ಮಂಗಳವಾರ, ಫೆಬ್ರವರಿ 28, 2012

ವಿಜ್ಞಾನ ದಿನ ವಿಶೇಷ: ಸ್ವಚ್ಛ ಇಂಧನ ಹಾಗೂ ಪರಮಾಣು ಸುರಕ್ಷತೆ

ಟಿ. ಜಿ. ಶ್ರೀನಿಧಿ
೧೯೨೮ ಫೆಬ್ರವರಿ ೨೮, ಭಾರತದ ಹೆಮ್ಮೆಯ ವಿಜ್ಞಾನಿ ಸರ್ ಸಿ ವಿ ರಾಮನ್ ಅವರು 'ರಾಮನ್ ಇಫೆಕ್ಟ್' ಎಂದೇ ಪ್ರಸಿದ್ಧವಾದ ತಮ್ಮ ಅಧ್ಯಯನದ ವಿವರಗಳನ್ನು ಜಗತ್ತಿಗೆ ತಿಳಿಸಿದ ದಿನ. ಇದೇ ಸಾಧನೆಗಾಗಿ ಅವರಿಗೆ ೧೯೩೦ನೇ ಇಸವಿಯಲ್ಲಿ ನೊಬೆಲ್ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದು ವಿಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ದೊರೆತ ಮೊತ್ತಮೊದಲ ನೊಬೆಲ್ ಪುರಸ್ಕಾರವೂ ಹೌದು.

ಸಮುದ್ರದ ಬಣ್ಣವೇಕೆ ನೀಲಿ ಎನ್ನುವುದು ಬಹಳ ಕಾಲದಿಂದ ಮನುಕುಲವನ್ನು ಕಾಡುತ್ತಿದ್ದ ಪ್ರಶ್ನೆ. ಆಕಾಶದ ನೀಲಿಯನ್ನು ನೀರು ಪ್ರತಿಫಲಿಸುವುದರಿಂದ ಅದೂ ನೀಲಿಯಾಗಿ ಕಾಣುತ್ತದೆ ಎಂದು ವಿಜ್ಞಾನಿಗಳೂ ಸೇರಿದಂತೆ ಅನೇಕರು ನಂಬಿದ್ದರು. ಒಮ್ಮೆ ರಾಮನ್ ಅವರು ಹಡಗಿನಲ್ಲಿ ಯುರೋಪಿಗೆ ಹೋಗುತ್ತಿದ್ದಾಗ ಅವರಿಗೂ ಇದೇ ಪ್ರಶ್ನೆ ಎದುರಾಯಿತಂತೆ. ಸಮುದ್ರದ ನೀಲಿ ಬಣ್ಣ ಆಕಾಶದ ಬಣ್ಣದ ಪ್ರತಿಫಲನವೋ ಅಥವಾ ಈ ನೀಲಿ ಬಣ್ಣದ ಹಿಂದೆ ಬೇರೇನಾದರೂ ಗುಟ್ಟು ಅಡಗಿದೆಯೋ ಎಂದು ಪತ್ತೆಮಾಡಲು ಹೊರಟ ರಾಮನ್ ಸೂರ್ಯನ ಬೆಳಕು ನೀರಿನಲ್ಲಿ ಹರಡಿಹೋಗುವುದೇ ಸಮುದ್ರದ ನೀರು ನೀಲಿಯಾಗಿ ಕಾಣಲು ಕಾರಣ ಎಂಬ ವಿಷಯವನ್ನು ಕಂಡುಹಿಡಿದರು. ಇದೇ ಅಂಶ ಮುಂದೆ ಅವರು ತಮ್ಮ ಅಧ್ಯಯನವನ್ನು ಮುಂದುವರೆಸಲು ಪ್ರೇರಣೆಯಾಯಿತು.

'ರಾಮನ್ ಪರಿಣಾಮ' ಸಂಶೋಧನೆಯ ವಿವರಗಳು ಪ್ರಕಟವಾದ ದಿನದ ನೆನಪಿನಲ್ಲಿ ಪ್ರತಿ ವರ್ಷ ಫೆಬ್ರವರಿ ೨೮ರಂದು ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಗುತ್ತದೆ. ವಿಜ್ಞಾನ ಹಾಗೂ ನಮ್ಮ ಜೀವನದಲ್ಲಿ ಅದರ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ರಾಷ್ಟ್ರೀಯ ವಿಜ್ಞಾನ ದಿನ ಆಚರಣೆಯ ಉದ್ದೇಶ.

ಪ್ರತೀ ವರ್ಷ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಚಟುವಟಿಕೆಗಳನ್ನು ಒಂದು ನಿರ್ದಿಷ್ಟ ವಿಷಯದ ಸುತ್ತ ಆಯೋಜಿಸಲಾಗುತ್ತದೆ. ಈ ಬಾರಿಯ ವಿಷಯ 'ಸ್ವಚ್ಛ ಇಂಧನದ ಆಯ್ಕೆಗಳು ಮತ್ತು ಪರಮಾಣು ಸುರಕ್ಷತೆ'.
ಕಳೆದ ವರ್ಷವಷ್ಟೆ ಭೂಮಿಯ ಜನಸಂಖ್ಯೆ ಏಳುನೂರು ಕೋಟಿ ತಲುಪಿದೆ. ಪ್ರಪಂಚದೆಲ್ಲೆಡೆಯ ಜನರ ಜೀವನಮಟ್ಟ ಏರುತ್ತಿದ್ದಂತೆ ಸಮೃದ್ಧಬದುಕಿನ ಕನಸು ಕಾಣುವವರ ಸಂಖ್ಯೆಯೂ ಹೆಚ್ಚುತ್ತಿದೆ. ಬಗೆಬಗೆಯ ವಸ್ತುಗಳನ್ನು ರಾಶಿಗಟ್ಟಲೆ ಕೊಳ್ಳುವ ಪ್ರವೃತ್ತಿ ವ್ಯಾಪಕವಾಗಿ ಬೆಳೆದಿದೆ.

