ಗುರುವಾರ, ಆಗಸ್ಟ್ 11, 2016

ಹಾಲ್ದೊಡ್ಡೇರಿ ಹೇಳುತ್ತಾರೆ, "ಬದಲಾವಣೆಗಳು ನಮ್ಮ ಭಾಗವಾಗಬೇಕು"

ಇಜ್ಞಾನ ಡಾಟ್ ಕಾಮ್‌ ಸಹಯೋಗದಲ್ಲಿ ಮೈಸೂರಿನ ಭಾರತೀ ಪ್ರಕಾಶನ ಇತ್ತೀಚೆಗೆ ಪ್ರಕಟಿಸಿರುವ ಕೃತಿ 'ಟೆಕ್ಸ್ಟ್ ಬುಕ್ ಅಲ್ಲ, ಇದು ಟೆಕ್ ಬುಕ್!' ತಂತ್ರಜ್ಞಾನ ಕ್ಷೇತ್ರದ ಹತ್ತಾರು ವಿಷಯಗಳನ್ನು ಸರಳ ಭಾಷೆಯಲ್ಲಿ ತಿಳಿಸುವ ಈ ಪುಸ್ತಕಕ್ಕೆ ಹೆಸರಾಂತ ವಿಜ್ಞಾನ ಸಂವಹನಕಾರ, ವಿಜ್ಞಾನಿ ಹಾಲ್ದೊಡ್ಡೇರಿ ಸುಧೀಂದ್ರ ಬರೆದ ಮುನ್ನುಡಿಯ ಪೂರ್ಣಪಾಠ ಇಲ್ಲಿದೆ. ಟೆಕ್ ಬುಕ್ ಕೊಳ್ಳಲು ಭೇಟಿಕೊಡಿ: tinyurl.com/ejnanatechbook

ಸುಧೀಂದ್ರ ಹಾಲ್ದೊಡ್ದೇರಿ       

ಕನ್ನಡದಲ್ಲಿನ ವಿಜ್ಞಾನ ಬರವಣಿಗೆಗೆ ಸುದೀರ್ಘ ಇತಿಹಾಸವಿದೆ.  ಮೊದಲ ಪೀಳಿಗೆಯ ಬೆಳ್ಳಾವೆ ವೆಂಕಟನಾರಣಪ್ಪ- ಆರ್.ಎಲ್. ನರಸಿಂಹಯ್ಯ, ಎರಡನೆಯ ಪೀಳಿಗೆಯ ಜಿ.ಟಿ.ನಾರಾಯಣರಾವ್-ಜೆ.ಆರ್.ಲಕ್ಷ್ಮಣರಾವ್, ಮೂರನೆಯ ಪೀಳಿಗೆಯ ನಾಗೇಶ ಹೆಗಡೆ-ಟಿ.ಆರ್.ಅನಂತರಾಮು ... ಹೀಗೆ ಪರಂಪರಾಗತವಾಗಿ ವಿಜ್ಞಾನ ಸಾಹಿತ್ಯ, ಅದರಲ್ಲೂ ವಿಶೇಷವಾಗಿ ಇಂದು ಪ್ರಸ್ತುತವಾದ ತಂತ್ರಜ್ಞಾನ ಸಾಹಿತ್ಯವನ್ನು ಶ್ರೀಮಂತಗೊಳಿಸಿರುವ ಮಹನೀಯರಿವರು.  ಆಯಾ ಪೀಳಿಗೆಯಲ್ಲಿಯೇ ಅನೇಕ ಬರಹಗಾರರು ವಿಜ್ಞಾನ ಸಾಹಿತ್ಯದ ಅಭಿವೃದ್ಧಿಗೆ ಬಹುದೊಡ್ಡ ಕಾಣಿಕೆ ನೀಡಿದ್ದಾರೆ, ಪ್ರಾಸಂಗಿಕವಾಗಿ ಕೆಲವರ ಹೆಸರನ್ನು ಮಾತ್ರ ಇಲ್ಲಿ ಉಲ್ಲೇಖಿಸಿದ್ದೇನೆ.  ಈ ನಿಟ್ಟಿನಲ್ಲಿ ಹೊಸ ಬರಹಗಾರರೆಂದು ಹೇಳಲಾಗದಷ್ಟು ಹಳಬರಾಗಿರುವ, ತಮ್ಮ ಹುಲುಸಾದ ವಿಜ್ಞಾನ ಫಸಲಿನ ಮೂಲಕ ಕನ್ನಡ ಓದುಗರಿಗೆ, ಪ್ರಮುಖವಾಗಿ ಕನ್ನಡ ದಿನಪತ್ರಿಕೆಗಳ ವಾಚಕರಿಗೆ ಪರಿಚಿತರಾಗಿರುವವರು ಟಿ.ಜಿ.ಶ್ರೀನಿಧಿ.  ಹಿಂದಿನ ಶ್ರೇಷ್ಠ ಪರಂಪರೆಯನ್ನು ಸಮರ್ಥವಾಗಿ ಮುನ್ನಡೆಸಲು ಪಣ ತೊಟ್ಟವರಂತೆ ಅವರು ನಿಖರ, ಸ್ಪಷ್ಟ ಹಾಗೂ ಸರಳ ಭಾಷೆಯಲ್ಲಿ ವಿಜ್ಞಾನ ಕುರಿತು ನಿರಂತರವಾಗಿ ಬರೆಯುತ್ತಿದ್ದಾರೆ.

