ಮಂಗಳವಾರ, ನವೆಂಬರ್ 1, 2011

ಇಬ್ಬರು ದಿಗ್ಗಜರ ನೆನಪಿನಲ್ಲಿ...

ಕಳೆದೊಂದು ತಿಂಗಳಲ್ಲಿ ಗಣಕ ವಿಜ್ಞಾನ ಕ್ಷೇತ್ರ ಇಬ್ಬರು ದಿಗ್ಗಜರನ್ನು ಕಳೆದುಕೊಂಡಿದೆ. ಈ ಬರೆಹ ಅವರಿಬ್ಬರ ನೆನಪಿಗೆ ಸಮರ್ಪಿತ.
ಸಿ ಸೃಷ್ಟಿಕರ್ತ ಇನ್ನಿಲ್ಲ
ಡಾ. ಡೆನ್ನಿಸ್ ರಿಚಿ - ವಿಶ್ವದೆಲ್ಲೆಡೆಯ ಗಣಕ ವಿಜ್ಞಾನ ವಿದ್ಯಾರ್ಥಿಗಳಿಗೆಲ್ಲ ಇದು ಚಿರಪರಿಚಿತ ಹೆಸರು. ಬಹುತೇಕ ವಿದ್ಯಾರ್ಥಿಗಳೆಲ್ಲ ಮೊದಲಿಗೆ ಕಲಿಯುವ 'ಸಿ' ಪ್ರೋಗ್ರಾಮಿಂಗ್ ಭಾಷೆಯನ್ನು ರೂಪಿಸುವುದರಲ್ಲಿ ಅವರ ಕೊಡುಗೆ ಅಪಾರವಾದದ್ದು. ಸಿ ಬಗ್ಗೆ ಅವರು ಬರೆದ ಪುಸ್ತಕವಂತೂ ಎಲ್ಲ ವಿದ್ಯಾರ್ಥಿಗಳ ಕೈಯಲ್ಲೂ ಕಾಣಸಿಗುತ್ತದೆ! ಅಷ್ಟೇ ಅಲ್ಲ, ಅತ್ಯಂತ ಜನಪ್ರಿಯ ಕಾರ್ಯಾಚರಣ ವ್ಯವಸ್ಥೆ 'ಯುನಿಕ್ಸ್' ಸೃಷ್ಟಿಸಿದ ತಂಡದಲ್ಲೂ ಡೆನ್ನಿಸ್ ಮಹತ್ವದ ಪಾತ್ರ ವಹಿಸಿದ್ದರು.

ತಮ್ಮ ಜೀವಮಾನದುದ್ದಕ್ಕೂ ಪ್ರಚಾರದಿಂದ ದೂರವೇ ಉಳಿದಿದ್ದ ಅವರ ನಿಧನದ ಸುದ್ದಿ ಹೊರಜಗತ್ತಿಗೆ ಗೊತ್ತಾದದ್ದೂ ತಡವಾಗಿಯೇ ಎನ್ನುವುದು ವಿಪರ್ಯಾಸ. ಅಕ್ಟೋಬರ್ ೧೩ರಂದು ಅವರ ಮಾಜಿ ಸಹೋದ್ಯೋಗಿಯೊಬ್ಬರು ಗೂಗಲ್ ಪ್ಲಸ್‌ನಲ್ಲಿ ಸೇರಿಸಿದ ಸಂದೇಶದಿಂದಾಗಿ ಈ ಸುದ್ದಿ ಹರಡುವಷ್ಟರಲ್ಲಿ ಡೆನ್ನಿಸ್ ನಿಧನರಾಗಿ ದಿನಗಳೇ ಕಳೆದಿದ್ದವು.

ಮಂಗಳವಾರ, ಅಕ್ಟೋಬರ್ 25, 2011

ಗೂಗಲ್ ಬಜ್‌ಗೆ ಬೈ ಬೈ!

ಟಿ. ಜಿ. ಶ್ರೀನಿಧಿ

"ಜನರ ಬದುಕನ್ನೇ ಬದಲಿಸುವಂತಹ, ಅವರು ದಿನಕ್ಕೆ ಎರಡು ಮೂರು ಬಾರಿಯಾದರೂ ಬಳಸುವಂತಹ ಉತ್ಪನ್ನಗಳನ್ನು ರೂಪಿಸುವುದು ನಮ್ಮ ಆಶಯ. ಈ ಪ್ರಯತ್ನದಲ್ಲಿ ಯಶಸ್ವಿಯಾಗಲು ಏಕಾಗ್ರತೆ ಬೇಕು; ನಾವು ಏನೆಲ್ಲ ಕೆಲಸ ಮಾಡುತ್ತೇವೆ ಎಂದು ಯೋಚಿಸಿಕೊಳ್ಳುವಂತೆಯೇ ನಾವು ಏನೆಲ್ಲ ಮಾಡುವುದಿಲ್ಲ ಎನ್ನುವುದನ್ನೂ ಗುರುತಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ನಮ್ಮ ಕೆಲ ಉತ್ಪನ್ನಗಳನ್ನು ಮುಚ್ಚಲು ನಿರ್ಧರಿಸಿದ್ದೇವೆ"

ಸರಿಸುಮಾರು ಇದೇ ಅರ್ಥ ಹೊಂದಿದ್ದ ಹೇಳಿಕೆ ಕಂಡುಬಂದದ್ದು ಈಗ ಕೆಲದಿನಗಳ ಹಿಂದೆ, ಗೂಗಲ್ ಸಂಸ್ಥೆಯ ಅಧಿಕೃತ ಬ್ಲಾಗ್‌ನಲ್ಲಿ. ಕಳೆದ ಸಪ್ಟೆಂಬರ್ ತಿಂಗಳಿನಲ್ಲಿ ಪ್ರಾರಂಭವಾದ 'ಮನೆ ಕ್ಲೀನಿಂಗ್' ಕೆಲಸದ ಮುಂದುವರೆದ ಭಾಗವಾಗಿ ಈ ಹೇಳಿಕೆ ಹೊರಬಿದ್ದಿದೆ.

ಸೆಪ್ಟೆಂಬರ್‌ನ ಘೋಷಣೆಯಲ್ಲಿ ಸಾಕಷ್ಟು ಉತ್ಪನ್ನಗಳ ನಿವೃತ್ತಿ ಪ್ರಸ್ತಾಪ ಇತ್ತಾದರೂ ಅವುಗಳಲ್ಲಿ ಹೆಸರಾಂತ ಎನ್ನಬಹುದಾದ ಯಾವ ಉತ್ಪನ್ನವೂ ಇಲ್ಲದ್ದರಿಂದ ಅದು ಅಷ್ಟೇನೂ ಸುದ್ದಿಯಾಗಿರಲಿಲ್ಲ. ಸೋಶಿಯಲ್ ಸರ್ಚ್ ಕ್ಷೇತ್ರದ ಮಹತ್ವದ ತಾಣವಾಗಲಿದೆ ಎಂಬ ಹಣೆಪಟ್ಟಿ ಹೊತ್ತಿದ್ದ 'ಆರ್ಡ್‌ವರ್ಕ್' ಹಾಗೂ ಕೆಲ ವರ್ಷಗಳ ಹಿಂದೆ ನಮ್ಮಲ್ಲಿ ಅನೇಕರು ಬಳಸಿದ್ದ 'ಗೂಗಲ್ ಡೆಸ್ಕ್‌ಟಾಪ್' - ಇವು ಆಗ ನಿವೃತ್ತಿಯತ್ತ ಮುಖಮಾಡಿದ ಉತ್ಪನ್ನಗಳಲ್ಲಿ ಪ್ರಮುಖವಾದವು.

ಅಕ್ಟೋಬರ್ ೧೪ರ ಘೋಷಣೆಯಲ್ಲಿ 'ಕೋಡ್ ಸರ್ಚ್', 'ಜೈಕು' ಮುಂತಾದ ಹೆಸರುಗಳಿವೆ. ಆದರೆ ಇವುಗಳ ಜೊತೆ ಒಂದು ಪರಿಚಿತ ಹೆಸರೂ ಸೇರಿಕೊಂಡಿರುವುದು ಈ ಬಾರಿಯ ಘೋಷಣೆ ಕೊಂಚಮಟ್ಟಿಗೆ ಸುದ್ದಿಮಾಡಲು ಕಾರಣವಾಗಿದೆ.

ಗುರುವಾರ, ಅಕ್ಟೋಬರ್ 20, 2011

ತಿನ್ನಲಾಗದ ಬಿಸ್ಕತ್ತು, ನುಂಗಲಾಗದ ಟ್ಯಾಬ್ಲೆಟ್ಟು


ಟಿ. ಜಿ, ಶ್ರೀನಿಧಿಯವರ ಹೊಸ ಪುಸ್ತಕ 'ತಿನ್ನಲಾಗದ ಬಿಸ್ಕತ್ತು, ನುಂಗಲಾಗದ ಟ್ಯಾಬ್ಲೆಟ್ಟು' ಬರುವ ನವೆಂಬರ್ ೬ರ ಸಂಜೆ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ನಿಮಗೆ ಆದರದ ಸ್ವಾಗತ. ಹಿರಿಯ ಭಾಷಾತಜ್ಞರಾದ ಪ್ರೊ. ಜಿ. ವೆಂಕಟಸುಬ್ಬಯ್ಯ ಹಾಗೂ ಖ್ಯಾತ ಚಲನಚಿತ್ರ ನಿರ್ದೇಶಕ ಶ್ರೀ ಗುರುಪ್ರಸಾದ್ ಅಂದು ನಮ್ಮೊಡನೆ ಇರಲಿದ್ದಾರೆ.

ಪುಸ್ತಕದ ಮುಂಗಡ ಬುಕಿಂಗ್ www.akrutibooks.com ತಾಣದಲ್ಲಿ ಪ್ರಾರಂಭವಾಗಿದೆ. ಬುಕಿಂಗ್ ದೃಢೀಕರಣ ಇಮೇಲ್‌ನ ಮುದ್ರಿತ ಪ್ರತಿ ತಂದು ಕಾರ್ಯಕ್ರಮದ ದಿನ ನಿಮ್ಮ ಪ್ರತಿಯನ್ನು ಪಡೆದುಕೊಳ್ಳಬಹುದು. ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗದವರ ಪ್ರತಿಗಳನ್ನು ಅಂಚೆ/ಕೊರಿಯರ್ ಮೂಲಕ ಕಳುಹಿಸಿಕೊಡಲಾಗುವುದು. ಅಂಚೆ ವೆಚ್ಚ ನಮ್ಮದೇ!

ಸರಳ ಶೈಲಿಯ ಬರೆವಣಿಗೆ ಜೊತೆಗೆ ಜಿ. ಎಸ್. ನಾಗನಾಥ್ ಅವರ ಕಾರ್ಟೂನುಗಳು ಈ ಪುಸ್ತಕವನ್ನು ಇನ್ನಷ್ಟು ಆಕರ್ಷಕಗೊಳಿಸಿವೆ.

ಬುಧವಾರ, ಅಕ್ಟೋಬರ್ 19, 2011

ಕೈಕೊಟ್ಟ ಬ್ಲ್ಯಾಕ್‌ಬೆರಿ, ಕಂಗೆಟ್ಟ ಬಳಕೆದಾರ

ಟಿ. ಜಿ. ಶ್ರೀನಿಧಿ

ಕಳೆದ ವಾರದಲ್ಲಿ ಬೆಂಗಳೂರಿನ ಬಿಸಿನೆಸ್‌ಮನ್ ಚೇತನ್‌ಗೆ ಕೈಕಾಲು ಕಟ್ಟಿಹಾಕಿದ ಅನುಭವ. ಕೆಲಸದ ಮೇಲೆ ಹೊರಗಡೆ ಹೋಗಿದ್ದಾಗ ಆಫೀಸಿನಿಂದ ಇಮೇಲ್ ಇಲ್ಲ, ಗ್ರಾಹಕರಿಗೆ ಅರ್ಜೆಂಟಾಗಿ ಕೊಟೇಶನ್ ಕಳುಹಿಸೋಣ ಎಂದರೆ ಅದೂ ಆಗುತ್ತಿಲ್ಲ, ಯಾವ ವೆಬ್‌ಸೈಟೂ ತೆರೆಯಲಾಗುತ್ತಿಲ್ಲ, ಅದೆಲ್ಲ ಹೋಗಲಿ ಎಂದರೆ ಗರ್ಲ್‌ಫ್ರೆಂಡ್ ಜೊತೆ ಚಾಟ್ ಮಾಡುವಂತೆಯೂ ಇಲ್ಲ!

ಇಷ್ಟೆಲ್ಲ ಫಜೀತಿಗೆ ಕಾರಣವಾಗಿದ್ದು ಅವರ ಬ್ಲ್ಯಾಕ್‌ಬೆರಿ.

ದಿನದ ಬಹುಪಾಲು ಸಮಯ ಕೆಲಸದ ಮೇಲೆ ಬಿಜಿಯಾಗಿರುವ ಚೇತನ್ ಒಂದು ಕಡೆ ಕುಳಿತುಕೊಳ್ಳುವುದೇ ಅಪರೂಪ. ಆದರೆ ಅವರ ಕೆಲಸಕ್ಕೆ ಸದಾಕಾಲ ಅಂತರಜಾಲ ಸಂಪರ್ಕ, ಇಮೇಲ್ ವ್ಯವಸ್ಥೆ ಎಲ್ಲವೂ ಬೇಕೇಬೇಕು. ಹೋದ ಕಡೆಗೆಲ್ಲ ಲ್ಯಾಪ್‌ಟಾಪ್ ತೆಗೆದುಕೊಂಡು ಹೋಗುವುದೂ ಸಮಸ್ಯೆಯೇ. ಹಾಗಾಗಿಯೇ ಅವರು ಬ್ಲ್ಯಾಕ್‌ಬೆರಿ ಬಳಸುತ್ತಾರೆ. ಎಸ್ಸೆಮ್ಮೆಸ್ ಕಳುಹಿಸಿದಷ್ಟೇ ಸುಲಭವಾಗಿ ಇಮೇಲ್ ಕಳುಹಿಸಲು ಅನುವುಮಾಡಿಕೊಡುವ ಬ್ಲ್ಯಾಕ್‌ಬೆರಿಯಲ್ಲಿ ಅಂತರಜಾಲಾಟ ಕೂಡ ಸುಲಭ. ಬ್ಲ್ಯಾಕ್‌ಬೆರಿ ಮೆಸೆಂಜರ್ (ಬಿಬಿಎಂ) ಬಳಸಿ ಗರ್ಲ್‌ಫ್ರೆಂಡ್ ಜೊತೆ ಹರಟೆಹೊಡೆಯುವುದೂ ಸುಲಭವೇ! ಬರಿಯ ಚಾಟಿಂಗ್ ಅಷ್ಟೇ ಅಲ್ಲ, ಚಿತ್ರ-ವಿಡಿಯೋ-ಧ್ವನಿರೂಪದ ಕಡತಗಳನ್ನೂ ಕಳುಹಿಸಬಹುದು.

ಆದರೆ ಹೋದವಾರ ಆದದ್ದೇ ಬೇರೆ.

ಶುಕ್ರವಾರ, ಅಕ್ಟೋಬರ್ 14, 2011

ಗ್ಯಾಡ್ಜೆಟ್ ಲೋಕ

ಡಾ. ಯು. ಬಿ. ಪವನಜ
ಈ ಬಾರಿಯ ಪ್ರಜಾವಾಣಿ ದೀಪಾವಳಿ ವಿಶೇಷಾಂಕದ ಜೊತೆಗೆ ಉಚಿತ ಕೊಡುಗೆಯಾಗಿ 'ಗ್ಯಾಡ್ಜೆಟ್ ಲೋಕ' ಎಂಬ ಪುಸ್ತಕ ಇದೆ. ಅದರಿಂದ ಆಯ್ದ ಕೆಲ ಸಾಲುಗಳು ಇಲ್ಲಿವೆ.
ಲೇಖಕರು: ಡಾ. ಯು. ಬಿ. ಪವನಜ
ಪಠ್ಯ ನೆರವು: ಟಿ. ಜಿ. ಶ್ರೀನಿಧಿ ಹಾಗೂ ಪ್ರಜಾವಾಣಿ ಸಂಪಾದಕೀಯ ತಂಡ

ಸುಮಾರು ಸಾಯಂಕಾಲ ೬:೩೦ರ ಸಮಯ. ಬೆಂಗಳೂರು ತಲುಪಲು ಇನ್ನೂ ಒಂದೂವರೆ ಗಂಟೆ ಸಮಯವಿತ್ತು. ಆ ಸಮಯಕ್ಕೆ ಸರಿಯಾಗಿ ಬೆಂಗಳೂರಿನ ದಿನಪತ್ರಿಕೆಯೊಂದರಿಂದ ಫೋನು ಬಂತು. ಪ್ರೂಫ್ ಕಳುಹಿಸಿದ್ದೇವೆ, ಪರಿಶೀಲಿಸಿ, ಎಂದು. ಆ ಪತ್ರಿಕೆಯಲ್ಲಿ ಪ್ರತಿ ಸೋಮವಾರ ನನ್ನ ಅಂಕಣ ಪ್ರಕಟವಾಗುತ್ತದೆ. ಸಾಮಾನ್ಯವಾಗಿ ನಾನು ಪ್ರತಿ ಸಂಚಿಕೆಯಲ್ಲೂ ಒಂದೆರಡು ಜಾಲತಾಣಗಳ ವಿಳಾಸ ನೀಡುತ್ತೇನೆ. ಈ ವಿಳಾಸಗಳಲ್ಲಿ, ಸ್ವಲ್ಪ ಹೆಚ್ಚು ಕಡಿಮೆಯಾದರೂ ಆ ಜಾಲತಾಣವನ್ನು ತೆರೆಯಲು ಪ್ರಯತ್ನಿಸುವವರಿಗೆ ತೊಂದರೆಯಾಗುತ್ತದೆ. ಬೇರೆ ವಿಷಯದಲ್ಲಿ ಸ್ವಲ್ಪ ಎಡವಟ್ಟಾದರೂ ಓದುಗರು ಅದು ಮುದ್ರಾರಾಕ್ಷಸನ ಹಾವಳಿ ಎಂದುಕೊಂಡು ಮನಸ್ಸಿನಲ್ಲೇ ತಪ್ಪನ್ನು ತಿದ್ದಿಕೊಂಡು ಓದುತ್ತಾರೆ. ಆದರೆ ಜಾಲತಾಣದ ವಿಳಾಸದಲ್ಲಿ ತಪ್ಪು ಆಗಲೇ ಬಾರದು. ಅದುದರಿಂದ ನಾನು ಮುಂಚಿತವಾಗಿಯೇ ಲೇಖನದ ಕರಡನ್ನು ಪಿಡಿಎಫ್ ರೂಪದಲ್ಲಿ ಇಮೈಲ್ ಮೂಲಕ ತರಿಸಿಕೊಳ್ಳುತ್ತೇನೆ. ಪತ್ರಿಕೆಯವರಿಗೆ ಆದಷ್ಟು ಬೇಗನೆ ನಾನು ಅವರು ಕಳುಹಿಸಿದ ಕರಡನ್ನು ಓದಿ ಅದು ಸರಿಯಿದೆಯೇ ಎಂದು ತಿಳಿಸಬೇಕಿತ್ತು. ಅದರೆ ನಾನು ಬೆಂಗಳೂರು ತಲುಪಲು ಇನ್ನೂ ಒಂದೂವರೆ ಗಂಟೆ ಸಮಯವಿತ್ತು. ಮತ್ತೆ ನನ್ನ ಸ್ಮಾರ್ಟ್‌ಫೋನ್ ಹೊರಬಂತು. ಅದರಲ್ಲಿ ಇಮೈಲ್ ಮೂಲಕ ಬಂದ ಕರಡು ಪಿಡಿಎಫ್ ಫೈಲನ್ನು ಡೌನ್‌ಲೋಡ್ ಮಾಡಿಕೊಂಡೆ. ಆ ಫೋನಿನಲ್ಲೇ ಇರುವ ತಂತ್ರಾಂಶ ಬಳಸಿ ಪಿಡಿಎಫ್ ಕಡತವನ್ನು ತೆರೆದು ಓದಿದೆ. ಅದರಲ್ಲಿ ನೀಡಿದ ಜಾಲತಾಣಗಳ ವಿಳಾಸ ಸರಿಯಿದೆಯೇ ಎಂದು ಪರಿಶೀಲಿಸಲೂ ಮತ್ತೆ ಅದೇ ಫೋನಿನಲ್ಲಿರುವ ಜಾಲತಾಣ ವೀಕ್ಷಕ ತಂತ್ರಾಂಶದ ಬಳಕೆ ಮಾಡಿದೆ. ಇಮೈಲ್ ಮೂಲಕವೇ ಉತ್ತರವನ್ನೂ ನೀಡಿದೆ.

ಗುರುವಾರ, ಅಕ್ಟೋಬರ್ 13, 2011

ಮರ್ಫಿ ಲಾ: ಏಕೆ ಎಲ್ಲವೂ ಉಲ್ಟಾಪಲ್ಟ?

"If anything can go wrong, it will."

ಮರ್ಫಿ ಲಾ ಹೆಸರನ್ನು ಕೇಳದವರು ಬೇಕಾದಷ್ಟು ಜನ ಇರಬಹುದು. ಆದರೆ ಅದರ ಅನುಭವವಾಗದವರು ಇರಲಿಕ್ಕಿಲ್ಲವೇನೋ.

ನಾಲ್ಕಾರು ಕ್ಯೂ‌ಗಳಿದ್ದ ಕಡೆ ನಾವು ನಿಂತ ಕ್ಯೂ ಮಾತ್ರ ಎಷ್ಟು ಹೊತ್ತಿಗೂ ಮುಂದಕ್ಕೆ ಹೋಗುವುದೇ ಇಲ್ಲ, ಕೈಗೇನೋ ಕೊಳೆ ಮೆತ್ತಿಕೊಂಡಾಗಲೇ ಮೂಗಿನ ತುದಿ ಕೆರೆಯಲು ಶುರುವಾಗುತ್ತದೆ... ಹೀಗೆ ಮರ್ಫಿಯ ನಿಯಮ ಬೇಕಾದಷ್ಟು ರೀತಿಯಲ್ಲಿ ನಮ್ಮ ಅನುಭವಕ್ಕೆ ಬಂದಿರುತ್ತದೆ.

ಈ ಮರ್ಫಿ ಲಾ ಬಗ್ಗೆ ಚೆಂದದ ಪುಸ್ತಕವೊಂದು ಇದೀಗ ಕನ್ನಡದಲ್ಲೂ ಬಂದಿದೆ.

ಮರ್ಫಿ ಲಾ: ಏಕೆ ಎಲ್ಲವೂ ಉಲ್ಟಾಪಲ್ಟ?
ಲೇಖಕರು: ಶ್ರೀ ಟಿ. ಆರ್. ಅನಂತರಾಮು
ಪ್ರಕಾಶಕರು: ಅಂಕಿತ ಪುಸ್ತಕ
ಮೊದಲ ಆವೃತ್ತಿ: ೨೦೧೧
ಬೆಲೆ: ರೂ. ೭೦

ಮಂಗಳವಾರ, ಅಕ್ಟೋಬರ್ 11, 2011

'ಸಿರಿ' ಬಂದ ಸಮಯ

ಟಿ. ಜಿ. ಶ್ರೀನಿಧಿ


ಕಳೆದ ವಾರದಲ್ಲಿ ಆಪಲ್ ಸಂಸ್ಥೆ ಸತತವಾಗಿ ಸುದ್ದಿಯಲ್ಲಿತ್ತು. ವಾರದ ಶುರುವಿನಲ್ಲಿ ಇದಕ್ಕೆ ಕಾರಣವಾದದ್ದು ಐಫೋನ್ ೫ರ ನಿರೀಕ್ಷೆ. ಕಳೆದ ಮಂಗಳವಾರದ "ಲೆಟ್ಸ್ ಟಾಕ್ ಐಫೋನ್" ಕಾರ್ಯಕ್ರಮದಲ್ಲಿ ಐಫೋನ್‌ನ ಈ ಹೊಸ ಅವತಾರದ ಪರಿಚಯವಾಗಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು.

ಐಫೋನ್ ೫ ಹೇಗಿರಬಹುದು, ಅದರಲ್ಲಿ ಆಪಲ್ ಏನೇನು ಹೊಸ ವೈಶಿಷ್ಟ್ಯಗಳನ್ನು ಸೇರಿಸಿರಬಹುದು ಎಂಬ ಪ್ರಶ್ನೆಗಳು ಎಲ್ಲ ದಿಕ್ಕುಗಳಿಂದಲೂ ಕೇಳಿಬಂದು ಸಾಕಷ್ಟು ಆಸಕ್ತಿ ಸೃಷ್ಟಿಯಾಗಿತ್ತು. ಸ್ಟೀವ್ ಜಾಬ್ಸ್ ನಿವೃತ್ತಿಯ ನಂತರ ಆಪಲ್‌ನ ನೇತೃತ್ವ ವಹಿಸಿಕೊಂಡಿರುವ ಟಿಮ್ ಕುಕ್ ಈ ಕಾರ್ಯಕ್ರಮವನ್ನು ಹೇಗೆ ನಡೆಸಿಕೊಡಬಹುದು ಎನ್ನುವ ಕುತೂಹಲವೂ ಇತ್ತು. ಕಾರ್ಯಕ್ರಮಕ್ಕೆ ಸ್ಟೀವ್ ಜಾಬ್ಸ್ ಬಂದರೂ ಬರಬಹುದು ಎಂಬ ವದಂತಿ ಬಿಬಿಸಿಯಲ್ಲೂ ಕಾಣಿಸಿಕೊಂಡಿತ್ತು!

ಆದರೆ ಕಾರ್ಯಕ್ರಮ ಶುರುವಾಗಿ ಸ್ವಲ್ಪಹೊತ್ತಿನಲ್ಲೇ ಕುತೂಹಲವೆಲ್ಲ ತಣ್ಣಗಾಗಿಹೋಯಿತು. ಏಕೆಂದರೆ ಅಲ್ಲಿ ಐಫೋನ್ ೫ರ ಸುದ್ದಿಯೇ ಇರಲಿಲ್ಲ!

ಬುಧವಾರ, ಅಕ್ಟೋಬರ್ 5, 2011

ವಿಜ್ಞಾನ ಸಂವಹನ ಸಂಚಿಕೆ ಬಂದಿದೆ!

ಇಜ್ಞಾನ ವಿದ್ಯುನ್ಮಾನ ಪತ್ರಿಕೆಯ 'ವಿಜ್ಞಾನ ಸಂವಹನ ಸಂಚಿಕೆ' ಇದೀಗ ಹೊರಬಂದಿದೆ. ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಇಜ್ಞಾನ ವಿದ್ಯುನ್ಮಾನ ಪತ್ರಿಕೆಯ ಕುರಿತು ನಿಮ್ಮ ಅನಿಸಿಕೆಗಳನ್ನು ತಿಳಿಯುವ ಕುತೂಹಲ ನಮಗಿದೆ. ದಯಮಾಡಿ ಕಮೆಂಟಿಸಿ!

ಈ ಸಂಚಿಕೆಯ ಸಂಪಾದನೆಯಲ್ಲಿ ನೆರವುನೀಡಿ, ಅದರ ವಿನ್ಯಾಸದ ಜವಾಬ್ದಾರಿಯನ್ನೂ ಹೊತ್ತ ಶ್ರೀ ಬೇಳೂರು ಸುದರ್ಶನರಿಗೆ ಕೃತಜ್ಞತೆಗಳು.

ಮಂಗಳವಾರ, ಅಕ್ಟೋಬರ್ 4, 2011

ಟ್ಯಾಬ್ಲೆಟ್ ಲೋಕದಲ್ಲೊಂದು ಹೊಸ ಕಿಚ್ಚು

ಟಿ. ಜಿ. ಶ್ರೀನಿಧಿ

ಸ್ಯಾಮ್‌ಸಂಗ್ ಗೆಲಾಕ್ಸಿ ಟ್ಯಾಬ್, ಬ್ಲ್ಯಾಕ್‌ಬೆರಿ ಪ್ಲೇಬುಕ್, ಮೋಟರೋಲಾ ಕ್ಸೂಮ್, ಡೆಲ್ ಸ್ಟ್ರೀಕ್ - ಒಂದರ ಹಿಂದೊಂದರಂತೆ ಹೊಸಹೊಸ ಟ್ಯಾಬ್ಲೆಟ್ ಗಣಕಗಳು ಮಾರುಕಟ್ಟೆಗೆ ಬರುತ್ತಲೇ ಇದ್ದರೂ ಟ್ಯಾಬ್ಲೆಟ್ ಲೋಕದಲ್ಲಿ ಆಪಲ್ ಐಟ್ಯಾಬ್‌ನ ಆಧಿಪತ್ಯ ಬಹುತೇಕ ಅಬಾಧಿತವಾಗಿಯೇ ಇದೆ. ಈ ವರ್ಷದ ಅಂತ್ಯಕ್ಕೂ ವಿಶ್ವದ ಟ್ಯಾಬ್ಲೆಟ್ ಮಾರುಕಟ್ಟೆಯ ಮುಕ್ಕಾಲು ಭಾಗ ಆಪಲ್ ಹಿಡಿತದಲ್ಲೇ ಮುಂದುವರೆಯಲಿದೆ ಎಂಬ ಸುದ್ದಿ ಇತ್ತೀಚೆಗಷ್ಟೆ ಕೇಳಿಬಂದಿತ್ತಲ್ಲ!

ಆದರೆ ಕಳೆದ ವರ್ಷಾಂತ್ಯಕ್ಕೆ ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿನ ಆಪಲ್ ಪಾಲು ಇದಕ್ಕಿಂತ ಶೇಕಡಾ ಹತ್ತರಷ್ಟು ಜಾಸ್ತಿಯಿತ್ತು ಎನ್ನುವುದು ಗಮನಾರ್ಹ. ಅಷ್ಟೇ ಅಲ್ಲ, ಈಗಷ್ಟೇ ಬೆಳೆಯುತ್ತಿರುವ ಕೆಲ ಮಾರುಕಟ್ಟೆಗಳಲ್ಲಿ (ವಿಶೇಷವಾಗಿ ನಮ್ಮ ದೇಶದಲ್ಲಿ) ಅಗ್ರಸ್ಥಾನ ತಲುಪಲು ಆಪಲ್ ಐಟ್ಯಾಬ್‌ಗೆ ಸಾಧ್ಯವಾಗಿಲ್ಲ ಎಂಬ ಸುದ್ದಿ ಕೂಡ ಇದೆ.

ಇಂತಹ ಸಂದರ್ಭದಲ್ಲಿ ಅಮೆಜಾನ್ ಡಾಟ್ ಕಾಮ್‌ನ ಹೊಸ ಉತ್ಪನ್ನ 'ಕಿಂಡ್ಲ್ ಫೈರ್' ಅನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಅಷ್ಟೇ ಅಲ್ಲ, ಈವರೆಗೂ ಬ್ರ್ಯಾಂಡ್ ನೇಮ್ ಹಾಗೂ ಟ್ಯಾಬ್ಲೆಟ್‌ನಲ್ಲಿರುವ ಸೌಲಭ್ಯಗಳ ಆಧಾರದ ಮೇಲೆ ಸ್ಪರ್ಧೆ ನಡೆಯುತ್ತಿದ್ದ ಟ್ಯಾಬ್ಲೆಟ್ ಪ್ರಪಂಚದಲ್ಲಿ ಕಿಂಡ್ಲ್ ಫೈರ್ ಪ್ರವೇಶದಿಂದಾಗಿ ದರಸಮರವೂ ಶುರುವಾಗಿದೆ!

ಶುಕ್ರವಾರ, ಸೆಪ್ಟೆಂಬರ್ 30, 2011

ಇಜ್ಞಾನ ವಿಶೇಷ: ಜೀವನಶೈಲಿ ಮತ್ತು ಆರೋಗ್ಯ

ಡಾ. ಪಿ.ಎಸ್. ಶಂಕರ್

ಇಜ್ಞಾನದ ಓದುಗರಿಗಾಗಿ ಈ ವಿಶೇಷ ಲೇಖನ ನೀಡಿರುವ ಡಾ| ಪಿ. ಎಸ್. ಶಂಕರ್ ಹೆಸರಾಂತ ವೈದ್ಯರು ಹಾಗೂ ವೈದ್ಯಕೀಯ ಲೇಖಕರು. ಗುಲಬರ್ಗಾದ ಎಂ ಆರ್ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕರಾಗಿ ಸೇವೆಸಲ್ಲಿಸುತ್ತಿರುವ ಶ್ರೀಯುತರು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸದಸ್ಯರು ಹಾಗೂ 'ವಿಜ್ಞಾನ ಲೋಕ' ಪತ್ರಿಕೆಯ ಸಂಪಾದಕರೂ ಹೌದು.

