ಶುಕ್ರವಾರ, ಡಿಸೆಂಬರ್ 30, 2016

ಎಂಬಿಪಿಎಸ್ ಎಂದರೇನು?

ಟಿ. ಜಿ. ಶ್ರೀನಿಧಿ

ಒಂದಲ್ಲ ಒಂದು ಸಾಧನದ ಮೂಲಕ ನಾವು ಸದಾಕಾಲ ಅಂತರಜಾಲ ಸಂಪರ್ಕವನ್ನು ಬಳಸುತ್ತಲೇ ಇರುತ್ತೇವಲ್ಲ, ಹಾಗೆ ಬಳಸುವಾಗ ಸಂಪರ್ಕದ ವೇಗದ ಬಗೆಗೂ ಕೇಳಿರುತ್ತೇವೆ: ೮ ಎಂಬಿಪಿಎಸ್, ೧೬ ಎಂಬಿಪಿಎಸ್, ೫೦ ಎಂಬಿಪಿಎಸ್... ಹೀಗೆ.

ಎಂಬಿ ಅಂದರೆ ಮೆಗಾಬೈಟ್ ಸರಿ, ಆದರೆ ಇದೇನಿದು ಎಂಬಿಪಿಎಸ್ (Mbps)?

ಯಾವುದೇ ದೂರಸಂಪರ್ಕ ವ್ಯವಸ್ಥೆಯ ಮೂಲಕ ಒಂದು ನಿರ್ದಿಷ್ಟ ಅವಧಿಯಲ್ಲಿ ಹಾದುಹೋಗುವ ದತ್ತಾಂಶದ (ಡೇಟಾ) ಸರಾಸರಿ ಪ್ರಮಾಣವನ್ನು ಡೇಟಾ ರೇಟ್ ಎಂದು ಕರೆಯುತ್ತಾರೆ. ಒಂದಷ್ಟು ದತ್ತಾಂಶವನ್ನು ತೆಗೆದುಕೊಂಡರೆ ಅದು ಒಂದು ಸ್ಥಳದಿಂದ ಮತ್ತೊಂದಕ್ಕೆ ಎಷ್ಟು ವೇಗವಾಗಿ ತಲುಪಬಲ್ಲದು ಎನ್ನುವುದನ್ನು ಈ ಡೇಟಾ ರೇಟ್ ಸೂಚಿಸುತ್ತದೆ.

ಬುಧವಾರ, ಡಿಸೆಂಬರ್ 28, 2016

ನಮ್ಮ ಕೈಬರಹ ಕಂಪ್ಯೂಟರಿಗೂ ಅರ್ಥ ಆಗುತ್ತಾ?

ಟಿ. ಜಿ. ಶ್ರೀನಿಧಿ

ಮುದ್ರಿತ ಅಕ್ಷರಗಳನ್ನು ಗುರುತಿಸಿ ಡಿಜಿಟಲ್ ರೂಪಕ್ಕೆ ಪರಿವರ್ತಿಸುವ ಓಸಿಆರ್ ತಂತ್ರಜ್ಞಾನದ ಬಗ್ಗೆ ನಾವು ಕೇಳಿದ್ದೇವೆ [ಓದಿ: ಓಸಿಆರ್ ಎಂಬ ಅಕ್ಷರ ಜಾಣ]. ಇದೇ ರೀತಿ ಹಸ್ತಾಕ್ಷರವನ್ನು ಗುರುತಿಸುವ 'ಹ್ಯಾಂಡ್‌ರೈಟಿಂಗ್ ರೆಕಗ್ನಿಶನ್' ತಂತ್ರಜ್ಞಾನವೂ ಇದೆ.

ಕೈಬರಹದ ಕಡತದ ಚಿತ್ರ - ಟಚ್‌ಸ್ಕ್ರೀನ್ ಮೇಲೆ ಬರೆದ ಪಠ್ಯವನ್ನೆಲ್ಲ ಪರಿಶೀಲಿಸಿ ಅದರಲ್ಲಿರುವ ಅಕ್ಷರಗಳನ್ನು ಗುರುತಿಸುವುದು, ಹಾಗೆ ಗುರುತಿಸಿದ್ದನ್ನು ಕಂಪ್ಯೂಟರಿಗೆ ಅರ್ಥವಾಗುವ ಭಾಷೆಗೆ ಬದಲಿಸುವುದು ಈ ತಂತ್ರಜ್ಞಾನದ ಕೆಲಸ.

ಹಸ್ತಾಕ್ಷರ ಗುರುತಿಸಲು ಎರಡು ಮಾರ್ಗಗಳನ್ನು ಅನುಸರಿಸುವುದು ಸಾಧ್ಯ.

ಸೋಮವಾರ, ಡಿಸೆಂಬರ್ 26, 2016

ಡಿಜಿಟಲ್ ಲೋಕದಲ್ಲಿ ಸುರಕ್ಷತೆ: ನೆನಪಿಡಬೇಕಾದ ಕೆಲ ಅಂಶಗಳು

ಟಿ. ಜಿ. ಶ್ರೀನಿಧಿ


ಹೊಸದನ್ನು ಪ್ರಯತ್ನಿಸುವ ಆಸಕ್ತಿಯಿಂದಲೋ ಅನಿವಾರ್ಯತೆಯಿಂದಲೋ ತಮ್ಮ ಹಣಕಾಸು ವ್ಯವಹಾರಗಳಿಗೆ ಡಿಜಿಟಲ್ ಲೋಕದತ್ತ ಹೊರಳುತ್ತಿರುವವರ ಸಂಖ್ಯೆ ಇತ್ತೀಚೆಗೆ ಜಾಸ್ತಿಯಾಗುತ್ತಿದೆ. ಹೀಗೆ ತಂತ್ರಜ್ಞಾನದ ಸವಲತ್ತುಗಳನ್ನು ಹೊಸದಾಗಿ ಪರಿಚಯಿಸಿಕೊಳ್ಳುವಾಗ ಅವುಗಳ ಬಳಕೆಯ ಬಗ್ಗೆ ತಿಳಿದುಕೊಳ್ಳಲು ನಾವು ಆಸಕ್ತಿತೋರಿಸುತ್ತೇವಲ್ಲ, ಅಲ್ಲಿ ನಮ್ಮ ಮಾಹಿತಿಯನ್ನು ಸುರಕ್ಷಿತವಾಗಿಡುವ ಬಗೆಗೂ ಅಷ್ಟೇ ಆಸಕ್ತಿವಹಿಸಬೇಕಾದ್ದು ಅನಿವಾರ್ಯ.

ಹೌದು, ಅಂತರಜಾಲ - ವಿಶ್ವವ್ಯಾಪಿ ಜಾಲಗಳ ವರ್ಚುಯಲ್ ಜಗತ್ತು ಹೊರಗಿನ ನಮ್ಮ ಪ್ರಪಂಚದಂತೆಯೇ. ಅಲ್ಲಿ ಒಳ್ಳೆಯ ಸಂಗತಿಗಳು ಎಷ್ಟಿವೆಯೋ ಕೆಟ್ಟವೂ ಅಷ್ಟೇ ಇವೆ. ಹಾಗಾಗಿ ಜಾಲಲೋಕದಲ್ಲಿರುವಾಗ ನಾವು ಯಾವಾಗಲೂ ನಮ್ಮ ಎಚ್ಚರಿಕೆಯಲ್ಲೇ ಇರಬೇಕು.

ಇಲ್ಲಿ ಜೋಪಾನಮಾಡಬೇಕಾದ ಸಂಗತಿಗಳ ಪೈಕಿ ಮೊದಲ ಸ್ಥಾನ ಪಾಸ್‌ವರ್ಡ್‌ಗಳದು.

ಶುಕ್ರವಾರ, ಡಿಸೆಂಬರ್ 23, 2016

ನಮ್ಮ ಲೊಕೇಶನ್ ಕಳುಹಿಸುವುದು ಹೇಗೆ ಗೊತ್ತೇ?

ಟಿ. ಜಿ. ಶ್ರೀನಿಧಿ

ಎಲ್ಲಿಗಾದರೂ ಹೊರಟಾಗ ನಾವು ಹೋಗಬೇಕಾದ ಸ್ಥಳದ ಬಗೆಗೆ ಗೂಗಲ್ ಸರ್ಚ್ ಮಾಡಿದರೆ ಆ ಕುರಿತ ಮಾಹಿತಿಯ ಜೊತೆಗೆ ಅದು ಎಲ್ಲಿದೆ ಎನ್ನುವುದನ್ನೂ ಮ್ಯಾಪಿನಲ್ಲಿ ನೋಡುವುದು ಸಾಧ್ಯ. ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ (ಜಿಪಿಎಸ್) ಆಧರಿಸಿ ಕೆಲಸಮಾಡುವ ಗೂಗಲ್ ಮ್ಯಾಪ್ಸ್‌ನಂತಹ ಸೌಲಭ್ಯಗಳನ್ನು ಬಳಸಿಕೊಂಡು ನಾವು ಅಲ್ಲಿಗೆ ತಲುಪುವುದು ಹೇಗೆ ಎಂದು ತಿಳಿದುಕೊಳ್ಳಬಹುದು.

ಆದರೆ ನಾವು ಇರುವ ಸ್ಥಳಕ್ಕೆ ಬೇರೆಯವರನ್ನು ಕರೆಯಬೇಕು ಎಂದಾಗ ಅವರಿಗೆ ಆ ವಿವರ ತಲುಪಿಸುವುದು ಹೇಗೆ?

ಬುಧವಾರ, ಡಿಸೆಂಬರ್ 21, 2016

ಯುಪಿಐ: ಹಣ ವರ್ಗಾವಣೆ ಇದೀಗ ಇಮೇಲ್ ಕಳಿಸುವಷ್ಟೇ ಸುಲಭ!

ಟಿ. ಜಿ. ಶ್ರೀನಿಧಿ


ಒಂದು ಕಾಲವಿತ್ತು, ಆಗ ಯಾರಿಗಾದರೂ ಸಂದೇಶ ಕಳುಹಿಸಬೇಕಾದರೆ ಅದನ್ನೊಂದು ಪತ್ರದಲ್ಲಿ ಬರೆದು, ವಿಳಾಸ ಬರೆದ ಲಕೋಟೆಯೊಳಗಿಟ್ಟು, ಸ್ಟಾಂಪು ಹಚ್ಚಿ ಅಂಚೆಡಬ್ಬಕ್ಕೆ ಹಾಕಿಬರಬೇಕಿತ್ತು. ವಿಳಾಸದಾರರಿಗೆ ಅದು ತಲುಪುತ್ತಿದ್ದದ್ದು ಅಂಚೆಯವರು ತಲುಪಿಸಿದಾಗಲಷ್ಟೇ. ಇಮೇಲ್ ಬಂದ ತಕ್ಷಣ ಈ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಯಿತು, ಕೇವಲ ಒಂದು ಸಾಲಿನ ವಿಳಾಸವನ್ನಷ್ಟೇ ಬರೆದು ಸಂದೇಶಗಳನ್ನು ಯಾವಾಗ ಬೇಕಾದರೂ ಕಳುಹಿಸುವುದು ಸಾಧ್ಯವಾಯಿತು.

ನಮ್ಮ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸುವ ಕೆಲಸ ತೀರಾ ಇತ್ತೀಚಿನವರೆಗೂ ಪತ್ರ ಬರೆದು ಪೋಸ್ಟಿಗೆ ಹಾಕುವ ಕೆಲಸದಷ್ಟೇ ಕ್ಲಿಷ್ಟವಾಗಿತ್ತು. ಎನ್‌ಇಎಫ್‌ಟಿಯಂತಹ "ಹೈಟೆಕ್" ವ್ಯವಸ್ಥೆಗಳಲ್ಲೂ ಐಎಫ್‌ಎಸ್‌ಸಿ ಸಂಖ್ಯೆ, ಅಕೌಂಟ್ ಸಂಖ್ಯೆ ಎಂದು ಬೇರೆಬೇರೆ ಮಾಹಿತಿಯನ್ನೆಲ್ಲ ಸರಿಯಾಗಿ ನಿಭಾಯಿಸಬೇಕಾದ್ದು - ಹಣ ವರ್ಗಾವಣೆಯಾಗಲು ಕಾಯಬೇಕಾದ್ದು ಅನಿವಾರ್ಯವಾಗಿತ್ತು.

ಅಂಚೆ ವ್ಯವಸ್ಥೆಯಲ್ಲಿ ಇಮೇಲ್ ತಂದಂತಹುದೇ ಬದಲಾವಣೆಯನ್ನು ಈ ಕೆಲಸದಲ್ಲಿ ತರಲು ಹೊರಟಿರುವುದು ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಎಂಬ ವ್ಯವಸ್ಥೆ.

ಮಂಗಳವಾರ, ಡಿಸೆಂಬರ್ 20, 2016

ಸಾಮಾನ್ಯರಲ್ಲಿ ಅಸಾಮಾನ್ಯ: ಎಕೆಬಿ

ಕೊಳ್ಳೇಗಾಲ ಶರ್ಮ

“ಅಡ್ಯನಡ್ಕರು ಇನ್ನಿಲ್ಲ.” ಹೀಗೊಂದು ಮೆಸೇಜು ಹಿರಿಯ ಮಿತ್ರ ಅನಂತರಾಮುರವರಿಂದ ಬಂದಾಗ ಏನು ಉತ್ತರಿಸಬೇಕೋ ತೋಚಲೇ ಇಲ್ಲ. “ಸೋ ಸ್ಯಾಡ್” ಎಂದು ಮೆಸೇಜಿಸಿಬಿಟ್ಟೆ.

ಆದರೆ ಆ ಎರಡು ಪದಗಳಲ್ಲಿ ಇಲ್ಲದ ನೋವು, ಭಾವಗಳು ಅನಂತರ ಇಡೀ ರಾತ್ರಿ ಕಾಡಿದುವೆಂದರೆ ತಪ್ಪಲ್ಲ. ಪ್ರೊಫೆಸರ್ ಅಡ್ಯನಡ್ಕ ಕೃಷ್ಣಭಟ್ಟರು ನನಗೂ ಶ್ರೀನಿಧಿಗೂ ಎಕೆಬಿ ಸರ್. ಅವರು ವೃತ್ತಿಬಾಂಧವರಷ್ಟೆ ಆಗಿರಲಿಲ್ಲ. ಅದಕ್ಕಿಂತಲೂ ಹೆಚ್ಚಿನದೇನನ್ನೋ ಕಳೆದುಕೊಂಡೆವು ಎಂದು ನಮಗಿಬ್ಬರಿಗೂ ಅನಿಸಿದ್ದು ಸಹಜವೇ.

ಎಕೆಬಿ ಹಾಗೂ ನನ್ನ ಬಾಂಧವ್ಯ ಮೂವತ್ತು ವರ್ಷಗಳನ್ನೂ ಮೀರಿದ್ದು. ನಾನಾಗ ಅವರ ವಯಸ್ಸಿನಲ್ಲಿ ಅರ್ಧ ವಯಸ್ಸಿನವನು ಅಷ್ಟೆ. ಮಣಿಪಾಲದಲ್ಲಿದ್ದ ನನಗೆ ಉಡುಪಿಗೆ ಜನವಿಜ್ಞಾನ ಜಾಥಾ ಬರುತ್ತಿದೆ ಎಂದು ತಿಳಿಯಿತು, “ಭಾಗವಹಿಸಲು ಇಚ್ಛೆಯಿರುವವರು ಪ್ರೊಫೆಸರ್ ಅಡ್ಯನಡ್ಕ ಕೃಷ್ಣಭಟ್ಟರು, ಫಿಸಿಕ್ಸ್ ಪ್ರೊಫೆಸರ್, ವಿಜಯ ಕಾಲೇಜು, ಮುಲ್ಕಿ ಇವರನ್ನು ಸಂಪರ್ಕಿಸಿ,” ಎಂದು ಸುದ್ದಿ ಓದಿದೆ. ಕೃಷ್ಣಭಟ್ಟರಿಗೆ ಒಂದು ಪತ್ರ ಬರೆದೆ. ಮಾರೋಲೆ ತಡವಾಗದೆಯೇ ತಲುಪಿತು. ಆದರೆ ನಾನು ಜಾಥಾದಲ್ಲಿ ಭಾಗವಹಿಸಲು ಹೋಗಲಿಲ್ಲವೆನ್ನಿ.

ಸೋಮವಾರ, ಡಿಸೆಂಬರ್ 19, 2016

E, H, H+ ಇದೆಲ್ಲ ಏನು?

ಟಿ. ಜಿ. ಶ್ರೀನಿಧಿ

ಮೊಬೈಲ್ ಫೋನ್ ಪರದೆಯ ಮೇಲ್ತುದಿಯಲ್ಲಿ ಹಲವು ಸಂಕೇತಗಳು ಕಾಣಸಿಗುವುದು ನಮಗೆಲ್ಲ ಗೊತ್ತು. ಈಗ ಸಮಯ ಎಷ್ಟು, ಬ್ಯಾಟರಿಯಲ್ಲಿ ಎಷ್ಟು ಶಕ್ತಿಯಿದೆ, ಮೊಬೈಲ್ ಸಿಗ್ನಲ್ ಹೇಗಿದೆ, ಬ್ಲೂಟೂತ್ ಚಾಲೂ ಆಗಿದೆಯೇ ಎನ್ನುವುದನ್ನೆಲ್ಲ ಈ ಸಂಕೇತಗಳು ನಮಗೆ ತಿಳಿಸುತ್ತವೆ.

ಈ ಪೈಕಿ ಇಂಟರ್‌ನೆಟ್ ಸಂಪರ್ಕವನ್ನು ಸೂಚಿಸುವ ಇನ್ನೊಂದು ಸಂಕೇತವೂ ಇರುತ್ತದೆ. ವೈ-ಫೈ ಸಂಪರ್ಕ ಬಳಸುವಾಗ ಇಲ್ಲಿ ಒಂದೇ ರೀತಿಯ ಚಿಹ್ನೆ ಇದ್ದರೆ ಮೊಬೈಲ್ ಇಂಟರ್‌ನೆಟ್ ಬಳಸುವಾಗ ಮಾತ್ರ E, H, H+ ಮುಂತಾದ ಬೇರೆಬೇರೆ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ.

ಶುಕ್ರವಾರ, ಡಿಸೆಂಬರ್ 16, 2016

ಮೊಬೈಲಿಗೊಂದು ಕೀಬೋರ್ಡು!

ಟಿ. ಜಿ. ಶ್ರೀನಿಧಿ

ಮೊಬೈಲಿನಲ್ಲಿ, ಟ್ಯಾಬ್ಲೆಟ್ಟಿನಲ್ಲಿ ಟಚ್ ಸ್ಕ್ರೀನ್ ಬಳಸಿ ಟೈಪಿಸುವುದು ನಮಗೆಲ್ಲ ಚೆನ್ನಾಗಿಯೇ ಅಭ್ಯಾಸವಾಗಿಬಿಟ್ಟಿದೆ. ಆದರೂ ಕೆಲವೊಮ್ಮೆ ದೊಡ್ಡ ಸಂದೇಶಗಳನ್ನು ಟೈಪಿಸುವಾಗ, ಮೊಬೈಲಿನಲ್ಲೇ ಕಡತಗಳನ್ನು ರೂಪಿಸುವ ಅನಿವಾರ್ಯ ಎದುರಾದಾಗ ಭೌತಿಕ ಕೀಲಿಮಣೆ (ಕೀಬೋರ್ಡ್) ಇದ್ದಿದ್ದರೆ ಎಷ್ಟು ಚೆನ್ನಾಗಿತ್ತಲ್ಲ ಎನ್ನಿಸುವುದು ಸಹಜ.

ಹೈಬ್ರಿಡ್ ಅಥವಾ ಟೂ-ಇನ್-ಒನ್ ಕಂಪ್ಯೂಟರುಗಳು ಈ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಲ್ಲವು.

ಮಂಗಳವಾರ, ಡಿಸೆಂಬರ್ 13, 2016

ಚಂಡಮಾರುತಕ್ಕೂ ಇಂಟರ್‌ನೆಟ್ ಸಂಪರ್ಕಕ್ಕೂ ಏನು ಸಂಬಂಧ? ಈ ಲೇಖನ ಓದಿ!

ಟಿ. ಜಿ. ಶ್ರೀನಿಧಿ

ನಾವು ಮೊಬೈಲಿನಲ್ಲಿ ಮಾತನಾಡುತ್ತೇವೆ, ಅಂತರಜಾಲ ಸಂಪರ್ಕ ಬಳಸುತ್ತೇವೆ. ಇದೆಲ್ಲ ಹೇಗೆ ಸಾಧ್ಯವಾಗುತ್ತದೆ ಎಂದು ಕೇಳಿದರೆ ಕಿಟಕಿಯಿಂದಾಚೆ ಕಾಣುವ ಮೊಬೈಲ್ ಟವರ್ ಅನ್ನು ತೋರಿಸುತ್ತೇವೆ. ಆದರೆ ಅಲ್ಲಿಂದ ಮುಂದಿನ ಸಂಪರ್ಕ ಸಾಧ್ಯವಾಗುವುದು, ನಮ್ಮ ಕರೆ ಬೇರೆಲ್ಲೋ ಇರುವ ಇನ್ನೊಬ್ಬರನ್ನು ತಲುಪುವುದು ಹೇಗೆ?

ಉತ್ತರ ಗೊತ್ತಿಲ್ಲದಿದ್ದರೆ ಆಕಾಶ ನೋಡಬೇಕಿಲ್ಲ, ಕಾಲ ಕೆಳಗಿನ ನೆಲವನ್ನಷ್ಟೇ ನೋಡಿದರೆ ಸಾಕು. ಏಕೆಂದರೆ ಮೊಬೈಲ್ ಟವರ್‌ಗಳ ನಂತರದ ಹಂತದ ಸಂವಹನದಲ್ಲಿ ಪ್ರಮುಖ ಪಾತ್ರ ವಹಿಸುವುದು ನೆಲದಡಿಯ ಕೇಬಲ್ಲುಗಳು.

ಈ ಕೇಬಲ್ಲುಗಳಲ್ಲಿ ಬಳಕೆಯಾಗುವುದೇ ಆಪ್ಟಿಕಲ್ ಫೈಬರ್ ಕೇಬಲ್ ಅಥವಾ ಓಎಫ್‌ಸಿ.

ಸೋಮವಾರ, ಡಿಸೆಂಬರ್ 12, 2016

ಪನೋರಮಾ ಮತ್ತು ಫೋಟೋಸ್ಫಿಯರ್ - ಛಾಯಾಗ್ರಹಣದಲ್ಲಿ ಹೀಗೂ ಉಂಟು!

ಟಿ. ಜಿ. ಶ್ರೀನಿಧಿ


ಮಾನವ ದೃಷ್ಟಿಯ ವ್ಯಾಪ್ತಿಗೆ ಹೋಲಿಸಿದಾಗ ಕ್ಯಾಮೆರಾದ ವ್ಯಾಪ್ತಿ ಸಾಮಾನ್ಯವಾಗಿ ತೀರಾ ಕಡಿಮೆಯಿರುತ್ತದೆ. ಕ್ಯಾಮೆರಾ ಬಳಸಿ ಚಿತ್ರಗಳನ್ನು ಕ್ಲಿಕ್ ಮಾಡುವಾಗ ನಮ್ಮ ಕಣ್ಣೆದುರು ಕಾಣುವುದರ ಒಂದು ಭಾಗವಷ್ಟೇ ಅದರಲ್ಲಿ ಸೆರೆಯಾಗುವುದಕ್ಕೆ ಇದೇ ಕಾರಣ.

ಈ ಕೊರತೆಯನ್ನು ನಿವಾರಿಸುವ ನಿಟ್ಟಿನಲ್ಲಿ ರೂಪುಗೊಂಡಿರುವುದೇ ಪನೋರಮಾ ಛಾಯಾಚಿತ್ರಗಳ ಪರಿಕಲ್ಪನೆ. ಯಾವುದೇ ದೃಶ್ಯದ ಸಮಗ್ರ ಚಿತ್ರಣವನ್ನು ಕೊಡುವುದು ಇಂತಹ ಚಿತ್ರಗಳ ವೈಶಿಷ್ಟ್ಯ.

