ಶನಿವಾರ, ಏಪ್ರಿಲ್ 26, 2014

ಇಜ್ಞಾನ ಎಂಬ ಏಳು ವರ್ಷಗಳ ಪಯಣ...

ಏಳು ವರ್ಷದ ವಿಶೇಷ: ಉಚಿತ ಇ-ಪುಸ್ತಕ 'ಸಪ್ತವರ್ಣ' ಓದಲು ಇಲ್ಲಿ ಕ್ಲಿಕ್ ಮಾಡಿ!


ಇಜ್ಞಾನ ಡಾಟ್ ಕಾಮ್ ಕತೆ ಶುರುವಾದದ್ದು ಏಳು ವರ್ಷಗಳ ಹಿಂದೆ, ೨೦೦೭ರ ಏಪ್ರಿಲ್‌ನಲ್ಲಿ. ಒಮ್ಮೆ ಹೀಗೆಯೇ ಮಾತನಾಡುತ್ತಿದ್ದಾಗ ವಿಜ್ಞಾನದ ಬರಹಗಳಿಗೇ ಒಂದು ಬ್ಲಾಗ್ ಮಾಡಬಹುದಲ್ಲ ಎಂದು ಐಡಿಯಾ ಕೊಟ್ಟವರು ಲೇಖಕ ಶ್ರೀ ಕೊಳ್ಳೇಗಾಲ ಶರ್ಮ. ಈ ಐಡಿಯಾ ಕುರಿತು ಯೋಚಿಸುತ್ತ ಬ್ಲಾಗಿನ ಹೆಸರೇನಿರಬೇಕು ಎಂದು ಕೇಳಿದಾಗ 'ಇಜ್ಞಾನ'ವೆಂಬ ನಾಮಕರಣ ಮಾಡಿದ್ದು ಗೆಳೆಯ ನಂದಕಿಶೋರ್.

ಅಲ್ಲಿಂದ ಇಲ್ಲಿಯವರೆಗೆ, ಕಳೆದ ಏಳು ವರ್ಷಗಳ ಇಜ್ಞಾನದ ಹಾದಿಯಲ್ಲಿ ಹಲವು ಮೈಲಿಗಲ್ಲುಗಳು ಹಾದುಹೋಗಿವೆ: ಇಜ್ಞಾನ 'ಡಾಟ್ ಕಾಮ್' ಆದದ್ದು, ವಿದ್ಯುನ್ಮಾನ ಪತ್ರಿಕೆಯೊಂದನ್ನು ಪ್ರಾಯೋಗಿಕವಾಗಿ ಪ್ರಕಟಿಸಿದ್ದು, 'ತಿನ್ನಲಾಗದ ಬಿಸ್ಕತ್ತು...' ಕೃತಿಯ ಮೂಲಕ ಪ್ರಕಾಶನವನ್ನೂ ಪ್ರಯತ್ನಿಸಿದ್ದು, ಓದುಗರಿಗಾಗಿ ಒಂದೆರಡು ಸ್ಪರ್ಧೆ ಏರ್ಪಡಿಸಿದ್ದು, 'ಶಾಪಿಂಗ್ ಸಂಗಾತಿ' ಪ್ರಾರಂಭಿಸಿದ್ದು... ಹೀಗೆ.