ಆರೋಗ್ಯ ಪ್ರತಿಯೊಬ್ಬ ವ್ಯಕ್ತಿಯ ದೈಹಿಕ, ಮಾನಸಿಕ, ಸಾಮಾಜಿಕ ಬೌದ್ಧಿಕ ಮತ್ತು ಆಧ್ಯಾತ್ಮಿಕ ಸುಸ್ಥಿತಿಯಾಗಿದೆ. ಆರೋಗ್ಯ ನಮ್ಮ ಎಲ್ಲ ಸಾಮಾಜಿಕ ಗುಣಧರ್ಮಗಳಿಗೆ ಮತ್ತು ಜೀವನದ ಸುಖ-ಸಂತೋಷಕ್ಕೆ ಬುನಾದಿಯಾಗಿದೆ. ಆರೋಗ್ಯ ಕೇವಲ ನಿರೋಗಿಯಾಗಿರುವುದಾಗಲೀ ಇಲ್ಲವೆ ದೌರ್ಬಲ್ಯವನ್ನು ಹೊಂದಿರುವುದಿಲ್ಲವಾಗಲೀ ಅಲ್ಲ.

ಆರೋಗ್ಯ - ಅನಾರೋಗ್ಯ, ರೋಗ-ನಿರೋಗ ಒಟ್ಟಿಗೆ ಸಾಗುವ ಸ್ಥಿತಿಗಳು. ಅವುಗಳನ್ನು ಬೇರ್ಪಡಿಸುವ ತಾಣವಾವುದೂ ಇಲ್ಲ. ನಾವು ಸದಾ ಆರೋಗ್ಯ - ಅನಾರೋಗ್ಯದ ನಡುವೆ ಬದುಕು ನಡೆಸುತ್ತಿದ್ದೇವೆ. ಈ ಸ್ಥಿತಿಗಳನ್ನು ತೋರಿಸುವ ರೇಖೆಯಲ್ಲಿ ಅತ್ಯಂತ ಕೆಳಗೆ ಗೋಚರಿಸುವುದು ಸಾವು ಮತ್ತು ಆ ರೇಖೆಯಲ್ಲಿ ಅತ್ಯಂತ ಉನ್ನತ ಸ್ಥಾನದಲ್ಲಿರುವುದು ಆರೋಗ್ಯ. ಹೀಗೆ ಅರೋಗ ಅಲೆಯಂತೆ ಆ ರೇಖೆಯ ಮೇಲೆ ಕೆಳಗೆ ಸಾಗುತ್ತಿದ್ದು ಅವುಗಳ ಬೇರೆ ಬೇರೆ ಮಟ್ಟ ವ್ಯಕ್ತಿಯ ಆರೋಗ್ಯ ಸ್ಥಿತಿಯಲ್ಲಿ ತೋರಿಬರುತ್ತಿರುವ ಬದಲಾವಣೆಗಳನ್ನು ಪ್ರತಿಫಲಿಸುತ್ತದೆ. ವ್ಯಕ್ತಿ ನಿರೋಗವನ್ನು ಆಯ್ದುಕೊಳ್ಳಬೇಕೇ ವಿನಃ ರೋಗವನ್ನಲ್ಲ.

ಹೀಗಾಗಿ ಆರೋಗ್ಯವೆಂಬುದು ಸ್ಥಾಯಿಯಲ್ಲ. ಅದು ನಿರಂತರವಾಗಿ ಬದಲುಗೊಳ್ಳುತ್ತರುವ ಸ್ಥಿತಿ ಇಂದು ತೋರಿಬರುವ ಆರೋಗ್ಯ ನಾಳೆ ಇರಲಿಕ್ಕಿಲ್ಲ. ನಾಡಿದ್ದು ಅದು ಮತ್ತೆ ಬದಲಾವಣೆಯನ್ನು ತೋರಿಸಬಹುದು. ನಾವು ಬದುಕಿರುವಷ್ಟು ಕಾಲ ಆರೋಗ್ಯದಿಂದ ಬದುಕಿರಬೇಕಾಗಿದೆ.

ಮಂಗಳವಾರ, ಸೆಪ್ಟೆಂಬರ್ 27, 2011

ಕಿರಿಯರ ಸಮಾಜಜಾಲಗಳು

ಟಿ. ಜಿ. ಶ್ರೀನಿಧಿ

ತಂತ್ರಜ್ಞಾನ ಎಂದತಕ್ಷಣ ಅದನ್ನು ಯುವಜನತೆಗೆ ಸಂಬಂಧಪಟ್ಟ ವಿಷಯ ಎನ್ನುವಂತೆ ನೋಡುವ ಪರಿಪಾಠವೇ ಜಾಸ್ತಿ. ಜಾಲಲೋಕದ ವಿಷಯ ಬಂದಾಗಲಂತೂ ಈ ಅಭಿಪ್ರಾಯ ಇನ್ನೂ ವ್ಯಾಪಕವಾಗಿದೆ. ಸೋಶಿಯಲ್ ನೆಟ್‌ವರ್ಕ್ ಅಥವಾ ಸಮಾಜ ಜಾಲಗಳನ್ನೇ ತೆಗೆದುಕೊಳ್ಳಿ; ಇದೆಲ್ಲ ನೀವು ಯುವಕರು ಬಳಸಿಕೊಳ್ರಪ್ಪ, ನಮಗೆ ಇದೊಂದೂ ಅರ್ಥವಾಗಲ್ಲ ಎನ್ನುವ ಅನೇಕ ಜನ ಕಾಣಸಿಗುತ್ತಾರೆ.

ಆದರೆ ಈಚಿನ ವರ್ಷಗಳಲ್ಲಿ ಸಮಾಜ ಜಾಲಗಳ ಜನಪ್ರಿಯತೆ ಅದೆಷ್ಟರ ಮಟ್ಟಿಗೆ ಹೆಚ್ಚಿದೆ ಎಂದರೆ ಚಿಕ್ಕ ಮಕ್ಕಳಿಂದ ಹಿಡಿದು ಅವರ ಅಜ್ಜ-ಅಜ್ಜಿಯರವರೆಗೆ ಎಲ್ಲ ವಯಸ್ಸಿನವರೂ ಸಮಾಜ ಜಾಲಗಳಲ್ಲಿ ಕಾಣಸಿಗುತ್ತಿದ್ದಾರೆ.

ಅಜ್ಜ-ಅಜ್ಜಿಯರು ವಿಶ್ವವ್ಯಾಪಿ ಜಾಲದತ್ತ ಮುಖಮಾಡಿದರೆ ಒಳ್ಳೆಯದೇ ಆಯಿತು ಬಿಡಿ; ಆದರೆ ಚಿಕ್ಕ ಮಕ್ಕಳೂ ಟ್ವೀಟರ್, ಫೇಸ್‌ಬುಕ್, ಮೈಸ್ಪೇಸ್ ಇತ್ಯಾದಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರಲ್ಲ!

ಮಂಗಳವಾರ, ಸೆಪ್ಟೆಂಬರ್ 20, 2011

ಇದು ಕ್ಯೂಆರ್ ಕೋಡ್

ಟಿ. ಜಿ. ಶ್ರೀನಿಧಿ

ಈಚೆಗೆ ಅನೇಕ ಜಾಹೀರಾತುಗಳಲ್ಲಿ, ಜಾಲತಾಣಗಳಲ್ಲಿ ಚಿತ್ರವಿಚಿತ್ರ ವಿನ್ಯಾಸದ ಕಪ್ಪನೆಯ ಚೌಕಗಳು ಕಾಣಿಸಿಕೊಳ್ಳುತ್ತಿರುವುದನ್ನು ನೀವು ಗಮನಿಸಿರಬಹುದು; ಇಂತಹ ಚೌಕಗಳ ಪಕ್ಕದಲ್ಲೇ ಪ್ರಕಟವಾಗುವ "ಈ ಕ್ಯೂಆರ್ ಸಂಕೇತವನ್ನು ಸ್ಕ್ಯಾನ್ ಮಾಡಿ" ಎಂಬ ಸಂದೇಶವನ್ನೂ ನೋಡಿರಬಹುದು. ಇದೆಂತಹ ಸಂಕೇತ? ಇದನ್ನು ಸ್ಕ್ಯಾನ್ ಮಾಡುವುದು ಹೇಗೆ? ಸ್ಕ್ಯಾನ್ ಮಾಡಿದಾಗ ಏನಾಗುತ್ತದೆ? - ಇಂತಹ ಅನೇಕ ಪ್ರಶ್ನೆಗಳೂ ನಿಮ್ಮ ಮನಸ್ಸಿಗೆ ಬಂದಿರಬಹುದು.

ಹೌದು, ಈ ಕ್ಯೂಆರ್ ಕೋಡ್ ಅಂದರೇನು? ನೋಡೋಣ ಬನ್ನಿ.

ಮಂಗಳವಾರ, ಸೆಪ್ಟೆಂಬರ್ 13, 2011

ಹಳೆಯ ಗಣಕದ ಹಳತಾಗದ ನೆನಪು

ಟಿ. ಜಿ. ಶ್ರೀನಿಧಿ

'ಫೋರ್ಡ್ ಮಾಡೆಲ್ ಟಿ' ಹೆಸರು ಕೇಳಿದ್ದೀರಾ? ಆಟೊಮೊಬೈಲ್ ಕ್ಷೇತ್ರದ ಚಿತ್ರಣವನ್ನು ಸಂಪೂರ್ಣವಾಗಿ ಬದಲಿಸಿದ ಕಾರು ಅದು. "ಕಾರುಗಳೆಂದರೆ ಐಷಾರಾಮಿ ವಸ್ತುಗಳು, ಅವು ಏನಿದ್ದರೂ ಶ್ರೀಮಂತರಿಗೆ ಮಾತ್ರ ಮೀಸಲು" ಎನ್ನುವ ಪರಿಸ್ಥಿತಿಯಿದ್ದ ಕಾಲದಲ್ಲಿ 'ಫೋರ್ಡ್ ಮಾಡೆಲ್ ಟಿ' ಕಾರು ಜನಸಾಮಾನ್ಯರಿಗೂ ಎಟುಕುವ ಬೆಲೆಯಲ್ಲಿ ಮಾರುಕಟ್ಟೆಗೆ ಬಂತು. ಕಾರುಗಳನ್ನು ಮಧ್ಯಮವರ್ಗದ ಜನತೆಯ ನಿಲುಕಿಗೂ ತಂದದ್ದು ಈ ಕಾರಿನ ಸಾಧನೆ.

ಹೀಗೆ ಯಾವುದೇ ಕ್ಷೇತ್ರ ತೆಗೆದುಕೊಂಡರೂ ಅದರಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದ ಕೆಲ ಘಟನೆಗಳು ಇತಿಹಾಸದಲ್ಲಿ ಕಾಣಸಿಗುತ್ತವೆ.

ವೈಯಕ್ತಿಕ ಗಣಕಗಳನ್ನು (ಪರ್ಸನಲ್ ಕಂಪ್ಯೂಟರ್; ಪಿಸಿ) ಸಾಮಾನ್ಯ ಜನರಿಗೂ ಎಟುಕುವಂತೆ ಮಾಡಿದ ಕಮಡೋರ್ ೬೪ ಗಣಕಗಳ ಸೃಷ್ಟಿಯನ್ನು ಇಂತಹ ಘಟನೆಗಳ ಸಾಲಿಗೆ ಧಾರಾಳವಾಗಿ ಸೇರಿಸಬಹುದು.

ಮಂಗಳವಾರ, ಸೆಪ್ಟೆಂಬರ್ 6, 2011

ಬ್ರಾಡ್‌ಬ್ಯಾಂಡ್ ಭಾಷೆ

ಟಿ. ಜಿ. ಶ್ರೀನಿಧಿ

ಅಂತರಜಾಲ ಸಂಪರ್ಕ ಬಂದ ಹೊಸತು. ವಿಶ್ವವ್ಯಾಪಿ ಜಾಲದಲ್ಲಿ ವಿಹರಿಸಬೇಕೆಂದರೆ ಆಗ ಲಭ್ಯವಿದ್ದದ್ದು ಡಯಲ್ ಅಪ್ ಸಂಪರ್ಕ ಮಾತ್ರ. ದೂರವಾಣಿ ಬಳಸಿ ಕೆಲಸಮಾಡುತ್ತಿದ್ದ ಆ ಬಗೆಯ ಸಂಪರ್ಕ ಬಳಸುವವರಿಗೆ ಅಪಾರ ತಾಳ್ಮೆಯಿರಬೇಕಿದ್ದು ಅನಿವಾರ್ಯವಾಗಿತ್ತು. ಯಾವುದೋ ಜಾಲತಾಣ ನೋಡಬೇಕೆಂದು ಹೊರಟರೆ ಪುಟಗಳು ತೀರಾ ನಿಧಾನವಾಗಿ ತೆರೆದುಕೊಳ್ಳುತ್ತಿದ್ದವು. ಇನ್ನು ಯಾವುದಾದರೂ ಕಡತವನ್ನು ಡೌನ್‌ಲೋಡ್ ಅಥವಾ ಅಪ್‌ಲೋಡ್ ಮಾಡಬೇಕಾದರಂತೂ ಅದರ ಆಮೆವೇಗ ಬೇಸರಬರಿಸಿಬಿಡುತ್ತಿತ್ತು. ಅಂತರಜಾಲ ಸಂಪರ್ಕದಲ್ಲಿರುವಾಗ ಯಾರಿಗಾದರೂ ಕರೆಮಾಡಬೇಕೆಂದರೆ ಅದೂ ಸಾಧ್ಯವಾಗುತ್ತಿರಲಿಲ್ಲ.

ಈ ಅನುಭವವನ್ನು ಥಟ್ ಅಂತ ಬದಲಿಸಿ ವಿಶ್ವವ್ಯಾಪಿ ಜಾಲದ ಜೊತೆಗಿನ ನಮ್ಮ ಅನುಭವದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದದ್ದು ಬ್ರಾಡ್‌ಬ್ಯಾಂಡ್ ಸಂಪರ್ಕ.

ಮಂಗಳವಾರ, ಆಗಸ್ಟ್ 30, 2011

ಫಿಶಿಂಗ್ ಅಲ್ಲ, ಇದು ವಿಶಿಂಗ್!

ಟಿ. ಜಿ. ಶ್ರೀನಿಧಿ

ಫಿಶಿಂಗ್ ಸಮಸ್ಯೆಯ ಅನೇಕ ಮುಖಗಳ ಪರಿಚಯ ನಮ್ಮಲ್ಲಿ ಅನೇಕರಿಗೆ ಇದೆ. ಬ್ಯಾಂಕಿನ ಹೆಸರಿನಲ್ಲಿ ಇಮೇಲ್ ಕಳುಹಿಸಿ ಬ್ಯಾಂಕ್ ಖಾತೆಯದೋ ಕ್ರೆಡಿಟ್ ಕಾರ್ಡಿನದೋ ವಿವರ ಕೇಳುವುದು, ಅರ್ಜಿಯನ್ನೇ ಹಾಕದಿದ್ದಾಗಲೂ ಕೆಲಸಕೊಡುವುದಾಗಿ ಸಂದೇಶ ಕಳಿಸುವುದು, ಲಕ್ಷಾಂತರ ರೂಪಾಯಿ ಬಹುಮಾನ ಬಂದಿದೆ ಎಂದು ಎಸ್ಸೆಮ್ಮೆಸ್ ಮಾಡಿ ಬಹುಮಾನ ತಲುಪಿಸಲು ಹಣ ಕೇಳುವುದು - ಇವೆಲ್ಲವುದರ ಬಗೆಗೆ ನಾವೆಲ್ಲ ಈಚೆಗೆ ಸಾಕಷ್ಟು ಎಚ್ಚರದಿಂದಿರುತ್ತೇವೆ.

ಎಲ್ಲರೂ ಹೀಗೆಯೇ ಎಚ್ಚರದಿಂದಿರಲು ಪ್ರಾರಂಭಿಸಿಬಿಟ್ಟರೆ ಕುತಂತ್ರಿಗಳ ಬೇಳೆ ಬೇಯುವುದಿಲ್ಲವಲ್ಲ! ಹಾಗಾಗಿಯೇ ಅವರು ಜನರಿಗೆ ಟೋಪಿಹಾಕುವ ಬೇರೆಬೇರೆ ತಂತ್ರಗಳನ್ನು ಹೆಣೆಯುತ್ತಿರುತ್ತಾರೆ.

ವಿಶಿಂಗ್ ಎನ್ನುವುದು ಇಂಥದ್ದೇ ಒಂದು ತಂತ್ರದ ಹೆಸರು.

ಮಂಗಳವಾರ, ಆಗಸ್ಟ್ 23, 2011

ಬಗ್ ಬ್ಯಾಂಗ್

ಟಿ. ಜಿ. ಶ್ರೀನಿಧಿ

ಗಣಕಗಳನ್ನು ಬಳಸಿ ಅನೇಕ ಕೆಲಸಗಳನ್ನು ಮಾಡಬಹುದು ಎನ್ನುವ ಹೇಳಿಕೆಯಲ್ಲಿ ಹೊಸತೇನೂ ಇಲ್ಲ. ಅವು ಒಂದು+ಒಂದು ಎಷ್ಟು ಎಂಬ ಲೆಕ್ಕವನ್ನು ಬೇಕಿದ್ದರೂ ಬಿಡಿಸಬಲ್ಲವು, ಮಂಗಳಗ್ರಹದತ್ತ ಹೊರಟ ಗಗನನೌಕೆಯ ಉಡಾವಣೆಯನ್ನು ನಿಯಂತ್ರಿಸಲೂ ಬಲ್ಲವು.

ಆದರೆ ಇಂತಹ ಯಾವುದೇ ಕೆಲಸ ಮಾಡಬೇಕಾದರೂ ಗಣಕಕ್ಕೆ ಸಂಪೂರ್ಣ ಮಾರ್ಗದರ್ಶನ ಬೇಕು. ಲೆಕ್ಕಾಚಾರ ಹೇಗೆ ಮಾಡಬೇಕು, ಅದಕ್ಕಾಗಿ ಯಾವ ದತ್ತಾಂಶ ಬಳಸಬೇಕು ಮುಂತಾದ ಎಲ್ಲ ವಿವರಗಳನ್ನೂ ಲೆಕ್ಕಾಚಾರ ಮಾಡುವಂತೆ ಹೇಳುವ ಮೊದಲೇ ನಾವು ಗಣಕಕ್ಕೆ ಹೇಳಿಕೊಟ್ಟಿರಬೇಕಾಗುತ್ತದೆ.

ಹೀಗೆ ಪ್ರತಿಯೊಂದು ಕೆಲಸವನ್ನೂ ಹೆಜ್ಜೆಹೆಜ್ಜೆಯಾಗಿ ವಿವರಿಸುವುದು ಕ್ರಮವಿಧಿ ಅಥವಾ ಪ್ರೋಗ್ರಾಮುಗಳ ಕೆಲಸ. ಗಣಕ ಯಾವುದೇ ಕೆಲಸ ಮಾಡುವಾಗಲೂ ಅದಕ್ಕೆ ಸಂಬಂಧಪಟ್ಟ ಕ್ರಮವಿಧಿಯಲ್ಲಿರುವ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸುತ್ತದೆ. ಉದಾಹರಣೆಗೆ ಒಂದು + ಒಂದು = ಎರಡು ಎನ್ನುವ ಬದಲು ಒಂದು + ಒಂದು = ಹನ್ನೊಂದು ಎಂದು ಕ್ರಮವಿಧಿಯಲ್ಲಿ ಹೇಳಿದ್ದರೆ ನೀವು ಒಂದು + ಒಂದು ಎಷ್ಟು ಎಂದಾಗ ಉತ್ತರ ಹನ್ನೊಂದು ಎಂದೇ ಬರುತ್ತದೆ.

ಗಣಕ ಮಾಡುವ ಲೆಕ್ಕಾಚಾರದಲ್ಲಿ ಆಗುವ ಎಡವಟ್ಟುಗಳಿಗೆ ಇಂತಹ ತಪ್ಪುಗಳೇ ಕಾರಣ. ಕ್ರಮವಿಧಿಗಳನ್ನು ಸರಿಯಾಗಿ ಪರೀಕ್ಷಿಸದೆ ಬಳಕೆದಾರರಿಗೆ ಕೊಟ್ಟಾಗ ಇಂತಹ ತಪ್ಪುಗಳು ಅವರಿಗೆ ಸಾಕಷ್ಟು ತೊಂದರೆಕೊಡುತ್ತವೆ, ಹೆಚ್ಚೂಕಡಿಮೆ ತಿಗಣೆಕಾಟದ ಹಾಗೆ. ಇದರಿಂದಲೇ ಈ ತಪ್ಪುಗಳನ್ನು 'ಬಗ್' ಎಂದು ಕರೆಯುತ್ತಾರೆ.

ಮಂಗಳವಾರ, ಆಗಸ್ಟ್ 16, 2011

ಲಂಡನ್ ರಂಪದ ಹೈಟೆಕ್ ರೂಪ

ಟಿ ಜಿ ಶ್ರೀನಿಧಿ

ಇಜ್ಞಾನ ವಿದ್ಯುನ್ಮಾನ ಪತ್ರಿಕೆಯ ಮಾಹಿತಿ ತಂತ್ರಜ್ಞಾನ ಸಂಚಿಕೆ ಇದೀಗ ಲಭ್ಯವಿದೆ. ಓದಲು ಇಲ್ಲಿ ಕ್ಲಿಕ್ ಮಾಡಿ!
ಕಳೆದ ವಾರದ ಮಾಧ್ಯಮಗಳಲ್ಲೆಲ್ಲ ಲಂಡನ್ ಗಲಭೆಗಳದೇ ಸುದ್ದಿ. ಊರತುಂಬ ಸುತ್ತುತ್ತಿದ್ದ ಗಲಭೆಕೋರ ಗುಂಪುಗಳ ಕಣ್ಣಿಗೆ ಬಿದ್ದ ಅಂಗಡಿಗಳೆಲ್ಲ ಧ್ವಂಸವಾದವು, ಪೋಲೀಸರಿಗೇ ಪೆಟ್ಟುಬಿದ್ದವು, ಕಟ್ಟಡಗಳು ಬೆಂಕಿಗೆ ಆಹುತಿಯಾದವು. ದುಬಾರಿ ವಸ್ತುಗಳನ್ನು ಮಾರುತ್ತಿದ್ದ ಅಂಗಡಿಗಳಿಗೆ ನುಗ್ಗಿದವರು ಕೈಗೆ ಸಿಕ್ಕಿದ್ದನ್ನೆಲ್ಲ ಹೊತ್ತೊಯ್ದರು; ವಿಶ್ವಸಮರಗಳಿಗೂ ಬಗ್ಗದೆ ನಿಂತಿದ್ದ ಶತಮಾನದಷ್ಟು ಹಳೆಯ ಅಂಗಡಿಯನ್ನೂ ಬಿಡದೆ ಸುಟ್ಟುಹಾಕಿದರು.

ಅಪರಾಧಿಯೆಂದು ಶಂಕಿಸಲಾದ ವ್ಯಕ್ತಿಯೊಬ್ಬ ಪೋಲೀಸರ ಗುಂಡಿಗೆ ಬಲಿಯಾದಾಗ ಶುರುವಾದದ್ದು ಈ ಗಲಭೆ. ಆದರೆ ಗಲಭೆಯ ಸ್ವರೂಪ ಅದೆಷ್ಟು ಬೇಗ ಬದಲಾಯಿತೆಂದರೆ ಕಂಡ ಅಂಗಡಿಗಳಿಗೆಲ್ಲ ನುಗ್ಗಿ ಕೈಗೆ ಸಿಕ್ಕಿದ್ದನ್ನೆಲ್ಲ ಲೂಟಿಮಾಡುವುದಷ್ಟೆ ಗಲಭೆಕೋರರ ಏಕಮಾತ್ರ ಉದ್ದೇಶವಾಗಿಹೋಯಿತು. ಅವರ್‍ಯಾರೋ ಲೂಟಿಮಾಡುತ್ತಿದ್ದಾರೆ, ನಾವೇನು ಕಮ್ಮಿ ಎಂದು ಇನ್ನಷ್ಟು ಗುಂಪುಗಳು ಲೂಟಿಗಿಳಿದವು, ಪ್ರತಿಭಟನೆಯ ರೂಪದಲ್ಲಿ ಶುರುವಾದ ಗಲಾಟೆಯ ಸುದ್ದಿ ಕೇಳಿದವರು ಊರಿನ ತುಂಬ ದರೋಡೆ ಶುರುಮಾಡಿಬಿಟ್ಟರು.

ಈ ಗಲಭೆಯ ಸ್ವರೂಪ, ಹಾಗೂ ಅದು ಊರತುಂಬ ಹರಡಿದ ವೇಗ ಅಚ್ಚರಿಮೂಡಿಸುವಂತಿತ್ತು. ಇತರ ಸಂದರ್ಭಗಳಲ್ಲಿ ಕಂಡುಬಂದಿದ್ದ ಹಾಗೆ ಯಾವುದೋ ಒಂದು ಗುಂಪು ಮಾತ್ರ ಗಲಭೆಯಲ್ಲಿ ತೊಡಗಿರಲಿಲ್ಲ; ಅಥವಾ ಒಂದೇ ಗುಂಪು ಪ್ರದೇಶದಿಂದ ಪ್ರದೇಶಕ್ಕೆ ಓಡಾಡುತ್ತಲೂ ಇರಲಿಲ್ಲ. ಇದ್ದಕ್ಕಿದ್ದ ಹಾಗೆ ಎಲ್ಲೆಂದರಲ್ಲಿ ಗುಂಪುಗಳು ಸೇರುತ್ತಿದ್ದವು, ಅಂಗಡಿಮುಂಗಟ್ಟುಗಳನ್ನು ಲೂಟಿಮಾಡಿ ಕೈಗೆ ಸಿಕ್ಕಷ್ಟನ್ನು ದೋಚಿಕೊಂಡು ನಾಪತ್ತೆಯಾಗಿಬಿಡುತ್ತಿದ್ದವು, ಒಂದು ಕಡೆ ಗಲಾಟೆಯಾದ ಸುದ್ದಿ ಕೇಳಿ ಪೋಲೀಸರು ಅಲ್ಲಿಗೆ ಧಾವಿಸುವಷ್ಟರಲ್ಲಿ ಅಲ್ಲಿಂದ ಎಷ್ಟೋ ದೂರದ ಇನ್ನೊಂದು ಪ್ರದೇಶದಲ್ಲಿ ಬೇರೆಯದೇ ಗುಂಪು ಗಲಭೆ ಪ್ರಾರಂಭಿಸುತ್ತಿತ್ತು.

ಪೋಲೀಸರ ಚಲನವಲನ ಗಮನಿಸಿ ಬಹಳ ಕಡಿಮೆ ಅವಧಿಯಲ್ಲಿ ಯೋಜನೆ ರೂಪಿಸುತ್ತಿದ್ದ ಈ ಗುಂಪುಗಳು ಅತ್ಯಂತ ವ್ಯವಸ್ಥಿತವಾಗಿ ಸೇರುತ್ತಿದ್ದ ಬಗೆ ಬಹಳ ಕುತೂಹಲಕರವಾಗಿತ್ತು, ಪೋಲೀಸರು ಎಷ್ಟೇ ಪರದಾಡಿದರೂ ಅವರಿಗೆ ಗಲಭೆಕೋರರ ಪ್ಲಾನು ಗೊತ್ತಾಗುತ್ತಲೇ ಇರಲಿಲ್ಲ.

ಏಕೆಂದರೆ, ಅನೇಕ ತಜ್ಞರು ಹೇಳುವಂತೆ, ಗಲಭೆಕೋರರು ತಮ್ಮ ನಡುವೆ ಸಂವಹನಕ್ಕಾಗಿ ಬ್ಲ್ಯಾಕ್‌ಬೆರಿ ಮೆಸೆಂಜರ್ ಸೇವೆಯನ್ನು ಬಳಸುತ್ತಿದ್ದರು!

ಮಂಗಳವಾರ, ಆಗಸ್ಟ್ 9, 2011

ವೆಬ್ ವಿಹಾರದ ಎರಡು ದಶಕ

ವಿಶ್ವವ್ಯಾಪಿ ಜಾಲ ಸಾರ್ವಜನಿಕ ಬಳಕೆಗಾಗಿ ಲಭ್ಯವಾಗಿ ಇದೀಗ ಇಪ್ಪತ್ತು ವರ್ಷ ಕಳೆದಿದೆ. ಈ ಸಂದರ್ಭದಲ್ಲಿ ವೆಬ್ ಬಗೆಗೆ ಹೀಗೊಂದು ಯೋಚನಾಲಹರಿ...

ಟಿ. ಜಿ. ಶ್ರೀನಿಧಿ

ಆಗಸ್ಟ್ ೬, ೧೯೯೧ - ವಿಶ್ವವ್ಯಾಪಿ ಜಾಲದ (ವರ್ಲ್ಡ್‌ವೈಡ್ ವೆಬ್) ಸೃಷ್ಟಿಕರ್ತ ಟಿಮ್ ಬರ್ನರ್ಸ್-ಲೀ ವಿಚಾರಜಾಲವೊಂದರಲ್ಲಿ (ನ್ಯೂಸ್‌ಗ್ರೂಪ್) ತಮ್ಮ ಸೃಷ್ಟಿಯನ್ನು ಹೊರಜಗತ್ತಿಗೆ ಪರಿಚಯಿಸಿದ ದಿನ. ವಿಶ್ವವ್ಯಾಪಿ ಜಾಲ ಸಾರ್ವಜನಿಕ ಬಳಕೆಗೆ ಸಿಗುವಂತಾಗಿ ನಿಜ ಅರ್ಥದಲ್ಲಿ ವಿಶ್ವವ್ಯಾಪಿಯಾದದ್ದೂ ಅದೇ ದಿನದಿಂದ. ಈ ಮಹತ್ವದ ಘಟನೆ ಸಂಭವಿಸಿ ಕಳೆದ ಶನಿವಾರಕ್ಕೆ ಇಪ್ಪತ್ತು ವರ್ಷ.

ಈ ಎರಡು ದಶಕಗಳಲ್ಲಿ ವಿಶ್ವವ್ಯಾಪಿ ಜಾಲ ನಮ್ಮ ಬದುಕನ್ನು ಅಪಾರವಾಗಿ ಬದಲಿಸಿಬಿಟ್ಟಿದೆ; ನಮ್ಮಲ್ಲಿ ಅನೇಕರ ಅದೆಷ್ಟೋ ಕೆಲಸಗಳು ಸಂಪೂರ್ಣವಾಗಿ ವಿಶ್ವವ್ಯಾಪಿ ಜಾಲದ ಮೇಲೆಯೇ ಅವಲಂಬಿತವಾಗಿ ಈಗಾಗಲೇ ಬಹಳ ಸಮಯ ಕಳೆದಿದೆ. ಬೆಡ್‌ರೂಮಲ್ಲಿ ಹೆಗ್ಗಣ ಬಂದರೆ ನಾವು ವಿಶ್ವವ್ಯಾಪಿ ಜಾಲದಲ್ಲಿ ದೊಣ್ಣೆ ಹುಡುಕುವುದಿಲ್ಲ, ನಿಜ. ಆದರೆ ಮಕ್ಕಳ ಹೋಮ್‌ವರ್ಕ್‌ನಿಂದ ದೊಡ್ಡವರ ಆಫೀಸ್‌ವರ್ಕ್‌ವರೆಗೆ ಅದೆಷ್ಟೋ ಸಂದರ್ಭಗಳಲ್ಲಿ ವಿಶ್ವವ್ಯಾಪಿ ಜಾಲದ ಮೊರೆಹೋಗುವುದು ಸಾಮಾನ್ಯ ಅಭ್ಯಾಸ. ಹಲವು ಸಂದರ್ಭಗಳಲ್ಲಿ ನಮ್ಮ ಜ್ಞಾಪಕಶಕ್ತಿಗಿಂತ ಹೆಚ್ಚಾಗಿ ಜಾಲತಾಣಗಳನ್ನು (ವಿಶೇಷವಾಗಿ ಗೂಗಲ್) ಅವಲಂಬಿಸುವುದೂ ಇದೆ.

ಶುಕ್ರವಾರ, ಆಗಸ್ಟ್ 5, 2011

ಇಗೋ ಇಲ್ಲಿದೆ ಮಾಹಿತಿ ತಂತ್ರಜ್ಞಾನ ಸಂಚಿಕೆ...

ಇಜ್ಞಾನ ವಿದ್ಯುನ್ಮಾನ ಪತ್ರಿಕೆಯ ಮೊದಲ ಸಂಚಿಕೆಗೆ ಒಳ್ಳೆಯ ಪ್ರತಿಕ್ರಿಯೆ ದೊರಕಿರುವುದು ತುಂಬಾ ಖುಷಿಕೊಟ್ಟಿದೆ. ಈ ಪ್ರಯತ್ನವನ್ನು ತಮ್ಮ ಓದುಗರಿಗೆ ಪರಿಚಯಿಸಿದ ಪ್ರಜಾವಾಣಿ ಹಾಗೂ ವಿಜಯ ಕರ್ನಾಟಕ ಪತ್ರಿಕೆಗಳಿಗೆ, ಪ್ರಚಾರ ದೊರಕಿಸಿಕೊಟ್ಟ ವಿಶ್ವವ್ಯಾಪಿಜಾಲದ ಮಿತ್ರರಿಗೆ, ಪ್ರತಿಕ್ರಿಯೆ ನೀಡಿದ ಸಹೃದಯರಿಗೆ ಹಾಗೂ ಇಜ್ಞಾನ ಡಾಟ್ ಕಾಮ್‌ನತ್ತ ಬಂದುಹೋದ ಎಲ್ಲ ಓದುಗರಿಗೂ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು.

