ಶುಕ್ರವಾರ, ಫೆಬ್ರವರಿ 21, 2014

ನಾವು, ನಮ್ಮ ತಂತ್ರಾಂಶ ಮತ್ತು ಬಳಕೆದಾರ

ಟಿ. ಜಿ. ಶ್ರೀನಿಧಿ

ನಾವು ಬರೆಯುವ ತಂತ್ರಾಂಶದ ಉದ್ದೇಶ ಏನೇ ಇರಬಹುದು, ಆದರೆ ಅದನ್ನು ಸಿದ್ಧಪಡಿಸುವುದರ ಹಿಂದೆ ತಂತ್ರಾಂಶದ ಬಳಕೆದಾರರಿಗೆ ಒಂದಲ್ಲ ಒಂದು ರೀತಿಯಲ್ಲಿ ನೆರವಾಗುವ ಸದುದ್ದೇಶವಂತೂ ಇರುತ್ತದೆ ಎನ್ನಬಹುದು (ಇತರರಿಗೆ ತೊಂದರೆಮಾಡುವ ವೈರಸ್‌ನಂತಹ ಕುತಂತ್ರಾಂಶಗಳ ಮಾತು ಇಲ್ಲಿ ಬೇಡ; ಅಂತಹ ತಂತ್ರಾಂಶಗಳ ರಚನೆ ತಪ್ಪು ಮಾತ್ರವೇ ಅಲ್ಲ, ಅಪರಾಧವೂ ಹೌದು!).

ಬಳಕೆದಾರರಿಗೆ ಉಪಯುಕ್ತವಾಗುವಂತಹ ತಂತ್ರಾಂಶ ಸಿದ್ಧಪಡಿಸುವಲ್ಲಿ ಅನೇಕ ಹೆಜ್ಜೆಗಳಿವೆ: ತಂತ್ರಾಂಶದ ಅಗತ್ಯಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು, ಆ ಅಗತ್ಯಗಳಿಗೆ ತಕ್ಕಂತೆ ಕ್ರಮವಿಧಿಗಳನ್ನು (ಪ್ರೋಗ್ರಾಮ್) ರಚಿಸುವುದು, ಹಾಗೆ ರಚಿಸಿದ ಕ್ರಮವಿಧಿಗಳಲ್ಲಿ ಯಾವುದೇ ತಪ್ಪುಗಳಿಲ್ಲದಂತೆ ನೋಡಿಕೊಳ್ಳುವುದು, ತಂತ್ರಾಂಶದ ಒಟ್ಟಾರೆ ಕಾರ್ಯವಿಧಾನ ಸಮರ್ಪಕವಾಗಿದೆಯೇ ಎಂದು ಪರೀಕ್ಷಿಸುವುದು - ಹೀಗೆ.

ಈ ಎಲ್ಲ ಹೆಜ್ಜೆಗಳಷ್ಟೇ ಮಹತ್ವದ ಇನ್ನೊಂದು ಭಾಗ, ಬಳಕೆದಾರನ ಮಟ್ಟಿಗೆ ತಂತ್ರಾಂಶದ ಬಳಕೆ ಸರಾಗವಾಗಿರುವಂತೆ ನೋಡಿಕೊಳ್ಳುವುದು. ನಾವು ರೂಪಿಸಿರುವ ತಂತ್ರಾಂಶ ಎಷ್ಟೇ ಸಮರ್ಥವಾಗಿದ್ದರೂ ಬಳಕೆದಾರರ ಮಟ್ಟಿಗೆ ಉಪಯೋಗಿಸಲು ಕಷ್ಟವಾಗುವಂತಿದ್ದರೆ ಆ ತಂತ್ರಾಂಶವನ್ನು ರೂಪಿಸಿದ ಮೂಲ ಉದ್ದೇಶವೇ ವಿಫಲವಾದಂತೆ.

ಹಾಗಾಗಿ ತಂತ್ರಾಂಶದ ತಾಂತ್ರಿಕ ವಿವರಗಳಷ್ಟೇ ಅದರ ಅಂತರ ಸಂಪರ್ಕ ಸಾಧನ (ಯೂಸರ್ ಇಂಟರ್‌ಫೇಸ್, ಯುಐ) ಕೂಡ ಮುಖ್ಯವಾಗುತ್ತದೆ. ಈ ಅಂತರ ಸಂಪರ್ಕ ಸಾಧನದ ವಿನ್ಯಾಸ (ಯುಐ ಡಿಸೈನ್), ಹಾಗಾಗಿಯೇ, ತಂತ್ರಾಂಶ ಅಭಿವೃದ್ಧಿಯ ಪ್ರಮುಖ ಭಾಗಗಳಲ್ಲೊಂದು.

ಭಾನುವಾರ, ಫೆಬ್ರವರಿ 16, 2014

ಡಾಟ್ ಕಾಮ್ ಕತೆಗೆ ಹೊಸದೊಂದು ತಿರುವು

ಟಿ. ಜಿ. ಶ್ರೀನಿಧಿ

ವಿಶ್ವವ್ಯಾಪಿ ಜಾಲ (ವರ್ಲ್ಡ್‌ವೈಡ್ ವೆಬ್) ನಮ್ಮ ಕಣ್ಣಮುಂದೆ ಮಾಹಿತಿಯ ಮಹಾಸಾಗರವನ್ನೇ ತಂದಿಟ್ಟಿದೆಯಲ್ಲ, ಅಷ್ಟೆಲ್ಲ ಮಾಹಿತಿ ನಮಗೆ ದೊರಕುವುದು ವೆಬ್‌ಸೈಟ್, ಅಂದರೆ ಜಾಲತಾಣಗಳ ಮೂಲಕ. ಈ ಜಾಲತಾಣಗಳನ್ನು ಬಹಳಷ್ಟು ಜನ ಗುರುತಿಸುವುದು ಡಾಟ್ ಕಾಮ್‌ಗಳೆಂದೇ.

'ಡಾಟ್ ಕಾಮ್' ಎನ್ನುವುದು ಜಾಲತಾಣಗಳ ಹೆಸರಿಗೆ ಪರ್ಯಾಯವಾಗಿ ಬೆಳೆದುಬಿಟ್ಟಿದ್ದರೂ ವಾಸ್ತವದಲ್ಲಿ ಅದು ಜಾಲತಾಣಗಳ ವಿಳಾಸದ ಒಂದು ಭಾಗವಷ್ಟೇ.

ವಿಶ್ವವ್ಯಾಪಿ ಜಾಲದಲ್ಲಿರುವ ಕೋಟ್ಯಂತರ ತಾಣಗಳನ್ನು ಪ್ರತ್ಯೇಕವಾಗಿ ಗುರುತಿಸುವ ವಿಳಾಸ - ಯೂನಿಫಾರ್ಮ್ ರಿಸೋರ್ಸ್ ಲೊಕೇಟರ್ (ಯುಆರ್‌ಎಲ್) - ಇರುತ್ತದಲ್ಲ, ಅದರ ಕೊನೆಯ ಭಾಗವನ್ನು ಜೆನೆರಿಕ್ ಟಾಪ್ ಲೆವೆಲ್ ಡೊಮೈನ್ (ಜಿಟಿಎಲ್‌ಡಿ) ಎಂದು ಕರೆಯುತ್ತಾರೆ.

ಡಾಟ್ ಕಾಮ್ ಎನ್ನುವುದು ಇಂತಹ ಜಿಟಿಎಲ್‌ಡಿಗಳಲ್ಲೊಂದು. ಡಾಟ್ ಕಾಮ್ ಅಲ್ಲದೆ .net, .org, .biz, .edu ಮುಂತಾದ ಇನ್ನೂ ಅನೇಕ ಜಿಟಿಎಲ್‌ಡಿಗಳು ಬಳಕೆಯಲ್ಲಿವೆ. ಇವಷ್ಟರ ಜೊತೆಗೆ ಜಾಲತಾಣ ಯಾವ ದೇಶದ್ದು ಎಂದು ಸೂಚಿಸುವ ಕಂಟ್ರಿ ಕೋಡ್ ಟಾಪ್ ಲೆವೆಲ್ ಡೊಮೈನ್(ಸಿಸಿಟಿಎಲ್‌ಡಿ)ಗಳೂ ಇವೆ - ಭಾರತಕ್ಕೆ .in, ಫ್ರಾನ್ಸಿನ ತಾಣಗಳಿಗೆ .fr, ಇಟಲಿಗೆ .it - ಹೀಗೆ.

ನಮ್ಮ ಜಾಲತಾಣದ ಹೆಸರು ಏನೇ ಇದ್ದರೂ ವಿಳಾಸದ ಕೊನೆಯ ಭಾಗಕ್ಕೆ ಮೇಲೆ ಹೇಳಿದ ಯಾವುದೋ ಒಂದು ವಿಸ್ತರಣೆಯನ್ನು ಬಳಸಬೇಕಾದ್ದು ಇಲ್ಲಿಯವರೆಗೂ ಅನಿವಾರ್ಯವಾಗಿತ್ತು. ಹಲವಾರು ವರ್ಷಗಳಿಂದ ಹೆಚ್ಚು ಬದಲಾವಣೆಗಳಿಲ್ಲದೆ ನಡೆದುಕೊಂಡುಬಂದಿದ್ದ ಈ ವ್ಯವಸ್ಥೆಗೆ ಇದೀಗ ಬದಲಾವಣೆಯ ಸಮಯ ಬಂದಿದೆ.

ಶುಕ್ರವಾರ, ಫೆಬ್ರವರಿ 7, 2014

ತಂತ್ರಾಂಶ ಮತ್ತು ತಪ್ಪು!

ಟಿ. ಜಿ. ಶ್ರೀನಿಧಿ

ತಂತ್ರಾಂಶಗಳ ತಯಾರಿ ಹೆಚ್ಚುತ್ತ ಹೋದಂತೆ ಅವುಗಳ ಬಳಕೆಯೂ ಹೆಚ್ಚುವುದು ಸಹಜ. ಹೀಗೆ ತಂತ್ರಾಂಶಗಳ ಬಳಕೆ ಎಲ್ಲ ಕ್ಷೇತ್ರಗಳಲ್ಲೂ ಹೆಚ್ಚುತ್ತಿದ್ದಂತೆ ಅವು ಮಾಡುವ ಕೆಲಸಗಳ ಪ್ರಮಾಣವೂ ಜಾಸ್ತಿಯಾಗುತ್ತದೆ.

