ಶುಕ್ರವಾರ, ಜುಲೈ 19, 2013

ಕ್ಯಾಮೆರಾ ಕತೆಗಳು : ೨

ಟಿ. ಜಿ. ಶ್ರೀನಿಧಿ

೧೮೪೪ರಲ್ಲಿ ತೆಗೆದ
ಕ್ಯಾಲೋಟೈಪ್ ಚಿತ್ರ
[ಮೊದಲ ಭಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ]
[ಮೂರನೆಯ ಭಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ]

೧೮೩೦ರ ಸುಮಾರಿಗೆ ಫ್ರಾನ್ಸಿನಲ್ಲಿ ರೂಪುಗೊಂಡ ಡಿಗೇರೋಟೈಪ್ ತಂತ್ರಜ್ಞಾನ ಫೋಟೋಗ್ರಫಿಯನ್ನು ಪ್ರಾಯೋಗಿಕವಾಗಿ ಸಾಧ್ಯವಾಗಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಿತು ಎನ್ನುವುದೇನೋ ನಿಜ. ಆದರೆ ಛಾಯಾಗ್ರಹಣವನ್ನು ನಿಜಕ್ಕೂ ಸರಳಗೊಳಿಸಿ ಚಿತ್ರಗಳನ್ನು ಸುಲಭವಾಗಿ ಪಡೆದುಕೊಳ್ಳುವಲ್ಲಿ ಈ ತಂತ್ರಜ್ಞಾನದಿಂದ ಹೆಚ್ಚಿನ ಸಹಾಯವೇನೂ ಆಗಲಿಲ್ಲ. ಕ್ಷಿಪ್ರವಾಗಿ ಚಿತ್ರ ಪಡೆಯಲು ಸಾಧ್ಯವಿಲ್ಲದೆ ಇದ್ದದ್ದು, ಚಿತ್ರ ಮೂಡಿಸಲು ಲೋಹದ ಫಲಕ ಬಳಸಬೇಕಿದ್ದದ್ದು, ಒಂದೇ ಚಿತ್ರದ ಹೆಚ್ಚುವರಿ ಪ್ರತಿಗಳನ್ನು ಪಡೆದುಕೊಳ್ಳಲು ಕಷ್ಟಪಡಬೇಕಾದ್ದು - ಇವೆಲ್ಲ ಈ ತಂತ್ರಜ್ಞಾನದ ಪ್ರಮುಖ ಕೊರತೆಗಳಾಗಿದ್ದವು.

ಛಾಯಾಗ್ರಹಣ ಇನ್ನಷ್ಟು ಸುಲಭವಾಗಬೇಕಾದರೆ ಈ ಕೊರತೆಗಳು ನೀಗಬೇಕಲ್ಲ, ಹಾಗಾಗಿ ಆ ದಿಕ್ಕಿನಲ್ಲಿ ಪ್ರಯತ್ನಗಳು ಶುರುವಾದವು. ಇಂತಹ ಹಲವು ಪ್ರಯತ್ನಗಳಿಗೆ ಸ್ವತಃ ಡಿಗೇರೋಟೈಪ್ ತಂತ್ರಜ್ಞಾನವೇ ಆಧಾರವಾಗಿತ್ತು. ಇಂತಹ ಹಲವು ಪ್ರಯತ್ನಗಳಿಂದಾಗಿ ಕೆಲವೇ ನಿಮಿಷಗಳಲ್ಲಿ ಚಿತ್ರಗಳನ್ನು ಸೆರೆಹಿಡಿಯುವುದು ಕೂಡ ಸಾಧ್ಯವಾಯಿತು; ಹಾಗಾಗಿ ಭಾವಚಿತ್ರಗಳನ್ನು ತೆಗೆಯುವ-ತೆಗೆಸಿಕೊಳ್ಳುವ ಅಭ್ಯಾಸ ಕೂಡ ಪ್ರಾರಂಭವಾಯಿತು. ಈ ಅಂಶ ಮೊದಲ ಬಾರಿಗೆ ಛಾಯಾಗ್ರಹಣವನ್ನು ಜನರತ್ತ ಕರೆತಂದಿತು ಎಂದರೂ ತಪ್ಪಾಗಲಾರದೇನೋ.

ಈ ನಡುವೆ ಛಾಯಾಗ್ರಹಣದಲ್ಲಿ ಲೋಹದ ಫಲಕ ಬಳಕೆಗೆ ಪರ್ಯಾಯದ ಹುಡುಕಾಟವೂ ಮುಂದುವರೆದಿತ್ತು. ಈ ನಿಟ್ಟಿನಲ್ಲಿ ವಿಲಿಯಂ ಟ್ಯಾಲ್‌ಬಟ್ ಎಂಬಾತನ ಕೊಡುಗೆ ಬಹಳ ಮಹತ್ವದ್ದು; ಛಾಯಾಗ್ರಹಣದಲ್ಲಿ ನೆಗೆಟಿವ್ ಬಳಕೆಯ ಪರಿಕಲ್ಪನೆಯನ್ನು ಪರಿಚಯಿಸಿದ್ದು ಈತನೇ. ೧೮೪೦ರ ಸುಮಾರಿಗೆ ಈತ ಬಳಕೆಗೆ ತಂದ ಕ್ಯಾಲೋಟೈಪ್ ತಂತ್ರಜ್ಞಾನದಲ್ಲಿ ಸಿಲ್ವರ್ ಅಯೊಡೈಡ್ ಲೇಪನವಿರುವ ಕಾಗದವನ್ನು ನೆಗೆಟಿವ್‌ನಂತೆ ಬಳಸಲಾಗುತ್ತಿತ್ತು. ನಮಗೆ ಬೇಕಾದ ದೃಶ್ಯದ ಛಾಯೆ ಕಾಗದದ ಈ ಹಾಳೆಯ ಮೇಲೆ ಮೂಡಿದ ನಂತರ ಅದನ್ನು ರಾಸಾಯನಿಕವಾಗಿ ಸಂಸ್ಕರಿಸಿ ಬೇರೊಂದು ಕಾಗದದ ಮೇಲೆ ಚಿತ್ರವನ್ನು ಮುದ್ರಿಸಿಕೊಳ್ಳುವುದು ಸಾಧ್ಯವಿತ್ತು.

ಈ ವಿಧಾನ ಕಾಗದದ ಬಳಕೆಯ ಸಾಧ್ಯತೆಯನ್ನು ತೋರಿಸಿಕೊಟ್ಟಿದ್ದರಿಂದ ಛಾಯಾಗ್ರಹಣದಲ್ಲಿ ಲೋಹದ ಫಲಕಗಳನ್ನೇ ಬಳಸಬೇಕಾದ ಅನಿವಾರ್ಯತೆ ದೂರವಾಯಿತು.

ಗುರುವಾರ, ಜುಲೈ 18, 2013

ರಂಜಕ ಪ್ರಸಂಗ

ನಾಗೇಶ ಹೆಗಡೆ

ಕೊಳ್ಳಿದೆವ್ವ ಅಂದರೆ ಬಾಲ್ಯದಲ್ಲಿ ನಮಗೆಲ್ಲ ಭಯ ಇತ್ತು. ಶವವನ್ನು ದಫನ ಮಾಡಿ ಬೆಂಕಿಯೆಲ್ಲ ಪೂರ್ತಿ ಆರಿದ ನಂತರ ಮೂರನೆಯ ರಾತ್ರಿಯಲ್ಲೂ ಶವದ ಮೂಳೆಗಳು ನಿಗಿನಿಗಿ ಮಿನುಗುತ್ತಿದ್ದರೆ ಭಯವೇ ತಾನೆ? ಆಗ ನಮಗೆ ಗೊತ್ತಿರಲಿಲ್ಲ, ಒಬ್ಬೊಬ್ಬ ಮನುಷ್ಯನ ಮೂಳೆಗಳಲ್ಲಿ ಸರಾಸರಿ ಆರುನೂರು ಗ್ರಾಮ್ ರಂಜಕ ಇರುತ್ತದೆ ಅಂತ, ರಂಜಕಕ್ಕೆ ಕತ್ತಲಲ್ಲಿ ಮಿನುಗುವ ಗುಣ ಇದೆ ಅಂತ. ಈಗಲೂ ರಂಜಕ ಅಂದರೆ ಕೊಂಚ ಭಯ ಆಗುತ್ತದೆ ಅದರ ಭವಿಷ್ಯದ ಚಿತ್ರಣವನ್ನು ಕಲ್ಪಿಸಿಕೊಂಡಾಗ.

ಆಧುನಿಕ ಕೃಷಿಕರಿಗೆಲ್ಲ ರಂಜಕ ಬೇಕೇಬೇಕು. ಸಾರಜನಕ, ರಂಜಕ ಮತ್ತು ಪೊಟ್ಯಾಶ್ ಇವು ಮೂರು ಮೂಲವಸ್ತುಗಳನ್ನು ಕೃಷಿಯ ಮೂಲಮಂತ್ರವೆಂತಲೇ ವಿಜ್ಞಾನಿಗಳು ಹೇಳುತ್ತ ಬಂದಿದ್ದಾರೆ. ಇವು ಎಲ್ಲಿಂದ ಬರುತ್ತವೆ? ಸಾರಜನಕವೇನೊ ಸುಲಭ. ವಾಯುಮಂಡಲದ ಶೇಕಡಾ ೭೮ ಪಾಲು ಸಾರಜನಕವೇ ಇದೆ; ಅದು ಎಂದೂ ಮುಗಿಯುವಂಥದ್ದಲ್ಲ. ಪೊಟ್ಯಾಶ್ ಕೂಡ ಅನಂತ ಪ್ರಮಾಣದಲ್ಲಿದೆ. ಸಮುದ್ರವಿದ್ದಷ್ಟು ಕಾಲ ಪೊಟ್ಯಾಶ್‌ಗೆ ತೊಂದರೆ ಇಲ್ಲ. ಆದರೆ ರಂಜಕ ಹಾಗಲ್ಲ. ಅದು ಸೀಮಿತ ಸಂಪನ್ಮೂಲ. ಚೀನಾ, ಅಮೆರಿಕ ಮತ್ತೊ ಮೊರೊಕ್ಕೊದಂಥ ಎಲ್ಲೋ ಕೆಲವು ದೇಶಗಳಲ್ಲಿ ಮಾತ್ರ ದೊಡ್ಡ ನಿಕ್ಷೇಪಗಳ ರೂಪದಲ್ಲಿ ಇರುವ ಶಿಲಾರಂಜಕವನ್ನು ವರ್ಷಕ್ಕೆ ೧೫ಕೋಟಿ ಟನ್‌ಗಳಷ್ಟು ಪ್ರಮಾಣದಲ್ಲಿ ಎತ್ತುತ್ತಿದ್ದಾರೆ. ಬೇಡಿಕೆ ವರ್ಷವರ್ಷಕ್ಕೆ ಹೆಚ್ಚುತ್ತಲೇ ಇದೆ. ಹೀಗೆ ನಿರಂತರ ಗಣಿಗಳಿಂದ ಮೇಲೆತ್ತಿ ಖಾಲಿ ಮಾಡಿದರೆ ಅದು ಮತ್ತೆ ಭರ್ತಿಯಾಗುವಂಥದ್ದಲ್ಲ. ಒಂದು ಅಂದಾಜಿನ ಪ್ರಕಾರ ಮುಂದಿನ ೭೦-೮೦ ವರ್ಷಗಳಿಗೆ ಸಾಲುವಷ್ಟು ರಂಜಕ ಮಾತ್ರ ಈ ಭೂಮಿಯ ಮೇಲಿದೆ. ಆಮೇಲೆ ಏನು? ತೀರ ಆಳದಲ್ಲಿ, ತೀರ ಕಷ್ಟಪಟ್ಟು ತೆಗೆಯಬಹುದಾದ ಕಳಪೆ ಗುಣಮಟ್ಟದ ರಂಜಕದ ನಿಕ್ಷೇಪ ಇದೆ. ಅದನ್ನೂ ತೆಗೆದು ಮುಂದಿನ ಹತ್ತು ವರ್ಷ ಬಳಸುತ್ತಾರೆ ಎನ್ನೋಣ. ಮುಂದೇನು?

ಸೋಮವಾರ, ಜುಲೈ 15, 2013

ದೈತ್ಯಪ್ರತಿಭೆಗಳ ಹೆಗಲ ಮೇಲೆ

ಖ್ಯಾತ ವಿಜ್ಞಾನ ಲೇಖಕ ಶ್ರೀ ಟಿ. ಆರ್. ಅನಂತರಾಮುರವರ 'ದೈತ್ಯಪ್ರತಿಭೆಗಳ ಹೆಗಲ ಮೇಲೆ', ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ. ಈ ಪುಸ್ತಕದ ಪರಿಚಯ ಇಲ್ಲಿದೆ. 

ಟಿ. ಎಸ್. ಗೋಪಾಲ್

ಕನ್ನಡ ಸಾಹಿತ್ಯದ ವಿದ್ಯಾರ್ಥಿಯಾದ ನನ್ನನ್ನು ಮೊದಲಿನಿಂದಲೂ ಬಹುವಾಗಿ ಆಕರ್ಷಿಸಿದ ಪ್ರಕಾರವೆಂದರೆ ಗದ್ಯಸಾಹಿತ್ಯ. ವಡ್ಡಾರಾಧನೆಯ ಶಿವಕೋಟ್ಯಾಚಾರ್ಯನಿಂದ ಮುದ್ದಣನವರೆಗೆ, ಗಳಗನಾಥ, ವಾಸುದೇವಾಚಾರ್ಯರಿಂದ ಮೂರ್ತಿರಾಯರವರೆಗೆ, ಕುವೆಂಪುರವರಿಂದ ದೇವನೂರು, ಕುಂವೀವರೆಗೂ ವಿಸ್ತರಿಸಿಕೊಂಡಿರುವ ಈ ಸಾಹಿತ್ಯಲೋಕ ಕನ್ನಡವನ್ನು ಬಹುಶ್ರೀಮಂತವಾಗಿಸಿದೆ. ಬೆಳ್ಳ್ಳಾವೆ, ಶಿವರಾಮ ಕಾರಂತ, ಜಿ.ಟಿ.ನಾರಾಯಣರಾವ್, ಬಿ.ಜಿ.ಎಲ್.ಸ್ವಾಮಿಯಂತಹವರಿಂದ ಆಧುನಿಕರಿಗೆ ತೆರೆದುಕೊಂಡ ಕನ್ನಡ ವಿಜ್ಞಾನಸಾಹಿತ್ಯವೂ ಇದೇ ಜಾಡುಹಿಡಿದು ಜನಪ್ರಿಯವೂ ಜ್ಞಾನಬೋಧಕವೂ ಆಗಿರುವುದೊಂದು ವಿಶೇಷವೇ.

ಈಚಿನ ದಶಕಗಳಲ್ಲಿ ದಿನಪತ್ರಿಕೆಗಳೂ ನಿಯತಕಾಲಿಕೆಗಳೂ ವಿಜ್ಞಾನಸಾಹಿತ್ಯವನ್ನು ನಿಯಮಿತ ಅಂಕಣಗಳ ಮೂಲಕವೂ ಜನಪ್ರಿಯ ಲೇಖನಗಳ ಮೂಲಕವೂ ಪ್ರಚುರಪಡಿಸಹೊರಟಿರುವುದೂ ಸ್ವಾಗತಾರ್ಹವೇ. ಇಂತಹ ಬರಹಗಳ ಮೂಲಕ ಆಧುನಿಕ ಕನ್ನಡ ಸಾಹಿತ್ಯಕ್ಕೆ ಮಿಗಿಲಾದ ಸೇವೆ ಸಲ್ಲಿಸುತ್ತಿರುವ ನಾಗೇಶ ಹೆಗಡೆ, ಹಾಲ್ದೊಡ್ಡೇರಿ, ಕೊಳ್ಳೇಗಾಲ ಶರ್ಮ, ಹೆಚ್ಚಾರ್ಕೆ ಮೊದಲಾದ ಮಹನೀಯರ ಸಾಲಿಗೆ ಟಿ.ಆರ್. ಅನಂತರಾಮುರವರೂ ಸೇರುತ್ತಾರೆ.

ಅನಂತರಾಮುರವರ ಬರಹ ಮೊದಲಿಗೆ ನನ್ನ ಗಮನ ಸೆಳೆದದ್ದು ಎಂಬತ್ತರ ದಶಕದಲ್ಲಿ ಪ್ರಕಟವಾದ ಅವರ 'ಹಿಮದ ಸಾಮ್ರಾಜ್ಯದಲ್ಲಿ' ಪುಸ್ತಕದ ಮೂಲಕ. ವಿಜ್ಞಾನದ ಬರಹ, ಶೈಲಿ ಇತರ ಜನಪ್ರಿಯ ಗದ್ಯಪ್ರಕಾರಗಳಂತೆ ಆಕರ್ಷಕವಾಗಿರಬಹುದೆಂದು ನನಗೆ ಈ ಪುಸ್ತಕ ತೋರಿಸಿಕೊಟ್ಟಿತು. ಇದೇ ಆಸಕ್ತಿಯಿಂದ ಅವರ ಈಚಿನ ಕೃತಿ 'ದೈತ್ಯಪ್ರತಿಭೆಗಳ ಹೆಗಲ ಮೇಲೆ' ಪುಸ್ತಕವನ್ನು ಕೈಯಲ್ಲಿ ಹಿಡಿದು ಓದಲು ತೊಡಗಿದಾಗ ಮೊದಲ ಅಧ್ಯಾಯವೇ ಅಚ್ಚರಿ ಮೂಡಿಸಿತು. ಇದೇನು ಗಂಭೀರವಿಜ್ಞಾನದ ಬರಹವೋ ಮತ್ತೇನೋ ಅನ್ನಿಸುವಂತಾಯಿತು.

ಶುಕ್ರವಾರ, ಜುಲೈ 12, 2013

ಕ್ಯಾಮೆರಾ ಕತೆಗಳು : ೧

ಟಿ. ಜಿ. ಶ್ರೀನಿಧಿ

[ಎರಡನೇ ಭಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ]
[ಮೂರನೆಯ ಭಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ]

ಹಂಪೆಯ ವಿರೂಪಾಕ್ಷ ದೇವಾಲಯದಲ್ಲಿ ದರ್ಶನ ಮುಗಿಸಿ ಹೊರಬರುವ ಹಾದಿಯಲ್ಲಿ ನಮಗೊಂದು ವಿಶಿಷ್ಟ ದೃಶ್ಯ ಕಾಣಸಿಗುತ್ತದೆ: ಸಣ್ಣ ಕಿಂಡಿಯೊಂದರ ಮೂಲಕ ಹಾದುಬರುವ ಬೆಳಕಿನ ಕಿರಣಗಳು ಎದುರಿನ ಗೋಡೆಯ ಮೇಲೆ ರಾಜಗೋಪುರದ ಚಿತ್ರವನ್ನು ಮೂಡಿಸುತ್ತವೆ.

ಸಣ್ಣದೊಂದು ಕಿಂಡಿಯ ಮೂಲಕ ಬೆಳಕು ಹಾಯುವಂತೆ ಮಾಡಿ ಎದುರಿನ ಗೋಡೆಯ ಮೇಲೆ ಹೊರಗಿನ ದೃಶ್ಯವನ್ನು - ತಲೆಕೆಳಗಾಗಿ - ಮೂಡಿಸುವ ಈ ತಂತ್ರವಿದೆಯಲ್ಲ, ಇದೇ ಇಂದಿನ ಛಾಯಾಗ್ರಹಣದ ಮೂಲರೂಪ ಎಂದು ತಜ್ಞರು ಹೇಳುತ್ತಾರೆ. ಪಿನ್‌ಹೋಲ್ ಕ್ಯಾಮೆರಾ, ಕ್ಯಾಮೆರಾ ಅಬ್ಸ್‌ಕೂರಾ (Camera Obscura) ಎಂದೆಲ್ಲ ಕರೆಯುವುದು ಶತಮಾನಗಳಷ್ಟು ಹಳೆಯ ಈ ತಂತ್ರವನ್ನೇ.


ಆದರೆ ಈ ತಂತ್ರಕ್ಕೂ ಇಂದಿನ ಫೋಟೋಗ್ರಫಿಗೂ ಒಂದು ಮುಖ್ಯ ವ್ಯತ್ಯಾಸವಿತ್ತು. ಇದರಲ್ಲಿ ಚಿತ್ರ ಒಂದೆಡೆ (ಉದಾಹರಣೆಗೆ, ಗೋಡೆಯ ಮೇಲೆ) ಮೂಡುತ್ತಿತ್ತೇ ಹೊರತು ಇಂದಿನ ಕ್ಯಾಮೆರಾಗಳಂತೆ ಎಲ್ಲೂ ದಾಖಲಾಗುತ್ತಿರಲಿಲ್ಲ. ಚಿತ್ರರಚನೆ ಗೊತ್ತಿದ್ದವರು ಬೇಕಿದ್ದರೆ ಗೋಡೆಯ ಮೇಲೆ ಮೂಡಿದ ಚಿತ್ರವನ್ನು ಪ್ರತಿಮಾಡಿಕೊಳ್ಳಬಹುದಿತ್ತು ಅಷ್ಟೆ.

ಭಾನುವಾರ, ಜುಲೈ 7, 2013

ಮೌಸ್ ಜನಕನ ನೆನಪಿನಲ್ಲಿ

ಟಿ. ಜಿ. ಶ್ರೀನಿಧಿ

ವಿಕಿಪೀಡಿಯಾ ಚಿತ್ರ
ಕಂಪ್ಯೂಟರ್ ಬಳಕೆದಾರರೆಲ್ಲರ ಅಚ್ಚುಮೆಚ್ಚಿನ ಸಂಗಾತಿಯೆಂದರೆ ಮೌಸ್. ಅದಿಲ್ಲದೆ ಕಂಪ್ಯೂಟರ್ ಬಳಸುವುದನ್ನು ನಮ್ಮಲ್ಲಿ ಅನೇಕರಿಗೆ ಕಲ್ಪಿಸಿಕೊಳ್ಳುವುದೂ ಕಷ್ಟವೇ. ಕಂಪ್ಯೂಟರ್ ಸಾಧನಗಳ ಪೈಕಿ ಮೌಸ್ ಗಳಿಸಿಕೊಂಡಿರುವ ಜನಪ್ರಿಯತೆ ಅಂಥದ್ದು. ಈವರೆಗೆ ಪ್ರಪಂಚದಲ್ಲಿ ನೂರು ಕೋಟಿಗೂ ಹೆಚ್ಚು ಸಂಖ್ಯೆಯ ಮೌಸ್‌ಗಳು ಮಾರಾಟವಾಗಿವೆಯಂತೆ.

ಆದರೆ ಕಂಪ್ಯೂಟರ್ ಪ್ರಪಂಚದ ವೈಚಿತ್ರ್ಯ ನೋಡಿ, ಇಲ್ಲಿನ ಆವಿಷ್ಕಾರಗಳು ಅದೆಷ್ಟೇ ಜನಪ್ರಿಯವಾದರೂ ಅವುಗಳನ್ನು ಸೃಷ್ಟಿಸಿದವರಿಗೆ ಹೇಳಿಕೊಳ್ಳುವಂತಹ ಪ್ರಸಿದ್ಧಿ ಬಂದಿರುವುದೇ ಇಲ್ಲ. ಕಂಪ್ಯೂಟರ್ ಮೌಸ್ ಸೃಷ್ಟಿಸಿದವರು ಯಾರು ಎಂದು ಕೇಳಿದರೆ ನಮ್ಮಲ್ಲಿ ಬಹುತೇಕರಿಗೆ ಅದರ ಉತ್ತರ ಗೊತ್ತಿರಲಿಕ್ಕಿಲ್ಲ.

ಈ ಪ್ರಶ್ನೆಗೆ ಉತ್ತರರೂಪವಾಗಿದ್ದ ವಿಜ್ಞಾನಿಯ ಹೆಸರು ಡಗ್ಲಸ್ ಎಂಗೆಲ್‌ಬಾರ್ಟ್. ಬರಿಯ ಮೌಸ್ ಅಷ್ಟೇ ಅಲ್ಲ, ಇಂದು ಕಂಪ್ಯೂಟರ್ ಪ್ರಪಂಚದ ಅವಿಭಾಜ್ಯ ಅಂಗಗಳಾಗಿರುವ ಅನೇಕ ಆವಿಷ್ಕಾರಗಳ ಹಿಂದೆ ಅವರ ಪರಿಶ್ರಮವಿತ್ತು. ಒಂದು ಅರ್ಥದಲ್ಲಿ ನೋಡಿದರೆ ಕಂಪ್ಯೂಟರ್ ಪ್ರಪಂಚದ ಬೆಳೆವಣಿಗೆಯನ್ನು ದಶಕಗಳಷ್ಟು ಹಿಂದೆಯೇ ಅಂದಾಜಿಸಿ ಆ ನಿಟ್ಟಿನಲ್ಲಿ ಕೆಲಸಮಾಡಿದ ಕೀರ್ತಿಯೂ ಅವರಿಗೇ ಸಲ್ಲಬೇಕು. ಕೋಣೆಗಾತ್ರದ ಕಂಪ್ಯೂಟರುಗಳ, ಪಂಚ್ಡ್ ಕಾರ್ಡುಗಳ ಕಾಲದಲ್ಲೇ ಇಂದಿನ ಐಟಿ ಜಗತ್ತನ್ನು ಮುಂಗಾಣಲು ಅವರಿಗೆ ಸಾಧ್ಯವಾಗಿದ್ದು ನಿಜಕ್ಕೂ ಅಚ್ಚರಿಯ ಸಂಗತಿ.

ಶುಕ್ರವಾರ, ಜೂನ್ 28, 2013

ಆನ್‌ಲೈನ್ ಸಹಾಯಹಸ್ತ

ಟಿ. ಜಿ. ಶ್ರೀನಿಧಿ

ಉತ್ತರಾಖಂಡದ ಪ್ರವಾಹ ಅಕ್ಷರಶಃ ಕಣ್ಣೀರಿನ ಪ್ರವಾಹವೇ ಆಗಿಬಿಟ್ಟಿದೆ. ವರ್ಷಗಳಿಂದ ನಡೆದ ವ್ಯವಸ್ಥಿತ ಪರಿಸರನಾಶ ದೊಡ್ಡ ಕಾರಣವೋ, ಪರಿಹಾರ ಕಾರ್ಯದಲ್ಲಿ ಸರಕಾರ ತೋರಿದ ಬೇಜವಾಬ್ದಾರಿತನ ದೊಡ್ಡ ಕಾರಣವೋ ಎಂದು ಯೋಚಿಸಲೂ ಆಗದಷ್ಟು ಪ್ರಮಾಣದ ಹಾನಿ ಇಡೀ ದೇಶವನ್ನೇ ಗಾಬರಿಗೊಳಿಸಿದೆ. ನಮ್ಮ ಸೇನಾಪಡೆಗಳು ತಮ್ಮ ಎಂದಿನ ಸಮರ್ಪಣಾಭಾವದೊಡನೆ ಮಾಡುತ್ತಿರುವ ಕೆಲಸವೊಂದೇ ಈ ಸನ್ನಿವೇಶದ ಏಕೈಕ ಆಶಾಕಿರಣ ಎನ್ನಬಹುದೇನೋ.

ಇಂತಹ ಸನ್ನಿವೇಶದಲ್ಲಿ ಉತ್ತರಾಖಂಡದಿಂದ ನೂರಾರು ಮೈಲಿ ದೂರವಿರುವ ನಮ್ಮನಿಮ್ಮಂಥವರು ಹೇಗೆ ನೆರವಾಗಬಹುದು ಎನ್ನುವುದು ದೊಡ್ಡ ಪ್ರಶ್ನೆ. ತೊಂದರೆಯಲ್ಲಿ ಸಿಲುಕಿರುವವರು ಆದಷ್ಟೂ ಬೇಗ ಪಾರಾಗಿ ಬರಲಿ ಎನ್ನುವ ಹಾರೈಕೆಯೇನೋ ಸರಿ, ಆದರೆ ಅಲ್ಲಿನ ಪರಿಸ್ಥಿತಿ ಸುಧಾರಿಸಲು ಅಷ್ಟೇ ಸಾಕಾಗುವುದಿಲ್ಲವಲ್ಲ!

ಈ ನಿಟ್ಟಿನಲ್ಲಿ ಇಂಟರ್‌ನೆಟ್ ಲೋಕ ತನ್ನ ಕೈಲಾದಷ್ಟು ಮಟ್ಟದ ನೆರವು ನೀಡಲು ಹೊರಟಿರುವುದು ವಿಶೇಷ.

ಶುಕ್ರವಾರ, ಜೂನ್ 21, 2013

ಎಲ್ಲೆಲ್ಲೂ ಇಂಟರ್‌ನೆಟ್!

ಟಿ. ಜಿ. ಶ್ರೀನಿಧಿ


ನೀವು ಯಾವ ಬಗೆಯ ಇಂಟರ್‌ನೆಟ್ ಸಂಪರ್ಕ ಉಪಯೋಗಿಸುತ್ತೀರಿ ಎಂದು ಕೇಳಿದರೆ ಬೇರೆಬೇರೆ ಸನ್ನಿವೇಶಗಳಲ್ಲಿ ಬೇರೆಬೇರೆ ರೀತಿಯ ಉತ್ತರಗಳು ಕೇಳಸಿಗುತ್ತವೆ: ಕಚೇರಿಗಳಲ್ಲಿ ಒಂದು ರೀತಿ, ನಗರಪ್ರದೇಶದ ಮನೆಗಳಲ್ಲಿ ಇನ್ನೊಂದು ರೀತಿ, ಗ್ರಾಮೀಣ ಪ್ರದೇಶಗಳಲ್ಲಿ ಬೇರೆಯದೇ ರೀತಿ. ಹೆಚ್ಚುಕಾಲ ಪ್ರಯಾಣದಲ್ಲೇ ಇರುವವರು ಬೇರೆಯದೇ ಉತ್ತರ ನೀಡುತ್ತಾರೇನೋ, ಇರಲಿ.

ಈ ಪೈಕಿ ಹೆಚ್ಚಿನ ಬ್ಯಾಂಡ್‌ವಿಡ್ತ್‌ನೊಡನೆ ಅತಿವೇಗದ ಸಂಪರ್ಕ ಒದಗಿಸುವ ಬ್ರಾಡ್‌ಬ್ಯಾಂಡ್ ಸೇವೆ ಸಾಕಷ್ಟು ಜನಪ್ರಿಯ. ದೂರಸಂಪರ್ಕ ಕ್ಷೇತ್ರದ ಪ್ರಮುಖ ಸಂಸ್ಥೆಗಳಷ್ಟೇ ಅಲ್ಲದೆ ಹಲವಾರು ಕೇಬಲ್ ಟೀವಿ ಸಂಸ್ಥೆಗಳೂ ಇಂತಹ ಅತಿವೇಗದ ಅಂತರಜಾಲ ಸಂಪರ್ಕವನ್ನು ಒದಗಿಸುತ್ತಿವೆ.

ವೈರ್‌ಲೆಸ್ ಫಿಡೆಲಿಟಿ ಅಥವಾ 'ವೈ-ಫಿ' ಮಾನಕ ಆಧಾರಿತ ತಂತ್ರಜ್ಞಾನ ಬಳಸಿ ವೈರ್‌ಲೆಸ್ (ನಿಸ್ತಂತು) ಅಂತರಜಾಲ ಸಂಪರ್ಕವನ್ನೂ ಕಲ್ಪಿಸಿಕೊಳ್ಳಬಹುದು. ಬ್ರಾಡ್‌ಬ್ಯಾಂಡ್ ಸೇವೆ ಒದಗಿಸುವ ಸಂಸ್ಥೆಗಳ ನೀಡುವ ವೈ-ಫಿ ಮೋಡೆಮ್ ಬಳಸಿ ನಮ್ಮ ಮನೆಯಲ್ಲೇ ಇಂತಹ ಸಂಪರ್ಕ ದೊರಕುವಂತೆ ಕೂಡ ಮಾಡಿಕೊಳ್ಳಬಹುದು.

ನಮ್ಮ ಕೈಲಿರುವ ಮೊಬೈಲುಗಳೆಲ್ಲ ಸ್ಮಾರ್ಟ್‌ಫೋನುಗಳಾಗುತ್ತಿದ್ದಂತೆ ಅವುಗಳ ಮೂಲಕ ಅಂತರಜಾಲ ಸಂಪರ್ಕ ಬಳಸುವುದು ಕೂಡ ಜನಪ್ರಿಯವಾಗಿದೆ. ಜಿಪಿಆರ್‌ಎಸ್, ಥ್ರೀಜಿ ಹೀಗೆ ಮೊಬೈಲ್ ಜಾಲ ಬಳಸಿ ಅಂತರಜಾಲ ಸಂಪರ್ಕ ಒದಗಿಸಿಕೊಡುವ ಅದೆಷ್ಟೋ ಬಗೆಯ ಹ್ಯಾಂಡ್‌ಸೆಟ್ಟುಗಳು ಹಾಗೂ ನಿಸ್ತಂತು ಅಂತರಜಾಲ ಸಂಪರ್ಕ ಉಪಕರಣಗಳು (ಡಾಂಗಲ್) ಮಾರುಕಟ್ಟೆಯಲ್ಲಿವೆ.

ಇನ್ನು ಸಾಮಾನ್ಯ ದೂರವಾಣಿ ಬಳಸಿ ಕೆಲಸಮಾಡುವ ಡಯಲ್-ಅಪ್ ಸಂಪರ್ಕ ತೀರಾ ಇತ್ತೀಚಿನವರೆಗೂ ವ್ಯಾಪಕ ಬಳಕೆಯಲ್ಲಿತ್ತು. ದೂರವಾಣಿ ತಂತಿಗಳ ಮೂಲಕ ಮಾಹಿತಿ ವಿನಿಮಯ ನಡೆಸುವ ಈ ಬಗೆಯ ಸಂಪರ್ಕ ಈಚೆಗೆ ನೇಪಥ್ಯಕ್ಕೆ ಸರಿಯುತ್ತಿದೆ.

ಅಂತರಜಾಲ ಸಂಪರ್ಕಗಳಲ್ಲಿ ಇಷ್ಟೆಲ್ಲ ವೈವಿಧ್ಯವಿದ್ದರೂ ಅವುಗಳ ವ್ಯಾಪ್ತಿಯೇ ದೊಡ್ಡದೊಂದು ಸಮಸ್ಯೆ. ಎಲ್ಲೆಲ್ಲಿ ದೂರವಾಣಿ ಅಥವಾ ಕೇಬಲ್ ಜಾಲ ಇಲ್ಲವೋ ಅಲ್ಲಿ ಅಂತರಜಾಲ ಸಂಪರ್ಕವೂ ಇರುವುದಿಲ್ಲ. ಇನ್ನು ಡಯಲ್-ಅಪ್ ಅಥವಾ ಮೊಬೈಲ್ ಅಂತರಜಾಲ ಸಂಪರ್ಕ ಕೆಲವೆಡೆಗಳಲ್ಲಿ ಇದ್ದರೂ ಸಂಪರ್ಕದ ವೇಗ ಬಹಳ ಕಡಿಮೆ ಇರುತ್ತದೆ.

ಇಂತಹ ಕಡೆಗಳಲ್ಲಿ ಅಂತರಜಾಲ ಸಂಪರ್ಕ ಒದಗಿಸುವುದು ಹೇಗೆ?

ಶುಕ್ರವಾರ, ಜೂನ್ 14, 2013

ಬದುಕು ಮತ್ತು ತಂತ್ರಜ್ಞಾನ

ಟಿ. ಜಿ. ಶ್ರೀನಿಧಿ

ನಮ್ಮ ಬದುಕಿನಲ್ಲಿ ತಂತ್ರಜ್ಞಾನದ ಪಾತ್ರ ಈಚಿನ ಕೆಲವರ್ಷಗಳಲ್ಲಿ ತೀವ್ರವೇ ಎನಿಸುವ ಮಟ್ಟದ ಬದಲಾವಣೆ ಕಂಡಿದೆ. ತಂತ್ರಜ್ಞಾನ ಅಂದಾಕ್ಷಣ ಕಂಪ್ಯೂಟರ್, ಫೋನ್, ಟ್ಯಾಬ್ಲೆಟ್ ಎಂದೆಲ್ಲ ಬೇರೆಬೇರೆ ಗ್ಯಾಜೆಟ್‌ಗಳತ್ತ ಕೈತೋರಿಸುತ್ತಿದ್ದ ನಮ್ಮ ಮೈಮೇಲೆಯೇ ಈಗ ತಂತ್ರಜ್ಞಾನದ ಹೊಸ ಆವಿಷ್ಕಾರಗಳು ಕಾಣಿಸಿಕೊಳ್ಳುತ್ತಿವೆ. ಬಟ್ಟೆ-ಚಪ್ಪಲಿ-ಬೆಲ್ಟುಗಳಷ್ಟೇ ಸಹಜವಾಗಿ ನಮ್ಮ ಉಡುಪಿನ ಅಂಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನದ ಈ ಆವಿಷ್ಕಾರಗಳದು 'ವೇರಬಲ್ ಟೆಕ್' ಎಂಬ ಹೊಸದೇ ಆಗ ಗುಂಪು.

ಸದಾಕಾಲವೂ ನಮ್ಮೊಂದಿಗೇ ಇದ್ದು ಬೇರೆಬೇರೆ ರೀತಿಯಲ್ಲಿ ನಮ್ಮ ಬದುಕಿನ ಕುರಿತ ಮಾಹಿತಿಯನ್ನು ಸಂಗ್ರಹಿಸಿಕೊಳ್ಳುವುದು ಈ ಸಾಧನಗಳ ಮೂಲ ಉದ್ದೇಶ. ಬೆಳಗಿನಿಂದ ರಾತ್ರಿಯವರೆಗೆ ನಾವು ಏನೇನೆಲ್ಲ ಮಾಡುತ್ತೇವೆ ಎನ್ನುವುದನ್ನು ಚಿತ್ರಗಳಲ್ಲೋ ವೀಡಿಯೋ ರೂಪದಲ್ಲೋ ದಾಖಲಿಸಿಕೊಳ್ಳುವುದರಿಂದ ಪ್ರಾರಂಭಿಸಿ ರಾತ್ರಿ ಮಲಗಿದಾಗ ನಮಗೆ ಗಾಢನಿದ್ರೆ ಬರುತ್ತದೋ ಇಲ್ಲವೋ ಎಂದು ಗಮನಿಸುವುದರ ತನಕ ವೇರಬಲ್ ಟೆಕ್ ಸಾಧನಗಳ ಕಾರ್ಯವ್ಯಾಪ್ತಿ ವಿಸ್ತರಿಸಿಕೊಂಡಿರುತ್ತದೆ. ಬೆಳಗಿನಿಂದ ಸಂಜೆಯವರೆಗೆ ನಾನು ಎಷ್ಟು ದೈಹಿಕ ಚಟುವಟಿಕೆಗಳಲ್ಲಿ ತೊಡಗಿದ್ದೆ, ಆ ಚಟುವಟಿಕೆಗಳಿಂದಾಗಿ ಎಷ್ಟು ಕ್ಯಾಲರಿ ಖರ್ಚಾಯಿತು ಎಂದೆಲ್ಲ ಗಮನಿಸಿ ಹೇಳುವ ಸಾಧನಗಳೂ ಇವೆ. ವೇರಬಲ್ ಟೆಕ್ನಾಲಜಿ ಕ್ಷೇತ್ರದ ಈವರೆಗಿನ ಅತ್ಯುನ್ನತ ಆವಿಷ್ಕಾರ ಎಂದು ಹೊಗಳಿಸಿಕೊಂಡಿರುವ ಗೂಗಲ್ ಗ್ಲಾಸ್ ಅಂತೂ ಸದಾ ಸುದ್ದಿಮಾಡುತ್ತಲೇ ಇರುತ್ತದೆ.

