ಪ್ರತಿ ವರ್ಷ ಫೆಬ್ರವರಿ ೨೮ನೇ ದಿನಾಂಕವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನದ ಕುರಿತು ಫೆ. ೨೬ರ ಪ್ರಜಾವಾಣಿಯಲ್ಲಿ ಪ್ರಕಟವಾದ ನಾಗೇಶ ಹೆಗಡೆಯವರ ಈ ಬರಹವನ್ನು ಲೇಖಕರ ಅನುಮತಿಯೊಡನೆ ಇಲ್ಲಿ ಪ್ರಕಟಿಸುತ್ತಿದ್ದೇವೆ.ನಾಗೇಶ ಹೆಗಡೆ
ನಮ್ಮ ದೇಶದಲ್ಲಿ ಪ್ರತಿದಿನ ಸುಮಾರು ೧೩೦೦ ಜನರು ಕ್ಷಯರೋಗದಿಂದ ಸಾವನ್ನಪ್ಪುತ್ತಿದ್ದಾರೆ. ಮಲೇರಿಯಾದಿಂದ ನಿತ್ಯವೂ ಸರಾಸರಿ ೩೨೫ ಜನರು ಇಹಲೋಕ ತ್ಯಜಿಸುತ್ತಿದ್ದಾರೆ. ಏಡ್ಸ್ ಸಾವು ಇನ್ನೂರರ ಆಸುಪಾಸು ಇದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ ಭೇದಿ- ಅತಿಸಾರದಿಂದ- (ಡಯಾರಿಯಾ) ಸುಮಾರು ಒಂದು ಸಾವಿರ ಮಕ್ಕಳು ಪ್ರತಿದಿನವೂ ಸಾಯುತ್ತಿದ್ದಾರೆ. ಒಂದು ಸಾವಿರ! ಆ ಯಾವವೂ ನಮಗೆ ಲೆಕ್ಕಕ್ಕಿಲ್ಲ. ಆದರೆ ಪ್ರತಿದಿನ ಸರಾಸರಿ ೨೦ ರೋಗಿಗಳ ಪ್ರಾಣ ಹೀರುತ್ತಿರುವ ಹಂದಿಜ್ವರದ ಬಗ್ಗೆ ಮಾತ್ರ ಹುಯಿಲು ಹೆಚ್ಚುತ್ತಿದೆ. ಕಳೆದ ಒಂದು ತಿಂಗಳಲ್ಲಿ ೬೦೦ ದಾಟಿತು,೭೦೦ ದಾಟಿತು, ೮೦೦ನ್ನೂ ದಾಟಿತು ಎಂದು ದಿಗಿಲುಗೊಳಿಸುವ ವರದಿಗಳು ಬರುತ್ತಿವೆ. ‘ರೋಗಪೀಡಿತರ ಸಂಖ್ಯೆ ೧೪ ಸಾವಿರ ತಲುಪಿದೆ’ ಎಂದು ಮೊನ್ನೆ ಸಂಸತ್ತಿನಲ್ಲೂ ಸಚಿವರು ಘೋಷಿಸಿದ್ದಾರೆ. ಬೇಕೆಂದಷ್ಟು ಲಸಿಕೆ ಮಾತ್ರೆ, ಮುಖವಾಡ ಎಲ್ಲ ಕಡೆ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆಯಂತೆ. ಔಷಧ ಕಂಪೆನಿಗಳು ತಮ್ಮ ಮುಖವಾಡದ ಹಿಂದೆ ಮುಸುಮುಸು ನಗುತ್ತಿರಬಹುದು.
ಕಂಗಾಲಾಗುವ ಸುದ್ದಿಯನ್ನೇ ಎಲ್ಲರೂ ಬಯಸುವ ಕಾಲ ಇದು. ಆದರೆ ಈ ಜ್ವರಕ್ಕೆ ಅಷ್ಟೊಂದು ಕಂಗಾಲು ಬೇಕಾಗಿಲ್ಲ. ಹಿಂದೆಲ್ಲ ಇದು ಬರೀ ‘ಫ್ಲೂ’ ಅಥವಾ ‘ಇನ್ಫ್ಲುಯೆಂಝಾ’ ಹೆಸರಲ್ಲಿ ಬರುತ್ತಿತ್ತು. ಅಂಥ ಪ್ರಾಣಾಂತಿಕ ಏನಲ್ಲ. ಹಂದಿಗಳಿಗೂ ಬೆದರಬೇಕಾಗಿಲ್ಲ. ಜ್ವರ ಬಂದ ಹಂದಿಗಳಿಂದ ನಮಗೆ ಸೋಂಕು ತಗುಲುವುದು ಇಲ್ಲವೇ ಇಲ್ಲವೆಂಬಷ್ಟು ಅಪರೂಪ. ಅಕಸ್ಮಾತ್ ತಗುಲಿದರೂ ಆ ಒಬ್ಬರಿಂದ ಇನ್ನೊಬ್ಬ ವ್ಯಕ್ತಿಗೆ ದಾಟುವುದು ಇನ್ನೂ ಅಪರೂಪ. ಯಾವುದೋ ದೇಶದಲ್ಲಿ ಹೇಗೋ ಇಬ್ಬರ ದೇಹದಲ್ಲಿ ಹೊಕ್ಕು -ಹೊರಟ ಹಂದಿ ವೈರಸ್ ತುಸು ಹೊಸರೂಪ ಧರಿಸಿ, ಒಬ್ಬರಿಂದೊಬ್ಬರಿಗೆ ದಾಟಲು ಕಲಿತಿರುತ್ತದೆ. ಅಲ್ಲಿಂದ ಮುಂದೆ ಅದು ಸಾಂಕ್ರಾಮಿಕ ಎನಿಸುತ್ತದೆ. ಈಗ ಅಂಥದೊಂದು ಸಾಂಕ್ರಾಮಿಕ ಎಲ್ಲಿಂದಲೋ ಇಲ್ಲಿಗೆ ಬಂದಿದೆ. ತಾನಾಗಿ ಬಂತೋ ಅಥವಾ ಬೇಕಂತಲೇ ತಂದಿದ್ದೊ ಗೊತ್ತಿಲ್ಲ.