ಪನೋರಮಾ ಚಿತ್ರಗಳ ವ್ಯಾಪ್ತಿ ಮಾನವ ದೃಷ್ಟಿಯ ವ್ಯಾಪ್ತಿಯ ಆಸುಪಾಸಿನಲ್ಲೇ ಇರುವುದು ವಿಶೇಷ. ಇಂತಹ ಚಿತ್ರಗಳು ಎಷ್ಟು ಉದ್ದವಿರುತ್ತವೋ ಅದರ ಎರಡರಷ್ಟಾದರೂ ಅಗಲವಾಗಿರುತ್ತವೆ.

ಪನೋರಮಾ ಚಿತ್ರಗಳನ್ನು ಸೆರೆಹಿಡಿಯಲು ಬಳಕೆಯಾಗುವ ವಿಧಾನಗಳು ಹಲವು. ಇಂತಹ ಚಿತ್ರಗಳನ್ನು ತೆಗೆಯಲು ಪ್ರತ್ಯೇಕ ಲೆನ್ಸುಗಳಷ್ಟೇ ಅಲ್ಲ, ವಿಶೇಷ ಕ್ಯಾಮೆರಾಗಳೂ ಬಳಕೆಯಾಗುತ್ತವೆ. ಹಾಗೆಂದಮಾತ್ರಕ್ಕೆ ಮಾಮೂಲಿ ಕ್ಯಾಮೆರಾ ಬಳಸಿ ಪನೋರಮಾ ಚಿತ್ರಗಳನ್ನು ತೆಗೆಯಲು ಸಾಧ್ಯವಿಲ್ಲ ಎಂದೇನೂ ಇಲ್ಲ. ಪನೋರಮಾ ಚಿತ್ರಗಳನ್ನು ತೆಗೆಯುವ ಸೌಲಭ್ಯ ಹಲವು ಸಾಮಾನ್ಯ ಕ್ಯಾಮೆರಾಗಳಲ್ಲಿ, ಮೊಬೈಲುಗಳಲ್ಲೂ ಇದೆ. ಒಂದು ದೃಶ್ಯದ ನಾಲ್ಕಾರು ಚಿತ್ರಗಳನ್ನು ತೆಗೆದು (ಅಡ್ಡವಾಗಿ ಅಥವಾ ಲಂಬವಾಗಿ) ಅವನ್ನೆಲ್ಲ ಜೋಡಿಸುವ ಮೂಲಕ ಇಲ್ಲಿ ಪನೋರಮಾ ಚಿತ್ರ ರೂಪಿಸಲಾಗುತ್ತದೆ.

ಶುಕ್ರವಾರ, ಡಿಸೆಂಬರ್ 9, 2016

ನೆಟ್ ಇಲ್ಲದೆ ಮೊಬೈಲ್ ಬ್ಯಾಂಕಿಂಗ್ - ಇಲ್ಲಿದೆ *99# ಸೇವೆಯ ವಿವರ!

ಟಿ. ಜಿ. ಶ್ರೀನಿಧಿ

ಹಣಕಾಸಿನ ವ್ಯವಹಾರಗಳಿಗೆ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಬಗೆಗೆ, ಅದನ್ನು ಸಾಧ್ಯವಾಗಿಸುವ ವಿವಿಧ ಸೌಲಭ್ಯಗಳ ಬಗೆಗೆ ಈಚೆಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಇಂತಹ ಸೌಲಭ್ಯಗಳ ಪೈಕಿ ಅಂತರಜಾಲ ಸಂಪರ್ಕದ ಅಗತ್ಯವಿಲ್ಲದೆ ಸಾಮಾನ್ಯ ಮೊಬೈಲುಗಳಲ್ಲೂ ಬಳಸಬಹುದಾದ ಒಂದು ವ್ಯವಸ್ಥೆಯೂ ಇದೆ ಎನ್ನುವುದು ವಿಶೇಷ. ಭಾರತ ಸರಕಾರದ ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (ಎನ್‌ಪಿಸಿಐ) ರೂಪಿಸಿರುವ 'ನ್ಯಾಶನಲ್ ಯೂನಿಫೈಡ್ ಯುಎಸ್‍ಎಸ್‌ಡಿ ಪ್ಲಾಟ್‌ಫಾರ್ಮ್ (ಎನ್‌ಯುಯುಪಿ)' ಎಂಬ ಈ ವ್ಯವಸ್ಥೆಯನ್ನು ಹಲವಾರು ಪ್ರಮುಖ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಒದಗಿಸುತ್ತಿವೆ.

ಪ್ರೀಪೇಯ್ಡ್ ಮೊಬೈಲಿನ ಬ್ಯಾಲೆನ್ಸ್ ತಿಳಿದುಕೊಳ್ಳಲು ನಾವು *123# ನಂತಹ ವಿಶೇಷ ಸಂಖ್ಯೆಗಳನ್ನು ಬಳಸುತ್ತೇವಲ್ಲ, ಅಲ್ಲಿ ಬಳಕೆಯಾಗುವ ವ್ಯವಸ್ಥೆಯೇ ಅನ್‌ಸ್ಟ್ರಕ್ಚರ್ಡ್ ಸಪ್ಲಿಮೆಂಟರಿ ಸರ್ವಿಸ್ ಡೇಟಾ, ಅರ್ಥಾತ್ ಯುಎಸ್‌ಎಸ್‌ಡಿ. ಮೊಬೈಲ್ ಸೇವೆ ಒದಗಿಸುವ ಸಂಸ್ಥೆ ಹಾಗೂ ಗ್ರಾಹಕರ ನಡುವೆ ಮಾಹಿತಿ ಸಂವಹನಕ್ಕೆಂದು ಬಳಕೆಯಾಗುವ ಶಿಷ್ಟಾಚಾರಕ್ಕೆ (ಪ್ರೋಟೋಕಾಲ್) ಇದೊಂದು ಉದಾಹರಣೆ.

ಎನ್‌ಯುಯುಪಿ ಮೂಲಕ ಮೊಬೈಲ್ ಬ್ಯಾಂಕಿಂಗ್ ಸೇವೆ ಒದಗಿಸಲೂ ಇದೇ ವ್ಯವಸ್ಥೆಯನ್ನು ಬಳಸಲಾಗುತ್ತಿದೆ.

ಗುರುವಾರ, ಡಿಸೆಂಬರ್ 8, 2016

'ಮೋಟೋ ಇ೩ ಪವರ್' ಹೇಗಿದೆ ಗೊತ್ತೇ?

ಕಡಿಮೆ ಬೆಲೆಯ ಹೊಸ ಮೋಟರೋಲಾ ಫೋನು 'ಮೋಟೋ ಇ೩ ಪವರ್' ಹೇಗಿದೆ? ಪರಿಣತ ಟೆಕ್ ಬ್ಲಾಗರ್, ಇಜ್ಞಾನದ ಅತಿಥಿ ಅಂಕಣಕಾರ ಅನಿರುದ್ಧ ಕಾರ್ತಿಕ್ ಅಭಿಪ್ರಾಯ ಇಲ್ಲಿದೆ!
ಅನಿರುದ್ಧ ಕಾರ್ತಿಕ್ 

ಎರಡು ವರ್ಷಗಳ ಹಿಂದೆ ಮೋಟರೋಲಾ ಸಂಸ್ಥೆ ಮೊದಲ ಮೋಟೋ ಇ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದಾಗ ಅದು ಅಗ್ಗದ ಮೊಬೈಲುಗಳ ಮಾನದಂಡವನ್ನೇ ಬದಲಿಸಿತ್ತು. ಅಂದಿನ ಕಾಲಕ್ಕೆ ಸಾಕಷ್ಟು ಉತ್ತಮ ಗುಣಮಟ್ಟದ ಫೋನ್ ಎಂದು ಕರೆಸಿಕೊಂಡಿದ್ದ ಮೋಟೋ ಇ ಮೂಲಕ ಅನೇಕ ಬಳಕೆದಾರರು ಸ್ಮಾರ್ಟ್‌ಫೋನ್ ಜಗತ್ತನ್ನು ಪ್ರವೇಶಿಸಿದರು. ನಂತರದ ದಿನಗಳಲ್ಲಿ ಶಿಯೋಮಿ, ಲೆನೊವೊ, ಏಸಸ್ ಮುಂತಾದ ಹಲವಾರು ಸಂಸ್ಥೆಗಳು ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಫೋನುಗಳನ್ನು ಪರಿಚಯಿಸಲು, ದರಸಮರ ಪ್ರಾರಂಭಿಸಲು ಮೋಟೋ ಇ ಕೂಡ ಕಾರಣವಾಗಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ. 

ಹೀಗೆ ಸ್ಮಾರ್ಟ್‌ಫೋನ್ ಮಾರುಕಟ್ಟೆಯ ಸ್ವರೂಪವನ್ನೇ ಬದಲಿಸಿದ ಮೋಟೋ ಇ ಸ್ಮಾರ್ಟ್ ಫೋನಿನ ಇತ್ತೀಚಿನ ಆವೃತ್ತಿಯೇ ರೂ. ೭೯೯೯ ಮುಖಬೆಲೆಯ 'ಮೋಟೋ ಇ೩ ಪವರ್'.

ಬುಧವಾರ, ಡಿಸೆಂಬರ್ 7, 2016

ಅಂಗೈಯಲ್ಲೇ ಗ್ರಂಥಾಲಯ, ಇದು ಡಿಜಿಟಲ್ ಲೈಬ್ರರಿ!

ಟಿ. ಜಿ. ಶ್ರೀನಿಧಿ

ತಂತ್ರಜ್ಞಾನ ಲೋಕದಲ್ಲಿ ಕೆಲವು ಘಟನೆಗಳಿಗೆ ಎಲ್ಲಿಲ್ಲದ ಮಹತ್ವ, ಜಗತ್ತನ್ನೇ ಬದಲಿಸಿದ ಶ್ರೇಯ.

ಈ ಘಟನೆಗಳಲ್ಲಿ ಹೊಸ ಸಂಗತಿಗಳ ಆವಿಷ್ಕಾರವೇ ಆಗಿರಬೇಕು ಎಂದೇನೂ ಇಲ್ಲ. ಆಗಲೇ ಅಸ್ತಿತ್ವದಲ್ಲಿರುವ ಪರಿಕಲ್ಪನೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕವೂ ಇಂತಹ ಮೈಲಿಗಲ್ಲುಗಳು ಸೃಷ್ಟಿಯಾಗುವುದುಂಟು.

ಇಂತಹುದೊಂದು ಘಟನೆಯ ಹಿಂದೆ ಇದ್ದ ವ್ಯಕ್ತಿ ಜರ್ಮನಿಯ ಯೊಹಾನೆಸ್ ಗುಟನ್‌ಬರ್ಗ್. ಏಷಿಯಾದ ಹಲವೆಡೆ ಹಂತಹಂತಗಳಲ್ಲಿ ರೂಪುಗೊಂಡಿದ್ದ ಮುದ್ರಣ ತಂತ್ರಜ್ಞಾನವನ್ನು ಕೊಂಚ ಸುಧಾರಿಸಿ, ಪ್ರಾಯೋಗಿಕವಾಗಿ ಅಳವಡಿಸಿದ ಆತನ ಸಾಧನೆ ಮುದ್ರಣ ತಂತ್ರಜ್ಞಾನದ ಉಗಮಕ್ಕೆ ಕಾರಣವಾಯಿತು. ಆ ಮೂಲಕ ಜ್ಞಾನಪ್ರಸಾರಕ್ಕೆ ಹೊಸ ವೇಗ ದೊರಕಿತು; ಮಾಹಿತಿಯನ್ನು ಯಾರು ಯಾವಾಗ ಬೇಕಿದ್ದರೂ ಪಡೆದುಕೊಳ್ಳಬಹುದೆಂಬ ಸಾಧ್ಯತೆ ಜಗತ್ತಿಗೆ ಗೋಚರಿಸಿತು.

ಮುಂದೆ ಕೆಲ ಶತಮಾನಗಳ ನಂತರ ಜ್ಞಾನಪ್ರಸಾರಕ್ಕೆ ಇಷ್ಟೇ ಮಹತ್ವದ ಕೊಡುಗೆ ನೀಡಿದ ಸಾಧನೆಗಳ ಸಾಲಿನಲ್ಲಿ ಅಂತರಜಾಲಕ್ಕೆ (ಇಂಟರ್‌ನೆಟ್) ಪ್ರಮುಖ ಸ್ಥಾನವಿರುವುದು ನಮಗೆಲ್ಲ ಗೊತ್ತೇ ಇದೆ. ಇದೇ ಅಂತರಜಾಲದ ಮೂಲಕ ಜ್ಞಾನಪ್ರಸಾರದ ವಿನೂತನ ಮಾರ್ಗವೊಂದನ್ನು ತೋರಿಸಿಕೊಟ್ಟ ಸಾಧನೆಯ ಜೊತೆಯಲ್ಲೂ ಗುಟನ್‌ಬರ್ಗ್ ಹೆಸರೇ ಇರುವುದು ವಿಶೇಷ.

ಸೋಮವಾರ, ಡಿಸೆಂಬರ್ 5, 2016

ವಾಟ್ಸ್‌ಆಪ್ - ಫೇಸ್‌ಬುಕ್‌ ನೆಮ್ಮದಿಗೆ ಐದು ಸೂತ್ರಗಳು

ಟಿ. ಜಿ. ಶ್ರೀನಿಧಿ

ಸೋಶಿಯಲ್ ನೆಟ್‌ವರ್ಕ್‌ಗಳಿಂದ ಅನುಕೂಲಗಳೆಷ್ಟಿವೆಯೋ ಅಷ್ಟೇ ಕಿರಿಕಿರಿಗಳೂ ಇವೆ. ವಿಪರೀತ ಸಂಖ್ಯೆಯ, ಕೆಲವೊಮ್ಮೆ ಸಭ್ಯತೆಯ ಗಡಿ ಮೀರಿದ ಪೋಸ್ಟು-ಮೆಸೇಜುಗಳು ಈ ಕಿರಿಕಿರಿಯ ಒಂದು ಮುಖವಾದರೆ ನಿರ್ದಿಷ್ಟ ವಿಚಾರಧಾರೆಯ ಪೋಸ್ಟುಗಳ ಪ್ರವಾಹ ಇದರ ಇನ್ನೊಂದು ಮುಖ. ವಾಟ್ಸ್‌ಆಪ್ - ಫೇಸ್‌ಬುಕ್‌‌ಗಳಲ್ಲಿ ಸಾಮಾನ್ಯವಾಗಿಬಿಟ್ಟಿರುವ ಈ ಕಿರಿಕಿರಿಗಳಿಂದ ಪಾರಾಗಲು ಬಳಸಬಹುದಾದ ಐದು ಸರಳ ಸೂತ್ರಗಳು ಇಲ್ಲಿವೆ.

ಶುಕ್ರವಾರ, ಡಿಸೆಂಬರ್ 2, 2016

ಬೇರೆ ನೆಟ್‌ವರ್ಕಿನ ಮೊಬೈಲಿಗೆ ಕರೆ - ಸಾಧ್ಯವಾಗುವುದು ಹೇಗೆ ಗೊತ್ತೇ?

ಟಿ. ಜಿ. ಶ್ರೀನಿಧಿ


ಈಗ ಎಲ್ಲೆಲ್ಲೂ ಮೊಬೈಲ್‌ನದೇ ಭರಾಟೆ. ಮಾತನಾಡುವುದು, ಸಂದೇಶ ಕಳುಹಿಸುವುದು ಅಷ್ಟೇ ಅಲ್ಲ, ಇನ್ನಿತರ ಅನೇಕ ಕೆಲಸಗಳಿಗೂ ನಾವು ಮೊಬೈಲ್ ಫೋನನ್ನೇ ಅವಲಂಬಿಸಿದ್ದೇವೆ. ಇಷ್ಟೆಲ್ಲ ಬಳಕೆದಾರರು ಇದ್ದಮೇಲೆ ಅವರಿಗೆಲ್ಲ ಸಂಪರ್ಕ ಒದಗಿಸುವ ಹಲವಾರು ಸಂಸ್ಥೆಗಳೂ ಇವೆ.

ಬೇರೆಬೇರೆ ಬಳಕೆದಾರರು ಬೇರೆಬೇರೆ ಸಂಸ್ಥೆಗಳಿಂದ ಪಡೆದ ದೂರವಾಣಿ ಸಂಪರ್ಕವನ್ನು ಬಳಸುವುದು ತೀರಾ ಸಾಮಾನ್ಯ ಸಂಗತಿ. ಈ ಸಂಪರ್ಕ ಬಳಸಿಕೊಂಡು ನಮ್ಮ ಗೆಳೆಯರನ್ನು - ಅವರು ಯಾವುದೇ ಸಂಸ್ಥೆಯ ಚಂದಾದಾರರಾಗಿರಲಿ - ಸುಲಭವಾಗಿ ಸಂಪರ್ಕಿಸಬಹುದೆನ್ನುವುದೂ ನಮಗೆ ಗೊತ್ತು.

ಮೊಬೈಲ್ ಆಗಿರಲಿ ಲ್ಯಾಂಡ್‌ಲೈನ್ ಆಗಿರಲಿ, ದೂರವಾಣಿ ಸೇವೆ ಒದಗಿಸುವ ಪ್ರತಿಯೊಂದು ಸಂಸ್ಥೆಯೂ ತನ್ನ ಚಂದಾದಾರರ ಅಗತ್ಯಗಳನ್ನು ಪೂರೈಸಲು ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಂಡಿರುತ್ತದೆ. ಜಾಲದ (ನೆಟ್‌ವರ್ಕ್) ಗುಣಮಟ್ಟ ಉತ್ತಮವಾಗಿಟ್ಟುಕೊಳ್ಳುವುದು, ಹೊಸಹೊಸ ಸೌಲಭ್ಯಗಳನ್ನು ಪರಿಚಯಿಸುವುದೆಲ್ಲ ಈ ವ್ಯವಸ್ಥೆಗಳ ಅಂಗವಾಗಿಯೇ.

ಆದರೆ ಆ ಸಂಸ್ಥೆಗಳು ಬರಿಯ ತಮ್ಮ ಜಾಲದ ಬಗೆಗೆ ತಲೆಕೆಡಿಸಿಕೊಂಡರೆ ಸಾಲುವುದಿಲ್ಲ.

ಬುಧವಾರ, ನವೆಂಬರ್ 30, 2016

ನಿಮಗೆ 'ರುಪೇ' ಗೊತ್ತೇ?

ಟಿ. ಜಿ. ಶ್ರೀನಿಧಿ


ಪ್ರಪಂಚದಲ್ಲಿ ಕ್ರೆಡಿಟ್ ಕಾರ್ಡ್ - ಡೆಬಿಟ್ ಕಾರ್ಡ್ ನೀಡುವ ಸಾವಿರಾರು ಬ್ಯಾಂಕುಗಳಿವೆ, ಲಕ್ಷಗಟ್ಟಲೆ ವ್ಯಾಪಾರಸ್ಥರಿದ್ದಾರೆ, ಕೋಟ್ಯಂತರ ಸಂಖ್ಯೆಯ ಗ್ರಾಹಕರಿದ್ದಾರೆ. ಕಾರ್ಡ್ ನೀಡುವ ಪ್ರತಿ ಬ್ಯಾಂಕಿನ ಸಂಪರ್ಕ ಪ್ರತಿಯೊಬ್ಬ ವ್ಯಾಪಾರಸ್ಥನಿಗೂ ಇರಬೇಕು ಎಂದರೆ ಅದು ಅಸಾಧ್ಯವೇ ಸರಿ. ಇಂತಹ ಪರಿಸ್ಥಿತಿಯಲ್ಲಿ ಗ್ರಾಹಕ, ವ್ಯಾಪಾರಸ್ಥ ಹಾಗೂ ಬ್ಯಾಂಕುಗಳ ನಡುವಿನ ಸಂಪರ್ಕ ಸೇತುವಿನಂತೆ ವೀಸಾ ಹಾಗೂ ಮಾಸ್ಟರ್‌ಕಾರ್ಡ್‌ನಂತಹ ಸಂಸ್ಥೆಗಳು ಕೆಲಸಮಾಡುತ್ತವೆ.

ಯಾವುದೇ ವ್ಯಾಪಾರಸ್ಥನೊಡನೆ ವ್ಯವಹರಿಸುವಾಗ ಗ್ರಾಹಕ ತನ್ನ ಕಾರ್ಡ್ ಬಳಸುತ್ತಾನೆ ಎಂದುಕೊಳ್ಳೋಣ. ಆತನ ಬ್ಯಾಂಕ್ ಖಾತೆ ಪರಿಶೀಲಿಸಿ ಅದರಲ್ಲಿ ಸಾಕಷ್ಟು ಹಣವಿದ್ದರೆ ಅದನ್ನು ಆತನ ಬ್ಯಾಂಕಿನಿಂದ ವ್ಯಾಪಾರಸ್ಥನ ಬ್ಯಾಂಕಿಗೆ-ಖಾತೆಗೆ ವರ್ಗಾಯಿಸಲು ನೆರವಾಗುವುದು ಈ ಸಂಸ್ಥೆಗಳ ಕೆಲಸ. ಇದಕ್ಕಾಗಿ ಅವು ಬ್ಯಾಂಕುಗಳಿಂದ ಶುಲ್ಕ ವಸೂಲಿ ಮಾಡುತ್ತವೆ.

ಸೋಮವಾರ, ನವೆಂಬರ್ 28, 2016

ಪವರ್‌ಸ್ಟೋರಿ: ಇದು ಬ್ಯಾಟರಿ ಸಮಾಚಾರ!

ಟಿ. ಜಿ. ಶ್ರೀನಿಧಿ

ಬಾಲ್ಯದ ದಿನಗಳ ವಿಷಯ. ಪಶ್ಚಿಮಘಟ್ಟದ ತಪ್ಪಲಿನ ನಮ್ಮ ಊರಿನಲ್ಲಿ ಹಗಲಿನಲ್ಲೇ ಕರೆಂಟು ಇರುತ್ತಿರಲಿಲ್ಲ, ಇನ್ನು ರಾತ್ರಿ ಸ್ಟ್ರೀಟ್ ಲೈಟಿರುತ್ತದೆಯೇ? ಮನೆಯೊಳಗೆ ಬೆಳಕಿಗಾಗಿ ಸೀಮೆಎಣ್ಣೆ ದೀಪ ಉರಿಸಿದಂತೆ ಹೊರಗಡೆಯ ಸಂಚಾರಕ್ಕೆ ಟಾರ್ಚು ನಮ್ಮ ಅಚ್ಚುಮೆಚ್ಚಿನ ಸಂಗಾತಿಯಾಗಿತ್ತು.

ಟಾರ್ಚನ್ನೇ ಬ್ಯಾಟರಿಯೆಂದು ಕರೆಯುವ ಅಭ್ಯಾಸ ಹಲವರಿಗಿದೆ; ಆದರೆ ನಮಗೆ ಪರಿಚಯವಿದ್ದ ಬ್ಯಾಟರಿ ಟಾರ್ಚಿನೊಳಗಿರುತ್ತದಲ್ಲ, ಅದು (ಕೆಲವರು ಅದನ್ನು ಸೆಲ್ಲು ಅಂತಲೂ ಕರೆಯುತ್ತಾರೆ). ಯಾವತ್ತೋ ಒಂದು ದಿನ ಸಂಜೆಯ ವಾಕಿಂಗ್ ಮುಗಿಸುವ ವೇಳೆಗೆ ಟಾರ್ಚಿನ ಬೆಳಕು ಮಂಕಾಯಿತು ಅನ್ನಿಸಿದರೆ ಹೊಸ ಬ್ಯಾಟರಿ ಕೊಂಡುತರುವ ಕೆಲಸ ನಾಳೆಯ ಕೆಲಸಗಳ ಪಟ್ಟಿಗೆ ಸೇರಿಬಿಡುವುದು.

ನಿಶ್ಶಕ್ತವಾಗಿ ನಿವೃತ್ತಿ ಪಡೆಯುವ ಬ್ಯಾಟರಿಗೆ ವಿದಾಯ ಹೇಳುವ ಕ್ರಮವೂ ನಮ್ಮೂರಿನಲ್ಲಿತ್ತು. ನೆಲಕ್ಕೆ ಸಗಣಿ ನೀರು ಹಾಕಿ ಸಾರಿಸುವವರು ಬಣ್ಣ ಗಾಢವಾಗಿ ಬರಲಿ ಎಂದು ಬ್ಯಾಟರಿಯೊಳಗಿನ ಕಪ್ಪು ಪುಡಿಯನ್ನು ಸಗಣಿ ನೀರಿಗೆ ಬೆರೆಸುತ್ತಿದ್ದರು.

