ಮಂಗಳವಾರ, ಡಿಸೆಂಬರ್ 25, 2012

ಕ್ಯಾಮೆರಾ ಕುಟುಂಬಕ್ಕೊಂದು ಹೊಸ ಸೇರ್ಪಡೆ


ಟಿ. ಜಿ. ಶ್ರೀನಿಧಿ

ಅತ್ಯುತ್ತಮ ಗುಣಮಟ್ಟದ ಛಾಯಾಚಿತ್ರಗಳಿಗೆ ಡಿಎಸ್‌ಎಲ್‌ಆರ್ ಕ್ಯಾಮೆರಾಗಳನ್ನು ಬಿಟ್ಟರಿಲ್ಲ ಎನ್ನುವುದು ಡಿಜಿಟಲ್ ಛಾಯಾಗ್ರಹಣದ ಅಆಇಈ ಬಲ್ಲವರಿಗೆಲ್ಲ ಗೊತ್ತಿರುವ ವಿಷಯವೇ. ಆದರೆ ಈ ಕ್ಯಾಮೆರಾಗಳ ದೊಡ್ಡ ಗಾತ್ರ ಹಲವು ಸನ್ನಿವೇಶಗಳಲ್ಲಿ ಕಿರಿಕಿರಿ ಮಾಡುವುದೂ ಉಂಟು.

ಒಂದೆರಡು ದಿನಗಳ ಪ್ರವಾಸಕ್ಕಾಗಿ ರೈಲಿನಲ್ಲೋ ಬಸ್ಸಿನಲ್ಲೋ ಹೊರಟಾಗಲಂತೂ ನಮ್ಮ ಇತರೆಲ್ಲ ಲಗ್ಗೇಜಿನಷ್ಟು, ಅಥವಾ ಅದಕ್ಕಿಂತ ಹೆಚ್ಚಿನದೇ ಜಾಗವನ್ನು ಡಿಎಸ್‌ಎಲ್‌ಆರ್ ಕ್ಯಾಮೆರಾ ಮತ್ತು ಅದರ ಪರಿಕರಗಳು ಆಕ್ರಮಿಸಿಕೊಂಡುಬಿಟ್ಟಿರುತ್ತವೆ. ಪದೇಪದೇ ಇಂತಹ ಅನುಭವಗಳಾದಾಗ ಸಾಮಾನ್ಯ ಪಾಯಿಂಟ್-ಆಂಡ್-ಶೂಟ್ ಕ್ಯಾಮೆರಾಗಳೇ ಡಿಎಸ್‌ಎಲ್‌ಆರ್‌ಗಳಿಗಿಂತ ಹೆಚ್ಚು ಆಪ್ಯಾಯಮಾನವಾಗಿ ಕಂಡರೂ ಆಶ್ಚರ್ಯವಿಲ್ಲ. ಸಣ್ಣ ಕ್ಯಾಮೆರಾಗಳ ಗಾತ್ರದಲ್ಲಿ ಡಿಎಸ್‌ಎಲ್‌ಆರ್ ವೈಶಿಷ್ಟ್ಯಗಳೆಲ್ಲ ಸಿಗುವಂತಿದ್ದರೆ ಎಷ್ಟು ಚೆನ್ನಾಗಿತ್ತಲ್ಲಪ್ಪ ಅನಿಸುವುದು ಅದೆಷ್ಟು ಬಾರಿಯೋ.

ಅಂತಹುದೊಂದು ಕನಸನ್ನು ನನಸುಮಾಡುವ ನಿಟ್ಟಿನಲ್ಲಿ ಸೃಷ್ಟಿಯಾಗಿರುವುದೇ ಕಾಂಪ್ಯಾಕ್ಟ್ ಸಿಸ್ಟಂ ಕ್ಯಾಮೆರಾ. ಸಾಮಾನ್ಯ ಕ್ಯಾಮೆರಾಗಳ ಗಾತ್ರದ ಆಸುಪಾಸಿನಲ್ಲಿ ಡಿಎಸ್‌ಎಲ್‌ಆರ್ ಕ್ಯಾಮೆರಾಗಳಲ್ಲಿರುವಂತಹ ಸೌಲಭ್ಯಗಳನ್ನು ಒದಗಿಸುವುದು ಈ ಕ್ಯಾಮೆರಾಗಳ ವೈಶಿಷ್ಟ್ಯ. ಮಿರರ್‌ಲೆಸ್ ಇಂಟರ್‌ಚೇಂಜಬಲ್ ಲೆನ್ಸ್ ಕ್ಯಾಮೆರಾ (ಐಎಲ್‌ಸಿ) ಎಂದೂ ಕರೆಸಿಕೊಳ್ಳುವ ಇದೇ ಡಿಜಿಟಲ್ ಕ್ಯಾಮೆರಾ ಕುಟುಂಬದ ಹೊಚ್ಚಹೊಸ ಸದಸ್ಯ!

ಬುಧವಾರ, ಡಿಸೆಂಬರ್ 19, 2012

ಬೆಂಗಳೂರಿನಲ್ಲಿ ವಿಜ್ಞಾನ-ತಂತ್ರಜ್ಞಾನ ಅಕಾಡೆಮಿ ಸಮ್ಮೇಳನ


ಇಜ್ಞಾನ ವಾರ್ತೆ

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಐದನೇ ವಾರ್ಷಿಕ ಸಮ್ಮೇಳನ ಬೆಂಗಳೂರಿನ ದಯಾನಂದ ಸಾಗರ್ ವಿದ್ಯಾಸಂಸ್ಥೆಯಲ್ಲಿ ಇಂದು ಬೆಳಿಗ್ಗೆ ಉದ್ಘಾಟನೆಯಾಯಿತು. ಬುಧವಾರ (ಡಿಸೆಂಬರ್ ೧೯, ೨೦೧೨) ಹಾಗೂ ಗುರುವಾರ (ಡಿಸೆಂಬರ್ ೨೦, ೨೦೧೨) ನಡೆಯಲಿರುವ ಈ ಸಮ್ಮೇಳನದಲ್ಲಿ ಅನೇಕ ವಿಷಯತಜ್ಞರು ತಮ್ಮ ಪ್ರಬಂಧಗಳನ್ನು ಮಂಡಿಸಲಿದ್ದಾರೆ.

ಹಿರಿಯ ವೈದ್ಯರೂ ಜನಪ್ರಿಯ ವಿಜ್ಞಾನ ಸಂವಹನಕಾರರೂ ಆದ ಡಾ. ಪಿ. ಎಸ್. ಶಂಕರ್ ಅವರನ್ನು ಅವರ ಜೀವಮಾನದ ಸಾಧನೆಗಾಗಿ ಉದ್ಘಾಟನಾ ಸಮಾರಂಭದಲ್ಲಿ ಗೌರವಿಸಲಾಯಿತು. ಈ ಗೌರವ ಪಡೆದಿರುವ ಡಾ. ಶಂಕರ್ ಅವರನ್ನು ಇಜ್ಞಾನ ಬಳಗ ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ.


ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಪತ್ರಿಕೆ 'ವಿಜ್ಞಾನ ಲೋಕ'ದ ಸಂಚಿಕೆಗಳಿಂದ ಆಯ್ದ ಪ್ರಾತಿನಿಧಿಕ ಬರೆಹಗಳ ಸಂಕಲನ 'ವಿಜ್ಞಾನ ದೀಪ್ತಿ'ಯನ್ನು ಉದ್ಘಾಟನಾ ಸಮಾರಂಭದಲ್ಲಿ ಲೋಕಾರ್ಪಣೆಗೊಳಿಸಲಾಯಿತು. ಸದ್ಯಕ್ಕೆ ಮೂರು ತಿಂಗಳಿಗೊಮ್ಮೆ ಪ್ರಕಟವಾಗುತ್ತಿರುವ 'ವಿಜ್ಞಾನ ಲೋಕ'ವನ್ನು ಪ್ರತಿ ತಿಂಗಳಿಗೊಮ್ಮೆ ಏಕೆ ಪ್ರಕಟಿಸಬಾರದು ಎಂಬ ಪ್ರಶ್ನೆ ಎದ್ದಿದ್ದು, ಹಾಗೂ ಆ ನಿಟ್ಟಿನಲ್ಲಿ ಬೇಕಾದ ನೆರವನ್ನು ಒದಗಿಸಿಕೊಡುವ ಆಶ್ವಾಸನೆ ಸ್ವತಃ ಮುಖ್ಯಮಂತ್ರಿಗಳಿಂದಲೇ ದೊರೆತದ್ದು ಇಂದಿನ ಕಾರ್ಯಕ್ರಮದ ವಿಶೇಷ.

ಮಂಗಳವಾರ, ಡಿಸೆಂಬರ್ 18, 2012

ಇದು ಡಿಎಸ್‌ಎಲ್‌ಆರ್!


ಟಿ. ಜಿ. ಶ್ರೀನಿಧಿ

ಇತ್ತೀಚಿನ ವರ್ಷಗಳಲ್ಲಿ ಡಿಜಿಟಲ್ ಕ್ಯಾಮೆರಾಗಳು ನಮ್ಮೆಲ್ಲರ ಬದುಕಿನಲ್ಲಿ ಅದೆಷ್ಟರ ಮಟ್ಟಿಗೆ ಹಾಸುಹೊಕ್ಕಾಗಿ ಸೇರಿಕೊಂಡಿವೆಯೆಂದರೆ ಮನೆಗಳಲ್ಲಿ ಡಿಜಿಟಲ್ ಕ್ಯಾಮೆರಾ ಇರುವುದು ಟೀವಿ, ಕಂಪ್ಯೂಟರ್ ಇರುವಷ್ಟೇ ಸಾಮಾನ್ಯವಾಗಿಬಿಟ್ಟಿದೆ. ಅಷ್ಟೇ ಅಲ್ಲ, ಡಿಜಿಟಲ್ ಕ್ಯಾಮೆರಾ ಮಾರುಕಟ್ಟೆಯಲ್ಲಿರುವ ವೈವಿಧ್ಯದ ಪರಿಣಾಮವಾಗಿ ಎಲ್ಲ ಬಜೆಟ್ಟುಗಳಿಗೂ ಹೊಂದಿಕೆಯಾಗಬಲ್ಲ ಕ್ಯಾಮೆರಾಗಳು ಸಿಗುತ್ತಿವೆ. ಅದೆಷ್ಟೋ ಜನರ ಮಟ್ಟಿಗೆ ಅವರ ಮೊಬೈಲುಗಳೇ ಡಿಜಿಟಲ್ ಕ್ಯಾಮೆರಾ ಕೂಡ ಆಗಿರುತ್ತವೆ.

ಇನ್ನು ಯಾವುದಾದರೂ ಪ್ರವಾಸಿ ಸ್ಥಳದ ಉದಾಹರಣೆ ತೆಗೆದುಕೊಂಡರಂತೂ ಅಲ್ಲಿರುವ ಪ್ರವಾಸಿಗರ ಕೈಗಳಲ್ಲೇ ನಮಗೆ ಹತ್ತಾರು ಬಗೆಯ ಕ್ಯಾಮೆರಾಗಳು ಕಾಣಸಿಗುತ್ತವೆ. ಕೆಲವೇ ಸಾವಿರ ಬೆಲೆಯ ಮೊಬೈಲಿನಲ್ಲಿರುವ ಕ್ಯಾಮೆರಾದಿಂದ ಪ್ರಾರಂಭಿಸಿ ಹತ್ತಾರು ಸಾವಿರ ರೂಪಾಯಿ ಬೆಲೆಯ ಅತ್ಯಾಧುನಿಕ ಕ್ಯಾಮೆರಾಗಳವರೆಗೆ ಡಿಜಿಟಲ್ ಕ್ಯಾಮೆರಾಗಳು ತೀರಾ ಸಾಮಾನ್ಯವೇ ಆಗಿಹೋಗಿವೆ. ಪ್ರೊಜೆಕ್ಟರ್ ಇರುವ ಕ್ಯಾಮೆರಾ, ಥ್ರೀಡಿ ಚಿತ್ರಗಳನ್ನು ತೆಗೆಯಬಲ್ಲ ಕ್ಯಾಮೆರಾ, ಎಚ್‌ಡಿ ವೀಡಿಯೋ ಸೆರೆಹಿಡಿಯಬಲ್ಲ ಕ್ಯಾಮೆರಾ - ಹೀಗೆ ಕ್ಯಾಮೆರಾಗಳಲ್ಲಿ ಕಾಣಸಿಗುವ ವೈವಿಧ್ಯಕ್ಕೆ ಕೊನೆಯೇ ಇಲ್ಲ!

ಇವೆಲ್ಲವುದರ ನಡುವೆ ಒಂದು ವಿಶೇಷ ಬಗೆಯ ಕ್ಯಾಮೆರಾ ಬಹಳ ಬೇಗನೆ ನಮ್ಮ ಗಮನಸೆಳೆಯಬಲ್ಲದು. ಇತರ ಕ್ಯಾಮೆರಾಗಳಿಗಿಂತ ಕೊಂಚ ದಪ್ಪಗಿರುವ ಈ ಕ್ಯಾಮೆರಾಗೆ ಬೇರೆ ಕ್ಯಾಮೆರಾಗಳಲ್ಲಿ ಕಾಣಸಿಗದಷ್ಟು ಉದ್ದದ ಲೆನ್ಸೊಂದು ಅಂಟಿಕೊಂಡಿರುವುದೂ ಅಪರೂಪವೇನಲ್ಲ.

ಡಿಎಸ್‌ಎಲ್‌ಆರ್ ಕ್ಯಾಮೆರಾಗಳೆಂದು ಕರೆಯುವುದು ಇವನ್ನೇ.

ಮಂಗಳವಾರ, ಡಿಸೆಂಬರ್ 11, 2012

ಪಾಸ್‌ವರ್ಡ್: ಪಾಸೋ ಫೇಲೋ? - ಭಾಗ ೨


ಟಿ. ಜಿ. ಶ್ರೀನಿಧಿ

ಕಂಪ್ಯೂಟರ್ ಪ್ರಪಂಚದಲ್ಲಿನ ನಮ್ಮ ಚಟುವಟಿಕೆಗಳನ್ನೆಲ್ಲ ಸುರಕ್ಷಿತವಾಗಿಡುವ ಒಂದು ಬೀಗ ಇದೆ ಎಂದು ಭಾವಿಸಿಕೊಂಡರೆ ಪಾಸ್‌ವರ್ಡುಗಳನ್ನು ಆ ಬೀಗದ ಕೀಲಿಕೈ ಎಂದೇ ಕರೆಯಬಹುದು.

ನಮ್ಮದೇ ಬೇಜವಾಬ್ದಾರಿಯಿಂದಲೋ ಕಳ್ಳರ ಕೈಚಳಕದಿಂದಲೋ ಕೀಲಿಕೈ ಕಳೆದುಹೋದರೆ ತೊಂದರೆಯಾಗುವುದು ನಮ್ಮ ಸುರಕ್ಷತೆಗೇ ತಾನೆ! ಹೀಗಾಗಿ ಬಾಹ್ಯ ಪ್ರಪಂಚದಲ್ಲಿರುವಂತೆ ಕಂಪ್ಯೂಟರಿನ ವರ್ಚುಯಲ್ ಲೋಕದಲ್ಲೂ ಪಾಸ್‌ವರ್ಡ್ ರೂಪದ ಕೀಲಿಕೈಗಳನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕಾದ್ದು ಅನಿವಾರ್ಯ.

ಕಂಪ್ಯೂಟರ್ ಪ್ರಪಂಚದಲ್ಲಿ ನಮ್ಮ ಸುರಕ್ಷತೆಗಾಗಿ ಪಾಸ್‌ವರ್ಡುಗಳನ್ನು ಜೋಪಾನಮಾಡುವುದು ಹೇಗೆ? ಅವುಗಳ ಆಯ್ಕೆ-ಬಳಕೆಯಲ್ಲಿ, ಗೌಪ್ಯತೆ ಕಾಪಾಡಿಕೊಳ್ಳುವುದರಲ್ಲಿ ನಾವು ಅನುಸರಿಸಬೇಕಾದ ಕ್ರಮಗಳೇನು? ಈ ಕುರಿತ ಒಂದಷ್ಟು ಮಾಹಿತಿ ಇಲ್ಲಿದೆ.

ಸೋಮವಾರ, ಡಿಸೆಂಬರ್ 10, 2012

'ಫ್ಲಾಪಿಯಿಂದ ಫೇಸ್‌ಬುಕ್‌ವರೆಗೆ' ಓದಿದಿರಾ?


ಮೈಸೂರಿನ ಭಾರತೀ ಪ್ರಕಾಶನ ಪ್ರಕಟಿಸಿರುವ ಟಿ. ಜಿ. ಶ್ರೀನಿಧಿಯವರ 'ಫ್ಲಾಪಿಯಿಂದ ಫೇಸ್‌ಬುಕ್‌ವರೆಗೆ' ಕೃತಿ ಕಳೆದ ಡಿಸೆಂಬರ್ ೮ರ ಸಂಜೆ ಬೆಂಗಳೂರಿನಲ್ಲಿ ಲೋಕಾರ್ಪಣೆಯಾಯಿತು.

ಈ ಪುಸ್ತಕದಲ್ಲೇನಿದೆ? ತಿಳಿಯಲು ಚುಕ್ಕುಬುಕ್ಕು ಡಾಟ್ ಕಾಮ್ ನೋಡಬಹುದು.

ಅಂತೆಯೇ ಈ ಪುಸ್ತಕವನ್ನು ಆನ್‌ಲೈನ್ ಅಂಗಡಿಯಲ್ಲಿ ಕೊಳ್ಳಲು ಆಕೃತಿ ಪುಸ್ತಕದ ಜಾಲತಾಣಕ್ಕೆ ಭೇಟಿಕೊಡಿ!

ಬುಧವಾರ, ಡಿಸೆಂಬರ್ 5, 2012

ಪಾಸ್‌ವರ್ಡ್: ಪಾಸೋ? ಫೇಲೋ? - ಭಾಗ ೧

ಟಿ. ಜಿ. ಶ್ರೀನಿಧಿ

ಎಂಟೋ ಹತ್ತೋ ಅಕ್ಷರಗಳ ಒಂದು ಪದದ ಮೇಲೆ ನಮ್ಮ ಇಡೀ ಬದುಕೇ ಅವಲಂಬಿತವಾಗಿದ್ದರೆ ಹೇಗಿರುತ್ತಿತ್ತು?

"ಛೆ ಛೆ, ಅದೆಲ್ಲಾದರೂ ಸಾಧ್ಯವೆ, ನಮ್ಮ ಇಡೀ ಬದುಕು ಒಂದೇ ಪದದ ಮೇಲೆ ಅವಲಂಬಿತವಾಗಲು ಹೇಗೆತಾನೆ ಸಾಧ್ಯ?" ಎಂದಿರಾ? ಇನ್ನೊಮ್ಮೆ ಯೋಚಿಸಿ, ಆಗಲೂ ಹೊಳೆಯದಿದ್ದರೆ ಡಿಜಿಟಲ್ ಪ್ರಪಂಚಕ್ಕೆ ಬನ್ನಿ.

ಮೇಜಿನ ಮೇಲಿನ ಕಂಪ್ಯೂಟರಿನಿಂದ ಪ್ರಾರಂಭಿಸಿ ಇಂಟರ್‌ನೆಟ್ ಸಂಪರ್ಕ, ಇಮೇಲ್, ಬ್ಯಾಂಕ್ ಖಾತೆ, ಕ್ರೆಡಿಟ್ ಕಾರ್ಡ್, ಸಮಾಜ ಜಾಲ ಇತ್ಯಾದಿಗಳವರೆಗೆ ನಮ್ಮ ಬದುಕಿಗೆ ಸಂಬಂಧಪಟ್ಟ ಸಮಸ್ತ ಮಾಹಿತಿಯೂ ತನ್ನ ಸುರಕ್ಷತೆಗಾಗಿ ಒಂದು ಪದವನ್ನು ನೆಚ್ಚಿಕೊಂಡಿರುತ್ತದೆ.

ಅದೇ ಪಾಸ್‌ವರ್ಡ್. ಡಿಜಿಟಲ್ ಪ್ರಪಂಚದಲ್ಲಿ ನಮ್ಮ ಮಾಹಿತಿಯನ್ನೆಲ್ಲ ಸುರಕ್ಷಿತವಾಗಿಡಲು, ಅದು ಅಪಾತ್ರರ ಕೈಗೆ ಸಿಗದಂತೆ ನೋಡಿಕೊಳ್ಳಲು, ನಮ್ಮ ಮಾಹಿತಿ ನಮಗಷ್ಟೆ ಗೊತ್ತು ಎಂಬ ಸಮಾಧಾನದ ಭಾವನೆ ಮೂಡಿಸಲು ಪಾಸ್‌ವರ್ಡ್ ಬೇಕೇ ಬೇಕು.

ಹಾಗೆಂದಮಾತ್ರಕ್ಕೆ ಕಂಪ್ಯೂಟರುಗಳು ಆಗಮಿಸುವ ಮೊದಲು ಪಾಸ್‌ವರ್ಡ್‌ಗಳು ಇರಲೇ ಇಲ್ಲ ಎಂದೇನೂ ಅರ್ಥವಲ್ಲ. ಒಂದಲ್ಲ ಒಂದು ಉದ್ದೇಶಕ್ಕಾಗಿ ರಹಸ್ಯ ಪದಗಳನ್ನು ಬಳಸುವ ಅಭ್ಯಾಸ ಬೆಳೆದುಬಂದಿರುವುದು ಇತಿಹಾಸದಲ್ಲಿ ಹಲವೆಡೆ ಕಾಣಸಿಗುತ್ತದೆ. ಚಿತ್ರದುರ್ಗದ ಕುರಿತು ತರಾಸುರವರ ಅಮರ ಕಾದಂಬರಿ ಸರಣಿಯನ್ನೇ ನೋಡಿ, ಅದೆಷ್ಟು ಕಡೆ ಬೇಹುಗಾರರು ತಮ್ಮ ಗುರುತು ತಿಳಿಸಲು 'ಸಂಜ್ಞಾಶಬ್ದ'ಗಳನ್ನು ಬಳಸುತ್ತಾರೆ; ಇಂದಿನ ಲೆಕ್ಕದಲ್ಲಿ ನೋಡಿದರೆ ಅದೂ ಪಾಸ್‌ವರ್ಡೇ!

ಶನಿವಾರ, ಡಿಸೆಂಬರ್ 1, 2012

ಹೊಸ ಪುಸ್ತಕ ರೆಡಿ!

ಹೊಸ ಪುಸ್ತಕ ಇದೀಗ ರೆಡಿಯಾಗಿದೆ! ಬರುವ ಡಿಸೆಂಬರ್ ೮ರ ಸಂಜೆ ೫ ಗಂಟೆಗೆ ರಾಜಾಜಿನಗರದಲ್ಲಿರುವ ಆಕೃತಿ ಪುಸ್ತಕ ಮಳಿಗೆಯಲ್ಲಿ ಈ ಕೃತಿ ಲೋಕಾರ್ಪಣೆಯಾಗಲಿದೆ. ಇದೇ ಸಂದರ್ಭದಲ್ಲಿ 'ಕಂಪ್ಯೂಟರ್ ಮತ್ತು ಕನ್ನಡ' ಸಂವಾದ ಕಾರ್ಯಕ್ರಮ ಇದೆ, 'ತಿನ್ನಲಾಗದ ಬಿಸ್ಕತ್ತು ನುಂಗಲಾಗದ ಟ್ಯಾಬ್ಲೆಟ್ಟು' ಕೃತಿಯ ಮರುಮುದ್ರಣವೂ ಹೊರಬರುತ್ತಿದೆ. ಲೋಕಾರ್ಪಣೆ ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ!


ಗುರುವಾರ, ನವೆಂಬರ್ 29, 2012

'ಫ್ಲಾಪಿಯಿಂದ ಫೇಸ್‌ಬುಕ್‌ವರೆಗೆ'

ತಂತ್ರಜ್ಞಾನ ಲೇಖಕ ಶ್ರೀ ಟಿ. ಜಿ. ಶ್ರೀನಿಧಿಯವರ 'ಫ್ಲಾಪಿಯಿಂದ ಫೇಸ್‌ಬುಕ್‌ವರೆಗೆ' ಕೃತಿ ಬರುವ ಡಿಸೆಂಬರ್ ೮ರ ಶನಿವಾರ ಸಂಜೆ ಬೆಂಗಳೂರಿನಲ್ಲಿ ಲೋಕಾರ್ಪಣೆಗೊಳ್ಳಲಿದೆ. ಉದಯವಾಣಿಯ 'ಜೋಶ್' ಪುರವಣಿಯಲ್ಲಿ ಕಳೆದ ಎರಡು ವರ್ಷಗಳಿಂದ ಪ್ರಕಟವಾಗುತ್ತಿರುವ 'ವಿಜ್ಞಾಪನೆ' ಅಂಕಣದ ಆಯ್ದ ಬರೆಹಗಳನ್ನು ಈ ಕೃತಿಯಲ್ಲಿ ಸಂಕಲಿಸಲಾಗಿದೆ.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಪ್ರಶಸ್ತಿ ಗಳಿಸಿದ್ದ ಅವರ 'ತಿನ್ನಲಾಗದ ಬಿಸ್ಕತ್ತು ನುಂಗಲಾಗದ ಟ್ಯಾಬ್ಲೆಟ್ಟು' ಕೃತಿಯ ಎರಡನೇ ಮುದ್ರಣವೂ ಅಂದೇ ಹೊರಬರುತ್ತಿದೆ.

ಆಕೃತಿ ಪುಸ್ತಕ, ಇಜ್ಞಾನ ಡಾಟ್ ಕಾಮ್ ಹಾಗೂ ಭಾರತೀ ಪ್ರಕಾಶನ - ಇವರ ಸಹಯೋಗದಲ್ಲಿ ಏರ್ಪಡಿಸಲಾಗಿರುವ ಈ ಕಾರ್ಯಕ್ರಮ ಬೆಂಗಳೂರು ರಾಜಾಜಿನಗರದ ಆಕೃತಿ ಪುಸ್ತಕ ಮಳಿಗೆಯಲ್ಲಿ ನಡೆಯಲಿದೆ.

ಇದೇ ಸಂದರ್ಭದಲ್ಲಿ 'ಕನ್ನಡ ಮತ್ತು ಕಂಪ್ಯೂಟರ್' ಎಂಬ ವಿಷಯದ ಕುರಿತು ಸಂವಾದವನ್ನೂ ಏರ್ಪಡಿಸಲಾಗಿದೆ. ಡಾ| ಯು ಬಿ ಪವನಜ, ಶ್ರೀ ಬೇಳೂರು ಸುದರ್ಶನ ಹಾಗೂ ಶ್ರೀ ಎನ್ ಎ ಎಂ ಇಸ್ಮಾಯಿಲ್ ಅವರು ಸಂವಾದದಲ್ಲಿ ಭಾಗವಹಿಸಲಿದ್ದಾರೆ.

ಇಜ್ಞಾನ ಡಾಟ್ ಕಾಮ್ ನಿಮ್ಮನ್ನು ಈ ಕಾರ್ಯಕ್ರಮಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತದೆ.

ಸ್ಥಳ: ಆಕೃತಿ ಪುಸ್ತಕ ಮಳಿಗೆ,
೩೧/೧, ೧೨ನೇ ಮುಖ್ಯರಸ್ತೆ, ೩ನೇ ಬ್ಲಾಕ್,
ರಾಜಾಜಿನಗರ, ಬೆಂಗಳೂರು ೫೬೦೦೧೦

ಸಮಯ: ಡಿಸೆಂಬರ್ ೮, ೨೦೧೨ರ ಶನಿವಾರ ಸಂಜೆ ೫ಕ್ಕೆ

ಕೃತಿಯ ಬಗ್ಗೆ...
"ಈ ಲೇಖನಗಳು ನೀಡುವ ಒಳನೋಟ ಅಪರೂಪದ್ದು. ಸಮಾಜದ ಆಗುಹೋಗುಗಳಿಗೂ, ಆ ಕಾಲದ ಬೆಳವಣಿಗೆಗಳಿಗೂ ಇರುವ ಸಂಬಂಧವನ್ನು ಶ್ರೀನಿಧಿ ಸರಳವಾಗಿ ನಿರೂಪಿಸುತ್ತಾರೆ. ಕಲಿಯುವ ಮನಸ್ಸಿದ್ದವರಿಗೆಲ್ಲ ಅವರ ಲೇಖನಗಳು ಸಂಗ್ರಾಹ್ಯವೇ. ಸಮಕಾಲೀನ ಉದಾಹರಣೆಗಳನ್ನು ಕೊಡುತ್ತಲೇ ವರ್ತಮಾನದ ಮಾಹಿತಿ ತಂತ್ರಜ್ಞಾನದ ಕತೆ ಹೇಳುತ್ತಾರೆ. ಅಂತರಜಾಲದ ಯಾವ ಪ್ರಮುಖ ಘಟನೆಗಳೂ ಅವರ ಕಣ್ಣು ತಪ್ಪಿಸಲಾಗದು! ಬಳಕೆದಾರನನ್ನೇ ಗಮನದಲ್ಲಿ ಇಟ್ಟುಕೊಂಡು ಬರೆದ ಈ ಲೇಖನಗಳನ್ನು ಖುಷಿಯಿಂದ ಓದಬಹುದು. ನಮ್ಮ ತಿಳವಳಿಕೆಯ ದಿಗಂತವನ್ನು ವಿಸ್ತರಿಸಿಕೊಳ್ಳಬಹುದು" - ಬೇಳೂರು ಸುದರ್ಶನ (ಮುನ್ನುಡಿಯಿಂದ)

ಮಂಗಳವಾರ, ನವೆಂಬರ್ 27, 2012

ಥ್ರೀಡಿ ಎಂಬ ಮಾಯಾಮಂತ್ರ


ಟಿ. ಜಿ. ಶ್ರೀನಿಧಿ

ಕೈಯಲ್ಲೊಂದು ಪುಸ್ತಕ ಹಿಡಿದುಕೊಂಡು ನೋಡಿ. ಉದ್ದ-ಅಗಲಗಳ ಜೊತೆಗೆ ಅದರ ದಪ್ಪವೂ ಒಂದು ಆಯಾಮವಾಗಿ ನಮಗೆ ಗೋಚರವಾಗುತ್ತದೆ. ಅಷ್ಟೇ ಅಲ್ಲ, ಅದು ಹಿನ್ನೆಲೆಯಲ್ಲಿರುವ ಸೋಫಾಗಿಂತ ಅದು ನಮಗೆ ಹೆಚ್ಚು ಹತ್ತಿರದಲ್ಲಿರುವುದು ಕೂಡ ಸ್ಪಷ್ಟವಾಗಿ ಕಾಣುತ್ತದೆ.

ಆದರೆ ಅದೇ ಪುಸ್ತಕದಲ್ಲಿರುವ ಯಾವುದೋ ಚಿತ್ರವನ್ನು ಗಮನಿಸಿದಾಗ ನಮಗೆ ಇಂತಹ ಅನುಭವ ಆಗುವುದಿಲ್ಲ. ಚಿತ್ರ ಅದೆಷ್ಟೇ ನೈಜವಾಗಿದ್ದರೂ ಅದಕ್ಕೆ-ಅದರಲ್ಲಿರುವ ವಸ್ತುಗಳಿಗೆ ಉದ್ದ ಅಗಲಗಳಷ್ಟೆ ಇರುತ್ತವೆ; ಆದರೆ ಅದು ನಮಗೆ ಮೂರನೆಯ ಆಯಾಮವನ್ನು ಕಟ್ಟಿಕೊಡುವುದಿಲ್ಲ.

