ಬುಧವಾರ, ಜೂನ್ 29, 2016

ಮನುಷ್ಯನೇಕೆ ಇಷ್ಟು ಬುದ್ಧಿವಂತ ಪ್ರಾಣಿ?

ಕೊಳ್ಳೇಗಾಲ ಶರ್ಮ

ಈ ವಿಶ್ವದಲ್ಲಿ ಇರುವ ಅತ್ಯಂತ ವಿಚಿತ್ರ ಪ್ರಾಣಿ ಯಾವುದು ಗೊತ್ತೇ? ಅದೇ ನಾವು. ನಾವು ಮನುಷ್ಯರಲ್ಲಿ ಇತರೆ ಪ್ರಾಣಿಗಳಿಗಳಿಗಿಲ್ಲದ ಎಷ್ಟೊಂದು ವಿಶೇಷ ಗುಣಗಳಿವೆ ಎಂದರೆ ಬಹುಶಃ ನಮ್ಮನ್ನು ಬೇರಾವುದೋ ಗ್ರಹದ ಜೀವಿಯಿರಬಹುದು ಎಂದು ವರ್ಗೀಕರಿಸಿದರೂ ತಪ್ಪಿಲ್ಲ. ಬೇರಾವುದೋ ಪ್ರಾಣಿ ಯಾಕೆ, ಮನುಷ್ಯನ ಕುಟುಂಬಕ್ಕೇ ಸೇರಿದ ವಾನರಗಳಿಗೂ ನಮಗೂ ಅಜಗಜಾಂತರ ವ್ಯತ್ಯಾಸವಿದೆ. ಎದ್ದು ಕಾಣುವ ಕೆಲವು ವ್ಯತ್ಯಾಸಗಳೆಂದರೆ ನಿರರ್ಗಳ ಮಾತು, ಸಂವಹನ ಕಲೆ, ಸಹಕಾರಿ ಪ್ರವೃತ್ತಿ, ಶಿಶುಪಾಲನೆಯ ಗುಣ, ನೇರ ನಡೆ ಮತ್ತು ಕುಶಲ ಬುದ್ಧಿವಂತಿಕೆ. ಇಷ್ಟೊಂದು ವಿಶಿಷ್ಟ ಗುಣಗಳು ಮಾನವನಿಗಷ್ಟೆ ಬಂದದ್ದೇಕೆ ಎನ್ನುವುದರ ಬಗ್ಗೆ ವಿಜ್ಞಾನಿಗಳಿಗೆ ಅವಿರತ ಕುತೂಹಲ. ಏಕೆಂದರೆ ಈ ಗುಣಗಳಿಂದಾಗಿಯೇ ಮನುಷ್ಯ ಇರುವುದೊಂದೇ ಪ್ರಪಂಚವನ್ನು ಆಳುವಷ್ಟು ಪ್ರಬಲನಾಗಿದ್ದಾನೆ ಎನ್ನಬಹುದು.

ಮತ್ತೊಂದು ದೃಷ್ಟಿಯಿಂದಲೂ ಮನುಷ್ಯ ಬಲು ವಿಶಿಷ್ಟ. ಇಡೀ ವಿಶ್ವವನ್ನೇ ಆಳುವ ಏಕೈಕ ಪ್ರಾಣಿಯೆನ್ನಿಸಿಕೊಂಡಿದ್ದರೂ ಇವನೇನು ಮಹಾ ಬಲಶಾಲಿಯಲ್ಲ.

ಸೋಮವಾರ, ಜೂನ್ 27, 2016

ಲೈಟ್ಸ್! ಆಕ್ಷನ್!! ಕ್ಯಾಮೆರಾ!!!

ಟಿ. ಜಿ. ಶ್ರೀನಿಧಿ 


ಪ್ರವಾಸ ಹೊರಟಾಗ ಜೊತೆಯಲ್ಲಿ ಕ್ಯಾಮೆರಾ ಕೊಂಡೊಯ್ಯುವ ಅಭ್ಯಾಸ ನಮಗೆಲ್ಲ ಗೊತ್ತಿರುವುದೇ. ಹೋದ ಜಾಗ, ಅಲ್ಲಿ ಕಂಡ ದೃಶ್ಯಗಳನ್ನೆಲ್ಲ ಛಾಯಾಚಿತ್ರ ಅಥವಾ ವೀಡಿಯೋ ರೂಪದಲ್ಲಿ ಸೆರೆಹಿಡಿದಿಟ್ಟುಕೊಳ್ಳಲು - ನೆನಪುಗಳನ್ನು ರೂಪಿಸಿಕೊಳ್ಳಲು ಈ ಅಭ್ಯಾಸ ನೆರವಾಗುತ್ತದೆ.