‘ಟೆಕ್ ಬುಕ್’ ಹೆಸರಿನ ‘ಟೆಕ್ಸ್ಟ್ ಬುಕ್’ ಅಲ್ಲದ ಈ ಪುಸ್ತಕವನ್ನು ಕೈಯ್ಯಲ್ಲಿ ಹಿಡಿದೊಡನೆ ನಮ್ಮ ಶ್ರೀನಿಧಿ ಅಪ್ಪಟ ಮೈಸೂರಿನವರೆನ್ನುವುದಕ್ಕೆ ನನಗೆ ಬೇರೆ ಸಾಕ್ಷಿ ಬೇಕಿರಲಿಲ್ಲ.  ಮನೆಯ ಥ್ರೀಡಿ ಪ್ರಿಂಟರು ಅವರ ಕಲ್ಪನೆಗೆ ಸಿಲುಕಿ ಕೇವಲ ಮೈಸೂರುಪಾಕನ್ನೇ ಮುದ್ರಿಸಿಕೊಡುತ್ತದೆ. ಚಾಲಕರಹಿತ, ಸ್ವನಿಯಂತ್ರಿತ, ಪುಟಾಣಿ ವಿಮಾನಗಳಾದ ‘ಡ್ರೋನ್’ಗಳ ಉಪಯೋಗದ ಬಗ್ಗೆ ಬರೆಯುವಾಗ ಅವರ ಕಣ್ಣಿಗೆ ಪೀಡ್ಝಾ ಕಾಣುವುದಿಲ್ಲ, ಮಸಾಲೆ ದೋಸೆ ಅವರ ದೃಷ್ಟಿಗೆ ಬೀಳುತ್ತದೆ.  ಹಾಗೆಯೇ ‘ಇಂಟರ್ ನೆಟ್ ಆಫ್ ಥಿಂಗ್ಸ್’ ಕುರಿತ ಲೇಖನದಲ್ಲಿ ಅವರ ಫ್ರಿಜ್ಜು ತರಿಸಿಕೊಳ್ಳುವುದು ಕೊತ್ತಂಬರಿ ಸೊಪ್ಪನ್ನೇ ಹೊರತು ಚೀಸ್ ಅಲ್ಲ.  ಈ ಮಾತುಗಳನ್ನಿಲ್ಲಿ ವಿಶೇಷವಾಗಿ ಹೇಳಲೇಬೇಕಾಯಿತು.  ಶ್ರೀನಿಧಿಯವರಿಗೆ ಎಲ್ಲ ವಿಷಯಗಳನ್ನೂ ‘ಲೋಕಲೈಸ್’ ಮಾಡಿಕೊಳ್ಳುವ ವಿಶೇಷ ಸಾಮರ್ಥ್ಯವಿದೆಯೆಂಬುದರ ಸಾಬೀತಿಗೆ ಮೇಲಿನ ಉದಾಹರಣೆಗಳೇ ಸಾಕು.


