ಸೋಮವಾರ, ಫೆಬ್ರವರಿ 29, 2016

ಕೆ. ಪಿ. ರಾಯರಿಗೆ ಹ್ಯಾಪಿ ಬರ್ತ್‌ಡೇ!

ಕಂಪ್ಯೂಟರಿಗೆ ಕನ್ನಡ ಕಲಿಸಿದ ಮೇಷ್ಟರು ಶ್ರೀ ಕೆ. ಪಿ. ರಾಯರಿಗೆ ಹ್ಯಾಪಿ ಬರ್ತ್‌ಡೇ ಹೇಳುವ ಅವಕಾಶ ನಮಗೆ ಸಿಗುವುದು ನಾಲ್ಕು ವರ್ಷಕ್ಕೊಮ್ಮೆ. ಇವತ್ತು (ಫೆ. ೨೯, ೨೦೧೬) ಅಂತಹ ಅವಕಾಶಗಳಲ್ಲೊಂದು ನಮ್ಮ ಪಾಲಿಗೆ ಸಿಕ್ಕಿದೆ. ಇಜ್ಞಾನದಲ್ಲಿ ಈ ಹಿಂದೆ ಪ್ರಕಟವಾಗಿದ್ದ ಕೆ. ಪಿ. ರಾವ್ ಜೀವನ-ಸಾಧನೆ ಕುರಿತ ಲೇಖನವನ್ನು ಈ ಸಂದರ್ಭದಲ್ಲಿ ಖುಷಿಯಿಂದ ಮರುಪ್ರಕಟಿಸುತ್ತಿದ್ದೇವೆ.

ಟಿ. ಜಿ. ಶ್ರೀನಿಧಿ

ಕಂಪ್ಯೂಟರಿನಲ್ಲಿರಲಿ, ಮೊಬೈಲ್-ಟ್ಯಾಬ್ಲೆಟ್ಟುಗಳಲ್ಲಿರಲಿ ಕನ್ನಡ ಸರಾಗವಾಗಿ ಮೂಡುವುದು ನಮ್ಮ ಪಾಲಿಗೆ ಹೊಸ ವಿಷಯವೇನೂ ಅಲ್ಲ. 
ಆದರೆ ಕೆಲ ದಶಕಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಕಂಪ್ಯೂಟರುಗಳೇ ಅಪರೂಪವಾಗಿದ್ದ ಆ ಕಾಲದಲ್ಲಿ ಕಂಪ್ಯೂಟರ್ ಬಳಸಬೇಕು ಎಂದರೆ ಇಂಗ್ಲಿಷ್ ಗೊತ್ತಿರಲೇಬೇಕು ಎನ್ನುವಂತಹ ಪರಿಸ್ಥಿತಿ ಇತ್ತು. 

ಫೋನಿನಲ್ಲಿ ಕನ್ನಡ ಓದಬಹುದು, ಕನ್ನಡ ಟೈಪುಮಾಡುವುದೂ ಸುಲಭ ಎಂದೆಲ್ಲ ವಿವರಿಸುವ ನಮಗೆ ಕಂಪ್ಯೂಟರ್ ಪ್ರಪಂಚದಲ್ಲಿ ಕನ್ನಡವೇ ಕಾಣಸಿಗದಿದ್ದ ದಿನಗಳನ್ನು ಊಹಿಸುವುದೇ ಕಷ್ಟ, ಅಲ್ಲವೆ?

ಅಂತಹ ದಿನಗಳಲ್ಲೂ ಕಂಪ್ಯೂಟರ್ ಪ್ರಪಂಚದಲ್ಲಿ ಸಕ್ರಿಯರಾಗಿದ್ದ ಕನ್ನಡದ ಭಗೀರಥರು ತಮ್ಮ ಅದಮ್ಯ ಉತ್ಸಾಹದಿಂದ ಕಂಪ್ಯೂಟರಿಗೂ ಅ-ಆ-ಇ-ಈ ಹೇಳಿಕೊಟ್ಟರು; ಡಿಜಿಟಲ್ ಲೋಕದಲ್ಲಿ ಕನ್ನಡ ಹುಲುಸಾಗಿ ಬೆಳೆಯಲು ಕಾರಣರಾದರು.