ಮೈಸೂರು ಅರಮನೆಯ ಮುಂದೆ ನಿಂತು, ತಾಜಮಹಲ್ ಎದುರಿನ ಬೆಂಚಿನ ಮೇಲೆ ಕುಳಿತು ಫೋಟೋ ತೆಗೆಸಿಕೊಳ್ಳುವುದು ಸುಲಭ. ಅಂತಹ ಸಂದರ್ಭಗಳಲ್ಲಿ ಮೊಬೈಲ್ ಕ್ಯಾಮೆರಾ ಅಷ್ಟೇ ಏಕೆ, ಇಷ್ಟುದ್ದ ಲೆನ್ಸಿನ ಭಾರೀ ಡಿಎಸ್‌ಎಲ್‌ಆರ್ ಬೇಕಾದರೂ ಜೊತೆಗಿಟ್ಟುಕೊಂಡಿರಬಹುದು.

ಆದರೆ ಕೆಲ ಸಂದರ್ಭಗಳಲ್ಲಿ ಫೋಟೋ ಕ್ಲಿಕ್ಕಿಸಲು ಅದೆಷ್ಟೇ ಆಸೆಯಾಗುತ್ತಿದ್ದರೂ ಕ್ಯಾಮೆರಾ ಹಿಡಿಯುವುದೇ ಸಾಧ್ಯವಾಗುವುದಿಲ್ಲ. ಬೆಟ್ಟದ ಮೇಲೆ ಕಡಿದಾದ ಹಾದಿಯಲ್ಲಿ ನಡೆಯುವುದೇ ಕಷ್ಟವಾದಾಗ ಕ್ಯಾಮೆರಾ ಹಿಡಿಯುವುದಾದರೂ ಹೇಗೆ? ಅದೂ ಒಂದೊಮ್ಮೆ ಸಾಧ್ಯವಾಗಬಹುದೇನೋ. ಆದರೆ ವಿಶ್ವದ ಅತಿ ಎತ್ತರದ ಹೆದ್ದಾರಿಯಲ್ಲಿ ಬೈಕು ಓಡಿಸುವಾಗ, ಹಾರುವ ವಿಮಾನದಿಂದ ಸ್ಕೈ‌ಡೈವಿಂಗ್ ಮಾಡುವಾಗ, ಸಮುದ್ರದಾಳದಲ್ಲಿ ಹವಳಗಳನ್ನು ನೋಡುವಾಗಲೆಲ್ಲ ಫೋಟೋ ತೆಗೆಯಬೇಕೆಂದರೆ??

ಶನಿವಾರ, ಜೂನ್ 25, 2016

ಯಾವ ಸ್ವರ್ಗದ ಹೂವೋ ಈ ಟೆರೆನ್ಸ್ ಟಾವೋ!