'ಬೇಕು'ಗಳ ಪಟ್ಟಿ ದೊಡ್ಡದಾಗುತ್ತಿದ್ದಂತೆ ಅದರ ಪರಿಣಾಮ ಅಂತಿಮವಾಗಿ ಆಗುವುದು ಇಂಧನಗಳ ಮೇಲೆಯೇ ತಾನೆ! ಹೀಗಾಗಿ ಇಂಧನದ ಬೇಡಿಕೆ ಕೂಡ ತೀವ್ರವಾಗಿ ಏರುತ್ತಿದೆ.

ವಿದ್ಯುತ್ತು, ಸಂಚಾರ ವ್ಯವಸ್ಥೆ, ಆಹಾರ, ಬಟ್ಟೆಬರೆ, ಸಂವಹನ ವ್ಯವಸ್ಥೆ - ಹೀಗೆ ಯಾವುದನ್ನೇ ಗಮನಿಸಿದರೂ ಅದರ ಉತ್ಪಾದನೆಯಾಗುವಲ್ಲಿಂದ ಪ್ರಾರಂಭಿಸಿ ನಾವು ಅದನ್ನು ಬಳಸುವವರೆಗೆ ಎಲ್ಲ ಹಂತಗಳಲ್ಲೂ ಒಂದಲ್ಲ ಒಂದು ಬಗೆಯ ಇಂಧನ ಬೇಕು. ಅದರಲ್ಲೂ ಪೆಟ್ರೋಲ್, ಡೀಸಲ್ ಹಾಗೂ ಕಲ್ಲಿದ್ದಲಿನಂತಹ ಪಳೆಯುಳಿಕೆ ಇಂಧನಗಳಿಲ್ಲದೆ ಕೆಲಸ ಸಾಗುವುದೇ ಕಷ್ಟ ಎನ್ನುವಂತಹ ಪರಿಸ್ಥಿತಿ ಬಹುತೇಕ ಎಲ್ಲೆಡೆಯೂ ನಿರ್ಮಾಣವಾಗಿದೆ.

ಪಳೆಯುಳಿಕೆ ಇಂಧನಗಳ ಪೂರೈಕೆ ಸೀಮಿತವಾದದ್ದು, ಅವು ಒಂದಲ್ಲ ಒಂದು ದಿನ ಮುಗಿದುಹೋಗುತ್ತವೆ ಎನ್ನುವ ಅಂಶ ನಮಗೆಲ್ಲ ಗೊತ್ತೇ ಇದೆ. ಆದರೆ ಸಮಸ್ಯೆ ಅದೊಂದೇ ಅಲ್ಲ.


ಹಸಿರುಮನೆ ಪರಿಣಾಮ
ಪಳೆಯುಳಿಕೆ ಇಂಧನಗಳ ಬಳಕೆ ಅಪಾರ ಪ್ರಮಾಣದ ಮಾಲಿನ್ಯ ಉಂಟುಮಾಡುತ್ತದೆ. ಕಲ್ಲಿದ್ದಲನ್ನು ಸುಟ್ಟು ವಿದ್ಯುತ್ ಉತ್ಪಾದಿಸುವ ಘಟಕಗಳು ಇದಕ್ಕೆ ಅತ್ಯುತ್ತಮ ಉದಾಹರಣೆ. ವಿಶ್ವದೆಲ್ಲೆಡೆ ಲಕ್ಷಾಂತರ ಜನ ಬಳಸುವ ಫೇಸ್‌ಬುಕ್ ತಾಣ ತನ್ನ ಚಟುವಟಿಕೆಗಳಿಗೆ ಬಳಸುವ ವಿದ್ಯುತ್ತಿನ ಉತ್ಪಾದನೆಗಾಗಿ ಕಲ್ಲಿದ್ದಲು ಉಪಯೋಗಿಸಬಾರದು ಎಂದು ಪರಿಸರ ಸಂಘಟನೆಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದು ಇದೇ ಕಾರಣಕ್ಕಾಗಿ.

ಪೆಟ್ರೋಲ್, ಡೀಸಲ್ ಇತ್ಯಾದಿಗಳ ಪಾಡು ಕಲ್ಲಿದ್ದಲಿಗಿಂತ ಬೇರೆಯೇನಲ್ಲ. ನಮ್ಮ ನಗರಗಳ ಪೀಕ್ ಅವರ್ ಟ್ರಾಫಿಕ್‌ನಲ್ಲಿ ವಾಹನ ಚಲಾಯಿಸುವ, ಅಥವಾ ಡೀಸಲ್ ಜನರೇಟರ್‌ನ ಆಸುಪಾಸು ಕೆಲಸಮಾಡುವ ಅನುಭವ ಇದ್ದವರಿಗೆ ಈ ಮಾತನ್ನು ವಿವರಿಸುವ ಅಗತ್ಯವೇ ಇಲ್ಲ.

ಹೀಗೆ ಸಿಕ್ಕಲ್ಲೆಲ್ಲ ಹೊಗೆ ತುಂಬಿಸಿ ಜೀವಸಂಕುಲದ ಆರೋಗ್ಯ ಕೆಡಿಸಿದ್ದಷ್ಟೇ ಅಲ್ಲ, ವಾತಾವರಣದಲ್ಲಿರುವ ಕಾರ್ಬನ್ ಸಮತೋಲನವನ್ನು ಹಾಳುಮಾಡಿದ ಕುಖ್ಯಾತಿಯೂ ಪಳೆಯುಳಿಕೆ ಇಂಧನಗಳಿಗೆ ಸಲ್ಲುತ್ತದೆ.

