ಮಂಗಳವಾರ, ಫೆಬ್ರವರಿ 23, 2016

ಮಾಹಿತಿ ತಂತ್ರಜ್ಞಾನ ಮತ್ತು ಬೆಂಗಳೂರು

ಟಿ. ಜಿ. ಶ್ರೀನಿಧಿ


ಜನಸಾಮಾನ್ಯರಿಗೆ ಮಾಹಿತಿ ತಂತ್ರಜ್ಞಾನದ ಪರಿಚಯವಾಗಿ ಹೆಚ್ಚು ಸಮಯವಾಗಿಲ್ಲ ಎನ್ನುವುದೇನೋ ನಿಜ. ಆದರೆ ಕಂಪ್ಯೂಟರ್ ವಿಜ್ಞಾನ ಹಾಗೂ ನಮ್ಮ ದೇಶದ ನಂಟು ಸಾಕಷ್ಟು ಹಳೆಯದು. ಭಾರತದ ವೈಜ್ಞಾನಿಕ ಕಾರ್ಯಕ್ರಮಗಳಿಗೆ ಭದ್ರ ಬುನಾದಿ ಹಾಕಿಕೊಟ್ಟ ಹೋಮಿ ಭಾಭಾರಂತಹ ದಾರ್ಶನಿಕರ ಪ್ರಯತ್ನಗಳನ್ನು ಇದರ ಹಿನ್ನೆಲೆಯಲ್ಲಿ ನಾವು ಕಾಣಬಹುದು. ಭಾರತದಲ್ಲಿ ಕಂಪ್ಯೂಟರ್ ವಿಜ್ಞಾನ ಕ್ಷೇತ್ರದ ಭೀಷ್ಮಪಿತಾಮಹ ಪ್ರೊ. ಆರ್. ನರಸಿಂಹನ್ ನೇತೃತ್ವದಲ್ಲಿ ನಮ್ಮ ಮೊದಲ ಕಂಪ್ಯೂಟರ್ TIFRAC ಸೃಷ್ಟಿಯ ಕೆಲಸ ೧೯೫೦ರ ದಶಕದಲ್ಲೇ ಪ್ರಾರಂಭವಾಗಿತ್ತು.
ಸರಿಸುಮಾರು ಇದೇ ಸಮಯದಲ್ಲಿ ಭಾರತದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲೂ ಕಂಪ್ಯೂಟರ್ ವಿಜ್ಞಾನ ಅಧ್ಯಯನದ ವಿಷಯಗಳಲ್ಲೊಂದಾಗಿ ಪ್ರಚಲಿತಕ್ಕೆ ಬಂತು.

ಇದರ ಬೆನ್ನಲ್ಲೇ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳೂ ಸಕ್ರಿಯವಾದವು. ವಾಯುಯಾನ, ಬೃಹತ್ ಕೈಗಾರಿಕೆ ಮುಂತಾದೆಡೆಗಳಂತೆ ಐಟಿ ಕ್ಷೇತ್ರದಲ್ಲೂ ಟಾಟಾ ಸಂಸ್ಥೆ ಪ್ರಾರಂಭಿಕ ಹಂತದಲ್ಲೇ ಭಾಗಿಯಾಗಿದ್ದು ವಿಶೇಷ.

ಆರಂಭಿಕ ಹಂತದಲ್ಲಿ ಭಾರತೀಯ ಐಟಿ ಉದ್ದಿಮೆಯ ವಹಿವಾಟು ಬಹುತೇಕ ಮುಂಬಯಿ ನಗರವನ್ನೇ ಕೇಂದ್ರವಾಗಿಟ್ಟುಕೊಂಡು ನಡೆಯುತ್ತಿತ್ತು. ಮೊದಲಿಗೆ ಸೀಮಿತ ಪ್ರಮಾಣದಲ್ಲೇ ನಡೆಯುತ್ತಿದ್ದ ಈ ಸಂಸ್ಥೆಗಳ ವಹಿವಾಟು ಕಂಪ್ಯೂಟರ್ ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಜಾಸ್ತಿಯಾಗುತ್ತ ಬಂತು. ಹೆಚ್ಚುಹೆಚ್ಚು ಸಂಸ್ಥೆಗಳು ಐಟಿ ಕ್ಷೇತ್ರ ಪ್ರವೇಶಿಸಿ ಅಲ್ಲಿ ಸ್ಪರ್ಧೆ ಹೆಚ್ಚುತ್ತಿದ್ದಂತೆ ಮುಂಬಯಿಯಷ್ಟೇ ಉತ್ತಮವಾದ ಸೌಕರ್ಯಗಳನ್ನು ಹೊಂದಿರುವ, ಸಾಧ್ಯವಾದರೆ ಅದಕ್ಕಿಂತ ಹೆಚ್ಚೇ ಅನುಕೂಲಕರವಾದ ಊರಿಗಾಗಿ ಹುಡುಕಾಟ ಪ್ರಾರಂಭವಾಯಿತು.

