ಶುಕ್ರವಾರ, ಜುಲೈ 26, 2013

ಕ್ಯಾಮೆರಾ ಕತೆಗಳು : ೩

ಟಿ. ಜಿ. ಶ್ರೀನಿಧಿ

[ಮೊದಲ ಭಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ]
[ಎರಡನೇ ಭಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ]

೧೮೭೦ರ ಸುಮಾರಿಗೆ ರೂಪುಗೊಂಡ 'ಡ್ರೈ ಪ್ಲೇಟ್' ತಂತ್ರಜ್ಞಾನದಿಂದಾಗಿ ನೆಗೆಟಿವ್‌ಗಳನ್ನು ಮುಂಚಿತವಾಗಿಯೇ ಸಿದ್ಧಪಡಿಸಿಟ್ಟುಕೊಳ್ಳುವುದು ಹಾಗೂ ಚಿತ್ರ ಸೆರೆಹಿಡಿದ ನಂತರ ಅದನ್ನು ನಿಧಾನವಾಗಿ ಸಂಸ್ಕರಿಸಿಕೊಳ್ಳುವುದು ಸಾಧ್ಯವಾಯಿತು. ಅಷ್ಟೇ ಅಲ್ಲ, ಈ ಬಗೆಯ ನೆಗೆಟಿವ್‌ಗಳ ಬಳಕೆಯಿಂದ ಚಿತ್ರಗಳನ್ನು ಸೆರೆಹಿಡಿಯಲು ದೀರ್ಘಸಮಯದವರೆಗೆ ಕಾಯಬೇಕಾದ ಹಾಗೂ ಟ್ರೈಪಾಡ್ ಅನ್ನು ಅವಲಂಬಿಸಬೇಕಾದ ಅನಿವಾರ್ಯತೆ ಕೂಡ ನಿವಾರಣೆಯಾಯಿತು.

ಕೈಯಲ್ಲಿ ಹಿಡಿದುಕೊಳ್ಳಬಹುದಾದಂತಹ (ಹ್ಯಾಂಡ್-ಹೆಲ್ಡ್) ಕ್ಯಾಮೆರಾಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲೂ ಇದೇ ಕಾರಣವಾಯಿತು. ಆ ಸಂದರ್ಭದ ಒಂದು ಬೆಳವಣಿಗೆ ಮುಂದೆ ಛಾಯಾಗ್ರಹಣ ಕ್ಷೇತ್ರದ ರೂಪುರೇಷೆಯನ್ನೇ ಬದಲಿಸಿಬಿಟ್ಟಿತು.

ಈ ಬೆಳವಣಿಗೆಗೆ ಕಾರಣನಾದ ವ್ಯಕ್ತಿಯ ಹೆಸರು ಜಾರ್ಜ್ ಈಸ್ಟ್‌ಮನ್. ಡ್ರೈ ಪ್ಲೇಟ್ ತಂತ್ರಜ್ಞಾನ ಹಾಗೂ ಕಾಗದದ ನೆಗೆಟಿವ್ ಪರಿಕಲ್ಪನೆ ಎರಡನ್ನೂ ಒಟ್ಟುಸೇರಿಸಿದ ಈತ ನೆಗೆಟಿವ್ ಸುರುಳಿಗಳನ್ನು ರೂಪಿಸಿದ. ತನ್ನ ಆವಿಷ್ಕಾರಗಳನ್ನು ಮಾರುಕಟ್ಟೆಗೆ ಪರಿಚಯಿಸಲೆಂದು ಆತ ಹುಟ್ಟುಹಾಕಿದ ಸಂಸ್ಥೆಯೇ ಕೊಡಕ್.

ಸಣ್ಣಗಾತ್ರದ ಕ್ಯಾಮೆರಾ ಹಾಗೂ ಅದರೊಳಗೆ ನೂರು ಚಿತ್ರಗಳಿಗೆ ಸಾಲುವಷ್ಟಿದ್ದ ನೆಗೆಟಿವ್ ಸುರುಳಿ ಎರಡೂ ಸೇರಿ ಮೊತ್ತಮೊದಲ ಕೊಡಕ್ ಕ್ಯಾಮೆರಾ ೧೮೮೮ರಲ್ಲಿ ಸಿದ್ಧವಾಯಿತು. ಛಾಯಾಗ್ರಹಣ ಪರಿಣತರಷ್ಟೇ ಮಾಡುವ ಕೆಲಸ ಎನ್ನುವ ಅಭಿಪ್ರಾಯ ಅಲ್ಲಿಗೆ ಅಂತ್ಯವಾಗಿ ಕ್ಯಾಮೆರಾಗಳು - ನಿಜ ಅರ್ಥದಲ್ಲಿ - ಜನಸಾಮಾನ್ಯರ ಕೈಗೆ ಬಂದವು.