ಇಷ್ಟಕ್ಕೂ ಈ ಸಾಧನಗಳು ಸಂಗ್ರಹಿಸುವ ಮಾಹಿತಿಯೆಲ್ಲ ನಮಗೆ ಯಾಕಾದರೂ ಬೇಕು ಎನ್ನುವುದು ಒಳ್ಳೆಯ ಪ್ರಶ್ನೆ.

ಶುಕ್ರವಾರ, ಜೂನ್ 7, 2013

ಬ್ರೌಸರ್ ಕಿಟಕಿಯಲ್ಲಿ ಕನ್ನಡದ ಕಂಪು

ಟಿ. ಜಿ. ಶ್ರೀನಿಧಿ

ವಿಶ್ವವ್ಯಾಪಿ ಜಾಲವನ್ನು ನಾವೆಲ್ಲ ಬಳಸುತ್ತೇವಾದರೂ ಬಳಕೆಯ ಉದ್ದೇಶ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಲೇ ಇರುತ್ತದೆ. ಶಾಲೆಯ ವಿದ್ಯಾರ್ಥಿಗೆ ವೆಬ್ ವಿಹಾರವೆಂದರೆ ಆಟವಾಡುವ ಅಥವಾ ಹೋಮ್‌ವರ್ಕ್‌ಗೆ ಬೇಕಾದ ಮಾಹಿತಿ ಹುಡುಕುವ ಮಾರ್ಗ; ಅದೇ ವೃತ್ತಿಪರನೊಬ್ಬನಿಗೆ ವಿಶ್ವವ್ಯಾಪಿ ಜಾಲವೆಂದರೆ ಕಚೇರಿಯ ಕೆಲಸಕ್ಕೆ ಮನೆಯಿಂದಲೇ ಕಿಟಕಿ ತೆರೆದುಕೊಡುವ ಕೊಂಡಿಯಿದ್ದಂತೆ. ಇನ್ನು ಮಕ್ಕಳು ಮೊಮ್ಮಕ್ಕಳೆಲ್ಲ ವಿದೇಶದಲ್ಲಿರುವ ಅಜ್ಜಿ-ತಾತನ ಪಾಲಿಗೆ ವಿಶ್ವವ್ಯಾಪಿ ಜಾಲ ಜೀವನಾಡಿಯೇ ಇದ್ದಂತೆ!

ಇವರೆಲ್ಲ ವಿಶ್ವವ್ಯಾಪಿ ಜಾಲವನ್ನು ಸಂಪರ್ಕಿಸುವ ವಿಧಾನ ಕೂಡ ವಿಭಿನ್ನವೇ. ಒಬ್ಬರು ತಮ್ಮ ಮೊಬೈಲಿನ ಥ್ರೀಜಿ ಸಂಪರ್ಕ ಬಳಸಿದರೆ ಇನ್ನೊಬ್ಬರ ಮನೆಯಲ್ಲಿ ಬ್ರಾಡ್‌ಬ್ಯಾಂಡ್, ವೈ-ಫಿ ಇತ್ಯಾದಿಗಳೆಲ್ಲ ಇರುತ್ತದೆ. ಇನ್ನು ಕೆಲವೆಡೆ ಹಳೆಯಕಾಲದ ಡಯಲ್ ಅಪ್ ಸಂಪರ್ಕವೂ ಬಳಕೆಯಾಗುತ್ತಿರುತ್ತದೆ.

ಇಷ್ಟೆಲ್ಲ ವೈವಿಧ್ಯಗಳ ನಡುವೆ ವಿಶ್ವವ್ಯಾಪಿ ಜಾಲದ ಎಲ್ಲ ಬಳಕೆದಾರರೂ ಕಡ್ಡಾಯವಾಗಿ ಉಪಯೋಗಿಸುವ ಅಂಶವೊಂದಿದೆ. ಅದೇ ಬ್ರೌಸರ್‌ಗಳ ಬಳಕೆ.

ವಿಶ್ವವ್ಯಾಪಿ ಜಾಲದಲ್ಲಿರುವ ತಾಣಗಳನ್ನು ತಮ್ಮ ಕಂಪ್ಯೂಟರಿನಲ್ಲಿ ವೀಕ್ಷಿಸಲು ಬಳಕೆದಾರರಿಗೆ ಅನುವುಮಾಡಿಕೊಡುವುದು ಈ ತಂತ್ರಾಂಶದ ಕೆಲಸ. ಹಾಗಾಗಿಯೇ ಬಳಸುತ್ತಿರುವ ಕಂಪ್ಯೂಟರ್, ಸಂಪರ್ಕದ ವಿಧಾನ, ಬಳಕೆಯ ಉದ್ದೇಶ ಇವೆಲ್ಲ ಏನೇ ಆದರೂ ವಿಶ್ವವ್ಯಾಪಿಜಾಲದ ಬಳಕೆದಾರರೆಲ್ಲರೂ ಬ್ರೌಸರ್ ತಂತ್ರಾಂಶವನ್ನು ಬಳಸಲೇಬೇಕು. ಲ್ಯಾಪ್‌ಟಾಪ್-ಡೆಸ್ಕ್‌ಟಾಪ್‌ಗಳಿಗಷ್ಟೆ ಅಲ್ಲ, ಟ್ಯಾಬ್ಲೆಟ್ಟು-ಮೊಬೈಲುಗಳಲ್ಲೂ ಬ್ರೌಸರ್ ತಂತ್ರಾಂಶ ಬೇಕು. ಕ್ಲೌಡ್ ಕಂಪ್ಯೂಟಿಂಗ್ ವಿಷಯಕ್ಕೆ ಬಂದರಂತೂ ಅದೆಷ್ಟೋ ಕೆಲಸಗಳಿಗೆ ಬ್ರೌಸರ್ ತಂತ್ರಾಂಶವೇ ಜೀವಾಳ.

ಶುಕ್ರವಾರ, ಮೇ 31, 2013

ಮೊದಲ ವೆಬ್‌ಪುಟದ ಹುಡುಕಾಟದಲ್ಲಿ...

ಟಿ. ಜಿ. ಶ್ರೀನಿಧಿ

ವರ್ಲ್ಡ್‌ವೈಡ್ ವೆಬ್, ಅಂದರೆ ವಿಶ್ವವ್ಯಾಪಿ ಜಾಲ, ಈಗ ನಮ್ಮ ಜೀವನದ ಭಾಗವೇ ಆಗಿಹೋಗಿದೆ. ವೆಬ್ ಪುಟಗಳನ್ನು ತೆರೆಯುವುದು, ವಿವಿಧ ಉದ್ದೇಶಗಳಿಗಾಗಿ ಅವನ್ನು ಬಳಸುವುದು - ಇದೆಲ್ಲ ಎಷ್ಟು ಸಾಮಾನ್ಯವೆಂದರೆ ಅದರಲ್ಲಿ ನಮಗೆ ಯಾವ ವಿಶೇಷತೆಯೂ ಕಾಣಸಿಗುವುದಿಲ್ಲ.

ಸುಮಾರು ಎರಡು ದಶಕಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ, ಏಕೆಂದರೆ ಆಗಿನ್ನೂ ವಿಶ್ವವ್ಯಾಪಿ ಜಾಲ ಹುಟ್ಟಿಯೇ ಇರಲಿಲ್ಲ.

ಆ ಸಂದರ್ಭದಲ್ಲಿ ಟಿಮ್ ಬರ್ನರ್ಸ್-ಲೀ ಎಂಬ ವಿಜ್ಞಾನಿಯೊಬ್ಬರು ಸ್ವಿಟ್ಸರ್‌ಲೆಂಡಿನ ಯೂರೋಪಿಯನ್ ಪಾರ್ಟಿಕಲ್ ಫಿಸಿಕ್ಸ್ ಲ್ಯಾಬೊರೇಟರಿಯಲ್ಲಿ (ಸರ್ನ್) ಕೆಲಸಮಾಡುತ್ತಿದ್ದರು. ತಾವು ಬಳಸುತ್ತಿದ್ದ ಮಾಹಿತಿ ಬೇಕೆಂದಾಗ ಬೇಕಾದಕಡೆ ದೊರಕುವಂತೆ ಮಾಡಿಕೊಳ್ಳಲು ಅವರು ನಡೆಸಿದ ಪ್ರಯತ್ನಗಳ ಫಲವೇ ವಿಶ್ವವ್ಯಾಪಿ ಜಾಲದ ಹುಟ್ಟಿಗೆ ಕಾರಣವಾಯಿತು.

ಮೊತ್ತಮೊದಲ ವೆಬ್‌ಸೈಟ್, ಅಂದರೆ ಜಾಲತಾಣ ರೂಪುಗೊಂಡದ್ದೂ ಇದೇ ಸಂದರ್ಭದಲ್ಲಿ.

ಶನಿವಾರ, ಮೇ 25, 2013

ಬರಿಯ ಫೋಟೋಗ್ರಫಿಯಷ್ಟೆ ಅಲ್ಲ, ಇದು ಲೋಮೋಗ್ರಫಿ!


ಟಿ. ಜಿ. ಶ್ರೀನಿಧಿ

ಸ್ಮಾರ್ಟ್‌ಫೋನ್ ಬಳಸುವವರಲ್ಲಿ ಅನೇಕರಿಗೆ ಇನ್ಸ್‌ಟಾಗ್ರಾಮ್ ಗೊತ್ತು. ನಾವು ಕ್ಲಿಕ್ಕಿಸುವ ಚಿತ್ರಗಳನ್ನು ನಮ್ಮ ಇಷ್ಟದಂತೆ ಬದಲಿಸುವ, ರೆಟ್ರೋ ಇಫೆಕ್ಟ್ ಕೊಡುವ ಆಪ್ (app) ಇದು; ಬಹಳ ಜನಪ್ರಿಯವೂ ಹೌದು. ಸುಮಾರು ಒಂದು ವರ್ಷದ ಹಿಂದೆ ಫೇಸ್‌ಬುಕ್ ಸಂಸ್ಥೆ ಒಂದು ಬಿಲಿಯನ್ ಡಾಲರ್ ಕೊಟ್ಟು ಇನ್ಸ್‌ಟಾಗ್ರಾಮ್ ಅನ್ನು ಕೊಂಡ ಸುದ್ದಿ ಬಂತಲ್ಲ, ಆಗ ಅದೆಷ್ಟು ಸುದ್ದಿಯಾಯಿತೆಂದರೆ ಸ್ಮಾರ್ಟ್‌ಫೋನ್ ಬಳಕೆದಾರರಲ್ಲದವರು ಕೂಡ ಇನ್ಸ್‌ಟಾಗ್ರಾಮ್ ಹೆಸರು ಕೇಳುವಂತಾಗಿತ್ತು!

ಫೋಟೋಗಳಿಗೆ ಹೀಗೆ ಸ್ಪೆಶಲ್ ಇಫೆಕ್ಟುಗಳನ್ನು ಸೇರಿಸುವುದು ಬಹಳ ಜನಪ್ರಿಯ ಅಭ್ಯಾಸ ಎಂದೇ ಹೇಳಬೇಕು. ಈಗಂತೂ ಡಿಜಿಟಲ್ ಚಿತ್ರಗಳಿಗೆ ಬಹಳ ಸುಲಭವಾಗಿ ನಮಗೆ ಬೇಕಾದ ಇಫೆಕ್ಟುಗಳನ್ನೆಲ್ಲ ಸೇರಿಸಿಬಿಡಬಹುದು. ಹಿಂದೆ ಬ್ಲಾಕ್ ಆಂಡ್ ವೈಟ್ ಕಾಲದಲ್ಲಿ ಚಿತ್ರಗಳಿಗೆ ಬಣ್ಣ ಹಾಕುತ್ತಿದ್ದದ್ದೂ ಸ್ಪೆಶಲ್ ಇಫೆಕ್ಟೇ!

ಇದೇನೋ ಚಿತ್ರ ಕ್ಲಿಕ್ಕಿಸಿದ ನಂತರದ ಮಾತಾಯಿತು. ಕ್ಲಿಕ್ಕಿಸಿದ ಚಿತ್ರ ಕ್ಯಾಮೆರಾದಲ್ಲಿ ಸೆರೆಯಾಗುವಾಗಲೇ ನಮಗೆ ಬೇಕಾದ ಇಫೆಕ್ಟುಗಳೆಲ್ಲ ಅದರಲ್ಲಿ ಸೇರಿಕೊಳ್ಳುವಂತಿದ್ದರೆ ಹೇಗಿರುತ್ತಿತ್ತು?

ಶುಕ್ರವಾರ, ಮೇ 17, 2013

ಓದುವ ಹವ್ಯಾಸಕ್ಕೆ ಆಪ್ ನೆರವು!


ಟಿ. ಜಿ. ಶ್ರೀನಿಧಿ

ಒಂದೆರಡು ದಶಕಗಳ ಹಿಂದಿನ ಬಾಲ್ಯ ನೆನಪಿಸಿಕೊಳ್ಳಿ. ಮಕ್ಕಳ ಇತರೆಲ್ಲ ಚಟುವಟಿಕೆಗಳ ಜೊತೆಗೆ ಪುಸ್ತಕಗಳೂ ಅವರ ಜೊತೆಗಾರರಾಗಿರುತ್ತಿದ್ದವು. ಓದಲು ಕಲಿಯುವ ಮುನ್ನ ಅಪ್ಪ-ಅಮ್ಮ ಹೇಳುವ ಕತೆಗಳಿಂದಲೇ ಪುಸ್ತಕಗಳ ಈ ಒಡನಾಟ ಪ್ರಾರಂಭವಾಗುತ್ತಿತ್ತು. ಹಾಗೆ ಪುಸ್ತಕಗಳ ರುಚಿ ಹತ್ತಿತೆಂದರೆ ಅಲ್ಲಿಂದ ಮುಂದಕ್ಕೆ ಪುಸ್ತಕಗಳ ಒಡನಾಟ ಮುಂದುವರೆಯುತ್ತಿದ್ದದ್ದು ಗ್ಯಾರಂಟಿ!

ಮುಂದಿನ ಕೆಲ ವರ್ಷಗಳಲ್ಲಿ ಪುಸ್ತಕಗಳ ಪ್ರಾಮುಖ್ಯವನ್ನು ಟೀವಿ ಒಂದಷ್ಟುಮಟ್ಟಿಗೆ ಕಡಿಮೆಮಾಡಿತು, ಆಮೇಲೆ ಟೀವಿಯ ಜೊತೆಗೆ ಕಂಪ್ಯೂಟರ್ ಕೂಡ ಬಂತು. ಅದೇನು ಅಷ್ಟು ಹೊತ್ತಿಂದ ಅದರ ಮುಂದೆ ಕೂತಿದ್ದೀಯಲ್ಲ, ಸ್ವಲ್ಪಹೊತ್ತು ಹೋಗಿ ಏನಾದರೂ ಓದಬಾರದೇ ಎಂದು ಮಕ್ಕಳು ಬೈಸಿಕೊಳ್ಳುವುದು ಸರ್ವೇಸಾಮಾನ್ಯವೂ ಆಯಿತು. ಡೆಸ್ಕ್‌ಟಾಪ್-ಲ್ಯಾಪ್‌ಟಾಪ್‌ಗಳ ಜೊತೆಗೆ ಸೇರಿಕೊಂಡ ಮೊಬೈಲ್ ಹಾಗೂ ಟ್ಯಾಬ್ಲೆಟ್ಟುಗಳಿಗೂ ಇದೇ ಕುಖ್ಯಾತಿ ಸಂದಿತು.

ಆದರೆ ಪ್ರಪಂಚವೆಲ್ಲ ಕಂಪ್ಯೂಟರ್ ಹಾಗೂ ಮೊಬೈಲಿನ ಹಾದಿಯಲ್ಲಿ ಸಾಗಿದಂತೆ ಅವುಗಳ ನೆರವಿನಿಂದ ಮಾಡಬಹುದಾದ ಕೆಲಸಗಳ ಪ್ರಮಾಣ ಹೆಚ್ಚಿತು. ಕಂಪ್ಯೂಟರಿನ ಮುಂದೆ ಕುಳಿತುಕೊಳ್ಳುವುದು ಸಮಯ ವ್ಯರ್ಥಮಾಡಲಿಕ್ಕಷ್ಟೆ ಅಲ್ಲ, ಅದು ಜ್ಞಾನಾರ್ಜನೆಯ ಮಾರ್ಗವೂ ಆಗಬಹುದು ಎಂಬ ಅರಿವು ಬೆಳೆಯಿತು. ಪುಸ್ತಕಗಳಿಂದ ಮಕ್ಕಳನ್ನು (ಹಾಗೂ ಕೆಲವೊಮ್ಮೆ ದೊಡ್ಡವರನ್ನೂ) ದೂರ ಕೊಂಡೊಯ್ದ ಆಪಾದನೆಯನ್ನು ಹೋಗಲಾಡಿಸಿಕೊಳ್ಳಲು ಇದೇ ಸುಸಮಯ ಎಂಬ ಆಲೋಚನೆಯೂ ಹುಟ್ಟಿಕೊಂಡಿತು!

ವಿದ್ಯುನ್ಮಾನ ಪುಸ್ತಕಗಳ (ಇ-ಬುಕ್) ಪರಿಕಲ್ಪನೆಯ ಬೆಳವಣಿಗೆಗೆ ನೆರವಾದದ್ದು ಇದೇ ಅಂಶ.

ಶುಕ್ರವಾರ, ಮೇ 10, 2013

ಕಲ್ಪನೆಗಳಿಗೆ ರೆಕ್ಕೆಕಟ್ಟುವ ಫೋಟೋಶಾಪ್


ಟಿ. ಜಿ. ಶ್ರೀನಿಧಿ

ನೂರು ಪದಗಳು ಹೇಳಲಾರದ್ದನ್ನು ಒಂದು ಚಿತ್ರ ಪರಿಣಾಮಕಾರಿಯಾಗಿ ಹೇಳುತ್ತದಂತೆ. ನಮ್ಮ ಸುತ್ತ ಇರುವ ಮಾಹಿತಿಯಲ್ಲಿ ದೊಡ್ಡದೊಂದು ಪಾಲು ಚಿತ್ರರೂಪದಲ್ಲೇ ಇರುವುದನ್ನು ನೋಡಿದಾಗ ಈ ಹೇಳಿಕೆಯ ಹಿನ್ನೆಲೆ ನಮಗೆ ಸ್ಪಷ್ಟವಾಗಿಬಿಡುತ್ತದೆ. ಏಕೆಂದರೆ ಪಠ್ಯರೂಪದ ಮಾಹಿತಿಯಿಂದ ಸಾಧ್ಯವಾಗುವ, ಅಥವಾ ಅದಕ್ಕಿಂತ ಹೆಚ್ಚು ಸಮರ್ಥವಾದ ಸಂವಹನ ಅದರ ಜತೆಗಿರುವ ಚಿತ್ರದ ಮೂಲಕ ಸಾಧ್ಯವಾಗುತ್ತದೆ.

ಚಿತ್ರ ಇಷ್ಟೆಲ್ಲ ಪರಿಣಾಮಕಾರಿಯಾದ ಮಾಧ್ಯಮ ಎಂದಮೇಲೆ ಚಿತ್ರಗಳ ಸೃಷ್ಟಿ ಹಾಗೂ ಚೆಂದಗಾಣಿಸುವ ಪ್ರಕ್ರಿಯೆಗಳೂ ಬಹಳ ಮುಖ್ಯವೇ ಆಗಿಬಿಡುತ್ತವಲ್ಲ. ಇವುಗಳ ಪ್ರಾಮುಖ್ಯ ಎಷ್ಟರಮಟ್ಟದ್ದು ಎಂದರೆ ಕಲಾವಿದರ ಕೈಚಳಕದಿಂದ ಸೃಷ್ಟಿಯಾದ ಚಿತ್ರಗಳನ್ನೂ ಬಹಳಷ್ಟು ಸಾರಿ ನಾವೆಲ್ಲ ನೈಜವೆಂದೇ ನಂಬಿಬಿಡುತ್ತೇವೆ.

ಈಚಿನ ವರ್ಷಗಳ ವಿಷಯಕ್ಕೆ ಬಂದರೆ ಇಂತಹ ಚಿತ್ರಗಳ ಹಿಂದೆ ಸ್ಪಷ್ಟವಾಗಿ ಕಾಣಸಿಗುವುದು ಕಂಪ್ಯೂಟರಿನ ಕೈವಾಡ. ಹೌದು, ಕಂಪ್ಯೂಟರ್ ಸಹಾಯದಿಂದ ಅತ್ಯಂತ ಉತ್ಕೃಷ್ಟ ಗುಣಮಟ್ಟದ ಚಿತ್ರಗಳನ್ನು ಸೃಷ್ಟಿಸುವುದು ಹಾಗೂ ಈಗಾಗಲೇ ಇರುವ ಚಿತ್ರಗಳನ್ನು ಸುಳಿವೇ ಸಿಗದಂತೆ ಬದಲಿಸಿಬಿಡುವುದು ಸಾಧ್ಯ.

ಇದನ್ನು ಸಾಧ್ಯವಾಗಿಸುವ ತಂತ್ರಾಂಶಗಳಲ್ಲಿ ಅತ್ಯಂತ ಪ್ರಮುಖ ಹೆಸರು ಫೋಟೋಶಾಪ್‌ನದು.

ಶುಕ್ರವಾರ, ಮೇ 3, 2013

ಇಂಟರ್‌ನೆಟ್ಟಿನ ಪಬ್ಲಿಕ್ ಪೊಲೀಸ್


ಟಿ. ಜಿ. ಶ್ರೀನಿಧಿ

ಜಾಲಲೋಕದ ಸಾಧ್ಯತೆಗಳು ಅಪಾರ. ವಿಶ್ವವ್ಯಾಪಿ ಜಾಲವೆಂಬ ಈ ಮಹಾಸಮುದಾಯ ಅಲ್ಲಿರುವ ನನ್ನ ನಿಮ್ಮಂತಹವರಿಗೂ ವಿಶಿಷ್ಟ ಶಕ್ತಿಗಳನ್ನು ನೀಡುತ್ತದೆ. ಕೆಲವೇ ದಿನಗಳಲ್ಲಿ ನಿಘಂಟು ಸಿದ್ಧಪಡಿಸಬೇಕೇ, ಯಾವುದೋ ತಂತ್ರಾಂಶವನ್ನು ಸುಧಾರಿಸಬೇಕೇ, ವೈಜ್ಞಾನಿಕ ಸಮಸ್ಯೆಯೊಂದಕ್ಕೆ ಉತ್ತರ ಹುಡುಕಬೇಕೇ ಅಥವಾ ಸಿನಿಮಾ ನಿರ್ಮಾಣಕ್ಕೆ ಕಾಸು ಕೂಡಿಸಬೇಕೇ - ಸಮುದಾಯದಲ್ಲಿರುವ ಎಲ್ಲರೂ ನಮ್ಮನಮ್ಮ ಕೈಲಾದ ಅಲ್ಪಸ್ವಲ್ಪ ಸಹಾಯವನ್ನಷ್ಟೇ ಮಾಡುವ ಮೂಲಕ ಒಟ್ಟಾರೆಯಾದ ಬೃಹತ್ ಸಾಧನೆಯೊಂದನ್ನು ಮಾಡಿತೋರಿಸುವ ಈ ಮಾಯಾಜಾಲ ಸಾಮಾನ್ಯವಾದುದೇನಲ್ಲ.

ಹನಿಗೂಡಿದರೆ ಹಳ್ಳ ಎನ್ನುವಂತೆ ಸಣ್ಣಸಣ್ಣ ವೈಯಕ್ತಿಕ ಕೊಡುಗೆಗಳ ಮೂಲಕ ದೊಡ್ಡ ಕೆಲಸಗಳನ್ನು ಸಾಧಿಸಿಕೊಳ್ಳುವ ಈ ವಿಶಿಷ್ಟ ಪರಿಕಲ್ಪನೆಯ ಹೆಸರೇ 'ಕ್ರೌಡ್‌ಸೋರ್ಸಿಂಗ್'. ಸಮುದಾಯದ ಸಾಮರ್ಥ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಈ ಪರಿಕಲ್ಪನೆಯ ಉದ್ದೇಶ.

ಸಮುದಾಯದ ಸಾಮರ್ಥ್ಯ ಎಂದಮೇಲೆ ಮುಗಿದೇ ಹೋಯಿತು, ಅದಕ್ಕೆ ನಾವು ಯಾವ ಮಿತಿಯನ್ನೂ ಕಲ್ಪಿಸಿಕೊಳ್ಳುವಂತೆಯೇ ಇಲ್ಲ. ಅನ್ಯಗ್ರಹ ಜೀವಿಗಳ ಹುಡುಕಾಟದಂತಹ ಕ್ಲಿಷ್ಟ ವೈಜ್ಞಾನಿಕ ಶೋಧಗಳಲ್ಲೇ ಸಮುದಾಯದ ಪಾಲ್ಗೊಳ್ಳುವಿಕೆ ಇದೆ ಎಂದಮೇಲೆ ಭೂಮಿಯ ಮೇಲಿನ ಪಾತಕಿಗಳ ಪತ್ತೆಯನ್ನೂ ಕ್ರೌಡ್‌ಸೋರ್ಸ್ ಮಾಡಬಹುದಲ್ಲ!

ಶುಕ್ರವಾರ, ಏಪ್ರಿಲ್ 26, 2013

ಮೊಬೈಲ್‌ನಲ್ಲಿ ಫೋಟೋ ಮೇಕಪ್


ಟಿ. ಜಿ. ಶ್ರೀನಿಧಿ


ಡಿಜಿಟಲ್ ಕ್ಯಾಮೆರಾಗಳ ಆವಿಷ್ಕಾರ ಫಿಲಂ ಕ್ಯಾಮೆರಾಗಳ ಕಾಲದಲ್ಲಿದ್ದ ಹಲವು ಅಭ್ಯಾಸಗಳನ್ನು ಬದಲಿಸಿತು. ಡೆವೆಲಪ್ ಮಾಡಿಸುವುದು, ಪ್ರಿಂಟು ಹಾಕಿಸುವುದು ಮೊದಲಾದ ತಾಪತ್ರಯಗಳನ್ನು ದೂರಮಾಡಿದ್ದು ಇದೇ ಡಿಜಿಟಲ್ ತಂತ್ರಜ್ಞಾನ ತಾನೆ!

ಆದರೆ ಡಿಜಿಟಲ್ ಕ್ಯಾಮೆರಾಗಳನ್ನೂ ಒಂದಷ್ಟು ಕಾಲ ಬಳಸಿದ ಮೇಲೆ ಅದರ ಜೊತೆಗೆ ಬಂದ ಕೆಲ ಅಭ್ಯಾಸಗಳೂ ತಾಪತ್ರಯ ಎನಿಸಲು ಶುರುವಾಯಿತು. ಫೋಟೋ ಕ್ಲಿಕ್ಕಿಸಿದ ತಕ್ಷಣ ಕ್ಯಾಮೆರಾದ ಪುಟಾಣಿ ಪರದೆಯಲ್ಲಿ ಕಾಣಿಸುತ್ತದೇನೋ ಸರಿ, ಆದರೆ ಚಿತ್ರವನ್ನು ಪೂರ್ಣಗಾತ್ರದಲ್ಲಿ ನೋಡಲು - ಅಗತ್ಯ ಬದಲಾವಣೆಗಳನ್ನು ಮಾಡಲು ಕಂಪ್ಯೂಟರಿಗೆ ವರ್ಗಾಯಿಸಲೇಬೇಕು. ನಾವು ಹೋದಕಡೆ ಕಂಪ್ಯೂಟರ್-ಇಂಟರ್‌ನೆಟ್ ಇತ್ಯಾದಿಗಳೆಲ್ಲ ಇಲ್ಲದಿದ್ದರೆ? ನಾವು ತೆಗೆದ ಚಿತ್ರಗಳನ್ನೆಲ್ಲ ಮಿತ್ರವೃಂದಕ್ಕೆ ತೋರಿಸಲು ಫೇಸ್‌ಬುಕ್ಕಿಗೋ ಇನ್ನಾವುದೋ ತಾಣಕ್ಕೋ ಸೇರಿಸುವುದು ಹೇಗೆ?

ಈ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಿರುವುದು ಕ್ಯಾಮೆರಾ ಫೋನುಗಳ ಹೆಚ್ಚುಗಾರಿಕೆ. ಈಗಂತೂ ದೊಡ್ಡದೊಂದು ಕ್ಯಾಮೆರಾ ಹಿಡಿದುಕೊಂಡು ಓಡಾಡುವವರು ಕ್ಲಿಕ್ಕಿಸುವಂತಹುದೇ ಚಿತ್ರಗಳನ್ನು ಜೇಬಿನಲ್ಲಿ ಮೊಬೈಲ್ ಫೋನ್ ಇಟ್ಟುಕೊಂಡವರೂ ಕ್ಲಿಕ್ಕಿಸುವುದು ಸಾಧ್ಯವಾಗಿದೆ.

ಕ್ಯಾಮೆರಾ ಫೋನುಗಳಲ್ಲಿ ಇನ್ನೂ ಒಂದು ವೈಶಿಷ್ಟ್ಯವಿದೆ: ಫೋಟೋ ಕ್ಲಿಕ್ಕಿಸಿದ ನಂತರ ಅದನ್ನು ಬೇರೆಯವರೊಡನೆ ಹಂಚಿಕೊಳ್ಳಲು ಕಂಪ್ಯೂಟರಿನತ್ತ ಮುಖಮಾಡುವುದನ್ನೇ ಅವು ತಪ್ಪಿಸುತ್ತವೆ.

ಶುಕ್ರವಾರ, ಏಪ್ರಿಲ್ 19, 2013

ಅಂತರಜಾಲದ ಅಂಚೆವ್ಯವಸ್ಥೆ


ಟಿ. ಜಿ. ಶ್ರೀನಿಧಿ

ನೂರು ಮನೆಗಳಿರುವ ಒಂದು ಊರಿದೆ ಎಂದುಕೊಳ್ಳೋಣ. ಬಹಳ ಕಾಲದಿಂದಲೂ ಅಲ್ಲಿರುವ ಮನೆಗಳ ಸಂಖ್ಯೆ ಅಷ್ಟೇ ಇರುವುದರಿಂದ ಊರಿನ ಎಲ್ಲ ವ್ಯವಸ್ಥೆಗಳೂ ನೂರು ಮನೆಗಳಿಗಷ್ಟೆ ಸರಿಯಾಗಿ ಕೆಲಸಮಾಡುವಂತೆ ರೂಪುಗೊಂಡುಬಿಟ್ಟಿವೆ. ನೂರು ಮನೆಗಳಿಗೆ ಸಾಲುವಷ್ಟು ನೀರು-ವಿದ್ಯುತ್ ಪೂರೈಕೆ, ನೂರು ಮನೆಗಳಿಗೆ ಬೇಕಾದಷ್ಟು ಅಂಗಡಿಗಳು, ನೂರು ಮನೆಗಳನ್ನಷ್ಟೆ ನಿಭಾಯಿಸಲು ಶಕ್ತವಾದ ಅಂಚೆ ವ್ಯವಸ್ಥೆ, ನೂರೇ ನೂರು ದೂರವಾಣಿ ಸಂಪರ್ಕ; ಯಾರಿಗೂ ಯಾವುದರಲ್ಲೂ ಕೊರತೆಯಿಲ್ಲ.

ಊರಿನಲ್ಲಿ ವ್ಯವಸ್ಥೆ ಇಷ್ಟೆಲ್ಲ ಸಮರ್ಪಕವಾಗಿದೆ ಎನ್ನುವ ಸುದ್ದಿ ಕೇಳಿದ ಅನೇಕ ಜನರು ಆ ಊರಿನತ್ತ ಆಕರ್ಷಿತರಾದರು. ಪರಿಣಾಮವಾಗಿ ಅಲ್ಲಿನ ರಿಯಲ್ ಎಸ್ಟೇಟ್ ಉದ್ದಿಮೆ ದೊಡ್ಡದಾಗಿ ಬೆಳೆಯಿತು. ದೊಡ್ಡ ಸಂಖ್ಯೆಯಲ್ಲಿ ಹೊಸ ಮನೆಗಳು, ಅಪಾರ್ಟ್‌ಮೆಂಟುಗಳೆಲ್ಲ ಸೃಷ್ಟಿಯಾದವು. ಒಂದೊಂದಾಗಿ ಹೊಸ ಕುಟುಂಬಗಳೂ ಆ ಮನೆಗಳಿಗೆ ಬಂದು ಸೇರಿಕೊಂಡವು.

ಮೂಲ ಊರಿನ ಸುತ್ತ ಬೇಕಾದಷ್ಟು ಜಾಗವೇನೋ ಇತ್ತು, ರಿಯಲ್ ಎಸ್ಟೇಟ್ ಉದ್ಯಮಿಗಳು ಅಲ್ಲೆಲ್ಲ ಮನೆ ಕಟ್ಟಿ ಮಾರಿಬಿಟ್ಟರು. ಆದರೆ ಅಷ್ಟೆಲ್ಲ ಸಂಖ್ಯೆಯ ಹೊಸ ಮನೆಗಳಿಗೆ ನೀರು-ವಿದ್ಯುತ್-ದೂರವಾಣಿ ಸಂಪರ್ಕಗಳನ್ನು ಕೊಡುವಷ್ಟು ಸಾಮರ್ಥ್ಯ ಅಲ್ಲಿನ ವ್ಯವಸ್ಥೆಗೆ ಇಲ್ಲ; ಬೇರೆಲ್ಲ ಹೋಗಲಿ ಎಂದರೆ ಹೊಸ ಮನೆಗಳವರ ಅಗತ್ಯಗಳನ್ನು ಪೂರೈಸುವಷ್ಟು ಸಾಮರ್ಥ್ಯವೂ ಊರಿನ ಅಂಗಡಿಗಳಿಗಿಲ್ಲ.

ನೂರು ಮನೆಗಳಿದ್ದಾಗ ಯಾವ ಕೊರತೆಯೂ ಇಲ್ಲದ ಊರು ಅತಿ ಶೀಘ್ರದಲ್ಲೇ ಸಮಸ್ಯೆಗಳ ಆಗರವಾಗುವುದು ಎಷ್ಟು ಸುಲಭ ಅಲ್ಲವೆ? ಸ್ವಲ್ಪ ಹೆಚ್ಚೂಕಡಿಮೆಯಾದರೆ ನಮ್ಮ ಅಂತರಜಾಲವೂ ಇಂತಹುದೇ ಪರಿಸ್ಥಿತಿಯತ್ತ ಹೋಗಬಹುದು ಎಂದು ತಜ್ಞರು ಹೇಳುತ್ತಾರೆ.

ಸೋಮವಾರ, ಏಪ್ರಿಲ್ 15, 2013

ಮಾತು ಮಾತುಗಳನು ದಾಟಿ...

ಟಿ. ಜಿ. ಶ್ರೀನಿಧಿ

ಕಳೆದ ಕೆಲ ದಶಕಗಳಲ್ಲಿ ನಮ್ಮ ಬದುಕನ್ನು ತೀರಾ ಗಣನೀಯವಾಗಿ ಬದಲಿಸಿರುವ ವಸ್ತುಗಳಲ್ಲಿ ಮೊಬೈಲ್ ದೂರವಾಣಿಯದು ಪ್ರಮುಖ ಸ್ಥಾನ. ಬಹಳ ಕಡಿಮೆ ಸಮಯದಲ್ಲಿ ಅಪಾರ ಜನಪ್ರಿಯತೆ ಗಳಿಸಿದ ಹೆಚ್ಚುಗಾರಿಕೆ ಈ ಮೊಬೈಲ್ ಫೋನಿನದು.

ಮೊಬೈಲ್ ದೂರವಾಣಿಯ ಕಲ್ಪನೆ ಸುಮಾರು ಐವತ್ತು-ಅರವತ್ತು ವರ್ಷಗಳಷ್ಟು ಹಳೆಯದು. ಸಾಮಾನ್ಯ ದೂರವಾಣಿ, ಅಂದರೆ ಲ್ಯಾಂಡ್‌ಲೈನ್, ಆ ವೇಳೆಗಾಗಲೇ ಸಾಕಷ್ಟು ವ್ಯಾಪಕವಾಗಿ ಬಳಕೆಯಾಗುತ್ತಿತ್ತು; ರೇಡಿಯೋ ಕಲ್ಪನೆ ಕೂಡ ಸುಮಾರು ಹಳೆಯದಾಗಿತ್ತು. ಒಬ್ಬರ ಮಾತನ್ನು ಇನ್ನೊಬ್ಬರಿಗೆ ತಲುಪಿಸುವ ಸಾಮಾನ್ಯ ಫೋನು ತಂತಿಗಳ ನೆರವಿಲ್ಲದೆ, ಅಂದರೆ ರೇಡಿಯೋ ರೀತಿಯಲ್ಲಿ, ಕೆಲಸ ಮಾಡಿದರೆ ಎಷ್ಟೊಂದು ಅನುಕೂಲ ಎನ್ನುವ ಯೋಚನೆ ಮೊಬೈಲ್ ದೂರವಾಣಿಯ ಸೃಷ್ಟಿಗೆ ಕಾರಣವಾಯಿತು.

ಆದರೆ ಅವತ್ತಿನ ಮೊಬೈಲ್ ತಂತ್ರಜ್ಞಾನ ಇವತ್ತಿನಷ್ಟು ಮುಂದುವರೆದಿರಲಿಲ್ಲ. ಮೊಬೈಲ್ ಕರೆಗಳ ದರ ವಿಪರೀತ ಜಾಸ್ತಿಯಿದ್ದದ್ದಷ್ಟೇ ಅಲ್ಲ, ಫೋನುಗಳೂ ತೀರಾ ದೊಡ್ಡದಾಗಿದ್ದವು. ಅವುಗಳ ಗಾತ್ರ ಎಷ್ಟು ದೊಡ್ಡದಿತ್ತೆಂದರೆ ಮೊದಮೊದಲು ಬಂದ ಮೊಬೈಲ್ ಫೋನುಗಳನ್ನು ಕಾರುಗಳಲ್ಲಷ್ಟೇ ಇಟ್ಟುಕೊಳ್ಳಲು ಸಾಧ್ಯವಿತ್ತು.

ಇದನ್ನೆಲ್ಲ ನೋಡುತ್ತಿದ್ದ ಮಾರ್ಟಿನ್ ಕೂಪರ್ ಎಂಬ ತಂತ್ರಜ್ಞರಿಗೆ ಒಂದು ಯೋಚನೆ ಬಂತು; ದೂರವಾಣಿಯನ್ನು ಒಂದು ಮನೆಗೆ, ಕಚೇರಿಗೆ ಅಥವಾ ಈಗ ವಾಹನಕ್ಕೆ ಸೀಮಿತಗೊಳಿಸಿಬಿಟ್ಟಿದ್ದೇವಲ್ಲ, ಅದರ ಬದಲು ದೂರವಾಣಿಗಿರುವ ಭೌಗೋಳಿಕ ಮಿತಿಯನ್ನು ಸಂಪೂರ್ಣವಾಗಿ ಹೋಗಲಾಡಿಸಿ ಒಬ್ಬ ವ್ಯಕ್ತಿಗೆ ಒಂದು ದೂರವಾಣಿ ಸಂಖ್ಯೆ ಕೊಡುವಂತಿದ್ದರೆ ಹೇಗೆ?