ಆಗ ಆಯ್ಕೆಯಾದದ್ದೇ ನಮ್ಮ ಬೆಂಗಳೂರು. ಆಹ್ಲಾದಕರ ವಾತಾವರಣ, ಅದಾಗಲೇ ತಲೆಯೆತ್ತಿದ್ದ ಕೈಗಾರಿಕೆಗಳು, ಉತ್ತಮ ಮೂಲಸೌಕರ್ಯ, ಜಾಗತಿಕ ಮಟ್ಟದ ಶೈಕ್ಷಣಿಕ ಹಾಗೂ ಸಂಶೋಧನಾ ಕೇಂದ್ರಗಳು - ಇವೆಲ್ಲ ಕಾರಣಗಳಿಂದಾಗಿ ಬೆಂಗಳೂರು ಐಟಿ ಸಂಸ್ಥೆಗಳ ಆದರ್ಶ ನೆಲೆಯಾಗಿ ರೂಪಗೊಳ್ಳುತ್ತ ಬಂತು. ದೇಶೀಯ ಸಂಸ್ಥೆಗಳಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ಸಂಸ್ಥೆಗಳು ಕೂಡ ಬೆಂಗಳೂರಿನ ಕಡೆಗೆ ಗಮನಹರಿಸಲು ಪ್ರಾರಂಭಿಸಿದವು. ತಂತ್ರಜ್ಞಾನ ಕ್ಷೇತ್ರದ ಬಹುರಾಷ್ಟ್ರೀಯ ಸಂಸ್ಥೆಗಳು ಬೆಂಗಳೂರಿನತ್ತ ಮುಖಮಾಡುವುದು ೧೯೮೫ರಷ್ಟು ಹಿಂದೆಯೇ ಪ್ರಾರಂಭವಾಗಿತ್ತು: ಟೆಕ್ಸಸ್ ಇನ್ಸ್‌ಟ್ರುಮೆಂಟ್ಸ್ ಸಂಸ್ಥೆಯ ಕೇಂದ್ರ ಬೆಂಗಳೂರಿನಲ್ಲಿ ಕಾರ್ಯಾರಂಭ ಮಾಡಿದ್ದು ಅದೇ ವರ್ಷದಲ್ಲಿ.

ಇನ್ನು ಮೂಲಸೌಕರ್ಯದ ದೃಷ್ಟಿಯಿಂದ ನೋಡಿದರೆ ರಾಜ್ಯ ಸರಕಾರಿ ಸ್ವಾಮ್ಯದ ಕಿಯೋನಿಕ್ಸ್ ಸಂಸ್ಥೆಯ ಪ್ರಯತ್ನದಿಂದ ಬೆಂಗಳೂರಿನ ಹೊರವಲಯದಲ್ಲಿ ಇಲೆಕ್ಟ್ರಾನಿಕ್ಸ್ ಸಿಟಿಯ ನಿರ್ಮಾಣವಾದದ್ದನ್ನು ಇನ್ನೊಂದು ಮಹತ್ತರ ಘಟನೆಯೆಂದು ಹೇಳಬಹುದು. ಈಗ ಅದೇ ಇಲೆಕ್ಟ್ರಾನಿಕ್ಸ್ ಸಿಟಿ ಬೆಂಗಳೂರಿನ ಐಟಿ ಉದ್ದಿಮೆಯ ಹೃದಯಭಾಗವಾಗಿ ಬೆಳೆದುನಿಂತಿರುವುದನ್ನು ನಾವೆಲ್ಲರೂ ನೋಡುತ್ತಿದ್ದೇವೆ.

ಮುಂದೆ ತೊಂಬತ್ತರ ದಶಕದ ಆರ್ಥಿಕ ಉದಾರೀಕರಣ ಭಾರತೀಯ ಐಟಿ ಉದ್ದಿಮೆ ಜಾಗತಿಕವಾಗಿ ಬೆಳೆಯಲು ಅಗತ್ಯ ನೆರವು ಒದಗಿಸಿತು. ಇದೇ ಸುಮಾರಿಗೆ ದೂರಸಂಪರ್ಕ ಕ್ಷೇತ್ರ ಕೂಡ ತೀವ್ರಗತಿಯಲ್ಲಿ ಬೆಳೆಯಿತು.

ಈ ನಡುವೆ ಕಂಪ್ಯೂಟರ್ ವಿಜ್ಞಾನ ಹಾಗೂ ಸಂವಹನ ತಂತ್ರಜ್ಞಾನಗಳಲ್ಲಿ ಸಂಭವಿಸಿದ್ದ ಬೆಳವಣಿಗೆಗಳ ಪರಿಣಾಮವಾಗಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳು ಎಲ್ಲಿಂದ ಬೇಕಿದ್ದರೂ ಕೆಲಸಮಾಡುವುದು ಸಾಧ್ಯವಾಯಿತು. ಇದರ ಪರಿಣಾಮವಾಗಿ ಗ್ರಾಹಕರ ಕಚೇರಿಯಲ್ಲಿ, ಅವರ ಕಂಪ್ಯೂಟರನ್ನು ಬಳಸಿಯೇ ಕೆಲಸಮಾಡುವ ಅನಿವಾರ್ಯತೆಯೂ ಹೋಯಿತು; ಭಾರತದಿಂದಲೇ ಕೆಲಸಮಾಡಿ ಅದನ್ನು ಗ್ರಾಹಕರಲ್ಲಿಗೆ 'ಕಳುಹಿಸುವ' ಅಭ್ಯಾಸ ವ್ಯಾಪಕವಾಗಿ ಬೆಳೆಯಿತು.

