾವ್ ಮತ್ತು ಅವರ ಸೇಡಿಯಾಪು ತಂತ್ರಾಂಶ ಕನ್ನಡ ಭಾಷೆ ಮಾತ್ರವಲ್ಲ, ಸಮಗ್ರ ಭಾರತೀಯ ಭಾಷೆಗಳನ್ನೇ ಗಣಕದಲ್ಲಿ ಅಳವಡಿಸುವ ವಿಷಯದಲ್ಲಿ ಎಲ್ಲರಿಂದ ಮೊದಲು ಆಲೋಚಿಸಿ ಕಾರ್ಯಗತರಾದವರು ನಮ್ಮ ಕನ್ನಡಿಗರೇ ಆದ ಶ್ರೀ ಕೆ. ಪಿ. ರಾವ್ ಅವರು. ೭೦ರ ದಶಕದಲ್ಲಿ ಅವರು ಮುಂಬಯಿಯ ಟಾಟಾ ಪ್ರೆಸ್‌ನಲ್ಲಿ ತಂತ್ರಜ್ಞರಾಗಿದ್ದಾಗ ಪ್ರಪ್ರಥಮ ಬಾರಿಗೆ ಫೋಟೋಟೈಪ್‌ಸೆಟ್ಟಿಂಗ್ ಯಂತ್ರದಲ್ಲಿ ಭಾರತೀಯ ಭಾಷೆಗಳನ್ನು ಅಳವಡಿಸುವ ಕೆಲಸವನ್ನು ಪ್ರಾರಂಭಿಸಿದರು. ಇವರು ಆ ಕಾಲಕ್ಕೆ ಲಭ್ಯವಿದ್ದ ಸೀಮಿತ ತಂತ್ರಜ್ಞಾನಗಳನ್ನೇ ಬಳಸಿ ಸುಂದರವಾದ ಕಂಪ್ಯೂಟರ್ ಫಾಂಟ್‌ಗಳನ್ನು (ಅಕ್ಷರಶೈಲಿಗಳು) ಕನ್ನಡ ಮತ್ತು ಇತರೆ ಭಾಷೆಗಳಿಗೆ ನಿರ್ಮಿಸಿದರು. ಅಂತಹ ಕನ್ನಡ ಲಿಪಿಯ ಫಾಂಟ್‌ನ್ನು ಸುಲಭವಾಗಿ ಕಂಪ್ಯೂಟರ್‌ನಲ್ಲಿ ಮೂಡಿಸಲು ಸರಳ ಹಾಗೂ ತರ್ಕಬದ್ಧವಾದ ಕೀಲಿಮಣೆ (ಕೀಬೋರ್ಡ್) ವಿನ್ಯಾಸವನ್ನು ರಚಿಸಿದ ಕೀರ್ತಿ ಶ್ರೀ ಕೆ.ಪಿ ರಾವ್‌ರವರಿಗೆ ಸಲ್ಲುತ್ತದೆ. ಭಾರತೀಯ ಭಾಷೆಗಳಿಗೆ ಮೊದಲ ಬಾರಿಗೆ ಧ್ವನ್ಯಾತ್ಮಕ ಕೀಲಿಮಣೆಯ ವಿನ್ಯಾಸ ಮಾಡಿದವರು ಇವರೇ.

ಸೋಮವಾರ, ಡಿಸೆಂಬರ್ 23, 2013

ಕಳೆದ ಹಾರ್ಡ್‌ಡಿಸ್ಕ್ ನೆಪದಲ್ಲಿ ಕಾಣದ ದುಡ್ಡಿನ ಕುರಿತು...