ಮಂಗಳವಾರ, ಏಪ್ರಿಲ್ 9, 2013

ತಿರುಗಿ ನೋಡುವ ಸಮಯ

ಉದಯವಾಣಿಯ 'ಜೋಶ್' ಪುರವಣಿಯಲ್ಲಿ ಕಳೆದ ೧೨೨ ವಾರಗಳಿಂದ ಪ್ರಕಟವಾಗುತ್ತಿದ್ದ 'ವಿಜ್ಞಾಪನೆ' ಅಂಕಣ ಇಂದಿನ ಲೇಖನದೊಡನೆ ಮುಕ್ತಾಯವಾಗುತ್ತಿದೆ. ಈ ಅಂಕಣವನ್ನು ಮೆಚ್ಚಿಕೊಂಡು ಪ್ರೋತ್ಸಾಹಿಸಿದ ಎಲ್ಲ ಓದುಗರಿಗೂ ಉದಯವಾಣಿಯ ಸಂಪಾದಕವರ್ಗಕ್ಕೂ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು. ಉದಯವಾಣಿ ಮಂಗಳೂರು ಆವೃತ್ತಿಯ 'ಯುವ ಸಂಪದ'ದಲ್ಲಿ ಪ್ರಕಟವಾಗುತ್ತಿರುವ ಅಂಕಣ 'ಸ್ವ-ತಂತ್ರ' ಸದ್ಯಕ್ಕೆ ಹಾಗೆಯೇ ಮುಂದುವರೆಯುತ್ತದೆ. ಇತರ ಹೊಸ ಬರಹಗಳು ಇಜ್ಞಾನ ಡಾಟ್ ಕಾಮ್‌ನಲ್ಲಿ ಎಂದಿನಂತೆ ಪ್ರಕಟವಾಗುತ್ತವೆ.
ಟಿ. ಜಿ. ಶ್ರೀನಿಧಿ

"ಈಗ ನಾವಿದ್ದೇವಲ್ಲ ಪರಿಸ್ಥಿತಿ, ತಂತ್ರಜ್ಞಾನ ಈಗಲೇ ಎಷ್ಟೊಂದು ಬೆಳೆದುಬಿಟ್ಟಿದೆ! ಮುಂದೆಯೂ ಹೀಗೆಯೇ ಬೆಳೆಯುತ್ತ ಹೋದರೆ ಏನು ಗತಿ?" ಎಂಬಂತಹ ಮಾತುಗಳು ನಾಗರೀಕತೆಯ ಪ್ರತಿಯೊಂದು ಹಂತದಲ್ಲೂ ಕೇಳಿಬಂದಿವೆ. ಕಳೆದೊಂದು ಶತಮಾನದಲ್ಲಂತೂ ಮಾಹಿತಿ ತಂತ್ರಜ್ಞಾನ ಬೆಳೆಯುತ್ತಹೋದಂತೆ ನಮ್ಮ ಸುತ್ತಲೂ ಸೃಷ್ಟಿಯಾಗುತ್ತಿರುವ ಮಾಹಿತಿಯ ಮಹಾಪೂರದ ಬಗ್ಗೆ ಕಾಳಜಿ ವ್ಯಕ್ತವಾಗುತ್ತಲೇ ಇದೆ.

೧೯೭೧ರಲ್ಲಿ ಪ್ರಕಟವಾದ ಲೇಖನವೊಂದು ಈಗಾಗಲೇ ನಮ್ಮಲ್ಲಿ ಐದಾರು ಟೀವಿ ಚಾನೆಲ್ಲುಗಳಿವೆ, ಇದು ಹೀಗೆಯೇ ಬೆಳೆಯುತ್ತ ಹೋಗಿ ಮುಂದೆ ನೂರಾರು ಚಾನೆಲ್ಲುಗಳಾದರೆ ಏನು ಗತಿ? ಎಂದು ಆತಂಕ ವ್ಯಕ್ತಪಡಿಸಿತ್ತಂತೆ. ತಮಾಷೆಯ ವಿಷಯವೆಂದರೆ, ಕೆಲವೇ ದಶಕಗಳ ನಂತರ, ಈಗ ನೂರಾರು ಚಾನೆಲ್ಲುಗಳು ಇರುವುದಷ್ಟೇ ಅಲ್ಲ, ನಮಗೆ ಅದು ವಿಶೇಷ ಎನಿಸುತ್ತಲೂ ಇಲ್ಲ!

ಬೇರೆಯವರ ವಿಷಯವೆಲ್ಲ ಏಕೆ, ಕಂಪ್ಯೂಟರ್ ವಿಜ್ಞಾನದ ಆದ್ಯ ತಜ್ಞರಲ್ಲೊಬ್ಬರಾದ ಅಲನ್ ಟ್ಯೂರಿಂಗ್ ಕೂಡ ೧೯೫೦ರಲ್ಲಿ ಇಂತಹುದೇ ಒಂದು ಮಾತು ಹೇಳಿದ್ದರಂತೆ. ಮುಂದಿನ ಐವತ್ತು ವರ್ಷಗಳಲ್ಲಿ ಕಂಪ್ಯೂಟರಿನ ಮೆಮೊರಿ ನೂರು ಕೋಟಿ ಬಿಟ್‌ಗಳನ್ನು ಉಳಿಸಿಕೊಳ್ಳುವ ಮಟ್ಟಕ್ಕೆ ಬೆಳೆಯಲಿದೆ ಎನ್ನುವುದು ಅವರ ಮಾತಿನ ಸಾರಾಂಶವಾಗಿತ್ತು. ನೂರು ಕೋಟಿ ಎನ್ನುವ ಸಂಖ್ಯೆ ಬಹಳ ದೊಡ್ಡದೇ, ನಿಜ. ಆದರೆ ಅದು ೧೨೮ ಎಂಬಿಗಿಂತ ಕೊಂಚ ಕಡಿಮೆಯೇ ಎನ್ನುವುದನ್ನು ಗಮನಿಸಿದಾಗ ಕಳೆದ ಐವತ್ತು-ಅರವತ್ತು ವರ್ಷಗಳಲ್ಲಿ ತಂತ್ರಜ್ಞಾನ ಹೇಗೆ ಬೆಳೆದಿದೆ ಎನ್ನುವುದು ನಮ್ಮ ಗಮನಕ್ಕೆ ಬರುತ್ತದೆ. ೧೨೮ಎಂಬಿ ಎಲ್ಲಿ, ಇಂದಿನ ಟೆರಾಬೈಟುಗಳೆಲ್ಲಿ!

ನಮ್ಮ ಸುತ್ತ ಇರುವ ಮಾಹಿತಿಯ ಪ್ರಮಾಣ ಹಾಗೂ ಕಂಪ್ಯೂಟರ್ ಮೆಮೊರಿಯ ಮಾತೆಲ್ಲ ಹಾಗಿರಲಿ. ಇದೆಲ್ಲದರ ಬೆಳವಣಿಗೆಗೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಕಾರಣವಾಗಿರುವುದು ಸಂಸ್ಕರಣಾ ಸಾಮರ್ಥ್ಯ, ಅಂದರೆ ಪ್ರಾಸೆಸಿಂಗ್ ಪವರ್ ಬೆಳೆದಿರುವ ರೀತಿ. ಬಹಳ ಹಿಂದಿನ ಮಾತೆಲ್ಲ ಏಕೆ, ಈ ಶತಮಾನದ ಪ್ರಾರಂಭದಲ್ಲೂ ಇನ್ನೂರು-ಮುನ್ನೂರು ಮೆಗಾಹರ್ಟ್ಸ್ ಆಸುಪಾಸಿನಲ್ಲೇ ಇದ್ದ ಪ್ರಾಸೆಸರ್ ಸಾಮರ್ಥ್ಯ ಗಿಗಾಹರ್ಟ್ಸ್‌ಗಳನ್ನು ದಾಟಿ ಅದೆಷ್ಟೋ ಕಾಲವಾಗಿದೆ. ಒಂದರ ಜಾಗದಲ್ಲಿ ಪ್ರಾಸೆಸರ್ ಒಳಗೆ ನಾಲ್ಕು ತಿರುಳುಗಳು (ಕ್ವಾಡ್-ಕೋರ್) ಬಂದು ಕುಳಿತುಬಿಟ್ಟಿವೆ!

ಕಂಪ್ಯೂಟರ್ ತಂತ್ರಜ್ಞಾನ ಈ ಪರಿಯ ಬೆಳವಣಿಗೆ ಕಾಣಲಿದೆ ಎಂದು ಬಹಳ ಹಿಂದೆಯೇ ಅನೇಕರು ಸರಿಯಾಗಿ ಊಹಿಸಿದ್ದರು.

ಶುಕ್ರವಾರ, ಏಪ್ರಿಲ್ 5, 2013

ಇಂಟರ್‌ನೆಟ್ ಲೋಕದ ಟ್ರಾಫಿಕ್ ಜಾಮ್


ಟಿ. ಜಿ. ಶ್ರೀನಿಧಿ

ನಮ್ಮ ಬೆಂಗಳೂರಿನ ಟ್ರಾಫಿಕ್ ಜಾಮ್‌ಗಳ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ? ಐಬಿಎಂ ಗ್ಲೋಬಲ್ ಕಮ್ಯೂಟರ್ ಪೇನ್ ಸರ್ವೆ ಪ್ರಕಾರ ದಿನನಿತ್ಯದ ಪ್ರಯಾಣಿಕರು ಅತ್ಯಂತ ಹೆಚ್ಚು ಕಿರಿಕಿರಿ ಅನುಭವಿಸುವ ಪ್ರಪಂಚದ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೂ ಸ್ಥಾನವಿದೆಯಂತೆ.

ಇದೇ ಬೆಂಗಳೂರು ಮಾಹಿತಿ ತಂತ್ರಜ್ಞಾನದ ತವರೂ ಹೌದು. ಇಲ್ಲಿನ ಪುಟ್ಟ ಮಕ್ಕಳೂ ಬಹುಶಃ ಡಾಟ್ ಕಾಮ್ ಭಾಷೆಯನ್ನೇ ಮಾತನಾಡುತ್ತಾರೇನೋ! ಕುತೂಹಲದ ಸಂಗತಿಯೆಂದರೆ ಬೆಂಗಳೂರು ಅಥವಾ ಇನ್ನಾವುದೇ ನಗರದಲ್ಲಿರುವಂತೆ ಅಂತರಜಾಲದ ಲೋಕದಲ್ಲೂ ರಸ್ತೆಗಳಿವೆ; ಅಡ್ಡರಸ್ತೆ-ಮುಖ್ಯರಸ್ತೆ-ರೋಡ್‌ಹಂಪು-ಪಾಟ್‌ಹೋಲು ಎಲ್ಲವೂ ಆನ್‌ಲೈನ್ ಲೋಕದಲ್ಲೂ ಇವೆ. ಆಟೋ ಕಾರು ಬಸ್ಸು ಲಾರಿಗಳ ಬದಲಿಗೆ ಅಲ್ಲಿ ಮಾಹಿತಿ ಹರಿದಾಡುತ್ತದೆ ಎನ್ನುವುದೊಂದೇ ವ್ಯತ್ಯಾಸ ಅಷ್ಟೆ. ಹೀಗಾಗಿಯೇ ಇದನ್ನು 'ಇನ್‌ಫರ್ಮೇಶನ್ ಸೂಪರ್‌ಹೈವೇ' ಎಂದು ಕರೆಯಲಾಗುತ್ತದೆ.

ಕಚೇರಿಗೆ ಹೋಗುವ ಧಾವಂತದಲ್ಲಿ ಹೆಚ್ಚುಹೆಚ್ಚು ಕಾರು-ಬಸ್ಸು-ಬೈಕುಗಳು ರಸ್ತೆಗಿಳಿದಾಗ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಆಗುತ್ತದಲ್ಲ, ಆನ್‌ಲೈನ್ ಪ್ರಪಂಚದಲ್ಲೂ ರಸ್ತೆಗಳಿವೆ ಎನ್ನುವುದಾದರೆ ಅಲ್ಲೂ ಟ್ರಾಫಿಕ್ ಜಾಮ್ ಆಗುವುದು ಸಾಧ್ಯವೆ?

ಗುರುವಾರ, ಏಪ್ರಿಲ್ 4, 2013

ಕಂಪ್ಯೂಟರ್ ಪ್ರಪಂಚ

ಟಿ. ಜಿ. ಶ್ರೀನಿಧಿಯವರ ಹೊಸ ಪುಸ್ತಕ 'ಕಂಪ್ಯೂಟರ್ ಪ್ರಪಂಚ' ನವಕರ್ನಾಟಕ ಪ್ರಕಾಶನದ ಮೂಲಕ ಇದೀಗ ಮಾರುಕಟ್ಟೆಗೆ ಬಂದಿದೆ. 

ಈ ಪುಸ್ತಕದಲ್ಲಿ ಏನಿದೆ? ಹಿರಿಯ ವಿಜ್ಞಾನ ಲೇಖಕ ಶ್ರೀ ಟಿ. ಆರ್. ಅನಂತರಾಮುರವರು ಬರೆದಿರುವ ಮುನ್ನುಡಿಯ ಕೆಲ ಸಾಲುಗಳು ಇಲ್ಲಿವೆ:

"ಕಂಪ್ಯೂಟರ್ ಚರಿತ್ರೆಯಿಂದ ತೊಡಗಿ ಕ್ಯೂಆರ್ ಕೋಡ್‌ವರೆಗೆ ವಿಸ್ತರಿಸಿರುವ `ಕಂಪ್ಯೂಟರ್ ಪ್ರಪಂಚ' ಕಲಿಯಲು ಪ್ರೇರೇಪಿಸುವ ಹೊಸ ಮಾರ್ಗವೊಂದನ್ನು ಅನಾವರಣಗೊಳಿಸಿದೆ. ಬ್ಲಾಗ್ ತೆರೆಯಬೇಕೆ? ಇಮೇಲ್ ಮಾಡಬೇಕೆ? ಇಂಟರ್‌ನೆಟ್ ಬಗ್ಗೆ ಇಣುಕು ನೋಟಬೇಕೆ? ಕುರ್ಚಿಯಲ್ಲಿ ಅಲ್ಲಾಡದೆ ಕುಳಿತು ಕಂಪ್ಯೂಟರ್ ಪ್ರಪಂಚದಲ್ಲಿ ವಿಹರಿಸಲು ನೆರವಾಗುವ ಆತ್ಮೀಯ ಧಾಟಿಯಲ್ಲಿ ನಿಮಗೆ ಇನ್‌ಸ್ಟ್ರಕ್ಷನ್ಸ್‌ಗಳನ್ನು ಕೊಡುವ ಕೃತಿ `ಕಂಪ್ಯೂಟರ್ ಪ್ರಪಂಚ'.

ಖುಷಿಕೊಡುವ ಒಂದು ವಿಚಾರ - ಅನೇಕ ಅಧ್ಯಾಯಗಳಲ್ಲಿ ನಿಮಗೆ ಟಿಪ್ಸ್‌ಗಳಿವೆ. ವಿಶೇಷ ಮಾಹಿತಿಗಳಿವೆ. ಮೌಸ್ ಜನ್ಮತಾಳಿದ್ದು ಯಾವ ಘಳಿಗೆಯಲ್ಲಿ? ಕವಿ ಬೈರನ್ ಮಗಳು - ಅಡ, ಮೊದಲ ಕಂಪ್ಯೂಟರ್ ಪ್ರೋಗ್ರಾಮರ್ ಆದದ್ದು, ಮಾರ್ಕ್ ೨ ಕಂಪ್ಯೂಟರ್ ಪರೀಕ್ಷೆಯಲ್ಲಿ ನಿಜವಾದ ಮೊದಲ ಜೀವಂತ ಬಗ್ ಕಂಡದ್ದು; ಇಂಥ ಅಪರೂಪದ ಕುತೂಹಲಕಾರಿ ಮಾಹಿತಿಗಳಿವೆ."

ದೊಡ್ಡ ಗಾತ್ರದ (೧/೪ ಕ್ರೌನ್) ೧೧೨ ಪುಟಗಳಿರುವ ಈ ಪುಸ್ತಕದ ಬೆಲೆ ರೂ. ೧೨೦.

ಮಂಗಳವಾರ, ಏಪ್ರಿಲ್ 2, 2013

ಸ್ಪಾಮ್ ಅಲ್ಲ, ಇದು ಬೇಕನ್!


ಟಿ. ಜಿ. ಶ್ರೀನಿಧಿ

ಸ್ಪಾಮ್ ಬಗ್ಗೆ ಎಲ್ಲರಿಗೂ ಗೊತ್ತು. ಬೇಡದ ಮಾಹಿತಿಯ ಕಸವನ್ನು ಅನುಮತಿಯಿಲ್ಲದೆ ನಮ್ಮ ಇಮೇಲ್ ಖಾತೆಯೊಳಗೆ ತಂದು ಸುರಿಯುವ ಈ ಕೆಟ್ಟ ಅಭ್ಯಾಸದ ವಿರುದ್ಧ ಇಡೀ ಅಂತರಜಾಲವೇ ಹೋರಾಡುತ್ತಿದೆ ಎಂದರೂ ಸರಿಯೇ. ಸ್ಪಾಮ್ ಸಂದೇಶಗಳನ್ನು ಎಡೆಬಿಡದೆ ಕಳುಹಿಸುವ ಬಾಟ್‌ನೆಟ್‌ಗಳನ್ನು ಹುಡುಕಿ ಮಟ್ಟಹಾಕುವ ಹಾಗೂ ಆ ಬಾಟ್‌ನೆಟ್‌ಗಳು ರಕ್ತಬೀಜಾಸುರರಂತೆ ಮತ್ತೆ ತಲೆಯೆತ್ತುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ.

ಹೀಗಿರುವಾಗ ಇಮೇಲ್ ಲೋಕಕ್ಕೆ ಹೊಸದೊಂದು ಉಪದ್ರವದ ಪ್ರವೇಶವಾಗಿದೆ. ಅತ್ತ ಸ್ಪಾಮ್‌ನಂತೆ ಸಂಪೂರ್ಣ ಅನಪೇಕ್ಷಿತವೂ ಅಲ್ಲದ, ಇತ್ತ ನಾವು ನಿರೀಕ್ಷಿಸುವ ಉಪಯುಕ್ತ ಸಂದೇಶವೂ ಅಲ್ಲದ ಹೊಸಬಗೆಯ ಈ ತಾಪತ್ರಯ ಈಗಾಗಲೇ ಅನೇಕ ಬಳಕೆದಾರರಿಗೆ ಕಿರಿಕಿರಿಮಾಡುತ್ತಿದೆ.

ಇದಕ್ಕೆ ತಜ್ಞರು ಇಟ್ಟಿರುವ ಹೆಸರು ಬೇಕನ್. ಇಂಗ್ಲಿಷಿನಲ್ಲಿ 'ಬಾಡಿಸಿದ ಅಥವಾ ಉಪ್ಪುಹಚ್ಚಿದ ಹಂದಿಯ ಮಾಂಸ' ಎಂದು ಅರ್ಥಕೊಡುವ ಈ ಪದವೇ ಇಮೇಲ್ ಪೆಟ್ಟಿಗೆಯ ಈ ತಾಪತ್ರಯಕ್ಕೆ ನಾಮಕಾರಣವಾಗಿದೆ; ಮೂಲದಿಂದ ಪ್ರತ್ಯೇಕವಾಗಿ ಗುರುತಿಸಲೋ ಏನೋ ಈ ಹೊಸ ಹೆಸರಿನ ಸ್ಪೆಲಿಂಗ್ ಮಾತ್ರ ಕೊಂಚ ಬದಲಾಗಿ bacon ಬದಲು bacn ಆಗಿದೆ ಅಷ್ಟೆ.

ಸ್ಪಾಮ್ ಅಂದರೇನು ಎನ್ನುವುದು ನಮಗೆಲ್ಲ ಗೊತ್ತು. ಯಾವುದೋ ವಿಷಯ ಕುರಿತ ಜಾಹೀರಾತು, ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ನೆರವಾಗುವ ಆಮಿಷ, ಮೋಸದ ಗಾಳ - ಹೀಗೆ ಅಪಾರ ವಿಷಯ ವೈವಿಧ್ಯ ಇಂತಹ ಸಂದೇಶಗಳಲ್ಲಿರುತ್ತದೆ. ಆದರೆ ಈ ಬೇಕನ್ ಅಂದರೇನು?

ಶುಕ್ರವಾರ, ಮಾರ್ಚ್ 29, 2013

ಕ್ಯಾಮೆರಾ ಕೊಳ್ಳುವ ಮುನ್ನ


ಟಿ. ಜಿ. ಶ್ರೀನಿಧಿ

ಎಲ್ಲರ ಕೈಯಲ್ಲೂ ಒಂದೊಂದು ಮೊಬೈಲ್ ಇರುವಂತೆ ಎಲ್ಲ ಮನೆಗಳಲ್ಲೂ ಒಂದೊಂದು ಡಿಜಿಟಲ್ ಕ್ಯಾಮೆರಾ ಇರುವುದು ಈಗ ಸರ್ವೇಸಾಮಾನ್ಯವಾದ ಸಂಗತಿ.

ಆದರೆ ಕ್ಯಾಮೆರಾ ಕೊಳ್ಳಲು ಹೊರಟಾಗ ಗ್ರಾಹಕರಾದ ನಮ್ಮೆದುರು ಹಲವಾರು ಪ್ರಶ್ನೆಗಳು ಮೂಡುತ್ತವೆ. ಇದಷ್ಟೇ ಸಾಲದೆಂದು ಮಾರುಕಟ್ಟೆಯಲ್ಲಿ ಕಾಣಸಿಗುವ ಬಗೆಬಗೆಯ ಕ್ಯಾಮೆರಾಗಳು ನಮ್ಮಲ್ಲಿ ಗೊಂದಲವನ್ನೂ ಮೂಡಿಸುತ್ತವೆ. ಹಾಗಾದರೆ ಕ್ಯಾಮೆರಾ ಕೊಳ್ಳುವ ಮುನ್ನ ನಾವು ಏನೆಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು? ನಮಗೆಂತಹ ಕ್ಯಾಮೆರಾ ಬೇಕು ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಹೇಗೆ? ಈ ನಿಟ್ಟಿನಲ್ಲಿ ಗಮನಿಸಬಹುದಾದ ಕೆಲ ಅಂಶಗಳು ಇಲ್ಲಿವೆ.

ಮಂಗಳವಾರ, ಮಾರ್ಚ್ 26, 2013

ಕಂಪ್ಯೂಟರ್ ಮತ್ತು ನಾವು : ಭಾಗ ೨

ಕಳೆದ ಶತಮಾನದ ಅತ್ಯಂತ ಮಹತ್ವದ ಆವಿಷ್ಕಾರವಾದ ಕಂಪ್ಯೂಟರ್ ನಮ್ಮ ಮೇಲೆ ಬೀರಿರುವ ಪ್ರಭಾವ ಎಂಥದ್ದು? ಈ ಕುರಿತು ಕಳೆದ ವಾರ ಪ್ರಕಟವಾದ ಲೇಖನದ ಮುಂದುವರೆದ ಭಾಗ ಇಲ್ಲಿದೆ. 
ಟಿ. ಜಿ. ಶ್ರೀನಿಧಿ

ಶತಮಾನಗಳ ಹಿಂದೆ ಗಡಿಯಾರಗಳು ಎಲ್ಲರ ಮನೆಗೂ ಬಂದವಲ್ಲ, ಅಂದಿನ ಪರಿಸ್ಥಿತಿ ಹೇಗಿದ್ದಿರಬಹುದು? ಕಿಟಕಿಯಿಂದಾಚೆ ಒಮ್ಮೆ ಇಣುಕಿನೋಡಿ ಈಗ ಸಮಯ ಇಷ್ಟು ಎಂದುಕೊಳ್ಳುತ್ತಿದ್ದವರಿಗೆ ಆಗ ಹೇಗೆನಿಸಿರಬಹುದು?

ತಿಂಡಿ ಯಾವಾಗ ತಿನ್ನಬೇಕು, ಕೆಲಸಕ್ಕೆ ಯಾವಾಗ ಹೋಗಬೇಕು, ಊಟ ಯಾವಾಗ ಮಾಡಬೇಕು - ಇಂತಹ ಪ್ರಶ್ನೆಗಳಿಗೆ ತಾನೇ ಉತ್ತರ ಕಂಡುಕೊಳ್ಳುವ ಬದಲು ಗಡಿಯಾರವನ್ನು ಅವಲಂಬಿಸುವಂತಾದದ್ದು ಆಗ ಮನುಷ್ಯನ ಬದುಕಿನಲ್ಲಾದ ದೊಡ್ಡ ಬದಲಾವಣೆ. ನಮ್ಮ ಮೆದುಳು ಗಡಿಯಾರದಂತೆಯೇ ಕೆಲಸಮಾಡುತ್ತದೆ ಎನಿಸತೊಡಗಿದ್ದು ಈ ಬದಲಾವಣೆಯ ನಂತರವೇ.

ಈಗ ನಮ್ಮ ಮೆದುಳು ಕಂಪ್ಯೂಟರಿನಂತೆಯೇ ಕೆಲಸಮಾಡುತ್ತದೆ ಎನಿಸಲು ಪ್ರಾರಂಭವಾಗಿದೆ; ಕಂಪ್ಯೂಟರುಗಳು ನಮ್ಮ ಬದುಕನ್ನು ಬದಲಿಸಲು ಹೊರಟಿರುವ ರೀತಿ ಇದೇ ಎನ್ನೋಣವೆ?

ಶುಕ್ರವಾರ, ಮಾರ್ಚ್ 22, 2013

ಆನ್‌ಲೈನ್ ಲೋಕದಲ್ಲಿ ನಿಮಗೆ ತಿಳಿದಿಲ್ಲದ ನೀವು!


ಟಿ. ಜಿ. ಶ್ರೀನಿಧಿ

ಶಾಲೆಯ ಹೋಮ್‌ವರ್ಕ್‌ಗೆ ಮಾಹಿತಿ, ಆಫೀಸಿನ ಕೆಲಸದಲ್ಲಿ ಸಹಾಯ, ಸಿನಿಮಾದ ವಿಮರ್ಶೆ, ಹೋಟಲ್ ಊಟದ ಬಗ್ಗೆ ಫೀಡ್‌ಬ್ಯಾಕು - ಏನೇ ಬೇಕಾದರೂ ನಾವು ವಿಶ್ವವ್ಯಾಪಿ ಜಾಲದ (ವರ್ಲ್ಡ್‌ವೈಡ್ ವೆಬ್) ಮೊರೆಹೋಗುವುದು ಸಾಮಾನ್ಯ ಸಂಗತಿ. ಅಲ್ಲಿರುವ ಅಪಾರ ಪ್ರಮಾಣದ ಮಾಹಿತಿಯಲ್ಲಿ ಬೇಕಾದ್ದನ್ನು ಹುಡುಕಿಕೊಳ್ಳಲು ಗೂಗಲ್‌ನಂತಹ ಸರ್ಚ್ ಇಂಜನ್ನುಗಳು ನಮಗೆ ನೆರವಾಗುತ್ತವೆ.

ಯಾರಾದರೂ ಹೊಸಬರ ಬಗ್ಗೆ ತಿಳಿದುಕೊಳ್ಳಬೇಕು ಎಂದರೂ ಸರ್ಚ್ ಇಂಜನ್ನುಗಳನ್ನೇ ಬಳಸುವಷ್ಟರ ಮಟ್ಟಿಗೆ ಇವುಗಳ ವ್ಯಾಪ್ತಿ ಬೆಳೆದುಬಿಟ್ಟಿದೆ. ಇನ್ನು ಫೇಸ್‌ಬುಕ್-ಲಿಂಕ್ಡ್‌ಇನ್-ಟ್ವಿಟ್ಟರುಗಳಂತಹ ಸಮಾಜಜಾಲಗಳ ಪಾತ್ರವೂ ಕಡಿಮೆಯದೇನಲ್ಲ; ಅಲ್ಲಿರುವ ಭಾರೀ ಪ್ರಮಾಣದ ಮಾಹಿತಿ ವ್ಯಕ್ತಿಗಳ ಬಗ್ಗೆ ಬೇಕಾದಷ್ಟು ಕತೆಗಳನ್ನು ಹೇಳಬಲ್ಲದು. ಉದ್ಯೋಗದಾತರು ತಮ್ಮಲ್ಲಿಗೆ ಬರುವ ಹೊಸಬರ ಬಗ್ಗೆ ಜಾಲಲೋಕದಲ್ಲಿ ಹುಡುಕಾಡುವುದಂತೂ ಸಾಮಾನ್ಯವೇ ಆಗಿಹೋಗಿದೆ.

ಯಾವುದೋ ಹೊಸ ಕೆಲಸಕ್ಕೆ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ನಮ್ಮ ಬಗ್ಗೆಯೇ ಹುಡುಕಾಟ ನಡೆದಿದೆ ಎಂದಿಟ್ಟುಕೊಂಡರೆ ಹುಡುಕಿದವರಿಗೆ ಎಂತಹ ಮಾಹಿತಿ ಸಿಕ್ಕರೆ ಚೆಂದ? ಉದ್ಯೋಗದಾತರು ಗೂಗಲ್‌ನಲ್ಲಿ ಹುಡುಕಿದಾಗ ಅವರಿಗೆ ನಮ್ಮ ಲಿಂಕ್ಡ್‌ಇನ್ ಪ್ರೊಫೈಲ್ ಸಿಗದೆ ಯಾವುದೋ ಜಾಲತಾಣದಲ್ಲಿ ನಾವು ಬೇರೊಬ್ಬರ ಬಗ್ಗೆ ಕೆಟ್ಟದಾಗಿ ಬರೆದಿದ್ದರ ಅಥವಾ ಇನ್ನಾರ ಜೊತೆಗೋ ಜಗಳವಾಡಿದ ದಾಖಲೆ ಮೊದಲಿಗೆ ಸಿಕ್ಕಿಬಿಟ್ಟರೆ? ಕಾಲೇಜಿನ ದಿನಗಳ ಹುಡುಗಾಟದಲ್ಲಿ ತೆಗೆಸಿಕೊಂಡು ಫೇಸ್‌ಬುಕ್‌ಗೆ ಸೇರಿಸಿದ್ದ ಆಕ್ಷೇಪಾರ್ಹ ಫೋಟೋಗಳು ಮುಂದೆಂದಾದರೂ ಮತ್ತೆ ಪ್ರತ್ಯಕ್ಷವಾದರೆ ಅದನ್ನು ನೋಡಿದವರಿಗೆ ನಮ್ಮ ಬಗ್ಗೆ ಎಂತಹ ಅಭಿಪ್ರಾಯ ಮೂಡಬಹುದು?

ಮಂಗಳವಾರ, ಮಾರ್ಚ್ 19, 2013

ಕಂಪ್ಯೂಟರ್ ಮತ್ತು ನಾವು : ಭಾಗ ೧


ಟಿ. ಜಿ. ಶ್ರೀನಿಧಿ

ಕಳೆದ ಶತಮಾನದ ಅತ್ಯಂತ ಮಹತ್ವದ ಆವಿಷ್ಕಾರಗಳಲ್ಲಿ ಕಂಪ್ಯೂಟರಿನದು ಪ್ರಮುಖ ಸ್ಥಾನ. ಬಹುಶಃ ನಾವೆಲ್ಲ ಈ ಮಾತನ್ನು ಬೇಜಾರು ಬರುವಷ್ಟು ಬಾರಿ ಕೇಳಿಬಿಟ್ಟಿದ್ದೇವೆ. ಬಹಳ ಕಡಿಮೆ ಸಮಯದಲ್ಲಿ ಮಾಹಿತಿ ತಂತ್ರಜ್ಞಾನ ನಮ್ಮ ಬದುಕನ್ನೆಲ್ಲ ಆವರಿಸಿಕೊಂಡಿರುವ ಪರಿಯ ಬಗೆಗೆ ಕೇಳುವುದು-ಓದುವುದು ಹಾಗಿರಲಿ, ಅದರ ಅನುಭವವೇ ನಮ್ಮೆಲ್ಲರಿಗೂ ಆಗಿದೆ.

ಹಾಗಾದರೆ ಕಂಪ್ಯೂಟರ್ ನಮ್ಮ ಮೇಲೆ ಬೀರಿರುವ ಪ್ರಭಾವ ಎಂಥದ್ದು? ಕೆಲಸಗಳನ್ನು ಸುಲಭಮಾಡಿದ್ದು, ಹೊಸಹೊಸ ಸೌಲಭ್ಯಗಳನ್ನು ಸೃಷ್ಟಿಸಿಕೊಟ್ಟಿದ್ದು - ಕಂಪ್ಯೂಟರ್ ತಂದ ಬದಲಾವಣೆಗಳು ಇಷ್ಟಕ್ಕೆ ಮಾತ್ರ ಸೀಮಿತವೆ?

ಈ ವಿಷಯದ ಕುರಿತು ಅಮೆರಿಕಾದ ಲೇಖಕ ನಿಕೊಲಸ್ ಕಾರ್ ೨೦೦೮ರಲ್ಲಿ 'ಇಸ್ ಗೂಗಲ್ ಮೇಕಿಂಗ್ ಅಸ್ ಸ್ಟುಪಿಡ್?' ಎಂಬುದೊಂದು ಲೇಖನ ಬರೆದಿದ್ದರು. ಕಂಪ್ಯೂಟರಿನ, ಅದರಲ್ಲೂ ಅಂತರಜಾಲದ ಮೇಲಿನ ಅತಿಯಾದ ಅವಲಂಬನೆಯಿಂದಾಗಿ ನಮ್ಮ ಮೇಲೆ ಏನೆಲ್ಲ ಪರಿಣಾಮಗಳಾಗುತ್ತಿವೆ ಎನ್ನುವ ನಿಟ್ಟಿನಲ್ಲಿ ಈ ಲೇಖನ ಹಲವು ಪ್ರಶ್ನೆಗಳನ್ನು ಮುಂದಿಟ್ಟಿತ್ತು.

ಯಾವುದೋ ಪುಸ್ತಕವನ್ನೋ ಸುದೀರ್ಘ ಲೇಖನವನ್ನೋ ಓದುವ ನಮ್ಮ ತಾಳ್ಮೆ ಈಚಿನ ವರ್ಷಗಳಲ್ಲಿ ಎಲ್ಲಿ ಹೋಗಿದೆ? ಕೆಲವು ಪುಟಗಳನ್ನು ಓದುತ್ತಿದ್ದಂತೆ ನಮ್ಮ ಏಕಾಗ್ರತೆ ಮಾಯವಾಗುವುದು ಏಕೆ?

ಈ ಪ್ರಶ್ನೆಗಳ ಹಿಂದೆ ಹೊರಟ ನಿಕೊಲಸ್ ತಲುಪಿದ್ದು ಕಂಪ್ಯೂಟರ್ ಪ್ರಪಂಚಕ್ಕೆ.

ಶುಕ್ರವಾರ, ಮಾರ್ಚ್ 15, 2013

ಎನ್‌ಎಫ್‌ಸಿ: ಹಾಗೆಂದರೇನು?


ಟಿ. ಜಿ. ಶ್ರೀನಿಧಿ

ಮೊಬೈಲ್ ಫೋನುಗಳ ಲೋಕವೇ ಹೀಗೆ, ಇಲ್ಲಿ ಆಗಿಂದಾಗ್ಗೆ ಹೊಸ ತಂತ್ರಜ್ಞಾನಗಳ ಪರಿಚಯ ಆಗುತ್ತಲೇ ಇರುತ್ತದೆ. ಕರೆಮಾಡುವ ಸೌಲಭ್ಯದ ಜೊತೆಗೆ ಎಸ್ಸೆಮ್ಮೆಸ್ ಸೇರಿಕೊಂಡಲ್ಲಿಂದಲೇ ಈ ಟ್ರೆಂಡ್ ಶುರುವಾಯಿತು ಎನ್ನಬಹುದೇನೋ.

ಅಂತರಜಾಲ ಉಪಯೋಗಿಸಲು ಜಿಪಿಆರ್‌ಎಸ್, ವೈ-ಫಿ, ನಾವೆಲ್ಲಿದ್ದೇವೆ ಎಂದು ಹೇಳುವ ಜಿಪಿಎಸ್, ಕಡತಗಳನ್ನು ವಿನಿಮಯ ಮಾಡಿಕೊಳ್ಳಲು ಬ್ಲೂಟೂಥ್ ಮೊದಲಾದ ಅನೇಕ ತಂತ್ರಜ್ಞಾನಗಳನ್ನು ನಾವು ಮೊಬೈಲ್ ಫೋನುಗಳಲ್ಲಿ ನೋಡಬಹುದು. ಅಷ್ಟೇ ಏಕೆ, ಜನಪ್ರಿಯತೆ ಗಳಿಸದ ಹಲವು ತಂತ್ರಜ್ಞಾನಗಳೂ ಬಂದು ಹೋದದ್ದಿದೆ; ಈಗ ಅದೆಷ್ಟು ಮೊಬೈಲುಗಳಲ್ಲಿ ನಮಗೆ ಇನ್‌ಫ್ರಾರೆಡ್ ಪೋರ್ಟ್ ಕಾಣಸಿಗುತ್ತದೆ?

ಇರಲಿ, ವಿಷಯ ಅದಲ್ಲ. ಮೊಬೈಲ್ ಲೋಕದಲ್ಲಿ ಈಚೆಗೆ ಸುದ್ದಿಮಾಡುತ್ತಿರುವ ಹೊಸದೊಂದು ತಂತ್ರಜ್ಞಾನವನ್ನು ಪರಿಚಯಿಸುವುದು ಈ ಲೇಖನದ ಉದ್ದೇಶ. ಆ ತಂತ್ರಜ್ಞಾನದ ಹೆಸರೇ ಎನ್‌ಎಫ್‌ಸಿ, ಅಂದರೆ ನಿಯರ್ ಫೀಲ್ಡ್ ಕಮ್ಯೂನಿಕೇಶನ್.

ಮಂಗಳವಾರ, ಮಾರ್ಚ್ 12, 2013

ಆನ್‌ಲೈನ್ ಹಣ 'ಬಿಟ್‍ಕಾಯಿನ್'


ಟಿ. ಜಿ. ಶ್ರೀನಿಧಿ

ತಂತ್ರಜ್ಞಾನ ಬೆಳೆದಂತೆ ಹಣದ ಬಳಕೆ, ನಮಗೆ ಪರಿಚಿತವಿರುವ ನೋಟು-ನಾಣ್ಯಗಳ ರೂಪದಲ್ಲಿ, ಕಡಿಮೆಯಾಗುತ್ತ ಹೋಗುತ್ತದೆ ಎನ್ನುವ ಹೇಳಿಕೆ ಬಹಳ ದಿನಗಳಿಂದಲೇ ಕೇಳಿಬರುತ್ತಿದೆ. ಸಿನಿಮಾ ಟಿಕೇಟಿನಿಂದ ಮನೆಯ ಕಂದಾಯದವರೆಗೆ ಪ್ರತಿಯೊಂದಕ್ಕೂ ಅಂತರಜಾಲದಲ್ಲೇ ಹಣಪಾವತಿಸುವ ನಾವು ಈ ಬದಲಾವಣೆಯನ್ನು ನೋಡುತ್ತಲೂ ಇದ್ದೇವೆ. ಈ ಹಿಂದೆ ಅಂಗಡಿ ಯಜಮಾನರಿಗೋ ಕೌಂಟರಿನಲ್ಲಿ ಕೂತ ಗುಮಾಸ್ತರಿಗೋ ಕೊಡುತ್ತಿದ್ದ ಗರಿಗರಿ ನೋಟುಗಳ ಸ್ಥಾನದಲ್ಲಿ ಇದೀಗ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಆನ್‌ಲೈನ್ ಬ್ಯಾಂಕಿಂಗ್ ಇತ್ಯಾದಿಗಳು ಬಳಕೆಯಾಗುತ್ತಿವೆ.