ಇಂಗ್ಲಿಷ್ ನಾಡಿನಿಂದ ಬಂದ ಕಂಪ್ಯೂಟರ್, ಇಂತಹ ಮೇಷ್ಟರೊಬ್ಬರ ನೆರವಿನಿಂದ ಕನ್ನಡ ಕಲಿತ ಕತೆ ಇಲ್ಲಿದೆ.

ಭಾನುವಾರ, ಫೆಬ್ರವರಿ 28, 2016

ರಾಷ್ಟ್ರೀಯ ವಿಜ್ಞಾನ ದಿನ

ಪ್ರತಿ ವರ್ಷ ಫೆಬ್ರವರಿ ೨೮ನೇ ದಿನಾಂಕವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ. ವಿಜ್ಞಾನ ಹಾಗೂ ನಮ್ಮ ಜೀವನದಲ್ಲಿ ಅದರ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ರಾಷ್ಟ್ರೀಯ ವಿಜ್ಞಾನ ದಿನ ಆಚರಣೆಯ ಉದ್ದೇಶ. ಉಪನ್ಯಾಸಗಳು, ಚರ್ಚಾಸ್ಪರ್ಧೆಗಳು, ರಸಪ್ರಶ್ನೆ, ವಸ್ತುಪ್ರದರ್ಶನ - ಹೀಗೆ ಅನೇಕ ಚಟುವಟಿಕೆಗಳನ್ನು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಂದರ್ಭದಲ್ಲಿ ದೇಶದ ವಿವಿಧೆಡೆ ಹಮ್ಮಿಕೊಳ್ಳಲಾಗುತ್ತದೆ. ಈ ಸಂದರ್ಭದಲ್ಲಿ  ರಾಷ್ಟ್ರೀಯ ವಿಜ್ಞಾನ ದಿನದ ಮಹತ್ವ ಕುರಿತ ಸಣ್ಣದೊಂದು ಲೇಖನ ಇಲ್ಲಿದೆ.
ಟಿ. ಜಿ. ಶ್ರೀನಿಧಿ

ಭಾರತದ ಹೆಮ್ಮೆಯ ವಿಜ್ಞಾನಿ ಸರ್ ಸಿ ವಿ ರಾಮನ್ ಅವರ ಅಪೂರ್ವ ಸಾಧನೆಯ ನೆನಪಿನಲ್ಲಿ ಈ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನ ಎಂದು ಗುರುತಿಸಲಾಗಿದೆ. ಅವರು ೧೯೨೮ರ ಫೆಬ್ರವರಿ ೨೮ರಂದು 'ರಾಮನ್ ಇಫೆಕ್ಟ್' ಎಂದೇ ಪ್ರಸಿದ್ಧವಾದ ತಮ್ಮ ಅಧ್ಯಯನದ ವಿವರಗಳನ್ನು ಜಗತ್ತಿಗೆ ತಿಳಿಸಿದ್ದರು.

ವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಏಷ್ಯಾದ ಮೊತ್ತಮೊದಲ ವಿಜ್ಞಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಸಿ ವಿ ರಾಮನ್ ಅವರ ಪೂರ್ಣ ಹೆಸರು ಚಂದ್ರಶೇಖರ ವೆಂಕಟರಾಮನ್ ಎಂದು. ಅವರು ಜನಿಸಿದ್ದು ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ, ೧೮೮೮ರ ನವೆಂಬರ್ ೭ರಂದು. ಅವರ ತಂದೆ ಚಂದ್ರಶೇಖರ ಅಯ್ಯರ್ ಗಣಿತ ಹಾಗೂ ಭೌತವಿಜ್ಞಾನದ ಶಿಕ್ಷಕರಾಗಿದ್ದರು. ನೋಬೆಲ್ ಪ್ರಶಸ್ತಿ ಪಡೆದ ಮತ್ತೋರ್ವ ವಿಜ್ಞಾನಿ ಸುಬ್ರಹ್ಮಣ್ಯಂ ಚಂದ್ರಶೇಖರ್ ಅವರು ಸಿ ವಿ ರಾಮನರ ಸ್ವಂತ ಅಣ್ಣನ ಮಗ.