ರೋಹಿತ್ ಚಕ್ರತೀರ್ಥ


ಅಡಿಲೇಡ್ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಸ್ನಾತಕೋತ್ತರ ಗಣಿತ ತರಗತಿ. ಕ್ಯಾಲ್ಕುಲಸ್ಸಿನ ಮೇಲೆ ಯಾವುದೋ ಗಹನ ಪ್ರಶ್ನೆಯನ್ನು ಪ್ರೊಫೆಸರ್ ಬೋರ್ಡಿನ ಮೇಲೆ ಬಿಡಿಸುತ್ತಿದ್ದಾರೆ. ಗಣಿತದ ಸಿಕ್ಕುಸಿಕ್ಕಾದ ಸಾಲುಗಳನ್ನು ಒಡೆಯುತ್ತ ಒಂದೊಂದು ಹೆಜ್ಜೆ ಮುಂದುವರಿಯುತ್ತಲೇ ಅವರಿಗೆ ಹಾದಿ ತಪ್ಪಿದ ಅರಿವಾಗಿದೆ. ಜಿಂಕೆಯ ಹಿಂದೆ ಹೋಗಿ ದಾರಿ ತಪ್ಪಿದ ದುಷ್ಯಂತನಂತೆ ಬೆಪ್ಪಾಗಿ ನಿಂತಿದ್ದಾರೆ. ಅವರ ಲೆಕ್ಕದ ತಲೆಬುಡ ಅರ್ಥವಾಗದಿದ್ದರೂ ವಿದ್ಯಾರ್ಥಿಗಳು ಈ ಶೋಕದಲ್ಲಿ ನಾವೂ ಭಾಗವಹಿಸಬೇಕು ಎನ್ನುವಂತೆ ಜೋಲುಮುಖ ಮಾಡಿ ಕೂತಿದ್ದಾರೆ. ಅಷ್ಟರಲ್ಲಿ ಆ ನೀರವ ಮೌನವನ್ನು ಸೀಳಿಕೊಂಡು ಒಂದು ಪುಟಾಣಿ ಕೀರಲು ದನಿ ಬಂದಿದೆ. ಆ ಚೋಟುದ್ದದ ಹುಡುಗ ಎದ್ದುನಿಂತು ಗುರುಗಳು ಎಲ್ಲಿ ತಪ್ಪಿದ್ದಾರೆ ಎನ್ನುವುದನ್ನು ಕರಾರುವಾಕ್ಕಾಗಿ ತೋರಿಸಿ, ಮುಂದಿನ ಸಾಲುಗಳನ್ನು ಹೇಗೆ ಬರೆದರೆ ಈ ತೊಂದರೆಯಿಂದ ಪಾರಾಗಬಹುದು ಎನ್ನುವ ದಾರಿ ತೋರುತ್ತಾನೆ. ಕ್ಷಣಕಾಲ ಎಲ್ಲವನ್ನೂ ಮರೆತು ಅವನ ಮುಖವನ್ನೇ ನೆಟ್ಟದೃಷ್ಟಿಯಿಂದ ನೋಡುವ ಗುರುಗಳು "ವಾಹ್! ಎಂತಹ ಸುಂದರ ಪರಿಹಾರ! ಮತ್ತದಕ್ಕೆ ಎಷ್ಟೊಂದು ಅರ್ಥಪೂರ್ಣವಾದ ನಿರೂಪಣೆ!" ಎಂದು ಮನದುಂಬಿ ಹೇಳಿ ಚಪ್ಪಾಳೆ ತಟ್ಟಿಯೇಬಿಡುತ್ತಾರೆ. ಹುಡುಗನಿಗೆ ಕ್ಲಾಸಿನ ಮುಂದೆ ದೊಡ್ಡವನಾದೆನೆಂಬ ಮುಜುಗರ, ಹಿತವಾದ ರೋಮಾಂಚನ, ಎದೆಯಲ್ಲಿ ಖುಷಿಯ ತಬಲ.

ಯಾಕೆಂದರೆ ಅವನಿಗಿನ್ನೂ ಆಗ, ನಂಬಿದರೆ ನಂಬಿ, ಕೇವಲ ಒಂಬತ್ತು ವರ್ಷ!

ಮಂಗಳವಾರ, ಜೂನ್ 21, 2016

ಮೀನಿನ ಬ್ಯಾಟರಿ!

ಕೊಳ್ಳೇಗಾಲ ಶರ್ಮ


ಈ ವಾರ ಮೀನಿನದ್ದೇ ಸುದ್ದಿ. ಮೊನ್ನೆ ನಮ್ಮೂರ ಐಯಂಗಾರ್ ಬೇಕರಿಯಲ್ಲಿಯೂ ಮಂಗಳೂರಿನಿಂದ ಮೀನಿನ ಸರಬರಾಜು ಕಡಿಮೆಯಾಗಿರುವ ಬಗ್ಗೆ ಭಯಂಕರ ಚರ್ಚೆ ನಡೆದಿತ್ತು. ಈ ವರ್ಷ ಮಳೆರಾಯ ಕಾಲಿಡಲು ಹಿಂಜರಿಯುತ್ತಿರುವ ಕಾರಣ ಕಡಲಮೀನಿನ ಸಂತತಿಯೂ ಕಡಿಮೆಯಾಗಿದೆ ಎನ್ನುವುದು ಚರ್ಚೆ. ಇದರ ಬೆನ್ನಲ್ಲೇ ಇನ್ನೊಂದು ಸುದ್ದಿ. ಮೀನುಗಳು ಮನುಷ್ಯರ ಮುಖಚರ್ಯೆಯನ್ನು ಗುರುತಿಸಬಲ್ಲುವಂತೆ. ಅಂದರೆ ಅವು ನಮ್ಮನ್ನೂ, ನಿಮ್ಮನ್ನೂ ಬೇರೆ ಬೇರೆ ವ್ಯಕ್ತಿಗಳೆಂದು ಗುರುತಿಸಬಲ್ಲವು ಎನ್ನುವ ಸುದ್ದಿ. ಇದಷ್ಟೇ ಸಾಲದು ಎನ್ನುವಂತೆ ಇನ್ನೊಂದು ಸುದ್ದಿಯೂ ಬಂದಿದೆ. ಅದೆಂದರೆ ನಮ್ಮ, ನಿಮ್ಮ ಮೊಬೈಲು ಫೋನುಗಳನ್ನು ಚಾಲಿಸುವಂತಹ ಬ್ಯಾಟರಿ ತಯಾರಿಸುವುದು.