ಶನಿವಾರ, ಜುಲೈ 20, 2013

ಏನು? ಗಣಿತ ಅಂದ್ರಾ?

ಪ್ರತಿಯೊಬ್ಬರೂ ಶಾಲೆಯಲ್ಲಿ ಗಣಿತ ಕಲಿತೇ ಇರುತ್ತಾರೆ. ಪಾಸು ಎನ್ನುವುದು ಅನಿವಾರ್ಯ; ಆದ್ದರಿಂದ ಪಾಸೂ ಮಾಡಿರುತ್ತಾರೆ. ಆದರೆ ಶಾಲೆಯಲ್ಲಿ ಕಲಿತ ಗಣಿತದ ಎಷ್ಟು ಭಾಗ ಹಲವಾರು ವರ್ಷಗಳ ನಂತರವೂ ನೆನಪಿನಲ್ಲಿ ಉಳಿದಿದೆ ಎಂದು ಪ್ರಶ್ನೆ ಕೇಳಿದಾಗ ಅವರ ವೃತ್ತಿಗೆ ಅನುಗುಣವಾಗಿ ವೈವಿಧ್ಯಮಯ ಉತ್ತರಗಳು ದೊರಕುತ್ತವೆ. ಬಹುಶಃ ಗಣಿತ ಇಷ್ಟ ಎನ್ನುವವರಿಗಿಂತ ಗಣಿತ ಕಷ್ಟ ಎನ್ನುವವರ ಸಂಖ್ಯೆಯೇ ಜಾಸ್ತಿಯೇನೋ.

ಇದಕ್ಕೆ ಕಾರಣ ಏನು ಎಂದು ಹುಡುಕುತ್ತ ಹೋದರೆ ಎದುರಿಗೆ ನಿಲ್ಲುವುದು ನಮ್ಮ ಶಿಕ್ಷಣ ವ್ಯವಸ್ಥೆ. ಈ ವರ್ಷದ ಸಿಲಬಸ್ ಇಷ್ಟು, ಇಷ್ಟನ್ನು ನೀನು ಕಲಿಯಲೇಬೇಕು ಎನ್ನುವ ಶಿಕ್ಷಣಕ್ರಮ ಮಕ್ಕಳನ್ನು ಹೆದರಿಸಬಹುದೇ ಹೊರತು ಅವರಲ್ಲಿ ಕಲಿಕೆಯ ಬಗ್ಗೆ ಪ್ರೀತಿ ಮೂಡಿಸಲಾರದು. ನಮ್ಮ ಶಾಲಾದಿನಗಳ ಗಣಿತದ ಪಾಠಗಳು ಸವಿನೆನಪನ್ನೇನೂ ಉಳಿಸದೆಹೋದದ್ದಕ್ಕೆ ಇದೇ ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ.

ಉದಾಹರಣೆಗೆ ನಮ್ಮ ಗಣಿತದ ಪಾಠದಲ್ಲಿದ್ದ ಲ.ಸಾ.ಅ. ಮತ್ತು ಮ.ಸಾ.ಅ. (Highest Common Factor (H.C.F) and Lowest Common Multiple (L.C.M)). ಅದನ್ನೆಲ್ಲ ಶಾಲೆಯಲ್ಲಿ ನಮಗೆ ಕಲಿಸಿಕೊಟ್ಟರು, ನಾವು ಕಲಿತೆವು, ಪರೀಕ್ಷೆ ಪಾಸಾಗಿ ಗೆದ್ದೆವು. ಆದರೆ ನಮಗೆ ಅವನ್ನೆಲ್ಲ ಲೆಕ್ಕಹಾಕುವುದು ಗೊತ್ತಾಯಿತೇ ಹೊರತು ಅದರ ಉಪಯೋಗ ಏನು ಎಂದು ಮಾತ್ರ ತಿಳಿಯಲಿಲ್ಲ.

