ಬುಧವಾರ, ಅಕ್ಟೋಬರ್ 30, 2013

ಕಂಪ್ಯೂಟರಿಗೆ ಕನ್ನಡ ಕಲಿಸಿದ ಕತೆ

ಕಂಪ್ಯೂಟರಿಗೆ ಕನ್ನಡ ಕಲಿಸಿದ ಮೇಷ್ಟರು ಶ್ರೀ ಕೆ. ಪಿ. ರಾವ್ ಅವರಿಗೆ ೨೦೧೩ರ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ. ಇದು ಕಂಪ್ಯೂಟರ್ ಬಳಸುವ ಕನ್ನಡಿಗರೆಲ್ಲರಿಗೂ ಅತ್ಯಂತ ಖುಷಿಯ ಕ್ಷಣ. ಈ ಸಂದರ್ಭದಲ್ಲಿ ಕೆ. ಪಿ. ರಾವ್ ಜೀವನ-ಸಾಧನೆ ಕುರಿತ ಲೇಖನ.

ಟಿ. ಜಿ. ಶ್ರೀನಿಧಿ

ಈಗಷ್ಟೆ ಮಾರುಕಟ್ಟೆಗೆ ಬಂದ ಹೊಸ ಮೊಬೈಲ್ ಫೋನ್ ಇರಲಿ, ಲೇಟೆಸ್ಟ್ ಟ್ಯಾಬ್ಲೆಟ್ ಕಂಪ್ಯೂಟರ್ ಇರಲಿ, ಅಥವಾ ಕಂಪ್ಯೂಟರಿನ ಯಾವುದೋ ತಂತ್ರಾಂಶವೇ ಇರಲಿ, "ಇದರಲ್ಲಿ ಕನ್ನಡ ಬಳಸಬಹುದೇ?" ಎನ್ನುವ ಪ್ರಶ್ನೆ ನಮ್ಮೆದುರು ಆಗಿಂದಾಗ್ಗೆ ಬರುತ್ತಲೇ ಇರುತ್ತದೆ. ಆದರೆ ಈ ಪ್ರಶ್ನೆ ಯಾವುದೋ ನಿರ್ದಿಷ್ಟ ಯಂತ್ರಾಂಶ ಅಥವಾ ತಂತ್ರಾಂಶಕ್ಕಷ್ಟೆ ಸೀಮಿತವಾಗಿರುತ್ತದೆ; ಏಕೆಂದರೆ ಕಂಪ್ಯೂಟರಿನಲ್ಲಿ ಕನ್ನಡ ಮೂಡುವುದು ನಮ್ಮ ಪಾಲಿಗೆ ಹೊಸ ವಿಷಯವೇನೂ ಅಲ್ಲವಲ್ಲ!

ಆದರೆ ಕೆಲ ದಶಕಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಕಂಪ್ಯೂಟರುಗಳೇ ಅಪರೂಪವಾಗಿದ್ದ ಆ ಕಾಲದಲ್ಲಿ ಕಂಪ್ಯೂಟರ್ ಬಳಸಬೇಕು ಎಂದರೆ ಇಂಗ್ಲಿಷ್ ಗೊತ್ತಿರಲೇಬೇಕು ಎನ್ನುವಂತಹ ಪರಿಸ್ಥಿತಿ ಇತ್ತು. ಆ ಫೋನಿನಲ್ಲಿ ಕನ್ನಡ ಓದಬಹುದು, ಈ ಟ್ಯಾಬ್ಲೆಟ್ಟಿನಲ್ಲಿ ಕನ್ನಡ ಟೈಪುಮಾಡುವುದೂ ಸುಲಭ ಎಂದೆಲ್ಲ ವಿವರಿಸುವ ನಮಗೆ ಕಂಪ್ಯೂಟರ್ ಪ್ರಪಂಚದಲ್ಲಿ ಕನ್ನಡವೇ ಕಾಣಸಿಗದಿದ್ದ ದಿನಗಳನ್ನು ಊಹಿಸುವುದೇ ಕಷ್ಟ, ಅಲ್ಲವೆ?