ಷಾಕ್ ಆಯಿತೇ! ಇದೇನು ‘ನಾನ್-ವೆಜ್’ ಬ್ಯಾಟರಿ ಎಂದಿರಾ?

ಸೋಮವಾರ, ಜೂನ್ 20, 2016

ವಿಜ್ಞಾನಲೋಕಕ್ಕೆ ಹತ್ತರ ಹರ್ಷ

ಟಿ. ಜಿ. ಶ್ರೀನಿಧಿ

ವಿಜ್ಞಾನ-ತಂತ್ರಜ್ಞಾನಗಳ ವಿಷಯಕ್ಕೆ ಬಂದರೆ ಅವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದು. ಆದರೆ ಮುಖ್ಯವಾಹಿನಿಯ ಪತ್ರಿಕೆಗಳಲ್ಲಿ ಈ ವಿಷಯಕ್ಕೆ ಎಷ್ಟು ತಾನೇ ಜಾಗ ನೀಡಲು ಸಾಧ್ಯ?

ಹಾಗೆಂದು ಸುಮ್ಮನಿರುವುದೂ ಸಾಧ್ಯವಿಲ್ಲವಲ್ಲ! ಈ ಕೊರತೆಯನ್ನು ತುಂಬಿಕೊಡಲು ವಿಜ್ಞಾನ ಪತ್ರಿಕೆಗಳು ಪ್ರಯತ್ನಿಸುತ್ತವೆ. ಸಾಮಾನ್ಯ ಪತ್ರಿಕೆಗಳಿಗಿಂತ ಹೆಚ್ಚು ಪ್ರಮಾಣದ ಮಾಹಿತಿಯನ್ನು ಆದಷ್ಟೂ ಹೆಚ್ಚು ವಿವರಗಳೊಡನೆ ನೀಡುವ ಸಾಧ್ಯತೆ ಈ ಪತ್ರಿಕೆಗಳ ವೈಶಿಷ್ಟ್ಯ. ವಿಷಯ ಕ್ಲಿಷ್ಟವೆಂದು ಸಾಮಾನ್ಯ ಪತ್ರಿಕೆಗಳಲ್ಲಿ ಜಾಗಪಡೆಯದ ಸಂಗತಿಗಳನ್ನೂ ಇವು ಓದುಗರಿಗೆ ತಲುಪಿಸಬಲ್ಲವು.

ಕನ್ನಡದಲ್ಲಿ ಅನೇಕ ವಿಜ್ಞಾನ ಪತ್ರಿಕೆಗಳು ಬಂದುಹೋಗಿವೆ. ಒಂದು ಶತಮಾನದಷ್ಟು ಹಿಂದೆ ಬೆಳ್ಳಾವೆ ವೆಂಕಟನಾರಣಪ್ಪನವರು ಪ್ರಾರಂಭಿಸಿ ನಡೆಸಿದ 'ವಿಜ್ಞಾನ'ದಿಂದ ಇತ್ತೀಚಿನವರೆಗೂ ಅನೇಕ ಪತ್ರಿಕೆಗಳು ಕನ್ನಡದ ಓದುಗರನ್ನು ತಲುಪಲು ಪ್ರಯತ್ನಿಸಿವೆ.