ಇನ್ನು ಕಿಟಕಿಯಾಚೆಗಿನ ದೃಶ್ಯವನ್ನು ಗಮನಿಸಿದರೆ ಎದುರಿಗೆ ಕಾಣುವ ಮನೆ, ರಸ್ತೆಯಲ್ಲಿ ನಿಂತಿರುವ ಕಾರು, ಮರ-ಗಿಡ ಎಲ್ಲವೂ ನಮಗೆ ಮೂರು ಆಯಾಮಗಳಲ್ಲೇ ಕಾಣಸಿಗುತ್ತವೆ. ಆದರೆ ಆಕಾಶದಲ್ಲಿರುವ ಚಂದ್ರ ಹಾಗಲ್ಲ; ಗೋಡೆಯ ಮೇಲಿನ ಕ್ಯಾಲೆಂಡರಿನಂತೆ ಅಲ್ಲೂ ಕಾಣಿಸುವುದು ಎರಡೇ ಆಯಾಮಗಳು!

ಇದಕ್ಕೆಲ್ಲ ಕಾರಣ ನಮ್ಮ ಕಣ್ಣುಗಳಲ್ಲಿರುವ ವಿಶಿಷ್ಟವಾದುದೊಂದು ಸಾಮರ್ಥ್ಯ; ನಮ್ಮ ಕಣ್ಣುಗಳು ಬೆಳಕು ಹಾಗೂ ಬಣ್ಣಗಳನ್ನು ಗುರುತಿಸುತ್ತವಲ್ಲ, ಆಗ ಎಡಗಣ್ಣಿಗೆ ಕಾಣುವ ದೃಶ್ಯ ನಮ್ಮ ಬಲಗಣ್ಣಿಗೆ ಕಾಣುವುದಕ್ಕಿಂತ ಕೊಂಚ ಭಿನ್ನವಾಗಿರುತ್ತದೆ. ಇವೆರಡೂ ಪ್ರತ್ಯೇಕ ದೃಶ್ಯಗಳು ಮೆದುಳನ್ನು ತಲುಪಿ ಒಟ್ಟಾಗಿ ಸೇರಿದಾಗಲಷ್ಟೆ ನಮಗೆ ಮೂರು ಆಯಾಮಗಳ (ಥ್ರೀಡಿ) ದೃಶ್ಯ ಗೋಚರವಾಗುತ್ತದೆ.

ನೈಜ ವಸ್ತುಗಳೇನೋ ನಮಗೆ ಥ್ರೀಡಿ ದೃಶ್ಯಗಳಾಗಿ ಕಾಣಸಿಗುತ್ತವೆ, ಆದರೆ ಪುಸ್ತಕದಲ್ಲಿ ಮುದ್ರಿತವಾದ ಚಿತ್ರಕ್ಕೆ, ಪರದೆಯ ಮೇಲೆ ಕಾಣಿಸುವ ಸಿನಿಮಾಗೆ ಮೂರನೆಯ ಆಯಾಮವೇ ಇರುವುದಿಲ್ಲವಲ್ಲ?

ಮಂಗಳವಾರ, ನವೆಂಬರ್ 20, 2012

ಮೆಮೊರಿ ಕಾರ್ಡ್ ಕೈಕೊಟ್ಟಾಗ...


ಟಿ ಜಿ ಶ್ರೀನಿಧಿ

ಡಿಜಿಟಲ್ ಉತ್ಪನ್ನಗಳ ಬಳಕೆ ಜಾಸ್ತಿಯಾದಮೇಲೆ ಎಲ್ಲೆಲ್ಲಿ ನೋಡಿದರೂ ಮೆಮೊರಿ ಕಾರ್ಡುಗಳದೇ ಭರಾಟೆ. ಮೊಬೈಲ್ ಫೋನಿನಲ್ಲೂ ಮೆಮೊರಿ ಕಾರ್ಡು, ಟ್ಯಾಬ್ಲೆಟ್ಟಿನಲ್ಲೂ ಮೆಮೊರಿ ಕಾರ್ಡು, ಡಿಜಿಟಲ್ ಕ್ಯಾಮೆರಾದಲ್ಲೂ ಮೆಮೊರಿ ಕಾರ್ಡು!

ಡಿಜಿಟಲ್ ಕ್ಯಾಮೆರಾ ಉದಾಹರಣೆಯನ್ನೇ ತೆಗೆದುಕೊಂಡರೆ ಹಿಂದಿನ ಕಾಲದಲ್ಲಿ ಫಿಲಂ ರೋಲುಗಳು ಮಾಡುತ್ತಿದ್ದ ಕೆಲಸವನ್ನು ಈಗ ಮೆಮೊರಿ ಕಾರ್ಡುಗಳು ಮಾಡುತ್ತಿವೆ. ಅಷ್ಟೇ ಅಲ್ಲ, ಮೂವತ್ತಾರು ಫೋಟೋ ಮುಗಿಯುತ್ತಿದ್ದಂತೆ ಹೊಸ ರೋಲು ಹಾಕಬೇಕಾದ ಪರಿಸ್ಥಿತಿಯನ್ನೂ ಬದಲಿಸಿವೆ. ಕಾರ್ಡಿನಲ್ಲಿ ಜಾಗ ಇರುವವರೆಗೂ ಫೋಟೋ - ವೀಡಿಯೋ ತುಂಬಿಕೊಳ್ಳುವುದು, ಕಾರ್ಡು ಭರ್ತಿಯಾಗುತ್ತಿದ್ದಂತೆ ಅವನ್ನೆಲ್ಲ ಕಂಪ್ಯೂಟರಿನೊಳಗೆ ಸುರಿಯುವುದು, ಖಾಲಿಯಾದ ಕಾರ್ಡನ್ನು ಮತ್ತೆ ಬಳಸುವುದು - ಕೆಲಸ ಇಷ್ಟೇ ಸರಳ!

ಹೀಗೆ ಮೆಮೊರಿ ಕಾರ್ಡನ್ನು ಮತ್ತೆ ಮತ್ತೆ ಬಳಸುವುದು ಸುಲಭ, ನಿಜ. ಆದರೆ ಒಂದಷ್ಟು ಸಾರಿ ಈ ಪ್ರಕ್ರಿಯೆಯ ಪುನರಾವರ್ತನೆ ಆಗುತ್ತಿದ್ದಂತೆ ಕಾರ್ಡಿನ ವಿಶ್ವಾಸಾರ್ಹತೆ ನಿಧಾನಕ್ಕೆ ಕಡಿಮೆಯಾಗುತ್ತ ಬರುತ್ತದೆ. ಅದರಲ್ಲೇನೋ ಸಮಸ್ಯೆ ಕಾಣಿಸಿಕೊಳ್ಳುತ್ತದೆ, ಅಥವಾ ಒಂದು ಕಂಪ್ಯೂಟರಿನಿಂದ ಇನ್ನೊಂದಕ್ಕೆ ಓಡಾಡುವ ಭರಾಟೆಯಲ್ಲಿ ಯಾವುದೋ ಕುತಂತ್ರಾಂಶ ಕಾರ್ಡಿನೊಳಕ್ಕೆ ಬಂದು ವಕ್ಕರಿಸಿಕೊಳ್ಳುತ್ತದೆ. ಕಾರಣ ಏನೇ ಆದರೂ ಪರಿಣಾಮ ಮಾತ್ರ ಒಂದೇ: ಕಾರ್ಡನ್ನು ಕಂಪ್ಯೂಟರಿಗೆ ಜೋಡಿಸಿದಾಗ ಅದು ಕಾರ್ಡನ್ನು ಗುರುತಿಸಲು ನಿರಾಕರಿಸುತ್ತದೆ, ಕಾರ್ಡಿನಲ್ಲಿರುವ ಫೋಟೋ ಕಾರ್ಡಿನಲ್ಲೇ ಇದ್ದರೂ ಅದನ್ನು ನೋಡುವುದು, ಕಾಪಿಮಾಡಿಕೊಳ್ಳುವುದು ಸಾಧ್ಯವಾಗುವುದಿಲ್ಲ!

ಭಾನುವಾರ, ನವೆಂಬರ್ 18, 2012

'ವಿಜ್ಞಾನ' ಸಂಪುಟಗಳ ಲೋಕಾರ್ಪಣೆ

ಇಜ್ಞಾನ ವಾರ್ತೆ

ಕನ್ನಡ ವಿಜ್ಞಾನ ಸಾಹಿತ್ಯದ ಆದ್ಯ ಪ್ರವರ್ತಕರಾದ ಶ್ರೀ ಬೆಳ್ಳಾವೆ ವೆಂಕಟನಾರಣಪ್ಪ ಹಾಗೂ ಶ್ರೀ ನಂಗಪುರಂ ವೆಂಕಟೇಶಯ್ಯಂಗಾರ್‍ಯರು ೧೯೧೮-೧೯ರಷ್ಟು ಹಿಂದೆಯೇ 'ವಿಜ್ಞಾನ' ಎಂಬ ಕನ್ನಡ ಮಾಸಪತ್ರಿಕೆಯನ್ನು ಪ್ರಾರಂಭಿಸಿದ್ದರು. ಅಷ್ಟೇ ಅಲ್ಲ, ಎಲ್ಲ ಸವಾಲುಗಳನ್ನು ಎದುರಿಸಿ ಆ ಪತ್ರಿಕೆಯನ್ನು ಎರಡು ವರ್ಷಗಳ ಕಾಲ ನಡೆಸಿಯೂ ಇದ್ದರು.

ಕನ್ನಡ ವಿಜ್ಞಾನ ಸಂವಹನ ಹಾಗೂ ಪತ್ರಿಕೋದ್ಯಮ - ಎರಡೂ ಕ್ಷೇತ್ರಗಳ ಪಾಲಿಗೆ ಇಂದಿಗೂ ಅಮೂಲ್ಯ ದಾಖಲೆಗಳಾಗಿರುವ ಈ ಇಪ್ಪತ್ನಾಲ್ಕು ಸಂಚಿಕೆಗಳು ಇದೀಗ ಎರಡು ಸಂಪುಟಗಳಲ್ಲಿ ಮರುಮುದ್ರಣ ಕಾಣುತ್ತಿವೆ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ಉದಯಭಾನು ಕಲಾಸಂಘದ ಸಹಭಾಗಿತ್ವದಲ್ಲಿ ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನೆರವಿನೊಡನೆ ಸಿದ್ಧವಾಗಿರುವ ಈ ಸಂಪುಟಗಳನ್ನು ನವೆಂಬರ್ ೧೯, ೨೦೧೨ರ ಸೋಮವಾರ ಲೋಕಾರ್ಪಣೆಗೊಳಿಸಲಾಗುತ್ತಿದೆ. ಬೆಂಗಳೂರು ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯಲಿರುವ ಈ ಸಮಾರಂಭದ ಸಂದರ್ಭದಲ್ಲಿ 'ವಿಜ್ಞಾನ' ಸಂಪುಟಗಳಿಗೆ ಶೇ. ೨೫ರ ರಿಯಾಯಿತಿ ನೀಡಲಾಗುವುದು. ಆಮಂತ್ರಣ ಪತ್ರಿಕೆಯನ್ನು ದೊಡ್ಡಗಾತ್ರದಲ್ಲಿ ನೋಡಲು ಪಕ್ಕದ ಚಿತ್ರದ ಮೇಲೆ ಕ್ಲಿಕ್ ಮಾಡಿ.

ಈ ಅಪೂರ್ವ ಪತ್ರಿಕೆಯ ಸಂಚಿಕೆಗಳನ್ನು ಓದಲು ನಮಗೆ ಮತ್ತೊಂದು ಅವಕಾಶ ನೀಡಿರುವ ಸಂಕಲನಕಾರರಾದ ಪ್ರೊ. ಎಚ್. ಆರ್. ರಾಮಕೃಷ್ಣರಾವ್ ಹಾಗೂ ಶ್ರೀ ಟಿ. ಆರ್. ಅನಂತರಾಮುರವರನ್ನು ಇಜ್ಞಾನ ಡಾಟ್ ಕಾಮ್ ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ.

('ವಿಜ್ಞಾನ' ಪತ್ರಿಕೆಯ ಮೊದಲ ಸಂಪುಟದ ಲೇಖನಗಳನ್ನು ಸಿರಿನುಡಿ ಜಾಲತಾಣದಲ್ಲಿ ಓದಬಹುದು)

ಬುಧವಾರ, ನವೆಂಬರ್ 7, 2012

ಕಂಪ್ಯೂಟರಿಗೆ ಕನ್ನಡ ಕಲಿಸಿದ ಕತೆ


ಟಿ. ಜಿ. ಶ್ರೀನಿಧಿ

ಶ್ರೀ ಕೆ. ಪಿ. ರಾವ್
ಈಗಷ್ಟೆ ಮಾರುಕಟ್ಟೆಗೆ ಬಂದ ಹೊಸ ಮೊಬೈಲ್ ಫೋನ್ ಇರಲಿ, ಲೇಟೆಸ್ಟ್ ಟ್ಯಾಬ್ಲೆಟ್ ಕಂಪ್ಯೂಟರ್ ಇರಲಿ, ಅಥವಾ ಕಂಪ್ಯೂಟರಿನ ಯಾವುದೋ ತಂತ್ರಾಂಶವೇ ಇರಲಿ, "ಇದರಲ್ಲಿ ಕನ್ನಡ ಬಳಸಬಹುದೇ?" ಎನ್ನುವ ಪ್ರಶ್ನೆ ನಮ್ಮೆದುರು ಆಗಿಂದಾಗ್ಗೆ ಬರುತ್ತಲೇ ಇರುತ್ತದೆ. ಆದರೆ ಈ ಪ್ರಶ್ನೆ ಯಾವುದೋ ನಿರ್ದಿಷ್ಟ ಯಂತ್ರಾಂಶ ಅಥವಾ ತಂತ್ರಾಂಶಕ್ಕಷ್ಟೆ ಸೀಮಿತವಾಗಿರುತ್ತದೆ; ಏಕೆಂದರೆ ಕಂಪ್ಯೂಟರಿನಲ್ಲಿ ಕನ್ನಡ ಮೂಡುವುದು ನಮ್ಮ ಪಾಲಿಗೆ ಹೊಸ ವಿಷಯವೇನೂ ಅಲ್ಲವಲ್ಲ!

ಆದರೆ ಕೆಲ ದಶಕಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಕಂಪ್ಯೂಟರುಗಳೇ ಅಪರೂಪವಾಗಿದ್ದ ಆ ಕಾಲದಲ್ಲಿ ಕಂಪ್ಯೂಟರ್ ಬಳಸಬೇಕು ಎಂದರೆ ಇಂಗ್ಲಿಷ್ ಗೊತ್ತಿರಲೇಬೇಕು ಎನ್ನುವಂತಹ ಪರಿಸ್ಥಿತಿ ಇತ್ತು. ಆ ಫೋನಿನಲ್ಲಿ ಕನ್ನಡ ಓದಬಹುದು, ಈ ಟ್ಯಾಬ್ಲೆಟ್ಟಿನಲ್ಲಿ ಕನ್ನಡ ಟೈಪುಮಾಡುವುದೂ ಸುಲಭ ಎಂದೆಲ್ಲ ವಿವರಿಸುವ ನಮಗೆ ಕಂಪ್ಯೂಟರ್ ಪ್ರಪಂಚದಲ್ಲಿ ಕನ್ನಡವೇ ಕಾಣಸಿಗದಿದ್ದ ದಿನಗಳನ್ನು ಊಹಿಸುವುದೇ ಕಷ್ಟ, ಅಲ್ಲವೆ?

ಅಂತಹ ದಿನಗಳಲ್ಲೂ ಕಂಪ್ಯೂಟರ್ ಪ್ರಪಂಚದಲ್ಲಿ ಸಕ್ರಿಯರಾಗಿದ್ದ ಕನ್ನಡದ ಭಗೀರಥರು ತಮ್ಮ ಅದಮ್ಯ ಉತ್ಸಾಹದಿಂದ ಕಂಪ್ಯೂಟರಿಗೂ ಅ-ಆ-ಇ-ಈ ಹೇಳಿಕೊಟ್ಟರು; ಡಿಜಿಟಲ್ ಲೋಕದಲ್ಲಿ ಕನ್ನಡ ಹುಲುಸಾಗಿ ಬೆಳೆಯಲು ಕಾರಣರಾದರು.

ಇಂಗ್ಲಿಷ್ ನಾಡಿನಿಂದ ಬಂದ ಕಂಪ್ಯೂಟರ್, ಇಂತಹ ಮೇಷ್ಟರೊಬ್ಬರ ನೆರವಿನಿಂದ ಕನ್ನಡ ಕಲಿತ ಕತೆ ಇಲ್ಲಿದೆ.

ಮಂಗಳವಾರ, ಅಕ್ಟೋಬರ್ 30, 2012

ಇನ್ನಷ್ಟು ವೀಡಿಯೋ ವಿಷಯ

ಡಿಜಿಟಲ್ ಛಾಯಾಗ್ರಹಣ ಅಂದಕೂಡಲೆ ಅದು ಫೋಟೋ ಅಷ್ಟೇ ಆಗಿರಬೇಕಿಲ್ಲವಲ್ಲ! ಹಾಗಾಗಿಯೇ ಕಳೆದವಾರದ ಲೇಖನದಲ್ಲಿ ಡಿಜಿಟಲ್ ವೀಡಿಯೋ ಕುರಿತ ಮಾಹಿತಿ ಹಂಚಿಕೊಳ್ಳಲಾಗಿತ್ತು. ಅದೇ ವಿಷಯದ ಕುರಿತ ಇನ್ನಷ್ಟು ಮಾಹಿತಿ ಇಂದಿನ ಸಂಚಿಕೆಯಲ್ಲೂ ಇದೆ.
ಟಿ. ಜಿ. ಶ್ರೀನಿಧಿ

ಈಚೆಗೆ ಉತ್ತಮ ಗುಣಮಟ್ಟದ ವೀಡಿಯೋ ಕುರಿತ ಪ್ರಸ್ತಾಪ ಬಂದಾಗಲೆಲ್ಲ 'ಎಚ್‌ಡಿ' ಎಂಬ ಎರಡಕ್ಷರದ ಹೆಸರು ಈಚೆಗೆ ವ್ಯಾಪಕವಾಗಿ ಕೇಳಸಿಗುತ್ತಿದೆ. ಎಲ್‌ಸಿಡಿ-ಎಲ್‌ಇಡಿ ಟೀವಿಗಳಿರಲಿ, ಡಿಜಿಟಲ್ ಕ್ಯಾಮೆರಾ ಇರಲಿ, ಟ್ಯಾಬ್ಲೆಟ್ಟು-ಮೊಬೈಲ್ ಫೋನುಗಳೇ ಇರಲಿ - ಎಲ್ಲೆಲ್ಲೂ ಎಚ್‌ಡಿಯದೇ ಭರಾಟೆ. ಇಷ್ಟಕ್ಕೂ ಈ ಎಚ್‌ಡಿ ಎಂದರೇನು?

ಹೈ ಡೆಫನಿಷನ್ ಕಪ್ಪು ಬಿಳುಪಿನ ಚಲನಚಿತ್ರಗಳಿರಲಿ, 'ಬ್ಲ್ಯಾಕ್ ಆಂಡ್ ವೈಟ್' ಟೀವಿಗಳಿರಲಿ, ಅವೆಲ್ಲ ನಿಧಾನಕ್ಕೆ ತೆರೆಮರೆಗೆ ಸರಿದು ವೀಡಿಯೋಗಳು ವರ್ಣಮಯವಾಗಿ ಕಾಣಿಸಿಕೊಳ್ಳಲು ಶುರುವಾದ ಕಾಲವೊಂದಿತ್ತಲ್ಲ? ಮನೆಯಲ್ಲಿ ಕಲರ್ ಟೀವಿ ಇದೆಯಂತೆ ಎನ್ನುವುದೇ ಆಗ ಹೆಮ್ಮೆಯ-ಪ್ರತಿಷ್ಠೆಯ ವಿಷಯವಾಗಿತ್ತು. ವೀಡಿಯೋ ಪ್ರಪಂಚದಲ್ಲಿ ಅಂತಹುದೇ ಇನ್ನೊಂದು ಕ್ರಾಂತಿಕಾರಕ ಬದಲಾವಣೆ ತಂದಿದ್ದು ಎಚ್‌ಡಿ ತಂತ್ರಜ್ಞಾನದ ಹಿರಿಮೆ. 'ಎಚ್‌ಡಿ' ಎನ್ನುವುದು 'ಹೈ ಡೆಫನಿಷನ್' ಎಂಬ ಹೆಸರಿನ ಹ್ರಸ್ವರೂಪ.

ಗುರುವಾರ, ಅಕ್ಟೋಬರ್ 25, 2012

ಡಿಜಿಟಲ್ ವೀಡಿಯೋ ಬಗ್ಗೆ ಒಂದಷ್ಟು...

ಡಿಜಿಟಲ್ ಛಾಯಾಗ್ರಹಣದ ಕುರಿತು ಒಂದಷ್ಟು ಮಾಹಿತಿ ನೀಡಿದ ಲೇಖನಗಳನ್ನು ಹಿಂದಿನ ವಾರಗಳಲ್ಲಿ  ಓದಿದ್ದೀರಿ. ಡಿಜಿಟಲ್ ಛಾಯಾಗ್ರಹಣ ಅಂದಕೂಡಲೆ ಅದು ಫೋಟೋ ಅಷ್ಟೇ ಆಗಿರಬೇಕಿಲ್ಲವಲ್ಲ! ಹಾಗಾಗಿಯೇ ಇಂದಿನ ಮತ್ತು ಮುಂದಿನ ಇನ್ನೊಂದು ಲೇಖನ ಡಿಜಿಟಲ್ ವೀಡಿಯೋ ಪರಿಚಯಕ್ಕಾಗಿ ಮೀಸಲು.
ಟಿ. ಜಿ. ಶ್ರೀನಿಧಿ

ಡಿಜಿಟಲ್ ಯುಗಕ್ಕಿಂತ ಕೊಂಚ ಹಿಂದಿನ ಕಾಲ ನೆನಪಿಸಿಕೊಳ್ಳಿ. ವೀಡಿಯೋ ಎಂದತಕ್ಷಣ ಅಂದಿನ ಕ್ಯಾಸೆಟ್ಟುಗಳೇ ನೆನಪಿಗೆ ಬರುತ್ತವಲ್ಲ! ರಜಾದಿನಗಳಲ್ಲಿ ಸಿನಿಮಾ ವೀಕ್ಷಣೆ ಎಂದರೆ ಈಗೇನೋ ಯೂಟ್ಯೂಬ್ ಮೂಲಕವೂ ಆಗಬಹುದು; ಆದರೆ ಆಗ ಪಕ್ಕದ ರಸ್ತೆಯ ವೀಡಿಯೋ ಲೈಬ್ರರಿಯೊಂದೇ ನಮ್ಮ ಸಿನಿಮಾ ಬೇಡಿಕೆಗಳನ್ನು ಪೂರೈಸುವ ಮೂಲವಾಗಿತ್ತು. ವಿಸಿಪಿ/ವಿಸಿಆರ್ ಇಲ್ಲವೆಂದರೆ ಅದೂ ಬಾಡಿಗೆಗೆ ಸಿಗುತ್ತಿತ್ತಲ್ಲ!

ಅಂದಿನ ವೀಡಿಯೋ ರೆಕಾರ್ಡಿಂಗ್ ಕೂಡ ಹಾಗೆಯೇ ಇತ್ತು; ಮದುವೆ ಮನೆ ವೀಡಿಯೋ ತೆಗೆಯುವ ವೀಡಿಯೋಗ್ರಾಫರ್ ಕ್ಯಾಮೆರಾ ಇರಲಿ, ಅಮೆರಿಕಾ ರಿಟರ್ನ್ಡ್ ಭಾವ ತಂದ ಪುಟ್ಟ ಕ್ಯಾಮ್‌ಕಾರ್ಡರ್ ಇರಲಿ - ಎಲ್ಲ ಕಡೆಯೂ ಕ್ಯಾಸೆಟ್ಟುಗಳದೇ ಭರಾಟೆ. ಟೇಪ್ ರೆಕಾರ್ಡರಿನ ಕ್ಯಾಸೆಟ್ಟಿನಂತೆ ಈ ತಂತ್ರಜ್ಞಾನವೂ ಅನಲಾಗ್ ಆಗಿತ್ತು.

ಪ್ರಪಂಚವೆಲ್ಲ ಡಿಜಿಟಲ್ ಆದಮೇಲೆ ವೀಡಿಯೋ ಮಾತ್ರ ಸುಮ್ಮನಿರಲು ಸಾಧ್ಯವೇ? ಬೇರೆಲ್ಲ ಕಡೆಗಳಲ್ಲೂ ಆದಂತೆ ಇಲ್ಲೂ ಡಿಜಿಟಲ್ ವೀಡಿಯೋ ಎಂಬ ಹೊಸ ಅವತಾರ ಸೃಷ್ಟಿಯಾಯಿತು; ವೀಡಿಯೋ ಚಿತ್ರೀಕರಣದ ಗುಣಮಟ್ಟ ಒಟ್ಟಾರೆಯಾಗಿ ಜಾಸ್ತಿಯಾಯಿತು. ಅಷ್ಟೇ ಅಲ್ಲ, ಕ್ಯಾಸೆಟ್ಟು ಹಳೆಯದಾದಂತೆ ಅಥವಾ ಒಂದರಿಂದ ಒಂದು ಕಾಪಿ ಮಾಡಿಕೊಂಡಂತೆ ವೀಡಿಯೋ ಗುಣಮಟ್ಟ ಕಡಿಮೆಯಾಗುತ್ತಿದ್ದ ಸಮಸ್ಯೆ ಕೂಡ ಇದರಿಂದಾಗಿ ನಿವಾರಣೆಯಾಯಿತು. ಎಷ್ಟು ಕಾಪಿ ಮಾಡಿಕೊಂಡರೂ ಪರವಾಗಿಲ್ಲ, ಎಷ್ಟು ಸಾರಿ ನೋಡಿದರೂ ಪರವಾಗಿಲ್ಲ, ವೀಡಿಯೋ ಗುಣಮಟ್ಟದಲ್ಲಿ ಮಾತ್ರ ಯಾವ ವ್ಯತ್ಯಾಸವೂ ಆಗುವುದಿಲ್ಲ ಎಂದು ಹೇಳುವ ಆತ್ಮವಿಶ್ವಾಸವನ್ನು ಡಿಜಿಟಲ್ ವೀಡಿಯೋ ನಮಗೆ ತಂದುಕೊಟ್ಟಿತು (ಸಿ.ಡಿ./ಡಿವಿಡಿಯ ಮೇಲ್ಮೈ ಹಾಳಾದರೆ ವೀಡಿಯೋ ಪ್ರದರ್ಶನದಲ್ಲಿ ಅಡಚಣೆ ಬರುತ್ತದೆ ನಿಜ, ಆದರೆ ಅದು ಮಾಧ್ಯಮದ ತೊಂದರೆಯೇ ವಿನಃ ಡಿಜಿಟಲ್ ವೀಡಿಯೋದ ಸಮಸ್ಯೆಯಲ್ಲ).

ಮದುವೆ ಕ್ಯಾಸೆಟ್ಟುಗಳನ್ನು ಸಿ.ಡಿ.ಗೋ ಡಿವಿಡಿಗೋ ಪರಿವರ್ತಿಸಿಕೊಳ್ಳುವ ಬಗ್ಗೆ ನಾವೆಲ್ಲ ಕೇಳಿದ್ದೇವೆ. ಇದು ಅನಲಾಗ್ ರೂಪದಲ್ಲಿರುವ ಮೂಲವನ್ನು ಡಿಜಿಟಲ್ ವೀಡಿಯೋಗೆ ಪರಿವರ್ತಿಸುವ ಉದಾಹರಣೆ ಅಷ್ಟೆ. ಹಾಗಾದರೆ ವೀಡಿಯೋಗಳನ್ನು ಡಿಜಿಟಲ್ ರೂಪದಲ್ಲೇ ಚಿತ್ರೀಕರಿಸಿಕೊಳ್ಳುವುದು ಹೇಗೆ?

ಶನಿವಾರ, ಅಕ್ಟೋಬರ್ 20, 2012

ಶ್ರದ್ಧಾಂಜಲಿ


ಹಿರಿಯ ವಿಜ್ಞಾನ ಲೇಖಕರಾದ ಶ್ರೀ ಕೈವಾರ ಗೋಪಿನಾಥರ ಹಠಾತ್ ನಿಧನದ ಸುದ್ದಿಯನ್ನು ಇಂದಿನ ಉದಯವಾಣಿ ಬಿತ್ತರಿಸಿದೆ. ಅವರಿಗೆ ನಮ್ಮ ಗೌರವಪೂರ್ವಕ ಶ್ರದ್ಧಾಂಜಲಿ. ಸರ್, ನಿಮ್ಮ ಅಗಲುವಿಕೆಯಿಂದ ಕನ್ನಡ ವಿಜ್ಞಾನ ಸಾಹಿತ್ಯ ಲೋಕ ನಿಜಕ್ಕೂ ಬಡವಾಗಿದೆ.

ಗುರುವಾರ, ಅಕ್ಟೋಬರ್ 18, 2012

ಖುಷಿ ಖುಷಿ!

ಇಜ್ಞಾನ ಡಾಟ್ ಕಾಮ್‌ನಲ್ಲಿ ದಾಖಲಾಗಿರುವ ಒಟ್ಟು ಪೇಜ್‌ವ್ಯೂಗಳ ಸಂಖ್ಯೆ ೫೦,೦೦೦ ದಾಟಿದೆ. ಈ ತಾಣ ಶುರುವಾಗಿ ಐದು ವರ್ಷ ಪೂರ್ಣವಾದ ೨೦೧೨ರಲ್ಲೇ ಐವತ್ತು ಸಾವಿರ ಸ್ಪರ್ಶದ ಈ ಖುಷಿಯೂ ದೊರಕಿರುವುದು ವಿಶೇಷ. 

ನಿಮ್ಮೆಲ್ಲರ ಸಹಕಾರದಿಂದ ಮುಂದೆ ಇನ್ನೂ ಹೆಚ್ಚಿನದನ್ನು ಸಾಧಿಸುವ ಉತ್ಸಾಹ ನಮಗಿದೆ. ನಿಮ್ಮ ಪ್ರೀತಿ, ಸಹಕಾರ, ಬೆಂಬಲ ಹೀಗೆಯೇ ಇರಲಿ!