ಇದೇ ಖುಷಿಯಲ್ಲಿ ಇಜ್ಞಾನ ಮಾಹಿತಿ ತಂತ್ರಜ್ಞಾನ ಸಂಚಿಕೆಯನ್ನು ನಿಮ್ಮ ಮುಂದಿಡುತ್ತಿದ್ದೇವೆ.

ನಿಮ್ಮ ಅನಿಸಿಕೆ ಅಭಿಪ್ರಾಯಗಳಿಗೆ ಹಾರ್ದಿಕ ಸ್ವಾಗತ.

ಮಂಗಳವಾರ, ಆಗಸ್ಟ್ 2, 2011

Oh! Yes, ಇದು ಓಎಸ್!

ಟಿ. ಜಿ. ಶ್ರೀನಿಧಿ

ವಿಂಡೋಸ್ ಎನ್ನುವ ಹೆಸರು ಕೇಳಿದ್ದೀರಾ?

ಓ, ಕೇಳಿಲ್ಲದೆ ಏನು! ಎಷ್ಟೇ ಆದರೂ ಗಣಕದ ಕೆಲಸ ಪ್ರಾರಂಭವಾಗುತ್ತಿದ್ದಂತೆ ಕಾಣುವ ಹೆಸರಲ್ಲವೇ ಅದು!

ಅದೇನೋ ಸರಿ, ಈ ವಿಂಡೋಸ್ ಅಂದರೆ ಏನು ಹೇಳ್ತೀರಾ?

ವಿಂಡೋಸ್ ಒಂದು ತಂತ್ರಾಂಶ.

ಅದೂ ಸರಿ, ಎಂತಹ ತಂತ್ರಾಂಶ ಅಂತ ಸ್ವಲ್ಪ ಹೇಳ್ತೀರಾ?

ನನಗೇನು ಅಷ್ಟೂ ಗೊತ್ತಿಲ್ವೇನ್ರಿ, ಅದೊಂದು ಆಪರೇಟಿಂಗ್ ಸಿಸ್ಟಂ!

ಆಪರೇಟಿಂಗ್ ಸಿಸ್ಟಂ
ಗಣಕದ ಪ್ರಾಥಮಿಕ ಚಟುವಟಿಕೆಗಳನ್ನು ನಿಯಂತ್ರಿಸುವ ಜೊತೆಗೆ ಅದರ ವಿವಿಧ ಸೌಲಭ್ಯಗಳನ್ನು ಬಳಸಿಕೊಳ್ಳಲು ನಮಗೆ ಸಹಾಯಮಾಡುವ ತಂತ್ರಾಂಶವೇ ಆಪರೇಟಿಂಗ್ ಸಿಸ್ಟಂ ಅಥವಾ ಕಾರ್ಯಾಚರಣ ವ್ಯವಸ್ಥೆ. ನಮಗೆಲ್ಲ ಚಿರಪರಿಚಿತವಾದ ಮೈಕ್ರೋಸಾಫ್ಟ್ ವಿಂಡೋಸ್, ಲಿನಕ್ಸ್ ಮುಂತಾದವು ಕಾರ್ಯಾಚರಣ ವ್ಯವಸ್ಥೆಗೆ ಕೆಲ ಉದಾಹರಣೆಗಳು.

ಮಂಗಳವಾರ, ಜುಲೈ 26, 2011

ಗುಂಪುಗುತ್ತಿಗೆಯ ಗುಟ್ಟು ಗೊತ್ತೆ?

ಟಿ. ಜಿ. ಶ್ರೀನಿಧಿ

ಗೂಗಲ್‌ನ ಅನುವಾದ ಸೇವೆ ಇತ್ತೀಚೆಗಷ್ಟೆ ಕನ್ನಡದಲ್ಲೂ ಲಭ್ಯವಾದದ್ದು, ಹಾಗೂ ವಿಚಿತ್ರ ಅನುವಾದಗಳಿಂದಾಗಿ ಸಾಕಷ್ಟು ಟೀಕೆಗೊಳಗಾದದ್ದು ನಿಮಗೆಲ್ಲ ಗೊತ್ತೇ ಇದೆ. ಎಲ್ಲೆಡೆಯಿಂದಲೂ ಬಂದ ಟೀಕೆಗಳಿಗೆ ಕಾರಣವೂ ಇಲ್ಲದಿರಲಿಲ್ಲ; ಏಕೆಂದರೆ ಬಹಳಷ್ಟು ಸನ್ನಿವೇಶಗಳಲ್ಲಿ ತೀರಾ ಸರಳ ಪದಪುಂಜಗಳಿಗೂ ಸರಿಯಾದ ಅನುವಾದ ಸಿಗುತ್ತಿರಲಿಲ್ಲ. ಇಷ್ಟೆಲ್ಲ ಟೀಕೆಗಳನ್ನು ಮುಂಚಿತವಾಗಿಯೇ ನಿರೀಕ್ಷಿಸಿದ್ದ ಗೂಗಲ್ ಸಂಸ್ಥೆ "ಕನ್ನಡ ಅನುವಾದ ಸೇವೆ ಇನ್ನೂ ಪ್ರಾಯೋಗಿಕ ಹಂತದಲ್ಲಿದೆ; ಹೀಗಾಗಿ ಯಾವುದೇ ಅನುವಾದ ಸರಿಯಾಗಿಲ್ಲ ಎನ್ನಿಸಿದರೆ ಅದನ್ನು ನೀವೇ ಉತ್ತಮಪಡಿಸುವ ಸೌಲಭ್ಯವಿದೆ" ಎಂದು ಹೇಳಿಬಿಟ್ಟಿತ್ತು.

ಉದಾಹರಣೆಗೆ 'Visit our website to read this article' ಎಂಬ ಸಾಲಿನ ಅನುವಾದ 'ಈ ಲೇಖನ ಓದಲು ನಮ್ಮ ವೆಬ್‌ಸೈಟ್ ಭೇಟಿ' ಎಂದು ಕಾಣಿಸಿಕೊಂಡರೆ ಅದನ್ನು ನಾವೇ 'ಈ ಲೇಖನ ಓದಲು ನಮ್ಮ ಜಾಲತಾಣಕ್ಕೆ ಭೇಟಿ ನೀಡಿ' ಎಂದು ತಿದ್ದಬಹುದು. ಬಳಕೆದಾರರೇ ಇಂತಹ ತಪ್ಪುಗಳನ್ನೆಲ್ಲ ಸರಿಪಡಿಸುತ್ತ ಹೋದಂತೆ ಅನುವಾದದ ಗುಣಮಟ್ಟವೂ ಉತ್ತಮಗೊಳ್ಳುತ್ತದೆ ಎನ್ನುವುದು ಈ ಸೌಲಭ್ಯ ಒದಗಿಸಿರುವುದರ ಹಿಂದಿನ ಉದ್ದೇಶ.

ಅಷ್ಟೇ ಅಲ್ಲ, ಹೀಗೆ ಬಳಕೆದಾರರೆಲ್ಲರ ನೆರವನ್ನು ಏಕಕಾಲದಲ್ಲೇ ಪಡೆದುಕೊಳ್ಳುವುದರಿಂದ ಕೆಲಸವೂ ಬೇಗ ಆಗುತ್ತದೆ. ಅವರಲ್ಲಿ ಯಾರಿಗೂ ಸಂಭಾವನೆ ಪಾವತಿಸುವ ಪ್ರಶ್ನೆಯೇ ಇಲ್ಲದ್ದರಿಂದ ಗೂಗಲ್‌ಗೆ ಇದರಿಂದ ಯಾವ ಖರ್ಚೂ ಆಗುವುದಿಲ್ಲ!

ಮಂಗಳವಾರ, ಜುಲೈ 19, 2011

ಮರೆತುಹೋದ ಮಿತ್ರ ಫ್ಲಾಪಿ

ಟಿ. ಜಿ. ಶ್ರೀನಿಧಿ

ಕೆಲವು ವರ್ಷಗಳ ಹಿಂದಿನ ಮಾತು. ಆಗಿನ್ನೂ ಥಂಬ್‌ಡ್ರೈವ್ ಪೆನ್‌ಡ್ರೈವ್ ಇತ್ಯಾದಿಗಳಲ್ಲ ಅಷ್ಟಾಗಿ ಬಳಕೆಗೆ ಬಂದಿರಲಿಲ್ಲ. ಸಿ.ಡಿ.ಗಳು ಇದ್ದವಾದರೂ ಅವುಗಳ ಬೆಲೆ ಈಗಿನಷ್ಟು ಕಡಿಮೆಯಿರಲಿಲ್ಲ. ಅಷ್ಟೇ ಅಲ್ಲ, ಅವುಗಳಿಗೆ ಮಾಹಿತಿ ತುಂಬಲು ಬೇಕಾದ ಸಿ.ಡಿ. ರೈಟರ್‌ಗಳು ಎಲ್ಲ ಗಣಕಗಳಲ್ಲೂ ಇರುತ್ತಿರಲಿಲ್ಲ. ಯಾವುದೋ ಸೈಬರ್ ಕೆಫೆಗೆ ಹೋಗಿ ನಮಗೆ ಬೇಕಾದ ಮಾಹಿತಿಯನ್ನು ಒಂದು ಸಿ.ಡಿ.ಗೆ ತುಂಬಿಸಿಕೊಂಡು ಬರಲು ಸಿ.ಡಿ. ಬೆಲೆಯ ಮೂರು ಪಟ್ಟು ಹಣ ಕೊಡಬೇಕಾದ ಪರಿಸ್ಥಿತಿಯಿತ್ತು.

ಆಗ ಸಹಾಯಕ್ಕೇ ಬರುತ್ತಿದ್ದದ್ದೇ ಫ್ಲಾಪಿ ಡಿಸ್ಕ್ ("ನಮ್ಯ ಮುದ್ರಿಕೆ"). ಸೈಬರ್ ಕೆಫೆಯಲ್ಲಿ ಅಂತರಜಾಲದಿಂದ ಪಡೆದ ಮಾಹಿತಿಯನ್ನು ಮನೆಗೆ ತರಲು, ಮನೆಯಲ್ಲೋ ಕಾಲೇಜಿನಲ್ಲೋ ಸಿದ್ಧಪಡಿಸಿದ ಕಡತವನ್ನು ಬೇರೊಬ್ಬರೊಡನೆ ಹಂಚಿಕೊಳ್ಳಲು - ಹೀಗೆ ಎಲ್ಲ ಕೆಲಸಕ್ಕೂ ಫ್ಲಾಪಿಯೇ ಬೇಕಾಗಿತ್ತು. ಮನೆಯಲ್ಲಿ ಡಜನ್‌ಗಟ್ಟಲೆ ಫ್ಲಾಪಿಗಳನ್ನು ತಂದಿಟ್ಟುಕೊಳ್ಳುವ ಅಭ್ಯಾಸ ಬಹುತೇಕ ಗಣಕ ಬಳಕೆದಾರರಲ್ಲಿ ಇತ್ತು.

ಫ್ಲಾಪಿ ಡಿಸ್ಕ್‌ಗಳು ಮಾರುಕಟ್ಟೆಗೆ ಪರಿಚಯವಾಗಿ ಇದೀಗ ನಲವತ್ತು ವರ್ಷಗಳು ಕಳೆದಿವೆ. ಆದರೆ ನಲವತ್ತರ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಾದ ಫ್ಲಾಪಿ ಡಿಸ್ಕ್‌ಗಳೇ ಕಾಣುತ್ತಿಲ್ಲ. ಹೌದಲ್ಲ, ಎಲ್ಲಿ ಹೋದವು ಮನೆಯಲ್ಲಿದ್ದ ಡಜನ್‌ಗಟ್ಟಲೆ ಫ್ಲಾಪಿಗಳು?

ಬುಧವಾರ, ಜುಲೈ 13, 2011

ಬೆದರು ತಂತ್ರಾಂಶಗಳಿಗೆ ಹೆದರಬೇಡಿ!

ಟಿ ಜಿ ಶ್ರೀನಿಧಿ

ಈ ಸನ್ನಿವೇಶವನ್ನು ಗಮನಿಸಿ: ವಿಶ್ವವ್ಯಾಪಿ ಜಾಲದಲ್ಲಿ ವಿಹರಿಸುವಾಗ ನಿಮ್ಮ ಗಣಕದ ಪರದೆಯ ಮೇಲೆ ಇದ್ದಕ್ಕಿದ್ದಂತೆ ಒಂದು ಜಾಹೀರಾತು ಕಾಣಿಸಿಕೊಳ್ಳುತ್ತದೆ. ನಿಮ್ಮ ಗಣಕಕ್ಕೆ ಅದ್ಯಾವುದೋ ವೈರಸ್ ತಗುಲಿಕೊಂಡಿದೆ ಎನ್ನುವುದು ಈ ಜಾಹೀರಾತಿನ ಸಾರಾಂಶ. ಆ ವೈರಸ್ ಕಾಟದಿಂದ ಮುಕ್ತರಾಗಲು ಏನುಮಾಡಬೇಕು ಎನ್ನುವುದೂ ಅದೇ ಜಾಹೀರಾತಿನಲ್ಲಿರುತ್ತದೆ: "ಇಲ್ಲಿ ಕ್ಲಿಕ್ ಮಾಡಿ, ನಮ್ಮ ಆಂಟಿವೈರಸ್ ತಂತ್ರಾಂಶ ಕೊಂಡು ಇನ್‌ಸ್ಟಾಲ್ ಮಾಡಿಕೊಳ್ಳಿ, ವೈರಸ್ ಕಾಟದಿಂದ ಮುಕ್ತರಾಗಿ!"

ಆದರೆ ನಿಜ ವಿಷಯವೇ ಬೇರೆ. ನಿಮ್ಮ ಗಣಕಕ್ಕೆ ಪ್ರಾಯಶಃ ವೈರಸ್ ಬಂದಿರುವುದೂ ಇಲ್ಲ, ಅವರು ಕೊಡುವ ತಂತ್ರಾಂಶ ಅದನ್ನು ಹೋಗಿಸುವುದೂ ಇಲ್ಲ. ವೈರಸ್ ಹೋಗಿಸುವುದಿರಲಿ, ಅದು ಇನ್ನೇನಾದರೂ ಕೆಟ್ಟ ಕೆಲಸ ಮಾಡದಿದ್ದರೆ ಅದೇ ನಿಮ್ಮ ಅದೃಷ್ಟ.

ಮಂಗಳವಾರ, ಜುಲೈ 12, 2011

ಹಕ್ಕಿಗಳಿಗೆ ಕೋಪ ಬಂದಾಗ...

ಟಿ ಜಿ ಶ್ರೀನಿಧಿ


ಹಂದಿಗಳ ಗುಂಪು ಹಕ್ಕಿಗಳ ಮೊಟ್ಟೆ ಕದ್ದೊಯ್ದರೆ ಏನಾಗುತ್ತದೆ?

ಹಕ್ಕಿಗಳಿಗೆ ಕೋಪ ಬರುತ್ತದೆ. ಸಿಂಪಲ್!

ಹಕ್ಕಿಗಳಿಗೆ ಕೋಪಬಂದರೆ ಏನಾಗುತ್ತದೆ?

ಪ್ರಪಂಚದಾದ್ಯಂತ ಕೋಟ್ಯಂತರ ಜನಕ್ಕೆ ಹೊಸತೊಂದು ಹವ್ಯಾಸ ಸಿಗುತ್ತದೆ; ಅವರಲ್ಲಿ ಅನೇಕರಿಗೆ ಈ ಹೊಸ ಹವ್ಯಾಸ ಚಟವೇ ಆಗಿಬಿಡುತ್ತದೆ; ಇದಕ್ಕೆಲ್ಲ ಕಾರಣವಾದ ಫಿನ್ಲೆಂಡಿನ ಸಂಸ್ಥೆಯೊಂದು ವಿಶ್ವವಿಖ್ಯಾತವಾಗುತ್ತದೆ!

ಆ ಸಂಸ್ಥೆಯ ಹೆಸರು ರೋವಿಯೋ ಮೊಬೈಲ್, ಹಾಗೂ ಆ ಸಂಸ್ಥೆ ಹುಟ್ಟುಹಾಕಿರುವ ವಿಶ್ವವಿಖ್ಯಾತ ಹವ್ಯಾಸದ ಹೆಸರು - ಆಂಗ್ರಿ ಬರ್ಡ್ಸ್.

ಮಂಗಳವಾರ, ಜುಲೈ 5, 2011

ಸಮಾಜ ಜಾಲಗಳ ಲೋಕದಲ್ಲಿ

ಟಿ ಜಿ ಶ್ರೀನಿಧಿ

ಅಂತರಜಾಲ ಲೋಕದ ಸುದ್ದಿಮನೆಗೆ ಕಳೆದ ಕೆಲದಿನಗಳಿಂದ ಬಿಡುವೇ ಇಲ್ಲ; ಒಂದರ ಮೇಲೊಂದರಂತೆ ಹೊಸಹೊಸ ಸುದ್ದಿಗಳು ಬರುತ್ತಲೇ ಇವೆ.

ಇಂತಹ ಸುದ್ದಿಗಳಲ್ಲಿ ಅತ್ಯಂತ ಹೆಚ್ಚು ಸದ್ದು ಮಾಡಿದ್ದು ಪ್ರಾಯಶಃ ಗೂಗಲ್ ಪ್ಲಸ್ ಅನಾವರಣದ ವಿಷಯ. ಅದೇ ಸಮಯದಲ್ಲಿ ಕಾಣಿಸಿಕೊಂಡ, ಆದರೆ ಅಷ್ಟಾಗಿ ಪ್ರಚಾರಪಡೆಯದ, ಇನ್ನೊಂದು ಸುದ್ದಿ ಮೈಸ್ಪೇಸ್ ಡಾಟ್ ಕಾಮ್ ಮಾರಾಟದ ಕುರಿತದ್ದು. ಈವರೆಗೆ ಅತ್ಯಂತ ಕ್ಷಿಪ್ರಗತಿಯ ಬೆಳೆವಣಿಗೆ ಕಂಡಿರುವ ಫೇಸ್‌ಬುಕ್ ಜನಪ್ರಿಯತೆ ನಿಧಾನಕ್ಕೆ ಕಡಿಮೆಯಾಗುತ್ತಿರಬಹುದು ಎಂದು ಸಂದೇಹ ವ್ಯಕ್ತಪಡಿಸಿದ ಅಧ್ಯಯನವೊಂದರ ಸುದ್ದಿಯೂ ಅಲ್ಲಲ್ಲಿ ಕಾಣಿಸಿಕೊಂಡಿದೆ.

ಇವೆಲ್ಲವೂ ಸೋಷಿಯಲ್ ನೆಟ್‌ವರ್ಕ್ ಅಥವಾ ಸಮಾಜ ಜಾಲಗಳಿಗೆ ಸಂಬಂಧಪಟ್ಟ ಸುದ್ದಿಗಳು ಎನ್ನುವುದು ವಿಶೇಷ.

ಶನಿವಾರ, ಜುಲೈ 2, 2011

ಇಜ್ಞಾನ ಡಾಟ್ ಕಾಮ್‌ಗೆ ಇಪ್ಪತ್ತೈದು ಸಾವಿರದ ಖುಷಿ


ಇಜ್ಞಾನ ಡಾಟ್‌ ಕಾಮ್‌ನಲ್ಲಿ ದಾಖಲಾಗಿರುವ ಪೇಜ್‌ವ್ಯೂ‌ಗಳ ಸಂಖ್ಯೆ ಇದೀಗ ೨೫,೦೦೦ ದಾಟಿದೆ. ಇಲ್ಲಿಗೆ ಭೇಟಿನೀಡಿದವರ ಸಂಖ್ಯೆ ಅದಾಗಲೇ ೧೦,೦೦೦ ದಾಟಿ ಮುಂದೆ ಹೋಗಿದೆ. ನನ್ನ ಈ ಪ್ರಯತ್ನದಲ್ಲಿ ಬೆಂಬಲಕ್ಕೆ ನಿಂತಿರುವ, ಹಾಗೂ ಮೆಚ್ಚಿ ಪ್ರೋತ್ಸಾಹಿಸುತ್ತಿರುವ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.

ವಿಶ್ವಾಸದಿಂದ,
ಟಿ ಜಿ ಶ್ರೀನಿಧಿ

ಮಂಗಳವಾರ, ಜೂನ್ 28, 2011

ಜಾಲತಾಣದ ಬಾಲದ ಕುರಿತು

ಟಿ ಜಿ ಶ್ರೀನಿಧಿ

ವಿಶ್ವವ್ಯಾಪಿ ಜಾಲದಲ್ಲಿ ಯಾವುದೋ ಮಾಹಿತಿ ಹುಡುಕಬೇಕೇ, ಗೂಗಲ್ ಡಾಟ್ ಕಾಮ್‌ಗೆ ಹೋಗಿ; ಇವತ್ತಿನ ಉದಯವಾಣಿ ಪತ್ರಿಕೆ ನೋಡಬೇಕೇ, ಉದಯವಾಣಿ ಡಾಟ್ ಕಾಮ್ ನೋಡಿ; 'ವಿಜ್ಞಾಪನೆ' ಅಂಕಣದ ಹಳೆಯ ಬರೆಹಗಳನ್ನು ಓದಬೇಕೇ, ಇಜ್ಞಾನ ಡಾಟ್ ಕಾಮ್ ನೋಡಿ...

ವಿಶ್ವವ್ಯಾಪಿ ಜಾಲಕ್ಕೂ ಡಾಟ್ ಕಾಮ್‌ಗಳಿಗೂ ಇರುವ ಅವಿನಾಭಾವ ಸಂಬಂಧ ಸುಲಭವಾಗಿ ಹೇಳಿ ಮುಗಿಸುವಂಥದ್ದಲ್ಲ. ವಿಶ್ವವ್ಯಾಪಿ ಜಾಲದಲ್ಲಿರುವ ತಾಣಗಳನ್ನು (ವೆಬ್‌ಸೈಟ್) ಬಹಳಷ್ಟು ಜನ ಗುರುತಿಸುವುದು ಡಾಟ್‌ಕಾಮ್‌ಗಳೆಂದೇ.

ಜಾಲತಾಣ, ಮತ್ತದರ ವಿಳಾಸ
ವಿಶ್ವವ್ಯಾಪಿ ಜಾಲದ ಮೂಲಕ ಲಭ್ಯವಿರುವ ಮಾಹಿತಿ ನಮಗೆ ದೊರಕುವುದು ವೆಬ್‌ಸೈಟ್ ಅಥವಾ ಜಾಲತಾಣಗಳ ಮೂಲಕ. ಮೇಲಿನ ಉದಾಹರಣೆಯಲ್ಲಿ ಹೇಳಿದ ಗೂಗಲ್ ಡಾಟ್ ಕಾಮ್, ಉದಯವಾಣಿ ಡಾಟ್ ಕಾಮ್, ಇಜ್ಞಾನ ಡಾಟ್ ಕಾಮ್ ಇವೆಲ್ಲ ಜಾಲತಾಣಕ್ಕೆ ಉದಾಹರಣೆಗಳು.

ಜಾಲತಾಣಗಳ ವಿಳಾಸಕ್ಕೆ ಡಾಟ್ ಕಾಮ್ ಎಂಬ ಪ್ರತ್ಯಯ ಸೇರಿದಂದಿನಿಂದ ಇಂದಿನವರೆಗಿನ ಕಾಲು ಶತಮಾನದ ಅವಧಿಯಲ್ಲಿ ಡಾಟ್ ಕಾಮ್ ಎನ್ನುವುದು ಜಾಲತಾಣದ ಹೆಸರಿಗೆ ಪರ್ಯಾಯವಾಗಿ ಬೆಳೆದುಬಿಟ್ಟಿದೆ, ನಿಜ. ಆದರೆ ವಾಸ್ತವದಲ್ಲಿ ಈ ಡಾಟ್ ಕಾಮ್ ಎನ್ನುವುದು ಜಾಲತಾಣಗಳ ವಿಳಾಸದ ಒಂದು ಭಾಗ ಮಾತ್ರ.

ವಿಶ್ವವ್ಯಾಪಿ ಜಾಲದಲ್ಲಿ ಲಭ್ಯವಿರುವ ಕೋಟ್ಯಂತರ ಜಾಲತಾಣಗಳನ್ನು ಪ್ರತ್ಯೇಕವಾಗಿ ಗುರುತಿಸಲು ಅನುವುಮಾಡಿಕೊಡುವ ವಿಳಾಸವನ್ನು ಯೂನಿಫಾರ್ಮ್ ರಿಸೋರ್ಸ್ ಲೊಕೇಟರ್ ಅಥವಾ ಯುಆರ್‌ಎಲ್ ಎಂದು ಹೆಸರು.

www.ejnana.com - ಇದು ಯುಆರ್‌ಎಲ್‌ಗೊಂದು ಉದಾಹರಣೆ. ಈ ವಿಳಾಸದ ಪ್ರಾರಂಭದಲ್ಲಿರುವ www ಎಂಬ ಸಂಕೇತ ಈ ತಾಣ ವಿಶ್ವವ್ಯಾಪಿ ಜಾಲದ ಮುಖಾಂತರ ಲಭ್ಯವಿದೆ ಎನ್ನುವುದನ್ನು ಸೂಚಿಸುತ್ತದೆ. ಇನ್ನು ejnana ಎನ್ನುವುದು ಜಾಲತಾಣದ ಹೆಸರು. ಕೊನೆಯ ಬಾಲಂಗೋಚಿಯೇ ಡಾಟ್ ಕಾಮ್.

ಸೋಮವಾರ, ಜೂನ್ 27, 2011

ಏನ್ಮಾಡ್ತೀರಾ ತರಲೆ, ಬದುಕುಳಿಯೋದೇ ಜಿರಲೆ!

ಬೇಳೂರು ಸುದರ್ಶನ

ಇದು ಲೀಪ್ರೋಚ್!
2006ರ ಒಂದು ದಿನ. ಕೇಪ್ ಟೌನ್ ವಿಶ್ವವಿದ್ಯಾಲಯದ ಜೀವಶಾಸ್ತ್ರ ವಿಭಾಗದ ಮೈಕ್ ಪಿಕರ್ ಮತ್ತು ಡಾ|| ಜೊನಾಥನ್ ಕೋಲ್ವಿಲ್ಲೆ ಹತ್ತಿರದ ಸಿಲ್ವರ್ ಮೈನ್ ಪ್ರಾಕೃತಿಕ ಮೀಸಲು ಪ್ರದೇಶದಲ್ಲಿ ಬಲೆ ಬೀಸುತ್ತಿದ್ದರು. ಯಾವುದಾದರೂ ಹಾರುವ ಕೀಟ ಸಿಗಬಹುದೇ ಎಂದು ಕಾಯುತ್ತಿದ್ದರು. ಹೀಗೇ ಸುಮ್ಮನೇ ಅವರ ಬಲೆಗೆ ಸಿಕ್ಕಿದ್ದು... ಜಿಗಿಯುವ ಜಿರಲೆ!

ಮೊದಲು ಇದೇನು ಮಿಡತೆಯೇ ಎಂದು ನೋಡಿದ ಅವರಿಗೆ, ಅದು ಜಿರಲೆ ಎಂದು ಗೊತ್ತಾದಾಗ ಅಚ್ಚರಿ. ಸರಿ, ಅದನ್ನು ಪ್ರಯೋಗಾಲಯಕ್ಕೆ ತಂದು ನಿಕಟ ಪರೀಕ್ಷೆಗೆ ಒಡ್ಡಿದಾಗ ಅದು ಈವರೆಗೂ ನೋಡಿರದ ಜಿರಲೆಯ ಜೀವಜಾತಿ ಎಂಬುದು ಖಚಿತವಾಯಿತು. ಆಮೇಲಿನ ನಾಲ್ಕು ವರ್ಷಗಳ ಕಾಲ ಅವರಿಬ್ಬರ ಸಂಶೋಧನಾ ಸಮಯವೆಲ್ಲ ಹಾರುವ ಜಿರಲೆಗೇ ಮೀಸಲಾಯಿತು. 2010ರಲ್ಲಿ ಅವರು ಈ ಜಿರಲೆಯ ಬಗ್ಗೆ ಸಂಶೋಧನಾ ಲೇಖನವನ್ನು ಪ್ರಕಟಿಸಿದರು. `ಸಾಲ್ಟೋಬ್ಲಾಟೆಲ್ಲಾ (ಹಾರುವ ಚಿಕ್ಕ ಜಿರಲೆ) ಮಾಂಟಿಸ್ ಟ್ಯಾಬುಲಾರಿಸ್ (ಟೇಬಲ್ ಮೌಂಟನ್ ರಾಷ್ಟ್ರೀಯ ಉದ್ಯಾನದಲ್ಲಿ ಸಿಕ್ಕಿದ್ದಕ್ಕಾಗಿ)' ಎಂಬ ನಾಮಕರಣದೊಂದಿಗೆ ವಸುಂಧರೆ ಜೀವಜಾಲದ ಇನ್ನೊಂದು ಕೌತುಕ ಪ್ರಕಟವಾಯಿತು. ಕಪ್ಪೆಯಂತೆ ಜಿಗಿಯುವ ಈ ಜಿರಲೆಗೆ ಲೀಪ್ರೋಚ್ (ಲೀಪ್ – ಕುಪ್ಪಳಿಸು) ಎಂಬ ಹೆಸರನ್ನೂ ಇಡಲಾಗಿದೆ.

ಬುಧವಾರ, ಜೂನ್ 22, 2011

'ಆಗಸದ ಅಲೆಮಾರಿಗಳು' ಕೃತಿಗೆ ಅಕಾಡೆಮಿ ಗೌರವ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ೨೦೦೯ನೇ ಸಾಲಿನ ಪುಸ್ತಕ ಬಹುಮಾನ ವಿತರಣಾ ಸಮಾರಂಭ ಜೂನ್ ೨೯, ೨೦೧೧ರಂದು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆಯಲಿದೆ.

ಡಾ| ಬಿ. ಎಸ್. ಶೈಲಜಾ ಅವರು ಈ ಸಂದರ್ಭದಲ್ಲಿ ವಿಜ್ಞಾನ ಸಾಹಿತ್ಯ ಪ್ರಕಾರದ ಬಹುಮಾನ ಸ್ವೀಕರಿಸಲಿದ್ದಾರೆ. ಅವರ 'ಆಗಸದ ಅಲೆಮಾರಿಗಳು' ಕೃತಿಗಾಗಿ ಈ ಗೌರವ ಲಭಿಸಿದೆ.

ಡಾ| ಶೈಲಜಾ ಅವರಿಗೆ ಇಜ್ಞಾನ ಡಾಟ್ ಕಾಮ್ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.

ಮಂಗಳವಾರ, ಜೂನ್ 21, 2011

ಹ್ಯಾಕಿಂಗ್ ಹಾವಳಿ

ಟಿ ಜಿ ಶ್ರೀನಿಧಿ

ಈಚಿನ ಕೆಲದಿನಗಳಿಂದ ಗಣಕ ಲೋಕದಲ್ಲೆಲ್ಲ ಹ್ಯಾಕಿಂಗ್‌ನದೇ ಸುದ್ದಿ. ಸೋನಿ, ಲಾಕ್‌ಹೀಡ್ ಮಾರ್ಟಿನ್, ಹೋಂಡಾ, ನಿಂಟೆಂಡೋ, ಸಿಟಿಬ್ಯಾಂಕ್ - ಹೀಗೆ ದೊಡ್ಡದೊಡ್ಡ ಸಂಸ್ಥೆಗಳೆಲ್ಲ ಒಂದರ ಹಿಂದೊಂದರಂತೆ ಹ್ಯಾಕರ್‌ಗಳ ದಾಳಿಗೆ ತುತ್ತಾಗುತ್ತಿವೆ. ತನ್ನ ಪ್ಲೇಸ್ಟೇಷನ್ ಜಾಲದ ಲಕ್ಷಾಂತರ ಬಳಕೆದಾರರಿಗೆ ಸಂಬಂಧಿಸಿದ ಮಾಹಿತಿ ಹ್ಯಾಕರ್‌ಗಳ ಕೈಸೇರಿದ್ದನ್ನು ಒಪ್ಪಿಕೊಂಡು ಬಹಿರಂಗವಾಗಿ ಕ್ಷಮೆಯಾಚಿಸುವಂತಹ ಪರಿಸ್ಥಿತಿ ಸೋನಿಯಂತಹ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಸಂಸ್ಥೆಗೂ ಬಂದಿದೆ. ಅಷ್ಟೇ ಏಕೆ, ಗಣಕಗಳಲ್ಲಿರುವ ಮಾಹಿತಿಯನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಬೇರೆ ಸಂಸ್ಥೆಗಳಿಗೆಲ್ಲ ನೆರವುನೀಡುವ ಆರ್‌ಎಸ್‌ಎ ಸಂಸ್ಥೆಗೂ ಹ್ಯಾಕರ್‌ಗಳ ಕಾಟ ತಪ್ಪಿಲ್ಲ.

