ಮಂಗಳವಾರ, ಡಿಸೆಂಬರ್ 28, 2010

ಜಾಲಲೋಕದ ಬೀದಿಜಗಳ

ಟಿ ಜಿ ಶ್ರೀನಿಧಿ

ಈಚಿನ ಕೆಲದಿನಗಳಲ್ಲಿ ಎಲ್ಲಿಲ್ಲಿ ನೋಡಿದರೂ ವಿಕಿಲೀಕ್ಸ್‌ನದೇ ಸುದ್ದಿ. ಈವರೆಗೂ ರಹಸ್ಯವಾಗಿಡಲಾಗಿದ್ದ ಸಾವಿರಾರು ಸಂಗತಿಗಳನ್ನು ಸಾರ್ವಜನಿಕವಾಗಿ ತಂದು ಸುರಿದಿರುವ ಈ ಜಾಲತಾಣ ಅತ್ಯಲ್ಪ ಸಮಯದಲ್ಲೇ ವಿಶ್ವದೆಲ್ಲೆಡೆ ಹೆಸರುಮಾಡಿಬಿಟ್ಟಿದೆ.

ಹೀಗೆ ಬಹಿರಂಗವಾಗಿರುವ ಸಂಗತಿಗಳು ಅದೆಷ್ಟು ಸುದ್ದಿಮಾಡಿವೆಯೋ ಅಷ್ಟೇ ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿ ವಿಕಿಲೀಕ್ಸ್ ತಾಣ ಕೂಡ ಸುದ್ದಿಯಲ್ಲಿದೆ. ವಿಶ್ವದೆಲ್ಲೆಡೆಯಿಂದ ವ್ಯಕ್ತವಾಗುತ್ತಿರುವ ಪರ-ವಿರೋಧವಾದ ಪ್ರತಿಕ್ರಿಯೆಗಳ ಜೊತೆಜೊತೆಯಲ್ಲೇ ಅಂತರಜಾಲ ಲೋಕದಲ್ಲೂ ವಿಕಿಲೀಕ್ಸ್ ಕುರಿತು ಸಾಕಷ್ಟು ಗಲಾಟೆಯಾಗುತ್ತಿದೆ.

ಇದೆಲ್ಲ ಪ್ರಾರಂಭವಾದದ್ದು ವಿಕಿಲೀಕ್ಸ್ ಜಾಲತಾಣಕ್ಕೆ ಹೋಸ್ಟಿಂಗ್ ಸೇವೆ ಒದಗಿಸಿದ್ದ ಅಮೆಜಾನ್ ಡಾಟ್ ಕಾಂ ಸಂಸ್ಥೆ ತನ್ನ ಸೇವೆಯನ್ನು ಹಿಂತೆಗೆದುಕೊಂಡಾಗ. ತಾನು ವಿಧಿಸಿರುವ ನಿಬಂಧನೆಗಳನ್ನು ವಿಕಿಲೀಕ್ಸ್ ಪಾಲಿಸುತ್ತಿಲ್ಲ ಎನ್ನುವುದು ಅಮೆಜಾನ್‌ನ ಆರೋಪ.

ಇದರ ನಂತರ ವಿಕಿಲೀಕ್ಸ್‌ಗೆ ಡೊಮೈನ್ ನೇಮ್ ಸರ್ವಿಸ್ ಒದಗಿಸುತ್ತಿದ್ದ ಸಂಸ್ಥೆ ಕೂಡ ತನ್ನ ಸೇವೆಯನ್ನು ನಿಲ್ಲಿಸಿಬಿಟ್ಟಿತು (ಯಾವುದೇ ತಾಣದ ಯುಆರ್‌ಎಲ್ ಅನ್ನು ಅದರ ಐ.ಪಿ. ವಿಳಾಸದೊಂದಿಗೆ ಹೊಂದಿಸಿಕೊಡುವ ಈ ವ್ಯವಸ್ಥೆ ಇಲ್ಲದಿದ್ದರೆ ಆ ತಾಣವನ್ನು ಯಾರೂ ನೋಡುವುದೇ ಸಾಧ್ಯವಿಲ್ಲ). ವಿಕಿಲೀಕ್ಸ್ ತಾಣದ ಮೇಲೆ ತೀವ್ರಪ್ರಮಾಣದ ಡಿಡಿಒಎಸ್ ದಾಳಿ ನಡೆಯುತ್ತಿದೆ ಹಾಗೂ ಇದರಿಂದ ತನ್ನ ವ್ಯವಸ್ಥೆಯೇ ಅಭದ್ರವಾಗುವ ಸಾಧ್ಯತೆಯಿದೆ; ಹೀಗಾಗಿ ಆ ತಾಣಕ್ಕೆ ನೀಡುತ್ತಿದ್ದ ಡೊಮೈನ್ ನೇಮ್ ಸರ್ವಿಸ್ ಅನ್ನು ನಿಲ್ಲಿಸುತ್ತಿದ್ದೇವೆ ಎನ್ನುವುದು ಆ ಸಂಸ್ಥೆ ನೀಡಿದ ಕಾರಣ.

ಏನಿದು ಡಿಡಿಒಎಸ್ ದಾಳಿ?
ಜಾಲತಾಣಗಳಿಗೆ ಅಸಂಖ್ಯಾತ ಕೃತಕ ಗ್ರಾಹಕರನ್ನು ಸೃಷ್ಟಿಸುವ ಬ್ಲ್ಯಾಕ್‌ಮೇಲ್ ತಂತ್ರಕ್ಕೆ ಡಿಸ್ಟ್ರಿಬ್ಯೂಟೆಡ್ ಡಿನಯಲ್ ಆಫ್ ಸರ್ವಿಸ್ ಅಥವಾ ಡಿಡಿಒಎಸ್ ದಾಳಿ ಎಂದು ಕರೆಯುತ್ತಾರೆ. ಇದು ಸೈಬರ್ ಭಯೋತ್ಪಾದನೆಯ ವಿಧಗಳಲ್ಲೊಂದು. ಇಂತಹ ದಾಳಿಗೆ ಈಡಾಗುವ ತಾಣದ ಸರ್ವರ್‌ಗೆ ಇದ್ದಕ್ಕಿದ್ದಂತೆ ಅಪಾರ ಪ್ರಮಾಣದ ಮಾಹಿತಿ ಹರಿದುಬರಲು ಪ್ರಾರಂಭವಾಗುತ್ತದೆ. ಇದರಿಂದಾಗಿ ಆ ಜಾಲತಾಣದ ಕಾರ್ಯಾಚರಣೆ ಬಲು ನಿಧಾನವಾಗಿಬಿಡುತ್ತದೆ. ಇಂತಹ ದಾಳಿಗಳು ಹೆಚ್ಚುಕಾಲ ಮುಂದುವರೆದದ್ದೇ ಆದರೆ ಮಾಹಿತಿಯ ಮಿತಿಮೀರಿದ ಒತ್ತಡದಿಂದಾಗಿ ದಾಳಿಗೀಡಾದ ಜಾಲತಾಣ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಸಾಧ್ಯತೆಯೂ ಇರುತ್ತದೆ.

ಸ್ಪಾಮ್ ಕಳುಹಿಸುವ ದಂಧೆಯಂತೆಯೇ ಈ ದಾಳಿಗಳಲ್ಲೂ ಸ್ಪೈವೇರ್‌ಗಳು ಹಾಗೂ ಬಾಟ್‌ನೆಟ್‌ಗಳ ಬಳಕೆ ಸಾಮಾನ್ಯ.

ಗೂಢಚಾರಿ ತಂತ್ರಾಂಶ ಅಥವಾ ಸ್ಪೈವೇರ್, ಗಣಕಲೋಕವನ್ನು ಕಾಡುವ ಕುತಂತ್ರಾಂಶಗಳಲ್ಲೊಂದು. ಇವು ಸಾಮಾನ್ಯವಾಗಿ ಉಪಯುಕ್ತ ತಂತ್ರಾಂಶಗಳ ಸೋಗಿನಲ್ಲಿ ಬಳಕೆದಾರರ ಗಣಕವನ್ನು ಪ್ರವೇಶಿಸುತ್ತವೆ. ಬಳಕೆದಾರರ ಗಣಕವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಅದನ್ನು ತಮ್ಮ ಕುಕೃತ್ಯಗಳಿಗೆ ಬಳಸಿಕೊಳ್ಳುವಲ್ಲಿ ಈ ತಂತ್ರಾಂಶಗಳು ಹ್ಯಾಕರ್‌ಗಳಿಗೆ ನೆರವಾಗುತ್ತವೆ. ಪ್ರತಿ ಬಾರಿ ಗಣಕವನ್ನು ಚಾಲೂ ಮಾಡಿದಾಗಲೂ ಸಕ್ರಿಯವಾಗುವ ಈ ತಂತ್ರಾಂಶ ಹ್ಯಾಕರ್‌ನ ಆದೇಶಗಳನ್ನು ಪಾಲಿಸಲು ಪ್ರಾರಂಭಿಸುತ್ತದೆ; ಅಂದರೆ ಆ ಗಣಕ ಒಂದು ಜಾಂಬಿ ಗಣಕ ಅಥವಾ 'ಬಾಟ್' ಆಗಿ ಬದಲಾಗುತ್ತದೆ (ಬಾಟ್ ಎನ್ನುವುದು ರೋಬಾಟ್ ಎಂಬ ಹೆಸರಿನ ಅಪಭ್ರಂಶ). ಪ್ರಪಂಚದಾದ್ಯಂತ ಇರುವ ಇಂತಹ ನೂರಾರು-ಸಾವಿರಾರು ಬಾಟ್‌ಗಳನ್ನು ಒಗ್ಗೂಡಿಸಿದ 'ಬಾಟ್‌ನೆಟ್'ಗಳೆಂಬ ಜಾಲಗಳೂ ಸಿದ್ಧವಾಗುತ್ತವೆ.

ಡಿಡಿಒಎಸ್ ದಾಳಿಗೆ ತುತ್ತಾಗುವ ತಾಣಗಳಿಗೆ ಅಪಾರ ಪ್ರಮಾಣದ ಮಾಹಿತಿ ಹರಿದುಬರುವುದು ಇವೇ ಬಾಟ್‌ನೆಟ್‌ಗಳಿಂದ. ಈ ಗಣಕಗಳು ಜಗತ್ತಿನ ಯಾವ ಮೂಲೆಯಲ್ಲಿ ಬೇಕಾದರೂ ಇರಬಹುದಾದ್ದರಿಂದ ಅನೇಕ ಸನ್ನಿವೇಶಗಳಲ್ಲಿ ನಿಜವಾದ ಅಪರಾಧಿಯ ಪತ್ತೆಯಾಗುವುದೇ ಇಲ್ಲ.

ವಿಕಿಲೀಕ್ಸ್ ವಾರ್
ವಿಕಿಲೀಕ್ಸ್ ವಿರೋಧಿಗಳು ಪ್ರಾರಂಭಿಸಿದ ಡಿಡಿಒಎಸ್ ದಾಳಿಗಳ ಬೆನ್ನಲ್ಲೇ ಡಿಎನ್‌ಎಸ್ ಸೇವೆಯೂ ನಿಂತುಹೋದದ್ದರಿಂದ ವಿಕಿಲೀಕ್ಸ್ ತಾಣ ತನ್ನ ವಿಳಾಸವನ್ನು ಬದಲಾಯಿಸಿಕೊಳ್ಳಬೇಕಾಗಿಬಂತು. ಇದರ ಬೆನ್ನಲ್ಲೇ ವಿಕಿಲೀಕ್ಸ್ ತಾಣಕ್ಕೆ ಬರುವ ದೇಣಿಗೆಗಳನ್ನು ನಾವು ಇನ್ನುಮುಂದೆ ಸಂಗ್ರಹಿಸುವುದಿಲ್ಲ ಎಂದು ವೀಸಾ, ಮಾಸ್ಟರ್‌ಕಾರ್ಡ್ ಹಾಗೂ ಪೇಪಾಲ್ ಸಂಸ್ಥೆಗಳೂ ಘೋಷಿಸಿಬಿಟ್ಟವು.

ಇಷ್ಟೆಲ್ಲ ಆದಾಗ ವಿಕಿಲೀಕ್ಸ್ ಬೆಂಬಲಿಗರಿಗೆ ಕೋಪಬಂತು. ತಮ್ಮ ಕೋಪ ತೋರಿಸಿಕೊಳ್ಳಲು ಅವರೂ ಡಿಡಿಒಎಸ್ ದಾಳಿಗಳ ಮೊರೆಹೋದರು. ಅಮೆಜಾನ್, ವೀಸಾ, ಮಾಸ್ಟರ್‌ಕಾರ್ಡ್ ಹಾಗೂ ಪೇಪಾಲ್ ತಾಣಗಳು ಅವರ ಕೋಪಕ್ಕೆ ಗುರಿಯಾಗಬೇಕಾಯಿತು.

ಹಬ್ಬುತ್ತಿರುವ ಹಾವಳಿ
ಹೀಗೆ ಡಿಡಿಒಎಸ್ ದಾಳಿಗಳನ್ನು ಮಾಡುವ ಮೂಲಕ ತಮ್ಮ ಸಿಟ್ಟುತೀರಿಸಿಕೊಳ್ಳುವ ಚಾಳಿ ಅಂತರಜಾಲ ಲೋಕದಲ್ಲಿ ವ್ಯಾಪಕವಾಗಿ ಬೆಳೆಯುತ್ತಿದೆ ಎಂದು ತಜ್ಞರು ಹೇಳುತ್ತಾರೆ.

ವಿವಿಧ ಸಂಘಸಂಸ್ಥೆಗಳ ಜಾಲತಾಣಗಳ ಮೇಲೆ ಅವರ ವಿರೋಧಿಗಳು ಡಿಡಿಒಎಸ್ ದಾಳಿ ನಡೆಸುವುದು ಸಾಮಾನ್ಯವಾಗಿಹೋಗಿದೆಯಂತೆ. ಯಾವುದೋ ಸಿದ್ಧಾಂತವನ್ನು ವಿರೋಧಿಸುವ ಸೋಗಿನಲ್ಲ್ಲಿ ತಮ್ಮ ದುರುದ್ದೇಶ ಈಡೇರಿಸಿಕೊಳ್ಳಲು ಪ್ರಯತ್ನಿಸುವ ಸೈಬರ್ ದುಷ್ಕರ್ಮಿಗಳೂ ಈ ತಂತ್ರ ಉಪಯೋಗಿಸುತ್ತಿರುವ ಸಂಶಯವೂ ಇದೆ. ಡಿಡಿಒಎಸ್ ದಾಳಿಗಳನ್ನು ನಡೆಸಲು ಅನುವುಮಾಡಿಕೊಡುವ ತಂತ್ರಾಂಶಗಳು ವಿಶ್ವವ್ಯಾಪಿ ಜಾಲದ ಮೂಲಕ ಸುಲಭವಾಗಿ ಲಭ್ಯವಾಗುತ್ತಿರುವುದೂ ಈ ದಾಳಿಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಅಭಿಪ್ರಾಯಪಡಲಾಗುತ್ತಿದೆ.

ಯಾವ ಉದ್ದೇಶಕ್ಕೇ ಆಗಲಿ, ಡಿಡಿಒಎಸ್ ದಾಳಿ ಅಥವಾ ಅದರಂತಹ ಇನ್ನಾವುದೇ ಸೈಬರ್ ದುಷ್ಕೃತ್ಯಗಳಲ್ಲಿ ಭಾಗಿಯಾಗುವುದು ಶಿಕ್ಷಾರ್ಹ ಅಪರಾಧವಾಗುತ್ತದೆ; ಹೀಗಾಗಿ ಇವೆಲ್ಲ ತಾಪತ್ರಯಗಳಿಂದ ದೂರವೇ ಇರಿ ಎನ್ನುವುದು ತಜ್ಞರ ಸಲಹೆ.

ಡಿಸೆಂಬರ್ ೨೮, ೨೦೧೦ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಮಂಗಳವಾರ, ಡಿಸೆಂಬರ್ 21, 2010

ಗ್ರಿಡ್ ಕಂಪ್ಯೂಟಿಂಗ್ ಮಾಯೆ

ಟಿ ಜಿ ಶ್ರೀನಿಧಿ

ಕಳೆದ ದಶಕದಲ್ಲಿ ಗಣಕಗಳ ಸಂಸ್ಕರಣಾ ಸಾಮರ್ಥ್ಯದಲ್ಲಿ ಆಗಿರುವ ಬದಲಾವಣೆ ಅಭೂತಪೂರ್ವವಾದದ್ದು. ನೂರಿನ್ನೂರು ಮೆಗಾಹರ್ಟ್ಸ್ ವೇಗದ ಪ್ರಾಸೆಸರ್, ಕೆಲವು ನೂರು ಎಂಬಿಗಳಷ್ಟು ರ್‍ಯಾಮ್ - ಏಳೆಂಟು ವರ್ಷಗಳ ಹಿಂದಿನ ಗಣಕಗಳಲ್ಲಿ ಇಷ್ಟೇ ಸಾಮರ್ಥ್ಯ ಇರುತ್ತಿದ್ದದ್ದು. ಆದರೆ ಈಗ? ಪ್ರಾಸೆಸರ್‌ಗಳ ವೇಗ ಗಿಗಾಹರ್ಟ್ಸ್ ತಲುಪಿ ಎಷ್ಟೋ ಕಾಲವಾಗಿದೆ, ಒಂದೆರಡು ಜಿಬಿಗಿಂತ ಕಡಿಮೆ ರ್‍ಯಾಮ್ ಇರುವ ಗಣಕ ಹುಡುಕಿದರೂ ಸಿಗುವುದು ಕಷ್ಟ.

ಆದರೆ ಇಷ್ಟು ದೊಡ್ಡ ಸಂಸ್ಕರಣಾ ಸಾಮರ್ಥ್ಯದ ಬಳಕೆ ನಮ್ಮನಿಮ್ಮ ಮನೆಗಳಲ್ಲಿ ಸಮರ್ಪಕವಾಗಿ ಆಗುತ್ತಿದೆಯೋ ಇಲ್ಲವೋ ಎಂದು ನೋಡಿದಾಗ ಇಲ್ಲ ಎಂಬ ಉತ್ತರ ದೊರಕುವ ಸಾಧ್ಯತೆಯೇ ಹೆಚ್ಚು. ಗಣಕಗಳ ತಾಂತ್ರಿಕ ವಿನ್ಯಾಸ ಬದಲಾಗಿರುವಷ್ಟು ಅವುಗಳ ಬಳಕೆ ಹೆಚ್ಚಾಗಿಲ್ಲ. ಮುನ್ನೂರು ಮೆಗಾಹರ್ಟ್ಸ್, ಅರವತ್ತನಾಲ್ಕು ಎಂಬಿ ಮೆಮೊರಿ ಇದ್ದಾಗ ಗಣಕ ಬಳಸಿ ಏನು ಮಾಡುತ್ತಿದ್ದೆವೋ ಈಗಲೂ ಹೆಚ್ಚೂಕಡಿಮೆ ಅದೇ ಕೆಲಸ ಮಾಡುತ್ತೇವೆ, ಹೆಚ್ಚೆಂದರೆ ತಂತ್ರಾಂಶಗಳ ಆವೃತ್ತಿಗಳು ಬದಲಾಗಿವೆ ಅಷ್ಟೆ. ಹೀಗಾಗಿ ಗಣಕ ಕೆಲಸಮಾಡುತ್ತಿದ್ದಷ್ಟು ಹೊತ್ತೂ ಪ್ರಾಸೆಸರ್‌ನ ಬಳಕೆ ಬಹಳ ಕೆಳಮಟ್ಟದಲ್ಲೇ ಇರುತ್ತದೆ.

ವಿಶ್ವದಾದ್ಯಂತ ಗಣಕ ಬಳಸುವ ಬಹುತೇಕ ಮನೆಗಳ ಪರಿಸ್ಥಿತಿ ಹೆಚ್ಚೂಕಡಿಮೆ ಹೀಗೆಯೇ ಇದೆ. ಇಷ್ಟೆಲ್ಲ ಗಣಕಗಳಲ್ಲಿ ಹೀಗೆ ಉಪಯೋಗಕ್ಕೆ ಬಾರದೆ ಹೋಗುವ ಸಂಸ್ಕರಣಾ ಸಾಮರ್ಥ್ಯವನ್ನೆಲ್ಲ ಒಟ್ಟುಸೇರಿಸಿದರೆ ಅದೆಷ್ಟು ದೊಡ್ಡ ಪ್ರಮಾಣದ ಸಂಪನ್ಮೂಲ ದೊರಕಬಹುದು ಎಂಬ ಆಲೋಚನೆಯ ಪರಿಣಾಮವಾಗಿ ಹುಟ್ಟಿಕೊಂಡಿರುವ ಕ್ಷೇತ್ರವೇ 'ಗ್ರಿಡ್ ಕಂಪ್ಯೂಟಿಂಗ್'.

ಅಂತರಜಾಲ ಸಂಪರ್ಕ ಹೊಂದಿರುವ ಗಣಕಗಳು ಕೆಲಸಮಾಡುತ್ತಿರುವಾಗ ಅವುಗಳಲ್ಲಿ ಲಭ್ಯವಿರುವ ಹೆಚ್ಚುವರಿ ಸಂಸ್ಕರಣಾ ಸಾಮರ್ಥ್ಯವನ್ನು ಒಟ್ಟುಗೂಡಿಸಿ ಬಳಸಿಕೊಳ್ಳುವುದು ಗ್ರಿಡ್ ಕಂಪ್ಯೂಟಿಂಗ್‌ನ ಉದ್ದೇಶ. ದೇಶದಲ್ಲೆಲ್ಲ ಹರಡಿರುವ ವಾಹಕ ತಂತಿಗಳ ಬಲೆಯನ್ನು ಬಳಸಿ ವಿದ್ಯುತ್ ಜಾಲಗಳು (ಗ್ರಿಡ್) ಕೆಲಸಮಾಡುವಂತೆ ಇಲ್ಲಿ ವಿಶ್ವದಾದ್ಯಂತ ಅಂತರಜಾಲದ ಬಲೆಯ ಮೂಲಕ ಸಂಪರ್ಕದಲ್ಲಿರುವ ಗಣಕಗಳನ್ನು ಅತ್ಯಂತ ಸಂಕೀರ್ಣವಾದ ಲೆಕ್ಕಾಚಾರಗಳು ಹಾಗೂ ಮಾಹಿತಿ ಸಂಸ್ಕರಣೆ ಕೈಗೊಳ್ಳಲು ಬಳಸಿಕೊಳ್ಳಲಾಗುತ್ತದೆ.

ಗ್ರಿಡ್ ಕಂಪ್ಯೂಟಿಂಗ್‌ನ ಕಲ್ಪನೆ ಮೊದಲಿಗೆ ಬಂದದ್ದು ಇಯಾನ್ ಫಾಸ್ಟರ್ ಹಾಗೂ ಕಾರ್ಲ್ ಕೆಸ್ಸೆಲ್‌ಮ್ಯಾನ್ ಎಂಬ ತಂತ್ರಜ್ಞರಿಗೆ, ೧೯೯೦ರ ಸುಮಾರಿನಲ್ಲಿ. ನಂತರ ಇವರ ಜೊತೆಗೂಡಿದ ಸ್ಟೀವ್ ಟ್ಯೂಕ್ ಎಂಬಾತನ ಜೊತೆಯಲ್ಲಿ ಇವರು ಗ್ರಿಡ್ ಕಂಪ್ಯೂಟಿಂಗ್ ಕುರಿತ ಕನಸುಗಳನ್ನು ವಾಸ್ತವಕ್ಕೆ ಬದಲಿಸಲು ಶ್ರಮಿಸಿದರು. ಹೀಗಾಗಿಯೇ ಈ ತ್ರಿವಳಿಯನ್ನು ಒಟ್ಟಾಗಿ ಗ್ರಿಡ್ ಪಿತಾಮಹರೆಂದು ಗುರುತಿಸಲಾಗುತ್ತದೆ.

ಭಾರೀ ಪ್ರಮಾಣದ ಸಂಸ್ಕರಣಾ ಸಾಮರ್ಥ್ಯ ಬೇಕಾಗುವ ಅನೇಕ ವೈಜ್ಞಾನಿಕ ಚಟುವಟಿಕೆಗಳಲ್ಲಿ ಗ್ರಿಡ್ ಕಂಪ್ಯೂಟಿಂಗ್ ಬಳಕೆಯಾಗುತ್ತಿದೆ. ಇದರಿಂದಾಗಿ ಸಂಶೋಧನಾಲಯಗಳಿಗೆ ಅಪಾರ ಉಳಿತಾಯ ಆಗುತ್ತಿದೆ; ಅಷ್ಟೇ ಅಲ್ಲ, ಹೆಚ್ಚುಹೆಚ್ಚು ಆಸಕ್ತರಿಗೆ ಈ ಸಂಶೋಧನೆಗಳಲ್ಲಿ ಸಹಾಯಮಾಡಿದ ಸಂತೋಷ ಕೂಡ ಸಿಗುತ್ತಿದೆ. ಸಂಸ್ಕರಿಸಬೇಕಾದ ದತ್ತಾಂಶವನ್ನು ವಿಶ್ವದೆಲ್ಲೆಡೆಯ ಗಣಕಗಳ ನಡುವೆ ಹಂಚಲು ಬಳಸಲಾಗುತ್ತಿರುವ ಬರ್ಕ್‌ಲಿ ಓಪನ್ ಇನ್‌ಫ್ರಾಸ್ಟ್ರಕ್ಚರ್ ಫಾರ್ ನೆಟ್‌ವರ್ಕ್ ಕಂಪ್ಯೂಟಿಂಗ್ ಅಥವಾ BOINC ಎಂಬ ತಂತ್ರಜ್ಞಾನವೂ ಉಚಿತವಾಗಿ ಲಭ್ಯವಿರುವಂಥದ್ದು (ಓಪನ್ ಸೋರ್ಸ್).

ರಸಾಯನಶಾಸ್ತ್ರದಲ್ಲಿ ಉನ್ನತ ಅಧ್ಯಯನಗಳನ್ನು ಕೈಗೊಂಡಿರುವ ಫೋಲ್ಡಿಂಗ್@ಹೋಮ್, ಕ್ಷೀರಪಥ ಗೆಲಾಕ್ಸಿಯ ಕುರಿತು ಕೆಲಸಮಾಡುತ್ತಿರುವ ಮಿಲ್ಕಿವೇ@ಹೋಮ್, ಭೂಮಿಯಾಚೆಗಿನ ಬದುಕಿಗಾಗಿ ಹುಡುಕಾಟ ನಡೆಸುವ ಸೆಟಿ@ಹೋಮ್, ನಕ್ಷತ್ರಗಳ ಕುರಿತು ಸಂಶೋಧನೆ ಮಾಡುತ್ತಿರುವ ಐನ್‌ಸ್ಟೈನ್@ಹೋಮ್ ಮುಂತಾದ ಅನೇಕ ಕಾರ್ಯಕ್ರಮಗಳು ಗ್ರಿಡ್ ಕಂಪ್ಯೂಟಿಂಗ್ ಬಳಸುತ್ತಿವೆ.

ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಸಕ್ತ ಬಳಕೆದಾರರು ಅವುಗಳ ಜಾಲತಾಣಕ್ಕೆ ಹೋಗಿ ಅಗತ್ಯ ತಂತ್ರಾಂಶವನ್ನು (ಉಚಿತವಾಗಿ) ಪಡೆದುಕೊಂಡು ತಮ್ಮ ಗಣಕದಲ್ಲಿ ಅನುಸ್ಥಾಪಿಸಿಕೊಳ್ಳಬೇಕಾಗುತ್ತದೆ. ಬಳಕೆದಾರರ ಗಣಕ ತನ್ನ ಪೂರ್ಣ ಸಂಸ್ಕರಣಾ ಸಾಮರ್ಥ್ಯವನ್ನು ಬಳಸುತ್ತಿಲ್ಲದ ಸಂದರ್ಭಗಳಲ್ಲಿ ಆ ತಂತ್ರಾಂಶ ತನಗೆ ಬೇಕಾದ ಲೆಕ್ಕಾಚಾರ ಮಾಡಿಕೊಳ್ಳುತ್ತದೆ; ಸಂಸ್ಕರಿಸಬೇಕಾದ ದತ್ತಾಂಶ ಪಡೆದುಕೊಳ್ಳಲು, ಸಂಸ್ಕರಿಸಿದ ನಂತರ ದೊರೆತ ಮಾಹಿತಿಯನ್ನು ತಿರುಗಿ ಕಳುಹಿಸಲು ಅಂತರಜಾಲ ಸಂಪರ್ಕ ಇರಬೇಕಾದ್ದು ಕಡ್ಡಾಯ.

ಮುಂಬರುವ ದಿನಗಳಲ್ಲಿ ವಿಜ್ಞಾನ ಪ್ರಪಂಚಕ್ಕೆ ಭಾರೀ ಕೊಡುಗೆ ನೀಡಲಿದೆಯೆಂದು ನಿರೀಕ್ಷಿಸಲಾಗಿರುವ ಗ್ರಿಡ್ ಕಂಪ್ಯೂಟಿಂಗ್‌ನ ಬಗೆಗೆ ಭಾರತದಲ್ಲೂ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ಕೇಂದ್ರ ಸರ್ಕಾರದ ನೆರವು ಹಾಗೂ ಸಿ-ಡ್ಯಾಕ್ ಸಂಸ್ಥೆಯ ನೇತೃತ್ವದಲ್ಲಿ ರೂಪುಗೊಂಡಿರುವ 'ಗರುಡ' ಭಾರತದ ಮೊದಲ ಕಂಪ್ಯೂಟರ್ ಗ್ರಿಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತ ಹಾಗೂ ಯುರೋಪಿನ ಸಂಶೋಧನಾಲಯಗಳ ನಡುವೆ ಸಂಪರ್ಕ ಕಲ್ಪಿಸುವ ಇಯು-ಇಂಡಿಯಾ ಗ್ರಿಡ್ ಕೂಡ ತನ್ನ ಕೆಲಸ ಪ್ರಾರಂಭಿಸಿದೆ.

ಡಿಸೆಂಬರ್ ೨೧, ೨೦೧೦ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಮಂಗಳವಾರ, ಡಿಸೆಂಬರ್ 14, 2010

ಸ್ಪಾಮ್ ಎಂಬ ಇಮೇಲ್ ಕಸ

ಟಿ ಜಿ ಶ್ರೀನಿಧಿ

ಈಚೆಗೆ ಅಮೆರಿಕಾದ ಎಫ್‌ಬಿಐ ರಷ್ಯಾದ ಯುವಕನೊಬ್ಬನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿತು. ಓಲೆಗ್ ನಿಕೋಲ್ಯಾಂಕೋ ಎಂಬ ಇಪ್ಪತ್ತಮೂರು ವರ್ಷದ ಈ ಯುವಕನ ಮೇಲೆ ಹೊರಿಸಲಾಗಿರುವ ಆರೋಪಗಳು ಸಾಬೀತಾದರೆ ಕನಿಷ್ಟ ಮೂರು ವರ್ಷ ಜೈಲುಶಿಕ್ಷೆಯ ಜೊತೆಗೆ ಎರಡೂವರೆ ಲಕ್ಷ ಡಾಲರುಗಳಷ್ಟು ದಂಡವನ್ನೂ ತೆರಬೇಕಾಗುತ್ತದೆ ಎಂದು ಪತ್ರಿಕಾ ವರದಿಗಳು ಹೇಳುತ್ತವೆ.

ಈತ ಎಲ್ಲೂ ಬಾಂಬ್ ಸಿಡಿಸಿಲ್ಲ, ಅಥವಾ ಇನ್ನಾವುದೇ ರೂಪದ ಭಯೋತ್ಪಾದನೆ ಮಾಡಿಲ್ಲ; ಆತನ ಮೇಲಿರುವುದು ಇಮೇಲ್ ಮೂಲಕ ಕೋಟಿಗಟ್ಟಲೆ ರದ್ದಿ ಸಂದೇಶಗಳನ್ನು ಕಳಿಸಿ ಜನರನ್ನು ವಂಚಿಸಿದ, ಹಾಗೂ ಆ ಮೂಲಕ ಅಂತರಜಾಲದ ದುರ್ಬಳಕೆ ಮಾಡಿಕೊಂಡ ಆರೋಪ. ಒಂದು ಸಮಯದಲ್ಲಿ ಅಂತರಜಾಲದ ಮೂಲಕ ಹರಿದಾಡುತ್ತಿದ್ದ ಇಮೇಲ್ ರದ್ದಿ ಸಂದೇಶಗಳಲ್ಲಿ ಮೂರನೇ ಒಂದರಷ್ಟಕ್ಕೆ ಈತನೇ ಕಾರಣನಾಗಿದ್ದನಂತೆ!

ಸ್ಪಾಮ್ ಬಂತು ಸ್ಪಾಮ್
ಇಮೇಲ್ ಮಾಧ್ಯಮದ ಮೂಲಕ ಅನಗತ್ಯ ಮಾಹಿತಿಯನ್ನು ಬಲವಂತವಾಗಿ ಹೊತ್ತು ತರುವ ಇಂತಹ ರದ್ದಿ ಸಂದೇಶಗಳ ಹೆಸರೇ ಸ್ಪಾಮ್.

ಲೈಂಗಿಕ ಶಕ್ತಿ ಹೆಚ್ಚಿಸುವ ಮಾಯಾ ಔಷಧಿ, ರೋಲೆಕ್ಸ್‌ನಂತೆಯೇ ಕಾಣುವ ನಕಲಿ ಕೈಗಡಿಯಾರ, ಸಾವಿರದೊಂದು ಬಗೆಯ ಹೊಸರುಚಿ ಕಲಿಸಿಕೊಡುವ ಸಿ.ಡಿ., ಸುಲಭವಾಗಿ ದುಡ್ಡುಮಾಡುವ ವಿಧಾನ ಮೊದಲಾದ ವಿವಿಧ ಬಗೆಯ ಜಾಹೀರಾತುಗಳನ್ನು ನಾವು ಸ್ಪಾಮ್ ಸಂದೇಶಗಳಲ್ಲಿ ಕಾಣಬಹುದು. ವೈದ್ಯರ ಸಲಹೆಯಿಲ್ಲದೆ ಮಾರಾಟ ಮಾಡಬಾರದಾದ ಔಷಧಗಳನ್ನು (ಪ್ರಿಸ್ಕ್ರಿಪ್ಷನ್ ಡ್ರಗ್ಸ್) ಅನಧಿಕೃತವಾಗಿ ಮಾರುವವರ ದಂಧೆಗಂತೂ ಸ್ಪಾಮ್ ಸಂದೇಶಗಳೇ ಜೀವಾಳ.

ಭಾರೀ ಮೊತ್ತದ ಹಣದ ಆಮಿಷ ಒಡ್ಡಿ ಜನರನ್ನು ವಂಚಿಸುವವರು ಕೂಡ ಸ್ಪಾಮ್ ಸಂದೇಶಗಳನ್ನೇ ಬಳಸುತ್ತಾರೆ. ನನ್ನ ಬಳಿ ಅದೆಷ್ಟೋ ಲಕ್ಷ ಡಾಲರ್‌ಗಳಷ್ಟು ಕಪ್ಪು ಹಣ ಇದೆ; ಅದನ್ನು ನನ್ನ ದೇಶದಿಂದ ಹೊರಕ್ಕೆ ತರಲು ಸಹಾಯ ಮಾಡಿದರೆ ನಿನಗೆ ಅದರಲ್ಲಿ ಅರ್ಧಪಾಲು ಕೊಡುತ್ತೇನೆ ಎಂದೋ, ನಿನಗೆ ನಮ್ಮ ಸಂಸ್ಥೆ ನಡೆಸುವ ಲಾಟರಿಯಲ್ಲಿ ಲಕ್ಷಾಂತರ ಡಾಲರುಗಳ ಬಹುಮಾನ ಬಂದಿದೆ ಎಂದೋ ಅಥವಾ ನಿನಗೆ ವಿದೇಶದಲ್ಲಿ ಉದ್ಯೋಗ ಕೊಡಿಸುತ್ತೇನೆ ಎಂದೋ ಹೇಳುವ ಸ್ಪಾಮ್ ಸಂದೇಶಗಳು ಇಂತಹ ವಂಚನೆಗಳಿಗೆ ನಾಂದಿಹಾಡುತ್ತವೆ.

ನಕಲಿ ಇಮೇಲ್ ಹಾಗೂ ಜಾಲತಾಣಗಳ ಸಹಾಯದಿಂದ ಬಳಕೆದಾರರ ಖಾಸಗಿ ಮಾಹಿತಿಯನ್ನು ಕದಿಯುವ ಫಿಶಿಂಗ್ ಹಗರಣದಲ್ಲೂ ಸ್ಪಾಮ್ ಸಂದೇಶಗಳು ಬಳಕೆಯಾಗುತ್ತವೆ. ಸಾಕಷ್ಟು ನೈಜವಾಗಿಯೇ ತೋರುವ ಈ ಸಂದೇಶಗಳು ಸಾಮಾನ್ಯವಾಗಿ ಬೇರೆಬೇರೆ ಬ್ಯಾಂಕುಗಳ ಹೆಸರಿನಲ್ಲಿ ಆಗಿಂದಾಗ್ಗೆ ಬರುತ್ತಿರುತ್ತವೆ. ಬ್ಯಾಂಕಿನ ಹೆಸರು ಹೇಳಿ ನಂಬಿಸಿ ಬ್ಯಾಂಕ್ ಖಾತೆಯ ಅಥವಾ ಕ್ರೆಡಿಟ್ ಕಾರ್ಡಿನ ವಿವರಗಳನ್ನು ಕದಿಯುವುದು ಇಂತಹ ನಕಲಿ ಸಂದೇಶಗಳ ಉದ್ದೇಶವಾಗಿರುತ್ತದೆ. ಇದೇ ರೀತಿಯಲ್ಲಿ ಇಮೇಲ್ ಖಾತೆಯ ಪಾಸ್‌ವರ್ಡ್ ಕದ್ದು ಅದನ್ನು ದುರ್ಬಳಕೆ ಮಾಡಿಕೊಂಡ ಉದಾಹರಣೆಗಳೂ ಇವೆ.

ಬಾಟ್ ಮತ್ತು ಬಾಟ್‌ನೆಟ್
ವಿಶ್ವದಾದ್ಯಂತ ಹರಿದಾಡುವ ಸ್ಪಾಮ್ ಸಂದೇಶಗಳಲ್ಲಿ ದೊಡ್ಡ ಪಾಲು ನಮ್ಮನಿಮ್ಮಂಥ ಸಾಮಾನ್ಯ ಬಳಕೆದಾರರ ಗಣಕಗಳಿಂದ ಬರುತ್ತಿದೆಯಂತೆ. ಗೂಢಚಾರಿ ತಂತ್ರಾಂಶಗಳ ಮೂಲಕ ಈ ಗಣಕಗಳನ್ನು 'ಹೈಜಾಕ್' ಮಾಡುವ ಹ್ಯಾಕರ್‌ಗಳು ಅವನ್ನು ಸ್ಪಾಮ್ ಸಂದೇಶಗಳ ರವಾನೆಗಾಗಿ ಬಳಸುತ್ತಾರೆ.