ಅಂತಹ ದಿನಗಳಲ್ಲೂ ಕಂಪ್ಯೂಟರ್ ಪ್ರಪಂಚದಲ್ಲಿ ಸಕ್ರಿಯರಾಗಿದ್ದ ಕನ್ನಡದ ಭಗೀರಥರು ತಮ್ಮ ಅದಮ್ಯ ಉತ್ಸಾಹದಿಂದ ಕಂಪ್ಯೂಟರಿಗೂ ಅ-ಆ-ಇ-ಈ ಹೇಳಿಕೊಟ್ಟರು; ಡಿಜಿಟಲ್ ಲೋಕದಲ್ಲಿ ಕನ್ನಡ ಹುಲುಸಾಗಿ ಬೆಳೆಯಲು ಕಾರಣರಾದರು.

ಇಂಗ್ಲಿಷ್ ನಾಡಿನಿಂದ ಬಂದ ಕಂಪ್ಯೂಟರ್, ಇಂತಹ ಮೇಷ್ಟರೊಬ್ಬರ ನೆರವಿನಿಂದ ಕನ್ನಡ ಕಲಿತ ಕತೆ ಇಲ್ಲಿದೆ.

ಶುಕ್ರವಾರ, ಅಕ್ಟೋಬರ್ 25, 2013

ಕಂಪ್ಯೂಟರಿಗೆ ಪಾಠವ ಹೇಳಿ... [ಭಾಗ ೨]

ಟಿ ಜಿ ಶ್ರೀನಿಧಿ

ಭಾಗ ೧ ಓದಲು ಇಲ್ಲಿ ಕ್ಲಿಕ್ ಮಾಡಿ

ಕಂಪ್ಯೂಟರ್ ಏನು ಮಾಡಬೇಕು ಎಂದು ತಿಳಿಸಲು ಕ್ರಮವಿಧಿಯನ್ನು (ಪ್ರೋಗ್ರಾಮ್) ಬರೆಯುವುದೇನೋ ಸರಿ. ಆದರೆ ಅದರ ತರ್ಕ (ಲಾಜಿಕ್) ಸರಿಯಿಲ್ಲದಿದ್ದರೆ - ಅಂದರೆ, ನಾವು ಯಾವುದಾದರೂ ವಿವರವನ್ನು ಸರಿಯಾಗಿ ಕೊಡದಿದ್ದರೆ - ಆ ಕ್ರಮವಿಧಿಯನ್ನು ಬಳಸಿದಾಗ ನಮ್ಮ ನಿರೀಕ್ಷೆಯ ಫಲಿತಾಂಶ ಬರುವುದಿಲ್ಲ. ಕಂಪ್ಯೂಟರ್ ನಮ್ಮ ಅಪೇಕ್ಷೆಯಂತೆ ಕೆಲಸಮಾಡಬೇಕಾದರೆ ಅದು ಯಾವ ಕೆಲಸಮಾಡಬೇಕೋ ಆ ಕೆಲಸದ ಪೂರ್ಣ ವಿವರಗಳು ನಾವು ಬರೆಯುವ ಕ್ರಮವಿಧಿಯಲ್ಲಿ ಇರಲೇಬೇಕು.

ಈಗ ನಿಮ್ಮ ಮನೆಗೆ ಕೆಲ ಮಿತ್ರರು ಬರಬೇಕಿದೆ ಎಂದುಕೊಳ್ಳೋಣ. ಇದನ್ನು ನಾವು ಬರೆಯುತ್ತಿರುವ ಕ್ರಮವಿಧಿಯ ಉದ್ದೇಶಕ್ಕೆ ಹೋಲಿಸಬಹುದು. ಆದರೆ ಮನೆಗೆ ಬರಲು ನಿಮ್ಮ ಮಿತ್ರರಿಗೆ ದಾರಿ ಗೊತ್ತಾಗಬೇಕು ತಾನೆ?

ಮಂಗಳವಾರ, ಅಕ್ಟೋಬರ್ 22, 2013

ಜ್ವಾಲಾಮುಖಿ ಒಡಲಿನ ತಂಪು!