ಈ ಎಲ್ಲ ಹ್ಯಾಕಿಂಗ್ ದಾಳಿಗಳಿಂದಾಗಿ ರಹಸ್ಯ ಕಡತಗಳು, ಹಣಕಾಸು ವ್ಯವಹಾರಕ್ಕೆ ಸಂಬಂಧಪಟ್ಟ ಮಾಹಿತಿ, ಬಳಕೆದಾರರ ವೈಯಕ್ತಿಕ ವಿವರಗಳು ಸೇರಿದಂತೆ ಅಪಾರ ಪ್ರಮಾಣದ ಮಾಹಿತಿ ಈಗಾಗಲೇ ಅಪಾತ್ರರ ಕೈಸೇರಿದೆ ಎನ್ನಲಾಗಿದೆ. ಹೀಗೆ ಕಳುವಾದ ಮಾಹಿತಿಯನ್ನು ಬಳಸಿಕೊಂಡು ದುಷ್ಕರ್ಮಿಗಳು ಯಾವಾಗ ಏನು ಮಾಡುತ್ತಾರೋ ಎಂದು ಗಾಬರಿಯಿಂದ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇಷ್ಟಕ್ಕೂ ಈ ಹ್ಯಾಕಿಂಗ್ ಎಂದರೇನು?

ಸೋಮವಾರ, ಜೂನ್ 20, 2011

ಪುಸ್ತಕ ಬಿಡುಗಡೆ - "ಭೂಮಿಗುದುರಿತೆ ಜೀವ?"


ಶ್ರೀ ಕೊಳ್ಳೇಗಾಲ ಶರ್ಮ ಅವರ "ಭೂಮಿಗುದುರಿತೆ ಜೀವ? ಮತ್ತು ಇತರ ಪ್ರಶ್ನೆಗಳು" ಕೃತಿ ಜೂನ್ ೨೫ರಂದು ಸಂಜೆ ಲೋಕಾರ್ಪಣೆಗೊಳ್ಳಲಿದೆ. ಬೆಂಗಳೂರಿನ ಜೆ. ಸಿ. ರಸ್ತೆಯಲ್ಲಿರುವ ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮ ಓದುಗರಿಗೆ ತಮ್ಮ ನೆಚ್ಚಿನ ವಿಜ್ಞಾನ ಬರಹಗಾರರನ್ನೆಲ್ಲ ಒಟ್ಟಿಗೆ ಭೇಟಿಯಾಗುವ ಅವಕಾಶ ಒದಗಿಸಲಿದೆ. ಇದೇ ಸಂದರ್ಭದಲ್ಲಿ ಹಿರಿಯ ವಿಜ್ಞಾನ ಬರಹಗಾರರಾದ ಪ್ರೊ. ಅಡ್ಯನಡ್ಕ ಕೃಷ್ಣಭಟ್, ಪ್ರೊ. ಜೆ. ಆರ್. ಲಕ್ಷ್ಮಣರಾವ್ ಹಾಗೂ ನವಕರ್ನಾಟಕ ಪ್ರಕಾಶನದ ಶ್ರೀ ಆರ್. ಎಸ್. ರಾಜಾರಾಮ್ ಅವರನ್ನು ಪೆನ್ ಸರ್ಕಲ್ ಅಂತರಜಾಲ ಬಳಗದ ವತಿಯಿಂದ ಗೌರವಿಸಲಾಗುವುದು.

ಹೆಚ್ಚಿನ ವಿವರಗಳಿಗಾಗಿ ಆಹ್ವಾನ ಪತ್ರಿಕೆಯ ಮೇಲೆ ಕ್ಲಿಕ್ ಮಾಡಿ.

ಶುಕ್ರವಾರ, ಜೂನ್ 17, 2011

ಮಳೆಗಾಡಿನ ಬಿರುಗಾಳಿ

ಪಶ್ಚಿಮಘಟ್ಟದ ಅರಣ್ಯ ಪ್ರದೇಶವನ್ನು ವಿಶ್ವಪರಂಪರೆಯ ತಾಣಗಳ ಪಟ್ಟಿಗೆ ಸೇರಿಸಲು ಒಪ್ಪದ ರಾಜ್ಯ ಸರಕಾರದ ನಿಲುವು ಸಾಕಷ್ಟು ವಾದವಿವಾದಗಳನ್ನು ಹುಟ್ಟುಹಾಕಿದೆ. ಈ ಕುರಿತು ಹಿರಿಯ ವಿಜ್ಞಾನ ಲೇಖಕ ಶ್ರೀ ಟಿ. ಆರ್. ಅನಂತರಾಮುರವರ ಅಭಿಪ್ರಾಯಗಳು ಇಲ್ಲಿವೆ...
ವಿಶ್ವಪರಂಪರಾ ತಾಣಗಳ ಪಟ್ಟಿಯಲ್ಲಿ ಪಶ್ಚಿಮಘಟ್ಟದಲ್ಲಿ ಗುರುತಿಸಿರುವ ಹತ್ತು ತಾಣಗಳನ್ನು ಕೈಬಿಡಿ ಎಂದು ಕರ್ನಾಟಕ ಸರ್ಕಾರ ಯುನೆಸ್ಕೋಗೆ ಒತ್ತಾಯ ಮಾಡಿರುವುದನ್ನು ನೋಡಿದರೆ ಬಹುಶಃ ಸರ್ಕಾರದ ಯಾರೊಬ್ಬರಿಗೂ ವಿಶ್ವಪರಂಪರಾತಾಣದ ಬಗ್ಗೆ ಮೂಲ ಪರಿಕಲ್ಪನೆಯೇ ಇಲ್ಲ ಎನ್ನಿಸುತ್ತದೆ.

ಇದಕ್ಕಿಂತ ಹೆಚ್ಚಿನ ಅಚ್ಚರಿ ಮೂಡಿಸಿರುವುದು ೧೯೮೬ರಲ್ಲಿ ಯುನೆಸ್ಕೋ `ಮನುಷ್ಯ ಮತ್ತು ಜೀವಿಗೋಳ' (ಮ್ಯಾನ್ ಅಂಡ್ ಬಯೋಸ್ಪಿಯರ್) ಯೋಜನೆಯಡಿ ಈಗಾಗಲೇ ಭಾರತದಲ್ಲಿ ೧೭ ತಾಣಗಳನ್ನು ಗುರುತಿಸಿ, ಆ ಪೈಕಿ ನಮ್ಮ ನೀಲಗಿರಿಯ ೫,೫೨೦ ಚದರ ಕಿಲೋ ಮೀಟರ್ ಪ್ರದೇಶವನ್ನು (ಬಂಡೀಪುರ, ನಾಗರಹೊಳೆ, ವೈನಾಡು, ಸಿರೂರು ಪರ್ವತ ಸೇರಿದಂತೆ) ಜೀವಿಗೋಳದ ರಕ್ಷಿತಪ್ರದೇಶವೆಂದು ಸಾರಿದೆ. ಇಲ್ಲೂ ಕೇಂದ್ರ ಸರ್ಕಾರವೇ ಯುನೆಸ್ಕೋ ಗಮನ ಸೆಳೆದಿತ್ತು. ಈಗ ಈ ತಾಣಗಳಲ್ಲಿ ವ್ಯಾಪಕ ಕಾರ್ಯಕ್ರಮಗಳನ್ನು ಯುನೆಸ್ಕೋ ಭಾರತದ ನೆರವಿನೊಂದಿಗೆ ಕೈಗೊಂಡಿದೆ. ಈ ಕಾರ್ಯಕ್ರಮದಡಿ ಮನುಷ್ಯ ಮತ್ತು ನಿಸರ್ಗದ ಮಧ್ಯೆ ಎರಡಕ್ಕೂ ಗಾಸಿಯಾಗದಂತೆ ನಾವು ಜೀವಿ ಪರಿಸ್ಥಿತಿಯನ್ನು ಹೇಗೆ ಉಳಿಸಿಕೊಳ್ಳಬಹುದು ಎಂಬುದೂ ಒಂದು. ಇನ್ನೊಂದು ಇಂದಿನ ನಮ್ಮ ಚಟುವಟಿಕೆಗಳಿಗೆ ನಾಳೆ ನಿಸರ್ಗ ಹೇಗೆ ಸ್ಪಂದಿಸುತ್ತದೆ ಎಂಬ ಎಚ್ಚರ ತಳೆಯುವುದು.

ಬುಧವಾರ, ಜೂನ್ 8, 2011

ವಿಶ್ವವ್ಯಾಪಿ ಜಾಲ ಹುಟ್ಟಿದ ಕಥೆ

ಟಿ ಜಿ ಶ್ರೀನಿಧಿ

ಈಚಿನ ವರ್ಷಗಳಲ್ಲಿ ವಿಶ್ವವ್ಯಾಪಿ ಜಾಲ (ವರ್ಲ್ಡ್‌ವೈಡ್ ವೆಬ್) ನಮ್ಮ ಬದುಕುಗಳ ಭಾಗವೇ ಆಗಿಹೋಗಿದೆ. ಅಂತರಜಾಲದಲ್ಲಿ (ಇಂಟರ್‌ನೆಟ್) ಲಭ್ಯವಿರುವ ಮಾಹಿತಿಯನ್ನು ನಮಗೆ ಸುಲಭವಾಗಿ ದೊರಕುವಂತೆ ಮಾಡುವ ಅತ್ಯಂತ ಜನಪ್ರಿಯ ವ್ಯವಸ್ಥೆ ಇದು.

ವಿಶ್ವವ್ಯಾಪಿ ಜಾಲದಲ್ಲಿ ವಿಹರಿಸುವಾಗ ಅದರ ಅಗಾಧತೆ ಹಾಗೂ ವೈವಿಧ್ಯಮಯ ಸಾಧ್ಯತೆಗಳು ನಮ್ಮಲ್ಲಿ ಬೆರುಗು ಹುಟ್ಟಿಸುತ್ತವೆ. ಕೆಲವೊಂದು ಸಲ ಇಷ್ಟೊಂದು ಸಂಕೀರ್ಣವಾದ ಈ ವ್ಯವಸ್ಥೆಯನ್ನು ಅದ್ಯಾರು ರೂಪಿಸಿದರಪ್ಪ ಎಂಬ ಪ್ರಶ್ನೆಯೂ ಮೂಡುತ್ತದೆ.

ಆ ಪ್ರಶ್ನೆಗೆ ಉತ್ತರರೂಪವಾಗಿ ನಿಲ್ಲುವ ಹೆಸರು ಸರ್ ಟಿಮ್ ಬರ್ನರ್ಸ್-ಲೀ ಅವರದು.

ಭಾನುವಾರ, ಜೂನ್ 5, 2011

ಇಜ್ಞಾನ ವಿಶೇಷ: ಪರಿಸರ ದಿನ ಮತ್ತೆ ಬಂದಿದೆ...

ನಾಗೇಶ ಹೆಗಡೆ
ಇಜ್ಞಾನ ಪರಿಸರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ. ಪರಿಸರ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ.
ಈ ಬಾರಿಯ ವಿಶ್ವ ಪರಿಸರ ದಿನಾಚರಣೆಗೆ ವಿಶೇಷ ಮಹತ್ವ ಇದೆ. ಇದೇ ಮೊದಲ ಬಾರಿಗೆ ಭಾರತವನ್ನು 'ಆತಿಥೇಯ ರಾಷ್ಟ್ರ' ಎಂದು ವಿಶ್ವಸಂಸ್ಥೆ ಘೋಷಿಸಿದೆ. ದಿಲ್ಲಿ ಮತ್ತು ಮುಂಬೈಗಳಲ್ಲಿ ವಿಶ್ವಸಂಸ್ಥೆಯೇ ಭಾರತದೊಂದಿಗೆ ಜಂಟಿಯಾಗಿ ಜೂನ್ ೫ರಂದು ಕಾರ್ಯಕ್ರಮಗಳನ್ನು ಆಯೋಜಿಸಲಿದೆ ಮತ್ತು ಅದು ಜಗತ್ತಿಗೆಲ್ಲ ಟಾಮ್ ಟಾಮ್ ಆಗುವಂತೆ ನೋಡಿಕೊಳ್ಳುತ್ತದೆ.

೨೦೧೧ರ ಇಡೀ ವರ್ಷವನ್ನು 'ಅರಣ್ಯಗಳ ಅಂತರರಾಷ್ಟ್ರೀಯ ವರ್ಷ' ಎಂದು ವಿಶ್ವಸಂಸ್ಥೆ ಘೋಷಣೆ ಮಾಡಿರುವುದರಿಂದ ಸಹಜವಾಗಿಯೇ ಜಾಗತಿಕ ಮಟ್ಟದ ಎಲ್ಲ ಕಾರ್ಯಕ್ರಮಗಳಲ್ಲೂ ಅರಣ್ಯವೇ ಒತ್ತುಗುರಿ ಆಗಿರುತ್ತದೆ. ಅದಕ್ಕೇ ಈ ಬಾರಿಯ ವಿಶ್ವ ಪರಿಸರ ದಿನಕ್ಕೂ ಅರಣ್ಯವನ್ನೇ ಮುಖ್ಯ ವಿಷಯವನ್ನಾಗಿ ಮಾಡಿಕೊಳ್ಳಲು ಎಲ್ಲ ರಾಷ್ಟ್ರಗಳಿಗೆ ಸೂಚಿಸಲಾಗಿದೆ. ಅದರಲ್ಲೂ ಈ ವರ್ಷ 'ಅರಣ್ಯ: ನಿಮ್ಮ ಸೇವೆಯಲ್ಲಿ ನಿಸರ್ಗ' ಎಂಬ ಧ್ಯೇಯವಾಕ್ಯವನ್ನೇ ಮುಂದಿಟ್ಟುಕೊಂಡು ಜೂನ್ ೫ರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಇ-ಜ್ಞಾನ ಪರಿಸರ ಸಂಚಿಕೆ

ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ಕನ್ನಡ ವಿದ್ಯುನ್ಮಾನ ಪತ್ರಿಕೆಯ ಮೊದಲ ಸಂಚಿಕೆಯನ್ನು ಜ್ಞಾನ ನಿಮ್ಮ ಮುಂದಿಡುತ್ತಿದೆ.

'ಪರಿಸರ ಸಂಚಿಕೆ'ಯಾಗಿ ಮೂಡಿಬಂದಿರುವ ನಮ್ಮ ಮೊದಲ ಪ್ರಯತ್ನ ಇದೀಗ ಜ್ಞಾನ ಡಾಟ್ ಕಾಮ್‌ನಲ್ಲಿ ಲಭ್ಯವಿದೆ. ನಿಮ್ಮ ಅನಿಸಿಕೆ ಅಭಿಪ್ರಾಯಗಳಿಗೆ ಆದರದ ಸ್ವಾಗತ.

ಜ್ಞಾನ ಪರಿಸರ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶನಿವಾರ, ಜೂನ್ 4, 2011

ಪರಿಸರ ದಿನ ವಿಶೇಷ: ವನ್ಯಜೀವಿ ಪ್ರೇಮ - ನಮ್ಮ ನಿಮ್ಮಲ್ಲಿ!?

ಟಿ. ಎಸ್. ಗೋಪಾಲ್

ನಾಳೆ (ಜೂನ್ ೫) ವಿಶ್ವ ಪರಿಸರ ದಿನ. ಈ ಸಂದರ್ಭದಲ್ಲಿ ಇಜ್ಞಾನ ವಿದ್ಯುನ್ಮಾನ ಪತ್ರಿಕೆಯ ಮೊದಲ ಸಂಚಿಕೆ 'ಪರಿಸರ ಸಂಚಿಕೆ'ಯಾಗಿ ಲಭ್ಯವಾಗಲಿದೆ. ನಿರೀಕ್ಷಿಸಿ!!!

"ಬದುಕನ್ನು ಕುರಿತು ನಿಜವಾದ ಪ್ರೀತಿಯಿದ್ದವನಿಗೆ ಮಾತ್ರ ಅದರ ಸಮೃದ್ಧಿಯಲ್ಲಿ, ವೈವಿಧ್ಯತೆಯಲ್ಲಿ ಆಸಕ್ತಿ ಹುಟ್ಟೀತು. ಅದಿಲ್ಲದೆ, ಬದುಕನ್ನು ಕೇವಲ ವ್ಯಾವಹಾರಿಕವಾಗಿ ಹಾಗೂ ಪ್ರಾಯೋಜನಿಕ ದೃಷ್ಟಿಯಿಂದ ನೋಡುವವನಿಗೆ ಅದರೊಳಗಿನ ಚಟುವಟಿಕೆಯಾಗಲೀ ಜೀವಂತಿಕೆಯಾಗಲೀ ಕಂಡೀತು ಹೇಗೆ?" - ಡಾ|| ಜಿ. ಎಸ್. ಶಿವರುದ್ರಪ್ಪ

ಕಾಡನ್ನು ಉಳಿಸಬೇಕು, ವನ್ಯಪ್ರಾಣಿಗಳನ್ನು ಕಾಪಾಡಬೇಕು ಎಂದು ಮಂತ್ರಿಗಳಿಂದ ಹಿಡಿದು ಶ್ರೀಸಾಮಾನ್ಯನವರೆಗೆ ಎಲ್ಲರೂ ಹೇಳುತ್ತಾರೆ. ಆದರೆ ಅದು ಹೇಗೆಂದು ಯಾರೂ ಯೋಚಿಸುವ ಗೋಜಿಗೆ ಹೋಗುವುದಿಲ್ಲ. ಹೇಗಿದ್ದರೂ ಅದು ಅರಣ್ಯ ಇಲಾಖೆಯವರ ಕೆಲಸ, ನೋಡಿಕೊಳ್ಳಲಿ - ಎಂಬುದೇ ಬಹುಜನರ ಆಲೋಚನೆ.

ಅಣೆಕಟ್ಟೆಗಳಿಂದ ಹಿಡಿದು ಬೃಹದಾಕಾರದ ವಿದ್ಯುತ್ ಕಂಬಗಳವರೆಗೆ ಸಕಲವೂ ಅರಣ್ಯಪ್ರದೇಶಗಳಲ್ಲೇ ಸ್ಥಾಪಿತವಾಗುವಂತೆ ಯೋಜನೆಗಳನ್ನು ರೂಪಿಸುವ ತಜ್ಞರು, ವೋಟುಗಳು ಮಾತ್ರವೇ ಶಾಶ್ವತ ಸತ್ಯವೆಂದು ಭ್ರಮಿಸಿರುವ ರಾಜಕಾರಣಿಗಳು, ಜನಪರ ಕಾರ್ಯಗಳ ನೆಪದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಕಾತರರಾಗಿರುವ ಅರಣ್ಯ ಇಲಾಖೆಯ ಅಧಿಕಾರಿಗಳು, ಕಾಡನ್ನೇ ನೋಡದೆ ವನ್ಯಜೀವಿ ಹಾಗೂ ಮಾನವನ ಸಹಜೀವನದ ಬಗೆಗೆ ಭಾಷಣಬಿಗಿಯುವ ಪರಿಸರವಾದಿ ಮಹಾಶಯರು ಮೊದಲಾಗಿ ಸಕಲರೂ ಅರಣ್ಯನಾಶದ ಪಾಲುದಾರರಾಗಿದ್ದಾರೆ.

ಗುರುವಾರ, ಜೂನ್ 2, 2011

ಏಳುನೂರು ಕೋಟಿ ತಲುಪಲಿದೆ ಭೂಮಿಯ ಜನಸಂಖ್ಯೆ: ಆಹಾರ-ಇಂಧನ ಸಮತೋಲನ ಹೇಗೆ?

ಟಿ ಜಿ ಶ್ರೀನಿಧಿ

೨೦೧೧ - ಭೂಗ್ರಹದ ಇತಿಹಾಸದ ಮಹತ್ವದ ಮೈಲಿಗಲ್ಲುಗಳಲ್ಲೊಂದು. ಭೂಮಿಯ ಜನಸಂಖ್ಯೆ ಈ ವರ್ಷದಲ್ಲಿ ಏಳುನೂರು ಕೋಟಿ ತಲುಪಲಿದೆ.

ಈಚಿನ ವರ್ಷಗಳಲ್ಲಿ ಜನರ ಜೀವನಮಟ್ಟ ಕೊಂಚ ಸುಧಾರಿಸಿದೆ, ನಿಜ. ಆದರೆ ಇಂದಿಗೂ ಜಗತ್ತಿನಲ್ಲಿರುವ ಸಂಪತ್ತಿನ ಅರ್ಧಭಾಗವನ್ನು ಶೇಕಡಾ ಎರಡರಷ್ಟು ಸಂಖ್ಯೆಯ ಜನರೇ ನಿಯಂತ್ರಿಸುತ್ತಿದ್ದಾರೆ.

ಬಡವರು ಹಾಗೂ ಶ್ರೀಮಂತರ ನಡುವಿನ ಈ ಭಾರೀ ಕಂದರವನ್ನು ಮಧ್ಯಮವರ್ಗದ ಜನ ನಿಧಾನವಾಗಿ ಮುಚ್ಚುತ್ತಿದ್ದಾರೆ. ಬಡವರನ್ನು ಮಧ್ಯಮವರ್ಗದತ್ತ, ಮಧ್ಯಮವರ್ಗದವರನ್ನು ಸಿರಿವಂತಿಕೆಯತ್ತ ಕೊಂಡೊಯ್ಯುವ ಪ್ರಕ್ರಿಯೆ, ನಿಧಾನವಾಗಿಯಾದರೂ, ನಡೆಯುತ್ತಿದೆ.

ಹಿಂದುಳಿದ ರಾಷ್ಟ್ರಗಳು ತಮ್ಮ ಹಣೆಪಟ್ಟಿ ಕಳಚಿಕೊಳ್ಳುವ ಉದ್ದೇಶದಿಂದ ಅಭಿವೃದ್ಧಿಹೊಂದಿದ ರಾಷ್ಟ್ರಗಳ ಜೀವನಶೈಲಿ ಅನುಕರಿಸಲು ಪ್ರಯತ್ನಿಸುತ್ತಿವೆ. ಇನ್ನು ಅಭಿವೃದ್ಧಿಹೊಂದಿದ ದೇಶಗಳಿಗೆ ತಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳುವ ಯಾವ ಉದ್ದೇಶವೂ ಇದ್ದಂತಿಲ್ಲ. ಹೀಗಾಗಿ ವಿಶ್ವದ ಸಂಪನ್ಮೂಲಗಳಿಗೆ ಬೇಡಿಕೆ ತೀವ್ರವಾಗಿ ಹೆಚ್ಚುತ್ತಿದೆ.

'ಬೇಕು'ಗಳ ಪಟ್ಟಿ ದೊಡ್ಡದಾಗುತ್ತಿದ್ದಂತೆ ಅದರ ಪರಿಣಾಮ ಅಂತಿಮವಾಗಿ ಆಗುವುದು ಇಂಧನಗಳ ಮೇಲೆಯೇ. ವಿದ್ಯುತ್ತು, ಸಂಚಾರ ವ್ಯವಸ್ಥೆ, ಆಹಾರ, ಬಟ್ಟೆಬರೆ, ಸಂವಹನ ವ್ಯವಸ್ಥೆ - ಹೀಗೆ ಯಾವುದನ್ನೇ ಗಮನಿಸಿದರೂ ಅದರ ಉತ್ಪಾದನೆಯಾಗುವಲ್ಲಿಂದ ಪ್ರಾರಂಭಿಸಿ ನಾವು ಅದನ್ನು ಬಳಸುವವರೆಗೆ ಎಲ್ಲ ಹಂತಗಳಲ್ಲೂ ಒಂದಲ್ಲ ಒಂದು ಬಗೆಯ ಇಂಧನ ಬೇಕು. ಕೃಷಿಯ ಉದಾಹರಣೆಯನ್ನೇ ನೋಡಿ - ರಸಗೊಬ್ಬರ ತಯಾರಿಕೆಗೆ, ಅದರ ಸಾಗಾಣಿಕೆಗೆ, ಕೃಷಿಭೂಮಿಯಲ್ಲಿ ಟ್ರಾಕ್ಟರ್ ನಡೆಸಲು, ಬೆಳೆಯನ್ನು ಸಂಸ್ಕರಿಸಲು ಎಲ್ಲದಕ್ಕೂ ಇಂಧನ ಬೇಕು. ಆಮೇಲೂ ಅಷ್ಟೆ - ಕೃಷಿ ಉತ್ಪನ್ನವನ್ನು ಮಾರುಕಟ್ಟೆಗೆ ತಲುಪಿಸಲು, ಅಲ್ಲಿ ಕೊಂಡ ವಸ್ತುಗಳನ್ನು ಮನೆಗೆ ಒಯ್ಯಲು, ಕಡೆಗೆ ಬೇಯಿಸಿ ತಿನ್ನಲಿಕ್ಕೂ ಇಂಧನ ಬೇಕೇ ಬೇಕು. ಹೀಗಾಗಿ ಪೆಟ್ರೋಲ್, ಡೀಸಲ್ ಮುಂತಾದ ಪಳೆಯುಳಿಕೆ ಇಂಧನಗಳಿಲ್ಲದೆ ಯಾವ ಕೆಲಸವೂ ಸಾಗುವುದೇ ಕಷ್ಟ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಆದರೆ ಒಂದಲ್ಲ ಒಂದುದಿನ ಮುಗಿದುಹೋಗಲಿರುವ ಈ ಇಂಧನಮೂಲಗಳನ್ನು ನೆಚ್ಚಿಕೊಳ್ಳುವುದು ಎಷ್ಟು ಸರಿ? ಹೆಚ್ಚುತ್ತಿರುವ ಜನಸಂಖ್ಯೆ, ಏರುತ್ತಿರುವ ಬೇಡಿಕೆಗಳಿಗೆ ಸರಿಸಮಾನವಾಗಿ ಇಂಧನ ಪೂರೈಕೆ ವ್ಯವಸ್ಥೆಮಾಡಿಕೊಳ್ಳುವುದು ಹೇಗೆ?

ಮಂಗಳವಾರ, ಮೇ 31, 2011

ಇಆರ್‌ಪಿ ಅಂದ್ರೆ ಇಷ್ಟೇನೇ...

ಟಿ ಜಿ ಶ್ರೀನಿಧಿ

ದಿನಕ್ಕೆ ನೂರಿನ್ನೂರು ರೂಪಾಯಿ ಸಂಪಾದಿಸುವ ಪುಟ್ಟ ದಿನಸಿ ಅಂಗಡಿಗೂ ನಡೆಸುವುದಕ್ಕೂ ನೂರಾರು ಕೋಟಿ ವ್ಯವಹಾರ ನಡೆಸುವ ದೊಡ್ಡದೊಂದು ಕಾರ್ಖಾನೆ ನಡೆಸುವುದಕ್ಕೂ ಏನೇನು ಸಾಮ್ಯತೆಗಳಿವೆ ಹೇಳುತ್ತೀರಾ?

ಏನೇನೂ ಇಲ್ಲ ಎಂದಿರಾದರೆ ನಿಮ್ಮ ಉತ್ತರ ಖಂಡಿತಾ ತಪ್ಪು.

ಅಂಗಡಿಯಲ್ಲಿ ಬೇರೆಬೇರೆ ವಸ್ತುಗಳ ದಾಸ್ತಾನು ಎಷ್ಟಿದೆ, ಯಾವುದೆಲ್ಲ ಮುಗಿಯುತ್ತ ಬಂದಿದೆ, ನಾಳೆ ಪಕ್ಕದಮನೆಯವರಿಗೆ ತಿಂಗಳ ದಿನಸಿ ಪೂರೈಸಬೇಕಾದರೆ ಏನನ್ನೆಲ್ಲ ಕೊಂಡುತರಬೇಕು ಎನ್ನುವುದನ್ನೆಲ್ಲ ಅಂಗಡಿಯ ಮಾಲೀಕ ಗಮನಿಸುತ್ತಿರಬೇಕಾಗುತ್ತದೆ. ಖರ್ಚುವೆಚ್ಚ, ಲಾಭನಷ್ಟಗಳ ಲೆಕ್ಕವನ್ನೂ ಇಟ್ಟಿರಬೇಕಾಗುತ್ತದೆ. ಇದನ್ನೆಲ್ಲ ಬರೆದಿಟ್ಟುಕೊಳ್ಳಲು ಆತ ಹತ್ತಾರು ಚೀಟಿಗಳನ್ನೋ ಪುಟ್ಟದೊಂದು ಪುಸ್ತಕವನ್ನೋ ಇಟ್ಟುಕೊಂಡಿರುತ್ತಾನೆ.

ದೊಡ್ಡ ಕಾರ್ಖಾನೆಯಲ್ಲಿಯೂ ಹೀಗೆಯೇ - ಕಚ್ಚಾವಸ್ತುಗಳ ದಾಸ್ತಾನು, ಉತ್ಪಾದನೆಯ ಪ್ರಮಾಣ, ಮುಂದಿನ ದಿನಗಳಲ್ಲಿ ಬರಬಹುದಾದ ಬೇಡಿಕೆಯ ಅಂದಾಜು, ಉದ್ಯೋಗಿಗಳ ಸಂಬಳ, ಲಾಭನಷ್ಟಗಳ ಲೆಕ್ಕಾಚಾರ ಇವೆಲ್ಲವನ್ನು ಅಲ್ಲಿಯೂ ಸದಾಕಾಲ ಗಮನಿಸುತ್ತಲೇ ಇರಬೇಕಾಗುತ್ತದೆ.

ಇದನ್ನೆಲ್ಲ ಗಮನಿಸಿಕೊಳ್ಳಲು ಅವರು ಇಆರ್‌ಪಿ ತಂತ್ರಾಂಶ ಬಳಸುತ್ತಾರೆ ಎನ್ನುವುದೊಂದೇ ವ್ಯತ್ಯಾಸ.

ಭಾನುವಾರ, ಮೇ 29, 2011

ಲಿಂಕ್ಡ್‌ಇನ್ ಲಂಘನ

ಟಿ ಜಿ ಶ್ರೀನಿಧಿ

ಕಳೆದ ವಾರ ನ್ಯೂಯಾರ್ಕ್ ಷೇರು ವಿನಿಮಯ ಕೇಂದ್ರದಲ್ಲಿ ಲಿಂಕ್ಡ್‌ಇನ್ ಎನ್ನುವ ಸಂಸ್ಥೆಯ ಷೇರುಗಳ ವಹಿವಾಟು ಪ್ರಾರಂಭವಾಯಿತು. ಅದೂ ಅಂತಿಂತಹ ಪ್ರಾರಂಭವೇನಲ್ಲ, ತಲಾ ನಲವತ್ತೈದು ಡಾಲರುಗಳ ಬೆಲೆಯಲ್ಲಿ ವಿತರಣೆಯಾಗಿದ್ದ ಈ ಷೇರಿನ ಬೆಲೆ ಎರಡನೆಯ ದಿನದ ವೇಳೆಗಾಗಲೇ ನೂರು ಡಾಲರುಗಳ ಆಸುಪಾಸಿಗೆ ತಲುಪಿಬಿಟ್ಟಿತ್ತು. ನಮ್ಮ ಲೆಕ್ಕದಲ್ಲಿ ಹೇಳುವುದಾದರೆ ಈ ಬೆಲೆಯಲ್ಲಿ ಲಿಂಕ್ಡ್‌ಇನ್ ಸಂಸ್ಥೆಯ ಮೌಲ್ಯ ಸುಮಾರು ನಲವತ್ತು ಸಾವಿರ ಕೋಟಿ ರೂಪಾಯಿಗಳಷ್ಟಾಗುತ್ತದೆ!

ಇದನ್ನೆಲ್ಲ ನೋಡಿದ, ಕೇಳಿದ ಅನೇಕರ ಮನಸ್ಸಿನಲ್ಲಿ ಹುಟ್ಟಿಕೊಂಡದ್ದು ಒಂದೇ ಪ್ರಶ್ನೆ - "ಇಷ್ಟೆಲ್ಲ ಭರ್ಜರಿಯಾಗಿ ಮಾರುಕಟ್ಟೆ ಪ್ರವೇಶಿಸಿದೆಯಲ್ಲ, ಇಷ್ಟಕ್ಕೂ ಈ ಸಂಸ್ಥೆ ಏನು ಮಾಡುತ್ತದೆ?"

ಬುಧವಾರ, ಮೇ 18, 2011

ಸ್ಕೈಪ್ ಸಮಾಚಾರ

ಟಿ ಜಿ ಶ್ರೀನಿಧಿ

ಅಂತರಜಾಲದ ಜನಪ್ರಿಯ ಉಪಯೋಗಗಳಲ್ಲಿ ಇನ್ಸ್‌ಟಂಟ್ ಮೆಸೇಜಿಂಗ್ ಅಥವಾ ಚಾಟಿಂಗ್ ಕೂಡ ಒಂದು. ಹರಟೆ ಅಥವಾ ಚಾಟ್ ಎಂದು ಕರೆಸಿಕೊಳ್ಳುವ ಈ ಮಾಧ್ಯಮದಲ್ಲಿ ಸಂದೇಶವಾಹಕ ತಂತ್ರಾಂಶದ ಸಂಪರ್ಕ ಹೊಂದಿರುವ ಯಾರು ಬೇಕಿದ್ದರೂ ಮತ್ತೊಬ್ಬರಿಗೆ ಸಂದೇಶಗಳನ್ನು ಕಳುಹಿಸುವುದು ಹಾಗೂ ಅವರ ಉತ್ತರಗಳನ್ನು ಪಡೆದುಕೊಳ್ಳಬಹುದು. ಪಠ್ಯ, ಧ್ವನಿ ಅಥವಾ ವೀಡಿಯೋ - ಈ ಯಾವುದೇ ರೂಪದಲ್ಲಿ ಹರಟೆ ಸಾಧ್ಯ.