ಗುರುವಾರ, ಫೆಬ್ರವರಿ 25, 2016

ಜೆನ್‌ಫೋನ್ ಮ್ಯಾಕ್ಸ್: ಮೊಬೈಲೂ ಹೌದು, ಪವರ್‌ಬ್ಯಾಂಕೂ ಹೌದು!

ಟಿ. ಜಿ. ಶ್ರೀನಿಧಿ


ಮೊಬೈಲ್ ಫೋನುಗಳು ಸ್ಮಾರ್ಟ್ ಆಗಿ ಕೆಲ ವರ್ಷ ಕಳೆದಿವೆಯಲ್ಲ, ಈ ಅವಧಿಯಲ್ಲಿ ಏನೆಲ್ಲ ಬದಲಾಗಿದೆ: ಕರೆ ಮಾಡಲು ಮತ್ತು ಎಸ್ಸೆಮ್ಮೆಸ್ ಕಳುಹಿಸಲಷ್ಟೆ ಸೀಮಿತವಾಗಿದ್ದ ಮೊಬೈಲುಗಳು ಇದೀಗ ಅಂಗೈ ಮೇಲಿನ ಕಂಪ್ಯೂಟರುಗಳೇ ಆಗಿಹೋಗಿವೆ. ಹೊಸ ಮಾದರಿಗಳು ಮಾರುಕಟ್ಟೆಗೆ ಬಂದಂತೆಲ್ಲ ಮೊಬೈಲಿನಲ್ಲಿ ಸಿಗುವ ಸೌಲಭ್ಯಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಅದರ ಜೊತೆಗೆ ಮೊಬೈಲುಗಳ ಬೆಲೆಯೂ ಕಡಿಮೆಯಾಗುತ್ತಿದೆ. ಕಳೆದ ವರ್ಷದ 'ಟಾಪ್-ಎಂಡ್' ಮಾಡೆಲಿನಲ್ಲಿ ದೊರಕುತ್ತಿದ್ದ ಸೌಲಭ್ಯ ಈ ವರ್ಷದ 'ಬಜೆಟ್' ಫೋನಿಗೇ ಸೇರಿರುವುದು ಇದೀಗ ಸರ್ವೇಸಾಮಾನ್ಯ.

ಅಂದಹಾಗೆ ಕಡಿಮೆಯಾಗುತ್ತಿರುವುದು ಮೊಬೈಲಿನ ಬೆಲೆಯಷ್ಟೇ ಅಲ್ಲ: ಪ್ರತಿ ಚಾರ್ಜಿನ ನಂತರ ಫೋನಿನ ಬ್ಯಾಟರಿ ಬಾಳಿಕೆಬರುವ ಸಮಯವೂ ಗಣನೀಯವಾಗಿ ಕಡಿಮೆಯಾಗಿದೆ.