ಇಂದಿನ ಯುವ ಪೀಳಿಗೆಗೆ, ಈಗಷ್ಟೇ ಕನ್ನಡ ಮಾಧ್ಯಮದಲ್ಲಿ ಪ್ರೌಢಶಾಲೆ ಮುಗಿಸಿ ನಗರಕ್ಕೆ ಕಾಲಿಟ್ಟವರಿಗೆ ಕಣ್ಣಿಗೆ ಕಾಣುವುದೆಲ್ಲವೂ ಬೆರಗಿನಂತಿರುತ್ತದೆ.  ಅಕ್ಷರಶಃ ಅರಗಿನ ಅರಮನೆ ಹೊಕ್ಕ ಅನುಭವವಾಗುತ್ತದೆ.  ಕೈಯ್ಯಲ್ಲೊಂದು ಸ್ಮಾರ್ಟ್ ಫೋನಿಟ್ಟುಕೊಂಡರೂ, ಈ  ಆರ್ ಎಫ್ ಕೋಡ್, ಕ್ಯೂ ಆರ್ ಕೋಡ್, ಎಲ್ ಇ ಡಿ, ಪೆನ್ನು, ಕಾಗದ ಕೊನೆಗೆ ಇಡೀ ನಗರವೇ ಸ್ಮಾರ್ಟ್ ಆಗುವಿಕೆ, ಇ-ಕಸ ...... ಅವರ ತಲೆಯೊಳಗೆ ಸಮುದ್ರ ಮಥನ ನಡೆಯಲಾರಂಭಿಸುತ್ತದೆ.  ಅಂಥ ಓದುಗರಿಗೆ ತಿಳಿಗನ್ನಡದಲ್ಲಿ ಅತ್ಯಂತ ಆಪ್ತ ಶೈಲಿಯಲ್ಲಿ ತಂತ್ರಜ್ಞಾನದ ಕೌತುಕಗಳನ್ನು ಜಾಣ್ಮೆಯಿಂದ ಶ್ರೀನಿಧಿ ಈ ಪುಸ್ತಕದಲ್ಲಿ ತಿಳಿಪಡಿಸಿದ್ದಾರೆ.  ಪುಟ ತಿರುವುತ್ತಿದ್ದಂತೆ ಈ ಪುಸ್ತಕದಲ್ಲಿ ಏನುಂಟು, ಏನಿಲ್ಲ? ಚಹರೆ ಗುರುತಿಸಿ ನಕಲಿ ಅನುಕರಣೆ ಮಾಡಬಲ್ಲ ಯಂತ್ರಗಳ ಬಗ್ಗೆ ಬರೆಯುವಾಗ ಶ್ರೀನಿಧಿ ಅದರ ಇಡೀ ಇತಿಹಾಸದತ್ತ ನಮ್ಮ ಗಮನ ಸೆಳೆಯುತ್ತಾರೆ.  ತನ್ನ ದೇಹಕ್ಕೆ ಚಿಪ್ ಸೇರಿಸಿಕೊಂಡು ಜಗತ್ತಿನ ಮೊದಲ ‘ಸೈಬರ್ಗ್’ ಆದ ಕೆವಿನ್ ವಾರ್ವಿಕ್‌ನ 1998ರ ಸಾಹಸದಿಂದ ಆರಂಭವಾಗುವ ಅವರ ಲೇಖನ, ಮಾನಸಿಕ ಸಂವಹನ ‘ಟೆಲಿಫಥಿ’ಯ ಕಲ್ಪನೆಗಳೂ ಸಾಕಾರವಾಗಬಹುದಾದ ದಿನಗಳತ್ತ ನಮ್ಮನ್ನು ದೂಡುತ್ತದೆ.