ಮಂಗಳವಾರ, ಅಕ್ಟೋಬರ್ 16, 2012

ಒಂದು ಸೊನ್ನೆ ಸೊನ್ನೆ

ಇಂದು ಪ್ರಕಟವಾಗುತ್ತಿರುವುದು ವಿಜ್ಞಾಪನೆ ಅಂಕಣದ ನೂರನೆಯ ಸಂಚಿಕೆ.
ಈ ಲೇಖನದ ಶೀರ್ಷಿಕೆ ಇದೇಕೆ ಹೀಗಿದೆ? ಒಂದು-ಸೊನ್ನೆ-ಸೊನ್ನೆ ಎಂದರೆ ನೂರೋ, ಮೂರೋ??
ಟಿ. ಜಿ. ಶ್ರೀನಿಧಿ

ಕಂಪ್ಯೂಟರುಗಳಿಗೂ ಒಂದು-ಸೊನ್ನೆಗೂ ಇರುವ ಸಂಬಂಧ ಎಲ್ಲರಿಗೂ ಗೊತ್ತಿರುವುದೇ. ಕಂಪ್ಯೂಟರುಗಳು ಕೆಲಸಮಾಡುವುದೇ ದ್ವಿಮಾನ ಪದ್ಧತಿಯ ಈ ಎರಡು ಅಂಕಿಗಳನ್ನು ಬಳಸಿ. ನಮಗೆಲ್ಲ ಚಿರಪರಿಚಿತವಾದ ಬಿಟ್-ಬೈಟ್-ಮೆಗಾಬೈಟ್-ಗಿಗಾಬೈಟ್-ಟೆರಾಬೈಟ್‌ಗಳಿಗೆಲ್ಲ ಈ ಎರಡು ಅಂಕಿಗಳೇ ಮೂಲ.

ಇದೆಲ್ಲ ಎಲ್ಲರಿಗೂ ಗೊತ್ತಿರುವ ವಿಷಯ ಎನ್ನುವಿರಾ? ಅದೂ ಸರಿಯೇ. ಕಂಪ್ಯೂಟರುಗಳು ದ್ವಿಮಾನ ಪದ್ಧತಿ ಬಳಸುವುದು, ಅವಕ್ಕೆ ಒಂದು-ಸೊನ್ನೆ ಎಂಬ ಅಂಕಿಗಳು ಮಾತ್ರವೇ ಅರ್ಥವಾಗುವುದು, ಪ್ರೋಗ್ರಾಮುಗಳನ್ನು ಯಾವ ಭಾಷೆಯಲ್ಲೇ ಬರೆದರೂ ಅದು ಮೊದಲಿಗೆ ಒಂದು-ಸೊನ್ನೆಯ ಈ ಭಾಷೆಗೆ ಬದಲಾಗಬೇಕಾದ್ದು - ಈ ವಿಷಯಗಳೆಲ್ಲ ಕಂಪ್ಯೂಟರ್ ವಿಜ್ಞಾನದ ಪ್ರಾಥಮಿಕ ಪಾಠಗಳಲ್ಲಿ ಭದ್ರವಾಗಿ ಕುಳಿತುಬಿಟ್ಟಿವೆ.

ಆದರೆ ಕಂಪ್ಯೂಟರುಗಳು ದ್ವಿಮಾನ ಪದ್ಧತಿಯನ್ನೇ ಏಕೆ ಬಳಸುತ್ತವೆ?

ಮಂಗಳವಾರ, ಅಕ್ಟೋಬರ್ 9, 2012

ಕ್ಯಾಮೆರಾ ಕಾಗುಣಿತ: ಭಾಗ ೨


ಅಪರ್ಚರ್, ಎಕ್ಸ್‌ಪೋಶರ್, ಶಟರ್ ಸ್ಪೀಡ್, ಫೋಕಲ್ ಲೆಂತ್ - ಕ್ಯಾಮೆರಾ ಪ್ರಪಂಚವನ್ನು ಪರಿಚಯಿಸಿಕೊಳ್ಳುತ್ತಿದ್ದಂತೆ ಇಂತಹ ಪದಗಳ ಸಾಲುಸಾಲೇ ನಮ್ಮ ಕಿವಿಗೆ ಬೀಳುತ್ತವೆ. ಹೀಗೆ ಕೇಳಸಿಗುವ ಕೆಲ ಪದಗಳನ್ನು ಕಳೆದ ವಾರದ ಲೇಖನ ಪರಿಚಯಿಸಿತ್ತು. ಅಂತಹವೇ ಇನ್ನಷ್ಟು ಪದಗಳ ಪರಿಚಯ ಇಲ್ಲಿದೆ.

ಟಿ. ಜಿ. ಶ್ರೀನಿಧಿ

ಶಟರ್ ಸ್ಪೀಡ್: ಕ್ಯಾಮೆರಾದಲ್ಲಿ ಫೋಟೋ ದಾಖಲಾಗಬೇಕೆಂದರೆ ಒಂದಷ್ಟು ಬೆಳಕು ಅದರ ಸೆನ್ಸರ್ ಮೇಲೆ ಬೀಳಬೇಕು. ಕ್ಯಾಮೆರಾದ 'ಶಟರ್' ಬೆಳಕನ್ನು ಒಳಬಿಡುವ ಬಾಗಿಲಿನಂತೆ ಕೆಲಸಮಾಡುತ್ತದೆ. ಈ ಶಟರ್ ತೆರೆದುಕೊಂಡಿದ್ದಷ್ಟು ಹೊತ್ತು ಮಾತ್ರ ಸೆನ್ಸರ್ ಮೇಲೆ ಬೆಳಕು ಬೀಳುವುದು ಸಾಧ್ಯ. ಶಟರ್ ಎಷ್ಟು ಹೊತ್ತು ತೆರೆದುಕೊಂಡಿರುತ್ತದೆ ಎನ್ನುವುದನ್ನು ತೀರ್ಮಾನಿಸುವುದು ಕ್ಯಾಮೆರಾದ 'ಶಟರ್‌ಸ್ಪೀಡ್'.

ಶಟರ್‌ಸ್ಪೀಡನ್ನು ಸೆಕೆಂಡುಗಳಲ್ಲಿ ಅಳೆಯಲಾಗುತ್ತದೆ. ಅದನ್ನು ಸೆಕೆಂಡಿನ ಅದೆಷ್ಟೋ ಸಾವಿರದಲ್ಲೊಂದು ಭಾಗದಿಂದ ಪ್ರಾರಂಭಿಸಿ ಹಲವು ಸೆಕೆಂಡುಗಳವರೆಗೆ ಹೊಂದಿಸುವುದು ಸಾಧ್ಯ.

ಬುಧವಾರ, ಅಕ್ಟೋಬರ್ 3, 2012

ಕ್ಯಾಮೆರಾ ಕಾಗುಣಿತ: ಭಾಗ ೧


ಟಿ. ಜಿ. ಶ್ರೀನಿಧಿ
ಅಪರ್ಚರ್, ಎಕ್ಸ್‌ಪೋಶರ್, ಶಟರ್ ಸ್ಪೀಡ್, ಫೋಕಲ್ ಲೆಂತ್ - ಕ್ಯಾಮೆರಾ ಪ್ರಪಂಚವನ್ನು ಪರಿಚಯಿಸಿಕೊಳ್ಳುತ್ತಿದ್ದಂತೆ ಇಂತಹ ಪದಗಳ ಸಾಲುಸಾಲೇ ನಮ್ಮ ಕಿವಿಗೆ ಬೀಳುತ್ತವೆ. ಹೀಗೆ ಕೇಳಸಿಗುವ ಕೆಲ ಪದಗಳ ಪರಿಚಯ ಇಲ್ಲಿದೆ. ಇಂತಹವೇ ಇನ್ನಷ್ಟು ಪದಗಳ ಪರಿಚಯ, ಮುಂದಿನ ವಾರ!
ಅಪರ್ಚರ್: ಕ್ಯಾಮೆರಾದ ಲೆನ್ಸಿನ ಮೂಲಕ ಒಂದಷ್ಟು ಬೆಳಕು ಸೆನ್ಸರಿನ ಮೇಲೆ ಬಿದ್ದಾಗ ಛಾಯಾಚಿತ್ರ ಅದರಲ್ಲಿ ಸೆರೆಯಾಗುತ್ತದೆ. ಹೀಗೆ ಬೆಳಕನ್ನು ಒಳಗೆ ಬಿಟ್ಟುಕೊಳ್ಳಲು ಲೆನ್ಸು ಎಷ್ಟು ದೊಡ್ಡದಾಗಿ ತೆರೆದುಕೊಳ್ಳುತ್ತದೆ ಎನ್ನುವುದನ್ನು 'ಅಪರ್ಚರ್' ಸೂಚಿಸುತ್ತದೆ. ಸುತ್ತಲಿನ ಬೆಳಕಿನ ಪ್ರಮಾಣಕ್ಕೆ ಅನುಗುಣವಾಗಿ ಹಿಗ್ಗುವ ಅಥವಾ ಕುಗ್ಗುವ ಮೂಲಕ ಕಣ್ಣಿನ ಅಕ್ಷಿಪಟಲದ (ರೆಟಿನಾ) ಮೇಲೆ ಬೀಳುವ ಬೆಳಕನ್ನು ಪಾಪೆ (ಪ್ಯೂಪಿಲ್) ನಿಯಂತ್ರಿಸುತ್ತದಲ್ಲ, ಕ್ಯಾಮೆರಾದ ಅಪರ್ಚರ್ ಕೂಡ ಇದೇ ಕೆಲಸ ಮಾಡುತ್ತದೆ.

ಮಂಗಳವಾರ, ಸೆಪ್ಟೆಂಬರ್ 25, 2012

ಸೂಪರ್‌ಕಂಪ್ಯೂಟರ್ ಬಗ್ಗೆ ಇನ್ನಷ್ಟು

ಟಿ. ಜಿ. ಶ್ರೀನಿಧಿ

ಕಂಪ್ಯೂಟರ್ ಕುಟುಂಬದ ಸದಸ್ಯರ ಪೈಕಿ ಅತಿ ಹೆಚ್ಚು ಸಂಸ್ಕರಣಾ ಸಾಮರ್ಥ್ಯ ಹೊಂದಿರುವ, ಹಾಗೂ ಅತ್ಯಂತ ದುಬಾರಿಯಾಗಿರುವ ಹೆಚ್ಚುಗಾರಿಕೆ ಸೂಪರ್‌ಕಂಪ್ಯೂಟರುಗಳದು. ಕ್ಲಿಷ್ಟ ಲೆಕ್ಕಾಚಾರಗಳ ಅಗತ್ಯವಿರುವ ಹವಾಮಾನ ಮುನ್ಸೂಚನೆ, ವೈಜ್ಞಾನಿಕ ಸಂಶೋಧನೆ ಮುಂತಾದ ಕ್ಷೇತ್ರಗಳಲ್ಲಿ ಸೂಪರ್‌ಕಂಪ್ಯೂಟರುಗಳು ಬಳಕೆಯಾಗುತ್ತವೆ.

ಇವುಗಳ ಸಂಸ್ಕರಣಾ ಸಾಮರ್ಥ್ಯ ತೀರಾ ಉನ್ನತಮಟ್ಟದ್ದಾಗಿರುವುದರಿಂದಲೇ ಅದನ್ನು ಅಳೆಯಲು 'ಫ್ಲೋಟಿಂಗ್ ಪಾಯಿಂಟ್ ಇನ್ಸ್‌ಟ್ರಕ್ಷನ್ಸ್ ಪರ್ ಸೆಕೆಂಡ್', ಅಂದರೆ FLOPS ಎಂಬ ಏಕಮಾನವನ್ನು ಬಳಸಲಾಗುತ್ತದೆ. ದಶಾಂಶವಿರುವ ದೊಡ್ಡದೊಡ್ಡ ಸಂಖ್ಯೆಗಳ ಮೇಲೆ ಯಾವುದೇ ಕಂಪ್ಯೂಟರ್ ಒಂದು ಸೆಕೆಂಡಿನಲ್ಲಿ ಗುಣಾಕಾರ, ಭಾಗಾಕಾರ, ವರ್ಗಮೂಲ ಮುಂತಾದ ಎಷ್ಟು ಲೆಕ್ಕಾಚಾರಗಳನ್ನು ಕೈಗೊಳ್ಳಬಲ್ಲದು ಎನ್ನುವುದನ್ನು ಈ ಮಾಪನ ತಿಳಿಸುತ್ತದೆ.

ನಮಗೆಲ್ಲ ಪರಿಚಿತವಿರುವ ಕ್ಯಾಲ್‌ಕ್ಯುಲೇಟರುಗಳ ಸಾಮರ್ಥ್ಯ FLOPS ಏಕಮಾನದಲ್ಲಿ ಸುಮಾರು ಹತ್ತು ಇರಬಹುದು. ೧೯೬೦ರ ಸುಮಾರಿಗೆ ಬಂದ ಸೂಪರ್‌ಕಂಪ್ಯೂಟರುಗಳಲ್ಲಿ ಇದಕ್ಕಿಂತ ಕೆಲವೇ ನೂರು ಪಟ್ಟು ಹೆಚ್ಚಿನ, ಅಂದರೆ ಕೆಲವು ಸಾವಿರ ಫ್ಲಾಪ್ಸ್‌ನಷ್ಟು ಸಂಸ್ಕರಣಾ ಸಾಮರ್ಥ್ಯ ಇರುತ್ತಿತ್ತೆಂದು ತೋರುತ್ತದೆ. ಅದೇ ಇಂದಿನ ಸ್ಮಾರ್ಟ್‌ಫೋನುಗಳ ವಿಷಯಕ್ಕೆ ಬಂದರೆ ಅವುಗಳ ಸಾಮರ್ಥ್ಯ ಒಂದೆರಡು ಕೋಟಿ ಫ್ಲಾಪ್ಸ್ ಇರಬಹುದು. ಇನ್ನು ಟ್ಯಾಬ್ಲೆಟ್ ಗಣಕಗಳ ವಿಷಯಕ್ಕೆ ಬಂದರಂತೂ ಅವುಗಳಲ್ಲಿ ಇನ್ನೂ ಎಂಟು-ಹತ್ತು ಪಟ್ಟು ಜಾಸ್ತಿ ಸಂಸ್ಕರಣಾ ಸಾಮರ್ಥ್ಯ ಇರುತ್ತದೆ.

ಮೇಲ್ನೋಟಕ್ಕೆ ಭಲೇ ಎನ್ನಿಸಿದರೂ ಸೂಪರ್‌ಕಂಪ್ಯೂಟರುಗಳ ಸಾಮರ್ಥ್ಯದ ಇದೆಲ್ಲ ಏನೇನೂ ಅಲ್ಲ. ಏಕೆಂದರೆ ಸದ್ಯದ ಸೂಪರ್‌ಕಂಪ್ಯೂಟರುಗಳ ಸಾಮರ್ಥ್ಯ ಪೆಟಾಫ್ಲಾಪ್ಸ್‌ಗಳಲ್ಲಿದೆ! ಕಿಲೋ ಅಂದರೆ ಸಾವಿರ, ಮೆಗಾ ಅಂದರೇನೇ ಹತ್ತು ಲಕ್ಷ, ಇನ್ನು ಪೆಟಾ ಅಂದರೆ?

ಮಂಗಳವಾರ, ಸೆಪ್ಟೆಂಬರ್ 18, 2012

ಕೀಬೋರ್ಡ್ ಕತೆ

ಟಿ. ಜಿ. ಶ್ರೀನಿಧಿ

ಕಂಪ್ಯೂಟರ್ ಬಳಕೆದಾರರಿಗೆಲ್ಲ ಚಿರಪರಿಚಿತ ಯಂತ್ರಾಂಶ ಕೀಬೋರ್ಡ್. ಕಂಪ್ಯೂಟರಿಗೆ ನಾವು ನೀಡಬೇಕಾದ ಆದೇಶಗಳಿರಲಿ, ಮುದ್ರಣಕ್ಕೆ ಸಿದ್ಧಪಡಿಸಬೇಕಿರುವ ಕಡತವಿರಲಿ, ಎಲ್ಲವುದಕ್ಕೂ ಕೀಬೋರ್ಡ್ ಬೇಕು. ಕೀಬೋರ್ಡಿನ ಕೀಲಿಗಳನ್ನು ಒತ್ತಿದರೆ ಸಾಕು, ನಾವು ಹೇಳಬೇಕಿರುವುದು ಕಂಪ್ಯೂಟರಿಗೆ ತಿಳಿದುಬಿಡುತ್ತದೆ! ಎಂದು ಈಗಷ್ಟೆ ಕಂಪ್ಯೂಟರ್ ಬಳಕೆ ಕಲಿತವರೂ ಹೇಳಬಲ್ಲರು.

ಕೇಳಲು, ನೋಡಲು ಅದೆಷ್ಟು ಸರಳವೆಂದು ತೋರಿದರೂ ಕೀಬೋರ್ಡ್ ಕೆಲಸಮಾಡುವ ವಿಧಾನ ಸಾಕಷ್ಟು ಸಂಕೀರ್ಣವಾದದ್ದೇ. ಹಾಗೆ ನೋಡಿದರೆ ಅದನ್ನೊಂದು ಸಣ್ಣ ಕಂಪ್ಯೂಟರ್ ಎಂದೇ ಕರೆಯಬಹುದು. ಬಳಕೆದಾರರು ಯಾವ ಕೀಲಿಯನ್ನು ಒತ್ತಿದ್ದಾರೆ ಎಂದು ಪತ್ತೆಮಾಡಿ ಸೂಕ್ತ ಸಂಕೇತದ ಮೂಲಕ ಆ ಮಾಹಿತಿಯನ್ನು ಕಂಪ್ಯೂಟರಿಗೆ ತಿಳಿಸಲು ಬೇಕಾದ ವ್ಯವಸ್ಥೆಯೆಲ್ಲ ಕೀಬೋರ್ಡಿನಲ್ಲಿರುತ್ತದೆ.

ಬುಧವಾರ, ಸೆಪ್ಟೆಂಬರ್ 12, 2012

ಫ್ಲ್ಯಾಶ್ ನ್ಯೂಸ್!

ಟಿ. ಜಿ. ಶ್ರೀನಿಧಿ

ಮೂರೂವರೆಸಾವಿರದ ಮೊಬೈಲ್ ಆಗಿರಲಿ, ಅದಕ್ಕಿಂತ ಹತ್ತು ಪಟ್ಟು ಹೆಚ್ಚಿನ ಬೆಲೆಯ ಡಿಎಸ್‌ಎಲ್‌ಆರ್ ಆಗಿರಲಿ, ನಮ್ಮಲ್ಲಿರುವ ಕ್ಯಾಮೆರಾ ಬಳಸಿ ಒಳ್ಳೆಯ ಚಿತ್ರಗಳನ್ನು ಕ್ಲಿಕ್ಕಿಸಬೇಕೆನ್ನುವುದೇ ನಮ್ಮೆಲ್ಲರ ಆಸೆ. ಕ್ಯಾಮೆರಾದಲ್ಲಿರುವ ಬೇರೆಬೇರೆ ಮೋಡ್‌ಗಳನ್ನು ಬಳಸುವುದು, ವಿಭಿನ್ನ ಕೋನಗಳಿಂದ ಚಿತ್ರ ತೆಗೆಯಲು ಪ್ರಯತ್ನಿಸುವುದು - ಎಲ್ಲವೂ ಇದೇ ಉದ್ದೇಶಕ್ಕಾಗಿಯೇ ಅಲ್ಲವೆ?

ಹೀಗೆ ಚಿತ್ರಗಳನ್ನು ಕ್ಲಿಕ್ಕಿಸುವಾಗ ನಮ್ಮ ಕೈಲಿರುವ ಕ್ಯಾಮೆರಾ ಹಾಗೂ ಅದರ ಮುಂದಿರುವ ದೃಶ್ಯದಷ್ಟೇ ಮಹತ್ವದ ವಿಷಯ ಇನ್ನೊಂದಿದೆ. ಅದೇ ಬೆಳಕು. ಬೆಳಕಿನ ಸಂಯೋಜನೆ ಸರಿಯಿಲ್ಲದೆ ಎಷ್ಟೇ ಅದ್ಭುತವಾದ ದೃಶ್ಯವನ್ನು ಕ್ಲಿಕ್ಕಿಸಿದರೂ ಒಳ್ಳೆಯ ಚಿತ್ರ ಸಿಗುವುದು ಅಸಾಧ್ಯವೆಂದೇ ಹೇಳಬಹುದು.

ಹಾಗೆಂದಮಾತ್ರಕ್ಕೆ ಎಲ್ಲ ಸನ್ನಿವೇಶಗಳಲ್ಲೂ ಫೋಟೋ ತೆಗೆಯಲು ಅನುಕೂಲಕರವಾದ ಬೆಳಕನ್ನು ನಿರೀಕ್ಷಿಸುವಂತಿಲ್ಲವಲ್ಲ?

ಸೋಮವಾರ, ಸೆಪ್ಟೆಂಬರ್ 10, 2012

ಅನಿಸಿಕೆ ತಿಳಿಸಿ ಬಹುಮಾನ ಗೆಲ್ಲಿ!

ಇಜ್ಞಾನ ಡಾಟ್ ಕಾಮ್‌ನಲ್ಲಿ ವಾರಕ್ಕೊಂದರಂತೆ ಪ್ರಕಟವಾಗುತ್ತಿರುವ ತಂತ್ರಜ್ಞಾನ ಲೇಖನಗಳನ್ನು ನೀವು ಗಮನಿಸಿದ್ದೀರಿ. ಪ್ರತಿ ಮಂಗಳವಾರ ಉದಯವಾಣಿಯ ಜೋಶ್ ಪುರವಣಿಯಲ್ಲಿ ಮೂಡಿಬರುವ ಈ ಅಂಕಣದ ನೂರನೆಯ ಕಂತು ಇನ್ನು ಕೆಲವೇ ವಾರಗಳಲ್ಲಿ ಪ್ರಕಟವಾಗಲಿದೆ.

ನೂರನೆಯ ಕಂತಿನಲ್ಲಿ ನೀವು ಯಾವ ವಿಷಯದ ಕುರಿತ ಬರೆಹವನ್ನು ಓದಲು ಇಷ್ಟಪಡುತ್ತೀರಿ?

ನಿಮ್ಮ ಅನಿಸಿಕೆಯನ್ನು ಸೆಪ್ಟೆಂಬರ್ ೩೦, ೨೦೧೨ರೊಳಗೆ ನಮಗೆ ತಿಳಿಸಿ. ಆಯ್ಕೆಯಾದ ಉತ್ತರಕ್ಕೆ ಇಜ್ಞಾನ ಡಾಟ್ ಕಾಮ್ ವತಿಯಿಂದ ವಿಶೇಷ ಬಹುಮಾನವಿದೆ!*


*ಷರತ್ತುಗಳು ಅನ್ವಯಿಸುತ್ತವೆ.

ಗುರುವಾರ, ಸೆಪ್ಟೆಂಬರ್ 6, 2012

ಹುಲಿ ಉಳಿಸುವ ದಾರಿ

ಇಜ್ಞಾನ ವಾರ್ತೆ


ಹೆಸರಾಂತ ವನ್ಯಜೀವಿ ಚಿತ್ರನಿರ್ಮಾಪಕ ಶ್ರೀ ಶೇಖರ್ ದತ್ತಾತ್ರಿಯವರು ನಿರ್ಮಿಸಿರುವ 'ದ ಟ್ರುಥ್ ಅಬೌಟ್ ಟೈಗರ್ಸ್' ಸಾಕ್ಷ್ಯಚಿತ್ರದ ಕನ್ನಡ ಆವೃತ್ತಿ ಇಂದು (ಸೆಪ್ಟೆಂಬರ್ ೬) ಸಂಜೆ ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಬಿಡುಗಡೆಯಾಯಿತು. ಅಳಿವಿನಂಚಿನಲ್ಲಿರುವ ಭಾರತದ ರಾಷ್ಟ್ರಪ್ರಾಣಿ ಹುಲಿಯನ್ನೂ, ಅದರ ನೈಜ ನೆಲೆಗಳನ್ನೂ ಸಂರಕ್ಷಿಸುವ ಅಗತ್ಯ ಮತ್ತು ಅದಕ್ಕಾಗಿ ಅನುಸರಿಸಬೇಕಾದ ಕ್ರಮಗಳನ್ನು ಈ ಸಾಕ್ಷ್ಯಚಿತ್ರ ನಿರೂಪಿಸುತ್ತದೆ. ಈ ಪರಿಣಾಮಕಾರಿ ಚಿತ್ರವನ್ನು 'ಹುಲಿ ಉಳಿಸುವ ದಾರಿ' ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿರುವವರು ಶ್ರೀ ಟಿ. ಎಸ್. ಗೋಪಾಲ್ ಹಾಗೂ ಡಾ| ಕೆ. ಉಲ್ಲಾಸ ಕಾರಂತ.

ಯಾವುದೇ ವಾಣಿಜ್ಯ ಉದ್ದೇಶಗಳಿಲ್ಲದ ಈ ಚಿತ್ರ ಹಾಗೂ ಅದರಲ್ಲಿರುವ ಮಾಹಿತಿಯ ಬಗ್ಗೆ ಹೆಚ್ಚಿನ ವಿವರಗಳನ್ನು www.truthabouttigers.org ಜಾಲತಾಣದಲ್ಲಿ ಪಡೆಯಬಹುದು. ಅಷ್ಟೇ ಅಲ್ಲ, ಸಂಪೂರ್ಣ ಸಾಕ್ಷ್ಯಚಿತ್ರವನ್ನು ಯುಟ್ಯೂಬ್‌ನಲ್ಲಿ (www.youtube.com/truthabouttigers) ಮುಕ್ತವಾಗಿ ವೀಕ್ಷಿಸಲೂಬಹುದು.

ಮಂಗಳವಾರ, ಸೆಪ್ಟೆಂಬರ್ 4, 2012

ಮೋಡ್ ಮೋಡಿ ನೋಡಿ!

ಟಿ. ಜಿ. ಶ್ರೀನಿಧಿ

ಮೊಬೈಲ್ ಫೋನಿನಲ್ಲಿರುವ ಕ್ಯಾಮೆರಾದಿಂದ ಪ್ರಾರಂಭಿಸಿ ಡಿಎಸ್‌ಎಲ್‌ಆರ್‌ವರೆಗೆ ನಾವೆಲ್ಲ ಅನೇಕ ರೀತಿಯ ಡಿಜಿಟಲ್ ಕ್ಯಾಮೆರಾಗಳನ್ನು ಬಳಸುತ್ತೇವೆ. ಬೇಕಾದಷ್ಟು ಚಿತ್ರಗಳನ್ನು ಕ್ಲಿಕ್ಕಿಸುತ್ತೇವೆ.

ನಾವು ಏನನ್ನು ಕ್ಲಿಕ್ಕಿಸಲು ಹೊರಟಿದ್ದೇವೋ ಆ ವಿಷಯಕ್ಕೆ ತಕ್ಕಂತೆ ಕ್ಯಾಮೆರಾದ ತಾಂತ್ರಿಕ ಸಂಯೋಜನೆಯನ್ನು ಬದಲಾಯಿಸಿಕೊಂಡರೆ ಉತ್ತಮ ಚಿತ್ರಗಳನ್ನು ಸೆರೆಹಿಡಿಯುವುದು ಸಾಧ್ಯವಾಗುತ್ತದೆ. ಮನೆಯೊಳಗೆ ಆಡುತ್ತಿರುವ ಮಗುವಿರಲಿ, ರಸ್ತೆಯಲ್ಲಿ ಓಡುತ್ತಿರುವ ಮರ್ಸಿಡಿಸ್ ಕಾರೇ ಇರಲಿ, ಬೇರೆಬೇರೆ 'ಮೋಡ್'ಗಳನ್ನು ಬಳಸಿ ಕ್ಯಾಮೆರಾದ ತಾಂತ್ರಿಕ ಸಂಯೋಜನೆಯನ್ನು ನಾವು ಕ್ಲಿಕ್ಕಿಸಲಿರುವ ಚಿತ್ರಕ್ಕೆ ಸರಿಯಾಗಿ ಹೊಂದಿಸಿಕೊಳ್ಳಬಹುದು.

ಬಹುತೇಕ ಕ್ಯಾಮೆರಾಗಳಲ್ಲಿ ವೃತ್ತಾಕಾರದ ಒಂದು ಪುಟ್ಟ ಡಯಲ್ ಅನ್ನು ತಿರುಗಿಸುವ ಮೂಲಕ ಮೋಡ್‌ಗಳನ್ನು ಬದಲಿಸಿಕೊಳ್ಳುವುದು ಸಾಧ್ಯ (ಚಿತ್ರ ನೋಡಿ). ಮೊಬೈಲುಗಳಲ್ಲಿ ಇಂತಹ ಡಯಲ್ ಇಲ್ಲದಿದ್ದರೂ ಕೂಡ ಕ್ಯಾಮೆರಾದ ಆಯ್ಕೆಗಳಲ್ಲೇ ನಮಗೆ ಬೇಕಾದ ಮೋಡ್ ಅನ್ನು ಆರಿಸಿಕೊಳ್ಳಬಹುದು. ಇಂತಹ ಕೆಲ 'ಮೋಡ್'ಗಳ ಪರಿಚಯ ಇಲ್ಲಿದೆ.

ಮಂಗಳವಾರ, ಆಗಸ್ಟ್ 28, 2012

ಫಾಂಟ್ ಫಂಡಾ!

ಟಿ. ಜಿ. ಶ್ರೀನಿಧಿ

ಕಂಪ್ಯೂಟರಿನ ಮುಂದೆ ಕುಳಿತಿದ್ದಷ್ಟೂ ಹೊತ್ತು ನಮ್ಮ ಸುತ್ತ ಮಾಹಿತಿಯ ಮಹಾಸಾಗರವೇ ಹರಡಿಕೊಂಡಿರುತ್ತದೆ, ಮತ್ತು ಅದರಲ್ಲಿ ಬಹುಪಾಲು ಪಠ್ಯರೂಪದಲ್ಲೇ ಇರುತ್ತದೆ. ಕಂಪ್ಯೂಟರ್ ಬಿಟ್ಟು ಎದ್ದಮೇಲೂ ಅಷ್ಟೆ: ಮೇಜಿನ ಮೇಲಿನ ಪತ್ರಿಕೆ, ಪಕ್ಕದ ರಸ್ತೆಯ ಲೈಬ್ರರಿಯಿಂದ ತಂದಿರುವ ಪುಸ್ತಕ, ಬೆಳಿಗ್ಗೆ ಪೇಪರಿನ ಜೊತೆ ಬಂದ ಪಾಂಪ್ಲೆಟ್ಟು, ಪೋಸ್ಟಿನಲ್ಲಿ ಬಂದಿರುವ ಟೆಲಿಫೋನ್ ಬಿಲ್ಲು - ಹೀಗೆ ಅಲ್ಲೂ ಭಾರೀ ಪ್ರಮಾಣದ ಮಾಹಿತಿ ಕಂಪ್ಯೂಟರಿನ ಸಹಾಯದಿಂದಲೇ ಮುದ್ರಿತವಾಗಿರುವುದು ನಮ್ಮ ಗಮನಕ್ಕೆ ಬರುತ್ತದೆ.