ಮಂಗಳವಾರ, ಫೆಬ್ರವರಿ 23, 2016

ಮಾಹಿತಿ ತಂತ್ರಜ್ಞಾನ ಮತ್ತು ಬೆಂಗಳೂರು

ಟಿ. ಜಿ. ಶ್ರೀನಿಧಿ


ಜನಸಾಮಾನ್ಯರಿಗೆ ಮಾಹಿತಿ ತಂತ್ರಜ್ಞಾನದ ಪರಿಚಯವಾಗಿ ಹೆಚ್ಚು ಸಮಯವಾಗಿಲ್ಲ ಎನ್ನುವುದೇನೋ ನಿಜ. ಆದರೆ ಕಂಪ್ಯೂಟರ್ ವಿಜ್ಞಾನ ಹಾಗೂ ನಮ್ಮ ದೇಶದ ನಂಟು ಸಾಕಷ್ಟು ಹಳೆಯದು. ಭಾರತದ ವೈಜ್ಞಾನಿಕ ಕಾರ್ಯಕ್ರಮಗಳಿಗೆ ಭದ್ರ ಬುನಾದಿ ಹಾಕಿಕೊಟ್ಟ ಹೋಮಿ ಭಾಭಾರಂತಹ ದಾರ್ಶನಿಕರ ಪ್ರಯತ್ನಗಳನ್ನು ಇದರ ಹಿನ್ನೆಲೆಯಲ್ಲಿ ನಾವು ಕಾಣಬಹುದು. ಭಾರತದಲ್ಲಿ ಕಂಪ್ಯೂಟರ್ ವಿಜ್ಞಾನ ಕ್ಷೇತ್ರದ ಭೀಷ್ಮಪಿತಾಮಹ ಪ್ರೊ. ಆರ್. ನರಸಿಂಹನ್ ನೇತೃತ್ವದಲ್ಲಿ ನಮ್ಮ ಮೊದಲ ಕಂಪ್ಯೂಟರ್ TIFRAC ಸೃಷ್ಟಿಯ ಕೆಲಸ ೧೯೫೦ರ ದಶಕದಲ್ಲೇ ಪ್ರಾರಂಭವಾಗಿತ್ತು.

ಶುಕ್ರವಾರ, ಫೆಬ್ರವರಿ 19, 2016

ಸರ್ವಾಂತರ್ಯಾಮಿ ಯುಎಸ್‌ಬಿ

ಟಿ. ಜಿ. ಶ್ರೀನಿಧಿ

ಒಂದು ಕಾಲವಿತ್ತು, ಆಗ ಕಂಪ್ಯೂಟರಿನ ಪ್ರತಿಯೊಂದು ಪರಿಕರವನ್ನೂ ಬೇರೆಬೇರೆ ರೀತಿಯಲ್ಲಿ ಜೋಡಿಸಬೇಕಿತ್ತು. ಪ್ರಿಂಟರುಗಳಿಗೆ ಪ್ಯಾರಲಲ್ ಪೋರ್ಟಿನ ಸಂಪರ್ಕ, ಮೋಡೆಮ್‌ಗೆ ಸೀರಿಯಲ್ ಪೋರ್ಟಿನ ಸಂಪರ್ಕವೆಲ್ಲ ಆಗ ಸರ್ವೇಸಾಮಾನ್ಯವಾಗಿತ್ತು. ನಿರ್ದಿಷ್ಟ ಬಗೆಯ ಪೋರ್ಟ್‌ಗಳು ಇರುತ್ತಿದ್ದದ್ದೇ ಒಂದೋ ಎರಡೋ, ಅವು ಮುಗಿದ ಮೇಲೆ ಬೇರೊಂದು ಪರಿಕರವನ್ನು ಸಂಪರ್ಕಿಸುವುದೆಂದರೆ ಅದೊಂದು ತಲೆನೋವಿನ ಸಂಗತಿಯೇ ಆಗಿತ್ತು.

ಕಂಪ್ಯೂಟರಿನ ಮಾತು ಹಾಗಿರಲಿ, ಮೊಬೈಲ್ ಫೋನುಗಳ ಹಣೆಬರಹವೂ - ತೀರಾ ಇತ್ತೀಚಿನವರೆಗೆ - ಹೀಗೆಯೇ ಇತ್ತು: ಸೋನಿ ಎರಿಕ್ಸನ್ನಿನ ಕೇಬಲ್ಲು ನೋಕಿಯಾಗೆ ಆಗಿಬರದು, ಸ್ಯಾಮ್‌ಸಂಗ್‌ನದು ಮೋಟರೋಲಾಗೆ ಸರಿಹೊಂದದು. ಒಂದೊಂದು ಫೋನಿಗೆ ಒಂದೊಂದು ಬಗೆಯ ಕೇಬಲ್ ಸಂಪರ್ಕ, ಪ್ರತಿಯೊಂದಕ್ಕೂ ಬೇರೆಬೇರೆ ಚಾರ್ಜರ್!

