ಮಂಗಳವಾರ, ಏಪ್ರಿಲ್ 17, 2012

ಇಮೇಲ್: ಪರಿಣಾಮಕಾರಿ ಬಳಕೆಗೆ ಎಂಟು ಸೂತ್ರಗಳು

ಟಿ. ಜಿ. ಶ್ರೀನಿಧಿ

ಇಮೇಲ್ ಯಾರಿಗೆ ತಾನೆ ಗೊತ್ತಿಲ್ಲ! ಅತ್ಯಂತ ಸುಲಭವಾಗಿ ಬಳಸಬಹುದಾದ ಈ ಮಾಧ್ಯಮವನ್ನು ಇತ್ತೀಚೆಗಷ್ಟೆ ಕಂಪ್ಯೂಟರ್ ಬಳಸಲು ಕಲಿತವರೂ ಸುಲಭವಾಗಿ ಬಳಸುತ್ತಾರೆ.

ಇಮೇಲ್ ಮಾಧ್ಯಮದ ಬಳಕೆ ವ್ಯಾಪಕವಾಗುತ್ತಿದ್ದಂತೆ ಇಮೇಲ್ ಸಂದೇಶಗಳ ಮೂಲಕ ನಡೆಯುವ ಸಂವಹನಕ್ಕೆ ನೀಡಲಾಗುತ್ತಿರುವ ಮಹತ್ವವೂ ಹೆಚ್ಚುತ್ತಿದೆ. ಗೆಳೆಯರ ನಡುವಿನ ಹರಟೆ, ಗಂಡ ಹೆಂಡಿರ ಮಾತುಕತೆಯಿಂದ ಪ್ರಾರಂಭಿಸಿ ವ್ಯಾಪಾರ ವಹಿವಾಟು, ಕಚೇರಿ ವ್ಯವಹಾರಗಳವರೆಗೆ ಪ್ರತಿಯೊಂದಕ್ಕೂ ಇಮೇಲ್ ಬಳಕೆಯಾಗುತ್ತಿದೆ. ಒಂದು ದಿನದಲ್ಲಿ ವಿಶ್ವದಾದ್ಯಂತ ಹದಿನಾಲ್ಕು ಸಾವಿರ ಕೋಟಿಗಿಂತ ಹೆಚ್ಚು ಇಮೇಲ್ ಸಂದೇಶಗಳನ್ನು ವಿನಿಮಯಮಾಡಿಕೊಳ್ಳಲಾಗುತ್ತದೆಯೆಂದು ಅಂಕಿಅಂಶಗಳು ಹೇಳುತ್ತವೆ. ಇವೆಲ್ಲ ಕಾರಣಗಳಿಂದಾಗಿ ಇಮೇಲ್ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಬೇಕಾದ್ದು ಇಂದಿನ ಅಗತ್ಯಗಳಲ್ಲೊಂದು.

ಇಮೇಲ್ ಕಳುಹಿಸಲು ಬರುತ್ತದೆ ಎನ್ನುವುದಕ್ಕೂ ಇಮೇಲ್ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಬಲ್ಲೆ ಎನ್ನುವುದಕ್ಕೂ ಏನಾದರೂ ವ್ಯತ್ಯಾಸವಿದೆಯೆ? ಖಂಡಿತಾ ಇದೆ. ಕೆಲವು ಸಣ್ಣಪುಟ್ಟ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದರಿಂದ ನಮ್ಮ ಇಮೇಲ್ ಸಂದೇಶ ಪರಿಣಾಮಕಾರಿಯಾಗಿರುವಂತೆ ಮಾಡಬಹುದು.

ಅಂತಹ ಕೆಲ ಸರಳ ಸೂತ್ರಗಳು ಇಲ್ಲಿವೆ.

ಭಾನುವಾರ, ಏಪ್ರಿಲ್ 15, 2012

ಟೈಟಾನಿಕ್ ನೆನಪಿನ ಲೇಖನ: ಐಸ್‌ಬರ್ಗ್ ಎಂಬ ಸಾಗರದೈತ್ಯ

ಟಿ. ಜಿ. ಶ್ರೀನಿಧಿ


"ಮುಳುಗಲಾಗದ" ಹಡಗು ಟೈಟಾನಿಕ್ ಮರೆಯಲಾಗದ ದುರಂತಕ್ಕೆ ಗುರಿಯಾಗಿ ಇದೀಗ ನೂರು ವರ್ಷ. ತಂತ್ರಜ್ಞಾನದ ಸಾಮರ್ಥ್ಯದ ಬಗೆಗೆ ಒಂದು ತಲೆಮಾರು ಇಟ್ಟಿದ್ದ ನಂಬಿಕೆಯನ್ನೇ ಅಲುಗಾಡಿಸಿದ ಈ ದುರಂತಕ್ಕೆ ಕಾರಣವಾದದ್ದು ನೀರ್ಗಲ್ಲು, ಅಥವಾ ಐಸ್‌ಬರ್ಗ್.