ಇಂತಹ ಅಂಶಗಳನ್ನೆಲ್ಲ ಸರಳವಾಗಿ ಹೇಳಿಕೊಡುವವರು ಯಾರಾದರೂ ಸಿಕ್ಕಿದ್ದರೆ ಗಣಿತದ ಬಗ್ಗೆ ಭೀತಿಯ ಜಾಗದಲ್ಲಿ ನಮಗೂ ಪ್ರೀತಿ ಬಂದಿರುತ್ತಿತ್ತೋ ಏನೋ.

ಶುಕ್ರವಾರ, ಜುಲೈ 19, 2013

ಕ್ಯಾಮೆರಾ ಕತೆಗಳು : ೨

ಟಿ. ಜಿ. ಶ್ರೀನಿಧಿ

೧೮೪೪ರಲ್ಲಿ ತೆಗೆದ
ಕ್ಯಾಲೋಟೈಪ್ ಚಿತ್ರ
[ಮೊದಲ ಭಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ]
[ಮೂರನೆಯ ಭಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ]

೧೮೩೦ರ ಸುಮಾರಿಗೆ ಫ್ರಾನ್ಸಿನಲ್ಲಿ ರೂಪುಗೊಂಡ ಡಿಗೇರೋಟೈಪ್ ತಂತ್ರಜ್ಞಾನ ಫೋಟೋಗ್ರಫಿಯನ್ನು ಪ್ರಾಯೋಗಿಕವಾಗಿ ಸಾಧ್ಯವಾಗಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಿತು ಎನ್ನುವುದೇನೋ ನಿಜ. ಆದರೆ ಛಾಯಾಗ್ರಹಣವನ್ನು ನಿಜಕ್ಕೂ ಸರಳಗೊಳಿಸಿ ಚಿತ್ರಗಳನ್ನು ಸುಲಭವಾಗಿ ಪಡೆದುಕೊಳ್ಳುವಲ್ಲಿ ಈ ತಂತ್ರಜ್ಞಾನದಿಂದ ಹೆಚ್ಚಿನ ಸಹಾಯವೇನೂ ಆಗಲಿಲ್ಲ. ಕ್ಷಿಪ್ರವಾಗಿ ಚಿತ್ರ ಪಡೆಯಲು ಸಾಧ್ಯವಿಲ್ಲದೆ ಇದ್ದದ್ದು, ಚಿತ್ರ ಮೂಡಿಸಲು ಲೋಹದ ಫಲಕ ಬಳಸಬೇಕಿದ್ದದ್ದು, ಒಂದೇ ಚಿತ್ರದ ಹೆಚ್ಚುವರಿ ಪ್ರತಿಗಳನ್ನು ಪಡೆದುಕೊಳ್ಳಲು ಕಷ್ಟಪಡಬೇಕಾದ್ದು - ಇವೆಲ್ಲ ಈ ತಂತ್ರಜ್ಞಾನದ ಪ್ರಮುಖ ಕೊರತೆಗಳಾಗಿದ್ದವು.

ಛಾಯಾಗ್ರಹಣ ಇನ್ನಷ್ಟು ಸುಲಭವಾಗಬೇಕಾದರೆ ಈ ಕೊರತೆಗಳು ನೀಗಬೇಕಲ್ಲ, ಹಾಗಾಗಿ ಆ ದಿಕ್ಕಿನಲ್ಲಿ ಪ್ರಯತ್ನಗಳು ಶುರುವಾದವು. ಇಂತಹ ಹಲವು ಪ್ರಯತ್ನಗಳಿಗೆ ಸ್ವತಃ ಡಿಗೇರೋಟೈಪ್ ತಂತ್ರಜ್ಞಾನವೇ ಆಧಾರವಾಗಿತ್ತು. ಇಂತಹ ಹಲವು ಪ್ರಯತ್ನಗಳಿಂದಾಗಿ ಕೆಲವೇ ನಿಮಿಷಗಳಲ್ಲಿ ಚಿತ್ರಗಳನ್ನು ಸೆರೆಹಿಡಿಯುವುದು ಕೂಡ ಸಾಧ್ಯವಾಯಿತು; ಹಾಗಾಗಿ ಭಾವಚಿತ್ರಗಳನ್ನು ತೆಗೆಯುವ-ತೆಗೆಸಿಕೊಳ್ಳುವ ಅಭ್ಯಾಸ ಕೂಡ ಪ್ರಾರಂಭವಾಯಿತು. ಈ ಅಂಶ ಮೊದಲ ಬಾರಿಗೆ ಛಾಯಾಗ್ರಹಣವನ್ನು ಜನರತ್ತ ಕರೆತಂದಿತು ಎಂದರೂ ತಪ್ಪಾಗಲಾರದೇನೋ.