ಇಷ್ಟೆಲ್ಲ ತಲೆನೋವನ್ನು ಬಹುಮಟ್ಟಿಗೆ ತಪ್ಪಿಸಿದ ಶ್ರೇಯ ಒಂದು ಮಾನಕಕ್ಕೆ (ಸ್ಟಾಂಡರ್ಡ್) ಸಲ್ಲಬೇಕು.

ಬುಧವಾರ, ಫೆಬ್ರವರಿ 17, 2016

ರೂ. ೨೫೧ಕ್ಕೆ ಮೊಬೈಲ್ ಫೋನ್!

ಇಜ್ಞಾನ ವಾರ್ತೆ


ರಿಂಗಿಂಗ್ ಬೆಲ್ಸ್ ಎಂಬ ನೋಯ್ಡಾ ಮೂಲದ ಮೊಬೈಲ್ ತಯಾರಿಕಾ ಸಂಸ್ಥೆ 'ಫ್ರೀಡಂ ೨೫೧' ಎಂಬ ಹೊಸ ಮೊಬೈಲ್ ಫೋನನ್ನು ಪರಿಚಯಿಸಿದ್ದು ಅದನ್ನು ರೂ. ೨೫೧ಕ್ಕೆ ಮಾರುತ್ತೇನೆಂದು ಹೇಳುವ ಮೂಲಕ ಸಂಚಲನವನ್ನೇ ಸೃಷ್ಟಿಸಿದೆ. ೧.೩ ಗಿಗಾಹರ್ಟ್ಸ್‌ನ ಪ್ರಾಸೆಸರ್, ನಾಲ್ಕು ಇಂಚಿನ ಸ್ಪರ್ಶಸಂವೇದಿ ಪರದೆ, ೧ ಜಿಬಿ ರ್‍ಯಾಮ್, ೮ ಜಿಬಿ ಶೇಖರಣಾ ಸಾಮರ್ಥ್ಯ, ೩.೨ ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹಾಗೂ ೦.೩ ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾಗಳಿರುವ ಈ ಫೋನಿನ ಮುಂಗಡ ಬುಕಿಂಗ್ ನಾಳೆ (ಫೆಬ್ರುವರಿ ೧೮, ೨೦೧೬) ಬೆಳಿಗ್ಗೆ ೬ರಿಂದ ಶುರುವಾಗಲಿದೆಯಂತೆ.

ಮಂಗಳವಾರ, ಫೆಬ್ರವರಿ 16, 2016

ಮಕ್ಕಳಿಗೊಂದು ಅರಿವಿನ ವೇದಿಕೆ

ರಂಗಸ್ವಾಮಿ ಮೂಕನಹಳ್ಳಿ

ಬೆಂಗಳೂರಿನ ವಸಂತ ಪ್ರಕಾಶನ ಸಂಸ್ಥೆ 'ಪುಸ್ತಕ ಮಹಲ್ ' ಪ್ರಕಾಶನ ಸಂಸ್ಥೆಯ ಸಹಭಾಗಿತ್ವದಲ್ಲಿ  'ಮಕ್ಕಳ ಜ್ಞಾನಕೋಶ'ವನ್ನು ನಾಲ್ಕು ಸಂಪುಟಗಳಲ್ಲಿ ಹೊರತರಲಿದೆ. ಆ ಪೈಕಿ ಮೊದಲೆರಡು ಸಂಪುಟಗಳು ಇದೀಗ ಮಾರುಕಟ್ಟೆಗೆ ಬಂದಿದ್ದು, ಉಳಿದೆರಡು ಸದ್ಯದಲ್ಲೇ ಸಹೃದಯರ ಕೈಸೇರಲಿದೆ .