ಮುಂದಿನ ದಿನಗಳಲ್ಲಿ ಸುದ್ದಿಮಾಡಿದ ವೈಟೂಕೆ ಸಮಸ್ಯೆ ಹಾಗೂ 'ಡಾಟ್‌ಕಾಮ್ ಬೂಮ್'ಗಳೂ ಬೆಂಗಳೂರಿನ ಐಟಿ ಸಂಸ್ಥೆಗಳ ಬೆಳವಣಿಗೆಗೆ ಸಾಕಷ್ಟು ನೆರವು ನೀಡಿದವು. ಆನಂತರದಲ್ಲಿ ಕೆಲ ಸಂಕಷ್ಟದ ದಿನಗಳು ಬಂದವಾದರೂ ಐಟಿ ಕ್ಷೇತ್ರ ತನ್ನ ಸಮಸ್ಯೆಗಳಿಂದ ಸಾಕಷ್ಟು ವೇಗವಾಗಿಯೇ ಹೊರಗೆ ಬಂತು. ಬಿಸಿನೆಸ್ ಪ್ರಾಸೆಸ್ ಔಟ್‌ಸೋರ್ಸಿಂಗ್ ಪರಿಕಲ್ಪನೆ ಪರಿಚಯವಾದ ಮೇಲೆ ಬರಿಯ ಸಾಫ್ಟ್‌ವೇರ್ ಅಭಿವೃದ್ಧಿ ಅಷ್ಟೇ ಅಲ್ಲದೆ ಇನ್ನೂ ಹಲವು ಕೆಲಸಗಳಲ್ಲೂ ಈ ಕ್ಷೇತ್ರ ತನ್ನನ್ನು ತೊಡಗಿಸಿಕೊಂಡಿತು.

ಹೊರಗುತ್ತಿಗೆಯ ಯುಗ
ಬೆಂಗಳೂರಿನ ಐಟಿ ಉದ್ದಿಮೆ ಬೆಳೆಯುತ್ತ ಹೋದಂತೆ ಹೊರದೇಶಗಳ ಅದೆಷ್ಟೋ ಸಂಸ್ಥೆಗಳು ತಮ್ಮ ಮಾಹಿತಿ ತಂತ್ರಜ್ಞಾನದ ಅಗತ್ಯಗಳಿಗಾಗಿ ನಮ್ಮ ದೇಶದತ್ತ ಮುಖಮಾಡಲು ಪ್ರಾರಂಭಿಸಿದವು. ಡಾಲರಿನಲ್ಲೋ ಪೌಂಡು-ಯೂರೋಗಳಲ್ಲೋ ಗಳಿಸುವ ಸಂಸ್ಥೆಗಳಿಗೆ ರೂಪಾಯಿಗಳಲ್ಲಿ ಸಂಬಳಕೊಟ್ಟು ಕೆಲಸಮಾಡಿಸಿಕೊಳ್ಳುವುದು ಉಳಿತಾಯದ ಹೊಸ ಹಾದಿಯಾಗಿಯೂ ಕಾಣಿಸಿತು.

ಹೊರಗುತ್ತಿಗೆ, ಅಂದರೆ 'ಔಟ್‌ಸೋರ್ಸಿಂಗ್'ನ ಈ ಅಭ್ಯಾಸ ಎಷ್ಟರ ಮಟ್ಟಿಗೆ ಬೆಳೆಯಿತೆಂದರೆ ವಿದೇಶಿ ಸಂಸ್ಥೆಗಳು ತಮ್ಮ ಹೆಚ್ಚುವರಿ ಅಗತ್ಯಗಳಿಗಾಗಿ ಮಾತ್ರ ಬೆಂಗಳೂರಿನತ್ತ ನೋಡುವುದರ ಬದಲಿಗೆ ತಮ್ಮಲ್ಲಿ ನಡೆಯುತ್ತಿದ್ದ ಐಟಿ ಕೆಲಸವಷ್ಟನ್ನೂ ಬೆಂಗಳೂರಿನ ಸಂಸ್ಥೆಗಳಿಗೆ ವಹಿಸಿಕೊಡಲು ಪ್ರಾರಂಭಿಸಿದವು. ಈ ಹೊರಗುತ್ತಿಗೆಯ ಪರಿಣಾಮವಾಗಿ ಅಲ್ಲಿನ ಹಲವಾರು ಉದ್ಯೋಗಿಗಳು ಕೆಲಸ ಕಳೆದುಕೊಂಡದ್ದೂ ಆಯಿತು, ಆ ಪ್ರಕ್ರಿಯೆಗೆ 'ಬ್ಯಾಂಗಲೋರ್‍ಡ್' ಎನ್ನುವ ಹೆಸರೇ ರೂಪುಗೊಂಡುಬಿಟ್ಟಿತು (ಅವರ ಕೆಲಸ ಬೆಂಗಳೂರಿಗೆ ಹೋಯಿತು ಎನ್ನುವ ಅರ್ಥದಲ್ಲಿ).

ಇಂದಿಗೂ ನಮ್ಮ ಐಟಿ ಉದ್ದಿಮೆ ನಿರ್ವಹಿಸುವ ಕೆಲಸದ ದೊಡ್ಡ ಪಾಲು ಇಂತಹ ಹೊರಗುತ್ತಿಗೆ ಕೆಲಸಗಳದ್ದೇ. ಈ ಕ್ಷೇತ್ರದ ಬಹಳಷ್ಟು ಸಂಸ್ಥೆಗಳು ತಮ್ಮ ಗ್ರಾಹಕರು ಬಳಸುವ ವಿವಿಧ ಕಂಪ್ಯೂಟರ್ ವ್ಯವಸ್ಥೆಗಳ ನಿರ್ವಹಣೆ ಮತ್ತು ಅದಕ್ಕೆ ಪೂರಕವಾದ ತಂತ್ರಾಂಶಗಳ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ. ಹೊಸದಾಗಿ ತಯಾರಾಗುವ ತಂತ್ರಾಂಶಗಳ ಪರೀಕ್ಷೆ (ಟೆಸ್ಟಿಂಗ್) ಕೂಡ ಐಟಿ ಸಂಸ್ಥೆಗಳಲ್ಲಿ ನಡೆಯುವ ಪ್ರಮುಖ ಚಟುವಟಿಕೆಗಳಲ್ಲೊಂದು.

