ಶುಕ್ರವಾರ, ಜುಲೈ 25, 2014

ರೋಹಿತ್ ಚಕ್ರತೀರ್ಥ ಹೇಳುತ್ತಾರೆ... "ನನಗೆ ಅರ್ಥವಾದದ್ದನ್ನಷ್ಟೇ ನನ್ನೆದುರು ಕೂತ ಅದೃಶ್ಯ ಓದುಗರಿಗೆ ಹೇಳುತ್ತಾ ಹೋಗುತ್ತೇನೆ"

ಕನ್ನಡದಲ್ಲಿ ವಿಜ್ಞಾನವನ್ನು ಬರೆಯುತ್ತಿರುವ ಲೇಖಕರ ಸಾಲಿನಲ್ಲಿ ರೋಹಿತ್ ಚಕ್ರತೀರ್ಥರದ್ದು ಹೊಸ ಹೆಸರು. ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರೋಹಿತ್, ಬೆಂಗಳೂರಿನ ಬೇಸ್ ಮತ್ತು ಟೈಮ್ ಸಂಸ್ಥೆಗಳಲ್ಲಿ ಶಿಕ್ಷಕರಾಗಿ; ಈಗ ಪಿಯರ್ಸನ್ ಎಜುಕೇಶನ್ ಸಂಸ್ಥೆಯಲ್ಲಿ ಮುಖ್ಯ ಕನ್ಸಲ್ಟೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿರುವ-ಆಗುತ್ತಿರುವ ಲೇಖನಗಳ ಜೊತೆಗೆ 'ಮನಸುಗಳ ನಡುವೆ ಪುಷ್ಪಕ ವಿಮಾನ', 'ಏಳುಸಾವಿರ ವರ್ಷ ಬದುಕಿದ ಮನುಷ್ಯ', 'ದೇವಕೀಟದ ರತಿರಹಸ್ಯ' ಮುಂತಾದ ಪುಸ್ತಕಗಳೂ ಬೆಳಕುಕಂಡಿವೆ. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ...
ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ಶಾಲೆ-ಕಾಲೇಜುಗಳಲ್ಲಿದ್ದಾಗ ಓರಗೆಯ ಗೆಳೆಯರಿಗೆ ವಿಜ್ಞಾನ ಮತ್ತು ಗಣಿತವನ್ನು ಅರ್ಥವಾಗುವಂತೆ, ಮುಖ್ಯವಾಗಿ ಪರೀಕ್ಷೆಯಲ್ಲಿ ಬರೆಯಲು ನಾಲ್ಕು ಸಾಲು ನೆನಪಲ್ಲುಳಿಯುವಂತೆ ಹೇಳಿಕೊಡುವ ಜವಾಬ್ದಾರಿ ನನ್ನ ತಲೆಮೇಲೆ ಬರುತ್ತಿತ್ತು. ಪದವಿ ಪೂರೈಸಿದ ಮೇಲೆ ಐದಾರು ವರ್ಷ ಅಧ್ಯಾಪನವೃತ್ತಿ ಮಾಡಿದಾಗಲೂ, ಕ್ಲಾಸಿನಲ್ಲಿ ಕತೆ-ಇತಿಹಾಸ-ಪುರಾಣ ಹೇಳುತ್ತೇನೆಂಬ ಕೀರ್ತಿಯೂ ಅಪಕೀರ್ತಿಯೂ ನನಗೆ ಮೆತ್ತಿಕೊಂಡದ್ದಿದೆ. ವಿಜ್ಞಾನವನ್ನು ನನ್ನ ಮುಂದಿನ ತಲೆಮಾರಿಗೆ ದಾಟಿಸಬಲ್ಲೆ ಎನ್ನುವ ವಿಶ್ವಾಸ ಬರಲು ಹೀಗೆ ಹರಟುವ ನನ್ನ ವಾಚಾಳಿತನವೇ ಕಾರಣ ಅಂತ ಅನಿಸುತ್ತದೆ.