ಈಗ ಆಗಿರುವುದೂ ಅದೇ. ಶಾಲೆಯ ಹೋಮ್‌ವರ್ಕ್‌ನಿಂದ ದೇಶದ ಸುರಕ್ಷತೆಯವರೆಗೆ, ಬ್ಯಾಂಕ್ ವ್ಯವಹಾರದಿಂದ ವೈಜ್ಞಾನಿಕ ಸಂಶೋಧನೆಯವರೆಗೆ ಅದೆಷ್ಟೋ ಕ್ಷೇತ್ರಗಳಲ್ಲಿ ಅದೆಷ್ಟೋ ಕೆಲಸಗಳಿಗಾಗಿ ತಂತ್ರಾಂಶಗಳು ಬಳಕೆಯಾಗುತ್ತವೆ. ಅನೇಕ ಕಡೆಗಳಲ್ಲಂತೂ ಕಂಪ್ಯೂಟರ್ ಇಲ್ಲದೆ ಕೆಲಸವೇ ನಡೆಯದ ಪರಿಸ್ಥಿತಿ ಬಂದುಬಿಟ್ಟಿದೆ; ಆನ್‌ಲೈನ್ ಬ್ಯಾಂಕಿಂಗ್ ಬೇಡ, ಮನಿಯಾರ್ಡರ್ ಕಳುಹಿಸುತ್ತೇನೆಂದರೂ ಪೋಸ್ಟ್ ಆಫೀಸಿನ ಕಂಪ್ಯೂಟರ್ ನೆಚ್ಚಿಕೊಳ್ಳಬೇಕಾದ ಕಾಲ ಇದು!

ಪರಿಸ್ಥಿತಿ ಹೀಗಿರುವಾಗ ನಾವು ಬಳಸುವ ತಂತ್ರಾಂಶಗಳು ಅತ್ಯಂತ ಕರಾರುವಾಕ್ಕಾಗಿ ಕೆಲಸಮಾಡಬೇಕಾದ್ದು ಅನಿವಾರ್ಯವಾಗಿಬಿಡುತ್ತದೆ. ಆದರೆ ತಂತ್ರಾಂಶ ಸಿದ್ಧಪಡಿಸುವವರೂ ಮನುಷ್ಯರೇ ತಾನೆ, ಹಾಗಾಗಿ ಹಲವಾರು ಬಾರಿ ಅವರ ಕೆಲಸದಲ್ಲಿ ತಪ್ಪುಗಳು ನುಸುಳಿಬಿಡುತ್ತವೆ. ಉದಾಹರಣೆಗೆ ಒಂದು + ಒಂದು = ಎರಡು ಎನ್ನುವ ಬದಲು ಒಂದು + ಒಂದು = ಹನ್ನೊಂದು ಎಂದು ತಂತ್ರಾಂಶದಲ್ಲಿ ಹೇಳಿದ್ದರೆ ನಾವು ಒಂದು + ಒಂದು ಎಷ್ಟು ಎಂದಾಗ ಉತ್ತರ ಹನ್ನೊಂದು ಎಂದೇ ಬರುತ್ತದೆ.

ಕಂಪ್ಯೂಟರಿನ ಲೆಕ್ಕಾಚಾರದಲ್ಲಿ ಆಗುವ ಎಡವಟ್ಟುಗಳಿಗೆ ಇಂತಹ ತಪ್ಪುಗಳೇ ಕಾರಣ. ಕ್ರಮವಿಧಿಗಳನ್ನು ಸರಿಯಾಗಿ ಪರೀಕ್ಷಿಸದೆ ತಂತ್ರಾಂಶ ರೂಪಿಸಿ ಬಳಕೆದಾರರಿಗೆ ಕೊಟ್ಟಾಗ ಇಂತಹ ತಪ್ಪುಗಳು ಅವರಿಗೆ ಸಾಕಷ್ಟು ತೊಂದರೆಕೊಡುತ್ತವೆ, ಹೆಚ್ಚೂಕಡಿಮೆ ತಿಗಣೆಕಾಟದ ಹಾಗೆ. ಇದರಿಂದಲೇ ಈ ತಪ್ಪುಗಳನ್ನು 'ಬಗ್' ಎಂದು ಕರೆಯುತ್ತಾರೆ.

ಗುರುವಾರ, ಫೆಬ್ರವರಿ 6, 2014

ಆ ಕಸ ಇ ಕಸ!

ಟಿ. ಜಿ. ಶ್ರೀನಿಧಿ

ತಂತ್ರಜ್ಞಾನ ನಮ್ಮ ಬದುಕನ್ನು ಆವರಿಸಿಕೊಂಡಿರುವ ಪರಿ ಎಂಥದ್ದು ಎಂದು ತಿಳಿದುಕೊಳ್ಳಬೇಕಾದರೆ ಒಮ್ಮೆ ನಮ್ಮ ಸುತ್ತಮುತ್ತ ಕಣ್ಣಾಡಿಸಿದರೆ ಸಾಕು. ದಿವಾನಖಾನೆಯಲ್ಲಿ ಎಲ್‌ಇಡಿ ಟಿವಿ, ಒಳಗಿನ ಕೋಣೆಯಲ್ಲೊಂದು ಡೆಸ್ಕ್‌ಟಾಪ್ ಕಂಪ್ಯೂಟರ್, ಮೂಲೆಯಲ್ಲೊಂದು ಲ್ಯಾಪ್‌ಟಾಪ್, ಪಕ್ಕದಲ್ಲಿ ಟ್ಯಾಬ್ಲೆಟ್ಟು-ಇಬುಕ್ ರೀಡರ್, ಜೇಬಿನೊಳಗೊಂದು ಮೊಬೈಲು - ನಮ್ಮ ಮನೆಗಳಲ್ಲಿರುವ ಇಲೆಕ್ಟ್ರಾನಿಕ್ ಉಪಕರಣಗಳು ಒಂದೇ ಎರಡೇ!   

ಇದನ್ನೆಲ್ಲ ಒಂದುಸಾರಿ ಕೊಂಡು ತಂದಿಟ್ಟುಕೊಂಡರೆ ಮುಗಿಯುವುದಿಲ್ಲವಲ್ಲ, ಆರುತಿಂಗಳಿಗೋ ವರ್ಷಕ್ಕೋ ಎರಡುವರ್ಷಕ್ಕೋ ಮನೆಯಲ್ಲಿರುವ ಇಲೆಕ್ಟ್ರಾನಿಕ್ ಉಪಕರಣಗಳೆಲ್ಲ ಬದಲಾಗುವುದು ಈಗ ಟ್ರೆಂಡ್ ಅನಿಸಿಕೊಂಡುಬಿಟ್ಟಿದೆ.  ಇರುವುದರ ಜಾಗಕ್ಕೆ ಹೊಸದು ಬರುವುದಷ್ಟೇ ಅಲ್ಲ, ಹೊಸ ಉಪಕರಣಗಳೂ ಆಗಿಂದಾಗ್ಗೆ ಮನೆಯೊಳಕ್ಕೆ ಬರುತ್ತಲೇ ಇರುತ್ತವೆ.

ಹೊಸ ಉಪಕರಣ ಬಂದಮೇಲೆ ಹಳೆಯದಕ್ಕೇನು ಕೆಲಸ? ಎಕ್ಸ್‌ಚೇಂಜೋ, ಸೆಕೆಂಡ್ ಹ್ಯಾಂಡ್ ಮಾರಾಟವೋ ಯಾವುದೋ ಒಂದು ಮಾರ್ಗದಲ್ಲಿ ಹಳೆಯದನ್ನು ನಾವು ಮನೆಯಿಂದ ಆಚೆಹಾಕುತ್ತೇವೆ. ಉಪಯೋಗಿಸಿ ಬೇಸರವಾದ, ಆದರೆ 'ರೀಸೇಲ್ ವ್ಯಾಲ್ಯೂ' ಇಲ್ಲದ ಉಪಕರಣಗಳನ್ನು ಬೇರೆಯವರಿಗೆ ಕೊಟ್ಟು ಕೈತೊಳೆದುಕೊಳ್ಳುವುದೂ ಉಂಟು. ಹಾಗೊಮ್ಮೆ ಯಾವುದಾದರೂ ಹಳೆಯ ಉಪಕರಣ ಮನೆಯಲ್ಲೇ ಉಳಿದುಕೊಂಡರೂ ಶೀಘ್ರದಲ್ಲೇ ಅದಕ್ಕೆ ಗೇಟ್‌ಪಾಸ್ ಸಿಗುವುದು ಗ್ಯಾರಂಟಿ! 

ಹೇಗಾದರೂ ಮಾಡಿ ಹಳೆಯ ಇಲೆಕ್ಟ್ರಾನಿಕ್ ಉಪಕರಣಗಳನ್ನು ಒಮ್ಮೆ ಮನೆಯಿಂದಾಚೆಗೆ ಕಳುಹಿಸುತ್ತಿದ್ದಂತೆ ನಮಗೆ ನೆಮ್ಮದಿ. ಬೇಡದ ವಸ್ತು ಆಚೆಹೋದ ಸಮಾಧಾನ ಅಷ್ಟೇ ಅಲ್ಲ, ಔಟ್‌ಡೇಟೆಡ್ ವಸ್ತು ಮನೆಯಲ್ಲಿದ್ದದ್ದನ್ನು ನೋಡಿದರೆ ಯಾರೇನು ಅಂದುಕೊಳ್ಳುವರೋ ಎಂಬ ಅಂಜಿಕೆಯಿಂದಲೂ ಮುಕ್ತಿ ಸಿಗುತ್ತದಲ್ಲ! 