ಸೂರ್ಯನಿಂದ ಬರುವ ಬೆಳಕಿನಿಂದಾಗಿ ಭೂಮಿಯ ಮೇಲ್ಮೈ ಬಿಸಿಯಾಗಿ ಶಾಖ ಹೊರಹೊಮ್ಮುತ್ತದೆ. ಇದು ಸಂಪೂರ್ಣವಾಗಿ ಭೂಮಿಯನ್ನು ಬಿಟ್ಟು ಹೋಗದಂತೆ ಕಾಯ್ದುಕೊಳ್ಳುವುದು ವಾತಾವರಣದಲ್ಲಿರುವ ನೀರಾವಿ, ಕಾರ್ಬನ್ ಡೈಆಕ್ಸೈಡ್ ಹಾಗೂ ಮೀಥೇನ್‌ಗಳ ಕೆಲಸ. ಇವನ್ನು ಹಸಿರುಮನೆ ಅನಿಲಗಳೆಂದು ಕರೆಯುತ್ತಾರೆ; ಈ ಅನಿಲಗಳಿಂದಾಗಿ ಭೂಮಿಯ ಉಷ್ಣತೆ ಜೀವಿಗಳ ಬದುಕಿಗೆ ಪೂರಕವಾಗಿ ಉಳಿಯುತ್ತದಲ್ಲ, ಆ ಪ್ರಕ್ರಿಯೆಯೇ ಹಸಿರುಮನೆ ಪರಿಣಾಮ. ಪಳೆಯುಳಿಕೆ ಇಂಧನಗಳ ಮಿತಿಮೀರಿದ ಬಳಕೆಯಿಂದಾಗಿ ವಾತಾವರಣದಲ್ಲಿನ ಹಸಿರುಮನೆ ಅನಿಲಗಳ ಪ್ರಮಾಣ ಹೆಚ್ಚಾಗಿದೆ, ಹವಾಮಾನ ಬದಲಾವಣೆ ಶುರುವಾಗಿದೆ.

ಅದೆಲ್ಲ ಹೋಗಲಿ ಎಂದರೆ ಪಳೆಯುಳಿಕೆ ಇಂಧನಗಳ ಪೂರೈಕೆಯೂ ಶಾಶ್ವತವಲ್ಲ. ಈಗಿನ ಪ್ರಮಾಣದಲ್ಲೇ ಬೇಡಿಕೆ ಹೆಚ್ಚುತ್ತ ಹೋದರೆ ಕೆಲವೇ ದಶಕಗಳಲ್ಲಿ ಭೂಮಿಯಲ್ಲಿರುವ ಪಳೆಯುಳಿಕೆ ಇಂಧನಗಳ ಸಂಗ್ರಹ ಸಂಪೂರ್ಣವಾಗಿ ಮುಗಿದುಹೋಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಆ ಸಮಯ ಸಮೀಪಿಸುತ್ತಿದ್ದಂತೆ ಬೆಲೆಯೇರಿಕೆಯ ಸಮಸ್ಯೆಯೂ ಪ್ರಾರಂಭವಾಗಲಿದೆ; ಇದರ ಅನುಭವ ನಮಗೇ ಈಗಾಗಲೇ ಆಗುತ್ತಿದೆಯಲ್ಲ!

ಹೀಗಿರುವಾಗ ನಮ್ಮೆಲ್ಲ ಅಗತ್ಯಗಳಿಗೂ ಪಳೆಯುಳಿಕೆ ಇಂಧನಗಳನ್ನೇ ನೆಚ್ಚಿಕೊಳ್ಳುವುದು ಎಷ್ಟು ಸರಿ? ಹೆಚ್ಚುತ್ತಿರುವ ಜನಸಂಖ್ಯೆ, ಏರುತ್ತಿರುವ ಬೇಡಿಕೆಗಳಿಗೆ ಸರಿಸಮಾನವಾಗಿ ಇಂಧನ ಪೂರೈಕೆ ವ್ಯವಸ್ಥೆಮಾಡಿಕೊಳ್ಳುವುದು ಹೇಗೆ? ಇಂಧನದ ಬಳಕೆಯಿಂದಾಗಿ ಮಾಲಿನ್ಯ ಮಿತಿಮೀರಿ ಹೆಚ್ಚದಂತೆ ತಡೆಯುವುದು ಹೇಗೆ?

ಈ ಪ್ರಶ್ನೆಗಳ ಬೆನ್ನಟ್ಟಿ ಹೊರಟವರಿಗೆ ಸಿಕ್ಕಿರುವ ಉತ್ತರವೇ ಸ್ವಚ್ಛ ಇಂಧನ.

ಸ್ವಚ್ಛ ಇಂಧನ
ಪರಿಸರಕ್ಕೆ ಹಾನಿಯಾಗದಂತೆ ಸಿದ್ಧವಾಗುವ, ಹಾಗೂ ಬಳಕೆಯಲ್ಲೂ ಹೆಚ್ಚು ಮಾಲಿನ್ಯ ಉಂಟುಮಾಡದ ಇಂಧನ ಮೂಲಗಳನ್ನು 'ಸ್ವಚ್ಛ' ಇಂಧನಗಳೆಂದು ಕರೆಯಬಹುದು. ಇಂತಹ ಬಹುಪಾಲು ಇಂಧನಗಳನ್ನು ನವೀಕರಿಸಬಲ್ಲ ಸಂಪನ್ಮೂಲಗಳಿಂದ ಪಡೆಯಲಾಗುತ್ತದೆ. ಉದಾಹರಣೆಗೆ ನೀರು, ಗಾಳಿ ಅಥವಾ ಸೂರ್ಯನ ಬೆಳಕಿನಿಂದ ನಾವು ವಿದ್ಯುತ್ ಉತ್ಪಾದಿಸಿದರೆ ಅದು ಸ್ವಚ್ಛ ಇಂಧನವೆಂದು ಹೇಳಬಹುದು. ಅವೆಲ್ಲವೂ ನವೀಕರಿಸಬಲ್ಲ ಇಂಧನ ಮೂಲಗಳು, ಹಾಗೂ ಅದರಿಂದ ಉಂಟಾಗುವ ಮಾಲಿನ್ಯ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ.