ಹಿರಿಯ ವಿಜ್ಞಾನ ಲೇಖಕ ಶ್ರೀ ಟಿ. ಆರ್. ಅನಂತರಾಮುರವರ 'ಭೂಮಿಯ ಟೈಂ ಬಾಂಬ್: ಜ್ವಾಲಾಮುಖಿ' ಕೃತಿಯ ಪರಿಚಯ

ಕೆ. ಎಸ್. ನವೀನ್

'ಭೂಮಿಯ ಟೈಂ ಬಾಂಬ್: ಜ್ವಾಲಾಮುಖಿ' ಹಿರಿಯ ವಿಜ್ಞಾನ ಲೇಖಕರಾದ ಶ್ರೀ ಟಿ. ಆರ್. ಅನಂತರಾಮು ಅವರ ಹೊಸ ಕೃತಿ. ಈ ಹಿಂದೆ ಜ್ವಾಲಾಮುಖಿ ಎಂಬ ಹೆಸರಿನ ಇವರದ್ದೇ ಪುಸ್ತಕ ಪ್ರಕಟವಾಗಿದ್ದರೂ ಇದು ಹೊಸತೇ ಆದ ಹೊತ್ತಗೆ.

ಒಟ್ಟು ಹದಿನೇಳು ಅಧ್ಯಾಯಗಳಿರುವ ಈ ಪುಸ್ತಕದಲ್ಲಿ ಜ್ವಾಲಾಮುಖಿಯ ವೈಜ್ಞಾನಿಕ ಕಥನ ಅಲೆ ಅಲೆಯಾಗಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಒಬ್ಬ ಅನುಭವಿ ಬರೆಹಗಾರ ಹೇಗೆ ಲೀಲಾಜಾಲವಾಗಿ ಪುಸ್ತಕದ ಎಲ್ಲ ವಿಭಾಗಗಳನ್ನು ಅಚ್ಚುಕಟ್ಟಾಗಿ  ಸಂಯೋಜಿಸಿ ಒಂದು ಕಲಾಕೃತಿಯನ್ನಾಗಿಸುತ್ತಾನೆ ಎಂಬುದಕ್ಕೆ ಈ ಪುಸ್ತಕ ಮಾದರಿ. ಶೀರ್ಷಿಕೆಗಳಿಂದಲೇ ಇದಕ್ಕೆ ಉದಾಹರಣೆ ಕೊಡಬಹುದು. "ಆಕಾಶದಲ್ಲಿ ಆತಂಕ", "ಜ್ವಾಲಾಮುಖಿಯ ಬಾಯಿಯೊಳಗೆ", "ವಾಯುನೆಲೆಯ ಮೇಲೆ ದಾಳಿ", "ಭೂಮಿಯೊಳಗೆ ಭೂತ", "ಭೂಗರ್ಭದಲ್ಲಿ ಏನಿದೆ?" ಹೀಗೆ ಓದುಗನನ್ನು ಸೆರೆಹಿಡಿಯುತ್ತವೆ. ಪುಸ್ತಕದ ನಡುವೆ ಇಪ್ಪತ್ತನಾಲ್ಕು ಪುಟಗಳ ವರ್ಣ ಚಿತ್ರ ಸಂಪುಟವಿದೆ. ಈ ಚಿತ್ರ ಸಂಪುಟ ಜ್ವಾಲಾಮುಖಿ ಜಗತ್ತಿನೊಳಗೊಂದು ಪಯಣ. ವಿಜ್ಞಾನ ಕೃತಿಗೆ ವರ್ಣಚಿತ್ರ ತರಬಹುದಾದ ಶೋಭೆಯನ್ನು ಇದು ಶ್ರುತ ಪಡಿಸಿದೆ. ಒಂದು ಪಠ್ಯಪುಸ್ತಕ ಅಥವಾ ಆಕರ ಗ್ರಂಥದ ಬಿಗುವಿನಿಂದ ಕೂಡಿರದೆ ಆಸಕ್ತ ಓದುಗ ಓದಲೇ ಬೇಕಾದ ಆಕರವಾಗಿ ಉಳಿಯುತ್ತದೆ.