ಟೈಟಾನಿಕ್ ದುರಂತದ ನಂತರ ಕಳೆದಿರುವ ಒಂದು ಶತಮಾನದಲ್ಲಿ ಅದೆಷ್ಟೋ ನೀರ್ಗಲ್ಲುಗಳು ಸಾಗರಗಳಲ್ಲಿ ತೇಲಿವೆ. ತಂತ್ರಜ್ಞಾನವೂ ಕಡಿಮೆಯೇನಲ್ಲ, ಅದೂ ನಾಗಾಲೋಟದಿಂದಲೇ ಮುನ್ನಡೆದಿದೆ.

ಆದರೆ ಇವರಿಬ್ಬರ ನಡುವೆ ಗೆದ್ದವರಾರು ಎಂಬುದು ಮಾತ್ರ ಇನ್ನೂ ತೀರ್ಮಾನವಾಗಿಲ್ಲ. ಒಂದು ಕ್ಷಣ ತಂತ್ರಜ್ಞಾನವೇ ಗೆದ್ದಿತು ಎನಿಸುವಷ್ಟರಲ್ಲಿ ಅದ್ಯಾವುದೋ ಸಮುದ್ರದಲ್ಲಿ ಸಾಗುತ್ತಿದ್ದ ಹಡಗಿಗೆ ನೀರ್ಗಲ್ಲು ಬಡಿದ ಸುದ್ದಿ ಕೇಳಿಬರುತ್ತದೆ.

ನಿಸರ್ಗ ಹಾಗೂ ಮಾನವನ ನಡುವಿನ ಈ ಟೆಸ್ಟ್ ಮ್ಯಾಚ್‌ನ ಇತ್ತೀಚಿನ ಸ್ಕೋರ್ ಎಷ್ಟು? ಒಂದು ಒಳನೋಟ ಇಲ್ಲಿದೆ.

ಗುರುವಾರ, ಏಪ್ರಿಲ್ 12, 2012

ಗಣಿತದ ಪದ್ಯ-ಪ್ರಬಂಧ

ಗಣಿತದ ಪರಿಕಲ್ಪನೆಗಳನ್ನು ರೋಚಕವಾಗಿ, ಮಕ್ಕಳಿಗೆ ಆಕರ್ಷಕವೆನಿಸುವಂತೆ ಹೇಳಲು ಸಾಧ್ಯವಾಗಬಹುದೆ? ಈ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಹಿರಿಯ ಸಂವಹನಕಾರರಾದ ಶ್ರೀ ವಿ. ಎಸ್. ಎಸ್. ಶಾಸ್ತ್ರಿಯವರು ಹೊಸದೊಂದು ಪುಸ್ತಕ ಬರೆದಿದ್ದಾರೆ.

'ಗಣಿತ - ಮಕ್ಕಳಿಗಾಗಿ ಪದ್ಯ, ಪ್ರಬಂಧ, ಪರಿಕಲ್ಪನೆ' ಎಂಬ ಹೆಸರಿನ ಈ ಕೃತಿಯಲ್ಲಿ ಏಳನೆಯ ತರಗತಿಯವರೆಗಿನ ಪಠ್ಯಕ್ರಮದಲ್ಲಿರುವ ಗಣಿತ ವಿಷಯಗಳನ್ನು ಕುರಿತ ಪದ್ಯ-ಕತೆ-ಪ್ರಬಂಧಗಳಿವೆ. ಪೂರಕ ಚಿತ್ರಗಳನ್ನು ಶಾಸ್ತ್ರಿಯವರೇ ಬರೆದಿರುವುದು ವಿಶೇಷ.
ಗಣಿತ - ಮಕ್ಕಳಿಗಾಗಿ ಪದ್ಯ, ಪ್ರಬಂಧ, ಪರಿಕಲ್ಪನೆ
ಲೇಖಕರು: ಶ್ರೀ ವಿ. ಎಸ್. ಎಸ್. ಶಾಸ್ತ್ರಿ
೮೮ ಪುಟಗಳು, ಬೆಲೆ: ರೂ. ೪೦
ಪ್ರಕಾಶಕರು: ಡಿವಿಜಿ ಪ್ರತಿಷ್ಠಾನ, ಕೋಲಾರ

ಮಂಗಳವಾರ, ಏಪ್ರಿಲ್ 10, 2012

ಇಬುಕ್ ರೀಡರ್ ಈಗ ಕಲರ್ ಕಲರ್!