ಇಷ್ಟೆಲ್ಲ ಮಾಹಿತಿಯನ್ನು ನಮಗೆ ತಲುಪಿಸುವ ಮಹತ್ವದ ಜವಾಬ್ದಾರಿ ಅಕ್ಷರಗಳದು. ಈ ಅಕ್ಷರಗಳ ಅನನ್ಯಲೋಕ ಕಂಪ್ಯೂಟರ್‌ನಲ್ಲಿ ತೆರೆದುಕೊಳ್ಳುವ ಬಗೆಯತ್ತ ಒಂದು ನೋಟ ಇಲ್ಲಿದೆ.

ಮಂಗಳವಾರ, ಆಗಸ್ಟ್ 21, 2012

ಪಿಕ್ಚರ್ ವಿಷಯ!

ಟಿ. ಜಿ. ಶ್ರೀನಿಧಿ

ಒಂದು ಚಿತ್ರ ಸಾವಿರ ಪದಗಳಿಗೆ ಸಮವಂತೆ. ಸುದೀರ್ಘ ವಿವರಣೆ ಸೇರಿಸಿ ಪೇಜುಗಟ್ಟಲೆ ಬರೆದರೂ ಪರಿಣಾಮಕಾರಿಯಾಗಿ ಹೇಳಲಾಗದ್ದನ್ನು ಒಂದೇ ಒಂದು ಚಿತ್ರ ಹೇಳಬಲ್ಲದು ಎನ್ನುವುದು ಈ ಮಾತಿನ ಅಭಿಪ್ರಾಯ; ಅದು ಅಕ್ಷರಶಃ ನಿಜವೂ ಹೌದು.

ಸಾವಿರ ಪದಗಳಿಗೆ ಪರ್ಯಾಯವಾದ ಇಂತಹ ಅದೆಷ್ಟೋ ಚಿತ್ರಗಳು ಕಂಪ್ಯೂಟರಿನೊಳಗೆ ಕಡತಗಳಾಗಿ ಕುಳಿತಿರುತ್ತವಲ್ಲ, ಅಂತಹುದೊಂದು ಕಡತದ ಬಾಲಂಗೋಚಿ, ಅಂದರೆ ಫೈಲ್ ಎಕ್ಸ್‌ಟೆನ್ಷನ್ ನೋಡಿಯೇ ಆ ಚಿತ್ರದ ಬಗೆಗೆ ಒಂದಷ್ಟು ಮಾಹಿತಿ ತಿಳಿದುಕೊಳ್ಳಬಹುದು. ಚಿತ್ರದ ಹೆಸರಿನ ಬಗೆಗೆ ಅದರ ಬಾಲಂಗೋಚಿ ತೆರೆದಿಡುವ ಈ ವಿವರಗಳನ್ನು ಸಾವಿರ ಪದಗಳೊಳಗೇ ವಿವರಿಸುವ ಪ್ರಯತ್ನ ಈ ಲೇಖನದಲ್ಲಿದೆ.

ಸೋಮವಾರ, ಆಗಸ್ಟ್ 20, 2012

ಪಶ್ಚಿಮ ಘಟ್ಟ - ನಮಗೆಷ್ಟು ಗೊತ್ತು?

'ಪಶ್ಚಿಮ ಘಟ್ಟ - ನಮಗೆಷ್ಟು ಗೊತ್ತು?' ವಿಷಯದ ಕುರಿತು ಭಾಷಣ-ಪ್ರಶ್ನೋತ್ತರ ಕಾರ್ಯಕ್ರಮ ಇಂದು (ಆಗಸ್ಟ್ ೨೦) ಸಂಜೆ ೪ ಗಂಟೆಗೆ ಬೆಂಗಳೂರಿನ ಆರ್ ವಿ ರಸ್ತೆಯಲ್ಲಿರುವ ಆರ್ ವಿ ಟೀಚರ್ಸ್ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ.

ಅದಮ್ಯ ಚೇತನ ಸಂಸ್ಥೆ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ವಿಷಯ ತಜ್ಞರಾದ ಶ್ರೀ ಪ್ರವೀಣ್ ಭಾರ್ಗವ್ ಅವರು ವಿಷಯ ಮಂಡನೆ ಮಾಡಲಿದ್ದಾರೆ.

ಆಮಂತ್ರಣ ಪತ್ರವನ್ನು ದೊಡ್ಡ ಗಾತ್ರದಲ್ಲಿ ನೋಡಲು ಪಕ್ಕದಲ್ಲಿರುವ ಚಿತ್ರದ ಮೇಲೆ ಕ್ಲಿಕ್ ಮಾಡಿ.

ಮಂಗಳವಾರ, ಆಗಸ್ಟ್ 14, 2012

ನೆಟ್ ಬ್ಯಾಂಕಿಂಗ್ ನೋಟ

ಟಿ. ಜಿ. ಶ್ರೀನಿಧಿ

ಕಳೆದ ವಾರ ಕಂಪ್ಯೂಟರ್ ಸುರಕ್ಷತಾ ಸಂಸ್ಥೆ ಕಾಸ್ಪರ್‌ಸ್ಕೀ ಲ್ಯಾಬ್ಸ್ ಕಡೆಯಿಂದ ಒಂದು ಸುದ್ದಿ ಬಂತು; 'ಗಾಸ್' ಎಂಬ ಹೊಸ ಕುತಂತ್ರಾಂಶ ಪತ್ತೆಯಾಗಿದೆ ಎನ್ನುವುದು ಈ ಸುದ್ದಿಯ ಸಾರಾಂಶ. ಈ ಹಿಂದೆ ಪತ್ತೆಯಾಗಿದ್ದ, ಸೈಬರ್ ಯುದ್ಧದ ಅಸ್ತ್ರ ಎಂದು ಪರಿಗಣಿಸಲಾಗಿದ್ದ 'ಫ್ಲೇಮ್'ನಂತೆಯೇ ಈ ಹೊಸ ಕುತಂತ್ರಾಂಶವೂ ಯಾವುದೋ ಸರಕಾರದ ಬೆಂಬಲದಿಂದಲೇ ರೂಪುಗೊಂಡಿರಬೇಕು ಎಂಬ ಸಂಶಯವನ್ನು ಕಾಸ್ಪರ್‌ಸ್ಕೀ ಸಂಸ್ಥೆಯ ತಂತ್ರಜ್ಞರು ವ್ಯಕ್ತಪಡಿಸಿದ್ದಾರೆ.

ಸ್ಟಕ್ಸ್‌ನೆಟ್ ಹೋಗಿ ಫ್ಲೇಮ್ ಬಂತು ಎನ್ನುವಷ್ಟರಲ್ಲಿ ಇದೇನಪ್ಪ ಇದು ಇನ್ನೊಂದು ತಾಪತ್ರಯ ವಕ್ಕರಿಸಿಕೊಂಡಿತಲ್ಲ ಎಂದುಕೊಳ್ಳುತ್ತಿರುವಂತೆಯೇ ಈ ಹೊಸ ಕುತಂತ್ರಾಂಶದ ಒಂದು ಅಂಶ ಗಮನಸೆಳೆಯಿತು: ಆನ್‌ಲೈನ್ ಬ್ಯಾಂಕಿಂಗ್ ಖಾತೆಯ ವಿವರಗಳನ್ನು ಕದಿಯುವುದು ಇದರ ವೈಶಿಷ್ಟ್ಯಗಳಲ್ಲೊಂದಂತೆ!

ಶುಕ್ರವಾರ, ಆಗಸ್ಟ್ 10, 2012

ಜೈವಿಕ ಇಂಧನ ಕ್ರಾಂತಿ: ಮಲ್ಲಿಗೆವಾಳು ಮೊದಲುಗೊಂಡು..

ಇವತ್ತು (ಆಗಸ್ಟ್ ೧೦) ಅಂತಾರಾಷ್ಟ್ರೀಯ ಜೈವಿಕ ಇಂಧನ ದಿನ. ಇಂದಿನಿಂದ ಮೂರು ದಿನಗಳವರೆಗೆ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ 'ಜೈವಿಕ ಇಂಧನ ಮೇಳ' ನಡೆಯುತ್ತಿದೆ. ಈ ಸಂದರ್ಭದಲ್ಲೊಂದು ವಿಶೇಷ ಲೇಖನ ಪ್ರಕಟಿಸಲು ಇಜ್ಞಾನ ಡಾಟ್ ಕಾಮ್ ಸಂತೋಷಿಸುತ್ತದೆ. ಜೈವಿಕ ಇಂಧನ ಮೇಳದ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ತಾಣಕ್ಕೆ ಭೇಟಿಕೊಡಬಹುದು.

ಟಿ. ಎಸ್. ಗೋಪಾಲ್

ಹಾಸನದಿಂದ ಸಕಲೇಶಪುರಕ್ಕೆ ಹೋಗುವ ಹೆದ್ದಾರಿಯಲ್ಲಿ ಆರೇಳು ಕಿ.ಮೀ. ದೂರ ಹೋದರೆ ಅಲ್ಲೇ ಎಡಕ್ಕೆ ಶೆಟ್ಟಿಹಳ್ಳಿಗೆ ಹೋಗುವ ರಸ್ತೆ. ಆ ರಸ್ತೆಯಲ್ಲಿ ಸ್ವಲ್ಪ ಮುಂದೆ ಹೋಗಿ ಶಂಕರನಹಳ್ಳಿ ದಾಟಿದರೆ, ಬಲಕ್ಕೆ ಮಲ್ಲಿಗೆವಾಳು ಗ್ರಾಮಕ್ಕೆ ಎರಡೇ ಕಿಲೋಮೀಟರು ಎಂಬ ಬೋರ್ಡು ಕಾಣಸಿಗುತ್ತದೆ. ಹಾಸನದಿಂದ ಹನ್ನೆರಡು ಕಿ.ಮೀ. ದೂರದ ಈ ಹಳ್ಳಿಯಲ್ಲಿ ಹೆಚ್ಚೆಂದರೆ ಒಂದು ನೂರು ಕುಟುಂಬಗಳಿವೆ.

ಶಾಲೆಯ ಮುಂದಿನ ಮಣ್ಣುರಸ್ತೆಯಲ್ಲಿ ನಮ್ಮ ವಾಹನ ನಿಲ್ಲುವಾಗ, ಹೊರಗೆ ಆಡುತ್ತಿದ್ದ ಮಕ್ಕಳು, ಆಗಾಗ ಬರುವ ಪ್ರೀತಿಯ ನೆಂಟರನ್ನು ಸ್ವಾಗತಿಸುವಷ್ಟೇ ಸಲಿಗೆಯಿಂದ ಸುತ್ತ ಬಂದು ನಿಂತವು. ಕಚ್ಚಾ ರಸ್ತೆಯಲ್ಲಿ ವಾಹನ ತಮ್ಮನ್ನು ದಾಟಿ ಬರುವಾಗಲೇ ಕೈಬೀಸಿ ನಗುಮುಖ ತೋರಿದ್ದ ನಾಲ್ಕಾರು ಜನ ಶಾಲೆಯತ್ತಲೇ ಬಂದರು.

ಮಂಗಳವಾರ, ಆಗಸ್ಟ್ 7, 2012

ಒಲಿಂಪಿಕ್ಸ್‌ಗೆ ಟ್ವಿಟ್ಟರ್ ಕಾಟ!

ಟಿ. ಜಿ. ಶ್ರೀನಿಧಿ

ಕಳೆದ ವಾರ ಲಂಡನ್ ಒಲಿಂಪಿಕ್ಸ್‌ನಲ್ಲಿ ಪುರುಷರ ಸೈಕ್ಲಿಂಗ್ ಸ್ಪರ್ಧೆ ಇತ್ತಲ್ಲ, ನಗರದ ಹೊರವಲಯದಲ್ಲೂ ಸಾಗಿದ ಈ ಸೈಕಲ್ ರೇಸ್ ವೀಕ್ಷಿಸಲು ಲಕ್ಷಾಂತರ ಜನ ರಸ್ತೆಯ ಇಕ್ಕೆಲಗಳಲ್ಲೂ ನೆರೆದದ್ದು ಟೀವಿ ಪ್ರಸಾರದಲ್ಲಿ ಕಂಡುಬಂತು. ದಾರಿಯುದ್ದಕ್ಕೂ ಎಲ್ಲರೂ ಫೋಟೋ ಕ್ಲಿಕ್ಕಿಸುವವರೇ ಇದ್ದಂತಿತ್ತು.

ರೇಸ್ ನೋಡಿ, ಫೋಟೋ ತೆಗೆದು ಸುಮ್ಮನಿದ್ದರೆ ಆದೀತೆ? ನಾವೆಲ್ಲಿದ್ದೇವೆ, ಏನು ಮಾಡುತ್ತಿದ್ದೇವೆ, ಯಾವ ಫೋಟೋ ತೆಗೆದಿದ್ದೇವೆ, ತೆಗೆದ ಫೋಟೋ ಹೇಗಿದೆ ಎಂಬುದನ್ನೆಲ್ಲ ಅವರು ಫೇಸ್‌ಬುಕ್‌ನಲ್ಲಿ-ಟ್ವಿಟ್ಟರಿನಲ್ಲಿ ಪ್ರಕಟಿಸಲು ಪ್ರಾರಂಭಿಸಿದರು.

ಮೊದಲೇ ನಗರದ ಹೊರವಲಯ, ಅಲ್ಲಿನ ನೆಟ್‌ವರ್ಕ್ ಹೇಗಿತ್ತೋ ಏನೋ. ಇಷ್ಟೆಲ್ಲ ಮಾಹಿತಿಯ ಪ್ರವಾಹ ಒಂದೇ ಬಾರಿಗೆ ದೂರವಾಣಿ ಜಾಲದತ್ತ ನುಗ್ಗುತ್ತಿದ್ದಂತೆ ನೆಟ್‌ವರ್ಕ್ ಪೂರ್ತಿ ಸುಸ್ತುಹೊಡೆದುಬಿಟ್ಟಿತಂತೆ.

ಇದರ ಅನಿರೀಕ್ಷಿತ ಪರಿಣಾಮವಾದದ್ದು ಪಂದ್ಯದ ನೇರಪ್ರಸಾರದ ಮೇಲೆ. ಯಾವ ಸ್ಪರ್ಧಿಗಳು ಯಾವ ಸ್ಥಾನದಲ್ಲಿದ್ದಾರೆ ಎನ್ನುವ ಮಾಹಿತಿ ಸೈಕಲ್‌ಗಳಲ್ಲಿ ಅಳವಡಿಸಲಾಗಿದ್ದ ಪುಟಾಣಿ ಜಿಪಿಎಸ್ ಟ್ರಾನ್ಸ್‌ಮಿಟರುಗಳಿಂದ ಹೊರಟು ಮೊಬೈಲ್ ದೂರವಾಣಿ ಜಾಲದ ಮೂಲಕ ಒಲಿಂಪಿಕ್ಸ್ ಬ್ರಾಡ್‌ಕಾಸ್ಟಿಂಗ್ ಸರ್ವಿಸ್‌ಗೆ ತಲುಪಬೇಕಿತ್ತು. ಆದರೆ ಮಾಹಿತಿಯ ಈ ಸಣ್ಣ ಹರಿವು ಟ್ವಿಟ್ಟರ್-ಫೇಸ್‌ಬುಕ್‌ನತ್ತ ಹರಿಯುತ್ತಿದ್ದ ಮಹಾಪೂರದಲ್ಲಿ ಕೊಚ್ಚಿಹೋಗಿ ಟೀವಿ ಪ್ರಸಾರಕ್ಕೆ ಪಂದ್ಯದ ಅಂಕಿಅಂಶಗಳೇ ಸಿಗದ ಪರಿಸ್ಥಿತಿ ನಿರ್ಮಾಣವಾಗಿಬಿಟ್ಟಿತ್ತು.

ಸೋಶಿಯಲ್ ನೆಟ್‌ವರ್ಕ್‌ಗಳು ನಮ್ಮ ದೈನಂದಿನ ಬದುಕಿನ ಅಂಗವೇ ಆಗಿಹೋಗಿರುವ ಪರಿಗೆ ಇದೊಂದು ಸಣ್ಣ ಉದಾಹರಣೆಯಷ್ಟೆ.

ಭಾನುವಾರ, ಆಗಸ್ಟ್ 5, 2012

ಬುಕ್ ಆಫ್ ಟೀ

ಪತ್ರಕರ್ತ ಮಿತ್ರ ಕುಮಾರ್ ಒಂದು ವಿಶಿಷ್ಟ ಪುಸ್ತಕ ಬರೆದಿದ್ದಾರೆ. ಚಹಾದ ಬಗೆಗಿನ 'ಬುಕ್ ಆಫ್ ಟೀ' ಇದು. ಚಹಾದ ವಿಧಗಳು, ಇತಿಹಾಸ ಇತ್ಯಾದಿಗಳಿಂದ ಟೀ ಕುರಿತಾದ ಕತೆ-ಕವನಗಳವರೆಗೆ ಸಾಕಷ್ಟು ಕುತೂಹಲಕರ ಮಾಹಿತಿ ಇಲ್ಲಿದೆ. ಬಗೆಬಗೆಯ ಚಹಾ ಮಾಡುವ ವಿಧಾನವೂ ಇದೆ!

ಕನ್ನಡದ ಮಟ್ಟಿಗೆ ಈ ಪ್ರಯತ್ನ ನಿಜಕ್ಕೂ ವಿನೂತನ. ಇಂತಹುದೊಂದು ಪ್ರಯತ್ನ ಮಾಡಿರುವ ಕುಮಾರ್‌ ಅವರನ್ನು ಇಜ್ಞಾನ ಡಾಟ್ ಕಾಮ್ ಅಭಿನಂದಿಸುತ್ತದೆ.
ಬುಕ್ ಆಫ್ ಟೀ
ಲೇಖಕರು: ಕುಮಾರ್ ಎಸ್.
೧೦೬ ಪುಟಗಳು, ಬೆಲೆ ರೂ. ೧೦೦/-
ಪ್ರಕಾಶಕರು: ಪಲ್ಲವ ಪ್ರಕಾಶನ, ಚನ್ನಪಟ್ಟಣ

ಮಂಗಳವಾರ, ಜುಲೈ 31, 2012

ಎಲ್ ನೋಡಿ ಕಾರ್ಡ್!

ಟಿ. ಜಿ. ಶ್ರೀನಿಧಿ

ಆಗತಾನೆ ಹುಟ್ಟಿದ ಮಗು ಜೊತೆಗಿನ ಆಸ್ಪತ್ರೆವಾಸ ಒಂದು ಅದ್ಭುತ ಅನುಭವ. ಊಟ-ನಿದ್ದೆ-ಓಡಾಟದ ಅಭ್ಯಾಸಗಳೆಲ್ಲ ದಿಢೀರನೆ ಬದಲಾಗಿ ನಮ್ಮ ಪ್ರತಿಯೊಂದು ಕೆಲಸವೂ ಪುಟ್ಟಮಗುವಿನ ಮೇಲೆ ಅವಲಂಬಿತವಾಗಲು ಶುರುವಾಗುವ ಸಮಯ ಅದು; ಎಂಟುಗಂಟೆ ನಿದ್ದೆಯ ನಂತರವೂ ಆಫೀಸಿನಲ್ಲಿ ತೂಕಡಿಸುತ್ತಿದ್ದವನು ಮೂರ್ನಾಲ್ಕು ಗಂಟೆಯ ಅರ್ಧಂಬರ್ಧ ನಿದ್ದೆ ಮಾಡಿಯೂ ಖುಷಿಯಾಗಿರುವ ಅಪರೂಪದ ಸನ್ನಿವೇಶ!

ಈ ಸಮಯದಲ್ಲಿ ಕ್ಯಾಮೆರಾಗಳಿಗೂ ಬಿಡುವಿಲ್ಲದ ಕೆಲಸ. ಪುಟ್ಟಮಕ್ಕಳ ಫೋಟೋ ತೆಗೆಯಬಹುದೋ ಇಲ್ಲವೋ ಎಂಬ ಹಿರಿಯರ ಜಿಜ್ಞಾಸೆಯ ನಡುವೆಯೇ ಮಗುವಿನ ಸಾಲುಸಾಲು ಛಾಯಾಚಿತ್ರಗಳು ಕ್ಯಾಮೆರಾಗಳಲ್ಲಿ ದಾಖಲಾಗಲು ಶುರುವಾಗುತ್ತವೆ. ಅತ್ತೆಯ ಮೊಬೈಲು, ತಾತನ ಪಾಯಿಂಟ್ ಆಂಡ್ ಶೂಟ್ ಕ್ಯಾಮೆರಾ, ಅಪ್ಪನ ಡಿಎಸ್‌ಎಲ್‌ಆರ್ - ಹೀಗೆ ಪಾಪು ಫೋಟೋಗಾಗಿ ಸಾಲುಗಟ್ಟಿ ನಿಲ್ಲುವ ಕ್ಯಾಮೆರಾಗಳು ಒಂದೆರಡಲ್ಲ.

ಹೀಗೆ ತೆಗೆದ ಚಿತ್ರಗಳನ್ನು ಕ್ಯಾಮೆರಾಗಳು ಉಳಿಸಿಡುವುದು ಮೆಮೊರಿ ಕಾರ್ಡಿನಲ್ಲಿ.

ಬುಧವಾರ, ಜುಲೈ 25, 2012

ಮತ್ತೆ ಮತ್ತೆ ಕ್ಲೌಡ್

ಟಿ. ಜಿ. ಶ್ರೀನಿಧಿ

ಮೈಕ್ರೋಸಾಫ್ಟ್ ಆಫೀಸ್ ಯಾರಿಗೆ ತಾನೇ ಗೊತ್ತಿಲ್ಲ! ವಿಂಡೋಸ್ ಕಾರ್ಯಾಚರಣ ವ್ಯವಸ್ಥೆ ಬಳಸುವವರೆಲ್ಲರೂ ಅದನ್ನು ಕನಿಷ್ಠ ಒಮ್ಮೆಯಾದರೂ ಬಳಸಿಯೇ ಇರುತ್ತಾರೆ ಎಂದರೂ ತಪ್ಪಾಗಲಾರದೇನೋ. ಇಪ್ಪತ್ತೊಂದು ವರ್ಷಗಳ ಹಿಂದೆ ಮೊದಲ ಬಾರಿಗೆ ಪರಿಚಯವಾದ, ಈಗಾಗಲೇ ಹಲವಾರು ಆವೃತ್ತಿಗಳನ್ನು ಕಂಡಿರುವ ಈ ತಂತ್ರಾಂಶ ಸಂಗ್ರಹದ ಜನಪ್ರಿಯತೆಯೇ ಅಂಥದ್ದು. ಈಗ ಪ್ರಪಂಚದಾದ್ಯಂತ ಸುಮಾರು ನೂರು ಕೋಟಿ ಜನರು ಮೈಕ್ರೋಸಾಫ್ಟ್ ಆಫೀಸ್ ಬಳಸುತ್ತಿದ್ದಾರಂತೆ.

ಇರಲಿ, ವಿಷಯ ಅದಲ್ಲ. ಮೊನ್ನೆ ಜುಲೈ ೧೬ರಂದು ಆಫೀಸ್ ತಂತ್ರಾಂಶ ಸಂಗ್ರಹದ ಹೊಸ ಆವೃತ್ತಿಯ ಘೋಷಣೆಯಾಯಿತು.

ಈ ಹೊಸ ಆವೃತ್ತಿಯನ್ನು ಟಚ್ ಸ್ಕ್ರೀನ್ ಇರುವ ಉಪಕರಣಗಳಲ್ಲೂ ಸುಲಭವಾಗಿ ಬಳಸುವಂತೆ ರೂಪಿಸಲಾಗಿದೆಯಂತೆ. ಮೈಕ್ರೋಸಾಫ್ಟ್ ಸಂಸ್ಥೆ ಇತ್ತೀಚೆಗಷ್ಟೆ 'ಸರ್ಫೇಸ್' ಹೆಸರಿನ ಹೊಸ ಟ್ಯಾಬ್ಲೆಟ್ ಕಂಪ್ಯೂಟರನ್ನು ಪರಿಚಯಿಸಿರುವುದರ, ಹಾಗೂ ವಿಂಡೋಸ್ ೮ ಕಾರ್ಯಾಚರಣ ವ್ಯವಸ್ಥೆಯನ್ನೂ ಟಚ್ ಸ್ನೇಹಿಯಾಗಿಸಿರುವ ಹಿನ್ನೆಲೆಯಲ್ಲಿ ಆಫೀಸ್ ತಂತ್ರಾಂಶ ಸಂಗ್ರಹದ ಈ ಹೊಸ ಅವತಾರ ಸಾಕಷ್ಟು ಕುತೂಹಲ ಮೂಡಿಸಿದೆ.

ಈ ಆವೃತ್ತಿಯ ಇನ್ನೊಂದು ಗಮನಾರ್ಹ ಅಂಶವೆಂದರೆ ಯಾವುದೇ ಆಫೀಸ್ ತಂತ್ರಾಂಶ ಬಳಸಿ ಸೃಷ್ಟಿಸಿದ ಕಡತವನ್ನು ತಕ್ಷಣವೇ ಕ್ಲೌಡ್‌ನಲ್ಲಿ ಉಳಿಸಿಡಲಾಗುತ್ತದಂತೆ. ಆಫೀಸಿನ ಲ್ಯಾಪ್‌ಟಾಪ್ ಬಳಸಿ ಸಿದ್ಧಪಡಿಸಿದ ವರ್ಡ್ ಡಾಕ್ಯುಮೆಂಟ್, ಮನೆಯ ಡೆಸ್ಕ್‌ಟಾಪ್ ಮುಂದೆ ಕುಳಿತಿದ್ದಾಗ ಸೃಷ್ಟಿಸಿದ ಎಕ್ಸೆಲ್ ಸ್ಪ್ರೆಡ್‌ಶೀಟ್ - ಈ ಯಾವುದನ್ನೇ ಆದರೂ ನಮಗೆ ಬೇಕಿದ್ದಾಗ ಬೇಕಾದ ಕಡೆ ಪಡೆದುಕೊಳ್ಳಲು ಈ ಹೊಸ ಸೌಲಭ್ಯ ಅನುವುಮಾಡಿಕೊಡಲಿದೆ.

ಇದನ್ನು ಸಾಧ್ಯವಾಗಿಸಿರುವ ಪರಿಕಲ್ಪನೆಯ ಹೆಸರೇ ಕ್ಲೌಡ್ ಕಂಪ್ಯೂಟಿಂಗ್.

ಮಂಗಳವಾರ, ಜುಲೈ 17, 2012

ಬ್ರೌಸರ್ ಬೈಟ್ಸ್

ಟಿ. ಜಿ. ಶ್ರೀನಿಧಿ

ವಿಶ್ವವ್ಯಾಪಿ ಜಾಲದಲ್ಲಿರುವ ಜಾಲತಾಣಗಳನ್ನು ಕಂಪ್ಯೂಟರಿನಲ್ಲಿ ವೀಕ್ಷಿಸಲು ಬ್ರೌಸರ್ ಅಥವಾ ವೀಕ್ಷಕ ತಂತ್ರಾಂಶಗಳು ಬಳಕೆಯಾಗುತ್ತವೆ. ವಿಶ್ವವ್ಯಾಪಿ ಜಾಲದಲ್ಲಿರುವ ಮಾಹಿತಿಯನ್ನು ಪಡೆದುಕೊಳ್ಳಲು ಈ ತಂತ್ರಾಂಶ ಅತ್ಯಗತ್ಯ. ವಿಶ್ವದ ಯಾವುದೋ ಮೂಲೆಯ ಸರ್ವರ್‌ನಲ್ಲಿ ಕುಳಿತಿರಬಹುದಾದ ಜಾಲತಾಣದ ಪುಟಗಳನ್ನು ನಮ್ಮ ಕಂಪ್ಯೂಟರಿನಲ್ಲಿ ವೀಕ್ಷಿಸಲು ಬ್ರೌಸರ್ ತಂತ್ರಾಂಶ ಅನುವುಮಾಡಿಕೊಡುತ್ತದೆ.

೧೯೯೩ರಲ್ಲಿ ವಿಶ್ವದ ಮೊತ್ತಮೊದಲ ಬ್ರೌಸರ್ 'ಮೊಸಾಯಿಕ್' ಸಿದ್ಧವಾದ ನಂತರ ಅನೇಕ ಬ್ರೌಸರ್ ತಂತ್ರಾಂಶಗಳು ಬಂದುಹೋಗಿವೆ. ಈಗ ಪ್ರಚಲಿತದಲ್ಲಿರುವ ಬ್ರೌಸರ್‌ಗಳಲ್ಲಿ ಮೊಜಿಲ್ಲಾ ಫೈರ್‌ಫಾಕ್ಸ್, ಇಂಟರ್‌ನೆಟ್ ಎಕ್ಸ್‌ಪ್ಲೋರರ್, ಗೂಗಲ್ ಕ್ರೋಮ್ ಮೊದಲಾದವು ಮುಖ್ಯವಾದವು. ಕೆಲ ಬ್ರೌಸರ್‌ಗಳ ಕನ್ನಡ ಆವೃತ್ತಿಯೂ ಇದೆ.

ವಿಶ್ವವ್ಯಾಪಿ ಜಾಲದಲ್ಲಿರುವ ಮಾಹಿತಿಯನ್ನು ನೋಡುವುದು ಮಾತ್ರವಲ್ಲ; ಆ ಮಾಹಿತಿಯನ್ನು ಉಳಿಸಿಕೊಳ್ಳುವುದು, ಮುದ್ರಿಸಿಕೊಳ್ಳುವುದು, ವಿವಿಧ ಪುಟಗಳ ನಡುವೆ ಹಿಂದೆಮುಂದೆ ಓಡಾಡುವುದು, ಅಚ್ಚುಮೆಚ್ಚಿನ ಪುಟಗಳ ವಿಳಾಸ ಸಂಗ್ರಹಿಸಿಟ್ಟುಕೊಳ್ಳುವುದು - ಇವೆಲ್ಲ ಸೌಲಭ್ಯಗಳೂ ಬ್ರೌಸರ್ ತಂತ್ರಾಂಶದಲ್ಲಿರುತ್ತವೆ.

ಮಂಗಳವಾರ, ಜುಲೈ 10, 2012

ಫೋಟೋ ಮೇಕಪ್ ಬಗ್ಗೆ ಇನ್ನಷ್ಟು...

ಟಿ. ಜಿ. ಶ್ರೀನಿಧಿ

ಪ್ರವಾಸದ ಜೋಶ್‌ನಲ್ಲಿ ಕ್ಲಿಕ್ಕಿಸಿದ ಛಾಯಾಚಿತ್ರಗಳು ಮನೆಗೆ ಮರಳಿದ ಮೇಲೆ ಮೆಮೊರಿ ಕಾರ್ಡಿನಲ್ಲೋ ಹಾರ್ಡ್ ಡಿಸ್ಕಿನ ಮೂಲೆಯಲ್ಲೋ ಸುಮ್ಮನೆ ಉಳಿದುಬಿಡುವುದೇ ಹೆಚ್ಚು. ಕೆಲವೊಮ್ಮೆ ಸೋಮಾರಿತನದಿಂದ ಹೀಗಾದರೆ ಇನ್ನು ಕೆಲ ಸಾರಿ ಚಿತ್ರಗಳನ್ನು ಸೂಕ್ತವಾಗಿ ಬದಲಿಸಿಕೊಳ್ಳುವ ವಿಧಾನ ಕುರಿತ ಗೊಂದಲವೂ ಇದಕ್ಕೆ ಕಾರಣವಾಗಬಹುದು. ಆ ಗೊಂದಲವನ್ನು ಕೊಂಚಮಟ್ಟಿಗೆ ಹೋಗಲಾಡಿಸುವ ನಿಟ್ಟಿನಲ್ಲಿ ಕೆಲ ಸುಲಭ ಉಪಾಯಗಳನ್ನು ಕಳೆದವಾರದ ವಿಜ್ಞಾಪನೆ ಪರಿಚಯಿಸಿತು. ಕಳೆದ ವಾರದ ಲೇಖನದ ಮುಂದುವರಿಕೆಯಾಗಿ ಡಿಜಿಟಲ್ ಛಾಯಾಚಿತ್ರಗಳನ್ನು ನಿರ್ವಹಿಸುವ ಕುರಿತು ಇನ್ನಷ್ಟು ಮಾಹಿತಿ ಈ ಲೇಖನದಲ್ಲಿದೆ.