ಗುರುವಾರ, ಜೂನ್ 16, 2016

ಹೀಗೊಂದು ಗಣಿತದ ಕತೆ: ಶಿಷ್ಯರ ಬುದ್ಧಿವಂತಿಕೆ

ರೋಹಿತ್ ಚಕ್ರತೀರ್ಥ

ಛಲ ಬಿಡದ ತ್ರಿವಿಕ್ರಮನು, ಮತ್ತೆ, ಆ ಹಳೇ ಮರದ ಕೊಂಬೆಗೆ ಹಾರಿಹೋಗಿ ತಲೆಕೆಳಗಾಗಿ ನೇತುಬಿದ್ದಿದ್ದ ಬೇತಾಳವನ್ನು ಇಳಿಸಿ ಬೆನ್ನಿಗೆ ಹಾಕಿಕೊಂಡು ಕಾಡಿನ ದಾರಿಯಲ್ಲಿ ನಡೆಯತೊಡಗಿದನು. ಆಗ ಬೇತಾಳವು, "ರಾಜಾ, ಮರಳಿ ಯತ್ನವ ಮಾಡು ಎಂಬ ಮಾತಿನಲ್ಲಿ ನೂರಕ್ಕೆ ನೂರರಷ್ಟು ನಂಬಿಕೆ ಇಟ್ಟು ದೃಢ ಮನಸ್ಸಿನಿಂದ ಕೆಲಸ ಮಾಡುತ್ತಿರುವ ನಿನ್ನ ಅವಸ್ಥೆಯನ್ನು ಕಂಡಾಗ ಮೆಚ್ಚುಗೆಯೂ ಕನಿಕರವೂ ಒಟ್ಟಿಗೇ ಮೂಡುತ್ತವೆ. ಒಂದೇ ಕೆಲಸವನ್ನು ಮತ್ತೆಮತ್ತೆ ಮಾಡುವ ಸಂದರ್ಭ ಬಂದಾಗ, ಅದನ್ನು ಸರಳಗೊಳಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆಯಾದರೂ ನೀನು ಯೋಚಿಸುವುದು ಬೇಡವೇ? ಅದಕ್ಕೆ ತಕ್ಕ ಹಾಗೆ ಒಂದು ಕತೆ ನನಗೆ ನೆನಪಾಗುತ್ತಿದೆ. ಗಮನವಿಟ್ಟು ಕೇಳು" ಎಂದು ತನ್ನ ಕತೆಯ ಬುಟ್ಟಿ ಬಿಚ್ಚಿತು.

ಅದು ಮೂರನೇ ತರಗತಿ. ಕ್ಲಾಸಿನೊಳಗೆ ಬಂದ ಮೇಸ್ಟ್ರಿಗೆ ಅಂದೇಕೋ ಮಹಾಜಾಡ್ಯ ಆವರಿಸಿದಂತಿದೆ. ಈ ಮಕ್ಕಳಿಗೆ ಸುಲಭಕ್ಕೆ ಬಿಡಿಸಲಾಗದ ಲೆಕ್ಕ ಕೊಟ್ಟು ಅರ್ಧ-ಮುಕ್ಕಾಲು ಗಂಟೆ ಒದ್ದಾಡಿಸಿಬಿಟ್ಟರೆ ತನ್ನ ಪೀರಿಯಡ್ಡು ಮುಗಿಯುತ್ತದೆ ಎಂಬ ಹಂಚಿಕೆ ಹಾಕಿದವರೇ "ಒಂದರಿಂದ ನೂರರವರೆಗಿನ ಎಲ್ಲ ಸಂಖ್ಯೆಗಳ ಮೊತ್ತ ಎಷ್ಟು ಹುಡುಕಿ ನೋಡುವಾ" ಎಂದು ಸವಾಲು ಹಾಕಿ ಕುರ್ಚಿಯಲ್ಲಿ ಸುಖಾಸೀನರಾಗಿದ್ದಾರೆ. ಮೇಸ್ಟ್ರು ಕಾಲ ಅಂಗುಷ್ಠದಲ್ಲಿ ಹೇಳಿದ್ದನ್ನು ಭಕ್ತಿಯಿಂದ ಶಿರಸಾವಹಿಸಿ ಮಾಡುವ ಮಕ್ಕಳು ಕೂಡಲೇ ಹಲಗೆ ಬಳಪ ಎತ್ತಿಕೊಳ್ಳುತ್ತಾರೆ. ತಮ್ಮ ಶಕ್ತ್ಯಾನುಸಾರ ಪ್ರಶ್ನೆಯ ಚಕ್ರವ್ಯೂಹವನ್ನು ಭೇದಿಸಲು ಸನ್ನದ್ಧರಾಗುತ್ತಾರೆ.

ಮಂಗಳವಾರ, ಜೂನ್ 14, 2016

ಸೀನಿನ ಲೆಕ್ಕಾಚಾರ!