ಟಿ. ಜಿ. ಶ್ರೀನಿಧಿ

ಕಾಲ್ಪನಿಕ ಚಿತ್ರ
ಈಚೆಗಂತೂ ಇಬುಕ್, ಅರ್ಥಾತ್ ವಿದ್ಯುನ್ಮಾನ ಪುಸ್ತಕಗಳ ಪರಿಕಲ್ಪನೆ ಹೊಸತು ಎಂದೇ ಅನ್ನಿಸುತ್ತಿಲ್ಲ. ಮೊಬೈಲಿನಲ್ಲಿ, ಕಂಪ್ಯೂಟರಿನಲ್ಲಿ, ಟ್ಯಾಬ್ಲೆಟ್ಟಿನಲ್ಲಿ, ಇಬುಕ್ ರೀಡರುಗಳಲ್ಲಿ - ಎಲ್ಲೆಲ್ಲೂ ಪುಸ್ತಕ ಓದುವ ಸೌಲಭ್ಯ ಸಿಕ್ಕಮೇಲೆ ಆ ಪುಸ್ತಕಕ್ಕೂ ಈ ಪುಸ್ತಕಕ್ಕೂ ಹೆಚ್ಚು ವ್ಯತ್ಯಾಸವೇ ಉಳಿದಿಲ್ಲವೇನೋ.

ಪುಸ್ತಕವನ್ನು ಮುದ್ರಿಸಿ, ಬೈಂಡುಮಾಡಿ ನೀಟಾಗಿ ಕಪಾಟಿನಲ್ಲಿ ಜೋಡಿಸಿಡುವ ಬದಲು ವಿದ್ಯುನ್ಮಾನ ರೂಪದಲ್ಲಿ ಮೆಮೊರಿ ಕಾರ್ಡಿನಲ್ಲೋ ಪೆನ್ ಡ್ರೈವ್‌ನಲ್ಲೋ ಇಟ್ಟುಕೊಂಡು ಬೇಕಾದಾಗ ನಮ್ಮ ಇಚ್ಛೆಯ ಉಪಕರಣದಲ್ಲಿ ಓದಲು ಅನುವುಮಾಡಿಕೊಟ್ಟಿದ್ದು ಇಬುಕ್ ಪರಿಕಲ್ಪನೆಯ ಸಾಧನೆ. ಮುದ್ರಿತ ರೂಪದಲ್ಲಿ ಮನೆಯಲ್ಲೆಲ್ಲ ತುಂಬಿಕೊಂಡುಬಿಡುವಷ್ಟು ಪುಸ್ತಕಗಳನ್ನು ಬೆರಳ ತುದಿಯಗಲದ ಮೆಮೊರಿ ಕಾರ್ಡ್‌ನೊಳಗೂ ತುಂಬಿಡಲು ಸಾಧ್ಯವಾಗಿಸಿದ್ದು ಇದೇ ಪರಿಕಲ್ಪನೆಯೇ.

ಇ ಪುಸ್ತಕಗಳು ಅದೆಷ್ಟು ಜನಪ್ರಿಯವಾಗಿವೆಯೆಂದರೆ ಅಮೆಜಾನ್ ಡಾಟ್ ಕಾಮ್‌ನಲ್ಲಿ ಮುದ್ರಿತ ಪುಸ್ತಕಗಳಿಗಿಂತ ಹೆಚ್ಚು ಸಂಖ್ಯೆಯ ಇ ಪುಸ್ತಕಗಳು ಮಾರಾಟವಾಗುತ್ತವೆ.

ಭಾನುವಾರ, ಏಪ್ರಿಲ್ 8, 2012

ಒಂದು ಖುಷಿಯ ಸುದ್ದಿ

ಆಕೃತಿ ಪುಸ್ತಕದ ಸಹಯೋಗದಲ್ಲಿ ಇಜ್ಞಾನ ಡಾಟ್ ಕಾಮ್ ಪ್ರಕಟಿಸಿದ 'ತಿನ್ನಲಾಗದ ಬಿಸ್ಕತ್ತು ನುಂಗಲಾಗದ ಟ್ಯಾಬ್ಲೆಟ್ಟು' ಕೃತಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಪ್ರಶಸ್ತಿ ಬಂದಿದೆ.

ಕೃತಿಯನ್ನು ಪ್ರೋತ್ಸಾಹಿಸಿದ, ಆಶೀರ್ವದಿಸಿದ ಎಲ್ಲರಿಗೂ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು.