ನೀವು ಮೆಚ್ಚುವ / ನಿಮ್ಮ ಮೇಲೆ ಪ್ರಭಾವ ಬೀರಿದ ಇತರ ವಿಜ್ಞಾನ ಸಂವಹನಕಾರರು ಯಾರು?
ಸಾಹಿತ್ಯದ ಎಲ್ಲ ಪ್ರಕಾರಗಳನ್ನೂ ಓದುವ 'ಜಾಕ್ ಆಫ್ ಆಲ್' ಆದ ನನಗೆ ವಿಜ್ಞಾನಸಾಹಿತ್ಯದಲ್ಲಿ ಪ್ರವೇಶ ಕಡಿಮೆ. ಯಾರನ್ನೂ ಪೂರ್ತಿಯಾಗಿ ಸಮಗ್ರವಾಗಿ ಓದಿಕೊಂಡಿಲ್ಲ. ತೇಜಸ್ವಿಯ ಹೆಸರೆತ್ತುವಾಗಲೂ ಅವರ ಕತೆ-ಕಾದಂಬರಿಗಳನ್ನು ಓದಿದಷ್ಟು ತೀವ್ರವಾಗಿ ವಿಜ್ಞಾನಸಾಹಿತ್ಯವನ್ನು ಓದಿಲ್ಲ. ಇದು ತುಂಬ ನಾಚಿಕೆಯ ವಿಷಯ.

ಸೋಮವಾರ, ಜುಲೈ 21, 2014

ಡಾ. ಪಿ. ಎಸ್. ಶಂಕರ್ ಹೇಳುತ್ತಾರೆ... "ಕೆಲಸ ಚಿಕ್ಕದಿರಲಿ, ದೊಡ್ಡದಿರಲಿ ಅದನ್ನು ಆಸಕ್ತಿಯಿಂದ ನಿರ್ವಹಿಸುವ ಮನೋಧರ್ಮ ನನ್ನದು"

ಕನ್ನಡದ ವೈದ್ಯವಿಜ್ಞಾನ ಸಂವಹನಕಾರರಲ್ಲಿ ಡಾ. ಪಿ. ಎಸ್. ಶಂಕರ್ ಅವರದ್ದು ಪ್ರಮುಖ ಹೆಸರು. ಇಂಗ್ಲಿಷ್ ಮತ್ತು ಕನ್ನಡದಲ್ಲಿ ನೂರಕ್ಕೂ ಹೆಚ್ಚು ಕೃತಿಗಳನ್ನು ಹಾಗೂ ಸಾವಿರಕ್ಕೂ ಹೆಚ್ಚು ಲೇಖನಗಳನ್ನು ರಚಿಸಿರುವ ಅವರು 'ವಿಜ್ಞಾನ ಲೋಕ' ಸೇರಿದಂತೆ ಹಲವು ಪತ್ರಿಕೆಗಳ ಸಂಪಾದಕರಾಗಿಯೂ ಕೆಲಸಮಾಡುತ್ತಿದ್ದಾರೆ. ವೈದ್ಯ ವಿಶ್ವಕೋಶ - ನಿಘಂಟುಗಳನ್ನು ರಚಿಸಿರುವುದು ಅವರ ಇನ್ನೊಂದು ಹೆಗ್ಗಳಿಕೆ. ಸುದೀರ್ಘ ಅವಧಿಯಿಂದ ವೈದ್ಯವಿಜ್ಞಾನ ಬೋಧನೆಯಲ್ಲಿ ತೊಡಗಿಸಿಕೊಂಡಿರುವ ಡಾ. ಶಂಕರ್ ಅವರು ರಾಜ್ಯೋತ್ಸವ ಪ್ರಶಸ್ತಿ, ಸರ್. ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ; ಹಲವು ವಿಶ್ವವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್ ಪದವಿಯನ್ನೂ ಸ್ವೀಕರಿಸಿದ್ದಾರೆ.  ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ...
ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ನಾನು ಹೈಸ್ಕೂಲು ಓದುತ್ತಿದ್ದಾಗಲೇ ಲೇಖನಗಳನ್ನು, ಕತೆ, ನಾಟಕಗಳನ್ನು ಬರೆಯುತ್ತಿದ್ದೆ. ಮುಂದೆ ಕಾಲೇಜು ಸೇರಿದ ನಂತರ ಬರವಣಿಗೆ ಹಿಂದಿನ ಸ್ಥಾನ ಪಡೆಯಿತು. ನನ್ನ ವೈದ್ಯ ವಿದ್ಯಾಭ್ಯಾಸ ಮುಗಿದು ಕೆಲಸಕ್ಕೆ ಸೇರಿಕೊಂಡಮೇಲೆ ಬರವಣಿಗೆಯನ್ನು ಮತ್ತೆ ಪ್ರಾರಂಭಿಸಿದೆ. ಕತೆ-ಕಾದಂಬರಿ ಬರೆಯುವ ಜನ ಬೇಕಾದಷ್ಟಿದ್ದಾರೆ, ನೀನು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಲೇಖನಗಳನ್ನು ಬರೆಯಬಹುದಲ್ಲ ಎಂದು ನನ್ನ ಅಣ್ಣ (ಶ್ರೀ ಪಾಟೀಲ ಪುಟ್ಟಪ್ಪ) ಸೂಚಿಸಿದ ಮೇಲೆ ನನ್ನ ಬರವಣಿಗೆ ವೈದ್ಯವಿಜ್ಞಾನ ಕ್ಷೇತ್ರದತ್ತ ಹೊರಳಿತು.

