ಡಿಸೆಂಬರ್ ೨೧, ೨೦೧೩ರಂದು ನಡೆದ ಕನ್ನಡ ವಿಶ್ವವಿದ್ಯಾನಿಲಯದ ನುಡಿಹಬ್ಬದಲ್ಲಿ ನಾಗೇಶ ಹೆಗಡೆಯವರು ಮಾಡಿದ ಭಾಷಣದ ಪೂರ್ಣಪಾಠ
ಕನ್ನಡ ವಿಶ್ವವಿದ್ಯಾಲಯದ ಆವರಣಕ್ಕೆ ಬಂದಾಗಲೆಲ್ಲ ನಮ್ಮ ಮನಸ್ಸು ಪ್ರಫುಲ್ಲಿತವಾಗುತ್ತದೆ. ಇಲ್ಲಿನ ಬಂಡೆಗಳು, ಇಲ್ಲಿ ಮರುಹುಟ್ಟು ಪಡೆದ ಸಸ್ಯಗಳು, ಇಲ್ಲಿನ ಸಹಜ ನೈಸರ್ಗಿಕ ಸೌಂದರ್ಯ ಜತೆಜತೆಗೆ ಕನ್ನಡದ ಕಲೆ, ಸಂಸ್ಕೃತಿ ಪರಂಪರೆಗಳನ್ನು ಬಿಂಬಿಸುವ ಶಿಲ್ಪ, ವಾಸ್ತುಶಿಲ್ಪ -ಹೀಗೆ ಇಲ್ಲಿನ ಒಂದೊಂದೂ ಕನ್ನಡ ಲೋಕದ ಅನನ್ಯತೆಯನ್ನು ಮೆರೆಯುವ ಪ್ರತೀಕಗಳಾಗಿವೆ.
ನಮ್ಮಲ್ಲಿ ಎರಡು ಕನ್ನಡ ನಾಡುಗಳಿವೆ: ಒಂದು ಬೆಂಗಳೂರಿನ ಬಹಿರ್ಮುಖಿ ಕನ್ನಡ: 'ವಿಜ್ಞಾನದ ರಾಜಧಾನಿ' ಎಂದು ಕರೆಸಿಕೊಂಡು ವಿಶ್ವವನ್ನು ಬೆಸೆಯುವ ಕನ್ನಡ. ಅದು ಕಾರ್ಪೊರೇಟ್ ವಲಯಗಳ ಥಳಕಿನ ಕನ್ನಡ. ರಾಷ್ಟ್ರದ ನಾಯಕರು, ವಿದೇಶೀ ಗಣ್ಯರು, ಉದ್ಯಮಿಗಳನ್ನು ಆಕರ್ಷಿಸುವ ಕನ್ನಡ. ಅದು ನಂದನ ನೀಲೇಕಣಿಯವರನ್ನು, ಶಕುಂತಲಾ ದೇವಿಯವರನ್ನು, ದೇವಿಪ್ರಸಾದ್ ಶೆಟ್ಟಿಯವರನ್ನು, ಮಾಲತಿ ಹೊಳ್ಳರನ್ನು, ಅನಿಲ್ ಕುಂಬ್ಳೆಗಳನ್ನು, ಉಲ್ಲಾಸ ಕಾರಂತರನ್ನು, ಸಿಎನ್ಆರ್ ರಾವ್, ಯುಆರ್ ರಾವ್ರವರನ್ನು, ನಾರಾಯಣ ಮೂರ್ತಿ- ಅನಂತಮೂರ್ತಿಯಂಥವರನ್ನು ನಾಡಿನಾಚೆ ಪ್ರದರ್ಶಿಸುವ ಕನ್ನಡ. ಅದು ಕ್ಯಾಲಿಫೋರ್ನಿಯಾಕ್ಕೆ ಕಂಪ್ಯೂಟರ್ ಪರಿಣತರನ್ನು, ಬಾಹ್ಯಾಕಾಶಕ್ಕೆ ಉಪಗ್ರಹಗಳನ್ನು, ಮಂಗಳಲೋಕಕ್ಕೆ ಪ್ರೋಬ್ಗಳನ್ನೂ ಕಳಿಸಬಲ್ಲ ಧೀರರ ಕನ್ನಡ. ಅದು ಹೆಬ್ಬಾಗಿಲ ಕನ್ನಡ.
ಇನ್ನೊಂದು ಒಳಮನೆಯ ಕನ್ನಡ, ಅಂತರ್ಮುಖಿ ಕನ್ನಡ. ಈ ಒಳಮನೆಯ ಕನ್ನಡ ಏನಿದೆ ಅದು ನಮ್ಮ ಸ್ವಂತದ ಕನ್ನಡ. ಅಲ್ಲಿ ಹಾಡು ಹಸೆಗಳಿವೆ. ಲಾವಣಿ ಪದ್ಯಗಳಿವೆ, ವಚನಗಳಿವೆ, ದಾಸರ ಪದಗಳಿವೆ, ಹಸೆ ಚಿತ್ರಗಳಿವೆ, ಕಾಷ್ಠಶಿಲ್ಪಗಳಿವೆ, ಗುಮಟೆ ಪಾಂಗುಗಳಿವೆ, ಪಣತ, ಹಗೇವು, ಬೀಸುಗಲ್ಲು, ಮನೆಮದ್ದುಗಳಿವೆ, ಕಜ್ಜಾಯ- ಕಷಾಯಗಳಿವೆ. ಅದು ರೈತ ಮಕ್ಕಳ, ಬುಡಕಟ್ಟಿನವರ ಖಾಸಾ ಕನ್ನಡ. ಅದು ಜಾಯಮಾನದ ಕನ್ನಡ.
ಈ ಒಳಮನೆಯ ಕನ್ನಡದ ಉಸ್ತುವಾರಿಯ, ಪರಿಚಾರಿಕೆಯ ಕೆಲಸ ಮಾಡುವ ಕನ್ನಡ ವಿಶ್ವವಿದ್ಯಾಲಯ ನಮ್ಮೆಲ್ಲರ ಹೆಮ್ಮೆಯ ಸಂಸ್ಥಾನವೆನಿಸಿದೆ. ಕನ್ನಡ ಜ್ಞಾನ ಮತ್ತು ಕೌಶಲ ಪರಂಪರೆಯನ್ನು ಕೆಡದಂತೆ ಕಾಯುವ ಉತ್ತಮ ಕೆಲಸವನ್ನು ಅದು ಮಾಡುತ್ತಿದೆ. ಜ್ಞಾನಪರಂಪರೆಯಲ್ಲಿ, ನಮ್ಮ ಜನಪದದಲ್ಲಿ ಅಂತಸ್ಥವಾಗಿದ್ದ ದೇಸೀ ವಿಜ್ಞಾನವನ್ನು ಹುಡುಕಿ ತೆಗೆಯುವ, ಸಂಸ್ಕರಿಸಿ ಮತ್ತೆ ಪುಟಕ್ಕಿಡುವ ಕೆಲಸವನ್ನು ಕನ್ನಡ ವಿಶ್ವವಿದ್ಯಾಲಯ ಹೊಸದಾಗಿ ಈ ವರ್ಷ ಆರಂಭಿಸುತ್ತಿದೆ.
ಅದು ಹೊಸದಾಗಿದ್ದರಿಂದ ನಾಲ್ಕು ಮಾತು ಹೇಳಬೇಕಾಗಿದೆ.