ನಿಶ್ಶಕ್ತ ಬ್ಯಾಟರಿ ಹಾಗಿರಲಿ, ಅಂಗಡಿಗೆ ಹೋಗಿ ಬ್ಯಾಟರಿ ಕೊಳ್ಳುವ ಅಭ್ಯಾಸಕ್ಕೇ ವಿದಾಯ ಹೇಳಬೇಕಾದ ಪರಿಸ್ಥಿತಿ ಮುಂದಿನ ವರ್ಷಗಳಲ್ಲಿ ಬಂತು.

ಬುಧವಾರ, ನವೆಂಬರ್ 23, 2016

ಮನರಂಜನೆ, ಈಗ ನಮ್ಮ ಅಂಗೈಯಲ್ಲಿ!

ಟಿ. ಜಿ. ಶ್ರೀನಿಧಿ


ನಮ್ಮ ಮನೆಗಳಿಗೆ ಟಿವಿ ಬಂದು ಒಂದೆರಡು ದಶಕಗಳಾಗಿವೆ. ಟಿವಿ ಪರಿಚಯವಾದ ಹೊಸತರಲ್ಲಿ ನಮಗೆ ದೊರಕುತ್ತಿದ್ದದ್ದು ಸೀಮಿತ ಆಯ್ಕೆಗಳಷ್ಟೇ. ಚಿತ್ರಗೀತೆ ಕೇಳಲು ಶುಕ್ರವಾರ ರಾತ್ರಿ, ಸಿನಿಮಾ ನೋಡಲು ಭಾನುವಾರ ಸಂಜೆಗಳಿಗೆ ಕಾಯಬೇಕಿದ್ದ ಸಮಯ ಅದು.

ಆನಂತರ ದೊಡ್ಡ ಊರುಗಳಿಗೆ ಕೇಬಲ್ ಬಂತು, ಕೊಂಚ ಸಮಯದ ನಂತರ ಹಳ್ಳಿಗಳಲ್ಲೂ ಡಿಶ್ ಆಂಟೆನಾಗಳು ಕಾಣಿಸಿಕೊಂಡವು. ಒಂದೇ ಚಾನೆಲ್ ನೋಡಬೇಕಿದ್ದ ಅನಿವಾರ್ಯತೆ ಹೋಗಿ ಹತ್ತಾರು ಚಾನಲ್ಲುಗಳ ಪೈಕಿ ಇಷ್ಟವಾದುದನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ ನಮಗೆ ಸಿಕ್ಕಿತು. ಈಗಂತೂ ಟಿವಿಯ ಸೆಟ್‌ಟಾಪ್ ಬಾಕ್ಸು ನೂರಾರು ಚಾನಲ್ಲುಗಳ ಲೋಕಕ್ಕೆ ನಮ್ಮನ್ನು ನೇರವಾಗಿ ಕರೆದೊಯ್ಯುತ್ತದೆ.

ಇಷ್ಟೆಲ್ಲ ಬದಲಾವಣೆಯಾದರೂ ನಾವು ಟೀವಿ ಕಾರ್ಯಕ್ರಮಗಳನ್ನು ನೋಡುವ ರೀತಿ ಮಾತ್ರ ತೀರಾ ಈಚಿನವರೆಗೂ ಹೆಚ್ಚೇನೂ ಬದಲಾಗಿರಲಿಲ್ಲ. ನೋಡಲು ಇಷ್ಟವಾಗುವಂತಹ ಕಾರ್ಯಕ್ರಮ ಸಿಗುವವರೆಗೂ ಚಾನಲ್ಲುಗಳನ್ನು ಬದಲಿಸುತ್ತಾ ಹೋಗುವುದು ಈಗಲೂ ನಮ್ಮಲ್ಲಿ ಅನೇಕರ ಅಭ್ಯಾಸ.

ಈ ಪರಿಸ್ಥಿತಿ ಬದಲಿಸಿ, ನಮ್ಮ ಆಯ್ಕೆಯ ಕಾರ್ಯಕ್ರಮವನ್ನು ನಮಗೆ ಬೇಕಾದಾಗ ನೋಡಲು ಅನುವುಮಾಡಿಕೊಟ್ಟಿರುವುದು ವೀಡಿಯೋ ಆನ್ ಡಿಮ್ಯಾಂಡ್ ಎಂಬ ಪರಿಕಲ್ಪನೆ.

ಭಾನುವಾರ, ನವೆಂಬರ್ 20, 2016

ತಂತ್ರಜ್ಞಾನ: ನಾಳೆಗಳ ನಿರ್ಮಾಣ

ಆಳ್ವಾಸ್ ನುಡಿಸಿರಿ - ೨೦೧೬ರಲ್ಲಿ ಮಾಡಿದ ಭಾಷಣದ ಪೂರ್ಣರೂಪ

ಟಿ. ಜಿ. ಶ್ರೀನಿಧಿ

ನಾಳೆಗಳನ್ನು ನಿರ್ಮಿಸುವಲ್ಲಿ ವಿದ್ಯಾಸಂಸ್ಥೆಗಳ ಪಾತ್ರ ಬಹಳ ಮಹತ್ವದ್ದು. ಅಂತಹ ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಿರುವ ಸಂಸ್ಥೆಯೊಂದು ನಾಳೆಗಳ ನಿರ್ಮಾಣದ ಕುರಿತಾಗಿಯೇ ಈ ಸಮ್ಮೇಳನವನ್ನು ಆಯೋಜಿಸಿರುವುದು ಅತ್ಯಂತ ಸಮಂಜಸವಾಗಿದೆ. ಕಳೆದೆರಡು ದಿನಗಳಿಂದ ವಿವಿಧ ಕ್ಷೇತ್ರದ ನಾಳೆಗಳ ಕುರಿತ ಅನೇಕ ಸಂಗತಿಗಳನ್ನು, ಅನಿಸಿಕೆ-ಅಭಿಪ್ರಾಯಗಳನ್ನು ನಾವೆಲ್ಲ ತಿಳಿದುಕೊಂಡಿದ್ದೇವೆ. ಇದೀಗ ತಂತ್ರಜ್ಞಾನ ಕ್ಷೇತ್ರದ ನಾಳೆಗಳ ಕುರಿತು ಮಾತನಾಡುವ ಸಮಯ.

೨೦೦೦ನೇ ಸಾಲಿನಲ್ಲಿ ಜಾವೆದ್ ಅಖ್ತರ್‌ ಅವರಿಗೆ ಅತ್ಯುತ್ತಮ ಗೀತರಚನೆಗೆಂದು ಚಲನಚಿತ್ರ ಕ್ಷೇತ್ರದ ರಾಷ್ಟ್ರಪುರಸ್ಕಾರ ಲಭಿಸಿತ್ತು. "ಹಾರುವ ಹಕ್ಕಿಗೆ ಬೀಸುವ ಗಾಳಿಗೆ ಸೀಮೆಯ ಹಂಗಿಲ್ಲ, ಮನುಜ ಮನುಜನ ನಡುವಲಿ ಮಾತ್ರ ಗಡಿಗಳಿಗೆಣೆಯಿಲ್ಲ" - ಇದು ಆ ಗೀತೆಯ ಮೊದಲ ಕೆಲ ಸಾಲುಗಳ ಭಾವಾರ್ಥ.

ನಿಜ, ಬಹುತೇಕ ಸರಹದ್ದುಗಳೆಲ್ಲ ಮನುಷ್ಯರದೇ ಸೃಷ್ಟಿ. ರಾಷ್ಟ್ರಗಳ, ರಾಜ್ಯಗಳ, ಭಾಷೆಗಳ, ಧರ್ಮಗಳ ಹೆಸರಿನಲ್ಲಿ ಅದೆಷ್ಟೋ ಸರಹದ್ದುಗಳನ್ನು ನಮ್ಮ ಸುತ್ತಲೂ ನಾವೇ ನಿರ್ಮಿಸಿಕೊಂಡುಬಿಟ್ಟಿದ್ದೇವೆ.

ಇಂತಹ ಸರಹದ್ದುಗಳ ಕಾಟ ಯಾವ ಕ್ಷೇತ್ರವನ್ನೂ ಬಿಟ್ಟಿಲ್ಲ. ಇವುಗಳ ಕೈವಾಡ ತಂತ್ರಜ್ಞಾನ ಕ್ಷೇತ್ರದಲ್ಲೂ ಇದೆ.

ಗುರುವಾರ, ಅಕ್ಟೋಬರ್ 20, 2016

ನಮ್ಮ ಮೊಬೈಲು, ನಮ್ಮದೇ ಭಾಷೆ!

ಟಿ. ಜಿ. ಶ್ರೀನಿಧಿ

ದಿನನಿತ್ಯದ ವ್ಯವಹಾರದಲ್ಲಿ ನಾವು ಮಾತನಾಡುವುದು ನಮ್ಮದೇ ಭಾಷೆಯಲ್ಲಿ. ಸ್ಪಷ್ಟ ಚಿಂತನೆ ಹಾಗೂ ಸಂವಹನ ಸಾಧ್ಯವಾಗುವುದು ಎಷ್ಟಾದರೂ ನಮ್ಮ ಪರಿಸರದ ಭಾಷೆಯಲ್ಲೇ ತಾನೇ?

ಆದರೆ ಸ್ಮಾರ್ಟ್ ಫೋನ್ ಬಳಸುವಾಗ ಮಾತ್ರ ನಮ್ಮದಲ್ಲದ ಭಾಷೆಯನ್ನು ಬಳಸುವ ಅನಿವಾರ್ಯತೆಗೆ ನಾವು ಸಿಲುಕುತ್ತೇವೆ. ಸಂದೇಶ ಕಳುಹಿಸುವುದು ಕನ್ನಡದಲ್ಲೇ ಆದರೂ ಇಂಗ್ಲಿಷ್ ಲಿಪಿಯನ್ನು ಬಳಸುತ್ತೇವೆ, ಕನ್ನಡ ಲಿಪಿ ಮೂಡಿಸುವುದೇ ಆದರೂ ಅದಕ್ಕಾಗಿ ಒಂದಲ್ಲ ಒಂದು ರೂಪದಲ್ಲಿ ಮತ್ತೆ ಇಂಗ್ಲಿಷಿನ ಮೊರೆಹೋಗುತ್ತೇವೆ.

ಇದನ್ನು ತಪ್ಪಿಸಿ ನಮ್ಮ ಫೋನನ್ನು ನಮ್ಮದೇ ಭಾಷೆಯಲ್ಲಿ ಬಳಸುವುದು ಸಾಧ್ಯವಿಲ್ಲವೇ? ಖಂಡಿತಾ ಸಾಧ್ಯವಿದೆ. ಅಷ್ಟೇ ಅಲ್ಲ, ಈ ನಿಟ್ಟಿನಲ್ಲಿ ಹಲವು ಪ್ರಯತ್ನಗಳೂ ನಡೆಯುತ್ತಿವೆ.

ಮಂಗಳವಾರ, ಅಕ್ಟೋಬರ್ 18, 2016

ಮೋಟರೋಲಾದಿಂದ ಹೊಸ ಮಾಡ್ಯುಲರ್ ಫೋನು!

ಟಿ. ಜಿ. ಶ್ರೀನಿಧಿ


ಇಂದಿನ ಸ್ಮಾರ್ಟ್‌ಫೋನುಗಳು ಎಷ್ಟೆಲ್ಲ ಕೆಲಸಮಾಡುತ್ತವೆ: ಸಿನಿಮಾ ನೋಡುವ ಪರದೆಯಾಗಿ, ಛಾಯಾಚಿತ್ರ ಸೆರೆಹಿಡಿವ ಕ್ಯಾಮೆರಾ ಆಗಿ, ಆಟವಾಡುವ ಸಾಧನವಾಗಿ - ಅವು ಬಳಕೆಯಾಗುವ ಉದ್ದೇಶಗಳ ದೊಡ್ಡದೊಂದು ಪಟ್ಟಿಯೇ ಇದೆ.

ಇಷ್ಟೆಲ್ಲ ಕೆಲಸಗಳಿಗೆ ಬಳಸುವುದರಿಂದಲೋ ಏನೋ, ನಮಗೆ ನಮ್ಮ ಫೋನ್ ಕುರಿತು ಬಹುಬೇಗ ಅಸಮಾಧಾನವೂ ಆಗುತ್ತದೆ. ಕೊಂಡು ಮೂರು ತಿಂಗಳಾಗುವಷ್ಟರಲ್ಲಿ ಅತ್ಯುತ್ತಮ ಕ್ಯಾಮೆರಾ ಇದೆಯೆಂದು ಕೊಂಡಿದ್ದ ಫೋನ್ ಅಷ್ಟೇನೂ ಚೆಂದದ ಫೋಟೋ ತೆಗೆಯುತ್ತಿಲ್ಲ ಎನಿಸುತ್ತದೆ, ಇನ್ನು ಕೆಲದಿನಗಳಲ್ಲಿ ರ್‍ಯಾಮ್ ಸಾಲದು ಎನಿಸುತ್ತದೆ, ಆರು ತಿಂಗಳಲ್ಲಿ ಅದರ ಬ್ಯಾಟರಿ ಸಾಮರ್ಥ್ಯ ಏನೇನೂ ಇಲ್ಲವಲ್ಲ ಎಂಬ ಭಾವನೆ ಮೂಡುತ್ತದೆ.

ಇಂತಹ ಸಂದರ್ಭಗಳಲ್ಲೆಲ್ಲ ಅನ್ನಿಸುವುದಿಷ್ಟು: ಈ ಹಿಂದೆ ಕಂಪ್ಯೂಟರುಗಳಲ್ಲಿ ಮಾಡುತ್ತಿದ್ದಂತೆ ಮೊಬೈಲುಗಳನ್ನೂ ಅಪ್‌ಗ್ರೇಡ್ ಮಾಡುವಂತಿದ್ದರೆ ಎಷ್ಟು ಚೆನ್ನಾಗಿತ್ತು! ರ್‍ಯಾಮ್ ಸಾಲದೆಬಂದಾಗ ಒಂದೆರಡು ಜಿಬಿ ಹೆಚ್ಚುವರಿ ರ್‍ಯಾಮ್ ಸೇರಿಸುವಂತಿದ್ದರೆ, ಕ್ಯಾಮೆರಾ ಚೆನ್ನಾಗಿಲ್ಲ ಎನ್ನಿಸಿದಾಗ ಹೊಸ ಕ್ಯಾಮೆರಾ ಅಳವಡಿಸಿಕೊಳ್ಳುವಂತಿದ್ದರೆ, ಇಲ್ಲದ ಸೌಲಭ್ಯ ಬೇಕೆನಿಸಿದಾಗ ಹೊಸ ಫೋನ್ ಕೊಳ್ಳುವ ಬದಲು ಆ ಸೌಲಭ್ಯಕ್ಕಷ್ಟೇ ದುಡ್ಡು ಕೊಟ್ಟು ಕೊಳ್ಳುವಂತಿದ್ದರೆ?

ಸೋಮವಾರ, ಅಕ್ಟೋಬರ್ 17, 2016

ಐಟಿಗೆ ಹೊಸ ತಿರುವು ಕೊಟ್ಟ ೧೯೬೮ರ ಆ ದಿನ

ಟಿ. ಜಿ. ಶ್ರೀನಿಧಿ

ಮಾಹಿತಿ ತಂತ್ರಜ್ಞಾನ ಜಗತ್ತಿನ ಬಹುತೇಕ ಸಾಧನೆಗಳ ಹಿಂದೆ ಅನೇಕ ವ್ಯಕ್ತಿಗಳ ಪರಿಶ್ರಮವಿರುತ್ತದೆ, ಸುದೀರ್ಘ ಅವಧಿಯಲ್ಲಿ ನಡೆದ ಹಲವು ಘಟನೆಗಳ ಛಾಯೆಯೂ ಕಾಣಸಿಗುತ್ತದೆ. ಹೀಗಾಗಿಯೇ ಏನೋ ಇಂತಹ ತಂತ್ರಜ್ಞಾನವನ್ನು ರೂಪಿಸಿದವರು ಇಂತಹವರೇ ಎಂದು ನಿಖರವಾಗಿ ಗುರುತಿಸುವುದು ಅದೆಷ್ಟೋ ಸಂದರ್ಭಗಳಲ್ಲಿ ಸಾಧ್ಯವಾಗುವುದೇ ಇಲ್ಲ.

ಹಾಗೆಂದಮಾತ್ರಕ್ಕೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲುಗಳೇ ಇಲ್ಲವೆಂದೇನೂ ಹೇಳುವಂತಿಲ್ಲ. ಒಂದು ಸಂದರ್ಭದಲ್ಲಿ ಒಂದು ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಮಹತ್ವದ ಘಟನೆಗಳು ನಡೆದಿರುವುದು ಹಾಗಿರಲಿ, ಒಂದೇ ಘಟನೆ ಇಡಿಯ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೇ ಹೊಸ ತಿರುವನ್ನು ತಂದುಕೊಟ್ಟ ಉದಾಹರಣೆಗಳೂ ಇವೆ.

ಅಂತಹುದೊಂದು ಘಟನೆ ೧೯೬೮ರ ಡಿಸೆಂಬರ್ ೯ರಂದು ನಡೆದಿತ್ತು.

ಶುಕ್ರವಾರ, ಅಕ್ಟೋಬರ್ 14, 2016

ಸಿ ಸೃಷ್ಟಿಕರ್ತನ ನೆನಪಿನಲ್ಲಿ

'ಸಿ' ಪ್ರೋಗ್ರಾಮಿಂಗ್ ಭಾಷೆಯನ್ನು ರೂಪಿಸಿದ ಡಾ. ಡೆನ್ನಿಸ್ ರಿಚಿ ನಿಧನರಾಗಿ ಇದೀಗ  (ಅಕ್ಟೋಬರ್ ೨೦೧೬) ಐದು ವರ್ಷ. ಈ ಸಂದರ್ಭದಲ್ಲಿ ಅವರ ನೆನಪಿನಲ್ಲೊಂದು ಬರಹ...
ಟಿ. ಜಿ. ಶ್ರೀನಿಧಿ

ಡಾ. ಡೆನ್ನಿಸ್ ರಿಚಿ - ವಿಶ್ವದೆಲ್ಲೆಡೆಯ ಕಂಪ್ಯೂಟರ್ ವಿಜ್ಞಾನ ವಿದ್ಯಾರ್ಥಿಗಳಿಗೆಲ್ಲ ಇದು ಚಿರಪರಿಚಿತ ಹೆಸರು. ಬಹುತೇಕ ವಿದ್ಯಾರ್ಥಿಗಳೆಲ್ಲ ಮೊದಲಿಗೆ ಕಲಿಯುವ 'ಸಿ' ಪ್ರೋಗ್ರಾಮಿಂಗ್ ಭಾಷೆಯನ್ನು ರೂಪಿಸುವುದರಲ್ಲಿ ಅವರ ಕೊಡುಗೆ ಅಪಾರವಾದದ್ದು. ಸಿ ಬಗ್ಗೆ ಅವರು ಬರೆದ ಪುಸ್ತಕವಂತೂ ಎಲ್ಲ ವಿದ್ಯಾರ್ಥಿಗಳ ಕೈಯಲ್ಲೂ ಕಾಣಸಿಗುತ್ತದೆ! ಅಷ್ಟೇ ಅಲ್ಲ, ಅತ್ಯಂತ ಜನಪ್ರಿಯ ಕಾರ್ಯಾಚರಣ ವ್ಯವಸ್ಥೆ 'ಯುನಿಕ್ಸ್' ಸೃಷ್ಟಿಸಿದ ತಂಡದಲ್ಲೂ ಡೆನ್ನಿಸ್ ಮಹತ್ವದ ಪಾತ್ರ ವಹಿಸಿದ್ದರು.

ಸಿ ಹಾಗೂ ಯುನಿಕ್ಸ್ ಕುರಿತು ೧೯೬೦-೭೦ರ ದಶಕಗಳಲ್ಲಿ ಡೆನ್ನಿಸ್ ಮತ್ತವರ ಸಹೋದ್ಯೋಗಿಗಳು ಬೆಲ್ ಲ್ಯಾಬ್ಸ್‌ನಲ್ಲಿ ಮಾಡಿದ ಕೆಲಸವೇ ಇಂದಿನ ಹಲವಾರು ಕ್ರಾಂತಿಕಾರಕ ತಂತ್ರಜ್ಞಾನಗಳಿಗೆ ಆಧಾರ ಎಂದರೆ ಡೆನ್ನಿಸ್ ಸಾಧನೆಯ ಮಹತ್ವದ ಅರಿವಾಗುತ್ತದೆ.

ಬುಧವಾರ, ಸೆಪ್ಟೆಂಬರ್ 14, 2016

ಕನ್ನಡ ಪುಸ್ತಕಗಳ ಇ-ಅವತಾರ

ಟಿ. ಜಿ. ಶ್ರೀನಿಧಿ


ತಂತ್ರಜ್ಞಾನ ಹಾಗೂ ಪುಸ್ತಕ ಸಂಸ್ಕೃತಿಯ ಮಾತು ಒಟ್ಟಿಗೆ ಕೇಳಿಬಂದಾಗಲೆಲ್ಲ ನಮಗೆ ಪರಸ್ಪರ ವಿರುದ್ಧವಾದ ಎರಡು ವಾದಗಳು ಕೇಳಸಿಗುತ್ತವೆ. "ಟೆಕ್ನಾಲಜಿಯಿಂದಾಗಿ ಪುಸ್ತಕ ಓದುವ ಹವ್ಯಾಸವೇ ಕಡಿಮೆಯಾಗುತ್ತಿದೆ" ಎಂದು ಕೆಲವರು ಹೇಳಿದರೆ "ಪುಸ್ತಕ ಸಂಸ್ಕೃತಿ ಉಳಿಯಬೇಕಾದರೆ ತಂತ್ರಜ್ಞಾನದ ಸಹಾಯ ಬೇಕೇಬೇಕು" ಎಂದು ಇನ್ನು ಕೆಲವರು ಹೇಳುತ್ತಾರೆ. ಸಂತೋಷದ ವಿಷಯವೆಂದರೆ ಇಷ್ಟೆಲ್ಲ ಮಾತನಾಡುವವರ ನಡುವೆ ಸದ್ದಿಲ್ಲದೆ ಕೆಲಸಮಾಡುವವರೂ ಅನೇಕರಿದ್ದಾರೆ, ಹಾಗೂ ಅವರ ಪ್ರಯತ್ನಗಳ ಫಲವಾಗಿ ಇಂದು ಕನ್ನಡ ಪುಸ್ತಕಗಳೂ ಇ-ಅವತಾರದಲ್ಲಿ ಕಾಣಿಸಿಕೊಳ್ಳುತ್ತಿವೆ. ಓದುಗ, ಪ್ರಕಾಶಕ, ತಂತ್ರಜ್ಞ ಹಾಗೂ ಸರಕಾರ - ಹೀಗೆ ನಾಲ್ಕೂ ನಿಟ್ಟಿನಿಂದ ನಡೆದ ಪ್ರಯತ್ನಗಳಿಂದಾಗಿ ಕನ್ನಡ ಪುಸ್ತಕಗಳು ಡಿಜಿಟಲ್ ಲೋಕದಲ್ಲಿ ತಮ್ಮ ಸ್ಥಾನ ಕಂಡುಕೊಳ್ಳುತ್ತಿವೆ. ಈ ಸಂದರ್ಭದಲ್ಲಿ ಸದ್ಯದ ಪರಿಸ್ಥಿತಿಯ ಒಂದು ಅವಲೋಕನ ಇಲ್ಲಿದೆ.