ಯಾವುದೋ ಉಪಯುಕ್ತ ತಂತ್ರಾಂಶದ ಸೋಗಿನಲ್ಲಿ ಗಣಕವನ್ನು ಪ್ರವೇಶಿಸುವ ಇಂತಹ ತಂತ್ರಾಂಶ ಗಣಕದ ಕಾರ್ಯಾಚರಣ ವ್ಯವಸ್ಥೆಗೆ ಅಂಟಿಕೊಳ್ಳುತ್ತದೆ. ಪ್ರತಿ ಬಾರಿ ಗಣಕವನ್ನು ಚಾಲೂ ಮಾಡಿದಾಗಲೂ ಈ ತಂತ್ರಾಂಶ ಸಕ್ರಿಯವಾಗುತ್ತದೆ; ಸ್ವಇಚ್ಛೆಯಿಲ್ಲದೆಯೇ ಹ್ಯಾಕರ್‌ನ ಆದೇಶಗಳನ್ನು ಪಾಲಿಸಲು ಪ್ರಾರಂಭಿಸುವ ಗಣಕ ಹ್ಯಾಕರ್‌ನ ಅಣತಿಯಂತೆ ಸ್ಪಾಮ್ ಸಂದೇಶಗಳನ್ನು ರವಾನಿಸುತ್ತಲೇ ಹೋಗುತ್ತದೆ. ಇಂತಹ ಗಣಕಗಳು ಬೇರೊಬ್ಬರ ಆದೇಶ ಪಾಲಿಸುವ ಯಂತ್ರಮಾನವನಂತೆ (ರೋಬಾಟ್) ಕೆಲಸಮಾಡುವುದರಿಂದ ಅವುಗಳನ್ನು ಬಾಟ್‌ಗಳೆಂದು ಕರೆಯುತ್ತಾರೆ. ಬಾಟ್ ಎನ್ನುವುದು ರೋಬಾಟ್ ಎಂಬ ಹೆಸರಿನ ಅಪಭ್ರಂಶ. ಇಂತಹ ನೂರಾರು-ಸಾವಿರಾರು ಬಾಟ್‌ಗಳನ್ನು ಒಗ್ಗೂಡಿಸಿ ರಚನೆಯಾಗುವ ಜಾಲಗಳಿಗೆ 'ಬಾಟ್‌ನೆಟ್'ಗಳೆಂದು ಹೆಸರು.

ಅತ್ಯಂತ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುವ ಈ ಜಾಲಗಳು ಸ್ಪಾಮ್ ಸಮಸ್ಯೆಯ ಕೇಂದ್ರಬಿಂದುಗಳೆಂದರೆ ತಪ್ಪಲ್ಲ. ಇದೀಗ ಎಫ್‌ಬಿಐ ಕೈಗೆ ಸಿಕ್ಕುಹಾಕಿಕೊಂಡಿರುವ ಓಲೆಗ್ ನಿಕೋಲ್ಯಾಂಕೋ ಕೂಡ ಇಂತಹುದೇ ಬಾಟ್‌ನೆಟ್ ಒಂದನ್ನು ನಿರ್ವಹಿಸುತ್ತಿದ್ದ. ಆತನ ಜಾಲ ದಿನಕ್ಕೆ ಹತ್ತು ಬಿಲಿಯನ್ ರದ್ದಿ ಸಂದೇಶಗಳನ್ನು ಕಳುಹಿಸಲು ಶಕ್ತವಾಗಿತ್ತು ಎಂದು ತಜ್ಞರು ಹೇಳಿದ್ದಾರೆ. ನಕಲಿ ವಾಚುಗಳು ಹಾಗೂ ಅನಧಿಕೃತ ಔಷಧಿ ಮಾರಾಟಗಾರರಿಂದ ಹಣ ಪಡೆದು ಆತ ಇಷ್ಟೆಲ್ಲ ರದ್ದಿ ಸಂದೇಶಗಳನ್ನು ಕಳುಹಿಸುತ್ತಿದ್ದನಂತೆ.

ಸ್ಪಾಮ್ ತಡೆ ಹೇಗೆ?
ಸ್ಪಾಮ್ ಕಾಟದಿಂದ ಪಾರಾಗಲು ಬಳಕೆದಾರರ ವಿವೇಚನೆಯೇ ಸೂಕ್ತ ಮಾರ್ಗ ಎನ್ನುವುದು ತಜ್ಞರ ಅಭಿಪ್ರಾಯ. ಸಂದೇಹಾಸ್ಪದ ಜಾಲತಾಣಗಳಲ್ಲಿ ನಿಮ್ಮ ಸಂಪರ್ಕ ವಿವರಗಳನ್ನು ದಾಖಲಿಸದಿರುವುದು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ. ಅಂತೆಯೇ ನಂಬಲಸಾಧ್ಯವೆಂದು ತೋರುವ ಸಂದೇಶಗಳನ್ನು ಕಡ್ಡಾಯವಾಗಿ ನಂಬದಿರುವುದು ಇನ್ನೊಂದು ಅತ್ಯಗತ್ಯ ಕ್ರಮ. ಯಾವುದೋ ದೇಶದಲ್ಲಿರುವ ಯಾರೋ ನಿಮಗೆ ಕೋಟ್ಯಂತರ ರೂಪಾಯಿ ಕೊಡುತ್ತೇವೆ ಎಂದೋ ನೀವು ಕೇಳಿಲ್ಲದೆಯೇ ವಿದೇಶದಲ್ಲಿ ಉದ್ಯೋಗಾವಕಾಶ ಕೊಡುತ್ತೇವೆ ಎಂದೋ ಹೇಳಿದರೆ ಅದರಲ್ಲಿ ಖಂಡಿತಾ ಏನೋ ಮೋಸವಿರುತ್ತದೆ ಎನ್ನುವುದು ನೆನಪಿರಲಿ. ಹಾಗೆಯೇ ಯಾವುದೇ ತಾಣ ನಿಮ್ಮ ಬ್ಯಾಂಕ್, ಕ್ರೆಡಿಟ್ ಕಾರ್ಡ್ ಅಥವಾ ಇಮೇಲ್ ಖಾತೆಯ ವಿವರಗಳನ್ನು ದಾಖಲಿಸಲು ಹೇಳಿದರೆ ಎಚ್ಚರವಹಿಸಿ, ಸುಖಾಸುಮ್ಮನೆ ಯಾವ ಸಂಸ್ಥೆಯೂ ನಿಮ್ಮ ವೈಯುಕ್ತಿಕ ವಿವರಗಳನ್ನು ಕೇಳುವುದಿಲ್ಲ ಎನ್ನುವ ವಿಷಯ ಸದಾ ನಿಮ್ಮ ನೆನಪಿನಲ್ಲಿರಲಿ.

ಡಿಸೆಂಬರ್ ೧೪, ೨೦೧೦ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಮಂಗಳವಾರ, ಡಿಸೆಂಬರ್ 7, 2010

ಮೌಸ್ ಪುರಾಣ

ಟಿ ಜಿ ಶ್ರೀನಿಧಿ

ಈ ವರ್ಷದ ಜುಲೈನಲ್ಲಿ ಆಪಲ್ ಸಂಸ್ಥೆ ತನ್ನ ಗಣಕಗಳ ಬಳಕೆದಾರರಿಗಾಗಿ ಮ್ಯಾಜಿಕ್ ಟ್ರ್ಯಾಕ್‌ಪಾಡ್ ಎಂಬುದೊಂದು ಹೊಸ ಸಾಧನವನ್ನು ಪರಿಚಯಿಸಿತು. ಲ್ಯಾಪ್‌ಟಾಪ್ ಗಣಕಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸ್ಪರ್ಶಸಂವೇದಿ ಟಚ್‌ಪ್ಯಾಡುಗಳನ್ನು ಡೆಸ್ಕ್‌ಟಾಪ್‌ಗಳಲ್ಲೂ ಬಳಸುವಂತೆ ಮಾಡುವ ಪ್ರಯತ್ನ ಇದು. ಕೀಬೋರ್ಡ್ ಪಕ್ಕದಲ್ಲಿ ಇಟ್ಟುಕೊಳ್ಳುವ ಈ ಪುಟ್ಟ ಗಾಜಿನ ತುಂಡಿನ ಮೇಲೆ ಬೆರಳುಗಳನ್ನು ಓಡಾಡಿಸುವ ಮೂಲಕ - ಥೇಟ್ ಟಚ್ ಸ್ಕ್ರೀನ್ ಮೊಬೈಲ್‌ನಂತೆಯೇ - ಗಣಕವನ್ನು ನಿಯಂತ್ರಿಸುವುದು ಸಾಧ್ಯ. ಕ್ಲಿಕ್ ಮಾಡುವುದು, ಸ್ಕ್ರಾಲ್ ಮಾಡುವುದು, ಪರದೆಯ ಮೇಲಿನ ಚಿತ್ರವನ್ನು ಹೇಗೆ ಬೇಕೋ ಹಾಗೆ ತಿರುಗಿಸುವುದು, ಇ-ಪುಸ್ತಕದ ಪುಟಗಳನ್ನು ಮಗುಚುವುದು - ಇವೆಲ್ಲ ಬೆರಳುಗಳ ಚಲನೆಯಿಂದಲೇ ಸಾಧ್ಯವಾಗುವಾಗ ಮೌಸ್‌ನ ಅಗತ್ಯವೇ ಇಲ್ಲ!

ಹೀಗಾಗಿಯೇ ಮ್ಯಾಜಿಕ್ ಟ್ರ್ಯಾಕ್‌ಪ್ಯಾಡ್‌ನ ಜೊತೆಗೆ ಹಳೆಯದೊಂದು ಪ್ರಶ್ನೆಯೂ ಗಣಕ ಲೋಕದತ್ತ ಮತ್ತೊಮ್ಮೆ ಹರಿದುಬಂತು - "ಕಂಪ್ಯೂಟರ್ ಮೌಸ್‌ಗೆ ವಿದಾಯ ಹೇಳುವ ಕಾಲ ಸಮೀಪಿಸಿದೆಯೆ?

ಇಲಿ ಇತಿಹಾಸ
ವಿಶ್ವದ ಗಣಕ ಬಳಕೆದಾರರ ಅಚ್ಚುಮೆಚ್ಚಿನ ಸಂಗಾತಿಯಾಗಿ ಸಾಗಿಬಂದಿರುವ ಸಾಧನ ಕಂಪ್ಯೂಟರ್ ಮೌಸ್. ಗಣಕ ಬಳಸಬೇಕಾದರೆ ಮೌಸ್ ಬೇಕೇಬೇಕು ಎನ್ನುವಷ್ಟರ ಮಟ್ಟದ್ದು ಈ ಸಾಧನದ ಜನಪ್ರಿಯತೆ. ನಾಲ್ಕು ದಶಕಗಳ ಹಿಂದೆ ಬಳಕೆಗೆ ಬಂದ ಈ ಸಾಧನದ ಸೃಷ್ಟಿ ಪ್ರಾಯಶಃ ಗಣಕ ಜಗತ್ತಿನ ಅತ್ಯಂತ ಪ್ರಮುಖ ಸಾಧನೆಗಳಲ್ಲೊಂದು.

ಕಂಪ್ಯೂಟರ್ ಮೌಸ್‌ನ ಇತಿಹಾಸ ಶುರುವಾಗುವುದು ೧೯೬೮ರಲ್ಲಿ. ಆಗಿನ್ನೂ ಕಂಪ್ಯೂಟರ್ ತಂತ್ರಜ್ಞಾನ ನಿಧಾನವಾಗಿ ಅಭಿವೃದ್ಧಿ ಹೊಂದುತ್ತಿತ್ತು. ಆ ವರ್ಷ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ನಡೆದ ಕಂಪ್ಯೂಟರ್ ತಂತ್ರಜ್ಞಾನ ಸಮ್ಮೇಳನದಲ್ಲಿ ಡಗ್ಲಾಸ್ ಎಂಗೆಲ್‌ಬಾರ್ಟ್ ಎಂಬಾತ 'ಎಕ್ಸ್-ವೈ ಪೊಸಿಷನ್ ಇಂಡಿಕೇಟರ್ ಫಾರ್ ಎ ಡಿಸ್ಪ್ಲೇ ಸಿಸ್ಟಮ್' ಎಂಬ ಸಾಧನವನ್ನು ಪ್ರದರ್ಶಿಸಿದ. ಇದೇ ಇಂದಿನ ಗಣಕಗಳ ಜೀವಾಳವಾಗಿರುವ ಮೌಸ್‌ನ ಪೂರ್ವಜ.

ಎಂಗೆಲ್‌ಬಾರ್ಟ್‌ನ ಮೊದಲ ಮೌಸ್ ಮರದಿಂದ ತಯಾರಿಸಿದ್ದಾಗಿತ್ತು. ಆತನ ಸಹಚರ ಬಿಲ್ ಇಂಗ್ಲಿಷ್ ಎಂಬಾತ ಇದನ್ನು ನಿರ್ಮಿಸಿದ್ದ. ಈ ಸಾಧನದ ತಳದಲ್ಲಿ ಎರಡು ಗಾಲಿಗಳಿದ್ದರೆ, ಮೇಲ್ಭಾಗದಲ್ಲಿ ಒಂದೇ ಒಂದು ಕೆಂಪು ಬಣ್ಣದ ಗುಂಡಿ ಇತ್ತು. ಎಂಗೆಲ್‌ಬಾರ್ಟ್‌ನ ಸಹೋದ್ಯೋಗಿಗಳಿಗೆ ಈ ವಿಚಿತ್ರ ಯಂತ್ರ ಇಲಿಯಂತೆ ಕಂಡಿದ್ದರಿಂದ ಅವರು ಅದನ್ನು ಮೌಸ್ ಎಂದು ಕರೆದರು ಎನ್ನುವುದು ಪ್ರತೀತಿ.

ಇದೇ ಎಂಗೆಲ್‌ಬಾರ್ಟ್ ಮುಂದೆ ಚಿತ್ರಾತ್ಮಕ ಸಂಪರ್ಕ ಸಾಧನ - ಗ್ರಾಫಿಕಲ್ ಯೂಸರ್ ಇಂಟರ್‌ಫೇಸ್ (ಜಿಯುಐ) - ಅನ್ನೂ ಸೃಷ್ಟಿಸಿದ. ಪಠ್ಯರೂಪದ ಆದೇಶಗಳ ಬದಲಿಗೆ ಮೌಸ್ ಕ್ಲಿಕ್‌ಗಳಿಂದ ಗಣಕಕ್ಕೆ ಆದೇಶ ನೀಡುವುದು ಈ ವ್ಯವಸ್ಥೆಯಿಂದಾಗಿ ಸಾಧ್ಯವಾಯಿತು. ಈ ವ್ಯವಸ್ಥೆಯನ್ನು ಆಧರಿಸಿ ರೂಪಗೊಂಡ ವಿಂಡೋಸ್ ಕಾರ್ಯಾಚರಣ ವ್ಯವಸ್ಥೆ ಗಣಕಗಳ ಬಳಕೆಯಲ್ಲಿ ಹೊಸದೊಂದು ಶಕೆಯನ್ನೇ ಪ್ರಾರಂಭಿಸಿತು. ಗಣಕಗಳಲ್ಲಿ ಚಿತ್ರಾತ್ಮಕ ಸಂಪರ್ಕ ಸಾಧನ ಹೊಂದಿರುವ ತಂತ್ರಾಂಶಗಳ ಬಳಕೆ ಹೆಚ್ಚುತ್ತಿದ್ದಂತೆ ಮೌಸ್‌ನ ಜನಪ್ರಿಯತೆಯೂ ಹೆಚ್ಚುತ್ತಾ ಹೋಯಿತು.

ಮೌಸ್ ಬದಲು ನೌಸ್
ಈಚಿನ ವರ್ಷಗಳಲ್ಲಿ ಹೊಸ ತಂತ್ರಜ್ಞಾನಗಳು ಅಭಿವೃದ್ಧಿ ಹೊಂದಿದಂತೆ ಕಂಪ್ಯೂಟರ್ ಮೌಸ್‌ಗೆ ಹಲವಾರು ಬದಲಿಗಳು ತಯಾರಾಗಿವೆ. ಸ್ಪರ್ಷವನ್ನು ಗ್ರಹಿಸಿ ಕೆಲಸಮಾಡುವ ಟಚ್ ಸ್ಕ್ರೀನ್ ತಂತ್ರಜ್ಞಾನವಂತೂ ಬಹಳ ಸಾಮಾನ್ಯವಾಗಿಹೋಗಿದೆ: ಮೊಬೈಲ್ ದೂರವಾಣಿ, ಎಟಿಎಂಗಳಿಂದ ಪ್ರಾರಂಭಿಸಿ ಗಣಕದ ಮಾನಿಟರ್‌ವರೆಗೆ ಎಲ್ಲೆಲ್ಲೂ ಟಚ್‌ಸ್ಕ್ರೀನ್ ಭರಾಟೆ ಕಾಣಸಿಗುತ್ತಿದೆ.

ಬಳಕೆದಾರರ ಮುಖಭಾವ, ಕಣ್ಣಿನ ದೃಷ್ಟಿ, ಹಾವಭಾವಗಳನ್ನು ಗ್ರಹಿಸಿ ಕೆಲಸಮಾಡುವ ಸಾಧನಗಳೂ ತಯಾರಾಗುತ್ತಿವೆ. ಗಣಕದ ಮುಂದೆ ಕುಳಿತ ಬಳಕೆದಾರನ ಮೂಗಿನ ಚಲನೆಯನ್ನು ಕ್ಯಾಮೆರಾ ಮೂಲಕ ಗಮನಿಸಿಕೊಂಡು ಅದಕ್ಕೆ ತಕ್ಕಂತೆ ಕೆಲಸಮಾಡುವ 'ನೌಸ್' ಎಂಬ ವಿಚಿತ್ರ ಸಾಧನ ಕೂಡ ಇದೆ - ನೋಸ್ ಬಳಸಿ ಉಪಯೋಗಿಸುವ ಮೌಸ್ ಇದು. ಬಳಕೆದಾರರ ಮೂಗು ಹೇಗೆಲ್ಲ ಚಲಿಸುತ್ತದೋ ಪರದೆಯ ಮೇಲಿನ ಮೌಸ್ ಪಾಯಿಂಟರ್ ಕೂಡ ಹಾಗೆಯೇ ಓಡಾಡುತ್ತದೆ. ಕ್ಲಿಕ್ ಮಾಡಲು ಕಣ್ಣು ಮಿಟುಕಿಸಿದರೆ ಸಾಕು!

ದಿನೇದಿನೇ ಬೆಳೆಯುತ್ತಿರುವ ಕಂಪ್ಯೂಟರ್ ಗೇಮ್ಸ್ ಮಾರುಕಟ್ಟೆ ಮತ್ತಷ್ಟು ಹೊಸ ಪ್ರಯೋಗಗಳಿಗೆ ಕೈಹಾಕಿದೆ. ಕೀಬೋರ್ಡ್, ಜಾಯ್‌ಸ್ಟಿಕ್ ಎಲ್ಲ ಬಿಟ್ಟು ಪುಟ್ಟದೊಂದು ಉಪಕರಣ ಹಿಡಿದುಕೊಂಡು ಕೈಯನ್ನು ಆಚೀಚೆ ಬೀಸುವ ಮೂಲಕವೇ ಆಟವನ್ನು ನಿಯಂತ್ರಿಸಲು ಅನುವುಮಾಡಿಕೊಟ್ಟ 'ನಿಂಟೆಂಡೋ ವೀ' ಈಗಾಗಲೇ ಅಪಾರ ಜನಪ್ರಿಯತೆ ಗಳಿಸಿದೆ. ಮೊಬೈಲ್‌ನಲ್ಲೂ ಅಷ್ಟೆ, ಚಲನೆಯನ್ನು ಪತ್ತೆಮಾಡುವ (ಮೋಷನ್ ಡಿಟೆಕ್ಷನ್) ತಂತ್ರಜ್ಞಾನದಿಂದಾಗಿ ಮೊಬೈಲ್ ದೂರವಾಣಿಯನ್ನು ಆಚೀಚೆ ಅಲುಗಾಡಿಸುವ ಮೂಲಕವೇ ಆಟವಾಡುವುದು ಸಾಧ್ಯವಾಗಿದೆ.

ಆಲೋಚನೆಗಳನ್ನು ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ವರ್ತಿಸುವ ಉಪಕರಣಗಳೂ ಇಷ್ಟರಲ್ಲೇ ತಯಾರಾಗಲಿವೆ ಎಂಬ ಸುದ್ದಿ ಕೂಡ ಇದೆ.

ಇವೆಲ್ಲ ಘಟನೆಗಳು ಮೌಸ್‌ನ ಅಂತ್ಯಕಾಲ ಸಮೀಪಿಸಿರುವುದರ ಸೂಚನೆಗಳು ಎಂದು ತಜ್ಞರು ಹೇಳುತ್ತಾರೆ. ಕಳೆದ ಐದಾರು ವರ್ಷಗಳಲ್ಲಿ ಕಾಣದಂತೆ ಮಾಯವಾದ ಫ್ಲಾಪಿಗಳ ಹಾಗೆಯೇ ಮೌಸ್ ಕೂಡ ಮುಂಬರುವ ವರ್ಷಗಳಲ್ಲಿ ಅಪರೂಪವಾಗಲಿದೆ ಎನ್ನುವುದು ಅವರ ಅಭಿಪ್ರಾಯ.

ಡಿಸೆಂಬರ್ ೭, ೨೦೧೦ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಮಂಗಳವಾರ, ನವೆಂಬರ್ 30, 2010

ಹುಡುಕಾಟದ ಎರಡು ದಶಕ

ಟಿ ಜಿ ಶ್ರೀನಿಧಿ

೧೯೯೦ನೇ ಇಸವಿ. ಅಂತರಜಾಲ ತನ್ನ ಬಾಲ್ಯಾವಸ್ಥೆಯಲ್ಲಿದ್ದ ಸಮಯ. ವಿಶ್ವವ್ಯಾಪಿ ಜಾಲವಂತೂ ಆಗತಾನೇ ಕಣ್ಣುಬಿಡುತ್ತಿತ್ತು. ಕೆನಡಾದ ಮೆಕ್‌ಗಿಲ್ ವಿಶ್ವವಿದ್ಯಾಲಯದಲ್ಲಿದ್ದ ಅಲಾನ್ ಎಮ್‌ಟೇಜ್ ಹಾಗೂ ಆತನ ಮಿತ್ರರು ಆ ವರ್ಷದಲ್ಲಿ 'ಆರ್ಚಿ' ಎಂಬ ತಂತ್ರಾಂಶ ಸೃಷ್ಟಿಸಿದರು. ಈ ತಂತ್ರಾಂಶ ಅಂದಿನ ಅಂತರಜಾಲದಲ್ಲಿ ಲಭ್ಯವಿದ್ದ ಕಡತಗಳ ಹೆಸರನ್ನೆಲ್ಲ ಪಟ್ಟಿಮಾಡಿಟ್ಟುಕೊಂಡು ಅವುಗಳಲ್ಲಿ ನಿಮಗೆ ಬೇಕಾದ್ದನ್ನು ಹುಡುಕಲು ಅನುವುಮಾಡಿಕೊಡುತ್ತಿತ್ತು.

ಅದೇ 'ಆರ್ಚಿ' ಇಂದಿನ ಸರ್ಚ್ ಇಂಜನ್‌ಗಳ ಪೂರ್ವಜ. ಪ್ರಪಂಚದ ಮೊದಲ ಸರ್ಚ್‌ಇಂಜನ್ ಎಂದು ಗುರುತಿಸಲಾಗುವ ಈ ತಂತ್ರಾಂಶ ಸೃಷ್ಟಿಯಾಗಿ ಇದೀಗ ಇಪ್ಪತ್ತು ವರ್ಷ.

ಸರ್ಚ್ ಇಂಜನ್ ಅಂದರೇನು?ವಿಶ್ವವ್ಯಾಪಿ ಜಾಲದಲ್ಲಿರುವ ಮಾಹಿತಿಯನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಹುಡುಕಲು ಸಹಾಯಮಾಡುವ ತಂತ್ರಾಂಶಕ್ಕೆ ಸರ್ಚ್ ಇಂಜನ್ ಅಥವಾ ಶೋಧನ ಚಾಲಕ ತಂತ್ರಾಂಶ ಎಂದು ಹೆಸರು. ನಮಗೆಲ್ಲ ಚಿರಪರಿಚಿತವಾದ ಗೂಗಲ್, ಬಿಂಗ್ ಮುಂತಾದವೆಲ್ಲ ಸರ್ಚ್ ಇಂಜನ್‌ಗೆ ಉದಾಹರಣೆಗಳು.

ಅಂತರಜಾಲದಲ್ಲಿದ್ದ ಕಡತಗಳನ್ನಷ್ಟೆ ಹುಡುಕುತ್ತಿದ್ದ 'ಆರ್ಚಿ' ತಂತ್ರಾಂಶಕ್ಕಿಂತ ಭಿನ್ನವಾಗಿ ಕೆಲಸಮಾಡುವ ಇವು ವಿಶ್ವವ್ಯಾಪಿ ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಹುಡುಕಿಕೊಡುತ್ತವೆ. ವಿವಿಧ ವಿಷಯಗಳಿಗೆ ಸಂಬಂಧಪಟ್ಟ ಪಠ್ಯವನ್ನಷ್ಟೆ ಅಲ್ಲದೆ ಚಿತ್ರಗಳು, ಸುದ್ದಿಗಳು, ಇ-ಪುಸ್ತಕಗಳು, ವೀಡಿಯೋಗಳು, ಭೂಪಟಗಳು ಮುಂತಾದವನ್ನೆಲ್ಲ ಈ ಸರ್ಚ್ ಇಂಜನ್‌ಗಳು ಹುಡುಕಿಕೊಡಬಲ್ಲವು.

ಎಲ್ಲಬಗೆಯ ಮಾಹಿತಿಯನ್ನೂ ಹುಡುಕಿಕೊಡುವ ಇಂತಹ ಸರ್ಚ್‌ಇಂಜನ್‌ಗಳ ಜೊತೆಗೆ ವಿಜ್ಞಾನ, ಪ್ರವಾಸ ಮುಂತಾದ ನಿರ್ದಿಷ್ಟ ವಿಷಯಗಳಿಗೆ ಮಾತ್ರವೇ ಸೀಮಿತವಾದ ವರ್ಟಿಕಲ್ ಸರ್ಚ್ ಇಂಜನ್‌ಗಳು ಕೂಡ ಇವೆ; ಯಾವುದೇ ವಿಷಯದ ಕುರಿತು ಸಮಗ್ರ ಮಾಹಿತಿ ಒದಗಿಸುವ ವುಲ್ಫ್‌ರಮ್ ಆಲ್ಫಾದಂತಹ ನಾಲೆಜ್ ಇಂಜನ್‌ಗಳೂ ರೂಪಗೊಂಡಿವೆ.

ಹುಡುಕುವ ಜೇಡವಿಶ್ವವ್ಯಾಪಿ ಜಾಲದಲ್ಲಿ ಮಾಹಿತಿಗಾಗಿ ಹುಡುಕಾಟ ನಡೆಸಲು ಸರ್ಚ್ ಇಂಜನ್‌ಗಳು ವೆಬ್ ಸ್ಪೈಡರ್‌ಗಳೆಂಬ ತಂತ್ರಾಂಶಗಳನ್ನು ಬಳಸುತ್ತವೆ. ಇವನ್ನು ನಾವು ಜೇಡಗಳೆಂದು ಕರೆಯೋಣ. ವಿಶ್ವವ್ಯಾಪಿ ಜಾಲದಲ್ಲಿರುವ ಲಕ್ಷಾಂತರ ಜಾಲತಾಣಗಳನ್ನು ಹಾಗೂ ಅವುಗಳಲ್ಲಿರುವ ಪುಟಗಳನ್ನು ಅವುಗಳ ಜನಪ್ರಿಯತೆಗೆ ಅನುಗುಣವಾಗಿ ವರ್ಗೀಕರಿಸಿ, ಆ ಪುಟಗಳಲ್ಲಿರುವ ಮಾಹಿತಿ ಯಾವ ವಿಷಯಗಳಿಗೆ ಸಂಬಂಧಿಸಿದ್ದು ಎಂಬ ಅಂಶವನ್ನು ದಾಖಲಿಸಿಕೊಳ್ಳುವುದು ಈ ಜೇಡಗಳ ಕೆಲಸ.

ಜಾಲತಾಣಗಳನ್ನು ರೂಪಿಸುವವರು ಜೇಡಗಳಿಗೆ ಸಹಾಯವಾಗಲೆಂದೇ ತಮ್ಮ ತಾಣದಲ್ಲಿರುವ ಪುಟಗಳ ಬಗ್ಗೆ ವಿವರಗಳನ್ನು ಮೆಟಾ ಟ್ಯಾಗ್‌ಗಳ ರೂಪದಲ್ಲಿ ಶೇಖರಿಸಿಟ್ಟಿರುತ್ತಾರೆ. ಜೇಡಗಳ ಹುಡುಕಾಟ ಇವೇ ಮೆಟಾ ಟ್ಯಾಗ್‌ಗಳನ್ನು ಆಧರಿಸಿರುತ್ತದೆ.

ಈ ಜೇಡಗಳು ಸಾಮಾನ್ಯವಾಗಿ ತಮ್ಮ ಹುಡುಕಾಟವನ್ನು ಅತ್ಯಂತ ಪ್ರಸಿದ್ಧ ಜಾಲತಾಣಗಳಿಂದ ಪ್ರಾರಂಭಿಸುತ್ತವೆ. ಅಲ್ಲಿಂದ ಮುಂದಕ್ಕೆ ಆ ಜಾಲತಾಣ ಹಾಗೂ ಅದರ ಸರ್ವರ್‌ನಲ್ಲಿರುವ ಇತರ ಎಲ್ಲ ಪುಟಗಳ ಮೇಲೂ ಒಮ್ಮೆ ಕಣ್ಣಾಡಿಸಿ ಅವುಗಳಲ್ಲಿರುವ ಮಾಹಿತಿಗೆ ಅನುಗುಣವಾಗಿ ಅವನ್ನು ವರ್ಗೀಕರಿಸಿಟ್ಟುಕೊಳ್ಳುವ ಕೆಲಸ ಶುರುವಾಗುತ್ತದೆ. ಒಂದು ಜಾಲತಾಣದಲ್ಲಿರುವ ಎಲ್ಲ ಲಿಂಕ್‌ಗಳನ್ನೂ ಈ ಜೇಡಗಳು ಹಿಂಬಾಲಿಸುವುದರಿಂದ ಅವುಗಳ ನಿಲುಕಿಗೆ ಸಿಗುವ ಪುಟಗಳ ಸಂಖ್ಯೆ ಬೆಳೆಯುತ್ತಲೇ ಹೋಗುತ್ತದೆ. ಹೀಗೆ ಸಂಗ್ರಹಿಸಲಾದ ಮಾಹಿತಿಯ ಅಧಾರದ ಮೇಲೆ ಒಂದು ಅಕಾರಾದಿಯನ್ನು (ಇಂಡೆಕ್ಸ್) ತಯಾರಿಸಿಕೊಳ್ಳುವ ಸರ್ಚ್ ಇಂಜನ್‌ಗಳು ನಮಗೆ ಬೇಕಾದದ್ದನ್ನು ಅತ್ಯಂತ ವೇಗವಾಗಿ ಹುಡುಕಿಕೊಳ್ಳಲು ಸಹಾಯ ಮಾಡುತ್ತವೆ.

ಹುಡುಕಾಟದ ವ್ಯವಹಾರನಮಗೆ ಬೇಕಾದ ಮಾಹಿತಿಯ ಪಕ್ಕದಲ್ಲೇ ಒಂದಷ್ಟು ಜಾಹೀರಾತುಗಳನ್ನೂ ಪ್ರದರ್ಶಿಸುವ ಮೂಲಕ ಸರ್ಚ್ ಇಂಜನ್‌ಗಳು ಹಣ ಸಂಪಾದಿಸುತ್ತವೆ. ಬಳಕೆದಾರ ಯಾವುದೋ ನಿರ್ದಿಷ್ಟ ಮಾಹಿತಿಗಾಗಿ ಹುಡುಕಿದಾಗ ಪ್ರಾಯೋಜಿತ ಲಿಂಕ್‌ಗಳನ್ನು ಪ್ರದರ್ಶಿಸುವ ಸರ್ಚ್ ಇಂಜನ್‌ಗಳೂ ಇವೆ. ಈ ಲಿಂಕ್‌ಗಳನ್ನು ತೋರಿಸಲು ಅವು ಜಾಹೀರಾತುದಾರರಿಂದ ಹಣ ಪಡೆದಿರುತ್ತವೆ.

ಮುಂದಿನ ಹಾದಿಪ್ರತಿಯೊಬ್ಬ ಬಳಕೆದಾರನೂ ಯಾವಯಾವ ತಾಣಗಳಿಗೆ ಭೇಟಿಕೊಡುತ್ತಾನೆ ಎಂಬುದನ್ನು ಗಮನಿಸಿಕೊಂಡು ಅದರ ಆಧಾರದ ಮೇಲೆ ಅಕಾರಾದಿ (ಇಂಡೆಕ್ಸ್) ಸಿದ್ಧಪಡಿಸಿಕೊಳ್ಳುವ ವಾವ್ಡ್ ಹಾಗೂ ಫಾರೂನಂತಹ ಸರ್ಚ್ ಇಂಜನ್‌ಗಳು ಇತ್ತೀಚೆಗೆ ಪ್ರಾರಂಭವಾಗಿವೆ. ಈ ಸರ್ಚ್ ಇಂಜನ್‌ಗಳು ಎಲ್ಲ ಬಳಕೆದಾರರ ಗಣಕದಲ್ಲೂ ಒಂದೊಂದು ಅಕಾರಾದಿಯನ್ನು ಇರಿಸುವ, ಹಾಗೂ ಅತಿ ಹೆಚ್ಚು ಬಳಕೆದಾರರನ್ನು ಆಕರ್ಷಿಸುವ ತಾಣಗಳನ್ನಷ್ಟೆ ತೋರಿಸುವ ಮೂಲಕ ಹುಡುಕಾಟವನ್ನು ಇನ್ನಷ್ಟು ಕ್ಷಿಪ್ರ ಹಾಗೂ ನಿಖರಗೊಳಿಸುವ ಮಹತ್ವಾಕಾಂಕ್ಷೆ ಹೊಂದಿವೆ.

ಯಾವುದೇ ವಿಷಯವನ್ನು ಕುರಿತ ಮಾಹಿತಿಯನ್ನು ಜನರ ನೆರವಿನಿಂದಲೇ ಒಟ್ಟುಗೂಡಿಸಿ ಹುಡುಕಾಟದ ಪ್ರಕ್ರಿಯೆಯನ್ನು ಸುಲಭಗೊಳಿಸುವ ಸಮುದಾಯ ಸರ್ಚ್‌ಇಂಜನ್‌ಗಳ ಸೃಷ್ಟಿಗಾಗಿ ಅನೇಕ ಪ್ರಯತ್ನಗಳು ಸಾಗಿವೆ. ಇಂತಹ ತಾಣಗಳು ಟ್ವೀಟರ್ ಹಾಗೂ ಫೇಸ್‌ಬುಕ್‌ನಂತಹ ತಾಣಗಳಲ್ಲಿ ಲಭ್ಯವಿರುವ ಸಂದೇಶಗಳನ್ನೂ ಹುಡುಕಿಕೊಡುವಂತಿರಬೇಕು ಎನ್ನುವ ಉದ್ದೇಶವೂ ಇದೆ.

ತನ್ನನ್ನು 'ಹೆಲ್ಪ್ ಇಂಜನ್' ಎಂದು ಗುರುತಿಸಿಕೊಳ್ಳುವ ಆರ್ಡ್‌ವರ್ಕ್ ಎಂಬ ತಾಣ ಬ್ಲಾಗುಗಳು, ಫೇಸ್‌ಬುಕ್ ಸಂದೇಶಗಳು ಹಾಗೂ ಟ್ವೀಟ್‌ಗಳನ್ನು ಜಾಲಾಡಿ ಅವುಗಳ ಲೇಖಕರಿಂದ ನಿಮಗೆ ಬೇಕಾದ ಮಾಹಿತಿ ಪಡೆದುಕೊಡುವ ಕೆಲಸವನ್ನು ಈಗಾಗಲೇ ಶುರುಮಾಡಿದೆ. ಇತರ ಬಳಕೆದಾರರಿಂದ ನಿಮ್ಮ ಪ್ರಶ್ನೆಗೆ ಉತ್ತರ ದೊರಕಿಸಿಕೊಳ್ಳುವ ಸೌಲಭ್ಯವನ್ನು ಫೇಸ್‌ಬುಕ್ ಕೂಡ ಪರಿಚಯಿಸಿದೆ.

ಇಷ್ಟೇ ಅಲ್ಲ, ಚಿತ್ರಗಳ ನೆರವಿನಿಂದ ಹುಡುಕಾಟವನ್ನು ಸಾಧ್ಯವಾಗಿಸುವ ಸರ್ಚ್ ಇಂಜನ್‌ಗಳು, ಆಡುಮಾತಿನ ಪ್ರಶ್ನೆಗಳಿಗೆ (ನ್ಯಾಚುರಲ್ ಲ್ಯಾಂಗ್ವೇಜ್ ಕ್ವೆರಿಯಿಂಗ್) ಉತ್ತರಿಸುವಂತಹ ಸರ್ಚ್ ಇಂಜನ್‌ಗಳು, ಅಷ್ಟೇ ಏಕೆ, ಧ್ವನಿಯ ರೂಪದಲ್ಲಿ ನಾವು 'ಕೇಳುವ' ಪ್ರಶ್ನೆಗಳಿಗೂ ಉತ್ತರಿಸಬಲ್ಲ ಸರ್ಚ್ ಇಂಜನ್‌ಗಳೂ ಸಿದ್ಧವಾಗುತ್ತಿವೆಯಂತೆ.

ಇಷ್ಟೆಲ್ಲ ಆದರೂ ಅಡುಗೆ ಮನೆ ಮೂಲೆಯಲ್ಲಿ ಅಡಗಿಕುಳಿತಿರುವ ಸಾಸಿವೆ ಡಬ್ಬ, ಪ್ಯಾಂಟಿನ ಜೇಬಿನಲ್ಲಿಟ್ಟು ಮರೆತ ಬೈಕಿನ ಕೀಲಿ ಇವನ್ನೆಲ್ಲ ಹುಡುಕಿಕೊಡುವ ಸರ್ಚ್ ಇಂಜನ್ ಮಾತ್ರ ಇದುವರೆಗೂ ತಯಾರಾಗಿಲ್ಲ. ಇಷ್ಟರಲ್ಲೇ ತಯಾರಾದರೂ ಆಗಬಹುದು, ಕಾದುನೋಡೋಣ!


ನವೆಂಬರ್ ೩೦, ೨೦೧೦ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಭಾನುವಾರ, ನವೆಂಬರ್ 28, 2010

ಮೊಬೈಲ್ ಬಗ್ಗೆ ಹೀಗೊಂದು ಬರಹ...

ಹಿಂದೊಮ್ಮೆ ಆಕಾಶವಾಣಿ ಮಡಿಕೇರಿಯ ಫೋನ್-ಔಟ್ ಕಾರ್ಯಕ್ರಮದಲ್ಲಿ ಮಾತನಾಡಲು ಬರೆದಿಟ್ಟಿದ್ದ ನೋಟ್ಸು ಇದು. ಬರೆವಣಿಗೆಯ ಬಗ್ಗೆ ನಿಮ್ಮ ಅನಿಸಿಕೆಗಳಿಗೆ ಸ್ವಾಗತ.

ಈಚಿನ ವರ್ಷಗಳಲ್ಲಿ ನಮ್ಮ ಬದುಕನ್ನು ತೀರಾ ಗಣನೀಯವಾಗಿ ಬದಲಿಸಿರುವ ವಸ್ತುಗಳಲ್ಲಿ ಮೊಬೈಲ್ ದೂರವಾಣಿಗೆ ಬಹಳ ಪ್ರಮುಖವಾದ ಸ್ಥಾನ. ಹೊಸದೊಂದು ವಸ್ತು ಮಾರುಕಟ್ಟೆಗೆ ಪರಿಚಯವಾದ ಕೆಲವೇ ವರ್ಷಗಳ ಅವಧಿಯಲ್ಲಿ ಇಷ್ಟೊಂದು ಜನಪ್ರಿಯವಾಗಿರುವ ಬೇರೆ ಯಾವುದೇ ಉದಾಹರಣೆ, ನಮ್ಮ ದೇಶದ ಮಟ್ಟಿಗಂತೂ, ಇಲ್ಲವೇ ಇಲ್ಲ ಅಂತ ಹೇಳಬೇಕಾಗುತ್ತದೆ.