ಈಗ ಒಂದಷ್ಟು ದಿನಗಳಿಂದ ಇಂಟರ್‌ನೆಟ್‌ ತುಂಬೆಲ್ಲ ಬಿಟ್‌ಕಾಯಿನ್‌ನದೇ ಸುದ್ದಿ. ಬಿಟ್‌ಕಾಯಿನ್ ಹಾಗಂತೆ ಹೀಗಂತೆ ಚಿನ್ನಕ್ಕಿಂತ ದುಬಾರಿಯಂತೆ... ಅಂತೆಕಂತೆಗಳಿಗೆ ಕೊನೆಯೇ ಇಲ್ಲ. ಈ ವಿಶಿಷ್ಟ ಪರಿಕಲ್ಪನೆಯನ್ನು ಕನ್ನಡದ ಓದುಗರಿಗೆ ವಿವರವಾಗಿ ಪರಿಚಯಿಸುವ ಪ್ರಯತ್ನವನ್ನು ಇಜ್ಞಾನ ಡಾಟ್ ಕಾಮ್ ಮಾಡಿದೆ. ಓದಿ, ಪ್ರತಿಕ್ರಿಯೆ ನೀಡಿ. ಈ ಲೇಖನವನ್ನು ಡಿಸೆಂಬರ್ ೨೨, ೨೦೧೩ರ 'ಸಾಪ್ತಾಹಿಕ ಸಂಪದ'ದಲ್ಲಿ ಪ್ರಕಟಿಸಿದ ಉದಯವಾಣಿಗೆ ನಮ್ಮ ಕೃತಜ್ಞತೆಗಳು. 

ಟಿ. ಜಿ. ಶ್ರೀನಿಧಿ


ಹಳೆಯ, ಕೆಟ್ಟುಹೋದ ಕಂಪ್ಯೂಟರಿನಿಂದ ತೆಗೆದಿಟ್ಟ ಹಾರ್ಡ್‌ಡಿಸ್ಕ್ ಬೆಲೆ ಎಷ್ಟಿರಬಹುದು? ಗುಜರಿ ಅಂಗಡಿಯವನು ಅಬ್ಬಬ್ಬಾ ಎಂದರೆ ಐನೂರು ರೂಪಾಯಿಗೆ ಕೊಳ್ಳಬಹುದೇನೋ.

ಬ್ರಿಟನ್ನಿನ ಜೇಮ್ಸ್ ಹವೆಲ್ಸ್ ಎಂಬಾತನಲ್ಲೂ ಇಂತಹುದೇ ಒಂದು ಹಾರ್ಡ್‌ಡಿಸ್ಕ್ ಇತ್ತು, ಬಹುಶಃ ಸುಮಾರು ಮೂರು-ನಾಲ್ಕು ವರ್ಷ ಹಳೆಯದು. ಹೀಗೆಯೇ ಒಂದು ದಿನ ಮನೆ ಸ್ವಚ್ಛಗೊಳಿಸುವಾಗ ಮತ್ತೆ ಕೈಗೆ ಸಿಕ್ಕ ಅದನ್ನು ಆತ ಸೀದಾ ಕಸದಬುಟ್ಟಿಗೆ ಸೇರಿಸಿದ. ನಂತರದ ದಿನಗಳಲ್ಲಿ ಅದು ಊರ ಕಸವೆಲ್ಲ ಸೇರುವ ಲ್ಯಾಂಡ್‌ಫಿಲ್ ಎಂಬ ಕಸಸಾಗರದೊಳಗೆ ಲೀನವಾಯಿತು. ಇದೆಲ್ಲ ಆಗಿ ಕೆಲವು ತಿಂಗಳು ಕಳೆದ ಮೇಲೆ ಜೇಮ್ಸ್‌ಗೆ ಜ್ಞಾನೋದಯವಾಗಿ ತಾನೆಂತಹ ಕೆಲಸಮಾಡಿಬಿಟ್ಟೆನಲ್ಲ ಎಂದು ಕೊರಗಲು ಶುರುಮಾಡಿದ.

