ಶುಕ್ರವಾರ, ಜುಲೈ 22, 2016

ಗೋಧಿಯ ಕುರಿತು ಗೊಂದಲ ಬೇಕಿಲ್ಲ

ಡಾ. ಶರಣಬಸವೇಶ್ವರ ಅಂಗಡಿ

ಗೆಳೆಯ ಗೋವಿಂದ ಒಮ್ಮೆ ತಮಾಷೆಗೆ 'ಗೋಧಿ ಅದೇ ವ್ಹೀಟ್‌ನಲ್ಲಿ ಹೀಟ್ ಇದೆ, ರೈಸ್‌ನಲ್ಲಿ ಐಸ್ ಇದೆ, ಅದಕ್ಕೇ ಚಪಾತಿ ತಿಂದರೆ ಉಷ್ಣ, ಅನ್ನವುಂಡರೆ ತಂಪು' ಅಂದಿದ್ದ. ಮೊನ್ನೆ, ತಮ್ಮನ್ನು ಯೋಗಗುರು ಎಂದು ಕರೆದುಕೊಳ್ಳುವ ಅನಂತ್‌ಜಿ ಎನ್ನುವ ವ್ಯಕ್ತಿ ಗೋಧಿಯನ್ನು ನಿಂದಿಸುವುದಲ್ಲದೇ, ಅಕ್ಕಿಯನ್ನು ಅನಿಷ್ಟವೆಂದದ್ದು, ದೇಶದ ಕೃಷಿಯನ್ನು, ಹಸಿರು ಕ್ರಾಂತಿಯನ್ನು ನಿರಾಧಾರವಾಗಿ, ಅವೈಜ್ಞಾನಿಕವಾಗಿ ಹಿಗ್ಗಾಮುಗ್ಗಾ ಟೀಕಿಸಿದ್ದನ್ನು ಕೇಳಿದಾಗ ಗೋವಿಂದನ ಹಳೆಯ ಜೋಕ್ ನೆನಪಾಯ್ತು. ಹಿಂದೊಮ್ಮೆ ಇದೇ ಅನಂತ್‌ಜಿ ಗೋಧಿಯನ್ನು ದುಷ್ಟ ಧಾನ್ಯವೆಂದಿದ್ದು ಸುದ್ದಿಯಾಗಿತ್ತು. ಅದಕ್ಕೆ(ಅವರೇ ಹೇಳಿದ್ದು) ಬಂದ ಸಾವಿರಾರು ಫೋನ್ ಕರೆಗಳಿಗೆ, ಮತ್ತು ಮಿಸ್ಡ್‌ಕಾಲ್‌ಗಳಿಗೆ ಪ್ರತಿಕ್ರಿಯೆಯಾಗಿ ಸುಮಾರು ಅರ್ಧಗಂಟೆಯ ಒಂದು ಆಡಿಯೋ ಕ್ಲಿಪ್ ತೇಲಿಬಿಟ್ಟಿದ್ದಾರೆ. ಅದನ್ನು ವಾಟ್ಸಾಪ್‌ನಲ್ಲಿ ಕೇಳುವ ಅವಕಾಶ ನನಗೂ ಸಿಕ್ಕಿತು. ಅವರ ಆ 'ಜ್ಞಾನ'ದಲ್ಲಿ ಹೇರಳ ತಪ್ಪುಗಳಿವೆ. ಅದು ಜನಸಾಮಾನ್ಯರಿಗೆ ತಿಳಿದಿರಲಿ ಎಂದು ಈ ಲೇಖನದ ಉದ್ದೇಶ.

ಬುಧವಾರ, ಜುಲೈ 20, 2016

ಸಮಾಜ ಜಾಲಗಳ ಮೊಬೈಲ್ ಅವತಾರ

ಟಿ. ಜಿ. ಶ್ರೀನಿಧಿ

ಮೊಬೈಲ್ ದೂರವಾಣಿಗಳ ಬಳಕೆ ಹೆಚ್ಚಿದಂತೆ ನಮ್ಮ ಅದೆಷ್ಟೋ ಚಟುವಟಿಕೆಗಳು ಮೊಬೈಲ್ ಕೇಂದ್ರಿತವಾಗಿಬಿಟ್ಟಿವೆ. ಇಂತಹ ಚಟುವಟಿಕೆಗಳ ಸಾಲಿನಲ್ಲಿ ಸೋಶಿಯಲ್ ನೆಟ್‌ವರ್ಕ್‌ಗಳ ಬಳಕೆಗೂ ಪ್ರಮುಖ ಸ್ಥಾನವಿದೆ.