ಮಂಗಳವಾರ, ಸೆಪ್ಟೆಂಬರ್ 6, 2016

ಗ್ಯಾಜೆಟ್ ಜಗತ್ತಿಗೂ ಬಂದ ಟೂ-ಇನ್-ಒನ್

ಟಿ. ಜಿ. ಶ್ರೀನಿಧಿ


ಹಿಂದಿನ ಕಾಲದಲ್ಲಿ ರೇಡಿಯೋ ಪ್ರತಿಷ್ಠೆಯ ಸಂಕೇತವಾಗಿತ್ತಂತೆ. ಇಷ್ಟು ದೊಡ್ಡ ರೇಡಿಯೋ ಮನೆಯಲ್ಲಿದೆ ಎನ್ನುವುದೇ ಅಂದಿನ ಮಟ್ಟಿಗೆ ವಿಶೇಷವಾದ ಸಂಗತಿಯಾಗಿದ್ದಿರಬೇಕು.

ಆಮೇಲೆ ಯಾವಾಗಲೋ ಟೇಪ್ ರೆಕಾರ್ಡರ್ ಮಾರುಕಟ್ಟೆಗೆ ಬಂತು. ಅದರೊಡನೆ ರೇಡಿಯೋ ಸ್ಟೇಶನ್ನಿನವರು ಪ್ರಸಾರ ಮಾಡುವ ಹಾಡನ್ನಷ್ಟೇ ಕೇಳಬೇಕಾದ ಅನಿವಾರ್ಯತೆಯೂ ಹೋಯಿತು; ನಮಗಿಷ್ಟವಾದ ಹಾಡನ್ನು ಬೇಕಾದಾಗ ಬೇಕಾದಷ್ಟು ಸಲ ಕೇಳುವುದು ಸಾಧ್ಯವಾಯಿತು.

ರೇಡಿಯೋ ಜೊತೆಗೆ ಈ ಹೊಸ ಸಾಧನವನ್ನೂ ಮನೆಯಲ್ಲಿಟ್ಟುಕೊಳ್ಳುವುದು ಒಂದಷ್ಟು ದಿನದ ಮಟ್ಟಿಗೆ ಫ್ಯಾಶನಬಲ್ ಅನಿಸಿತೇನೋ ಸರಿ; ಆದರೆ ಕೊಂಚ ಸಮಯದ ನಂತರ ಎರಡೆರಡು ಪೆಟ್ಟಿಗೆಗಳೇಕಿರಬೇಕು ಎನ್ನುವ ಯೋಚನೆ ಶುರುವಾಯಿತು. ಆಗ ಬಂದದ್ದು ರೇಡಿಯೋ ಸೌಲಭ್ಯವೂ ಇರುವ ಟೇಪ್‌ರೆಕಾರ್ಡರ್, ಅರ್ಥಾತ್ 'ಟೂ-ಇನ್-ಒನ್'.

ಶುಕ್ರವಾರ, ಸೆಪ್ಟೆಂಬರ್ 2, 2016

VoLTE: ಹಾಗೆಂದರೇನು?

ಟಿ. ಜಿ. ಶ್ರೀನಿಧಿ

ಮೊಬೈಲ್ ಜಾಲಗಳ ಬಗ್ಗೆ ಮಾತನಾಡುವಾಗ ೩ಜಿ - ೪ಜಿಗಳ ಪ್ರಸ್ತಾಪ ಬರುವುದು ಸಾಮಾನ್ಯ. ಈ ಪೈಕಿ ೪ಜಿ ತಂತ್ರಜ್ಞಾನವನ್ನು 'ಎಲ್‌ಟಿಇ' ಎಂದೂ ಗುರುತಿಸಲಾಗುತ್ತದೆ. ಇದು 'ಲಾಂಗ್ ಟರ್ಮ್ ಎವಲ್ಯೂಶನ್' ಎಂಬ ಹೆಸರಿನ ಹ್ರಸ್ವರೂಪ.

ಮೊಬೈಲ್ ಜಗತ್ತಿನಲ್ಲಿ ತೀರಾ ಇತ್ತೀಚಿನವರೆಗೂ ಧ್ವನಿರೂಪದ ಕರೆಗಳು (ವಾಯ್ಸ್) ಹಾಗೂ ಅಂತರಜಾಲ ಸಂಪರ್ಕ (ಡೇಟಾ) ಬಳಸುವ ಸೇವೆಗಳನ್ನು ಪ್ರತ್ಯೇಕವಾಗಿ ನಿಭಾಯಿಸಲಾಗುತ್ತಿತ್ತು. ನಮ್ಮ ದೇಶದ ಮಟ್ಟಿಗೆ ಈಗಲೂ ಬಹುಪಾಲು ಸಂಪರ್ಕಗಳು ಹೀಗೆಯೇ ಕೆಲಸಮಾಡುತ್ತವೆ.

ಇದರ ಬದಲು ವಾಯ್ಸ್ - ಡೇಟಾ ಎರಡನ್ನೂ ಒಟ್ಟಿಗೆ ನಿರ್ವಹಿಸಿದರೆ? ಪ್ರತ್ಯೇಕ ಮೂಲಸೌಕರ್ಯವನ್ನು ನಿಭಾಯಿಸಬೇಕಾದ ಖರ್ಚೂ ಉಳಿಯುತ್ತದೆ, ಸ್ಪರ್ಧಾತ್ಮಕ ಬೆಲೆಗಳಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡುವುದೂ ಸಾಧ್ಯವಾಗುತ್ತದೆ. ಈ ಉದ್ದೇಶದಿಂದ ರೂಪುಗೊಂಡಿರುವ ತಂತ್ರಜ್ಞಾನವೇ 'ವಿಒ‌ಎಲ್‌ಟಿಇ', ಅಂದರೆ 'ವಾಯ್ಸ್ ಓವರ್ ಎಲ್‌ಟಿಇ'.

ಮಂಗಳವಾರ, ಆಗಸ್ಟ್ 30, 2016

ಭಾರತದ ಐಟಿ ಜಗತ್ತು

ಟಿ. ಜಿ. ಶ್ರೀನಿಧಿ


ಕಂಪ್ಯೂಟರ್ ವಿಜ್ಞಾನ ಹಾಗೂ ನಮ್ಮ ದೇಶದ ನಂಟು ಸಾಕಷ್ಟು ಹಳೆಯದು. ಭಾರತದ ವೈಜ್ಞಾನಿಕ ಕಾರ್ಯಕ್ರಮಗಳಿಗೆ ಭದ್ರ ಬುನಾದಿ ಹಾಕಿಕೊಟ್ಟ ಹೋಮಿ ಭಾಭಾರಂತಹ ದಾರ್ಶನಿಕರ ಪ್ರಯತ್ನಗಳನ್ನು ಈ ನಂಟಿನ ಹಿನ್ನೆಲೆಯಲ್ಲಿ ನಾವು ಕಾಣಬಹುದು. ಭಾರತೀಯ ಕಂಪ್ಯೂಟರ್ ವಿಜ್ಞಾನ ಕ್ಷೇತ್ರದ ಭೀಷ್ಮಪಿತಾಮಹ ಪ್ರೊ. ಆರ್. ನರಸಿಂಹನ್ ನೇತೃತ್ವದಲ್ಲಿ ನಮ್ಮ ಮೊದಲ ಕಂಪ್ಯೂಟರ್ TIFRAC ಸೃಷ್ಟಿಯ ಕೆಲಸ ೧೯೫೦ರ ದಶಕದಲ್ಲೇ ಪ್ರಾರಂಭವಾಗಿತ್ತು. ಸರಿಸುಮಾರು ಇದೇ ಸಮಯದಲ್ಲಿ ಭಾರತದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲೂ ಕಂಪ್ಯೂಟರ್ ವಿಜ್ಞಾನ ಅಧ್ಯಯನದ ವಿಷಯಗಳಲ್ಲೊಂದಾಗಿ ಪ್ರಚಲಿತವಾಯಿತು.

ಇದರ ಬೆನ್ನಲ್ಲೇ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳೂ ಸಕ್ರಿಯವಾದವು. ವಾಯುಯಾನ, ಬೃಹತ್ ಕೈಗಾರಿಕೆ ಮುಂತಾದೆಡೆಗಳಂತೆ ಐಟಿ ಕ್ಷೇತ್ರದಲ್ಲೂ ಟಾಟಾ ಸಂಸ್ಥೆ ಪ್ರಾರಂಭಿಕ ಹಂತದಲ್ಲೇ ಭಾಗಿಯಾಗಿದ್ದು ವಿಶೇಷ. ೧೯೬೦-೮೦ರ ಆಸುಪಾಸಿನಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಪಟ್ನಿ ಕಂಪ್ಯೂಟರ್ ಸಿಸ್ಟಮ್ಸ್, ಎಚ್‌ಸಿಎಲ್ ಟೆಕ್ನಾಲಜೀಸ್, ವಿಪ್ರೋ, ಇನ್‌ಫೋಸಿಸ್ -  ಹೀಗೆ ಹಲವು ಸಂಸ್ಥೆಗಳು ಕೆಲಸ ಪ್ರಾರಂಭಿಸಿದವು.

ನಮ್ಮಲ್ಲಿ ಲಭ್ಯವಿದ್ದ ಮಾನವ ಸಂಪನ್ಮೂಲವನ್ನೇ ಬಂಡವಾಳವನ್ನಾಗಿಟ್ಟುಕೊಂಡು ಬೆಳೆದ ಐಟಿ ಉದ್ದಿಮೆಯ ಪ್ರಾರಂಭಿಕ ಉದ್ದೇಶ ಹೊರದೇಶದ ಸಂಸ್ಥೆಗಳಲ್ಲಿ ಕೆಲಸಮಾಡಲು ಸಾಫ್ಟ್‌ವೇರ್ ತಂತ್ರಜ್ಞರನ್ನು ಒದಗಿಸುವುದಷ್ಟೇ ಆಗಿತ್ತು.

ಮಂಗಳವಾರ, ಆಗಸ್ಟ್ 23, 2016

ವರ್ಲ್ಡ್‌ವೈಡ್ ವೆಬ್: 25

ವಿಶ್ವವ್ಯಾಪಿ ಜಾಲದ (ವರ್ಲ್ಡ್‌ವೈಡ್ ವೆಬ್) ಇತಿಹಾಸದಲ್ಲಿ ೧೯೯೧ರ ಆಗಸ್ಟ್ ತಿಂಗಳಿಗೆ ಮಹತ್ವದ ಸ್ಥಾನವಿದೆ. ತಮ್ಮ ಆವಿಷ್ಕಾರದ ಕುರಿತು ಈ ಮಾಯಾಜಾಲದ ರೂವಾರಿ ಟಿಮ್ ಬರ್ನರ್ಸ್-ಲೀ ಮೊದಲಬಾರಿಗೆ ಬರೆದದ್ದು ಆ ತಿಂಗಳ ೬ರಂದು, ಮತ್ತು ವಿಶ್ವವ್ಯಾಪಿ ಜಾಲ ಇಡೀ ವಿಶ್ವಕ್ಕೆ ತೆರೆದುಕೊಂಡದ್ದು ೨೩ರಂದು. ಆ ಘಟನೆ ನಡೆದು ಇಂದಿಗೆ ೨೫ ವರ್ಷ. ಈ ಸಂದರ್ಭದಲ್ಲಿ ವಿಶ್ವವ್ಯಾಪಿ ಜಾಲದ ಹುಟ್ಟಿಗೆ ಕಾರಣವಾದ ಘಟನೆಗಳತ್ತ ಒಂದು ಹಿನ್ನೋಟ, ನಿಮಗಾಗಿ!

ಟಿ. ಜಿ. ಶ್ರೀನಿಧಿ
ನಮ್ಮ ಬದುಕಿನಲ್ಲಿ ಮಹತ್ವದ ಬದಲಾವಣೆಗಳನ್ನು ತಂದ ವಿಶ್ವವ್ಯಾಪಿ ಜಾಲ (ವರ್ಲ್ಡ್‌ವೈಡ್ ವೆಬ್) ನಮಗೆಲ್ಲರಿಗೂ ಡಬ್ಲ್ಯೂಡಬ್ಲ್ಯೂಡಬ್ಲ್ಯೂ ಅಂತಲೇ ಹೆಚ್ಚು ಪರಿಚಯ. ಈ ಡಬ್ಲ್ಯೂಡಬ್ಲ್ಯೂಡಬ್ಲ್ಯೂ ಎಂದರೇನು ಎಂದು ಕೇಳಿದಾಗ ಮಾತ್ರ ನಮ್ಮಲ್ಲಿ ಅನೇಕರಿಗೆ ಕೊಂಚ ಗೊಂದಲವಾಗುತ್ತದೆ. "ಡಬ್ಲ್ಯೂಡಬ್ಲ್ಯೂಡಬ್ಲ್ಯೂ ಎಂದರೆ ಇಂಟರ್‌ನೆಟ್ ತಾನೆ?" ಎನ್ನುವುದು ಅವರಲ್ಲಿ ಬಹಳಷ್ಟು ಜನ ಕೇಳುವ ಪ್ರಶ್ನೆ.

ಅಲ್ಲ, ಈ ವಿಶ್ವವ್ಯಾಪಿ ಜಾಲ ಅಂತರಜಾಲದ ಒಂದು ಅಂಗ ಮಾತ್ರ. ವಿಶ್ವವ್ಯಾಪಿ ಜಾಲ ಹುಟ್ಟುವ ಮೊದಲೇ ಅಂತರಜಾಲ ಇತ್ತು. ಆದರೆ ಅದು ಆಗ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ಮಾತ್ರವೇ ಹೆಚ್ಚಾಗಿ ಬಳಕೆಯಲ್ಲಿತ್ತು. ಸಾಮಾನ್ಯ ಜನತೆಗೆ ಆಗಿನ್ನೂ ಅದು ಅಷ್ಟಾಗಿ ಪರಿಚಿತವಾಗಿರಲಿಲ್ಲ.

ಇಂತಹ ಪರಿಸ್ಥಿತಿಯಿದ್ದಾಗ, ೧೯೮೦ರ ದಶಕದ ಪ್ರಾರಂಭದಲ್ಲಿ, ಟಿಮ್ ಬರ್ನರ್ಸ್ ಲೀ ಎಂಬ ತಂತ್ರಜ್ಞ ಸ್ವಿಟ್ಜರ್‌ಲೆಂಡಿನ ಜಿನೀವಾದಲ್ಲಿರುವ ಯೂರೋಪಿಯನ್ ಪಾರ್ಟಿಕಲ್ ಫಿಸಿಕ್ಸ್ ಲ್ಯಾಬೊರೇಟರಿಯಲ್ಲಿ (ಸರ್ನ್) ತಾತ್ಕಾಲಿಕವಾಗಿ ಕೆಲಸಕ್ಕೆ ಸೇರಿದರು.

ಶುಕ್ರವಾರ, ಆಗಸ್ಟ್ 19, 2016

ವಿಶ್ವ ಛಾಯಾಗ್ರಹಣ ದಿನ ವಿಶೇಷ: ಕ್ಲಿಕ್ ಮಾಡಿ ನೋಡಿ!

ಕಂಪ್ಯೂಟರ್ ಕ್ಷೇತ್ರದಲ್ಲಿ ಜನಪ್ರಿಯವಾಗಿರುವ 'ಓಪನ್ ಸೋರ್ಸ್' ಪರಿಕಲ್ಪನೆಯ ರೂಪವೊಂದನ್ನು ೧೭೭ ವರ್ಷಗಳ ಹಿಂದೆಯೇ ಪರಿಚಯಿಸಿದ್ದು ಡಿಗೇರೋಟೈಪ್ ತಂತ್ರಜ್ಞಾನ. ಲೂಯಿ ಡಿಗೇರ್ ರೂಪಿಸಿದ ಈ ತಂತ್ರಜ್ಞಾನದ ಹಕ್ಕುಸ್ವಾಮ್ಯವನ್ನು ೧೮೩೯ರಲ್ಲಿ ಫ್ರೆಂಚ್ ಸರಕಾರ ಕೊಂಡು ಅದನ್ನು "ಮನುಕುಲಕ್ಕೆ ಕೊಡುಗೆ"ಯಾಗಿ ಸಮರ್ಪಿಸಿದ ದಿನವೇ ಆಗಸ್ಟ್ ೧೯. ಇದೀಗ ವಿಶ್ವ ಛಾಯಾಗ್ರಹಣ ದಿನವೆಂದು ನಾವು ಗುರುತಿಸುವುದು ಇದೇ ದಿನವನ್ನು. ಛಾಯಾಗ್ರಹಣದ ವಿಕಾಸ ಕುರಿತು ನಾವು ಹಿಂದೊಮ್ಮೆ ಪ್ರಕಟಿಸಿದ್ದ ಲೇಖನವನ್ನು ಈ ಸಂದರ್ಭದಲ್ಲಿ ಮರುಪ್ರಕಟಿಸುತ್ತಿದ್ದೇವೆ.
ಟಿ. ಜಿ. ಶ್ರೀನಿಧಿ

ಮನುಷ್ಯ ತನ್ನ ಕಣ್ಣಮುಂದಿನ ದೃಶ್ಯವನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಉದ್ದೇಶದಿಂದ ಮಾಡದ ಪ್ರಯತ್ನವೇ ಇಲ್ಲ ಎನ್ನಬಹುದೇನೋ. ಶಿಲಾಯುಗದ ರೇಖಾಚಿತ್ರಗಳಿಂದ ಪರಿಣತರ ಕಲಾಕೃತಿಗಳವರೆಗೆ ಅನೇಕ ಸೃಷ್ಟಿಗಳ ಉದ್ದೇಶ ಇದೇ ಆಗಿರುವುದನ್ನು ನಾವು ಗಮನಿಸಬಹುದು.

ಆದರೆ ಇಂತಹ ಪ್ರಯತ್ನಗಳಿಗೆ ಒಂದು ದೊಡ್ಡ ಸಮಸ್ಯೆ ಅಡ್ಡಬರುತ್ತಿತ್ತು - ಕಂಡದ್ದನ್ನು ಕಂಡಂತೆ ಚಿತ್ರಿಸಲು ಎಲ್ಲರಿಗೂ ಬರುವುದಿಲ್ಲ, ಹಾಗೂ ನಮಗೆ ಬಂದಂತೆ ಚಿತ್ರಿಸಿದರೆ ಅದು ನಾವು ಕಂಡದ್ದನ್ನು ನಿಖರವಾಗಿ ಪ್ರತಿನಿಧಿಸುವುದಿಲ್ಲ!

ಹಾಗಾದರೆ ನಾವು ಕಂಡದ್ದನ್ನು ಕಂಡಹಾಗೆಯೇ ದಾಖಲಿಸಿಟ್ಟುಕೊಳ್ಳುವುದು ಹೇಗೆ? ಈ ನಿಟ್ಟಿನಲ್ಲಿ ನಡೆದ ಪ್ರಯತ್ನಗಳು ಒಂದೆರಡಲ್ಲ.

ಇಂತಹ ಪ್ರಯತ್ನಗಳಲ್ಲೊಂದಾದ 'ಕ್ಯಾಮೆರಾ ಅಬ್ಸ್‌ಕ್ಯೂರಾ' (Camera Obscura, ಪಿನ್‌ಹೋಲ್ ಕ್ಯಾಮೆರಾ ಎಂದೂ ಪರಿಚಿತ) ನಮ್ಮ ಎದುರಿನ ದೃಶ್ಯದ ತಲೆಕೆಳಗಾದ ರೂಪವನ್ನು ಪರದೆಯ ಮೇಲೆ ಚಿಕ್ಕದಾಗಿ ಮೂಡಿಸಿ ಚಿತ್ರಕಾರರಿಗೆ ಅದನ್ನು ನಕಲು ಮಾಡಿಕೊಳ್ಳಲು ನೆರವಾಗುತ್ತಿತ್ತು. ಬೇಕಾದ ದೃಶ್ಯವನ್ನು ಕ್ಷಿಪ್ರವಾಗಿ ಬರೆದುಕೊಳ್ಳುವ ಕಲಾವಿದರಿಗೇನೋ ಸರಿ, ಆದರೆ ಚಿತ್ರಬಿಡಿಸಲು ಬಾರದವರಿಗೆ ಇದರಿಂದ ಯಾವ ಉಪಯೋಗವೂ ಆಗುತ್ತಿರಲಿಲ್ಲ.

ಚಿತ್ರಬಿಡಿಸಲು ಬಾರದವರೂ ಈ ತಂತ್ರ ಬಳಸಬೇಕೆಂದರೆ ಪರದೆಯ ಮೇಲೆ ಮೂಡುವ ಚಿತ್ರ ತನ್ನಷ್ಟಕ್ಕೆ ತಾನೇ ಒಂದೆಡೆ ದಾಖಲಾಗುವಂತಿರಬೇಕು. ಹಾಗೆಂದು ಯೋಚಿಸಿ ಕಾರ್ಯಪ್ರವೃತ್ತನಾದವನು ಫ್ರಾನ್ಸಿನ ನಿಸೆಫೋರ್ ನಿಯಪ್ಸ್ ಎಂಬ ವ್ಯಕ್ತಿ. ಕ್ಯಾಮೆರಾ ಅಬ್ಸ್‌ಕೂರಾದಲ್ಲಿ ಚಿತ್ರಕಾರರಿಗಾಗಿ ಇದ್ದ ಪರದೆಯ ಜಾಗದಲ್ಲಿ ರಾಸಾಯನಿಕವಾಗಿ ಸಂಸ್ಕರಿಸಿದ ಲೋಹದ ಫಲಕವನ್ನು ತಂದು ಕೂರಿಸಿ 'ಹೀಲಿಯೋಗ್ರಫಿ' ಎಂಬ ತಂತ್ರಜ್ಞಾನವನ್ನು ರೂಪಿಸಿದ್ದು ಇವನ ಸಾಧನೆ.

ಗುರುವಾರ, ಆಗಸ್ಟ್ 11, 2016

ಹಾಲ್ದೊಡ್ಡೇರಿ ಹೇಳುತ್ತಾರೆ, "ಬದಲಾವಣೆಗಳು ನಮ್ಮ ಭಾಗವಾಗಬೇಕು"

ಇಜ್ಞಾನ ಡಾಟ್ ಕಾಮ್‌ ಸಹಯೋಗದಲ್ಲಿ ಮೈಸೂರಿನ ಭಾರತೀ ಪ್ರಕಾಶನ ಇತ್ತೀಚೆಗೆ ಪ್ರಕಟಿಸಿರುವ ಕೃತಿ 'ಟೆಕ್ಸ್ಟ್ ಬುಕ್ ಅಲ್ಲ, ಇದು ಟೆಕ್ ಬುಕ್!' ತಂತ್ರಜ್ಞಾನ ಕ್ಷೇತ್ರದ ಹತ್ತಾರು ವಿಷಯಗಳನ್ನು ಸರಳ ಭಾಷೆಯಲ್ಲಿ ತಿಳಿಸುವ ಈ ಪುಸ್ತಕಕ್ಕೆ ಹೆಸರಾಂತ ವಿಜ್ಞಾನ ಸಂವಹನಕಾರ, ವಿಜ್ಞಾನಿ ಹಾಲ್ದೊಡ್ಡೇರಿ ಸುಧೀಂದ್ರ ಬರೆದ ಮುನ್ನುಡಿಯ ಪೂರ್ಣಪಾಠ ಇಲ್ಲಿದೆ. ಟೆಕ್ ಬುಕ್ ಕೊಳ್ಳಲು ಭೇಟಿಕೊಡಿ: tinyurl.com/ejnanatechbook

ಸುಧೀಂದ್ರ ಹಾಲ್ದೊಡ್ದೇರಿ       

ಕನ್ನಡದಲ್ಲಿನ ವಿಜ್ಞಾನ ಬರವಣಿಗೆಗೆ ಸುದೀರ್ಘ ಇತಿಹಾಸವಿದೆ.  ಮೊದಲ ಪೀಳಿಗೆಯ ಬೆಳ್ಳಾವೆ ವೆಂಕಟನಾರಣಪ್ಪ- ಆರ್.ಎಲ್. ನರಸಿಂಹಯ್ಯ, ಎರಡನೆಯ ಪೀಳಿಗೆಯ ಜಿ.ಟಿ.ನಾರಾಯಣರಾವ್-ಜೆ.ಆರ್.ಲಕ್ಷ್ಮಣರಾವ್, ಮೂರನೆಯ ಪೀಳಿಗೆಯ ನಾಗೇಶ ಹೆಗಡೆ-ಟಿ.ಆರ್.ಅನಂತರಾಮು ... ಹೀಗೆ ಪರಂಪರಾಗತವಾಗಿ ವಿಜ್ಞಾನ ಸಾಹಿತ್ಯ, ಅದರಲ್ಲೂ ವಿಶೇಷವಾಗಿ ಇಂದು ಪ್ರಸ್ತುತವಾದ ತಂತ್ರಜ್ಞಾನ ಸಾಹಿತ್ಯವನ್ನು ಶ್ರೀಮಂತಗೊಳಿಸಿರುವ ಮಹನೀಯರಿವರು.  ಆಯಾ ಪೀಳಿಗೆಯಲ್ಲಿಯೇ ಅನೇಕ ಬರಹಗಾರರು ವಿಜ್ಞಾನ ಸಾಹಿತ್ಯದ ಅಭಿವೃದ್ಧಿಗೆ ಬಹುದೊಡ್ಡ ಕಾಣಿಕೆ ನೀಡಿದ್ದಾರೆ, ಪ್ರಾಸಂಗಿಕವಾಗಿ ಕೆಲವರ ಹೆಸರನ್ನು ಮಾತ್ರ ಇಲ್ಲಿ ಉಲ್ಲೇಖಿಸಿದ್ದೇನೆ.  ಈ ನಿಟ್ಟಿನಲ್ಲಿ ಹೊಸ ಬರಹಗಾರರೆಂದು ಹೇಳಲಾಗದಷ್ಟು ಹಳಬರಾಗಿರುವ, ತಮ್ಮ ಹುಲುಸಾದ ವಿಜ್ಞಾನ ಫಸಲಿನ ಮೂಲಕ ಕನ್ನಡ ಓದುಗರಿಗೆ, ಪ್ರಮುಖವಾಗಿ ಕನ್ನಡ ದಿನಪತ್ರಿಕೆಗಳ ವಾಚಕರಿಗೆ ಪರಿಚಿತರಾಗಿರುವವರು ಟಿ.ಜಿ.ಶ್ರೀನಿಧಿ.  ಹಿಂದಿನ ಶ್ರೇಷ್ಠ ಪರಂಪರೆಯನ್ನು ಸಮರ್ಥವಾಗಿ ಮುನ್ನಡೆಸಲು ಪಣ ತೊಟ್ಟವರಂತೆ ಅವರು ನಿಖರ, ಸ್ಪಷ್ಟ ಹಾಗೂ ಸರಳ ಭಾಷೆಯಲ್ಲಿ ವಿಜ್ಞಾನ ಕುರಿತು ನಿರಂತರವಾಗಿ ಬರೆಯುತ್ತಿದ್ದಾರೆ.