ಬೇಡದ ಹಾರ್ಡ್ ಡಿಸ್ಕನ್ನು ಕಸಕ್ಕೆ ಹಾಕಿದ ಮೇಲೆ ಅದನ್ನು ನೆನಪಿಸಿಕೊಂಡು ಕೊರಗುವುದು ಯಾಕೆ? ಇಲ್ಲೇನೋ ವಿಚಿತ್ರವಿದೆ ಅನ್ನಿಸುತ್ತಿದೆ, ಅಲ್ಲವೆ?

ವಿಚಿತ್ರವೇನೂ ಇಲ್ಲ - ಜೇಮ್ಸ್ ಬಿಸಾಡಿದ ಹಾರ್ಡ್‌ಡಿಸ್ಕ್‌ನಲ್ಲಿ ಸುಮಾರು ಏಳೂವರೆಸಾವಿರ ಬಿಟ್‌ಕಾಯಿನ್‌ಗಳಿದ್ದವು, ಮತ್ತು ನವೆಂಬರ್ ೨೦೧೩ರ ಅಂತ್ಯದಲ್ಲಿ ಅವುಗಳ ಒಟ್ಟು ಮೌಲ್ಯ ಸುಮಾರು ಏಳೂವರೆ ಲಕ್ಷ ಅಮೆರಿಕನ್ ಡಾಲರುಗಳಷ್ಟಿತ್ತು. ರೂಪಾಯಿ ಲೆಕ್ಕದಲ್ಲಿ ೪೬ ಕೋಟಿಗಿಂತ ಹೆಚ್ಚು!

ಅರೆ, ಇಷ್ಟೆಲ್ಲ ಬೆಲೆಬಾಳುವ ವಸ್ತು ಹಳೆಯ ಹಾರ್ಡ್‌ಡಿಸ್ಕ್‌ನೊಳಗೇಕಿತ್ತು? ಇಷ್ಟಕ್ಕೂ ಈ ಬಿಟ್ ಕಾಯಿನ್ ಎಂದರೇನು?

ಭಾನುವಾರ, ಡಿಸೆಂಬರ್ 22, 2013

ಇಜ್ಞಾನ ವಿಶೇಷ: ನಾಗೇಶ ಹೆಗಡೆ ಹೇಳುತ್ತಾರೆ...

ಡಿಸೆಂಬರ್ ೨೧, ೨೦೧೩ರಂದು ನಡೆದ ಕನ್ನಡ ವಿಶ್ವವಿದ್ಯಾನಿಲಯದ ನುಡಿಹಬ್ಬದಲ್ಲಿ ನಾಗೇಶ ಹೆಗಡೆಯವರು ಮಾಡಿದ ಭಾಷಣದ ಪೂರ್ಣಪಾಠ 

ಕನ್ನಡ ವಿಶ್ವವಿದ್ಯಾಲಯದ ಆವರಣಕ್ಕೆ ಬಂದಾಗಲೆಲ್ಲ ನಮ್ಮ ಮನಸ್ಸು ಪ್ರಫುಲ್ಲಿತವಾಗುತ್ತದೆ. ಇಲ್ಲಿನ ಬಂಡೆಗಳು, ಇಲ್ಲಿ ಮರುಹುಟ್ಟು ಪಡೆದ ಸಸ್ಯಗಳು, ಇಲ್ಲಿನ ಸಹಜ ನೈಸರ್ಗಿಕ ಸೌಂದರ್ಯ ಜತೆಜತೆಗೆ ಕನ್ನಡದ ಕಲೆ, ಸಂಸ್ಕೃತಿ ಪರಂಪರೆಗಳನ್ನು ಬಿಂಬಿಸುವ ಶಿಲ್ಪ, ವಾಸ್ತುಶಿಲ್ಪ -ಹೀಗೆ ಇಲ್ಲಿನ ಒಂದೊಂದೂ ಕನ್ನಡ ಲೋಕದ ಅನನ್ಯತೆಯನ್ನು ಮೆರೆಯುವ ಪ್ರತೀಕಗಳಾಗಿವೆ.