ಅಷ್ಟೇ ಅಲ್ಲ, ನಾವು ಉಪಯೋಗಿಸುತ್ತಿರುವ ಉಪಕರಣಗಳ ಕೆಟ್ಟುಹೋದ ಬಿಡಿಭಾಗಗಳೂ ಮನೆಯಿಂದಾಚೆ ಹೋಗಲೇಬೇಕು. ಇನ್ನು ಕೆಲಸಮಾಡದ ಬಲ್ಬು - ಟ್ಯೂಬ್‌ಲೈಟು, ಬೇಡದ ಸಿಡಿ - ಡಿವಿಡಿ ಇತ್ಯಾದಿ ಸಣ್ಣಪುಟ್ಟ ವಸ್ತುಗಳಂತೂ ಆಗಿಂದಾಗ್ಗೆ ಕಸದಬುಟ್ಟಿ ಸೇರುತ್ತಲೇ ಇರುತ್ತವೆ.

ಆದರೆ ಹೀಗೆ ಮನೆಯಿಂದಾಚೆ ಹೋಗುವ ಇಲೆಕ್ಟ್ರಾನಿಕ್ ಉತ್ಪನ್ನಗಳು ಮುಂದೆ ಏನಾಗುತ್ತವೆ ಎನ್ನುವುದರ ಬಗ್ಗೆ ನಾವು ಯಾರೂ ತಲೆಕೆಡಿಸಿಕೊಳ್ಳುವುದೇ ಇಲ್ಲ. ನನ್ನ-ನಿಮ್ಮಂತಹ ಸಾಮಾನ್ಯರಷ್ಟೇ ಅಲ್ಲ, ಇಂತಹ ಉಪಕರಣಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಸುವ-ಬಿಸಾಡುವ ಸಂಸ್ಥೆಗಳೂ ಈ ಬಗ್ಗೆ ವಹಿಸುವ ಕಾಳಜಿ ಅಷ್ಟಕ್ಕಷ್ಟೇ.

ಹೀಗಾಗಿಯೇ ಇಂತಹ ಹಳೆಯ, ನಿರುಪಯುಕ್ತ ಇಲೆಕ್ಟ್ರಾನಿಕ್ ಉತ್ಪನ್ನಗಳು ಈಗೊಂದು ದೊಡ್ಡ ಸಮಸ್ಯೆಯಾಗಿ ಬೆಳೆದುನಿಂತಿವೆ: ಅನೇಕರ ಆರೋಗ್ಯ ಹಾಳುಮಾಡುತ್ತಿವೆ, ನಮ್ಮ ಭೂಮಿಗೇ ದೊಡ್ಡದೊಂದು ತಲೆನೋವು ತಂದಿಟ್ಟಿವೆ.

ಇದು ಇಲೆಕ್ಟ್ರಾನಿಕ್ ವೇಸ್ಟ್, ಅಂದರೆ ಇ-ಕಸದ ಕತೆ.

ಶುಕ್ರವಾರ, ಜನವರಿ 31, 2014

ಸಾಫ್ಟ್‌ವೇರ್ ಜಗದ ಜೀವನಚಕ್ರ

ಟಿ. ಜಿ. ಶ್ರೀನಿಧಿ

ತಂತ್ರಾಂಶ ರಚನೆಯಲ್ಲಿ ಪಾಲಿಸಬೇಕಾದ ಕ್ರಮ, ನಿಯಮ-ನಿಬಂಧನೆಗಳ ರೂಪುರೇಷೆಯನ್ನು ಸಾಫ್ಟ್‌ವೇರ್ ಇಂಜಿನಿಯರಿಂಗ್ ಪರಿಕಲ್ಪನೆ ಮುಂದಿಡುತ್ತದೇನೋ ಸರಿ, ಆದರೆ ಆ ನಿಯಮ ನಿಬಂಧನೆಗಳು ಯಾವುವು, ಹಾಗೂ ಅವನ್ನು ಪಾಲಿಸುವುದು ಹೇಗೆ?

ಈ ಉದ್ದೇಶಕ್ಕಾಗಿ ಸಾಫ್ಟ್‌ವೇರ್ ಜಗತ್ತಿನಲ್ಲಿ ಹಲವು ಕಾರ್ಯವಿಧಾನ ಮಾದರಿಗಳನ್ನು (ಪ್ರಾಸೆಸ್ ಮಾಡೆಲ್) ಬಳಸಲಾಗುತ್ತದೆ. ಈ ಮಾದರಿಗಳು ತಂತ್ರಾಂಶ ರಚನೆಯ ವಿವಿಧ ಹಂತಗಳನ್ನು ಹಾಗೂ ಅಂತಹ ಪ್ರತಿಯೊಂದು ಹಂತದಲ್ಲೂ ಕೈಗೊಳ್ಳಬೇಕಾದ ನಿರ್ದಿಷ್ಟ ಚಟುವಟಿಕೆಗಳನ್ನು ನಮ್ಮ ಮುಂದಿಡುತ್ತವೆ. ಸರಳವಾಗಿ ಹೇಳುವುದಾದರೆ ತಂತ್ರಾಂಶ ರಚನೆ ಪ್ರಕ್ರಿಯೆಯ ಜೀವನ ಚಕ್ರವನ್ನೇ ನಿರ್ದೇಶಿಸುತ್ತವೆ.

ಮೂಲತಃ ಈ ಎಲ್ಲ ಮಾದರಿಗಳಲ್ಲೂ ಸಾಫ್ಟ್‌ವೇರ್ ಇಂಜಿನಿಯರಿಂಗ್ ಪರಿಕಲ್ಪನೆಯಲ್ಲಿರುವ ಮೂಲ ಹೆಜ್ಜೆಗಳೇ (ರಿಕ್ವೈರ್‌ಮೆಂಟ್ಸ್ ಅನಾಲಿಸಿಸ್, ಡಿಸೈನ್, ಡೆವೆಲಪ್‌ಮೆಂಟ್, ಟೆಸ್ಟಿಂಗ್ ಇತ್ಯಾದಿ) ಬಳಕೆಯಾಗುತ್ತವೆ. ಆದರೆ ಪ್ರತಿಯೊಂದು ಮಾದರಿಯಲ್ಲೂ ಈ ಹೆಜ್ಜೆಗಳ ಅನುಷ್ಠಾನ ಮಾತ್ರ ಭಿನ್ನವಾಗಿರುತ್ತದೆ.

ಒಂದು ಉದಾಹರಣೆ ನೋಡೋಣ.

ಬುಧವಾರ, ಜನವರಿ 29, 2014

ಸೋಶಿಯಲ್ ನೆಟ್‌ವರ್ಕ್‌ನಲ್ಲಿ ನೆಟ್ಟಗಿರೋಣ!

ಟಿ. ಜಿ. ಶ್ರೀನಿಧಿ


ಸೋಶಿಯಲ್ ನೆಟ್‌ವರ್ಕ್ ಅಥವಾ ಸಮಾಜಜಾಲಗಳು ಯಾರಿಗೆ ತಾನೆ ಗೊತ್ತಿಲ್ಲ? ಪುಟ್ಟಮಕ್ಕಳಿಂದ ಅಜ್ಜಿತಾತನವರೆಗೆ ಎಲ್ಲರೂ ಇಂದು ಫೇಸ್‌ಬುಕ್, ಟ್ವಿಟ್ಟರ್ ಮುಂತಾದ ಸಮಾಜಜಾಲಗಳಲ್ಲಿ ಕಾಣಸಿಗುತ್ತಾರೆ. ಚಾಟಿಂಗ್, ಫೋಟೋ-ವೀಡಿಯೋ ಹಂಚಿಕೆ, ಮಾಹಿತಿ ವಿತರಣೆ ಇವೆಲ್ಲ ಈ ತಾಣಗಳ ಮುಖ್ಯ ಉಪಯೋಗ.

ಸಮಾಜಜಾಲಗಳಿಂದ ಇನ್ನೂ ಬೇಕಾದಷ್ಟು ಪ್ರಯೋಜನಗಳಿವೆ. ಹೊಸಬರ ಪರಿಚಯ ಮಾಡಿಕೊಂಡು ನಮ್ಮ ನೆಟ್‌ವರ್ಕ್ ವಿಸ್ತರಿಸಿಕೊಳ್ಳುವುದು ಇಂತಹ ಪ್ರಯೋಜನಗಳಲ್ಲೊಂದು. ಲಿಂಕ್ಡ್‌ಇನ್‌ನಂತಹ ತಾಣಗಳಲ್ಲಿ ರೂಪುಗೊಳ್ಳುವ ಇಂತಹ ನೆಟ್‌ವರ್ಕ್ ನಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ನೆರವು ನೀಡಬಲ್ಲದು. ಇದಲ್ಲದೆ ನಮ್ಮ ಪ್ರಶ್ನೆಗಳಿಗೆ ಉತ್ತರ ಹುಡುಕುವುದರಿಂದ ಪ್ರಾರಂಭಿಸಿ ಯಾವುದೋ ಕೆಲಸಕ್ಕೆ ಅಗತ್ಯವಾದ ಮಾಹಿತಿ ಅಥವಾ ನೆರವು ಪಡೆದುಕೊಳ್ಳುವವರೆಗೆ ಅನೇಕ ಕೆಲಸಗಳಲ್ಲಿ ಸಮಾಜಜಾಲಗಳು ನೆರವಾಗುತ್ತವೆ. ನಮ್ಮ ಬಿಸಿನೆಸ್ ಬೆಳವಣಿಗೆಗೆ - ನಮ್ಮ ಗ್ರಾಹಕರೊಡನೆ ಸಂಪರ್ಕ ಬೆಳೆಸಿಕೊಳ್ಳುವುದಕ್ಕೂ ಸಮಾಜಜಾಲಗಳನ್ನು ಬಳಸಿಕೊಳ್ಳಬಹುದು. ಸಮಾಜಜಾಲಗಳನ್ನು ಸೂಕ್ತವಾಗಿ ಬಳಸಿಕೊಂಡರೆ ಹಣಕಾಸಿನ ಲಾಭ ಮಾಡಿಕೊಳ್ಳುವುದೂ ಸಾಧ್ಯ.