ಅಂತರಜಾಲ ಸಂಪರ್ಕದಲ್ಲಿರುವಾಗ ಮಿತ್ರರ ಗಣಕಕ್ಕೆ ಕರೆ ಮಾಡಿ ಮಾತನಾಡುವುದು ಅಥವಾ 'ವಾಯ್ಸ್ ಚಾಟ್' ಮಾಡುವುದು ಜಾಲಿಗರಲ್ಲಿ ಬಹುತೇಕರ ಅಚ್ಚುಮೆಚ್ಚಿನ ಹವ್ಯಾಸ. ಗೆಳೆಯರೊಡನೆ ಮುಖಾಮುಖಿ ಮಾತನಾಡಲು ಅವಕಾಶಮಾಡಿಕೊಡುವ ವೀಡಿಯೋ ಚಾಟ್ ಕೂಡ ಸಾಕಷ್ಟು ಜನಪ್ರಿಯ. ನಮಗೆ ಬೇಕಾದವರೊಡನೆ ನೇರವಾಗಿ ಮಾತನಾಡಲು ಸಹಾಯಮಾಡುವ ಈ ಮಾಧ್ಯಮಗಳದ್ದು ಸಾಂಪ್ರದಾಯಿಕ ದೂರವಾಣಿಗಿಂತ ಬಹಳ ಕಡಿಮೆ ವೆಚ್ಚ; ಅಷ್ಟೇ ಅಲ್ಲ, ಹೇಳಬೇಕಾದ್ದನ್ನೆಲ್ಲ ಕೀಲಿಮಣೆಯಲ್ಲಿ ಕುಟ್ಟಬೇಕಾದ ಪಠ್ಯರೂಪದ ಚಾಟಿಂಗ್‌ಗಿಂತ ಇದು ಸುಲಭವೂ ಹೌದು!

ಈ ಬಗೆಯ ಸೇವೆಗಳನ್ನು ಒದಗಿಸುವ ಅನೇಕ ಸಂಸ್ಥೆಗಳು ಜಾಲಲೋಕದಲ್ಲಿ ಸಕ್ರಿಯವಾಗಿವೆ; ಗೂಗಲ್, ಯಾಹೂ ಮುಂತಾದ ಅನೇಕ ಜನಪ್ರಿಯ ತಾಣಗಳ ಮೂಲಕ ವಾಯ್ಸ್ ಹಾಗೂ ವೀಡಿಯೋ ಚಾಟಿಂಗ್ ಸೌಲಭ್ಯ ದೊರಕುತ್ತದೆ.

ಇಂತಹ ತಾಣಗಳ ಸಾಲಿನಲ್ಲಿ ಅಗ್ರಗಣ್ಯವಾಗಿ ನಿಲ್ಲುವುದು ಸ್ಕೈಪ್‌ನ ಹೆಸರು.

ಮಂಗಳವಾರ, ಮೇ 10, 2011

ವಿಶ್ವವ್ಯಾಪಿ ಜಾಲದಲ್ಲಿ ಮಾಹಿತಿಯ ಸಂಚಾರ

ಟಿ ಜಿ ಶ್ರೀನಿಧಿ

ಹೀಗೊಂದು ದಿನ ಬೆಳಗ್ಗೆ, ಯಾವುದೋ ಕಾರಣಕ್ಕಾಗಿ, ನಿಮ್ಮ ಮನೆಗೆ ದಿನಪತ್ರಿಕೆ ತಲುಪಲಿಲ್ಲ ಎಂದಿಟ್ಟುಕೊಳ್ಳೋಣ. ಪಕ್ಕದ ಮನೆಯವರನ್ನು ಕೇಳೋಣ ಎಂದುಕೊಂಡರೆ ಅವರ ಮನೆಗೂ ಪತ್ರಿಕೆ ಬಂದಿಲ್ಲ. ಹೀಗಿರುವಾಗ ಆ ದಿನ ಪತ್ರಿಕೆ ಓದಬೇಕಾದರೆ ಅಂತರಜಾಲದ ಮೊರೆಹೋಗುವುದೊಂದೇ ನಿಮ್ಮ ಮುಂದಿರುವ ಆಯ್ಕೆ.

ಸರಿ, ಈಗ ನೀವು ಉದಯವಾಣಿಯ ಜಾಲತಾಣವನ್ನು ಸಂದರ್ಶಿಸಲು ಹೊರಟಿದ್ದೀರಿ ಎಂದುಕೊಳ್ಳೋಣ. ಇದಕ್ಕಾಗಿ ಮೊದಲು ನಿಮ್ಮ ಗಣಕದಲ್ಲಿರುವ ಬ್ರೌಸರ್ ತಂತ್ರಾಂಶವನ್ನು ತೆರೆದು ಅಲ್ಲಿರುವ ವಿಳಾಸ ಪಟ್ಟಿಯಲ್ಲಿ (ಅಡ್ರೆಸ್ ಬಾರ್) ಉದಯವಾಣಿ ಡಾಟ್ ಕಾಮ್ ಎಂದು ದಾಖಲಿಸಿ ಎಂಟರ್ ಕೀಲಿ ಒತ್ತುತ್ತೀರಿ.

ಮುಂದೆ?

ಮಂಗಳವಾರ, ಮೇ 3, 2011

ಡೇಟಾ ವೇರ್‌ಹೌಸ್ ಎಂಬ ಮಾಹಿತಿ ಗೋದಾಮು


ಟಿ ಜಿ ಶ್ರೀನಿಧಿ

ಪಕ್ಕದ ರಸ್ತೆಯ ಬ್ಯಾಂಕಿಗೆ ಹೋಗಿ ಒಂದು ಲಕ್ಷ ಸಾಲ ತೆಗೆದುಕೊಂಡಿದ್ದ ವ್ಯಕ್ತಿ ಆ ಸಾಲ ತೀರಿಸದೆ ತಲೆಮರೆಸಿಕೊಂಡನಂತೆ. ಸ್ವಲ್ಪದಿನ ಬಿಟ್ಟು ದೂರದ ಇನ್ನೊಂದು ಊರಿಗೆ ಹೋಗಿ ಅಲ್ಲಿನ ಬ್ಯಾಂಕಿನಲ್ಲಿ ಐದು ಲಕ್ಷದ ಸಾಲ ಕೇಳಿದನಂತೆ, ನಮ್ಮ ಊರಿನಲ್ಲಿ ಸಾಲ ತೆಗೆದುಕೊಂಡು ಓಡಿಬಂದಿರುವ ವಿಷಯ ಇವರಿಗೇನು ಗೊತ್ತು ಎಂಬ ಧೈರ್ಯದಿಂದ.

ತನ್ನ ಹಣಕಾಸು ವ್ಯವಹಾರಕ್ಕೆ ಸಂಬಂಧಪಟ್ಟ ಎಲ್ಲ ವಿವರಗಳು ಎಲ್ಲ ಬ್ಯಾಂಕುಗಳಿಗೂ ಗೊತ್ತಿರುತ್ತವೆ ಎಂಬ ವಿಷಯ ಮಾತ್ರ ಅವನಿಗೆ  ಗೊತ್ತೇ ಇರಲಿಲ್ಲ, ಪಾಪ!

ಗುರುವಾರ, ಏಪ್ರಿಲ್ 28, 2011

ಮಲಿನ ಗಾಳಿಯ ಮರುಚೇತನ ಸಾಧ್ಯ

ಕೊಳ್ಳೇಗಾಲ ಶರ್ಮ

ಬೆಂಗಳೂರಿನ ಉಸಿರುಗಟ್ಟಿಸುವ ಹೊಗೆಗಾಳಿಯಿಂದ ತಪ್ಪಿಸಿಕೊಂಡು ತುಸು ಆರಾಮ ಪಡೆಯಲು ಪ್ರತಿ ವಾರವೂ ವಾಹನದಲ್ಲಿ ಬೇರಾವುದೋ ಊರಿಗೆ ಓಟಕೀಳುವವರಲ್ಲಿ ನೀವೂ ಒಬ್ಬರಾಗಿದ್ದರೆ ಇದೋ ಇಲ್ಲೊಂದು ಸಮಾಧಾನಕರವಾದ ಸುದ್ದಿ. ನವದೆಹಲಿಯಲ್ಲಿ ಕೆಲವು ವರ್ಷಗಳ ಹಿಂದೆ ಅನುಷ್ಠಾನಕ್ಕೆ ಬಂದ ವಾಯುಮಾಲಿನ್ಯವನ್ನು ನಿಯಂತ್ರಿಸುವ ಕ್ರಮಗಳು ಮಲಿನವಾಗಿರುವ ಗಾಳಿಯ ದುಷ್ಪ್ರಭಾವವನ್ನು ಕಡಿಮೆ ಮಾಡುತ್ತವೆ ಎನ್ನುವ ಸುದ್ದಿಯನ್ನು ಅಟ್ಮಾಸ್ಫೆರಿಕ್ ಎನ್‌ವಿರಾನ್‌ಮೆಂಟ್ ಪತ್ರಿಕೆ ಪ್ರಕಟಿಸಿದೆ. ಅಮೆರಿಕೆಯ ಅಯೋವಾ ವಿಶ್ವವಿದ್ಯಾನಿಲಯದ ಭೂಗೋಳವಿಜ್ಞಾನಿ ಭಾರತ ಸಂಜಾತ ನರೇಶ್ ಕುಮಾರ್ ಬ್ರೌನ್ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರಜ್ಞ ಆಂಡ್ರ್ಯೂ ಫಾಸ್ಟರ್ ಜೊತೆಗೂಡಿ ಪ್ರಕಟಿಸಿರುವ ಒಂದು ವಿಶ್ಲೇಷಣಾ ಪ್ರಬಂಧವೊಂದು ಈ ತೀರ್ಮಾನಕ್ಕೆ ಬಂದಿದೆ.

ಮಂಗಳವಾರ, ಏಪ್ರಿಲ್ 26, 2011

ಇದು ಸೋಶಿಯಲ್ ನ್ಯೂಸ್

ಟಿ ಜಿ ಶ್ರೀನಿಧಿ

೨೦೦೮ರಲ್ಲೇ ಪ್ರಾರಂಭವಾಗಿದ್ದರೂ ನಿರೀಕ್ಷಿತ ಜನಪ್ರಿಯತೆ ಗಳಿಸುವಲ್ಲಿ ವಿಫಲವಾದ ಯಾಹೂ ಬಜ್ ಸೇವೆ ಏಪ್ರಿಲ್ ೨೧, ೨೦೧೧ರಿಂದ ಸ್ಥಗಿತಗೊಳ್ಳಲಿದೆ ಎಂಬ ಸುದ್ದಿ ಈಚೆಗೆ ಕೆಲ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿತ್ತು. ಯಾಹೂ ಡಾಟ್ ಕಾಮ್‌ನಲ್ಲಿ ಅಂಥದ್ದೊಂದು ಸೇವೆ ಲಭ್ಯವಿತ್ತು ಎನ್ನುವುದೇ ಬಹಳಷ್ಟು ಜನಕ್ಕೆ ಗೊತ್ತಿರಲಿಲ್ಲ; ಹೀಗಾಗಿ ಅದು ನಿಂತುಹೋದ ಸುದ್ದಿ ಓದಿದವರಲ್ಲಿ ಅನೇಕರು ಕೇಳಿದ ಪ್ರಶ್ನೆ - "ಯಾಹೂ ಬಜ್ ಅಂದರೇನು?"

ಸೋಶಿಯಲ್ ನ್ಯೂಸ್ ವಿಶ್ವವ್ಯಾಪಿ ಜಾಲದ ಬಳಕೆದಾರರು ಬೇರೆಬೇರೆ ತಾಣಗಳಲ್ಲಿ ನೋಡಿ, ಓದಿ, ಮೆಚ್ಚಿದ ಮಾಹಿತಿಯನ್ನು ಇತರರೊಡನೆ ಒಂದೇ ವೇದಿಕೆಯಲ್ಲಿ ಹಂಚಿಕೊಳ್ಳಲು ಸಹಾಯಮಾಡುವ ತಾಣಗಳನ್ನು ಸೋಶಿಯಲ್ ನ್ಯೂಸ್ ಅಥವಾ ಸಾಮಾಜಿಕ ಸುದ್ದಿತಾಣಗಳು ಎಂದು ಕರೆಯುತ್ತಾರೆ.

ಈಗಷ್ಟೆ ಕಣ್ಣುಮುಚ್ಚಿದ ಯಾಹೂ ಬಜ್ ಕೂಡ ಇಂತಹುದೇ ಒಂದು ತಾಣ.

ಮಂಗಳವಾರ, ಏಪ್ರಿಲ್ 19, 2011

ಇಮೇಲ್ ಕ್ರಾಂತಿಯ ನಾಲ್ಕು ದಶಕ

ಟಿ ಜಿ ಶ್ರೀನಿಧಿ

ಇಮೇಲ್ ಕಂಡುಹಿಡಿದದ್ದು ಯಾರು? ಗಣಕಲೋಕದಲ್ಲಿ ಕೇಳಿಬರುವ ಅನೇಕ ಉತ್ತರವಿಲ್ಲದ ಪ್ರಶ್ನೆಗಳಲ್ಲಿ ಇದೂ ಒಂದು.

ಹೌದು, ಇಮೇಲ್ ತಂತ್ರಜ್ಞಾನವನ್ನು ಯಾರೋ ಒಬ್ಬ ವಿಜ್ಞಾನಿ ಯಾವುದೋ ಒಂದು ದಿನ ಇದ್ದಕ್ಕಿದ್ದಂತೆ ಕಂಡುಹಿಡಿಯಲಿಲ್ಲ; ಗಣಕಲೋಕದ ಅದೆಷ್ಟೋ ಆವಿಷ್ಕಾರಗಳಂತೆ ಸಾಕಷ್ಟು ದೀರ್ಘವಾದ ಅವಧಿಯಲ್ಲಿ ಅನೇಕ ತಂತ್ರಜ್ಞರ ಶ್ರಮದಿಂದ ವಿಕಾಸವಾದ ತಂತ್ರಜ್ಞಾನ ಅದು.

ಆದರೆ ಇಮೇಲ್ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದ ಅನೇಕ ಸಂಗತಿಗಳಿವೆ - ಇಮೇಲ್ ವಿಳಾಸಗಳಲ್ಲಿ @ ಚಿಹ್ನೆಯ ಬಳಕೆ ಪ್ರಾರಂಭವಾದದ್ದು ಇಂತಹ ಮೈಲಿಗಲ್ಲುಗಳಲ್ಲಿ ಅತ್ಯಂತ ಮಹತ್ವಪೂರ್ಣವಾದದ್ದು.

ಆ ಸಾಧನೆಗೆ ಈಗ ನಲವತ್ತು ವರ್ಷ.

ಸೋಮವಾರ, ಏಪ್ರಿಲ್ 18, 2011

ಗಣಕಿಂಡಿ ಅಂಕಣಕ್ಕೆ ನೂರರ ಸಂಭ್ರಮ

ಕನ್ನಡಪ್ರಭದಲ್ಲಿ ಪ್ರಕಟವಾಗುತ್ತಿರುವ ಡಾ| ಯು ಬಿ ಪವನಜ ಅವರ 'ಗಣಕಿಂಡಿ' ಅಂಕಣಕ್ಕೆ ಈಗ ನೂರು ವಾರದ ಸಂಭ್ರಮ. ನೂರು ಎಂಬ ವಿಷಯದ ಸುತ್ತಲೇ ರಚಿಸಲಾಗಿರುವ ಗಣಕಿಂಡಿಯ ಈ ವಾರದ ಕಂತು ಇಲ್ಲಿದೆ.

ಗುರುವಾರ, ಏಪ್ರಿಲ್ 14, 2011

ನೀರಸ ವಿಷಯದ ಅದ್ಭುತ ಪತ್ರಿಕೆಗಳು

ಕೊಳ್ಳೇಗಾಲ ಶರ್ಮ

ಏನು ಮಾರಾಯರೇ! ನಿಮ್ಮ ಹೆಸರು ಓದಿ ನೀವೆಲ್ಲೋ ಬಹಳ ವಯಸ್ಸಾದವರಿರಬೇಕು ಅಂದುಕೊಂಡಿದ್ದೆ. ಈಗ ನಮ್ಮ ಜೊತೆಯಿಲ್ಲದ ಹಿರಿಯ ಸಂಪಾದಕ ಸಂತೋಷ ಕುಮಾರ್ ಗುಲ್ವಾಡಿ ಇಪ್ಪತ್ತೈದು ವರ್ಷಗಳ ಹಿಂದೆ ಮೊತ್ತ ಮೊದಲು ಭೇಟಿಯಾದಾಗ ನನ್ನನ್ನು ಕುರಿತು ಹೇಳಿದ ಮಾತು ಇದು. ಲೇಖನವನ್ನು ಓದಿಯೇ ಲೇಖಕರ ಸ್ವರೂಪವನ್ನು ಊಹಿಸಿಕೊಳ್ಳುತ್ತಿದ್ದ ಕಾಲ ಅದು. ಗುಲ್ವಾಡಿಯವರಾದರೂ ಕೇವಲ ವಯಸ್ಸು ಹೆಚ್ಚಿಸಿದ್ದರು. ನನಗೆ ಪರಿಚಿತರಾದ ಪ್ರಖ್ಯಾತ ಹಾಸ್ಯ ಸಾಹಿತಿಗಳೊಬ್ಬರಿದ್ದಾರೆ. ಮುಖತಃ ಭೇಟಿ ಮಾಡಿದಾಗ ಅವರ ಮುಖದ ಮೇಲೆ ಮುಗುಳ್ನಗುವೂ ಕಾಣಿಸಲಿಕ್ಕಿಲ್ಲ. ಆದರೆ ಬಾಯಿ ಬಿಟ್ಟರೋ, ನೀವು ನಗುತ್ತಲೇ ಇರುತ್ತೀರಿ. ಅಷ್ಟು ಹಾಸ್ಯ! ಹೀಗಾಗಿ ಬರೆಹಕ್ಕೂ, ಲೇಖಕರ ಸ್ವರೂಪಕ್ಕೂ ಏನಕೇನ ಸಂಬಂಧವಿರಲಿಕ್ಕಿಲ್ಲ.

ಬುಧವಾರ, ಏಪ್ರಿಲ್ 13, 2011

ಪ್ರಜಾವಾಣಿಯಲ್ಲಿ ಇ-ಜ್ಞಾನ ಡಾಟ್ ಕಾಮ್

ಪ್ರಜಾವಾಣಿ ಏಪ್ರಿಲ್ ೧೩, ೨೦೧೧ರ ಸಂಚಿಕೆಯ ತಂತ್ರಜ್ಞಾನ ಪುರವಣಿಯಲ್ಲಿ ಇ-ಜ್ಞಾನ ಡಾಟ್ ಕಾಮ್ ಪರಿಚಯ ಪ್ರಕಟವಾಗಿದೆ. ಇದಕ್ಕೆ ಕಾರಣರಾದವರಿಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು.

ಮಂಗಳವಾರ, ಏಪ್ರಿಲ್ 12, 2011

ಸುರಕ್ಷಿತ ಜಾಲತಾಣಗಳ ಸುತ್ತ

ಟಿ ಜಿ ಶ್ರೀನಿಧಿ

ಆನ್‌ಲೈನ್ ಬ್ಯಾಂಕಿಂಗ್ - ವಿಶ್ವವ್ಯಾಪಿ ಜಾಲದ ಅತ್ಯಂತ ಜನಪ್ರಿಯ ಉಪಯೋಗಗಳಲ್ಲೊಂದು. ಪಕ್ಕದ ಬೀದಿಯ ಬ್ಯಾಂಕಿಗೆ ಹೋಗಿ ಮಾಡಬಹುದಾದ ಬಹುತೇಕ ಕೆಲಸಗಳನ್ನೆಲ್ಲ ನಮ್ಮ ಗಣಕದ ಮುಂದೆಯೇ ಕುಳಿತು ಮಾಡುವ ಸೌಲಭ್ಯವನ್ನು ಈ ವ್ಯವಸ್ಥೆ ನಮಗೆ ಒದಗಿಸಿಕೊಟ್ಟಿದೆ.

ನೀವು ಆನ್‌ಲೈನ್ ಬ್ಯಾಂಕಿಂಗ್ ವ್ಯವಸ್ಥೆ ಬಳಸಿದ್ದರೆ ಅಂತಹ ಸೇವೆ ಒದಗಿಸುವ ತಾಣ ಇತರ ಸಾಮಾನ್ಯ ತಾಣಗಳಿಗಿಂತ ಕೊಂಚ ಬೇರೆ ರೀತಿ ಇರುವುದನ್ನು ನೋಡಿರಬಹುದು - ಅವುಗಳ ವಿಳಾಸ ಇತರ ತಾಣಗಳಂತೆ 'http://' ಎಂದು ಪ್ರಾರಂಭವಾಗುವ ಬದಲು 'https://' ಎಂದು ಪ್ರಾರಂಭವಾಗಿರುತ್ತದೆ; ಜೊತೆಗೆ ನೀವು ಆ ತಾಣ ತೆರೆದಾಗ ಪರದೆಯ ಮೇಲೆ ಪುಟ್ಟದೊಂದು ಬೀಗದ ಚಿತ್ರವೂ ಕಾಣಿಸಿಕೊಂಡಿರುತ್ತದೆ.

ನೀವು ತೆರೆದಿರುವ ತಾಣ ನಿಮ್ಮ ವಹಿವಾಟು ನಡೆಸಲು ಸಾಕಷ್ಟು ಸುರಕ್ಷಿತವಾಗಿದೆ ಎಂದು ತಿಳಿಸುವ ಅಂಶಗಳು ಇವು.

ಸೋಮವಾರ, ಏಪ್ರಿಲ್ 11, 2011

ರೈಲುಗಳ ಲೋಕ

ರೈಲು ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ? ಅದರ ಚುಕುಬುಕು ಸದ್ದಂತೂ ಮಕ್ಕಳಿಗೆ ಅಚ್ಚುಮೆಚ್ಚು. ರೈಲು ಪ್ರಯಾಣವೂ ಅಷ್ಟೆ; ನಿಲ್ದಾಣದಲ್ಲಿನ ಗಡಿಬಿಡಿ, ತಿಂಡಿತಿನಿಸು ಮಾರಾಟಗಾರರ ಕೂಗು, ಸೇತುವೆ ಮೇಲೆ ಸುರಂಗದ ಒಳಗೆ ರೈಲಿನ ಓಟ - ಪ್ರತಿಯೊಂದೂ ವಿಶಿಷ್ಟ ಅನುಭವವೇ.

ರೈಲುಗಳಲ್ಲಿ ಅದೆಷ್ಟೋ ವಿಧಗಳಿವೆ. ಹಿಂದಿನ ಕಾಲದಲ್ಲಿ ಎಲ್ಲ ರೈಲುಗಳೂ ಕಲ್ಲಿದ್ದಲನ್ನು ಉರಿಸಿ ನೀರಿನ ಹಬೆಯನ್ನು ಉತ್ಪಾದಿಸಿಕೊಂಡು ಅದರ ಶಕ್ತಿಯಿಂದ ಚಲಿಸುತ್ತಿದ್ದವು. ಹೀಗಾಗಿಯೇ ರೈಲುಗಳಿಗೆ ಉಗಿಬಂಡಿ ಎಂಬ ಹೆಸರು ಬಂದದ್ದು.

ಮಂಗಳವಾರ, ಏಪ್ರಿಲ್ 5, 2011

ಮತ್ತೆ ಸುದ್ದಿಮಾಡಿದ ಸ್ಪೇಸ್ ಟೂರಿಸಂ

ಟಿ ಜಿ ಶ್ರೀನಿಧಿ

ಮನುಕುಲದ ಇತಿಹಾಸದಲ್ಲಿ ಪ್ರತಿಯೊಂದು ಹೊಸ ಆವಿಷ್ಕಾರ ನಡೆದಾಗಲೂ ಅದಕ್ಕೆ ವ್ಯಾಪಕವಾದ ಪ್ರತಿರೋಧಗಳು ವ್ಯಕ್ತವಾಗುತ್ತಲೇ ಬಂದಿವೆ. ಬೆಂಕಿಯ ಬಳಕೆಯಿಂದ ಪ್ರಾರಂಭಿಸಿ ವಿದ್ಯುತ್ತಿನ ಬಳಕೆಯವರೆಗೆ, ಕಾರು-ಬಸ್ಸು-ರೈಲುಗಳಿಂದ ವಿಮಾನದವರೆಗೆ, ಅಲೆಗ್ಸಾಂಡರ್ ಗ್ರಹಾಂಬೆಲ್‌ನ ದೂರವಾಣಿಯಿಂದ ಹಿಡಿದು ಇತ್ತೀಚಿನ ಮೊಬೈಲ್ ದೂರವಾಣಿಗಳವರೆಗೆ ಎಲ್ಲ ಹೊಸ ಉಪಕರಣ-ಸಲಕರಣೆಗಳೂ ಜನಪ್ರಿಯವಾಗುವ ಮುನ್ನ ಸಾಕಷ್ಟು ಉಪೇಕ್ಷೆ-ತಾತ್ಸಾರಕ್ಕೆ ತುತ್ತಾಗಿವೆ.

ಸೋಮವಾರ, ಏಪ್ರಿಲ್ 4, 2011

ಹೊಸ ಕಣಜ ಬಂದಿದೆ!

ಇ-ಜ್ಞಾನ ವಾರ್ತೆ 

'ಕಣಜ' ಅಂತರಜಾಲ ಕನ್ನಡ ಜ್ಞಾನಕೋಶದ ಹೊಸ ಆವೃತ್ತಿ ಇದೀಗ ಅನಾವರಣಗೊಂಡಿದೆ. ಈ ಜಾಲತಾಣವು ಈಗ ಪರೀಕ್ಷಾರ್ಥವಾಗಿ ಹಲವು ಲೇಖನಗಳನ್ನು / ಪುಸ್ತಕ ಭಾಗಗಳನ್ನು ಪ್ರಕಟಿಸಿದ್ದು ಎಲ್ಲವೂ ಸಂಪಾದನೆಯ ವಿವಿಧ ಹಂತದಲ್ಲಿವೆ. ಕಣಜಕ್ಕೆ ಭೇಟಿನೀಡಲು ಇಲ್ಲಿ ಕ್ಲಿಕ್ ಮಾಡಿ.   

ಮಂಗಳವಾರ, ಮಾರ್ಚ್ 29, 2011

ಟ್ವೀಟರ್ ಚಿಲಿಪಿಲಿಗೆ ಹ್ಯಾಪಿ ಬರ್ತ್‌ಡೇ

ಟಿ ಜಿ ಶ್ರೀನಿಧಿ

ಭಾರತ - ಆಸ್ಟ್ರೇಲಿಯಾ ಮ್ಯಾಚು ನೋಡ್ತಾ ಇದೀನಿ

ನಾನೂ ಅಷ್ಟೆ, ಸಖತ್ತಾಗಿದೆ ಮ್ಯಾಚು!

ಛೆ, ನಾನು ಮಿಸ್ ಮಾಡ್ಕೊತಿದೀನಿ, ಆಫೀಸಲ್ಲಿ ತುಂಬಾ ಕೆಲ್ಸ

ಬುಧವಾರ, ಮಾರ್ಚ್ 23, 2011

ಜಪಾನ್‌ಗಾಗಿ ಮಿಡಿದ ಜಾಲಲೋಕದ ಹೃದಯ

ಟಿ ಜಿ ಶ್ರೀನಿಧಿ

ಭೂಕಂಪ, ಸುನಾಮಿ, ವಿಕಿರಣ ಸೋರಿಕೆ, ಜ್ವಾಲಾಮುಖಿ ಸ್ಫೋಟ - ಒಂದರ ಹಿಂದೆ ಒಂದರಂತೆ ಬಂದೆರಗುತ್ತಿರುವ ಸಮಸ್ಯೆಗಳಿಂದ ಜಪಾನ್ ದೇಶ ತತ್ತರಿಸಿಹೋಗಿದೆ. ಈ ಸಮಸ್ಯೆಗಳ ಗಂಭೀರತೆ ಎಷ್ಟಿದೆಯೆಂದರೆ ವಿಶ್ವದ ಎಲ್ಲ ಮಾಧ್ಯಮಗಳೂ ಜಪಾನಿನ ಸುದ್ದಿಗಳನ್ನು ನಮಗೆ ನಿರಂತರವಾಗಿ ತಲುಪಿಸುತ್ತಿವೆ. ಸಾಲುಸಾಲು ದುರಂತಗಳ ಸಂತ್ರಸ್ತರಿಗಾಗಿ ಇಡೀ ಪ್ರಪಂಚವೇ ಮರುಗುತ್ತಿದೆ.

ಹೀಗಿರುವಾಗ ಅಂತರಜಾಲ ಲೋಕ ಸುಮ್ಮನಿರುವುದು ಸಾಧ್ಯವೆ?

ಮಂಗಳವಾರ, ಮಾರ್ಚ್ 22, 2011

ವಿಜ್ಞಾನ ಜಗತ್ತು ೨೦೧೦

ಪ್ರತಿವರ್ಷ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುವ ಸಾಧನೆಗಳನ್ನು ಆಯಾ ವರ್ಷದ ಕೊನೆಯಲ್ಲಿ ಇಯರ್ ಬುಕ್ ರೂಪದಲ್ಲಿ ಪ್ರಕಟಿಸುವ ಅಭ್ಯಾಸ ಇಂಗ್ಲಿಷಿನಲ್ಲಿದೆ. ಆದರೆ ಈ ಕೆಲಸ ಈವರೆಗೆ ಕನ್ನಡದಲ್ಲಿ ಆಗಿರಲಿಲ್ಲ. ಗುಲ್ಬರ್ಗಾದ ಡಾ. ಪಿ. ಎಸ್. ಶಂಕರ್ ಪ್ರತಿಷ್ಠಾನ ಇತ್ತೀಚೆಗೆ ಪ್ರಕಟಿಸಿರುವ 'ವಿಜ್ಞಾನ ಜಗತ್ತು ೨೦೧೦' ಕೃತಿ ಕನ್ನಡದಲ್ಲಿ ಈ ಬಗೆಯ ಪುಸ್ತಕಗಳ ಕೊರತೆಯನ್ನು ತುಂಬಿಕೊಡುವತ್ತ ಮೊದಲ ಹೆಜ್ಜೆ ಇಟ್ಟಿದೆ.

ಮಂಗಳವಾರ, ಮಾರ್ಚ್ 15, 2011

ಕುಕಿ ಕರಾಮತ್ತು

ಟಿ ಜಿ ಶ್ರೀನಿಧಿ

ಗಣಕಲೋಕದಲ್ಲಿ ವಿಚಿತ್ರವಾದುದೊಂದು ಅಭ್ಯಾಸ ಇದೆ. ನಿತ್ಯದ ಬಳಕೆಯಲ್ಲಿರುವ ಪರಿಚಿತ ಹೆಸರುಗಳನ್ನು ಅನೇಕ ಸಂದರ್ಭಗಳಲ್ಲಿ ಗಣಕವಿಜ್ಞಾನಿಗಳು ತಮ್ಮ ಕೆಲಸದಲ್ಲೂ ಬಳಸಿಕೊಂಡುಬಿಡುತ್ತಾರೆ. ಮೌಸ್, ವೈರಸ್, ಶೆಲ್, ಥ್ರೆಡ್, ಬಗ್ - ಹೀಗೆ ಅದೆಷ್ಟೋ ಪರಿಚಿತ ಹೆಸರುಗಳು ನಮಗೆ ಗೊತ್ತಿರುವ ಅರ್ಥಕ್ಕೆ ಕೊಂಚವೂ ಸಂಬಂಧವಿಲ್ಲದ ರೀತಿಯಲ್ಲಿ ಗಣಕಲೋಕದಲ್ಲಿ ಬಳಕೆಯಾಗುತ್ತಿವೆ.

ಮಂಗಳವಾರ, ಮಾರ್ಚ್ 8, 2011

ಕಾಪಿ ಪೇಸ್ಟ್ ಕತೆ

ಟಿ ಜಿ ಶ್ರೀನಿಧಿ

ಇತ್ತೀಚೆಗೆ ಜರ್ಮನಿಯ ಮಂತ್ರಿಯೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾದ ಪರಿಸ್ಥಿತಿ ಬಂತು. ಆತನ ಮೇಲಿದ್ದದ್ದು ತನ್ನ ಡಾಕ್ಟರೇಟ್ ಪ್ರಬಂಧದಲ್ಲಿ ಕೃತಿಚೌರ್ಯ ಮಾಡಿದ ಆರೋಪ. ಲಿಬಿಯಾದ ಕುಖ್ಯಾತ ಸರ್ವಾಧಿಕಾರಿ ಕರ್ನಲ್ ಗಡಾಫಿಯ ಮಗನ ಮೇಲೂ ಇದೀಗ ಇಂತಹುದೇ ಅರೋಪ ಬಂದಿದೆ. ಆತನಿಗೆ ಡಾಕ್ಟರೇಟ್ ಕೊಟ್ಟಿದ್ದ ಪ್ರತಿಷ್ಠಿತ ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್ ಈ ಅರೋಪ ಕುರಿತ ತನಿಖೆ ಪ್ರಾರಂಭಿಸಿದೆ.