ಶುಕ್ರವಾರ, ಅಕ್ಟೋಬರ್ 18, 2013

ಕಂಪ್ಯೂಟರಿಗೆ ಪಾಠವ ಹೇಳಿ... [ಭಾಗ ೧]

ಟಿ ಜಿ ಶ್ರೀನಿಧಿ

ನಮ್ಮಿಂದ ಹೇಳಿಸಿಕೊಳ್ಳದೆ ಕಂಪ್ಯೂಟರ್ ಯಾವ ಕೆಲಸವನ್ನೂ ಮಾಡುವುದಿಲ್ಲ ಎನ್ನುವ ಮಾತನ್ನು ನಾವು ಆಗಿಂದಾಗ್ಗೆ ಕೇಳುತ್ತಿರುತ್ತೇವೆ. ಕಂಪ್ಯೂಟರ್ ಏನು ಮಾಡುವುದಿದ್ದರೂ ನಾವು ಹೇಳಿದ್ದನ್ನಷ್ಟೆ, ಹೇಳಿದಂತೆಯೇ ಮಾಡುತ್ತದೆ ಎನ್ನುವುದೂ ನಮಗೆ ಗೊತ್ತು. ಆದರೆ ನಮಗೇನು ಬೇಕು ಎನ್ನುವುದನ್ನು ಕಂಪ್ಯೂಟರಿಗೆ ಹೇಳುವುದು ಹೇಗೆ?

ನಮಗೆ ಬೇಕಾದ ಕೆಲಸ ಮಾಡಿಕೊಡುವ ಸಾಫ್ಟ್‌ವೇರ್ (ತಂತ್ರಾಂಶ) ಕೊಂಡುಕೊಂಡರೆ ಆಯಿತು ಎಂದುಬಿಡಬಹುದು ನಿಜ. ಆದರೆ ಆ ತಂತ್ರಾಂಶವನ್ನು ಮೊದಲಿಗೆ ಯಾರೋ ಸಿದ್ಧಪಡಿಸಿರಬೇಕು ತಾನೆ?

ಹಾಗಾದರೆ ತಂತ್ರಾಂಶವನ್ನು ಸಿದ್ಧಪಡಿಸುವುದು ಎಂದರೇನು, ಮತ್ತು ಅದು ಸಾಧ್ಯವಾಗುವುದು ಹೇಗೆ?

ಏನು ಕೆಲಸ ಮಾಡಬೇಕು ಎನ್ನುವುದನ್ನು ಅತ್ಯಂತ ಸ್ಪಷ್ಟವಾಗಿ ಸಣ್ಣಸಣ್ಣ ಹೆಜ್ಜೆಗಳಲ್ಲಿ ಹೇಳಬೇಕು - ಇದು ಈ ಪ್ರಶ್ನೆಗೆ ಅತ್ಯಂತ ಸರಳ ಉತ್ತರ.

ಶುಕ್ರವಾರ, ಅಕ್ಟೋಬರ್ 11, 2013

ಬಿಗ್ ಡೇಟಾ ಬಗ್ಗೆ ಇನ್ನಷ್ಟು...

ಟಿ ಜಿ ಶ್ರೀನಿಧಿ

ಸರ್ಚ್ ಇಂಜನ್ ಹುಡುಕಾಟಗಳು, ಸಮಾಜಜಾಲಗಳಲ್ಲಿ ಹರಿದಾಡುವ ಸಂದೇಶಗಳು, ಆನ್‌ಲೈನ್ ಅಂಗಡಿಗಳಲ್ಲಿ ಮಾರಾಟವಾಗುವ ಸರಕುಗಳು - ಹೀಗೆ ಹಲವಾರು ಮೂಲಗಳಿಂದ ಹರಿದುಬರುವ ಅಗಾಧ ಪ್ರಮಾಣದ ದತ್ತಾಂಶವನ್ನು ನಾವು ಬಿಗ್ ಡೇಟಾ ಎಂದು ಕರೆಯುತ್ತೇವೆ ಎನ್ನುವುದೇನೋ ಸರಿ. ಆದರೆ ಇಷ್ಟೆಲ್ಲ ಭಾರೀ ಪ್ರಮಾಣದ ಮಾಹಿತಿಯಿಂದ ನಮಗೇನು ಉಪಯೋಗ? ಇದನ್ನು ವಿಶ್ಲೇಷಿಸಿ ಉಪಯುಕ್ತ ಮಾಹಿತಿ ಪಡೆದುಕೊಳ್ಳುವುದು ಹೇಗೆ?