ಇಷ್ಟೆಲ್ಲ ಪ್ರಯತ್ನಗಳಲ್ಲಿ ಇಜ್ಞಾನ ಡಾಟ್ ಕಾಮ್ ಜೊತೆಯಲ್ಲಿ ನಿಂತವರು ಅನೇಕ ಮಂದಿ. ಈ ಅವಧಿಯಲ್ಲಿ ಡಾ. ಪಿ. ಎಸ್. ಶಂಕರ್, ಶ್ರೀ ನಾಗೇಶ ಹೆಗಡೆ, ಶ್ರೀ ಟಿ. ಆರ್. ಅನಂತರಾಮು, ಡಾ. ಯು. ಬಿ. ಪವನಜ, ಶ್ರೀ ಶ್ರೀವತ್ಸ ಜೋಶಿ, ಶ್ರೀ ಬೇಳೂರು ಸುದರ್ಶನ, ಶ್ರೀ ಕೊಳ್ಳೇಗಾಲ ಶರ್ಮ, ಶ್ರೀ ಟಿ. ಎಸ್. ಗೋಪಾಲ್ ಸೇರಿದಂತೆ ಅನೇಕ ಮಹನೀಯರ ಲೇಖನಗಳನ್ನು ಪ್ರಕಟಿಸುವ - ಹಲವು ಲೇಖಕರ ಪುಸ್ತಕಗಳನ್ನು ಪರಿಚಯಿಸುವ ಅವಕಾಶ ಇಜ್ಞಾನಕ್ಕೆ ದೊರಕಿತು. ಇಜ್ಞಾನದ ಪ್ರಯೋಗಗಳಿಗೆ ಓದುಗರ - ಪತ್ರಿಕೆಗಳ - ಕನ್ನಡ ಜಾಲತಾಣಗಳ ಬೆಂಬಲವೂ ಒದಗಿಬಂತು.

ಇಂದು, ಇಜ್ಞಾನ ಪ್ರಾರಂಭವಾಗಿ ಏಳು ವರ್ಷ. ನಮ್ಮ ಈ ಪಯಣದಲ್ಲಿ ನಿಮ್ಮ ಬೆಂಬಲ ಸದಾ ನಮ್ಮ ಜೊತೆಯಲ್ಲಿದೆ, ಮುಂದೆಯೂ ಹಾಗೆಯೇ ಇರಲಿ.

ಹುಟ್ಟುಹಬ್ಬದ ಈ ಖುಷಿಯಲ್ಲಿ ನಿಮಗೆ ನಮ್ಮ ಉಡುಗೊರೆಯಾಗಿ 'ಸಪ್ತವರ್ಣ' ಎಂಬ ಇ-ಪುಸ್ತಕವನ್ನು ಉಚಿತವಾಗಿ ನೀಡುತ್ತಿದ್ದೇವೆ. ಕಳೆದ ಏಳು ವರ್ಷಗಳಲ್ಲಿ ಹೆಚ್ಚು ಜನರನ್ನು ತಲುಪಿದ ಏಳು ಲೇಖನಗಳ ಈ ಸಂಕಲನವನ್ನು ಇಂದು ಪ್ರಕಟಿಸಲು ನಾವು ಹರ್ಷಿಸುತ್ತೇವೆ.

ಈ ಪುಸ್ತಕದಲ್ಲಿ ಪ್ರಕಟಿಸಲು ತಮ್ಮ ಅನಿಸಿಕೆಗಳನ್ನು ನೀಡಿರುವ ಶ್ರೀ ವಸುಧೇಂದ್ರ, ಶ್ರೀ ಬೇಳೂರು ಸುದರ್ಶನ, ಶ್ರೀ ನಂದಕಿಶೋರ್ ಹಾಗೂ ಶ್ರೀ ವಿಕಾಸ್ ಹೆಗಡೆಯವರಿಗೆ ನಮ್ಮ ವಿಶೇಷ ಕೃತಜ್ಞತೆಗಳು.

ನಿಮ್ಮ ಪ್ರೋತ್ಸಾಹಕ್ಕೆ ಮತ್ತೊಮ್ಮೆ ಧನ್ಯವಾದಗಳು!