ಮೊಬೈಲ್ ದೂರವಾಣಿಯ ಕಲ್ಪನೆ ಸುಮಾರು ಐವತ್ತು-ಅರವತ್ತು ವರ್ಷಗಳಷ್ಟು ಹಳೆಯದು. ಸಾಮಾನ್ಯ ದೂರವಾಣಿ - ಅಂದ್ರೆ ಲ್ಯಾಂಡ್‌ಲೈನು - ಆ ವೇಳೆಗಾಗ್ಲೇ ಸಾಕಷ್ಟು ವ್ಯಾಪಕವಾಗಿ ಬಳಕೆಯಾಗುತ್ತಿತ್ತು, ರೇಡಿಯೋ ಕಲ್ಪನೆ ಕೂಡ ಸುಮಾರು ಹಳೆಯದಾಗಿತ್ತು. ಒಬ್ಬರ ಮಾತನ್ನು ಇನ್ನೊಬ್ಬರಿಗೆ ತಲುಪಿಸುವ ಮಾಮೂಲಿ ಫೋನು ತಂತಿಗಳ ನೆರವಿಲ್ಲದೆ - ಅಂದರೆ ರೇಡಿಯೋ ರೀತಿಯಲ್ಲಿ - ಕೆಲಸ ಮಾಡಿದರೆ ಎಷ್ಟೊಂದು ಅನುಕೂಲ ಆಗುತ್ತಲ್ಲ ಎನ್ನುವ ಯೋಚನೆ ಮೊಬೈಲ್ ದೂರವಾಣಿಯ ಸೃಷ್ಟಿಗೆ ಕಾರಣವಾಯಿತು.

ಇದೆಲ್ಲ ಆಗಿದ್ದು ೧೯೪೦-೫೦ರ ದಶಕದಲ್ಲಿ. ಆದರೆ ಅವತ್ತಿನ ಮೊಬೈಲ್ ತಂತ್ರಜ್ಞಾನ ಇವತ್ತಿನಷ್ಟು ಮುಂದುವರೆದಿರಲಿಲ್ಲ. ಫೋನುಗಳು ತೀರಾ ದೊಡ್ಡದಾಗಿದ್ದವು, ಬೆಲೆ ವಿಪರೀತ ಜಾಸ್ತಿ ಇತ್ತು, ಹೋಗಲಿ ಅಂದರೆ ಅದರಲ್ಲಿ ಆಡುವ ಮಾತುಗಳಿಗೆ ಒಂಚೂರೂ ಪ್ರೈವಸಿ ಅನ್ನೋದೇ ಇರಲಿಲ್ಲ. ನೀವು ನಿಮ್ಮ ಹೆಂಡ್ತಿ ಜೊತೇನೋ ಬಾಸ್ ಜೊತೇನೋ ಗರ್ಲ್‌ಫ್ರೆಂಡ್ ಜೊತೇನೋ ಮೊಬೈಲಲ್ಲಿ ಮಾತಾಡ್ತಾ ಇದ್ರೆ ಅದ್ನ ಮೊಬೈಲ್ ಫೋನ್ ಇರುವ ಬೇರೆ ಯಾರು ಬೇಕಾದರೂ ಕೇಳಿಸಿಕೊಳ್ಳುವಂಥ ಪರಿಸ್ಥಿತಿ ಇತ್ತು. ಹೀಗಾಗಿ ಮೊಬೈಲ್ ಫೋನುಗಳಿಗೆ ಒಂದು ಭವಿಷ್ಯ ಇದೆ ಅಂತಲೇ ಯಾರೂ ನಂಬಿರಲಿಲ್ಲ.

ಆದರೆ ಎಲ್ಲಿಂದ ಎಲ್ಲಿಗೆ ಯಾವಾಗ ಬೇಕಾದರೂ ಕರೆಮಾಡುವ ಸೌಲಭ್ಯ ಒದಗಿಸ್ತಲ್ಲ ಈ ಮೊಬೈಲ್ ದೂರವಾಣಿ, ಆ ಅನುಕೂಲ ಮಾತ್ರ ಎಲ್ಲರ ನಿರೀಕ್ಷೆಯನ್ನೂ ಮೀರಿ ಜನಪ್ರಿಯವಾಯ್ತು. ಆದರೆ ಈ ಜನಪ್ರಿಯತೆ ಬರೋದಕ್ಕೆ ಸುಮಾರು ಐವತ್ತು ವರ್ಷ ಕಾಯಬೇಕಾಯ್ತು ಅಷ್ಟೆ.

ನಮ್ಮ ದೇಶದ ಉದಾಹರಣೆಯನ್ನೇ ತೊಗೊಂಡ್ರೆ ನಮ್ಮ ಮಾರುಕಟ್ಟೆಗೆ ಮೊಬೈಲ್ ದೂರವಾಣಿ ಬಂದಿದ್ದು ಸುಮಾರು ಹದಿನೈದು ವರ್ಷಗಳ ಹಿಂದೆ. ಆಗ ಇದ್ದ ಹ್ಯಾಂಡ್‌ಸೆಟ್ಟುಗಳು ಹೆಚ್ಚೂಕಡಿಮೆ ಇವತ್ತಿನ ಕಾರ್ಡ್‌ಲೆಸ್ ಫೋನುಗಳಷ್ಟು ದೊಡ್ಡದಾಗಿದ್ದವು. ಹ್ಯಾಂಡ್‌ಸೆಟ್ ಹೋಗಲಿ, ಮೊಬೈಲ್ ಬಳಸಿ ಮಾತಾಡಬೇಕು ಅಂದರೆ ನಿಮಿಷಕ್ಕೆ ಹದಿನೈದು ಇಪ್ಪತ್ತು ರುಪಾಯಿ ಕೊಡಬೇಕಿತ್ತು. ಔಟ್‌ಗೋಯಿಂಗ್‌ಗೂ ಅಷ್ಟು ದುಡ್ಡು, ಇನ್‌ಕಮಿಂಗ್‌ಗೂ ಅಷ್ಟೇ ದುಡ್ಡು!

ಯಾವಾಗ ಮೊಬೈಲ್ ಕ್ಷೇತ್ರದ ಮೇಲೆ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಅಥವಾ ಟ್ರಾಯ್ ಸಂಸ್ಥೆಯ ನಿಯಂತ್ರಣ ಬಂತೋ, ಅಲ್ಲಿಂದ ಪರಿಸ್ಥಿತಿ ನಿಧಾನಕ್ಕೆ ಬದಲಾಯ್ತು. ಮಾರುಕಟ್ಟೆಯಲ್ಲಿ ಸ್ಪರ್ಧೆ ಜಾಸ್ತಿ ಆಯ್ತು, ಹೊಸಹೊಸ ಸಂಸ್ಥೆಗಳು ಮೊಬೈಲ್ ಸಂಪರ್ಕ ಕೊಡೋದಕ್ಕೆ ಪ್ರಾರಂಭಿಸಿದವು. ಇದರಿಂದ ಮೊಬೈಲ್‌ಗಾಗಿ ಮಾಡಬೇಕಾದ ಖರ್ಚು ಕೂಡ ಗಣನೀಯವಾಗಿ ಕಡಿಮೆಯಾಯ್ತು. ತುಂಬಾ ಕಡಿಮೆ ಖರ್ಚಿನಲ್ಲಿ ದೂರವಾಣಿ ಸಂಪರ್ಕ ಸಿಗತ್ತೆ ಅಂತ ಆದ ತಕ್ಷಣ ಜನಪ್ರಿಯತೆನೂ ಜಾಸ್ತಿಯಾಯ್ತು.

ಇದೆಲ್ಲದರ ಪರಿಣಾಮ - ಪ್ರಪಂಚದಲ್ಲೇ ಅತಿ ಹೆಚ್ಚು ಮೊಬೈಲ್ ಸಂಪರ್ಕ ಹೊಂದಿರುವ ದೇಶಗಳಲ್ಲಿ ಭಾರತಕ್ಕೆ ಈಗ ಎರಡನೇ ಸ್ಥಾನ. ಮೊಬೈಲ್ ಸೇವೆಯ ಬೆಲೆ ಅತ್ಯಂತ ಕಡಿಮೆಯಿರುವ ದೇಶಗಳ ಸಾಲಿನಲ್ಲೂ ನಮಗೆ ಪ್ರಮುಖ ಸ್ಥಾನ ಇದೆ.

ಬಳಕೆದಾರರು ಜಾಸ್ತಿ ಆದ ಹಾಗೆ ಮೊಬೈಲ್ ಮೂಲಕ ಲಭ್ಯವಾಗ್ತಾ ಇರುವ ಸೌಲಭ್ಯಗಳೂ ಹೆಚ್ಚುತ್ತಿವೆ. ಮೊಬೈಲಲ್ಲಿ ಕರೆ ಮಾಡಿ ಮಾತಾಡಬಹುದು ಅನ್ನುವ ದಿನಗಳು ಹೋಗಿ ಇತರ ನೂರೆಂಟು ಕೆಲಸಗಳ ಜೊತೆಗೆ ದೂರವಾಣಿ ಕರೆಯನ್ನು ಕೂಡ ಮಾಡಬಹುದು ಅನ್ನುವಂತಹ ಸಂದರ್ಭ ಬಂದಿದೆ. ಎಸ್ಸೆಮ್ಮೆಸ್, ಎಮ್ಮೆಮ್ಮೆಸ್, ವಾಯ್ಸ್‌ಮೇಲ್ ಮುಂತಾದ ಸೌಲಭ್ಯಗಳಿಂದ ಪ್ರಾರಂಭಿಸಿ ಇಮೇಲ್ ಕಳಿಸೋದು, ಇಂಟರ್‌ನೆಟ್ ಬ್ರೌಸಿಂಗ್ ಮಾಡೋದು, ಟೀವಿ ನೋಡೋದು, ವೀಡಿಯೋಕಾನ್ಫರೆನ್ಸಿಂಗ್ - ಹೀಗೆ ನೂರೆಂಟು ಹೊಸ ಸಾಧ್ಯತೆಗಳು ನಮ್ಮ ಮುಂದೆ ಬಂದಿವೆ.

ಮೊಬೈಲ್ ಮೂಲಕ ಅಂತರಜಾಲ ಸಂಪರ್ಕ ಕಲ್ಪಿಸಿಕೊಳ್ಳೋದು ಸಾಧ್ಯ ಆದ ಮೇಲಂತೂ ಕಂಪ್ಯೂಟರ್ ಬಳಸಿ ಏನೇನು ಮಾಡ್ತೀವೋ ಅದೆಲ್ಲವನ್ನೂ ಮೊಬೈಲ್ ಮೂಲಕವೇ ಮಾಡಿಮುಗಿಸೋದು ಸಾಧ್ಯವಾಗಿದೆ. ಬ್ಯಾಂಕಿಂಗ್ ವ್ಯವಹಾರ, ಸಿನಿಮಾ ಟಿಕೆಟ್ ಬುಕಿಂಗ್ ಮಾಡೋದು, ಬೇರೆಬೇರೆ ವೆಬ್‌ಸೈಟುಗಳಲ್ಲಿ ನಮಗೆ ಬೇಕಾದ ಮಾಹಿತಿಗಾಗಿ ಹುಡುಕಾಟ ನಡೆಸೋದು ಇದೆಲ್ಲ ಸಾಧ್ಯವಾಗಿದೆ. ಥ್ರೀ-ಜಿ ಬಂದಮೇಲಂತೂ ನೀವು ಯಾರ ಜೊತೆ ಮಾತಾಡ್ತೀರೋ ಅವರನ್ನ ನಿಮ್ಮ ಫೋನಿನ ಪರದೆಯ ಮೇಲೆ ನೋಡಿಕೊಂಡೇ ಮಾತಾಡುವುದು ಸಾಧ್ಯವಾಗಿದೆ.
ಇನ್ನು ಮೌಲ್ಯವರ್ಧಿತ ಸೇವೆ ಅಥವಾ ವ್ಯಾಲ್ಯೂ ಆಡೆಡ್ ಸರ್ವಿಸ್ - ವಿಎಎಸ್. ಕ್ರಿಕೆಟ್ ಸ್ಕೋರ್ ಇಂದ ಪ್ರಾರಂಭಿಸಿ ದಿನಭವಿಷ್ಯದ ತನಕ ಏನೆಲ್ಲ ಮಾಹಿತಿಯಲ್ಲಿ ನಿಮಗೆ ಆಸಕ್ತಿ ಇದೆಯೋ ಅದೆಲ್ಲ ಎಸ್ಸೆಮ್ಮೆಸ್ ಮಾಧ್ಯಮದಲ್ಲಿ ಸಿಗ್ತಾ ಇದೆ. ಬಿಡುವಿನ ವೇಳೆಯಲ್ಲಿ ಕೇಳಲು ಹಾಡುಗಳನ್ನ ಆಟಾಡೋದಕ್ಕೆ ಗೇಮ್‌ಗಳನ್ನ ಡೌನ್‌ಲೋಡ್ ಮಾಡಿಕೊಳ್ಳೋದು, ರಿಂಗ್‌ಟೋನ್ ಕಾಲರ್ ಟ್ಯೂನ್ ಇವನ್ನೆಲ್ಲ ಇಷ್ಟಬಂದಹಾಗೆ ಇಷ್ಟಬಂದಷ್ಟು ಸಲ ಬದಲಾಯಿಸೋದು ಎಲ್ಲ ಚಿಟಿಕೆ ಹೊಡೆದಷ್ಟು ಸುಲಭ ಆಗಿಬಿಟ್ಟಿದೆ.

ಮೊಬೈಲ್ ಕ್ಷೇತ್ರದಲ್ಲಿ ಆಗಿರುವ ಇಷ್ಟೆಲ್ಲ ಬದಲಾವಣೆಗಳು ಇನ್ನೂ ಅದೆಷ್ಟೋ ಬಗೆಯ ಹೊಸಹೊಸ ಸೌಲಭ್ಯಗಳನ್ನ ನಾವೆಲ್ಲ ನಿರೀಕ್ಷಿಸುವ ಹಾಗೆ ಮಾಡಿವೆ. ಏನೇನಾಗುತ್ತೋ, ಕಾದು ನೋಡೋಣ!

ಮಂಗಳವಾರ, ನವೆಂಬರ್ 23, 2010

ಕುತಂತ್ರ ತಡೆಗೆ ಕ್ಯಾಪ್ಚಾ

ಟಿ ಜಿ ಶ್ರೀನಿಧಿ

ವಿಶ್ವವ್ಯಾಪಿ ಜಾಲದಲ್ಲಿ ಅನುಕೂಲಗಳೆಷ್ಟಿವೆಯೋ ಅಷ್ಟೇ ಅನಾನುಕೂಲಗಳೂ ಇವೆ. ಇಮೇಲ್ ಅದ್ಭುತ ಸಂಪರ್ಕ ಮಾಧ್ಯಮ; ಆದರೆ ಅದರಲ್ಲಿ ಅನಗತ್ಯ 'ಸ್ಪಾಮ್' ಸಂದೇಶಗಳ ಹಾವಳಿ ವಿಪರೀತ. ವಿಚಾರವಿನಿಮಯಕ್ಕೆ ಪರಿಣಾಮಕಾರಿ ವೇದಿಕೆ ಬ್ಲಾಗಿಂಗ್; ಆದರೆ ಬ್ಲಾಗುಗಳಲ್ಲಿ ಅನಪೇಕ್ಷಿತ ಪ್ರತಿಕ್ರಿಯೆಗಳು ಸಾಕಷ್ಟು ತೊಂದರೆಕೊಡುತ್ತವೆ. ಅಷ್ಟೇ ಅಲ್ಲ, ಎಲ್ಲೆಲ್ಲಿ ಬಳಕೆದಾರರು ಮಾಹಿತಿ ದಾಖಲಿಸುವ ನಮೂನೆಗಳಿರುತ್ತವೋ ಅಲ್ಲೆಲ್ಲ ದುರುದ್ದೇಶಪೂರಿತ ತಂತ್ರಾಂಶಗಳು ಅನಗತ್ಯವಾಗಿ ಹಸ್ತಕ್ಷೇಪಮಾಡುತ್ತವೆ; ಸ್ವಯಂಚಾಲಿತವಾಗಿ ಯದ್ವಾತದ್ವಾ ಮಾಹಿತಿ ಪೂರೈಸುತ್ತವೆ. ಸೌಲಭ್ಯಗಳ ದುರುಪಯೋಗ, ಜಾಲತಾಣದ ಕಾರ್ಯಾಚರಣೆಗೆ ಅಡ್ಡಿಪಡಿಸುವುದು, ಸ್ಪಾಮ್ ಸಂದೇಶಗಳನ್ನು ಕಳಿಸುವುದು, ವೈರಸ್-ವರ್ಮ್‌ಗಳನ್ನು ಹರಡುವುದು - ಈ ತಂತ್ರಾಂಶಗಳಿಗೆ ಇಂತಹ ಯಾವುದೇ ದುರುದ್ದೇಶ ಇರಬಹುದು. ನಮ್ಮ ಇಮೇಲ್ ಇನ್‌ಬಾಕ್ಸ್‌ಗೆ ಹರಿದುಬರುವ ನೂರಾರು ಸ್ಪಾಮ್ ಸಂದೇಶಗಳು ಇಂತಹವೇ ತಂತ್ರಾಂಶಗಳ ಸೃಷ್ಟಿ.

ಈ ಮಾಹಿತಿ ಪ್ರವಾಹವನ್ನು ನಿಲ್ಲಿಸಿ, ಕುತಂತ್ರಗಳನ್ನು ಸೋಲಿಸಬೇಕಾದರೆ ಯಾವುದೇ ಸೌಲಭ್ಯವನ್ನು ಬಳಸಲು ಪ್ರಯತ್ನಿಸುತ್ತಿರುವವರು ನಿಜಕ್ಕೂ ನಮ್ಮನಿಮ್ಮಂತಹ ಬಳಕೆದಾರರೋ ಅಥವಾ ಸ್ವಯಂಚಾಲಿತವಾಗಿ ಮಾಹಿತಿ ಪೂರೈಸುತ್ತಿರುವ ದುರುದ್ದೇಶಪೂರಿತ ತಂತ್ರಾಂಶಗಳೋ ಎನ್ನುವುದನ್ನು ಪತ್ತೆಮಾಡಬೇಕಾಗುತ್ತದೆ. ಒಂದುವೇಳೆ ಸ್ವಯಂಚಾಲಿತ ತಂತ್ರಾಂಶವೇನಾದರೂ ನಕಲಿ ಮಾಹಿತಿ ಪ್ರವಾಹ ಸೃಷ್ಟಿಸಲು ಪ್ರಯತ್ನಿಸುತ್ತಿದ್ದರೆ ಅದನ್ನು ತಡೆಯುವುದೂ ಅಗತ್ಯ. ಈ ಉದ್ದೇಶಕ್ಕಾಗಿಯೇ 'ಕ್ಯಾಪ್ಚಾ'ಗಳು ಬಳಕೆಯಾಗುತ್ತವೆ.

ಕ್ಯಾಪ್ಚಾ ಎನ್ನುವ ಹೆಸರು 'ಕಂಪ್ಲೀಟ್‌ಲಿ ಆಟೋಮೇಟೆಡ್ ಪಬ್ಲಿಕ್ ಟ್ಯೂರಿಂಗ್ ಟೆಸ್ಟ್ ಟು ಟೆಲ್ ಕಂಪ್ಯೂಟರ್ಸ್ ಆಂಡ್ ಹ್ಯೂಮನ್ಸ್ ಅಪಾರ್ಟ್' ಎಂಬುದರ ಹ್ರಸ್ವರೂಪ. ಈ ನಾಮಕರಣವಾದದ್ದು ೨೦೦೦ದಲ್ಲಿ. ಯಾವುದೇ ಪ್ರಶ್ನೆಗೆ ಉತ್ತರಿಸುತ್ತಿರುವುದು ಸ್ವಯಂಚಾಲಿತ ತಂತ್ರಾಂಶವಲ್ಲ, ಮಾನವ ಬಳಕೆದಾರರೇ ಎಂದು ಖಾತರಿಪಡಿಸಿಕೊಳ್ಳುವ ಉದ್ದೇಶದಿಂದ ಕ್ಯಾಪ್ಚಾಗಳ ಬಳಕೆ ಪ್ರಾರಂಭವಾಯ್ತು.

ಪರದೆಯ ಮೇಲೆ ತೋರಿಸುವ ಚಿತ್ರದಲ್ಲಿನ ಅಕ್ಷರ ಅಥವಾ ಅಂಕಿಗಳನ್ನು ಗುರುತಿಸುವಂತೆ, ಅಥವಾ ಸರಳ ಪ್ರಶ್ನೆಗಳಿಗೆ ಉತ್ತರಿಸುವಂತೆ ಬಳಕೆದಾರರನ್ನು ಕೇಳುವುದು ಕ್ಯಾಪ್ಚಾಗಳ ಲಕ್ಷಣ.

ಹತ್ತಕ್ಕೆ ಮೂರು ಸೇರಿಸಿದರೆ ಎಷ್ಟು, ಅಥವಾ ಆಕಾಶದ ಬಣ್ಣ ಯಾವುದು ಎನ್ನುವಂತಹ ಸರಳ ಪ್ರಶ್ನೆಗಳಿಂದ ಪ್ರಾರಂಭಿಸಿ ತಿರುಚಾದ ಅಕ್ಷರ ಅಥವಾ ಅಂಕಿಗಳನ್ನು ಗುರುತಿಸಿ ಎಂದು ಕೇಳುವವರೆಗೆ ಕ್ಯಾಪ್ಚಾಗಳು ಅನೇಕ ಬಗೆಯವಾಗಿರಬಹುದು. ಒದಗಿಸಲಾಗುವ ಶ್ರವ್ಯ ಸಂದೇಶವನ್ನು ಕೇಳಿ ಅದನ್ನು ದಾಖಲಿಸಿ ಎಂದು ಕೇಳುವ ಕ್ಯಾಪ್ಚಾಗಳೂ ಇವೆ.

ಹೊಸ ಇಮೇಲ್ ಖಾತೆ ತೆರೆಯುವಾಗ, ಬ್ಲಾಗ್‌ನಲ್ಲಿ ಪ್ರತಿಕ್ರಿಯೆ ದಾಖಲಿಸುವಾಗ, ಆನ್‌ಲೈನ್ ಪಾವತಿ ಸಂದರ್ಭದಲ್ಲಿ - ಹೀಗೆ ಅನೇಕ ಕಡೆ ಕ್ಯಾಪ್ಚಾಗಳ ಬಳಕೆಯಾಗುತ್ತದೆ. ಕ್ಯಾಪ್ಚಾ ಕೇಳಿದ ಪ್ರಶ್ನೆಗೆ ಸರಿಯಾದ ಉತ್ತರ ನೀಡಿದಾಗಲಷ್ಟೆ ಬಳಕೆದಾರರಿಗೆ ತಮ್ಮ ಪ್ರಯತ್ನದಲ್ಲಿ ಮುಂದುವರೆಯಲು ಅನುಮತಿ ಸಿಗುತ್ತದೆ. ಸಾಮಾನ್ಯವಾಗಿ ಕ್ಯಾಪ್ಚಾ ಕೇಳುವ ಪ್ರಶ್ನೆಗೆ ಉತ್ತರಿಸಲು ತಂತ್ರಾಂಶಗಳು ಅಸಮರ್ಥವಾಗಿರುತ್ತವೆ; ಹೀಗಾಗಿ ಕ್ಯಾಪ್ಚಾ ಬಳಕೆಯಿಂದ ದುರುದ್ದೇಶಪೂರಿತ ತಂತ್ರಾಂಶಗಳ ಹಾವಳಿಯನ್ನು ಕಡಿಮೆಮಾಡಬಹುದು.

ಆದರೆ ಇದರಲ್ಲಿ ಕ್ಯಾಪ್ಚಾಗಳು ಸಂಪೂರ್ಣವಾಗಿ ಯಶಸ್ವಿಯಾಗಿವೆ ಎಂದು ಹೇಳುವುದು ಕಷ್ಟ. ದುರುದ್ದೇಶಪೂರಿತ ತಂತ್ರಾಂಶ ನಿರ್ಮಾತೃಗಳು ಕ್ಯಾಪ್ಚಾಗಳನ್ನು ಸೋಲಿಸುವ ದಾರಿಗಳನ್ನು ಹುಡುಕಿಕೊಳ್ಳುತ್ತಿದ್ದಾರೆ. ಕೆಲವೆಡೆ ಅವರು ತಮ್ಮ ತಂತ್ರಾಂಶವನ್ನು ಇನ್ನಷ್ಟು ಉತ್ತಮಪಡಿಸಿದ್ದರೆ ಇನ್ನು ಕೆಲ ಸಂದರ್ಭಗಳಲ್ಲಿ ಕ್ಯಾಪ್ಚಾ ಬಳಸುವ ತಾಣದಲ್ಲಿನ ಸುರಕ್ಷತಾ ನ್ಯೂನತೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.

ಹೀಗಾಗಿ ಕ್ಯಾಪ್ಚಾಗಳೂ ಸತತವಾಗಿ ಸುಧಾರಣೆಹೊಂದಬೇಕಾದ ಅಗತ್ಯ ಎದುರಾಗಿದೆ. ಈ ನಿಟ್ಟಿನಲ್ಲಿ ನಡೆದಿರುವ ಒಂದು ಪ್ರಯತ್ನ ವೀಡಿಯೋ ರೂಪದ ಕ್ಯಾಪ್ಚಾ ಬಳಕೆ. ಪುಟ್ಟದೊಂದು ವೀಡಿಯೋ ತೋರಿಸಿ ಅದರಲ್ಲಿ ಬರುವ ಅಕ್ಷರಗಳನ್ನು ಗುರುತಿಸಿ ದಾಖಲಿಸಿ ಎಂದು ಕೇಳುವುದು ಈ ಕ್ಯಾಪ್ಚಾದ ವೈಶಿಷ್ಟ್ಯ. ಸುಮ್ಮನೆ ಯಾವುದೋ ವೀಡಿಯೋ ತೋರಿಸುವ ಬದಲಿಗೆ ಜಾಹೀರಾತುಗಳನ್ನು ತೋರಿಸಿದರೆ ತಾಣಗಳು ಅದರಲ್ಲೂ ಹಣಸಂಪಾದನೆ ಮಾಡಬಹುದು ಎಂದು ಇದರ ಸೃಷ್ಟಿಕರ್ತರು ಹೇಳುತ್ತಾರೆ.

ಚಿತ್ರಗಳ ದೊಡ್ಡದೊಂದು ಸಂಗ್ರಹದಿಂದ ನಾಲ್ಕಾರನ್ನು ಆಯ್ದು ತೋರಿಸಿ ಅವುಗಳಲ್ಲಿ ಒಂದನ್ನು ಗುರುತಿಸುವಂತೆ ಕೇಳುವುದು ಕ್ಯಾಪ್ಚಾದ ಇನ್ನೊಂದು ರೂಪ. ಹಣ್ಣು, ಹೂವು, ಮನೆ, ವಿಮಾನ, ನಾಯಿ - ಹೀಗೆ ಐದು ಚಿತ್ರಗಳನ್ನು ಒಟ್ಟಿಗೆ ತೋರಿಸಿ ವಿಮಾನದ ಚಿತ್ರದ ಮೇಲೆ ಕ್ಲಿಕ್ ಮಾಡಿ ಎಂದರೆ ನಾನು-ನೀವು ಗುರುತಿಸುವಷ್ಟು ಸುಲಭವಾಗಿ ತಂತ್ರಾಂಶಗಳು ಗುರುತಿಸಲಾರವು. ಇದೇ ಈ ಕ್ಯಾಪ್ಚಾದ ಹೈಲೈಟ್. ಆದರೆ ಈ ವಿಧಾನ ಇನ್ನೂ ವ್ಯಾಪಕವಾಗಿ ಬಳಕೆಗೆ ಬಂದಿಲ್ಲ.

ಹಳೆಯ ಕ್ಯಾಪ್ಚಾ ಕಲ್ಪನೆಯನ್ನೇ ಉಳಿಸಿಕೊಂಡು ಅದರಲ್ಲೇ ವಿಶಿಷ್ಟ ಸುಧಾರಣೆಗಳನ್ನು ಮಾಡಿರುವುದು 'ರೀಕ್ಯಾಪ್ಚಾ'. ಇದರ ನಿರ್ವಹಣೆ ಗೂಗಲ್ ಸಂಸ್ಥೆಯದು. ಇಲ್ಲಿ ಬಳಕೆದಾರರಿಗೆ ಎರಡು ಪದಗಳನ್ನು ತೋರಿಸಿ ಅವನ್ನು ಗುರುತಿಸುವಂತೆ ಕೇಳಲಾಗುತ್ತದೆ. ಆದರೆ ಅವುಗಳಲ್ಲಿ ಒಂದು ಪದ ಮಾತ್ರ 'ರೀಕ್ಯಾಪ್ಚಾ' ವ್ಯವಸ್ಥೆಗೆ ಪರಿಚಿತವಾಗಿರುತ್ತದೆ; ಎರಡನೆಯ ಪದ ಯಾವುದೋ ಹಳೆಯ ಪತ್ರಿಕೆಯಿಂದಲೋ ಪುಸ್ತಕದಿಂದಲೋ ಬಂದಿರುತ್ತದೆ! ಅದು ಹೇಗೆ ಎಂದಿರಾ, ಗೂಗಲ್ ಸಂಸ್ಥೆ ಲಕ್ಷಾಂತರ ಮುದ್ರಿತ ಪುಸ್ತಕ-ಪತ್ರಿಕೆಗಳ ಗಣಕೀಕರಣದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಆದರೆ ಮುದ್ರಿತ ಪಠ್ಯವನ್ನು ಗುರುತಿಸಿ ಗಣಕೀಕರಣಗೊಳಿಸುವ ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ (ಒಸಿಆರ್) ತಂತ್ರಾಂಶಗಳಿಗೆ ಎಲ್ಲ ಪದಗಳನ್ನೂ ಸರಿಯಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ. ಅಂತಹ ಪದಗಳ ಚಿತ್ರವನ್ನು ರೀಕ್ಯಾಪ್ಚಾ ವ್ಯವಸ್ಥೆಗೆ ಕಳುಹಿಸಿಕೊಡಲಾಗುತ್ತದೆ.

ಬಳಕೆದಾರರು ರೀಕ್ಯಾಪ್ಚಾಗೆ ಪರಿಚಿತವಾದ ಪದವನ್ನು ಸರಿಯಾಗಿ ಗುರುತಿಸಿದರೆ ಅಪರಿಚಿತವಾದ ಇನ್ನೊಂದು ಪದವನ್ನೂ ಸರಿಯಾಗಿ ಗುರುತಿಸಿರುವ ಸಾಧ್ಯತೆ ಹೆಚ್ಚು. ಯಾವುದೇ ಪದವನ್ನು ಒಬ್ಬರಿಗಿಂತ ಹೆಚ್ಚು ಜನ ಒಂದೇ ರೀತಿ ಗುರುತಿಸಿದ ಮೇಲೆ ಅದು ಸರಿಯೇ ತಾನೆ!

ಲಕ್ಷಾಂತರ ಜನ ಪ್ರಪಂಚದ ಮೂಲೆಮೂಲೆಗಳಿಂದ ರೀಕ್ಯಾಪ್ಚಾ ಪ್ರಶ್ನೆಗಳಿಗೆ ಉತ್ತರಿಸುವಾಗ ಎಷ್ಟೆಲ್ಲ ಪದಗಳನ್ನು ಅತ್ಯಂತ ಕಡಿಮೆ ಸಮಯದಲ್ಲಿ ಗುರುತಿಸುವುದು ಸಾಧ್ಯವಾಗುತ್ತಿದೆ; ಸ್ಪಾಮ್ ತಡೆಯಲು ರೂಪಗೊಂಡ ಕ್ಯಾಪ್ಚಾ ವ್ಯವಸ್ಥೆ ತನ್ನ ಹೊಸ ಅವತಾರದಲ್ಲಿ ನಮ್ಮ ಇತಿಹಾಸವನ್ನು ಗಣಕೀಕರಣಗೊಳಿಸಲು ನೆರವುನೀಡುತ್ತಿದೆ.

ನವೆಂಬರ್ ೨೩, ೨೦೧೦ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಮಂಗಳವಾರ, ನವೆಂಬರ್ 16, 2010

ಟ್ಯಾಬ್ಲೆಟ್ ಕದನ

ಟಿ ಜಿ ಶ್ರೀನಿಧಿ

ಈಚಿನ ಕೆಲ ತಿಂಗಳುಗಳಿಂದ ಗಣಕ ಲೋಕದಲ್ಲೆಲ್ಲ ಟ್ಯಾಬ್ಲೆಟ್‌ಗಳದ್ದೇ ಸುದ್ದಿ. ಮೊದಲಿಗೆ ಈ ಸಂಚಲನ ಹುಟ್ಟುಹಾಕಿದ್ದು ವರ್ಷದ ಪ್ರಾರಂಭದಲ್ಲಿ ಮಾರುಕಟ್ಟೆಗೆ ಬಂದ ಆಪಲ್ ಸಂಸ್ಥೆಯ ಐಪ್ಯಾಡ್. ಆಮೇಲಂತೂ ಸಾಲುಸಾಲಾಗಿ ಟ್ಯಾಬ್ಲೆಟ್‌ಗಳು ಸುದ್ದಿಯಲ್ಲಿವೆ - ಬ್ಲಾಕ್‌ಬೆರಿಯ ಪ್ಲೇಬುಕ್, ಎಚ್‌ಪಿ ಸ್ಲೇಟ್, ಸ್ಯಾಮ್‌ಸಂಗ್ ಗೆಲಾಕ್ಸಿ ಟ್ಯಾಬ್ ಎಲ್ಲ ಸೇರಿಕೊಂಡು ದೊಡ್ಡಪ್ರಮಾಣದ ಟ್ಯಾಬ್ಲೆಟ್ ಸಮರಕ್ಕೆ ನಾಂದಿಹಾಡಿವೆ.

ಏನಿದು ಟ್ಯಾಬ್ಲೆಟ್?
ಸ್ಪರ್ಶ ಸಂವೇದನೆ ಹೊಂದಿರುವ ಒಂದೇ ಫಲಕದಲ್ಲಿ (ಟಚ್-ಸ್ಕ್ರೀನ್) ಅಡಕವಾಗಿರುವ ಸಂಪೂರ್ಣ ಗಣಕವೇ ಟ್ಯಾಬ್ಲೆಟ್. ಸಾಮಾನ್ಯ ಗಣಕಗಳನ್ನು ಬಳಸಿ ಏನೆಲ್ಲ ಮಾಡಬಹುದೋ ಅದನ್ನೆಲ್ಲ ಟ್ಯಾಬ್ಲೆಟ್ ಕೂಡ ಮಾಡಬಲ್ಲದು. ಸಾಮಾನ್ಯವಾಗಿ ಇವುಗಳಲ್ಲಿ ಕೀಲಿಮಣೆ ಇರುವುದಿಲ್ಲ; ಕೈಬೆರಳು ಅಥವಾ ಸ್ಟೈಲಸ್ ಕಡ್ಡಿ ಉಪಯೋಗಿಸಬೇಕಾಗುತ್ತದೆ. ನಾವೆಲ್ಲ ಚಿಕ್ಕವಯಸ್ಸಿನಲ್ಲಿ ಉಪಯೋಗಿಸಿದ್ದ ಸ್ಲೇಟನ್ನು ನೆನಪಿಸಿಕೊಳ್ಳಿ. ಟ್ಯಾಬ್ಲೆಟ್ ಗಣಕವನ್ನು ಅದರ ಮಾಡರ್ನ್ ಅವತಾರ ಎಂದು ಕರೆಯಬಹುದು.

ಆಪಲ್ ಐಪ್ಯಾಡ್ ಈ ವರ್ಷ ಮಾರುಕಟ್ಟೆಗೆ ಬಂತು ಎಂದಮಾತ್ರಕ್ಕೆ ಟ್ಯಾಬ್ಲೆಟ್ ತಂತ್ರಜ್ಞಾನ ನಿನ್ನೆಮೊನ್ನೆ ಹುಟ್ಟಿದ್ದೇನೂ ಅಲ್ಲ. ಕೈಯಲ್ಲಿ ಹಿಡಿದುಕೊಳ್ಳಬಹುದಾದ (ಹ್ಯಾಂಡ್‌ಹೆಲ್ಡ್) ಗಣಕಗಳ ಸೃಷ್ಟಿಗೆ ಸುಮಾರು ನೂರು ವರ್ಷಗಳಿಂದ ಪ್ರಯತ್ನ ನಡೆಯುತ್ತಿದ್ದ ಬಗ್ಗೆ ದಾಖಲೆಗಳಿವೆ. ಆದರೆ ಟ್ಯಾಬ್ಲೆಟ್ ಗಣಕಕ್ಕೆ ನಾಮಕರಣವಾದದ್ದು ಮಾತ್ರ ೨೦೦೦ದಲ್ಲಿ, ಮೈಕ್ರೋಸಾಫ್ಟ್ ಸಂಸ್ಥೆ ತನ್ನ 'ಟ್ಯಾಬ್ಲೆಟ್ ಪಿಸಿ'ಯನ್ನು ಪರಿಚಯಿಸಿದಾಗ. ಆದರೆ ಮುಂದಿನ ಹತ್ತು ವರ್ಷಗಳಲ್ಲಿ ಟ್ಯಾಬ್ಲೆಟ್‌ಗಳು ಹೆಚ್ಚಿನ ಜನಪ್ರಿಯತೆ ಕಾಣಲಿಲ್ಲ. ಹೆಚ್ಚಿನ ತೂಕ, ಬಳಕೆದಾರ ಸ್ನೇಹಿಯಲ್ಲದ ತಂತ್ರಾಂಶಗಳು - ಹೀಗೆ ಅನೇಕ ಕಾರಣಗಳಿಂದ ಟ್ಯಾಬ್ಲೆಟ್ ಮಾರುಕಟ್ಟೆ ಅಷ್ಟಾಗಿ ಬೆಳೆದಿರಲಿಲ್ಲ.

ಟ್ಯಾಬ್ಲೆಟ್ ಸಮರ
ಆದರೆ ೨೦೧೦ರಲ್ಲಿ ಆಪಲ್ ಐಪ್ಯಾಡ್ ಮಾರುಕಟ್ಟೆಗೆ ಬಂದಾಗ ಈ ಪರಿಸ್ಥಿತಿ ಬಹುಮಟ್ಟಿಗೆ ಬದಲಾಗಿತ್ತು. ಸುಲಭವಾಗಿ ಬಳಸಬಹುದಾದ ತಂತ್ರಾಂಶಗಳು, ಉತ್ತಮ ಗುಣಮಟ್ಟದ ಟಚ್-ಸ್ಕ್ರೀನ್, ಕಡಿಮೆ ತೂಕ, ಜೊತೆಗೆ ಆಪಲ್‌ನ ಬ್ರಾಂಡ್ ನೇಮ್ ಎಲ್ಲ ಸೇರಿಕೊಂಡು ಟ್ಯಾಬ್ಲೆಟ್‌ಗಳಿಗೊಂದು ಪುನರ್ಜನ್ಮ ದೊರೆಯಿತು.