ಗಣಕ ಜಗತ್ತಿನಲ್ಲಿ ಸರ್ವಾಂತರ್ಯಾಮಿಯಾಗಿರುವ ಕಾಪಿ-ಪೇಸ್ಟ್ ತಂತ್ರ ಎಷ್ಟು ಪ್ರಭಾವಶಾಲಿ ಎನ್ನುವುದಕ್ಕೆ ಇವು ಕೇವಲ ಉದಾಹರಣೆಗಳಷ್ಟೆ.

ಸೋಮವಾರ, ಮಾರ್ಚ್ 7, 2011

ವಿಶ್ವಕನ್ನಡ ಸಮ್ಮೇಳನದಲ್ಲಿ ವಿಜ್ಞಾನ-ತಂತ್ರಜ್ಞಾನ

ಇ-ಜ್ಞಾನ ವಾರ್ತೆ

ಮಾರ್ಚ್ ಹನ್ನೊಂದರಿಂದ ಮೂರು ದಿನಗಳ ಕಾಲ ಬೆಳಗಾವಿಯಲ್ಲಿ ನಡೆಯಲಿರುವ ವಿಶ್ವಕನ್ನಡ ಸಮ್ಮೇಳನದಲ್ಲಿ 'ಜ್ಞಾನ - ವಿಜ್ಞಾನ - ತಂತ್ರಜ್ಞಾನ - ಕರ್ನಾಟಕ' ಎಂಬ ವಿಚಾರಸಂಕಿರಣವನ್ನು ಆಯೋಜಿಸಲಾಗಿದೆ.

ಮಂಗಳವಾರ, ಮಾರ್ಚ್ 1, 2011

ಇದು ಸೋಷಿಯಲ್ ಶಾಪಿಂಗ್

ಟಿ ಜಿ ಶ್ರೀನಿಧಿ

ಸ್ನ್ಯಾಪ್‌ಡೀಲ್, ಕೂವ್ಸ್, ಡೀಲಿವೋರ್, ಡೀಲ್ಸ್ ಆಂಡ್ ಯೂ, ಟ್ಯಾಗಲ್, ಮಸ್ತಿ ಡೀಲ್ಸ್, ಸಿಟಿಆಫರ್ಸ್ - ಇವು ಭಾರತದ ಜಾಲಲೋಕದಲ್ಲಿ ಇತ್ತೀಚೆಗೆ ಕೇಳಿಬರುತ್ತಿರುವ ಹೊಸ ಹೆಸರುಗಳಲ್ಲಿ ಕೆಲವು. "ಇಪ್ಪತ್ತೈದು ರೂಪಾಯಿ ಕೊಡಿ, ಪುಸ್ತಕಗಳ ಖರೀದಿ ಮೇಲೆ ಇನ್ನೂರು ರೂಪಾಯಿ ರಿಯಾಯಿತಿ ಪಡೆಯಿರಿ", "ನಾನ್ನೂರು ರೂಪಾಯಿ ಬೆಲೆಯ ತಿಂಡಿತೀರ್ಥ ಸೇವಿಸಿ, ನೂರಾ ತೊಂಬತ್ತು ರೂಪಾಯಿ ಮಾತ್ರ ಬಿಲ್ ಪಾವತಿಸಿ", "ವೈನಾಡಿನ ಕಾಡಿನಲ್ಲಿರುವ ರೆಸಾರ್ಟಿನಲ್ಲಿ ತಂಗಲು ಅರ್ಧಬೆಲೆ ಮಾತ್ರ ಕೊಟ್ಟರೆ ಸಾಕು" ಎನ್ನುವಂತಹ 'ಡೀಲು'ಗಳನ್ನು ಮಾರುವುದು ಈ ತಾಣಗಳ ಕೆಲಸ. ಆನ್‌ಲೈನ್ ವ್ಯಾಪಾರಕ್ಕೆ ಹೊಸ ಮೆರುಗು ತಂದುಕೊಟ್ಟಿರುವ ಈ ತಾಣಗಳೆಲ್ಲ ಸೋಷಿಯಲ್ ಶಾಪಿಂಗ್‌ನ ಪರಿಕಲ್ಪನೆ ಆಧರಿಸಿ ಕೆಲಸಮಾಡುತ್ತಿವೆ.

ಸೋಮವಾರ, ಫೆಬ್ರವರಿ 28, 2011

ಹಂಪಿಯಲ್ಲಿ ರಾಷ್ಟ್ರೀಯ ವಿಚಾರಸಂಕಿರಣ

ಇ-ಜ್ಞಾನ ವಾರ್ತೆ


'ಕನ್ನಡದಲ್ಲಿ ಜ್ಞಾನಾಧಾರಿತ ಪಠ್ಯಗಳ ಭಾಷಾಂತರ' ಕುರಿತ ರಾಷ್ಟ್ರೀಯ ವಿಚಾರಸಂಕಿರಣ ಕಳೆದ ಫೆಬ್ರುವರಿ ೨೫ ಹಾಗೂ ೨೬ರಂದು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆಯಿತು. ಭಾರತ ಸರಕಾರದ ರಾಷ್ಟ್ರೀಯ ಅನುವಾದ ಮಿಷನ್, ಮೈಸೂರಿನ ಸಿಐಐಎಲ್ ಹಾಗೂ ಹಂಪಿ ವಿವಿಯ ಭಾಷಾಂತರ ಅಧ್ಯಯನ ವಿಭಾಗ ಈ ಕಾರ್ಯಕ್ರಮವನ್ನು ಆಯೋಜಿಸಿದ್ದವು.

ಒಟ್ಟಾರೆಯಾಗಿ ಜ್ಞಾನಾಧಾರಿತ ಪಠ್ಯಗಳ ಭಾಷಾಂತರದ ಬಗ್ಗೆ ಗಮನಹರಿಸಿದ ಈ ಕಾರ್ಯಕ್ರಮದಲ್ಲಿ ವಿಜ್ಞಾನ ಬರೆವಣಿಗೆ ವಿಷಯದ ಕಡೆಗೂ ಸಾಕಷ್ಟು ಮಹತ್ವ ನೀಡಲಾಗಿತ್ತು. ಡಾ|ಯು ಬಿ ಪವನಜ, ಶ್ರೀ ಟಿ ಆರ್  ಅನಂತರಾಮು, ಶ್ರೀ ಕೊಳ್ಳೇಗಾಲ ಶರ್ಮ, ಶ್ರೀ ಎ ಪಿ ರಾಧಾಕೃಷ್ಣ - ಇವರು ಈ ವಿಚಾರಸಂಕಿರಣದಲ್ಲಿ ಭಾಗವಹಿಸಿದ್ದ ವಿಜ್ಞಾನ-ತಂತ್ರಜ್ಞಾನ ಬರೆಹಗಾರರು.

ಈ ವಿಚಾರಸಂಕಿರಣದಲ್ಲಿ ನಾನೂ ಭಾಗವಹಿಸಿದ್ದೆ. 'ಕನ್ನಡದಲ್ಲಿ ಮಾಹಿತಿ ತಂತ್ರಜ್ಞಾನ ಬರೆವಣಿಗೆ - ಸವಾಲುಗಳು' ಇದು ನಾನು ಮಂಡಿಸಿದ ಪ್ರಬಂಧದ ವಿಷಯ. - ಶ್ರೀನಿಧಿ

ಮಂಗಳವಾರ, ಫೆಬ್ರವರಿ 22, 2011

ಬಿಟ್‌ನಿಂದ ಎಕ್ಸಾಬೈಟ್‌ವರೆಗೆ

ಟಿ ಜಿ ಶ್ರೀನಿಧಿ

೧೮-೧೯ನೇ ಶತಮಾನದ ಕೈಗಾರಿಕಾ ಕ್ರಾಂತಿಯ ನಂತರ ಮನುಕುಲದ ಮೇಲೆ ಅಷ್ಟೇ ದೊಡ್ಡ ಪ್ರಭಾವ ಬೀರಿರುವುದು ಮಾಹಿತಿ ಕ್ರಾಂತಿ. ಆಧುನಿಕ ಗಣಕಗಳ ಬೆಳೆವಣಿಗೆಯೊಡನೆ ಪ್ರಾರಂಭವಾದದ್ದು ಈ ಕ್ರಾಂತಿ. ಅಂತರಜಾಲದ ವಿಕಾಸ, ವಿಶ್ವವ್ಯಾಪಿ ಜಾಲದ ಹುಟ್ಟು, ಅತ್ಯಾಧುನಿಕ ಸಂವಹನ ಮಾಧ್ಯಮಗಳ ಉಗಮ ಮುಂತಾದ ಎಲ್ಲ ಹೆಜ್ಜೆಗಳೂ ನಮ್ಮ ಬದುಕನ್ನು ಅಪಾರವಾಗಿ ಬದಲಿಸಿವೆ. ವಿಶ್ವವ್ಯಾಪಿ ಜಾಲದಲ್ಲಿ, ಮೊಬೈಲ್ ಮೂಲಕ, ದೂರದರ್ಶನ-ಆಕಾಶವಾಣಿಗಳಲ್ಲಿ, ಪತ್ರಿಕೆಗಳಲ್ಲಿ - ಹೀಗೆ ಎಲ್ಲೆಲ್ಲಿ ನೋಡಿದರೂ ಮಾಹಿತಿಯ ಮಹಾಪೂರವೇ ನಮ್ಮನ್ನು ಆವರಿಸಿಕೊಂಡಿದೆ.

ಮಂಗಳವಾರ, ಫೆಬ್ರವರಿ 15, 2011

ಗಣಕಲೋಕಕ್ಕೆ ಪವರ್‌ಕಟ್ ಭೀತಿ

ಟಿ ಜಿ ಶ್ರೀನಿಧಿ

ದೈನಂದಿನ ಬದುಕಿನ ಎಲ್ಲ ಕ್ಷೇತ್ರಗಳಲ್ಲೂ ಆಗಿರುವ ವ್ಯಾಪಕ ಗಣಕೀಕರಣದ ಪರಿಚಯ ನಮ್ಮೆಲ್ಲರಿಗೂ ಚೆನ್ನಾಗಿಯೇ ಇದೆ. ಅತ್ಯಂತ ಹೆಚ್ಚು ಗಣಕೀಕರಣವಾಗಿರುವ ಇಂತಹ ಕ್ಷೇತ್ರಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರ ಪ್ರಮುಖವಾದದ್ದು. ಒಂದು ಶಾಖೆಯಲ್ಲಿರುವ ಖಾತೆಯನ್ನು ಬೇರೆ ಯಾವ ಖಾತೆಯಿಂದಲಾದರೂ ನಿರ್ವಹಿಸುವುದು, ಖಾತೆಗಳ ನಡುವೆ ಬಹಳ ಸುಲಭವಾಗಿ ಹಣ ವರ್ಗಾವಣೆ ಮಾಡುವುದು - ಇಂತಹ ಸೌಲಭ್ಯಗಳಿಗೆಲ್ಲ ಗಣಕೀಕರಣವೇ ಕಾರಣ.

ಗಣಕೀಕರಣದ ಇನ್ನೊಂದು ಪರಿಣಾಮವೆಂದರೆ ಬ್ಯಾಂಕಿಂಗ್ ಚಟುವಟಿಕೆಗಳಲ್ಲಿ ಗಣಕಗಳ ಮೇಲಿನ ಅವಲಂಬನೆ ತೀವ್ರವಾಗಿ ಹೆಚ್ಚಿದೆ. ಕೋಟ್ಯಂತರ ರೂಪಾಯಿಗಳ ವ್ಯವಹಾರವನ್ನು ನಿರ್ವಹಿಸುವ ಈ ಗಣಕಗಳು ಸದಾಕಾಲ ಕೆಲಸಮಾಡುತ್ತಲೇ ಇರಬೇಕಾಗುತ್ತದೆ; ತಪ್ಪುಗಳಾಗುವ ಅಥವಾ ಯಾಂತ್ರಿಕ ವೈಫಲ್ಯದ ಸಾಧ್ಯತೆಯಂತೂ ಇಲ್ಲವೇ ಇಲ್ಲದಂತೆ ನೋಡಿಕೊಳ್ಳಬೇಕಾಗುತ್ತದೆ.

ಸೋಮವಾರ, ಫೆಬ್ರವರಿ 14, 2011

ಕನ್ನಡ ವಿಜ್ಞಾನ ಸಾಹಿತಿಗಳ ಸಮಾವೇಶ

ಇ-ಜ್ಞಾನ ವಾರ್ತೆ

ಕನ್ನಡ ಜನಪ್ರಿಯ ವಿಜ್ಞಾನ ಸಾಹಿತಿಗಳ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ವಿಜ್ಞಾನ ಸಾಹಿತಿಗಳ ನಾಲ್ಕನೇ ಸಮಾವೇಶ ಕಳೆದ ವಾರಾಂತ್ಯ (ಫೆಬ್ರುವರಿ ೧೨-೧೩) ಹಾಸನ ಜಿಲ್ಲೆ ಆಲೂರಿನ ಸಮೀಪದ ಪುಣ್ಯಭೂಮಿಯಲ್ಲಿ ನಡೆಯಿತು. ಹಸಿರು ತೋಟದ ಪರಿಸರದಲ್ಲಿ ನಡೆದ ಈ ಸಮಾವೇಶದಲ್ಲಿ ಡಾ| ಪಿ ಎಸ್ ಶಂಕರ್, ಡಾ| ಪ್ರಧಾನ್ ಗುರುದತ್ತ, ಪ್ರೊ| ಎಚ್ ಬಿ ದೇವರಾಜ ಸರ್ಕಾರ್, ಶ್ರೀ ಟಿ ಆರ್ ಅನಂತರಾಮು, ಡಾ| ನಾ ಸೋಮೇಶ್ವರ, ಡಾ| ಲೀಲಾವತಿ ದೇವದಾಸ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಆರೋಗ್ಯ-ಕೃಷಿ-ವಿಜ್ಞಾನ ಸಾಹಿತ್ಯ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ನಾಲ್ವರು ಹಿರಿಯರನ್ನು ಸಮಾವೇಶದ ಮೊದಲ ದಿನದಂದು ಸನ್ಮಾನಿಸಲಾಯಿತು.

ಈ ಸಮಾರಂಭದ ಕೆಲವು ಚಿತ್ರಗಳು ಇಲ್ಲಿವೆ.








ಬುಧವಾರ, ಫೆಬ್ರವರಿ 9, 2011

ಪುಟ್ಟ ವಿಳಾಸದ ದೊಡ್ಡ ವಿಲಾಸ

ಟಿ ಜಿ ಶ್ರೀನಿಧಿ

bit.ly/g9X0oN, goo.gl/FrX4, mcaf.ee/27f1a - ಈ ಬಗೆಯ ಪುಟ್ಟಪುಟ್ಟ ವೆಬ್ ವಿಳಾಸಗಳನ್ನು ನೀವು ನೋಡಿರಬಹುದು. 'ಶಾರ್ಟ್ ಯುಆರ್‌ಎಲ್' ಎಂದು ಕರೆಸಿಕೊಳ್ಳುವ ಇಂತಹ ಪುಟ್ಟ ವಿಳಾಸಗಳು ವಿಶ್ವವ್ಯಾಪಿ ಜಾಲದಲ್ಲಿ ಈಗ ಬಹಳ ಜನಪ್ರಿಯವಾಗಿವೆ.

ಯುಆರ್‌ಎಲ್ ಅಂದರೇನು?
ವಿಶ್ವವ್ಯಾಪಿ ಜಾಲದಲ್ಲಿ ಲಭ್ಯವಿರುವ ಕೋಟ್ಯಂತರ ಜಾಲತಾಣಗಳನ್ನು ಪ್ರತ್ಯೇಕವಾಗಿ ಗುರುತಿಸಲು ಅನುವುಮಾಡಿಕೊಡುವ ವಿಳಾಸಕ್ಕೆ ಯೂನಿಫಾರ್ಮ್ ರಿಸೋರ್ಸ್ ಲೊಕೇಟರ್ ಅಥವಾ ಯುಆರ್‌ಎಲ್ ಎಂದು ಹೆಸರು. ಪ್ರತಿಯೊಂದು ಜಾಲತಾಣಕ್ಕೂ ವಿಶಿಷ್ಟವಾದ ಯುಆರ್‌ಎಲ್ ಇರುತ್ತದೆ. ಇದು ಆ ಜಾಲತಾಣದ ವಿಳಾಸಕ್ಕೆ ಸಮಾನ.

ಆದರೆ ಇಂತಹ ವಿಳಾಸಗಳು ಕೆಲವೊಮ್ಮೆ ತೀರಾ ಉದ್ದವಾಗಿರುತ್ತವೆ, ಇಲ್ಲವೇ ನೆನಪಿಟ್ಟುಕೊಳ್ಳಲು ಕಷ್ಟವಾಗುವಂತಿರುತ್ತವೆ. ಉದಯವಾಣಿ ಡಾಟ್ ಕಾಮ್, ಗೂಗಲ್ ಡಾಟ್ ಕಾಂ ಮೊದಲಾದ ವಿಳಾಸಗಳನ್ನು ನೆನಪಿಟ್ಟುಕೊಂಡಷ್ಟು ಸುಲಭವಾಗಿ http://74.127.61.106/epaper/PDFList.aspx?Pg=H&Edn=BN&DispDate=2/1/2011ನಂತಹ ವಿಳಾಸವನ್ನು ನೆನಪಿಡಲು ಆಗುವುದಿಲ್ಲ.

ಪುಟ್ಟ ವಿಳಾಸಗಳ ಅಗತ್ಯ ಉಂಟಾಗುವುದೇ ಇಲ್ಲಿ. ಕಳೆದವಾರ ಈ ಅಂಕಣದಲ್ಲಿ ಪ್ರಕಟವಾಗಿದ್ದ ಬರೆಹವನ್ನು http://e-jnana.blogspot.com/2011/02/blog-post.html ಎಂಬ ವಿಳಾಸದಲ್ಲಿ ನೋಡಿ ಎಂದು ಹೇಳುವ ಬದಲು ಪುಟ್ಟದಾಗಿ goo.gl/eLnpG ನೋಡಿ ಎಂದು ಹೇಳಬಹುದು.

ಇಲ್ಲಿ goo.gl/eLnpG ಎನ್ನುವುದು ಪುಟ್ಟ ವಿಳಾಸಕ್ಕೊಂದು ಉದಾಹರಣೆ. ಮೂಲ ವಿಳಾಸವನ್ನು ದಾಖಲಿಸಿಕೊಂಡು ಅದರ ಬದಲಿಗೆ ಬಳಸಬಹುದಾದ ಇಂತಹ ಪುಟ್ಟ ವಿಳಾಸಗಳನ್ನು ಕೊಡುವ ಅನೇಕ ತಾಣಗಳು ವಿಶ್ವವ್ಯಾಪಿ ಜಾಲದಲ್ಲಿವೆ. bit.ly, ಗೂಗಲ್ ಸಂಸ್ಥೆಯ goo.gl, ಮೆಕಫಿ ಸಂಸ್ಥೆಯ mcaf.ee ಇವೆಲ್ಲ ಈ ಬಗೆಯ ಕೆಲ ತಾಣಗಳು.

ವಿಳಾಸ ಸಂಕ್ಷಿಪ್ತಗೊಳಿಸುವ (ಯುಆರ್‌ಎಲ್ ಶಾರ್ಟನಿಂಗ್) ಸೇವೆ ಒದಗಿಸುವ ಇಂತಹ ಯಾವುದೇ ಜಾಲತಾಣಕ್ಕೆ ಹೋಗಿ ನಿಮಗೆ ಉದ್ದವೆನಿಸುವ ಯಾವುದೇ ವಿಳಾಸವನ್ನು ದಾಖಲಿಸುತ್ತಿದ್ದಂತೆಯೇ ಅದಕ್ಕೆ ಪರ್ಯಾಯವಾದ ಶಾರ್ಟ್ ಯುಆರ್‌ಎಲ್ ಸಿದ್ಧವಾಗುತ್ತದೆ. ಇದನ್ನು ನೀವು ಎಲ್ಲಿ ಯಾರ ಜೊತೆಗೆ ಬೇಕಿದ್ದರೂ ಹಂಚಿಕೊಳ್ಳಬಹುದು. ಮೂಲ ವಿಳಾಸ ಹಾಗೂ ಪುಟ್ಟ ವಿಳಾಸ ಎರಡನ್ನೂ ನೆನಪಿಟ್ಟುಕೊಳ್ಳುವ ಯುಆರ್‌ಎಲ್ ಶಾರ್ಟನಿಂಗ್ ಸೇವೆ ಅವೆರಡನ್ನೂ ಹೊಂದಿಸಿ ಬಳಕೆದಾರರು ಪುಟ್ಟ ವಿಳಾಸ ದಾಖಲಿಸಿದಾಗೆಲ್ಲ ಅವರನ್ನು ಮೂಲ ವಿಳಾಸಕ್ಕೇ ಕರೆದೊಯ್ಯುತ್ತದೆ.

ಪುಟ್ಟ ವಿಳಾಸದ ಒಂದು ದಶಕ
ವಿಶ್ವವ್ಯಾಪಿ ಜಾಲದಲ್ಲಿ ಪುಟ್ಟ ವಿಳಾಸಗಳನ್ನು ಬಳಸುವ ಅಭ್ಯಾಸ ಇತ್ತೀಚಿನದೇನಲ್ಲ. 'ಮೇಕ್ ಎ ಶಾರ್ಟರ್ ಲಿಂಕ್' ಎಂಬ ಜಾಲತಾಣ ೨೦೦೧ರಷ್ಟು ಹಿಂದೆಯೇ ಯುಆರ್‌ಎಲ್ ಶಾರ್ಟನಿಂಗ್ ಸೇವೆ ಒದಗಿಸುತ್ತಿತ್ತು. ನಂತರದ ದಿನಗಳಲ್ಲಿ 'ಟೈನಿ ಯುಆರ್‌ಎಲ್' ಎಂಬ ತಾಣ ಕೂಡ ಸಾಕಷ್ಟು ಹೆಸರುಮಾಡಿತ್ತು.

೨೦೦೬ರಲ್ಲಿ ಕಾಣಿಸಿಕೊಂಡ ಟ್ವೀಟರ್‌ನಿಂದಾಗಿ ಪುಟ್ಟ ವಿಳಾಸಗಳ ಜನಪ್ರಿಯತೆ ಇನ್ನಷ್ಟು ಹೆಚ್ಚಿತು. ಇಲ್ಲಿ ನೂರಾ ನಲವತ್ತು ಅಕ್ಷರಗಳೊಳಗಾಗಿ ಸಂದೇಶಗಳನ್ನು ಬರೆಯಬೇಕಾದ ಅನಿವಾರ್ಯತೆ ಇದ್ದುದರಿಂದ ದೊಡ್ಡದೊಡ್ಡ ವಿಳಾಸಗಳಿಗೆ ಜಾಗವೇ ಇಲ್ಲದಂತಾಯಿತು.

ಇದೀಗ ಟ್ವೀಟರ್‌ನಲ್ಲಿ bit.ly ಎಂಬ ಯುಆರ್‌ಎಲ್ ಶಾರ್ಟನಿಂಗ್ ಸೇವೆ ವ್ಯಾಪಕವಾಗಿ ಬಳಕೆಯಾಗುತ್ತದೆ.

ಪುಟ್ಟದಲ್ಲ ಈ ಸಮಸ್ಯೆ
ಈ ಪುಟ್ಟ ವಿಳಾಸಗಳು ಯಾವ ಮೂಲ ವಿಳಾಸಕ್ಕೆ ಕರೆದೊಯ್ಯುತ್ತವೆ ಎಂದು ಮೇಲ್ನೋಟಕ್ಕೆ ಗೊತ್ತಾಗುವುದಿಲ್ಲ. ಹೀಗಾಗಿ ಇವುಗಳನ್ನು ವೈರಸ್ ಹರಡುವಂತಹ ಕೆಟ್ಟ ಉದ್ದೇಶಗಳಿಗಾಗಿಯೂ ಬಳಸಲಾಗುತ್ತಿದೆ. ಇತ್ತೀಚೆಗೆ ಟ್ವೀಟರ್‌ನಲ್ಲಿ ಕಾಣಿಸಿಕೊಂಡಿದ್ದ ಇಂಥದ್ದೊಂದು ಪುಟ್ಟ ವಿಳಾಸ ಸಾಕಷ್ಟು ತೊಂದರೆ ಉಂಟುಮಾಡಿತ್ತು; ಆ ವಿಳಾಸಕ್ಕೆ ಹೋದವರಿಗೆಲ್ಲ ನಿಮ್ಮ ಗಣಕಕ್ಕೆ ವೈರಸ್ ಬಂದಿದೆ ಎಂದು ಹೆದರಿಸಿ ಆಂಟಿ-ವೈರಸ್ ನೀಡುವ ನೆಪದಲ್ಲಿ ಯಾವುದೋ ಕುತಂತ್ರಾಂಶವನ್ನು ಅವರ ಗಣಕದಲ್ಲಿ ಅನುಸ್ಥಾಪಿಸಲಾಗುತ್ತಿತ್ತು. ಬೇಡದ ತಂತ್ರಾಂಶಕ್ಕೆ ದುಡ್ಡು ಬೇರೆ ಕೊಟ್ಟು ಆ ತಂತ್ರಾಂಶದಿಂದ ಆಗುವ ತೊಂದರೆಯನ್ನೂ ಅನುಭವಿಸುವ ಪಾಡು ಬಳಕೆದಾರರದು!

ಇಂತಹ ತೊಂದರೆ ತಪ್ಪಿಸಿಕೊಳ್ಳಲು ಇರುವ ಒಂದೇ ಮಾರ್ಗ ಅಪರಿಚಿತ ಮೂಲಗಳಿಂದ ಬಂದ, ಅಥವಾ ಸಂದೇಹಾಸ್ಪದ ಸಂದೇಶಗಳಲ್ಲಿರುವ ಪುಟ್ಟ ವಿಳಾಸಗಳ ಕೊಂಡಿಯ ಮೇಲೆ ಕ್ಲಿಕ್ಕಿಸದಿರುವುದು ಎಂದು ತಜ್ಞರು ಹೇಳುತ್ತಾರೆ. ನೀವು ನೋಡಹೊರಟಿರುವ ಪುಟ್ಟ ವಿಳಾಸ ಎಲ್ಲಿಗೆ ಕರೆದೊಯ್ಯಲಿದೆ ಎಂದು ಪರೀಕ್ಷಿಸಿನೋಡುವ ಸೌಲಭ್ಯ ಬಳಸಿಕೊಳ್ಳುವುದೂ ಒಳ್ಳೆಯ ಆಯ್ಕೆಯೇ. mcaf.ee ತಾಣ ಇಂತಹ ಸೌಲಭ್ಯ ಒದಗಿಸುತ್ತಿರುವ ಯುಆರ್‌ಎಲ್ ಶಾರ್ಟನಿಂಗ್ ಸೇವೆಗಳಿಗೊಂದು ಉದಾಹರಣೆ.

ಫೆಬ್ರುವರಿ ೮, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಮಂಗಳವಾರ, ಫೆಬ್ರವರಿ 1, 2011

ಕಂಟ್ರೋಲ್ ಆಲ್ಟ್ ಡಿಲೀಟ್!

ಟಿ ಜಿ ಶ್ರೀನಿಧಿ

ಗಣಕದಲ್ಲಿ ಕೆಲಸಮಾಡುತ್ತಿರುವಾಗ ಕೆಲವೊಮ್ಮೆ ನೀವು ಬಳಸುತ್ತಿದ್ದ ತಂತ್ರಾಂಶ ಇದ್ದಕ್ಕಿದ್ದಹಾಗೆ ದಿಕ್ಕುತೋಚದೆ ಹ್ಯಾಂಗ್ ಆಗುವುದನ್ನು ನೀವು ಗಮನಿಸಿಯೇ ಇರುತ್ತೀರಿ. ಆಗೆಲ್ಲ ನಿಮ್ಮ ಸಹಾಯಕ್ಕೆ ಬರುವುದು ಮೂರು ಬೆರಳಿನ ಸಲಾಮು, ಅರ್ಥಾತ್ ಕಂಟ್ರೋಲ್-ಆಲ್ಟ್-ಡಿಲೀಟ್!

ಗಣಕದ ಕೀಲಿಮಣೆಯಲ್ಲಿ ಕಂಟ್ರೋಲ್, ಆಲ್ಟ್ ಹಾಗೂ ಡಿಲೀಟ್ - ಈ ಮೂರೂ ಕೀಲಿಗಳನ್ನು ಒಟ್ಟಿಗೆ ಒತ್ತುವ ಆಯ್ಕೆಯನ್ನು ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯ ಬಳಕೆದಾರರು ಬಹಳ ವ್ಯಾಪಕವಾಗಿ ಬಳಸುತ್ತಾರೆ. ತಂತ್ರಾಂಶಗಳು ಹ್ಯಾಂಗ್ ಆದಾಗ ಅವುಗಳ ಕೆಲಸವನ್ನು ಬಲವಂತವಾಗಿ ಸ್ಥಗಿತಗೊಳಿಸಲು ಅಥವಾ ಯಾವ ತಂತ್ರಾಂಶವೂ ಪ್ರತಿಕ್ರಿಯೆ ನೀಡದ ಸಂದರ್ಭದಲ್ಲಿ ಗಣಕವನ್ನು ರೀಬೂಟ್ ಮಾಡಲು ಅನುವುಮಾಡಿಕೊಡುವ ರಾಮಬಾಣ ಈ ಕಂಟ್ರೋಲ್-ಆಲ್ಟ್-ಡಿಲೀಟ್.

ಅಷ್ಟೇ ಅಲ್ಲ, ಗಣಕಕ್ಕೆ ಲಾಗ್‌ಆನ್ ಆಗುವಾಗ, ಗುಪ್ತಪದ ಬದಲಿಸಲು, ಟಾಸ್ಕ್ ಮ್ಯಾನೇಜರ್ ತಂತ್ರಾಂಶವನ್ನು ತೆರೆಯಲು, ಲಾಗ್‌ಆಫ್ ಅಥವಾ ಶಟ್‌ಡೌನ್ ಮಾಡಲು - ಹೀಗೆ ಅನೇಕ ಕೆಲಸಗಳಿಗೂ ಇದೇ ಮೂರು ಕೀಲಿಗಳ ಸಂಯೋಜನೆ ಸಹಾಯಮಾಡುತ್ತದೆ. ಓಎಸ್/೨ ಹಾಗೂ ಲಿನಕ್ಸ್ ಕಾರ್ಯಾಚರಣ ವ್ಯವಸ್ಥೆ ಬಳಸುವ ಗಣಕಗಳಲ್ಲೂ ಕಂಟ್ರೋಲ್-ಆಲ್ಟ್-ಡಿಲೀಟ್ ಬಳಸಿ ರೀಬೂಟ್ ಮಾಡುವುದು ಸಾಧ್ಯ. ಇಷ್ಟೆಲ್ಲ ಕೆಲಸಗಳಿಗೆ ಸಹಾಯಮಾಡುವ ಈ ಸಂಯೋಜನೆಗೆ ಮೂರು ಬೆರಳಿನ ಸಲಾಮು ಅಥವಾ ಥ್ರೀ ಫಿಂಗರ್ ಸಲ್ಯೂಟ್ ಎಂಬ ಅಡ್ಡಹೆಸರೂ ಇದೆ.

ಯಾವುದೇ ಕೆಲಸ ಸಾಧಿಸಲು ಕೀಲಿಮಣೆಯಲ್ಲಿ ಮೂರು ಕೀಲಿಗಳನ್ನು ಒಟ್ಟಿಗೆ ಒತ್ತುವ ಕಲ್ಪನೆಯೇ ವಿಚಿತ್ರವಾದದ್ದು. ಅದರಲ್ಲೂ ಕೀಲಿಮಣೆಯ ಒಂದು ಮೂಲೆಯಲ್ಲಿರುವ ಕಂಟ್ರೋಲ್ ಹಾಗೂ ಆಲ್ಟ್ ಜೊತೆಗೆ ಇನ್ನೊಂದು ಮೂಲೆಯಲ್ಲಿರುವ ಡಿಲೀಟ್ ಕೀಲಿಯನ್ನು ಒತ್ತುವುದಂತೂ ಇನ್ನೂ ವಿಚಿತ್ರವಾದ ಕಲ್ಪನೆ. ಆದರೂ ವಿಶ್ವದೆಲ್ಲೆಡೆ ಕೋಟ್ಯಂತರ ಜನರು ಈ ಸಂಯೋಜನೆಯನ್ನು ಹೆಚ್ಚೂಕಡಿಮೆ ಮೂವತ್ತು ವರ್ಷಗಳಿಂದ ಬಳಸುತ್ತಿದ್ದಾರೆ.