ಮಂಜುಗಡ್ಡೆ ನೀರಿನ ಮೇಲೆ ಏಕೆ ತೇಲುತ್ತದೆ? ನಾಲಿಗೆಗೆ ರುಚಿ ಹೇಗೆ ತಿಳಿಯುತ್ತದೆ? ಆಹಾರವಿಲ್ಲದೆ ಮನಷ್ಯ ಎಷ್ಟು ದಿನ ಬದುಕಿರಬಹುದು? ಶುಷ್ಕ ಹಿಮ ಎಂದರೇನು? ವಿಶ್ವವು ಹೇಗೆ ಆಸ್ತಿತ್ವಕ್ಕೆ ಬಂತು? ಇಂಗ್ಲಿಷ್ ಭಾಷೆ ಹೇಗೆ ಜನ್ಮ ತಾಳಿತು? ನಮಗೇಕೆ ಜ್ವರ ಬರುತ್ತದೆ? ಜನ ಮೊದಲು ಹಣವನ್ನು ಬಳಸಿದ್ದು ಯಾವಾಗ? ಪೈ ಏಕೆ ವಿಶಿಷ್ಟ ಸಂಖ್ಯೆ? - ಹೀಗೆ ವಿಜ್ಞಾನ  ತಂತ್ರಜ್ಞಾನ, ಸಸ್ಯ, ಪ್ರಾಣಿ, ವಿಶ್ವ, ಅಂತರಿಕ್ಷ, ವೈದ್ಯಕೀಯ, ಪ್ರಕೃತಿ ಪರಿಸರ, ವ್ಯಕ್ತಿ, ಅನ್ವೇಷಣೆ ಎಲ್ಲವನ್ನೂ ಕುರಿತು ಮಕ್ಕಳ ಮನದಲ್ಲಿ ಮೂಡಬಹುದಾದ ಎಲ್ಲಾ ರೀತಿಯ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ.

ಗುರುವಾರ, ಫೆಬ್ರವರಿ 11, 2016

ಫೆಬ್ರುವರಿ ೧೧-೧೨: ಮೋಟೊರೋಲಾ ಫೋನುಗಳ ಮೇಲೆ ವಿಶೇಷ ರಿಯಾಯಿತಿ


ಲೆನೋವೋ ಜೊತೆಸೇರಿ ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಮೂರನೆಯ ಸ್ಥಾನ ಪಡೆದಿರುವ ಮೋಟೊರೋಲಾ ಫೋನುಗಳ ಮೇಲೆ ಫ್ಲಿಪ್‌ಕಾರ್ಟ್ ವಿಶೇಷ ರಿಯಾಯಿತಿಗಳನ್ನು ಘೋಷಿಸಿದೆ.

ಈ ಕೊಡುಗೆ ಮೋಟೊರೋಲಾ ಫೋನುಗಳು (ಮೋಟೋ ಇ೨, ಮೋಟೋ ಜಿ೩, ಮೋಟೋ ಜಿ ಟರ್ಬೋ, ಮೋಟೋ ಎಕ್ಸ್ - ಪ್ಲೇ, ಸ್ಟೈಲ್ ಹಾಗೂ ಫೋರ್ಸ್) ಹಾಗೂ ಸ್ಮಾರ್ಟ್‌ವಾಚುಗಳಿಗೆ (ಮೋಟೋ ೩೬೦ ೨ನೇ ತಲೆಮಾರು) ಅನ್ವಯಿಸುತ್ತದೆ.

ಮಂಗಳವಾರ, ಫೆಬ್ರವರಿ 9, 2016

ಎಲ್‌ಇಡಿ ಬೆಳಗೋಣ ಬನ್ನಿ!