ಸಮಸ್ಯೆಗಳು, ಸವಾಲುಗಳು
ತಂತ್ರಾಂಶ ಸಂಬಂಧಿತ ಕೆಲಸಗಳನ್ನು ಹೊರಗುತ್ತಿಗೆ ನೀಡುವ ಅಭ್ಯಾಸ ಬೆಳೆದಂತೆ ವಿವಿಧ ಸೇವಾಸಂಸ್ಥೆಗಳ ನಡುವಿನ ಸ್ಪರ್ಧೆ ಹೆಚ್ಚಿತಲ್ಲ, ಐಟಿ ಸೇವೆಗಳನ್ನು ಬೇರೊಬ್ಬರಿಗಿಂತ ಕಡಿಮೆ ಬೆಲೆಯಲ್ಲಿ ಒದಗಿಸುವ ಮೇಲಾಟ ಶುರುವಾದದ್ದು ಅದೇ ಸಂದರ್ಭದಲ್ಲಿ. ಮುಂದೆ ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಏರುಪೇರುಗಳಾದಾಗ ಕೆಲಸಗಳನ್ನು ಹೊರಗುತ್ತಿಗೆ ನೀಡುವವರು ಕೂಡ ತಮ್ಮ ವೆಚ್ಚವನ್ನು ಆದಷ್ಟೂ ಕಡಿಮೆಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಪ್ರಾರಂಭಿಸಿದರು. ಇದೆಲ್ಲದರ ಪರಿಣಾಮವಾಗಿ 'ಕಡಿಮೆ ವೆಚ್ಚ' ಎನ್ನುವುದು ನಮ್ಮ ಐಟಿ ಉದ್ದಿಮೆಯ ಪ್ರಮುಖ ಧ್ಯೇಯಗಳಲ್ಲೊಂದಾಗಿ ಪ್ರತಿಷ್ಠಾಪಿತವಾಗಿಬಿಟ್ಟಿತು.