ಶುಕ್ರವಾರ, ಜುಲೈ 6, 2012

ಟೊರೆಂಟ್ ಪ್ರಪಂಚ

ಯಶಸ್ವಿನಿ, ಟಿ. ಜಿ. ಶ್ರೀನಿಧಿ

ಇತ್ತೀಚಿನ ಸೂಪರ್‌ಹಿಟ್ ಸಿನಿಮಾ ನೋಡಬೇಕು ಅಂತಲೋ ಮೊನ್ನೆಮೊನ್ನೆಯಷ್ಟೇ ಬಿಡುಗಡೆಯಾದ ತಂತ್ರಾಂಶ ಬಳಸಬೇಕು ಅಂತಲೋ ಹೇಳಿದಾಗ ಟೊರೆಂಟ್ಸ್‌ನಲ್ಲಿ ಉಚಿತವಾಗಿ ಸಿಗುತ್ತೆ ನೋಡಿ ಎನ್ನುವ ಸಲಹೆ ನಿಮಗೆ ದೊರೆತಿರಬಹುದು. ಏನಿದು ಟೊರೆಂಟ್ ಅಂದರೆ?

ಬಿಟ್‌ಟೊರೆಂಟ್ ಎನ್ನುವುದು ಅಂತರಜಾಲದಲ್ಲಿ ಕಡತಗಳನ್ನು ಹಂಚಿಕೊಳ್ಳಲಿಕ್ಕೆಂದೇ ರೂಪಿಸಲಾಗಿರುವ ಶಿಷ್ಟಾಚಾರ (ಪ್ರೋಟೋಕಾಲ್). ನಮಗೆ ಬೇಕಾದ ಕಡತವನ್ನು ಡೌನ್‌ಲೋಡ್ ಮಾಡಿಕೊಳ್ಳಲು ಈ ಶಿಷ್ಟಾಚಾರದ ಪ್ರಕಾರ ಯಾವುದೇ ಒಂದು ಸರ್ವರ್ ಅನ್ನು ಅವಲಂಬಿಸುವ ಅಗತ್ಯವಿಲ್ಲ; ಹಾಗಾಗಿ ದೊಡ್ಡಗಾತ್ರದ ಕಡತಗಳನ್ನು ಕ್ಷಿಪ್ರವಾಗಿ ಪಡೆದುಕೊಳ್ಳಲು ಈ ಶಿಷ್ಟಾಚಾರ ಬಹಳ ಉಪಯುಕ್ತ.

ವ್ಯಕ್ತಿಯಿಂದ ವ್ಯಕ್ತಿಗೆ (ಪರ್ಸನ್ ಟು ಪರ್ಸನ್, ಪಿ೨ಪಿ) ನಡೆಯುವ ಮಾಹಿತಿ ವಿನಿಮಯದಲ್ಲಿ ಇದೊಂದು ಬಹುಮುಖ್ಯ ಮಾಧ್ಯಮವೆಂದೇ ಹೇಳಬೇಕು. ಜನವರಿ ೨೦೧೨ರ ಅಂಕಿಅಂಶಗಳ ಪ್ರಕಾರ ಸುಮಾರು ಹದಿನೈದು ಕೋಟಿ ಜನ ಕಂಪ್ಯೂಟರ್ ಬಳಕೆದಾರರು ಬಿಟ್‌ಟೊರೆಂಟ್ ಶಿಷ್ಟಾಚಾರವನ್ನು ಬಳಸುತ್ತಿದ್ದಾರಂತೆ!

ಮಂಗಳವಾರ, ಜುಲೈ 3, 2012

ಫೋಟೋ ತೆಗೆದಾಯ್ತು, ಈಗ ಮೇಕಪ್ ಮಾಡುವ ಸಮಯ!

ಟಿ. ಜಿ. ಶ್ರೀನಿಧಿ

ಎಲ್ಲರ ಕೈಗೂ, ಎಲ್ಲ ಮೊಬೈಲಿಗೂ ಒಂದೊಂದು ಡಿಜಿಟಲ್ ಕ್ಯಾಮೆರಾ ಸೇರಿಕೊಂಡಮೇಲೆ ಫೋಟೋ ಕ್ಲಿಕ್ಕಿಸುವುದು ಬಲು ಸುಲಭದ ಕೆಲಸವಾಗಿಬಿಟ್ಟಿದೆ. ಮೆಮೊರಿ ಕಾರ್ಡುಗಳಲ್ಲಿ ಗಿಗಾಬೈಟ್‌ಗಟ್ಟಲೆ ಜಾಗ ನಮ್ಮ ಒಡೆತನದಲ್ಲೇ ಇರುವಾಗ ರೀಲಿದ್ದಷ್ಟೇ ಫೋಟೋ ತೆಗೆಯುವ ಅನಿವಾರ್ಯತೆಯೂ ಇಲ್ಲ. ಫೋಟೋ ತೆಗೆಯುವ ಉತ್ಸಾಹವೊಂದಿದ್ದರೆ ಸಾಕು, ಬ್ಯಾಟರಿಯಲ್ಲಿ ಜೀವ - ಕಾರ್ಡಿನಲ್ಲಿ ಜಾಗ ಇರುವ ತನಕ ನಿರಾತಂಕವಾಗಿ ಕ್ಲಿಕ್ಕಿಸುತ್ತಲೇ ಇರಬಹುದು. ಪ್ರವಾಸಕ್ಕೇನಾದರೂ ಹೋದರಂತೂ ಕ್ಯಾಮೆರಾಗೆ ಬಿಡುವೇ ಇಲ್ಲದಷ್ಟು ಕೆಲಸವಿರುತ್ತದೆ.

ಅಂತಹುದೊಂದು ಪ್ರವಾಸ ಮುಗಿಸಿಕೊಂಡು ಬಂದಮೇಲೆ ನೋಡಿದರೆ ನೂರಾರು ಚಿತ್ರಗಳು ಮೆಮೊರಿ ಕಾರ್ಡಿನಲ್ಲಿ ಬೆಚ್ಚಗೆ ಕುಳಿತಿರುತ್ತವೆ. ಅವನ್ನೆಲ್ಲ ಕಂಪ್ಯೂಟರಿಗೆ ವರ್ಗಾಯಿಸಿಕೊಂಡು ಮನೆಮಂದಿಯೆಲ್ಲ ನೋಡಲು ಕುಳಿತೆವೆಂದರೆ ತಕ್ಷಣ ಶುರುವಾಗುತ್ತದೆ ವಿಮರ್ಶೆಯ ಧಾರೆ - "ಅಯ್ಯೋ ಈ ಚಿತ್ರ ಯಾಕಿಷ್ಟು ಡಾರ್ಕ್ ಆಗಿ ಬಂದಿದೆ?", "ಗಂಡ ಹೆಂಡತಿ ತೆಗೆಸಿಕೊಂಡಿರುವ ಚಿತ್ರದಲ್ಲಿ ಇದ್ಯಾರೋ ಇದು ಅಂಕಲ್ ಬಂದುಬಿಟ್ಟಿದ್ದಾರೆ!", "ಈ ಕಾರಿನ ಚಿತ್ರ ಅದ್ಯಾಕೆ ಸೊಟ್ಟಗಿದೆ?" "ನಿನ್ನ ಕಣ್ಣು ಯಾಕೆ ಹೀಗೆ ಕೆಂಪು ಕೆಂಪಾಗಿ ಕಾಣ್ತಿದೆ?"... ಪ್ರಶ್ನೆಗಳಿಗೆ, ಉದ್ಗಾರಗಳಿಗೆ ಕೊನೆಯೇ ಇಲ್ಲ!

ಡಿಜಿಟಲ್ ಛಾಯಾಚಿತ್ರಗಳಲ್ಲಿ ಇರಬಹುದಾದ ಇವೆಲ್ಲ ಕೊರತೆಗಳನ್ನು ಸರಿಪಡಿಸುವುದು ಫೋಟೋ ಕ್ಲಿಕ್ಕಿಸಿದಷ್ಟೇ ಸುಲಭ. ಇದಕ್ಕಾಗಿ ನಮ್ಮ ಕಂಪ್ಯೂಟರಿನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಬಹುದಾದ, ಸುಲಭವಾಗಿ ಬಳಸಬಹುದಾದ ಅನೇಕ ತಂತ್ರಾಂಶಗಳಿವೆ.

ಇಂತಹ ತಂತ್ರಾಂಶಗಳ ಕಾರ್ಯವ್ಯಾಪ್ತಿ ಬಹಳ ದೊಡ್ಡದು. ಡಿಜಿಟಲ್ ಛಾಯಾಚಿತ್ರಗಳಿಗೆ ಸಾಮಾನ್ಯವಾಗಿ ಬೇಕಾಗುವ ಉಪಚಾರ, ಹಾಗೂ ಅದರಲ್ಲಿ ತಂತ್ರಾಂಶಗಳ ಪಾತ್ರದ ಕುರಿತ ಸಣ್ಣದೊಂದು ಪರಿಚಯ ಇಲ್ಲಿದೆ.

ಮಂಗಳವಾರ, ಜೂನ್ 26, 2012

ವೆಬ್ ಯುದ್ಧಕ್ಕೆ ಫ್ಲೇಮ್ ಕಿಚ್ಚು

ಟಿ. ಜಿ. ಶ್ರೀನಿಧಿ



ಇನ್ನೊಂದು ಮಹಾಯುದ್ಧವೇನಾದರೂ ಶುರುವಾದರೆ ಹೇಗಿರಬಹುದು? "ಅಣುಬಾಂಬುಗಳು ಸಿಡಿದು ಭೂಮಿಯೇ ನರಕವಾಗಬಹುದು, ಅಳಿವು-ಉಳಿವಿನ ಮಧ್ಯೆ ನಾವು ಸುದೀರ್ಘ ಸೆಣಸಾಟ ನಡೆಸಬೇಕಾಗಬಹುದು" ಎನ್ನುತ್ತೀರಾ?

ಇದು ಹಳೆಯ ಕಲ್ಪನೆ ಎನ್ನುತ್ತಾರೆ ತಜ್ಞರು. ಅವರ ಮಾತನ್ನು ಕೇಳುವುದಾದರೆ ಈಗ ವಿಶ್ವಸಮರದ ಪರಿಕಲ್ಪನೆಯೇ ಬದಲಾಗಿಬಿಟ್ಟಿದೆ.

ಮಂಗಳವಾರ, ಜೂನ್ 19, 2012

ಅಲನ್ ಟ್ಯೂರಿಂಗ್ ನೆನಪಿನಲ್ಲಿ...

ಟಿ. ಜಿ. ಶ್ರೀನಿಧಿ
ಕಂಪ್ಯೂಟರ್ ಕಂಡುಹಿಡಿದದ್ದು ಇಂಥವರೇ ಎಂದು ಹೇಳಲಾಗುವುದಿಲ್ಲ ನಿಜ. ಆದರೆ ಕಂಪ್ಯೂಟರ್ ತಂತ್ರಜ್ಞಾನದ ಬೆಳೆವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ ಅನೇಕರು ಇತಿಹಾಸದಲ್ಲಿ ಕಾಣಸಿಗುತ್ತಾರೆ. ಅಂತಹ ಮೇಧಾವಿಗಳಲ್ಲೊಬ್ಬರು ಅಲನ್ ಟ್ಯೂರಿಂಗ್. ಮುಂದಿನ ಶನಿವಾರ (ಜೂನ್ ೨೩) ಅವರ ನೂರನೇ ಜನ್ಮದಿನ. ಈ ವಿಶೇಷ ಲೇಖನ, ಆ ಮಹನೀಯನ ನೆನಪಿಗೆ ಸಮರ್ಪಿತ.
ಎರಡನೇ ವಿಶ್ವಸಮರ ಎಂದಾಕ್ಷಣ ನಮಗೆ ಅದರಿಂದಾದ ಅನಾಹುತಗಳೇ ನೆನಪಿಗೆ ಬರುತ್ತವಲ್ಲ, ಆ ಮಹಾಯುದ್ಧ ಈಗ ನಮ್ಮ ಬದುಕನ್ನೆಲ್ಲ ಆವರಿಸಿಕೊಂಡಿರುವ ಕಂಪ್ಯೂಟರ್ ತಂತ್ರಜ್ಞಾನದ ಬೆಳೆವಣಿಗೆಗೂ ಕಾರಣವಾಯಿತು. ಯುದ್ಧದ ಸಂದರ್ಭದಲ್ಲಿ ಬೆಳೆವಣಿಗೆ ಕಂಡಿತು ಎಂದಾಗಲೇ ಆ ಬೆಳೆವಣಿಗೆ ಲೋಕಕಲ್ಯಾಣಾರ್ಥವಾಗಿಯೇನೂ ಆಗಿರಲಾರದು ಎಂಬ ಅಂಶ ನಮ್ಮ ಮನಸ್ಸಿಗೆ ಬರುತ್ತದೆ. ಅದು ನಿಜವೂ ಹೌದು. ಆ ಸಮಯದಲ್ಲಿ ಬ್ರಿಟನ್ನಿನಲ್ಲಿ ಆದ ಬೆಳೆವಣಿಗೆಯೆಲ್ಲ ಜರ್ಮನಿಯ ಯುದ್ಧತಂತ್ರವನ್ನು ಅರಿಯಲು - ಮುರಿಯಲೇ ಆಯಿತು ಎಂದರೂ ತಪ್ಪಾಗಲಾರದು.

ಜರ್ಮನಿಯ ಸೇನೆ ರಹಸ್ಯವಾಗಿ ಕಳುಹಿಸುತ್ತಿದ್ದ ಸಂದೇಶಗಳು ಅಮೆರಿಕಾ-ಬ್ರಿಟನ್ ನೇತೃತ್ವದ ಮಿತ್ರರಾಷ್ಟ್ರಗಳ ಕೈಗೆ ಸಿಕ್ಕರೂ ಅವನ್ನು ಅರ್ಥಮಾಡಿಕೊಳ್ಳಲು ಪರದಾಡಬೇಕಾಗಿತ್ತು. ಹಾಗೆಯೇ ಮಿತ್ರರಾಷ್ಟ್ರಗಳ ಸೇನೆಯ ಸಂದೇಶಗಳು ಜರ್ಮನ್ನರ ಕೈಗೆ ಸಿಗದಂತೆಯೂ ಎಚ್ಚರವಹಿಸಬೇಕಿತ್ತು. ಈ ಉದ್ದೇಶಕ್ಕಾಗಿ ಕಟ್ಟಲಾಗುತ್ತಿದ್ದ ತಜ್ಞರ ತಂಡಕ್ಕೆ ಸೇರಿಕೊಂಡವರಲ್ಲಿ ಅಲನ್ ಟ್ಯೂರಿಂಗ್ ಒಬ್ಬರು.

ಮಂಗಳವಾರ, ಜೂನ್ 12, 2012

ಕಂಪ್ಯೂಟರ್ ಪರಿಣತ ಎನಿಸಿಕೊಳ್ಳಬೇಕೆ? ಸಾಫ್ಟ್‌ವೇರ್ ಪರಿಣತಿಯಷ್ಟೆ ಸಾಲದು!

ಟಿ. ಜಿ. ಶ್ರೀನಿಧಿ

ಕಂಪ್ಯೂಟರ್ ಬಳಕೆಯಲ್ಲಿ ಪರಿಣತಿ ಗಳಿಸಿಕೊಳ್ಳುವುದಷ್ಟೆ ಅಲ್ಲ, ಕಂಪ್ಯೂಟರ್ ಬಳಕೆಯ ಸರಿಯಾದ ವಿಧಾನ ತಿಳಿದುಕೊಳ್ಳುವುದು ಕೂಡ ಬಹಳ ಮುಖ್ಯ. ಕಂಪ್ಯೂಟರ್ ಬಳಸುವ ಸರಿಯಾದ ವಿಧಾನ ಎಂದಮಾತ್ರಕ್ಕೆ ಅದು ಕಂಪ್ಯೂಟರ್ ಬಳಸಿ ಮಾಡುವ ಕೆಲಸಗಳಿಗಷ್ಟೆ ಸಂಬಂಧಪಟ್ಟ ವಿಷಯವಲ್ಲ; ಕಂಪ್ಯೂಟರ್ ಬಳಸುವಾಗ ನಾವು ಕುಳಿತಿರುವ ಭಂಗಿ, ಬಳಸುವ ಪೀಠೋಪಕರಣಗಳ ವಿನ್ಯಾಸವೂ ಅದರ ವ್ಯಾಪ್ತಿಗೆ ಬರುತ್ತವೆ.

ಅಸಮರ್ಪಕ ಭಂಗಿ ಅಥವಾ ಹೊಂದಿಕೊಳ್ಳದ ಪೀಠೋಪಕರಣದ ಬಳಕೆ ನಮ್ಮ ಆರೋಗ್ಯದ ಮೇಲೆ ನೇರ ಪರಿಣಾಮ ಬೀರಬಲ್ಲದು. ಅಂತಹ ದುಷ್ಪರಿಣಾಮಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಪಾಲಿಸಬಹುದಾದ ಕೆಲ ನಿಯಮಗಳು ಇಲ್ಲಿವೆ.

ಮಂಗಳವಾರ, ಜೂನ್ 5, 2012

ಕ್ರೌಡ್‌ಫಂಡಿಂಗ್

ಟಿ. ಜಿ. ಶ್ರೀನಿಧಿ

"ನನ್ನ ಹತ್ತಿರ ಎಂತಹ ಬಿಸಿನೆಸ್ ಐಡಿಯಾ ಇದೆ ಗೊತ್ತಾ? ಇನ್‌ವೆಸ್ಟ್ ಮಾಡೋದಕ್ಕೆ ಯಾರಾದ್ರೂ ಸಿಕ್ಕಿದ್ರೆ ಅದರಿಂದ ಲಕ್ಷ ಲಕ್ಷ ದುಡಿಯಬಹುದು!" ಎಂದೆಲ್ಲ ಹೇಳುವವರನ್ನು ನೀವೂ ನೋಡಿರಬಹುದು. ಬಹಳಷ್ಟು ಸಾರಿ ಇವು ಬಂಡವಾಳವಿಲ್ಲದ ಬಡಾಯಿಗಳಾಗಿರುತ್ತವಾದರೂ ಕೆಲವೊಮ್ಮೆ ಒಳ್ಳೆಯ ಐಡಿಯಾಗಳು ಕೂಡ ಇನ್ವೆಸ್ಟ್‌ಮೆಂಟ್ ಸಮಸ್ಯೆಯಿಂದ ಬಳಲುತ್ತವೆ. ಬಂಡವಾಳದ ಕೊರತೆಯಿಂದ ಅದೆಷ್ಟು ಒಳ್ಳೆಯ ಐಡಿಯಾಗಳು ಅಪರಿಚಿತವಾಗಿಯೇ ಉಳಿದುಬಿಟ್ಟಿವೆಯೋ!

ಒಳ್ಳೆಯ ಬಿಸಿನೆಸ್ ರೂಪಿಸಿಕೊಳ್ಳಲು ಸಖತ್ತಾಗಿರುವ ಐಡಿಯಾ ಎಷ್ಟು ಮುಖ್ಯವೋ ಅದಕ್ಕೆ ಬೇಕಾದಷ್ಟು ಬಂಡವಾಳ ಹೂಡುವುದೂ ಅಷ್ಟೇ ಮುಖ್ಯ. ಆದರೆ ಐಡಿಯಾ ದೊಡ್ಡದಾದಂತೆ ಅದಕ್ಕೆ ಬೇಕಾದ ಬಂಡವಾಳದ ಪ್ರಮಾಣವೂ ದೊಡ್ಡದೇ ಆಗುತ್ತದೆ; ಅಲ್ಲೇ ಸಮಸ್ಯೆಯೂ ಶುರುವಾಗುತ್ತದೆ. ಬಿಸಿನೆಸ್‌ಗೆ ಬೇಕಾದ ಬಂಡವಾಳ ಹೊಂದಿಸಿಕೊಳ್ಳುವುದು ಬಹಳಷ್ಟು ಸಾರಿ ದೊಡ್ಡ ಸಮಸ್ಯೆಯೇ. ವ್ಯವಹಾರ ಲಾಭದಾಯಕವಾಗಬಹುದು ಎಂದು ಹೂಡಿಕೆದಾರರಿಗೆ ಅನಿಸದಿದ್ದರೆ ಬಂಡವಾಳ ಹುಟ್ಟುವುದೇ ಇಲ್ಲ. ತೀರಾ ಕ್ರಾಂತಿಕಾರಕ ಎನಿಸುವಂತಹ ಐಡಿಯಾಗಳು ಈ ಕಾರಣದಿಂದಾಗಿಯೇ ಹಲವು ಸಾರಿ ಬಂಡವಾಳಕ್ಕಾಗಿ ಪರದಾಡಬೇಕಾಗುತ್ತದೆ.

ಅಂತರಜಾಲದ ಲೋಕದಲ್ಲಿ ಇದಕ್ಕೊಂದು ಯಶಸ್ವಿ ಪರ್ಯಾಯ ಇದೆ. ಅದು ಬಹಳ ಸರಳವೂ ಹೌದು - ಒಬ್ಬನೇ ಹೂಡಿಕೆದಾರನಿಂದ ಒಂದು ಲಕ್ಷ ರೂಪಾಯಿ ಕೇಳುವುದಕ್ಕಿಂತ ನೂರು ಜನರಿಂದ ತಲಾ ಸಾವಿರ ರೂಪಾಯಿ ಪಡೆದುಕೊಳ್ಳುವುದು ಸುಲಭ ಎನ್ನುವ ಅಂಶವನ್ನು 'ಕ್ರೌಡ್‌ಫಂಡಿಂಗ್' ಹೆಸರಿನ ಈ ಪರಿಕಲ್ಪನೆ ಬಳಸಿಕೊಳ್ಳುತ್ತದೆ.

ಗುರುವಾರ, ಮೇ 31, 2012

ಚಿತ್ರಗಳಲ್ಲಿ ಶುಕ್ರ ಸಂಕ್ರಮದ ಕತೆ!

ಬರುವ ಜೂನ್ ೬ರ ಶುಕ್ರ ಸಂಕ್ರಮದ ಬಗ್ಗೆ ಕೇಳಿದ್ದೀರಲ್ಲ? ಪುಣೆಯ ನ್ಯಾಶನಲ್‌ ಸೆಂಟರ್‌ ಫಾರ್‌ ರೇಡಿಯೋ ಆಸ್ಟ್ರೋಫಿಸಿಕ್ಸ್‌ ಸಂಸ್ಥೆ ಇದೀಗ ಈ ವಿಷಯ ಕುರಿತ ಚಿತ್ರಮಯ ಪುಸ್ತಕವೊಂದನ್ನು (ಗ್ರಾಫಿಕ್ ನಾವೆಲ್) ಕನ್ನಡದಲ್ಲಿ ಹೊರತಂದಿದೆ. ಅಷ್ಟೇ ಅಲ್ಲ, ಅದನ್ನು ಎಲ್ಲರೊಡನೆಯೂ ಮುಕ್ತವಾಗಿ ಹಂಚಿಕೊಂಡಿದೆ.

ಈ ಶ್ಲಾಘನೀಯ ಕೆಲಸಕ್ಕಾಗಿ ಇಜ್ಞಾನ ಡಾಟ್ ಕಾಮ್ ಆ ಸಂಸ್ಥೆಯನ್ನು ಅಭಿನಂದಿಸುತ್ತದೆ, ಹಾಗೂ ಆ ಪುಸ್ತಕವನ್ನು ಇಲ್ಲಿ ಹಂಚಿಕೊಳ್ಳಲು ಹರ್ಷಿಸುತ್ತದೆ.

ಮಂಗಳವಾರ, ಮೇ 22, 2012

ನೂರು ಬಿಲಿಯನ್ ಲೈಕುಗಳು!?

ಫೇಸ್‌ಬುಕ್ ಮೌಲ್ಯ ನೂರು ಬಿಲಿಯನ್ ಅಂತೆ...

ಟಿ. ಜಿ. ಶ್ರೀನಿಧಿ

ಮೇ ೧೮ ಬಂದು ಹೋಗಿದೆ. ಅಮೆರಿಕಾದ ನ್ಯಾಸ್‌ಡಾಕ್ ಶೇರು ವಿನಿಮಯ ಕೇಂದ್ರದಲ್ಲಿ ಫೇಸ್‌ಬುಕ್ ಶೇರುಗಳ ವಹಿವಾಟು ಶುರುವಾದದ್ದೂ ಆಗಿದೆ.

ವಹಿವಾಟು ಶುರುವಾದ ದಿನವೇ ಫೇಸ್‌ಬುಕ್ ಶೇರುಗಳ ಬೆಲೆ ಗಗನಕ್ಕೇರಲಿದೆ, ಮಂಕುಬಡಿದಂತಿರುವ ಪ್ರಪಂಚದ ಮಾರುಕಟ್ಟೆಗಳಿಗೆ ಈ ಘಟನೆ ಹೊಸ ಚೈತನ್ಯ ತುಂಬಲಿದೆ ಎಂದೆಲ್ಲ ಆಸೆಯಿಟ್ಟುಕೊಂಡಿದ್ದವರ ನಿರೀಕ್ಷೆಗಳು ಮಾತ್ರ ನಿಜವಾಗಿಲ್ಲ. ಶೇರು ಮಾರುಕಟ್ಟೆ ಪ್ರವೇಶದೊಡನೆ ಫೇಸ್‌ಬುಕ್ ಮೌಲ್ಯ ನೂರು ಬಿಲಿಯನ್ ಡಾಲರ್ ದಾಟಿದೆಯಾದರೂ ಅದು ನಿಜಕ್ಕೂ ಅಷ್ಟೊಂದು ಬೆಲೆಬಾಳುತ್ತದೆಯೇ ಎನ್ನುವ ಪ್ರಶ್ನೆಗೂ ಉತ್ತರ ಸಿಕ್ಕಿಲ್ಲ.

ಎಂಟು ವರ್ಷ ಎಳೆಯ ಸಂಸ್ಥೆಯೊಂದು ನಮ್ಮೆಲ್ಲರ ವೈಯಕ್ತಿಕ ಮಾಹಿತಿಯನ್ನೇ ಬಂಡವಾಳವಾಗಿಟ್ಟುಕೊಂಡು ತನ್ನ ಮೌಲ್ಯವನ್ನು ನೂರು ಬಿಲಿಯನ್ ಡಾಲರುಗಳಾಚೆ ಕೊಂಡೊಯ್ದಿರುವ ಕತೆ ಇದು.

ಮಂಗಳವಾರ, ಮೇ 15, 2012

ಕಂಪ್ಯೂಟರ್ ಕುಟುಂಬ

ಟಿ. ಜಿ. ಶ್ರೀನಿಧಿ

ಹದಿನಾಲ್ಕು ಹದಿನೈದು ವರ್ಷಗಳ ಹಿಂದಿನವರೆಗೂ ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಕಂಪ್ಯೂಟರ್ ಒಂದು ಅಪರೂಪದ ವಸ್ತುವಾಗಿಯೇ ಇತ್ತು. ಅದಕ್ಕಿಂತ ಐದು-ಹತ್ತು ವರ್ಷಗಳ ಮೊದಲು ನಗರಪ್ರದೇಶಗಳಲ್ಲೂ ಇದೇ ಸ್ಥಿತಿ ಇದ್ದಿರಬೇಕು. ಒಂದಷ್ಟು ಜನಕ್ಕೆ ಕಂಪ್ಯೂಟರ್ ಪರಿಚಯವಿತ್ತು ಎಂದೇ ಇಟ್ಟುಕೊಂಡರೂ ಇಂಟರ್‌ನೆಟ್-ಇಮೇಲುಗಳೆಲ್ಲ ಇಂದಿನಷ್ಟು ವ್ಯಾಪಕವಾಗಿ ನಮ್ಮನ್ನು ಆವರಿಸಿಕೊಂಡಿರಲಿಲ್ಲ.

ಆದರೆ ಈಗ, ಕೆಲವೇ ವರ್ಷಗಳ ಅವಧಿಯಲ್ಲಿ ಪರಿಸ್ಥಿತಿ ಎಷ್ಟೊಂದು ಬದಲಾಗಿಬಿಟ್ಟಿದೆ! ನಾಗರಹೊಳೆ ಕಾಡಿನ ಪಕ್ಕದೂರಿನಲ್ಲಿರುವ ಶಾಲೆಗೂ ಈಗ ಕಂಪ್ಯೂಟರ್ ಬಂದಿದೆ. ಬ್ರಹ್ಮಗಿರಿ ಬೆಟ್ಟದ ಮೇಲೆ ನಿಂತಿದ್ದಾಗಲೂ ನಮ್ಮ ಕೈಲಿರುವ ಮೊಬೈಲಿಗೆ ಬೇಕಾದ ಡಾಟ್ ಕಾಮ್ ಅನ್ನು ಬರಮಾಡಿಕೊಳ್ಳುವುದು ಸಾಧ್ಯವಾಗಿದೆ. ಕೈತೋರಿದಲ್ಲಿ ನಿಲ್ಲುವ ಬಸ್ಸಿನ ನಿರ್ವಾಹಕರ ಕೈಯಿಂದ ಹಿಡಿದು ಸರಕಾರಿ ಕಚೇರಿಯ ಮೇಜಿನವರೆಗೆ ವಿವಿಧ ಗಾತ್ರ-ರೂಪದ ಕಂಪ್ಯೂಟರುಗಳು ಎಲ್ಲೆಲ್ಲೂ ಕಾಣಸಿಗುತ್ತವೆ.

ಹೌದಲ್ಲ, ಈ ಕಂಪ್ಯೂಟರುಗಳಲ್ಲಿ ಅದೆಷ್ಟು ವಿಧ!

ಮಂಗಳವಾರ, ಮೇ 8, 2012

QWERTY ಕಥನ

ಎಲ್ಲಿಂದ ಬಂತು ಈ ವಿಚಿತ್ರ ಏರ್ಪಾಡು?