ಶುಕ್ರವಾರ, ಏಪ್ರಿಲ್ 25, 2014

ಸಾಫ್ಟ್‌ವೇರ್ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್

ಟಿ. ಜಿ. ಶ್ರೀನಿಧಿ

ತಂತ್ರಾಂಶವನ್ನು ಸಿದ್ಧಪಡಿಸುವ ಕೆಲಸವೆಂದರೆ ಬರಿಯ ಪ್ರೋಗ್ರಾಮಿಂಗ್ ಅಷ್ಟೇ ಅಲ್ಲವೆಂದು ಸಾಫ್ಟ್‌ವೇರ್ ಇಂಜಿನಿಯರಿಂಗ್ ಪರಿಕಲ್ಪನೆ ನಮಗೆ ತಿಳಿಸಿಕೊಡುತ್ತದೆ. ತಂತ್ರಾಂಶ ಅಭಿವೃದ್ಧಿಯ ಈ ಪೂರ್ಣ ಪ್ರಕ್ರಿಯೆ ಸಾಕಷ್ಟು ಕ್ಲಿಷ್ಟವೇ ಸರಿ.

ಮಹತ್ವದ ಕೆಲಸಗಳಲ್ಲಿ ಬಳಕೆಗೆಂದು ತಂತ್ರಾಂಶಗಳನ್ನು ರೂಪಿಸುವಾಗ ಕೆಲಸದ ಅಗಾಧತೆ, ಸಂಕೀರ್ಣ ವಿನ್ಯಾಸ ಇವೆಲ್ಲ ಸೇರಿ ತಂತ್ರಾಂಶ ಅಭಿವೃದ್ಧಿಯ ಕೆಲಸ ಇನ್ನಷ್ಟು ಕ್ಲಿಷ್ಟವಾಗಿಬಿಡುತ್ತದೆ. ನಿಗದಿತ ಅವಧಿಯೊಳಗೆ ನಿರ್ದಿಷ್ಟ ವೆಚ್ಚದಲ್ಲಿ ಬಳಕೆದಾರರ ಅಗತ್ಯಗಳಿಗೆ ಸರಿಹೊಂದುವಂತಹ ತಂತ್ರಾಂಶವನ್ನು ಅಭಿವೃದ್ಧಿಪಡಿಸಬೇಕಾದ ಸವಾಲನ್ನು ಎದುರಿಸುವ ಈ ಕೆಲಸ ಸುಲಭವೇನಲ್ಲ.

ಇಂತಹ ಸನ್ನಿವೇಶಗಳಲ್ಲಿ ತಂತ್ರಾಂಶ ಅಭಿವೃದ್ಧಿಯ ಕೆಲಸ ಒಂದು ನಿರ್ದಿಷ್ಟ ಯೋಜನೆಗೆ ಅನುಗುಣವಾಗಿ ನಡೆದರೆ ಮಾತ್ರ ಅದು ಯಶಸ್ವಿಯಾಗುವುದು ಸಾಧ್ಯ. ಹಾಗೊಂದು ಯೋಜನೆಯನ್ನು ರೂಪಿಸಿ ಅದರಂತೆ ತಂತ್ರಾಂಶ ಅಭಿವೃದ್ಧಿಯ ಕೆಲಸ ಕೈಗೊಳ್ಳಲು ನೆರವಾಗುವುದು 'ಸಾಫ್ಟ್‌ವೇರ್ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್' ಎಂಬ ಪರಿಕಲ್ಪನೆ.