ಇಲ್ಲಿ ನೋಟು-ನಾಣ್ಯಗಳನ್ನು ಎಣಿಸಿಕೊಡುವ ಬದಲಿಗೆ ಕೆಲವೇ ಕ್ಲಿಕ್ಕುಗಳಲ್ಲಿ ಹಣ ವರ್ಗಾವಣೆಯಾಗುತ್ತದೆ, ನಿಜ. ಆದರೆ ನಾವು ಯಾವ ವಿಧಾನವನ್ನೇ ಬಳಸಿದರೂ ಅಂತಿಮವಾಗಿ ವಹಿವಾಟು ನಡೆಯುವುದು ಮಾತ್ರ ಈಗ ಚಲಾವಣೆಯಲ್ಲಿರುವ ಹಣಕಾಸು ವ್ಯವಸ್ಥೆಯಲ್ಲಿಯೇ. ಅಂದರೆ ಬದನೆಕಾಯಿ ಕೊಂಡರೂ ಬೆಂಜ್ ಕಾರು ಕೊಂಡರೂ ನಾವು ಮಾತ್ರ ಕೊನೆಗೆ ರೂಪಾಯಿಗಳಲ್ಲೇ ಪಾವತಿಸಬೇಕಾದ್ದು ಅನಿವಾರ್ಯ.

ಇದೀಗ ಹಣದ ವರ್ಗಾವಣೆ ಮಾತ್ರ ವರ್ಚುಯಲ್ ರೂಪದಲ್ಲಿ ಆಗುತ್ತಿದೆಯಲ್ಲ, ಹಣವೂ ವರ್ಚುಯಲ್ ರೂಪದಲ್ಲೇ ಇದ್ದರೆ?

ಶುಕ್ರವಾರ, ಮಾರ್ಚ್ 8, 2013

ಬಂತು ಬಂತು ಫೈರ್‌ಫಾಕ್ಸ್ ಓಎಸ್

ಟಿ. ಜಿ. ಶ್ರೀನಿಧಿ

ಈಗೊಂದು ಹತ್ತು ಹನ್ನೆರಡು ವರ್ಷಗಳಿಂದ ಮೊಬೈಲ್ ಬಳಸುತ್ತಿರುವವರನ್ನು ಕೇಳಿನೋಡಿ, ಅಂದಿನ ಮೊಬೈಲುಗಳು ಎಂದಾಕ್ಷಣ 'ಸ್ನೇಕ್'ನಂತಹ ಆಟಗಳು, ಟಾರ್ಚ್ ಲೈಟು, ಎಲ್ಲಬಗೆಯ ಸಂಗೀತವನ್ನೂ ಹೆಚ್ಚೂಕಡಿಮೆ ಒಂದೇರೀತಿ ಕೇಳಿಸುತ್ತಿದ್ದ ಮಾನೋಫೋನಿಕ್ ರಿಂಗ್‌ಟೋನುಗಳು - ಇಂತಹ ವಿಷಯಗಳೇ ಅವರ ಮನಸ್ಸಿಗೆ ಬರುತ್ತವೆ.

ನಿಜ, ಆಗ ನಾವು ಸ್ಮಾರ್ಟ್ ಆಗಿದ್ದೆವೋ ಇಲ್ಲವೋ, ನಮ್ಮ ಮೊಬೈಲುಗಳು ಮಾತ್ರ ಇಂದಿನಷ್ಟು 'ಸ್ಮಾರ್ಟ್' ಆಗಿರಲಿಲ್ಲ. ಕಳೆದ ದಶಕದಲ್ಲಿ ತಂತ್ರಜ್ಞಾನ ಅದಾವ ಮಟ್ಟದಲ್ಲಿ ಬೆಳವಣಿಗೆ ಕಂಡಿತೆಂದರೆ ಬರಿಯ ದೂರವಾಣಿ ಕರೆ ಮತ್ತು ಎಸ್ಸೆಮ್ಮೆಸ್‌ಗಷ್ಟೆ ಸೀಮಿತವಾಗಿದ್ದ ಮೊಬೈಲ್ ಫೋನುಗಳು 'ಸ್ಮಾರ್ಟ್'ಫೋನುಗಳಾಗಿ ಬದಲಾಗಿ ಕಂಪ್ಯೂಟರುಗಳ ಸರಿಸಮಕ್ಕೇ ಬೆಳೆದುನಿಂತವು. ಮೊಬೈಲ್ ಫೋನ್ ಎಂದರೆ ಕರೆಮಾಡಲಿಕ್ಕಷ್ಟೆ ಇರುವ ಸಾಧನ ಎಂಬ ಭಾವನೆ ಹೋಗಿ ಅದು ನಮ್ಮ ಅಂಗೈಯಲ್ಲಿರುವ ಕಂಪ್ಯೂಟರ್ ಎನಿಸುವಷ್ಟು ಮಟ್ಟಿಗಿನ ಬದಲಾವಣೆ ನಮ್ಮೆಲ್ಲರ ಕಣ್ಮುಂದೆಯೇ ಆಯಿತು ಎಂದರೂ ತಪ್ಪಲ್ಲವೇನೋ.

ಕಂಪ್ಯೂಟರಿನಲ್ಲಿ ನಮಗೆ ಬೇಕಾದ ತಂತ್ರಾಂಶವನ್ನಷ್ಟೆ ನಾವೇನು ನೇರವಾಗಿ ಬಳಸುವುದಿಲ್ಲವಲ್ಲ, ಅಲ್ಲಿನ ಎಲ್ಲ ಚಟುವಟಿಕೆಗಳನ್ನೂ ನಿಯಂತ್ರಿಸಲು ಕಾರ್ಯಾಚರಣ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಂ, ಓಎಸ್) ಬೇಕೇಬೇಕು. ಮೊಬೈಲುಗಳು ಕಂಪ್ಯೂಟರುಗಳಾಗುವತ್ತ ಸಾಗಿದಂತೆ ಅವುಗಳಲ್ಲೂ ಹತ್ತಾರು ಬಗೆಯ ತಂತ್ರಾಂಶಗಳ ಬಳಕೆ ಶುರುವಾಯಿತಲ್ಲ, ಮೊಬೈಲ್ ಆಪರೇಟಿಂಗ್ ಸಿಸ್ಟಂಗಳ ಬಗ್ಗೆ ಹೊರಪ್ರಪಂಚದ ಗಮನ ಹರಿದದ್ದು ಆಗಲೇ.

ಮಂಗಳವಾರ, ಮಾರ್ಚ್ 5, 2013

ಫೋಟೋ ಹಾದಿಯ ಸ್ನೇಹಿತರು


ಟಿ. ಜಿ. ಶ್ರೀನಿಧಿ

ಡಿಜಿಟಲ್ ಛಾಯಾಗ್ರಹಣ ಪ್ರಾರಂಭಿಸಲು ಮುಖ್ಯವಾಗಿ ಬೇಕಾದದ್ದು ಛಾಯಾಗ್ರಹಣದಲ್ಲಿ ಆಸಕ್ತಿ, ಜೊತೆಗೊಂದು ತಕ್ಕಮಟ್ಟಿಗೆ ಚೆನ್ನಾಗಿರುವ ಕ್ಯಾಮೆರಾ. ಆದರೆ ಚಿತ್ರಗಳ ಡಿಜಿಟಲ್ ಪ್ರಪಂಚದೊಳಗೆ ಮುಂದೆಮುಂದೆ ಸಾಗಿದಂತೆ ನಮ್ಮ ಪ್ರಯಾಣದಲ್ಲಿ ಸಾಥ್ ನೀಡಲು ಬೇಕಾದ ಪೂರಕ ಸಾಧನಗಳ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಅಂತಹ ಕೆಲ ಸಾಧನಗಳ ಪರಿಚಯ ಇಲ್ಲಿದೆ.

* * *
ಬೆಳಕು ಕಡಿಮೆಯಿದ್ದಾಗ, ಅಥವಾ ಶಟರ್‌ಸ್ಪೀಡನ್ನು ಹೆಚ್ಚು ಅವಧಿಗೆ ಹೊಂದಿಸಿದ್ದಾಗ ನಾವು ಕ್ಲಿಕ್ಕಿಸುವ ಛಾಯಾಚಿತ್ರ ಅಸ್ಪಷ್ಟವಾಗಿ ಮೂಡುವ ("ಶೇಕ್ ಆಗುವ") ಸಾಧ್ಯತೆ ಹೆಚ್ಚು. ಕ್ಯಾಮೆರಾದ ಶಟರ್ ತೆಗೆದಿದ್ದಷ್ಟು ಹೊತ್ತು ಅದನ್ನು ಸ್ಥಿರವಾಗಿಡಬೇಕಲ್ಲ, ಕ್ಯಾಮೆರಾವನ್ನು ಕೈಯಲ್ಲಿ ಹಿಡಿದಾಗ ಕೆಲವೊಮ್ಮೆ ಅದು ಸಾಧ್ಯವಾಗದಿರುವುದೇ ಈ ಸಮಸ್ಯೆಗೆ ಕಾರಣವಾಗುತ್ತದೆ. ಇದನ್ನು ತಪ್ಪಿಸಲು ಕ್ಯಾಮೆರಾವನ್ನು ಯಾವುದಾದರೂ ಸ್ಥಿರ ವಸ್ತುವಿನ ಮೇಲೆ ಇಡಬಹುದು. ಆದರೆ ನಮಗೆ ಬೇಕಾದಾಗ ಬೇಕಾದ ಸ್ಥಳದಲ್ಲಿ ಸ್ಥಿರ ವಸ್ತುವನ್ನು ಎಲ್ಲಿಂದ ತರುವುದು?

ಶನಿವಾರ, ಮಾರ್ಚ್ 2, 2013

ಕನ್ನಡ, ಕಂಪ್ಯೂಟರ್ ಮತ್ತು ಕೆ. ಪಿ. ರಾವ್


ಕನ್ನಡ ವಿಶ್ವವಿದ್ಯಾನಿಲಯದಿಂದ ಇತ್ತೀಚೆಗೆ 'ನಾಡೋಜ' ಗೌರವ ಪಡೆದ ಶ್ರೀ ಕೆ. ಪಿ. ರಾವ್, ಭಾರತೀಯ ಭಾಷೆಗಳಲ್ಲಿ ಕಂಪ್ಯೂಟಿಂಗ್ ಕ್ಷೇತ್ರದ ಪಿತಾಮಹರೆಂದೇ ಪ್ರಸಿದ್ಧರು.

ಈಗ ವ್ಯಾಪಕವಾಗಿ ಬಳಕೆಯಲ್ಲಿರುವ ಕರ್ನಾಟಕ ಸರ್ಕಾರದ ಅಧಿಕೃತ ಕೀಲಿಮಣೆ ವಿನ್ಯಾಸವನ್ನು ರೂಪಿಸಿದ್ದು ಅವರ ಸಾಧನೆ. ಅಷ್ಟೇ ಅಲ್ಲ, ೧೯೮೦ರ ದಶಕದಲ್ಲೇ ಕನ್ನಡದ ಪದಸಂಸ್ಕಾರಕ ತಂತ್ರಾಂಶ 'ಸೇಡಿಯಾಪು' ರಚಿಸಿ ಮುಕ್ತ ಬಳಕೆಗೆ ನೀಡಿದ ಹಿರಿಮೆಯೂ ಅವರದ್ದೇ.

ಅವರ ಜೀವನ-ಸಾಧನೆಯನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಪುಸ್ತಕವೊಂದು ಇಷ್ಟರಲ್ಲೇ ಹೊರಬರಲಿದೆ. ಇಜ್ಞಾನ ಡಾಟ್ ಕಾಮ್‌ನ   ಟಿ. ಜಿ. ಶ್ರೀನಿಧಿ ಬರೆದ ಈ ಪುಸ್ತಕವನ್ನು ಬೆಂಗಳೂರಿನ ಉದಯಭಾನು ಕಲಾಸಂಘ ಪ್ರಕಟಿಸುತ್ತಿದೆ.

ಶುಕ್ರವಾರ, ಮಾರ್ಚ್ 1, 2013

ಲೆನ್ಸ್‌ಗಳ ಲೋಕದಲ್ಲಿ


ಟಿ. ಜಿ. ಶ್ರೀನಿಧಿ

ಡಿಜಿಟಲ್ ಎಸ್‌ಎಲ್‌ಆರ್ (ಡಿಎಸ್‌ಎಲ್‌ಆರ್) ಕ್ಯಾಮೆರಾಗಳ ಬೆಲೆ ಈಚಿನ ವರ್ಷಗಳಲ್ಲಿ ಕೈಗೆಟುಕುವ ಮಟ್ಟಕ್ಕೆ ಬಂದು ತಲುಪಿದೆ. ಇದಕ್ಕೆ ತಂತ್ರಜ್ಞಾನದ ಅಭಿವೃದ್ಧಿ ಒಂದು ಕಾರಣವಾದರೆ ಹೆಚ್ಚುತ್ತಿರುವ ಆದಾಯ ಇನ್ನೊಂದು ಕಾರಣ ಎನ್ನಬಹುದೇನೋ. ಇರಲಿ.

ಸಾಮಾನ್ಯ ಕ್ಯಾಮೆರಾಗಳಲ್ಲಿ ಎಷ್ಟು ಸಾಮರ್ಥ್ಯವಿರುತ್ತದೋ ಅದಷ್ಟನ್ನು ಮಾತ್ರ ಉಪಯೋಗಿಸಿಕೊಳ್ಳುವುದು ಬಳಕೆದಾರರ ಕೆಲಸ. ಕ್ಲಿಕ್ಕಿಸಬೇಕಿರುವುದು ಯಾವುದೇ ಬಗೆಯ ಚಿತ್ರವಾದರೂ ಕ್ಯಾಮೆರಾದಲ್ಲಿರುವ ಲೆನ್ಸಿನಿಂದಲೇ ಕೆಲಸ ಸಾಧಿಸಿಕೊಳ್ಳಬೇಕಾದ್ದು ಅನಿವಾರ್ಯ.

ಆದರೆ ಎಸ್‌ಎಲ್‌ಆರ್ ಕ್ಯಾಮೆರಾಗಳಲ್ಲಿ ಹಾಗಲ್ಲ. ಇಲ್ಲಿ ಬೇರೆಬೇರೆ ರೀತಿಯ ಚಿತ್ರಗಳನ್ನು ಕ್ಲಿಕ್ಕಿಸಲು ಬೇರೆಯವೇ ಲೆನ್ಸುಗಳನ್ನು ಬಳಸುವುದು ಸಾಧ್ಯ. ಹುಲ್ಲಿನ ಮೇಲೆ ಬಿದ್ದಿರುವ ಇಬ್ಬನಿಯ ಹನಿಯಿರಲಿ, ಕ್ಯಾಮೆರಾದ ಎದುರು ಆಡುತ್ತಿರುವ ಮಗುವಿರಲಿ ಅಥವಾ ದೂರದಲ್ಲಿ ಕಾಣುತ್ತಿರುವ ದೇವಸ್ಥಾನದ ಗೋಪುರವೇ ಇರಲಿ, ವಿವಿಧ ಬಗೆಯ ಚಿತ್ರಗಳನ್ನು ಕ್ಲಿಕ್ಕಿಸಲೆಂದೇ ಬೇರೆಬೇರೆ ಲೆನ್ಸುಗಳು ದೊರಕುತ್ತವೆ. ಹಾಗಾಗಿಯೇ ಡಿಎಸ್‌ಎಲ್‌ಆರ್ ಕ್ಯಾಮೆರಾಗಳ ಬಳಕೆ ಹೆಚ್ಚಿದಂತೆ ಬೇರೆಬೇರೆ ರೀತಿಯ ಲೆನ್ಸುಗಳು ಕಾಣಿಸಿಕೊಳ್ಳುತ್ತಿರುವುದೂ ಜಾಸ್ತಿಯಾಗಿದೆ.

ಮಂಗಳವಾರ, ಫೆಬ್ರವರಿ 26, 2013

ಮೊಬೈಲ್ ಕ್ಯಾಮೆರಾ ಮ್ಯಾಜಿಕ್


ಟಿ. ಜಿ. ಶ್ರೀನಿಧಿ

ಮನೆಯಲ್ಲಿ ಎಷ್ಟು ಒಳ್ಳೆಯ ಡಿಜಿಟಲ್ ಕ್ಯಾಮೆರಾ ಇದ್ದರೂ ಅದನ್ನು ಎಲ್ಲಕಡೆಯೂ ಕೊಂಡೊಯ್ಯುವುದು ಅಸಾಧ್ಯ. ಆದರೆ ಉತ್ತಮ ಫೋಟೋ ತೆಗೆಯಬಹುದಾದಂತಹ ಅದೆಷ್ಟೋ ಸನ್ನಿವೇಶಗಳು ನಮ್ಮಲ್ಲಿ ಕ್ಯಾಮೆರಾ ಇಲ್ಲದ ಸಮಯದಲ್ಲೇ ಎದುರಾಗುತ್ತವಲ್ಲ!

ಉದಾಹರಣೆಗೆ ಕಳೆದವಾರ ರಷ್ಯಾದಲ್ಲಿ ಸಂಭವಿಸಿದ ಉಲ್ಕಾಪಾತದ ಘಟನೆಯನ್ನೇ ನೋಡಿ. ಆ ಸಂದರ್ಭದಲ್ಲಿ ಹೊರಗಡೆ ಇದ್ದವರ ಕೈಯಲ್ಲಿ ಕ್ಯಾಮೆರಾ ಇಲ್ಲದಿದ್ದರೆ ಇಂತಹ ಅಪರೂಪದ ವಿದ್ಯಮಾನ ನೋಡಿಯೂ ಫೋಟೋ ತೆಗೆಯುವುದು ಸಾಧ್ಯವಾಗುತ್ತಿರಲಿಲ್ಲ. ಆದರೆ ರಷ್ಯಾದವರಿಗೇನೋ ಅಂತಹ ಪರಿಸ್ಥಿತಿ ಬರಲಿಲ್ಲ ಬಿಡಿ. ಅಲ್ಲಿನ ರಸ್ತೆಗಳಲ್ಲಿ ಸುರಕ್ಷತೆ ಅದೆಷ್ಟು ಹದಗೆಟ್ಟಿದೆಯೆಂದರೆ ಪೋಲೀಸರು ಕಳ್ಳರು ಎಲ್ಲರೂ ಒಂದೇ ರೀತಿಯಲ್ಲಿ ವಾಹನ ಚಾಲಕರನ್ನು ಗೋಳುಹೊಯ್ದುಕೊಳ್ಳುತ್ತಾರಂತೆ. ಅಂತಹ ಸನ್ನಿವೇಶಗಳಲ್ಲಿ ಸಿಕ್ಕಿಕೊಂಡಾಗ ಸಹಾಯಕ್ಕಿರಲಿ ಎಂದು ಕಾರುಗಳ ಡ್ಯಾಶ್‌ಬೋರ್ಡಿನಲ್ಲಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳುವುದು ಅಲ್ಲಿ ತೀರಾ ಸಾಮಾನ್ಯ. ಹಾಗಾಗಿ ಮೊನ್ನೆ ಉಲ್ಕಾಪಾತವಾಗುತ್ತಿದ್ದಂತೆ ಆಗ ರಸ್ತೆಯಲ್ಲಿದ್ದ ಬಹುತೇಕ ಕಾರುಗಳಲ್ಲಿದ್ದ ಕ್ಯಾಮೆರಾಗಳಲ್ಲಿ ಆ ದೃಶ್ಯ ಸೆರೆಯಾಗಿತ್ತು.

ರಷ್ಯಾದಲ್ಲೇನೋ ಸರಿ, ಆದರೆ ನಮ್ಮೂರಿನಲ್ಲಿ? ನಮ್ಮಲ್ಲಿ ಸುರಕ್ಷತೆಯ ಪರಿಸ್ಥಿತಿ ಕಾರಿನಲ್ಲಿ ಕ್ಯಾಮೆರಾ ಇಟ್ಟುಕೊಂಡು ತಿರುಗುವಷ್ಟು ಇನ್ನೂ ಕೆಟ್ಟಿಲ್ಲ. ಜೊತೆಗೆ ಕಾರಿನಲ್ಲೊಂದು ಕ್ಯಾಮೆರಾ ಇದ್ದರೂ ಬೆಂಗಳೂರಿನಲ್ಲಿ ಎಲ್ಲ ಕಡೆಗೂ ಕಾರು ತೆಗೆದುಕೊಂಡು ಹೋಗುವಷ್ಟು ಜಾಗವೇ ಇಲ್ಲವಲ್ಲ; ಪಕ್ಕದ ರಸ್ತೆಯ ಪಾರ್ಕಿಂಗ್ ಲಾಟಿನಲ್ಲಿ ಕಾರು ನಿಲ್ಲಿಸಿ ನಡೆದುಕೊಂಡು ಹೋಗುತ್ತಿದ್ದಾಗ ಫೋಟೋ ತೆಗೆಯಬೇಕೆನಿಸಿದರೆ ಏನು ಮಾಡುವುದು?

ಸೋಮವಾರ, ಫೆಬ್ರವರಿ 25, 2013

ಸೆಲ್ಫ್ ಪಬ್ಲಿಶಿಂಗ್ - ನಮ್ಮ ಪುಸ್ತಕ ನಾವೇ ಪ್ರಕಟಿಸೋಣ!


ಟಿ. ಜಿ. ಶ್ರೀನಿಧಿ

ಬರವಣಿಗೆಯ ಹವ್ಯಾಸ ಅಪರೂಪದ್ದೇನೂ ಅಲ್ಲ. ಕತೆ-ಕವನ-ಲಲಿತಪ್ರಬಂಧ-ಲೇಖನ ಇತ್ಯಾದಿ ಯಾವುದೋ ಒಂದು ಪ್ರಕಾರದಲ್ಲಿ ಸಾಹಿತ್ಯಕೃಷಿ ಮಾಡುವವರು ಅನೇಕ ಜನರಿದ್ದಾರೆ.

ಹಿಂದೆ ಬರವಣಿಗೆಯ ಪ್ರಕಟಣೆ ಪತ್ರಿಕೆಗಳಲ್ಲಷ್ಟೆ ಆಗಬೇಕಿದ್ದಾಗ ಹವ್ಯಾಸಿ ಬರಹಗಾರರು ಬರೆದದ್ದು ಪ್ರಕಟವಾಗಲು ಅವಕಾಶ ಕಡಿಮೆಯಿತ್ತು. ಹಾಗಾಗಿ ಅನೇಕರ ಬರವಣಿಗೆಯೆಲ್ಲ ಅವರ ಡೈರಿಯೊಳಗೇ ಹುದುಗಿ ಕುಳಿತಿರುವುದು ಸಾಮಾನ್ಯವಾಗಿತ್ತು.

ಮುಂದೆ ವಿಶ್ವವ್ಯಾಪಿ ಜಾಲದ ಹರವು ವ್ಯಾಪಕವಾದ ಮೇಲೆ ನಮ್ಮ ಬರವಣಿಗೆಯನ್ನು ಅದರ ಮೂಲಕ ಪ್ರಕಟಿಸುವ ಹೊಸ ಸಾಧ್ಯತೆ ಸೃಷ್ಟಿಯಾಯಿತು. ವೆಬ್‌ಸೈಟು-ಬ್ಲಾಗುಗಳಲ್ಲಿ ನಾವು ಬರೆದದ್ದನ್ನೆಲ್ಲ ಪ್ರಕಟಿಸುವ ಜೊತೆಗೆ ಓದುಗರೊಡನೆ ಕ್ಷಿಪ್ರ ವಿಚಾರ ವಿನಿಮಯ ಕೂಡ ಸಾಧ್ಯವಾಯಿತು. ಈ ಹೊಸ ಮಾಧ್ಯಮದ ಮೂಲಕ ಬೆಳಕಿಗೆ ಬಂದ ಪ್ರತಿಭಾನ್ವಿತ ಲೇಖಕರ ಸಂಖ್ಯೆಯೂ ಸಣ್ಣದೇನಲ್ಲ.

ಒಂದಷ್ಟು ಸಮಯದವರೆಗೆ ಬರಹಗಳನ್ನು ಹೀಗೆ ಪ್ರಕಟಿಸಿದ ಮೇಲೆ ಅದನ್ನೆಲ್ಲ ಪುಸ್ತಕರೂಪಕ್ಕೆ ತರುವ ಯೋಚನೆ ಬಾರದಿರುವುದು ಅಪರೂಪ. ಯೋಚನೆ ಬಂದರೆ ಸಾಕೆ, ಪ್ರಕಟಿಸಲು ಪ್ರಕಾಶಕರು ಬೇಕಲ್ಲ! ಕೆಲವು ಬರಹಗಾರರಿಗೇನೋ ಈ ಯೋಚನೆ ಕಾಡುವುದಿಲ್ಲ. ಆದರೆ ಉಳಿದವರು ಏನು ಮಾಡಬೇಕು? ಆಗ ನೆರವಿಗೆ ಬರುವುದೇ ಸ್ವಯಂಪ್ರಕಾಶನ ಅಥವಾ ಸೆಲ್ಫ್ ಪಬ್ಲಿಶಿಂಗ್‌ನ ಪರಿಕಲ್ಪನೆ.

ಮಂಗಳವಾರ, ಫೆಬ್ರವರಿ 19, 2013

ನೆಟ್‌ಲೋಕದಲ್ಲಿ ನೆಟ್ಟಗಿರೋಣ!

ತಪ್ಪು ಮಾಹಿತಿ ತಪ್ಪಿಸಲು ಕೆಲ ಸೂತ್ರಗಳು

ಟಿ. ಜಿ. ಶ್ರೀನಿಧಿ

ನಮ್ಮ ಬದುಕಿನ ಮೇಲೆ ವಿಶ್ವವ್ಯಾಪಿ ಜಾಲದ (ವರ್ಲ್ಡ್‌ವೈಡ್ ವೆಬ್) ಪ್ರಭಾವ ಹೆಚ್ಚುತ್ತಿರುವಂತೆಯೇ ವಿವಿಧ ಮಾಹಿತಿಗಾಗಿ ನಾವು ಅದನ್ನು ಅವಲಂಬಿಸುವುದೂ ಜಾಸ್ತಿಯಾಗಿದೆ. ಯಾವ ವಿಷಯದ ಬಗ್ಗೆ ಯಾವುದೇ ಮಾಹಿತಿ ಬೇಕಿದ್ದರೂ ವಿಶ್ವವ್ಯಾಪಿ ಜಾಲವನ್ನು ಪ್ರಮುಖ ಆಕರವಾಗಿ ಪರಿಗಣಿಸುವ ಅಭ್ಯಾಸ ಅನೇಕರಲ್ಲಿ ಈಗಾಗಲೇ ಬೆಳೆದುಬಿಟ್ಟಿದೆ.

ಈ ಅಭ್ಯಾಸ ತಪ್ಪು ಎನ್ನುವಂತೇನೂ ಇಲ್ಲ. ಏಕೆಂದರೆ ವಿಶ್ವವ್ಯಾಪಿ ಜಾಲ ನಿಜಕ್ಕೂ ಅಮೂಲ್ಯ ಮಾಹಿತಿಯ ಗಣಿ. ಆದರೆ ಇಲ್ಲಿ ಗಣಿಗಾರಿಕೆ ಮಾಡಲು ಹೊರಟಾಗ ಕೆಲವೊಮ್ಮೆ ಬಂಗಾರದ ಬದಲಿಗೆ ಕಾಗೆಬಂಗಾರ ಸಿಕ್ಕಿಬಿಡುತ್ತದೆ. ಅಂದರೆ, ಜಾಲಲೋಕದಲ್ಲಿ ಉಪಯುಕ್ತ ಮಾಹಿತಿ ಎಷ್ಟಿದೆಯೋ ಅಷ್ಟೇ, ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದ ಸುಳ್ಳುಗಳೂ ಅಲ್ಲಿ ಸುಳಿದಾಡುತ್ತಿರುತ್ತವೆ.

ವಿಶ್ವವ್ಯಾಪಿ ಜಾಲದ ಸಾಮಾನ್ಯ ಬಳಕೆದಾರರಾದ ನಾವು ಅಲ್ಲಿ ಸುಳ್ಳುಗಳನ್ನು ಸೃಷ್ಟಿಸುವ, ಇಲ್ಲವೇ ಅಂತಹ ಸುಳ್ಳುಗಳನ್ನು ಬಳಸಿ ಇತರರನ್ನು ವಂಚಿಸುವ ಉಸಾಬರಿಗೆ ಹೋಗುವುದಿಲ್ಲ ನಿಜ. ಆದರೆ ಜಾಲಲೋಕದಲ್ಲಿ ನಮ್ಮ ಗಮನಕ್ಕೆ ಬಂದ ಮಾಹಿತಿಯನ್ನೆಲ್ಲ ಸುಳ್ಳೋ ನಿಜವೋ ನೋಡದೆ ಎಲ್ಲರಿಗೂ ಹಂಚಿಬಿಡುವ ಹವ್ಯಾಸ ಮಾತ್ರ ನಮ್ಮಲ್ಲಿ ಅನೇಕರಿಗೆ ಇರುತ್ತದೆ. ಫೇಸ್‌ಬುಕ್‌ನಲ್ಲಂತೂ ಸಿಕ್ಕಿದ್ದನ್ನೆಲ್ಲ ಶೇರ್ ಮಾಡುವುದೇ ಹಲವರ ಕೆಲಸ.

ಕಂಪ್ಯೂಟರ್ ವೈರಸ್ಸುಗಳ ಬಗ್ಗೆ ಕಪೋಲಕಲ್ಪಿತ ಮಾಹಿತಿ, ಫೇಸ್‌ಬುಕ್ ಸೇವೆ ನಿಂತುಹೋಗಲಿದೆ ಎನ್ನುವಂತಹ ಬೆದರಿಕೆಗಳು, ಅದೇನೇನೋ ಮಾಡಿದರೆ ಐಪ್ಯಾಡು-ಲ್ಯಾಪ್‌ಟಾಪುಗಳೆಲ್ಲ ಉಚಿತವಾಗಿ ಸಿಗುತ್ತದೆ ಎನ್ನುವಂತಹ ಬೊಗಳೆ - ಇವು ಜಾಲಲೋಕದಲ್ಲಿ ಹರಿದಾಡುವ ತಲೆಬುಡವಿಲ್ಲದ ಸಂಗತಿಗಳಿಗೆ ಕೆಲವು ಉದಾಹರಣೆಗಳಷ್ಟೆ. ಇವೆಲ್ಲ ಹಾಗಿರಲಿ, ಇಂತಹ ಇನ್ನೂ ಕೆಲ ಸಂದೇಶಗಳು ಆರೋಗ್ಯ ಹಾಗೂ ಔಷಧಗಳಿಗೆ ಸಂಬಂಧಿಸಿದ ಸುಳ್ಳು ಅಥವಾ ತಪ್ಪು ಮಾಹಿತಿಯನ್ನು ಹಂಚುತ್ತವೆ.

ಇಂತಹ ಮಾಹಿತಿಯನ್ನು ಹಂಚುವುದು ಮತ್ತು ನಂಬುವುದು ಎರಡೂ ಶುದ್ಧ ತಪ್ಪು. ಅದರಿಂದಾಗಿ ಸಮಯ ಹಾಳಾಗುವುದು ಅಥವಾ ಮಿತ್ರರಿಂದ ಬೈಸಿಕೊಳ್ಳುವುದಷ್ಟೇ ಅಲ್ಲ, ಆರೋಗ್ಯಕ್ಕೆ ಸಂಬಂಧಿಸಿದಂತೆ ಸಿಕ್ಕಸಿಕ್ಕ ಸಲಹೆಯನ್ನೆಲ್ಲ ಪಾಲಿಸಹೋಗುವುದು ಹಾನಿಕಾರಕವೂ ಆಗಬಹುದು.

ಹಾಗಾದರೆ ಇದರಿಂದ ಪಾರಾಗಲು ನಾವೇನು ಮಾಡಬೇಕು? ಜಾಲಲೋಕದಲ್ಲಿರುವ ಅಪಾರ ಫಸಲಿನಲ್ಲಿ ಕಾಳನ್ನಷ್ಟೆ ತೆಗೆದುಕೊಂಡು ಜೊಳ್ಳು ಸಿಕ್ಕಸಿಕ್ಕಲ್ಲೆಲ್ಲ ಹಾರಾಡದಂತೆ ನೋಡಿಕೊಳ್ಳುವುದು ಹೇಗೆ? ಈ ನಿಟ್ಟಿನಲ್ಲಿ ಒಂದಷ್ಟು ಮಾಹಿತಿ ಇಲ್ಲಿದೆ.

ಸೋಮವಾರ, ಫೆಬ್ರವರಿ 18, 2013

ಗೋಗಿಯ ಪಾಶ ದೂರಸರಿಸಿದ ವಿಜ್ಞಾನ ಲೇಖನ


ಗುಲಬರ್ಗಾ ಜಿಲ್ಲೆಯ ಗೋಗಿಯಲ್ಲಿ ಯುರೇನಿಯಂ ಗಣಿಗಾರಿಕೆ ಪ್ರಾರಂಭವಾಗುವ ಸುದ್ದಿ ಕೇಳಿದಾಗ ಕನ್ನಡದ ಹಿರಿಯ ವಿಜ್ಞಾನ ಲೇಖಕ ಶ್ರೀ ನಾಗೇಶ ಹೆಗಡೆಯವರು ೨೦೧೧ರಲ್ಲಿ ಒಂದು ಲೇಖನ ಬರೆದಿದ್ದರು. ಯುರೇನಿಯಂ ಗಣಿಗಾರಿಕೆಯ ಸಮಸ್ಯೆಗಳು, ಹಾಗೊಮ್ಮೆ ಗಣಿಗಾರಿಕೆ ಮಾಡಲೇಬೇಕೆಂದರೆ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳು ಮುಂತಾದವನ್ನೆಲ್ಲ ಮನೋಜ್ಞವಾಗಿ ವಿವರಿಸಿದ್ದ ಆ ಲೇಖನವೇ 'ಜಾದೂಗುಡದಿಂದ ಬಂದೀತು ಗೋಗಿಯ ಪಾಶ'. 
ಸಾವಿರಕ್ಕೂ ಕಡಿಮೆ ಪದಗಳಿದ್ದ ಈ ಲೇಖನ ಜನರಲ್ಲಿ ಮೂಡಿಸಿದ ಅರಿವು ಎಷ್ಟು ಪ್ರಮಾಣದಲ್ಲಿತ್ತೆಂದರೆ ಅದೊಂದು ಆಂದೋಲನವನ್ನೇ ಹುಟ್ಟುಹಾಕಿತು. ಇದೆಲ್ಲದರ ಪರಿಣಾಮವಾಗಿ ಕೇಂದ್ರ ಸರಕಾರ ಅಲ್ಲಿ ಯುರೇನಿಯಂ ಗಣಿಗಾರಿಕೆಯನ್ನು ನಿಲ್ಲಿಸಹೊರಟಿದೆ ಎಂದು ಕನ್ನಡಪ್ರಭ ವರದಿಮಾಡಿದೆ. ಜನಸಾಮಾನ್ಯರಲ್ಲಿ ಅರಿವುಮೂಡಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ವಿಜ್ಞಾನ ಸಂವಹನದ ಪಾತ್ರ ಎಷ್ಟು ಮಹತ್ವದ್ದು ಎನ್ನುವುದಕ್ಕೆ ಈ ಲೇಖನ ಒಳ್ಳೆಯ ಉದಾಹರಣೆ ಎಂದು ಇಜ್ಞಾನ ಡಾಟ್ ಕಾಮ್ ಭಾವಿಸುತ್ತದೆ. 
ಪ್ರಜಾವಾಣಿಯ ಆಗಸ್ಟ್ ೯, ೨೦೧೧ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನವನ್ನು ಶ್ರೀ ನಾಗೇಶ ಹೆಗಡೆಯವರ ಅನುಮತಿಯೊಡನೆ ಇಲ್ಲಿ ಮತ್ತೆ ಪ್ರಕಟಿಸುತ್ತಿದ್ದೇವೆ

ಶುಕ್ರವಾರ, ಫೆಬ್ರವರಿ 15, 2013

ಕಾಪಿ ಪೇಸ್ಟ್‌‌ಗೆ ಕಂಪ್ಯೂಟರ್ ಕಡಿವಾಣ


ಟಿ. ಜಿ. ಶ್ರೀನಿಧಿ

ವಿಶ್ವವ್ಯಾಪಿ ಜಾಲದಿಂದಾಗಿ ಮಾಹಿತಿ ನಮಗೆ ಎಷ್ಟೆಲ್ಲ ಸುಲಭವಾಗಿ ಸಿಗುವಂತಾಗಿದೆಯಲ್ಲ? ಶಾಲೆ-ಕಾಲೇಜಿನ ಅಸೈನ್‌ಮೆಂಟ್ ಮಾಡಲು ಲೈಬ್ರರಿಗೆ ಹೋಗುವ, ಪಕ್ಕದ ಮನೆಯ ಮೇಷ್ಟರ ಹತ್ತಿರ ಪುಸ್ತಕ ಕೇಳುವ ಕೆಲಸವೆಲ್ಲ ತಪ್ಪಿ ನಮಗೆ ಬೇಕಾದ ಮಾಹಿತಿಯೆಲ್ಲ ಕ್ಷಣಾರ್ಧದಲ್ಲೇ ಪ್ರತ್ಯಕ್ಷವಾಗುವಂತೆ ಮಾಡಿದ್ದು ವಿಶ್ವವ್ಯಾಪಿ ಜಾಲದ ಹಿರಿಮೆ.

ಬೇಕಾದ ಮಾಹಿತಿಯೆಲ್ಲ ಇಷ್ಟು ಸುಲಭವಾಗಿ ಸಿಗುವಾಗ ಅದನ್ನು ಬಳಸಲೇನು ಹಿಂಜರಿಕೆ? ಕೃತಿಚೌರ್ಯ, ಅಂದರೆ ಎಲ್ಲಿಂದಲೋ ತೆಗೆದ ಮಾಹಿತಿಯನ್ನು ನಮ್ಮದೇ ಎಂದು ಕಾಪಿ ಪೇಸ್ಟ್ ಮಾಡುವ ಚಟ, ವ್ಯಾಪಕವಾಗಿ ಬೆಳೆದದ್ದು ಈ ಧೋರಣೆಯಿಂದಾಗಿಯೇ. ಪ್ರೈಮರಿ ಶಾಲೆಯ ಹೋಮ್‌ವರ್ಕಿನಿಂದ ಪ್ರಾರಂಭಿಸಿ ಡಾಕ್ಟರೇಟಿನ ಪ್ರಬಂಧದವರೆಗೆ ಕೃತಿಚೌರ್ಯದ ಕಾಟ ಯಾವುದನ್ನೂ ಬಿಟ್ಟಿಲ್ಲ!

ಪ್ರೈಮರಿ ಶಾಲೆಯ ಮಗು ತನ್ನ ಪ್ರಬಂಧವನ್ನು ಎಲ್ಲಿಂದಲೋ ಕಾಪಿಮಾಡಿಕೊಂಡು ಬಂದಿದ್ದರೆ ಹಾಗೆ ಮಾಡಬಾರದೆಂದು ಒಳ್ಳೆಯ ಮಾತಿನಲ್ಲೇ ತಿಳಿಹೇಳೋಣ. ಆದರೆ ಡಾಕ್ಟರೇಟ್ ಪ್ರಬಂಧದಲ್ಲೂ ಇದೇ ತಾಪತ್ರಯ ಕಾಣಿಸಿಕೊಂಡರೆ? ಜರ್ಮನಿಯಲ್ಲಿ ಇತ್ತೀಚೆಗೆ ನಡೆದದ್ದು ಇದೇ. ಸಾಮಾನ್ಯ ವ್ಯಕ್ತಿಯಲ್ಲ, ಅಲ್ಲಿನ ಶಿಕ್ಷಣ ಸಚಿವರೇ ಹೀಗೆ ಕಾಪಿ ಪೇಸ್ಟ್ ಮಾಡಿ ಸಿಕ್ಕಿಕೊಂಡು ಅವರ ಡಾಕ್ಟರೇಟನ್ನು ವಾಪಸ್ ಪಡೆದು ಏನೆಲ್ಲ ಫಜೀತಿಯಾಗಿಬಿಟ್ಟಿತ್ತು.