ಮಂಗಳವಾರ, ಏಪ್ರಿಲ್ 3, 2012

ಚಿತ್ರಬಿಡಿಸಲಾ ಇಲ್ಲ ಕ್ಲಿಕ್ ಮಾಡಲಾ?

ಟಿ. ಜಿ. ಶ್ರೀನಿಧಿ


ಮನಸ್ಸಿಗೆ ಸಂತೋಷಕೊಡುವ ತಾಣಗಳಿಗೆ ಹೋದಾಗ ಅಲ್ಲಿನ ಪರಿಸರ ನಮಗೆ ತುಂಬಾ ಇಷ್ಟವಾಗುವುದು ಸಾಮಾನ್ಯ. ಊರಿಗೆ ಮರಳುವಾಗ ನಮ್ಮೊಡನೆ ಆ ಪರಿಸರವನ್ನೂ ತೆಗೆದುಕೊಂಡು ಬರುವಂತಿದ್ದರೆ ಎಷ್ಟು ಚೆನ್ನ ಎನಿಸುವುದೂ ಸಹಜವೇ. ಈ ಅನಿಸಿಕೆಯ ದೆಸೆಯಿಂದ ನಾವು ಛಾಯಾಚಿತ್ರಗಳನ್ನು ಕ್ಲಿಕ್ಕಿಸುತ್ತೇವೆ ನಿಜ. ಆದರೆ ಅವು ನಮ್ಮನ್ನು ಆವರಿಸಿಕೊಂಡಿರುವ ಪರಿಸರದ ಒಂದು ಭಾಗದ ಚಿತ್ರಣವನ್ನು ಮಾತ್ರ ಸೆರೆಹಿಡಿಯಬಲ್ಲವು.

ಈಗೊಂದು ಉದಾಹರಣೆ ನೋಡೋಣ. ಈ ಬರೆಹವನ್ನು ಟೈಪಿಸುತ್ತ ನಾನು ನನ್ನ ಕೋಣೆಯಲ್ಲಿ ಕುಳಿತಿದ್ದೇನೆ. ಎಡಬದಿಯಲ್ಲಿರುವ ಗೋಡೆ, ಕೋಣೆಯ ಬಾಗಿಲು, ಎದುರಿನ ಮೇಜು, ಅದರ ಮೇಲಿನ ಕಂಪ್ಯೂಟರ್, ಮೇಜಿನ ಪಕ್ಕದಲ್ಲಿ ನೇತುಹಾಕಿರುವ ಪೇಂಟಿಂಗ್, ಅದರ ಪಕ್ಕದಲ್ಲಿರುವ ಪುಸ್ತಕದ ಬೀರು, ಅದರ ಪಕ್ಕದ ಕಿಟಕಿ - ಇದಿಷ್ಟೂ ನನ್ನ ಕಣ್ಣಿನ ದೃಷ್ಟಿಯ ವ್ಯಾಪ್ತಿಯಲ್ಲಿ ಬರುತ್ತಿವೆ.

ಈ ದೃಶ್ಯದ ಫೋಟೋ ತೆಗೆಯೋಣ ಎಂದುಕೊಂಡಾಗ ಸಮಸ್ಯೆ ಶುರು. ಛಾಯಾಚಿತ್ರದ ವ್ಯಾಪ್ತಿಗೆ ಬಾಗಿಲು, ಕಂಪ್ಯೂಟರ್ ಎರಡೂ ಬಂದರೆ ಪೇಂಟಿಂಗು, ಬೀರು, ಕಿಟಕಿಗಳ ಸುಳಿವೇ ಇರುವುದಿಲ್ಲ. ಪೇಂಟಿಂಗು, ಬೀರು ಎರಡೂ ಬಂದರೆ ಬಾಗಿಲು-ಕಂಪ್ಯೂಟರು ನಾಪತ್ತೆ!

ಮಾನವ ದೃಷ್ಟಿಯ ವ್ಯಾಪ್ತಿಗೆ ಹೋಲಿಸಿದಾಗ ಕ್ಯಾಮೆರಾದ ವ್ಯಾಪ್ತಿ ಸಾಮಾನ್ಯವಾಗಿ ತೀರಾ ಕಡಿಮೆಯಿರುವುದೇ ಈ ಸಮಸ್ಯೆಗೆ ಕಾರಣ. ಈ ಕೊರತೆಯನ್ನು ನಿವಾರಿಸುವ ನಿಟ್ಟಿನಲ್ಲಿ ರೂಪುಗೊಂಡಿರುವುದೇ ಪನೋರಮಾ ಛಾಯಾಚಿತ್ರಗಳ ಪರಿಕಲ್ಪನೆ.
badge