ಟಿ. ಜಿ. ಶ್ರೀನಿಧಿ


ಲ್ಯಾಪ್‌ಟಾಪ್ ಆಗಲಿ ಡೆಸ್ಕ್‌ಟಾಪ್ ಆಗಲಿ ನೀವು ಬಳಸುವ ಕಂಪ್ಯೂಟರಿನ ಕೀಲಿಮಣೆಯನ್ನೊಮ್ಮೆ ಗಮನವಿಟ್ಟು ನೋಡಿ: Q - W - E - R - T - Y ಎಂದು ಶುರುವಾಗುವ ಅಕ್ಷರಗಳ ವಿಚಿತ್ರ ಜೋಡಣೆ ನಿಮ್ಮ ಕಣ್ಣಿಗೆ ಬೀಳುತ್ತದೆ. ವಿಶ್ವದೆಲ್ಲೆಡೆ ಕೋಟ್ಯಂತರ ಜನಕ್ಕೂ ಅವರ ಬೆರಳುಗಳಿಗೂ ಈ ಜೋಡಣೆ ಚಿರಪರಿಚಿತ. ಎ ಪಕ್ಕದಲ್ಲಿ ಎಸ್, ಬಿ ಮೊದಲು ವಿ, ಇ ಆದಮೇಲೆ ಆರ್ - ಇದೆಲ್ಲ ನಮಗೆ ಅದೆಷ್ಟು ಅಭ್ಯಾಸವಾಗಿಹೋಗಿದೆ ಎಂದರೆ ಅದು ವಿಚಿತ್ರವಾಗಿದೆಯೆಂದು ತೋರುವುದೇ ಅಪರೂಪ!

ಅದೆಲ್ಲ ಸರಿ, ಈ ವಿಚಿತ್ರ ಏರ್ಪಾಡು ನಮ್ಮೆಲ್ಲರ ಬದುಕುಗಳಿಗೆ ಸೇರಿಕೊಂಡದ್ದು ಯಾವಾಗ?

ಈ ಕತೆ ಶುರುವಾಗುವುದು ಸುಮಾರು ಎರಡು ಶತಮಾನಗಳ ಹಿಂದೆ.

ಗುರುವಾರ, ಮೇ 3, 2012

ಶುಕ್ರ ಗ್ರಹದ ಸಂಕ್ರಮಣ

ಸೂರ್ಯ ಹಾಗೂ ಭೂಮಿಯ ನಡುವೆ ಚಂದ್ರ ಬಂದು ಗ್ರಹಣಕ್ಕೆ ಕಾರಣವಾಗುವ ಸಂಗತಿ ನಮಗೆಲ್ಲ ಗೊತ್ತು. ಚಂದ್ರನಷ್ಟೇ ಅಲ್ಲ, ಬುಧ ಹಾಗೂ ಶುಕ್ರಗ್ರಹಗಳೂ ಸೂರ್ಯ ಮತ್ತು ಭೂಮಿಯ ನಡುವೆ ಬರುವುದು ಸಾಧ್ಯವಿದೆ. ಈ ಘಟನೆಯನ್ನು ಸಂಕ್ರಮಣ ಎಂದು ಕರೆಯುತ್ತಾರೆ.

ಬರುವ ಜೂನ್ ೬ರಂದು ಶುಕ್ರ ಸಂಕ್ರಮಣ. ಇದರ ಹಿಂದಿನ ಸಂಕ್ರಮಣ ನಡೆದದ್ದು ೨೦೦೪ರಲ್ಲಿ. ಮುಂದಿನದಕ್ಕೆ ಕಾಯುತ್ತೇವೆ ಎನ್ನುವಂತಿಲ್ಲ. ಯಾಕೆ ಗೊತ್ತಾ?

ಬುಧವಾರ, ಮೇ 2, 2012

ಇವರು ಗಾರ್ಸಿನಿಯಾ ಸೋದರರು!

ಹೆಸರಷ್ಟೇ ಅಲ್ಲ, ಇಡೀ ಪುಸ್ತಕವೇ ವಿಶಿಷ್ಟವಾಗಿದೆ. ನಮ್ಮ ಕುಟುಂಬದವರ ಗ್ರೂಪ್ ಫೋಟೋ ನಮ್ಮನೇಲಿ ಇರಲೇ ಇಲ್ಲ ಎಂದು ಮುನ್ನುಡಿ ಶುರುಮಾಡುವ ಕೆನರಾ ಸೀಮೆಯ ಉಪ್ಪಾಗೆಯೆಂಬ ಹಿರಿಯಣ್ಣನ ಮಾತಿರಲಿ, ಸಿಯಾಟಲ್ ಏರ್‌ಪೋರ್ಟ್‌ನಲ್ಲಿ ಏನಾಯ್ತು ಗೊತ್ತಾ ಎಂದು ಕೇಳುವ ಲೇಖಕರ ನುಡಿಯಿರಲಿ, ಗಾರ್ಸಿನಿಯಾ ಎಂಬ ಪರದೇಸಿ ಪಿತೃನಾಮವಿರುವ ನಾಲ್ಕು ಜನ ಅಣ್ಣತಮ್ಮಂದಿರ ಪರಿಚಯವಿರಲಿ - ಇಡೀ ಪುಸ್ತಕ ಬಹಳ ಕುತೂಹಲಕರವಾಗಿ ಮೂಡಿಬಂದಿದೆ.

ಮಂಗಳವಾರ, ಮೇ 1, 2012

ಬೇಗನೆ ಎದ್ದ ಹಕ್ಕಿಯೂ, ತಡವಾಗಿ ಬಂದ ಇಲಿಯೂ...

ತಂತ್ರಜ್ಞಾನ ಲೋಕದ ಕೆಲ ಇಂಟರೆಸ್ಟಿಂಗ್ ಕತೆಗಳು

ಟಿ. ಜಿ. ಶ್ರೀನಿಧಿ

ಇಂಗ್ಲಿಷಿನಲ್ಲೊಂದು ಹೇಳಿಕೆಯಿದೆ, "ಅರ್ಲಿ ಬರ್ಡ್ ಗೆಟ್ಸ್ ದ ವರ್ಮ್" ಅಂತ. ಯಾವ ಹಕ್ಕಿ ಮಿಕ್ಕೆಲ್ಲವಕ್ಕಿಂತ ಬೇಗ ಎದ್ದು ಹೊರಡುತ್ತದೋ ಅದಕ್ಕೆ ಹೆಚ್ಚು ಹುಳುಗಳು ಆಹಾರವಾಗಿ ಸಿಗುತ್ತವೆ ಎನ್ನುವುದು ಅದರ ಅರ್ಥ. ಬೇಗನೆ ಎದ್ದ ಹುಳುವಿನ ಕತೆ ಏನಾದರೂ ಆಗಲಿ, ನೀವು ಬೇಗನೆ ಎದ್ದು ಹೊರಟ ಹಕ್ಕಿಯಾದರೆ ನಿಮಗೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಈ ಮಾತಿನ ಸಾರಾಂಶ.

ಹಾಗಾದರೆ ಈ ಮಾತಿನ ಆಧಾರದ ಮೇಲೆ ಯಾವುದೇ ಕೆಲಸವನ್ನು ಯಾರು ಬೇಗನೆ ಪ್ರಾರಂಭಿಸಿರುತ್ತಾರೋ ಅವರಿಗೇ ಹೆಚ್ಚಿನ ಅಡ್ವಾಂಟೇಜು ಎನ್ನಬಹುದೆ? ಕಾಮನ್ ಸೆನ್ಸ್ ಪ್ರಕಾರ ಹೇಳುವುದಾದರೆ ಬಹುತೇಕ ಸಂದರ್ಭಗಳಲ್ಲಿ ಅದೇ ಸರಿ.

ಆದರೆ ತಂತ್ರಜ್ಞಾನ ಲೋಕದಲ್ಲಿ ಎಲ್ಲವೂ ಯಾವಾಗಲೂ ಕಾಮನ್ ಆಗಿರುವುದಿಲ್ಲ. ಅದು ಹೇಗೆ ಎನ್ನುವುದಕ್ಕೆ ಇಲ್ಲೊಂದಷ್ಟು ಉದಾಹರಣೆಗಳಿವೆ. ಓದಿ.

ಮಂಗಳವಾರ, ಏಪ್ರಿಲ್ 17, 2012

ಇಮೇಲ್: ಪರಿಣಾಮಕಾರಿ ಬಳಕೆಗೆ ಎಂಟು ಸೂತ್ರಗಳು

ಟಿ. ಜಿ. ಶ್ರೀನಿಧಿ

ಇಮೇಲ್ ಯಾರಿಗೆ ತಾನೆ ಗೊತ್ತಿಲ್ಲ! ಅತ್ಯಂತ ಸುಲಭವಾಗಿ ಬಳಸಬಹುದಾದ ಈ ಮಾಧ್ಯಮವನ್ನು ಇತ್ತೀಚೆಗಷ್ಟೆ ಕಂಪ್ಯೂಟರ್ ಬಳಸಲು ಕಲಿತವರೂ ಸುಲಭವಾಗಿ ಬಳಸುತ್ತಾರೆ.

ಇಮೇಲ್ ಮಾಧ್ಯಮದ ಬಳಕೆ ವ್ಯಾಪಕವಾಗುತ್ತಿದ್ದಂತೆ ಇಮೇಲ್ ಸಂದೇಶಗಳ ಮೂಲಕ ನಡೆಯುವ ಸಂವಹನಕ್ಕೆ ನೀಡಲಾಗುತ್ತಿರುವ ಮಹತ್ವವೂ ಹೆಚ್ಚುತ್ತಿದೆ. ಗೆಳೆಯರ ನಡುವಿನ ಹರಟೆ, ಗಂಡ ಹೆಂಡಿರ ಮಾತುಕತೆಯಿಂದ ಪ್ರಾರಂಭಿಸಿ ವ್ಯಾಪಾರ ವಹಿವಾಟು, ಕಚೇರಿ ವ್ಯವಹಾರಗಳವರೆಗೆ ಪ್ರತಿಯೊಂದಕ್ಕೂ ಇಮೇಲ್ ಬಳಕೆಯಾಗುತ್ತಿದೆ. ಒಂದು ದಿನದಲ್ಲಿ ವಿಶ್ವದಾದ್ಯಂತ ಹದಿನಾಲ್ಕು ಸಾವಿರ ಕೋಟಿಗಿಂತ ಹೆಚ್ಚು ಇಮೇಲ್ ಸಂದೇಶಗಳನ್ನು ವಿನಿಮಯಮಾಡಿಕೊಳ್ಳಲಾಗುತ್ತದೆಯೆಂದು ಅಂಕಿಅಂಶಗಳು ಹೇಳುತ್ತವೆ. ಇವೆಲ್ಲ ಕಾರಣಗಳಿಂದಾಗಿ ಇಮೇಲ್ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಬೇಕಾದ್ದು ಇಂದಿನ ಅಗತ್ಯಗಳಲ್ಲೊಂದು.

ಇಮೇಲ್ ಕಳುಹಿಸಲು ಬರುತ್ತದೆ ಎನ್ನುವುದಕ್ಕೂ ಇಮೇಲ್ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಬಲ್ಲೆ ಎನ್ನುವುದಕ್ಕೂ ಏನಾದರೂ ವ್ಯತ್ಯಾಸವಿದೆಯೆ? ಖಂಡಿತಾ ಇದೆ. ಕೆಲವು ಸಣ್ಣಪುಟ್ಟ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದರಿಂದ ನಮ್ಮ ಇಮೇಲ್ ಸಂದೇಶ ಪರಿಣಾಮಕಾರಿಯಾಗಿರುವಂತೆ ಮಾಡಬಹುದು.

ಅಂತಹ ಕೆಲ ಸರಳ ಸೂತ್ರಗಳು ಇಲ್ಲಿವೆ.

ಭಾನುವಾರ, ಏಪ್ರಿಲ್ 15, 2012

ಟೈಟಾನಿಕ್ ನೆನಪಿನ ಲೇಖನ: ಐಸ್‌ಬರ್ಗ್ ಎಂಬ ಸಾಗರದೈತ್ಯ

ಟಿ. ಜಿ. ಶ್ರೀನಿಧಿ


"ಮುಳುಗಲಾಗದ" ಹಡಗು ಟೈಟಾನಿಕ್ ಮರೆಯಲಾಗದ ದುರಂತಕ್ಕೆ ಗುರಿಯಾಗಿ ಇದೀಗ ನೂರು ವರ್ಷ. ತಂತ್ರಜ್ಞಾನದ ಸಾಮರ್ಥ್ಯದ ಬಗೆಗೆ ಒಂದು ತಲೆಮಾರು ಇಟ್ಟಿದ್ದ ನಂಬಿಕೆಯನ್ನೇ ಅಲುಗಾಡಿಸಿದ ಈ ದುರಂತಕ್ಕೆ ಕಾರಣವಾದದ್ದು ನೀರ್ಗಲ್ಲು, ಅಥವಾ ಐಸ್‌ಬರ್ಗ್.

ಟೈಟಾನಿಕ್ ದುರಂತದ ನಂತರ ಕಳೆದಿರುವ ಒಂದು ಶತಮಾನದಲ್ಲಿ ಅದೆಷ್ಟೋ ನೀರ್ಗಲ್ಲುಗಳು ಸಾಗರಗಳಲ್ಲಿ ತೇಲಿವೆ. ತಂತ್ರಜ್ಞಾನವೂ ಕಡಿಮೆಯೇನಲ್ಲ, ಅದೂ ನಾಗಾಲೋಟದಿಂದಲೇ ಮುನ್ನಡೆದಿದೆ.

ಆದರೆ ಇವರಿಬ್ಬರ ನಡುವೆ ಗೆದ್ದವರಾರು ಎಂಬುದು ಮಾತ್ರ ಇನ್ನೂ ತೀರ್ಮಾನವಾಗಿಲ್ಲ. ಒಂದು ಕ್ಷಣ ತಂತ್ರಜ್ಞಾನವೇ ಗೆದ್ದಿತು ಎನಿಸುವಷ್ಟರಲ್ಲಿ ಅದ್ಯಾವುದೋ ಸಮುದ್ರದಲ್ಲಿ ಸಾಗುತ್ತಿದ್ದ ಹಡಗಿಗೆ ನೀರ್ಗಲ್ಲು ಬಡಿದ ಸುದ್ದಿ ಕೇಳಿಬರುತ್ತದೆ.

ನಿಸರ್ಗ ಹಾಗೂ ಮಾನವನ ನಡುವಿನ ಈ ಟೆಸ್ಟ್ ಮ್ಯಾಚ್‌ನ ಇತ್ತೀಚಿನ ಸ್ಕೋರ್ ಎಷ್ಟು? ಒಂದು ಒಳನೋಟ ಇಲ್ಲಿದೆ.

ಗುರುವಾರ, ಏಪ್ರಿಲ್ 12, 2012

ಗಣಿತದ ಪದ್ಯ-ಪ್ರಬಂಧ

ಗಣಿತದ ಪರಿಕಲ್ಪನೆಗಳನ್ನು ರೋಚಕವಾಗಿ, ಮಕ್ಕಳಿಗೆ ಆಕರ್ಷಕವೆನಿಸುವಂತೆ ಹೇಳಲು ಸಾಧ್ಯವಾಗಬಹುದೆ? ಈ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಹಿರಿಯ ಸಂವಹನಕಾರರಾದ ಶ್ರೀ ವಿ. ಎಸ್. ಎಸ್. ಶಾಸ್ತ್ರಿಯವರು ಹೊಸದೊಂದು ಪುಸ್ತಕ ಬರೆದಿದ್ದಾರೆ.

'ಗಣಿತ - ಮಕ್ಕಳಿಗಾಗಿ ಪದ್ಯ, ಪ್ರಬಂಧ, ಪರಿಕಲ್ಪನೆ' ಎಂಬ ಹೆಸರಿನ ಈ ಕೃತಿಯಲ್ಲಿ ಏಳನೆಯ ತರಗತಿಯವರೆಗಿನ ಪಠ್ಯಕ್ರಮದಲ್ಲಿರುವ ಗಣಿತ ವಿಷಯಗಳನ್ನು ಕುರಿತ ಪದ್ಯ-ಕತೆ-ಪ್ರಬಂಧಗಳಿವೆ. ಪೂರಕ ಚಿತ್ರಗಳನ್ನು ಶಾಸ್ತ್ರಿಯವರೇ ಬರೆದಿರುವುದು ವಿಶೇಷ.
ಗಣಿತ - ಮಕ್ಕಳಿಗಾಗಿ ಪದ್ಯ, ಪ್ರಬಂಧ, ಪರಿಕಲ್ಪನೆ
ಲೇಖಕರು: ಶ್ರೀ ವಿ. ಎಸ್. ಎಸ್. ಶಾಸ್ತ್ರಿ
೮೮ ಪುಟಗಳು, ಬೆಲೆ: ರೂ. ೪೦
ಪ್ರಕಾಶಕರು: ಡಿವಿಜಿ ಪ್ರತಿಷ್ಠಾನ, ಕೋಲಾರ

ಮಂಗಳವಾರ, ಏಪ್ರಿಲ್ 10, 2012

ಇಬುಕ್ ರೀಡರ್ ಈಗ ಕಲರ್ ಕಲರ್!

ಟಿ. ಜಿ. ಶ್ರೀನಿಧಿ

ಕಾಲ್ಪನಿಕ ಚಿತ್ರ
ಈಚೆಗಂತೂ ಇಬುಕ್, ಅರ್ಥಾತ್ ವಿದ್ಯುನ್ಮಾನ ಪುಸ್ತಕಗಳ ಪರಿಕಲ್ಪನೆ ಹೊಸತು ಎಂದೇ ಅನ್ನಿಸುತ್ತಿಲ್ಲ. ಮೊಬೈಲಿನಲ್ಲಿ, ಕಂಪ್ಯೂಟರಿನಲ್ಲಿ, ಟ್ಯಾಬ್ಲೆಟ್ಟಿನಲ್ಲಿ, ಇಬುಕ್ ರೀಡರುಗಳಲ್ಲಿ - ಎಲ್ಲೆಲ್ಲೂ ಪುಸ್ತಕ ಓದುವ ಸೌಲಭ್ಯ ಸಿಕ್ಕಮೇಲೆ ಆ ಪುಸ್ತಕಕ್ಕೂ ಈ ಪುಸ್ತಕಕ್ಕೂ ಹೆಚ್ಚು ವ್ಯತ್ಯಾಸವೇ ಉಳಿದಿಲ್ಲವೇನೋ.

ಪುಸ್ತಕವನ್ನು ಮುದ್ರಿಸಿ, ಬೈಂಡುಮಾಡಿ ನೀಟಾಗಿ ಕಪಾಟಿನಲ್ಲಿ ಜೋಡಿಸಿಡುವ ಬದಲು ವಿದ್ಯುನ್ಮಾನ ರೂಪದಲ್ಲಿ ಮೆಮೊರಿ ಕಾರ್ಡಿನಲ್ಲೋ ಪೆನ್ ಡ್ರೈವ್‌ನಲ್ಲೋ ಇಟ್ಟುಕೊಂಡು ಬೇಕಾದಾಗ ನಮ್ಮ ಇಚ್ಛೆಯ ಉಪಕರಣದಲ್ಲಿ ಓದಲು ಅನುವುಮಾಡಿಕೊಟ್ಟಿದ್ದು ಇಬುಕ್ ಪರಿಕಲ್ಪನೆಯ ಸಾಧನೆ. ಮುದ್ರಿತ ರೂಪದಲ್ಲಿ ಮನೆಯಲ್ಲೆಲ್ಲ ತುಂಬಿಕೊಂಡುಬಿಡುವಷ್ಟು ಪುಸ್ತಕಗಳನ್ನು ಬೆರಳ ತುದಿಯಗಲದ ಮೆಮೊರಿ ಕಾರ್ಡ್‌ನೊಳಗೂ ತುಂಬಿಡಲು ಸಾಧ್ಯವಾಗಿಸಿದ್ದು ಇದೇ ಪರಿಕಲ್ಪನೆಯೇ.

ಇ ಪುಸ್ತಕಗಳು ಅದೆಷ್ಟು ಜನಪ್ರಿಯವಾಗಿವೆಯೆಂದರೆ ಅಮೆಜಾನ್ ಡಾಟ್ ಕಾಮ್‌ನಲ್ಲಿ ಮುದ್ರಿತ ಪುಸ್ತಕಗಳಿಗಿಂತ ಹೆಚ್ಚು ಸಂಖ್ಯೆಯ ಇ ಪುಸ್ತಕಗಳು ಮಾರಾಟವಾಗುತ್ತವೆ.

ಭಾನುವಾರ, ಏಪ್ರಿಲ್ 8, 2012

ಒಂದು ಖುಷಿಯ ಸುದ್ದಿ

ಆಕೃತಿ ಪುಸ್ತಕದ ಸಹಯೋಗದಲ್ಲಿ ಇಜ್ಞಾನ ಡಾಟ್ ಕಾಮ್ ಪ್ರಕಟಿಸಿದ 'ತಿನ್ನಲಾಗದ ಬಿಸ್ಕತ್ತು ನುಂಗಲಾಗದ ಟ್ಯಾಬ್ಲೆಟ್ಟು' ಕೃತಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಪ್ರಶಸ್ತಿ ಬಂದಿದೆ.

ಕೃತಿಯನ್ನು ಪ್ರೋತ್ಸಾಹಿಸಿದ, ಆಶೀರ್ವದಿಸಿದ ಎಲ್ಲರಿಗೂ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು.

ಮಂಗಳವಾರ, ಏಪ್ರಿಲ್ 3, 2012

ಚಿತ್ರಬಿಡಿಸಲಾ ಇಲ್ಲ ಕ್ಲಿಕ್ ಮಾಡಲಾ?

ಟಿ. ಜಿ. ಶ್ರೀನಿಧಿ


ಮನಸ್ಸಿಗೆ ಸಂತೋಷಕೊಡುವ ತಾಣಗಳಿಗೆ ಹೋದಾಗ ಅಲ್ಲಿನ ಪರಿಸರ ನಮಗೆ ತುಂಬಾ ಇಷ್ಟವಾಗುವುದು ಸಾಮಾನ್ಯ. ಊರಿಗೆ ಮರಳುವಾಗ ನಮ್ಮೊಡನೆ ಆ ಪರಿಸರವನ್ನೂ ತೆಗೆದುಕೊಂಡು ಬರುವಂತಿದ್ದರೆ ಎಷ್ಟು ಚೆನ್ನ ಎನಿಸುವುದೂ ಸಹಜವೇ. ಈ ಅನಿಸಿಕೆಯ ದೆಸೆಯಿಂದ ನಾವು ಛಾಯಾಚಿತ್ರಗಳನ್ನು ಕ್ಲಿಕ್ಕಿಸುತ್ತೇವೆ ನಿಜ. ಆದರೆ ಅವು ನಮ್ಮನ್ನು ಆವರಿಸಿಕೊಂಡಿರುವ ಪರಿಸರದ ಒಂದು ಭಾಗದ ಚಿತ್ರಣವನ್ನು ಮಾತ್ರ ಸೆರೆಹಿಡಿಯಬಲ್ಲವು.

ಈಗೊಂದು ಉದಾಹರಣೆ ನೋಡೋಣ. ಈ ಬರೆಹವನ್ನು ಟೈಪಿಸುತ್ತ ನಾನು ನನ್ನ ಕೋಣೆಯಲ್ಲಿ ಕುಳಿತಿದ್ದೇನೆ. ಎಡಬದಿಯಲ್ಲಿರುವ ಗೋಡೆ, ಕೋಣೆಯ ಬಾಗಿಲು, ಎದುರಿನ ಮೇಜು, ಅದರ ಮೇಲಿನ ಕಂಪ್ಯೂಟರ್, ಮೇಜಿನ ಪಕ್ಕದಲ್ಲಿ ನೇತುಹಾಕಿರುವ ಪೇಂಟಿಂಗ್, ಅದರ ಪಕ್ಕದಲ್ಲಿರುವ ಪುಸ್ತಕದ ಬೀರು, ಅದರ ಪಕ್ಕದ ಕಿಟಕಿ - ಇದಿಷ್ಟೂ ನನ್ನ ಕಣ್ಣಿನ ದೃಷ್ಟಿಯ ವ್ಯಾಪ್ತಿಯಲ್ಲಿ ಬರುತ್ತಿವೆ.

ಈ ದೃಶ್ಯದ ಫೋಟೋ ತೆಗೆಯೋಣ ಎಂದುಕೊಂಡಾಗ ಸಮಸ್ಯೆ ಶುರು. ಛಾಯಾಚಿತ್ರದ ವ್ಯಾಪ್ತಿಗೆ ಬಾಗಿಲು, ಕಂಪ್ಯೂಟರ್ ಎರಡೂ ಬಂದರೆ ಪೇಂಟಿಂಗು, ಬೀರು, ಕಿಟಕಿಗಳ ಸುಳಿವೇ ಇರುವುದಿಲ್ಲ. ಪೇಂಟಿಂಗು, ಬೀರು ಎರಡೂ ಬಂದರೆ ಬಾಗಿಲು-ಕಂಪ್ಯೂಟರು ನಾಪತ್ತೆ!

ಮಾನವ ದೃಷ್ಟಿಯ ವ್ಯಾಪ್ತಿಗೆ ಹೋಲಿಸಿದಾಗ ಕ್ಯಾಮೆರಾದ ವ್ಯಾಪ್ತಿ ಸಾಮಾನ್ಯವಾಗಿ ತೀರಾ ಕಡಿಮೆಯಿರುವುದೇ ಈ ಸಮಸ್ಯೆಗೆ ಕಾರಣ. ಈ ಕೊರತೆಯನ್ನು ನಿವಾರಿಸುವ ನಿಟ್ಟಿನಲ್ಲಿ ರೂಪುಗೊಂಡಿರುವುದೇ ಪನೋರಮಾ ಛಾಯಾಚಿತ್ರಗಳ ಪರಿಕಲ್ಪನೆ.

ಮಂಗಳವಾರ, ಮಾರ್ಚ್ 27, 2012

ಸಾಫ್ಟ್‌ವೇರ್ ಸಮಾಚಾರ

ಟಿ. ಜಿ. ಶ್ರೀನಿಧಿ

ಸಾಫ್ಟ್‌ವೇರ್ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ!? ಈ ಹೆಸರು ಅದೆಷ್ಟು ಜನಪ್ರಿಯವೆಂದರೆ ಬಹುತೇಕ ಜನ ಐಟಿ ಕ್ಷೇತ್ರದ ಉದ್ಯೋಗಿಗಳನ್ನು "ಓ, ನೀವು ಸಾಫ್ಟ್‌ವೇರ್‌ನವರಾ" ಎಂದೇ ಗುರುತಿಸುತ್ತಾರೆ.

ಈ ಸಾಫ್ಟ್‌ವೇರ್ ಎಂದರೇನು ಎನ್ನುವ ಪ್ರಶ್ನೆಗೆ ಉತ್ತರ ಹೇಳುವುದು ಬಹಳ ಸುಲಭ.

ಕಂಪ್ಯೂಟರ್‌ಗೆ ತನ್ನದೇ ಆದ ಸ್ವಂತ ಬುದ್ಧಿ ಇರುವುದಿಲ್ಲ. ಅದು ಯಾವುದೇ ಕೆಲಸ ಮಾಡಬೇಕಾದರೂ ಆ ಕೆಲಸದ ಸಮಸ್ತ ವಿವರಗಳನ್ನು ಅದಕ್ಕೆ ಮುಂಚಿತವಾಗಿಯೇ ಕೊಟ್ಟಿರಬೇಕಾಗುತ್ತದೆ.

ಹೀಗೆ ಮಾಡಬೇಕಾದ ಕೆಲಸದ ವಿವರಗಳನ್ನು ಕೊಡುವುದು ಸಾಫ್ಟ್‌ವೇರ್ ಅಥವಾ ತಂತ್ರಾಂಶದ ಕೆಲಸ. ನಾವು ಕೊಟ್ಟ ಇನ್‌ಪುಟ್ ಬಳಸಿ ಏನೇನು ಲೆಕ್ಕಾಚಾರ ಮಾಡಬೇಕು, ಯಾವ ರೀತಿಯ ಔಟ್‌ಪುಟ್ ಕೊಡಬೇಕು ಎನ್ನುವುದನ್ನೆಲ್ಲ ಅವು ಕಂಪ್ಯೂಟರ್‌ಗೆ ವಿವರಿಸುತ್ತವೆ.

ವಿವಿಧ ಉದ್ದೇಶ ಹಾಗೂ ಉಪಯೋಗಗಳಿಗಾಗಿ ಅನೇಕ ಬಗೆಯ ತಂತ್ರಾಂಶಗಳು ಬಳಕೆಯಾಗುತ್ತವೆ. ಕಂಪ್ಯೂಟರ್ ಬೂಟ್ ಆಗಲು ಸಹಾಯಮಾಡುವ ಬಯಾಸ್‌ನಿಂದ ಪ್ರಾರಂಭಿಸಿ ಕಂಪ್ಯೂಟರಿನ ಕೆಲಸಕಾರ್ಯಗಳನ್ನೆಲ್ಲ ನಿಯಂತ್ರಿಸುವ ಆಪರೇಟಿಂಗ್ ಸಿಸ್ಟಂವರೆಗೆ, ಟೈಂಪಾಸ್ ಮಾಡಲು ನೆರವುನೀಡುವ ಗೇಮ್‌ಗಳವರೆಗೆ ಎಲ್ಲವೂ ತಂತ್ರಾಂಶಗಳೇ.

ತಂತ್ರಾಂಶ ನಿರ್ಮಿಸುವ ಜನಕ್ಕೆ ಹಾಗೂ ಸಂಸ್ಥೆಗಳಿಗೆ ತಮ್ಮ ಕೆಲಸಕ್ಕೆ ಪ್ರತಿಫಲ ಬೇಕಲ್ಲ, ಹಾಗಾಗಿ ಕೆಲವು ತಂತ್ರಾಂಶಗಳನ್ನು ನಾವು ದುಡ್ಡು ಕೊಟ್ಟೇ ಕೊಳ್ಳಬೇಕು.

ಮಂಗಳವಾರ, ಮಾರ್ಚ್ 20, 2012

ಆಟವಾಡುವ ವ್ಯವಹಾರ

ಟಿ. ಜಿ. ಶ್ರೀನಿಧಿ

ಕಂಪ್ಯೂಟರ್‌ನಲ್ಲಿ ಆಟವಾಡುವುದೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಐದು ವರ್ಷದ ಪುಟಾಣಿ ಆದಿತ್ಯನಿಂದ ಹಿಡಿದು ಅವರ ತಾತನವರೆಗೆ ಎಲ್ಲರೂ ವಯಸ್ಸಿನ ಭೇದವಿಲ್ಲದೆ ಕಂಪ್ಯೂಟರ್ ಗೇಮ್‌ಗಳನ್ನು ಮೆಚ್ಚುತ್ತಾರೆ.

ಇದೇ ಕಾರಣಕ್ಕಾಗಿ ವ್ಯಾಪಾರಿ ಸಂಸ್ಥೆಗಳಿಗೂ ಕಂಪ್ಯೂಟರ್ ಗೇಮ್‌ಗಳ ಬಗ್ಗೆ ಪ್ರೀತಿ. ಹೀಗಾಗಿಯೇ ಈಗ ಕಂಪ್ಯೂಟರ್ ಗೇಮ್‌ಗಳು ಜಾಹೀರಾತಿನ ಹೊಸ ಮಾಧ್ಯಮವಾಗಿ ರೂಪಗೊಳ್ಳುತ್ತಿವೆ.