ಅದೆಲ್ಲ ಸರಿ, ವಿಶ್ವವ್ಯಾಪಿ ಜಾಲದಲ್ಲಿ ನಾವು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲದಷ್ಟು ಅಗಾಧ ಪ್ರಮಾಣದ ಮಾಹಿತಿಯಿರುತ್ತದಲ್ಲ. ಅಲ್ಲಿ ಯಾವುದೋ ಮೂಲೆಯಿಂದ ಒಂದಷ್ಟನ್ನು ಯಾರಾದರೂ ಕದ್ದರೆ ಅದು ಪತ್ತೆಯಾಗುವುದು ಹೇಗೆ? ಅದು ಹುಲ್ಲುಬಣವೆಯಲ್ಲಿ ಸೂಜಿ ಹುಡುಕಿದಂತಾಗುವುದಿಲ್ಲವೆ?

ಶುಕ್ರವಾರ, ಫೆಬ್ರವರಿ 8, 2013

ನೆನಪುಗಳ ಮಾತಲ್ಲ, ಇದು ನೆನಪುಗಳ ಫೋಟೋ ಆಲ್ಬಮ್!

ಟಿ. ಜಿ. ಶ್ರೀನಿಧಿ

ಮದುವೆ, ಗೃಹಪ್ರವೇಶ, ಹುಟ್ಟುಹಬ್ಬಗಳಂತದ ಸ್ಮರಣೀಯ ಸನ್ನಿವೇಶಗಳನ್ನು ಛಾಯಾಚಿತ್ರಗಳಲ್ಲಿ ಸೆರೆಹಿಡಿದಿಡುವುದು ನಮಗೇನೂ ಹೊಸ ವಿಷಯವಲ್ಲ. ದೊಡ್ಡ ಕಾರ್ಯಕ್ರಮಗಳಿರಲಿ, ಎಲ್ಲ ಮೊಬೈಲುಗಳಲ್ಲೂ ಕ್ಯಾಮೆರಾ ಬಂದಮೇಲೆ ದಿನನಿತ್ಯದ ಕೆಲ ಘಟನೆಗಳು ಕೂಡ ಛಾಯಾಚಿತ್ರಗಳಾಗಿ ನಮ್ಮ ಸಂಗ್ರಹಕ್ಕೆ ಸೇರುತ್ತಿವೆ.

ಆದರೆ ಫೋಟೋ ತೆಗೆಯಬೇಕು ಅನ್ನಿಸಿದಾಗಲೆಲ್ಲ ಫೋಟೋ ತೆಗೆಯುವುದು ಸಾಧ್ಯವಾಗಬೇಕಲ್ಲ! ಸ್ಟೇಜಿನ ಮೇಲೆ ನಿಂತು ಭಾಷಣ ಬಿಗಿಯುತ್ತಿರುವಾಗ ಭಾಷಣಕಾರನಿಗೆ ಎಷ್ಟೇ ಆಸೆಯಾದರೂ ಆತನೇ ಸಭಿಕರ ಫೋಟೋ ಕ್ಲಿಕ್ಕಿಸುವುದು ಅಸಹಜವಾಗಿ ಕಾಣುತ್ತದೆ. ಅಂತೆಯೇ ಶಾಪಿಂಗ್ ಮುಗಿಸಿ ಎರಡು ಕೈಯಲ್ಲೂ ಒಂದೊಂದು ಚೀಲ ಹಿಡಿದು ಬರುವಾಗ ಯಾವುದೋ ಫೋಟೋ ಕ್ಲಿಕ್ಕಿಸಬೇಕೆಂದರೂ ಅದು ಸಾಧ್ಯವಾಗುವುದಿಲ್ಲ. ಹೀಗಾಗಿಯೇ ಬಹುತೇಕ ನೆನಪುಗಳನ್ನು ಉಳಿಸಿಟ್ಟುಕೊಳ್ಳಲು ನಾವು ಇನ್ನೂ ಜ್ಞಾಪಕಶಕ್ತಿಯನ್ನೇ ಅವಲಂಬಿಸಬೇಕಿದೆ.

ಇದರ ಬದಲಿಗೆ ನಮ್ಮ ದಿನನಿತ್ಯದ ಎಲ್ಲ ನೆನಪುಗಳನ್ನೂ ಛಾಯಾಚಿತ್ರಗಳ ರೂಪದಲ್ಲಿ ಸಂಗ್ರಹಿಸಿಡುವಂತಿದ್ದರೆ? ಹತ್ತು ವರ್ಷಗಳ ಹಿಂದೆ ಇದೇ ದಿನ ನಾನು ಏನೆಲ್ಲ ಮಾಡಿದ್ದೆ ಎನ್ನುವಂತಹ ವಿವರಗಳನ್ನು ನಮಗೆ ಬೇಕಾದಾಗಲೆಲ್ಲ ನೆನಪಿಸಿಕೊಳ್ಳಬಹುದಿತ್ತು ಅಲ್ಲವೆ?

ಮಂಗಳವಾರ, ಫೆಬ್ರವರಿ 5, 2013

ಪುಟ್ಟ ಮಗು ಕೊಟ್ಟ ದೊಡ್ಡ ಐಡಿಯಾ


ಟಿ. ಜಿ. ಶ್ರೀನಿಧಿ

ಪ್ರವಾಸಕ್ಕೆಂದು ಬೇರೆ ಊರಿಗೆ ಹೊರಟಾಗ ಮಕ್ಕಳಿಗೆ ಎಲ್ಲಿಲ್ಲದ ಉತ್ಸಾಹ ಬಂದುಬಿಟ್ಟಿರುತ್ತದೆ. ಹಾಗಾಗಿಯೇ ಇತರ ದಿನಗಳಲ್ಲಿ ಎಂಟುಗಂಟೆಗೆ ಏಳುವಾಗಲೂ ಎಂಟುಬಾರಿ ಎಬ್ಬಿಸಿಕೊಳ್ಳುವ ಮಕ್ಕಳು ಪ್ರವಾಸ ಹೋಗಬೇಕು ಎನ್ನುವ ದಿನಗಳಲ್ಲಿ ಎಲ್ಲರಿಗಿಂತ ಮುಂಚೆ ಎದ್ದು ಕುಳಿತಿರುತ್ತಾರೆ. ಅವರ ಆತುರ ಅಷ್ಟಕ್ಕೇ ಮುಗಿಯುವುದಿಲ್ಲ. ಪ್ರಯಾಣದ ಸಂದರ್ಭದಲ್ಲಿ ಗಳಿಗೆಗೊಮ್ಮೆ "ನಾವು ಹೋಗಬೇಕಾದ ಜಾಗ ಬಂತಾ?", "ಇನ್ನೂ ಎಷ್ಟು ಹೊತ್ತು" ಎನ್ನುವಂತಹ ಪ್ರಶ್ನೆಗಳನ್ನೆಲ್ಲ ಕೇಳುತ್ತಲೇ ಇರುತ್ತಾರೆ. ಇಂತಹ ಅದಮ್ಯ ಕುತೂಹಲದ ಮಗುವೊಂದರ ಕತೆಯೇ ಇದು.

* * *

ಕೆಲವು ದಶಕಗಳ ಹಿಂದಿನ ಮಾತು. ಅಮೆರಿಕಾದ ಎಡ್ವಿನ್ ಲ್ಯಾಂಡ್ ತನ್ನ ಮೂರು ವರ್ಷದ ಮಗಳೊಂದಿಗೆ ಪ್ರವಾಸ ಹೊರಟಿದ್ದ ಸಂದರ್ಭ. ಪ್ರವಾಸದ ಸಂದರ್ಭದಲ್ಲಿ ಆತ ಛಾಯಾಚಿತ್ರಗಳನ್ನು ಕ್ಲಿಕ್ಕಿಸಿದಾಗೆಲ್ಲ ಆ ಛಾಯಾಚಿತ್ರವನ್ನು ತನಗೂ ತೋರಿಸು ಎಂದು ಮಗಳು ದುಂಬಾಲುಬೀಳುತ್ತಿದ್ದಳು.

ಕ್ಲಿಕ್ಕಿಸಿದ ತಕ್ಷಣ ಚಿತ್ರವನ್ನು ತೋರಿಸುವ ಡಿಜಿಟಲ್ ಕ್ಯಾಮೆರಾ ತಂತ್ರಜ್ಞಾನ ಆಗಿನ್ನೂ ಬಂದಿರಲಿಲ್ಲ. ಹಾಗಾಗಿ "ನಾವು ಊರಿಗೆ ಹೋದಮೇಲೆ ಫಿಲಂ ರೋಲನ್ನು ತೊಳೆಸಿ ಪ್ರಿಂಟು ಹಾಕಿಸುತ್ತೇನೆ, ಆಗ ನೀನು ಈ ಚಿತ್ರಗಳನ್ನೆಲ್ಲ ನೋಡುವೆಯಂತೆ" ಎನ್ನುವ ವಿವರಣೆ ಎಡ್ವಿನ್ ಕಡೆಯಿಂದ ಬಂತು. ಆಗ ಆತನ ಮಗಳು ಕೇಳಿದ್ದು ಹೀಗೆ - "ನಾವು ಫೋಟೋ ನೋಡಲು ಅಷ್ಟೆಲ್ಲ ಯಾಕೆ ಕಾಯಬೇಕು?"

ಬೇರೆ ಯಾರಾದರೂ ಆಗಿದ್ದರೆ ಈ ಪ್ರಶ್ನೆಗೆ ಉತ್ತರವಾಗಿ ನಕ್ಕು ಸುಮ್ಮನಾಗಿಬಿಡುತ್ತಿದ್ದರೇನೋ. ಆದರೆ ಎಡ್ವಿನ್ ಲ್ಯಾಂಡ್ ಹಾಗೆ ಮಾಡಲಿಲ್ಲ. ಪುಟ್ಟ ಮಗುವಿನ ಮುಗ್ಧ ಪ್ರಶ್ನೆಯನ್ನೇ ಮುಂದಿಟ್ಟುಕೊಂಡು ಯೋಚಿಸಲು ಪ್ರಾರಂಭಿಸಿದ ಆತ ಆಗಿನ ಕಾಲಕ್ಕೆ ಕ್ರಾಂತಿಕಾರಕ ಎನ್ನಬಹುದಾಗಿದ್ದ ಪೋಲರಾಯ್ಡ್ ಕ್ಯಾಮೆರಾವನ್ನು ಸೃಷ್ಟಿಸಿದ.

ಸೋಮವಾರ, ಫೆಬ್ರವರಿ 4, 2013

ಗುಲಬರ್ಗಾದಲ್ಲಿ ಜನಪ್ರಿಯ ವಿಜ್ಞಾನ ಸಾಹಿತಿಗಳ ಸಮಾವೇಶ

ಇಜ್ಞಾನ ವಾರ್ತೆ

ಜನಪ್ರಿಯ ವಿಜ್ಞಾನ ಸಾಹಿತಿಗಳ ರಾಜ್ಯಮಟ್ಟದ ಆರನೇ ಸಮಾವೇಶ ಬರುವ ಫೆಬ್ರುವರಿ ೧೬ ಹಾಗೂ ೧೭ರಂದು ಗುಲಬರ್ಗಾದಲ್ಲಿ ನಡೆಯಲಿದೆ. ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ಜನಪ್ರಿಯ ವಿಜ್ಞಾನ ಸಾಹಿತಿಗಳ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಗುಲಬರ್ಗಾದ ನೂತನ ವಿದ್ಯಾಲಯ ಕಾಲೇಜಿನ ಅನಂತರಾವ್ ದೇಶ್‌ಮುಖ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಎರಡು ದಿನಗಳ ಈ ಸಮಾವೇಶದಲ್ಲಿ ಮಂಡಿಸಲಾಗುವ ಪ್ರಬಂಧಗಳನ್ನು `ವಿಜ್ಞಾನ ಸಂವಹನ: ೩ನೇ ಆಯಾಮ' ಎಂಬ ಹೆಸರಿನ ಪುಸ್ತಕರೂಪದಲ್ಲಿ ಪ್ರಕಟಿಸಲಾಗುವುದು.

ಶುಕ್ರವಾರ, ಫೆಬ್ರವರಿ 1, 2013

ಮ್ಯೂಸಿಕ್ ಸ್ಟ್ರೀಮಿಂಗ್: ಸಿನಿಮಾ ಹಾಡಿನ ಆನ್‌ಲೈನ್ ಪಾಡು!


ಟಿ. ಜಿ. ಶ್ರೀನಿಧಿ

ಒಂದು ಕಾಲ ಇತ್ತು. ಹೊಸ ಸಿನಿಮಾದಲ್ಲಿ ನಮಗಿಷ್ಟವಾದ ಹಾಡುಗಳನ್ನು ಬೇಕೆಂದಾಗ ಕೇಳಲು ಅಂಗಡಿಗೆ ಹೋಗಿ ಆಡಿಯೋ ಕ್ಯಾಸೆಟ್ ಕೊಳ್ಳುವುದಷ್ಟೇ ಆಗ ನಮ್ಮ ಮುಂದಿದ್ದ ಆಯ್ಕೆಯಾಗಿತ್ತು. ಟೀವಿಯಲ್ಲಿ ಚಿತ್ರಹಾರ್-ಚಿತ್ರಮಂಜರಿ ನೋಡುವುದಂತೂ ಆಗ ಇಡೀ ಕುಟುಂಬಕ್ಕೇ ಒಂದು ಸಂಭ್ರಮ. ಆಮೇಲೆ ಮಾಹಿತಿ ತಂತ್ರಜ್ಞಾನ ಬಂತಲ್ಲ, ನಮ್ಮ ಬದುಕಿನ ಬೇರೆಲ್ಲ ಆಯಾಮಗಳಂತೆ ಅದು ಸಿನಿಮಾ ಹಾಡುಗಳನ್ನು ಆಲಿಸುವ ಅನುಭವವನ್ನೂ ಬದಲಿಸಿಬಿಟ್ಟಿತು. ಎಂಪಿಥ್ರೀ ದೆಸೆಯಿಂದ ಕೈಯಲ್ಲಿನ ಫೋನುಗಳೂ ಮ್ಯೂಸಿಕ್ ಪ್ಲೇಯರುಗಳಾಗಿ ಬದಲಾದವು.

ಇದರ ಜೊತೆಯಲ್ಲೇ ಬೆಳೆದದ್ದು ಪೈರಸಿ ಪಿಡುಗು. ಸಿನಿಮಾ ಹಾಡು ಬೇಕು ಎಂದಾಕ್ಷಣ ನಮಗೆ ಟೊರೆಂಟುಗಳೇ ಮೊದಲು ನೆನಪಾಗುತ್ತವೆ. ಸ್ವತಃ ಡೌನ್‌ಲೋಡ್ ಮಾಡದಿದ್ದರೆ ಸ್ನೇಹಿತರಿಂದ ಪಡೆದುಕೊಂಡಾದರೂ ಸರಿ ಎನ್ನುವ ನಮಗೆ ಸಿನಿಮಾ ಹಾಡುಗಳನ್ನು ಕೊಂಡು ಕೇಳುವ ಪರಿಕಲ್ಪನೆ ಅಷ್ಟಾಗಿ ಹಿಡಿಸುವುದೇ ಇಲ್ಲ. ಹಾಡುಕೇಳಲು ದುಡ್ಡುಕೊಡಿ ಎನ್ನುವ ಐಟ್ಯೂನ್ಸ್‌ನಂತಹ ಐಡಿಯಾಗಳು ಹೀಗಾಗಿಯೇ ನಮ್ಮಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿಲ್ಲ (ಐದು ಹತ್ತು ರೂಪಾಯಿಗಳಿಗೆ ಒಂದು ಹಾಡಿನಂತೆ ನಮಗಿಷ್ಟವಾದುದನ್ನು ಡೌನ್‌ಲೋಡ್ ಮಾಡಿಕೊಳ್ಳುವ ಸೌಲಭ್ಯವನ್ನು ಫ್ಲಿಪ್‌ಕಾರ್ಟ್ ಡಾಟ್ ಕಾಮ್ ಈಚೆಗಷ್ಟೇ 'ಫ್ಲೈಟ್' ಎಂಬ ಹೆಸರಿನಲ್ಲಿ ಪರಿಚಯಿಸಿದೆ: flipkart.com/mp3-downloads).

ಪೈರಸಿಗೆ ಪ್ರೋತ್ಸಾಹಿಸದೆಯೇ ಸೂಪರ್‌ಹಿಟ್ ಹಾಡುಗಳನ್ನು ಕೇಳುವ ಸೌಲಭ್ಯವನ್ನು ನಮಗೆ ಒದಗಿಸಿರುವುದು ಮ್ಯೂಸಿಕ್ ಸ್ಟ್ರೀಮಿಂಗ್ ತಾಣಗಳು. ಹಾಡನ್ನು ಡೌನ್‌ಲೋಡ್ ಮಾಡಿಕೊಳ್ಳಲು ಬಿಡದೆ ನಮಗೆ ಬೇಕಾದ ಹಾಡನ್ನು ವಿಶ್ವವ್ಯಾಪಿ ಜಾಲದಲ್ಲೇ ಕೇಳಿಸುವುದು ಈ ತಾಣಗಳ ವೈಶಿಷ್ಟ್ಯ. ಡೆಸ್ಕ್‌ಟಾಪ್-ಲ್ಯಾಪ್‌ಟಾಪ್‌ಗಳಲ್ಲಷ್ಟೇ ಏಕೆ, ಈ ಸೌಲಭ್ಯವನ್ನು ಮೊಬೈಲ್ ಹಾಗೂ ಟ್ಯಾಬ್ಲೆಟ್ಟುಗಳಲ್ಲೂ ಬಳಸಬಹುದು.

ಗುರುವಾರ, ಜನವರಿ 31, 2013

ಥ್ರೀಡಿ ಪ್ರಿಂಟಿಂಗ್ ವಂಡರ್: ಮುರಿದ ಮೊಬೈಲು ಮನೆಯಲ್ಲೇ ರಿಪೇರಿ!


ಉದಯವಾಣಿ ಮಂಗಳೂರು ಆವೃತ್ತಿಯ 'ಯುವ ಸಂಪದ' ಪುರವಣಿಯಲ್ಲಿ ಪ್ರಾರಂಭವಾಗಿರುವ 'ಸ್ವ-ತಂತ್ರ' ಅಂಕಣದ ಮೊದಲ ಬರಹ
ಟಿ. ಜಿ. ಶ್ರೀನಿಧಿ

ಮೊಬೈಲ್ ಫೋನುಗಳನ್ನು ನಾವು ಎಷ್ಟೇ ಜೋಪಾನಮಾಡಿದರೂ ತೀರಾ ಅನಿರೀಕ್ಷಿತ ಸಂದರ್ಭದಲ್ಲಿ ಅವು ನಮ್ಮ ಕೈಗೇ ಕೈಕೊಟ್ಟು ಕೆಳಗೆ ಬಿದ್ದುಬಿಡುತ್ತವೆ. ಹಾಗಾಗಿ ಅವುಗಳ ಪ್ಲಾಸ್ಟಿಕ್ ಹೊರಕವಚ ಹಾಳಾಗುವುದು ತೀರಾ ಸಾಮಾನ್ಯ. ಇಂತಹ ಸಂದರ್ಭದಲ್ಲಿ ಮುರಿದ ಭಾಗಗಳನ್ನು ಅಂಟಿಸುವುದು ಅಥವಾ ಬದಲಿ ಭಾಗ ಹುಡುಕಿಕೊಂಡು ಅಂಗಡಿಯತ್ತ ಹೋಗುವುದಷ್ಟೆ ನಾವು ಮಾಡಬಹುದಾದ ಕೆಲಸ.

ತಂತ್ರಜ್ಞಾನ ಪ್ರಪಂಚದಲ್ಲಿ ಕೇಳಿಬರುತ್ತಿರುವ ಸುದ್ದಿಯ ಪ್ರಕಾರ ಈ ಪರಿಸ್ಥಿತಿ ಸದ್ಯದಲ್ಲೇ ಬದಲಾಗಲಿದೆಯಂತೆ. ಮೊಬೈಲ್ ಫೋನಿನ ಹೊರಕವಚ ಮುರಿದುಹೋದರೆ, ಅಥವಾ ಒಂದೇ ಬಣ್ಣದ್ದನ್ನು ನೋಡಿ ನೋಡಿ ಬೋರಾದರೆ ಥ್ರೀಡಿ ಮುದ್ರಣ ತಂತ್ರಜ್ಞಾನ ಬಳಸಿ ನಮಗೆ ಬೇಕಾದಂತಹ ಬದಲಿಭಾಗವನ್ನು ನಾವೇ ಸೃಷ್ಟಿಸಿಕೊಳ್ಳುವುದು ಸಾಧ್ಯವಾಗಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ಅಂತಹ ಆಸಕ್ತಿ - ಸಾಮರ್ಥ್ಯ ಎರಡೂ ಇರುವವರಿಗೆ ಲೂಮಿಯಾ ೮೨೦ ಫೋನ್ ಕವಚ ವಿನ್ಯಾಸದ ಪೂರ್ಣ ವಿವರಗಳನ್ನು ನೀಡಲು ಸಿದ್ಧವೆಂದು ನೋಕಿಯಾ ಸಂಸ್ಥೆ ಈಗಾಗಲೇ ಘೋಷಿಸಿಬಿಟ್ಟಿದೆ.

ಕಂಪ್ಯೂಟರಿಗೊಂದು ಪ್ರಿಂಟರ್ ಜೋಡಿಸಿ ನಮಗೆ ಬೇಕಾದ ಕಡತವನ್ನು ಕಾಗದದ ಮೇಲೆ ಮುದ್ರಿಸಿಕೊಳ್ಳುತ್ತೇವಲ್ಲ, ಥ್ರೀಡಿ ಪ್ರಿಂಟಿಂಗ್ ತಂತ್ರಜ್ಞಾನವೂ ಕೊಂಚ ಹಾಗೆಯೇ. ಆದರೆ ಇಲ್ಲಿ ನಮಗೆ ಬೇಕಾದ ವಸ್ತುವಿನ ಚಿತ್ರವನ್ನು ಮುದ್ರಿಸಿಕೊಳ್ಳುವ ಬದಲಿಗೆ ಪ್ಲಾಸ್ಟಿಕ್ ಕರಗಿಸಿ ನಮಗೇನು ಬೇಕೋ ಅದನ್ನೇ ತಯಾರಿಸಿಕೊಂಡುಬಿಡುವುದು ಸಾಧ್ಯ. ಮೊಬೈಲ್ ಫೋನ್ ಕವಚದ ಉದಾಹರಣೆಯನ್ನೇ ತೆಗೆದುಕೊಂಡರೆ ಅದರ ವಿನ್ಯಾಸದ ವಿವರಗಳನ್ನು ಅಗತ್ಯ ಸಾಫ್ಟ್‌ವೇರ್ ಮೂಲಕ ಥ್ರೀಡಿ ಪ್ರಿಂಟರಿಗೆ ಒಪ್ಪಿಸಿಕೊಟ್ಟರೆ ಸಾಕು, ಅದು ಪದರ ಪದರವಾಗಿ ಪ್ಲಾಸ್ಟಿಕ್ಕನ್ನು ಹೊರಸೂಸಿ ನಮ್ಮ ಫೋನಿಗೆ ನಾವು ಕೇಳಿದಂತಹುದೇ ಕವಚವನ್ನು ರೆಡಿಮಾಡಿಕೊಟ್ಟುಬಿಡುತ್ತದೆ!

ಮೊದಲಿಗೆ ಪರಿಚಿತವಾದ ಥ್ರೀಡಿ ಪ್ರಿಂಟರುಗಳಲ್ಲಿ ಕೇವಲ ಒಂದೇ ಬಣ್ಣದ ಪ್ಲಾಸ್ಟಿಕ್ ಬಳಸುವುದು ಸಾಧ್ಯವಿತ್ತು. ಆದರೆ ಇದೀಗ ಸಿದ್ಧವಾಗುತ್ತಿರುವ ಮಾದರಿಗಳಲ್ಲಿ ಬಹುವರ್ಣದ ಸೂಕ್ಷ್ಮ ವಿನ್ಯಾಸಗಳನ್ನೂ ತಯಾರಿಸುವುದು ಸಾಧ್ಯ ಎನ್ನಲಾಗಿದೆ. ಪ್ರಸ್ತುತ ದೊಡ್ಡ ಸಂಸ್ಥೆಗಳಲ್ಲಿ, ಸಂಶೋಧನಾಲಯಗಳಲ್ಲಿ ಅಗತ್ಯ ಮಾದರಿಗಳನ್ನು ತಯಾರಿಸಲಷ್ಟೆ ಬಳಕೆಯಾಗುತ್ತಿರುವ ಥ್ರೀಡಿ ಪ್ರಿಂಟರುಗಳು ಮುಂದಿನ ದಿನಗಳಲ್ಲಿ ಸಾಮಾನ್ಯ ಪ್ರಿಂಟರುಗಳಷ್ಟೇ ವ್ಯಾಪಕವಾಗಿ ಬಳಕೆಗೆ ಬರುವ ನಿರೀಕ್ಷೆಯಿದೆ. ಮುರಿದುಹೋದ ಟೀವಿ ರಿಮೋಟಿಗೆ ಪ್ಲಾಸ್ಟರ್ ಹಚ್ಚಿಡುವ ಬದಲು ಮುರಿದ ಭಾಗಕ್ಕೆ ಬದಲಿಯನ್ನು ಮನೆಯಲ್ಲೇ ತಯಾರಿಸಿಕೊಳ್ಳುವುದು ಆಗ ಸಾಧ್ಯವಾಗಲಿದೆ. ಅಷ್ಟೇ ಅಲ್ಲ, ಥ್ರೀಡಿ ಬಯೋಪ್ರಿಂಟಿಂಗ್ ಎಂಬ ಸುಧಾರಿತ ತಂತ್ರಜ್ಞಾನ ಬಳಸಿ ಆಹಾರಪದಾರ್ಥಗಳಿಂದ ಕೃತಕ ಅಂಗಾಂಗಗಳವರೆಗೆ ಅದೆಷ್ಟೋ ಬಗೆಯ ಜೈವಿಕ ಪದಾರ್ಥಗಳನ್ನು ಸೃಷ್ಟಿಸುವತ್ತಲೂ ಪ್ರಯತ್ನಗಳು ನಡೆದಿವೆ.

ಜನವರಿ ೨೫, ೨೦೧೩ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಮಂಗಳವಾರ, ಜನವರಿ 29, 2013

ಒಂದು ಕ್ಲಿಕ್ಕಿನ ಕತೆ


ಟಿ. ಜಿ. ಶ್ರೀನಿಧಿ

ಮೊನ್ನೆ ನನ್ನ ಹೆಂಡತಿಯ ಜೊತೆಗೆ ಮಾತನಾಡುತ್ತಿದ್ದಾಗ ಸಂಭಾಷಣೆ ನನ್ನ ಪ್ರಾಥಮಿಕ ಶಾಲೆಯ ದಿನಗಳತ್ತ  ತಿರುಗಿತು. ಸುಮಾರು ಹದಿನೈದು-ಇಪ್ಪತ್ತು ವರ್ಷ ಹಿಂದೆ ಮಲೆನಾಡಿನ ಪುಟ್ಟ ಊರೊಂದರಲ್ಲಿ ಕಳೆದ ಆ ದಿನಗಳ ನೆನಪು ನನಗೆ ಇಂದೂ ಸ್ಪಷ್ಟವಾಗಿಯೇ ಇದೆ; ಆದರೆ ಆ ಸನ್ನಿವೇಶಗಳನ್ನು ನನ್ನ ಹೆಂಡತಿಗೆ ವಿವರಿಸುವಾಗ ತೋರಿಸಲು ಇರುವ ಛಾಯಾಚಿತ್ರಗಳು ಮಾತ್ರ ಬೆರೆಳೆಣಿಕೆಯಷ್ಟು: ಹಳೆಯ ಆಲ್ಬಮ್ಮುಗಳನ್ನೆಲ್ಲ ಹುಡುಕಿದರೆ ಶಾಲೆಯ ಪ್ರತಿ ವರ್ಷಕ್ಕೂ ಒಂದೋ ಎರಡೋ ಚಿತ್ರ ಸಿಗಬಹುದೇನೋ ಅಷ್ಟೆ!

ಆದರೆ ಈಗ? ಸಮಾರಂಭಗಳು - ಪ್ರವಾಸಗಳು ಹಾಗಿರಲಿ, ದಿನನಿತ್ಯದ ಸಣ್ಣಪುಟ್ಟ ಘಟನೆಗಳ ಚಿತ್ರಗಳೂ ನಮ್ಮ ನೆನಪಿನ ವಿಸ್ತರಣೆಯಂತೆ ಮೊಬೈಲಿನಲ್ಲಿ - ಕ್ಯಾಮೆರಾದಲ್ಲಿ - ಕಂಪ್ಯೂಟರಿನಲ್ಲಿ ಕುಳಿತುಬಿಟ್ಟಿರುತ್ತವೆ.

ಸಾಕಷ್ಟು ಕೆಲಸ ಮತ್ತು ಖರ್ಚಿನ ವ್ಯವಹಾರವಾಗಿದ್ದ ಛಾಯಾಗ್ರಹಣವನ್ನು ಇಷ್ಟು ಸರಳಗೊಳಿಸಿದ್ದು, ನಿರ್ವಿವಾದವಾಗಿ, ಡಿಜಿಟಲ್ ಕ್ಯಾಮೆರಾಗಳು. ಈ ಡಿಜಿಟಲ್ ಅವತಾರದಿಂದಾಗಿ ಛಾಯಾಗ್ರಹಣ ಇಂದು ಪ್ರತಿಯೊಬ್ಬರ ಕೈಗೂ ಎಟುಕುವಂತಾಗಿದೆ. ತಂತ್ರಜ್ಞಾನ ಪಂಡಿತರಿಂದ ಪಾಮರರವರೆಗೆ ಡಿಜಿಟಲ್ ಕ್ಯಾಮೆರಾ ಬಳಕೆ ಎಲ್ಲರಿಗೂ ನೀರು ಕುಡಿದಷ್ಟೇ ಸುಲಭ.

ಛಾಯಾಗ್ರಹಣದ ಸ್ವರೂಪವನ್ನೇ ಬದಲಿಸಿಬಿಟ್ಟಿರುವ ಈ ಕ್ಯಾಮೆರಾಗಳು ಕೆಲಸಮಾಡುವುದು ಹೇಗೆ? ಡಿಜಿಟಲ್ ಕ್ಯಾಮೆರಾ ಕಾರ್ಯವೈಖರಿಯ ಸಣ್ಣದೊಂದು ಪರಿಚಯ ಇಲ್ಲಿದೆ.

ಮಂಗಳವಾರ, ಜನವರಿ 22, 2013

5S ಮತ್ತು ಕಂಪ್ಯೂಟರ್


ಟಿ. ಜಿ. ಶ್ರೀನಿಧಿ

ಮಾಡುವ ಕೆಲಸ ಯಾವುದೇ ಆದರೂ ಅದು ಅಚ್ಚುಕಟ್ಟಾಗಿರಬೇಕು ಎನ್ನುವ ಮನೋಭಾವ ನಮ್ಮಲ್ಲಿ ಅನೇಕರಿಗಿರುತ್ತದೆ. ಮನೆಯ ಕೆಲಸವಾದರೂ ಸರಿ, ಕಚೇರಿಯ ಕೆಲಸವಾದರೂ ಸರಿ, ಕೆಲಸ ಶಿಸ್ತುಬದ್ಧವಾಗಿ ಸಾಗಬೇಕು; ನೋಡಿದವರು ಮೆಚ್ಚಿ ವಾಹ್ ಎನ್ನುವಂತಿರಬೇಕು ಎನ್ನುವ ಹಂಬಲವೂ ಅಪರೂಪವೇನಲ್ಲ ಬಿಡಿ.

ಬಳಸುವ ವಸ್ತುಗಳನ್ನೆಲ್ಲ ವ್ಯವಸ್ಥಿತವಾಗಿ ಇಟ್ಟಿರುವುದು, ಎಲ್ಲಿ ನೋಡಿದರೂ ಒಪ್ಪ-ಓರಣದ ಜೋಡಣೆ, ಒಟ್ಟಾರೆಯಾಗಿ ಅಚ್ಚುಕಟ್ಟಿನ ಕೆಲಸ - ಇವೆಲ್ಲದರ ಉಪಯೋಗ ಬೇರೆಯವರಿಂದ ಹೊಗಳಿಕೆ ಗಿಟ್ಟಿಸಿಕೊಳ್ಳುವುದಷ್ಟೇ ಅಲ್ಲ. ಕೆಲಸದಲ್ಲೊಂದು ಶಿಸ್ತನ್ನು ರೂಢಿಸಿಕೊಂಡಾಗ ಮಾಡುವ ಕೆಲಸ ಸರಿಯಾದ ಫಲಿತಾಂಶಗಳನ್ನೇ ಕೊಟ್ಟು ನಮ್ಮ ಬದುಕಿನ ಮೇಲೂ ಒಳ್ಳೆಯ ಪರಿಣಾಮವನ್ನೇ ಬೀರುತ್ತದೆ. ಅಷ್ಟೇ ಅಲ್ಲ, ಅವ್ಯವಸ್ಥೆಯ ಕಿರಿಕಿರಿಯಿಲ್ಲದೆ ಕೆಲಸವೆಲ್ಲ ಬೇಗನೆ ಮುಗಿದೂಹೋಗುತ್ತದೆ.

ವೈಯಕ್ತಿಕ ಬದುಕಿಗಷ್ಟೇ ಅಲ್ಲ, ಈ ನಿಯಮ ನಮ್ಮ ಉದ್ಯೋಗಗಳಿಗೂ ಅನ್ವಯಿಸುತ್ತದೆ. ಕಚೇರಿಯಿಂದ ಕಾರ್ಖಾನೆಯವರೆಗೆ ಎಲ್ಲ ಪರಿಸರಗಳಲ್ಲೂ ಅಚ್ಚುಕಟ್ಟಾದ ವ್ಯವಸ್ಥೆಗೆ ತನ್ನದೇ ಆದ ಮಹತ್ವವಿದೆ. ಕಚೇರಿಯ ಫೈಲುಗಳಿರಬಹುದು ಅಥವಾ ಕಾರ್ಖಾನೆಯ ಉಪಕರಣಗಳಿರಬಹುದು - ಬೇಕಾದ ವಸ್ತು ಬೇಕಾದಾಗ ಸಿಗುವಂತಿದ್ದರೆ, ಅದಕ್ಕಾಗಿ ಹುಡುಕುತ್ತ ಅನಗತ್ಯ ವಸ್ತುಗಳ ರಾಶಿಯನ್ನೇ ದಾಟಬೇಕಾದ ಅಗತ್ಯ ಇಲ್ಲದಿದ್ದರೆ ಕೆಲಸ ಬೇಗ ಮುಗಿಯುತ್ತದೆ, ಒಟ್ಟಾರೆ ಉತ್ಪಾದಕತೆ ಹೆಚ್ಚುತ್ತದೆ.

ಈ ಸರಳ ಪರಿಕಲ್ಪನೆಯನ್ನೇ ಆಧರಿಸಿ ಜಪಾನಿನ ಕೆಲ ತಜ್ಞರು ಅನೇಕ ವರ್ಷಗಳ ಹಿಂದೆ ಫೈವ್ ಎಸ್ ಎನ್ನುವ ಮೆಥಡಾಲಜಿ, ಅಂದರೆ ಕ್ರಮಾನುಸರಣೆಯನ್ನು ಜಾರಿಗೆ ತಂದರು. ಕೆಲಸದ ಸ್ಥಳವನ್ನು ವ್ಯವಸ್ಥಿತವಾಗಿ ಸಜ್ಜುಗೊಳಿಸಿಕೊಳ್ಳುವ ಮೂಲಕ ನಮ್ಮ ಕೆಲಸ ಹೆಚ್ಚು ಪರಿಣಾಮಕಾರಿಯಾಗಿರುವಂತೆ ನೋಡಿಕೊಳ್ಳಬಹುದು ಎನ್ನುವುದು ಈ ಕ್ರಮಾನುಸರಣೆಯ ಹಿಂದಿನ ಉದ್ದೇಶ.

ಮಂಗಳವಾರ, ಜನವರಿ 15, 2013

ಕಾಫಿ, ಕಂಪ್ಯೂಟರ್ ಮತ್ತು ಕ್ಯಾಮೆರಾ


ಟಿ. ಜಿ. ಶ್ರೀನಿಧಿ

ತಂತ್ರಜ್ಞಾನದ ಒಟ್ಟಾರೆ ಇತಿಹಾಸಕ್ಕೆ ಹೋಲಿಸಿದಾಗ ಅಂತರಜಾಲ ನಮ್ಮ ಬದುಕನ್ನು ಪ್ರವೇಶಿಸಿದ್ದು ತೀರಾ ಇತ್ತೀಚೆಗೆ ಅಂತಲೇ ಹೇಳಬೇಕು. ಆದರೆ ಕೆಲವೇ ದಶಕಗಳ ಅವಧಿಯಲ್ಲಿ ಅದು ನಮ್ಮೆಲ್ಲರ ಬದುಕಿನ ಮೇಲೆ ಪ್ರಾಯಶಃ ಹಿಂದಿನ ಎಲ್ಲ ತಂತ್ರಜ್ಞಾನಗಳಿಗಿಂತ ಹೆಚ್ಚಿನ ಪ್ರಭಾವ ಬೀರಿದೆ. ನಮ್ಮಲ್ಲಿ ಅನೇಕರಿಗೆ ಇಂಟರ್‌ನೆಟ್ ಇಲ್ಲದ ಬದುಕನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲವೇನೋ.

ಆದರೆ ಕೆಲವೇ ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಅಂತರಜಾಲ ಸೃಷ್ಟಿಯಾಗಿ ಈಗಿನ್ನೂ ಮೂವತ್ತು ವರ್ಷಗಳಾಗಿವೆ ಅಷ್ಟೆ; ವಿಶ್ವವ್ಯಾಪಿ ಜಾಲ (ವರ್ಲ್ಡ್ ವೈಡ್ ವೆಬ್) ರೂಪುಗೊಂಡಿದ್ದು ಇಂಟರ್‌ನೆಟ್ ಬಂದು ಹತ್ತು ವರ್ಷದ ಮೇಲೆ. ವಿಶ್ವವ್ಯಾಪಿ ಜಾಲದ ಬೆಳೆವಣಿಗೆಯೂ ಅಷ್ಟೆ; ಏನೂ ಇಲ್ಲದ ಪರಿಸ್ಥಿತಿಯಿಂದ ಇಂದಿನ ಅಪಾರ ಸಾಧ್ಯತೆಗಳವರೆಗಿನ ವಿಕಾಸ ರಾತ್ರೋರಾತ್ರಿಯೇನೂ ಆಗಿಹೋಗಲಿಲ್ಲ.