ನಮ್ಮಲ್ಲಿ ಎರಡು ಕನ್ನಡ ನಾಡುಗಳಿವೆ: ಒಂದು ಬೆಂಗಳೂರಿನ ಬಹಿರ್ಮುಖಿ ಕನ್ನಡ: 'ವಿಜ್ಞಾನದ ರಾಜಧಾನಿ' ಎಂದು ಕರೆಸಿಕೊಂಡು ವಿಶ್ವವನ್ನು ಬೆಸೆಯುವ ಕನ್ನಡ. ಅದು ಕಾರ್ಪೊರೇಟ್ ವಲಯಗಳ ಥಳಕಿನ ಕನ್ನಡ. ರಾಷ್ಟ್ರದ ನಾಯಕರು, ವಿದೇಶೀ ಗಣ್ಯರು, ಉದ್ಯಮಿಗಳನ್ನು ಆಕರ್ಷಿಸುವ ಕನ್ನಡ. ಅದು ನಂದನ ನೀಲೇಕಣಿಯವರನ್ನು, ಶಕುಂತಲಾ ದೇವಿಯವರನ್ನು, ದೇವಿಪ್ರಸಾದ್ ಶೆಟ್ಟಿಯವರನ್ನು, ಮಾಲತಿ ಹೊಳ್ಳರನ್ನು, ಅನಿಲ್ ಕುಂಬ್ಳೆಗಳನ್ನು, ಉಲ್ಲಾಸ ಕಾರಂತರನ್ನು, ಸಿಎನ್‌ಆರ್ ರಾವ್, ಯುಆರ್ ರಾವ್‌ರವರನ್ನು, ನಾರಾಯಣ ಮೂರ್ತಿ- ಅನಂತಮೂರ್ತಿಯಂಥವರನ್ನು ನಾಡಿನಾಚೆ ಪ್ರದರ್ಶಿಸುವ ಕನ್ನಡ. ಅದು ಕ್ಯಾಲಿಫೋರ್ನಿಯಾಕ್ಕೆ ಕಂಪ್ಯೂಟರ್ ಪರಿಣತರನ್ನು, ಬಾಹ್ಯಾಕಾಶಕ್ಕೆ ಉಪಗ್ರಹಗಳನ್ನು, ಮಂಗಳಲೋಕಕ್ಕೆ ಪ್ರೋಬ್‌ಗಳನ್ನೂ ಕಳಿಸಬಲ್ಲ ಧೀರರ ಕನ್ನಡ. ಅದು ಹೆಬ್ಬಾಗಿಲ ಕನ್ನಡ.

ಇನ್ನೊಂದು ಒಳಮನೆಯ ಕನ್ನಡ, ಅಂತರ್ಮುಖಿ ಕನ್ನಡ. ಈ ಒಳಮನೆಯ ಕನ್ನಡ ಏನಿದೆ ಅದು ನಮ್ಮ ಸ್ವಂತದ ಕನ್ನಡ. ಅಲ್ಲಿ ಹಾಡು ಹಸೆಗಳಿವೆ. ಲಾವಣಿ ಪದ್ಯಗಳಿವೆ, ವಚನಗಳಿವೆ, ದಾಸರ ಪದಗಳಿವೆ, ಹಸೆ ಚಿತ್ರಗಳಿವೆ, ಕಾಷ್ಠಶಿಲ್ಪಗಳಿವೆ, ಗುಮಟೆ ಪಾಂಗುಗಳಿವೆ, ಪಣತ, ಹಗೇವು, ಬೀಸುಗಲ್ಲು, ಮನೆಮದ್ದುಗಳಿವೆ, ಕಜ್ಜಾಯ- ಕಷಾಯಗಳಿವೆ. ಅದು ರೈತ ಮಕ್ಕಳ, ಬುಡಕಟ್ಟಿನವರ ಖಾಸಾ ಕನ್ನಡ. ಅದು ಜಾಯಮಾನದ ಕನ್ನಡ.