ನೀವು ಮೆಚ್ಚುವ / ನಿಮ್ಮ ಮೇಲೆ ಪ್ರಭಾವ ಬೀರಿದ ಇತರ ವಿಜ್ಞಾನ ಸಂವಹನಕಾರರು ಯಾರು?
ಬೇರೆ ಸಂವಹನಕಾರರ ಬರವಣಿಗೆಯನ್ನು ನಾನು ಮೆಚ್ಚುತ್ತೇನೆ. ಆದರೆ ನನ್ನ ಮೇಲೆ ಪ್ರಭಾವ ಬೀರಿದ ಸಂವಹನಕಾರರು ಯಾರೂ ಇಲ್ಲ. ನನಗೆ ನಾನೇ ಗುರು. ನಾನು ರಚಿಸಿದ ಪದಕೋಶವಾಗಲಿ, ವಿಶ್ವಕೋಶವೇ ಅಗಲಿ ಎಲ್ಲವೂ ನನ್ನ ಓದು, ಅನುಭವ ಮತ್ತು ಸ್ವಂತ ಚಿಂತನದ ಫಲ. ನನ್ನ ಓದು, ಬರವಣಿಗೆ ನಿರಂತರವಾಗಿ ಜರುಗುತ್ತಿರುವ ಕ್ರಿಯೆ. ನನ್ನ ವೃತ್ತಿಯ ಭಾರ - ಜವಾಬ್ದಾರಿ ಇದ್ದರೂ ಬರವಣಿಗೆಯನ್ನು ನಾನು ಎಂದೂ ಕಡೆಗಣಿಸಿಲ್ಲ.

ಶುಕ್ರವಾರ, ಜುಲೈ 11, 2014

ಕೊಳ್ಳೇಗಾಲ ಶರ್ಮ ಹೇಳುತ್ತಾರೆ... "ವಿಜ್ಞಾನದ ವಿಷಯಗಳು ಎಲ್ಲವೂ ನಮ್ಮ ಇಂದ್ರಿಯಗಳಿಗೆ ನೇರವಾಗಿ ನಿಲುಕುವಂತಹವಲ್ಲ"