ಅಷ್ಟೇ ಏಕೆ, ಹೊಸ ವಿಷಯಗಳ ಹಾಗೂ ಹಳೆಯ ವಿಷಯದ ಹೊಸ ಆಯಾಮಗಳನ್ನು ಪರಿಚಯಿಸಿಕೊಳ್ಳಲೂ ಸಮಾಜಜಾಲಗಳು ಸಹಾಯಮಾಡುತ್ತವೆ. ನೂರೆಂಟು ವಿಷಯಗಳ ಬಗ್ಗೆ ಆರೋಗ್ಯಕರ ಚರ್ಚೆ ಕೂಡ ಇಲ್ಲಿ ಸಾಧ್ಯ. ಅದೆಷ್ಟೋ ಸಂದರ್ಭಗಳಲ್ಲಿ ಸುದ್ದಿಗಳು ಬೇರೆಲ್ಲ ಮಾಧ್ಯಮಗಳಿಗೆ ಮೊದಲು ಸಮಾಜಜಾಲಗಳಲ್ಲೇ ಕಾಣಿಸಿಕೊಳ್ಳುವುದೂ ಉಂಟು.

ಹೀಗಿದ್ದರೂ ನಮ್ಮಂತಹ ಅದೆಷ್ಟೋ ಬಳಕೆದಾರರ ಪಾಲಿಗೆ ಸಮಾಜಜಾಲಗಳು ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವ ವೇದಿಕೆಗಳಾಗಿಯೇ ಮುಂದುವರೆದಿವೆ. ಗೆಳೆಯರೊಂದಿಗೆ ಸದಾಕಾಲ ಸಂಪರ್ಕದಲ್ಲಿರಲು, ಹೊಸಹೊಸ ಜನರನ್ನು ಪರಿಚಯ ಮಾಡಿಕೊಳ್ಳಲು, ನಮ್ಮ ಚಟುವಟಿಕೆಗಳ ಬಗೆಗೆ ಮಿತ್ರರಿಗೆಲ್ಲ ಹೇಳಲು, ಛಾಯಾಚಿತ್ರ-ವೀಡಿಯೋಗಳನ್ನು ಹಂಚಿಕೊಳ್ಳಲು, ಪಠ್ಯ-ಧ್ವನಿ-ವೀಡಿಯೋ ರೂಪದಲ್ಲಿ ಚಾಟ್ ಮಾಡಲು ಈ ತಾಣಗಳು ನೆರವಾಗುತ್ತಿವೆ.

ಈ ಸಹಾಯದ ಬೆನ್ನಹಿಂದೆಯೇ ಅವು ನಮ್ಮ ಮೇಲೊಂದು ಮಹತ್ವದ ಜವಾಬ್ದಾರಿಯನ್ನೂ ಹೊರೆಸುತ್ತಿವೆ. ಸಮಾಜಜಾಲಗಳಲ್ಲಿ ಇಷ್ಟೆಲ್ಲ ಬಗೆಯ ವೈಯಕ್ತಿಕ ಮಾಹಿತಿ ಹಂಚಿಕೊಳ್ಳುತ್ತೇವಲ್ಲ, ಅದರಮೇಲೆ ಒಂದಷ್ಟು ಮಟ್ಟದ ಸ್ವಯಂನಿಯಂತ್ರಣ ಇಟ್ಟುಕೊಳ್ಳಬೇಕಾದ್ದೇ ಈ ಜವಾಬ್ದಾರಿ.

ಶುಕ್ರವಾರ, ಜನವರಿ 24, 2014

ಆಪರೇಟಿಂಗ್ ಸಿಸ್ಟಂ

ಟಿ. ಜಿ. ಶ್ರೀನಿಧಿ

ಪ್ರೋಗ್ರಾಮ್ ಬರೆದು ಕಂಪ್ಯೂಟರಿಗೆ ಪಾಠಹೇಳುವುದೇನೋ ಸರಿ, ಆದರೆ ನಾವು ಪ್ರೋಗ್ರಾಮ್ ಬರೆಯಲಿಕ್ಕಾದರೂ ಒಂದು ಕಂಪ್ಯೂಟರ್ ಬೇಕಲ್ಲ. ಮೊದಲಿಗೆ ಅದು ಕೆಲಸಮಾಡುತ್ತಿದ್ದರೆ ತಾನೇ ನಾವು ಪ್ರೋಗ್ರಾಮ್ ಬರೆಯುವುದು?

ನಿಜ, ಯಾವ ಕಂಪ್ಯೂಟರೇ ಆದರೂ ಅದು ನಾವು ಹೇಳಿದ ಮಾತು ಕೇಳುವಂತೆ ಮಾಡುವ ವ್ಯವಸ್ಥೆಯೊಂದು ಬೇಕೇಬೇಕು. ಕೆಲವರು ತಮ್ಮ ಪ್ರೋಗ್ರಾಮುಗಳ ಮೂಲಕ ಅಂತಹ ವ್ಯವಸ್ಥೆಯನ್ನೇ ರೂಪಿಸುತ್ತಾರೆ ಬಿಡಿ, ಆದರೆ ಮಿಕ್ಕವರ ಕ್ರಮವಿಧಿಗಳು ಕೆಲಸಮಾಡಲು ಇಂತಹುದೊಂದು ವ್ಯವಸ್ಥೆ ಅತ್ಯಗತ್ಯ.

ಅಂತಹ ವ್ಯವಸ್ಥೆಯೇ ಆಪರೇಟಿಂಗ್ ಸಿಸ್ಟಂ, ಅಂದರೆ ಕಾರ್ಯಾಚರಣ ವ್ಯವಸ್ಥೆ. ಕಂಪ್ಯೂಟರಿನ ಪ್ರಾಥಮಿಕ ಚಟುವಟಿಕೆಗಳನ್ನು ನಿಯಂತ್ರಿಸುವ, ಅದರ ವಿವಿಧ ಸೌಲಭ್ಯಗಳನ್ನು ಬಳಸಿಕೊಳ್ಳಲು ನಮಗೆ ಸಹಾಯಮಾಡುವ, ನಮ್ಮ ಕ್ರಮವಿಧಿಗಳು ಕೆಲಸಮಾಡಲು ಅನುವುಮಾಡಿಕೊಡುವ ಈ ವ್ಯವಸ್ಥೆಯೂ ಒಂದು ತಂತ್ರಾಂಶವೇ. ನಮಗೆಲ್ಲ ಚಿರಪರಿಚಿತವಾದ ಮೈಕ್ರೋಸಾಫ್ಟ್ ವಿಂಡೋಸ್, ಲಿನಕ್ಸ್ ಮುಂತಾದವು ಕಾರ್ಯಾಚರಣ ವ್ಯವಸ್ಥೆಗೆ ಕೆಲ ಉದಾಹರಣೆಗಳು.

ಶುಕ್ರವಾರ, ಜನವರಿ 17, 2014

ಕಣ್ಣಮುಂದಿನ ಅದ್ಭುತಲೋಕ: ಆಗ್‌ಮೆಂಟೆಡ್ ರಿಯಾಲಿಟಿ

ಟಿ. ಜಿ. ಶ್ರೀನಿಧಿ
ಇದು 'ಸ್ವ-ತಂತ್ರ' ಅಂಕಣದ ಐವತ್ತನೇ ಸಂಚಿಕೆ. ಇಂದು ಪ್ರಕಟವಾಗಿರುವ ಅಂಕಣಬರಹದ ವಿಷಯವನ್ನು ಅಂತರಜಾಲದಲ್ಲಿ ನಡೆದ ಸ್ಪರ್ಧೆಯೊಂದರ ಮೂಲಕ ಓದುಗರೇ ಸೂಚಿಸಿರುವುದು ವಿಶೇಷ. ಈ ವಿಷಯ ಸೂಚಿಸಿ ಇಜ್ಞಾನ ಡಾಟ್ ಕಾಮ್‌ನಿಂದ ಬಹುಮಾನ ಗೆದ್ದಿರುವ ಶ್ರೀ ಅಶ್ವತ್ಥ್ ಸಂಪಾಜೆಯವರಿಗೆ ಅಭಿನಂದನೆಗಳು.
ಅಪರಿಚಿತ ಸ್ಥಳದಲ್ಲಿ ಹೋಟಲೊಂದರ ಮುಂದೆ ನಿಂತಾಗ ನಮ್ಮ ಕಣ್ಣಿಗೆ ಅದರ ಬೋರ್ಡಿನ ಬದಲು ಅಲ್ಲಿ ದೊರಕುವ ಊಟೋಪಚಾರದ ವಿಮರ್ಶೆ ಕಂಡರೆ ಹೇಗಿರುತ್ತದೆ? ಒಳಕ್ಕೆ ಹೋಗಿಬಂದು ಆಮೇಲೆ ಊಟ ಕೆಟ್ಟದಾಗಿತ್ತೆಂದು ಬೈದುಕೊಳ್ಳುವುದಾದರೂ ತಪ್ಪುತ್ತದಲ್ಲ! ಅದೇರೀತಿ ಪಠ್ಯಪುಸ್ತಕ ಓದಿ ಬೇಜಾರಾದಾಗ ಪುಟದಲ್ಲಿನ ಅಕ್ಷರಗಳ ಬದಲು ಪಾಠಕ್ಕೆ ಸಂಬಂಧಪಟ್ಟ ವೀಡಿಯೋ ಕಾಣಿಸಿಕೊಂಡರೆ? ಇತಿಹಾಸದ್ದೋ ವಿಜ್ಞಾನದ್ದೋ ಪುಟಗಟ್ಟಲೆ ಶುಷ್ಕ ನಿರೂಪಣೆ ಓದುವ ಬದಲು ಅದೆಲ್ಲ ಚಿತ್ರ ಮತ್ತು ಧ್ವನಿಯ ರೂಪದಲ್ಲಿ ಮೂಡಿಬರುವಂತಿದ್ದರೆ?