ಈ ಒಳಮನೆಯ ಕನ್ನಡದ ಉಸ್ತುವಾರಿಯ, ಪರಿಚಾರಿಕೆಯ ಕೆಲಸ ಮಾಡುವ ಕನ್ನಡ ವಿಶ್ವವಿದ್ಯಾಲಯ ನಮ್ಮೆಲ್ಲರ ಹೆಮ್ಮೆಯ ಸಂಸ್ಥಾನವೆನಿಸಿದೆ. ಕನ್ನಡ ಜ್ಞಾನ ಮತ್ತು ಕೌಶಲ ಪರಂಪರೆಯನ್ನು ಕೆಡದಂತೆ ಕಾಯುವ ಉತ್ತಮ ಕೆಲಸವನ್ನು ಅದು ಮಾಡುತ್ತಿದೆ. ಜ್ಞಾನಪರಂಪರೆಯಲ್ಲಿ, ನಮ್ಮ ಜನಪದದಲ್ಲಿ ಅಂತಸ್ಥವಾಗಿದ್ದ ದೇಸೀ ವಿಜ್ಞಾನವನ್ನು ಹುಡುಕಿ ತೆಗೆಯುವ, ಸಂಸ್ಕರಿಸಿ ಮತ್ತೆ ಪುಟಕ್ಕಿಡುವ ಕೆಲಸವನ್ನು ಕನ್ನಡ ವಿಶ್ವವಿದ್ಯಾಲಯ ಹೊಸದಾಗಿ ಈ ವರ್ಷ ಆರಂಭಿಸುತ್ತಿದೆ.

ಅದು ಹೊಸದಾಗಿದ್ದರಿಂದ ನಾಲ್ಕು ಮಾತು ಹೇಳಬೇಕಾಗಿದೆ.

ಶನಿವಾರ, ಡಿಸೆಂಬರ್ 21, 2013

ಅಂತರಜಾಲದ ವೇಗದ ಲೆಕ್ಕ

ಟಿ. ಜಿ. ಶ್ರೀನಿಧಿ

ಅಂತರಜಾಲ ಲೋಕದಲ್ಲಿ ಈಗ ಎಲ್ಲೆಲ್ಲೂ ಬ್ರಾಡ್‌ಬ್ಯಾಂಡ್ ಸಂಪರ್ಕಗಳದ್ದೇ ರಾಜ್ಯಭಾರ. ಡಯಲ್ ಅಪ್ ಸಂಪರ್ಕಗಳ ಹೋಲಿಕೆಯಲ್ಲಿ ಅದ್ಭುತವೆನಿಸುವಂತಹ ವೇಗದ ಅಂತರಜಾಲ ಸಂಪರ್ಕ ಕಲ್ಪಿಸಿಕೊಟ್ಟಿದ್ದು ಬ್ರಾಡ್‌ಬ್ಯಾಂಡ್‌ನ ಹಿರಿಮೆ. ಈ ಬಗೆಯ ಸಂಪರ್ಕಗಳ ವೇಗ ಕಳೆದ ಕೆಲ ವರ್ಷಗಳಲ್ಲಿ ಒಂದೇ ಸಮನೆ ಹೆಚ್ಚುತ್ತಲೇ ಇದೆ. ಇನ್ನು ಈಗ ಮೊಬೈಲಿನಲ್ಲಿ ಥ್ರೀಜಿ ಸಂಪರ್ಕ ಬಂದಮೇಲಂತೂ ಬ್ರಾಡ್‌ಬ್ಯಾಂಡ್ ಸಂಪರ್ಕವೇ ನಿಧಾನವೇನೋ ಎನ್ನಿಸುವಂತಹ ವೇಗಗಳೂ ಸಾಧ್ಯವಾಗಿವೆ.

ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ನಿಯಮದನ್ವಯ ಯಾವುದೇ ಅಂತರಜಾಲ ಸಂಪರ್ಕ ಬ್ರಾಡ್‌ಬ್ಯಾಂಡ್ ಎಂದು ಕರೆಸಿಕೊಳ್ಳಲು ಪ್ರತಿ ಸೆಕೆಂಡಿಗೆ ಕನಿಷ್ಠ ೨೫೬ ಕೆಬಿಪಿಎಸ್ ಡೌನ್‌ಲೋಡ್ ವೇಗ ಹೊಂದಿರಬೇಕು, ನಿಜ. ಆದರೆ ಹತ್ತಾರು ಎಂಬಿಪಿಎಸ್ ವೇಗದ ಸಂಪರ್ಕಗಳೂ ಲಭ್ಯವಿವೆ.

ಕೆಬಿ ಅಂದರೆ ಕಿಲೋಬೈಟ್, ಎಂಬಿ ಅಂದರೆ ಮೆಗಾಬೈಟ್ ಎನ್ನುವ ಲೆಕ್ಕವನ್ನೆಲ್ಲ ಕೇಳಿದ್ದೇವೆ, ಆದರೆ ಇದೇನಿದು ಕೆಬಿಪಿಎಸ್-ಎಂಬಿಪಿಎಸ್?

ಶುಕ್ರವಾರ, ಡಿಸೆಂಬರ್ 13, 2013

ತರ್ಕದ ಹರಿವಿಗೆ ಫ್ಲೋಚಾರ್ಟ್ ನೆರವು

ಟಿ. ಜಿ. ಶ್ರೀನಿಧಿ

ಕಂಪ್ಯೂಟರಿಗೆ ಏನಾದರೂ ಕೆಲಸ ಮಾಡುವಂತೆ ಹೇಳಬೇಕಾದರೆ ಕ್ರಮವಿಧಿ (ಪ್ರೋಗ್ರಾಮ್) ಬರೆಯಬೇಕು ತಾನೆ, ಹಾಗೆ ಬರೆಯುವಾಗ ನಮ್ಮ ಅಗತ್ಯಗಳನ್ನೆಲ್ಲ ಒಂದೇ ಬಾರಿಗೆ ಕಂಪ್ಯೂಟರಿನ ಭಾಷೆಯಲ್ಲೇ ಹೇಳುವುದು ಕೊಂಚ ಕಷ್ಟವಾಗಬಹುದು. ಹಾಗಾಗಿ ಕ್ರಮವಿಧಿ ರಚನೆಯ ಮೊದಲು ಅದರ ವಿವರಗಳನ್ನೆಲ್ಲ ಒಂದು ಕಡೆ ಬರೆದು, ವಿಶ್ಲೇಷಿಸಿ ಆನಂತರವಷ್ಟೇ ಪ್ರೋಗ್ರಾಮಿಂಗ್ ಕೆಲಸ ಕೈಗೆತ್ತಿಕೊಳ್ಳುವುದು ಐಟಿ ಜಗತ್ತಿನ ಸಂಪ್ರದಾಯ.

ಈ ಕೆಲಸದಲ್ಲಿ ಹಲವಾರು ತಂತ್ರಗಳನ್ನು ಬಳಸಲಾಗುತ್ತದೆ. ನಾವು ಬರೆಯಲಿರುವ ಕ್ರಮವಿಧಿಯ ಪ್ರತಿಯೊಂದು ಹೆಜ್ಜೆಯನ್ನೂ ಗುರುತಿಸುವುದು, ಹಾಗೂ ಪ್ರತಿ ಹೆಜ್ಜೆಯಲ್ಲೂ ನಮ್ಮ ಕ್ರಮವಿಧಿ ಹೇಗೆ ವರ್ತಿಸಬೇಕು ಎಂದು ತೀರ್ಮಾನಿಸಿಕೊಳ್ಳಲು ನೆರವಾಗುವುದು ಈ ತಂತ್ರಗಳೆಲ್ಲವುದರ ಸಮಾನ ಗುರಿ. ಇಂತಹ ತಂತ್ರಗಳಲ್ಲೊಂದು ಫ್ಲೋಚಾರ್ಟ್, ಅಂದರೆ ಪ್ರವಾಹನಕ್ಷೆ.