ಒಂದು ಶತಮಾನಕ್ಕೂ ಹೆಚ್ಚಿನ ಸಮಯದಿಂದ ಸ್ವಚ್ಛ ಇಂಧನ ಪೂರೈಸುತ್ತ ಬಂದಿರುವ ಹಿರಿಮೆ ಜಲವಿದ್ಯುತ್ ಯೋಜನೆಗಳದು. ನವೀಕರಿಸಬಲ್ಲ ಇಂಧನಮೂಲಗಳ ಪೈಕಿ ಅತ್ಯಂತ ವ್ಯಾಪಕವಾಗಿ ಬಳಕೆಯಾಗುತ್ತಿರುವುದೆಂದರೆ ಇದೇ. ಪ್ರಪಂಚದೆಲ್ಲೆಡೆ ಬಳಕೆಯಾಗುವ ಒಟ್ಟು ವಿದ್ಯುತ್ತಿನ ಶೇ.೧೬ರಷ್ಟು ಭಾಗ ಇದೊಂದೇ ಮೂಲದಿಂದ ಉತ್ಪಾದನೆಯಾಗುತ್ತದೆ (ನೀರಿನ ಶಕ್ತಿಯಿಂದ ವಿದ್ಯುತ್ ಪಡೆಯುವ ಪ್ರಕ್ರಿಯೆ ಮಾಲಿನ್ಯಕಾರಿಯಲ್ಲ ಎಂಬುದು ನಿಜವಾದರೂ ಜಲವಿದ್ಯುತ್ ಯೋಜನೆಗಳ ನಿರ್ಮಾಣಕ್ಕಾಗಿ ಈವರೆಗೆ ಅಪಾರ ಪ್ರಮಾಣದ ಅರಣ್ಯಸಂಪತ್ತನ್ನು 'ಮುಳುಗಿಸಲಾಗಿದೆ' ಎಂಬ ಕಟುಸತ್ಯವನ್ನು ಮರೆಮಾಚುವಂತಿಲ್ಲ).

ಭೂಮಿಯ ಶಾಖ (ಜಿಯೋಥರ್ಮಲ್ ಎನರ್ಜಿ), ಸ್ವಚ್ಛ ಇಂಧನದ ಇನ್ನೊಂದು ಮೂಲ. ಈ ಶಾಖವನ್ನು ಬಳಸಿ ವಿದ್ಯುತ್ ಉತ್ಪಾದನೆ ಮಾಡುವುದು ಜಿಯೋಥರ್ಮಲ್ ವಿದ್ಯುತ್ ಘಟಕಗಳ ವೈಶಿಷ್ಟ್ಯ. ಚಳಿಯ ರಾಷ್ಟ್ರಗಳಲ್ಲಿ ಕಟ್ಟಡಗಳನ್ನು ಬಿಸಿಯಾಗಿಡಲು ಶಾಖವನ್ನೇ ನೇರವಾಗಿಯೂ ಬಳಸಬಹುದು. ಆದರೆ ಜಿಯೋಥರ್ಮಲ್ ಘಟಕಗಳನ್ನು ಎಲ್ಲೆಡೆಯೂ ಸ್ಥಾಪಿಸುವುದು ಸಾಧ್ಯವಿಲ್ಲ. ಅಗತ್ಯ ಪ್ರಮಾಣದ ಶಾಖವನ್ನು ಪಡೆಯಲು ಭೂಮಿಯ ಮೇಲ್ಮೈಯಿಂದ ಕಿಲೋಮೀಟರುಗಳ ಆಳದವರೆಗೂ ಕೊಳವೆಬಾವಿ ತೋಡಬೇಕಾಗುತ್ತದೆ; ಇದು ತಾಂತ್ರಿಕವಾಗಿ ಹಾಗೂ ಆರ್ಥಿಕವಾಗಿ ಕಷ್ಟದ ಕೆಲಸವಾಗಿರುವುದರಿಂದ ಜಿಯೋಥರ್ಮಲ್ ಎನರ್ಜಿಯ ಬಳಕೆ ಇನ್ನೂ ವ್ಯಾಪಕವಾಗಿ ಬೆಳೆದಿಲ್ಲ.

ಸಮುದ್ರ ಕೂಡ ಸ್ವಚ್ಛ ಇಂಧನದ ಬಹುದೊಡ್ಡ ಆಕರ. ಸಮುದ್ರದ ಅಲೆಗಳಿಂದ ಪಡೆಯಲಾಗುವ ವೇವ್ ಪವರ್ ಹಾಗೂ ಉಬ್ಬರ ಇಳಿತಗಳಿಂದ ಪಡೆಯಲಾಗುವ ಟೈಡಲ್ ಪವರ್ ಘಟಕಗಳು ಪ್ರಪಂಚದ ಹಲವೆಡೆಗಳಲ್ಲಿ ಈಗಾಗಲೇ ಕೆಲಸಮಾಡುತ್ತಿವೆ. ಆದರೆ ಇವುಗಳ ವ್ಯಾಪ್ತಿಯೂ ಸೀಮಿತ.

ಗಾಳಿಶಕ್ತಿಯ ವಿಷಯವೇ ಬೇರೆ. ಗಾಳಿಯಂತ್ರಗಳನ್ನು (ವಿಂಡ್‌ಮಿಲ್) ಬಳಸಿ ವಿದ್ಯುತ್ ಉತ್ಪಾದಿಸುವ ತಂತ್ರಜ್ಞಾನ ಈಗಾಗಲೇ ಸಾಕಷ್ಟು ಬೆಳೆದಿರುವುದರಿಂದ ಸ್ವಚ್ಛ ಇಂಧನ ಪೂರೈಕೆಯಲ್ಲಿ ಗಾಳಿಶಕ್ತಿ ಮಹತ್ವದ ಪಾತ್ರ ವಹಿಸುತ್ತಿದೆ. ಡೆನ್ಮಾರ್ಕ್ ದೇಶದ ಉದಾಹರಣೆ ತೆಗೆದುಕೊಳ್ಳುವುದಾದರೆ ಒಟ್ಟು ವಿದ್ಯುತ್ ಬಳಕೆಯ ಶೇ.೨೦ರಷ್ಟನ್ನು ಗಾಳಿಶಕ್ತಿಯಿಂದಲೇ ಪೂರೈಸಲಾಗುತ್ತಿದೆ.