ಇಜ್ಞಾನ ವಾರ್ತೆ

ಸಂಪನ್ಮೂಲಗಳನ್ನು ಜವಾಬ್ದಾರಿಯುತವಾಗಿ ಬಳಸುವ ಅಗತ್ಯ ಈಗ ಹಿಂದೆಂದಿಗಿಂತಲೂ ಹೆಚ್ಚಿದೆ. ಈ ನಿಟ್ಟಿನಲ್ಲಿ ಕೆಲವು ಸರಳ ಆದರೂ ಪರಿಣಾಮಕಾರಿಯಾದ ಕ್ರಮಗಳನ್ನು ನಾವೂ ಕೈಗೊಳ್ಳಬಹುದು. ವಿದ್ಯುತ್ ಬಳಕೆಯನ್ನು ಮಿತಗೊಳಿಸುವುದು ಇಂತಹ ಕ್ರಮಗಳಲ್ಲೊಂದು. ಇದನ್ನು ಸಾಧ್ಯವಾಗಿಸುವ ಒಂದು ಮಾರ್ಗ ಎಲ್‌ಇಡಿ ಬಲ್ಬುಗಳ ಬಳಕೆ [ಎಲ್ಲೆಲ್ಲೂ ಎಲ್‌ಇಡಿ]. ಎಲ್‌ಇಡಿ ಬಲ್ಬುಗಳು ಹೆಚ್ಚಿನ ಪ್ರಕಾಶ ನೀಡುವುದಷ್ಟೇ ಅಲ್ಲ, ಕಡಿಮೆ ವಿದ್ಯುತ್ ಬಳಸುವ ಮೂಲಕ ಜೇಬಿನ ಮೇಲಿನ ಒತ್ತಡವನ್ನೂ ಕಡಿಮೆಮಾಡುತ್ತವೆ!

ಈ ವಿಷಯ ಗೊತ್ತಿದ್ದರೂ ಎಲ್‌ಇಡಿ ಬಲ್ಬುಗಳ ದುಬಾರಿ ಬೆಲೆಯಿಂದಾಗಿ ಅನೇಕರು ಅವುಗಳಿಂದ ದೂರವೇ ಉಳಿದಿದ್ದರು. ಈಗ, ಕೇಂದ್ರ ಸರಕಾರದ 'ಡೊಮೆಸ್ಟಿಕ್ ಎಫೀಶಿಯೆಂಟ್ ಲೈಟಿಂಗ್ ಪ್ರೋಗ್ರಾಮ್ (ಡಿಇಎಲ್‌ಪಿ)' ದೆಸೆಯಿಂದ ಎಲ್‌ಇಡಿ ಬಲ್ಬುಗಳ ಬೆಲೆ ಕೈಗೆಟುಕುವ ಮಟ್ಟಕ್ಕೆ ಬಂದು ತಲುಪಿದೆ. ಈ ಕಾರ್ಯಕ್ರಮದನ್ವಯ ಒಂಬತ್ತು ವ್ಯಾಟ್‌ನ ಎಲ್‌ಇಡಿ ಬಲ್ಬುಗಳನ್ನು ತಲಾ ನೂರು ರೂಪಾಯಿಯಂತೆ ಬಳಕೆದಾರರಿಗೆ ತಲುಪಿಸಲಾಗುತ್ತಿದೆ. ಅದೂ ಅಂತಿಂಥ ಚೀನಾ ಮಾಲಲ್ಲ, ಹೆಸರಾಂತ ಸಂಸ್ಥೆಗಳು ತಯಾರಿಸುವ ಬಲ್ಬನ್ನೇ!

ಈ ಯೋಜನೆಯ ಹಿಂದಿರುವುದು ಭಾರತ ಸರಕಾರದ ಎನರ್ಜಿ ಎಫಿಶಿಯೆನ್ಸಿ ಸರ್ವೀಸಸ್ ಲಿಮಿಟೆಡ್ (ಇಇಎಸ್ಎಲ್) ಎಂಬ ಸಂಸ್ಥೆ.
badge