‘ಟೆಕ್ ಬುಕ್’ ಹೆಸರಿನ ‘ಟೆಕ್ಸ್ಟ್ ಬುಕ್’ ಅಲ್ಲದ ಈ ಪುಸ್ತಕವನ್ನು ಕೈಯ್ಯಲ್ಲಿ ಹಿಡಿದೊಡನೆ ನಮ್ಮ ಶ್ರೀನಿಧಿ ಅಪ್ಪಟ ಮೈಸೂರಿನವರೆನ್ನುವುದಕ್ಕೆ ನನಗೆ ಬೇರೆ ಸಾಕ್ಷಿ ಬೇಕಿರಲಿಲ್ಲ.  ಮನೆಯ ಥ್ರೀಡಿ ಪ್ರಿಂಟರು ಅವರ ಕಲ್ಪನೆಗೆ ಸಿಲುಕಿ ಕೇವಲ ಮೈಸೂರುಪಾಕನ್ನೇ ಮುದ್ರಿಸಿಕೊಡುತ್ತದೆ. ಚಾಲಕರಹಿತ, ಸ್ವನಿಯಂತ್ರಿತ, ಪುಟಾಣಿ ವಿಮಾನಗಳಾದ ‘ಡ್ರೋನ್’ಗಳ ಉಪಯೋಗದ ಬಗ್ಗೆ ಬರೆಯುವಾಗ ಅವರ ಕಣ್ಣಿಗೆ ಪೀಡ್ಝಾ ಕಾಣುವುದಿಲ್ಲ, ಮಸಾಲೆ ದೋಸೆ ಅವರ ದೃಷ್ಟಿಗೆ ಬೀಳುತ್ತದೆ.  ಹಾಗೆಯೇ ‘ಇಂಟರ್ ನೆಟ್ ಆಫ್ ಥಿಂಗ್ಸ್’ ಕುರಿತ ಲೇಖನದಲ್ಲಿ ಅವರ ಫ್ರಿಜ್ಜು ತರಿಸಿಕೊಳ್ಳುವುದು ಕೊತ್ತಂಬರಿ ಸೊಪ್ಪನ್ನೇ ಹೊರತು ಚೀಸ್ ಅಲ್ಲ.  ಈ ಮಾತುಗಳನ್ನಿಲ್ಲಿ ವಿಶೇಷವಾಗಿ ಹೇಳಲೇಬೇಕಾಯಿತು.  ಶ್ರೀನಿಧಿಯವರಿಗೆ ಎಲ್ಲ ವಿಷಯಗಳನ್ನೂ ‘ಲೋಕಲೈಸ್’ ಮಾಡಿಕೊಳ್ಳುವ ವಿಶೇಷ ಸಾಮರ್ಥ್ಯವಿದೆಯೆಂಬುದರ ಸಾಬೀತಿಗೆ ಮೇಲಿನ ಉದಾಹರಣೆಗಳೇ ಸಾಕು.

ಮಂಗಳವಾರ, ಆಗಸ್ಟ್ 9, 2016

ಸಿಮ್ ಕಾರ್ಡಿನ ಕಾಲು ಶತಮಾನ

ಟಿ. ಜಿ. ಶ್ರೀನಿಧಿ


ಮೊಬೈಲ್ ಸಂಪರ್ಕ ಪಡೆಯಲು ಏನೆಲ್ಲ ಬೇಕು? ಮೊದಲಿಗೆ ಒಂದು ಮೊಬೈಲ್ ಫೋನ್ ಬೇಕು, ಆಮೇಲೊಂದು ಸಿಮ್ ಕಾರ್ಡ್ ಬೇಕು!

ಹೌದು, ನಿಮ್ಮ ಮೊಬೈಲ್ ಫೋನು ಯಾವುದೇ ಇರಲಿ - ಸ್ಮಾರ್ಟ್ ಆಗಿರಲಿ ಇಲ್ಲದಿರಲಿ - ಜಿಎಸ್‌ಎಂ ತಂತ್ರಜ್ಞಾನ ಬಳಸುವುದಾದರೆ ಅದರಲ್ಲೊಂದು ಸಿಮ್ ಅಂತೂ ಇರಲೇಬೇಕು. 'ಸಿಮ್' ಎಂಬ ಹೆಸರು 'ಸಬ್‌ಸ್ಕ್ರೈಬರ್  ಐಡೆಂಟಿಫಿಕೇಶನ್ ಮಾಡ್ಯೂಲ್' (ಚಂದಾದಾರರನ್ನು ಗುರುತಿಸುವ ಘಟಕ) ಎನ್ನುವುದರ ಹ್ರಸ್ವರೂಪ. ಹೆಸರೇ ಹೇಳುವಂತೆ ಚಂದಾದಾರರನ್ನು ಗುರುತಿಸಿ ಮೊಬೈಲ್ ಜಾಲದೊಡನೆ ಅವರ ಸಂಪರ್ಕ ಏರ್ಪಡಿಸುವಲ್ಲಿ ಈ ಪುಟ್ಟ ಬಿಲ್ಲೆಯದು ಮಹತ್ವದ ಪಾತ್ರ.

ಈ ವಿಶಿಷ್ಟ ಸಾಧನ ಸೃಷ್ಟಿಯಾಗಿ ಇದೀಗ ಇಪ್ಪತ್ತೈದು ವರ್ಷ. ತಂತ್ರಜ್ಞಾನ ಲೋಕದ ಮಟ್ಟಿಗೆ ಇದೊಂದು ಬಹುದೊಡ್ಡ ಅವಧಿ. ಇಷ್ಟೆಲ್ಲ ಸಮಯದವರೆಗೂ ಚಾಲ್ತಿಯಲ್ಲಿ ಉಳಿದುಕೊಂಡಿರುವುದು ಸಿಮ್‌ನ ಹಿರಿಮೆಯೇ ಸರಿ!

ಶುಕ್ರವಾರ, ಜುಲೈ 22, 2016

ಗೋಧಿಯ ಕುರಿತು ಗೊಂದಲ ಬೇಕಿಲ್ಲ

ಡಾ. ಶರಣಬಸವೇಶ್ವರ ಅಂಗಡಿ

ಗೆಳೆಯ ಗೋವಿಂದ ಒಮ್ಮೆ ತಮಾಷೆಗೆ 'ಗೋಧಿ ಅದೇ ವ್ಹೀಟ್‌ನಲ್ಲಿ ಹೀಟ್ ಇದೆ, ರೈಸ್‌ನಲ್ಲಿ ಐಸ್ ಇದೆ, ಅದಕ್ಕೇ ಚಪಾತಿ ತಿಂದರೆ ಉಷ್ಣ, ಅನ್ನವುಂಡರೆ ತಂಪು' ಅಂದಿದ್ದ. ಮೊನ್ನೆ, ತಮ್ಮನ್ನು ಯೋಗಗುರು ಎಂದು ಕರೆದುಕೊಳ್ಳುವ ಅನಂತ್‌ಜಿ ಎನ್ನುವ ವ್ಯಕ್ತಿ ಗೋಧಿಯನ್ನು ನಿಂದಿಸುವುದಲ್ಲದೇ, ಅಕ್ಕಿಯನ್ನು ಅನಿಷ್ಟವೆಂದದ್ದು, ದೇಶದ ಕೃಷಿಯನ್ನು, ಹಸಿರು ಕ್ರಾಂತಿಯನ್ನು ನಿರಾಧಾರವಾಗಿ, ಅವೈಜ್ಞಾನಿಕವಾಗಿ ಹಿಗ್ಗಾಮುಗ್ಗಾ ಟೀಕಿಸಿದ್ದನ್ನು ಕೇಳಿದಾಗ ಗೋವಿಂದನ ಹಳೆಯ ಜೋಕ್ ನೆನಪಾಯ್ತು. ಹಿಂದೊಮ್ಮೆ ಇದೇ ಅನಂತ್‌ಜಿ ಗೋಧಿಯನ್ನು ದುಷ್ಟ ಧಾನ್ಯವೆಂದಿದ್ದು ಸುದ್ದಿಯಾಗಿತ್ತು. ಅದಕ್ಕೆ(ಅವರೇ ಹೇಳಿದ್ದು) ಬಂದ ಸಾವಿರಾರು ಫೋನ್ ಕರೆಗಳಿಗೆ, ಮತ್ತು ಮಿಸ್ಡ್‌ಕಾಲ್‌ಗಳಿಗೆ ಪ್ರತಿಕ್ರಿಯೆಯಾಗಿ ಸುಮಾರು ಅರ್ಧಗಂಟೆಯ ಒಂದು ಆಡಿಯೋ ಕ್ಲಿಪ್ ತೇಲಿಬಿಟ್ಟಿದ್ದಾರೆ. ಅದನ್ನು ವಾಟ್ಸಾಪ್‌ನಲ್ಲಿ ಕೇಳುವ ಅವಕಾಶ ನನಗೂ ಸಿಕ್ಕಿತು. ಅವರ ಆ 'ಜ್ಞಾನ'ದಲ್ಲಿ ಹೇರಳ ತಪ್ಪುಗಳಿವೆ. ಅದು ಜನಸಾಮಾನ್ಯರಿಗೆ ತಿಳಿದಿರಲಿ ಎಂದು ಈ ಲೇಖನದ ಉದ್ದೇಶ.

ಬುಧವಾರ, ಜುಲೈ 20, 2016

ಸಮಾಜ ಜಾಲಗಳ ಮೊಬೈಲ್ ಅವತಾರ

ಟಿ. ಜಿ. ಶ್ರೀನಿಧಿ

ಮೊಬೈಲ್ ದೂರವಾಣಿಗಳ ಬಳಕೆ ಹೆಚ್ಚಿದಂತೆ ನಮ್ಮ ಅದೆಷ್ಟೋ ಚಟುವಟಿಕೆಗಳು ಮೊಬೈಲ್ ಕೇಂದ್ರಿತವಾಗಿಬಿಟ್ಟಿವೆ. ಇಂತಹ ಚಟುವಟಿಕೆಗಳ ಸಾಲಿನಲ್ಲಿ ಸೋಶಿಯಲ್ ನೆಟ್‌ವರ್ಕ್‌ಗಳ ಬಳಕೆಗೂ ಪ್ರಮುಖ ಸ್ಥಾನವಿದೆ.

ಹೌದು, ಸೋಶಿಯಲ್ ನೆಟ್‌ವರ್ಕ್‌ಗಳು ಪರಿಚಯವಾದಾಗ ಕಂಪ್ಯೂಟರಿನಲ್ಲಿ ಮಾತ್ರವೇ ಅವನ್ನು ಬಳಸುತ್ತಿದ್ದ ನಾವು ಈಗ ಅವುಗಳ ಬಳಕೆಯನ್ನು ಹೆಚ್ಚೂಕಡಿಮೆ ಪೂರ್ತಿಯಾಗಿಯೇ ಮೊಬೈಲಿಗೆ ವರ್ಗಾಯಿಸಿಬಿಟ್ಟಿದ್ದೇವೆ. ಮೊಬೈಲುಗಳು ಸದಾಕಾಲ ನಮ್ಮ ಜೊತೆಗಿರುತ್ತವಲ್ಲ, ಹಾಗಾಗಿಯೋ ಏನೋ ಅವು ಸಮಾಜಜಾಲಗಳಲ್ಲಿ ನಮ್ಮ ಎಲ್ಲ ಚಟುವಟಿಕೆಗಳಿಗೂ ಸರಿಯಾದ ಜೋಡಿಯಾಗಿ ಬೆಳೆದಿವೆ.

ಮೊದಲಿಗೆ ಸಮಾಜಜಾಲಗಳ ವೆಬ್‌ಸೈಟನ್ನು ತೆರೆಯಲಷ್ಟೆ ಮೊಬೈಲ್ ಫೋನ್ ಬಳಕೆಯಾಗುತ್ತಿತ್ತು. ನಂತರ ನಮ್ಮ ಫೋನುಗಳು ಹೆಚ್ಚು ಸ್ಮಾರ್ಟ್ ಆದಂತೆ, ಆಪ್‌ಗಳ ಪ್ರಭಾವ ಜಾಸ್ತಿಯಾದಂತೆ ಸಮಾಜಜಾಲಗಳ ಆಪ್‌ಗಳು ನಮ್ಮ ಮೊಬೈಲಿಗೆ ಬಂದು ಕುಳಿತವು. ಫೇಸ್‌ಬುಕ್‌ನದೊಂದು ಆಪ್, ಟ್ವಿಟರ್‌ನದೊಂದು ಆಪ್ ಎಂದು ಸಮಾಜಜಾಲಗಳ ಆಪ್‌ಗಳು ಒಂದೊಂದಾಗಿ ನಮ್ಮ ಮೊಬೈಲನ್ನು ಸೇರಿಕೊಂಡವು.

ಸೋಮವಾರ, ಜುಲೈ 18, 2016

ನಾವು ಆಕಳಿಸುವುದೇಕೆ?

ಕೊಳ್ಳೇಗಾಲ ಶರ್ಮ

ಬಹುಶಃ ಶೀರ್ಷಿಕೆಯನ್ನು ಓದಿಯೇ ನೀವು ಆಕಳಿಸುವುದಕ್ಕೆ ಆರಂಭಿಸಿದ್ದೀರೆಂದರೆ ಅದು ಲೇಖನದ ತಪ್ಪಲ್ಲ. ಹಾಂ. ನೀವು ಮಹಿಳೆಯರಾಗಿದ್ದರೆ ಖಂಡಿತ ಆಕಳಿಸಿರುತ್ತೀರಿ. ಪುರುಷರಾದರೆ ಆ ಸಾಧ್ಯತೆ ಸ್ವಲ್ಪ ಕಡಿಮೆ. ಇದೇನಿದು? ಆಕಳಿಕೆಗೂ, ಗಂಡು-ಹೆಣ್ಣಿಗೂ ಸಂಬಂಧ ಯಾಕೆ ಕಲ್ಪಿಸುತ್ತಿದ್ದೀರಿ ಎಂದಿರಾ? ಇದು ಹೇಳಿದ್ದು ನಾನಲ್ಲ. ಇಟಲಿಯ ಪೀಸಾ ವಿಶ್ವವಿದ್ಯಾನಿಲಯದ ಮನಶ್ಶಾಸ್ತ್ರಜ್ಞೆ ಎಲಿಸಬೆಟ್ಟಾ ಪಲಾಜಿ ಮತ್ತು ಸಂಗಡಿಗರು ಹೀಗೊಂದು ಹೊಸ ತರ್ಕವನ್ನು ಮುಂದಿಟ್ಟಿದ್ದಾರೆ.

ಆಕಳಿಕೆ ಒಂದು ವಿಚಿತ್ರವಾದ ನಿಗೂಢ ವಿದ್ಯಮಾನ. ಬೇಸರವಾದಾಗ ಅಥವಾ ನಿದ್ರೆ ಬಂದಾಗಷ್ಟೆ ಆಕಳಿಕೆ ಬರುತ್ತದೆನ್ನುವುದು ಸಾಮಾನ್ಯ ನಂಬಿಕೆ. ಬಹುಮಟ್ಟಿಗೆ ಇದು ನಿಜವೂ ಹೌದು. ಇದಕ್ಕಾಗಿಯೇ ಆಕಳಿಕೆ ಎಂದರೆ ಬಹುಶಃ ಮಿದುಳಿಗೆ ಹೆಚ್ಚಿನ ಆಕ್ಸಿಜನ್ ಒದಗಿಸುವ ವಿದ್ಯಮಾನವಿರಬಹುದು ಎನ್ನುವ ನಂಬಿಕೆಯೂ ಇತ್ತು. ಏಕೆಂದರೆ ಆಕ್ಸಿಜನ್ ಕೊರತೆಯಾದಾಗ ಮಿದುಳು ತನ್ನಂತಾನೇ ನಿದ್ರೆಗೆ ಜಾರುತ್ತದೆ. ಅದನ್ನು ತಪ್ಪಿಸಲೆಂದು ಗಾಳಿಯನ್ನು ಹೆಚ್ಚಾಗಿ ಹೀರಿ, ಹೆಚ್ಚು ಆಕ್ಸಿಜನ್ನು ಒದಗುವಂತೆ ಮಿದುಳಿಗೆ ರಕ್ತದ ಸರಬರಾಜನ್ನು ಹೆಚ್ಚಿಸಲು ನಿಸರ್ಗ ಹೂಡಿರುವ ತಂತ್ರವೇ ಆಕಳಿಕೆ ಎನ್ನುವುದು ಬಲು ಹಿಂದಿನಿಂದ ಬಂದ ನಂಬಿಕೆ.

ಗುರುವಾರ, ಜುಲೈ 7, 2016

ಶ್ವಾನ ಸ್ವರ್ಗಾರೋಹಣ

ರೋಹಿತ್ ಚಕ್ರತೀರ್ಥ

೧೯೫೭ರ ಚಳಿಗಾಲ. ಅಮೆರಿಕ ಮತ್ತು ಸೋವಿಯೆಟ್ ರಷ್ಯದ ನಡುವೆ ಜಗತ್ತಿನ ದೊಡ್ಡಣ್ಣನಾಗಲು ಶೀತಲ ಸಮರ ಅರ್ಥಾತ್ ಕೋಲ್ಡ್ ವಾರ್ ನಡೆಯುತ್ತಿದ್ದ ಸಮಯ. ಸೋವಿಯಟ್ ರಷ್ಯದ ಅಧ್ಯಕ್ಷ ನಿಕಿಟ ಕ್ರುಶ್ಚೇವ್ ದೇಶದ ಎಲ್ಲ ರಾಕೆಟ್ ತಂತ್ರಜ್ಞರನ್ನು ಒಂದು ಔತಣ ಕೂಟಕ್ಕೆ ಕರೆದಿದ್ದರು. ಸ್ಪುಟ್ನಿಕ್ ೧ರ ಅಭೂತಪೂರ್ವ ಯಶಸ್ಸಿನ ವಿಜಯ ದುಂಧುಬಿಯಾಗಿತ್ತು ಈ ಔತಣ ಕೂಟ. ಸೋವಿಯೆಟ್ ಕೂಟದ ಅಂತರಿಕ್ಷ ಯೋಜನೆಗಳ ಪಿತಾಮಹ ಎಂದೇ ಕರೆಯಲ್ಪಟ್ಟ ಸೆರ್ಗಿ ಕೊರೊಲೆವ್ ಕೂಡ ಅಲ್ಲಿದ್ದರು. ನಿಕಿಟ ಕ್ರುಶ್ಚೇವ್, ನೆರೆದಿದ್ದ ಗಣ್ಯರನ್ನು ಅವರ ಸಾಧನೆಗಳಿಗಾಗಿ ಅಭಿನಂದಿಸಿ, ಸೋವಿಯೆಟ್ ಕೂಟದ ಅಂತರಿಕ್ಷ ಸಾಧನೆಗಳನ್ನು ಕೊಂಡಾಡಿ, ವೋಡ್ಕದ ಗ್ಲಾಸೆತ್ತಿ ಘೋಷಿಸಿದರು: ಇದೇ ವರ್ಷದ ನವೆಂಬರ್ ೭ರಂದು ನಾವು ಬೊಲ್ಶೆವಿಕ್ ಕ್ರಾಂತಿಯ ನಲವತ್ತನೆ ವರ್ಷದ ಸಂಭ್ರಮಾಚರಣೆ ಮಾಡುತ್ತಿದ್ದೇವೆ. ಅದರ ನೆನಪಿಗಾಗಿ ನಮ್ಮ ರಾಷ್ಟ್ರ ಇನ್ನೊಂದು ಸ್ಪುಟ್ನಿಕ್‌ನ್ನು ಅಂತರಿಕ್ಷಕ್ಕೆ ಹಾರಿಬಿಡಬೇಕು!

ನೆರೆದ ತಂತ್ರಜ್ಞರು ಮತ್ತು ವಿಜ್ಞಾನಿಗಳ ಬೆನ್ನುಹುರಿ ಆ ಚಳಿಯ ಕೊರೆತದಲ್ಲೂ 'ಚುಳ್' ಎಂದಿತು!

ಬುಧವಾರ, ಜೂನ್ 29, 2016

ಮನುಷ್ಯನೇಕೆ ಇಷ್ಟು ಬುದ್ಧಿವಂತ ಪ್ರಾಣಿ?

ಕೊಳ್ಳೇಗಾಲ ಶರ್ಮ

ಈ ವಿಶ್ವದಲ್ಲಿ ಇರುವ ಅತ್ಯಂತ ವಿಚಿತ್ರ ಪ್ರಾಣಿ ಯಾವುದು ಗೊತ್ತೇ? ಅದೇ ನಾವು. ನಾವು ಮನುಷ್ಯರಲ್ಲಿ ಇತರೆ ಪ್ರಾಣಿಗಳಿಗಳಿಗಿಲ್ಲದ ಎಷ್ಟೊಂದು ವಿಶೇಷ ಗುಣಗಳಿವೆ ಎಂದರೆ ಬಹುಶಃ ನಮ್ಮನ್ನು ಬೇರಾವುದೋ ಗ್ರಹದ ಜೀವಿಯಿರಬಹುದು ಎಂದು ವರ್ಗೀಕರಿಸಿದರೂ ತಪ್ಪಿಲ್ಲ. ಬೇರಾವುದೋ ಪ್ರಾಣಿ ಯಾಕೆ, ಮನುಷ್ಯನ ಕುಟುಂಬಕ್ಕೇ ಸೇರಿದ ವಾನರಗಳಿಗೂ ನಮಗೂ ಅಜಗಜಾಂತರ ವ್ಯತ್ಯಾಸವಿದೆ. ಎದ್ದು ಕಾಣುವ ಕೆಲವು ವ್ಯತ್ಯಾಸಗಳೆಂದರೆ ನಿರರ್ಗಳ ಮಾತು, ಸಂವಹನ ಕಲೆ, ಸಹಕಾರಿ ಪ್ರವೃತ್ತಿ, ಶಿಶುಪಾಲನೆಯ ಗುಣ, ನೇರ ನಡೆ ಮತ್ತು ಕುಶಲ ಬುದ್ಧಿವಂತಿಕೆ. ಇಷ್ಟೊಂದು ವಿಶಿಷ್ಟ ಗುಣಗಳು ಮಾನವನಿಗಷ್ಟೆ ಬಂದದ್ದೇಕೆ ಎನ್ನುವುದರ ಬಗ್ಗೆ ವಿಜ್ಞಾನಿಗಳಿಗೆ ಅವಿರತ ಕುತೂಹಲ. ಏಕೆಂದರೆ ಈ ಗುಣಗಳಿಂದಾಗಿಯೇ ಮನುಷ್ಯ ಇರುವುದೊಂದೇ ಪ್ರಪಂಚವನ್ನು ಆಳುವಷ್ಟು ಪ್ರಬಲನಾಗಿದ್ದಾನೆ ಎನ್ನಬಹುದು.