ಮೂಲತಃ ಶ್ರೀನಿಧಿಯವರೊಬ್ಬ ‘ಟೆಕ್ಕಿ’.  ಆದ್ದರಿಂದ ಈ ಪುಸ್ತಕದತ್ತ ಕಣ್ಣು ಹಾಯಿಸಿದಾಗ ನಿಮ್ಮಲ್ಲೇಳುವ ಭಾವನೆಗಳನ್ನು ಅವರು ‘ಟೆಕ್ಕಿ’ಯಾಗಿಯೇ ವಿವರಿಸುತ್ತಾರೆ.  ಉದಾಹರಣೆಗೆ ‘ಎಮೋಜಿ’ಗಳೆಂದೇ ಇಂದು ಖ್ಯಾತವಾಗಿರುವ ಹಳಬರ ಪಾಲಿನ ‘ಸ್ಮೈಲಿ’ಗಳು ಹೇಗೆ ‘ಎಮೊಟೈಕನ್’ಗಳಾಗಿದ್ದವೆಂಬುದನ್ನು ಸ್ವಾರಸ್ಯಕರವಾಗಿ ಬಣ್ಣಿಸುತ್ತಾರೆ.  ಈ ಚಿತ್ರಾಕ್ಷರಗಳ ಕುರಿತ ಲೇಖನವು ನಿಮ್ಮ ಚಿತ್ತವನ್ನು ಅತ್ತಿತ್ತ ಕದಲಿಸದಂತೆ ಓದಿಸಿಕೊಂಡು ಹೋಗುತ್ತದೆ.  ನಮ್ಮ ಪ್ರಸ್ತುತ ‘ಟೆಕ್ಕಿ’ ಜಗತ್ತಿನ ಬಝ್ ವರ್ಡ್‌ಗಳಾದ ‘ಇಂಟರ್ ನೆಟ್ ಆಫ್ ಥಿಂಗ್ಸ್’, ‘ಬಿಗ್ ಡೇಟಾ’ ಬಗ್ಗೆ ಅವರ ವ್ಯಾಖ್ಯಾನ ಸುಲಲಿತವಾಗಿದೆ.  ಇಂದಿನ ನಮ್ಮೆಲ್ಲ ಡಿಜಿಟಲ್ ಚಟುವಟಿಕೆಗಳನ್ನು ದಾಖಲಿಸಿಕೊಂಡು ನಮ್ಮ ಗುಣಾವಗುಣಗಳನ್ನು ವಿಶ್ಲೇಷಿಸ್, ಬ್ಯುಸಿನೆಸ್ ವಹಿವಾಟುಗಳ ಅಭಿವೃದ್ಧಿಗೆ ಹೇಗೆ ಬಳಸಿಕೊಳ್ಳಲಾಗುತ್ತಿದೆಯೆಂಬುದರ ಪರಿಚಯ ಈ ಲೇಖನದಲ್ಲಿದೆ.  ಹಾಗೆಯೇ 3-ವಿ ಅಂದರೆ ‘ವಾಲ್ಯೂಮ್’, ‘ವೆರೈಟಿ’ ಮತ್ತು ‘ವೆಲಾಸಿಟಿ’ಗಳನ್ನು ಜೀವಾಳವಾಗಿಸಿಟ್ಟುಕೊಂಡು ಇಂದಿನ ಡಿಜಿಟಲ್ ಧಾವಂತದ ಬಗ್ಗೆ ಕುತೂಹಲವೇಳುತ್ತದೆ, ಜತೆಗೆ ಆತಂಕವೂ ಮನೆ ಮಾಡುತ್ತದೆ.

ಎಲ್ಲ ಹೊಸತನ್ನೂ ಅದು ಹೊಸತಾಗಿರುವಾಗಲೇ ಹಿಡಿದಿಡುವ ಶ್ರೀನಿಧಿಯವರು ತಮ್ಮ ಲೇಖನಗಳನ್ನು ನಾಗಾಲೋಟದಲ್ಲಿಯೇ ಬರೆಯುತ್ತಾರೆ.  ಅದೇ ವೇಗದಲ್ಲಿ ತಮ್ಮ ಲೇಖನಗಳನ್ನು ಓದಿಸಿಕೊಂಡು ಹೋಗುವಂತೆ ಬರೆಯುವ ಕಲೆಯೂ ಅವರಿಗೆ ಕರಗತ.  ಈ ಹೊಸ ಓಟದ ನಡುವೆ ಹಳೆಯ ಜಮಾನಾದ ಸರ್ವಾಂತರ್ಯಾಮಿ ‘ಯು.ಎಸ್.ಬಿ.’ ಅವರ ನೆನಪಿನಲ್ಲಿ ಖಂಡಿತವಾಗಿಯೂ ಇರುವುದಿಲ್ಲವೆಂಬುದು ನನ್ನ ನಂಬಿಕೆಯಾಗಿತ್ತು.  ಆದರೆ ‘ಯು.ಎಸ್.ಬಿ.’ ಬಗ್ಗೆಯೂ ಸರಳ ಸುಂದರ ಲೇಖನ ಬರೆದು ನನ್ನ ಕಲ್ಪನೆಯನ್ನು ನುಚ್ಚುನೂರು ಮಾಡಿದ್ದಾರೆ.  ತಮ್ಮ ಕಣ್ಬಿಟ್ಟು ಹರಿದತ್ತಲೆಲ್ಲಾ ಯು.ಎಸ್.ಬಿ. ಎಂಬ ಸಂಪರ್ಕ ಕೊಂಡಿಯನ್ನೇ ಕನವರಿಸುವವರಿಗೆ ಈ ಲೇಖನವೊಂದು ಆಕರ ಕೋಶ.