ಐಪ್ಯಾಡ್ ಜನಪ್ರಿಯವಾಗುತ್ತಿದ್ದಂತೆಯೇ ಹೊಸ ಟ್ಯಾಬ್ಲೆಟ್ಟುಗಳು ಸಾಲುಸಾಲಾಗಿ ಮಾರುಕಟ್ಟೆಗೆ ಬರುವುದು ಪ್ರಾರಂಭವಾಗಿದೆ. ಬ್ಲಾಕ್‌ಬೆರಿ ನಿರ್ಮಾತೃಗಳಾದ ರೀಸರ್ಚ್ ಇನ್ ಮೋಷನ್ ಸಂಸ್ಥೆ ತನ್ನ 'ಪ್ಲೇಬುಕ್' ಅನ್ನು ಈಗಾಗಲೇ ಪ್ರದರ್ಶಿಸಿದೆ. ಸ್ಯಾಮ್‌ಸಂಗ್‌ನ ಗೆಲಾಕ್ಸಿ ಟ್ಯಾಬ್ ಮತ್ತು ಎಚ್‌ಪಿ ಸ್ಲೇಟ್ ಟ್ಯಾಬ್ಲೆಟ್‌ಗಳು ಇಷ್ಟರಲ್ಲೇ ಮಾರುಕಟ್ಟೆಗೆ ಬರಲಿವೆ.

ಬಡವರ ಟ್ಯಾಬ್ಲೆಟ್
ಟ್ಯಾಬ್ಲೆಟ್‌ಗಳದು ಹೆಚ್ಚಿನ ಯಂತ್ರಾಂಶ ಅಗತ್ಯವಿಲ್ಲದ ಸರಳ ವಿನ್ಯಾಸ; ಜೊತೆಗೆ ಅವುಗಳನ್ನು ಉಪಯೋಗಿಸುವುದೂ ಸುಲಭ. ಇದೀಗ ಗೂಗಲ್‌ನ ಆಂಡ್ರಾಯ್ಡ್ ಕಾರ್ಯಾಚರಣ ವ್ಯವಸ್ಥೆ ಕೂಡ ಲಭ್ಯವಿರುವುದರಿಂದ ತಂತ್ರಾಂಶಗಳೂ ದುಬಾರಿಯಲ್ಲ. ಹೀಗಾಗಿ ಅಭಿವೃದ್ಧಿಶೀಲ ದೇಶಗಳ ಮಕ್ಕಳಿಗೆ ಆಧುನಿಕ ಶಿಕ್ಷಣ ಒದಗಿಸಲು ಟ್ಯಾಬ್ಲೆಟ್‌ಗಳೇ ಸರಿಯಾದ ಮಾಧ್ಯಮ ಎಂಬ ಅಭಿಪ್ರಾಯ ಮೂಡಿದೆ.

ಸುಲಭ ಬೆಲೆಯ ಲ್ಯಾಪ್‌ಟಾಪ್‌ಗಳನ್ನು ತಯಾರಿಸುವ ಉದ್ದೇಶದೊಡನೆ ಕೆಲಸಮಾಡುತ್ತಿರುವ 'ಒನ್ ಲ್ಯಾಪ್‌ಟಾಪ್ ಪರ್ ಚೈಲ್ಡ್' ಕಾರ್ಯಕ್ರಮ (ಒಎಲ್‌ಪಿಸಿ) ಇದೀಗ ಟ್ಯಾಬ್ಲೆಟ್ ಗಣಕವನ್ನೂ ಸೃಷ್ಟಿಸಲು ಹೊರಟಿದೆ. ಎಕ್ಸ್‌ಒ-೩ ಹೆಸರಿನ ಈ ಟ್ಯಾಬ್ಲೆಟ್ ಅನ್ನು ಐದು ಸಾವಿರ ರೂಪಾಯಿಗಳ ಒಳಗೆ ಲಭ್ಯವಾಗುವಂತೆ ಮಾಡುವುದು ಒಎಲ್‌ಪಿಸಿ ಉದ್ದೇಶ.

ಭಾರತ ಕೂಡ ಈ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಇದೇ ವರ್ಷ ಅನಾವರಣಗೊಂಡ 'ಸಾಕ್ಷಾತ್' ವಿಶ್ವದ ಅತ್ಯಂತ ಕಡಿಮೆ ಬೆಲೆಯ ಟ್ಯಾಬ್ಲೆಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಂದೂವರೆ ಸಾವಿರ ರೂಪಾಯಿ ವೆಚ್ಚದಲ್ಲಿ ಸಿದ್ಧವಾಗಿರುವ ಈ ಟ್ಯಾಬ್ಲೆಟ್ ಅನ್ನು ಭಾರತೀಯ ವಿಜ್ಞಾನ ಮಂದಿರ ಹಾಗೂ ಐಐಟಿಗಳು ಜಂಟಿಯಾಗಿ ರೂಪಿಸಿವೆ. ಎರಡು ಗಿಗಾಬೈಟ್ ಮೆಮೊರಿ, ಅಂತರಜಾಲ ಸಂಪರ್ಕ, ಸ್ಪರ್ಶಸಂವೇದಿ ಪರದೆಗಳನ್ನು ಹೊಂದಿರುವ ಸಾಕ್ಷಾತ್‌ಗಾಗಿಯೇ ಐಐಟಿಗಳು ಅನೇಕ ಶೈಕ್ಷಣಿಕ ತಂತ್ರಾಂಶಗಳನ್ನು ರೂಪಿಸಿವೆ.

ಮುಂದಿನ ವರ್ಷದ ವೇಳೆಗೆ ಇಂತಹ ಹತ್ತು ಲಕ್ಷ ಟ್ಯಾಬ್ಲೆಟ್‌ಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗುವುದು ಎಂದು ಕೇಂದ್ರ ಸರಕಾರ ಹೇಳಿದೆ. ಇವುಗಳ ಉತ್ಪಾದನೆ ಹೆಚ್ಚಿದಂತೆ ಬೆಲೆ ಇನ್ನೂ ಕಡಿಮೆಯಾಗಬಹುದು ಎಂಬ ನಿರೀಕ್ಷೆಯೂ ಇದೆ.

ನವೆಂಬರ್ ೧೬, ೨೦೧೦ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಬುಧವಾರ, ನವೆಂಬರ್ 10, 2010

ಕಲ್ಪನೆಯ ಯಾತ್ರೆಗೆ ಸಿದ್ಧರಾಗಿ!

'ಕಲ್ಪನೆಯ ಯಾತ್ರೆ ೨೦೧೦' ಹೆಸರಿನ ಖಗೋಳ ಉತ್ಸವ ಬರುವ ನವೆಂಬರ್ ೨೬ರಿಂದ ಡಿಸೆಂಬರ್ ೫ರವರೆಗೆ ಬೆಂಗಳೂರಿನ ಜವಾಹರ್‌ಲಾಲ್ ನೆಹರು ತಾರಾಲಯದಲ್ಲಿ ನಡೆಯಲಿದೆ.

ಈ ವಿಶಿಷ್ಟ ಕಾರ್ಯಕ್ರಮದ ವಿವರಗಳಿಗೆ ಕೆಳಗಿನ ಚಿತ್ರಗಳ ಮೇಲೆ ಕ್ಲಿಕ್ ಮಾಡಿ, ಅಥವಾ ಕಲ್ಪನೆಯ ಯಾತ್ರೆಯ ಜಾಲತಾಣ ನೋಡಿ.


ಮಂಗಳವಾರ, ನವೆಂಬರ್ 9, 2010

ಗಣಕ ಲೋಕದಿಂದ ಮೇಘ ಸಂದೇಶ

ಟಿ ಜಿ ಶ್ರೀನಿಧಿ


ಕ್ಲೌಡ್ ಕಂಪ್ಯೂಟಿಂಗ್ - ಗಣಕ ಲೋಕದಲ್ಲಿ ಹೊಸ ಸಂಚಲನ ಮೂಡಿಸಿರುವ ಪರಿಕಲ್ಪನೆ. ಗೂಗಲ್, ಅಮೆಜಾನ್ ಮುಂತಾದ ಅಂತರಜಾಲ ಸಂಸ್ಥೆಗಳು ಈಗಾಗಲೇ ಬಳಸುತ್ತಿರುವ ಕ್ಲೌಡ್ ಕಂಪ್ಯೂಟಿಂಗ್ ತಂತ್ರಜ್ಞಾನವನ್ನು ತಾವೂ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಮೈಕ್ರೋಸಾಫ್ಟ್, ಎಚ್‌ಪಿ, ಡೆಲ್ ಮುಂತಾದ ಸಂಸ್ಥೆಗಳು ಈಗಾಗಲೇ ದೊಡ್ಡಪ್ರಮಾಣದ ಪ್ರಯತ್ನಗಳನ್ನು ಶುರುಮಾಡಿವೆ. ಗ್ರಾಹಕ ಸಂಪರ್ಕ ನಿರ್ವಹಣೆ ವ್ಯವಸ್ಥೆಯನ್ನು ಕ್ಲೌಡ್ ಮೂಲಕ ಒದಗಿಸುತ್ತಿರುವ ಸೇಲ್ಸ್‌ಫೋರ್ಸ್ ಡಾಟ್ ಕಾಮ್‌ನಂತಹ ಸಂಸ್ಥೆಗಳು ಈಗಾಗಲೇ ಅದ್ಭುತ ಯಶಸ್ಸು ಸಾಧಿಸಿವೆ. ಈಗ ವಾರ್ಷಿಕ ೨.೪ ಬಿಲಿಯನ್ ಡಾಲರುಗಳಷ್ಟು ವಹಿವಾಟು ನಡೆಸುತ್ತಿರುವ ಕ್ಲೌಡ್ ಕಂಪ್ಯೂಟಿಂಗ್ ಕ್ಷೇತ್ರ ಮುಂದಿನ ಮೂರು ವರ್ಷಗಳಲ್ಲಿ ನಾಲ್ಕು ಪಟ್ಟು ದೊಡ್ಡದಾಗಿ ಬೆಳೆಯಲಿದೆ ಎಂದು ಅಂದಾಜಿಸಲಾಗಿದೆ. ಗಣಕ ಲೋಕದ ಭವಿಷ್ಯವೇ ಈ ಕ್ಲೌಡ್ ಕಂಪ್ಯೂಟಿಂಗ್‌ನಲ್ಲಿದೆ ಎನ್ನುವ ಧಾಟಿಯ ಮಾತುಗಳೂ ಬೇಕಾದಷ್ಟು ಕೇಳಿಬರುತ್ತಿವೆ.

ಇಲ್ಲಿ ಕ್ಲೌಡ್ ಎಂದರೆ ಮೋಡವಲ್ಲ. ಕ್ಲೌಡ್ ಕಂಪ್ಯೂಟಿಂಗ್ ಬಳಕೆದಾರರು ಮೋಡದ ಮೇಲೆ ಕುಳಿತಿರಬೇಕಾದ ಅಗತ್ಯವೂ ಇಲ್ಲ. ಹಾಗಾದರೆ ಈ ಕ್ಲೌಡ್ ಕಂಪ್ಯೂಟಿಂಗ್ ಅಂದರೆ ಏನು?

ತಂತ್ರಾಂಶ, ಶೇಖರಣಾ ಸಾಮರ್ಥ್ಯ, ದುಬಾರಿ ಯಂತ್ರಾಂಶ - ಹೀಗೆ ಗಣಕದಲ್ಲಿ ನಿಮಗೆ ಅಗತ್ಯವಾದ ಯಾವುದೇ ಸೇವೆಯನ್ನು ಅಂತರಜಾಲದ ಮೂಲಕ ಒದಗಿಸುವ ಪರಿಕಲ್ಪನೆಯ ಹೆಸರೇ ಕ್ಲೌಡ್ ಕಂಪ್ಯೂಟಿಂಗ್. ಯಾವುದೇ ಸಂಸ್ಥೆ ತನ್ನ ಅಗತ್ಯಗಳಿಗೆ ಬೇಕಾದ ಗಣಕ ವ್ಯವಸ್ಥೆಯನ್ನು ಸ್ವತಃ ಸ್ಥಾಪಿಸಿಕೊಂಡು ನಿರ್ವಹಿಸುವ ಬದಲು ಬೇರೊಂದು ಸಂಸ್ಥೆಗೆ ಗುತ್ತಿಗೆ ಕೊಟ್ಟುಬಿಡುವುದು ಕ್ಲೌಡ್ ಕಂಪ್ಯೂಟಿಂಗ್‌ನ ಮೂಲಮಂತ್ರ.

ಉದಾಹರಣೆಗೆ ಇಪ್ಪತ್ತೈದು ಉದ್ಯೋಗಿಗಳಿರುವ ಒಂದು ಸಂಸ್ಥೆಯನ್ನೇ ತೆಗೆದುಕೊಳ್ಳಿ. ಆ ಸಂಸ್ಥೆ ತನ್ನ ಎಲ್ಲ ನೌಕರರಿಗೆ ಇಮೇಲ್ ಸೌಲಭ್ಯ ಕೊಡಲು ತನ್ನದೇ ಆದ ಸರ್ವರ್ ಸ್ಥಾಪಿಸಿಕೊಂಡು ಅದರ ನಿರ್ವಹಣೆಗೆ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಹೊರಟರೆ ದೊಡ್ಡ ಪ್ರಮಾಣದ ಖರ್ಚು ಬರುತ್ತದೆ. ಅದರ ಬದಲು ಆ ಸಂಸ್ಥೆ ಗೂಗಲ್‌ನ ಎಂಟರ್‌ಪ್ರೈಸ್ ಇಮೇಲ್ ಸೌಲಭ್ಯವನ್ನು ಕೊಳ್ಳುತ್ತದೆ ಎಂದುಕೊಳ್ಳೋಣ. ಸರ್ವರ್ ಬೇಡ, ತಂತ್ರಾಂಶ ಬೇಡ, ಹೆಚ್ಚುವರಿ ಸಿಬ್ಬಂದಿಯೂ ಬೇಡ; ಆ ಖರ್ಚಿನ ಸಣ್ಣದೊಂದು ಭಾಗದಲ್ಲಿ ಸಂಸ್ಥೆಯ ಎಲ್ಲ ನೌಕರರಿಗೂ ಇಮೇಲ್ ಸೌಲಭ್ಯ ದೊರಕಿಬಿಡುತ್ತದೆ. ಜೊತೆಗೆ ನೌಕರರು ವಿಶ್ವದ ಯಾವುದೇ ಮೂಲೆಯಲ್ಲಿ - ಕಚೇರಿಯಲ್ಲಿ, ಮನೆಯಲ್ಲಿ, ಪ್ರವಾಸದಲ್ಲಿ ಎಲ್ಲೇ ಇದ್ದರೂ ತಮ್ಮ ಸಹೋದ್ಯೋಗಿಗಳ ಜೊತೆ ಸಂಪರ್ಕದಲ್ಲಿರುವುದು ಸಾಧ್ಯವಾಗುತ್ತದೆ.

ಬಳಕೆದಾರರ ಸಂಸ್ಥೆಯ ಹೊರಗೆ, ಬೇರೊಬ್ಬರ ಸಂಪೂರ್ಣ ಉಸ್ತುವಾರಿಯಲ್ಲಿ ಕ್ಲೌಡ್ ಕಂಪ್ಯೂಟಿಂಗ್ ವ್ಯವಸ್ಥೆ ಕೆಲಸಮಾಡುತ್ತದೆ. ಹೀಗಾಗಿ ಗಣಕ ವ್ಯವಸ್ಥೆಗಳನ್ನು ಚಿತ್ರದಲ್ಲಿ ಪ್ರತಿನಿಧಿಸುವಾಗ ಈ ಭಾಗವನ್ನು ಮೋಡದ ಆಕಾರದಲ್ಲಿ ತೋರಿಸುತ್ತಾರೆ; ಅದು ನಮ್ಮ ವ್ಯವಸ್ಥೆಯಿಂದ ಹೊರಗಿದೆ ಎಂದು ತೋರಿಸುವುದು ಅದರ ಉದ್ದೇಶ. ಈ ಮೋಡದ ಆಕಾರವೇ 'ಕ್ಲೌಡ್' ಎಂಬ ಹೆಸರಿನ ಮೂಲ.

ಕ್ಲೌಡ್ ಕಂಪ್ಯೂಟಿಂಗ್ ತೀರಾ ಹೊಸ ಪರಿಕಲ್ಪನೆಯೇನಲ್ಲ. ನಮ್ಮ ನಿಮ್ಮಂತಹ ಸಾಮಾನ್ಯ ಬಳಕೆದಾರರು ಬ್ಲಾಗರ್, ಫ್ಲಿಕರ್, ಫೇಸ್‌ಬುಕ್, ಹಾಟ್‌ಮೇಲ್ ಮುಂತಾದ ಯಾವುದೋ ರೂಪದಲ್ಲಿ ಈಗಾಗಲೇ ಇದನ್ನು ಬಳಸುತ್ತಿದ್ದೇವೆ. ಆದರೆ ಸಂಸ್ಥೆಗಳ ದೃಷ್ಟಿಯಿಂದ ಇದಿನ್ನೂ ಈಗ ಬೆಳೆಯುತ್ತಿರುವ ಕ್ಷೇತ್ರ. ಇಮೇಲ್ ವ್ಯವಸ್ಥೆಯಿಂದ ಪ್ರಾರಂಭಿಸಿ ದತ್ತಸಂಚಯಗಳು, ಇಆರ್‌ಪಿ, ಥ್ರೀಡಿ ಮಾಡೆಲಿಂಗ್ ಇತ್ಯಾದಿಗಳವರೆಗೆ ಅನೇಕಬಗೆಯ ಸೇವೆಗಳು ಈಗ ಕ್ಲೌಡ್ ಕಂಪ್ಯೂಟಿಂಗ್ ಮೂಲಕ ದೊರಕುತ್ತಿವೆ. ಅವೆಲ್ಲವೂ ಅಂತರಜಾಲದ ಮೂಲಕವೇ ಲಭ್ಯವಾಗುತ್ತಿರುವುದರಿಂದ ಬಳಕೆದಾರರು ಗಣಕೀಕರಣಕ್ಕೆ ಮಾಡಬೇಕಾದ ವೆಚ್ಚದಲ್ಲಿ ಗಮನಾರ್ಹ ಉಳಿತಾಯ ಸಾಧ್ಯವಾಗುತ್ತಿದೆ.

ಕ್ಲೌಡ್ ಕಂಪ್ಯೂಟಿಂಗ್ ಸೇವೆ ಒದಗಿಸುವ ಸಂಸ್ಥೆಗಳು ಅನೇಕ ಬಳಕೆದಾರರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತವೆ. ಇಲ್ಲಿ ಒಂದೆರಡು ಸರ್ವರ್‌ಗಳಲ್ಲ, ಅನೇಕ ಸರ್ವರ್‌ಗಳ ತೋಟವೇ (ಸರ್ವರ್ ಫಾರ್ಮ್) ಇರುತ್ತದೆ. ಹೀಗಾಗಿ ಒಬ್ಬೊಬ್ಬರಿಗೂ ಬೇರೆಬೇರೆಯಾಗಿ ಯಂತ್ರಾಂಶಗಳನ್ನು ಕೊಳ್ಳುವ, ಸ್ಥಾಪಿಸುವ ಅಥವಾ ನಿರ್ವಹಿಸುವ ಅಗತ್ಯ ಇರುವುದಿಲ್ಲ; ಇದರ ಪರಿಣಾಮ ಬಳಕೆದಾರರಿಗೆ ಕಡಿಮೆ ವೆಚ್ಚದಲ್ಲಿ ಬೇಕಾದ ಸೇವೆಗಳೆಲ್ಲ ದೊರಕಿಬಿಡುತ್ತವೆ. ಯಂತ್ರಾಂಶ ನಿರ್ವಹಣೆ, ಆಗಿಂದಾಗ್ಗೆ ಅದರಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುವುದು, ಇದಕ್ಕೆಲ್ಲ ಬೇಕಾದ ನೌಕರರ ಸಂಬಳ... ಈ ರೀತಿಯ ಯಾವ ತಲೆನೋವೂ ಇಲ್ಲ; ಬಿಲ್ ಬಂದಾಗ ದುಡ್ಡು ಕೊಟ್ಟರೆ ಮುಗಿಯಿತು - ನೀರಿನದೋ ಕರೆಂಟಿನದೋ ಕೇಬಲ್‌ದೋ ಬಿಲ್ ಕಟ್ಟಿದ ಹಾಗೆ! ಹೀಗಾಗಿಯೇ ಕ್ಲೌಡ್ ಕಂಪ್ಯೂಟಿಂಗ್ ಅನ್ನು ಐಟಿ-ಆಸ್-ಎ-ಸರ್ವಿಸ್ ಎಂದೂ ಕರೆಯುತ್ತಾರೆ.

ಈ ವ್ಯವಸ್ಥೆಯಲ್ಲಿ ಬಳಕೆದಾರರ ಮಾಹಿತಿಯೆಲ್ಲ ಬೇರೊಬ್ಬರ ಗಣಕದಲ್ಲಿ ಶೇಖರವಾಗುವುದರಿಂದ ಕ್ಲೌಡ್ ಕಂಪ್ಯೂಟಿಂಗ್ ಸುರಕ್ಷಿತವೇ ಎಂಬ ಪ್ರಶ್ನೆ ಈಗಾಗಲೇ ಕೇಳಿಬಂದಿದೆ. ಆದರೆ ನಾವು ಅತ್ಯುನ್ನತ ಮಟ್ಟದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತೇವೆ; ಅಷ್ಟೆಲ್ಲ ಹೆಚ್ಚಿನ ಸುರಕ್ಷತೆ ಸಣ್ಣಪುಟ್ಟ ಸಂಸ್ಥೆಗಳ ಗಣಕ ವ್ಯವಸ್ಥೆಯಲ್ಲಿ ಖಂಡಿತಾ ಇರುವುದಿಲ್ಲ ಎಂದು ಕ್ಲೌಡ್ ಕಂಪ್ಯೂಟಿಂಗ್ ಸೇವೆ ಒದಗಿಸುತ್ತಿರುವ ಸಂಸ್ಥೆಗಳು ವಾದಿಸಿವೆ.

ಅದೆಲ್ಲ ಏನೇ ಇರಲಿ, ಗಣಕ ಲೋಕದಲ್ಲೊಂದು ಕ್ರಾಂತಿಕಾರಕ ಬದಲಾವಣೆ ತರಲು ರಂಗಸಜ್ಜಿಕೆ ಸಿದ್ಧವಾಗಿದೆ ಎನ್ನುವುದಂತೂ ನಿಜ.

ನವೆಂಬರ್ ೯, ೨೦೧೦ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಮಂಗಳವಾರ, ನವೆಂಬರ್ 2, 2010

ಬೂಟ್ ಮಾಡಲು ಅರೆಕ್ಷಣ ಸಾಕು

ಟಿ ಜಿ ಶ್ರೀನಿಧಿ

ಗಣಕ ಉಪಯೋಗಿಸುವವರೆಲ್ಲ ಆಪರೇಟಿಂಗ್ ಸಿಸ್ಟಂ ಅಥವಾ ಕಾರ್ಯಾಚರಣ ವ್ಯವಸ್ಥೆ ಎಂಬ ಹೆಸರು ಕೇಳಿಯೇ ಇರುತ್ತಾರೆ. ಗಣಕದ ಪ್ರಾಥಮಿಕ ಚಟುವಟಿಕೆಗಳನ್ನು ನಿಯಂತ್ರಿಸುವ ಜೊತೆಗೆ ಅದರ ವಿವಿಧ ಸೌಲಭ್ಯಗಳನ್ನು ಬಳಸಿಕೊಳ್ಳಲು ನಮಗೆ ಸಹಾಯಮಾಡುವ ತಂತ್ರಾಂಶ ಇದು. ಮೈಕ್ರೋಸಾಫ್ಟ್ ವಿಂಡೋಸ್, ಲಿನಕ್ಸ್ ಮುಂತಾದವು ಕಾರ್ಯಾಚರಣ ವ್ಯವಸ್ಥೆಗೆ ಕೆಲ ಉದಾಹರಣೆಗಳು.

ಗಣಕದಲ್ಲಿ ಯಾವುದೇ ಯಂತ್ರಾಂಶ ಅಥವಾ ತಂತ್ರಾಂಶ ಬಳಸಬೇಕಾದರೂ ಕಾರ್ಯಾಚರಣ ವ್ಯವಸ್ಥೆ ಇರಲೇಬೇಕು. ಅಷ್ಟೇ ಅಲ್ಲ, ಇವುಗಳಲ್ಲಿ ಏನನ್ನು ಬಳಸಬೇಕಾದರೂ ಮೊದಲಿಗೆ ಕಾರ್ಯಾಚರಣ ವ್ಯವಸ್ಥೆ ಪ್ರಾರಂಭವಾಗಿರಬೇಕು.

ನೀವು ಗುಂಡಿ ಒತ್ತಿದ ತಕ್ಷಣವೇ ಗಣಕ ತನ್ನಲ್ಲಿ ಈ ಕಾರ್ಯಾಚರಣ ವ್ಯವಸ್ಥೆ ಎಲ್ಲಿ ಶೇಖರವಾಗಿದೆ ಎಂದು ಹುಡುಕಿ ಅದನ್ನು ಪ್ರಾರಂಭಿಸುತ್ತದೆ. 'ಬೂಟ್' ಮಾಡುವುದು ಎನ್ನುವುದು ಇದಕ್ಕೇ.

ಬೂಟ್ ಮಾಡುವುದು ಬಯಾಸ್ ಎಂಬ ತಂತ್ರಾಂಶದ ಕೆಲಸ. ಬಯಾಸ್ ಎನ್ನುವುದು 'ಬೇಸಿಕ್ ಇನ್‌ಪುಟ್/ಔಟ್‌ಪುಟ್ ಸಿಸ್ಟಂ'ನ ಹ್ರಸ್ವರೂಪ.

ಗಣಕ ಲೋಕದಲ್ಲಿ ಎಲ್ಲವೂ ಅತ್ಯಂತ ಕ್ಷಿಪ್ರವಾಗಿ ಬದಲಾಗುತ್ತಿರುತ್ತವೆ; ಇವತ್ತು ಅತ್ಯಾಧುನಿಕ ಎಂದು ಕರೆಸಿಕೊಳ್ಳುವುದು ನಾಳೆಗಾಗಲೇ ಹಳತಾಗಿರುತ್ತದೆ. ಆದರೆ ಇದಕ್ಕೆ ಅಪವಾದದಂತಿರುವುದು ಈ ಬಯಾಸ್. ಇಪ್ಪತ್ತೈದು ವರ್ಷಗಳ ಹಿಂದೆ ಸೃಷ್ಟಿಯಾದ ಈ ತಂತ್ರಾಂಶ ಇಲ್ಲಿಯವರೆಗೂ ಅಬಾಧಿತವಾಗಿ ಬಳಕೆಯಾಗುತ್ತಾ ಬಂದಿದೆ.

ಬಯಾಸ್ ಸೃಷ್ಟಿಯಾದಾಗ ಅದರ ಆಯುಷ್ಯದ ಬಗೆಗೆ ಹೆಚ್ಚಿನ ನಿರೀಕ್ಷೆಯೇನೂ ಇರಲಿಲ್ಲ. ಹೆಚ್ಚೆಂದರೆ ಎರಡು ಎರಡೂವರೆ ಲಕ್ಷ ಗಣಕಗಳಲ್ಲಷ್ಟೆ ಬಳಕೆಯಾಗಬಹುದು ಎನ್ನಲಾಗಿದ್ದ ಬಯಾಸ್ ೧೯೭೯ರಿಂದ ಇಲ್ಲಿಯವರೆಗೂ ಗಣಕಗಳ ಅವಿಭಾಜ್ಯ ಅಂಗವಾಗಿ ಸಾಗಿಬಂದಿದೆ.

ಆದರೆ ಈ ಸುದೀರ್ಘ ಅವಧಿಯಲ್ಲಿ ಇತರ ತಂತ್ರಾಂಶ-ಯಂತ್ರಾಂಶಗಳು ಆಮೂಲಾಗ್ರವಾಗಿ ಬದಲಾದಂತೆ ಬಯಾಸ್ ಬದಲಾಗಿಲ್ಲ. ಹೀಗಾಗಿ ಹತ್ತು ವರ್ಷಗಳ ಹಿಂದಿನ ಗಣಕ ಬೂಟ್ ಆಗಲು ಎಷ್ಟು ಸಮಯ ತೆಗೆದುಕೊಳ್ಳುತ್ತಿತ್ತೋ ಇಂದಿನ ಅತ್ಯಾಧುನಿಕ ಗಣಕವೂ ಹೆಚ್ಚೂಕಡಿಮೆ ಅಷ್ಟೇ ಸಮಯ ತೆಗೆದುಕೊಳ್ಳುತ್ತಿದೆ.

ಈಗ ಕಡೆಗೂ ಬಯಾಸ್‌ಗೆ ಬದಲಾವಣೆಯ ಸಮಯ ಬಂದಿದೆ. ಯೂನಿಫೈಡ್ ಎಕ್ಸ್‌ಟೆನ್ಸಿಬಲ್ ಫರ್ಮ್‌ವೇರ್ ಇಂಟರ್‌ಫೇಸ್ (ಯುಇಎಫ್‌ಐ) ಎಂಬ ಹೊಸ ತಂತ್ರಜ್ಞಾನ ಮುಂದಿನ ವರ್ಷದಿಂದ ಗಣಕಗಳಲ್ಲಿ ಬಯಾಸ್‌ನ ಬದಲಿಗೆ ಕಾಣಿಸಿಕೊಳ್ಳಲಿದೆಯಂತೆ. ಈ ತಂತ್ರಜ್ಞಾನದ ಸಹಾಯದಿಂದ ಗಣಕಗಳನ್ನು ಕೆಲವೇ ಸೆಕೆಂಡುಗಳಲ್ಲಿ ಬೂಟ್ ಆಗುವಂತೆ ಮಾಡಬಹುದು ಎಂದು ಅವರು ಹೇಳಿದ್ದಾರೆ.

ಬಯಾಸ್‌ನಲ್ಲಿದ್ದ ಅನೇಕ ಸಮಸ್ಯೆಗಳನ್ನು ಈ ಹೊಸ ತಂತ್ರಜ್ಞಾನ ಹೋಗಲಾಡಿಸಲಿದೆ. ಬಯಾಸ್ ಬಳಸುವ ಗಣಕಗಳಲ್ಲಿ ಎರಡು ಟೆರಾಬೈಟ್‌ಗಿಂತ ಹೆಚ್ಚಿನ ಸಾಮರ್ಥ್ಯದ ಹಾರ್ಡ್‌ಡಿಸ್ಕ್‌ಗಳನ್ನು ಬಳಸುವುದು ಸಾಧ್ಯವಿಲ್ಲ. ಮಾರುಕಟ್ಟೆಯಲ್ಲಿ ಅಷ್ಟೊಂದು ಹೆಚ್ಚಿನ ಸಾಮರ್ಥ್ಯದ ಹಾರ್ಡ್‌ಡಿಸ್ಕ್‌ಗಳು ದೊರಕುತ್ತಿರಲಿಲ್ಲವಾದ್ದರಿಂದ ಈ ಸಮಸ್ಯೆ ಯಾರಿಗೂ ಅಷ್ಟೊಂದು ದೊಡ್ಡದಾಗಿ ಕಂಡಿರಲಿಲ್ಲ. ಆದರೆ ತೀರಾ ಈಚೆಗೆ ವೆಸ್ಟರ್ನ್ ಡಿಜಿಟಲ್ ಸಂಸ್ಥೆ ವಿಶ್ವದ ಮೊದಲ ಮೂರು ಟೆರಾಬೈಟ್ ಹಾರ್ಡ್ ಡಿಸ್ಕ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಹಾರ್ಡ್ ಡಿಸ್ಕ್ ಬಳಸಬೇಕಾದರೆ ಗಣಕದಲ್ಲಿ ಯುಇಎಫ್‌ಐ ಇರಲೇಬೇಕು (ಈಗಿನ ಗಣಕದಲ್ಲೇ ಇದನ್ನು ಬಳಸಬೇಕು ಎನ್ನುವ ವಿಂಡೋಸ್ ವಿಸ್ತಾ ಅಥವಾ ವಿಂಡೋಸ್ ೭ ಬಳಕೆದಾರರು ಅದಕ್ಕೊಂದು ಪ್ರತ್ಯೇಕ ಅಡಾಪ್ಟರ್ ಕೊಳ್ಳಬೇಕಾಗುತ್ತದೆ).

ಮೊದಲಿಗೆ ಇಂಟೆಲ್ ಸಂಸ್ಥೆಯ ಆಶ್ರಯದಲ್ಲಿ ರೂಪಗೊಂಡ ಯುಇಎಫ್‌ಐ ಇದೀಗ ಒಂದು ಮಾನಕವಾಗಿ ಬೆಳೆಯುತ್ತಿದೆ. ೨೦೧೧ರ ವೇಳೆಗೆ ಪ್ರಪಂಚದಾದ್ಯಂತ ಮಾರಾಟವಾಗುವ ಗಣಕಗಳಲ್ಲಿ ಬಹುಪಾಲು ಈ ತಂತ್ರಜ್ಞಾನವನ್ನೇ ಬಳಸುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ. ಆದರೆ ಯುಇಎಫ್‌ಐ ತಂತ್ರಜ್ಞಾನ ಈಗಾಗಲೇ ಸಾಕಷ್ಟು ಸಮಯದಿಂದ ಅಭಿವೃದ್ಧಿಯಲ್ಲಿರುವುದನ್ನು ಗಮನಿಸಿದರೆ ಈ ಹೇಳಿಕೆಯನ್ನು ಸಂಪೂರ್ಣವಾಗಿ ನಂಬುವುದು ಕಷ್ಟ ಎಂಬ ಅಭಿಪ್ರಾಯವೂ ಇದೆ.

ಈ ತಂತ್ರಜ್ಞಾನದ ಬಗೆಗಿನ ಹೆಚ್ಚಿನ ವಿವರಗಳು ಯೂನಿಫೈಡ್ ಎಕ್ಸ್‌ಟೆನ್ಸಿಬಲ್ ಫರ್ಮ್‌ವೇರ್ ಇಂಟರ್‌ಫೇಸ್ ಫೋರಂನ ಜಾಲತಾಣದಲ್ಲಿ ಲಭ್ಯವಿವೆ.

ನವೆಂಬರ್ ೨, ೨೦೧೦ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಮಂಗಳವಾರ, ಅಕ್ಟೋಬರ್ 26, 2010

ವರ್ಮಾಘಾತ!

ಟಿ ಜಿ ಶ್ರೀನಿಧಿ

ಆರ್ಕುಟ್ ಡಾಟ್ ಕಾಮ್ - ವಿಶ್ವವ್ಯಾಪಿ ಜಾಲದಲ್ಲಿ ಗೆಳೆಯರೊಡನೆ ಸಂಪರ್ಕದಲ್ಲಿರಲು ಅನುವುಮಾಡಿಕೊಡುವ ತಾಣಗಳಲ್ಲೊಂದು; ವಿಶ್ವವೆಲ್ಲ ಫೇಸ್‌ಬುಕ್ ಜಪ ಮಾಡುತ್ತಿರುವಾಗಲೂ ಭಾರತ ಹಾಗೂ ಬ್ರೆಜಿಲ್‌ನಂತಹ ದೇಶಗಳಲ್ಲಿ ಸಾಕಷ್ಟು ಜನಪ್ರಿಯವಾಗಿರುವ ಸಾಮಾಜಿಕ ಜಾಲತಾಣ. ಈಚೆಗೊಂದು ದಿನ ಈ ತಾಣದಲ್ಲೆಲ್ಲ 'ಬಾಮ್ ಸಬಾಡೋ'ದೇ ಸುದ್ದಿ; ಎರಡು ಪದಗಳ ಈ ಸಂದೇಶವನ್ನು ಕಂಡ ಬಳಕೆದಾರರೆಲ್ಲ ಬೆಚ್ಚಿಬೀಳುವ ಪರಿಸ್ಥಿತಿ.

ಬಾಮ್ ಸಬಾಡೋ ಅಂದರೆ ಪೋರ್ಚುಗೀಸ್ ಭಾಷೆಯಲ್ಲಿ ಶುಭ ಶನಿವಾರ ಎಂದರ್ಥ. ಆರ್ಕುಟ್ ಬಳಕೆದಾರರ ಸ್ಕ್ರಾಪ್‌ಬುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಸಂದೇಶ ಅವರ ಗೆಳೆಯರ ಹೆಸರಿನಲ್ಲೇ ಬಂದಿರುತ್ತಿತ್ತು; ಅಷ್ಟೇ ಅಲ್ಲ, ಅದರಲ್ಲೊಂದು ಕೊಂಡಿ (ಹೈಪರ್‌ಲಿಂಕ್) ಕೂಡ ಇರುತ್ತಿತ್ತು. ಅಪ್ಪಿತಪ್ಪಿ ಅದರ ಮೇಲೇನಾದರೂ ಕ್ಲಿಕ್ ಮಾಡಿದ್ದೇ ಆದರೆ ಆ ಸಂದೇಶ ಅವರ ಮಿತ್ರರೆಲ್ಲರ ಸ್ಕ್ರಾಪ್‌ಬುಕ್‌ಗೂ ತಲುಪುತ್ತಿತ್ತು. ಜೊತೆಗೆ ಬಳಕೆದಾರರ ಖಾತೆಗೆ ಯಾವ್ಯಾವುದೋ ಕಮ್ಯೂನಿಟಿಗಳು ತನ್ನಷ್ಟಕ್ಕೇ ಸೇರಿಕೊಳ್ಳುತ್ತಿದ್ದವು. ಈ ಸಂದೇಶ ಪಡೆದ ಮಿತ್ರರ ಖಾತೆಯಲ್ಲೂ ಇದೇ ಘಟನಾವಳಿ ರಿಪೀಟ್. ಕೆಲವೇ ಗಂಟೆಗಳಲ್ಲಿ ಇದರ ಹಾವಳಿ ತಡೆಯಲಾರದೆ ಇಡೀ ಆರ್ಕುಟ್ ತಾಣ ಅಲ್ಲಾಡಿಹೋಗಿತ್ತು.

ಇಷ್ಟೆಲ್ಲ ಹಾವಳಿ ಮಾಡಿದ ಬಾಮ್ ಸಬಾಡೋ ಒಂದು ವರ್ಮ್, ಕಂಪ್ಯೂಟರ್‌ಗಳನ್ನು ಕಾಡುವ ಕುತಂತ್ರಾಂಶಗಳಲ್ಲೊಂದು.

ಗಣಕದಲ್ಲಿರುವ ಮಾಹಿತಿಯನ್ನು ಅಳಿಸಿಹಾಕುವುದು, ತಂತ್ರಾಂಶಗಳು ಕೆಲಸಮಾಡದಂತೆ ಮಾಡುವುದು, ಕಡತಗಳನ್ನು ತೆರೆಯಲಾಗದಂತೆ ಮಾಡಿ ಅವುಗಳಲ್ಲಿರುವ ಮಾಹಿತಿ ನಮಗೆ ಸಿಗದಂತೆ ಮಾಡುವುದು, ಅಂತರ್ಜಾಲದ ಸಂಪನ್ಮೂಲಗಳನ್ನು ಸುಖಾಸುಮ್ಮನೆ ಬಳಸಿಕೊಂಡು ನಿಜವಾದ ಬಳಕೆದಾರರಿಗೆ ತೊಂದರೆ ಉಂಟುಮಾಡುವುದು - ಹೀಗೆ ನೂರೆಂಟು ಬಗೆಯಲ್ಲಿ ತೊಂದರೆಕೊಡುವ ದುರುದ್ದೇಶಪೂರಿತ ತಂತ್ರಾಂಶಗಳನ್ನು ಮಾಲ್‌ವೇರ್‌ಗಳೆಂದು ಕರೆಯುತ್ತಾರೆ.

ವರ್ಮ್‌ಗಳು ಈ ಮಾಲ್‌ವೇರ್‌ನ ಒಂದು ವಿಧ. ಈ ತಂತ್ರಾಂಶಗಳು ಗಣಕ ಜಾಲಗಳ ಮೂಲಕ ಹರಡುತ್ತ ಹೋಗಿ ಗಣಕಗಳ ನಡುವಿನ ಮಾಹಿತಿ ಸಂಚಾರಕ್ಕೆ ತಡೆಯೊಡ್ಡುತ್ತವೆ. ವೆಬ್‌ಸರ್ವರ್‌ಗಳ ಮೇಲೆ ದಾಳಿಮಾಡಿ ಅಲ್ಲಿ ಶೇಖರವಾಗಿರುವ ಜಾಲತಾಣದ ಪುಟಗಳನ್ನು ವಿರೂಪಗೊಳಿಸುವ ಉದ್ದೇಶ ಕೂಡ ಕೆಲ ವರ್ಮ್‌ಗಳಿಗಿರುತ್ತದೆ. ಒಂದೇ ಸಮಯದಲ್ಲಿ ಒಂದೇ ಜಾಲತಾಣಕ್ಕೆ ಸಾವಿರಾರು ಗಣಕಗಳಿಂದ ಮಾಹಿತಿಗಾಗಿ ಕೋರಿಕೆ ಕಳುಹಿಸಿ ಆ ತಾಣವನ್ನು ನಿಷ್ಕ್ರಿಯಗೊಳಿಸುವ ಕಾನ್ಸರ್ಟೆಡ್ ಅಟ್ಯಾಕ್‌ಗಳೆಂಬ ದಾಳಿ ನಡೆಸುವುದು ಕೂಡ ವರ್ಮ್‌ಗಳ ಉದ್ದೇಶವಾಗಿರುವುದು ಸಾಧ್ಯ.

ಇನ್ನು ಬಾಮ್ ಸಬಾಡೋನಂತಹ ವರ್ಮ್‌ಗಳು ಜಾಲತಾಣಗಳಲ್ಲಿರುವ ಸುರಕ್ಷತಾ ದೌರ್ಬಲ್ಯಗಳನ್ನು ದುರುಪಯೋಗಪಡಿಸಿಕೊತ್ತವೆ. ಸಾಮಾನ್ಯ ಕೊಂಡಿಯಂತೆಯೇ ಕಾಣುವ ಹೈಪರ್‌ಲಿಂಕ್ ಮೇಲೆ ಕ್ಲಿಕ್ಕಿಸಿದಾಗ ಬೇರೊಂದು ದುರುದ್ದೇಶಪೂರಿತ ತಾಣಕ್ಕೆ ಕೊಂಡೊಯ್ಯುವುದು, ಬಳಕೆದಾರರ ಖಾಸಗಿ ಮಾಹಿತಿ ಕದಿಯುವುದು ಇವೆಲ್ಲ ಈ 'ಕ್ರಾಸ್-ಸೈಟ್ ಸ್ಕ್ರಿಪ್ಟಿಂಗ್' ವರ್ಮ್‌ಗಳ ಕೆಲಸ. ಆರ್ಕುಟ್ ಮಾತ್ರವಲ್ಲದೆ ಫೇಸ್‌ಬುಕ್, ಟ್ವಿಟರ್ ಮುಂತಾದ ಹಲವಾರು ಸಾಮಾಜಿಕ ಜಾಲತಾಣಗಳು ಈಗಾಗಲೇ ಈ ವರ್ಮ್‌ಗಳಿಂದ ತೊಂದರೆ ಅನುಭವಿಸಿವೆ.

ಈವರೆಗೆ ವರ್ಮ್‌ಗಳ ಹಾವಳಿ ಕೇವಲ ವೈಯುಕ್ತಿಕ ಗಣಕ ಅಥವಾ ಪರ್ಸನಲ್ ಕಂಪ್ಯೂಟರ್‌ಗಳಿಗೆ ಮಾತ್ರ ಸೀಮಿತವಾಗಿತ್ತು. ಸಿಡಿ, ಪೆನ್‌ಡ್ರೈವ್ ಮೂಲಕವೋ ವಿಶ್ವವ್ಯಾಪಿ ಜಾಲದಲ್ಲೋ ಹರಡುವ ಇಂತಹ ವರ್ಮ್‌ಗಳಿಂದ ಉಂಟಾಗುವ ತೊಂದರೆ ದೊಡ್ಡಪ್ರಮಾಣದ್ದೇ ಆದರೂ ಅವುಗಳಿಂದ ಪಾರಾಗುವ ವಿಧಾನ ಸುಲಭ. ವೈರಸ್ ವಿರೋಧಿ ತಂತ್ರಾಂಶಗಳ (ಆಂಟಿ ವೈರಸ್) ಬಳಕೆ, ಅಪರಿಚಿತ ಜಾಲತಾಣಗಳಿಂದ ತಂತ್ರಾಂಶಗಳನ್ನು ಡೌನ್‌ಲೋಡ್ ಮಾಡದಿರುವುದು, ಸಂಶಯಾಸ್ಪದ ಇಮೇಲ್‌ಗಳನ್ನು ತೆರೆಯದಿರುವುದು, ಸಿಕ್ಕಸಿಕ್ಕ ಹೈಪರ್‌ಲಿಂಕ್‌ಗಳ ಮೇಲೆಲ್ಲ ಕ್ಲಿಕ್ ಮಾಡದಿರುವುದು ಮುಂತಾದ ಕೆಲ ಸರಳ ಕ್ರಮಗಳನ್ನು ಪಾಲಿಸುವುದರಿಂದ ವರ್ಮ್‌ಗಳನ್ನು ದೂರವಿಡುವುದು ಸಾಧ್ಯ.

ಆದರೆ ಇದೀಗ ವರ್ಮ್‌ಗಳ ವ್ಯಾಪ್ತಿ ನಮ್ಮ ನಿಮ್ಮ ಗಣಕಗಳಿಂದಾಚೆಗೆ ಬೆಳೆಯುತ್ತಿದೆ. ಸಂಶೋಧನಾ ಸಂಸ್ಥೆಗಳು, ವಿದ್ಯುತ್ ಉತ್ಪಾದನಾ ಘಟಕಗಳು, ಅಣುಶಕ್ತಿ ಕೇಂದ್ರಗಳು, ಕಾರ್ಖಾನೆಗಳು ಮುಂತಾದ ಕಡೆ ಪ್ರಮುಖ ಚಟುವಟಿಕೆಗಳಲ್ಲಿ ಬಳಕೆಯಾಗುವ ಗಣಕೀಕೃತ ಯಂತ್ರೋಪಕರಣಗಳನ್ನು ಬಾಧಿಸುವ ಸ್ಟಕ್ಸ್‌ನೆಟ್ ಎಂಬ ಕಂಪ್ಯೂಟರ್ ವರ್ಮ್ ಇತ್ತೀಚೆಗೆ ಬೆಳಕಿಗೆ ಬಂದಿದೆ.

ಔದ್ಯಮಿಕ ಕೇಂದ್ರಗಳನ್ನೇ ಗುರಿಯಾಗಿಸಿಕೊಂಡ ಇಂತಹ ವರ್ಮ್‌ಗಳನ್ನು ಸೈಬರ್ ಬ್ರಹ್ಮಾಸ್ತ್ರಗಳೆಂದು ಕರೆಯಬಹುದು. ದೇಶದ ಅತ್ಯಂತ ಮಹತ್ವದ ಕೇಂದ್ರಗಳ ಚಟುವಟಿಕೆಯನ್ನೇ ಹಾಳುಗೆಡವಬಲ್ಲ ಇಂತಹ ವರ್ಮ್‌ಗಳಿಂದ ಉಂಟಾಗಬಹುದಾದ ತೊಂದರೆ ಅಗಾಧ ಪ್ರಮಾಣದ್ದು. ಅತ್ಯುನ್ನತ ಮಟ್ಟದ ತಾಂತ್ರಿಕತೆ ಬಳಸುವ ಈ ಬಗೆಯ ವರ್ಮ್‌ಗಳನ್ನು ವೈರಿದೇಶಗಳು ತಮ್ಮ ಶತ್ರುಗಳಿಗೆ ತೊಂದರೆಕೊಡಲು ಬಳಸುತ್ತಿವೆ ಎಂದು ನಂಬಲಾಗಿದೆ.

ಸ್ಟಕ್ಸ್‌ನೆಟ್ ಹಾವಳಿಯ ಬಗೆಗೆ ಮೊದಲ ಗಂಭೀರ ಸುದ್ದಿ ಬಂದದ್ದು ಇರಾನ್ ದೇಶದಿಂದ. ಅಲ್ಲಿನ ಅಣುಶಕ್ತಿ ಕೇಂದ್ರವೊಂದರ ಯಂತ್ರೋಪಕರಣಗಳು ಈ ವರ್ಮ್‌ನಿಂದ ಬಾಧಿತವಾಗಿರುವ ಸಮಾಚಾರ ವಿಶ್ವದೆಲ್ಲೆಡೆ ಗಾಬರಿ ಮೂಡಿಸಿದೆ. ಇರಾನ್ ಮಾತ್ರವಲ್ಲದೆ ಚೀನಾ, ಇಂಡೋನೇಶಿಯಾ ಮೊದಲಾದೆಡೆಗಳಲ್ಲೂ ಈ ವರ್ಮ್ ಹರಡುತ್ತಿದೆಯಂತೆ.

ಭಾರತದಲ್ಲೂ ಈ ವರ್ಮ್ ಹಾವಳಿ ಕಾಣಿಸಿಕೊಂಡಿದೆ ಎಂದು ಗಣಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ಜುಲೈನಲ್ಲಿ ಇದ್ದಕ್ಕಿದ್ದಂತೆ ತೊಂದರೆಗೀಡಾಗಿ ಈಗ ಭಾಗಶಃ ನಿಷ್ಕ್ರಿಯವಾಗಿರುವ ಇನ್‌ಸ್ಯಾಟ್-೪ಬಿ ಉಪಗ್ರಹದ ವೈಫಲ್ಯಕ್ಕೆ ಇದೇ ವರ್ಮ್ ಕಾರಣವಿರಬಹುದು ಎಂದು ಜೆಫ್ರಿ ಕಾರ್ ಎಂಬ ತಜ್ಞ ಹೇಳಿದ್ದಾನೆ. ಈ ಉಪಗ್ರಹದ ವೈಫಲ್ಯದಿಂದಾಗಿ ಭಾರತದ ಎರಡು ಪ್ರಮುಖ ಡಿಟಿಎಚ್ ಸಂಸ್ಥೆಗಳು ಚೀನಾದೇಶದ ಉಪಗ್ರಹವೊಂದರ ಸೇವೆಯನ್ನು ಕೊಳ್ಳಬೇಕಾಯಿತು. ಬಾಹ್ಯಾಕಾಶ ವಿಜ್ಞಾನದಲ್ಲಿ ಹೆಚ್ಚುಹೆಚ್ಚಿನ ಸಾಧನೆ ಮಾಡಲು ಭಾರತ ಹಾಗೂ ಚೀನಾದ ನಡುವೆ ಏರ್ಪಟ್ಟಿರುವ ಸ್ಪರ್ಧೆಯ ಹಿನ್ನೆಲೆಯಲ್ಲಿ ಈ ಘಟನೆಯನ್ನು ಗಮನಿಸಿದರೆ ಸೈಬರ್ ಯುದ್ಧದ ಇನ್ನೂ ಕುತೂಹಲಕರ ಅಂಶಗಳು ಹೊರಬರಬಹುದೇನೋ!

ಅಕ್ಟೋಬರ್ ೨೬, ೨೦೧೦ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಗುರುವಾರ, ಅಕ್ಟೋಬರ್ 21, 2010

ಟಾಕಿನ್ ಎಂಬ ವಿಶಿಷ್ಟಜೀವಿ

ಟಿ ಜಿ ಶ್ರೀನಿಧಿ

"ಹದಿನೈದನೇ ಶತಮಾನದಲ್ಲಿ ಭೂತಾನಿನಲ್ಲೊಬ್ಬ ಸಂತನಿದ್ದನಂತೆ. ಆತ ಚಿತ್ರವಿಚಿತ್ರ ಪವಾಡಗಳನ್ನು ಮಾಡಬಲ್ಲ ಎಂಬ ನಂಬಿಕೆ ವ್ಯಾಪಕವಾಗಿತ್ತು. ಆತ ಎಲ್ಲಿಯೇ ಹೋದರೂ ಆತನ ಪವಾಡಗಳನ್ನು ನೋಡಲು ಜನರು ಮುಗಿಬೀಳುತ್ತಿದ್ದರು.

ಇಂಥದ್ದೇ ಒಂದು ಸಂದರ್ಭದಲ್ಲಿ ಆ ಸಂತನನ್ನು ಮುತ್ತಿಕೊಂಡ ಜನರು ತಮಗೇನಾದರೂ ಪವಾಡ ಮಾಡಿ ತೋರಿಸಿ ಅಂತ ದುಂಬಾಲುಬಿದ್ದರು. ಸರಿ ಅದಕ್ಕೇನಂತೆ ಅಂದ ಸಂತ ಮೊದಲು ನನಗೊಂದು ಮೇಕೆ ಮತ್ತೊಂದು ಹಸು ತಂದುಕೊಡಿ ಅಂದರು. ಓಹೋ ಇದೇನೋ ಭಾರೀ ಪವಾಡವೇ ಇರಬೇಕು ಅಂದುಕೊಂಡ ಜನ ಎಲ್ಲಿಂದಲೋ ಒಂದು ಹಸು, ಮೇಕೆ ಎರಡನ್ನೂ ಹಿಡಿದುಕೊಂಡು ಬಂದರೆ ಆ ಸಂತ ಎರಡನ್ನೂ ಹಿಡಿದು ತಿಂದೇಬಿಟ್ಟರು. ಮಿಕ್ಕಿದ್ದು ಬರಿಯ ಮೂಳೆ ಮಾತ್ರ.

ಜನರೆಲ್ಲ ಇದೊಳ್ಳೆ ಕಥೆಯಾಯಿತಲ್ಲ ಅಂದುಕೊಳ್ಳುತ್ತಿರುವಷ್ಟರಲ್ಲೇ ಹಸುವಿನ ದೇಹದ ಮೂಳೆಗಳಿಗೆ ಮೇಕೆಯ ತಲೆಬುರುಡೆ ಅಂಟಿಸಿದ ಸಂತ ಅದಕ್ಕೆ ಜೀವಕೊಟ್ಟರಂತೆ. ತಕ್ಷಣ ಮೇಲೆದ್ದ ಹಸುವಿನ ದೇಹ, ಮೇಕೆಯ ತಲೆಯ ಆ ವಿಚಿತ್ರ ಪ್ರಾಣಿ ಓಡಿಹೋಗಿ ಕಾಡುಸೇರಿತಂತೆ" - ಇದು ಟಾಕಿನ್ ಎಂಬ ವಿಚಿತ್ರಪ್ರಾಣಿ ಸೃಷ್ಟಿಯಾದ ಬಗೆಗೆ ಭೂತಾನಿನಲ್ಲಿ ಪ್ರಚಲಿತದಲ್ಲಿರುವ ಜಾನಪದ ಕತೆ.

ಹಸುವಿನ ದೇಹ, ಮೇಕೆಯ ತಲೆಯ ಟಾಕಿನ್ (Budorcas taxicolor) ಈ ಕಥೆಯಷ್ಟೇ ವಿಚಿತ್ರವಾಗಿರುವುದು ತಮಾಷೆಯ ಸಂಗತಿ. ಜೀವವಿಜ್ಞಾನಿಗಳಿಗೂ ಇದರ ವೈಚಿತ್ರ್ಯ ವಿಶೇಷವಾಗಿ ಕಾಣಿಸಿರುವುದರಿಂದ ಅವರೂ ಈ ಪ್ರಾಣಿಯನ್ನು ತನ್ನದೇ ಆದ ವಿಶೇಷ ಗುಂಪಿಗೆ ಸೇರಿಸಿಬಿಟ್ಟಿದ್ದಾರೆ. ಇನ್ನು ಭೂತಾನ್ ದೇಶವಂತೂ ಟಾಕಿನ್ ಅನ್ನು ತನ್ನ ರಾಷ್ಟ್ರೀಯ ಪ್ರಾಣಿಯಾಗಿ ಗುರುತಿಸಿದೆ.
ಹಿಮಾಲಯದ ಆಸುಪಾಸಿನ ಪ್ರದೇಶ ಹಾಗೂ ಚೀನಾದ ಪಶ್ಚಿಮ ಭಾಗಗಳು ಟಾಕಿನ್‌ಗಳ ನೆಲೆ. ನಾಲ್ಕುಸಾವಿರ ಅಡಿಗೂ ಎತ್ತರದ ಪರ್ವತಪ್ರದೇಶಗಳಲ್ಲಿ ಮಾತ್ರವೇ ಕಂಡುಬರುವ ಟಾಕಿನ್ ತನ್ನ ವಿಶಿಷ್ಟ ರೂಪ ಹಾಗೂ ದಟ್ಟ ತುಪ್ಪಳದಿಂದಾಗಿ ಗಮನಸೆಳೆಯುತ್ತದೆ. ಪರ್ವತ ಪ್ರದೇಶದಲ್ಲಿ ಚಳಿ ತೀವ್ರವಾದಾಗ ಮಾತ್ರ ಇವು ಕೆಳಗಿನ ಕಣಿವೆಗಳತ್ತ ವಲಸೆಹೋಗುತ್ತವೆ.

ಸುಮಾರು ನಾಲ್ಕು ಅಡಿಯಷ್ಟು ಎತ್ತರ ಹಾಗೂ ಐದಾರುನೂರು ಕೆಜಿ ತೂಕದವರೆಗೂ ಬೆಳೆಯುವ ಈ ಪ್ರಾಣಿ ಅಪ್ಪಟ ಸಸ್ಯಾಹಾರಿ. ಗಂಡು ಹೆಣ್ಣು ಎರಡರ ತಲೆ ಮೇಲೂ ಕೊಂಬು ನೋಡಬಹುದು. ತಮ್ಮ ನಿಲುಕಿಗೆ ಸಿಗಬಲ್ಲ ಯಾವುದೇ ಗಿಡ-ಮರದ ಸೊಪ್ಪು ಇವುಗಳ ಮುಖ್ಯ ಆಹಾರ. ಎಲೆಗಳು ಸುಲಭಕ್ಕೆ ನಿಲುಕದಿದ್ದರೆ ಎರಡು ಕಾಲುಗಳ ಮೇಲೆ ನಿಂತು ಅಥವಾ ಇನ್ನು ಕೆಲ ಸಂದರ್ಭಗಳಲ್ಲಿ ಗಿಡವನ್ನೇ ಬೀಳಿಸಿ ಮೇಯುವ ಅಭ್ಯಾಸ ಕೂಡ ಇದೆ.

ಹಗಲುಹೊತ್ತಿನಲ್ಲಿ ಚುರುಕಾಗಿರುವ ಈ ಪ್ರಾಣಿಗಳದು ಗುಂಪುಗಳಲ್ಲಿ ಮೇಯುವ ಅಭ್ಯಾಸ. ಒಂದೇ ಗುಂಪಿನಲ್ಲಿ ಮುನ್ನೂರು ಟಾಕಿನ್‌ಗಳನ್ನು ನೋಡಿರುವವರೂ ಇದ್ದಾರೆ. ಆದರೆ ವಯಸ್ಸಾದ ಗಂಡುಗಳು ಮಾತ್ರ ಒಬ್ಬಂಟಿಯಾಗಿರುತ್ತವೆ.

ಬೇಸಿಗೆಕಾಲ, ಟಾಕಿನ್‌ಗಳ ಸಂತಾನೋತ್ಪತ್ತಿಯ ಸಮಯ. ಏಳೆಂಟು ತಿಂಗಳ ನಂತರ ಹುಟ್ಟುವ ಮರಿ ಮೂರೇ ದಿನದಲ್ಲಿ ತಾಯಿಯೊಡನೆ ಸರಾಗವಾಗಿ ಓಡಾಡಲು ಕಲಿತುಬಿಡುತ್ತದೆ. ಹುಲಿಮರಿಯನ್ನು ಕಬ್ ಎಂದು ಕರೆಯುವಂತೆ ಟಾಕಿನ್ ಮರಿಯನ್ನು ಕಿಡ್ ಎನ್ನುತ್ತಾರೆ.

ಕರಡಿ, ಹಿಮಚಿರತೆ ಹಾಗೂ ತೋಳ ಟಾಕಿನ್‌ನನ್ನು ಕಾಡುವ ಪ್ರಮುಖ ಬೇಟೆಗಾರ ಪ್ರಾಣಿಗಳು. ಮಾನವ ಬೇಟೆಗಾರರ ಉಪಟಳವೂ ಇಲ್ಲದಿಲ್ಲ. ಜೊತೆಗೆ ಅರಣ್ಯಗಳಲ್ಲಿ ಮಾನವನ ಹಸ್ತಕ್ಷೇಪ ಹೆಚ್ಚುತ್ತಿರುವುದರಿಂದ ಇವುಗಳ ನೆಲೆ ದಿನೇದಿನೇ ಕ್ಷೀಣಿಸುತ್ತಿದೆ; ಮೇವಿಗಾಗಿ ಸಾಕುಪ್ರಾಣಿಗಳೊಡನೆ ಸ್ಪರ್ಧಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.  ಹೀಗಾಗಿ ಇವನ್ನು ಸಂರಕ್ಷಣಾ ದೃಷ್ಟಿಯಿಂದ ತೊಂದರೆಗೊಳಗಾಗಿರುವ ಪ್ರಭೇದ (ವಲ್ನರಬಲ್ ಸ್ಪೀಷೀಸ್) ಎಂದು ಗುರುತಿಸಲಾಗಿದೆ.

ನವೆಂಬರ್ ೨೦೧೦ರ ವಿಜ್ಞಾನ ಲೋಕದಲ್ಲಿ ಪ್ರಕಟವಾದ ಲೇಖನ

ಬುಧವಾರ, ಅಕ್ಟೋಬರ್ 20, 2010

ನಿಲ್ಲದ ವಿಮಾನಕ್ಕಾಗಿ ಮುಗಿಯದ ಹುಡುಕಾಟ

ಟಿ ಜಿ ಶ್ರೀನಿಧಿ

ಈಚಿನ ವರ್ಷಗಳಲ್ಲಿ  ಚಾಲಕರಹಿತ ವಿಮಾನಗಳು (ಅನ್‌ಮ್ಯಾನ್ಡ್ ಏರಿಯಲ್ ವೆಹಿಕಲ್ - ಯುಎವಿ) ರಕ್ಷಣಾ ಕ್ಷೇತ್ರದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿವೆ. ರಕ್ಷಣಾ ಸಿಬ್ಬಂದಿಯ ಜೀವಹಾನಿಯಾಗುವ ಭಯವಿಲ್ಲದೆ, ಶತ್ರುಪ್ರದೇಶದಲ್ಲಿ ಏನೇನು ನಡೆಯುತ್ತಿದೆ ಎನ್ನುವುದನ್ನು ಗಮನಿಸಲು, ಅಲ್ಲಿನ ಚಲನವಲನಗಳ ಚಿತ್ರಗಳನ್ನು ಪಡೆಯಲು,  ಕಡೆಗೆ ಆ ಪ್ರದೇಶಗಳ ಮೇಲೆ ದಾಳಿ ನಡೆಸಲು ಕೂಡ ಈ ವಿಮಾನಗಳು ಉಪಯುಕ್ತವಾಗಿವೆ. ಕೈಯಲ್ಲಿ ಹಿಡಿದುಕೊಳ್ಳುವಷ್ಟು ಪುಟ್ಟ ಗಾತ್ರದಿಂದ ಪ್ರಾರಂಭಿಸಿ ಒಂದೆರಡು ಸಾವಿರ  ಕೆಜಿ ತೂಗುವ ದೊಡ್ಡ ವಿಮಾನಗಳವರೆಗೆ ಅನೇಕ ಬಗೆಯ ಚಾಲಕರಹಿತ ವಿಮಾನಗಳು ವಿಶ್ವದ ವಿವಿಧೆಡೆಗಳಲ್ಲಿ ಬಳಕೆಯಲ್ಲಿವೆ.

ಆದರೆ ಇಂತಹ ವಿಮಾನಗಳ  ಬಳಕೆಯಲ್ಲಿ ಅವುಗಳಿಗೆ ಪೂರೈಸಬೇಕಾದ  ಇಂಧನದ್ದೇ ಬಹುದೊಡ್ಡ ಸಮಸ್ಯೆ. ಎಷ್ಟೇ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ  ವಿಮಾನವಾದರೂ  ಅದರಲ್ಲಿ ಸೀಮಿತ ಪ್ರಮಾಣದ  ಇಂಧನವನ್ನಷ್ಟೆ ಶೇಖರಿಸಿಡಲು ಸಾಧ್ಯ; ಹೀಗಾಗಿ  ನಿರ್ದಿಷ್ಟ ಸಮಯದ ಹಾರಾಟದ ನಂತರ ಅವು ತಮ್ಮ ನಿಯಂತ್ರಣ ಕೇಂದ್ರಕ್ಕೆ ವಾಪಸ್  ಬರಬೇಕಾಗುತ್ತದೆ. ಇದರಿಂದ ಸಮಯ ವ್ಯರ್ಥವಾಗುವುದಷ್ಟೇ ಅಲ್ಲದೆ ಶತ್ರುಪ್ರದೇಶದಲ್ಲಿ ಹೆಚ್ಚು ದೂರ ಸಾಗುವುದೂ ಅಸಾಧ್ಯವಾಗುತ್ತದೆ; ಹೀಗಾಗಿ ಈ ವಿಮಾನಗಳ ಕಾರ್ಯಕ್ಷೇತ್ರವೂ ಸೀಮಿತವಾಗುತ್ತದೆ.

ಈ ಸಮಸ್ಯೆಯನ್ನು ಹೋಗಲಾಡಿಸಲು ಬಹುದಿನಗಳಿಂದ ಪ್ರಯತ್ನಗಳು ನಡೆಯುತ್ತಲೇ ಬಂದಿವೆ. ಸಾಂಪ್ರದಾಯಿಕ ಇಂಧನ ಮೂಲಗಳ ಬದಲಿಗೆ ಸೌರಶಕ್ತಿ ಬಳಸಿದರೆ ಸುದೀರ್ಘ  ಕಾಲದವರೆಗೆ ನಿಲ್ಲದೆ ಹಾರಾಡುವಂತಹ ವಿಮಾನಗಳನ್ನು ಸೃಷ್ಟಿಸುವುದು ಸಾಧ್ಯ ಎಂಬ ಪರಿಕಲ್ಪನೆಯನ್ನಿಟ್ಟುಕೊಂಡೇ ಸಾಕಷ್ಟು ಕೆಲಸ ನಡೆದಿದೆ. ೧೯೭೪ರಷ್ಟು ಹಿಂದೆಯೇ ಆಸ್ಟ್ರೋಫ್ಲೈಟ್ ಸನ್‌ರೈಸ್ ಎಂಬ ಹೆಸರಿನ ಸೌರಶಕ್ತಿಚಾಲಿತ ವಿಮಾನ ಯಶಸ್ವಿ ಹಾರಾಟ ನಡೆಸಿತ್ತು. ೨೦೦೦ನೇ ಇಸವಿಯ ಆಸುಪಾಸಿನಲ್ಲಿ ಸಾಕಷ್ಟು ಸುದ್ದಿಮಾಡಿದ್ದ ಹೀಲಿಯೋಸ್ ಎಂಬ ಸೌರ ವಿಮಾನವಂತೂ ಮೂವತ್ತು ಸಾವಿರ ಅಡಿಗಳಷ್ಟು ಎತ್ತರಕ್ಕೆ ಹಾರಿ ದಾಖಲೆ ನಿರ್ಮಿಸಿತ್ತು.

ಇಷ್ಟೆಲ್ಲ ಆದರೂ ಇಂಧನ  ಮರುಪೂರೈಕೆಯ ಅಗತ್ಯವಿಲ್ಲದೆ ಸುದೀರ್ಘ ಅವಧಿಯ ಹಾರಾಟ ಕೈಗೊಳ್ಳುವ ನಿಟ್ಟಿನಲ್ಲಿ  ಮಾತ್ರ ಯಾವ ಗಮನಾರ್ಹ ಸಾಧನೆಯೂ  ಕಂಡುಬಂದಿರಲಿಲ್ಲ.  ೨೦೦೧ರಲ್ಲಿ ಸತತ ಮೂವತ್ತು  ಗಂಟೆಗಳ ಕಾಲ ಹಾರಾಟ ನಡೆಸಿದ ಗ್ಲೋಬಲ್ ಹಾಕ್ ವಿಮಾನದ್ದೇ ಈವರೆಗಿನ ಅತ್ಯುತ್ತಮ ಸಾಧನೆಯಾಗಿತ್ತು. ಚಾಲಕರಹಿತ ವಿಮಾನವೇಕೆ,  ಮನುಷ್ಯಚಾಲಿತ ವಿಮಾನ ಕೂಡ ಇಂಧನ ಮರುಪೂರೈಕೆ ಬೇಡದೆ ಒಂಬತ್ತು ದಿನಗಳಿಗಿಂತ ಹೆಚ್ಚುಕಾಲ ಹಾರಾಡಿರಲಿಲ್ಲ.

ಆದರೆ ಈಗ ಹಿಂದಿನ  ಎಲ್ಲ ದಾಖಲೆಗಳನ್ನೂ ಮುರಿದಿರುವ ಕೈನೆಟಿಕ್ ಜಫೈರ್ ಎಂಬ ಚಾಲಕರಹಿತ ವಿಮಾನ ಒಮ್ಮೆಯೂ ನಿಲ್ಲದೆ ಸತತ ಎರಡು ವಾರಗಳ ಕಾಲ ಹಾರಾಟ ನಡೆಸಿ ಇತಿಹಾಸ ಸೃಷ್ಟಿಸಿದೆ. ಕಳೆದ ಜುಲೈ ೯ರಿಂದ ಜುಲೈ ೨೩ರ ಅವಧಿಯಲ್ಲಿ ಸತತವಾಗಿ ೩೩೬ ಗಂಟೆಗಳ ಕಾಲ ಹಾರಾಡಿದ ಈ ವಿಮಾನಕ್ಕೀಗ ಎಂದೆಂದೂ ನಿಲ್ಲದ ವಿಮಾನ ಎಂಬ ಬಿರುದಿನ ಹೆಮ್ಮೆ.

ಈ ವಿಮಾನದ ಮೈತುಂಬಾ ಅಳವಡಿಸಲಾಗಿದ್ದ ಸೌರಶಕ್ತಿ ಕೋಶಗಳು  ಸೂರ್ಯನ ಬೆಳಕನ್ನು ಸೌರಶಕ್ತಿಗೆ ಪರಿವರ್ತಿಸಿ ಲೀಥಿಯಂ-ಸಲ್ಫರ್ ಬ್ಯಾಟರಿಗಳಲ್ಲಿ ಶೇಖರಿಸುತ್ತವೆ. ಈ  ವಿದ್ಯುತ್ತಿನಿಂದಲೇ ವಿಮಾನದ ತಡೆರಹಿತ ಹಾರಾಟ ಸಾಧ್ಯವಾಗುತ್ತದೆ. ಹಗಲು ಹೊತ್ತಿನಲ್ಲಿ ಶೇಖರವಾದ ಹೆಚ್ಚಿನ ವಿದ್ಯುತ್ತು ರಾತ್ರಿಹೊತ್ತಿನ ಹಾರಾಟಕ್ಕೆ ಬಳಕೆಯಾಗುತ್ತದೆ.

ಇಂತಹ ಅಭೂತಪೂರ್ವ  ಸಾಧನೆಯಿಂದ ವಿಶ್ವದ ಗಮನಸೆಳೆದಿರುವ ಈ ವಿಮಾನವನ್ನು ಸೃಷ್ಟಿಸಿದವರು ಬ್ರಿಟನ್ನಿನ ಕೈನೆಟಿಕ್ ಸಂಸ್ಥೆಯ ತಂತ್ರಜ್ಞರು. ಈ  ವಿಮಾನ ಅತಿ ಶೀಘ್ರದಲ್ಲೇ ಅನೇಕ ರೀತಿಯ ಉದ್ದೇಶಗಳಿಗಾಗಿ ಬಳಕೆಯಾಗಲಿದೆ ಎಂಬ ಸಂತಸ ಅವರದು. ಯಾವುದೇ ಪ್ರದೇಶದ ಮೇಲೆ ಸತತ ನಿಗಾ ಇಡುವುದನ್ನು ಸಾಧ್ಯವಾಗಿಸಲಿರುವ ಜಫೈರ್ ವಿಮಾನ ರಕ್ಷಣಾ ಕ್ಷೇತ್ರದಲ್ಲಿ ಮಾತ್ರವಲ್ಲದೆ ಅನೇಕ ವೈಜ್ಞಾನಿಕ ಉದ್ದೇಶಗಳಿಗಾಗಿಯೂ ಬಳಕೆಯಾಗಬಲ್ಲದು ಎಂದು ಅವರು ಹೇಳುತ್ತಾರೆ.

ಆದರೆ ಇಲ್ಲೂ ಒಂದು  ಸಮಸ್ಯೆಯಿದೆ - ಸೌರಶಕ್ತಿಚಾಲಿತ ವಿಮಾನಗಳ  ಮೇಲೆ ಸಾಕಷ್ಟು ಸಂಖ್ಯೆಯ ಸೌರಶಕ್ತಿಕೋಶಗಳಿರಬೇಕಾಗುತ್ತದೆ; ಹೀಗಾಗಿ ಇಂತಹ ವಿಮಾನಗಳ  ಗಾತ್ರವನ್ನು ಗಣನೀಯವಾಗಿ ಚಿಕ್ಕದಾಗಿಸುವುದು ಕಷ್ಟ. ದೊಡ್ಡಗಾತ್ರದ ವಿಮಾನಗಳು ಶತ್ರುಪ್ರದೇಶದಲ್ಲಿ ಗೂಢಚಾರಿಕೆ ನಡೆಸುವುದು ಎಷ್ಟು ಕಷ್ಟ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ತಾನೆ?

ಅಮೆರಿಕಾದ ಎಂಐಟಿಯ ತಂತ್ರಜ್ಞರು ಈ ಸಮಸ್ಯೆಗೂ ಒಂದು ಪರಿಹಾರ ಹುಡುಕಲು ಹೊರಟಿದ್ದಾರೆ. ಹೆಚ್ಚೂಕಡಿಮೆ ಪ್ರಪಂಚದ ಎಲ್ಲಕಡೆಗಳಲ್ಲೂ ವ್ಯಾಪಿಸಿಕೊಂಡಿರುವ ವಿದ್ಯುತ್ ವಿತರಣಾ ಜಾಲಗಳಿಂದ ವಿದ್ಯುತ್ತನ್ನು ಕದಿಯುವುದು ಅವರ ಐಡಿಯಾ. ಶತ್ರುಪ್ರದೇಶದಲ್ಲಿ ಹಾರಾಡುವ ವಿಮಾನಕ್ಕೆ ಅವರದೇ ಖರ್ಚಿನಲ್ಲಿ ಇಂಧನವೂ ದೊರಕುವಂತೆ ಮಾಡುವ  ಉದ್ದೇಶ ಈ ತಂತ್ರಜ್ಞರದು. ನಮ್ಮ ಮನೆಗಳ ಮುಂದಿನ ವಿದ್ಯುತ್ ತಂತಿಯ ಮೇಲೆ ಕಾಗೆಗಳು ಕೂರುತ್ತವಲ್ಲ, ಅದೇ ರೀತಿ ವಿದ್ಯುತ್ ತಂತಿಗಳ ಮೇಲೆ "ಕುಳಿತು" ತನ್ನ  ಬ್ಯಾಟರಿಗಳನ್ನು ರೀಚಾರ್ಜ್ ಮಾಡಿಕೊಳ್ಳಬಲ್ಲ ಪುಟ್ಟ ವಿಮಾನವೊಂದನ್ನು ಅವರು ರೂಪಿಸುತ್ತಿದ್ದಾರೆ. ಅಮೆರಿಕಾರ ಡೇಟನ್‌ನಲ್ಲಿರುವ ಏರ್‌ಫೋರ್ಸ್ ರೀಸರ್ಚ್ ಲ್ಯಾಬೊರೇಟರಿ  ಕೂಡ ಇಂತಹುದೇ ವಿಮಾನಗಳ ತಯಾರಿಕೆಯಲ್ಲಿ ತೊಡಗಿಕೊಂಡಿದೆಯಂತೆ.

ಒಟ್ಟಿನಲ್ಲಿ ವಿಮಾನಯಾನ  ಕ್ಷೇತ್ರದಲ್ಲಿ ಹೊಸದೊಂದು ಶಕೆಯ ಆರಂಭಕ್ಕೆ ರಂಗಸಜ್ಜಿಕೆ ಸಿದ್ಧವಾಗಿದೆ. ಇದಕ್ಕೆ ಕಾರಣವಾಗುವ  ಹೊಸ ಬೆಳವಣಿಗೆಗಳು ಬರಿಯ ಯುದ್ಧರಂಗಕ್ಕಷ್ಟೆ ಸೀಮಿತವಾಗದೆ ಮನುಕುಲದ ಕಲ್ಯಾಣಕ್ಕೆ ತಮ್ಮ ಕೊಡುಗೆ ನೀಡಲಿ ಎಂದು ಹಾರೈಸುವುದಷ್ಟೆ ನಮ್ಮ ಕೆಲಸ.

ಅಕ್ಟೋಬರ್ ೨೦, ೨೦೧೦ರ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ

ಮಂಗಳವಾರ, ಅಕ್ಟೋಬರ್ 19, 2010

ನೊಬೆಲ್ ಅಲ್ಲ, ಇಗ್-ನೊಬೆಲ್!

ನನ್ನ ಅಂಕಣ 'ವಿಜ್ಞಾಪನೆ' ಇಂದಿನಿಂದ ಉದಯವಾಣಿಯಲ್ಲಿ ಪ್ರಾರಂಭವಾಗಿದೆ. ಪ್ರತಿ ಮಂಗಳವಾರದ ಪುರವಣಿಯಲ್ಲಿ ಪ್ರಕಟವಾಗುವ ಈ ಅಂಕಣದ ಮೊದಲ ಬರಹ ಇಲ್ಲಿದೆ.

ವಿಜ್ಞಾನ ತಂತ್ರಜ್ಞಾನ ಕ್ಷೇತ್ರ ಎಷ್ಟು ರೋಚಕವೋ ಅಷ್ಟೇ ವಿಚಿತ್ರ ಕೂಡ. ವಿಜ್ಞಾನಿಗಳು ಏನೇನನ್ನೋ ಕಂಡುಹಿಡಿಯುತ್ತಿರುತ್ತಾರೆ. ಹೊಸಹೊಸ ಸಿದ್ಧಾಂತಗಳನ್ನು ಮಂಡಿಸುತ್ತಿರುತ್ತಾರೆ; ಉಪಯೋಗವಿದೆಯೋ ಇಲ್ಲವೋ ಚಿತ್ರವಿಚಿತ್ರ ವಸ್ತುಗಳನ್ನು ನಿರಂತರವಾಗಿ ಸೃಷ್ಟಿಸುತ್ತಲೇ ಇರುತ್ತಾರೆ. ಜೀವನವನ್ನೇ ಬದಲಿಸುವಂಥ ಅನ್ವೇಷಣೆಗಳ ಜೊತೆಗೆ ಹಾಸ್ಯಾಸ್ಪದವಾದ ಸಂಶೋಧನೆಗಳೂ ಆಗಿಂದಾಗ್ಗೆ ಸುದ್ದಿಮಾಡುತ್ತಿರುತ್ತವೆ.