ಗುರುವಾರ, ಏಪ್ರಿಲ್ 24, 2014

ಆಕಾಶದಲ್ಲೊ೦ದು ಮನೆ

ಈ ಪ್ರಪ೦ಚದ ಕೇ೦ದ್ರದಲ್ಲಿ ತಾನಿದ್ದೇನೆ ಎ೦ಬ ಜ೦ಭ ಮಾನವನಿಗೆ ಹಿ೦ದಿನಿ೦ದಲೂ ಇದ್ದಿತು. ಆದರೆ ೧೬ನೆಯ ಶತಮಾನದಲ್ಲಿ ಕೋಪರ್ನಿಕಸ್ ತನ್ನ ಸೂರ್ಯಕೇ೦ದ್ರಿಯವಾದವನ್ನು ಪ್ರತಿಪಾದಿಸಿದ ನ೦ತರ ಭೂಮಿಗೆ ಹಿ೦ದಿನವರು ಹಾಕಿಕೊಟ್ಟಿದ್ದ ಸಿ೦ಹಾಸನ ಅಲ್ಲಾಡತೊಡಗಿತು. ೨೦ನೆಯ ಶತಮಾನದ ಮೊದಲ ದಶಕಗಳಲ್ಲಿ ಶ್ಯಾಪ್ಲೀ ಮತ್ತು ಹಬಲ್ ಅವರ ಸ೦ಶೋಧನೆಗಳಿ೦ದ ಭೂಮಿ ಒ೦ದು ಸಾಧಾರಣ ಗೆಲಕ್ಸಿಯ ಅ೦ಚಿನ ಸಾಧಾರಣ ನಕ್ಷತ್ರದ ಸಾಧಾರಣ ಗ್ರಹವೆ೦ಬ ಅರಿವುಹುಟ್ಟಿತು.

ಇದರ ಪರಿಣಾಮವಾಗಿ ಈ ಪ್ರಪ೦ಚದಲ್ಲಿ ನಾನು ಒಬ್ಬನೇ ಇದ್ದೇನೆಯೋ ಎನ್ನುವ ಅನುಮಾನ ಮನುಷ್ಯನಲ್ಲಿ ಮೂಡಿತು. ಹಿ೦ದಿನ ಶತಮಾನದ ಅನೇಕ ಆವಿಷ್ಕಾರಗಳ ನ೦ತರ ಎಲ್ಲೋ ಆಚೆ ನಮ್ಮ ಭೂಮಿಯ ತರಹವೇ ಗ್ರಹಗಳು ಇರಬಹುದು ಮತ್ತು ನಮ್ಮ೦ತೆಯೋ ಅಥವಾ ಇನ್ನು ಯಾವ ರೂಪದಲ್ಲೋ ಜನರು ಇರಬಹುದು ಎನ್ನುವ ಊಹೆಗೆ ಹೆಚ್ಚಿನ ಬಲ ಸಿಗುತ್ತಿದೆ. ಇದಕ್ಕೆ ಸ೦ಬ೦ಧ ಪಟ್ಟ೦ತೆ ಅನ್ಯಗ್ರಹ ಜೀವಿಗಳು, ಹಾರಾಡುವ ತಟ್ಟೆಗಳು ಇತ್ಯಾದಿ ವರದಿಗಳು ಪತ್ರಿಕೆಗಳಲ್ಲಿ ಬರುತಲೇ ಇರುತ್ತವೆ; ಅವುಗಳ ಬಗ್ಗೆ ಅನೇಕ ವೈಜ್ಞಾನಿಕ ಕಥಾ ಕಾದ೦ಬರಿಗಳು ರಚಿಸಲ್ಪಟ್ಟಿರುವುದಲ್ಲದೆ ಚಲನಚಿತ್ರಗಳೂ ಮನುಷ್ಯನ ಕುತೂಹಲವನ್ನು ಹೆಚ್ಚಿಸಿವೆ. ಹಾಗಾಗಿಯೇ ಈ ವಿಷಯಗಳು ವಿಜ್ಞಾನಿಗಳನ್ನಲ್ಲದೆ ಸಾಮಾನ್ಯ ಜನತೆಯನ್ನೂ ತಮ್ಮತ್ತ ಸೆಳೆಯುತ್ತವೆ.

ಈ ವಿಷಯದ ಕುರಿತು ಗಮನಹರಿಸುವ ಹೊಸ ಪುಸ್ತಕವೊಂದು ಇದೀಗ ಮಾರುಕಟ್ಟೆಯಲ್ಲಿದೆ.

ಶುಕ್ರವಾರ, ಏಪ್ರಿಲ್ 18, 2014

ಕಮೆಂಟ್ ಮಾಡಿ!