ಸಾಂಪ್ರದಾಯಿಕ ದತ್ತಸಂಚಯಗಳಲ್ಲೇನೋ ನಮಗೆ ಏಕರೂಪದ ದತ್ತಾಂಶ ಸಿಗುತ್ತದೆ; ಆದರೆ ಬಿಗ್ ಡೇಟಾದಲ್ಲಿ ಹಾಗಲ್ಲವಲ್ಲ - ಇಲ್ಲಿ ವಿವಿಧ ಮೂಲಗಳಿಂದ ವಿವಿಧ ರೂಪಗಳಲ್ಲಿ ಬರುವ ದತ್ತಾಂಶವನ್ನು ಸಂಸ್ಕರಿಸುವುದೇ ಮೊದಲ ಸವಾಲು. ಹಲವಾರು ಬಾರಿ ಆ ಮಾಹಿತಿ ಒಂದೇ ಸ್ಥಳದಲ್ಲಿರುವುದೂ ಇಲ್ಲ.

ಹಿಂದೆ ಈ ಬಗೆಯ ದತ್ತಾಂಶವನ್ನು ಯಾರೂ ಸಂಸ್ಕರಿಸುತ್ತಲೇ ಇರಲಿಲ್ಲ. ಆದರೆ ಬಿಗ್ ಡೇಟಾ ಮಹತ್ವ ಸ್ಪಷ್ಟವಾಗುತ್ತ ಹೋದಂತೆ ಸಂಸ್ಥೆಗಳಿಗೆ ಈ ಬಗೆಯ ದತ್ತಾಂಶವನ್ನೂ ಸಂಸ್ಕರಿಸಿ ವಿಶ್ಲೇಷಿಸಬೇಕಾದ ಅಗತ್ಯ ಕಂಡುಬಂತು. ಆಗ ಶುರುವಾದದ್ದೇ ದತ್ತಾಂಶ ಸಂಸ್ಕರಣೆ-ವಿಶ್ಲೇಷಣೆಯ ಹೊಸ ಯುಗ. ಸಾಮಾನ್ಯ ವಿಧಾನಗಳಿಂದ ಸಂಪೂರ್ಣವಾಗಿ ಬೇರೆಯದೇ ಆದ ಈ ಬಗೆಯ ಸಂಸ್ಕರಣೆ-ವಿಶ್ಲೇಷಣೆಯಲ್ಲಿ ಬೇರೆಬೇರೆಡೆ ಇರುವ ಬೇರೆಬೇರೆ ಬಗೆಯ ದತ್ತಾಂಶವನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಸಂಸ್ಕರಿಸಲಾಗುತ್ತದೆ. ಇದರ ಫಲಿತಾಂಶವಾಗಿ ದೊರಕುವ ಮಾಹಿತಿ ಬಲು ಮಹತ್ವದ್ದಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ.

ಗುರುವಾರ, ಅಕ್ಟೋಬರ್ 10, 2013

ಕೌತುಕದ ಚುಚ್ಚುಮದ್ದು

ಇಂಜೆಕ್ಷನ್, ಸಿರಿಂಜ್ ಇವೆಲ್ಲ ಮಕ್ಕಳಲ್ಲಿ ಹುಟ್ಟುಹಾಕುವ ಭಾವನೆಗಳು ಅನೇಕ ಬಗೆಯವು: ಸಿರಿಂಜ್ ನೋಡಿದರೆ ಕುತೂಹಲ, ಇಂಜೆಕ್ಷನ್ ಎಂದರೆ ಭಯ!

ಇದೇ ಸಿರಿಂಜನ್ನು ಬಳಸಿಕೊಂಡು ವಿಜ್ಞಾನ ಕಲಿಕೆಯನ್ನು ಸಾಧ್ಯವಾಗಿಸಬಹುದೆ? ಈ ಉದ್ದೇಶದಿಂದ ಪ್ರಕಟವಾಗಿರುವ ಪುಸ್ತಕವೇ 'ಕೌತುಕದ ಚುಚ್ಚುಮದ್ದು! ...ಸೋಜಿಗದ ಸೂಜಿಮದ್ದು.' ಮಕ್ಕಳ ವಿಜ್ಞಾನ ಕಲಿಕೆಗೆ ಸಂತಸ ನೀಡುವ ಪ್ರಸಂಗಗಳ ಈ ಕೃತಿಯ ಲೇಖಕರು ಶ್ರೀ ನಾರಾಯಣ ಬಾಬಾನಗರ.