ಇದೊಳ್ಳೆ ಸಿನಿಮಾ ಕತೆ ಆಯಿತಲ್ಲ ಎನ್ನಬೇಡಿ. ಮೇಲ್ನೋಟಕ್ಕೆ ಕಾಲ್ಪನಿಕ ಕತೆಯಂತೆ ತೋರುವ ಈ ವಿಷಯಗಳೆಲ್ಲ ಈಗಾಗಲೇ ಸಾಧ್ಯವಾಗಿವೆ. ಇದನ್ನೆಲ್ಲ ಸಾಧ್ಯವಾಗಿಸಿರುವ ತಂತ್ರಜ್ಞಾನದ ಹೆಸರು ಆಗ್‌ಮೆಂಟೆಡ್ ರಿಯಾಲಿಟಿ, ಹ್ರಸ್ವವಾಗಿ 'ಎಆರ್'.

ತಂತ್ರಜ್ಞಾನದ ನೆರವಿನಿಂದ ನಮ್ಮ ಕಣ್ಣಮುಂದಿನ ವಾಸ್ತವ ದೃಶ್ಯಕ್ಕೆ ವರ್ಚುಯಲ್ ಅಂಶಗಳನ್ನು ಹೆಚ್ಚುವರಿಯಾಗಿ ಸೇರಿಸುವುದು ಈ 'ಎಆರ್'ನ ಹೆಚ್ಚುಗಾರಿಕೆ.

ಶುಕ್ರವಾರ, ಜನವರಿ 10, 2014

ಸಾಫ್ಟ್‌ವೇರ್ ಇಂಜಿನಿಯರಿಂಗ್

ಟಿ. ಜಿ. ಶ್ರೀನಿಧಿ

ಎರಡು ಸಂಖ್ಯೆಗಳನ್ನು ಕೂಡುವುದಕ್ಕೋ ಅವುಗಳ ಪೈಕಿ ದೊಡ್ಡ ಸಂಖ್ಯೆಯನ್ನು ಗುರುತಿಸುವುದಕ್ಕೋ ಪ್ರೋಗ್ರಾಮ್, ಅಂದರೆ ಕ್ರಮವಿಧಿ ಬರೆಯುವುದು ಸುಲಭದ ಕೆಲಸ. ಕೊಂಚ ತರಬೇತಿಯೊಡನೆ ಇಷ್ಟು ಕೆಲಸವನ್ನು ಯಾರು ಬೇಕಿದ್ದರೂ ಮಾಡಬಹುದು.

ಆದರೆ ಎಲ್ಲ ಕ್ರಮವಿಧಿಗಳೂ ಇಷ್ಟು ಸರಳವಾಗಿರುವುದಿಲ್ಲ. ಬ್ಯಾಂಕಿನ ಹಣಕಾಸು ವ್ಯವಹಾರಗಳನ್ನು ನಿರ್ವಹಿಸುವಾಗ, ಕಚೇರಿಯಲ್ಲಿ ಸಂಬಳ ವಿತರಿಸುವಾಗ, ಆಸ್ಪತ್ರೆಯಲ್ಲಿ ವೈದ್ಯಕೀಯ ಯಂತ್ರೋಪಕರಣಗಳನ್ನು ನಿರ್ವಹಿಸುವಾಗ, ವಿಮಾನ ಹಾರಾಟವನ್ನು ನಿಯಂತ್ರಿಸುವಾಗೆಲ್ಲ ಬಹಳ ಸಂಕೀರ್ಣವಾದ ತಂತ್ರಾಂಶಗಳು ಬಳಕೆಯಾಗುತ್ತವೆ.

ಆ ತಂತ್ರಾಂಶಗಳಲ್ಲಿ ಬಹಳ ದೊಡ್ಡ ಸಂಖ್ಯೆಯ ಕ್ರಮವಿಧಿಗಳು ಅಲ್ಪಸ್ವಲ್ಪ ತಪ್ಪಿಗೂ ಜಾಗವಿಲ್ಲದಂತೆ ಒಟ್ಟಾಗಿ ಕೆಲಸಮಾಡಬೇಕಾದ್ದು ಅನಿವಾರ್ಯ. ವಿಮಾನ ಹಾರಾಟದ ಸಂದರ್ಭದಲ್ಲಿ ಅದನ್ನು ನಿಯಂತ್ರಿಸುವ ತಂತ್ರಾಂಶವೇನಾದರೂ ತಪ್ಪುಮಾಡಿದರೆ ಪರಿಣಾಮ ಏನಾಗಬಹುದು?

ಸಾಫ್ಟ್‌ವೇರ್ ಡೆವೆಲಪ್‌ಮೆಂಟ್ (ತಂತ್ರಾಂಶ ಅಭಿವೃದ್ಧಿ) ಕೆಲಸ ಮಹತ್ವ ಪಡೆದುಕೊಳ್ಳುವುದು ಇದೇ ಕಾರಣಕ್ಕಾಗಿ. ತಂತ್ರಾಂಶ ಅಭಿವೃದ್ಧಿಯೆಂದರೆ ಕ್ರಮವಿಧಿ ರಚನೆಯಷ್ಟೇ ಅಲ್ಲ ಎನ್ನುವುದೂ ಇದರಿಂದಾಗಿಯೇ.

'ಸಾಫ್ಟ್‌ವೇರ್ ಇಂಜಿನಿಯರಿಂಗ್'ನ ಪರಿಕಲ್ಪನೆ ಹುಟ್ಟುವುದೇ ಇಲ್ಲಿ.

ಗುರುವಾರ, ಜನವರಿ 9, 2014

ಪಾಠದಲ್ಲಿ ಆಟದ ವಿನೋದ ಕಾಣಬೇಕಾದರೆ...

ವಿಜ್ಞಾನದ ಕಲಿಕೆಯಲ್ಲಿ ಆಟಿಕೆಗಳನ್ನು ಬಳಸಬಹುದೆ? ಒಂದಷ್ಟು ಉದಾಹರಣೆಗಳ ಮೂಲಕ 'ಹೌದು!' ಎನ್ನುವ ಪುಸ್ತಕವೊಂದು ಇದೀಗ ಪ್ರಕಟವಾಗಿದೆ. ಶ್ರೀ ನಾರಾಯಣ ಬಾಬಾನಗರ ಅವರ 'ಆಹಾ! ಆಟಿಕೆಗಳು' ಕೃತಿಗೆ ಹಿರಿಯ ವಿಜ್ಞಾನ ಸಂವಹನಕಾರ ಪ್ರೊ. ಎಮ್. ಆರ್. ನಾಗರಾಜುರವರು ಬರೆದಿರುವ ಬೆನ್ನುಡಿ ಇಲ್ಲಿದೆ.

ಪಾಠ ಮತ್ತು ಆಟ ಎರಡೂ ತದ್ವಿರುದ್ಧ ಪದಗಳಾಗಿರುವುದು ಶಿಕ್ಷಣ ವ್ಯವಸ್ಥೆಯ ದುರಂತ. ಪಾಠದಲ್ಲಿ ಆಟದ ವಿನೋದ ಕಾಣಬೇಕಾದರೆ ಆಟಿಕೆಗಳು ಬೋಧನಾ ಸಾಮಗ್ರಿಗಳಾಗಬೇಕು. ಹಾಗೆಯೇ ಬೋಧನಾ ಸಾಮಗ್ರಿಗಳನ್ನು ಮಾರ್ಪಡಿಸಿ ಆಟಿಕೆಗಳಾಗಿಸಬೇಕು. ಆಗ ಆಟದ ಆನಂದ ಕಲಿಕೆಯ ಆನಂದ ಕೂಡಿ ಆಯಾಸವಿಲ್ಲದ ಸಂವಹನಕ್ಕೆ ದಾರಿಮಾಡಿಕೊಡುತ್ತದೆ.

ಹಾಗಾದರೆ ಮಾಡಬೇಕಾದ್ದಾದರೂ ಏನು? ಆಟಿಕೆಗಳನ್ನು ಗಮನಿಸುತ್ತಾ ಏಕ ಪರಿಕಲ್ಪನೆ ಲಕ್ಷಿತವಾಗುವಂತೆ ಅದನ್ನು ಮಾರ್ಪಡಿಸುವುದು. ಹಾಗೆಯೇ ಬೋಧನಾ ಸಾಮಗ್ರಿಗಳನ್ನು ಸ್ಥಳೀಯ ಲಭ್ಯ ಪರ್ಯಾಯಗಳೊಂದಿಗೆ ರೂಪಿಸಿ ಅದಕ್ಕೆ ರಂಜನೆಯ ಲೇಪವನ್ನು ಕೊಡುವುದು. ಈ ಕೆಲಸ, ಹೇಳಿದಷ್ಟು ಸುಲಭವಲ್ಲ. ಹಾಗೆ ಮಾಡಿ ಯಶಸ್ವಿಯಾದ ಮಾದರಿಗಳು ಇಲ್ಲಿವೆ. ಸಮಾನಾಂತರವಾಗಿ, ಸಾಹಸ ಕೈಗೊಳ್ಳುವವರಿಗೆ ಇವು ಪೂರಕ ಸಾಮಗ್ರಿಯಾಗಬಲ್ಲವು. ಇಂತಹ ಮಾದರಿಗಳ, ಆಟಿಕೆಗಳ ಬೆಳವಣಿಗೆಗೆ ಈ ಪುಸ್ತಕ ವೇಗವರ್ಧಕವಾಗಬಲ್ಲದು.

ಅರ್ಥಪೂರ್ಣ ವಿಜ್ಞಾನದ ಕಲಿಕೆಗೆ... ಆಹಾ! ಆಟಿಕೆಗಳು
ಲೇಖಕರು: ನಾರಾಯಣ ಬಾಬಾನಗರ
೫೨ ಪುಟಗಳು, ಬೆಲೆ ರೂ. ೪೦/-
ಪ್ರಕಾಶಕರು: ಬೆನಕ ಬುಕ್ಸ್ ಬ್ಯಾಂಕ್

ಶುಕ್ರವಾರ, ಜನವರಿ 3, 2014

ಆಲ್ಗರಿದಮ್ ಅಂದರೇನು?