ಸಮಸ್ಯೆಯಾದದ್ದು ಅದೇ. ವೆಚ್ಚ ಕಡಿಮೆಮಾಡುವ ಭರಾಟೆಯಲ್ಲಿ ಸಂಸ್ಥೆಗಳು ಸಮರ್ಥ ಉದ್ಯೋಗಿಗಳ ಆಯ್ಕೆ ಹಾಗೂ ತರಬೇತಿಯತ್ತ ಹೆಚ್ಚು ಗಮನ ಕೊಡುತ್ತಿಲ್ಲ, ಆದಷ್ಟು ಬೇಗ ಆದಷ್ಟೂ ಕಡಿಮೆ ವೆಚ್ಚದಲ್ಲಿ ಪ್ರಾಜೆಕ್ಟ್ ಮುಗಿಸುವ ಆತುರದ ಋಣಾತ್ಮಕ ಪರಿಣಾಮ ಕೆಲಸದ ಗುಣಮಟ್ಟದ ಮೇಲೆ ಆಗುತ್ತಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ನಮ್ಮ ಐಟಿ ಸಂಸ್ಥೆಗಳು ಗ್ರಾಹಕ ಹೇಳಿದ ಕೆಲಸವನ್ನಷ್ಟೆ ಮಾಡುತ್ತವೆ, ಹೊಸ ಆಲೋಚನೆಗಳನ್ನು ಹುಟ್ಟುಹಾಕುವಲ್ಲಿ ಅವುಗಳಿಂದ ಹೆಚ್ಚಿನ ಕೆಲಸವೇನೂ ಆಗುತ್ತಿಲ್ಲ ಎನ್ನುವ ಆರೋಪ ಕೇಳಿಬರುವುದಕ್ಕೂ ಒಂದು ರೀತಿಯಲ್ಲಿ ಇದೇ ಕಾರಣ ಎನ್ನಬಹುದು. ತಮ್ಮ ಕೆಲಸಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ತಿಳಿದುಕೊಂಡು ಮುಂದುವರೆಯುವ ಬದಲಿಗೆ ತಮ್ಮ ಗ್ರಾಹಕರ ಕಾರ್ಯಕ್ಷೇತ್ರದ (ಡೊಮೈನ್) ಕುರಿತು ಹೆಚ್ಚಿನ ಅರಿವು ಪಡೆದುಕೊಳ್ಳುವ ಕುತೂಹಲ, ಆ ಕ್ಷೇತ್ರದಲ್ಲಿ ಹೊಸ ಬೆಳವಣಿಗೆಗಳಿಗೆ ಕಾರಣರಾಗುವ ಹುಮ್ಮಸ್ಸು ಹಾಗೂ ತಮ್ಮ ಗ್ರಾಹಕರಿಗೆ ತಂತ್ರಜ್ಞಾನದ ವಿಷಯದಲ್ಲಿ ಮಾರ್ಗದರ್ಶಕರಾಗುವ ಮನೋಭಾವ ನಮ್ಮ ಸಂಸ್ಥೆಗಳಿಗೆ ಇನ್ನೂ ಬರಬೇಕಿದೆ ಎನ್ನುವ ಅಭಿಪ್ರಾಯ ಸಾಮಾನ್ಯವಾಗಿದೆ.
ಬುದ್ಧಿಮತ್ತೆ ಹಾಗೂ ಕೌಶಲವನ್ನು ಆಧರಿಸಿದ ಕ್ಷೇತ್ರ ಎಂಬ ಹಣೆಪಟ್ಟಿಯೂ ಬಹಳಷ್ಟು ಸಂದರ್ಭಗಳಲ್ಲಿ ನಮ್ಮ ಐಟಿ ಉದ್ದಿಮೆಗೆ ಹೊಂದುವುದಿಲ್ಲ ಎನ್ನುವುದು ಆಗಾಗ್ಗೆ ಕೇಳಿಬರುವ ಇನ್ನೊಂದು ಆಪಾದನೆ. ಇದರಲ್ಲಿ ಸತ್ಯವೂ ಇಲ್ಲದಿಲ್ಲ. ದೊಡ್ಡ ಸಂಬಳದೊಡನೆ ಯುವಜನರನ್ನು ತಮ್ಮತ್ತ ಸೆಳೆಯುವ ಸಂಸ್ಥೆಗಳು ಬಹಳಷ್ಟು ಸಾರಿ ಅವರ ಪೂರ್ಣ ಬೌದ್ಧಿಕ ಸಾಮರ್ಥ್ಯವನ್ನು ಬಳಸಿಕೊಳ್ಳುವಲ್ಲಿ ಸೋಲುತ್ತವೆ ಎಂದು ಭಾರತರತ್ನ ಸಿಎನ್‌ಆರ್ ರಾವ್‌ರಂತಹ ಹಿರಿಯರೇ ಹೇಳಿದ್ದೂ ಇದೆ. ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಗಳೊಡನೆ ನಿರಂತರ ಸಂಪರ್ಕ ಏರ್ಪಡಿಸಿಕೊಳ್ಳುವಲ್ಲೂ ಬಹಳಷ್ಟು ಐಟಿ ಸಂಸ್ಥೆಗಳ ಸಾಧನೆ ಹೇಳಿಕೊಳ್ಳುವ ಮಟ್ಟದಲ್ಲಿಲ್ಲ. ಯುವಜನತೆಯ ಬೌದ್ಧಿಕ ಸಾಮರ್ಥ್ಯಕ್ಕೆ ತಕ್ಕುದಾದ ಸವಾಲುಗಳನ್ನು ಸೃಷ್ಟಿಸಲು ಬಹಳಷ್ಟು ಐಟಿ ಸಂಸ್ಥೆಗಳು ಸೋಲುತ್ತಿವೆ ಎನ್ನುವ ಆರೋಪ ಒಂದು ಕಡೆಯಾದರೆ ಕಾಲೇಜುಗಳಿಂದ ಹೊರಬರುತ್ತಿರುವ ವಿದ್ಯಾರ್ಥಿಗಳಲ್ಲಿ ಬಹುಮಂದಿ ಇಂತಹ ಸಂಸ್ಥೆಗಳು ಅಪೇಕ್ಷಿಸುವ ಮಟ್ಟವನ್ನೂ ಮುಟ್ಟುತ್ತಿಲ್ಲ ಎನ್ನುವುದು ಇನ್ನೊಂದು ಸಮಸ್ಯೆ. ತರ್ಕಬದ್ಧ ಆಲೋಚನೆ, ಸ್ಪಷ್ಟ ಸಂವಹನದಂತಹ ಮೂಲಭೂತ ಗುಣಗಳನ್ನು ಬೆಳೆಸಿಕೊಳ್ಳುವಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರಿಸದಿರುವುದು (ಹಾಗೂ ಅದಕ್ಕೆ ಪೂರಕವಾದ ವಾತಾವರಣ ಕಾಲೇಜುಗಳಲ್ಲಿ ನಿರ್ಮಾಣವಾಗದಿರುವುದು) ನಿಜಕ್ಕೂ ಚಿಂತೆಗೀಡುಮಾಡುವ ಸಂಗತಿಯೇ. 
ಸಾಮಾಜಿಕ ಆಯಾಮ
ದೊಡ್ಡಮೊತ್ತದ ಸಂಬಳ, ವಿದೇಶ ಪ್ರವಾಸದಂತಹ ಸೌಲಭ್ಯಗಳನ್ನೆಲ್ಲ ಒದಗಿಸಿ ಐಟಿ ಉದ್ದಿಮೆ ಮಧ್ಯಮವರ್ಗದ ಜೀವನಶೈಲಿಯನ್ನು ಬದಲಿಸಿಬಿಟ್ಟದ್ದು ನಿಜವೇ. ಮಧ್ಯಮವರ್ಗದಿಂದ ಬಂದು ದೊಡ್ಡದೊಡ್ಡ ಸಂಸ್ಥೆಗಳನ್ನು ಸ್ಥಾಪಿಸಿದವರು, ಅಪಾರ ಸಂಖ್ಯೆಯ ಉದ್ಯೋಗಾವಕಾಶಗಳನ್ನು ರೂಪಿಸಿದವರನ್ನು ನಮ್ಮ ಸಮಾಜ ಬಹಳ ಗೌರವದಿಂದಲೇ ಕಾಣುತ್ತದೆ.

ಇದರ ಜೊತೆಗೆ ಸಮಾಜದಲ್ಲಿ ಆರ್ಥಿಕ ಅಸಮಾನತೆ ರೂಪಿಸಿದ ಹಾಗೂ ಆಸ್ತಿ ಬೆಲೆ - ಮನೆ ಬಾಡಿಗೆ - ತಿಂಗಳ ಖರ್ಚು ಮುಂತಾದವನ್ನೆಲ್ಲ ತೀವ್ರವಾಗಿ ಏರಿಸಿದ ಕೀರ್ತಿಯನ್ನೂ ಅನೇಕರು ಇದೇ ಉದ್ದಿಮೆಗೆ ನೀಡುತ್ತಾರೆ. ಕೆಲಸದ ಒತ್ತಡ ಹಾಗೂ ಅಸಮರ್ಪಕ ಅಭ್ಯಾಸಗಳಿಂದ ಉದ್ಯೋಗಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದ ಕುಖ್ಯಾತಿ ಕೂಡ ಐಟಿ ಕ್ಷೇತ್ರಕ್ಕಿದೆ.