ಕನ್ನಡ ವಿಜ್ಞಾನ ಸಂವಹನಕಾರರಲ್ಲಿ ಕೊಳ್ಳೇಗಾಲ ಶರ್ಮರದು ಪ್ರಮುಖ ಹೆಸರು. ಸಾವಿರಕ್ಕೂ ಹೆಚ್ಚು ಲೇಖನ, ಅಂಕಣಬರಹಗಳನ್ನು ಬರೆದಿರುವ ಶರ್ಮರ 'ವಿಜ್ಞಾನ' ಅಂಕಣ ಕನ್ನಡಪ್ರಭ ಪತ್ರಿಕೆಯಲ್ಲಿ ಸುದೀರ್ಘಕಾಲ ಪ್ರಕಟವಾಗಿತ್ತು. 'ಸೈನ್ಸ್ ರಿಪೋರ್ಟರ್' ಸಂಪಾದಕ ಮಂಡಲಿಯ ಸದಸ್ಯರಾಗಿ, ಹಂಪಿ ವಿವಿ ಪ್ರಕಟಣೆ 'ವಿಜ್ಞಾನ ಸಂಗಾತಿ'ಯ ಆರಂಭದ ಸಂಚಿಕೆಗಳಿಗೆ ಗೌರವ ಸಂಪಾದಕರಾಗಿಯೂ ಸೇವೆ ಸಲ್ಲಿಸಿರುವ ಶರ್ಮ ಮೈಸೂರಿನ ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ ಪ್ರಚಾರ ವಿಭಾಗದಲ್ಲಿ ಕೆಲಸಮಾಡುತ್ತಿದ್ದಾರೆ. 'ಮರಳ ಮೇಲಿನ ಹೆಜ್ಜೆಗಳು', 'ಭೂಮಿಗುದುರಿತೆ ಜೀವ? ಮತ್ತು ಇತರ ಪ್ರಶ್ನೆಗಳು' ಮೊದಲಾದ ಕೃತಿಗಳನ್ನು ರಚಿಸಿರುವ ಇವರಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ 'ಶ್ರೇಷ್ಠ ಲೇಖಕ' ಗೌರವ ಲಭಿಸಿದೆ. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ...

ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ನನ್ನನ್ನು ವಿಶೇಷವಾಗಿ ಆಕರ್ಷಿಸಿದ ಸಂಗತಿಗಳನ್ನು ಇತರರ ಜೊತೆಗೆ ಹಂಚಿಕೊಳ್ಳಬೇಕು ಎನ್ನುವ ಹಂಬಲ. ವಿಜ್ಞಾನದ ವಿಷಯಗಳು ಎಲ್ಲವೂ ನಮ್ಮ ಇಂದ್ರಿಯಗಳಿಗೆ ನೇರವಾಗಿ ನಿಲುಕುವಂತಹವಲ್ಲ. ಹೀಗಾಗಿ ನಾನು ಅರಿತುಕೊಂಡದ್ದನ್ನು ಬೇರೆಯವರಿಗೆ ತಿಳಿಸುವಾಗ ಸಂವಹನದ ಹಲವು ಸೂತ್ರಗಳನ್ನು ಬಳಸಬೇಕಾಗುತ್ತದೆ ಎನ್ನುವುದು ಅರ್ಥವಾಯಿತು. ಕೆಲವು ಹಿರಿಯ ಲೇಖಕರ ಬರಹಗಳನ್ನು ಓದಿ ಪ್ರೇರಣೆಯೂ ಆಗಿತ್ತು. ಇದು ವಿಜ್ಞಾನ ಸಂವಹನ ಕ್ಷೇತ್ರಕ್ಕೆ ಬರಲು ಮುಖ್ಯ ಕಾರಣ.

ನೀವು ಮೆಚ್ಚುವ / ನಿಮ್ಮ ಮೇಲೆ ಪ್ರಭಾವ ಬೀರಿದ ಇತರ ವಿಜ್ಞಾನ ಸಂವಹನಕಾರರು ಯಾರು?
ಬಾಲ್ಯದಲ್ಲಿ ನಾನು ಓದಿದ ಜಿ. ಟಿ. ನಾರಾಯಣರಾಯರ ಕೃತಿ - ನಕ್ಷತ್ರಗಳನ್ನು ಕುರಿತದ್ದು - ಈ ವಿಶ್ವದ ವಿಸ್ತಾರ, ನಕ್ಷತ್ರಗಳ ಅಗಣಿತ ಸಂಖ್ಯೆಯನ್ನು ಮನಸ್ಸಿಗೆ ಮುಟ್ಟಿಸಿ ವಿಜ್ಞಾನದಲ್ಲಿ ಆಸಕ್ತಿ ಹುಟ್ಟಿಸಿತು.