ಟಿ. ಜಿ. ಶ್ರೀನಿಧಿ

ಕಂಪ್ಯೂಟರ್ ವಿಜ್ಞಾನದ ಪ್ರಾಥಮಿಕ ಪಾಠಗಳನ್ನು ಕಲಿಯಲು ಹೊರಟವರು ಮೊದಲಿಗೆ ಕೇಳುವ ಹೆಸರುಗಳಲ್ಲಿ 'ಆಲ್ಗರಿದಮ್' ಪ್ರಮುಖವಾದದ್ದು. ಇದನ್ನು ಕನ್ನಡದಲ್ಲಿ 'ಕ್ರಮಾವಳಿ' ಎನ್ನೋಣ.

ನಾವೀಗ ಯಾವುದೋ ಒಂದು ಪ್ರೋಗ್ರಾಮ್ (ಕ್ರಮವಿಧಿ) ಬರೆಯುತ್ತಿದ್ದೇವೆ ಎನ್ನುವುದಾದರೆ ಅದರಲ್ಲಿ ಪ್ರತಿಯೊಂದು ಹೆಜ್ಜೆಯನ್ನೂ ಪ್ರತ್ಯೇಕವಾಗಿ ವಿವರಿಸಬೇಕು ತಾನೆ, ಅಷ್ಟೆಲ್ಲ ಹೆಜ್ಜೆಗಳ ಸರಣಿಯೇ ಆಲ್ಗರಿದಮ್, ಅಂದರೆ ಕ್ರಮಾವಳಿ. ಆಲ್ಗರಿದಮ್ ಎನ್ನುವ ಪದ ಕ್ರಿ.ಶ. ೮೨೫ರ ಸುಮಾರಿಗೆ ಪರ್ಶಿಯಾದಲ್ಲಿದ್ದ ಅಲ್-ಖೋವಾರಿಜ್ಮಿ (al Khowarizmi) ಎನ್ನುವ ಗಣಿತಜ್ಞನ ಹೆಸರಿನಿಂದ ರೂಪುಗೊಂಡಿತು ಎಂದು ಇತಿಹಾಸ ಹೇಳುತ್ತದೆ.

ಕಂಪ್ಯೂಟರಿಗೆ ನೀಡುವ ಇನ್‌ಪುಟ್ ಅನ್ನು ಸೂಕ್ತವಾಗಿ ಸಂಸ್ಕರಿಸಿ ನಮಗೆ ಬೇಕಾದ ರೂಪದ ಔಟ್‌ಪುಟ್ ನೀಡುವಂತೆ ನಿರ್ದೇಶಿಸುವುದು ಆಲ್ಗರಿದಮ್, ಅಂದರೆ ಕ್ರಮಾವಳಿಯ ಕೆಲಸ. ಇದು ಪ್ರೋಗ್ರಾಮಿಂಗ್ ಕ್ಷೇತ್ರದ ಪ್ರಾಥಮಿಕ ಪಾಠ ಎಂದರೂ ಸರಿಯೇ.

ಕ್ರಮಾವಳಿಯ ಪ್ರಾಮುಖ್ಯ ಏನು ಎಂದು ವಿವರಿಸುವುದು ಬಹಳ ಸುಲಭ. ಏಕೆಂದರೆ ನಮ್ಮ ಬದುಕಿನ ಬಹುತೇಕ ಕೆಲಸಗಳೆಲ್ಲ ಒಂದಲ್ಲ ಒಂದು ಕ್ರಮಾವಳಿಯನ್ನು ಆಧರಿಸಿರುತ್ತವೆ. ಮನೆಗೆ ಇನ್ಸ್‌ಟಂಟ್ ನೂಡಲ್ಸ್ ತಂದಿರುತ್ತೇವಲ್ಲ, ಆ ಪೊಟ್ಟಣದ ಹಿಂಭಾಗ ನೋಡಿ: ಎಷ್ಟು ನೀರು ಹಾಕಬೇಕು, ಎಷ್ಟು ಹೊತ್ತು ಬೇಯಿಸಬೇಕು, ಮಸಾಲೆ ಯಾವಾಗ ಹಾಕಬೇಕು ಎಂಬ ಪ್ರತಿಯೊಂದು ವಿವರವನ್ನೂ ಅದರಲ್ಲಿ ಒಂದಾದಮೇಲೆ ಒಂದರಂತೆ ಪಟ್ಟಿಮಾಡಿರುತ್ತಾರೆ.

ಮಂಗಳವಾರ, ಡಿಸೆಂಬರ್ 31, 2013

ಹೊಸವರ್ಷಕ್ಕೊಂದು ಹೊಸ ತಾಣ

ಶಾಪಿಂಗ್ - ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗ. ಇಷ್ಟವೋ ಕಷ್ಟವೋ, ಅದು ಅನಿವಾರ್ಯವೂ ಹೌದು.

ಅನಿವಾರ್ಯ ಎಂದಮಾತ್ರಕ್ಕೆ ಶಾಪಿಂಗ್ ಸುಲಭದ ಕೆಲಸವೇನೂ ಅಲ್ಲ. ಯಾವುದೇ ವಸ್ತುವಿಗಾಗಿ ಶಾಪಿಂಗ್ ಮಾಡಲು ಹೊರಟಾಗ ಮಾರುಕಟ್ಟೆಯಲ್ಲಿ ಕಾಣಸಿಗುವ ಆಯ್ಕೆಗಳು ನಮ್ಮ ಮನಸಿನಲ್ಲಿ ಹುಟ್ಟುಹಾಕುವ ಗೊಂದಲವೇನು ಸಾಮಾನ್ಯದ್ದೇ?

ಇಂತಹ ಗೊಂದಲದ ಕೆಲವು ಕ್ಷಣಗಳಲ್ಲಿ ನಿಮಗೆ ನೆರವಾಗುವ ಸಣ್ಣದೊಂದು ಪ್ರಯತ್ನವನ್ನು ಇಜ್ಞಾನ ಡಾಟ್ ಕಾಮ್ ಮಾಡುತ್ತಿದೆ. ೨೦೧೪ರ ಮೊದಲ ದಿನ, ಹೊಸವರ್ಷದ ಶುಭಾಶಯಗಳೊಂದಿಗೆ, 'ಇಜ್ಞಾನ ಶಾಪಿಂಗ್ ಸಂಗಾತಿ'ಯ ಪ್ರಾಯೋಗಿಕ ಆವೃತ್ತಿ ಇಗೊಳ್ಳಿ ನಿಮ್ಮ ಮುಂದಿದೆ.

ಸೋಮವಾರ, ಡಿಸೆಂಬರ್ 30, 2013

ನಿಮ್ಮ ಅನಿಸಿಕೆ ನಮ್ಮ ಬಹುಮಾನ!

ಪ್ರತಿ ವಾರದ ಕೊನೆಗೆ ಇಜ್ಞಾನ ಡಾಟ್ ಕಾಮ್‌ನಲ್ಲಿ ಪ್ರಕಟವಾಗುವ ತಂತ್ರಜ್ಞಾನ ಲೇಖನಗಳನ್ನು ನೀವು ಗಮನಿಸಿದ್ದೀರಿ. ಪ್ರತಿ ಶುಕ್ರವಾರ ಉದಯವಾಣಿ ಮಂಗಳೂರು ಆವೃತ್ತಿಯ 'ಯುವ ಸಂಪದ' ಪುರವಣಿಯಲ್ಲಿ, 'ಸ್ವ-ತಂತ್ರ' ಎನ್ನುವ ಹೆಸರಿನಲ್ಲಿ ಮೂಡಿಬರುವ ಈ ಅಂಕಣದ ಐವತ್ತನೆಯ ಕಂತು ಇನ್ನು ಕೆಲವೇ ವಾರಗಳಲ್ಲಿ ಪ್ರಕಟವಾಗಲಿದೆ.

ಈ ಸರಣಿಯ ಐವತ್ತನೇ ಕಂತಿನಲ್ಲಿ ನೀವು ಯಾವ ವಿಷಯದ ಕುರಿತು ಓದಲು ಇಷ್ಟಪಡುತ್ತೀರಿ?

ನಿಮ್ಮ ಅನಿಸಿಕೆಯನ್ನು ಜನವರಿ ೫, ೨೦೧೪ರೊಳಗೆ ನಮಗೆ ತಿಳಿಸಿ.

ಶುಕ್ರವಾರ, ಡಿಸೆಂಬರ್ 27, 2013

ದಾರಿತೋರುವ ತಂತ್ರಜ್ಞಾನ ಜಿಪಿಎಸ್

ಟಿ. ಜಿ. ಶ್ರೀನಿಧಿ

ಹೀಗೊಂದು ಸನ್ನಿವೇಶ ಕಲ್ಪಿಸಿಕೊಳ್ಳಿ: ಹವಾನಿಯಂತ್ರಿತ ರೈಲಿನಲ್ಲಿ, ಮೇಲಿನ ಬರ್ತ್‌ನಲ್ಲಿ ಮಲಗಿ ಪ್ರಯಾಣಿಸುತ್ತಿದ್ದೀರಿ. ರೈಲು ಮಧ್ಯರಾತ್ರಿ ಯಾವುದೋ ನಿಲ್ದಾಣದಲ್ಲಿ ನಿಲ್ಲುತ್ತದೆ, ನಿಮಗೆ ಎಚ್ಚರವೂ ಆಗುತ್ತದೆ. ಇದ್ಯಾವ ನಿಲ್ದಾಣವೋ ತಿಳಿದುಕೊಳ್ಳುವ ಕುತೂಹಲ ಒಂದುಕಡೆ, ಬೆಚ್ಚನೆಯ ಹೊದಿಕೆ ತೆಗೆದು ಇಳಿಯಲು ಸೋಮಾರಿತನ ಇನ್ನೊಂದು ಕಡೆ.

ಕಡೆಗೆ ಸೋಮಾರಿತನವೇ ಗೆದ್ದಾಗ ಮೊಬೈಲ್ ಫೋನ್ ಕೈಗೆತ್ತಿಕೊಂಡು ಗೂಗಲ್ ಮ್ಯಾಪ್ಸ್ ತೆರೆಯುತ್ತೇವೆ, ನಾನೆಲ್ಲಿದ್ದೇನೆ ಎಂದು ಅದನ್ನು ಕೇಳುತ್ತಿದ್ದಂತೆ ಫೋನಿನಲ್ಲಿರುವ ಭೂಪಟದಲ್ಲಿ ನಾವು ಇರುವ ಊರು ಕಾಣಿಸಿಕೊಳ್ಳುತ್ತದೆ!