ಇಷ್ಟೆಲ್ಲಾ ಲೇಖನಗಳನ್ನು ಓದಿದ ಮೇಲೆ ಓದುಗರಿಗಷ್ಟೇ ಅಲ್ಲ, ಈ ಪುಸ್ತಕವನ್ನಿಟ್ಟ ಮೇಜು, ಅದರ ಪಕ್ಕದಲ್ಲಿದ್ದ ವಾಚು, ಕೊನೆಗೆ ಕನ್ನಡಕಗಳೂ ‘ಜಾಣ’ ರಾಗುವುದರಲ್ಲಿ ಸಂದೇಹವೇ ಇಲ್ಲ.  ಯಾರೋ ಗೀಚಿದ ಬರಹಗಳನ್ನು ಇನ್ಯಾರೋ ಓದುವ ಕಷ್ಟ, ವೈದ್ಯರ ಪ್ರಿಸ್ಕ್ರಿಪ್ಷನ್ ಹಿಡಿದವರಿಗೆ ಮಾತ್ರ ಗೊತ್ತು.  ಆದರೆ ನಿಮ್ಮ ಕಂಪ್ಯೂಟರು ಔಷಧಿ ಚೀಟಿ ಓದುವ ಫಾರ್ಮಸಿಸ್ಟನಂತೆ ಎಂಥ ಬ್ರಹ್ಮ ಲಿಪಿಯನ್ನೂ ಅರ್ಥ ಮಾಡಿಕೊಳ್ಳುವಂತಿದ್ದರೆ?  ಇಂಥ ಸೌಲಭ್ಯ ಓ.ಸಿ.ಆರ್. ತಂತ್ರಜ್ಞಾನದಲ್ಲಿದೆ.  ಇದೇಕೆ ಬೇಕು ಎಂಬುದನ್ನು ನೀವು ಲೇಖನ ಓದಿಯೇ ತಿಳಿಯಬೇಕು, ಅಲ್ಲಿಯ ತನಕ ಈ ಅಕ್ಷರ ಜಾಣ, ನಿಮಗೆ ಸಸ್ಪೆನ್ಸ್ ಆಗಿಯೇ ಉಳಿಯುತ್ತದೆ.  ಇನ್ನು ‘ರೂಪಾಂತರ ಪರ್ವ’ದಲ್ಲಿ ಶ್ರೀನಿಧಿಯವರ ಚಿಂತನೆಯನ್ನು ಮೆಚ್ಚಿಕೊಳ್ಳಲೇಬೇಕು. ಮೈಸೂರುಪಾಕಿನಿಂದ ಮಸಾಲೆದೋಸೆಯವರೆಗೆ ತಮ್ಮ ಜಿಹ್ವಾ ಚಾಪಲ್ಯವನ್ನು ಬಹಿರಂಗಗೊಳಿಸಿರುವ ಅವರು ಕಂಪ್ಯೂಟರಿನ ಗಾತ್ರವನ್ನು ಅಳೆಯುವುದು ಟಿಫನ್ ಬಾಕ್ಸ್ ಮೂಲಕವೇ.  ತಮಾಷೆ ಸಾಕು, ಕಂಪ್ಯೂಟರ್ ಕಂಪ್ಯೂಟರಿನಂತಿರದಿದ್ದರೆ ಹೇಗಿರುತ್ತದೆ ಎಂದು ತಿಳಿದುಕೊಳ್ಳಲು ನೀವು ಹೆಚ್ಚು ತಿಣಕಾಡಬೇಕಿಲ್ಲ.  ನಿಮ್ಮಂಥ ‘ಕರ್ಸರ್’ ವ್ಯಸನಿಗಳಿಗೆ ಲೇಖನದ ಮೇಲಿನ ಕರ್ಸರಿ ಗ್ಲಾನ್ಸ್ ಸಾಕು!