ಕಂಪ್ಯೂಟರ್ ಗೇಮ್‌ಗಳನ್ನು ಜಾಹೀರಾತು ಮಾಧ್ಯಮವನ್ನಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಕಳೆದ ವರ್ಷ ಅಮೆರಿಕಾ ಒಂದರಲ್ಲೇ ಸುಮಾರು ನೂರು ಕೋಟಿ ಡಾಲರುಗಳನ್ನು ವೆಚ್ಚಮಾಡಲಾಗಿದೆಯೆಂದು ಅಂದಾಜಿಸಲಾಗಿದೆ. ಈ ಮೊತ್ತ ಮುಂದಿನ ಮೂರು-ನಾಲ್ಕು ವರ್ಷಗಳಲ್ಲಿ ಕನಿಷ್ಠ ಮೂರು ಪಟ್ಟು ಬೆಳೆಯುವ ನಿರೀಕ್ಷೆಯಿದೆಯಂತೆ.

ಮಂಗಳವಾರ, ಮಾರ್ಚ್ 13, 2012

ಬದುಕಿನ ಬ್ಲಾಗು 'ಲೈಫ್ ಲಾಗ್'

ಟಿ. ಜಿ. ಶ್ರೀನಿಧಿ

ಬ್ಲಾಗುಗಳ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ!? ತಮಗನಿಸಿದ್ದನ್ನು ವಿಶ್ವವ್ಯಾಪಿ ಜಾಲದ ಮೂಲಕ ಪ್ರಪಂಚದೊಡನೆ ಮುಕ್ತವಾಗಿ ಹಂಚಿಕೊಳ್ಳಲು ಲಕ್ಷಾಂತರ ಜನ ಬಳಸುವ ಮಾಧ್ಯಮ ಅದು.

ಬ್ಲಾಗನ್ನು ಆನ್‌ಲೈನ್ ದಿನಚರಿಯೆಂದು ಕರೆಯುತ್ತಾರಾದರೂ ಎಲ್ಲರೂ ಅದನ್ನು ದಿನಚರಿಯಂತೇನೂ ಬಳಸುವುದಿಲ್ಲ. ಆದರೆ ಖಾಸಗಿ ಡೈರಿಯಲ್ಲಿ ಬರೆದುಕೊಳ್ಳುವಂತೆಯೇ ಬ್ಲಾಗಿನಲ್ಲೂ ಬರೆದು ಅದನ್ನು ಪ್ರಪಂಚಕ್ಕೆಲ್ಲ ತೆರೆದಿಡುವವರೂ ಇದ್ದಾರೆ. ಇನ್ನು ಟ್ವಿಟ್ಟರಿನಂತಹ ಮೈಕ್ರೋಬ್ಲಾಗುಗಳನ್ನಂತೂ ಕೇಳುವುದೇ ಬೇಡ. ಈಗ ಎದ್ದೆ, ಆಫೀಸಿಗೆ ಹೊರಟೆ, ಟ್ರಾಫಿಕ್ ಜಾಮ್‌ನಲ್ಲಿದ್ದೇನೆ, ಕ್ಯಾಂಟೀನಿನಲ್ಲಿ ಇಡ್ಲಿ ತಿನ್ನುತ್ತಿದ್ದೇನೆ ಎಂಬಲ್ಲಿಂದ ಈಗ ಹೋಗಿ ನಿದ್ದೆಮಾಡುತ್ತೇನೆ, ಗುಡ್‌ನೈಟ್ ಎನ್ನುವವರೆಗೆ ತಾವು ದಿನನಿತ್ಯ ಮಾಡುವ ಎಲ್ಲ ಕೆಲಸಗಳನ್ನೂ ಟ್ವಿಟ್ಟರಿನಲ್ಲಿ ದಾಖಲಿಸುವ ಜನ ಬೇಕಾದಷ್ಟು ಸಂಖ್ಯೆಯಲ್ಲಿದ್ದಾರೆ.

ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಪ್ರತಿನಿತ್ಯವೂ ಬೆಳಗಿನಿಂದ ಸಂಜೆಯವರೆಗೆ ಮಾಡುವ ಕೆಲಸಗಳನ್ನೆಲ್ಲ ಛಾಯಾಚಿತ್ರಗಳ ರೂಪದಲ್ಲಿ ದಾಖಲಿಸಿಡುತ್ತಾ ಹೋದರೆ ಹೇಗಿರಬಹುದು?

ಮಂಗಳವಾರ, ಮಾರ್ಚ್ 6, 2012

ಮೆಮೊರಿ ಮ್ಯಾಜಿಕ್

ಟಿ. ಜಿ. ಶ್ರೀನಿಧಿ

ಕಂಪ್ಯೂಟರ್ ಬಳಸಿ ವಿಭಿನ್ನ ರೀತಿಯ ಕೆಲಸಗಳನ್ನು ಮಾಡುವುದು ಸಾಧ್ಯ ಎನ್ನುವುದು ನಮಗೆ ಗೊತ್ತು. ಇದಕ್ಕಾಗಿ ಹಲವಾರು ಬಗೆಯ ತಂತ್ರಾಂಶಗಳು ದೊರಕುತ್ತವೆ ಎನ್ನುವುದೂ ಗೊತ್ತು. ಇಂತಹ ತಂತ್ರಾಂಶಗಳನ್ನೆಲ್ಲ ಬಳಸಿ ಬೇಕಾದಷ್ಟು ರೀತಿಯ ಕೆಲಸಗಳನ್ನು ಮಾಡಿಕೊಳ್ಳುತ್ತೇವಲ್ಲ, ಆ ಮಾಹಿತಿಯೆಲ್ಲ ಶೇಖರವಾಗುವುದು ಎಲ್ಲಿ?

ಇದಕ್ಕಾಗಿ ಬಳಕೆಯಾಗುವುದೇ ಮೆಮೊರಿ. ಸರಳ ಭಾಷೆಯಲ್ಲಿ ಹೇಳುವುದಾದರೆ ಇದನ್ನು ಕಂಪ್ಯೂಟರಿನ ಜ್ಞಾಪಕಶಕ್ತಿ ಎಂದು ಕರೆಯಬಹುದು. ಕಂಪ್ಯೂಟರಿನಲ್ಲಿ ಬಳಕೆಯಾಗುವ ದತ್ತಾಂಶ ಹಾಗೂ ಮಾಹಿತಿಯ ಸಕಲವೂ ಶೇಖರವಾಗುವುದು ಈ ಜ್ಞಾಪಕಶಕ್ತಿಯಲ್ಲೇ.

ಕಂಪ್ಯೂಟರ್ ಮೆಮೊರಿಯನ್ನು ಕೊಂಚಮಟ್ಟಿಗೆ ನಮ್ಮ ನೆನಪಿನ ಶಕ್ತಿಗೆ ಹೋಲಿಸಬಹುದು. ಉದಾಹರಣೆಗೆ ನಿಮ್ಮ ಮಿತ್ರರು ನಿಮಗೆ ಅವರ ದೂರವಾಣಿ ಸಂಖ್ಯೆಯನ್ನು ಹೇಳಿದರು ಎಂದುಕೊಳ್ಳೋಣ. ಆ ಸಂಖ್ಯೆಯನ್ನು ಮೊಬೈಲಿನ ಅಡ್ರೆಸ್ ಬುಕ್‌ಗೆ ಸೇರಿಸುವವರೆಗೆ, ಅಥವಾ ಡೈರಿಯಲ್ಲಿ ಬರೆದಿಟ್ಟುಕೊಳ್ಳುವವರೆಗೆ ಮಾತ್ರ ನೀವು ನೆನಪಿಟ್ಟುಕೊಂಡರೆ ಸಾಕು. ಆಮೇಲೆ ನೀವದನ್ನು ಮರೆತರೂ ಚಿಂತೆಯಿಲ್ಲ. ಬೇಕಾದಾಗ ನೋಡಿಕೊಳ್ಳಲು, ಕರೆಮಾಡಲು ಆ ದೂರವಾಣಿ ಸಂಖ್ಯೆ ನಿಮ್ಮ ಅಡ್ರೆಸ್ ಬುಕ್‌ನಲ್ಲಿ ಸಿಗುತ್ತದಲ್ಲ!

ಕಂಪ್ಯೂಟರ್ ಕೂಡ ಹಾಗೆಯೇ. ತಕ್ಷಣಕ್ಕೆ ಬೇಕಾದದ್ದೆಲ್ಲ ನೆನಪಿಟ್ಟುಕೊಳ್ಳಲು ನಮ್ಮ ಮೆದುಳು ಇರುವ ಹಾಗೆ ಕಂಪ್ಯೂಟರಿನಲ್ಲಿ 'ಪ್ರೈಮರಿ ಮೆಮೊರಿ' ಇರುತ್ತದೆ. ಈ ಕ್ಷಣದಲ್ಲೇ ಬೇಕಾಗದ ವಿಷಯಗಳು ಸೆಕಂಡರಿ ಮೆಮೊರಿಯಲ್ಲಿ ಶೇಖರವಾಗುತ್ತವೆ; ಮೊಬೈಲ್ ಸಂಖ್ಯೆಯನ್ನು ಅಡ್ರೆಸ್ ಬುಕ್‌ನಲ್ಲಿ ಬರೆದಿಟ್ಟುಕೊಂಡಂತೆ!

ಬುಧವಾರ, ಫೆಬ್ರವರಿ 29, 2012

ಕಳೆದುಹೋದ ಪುಟಗಳ ಹುಡುಕಾಟದಲ್ಲಿ...

ಟಿ. ಜಿ. ಶ್ರೀನಿಧಿ

ಹಿಂದೆ ಜಿಯೋಸಿಟೀಸ್ ಎಂಬುದೊಂದು ಜಾಲತಾಣ ಇತ್ತು. ವಿಶ್ವವ್ಯಾಪಿ ಜಾಲ ಆಗಷ್ಟೆ ಪರಿಚಿತವಾಗುತ್ತಿದ್ದ ಸಂದರ್ಭದಲ್ಲಿ ಅದೆಷ್ಟೋ ಲಕ್ಷ ಜನ ಬಳಕೆದಾರರು ಈ ತಾಣದ ಸೇವೆ ಬಳಸಿಕೊಂಡು ತಮ್ಮ ವೈಯಕ್ತಿಕ ವೆಬ್‌ಪುಟಗಳನ್ನು ರೂಪಿಸಿಕೊಂಡಿದ್ದರು. ಅದೆಷ್ಟೋ ಜನ ಬಳಕೆದಾರರಿಗೆ ನಮ್ಮ ಸ್ವಂತದ್ದೂ ಒಂದು ವೆಬ್‌ಪುಟ ಇದೆ ಎಂದು ಹೇಳಿಕೊಳ್ಳುವ ಖುಷಿ ಕೊಟ್ಟದ್ದು ಈ ತಾಣ. ೧೯೯೪ರಲ್ಲಿ ಪ್ರಾರಂಭವಾದ ಈ ತಾಣವನ್ನು ೧೯೯೯ರಲ್ಲಿ ಯಾಹೂ ಕೊಂಡುಕೊಂಡಿತ್ತು. ಒಂದು ಕಾಲಕ್ಕೆ ವಿಶ್ವವ್ಯಾಪಿ ಜಾಲದ ಅತ್ಯಂತ ಜನಪ್ರಿಯ ತಾಣಗಳ ಪಟ್ಟಿಯಲ್ಲಿ ಮೂರನೆಯ ಸ್ಥಾನದಲ್ಲಿದ್ದ ಜಿಯೋಸಿಟೀಸ್‌ನಲ್ಲಿ ೨೦೦೯ರ ವೇಳೆಗೆ ಮೂರೂವರೆ ಕೋಟಿಗಿಂತ ಹೆಚ್ಚು ಪುಟಗಳಿದ್ದವು.

ಆ ವೇಳೆಗೆ ಜಿಯೋಸಿಟೀಸ್ ತಾಣದ ಜನಪ್ರಿಯತೆ ಕಡಿಮೆಯಾಗುತ್ತಿತ್ತು. ಇನ್ನು ಇದನ್ನು ನಡೆಸುವುದು ಕಷ್ಟ ಎಂದುಕೊಂಡ ಯಾಹೂ ಒಂದು ದಿನ ಆ ತಾಣವನ್ನು ಮುಚ್ಚಿಯೇಬಿಟ್ಟಿತು. ಹಾಗೆ ಮುಚ್ಚುತ್ತಿದ್ದಂತೆ ಮೂರುವರೆ ಕೋಟಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದ ಅವೆಲ್ಲ ವೆಬ್ ಪುಟಗಳೂ ಅವನ್ನು ಸೃಷ್ಟಿಸಿದ್ದವರ ಪಾಲಿಗೆ ಖಾಯಂ ಆಗಿ ಕಳೆದುಹೋದವು.

ವಿಶ್ವವ್ಯಾಪಿ ಜಾಲದ ಇತಿಹಾಸದಲ್ಲಿ ಇಂತಹ ಇನ್ನೂ ಅದೆಷ್ಟೋ ಘಟನೆಗಳು ನಡೆದಿವೆ.

ಮಂಗಳವಾರ, ಫೆಬ್ರವರಿ 28, 2012

ವಿಜ್ಞಾನ ದಿನ ವಿಶೇಷ: ಸ್ವಚ್ಛ ಇಂಧನ ಹಾಗೂ ಪರಮಾಣು ಸುರಕ್ಷತೆ

ಟಿ. ಜಿ. ಶ್ರೀನಿಧಿ
೧೯೨೮ ಫೆಬ್ರವರಿ ೨೮, ಭಾರತದ ಹೆಮ್ಮೆಯ ವಿಜ್ಞಾನಿ ಸರ್ ಸಿ ವಿ ರಾಮನ್ ಅವರು 'ರಾಮನ್ ಇಫೆಕ್ಟ್' ಎಂದೇ ಪ್ರಸಿದ್ಧವಾದ ತಮ್ಮ ಅಧ್ಯಯನದ ವಿವರಗಳನ್ನು ಜಗತ್ತಿಗೆ ತಿಳಿಸಿದ ದಿನ. ಇದೇ ಸಾಧನೆಗಾಗಿ ಅವರಿಗೆ ೧೯೩೦ನೇ ಇಸವಿಯಲ್ಲಿ ನೊಬೆಲ್ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದು ವಿಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ದೊರೆತ ಮೊತ್ತಮೊದಲ ನೊಬೆಲ್ ಪುರಸ್ಕಾರವೂ ಹೌದು.

ಸಮುದ್ರದ ಬಣ್ಣವೇಕೆ ನೀಲಿ ಎನ್ನುವುದು ಬಹಳ ಕಾಲದಿಂದ ಮನುಕುಲವನ್ನು ಕಾಡುತ್ತಿದ್ದ ಪ್ರಶ್ನೆ. ಆಕಾಶದ ನೀಲಿಯನ್ನು ನೀರು ಪ್ರತಿಫಲಿಸುವುದರಿಂದ ಅದೂ ನೀಲಿಯಾಗಿ ಕಾಣುತ್ತದೆ ಎಂದು ವಿಜ್ಞಾನಿಗಳೂ ಸೇರಿದಂತೆ ಅನೇಕರು ನಂಬಿದ್ದರು. ಒಮ್ಮೆ ರಾಮನ್ ಅವರು ಹಡಗಿನಲ್ಲಿ ಯುರೋಪಿಗೆ ಹೋಗುತ್ತಿದ್ದಾಗ ಅವರಿಗೂ ಇದೇ ಪ್ರಶ್ನೆ ಎದುರಾಯಿತಂತೆ. ಸಮುದ್ರದ ನೀಲಿ ಬಣ್ಣ ಆಕಾಶದ ಬಣ್ಣದ ಪ್ರತಿಫಲನವೋ ಅಥವಾ ಈ ನೀಲಿ ಬಣ್ಣದ ಹಿಂದೆ ಬೇರೇನಾದರೂ ಗುಟ್ಟು ಅಡಗಿದೆಯೋ ಎಂದು ಪತ್ತೆಮಾಡಲು ಹೊರಟ ರಾಮನ್ ಸೂರ್ಯನ ಬೆಳಕು ನೀರಿನಲ್ಲಿ ಹರಡಿಹೋಗುವುದೇ ಸಮುದ್ರದ ನೀರು ನೀಲಿಯಾಗಿ ಕಾಣಲು ಕಾರಣ ಎಂಬ ವಿಷಯವನ್ನು ಕಂಡುಹಿಡಿದರು. ಇದೇ ಅಂಶ ಮುಂದೆ ಅವರು ತಮ್ಮ ಅಧ್ಯಯನವನ್ನು ಮುಂದುವರೆಸಲು ಪ್ರೇರಣೆಯಾಯಿತು.

'ರಾಮನ್ ಪರಿಣಾಮ' ಸಂಶೋಧನೆಯ ವಿವರಗಳು ಪ್ರಕಟವಾದ ದಿನದ ನೆನಪಿನಲ್ಲಿ ಪ್ರತಿ ವರ್ಷ ಫೆಬ್ರವರಿ ೨೮ರಂದು ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಗುತ್ತದೆ. ವಿಜ್ಞಾನ ಹಾಗೂ ನಮ್ಮ ಜೀವನದಲ್ಲಿ ಅದರ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ರಾಷ್ಟ್ರೀಯ ವಿಜ್ಞಾನ ದಿನ ಆಚರಣೆಯ ಉದ್ದೇಶ.

ಪ್ರತೀ ವರ್ಷ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಚಟುವಟಿಕೆಗಳನ್ನು ಒಂದು ನಿರ್ದಿಷ್ಟ ವಿಷಯದ ಸುತ್ತ ಆಯೋಜಿಸಲಾಗುತ್ತದೆ. ಈ ಬಾರಿಯ ವಿಷಯ 'ಸ್ವಚ್ಛ ಇಂಧನದ ಆಯ್ಕೆಗಳು ಮತ್ತು ಪರಮಾಣು ಸುರಕ್ಷತೆ'.
ಕಳೆದ ವರ್ಷವಷ್ಟೆ ಭೂಮಿಯ ಜನಸಂಖ್ಯೆ ಏಳುನೂರು ಕೋಟಿ ತಲುಪಿದೆ. ಪ್ರಪಂಚದೆಲ್ಲೆಡೆಯ ಜನರ ಜೀವನಮಟ್ಟ ಏರುತ್ತಿದ್ದಂತೆ ಸಮೃದ್ಧಬದುಕಿನ ಕನಸು ಕಾಣುವವರ ಸಂಖ್ಯೆಯೂ ಹೆಚ್ಚುತ್ತಿದೆ. ಬಗೆಬಗೆಯ ವಸ್ತುಗಳನ್ನು ರಾಶಿಗಟ್ಟಲೆ ಕೊಳ್ಳುವ ಪ್ರವೃತ್ತಿ ವ್ಯಾಪಕವಾಗಿ ಬೆಳೆದಿದೆ.

'ಬೇಕು'ಗಳ ಪಟ್ಟಿ ದೊಡ್ಡದಾಗುತ್ತಿದ್ದಂತೆ ಅದರ ಪರಿಣಾಮ ಅಂತಿಮವಾಗಿ ಆಗುವುದು ಇಂಧನಗಳ ಮೇಲೆಯೇ ತಾನೆ! ಹೀಗಾಗಿ ಇಂಧನದ ಬೇಡಿಕೆ ಕೂಡ ತೀವ್ರವಾಗಿ ಏರುತ್ತಿದೆ.

ವಿದ್ಯುತ್ತು, ಸಂಚಾರ ವ್ಯವಸ್ಥೆ, ಆಹಾರ, ಬಟ್ಟೆಬರೆ, ಸಂವಹನ ವ್ಯವಸ್ಥೆ - ಹೀಗೆ ಯಾವುದನ್ನೇ ಗಮನಿಸಿದರೂ ಅದರ ಉತ್ಪಾದನೆಯಾಗುವಲ್ಲಿಂದ ಪ್ರಾರಂಭಿಸಿ ನಾವು ಅದನ್ನು ಬಳಸುವವರೆಗೆ ಎಲ್ಲ ಹಂತಗಳಲ್ಲೂ ಒಂದಲ್ಲ ಒಂದು ಬಗೆಯ ಇಂಧನ ಬೇಕು. ಅದರಲ್ಲೂ ಪೆಟ್ರೋಲ್, ಡೀಸಲ್ ಹಾಗೂ ಕಲ್ಲಿದ್ದಲಿನಂತಹ ಪಳೆಯುಳಿಕೆ ಇಂಧನಗಳಿಲ್ಲದೆ ಕೆಲಸ ಸಾಗುವುದೇ ಕಷ್ಟ ಎನ್ನುವಂತಹ ಪರಿಸ್ಥಿತಿ ಬಹುತೇಕ ಎಲ್ಲೆಡೆಯೂ ನಿರ್ಮಾಣವಾಗಿದೆ.

ಪಳೆಯುಳಿಕೆ ಇಂಧನಗಳ ಪೂರೈಕೆ ಸೀಮಿತವಾದದ್ದು, ಅವು ಒಂದಲ್ಲ ಒಂದು ದಿನ ಮುಗಿದುಹೋಗುತ್ತವೆ ಎನ್ನುವ ಅಂಶ ನಮಗೆಲ್ಲ ಗೊತ್ತೇ ಇದೆ. ಆದರೆ ಸಮಸ್ಯೆ ಅದೊಂದೇ ಅಲ್ಲ.

ಮಂಗಳವಾರ, ಫೆಬ್ರವರಿ 21, 2012

ಕಂಪ್ಯೂಟರ್ ಲೋಕದ ದುಷ್ಟಕೂಟ

ವೈರಸ್, ವರ್ಮ್, ಟ್ರೋಜನ್, ಬಾಟ್, ಸ್ಪೈವೇರ್ - ಕಂಪ್ಯೂಟರ್ ಪ್ರಪಂಚದ ಕುತಂತ್ರಾಂಶಗಳಿಗೆ ಅದೆಷ್ಟು ಹೆಸರುಗಳು! ಮಾಡುವುದು ಕೆಟ್ಟ ಕೆಲಸವೇ ಆದರೂ ಇವುಗಳಲ್ಲಿ ಪ್ರತಿಯೊಂದೂ ಕೆಲಸಮಾಡುವ ರೀತಿ ವಿಭಿನ್ನವಾದದ್ದು. ಈ ದುಷ್ಟಕೂಟದ ಸಣ್ಣದೊಂದು ಪರಿಚಯ ಇಲ್ಲಿದೆ.

ಟಿ. ಜಿ. ಶ್ರೀನಿಧಿ

ಈಗಂತೂ ಪ್ರತಿಯೊಂದು ಕೆಲಸಕ್ಕೂ ಕಂಪ್ಯೂಟರ್ ಬೇಕು. ಕಂಪ್ಯೂಟರ್‌ನಲ್ಲಿ ಬೇರೆಬೇರೆ ರೀತಿಯ ಕೆಲಸಮಾಡಲು ಬೇರೆಬೇರೆ ತಂತ್ರಾಂಶಗಳು (ಸಾಫ್ಟ್‌ವೇರ್) ಬೇಕು. ನಮ್ಮ ಕೆಲಸದಲ್ಲಿ ತಂತ್ರಾಂಶಗಳಿಂದ ಅದೆಷ್ಟು ಸಹಾಯವಾಗುತ್ತದೋ ಅಷ್ಟೇ ಪ್ರಮಾಣದ ತೊಂದರೆಯೂ ಆಗಬಲ್ಲದು. ಸದುದ್ದೇಶಗಳಿಗಾಗಿ ಬಳಕೆಯಾಗುವ ತಂತ್ರಾಂಶಗಳಂತೆ ಕೆಟ್ಟ ಕೆಲಸಗಳಿಗಾಗಿಯೂ ತಂತ್ರಾಂಶಗಳು ರೂಪಗೊಂಡಿರುವುದು ಇದಕ್ಕೆ ಕಾರಣ.

ಕೆಟ್ಟ ಉದ್ದೇಶದ ತಂತ್ರಾಂಶಗಳ ಹಾವಳಿ ಅಷ್ಟಿಷ್ಟಲ್ಲ. ಕಂಪ್ಯೂಟರುಗಳ ಕಾರ್ಯಾಚರಣೆಗೆ ತೊಂದರೆಮಾಡುವುದು, ಶೇಖರಿಸಿಟ್ಟ ಮಾಹಿತಿಯನ್ನು ಅಳಿಸಿಹಾಕುವುದು, ವೈಯಕ್ತಿಕ ಮಾಹಿತಿಯನ್ನು ಕದ್ದು ದುರ್ಬಳಕೆ ಮಾಡಿಕೊಳ್ಳುವುದು - ಹೀಗೆ ಇಂತಹ ತಂತ್ರಾಂಶಗಳು ಬೇಕಾದಷ್ಟು ಬಗೆಯಲ್ಲಿ ತೊಂದರೆಕೊಡುತ್ತವೆ. ಒಂದಲ್ಲ ಒಂದು ರೀತಿಯಲ್ಲಿ ಬೇರೊಬ್ಬರಿಗೆ ಕೇಡುಬಗೆಯುವುದೇ ಇಂತಹ ತಂತ್ರಾಂಶಗಳ ಉದ್ದೇಶವಾದ್ದರಿಂದ ಅವನ್ನು ಮಲೀಷಿಯಸ್ ಸಾಫ್ಟ್‌ವೇರ್ ಅಥವಾ ಮಾಲ್‌ವೇರ್ ಎಂದು ಕರೆಯುತ್ತಾರೆ. ಕನ್ನಡದಲ್ಲಿ ನಾವು ಅವನ್ನು ಕುತಂತ್ರಾಂಶಗಳೆಂದು ಕರೆಯೋಣ.

ವೈರಸ್, ವರ್ಮ್, ಟ್ರೋಜನ್, ಬಾಟ್, ಸ್ಪೈವೇರ್ ಇವೆಲ್ಲ ಕುತಂತ್ರಾಂಶಗಳಿಗೆ ಉದಾಹರಣೆಗಳು.

ಗುರುವಾರ, ಫೆಬ್ರವರಿ 16, 2012

ಉತ್ತರ ಕರ್ನಾಟಕದ ವಿವಿಧೆಡೆ ವಿಜ್ಞಾನ ದಿನಾಚರಣೆ

ಇಜ್ಞಾನ ವಾರ್ತೆ

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಹಾಗೂ ಗುಲಬರ್ಗಾದ ಡಾ. ಪಿ. ಎಸ್. ಶಂಕರ್ ಪ್ರತಿಷ್ಠಾನದ ಸಹಯೋಗದಲ್ಲಿ ಉತ್ತರ ಕರ್ನಾಟಕದ ಹಲವೆಡೆಗಳಲ್ಲಿ 'ರಾಷ್ಟ್ರೀಯ ವಿಜ್ಞಾನ ದಿನಾಚರಣೆ - ೨೦೧೨' ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಸಂದರ್ಭದಲ್ಲಿ ಈ ವರ್ಷದ ವಿಜ್ಞಾನ ದಿನಾಚರಣೆಯ ವಿಷಯವಾದ 'ಸ್ವಚ್ಛ ಇಂಧನದ ಆಯ್ಕೆಗಳು ಹಾಗೂ ಪರಮಾಣು ಸುರಕ್ಷತೆ' ಕುರಿತು ಉಪನ್ಯಾಸಗಳಿರುತ್ತವೆ.

ಕಾರ್ಯಕ್ರಮದ ವಿವರಗಳು ಹೀಗಿವೆ:
  • ಫೆಬ್ರುವರಿ ೨೩: ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯ, ಬಳ್ಳಾರಿ
  • ಫೆಬ್ರುವರಿ ೨೪: ಹೆಚ್. ಆರ್. ಶ್ರೀರಾಮುಲು ಸ್ಮಾರಕ ಮಹಾವಿದ್ಯಾಲಯ, ಗಂಗಾವತಿ (ಕೊಪ್ಪಳ ಜಿಲ್ಲೆ)
  • ಫೆಬ್ರುವರಿ ೨೫: ರಾಯಚೂರು ವಿಜ್ಞಾನ ಕೇಂದ್ರ, ರಾಯಚೂರು
  • ಫೆಬ್ರುವರಿ ೨೭: ಬಿ. ವಿ. ಭೂಮರೆಡ್ಡಿ ಪದವಿ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯ, ಬೀದರ
  • ಫೆಬ್ರುವರಿ ೨೮: ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯ, ಗುಲಬರ್ಗಾ
  • ಫೆಬ್ರುವರಿ ೨೯: ಸರಕಾರಿ ಪದವಿ ಮಹಾವಿದ್ಯಾಲಯ, ಯಾದಗಿರಿ

ಶುಕ್ರವಾರ, ಫೆಬ್ರವರಿ 10, 2012

ಜನಪ್ರಿಯ ವಿಜ್ಞಾನ ಸಾಹಿತಿಗಳ ಸಮಾವೇಶ

ಇಜ್ಞಾನ ವಾರ್ತೆ

ಜನಪ್ರಿಯ ವಿಜ್ಞಾನ ಸಾಹಿತಿಗಳ ವೇದಿಕೆ, ಕರಾವಿಪ ಹಾಗೂ ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಯೋಗದಲ್ಲಿ ಈ ವಾರಾಂತ್ಯ (೧೧-೧೨ ಫೆಬ್ರುವರಿ ೨೦೧೨) ೫ನೇ ರಾಜ್ಯಮಟ್ಟದ ಜನಪ್ರಿಯ ವಿಜ್ಞಾನ ಸಾಹಿತಿಗಳ ಸಮಾವೇಶ ಆಯೋಜಿಸಲಾಗಿದೆ. ಬೆಂಗಳೂರು ಬನಶಂಕರಿ ೨ನೇ ಹಂತದ ಕಿಮ್ಸ್ ಸಂಸ್ಥೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಪ್ರೊ. ಜೆ. ಆರ್. ಲಕ್ಷ್ಮಣರಾವ್, ಡಾ. ಸಿ. ಆರ್. ಚಂದ್ರಶೇಖರ, ಡಾ. ಪಿ. ಎಸ್. ಶಂಕರ್, ಪ್ರೊ. ಅಡ್ಯನಡ್ಕ ಕೃಷ್ಣಭಟ್ ಸೇರಿದಂತೆ ಅನೇಕ ಹಿರಿಯ ಸಂವಹನಕಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಮಂಗಳವಾರ, ಫೆಬ್ರವರಿ 7, 2012

ವಿಶ್ವಸಂಕೇತ ಯುನಿಕೋಡ್

ಟಿ. ಜಿ. ಶ್ರೀನಿಧಿ

ವಿಶ್ವವ್ಯಾಪಿ ಜಾಲದ ಮೂಲಕ ಇಮೇಲ್ ಬಳಕೆ ಪ್ರಾರಂಭವಾದ ಹೊಸದರಲ್ಲಿ ಅದರ ವ್ಯವಹಾರವೆಲ್ಲ ಇಂಗ್ಲಿಷಿನಲ್ಲೇ ಇತ್ತು. ಬರಿಯ ಇಮೇಲ್ ಅಷ್ಟೇ ಏಕೆ, ನಮ್ಮ ಮಟ್ಟಿಗೆ ಇಡಿಯ ವಿಶ್ವವ್ಯಾಪಿ ಜಾಲವೇ ಇಂಗ್ಲಿಷ್‌ಮಯವಾಗಿತ್ತು.