ಇದನ್ನು ಸಾಧ್ಯವಾಗಿಸುವುದು ಜಿಪಿಎಸ್, ಅಂದರೆ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ. ಅಪರಿಚಿತ ಜಾಗಗಳಲ್ಲಿದ್ದಾಗ ಆ ಸ್ಥಳದ ಕುರಿತ ಮಾಹಿತಿಯನ್ನು ಪಡೆದುಕೊಳ್ಳಲಷ್ಟೇ ಅಲ್ಲ, ವಾಹನ ಚಲಾಯಿಸುವಾಗ ನಮಗೆ ಮಾರ್ಗದರ್ಶನ ನೀಡುವ ಯಂತ್ರಗಳಲ್ಲಿ ಬಳಕೆಯಾಗುವುದೂ ಇದೇ ತಂತ್ರಜ್ಞಾನ. ಬಹುತೇಕ ಮೊಬೈಲ್ ಫೋನುಗಳಲ್ಲಿ ಲಭ್ಯವಿರುವ ಸೌಲಭ್ಯವಂತೂ ಈ ತಂತ್ರಜ್ಞಾನವನ್ನು ನಮ್ಮ ಅಂಗೈಗೇ ತಂದಿಟ್ಟುಬಿಟ್ಟಿದೆ!

ಅಂದಹಾಗೆ ನಾವೆಲ್ಲಿದ್ದೇವೆ ಎಂದು ಈ ತಂತ್ರಜ್ಞಾನಕ್ಕೆ ಗೊತ್ತಾಗುವುದು ಹೇಗೆ?

ಮಂಗಳವಾರ, ಡಿಸೆಂಬರ್ 24, 2013

ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ -ಅಂದು, ಇಂದು, ಮುಂದು

ಡಿಸೆಂಬರ್ ೨೧, ೨೦೧೩ರಂದು ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ೨೦೧೩ರ 'ಕನ್ನಡ ಮತ್ತು ಅವಕಾಶ' ಗೋಷ್ಠಿಯಲ್ಲಿ ಡಾ. ಯು. ಬಿ. ಪವನಜ ಮಾಡಿದ ಭಾಷಣದ ಪೂರ್ಣಪಾಠ.

ಡಾ| ಯು. ಬಿ. ಪವನಜ

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಎಂಬುದು ಆರಂಭದ ದಿನಗಳಲ್ಲಿ ಗಣಕಗಳಲ್ಲಿ ಕನ್ನಡದ ಬಳಕೆಯಿಂದ ಪ್ರಾರಂಭವಾಯಿತು. ಇದು  ಸುಮಾರು ಮೂರು ದಶಕಗಳ ಹಿಂದಿನ ಕಥೆ. ಪದಸಂಸ್ಕರಣವು ಇದರಲ್ಲಿಯ ಮೊದಲನೆಯದು. ಪತ್ರ, ಲೇಖನ, ದಾಖಲೆಗಳನ್ನು ಬರೆಯಲು, ತಿದ್ದಲು ಇವುಗಳ ಬಳಕೆ ಆಗುತ್ತಿದೆ. ಪದಸಂಸ್ಕರಣದ ಮುಂದುವರೆದ ಸೌಕರ್ಯವೇ ಡಿ.ಟಿ.ಪಿ. ಅಂದರೆ ಪಠ್ಯದ ಜೊತೆ ಚಿತ್ರಗಳನ್ನು ಸೇರಿಸಿ ಪುಟವಿನ್ಯಾಸ ಮಾಡುವುದು. ಈಗ ಎಲ್ಲ ಪುಸ್ತಕಗಳು ಮತ್ತು ಪತ್ರಿಕೆಗಳು ಇದೇ ವಿಧಾನದಿಂದ ತಯಾರಾಗುತ್ತಿವೆ.

ಕೆ.ಪಿ. ರಾವ್ ಮತ್ತು ಅವರ ಸೇಡಿಯಾಪು ತಂತ್ರಾಂಶ ಕನ್ನಡ ಭಾಷೆ ಮಾತ್ರವಲ್ಲ, ಸಮಗ್ರ ಭಾರತೀಯ ಭಾಷೆಗಳನ್ನೇ ಗಣಕದಲ್ಲಿ ಅಳವಡಿಸುವ ವಿಷಯದಲ್ಲಿ ಎಲ್ಲರಿಂದ ಮೊದಲು ಆಲೋಚಿಸಿ ಕಾರ್ಯಗತರಾದವರು ನಮ್ಮ ಕನ್ನಡಿಗರೇ ಆದ ಶ್ರೀ ಕೆ. ಪಿ. ರಾವ್ ಅವರು. ೭೦ರ ದಶಕದಲ್ಲಿ ಅವರು ಮುಂಬಯಿಯ ಟಾಟಾ ಪ್ರೆಸ್‌ನಲ್ಲಿ ತಂತ್ರಜ್ಞರಾಗಿದ್ದಾಗ ಪ್ರಪ್ರಥಮ ಬಾರಿಗೆ ಫೋಟೋಟೈಪ್‌ಸೆಟ್ಟಿಂಗ್ ಯಂತ್ರದಲ್ಲಿ ಭಾರತೀಯ ಭಾಷೆಗಳನ್ನು ಅಳವಡಿಸುವ ಕೆಲಸವನ್ನು ಪ್ರಾರಂಭಿಸಿದರು. ಇವರು ಆ ಕಾಲಕ್ಕೆ ಲಭ್ಯವಿದ್ದ ಸೀಮಿತ ತಂತ್ರಜ್ಞಾನಗಳನ್ನೇ ಬಳಸಿ ಸುಂದರವಾದ ಕಂಪ್ಯೂಟರ್ ಫಾಂಟ್‌ಗಳನ್ನು (ಅಕ್ಷರಶೈಲಿಗಳು) ಕನ್ನಡ ಮತ್ತು ಇತರೆ ಭಾಷೆಗಳಿಗೆ ನಿರ್ಮಿಸಿದರು. ಅಂತಹ ಕನ್ನಡ ಲಿಪಿಯ ಫಾಂಟ್‌ನ್ನು ಸುಲಭವಾಗಿ ಕಂಪ್ಯೂಟರ್‌ನಲ್ಲಿ ಮೂಡಿಸಲು ಸರಳ ಹಾಗೂ ತರ್ಕಬದ್ಧವಾದ ಕೀಲಿಮಣೆ (ಕೀಬೋರ್ಡ್) ವಿನ್ಯಾಸವನ್ನು ರಚಿಸಿದ ಕೀರ್ತಿ ಶ್ರೀ ಕೆ.ಪಿ ರಾವ್‌ರವರಿಗೆ ಸಲ್ಲುತ್ತದೆ. ಭಾರತೀಯ ಭಾಷೆಗಳಿಗೆ ಮೊದಲ ಬಾರಿಗೆ ಧ್ವನ್ಯಾತ್ಮಕ ಕೀಲಿಮಣೆಯ ವಿನ್ಯಾಸ ಮಾಡಿದವರು ಇವರೇ.

ಸೋಮವಾರ, ಡಿಸೆಂಬರ್ 23, 2013

ಕಳೆದ ಹಾರ್ಡ್‌ಡಿಸ್ಕ್ ನೆಪದಲ್ಲಿ ಕಾಣದ ದುಡ್ಡಿನ ಕುರಿತು...

ಈಗ ಒಂದಷ್ಟು ದಿನಗಳಿಂದ ಇಂಟರ್‌ನೆಟ್‌ ತುಂಬೆಲ್ಲ ಬಿಟ್‌ಕಾಯಿನ್‌ನದೇ ಸುದ್ದಿ. ಬಿಟ್‌ಕಾಯಿನ್ ಹಾಗಂತೆ ಹೀಗಂತೆ ಚಿನ್ನಕ್ಕಿಂತ ದುಬಾರಿಯಂತೆ... ಅಂತೆಕಂತೆಗಳಿಗೆ ಕೊನೆಯೇ ಇಲ್ಲ. ಈ ವಿಶಿಷ್ಟ ಪರಿಕಲ್ಪನೆಯನ್ನು ಕನ್ನಡದ ಓದುಗರಿಗೆ ವಿವರವಾಗಿ ಪರಿಚಯಿಸುವ ಪ್ರಯತ್ನವನ್ನು ಇಜ್ಞಾನ ಡಾಟ್ ಕಾಮ್ ಮಾಡಿದೆ. ಓದಿ, ಪ್ರತಿಕ್ರಿಯೆ ನೀಡಿ. ಈ ಲೇಖನವನ್ನು ಡಿಸೆಂಬರ್ ೨೨, ೨೦೧೩ರ 'ಸಾಪ್ತಾಹಿಕ ಸಂಪದ'ದಲ್ಲಿ ಪ್ರಕಟಿಸಿದ ಉದಯವಾಣಿಗೆ ನಮ್ಮ ಕೃತಜ್ಞತೆಗಳು. 

ಟಿ. ಜಿ. ಶ್ರೀನಿಧಿ


ಹಳೆಯ, ಕೆಟ್ಟುಹೋದ ಕಂಪ್ಯೂಟರಿನಿಂದ ತೆಗೆದಿಟ್ಟ ಹಾರ್ಡ್‌ಡಿಸ್ಕ್ ಬೆಲೆ ಎಷ್ಟಿರಬಹುದು? ಗುಜರಿ ಅಂಗಡಿಯವನು ಅಬ್ಬಬ್ಬಾ ಎಂದರೆ ಐನೂರು ರೂಪಾಯಿಗೆ ಕೊಳ್ಳಬಹುದೇನೋ.