ಮೊದಲಿಗೆ ಒಂದು ಉದಾಹರಣೆಯನ್ನು ಗಮನಿಸೋಣ. ಶಾಲೆಯಿಂದ ಮನೆಗೆ ಬಂದ ವಿದ್ಯಾರ್ಥಿ ಏನೆಲ್ಲ ಮಾಡುತ್ತಾನೆ? ತಿಂಡಿ ತಿಂದು ಸ್ವಲ್ಪಹೊತ್ತು ಆಟವಾಡಿ ಆನಂತರ ಓದಿಕೊಳ್ಳಲು ಕೂರುತ್ತಾನೆ, ಓದಿ ಮುಗಿದಮೇಲೆ ಊಟಮಾಡಿ ಟೀವಿ ನೋಡಿ ನಿದ್ರಿಸುತ್ತಾನೆ - ಅಷ್ಟೇ ತಾನೆ?

ವಿವರಣೆಯ ದೃಷ್ಟಿಯಿಂದ ಸರಿಯೇ ಇರಬಹುದು, ಆದರೆ ಇಂತಹ ವಿವರಣೆಗಳು ಕಂಪ್ಯೂಟರಿಗೆ ಅರ್ಥವಾಗುವುದಿಲ್ಲ. ಹಾಗಾದರೆ ಕಂಪ್ಯೂಟರಿಗೆ ಅರ್ಥವಾಗಲು ಇನ್ನೇನೆಲ್ಲ ವಿವರಗಳು ಬೇಕು?

ಶನಿವಾರ, ಡಿಸೆಂಬರ್ 7, 2013

ಇಜ್ಞಾನ ವಿಶೇಷ: ನದಿ ತಿರುವು

ನಾಗೇಶ ಹೆಗಡೆ


'ಎದುರಾಳಿಯನ್ನು ನೇರಾನೇರ ಕೆಡವಲು ಸಾಧ್ಯವಿಲ್ಲದಿದ್ದರೆ ಆತನನ್ನು ಗೊಂದಲಕ್ಕೆ ಕೆಡವಿ' ಎಂಬುದೊಂದು ತಮಾಷೆಯ ಮಾತಿದೆ. ನೇತ್ರಾವತಿ (ಎತ್ತಿನ ಹೊಳೆ) ನದಿ ತಿರುವು ಯೋಜನೆಯ ಸಮರ್ಥಕರು ಇದನ್ನೇ ಮಾಡುತ್ತಿದ್ದಾರೆ.