ನಮಗೆಲ್ಲ ಪರಿಚಿತವಾದ ಸಿರಿಂಜು ಈ ಪುಸ್ತಕದ ಕೇಂದ್ರಬಿಂದು. ಸಿರಿಂಜ್‌ಗಳನ್ನು ಬಳಸಿ ಮಾಡಬಹುದಾದ ಅನೇಕ ಚಟುವಟಿಕೆಗಳನ್ನು ಈ ಪುಸ್ತಕ ಪರಿಚಯಿಸುತ್ತದೆ. ಸಂದರ್ಭಕ್ಕೆ ತಕ್ಕಂತೆ ಹಲವಾರು ಪೂರಕ ಸಂಗತಿಗಳನ್ನೂ ಪರಿಚಯಿಸಲಾಗಿದೆ (ಉದಾ: ಕೆಲವು ಇಂಜೆಕ್ಷನ್‌ಗಳಲ್ಲಿ ನೀರು ಹಾಗೂ ಔಷಧಿಯ ಪುಡಿ ಪ್ರತ್ಯೇಕವಾಗಿರುವುದು ಏಕೆ?).

ಶುಕ್ರವಾರ, ಅಕ್ಟೋಬರ್ 4, 2013

ಬಿಗ್ ಡೇಟಾ ಬಗ್ಗೆ...

ಟಿ ಜಿ ಶ್ರೀನಿಧಿ

ಡೇಟಾ ಅಥವಾ ದತ್ತಾಂಶ ಎಂದತಕ್ಷಣ ನಮಗೆ ಹಲವಾರು ಸಂಗತಿಗಳು ನೆನಪಾಗುತ್ತವೆ. ಕಳೆದ ಒಂದು ವರ್ಷದಲ್ಲಿ ನಮ್ಮ ದೇಹದ ತೂಕ, ಆರು ತಿಂಗಳಿನಿಂದೀಚೆಗೆ ಮೊಬೈಲ್ ರೀಚಾರ್ಜಿಗೆ ಖರ್ಚುಮಾಡಿದ ಹಣ, ಪರೀಕ್ಷೆಯಲ್ಲಿ ಪಡೆದ ಅಂಕಗಳು, ಪಾಕೆಟ್ ಮನಿ ಖರ್ಚಿನ ಲೆಕ್ಕ - ಹೀಗೆ ಒಂದಲ್ಲ ಒಂದು ಬಗೆಯ ದತ್ತಾಂಶ ನಮ್ಮನ್ನು ಸದಾ ಆವರಿಸಿಕೊಂಡಿರುತ್ತದಲ್ಲ!

ವೈಯಕ್ತಿಕ ವಿಷಯ ಹಾಗಿರಲಿ, ಸಣ್ಣ-ದೊಡ್ಡ ಸಂಸ್ಥೆಗಳಲ್ಲೂ ದತ್ತಾಂಶದ್ದೇ ಭರಾಟೆ. ಕಳೆದ ವರ್ಷದ ಲಾಭ-ನಷ್ಟ, ಮೂರುತಿಂಗಳಿನಲ್ಲಿ ಮಾರಾಟವಾದ ಉತ್ಪನ್ನಗಳ ಲೆಕ್ಕಾಚಾರ, ಶೇರು ಬೆಲೆಯ ಏರಿಳಿತ, ಉದ್ಯೋಗಿಗಳ ಬಗೆಗಿನ ವಿವರ - ಹೀಗೆ ಅಲ್ಲೂ ಭಾರೀ ಪ್ರಮಾಣದಲ್ಲಿ ದತ್ತಾಂಶದ ಶೇಖರಣೆ ನಡೆದಿರುತ್ತದೆ. ಕಂಪ್ಯೂಟರುಗಳು-ಅವುಗಳಲ್ಲಿನ ಡೇಟಾಬೇಸುಗಳೆಲ್ಲ ಇಂತಹ ದತ್ತಾಂಶದ ಸಂಗ್ರಹದಿಂದ ತುಂಬಿ ತುಳುಕುತ್ತಿರುತ್ತವೆ ಎಂದರೂ ಸರಿಯೇ!

ಬಹಳ ವರ್ಷಗಳಿಂದ ಕಂಪ್ಯೂಟರ್ ಪ್ರಪಂಚ ಬೆಳೆದುಬಂದಿರುವುದೂ ಹೀಗೆಯೇ. ಇದರಿಂದಾಗಿ ದತ್ತಾಂಶದ ಸಂಗ್ರಹ ಎಂದಾಕ್ಷಣ ಅದು ಯಾವುದೋ ಒಂದು ದತ್ತಸಂಚಯ, ಅಂದರೆ ಡೇಟಾಬೇಸ್‌ನಲ್ಲೇ ಆಗಿರಬೇಕು ಎನ್ನುವ ಅಭಿಪ್ರಾಯವೇ ಇನ್ನೂ ವ್ಯಾಪಕವಾಗಿದೆ.