ಟಿ. ಜಿ. ಶ್ರೀನಿಧಿ

ಪ್ರೋಗ್ರಾಮಿಂಗ್ ಮುಗಿದ ತಕ್ಷಣ ತಂತ್ರಾಂಶ ಅಭಿವೃದ್ಧಿಯ ಕೆಲಸವೇನೂ ಮುಗಿಯುವುದಿಲ್ಲ. ತಂತ್ರಾಂಶ ಪರೀಕ್ಷೆಯ (ಟೆಸ್ಟಿಂಗ್) ಕಾರಣದಿಂದಲೋ, ನಂತರದ ದಿನಗಳಲ್ಲಿ ನಿರ್ವಹಣೆಗಾಗಿಯೋ (ಮೇಂಟೆನೆನ್ಸ್) ಪ್ರೋಗ್ರಾಮುಗಳನ್ನು ಬದಲಾಯಿಸುವ ಕೆಲಸ ನಡೆದೇ ಇರುತ್ತದೆ. ಈ ಪ್ರಕ್ರಿಯೆ ಸಾಕಷ್ಟು ದೀರ್ಘಕಾಲ ನಡೆಯುವಂಥದ್ದು: ಏಕೆಂದರೆ ತಂತ್ರಾಂಶಗಳು ದಶಕಗಳ ಕಾಲ ಬಳಕೆಯಲ್ಲಿ ಉಳಿದುಕೊಳ್ಳುವುದು ಕಂಪ್ಯೂಟರ್ ಪ್ರಪಂಚದಲ್ಲಿ ಅಪರೂಪದ ಸಂಗತಿಯೇನಲ್ಲ.

ಇಷ್ಟೆಲ್ಲ ದೀರ್ಘಕಾಲ ತಂತ್ರಾಂಶಗಳು ಬಳಕೆಯಾಗುತ್ತವೆ ಎಂದರೆ ಆ ಅವಧಿಯಲ್ಲಿ ಯಾವಾಗ ಬೇಕಾದರೂ ತಂತ್ರಾಂಶದಲ್ಲಿನ ಪ್ರೋಗ್ರಾಮುಗಳನ್ನು ಬದಲಿಸಬೇಕಾಗಿ ಬರಬಹುದು. ಆದರೆ ಇಷ್ಟೆಲ್ಲ ದೀರ್ಘಕಾಲ ಒಬ್ಬನೇ ವ್ಯಕ್ತಿ ಆ ಬದಲಾವಣೆಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಾನೆ ಎನ್ನುವಂತಿಲ್ಲ.

ಅರೆ, ಪ್ರೋಗ್ರಾಮನ್ನು ಬದಲಿಸಬೇಕಾದ ಅಗತ್ಯಕ್ಕೂ ಆ ಬದಲಾವಣೆಗಳನ್ನು ಯಾರು ಮಾಡುತ್ತಾರೆ ಎನ್ನುವುದಕ್ಕೂ ಏನು ಸಂಬಂಧ?

ಸಂಬಂಧ ಬಹಳ ಸರಳವಾದದ್ದು.

ಶನಿವಾರ, ಏಪ್ರಿಲ್ 12, 2014

ತಂತ್ರಾಂಶ ನಿರ್ವಹಣೆಯೂ ಬಹುಮುಖ್ಯ!

ಟಿ. ಜಿ. ಶ್ರೀನಿಧಿ

ಕಂಪ್ಯೂಟರ್ ವ್ಯವಸ್ಥೆಗಳೆಂದಮೇಲೆ ಅವುಗಳ ನಿರ್ವಹಣೆಗೂ ಸಾಕಷ್ಟು ಸಮಯ-ಹಣ ಬೇಕು ಎನ್ನುವ ವಿಷಯ ನಮಗೆ ಗೊತ್ತೇ ಇದೆ. ಆದರೆ ಕಂಪ್ಯೂಟರಿನ ನಿರ್ವಹಣೆಯೆಂದ ತಕ್ಷಣ ಹೆಚ್ಚಾಗಿ ನಮ್ಮ ಮನಸ್ಸಿಗೆ ಬರುವುದು ಯಂತ್ರಾಂಶದ (ಹಾರ್ಡ್‌ವೇರ್) ನಿರ್ವಹಣೆಯ ವಿಷಯವೇ. ಮೌಸ್ ಕೆಲಸಮಾಡುತ್ತಿಲ್ಲವೆಂದೋ ಮೋಡೆಮ್ ಕೆಟ್ಟಿದೆಯೆಂದೋ ಇನ್ನಾವುದೋ ಭಾಗ ಹಳೆಯದಾಗಿದೆಯೆಂದೋ ಸಾಕಷ್ಟು ಖರ್ಚುಮಾಡಿರುವ ವಿಷಯ ನಮ್ಮೆಲ್ಲರ ನೆನಪಿನಲ್ಲೂ ಇರುತ್ತದಲ್ಲ!