ಶುಕ್ರವಾರ, ಜುಲೈ 4, 2014

ಅನಂತರಾಮು ಹೇಳುತ್ತಾರೆ... "ನನ್ನ ಮೊದಲ ಆದ್ಯತೆ ಭಾವಗೀತೆಗಳ ಕಡೆಗೆ"

ಶ್ರೀ ಟಿ. ಆರ್. ಅನಂತರಾಮುರವರು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣ ಸಂಸ್ಥೆಯಲ್ಲಿ ಹಿರಿಯ ಭೂ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದವರು, ಕನ್ನಡದ ಅತ್ಯಂತ ಜನಪ್ರಿಯ ವಿಜ್ಞಾನ ಸಂವಹನಕಾರರಲ್ಲೊಬ್ಬರು. ನಾಲ್ಕು ದಶಕಗಳಿಂದ ಕನ್ನಡದಲ್ಲಿ ಜನಪ್ರಿಯ ವಿಜ್ಞಾನ ಸಾಹಿತ್ಯ ರಚನೆಯಲ್ಲಿ ತೊಡಗಿರುವ ಅನಂತರಾಮುರವರ ೬೦ಕ್ಕೂ ಹೆಚ್ಚು ಕೃತಿಗಳು ಈವರೆಗೆ ಪ್ರಕಟವಾಗಿವೆ. ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನಕ್ಕೆ ಪಾತ್ರರಾಗಿರುವ ಅನಂತರಾಮುರವರಿಗೆ ಕರ್ನಾಟಕ ಸರ್ಕಾರದ ವಿಶನ್ ಗ್ರೂಪ್ ನೀಡುವ ‘ಅತ್ಯುತ್ತಮ ವಿಜ್ಞಾನ ಸಂವಹನಕಾರ’ ಪ್ರಶಸ್ತಿ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ 'ಶ್ರೇಷ್ಠ ಲೇಖಕ' ಪ್ರಶಸ್ತಿಗಳ ಗೌರವವೂ ದೊರೆತಿದೆ. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ...

ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ಎಂ. ಎಸ್ಸಿ. ಮುಗಿದೊಡನೆ 1972ರಲ್ಲಿ ಬೆಂಗಳೂರಿನ ಸರ್ಕಾರಿ ಕಾಲೇಜಿನ ಭೂವಿಜ್ಞಾನ ವಿಭಾಗದಲ್ಲಿ ಅಧ್ಯಾಪಕನಾದೆ. ಕವಿಯಾಗಬೇಕೆಂಬ ಹಂಬಲವಿತ್ತು. ಮಾನಸಿಕವಾಗಿ ಅದೇ ಗುಂಗಿನಲ್ಲಿದ್ದೆ. ಸಹೋದ್ಯೋಗಿಯಾಗಿದ್ದ ಕವಿ ನಿಸಾರ್ ಅಹಮದ್ ಅವರು ಬಿಲ್ ಕುಲ್ ಒಪ್ಪಲಿಲ್ಲ. ಬದಲು ವಿಜ್ಞಾನದ ವಿಚಾರವಾಗಿ ಬರೆಯಲು ಶುರುಮಾಡು ಎಂದರು. ಭೂವಿಜ್ಞಾನ ಬದುಕಿಗೆ ಬಹು ಹತ್ತಿರ. ಬರೆಯಲು ಸಾಕಷ್ಟು ವಿಚಾರವಿತ್ತು. 'ಸುಧಾ'ಕ್ಕೆ 'ವಸುಂಧರೆ ಬಂಜೆಯಾದಾಳೆ?' ಎಂಬ ಲೇಖನ ಬರೆದೆ. ಅಲ್ಲಿಗೆ ನನ್ನ ಮತಾಂತರ ಮುಗಿದಿತ್ತು. ವಿಜ್ಞಾನಕ್ಕೆ ಅಂಟಿಕೊಂಡೆ. ಸುಧಾದ ಸಂಪಾದಕ ಎಂ. ಬಿ. ಸಿಂಗ್ ನಿರಂತರವಾಗಿ ಪ್ರೋತ್ಸಾಹ ಕೊಡುತ್ತಲೇ ಹೋದರು.
badge