ಪ್ರಮುಖವಾಗಿ ಮಾನವ ಸಂಪನ್ಮೂಲವನ್ನೇ ಆಧರಿಸಿರುವ ಐಟಿ ಉದ್ದಿಮೆ ಬೆಳೆದಂತೆ ವಿಶೇಷವಾಗಿ ಬೆಂಗಳೂರಿನ ಮೂಲಸೌಕರ್ಯದ ಮೇಲೆ ಅಪಾರ ಪ್ರಮಾಣದ ಒತ್ತಡ ಬಿದ್ದಿದೆ. ಬಹಳಷ್ಟು ಪ್ರದೇಶಗಳಲ್ಲಿ ಸಾಮಾನ್ಯವಾಗಿಬಿಟ್ಟಿರುವ ಟ್ರಾಫಿಕ್ ಸಮಸ್ಯೆಗಳಿಗೆ ಐಟಿ ಉದ್ಯೋಗಿಗಳ ವಾಹನಗಳೂ ತಮ್ಮ ಕೊಡುಗೆ ನೀಡುತ್ತಿವೆ. ಬೆಂಗಳೂರನ್ನು ಹೊರತುಪಡಿಸಿ ರಾಜ್ಯದ ಇನ್ನಿತರ ನಗರಗಳಲ್ಲಿ ಐಟಿ ಉದ್ದಿಮೆ ಅಷ್ಟಾಗಿ ವ್ಯಾಪಿಸಿಕೊಂಡಿಲ್ಲದಿರುವುದು ಅವಕಾಶಗಳ ದೃಷ್ಟಿಯಿಂದ ಪ್ರಾದೇಶಿಕ ಅಸಮತೋಲನಕ್ಕೂ ಕಾರಣವಾಗಿದೆ. ಬೆಂಗಳೂರಿನ ಹೊರಗಿನ ಸಂಗತಿ ಹಾಗಿರಲಿ, ನಗರದೊಳಗಿನ ಅಭಿವೃದ್ಧಿ ಯೋಜನೆಗಳೂ ಸಾಮಾನ್ಯವಾಗಿ ಐಟಿ ಸಂಸ್ಥೆಗಳು ಹೆಚ್ಚಾಗಿರುವ ಪ್ರದೇಶಗಳಲ್ಲೇ ಆಗುತ್ತವೆ ಎನ್ನುವ ದೂರು ಕೇಳಿಸುವುದೂ ಅಪರೂಪವೇನಲ್ಲ.

ಅಷ್ಟೇ ಅಲ್ಲ, ಕರ್ನಾಟಕದಲ್ಲಿ ಇಷ್ಟೆಲ್ಲ ಐಟಿ ಸಂಸ್ಥೆಗಳಿದ್ದರೂ ಅವುಗಳಿಂದ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡಕ್ಕೆ ಕೊಡುಗೆಗಳು ದೊರೆತಿರುವುದು ತೀರಾ ಕಡಿಮೆ ಎನ್ನುವ ಅಸಮಾಧಾನ ಕೂಡ ವ್ಯಾಪಕವಾಗಿದೆ. ಈ ದಿಸೆಯಲ್ಲಿ ಆಗಿರುವ ಅಲ್ಪಸ್ವಲ್ಪ ಕೆಲಸವೂ ಸಣ್ಣ ಸಂಸ್ಥೆಗಳಿಂದಲೇ ಆಗಿರುವುದು ಗಮನಾರ್ಹ.

ಮುಂದಿನ ದಾರಿ
ಪ್ರಾರಂಭಿಕ ದಿನಗಳಿಂದಲೂ ಪಾಶ್ಚಿಮಾತ್ಯ ಗ್ರಾಹಕರನ್ನೇ ಮುಖ್ಯವಾಗಿ ಗಮನದಲ್ಲಿಟ್ಟುಕೊಂಡಿದ್ದ ಭಾರತೀಯ ಐಟಿ ಉದ್ದಿಮೆ ಬಹುಸಮಯ ಭಾರತವನ್ನು ತನ್ನ ಮಾರುಕಟ್ಟೆಯೆಂದು ಪರಿಗಣಿಸಿಯೇ ಇರಲಿಲ್ಲ. ಈಚಿನ ವರ್ಷಗಳಲ್ಲಿ ಈ ಪರಿಸ್ಥಿತಿ ಗಮನಾರ್ಹವಾಗಿ ಬದಲಾಗಿರುವುದು ಸಂತೋಷದ ವಿಷಯ. ಹಣಕಾಸು ವ್ಯವಹಾರ, ಆಡಳಿತ, ವ್ಯಾಪಾರ ವಹಿವಾಟು, ಸಾರಿಗೆ, ಸಂಪರ್ಕ ಮಾಧ್ಯಮಗಳೇ ಮೊದಲಾದ ಪ್ರತಿಯೊಂದು ಕ್ಷೇತ್ರದಲ್ಲೂ ಆಗುತ್ತಿರುವ ಬದಲಾವಣೆಗಳು ಐಟಿ ಉದ್ದಿಮೆಯ ಪಾಲಿಗೆ ಭಾರತವನ್ನೂ ಮಹತ್ವದ ಮಾರುಕಟ್ಟೆಯಾಗಿ ರೂಪಿಸಿವೆ. ಇದರ ಜೊತೆಗೆ ಮಾಹಿತಿ ತಂತ್ರಜ್ಞಾನದ ಉಪಯೋಗಗಳು ಸಾಮಾನ್ಯ ಜನತೆಗೂ ದೊರಕಲು ಪ್ರಾರಂಭವಾಗಿವೆ.