ಹಾಗೆ ನೋಡಿದರೆ ನಮಗೆಲ್ಲ ಇದೀಗ ಚಿರಪರಿಚಿತವಾಗಿರುವ ಅನೇಕ ಸಂಗತಿಗಳು ವಿಶ್ವವ್ಯಾಪಿ ಜಾಲದ ಪ್ರಾರಂಭಿಕ ವರ್ಷಗಳಲ್ಲಿ ಅಸ್ತಿತ್ವದಲ್ಲೇ ಇರಲಿಲ್ಲ. ಅಂತಹ ಸಂಗತಿಗಳಲ್ಲಿ ಈಗ ಸರ್ವಾಂತರ್ಯಾಮಿಯಾಗಿರುವ ವೆಬ್ ಕ್ಯಾಮೆರಾ ಕೂಡ ಒಂದು.

ಬುಧವಾರ, ಜನವರಿ 9, 2013

ಇಂಟರ್‌ನೆಟ್ಟಿನ ಹ್ಯಾಪಿ ಬರ್ತ್‌ಡೇ

ಟಿ. ಜಿ. ಶ್ರೀನಿಧಿ

ಕಳೆದ ಮಂಗಳವಾರ, ಜನವರಿ ೧ರಂದು, ಒಬ್ಬೊಬ್ಬರ ಪ್ರೋಗ್ರಾಮು ಒಂದೊಂದು ಥರಾ ಇತ್ತು. ಕೆಲವರಿಗೆ ರಜೆಯ ಮಜೆ ಇದ್ದರೆ ಇನ್ನು ಕೆಲವರಿಗೆ ಆಫೀಸಿನಲ್ಲಿ ಕುಳಿತಿರುವ ಸಜೆ; ಕೆಲವರು ಕುಡಿದು ಕುಣಿದು ಕುಪ್ಪಳಿಸುತ್ತಿದ್ದರೆ ಇನ್ನು ಕೆಲವರು ಇನ್ನೊಂದು ವರ್ಷ ಅಷ್ಟೇ ತಾನೆ ಎಂದು ಮುಖ ತಿರುಗಿಸಿಕೊಂಡು ಸಾಗಿದ್ದರು. ಪ್ರೋಗ್ರಾಮು ಏನೇ ಇದ್ದರೂ ಹ್ಯಾಪಿ ನ್ಯೂ ಇಯರ್ ಎನ್ನುತ್ತ ಶುಭಕೋರುವುದನ್ನು ಮಾತ್ರ ಬಹುತೇಕ ಯಾರೂ ತಪ್ಪಿಸಿಕೊಂಡಿರಲಿಲ್ಲವೇನೋ. ಹೊಸವರ್ಷದ ಪ್ರತಿಜ್ಞೆಗಳು, ಪಾರ್ಟಿಗಳು, ಟೀವಿ ಪ್ರೋಗ್ರಾಮುಗಳು ಎಲ್ಲೆಲ್ಲೂ ತಮ್ಮ ಪ್ರಭಾವ ತೋರಿಸುತ್ತಿದ್ದವು.

ಇಂಟರ್‌ನೆಟ್ ಪ್ರಪಂಚದಲ್ಲೇನು ಕಡಿಮೆ ಸಂಭ್ರಮ ಇತ್ತೇನು? ವಾರ ಮುಂಚಿನಿಂದಲೇ ಹರಿದಾಡುತ್ತಿದ್ದ ಶುಭಾಶಯದ ಇಮೇಲುಗಳ ಭರಾಟೆ ಜನವರಿ ೧ರ ವೇಳೆಗೆ ಪರಮಾವಧಿ ತಲುಪಿಬಿಟ್ಟಿತ್ತು. ಫೇಸ್‌ಬುಕ್, ಟ್ವಿಟ್ಟರುಗಳಲ್ಲಂತೂ ಎಲ್ಲೆಲ್ಲಿ ನೋಡಿದರೂ ನ್ಯೂ ಇಯರ್ ಸಂದೇಶಗಳೇ. ಆನ್‌ಲೈನ್ ಶಾಪಿಂಗ್ ತಾಣಗಳಲ್ಲೂ ಅಷ್ಟೆ, ಹೊಸವರ್ಷದ ಹ್ಯಾಪಿ ಜನರನ್ನು ತಮ್ಮತ್ತ ಸೆಳೆಯಲು ಸಾಧ್ಯವಾದ ಎಲ್ಲ ಪ್ರಯತ್ನಗಳೂ ಜಾರಿಯಲ್ಲಿದ್ದವು.

ಈ ಇಮೇಲು, ಸೋಶಿಯಲ್ ನೆಟ್‌ವರ್ಕು, ಆನ್‌ಲೈನ್ ಶಾಪಿಂಗುಗಳನ್ನೆಲ್ಲ ಸಾಧ್ಯವಾಗಿಸಿದ ಅಂತರಜಾಲವಿದೆಯಲ್ಲ, ಇಂಟರ್‌ನೆಟ್ಟು, ಅದಕ್ಕೇನಾದರೂ ಭಾವನೆಗಳಿರುವಂತಿದ್ದರೆ ಆ ದಿನ ಇಷ್ಟೆಲ್ಲ ಗಲಾಟೆಯ ನಡುವೆ ಅದಕ್ಕೆ ಕೊಂಚ ಬೇಸರವಾಗಿರುತ್ತಿತ್ತೋ ಏನೋ. ತನಗೆ ಯಾರೂ ಹ್ಯಾಪಿ ನ್ಯೂ ಇಯರ್ ಹೇಳಲಿಲ್ಲ ಅಂತಲ್ಲ, 'ಹ್ಯಾಪಿ ಬರ್ತ್‌ಡೇ' ಅನ್ನಲಿಲ್ಲವಲ್ಲ ಅಂತ!

ಮಂಗಳವಾರ, ಜನವರಿ 1, 2013

ಇಂಟರ್‌ನೆಟ್ ಅಷ್ಟೇ ಅಲ್ಲ, ಇದು ಇಂಟರ್-ಪ್ಲಾ-ನೆಟ್!


ಟಿ. ಜಿ. ಶ್ರೀನಿಧಿ

ಎಲ್ಲರಿಗಿಂತ ಮೊದಲು ಎವರೆಸ್ಟ್ ಪರ್ವತ ಹತ್ತಿದವರು ನಾವೇ ಎಂದುಕೊಂಡು ಹೋಗಿ ನೋಡಿದರೆ ಅಲ್ಲಿ ಅವರಿಗೊಂದು ಚಹಾ ಅಂಗಡಿ ಸಿಕ್ಕಿತು ಎನ್ನುವುದು ಹಳೆಯ ಜೋಕು. ಈಗ ಎವರೆಸ್ಟ್ ಪರ್ವತಾರೋಹಣವೆಲ್ಲ ಹಳೆಯ ವಿಷಯ; ಮುಂದೊಂದು ದಿನ ಯಾರಾದರೂ ಮಂಗಳ ಗ್ರಹದ ಮೇಲೆ ಇಳಿದರೆ ಅದನ್ನೇನಾದರೂ ವಿಶೇಷ ಎನ್ನಬಹುದೇನೋ ಅಷ್ಟೆ.

ಹಾಗೆ ಮಂಗಳಗ್ರಹ ತಲುಪಿದವರು ಚಹಾ ಅಂಗಡಿ ನೋಡುತ್ತಾರೋ ಇಲ್ಲವೋ, ಅವರಿಗೆ ಇಂಟರ್‌ನೆಟ್ ಸಂಪರ್ಕವನ್ನಂತೂ ಕೊಡಬಹುದು ಎನ್ನುತ್ತಿದ್ದಾರೆ ವಿಜ್ಞಾನಿಗಳು. ಇಂಟರ್‌ಪ್ಲಾನೆಟರಿ ಪ್ರವಾಸ ಮುಗಿಸಿದ ಮೇಲೂ ಈಸಿಯಾಗಿ ಇಜ್ಞಾನ ಡಾಟ್ ಕಾಮ್‌ನೊಳಗೆ ಇಣುಕಲು ನೆರವಾಗಬಲ್ಲ ಇಂಟರೆಸ್ಟಿಂಗ್ ಪರಿಕಲ್ಪನೆಯೊಂದರ ಪರಿಚಯ ಇಲ್ಲಿದೆ.

ಮಂಗಳವಾರ, ಡಿಸೆಂಬರ್ 25, 2012

ಕ್ಯಾಮೆರಾ ಕುಟುಂಬಕ್ಕೊಂದು ಹೊಸ ಸೇರ್ಪಡೆ


ಟಿ. ಜಿ. ಶ್ರೀನಿಧಿ

ಅತ್ಯುತ್ತಮ ಗುಣಮಟ್ಟದ ಛಾಯಾಚಿತ್ರಗಳಿಗೆ ಡಿಎಸ್‌ಎಲ್‌ಆರ್ ಕ್ಯಾಮೆರಾಗಳನ್ನು ಬಿಟ್ಟರಿಲ್ಲ ಎನ್ನುವುದು ಡಿಜಿಟಲ್ ಛಾಯಾಗ್ರಹಣದ ಅಆಇಈ ಬಲ್ಲವರಿಗೆಲ್ಲ ಗೊತ್ತಿರುವ ವಿಷಯವೇ. ಆದರೆ ಈ ಕ್ಯಾಮೆರಾಗಳ ದೊಡ್ಡ ಗಾತ್ರ ಹಲವು ಸನ್ನಿವೇಶಗಳಲ್ಲಿ ಕಿರಿಕಿರಿ ಮಾಡುವುದೂ ಉಂಟು.

ಒಂದೆರಡು ದಿನಗಳ ಪ್ರವಾಸಕ್ಕಾಗಿ ರೈಲಿನಲ್ಲೋ ಬಸ್ಸಿನಲ್ಲೋ ಹೊರಟಾಗಲಂತೂ ನಮ್ಮ ಇತರೆಲ್ಲ ಲಗ್ಗೇಜಿನಷ್ಟು, ಅಥವಾ ಅದಕ್ಕಿಂತ ಹೆಚ್ಚಿನದೇ ಜಾಗವನ್ನು ಡಿಎಸ್‌ಎಲ್‌ಆರ್ ಕ್ಯಾಮೆರಾ ಮತ್ತು ಅದರ ಪರಿಕರಗಳು ಆಕ್ರಮಿಸಿಕೊಂಡುಬಿಟ್ಟಿರುತ್ತವೆ. ಪದೇಪದೇ ಇಂತಹ ಅನುಭವಗಳಾದಾಗ ಸಾಮಾನ್ಯ ಪಾಯಿಂಟ್-ಆಂಡ್-ಶೂಟ್ ಕ್ಯಾಮೆರಾಗಳೇ ಡಿಎಸ್‌ಎಲ್‌ಆರ್‌ಗಳಿಗಿಂತ ಹೆಚ್ಚು ಆಪ್ಯಾಯಮಾನವಾಗಿ ಕಂಡರೂ ಆಶ್ಚರ್ಯವಿಲ್ಲ. ಸಣ್ಣ ಕ್ಯಾಮೆರಾಗಳ ಗಾತ್ರದಲ್ಲಿ ಡಿಎಸ್‌ಎಲ್‌ಆರ್ ವೈಶಿಷ್ಟ್ಯಗಳೆಲ್ಲ ಸಿಗುವಂತಿದ್ದರೆ ಎಷ್ಟು ಚೆನ್ನಾಗಿತ್ತಲ್ಲಪ್ಪ ಅನಿಸುವುದು ಅದೆಷ್ಟು ಬಾರಿಯೋ.

ಅಂತಹುದೊಂದು ಕನಸನ್ನು ನನಸುಮಾಡುವ ನಿಟ್ಟಿನಲ್ಲಿ ಸೃಷ್ಟಿಯಾಗಿರುವುದೇ ಕಾಂಪ್ಯಾಕ್ಟ್ ಸಿಸ್ಟಂ ಕ್ಯಾಮೆರಾ. ಸಾಮಾನ್ಯ ಕ್ಯಾಮೆರಾಗಳ ಗಾತ್ರದ ಆಸುಪಾಸಿನಲ್ಲಿ ಡಿಎಸ್‌ಎಲ್‌ಆರ್ ಕ್ಯಾಮೆರಾಗಳಲ್ಲಿರುವಂತಹ ಸೌಲಭ್ಯಗಳನ್ನು ಒದಗಿಸುವುದು ಈ ಕ್ಯಾಮೆರಾಗಳ ವೈಶಿಷ್ಟ್ಯ. ಮಿರರ್‌ಲೆಸ್ ಇಂಟರ್‌ಚೇಂಜಬಲ್ ಲೆನ್ಸ್ ಕ್ಯಾಮೆರಾ (ಐಎಲ್‌ಸಿ) ಎಂದೂ ಕರೆಸಿಕೊಳ್ಳುವ ಇದೇ ಡಿಜಿಟಲ್ ಕ್ಯಾಮೆರಾ ಕುಟುಂಬದ ಹೊಚ್ಚಹೊಸ ಸದಸ್ಯ!

ಬುಧವಾರ, ಡಿಸೆಂಬರ್ 19, 2012

ಬೆಂಗಳೂರಿನಲ್ಲಿ ವಿಜ್ಞಾನ-ತಂತ್ರಜ್ಞಾನ ಅಕಾಡೆಮಿ ಸಮ್ಮೇಳನ


ಇಜ್ಞಾನ ವಾರ್ತೆ

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಐದನೇ ವಾರ್ಷಿಕ ಸಮ್ಮೇಳನ ಬೆಂಗಳೂರಿನ ದಯಾನಂದ ಸಾಗರ್ ವಿದ್ಯಾಸಂಸ್ಥೆಯಲ್ಲಿ ಇಂದು ಬೆಳಿಗ್ಗೆ ಉದ್ಘಾಟನೆಯಾಯಿತು. ಬುಧವಾರ (ಡಿಸೆಂಬರ್ ೧೯, ೨೦೧೨) ಹಾಗೂ ಗುರುವಾರ (ಡಿಸೆಂಬರ್ ೨೦, ೨೦೧೨) ನಡೆಯಲಿರುವ ಈ ಸಮ್ಮೇಳನದಲ್ಲಿ ಅನೇಕ ವಿಷಯತಜ್ಞರು ತಮ್ಮ ಪ್ರಬಂಧಗಳನ್ನು ಮಂಡಿಸಲಿದ್ದಾರೆ.

ಹಿರಿಯ ವೈದ್ಯರೂ ಜನಪ್ರಿಯ ವಿಜ್ಞಾನ ಸಂವಹನಕಾರರೂ ಆದ ಡಾ. ಪಿ. ಎಸ್. ಶಂಕರ್ ಅವರನ್ನು ಅವರ ಜೀವಮಾನದ ಸಾಧನೆಗಾಗಿ ಉದ್ಘಾಟನಾ ಸಮಾರಂಭದಲ್ಲಿ ಗೌರವಿಸಲಾಯಿತು. ಈ ಗೌರವ ಪಡೆದಿರುವ ಡಾ. ಶಂಕರ್ ಅವರನ್ನು ಇಜ್ಞಾನ ಬಳಗ ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ.


ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಪತ್ರಿಕೆ 'ವಿಜ್ಞಾನ ಲೋಕ'ದ ಸಂಚಿಕೆಗಳಿಂದ ಆಯ್ದ ಪ್ರಾತಿನಿಧಿಕ ಬರೆಹಗಳ ಸಂಕಲನ 'ವಿಜ್ಞಾನ ದೀಪ್ತಿ'ಯನ್ನು ಉದ್ಘಾಟನಾ ಸಮಾರಂಭದಲ್ಲಿ ಲೋಕಾರ್ಪಣೆಗೊಳಿಸಲಾಯಿತು. ಸದ್ಯಕ್ಕೆ ಮೂರು ತಿಂಗಳಿಗೊಮ್ಮೆ ಪ್ರಕಟವಾಗುತ್ತಿರುವ 'ವಿಜ್ಞಾನ ಲೋಕ'ವನ್ನು ಪ್ರತಿ ತಿಂಗಳಿಗೊಮ್ಮೆ ಏಕೆ ಪ್ರಕಟಿಸಬಾರದು ಎಂಬ ಪ್ರಶ್ನೆ ಎದ್ದಿದ್ದು, ಹಾಗೂ ಆ ನಿಟ್ಟಿನಲ್ಲಿ ಬೇಕಾದ ನೆರವನ್ನು ಒದಗಿಸಿಕೊಡುವ ಆಶ್ವಾಸನೆ ಸ್ವತಃ ಮುಖ್ಯಮಂತ್ರಿಗಳಿಂದಲೇ ದೊರೆತದ್ದು ಇಂದಿನ ಕಾರ್ಯಕ್ರಮದ ವಿಶೇಷ.

ಮಂಗಳವಾರ, ಡಿಸೆಂಬರ್ 18, 2012

ಇದು ಡಿಎಸ್‌ಎಲ್‌ಆರ್!


ಟಿ. ಜಿ. ಶ್ರೀನಿಧಿ

ಇತ್ತೀಚಿನ ವರ್ಷಗಳಲ್ಲಿ ಡಿಜಿಟಲ್ ಕ್ಯಾಮೆರಾಗಳು ನಮ್ಮೆಲ್ಲರ ಬದುಕಿನಲ್ಲಿ ಅದೆಷ್ಟರ ಮಟ್ಟಿಗೆ ಹಾಸುಹೊಕ್ಕಾಗಿ ಸೇರಿಕೊಂಡಿವೆಯೆಂದರೆ ಮನೆಗಳಲ್ಲಿ ಡಿಜಿಟಲ್ ಕ್ಯಾಮೆರಾ ಇರುವುದು ಟೀವಿ, ಕಂಪ್ಯೂಟರ್ ಇರುವಷ್ಟೇ ಸಾಮಾನ್ಯವಾಗಿಬಿಟ್ಟಿದೆ. ಅಷ್ಟೇ ಅಲ್ಲ, ಡಿಜಿಟಲ್ ಕ್ಯಾಮೆರಾ ಮಾರುಕಟ್ಟೆಯಲ್ಲಿರುವ ವೈವಿಧ್ಯದ ಪರಿಣಾಮವಾಗಿ ಎಲ್ಲ ಬಜೆಟ್ಟುಗಳಿಗೂ ಹೊಂದಿಕೆಯಾಗಬಲ್ಲ ಕ್ಯಾಮೆರಾಗಳು ಸಿಗುತ್ತಿವೆ. ಅದೆಷ್ಟೋ ಜನರ ಮಟ್ಟಿಗೆ ಅವರ ಮೊಬೈಲುಗಳೇ ಡಿಜಿಟಲ್ ಕ್ಯಾಮೆರಾ ಕೂಡ ಆಗಿರುತ್ತವೆ.

ಇನ್ನು ಯಾವುದಾದರೂ ಪ್ರವಾಸಿ ಸ್ಥಳದ ಉದಾಹರಣೆ ತೆಗೆದುಕೊಂಡರಂತೂ ಅಲ್ಲಿರುವ ಪ್ರವಾಸಿಗರ ಕೈಗಳಲ್ಲೇ ನಮಗೆ ಹತ್ತಾರು ಬಗೆಯ ಕ್ಯಾಮೆರಾಗಳು ಕಾಣಸಿಗುತ್ತವೆ. ಕೆಲವೇ ಸಾವಿರ ಬೆಲೆಯ ಮೊಬೈಲಿನಲ್ಲಿರುವ ಕ್ಯಾಮೆರಾದಿಂದ ಪ್ರಾರಂಭಿಸಿ ಹತ್ತಾರು ಸಾವಿರ ರೂಪಾಯಿ ಬೆಲೆಯ ಅತ್ಯಾಧುನಿಕ ಕ್ಯಾಮೆರಾಗಳವರೆಗೆ ಡಿಜಿಟಲ್ ಕ್ಯಾಮೆರಾಗಳು ತೀರಾ ಸಾಮಾನ್ಯವೇ ಆಗಿಹೋಗಿವೆ. ಪ್ರೊಜೆಕ್ಟರ್ ಇರುವ ಕ್ಯಾಮೆರಾ, ಥ್ರೀಡಿ ಚಿತ್ರಗಳನ್ನು ತೆಗೆಯಬಲ್ಲ ಕ್ಯಾಮೆರಾ, ಎಚ್‌ಡಿ ವೀಡಿಯೋ ಸೆರೆಹಿಡಿಯಬಲ್ಲ ಕ್ಯಾಮೆರಾ - ಹೀಗೆ ಕ್ಯಾಮೆರಾಗಳಲ್ಲಿ ಕಾಣಸಿಗುವ ವೈವಿಧ್ಯಕ್ಕೆ ಕೊನೆಯೇ ಇಲ್ಲ!

ಇವೆಲ್ಲವುದರ ನಡುವೆ ಒಂದು ವಿಶೇಷ ಬಗೆಯ ಕ್ಯಾಮೆರಾ ಬಹಳ ಬೇಗನೆ ನಮ್ಮ ಗಮನಸೆಳೆಯಬಲ್ಲದು. ಇತರ ಕ್ಯಾಮೆರಾಗಳಿಗಿಂತ ಕೊಂಚ ದಪ್ಪಗಿರುವ ಈ ಕ್ಯಾಮೆರಾಗೆ ಬೇರೆ ಕ್ಯಾಮೆರಾಗಳಲ್ಲಿ ಕಾಣಸಿಗದಷ್ಟು ಉದ್ದದ ಲೆನ್ಸೊಂದು ಅಂಟಿಕೊಂಡಿರುವುದೂ ಅಪರೂಪವೇನಲ್ಲ.

ಡಿಎಸ್‌ಎಲ್‌ಆರ್ ಕ್ಯಾಮೆರಾಗಳೆಂದು ಕರೆಯುವುದು ಇವನ್ನೇ.

ಮಂಗಳವಾರ, ಡಿಸೆಂಬರ್ 11, 2012

ಪಾಸ್‌ವರ್ಡ್: ಪಾಸೋ ಫೇಲೋ? - ಭಾಗ ೨


ಟಿ. ಜಿ. ಶ್ರೀನಿಧಿ

ಕಂಪ್ಯೂಟರ್ ಪ್ರಪಂಚದಲ್ಲಿನ ನಮ್ಮ ಚಟುವಟಿಕೆಗಳನ್ನೆಲ್ಲ ಸುರಕ್ಷಿತವಾಗಿಡುವ ಒಂದು ಬೀಗ ಇದೆ ಎಂದು ಭಾವಿಸಿಕೊಂಡರೆ ಪಾಸ್‌ವರ್ಡುಗಳನ್ನು ಆ ಬೀಗದ ಕೀಲಿಕೈ ಎಂದೇ ಕರೆಯಬಹುದು.

ನಮ್ಮದೇ ಬೇಜವಾಬ್ದಾರಿಯಿಂದಲೋ ಕಳ್ಳರ ಕೈಚಳಕದಿಂದಲೋ ಕೀಲಿಕೈ ಕಳೆದುಹೋದರೆ ತೊಂದರೆಯಾಗುವುದು ನಮ್ಮ ಸುರಕ್ಷತೆಗೇ ತಾನೆ! ಹೀಗಾಗಿ ಬಾಹ್ಯ ಪ್ರಪಂಚದಲ್ಲಿರುವಂತೆ ಕಂಪ್ಯೂಟರಿನ ವರ್ಚುಯಲ್ ಲೋಕದಲ್ಲೂ ಪಾಸ್‌ವರ್ಡ್ ರೂಪದ ಕೀಲಿಕೈಗಳನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕಾದ್ದು ಅನಿವಾರ್ಯ.

ಕಂಪ್ಯೂಟರ್ ಪ್ರಪಂಚದಲ್ಲಿ ನಮ್ಮ ಸುರಕ್ಷತೆಗಾಗಿ ಪಾಸ್‌ವರ್ಡುಗಳನ್ನು ಜೋಪಾನಮಾಡುವುದು ಹೇಗೆ? ಅವುಗಳ ಆಯ್ಕೆ-ಬಳಕೆಯಲ್ಲಿ, ಗೌಪ್ಯತೆ ಕಾಪಾಡಿಕೊಳ್ಳುವುದರಲ್ಲಿ ನಾವು ಅನುಸರಿಸಬೇಕಾದ ಕ್ರಮಗಳೇನು? ಈ ಕುರಿತ ಒಂದಷ್ಟು ಮಾಹಿತಿ ಇಲ್ಲಿದೆ.

ಸೋಮವಾರ, ಡಿಸೆಂಬರ್ 10, 2012

'ಫ್ಲಾಪಿಯಿಂದ ಫೇಸ್‌ಬುಕ್‌ವರೆಗೆ' ಓದಿದಿರಾ?


ಮೈಸೂರಿನ ಭಾರತೀ ಪ್ರಕಾಶನ ಪ್ರಕಟಿಸಿರುವ ಟಿ. ಜಿ. ಶ್ರೀನಿಧಿಯವರ 'ಫ್ಲಾಪಿಯಿಂದ ಫೇಸ್‌ಬುಕ್‌ವರೆಗೆ' ಕೃತಿ ಕಳೆದ ಡಿಸೆಂಬರ್ ೮ರ ಸಂಜೆ ಬೆಂಗಳೂರಿನಲ್ಲಿ ಲೋಕಾರ್ಪಣೆಯಾಯಿತು.

ಈ ಪುಸ್ತಕದಲ್ಲೇನಿದೆ? ತಿಳಿಯಲು ಚುಕ್ಕುಬುಕ್ಕು ಡಾಟ್ ಕಾಮ್ ನೋಡಬಹುದು.

ಅಂತೆಯೇ ಈ ಪುಸ್ತಕವನ್ನು ಆನ್‌ಲೈನ್ ಅಂಗಡಿಯಲ್ಲಿ ಕೊಳ್ಳಲು ಆಕೃತಿ ಪುಸ್ತಕದ ಜಾಲತಾಣಕ್ಕೆ ಭೇಟಿಕೊಡಿ!

ಬುಧವಾರ, ಡಿಸೆಂಬರ್ 5, 2012

ಪಾಸ್‌ವರ್ಡ್: ಪಾಸೋ? ಫೇಲೋ? - ಭಾಗ ೧

ಟಿ. ಜಿ. ಶ್ರೀನಿಧಿ

ಎಂಟೋ ಹತ್ತೋ ಅಕ್ಷರಗಳ ಒಂದು ಪದದ ಮೇಲೆ ನಮ್ಮ ಇಡೀ ಬದುಕೇ ಅವಲಂಬಿತವಾಗಿದ್ದರೆ ಹೇಗಿರುತ್ತಿತ್ತು?

"ಛೆ ಛೆ, ಅದೆಲ್ಲಾದರೂ ಸಾಧ್ಯವೆ, ನಮ್ಮ ಇಡೀ ಬದುಕು ಒಂದೇ ಪದದ ಮೇಲೆ ಅವಲಂಬಿತವಾಗಲು ಹೇಗೆತಾನೆ ಸಾಧ್ಯ?" ಎಂದಿರಾ? ಇನ್ನೊಮ್ಮೆ ಯೋಚಿಸಿ, ಆಗಲೂ ಹೊಳೆಯದಿದ್ದರೆ ಡಿಜಿಟಲ್ ಪ್ರಪಂಚಕ್ಕೆ ಬನ್ನಿ.

ಮೇಜಿನ ಮೇಲಿನ ಕಂಪ್ಯೂಟರಿನಿಂದ ಪ್ರಾರಂಭಿಸಿ ಇಂಟರ್‌ನೆಟ್ ಸಂಪರ್ಕ, ಇಮೇಲ್, ಬ್ಯಾಂಕ್ ಖಾತೆ, ಕ್ರೆಡಿಟ್ ಕಾರ್ಡ್, ಸಮಾಜ ಜಾಲ ಇತ್ಯಾದಿಗಳವರೆಗೆ ನಮ್ಮ ಬದುಕಿಗೆ ಸಂಬಂಧಪಟ್ಟ ಸಮಸ್ತ ಮಾಹಿತಿಯೂ ತನ್ನ ಸುರಕ್ಷತೆಗಾಗಿ ಒಂದು ಪದವನ್ನು ನೆಚ್ಚಿಕೊಂಡಿರುತ್ತದೆ.

ಅದೇ ಪಾಸ್‌ವರ್ಡ್. ಡಿಜಿಟಲ್ ಪ್ರಪಂಚದಲ್ಲಿ ನಮ್ಮ ಮಾಹಿತಿಯನ್ನೆಲ್ಲ ಸುರಕ್ಷಿತವಾಗಿಡಲು, ಅದು ಅಪಾತ್ರರ ಕೈಗೆ ಸಿಗದಂತೆ ನೋಡಿಕೊಳ್ಳಲು, ನಮ್ಮ ಮಾಹಿತಿ ನಮಗಷ್ಟೆ ಗೊತ್ತು ಎಂಬ ಸಮಾಧಾನದ ಭಾವನೆ ಮೂಡಿಸಲು ಪಾಸ್‌ವರ್ಡ್ ಬೇಕೇ ಬೇಕು.

ಹಾಗೆಂದಮಾತ್ರಕ್ಕೆ ಕಂಪ್ಯೂಟರುಗಳು ಆಗಮಿಸುವ ಮೊದಲು ಪಾಸ್‌ವರ್ಡ್‌ಗಳು ಇರಲೇ ಇಲ್ಲ ಎಂದೇನೂ ಅರ್ಥವಲ್ಲ. ಒಂದಲ್ಲ ಒಂದು ಉದ್ದೇಶಕ್ಕಾಗಿ ರಹಸ್ಯ ಪದಗಳನ್ನು ಬಳಸುವ ಅಭ್ಯಾಸ ಬೆಳೆದುಬಂದಿರುವುದು ಇತಿಹಾಸದಲ್ಲಿ ಹಲವೆಡೆ ಕಾಣಸಿಗುತ್ತದೆ. ಚಿತ್ರದುರ್ಗದ ಕುರಿತು ತರಾಸುರವರ ಅಮರ ಕಾದಂಬರಿ ಸರಣಿಯನ್ನೇ ನೋಡಿ, ಅದೆಷ್ಟು ಕಡೆ ಬೇಹುಗಾರರು ತಮ್ಮ ಗುರುತು ತಿಳಿಸಲು 'ಸಂಜ್ಞಾಶಬ್ದ'ಗಳನ್ನು ಬಳಸುತ್ತಾರೆ; ಇಂದಿನ ಲೆಕ್ಕದಲ್ಲಿ ನೋಡಿದರೆ ಅದೂ ಪಾಸ್‌ವರ್ಡೇ!

ಶನಿವಾರ, ಡಿಸೆಂಬರ್ 1, 2012

ಹೊಸ ಪುಸ್ತಕ ರೆಡಿ!

ಹೊಸ ಪುಸ್ತಕ ಇದೀಗ ರೆಡಿಯಾಗಿದೆ! ಬರುವ ಡಿಸೆಂಬರ್ ೮ರ ಸಂಜೆ ೫ ಗಂಟೆಗೆ ರಾಜಾಜಿನಗರದಲ್ಲಿರುವ ಆಕೃತಿ ಪುಸ್ತಕ ಮಳಿಗೆಯಲ್ಲಿ ಈ ಕೃತಿ ಲೋಕಾರ್ಪಣೆಯಾಗಲಿದೆ. ಇದೇ ಸಂದರ್ಭದಲ್ಲಿ 'ಕಂಪ್ಯೂಟರ್ ಮತ್ತು ಕನ್ನಡ' ಸಂವಾದ ಕಾರ್ಯಕ್ರಮ ಇದೆ, 'ತಿನ್ನಲಾಗದ ಬಿಸ್ಕತ್ತು ನುಂಗಲಾಗದ ಟ್ಯಾಬ್ಲೆಟ್ಟು' ಕೃತಿಯ ಮರುಮುದ್ರಣವೂ ಹೊರಬರುತ್ತಿದೆ. ಲೋಕಾರ್ಪಣೆ ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ!


ಗುರುವಾರ, ನವೆಂಬರ್ 29, 2012

'ಫ್ಲಾಪಿಯಿಂದ ಫೇಸ್‌ಬುಕ್‌ವರೆಗೆ'

ತಂತ್ರಜ್ಞಾನ ಲೇಖಕ ಶ್ರೀ ಟಿ. ಜಿ. ಶ್ರೀನಿಧಿಯವರ 'ಫ್ಲಾಪಿಯಿಂದ ಫೇಸ್‌ಬುಕ್‌ವರೆಗೆ' ಕೃತಿ ಬರುವ ಡಿಸೆಂಬರ್ ೮ರ ಶನಿವಾರ ಸಂಜೆ ಬೆಂಗಳೂರಿನಲ್ಲಿ ಲೋಕಾರ್ಪಣೆಗೊಳ್ಳಲಿದೆ. ಉದಯವಾಣಿಯ 'ಜೋಶ್' ಪುರವಣಿಯಲ್ಲಿ ಕಳೆದ ಎರಡು ವರ್ಷಗಳಿಂದ ಪ್ರಕಟವಾಗುತ್ತಿರುವ 'ವಿಜ್ಞಾಪನೆ' ಅಂಕಣದ ಆಯ್ದ ಬರೆಹಗಳನ್ನು ಈ ಕೃತಿಯಲ್ಲಿ ಸಂಕಲಿಸಲಾಗಿದೆ.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಪ್ರಶಸ್ತಿ ಗಳಿಸಿದ್ದ ಅವರ 'ತಿನ್ನಲಾಗದ ಬಿಸ್ಕತ್ತು ನುಂಗಲಾಗದ ಟ್ಯಾಬ್ಲೆಟ್ಟು' ಕೃತಿಯ ಎರಡನೇ ಮುದ್ರಣವೂ ಅಂದೇ ಹೊರಬರುತ್ತಿದೆ.

ಆಕೃತಿ ಪುಸ್ತಕ, ಇಜ್ಞಾನ ಡಾಟ್ ಕಾಮ್ ಹಾಗೂ ಭಾರತೀ ಪ್ರಕಾಶನ - ಇವರ ಸಹಯೋಗದಲ್ಲಿ ಏರ್ಪಡಿಸಲಾಗಿರುವ ಈ ಕಾರ್ಯಕ್ರಮ ಬೆಂಗಳೂರು ರಾಜಾಜಿನಗರದ ಆಕೃತಿ ಪುಸ್ತಕ ಮಳಿಗೆಯಲ್ಲಿ ನಡೆಯಲಿದೆ.

ಇದೇ ಸಂದರ್ಭದಲ್ಲಿ 'ಕನ್ನಡ ಮತ್ತು ಕಂಪ್ಯೂಟರ್' ಎಂಬ ವಿಷಯದ ಕುರಿತು ಸಂವಾದವನ್ನೂ ಏರ್ಪಡಿಸಲಾಗಿದೆ. ಡಾ| ಯು ಬಿ ಪವನಜ, ಶ್ರೀ ಬೇಳೂರು ಸುದರ್ಶನ ಹಾಗೂ ಶ್ರೀ ಎನ್ ಎ ಎಂ ಇಸ್ಮಾಯಿಲ್ ಅವರು ಸಂವಾದದಲ್ಲಿ ಭಾಗವಹಿಸಲಿದ್ದಾರೆ.

ಇಜ್ಞಾನ ಡಾಟ್ ಕಾಮ್ ನಿಮ್ಮನ್ನು ಈ ಕಾರ್ಯಕ್ರಮಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತದೆ.

ಸ್ಥಳ: ಆಕೃತಿ ಪುಸ್ತಕ ಮಳಿಗೆ,
೩೧/೧, ೧೨ನೇ ಮುಖ್ಯರಸ್ತೆ, ೩ನೇ ಬ್ಲಾಕ್,
ರಾಜಾಜಿನಗರ, ಬೆಂಗಳೂರು ೫೬೦೦೧೦

ಸಮಯ: ಡಿಸೆಂಬರ್ ೮, ೨೦೧೨ರ ಶನಿವಾರ ಸಂಜೆ ೫ಕ್ಕೆ

ಕೃತಿಯ ಬಗ್ಗೆ...
"ಈ ಲೇಖನಗಳು ನೀಡುವ ಒಳನೋಟ ಅಪರೂಪದ್ದು. ಸಮಾಜದ ಆಗುಹೋಗುಗಳಿಗೂ, ಆ ಕಾಲದ ಬೆಳವಣಿಗೆಗಳಿಗೂ ಇರುವ ಸಂಬಂಧವನ್ನು ಶ್ರೀನಿಧಿ ಸರಳವಾಗಿ ನಿರೂಪಿಸುತ್ತಾರೆ. ಕಲಿಯುವ ಮನಸ್ಸಿದ್ದವರಿಗೆಲ್ಲ ಅವರ ಲೇಖನಗಳು ಸಂಗ್ರಾಹ್ಯವೇ. ಸಮಕಾಲೀನ ಉದಾಹರಣೆಗಳನ್ನು ಕೊಡುತ್ತಲೇ ವರ್ತಮಾನದ ಮಾಹಿತಿ ತಂತ್ರಜ್ಞಾನದ ಕತೆ ಹೇಳುತ್ತಾರೆ. ಅಂತರಜಾಲದ ಯಾವ ಪ್ರಮುಖ ಘಟನೆಗಳೂ ಅವರ ಕಣ್ಣು ತಪ್ಪಿಸಲಾಗದು! ಬಳಕೆದಾರನನ್ನೇ ಗಮನದಲ್ಲಿ ಇಟ್ಟುಕೊಂಡು ಬರೆದ ಈ ಲೇಖನಗಳನ್ನು ಖುಷಿಯಿಂದ ಓದಬಹುದು. ನಮ್ಮ ತಿಳವಳಿಕೆಯ ದಿಗಂತವನ್ನು ವಿಸ್ತರಿಸಿಕೊಳ್ಳಬಹುದು" - ಬೇಳೂರು ಸುದರ್ಶನ (ಮುನ್ನುಡಿಯಿಂದ)

ಮಂಗಳವಾರ, ನವೆಂಬರ್ 27, 2012

ಥ್ರೀಡಿ ಎಂಬ ಮಾಯಾಮಂತ್ರ


ಟಿ. ಜಿ. ಶ್ರೀನಿಧಿ

ಕೈಯಲ್ಲೊಂದು ಪುಸ್ತಕ ಹಿಡಿದುಕೊಂಡು ನೋಡಿ. ಉದ್ದ-ಅಗಲಗಳ ಜೊತೆಗೆ ಅದರ ದಪ್ಪವೂ ಒಂದು ಆಯಾಮವಾಗಿ ನಮಗೆ ಗೋಚರವಾಗುತ್ತದೆ. ಅಷ್ಟೇ ಅಲ್ಲ, ಅದು ಹಿನ್ನೆಲೆಯಲ್ಲಿರುವ ಸೋಫಾಗಿಂತ ಅದು ನಮಗೆ ಹೆಚ್ಚು ಹತ್ತಿರದಲ್ಲಿರುವುದು ಕೂಡ ಸ್ಪಷ್ಟವಾಗಿ ಕಾಣುತ್ತದೆ.

ಆದರೆ ಅದೇ ಪುಸ್ತಕದಲ್ಲಿರುವ ಯಾವುದೋ ಚಿತ್ರವನ್ನು ಗಮನಿಸಿದಾಗ ನಮಗೆ ಇಂತಹ ಅನುಭವ ಆಗುವುದಿಲ್ಲ. ಚಿತ್ರ ಅದೆಷ್ಟೇ ನೈಜವಾಗಿದ್ದರೂ ಅದಕ್ಕೆ-ಅದರಲ್ಲಿರುವ ವಸ್ತುಗಳಿಗೆ ಉದ್ದ ಅಗಲಗಳಷ್ಟೆ ಇರುತ್ತವೆ; ಆದರೆ ಅದು ನಮಗೆ ಮೂರನೆಯ ಆಯಾಮವನ್ನು ಕಟ್ಟಿಕೊಡುವುದಿಲ್ಲ.