ಈ ನಡುವೆ ಛಾಯಾಗ್ರಹಣದಲ್ಲಿ ಲೋಹದ ಫಲಕ ಬಳಕೆಗೆ ಪರ್ಯಾಯದ ಹುಡುಕಾಟವೂ ಮುಂದುವರೆದಿತ್ತು. ಈ ನಿಟ್ಟಿನಲ್ಲಿ ವಿಲಿಯಂ ಟ್ಯಾಲ್‌ಬಟ್ ಎಂಬಾತನ ಕೊಡುಗೆ ಬಹಳ ಮಹತ್ವದ್ದು; ಛಾಯಾಗ್ರಹಣದಲ್ಲಿ ನೆಗೆಟಿವ್ ಬಳಕೆಯ ಪರಿಕಲ್ಪನೆಯನ್ನು ಪರಿಚಯಿಸಿದ್ದು ಈತನೇ. ೧೮೪೦ರ ಸುಮಾರಿಗೆ ಈತ ಬಳಕೆಗೆ ತಂದ ಕ್ಯಾಲೋಟೈಪ್ ತಂತ್ರಜ್ಞಾನದಲ್ಲಿ ಸಿಲ್ವರ್ ಅಯೊಡೈಡ್ ಲೇಪನವಿರುವ ಕಾಗದವನ್ನು ನೆಗೆಟಿವ್‌ನಂತೆ ಬಳಸಲಾಗುತ್ತಿತ್ತು. ನಮಗೆ ಬೇಕಾದ ದೃಶ್ಯದ ಛಾಯೆ ಕಾಗದದ ಈ ಹಾಳೆಯ ಮೇಲೆ ಮೂಡಿದ ನಂತರ ಅದನ್ನು ರಾಸಾಯನಿಕವಾಗಿ ಸಂಸ್ಕರಿಸಿ ಬೇರೊಂದು ಕಾಗದದ ಮೇಲೆ ಚಿತ್ರವನ್ನು ಮುದ್ರಿಸಿಕೊಳ್ಳುವುದು ಸಾಧ್ಯವಿತ್ತು.

ಈ ವಿಧಾನ ಕಾಗದದ ಬಳಕೆಯ ಸಾಧ್ಯತೆಯನ್ನು ತೋರಿಸಿಕೊಟ್ಟಿದ್ದರಿಂದ ಛಾಯಾಗ್ರಹಣದಲ್ಲಿ ಲೋಹದ ಫಲಕಗಳನ್ನೇ ಬಳಸಬೇಕಾದ ಅನಿವಾರ್ಯತೆ ದೂರವಾಯಿತು.

ಗುರುವಾರ, ಜುಲೈ 18, 2013

ರಂಜಕ ಪ್ರಸಂಗ

ನಾಗೇಶ ಹೆಗಡೆ

ಕೊಳ್ಳಿದೆವ್ವ ಅಂದರೆ ಬಾಲ್ಯದಲ್ಲಿ ನಮಗೆಲ್ಲ ಭಯ ಇತ್ತು. ಶವವನ್ನು ದಫನ ಮಾಡಿ ಬೆಂಕಿಯೆಲ್ಲ ಪೂರ್ತಿ ಆರಿದ ನಂತರ ಮೂರನೆಯ ರಾತ್ರಿಯಲ್ಲೂ ಶವದ ಮೂಳೆಗಳು ನಿಗಿನಿಗಿ ಮಿನುಗುತ್ತಿದ್ದರೆ ಭಯವೇ ತಾನೆ? ಆಗ ನಮಗೆ ಗೊತ್ತಿರಲಿಲ್ಲ, ಒಬ್ಬೊಬ್ಬ ಮನುಷ್ಯನ ಮೂಳೆಗಳಲ್ಲಿ ಸರಾಸರಿ ಆರುನೂರು ಗ್ರಾಮ್ ರಂಜಕ ಇರುತ್ತದೆ ಅಂತ, ರಂಜಕಕ್ಕೆ ಕತ್ತಲಲ್ಲಿ ಮಿನುಗುವ ಗುಣ ಇದೆ ಅಂತ. ಈಗಲೂ ರಂಜಕ ಅಂದರೆ ಕೊಂಚ ಭಯ ಆಗುತ್ತದೆ ಅದರ ಭವಿಷ್ಯದ ಚಿತ್ರಣವನ್ನು ಕಲ್ಪಿಸಿಕೊಂಡಾಗ.