ನಮ್ಮ ಐಟಿ ಉದ್ದಿಮೆ ಹೊರಗುತ್ತಿಗೆಯ ಕೆಲಸಗಳಿಗಷ್ಟೇ ಲಾಯಕ್ಕು ಎನ್ನುವ ಅಭಿಪ್ರಾಯವನ್ನು ಬದಲಿಸುವ ನಿಟ್ಟಿನಲ್ಲೂ ಪ್ರಯತ್ನಗಳು ನಡೆದಿರುವುದು ಗಮನಾರ್ಹ. ಮಾಹಿತಿ ತಂತ್ರಜ್ಞಾನದ ನೆರವಿನಿಂದ ಹೊಸ ಪರಿಕಲ್ಪನೆಗಳನ್ನು ಪರಿಚಯಿಸುತ್ತಿರುವ ಭಾರತೀಯ ಸಂಸ್ಥೆಗಳು ನಮ್ಮ ಐಟಿ ಜಗತ್ತಿನಲ್ಲಿ ಸೇವೆಗಳ (ಸರ್ವಿಸ್) ಜೊತೆಗೆ ಉತ್ಪನ್ನಗಳಿಗೂ (ಪ್ರಾಡಕ್ಟ್) ಜಾಗ ಒದಗಿಸಿಕೊಡುವ ಪ್ರಯತ್ನದಲ್ಲಿವೆ. ಗ್ರಾಹಕರ ಮಾಹಿತಿ ತಂತ್ರಜ್ಞಾನ ಅಗತ್ಯಗಳ ಕುರಿತು ಸಮಾಲೋಚಿಸುವ ಹಾಗೂ ಸಲಹೆಗಳನ್ನು ನೀಡುವುದರಲ್ಲೂ (ಕನ್ಸಲ್ಟಿಂಗ್) ನಮ್ಮ ಐಟಿ ಸಂಸ್ಥೆಗಳು ತಮ್ಮ ಛಾಪು ಮೂಡಿಸುತ್ತಿವೆ. ತಂತ್ರಾಂಶದ ಜೊತೆಗೆ ಯಂತ್ರಾಂಶ ಅಭಿವೃದ್ಧಿಯಲ್ಲೂ ಕೆಲಸಗಳು ನಡೆಯುತ್ತಿವೆ. ಒಂದು ಕಾಲದಲ್ಲಿ ತಂತ್ರಾಂಶ ಅಭಿವೃದ್ಧಿ ಹಾಗೂ ನಿರ್ವಹಣೆಯನ್ನಷ್ಟೆ ತಮ್ಮ ಪ್ರಮುಖ ಉದ್ದೇಶವಾಗಿಟ್ಟುಕೊಂಡಿದ್ದ ಸಂಸ್ಥೆಗಳು ಇದೀಗ ಅವರ ಯಂತ್ರಾಂಶ ವ್ಯವಸ್ಥೆಗಳನ್ನು ನಿರ್ವಹಿಸುವ (ಇನ್‌ಫ್ರಾಸ್ಟ್ರಕ್ಚರ್ ಮ್ಯಾನೇಜ್‌ಮೆಂಟ್) ಕೆಲಸದಲ್ಲೂ ತೊಡಗಿವೆ.
ಈಚಿನ ದಿನಗಳಲ್ಲಿ ತಂತ್ರಜ್ಞಾನ ಕ್ಷೇತ್ರದ ಹೊಸ ಸಂಸ್ಥೆಗಳು, ಅರ್ಥಾತ್ 'ಸ್ಟಾರ್ಟ್-ಅಪ್'ಗಳು, ನಮ್ಮ ದೇಶದಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ಪ್ರಾರಂಭವಾಗುತ್ತಿವೆಯಲ್ಲ, ಹೊಸ ಆಲೋಚನೆಗಳನ್ನು ಕಾರ್ಯಗತಗೊಳಿಸುವಲ್ಲಿ ಅವುಗಳದು ಮಹತ್ವದ ಸಾಧನೆ. ಮಾರುಕಟ್ಟೆಯಲ್ಲಿನ ಹೊಸ ಸಾಧ್ಯತೆಗಳನ್ನು ಬಳಸಿಕೊಳ್ಳುವ ಜೊತೆಗೆ ವಿಶ್ವದೆಲ್ಲೆಡೆಯ ಹೂಡಿಕೆದಾರರ ಗಮನವನ್ನೂ ಸೆಳೆದಿರುವ ಈ ಸಂಸ್ಥೆಗಳು ದೇಶೀಯ ಮಾರುಕಟ್ಟೆಯ ಜೊತೆಗೆ ಅಂತಾರಾಷ್ಟ್ರೀಯ ಗ್ರಾಹಕರಿಗೂ ತಮ್ಮ ಸೇವೆ ಒದಗಿಸುತ್ತಿವೆ. ಸದ್ಯ ಸುಮಾರು ೩,೦೦೦ದಷ್ಟಿರುವ ಭಾರತೀಯ ಸ್ಟಾರ್ಟ್-ಅಪ್‌ಗಳ ಸಂಖ್ಯೆ ೨೦೨೦ರ ವೇಳೆಗೆ ಹತ್ತು ಸಾವಿರ ದಾಟಿ ಸುಮಾರು ಎರಡೂವರೆ ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದು ನಾಸ್‌ಕಾಮ್ ಅಂದಾಜು ಹೇಳುತ್ತದೆ. ಈ ಸಂಸ್ಥೆಗಳ ಅಚ್ಚುಮೆಚ್ಚಿನ ನಗರಗಳ ಸಾಲಿನಲ್ಲಿ, ಬೆಂಗಳೂರಿಗೆ, ಸಹಜವಾಗಿಯೇ ಪ್ರಮುಖ ಸ್ಥಾನ.  
೨೦೧೩-೧೪ರಲ್ಲಿ ನಮ್ಮ ದೇಶದಲ್ಲಿ ಐಟಿ ಉದ್ದಿಮೆಯ ಒಟ್ಟು ವಹಿವಾಟು ಸುಮಾರು ೬೨ ಬಿಲಿಯನ್ ಡಾಲರುಗಳಷ್ಟಿತ್ತು ಎಂದು ಇಂಡಿಯಾ ಬ್ರಾಂಡ್ ಈಕ್ವಿಟಿ ಫೌಂಡೇಶನ್ ಜಾಲತಾಣ ಹೇಳುತ್ತದೆ. ಈ ವಹಿವಾಟಿನ ದೊಡ್ಡದೊಂದು ಪಾಲು ನಮ್ಮ ಬೆಂಗಳೂರಿನಿಂದ ಬರುತ್ತಿದೆ. ವಿಶ್ವದ ಅತ್ಯಂತ ಪ್ರಸಿದ್ಧ ಸಂಸ್ಥೆಗಳು ಇದೀಗ ನಮ್ಮ ರಾಜ್ಯದಿಂದ ವಹಿವಾಟು ನಡೆಸುತ್ತಿವೆ. ಲಕ್ಷಾಂತರ ಜನರು ಐಟಿ ಕ್ಷೇತ್ರದಿಂದಾಗಿ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಉದ್ಯೋಗ ಪಡೆದಿದ್ದಾರೆ. ದಶಕಗಳ ಹಿಂದಿನ ಮೇನ್‌ಫ್ರೇಮ್ ಇರಲಿ, ಇಂದಿನ ಬಿಗ್ ಡೇಟಾ - ಕ್ಲೌಡ್ ಕಂಪ್ಯೂಟಿಂಗ್ - ಮೊಬೈಲ್ ಆಪ್ ಇತ್ಯಾದಿಗಳೇ ಇರಲಿ ಪ್ರತಿಯೊಂದು ತಂತ್ರಜ್ಞಾನವನ್ನೂ ತಮ್ಮ ಕೆಲಸದಲ್ಲಿ ಬಳಸುವ ಐಟಿ ಉದ್ಯೋಗಿಗಳು ಬೆಂಗಳೂರಿನಲ್ಲಿದ್ದಾರೆ. ಯುವಜನತೆಗೆ ದೊಡ್ಡಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡುವಲ್ಲಿ, ಹಾಗೂ ಒಟ್ಟಾರೆಯಾಗಿ ಮಧ್ಯಮವರ್ಗದ ಜೀವನಮಟ್ಟವನ್ನು ಗಮನಾರ್ಹವಾಗಿ ಬದಲಿಸುವಲ್ಲಿ ಐಟಿ ಕ್ಷೇತ್ರದ ಕೊಡುಗೆ ಮಹತ್ವದ್ದು.