ಎತ್ತಿನಹೊಳೆ ವಿವಾದ ನೆನೆಗುದಿಗೆ ಬಿದ್ದಿದೆ. ಇಡೀ ಯೋಜನೆ ನಿರರ್ಥಕವೆಂದು ಹೇಳುವ ಪರಿಸರಪ್ರೇಮಿಗಳು, ಕಾನೂನುತಜ್ಞರು, ನೀರಾವರಿ ಪರಿಣತರ ವಾದಗಳಿಗೆ ಸೂಕ್ತ ಉತ್ತರ ನೀಡಲಾರದೆ ಸರಕಾರ ಕಕ್ಕಾಬಿಕ್ಕಿಯಾಗಿದೆ. ಇದೇ ಸಂದರ್ಭದಲ್ಲಿ ಇನ್ನಷ್ಟು ಅಂಥದ್ದೇ ಯೋಜನೆಗಳನ್ನು ಜನತೆಯ ಮುಂದೆ ಛೂ ಬಿಟ್ಟು ಎಲ್ಲರನ್ನೂ ಗೊಂದಲಕ್ಕೆ ಕೆಡವಲಾಗುತ್ತಿದೆ. ಲಿಂಗನಮಕ್ಕಿಯಿಂದ ಕುಡಿಯುವ ನೀರನ್ನು ಬೆಂಗಳೂರಿಗೆ ಸಾಗಿಸುವ ಯೋಜನೆ ಬರುತ್ತದಂತೆ.ಲಿಂಗನಮಕ್ಕಿಗೆ ದೂರದ ಅಘನಾಶಿನಿಯಿಂದ ನೀರನ್ನು ಪಂಪ್ ಮಾಡಿ ತುಂಬಲು ಸಾಧ್ಯವಿದೆಯಂತೆ. ಅಂಥ ಭಾರೀ ಯೋಜನೆಗಳು ಜಾರಿಗೆ ಬಂದರೆ ಮಾತ್ರ ಬೆಂಗಳೂರಿನ ಜನರಿಗೆ ನೀರು ಪೂರೈಕೆ ಸಾಧ್ಯವಂತೆ. ಇಲ್ಲಾಂದರೆ ರಾಜಧಾನಿಯಲ್ಲಿ ಹಾಹಾಕಾರ ಏಳುತ್ತದಂತೆ....

ಶುಕ್ರವಾರ, ಡಿಸೆಂಬರ್ 6, 2013

ಸ್ಮೈಲಿ ಸಮಾಚಾರ

ಟಿ. ಜಿ. ಶ್ರೀನಿಧಿ

ಇಮೇಲಿನಲ್ಲಿ ನಗುವುದು ಹೇಗೆ ಅಂತಲೋ ಮೊಬೈಲಿನಲ್ಲಿ ಅಳುವುದು ಹೇಗೆ ಅಂತಲೋ ಕೇಳಿದರೆ ನಿಮ್ಮ ಉತ್ತರ ಏನಿರುತ್ತದೆ? "ಅದೇನು ಸುಲಭ - ಸ್ಮೈಲಿ ಇದೆಯಲ್ಲ!" ಎನ್ನುತ್ತೀರಿ ತಾನೆ?

ಹೌದು, ಸ್ಮೈಲಿಗಳ ಜನಪ್ರಿಯತೆಯೇ ಅಂಥದ್ದು. ಇಮೇಲಿನಲ್ಲೋ ಎಸ್ಸೆಮ್ಮೆಸ್ಸಿನಲ್ಲೋ ನಮ್ಮ ಭಾವನೆಗಳಿಗೊಂದು ರೂಪಕೊಡಲು ಅನುವುಮಾಡಿಕೊಟ್ಟ ಈ ಸಂಕೇತಗಳು ಜನಪ್ರಿಯವಾಗಿದ್ದರಲ್ಲಿ ಆಶ್ಚರ್ಯವೂ ಏನಿಲ್ಲ ಬಿಡಿ.

ಸಾಮಾನ್ಯ ಭಾಷೆಯಲ್ಲಿ ಸ್ಮೈಲಿಗಳೆಂದು ಕರೆಸಿಕೊಂಡರೂ ಭಾವನೆಗಳನ್ನು (ಎಮೋಶನ್) ವ್ಯಕ್ತಪಡಿಸಲು ನೆರವಾಗುವ ಈ ಸಂಕೇತಗಳಾದ (ಐಕನ್) ಇವನ್ನು ಎಮೋಶನ್, ಐಕನ್ ಎರಡೂ ಸೇರಿಸಿ 'ಎಮೋಟೈಕನ್'ಗಳೆಂದು ಗುರುತಿಸಲಾಗುತ್ತದೆ.

ಈ ಸಂಕೇತಗಳಿಗೆ ಮೂರು ದಶಕಗಳಿಗೂ ಮೀರಿದ ಇತಿಹಾಸವಿದೆ.
badge