ಇನ್ನು ಕಿಟಕಿಯಾಚೆಗಿನ ದೃಶ್ಯವನ್ನು ಗಮನಿಸಿದರೆ ಎದುರಿಗೆ ಕಾಣುವ ಮನೆ, ರಸ್ತೆಯಲ್ಲಿ ನಿಂತಿರುವ ಕಾರು, ಮರ-ಗಿಡ ಎಲ್ಲವೂ ನಮಗೆ ಮೂರು ಆಯಾಮಗಳಲ್ಲೇ ಕಾಣಸಿಗುತ್ತವೆ. ಆದರೆ ಆಕಾಶದಲ್ಲಿರುವ ಚಂದ್ರ ಹಾಗಲ್ಲ; ಗೋಡೆಯ ಮೇಲಿನ ಕ್ಯಾಲೆಂಡರಿನಂತೆ ಅಲ್ಲೂ ಕಾಣಿಸುವುದು ಎರಡೇ ಆಯಾಮಗಳು!

ಇದಕ್ಕೆಲ್ಲ ಕಾರಣ ನಮ್ಮ ಕಣ್ಣುಗಳಲ್ಲಿರುವ ವಿಶಿಷ್ಟವಾದುದೊಂದು ಸಾಮರ್ಥ್ಯ; ನಮ್ಮ ಕಣ್ಣುಗಳು ಬೆಳಕು ಹಾಗೂ ಬಣ್ಣಗಳನ್ನು ಗುರುತಿಸುತ್ತವಲ್ಲ, ಆಗ ಎಡಗಣ್ಣಿಗೆ ಕಾಣುವ ದೃಶ್ಯ ನಮ್ಮ ಬಲಗಣ್ಣಿಗೆ ಕಾಣುವುದಕ್ಕಿಂತ ಕೊಂಚ ಭಿನ್ನವಾಗಿರುತ್ತದೆ. ಇವೆರಡೂ ಪ್ರತ್ಯೇಕ ದೃಶ್ಯಗಳು ಮೆದುಳನ್ನು ತಲುಪಿ ಒಟ್ಟಾಗಿ ಸೇರಿದಾಗಲಷ್ಟೆ ನಮಗೆ ಮೂರು ಆಯಾಮಗಳ (ಥ್ರೀಡಿ) ದೃಶ್ಯ ಗೋಚರವಾಗುತ್ತದೆ.

ನೈಜ ವಸ್ತುಗಳೇನೋ ನಮಗೆ ಥ್ರೀಡಿ ದೃಶ್ಯಗಳಾಗಿ ಕಾಣಸಿಗುತ್ತವೆ, ಆದರೆ ಪುಸ್ತಕದಲ್ಲಿ ಮುದ್ರಿತವಾದ ಚಿತ್ರಕ್ಕೆ, ಪರದೆಯ ಮೇಲೆ ಕಾಣಿಸುವ ಸಿನಿಮಾಗೆ ಮೂರನೆಯ ಆಯಾಮವೇ ಇರುವುದಿಲ್ಲವಲ್ಲ?

ಮಂಗಳವಾರ, ನವೆಂಬರ್ 20, 2012

ಮೆಮೊರಿ ಕಾರ್ಡ್ ಕೈಕೊಟ್ಟಾಗ...


ಟಿ ಜಿ ಶ್ರೀನಿಧಿ

ಡಿಜಿಟಲ್ ಉತ್ಪನ್ನಗಳ ಬಳಕೆ ಜಾಸ್ತಿಯಾದಮೇಲೆ ಎಲ್ಲೆಲ್ಲಿ ನೋಡಿದರೂ ಮೆಮೊರಿ ಕಾರ್ಡುಗಳದೇ ಭರಾಟೆ. ಮೊಬೈಲ್ ಫೋನಿನಲ್ಲೂ ಮೆಮೊರಿ ಕಾರ್ಡು, ಟ್ಯಾಬ್ಲೆಟ್ಟಿನಲ್ಲೂ ಮೆಮೊರಿ ಕಾರ್ಡು, ಡಿಜಿಟಲ್ ಕ್ಯಾಮೆರಾದಲ್ಲೂ ಮೆಮೊರಿ ಕಾರ್ಡು!

ಡಿಜಿಟಲ್ ಕ್ಯಾಮೆರಾ ಉದಾಹರಣೆಯನ್ನೇ ತೆಗೆದುಕೊಂಡರೆ ಹಿಂದಿನ ಕಾಲದಲ್ಲಿ ಫಿಲಂ ರೋಲುಗಳು ಮಾಡುತ್ತಿದ್ದ ಕೆಲಸವನ್ನು ಈಗ ಮೆಮೊರಿ ಕಾರ್ಡುಗಳು ಮಾಡುತ್ತಿವೆ. ಅಷ್ಟೇ ಅಲ್ಲ, ಮೂವತ್ತಾರು ಫೋಟೋ ಮುಗಿಯುತ್ತಿದ್ದಂತೆ ಹೊಸ ರೋಲು ಹಾಕಬೇಕಾದ ಪರಿಸ್ಥಿತಿಯನ್ನೂ ಬದಲಿಸಿವೆ. ಕಾರ್ಡಿನಲ್ಲಿ ಜಾಗ ಇರುವವರೆಗೂ ಫೋಟೋ - ವೀಡಿಯೋ ತುಂಬಿಕೊಳ್ಳುವುದು, ಕಾರ್ಡು ಭರ್ತಿಯಾಗುತ್ತಿದ್ದಂತೆ ಅವನ್ನೆಲ್ಲ ಕಂಪ್ಯೂಟರಿನೊಳಗೆ ಸುರಿಯುವುದು, ಖಾಲಿಯಾದ ಕಾರ್ಡನ್ನು ಮತ್ತೆ ಬಳಸುವುದು - ಕೆಲಸ ಇಷ್ಟೇ ಸರಳ!

ಹೀಗೆ ಮೆಮೊರಿ ಕಾರ್ಡನ್ನು ಮತ್ತೆ ಮತ್ತೆ ಬಳಸುವುದು ಸುಲಭ, ನಿಜ. ಆದರೆ ಒಂದಷ್ಟು ಸಾರಿ ಈ ಪ್ರಕ್ರಿಯೆಯ ಪುನರಾವರ್ತನೆ ಆಗುತ್ತಿದ್ದಂತೆ ಕಾರ್ಡಿನ ವಿಶ್ವಾಸಾರ್ಹತೆ ನಿಧಾನಕ್ಕೆ ಕಡಿಮೆಯಾಗುತ್ತ ಬರುತ್ತದೆ. ಅದರಲ್ಲೇನೋ ಸಮಸ್ಯೆ ಕಾಣಿಸಿಕೊಳ್ಳುತ್ತದೆ, ಅಥವಾ ಒಂದು ಕಂಪ್ಯೂಟರಿನಿಂದ ಇನ್ನೊಂದಕ್ಕೆ ಓಡಾಡುವ ಭರಾಟೆಯಲ್ಲಿ ಯಾವುದೋ ಕುತಂತ್ರಾಂಶ ಕಾರ್ಡಿನೊಳಕ್ಕೆ ಬಂದು ವಕ್ಕರಿಸಿಕೊಳ್ಳುತ್ತದೆ. ಕಾರಣ ಏನೇ ಆದರೂ ಪರಿಣಾಮ ಮಾತ್ರ ಒಂದೇ: ಕಾರ್ಡನ್ನು ಕಂಪ್ಯೂಟರಿಗೆ ಜೋಡಿಸಿದಾಗ ಅದು ಕಾರ್ಡನ್ನು ಗುರುತಿಸಲು ನಿರಾಕರಿಸುತ್ತದೆ, ಕಾರ್ಡಿನಲ್ಲಿರುವ ಫೋಟೋ ಕಾರ್ಡಿನಲ್ಲೇ ಇದ್ದರೂ ಅದನ್ನು ನೋಡುವುದು, ಕಾಪಿಮಾಡಿಕೊಳ್ಳುವುದು ಸಾಧ್ಯವಾಗುವುದಿಲ್ಲ!

ಭಾನುವಾರ, ನವೆಂಬರ್ 18, 2012

'ವಿಜ್ಞಾನ' ಸಂಪುಟಗಳ ಲೋಕಾರ್ಪಣೆ

ಇಜ್ಞಾನ ವಾರ್ತೆ

ಕನ್ನಡ ವಿಜ್ಞಾನ ಸಾಹಿತ್ಯದ ಆದ್ಯ ಪ್ರವರ್ತಕರಾದ ಶ್ರೀ ಬೆಳ್ಳಾವೆ ವೆಂಕಟನಾರಣಪ್ಪ ಹಾಗೂ ಶ್ರೀ ನಂಗಪುರಂ ವೆಂಕಟೇಶಯ್ಯಂಗಾರ್‍ಯರು ೧೯೧೮-೧೯ರಷ್ಟು ಹಿಂದೆಯೇ 'ವಿಜ್ಞಾನ' ಎಂಬ ಕನ್ನಡ ಮಾಸಪತ್ರಿಕೆಯನ್ನು ಪ್ರಾರಂಭಿಸಿದ್ದರು. ಅಷ್ಟೇ ಅಲ್ಲ, ಎಲ್ಲ ಸವಾಲುಗಳನ್ನು ಎದುರಿಸಿ ಆ ಪತ್ರಿಕೆಯನ್ನು ಎರಡು ವರ್ಷಗಳ ಕಾಲ ನಡೆಸಿಯೂ ಇದ್ದರು.

ಕನ್ನಡ ವಿಜ್ಞಾನ ಸಂವಹನ ಹಾಗೂ ಪತ್ರಿಕೋದ್ಯಮ - ಎರಡೂ ಕ್ಷೇತ್ರಗಳ ಪಾಲಿಗೆ ಇಂದಿಗೂ ಅಮೂಲ್ಯ ದಾಖಲೆಗಳಾಗಿರುವ ಈ ಇಪ್ಪತ್ನಾಲ್ಕು ಸಂಚಿಕೆಗಳು ಇದೀಗ ಎರಡು ಸಂಪುಟಗಳಲ್ಲಿ ಮರುಮುದ್ರಣ ಕಾಣುತ್ತಿವೆ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ಉದಯಭಾನು ಕಲಾಸಂಘದ ಸಹಭಾಗಿತ್ವದಲ್ಲಿ ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನೆರವಿನೊಡನೆ ಸಿದ್ಧವಾಗಿರುವ ಈ ಸಂಪುಟಗಳನ್ನು ನವೆಂಬರ್ ೧೯, ೨೦೧೨ರ ಸೋಮವಾರ ಲೋಕಾರ್ಪಣೆಗೊಳಿಸಲಾಗುತ್ತಿದೆ. ಬೆಂಗಳೂರು ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯಲಿರುವ ಈ ಸಮಾರಂಭದ ಸಂದರ್ಭದಲ್ಲಿ 'ವಿಜ್ಞಾನ' ಸಂಪುಟಗಳಿಗೆ ಶೇ. ೨೫ರ ರಿಯಾಯಿತಿ ನೀಡಲಾಗುವುದು. ಆಮಂತ್ರಣ ಪತ್ರಿಕೆಯನ್ನು ದೊಡ್ಡಗಾತ್ರದಲ್ಲಿ ನೋಡಲು ಪಕ್ಕದ ಚಿತ್ರದ ಮೇಲೆ ಕ್ಲಿಕ್ ಮಾಡಿ.

ಈ ಅಪೂರ್ವ ಪತ್ರಿಕೆಯ ಸಂಚಿಕೆಗಳನ್ನು ಓದಲು ನಮಗೆ ಮತ್ತೊಂದು ಅವಕಾಶ ನೀಡಿರುವ ಸಂಕಲನಕಾರರಾದ ಪ್ರೊ. ಎಚ್. ಆರ್. ರಾಮಕೃಷ್ಣರಾವ್ ಹಾಗೂ ಶ್ರೀ ಟಿ. ಆರ್. ಅನಂತರಾಮುರವರನ್ನು ಇಜ್ಞಾನ ಡಾಟ್ ಕಾಮ್ ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ.

('ವಿಜ್ಞಾನ' ಪತ್ರಿಕೆಯ ಮೊದಲ ಸಂಪುಟದ ಲೇಖನಗಳನ್ನು ಸಿರಿನುಡಿ ಜಾಲತಾಣದಲ್ಲಿ ಓದಬಹುದು)

ಬುಧವಾರ, ನವೆಂಬರ್ 7, 2012

ಕಂಪ್ಯೂಟರಿಗೆ ಕನ್ನಡ ಕಲಿಸಿದ ಕತೆ


ಟಿ. ಜಿ. ಶ್ರೀನಿಧಿ

ಶ್ರೀ ಕೆ. ಪಿ. ರಾವ್
ಈಗಷ್ಟೆ ಮಾರುಕಟ್ಟೆಗೆ ಬಂದ ಹೊಸ ಮೊಬೈಲ್ ಫೋನ್ ಇರಲಿ, ಲೇಟೆಸ್ಟ್ ಟ್ಯಾಬ್ಲೆಟ್ ಕಂಪ್ಯೂಟರ್ ಇರಲಿ, ಅಥವಾ ಕಂಪ್ಯೂಟರಿನ ಯಾವುದೋ ತಂತ್ರಾಂಶವೇ ಇರಲಿ, "ಇದರಲ್ಲಿ ಕನ್ನಡ ಬಳಸಬಹುದೇ?" ಎನ್ನುವ ಪ್ರಶ್ನೆ ನಮ್ಮೆದುರು ಆಗಿಂದಾಗ್ಗೆ ಬರುತ್ತಲೇ ಇರುತ್ತದೆ. ಆದರೆ ಈ ಪ್ರಶ್ನೆ ಯಾವುದೋ ನಿರ್ದಿಷ್ಟ ಯಂತ್ರಾಂಶ ಅಥವಾ ತಂತ್ರಾಂಶಕ್ಕಷ್ಟೆ ಸೀಮಿತವಾಗಿರುತ್ತದೆ; ಏಕೆಂದರೆ ಕಂಪ್ಯೂಟರಿನಲ್ಲಿ ಕನ್ನಡ ಮೂಡುವುದು ನಮ್ಮ ಪಾಲಿಗೆ ಹೊಸ ವಿಷಯವೇನೂ ಅಲ್ಲವಲ್ಲ!

ಆದರೆ ಕೆಲ ದಶಕಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಕಂಪ್ಯೂಟರುಗಳೇ ಅಪರೂಪವಾಗಿದ್ದ ಆ ಕಾಲದಲ್ಲಿ ಕಂಪ್ಯೂಟರ್ ಬಳಸಬೇಕು ಎಂದರೆ ಇಂಗ್ಲಿಷ್ ಗೊತ್ತಿರಲೇಬೇಕು ಎನ್ನುವಂತಹ ಪರಿಸ್ಥಿತಿ ಇತ್ತು. ಆ ಫೋನಿನಲ್ಲಿ ಕನ್ನಡ ಓದಬಹುದು, ಈ ಟ್ಯಾಬ್ಲೆಟ್ಟಿನಲ್ಲಿ ಕನ್ನಡ ಟೈಪುಮಾಡುವುದೂ ಸುಲಭ ಎಂದೆಲ್ಲ ವಿವರಿಸುವ ನಮಗೆ ಕಂಪ್ಯೂಟರ್ ಪ್ರಪಂಚದಲ್ಲಿ ಕನ್ನಡವೇ ಕಾಣಸಿಗದಿದ್ದ ದಿನಗಳನ್ನು ಊಹಿಸುವುದೇ ಕಷ್ಟ, ಅಲ್ಲವೆ?

ಅಂತಹ ದಿನಗಳಲ್ಲೂ ಕಂಪ್ಯೂಟರ್ ಪ್ರಪಂಚದಲ್ಲಿ ಸಕ್ರಿಯರಾಗಿದ್ದ ಕನ್ನಡದ ಭಗೀರಥರು ತಮ್ಮ ಅದಮ್ಯ ಉತ್ಸಾಹದಿಂದ ಕಂಪ್ಯೂಟರಿಗೂ ಅ-ಆ-ಇ-ಈ ಹೇಳಿಕೊಟ್ಟರು; ಡಿಜಿಟಲ್ ಲೋಕದಲ್ಲಿ ಕನ್ನಡ ಹುಲುಸಾಗಿ ಬೆಳೆಯಲು ಕಾರಣರಾದರು.

ಇಂಗ್ಲಿಷ್ ನಾಡಿನಿಂದ ಬಂದ ಕಂಪ್ಯೂಟರ್, ಇಂತಹ ಮೇಷ್ಟರೊಬ್ಬರ ನೆರವಿನಿಂದ ಕನ್ನಡ ಕಲಿತ ಕತೆ ಇಲ್ಲಿದೆ.

ಮಂಗಳವಾರ, ಅಕ್ಟೋಬರ್ 30, 2012

ಇನ್ನಷ್ಟು ವೀಡಿಯೋ ವಿಷಯ

ಡಿಜಿಟಲ್ ಛಾಯಾಗ್ರಹಣ ಅಂದಕೂಡಲೆ ಅದು ಫೋಟೋ ಅಷ್ಟೇ ಆಗಿರಬೇಕಿಲ್ಲವಲ್ಲ! ಹಾಗಾಗಿಯೇ ಕಳೆದವಾರದ ಲೇಖನದಲ್ಲಿ ಡಿಜಿಟಲ್ ವೀಡಿಯೋ ಕುರಿತ ಮಾಹಿತಿ ಹಂಚಿಕೊಳ್ಳಲಾಗಿತ್ತು. ಅದೇ ವಿಷಯದ ಕುರಿತ ಇನ್ನಷ್ಟು ಮಾಹಿತಿ ಇಂದಿನ ಸಂಚಿಕೆಯಲ್ಲೂ ಇದೆ.
ಟಿ. ಜಿ. ಶ್ರೀನಿಧಿ

ಈಚೆಗೆ ಉತ್ತಮ ಗುಣಮಟ್ಟದ ವೀಡಿಯೋ ಕುರಿತ ಪ್ರಸ್ತಾಪ ಬಂದಾಗಲೆಲ್ಲ 'ಎಚ್‌ಡಿ' ಎಂಬ ಎರಡಕ್ಷರದ ಹೆಸರು ಈಚೆಗೆ ವ್ಯಾಪಕವಾಗಿ ಕೇಳಸಿಗುತ್ತಿದೆ. ಎಲ್‌ಸಿಡಿ-ಎಲ್‌ಇಡಿ ಟೀವಿಗಳಿರಲಿ, ಡಿಜಿಟಲ್ ಕ್ಯಾಮೆರಾ ಇರಲಿ, ಟ್ಯಾಬ್ಲೆಟ್ಟು-ಮೊಬೈಲ್ ಫೋನುಗಳೇ ಇರಲಿ - ಎಲ್ಲೆಲ್ಲೂ ಎಚ್‌ಡಿಯದೇ ಭರಾಟೆ. ಇಷ್ಟಕ್ಕೂ ಈ ಎಚ್‌ಡಿ ಎಂದರೇನು?

ಹೈ ಡೆಫನಿಷನ್ ಕಪ್ಪು ಬಿಳುಪಿನ ಚಲನಚಿತ್ರಗಳಿರಲಿ, 'ಬ್ಲ್ಯಾಕ್ ಆಂಡ್ ವೈಟ್' ಟೀವಿಗಳಿರಲಿ, ಅವೆಲ್ಲ ನಿಧಾನಕ್ಕೆ ತೆರೆಮರೆಗೆ ಸರಿದು ವೀಡಿಯೋಗಳು ವರ್ಣಮಯವಾಗಿ ಕಾಣಿಸಿಕೊಳ್ಳಲು ಶುರುವಾದ ಕಾಲವೊಂದಿತ್ತಲ್ಲ? ಮನೆಯಲ್ಲಿ ಕಲರ್ ಟೀವಿ ಇದೆಯಂತೆ ಎನ್ನುವುದೇ ಆಗ ಹೆಮ್ಮೆಯ-ಪ್ರತಿಷ್ಠೆಯ ವಿಷಯವಾಗಿತ್ತು. ವೀಡಿಯೋ ಪ್ರಪಂಚದಲ್ಲಿ ಅಂತಹುದೇ ಇನ್ನೊಂದು ಕ್ರಾಂತಿಕಾರಕ ಬದಲಾವಣೆ ತಂದಿದ್ದು ಎಚ್‌ಡಿ ತಂತ್ರಜ್ಞಾನದ ಹಿರಿಮೆ. 'ಎಚ್‌ಡಿ' ಎನ್ನುವುದು 'ಹೈ ಡೆಫನಿಷನ್' ಎಂಬ ಹೆಸರಿನ ಹ್ರಸ್ವರೂಪ.

ಗುರುವಾರ, ಅಕ್ಟೋಬರ್ 25, 2012

ಡಿಜಿಟಲ್ ವೀಡಿಯೋ ಬಗ್ಗೆ ಒಂದಷ್ಟು...

ಡಿಜಿಟಲ್ ಛಾಯಾಗ್ರಹಣದ ಕುರಿತು ಒಂದಷ್ಟು ಮಾಹಿತಿ ನೀಡಿದ ಲೇಖನಗಳನ್ನು ಹಿಂದಿನ ವಾರಗಳಲ್ಲಿ  ಓದಿದ್ದೀರಿ. ಡಿಜಿಟಲ್ ಛಾಯಾಗ್ರಹಣ ಅಂದಕೂಡಲೆ ಅದು ಫೋಟೋ ಅಷ್ಟೇ ಆಗಿರಬೇಕಿಲ್ಲವಲ್ಲ! ಹಾಗಾಗಿಯೇ ಇಂದಿನ ಮತ್ತು ಮುಂದಿನ ಇನ್ನೊಂದು ಲೇಖನ ಡಿಜಿಟಲ್ ವೀಡಿಯೋ ಪರಿಚಯಕ್ಕಾಗಿ ಮೀಸಲು.
ಟಿ. ಜಿ. ಶ್ರೀನಿಧಿ

ಡಿಜಿಟಲ್ ಯುಗಕ್ಕಿಂತ ಕೊಂಚ ಹಿಂದಿನ ಕಾಲ ನೆನಪಿಸಿಕೊಳ್ಳಿ. ವೀಡಿಯೋ ಎಂದತಕ್ಷಣ ಅಂದಿನ ಕ್ಯಾಸೆಟ್ಟುಗಳೇ ನೆನಪಿಗೆ ಬರುತ್ತವಲ್ಲ! ರಜಾದಿನಗಳಲ್ಲಿ ಸಿನಿಮಾ ವೀಕ್ಷಣೆ ಎಂದರೆ ಈಗೇನೋ ಯೂಟ್ಯೂಬ್ ಮೂಲಕವೂ ಆಗಬಹುದು; ಆದರೆ ಆಗ ಪಕ್ಕದ ರಸ್ತೆಯ ವೀಡಿಯೋ ಲೈಬ್ರರಿಯೊಂದೇ ನಮ್ಮ ಸಿನಿಮಾ ಬೇಡಿಕೆಗಳನ್ನು ಪೂರೈಸುವ ಮೂಲವಾಗಿತ್ತು. ವಿಸಿಪಿ/ವಿಸಿಆರ್ ಇಲ್ಲವೆಂದರೆ ಅದೂ ಬಾಡಿಗೆಗೆ ಸಿಗುತ್ತಿತ್ತಲ್ಲ!

ಅಂದಿನ ವೀಡಿಯೋ ರೆಕಾರ್ಡಿಂಗ್ ಕೂಡ ಹಾಗೆಯೇ ಇತ್ತು; ಮದುವೆ ಮನೆ ವೀಡಿಯೋ ತೆಗೆಯುವ ವೀಡಿಯೋಗ್ರಾಫರ್ ಕ್ಯಾಮೆರಾ ಇರಲಿ, ಅಮೆರಿಕಾ ರಿಟರ್ನ್ಡ್ ಭಾವ ತಂದ ಪುಟ್ಟ ಕ್ಯಾಮ್‌ಕಾರ್ಡರ್ ಇರಲಿ - ಎಲ್ಲ ಕಡೆಯೂ ಕ್ಯಾಸೆಟ್ಟುಗಳದೇ ಭರಾಟೆ. ಟೇಪ್ ರೆಕಾರ್ಡರಿನ ಕ್ಯಾಸೆಟ್ಟಿನಂತೆ ಈ ತಂತ್ರಜ್ಞಾನವೂ ಅನಲಾಗ್ ಆಗಿತ್ತು.

ಪ್ರಪಂಚವೆಲ್ಲ ಡಿಜಿಟಲ್ ಆದಮೇಲೆ ವೀಡಿಯೋ ಮಾತ್ರ ಸುಮ್ಮನಿರಲು ಸಾಧ್ಯವೇ? ಬೇರೆಲ್ಲ ಕಡೆಗಳಲ್ಲೂ ಆದಂತೆ ಇಲ್ಲೂ ಡಿಜಿಟಲ್ ವೀಡಿಯೋ ಎಂಬ ಹೊಸ ಅವತಾರ ಸೃಷ್ಟಿಯಾಯಿತು; ವೀಡಿಯೋ ಚಿತ್ರೀಕರಣದ ಗುಣಮಟ್ಟ ಒಟ್ಟಾರೆಯಾಗಿ ಜಾಸ್ತಿಯಾಯಿತು. ಅಷ್ಟೇ ಅಲ್ಲ, ಕ್ಯಾಸೆಟ್ಟು ಹಳೆಯದಾದಂತೆ ಅಥವಾ ಒಂದರಿಂದ ಒಂದು ಕಾಪಿ ಮಾಡಿಕೊಂಡಂತೆ ವೀಡಿಯೋ ಗುಣಮಟ್ಟ ಕಡಿಮೆಯಾಗುತ್ತಿದ್ದ ಸಮಸ್ಯೆ ಕೂಡ ಇದರಿಂದಾಗಿ ನಿವಾರಣೆಯಾಯಿತು. ಎಷ್ಟು ಕಾಪಿ ಮಾಡಿಕೊಂಡರೂ ಪರವಾಗಿಲ್ಲ, ಎಷ್ಟು ಸಾರಿ ನೋಡಿದರೂ ಪರವಾಗಿಲ್ಲ, ವೀಡಿಯೋ ಗುಣಮಟ್ಟದಲ್ಲಿ ಮಾತ್ರ ಯಾವ ವ್ಯತ್ಯಾಸವೂ ಆಗುವುದಿಲ್ಲ ಎಂದು ಹೇಳುವ ಆತ್ಮವಿಶ್ವಾಸವನ್ನು ಡಿಜಿಟಲ್ ವೀಡಿಯೋ ನಮಗೆ ತಂದುಕೊಟ್ಟಿತು (ಸಿ.ಡಿ./ಡಿವಿಡಿಯ ಮೇಲ್ಮೈ ಹಾಳಾದರೆ ವೀಡಿಯೋ ಪ್ರದರ್ಶನದಲ್ಲಿ ಅಡಚಣೆ ಬರುತ್ತದೆ ನಿಜ, ಆದರೆ ಅದು ಮಾಧ್ಯಮದ ತೊಂದರೆಯೇ ವಿನಃ ಡಿಜಿಟಲ್ ವೀಡಿಯೋದ ಸಮಸ್ಯೆಯಲ್ಲ).

ಮದುವೆ ಕ್ಯಾಸೆಟ್ಟುಗಳನ್ನು ಸಿ.ಡಿ.ಗೋ ಡಿವಿಡಿಗೋ ಪರಿವರ್ತಿಸಿಕೊಳ್ಳುವ ಬಗ್ಗೆ ನಾವೆಲ್ಲ ಕೇಳಿದ್ದೇವೆ. ಇದು ಅನಲಾಗ್ ರೂಪದಲ್ಲಿರುವ ಮೂಲವನ್ನು ಡಿಜಿಟಲ್ ವೀಡಿಯೋಗೆ ಪರಿವರ್ತಿಸುವ ಉದಾಹರಣೆ ಅಷ್ಟೆ. ಹಾಗಾದರೆ ವೀಡಿಯೋಗಳನ್ನು ಡಿಜಿಟಲ್ ರೂಪದಲ್ಲೇ ಚಿತ್ರೀಕರಿಸಿಕೊಳ್ಳುವುದು ಹೇಗೆ?

ಶನಿವಾರ, ಅಕ್ಟೋಬರ್ 20, 2012

ಶ್ರದ್ಧಾಂಜಲಿ


ಹಿರಿಯ ವಿಜ್ಞಾನ ಲೇಖಕರಾದ ಶ್ರೀ ಕೈವಾರ ಗೋಪಿನಾಥರ ಹಠಾತ್ ನಿಧನದ ಸುದ್ದಿಯನ್ನು ಇಂದಿನ ಉದಯವಾಣಿ ಬಿತ್ತರಿಸಿದೆ. ಅವರಿಗೆ ನಮ್ಮ ಗೌರವಪೂರ್ವಕ ಶ್ರದ್ಧಾಂಜಲಿ. ಸರ್, ನಿಮ್ಮ ಅಗಲುವಿಕೆಯಿಂದ ಕನ್ನಡ ವಿಜ್ಞಾನ ಸಾಹಿತ್ಯ ಲೋಕ ನಿಜಕ್ಕೂ ಬಡವಾಗಿದೆ.

ಗುರುವಾರ, ಅಕ್ಟೋಬರ್ 18, 2012

ಖುಷಿ ಖುಷಿ!

ಇಜ್ಞಾನ ಡಾಟ್ ಕಾಮ್‌ನಲ್ಲಿ ದಾಖಲಾಗಿರುವ ಒಟ್ಟು ಪೇಜ್‌ವ್ಯೂಗಳ ಸಂಖ್ಯೆ ೫೦,೦೦೦ ದಾಟಿದೆ. ಈ ತಾಣ ಶುರುವಾಗಿ ಐದು ವರ್ಷ ಪೂರ್ಣವಾದ ೨೦೧೨ರಲ್ಲೇ ಐವತ್ತು ಸಾವಿರ ಸ್ಪರ್ಶದ ಈ ಖುಷಿಯೂ ದೊರಕಿರುವುದು ವಿಶೇಷ. 

ನಿಮ್ಮೆಲ್ಲರ ಸಹಕಾರದಿಂದ ಮುಂದೆ ಇನ್ನೂ ಹೆಚ್ಚಿನದನ್ನು ಸಾಧಿಸುವ ಉತ್ಸಾಹ ನಮಗಿದೆ. ನಿಮ್ಮ ಪ್ರೀತಿ, ಸಹಕಾರ, ಬೆಂಬಲ ಹೀಗೆಯೇ ಇರಲಿ!

ಮಂಗಳವಾರ, ಅಕ್ಟೋಬರ್ 16, 2012

ಒಂದು ಸೊನ್ನೆ ಸೊನ್ನೆ

ಇಂದು ಪ್ರಕಟವಾಗುತ್ತಿರುವುದು ವಿಜ್ಞಾಪನೆ ಅಂಕಣದ ನೂರನೆಯ ಸಂಚಿಕೆ.
ಈ ಲೇಖನದ ಶೀರ್ಷಿಕೆ ಇದೇಕೆ ಹೀಗಿದೆ? ಒಂದು-ಸೊನ್ನೆ-ಸೊನ್ನೆ ಎಂದರೆ ನೂರೋ, ಮೂರೋ??
ಟಿ. ಜಿ. ಶ್ರೀನಿಧಿ

ಕಂಪ್ಯೂಟರುಗಳಿಗೂ ಒಂದು-ಸೊನ್ನೆಗೂ ಇರುವ ಸಂಬಂಧ ಎಲ್ಲರಿಗೂ ಗೊತ್ತಿರುವುದೇ. ಕಂಪ್ಯೂಟರುಗಳು ಕೆಲಸಮಾಡುವುದೇ ದ್ವಿಮಾನ ಪದ್ಧತಿಯ ಈ ಎರಡು ಅಂಕಿಗಳನ್ನು ಬಳಸಿ. ನಮಗೆಲ್ಲ ಚಿರಪರಿಚಿತವಾದ ಬಿಟ್-ಬೈಟ್-ಮೆಗಾಬೈಟ್-ಗಿಗಾಬೈಟ್-ಟೆರಾಬೈಟ್‌ಗಳಿಗೆಲ್ಲ ಈ ಎರಡು ಅಂಕಿಗಳೇ ಮೂಲ.

ಇದೆಲ್ಲ ಎಲ್ಲರಿಗೂ ಗೊತ್ತಿರುವ ವಿಷಯ ಎನ್ನುವಿರಾ? ಅದೂ ಸರಿಯೇ. ಕಂಪ್ಯೂಟರುಗಳು ದ್ವಿಮಾನ ಪದ್ಧತಿ ಬಳಸುವುದು, ಅವಕ್ಕೆ ಒಂದು-ಸೊನ್ನೆ ಎಂಬ ಅಂಕಿಗಳು ಮಾತ್ರವೇ ಅರ್ಥವಾಗುವುದು, ಪ್ರೋಗ್ರಾಮುಗಳನ್ನು ಯಾವ ಭಾಷೆಯಲ್ಲೇ ಬರೆದರೂ ಅದು ಮೊದಲಿಗೆ ಒಂದು-ಸೊನ್ನೆಯ ಈ ಭಾಷೆಗೆ ಬದಲಾಗಬೇಕಾದ್ದು - ಈ ವಿಷಯಗಳೆಲ್ಲ ಕಂಪ್ಯೂಟರ್ ವಿಜ್ಞಾನದ ಪ್ರಾಥಮಿಕ ಪಾಠಗಳಲ್ಲಿ ಭದ್ರವಾಗಿ ಕುಳಿತುಬಿಟ್ಟಿವೆ.

ಆದರೆ ಕಂಪ್ಯೂಟರುಗಳು ದ್ವಿಮಾನ ಪದ್ಧತಿಯನ್ನೇ ಏಕೆ ಬಳಸುತ್ತವೆ?

ಮಂಗಳವಾರ, ಅಕ್ಟೋಬರ್ 9, 2012

ಕ್ಯಾಮೆರಾ ಕಾಗುಣಿತ: ಭಾಗ ೨


ಅಪರ್ಚರ್, ಎಕ್ಸ್‌ಪೋಶರ್, ಶಟರ್ ಸ್ಪೀಡ್, ಫೋಕಲ್ ಲೆಂತ್ - ಕ್ಯಾಮೆರಾ ಪ್ರಪಂಚವನ್ನು ಪರಿಚಯಿಸಿಕೊಳ್ಳುತ್ತಿದ್ದಂತೆ ಇಂತಹ ಪದಗಳ ಸಾಲುಸಾಲೇ ನಮ್ಮ ಕಿವಿಗೆ ಬೀಳುತ್ತವೆ. ಹೀಗೆ ಕೇಳಸಿಗುವ ಕೆಲ ಪದಗಳನ್ನು ಕಳೆದ ವಾರದ ಲೇಖನ ಪರಿಚಯಿಸಿತ್ತು. ಅಂತಹವೇ ಇನ್ನಷ್ಟು ಪದಗಳ ಪರಿಚಯ ಇಲ್ಲಿದೆ.

ಟಿ. ಜಿ. ಶ್ರೀನಿಧಿ

ಶಟರ್ ಸ್ಪೀಡ್: ಕ್ಯಾಮೆರಾದಲ್ಲಿ ಫೋಟೋ ದಾಖಲಾಗಬೇಕೆಂದರೆ ಒಂದಷ್ಟು ಬೆಳಕು ಅದರ ಸೆನ್ಸರ್ ಮೇಲೆ ಬೀಳಬೇಕು. ಕ್ಯಾಮೆರಾದ 'ಶಟರ್' ಬೆಳಕನ್ನು ಒಳಬಿಡುವ ಬಾಗಿಲಿನಂತೆ ಕೆಲಸಮಾಡುತ್ತದೆ. ಈ ಶಟರ್ ತೆರೆದುಕೊಂಡಿದ್ದಷ್ಟು ಹೊತ್ತು ಮಾತ್ರ ಸೆನ್ಸರ್ ಮೇಲೆ ಬೆಳಕು ಬೀಳುವುದು ಸಾಧ್ಯ. ಶಟರ್ ಎಷ್ಟು ಹೊತ್ತು ತೆರೆದುಕೊಂಡಿರುತ್ತದೆ ಎನ್ನುವುದನ್ನು ತೀರ್ಮಾನಿಸುವುದು ಕ್ಯಾಮೆರಾದ 'ಶಟರ್‌ಸ್ಪೀಡ್'.

ಶಟರ್‌ಸ್ಪೀಡನ್ನು ಸೆಕೆಂಡುಗಳಲ್ಲಿ ಅಳೆಯಲಾಗುತ್ತದೆ. ಅದನ್ನು ಸೆಕೆಂಡಿನ ಅದೆಷ್ಟೋ ಸಾವಿರದಲ್ಲೊಂದು ಭಾಗದಿಂದ ಪ್ರಾರಂಭಿಸಿ ಹಲವು ಸೆಕೆಂಡುಗಳವರೆಗೆ ಹೊಂದಿಸುವುದು ಸಾಧ್ಯ.

ಬುಧವಾರ, ಅಕ್ಟೋಬರ್ 3, 2012

ಕ್ಯಾಮೆರಾ ಕಾಗುಣಿತ: ಭಾಗ ೧


ಟಿ. ಜಿ. ಶ್ರೀನಿಧಿ
ಅಪರ್ಚರ್, ಎಕ್ಸ್‌ಪೋಶರ್, ಶಟರ್ ಸ್ಪೀಡ್, ಫೋಕಲ್ ಲೆಂತ್ - ಕ್ಯಾಮೆರಾ ಪ್ರಪಂಚವನ್ನು ಪರಿಚಯಿಸಿಕೊಳ್ಳುತ್ತಿದ್ದಂತೆ ಇಂತಹ ಪದಗಳ ಸಾಲುಸಾಲೇ ನಮ್ಮ ಕಿವಿಗೆ ಬೀಳುತ್ತವೆ. ಹೀಗೆ ಕೇಳಸಿಗುವ ಕೆಲ ಪದಗಳ ಪರಿಚಯ ಇಲ್ಲಿದೆ. ಇಂತಹವೇ ಇನ್ನಷ್ಟು ಪದಗಳ ಪರಿಚಯ, ಮುಂದಿನ ವಾರ!
ಅಪರ್ಚರ್: ಕ್ಯಾಮೆರಾದ ಲೆನ್ಸಿನ ಮೂಲಕ ಒಂದಷ್ಟು ಬೆಳಕು ಸೆನ್ಸರಿನ ಮೇಲೆ ಬಿದ್ದಾಗ ಛಾಯಾಚಿತ್ರ ಅದರಲ್ಲಿ ಸೆರೆಯಾಗುತ್ತದೆ. ಹೀಗೆ ಬೆಳಕನ್ನು ಒಳಗೆ ಬಿಟ್ಟುಕೊಳ್ಳಲು ಲೆನ್ಸು ಎಷ್ಟು ದೊಡ್ಡದಾಗಿ ತೆರೆದುಕೊಳ್ಳುತ್ತದೆ ಎನ್ನುವುದನ್ನು 'ಅಪರ್ಚರ್' ಸೂಚಿಸುತ್ತದೆ. ಸುತ್ತಲಿನ ಬೆಳಕಿನ ಪ್ರಮಾಣಕ್ಕೆ ಅನುಗುಣವಾಗಿ ಹಿಗ್ಗುವ ಅಥವಾ ಕುಗ್ಗುವ ಮೂಲಕ ಕಣ್ಣಿನ ಅಕ್ಷಿಪಟಲದ (ರೆಟಿನಾ) ಮೇಲೆ ಬೀಳುವ ಬೆಳಕನ್ನು ಪಾಪೆ (ಪ್ಯೂಪಿಲ್) ನಿಯಂತ್ರಿಸುತ್ತದಲ್ಲ, ಕ್ಯಾಮೆರಾದ ಅಪರ್ಚರ್ ಕೂಡ ಇದೇ ಕೆಲಸ ಮಾಡುತ್ತದೆ.