ಆದರೆ ನಿರ್ವಹಣೆ ಬೇಕಿರುವುದು ಕೇವಲ ಯಂತ್ರಾಂಶಕ್ಕೆ ಮಾತ್ರವಲ್ಲ, ನಾವು ಬರೆಯುವ ತಂತ್ರಾಂಶವನ್ನು (ಸಾಫ್ಟ್‌ವೇರ್) ನಿರ್ವಹಿಸುವುದೂ ಸಾಕಷ್ಟು ದೊಡ್ಡ ಕೆಲಸವೇ.

ಯಂತ್ರಾಂಶದಲ್ಲೇನೋ ಸರಿ, ಬೇಕಾದಷ್ಟು ಬಿಡಿಭಾಗಗಳಿರುತ್ತವೆ - ಉಪಯೋಗಿಸುತ್ತ ಹೋದಂತೆ ಹಾಳಾಗುವ ಸಾಧ್ಯತೆಯೂ ಇರುತ್ತದೆ. ಆದರೆ ತಂತ್ರಾಂಶದ ನಿರ್ವಹಣೆ ಎಂದರೇನು?

ಕೇಳಲು ವಿಚಿತ್ರವೆಂದು ತೋರಿದರೂ ತಂತ್ರಾಂಶಕ್ಕೆ ನಿರ್ವಹಣೆಯ (ಮೇಂಟೆನೆನ್ಸ್) ಅಗತ್ಯ ಬರುವುದು ಅಪರೂಪವೇನಲ್ಲ.

ಶುಕ್ರವಾರ, ಏಪ್ರಿಲ್ 4, 2014

ತಂತ್ರಜ್ಞಾನದ ಒಗ್ಗರಣೆ - ಅಕ್ಷರಗಳ ಚಿತ್ರಾನ್ನ!

ಟಿ. ಜಿ. ಶ್ರೀನಿಧಿ


ಹೊಸ ಇಮೇಲ್ ಖಾತೆ ತೆರೆಯುವಾಗ, ಬ್ಲಾಗ್ ಬರಹಕ್ಕೆ ಕಮೆಂಟ್ ಮಾಡುವಾಗ, ಬ್ಯಾಂಕಿನ ಆನ್‌ಲೈನ್ ವ್ಯವಹಾರದಲ್ಲಿ, ಕಡೆಗೆ ರೈಲಿನ ಟಿಕೇಟು ಬುಕ್ ಮಾಡುವಾಗಲೂ ನಮ್ಮ ಮುಂದೆ ಅಕ್ಷರಗಳ ಕಲಸುಮೇಲೋಗರದಂತೆ ಕಾಣುವ ವಿಚಿತ್ರ ಚಿತ್ರವೊಂದು ಕಾಣಿಸಿಕೊಳ್ಳುತ್ತದೆ. ಜೊತೆಗೆ "ನೀವು ರೋಬಾಟ್ ಅಲ್ಲ ಎಂಬುದನ್ನು ಸಾಬೀತುಪಡಿಸಲು ಈ ಪಠ್ಯವನ್ನು ಟೈಪ್ ಮಾಡಿ" ಎಂಬ ಸಂದೇಶವೂ! ಆ ಅಕ್ಷರಗಳನ್ನೆಲ್ಲ ಸರಿಯಾಗಿ ಗುರುತಿಸಿ ಟೈಪಿಸಿದಾಗಷ್ಟೇ ನಾವು ಮಾಡುತ್ತಿರುವ ಕೆಲಸದಲ್ಲಿ ಮುಂದುವರೆಯುವುದು ಸಾಧ್ಯ.