ಆಗ ಇಮೇಲ್‌ನಲ್ಲಿ ವ್ಯವಹರಿಸುವಾಗ ಕನ್ನಡ ಸಂದೇಶಗಳನ್ನು ಇಂಗ್ಲಿಷ್ ಲಿಪಿಯಲ್ಲೇ ಬರೆಯುವ ಅಭ್ಯಾಸವಿತ್ತು. "ಏನಪ್ಪಾ, ಚೆನ್ನಾಗಿದ್ದೀಯಾ?" ಎನ್ನುವುದಕ್ಕೆ "Enappa, chennagiddeeyaa?" ಎಂದು ಲಿಪ್ಯಂತರಿಸಿ ಬರೆಯುವ ಈ ಭಾಷೆಯನ್ನು ಈಗಲೂ ಕೆಲವರು ರೂಢಿಯಲ್ಲಿಟ್ಟುಕೊಂಡಿದ್ದಾರೆ. ಆದರೆ ಕನ್ನಡ ಸಂದೇಶಗಳನ್ನು ಇಂಗ್ಲಿಷಿನಲ್ಲಿ ಬರೆಯುವುದು ಎಷ್ಟು ಕಷ್ಟವೋ ಅದನ್ನು ಓದುವುದು ಇನ್ನೂ ಕಷ್ಟ ಎನ್ನುವುದು ನಮ್ಮೆಲ್ಲರ ಅನುಭವಕ್ಕೂ ಬಂದಿರುವ ವಿಷಯವೇ.

ನಂತರ ಕನ್ನಡ ಪದಸಂಸ್ಕಾರಕಗಳು ಬಂದವು. ಆಗ ಕನ್ನಡದಲ್ಲಿ ಸಿದ್ಧಪಡಿಸಿದ ಕಡತಗಳನ್ನು ಅಟ್ಯಾಚ್‌ಮೆಂಟ್ ರೂಪದಲ್ಲಿ ವಿನಿಮಯ ಮಾಡಿಕೊಳ್ಳುವ ಅಭ್ಯಾಸ ಶುರುವಾಯಿತು. ಮೊದಲಿಗೆ 'ಬರಹ', ಹಾಗೂ ನಂತರದ ದಿನಗಳಲ್ಲಿ 'ನುಡಿ' (ಇದರ ಮೊದಲ ಹೆಸರು 'ಕಲಿತ' ಎಂದಿತ್ತು) ತಂತ್ರಾಂಶಗಳು ಉಚಿತವಾಗಿ ದೊರಕುವಂತಾದಾಗ ಇಮೇಲ್ ಮಾಧ್ಯಮದಲ್ಲಿ ಮಾತ್ರವೇ ಅಲ್ಲ, ಒಟ್ಟು ವಿಶ್ವವ್ಯಾಪಿ ಜಾಲದಲ್ಲೇ ಕನ್ನಡದ ಬಳಕೆ ಇನ್ನಷ್ಟು ವ್ಯಾಪಕವಾಯಿತು.

ಆದರೆ ಇಲ್ಲೂ ಒಂದು ಸಮಸ್ಯೆಯಿತ್ತು. ಯಾವುದೇ ಕನ್ನಡ ತಂತ್ರಾಂಶ ಬಳಸಿ ನೀವೊಂದು ಕಡತ ತಯಾರಿಸಿದ್ದರೆ ನಿಮ್ಮ ಸಂದೇಶ ಓದುವವರಲ್ಲೂ ಆ ತಂತ್ರಾಂಶ, ಅಥವಾ ಕನಿಷ್ಠಪಕ್ಷ ಅದರ ಫಾಂಟುಗಳಾದರೂ ಇರಬೇಕಿದ್ದು ಅನಿವಾರ್ಯವಾಗಿತ್ತು. ಜಾಲತಾಣಗಳ ಪರಿಸ್ಥಿತಿಯೂ ಹೀಗೆಯೇ ಇತ್ತು. ಸರಿಯಾದ ಫಾಂಟುಗಳಿಲ್ಲದ ಕಂಪ್ಯೂಟರಿನಲ್ಲಿ ಕನ್ನಡ ತಾಣಗಳಲ್ಲಿದ್ದ ಪಠ್ಯವೆಲ್ಲ ಇಂಗ್ಲಿಷ್ ಅಕ್ಷರಗಳ ಅಸಂಬದ್ಧ ಜೋಡಣೆಯಂತೆಯೇ ಕಾಣಸಿಗುತ್ತಿದ್ದವು.

ರೆಡಿಫ್‌ಮೇಲ್, ಇ-ಪತ್ರ, ಇ-ಟಪಾಲ್ ಮುಂತಾದ ಕೆಲ ತಾಣಗಳು ಬೇರೆ ತಂತ್ರಾಂಶದ ಅಗತ್ಯವಿಲ್ಲದೆ ಕನ್ನಡದಲ್ಲೇ ಇಮೇಲ್ ಕಳುಹಿಸುವ ಸೌಲಭ್ಯವನ್ನು ಒದಗಿಸಿದವಾದರೂ ಅವು ಯಾವುವೂ ಪರಿಪೂರ್ಣವಾಗಿರಲಿಲ್ಲ. ಜಾಲತಾಣಗಳ ಮಟ್ಟಿಗೆ ಈ ಸಮಸ್ಯೆ ಡೈನಮಿಕ್ ಫಾಂಟ್‌ನಿಂದ ಕೊಂಚಮಟ್ಟಿಗೆ ನಿವಾರಣೆಯಾಯಿತು; ಆದರೂ ಮಾಹಿತಿಯೆಲ್ಲ ಫಾಂಟ್ ಮೇಲೆಯೇ ಆಧರಿತವಾಗಿದ್ದರಿಂದ ಸರ್ಚ್ ಇಂಜನ್ ಮೂಲಕ ಆಗಲೂ ಕನ್ನಡದ ಮಾಹಿತಿಯನ್ನು ಸುಲಭವಾಗಿ ಹುಡುಕಲು ಆಗುತ್ತಿರಲಿಲ್ಲ (ಕೆಲವು ಕನ್ನಡ ತಾಣಗಳ ಮಟ್ಟಿಗೆ ಈ ಪರಿಸ್ಥಿತಿ ಈಗಲೂ ಮುಂದುವರೆದಿದೆ!).

ಈ ಪರಿಸ್ಥಿತಿ ಬದಲಾದದ್ದು ಯುನಿಕೋಡ್ ಸಂಕೇತ ವಿಧಾನ ಬಳಕೆಗೆ ಬಂದಾಗ.

ಶುಕ್ರವಾರ, ಫೆಬ್ರವರಿ 3, 2012

ಸಮದ್ರದಾಳದ ವಿಶಿಷ್ಟ ಗಣತಿ

ಟಿ. ಜಿ. ಶ್ರೀನಿಧಿ

೧೯೯೦ರಲ್ಲಿ ಜಪಾನಿನ ಒಸಾಕಾದಲ್ಲಿ ಒಂದು ದೊಡ್ಡ ಪ್ರದರ್ಶನ ನಡೆದಿತ್ತು, ಅಂತರರಾಷ್ಟ್ರೀಯ ಉದ್ಯಾನ ಹಾಗೂ ವನರಾಜಿ ಪ್ರದರ್ಶನ ಅಂತ; ಚಿಕ್ಕದಾಗಿ ಅದನ್ನು ಎಕ್ಸ್‌ಪೋ '೯೦ ಅಂತ ಕರೆದಿದ್ದರು. ಉದ್ಯಾನಗಳ ಬಗೆಗೆ ಅಷ್ಟೊಂದು ದೊಡ್ಡ ಪ್ರದರ್ಶನ ನಡೆದದ್ದು ಏಷಿಯಾಕ್ಕೆಲ್ಲ ಅದೇ ಮೊದಲು. ಎಕ್ಸ್‌ಪೋ '೯೦ ನಡೆದ ಆರು ತಿಂಗಳ ಕಾಲವೂ 'ಪ್ರಕೃತಿಯ ಜೊತೆ ಮಾನವನ ಸೌಹಾರ್ದಯುತ ಸಹಬಾಳ್ವೆ' ಎಂಬ ವಿಷಯದ ಸುತ್ತ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಆದರೆ ಪ್ರಕೃತಿ-ಮಾನವನ ಸಹಬಾಳ್ವೆ ಬರಿಯ ಆರುತಿಂಗಳು ಮಾತ್ರ ತಲೆಕೆಡಿಸಿಕೊಂಡು ಆಮೇಲೆ ಮರೆತುಬಿಡುವ ವಿಷಯ ಅಲ್ಲವಲ್ಲ! ಹೀಗಾಗಿಯೇ ಎಕ್ಸ್‌ಪೋ '೯೦ ಮುಗಿದ ಮೇಲೂ ಆ ಬಗ್ಗೆ ಕೆಲಸಮಾಡುವುದು ಸಾಧ್ಯವಾಗಲಿ ಎಂದು 'ಎಕ್ಸ್‌ಪೋ '೯೦ ಸ್ಮಾರಕ ಪ್ರತಿಷ್ಠಾನ'ವನ್ನು ಸ್ಥಾಪಿಸಲಾಯಿತು. ಮಾನವ ಹಾಗೂ ಪ್ರಕೃತಿಯ ಸಂಬಂಧಗಳ ಮೇಲೆ ಬೆಳಕುಚೆಲ್ಲುವ ಮಹತ್ವದ ಸಾಧನೆಗಳನ್ನು ಗುರುತಿಸಿ ಗೌರವಿಸುವುದು ಈ ಪ್ರತಿಷ್ಠಾನದ ಉದ್ದೇಶಗಳಲ್ಲೊಂದು. ಇದಕ್ಕಾಗಿ ಈ ಪ್ರತಿಷ್ಠಾನ 'ಅಂತರರಾಷ್ಟ್ರೀಯ ಕಾಸ್ಮಾಸ್ ಬಹುಮಾನ' ಎಂಬ ಹೆಸರಿನ ಪ್ರಶಸ್ತಿಯನ್ನು ಸ್ಥಾಪಿಸಿದೆ. ಇದು ಪರಿಸರ ಕ್ಷೇತ್ರದಲ್ಲಿ ಪ್ರಪಂಚದ ಅತ್ಯುಚ್ಚ ಪ್ರಶಸ್ತಿಗಳಲ್ಲೊಂದು.

೨೦೧೧ನೇ ಸಾಲಿನಲ್ಲಿ ಈ ಪ್ರಶಸ್ತಿಗೆ ಆಯ್ಕೆಯಾದದ್ದು ಸೆನ್ಸಸ್ ಆಫ್ ಮರೈನ್ ಲೈಫ್ ಎಂಬ ಯೋಜನೆ.

ನಮಗೆಲ್ಲ ಜನಗಣತಿ ಗೊತ್ತು, ಆದರೆ ಇದ್ಯಾವುದಿದು ಸಮುದ್ರಜೀವಗಳ ಗಣತಿ?

ಬುಧವಾರ, ಫೆಬ್ರವರಿ 1, 2012

ಪೈರಸಿ ಕಾಟ, ಇಂಟರ್‌ನೆಟ್ ಪರದಾಟ

ಸೋಪಾ-ಪೀಪಾ ಆದಮೇಲೆ ಈಗ ಆಕ್ಟಾ ಬೇರೆ ಬಂದಿದೆ. ಇಂಟರ್‌ನೆಟ್ ಲೋಕಕ್ಕೆ ಪೈರಸಿಯ ಜೊತೆಗೆ ಪೈರಸಿ ವಿರೋಧಿ ಕಾನೂನುಗಳ ಕಾಟವೂ ಶುರುವಾಗಿದೆ!
ಟಿ. ಜಿ. ಶ್ರೀನಿಧಿ

ಈಚೆಗೆ ಕೆಲದಿನಗಳಿಂದ ಅಂತರಜಾಲ ಪ್ರಪಂಚದಲ್ಲಿ ಗಲಾಟೆಯೋ ಗಲಾಟೆ.

ಕಳೆದ ಜನವರಿ ೧೮ರಂದು ವಿಕಿಪೀಡಿಯಾ ತಾಣ ಒಂದು ದಿನದ ಬಂದ್ ಆಚರಿಸಿದ್ದು ನಿಮಗೆಲ್ಲ ನೆನಪಿರಬೇಕು; ವಿಕಿಪೀಡಿಯಾ ಜೊತೆಗೆ ಇನ್ನೂ ಹಲವಾರು ದೊಡ್ಡ-ಸಣ್ಣ ತಾಣಗಳು ಆ ಬಂದ್‌ನಲ್ಲಿ ಪಾಲ್ಗೊಂಡಿದ್ದವು. ಇನ್ನು ಕೆಲ ಜಾಲತಾಣಗಳು ಪ್ರತಿಭಟನೆಯಲ್ಲಿ ನೇರವಾಗಿ ಭಾಗವಹಿಸದಿದ್ದರೂ ಅದಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದವು.

ಇಷ್ಟೆಲ್ಲ ಗಲಾಟೆಗೆ ಕಾರಣವಾದದ್ದು ಅಮೆರಿಕಾ ಸಂಸತ್ತಿನಲ್ಲಿ ಪ್ರಸ್ತಾಪವಾಗಿದ್ದ ಎರಡು ಮಸೂದೆಗಳು. ಅವುಗಳ ಹೆಸರೇ 'ಸೋಪಾ' (ಸ್ಟಾಪ್ ಆನ್‌ಲೈನ್ ಪೈರಸಿ ಆಕ್ಟ್) ಹಾಗೂ 'ಪೀಪಾ' (ಪ್ರೊಟೆಕ್ಟ್ ಇಂಟಲೆಕ್ಚುಯಲ್ ಪ್ರಾಪರ್ಟಿ ಆಕ್ಟ್). ಇಂಟರ್‌ನೆಟ್ ಪ್ರಪಂಚವನ್ನು ಕಾಡುತ್ತಿರುವ ಪೈರಸಿ ಪೀಡೆಯ ನಿವಾರಣೆಗೆ ಪ್ರಯತ್ನಿಸುವುದು ಈ ಮಸೂದೆಗಳ ಉದ್ದೇಶ. ಪೈರಸಿ ತಡೆಗಾಗಿ ಈ ಮಸೂದೆಗಳಲ್ಲಿ ಪ್ರಸ್ತಾಪವಾಗಿರುವ ಕೆಲ ನಿಯಮಗಳು ತೀರಾ ಕಠಿಣವಾಗಿವೆ ಎನ್ನುವುದು ಅವುಗಳ ವಿರುದ್ಧದ ಪ್ರತಿಭಟನೆಗೆ ಕಾರಣವಾಗಿತ್ತು.

ಜನವರಿ ೧೮ರ ಪ್ರತಿಭಟನೆಗಳಿಗೆ ವಿಶ್ವವ್ಯಾಪಿ ಬೆಂಬಲ ವ್ಯಕ್ತವಾದಾಗ ಸೋಪಾ-ಪೀಪಾಗಳಿಗೆ ದೊರೆತಿದ್ದ ಬೆಂಬಲ ಕೊಂಚಮಟ್ಟಿಗೆ ಕಡಿಮೆಯಾಯಿತು. ಜನರ ಒತ್ತಡಕ್ಕೆ ಮಣಿದ ಅಮೆರಿಕಾ ಸಂಸತ್ತು ಸದ್ಯಕ್ಕೆ ಈ ವಿಧೇಯಕಗಳ ಬಗೆಗೆ ಯಾವುದೇ ಕ್ರಮ ತೆಗೆದುಕೊಳ್ಳದಿರುವ ನಿರ್ಧಾರವನ್ನೂ ಪ್ರಕಟಿಸಿತು. ಪ್ರತಿಭಟನೆ ಇನ್ನೂ ಮುಗಿದಿಲ್ಲ ಎಂದು ವಿಕಿಪೀಡಿಯಾ ಹೇಳಿದೆಯಾದರೂ ಸೋಪಾ-ಪೀಪಾ ಪ್ರಸಂಗಕ್ಕೆ ಅಲ್ಪವಿರಾಮವಂತೂ ಸಿಕ್ಕಿದೆ.

ಮಂಗಳವಾರ, ಜನವರಿ 24, 2012

ಕಂಪ್ಯೂಟರ್ ಇತಿಹಾಸದ ಪುಟಗಳಿಂದ

ಟಿ. ಜಿ. ಶ್ರೀನಿಧಿ

ನಮ್ಮ ಬದುಕಿನ ಎಲ್ಲ ಕ್ಷೇತ್ರಗಳಲ್ಲೂ ಮಾಹಿತಿ ತಂತ್ರಜ್ಞಾನದ ಕೈವಾಡ ಇರುವ ಇಂದಿನ ಪರಿಸ್ಥಿತಿಯಲ್ಲಿ ಕಂಪ್ಯೂಟರ್ ಒಂದು ಕುತೂಹಲಹುಟ್ಟಿಸುವ ವಸ್ತುವಾಗಿ ಉಳಿದಿಲ್ಲ, ನಿಜ. ಆದರೆ ಕಳೆದ ಒಂದು ಶತಮಾನಕ್ಕಿಂತ ಕಡಿಮೆ ಸಮಯದಲ್ಲಿ ಕಂಪ್ಯೂಟರ್ ಜಗತ್ತು ವಿಕಾಸಗೊಂಡ ರೀತಿಯತ್ತ ನೋಡಿದರೆ ಅದು ಮಾತ್ರ ನಿಜಕ್ಕೂ ವಿಸ್ಮಯಕಾರಿ. ಕೋಣೆಗಾತ್ರದ ಆನೆತೂಕದ ದೈತ್ಯ ಯಂತ್ರಗಳಿಂದ ಪ್ರಾರಂಭಿಸಿ ಅಂಗೈ ಮೇಲಿಟ್ಟುಕೊಳ್ಳಬಹುದಾದ ಇಂದಿನ ಹೈಟೆಕ್ ಉಪಕರಣಗಳವರೆಗೆ ಕಂಪ್ಯೂಟಿಂಗ್ ತಂತ್ರಜ್ಞಾನ ಬೆಳೆದುಬಂದ ಬಗೆ ಅಷ್ಟು ರೋಚಕವಾದದ್ದು. ಆ ಪ್ರಕ್ರಿಯೆಯ ಪ್ರತಿಯೊಂದು ಘಟ್ಟವೂ ವಿಶಿಷ್ಟ, ವಿಭಿನ್ನ.

ಹಾಲೆರಿತ್ ಮತ್ತು ಪಂಚ್ಡ್ ಕಾರ್ಡು
ಜೋಸೆಫ್ ಜಾಕಾರ್ಡ್ ತಯಾರಿಸಿದ ಮಗ್ಗದ ಪ್ರೇರಣೆಯಿಂದ ಚಾರ್ಲ್ಸ್ ಬ್ಯಾಬೇಜ್ ಮಾಡಿದ ವಿನ್ಯಾಸಗಳು, ಹಾಗೂ ಅವುಗಳಿಂದಾಗಿ ಪಂಚ್ಡ್ ಕಾರ್ಡುಗಳು ಕಂಪ್ಯೂಟರ್ ಪ್ರಪಂಚ ಪ್ರವೇಶಿಸಿದ ಚಾರಿತ್ರಿಕ ಘಟನೆ ನಮಗೆಲ್ಲ ಗೊತ್ತೇ ಇದೆ (ಡಿಸೆಂಬರ್ ೨೦, ೨೦೧೧ರ ವಿಜ್ಞಾಪನೆ ನೋಡಿ).

ಇದರ ನಂತರದ ಮಹತ್ವದ ಘಟನೆ ನಡೆದದ್ದು ಅಮೆರಿಕಾದಲ್ಲಿ.

ಮಂಗಳವಾರ, ಜನವರಿ 17, 2012

ಕ್ಯಾಮೆರಾ ಕತೆಗಳು

ಡಿಜಿಟಲ್ ಕ್ಯಾಮೆರಾ ಗುಂಗಿನಲ್ಲಿ ಒಂದು ಲಹರಿ

ಟಿ. ಜಿ. ಶ್ರೀನಿಧಿ

ಹಿಂದಿನ ಕಾಲದಲ್ಲಿ, ಅಂದರೆ ಸುಮಾರು ಹತ್ತು ವರ್ಷಕ್ಕೂ ಮೊದಲು, ಫೋಟೋ ತೆಗೆಯಬೇಕು ಎಂದರೆ ಕ್ಯಾಮೆರಾಗಳಿಗೆ ರೀಲು ಹಾಕಿಸಬೇಕಾಗುತ್ತಿತ್ತು. ಆಗ ಸಿಗುತ್ತಿದ್ದ ಕ್ಯಾಮೆರಾಗಳು - ಫಿಲಂ ರೀಲುಗಳ ಮಟ್ಟಿಗೆ ಕೊಡಕ್ ಸಂಸ್ಥೆಗೆ ಒಂದು ರೀತಿಯ ಸೂಪರ್ ಸ್ಟಾರ್ ಪಟ್ಟವೇ ಇತ್ತು. ಫೋಟೋಗ್ರಫಿ ಉತ್ಪನ್ನಗಳ ಮಾರುಕಟ್ಟೆಯ ಬಹುತೇಕ ಭಾಗವನ್ನು ತನ್ನ ಹಿಡಿತದಲ್ಲೇ ಇಟ್ಟುಕೊಂಡಿದ್ದ ಆ ಸಂಸ್ಥೆ ಸೂಪರ್ ಸ್ಟಾರ್ ಆಗುವುದು ಸಹಜ ತಾನೆ!

ಆದರೆ ಫೋಟೋಗ್ರಫಿ ಲೋಕದ ಬದಲಾದ ಪರಿಸ್ಥಿತಿಯಲ್ಲಿ ಸ್ಟಾರ್ ಪಟ್ಟ ಉಳಿಸಿಕೊಳ್ಳುವುದು ಕೊಡಕ್‌ಗೆ ಸಾಧ್ಯವಾಗಲಿಲ್ಲ; ಡಿಜಿಟಲ್ ಉತ್ಪನ್ನಗಳತ್ತ ಮುಖಮಾಡಲು ಪ್ರಯತ್ನಿಸಿದರೂ ಆ ಪ್ರಯತ್ನದಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಸಿಗಲಿಲ್ಲ. ಹೀಗಾಗಿ ಈಚಿನ ಕೆಲವರ್ಷಗಳಲ್ಲಿ ಕೊಡಕ್ ಸಂಸ್ಥೆ ಹೆಚ್ಚೂಕಡಿಮೆ ನೇಪಥ್ಯಕ್ಕೇ ಸರಿದುಬಿಟ್ಟಿತ್ತು.

ಈಗ ಇದ್ದಕ್ಕಿದ್ದಂತೆ ಕೊಡಕ್ ಸಂಸ್ಥೆ ನೆನಪಿಗೆ ಬರಲು ಕಾರಣವಾದದ್ದು ಕೆಲದಿನಗಳ ಹಿಂದೆ ಕೇಳಿಬಂದ ಸುದ್ದಿ. ತೀವ್ರ ಹಣಕಾಸಿನ ಸಮಸ್ಯೆಗಳಿಗೆ ಸಿಲುಕಿರುವ ಆ ಸಂಸ್ಥೆ ದಿವಾಳಿಯಾಗುವತ್ತ ಸಾಗಿದೆ ಎಂಬ ಆ ಸುದ್ದಿಯಿಂದ ತಂತ್ರಜ್ಞಾನ ಲೋಕದಲ್ಲಿ ಇನ್ನೂ ಕೆಲ ನೆನಪುಗಳು ಮರುಕಳಿಸಿದ್ದವು.

ಅಂತಹ ಒಂದು ನೆನಪು ೧೯೭೫ನೇ ಇಸವಿಯದು.

ಭಾನುವಾರ, ಜನವರಿ 15, 2012

ಪತ್ರಿಕೆಗಳಲ್ಲಿ '...ಬಿಸ್ಕತ್ತು ...ಟ್ಯಾಬ್ಲೆಟ್ಟು'

ಜನವರಿ ೧೫, ೨೦೧೨ರ ಪ್ರಜಾವಾಣಿಯಲ್ಲಿ ಪ್ರಕಟವಾಗಿರುವ ಬರೆಹ
* * *
ಜನವರಿ ೧೬, ೨೦೧೨ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾಗಿರುವ ಬರೆಹ

ಮಂಗಳವಾರ, ಜನವರಿ 10, 2012

ವೈರಸ್ ತಡೆಗೆ ಆಂಟಿವೈರಸ್

ಟಿ. ಜಿ. ಶ್ರೀನಿಧಿ

ಕಳೆದ ವಾರದಲ್ಲಿ ಒಂದು ಸುದ್ದಿ ಕೇಳಿಬಂತು - ಇಂಗ್ಲೆಂಡ್ ಹಾಗೂ ಫ್ರಾನ್ಸಿನ ಸುಮಾರು ನಲವತ್ತೈದು ಸಾವಿರ ಬಳಕೆದಾರರ ಫೇಸ್‌ಬುಕ್ ಪಾಸ್‌ವರ್ಡ್‌ಗಳು ಕಳವಾಗಿವೆ ಎನ್ನುವುದು ಆ ಸುದ್ದಿಯ ಸಾರಾಂಶ.

ಈ ಕಳವನ್ನು ಪತ್ತೆಮಾಡಿದ ಕಂಪ್ಯೂಟರ್ ಸುರಕ್ಷತಾ ತಜ್ಞರು ಇದೆಲ್ಲ ಹೇಗಾಯಿತು ಎನ್ನುವುದನ್ನೂ ವಿವರಿಸಿದ್ದರು: ದುಷ್ಕರ್ಮಿಗಳ ದುರುದ್ದೇಶ ಕುತಂತ್ರಾಂಶವೊಂದರ ಬೆನ್ನೇರಿ ಇಷ್ಟೆಲ್ಲ ಹಾವಳಿ ಮಾಡಿತ್ತು! ಬಳಕೆದಾರರನ್ನು ಮೋಸಗೊಳಿಸಿ ಅವರ ಪಾಸ್‌ವರ್ಡ್ ಕದಿಯಲು ರ್‍ಯಾಮ್ನಿಟ್ ಎಂಬ ಹೆಸರಿನ ವರ್ಮ್ ಅನ್ನು ಬಳಸಲಾಗಿತ್ತಂತೆ. ಈ ಹಿಂದೆ ಬ್ಯಾಂಕ್ ಖಾತೆಗಳ ಮಾಹಿತಿ ಕದಿಯಲು ಇದೇ ವರ್ಮ್ ಬಳಕೆಯಾಗಿದ್ದ ಇತಿಹಾಸವಿದೆ. ಈ ಬಾರಿ ಇದರ ಸಹಾಯದಿಂದ ಕದ್ದ ಪಾಸ್‌ವರ್ಡ್ ಉಪಯೋಗಿಸಿ ಬಳಕೆದಾರರ ಫೇಸ್‌ಬುಕ್ ಖಾತೆ ಪ್ರವೇಶಿಸುವ ದುಷ್ಕರ್ಮಿಗಳು ಅದನ್ನು ವೈಯಕ್ತಿಕ ಮಾಹಿತಿಯ ಕಳವು, ಕುತಂತ್ರಾಂಶಗಳ ಹರಡುವಿಕೆ ಮುಂತಾದ ಕುಕೃತ್ಯಗಳಿಗೆ ಬಳಸಬಹುದು ಎಂದು ತಜ್ಞರು ಹೇಳುತ್ತಾರೆ.

ಇಂತಹ ನೂರಾರು ಪೀಡೆಗಳು ಕಂಪ್ಯೂಟರ್ ಪ್ರಪಂಚದ ತುಂಬೆಲ್ಲ ಇವೆ. ಇವುಗಳಿಂದೆಲ್ಲ ಪಾರಾಗಲು ಕಂಪ್ಯೂಟರ್ ತಜ್ಞರು ಹೇಳುವುದು ಒಂದೇ ರಾಮಬಾಣದ ಹೆಸರು. ಅದೇ ವೈರಸ್ ವಿರೋಧಿ ತಂತ್ರಾಂಶ, ಅರ್ಥಾತ್ ಆಂಟಿವೈರಸ್!

ಮಂಗಳವಾರ, ಜನವರಿ 3, 2012

ಪ್ರೋಗ್ರಾಮಿಂಗ್ ಪ್ರಪಂಚ

ಟಿ. ಜಿ. ಶ್ರೀನಿಧಿ

ಕಂಪ್ಯೂಟರ್ ಏನೇನೆಲ್ಲ ಮಾಡುತ್ತದಲ್ಲ! ಮದುವೆ ಇನ್ವಿಟೇಷನ್ ವಿನ್ಯಾಸದಿಂದ ಪ್ರಾರಂಭಿಸಿ ರಾಕೆಟ್ ಉಡಾವಣೆಯ ನಿಯಂತ್ರಣದವರೆಗೆ ಈಗ ಎಲ್ಲವುದಕ್ಕೂ ಕಂಪ್ಯೂಟರ್ ಬೇಕೇ ಬೇಕು.

ಆದರೆ ಕಂಪ್ಯೂಟರ್‌ಗೆ ಸ್ವಂತ ಬುದ್ಧಿ ಇರುವುದಿಲ್ಲ. ಇಂತಿಂತಹ ಕೆಲಸಗಳನ್ನು ಇಂಥದ್ದೇ ರೀತಿಯಲ್ಲಿ ಮಾಡು ಎಂದು ಹೇಳದ ಹೊರತು ಅದು ಯಾವ ಕೆಲಸವನ್ನೂ ಮಾಡುವುದಿಲ್ಲ, ಮತ್ತು ನಾವು ಹೇಳಿದ ಕೆಲಸವನ್ನು ನಾವು ಹೇಳಿದಂತೆ ಮಾತ್ರ ಮಾಡುತ್ತದೆ. ಉದಾಹರಣೆಗೆ ಒಂದು + ಒಂದು ಎಷ್ಟು ಎಂದು ಯಾರಾದರೂ ಕೇಳಿದಾಗ ಹನ್ನೊಂದು ಎಂದು ಉತ್ತರಿಸಲು ಅದಕ್ಕೆ ಹೇಳಿಕೊಟ್ಟಿದ್ದೇವೆ ಎಂದುಕೊಳ್ಳೋಣ; ಆಮೇಲೆ ಅದೆಷ್ಟು ಬಾರಿ ಕೇಳಿದರೂ ಸಿಗುವುದು ಒಂದು + ಒಂದು = ಹನ್ನೊಂದು ಎಂಬ ಉತ್ತರವೇ!

ಹೀಗೆ ಪ್ರತಿಯೊಂದು ಕೆಲಸವನ್ನೂ ಮಾಡಲು ಕಂಪ್ಯೂಟರ್‌ಗೆ ಕೊಡಬೇಕಾದ ನಿರ್ದೇಶನಗಳನ್ನು ಪ್ರೋಗ್ರಾಮ್(ಕ್ರಮವಿಧಿ)ಗಳ ರೂಪದಲ್ಲಿ ಬರೆಯಲಾಗಿರುತ್ತದೆ. ಕಂಪ್ಯೂಟರ್ ಯಾವುದೇ ಕೆಲಸ ಮಾಡುವಾಗಲೂ ಅದಕ್ಕೆ ಸಂಬಂಧಪಟ್ಟ ಪ್ರೋಗ್ರಾಮಿನಲ್ಲಿರುವ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸುತ್ತದೆ.
badge