ಮಂಗಳವಾರ, ಸೆಪ್ಟೆಂಬರ್ 25, 2012

ಸೂಪರ್‌ಕಂಪ್ಯೂಟರ್ ಬಗ್ಗೆ ಇನ್ನಷ್ಟು

ಟಿ. ಜಿ. ಶ್ರೀನಿಧಿ

ಕಂಪ್ಯೂಟರ್ ಕುಟುಂಬದ ಸದಸ್ಯರ ಪೈಕಿ ಅತಿ ಹೆಚ್ಚು ಸಂಸ್ಕರಣಾ ಸಾಮರ್ಥ್ಯ ಹೊಂದಿರುವ, ಹಾಗೂ ಅತ್ಯಂತ ದುಬಾರಿಯಾಗಿರುವ ಹೆಚ್ಚುಗಾರಿಕೆ ಸೂಪರ್‌ಕಂಪ್ಯೂಟರುಗಳದು. ಕ್ಲಿಷ್ಟ ಲೆಕ್ಕಾಚಾರಗಳ ಅಗತ್ಯವಿರುವ ಹವಾಮಾನ ಮುನ್ಸೂಚನೆ, ವೈಜ್ಞಾನಿಕ ಸಂಶೋಧನೆ ಮುಂತಾದ ಕ್ಷೇತ್ರಗಳಲ್ಲಿ ಸೂಪರ್‌ಕಂಪ್ಯೂಟರುಗಳು ಬಳಕೆಯಾಗುತ್ತವೆ.

ಇವುಗಳ ಸಂಸ್ಕರಣಾ ಸಾಮರ್ಥ್ಯ ತೀರಾ ಉನ್ನತಮಟ್ಟದ್ದಾಗಿರುವುದರಿಂದಲೇ ಅದನ್ನು ಅಳೆಯಲು 'ಫ್ಲೋಟಿಂಗ್ ಪಾಯಿಂಟ್ ಇನ್ಸ್‌ಟ್ರಕ್ಷನ್ಸ್ ಪರ್ ಸೆಕೆಂಡ್', ಅಂದರೆ FLOPS ಎಂಬ ಏಕಮಾನವನ್ನು ಬಳಸಲಾಗುತ್ತದೆ. ದಶಾಂಶವಿರುವ ದೊಡ್ಡದೊಡ್ಡ ಸಂಖ್ಯೆಗಳ ಮೇಲೆ ಯಾವುದೇ ಕಂಪ್ಯೂಟರ್ ಒಂದು ಸೆಕೆಂಡಿನಲ್ಲಿ ಗುಣಾಕಾರ, ಭಾಗಾಕಾರ, ವರ್ಗಮೂಲ ಮುಂತಾದ ಎಷ್ಟು ಲೆಕ್ಕಾಚಾರಗಳನ್ನು ಕೈಗೊಳ್ಳಬಲ್ಲದು ಎನ್ನುವುದನ್ನು ಈ ಮಾಪನ ತಿಳಿಸುತ್ತದೆ.

ನಮಗೆಲ್ಲ ಪರಿಚಿತವಿರುವ ಕ್ಯಾಲ್‌ಕ್ಯುಲೇಟರುಗಳ ಸಾಮರ್ಥ್ಯ FLOPS ಏಕಮಾನದಲ್ಲಿ ಸುಮಾರು ಹತ್ತು ಇರಬಹುದು. ೧೯೬೦ರ ಸುಮಾರಿಗೆ ಬಂದ ಸೂಪರ್‌ಕಂಪ್ಯೂಟರುಗಳಲ್ಲಿ ಇದಕ್ಕಿಂತ ಕೆಲವೇ ನೂರು ಪಟ್ಟು ಹೆಚ್ಚಿನ, ಅಂದರೆ ಕೆಲವು ಸಾವಿರ ಫ್ಲಾಪ್ಸ್‌ನಷ್ಟು ಸಂಸ್ಕರಣಾ ಸಾಮರ್ಥ್ಯ ಇರುತ್ತಿತ್ತೆಂದು ತೋರುತ್ತದೆ. ಅದೇ ಇಂದಿನ ಸ್ಮಾರ್ಟ್‌ಫೋನುಗಳ ವಿಷಯಕ್ಕೆ ಬಂದರೆ ಅವುಗಳ ಸಾಮರ್ಥ್ಯ ಒಂದೆರಡು ಕೋಟಿ ಫ್ಲಾಪ್ಸ್ ಇರಬಹುದು. ಇನ್ನು ಟ್ಯಾಬ್ಲೆಟ್ ಗಣಕಗಳ ವಿಷಯಕ್ಕೆ ಬಂದರಂತೂ ಅವುಗಳಲ್ಲಿ ಇನ್ನೂ ಎಂಟು-ಹತ್ತು ಪಟ್ಟು ಜಾಸ್ತಿ ಸಂಸ್ಕರಣಾ ಸಾಮರ್ಥ್ಯ ಇರುತ್ತದೆ.

ಮೇಲ್ನೋಟಕ್ಕೆ ಭಲೇ ಎನ್ನಿಸಿದರೂ ಸೂಪರ್‌ಕಂಪ್ಯೂಟರುಗಳ ಸಾಮರ್ಥ್ಯದ ಇದೆಲ್ಲ ಏನೇನೂ ಅಲ್ಲ. ಏಕೆಂದರೆ ಸದ್ಯದ ಸೂಪರ್‌ಕಂಪ್ಯೂಟರುಗಳ ಸಾಮರ್ಥ್ಯ ಪೆಟಾಫ್ಲಾಪ್ಸ್‌ಗಳಲ್ಲಿದೆ! ಕಿಲೋ ಅಂದರೆ ಸಾವಿರ, ಮೆಗಾ ಅಂದರೇನೇ ಹತ್ತು ಲಕ್ಷ, ಇನ್ನು ಪೆಟಾ ಅಂದರೆ?

ಮಂಗಳವಾರ, ಸೆಪ್ಟೆಂಬರ್ 18, 2012

ಕೀಬೋರ್ಡ್ ಕತೆ

ಟಿ. ಜಿ. ಶ್ರೀನಿಧಿ

ಕಂಪ್ಯೂಟರ್ ಬಳಕೆದಾರರಿಗೆಲ್ಲ ಚಿರಪರಿಚಿತ ಯಂತ್ರಾಂಶ ಕೀಬೋರ್ಡ್. ಕಂಪ್ಯೂಟರಿಗೆ ನಾವು ನೀಡಬೇಕಾದ ಆದೇಶಗಳಿರಲಿ, ಮುದ್ರಣಕ್ಕೆ ಸಿದ್ಧಪಡಿಸಬೇಕಿರುವ ಕಡತವಿರಲಿ, ಎಲ್ಲವುದಕ್ಕೂ ಕೀಬೋರ್ಡ್ ಬೇಕು. ಕೀಬೋರ್ಡಿನ ಕೀಲಿಗಳನ್ನು ಒತ್ತಿದರೆ ಸಾಕು, ನಾವು ಹೇಳಬೇಕಿರುವುದು ಕಂಪ್ಯೂಟರಿಗೆ ತಿಳಿದುಬಿಡುತ್ತದೆ! ಎಂದು ಈಗಷ್ಟೆ ಕಂಪ್ಯೂಟರ್ ಬಳಕೆ ಕಲಿತವರೂ ಹೇಳಬಲ್ಲರು.

ಕೇಳಲು, ನೋಡಲು ಅದೆಷ್ಟು ಸರಳವೆಂದು ತೋರಿದರೂ ಕೀಬೋರ್ಡ್ ಕೆಲಸಮಾಡುವ ವಿಧಾನ ಸಾಕಷ್ಟು ಸಂಕೀರ್ಣವಾದದ್ದೇ. ಹಾಗೆ ನೋಡಿದರೆ ಅದನ್ನೊಂದು ಸಣ್ಣ ಕಂಪ್ಯೂಟರ್ ಎಂದೇ ಕರೆಯಬಹುದು. ಬಳಕೆದಾರರು ಯಾವ ಕೀಲಿಯನ್ನು ಒತ್ತಿದ್ದಾರೆ ಎಂದು ಪತ್ತೆಮಾಡಿ ಸೂಕ್ತ ಸಂಕೇತದ ಮೂಲಕ ಆ ಮಾಹಿತಿಯನ್ನು ಕಂಪ್ಯೂಟರಿಗೆ ತಿಳಿಸಲು ಬೇಕಾದ ವ್ಯವಸ್ಥೆಯೆಲ್ಲ ಕೀಬೋರ್ಡಿನಲ್ಲಿರುತ್ತದೆ.

ಬುಧವಾರ, ಸೆಪ್ಟೆಂಬರ್ 12, 2012

ಫ್ಲ್ಯಾಶ್ ನ್ಯೂಸ್!

ಟಿ. ಜಿ. ಶ್ರೀನಿಧಿ

ಮೂರೂವರೆಸಾವಿರದ ಮೊಬೈಲ್ ಆಗಿರಲಿ, ಅದಕ್ಕಿಂತ ಹತ್ತು ಪಟ್ಟು ಹೆಚ್ಚಿನ ಬೆಲೆಯ ಡಿಎಸ್‌ಎಲ್‌ಆರ್ ಆಗಿರಲಿ, ನಮ್ಮಲ್ಲಿರುವ ಕ್ಯಾಮೆರಾ ಬಳಸಿ ಒಳ್ಳೆಯ ಚಿತ್ರಗಳನ್ನು ಕ್ಲಿಕ್ಕಿಸಬೇಕೆನ್ನುವುದೇ ನಮ್ಮೆಲ್ಲರ ಆಸೆ. ಕ್ಯಾಮೆರಾದಲ್ಲಿರುವ ಬೇರೆಬೇರೆ ಮೋಡ್‌ಗಳನ್ನು ಬಳಸುವುದು, ವಿಭಿನ್ನ ಕೋನಗಳಿಂದ ಚಿತ್ರ ತೆಗೆಯಲು ಪ್ರಯತ್ನಿಸುವುದು - ಎಲ್ಲವೂ ಇದೇ ಉದ್ದೇಶಕ್ಕಾಗಿಯೇ ಅಲ್ಲವೆ?

ಹೀಗೆ ಚಿತ್ರಗಳನ್ನು ಕ್ಲಿಕ್ಕಿಸುವಾಗ ನಮ್ಮ ಕೈಲಿರುವ ಕ್ಯಾಮೆರಾ ಹಾಗೂ ಅದರ ಮುಂದಿರುವ ದೃಶ್ಯದಷ್ಟೇ ಮಹತ್ವದ ವಿಷಯ ಇನ್ನೊಂದಿದೆ. ಅದೇ ಬೆಳಕು. ಬೆಳಕಿನ ಸಂಯೋಜನೆ ಸರಿಯಿಲ್ಲದೆ ಎಷ್ಟೇ ಅದ್ಭುತವಾದ ದೃಶ್ಯವನ್ನು ಕ್ಲಿಕ್ಕಿಸಿದರೂ ಒಳ್ಳೆಯ ಚಿತ್ರ ಸಿಗುವುದು ಅಸಾಧ್ಯವೆಂದೇ ಹೇಳಬಹುದು.

ಹಾಗೆಂದಮಾತ್ರಕ್ಕೆ ಎಲ್ಲ ಸನ್ನಿವೇಶಗಳಲ್ಲೂ ಫೋಟೋ ತೆಗೆಯಲು ಅನುಕೂಲಕರವಾದ ಬೆಳಕನ್ನು ನಿರೀಕ್ಷಿಸುವಂತಿಲ್ಲವಲ್ಲ?

ಸೋಮವಾರ, ಸೆಪ್ಟೆಂಬರ್ 10, 2012

ಅನಿಸಿಕೆ ತಿಳಿಸಿ ಬಹುಮಾನ ಗೆಲ್ಲಿ!

ಇಜ್ಞಾನ ಡಾಟ್ ಕಾಮ್‌ನಲ್ಲಿ ವಾರಕ್ಕೊಂದರಂತೆ ಪ್ರಕಟವಾಗುತ್ತಿರುವ ತಂತ್ರಜ್ಞಾನ ಲೇಖನಗಳನ್ನು ನೀವು ಗಮನಿಸಿದ್ದೀರಿ. ಪ್ರತಿ ಮಂಗಳವಾರ ಉದಯವಾಣಿಯ ಜೋಶ್ ಪುರವಣಿಯಲ್ಲಿ ಮೂಡಿಬರುವ ಈ ಅಂಕಣದ ನೂರನೆಯ ಕಂತು ಇನ್ನು ಕೆಲವೇ ವಾರಗಳಲ್ಲಿ ಪ್ರಕಟವಾಗಲಿದೆ.

ನೂರನೆಯ ಕಂತಿನಲ್ಲಿ ನೀವು ಯಾವ ವಿಷಯದ ಕುರಿತ ಬರೆಹವನ್ನು ಓದಲು ಇಷ್ಟಪಡುತ್ತೀರಿ?

ನಿಮ್ಮ ಅನಿಸಿಕೆಯನ್ನು ಸೆಪ್ಟೆಂಬರ್ ೩೦, ೨೦೧೨ರೊಳಗೆ ನಮಗೆ ತಿಳಿಸಿ. ಆಯ್ಕೆಯಾದ ಉತ್ತರಕ್ಕೆ ಇಜ್ಞಾನ ಡಾಟ್ ಕಾಮ್ ವತಿಯಿಂದ ವಿಶೇಷ ಬಹುಮಾನವಿದೆ!*


*ಷರತ್ತುಗಳು ಅನ್ವಯಿಸುತ್ತವೆ.

ಗುರುವಾರ, ಸೆಪ್ಟೆಂಬರ್ 6, 2012

ಹುಲಿ ಉಳಿಸುವ ದಾರಿ

ಇಜ್ಞಾನ ವಾರ್ತೆ


ಹೆಸರಾಂತ ವನ್ಯಜೀವಿ ಚಿತ್ರನಿರ್ಮಾಪಕ ಶ್ರೀ ಶೇಖರ್ ದತ್ತಾತ್ರಿಯವರು ನಿರ್ಮಿಸಿರುವ 'ದ ಟ್ರುಥ್ ಅಬೌಟ್ ಟೈಗರ್ಸ್' ಸಾಕ್ಷ್ಯಚಿತ್ರದ ಕನ್ನಡ ಆವೃತ್ತಿ ಇಂದು (ಸೆಪ್ಟೆಂಬರ್ ೬) ಸಂಜೆ ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಬಿಡುಗಡೆಯಾಯಿತು. ಅಳಿವಿನಂಚಿನಲ್ಲಿರುವ ಭಾರತದ ರಾಷ್ಟ್ರಪ್ರಾಣಿ ಹುಲಿಯನ್ನೂ, ಅದರ ನೈಜ ನೆಲೆಗಳನ್ನೂ ಸಂರಕ್ಷಿಸುವ ಅಗತ್ಯ ಮತ್ತು ಅದಕ್ಕಾಗಿ ಅನುಸರಿಸಬೇಕಾದ ಕ್ರಮಗಳನ್ನು ಈ ಸಾಕ್ಷ್ಯಚಿತ್ರ ನಿರೂಪಿಸುತ್ತದೆ. ಈ ಪರಿಣಾಮಕಾರಿ ಚಿತ್ರವನ್ನು 'ಹುಲಿ ಉಳಿಸುವ ದಾರಿ' ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿರುವವರು ಶ್ರೀ ಟಿ. ಎಸ್. ಗೋಪಾಲ್ ಹಾಗೂ ಡಾ| ಕೆ. ಉಲ್ಲಾಸ ಕಾರಂತ.

ಯಾವುದೇ ವಾಣಿಜ್ಯ ಉದ್ದೇಶಗಳಿಲ್ಲದ ಈ ಚಿತ್ರ ಹಾಗೂ ಅದರಲ್ಲಿರುವ ಮಾಹಿತಿಯ ಬಗ್ಗೆ ಹೆಚ್ಚಿನ ವಿವರಗಳನ್ನು www.truthabouttigers.org ಜಾಲತಾಣದಲ್ಲಿ ಪಡೆಯಬಹುದು. ಅಷ್ಟೇ ಅಲ್ಲ, ಸಂಪೂರ್ಣ ಸಾಕ್ಷ್ಯಚಿತ್ರವನ್ನು ಯುಟ್ಯೂಬ್‌ನಲ್ಲಿ (www.youtube.com/truthabouttigers) ಮುಕ್ತವಾಗಿ ವೀಕ್ಷಿಸಲೂಬಹುದು.

ಮಂಗಳವಾರ, ಸೆಪ್ಟೆಂಬರ್ 4, 2012

ಮೋಡ್ ಮೋಡಿ ನೋಡಿ!

ಟಿ. ಜಿ. ಶ್ರೀನಿಧಿ

ಮೊಬೈಲ್ ಫೋನಿನಲ್ಲಿರುವ ಕ್ಯಾಮೆರಾದಿಂದ ಪ್ರಾರಂಭಿಸಿ ಡಿಎಸ್‌ಎಲ್‌ಆರ್‌ವರೆಗೆ ನಾವೆಲ್ಲ ಅನೇಕ ರೀತಿಯ ಡಿಜಿಟಲ್ ಕ್ಯಾಮೆರಾಗಳನ್ನು ಬಳಸುತ್ತೇವೆ. ಬೇಕಾದಷ್ಟು ಚಿತ್ರಗಳನ್ನು ಕ್ಲಿಕ್ಕಿಸುತ್ತೇವೆ.

ನಾವು ಏನನ್ನು ಕ್ಲಿಕ್ಕಿಸಲು ಹೊರಟಿದ್ದೇವೋ ಆ ವಿಷಯಕ್ಕೆ ತಕ್ಕಂತೆ ಕ್ಯಾಮೆರಾದ ತಾಂತ್ರಿಕ ಸಂಯೋಜನೆಯನ್ನು ಬದಲಾಯಿಸಿಕೊಂಡರೆ ಉತ್ತಮ ಚಿತ್ರಗಳನ್ನು ಸೆರೆಹಿಡಿಯುವುದು ಸಾಧ್ಯವಾಗುತ್ತದೆ. ಮನೆಯೊಳಗೆ ಆಡುತ್ತಿರುವ ಮಗುವಿರಲಿ, ರಸ್ತೆಯಲ್ಲಿ ಓಡುತ್ತಿರುವ ಮರ್ಸಿಡಿಸ್ ಕಾರೇ ಇರಲಿ, ಬೇರೆಬೇರೆ 'ಮೋಡ್'ಗಳನ್ನು ಬಳಸಿ ಕ್ಯಾಮೆರಾದ ತಾಂತ್ರಿಕ ಸಂಯೋಜನೆಯನ್ನು ನಾವು ಕ್ಲಿಕ್ಕಿಸಲಿರುವ ಚಿತ್ರಕ್ಕೆ ಸರಿಯಾಗಿ ಹೊಂದಿಸಿಕೊಳ್ಳಬಹುದು.

ಬಹುತೇಕ ಕ್ಯಾಮೆರಾಗಳಲ್ಲಿ ವೃತ್ತಾಕಾರದ ಒಂದು ಪುಟ್ಟ ಡಯಲ್ ಅನ್ನು ತಿರುಗಿಸುವ ಮೂಲಕ ಮೋಡ್‌ಗಳನ್ನು ಬದಲಿಸಿಕೊಳ್ಳುವುದು ಸಾಧ್ಯ (ಚಿತ್ರ ನೋಡಿ). ಮೊಬೈಲುಗಳಲ್ಲಿ ಇಂತಹ ಡಯಲ್ ಇಲ್ಲದಿದ್ದರೂ ಕೂಡ ಕ್ಯಾಮೆರಾದ ಆಯ್ಕೆಗಳಲ್ಲೇ ನಮಗೆ ಬೇಕಾದ ಮೋಡ್ ಅನ್ನು ಆರಿಸಿಕೊಳ್ಳಬಹುದು. ಇಂತಹ ಕೆಲ 'ಮೋಡ್'ಗಳ ಪರಿಚಯ ಇಲ್ಲಿದೆ.

ಮಂಗಳವಾರ, ಆಗಸ್ಟ್ 28, 2012

ಫಾಂಟ್ ಫಂಡಾ!

ಟಿ. ಜಿ. ಶ್ರೀನಿಧಿ

ಕಂಪ್ಯೂಟರಿನ ಮುಂದೆ ಕುಳಿತಿದ್ದಷ್ಟೂ ಹೊತ್ತು ನಮ್ಮ ಸುತ್ತ ಮಾಹಿತಿಯ ಮಹಾಸಾಗರವೇ ಹರಡಿಕೊಂಡಿರುತ್ತದೆ, ಮತ್ತು ಅದರಲ್ಲಿ ಬಹುಪಾಲು ಪಠ್ಯರೂಪದಲ್ಲೇ ಇರುತ್ತದೆ. ಕಂಪ್ಯೂಟರ್ ಬಿಟ್ಟು ಎದ್ದಮೇಲೂ ಅಷ್ಟೆ: ಮೇಜಿನ ಮೇಲಿನ ಪತ್ರಿಕೆ, ಪಕ್ಕದ ರಸ್ತೆಯ ಲೈಬ್ರರಿಯಿಂದ ತಂದಿರುವ ಪುಸ್ತಕ, ಬೆಳಿಗ್ಗೆ ಪೇಪರಿನ ಜೊತೆ ಬಂದ ಪಾಂಪ್ಲೆಟ್ಟು, ಪೋಸ್ಟಿನಲ್ಲಿ ಬಂದಿರುವ ಟೆಲಿಫೋನ್ ಬಿಲ್ಲು - ಹೀಗೆ ಅಲ್ಲೂ ಭಾರೀ ಪ್ರಮಾಣದ ಮಾಹಿತಿ ಕಂಪ್ಯೂಟರಿನ ಸಹಾಯದಿಂದಲೇ ಮುದ್ರಿತವಾಗಿರುವುದು ನಮ್ಮ ಗಮನಕ್ಕೆ ಬರುತ್ತದೆ.

ಇಷ್ಟೆಲ್ಲ ಮಾಹಿತಿಯನ್ನು ನಮಗೆ ತಲುಪಿಸುವ ಮಹತ್ವದ ಜವಾಬ್ದಾರಿ ಅಕ್ಷರಗಳದು. ಈ ಅಕ್ಷರಗಳ ಅನನ್ಯಲೋಕ ಕಂಪ್ಯೂಟರ್‌ನಲ್ಲಿ ತೆರೆದುಕೊಳ್ಳುವ ಬಗೆಯತ್ತ ಒಂದು ನೋಟ ಇಲ್ಲಿದೆ.

ಮಂಗಳವಾರ, ಆಗಸ್ಟ್ 21, 2012

ಪಿಕ್ಚರ್ ವಿಷಯ!

ಟಿ. ಜಿ. ಶ್ರೀನಿಧಿ

ಒಂದು ಚಿತ್ರ ಸಾವಿರ ಪದಗಳಿಗೆ ಸಮವಂತೆ. ಸುದೀರ್ಘ ವಿವರಣೆ ಸೇರಿಸಿ ಪೇಜುಗಟ್ಟಲೆ ಬರೆದರೂ ಪರಿಣಾಮಕಾರಿಯಾಗಿ ಹೇಳಲಾಗದ್ದನ್ನು ಒಂದೇ ಒಂದು ಚಿತ್ರ ಹೇಳಬಲ್ಲದು ಎನ್ನುವುದು ಈ ಮಾತಿನ ಅಭಿಪ್ರಾಯ; ಅದು ಅಕ್ಷರಶಃ ನಿಜವೂ ಹೌದು.

ಸಾವಿರ ಪದಗಳಿಗೆ ಪರ್ಯಾಯವಾದ ಇಂತಹ ಅದೆಷ್ಟೋ ಚಿತ್ರಗಳು ಕಂಪ್ಯೂಟರಿನೊಳಗೆ ಕಡತಗಳಾಗಿ ಕುಳಿತಿರುತ್ತವಲ್ಲ, ಅಂತಹುದೊಂದು ಕಡತದ ಬಾಲಂಗೋಚಿ, ಅಂದರೆ ಫೈಲ್ ಎಕ್ಸ್‌ಟೆನ್ಷನ್ ನೋಡಿಯೇ ಆ ಚಿತ್ರದ ಬಗೆಗೆ ಒಂದಷ್ಟು ಮಾಹಿತಿ ತಿಳಿದುಕೊಳ್ಳಬಹುದು. ಚಿತ್ರದ ಹೆಸರಿನ ಬಗೆಗೆ ಅದರ ಬಾಲಂಗೋಚಿ ತೆರೆದಿಡುವ ಈ ವಿವರಗಳನ್ನು ಸಾವಿರ ಪದಗಳೊಳಗೇ ವಿವರಿಸುವ ಪ್ರಯತ್ನ ಈ ಲೇಖನದಲ್ಲಿದೆ.

ಸೋಮವಾರ, ಆಗಸ್ಟ್ 20, 2012

ಪಶ್ಚಿಮ ಘಟ್ಟ - ನಮಗೆಷ್ಟು ಗೊತ್ತು?

'ಪಶ್ಚಿಮ ಘಟ್ಟ - ನಮಗೆಷ್ಟು ಗೊತ್ತು?' ವಿಷಯದ ಕುರಿತು ಭಾಷಣ-ಪ್ರಶ್ನೋತ್ತರ ಕಾರ್ಯಕ್ರಮ ಇಂದು (ಆಗಸ್ಟ್ ೨೦) ಸಂಜೆ ೪ ಗಂಟೆಗೆ ಬೆಂಗಳೂರಿನ ಆರ್ ವಿ ರಸ್ತೆಯಲ್ಲಿರುವ ಆರ್ ವಿ ಟೀಚರ್ಸ್ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ.

ಅದಮ್ಯ ಚೇತನ ಸಂಸ್ಥೆ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ವಿಷಯ ತಜ್ಞರಾದ ಶ್ರೀ ಪ್ರವೀಣ್ ಭಾರ್ಗವ್ ಅವರು ವಿಷಯ ಮಂಡನೆ ಮಾಡಲಿದ್ದಾರೆ.

ಆಮಂತ್ರಣ ಪತ್ರವನ್ನು ದೊಡ್ಡ ಗಾತ್ರದಲ್ಲಿ ನೋಡಲು ಪಕ್ಕದಲ್ಲಿರುವ ಚಿತ್ರದ ಮೇಲೆ ಕ್ಲಿಕ್ ಮಾಡಿ.

ಮಂಗಳವಾರ, ಆಗಸ್ಟ್ 14, 2012

ನೆಟ್ ಬ್ಯಾಂಕಿಂಗ್ ನೋಟ

ಟಿ. ಜಿ. ಶ್ರೀನಿಧಿ

ಕಳೆದ ವಾರ ಕಂಪ್ಯೂಟರ್ ಸುರಕ್ಷತಾ ಸಂಸ್ಥೆ ಕಾಸ್ಪರ್‌ಸ್ಕೀ ಲ್ಯಾಬ್ಸ್ ಕಡೆಯಿಂದ ಒಂದು ಸುದ್ದಿ ಬಂತು; 'ಗಾಸ್' ಎಂಬ ಹೊಸ ಕುತಂತ್ರಾಂಶ ಪತ್ತೆಯಾಗಿದೆ ಎನ್ನುವುದು ಈ ಸುದ್ದಿಯ ಸಾರಾಂಶ. ಈ ಹಿಂದೆ ಪತ್ತೆಯಾಗಿದ್ದ, ಸೈಬರ್ ಯುದ್ಧದ ಅಸ್ತ್ರ ಎಂದು ಪರಿಗಣಿಸಲಾಗಿದ್ದ 'ಫ್ಲೇಮ್'ನಂತೆಯೇ ಈ ಹೊಸ ಕುತಂತ್ರಾಂಶವೂ ಯಾವುದೋ ಸರಕಾರದ ಬೆಂಬಲದಿಂದಲೇ ರೂಪುಗೊಂಡಿರಬೇಕು ಎಂಬ ಸಂಶಯವನ್ನು ಕಾಸ್ಪರ್‌ಸ್ಕೀ ಸಂಸ್ಥೆಯ ತಂತ್ರಜ್ಞರು ವ್ಯಕ್ತಪಡಿಸಿದ್ದಾರೆ.

ಸ್ಟಕ್ಸ್‌ನೆಟ್ ಹೋಗಿ ಫ್ಲೇಮ್ ಬಂತು ಎನ್ನುವಷ್ಟರಲ್ಲಿ ಇದೇನಪ್ಪ ಇದು ಇನ್ನೊಂದು ತಾಪತ್ರಯ ವಕ್ಕರಿಸಿಕೊಂಡಿತಲ್ಲ ಎಂದುಕೊಳ್ಳುತ್ತಿರುವಂತೆಯೇ ಈ ಹೊಸ ಕುತಂತ್ರಾಂಶದ ಒಂದು ಅಂಶ ಗಮನಸೆಳೆಯಿತು: ಆನ್‌ಲೈನ್ ಬ್ಯಾಂಕಿಂಗ್ ಖಾತೆಯ ವಿವರಗಳನ್ನು ಕದಿಯುವುದು ಇದರ ವೈಶಿಷ್ಟ್ಯಗಳಲ್ಲೊಂದಂತೆ!

ಶುಕ್ರವಾರ, ಆಗಸ್ಟ್ 10, 2012

ಜೈವಿಕ ಇಂಧನ ಕ್ರಾಂತಿ: ಮಲ್ಲಿಗೆವಾಳು ಮೊದಲುಗೊಂಡು..

ಇವತ್ತು (ಆಗಸ್ಟ್ ೧೦) ಅಂತಾರಾಷ್ಟ್ರೀಯ ಜೈವಿಕ ಇಂಧನ ದಿನ. ಇಂದಿನಿಂದ ಮೂರು ದಿನಗಳವರೆಗೆ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ 'ಜೈವಿಕ ಇಂಧನ ಮೇಳ' ನಡೆಯುತ್ತಿದೆ. ಈ ಸಂದರ್ಭದಲ್ಲೊಂದು ವಿಶೇಷ ಲೇಖನ ಪ್ರಕಟಿಸಲು ಇಜ್ಞಾನ ಡಾಟ್ ಕಾಮ್ ಸಂತೋಷಿಸುತ್ತದೆ. ಜೈವಿಕ ಇಂಧನ ಮೇಳದ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ತಾಣಕ್ಕೆ ಭೇಟಿಕೊಡಬಹುದು.

ಟಿ. ಎಸ್. ಗೋಪಾಲ್

ಹಾಸನದಿಂದ ಸಕಲೇಶಪುರಕ್ಕೆ ಹೋಗುವ ಹೆದ್ದಾರಿಯಲ್ಲಿ ಆರೇಳು ಕಿ.ಮೀ. ದೂರ ಹೋದರೆ ಅಲ್ಲೇ ಎಡಕ್ಕೆ ಶೆಟ್ಟಿಹಳ್ಳಿಗೆ ಹೋಗುವ ರಸ್ತೆ. ಆ ರಸ್ತೆಯಲ್ಲಿ ಸ್ವಲ್ಪ ಮುಂದೆ ಹೋಗಿ ಶಂಕರನಹಳ್ಳಿ ದಾಟಿದರೆ, ಬಲಕ್ಕೆ ಮಲ್ಲಿಗೆವಾಳು ಗ್ರಾಮಕ್ಕೆ ಎರಡೇ ಕಿಲೋಮೀಟರು ಎಂಬ ಬೋರ್ಡು ಕಾಣಸಿಗುತ್ತದೆ. ಹಾಸನದಿಂದ ಹನ್ನೆರಡು ಕಿ.ಮೀ. ದೂರದ ಈ ಹಳ್ಳಿಯಲ್ಲಿ ಹೆಚ್ಚೆಂದರೆ ಒಂದು ನೂರು ಕುಟುಂಬಗಳಿವೆ.

ಶಾಲೆಯ ಮುಂದಿನ ಮಣ್ಣುರಸ್ತೆಯಲ್ಲಿ ನಮ್ಮ ವಾಹನ ನಿಲ್ಲುವಾಗ, ಹೊರಗೆ ಆಡುತ್ತಿದ್ದ ಮಕ್ಕಳು, ಆಗಾಗ ಬರುವ ಪ್ರೀತಿಯ ನೆಂಟರನ್ನು ಸ್ವಾಗತಿಸುವಷ್ಟೇ ಸಲಿಗೆಯಿಂದ ಸುತ್ತ ಬಂದು ನಿಂತವು. ಕಚ್ಚಾ ರಸ್ತೆಯಲ್ಲಿ ವಾಹನ ತಮ್ಮನ್ನು ದಾಟಿ ಬರುವಾಗಲೇ ಕೈಬೀಸಿ ನಗುಮುಖ ತೋರಿದ್ದ ನಾಲ್ಕಾರು ಜನ ಶಾಲೆಯತ್ತಲೇ ಬಂದರು.

ಮಂಗಳವಾರ, ಆಗಸ್ಟ್ 7, 2012

ಒಲಿಂಪಿಕ್ಸ್‌ಗೆ ಟ್ವಿಟ್ಟರ್ ಕಾಟ!

ಟಿ. ಜಿ. ಶ್ರೀನಿಧಿ

ಕಳೆದ ವಾರ ಲಂಡನ್ ಒಲಿಂಪಿಕ್ಸ್‌ನಲ್ಲಿ ಪುರುಷರ ಸೈಕ್ಲಿಂಗ್ ಸ್ಪರ್ಧೆ ಇತ್ತಲ್ಲ, ನಗರದ ಹೊರವಲಯದಲ್ಲೂ ಸಾಗಿದ ಈ ಸೈಕಲ್ ರೇಸ್ ವೀಕ್ಷಿಸಲು ಲಕ್ಷಾಂತರ ಜನ ರಸ್ತೆಯ ಇಕ್ಕೆಲಗಳಲ್ಲೂ ನೆರೆದದ್ದು ಟೀವಿ ಪ್ರಸಾರದಲ್ಲಿ ಕಂಡುಬಂತು. ದಾರಿಯುದ್ದಕ್ಕೂ ಎಲ್ಲರೂ ಫೋಟೋ ಕ್ಲಿಕ್ಕಿಸುವವರೇ ಇದ್ದಂತಿತ್ತು.

ರೇಸ್ ನೋಡಿ, ಫೋಟೋ ತೆಗೆದು ಸುಮ್ಮನಿದ್ದರೆ ಆದೀತೆ? ನಾವೆಲ್ಲಿದ್ದೇವೆ, ಏನು ಮಾಡುತ್ತಿದ್ದೇವೆ, ಯಾವ ಫೋಟೋ ತೆಗೆದಿದ್ದೇವೆ, ತೆಗೆದ ಫೋಟೋ ಹೇಗಿದೆ ಎಂಬುದನ್ನೆಲ್ಲ ಅವರು ಫೇಸ್‌ಬುಕ್‌ನಲ್ಲಿ-ಟ್ವಿಟ್ಟರಿನಲ್ಲಿ ಪ್ರಕಟಿಸಲು ಪ್ರಾರಂಭಿಸಿದರು.

ಮೊದಲೇ ನಗರದ ಹೊರವಲಯ, ಅಲ್ಲಿನ ನೆಟ್‌ವರ್ಕ್ ಹೇಗಿತ್ತೋ ಏನೋ. ಇಷ್ಟೆಲ್ಲ ಮಾಹಿತಿಯ ಪ್ರವಾಹ ಒಂದೇ ಬಾರಿಗೆ ದೂರವಾಣಿ ಜಾಲದತ್ತ ನುಗ್ಗುತ್ತಿದ್ದಂತೆ ನೆಟ್‌ವರ್ಕ್ ಪೂರ್ತಿ ಸುಸ್ತುಹೊಡೆದುಬಿಟ್ಟಿತಂತೆ.

ಇದರ ಅನಿರೀಕ್ಷಿತ ಪರಿಣಾಮವಾದದ್ದು ಪಂದ್ಯದ ನೇರಪ್ರಸಾರದ ಮೇಲೆ. ಯಾವ ಸ್ಪರ್ಧಿಗಳು ಯಾವ ಸ್ಥಾನದಲ್ಲಿದ್ದಾರೆ ಎನ್ನುವ ಮಾಹಿತಿ ಸೈಕಲ್‌ಗಳಲ್ಲಿ ಅಳವಡಿಸಲಾಗಿದ್ದ ಪುಟಾಣಿ ಜಿಪಿಎಸ್ ಟ್ರಾನ್ಸ್‌ಮಿಟರುಗಳಿಂದ ಹೊರಟು ಮೊಬೈಲ್ ದೂರವಾಣಿ ಜಾಲದ ಮೂಲಕ ಒಲಿಂಪಿಕ್ಸ್ ಬ್ರಾಡ್‌ಕಾಸ್ಟಿಂಗ್ ಸರ್ವಿಸ್‌ಗೆ ತಲುಪಬೇಕಿತ್ತು. ಆದರೆ ಮಾಹಿತಿಯ ಈ ಸಣ್ಣ ಹರಿವು ಟ್ವಿಟ್ಟರ್-ಫೇಸ್‌ಬುಕ್‌ನತ್ತ ಹರಿಯುತ್ತಿದ್ದ ಮಹಾಪೂರದಲ್ಲಿ ಕೊಚ್ಚಿಹೋಗಿ ಟೀವಿ ಪ್ರಸಾರಕ್ಕೆ ಪಂದ್ಯದ ಅಂಕಿಅಂಶಗಳೇ ಸಿಗದ ಪರಿಸ್ಥಿತಿ ನಿರ್ಮಾಣವಾಗಿಬಿಟ್ಟಿತ್ತು.

ಸೋಶಿಯಲ್ ನೆಟ್‌ವರ್ಕ್‌ಗಳು ನಮ್ಮ ದೈನಂದಿನ ಬದುಕಿನ ಅಂಗವೇ ಆಗಿಹೋಗಿರುವ ಪರಿಗೆ ಇದೊಂದು ಸಣ್ಣ ಉದಾಹರಣೆಯಷ್ಟೆ.

ಭಾನುವಾರ, ಆಗಸ್ಟ್ 5, 2012

ಬುಕ್ ಆಫ್ ಟೀ

ಪತ್ರಕರ್ತ ಮಿತ್ರ ಕುಮಾರ್ ಒಂದು ವಿಶಿಷ್ಟ ಪುಸ್ತಕ ಬರೆದಿದ್ದಾರೆ. ಚಹಾದ ಬಗೆಗಿನ 'ಬುಕ್ ಆಫ್ ಟೀ' ಇದು. ಚಹಾದ ವಿಧಗಳು, ಇತಿಹಾಸ ಇತ್ಯಾದಿಗಳಿಂದ ಟೀ ಕುರಿತಾದ ಕತೆ-ಕವನಗಳವರೆಗೆ ಸಾಕಷ್ಟು ಕುತೂಹಲಕರ ಮಾಹಿತಿ ಇಲ್ಲಿದೆ. ಬಗೆಬಗೆಯ ಚಹಾ ಮಾಡುವ ವಿಧಾನವೂ ಇದೆ!

ಕನ್ನಡದ ಮಟ್ಟಿಗೆ ಈ ಪ್ರಯತ್ನ ನಿಜಕ್ಕೂ ವಿನೂತನ. ಇಂತಹುದೊಂದು ಪ್ರಯತ್ನ ಮಾಡಿರುವ ಕುಮಾರ್‌ ಅವರನ್ನು ಇಜ್ಞಾನ ಡಾಟ್ ಕಾಮ್ ಅಭಿನಂದಿಸುತ್ತದೆ.
ಬುಕ್ ಆಫ್ ಟೀ
ಲೇಖಕರು: ಕುಮಾರ್ ಎಸ್.
೧೦೬ ಪುಟಗಳು, ಬೆಲೆ ರೂ. ೧೦೦/-
ಪ್ರಕಾಶಕರು: ಪಲ್ಲವ ಪ್ರಕಾಶನ, ಚನ್ನಪಟ್ಟಣ
badge