ಕೊಳ್ಳೇಗಾಲ ಶರ್ಮ


ನಾನು ಸೀನಿದಾಗಲೆಲ್ಲ ಕೇಳುತ್ತಿದ್ದ ಮಾತು. “ಅಯ್ಯೋ. ಒಂಟಿ ಸೀನು ಸೀನಿಬಿಟ್ಟೆಯಲ್ಲೋ? ಇನ್ನೊಂದು ಸೀನು ಸೀನಿಬಿಡು.” ಇದು ಅಮ್ಮ ಸೀನಿನಿಂದ ನಾನು ಪಡುತ್ತಿದ್ದ ಅವಸ್ಥೆಯನ್ನು ಕಂಡು ತಮಾಷೆ ಮಾಡಲು ಹೇಳುತ್ತಿದ್ದಳೋ, ಅಥವಾ ಸೀನಿದ್ದರಿಂದಾದ ಮುಜುಗರ ಕಡಿಮೆಯಾಗುವಂತೆ ಸಮಾಧಾನ ಮಾಡಲು ಹೇಳುತ್ತಿದ್ದಳೋ ಗೊತ್ತಿಲ್ಲ. ಒಟ್ಟಾರೆ ಸೀನುವುದು ಎಂದರೆ ಕಸಿವಿಸಿಯ ವಿಷಯ ಎನ್ನುವುದಂತೂ ಮನಸ್ಸಿನಲ್ಲಿ ಗಟ್ಟಿಯಾಗಿ ನೆಲೆಯಾಗಿ ಬಿಟ್ಟಿದೆ. ಅಮ್ಮ ಏನೋ ಇನ್ನೊಮ್ಮೆ ಸೀನು ಎಂದು ಬಿಡುತ್ತಿದ್ದಳು. ಆದರೆ ಹಾಗೆ ಬೇಕೆಂದ ಹಾಗೆ, ಬೇಕಾದಷ್ಟು ಬಾರಿ ಸೀನಲು ಆದೀತೇ? ಅದೇನು ನಮ್ಮ ಮಾತು ಕೇಳುವ ವಿದ್ಯಮಾನವೇ?

ಹೀಗೆಂದು ನಾವು ನೀವು ಹೇಳಿಬಿಡಬಹುದು. ಆದರೆ ಅಮೆರಿಕದ ತಂತ್ರಜ್ಞಾನದ ಕಾಶಿ ಮಸ್ಯಾಚುಸೆಟ್ಸ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಯಲ್ಲಿ ಭೌತವಿಜ್ಞಾನಿಯಾಗಿರುವ ಲಿಡಿಯಾ ಬೋರೊಯಿಬಾ ಹೀಗೆನ್ನುವುದಿಲ್ಲ. ಹಾಗಂತ ಆಕೆಗೆ ಸದಾ ಸೀನುವ ಖಾಯಿಲೆ ಇದೆ ಎನ್ನಬೇಡಿ. ಆಕೆ ಸೀನಿನ ಭೌತಶಾಸ್ತ್ರವನ್ನು ಲೆಕ್ಕ ಹಾಕುತ್ತಿರುವ ವಿಜ್ಞಾನಿ ಅಷ್ಟೆ. ಬೇಕೆಂದಾಗ ನಿಮಗೆ ಸೀನು ತರಿಸಿ, ನೀವು ಸೀನುವ ಸಂದರ್ಭದಲ್ಲಿ ನಡೆಯುವ ವಿದ್ಯಮಾನವನ್ನು ಕೂಲಂಕಷವಾಗಿ ಲೆಕ್ಕಾಚಾರ ಹಾಕುವ ಕೆಲಸದಲ್ಲಿ ಲಿಡಿಯಾ ನಿರತೆ. ಈಕೆಯ ಪ್ರಕಾರ ಸೀನುವ ಬಗ್ಗೆ ನಮಗೆ ಹೆಚ್ಚೇನೂ ತಿಳಿದಿಲ್ಲವಂತೆ.

ನಿಜ. ಮೂಗಿಗೆ ಒಂದಿಷ್ಟು ಕಿರಿಕಿರಿಯಾದಾಗ ಫಟಾರನೆ ಆಗುವ ಮಹಾಸ್ಫೋಟವೇ ಸೀನು.

ಬುಧವಾರ, ಜೂನ್ 8, 2016

ಗ್ಯಾಜೆಟ್ ಇಜ್ಞಾನ: ಹೊಸ ಲೆನೋವೋ‌ ಫೋನ್ ಸದ್ಯದಲ್ಲೇ ಮಾರುಕಟ್ಟೆಗೆ

ಟಿ. ಜಿ. ಶ್ರೀನಿಧಿ



ಅಪ್‌ಡೇಟ್: ಲೆನೋವೋ ವೈಬ್ K5 ರೂ. ೬,೯೯೯ರ ಮುಖಬೆಲೆಯೊಡನೆ ಬಿಡುಗಡೆಯಾಗಿದೆ. 

ಈಚಿನ ದಿನಗಳಲ್ಲಿ ನಮ್ಮ ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುವೇ ಇಲ್ಲ. ಹಲವು ಮೊಬೈಲ್ ನಿರ್ಮಾತೃಗಳ ಹತ್ತಾರು ಮಾದರಿಯ ಹೊಸ ಫೋನುಗಳು ಸದಾಕಾಲ ಸುದ್ದಿಮಾಡುತ್ತಲೇ ಇರುತ್ತವೆ.