ನಮ್ಮ ಜೀವನದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಬಲ್ಲ ಸಂಶೋಧನೆಗಳಿಗೆ ನೂರೆಂಟು ಪ್ರಶಸ್ತಿಗಳಿವೆ; ಯಾವ್ಯಾವುದೋ ಏಕೆ, ನೊಬೆಲ್ ಪ್ರಶಸ್ತಿಯೇ ಇದೆ. ಅದರಲ್ಲೂ ರಾಸಾಯನಶಾಸ್ತ್ರಕ್ಕೆ, ಜೀವಶಾಸ್ತ್ರಕ್ಕೆ, ಭೌತಶಾಸ್ತ್ರಕ್ಕೆ, ವೈದ್ಯವಿಜ್ಞಾನಕ್ಕೆ - ಹೀಗೆ ಬೇರೆಬೇರೆ ವಿಷಯಗಳಿಗೆ ಬೇರೆಯದೇ ಆದ ನೊಬೆಲ್ ಪ್ರಶಸ್ತಿಗಳಿವೆ.

ಆದರೆ ವಿಚಿತ್ರ ಸಂಶೋಧನೆಗಳ ಪಾಡು ಏನಾಗಬೇಕು? ಅವುಗಳ ಸುದ್ದಿ ಕೇಳಿದ ಜನರ ಅಪಹಾಸ್ಯವೇ ಪ್ರಶಸ್ತಿ ಎಂದುಕೊಳ್ಳಲಾದೀತೆ?

ಅಂತಹ ಪರಿಸ್ಥಿತಿ ಬೇಡ ಅಂತಲೇ 'ಆನಲ್ಸ್ ಆಫ್ ಇಂಪ್ರಾಬಬಲ್ ರೀಸರ್ಚ್' ಎಂಬ ಸಂಸ್ಥೆ ವಿಚಿತ್ರ ಸಂಶೋಧನೆ-ಅಧ್ಯಯನಗಳಿಗೂ ಪ್ರಶಸ್ತಿ ನೀಡುವ ಪರಿಪಾಠ ಬೆಳೆಸಿಕೊಂಡಿದೆ. ವಿವಿಧ ಕ್ಷೇತ್ರಗಳಲ್ಲಿ ಆಯಾ ವರ್ಷ ದಾಖಲಾಗುವ ಅತ್ಯಂತ ವಿಚಿತ್ರ, ಹಾಸ್ಯಾಸ್ಪದ ಸಾಧನೆಗಳಿಗೆ 'ಇಗ್ನೊಬೆಲ್' ಹೆಸರಿನ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಕಳೆದ ಇಪ್ಪತ್ತೊಂದು ವರ್ಷಗಳಿಂದ ನೀಡಲಾಗುತ್ತಿರುವ ಇಗ್ನೊಬೆಲ್ ಪ್ರಶಸ್ತಿ ಪ್ರದಾನ ಮಾಡಲು ನೊಬೆಲ್ ವಿಜೇತರನ್ನೇ ಆಹ್ವಾನಿಸಲಾಗುವುದು ವಿಶೇಷ.

'ಮೊದಲು ನಗಿಸಿ ಆನಂತರ ಯೋಚಿಸುವಂತೆ ಮಾಡುವ ಸಂಶೋಧನೆಗಳಿಗೆ ಈ ಪ್ರಶಸ್ತಿ' ಎನ್ನುವುದು ಇಗ್ನೊಬೆಲ್ ಆಯೋಜಕರ ಹೇಳಿಕೆ. ಅವರು ಎರಡು ತಿಂಗಳಿಗೊಮ್ಮೆ ಪ್ರಕಟಿಸುವ 'ಆನಲ್ಸ್ ಆಫ್ ಇಂಪ್ರಾಬಬಲ್ ರೀಸರ್ಚ್' ಪತ್ರಿಕೆಯ ಧ್ಯೇಯವಾಕ್ಯವೂ ಇದೇ. ತಮ್ಮ ಸಂಶೋಧನೆಗಳ ಬಗೆಗೆ ಸುಳ್ಳುಹೇಳುವ ಅಥವಾ ಜನರ ಹಿತಕ್ಕೆ ವಿರೋಧವಾಗಿರುವ ಸಂಶೋಧಕ/ಸಂಸ್ಥೆಗಳಿಗೂ ಈ ಪ್ರಶಸ್ತಿ ಆಗಿಂದಾಗ್ಗೆ ಬಿಸಿಮುಟ್ಟಿಸುತ್ತದೆ.

ಈ ವರ್ಷದ ಇಗ್ನೊಬೆಲ್ ಪ್ರಶಸ್ತಿಗಳು ಇತ್ತೀಚೆಗಷ್ಟೆ ಪ್ರಕಟವಾಗಿ ವಿಶ್ವದ ಗಮನಸೆಳೆದಿವೆ. ಕಳೆದ ಸೆಪ್ಟೆಂಬರ್ ೩೦ರಂದು ಅಮೆರಿಕಾದಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ವಿವಿಧ ವಿಜ್ಞಾನಿಗಳಿಗೆ, ಸಂಸ್ಥೆಗಳಿಗೆ ನೀಡಲಾಯಿತು.

ಇಂಜಿನಿಯರಿಂಗ್ ವಿಭಾಗದ ಪ್ರಶಸ್ತಿ ಗೆದ್ದದ್ದು ಬ್ರಿಟನ್ನಿನ ವಿಜ್ಞಾನಿ ಕರೀನಾ ವೈಟ್‌ಹೌಸ್ ಮತ್ತು ಅವರ ತಂಡ. ದೂರನಿಯಂತ್ರಿತ ಹೆಲಿಕಾಪ್ಟರ್ ಬಳಸಿ ತಿಮಿಂಗಿಲಗಳ ಉಸಿರಾಟದ ಅಧ್ಯಯನಮಾಡಿದ್ದು ಈ ತಂಡದ ಸಾಧನೆ. ತಿಮಿಂಗಿಲದ ಉಸಿರಿನಲ್ಲಿರುವ ಅನಿಲಗಳು, ಸಿಂಬಳ ಇತ್ಯಾದಿಗಳ ಅಧ್ಯಯನ ಮಾಡಿ ಅವುಗಳಲ್ಲಿರುವ ರೋಗಕಾರಕ ಸೂಕ್ಷ್ಮಾಣುಗಳನ್ನು ಪತ್ತೆಮಾಡುವುದು ಅವರ ಉದ್ದೇಶವಾಗಿತ್ತು.

ನೆದರ್‌ಲೆಂಡಿನ ಸೈಮನ್ ರೀಟ್‌ವೆಲ್ಡ್ ಮತ್ತು ಸಂಗಡಿಗರಿಗೆ ಆರೋಗ್ಯ ವಿಜ್ಞಾನ ಕ್ಷೇತ್ರದ ಇಗ್ನೊಬೆಲ್ ಪ್ರಶಸ್ತಿ ಬಂತು. ಏರುತಗ್ಗುಗಳಲ್ಲಿ ಅತಿವೇಗದ ಚಲನೆಯ ಅನುಭವ ನೀಡುವ ರೋಲರ್ ಕೋಸ್ಟರ್ ಯಾನ ಆಸ್ತಮಾ ರೋಗಕ್ಕೆ ಮದ್ದು ಎನ್ನುವುದು ಈ ತಂಡದ ಸಂಶೋಧನೆ.

ಭೌತಶಾಸ್ತ್ರದ ಪ್ರಶಸ್ತಿ ಬಂದದ್ದು ಇನ್ನೊಂದು ವಿಶಿಷ್ಟ ಸಂಶೋಧನೆಗೆ. ಚಳಿಗಾಲದಲ್ಲಿ ರಸ್ತೆಗಳಲ್ಲಿ ಹಿಮ ಬೀಳುತ್ತಲ್ಲ, ಆಗ ಜಾರಿಬೀಳುವುದನ್ನು ತಪ್ಪಿಸಲು ಕಾಲುಚೀಲವನ್ನು ಬೂಟಿನ ಮೇಲೆ ಹಾಕಿಕೊಳ್ಳಿ ಎಂದು ಹೇಳಿದ ನ್ಯೂಜಿಲೆಂಡಿನ ವಿಜ್ಞಾನಿಗಳಿಗೆ ಈ ಬಹುಮಾನ ನೀಡಲಾಗಿದೆ.

ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಇಗ್ನೊಬೆಲ್ ಗೆದ್ದ ಸಂಶೋಧನೆಯದು ಇನ್ನೂ ತಮಾಷೆಯ ಕತೆ. ಸೂಕ್ಷ್ಮಜೀವಿಗಳು ಹೆಚ್ಚಾಗಿ ಗಡ್ಡಧಾರಿ ವಿಜ್ಞಾನಿಗಳಿಗೇ ಅಂಟಿಕೊಂಡಿರುತ್ತವೆ ಎಂದು ಕಂಡುಹಿಡಿದ ಅಮೆರಿಕಾದ ವಿಜ್ಞಾನಿಗಳು ಈ ಬಹುಮಾನ ಗೆದ್ದರು.

ಅಂದಹಾಗೆ ಇಗ್ನೊಬೆಲ್ ಪ್ರಶಸ್ತಿಗಳು ಬರಿಯ ವಿಜ್ಞಾನ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ತಾವೂ ಮುಳುಗುವ ಜೊತೆಗೆ ವಿಶ್ವದ ಅರ್ಥವ್ಯವಸ್ಥೆಯನ್ನೂ ಹದಗೆಡಿಸಿದ ಹಣಕಾಸು ಸಂಸ್ಥೆಗಳ ಅಧಿಕಾರಿಗಳಿಗೆ ಅರ್ಥಶಾಸ್ತ್ರ ಕ್ಷೇತ್ರದ ಪ್ರಶಸ್ತಿ ನೀಡಲಾಗಿದೆ. ಅಂತೆಯೇ ಬೇರೆಯವರಿಗೆ ಬಯ್ಯುವುದರಿಂದ ನಿಮ್ಮ ನೋವನ್ನು ಕಡಿಮೆಮಾಡಿಕೊಳ್ಳಬಹುದು ಎಂದು ಕಂಡುಹಿಡಿದವರಿಗೆ ಇಗ್ನೊಬೆಲ್ ಶಾಂತಿ ಪ್ರಶಸ್ತಿ ಬಂದಿದೆ.

ಇಗ್ನೊಬೆಲ್ ಪ್ರಶಸ್ತಿ ಕುರಿತ ಇನ್ನೂ ಹೆಚ್ಚಿನ ವಿವರಗಳು ಈ ತಾಣದಲ್ಲಿ ಲಭ್ಯವಿವೆ. ಇಗ್ನೊಬೆಲ್ ಪರಿಕಲ್ಪನೆಯ ಪರಿಚಯ, ಇದುವರೆಗೂ ಆ ಪ್ರಶಸ್ತಿ ಪಡೆದ ವಿಚಿತ್ರ ಸಂಶೋಧನೆಗಳ ವಿವರ, 'ಆನಲ್ಸ್ ಆಫ್ ಇಂಪ್ರಾಬಬಲ್ ರೀಸರ್ಚ್' ಪತ್ರಿಕೆಯ ಸಂಚಿಕೆಗಳು ಎಲ್ಲ ಇಲ್ಲಿ ದೊರಕುತ್ತವೆ.

ಅಕ್ಟೋಬರ್ ೧೯, ೨೦೧೦ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಶುಕ್ರವಾರ, ಅಕ್ಟೋಬರ್ 15, 2010

ಕನ್ನಡದಲ್ಲಿ ಐಟಿ ಸಾಹಿತ್ಯ - ಮಾಹಿತಿ ಸಂಗ್ರಹಣೆಗೆ ನೆರವು ಬೇಕು!

ಕನ್ನಡದಲ್ಲಿ ಮಾಹಿತಿ ತಂತ್ರಜ್ಞಾನ ಕುರಿತ ಪುಸ್ತಕಗಳು ಮೊದಲೇ ಕಡಿಮೆ. ಇರುವ ಪುಸ್ತಕಗಳಿಗೆ ಪ್ರಚಾರವಂತೂ ಇಲ್ಲವೇ ಇಲ್ಲ. ಬೇರೆ ಪುಸ್ತಕಗಳನ್ನು ನೋಡದೆ ನಮ್ಮದೇ ಮೊದಲ ಪುಸ್ತಕ ಎಂದು ಹೇಳಿಕೊಳ್ಳುವವರೂ ಇದ್ದಾರೆ. ಹೀಗಾಗಿ ಕನ್ನಡದಲ್ಲಿ ಈವರೆಗೆ ಪ್ರಕಟವಾಗಿರುವ ಐಟಿ ಪುಸ್ತಕಗಳೆಷ್ಟು ಎಂಬ ಪ್ರಶ್ನೆಗೆ ಉತ್ತರಿಸುವುದು ಬಹಳ ಕಷ್ಟದ ಕೆಲಸ.

ಇ-ಜ್ಞಾನ ಇದೀಗ ಈ ಪ್ರಶ್ನೆಗೆ ಉತ್ತರ ಹುಡುಕುವ ಕೆಲಸ ಶುರುಮಾಡಿದೆ. ಕನ್ನಡದಲ್ಲಿ ಈವರೆಗೆ ಪ್ರಕಟವಾಗಿರುವ ಐಟಿ ಪುಸ್ತಕಗಳ ಬಗ್ಗೆ ನಿಮ್ಮಲ್ಲಿರುವ ಮಾಹಿತಿಯನ್ನು ದಯಮಾಡಿ ನಮ್ಮೊಡನೆ ಹಂಚಿಕೊಳ್ಳಿ. ಕೆಳಗಿನ ಪಟ್ಟಿಯಲ್ಲಿ ದಾಖಲಾಗಿರುವ ಪುಸ್ತಕಗಳ ವಿವರಣೆ ತಪ್ಪು ಅಥವಾ ಅಪೂರ್ಣವಾಗಿದ್ದರೆ ಅದನ್ನೂ ಹೇಳಿ.

ಧನ್ಯವಾದಗಳು!

ಬುಧವಾರ, ಅಕ್ಟೋಬರ್ 13, 2010

ಮುಂದಿನ ಹೆಜ್ಜೆ ಸೂರ್ಯನ ಕಡೆಗೆ!

ಟಿ ಜಿ ಶ್ರೀನಿಧಿ

ಕಳೆದ ವರ್ಷ ರೋಚಕ  ಯಶಸ್ಸು ಪಡೆದ ಚಂದ್ರಯಾನದ  ನಂತರ ಪ್ರಪಂಚದ ಗಮನ ಮತ್ತೊಮ್ಮೆ ಚಂದ್ರನ ಕಡೆಗೆ ತಿರುಗಿದೆ. ಚಂದ್ರನ ಅಧ್ಯಯನವನ್ನು ಗಮನದಲ್ಲಿಟ್ಟುಕೊಂಡ ಅನೇಕ ಯೋಜನೆಗಳು ರೂಪಗೊಳ್ಳುತ್ತಿವೆ; ನಾಲ್ಕು ದಶಕಗಳ ಹಿಂದೆ ಮಾನವ ಚಂದ್ರನ ಮೇಲೆ ಇಳಿದದ್ದು ನಿಜವೋ ಸುಳ್ಳೋ ಎಂಬ ಚರ್ಚೆ ಮುಗಿಯುವ ಮೊದಲೇ ಇನ್ನೊಂದು ಬಾರಿ ಚಂದ್ರನ ಮೇಲೆ ಮನುಷ್ಯರನ್ನು ಇಳಿಸುವ ಯೋಜನೆಗಳು ಕೂಡ ಕೇಳಿಬರುತ್ತಿವೆ. 

ಆದರೆ ಅಷ್ಟರಲ್ಲೇ  ಇನ್ನೊಂದು ಹೆಜ್ಜೆ ಮುಂದೆಹೋಗಿರುವ ಅಮೆರಿಕಾದ  ನಾಸಾ ಸಂಸ್ಥೆ ಮಾನವರಹಿತ ಅಂತರಿಕ್ಷವಾಹನವೊಂದನ್ನು  ಸೂರ್ಯನ ವಾತಾವರಣದೊಳಕ್ಕೆ ನುಗ್ಗಿಸುವ  ಮಹತ್ವಾಕಾಂಕ್ಷಿ ಯೋಜನೆ ಪ್ರಕಟಿಸಿದೆ. 'ಸೋಲಾರ್  ಪ್ರೋಬ್ ಪ್ಲಸ್' ಎಂಬ ಹೆಸರಿನ ಈ ಅಂತರಿಕ್ಷವಾಹನವನ್ನು ೨೦೧೮ರ ವೇಳೆಗೆ ಉಡಾಯಿಸುವ ಆಲೋಚನೆ ನಾಸಾದ್ದು. ಸುಮಾರು ಹದಿನೆಂಟು ಕೋಟಿ ಡಾಲರ್ ವೆಚ್ಚದ ಈ ಯೋಜನೆ ನಮ್ಮೆಲ್ಲರ ಜೀವನಾಧಾರವಾದ ಸೂರ್ಯನ ಬಗ್ಗೆ ಅಮೂಲ್ಯವಾದ ಮಾಹಿತಿಯನ್ನು ಒದಗಿಸಲಿದೆ ಎಂಬ ನಿರೀಕ್ಷೆಯಿದೆ. 

ಸೂರ್ಯನ ಹೊರ ವಾತಾವರಣಕ್ಕೆ ಕರೋನಾ ಎಂದು ಹೆಸರು. ಇದು ನಮಗೆ ಕಾಣುವ ಸೂರ್ಯನ ಮೇಲ್ಮೈ(ಫೋಟೋಸ್ಫಿಯರ್)ಗಿಂತ ನೂರಾರು ಪಟ್ಟು ಹೆಚ್ಚು ಬಿಸಿಯಾಗಿರುತ್ತದೆ. ಈ ವೈಚಿತ್ರ್ಯಕ್ಕೆ ಕಾರಣ ಹುಡುಕುವುದು ಸೋಲಾರ್ ಪ್ರೋಬ್ ಪ್ಲಸ್‌ನ ಆಶಯಗಳಲ್ಲೊಂದು. 

ಜೊತೆಗೆ ಸೌರ ಮಾರುತಗಳ (ಸೋಲಾರ್ ವಿಂಡ್) ಬಗೆಗೂ ಹೆಚ್ಚಿನ ಮಾಹಿತಿ ಕಲೆಹಾಕುವ ಉದ್ದೇಶವಿದೆ. ಸೂರ್ಯನ ವಾತಾವರಣದಿಂದ ಹೊರಚಿಮ್ಮುವ ಇಲೆಕ್ಟ್ರಾನ್ ಹಾಗೂ ಪ್ರೋಟಾನುಗಳ ಈ ಧಾರೆ ನಮ್ಮ ಭೂಮಿಯ ಮೇಲೆ ಭೂಕಾಂತೀಯ ಮಾರುತಗಳು, ಅರೋರಾಗಳು ಮುಂತಾದ ಘಟನೆಗಳಿಗೆ ಕಾರಣವಾಗುತ್ತದೆ. ಧೂಮಕೇತುಗಳ ಬಾಲ ಸದಾಕಾಲ ಸೂರ್ಯನ ವಿರುದ್ಧ ದಿಕ್ಕಿಗೇ ತೋರುವುದಕ್ಕೂ ಸೌರಮಾರುತಗಳೇ ಕಾರಣ.

ಅಂತರಿಕ್ಷದ ಮೂಲೆಮೂಲೆಗಳಿಗೂ  ಲಗ್ಗೆಯಿಟ್ಟಿರುವ ಅಂತರಿಕ್ಷವಾಹನಗಳು ಈವರೆಗೂ ತಲುಪದಿರುವ ಕೆಲವೇ ಗುರಿಗಳಲ್ಲಿ ಅತ್ಯಂತ  ಪ್ರಮುಖವಾದದ್ದು ಸೂರ್ಯ. ಈ ಕೊರತೆಯನ್ನು  ನೀಗುವ ಮಹತ್ವದ ಪ್ರಯತ್ನಕ್ಕೆ ಸೋಲಾರ್ ಪ್ರೋಬ್ ಪ್ಲಸ್ ತಂಡ ಸಿದ್ಧವಾಗುತ್ತಿದೆ. 

ಆದರೆ ಸೂರ್ಯನ  ವಾತಾವರಣ ವಿಪರೀತ ಬಿಸಿಯಿರುತ್ತಲ್ಲ, ಈ ಅಂತರಿಕ್ಷವಾಹನ ಅದನ್ನು ಪ್ರವೇಶಿಸುವುದಾದರೂ ಹೇಗೆ  ಎಂದು ನೀವು ಕೇಳಬಹುದು. ನಿಜ, ಸೂರ್ಯನ  ವಾತಾವರಣ ತಲುಪುತ್ತಿದ್ದಂತೆಯೇ ಈ ವಾಹನ ಅಲ್ಲಿನ ಶಾಖ ತಾಳಲಾರದೆ ಸುಟ್ಟುಹೋಗುತ್ತದೆ. ಆದರೆ ಅಷ್ಟರೊಳಗಾಗಿಯೇ ಅದು ಅತ್ಯಂತ ಅಮೂಲ್ಯ ಮಾಹಿತಿಯನ್ನು ಸಂಗ್ರಹಿಸಿ ಕಳುಹಿಸಲಿದೆ. ಅಲ್ಲಿಯವರೆಗಿನ ತಾಪಮಾನ ಹಾಗೂ ವಿಕಿರಣದಿಂದ ಈ ಅಂತರಿಕ್ಷವಾಹನದ ಉಪಕರಣಗಳನ್ನು ಸುರಕ್ಷಿತವಾಗಿಡಲು ಬೇಕಾದ ಸುರಕ್ಷತಾ ಕವಚದ (ಕಾರ್ಬನ್ ಕಾಂಪೋಸಿಟ್ ಹೀಟ್ ಶೀಲ್ಡ್) ನಿರ್ಮಾಣ ಇಷ್ಟರಲ್ಲೇ ಪ್ರಾರಂಭವಾಗಲಿದೆ.   

ಅಂದಹಾಗೆ ಸೂರ್ಯನ  ಬಳಿ ಸಾಗುವ ಪ್ರಯತ್ನಗಳಲ್ಲಿ ಸೋಲಾರ್  ಪ್ರೋಬ್ ಪ್ಲಸ್ ಏಕಾಂಗಿಯೇನಲ್ಲ. ನಾಸಾ  ಹಾಗೂ ಯುರೋಪಿಯನ್ ಸ್ಪೇಸ್ ಏಜೆನ್ಸಿಗಳು ಜಂಟಿಯಾಗಿ ಸೋಲಾರ್ ಆರ್ಬಿಟರ್ ಎಂಬ ಯೋಜನೆಯೊಂದನ್ನು  ರೂಪಿಸುತ್ತಿವೆ. ಈ ದಶಕದ ಕೊನೆಯ ವೇಳೆಗೆ ಸೂರ್ಯನತ್ತ ಒಂದು ಉಪಗ್ರಹವನ್ನು ಕಳುಹಿಸುವ ಉದ್ದೇಶ ಈ ಯೋಜನೆಯದು. 

ಅಕ್ಟೋಬರ್ ೧೩, ೨೦೧೦ರ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ

ಗುರುವಾರ, ಸೆಪ್ಟೆಂಬರ್ 23, 2010

ಆಟವಾಡಿ, ಅನ್ನ ನೀಡಿ!

ಟಿ ಜಿ ಶ್ರೀನಿಧಿ

ಫ್ರೀರೈಸ್ ತಾಣ ತಲುಪಲು ಚಿತ್ರದ ಮೇಲೆ ಕ್ಲಿಕ್ಕಿಸಿ
ಗಣಕದ ಮುಂದೆ ಕುಳಿತು ಆಟವಾಡುವುದು ಅತ್ಯಂತ ವ್ಯಾಪಕವಾದ ಹವ್ಯಾಸಗಳಲ್ಲೊಂದು. ಹವ್ಯಾಸವೇನು, ಅನೇಕರಿಗೆ ಇದೊಂದು ಚಟ ಅಂತಲೇ ಹೇಳಬಹುದು. ಸದಾಕಾಲವೂ ಒಂದಿಲ್ಲೊಂದು ಆಟ ಆಡಿಕೊಂಡು ಗಣಕದ ಮುಂದೆ ಕುಳಿತಿರುವವರೂ ಇಲ್ಲದಿಲ್ಲ.

ಈಚೆಗೆ ಬಹಳ ಸುದ್ದಿಮಾಡಿದ ಇಂಥ ಆಟಗಳಲ್ಲಿ ಫಾರ್ಮ್‌ವಿಲೆ ಪ್ರಮುಖವಾದದ್ದು. ಫೇಸ್‌ಬುಕ್ ಜಾಲತಾಣದಲ್ಲಿ ಲಭ್ಯವಿರುವ ಈ ಆಟ ಆಡುವವರು ಗಣಕದಲ್ಲೇ ಉತ್ತು ಬಿತ್ತು ಬೆಳೆತೆಗೆಯುವುದು ಸಾಧ್ಯ. ಪರಿಚಯವಾದ ಒಂದು-ಒಂದೂವರೆ ವರ್ಷಗಳ ಅವಧಿಯಲ್ಲೇ ಆರು ಕೋಟಿಗೂ ಹೆಚ್ಚು ಜನಕ್ಕೆ 'ಫಾರ್ಮಿಂಗ್' ಹುಚ್ಚು ಹತ್ತಿಸಿದ ಹಿರಿಮೆ ಈ ಆಟದ್ದು.

ಗಣಕದಲ್ಲಿ ಮಾತ್ರ ಕಾಣಿಸುವ ಬತ್ತವನ್ನು ಮೌಸ್ ಬಳಸಿ ನಾಟಿಮಾಡಿ ಬೆಳೆತೆಗೆಯುವ ಫಾರ್ಮ್‌ವಿಲೆ ಆಟಗಾರರ ವರ್ಚುಯಲ್ ಸಂಭ್ರಮದ ನಡುವೆ ಇಲ್ಲಿ ಇನ್ನೂ ಒಂದು ಆನ್‌ಲೈನ್ ಆಟ ಹೆಚ್ಚಿನ ಪ್ರಚಾರವಿಲ್ಲದೆ ಕುಳಿತಿದೆ, ಹಾಗೂ ಅದು ಹಸಿದ ಹೊಟ್ಟೆಗಳಿಗೆ ನಿಜಕ್ಕೂ ಅನ್ನ ನೀಡುತ್ತದೆ ಎಂದರೆ ನಂಬುತ್ತೀರಾ?

ಖಂಡಿತಾ ನಂಬಲೇ ಬೇಕು. 'ಫ್ರೀ ರೈಸ್' ಎಂಬ ಹೆಸರಿನ ಈ ಆಟ www.freerice.com ಜಾಲತಾಣದಲ್ಲಿ ಲಭ್ಯವಿದೆ. ಇದು ತುಂಬಾ ಸುಲಭ - ಕಲೆ, ಭಾಷೆ, ರಸಾಯನಶಾಸ್ತ್ರ, ಭೂಗೋಳ, ಗಣಿತ ಮುಂತಾದವುಗಳಲ್ಲಿ ಯಾವುದಾದರೂ ಒಂದು ವಿಷಯ ಆಯ್ದುಕೊಂಡು ಆ ವಿಷಯಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಉತ್ತರಿಸುತ್ತ ಹೋದರಾಯಿತು; ಸಾಮಾನ್ಯಜ್ಞಾನ ಹೆಚ್ಚಿಸಿಕೊಳ್ಳುವ ಜೊತೆಗೆ ಹಸಿದ ಹೊಟ್ಟೆಗೆ ಅನ್ನನೀಡಿದ ಪುಣ್ಯವೂ ನಿಮಗೆ ದೊರಕುತ್ತದೆ.

ಅದು ಹೇಗೆ ಅಂದಿರಾ? ಈ ಆಟದಲ್ಲಿ ನೀವು ನೀಡುವ ಪ್ರತಿಯೊಂದು ಸರಿಯುತ್ತರಕ್ಕೂ ಹತ್ತು ಕಾಳು ಅಕ್ಕಿ ಬಹುಮಾನ. ನೀವು ಎಷ್ಟು ಕಾಳು ಅಕ್ಕಿ ಗೆಲ್ಲುತ್ತೀರೋ ಅಷ್ಟು ಅಕ್ಕಿಯನ್ನು ವಿಶ್ವದ ವಿವಿಧೆಡೆಗಳಲ್ಲಿ ಆಹಾರದ ಕೊರತೆಯಿಂದ ಬಳಲುತ್ತಿರುವ ಜನತೆಗೆ ಕೊಡುಗೆಯಾಗಿ ನೀಡಲಾಗುತ್ತದೆ.

ಪ್ರತಿಯೊಂದು ಪ್ರಶ್ನೆಯ ಕೆಳಗೂ ಪ್ರದರ್ಶಿಸಲಾಗುವ ಜಾಹೀರಾತಿನಿಂದ ಬರುವ ಆದಾಯದಿಂದ ಈ ಅಕ್ಕಿಯನ್ನು ಕೊಳ್ಳಲಾಗುತ್ತದೆ. ಆಟವಾಡುವ ಜೊತೆಗೆ ಹಣದ ರೂಪದ ದೇಣಿಗೆಯನ್ನೂ ಕೊಡುತ್ತೇವೆ ಎನ್ನುವವರಿಗೂ ಸ್ವಾಗತವಿದೆ.

ಈ ವಿಶಿಷ್ಟ ಕಲ್ಪನೆಗೆ ಜೀವಕೊಟ್ಟವನು ಜಾನ್ ಬ್ರೀನ್ ಎಂಬ ವ್ಯಕ್ತಿ, ೨೦೦೭ರಲ್ಲಿ. ನಂತರ ಆತ ಅದರ ನಿರ್ವಹಣೆಯನ್ನು ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮಕ್ಕೆ (ವರ್ಲ್ಡ್ ಫುಡ್ ಪ್ರೋಗ್ರಾಂ) ಬಿಟ್ಟುಕೊಟ್ಟ. ಅಲ್ಲಿಂದೀಚೆಗೆ ಈ ಆಟ ಅಭೂತಪೂರ್ವ ಯಶಸ್ಸನ್ನು ಕಂಡಿದೆ, ಲಕ್ಷಾಂತರ ಬಡಜನರ ಅನ್ನದಾತನಾಗಿ ಬೆಳೆದಿದೆ.

ಒಂದು ಉತ್ತರಕ್ಕೆ ಹತ್ತು ಕಾಳು ಅಕ್ಕಿ ಬಹಳ ಕಡಿಮೆ ಅನ್ನಿಸಬಹುದು; ಆದರೆ ಸಾವಿರಾರು ಜನ ಈ ಆಟ ಆಡುತ್ತಿರುವಾಗ ದಿನಕ್ಕೆ ಕಡಿಮೆಯೆಂದರೂ ಒಂದು ಕೋಟಿ ಕಾಳುಗಳು ಸಂಗ್ರಹವಾಗುತ್ತವೆ - ಒಂದು ಗ್ರಾಮ್ ಅಕ್ಕಿಯಲ್ಲಿ ೫೦ ಕಾಳುಗಳಿವೆ ಎಂದುಕೊಂಡರೆ ಇನ್ನೂರು ಕೆಜಿ ಅಕ್ಕಿ!

ಈವರೆಗೆ ಈ ಆಟದ ಮೂಲಕ ಎಂಟುಸಾವಿರ ಕೋಟಿ ಅಕ್ಕಿಕಾಳುಗಳನ್ನು ಸಂಗ್ರಹಿಸಿ ವಿತರಿಸಲಾಗಿದೆ. ನೇಪಾಳ, ಕಾಂಬೋಡಿಯಾ, ಉಗಾಂಡಾ, ಬಾಂಗ್ಲಾದೇಶ, ಮ್ಯಾನ್ಮಾರ್ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಈ ಅಕ್ಕಿಯ ವಿತರಣೆ ನಡೆಯುತ್ತಿದೆ.

ಫ್ರೀರೈಸ್ ಡಾಟ್ ಕಾಮ್ ತಾಣವನ್ನು ನಡೆಸುತ್ತಿರುವ, ಹಾಗೂ ಈ ಮೂಲಕ ಸಂಗ್ರಹವಾಗುವ ಅಕ್ಕಿಯ ವಿತರಣೆಯ ಜವಾಬ್ದಾರಿ ಹೊತ್ತಿರುವ ವಿಶ್ವ ಆಹಾರ ಕಾರ್ಯಕ್ರಮದ ಬಗೆಗೆ ಹೆಚ್ಚಿನ ಮಾಹಿತಿಗಾಗಿ www.wfp.org ತಾಣಕ್ಕೆ ಭೇಟಿಕೊಡಬಹುದು.

ಸೆಪ್ಟೆಂಬರ್ ೩೦, ೨೦೧೦ರ ಸುಧಾದಲ್ಲಿ ಪ್ರಕಟವಾದ ಲೇಖನ

ಬುಧವಾರ, ಸೆಪ್ಟೆಂಬರ್ 8, 2010

ಸೂಪರ್‌ಮಾಡೆಲ್ ಸ್ಯಾಟೆಲೈಟಿಗೆ ಚಳಿಯಾದ ಕತೆ

GOCE ಉಪಗ್ರಹ (ಇಎಸ್‌ಎ ಚಿತ್ರ)
ಯುರೋಪಿನ ಉಪಗ್ರಹ GOCE (Gravity field and steady-state Ocean Circulation Explorer) ಈವರೆಗೆ ತಯಾರಿಸಲಾಗಿರುವ ಕೃತಕ ಉಪಗ್ರಹಗಳಲ್ಲೆಲ್ಲ ಅತ್ಯಂತ ಆಕರ್ಷಕವಾದದ್ದು ಎಂಬ ಹೆಗ್ಗಳಿಕೆಗೆ ಪಾತ್ರವಾದ ಬಗ್ಗೆ ಪುಟ್ಟ ಬರಹವೊಂದು ಈ ಹಿಂದೆ ಇ-ಜ್ಞಾನದಲ್ಲಿ ಪ್ರಕಟವಾಗಿತ್ತು.

ಭೂಮಿಯ ಆಂತರಿಕ ರಚನೆ ಹಾಗೂ ಗುರುತ್ವಾಕರ್ಷಣೆಯ ಬಗೆಗೆ ವಿವರವಾದ ಮಾಹಿತಿ ಸಂಗ್ರಹಿಸಲು ಹೊರಟಿದ್ದ ಈ ಉಪಗ್ರಹ ಈಚೆಗೊಂದು ದಿನ ಇದ್ದಕ್ಕಿದ್ದ ಹಾಗೆ ತನ್ನ ನಿಯಂತ್ರಣ ಕೇಂದ್ರಕ್ಕೆ ಮಾಹಿತಿ ಕಳುಹಿಸುವುದನ್ನೇ ನಿಲ್ಲಿಸಿಬಿಟ್ಟಿತು.

ಇದೇನಪ್ಪಾ ಹೀಗಾಯಿತಲ್ಲ ಎಂದುಕೊಂಡ ವಿಜ್ಞಾನಿಗಳು ಏನೆಲ್ಲ ಪರದಾಡಿದರೂ ಈ ಸಮಸ್ಯೆಗೆ ಪರಿಹಾರ ದೊರೆತಿರಲಿಲ್ಲ. ಏನೇನೆಲ್ಲ ಪರದಾಡಿದ ಅವರು ಕೊನೆಗೂ ಉಪಗ್ರಹದ ಜೊತೆ ಸಂಪರ್ಕ ಸಾಧಿಸಿದಾಗ ಪತ್ತೆಯಾದ ಅಂಶ ಅದಕ್ಕೆ ಚಳಿಯಾಗಿದೆ ಎನ್ನುವುದು - ಅದರ ಬ್ಯಾಟರಿ, ಗಣಕ ಹಾಗೂ ವಿದ್ಯುತ್ ವಿತರಣಾ ವ್ಯವಸ್ಥೆ ಇದ್ದ ಭಾಗ ಹತ್ತಿರ ಹತ್ತಿರ ಸೊನ್ನೆ ಡಿಗ್ರಿಯಲ್ಲಿ ನಡುಗುತ್ತಿತ್ತಂತೆ.

ದೂರನಿಯಂತ್ರಣದ ಮೂಲಕ ಅಲ್ಲಿನ ತಾಪಮಾನವನ್ನು ಏಳೆಂಟು ಡಿಗ್ರಿ ಹೆಚ್ಚಿಸುತ್ತಿದ್ದ ಹಾಗೆಯೇ ಬೆಚ್ಚಗಾದ ಉಪಗ್ರಹ ತನ್ನ ಕೆಲಸವನ್ನು ಮತ್ತೆ ಪ್ರಾರಂಭಿಸಿದೆ, ವಿಜ್ಞಾನ ಜಗತ್ತಿನಲ್ಲಿ ಸಂತಸ ಮೂಡಿಸಿದೆ.

ಅಂದಹಾಗೆ ಈ ಉಪಗ್ರಹ ಸಂಗ್ರಹಿಸಬೇಕಿದ್ದ ಮಾಹಿತಿಯಲ್ಲಿ ಮೂರನೇ ಎರಡರಷ್ಟು ಭಾಗವನ್ನು ಈಗಾಗಲೇ ಸಂಗ್ರಹಿಸಿದೆಯಂತೆ. ತನ್ನ ಮೈಕೈ ಬೆಚ್ಚಗಿಟ್ಟುಕೊಂಡು ಮಿಕ್ಕ ಕೆಲಸವನ್ನೂ ಆದಷ್ಟುಬೇಗ ಮುಗಿಸಲಿ, ಪಾಪ ಸ್ಯಾಟೆಲೈಟು!

ಸೋಮವಾರ, ಸೆಪ್ಟೆಂಬರ್ 6, 2010

ಕಂಬಳಿಹುಳದ ಕಡಿತ: ಉರಿಗೆ ರಿಯಾಯ್ತಿ ಇಲ್ಲ!

ಬೇಳೂರು ಸುದರ್ಶನ

ಮೊನ್ನೆ ಯಾರನ್ನೋ ಭೇಟಿಯಾಗಲೆಂದು ಸರಸರ ಅಂಗಿ ಎಳೆದುಕೊಂಡು ಹೊರಬಂದೆ. ಸ್ವಲ್ಪ ದೂರ ಹೋಗುವಷ್ಟರಲ್ಲೇ ಬಲ ತೋಳಿನಲ್ಲಿ ಏನೋ ಮೃದುವಾದ ಹುಳ ಇದ್ದ ಹಾಗೆ ಅನ್ನಿಸಿ ಹೊರಗಿನಿಂದಲೇ ಮುಟ್ಟಿ ನೋಡಿದೆ.

ಯಾರೋ  ಜೇಮ್ಸ್‌ಬಾಂಡ್ ಬಳಸುವ ಅತಿಸೂಕ್ಷ್ಮ ಸೂಜಿಯನ್ನು ಚುಚ್ಚಿದ ಹಾಗೆ ಮೈಯೆಲ್ಲ ಜುಮ್ಮೆಂದಿತು. ತಕ್ಷಣ ದೇಹ ಸ್ವಯಂಚಾಲಿತವಾಗಿ, ನನ್ನನ್ನು ಕೇಳದೇ ಸ್ಪಂದಿಸಿತು. ನನ್ನ ಕೈಯಿಂದ ಕ್ಷಣಮಾತ್ರದಲ್ಲಿ ಆ ಹುಳವನ್ನು ಹಾಗೇ ಒತ್ತಿಬಿಟ್ಟೆ. ಆಮೇಲೆ ಅದನ್ನು ಕೊಡವಿದೆ. ಒಂದು ಕರಿಮುದ್ದೆಯಂಥ ಮೃತದೇಹ ರಸ್ತೆಯಲ್ಲಿ ಬಿದ್ದಿತ್ತು. ಅದನ್ನು ನೋಡೋದೇನು? ಅಷ್ಟುಹೊತ್ತಿಗೆ ನನ್ನ ತೋಳಿನ ಮೇಲ್ಭಾಗದಲ್ಲಿ ಸಾವಿರಾರು ಸೂಜಿಗಳು ಚುಚ್ಚಿದಂತಾಯಿತು. ಸರಸರನೆ ಮೈ ಕೆಂಪೇರಿತು. ಉಜ್ಜಿದ ಜಾಗದಲ್ಲಿ ಧಡಸಲುಗಳು ಮೇಲೆದ್ದವು. ಬಿಸಿ ಕಾವಲಿಯಿಂದ ಮೈಯನ್ನು ಉಜ್ಜಿಕೊಂಡಂತೆ ಉರಿ. ಜೊತೆಗೇ ವಿಪರೀತ ಎನ್ನಿಸುವಷ್ಟು ನೋವು.