ಹೌದು, ಸೋಶಿಯಲ್ ನೆಟ್‌ವರ್ಕ್‌ಗಳು ಪರಿಚಯವಾದಾಗ ಕಂಪ್ಯೂಟರಿನಲ್ಲಿ ಮಾತ್ರವೇ ಅವನ್ನು ಬಳಸುತ್ತಿದ್ದ ನಾವು ಈಗ ಅವುಗಳ ಬಳಕೆಯನ್ನು ಹೆಚ್ಚೂಕಡಿಮೆ ಪೂರ್ತಿಯಾಗಿಯೇ ಮೊಬೈಲಿಗೆ ವರ್ಗಾಯಿಸಿಬಿಟ್ಟಿದ್ದೇವೆ. ಮೊಬೈಲುಗಳು ಸದಾಕಾಲ ನಮ್ಮ ಜೊತೆಗಿರುತ್ತವಲ್ಲ, ಹಾಗಾಗಿಯೋ ಏನೋ ಅವು ಸಮಾಜಜಾಲಗಳಲ್ಲಿ ನಮ್ಮ ಎಲ್ಲ ಚಟುವಟಿಕೆಗಳಿಗೂ ಸರಿಯಾದ ಜೋಡಿಯಾಗಿ ಬೆಳೆದಿವೆ.

ಮೊದಲಿಗೆ ಸಮಾಜಜಾಲಗಳ ವೆಬ್‌ಸೈಟನ್ನು ತೆರೆಯಲಷ್ಟೆ ಮೊಬೈಲ್ ಫೋನ್ ಬಳಕೆಯಾಗುತ್ತಿತ್ತು. ನಂತರ ನಮ್ಮ ಫೋನುಗಳು ಹೆಚ್ಚು ಸ್ಮಾರ್ಟ್ ಆದಂತೆ, ಆಪ್‌ಗಳ ಪ್ರಭಾವ ಜಾಸ್ತಿಯಾದಂತೆ ಸಮಾಜಜಾಲಗಳ ಆಪ್‌ಗಳು ನಮ್ಮ ಮೊಬೈಲಿಗೆ ಬಂದು ಕುಳಿತವು. ಫೇಸ್‌ಬುಕ್‌ನದೊಂದು ಆಪ್, ಟ್ವಿಟರ್‌ನದೊಂದು ಆಪ್ ಎಂದು ಸಮಾಜಜಾಲಗಳ ಆಪ್‌ಗಳು ಒಂದೊಂದಾಗಿ ನಮ್ಮ ಮೊಬೈಲನ್ನು ಸೇರಿಕೊಂಡವು.

ಸೋಮವಾರ, ಜುಲೈ 18, 2016

ನಾವು ಆಕಳಿಸುವುದೇಕೆ?

ಕೊಳ್ಳೇಗಾಲ ಶರ್ಮ

ಬಹುಶಃ ಶೀರ್ಷಿಕೆಯನ್ನು ಓದಿಯೇ ನೀವು ಆಕಳಿಸುವುದಕ್ಕೆ ಆರಂಭಿಸಿದ್ದೀರೆಂದರೆ ಅದು ಲೇಖನದ ತಪ್ಪಲ್ಲ. ಹಾಂ. ನೀವು ಮಹಿಳೆಯರಾಗಿದ್ದರೆ ಖಂಡಿತ ಆಕಳಿಸಿರುತ್ತೀರಿ. ಪುರುಷರಾದರೆ ಆ ಸಾಧ್ಯತೆ ಸ್ವಲ್ಪ ಕಡಿಮೆ. ಇದೇನಿದು? ಆಕಳಿಕೆಗೂ, ಗಂಡು-ಹೆಣ್ಣಿಗೂ ಸಂಬಂಧ ಯಾಕೆ ಕಲ್ಪಿಸುತ್ತಿದ್ದೀರಿ ಎಂದಿರಾ? ಇದು ಹೇಳಿದ್ದು ನಾನಲ್ಲ. ಇಟಲಿಯ ಪೀಸಾ ವಿಶ್ವವಿದ್ಯಾನಿಲಯದ ಮನಶ್ಶಾಸ್ತ್ರಜ್ಞೆ ಎಲಿಸಬೆಟ್ಟಾ ಪಲಾಜಿ ಮತ್ತು ಸಂಗಡಿಗರು ಹೀಗೊಂದು ಹೊಸ ತರ್ಕವನ್ನು ಮುಂದಿಟ್ಟಿದ್ದಾರೆ.