* * *

ಲೇಖಕರ ಮಾತು:
ಇದು ಉದಯಭಾನು ಕಲಾಸಂಘದ 'ಬೆಂಗಳೂರು ದರ್ಶನ'ಕ್ಕಾಗಿ ನಾನು ಬರೆದಿದ್ದ ಲೇಖನ. ದಯಮಾಡಿ ಗಮನಿಸಿ, ೨೦೧೬ರ ಫೆ. ೨೧ರಂದು ಬಿಡುಗಡೆಯಾದ 'ಬೆಂಗಳೂರು ದರ್ಶನ'ದ ಮೊದಲ ಸಂಪುಟದಲ್ಲಿ ನನ್ನ ಹೆಸರಿನೊಡನೆ ಪ್ರಕಟವಾಗಿರುವ ಲೇಖನ ನಾನು ಬರೆದದ್ದಲ್ಲ ಹಾಗೂ ಆ ಲೇಖನದಲ್ಲಿ ಪ್ರಸ್ತಾಪವಾಗಿರುವ ವಿಷಯ-ಅಭಿಪ್ರಾಯಗಳೊಡನೆ ನನ್ನ ಸಹಮತ ಇಲ್ಲ. ಈ ಅಂಶವನ್ನು ಸಂಪಾದಕರ ಗಮನಕ್ಕೆ ತಂದಿದ್ದೇನೆ ಹಾಗೂ ಅವರ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದೇನೆ.
- ಟಿ. ಜಿ. ಶ್ರೀನಿಧಿ ಫೆ. ೨೨, ೨೦೧೬

ಹೆಚ್ಚುವರಿ ಮಾಹಿತಿ (ಫೆ. ೨೬, ೨೦೧೬): ಪ್ರಕಾಶಕರು ಇಲ್ಲಿ ತಪ್ಪಾಗಿರುವುದನ್ನು ಒಪ್ಪಿಕೊಂಡಿದ್ದಾರೆ, ಮುದ್ರಿತ ಪ್ರತಿಗಳಲ್ಲಿ ಸ್ಟಿಕರ್ ಅಂಟಿಸುವ ಮೂಲಕ ತಿದ್ದುಪಡಿ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಅವರಿಗೆ ಧನ್ಯವಾದಗಳು.
badge