ಒಂದು ಕಂಬಳಿ  ಹುಳ ನನ್ನನ್ನು ಇಷ್ಟೆಲ್ಲ ಗಾಸಿ  ಮಾಡಿ ಸತ್ತಿತ್ತು. ಅದೇನಾದರೂ ನನ್ನ  ಹ್ಯಾಂಗರಿಗೆ ನೇತಾಡಿಕೊಂಡು ಬಂದು, ಅಂಗಿಯ ಒಳಗೆ  ತೂರಿಕೊಳ್ಳದಿದ್ದರೆ.....

ಒಂದು ಸುಂದರ  ಚಿಟ್ಟೆಯಾಗಿ ಲಾಲ್‌ಬಾಗಿನಲ್ಲಿ ಹಾರಾಡುತ್ತಿತ್ತು. ಅಲ್ಲಿ ಅಕಸ್ಮಾತ್ ಕವಿಹೃದಯದವರು ವಾಕಿಂಗ್ ಹೋಗಿದ್ದರೆ ಆಹಾ, ಎಂಥ ಸುಂದರ ಚಿಟ್ಟೆ ಎಂದು ಒಂದು ಹಾಡನ್ನೇ ಬರೆಯುತ್ತಿದ್ದರು. ಪ್ರೇಮಿಗಳಾಗಿದ್ದರೆ, ಅರೆ, ಎಂಥ ಛಂದದ ಚಿಟ್ಟೆ, ಪ್ರೀತಿಯ ಸಂಕೇತ ಎಂದು ಮುದಗೊಳ್ಳುತ್ತಿದ್ದರು. ಸ್ವಾತಂತ್ರ್ಯೋತ್ಸದ ಪುಷ್ಟ ಪ್ರದರ್ಶನದಲ್ಲಿ ಹೂವಿಂದ ಹೂವಿಗೆ ಹಾರುವಂಥ ಚಿಟ್ಟೆಯಾಗಲು ಬಣ್ಣದ ರೆಕ್ಕೆಯನ್ನು ದಕ್ಕಿಸಿಕೊಳ್ಳಲಿದ್ದ ಆ ಕಂಬಳಿ ಹುಳ, ಈ ನರಮನುಷ್ಯನ ಕ್ರೌರ್ಯಕ್ಕೆ ಬಲಿಯಾಗಿ ರಸ್ತೆಯಲ್ಲಿ ನೆಣವಾಗಿ ಬಿದ್ದಿತ್ತು.

ಅದನ್ನು  ಮರೆಯೋಣ ಎಂದುಕೊಂಡರೆ ಸಾಧ್ಯವೆ? ಬರೋಬ್ಬರಿ ಒಂದು ವಾರ ನನ್ನ ತೋಳು ಉರಿಯಿಂದ  ನುಲಿಯಿತು; ನೋವಿನಿಂದ ನರಳಿತು. ಸುಂದರ  ಚಿಟ್ಟೆಯ ಬಾಲ್ಯಾವತಾರ ನನ್ನನ್ನು ಇಷ್ಟೆಲ್ಲ ಕಂಗೆಡಿಸಬಹುದೆ ಎಂದು ಮಾಹಿತಿಗಾಗಿ ಹುಡುಕಾಡಿದೆ. ನನ್ನ ನೋವನ್ನೂ ಮರೆಸುವ ಅಚ್ಚರಿಯ ಸಂಗತಿಗಳು ಸಿಕ್ಕಿದವು.

೭೦೦ಕ್ಕೂ ಕಡಿಮೆ  ಮಾಂಸಖಂಡಗಳಿರುವ ನನ್ನಂಥ ಮನುಷ್ಯನಿಗೆ ಇಷ್ಟೆಲ್ಲ ಕಿರೀಕ್ ಮಾಡಿದ ಆ ಕಂಬಳಿ ಹುಳದಲ್ಲಿ ೨೦೦೦ ಮಾಂಸಖಂಡಗಳು ಇರುತ್ತವಂತೆ! ನನಗೆ ಯಮ ಉರಿ ಕೊಟ್ಟ ಕಂಬಳಿ ಹುಳದಂಥ ಇಪ್ಪತ್ತು ಬಗೆಯ ಅಪಾಯಕಾರಿ ಕಂಬಳಿ ಹುಳಗಳು (ಚುಚ್ಚುವ ವಿಷಯದಲ್ಲಿ ಅಪಾಯಕಾರಿ, ಉಳಿದಂತೆ, ಈ ಅಪಾಯ ಅನ್ನೋದೆಲ್ಲ ಮನುಷ್ಯನ ದೃಷ್ಟಿಯಿಂದ ಬರೆದಿರೋ ಭಾವನೆಗಳು ಅಷ್ಟೆ) ಇವೆಯಂತೆ.

ಇಂಥ ಕಂಬಳಿ  ಹುಳ ಕಚ್ಚಿದರೆ ಅಥವಾ ಮೈಯನ್ನು ಚುಚ್ಚಿದರೆ ನನಗಾದ ಹಾಗೆ ಉರಿಯಾಗುವುದು ತೀರಾ ಅಲ್ಪ ಪರಿಣಾಮ. ಹಲವು ಪ್ರಕರಣಗಳಲ್ಲಿ ನೋವಿನ ಜೊತೆಗೆ ಊತವೂ ಆಗುತ್ತದೆ. ಚರ್ಮ ಮೃದುವಾಗಿದ್ದರೆ ಮಾತ್ರ ಈ ಉರಿ, ನೋವು, ಊತ ಎಲ್ಲವೂ ಹೆಚ್ಚಾಗುತ್ತದೆ. ಉಸಿರಾಡಲೂ ತೊಂದರೆಯಾಗುವಷ್ಟು ಪ್ರಭಾವ ಬೀರಬಲ್ಲ ಕಂಬಳಿ ಹುಳಗಳೂ ಇವೆ. ಅಕಸ್ಮಾತ್ ಕಂಬಳಿ ಹುಳಗಳು ಕಣ್ಣಿಗೆ ತಾಗಿದರೆ ನೀವು ತಕ್ಷಣ ಆಸ್ಪತ್ರೆಗೆ ಓಡಬೇಕು. ಇಲ್ಲಾಂದ್ರೆ ನಿಮ್ಮ ಕಣ್ಣಿನ ಕಾರ್ನಿಯಾಗೇ ಅಪಾಯವಿದೆ. ಈ ಕಂಬಳಿ ಹುಳಗಳ ಕೂದಲೇನಾದರೂ ಶ್ವಾಸಕೋಶಕ್ಕೆ ಸೇರಿದರೆ, ಉಸಿರಾಟಕ್ಕೂ ತೊಂದರೆ.

ಕಂಬಳಿಹುಳದ  ಮೈಯೆಲ್ಲ ಇರುವ ಇಂಥ ಮೊನಚು ಕೂದಲನ್ನು ಹೈಪೋಡರ್ಮಿಕ್ ನೀಡಲ್, ಅರ್ಥಾತ್ ಅತಿಸೂಕ್ಷ್ಮ ಸೂಜಿ ಎಂದೇ ಕರೆಯುತ್ತಾರೆ. ಇವು ಬರೀ ಕೂದಲಲ್ಲ. ವಿಷವನ್ನೇ ನಿಮ್ಮ ದೇಹಕ್ಕೆ ನುಗ್ಗಿಸುವ ವಿಷಪದಾರ್ಥವನ್ನು ದಾಸ್ತಾನು ಹೊಂದಿರುವ ಕೊಳವೆಗಳು; ಸೂಕ್ಷ್ಮಾಕಾರದ ಫಿರಂಗಿಗಳು ಎಂದರೂ ತಪ್ಪಿಲ್ಲ.

ಆಮೇಲೆ ಕಂಬಳಿ  ಹುಳಗಳು ತಾವಾಗೇ ಕಚ್ಚುವುದಿಲ್ಲ. ತಣ್ಣಗೆ ತಮಗೆ ಬಏಕಾದ ಗಿಡ, ಮರ, ಎಲೆ, ಹೂವುಗಳನ್ನು ತಿಂದುಕೊಂಡು ಹಾಯಾಗಿರುತ್ತವೆ. ಚಳಿಗಾಲ, ತೇವದ ವಾತಾವರಣದಲ್ಲಿ ಎಲ್ಲೆಲ್ಲೋ ಓಡಾಡುತ್ತ ಉಡುಗೆ-ತೊಡುಗೆಗಳನ್ನು ಸೇರಿಕೊಳ್ಳುವುದೂ ಇದೆ. ಅದನ್ನು ನಾವು ಉಜ್ಜಿದರೇ ಅಪಾಯವೇ ವಿನಃ, ಅವು ಚೇಳುಗಳ ಹಾಗೆ ನಮ್ಮನ್ನು ಕಚ್ಚಲೆಂದು ಬರುವುದಿಲ್ಲ.

ಹಾಗಾದರೆ ಕಂಬಳಿಹುಳ ಚುಚ್ಚಿ ಉರಿಯಾದರೆ ಏನು ಮಾಡಬೇಕು?

ಕಂಬಳಿಹುಳದ  ಕೂದಲುಗಳು ಚರ್ಮಕ್ಕೆ ಸಿಕ್ಕಿಕೊಂಡಿದ್ದರೆ:  ವೈದ್ಯಕೀಯ ಚಿಕಿತ್ಸೆಯಲ್ಲಿ ಬಳಸುವ ಟೇಪನ್ನು ಹಚ್ಚಿ ತೆಗೆಯಿರಿ. ಟೇಪಿನೊಂದಿಗೆ ಕೂದಲೂ ಹೊರಬರುತ್ತದೆ. ಉರಿಬಿದ್ದ ಜಾಗಕ್ಕೆ ಅಲೋವೀರಾ ಹಚ್ಚಿದರೆ ಕೊಂಚ ಸಮಾಧಾನವಾಗುತ್ತದೆ.

ಕಂಬಳಿಹುಳ  ಚುಚ್ಚಿದ ಜಾಗವನ್ನು ಸ್ನಾನದ ಬ್ರಶ್ಶಿನಿಂದ  ಉಜ್ಜಿದರೆ ಮತ್ತೆ ಅದೇ ನೋವು ಮರುಕಳಿಸುತ್ತದೆ.  ನಾನು ಯಾವುದೋ ಬಾತ್‌ರೂಮ್ ಹಾಡು ಗುನುಗುತ್ತ ಹೀಗೆ ಉಜ್ಜಿಕೊಂಡು ಮತ್ತೆ  ಮತ್ತೆ ಅಯ್ಯೋ ಎಂದು ಮೌನವಾಗಿ ಕಿರುಚಿದ್ದೇನೆ. ಆದ್ದರಿಂದ ಉರಿ ಇರುವ ಜಾಗವನ್ನು ಉಜ್ಜಬೇಡಿ; ಮುಟ್ಟಲೂ ಬೇಡಿ. ಮುಖ್ಯವಾಗಿ ಭುಜ ತಟ್ಟಿ ಮಾತನಾಡಿಸುವ ಸ್ನೇಹಿತರಿಂದ ದೂರ ಇರಿ. ಅವರಿಗೆ ನಿಮ್ಮ ಭುಜದಲ್ಲಿ ಇಂಥ ಉರಿ ಇದೆ ಎಂಬುದು ಮರೆತೇಹೋಗಿ ಮತ್ತೆ ಮತ್ತೆ ನಿಮ್ಮ ಭುಜ ತಟ್ಟುತ್ತಾರೆ. ಅದರಿಂದ ನಿಮಗೆ ನಗುನಗುತ್ತ ಮಾತನಾಡಲು ಆಗುವುದಿಲ್ಲ ಎಂಬುದನ್ನು ಗಮನದಲ್ಲಿಡಿ.

(ಈ ಥರ ಕಚ್ಚುವ / ಉರಿಯೂತ ಉಂಟು ಮಾಡುವ ಕಂಬಳಿ ಹುಳಗಳ ಕೆಲವೇ ಬಗೆಗಳನ್ನು ತಿಳಿಯಲು ಈ ಕೊಂಡಿಯನ್ನು ಹುಷಾರಾಗಿ, ಮೈಯೆಲ್ಲ ಕಣ್ಣಾಗಿಸಿಕೊಂಡು ಕ್ಲಿಕ್ ಮಾಡಿ!)

ಮಿತ್ರಮಾಧ್ಯಮದಲ್ಲಿ ಈ ಹಿಂದೆ ಪ್ರಕಟವಾದ ಲೇಖನ

ಗುರುವಾರ, ಆಗಸ್ಟ್ 19, 2010

ಬಂದಿದೆ ಬಯೋಬಗ್‌!

ಟಿ ಜಿ ಶ್ರೀನಿಧಿ


ಕೊಳಚೆ ನಿರ್ವಹಣೆ ನಮ್ಮೆಲ್ಲ ನಗರಗಳನ್ನು ಬಾಧಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲೊಂದು. ಬರಿಯ ಪ್ಲಾಸ್ಟಿಕ್ ಒಂದೇ ಅಲ್ಲ, ದೊಡ್ಡ ನಗರಗಳಲ್ಲಿ ಜೈವಿಕ ತ್ಯಾಜ್ಯ (ಮಲಮೂತ್ರ, ಹಾಳಾದ ಆಹಾರ ಪದಾರ್ಥ ಮುಂತಾದ ಕೊಳೆಯುವ ಕಸ) ಕೂಡ ಸಾಕಷ್ಟು ದೊಡ್ಡ ಸಮಸ್ಯೆಯೇ - ಸಹಿಸಲಾರದ ದುರ್ವಾಸನೆ ಹೊರಡಿಸುವುದರಿಂದ ಹಿಡಿದು ಅಂತರ್ಜಲವನ್ನು ಕಲುಷಿತಗೊಳಿಸುವವರೆಗೆ ಅನೇಕ ಬಗೆಯ ತೊಂದರೆಗಳ ಮೂಲ ಅದು.

ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ಹಾಗೆ ಈ ಸಮಸ್ಯೆಯನ್ನು ಮತ್ತೊಂದು ಸಮಸ್ಯೆಯ ನಿವಾರಣೆಗೆ ಬಳಸುವ ಐಡಿಯಾ ಇಂಗ್ಲೆಂಡಿನಿಂದ ಕೇಳಿಬಂದಿದೆ. ಮಾನವ ತ್ಯಾಜ್ಯದಿಂದ ತಯಾರಾದ ಬಯೋಗ್ಯಾಸ್ ಅನ್ನು ಸಂಸ್ಕರಿಸಿ, ಅದನ್ನೇ ಇಂಧನವನ್ನಾಗಿ ಬಳಸಿ ಕಾರು ಓಡಿಸುವ ವಿಚಿತ್ರ ಕಲ್ಪನೆಯನ್ನು ಅವರು ಪ್ರಾಯೋಗಿಕವಾಗಿ ಸಾಧಿಸಿ ತೋರಿಸಿದ್ದಾರೆ. ಪರ್ಯಾಯ ಇಂಧನ ಬಳಕೆಯಿಂದ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ನಮ್ಮ ಅವಲಂಬನೆಯನ್ನು ಕಡಿಮೆಮಾಡುವುದು ಸಾಧ್ಯ ಎಂದು ತೋರಿಸುವುದು ಈ ಪ್ರಯತ್ನದ ಹಿಂದಿನ ಉದ್ದೇಶ. ವೆಸೆಕ್ಸ್ ವಾಟರ್ ಹಾಗೂ ಜೆನ್‌ಇಕೋ ಎಂಬ ಸಂಸ್ಥೆಗಳು ಒಟ್ಟಾಗಿ ಈ ಕಲ್ಪನೆಯನ್ನು ಕಾರ್ಯಗತಗೊಳಿಸಿವೆ.

ಈ ವಿಚಿತ್ರ ಇಂಧನ ಬಳಸಿ ಚಲಿಸುವಂತೆ ಪರಿವರ್ತಿಸಲಾಗಿರುವ ಫೋಕ್ಸ್‌ವಾಗನ್ ಬೀಟಲ್ ಕಾರಿಗೆ ಬಯೋ-ಬಗ್ ಎಂದು ಹೆಸರಿಡಲಾಗಿದೆ. ಜೈವಿಕ ತ್ಯಾಜ್ಯವನ್ನು ವಿಘಟನೆಗೊಳಿಸಿ ಮರಳಿ ಮಣ್ಣಿಗೆ ಸೇರಿಸುವ ಕೀಟಗಳ ಪ್ರಾತಿನಿಧಿಕ ಸಂಕೇತವಾಗಿ ಹುಳದ ಹೆಸರಿನ ಬೀಟಲ್ ಕಾರನ್ನು ಆರಿಸಲಾಗಿದೆ ಎನ್ನುವುದು ಈ ಯೋಜನೆಯ ರೂವಾರಿಗಳ ಹೇಳಿಕೆ.

ಜೈವಿಕ ತ್ಯಾಜ್ಯ ಬಳಸಿ ಬಯೋಗ್ಯಾಸ್ ತಯಾರಿಸುವುದು, ಹಾಗೂ ಅದನ್ನು ಇಂಧನವನ್ನಾಗಿ ಬಳಸುವುದು ನಾವು ಕೇಳಿರದ ಸಂಗತಿಯೇನಲ್ಲ. ಆದರೆ ಈ ಕಾರನ್ನು ಚಲಾಯಿಸಲು ಬಳಕೆಯಾಗುತ್ತಿರುವುದು ಈ ಬಯೋಗ್ಯಾಸ್ ಅಲ್ಲ. ಸಾಧಾರಣ ಬಯೋಗ್ಯಾಸ್‌ನಲ್ಲಿರುವ ಹೆಚ್ಚಿನ ಇಂಗಾಲದ ಡೈಆಕ್ಸೈಡ್ ಅಂಶವನ್ನು ಹೋಗಲಾಡಿಸಿದಾಗ ಉಳಿಯುವ ಮೀಥೇನ್ ಅನಿಲವನ್ನು ಈ ಕಾರಿನ ಇಂಧನವನ್ನಾಗಿ ಬಳಸಲಾಗುತ್ತ್ತಿದೆ.

ಸಾಮಾನ್ಯ ಕಾರುಗಳಿಗೆ ಹೋಲಿಸಿದರೆ ಬಯೋ-ಬಗ್‌ನ ಚಲನೆಯಲ್ಲಿ ಯಾವ ಬಗೆಯ ವ್ಯತ್ಯಾಸವೂ ಇರುವುದಿಲ್ಲ; ಕೆಟ್ಟ ವಾಸನೆಯಂತೂ ಖಂಡಿತಾ ಇರುವುದಿಲ್ಲ ಎಂದು ಅದರ ನಿರ್ಮಾತೃಗಳು ಹೇಳುತ್ತಾರೆ. ಅಂದಹಾಗೆ ಈ ಇಂಧನದ ಕಾರ್ಯಕ್ಷಮತೆಯೇನೂ ಕಡಿಮೆಯಿಲ್ಲ - ಕೇವಲ ಎಪ್ಪತ್ತು ಮನೆಗಳಿಂದ ಹೊರಬರುವ ತ್ಯಾಜ್ಯದಿಂದ ಹತ್ತುಸಾವಿರ ಮೈಲಿಗಳ ಪ್ರಯಾಣಕ್ಕೆ ಸಾಕಾಗುವಷ್ಟು ಇಂಧನ ಪಡೆಯಬಹುದಂತೆ!

ಬಯೋಮೀಥೇನ್ ಎಂದು ಕರೆಯಲಾಗುವ ಈ ಅನಿಲ ಬಳಸಿ ವಾಹನಗಳನ್ನು ಚಲಾಯಿಸುವ ಇನ್ನೂ ಹಲವಾರು ಪ್ರಯತ್ನಗಳು ಯುರೋಪಿನಾದ್ಯಂತ ನಡೆಯುತ್ತಿವೆ - ಸ್ವೀಡನ್ ದೇಶದಲ್ಲಿ ಈಗಾಗಲೇ ಹತ್ತು ಸಾವಿರಕ್ಕೂ ಹೆಚ್ಚು ಬಯೋಮೀಥೇನ್ ಚಾಲಿತ ವಾಹನಗಳು ಸಂಚರಿಸುತ್ತಿವೆ ಎಂಬ ಅಂದಾಜಿದೆ.

ಆಗಸ್ಟ್ ೨೬, ೨೦೧೦ರ ಸುಧಾದಲ್ಲಿ ಪ್ರಕಟವಾದ ಲೇಖನ

ಸೋಮವಾರ, ಏಪ್ರಿಲ್ 26, 2010

ಇ-ಜ್ಞಾನಕ್ಕೆ ಮೂರು ತುಂಬಿತು!

ವಿಜ್ಞಾನ ತಂತ್ರಜ್ಞಾನ ವಿಷಯಗಳಿಗೆ ಮೀಸಲಾದ ನನ್ನ ಕನ್ನಡ ಬ್ಲಾಗು ಇ-ಜ್ಞಾನ ಪ್ರಾರಂಭವಾಗಿ ಇಂದಿಗೆ ಮೂರು ವರ್ಷ. ಮೂರು ವರ್ಷಗಳ ಈ ಅವಧಿಯಲ್ಲಿ ಇಲ್ಲಿ ಪ್ರಕಟವಾಗಿರುವ ಲೇಖನಗಳ ಸಂಖ್ಯೆ ಹೇಳಿಕೊಳ್ಳುವಷ್ಟು ದೊಡ್ಡದಲ್ಲದಿದ್ದರೂ ಓದುಗ ಮಿತ್ರರಿಂದ ದೊರೆತಿರುವ ಸಹಕಾರ ಮಾತ್ರ ಅಪಾರವಾದದ್ದು. ಇ-ಜ್ಞಾನದತ್ತ ಬಂದುಹೋಗುತ್ತ, ಇಲ್ಲಿನ ಲೇಖನಗಳನ್ನು ಮೆಚ್ಚುತ್ತ, ತಪ್ಪುಗಳನ್ನು ತೋರಿಸುತ್ತ ಈ ಬಳಗದ ಸದಸ್ಯರಾಗಿರುವ ಎಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ಇ-ಜ್ಞಾನದೊಂದಿಗಿನ ನಿಮ್ಮ ಒಡನಾಟ ಹೀಗೆಯೇ ಮುಂದುವರೆಯಲಿ.

ವಿಶ್ವಾಸಪೂರ್ವಕ,
ಟಿ ಜಿ ಶ್ರೀನಿಧಿ

ಜಾಲಲೋಕದ ಮಬ್ಬಿನಲ್ಲಿ ಸರ್ಚ್ ಇಂಜನ್ ಬೆಳಕು

ಟಿ ಜಿ ಶ್ರೀನಿಧಿ

ಸುಮಾರು ಹದಿನೈದು ವರ್ಷ ಹಿಂದಿನ ಘಟನೆಯಿರಬೇಕು. ನನ್ನ ಅಕ್ಕನ ಶಾಲೆಯಲ್ಲಿ ಕರ್ನಾಟಕದ ಪ್ರಸಿದ್ಧ ಪ್ರವಾಸಿತಾಣಗಳ ಬಗೆಗೆ ಒಂದು ಚಿತ್ರಸಹಿತ ಪ್ರಬಂಧ ಬರೆದುತನ್ನಿ ಎಂದು ಹೇಳಿದ್ದರು. ಪ್ರಬಂಧವೇನೋ ಸರಿ, ಆದರೆ ಚಿತ್ರಗಳಿಗೇನು ಮಾಡೋಣ? ಆಗ ಮನೆಮಂದಿಯೆಲ್ಲ ಎರಡು ದಿನ ಕುಳಿತು ಹಳೆಯ ಪತ್ರಿಕಾ ಪುರವಣಿಗಳು ಹಾಗೂ ದೀಪಾವಳಿ ಸಂಚಿಕೆಗಳ ಸಂಗ್ರಹವನ್ನೆಲ್ಲ ಜಾಲಾಡಿ ಚಿತ್ರಗಳನ್ನು ಸಂಗ್ರಹಿಸಿದ್ದು, ಆಮೇಲೆ ನಮ್ಮಕ್ಕ ಪ್ರಬಂಧವನ್ನು ಸಿದ್ಧಪಡಿಸಿದ್ದು ನನಗಿನ್ನೂ ಚೆನ್ನಾಗಿ ನೆನಪಿದೆ.

ಆದರೆ ಈಗ ಪರಿಸ್ಥಿತಿ ಹಾಗಿಲ್ಲ ಎಂದು ಮೊನ್ನೆತಾನೆ ನೆನೆಪಿಸಿದವಳು ನನ್ನ ಇನ್ನೊಬ್ಬ ಅಕ್ಕನ ಮಗಳು. ಅವಳ ಶಾಲೆಯಲ್ಲಿ ಆಫ್ರಿಕಾದ ಕಾಡುಪ್ರಾಣಿಗಳ ಚಿತ್ರಗಳನ್ನು ಸಂಗ್ರಹಿಸಿತನ್ನಿ ಎಂದು ಹೇಳಿದ್ದರಂತೆ. ಜಾಸ್ತಿ ಸಮಯ ಇಲ್ಲ, ಬೇಗ ಹುಡುಕಿಕೊಡು ಅಂತ ನನಗೆ ದುಂಬಾಲುಬಿದ್ದಳು. ನಾನು ಗೂಗಲ್ ಮಾಡಿದೆ, ಚಿತ್ರಗಳನ್ನು ಮುದ್ರಿಸಿ ಅವಳಿಗೆ ಕೊಟ್ಟೆ. ಅರ್ಧಗಂಟೆಯೊಳಗೆ ಅವಳ ಚಿತ್ರಸಂಗ್ರಹ ಸಿದ್ಧವಾಗಿತ್ತು.

ಹೌದಲ್ಲ, ಈಗ ಪರಿಸ್ಥಿತಿ ಎಷ್ಟು ಬದಲಾಗಿದೆ. ಪ್ರಪಂಚದ ಮೂಲೆಮೂಲೆಗಳ ಮಾಹಿತಿ ನಮ್ಮ ಗಣಕದಲ್ಲಿ ಕ್ಷಣಾರ್ಧದಲ್ಲಿ ಲಭ್ಯವಾಗುತ್ತಿದೆ. ವಿಶ್ವವ್ಯಾಪಿ ಜಾಲ ಅದೆಷ್ಟು ಶಕ್ತವಾಗಿ ಬೆಳೆದಿದೆಯೆಂದರೆ ಪುಟ್ಟ ಮಕ್ಕಳ ಹೋಮ್‌ವರ್ಕ್‌ನಿಂದ ಹಿಡಿದು ದೊಡ್ಡವರ ಪ್ರಾಜೆಕ್ಟ್ ರಿಪೋರ್ಟ್‌ವರೆಗೂ ಅದೆಷ್ಟೋ ಕೆಲಸಗಳಿಗೆ ಬೇಕಾದ ಮಾಹಿತಿ ನಮಗೆ ಬೇಕಾದಾಗ ಬೇಕಾದ ಕಡೆ ದೊರಕುವಂತಾಗಿದೆ.

ಇದನ್ನು ಸಾಧ್ಯವಾಗಿಸಿರುವ ತಂತ್ರಾಂಶಗಳೇ ಸರ್ಚ್ ಇಂಜನ್ಗಳು ಅಥವಾ ಶೋಧನ ಚಾಲಕ ತಂತ್ರಾಂಶಗಳು. ಇವು ವಿಶ್ವವ್ಯಾಪಿ ಜಾಲದಲ್ಲಿರುವ ಮಾಹಿತಿಯನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಹುಡುಕಲು ಸಹಾಯಮಾಡುತ್ತವೆ. ಗೂಗಲ್, ಬಿಂಗ್ ಇವೆಲ್ಲ ಸರ್ಚ್ ಇಂಜನ್‌ಗಳಿಗೆ ಉದಾಹರಣೆಗಳು. ಗೂಗಲ್ ಅಂತೂ ಅದೆಷ್ಟು ಪ್ರಸಿದ್ಧವಾಗಿದೆಯೆಂದರೆ ಸರ್ಚ್‌ಇಂಜನ್ ಬಳಸಿ ಅಂತರ್ಜಾಲದಲ್ಲಿ ಮಾಹಿತಿಗಾಗಿ ಹುಡುಕಾಡುವ ಪ್ರಕ್ರಿಯೆಗೆ googಟiಟಿg ಅಥವಾ ಗೂಗಲ್ ಮಾಡುವುದು ಎಂಬ ಅಡ್ಡಹೆಸರೇ ಹುಟ್ಟಿಕೊಂಡುಬಿಟ್ಟಿದೆ.

ಯಾವುದೇ ವಿಷಯದ ಕುರಿತು ವಿಶ್ವವ್ಯಾಪಿ ಜಾಲದಲ್ಲಿ ಇರಬಹುದಾದ ಮಾಹಿತಿಯನ್ನು ಅತ್ಯಂತ ಸುಲಭವಾಗಿ ಹುಡುಕಿಕೊಡುವ ಈ ತಂತ್ರಾಂಶಗಳು ವಿಶ್ವದಾದ್ಯಂತ ಇರುವ ಅಂತರ್ಜಾಲ ಬಳಕೆದಾರರಲ್ಲಿ ಅತ್ಯಂತ ಜನಪ್ರಿಯವಾಗಿವೆ. ವಿವಿಧ ವಿಷಯಗಳಿಗೆ ಸಂಬಂಧಪಟ್ಟ ಪಠ್ಯರೂಪದ ಮಾಹಿತಿಯಷ್ಟೇ ಅಲ್ಲದೆ ಚಿತ್ರಗಳು, ಸುದ್ದಿಗಳು, ಇ-ಪುಸ್ತಕಗಳು, ಭೂಪಟಗಳು ಮುಂತಾದ ಅನೇಕ ರೂಪಗಳಲ್ಲಿರುವ ಮಾಹಿತಿಯನ್ನು ಸರ್ಚ್ ಇಂಜನ್‌ಗಳು ಹುಡುಕಿಕೊಡುತ್ತವೆ. ಬೇರೆ ತಾಣಗಳಲ್ಲಿರುವ ಮಾಹಿತಿಯ ಮಾತು ಹಾಗಿರಲಿ, ನಮ್ಮ ಗಣಕದಲ್ಲಿರುವ ಮಾಹಿತಿಯನ್ನು ಹುಡುಕುವುದಕ್ಕಾಗಿಯೂ ಸರ್ಚ್ ಇಂಜನ್‌ಗಳು ಲಭ್ಯವಿವೆ.

* * *

ನಿಮ್ಮ ಇಚ್ಛೆಯ ವಿಷಯಗಳಿಗಾಗಿ ವಿಶ್ವವ್ಯಾಪಿ ಜಾಲದ ಪುಟಗಳ ನಡುವೆ ಹುಡುಕಾಟ ನಡೆಸುವುದು ಸರ್ಚ್ ಇಂಜನ್‌ಗಳ ಕೆಲಸ. ನಾವು ಹುಡುಕುತ್ತಿರುವ ವಿಷಯಕ್ಕೆ ಸಂಬಂಧಿಸಿದ ಮುಖ್ಯ ಪದಗಳನ್ನು (ಕೀ ವರ್ಡ್ಸ್) ನಿರ್ದಿಷ್ಟರೂಪದಲ್ಲಿ ಬೆರಳಚ್ಚಿಸಿ, ಹುಡುಕುವ ಪ್ರಕ್ರಿಯೆಯನ್ನು ಪ್ರಾರಂಭಗೊಳಿಸಿದರೆ, ಸರ್ಚ್ ಇಂಜನ್‌ಗಳು ನಮಗೆ ಬೇಕಾದ ಮಾಹಿತಿ ವಿಶ್ವವ್ಯಾಪಿ ಜಾಲದಲ್ಲಿ ಎಲ್ಲೆಲ್ಲಿ ಲಭ್ಯವಿದೆ ಎಂಬುದನ್ನು ಹುಡುಕಿಕೊಡುತ್ತವೆ; ಕಡತಗಳು, ಚಿತ್ರಗಳು, ಸುದ್ದಿಗಳು, ವಿಡಿಯೋಗಳು - ಹೀಗೆ ನಮಗೆ ಬೇಕಾದ ವಿಷಯಕ್ಕೆ ಸಂಬಂಧಪಟ್ಟ, ಯಾವುದೇ ರೂಪದಲ್ಲಿರುವ ಮಾಹಿತಿಯನ್ನು ಪತ್ತೆಮಾಡುತ್ತವೆ.

ಹೀಗೆ ಹುಡುಕಿದ ಮಾಹಿತಿಯನ್ನು ಅದರ ಪ್ರಾಮುಖ್ಯತೆಗೆ ಅನುಗುಣವಾಗಿ ಜೋಡಿಸಿ ಅವು ನಿಮ್ಮ ಮುಂದೆ ಪ್ರದರ್ಶಿಸುತ್ತವೆ. ಇಂತಹ ಪ್ರತಿಯೊಂದು ಮಾಹಿತಿಯೂ ಒಂದೊಂದು ತಂತು ಅಥವಾ ಲಿಂಕ್ನ ರೂಪದಲ್ಲಿರುವುದರಿಂದ ಅವುಗಳ ಮೇಲೆ ಕ್ಲಿಕ್ ಮಾಡಿ ನಿಮಗೆ ಬೇಕಾದ ಮಾಹಿತಿ ಪಡೆದುಕೊಳ್ಳುವುದು ಸಾಧ್ಯವಾಗುತ್ತದೆ.

ಈ ಮಾಹಿತಿ ಹುಡುಕಾಟ ನಡೆಸಲು ಸರ್ಚ್ ಇಂಜನ್‌ಗಳು ವೆಬ್ ಸ್ಪೈಡರ್‌ಗಳೆಂಬ ತಂತ್ರಾಂಶಗಳನ್ನು ಬಳಸುತ್ತವೆ. ಇವನ್ನು ನಾವು ಜೇಡಗಳೆಂದು ಕರೆಯೋಣ. ವಿಶ್ವವ್ಯಾಪಿ ಜಾಲದಲ್ಲಿರುವ ಲಕ್ಷಾಂತರ ಜಾಲತಾಣಗಳನ್ನು (ವೆಬ್‌ಸೈಟ್) ಹಾಗೂ ಅವುಗಳಲ್ಲಿರುವ ಪುಟಗಳನ್ನು ಅವುಗಳ ಜನಪ್ರಿಯತೆಗೆ ಅನುಗುಣವಾಗಿ ವರ್ಗೀಕರಿಸಿ, ಆ ಪುಟಗಳಲ್ಲಿರುವ ಮಾಹಿತಿ ಯಾವ ವಿಷಯಗಳಿಗೆ ಸಂಬಂಧಿಸಿದ್ದು ಎಂಬ ಅಂಶವನ್ನು ದಾಖಲಿಸಿಕೊಳ್ಳುವುದು ಈ ಜೇಡಗಳ ಕೆಲಸ. ಜಾಲತಾಣಗಳನ್ನು ರೂಪಿಸುವವರು ಇಂತಹ ಸ್ಪೈಡರ್‌ಗಳಿಗೆ ಸಹಾಯವಾಗಲೆಂದೇ ತಮ್ಮ ತಾಣದ ಪುಟಗಳ ಬಗ್ಗೆ ಪ್ರಮುಖ ಮಾಹಿತಿಗಳನ್ನು ಮೆಟಾ ಟ್ಯಾಗ್ಗಳ ರೂಪದಲ್ಲಿ ಸಂಕ್ಷಿಪ್ತವಾಗಿ ಶೇಖರಿಸಿಟ್ಟಿರುತ್ತಾರೆ. ಸ್ಪೈಡರ್‌ಗಳ ಹುಡುಕಾಟ ಇದೇ ಮೆಟಾ ಟ್ಯಾಗ್‌ಗಳನ್ನು ಆಧರಿಸಿರುತ್ತದೆ.

ಈ ಜೇಡಗಳು ಸಾಮಾನ್ಯವಾಗಿ ತಮ್ಮ ಹುಡುಕಾಟವನ್ನು ಅತ್ಯಂತ ಪ್ರಸಿದ್ಧ ಜಾಲತಾಣಗಳು ಹಾಗೂ ಅತಿಹೆಚ್ಚು ಬಳಕೆದಾರರನ್ನು ಹೊಂದಿರುವ ಸರ್ವರ್‌ಗಳಿಂದ ಪ್ರಾರಂಭಿಸುತ್ತವೆ. ಅಲ್ಲಿಂದ ಮುಂದಕ್ಕೆ ಆ ಜಾಲತಾಣ ಹಾಗೂ ಆ ಜಾಲತಾಣವನ್ನು ಹೊಂದಿರುವ ಸರ್ವರ್‌ನಲ್ಲಿರುವ ಎಲ್ಲ ಪುಟಗಳ ಮೇಲೂ ಒಮ್ಮೆ ಕಣ್ಣಾಡಿಸಿ ಅವುಗಳಲ್ಲಿರುವ ಮಾಹಿತಿಯನ್ನು ವರ್ಗೀಕರಿಸಿಟ್ಟುಕೊಳ್ಳುವ ಕೆಲಸ ಪ್ರಾರಂಭವಾಗುತ್ತದೆ. ಒಂದು ಜಾಲತಾಣದಲ್ಲಿರುವ ಎಲ್ಲ ತಂತುಗಳನ್ನೂ ಈ ಜೇಡಗಳು ಹಿಂಬಾಲಿಸುವುದರಿಂದ ಅವುಗಳ ನಿಲುಕಿಗೆ ಸಿಗುವ ಪುಟಗಳ ಸಂಖ್ಯೆ ಬೆಳೆಯುತ್ತಲೇ ಹೋಗುತ್ತದೆ. ಸ್ಪೈಡರ್‌ಗಳು ಸಂಗ್ರಹಿಸುವ ಮಾಹಿತಿಯ ಅಧಾರದ ಮೇಲೆ ಒಂದು ಅಕಾರಾದಿಯನ್ನು (ಇಂಡೆಕ್ಸ್) ತಯಾರಿಸಿಕೊಳ್ಳುವ ಸರ್ಚ್ ಇಂಜನ್‌ಗಳು ನಮಗೆ ಬೇಕಾದ ಮಾಹಿತಿಯನ್ನು ಅತ್ಯಂತ ವೇಗವಾಗಿ ಹುಡುಕಿಕೊಳ್ಳಲು ಸಹಾಯ ಮಾಡುತ್ತವೆ.