ಆಧುನಿಕ ಕೃಷಿಕರಿಗೆಲ್ಲ ರಂಜಕ ಬೇಕೇಬೇಕು. ಸಾರಜನಕ, ರಂಜಕ ಮತ್ತು ಪೊಟ್ಯಾಶ್ ಇವು ಮೂರು ಮೂಲವಸ್ತುಗಳನ್ನು ಕೃಷಿಯ ಮೂಲಮಂತ್ರವೆಂತಲೇ ವಿಜ್ಞಾನಿಗಳು ಹೇಳುತ್ತ ಬಂದಿದ್ದಾರೆ. ಇವು ಎಲ್ಲಿಂದ ಬರುತ್ತವೆ? ಸಾರಜನಕವೇನೊ ಸುಲಭ. ವಾಯುಮಂಡಲದ ಶೇಕಡಾ ೭೮ ಪಾಲು ಸಾರಜನಕವೇ ಇದೆ; ಅದು ಎಂದೂ ಮುಗಿಯುವಂಥದ್ದಲ್ಲ. ಪೊಟ್ಯಾಶ್ ಕೂಡ ಅನಂತ ಪ್ರಮಾಣದಲ್ಲಿದೆ. ಸಮುದ್ರವಿದ್ದಷ್ಟು ಕಾಲ ಪೊಟ್ಯಾಶ್‌ಗೆ ತೊಂದರೆ ಇಲ್ಲ. ಆದರೆ ರಂಜಕ ಹಾಗಲ್ಲ. ಅದು ಸೀಮಿತ ಸಂಪನ್ಮೂಲ. ಚೀನಾ, ಅಮೆರಿಕ ಮತ್ತೊ ಮೊರೊಕ್ಕೊದಂಥ ಎಲ್ಲೋ ಕೆಲವು ದೇಶಗಳಲ್ಲಿ ಮಾತ್ರ ದೊಡ್ಡ ನಿಕ್ಷೇಪಗಳ ರೂಪದಲ್ಲಿ ಇರುವ ಶಿಲಾರಂಜಕವನ್ನು ವರ್ಷಕ್ಕೆ ೧೫ಕೋಟಿ ಟನ್‌ಗಳಷ್ಟು ಪ್ರಮಾಣದಲ್ಲಿ ಎತ್ತುತ್ತಿದ್ದಾರೆ. ಬೇಡಿಕೆ ವರ್ಷವರ್ಷಕ್ಕೆ ಹೆಚ್ಚುತ್ತಲೇ ಇದೆ. ಹೀಗೆ ನಿರಂತರ ಗಣಿಗಳಿಂದ ಮೇಲೆತ್ತಿ ಖಾಲಿ ಮಾಡಿದರೆ ಅದು ಮತ್ತೆ ಭರ್ತಿಯಾಗುವಂಥದ್ದಲ್ಲ. ಒಂದು ಅಂದಾಜಿನ ಪ್ರಕಾರ ಮುಂದಿನ ೭೦-೮೦ ವರ್ಷಗಳಿಗೆ ಸಾಲುವಷ್ಟು ರಂಜಕ ಮಾತ್ರ ಈ ಭೂಮಿಯ ಮೇಲಿದೆ. ಆಮೇಲೆ ಏನು? ತೀರ ಆಳದಲ್ಲಿ, ತೀರ ಕಷ್ಟಪಟ್ಟು ತೆಗೆಯಬಹುದಾದ ಕಳಪೆ ಗುಣಮಟ್ಟದ ರಂಜಕದ ನಿಕ್ಷೇಪ ಇದೆ. ಅದನ್ನೂ ತೆಗೆದು ಮುಂದಿನ ಹತ್ತು ವರ್ಷ ಬಳಸುತ್ತಾರೆ ಎನ್ನೋಣ. ಮುಂದೇನು?

ಸೋಮವಾರ, ಜುಲೈ 15, 2013

ದೈತ್ಯಪ್ರತಿಭೆಗಳ ಹೆಗಲ ಮೇಲೆ

ಖ್ಯಾತ ವಿಜ್ಞಾನ ಲೇಖಕ ಶ್ರೀ ಟಿ. ಆರ್. ಅನಂತರಾಮುರವರ 'ದೈತ್ಯಪ್ರತಿಭೆಗಳ ಹೆಗಲ ಮೇಲೆ', ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ. ಈ ಪುಸ್ತಕದ ಪರಿಚಯ ಇಲ್ಲಿದೆ. 