ಈ ಬಿಡುವಿಲ್ಲದ ಚಟುವಟಿಕೆಯಿಂದಾಗಿ ಮೊಬೈಲ್ ಗ್ರಾಹಕರಿಗೆ ಲಭ್ಯವಿರುವ ಆಯ್ಕೆಗಳು ದಿನೇದಿನೇ ಹೆಚ್ಚುತ್ತಿವೆ. ಅಷ್ಟೇ ಅಲ್ಲ, ಮೊಬೈಲಿನಲ್ಲಿ ದೊರಕುವ ಸೌಲಭ್ಯಗಳೂ ಹೆಚ್ಚುತ್ತಿವೆ. ಮೊದಲಿಗೆ ದುಬಾರಿ ಫೋನುಗಳಲ್ಲಷ್ಟೆ ಕಾಣಿಸಿಕೊಂಡ ಅದೆಷ್ಟೋ ಅನುಕೂಲಗಳು ಅವುಗಳ ಹೋಲಿಕೆಯಲ್ಲಿ ಸಾಕಷ್ಟು ಕಡಿಮೆ ಬೆಲೆಯ ಮಾದರಿಗಳಲ್ಲೂ ಸಿಗುತ್ತಿವೆ. ಹಾಗಾಗಿಯೇ ಏನೋ, ಹತ್ತು ಸಾವಿರ ರೂಪಾಯಿಯ ಆಸುಪಾಸಿನಲ್ಲಿ ಸಾಕಷ್ಟು ಉತ್ತಮವಾದ ಫೋನ್ ಕೊಳ್ಳುವುದು ಇದೀಗ ಸಾಧ್ಯವಾಗಿದೆ.

ಹಾಗೆಂದು ಎಲ್ಲಾದರೂ ಸುಮ್ಮನಿರುವುದು ಸಾಧ್ಯವೇ, ಉತ್ತಮ ಮೊಬೈಲ್ ಫೋನುಗಳನ್ನು ಅದಕ್ಕಿಂತ ಕಡಿಮೆ ಬೆಲೆಯಲ್ಲಿ ನೀಡುವ ಪ್ರಯತ್ನಗಳೂ ಸಾಗಿವೆ. ಕಳೆದ ವರ್ಷ ಮಾರುಕಟ್ಟೆಗೆ ಬಂದು ಭಾರೀ ಜನಪ್ರಿಯತೆ ಗಳಿಸಿಕೊಂಡಿದ್ದ ಲೆನೋವೋ A6000 ಹಾಗೂ A6000 ಪ್ಲಸ್ ಇಂತಹ ಫೋನುಗಳಿಗೆ ಉತ್ತಮ ಉದಾಹರಣೆಗಳು.

ಈ ಪ್ರಯತ್ನದ ಮುಂದುವರೆದ ಅಂಗವಾಗಿ ಲೆನೋವೋ ಸಂಸ್ಥೆ ತನ್ನ 'ವೈಬ್ K5' ಮಾದರಿಯನ್ನು ಈ ತಿಂಗಳು (ಜೂನ್ ೨೦೧೬) ಭಾರತೀಯ ಮಾರುಕಟ್ಟೆಗೆ ಬಿಡುಗಡೆಮಾಡುವ ನಿರೀಕ್ಷೆಯಿದೆ.

ಮಂಗಳವಾರ, ಜೂನ್ 7, 2016

ಪ್ರಣಯದಾಟವೂ ಕಾಂತಶಕ್ತಿಯೂ

ಕೊಳ್ಳೇಗಾಲ ಶರ್ಮ

ಪ್ರಣಯದಾಟ ಕಾಂತ-ಕಾಂತೆಯರ ನಡುವೆ ನಡೆಯುತ್ತದೆ. ಅದರಲ್ಲನೇನು ವಿಶೇಷ? ಎಂದಿರಾ? ನಿಜ. ಪ್ರಣಯದಾಟ ಗಂಡು-ಹೆಣ್ಣಿನ ನಡುವಿನ ಆಕರ್ಷಣೆಯ ಫಲ. ಗಂಡು ಹೆಣ್ಣನ್ನು ಆಕರ್ಷಿಸುತ್ತದೋ, ಹೆಣ್ಣು ಗಂಡನ್ನು ಆಕರ್ಷಿಸುತ್ತದೋ, ಗೊತ್ತಿಲ್ಲ. ಒಟ್ಟಾರೆ ಸಂತಾನಾಭಿವೃದ್ಧಿಯಲ್ಲಿ ಪ್ರಣಯದಾಟಗಳು ಪ್ರಮುಖ ಪಾತ್ರ ವಹಿಸುತ್ತವೆನ್ನುವುದು ಮಾತ್ರ ನಿಜ. ಈ ಆಟ ಕೇವಲ ಹೆಣ್ಣು, ಗಂಡಿನ ನಡುವಿನ ಆಕರ್ಷಣೆಯಲ್ಲ. ಇದರಲ್ಲಿ ಈ ಭೂಮಿಯ ಕಾಂತ ಶಕ್ತಿಯ ಪ್ರಭಾವವೂ ಇದೆಯಂತೆ.