ದುರುದ್ದೇಶಪೂರಿತ ತಂತ್ರಾಂಶಗಳ ಅನಗತ್ಯ ಹಸ್ತಕ್ಷೇಪ ತಪ್ಪಿಸಿ ಸೌಲಭ್ಯಗಳ ದುರುಪಯೋಗವನ್ನು ತಡೆಯುತ್ತದಲ್ಲ ಈ ವಿಧಾನ, ಇದಕ್ಕೆ 'ಕ್ಯಾಪ್ಚಾ' ಎಂದು ಹೆಸರು. ಕ್ಯಾಪ್ಚಾ ಎನ್ನುವ ಹೆಸರು 'ಕಂಪ್ಲೀಟ್‌ಲಿ ಆಟೋಮೇಟೆಡ್ ಪಬ್ಲಿಕ್ ಟ್ಯೂರಿಂಗ್ ಟೆಸ್ಟ್ ಟು ಟೆಲ್ ಕಂಪ್ಯೂಟರ್ಸ್ ಆಂಡ್ ಹ್ಯೂಮನ್ಸ್ ಅಪಾರ್ಟ್' ಎಂಬುದರ ಹ್ರಸ್ವರೂಪ. ಈ ನಾಮಕರಣವಾದದ್ದು ೨೦೦೦ದಲ್ಲಿ. ಯಾವುದೇ ಪ್ರಶ್ನೆಗೆ ಉತ್ತರಿಸುತ್ತಿರುವುದು ಸ್ವಯಂಚಾಲಿತ ತಂತ್ರಾಂಶವಲ್ಲ, ಮಾನವ ಬಳಕೆದಾರರೇ ಎಂದು ಖಾತರಿಪಡಿಸಿಕೊಳ್ಳುವ ಉದ್ದೇಶದಿಂದ ಕ್ಯಾಪ್ಚಾಗಳ ಬಳಕೆ ಪ್ರಾರಂಭವಾಯ್ತು.

ಪರದೆಯ ಮೇಲೆ ತೋರಿಸುವ ಚಿತ್ರದಲ್ಲಿನ ಅಕ್ಷರ ಅಥವಾ ಅಂಕಿಗಳನ್ನು ಗುರುತಿಸುವಂತೆ, ಅಥವಾ ಸರಳ ಪ್ರಶ್ನೆಗಳಿಗೆ ಉತ್ತರಿಸುವಂತೆ ಬಳಕೆದಾರರನ್ನು ಕೇಳುವುದು ಕ್ಯಾಪ್ಚಾಗಳ ಲಕ್ಷಣ.

ಬುಧವಾರ, ಏಪ್ರಿಲ್ 2, 2014

ರಜೆಯಲ್ಲಿ ಕಂಪ್ಯೂಟರಿನ ಗೆಳೆತನ ಬೆಳೆಸಿ!

ಟಿ. ಜಿ. ಶ್ರೀನಿಧಿ

ಕಳೆದ ಶತಮಾನದ ಅತ್ಯಂತ ಮಹತ್ವದ ಆವಿಷ್ಕಾರಗಳಲ್ಲಿ ಕಂಪ್ಯೂಟರಿನದು ಪ್ರಮುಖ ಸ್ಥಾನ. ಬಹುಶಃ ನಾವೆಲ್ಲ ಈ ಮಾತನ್ನು ಬೇಜಾರು ಬರುವಷ್ಟು ಬಾರಿ ಕೇಳಿಬಿಟ್ಟಿದ್ದೇವೆ. ಬಹಳ ಕಡಿಮೆ ಅವಧಿಯಲ್ಲಿ ಮಾಹಿತಿ ತಂತ್ರಜ್ಞಾನ ನಮ್ಮ ಬದುಕನ್ನೆಲ್ಲ ಆವರಿಸಿಕೊಂಡಿರುವ ಪರಿಯ ಬಗೆಗೆ ಕೇಳುವುದು-ಓದುವುದು ಹಾಗಿರಲಿ, ಅದರ ಅನುಭವವನ್ನೇ ನಾವೆಲ್ಲರೂ ಪಡೆದಾಗಿದೆ.