ಟಿ. ಎಸ್. ಗೋಪಾಲ್

ಕನ್ನಡ ಸಾಹಿತ್ಯದ ವಿದ್ಯಾರ್ಥಿಯಾದ ನನ್ನನ್ನು ಮೊದಲಿನಿಂದಲೂ ಬಹುವಾಗಿ ಆಕರ್ಷಿಸಿದ ಪ್ರಕಾರವೆಂದರೆ ಗದ್ಯಸಾಹಿತ್ಯ. ವಡ್ಡಾರಾಧನೆಯ ಶಿವಕೋಟ್ಯಾಚಾರ್ಯನಿಂದ ಮುದ್ದಣನವರೆಗೆ, ಗಳಗನಾಥ, ವಾಸುದೇವಾಚಾರ್ಯರಿಂದ ಮೂರ್ತಿರಾಯರವರೆಗೆ, ಕುವೆಂಪುರವರಿಂದ ದೇವನೂರು, ಕುಂವೀವರೆಗೂ ವಿಸ್ತರಿಸಿಕೊಂಡಿರುವ ಈ ಸಾಹಿತ್ಯಲೋಕ ಕನ್ನಡವನ್ನು ಬಹುಶ್ರೀಮಂತವಾಗಿಸಿದೆ. ಬೆಳ್ಳ್ಳಾವೆ, ಶಿವರಾಮ ಕಾರಂತ, ಜಿ.ಟಿ.ನಾರಾಯಣರಾವ್, ಬಿ.ಜಿ.ಎಲ್.ಸ್ವಾಮಿಯಂತಹವರಿಂದ ಆಧುನಿಕರಿಗೆ ತೆರೆದುಕೊಂಡ ಕನ್ನಡ ವಿಜ್ಞಾನಸಾಹಿತ್ಯವೂ ಇದೇ ಜಾಡುಹಿಡಿದು ಜನಪ್ರಿಯವೂ ಜ್ಞಾನಬೋಧಕವೂ ಆಗಿರುವುದೊಂದು ವಿಶೇಷವೇ.

ಈಚಿನ ದಶಕಗಳಲ್ಲಿ ದಿನಪತ್ರಿಕೆಗಳೂ ನಿಯತಕಾಲಿಕೆಗಳೂ ವಿಜ್ಞಾನಸಾಹಿತ್ಯವನ್ನು ನಿಯಮಿತ ಅಂಕಣಗಳ ಮೂಲಕವೂ ಜನಪ್ರಿಯ ಲೇಖನಗಳ ಮೂಲಕವೂ ಪ್ರಚುರಪಡಿಸಹೊರಟಿರುವುದೂ ಸ್ವಾಗತಾರ್ಹವೇ. ಇಂತಹ ಬರಹಗಳ ಮೂಲಕ ಆಧುನಿಕ ಕನ್ನಡ ಸಾಹಿತ್ಯಕ್ಕೆ ಮಿಗಿಲಾದ ಸೇವೆ ಸಲ್ಲಿಸುತ್ತಿರುವ ನಾಗೇಶ ಹೆಗಡೆ, ಹಾಲ್ದೊಡ್ಡೇರಿ, ಕೊಳ್ಳೇಗಾಲ ಶರ್ಮ, ಹೆಚ್ಚಾರ್ಕೆ ಮೊದಲಾದ ಮಹನೀಯರ ಸಾಲಿಗೆ ಟಿ.ಆರ್. ಅನಂತರಾಮುರವರೂ ಸೇರುತ್ತಾರೆ.

ಅನಂತರಾಮುರವರ ಬರಹ ಮೊದಲಿಗೆ ನನ್ನ ಗಮನ ಸೆಳೆದದ್ದು ಎಂಬತ್ತರ ದಶಕದಲ್ಲಿ ಪ್ರಕಟವಾದ ಅವರ 'ಹಿಮದ ಸಾಮ್ರಾಜ್ಯದಲ್ಲಿ' ಪುಸ್ತಕದ ಮೂಲಕ. ವಿಜ್ಞಾನದ ಬರಹ, ಶೈಲಿ ಇತರ ಜನಪ್ರಿಯ ಗದ್ಯಪ್ರಕಾರಗಳಂತೆ ಆಕರ್ಷಕವಾಗಿರಬಹುದೆಂದು ನನಗೆ ಈ ಪುಸ್ತಕ ತೋರಿಸಿಕೊಟ್ಟಿತು. ಇದೇ ಆಸಕ್ತಿಯಿಂದ ಅವರ ಈಚಿನ ಕೃತಿ 'ದೈತ್ಯಪ್ರತಿಭೆಗಳ ಹೆಗಲ ಮೇಲೆ' ಪುಸ್ತಕವನ್ನು ಕೈಯಲ್ಲಿ ಹಿಡಿದು ಓದಲು ತೊಡಗಿದಾಗ ಮೊದಲ ಅಧ್ಯಾಯವೇ ಅಚ್ಚರಿ ಮೂಡಿಸಿತು. ಇದೇನು ಗಂಭೀರವಿಜ್ಞಾನದ ಬರಹವೋ ಮತ್ತೇನೋ ಅನ್ನಿಸುವಂತಾಯಿತು.