* * *

ಸರ್ಚ್ ತಂತ್ರಜ್ಞಾನ ಬೆಳೆದಂತೆ ಎಲ್ಲಬಗೆಯ ಮಾಹಿತಿಯನ್ನೂ ಹುಡುಕುಕೊಡುವ ಗೂಗಲ್‌ನಂತಹ ಸರ್ಚ್‌ಇಂಜನ್‌ಗಳ ಜೊತೆಗೆ ನಿರ್ದಿಷ್ಟ ವಿಷಯಗಳಿಗೆ (ಉದ್ಯೋಗಾವಕಾಶಗಳು, ವೈಜ್ಞಾನಿಕ ಮಾಹಿತಿ, ಪ್ರವಾಸ ಇತ್ಯಾದಿ) ಮಾತ್ರವೇ ಸೀಮಿತವಾದ ವರ್ಟಿಕಲ್ ಸರ್ಚ್ ಇಂಜನ್‌ಗಳೂ ಹುಟ್ಟಿಕೊಂಡಿವೆ. ಯಾವುದೇ ವಿಷಯವನ್ನು ಕುರಿತಾದ ಮಾಹಿತಿಯನ್ನು ಜನರ ನೆರವಿನಿಂದಲೇ ಒಟ್ಟುಗೂಡಿಸಿ ಹುಡುಕಾಟದ ಪ್ರಕ್ರಿಯೆಯನ್ನು ಸುಲಭಗೊಳಿಸುವ ಆಶಯ ಹೊಂದಿರುವ ಸಮುದಾಯ ಸರ್ಚ್‌ಇಂಜನ್‌ಗಳೂ ಪ್ರಚಲಿತಕ್ಕೆ ಬರುತ್ತಿವೆ.

ಅಷ್ಟೇ ಅಲ್ಲ, ಯಾವುದೇ ವಿಷಯದ ಕುರಿತು ಸಮಗ್ರ ಮಾಹಿತಿ ಒದಗಿಸುವ ನಾಲೆಜ್ ಇಂಜನ್‌ಗಳೂ ತಯಾರಾಗುತ್ತಿವೆ. ವುಲ್ಫ್‌ರಮ್ ಆಲ್ಫಾ ಎನ್ನುವುದು ಇಂತಹುದೊಂದು ನಾಲೆಜ್ ಇಂಜನ್. ಈ ತಾಣ ಯಾವುದೇ ವಿಷಯದ ಬಗ್ಗೆ ಜಾಲತಾಣಗಳಲ್ಲಿ ಲಭ್ಯವಿರುವ ಮಾಹಿತಿಯನ್ನಷ್ಟೆ ಹುಡುಕಿಕೊಡುವ ಬದಲಿಗೆ ಆ ವಿಷಯದ ಕುರಿತಾದ ಸಮಗ್ರ ಮಾಹಿತಿ ನೀಡುವ ಪ್ರಯತ್ನ ಮಾಡುತ್ತದೆ.

ಉದಾಹರಣೆಗೆ ಗೂಗಲ್‌ನಲ್ಲಿ ಮೈಸೂರು ಬೆಂಗಳೂರು ಎಂದು ದಾಖಲಿಸಿ ಹುಡುಕಲು ಹೇಳಿದಿರಿ ಎಂದುಕೊಳ್ಳೋಣ. ಅದಕ್ಕೆ ಉತ್ತರವಾಗಿ ನಿಮಗೆ ಸಿಗುವುದು ಮೈಸೂರು ಹಾಗೂ ಬೆಂಗಳೂರು ಎಂಬ ಎರಡೂ ಹೆಸರುಗಳ ಉಲ್ಲೇಖವಿರುವ ಜಾಲತಾಣಗಳ ಪಟ್ಟಿ. ಆದರೆ ವುಲ್ಫ್‌ರಮ್ ಆಲ್ಫಾ ತಾಣದಲ್ಲಿ ಮೈಸೂರು ಬೆಂಗಳೂರು ಎಂಬುದರ ಬಗ್ಗೆ ಹುಡುಕಿದರೆ ಈ ಊರುಗಳು ಎಲ್ಲಿವೆ, ಸಮುದ್ರಮಟ್ಟದಿಂದ ಎಷ್ಟು ಎತ್ತರದಲ್ಲಿವೆ, ಜನಸಂಖ್ಯೆ ಎಷ್ಟು, ಈಗ ಅಲ್ಲಿ ಟೈಮೆಷ್ಟು, ಒಂದಕ್ಕೊಂದು ಎಷ್ಟು ದೂರದಲ್ಲಿವೆ ಮುಂತಾದ ಎಲ್ಲ ವಿವರಗಳೂ ಒಂದೇ ಕಡೆ ಸಿಕ್ಕಿಬಿಡುತ್ತವೆ!

* * *

ಇದೀಗ ಪ್ರಚಲಿತದಲ್ಲಿರುವ ಪಠ್ಯಾಧಾರಿತ ಸರ್ಚ್ ಇಂಜನ್‌ಗಳ ಜೊತೆಗೆ ಚಿತ್ರಗಳ ನೆರವಿನಿಂದ ಹುಡುಕಾಟವನ್ನು ಸಾಧ್ಯವಾಗಿಸುವ ಸರ್ಚ್ ಇಂಜನ್‌ಗಳೂ ಸಿದ್ಧವಾಗುತ್ತಿವೆ. ಇಂತಹ ಸರ್ಚ್ ಇಂಜನ್‌ಗಳ ಸಹಾಯದಿಂದ ನಿಮ್ಮ ಬಳಿಯಿರುವ ಚಿತ್ರವನ್ನು ಆಧಾರವಾಗಿಟ್ಟುಕೊಂಡು ಆ ಚಿತ್ರಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಹುಡುಕುವುದು ಸಾಧ್ಯವಾಗಲಿದೆಯಂತೆ.

ಇಷ್ಟೆಲ್ಲ ಮುಂದುವರೆದಿರುವ ಸರ್ಚ್ ತಂತ್ರಜ್ಞಾನದ ಮುಂದಿನ ಹಂತವಾಗಿ ಆಡುಮಾತಿನ ಪ್ರಶ್ನೆಗಳಿಗೆ (ನ್ಯಾಚುರಲ್ ಲ್ಯಾಂಗ್ವೇಜ್ ಕ್ವೆರಿಯಿಂಗ್) ಉತ್ತರಿಸು ವಂತಹ ಸರ್ಚ್ ಇಂಜನ್‌ಗಳು ರೂಪಗೊಳ್ಳುತ್ತಿವೆ. ಇಂದಿನ ಸರ್ಚ್ ಇಂಜನ್‌ಗಳಿಗಿಂತ ಹೆಚ್ಚು ಬುದ್ಧಿವಂತವಾಗಿರುವ ಇಂತಹ ಸರ್ಚ್ ಇಂಜನ್‌ಗಳು ನಿರ್ದಿಷ್ಟ ರೂಪದ ಕೀವರ್ಡ್‌ಗಳನ್ನೇನೂ ಬಳಸದೆ ಆಡುಮಾತಿನ ರೂಪದಲ್ಲೇ ಬರೆದ ನಮ್ಮ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಮಾಡಲಿವೆ.

ಶಿವರಾಮ ಕಾರಂತರು ಬರೆದ ಮೊದಲ ಪುಸ್ತಕ ಯಾವುದು ಎಂದು ಕೇಳಿದಾಗ ಶಿವರಾಮ ಕಾರಂತ ಪುಸ್ತಕ ಎಂಬ ಉಲ್ಲೇಖವಿರುವ ತಾಣಗಳನ್ನೆಲ್ಲ ತೋರಿಸುವ ಬದಲು ಅವರ ಮೊದಲ ಪುಸ್ತಕದ ಬಗೆಗಿನ ಮಾಹಿತಿಯನ್ನೇ ತೋರಿಸುವ ಚಾಕಚಕ್ಯತೆ ಇಂತಹ ಸರ್ಚ್ ಇಂಜನ್‌ಗಳಲ್ಲಿ ಇರಲಿದೆ.

ಈ ರೂಪದಲ್ಲಿ ಬರೆದ ಪ್ರಶ್ನೆಗಳ ಜೊತೆಗೆ ಧ್ವನಿಯ ರೂಪದಲ್ಲಿ ನಾವು ಕೇಳುವ ಪ್ರಶ್ನೆಗಳಿಗೂ ಉತ್ತರಿಸಬಲ್ಲ ಸರ್ಚ್ ಇಂಜನ್‌ಗಳೂ ಸಿದ್ಧವಾಗುತ್ತಿವೆ. ಸರ್ಚ್ ಇಂಜನ್ ಕ್ಷೇತ್ರದ ದಿಗ್ಗಜ ಗೂಗಲ್ ಈಗಾಗಲೇ ಇಂತಹುದೊಂದು ವ್ಯವಸ್ಥೆ ರೂಪಿಸಿದೆ. ನೋಕಿಯಾದ ಕೆಲ ಮಾದರಿ ಮೊಬೈಲ್‌ಗಳಲ್ಲಿ ಲಭ್ಯವಿರುವ ಈ ವ್ಯವಸ್ಥೆ ಇಂಗ್ಲಿಷ್ ಜೊತೆಗೆ ಚೈನೀಸ್ ಭಾಷೆಯನ್ನೂ ಅರ್ಥಮಾಡಿಕೊಳ್ಳಬಲ್ಲದಂತೆ!

ನವೆಂಬರ್ ೨೦೦೯ರಲ್ಲಿ ಬರೆದ ಲೇಖನ, ಮೇ ೨೦೧೦ರ 'ವಿಜ್ಞಾನ ಲೋಕ'ದಲ್ಲಿ ಪ್ರಕಟವಾಗಿದೆ.

ಸೋಮವಾರ, ಮಾರ್ಚ್ 1, 2010

ಕಾಫಿ ಮತ್ತು ಕಂಪ್ಯೂಟರ್

ಟಿ ಜಿ ಶ್ರೀನಿಧಿ


ಕಂಪ್ಯೂಟರ್ ಅಥವಾ  ಗಣಕವನ್ನು ಬಳಸಿ ಅನೇಕ ಕೆಲಸಗಳನ್ನು  ಅತ್ಯಂತ ವೇಗವಾಗಿ ಮಾಡಬಹುದು.  ಆದರೆ ಗಣಕಕ್ಕೆ ಸ್ವಂತ ಬುದ್ಧಿ ಇರುವುದಿಲ್ಲ. ಅದು ನಾವು ಹೇಳಿದ ಕೆಲಸ ಮಾತ್ರ ಮಾಡುತ್ತದೆ.

ಈಗ ನಮಗೆ ೧+೧=? ಎಂಬ ಪ್ರಶ್ನೆಗೆ ಉತ್ತರ ಬೇಕಾಗಿದೆ ಎಂದುಕೊಳ್ಳೋಣ. ೧+೧ ಎನ್ನುವುದು ನಾವು ಗಣಕಕ್ಕೆ ನೀಡುವ ಮಾಹಿತಿ. ಇದನ್ನು ಇನ್‌ಪುಟ್ ಎನ್ನುತ್ತಾರೆ. ಈ ಪ್ರಶ್ನೆಯ ಉತ್ತರ ಗಣಕ ನಮಗೆ ನೀಡುವ ಮಾಹಿತಿ. ಇದಕ್ಕೆ ಔಟ್‌ಪುಟ್ ಎಂದು ಹೆಸರು.

ನಾವು ಕೊಟ್ಟ ಇನ್‌ಪುಟ್ ಬಳಸಿ ಏನೇನು ಲೆಕ್ಕಾಚಾರ ಮಾಡಬೇಕು, ಯಾವ ಔಟ್‌ಪುಟ್ ಕೊಡಬೇಕು ಎಂದು ಗಣಕಕ್ಕೆ ತಿಳಿಸಿ ಹೇಳುವುದು ಸಾಫ್ಟ್‌ವೇರ್ ಅಥವಾ ತಂತ್ರಾಂಶದ ಕೆಲಸ.

ಹೀಗೆ ಸಿಕ್ಕ ಔಟ್‌ಪುಟ್ ಅನ್ನು ಪರದೆಯ ಮೇಲೆ ನೋಡಬಹುದು, ಗಣಕದಲ್ಲೇ ಉಳಿಸಿಡಬಹುದು, ಮುದ್ರಿಸಿಕೊಳ್ಳಲೂಬಹುದು. ಈ ಕೆಲಸದಲ್ಲಿ ಸಹಾಯಮಾಡುವ ಮಾನಿಟರ್, ಹಾರ್ಡ್‌ಡಿಸ್ಕ್, ಪ್ರಿಂಟರ್ ಮುಂತಾದ ನಮ್ಮ ಕಣ್ಣಿಗೆ ಕಾಣುವ ಭಾಗಗಳನ್ನು ಹಾರ್ಡ್‌ವೇರ್ ಅಥವಾ ಯಂತ್ರಾಂಶ ಎಂದು ಕರೆಯುತ್ತಾರೆ.

ಇದನ್ನೆಲ್ಲ  ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳಲು ಒಂದು ಪ್ರಶ್ನೆ ಕೇಳೋಣ - ಕಾಫಿ ಮಾಡುವುದು ಹೇಗೆ?

ಇದಕ್ಕೆ ಉತ್ತರ  ಏನು? ಪಾತ್ರೆಗೆ ಹಾಲು ಹಾಕಿ ಒಲೆಯ ಮೇಲೆ ಇಡು, ಸಕ್ಕರೆ ಹಾಕು, ಚೆನ್ನಾಗಿ ಬಿಸಿ ಮಾಡು, ಡಿಕಾಕ್ಷನ್ ಬೆರೆಸು ಹಾಗೂ ಲೋಟಕ್ಕೆ ಹಾಕಿ ಕೊಡು.

ಇದನ್ನೇ ಕಂಪ್ಯೂಟರ್  ಭಾಷೆಯಲ್ಲಿ ಹೇಳಿದರೆ - ಹಾಲು, ಡಿಕಾಕ್ಷನ್ ಹಾಗೂ ಸಕ್ಕರೆ ಇನ್‌ಪುಟ್; ಬಿಸಿಬಿಸಿ ಕಾಫಿ ಔಟ್‌ಪುಟ್. ಕಾಫಿ ಮಾಡುವುದು ಹೇಗೆ ಎಂದು ಹೇಳುವುದು ತಂತ್ರಾಂಶದ ಕೆಲಸ. ಪಾತ್ರೆ, ಒಲೆ, ಲೋಟ ಇವೆಲ್ಲ ಹಾರ್ಡ್‌ವೇರ್.

ಎಷ್ಟು ಸುಲಭ  ಅಲ್ಲವೆ?

ಶುಕ್ರವಾರ, ಫೆಬ್ರವರಿ 19, 2010

ರಾಷ್ಟ್ರೀಯ ವಿಜ್ಞಾನ ದಿನ ೨೦೧೦

ರಾಷ್ಟ್ರೀಯ ವಿಜ್ಞಾನ ದಿನ ೨೦೧೦ರ ಸಂದರ್ಭದಲ್ಲಿ ಗುಲಬರ್ಗಾದ ಡಾ| ಪಿ ಎಸ್ ಶಂಕರ್ ಪ್ರತಿಷ್ಠಾನ, ಬೀದರದ ಬಿ ವಿ ಭೂಮರೆಡ್ಡಿ ಮಹಾವಿದ್ಯಾಲಯ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಸಂಯುಕ್ತ ಆಶ್ರಯದಲ್ಲಿ ಉತ್ತರ ಕರ್ನಾಟಕದ ಹಲವೆಡೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಫೆಬ್ರುವರಿ ೨೩ರಂದು ಯಾದಗಿರಿ, ೨೪ರಂದು ಬೀದರ, ಮಾರ್ಚ್ ೨ರಂದು ಬಳ್ಳಾರಿ, ೩ರಂದು ರಾಯಚೂರು-ಗಂಗಾವತಿ ಹಾಗೂ ೪ರಂದು ಗುಲಬರ್ಗಾದಲ್ಲಿ ಈ ಕಾರ್ಯಕ್ರಮಗಳು ನಡೆಯಲಿವೆ.

೧೯೨೮ ಫೆಬ್ರವರಿ ೨೮, ಭಾರತದ ಹೆಮ್ಮೆಯ ವಿಜ್ಞಾನಿ ಸರ್ ಸಿ ವಿ ರಾಮನ್ ಅವರು 'ರಾಮನ್ ಪರಿಣಾಮ' ಎಂದೇ ಪ್ರಸಿದ್ಧವಾದ ತಮ್ಮ ಸಂಶೋಧನೆಯ ವಿವರಗಳನ್ನು ಜಗತ್ತಿಗೆ ತಿಳಿಸಿದ ದಿನ. ಕೋಲ್ಕತಾದ ಇಂಡಿಯನ್ ಅಸೋಸಿಯೇಷನ್ ಫಾರ್ ಕಲ್ಟಿವೇಷನ್ ಆಫ್ ಸೈನ್ಸ್‌ನಲ್ಲಿ ರಾಮನ್ ಅವರು ತಮ್ಮ ಸಹೋದ್ಯೋಗಿಗಳೊಡನೆ ನಡೆಸಿದ ಸಂಶೋಧನೆಗಳ ಪರಿಣಾಮವೇ ಈ ಅಪೂರ್ವ ಸಂಶೋಧನೆ. ಇದೇ ಸಂಶೋಧನೆಗಾಗಿ ಅವರಿಗೆ ೧೯೩೦ನೇ ಇಸವಿಯಲ್ಲಿ ನೋಬೆಲ್ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದು ವಿಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ದೊರೆತ ಮೊತ್ತಮೊದಲ ನೋಬೆಲ್ ಪುರಸ್ಕಾರವೂ ಹೌದು.

ಒಮ್ಮೆ ಹಡಗಿನಲ್ಲಿ ಪ್ರಯಾಣಿಸುವಾಗ ರಾಮನ್ ಅವರಿಗೆ ಸಮುದ್ರ ಏಕೆ ಯಾವಾಗಲೂ ನೀಲಿಯಾಗಿಯೇ ಕಾಣುತ್ತದೆ ಎಂಬ ಪ್ರಶ್ನೆ ಎದುರಾಯಿತಂತೆ. ಅದು ಆಕಾಶದ ಬಣ್ಣದ ಪ್ರತಿಫಲನವೋ ಅಥವಾ ಈ ನೀಲಿ ಬಣ್ಣದ ಹಿಂದೆ ಬೇರೇನಾದರೂ ಗುಟ್ಟು ಅಡಗಿದೆಯೋ ಎಂದು ಪತ್ತೆಮಾಡಲು ಹೊರಟ ರಾಮನ್ ಸೂರ್ಯನ ಬೆಳಕು ನೀರಿನಲ್ಲಿ ಹರಡಿಹೋಗುವುದೇ ಸಮುದ್ರದ ನೀರು ನೀಲಿಯಾಗಿ ಕಾಣಲು ಕಾರಣ ಎಂಬ ವಿಷಯವನ್ನು ಕಂಡುಹಿಡಿದರು. ಇದೇ ಅಂಶ ಮುಂದೆ 'ರಾಮನ್ ಪರಿಣಾಮ'ದ ಸಂಶೋಧನೆಗೆ ಪ್ರೇರಣೆಯಾಯಿತು.

'ರಾಮನ್ ಪರಿಣಾಮ' ಸಂಶೋಧನೆಯ ವಿವರಗಳು ಪ್ರಕಟವಾದ ಆ ಚಾರಿತ್ರಿಕ ದಿನದ ನೆನಪಿನಲ್ಲಿ ಪ್ರತಿ ವರ್ಷ ಫೆಬ್ರವರಿ ೨೮ನೇ ದಿನಾಂಕವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ. ವಿಜ್ಞಾನ ಹಾಗೂ ನಮ್ಮ ಜೀವನದಲ್ಲಿ ಅದರ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ರಾಷ್ಟ್ರೀಯ ವಿಜ್ಞಾನ ದಿನ ಆಚರಣೆಯ ಉದ್ದೇಶಗಳಲ್ಲೊಂದು.

ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ ವಿಜ್ಞಾನ, ಜೈವಿಕ ತಂತ್ರಜ್ಞಾನ, ವೈದ್ಯವಿಜ್ಞಾನ - ಹೀಗೆ ಅನೇಕ ಕ್ಷೇತ್ರಗಳಲ್ಲಿ ಇಂದು ಭಾರತೀಯ ವೈಜ್ಞಾನಿಕರು ಅಪಾರ ಪ್ರಮಾಣದ ಸಾಧನೆ ಮಾಡಿದ್ದಾರೆ. ವಿಜ್ಞಾನದ ಬೆಳೆವಣಿಗೆ ಇನ್ನೂ ಪ್ರಾರಂಭಿಕ ಹಂತದಲ್ಲಿದ್ದ ಸ್ವಾತಂತ್ರ್ಯಪೂರ್ವದ ದಿನಗಳಿಂದ ಪ್ರಾರಂಭಿಸಿ ಇಂದಿನವರೆಗೆ ನಮ್ಮ ದೇಶ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿಯ ಪರಿಚಯವನ್ನು ಎಲ್ಲರಿಗೂ ಮಾಡಿಕೊಡುವುದು ಈ ಆಚರಣೆಯ ಇನ್ನೊಂದು ಆಶಯ.

ಪ್ರತೀ ವರ್ಷ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಚಟುವಟಿಕೆಗಳನ್ನು ಒಂದು ನಿರ್ದಿಷ್ಟ ವಿಷಯದ ಸುತ್ತ ಆಯೋಜಿಸಲಾಗುತ್ತದೆ. ಜೀವವೈವಿಧ್ಯ - ಇದು ಈ ವರ್ಷದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಗಾಗಿ ಆಯ್ಕೆಯಾಗಿರುವ ವಿಷಯ. ಉಪನ್ಯಾಸಗಳು, ಚರ್ಚಾಸ್ಪರ್ಧೆಗಳು, ರಸಪ್ರಶ್ನೆ, ವಸ್ತುಪ್ರದರ್ಶನ - ಹೀಗೆ ಈ ಈ ವಿಷಯಕ್ಕೆ ಸಂಬಂಧಪಟ್ಟ ಅನೇಕ ಚಟುವಟಿಕೆಗಳನ್ನು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಂದರ್ಭದಲ್ಲಿ ದೇಶದ ವಿವಿಧೆಡೆಗಳಲ್ಲಿ ಹಮ್ಮಿಕೊಳ್ಳಲಾಗಿದೆ.

ಗುರುವಾರ, ಜನವರಿ 14, 2010

ಸಂಕ್ರಾಂತಿ ಮತ್ತು ಸೂರ್ಯಗ್ರಹಣ

ಟಿ ಜಿ ಶ್ರೀನಿಧಿ

ಸಮೃದ್ಧಿಯ ಸಂಕೇತವಾದ ಸಂಕ್ರಾಂತಿ ಹಬ್ಬವನ್ನು ಜನವರಿ ೧೪ರಂದು ಭಾರತದೆಲ್ಲೆಡೆ ವಿವಿಧ ಹೆಸರುಗಳಿಂದ ಆಚರಿಸಲಾಗುತ್ತದೆ. ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡುವ ಹಬ್ಬ ಈ ಸಂಕ್ರಾಂತಿ. ಇದು ಬೆಳೆ ಕಟಾವಿನ ಕಾಲವೂ ಹೌದು.

ಪ್ರತಿ ವರ್ಷ ಡಿಸೆಂಬರ್ ೨೧-೨೨ರ ವೇಳೆಗೆ ಭೂಮಿಯ ಮಕರಸಂಕ್ರಾಂತಿ ವೃತ್ತದ ಮೇಲೆ ಸೂರ್ಯ ನೇರವಾಗಿ ಪ್ರಕಾಶಿಸಲು ಪ್ರಾರಂಭಿಸುತ್ತಾನೆ. ಸೂರ್ಯನ ಉತ್ತರದಿಕ್ಕಿನ ಪ್ರಯಾಣದ ಆರಂಭವನ್ನು ಸೂಚಿಸುವ, ಹಗಲಿನ ಸಮಯ ಹೆಚ್ಚುತ್ತಾ ಹೋಗುವ ಈ ಕಾಲವೇ ಉತ್ತರಾಯಣ. ಹಿಂದೆ ಉತ್ತರಾಯಣ ಸಂಕ್ರಾಂತಿ ಹಬ್ಬದ ದಿನವೇ ಪ್ರಾರಂಭವಾಗುತ್ತಿತ್ತು. ಆದರೆ ಸಮಯ ಸರಿದಂತೆ ಭೂಮಿಯ ಚಲನೆಯಲ್ಲಿ ಉಂಟಾದ ಬದಲಾವಣೆಗಳಿಂದ ಉತ್ತರಾಯಣ ಡಿಸೆಂಬರ್‌ನಲ್ಲೇ ಪ್ರಾರಂಭವಾಗುತ್ತದೆ. ಆದರೂ ನಾವು ಮಾತ್ರ ಸಂಕ್ರಾಂತಿಯನ್ನು ಜನವರಿ ೧೪ರಂದೇ ಆಚರಿಸುತ್ತೇವೆ.

ಸಂಕ್ರಾಂತಿಯ ಮರುದಿನ ಕಂಕಣ ಸೂರ್ಯಗ್ರಹಣ ಈ ವರ್ಷದ ವಿಶೇಷ.

ಭೂಮಿಗೂ ಸೂರ್ಯನಿಗೂ ನಡುವೆ ಚಂದ್ರ ಅಡ್ಡ ಬಂದಾಗ ಸೂರ್ಯಗ್ರಹಣ ಆಗುತ್ತದೆ ಎಂದು ನಮಗೆಲ್ಲ ಗೊತ್ತು. ಗ್ರಹಣದ ಸಂದರ್ಭದಲ್ಲಿ ಚಂದ್ರ ಸೂರ್ಯನನ್ನು ಪೂರ್ತಿಯಾಗಿ ಮರೆಮಾಡಿದರೆ ಆಗ ಅದು ಪೂರ್ಣ ಸೂರ್ಯಗ್ರಹಣ ಆಗುತ್ತದೆ. ಆದರೆ ಈ ಬಾರಿ ಹಾಗಲ್ಲ. ಚಂದ್ರ ಸೂರ್ಯನಿಗೆ ಅಡ್ಡವಾಗಿ ಬಂದರೂ ಸೂರ್ಯ ಸಂಪೂರ್ಣವಾಗಿ ಮರೆಯಾಗುವುದಿಲ್ಲ. ಸೂರ್ಯನ ಬಿಂಬ ಬಳೆಯ ಹಾಗೆ ಬೆಳಗುತ್ತದೆ. ಹಾಗಾಗಿಯೇ ಇದು ಕಂಕಣ ಗ್ರಹಣ.

ಗ್ರಹಣ ಒಂದು ನೈಸರ್ಗಿಕ ಘಟನೆ, ಅದನ್ನು ನೋಡಿ ಆನಂದಿಸಬೇಕೇ ಹೊರತು ಹೆದರಿ ಮನೆಯೊಳಗೆ ಅವಿತಿರುವುದರಲ್ಲಿ ಯಾವುದೇ ಅರ್ಥವಿಲ್ಲ. ಆದರೆ ನೆನಪಿಡಿ, ಸೂರ್ಯನನ್ನು ಬರಿಗಣ್ಣಿನಿಂದ ನೋಡುವುದು ಅಪಾಯಕಾರಿ. ಗ್ರಹಣ ನೋಡಲೆಂದೇ ತಯಾರಿಸಿರುವ ವಿಶೇಷ ಕನ್ನಡಕ ಅಥವಾ ವಿಶಿಷ್ಟ ಕ್ಯಾಮೆರಾಗಳನ್ನು ಬಳಸಿ ಮಾತ್ರವೇ ಸೂರ್ಯಗ್ರಹಣ ನೋಡಬಹುದು.

ಚಿಣ್ಣರ ಚೇತನ ಗೋಡೆ ಪತ್ರಿಕೆಯ ಜನವರಿ ೨೦೧೦ ಸಂಚಿಕೆಯಲ್ಲಿ ಪ್ರಕಟವಾದ ಲೇಖನ

ಶನಿವಾರ, ಜನವರಿ 2, 2010

ಬಾನಂಗಳದತ್ತ ಕಣ್ಣುಗಳು

ದೂರದರ್ಶಕದ ಆವಿಷ್ಕಾರವಾಗಿ ನಾನ್ನೂರು ವರ್ಷಗಳು ಪೂರ್ಣವಾದ ಸಂದರ್ಭದಲ್ಲಿ ಯುರೋಪಿಯನ್ ಸ್ಪೇಸ್ ಏಜೆನ್ಸಿ, ಇಂಟರ್‌ನ್ಯಾಷನಲ್ ಆಸ್ಟ್ರನಾಮಿಕಲ್ ಯೂನಿಯನ್ ಹಾಗೂ ಯುರೋಪಿಯನ್ ಸದರ್ನ್ ಅಬ್ಸರ್ವೇಟರಿಗಳ ಸಹಭಾಗಿತ್ವದಲ್ಲಿ 'Eyes on the Skies' ಎಂಬ ಚಲನಚಿತ್ರವನ್ನು ಸಿದ್ಧಪಡಿಸಲಾಗಿದೆ. ಒಟ್ಟು ಮೂವತ್ತಮೂರು ಭಾಷೆಗಳ ಸಬ್-ಟೈಟಲ್ ಹೊಂದಿರುವ ಇದು ಅಂತರರಾಷ್ಟ್ರೀಯ ಖಗೋಳವಿಜ್ಞಾನ ವರ್ಷದ ಅಧಿಕೃತ ಚಲನಚಿತ್ರವೂ ಹೌದು.

ಕನ್ನಡ ಸಬ್‌ಟೈಟಲ್ ಹೊಂದಿರುವ ಈ ಚಲನಚಿತ್ರದ ಡಿವಿಡಿ ಕಳೆದ ನವೆಂಬರ್‌ನಿಂದ  ಬೆಂಗಳೂರಿನ ಜವಾಹರ್‌ಲಾಲ್ ಪ್ಲಾನೆಟೇರಿಯಂ ಮೂಲಕ ಲಭ್ಯವಿದೆ. ’ಬಾನಂಗಳದತ್ತ ಕಣ್ಣುಗಳು’ ಎಂಬ ಹೆಸರಿನ ಈ ಚಲನಚಿತ್ರ ದೂರದರ್ಶಕದ ಇತಿಹಾಸ ಹಾಗೂ ಅದು ಬೆಳೆದುಬಂದ ದಾರಿಯನ್ನು ವಿವರಿಸುತ್ತದೆ. ಏಳು ಅಧ್ಯಾಯಗಳಿರುವ, ಒಟ್ಟು ಅರುವತ್ತು ನಿಮಿಷದ ಈ ಚಲನಚಿತ್ರದ ಬಗೆಗಿನ ಹೆಚ್ಚಿನ ವಿವರಗಳಿಗೆ ತಾರಾಲಯದ ಜಾಲತಾಣ ನೋಡಿ.  'Eyes on the Skies'ನ ಜಾಲತಾಣ ಇಲ್ಲಿದೆ.

ಶುಕ್ರವಾರ, ಜನವರಿ 1, 2010

ಬಾಹ್ಯಾಕಾಶಕ್ಕೆ ಟೂರು!

ಟಿ ಜಿ ಶ್ರೀನಿಧಿ
 

ಬಾಹ್ಯಾಕಾಶಕ್ಕೆ ಪ್ರವಾಸ  ಹೋಗುವ ಆಲೋಚನೆ ಹೊಸದೇನಲ್ಲ. ಹಿಂದೆ  ಬರಿಯ ಕತೆ-ಕಾದಂಬರಿಗಳಿಗಷ್ಟೇ ಸೀಮಿತವಾಗಿದ್ದ ಈ ಕನಸು ನನಸಾಗಿಯೇ ಹತ್ತು ವರ್ಷಗಳ  ಮೇಲಾಗಿದೆ. ಆದರೆ ಈ ಪ್ರವಾಸದ ವೆಚ್ಚ ಈವರೆಗೂ ಸುಮಾರು ನೂರು ಕೋಟಿ ರೂಪಾಯಿಗಳ ಆಸುಪಾಸಿನಲ್ಲಿರುವುದರಿಂದ ನಮ್ಮಂಥ ಸಾಮಾನ್ಯರು ಬಾಹ್ಯಾಕಾಶ ಪ್ರವಾಸದ ಬಗ್ಗೆ ಯೋಚಿಸುವುದು ಮಾತ್ರ ಸಾಧ್ಯವಾಗಿರಲಿಲ್ಲ.

ಪ್ರಸ್ತುತ ಕೋಟಿಗಳಲ್ಲಿರುವ ಟಿಕೇಟಿನ ಬೆಲೆ ಕನಿಷ್ಠಪಕ್ಷ ಲಕ್ಷಗಳಿಗಾದರೂ ಇಳಿದರೆ  ಮಾತ್ರ ಜನಸಾಮಾನ್ಯರು ಬಾಹ್ಯಾಕಾಶಕ್ಕೆ ಹೋಗಿಬರುವುದು ಸಾಧ್ಯ ಎಂದು ಅರಿತುಕೊಂಡ ಅನೇಕ ಸಂಸ್ಥೆಗಳು ಈ ನಿಟ್ಟಿನಲ್ಲಿ ಬಹಳವರ್ಷಗಳಿಂದ ಕೆಲಸಮಾಡುತ್ತಿವೆ.

ಇಂಥ ಸಂಸ್ಥೆಗಳಲ್ಲೊಂದು ಅಮೆರಿಕಾದ ಸ್ಕೇಲ್ಡ್ ಕಾಂಪೋಸಿಟ್ಸ್. ಅಂತರಿಕ್ಷಯಾತ್ರೆಯನ್ನು  ಸುಲಭವಾಗಿಸುವ ನಿಟ್ಟಿನಲ್ಲಿ ಅತ್ಯುತ್ತಮ  ಪ್ರಯತ್ನಕ್ಕಾಗಿ ಮೀಸಲಾಗಿದ್ದ ಒಂದು ಕೋಟಿ ಡಾಲರ್  ಮೊತ್ತದ ’ಎಕ್ಸ್ ಪ್ರೈಜ್’ ಬಹುಮಾನ ಗೆದ್ದ ಸಂಸ್ಥೆ ಇದು. ಈ ಸಂಸ್ಥೆ ತಯಾರಿಸಿದ ’ಸ್ಪೇಸ್ ಶಿಪ್ ಒನ್’ ಎಂಬ ಅಂತರಿಕ್ಷವಾಹನ ೨೦೦೪ರಲ್ಲಿ ಯಶಸ್ವಿ ಯಾನ ಕೈಗೊಂಡು ಭೂಮಿಯ ಮೇಲಿಂದ ನೂರಾ ಹತ್ತು ಕಿಲೋಮೀಟರುಗಳಷ್ಟು ಎತ್ತರದವರೆಗೆ ಹೋಗಿಬಂದಿತ್ತು.

ಅಂತರಿಕ್ಷ ಪ್ರವಾಸದ  ಕಮರ್ಷಿಯಲ್ ಸಾಧ್ಯಾಸಾಧ್ಯತೆಗಳ ಬಗ್ಗೆ ಗಂಭೀರ ಚಿಂತನೆ ನಡೆದದ್ದೇ ಆಗ. ಎಲ್ಲ ಸರಿಯಾಗಿ ನಡೆದರೆ ಇದೆಷ್ಟು ದೊಡ್ಡ ಪ್ರಮಾಣದ ಮಾರುಕಟ್ಟೆಯಾಗಬಲ್ಲದು ಎಂದು ಅರಿತುಕೊಂಡ ವರ್ಜಿನ್ ಸಂಸ್ಥೆ ತಕ್ಷಣವೇ ಸ್ಕೇಲ್ಡ್ ಕಾಂಪೋಸಿಟ್ಸ್ ಜೊತೆಗೆ ಕೈಗೂಡಿಸಿತು; ವರ್ಜಿನ್ ಗೆಲಾಕ್ಟಿಕ್ ಎಂಬ ಸಂಸ್ಥೆಯನ್ನೂ ಹುಟ್ಟುಹಾಕಿತು.

ಈ ಸಹಭಾಗಿತ್ವದ ಫಲವಾಗಿ ಸ್ಪೇಸ್ ಶಿಪ್ ಒನ್‌ನ ಸುಧಾರಿತ ಆವೃತ್ತಿ  ’ವಿಎಸ್‌ಎಸ್ ಎಂಟರ್‌ಪ್ರೈಸ್’ ಎಂಬ ಹೆಸರಿನಲ್ಲಿ ಇದೀಗ  ಸಿದ್ಧವಾಗಿದೆ. ಈ ಅಂತರಿಕ್ಷವಾಹನ ಬಳಸಿ ಆಸಕ್ತರಿಗೆ  ಅಂತರಿಕ್ಷಕ್ಕೆ ಹೋಗಿಬರುವ ಅವಕಾಶ ಕಲ್ಪಿಸುವುದು  ವರ್ಜಿನ್ ಸಂಸ್ಥೆಯ ಮುಖ್ಯಸ್ಥ ರಿಚರ್ಡ್  ಬ್ರಾನ್ಸನ್ ಗುರಿ.

ಮುಂದಿನ ಹದಿನೆಂಟು ತಿಂಗಳುಗಳ ಕಾಲ ವಿವಿಧ ಪರೀಕ್ಷೆಗಳಿಗೆ ಒಳಪಡಲಿರುವ ’ವಿಎಸ್‌ಎಸ್ ಎಂಟರ್‌ಪ್ರೈಸ್’ ಆನಂತರ ತನ್ನ ವಾಣಿಜ್ಯ ಸೇವೆ ಪ್ರಾರಂಭಿಸಲಿದೆ. ಅಷ್ಟು ಹೊತ್ತಿಗೆ ಅದರ ಹಾರಾಟಕ್ಕೆ ಬೇಕಾದ ಸ್ಪೇಸ್‌ಪೋರ್ಟ್ ಕೂಡ ಸಿದ್ಧವಾಗಲಿದೆ.

ಈ ಅಂತರಿಕ್ಷ ವಾಹನದಲ್ಲಿ  ಆರು ಜನ ಪ್ರವಾಸಿಗರ ಜೊತೆಗೆ ಇಬ್ಬರು  ಸಿಬ್ಬಂದಿ ಪ್ರಯಾಣಿಸಬಹುದು. ಸುಮಾರು ಹದಿನೈದು ಕಿಲೋಮೀಟರ್ ಎತ್ತರದವರೆಗೆ ’ವೈಟ್ ನೈಟ್’ ಎಂಬ ಮಾತೃನೌಕೆಯ ಬೆನ್ನೇರಿ ಸವಾರಿಮಾಡುವ ಈ ಅಂತರಿಕ್ಷವಾಹನ ಅಲ್ಲಿ ಮಾತೃನೌಕೆಯಿಂದ ಬೇರ್ಪಟ್ಟು ಗಂಟೆಗೆ ನಾಲ್ಕುಸಾವಿರ ಕಿಲೋಮೀಟರ್ ವೇಗದಲ್ಲಿ ಮೇಲ್ಮುಖವಾಗಿ ಚಲಿಸಲಿದೆ; ಕೇವಲ ಒಂದೂವರೆ ನಿಮಿಷದಲ್ಲಿ ತನ್ನ ಪ್ರಯಾಣಿಕರನ್ನು ೧೧೦ ಕಿಲೋಮೀಟರ್ ಎತ್ತರಕ್ಕೆ ಕೊಂಡೊಯ್ದು ಭಾರರಹಿತ ಸ್ಥಿತಿಯ ಅನುಭವ ನೀಡಲಿದೆ.

ಕ್ಷಣಮಾತ್ರದ್ದಾದರೂ ಅಪೂರ್ವವಾದ  ಈ ಅನುಭವವನ್ನು ತಮ್ಮದಾಗಿಸಿಕೊಳ್ಳಲು  ಕನಿಷ್ಠ ೩೦೦ ಜನ ಈಗಾಗಲೇ ನೋಂದಾಯಿಸಿಕೊಂಡಿದ್ದಾರಂತೆ.  ವರ್ಜಿನ್ ಸಂಸ್ಥೆ ಅವರಿಂದ ತಲಾ ಸುಮಾರು ಒಂದು ಕೋಟಿ ರೂಪಾಯಿ ಶುಲ್ಕ ಪಡೆಯುವ ನಿರೀಕ್ಷೆಯಿದೆ.

ಡಿಸೆಂಬರ್ ೨೪, ೨೦೦೯ರ ಸುಧಾದಲ್ಲಿ ಪ್ರಕಟವಾದ ಲೇಖನ
badge