ಕನ್ನಡದಲ್ಲಿ ವಿಜ್ಞಾನವನ್ನು ಬರೆಯುತ್ತಿರುವ ಲೇಖಕರ ಸಾಲಿನಲ್ಲಿ ರೋಹಿತ್ ಚಕ್ರತೀರ್ಥರದ್ದು ಹೊಸ ಹೆಸರು. ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರೋಹಿತ್, ಬೆಂಗಳೂರಿನ ಬೇಸ್ ಮತ್ತು ಟೈಮ್ ಸಂಸ್ಥೆಗಳಲ್ಲಿ ಶಿಕ್ಷಕರಾಗಿ; ಈಗ ಪಿಯರ್ಸನ್ ಎಜುಕೇಶನ್ ಸಂಸ್ಥೆಯಲ್ಲಿ ಮುಖ್ಯ ಕನ್ಸಲ್ಟೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿರುವ-ಆಗುತ್ತಿರುವ ಲೇಖನಗಳ ಜೊತೆಗೆ 'ಮನಸುಗಳ ನಡುವೆ ಪುಷ್ಪಕ ವಿಮಾನ', 'ಏಳುಸಾವಿರ ವರ್ಷ ಬದುಕಿದ ಮನುಷ್ಯ', 'ದೇವಕೀಟದ ರತಿರಹಸ್ಯ' ಮುಂತಾದ ಪುಸ್ತಕಗಳೂ ಬೆಳಕುಕಂಡಿವೆ. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ...ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ಶಾಲೆ-ಕಾಲೇಜುಗಳಲ್ಲಿದ್ದಾಗ ಓರಗೆಯ ಗೆಳೆಯರಿಗೆ ವಿಜ್ಞಾನ ಮತ್ತು ಗಣಿತವನ್ನು ಅರ್ಥವಾಗುವಂತೆ, ಮುಖ್ಯವಾಗಿ ಪರೀಕ್ಷೆಯಲ್ಲಿ ಬರೆಯಲು ನಾಲ್ಕು ಸಾಲು ನೆನಪಲ್ಲುಳಿಯುವಂತೆ ಹೇಳಿಕೊಡುವ ಜವಾಬ್ದಾರಿ ನನ್ನ ತಲೆಮೇಲೆ ಬರುತ್ತಿತ್ತು. ಪದವಿ ಪೂರೈಸಿದ ಮೇಲೆ ಐದಾರು ವರ್ಷ ಅಧ್ಯಾಪನವೃತ್ತಿ ಮಾಡಿದಾಗಲೂ, ಕ್ಲಾಸಿನಲ್ಲಿ ಕತೆ-ಇತಿಹಾಸ-ಪುರಾಣ ಹೇಳುತ್ತೇನೆಂಬ ಕೀರ್ತಿಯೂ ಅಪಕೀರ್ತಿಯೂ ನನಗೆ ಮೆತ್ತಿಕೊಂಡದ್ದಿದೆ. ವಿಜ್ಞಾನವನ್ನು ನನ್ನ ಮುಂದಿನ ತಲೆಮಾರಿಗೆ ದಾಟಿಸಬಲ್ಲೆ ಎನ್ನುವ ವಿಶ್ವಾಸ ಬರಲು ಹೀಗೆ ಹರಟುವ ನನ್ನ ವಾಚಾಳಿತನವೇ ಕಾರಣ ಅಂತ ಅನಿಸುತ್ತದೆ.
ನೀವು ಮೆಚ್ಚುವ / ನಿಮ್ಮ ಮೇಲೆ ಪ್ರಭಾವ ಬೀರಿದ ಇತರ ವಿಜ್ಞಾನ ಸಂವಹನಕಾರರು ಯಾರು?
ಸಾಹಿತ್ಯದ ಎಲ್ಲ ಪ್ರಕಾರಗಳನ್ನೂ ಓದುವ 'ಜಾಕ್ ಆಫ್ ಆಲ್' ಆದ ನನಗೆ ವಿಜ್ಞಾನಸಾಹಿತ್ಯದಲ್ಲಿ ಪ್ರವೇಶ ಕಡಿಮೆ. ಯಾರನ್ನೂ ಪೂರ್ತಿಯಾಗಿ ಸಮಗ್ರವಾಗಿ ಓದಿಕೊಂಡಿಲ್ಲ. ತೇಜಸ್ವಿಯ ಹೆಸರೆತ್ತುವಾಗಲೂ ಅವರ ಕತೆ-ಕಾದಂಬರಿಗಳನ್ನು ಓದಿದಷ್ಟು ತೀವ್ರವಾಗಿ ವಿಜ್ಞಾನಸಾಹಿತ್ಯವನ್ನು ಓದಿಲ್ಲ. ಇದು ತುಂಬ ನಾಚಿಕೆಯ ವಿಷಯ.