ಶುಕ್ರವಾರ, ಜುಲೈ 12, 2013

ಕ್ಯಾಮೆರಾ ಕತೆಗಳು : ೧

ಟಿ. ಜಿ. ಶ್ರೀನಿಧಿ

[ಎರಡನೇ ಭಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ]
[ಮೂರನೆಯ ಭಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ]

ಹಂಪೆಯ ವಿರೂಪಾಕ್ಷ ದೇವಾಲಯದಲ್ಲಿ ದರ್ಶನ ಮುಗಿಸಿ ಹೊರಬರುವ ಹಾದಿಯಲ್ಲಿ ನಮಗೊಂದು ವಿಶಿಷ್ಟ ದೃಶ್ಯ ಕಾಣಸಿಗುತ್ತದೆ: ಸಣ್ಣ ಕಿಂಡಿಯೊಂದರ ಮೂಲಕ ಹಾದುಬರುವ ಬೆಳಕಿನ ಕಿರಣಗಳು ಎದುರಿನ ಗೋಡೆಯ ಮೇಲೆ ರಾಜಗೋಪುರದ ಚಿತ್ರವನ್ನು ಮೂಡಿಸುತ್ತವೆ.

ಸಣ್ಣದೊಂದು ಕಿಂಡಿಯ ಮೂಲಕ ಬೆಳಕು ಹಾಯುವಂತೆ ಮಾಡಿ ಎದುರಿನ ಗೋಡೆಯ ಮೇಲೆ ಹೊರಗಿನ ದೃಶ್ಯವನ್ನು - ತಲೆಕೆಳಗಾಗಿ - ಮೂಡಿಸುವ ಈ ತಂತ್ರವಿದೆಯಲ್ಲ, ಇದೇ ಇಂದಿನ ಛಾಯಾಗ್ರಹಣದ ಮೂಲರೂಪ ಎಂದು ತಜ್ಞರು ಹೇಳುತ್ತಾರೆ. ಪಿನ್‌ಹೋಲ್ ಕ್ಯಾಮೆರಾ, ಕ್ಯಾಮೆರಾ ಅಬ್ಸ್‌ಕೂರಾ (Camera Obscura) ಎಂದೆಲ್ಲ ಕರೆಯುವುದು ಶತಮಾನಗಳಷ್ಟು ಹಳೆಯ ಈ ತಂತ್ರವನ್ನೇ.


ಆದರೆ ಈ ತಂತ್ರಕ್ಕೂ ಇಂದಿನ ಫೋಟೋಗ್ರಫಿಗೂ ಒಂದು ಮುಖ್ಯ ವ್ಯತ್ಯಾಸವಿತ್ತು. ಇದರಲ್ಲಿ ಚಿತ್ರ ಒಂದೆಡೆ (ಉದಾಹರಣೆಗೆ, ಗೋಡೆಯ ಮೇಲೆ) ಮೂಡುತ್ತಿತ್ತೇ ಹೊರತು ಇಂದಿನ ಕ್ಯಾಮೆರಾಗಳಂತೆ ಎಲ್ಲೂ ದಾಖಲಾಗುತ್ತಿರಲಿಲ್ಲ. ಚಿತ್ರರಚನೆ ಗೊತ್ತಿದ್ದವರು ಬೇಕಿದ್ದರೆ ಗೋಡೆಯ ಮೇಲೆ ಮೂಡಿದ ಚಿತ್ರವನ್ನು ಪ್ರತಿಮಾಡಿಕೊಳ್ಳಬಹುದಿತ್ತು ಅಷ್ಟೆ.