ಮತ್ತೊಂದು ದೃಷ್ಟಿಯಿಂದಲೂ ಮನುಷ್ಯ ಬಲು ವಿಶಿಷ್ಟ. ಇಡೀ ವಿಶ್ವವನ್ನೇ ಆಳುವ ಏಕೈಕ ಪ್ರಾಣಿಯೆನ್ನಿಸಿಕೊಂಡಿದ್ದರೂ ಇವನೇನು ಮಹಾ ಬಲಶಾಲಿಯಲ್ಲ.

ಸೋಮವಾರ, ಜೂನ್ 27, 2016

ಲೈಟ್ಸ್! ಆಕ್ಷನ್!! ಕ್ಯಾಮೆರಾ!!!

ಟಿ. ಜಿ. ಶ್ರೀನಿಧಿ 


ಪ್ರವಾಸ ಹೊರಟಾಗ ಜೊತೆಯಲ್ಲಿ ಕ್ಯಾಮೆರಾ ಕೊಂಡೊಯ್ಯುವ ಅಭ್ಯಾಸ ನಮಗೆಲ್ಲ ಗೊತ್ತಿರುವುದೇ. ಹೋದ ಜಾಗ, ಅಲ್ಲಿ ಕಂಡ ದೃಶ್ಯಗಳನ್ನೆಲ್ಲ ಛಾಯಾಚಿತ್ರ ಅಥವಾ ವೀಡಿಯೋ ರೂಪದಲ್ಲಿ ಸೆರೆಹಿಡಿದಿಟ್ಟುಕೊಳ್ಳಲು - ನೆನಪುಗಳನ್ನು ರೂಪಿಸಿಕೊಳ್ಳಲು ಈ ಅಭ್ಯಾಸ ನೆರವಾಗುತ್ತದೆ.

ಮೈಸೂರು ಅರಮನೆಯ ಮುಂದೆ ನಿಂತು, ತಾಜಮಹಲ್ ಎದುರಿನ ಬೆಂಚಿನ ಮೇಲೆ ಕುಳಿತು ಫೋಟೋ ತೆಗೆಸಿಕೊಳ್ಳುವುದು ಸುಲಭ. ಅಂತಹ ಸಂದರ್ಭಗಳಲ್ಲಿ ಮೊಬೈಲ್ ಕ್ಯಾಮೆರಾ ಅಷ್ಟೇ ಏಕೆ, ಇಷ್ಟುದ್ದ ಲೆನ್ಸಿನ ಭಾರೀ ಡಿಎಸ್‌ಎಲ್‌ಆರ್ ಬೇಕಾದರೂ ಜೊತೆಗಿಟ್ಟುಕೊಂಡಿರಬಹುದು.

ಆದರೆ ಕೆಲ ಸಂದರ್ಭಗಳಲ್ಲಿ ಫೋಟೋ ಕ್ಲಿಕ್ಕಿಸಲು ಅದೆಷ್ಟೇ ಆಸೆಯಾಗುತ್ತಿದ್ದರೂ ಕ್ಯಾಮೆರಾ ಹಿಡಿಯುವುದೇ ಸಾಧ್ಯವಾಗುವುದಿಲ್ಲ. ಬೆಟ್ಟದ ಮೇಲೆ ಕಡಿದಾದ ಹಾದಿಯಲ್ಲಿ ನಡೆಯುವುದೇ ಕಷ್ಟವಾದಾಗ ಕ್ಯಾಮೆರಾ ಹಿಡಿಯುವುದಾದರೂ ಹೇಗೆ? ಅದೂ ಒಂದೊಮ್ಮೆ ಸಾಧ್ಯವಾಗಬಹುದೇನೋ. ಆದರೆ ವಿಶ್ವದ ಅತಿ ಎತ್ತರದ ಹೆದ್ದಾರಿಯಲ್ಲಿ ಬೈಕು ಓಡಿಸುವಾಗ, ಹಾರುವ ವಿಮಾನದಿಂದ ಸ್ಕೈ‌ಡೈವಿಂಗ್ ಮಾಡುವಾಗ, ಸಮುದ್ರದಾಳದಲ್ಲಿ ಹವಳಗಳನ್ನು ನೋಡುವಾಗಲೆಲ್ಲ ಫೋಟೋ ತೆಗೆಯಬೇಕೆಂದರೆ??

ಶನಿವಾರ, ಜೂನ್ 25, 2016

ಯಾವ ಸ್ವರ್ಗದ ಹೂವೋ ಈ ಟೆರೆನ್ಸ್ ಟಾವೋ!

ರೋಹಿತ್ ಚಕ್ರತೀರ್ಥ


ಅಡಿಲೇಡ್ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಸ್ನಾತಕೋತ್ತರ ಗಣಿತ ತರಗತಿ. ಕ್ಯಾಲ್ಕುಲಸ್ಸಿನ ಮೇಲೆ ಯಾವುದೋ ಗಹನ ಪ್ರಶ್ನೆಯನ್ನು ಪ್ರೊಫೆಸರ್ ಬೋರ್ಡಿನ ಮೇಲೆ ಬಿಡಿಸುತ್ತಿದ್ದಾರೆ. ಗಣಿತದ ಸಿಕ್ಕುಸಿಕ್ಕಾದ ಸಾಲುಗಳನ್ನು ಒಡೆಯುತ್ತ ಒಂದೊಂದು ಹೆಜ್ಜೆ ಮುಂದುವರಿಯುತ್ತಲೇ ಅವರಿಗೆ ಹಾದಿ ತಪ್ಪಿದ ಅರಿವಾಗಿದೆ. ಜಿಂಕೆಯ ಹಿಂದೆ ಹೋಗಿ ದಾರಿ ತಪ್ಪಿದ ದುಷ್ಯಂತನಂತೆ ಬೆಪ್ಪಾಗಿ ನಿಂತಿದ್ದಾರೆ. ಅವರ ಲೆಕ್ಕದ ತಲೆಬುಡ ಅರ್ಥವಾಗದಿದ್ದರೂ ವಿದ್ಯಾರ್ಥಿಗಳು ಈ ಶೋಕದಲ್ಲಿ ನಾವೂ ಭಾಗವಹಿಸಬೇಕು ಎನ್ನುವಂತೆ ಜೋಲುಮುಖ ಮಾಡಿ ಕೂತಿದ್ದಾರೆ. ಅಷ್ಟರಲ್ಲಿ ಆ ನೀರವ ಮೌನವನ್ನು ಸೀಳಿಕೊಂಡು ಒಂದು ಪುಟಾಣಿ ಕೀರಲು ದನಿ ಬಂದಿದೆ. ಆ ಚೋಟುದ್ದದ ಹುಡುಗ ಎದ್ದುನಿಂತು ಗುರುಗಳು ಎಲ್ಲಿ ತಪ್ಪಿದ್ದಾರೆ ಎನ್ನುವುದನ್ನು ಕರಾರುವಾಕ್ಕಾಗಿ ತೋರಿಸಿ, ಮುಂದಿನ ಸಾಲುಗಳನ್ನು ಹೇಗೆ ಬರೆದರೆ ಈ ತೊಂದರೆಯಿಂದ ಪಾರಾಗಬಹುದು ಎನ್ನುವ ದಾರಿ ತೋರುತ್ತಾನೆ. ಕ್ಷಣಕಾಲ ಎಲ್ಲವನ್ನೂ ಮರೆತು ಅವನ ಮುಖವನ್ನೇ ನೆಟ್ಟದೃಷ್ಟಿಯಿಂದ ನೋಡುವ ಗುರುಗಳು "ವಾಹ್! ಎಂತಹ ಸುಂದರ ಪರಿಹಾರ! ಮತ್ತದಕ್ಕೆ ಎಷ್ಟೊಂದು ಅರ್ಥಪೂರ್ಣವಾದ ನಿರೂಪಣೆ!" ಎಂದು ಮನದುಂಬಿ ಹೇಳಿ ಚಪ್ಪಾಳೆ ತಟ್ಟಿಯೇಬಿಡುತ್ತಾರೆ. ಹುಡುಗನಿಗೆ ಕ್ಲಾಸಿನ ಮುಂದೆ ದೊಡ್ಡವನಾದೆನೆಂಬ ಮುಜುಗರ, ಹಿತವಾದ ರೋಮಾಂಚನ, ಎದೆಯಲ್ಲಿ ಖುಷಿಯ ತಬಲ.

ಯಾಕೆಂದರೆ ಅವನಿಗಿನ್ನೂ ಆಗ, ನಂಬಿದರೆ ನಂಬಿ, ಕೇವಲ ಒಂಬತ್ತು ವರ್ಷ!

ಮಂಗಳವಾರ, ಜೂನ್ 21, 2016

ಮೀನಿನ ಬ್ಯಾಟರಿ!

ಕೊಳ್ಳೇಗಾಲ ಶರ್ಮ


ಈ ವಾರ ಮೀನಿನದ್ದೇ ಸುದ್ದಿ. ಮೊನ್ನೆ ನಮ್ಮೂರ ಐಯಂಗಾರ್ ಬೇಕರಿಯಲ್ಲಿಯೂ ಮಂಗಳೂರಿನಿಂದ ಮೀನಿನ ಸರಬರಾಜು ಕಡಿಮೆಯಾಗಿರುವ ಬಗ್ಗೆ ಭಯಂಕರ ಚರ್ಚೆ ನಡೆದಿತ್ತು. ಈ ವರ್ಷ ಮಳೆರಾಯ ಕಾಲಿಡಲು ಹಿಂಜರಿಯುತ್ತಿರುವ ಕಾರಣ ಕಡಲಮೀನಿನ ಸಂತತಿಯೂ ಕಡಿಮೆಯಾಗಿದೆ ಎನ್ನುವುದು ಚರ್ಚೆ. ಇದರ ಬೆನ್ನಲ್ಲೇ ಇನ್ನೊಂದು ಸುದ್ದಿ. ಮೀನುಗಳು ಮನುಷ್ಯರ ಮುಖಚರ್ಯೆಯನ್ನು ಗುರುತಿಸಬಲ್ಲುವಂತೆ. ಅಂದರೆ ಅವು ನಮ್ಮನ್ನೂ, ನಿಮ್ಮನ್ನೂ ಬೇರೆ ಬೇರೆ ವ್ಯಕ್ತಿಗಳೆಂದು ಗುರುತಿಸಬಲ್ಲವು ಎನ್ನುವ ಸುದ್ದಿ. ಇದಷ್ಟೇ ಸಾಲದು ಎನ್ನುವಂತೆ ಇನ್ನೊಂದು ಸುದ್ದಿಯೂ ಬಂದಿದೆ. ಅದೆಂದರೆ ನಮ್ಮ, ನಿಮ್ಮ ಮೊಬೈಲು ಫೋನುಗಳನ್ನು ಚಾಲಿಸುವಂತಹ ಬ್ಯಾಟರಿ ತಯಾರಿಸುವುದು.

ಷಾಕ್ ಆಯಿತೇ! ಇದೇನು ‘ನಾನ್-ವೆಜ್’ ಬ್ಯಾಟರಿ ಎಂದಿರಾ?

ಸೋಮವಾರ, ಜೂನ್ 20, 2016

ವಿಜ್ಞಾನಲೋಕಕ್ಕೆ ಹತ್ತರ ಹರ್ಷ

ಟಿ. ಜಿ. ಶ್ರೀನಿಧಿ

ವಿಜ್ಞಾನ-ತಂತ್ರಜ್ಞಾನಗಳ ವಿಷಯಕ್ಕೆ ಬಂದರೆ ಅವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದು. ಆದರೆ ಮುಖ್ಯವಾಹಿನಿಯ ಪತ್ರಿಕೆಗಳಲ್ಲಿ ಈ ವಿಷಯಕ್ಕೆ ಎಷ್ಟು ತಾನೇ ಜಾಗ ನೀಡಲು ಸಾಧ್ಯ?

ಹಾಗೆಂದು ಸುಮ್ಮನಿರುವುದೂ ಸಾಧ್ಯವಿಲ್ಲವಲ್ಲ! ಈ ಕೊರತೆಯನ್ನು ತುಂಬಿಕೊಡಲು ವಿಜ್ಞಾನ ಪತ್ರಿಕೆಗಳು ಪ್ರಯತ್ನಿಸುತ್ತವೆ. ಸಾಮಾನ್ಯ ಪತ್ರಿಕೆಗಳಿಗಿಂತ ಹೆಚ್ಚು ಪ್ರಮಾಣದ ಮಾಹಿತಿಯನ್ನು ಆದಷ್ಟೂ ಹೆಚ್ಚು ವಿವರಗಳೊಡನೆ ನೀಡುವ ಸಾಧ್ಯತೆ ಈ ಪತ್ರಿಕೆಗಳ ವೈಶಿಷ್ಟ್ಯ. ವಿಷಯ ಕ್ಲಿಷ್ಟವೆಂದು ಸಾಮಾನ್ಯ ಪತ್ರಿಕೆಗಳಲ್ಲಿ ಜಾಗಪಡೆಯದ ಸಂಗತಿಗಳನ್ನೂ ಇವು ಓದುಗರಿಗೆ ತಲುಪಿಸಬಲ್ಲವು.

ಕನ್ನಡದಲ್ಲಿ ಅನೇಕ ವಿಜ್ಞಾನ ಪತ್ರಿಕೆಗಳು ಬಂದುಹೋಗಿವೆ. ಒಂದು ಶತಮಾನದಷ್ಟು ಹಿಂದೆ ಬೆಳ್ಳಾವೆ ವೆಂಕಟನಾರಣಪ್ಪನವರು ಪ್ರಾರಂಭಿಸಿ ನಡೆಸಿದ 'ವಿಜ್ಞಾನ'ದಿಂದ ಇತ್ತೀಚಿನವರೆಗೂ ಅನೇಕ ಪತ್ರಿಕೆಗಳು ಕನ್ನಡದ ಓದುಗರನ್ನು ತಲುಪಲು ಪ್ರಯತ್ನಿಸಿವೆ.

ಗುರುವಾರ, ಜೂನ್ 16, 2016

ಹೀಗೊಂದು ಗಣಿತದ ಕತೆ: ಶಿಷ್ಯರ ಬುದ್ಧಿವಂತಿಕೆ

ರೋಹಿತ್ ಚಕ್ರತೀರ್ಥ

ಛಲ ಬಿಡದ ತ್ರಿವಿಕ್ರಮನು, ಮತ್ತೆ, ಆ ಹಳೇ ಮರದ ಕೊಂಬೆಗೆ ಹಾರಿಹೋಗಿ ತಲೆಕೆಳಗಾಗಿ ನೇತುಬಿದ್ದಿದ್ದ ಬೇತಾಳವನ್ನು ಇಳಿಸಿ ಬೆನ್ನಿಗೆ ಹಾಕಿಕೊಂಡು ಕಾಡಿನ ದಾರಿಯಲ್ಲಿ ನಡೆಯತೊಡಗಿದನು. ಆಗ ಬೇತಾಳವು, "ರಾಜಾ, ಮರಳಿ ಯತ್ನವ ಮಾಡು ಎಂಬ ಮಾತಿನಲ್ಲಿ ನೂರಕ್ಕೆ ನೂರರಷ್ಟು ನಂಬಿಕೆ ಇಟ್ಟು ದೃಢ ಮನಸ್ಸಿನಿಂದ ಕೆಲಸ ಮಾಡುತ್ತಿರುವ ನಿನ್ನ ಅವಸ್ಥೆಯನ್ನು ಕಂಡಾಗ ಮೆಚ್ಚುಗೆಯೂ ಕನಿಕರವೂ ಒಟ್ಟಿಗೇ ಮೂಡುತ್ತವೆ. ಒಂದೇ ಕೆಲಸವನ್ನು ಮತ್ತೆಮತ್ತೆ ಮಾಡುವ ಸಂದರ್ಭ ಬಂದಾಗ, ಅದನ್ನು ಸರಳಗೊಳಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆಯಾದರೂ ನೀನು ಯೋಚಿಸುವುದು ಬೇಡವೇ? ಅದಕ್ಕೆ ತಕ್ಕ ಹಾಗೆ ಒಂದು ಕತೆ ನನಗೆ ನೆನಪಾಗುತ್ತಿದೆ. ಗಮನವಿಟ್ಟು ಕೇಳು" ಎಂದು ತನ್ನ ಕತೆಯ ಬುಟ್ಟಿ ಬಿಚ್ಚಿತು.

ಅದು ಮೂರನೇ ತರಗತಿ. ಕ್ಲಾಸಿನೊಳಗೆ ಬಂದ ಮೇಸ್ಟ್ರಿಗೆ ಅಂದೇಕೋ ಮಹಾಜಾಡ್ಯ ಆವರಿಸಿದಂತಿದೆ. ಈ ಮಕ್ಕಳಿಗೆ ಸುಲಭಕ್ಕೆ ಬಿಡಿಸಲಾಗದ ಲೆಕ್ಕ ಕೊಟ್ಟು ಅರ್ಧ-ಮುಕ್ಕಾಲು ಗಂಟೆ ಒದ್ದಾಡಿಸಿಬಿಟ್ಟರೆ ತನ್ನ ಪೀರಿಯಡ್ಡು ಮುಗಿಯುತ್ತದೆ ಎಂಬ ಹಂಚಿಕೆ ಹಾಕಿದವರೇ "ಒಂದರಿಂದ ನೂರರವರೆಗಿನ ಎಲ್ಲ ಸಂಖ್ಯೆಗಳ ಮೊತ್ತ ಎಷ್ಟು ಹುಡುಕಿ ನೋಡುವಾ" ಎಂದು ಸವಾಲು ಹಾಕಿ ಕುರ್ಚಿಯಲ್ಲಿ ಸುಖಾಸೀನರಾಗಿದ್ದಾರೆ. ಮೇಸ್ಟ್ರು ಕಾಲ ಅಂಗುಷ್ಠದಲ್ಲಿ ಹೇಳಿದ್ದನ್ನು ಭಕ್ತಿಯಿಂದ ಶಿರಸಾವಹಿಸಿ ಮಾಡುವ ಮಕ್ಕಳು ಕೂಡಲೇ ಹಲಗೆ ಬಳಪ ಎತ್ತಿಕೊಳ್ಳುತ್ತಾರೆ. ತಮ್ಮ ಶಕ್ತ್ಯಾನುಸಾರ ಪ್ರಶ್ನೆಯ ಚಕ್ರವ್ಯೂಹವನ್ನು ಭೇದಿಸಲು ಸನ್ನದ್ಧರಾಗುತ್ತಾರೆ.

ಮಂಗಳವಾರ, ಜೂನ್ 14, 2016

ಸೀನಿನ ಲೆಕ್ಕಾಚಾರ!

ಕೊಳ್ಳೇಗಾಲ ಶರ್ಮ


ನಾನು ಸೀನಿದಾಗಲೆಲ್ಲ ಕೇಳುತ್ತಿದ್ದ ಮಾತು. “ಅಯ್ಯೋ. ಒಂಟಿ ಸೀನು ಸೀನಿಬಿಟ್ಟೆಯಲ್ಲೋ? ಇನ್ನೊಂದು ಸೀನು ಸೀನಿಬಿಡು.” ಇದು ಅಮ್ಮ ಸೀನಿನಿಂದ ನಾನು ಪಡುತ್ತಿದ್ದ ಅವಸ್ಥೆಯನ್ನು ಕಂಡು ತಮಾಷೆ ಮಾಡಲು ಹೇಳುತ್ತಿದ್ದಳೋ, ಅಥವಾ ಸೀನಿದ್ದರಿಂದಾದ ಮುಜುಗರ ಕಡಿಮೆಯಾಗುವಂತೆ ಸಮಾಧಾನ ಮಾಡಲು ಹೇಳುತ್ತಿದ್ದಳೋ ಗೊತ್ತಿಲ್ಲ. ಒಟ್ಟಾರೆ ಸೀನುವುದು ಎಂದರೆ ಕಸಿವಿಸಿಯ ವಿಷಯ ಎನ್ನುವುದಂತೂ ಮನಸ್ಸಿನಲ್ಲಿ ಗಟ್ಟಿಯಾಗಿ ನೆಲೆಯಾಗಿ ಬಿಟ್ಟಿದೆ. ಅಮ್ಮ ಏನೋ ಇನ್ನೊಮ್ಮೆ ಸೀನು ಎಂದು ಬಿಡುತ್ತಿದ್ದಳು. ಆದರೆ ಹಾಗೆ ಬೇಕೆಂದ ಹಾಗೆ, ಬೇಕಾದಷ್ಟು ಬಾರಿ ಸೀನಲು ಆದೀತೇ? ಅದೇನು ನಮ್ಮ ಮಾತು ಕೇಳುವ ವಿದ್ಯಮಾನವೇ?

ಹೀಗೆಂದು ನಾವು ನೀವು ಹೇಳಿಬಿಡಬಹುದು. ಆದರೆ ಅಮೆರಿಕದ ತಂತ್ರಜ್ಞಾನದ ಕಾಶಿ ಮಸ್ಯಾಚುಸೆಟ್ಸ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಯಲ್ಲಿ ಭೌತವಿಜ್ಞಾನಿಯಾಗಿರುವ ಲಿಡಿಯಾ ಬೋರೊಯಿಬಾ ಹೀಗೆನ್ನುವುದಿಲ್ಲ. ಹಾಗಂತ ಆಕೆಗೆ ಸದಾ ಸೀನುವ ಖಾಯಿಲೆ ಇದೆ ಎನ್ನಬೇಡಿ. ಆಕೆ ಸೀನಿನ ಭೌತಶಾಸ್ತ್ರವನ್ನು ಲೆಕ್ಕ ಹಾಕುತ್ತಿರುವ ವಿಜ್ಞಾನಿ ಅಷ್ಟೆ. ಬೇಕೆಂದಾಗ ನಿಮಗೆ ಸೀನು ತರಿಸಿ, ನೀವು ಸೀನುವ ಸಂದರ್ಭದಲ್ಲಿ ನಡೆಯುವ ವಿದ್ಯಮಾನವನ್ನು ಕೂಲಂಕಷವಾಗಿ ಲೆಕ್ಕಾಚಾರ ಹಾಕುವ ಕೆಲಸದಲ್ಲಿ ಲಿಡಿಯಾ ನಿರತೆ. ಈಕೆಯ ಪ್ರಕಾರ ಸೀನುವ ಬಗ್ಗೆ ನಮಗೆ ಹೆಚ್ಚೇನೂ ತಿಳಿದಿಲ್ಲವಂತೆ.

ನಿಜ. ಮೂಗಿಗೆ ಒಂದಿಷ್ಟು ಕಿರಿಕಿರಿಯಾದಾಗ ಫಟಾರನೆ ಆಗುವ ಮಹಾಸ್ಫೋಟವೇ ಸೀನು.

ಬುಧವಾರ, ಜೂನ್ 8, 2016

ಗ್ಯಾಜೆಟ್ ಇಜ್ಞಾನ: ಹೊಸ ಲೆನೋವೋ‌ ಫೋನ್ ಸದ್ಯದಲ್ಲೇ ಮಾರುಕಟ್ಟೆಗೆ

ಟಿ. ಜಿ. ಶ್ರೀನಿಧಿ



ಅಪ್‌ಡೇಟ್: ಲೆನೋವೋ ವೈಬ್ K5 ರೂ. ೬,೯೯೯ರ ಮುಖಬೆಲೆಯೊಡನೆ ಬಿಡುಗಡೆಯಾಗಿದೆ. 