ಗಂಡು-ಹೆಣ್ಣಿನ ನಡುವೆ ನಡೆಯುವ ಪ್ರಣಯಕೇಳಿಯನ್ನು ವಿದ್ಯುತ್ ಅಥವಾ ಅಯಸ್ಕಾಂತ ಶಕ್ತಿಯು ಪ್ರಭಾವಿಸುತ್ತದೆನ್ನುವ ಸ್ವಾರಸ್ಯಕರ (ಶಾಕಿಂಗ್ ಸುದ್ದಿ ಅಂದರೂ ಸರಿಯೇ. ಆಕರ್ಷಕ ಸುದ್ದಿ ಅಂದರೂ ಸರಿಯೇ!) ಸುದ್ದಿಯನ್ನು ತೈವಾನಿನ ಚಾಂಗ್ ಗುನ್ ವಿವಿಯ ವಿಜ್ಞಾನಿ ಚಿಯಾಲಿನ್ ವೂ ಮತ್ತು ಸಂಗಡಿಗರು ಇತ್ತೀಚಿನ ಪಿಎಲ್ಓಎಸ್ ಒನ್ ಪತ್ರಿಕೆಯಲ್ಲಿ ವರದಿ ಮಾಡಿದ್ದಾರೆ.

ಗುರುವಾರ, ಜೂನ್ 2, 2016

ಗತಿಸಿಹೋದವು ಆ ದಿನಗಳು!

ರೋಹಿತ್ ಚಕ್ರತೀರ್ಥ

"ನಮ್ ಕಾಲದಲ್ಲಿ ನೋಡಬೇಕಿತ್ತು!" ಎಂದೇ ಹಲವು ಹಿರಿಯರ ಕತೆಗಳು ಶುರುವಾಗುವುದು. ಹಿಂದಿನ ಕಾಲದಲ್ಲಿ ಏನಿತ್ತು? ಫಾಸ್ಟ್ ಟ್ರೇನು, ಏರೋಪ್ಲೇನುಗಳು ಇರಲಿಲ್ಲ. ಕಾಗದ, ತಂತಿ ಬಿಟ್ಟರೆ ಬೇರಾವ ಸಂವಹನ ಮಾಧ್ಯಮವೂ ಇರಲಿಲ್ಲ. ಕಪ್ಪುಬಿಳುಪು ಟಿವಿಯಲ್ಲಿ ದೂರದರ್ಶನ ಹಾಕಿದ್ದನ್ನೇ ಮೂರು ಹೊತ್ತು ನೋಡುತ್ತ ಕೂರಬೇಕಿತ್ತು. ಫೇಸ್‌ಬುಕ್ ಬಿಡಿ, ಈಗಿನವರಿಗೆ ಪರಿಚಯವಿಲ್ಲದ ಮೈಸ್ಪೇಸ್, ಆರ್ಕುಟ್ ಮುಂತಾದ ಪಳೆಯುಳಿಕೆಗಳು ಕೂಡ ಇರದ ಕಾಲ ಅದು. ಅಂಥಾದ್ದರಲ್ಲಿ ಯಾವ ಸುಖ-ಸೌಕರ್ಯ ಇಲ್ಲದ ಆ ಶಿಲಾಯುಗವನ್ನು ಗೋಲ್ಡನ್ ಏಜ್ ಅಂತೀರಲ್ಲ, ತಲೆ ಕೆಟ್ಟಿದೆಯೇ ಎಂದು ಈಗಿನವರು ಕೇಳಿಯಾರು. ತಡೆಯಿರಿ, ಇನ್ನೈವತ್ತು ವರ್ಷಗಳು ಹೋದರೆ ಇದೇ ಮಂದಿ "ನಮ್ಮ ಕಾಲದಲ್ಲಿ ಎಷ್ಟೊಂದು ಚೆನ್ನಿತ್ತು! ಸಂವಹನಕ್ಕೆ ಸ್ಮಾರ್ಟ್ ಫೋನ್ ಬಿಟ್ಟರೆ ಬೇರೇನಿರಲಿಲ್ಲ!" ಎನ್ನುವ ಕಾಲ ಬರುತ್ತದೆ.
badge