ಆದರೆ ಕಂಪ್ಯೂಟರುಗಳು-ಅವುಗಳ ಜಾಲಗಳು ನಮ್ಮ ಬದುಕನ್ನು ಆವರಿಸಿಕೊಳ್ಳುತ್ತಹೋದಂತೆ ದತ್ತಾಂಶದ ಸಂಗ್ರಹವೂ ಅದೆಷ್ಟು ಪ್ರಮಾಣದಲ್ಲಿ ಹೆಚ್ಚಿದೆಯೆಂದರೆ ಅದು ಡೇಟಾಬೇಸ್‌ಗಳ ಮಿತಿಯನ್ನೆಲ್ಲ ಮೀರಿ ಬೆಳೆದುಬಿಟ್ಟಿದೆ. ಹೀಗಾಗಿಯೇ ಈಗ ದತ್ತಾಂಶವೆಂದರೆ ಡೇಟಾಬೇಸಿನ ಟೇಬಲ್ಲುಗಳು - ಅವುಗಳ ನಡುವಿನ ಸಂಬಂಧ (ರಿಲೇಶನ್) ಇಷ್ಟೇ ಅಲ್ಲ. ಪಠ್ಯ, ಧ್ವನಿ, ಚಿತ್ರ, ವೀಡಿಯೋಗಳೊಡನೆ ಶುರುವಾಗುವ ದತ್ತಾಂಶದ ಪಟ್ಟಿ, ಸರ್ಚ್ ಇಂಜನ್ ಹುಡುಕಾಟಗಳು, ಸಮಾಜಜಾಲಗಳಲ್ಲಿ ಹರಿದಾಡುವ ಸಂದೇಶಗಳು, ಆನ್‌ಲೈನ್ ಅಂಗಡಿಗಳಲ್ಲಿ ಮಾರಾಟವಾಗುವ ಸರಕುಗಳು - ಹೀಗೆ ಹಲವಾರು ಹೊಸ ಮೂಲಗಳನ್ನು ತನ್ನಲ್ಲಿ ಸೇರಿಸಿಕೊಳ್ಳುತ್ತಿದೆ. ದತ್ತಾಂಶ ನಿರ್ದಿಷ್ಟ ರೂಪದಲ್ಲಷ್ಟೆ ಇರಬೇಕು ಎನ್ನುವ ಅಘೋಷಿತ ನಿಯಮ ಕೂಡ ದೂರವಾಗುತ್ತಿದೆ.

ಹೀಗಿರುವಾಗ ಸಹಜವಾಗಿಯೇ ದತ್ತಾಂಶದ ಪ್ರಮಾಣದಲ್ಲೂ ಗಮನಾರ್ಹ ಪ್ರಮಾಣದ ಏರಿಕೆ ಕಂಡುಬಂದಿದೆ. ಗಿಗಾಬೈಟುಗಳ ಲೆಕ್ಕವೆಲ್ಲ ಹಳೆಯದಾಗಿ ದತ್ತಾಂಶದ ಪ್ರಮಾಣವನ್ನು ಇದೀಗ ಪೆಟಾಬೈಟ್-ಎಕ್ಸಾಬೈಟುಗಳಲ್ಲಿ ಅಳೆಯಲಾಗುತ್ತಿದೆ (ಒಂದು ಪೆಟಾಬೈಟ್ ಎನ್ನುವುದು ಹತ್ತು ಲಕ್ಷ ಗಿಗಾಬೈಟ್‌ಗಳಿಗೆ ಸಮ; ಎಕ್ಸಾಬೈಟ್ ಎಂದರೆ ಸಾವಿರ ಪೆಟಾಬೈಟ್). ಮಾಹಿತಿ ತಂತ್ರಜ್ಞಾನ ಪ್ರಪಂಚದಲ್ಲಿ ಬಿಗ್ ಡೇಟಾ ಎಂದು ಗುರುತಿಸುವುದು ಇದನ್ನೇ.
badge