ಗುರುವಾರ, ಜನವರಿ 14, 2010

ಸಂಕ್ರಾಂತಿ ಮತ್ತು ಸೂರ್ಯಗ್ರಹಣ

ಟಿ ಜಿ ಶ್ರೀನಿಧಿ

ಸಮೃದ್ಧಿಯ ಸಂಕೇತವಾದ ಸಂಕ್ರಾಂತಿ ಹಬ್ಬವನ್ನು ಜನವರಿ ೧೪ರಂದು ಭಾರತದೆಲ್ಲೆಡೆ ವಿವಿಧ ಹೆಸರುಗಳಿಂದ ಆಚರಿಸಲಾಗುತ್ತದೆ. ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡುವ ಹಬ್ಬ ಈ ಸಂಕ್ರಾಂತಿ. ಇದು ಬೆಳೆ ಕಟಾವಿನ ಕಾಲವೂ ಹೌದು.

ಪ್ರತಿ ವರ್ಷ ಡಿಸೆಂಬರ್ ೨೧-೨೨ರ ವೇಳೆಗೆ ಭೂಮಿಯ ಮಕರಸಂಕ್ರಾಂತಿ ವೃತ್ತದ ಮೇಲೆ ಸೂರ್ಯ ನೇರವಾಗಿ ಪ್ರಕಾಶಿಸಲು ಪ್ರಾರಂಭಿಸುತ್ತಾನೆ. ಸೂರ್ಯನ ಉತ್ತರದಿಕ್ಕಿನ ಪ್ರಯಾಣದ ಆರಂಭವನ್ನು ಸೂಚಿಸುವ, ಹಗಲಿನ ಸಮಯ ಹೆಚ್ಚುತ್ತಾ ಹೋಗುವ ಈ ಕಾಲವೇ ಉತ್ತರಾಯಣ. ಹಿಂದೆ ಉತ್ತರಾಯಣ ಸಂಕ್ರಾಂತಿ ಹಬ್ಬದ ದಿನವೇ ಪ್ರಾರಂಭವಾಗುತ್ತಿತ್ತು. ಆದರೆ ಸಮಯ ಸರಿದಂತೆ ಭೂಮಿಯ ಚಲನೆಯಲ್ಲಿ ಉಂಟಾದ ಬದಲಾವಣೆಗಳಿಂದ ಉತ್ತರಾಯಣ ಡಿಸೆಂಬರ್‌ನಲ್ಲೇ ಪ್ರಾರಂಭವಾಗುತ್ತದೆ. ಆದರೂ ನಾವು ಮಾತ್ರ ಸಂಕ್ರಾಂತಿಯನ್ನು ಜನವರಿ ೧೪ರಂದೇ ಆಚರಿಸುತ್ತೇವೆ.

ಸಂಕ್ರಾಂತಿಯ ಮರುದಿನ ಕಂಕಣ ಸೂರ್ಯಗ್ರಹಣ ಈ ವರ್ಷದ ವಿಶೇಷ.

ಭೂಮಿಗೂ ಸೂರ್ಯನಿಗೂ ನಡುವೆ ಚಂದ್ರ ಅಡ್ಡ ಬಂದಾಗ ಸೂರ್ಯಗ್ರಹಣ ಆಗುತ್ತದೆ ಎಂದು ನಮಗೆಲ್ಲ ಗೊತ್ತು. ಗ್ರಹಣದ ಸಂದರ್ಭದಲ್ಲಿ ಚಂದ್ರ ಸೂರ್ಯನನ್ನು ಪೂರ್ತಿಯಾಗಿ ಮರೆಮಾಡಿದರೆ ಆಗ ಅದು ಪೂರ್ಣ ಸೂರ್ಯಗ್ರಹಣ ಆಗುತ್ತದೆ. ಆದರೆ ಈ ಬಾರಿ ಹಾಗಲ್ಲ. ಚಂದ್ರ ಸೂರ್ಯನಿಗೆ ಅಡ್ಡವಾಗಿ ಬಂದರೂ ಸೂರ್ಯ ಸಂಪೂರ್ಣವಾಗಿ ಮರೆಯಾಗುವುದಿಲ್ಲ. ಸೂರ್ಯನ ಬಿಂಬ ಬಳೆಯ ಹಾಗೆ ಬೆಳಗುತ್ತದೆ. ಹಾಗಾಗಿಯೇ ಇದು ಕಂಕಣ ಗ್ರಹಣ.

ಗ್ರಹಣ ಒಂದು ನೈಸರ್ಗಿಕ ಘಟನೆ, ಅದನ್ನು ನೋಡಿ ಆನಂದಿಸಬೇಕೇ ಹೊರತು ಹೆದರಿ ಮನೆಯೊಳಗೆ ಅವಿತಿರುವುದರಲ್ಲಿ ಯಾವುದೇ ಅರ್ಥವಿಲ್ಲ. ಆದರೆ ನೆನಪಿಡಿ, ಸೂರ್ಯನನ್ನು ಬರಿಗಣ್ಣಿನಿಂದ ನೋಡುವುದು ಅಪಾಯಕಾರಿ. ಗ್ರಹಣ ನೋಡಲೆಂದೇ ತಯಾರಿಸಿರುವ ವಿಶೇಷ ಕನ್ನಡಕ ಅಥವಾ ವಿಶಿಷ್ಟ ಕ್ಯಾಮೆರಾಗಳನ್ನು ಬಳಸಿ ಮಾತ್ರವೇ ಸೂರ್ಯಗ್ರಹಣ ನೋಡಬಹುದು.

ಚಿಣ್ಣರ ಚೇತನ ಗೋಡೆ ಪತ್ರಿಕೆಯ ಜನವರಿ ೨೦೧೦ ಸಂಚಿಕೆಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge