ವಿಜ್ಞಾನದ ಕಲಿಕೆ ಕಬ್ಬಿಣದ ಕಡಲೆಯಾಗದೆ ಖುಷಿಕೊಡುವ ಕೆಲಸವಾಗಬೇಕೆಂದು ನಂಬಿರುವ, ತಮ್ಮ ವಿದ್ಯಾರ್ಥಿಗಳಿಗೆ ಅದೇ ಅನುಭವವನ್ನು ಕಟ್ಟಿಕೊಡುತ್ತಿರುವ ಅಪರೂಪದ ಶಿಕ್ಷಕರಲ್ಲಿ ಶ್ರೀ ನಾರಾಯಣ ಬಾಬಾನಗರ ಕೂಡ ಒಬ್ಬರು. ವಿಜಾಪುರ ಸಮೀಪದ ಕಾಖಂಡಕಿಯವರಾದ ನಾರಾಯಣರು ಪ್ರಾಣಿಶಾಸ್ತ್ರ ಹಾಗೂ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವೀಧರರು. ಪ್ರೌಢಶಾಲಾ ವಿಜ್ಞಾನ ಶಿಕ್ಷಕರಾಗಿರುವ ಅವರು ಆಟಿಕೆಗಳ ಮೂಲಕ ಪಾಠ ಹೇಳುವ ವಿನೂತನ ಪ್ರಯೋಗ ಮಾಡಿದ್ದಾರೆ, ಹಲವೆಡೆಗಳಲ್ಲಿ ಪ್ರಾತ್ಯಕ್ಷಿಕೆಗಳನ್ನೂ ನೀಡಿದ್ದಾರೆ. ಪತ್ರಿಕಾ ಲೇಖನಗಳಷ್ಟೇ ಅಲ್ಲದೆ 'ಕುಂಟಾಬಿಲ್ಲೆ', 'ವಿಜ್ಞಾನ ವಿಹಾರ', 'ಬಣ್ಣದ ಬಾಲಂಗೋಚಿ', 'ಕೌತುಕದ ಚುಚ್ಚುಮದ್ದು! ...ಸೋಜಿಗದ ಸೂಜಿಮದ್ದು', 'ಆಹಾ! ಆಟಿಕೆಗಳು' ಮುಂತಾದ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಸಿ. ಎನ್. ಆರ್. ರಾವ್ ಶಿಕ್ಷಣ ಪ್ರತಿಷ್ಠಾನದ 'ಉತ್ತಮ ವಿಜ್ಞಾನ ಶಿಕ್ಷಕ' ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಭಾಜನರಾಗಿದ್ದಾರೆ. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ...ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ನಾನು ಕಲಿತಿದ್ದು ಒಂದು ಚಿಕ್ಕ ಹಳ್ಳಿಯ ಸರಕಾರಿ ಶಾಲೆಯಲ್ಲಿ. ಅಲ್ಲಿ ಪರಿಸರದ ಬೆರಗುಗಳಿಗೆ ಉತ್ತರಗಳು ಅಂತ ಸಿಕ್ಕಿದ್ದು ತುಂಬಾ ಅಪರೂಪ. ಉತ್ತರ ಕೇಳಿದಾಗ ಹೇಳಬೇಕಾದವರಿಂದ ನಿರಾಶೆ ಸಿಕ್ಕಿದ್ದೇ ಹೆಚ್ಚು ಸಲ. ಪ್ರೌಢ ಶಿಕ್ಷಣ ಮುಗಿಸಿ ನಗರದ ಕಾಲೇಜಿಗೆ ಸೇರಿದಾಗ ಕೀಳರಿಮೆಯೇ ತುಂಬಿ ತುಳುಕಾಡಿತು. ಪಠ್ಯದ ಆಚೆಗಿನ ವಿಜ್ಞಾನ ಸಂಬಂಧಿ ಪ್ರಶ್ನೆಗಳನ್ನು ಕೇಳಿದಾಗ ಉಡಾಫೆಯ ಉತ್ತರಗಳೇ ದೊರಕಿದವು. ಏಕೆ?ಹೇಗೆ? ಎಂಬ ಪ್ರಶ್ನೆಗಳಿಗೆ ಸಮಾಧಾನದ ಉತ್ತರಗಳು ಅಂತ ಸಿಕ್ಕದ್ದು ಪದವಿ ಓದುವಾಗ.