ಸ್ವಚ್ಛ ಇಂಧನದ ಇನ್ನೊಂದು ಪ್ರಮುಖ ಮೂಲ ಸೌರಶಕ್ತಿ. ಸೌರಶಕ್ತಿಯಿಂದ ಬೆಳಕು ಪಡೆಯುವ, ನೀರು ಕಾಯಿಸುವ, ಅಡುಗೆ ಮಾಡುವ ತಂತ್ರಜ್ಞಾನಗಳು ನಮಗೆಲ್ಲ ಈಗಾಗಲೇ ಪರಿಚಿತ. ಇದರ ಮುಂದಿನ ಹಂತವಾಗಿ ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸುವ ದೊಡ್ಡಪ್ರಮಾಣದ ಘಟಕಗಳ ಸ್ಥಾಪನೆ ಈಗಾಗಲೇ ಪ್ರಪಂಚದೆಲ್ಲೆಡೆ ನಡೆಯುತ್ತಿದೆ.

ಒಟ್ಟಿನಲ್ಲಿ ಹೇಳುವುದಾದರೆ ಸ್ವಚ್ಛ ಇಂಧನಗಳ ಬಳಕೆಯಿಂದ ಪರಿಸರದ ಮೇಲಿನ ದುಷ್ಪರಿಣಾಮಗಳು ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ, ಪಳೆಯುಳಿಕೆ ಇಂಧನಗಳ ಮೇಲಿನ ನಮ್ಮ ಅವಲಂಬನೆಯೂ ಕಡಿಮೆಯಾಗುತ್ತದೆ. ಸ್ವಚ್ಛ ಇಂಧನದ ವಿವಿಧ ಮೂಲಗಳನ್ನು ಸರಿಯಾದ ಯೋಜನೆಯೊಡನೆ ಒಟ್ಟಾಗಿ ಬಳಸಿಕೊಂಡರೆ ಇಂಧನದ ನಿರಂತರ ಪೂರೈಕೆಯೂ ಸಾಧ್ಯವಾಗುತ್ತದೆ.

ಒಟ್ಟಿನಲ್ಲಿ ನಮ್ಮ ಮುಂದಿನ ಪೀಳಿಗೆಗಳಿಗೆ ಭೂಮಿಯ ಮೇಲೆ ನೆಮ್ಮದಿಯ ಬದುಕನ್ನು ಕಟ್ಟಿಕೊಡುವಲ್ಲಿ ಸ್ವಚ್ಛ ಇಂಧನಗಳ ಪಾತ್ರ ಮಹತ್ವದ್ದು ಎನ್ನುವುದಂತೂ ನಿಜ.

ಭಾರತದ ಸಾಧನೆ
ಸ್ವಚ್ಛ ಇಂಧನ ಕ್ಷೇತ್ರದಲ್ಲಿ ನಮ್ಮ ದೇಶ ಮಹತ್ವದ ಪ್ರಗತಿ ಸಾಧಿಸಿರುವುದು ಹೆಮ್ಮೆಯ ಸಂಗತಿ. ೨೦೧೧ನೇ ಸಾಲಿನಲ್ಲಿ ಈ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ರಾಷ್ಟ್ರಗಳ ಸಾಲಿನಲ್ಲಿ ಭಾರತದ್ದು ಪ್ರಮುಖ ಸ್ಥಾನ; ಕಳೆದ ವರ್ಷ ನಮ್ಮ ದೇಶದ ಸ್ವಚ್ಛ ಇಂಧನ ಕ್ಷೇತ್ರದಲ್ಲಿ ಹೂಡಿಕೆಯಾದ ಬಂಡವಾಳ ಒಂದು ಸಾವಿರ ಕೋಟಿ ಡಾಲರುಗಳಿಗಿಂತ ಹೆಚ್ಚು ಎಂದು 'ರಿನ್ಯೂವಬಲ್ ಎನರ್ಜಿ ವರ್ಲ್ಡ್' ತಾಣದ ವರದಿ ಹೇಳುತ್ತದೆ. ಭಾರತದಲ್ಲಿ ಕಳೆದ ವರ್ಷ ಹೆಚ್ಚಳವಾದ ವಿದ್ಯುತ್ ಉತ್ಪಾದನೆಯ ಪ್ರಮಾಣದಲ್ಲಿ ಮೂರು ಗಿಗಾವ್ಯಾಟ್‌ನಷ್ಟನ್ನು ಗಾಳಿಶಕ್ತಿಯಿಂದ ಪಡೆಯಲಾಗಿರುವುದು ವಿಶೇಷ.