ನಿಜ, ಉದ್ಯೋಗದಿಂದ ಮನರಂಜನೆಯವರೆಗೆ ಎಲ್ಲೆಲ್ಲೂ ಕಂಪ್ಯೂಟರಿನದೇ ಭರಾಟೆ. ಕಚೇರಿಯ ಕೆಲಸ ಮಾಡಲು, ಪ್ರವಾಸಕ್ಕೆ ಟಿಕೇಟು ಕಾದಿರಿಸಲು, ಬ್ಯಾಂಕಿನದೋ ಶೇರು ಮಾರುಕಟ್ಟೆಯದೋ ವ್ಯವಹಾರ ನಡೆಸಲು, ಗೆಳೆಯರೊಡನೆ ಹರಟೆಹೊಡೆಯಲು, ಕಡೆಗೆ ಆಟವಾಡಲೂ ನಮಗೆ ಕಂಪ್ಯೂಟರ್ ಬೇಕು.

ಶಾಲೆ ಕಾಲೇಜಿನ ರಜಾದಿನಗಳ ಮಾತನ್ನಂತೂ ಕೇಳುವುದೇ ಬೇಡ, ಹೊರಗಿನ ಬಿರುಬಿಸಿಲನ್ನು ತಪ್ಪಿಸಿಕೊಳ್ಳಲು ಮನೆಯೊಳಗೆ ಕಂಪ್ಯೂಟರ್ ಇದೆಯಲ್ಲ! ಪರೀಕ್ಷೆಮುಗಿಸಿದ ವಿದ್ಯಾರ್ಥಿಗಳಿಗೆ ಕಂಪ್ಯೂಟರೇ ಈಗ ಆಪ್ತಮಿತ್ರ.

ಆದರೆ ಕಂಪ್ಯೂಟರೆಂಬ ಈ ಮಿತ್ರನ ಒಡನಾಟ ಯಾವಾಗಲೂ ನಮಗೆ ಒಳ್ಳೆಯದನ್ನೇ ಮಾಡಬೇಕು ಎಂದೇನೂ ಇಲ್ಲ. ಒಳಿತಿನ ಪ್ರಮಾಣದಷ್ಟೇ ಕೆಡುಕನ್ನೂ ಮಾಡಬಲ್ಲ ಈ ಯಂತ್ರದ ಒಡನಾಟದಿಂದ ಗರಿಷ್ಠ ಪ್ರಮಾಣದ ಲಾಭ ಪಡೆದುಕೊಳ್ಳುವುದು, ಮತ್ತು ಅದೇ ಸಮಯದಲ್ಲಿ ಕೆಟ್ಟದುದರಿಂದ ದೂರವಿರುವುದು ಸಂಪೂರ್ಣವಾಗಿ ನಮ್ಮ ವಿವೇಚನೆಯನ್ನೇ ಅವಲಂಬಿಸಿರುತ್ತದೆ.

ಹಾಗೆಂದಮಾತ್ರಕ್ಕೆ ಈ ಕಂಪ್ಯೂಟರ್-ಇಂಟರ್‌ನೆಟ್ ಇತ್ಯಾದಿಗಳ ಸಹವಾಸವೇ ಬೇಡ, ಅದರಿಂದ ದೂರವೇ ಉಳಿದುಬಿಡೋಣ ಎನ್ನುವುದು ಖಂಡಿತಾ ತಪ್ಪಾಗುತ್ತದೆ.
badge