ಈಚಿನ ದಿನಗಳಲ್ಲಿ ನಮ್ಮ ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುವೇ ಇಲ್ಲ. ಹಲವು ಮೊಬೈಲ್ ನಿರ್ಮಾತೃಗಳ ಹತ್ತಾರು ಮಾದರಿಯ ಹೊಸ ಫೋನುಗಳು ಸದಾಕಾಲ ಸುದ್ದಿಮಾಡುತ್ತಲೇ ಇರುತ್ತವೆ.

ಈ ಬಿಡುವಿಲ್ಲದ ಚಟುವಟಿಕೆಯಿಂದಾಗಿ ಮೊಬೈಲ್ ಗ್ರಾಹಕರಿಗೆ ಲಭ್ಯವಿರುವ ಆಯ್ಕೆಗಳು ದಿನೇದಿನೇ ಹೆಚ್ಚುತ್ತಿವೆ. ಅಷ್ಟೇ ಅಲ್ಲ, ಮೊಬೈಲಿನಲ್ಲಿ ದೊರಕುವ ಸೌಲಭ್ಯಗಳೂ ಹೆಚ್ಚುತ್ತಿವೆ. ಮೊದಲಿಗೆ ದುಬಾರಿ ಫೋನುಗಳಲ್ಲಷ್ಟೆ ಕಾಣಿಸಿಕೊಂಡ ಅದೆಷ್ಟೋ ಅನುಕೂಲಗಳು ಅವುಗಳ ಹೋಲಿಕೆಯಲ್ಲಿ ಸಾಕಷ್ಟು ಕಡಿಮೆ ಬೆಲೆಯ ಮಾದರಿಗಳಲ್ಲೂ ಸಿಗುತ್ತಿವೆ. ಹಾಗಾಗಿಯೇ ಏನೋ, ಹತ್ತು ಸಾವಿರ ರೂಪಾಯಿಯ ಆಸುಪಾಸಿನಲ್ಲಿ ಸಾಕಷ್ಟು ಉತ್ತಮವಾದ ಫೋನ್ ಕೊಳ್ಳುವುದು ಇದೀಗ ಸಾಧ್ಯವಾಗಿದೆ.

ಹಾಗೆಂದು ಎಲ್ಲಾದರೂ ಸುಮ್ಮನಿರುವುದು ಸಾಧ್ಯವೇ, ಉತ್ತಮ ಮೊಬೈಲ್ ಫೋನುಗಳನ್ನು ಅದಕ್ಕಿಂತ ಕಡಿಮೆ ಬೆಲೆಯಲ್ಲಿ ನೀಡುವ ಪ್ರಯತ್ನಗಳೂ ಸಾಗಿವೆ. ಕಳೆದ ವರ್ಷ ಮಾರುಕಟ್ಟೆಗೆ ಬಂದು ಭಾರೀ ಜನಪ್ರಿಯತೆ ಗಳಿಸಿಕೊಂಡಿದ್ದ ಲೆನೋವೋ A6000 ಹಾಗೂ A6000 ಪ್ಲಸ್ ಇಂತಹ ಫೋನುಗಳಿಗೆ ಉತ್ತಮ ಉದಾಹರಣೆಗಳು.

ಈ ಪ್ರಯತ್ನದ ಮುಂದುವರೆದ ಅಂಗವಾಗಿ ಲೆನೋವೋ ಸಂಸ್ಥೆ ತನ್ನ 'ವೈಬ್ K5' ಮಾದರಿಯನ್ನು ಈ ತಿಂಗಳು (ಜೂನ್ ೨೦೧೬) ಭಾರತೀಯ ಮಾರುಕಟ್ಟೆಗೆ ಬಿಡುಗಡೆಮಾಡುವ ನಿರೀಕ್ಷೆಯಿದೆ.

ಮಂಗಳವಾರ, ಜೂನ್ 7, 2016

ಪ್ರಣಯದಾಟವೂ ಕಾಂತಶಕ್ತಿಯೂ

ಕೊಳ್ಳೇಗಾಲ ಶರ್ಮ

ಪ್ರಣಯದಾಟ ಕಾಂತ-ಕಾಂತೆಯರ ನಡುವೆ ನಡೆಯುತ್ತದೆ. ಅದರಲ್ಲನೇನು ವಿಶೇಷ? ಎಂದಿರಾ? ನಿಜ. ಪ್ರಣಯದಾಟ ಗಂಡು-ಹೆಣ್ಣಿನ ನಡುವಿನ ಆಕರ್ಷಣೆಯ ಫಲ. ಗಂಡು ಹೆಣ್ಣನ್ನು ಆಕರ್ಷಿಸುತ್ತದೋ, ಹೆಣ್ಣು ಗಂಡನ್ನು ಆಕರ್ಷಿಸುತ್ತದೋ, ಗೊತ್ತಿಲ್ಲ. ಒಟ್ಟಾರೆ ಸಂತಾನಾಭಿವೃದ್ಧಿಯಲ್ಲಿ ಪ್ರಣಯದಾಟಗಳು ಪ್ರಮುಖ ಪಾತ್ರ ವಹಿಸುತ್ತವೆನ್ನುವುದು ಮಾತ್ರ ನಿಜ. ಈ ಆಟ ಕೇವಲ ಹೆಣ್ಣು, ಗಂಡಿನ ನಡುವಿನ ಆಕರ್ಷಣೆಯಲ್ಲ. ಇದರಲ್ಲಿ ಈ ಭೂಮಿಯ ಕಾಂತ ಶಕ್ತಿಯ ಪ್ರಭಾವವೂ ಇದೆಯಂತೆ.

ಗಂಡು-ಹೆಣ್ಣಿನ ನಡುವೆ ನಡೆಯುವ ಪ್ರಣಯಕೇಳಿಯನ್ನು ವಿದ್ಯುತ್ ಅಥವಾ ಅಯಸ್ಕಾಂತ ಶಕ್ತಿಯು ಪ್ರಭಾವಿಸುತ್ತದೆನ್ನುವ ಸ್ವಾರಸ್ಯಕರ (ಶಾಕಿಂಗ್ ಸುದ್ದಿ ಅಂದರೂ ಸರಿಯೇ. ಆಕರ್ಷಕ ಸುದ್ದಿ ಅಂದರೂ ಸರಿಯೇ!) ಸುದ್ದಿಯನ್ನು ತೈವಾನಿನ ಚಾಂಗ್ ಗುನ್ ವಿವಿಯ ವಿಜ್ಞಾನಿ ಚಿಯಾಲಿನ್ ವೂ ಮತ್ತು ಸಂಗಡಿಗರು ಇತ್ತೀಚಿನ ಪಿಎಲ್ಓಎಸ್ ಒನ್ ಪತ್ರಿಕೆಯಲ್ಲಿ ವರದಿ ಮಾಡಿದ್ದಾರೆ.

ಗುರುವಾರ, ಜೂನ್ 2, 2016

ಗತಿಸಿಹೋದವು ಆ ದಿನಗಳು!

ರೋಹಿತ್ ಚಕ್ರತೀರ್ಥ

"ನಮ್ ಕಾಲದಲ್ಲಿ ನೋಡಬೇಕಿತ್ತು!" ಎಂದೇ ಹಲವು ಹಿರಿಯರ ಕತೆಗಳು ಶುರುವಾಗುವುದು. ಹಿಂದಿನ ಕಾಲದಲ್ಲಿ ಏನಿತ್ತು? ಫಾಸ್ಟ್ ಟ್ರೇನು, ಏರೋಪ್ಲೇನುಗಳು ಇರಲಿಲ್ಲ. ಕಾಗದ, ತಂತಿ ಬಿಟ್ಟರೆ ಬೇರಾವ ಸಂವಹನ ಮಾಧ್ಯಮವೂ ಇರಲಿಲ್ಲ. ಕಪ್ಪುಬಿಳುಪು ಟಿವಿಯಲ್ಲಿ ದೂರದರ್ಶನ ಹಾಕಿದ್ದನ್ನೇ ಮೂರು ಹೊತ್ತು ನೋಡುತ್ತ ಕೂರಬೇಕಿತ್ತು. ಫೇಸ್‌ಬುಕ್ ಬಿಡಿ, ಈಗಿನವರಿಗೆ ಪರಿಚಯವಿಲ್ಲದ ಮೈಸ್ಪೇಸ್, ಆರ್ಕುಟ್ ಮುಂತಾದ ಪಳೆಯುಳಿಕೆಗಳು ಕೂಡ ಇರದ ಕಾಲ ಅದು. ಅಂಥಾದ್ದರಲ್ಲಿ ಯಾವ ಸುಖ-ಸೌಕರ್ಯ ಇಲ್ಲದ ಆ ಶಿಲಾಯುಗವನ್ನು ಗೋಲ್ಡನ್ ಏಜ್ ಅಂತೀರಲ್ಲ, ತಲೆ ಕೆಟ್ಟಿದೆಯೇ ಎಂದು ಈಗಿನವರು ಕೇಳಿಯಾರು. ತಡೆಯಿರಿ, ಇನ್ನೈವತ್ತು ವರ್ಷಗಳು ಹೋದರೆ ಇದೇ ಮಂದಿ "ನಮ್ಮ ಕಾಲದಲ್ಲಿ ಎಷ್ಟೊಂದು ಚೆನ್ನಿತ್ತು! ಸಂವಹನಕ್ಕೆ ಸ್ಮಾರ್ಟ್ ಫೋನ್ ಬಿಟ್ಟರೆ ಬೇರೇನಿರಲಿಲ್ಲ!" ಎನ್ನುವ ಕಾಲ ಬರುತ್ತದೆ.

ಮಂಗಳವಾರ, ಮೇ 31, 2016

ಅಪ್ಪನ ಬೆಲೆ ಏನು ಗೊತ್ತೇ?

ಕೊಳ್ಳೇಗಾಲ ಶರ್ಮ

Frédéric SALEIN / Wikimedia Commons

ಮನೆ ಜಗಳದ ವಿಷಯ ಅಲ್ಲ ಬಿಡಿ. ಇದು ಜೀವಿವಿಜ್ಞಾನದ ವಿಸ್ಮಯ. ಹೌದು. ಜೀವಿಗಳಲ್ಲಿ ಗಂಡು ಹೆಣ್ಣು ಎನ್ನುವ ಭೇದವನ್ನು ಯಃಕಶ್ಚಿತ್ ಕೀಟಗಳಿಂದ ಮಾನವನವರೆಗೂ ಕಾಣುತ್ತೇವೆ. ಜೀವಿಗಳ ಬೆಳೆವಣಿಗೆ, ಉಳಿವಿಗೆ ಹೆಣ್ಣಿನ ಕೊಡುಗೆ ಏನೆಂಬುದನ್ನು ವಿವರಿಸಬೇಕಿಲ್ಲ. ನೂರಾರು ಸಂತಾನವನ್ನು ಹೆರುವ ಹೊಣೆ ಹೆಣ್ಣಿನದ್ದೇ. ಅದಕ್ಕೇ ಅದಕ್ಕೆ ಅಮ್ಮನ ಪಟ್ಟ. ಹಾಗಿದ್ದರೆ ಗಂಡಿನ ಪಾತ್ರವೇನು? ಕೇವಲ ಸಂತಾನಾಭಿವೃದ್ಧಿ ಮಾಡಲಿ ಎಂದು ಹೆಣ್ಣಿಗೆ ವೀರ್ಯಾಣುವನ್ನು ಕೊಡುವುದಷ್ಟೆ ಗಂಡಿನ ಕೆಲಸವೆ? ಅಥವಾ ಅದಕ್ಕಿಂತಲೂ ಹೆಚ್ಚಿನದೇನಾದರೂ ಇದೆಯೋ? ಇದು ಪ್ರಶ್ನೆ.

ಈ ಪ್ರಶ್ನೆಯೊಳಗೆ ಅಡಗಿದೆ ಅಪ್ಪನ ಕುರಿತ ಇನ್ನೊಂದು ಪ್ರಶ್ನೆ.

ಭಾನುವಾರ, ಮೇ 29, 2016

ಜೆನ್‌ಫೋನ್ ಮ್ಯಾಕ್ಸ್ ಇದೀಗ ಇನ್ನಷ್ಟು ಶಕ್ತಿಶಾಲಿ!

ಟಿ. ಜಿ. ಶ್ರೀನಿಧಿ

ಮೊಬೈಲ್ ಫೋನಿನ ಬ್ಯಾಟರಿ ಕೈಕೊಟ್ಟಾಗ ಬಳಸಲೆಂದು ಪವರ್ ಬ್ಯಾಂಕ್ ಇಟ್ಟುಕೊಂಡಿರುವುದು ನಮಗೆಲ್ಲ ಅಭ್ಯಾಸವಾಗಿದೆ. ಆ ಪವರ್‌ಬ್ಯಾಂಕ್ ನಮ್ಮ ಫೋನಿನಲ್ಲೇ ಇರುವಂತಿದ್ದರೆ? ನಮ್ಮ ಗೆಳೆಯರ ಫೋನಿನ ಬ್ಯಾಟರಿಯನ್ನು ಅದರಿಂದಲೇ ಚಾರ್ಜ್ ಮಾಡುವಂತಿದ್ದರೆ?

ಐದು ಸಾವಿರ ಎಂಎ‌ಎಚ್ ಸಾಮರ್ಥ್ಯದ ಬ್ಯಾಟರಿಯೊಡನೆ ಈ ಕನಸನ್ನು ನನಸಾಗಿಸಿರುವ ಏಸಸ್ ಜೆನ್‌ಫೋನ್ ಮ್ಯಾಕ್ಸ್ ಮೊಬೈಲಿನ ಪರಿಚಯ ಈ ಹಿಂದೆ ಇಜ್ಞಾನ ಡಾಟ್ ಕಾಮ್‌ನಲ್ಲಿ ಪ್ರಕಟವಾಗಿತ್ತು [ಮೊಬೈಲೂ ಹೌದು, ಪವರ್‌ಬ್ಯಾಂಕೂ ಹೌದು!]. ಈ ವಿಶಿಷ್ಟ ಮೊಬೈಲಿನ ಹೊಸ ಆವೃತ್ತಿಯನ್ನು ಇದೀಗ ಪರಿಚಯಿಸಲಾಗಿದೆ ಎನ್ನುವುದು ಇಂದಿನ ಸುದ್ದಿ.

ಏಸಸ್ ಜೆನ್‌ಫೋನ್ ಮ್ಯಾಕ್ಸ್‌ನ ಈ ಹೊಸ ಆವೃತ್ತಿ ಹೆಚ್ಚು ಶಕ್ತಿಶಾಲಿ ಪ್ರಾಸೆಸರ್, ಹೆಚ್ಚು ಶೇಖರಣಾ ಸಾಮರ್ಥ್ಯ, ಹೆಚ್ಚು ಸಾಮರ್ಥ್ಯದ ರ್‍ಯಾಮ್ ಆಯ್ಕೆಗಳು ಹಾಗೂ ಆಂಡ್ರಾಯ್ಡ್‌ನ ಲೇಟೆಸ್ಟ್ ಆವೃತ್ತಿಯೊಡನೆ (೬.೦.೧, ಮಾರ್ಶ್‌ಮೆಲ್ಲೋ) ಮಾರುಕಟ್ಟೆಗೆ ಬಂದಿದೆ.

ಗುರುವಾರ, ಮೇ 26, 2016

ಇಜ್ಞಾನ ವಿಶೇಷ ಲೇಖನ: ಮಿದುಳು ಎಂಬ ಹೆಡ್ಡಾಫೀಸು

ರೋಹಿತ್ ಚಕ್ರತೀರ್ಥ

ಗಿರೀಶ ಕಾರ್ನಾಡರ "ಹಯವದನ" ನಾಟಕದಲ್ಲಿ ಒಂದು ಪ್ರಸಂಗ ಬರುತ್ತದೆ. ಕಪಿಲ ಮತ್ತು ದೇವದತ್ತ ಎಂಬ ಇಬ್ಬರು ಗೆಳೆಯರು ಕಾಳಿಯ ದೇಗುಲದಲ್ಲಿ ಕತ್ತಿ ಹಿರಿದು ಹೋರಾಡಿ ಪರಸ್ಪರರ ರುಂಡಗಳನ್ನು ಕಡಿದುಹಾಕುತ್ತಾರೆ. ದೇವದತ್ತನ ಪತ್ನಿ ಪದ್ಮಿನಿ ಅಲ್ಲಿಗೆ ಬಂದು, ಕಡಿದು ಚೆಲ್ಲಿದ ದೇಹಗಳನ್ನು ನೋಡಿ ಭಯಭೀತಳಾದಾಗ ಕಾಳಿ ಪ್ರತ್ಯಕ್ಷಳಾಗಿ, ಅವರಿಬ್ಬರ ರುಂಡಗಳನ್ನೂ ಮರಳಿ ದೇಹಗಳಿಗೆ ಜೋಡಿಸಿಟ್ಟರೆ ತಾನವರಿಗೆ ಜೀವ ಕೊಡುತ್ತೇನೆಂದು ಹೇಳುತ್ತಾಳೆ. ಗಡಿಬಿಡಿಯಲ್ಲಿ ಪದ್ಮಿನಿ ಕಪಿಲನ ತಲೆಯನ್ನು ದೇವದತ್ತನಿಗೂ ದೇವದತ್ತನದನ್ನು ಕಪಿಲನಿಗೂ ಜೋಡಿಸಿಡುತ್ತಾಳೆ. ಈ ಆಟವನ್ನು ನೋಡಿಯೂ ವಿಧಿಲಿಖಿತ ಎಂದು ಸುಮ್ಮನಿರುವ ಕಾಳಿ ಅವರಿಗೆ ಜೀವ ಕೊಟ್ಟುಬಿಡುತ್ತಾಳೆ. ಈಗ ಪದ್ಮಿನಿಯ ಗಂಡ ಯಾರು? ಕಪಿಲನೋ ದೇವದತ್ತನೋ? ಅಸಲಿಗೆ ಯಾರು ಕಪಿಲ ಯಾರು ದೇವದತ್ತ, ಎಂಬ ತಾತ್ತ್ವಿಕಸಮಸ್ಯೆ ಹುಟ್ಟುತ್ತದೆ. ಒಬ್ಬ ಋಷಿಯ ಬಳಿ ಹೋದಾಗ ಅವನು ಅಂಗಗಳಲ್ಲಿ ತಲೆಯೇ ಉತ್ತಮಾಂಗ. ಹಾಗಾಗಿ ದೇವದತ್ತನ ತಲೆಯಿರುವವನೇ ದೇವದತ್ತ ಎಂದು ತೀರ್ಪು ಕೊಡುತ್ತಾನೆ.

ಮನುಷ್ಯನಿಗೆ ತಲೆ ಎಷ್ಟು ಮುಖ್ಯ? ಅವನ ಅಸ್ತಿತ್ವಕ್ಕೆ ಅರ್ಥವಂತಿಕೆ ತರುವ ಭಾಗ ಯಾವುದು ಎಂಬ ಚರ್ಚೆ ಶತಶತಮಾನಗಳಿಂದ ನಡೆದುಬಂದಿದೆ.

ಮಂಗಳವಾರ, ಮೇ 24, 2016

ಅನ್ಯಗ್ರಹ ಜೀವಿಗಳು ಹೇಗಿರಬಹುದು?

ಕೊಳ್ಳೇಗಾಲ ಶರ್ಮ

ಮಂಗಳನಿಂದಲೋ, ಶುಕ್ರನಿಂದಲೋ ಜೀವಿಗಳು ಭೂಮಿಗೆ ಬಂದು ಇಳಿದರೆ ಏನಪ್ಪಾ ಅನ್ನುವ ಆತಂಕ ಇಂದು ನಿನ್ನೆಯದಲ್ಲ. ಸುಮಾರು 120 ವರ್ಷಗಳ ಹಿಂದೆ ಸುಪ್ರಸಿದ್ಧ ಆಂಗ್ಲ ಲೇಖಕ ಹೆಚ್. ಜಿ. ವೆಲ್ಸ್ 'ದಿ ವಾರ್ ಆಫ್ ದಿ ವರ್ಲ್ಡ್ಸ್' (ಲೋಕಗಳ ಕದನ) ಎನ್ನುವ ಪುಸ್ತಕವನ್ನು ಬರೆದಿದ್ದ. ಫ್ರೆಂಚರು ಮತ್ತು ಆಂಗ್ಲರ ನಡುವಿನ ಯುದ್ಧಗಳ ವಿಡಂಬನೆಯಾಗಿದ್ದ ಈ ಕಥೆಯಲ್ಲಿ ಮಂಗಳಗ್ರಹವಾಸಿಗಳು ಇಂಗ್ಲೆಂಡಿನ ಮೇಲೆ ಆಕ್ರಮಣ ಮಾಡಿದರೆಂದಿತ್ತು. ಇದೇ ಕಥೆಯನ್ನು ಕೆಲವು ದಶಕಗಳ ಅನಂತರ ಅಮೆರಿಕದ ರೇಡಿಯೋ ಒಂದು ನಾಟಕವನ್ನಾಗಿ ಪ್ರಸಾರ ಮಾಡಿದಾಗ, ಆಗಷ್ಟೆ ಎರಡನೇ ಮಹಾಯುದ್ಧದ ಬಿಸಿಯನ್ನು ಕಂಡಿದ್ದ ಅಮೆರಿಕನ್ನರು, ನಾಟಕವನ್ನೇ ನಿಜವೆಂದು ತಿಳಿದು ಬೆಚ್ಚಿ ಬಿದ್ದಿದ್ದು ಚರಿತ್ರೆ. ಒಟ್ಟಾರೆ ಅನ್ಯಗ್ರಹವಾಸಿಗಳು ಎಂದರೆ ಬೆಚ್ಚುವ ಬೆದರುವವರೇ ಜಾಸ್ತಿ. ನಮ್ಮಲ್ಲೂ ಅನ್ಯಗ್ರಹವಾಸಿಗಳ ಬಗ್ಗೆ ಇರುವ ಕಲ್ಪನೆಗಳು ಸುಂದರವೇನಲ್ಲ! ನಾಗಲೋಕ, ನರಕಲೋಕ ಎಂದೆಲ್ಲ ಹೇಳುವ ವಿಚಿತ್ರ ವಿಶ್ವದ ಜೀವಿಗಳು ಅತ್ತ ಮಾನವರೂ ಅಲ್ಲದ, ಇತ್ತ ಪ್ರಾಣಿಗಳೂ ಅಲ್ಲದ ರೂಪಗಳು. 

ಯಾವುದೋ ಜೀವಿಯ ತಳಿಗುಣವನ್ನು ಇನ್ಯಾವುದೋ ಜೀವಿಗೆ ತಳುಕಿಸುವಷ್ಟು ಜೀವವಿಜ್ಞಾನದ ಅರಿವನ್ನು ಪಡೆದಿರುವ ಇಂದಿನ ದಿನಗಳಲ್ಲಿಯೂ, ಅನ್ಯಗ್ರಹಜೀವಿಗಳ ಬಗ್ಗೆ ಇದೇ ಬಗೆಯ ಕಲ್ಪನೆಗಳೇ ಚಾಲ್ತಿಯಲ್ಲಿವೆ ಎನ್ನುವುದು ವಿಚಿತ್ರವಾದರೂ ಸತ್ಯ. ಕೆಲವು ಕಥೆಗಳಲ್ಲಿಯಂತೂ ಹುಳುಗಳಂತೆ ಕಾಣುವ ದೈತ್ಯ ಜೀವಿಗಳು ಭೂಮಿಯನ್ನು ದಂಡೆತ್ತಿ ಬರುವಂತೆ ತೋರಿಸಲಾಗುತ್ತದೆ. ಇನ್ನು ಕೆಲವು ಕಲ್ಪನೆಗಳಲ್ಲಿ ಅನ್ಯಗ್ರಹಜೀವಿಗೆ ಇರುವ ಅದ್ಭುತ ಶಕ್ತಿ, ಸಾಮರ್ಥ್ಯಗಳು ಬೆರಗುಗೊಳಿಸುತ್ತವೆ. ಉದಾಹರಣೆಗೆ, ಹೃತಿಕ್ ರೋಷನ್ ನಟಿಸಿದ 'ಕ್ರಿಷ್' ಚಿತ್ರದಲ್ಲಿ ಅನುವಂಶೀಯವಾಗಿ ಪೆದ್ದನಾಗಿರುವ ಹೃತಿಕ್ ರೋಷನ್ ಅನ್ಯಗ್ರಹಜೀವಿಯೊಂದರ ಜೊತೆಗೆ ಗೆಳೆತನ ಬೆಳೆಸುತ್ತಾನೆ. ಆ ಜೀವಿ ಅವನಿಗೆ ಅತಿಮಾನುಷ ಶಕ್ತಿಯನ್ನು ತುಂಬುತ್ತದೆ. ಇದೇ ಕಥೆಯನ್ನು ಮುಂದುವರೆಸಿದ 'ಕ್ರಿಷ್ 2' ನಲ್ಲಿ ಅತಿ ಮಾನುಷ ಶಕ್ತಿಯ ಕ್ರಿಷ್ ನ ಮಗನಿಗೂ ಆ ಶಕ್ತಿ ಬಂದಿರುತ್ತದೆ. ಇವೆಲ್ಲ ನಿಜವೇ? ಹೀಗಾಗಬಹುದೇ?