ಭಾನುವಾರ, ಜುಲೈ 7, 2013

ಮೌಸ್ ಜನಕನ ನೆನಪಿನಲ್ಲಿ

ಟಿ. ಜಿ. ಶ್ರೀನಿಧಿ

ವಿಕಿಪೀಡಿಯಾ ಚಿತ್ರ
ಕಂಪ್ಯೂಟರ್ ಬಳಕೆದಾರರೆಲ್ಲರ ಅಚ್ಚುಮೆಚ್ಚಿನ ಸಂಗಾತಿಯೆಂದರೆ ಮೌಸ್. ಅದಿಲ್ಲದೆ ಕಂಪ್ಯೂಟರ್ ಬಳಸುವುದನ್ನು ನಮ್ಮಲ್ಲಿ ಅನೇಕರಿಗೆ ಕಲ್ಪಿಸಿಕೊಳ್ಳುವುದೂ ಕಷ್ಟವೇ. ಕಂಪ್ಯೂಟರ್ ಸಾಧನಗಳ ಪೈಕಿ ಮೌಸ್ ಗಳಿಸಿಕೊಂಡಿರುವ ಜನಪ್ರಿಯತೆ ಅಂಥದ್ದು. ಈವರೆಗೆ ಪ್ರಪಂಚದಲ್ಲಿ ನೂರು ಕೋಟಿಗೂ ಹೆಚ್ಚು ಸಂಖ್ಯೆಯ ಮೌಸ್‌ಗಳು ಮಾರಾಟವಾಗಿವೆಯಂತೆ.

ಆದರೆ ಕಂಪ್ಯೂಟರ್ ಪ್ರಪಂಚದ ವೈಚಿತ್ರ್ಯ ನೋಡಿ, ಇಲ್ಲಿನ ಆವಿಷ್ಕಾರಗಳು ಅದೆಷ್ಟೇ ಜನಪ್ರಿಯವಾದರೂ ಅವುಗಳನ್ನು ಸೃಷ್ಟಿಸಿದವರಿಗೆ ಹೇಳಿಕೊಳ್ಳುವಂತಹ ಪ್ರಸಿದ್ಧಿ ಬಂದಿರುವುದೇ ಇಲ್ಲ. ಕಂಪ್ಯೂಟರ್ ಮೌಸ್ ಸೃಷ್ಟಿಸಿದವರು ಯಾರು ಎಂದು ಕೇಳಿದರೆ ನಮ್ಮಲ್ಲಿ ಬಹುತೇಕರಿಗೆ ಅದರ ಉತ್ತರ ಗೊತ್ತಿರಲಿಕ್ಕಿಲ್ಲ.

ಈ ಪ್ರಶ್ನೆಗೆ ಉತ್ತರರೂಪವಾಗಿದ್ದ ವಿಜ್ಞಾನಿಯ ಹೆಸರು ಡಗ್ಲಸ್ ಎಂಗೆಲ್‌ಬಾರ್ಟ್. ಬರಿಯ ಮೌಸ್ ಅಷ್ಟೇ ಅಲ್ಲ, ಇಂದು ಕಂಪ್ಯೂಟರ್ ಪ್ರಪಂಚದ ಅವಿಭಾಜ್ಯ ಅಂಗಗಳಾಗಿರುವ ಅನೇಕ ಆವಿಷ್ಕಾರಗಳ ಹಿಂದೆ ಅವರ ಪರಿಶ್ರಮವಿತ್ತು. ಒಂದು ಅರ್ಥದಲ್ಲಿ ನೋಡಿದರೆ ಕಂಪ್ಯೂಟರ್ ಪ್ರಪಂಚದ ಬೆಳೆವಣಿಗೆಯನ್ನು ದಶಕಗಳಷ್ಟು ಹಿಂದೆಯೇ ಅಂದಾಜಿಸಿ ಆ ನಿಟ್ಟಿನಲ್ಲಿ ಕೆಲಸಮಾಡಿದ ಕೀರ್ತಿಯೂ ಅವರಿಗೇ ಸಲ್ಲಬೇಕು. ಕೋಣೆಗಾತ್ರದ ಕಂಪ್ಯೂಟರುಗಳ, ಪಂಚ್ಡ್ ಕಾರ್ಡುಗಳ ಕಾಲದಲ್ಲೇ ಇಂದಿನ ಐಟಿ ಜಗತ್ತನ್ನು ಮುಂಗಾಣಲು ಅವರಿಗೆ ಸಾಧ್ಯವಾಗಿದ್ದು ನಿಜಕ್ಕೂ ಅಚ್ಚರಿಯ ಸಂಗತಿ.
badge