ಸೌರಶಕ್ತಿಯಿಂದ ವಿದ್ಯುತ್ ತಯಾರಿಸುವಲ್ಲೂ ನಮ್ಮ ದೇಶ ಹಿಂದುಳಿದಿಲ್ಲ. ಸೌರಶಕ್ತಿಯಿಂದ ವಿದ್ಯುತ್ ಉತ್ಪಾದನೆ ದುಬಾರಿ ವ್ಯವಹಾರ ಎನ್ನುವ ಅಭಿಪ್ರಾಯವನ್ನೇ ಬದಲಿಸುವ ಮಟ್ಟಿಗಿನ ಕೆಲಸ ಈ ಕ್ಷೇತ್ರದಲ್ಲಿ ನಡೆದಿದೆ. 'ನ್ಯೂ ಸೈಂಟಿಸ್ಟ್'ನಲ್ಲಿ ಪ್ರಕಟವಾಗಿರುವ ವರದಿಯೊಂದರ ಪ್ರಕಾರ ಇದೀಗ ಭಾರತದಲ್ಲಿ ಸೌರವಿದ್ಯುತ್ ಉತ್ಪಾದನೆ ಡೀಸಲ್ ಜನರೇಟರ್‌ನಿಂದ ವಿದ್ಯುತ್ ಪಡೆಯುವುದಕ್ಕಿಂದ ಕಡಿಮೆ ಖರ್ಚಿನಲ್ಲಿ ಆಗುತ್ತಿದೆಯಂತೆ. 'ಬ್ಲೂಮ್‌ಬರ್ಗ್ ನ್ಯೂ ಎನರ್ಜಿ ಫೈನಾನ್ಸ್' ಅಧ್ಯಯನದಂತೆ ಸೌರ ಫಲಕಗಳ ಬೆಲೆಯೂ ಕಳೆದ ವರ್ಷದಲ್ಲಿ ಅರ್ಧಕ್ಕರ್ಧ ಇಳಿದಿದೆ. ೨೦೨೨ರ ವೇಳೆಗೆ ಸೌರವಿದ್ಯುತ್ ಉತ್ಪಾದನೆಯ ಪ್ರಮಾಣವನ್ನು ಇಪ್ಪತ್ತು ಸಾವಿರ ಮೆಗಾವ್ಯಾಟ್‌ಗೆ ಏರಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಈ ಬೆಳೆವಣಿಗೆಗಳು ಮತ್ತಷ್ಟು ಪ್ರೋತ್ಸಾಹ ನೀಡುವ ನಿರೀಕ್ಷೆಯಿದೆ.
ಜೈವಿಕ ಇಂಧನ
ಸ್ವಚ್ಛ ಇಂಧನಗಳನ್ನು ಬಳಸಬೇಕು ಎನ್ನುವುದೇನೋ ಸರಿ. ಆದರೆ ನಮ್ಮೂರ ಬಸ್ಸು ನೀರು, ಗಾಳಿ ಅಥವಾ ಸೂರ್ಯನ ಬೆಳಕಿನಿಂದ ಓಡುವುದಿಲ್ಲವಲ್ಲ! ವಿದ್ಯುತ್ತು, ಸೌರಶಕ್ತಿ ಮುಂತಾದವುಗಳಿಂದ ವಾಹನ ಓಡಿಸುವುದು ಸಾಧ್ಯವಾದರೂ ಈಗಿರುವ ಎಲ್ಲ ಪೆಟ್ರೋಲ್-ಡೀಸಲ್ ಗಾಡಿಗಳನ್ನು ಅವಕ್ಕೆ ತಕ್ಕಂತೆ ಬದಲಿಸುವುದು ಕಷ್ಟದ ಕೆಲಸ. ಅಷ್ಟೇ ಅಲ್ಲ, ಪ್ರಸ್ತುತ ಬಳಕೆಯಾಗುತ್ತಿರುವ ಡೀಸಲ್-ಪೆಟ್ರೋಲ್‌ಗಳಿಗೆ ಪರ್ಯಾಯವಾಗಬಲ್ಲ ಮಟ್ಟಕ್ಕೆ ಸ್ವಚ್ಛ ಇಂಧನಗಳ ಪೂರೈಕೆ ಬೆಳೆದೂ ಇಲ್ಲ.

ಇದಕ್ಕೆ ಪರಿಹಾರ ನೀಡುವ ಪ್ರಯತ್ನದಲ್ಲಿ ತಯಾರಾಗಿರುವುದು ಜೈವಿಕ ಇಂಧನಗಳ ಪರಿಕಲ್ಪನೆ. ಇಲ್ಲಿ ಸಸ್ಯಜನ್ಯ ಅಥವಾ ಪ್ರಾಣಿಜನ್ಯ ಎಣ್ಣೆಗಳನ್ನು ಪಳೆಯುಳಿಕೆ ಇಂಧನಗಳ ಬದಲಿಗೆ, ಅಥವಾ ಅವುಗಳೊಡನೆ ಮಿಶ್ರಮಾಡಿ ಬಳಸಲಾಗುತ್ತದೆ. ಇದಕ್ಕಾಗಿ ಇಂಜಿನ್‌ನಲ್ಲಿ ಯಾವುದೇ ರೀತಿಯ ಬದಲಾವಣೆಯ ಅಗತ್ಯವೂ ಇಲ್ಲ; ಜೊತೆಗೆ ಇದು ನವೀಕರಿಸಬಹುದಾದ ಇಂಧನಮೂಲವೂ ಹೌದು!

ಇಂತಹ ಜೈವಿಕ ಇಂಧನಗಳ ಸಾಲಿನಲ್ಲಿ ಅಗ್ರಗಣ್ಯವಾಗಿ ನಿಲ್ಲುವುದು ಎಥನಾಲ್ (ಈಥೈಲ್ ಆಲ್ಕೊಹಾಲ್). ಭಾರತವೂ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಎಥನಾಲ್ ಅನ್ನು ನಿರ್ದಿಷ್ಟ ಪ್ರಮಾಣದಲ್ಲಿ ಪೆಟ್ರೋಲಿನ ಜೊತೆಗೆ ಮಿಶ್ರಮಾಡಬೇಕೆಂಬ ನಿಯಮವೇ ಇದೆ. ಬ್ರೆಜಿಲ್ ದೇಶದಲ್ಲಂತೂ ಪೆಟ್ರೋಲಿನ ಜೊತೆಗೆ ಶೇ.೨೫ರಷ್ಟು ಎಥನಾಲ್ ಮಿಶ್ರಮಾಡಬೇಕಾದದ್ದು ಕಡ್ಡಾಯ.