ಬದಲಾವಣೆಗಳೇ ಜೀವಾಳ.  ಕಂಪ್ಯೂಟರ್ ಕ್ಷೇತ್ರದಲ್ಲಿ ಇಷ್ಟೆಲ್ಲಾ ಬದಲಾವಣೆಗಳು ಜರುಗಿರದಿದ್ದರೆ ನೀವು ಈ ಪುಸ್ತಕ ಓದುವುದಿರಲಿ, ಶ್ರೀನಿಧಿಯೂ ಇವುಗಳ ಬಗ್ಗೆ ಚಿಂತಿಸದೆಯೇ ಮತ್ತೊಂದು ಕ್ಷೇತ್ರದಲ್ಲಿ ನೆಮ್ಮದಿ ಕಂಡುಕೊಳ್ಳುತ್ತಿದ್ದರು.  ಆದರೆ ಗಾರ್ಡನ್ ಮೂರ್ ಅವರಂಥ ಕಂಪ್ಯೂಟರ್ ಭವಿಷ್ಯಕಾರರ ನುಡಿಗಳೆಲ್ಲಾ ನಿಜವಾಗುತ್ತಾ ಬಂದು, ನಮಗರಿವಿಲ್ಲದಂತೆಯೇ ಕಂಪ್ಯೂಟರುಗಳು ನಮ್ಮನ್ನು ಆವರಿಸಿಕೊಳ್ಳುತ್ತಾ ಬಂದಿವೆ.  ಇಂಥ ‘ಮೂರ್ ನಿಯಮ’ಗಳು ನೂರ್ ಕಾಲ ಬಾಳಬೇಕು.  ಬದಲಾವಣೆಗಳು ನಮ್ಮ ಭಾಗವಾಗಬೇಕು.  ಇವೆಲ್ಲ ಬಗೆ ಬಗೆ ಬದಲಾವಣೆಗಳ ಬಗ್ಗೆ ಬೆರಗು ಹುಟ್ಟಿಸುವಂತೆ ಬರೆಯಬಲ್ಲ ಪುಸ್ತಕಗಳು ನಮಗೆ ಹೆಚ್ಚಾಗಿ ಬೇಕು.  ಶ್ರೀನಿಧಿಯಂಥ ಯುವ ಉತ್ಸಾಹಿಗಳಿಗೆ ಇದು ದೊಡ್ಡ ಸವಾಲೇನಲ್ಲ.  ಹೊಸ ತಂತ್ರಜ್ಞಾನಗಳನ್ನು ಉಂಡು, ಉಟ್ಟು, ಹಾಸಿ, ಹೊಸೆಯಬಲ್ಲ ತಂತ್ರಜ್ಞರವರು.  ಅವರ ಕೀಬೋರ್ಡು ಮತ್ತು ಮೌಸು ಇಂಥ ನೂರಾರು ಪುಸ್ತಕಗಳನ್ನು ಕನ್ನಡದ ನವ ವಿಜ್ಞಾನ ಸಾಕ್ಷರರಿಗೆ ಕೊಡಲಿ ಎಂಬ ಹಾರೈಕೆ ನನ್ನದು.

ಟೆಕ್ ಬುಕ್ ಕೊಳ್ಳಲು ಭೇಟಿಕೊಡಿ: tinyurl.com/ejnanatechbook

2 ಕಾಮೆಂಟ್‌ಗಳು:

Unknown ಹೇಳಿದರು...

ಟಿ.ಜಿ. ಶ್ರೀನಿಧಿಯವರೆ, ನಮಸ್ಕಾರ.
ತಮ್ಮ ಈ ಪುಸ್ತಕವನ್ನು ಓದಲು ಬಯಸುತ್ತೇನೆ.
ಇಂದಿನ ವಿಜಯವಾಣಿಯಲ್ಲಿ ಪ್ರಕಟವಾಗಿರುವ 'ಕನ್ನದ ಪುಸ್ತಕಗಳ e ಅವತಾರ' ಲೇಖನ ತುಂಬಾ ಇಷ್ಟವಾಯಿತು.
ಈ ಬಗ್ಗೆ ತಮ್ಮೊಂದಿಗೆ ಮಾತನಾಬೇಕಾಗಿದೆ.

ವಂದನೆಗಳು.
ಡಾ. ಮಾನಕರಿ.ಶ್ರೀನಿವಾಸಾಚಾರ್ಯ.

Unknown ಹೇಳಿದರು...

ಪ್ರತಿಯೊಬ್ಬ ಛಾಯಾಚಿತ್ರಕಾರ ಓದಿ ಅರಗಿಸಿಕೊಳ್ಳಬೇಕಾದ ಲೇಖನ. ಉತ್ತಮ ಲೇಖನ ಸಿದ್ಧಪಡಿಸಿದುದಕ್ಕಾಗಿ ಅಭಿನಂದನೆಗಳು.

badge