ಆಕಳಿಕೆ ಒಂದು ವಿಚಿತ್ರವಾದ ನಿಗೂಢ ವಿದ್ಯಮಾನ. ಬೇಸರವಾದಾಗ ಅಥವಾ ನಿದ್ರೆ ಬಂದಾಗಷ್ಟೆ ಆಕಳಿಕೆ ಬರುತ್ತದೆನ್ನುವುದು ಸಾಮಾನ್ಯ ನಂಬಿಕೆ. ಬಹುಮಟ್ಟಿಗೆ ಇದು ನಿಜವೂ ಹೌದು. ಇದಕ್ಕಾಗಿಯೇ ಆಕಳಿಕೆ ಎಂದರೆ ಬಹುಶಃ ಮಿದುಳಿಗೆ ಹೆಚ್ಚಿನ ಆಕ್ಸಿಜನ್ ಒದಗಿಸುವ ವಿದ್ಯಮಾನವಿರಬಹುದು ಎನ್ನುವ ನಂಬಿಕೆಯೂ ಇತ್ತು. ಏಕೆಂದರೆ ಆಕ್ಸಿಜನ್ ಕೊರತೆಯಾದಾಗ ಮಿದುಳು ತನ್ನಂತಾನೇ ನಿದ್ರೆಗೆ ಜಾರುತ್ತದೆ. ಅದನ್ನು ತಪ್ಪಿಸಲೆಂದು ಗಾಳಿಯನ್ನು ಹೆಚ್ಚಾಗಿ ಹೀರಿ, ಹೆಚ್ಚು ಆಕ್ಸಿಜನ್ನು ಒದಗುವಂತೆ ಮಿದುಳಿಗೆ ರಕ್ತದ ಸರಬರಾಜನ್ನು ಹೆಚ್ಚಿಸಲು ನಿಸರ್ಗ ಹೂಡಿರುವ ತಂತ್ರವೇ ಆಕಳಿಕೆ ಎನ್ನುವುದು ಬಲು ಹಿಂದಿನಿಂದ ಬಂದ ನಂಬಿಕೆ.

ಗುರುವಾರ, ಜುಲೈ 7, 2016

ಶ್ವಾನ ಸ್ವರ್ಗಾರೋಹಣ

ರೋಹಿತ್ ಚಕ್ರತೀರ್ಥ

೧೯೫೭ರ ಚಳಿಗಾಲ. ಅಮೆರಿಕ ಮತ್ತು ಸೋವಿಯೆಟ್ ರಷ್ಯದ ನಡುವೆ ಜಗತ್ತಿನ ದೊಡ್ಡಣ್ಣನಾಗಲು ಶೀತಲ ಸಮರ ಅರ್ಥಾತ್ ಕೋಲ್ಡ್ ವಾರ್ ನಡೆಯುತ್ತಿದ್ದ ಸಮಯ. ಸೋವಿಯಟ್ ರಷ್ಯದ ಅಧ್ಯಕ್ಷ ನಿಕಿಟ ಕ್ರುಶ್ಚೇವ್ ದೇಶದ ಎಲ್ಲ ರಾಕೆಟ್ ತಂತ್ರಜ್ಞರನ್ನು ಒಂದು ಔತಣ ಕೂಟಕ್ಕೆ ಕರೆದಿದ್ದರು. ಸ್ಪುಟ್ನಿಕ್ ೧ರ ಅಭೂತಪೂರ್ವ ಯಶಸ್ಸಿನ ವಿಜಯ ದುಂಧುಬಿಯಾಗಿತ್ತು ಈ ಔತಣ ಕೂಟ. ಸೋವಿಯೆಟ್ ಕೂಟದ ಅಂತರಿಕ್ಷ ಯೋಜನೆಗಳ ಪಿತಾಮಹ ಎಂದೇ ಕರೆಯಲ್ಪಟ್ಟ ಸೆರ್ಗಿ ಕೊರೊಲೆವ್ ಕೂಡ ಅಲ್ಲಿದ್ದರು. ನಿಕಿಟ ಕ್ರುಶ್ಚೇವ್, ನೆರೆದಿದ್ದ ಗಣ್ಯರನ್ನು ಅವರ ಸಾಧನೆಗಳಿಗಾಗಿ ಅಭಿನಂದಿಸಿ, ಸೋವಿಯೆಟ್ ಕೂಟದ ಅಂತರಿಕ್ಷ ಸಾಧನೆಗಳನ್ನು ಕೊಂಡಾಡಿ, ವೋಡ್ಕದ ಗ್ಲಾಸೆತ್ತಿ ಘೋಷಿಸಿದರು: ಇದೇ ವರ್ಷದ ನವೆಂಬರ್ ೭ರಂದು ನಾವು ಬೊಲ್ಶೆವಿಕ್ ಕ್ರಾಂತಿಯ ನಲವತ್ತನೆ ವರ್ಷದ ಸಂಭ್ರಮಾಚರಣೆ ಮಾಡುತ್ತಿದ್ದೇವೆ. ಅದರ ನೆನಪಿಗಾಗಿ ನಮ್ಮ ರಾಷ್ಟ್ರ ಇನ್ನೊಂದು ಸ್ಪುಟ್ನಿಕ್‌ನ್ನು ಅಂತರಿಕ್ಷಕ್ಕೆ ಹಾರಿಬಿಡಬೇಕು!

ನೆರೆದ ತಂತ್ರಜ್ಞರು ಮತ್ತು ವಿಜ್ಞಾನಿಗಳ ಬೆನ್ನುಹುರಿ ಆ ಚಳಿಯ ಕೊರೆತದಲ್ಲೂ 'ಚುಳ್' ಎಂದಿತು!
badge