ಇದೇ ರೀತಿ ಡೀಸಲ್‌ಗೂ ಕೂಡ ಜೈವಿಕ ಪರ್ಯಾಯ ಲಭ್ಯವಿದೆ, ಹಾಗೂ ಜನಪ್ರಿಯತೆ ಗಳಿಸಿಕೊಳ್ಳುತ್ತಿದೆ. ನಮ್ಮಲ್ಲಿ ಸಾಮಾನ್ಯವಾಗಿ ಬೆಳೆಯುವ ಹೊಂಗೆ, ಹಿಪ್ಪೆ, ಬೇವು, ಸುರಹೊನ್ನೆ ಮೊದಲಾದ ಮರಗಳ ಬೀಜದಿಂದ ತೆಗೆದ ಎಣ್ಣೆಯನ್ನು ಜೈವಿಕ ಡೀಸಲ್ ಉತ್ಪಾದನೆಯಲ್ಲಿ ಬಳಸಬಹುದು ಎಂದು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ವಿಜ್ಞಾನಿಗಳು ತೋರಿಸಿಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಗಮನಾರ್ಹ ಪ್ರಮಾಣದ ಪ್ರಯತ್ನವೊಂದು ನಮ್ಮ ರಾಜ್ಯದಲ್ಲಿ ನಡೆಯುತ್ತಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅನೇಕ ವಾಹನಗಳಲ್ಲಿ ಜೈವಿಕ ಡೀಸಲ್ ಬಳಕೆ ಈಗಾಗಲೇ ಆಗುತ್ತಿದೆ.
ಪರಮಾಣು ಸುರಕ್ಷತೆ
ಪಳೆಯುಳಿಕೆ ಇಂಧನಗಳಿಗೆ ಬದಲಿ ಆಯ್ಕೆಗಳನ್ನು ಹುಡುಕುವಾಗ ನಮ್ಮೆದುರು ನಿಲ್ಲುವ ಹೆಸರುಗಳಲ್ಲಿ ಪರಮಾಣು ಶಕ್ತಿ ಕೂಡ ಒಂದು. ಅದನ್ನು ಸ್ವಚ್ಛ ಇಂಧನಗಳ ಸಾಲಿನಲ್ಲಿ ನಿಲ್ಲಿಸುವವರೂ ಇದ್ದಾರೆ.

ಪರಮಾಣು ಶಕ್ತಿ ಒಂದು ಪರ್ಯಾಯ ಇಂಧನಮೂಲ ನಿಜ; ಸಾವಿರಾರು ಟನ್ ಕಲ್ಲಿದ್ದಲಿನಿಂದ ಉತ್ಪಾದನೆಯಾಗುವ ಶಕ್ತಿಯನ್ನು ಅಲ್ಪಪ್ರಮಾಣದ ಯುರೇನಿಯಂನಿಂದಲೋ, ಥೋರಿಯಂನಿಂದಲೋ ಪಡೆಯಬಹುದು ಎನ್ನುವುದೂ ನಿಜ.

ಆದರೆ ಪರಮಾಣು ಶಕ್ತಿಯ ಉತ್ಪಾದನೆ ಹಾಗೂ ಬಳಕೆಯ ಸುತ್ತ ಸುರಕ್ಷತೆಗೆ ಸಂಬಂಧಪಟ್ಟ ನೂರಾರು ಸಮಸ್ಯೆಗಳಿವೆ. ದಶಕಗಳ ಹಿಂದಿನ ಚೆರ್ನೋಬಿಲ್ ದುರಂತದಿಂದ ಪ್ರಾರಂಭಿಸಿ ಕಳೆದ ವರ್ಷ ಜಪಾನ್‌ನ ಫುಕುಶಿಮಾದಲ್ಲಿ ಸಂಭವಿಸಿದ ಘಟನೆಗಳವರೆಗೆ ಹತ್ತಾರು ಅವಘಡಗಳು ಈ ಸಮಸ್ಯೆಗಳನ್ನು ನಮಗೆ ಪದೇಪದೇ ಪರಿಚಯಿಸಿವೆ. ಹೀಗಾಗಿಯೇ ಪರಮಾಣು ಶಕ್ತಿಯ ಬಳಕೆ ಸಂಪೂರ್ಣ ಸುರಕ್ಷಿತವಾಗಿರಬೇಕಾಗುತ್ತದೆ.
ಭಾರತದಲ್ಲಿ ಪರಮಾಣು ಶಕ್ತಿ
ಸದ್ಯದಲ್ಲಿ ಭಾರತದ ಒಟ್ಟು ವಿದ್ಯುತ್ ಉತ್ಪಾದನೆಯ ಸುಮಾರು ಶೇ.೩ರಷ್ಟು ಭಾಗ ಪರಮಾಣು ಶಕ್ತಿಯಿಂದ ದೊರಕುತ್ತಿದೆ.
ದೇಶದಲ್ಲಿ ಪರಮಾಣು ಶಕ್ತಿಯ ಉತ್ಪಾದನೆಯ ಹೊಣೆಹೊತ್ತಿರುವ ಸಂಸ್ಥೆ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ. ಪ್ರಸ್ತುತ ಈ ಸಂಸ್ಥೆಯ ಮೇಲ್ವಿಚಾರಣೆಯಲ್ಲಿ ಇಪ್ಪತ್ತು ರಿಯಾಕ್ಟರ್‌ಗಳು ಕೆಲಸಮಾಡುತ್ತಿವೆ. ಅವುಗಳಲ್ಲಿ ನಾಲ್ಕು ಕರ್ನಾಟಕದ ಕೈಗಾದಲ್ಲಿವೆ.

ಸದ್ಯ ಕೆಲಸಮಾಡುತ್ತಿರುವ ಪರಮಾಣು ವಿದ್ಯುತ್ ಘಟಕಗಳು ಒಟ್ಟು ೪,೭೮೦ ಮೆಗಾವ್ಯಾಟ್‌ನಷ್ಟು ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ. ಸದ್ಯ ನಿರ್ಮಾಣದಲ್ಲಿರುವ ಹೊಸ ಘಟಕಗಳೂ ಸಿದ್ಧವಾದಾಗ ಈ ಸಾಮರ್ಥ್ಯ ಎರಡು ಪಟ್ಟು ಹೆಚ್ಚಲಿದೆ.