ಕಂಟ್ರೋಲ್ ಆಲ್ಟ್ ಡಿಲೀಟ್ ಇಷ್ಟೆಲ್ಲ ಜನಪ್ರಿಯವಾಗುತ್ತದೆ ಎಂಬ ಕಲ್ಪನೆ ಅದರ ಸೃಷ್ಟಿಕರ್ತ ಡೇವಿಡ್ ಬ್ರಾಡ್ಲಿಗೂ ಇರಲಿಲ್ಲವಂತೆ. ೧೯೮೦ರಲ್ಲೋ ೮೧ರಲ್ಲೋ ಆದ ಈ ಸಂಯೋಜನೆಯ ಸೃಷ್ಟಿ ಅಂತಹ ಸ್ಮರಣಾರ್ಹ ಘಟನೆಯೇನೂ ಆಗಿರಲಿಲ್ಲ ಎಂಬುದು ಅವರ ಹೇಳಿಕೆ.

ಆಗ ಐಬಿಎಂ ಸಂಸ್ಥೆಯಲ್ಲಿ 'ಐಬಿಎಂ ಪಿಸಿ'ಯ ಮೇಲೆ ಕೆಲಸ ನಡೆಯುತ್ತಿತ್ತು. ಅದಕ್ಕಾಗಿ ತಂತ್ರಾಂಶಗಳನ್ನು ರೂಪಿಸಿ ಪರೀಕ್ಷಿಸುತ್ತಿದ್ದ ತಂತ್ರಜ್ಞರು ಅನೇಕಬಾರಿ ಗಣಕವನ್ನು ರೀಬೂಟ್ ಮಾಡಬೇಕಾಗುತ್ತಿತ್ತು. ಪ್ರತಿಬಾರಿಯೂ ಗಣಕವನ್ನು ಆರಿಸಿ ಪುನಃ ಚಾಲೂ ಮಾಡುವಾಗ ಪವರ್ ಆನ್ ಸೆಲ್ಫ್ ಟೆಸ್ಟ್(ಪೋಸ್ಟ್)ನಿಂದಾಗಿ ಕೆಲ ನಿಮಿಷಗಳಷ್ಟು ಸಮಯ ವ್ಯಯವಾಗುತ್ತಿತ್ತು. ಇದರ ಬದಲು ಗಣಕವನ್ನು ಆರಿಸದೆಯೇ ರೀಬೂಟ್ ಮಾಡಿದರೆ ಸಾಕಷ್ಟು ಸಮಯದ ಉಳಿತಾಯವಾಗಬಹುದು ಎಂಬ ಆಲೋಚನೆಯ ಪರಿಣಾಮವೇ ಕಂಟ್ರೋಲ್ ಆಲ್ಟ್ ಡಿಲೀಟ್ ಸಂಯೋಜನೆಯ ಸೃಷ್ಟಿ.

ಆಕಸ್ಮಿಕವಾಗಿ ಕೀಲಿಗಳನ್ನು ಒತ್ತುವ ಸಾಧ್ಯತೆ ತಪ್ಪಿಸುವ ಒಂದೇ ಕಾರಣದಿಂದ ಕೀಲಿಮಣೆಯ ವಿರುದ್ಧ ಮೂಲೆಗಳಲ್ಲಿರುವ ಕಂಟ್ರೋಲ್, ಆಲ್ಟ್ ಹಾಗೂ ಡಿಲೀಟ್ ಕೀಲಿಗಳನ್ನು ಈ ಉದ್ದೇಶಕ್ಕಾಗಿ ಆರಿಸಿಕೊಳ್ಳಲಾಯಿತಂತೆ. ಆ ಸಮಯದಲ್ಲಿ ನಮ್ಮನಿಮ್ಮಂತಹ ಗಣಕ ಬಳಕೆದಾರರಿಗೆ ಈ ಆಯ್ಕೆ ಒದಗಿಸುವ ಯಾವ ಉದ್ದೇಶವೂ ಇರಲಿಲ್ಲ ಎನ್ನುವುದು ತಮಾಷೆಯ ಸಂಗತಿ.

ಈ ಕೀಲಿಗಳ ಆಯ್ಕೆಗಾಗಲೀ ಅಥವಾ ಈ ಸಂಯೋಜನೆಯನ್ನು ಬಳಸಿದಾಗ ಗಣಕವನ್ನು ರೀಬೂಟ್ ಮಾಡುವ ತಂತ್ರಾಂಶದ ಸೃಷ್ಟಿಗಾಗಲೀ ಹೆಚ್ಚೇನೂ ಸಮಯ ಹಿಡಿಸಲಿಲ್ಲ ಎಂದು ಬ್ರಾಡ್ಲಿ ಹೇಳುತ್ತಾರೆ. ಗಣಕ ಕ್ಷೇತ್ರದಲ್ಲಿ ಮೂರು ದಶಕಕ್ಕೂ ಹೆಚ್ಚು ಕಾಲ ಕೆಲಸ ಮಾಡಿರುವ ಅವರು ತಮ್ಮ ಸಣ್ಣದೊಂದು ಸೃಷ್ಟಿ ಇಷ್ಟೆಲ್ಲ ಜನಪ್ರಿಯವಾಗುತ್ತದೆ ಎಂದು ಖಂಡಿತಾ ಅಂದುಕೊಂಡಿರಲಿಲ್ಲವಂತೆ.

ಫೆಬ್ರುವರಿ ೧, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಮಂಗಳವಾರ, ಜನವರಿ 25, 2011

ಅಂತರಜಾಲಕ್ಕೂ ಬೆನ್ನೆಲುಬು!

ಟಿ ಜಿ ಶ್ರೀನಿಧಿ

ಮಳೆಗಾಲದಲ್ಲಿ ವಿದ್ಯುತ್ ಹಾಗೂ ದೂರವಾಣಿ ತಂತಿಗಳ ಮೇಲೆ ಕೊಂಬೆಯೋ ಮರವೋ ಬಿದ್ದು ದಿನಗಟ್ಟಲೆ ಸಂಪರ್ಕ ತಪ್ಪಿಹೋಗುವುದು ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯ ಸಂಗತಿ. ಬರಿಯ ಗ್ರಾಮೀಣ ಪ್ರದೇಶಗಳೇ ಏಕೆ, ನಗರಗಳಲ್ಲೂ ಒಮ್ಮೊಮ್ಮೆ ಇಂತಹ ತೊಂದರೆ ಆಗುವುದುಂಟು. ತುಂಡಾದ ತಂತಿ ಸರಿಹೋಗುವ ತನಕ ವಿದ್ಯುತ್ತೂ ಇಲ್ಲ, ದೂರವಾಣಿಯೂ ಇಲ್ಲ. ದೂರವಾಣಿ ಸಂಪರ್ಕದ ತಂತಿ ಕಡಿದುಹೋದರೆ ಅಂತರಜಾಲ ಸಂಪರ್ಕಕ್ಕೂ ಕುತ್ತು.

ಆದರೆ ಇಂತಹ ಸಂದರ್ಭಗಳಲ್ಲಿ ತೊಂದರೆಯಾಗುವುದು ಬಹಳ ಸೀಮಿತ ಪ್ರದೇಶದಲ್ಲಿ ಮಾತ್ರ - ನಗರಪ್ರದೇಶವಾದರೆ ಒಂದೋ ಎರಡೋ ರಸ್ತೆ, ಗ್ರಾಮೀಣ ಪ್ರದೇಶದಲ್ಲಿ ಒಂದೋ ಎರಡೋ ಹಳ್ಳಿ ಅಷ್ಟೆ. ಆದರೆ ದೇಶದೇಶಗಳ ಅಂತರಜಾಲ ಸಂಪರ್ಕವೇ ತಪ್ಪಿಹೋಗುವುದರ ಬಗ್ಗೆ ಕೇಳಿದ್ದೀರಾ?

ಇದು ಖಂಡಿತಾ ತಮಾಷೆಯಲ್ಲ, ಅಂತರಜಾಲದ ಬೆನ್ನೆಲುಬಿಗೆ ತೊಂದರೆಯಾದಾಗ ಇಂತಹ ಸಮಸ್ಯೆ ನಿಜಕ್ಕೂ ಕಾಣಿಸಿಕೊಳ್ಳುತ್ತದೆ!

ಅಂತರಜಾಲದ ಬ್ಯಾಕ್‌ಬೋನ್
ನಮ್ಮ ಮನೆಗಳಿಗೆ ಅಂತರಜಾಲ ಸಂಪರ್ಕ ಒದಗಿಸುವ ಬಿಎಸ್‌ಎನ್‌ಎಲ್, ಏರ್‌ಟೆಲ್ ಮುಂತಾದ ಸಂಸ್ಥೆಗಳನ್ನು ಇಂಟರ್‌ನೆಟ್ ಸರ್ವಿಸ್ ಪ್ರೊವೈಡರ್ ಅಥವಾ ಐಎಸ್‌ಪಿಗಳೆಂದು ಕರೆಯುವುದು ನಿಮಗೆ ಗೊತ್ತೇ ಇದೆ.

ನಮಗೆ ಅಂತರಜಾಲ ಸಂಪರ್ಕ ಒದಗಿಸುವ ಇಂತಹ ಸಂಸ್ಥೆಗಳಿಗೆ ಅವಕ್ಕಿಂತ ದೊಡ್ಡದಾದ ಮತ್ತೊಂದು ಐ.ಎಸ್.ಪಿ.ಯ ಜೊತೆಗೆ ಸಂಪರ್ಕ ಇರುತ್ತದೆ. ಇಂತಹ ದೊಡ್ಡ ಐ.ಎಸ್.ಪಿ.ಗಳಿಗೆ, ಇನ್ನೂ ದೊಡ್ಡ ಐ.ಎಸ್.ಪಿ.ಗಳ ಜೊತೆಗೆ ಸಂಪರ್ಕ ಇರುತ್ತದೆ. ಇಂತಹ ಸಂಪರ್ಕವನ್ನು ಸಾಮಾನ್ಯವಾಗಿ ಉಪಗ್ರಹ ಸಂಕೇತಗಳ ಮೂಲಕ ಏರ್ಪಡಿಸಿಕೊಳ್ಳಲಾಗುತ್ತದೆ.

ಕೊನೆಗೆ ಜಾಗತಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಐ.ಎಸ್.ಪಿ.ಗಳು ತಮ್ಮ ನಡುವೆ ಫೈಬರ್ ಆಪ್ಟಿಕ್ ತಂತುಗಳ ಜಾಲವನ್ನು ನಿರ್ಮಿಸಿಕೊಂಡಿರುತ್ತವೆ. ಇದನ್ನು ಫೈಬರ್ ಆಪ್ಟಿಕ್ ಬ್ಯಾಕ್‌ಬೋನ್ ಎಂದು ಕರೆಯುತ್ತಾರೆ. ಜಾಗತಿಕ ಮಟ್ಟದ ಅಂತರಜಾಲದ ಬೆನ್ನೆಲುಬು ಇದು. ಇವೆಲ್ಲ ಸಂಪರ್ಕಗಳೂ ಒಟ್ಟಾಗಿ ಅಂತರಜಾಲದ ಮೂಲಕ ಇಡೀ ವಿಶ್ವವನ್ನೇ ಒಂದುಗೂಡಿಸುತ್ತವೆ.

ಆಪ್ಟಿಕಲ್ ಫೈಬರ್
ಅತ್ಯಂತ ಶುದ್ಧ ಗಾಜಿನಿಂದ ಪಾರದರ್ಶಕ ಸಲಾಕೆಗಳನ್ನು ತಯಾರಿಸಿ ಅವು ಬಳುಕುವಷ್ಟು ತೆಳ್ಳಗೆ, ಉದ್ದಕ್ಕೆ ಆಗುವ ತನಕ ಜಗ್ಗಿಸಿ ಎಳೆಯುವುದರಿಂದ ಆಪ್ಟಿಕಲ್ ಫೈಬರ್‌ಗಳು ತಯಾರಾಗುತ್ತವೆ. ನಾವು ರಸ್ತೆಬದಿಗಳಲ್ಲಿ ನೋಡುತ್ತೇವಲ್ಲ, ದೂರವಾಣಿ ಸಂಸ್ಥೆಗಳು ಅಳವಡಿಸುವ ಬಣ್ಣಬಣ್ಣದ ದಪ್ಪನೆಯ ಕೊಳವೆಗಳು, ಆ ಕೊಳವೆಗಳ ಒಳಗಿರುವುದು ಇಂತಹವೇ ಆಪ್ಟಿಕಲ್ ಫೈಬರ್‌ಗಳು.

ಈ ಆಪ್ಟಿಕಲ್ ಫೈಬರ್‌ಗಳ ಮೂಲಕ ಅಪಾರ ಪ್ರಮಾಣದ ಮಾಹಿತಿಯನ್ನು ಬೆಳಕಿನ ಕಿರಣಗಳ ರೂಪದಲ್ಲಿ ಅನೇಕ ಕಿಲೋಮೀಟರುಗಳಷ್ಟು ದೂರ ರವಾನಿಸುವುದು ಸಾಧ್ಯ. ಈ ಎಳೆಗಳನ್ನು ಅತ್ಯಂತ ಶುದ್ಧವಾದ ಗಾಜಿನಿಂದ ತಯಾರಿಸಲಾಗುವುದರಿಂದ ಅದರ ಮೂಲಕ ಸಾಗುವ ಬೆಳಕಿನ ಕಿರಣಗಳು ಸಂಪೂರ್ಣ ಆಂತರಿಕ ಪ್ರತಿಫಲನ (ಟೋಟಲ್ ಇಂಟರ್ನಲ್ ರಿಫ್ಲೆಕ್ಷನ್) ಕ್ಕೆ ಒಳಗಾಗುತ್ತವೆ - ಅಂದರೆ, ಬೆಳಕಿನ ಕಿರಣಗಳು ಸಂಪೂರ್ಣವಾಗಿ ಈ ಎಳೆಯೊಳಗೇ ಪ್ರತಿಫಲಿಸಲ್ಪಡುತ್ತದೆ. ಹೀಗಾಗಿ ಆಪ್ಟಿಕಲ್ ಫೈಬರ್‌ಗಳಲ್ಲಿ ಮಾಹಿತಿ ಸೋರಿಕೆ ಬಹಳ ಕಡಿಮೆ ಹಾಗೂ ಮಾಹಿತಿ ಸಂವಹನದ ನಿಖರತೆ ಬಹಳ ಹೆಚ್ಚಾಗಿರುತ್ತದೆ.

ಆಪ್ಟಿಕಲ್ ಫೈಬರ್‌ಗಳ ಈ ವಿಶಿಷ್ಟ ಗುಣದಿಂದಾಗಿಯೇ ಅವು ಈಗ ಅಂತರಜಾಲ, ಸ್ಥಿರ ದೂರವಾಣಿ, ಮೊಬೈಲ್ ಸೇವೆಗಳು ಮುಂತಾದ ಎಲ್ಲ ಮಾಹಿತಿ ಮೂಲಗಳಿಗೂ ಬೆನ್ನೆಲುಬಿನಂತೆ ಆಗಿಬಿಟ್ಟಿವೆ. ಅಂತರಜಾಲ ಸಂಪರ್ಕಕ್ಕಾಗಿ ಬಳಕೆಯಾಗುವ ಫೈಬರ್ ಆಪ್ಟಿಕ್ ಬ್ಯಾಕ್‌ಬೋನ್‌ಗಳಂತೂ ವಿಶ್ವದ ಮೂಲೆಮೂಲೆಗಳನ್ನು ಸಂಪರ್ಕಿಸುತ್ತಿವೆ.

ಬೆನ್ನೆಲುಬಿನ ಸಮಸ್ಯೆ
ಫೈಬರ್ ಆಪ್ಟಿಕ್ ಬ್ಯಾಕ್‌ಬೋನ್‌ಗಳ ಮೂಲಕ ನಡೆಯುವ ಸಂವಹನಕ್ಕೆ ಸಬ್‌ಮರೀನ್ ಕಮ್ಯೂನಿಕೇಷನ್ಸ್ ಕೇಬಲ್‌ಗಳನ್ನು ಬಳಸಲಾಗುತ್ತದೆ; ಅಂದರೆ, ಈ ಕೇಬಲ್‌ಗಳು ಸಮುದ್ರದ ಆಳದಲ್ಲಿರುತ್ತವೆ. ಅಂತರರಾಷ್ಟ್ರೀಯ ದೂರವಾಣಿ ಕರೆಗಳಿಗೂ ಈ ಕೇಬಲ್‌ಗಳೇ ಬೇಕು. ವಿಶ್ವದ ಯಾವುದೋ ಮೂಲೆಯಲ್ಲಿರುವ ವ್ಯಕ್ತಿ ಇನ್ನಾವುದೋ ಮೂಲೆಯಲ್ಲಿರುವ ಮತ್ತೊಬ್ಬರನ್ನು ಸಂಪರ್ಕಿಸಬೇಕಾದರೆ ಆ ಸಂವಹನಕ್ಕೆ ಸಮುದ್ರದಾಳದ ಈ ಕೇಬಲ್ಲುಗಳೇ ಜೀವಾಳ. ಅನೇಕ ಸರಕಾರಗಳು ಹಾಗೂ ಖಾಸಗಿ ಸಂಸ್ಥೆಗಳ ಒಡೆತನದಲ್ಲಿ ಕಾರ್ಯನಿರ್ವಹಿಸುವ ಈ ಬಗೆಯ ಕೇಬಲ್ಲುಗಳ ಜಾಲ ಅಂಟಾರ್ಕ್‌ಟಿಕಾ ಹೊರತುಪಡಿಸಿ ಬೇರೆಲ್ಲ ಖಂಡಗಳನ್ನೂ ಪರಸ್ಪರ ಸಂಪರ್ಕಿಸುತ್ತದೆ.

ಹೀಗಾಗಿಯೇ ಈ ಕೇಬಲ್‌ಗಳಿಗೆ ಏನಾದರೂ ತೊಂದರೆಯಾದಾಗ ಬಹುದೊಡ್ಡ ಪ್ರದೇಶದ ಸಂಪರ್ಕವ್ಯವಸ್ಥೆಗೆ ಕುತ್ತುಬರುತ್ತದೆ. ೨೦೦೮ರಲ್ಲಿ ಎರಡು ಬಾರಿ ನಮ್ಮೆಲ್ಲರ ಅಂತರಜಾಲ ಸಂಪರ್ಕಗಳು ಏಕಾಏಕಿ ಕೈಕೊಟ್ಟಿದ್ದು ನಿಮಗೆ ನೆನಪಿರಬಹುದು, ಯುರೋಪ್ ಹಾಗೂ ಮಧ್ಯಪ್ರಾಚ್ಯದ ರಾಷ್ಟ್ರಗಳನ್ನು ಭಾರತಕ್ಕೆ ಸಂಪರ್ಕಿಸುವ ಸಬ್‌ಮರೀನ್ ಕೇಬಲ್ಲುಗಳಲ್ಲಿ ಕೆಲವು ಈಜಿಪ್ಟ್ ಸಮೀಪದಲ್ಲಿ ತುಂಡಾದದ್ದು ಈ ಘಟನೆಗೆ ಕಾರಣವಾಗಿತ್ತು. ತೀರಾ ಇತ್ತೀಚೆಗೆ, ೨೦೧೦ರ ಕೊನೆಯ ಭಾಗದಲ್ಲಿ ಕೂಡ ಇಂತಹವೇ ಕೆಲ ಕೇಬಲ್ಲುಗಳು ಕತ್ತರಿಸಿಹೋಗಿದ್ದರಿಂದ ಆಫ್ರಿಕಾ ಖಂಡದ ಬಹುಭಾಗದಲ್ಲಿ ಅಂತರಜಾಲ ಸಂಪರ್ಕ ಕಡಿದುಹೋಗಿತ್ತು.

ಸುಮಾರು ಎರಡೂಮುಕ್ಕಾಲು ಇಂಚು ಅಥವಾ ಅದಕ್ಕಿಂತ ಕಡಿಮೆ ವ್ಯಾಸದ, ಪ್ರತಿ ಮೀಟರ್ ಉದ್ದಕ್ಕೆ ಹೆಚ್ಚೂಕಡಿಮೆ ಹತ್ತು ಕಿಲೋಗ್ರಾಮ್ ತೂಕ ಹೊಂದಿರುವ ಈ ಕೇಬಲ್‌ಗಳ ಮಹತ್ವ ಅಂತರಜಾಲ ಲೋಕದ ಮಟ್ಟಿಗೆ ಅತ್ಯಂತ ಮಹತ್ವದ್ದು. ಇವುಗಳ ಮೂರ್ತಿ ಅಂಥಾ ಚಿಕ್ಕದೇನಲ್ಲ, ನಿಜ. ಆದರೆ ಕೀರ್ತಿ ಮಾತ್ರ ಬಹಳ ದೊಡ್ಡದು!

ಜನವರಿ ೨೫, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಶುಕ್ರವಾರ, ಜನವರಿ 21, 2011

ಸ್ನಾನ - ವಿಜ್ಞಾನ

ತುಂಬಾ ಹಿಂದೆ ಗ್ರೀಸ್ ದೇಶದಲ್ಲಿ ಒಬ್ಬ ರಾಜನಿದ್ದನಂತೆ. ಅವನು ಹೊಸದೊಂದು ಕಿರೀಟ ಮಾಡಿಸಿದ್ದ. ಆ ಕಿರೀಟ ಸಿದ್ಧವಾಗಿ ಬಂದ ಮೇಲೆ ಅವನಿಗೇಕೋ ಆ ಕಿರೀಟದ ಚಿನ್ನದಲ್ಲಿ ಕಲಬೆರಕೆ ಆಗಿರಬಹುದು ಎಂಬ ಸಂಶಯ ಬಂತು; ಈ ಸಂಶಯ ಯಾರು ನಿವಾರಿಸುತ್ತೀರೋ ಅವರಿಗೆ ಬಹುಮಾನ ಕೊಡುತ್ತೇನೆ ಎಂದು ಸವಾಲು ಹಾಕಿದ.

ಅವನ ಆಸ್ಥಾನದಲ್ಲಿ ಆರ್ಕಿಮಿಡಿಸ್ ಎಂಬ ವ್ಯಕ್ತಿ ಇದ್ದ. ಏನಾದರೂ ಮಾಡಿ ರಾಜನ ಸಂಶಯ ನಿವಾರಿಸಲೇಬೇಕು ಎಂದುಕೊಂಡ ಆತ ಅದರ ಬಗ್ಗೆ ಯೋಚಿಸಲು ಶುರುಮಾಡಿದ. ವಸ್ತುವಿನ ಸಾಂದ್ರತೆಗೆ ತಕ್ಕಂತೆ ಅದರ ಗಾತ್ರದಲ್ಲಿ ವ್ಯತ್ಯಾಸವಿರುತ್ತದೆ ಎನ್ನುವುದು ಅವನಿಗೆ ಗೊತ್ತಿತ್ತು. ಆದರೆ ಬೆರಕೆ ಲೋಹದಲ್ಲಿ ಯಾವ ಲೋಹ ಎಷ್ಟು ಮಿಶ್ರವಾಗಿದೆ ಎಂಬುದನ್ನು ಹೇಗೆ ಗುರುತಿಸಬೇಕು ಎನ್ನುವುದು ಗೊತ್ತಿರಲಿಲ್ಲ.

ಅವನು ಅದೇ ವಿಷಯದ ಬಗ್ಗೆ ಹಗಲೂ ರಾತ್ರಿ ಯೋಚಿಸುತ್ತಲೇ ಇದ್ದ. ಅವನ ಏಕಾಗ್ರತೆ ಎಷ್ಟರ ಮಟ್ಟಿಗೆ ಇತ್ತು ಎಂದರೆ ಸ್ನಾನ ಮಾಡುವಾಗಲೂ ಅದನ್ನೇ ಯೋಚಿಸುತ್ತ ಸ್ನಾನದ ತೊಟ್ಟಿಗೆ ಇಳಿದ.

ಅವನು ನೀರಿನ ತೊಟ್ಟಿಯೊಳಕ್ಕೆ ಇಳಿದ ತಕ್ಷಣ ಒಂದಷ್ಟು ನೀರು ಹೊರಚೆಲ್ಲಿತು. ಅದನ್ನು ನೋಡಿದ ತಕ್ಷಣ ಆರ್ಕಿಮಿಡಿಸ್‌ಗೆ ಅವನ ಗಾತ್ರ ಹಾಗೂ ತೊಟ್ಟಿಯಿಂದ ಹೊರಚೆಲ್ಲಿದ ನೀರಿನ ನಡುವೆ ಇರುವ ಸಂಬಂಧ ಹೊಳೆಯಿತು. ಈ ಖುಷಿಯಲ್ಲಿ ಆತ ಬಟ್ಟೆಯನ್ನೂ ಹಾಕಿಕೊಳ್ಳದೆ ಯುರೇಕಾ! ಯುರೇಕಾ!! (ನಾನು ಕಂಡುಹಿಡಿದೆ! ನಾನು ಕಂಡುಹಿಡಿದೆ!!) ಎಂದು ಕೂಗುತ್ತ ರಾಜನ ಹತ್ತಿರ ಓಡಿಹೋದನಂತೆ.

ಒಂದೇ ತೂಕದ ಚಿನ್ನದ ಗಾತ್ರಕ್ಕೂ ಕಲಬೆರಕೆಯಾಗಿದ್ದ ಲೋಹದ ಗಾತ್ರಕ್ಕೂ ವ್ಯತ್ಯಾಸವಿರುತ್ತದೆ. ಆರ್ಕಿಮಿಡಿಸ್ ಮೊದಲು ಕಿರೀಟದಷ್ಟೇ ತೂಕದ ಶುದ್ಧ ಚಿನ್ನ ತೆಗೆದುಕೊಂಡು ನೀರಿನಲ್ಲಿ ಮುಳುಗಿಸಿದಾಗ ಅದೆಷ್ಟು ನೀರನ್ನು ಹೊರಚೆಲ್ಲುತ್ತದೆ ಎನ್ನುವುದನ್ನು ಪತ್ತೆಮಾಡಿದ; ಆನಂತರ ಕಿರೀಟವನ್ನು ಮುಳುಗಿಸಿ ಅದು ಹೊರಚೆಲ್ಲಿದ ನೀರನ್ನು ಅಳೆದ. ಇದೆರಡರಲ್ಲೂ ವ್ಯತ್ಯಾಸ ಕಂಡುಬಂದಿದ್ದರಿಂದ ಕಿರೀಟದಲ್ಲಿ ಬಳಸಿದ ಚಿನ್ನ ಕಲಬೆರಕೆಯಾಗಿತ್ತು ಎನ್ನುವುದು ಆರ್ಕಿಮಿಡಿಸ್‌ಗೆ ಗೊತ್ತಾಯಿತು.

ಬಟ್ಟೆಹಾಕಿಕೊಳ್ಳದೆ ಸ್ನಾನದ ಮನೆಯಿಂದ ಓಡಿಹೋದ ಘಟನೆ ನಿಜವಾಗಿಯೂ ನಡೆದಿತ್ತೋ ಇಲ್ಲವೋ, ಆದರೆ ಆರ್ಕಿಮಿಡಿಸ್ ಈ ವಿಷಯದಲ್ಲಿ ಅನೇಕ ಸಂಶೋಧನೆಗಳನ್ನು ಮಾಡಿದ್ದಂತೂ ನಿಜ.

ನೀವು ಯಾವಾಗಲಾದರೂ ಕೆರೆ ಅಥವಾ ಬಾವಿಯೊಳಕ್ಕೆ ಕಲ್ಲೆಸೆದಿದ್ದೀರಾ? ಆ ಕಲ್ಲು ಎಷ್ಟೇ ಚಿಕ್ಕದಾಗಿದ್ದರೂ ತಕ್ಷಣ ಮುಳುಗಿಹೋಗುತ್ತದೆ ತಾನೆ? ಆದರೆ ಸಾವಿರಾರು ಕೆಜಿ ತೂಗುವ ಹಡಗುಗಳು ಮಾತ್ರ ನೀರಿನಲ್ಲಿ ಮುಳುಗದೆ ತೇಲುವುದು ಹೇಗೆ? ಈ ಪ್ರಶ್ನೆಗೆ ಆರ್ಕಿಮಿಡಿಸ್ ಸಿದ್ಧಾಂತ ಉತ್ತರ ನೀಡುತ್ತದೆ. ಹಡಗು ತನ್ನ ತೂಕಕ್ಕೆ ಸರಿಸಮನಾದಷ್ಟು ನೀರನ್ನು ಮಾತ್ರವೇ ತನ್ನ ಬುಡದಿಂದ ಆಚೀಚೆತಳ್ಳುವುದರಿಂದ ಅದು ಮುಳುಗದೆ ತೇಲುತ್ತದೆ ಎಂದು ಆತ ವಿವರಿಸಿದ.

ಆಯಾಸವಿಲ್ಲದೆ ಭಾರವಾದ ವಸ್ತುಗಳನ್ನು ಎತ್ತಲು ಅನುಕೂಲ ಮಾಡಿಕೊಡುವ ಸನ್ನೆ ತತ್ವವನ್ನೂ ಆತನೇ ಕಂಡುಹಿಡಿದದ್ದು ಎಂದು ಹೇಳುತ್ತಾರೆ. ಈ ಮಹಾನ್ ವ್ಯಕ್ತಿ ಕ್ರಿ. ಪೂ. ೨೮೭ರಿಂದ ೨೧೨ರ ನಡುವೆ ಜೀವಿಸಿದ್ದ.

ಚಿಣ್ಣರ ಚೇತನ ಗೋಡೆ ಪತ್ರಿಕೆಯ ೨೦೧೧ ಜನವರಿ ೧-೧೫ ಸಂಚಿಕೆಯಲ್ಲಿ ಪ್ರಕಟವಾದ ಲೇಖನ

ಮಂಗಳವಾರ, ಜನವರಿ 18, 2011

ಜಾಲಲೋಕದಲ್ಲಿ ಮೋಸದ ಗಾಳ

ಟಿ ಜಿ ಶ್ರೀನಿಧಿ

ನಿಮ್ಮ ಬ್ಯಾಂಕಿನ ಹೆಸರಿನಲ್ಲಿ ನಿಮಗೊಂದು ಇಮೇಲ್ ಸಂದೇಶ ಬರುತ್ತದೆ. ಇಂತಹ ಸಂದೇಶ ಸಾಮಾನ್ಯವಾಗಿ ಕೆಳಗಿರುವ ಲಿಂಕ್‌ನ ಮೇಲೆ ಕ್ಲಿಕ್ಕಿಸಿ ನಿಮ್ಮ ಖಾತೆಯ ವಿವರಗಳನ್ನು ದೃಢೀಕರಿಸಿ; ಇಲ್ಲದಿದ್ದರೆ ನಿಮ್ಮ ಖಾತೆಯನ್ನು ಮುಚ್ಚಿಬಿಡುತ್ತೇನೆ ಹುಷಾರ್! ಎಂಬ ಧಾಟಿಯಲ್ಲಿರುತ್ತದೆ. ಅದನ್ನು ನಂಬಿ ನೀವೇನಾದರೂ ನಿಮ್ಮ ವಿವರಗಳನ್ನು ಕೊಟ್ಟಿರೋ, ನಿಮ್ಮ ಖಾತೆಯಲ್ಲಿರುವ ಹಣವೆಲ್ಲ ಒಂದೇ ಬಾರಿಗೆ ಮಂಗಮಾಯವಾಗಿಬಿಡುತ್ತದೆ!

ಇದಕ್ಕೆ ಕಾರಣವಿಷ್ಟೆ: ನಿಮಗೆ ಬಂದ ಸಂದೇಶ ಮೇಲ್ನೋಟಕ್ಕೆ ನೈಜವಾಗಿಯೇ ಕಂಡರೂ ಅದನ್ನು ನಿಮ್ಮ ಬ್ಯಾಂಕು ಕಳುಹಿಸಿರುವುದೇ ಇಲ್ಲ. ಇಷ್ಟರಮೇಲೆ ಆ ಸಂದೇಶದಲ್ಲಿದ್ದ ಲಿಂಕ್‌ನ ಮೇಲೆ ಕ್ಲಿಕ್ಕಿಸಿ ನೀವು ಭೇಟಿಕೊಟ್ಟ ತಾಣ ನಿಮ್ಮ ಬ್ಯಾಂಕಿನದೂ ಆಗಿರುವುದಿಲ್ಲ.

ಇದೇ ಫಿಶಿಂಗ್ - ನಕಲಿ ಇಮೇಲ್ ಹಾಗೂ ಜಾಲತಾಣಗಳ ಸಹಾಯದಿಂದ ಅಂತರಜಾಲ ಬಳಕೆದಾರರ ಖಾಸಗಿ ಮಾಹಿತಿಯನ್ನು ಕದಿಯುವ ಭಾರೀ ಹಗರಣ.