ಸೋಮವಾರ, ಮೇ 23, 2016

ಎಂಬಿಪಿಎಸ್ ಎಂದರೇನು?

ಒಂದಲ್ಲ ಒಂದು ಸಾಧನದ ಮೂಲಕ ನಾವು ಸದಾಕಾಲ ಅಂತರಜಾಲ ಸಂಪರ್ಕವನ್ನು ಬಳಸುತ್ತಲೇ ಇರುತ್ತೇವಲ್ಲ, ಹಾಗೆ ಬಳಸುವಾಗ ಸಂಪರ್ಕದ ವೇಗದ ಬಗೆಗೂ ಕೇಳಿರುತ್ತೇವೆ: ೮ ಎಂಬಿಪಿಎಸ್, ೧೬ ಎಂಬಿಪಿಎಸ್, ೫೦ ಎಂಬಿಪಿಎಸ್... ಹೀಗೆ.

ಎಂಬಿ ಅಂದರೆ ಮೆಗಾಬೈಟ್ ಸರಿ, ಆದರೆ ಇದೇನಿದು ಎಂಬಿಪಿಎಸ್?

ಗುರುವಾರ, ಮೇ 19, 2016

ಕಂಪ್ಯೂಟರಿನ ಪುಟಾಣಿ ರೂಪ

ಟಿ. ಜಿ. ಶ್ರೀನಿಧಿ

ಕಂಪ್ಯೂಟರುಗಳು ಮೊದಲಿಗೆ ಕಾಣಿಸಿಕೊಂಡಿದ್ದು ಬೆರಳೆಣಿಕೆಯಷ್ಟು ಸಂಶೋಧನಾಲಯಗಳಲ್ಲಿ, ಪ್ರತಿಷ್ಠಿತ ಕಾಲೇಜು-ವಿವಿಗಳಲ್ಲಿ, ದೊಡ್ಡದೊಡ್ಡ ಸಂಸ್ಥೆಗಳಲ್ಲಿ ಮಾತ್ರವೇ. ಒಂದೊಂದು ಕಂಪ್ಯೂಟರು ಒಂದೊಂದು ಕೋಣೆಯ ತುಂಬ ತುಂಬಿಕೊಂಡಿರುತ್ತಿದ್ದ ಕಾಲ ಅದು. ಪೂರ್ತಿ ಕಂಪ್ಯೂಟರಿನ ಮಾತು ಹಾಗಿರಲಿ, ಅವರ ಕಚೇರಿಯಲ್ಲಿದ್ದ ಹಾರ್ಡ್ ಡಿಸ್ಕು - ಬರಿಯ ಎರಡು ಜಿಬಿ ಸಾಮರ್ಥ್ಯದ್ದು - ಹಳೆಯ ವಾಶಿಂಗ್ ಮಶೀನಿನಷ್ಟು ದೊಡ್ಡದಾಗಿತ್ತು ಎಂದು ಹಿರಿಯ ಬ್ಯಾಂಕ್ ಅಧಿಕಾರಿ ಶ್ರೀಧರ ಈಚೆಗಷ್ಟೆ ನೆನಪಿಸಿಕೊಳ್ಳುತ್ತಿದ್ದರು.

ಆ ದಿನಗಳಿಂದ ಇಂದಿನವರೆಗೆ ಕಂಪ್ಯೂಟರ್ ಜಗತ್ತಿನಲ್ಲಿ ಅಸಂಖ್ಯ ಬದಲಾವಣೆಗಳಾಗಿವೆ. ಕಂಪ್ಯೂಟರಿನ ಸಾಮರ್ಥ್ಯ - ದತ್ತಾಂಶ ಸಂಸ್ಕರಿಸುವುದಾಗಲಿ, ಸಂಸ್ಕರಿಸಿದ ಮಾಹಿತಿಯನ್ನು ಉಳಿಸಿಟ್ಟುಕೊಳ್ಳುವುದಾಗಲಿ - ಅಪಾರವಾಗಿ ಹೆಚ್ಚಿದೆ. ಸಾಮರ್ಥ್ಯ ಹೆಚ್ಚಾಗಿರುವುದರ ಜೊತೆಗೆ ಕಂಪ್ಯೂಟರಿನ ಗಾತ್ರವೂ ಗಮನಾರ್ಹವಾಗಿ ಕುಗ್ಗಿದೆ. ಗಾತ್ರದ ಹೋಲಿಕೆಯಲ್ಲಿ ಅಂದಿನ ಕೋಣೆಗಾತ್ರದ ಕಂಪ್ಯೂಟರುಗಳೆಲ್ಲಿ, ಇಂದಿನ ಲ್ಯಾಪ್‌ಟಾಪುಗಳೆಲ್ಲಿ!?

ಮಂಗಳವಾರ, ಮೇ 17, 2016

ಅನ್ಯಗ್ರಹ ಜೀವಿಗಳು ಪ್ರವಾಸ ಬಂದರೇ?

ಕೊಳ್ಳೇಗಾಲ ಶರ್ಮ

ಈಚೆಗೊಂದು ದಿನ ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಸೂಳೆಕೆರೆ ಗ್ರಾಮದಲ್ಲಿ ಅನ್ಯಗ್ರಹ ಜೀವಿಗಳು ಕಾಣಿಸಿಕೊಂಡರಂತೆ. ಗ್ರಾಮಸ್ಥರು ಗದ್ದೆಯಿಂದ  ಹಿಂದಿರುಗುವ ವೇಳೆ ರಾತ್ರಿ ಇದ್ದಕ್ಕಿದ್ದಹಾಗೆ ಆಕಾಶದಲ್ಲಿ ಬೆಂಕಿಯ ಚೆಂಡಿನಂತಹ ಪ್ರಕಾಶ ಕಾಣಿಸಿಕೊಂಡಿತು, ಅದರ ಜೊತೆಗೆ ತಟ್ಟೆಯ ರೀತಿಯ ವಸ್ತುವೊಂದು ಕಾಣಿಸಿಕೊಂಡಿತು ಎಂದು ಪತ್ರಿಕೆಯ ವರದಿಗಳು ಹೇಳಿದುವು. ಸುದ್ದಿ ಬಯಲಾದ ಕೂಡಲೇ ಟೀವಿ ಚಾನೆಲೊಂದರಿಂದ “ಸರ್ ಒಂದು ಚರ್ಚೆ ಇಟ್ಟುಕೊಂಡಿದ್ದೇವೆ. ದಯವಿಟ್ಟು ಸ್ಟುಡಿಯೋಗೆ ಬಂದು ಚರ್ಚೆಯಲ್ಲಿ ಭಾಗವಹಿಸಿ,” ಎಂದು ಆಹ್ವಾನವೂ ಬಂತು. ಯಾವ ರೀತಿ ಇತ್ತಂತೆ ಅನ್ಯಗ್ರಹ ಜೀವಿ ಎಂದು ಕೇಳಿದ್ದಕ್ಕೆ ‘ನೋ ಐಡಿಯಾ ಸರ್, ಅದನ್ನು ನೋಡಿದವರೂ ಬರುತ್ತಾರೆ. ಅವರನ್ನೇ ಕೇಳೋಣ’ ಎನ್ನುವ ಉತ್ತರ ಬಂತು. ನೋಡಿದವರು ಪ್ರತ್ಯಕ್ಷವಾಗದಿದ್ದರಿಂದ ಚರ್ಚೆಯೂ ನಡೆಯಲಿಲ್ಲ ಅನ್ನುವುದು ಬೇರೆ ಮಾತು. ಆದರೆ ಹೀಗೊಂದು ವೇಳೆ ಅನ್ಯಗ್ರಹಗಳಲ್ಲಿ ಜೀವಿಗಳಿದ್ದರೆ ಅವರು ಹೇಗಿರಬಹುದು? ನಮ್ಮ ಭೂಮಿಯಂತಹ ಗ್ರಹಕ್ಕೆ ಅವರು ಬರಬಹುದೇ? ಬಂದರೆ ವಲಸೆ ಬರುತ್ತಾರೋ? ಆಕ್ರಮಣ ಮಾಡಲು ಬರಬಹುದೋ? ಇವೆಲ್ಲ ಪ್ರಶ್ನೆಗಳು ನನ್ನ ತಲೆಯನ್ನೂ ಕೊರೆಯತೊಡಗಿದುವು.

ಇವೆಲ್ಲಕ್ಕಿಂತಲೂ ಮುಖ್ಯವಾದ ಪ್ರಶ್ನೆಗಳು.  ಅನ್ಯಜೀವಿಗಳಿರಬಹುದಾದರೆ ಎಲ್ಲಿ? ಎಷ್ಟು ದೂರದಲ್ಲಿರಬಹುದು?

ಸೋಮವಾರ, ಮೇ 16, 2016

ಆಪ್‌ಬರ್ಗರ್!

ಸ್ಮಾರ್ಟ್‌ಫೋನುಗಳು ಸರ್ವಾಂತರ್ಯಾಮಿಯಾಗಿರುವ ಈ ಕಾಲದಲ್ಲಿ ಆಪ್‌ಗಳ (ಮೊಬೈಲ್ ತಂತ್ರಾಂಶ) ವಿಷಯ ನಮಗೆಲ್ಲ ಗೊತ್ತು. ಬನ್‌ನ ಎರಡು ತುಣುಕುಗಳ ನಡುವೆ ಕರಿದ / ಬೇಯಿಸಿದ ತಿಂಡಿಯನ್ನೂ ತರಕಾರಿ-ಬೆಣ್ಣೆ-ಚೀಸ್ ಇತ್ಯಾದಿಗಳನ್ನೂ ಇಟ್ಟು ತಯಾರಿಸುವ ಬರ್ಗರ್ ಪರಿಚಯವೂ ಇದೆ. ಆದರೆ ಆಪ್‍ಗೂ ಬರ್ಗರ್‌ಗೂ ಎತ್ತಣಿಂದೆತ್ತ ಸಂಬಂಧ?

ಗುರುವಾರ, ಮೇ 12, 2016

ಇಜ್ಞಾನ ವಿಶೇಷ ಲೇಖನ: 'ವಸುಧೈವ ಕುಟುಂಬಕಮ್'

ರೋಹಿತ್ ಚಕ್ರತೀರ್ಥ

ಕೆಲವು ವರ್ಷಗಳ ಹಿಂದೆ ರಾಮಕೃಷ್ಣ ಬೆಳ್ಳೂರು ಎಂಬವರು ಒಂದು ಚಿತ್ರಸರಣಿ ಮಾಡಿದ್ದರು. ಮಹಾವಿಜ್ಞಾನಿ ಐನ್‌ಸ್ಟೈನ್‌ರನ್ನೂ ಕನ್ನಡದ ಸಾಹಿತ್ಯಮೇರು ಶಿವರಾಮ ಕಾರಂತರನ್ನೂ ಅಕ್ಕಪಕ್ಕದಲ್ಲಿಟ್ಟು ನೋಡಿದರೆ ಅವರೇ ಇವರಾ ಎಂದು ಗೊಂದಲವಾಗುವಷ್ಟು ಅವರಿಬ್ಬರ ಚಹರೆಗಳೂ ಹೋಲುವುದನ್ನು ತೋರಿಸಿ "ಎಷ್ಟೊಂದು ಸೇಮ್ ಇದ್ದಾರಲ್ವಾ?" ಎಂದು ಕೇಳಿದ್ದರು. ಗಡ್ಡ-ಮೀಸೆ ಬಿಟ್ಟ ಕೆ.ಎಸ್. ಅಶ್ವಥ್‌ರನ್ನು ಗೆಲಿಲಿಯೋ ಪಕ್ಕದಲ್ಲಿ ಕೂರಿಸಿದರೂ ಇದೇ ಗೊಂದಲ. ಕರ್ನಾಟಕದ ರಾಜ್ಯಪಾಲರಾಗಿದ್ದ ಖುರ್ಷಿದ್ ಆಲಂ ಖಾನ್ ಮತ್ತು ಚಿತ್ರನಟ ಬ್ರಹ್ಮಾವರ ಸದಾಶಿವ ರಾವ್ ನೋಡಲು ಒಂದೇ ರೀತಿ ಇದ್ದರು. ರಿಸರ್ವ್ ಬ್ಯಾಂಕ್‌ನ ಗವರ್ನರ್ ಆಗಿದ್ದ ಸುಬ್ಬಾ ರಾವ್‌ರನ್ನು ನಮ್ಮ "ಥಟ್ ಅಂತ ಹೇಳಿ" ಖ್ಯಾತಿಯ ಡಾ. ನಾ. ಸೋಮೇಶ್ವರ ಪಕ್ಕದಲ್ಲಿ ನಿಲ್ಲಿಸಿದರೆ ನಿಜವ್ಯಕ್ತಿಯೊಬ್ಬರು ತನ್ನ ಮೇಣದ ಪ್ರತಿಮೆಯೊಂದಿಗೆ ನಿಂತಿದ್ದಾರೋ ಎಂದು ಭಾಸವಾಗುತ್ತದೆ. ನಿತಿನ್ ಮುಖೇಶ್ ಎಂಬ ಹಾಡುಗಾರನನ್ನು ಟಿ.ಎಂ. ಕೃಷ್ಣ ಎಂಬ ಕರ್ನಾಟಕ ಸಂಗೀತಗಾರರ ಪಕ್ಕದಲ್ಲಿ ಕೂರಿಸಿದರೆ ಇವರೇನು ಅವಳಿ-ಜವಳೀನಾ ಅಂತ ಕೇಳುವಷ್ಟು ಅವರಿಬ್ಬರೂ ಸೇಮ್‌ಸೇಮ್. ನಮ್ಮ ನಡುವಿನ ಹೆಮ್ಮೆಯ ವಿಜ್ಞಾನಿ ರೊದ್ದಂ ನರಸಿಂಹ ತಮ್ಮ ಎಂದಿನ ಕೋಟು ಪ್ಯಾಂಟಿನ ಪೋಷಾಕು ತೆಗೆದು ಪಟ್ಟೆ ಪೀತಾಂಬರ ಉಟ್ಟುಕೊಂಡರೆ ಯಾರಾದರೂ "ವಿದ್ಯಾಭೂಷಣರೇ, ಒಂದು ಹಾಡು ಹಾಡಿ" ಅಂತ ಪೀಡಿಸಿಯಾರು!

ಮಂಗಳವಾರ, ಮೇ 10, 2016

ಇಜ್ಞಾನದ ಹತ್ತನೆಯ ವರ್ಷ

ವಿಜ್ಞಾನ-ತಂತ್ರಜ್ಞಾನಗಳ ಬಗ್ಗೆ ಬೇಕಾದಷ್ಟು ಮಾಹಿತಿ ಸಿಗುವ ಕನ್ನಡದ ಜಾಲತಾಣವೊಂದನ್ನು ರೂಪಿಸಬೇಕು ಎನ್ನುವ ಕನಸಿಗೆ ಈಗ ಹತ್ತು ವರ್ಷ. ಕಳೆದ ದಶಕದ ಮಧ್ಯಭಾಗದಲ್ಲಿ ಪರಿಚಿತರಾದ ಹೆಸರಾಂತ ವಿಜ್ಞಾನ ಬರಹಗಾರ ಕೊಳ್ಳೇಗಾಲ ಶರ್ಮರೂ ನಾನೂ ಮಾತನಾಡುವಾಗ ಹೀಗೊಂದು ತಾಣ ಇರಬೇಕು ಎನ್ನುವ ಪ್ರಸ್ತಾಪ ಬಹಳಷ್ಟು ಬಾರಿ ಬಂದುಹೋಗಿತ್ತು.

ಈ ಪ್ರಯೋಗವನ್ನು ಒಮ್ಮೆ ಪ್ರಯತ್ನಿಸಿ ನೋಡಿಯೇಬಿಡೋಣ ಎಂದು ಹೊರಟಾಗ ತಾಣದ ಹೆಸರೇನಿರಬೇಕು ಎನ್ನುವ ಪ್ರಶ್ನೆ ಬಂತು. ಆಗ ನೆರವಾದವನು ಮಿತ್ರ ನಂದಕಿಶೋರ್. ಅವನು ಥಟ್ಟನೆ ಹೇಳಿದ ಹೆಸರೇ 'ಇಜ್ಞಾನ'. ಏನನ್ನೂ ಹೇಳದೆ ಏನೇನೆಲ್ಲ ಹೇಳುವ ಹೆಸರು ಅದು. ಇದೇನು 'ವಿಜ್ಞಾನ'ದ ಗ್ರಾಮ್ಯ ಅಪಭ್ರಂಶವೇ, ಅಥವಾ ವಿದ್ಯುನ್ಮಾನ (ಇ-) ಜ್ಞಾನಕ್ಕೆ ನೀವಿಟ್ಟ ಹೆಸರೇ ಎಂದು ಹಲವರು ಕೇಳಿದ್ದುಂಟು.

ಹೆಸರಿನ ಅರ್ಥ ಏನೇ ಇರಲಿ. 'ಇಜ್ಞಾನ'ವೆಂಬ ಹೆಸರಿಟ್ಟುಕೊಂಡು ಶುರುವಾದ, ವಿಜ್ಞಾನ-ತಂತ್ರಜ್ಞಾನಗಳ ಬಗ್ಗೆ ಕನ್ನಡದಲ್ಲಿ ನಿರಂತರವಾಗಿ ಮಾಹಿತಿ ಹಂಚಿಕೊಳ್ಳುತ್ತ ಬಂದ ತಾಣಕ್ಕೆ ಇದೀಗ ಹತ್ತನೆಯ ವರ್ಷದ ಸಂಭ್ರಮ.

ಗುರುವಾರ, ಮೇ 5, 2016

ವಿಶ್ವ ಪಾಸ್‌ವರ್ಡ್ ದಿನ ವಿಶೇಷ: ನಿಮ್ಮ ಪಾಸ್‌ವರ್ಡ್ ಜೋಪಾನ!

ಡಿಜಿಟಲ್ ಪ್ರಪಂಚದಲ್ಲಿ ನಮ್ಮ ಮಾಹಿತಿಯನ್ನೆಲ್ಲ ಸುರಕ್ಷಿತವಾಗಿಡಲು, ಅದು ಅಪಾತ್ರರ ಕೈಗೆ ಸಿಗದಂತೆ ನೋಡಿಕೊಳ್ಳಲು, ನಮ್ಮ ಮಾಹಿತಿ ನಮಗಷ್ಟೆ ಗೊತ್ತು ಎಂಬ ಸಮಾಧಾನದ ಭಾವನೆ ಮೂಡಿಸಲು ಪಾಸ್‌ವರ್ಡ್ ಬೇಕೇಬೇಕು. ವಿಶ್ವ ಪಾಸ್‌ವರ್ಡ್ ದಿನದಂದು (ಮೇ ೫) ಈ ಲೇಖನವನ್ನು ಮರುಪ್ರಕಟಿಸುವ ಮೂಲಕ ನಾವು ಪಾಸ್‌ವರ್ಡ್ ಮಹತ್ವವನ್ನು ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ.. 
ಟಿ. ಜಿ. ಶ್ರೀನಿಧಿ


ಆಲಿಬಾಬನ ಕತೆ ಗೊತ್ತಲ್ಲ, ಅದರಲ್ಲಿ ನಲವತ್ತು ಮಂದಿ ಕಳ್ಳರು ತಾವು ಕದ್ದು ತಂದ ಸಂಪತ್ತನ್ನೆಲ್ಲ ಒಂದು ಗುಹೆಯಲ್ಲಿ ಅವಿಸಿಡುತ್ತಿರುತ್ತಾರೆ. ಮತ್ತೆ ಕಳ್ಳತನಕ್ಕೆ ಹೋದಾಗ ಬೇರೆ ಕಳ್ಳರು ಬಂದು ಇವರ ಸಂಪತ್ತನ್ನೇ ಕದ್ದುಬಿಡಬಾರದಲ್ಲ, ಅದಕ್ಕಾಗಿ 'ಬಾಗಿಲು ತೆರೆಯೇ ಸೇಸಮ್ಮ' ಎಂದು ಹೇಳದ ಹೊರತು ಗುಹೆಯೊಳಕ್ಕೆ ಯಾರೂ ಹೋಗಲಾಗದಂತಹ ವ್ಯವಸ್ಥೆಯನ್ನೂ ರೂಪಿಸಿಕೊಂಡಿರುತ್ತಾರೆ.

ಕಳ್ಳರ ಬಂದೋಬಸ್ತು ಜೋರಾಗಿಯೇ ಇತ್ತು ನಿಜ. ಆದರೆ ಆಲಿಬಾಬ ಯಾವಾಗ ಅವರ ಗುಪ್ತಸಂಕೇತವನ್ನು ಕೇಳಿಸಿಕೊಂಡನೋ ಅಲ್ಲಿಂದ ಸೇಸಮ್ಮ ಆಲಿಬಾಬನಿಗೂ ಬಾಗಿಲು ತೆರೆಯಲು ಶುರುಮಾಡಿದಳು!

ಆಲಿಬಾಬನ ಈ ಕತೆ ಕಲ್ಪನೆಯದೇ ಇರಬಹುದು.

ಸೋಮವಾರ, ಮೇ 2, 2016

ಬಿಟ್‌ಕಾಯಿನ್ ಸೃಷ್ಟಿಕರ್ತ ಮರೆಯಿಂದ ಹೊರಬಂದನೇ?


ಬಿಟ್‌ಕಾಯಿನ್ ಎನ್ನುವುದು ಅಂತರಜಾಲ ಲೋಕದಲ್ಲಿ ಜನಪ್ರಿಯತೆ ಗಳಿಸಿಕೊಳ್ಳುತ್ತಿರುವ ವರ್ಚುಯಲ್ ಹಣ. ಭಾರತದಲ್ಲಿ ರೂಪಾಯಿ, ಅಮೆರಿಕಾದಲ್ಲಿ ಡಾಲರುಗಳೆಲ್ಲ ಇದ್ದ ಹಾಗೆ ಅಂತರಜಾಲದ ಹಣ ಇದು. ಅಂತರಜಾಲ ಹೇಗೆ ಮಿಥ್ಯಾಲೋಕವೋ ಅಲ್ಲಿ ಚಲಾವಣೆಯಾಗುವ ಈ 'ಬಿಟ್‌ಕಾಯಿನ್' ಕೂಡ ವರ್ಚುಯಲ್, ಅಂದರೆ ಕಣ್ಣಿಗೆ ಕಾಣದ, ಕರೆನ್ಸಿಯೇ.

ಈಚಿನ ಕೆಲ ವರ್ಷಗಳಲ್ಲಿ ಈ ಬಿಟ್‌ಕಾಯಿನ್ ಸಾಕಷ್ಟು ಸುದ್ದಿಮಾಡಿದೆ. ಈ ಬಗ್ಗೆ ಇಜ್ಞಾನವೂ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಲೇಖನಗಳು, ಸುದ್ದಿಗಳು ಪ್ರಕಟವಾಗಿವೆ. [ಓದಿ: ಕಳೆದ ಹಾರ್ಡ್‌ಡಿಸ್ಕ್ ನೆಪದಲ್ಲಿ ಕಾಣದ ದುಡ್ಡಿನ ಕುರಿತು...]
badge