ಸಂಸ್ಥೆಯ ಜಾಲತಾಣದಲ್ಲಿರುವ ಮಾಹಿತಿಯ ಪ್ರಕಾರ ಭಾರತದಲ್ಲಿ ಸುಮಾರು ೭೮,೦೦೦ ಟನ್ ಯುರೇನಿಯಂ ಹಾಗೂ ೩,೬೩,೦೦೦ ಟನ್ ಥೋರಿಯಂ ನಿಕ್ಷೇಪ ಇದೆ. ದೇಶದ ವಿದ್ಯುತ್ ಬೇಡಿಕೆ ಪೂರೈಸುವಲ್ಲಿ ಈ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಮೂರು ಹಂತದ ಪರಮಾಣು ಶಕ್ತಿ ಕಾರ್ಯಕ್ರಮದ ಉದ್ದೇಶ. ಪರಮಾಣು ಶಕ್ತಿ ಬಳಕೆಗೆ ದೇಶದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವುದನ್ನು ಗಮನಿಸಿದರೆ ಈ ಉದ್ದೇಶ ಈಡೇರಿಕೆಗೆ ಸಾಕಷ್ಟು ಅಡ್ಡಿ-ಆತಂಕಗಳು ಎದುರಾಗುವಂತೆ ತೋರುತ್ತಿದೆ.
ಪರಮಾಣು ಶಕ್ತಿಯ ಉತ್ಪಾದನೆಗಾಗಿ ಬೇಕಾಗುವ ಯುರೇನಿಯಂನಂತಹ ಧಾತುಗಳು ನೈಸರ್ಗಿಕವಾಗಿ ಬಹಳ ಕಡಿಮೆ ಪ್ರಮಾಣದಲ್ಲಿ ಸಿಗುತ್ತವೆ, ಹೀಗಾಗಿಯೇ ಅವುಗಳ ಗಣಿಗಾರಿಕೆಯ ಸಂದರ್ಭದಲ್ಲಿ ಅತ್ಯಲ್ಪ ಪ್ರಮಾಣದ ಉಪಯುಕ್ತ ಧಾತುವನ್ನು ಪಡೆಯಲು ಅಪಾರ ಪ್ರಮಾಣದ ಅದಿರನ್ನು ಹೊರತೆಗೆಯಬೇಕಾಗುತ್ತದೆ. ಹೀಗೆ ಹೊರತೆಗೆದ ಅದಿರಿನ ನಿರುಪಯುಕ್ತ ಭಾಗವೂ ಗಣಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ವಿಕಿರಣ ಪಸರಿಸಬಲ್ಲದು!

ಪರಮಾಣು ಶಕ್ತಿ ಪಡೆಯಲು ಆ ಧಾತುವನ್ನು ಸಂಸ್ಕರಿಸುವಾಗಲೂ ಸಾಕಷ್ಟು ಪ್ರಮಾಣದ ವಿಕಿರಣಶೀಲ ಪದಾರ್ಥಗಳು ಉಳಿದುಕೊಳ್ಳುತ್ತವೆ. ಅದರಿಂದ ವಿದ್ಯುತ್ ಉತ್ಪಾದಿಸುವಾಗ, ನಂತರ ಉಳಿಯುವ ತ್ಯಾಜ್ಯವನ್ನು ಹಾಗೂ ವಿಕಿರಣಪೂರಿತ ಯಂತ್ರೋಪಕರಣಗಳನ್ನು ವಿಲೇವಾರಿ ಮಾಡುವ ಸಂದರ್ಭದಲ್ಲೂ ಬಹಳ ಎಚ್ಚರಿಕೆ ವಹಿಸಬೇಕಾದದ್ದು ಅಗತ್ಯ. ಪರಮಾಣು ಸ್ಥಾವರಗಳ ಕಾರ್ಯಾಚರಣೆಯಲ್ಲಿ ಆಗಬಹುದಾದ ಸಣ್ಣ ತಪ್ಪಾದರೂ ವಿಕಿರಣ ಸುತ್ತಮುತ್ತಲೆಲ್ಲ ಪಸರಿಸಿ ಸುತ್ತಲಿನ ಪರಿಸರದ ಮೇಲೆ ದೀರ್ಘಕಾಲೀನ ದುಷ್ಪರಿಣಾಮ ಆಗುವ ಸಾಧ್ಯತೆ ಇರುತ್ತದೆ. ಪರಮಾಣು ಸ್ಥಾವರಗಳು ಭಯೋತ್ಪಾತ, ಯುದ್ಧ ಅಥವಾ ನೈಸರ್ಗಿಕ ವಿಕೋಪದಂತಹ ಯಾವುದೇ ಘಟನೆಯಿಂದ ಹಾನಿಗೀಡಾದರೂ ಇದೇ ಗತಿ.

ಇವುಗಳನ್ನೆಲ್ಲ ತಡೆಯಲು ಪ್ರಯತ್ನಿಸುವುದೇ ಪರಮಾಣು ಸುರಕ್ಷತೆಯ ಮೂಲಮಂತ್ರ. ಪರಮಾಣು ಶಕ್ತಿಯ ಸಾಮರ್ಥ್ಯ ಏನೇ ಇದ್ದರೂ ಅದರ ಉತ್ಪಾದನೆ ಹಾಗೂ ಬಳಕೆಯ ಸಂದರ್ಭದಲ್ಲಿ ಅತ್ಯುನ್ನತ ಮಟ್ಟದ ಸುರಕ್ಷತೆಯ ಖಾತರಿ ಸಿಕ್ಕಿದಾಗ ಮಾತ್ರ ಅದು ಜನೋಪಯೋಗಿಯಾಗಬಲ್ಲದು. ಸ್ಥಾವರಗಳ ನಿರ್ಮಾಣ, ಸುರಕ್ಷತೆ, ಕಾರ್ಯಾಚರಣೆ, ವಿಕಿರಣಶೀಲ ವಸ್ತುಗಳ ನಿರ್ವಹಣೆ ಮುಂತಾದ ಎಲ್ಲ ಕ್ಷೇತ್ರಗಳಲ್ಲೂ ಭದ್ರತೆಯ ವ್ಯವಸ್ಥೆ ಮಾಡಿದಾಗಲಷ್ಟೆ ಪರಮಾಣುಶಕ್ತಿಯನ್ನು ಭವಿಷ್ಯದ ಇಂಧನವೆಂದು ಕರೆಯುವುದು ಸಾಧ್ಯ.

ಈ ಲೇಖನದ ಸಂಗ್ರಹರೂಪ ಫೆಬ್ರುವರಿ ೨೬, ೨೦೧೨ರ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿತ್ತು.
badge