ಈ ಹಗರಣಕ್ಕೆ ಫಿಶಿಂಗ್ (phishing) ಎಂಬ ನಾಮಕರಣವಾದದ್ದು ೧೯೯೬ರಲ್ಲಿ.  ಈ ಹಗರಣ ಗಾಳ ಹಾಕಿ ಮೀನು ಹಿಡಿಯುವ ಹಾಗೆಯೇ ನಡೆಯುವುದರಿಂದ ಇದಕ್ಕೆ ಫಿಶಿಂಗ್ ಎಂದು ಹೆಸರಿಡಲಾಯಿತು, ಈ ಹೆಸರನ್ನು ಪ್ರತ್ಯೇಕವಾಗಿ ಗುರುತಿಸಲು ಸ್ಪೆಲ್ಲಿಂಗ್‌ನಲ್ಲಿ ಮಾತ್ರ ಬದಲಾವಣೆ ಮಾಡಲಾಯಿತು ಎನ್ನುವುದು ಸಾಮಾನ್ಯ ನಂಬಿಕೆ. ಗಣಕಗಳ ಸಹಾಯದಿಂದ ಅನೇಕ ಬಗೆಯ ಅವ್ಯವಹಾರ ನಡೆಸುವ ಹ್ಯಾಕರ್‌ಗಳ ಸಮುದಾಯದಲ್ಲಿ  ಇಂತಹ ವಿಭಿನ್ನ ರೀತಿಯ ಸ್ಪೆಲ್ಲಿಂಗ್ ಬಳಕೆ ಸಾಮಾನ್ಯವಂತೆ.

ಫಿಶಿಂಗ್‌ನ ಸಮಸ್ಯೆ ಈಗ ಇಮೇಲ್‌ಗಳಿಗಷ್ಟೇ ಸೀಮಿತವಾಗಿ ಉಳಿದಿಲ್ಲ. ಎಸ್ಸೆಮ್ಮೆಸ್‌ಗಳು, ಇನ್ಸ್‌ಟೆಂಟ್ ಮೆಸೆಂಜರ್‌ಗಳು, ನಕಲಿ ಜಾಹಿರಾತುಗಳು - ಹೀಗೆ ಎಲ್ಲೆಡೆಗಳಲ್ಲೂ ಹರಡಿಕೊಂಡಿರುವ ಫಿಶಿಂಗ್ ಜಾಲ ಅಂತರಜಾಲ ಬಳಕೆದಾರರ ಖಾಸಗಿ ಮಾಹಿತಿಯನ್ನು ಕದಿಯಲು ಇನ್ನಿಲ್ಲದ ಪ್ರಯತ್ನಗಳನ್ನು ನಡೆಸುತ್ತಿದೆ. ಫಿಶಿಂಗ್‌ಗೆ ಬಲಿಯಾಗುವ ಮಾಹಿತಿಯಲ್ಲಿ ಹಣಕಾಸು ವ್ಯವಹಾರಗಳಿಗೆ ಸಂಬಂಧಪಟ್ಟ ಮಾಹಿತಿಯದೇ ಹೆಚ್ಚಿನ ಪಾಲು; ಆದರೆ ಈ ಮಾಹಿತಿಯ ಜೊತೆಗೆ ಸಮುದಾಯ ತಾಣಗಳು ಹಾಗೂ ಇಮೇಲ್ ಖಾತೆಯ ಪಾಸ್‌ವರ್ಡ್‌ಗಳಂತಹ ಅನೇಕ ಬಗೆಯ ಮಾಹಿತಿಗಳೂ ಫಿಶಿಂಗ್ ಬಲೆಗೆ ಬೀಳುತ್ತವೆ.

ನಿಮಗೆ ಆದಾಯತೆರಿಗೆಯ ಮರುಪಾವತಿ ಬರುವುದಿದೆ, ಅದನ್ನು ಯಾವ ಖಾತೆಗೆ ಕಳುಹಿಸಬೇಕು ಹೇಳಿ ಎನ್ನುವ ನೆಪದಲ್ಲಿ ಬಳಕೆದಾರರ ಬ್ಯಾಂಕ್ ಖಾತೆಯ ವಿವರಗಳನ್ನು ಕದ್ದ ಅನೇಕ ಘಟನೆಗಳು ಕಳೆದ ವರ್ಷ ವಿಶ್ವದ ವಿವಿಧೆಡೆಗಳಿಂದ ವರದಿಯಾಗಿದ್ದವು. ಇನ್ನು ಇಮೇಲ್ ಖಾತೆಯ ಪಾಸ್‌ವರ್ಡ್ ಕದ್ದು "ನಾನು ಲಂಡನ್‌ನಲ್ಲಿದ್ದೇನೆ, ನನ್ನ ಪರ್ಸ್ ಕಳೆದುಹೋಗಿದೆ, ಆದಷ್ಟು ಬೇಗ ಒಂದು ಸಾವಿರ ಪೌಂಡ್ ಕಳಿಸು" ಎಂಬಂತಹ ಸಂದೇಶಗಳನ್ನು ಕಳುಹಿಸುವುದೂ ಒಂದು ದೊಡ್ಡ ದಂಧೆಯೇ. ಈ ಕುತಂತ್ರಕ್ಕೆ ಬಲಿಯಾದವರ ಸುದ್ದಿಗಳು ಆಗಿಂದಾಗ್ಗೆ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತವೆ.

ಫಿಶಿಂಗ್ ಸಂದೇಶವನ್ನು ಪಡೆಯುವವರಲ್ಲಿ ಶೇಕಡಾ ಐದರಷ್ಟು ಜನ ಅಂತಹ ಸಂದೇಶಗಳನ್ನು ನಂಬಿ ವಂಚನೆಗೆ ಒಳಗಾಗುತ್ತಾರೆ ಎಂದು ಅಧ್ಯಯನವೊಂದು ತಿಳಿಸಿದೆ. ಹೀಗೆ ಫಿಶಿಂಗ್‌ನಿಂದ ವಂಚನೆಗೆ ಒಳಗಾಗುವುದು ಎಂದರೆ ಸಾಮಾನ್ಯವಾಗಿ ಭಾರೀ ಪ್ರಮಾಣದ ಆರ್ಥಿಕ ನಷ್ಟ ಅನುಭವಿಸುವುದು ಎಂದೇ ಅರ್ಥ. ಹೀಗಾಗಿ ಈ ಹಗರಣದ ಕುರಿತು ಎಚ್ಚರದಿಂದಿರಬೇಕಾದದ್ದು ಅಗತ್ಯ.

ಇಂತಹ ಯಾವುದೇ ಸಂಶಯಾಸ್ಪದ ಸಂದೇಶಗಳು ಬಂದಾಗ ತಟ್ಟನೆ ಪ್ರತಿಕ್ರಿಯಿಸುವ ಬದಲು ಸ್ವಲ್ಪ ಯೋಚಿಸುವುದು ಒಳ್ಳೆಯದು. ಬುದ್ಧಿವಂತಿಕೆಯ ಲಕ್ಷಣ. ಸಾಮಾನ್ಯವಾಗಿ ಯಾವುದೇ ಸಂಸ್ಥೆ ನಿಮ್ಮ ಪಾಸ್‌ವರ್ಡ್‌ಗಳನ್ನು ಕೊಡುವಂತೆ ಕೇಳುವುದಿಲ್ಲ ಎನ್ನುವ ವಿಷಯ ಸದಾ ನಿಮ್ಮ ನೆನಪಿನಲ್ಲಿರಲಿ.

ಆನ್‌ಲೈನ್ ಬ್ಯಾಂಕಿಂಗ್ ಸೇರಿದಂತೆ ಯಾವುದೇ ಬಗೆಯ ಖಾಸಗಿ ವ್ಯವಹಾರ ನಡೆಸುವಾಗ ವೆಬ್‌ತಾಣಗಳನ್ನು ತೆರೆಯಲು ಸಂದೇಶದಲ್ಲಿರುವ ಲಿಂಕ್‌ಗಳನ್ನು ಬಳಸಬೇಡಿ; ಇಂತಹ ಲಿಂಕ್‌ಗಳು ನಿಮ್ಮನ್ನು ನಕಲಿ ತಾಣಗಳಿಗೆ ಕೊಂಡೊಯ್ಯುವ ಸಾಧ್ಯತೆಯೇ ಹೆಚ್ಚು. ಬದಲಿಗೆ ಬ್ರೌಸರ್ ತಂತ್ರಾಂಶದಲ್ಲಿ ಜಾಲತಾಣದ ವಿಳಾಸ ಬೆರಳಚ್ಚಿಸಿಯೇ ತಾಣವನ್ನು ಪ್ರವೇಶಿಸಿ. ಲಿಂಕ್ ಮೂಲಕವೇ ತಾಣ ಪ್ರವೇಶಿಸಬೇಕಾಗಿ ಬಂದಾಗ ಬ್ರೌಸರ್‌ನ ವಿಳಾಸಪಟ್ಟಿಯಲ್ಲಿ ಸರಿಯಾದ ತಾಣದ ವಿಳಾಸವಿದೆಯೋ ಇಲ್ಲವೋ ಎನ್ನುವುದನ್ನು ಪರಿಶೀಲಿಸಿ.

ಜನವರಿ ೧೮, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಮಂಗಳವಾರ, ಜನವರಿ 11, 2011

ಬೆಳೆಯುತ್ತಿದೆ ಬ್ರೌಸರ್ ಲೋಕ

ಟಿ ಜಿ ಶ್ರೀನಿಧಿ

ಕಳೆದ ಡಿಸೆಂಬರ್‌ನಲ್ಲಿ ಗೂಗಲ್ ಸಂಸ್ಥೆ ತನ್ನ ಹೊಸ ಕೊಡುಗೆಯಾಗಿ ಕ್ರೋಮ್ ಒಎಸ್‌ನ ಪ್ರಾಯೋಗಿಕ ಆವೃತ್ತಿಯನ್ನು ಪರಿಚಯಿಸಿತು.

ಈ ಕ್ರೋಮ್ ಒಎಸ್ ಎನ್ನುವುದು ಒಂದು ಕಾರ್ಯಾಚರಣ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಂ). ಸರಳವಾಗಿ ಹೇಳಬೇಕಾದರೆ ಕಾರ್ಯಾಚರಣ ವ್ಯವಸ್ಥೆ ಎನ್ನುವುದು ಗಣಕದ ಪ್ರಾಥಮಿಕ ಚಟುವಟಿಕೆಗಳನ್ನು ನಿಯಂತ್ರಿಸುವ, ಹಾಗೂ ಅದರಲ್ಲಿರುವ ವಿವಿಧ ಸೌಲಭ್ಯಗಳನ್ನು ಬಳಸಿಕೊಳ್ಳಲು ನಮಗೆ ಸಹಾಯಮಾಡುವ ತಂತ್ರಾಂಶ. ವಿಂಡೋಸ್, ಲಿನಕ್ಸ್ ಇವೆಲ್ಲ ಕಾರ್ಯಾಚರಣ ವ್ಯವಸ್ಥೆಗಳೇ.

ಆದರೆ ಕ್ರೋಮ್ ಒಎಸ್ ನಮಗೆ ಗೊತ್ತಿರುವ ಬೇರೆಲ್ಲ ಕಾರ್ಯಾಚರಣ ವ್ಯವಸ್ಥೆಗಳಿಗಿಂತ ವಿಭಿನ್ನವಾದದ್ದು.

ಅದಕ್ಕೆ ಕಾರಣ ಇಷ್ಟೆ - ಕ್ರೋಮ್ ಒಎಸ್ ಕಾರ್ಯಾಚರಣ ವ್ಯವಸ್ಥೆ ಸಂಪೂರ್ಣವಾಗಿ ಬ್ರೌಸರ್ ತಂತ್ರಾಂಶವನ್ನೇ ಆಧರಿಸಿಕೊಂಡು ಕೆಲಸಮಾಡುತ್ತದೆ. ಪದಸಂಸ್ಕರಣಾ ತಂತ್ರಾಂಶ ಬಳಸಿ ಅರ್ಜಿ ಟೈಪಿಸಬೇಕಾಗಿರಲಿ, ಸ್ಪ್ರೆಡ್‌ಶೀಟಿನಲ್ಲಿ ಲೆಕ್ಕಾಚಾರ ಹಾಕುವ ಅಗತ್ಯವಿರಲಿ - ಯಾವುದೇ ಪ್ರತ್ಯೇಕ ತಂತ್ರಾಂಶವನ್ನು ಅನುಸ್ಥಾಪಿಸಿಕೊಳ್ಳುವ ಅಗತ್ಯವಿಲ್ಲದೆ ಎಲ್ಲವೂ ವಿಶ್ವವ್ಯಾಪಿ ಜಾಲದ ಮೂಲಕವೇ ಲಭ್ಯವಾಗುತ್ತದೆ. ಈ ಕಾರ್ಯಾಚರಣ ವ್ಯವಸ್ಥೆಯಲ್ಲಿ ಸಕಲ ಕೆಲಸಗಳಿಗೂ ಬ್ರೌಸರ್ ಬೇಕೇಬೇಕು!

ಬ್ರೌಸರ್ ಅಂದರೇನು?
ವಿಶ್ವವ್ಯಾಪಿ ಜಾಲದಲ್ಲಿರುವ ಜಾಲತಾಣಗಳನ್ನು ನಮ್ಮ-ನಿಮ್ಮ ಗಣಕಗಳಲ್ಲಿ ವೀಕ್ಷಿಸಲು ಬ್ರೌಸರ್ ಅಥವಾ ವೀಕ್ಷಕ ತಂತ್ರಾಂಶಗಳು ಬಳಕೆಯಾಗುತ್ತವೆ. ವಿಶ್ವವ್ಯಾಪಿ ಜಾಲದಲ್ಲಿರುವ ಮಾಹಿತಿಯನ್ನು ಪಡೆದುಕೊಳ್ಳಲು ಈ ತಂತ್ರಾಂಶ ಅತ್ಯಗತ್ಯ.

ಮೊಜಿಲ್ಲಾ ಫೈರ್‌ಫಾಕ್ಸ್, ಇಂಟರ್‌ನೆಟ್ ಎಕ್ಸ್‌ಪ್ಲೋರರ್, ಗೂಗಲ್ ಕ್ರೋಮ್ ಮೊದಲಾದವು ಈಗ ಪ್ರಚಲಿತದಲ್ಲಿರುವ ಬ್ರೌಸರ್‌ಗಳಲ್ಲಿ ಮುಖ್ಯವಾದವು. ವಿಶ್ವದ ಮೂಲೆಮೂಲೆಗಳಲ್ಲಿರುವ ಗಣಕಗಳಲ್ಲಿ ಶೇಖರವಾಗಿರುವ ವೆಬ್ ಪುಟಗಳನ್ನು ನಮ್ಮ ಗಣಕಗಳಲ್ಲಿ ವೀಕ್ಷಿಸಲು ಈ ತಂತ್ರಾಂಶಗಳು ಅನುವುಮಾಡಿಕೊಡುತ್ತವೆ. ವಿಶ್ವವ್ಯಾಪಿ ಜಾಲದಲ್ಲಿರುವ ಮಾಹಿತಿಯನ್ನು ನೋಡುವುದು ಮಾತ್ರವಲ್ಲ; ಆ ಮಾಹಿತಿಯನ್ನು ಉಳಿಸಿಕೊಳ್ಳುವುದು, ಮುದ್ರಿಸಿಕೊಳ್ಳುವುದು, ವಿವಿಧ ಪುಟಗಳ ನಡುವೆ ಹಿಂದೆಮುಂದೆ ಓಡಾಡುವುದು, ಅಚ್ಚುಮೆಚ್ಚಿನ ಪುಟಗಳ ವಿಳಾಸ ಸಂಗ್ರಹಿಸಿಟ್ಟುಕೊಳ್ಳುವುದು - ಇವೆಲ್ಲ ಸೌಲಭ್ಯಗಳೂ ಬ್ರೌಸರ್ ತಂತ್ರಾಂಶದಲ್ಲಿರುತ್ತವೆ.

ಬ್ರೌಸರ್ ಇತಿಹಾಸ
ವಿಶ್ವವ್ಯಾಪಿ ಜಾಲದ ಪ್ರಾರಂಭಿಕ ದಿನಗಳಲ್ಲಿ ರೂಪಗೊಂಡ ಜಾಲತಾಣಗಳಲ್ಲಿ ಪಠ್ಯ ಮಾತ್ರವೇ ಇರುತ್ತಿತ್ತು. ಆದರೆ ಜಾಲತಾಣಗಳಲ್ಲಿ ಪಠ್ಯದ ಚಿತ್ರಗಳು ಕೂಡ ಇದ್ದು ಚಿತ್ರಾತ್ಮಕ ಸಂಪರ್ಕ ಸಾಧನ (ಗ್ರಾಫಿಕಲ್ ಯೂಸರ್ ಇಂಟರ್‌ಫೇಸ್) ಲಭ್ಯವಾಗುವಂತಾದಾಗ ಮಾತ್ರ ಈ ಅದ್ಭುತ ವ್ಯವಸ್ಥೆ ಸಾಮಾನ್ಯ ಜನರನ್ನೂ ತಲುಪುವಂತಾಗುತ್ತದೆ, ಎಲ್ಲರ ಆಸಕ್ತಿಯ ವಿಷಯಗಳಿಗೂ ಅಲ್ಲಿ ಸ್ಥಾನ ದೊರಕುತ್ತದೆ ಎಂಬ ಭಾವನೆ ಬಹಳಬೇಗ ಗಣಕತಜ್ಞರಲ್ಲಿ ಮೂಡಿತು.

ಹೀಗೆ ಲಭ್ಯವಾದ ಬಹುಮಾಧ್ಯಮ ಮಾಹಿತಿಯನ್ನು ಪಡೆದುಕೊಳ್ಳಲು ಹೊಸದೊಂದು ತಂತ್ರಾಂಶ ಅಗತ್ಯವಾಯಿತು. ಈಗ ನಮಗೆ ಪರಿಚಿತವಾಗಿರುವ ಬ್ರೌಸರ್ ತಂತ್ರಾಂಶದ ಪರಿಕಲ್ಪನೆ ಹುಟ್ಟಿದ್ದೇ ಆಗ.

ಅಮೆರಿಕಾದ ನ್ಯಾಷನಲ್ ಸೆಂಟರ್ ಫಾರ್ ಸೂಪರ್‌ಕಂಪ್ಯೂಟಿಂಗ್ ಅಪ್ಲಿಕೇಷನ್ಸ್‌ನಲ್ಲಿ ಅಧ್ಯಯನ ನಡೆಸುತ್ತಿದ್ದ ಮಾರ್ಕ್ ಆಂಡ್ರೀಸನ್ ಹಾಗೂ ಎರಿಕ್ ಬೀನಾ ಎಂಬ ವಿದ್ಯಾರ್ಥಿಗಳು ೧೯೯೩ರಲ್ಲಿ 'ಮೊಸಾಯಿಕ್' ಎನ್ನುವ ಬ್ರೌಸರ್ ಸಿದ್ಧಪಡಿಸಿದರು. ವಿಶ್ವವ್ಯಾಪಿ ಜಾಲಕ್ಕೆ ಮೊತ್ತಮೊದಲ ಬಾರಿಗೆ ಚಿತ್ರಾತ್ಮಕ ಸಂಪರ್ಕ ಸಾಧನವನ್ನು ಒದಗಿಸಿದ ಈ ತಂತ್ರಾಂಶ ಅದರ ಭವಿಷ್ಯವನ್ನೇ ಬದಲಾಯಿಸಿಬಿಟ್ಟಿತು.

ಮುಂದಿನ ದಿನಗಳಲ್ಲಿ
ಕ್ಲೌಡ್ ಕಂಪ್ಯೂಟಿಂಗ್‌ನ ವಿಕಾಸವಾಗುತ್ತಿದ್ದಂತೆ ಬ್ರೌಸರ್ ತಂತ್ರಾಂಶದ ಮಹತ್ವ ಹೆಚ್ಚುತ್ತಿದೆ. ಕ್ಲೌಡ್ ಕಂಪ್ಯೂಟಿಂಗ್‌ನಲ್ಲಿ ವಿವಿಧ ತಂತ್ರಾಂಶಗಳು ಹಾಗೂ ಸಂಬಂಧಿತ ಸೇವೆಗಳು ವಿಶ್ವವ್ಯಾಪಿ ಜಾಲದ ಮೂಲಕವೇ ಲಭ್ಯವಾಗುವುದರಿಂದ ಅವೆಲ್ಲವನ್ನೂ ಬ್ರೌಸರ್ ಮೂಲಕವೇ ಪಡೆದುಕೊಳ್ಳಬೇಕಾಗುತ್ತದೆ.

ಈ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯೋಗಗಳಲ್ಲಿ ಕ್ರೋಮ್ ಒಎಸ್ ಅಗ್ರಗಣ್ಯವಾದದ್ದು. ಗಣಕದಲ್ಲಿ ನಾವು ಬಳಸುವ ತಂತ್ರಾಂಶಗಳು ಹಾಗೂ ಅವನ್ನು ಬಳಸಿ ತಯಾರಿಸುವ ಮಾಹಿತಿ ಎರಡನ್ನೂ ವಿಶ್ವವ್ಯಾಪಿ ಜಾಲದ ಮೂಲಕ ಲಭ್ಯವಾಗಿಸಿ ಅಲ್ಲಿಯೇ ಶೇಖರಿಸಿಡುವ ಮಹತ್ವಾಕಾಂಕ್ಷೆ ಈ ಕಾರ್ಯಾಚರಣ ವ್ಯವಸ್ಥೆಯದ್ದು. ಒಂದುವೇಳೆ ಈ ಪ್ರಯೋಗ ಜನರ ಮೆಚ್ಚುಗೆ ಪಡೆಯುವಲ್ಲಿ ಯಶಸ್ವಿಯಾದರೆ ಮುಂದಿನ ವರ್ಷಗಳಲ್ಲಿ ನಾವೆಲ್ಲ ಗಣಕ ಬಳಸುವ ವಿಧಾನದಲ್ಲಿ ಅಪಾರ ಬದಲಾವಣೆಯಾಗುವ ನಿರೀಕ್ಷೆಯಿದೆ.

ಜನವರಿ ೧೧, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಮಂಗಳವಾರ, ಜನವರಿ 4, 2011

ಆಕಾಶದಿಂದ ಅಂತರಜಾಲ

ಟಿ ಜಿ ಶ್ರೀನಿಧಿ

೨೦೧೦ರ ಕೊನೆಯ ವಾರದಲ್ಲಿ ಕಾ-ಸ್ಯಾಟ್ ಎಂಬ ಯುರೋಪಿನ ಉಪಗ್ರಹ ಉಡಾವಣೆಯಾಯಿತು. ಉಪಗ್ರಹದ ಉಡಾವಣೆಯಲ್ಲೇನೂ ವಿಶೇಷವಿಲ್ಲವಾದರೂ ಈ ಉಪಗ್ರಹದ ಉದ್ದೇಶವೇ ವಿಶೇಷವಾದದ್ದು - ಯುರೋಪಿನ ಗ್ರಾಮೀಣ ಪ್ರದೇಶಗಳಿಗೆ ಈ ಉಪಗ್ರಹದ ಮೂಲಕ ಅಂತರಜಾಲ ಸೌಲಭ್ಯ ಒದಗಿಸಲಾಗುತ್ತದೆ.

ಇಂಟರ್‌ನೆಟ್ ಅಥವಾ ಅಂತರಜಾಲ ಎನ್ನುವುದು ಅಪಾರ ಸಂಖ್ಯೆಯ ಗಣಕಗಳನ್ನು ಒಂದುಗೂಡಿಸುವ ಒಂದು ಬೃಹತ್ ಜಾಲ. ಯಾವುದೇ ಒಂದು ಗಣಕ ಈ ಬೃಹತ್ ಜಾಲದ ಅಂಗ ಎನ್ನಿಸಿಕೊಳ್ಳಬೇಕಾದರೆ ಅದು ಅಂತರಜಾಲದೊಡನೆ ಸಂಪರ್ಕ ಹೊಂದಿರಬೇಕು. ಹಾಗಿದ್ದಾಗ ಮಾತ್ರ ಅದು ಅಂತರಜಾಲದ ಇತರ ಗಣಕಗಳೊಡನೆ ಸಂಪರ್ಕ ಏರ್ಪಡಿಸಿಕೊಳ್ಳಲು ಸಾಧ್ಯ. ಅಂತೆಯೇ ಆ ಗಣಕದ ಬಳಕೆದಾರರು - ಅಂದರೆ ನಾವು - ವಿಶ್ವದ ವಿವಿಧೆಡೆಗಳಲ್ಲಿ ಸಂಗ್ರಹವಾಗಿರುವ ಮಾಹಿತಿಯನ್ನು ವಿಶ್ವವ್ಯಾಪಿ ಜಾಲದ ಮೂಲಕ ಪಡೆದುಕೊಳ್ಳುವುದು ಕೂಡ ಸಾಧ್ಯವಾಗುತ್ತದೆ.

ಇಂತಹ ಅಂತರಜಾಲ ಸಂಪರ್ಕಗಳಲ್ಲಿ ಹಲವಾರು ಬಗೆ - ಬ್ರಾಡ್‌ಬ್ಯಾಂಡ್, ಡಯಲ್‌ಅಪ್, ಜಿಪಿಆರ್‌ಎಸ್ ಹೀಗೆ. ಈ ಸಾಲಿಗೆ ಹೊಸ ಸೇರ್ಪಡೆಯೇ ಮೇಲೆ ಹೇಳಿದ ಉಪಗ್ರಹ ಅಂತರಜಾಲ ಸಂಪರ್ಕ.

* * *

ಹೆಚ್ಚಿನ ಬ್ಯಾಂಡ್‌ವಿಡ್ತ್‌ನೊಡನೆ ಅತಿವೇಗದ ಅಂತರಜಾಲ ಸಂಪರ್ಕ ಒದಗಿಸುವ ಬ್ರಾಡ್‌ಬ್ಯಾಂಡ್ ಸೇವೆ ಸದ್ಯಕ್ಕೆ ಅಂತರಜಾಲ ಸಂಪರ್ಕಗಳಲ್ಲೆಲ್ಲ ಅತ್ಯಂತ ಪ್ರಸಿದ್ಧವಾದದ್ದು. ದೂರಸಂಪರ್ಕ ಕ್ಷೇತ್ರದ ಪ್ರಮುಖ ಸಂಸ್ಥೆಗಳಷ್ಟೇ ಅಲ್ಲದೆ ಹಲವಾರು ಕೇಬಲ್ ಟೀವಿ ಸಂಸ್ಥೆಗಳೂ ಇಂತಹ ಅತಿವೇಗದ ಅಂತರ ಜಾಲಸಂಪರ್ಕವನ್ನು ಒದಗಿಸುತ್ತಿವೆ.

ವೈರ್‌ಲೆಸ್ ಫಿಡೆಲಿಟಿ ಅಥವಾ 'ವೈ-ಫಿ' ಮಾನಕ ಆಧಾರಿತ ತಂತ್ರಜ್ಞಾನ ಬಳಸಿ ವೈರ್‌ಲೆಸ್ (ನಿಸ್ತಂತು) ಅಂತರಜಾಲ ಸಂಪರ್ಕ ಹೊಂದುವುದು ಕೂಡ ಸಾಧ್ಯವಿದೆ. ಬ್ರಾಡ್‌ಬ್ಯಾಂಡ್ ಸೇವೆ ಒದಗಿಸುವ ಸಂಸ್ಥೆಗಳ ಮೂಲಕ ಲಭ್ಯವಿರುವ ವೈ-ಫಿ ಮೋಡೆಮ್ ಬಳಸಿ ನಮ್ಮ ಮನೆಯಲ್ಲೇ ಇಂತಹ ಸಂಪರ್ಕ ದೊರಕುವಂತೆ ಮಾಡಿಕೊಳ್ಳಬಹುದು.

ದೂರವಾಣಿಯನ್ನು ಬಳಸಿ ಕೆಲಸಮಾಡುವ ಡಯಲ್-ಅಪ್ ಸಂಪರ್ಕ ತೀರಾ ಇತ್ತೀಚಿನವರೆಗೂ ವ್ಯಾಪಕ ಬಳಕೆಯಲ್ಲಿತ್ತು. ದೂರವಾಣಿ ತಂತಿಗಳ ಮೂಲಕ ಮಾಹಿತಿ ವಿನಿಮಯ ನಡೆಸುವ ಈ ಬಗೆಯ ಸಂಪರ್ಕ ಈಚೆಗೆ ತನ್ನ ಜನಪ್ರಿಯತೆ ಕಳೆದುಕೊಳ್ಳುತ್ತಿದೆ.

ಮೊಬೈಲ್ ದೂರವಾಣಿಗಳ ಮೂಲಕವೂ ಅಂತರಜಾಲ ಸಂಪರ್ಕ ಹೊಂದುವುದು ಸಾಧ್ಯ. ಈಗಂತೂ ಈ ತಂತ್ರಜ್ಞಾನವನ್ನು ಬಳಸಿ ಅಂತರಜಾಲ ಸಂಪರ್ಕ ಒದಗಿಸುವ ಅದೆಷ್ಟೋ ಬಗೆಯ ಮೊಬೈಲ್ ದೂರವಾಣಿಗಳು ಹಾಗೂ ನಿಸ್ತಂತು ಅಂತರಜಾಲ ಸಂಪರ್ಕ ಉಪಕರಣಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.

* * *

ಸಾಮಾನ್ಯವಾಗಿ ಲಭ್ಯವಿರುವ ಅಂತರಜಾಲ ಸಂಪರ್ಕಗಳ ಸಮಸ್ಯೆ ಎಂದರೆ ಅವುಗಳ ವ್ಯಾಪ್ತಿ. ಎಲ್ಲೆಲ್ಲಿ ದೂರವಾಣಿ ಅಥವಾ ಕೇಬಲ್ ಜಾಲ ಇಲ್ಲವೋ ಅಲ್ಲಿ ಅಂತರಜಾಲ ಸಂಪರ್ಕವೂ ಇರುವುದಿಲ್ಲ. ಇನ್ನು ಡಯಲ್-ಅಪ್ ಅಥವಾ ಮೊಬೈಲ್ ಅಂತರಜಾಲ ಸಂಪರ್ಕ ಕೆಲವೆಡೆಗಳಲ್ಲಿ ಇದ್ದರೂ ಸಂಪರ್ಕದ ವೇಗ ಬಹಳ ಕಡಿಮೆ ಇರುತ್ತದೆ.

ಈ ಕೊರತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ನಡೆದಿರುವ ಪ್ರಯತ್ನವೇ ಉಪಗ್ರಹ ಅಂತರಜಾಲ ಸಂಪರ್ಕ. ಗ್ರಾಮೀಣ ಪ್ರದೇಶದ ಬಳಕೆದಾರರಿಗೆ ಉಪಗ್ರಹದ ಮೂಲಕ ಅತಿವೇಗದ ಅಂತರಜಾಲ ಸಂಪರ್ಕ ಒದಗಿಸುವುದು ಇದರ ವೈಶಿಷ್ಟ್ಯ. ಇದು ನಮಗೆಲ್ಲ ಪರಿಚಿತವಾಗಿರುವ ಡಿಟಿಹೆಚ್ ಸೇವೆಯಂತೆಯೇ ಪುಟಾಣಿ ಡಿಷ್ ಆಂಟೆನಾ ಬಳಸಿಕೊಂಡು ಕೆಲಸಮಾಡುತ್ತದೆ. ಈ ಸಂಪರ್ಕ ಬೇರೆಲ್ಲ ಬಗೆಯ ಅಂತರಜಾಲ ಸಂಪರ್ಕಗಳಿಗಿಂತ ತುಸು ದುಬಾರಿಯಾದರೂ ನಾಗರಹೊಳೆ ಕಾಡಿನ ಮಧ್ಯದಲ್ಲಿರುವ ಹಳ್ಳಿಗೂ ಹೆಚ್ಚುವೇಗದ ಅಂತರಜಾಲ ಸಂಪರ್ಕ ದೊರಕುವಂತಾಗಲು ಇದೊಂದು ಉತ್ತಮ ಮಾರ್ಗ.

ಪ್ರಪಂಚದ ಅನೇಕ ಕಡೆಗಳಲ್ಲಿ ಉಪಗ್ರಹ ಅಂತರಜಾಲ ಈಗಾಗಲೇ ಲಭ್ಯವಿದೆ; ಯುರೋಪಿನಲ್ಲಿ ನಡೆದಿರುವ ಪ್ರಯತ್ನ ಇದರ ವ್ಯಾಪ್ತಿಯನ್ನು ಇನ್ನೂ ದೊಡ್ಡದಾಗಿ ವಿಸ್ತರಿಸಲು ಹೊರಟಿದೆ. ಈ ಪ್ರಯತ್ನ ಯಶಸ್ವಿಯಾದರೆ ನಮ್ಮ ಹಳ್ಳಿಗಳಲ್ಲಿ ಡಿಟಿಹೆಚ್ ಆಂಟೆನಾಗಳು ಕಾಣಿಸುವಷ್ಟೇ ಸಾಮಾನ್ಯವಾಗಿ ಉಪಗ್ರಹ ಅಂತರಜಾಲದ ಡಿಷ್ ಆಂಟೆನಾಗಳೂ ಕಾಣಸಿಗುವ ದಿನ ದೂರವಿಲ್ಲ!

ಜನವರಿ ೪, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ
badge