ಬ್ರಿಟನ್ನಿನ ಜೇಮ್ಸ್ ಹವೆಲ್ಸ್ ಎಂಬಾತನಲ್ಲೂ ಇಂತಹುದೇ ಒಂದು ಹಾರ್ಡ್‌ಡಿಸ್ಕ್ ಇತ್ತು, ಬಹುಶಃ ಸುಮಾರು ಮೂರು-ನಾಲ್ಕು ವರ್ಷ ಹಳೆಯದು. ಹೀಗೆಯೇ ಒಂದು ದಿನ ಮನೆ ಸ್ವಚ್ಛಗೊಳಿಸುವಾಗ ಮತ್ತೆ ಕೈಗೆ ಸಿಕ್ಕ ಅದನ್ನು ಆತ ಸೀದಾ ಕಸದಬುಟ್ಟಿಗೆ ಸೇರಿಸಿದ. ನಂತರದ ದಿನಗಳಲ್ಲಿ ಅದು ಊರ ಕಸವೆಲ್ಲ ಸೇರುವ ಲ್ಯಾಂಡ್‌ಫಿಲ್ ಎಂಬ ಕಸಸಾಗರದೊಳಗೆ ಲೀನವಾಯಿತು. ಇದೆಲ್ಲ ಆಗಿ ಕೆಲವು ತಿಂಗಳು ಕಳೆದ ಮೇಲೆ ಜೇಮ್ಸ್‌ಗೆ ಜ್ಞಾನೋದಯವಾಗಿ ತಾನೆಂತಹ ಕೆಲಸಮಾಡಿಬಿಟ್ಟೆನಲ್ಲ ಎಂದು ಕೊರಗಲು ಶುರುಮಾಡಿದ.

ಬೇಡದ ಹಾರ್ಡ್ ಡಿಸ್ಕನ್ನು ಕಸಕ್ಕೆ ಹಾಕಿದ ಮೇಲೆ ಅದನ್ನು ನೆನಪಿಸಿಕೊಂಡು ಕೊರಗುವುದು ಯಾಕೆ? ಇಲ್ಲೇನೋ ವಿಚಿತ್ರವಿದೆ ಅನ್ನಿಸುತ್ತಿದೆ, ಅಲ್ಲವೆ?

ವಿಚಿತ್ರವೇನೂ ಇಲ್ಲ - ಜೇಮ್ಸ್ ಬಿಸಾಡಿದ ಹಾರ್ಡ್‌ಡಿಸ್ಕ್‌ನಲ್ಲಿ ಸುಮಾರು ಏಳೂವರೆಸಾವಿರ ಬಿಟ್‌ಕಾಯಿನ್‌ಗಳಿದ್ದವು, ಮತ್ತು ನವೆಂಬರ್ ೨೦೧೩ರ ಅಂತ್ಯದಲ್ಲಿ ಅವುಗಳ ಒಟ್ಟು ಮೌಲ್ಯ ಸುಮಾರು ಏಳೂವರೆ ಲಕ್ಷ ಅಮೆರಿಕನ್ ಡಾಲರುಗಳಷ್ಟಿತ್ತು. ರೂಪಾಯಿ ಲೆಕ್ಕದಲ್ಲಿ ೪೬ ಕೋಟಿಗಿಂತ ಹೆಚ್ಚು!

ಅರೆ, ಇಷ್ಟೆಲ್ಲ ಬೆಲೆಬಾಳುವ ವಸ್ತು ಹಳೆಯ ಹಾರ್ಡ್‌ಡಿಸ್ಕ್‌ನೊಳಗೇಕಿತ್ತು? ಇಷ್ಟಕ್ಕೂ ಈ ಬಿಟ್ ಕಾಯಿನ್ ಎಂದರೇನು?

ಭಾನುವಾರ, ಡಿಸೆಂಬರ್ 22, 2013

ಇಜ್ಞಾನ ವಿಶೇಷ: ನಾಗೇಶ ಹೆಗಡೆ ಹೇಳುತ್ತಾರೆ...

ಡಿಸೆಂಬರ್ ೨೧, ೨೦೧೩ರಂದು ನಡೆದ ಕನ್ನಡ ವಿಶ್ವವಿದ್ಯಾನಿಲಯದ ನುಡಿಹಬ್ಬದಲ್ಲಿ ನಾಗೇಶ ಹೆಗಡೆಯವರು ಮಾಡಿದ ಭಾಷಣದ ಪೂರ್ಣಪಾಠ 

ಕನ್ನಡ ವಿಶ್ವವಿದ್ಯಾಲಯದ ಆವರಣಕ್ಕೆ ಬಂದಾಗಲೆಲ್ಲ ನಮ್ಮ ಮನಸ್ಸು ಪ್ರಫುಲ್ಲಿತವಾಗುತ್ತದೆ. ಇಲ್ಲಿನ ಬಂಡೆಗಳು, ಇಲ್ಲಿ ಮರುಹುಟ್ಟು ಪಡೆದ ಸಸ್ಯಗಳು, ಇಲ್ಲಿನ ಸಹಜ ನೈಸರ್ಗಿಕ ಸೌಂದರ್ಯ ಜತೆಜತೆಗೆ ಕನ್ನಡದ ಕಲೆ, ಸಂಸ್ಕೃತಿ ಪರಂಪರೆಗಳನ್ನು ಬಿಂಬಿಸುವ ಶಿಲ್ಪ, ವಾಸ್ತುಶಿಲ್ಪ -ಹೀಗೆ ಇಲ್ಲಿನ ಒಂದೊಂದೂ ಕನ್ನಡ ಲೋಕದ ಅನನ್ಯತೆಯನ್ನು ಮೆರೆಯುವ ಪ್ರತೀಕಗಳಾಗಿವೆ.

ನಮ್ಮಲ್ಲಿ ಎರಡು ಕನ್ನಡ ನಾಡುಗಳಿವೆ: ಒಂದು ಬೆಂಗಳೂರಿನ ಬಹಿರ್ಮುಖಿ ಕನ್ನಡ: 'ವಿಜ್ಞಾನದ ರಾಜಧಾನಿ' ಎಂದು ಕರೆಸಿಕೊಂಡು ವಿಶ್ವವನ್ನು ಬೆಸೆಯುವ ಕನ್ನಡ. ಅದು ಕಾರ್ಪೊರೇಟ್ ವಲಯಗಳ ಥಳಕಿನ ಕನ್ನಡ. ರಾಷ್ಟ್ರದ ನಾಯಕರು, ವಿದೇಶೀ ಗಣ್ಯರು, ಉದ್ಯಮಿಗಳನ್ನು ಆಕರ್ಷಿಸುವ ಕನ್ನಡ. ಅದು ನಂದನ ನೀಲೇಕಣಿಯವರನ್ನು, ಶಕುಂತಲಾ ದೇವಿಯವರನ್ನು, ದೇವಿಪ್ರಸಾದ್ ಶೆಟ್ಟಿಯವರನ್ನು, ಮಾಲತಿ ಹೊಳ್ಳರನ್ನು, ಅನಿಲ್ ಕುಂಬ್ಳೆಗಳನ್ನು, ಉಲ್ಲಾಸ ಕಾರಂತರನ್ನು, ಸಿಎನ್‌ಆರ್ ರಾವ್, ಯುಆರ್ ರಾವ್‌ರವರನ್ನು, ನಾರಾಯಣ ಮೂರ್ತಿ- ಅನಂತಮೂರ್ತಿಯಂಥವರನ್ನು ನಾಡಿನಾಚೆ ಪ್ರದರ್ಶಿಸುವ ಕನ್ನಡ. ಅದು ಕ್ಯಾಲಿಫೋರ್ನಿಯಾಕ್ಕೆ ಕಂಪ್ಯೂಟರ್ ಪರಿಣತರನ್ನು, ಬಾಹ್ಯಾಕಾಶಕ್ಕೆ ಉಪಗ್ರಹಗಳನ್ನು, ಮಂಗಳಲೋಕಕ್ಕೆ ಪ್ರೋಬ್‌ಗಳನ್ನೂ ಕಳಿಸಬಲ್ಲ ಧೀರರ ಕನ್ನಡ. ಅದು ಹೆಬ್ಬಾಗಿಲ ಕನ್ನಡ.

ಇನ್ನೊಂದು ಒಳಮನೆಯ ಕನ್ನಡ, ಅಂತರ್ಮುಖಿ ಕನ್ನಡ. ಈ ಒಳಮನೆಯ ಕನ್ನಡ ಏನಿದೆ ಅದು ನಮ್ಮ ಸ್ವಂತದ ಕನ್ನಡ. ಅಲ್ಲಿ ಹಾಡು ಹಸೆಗಳಿವೆ. ಲಾವಣಿ ಪದ್ಯಗಳಿವೆ, ವಚನಗಳಿವೆ, ದಾಸರ ಪದಗಳಿವೆ, ಹಸೆ ಚಿತ್ರಗಳಿವೆ, ಕಾಷ್ಠಶಿಲ್ಪಗಳಿವೆ, ಗುಮಟೆ ಪಾಂಗುಗಳಿವೆ, ಪಣತ, ಹಗೇವು, ಬೀಸುಗಲ್ಲು, ಮನೆಮದ್ದುಗಳಿವೆ, ಕಜ್ಜಾಯ- ಕಷಾಯಗಳಿವೆ. ಅದು ರೈತ ಮಕ್ಕಳ, ಬುಡಕಟ್ಟಿನವರ ಖಾಸಾ ಕನ್ನಡ. ಅದು ಜಾಯಮಾನದ ಕನ್ನಡ.

ಈ ಒಳಮನೆಯ ಕನ್ನಡದ ಉಸ್ತುವಾರಿಯ, ಪರಿಚಾರಿಕೆಯ ಕೆಲಸ ಮಾಡುವ ಕನ್ನಡ ವಿಶ್ವವಿದ್ಯಾಲಯ ನಮ್ಮೆಲ್ಲರ ಹೆಮ್ಮೆಯ ಸಂಸ್ಥಾನವೆನಿಸಿದೆ. ಕನ್ನಡ ಜ್ಞಾನ ಮತ್ತು ಕೌಶಲ ಪರಂಪರೆಯನ್ನು ಕೆಡದಂತೆ ಕಾಯುವ ಉತ್ತಮ ಕೆಲಸವನ್ನು ಅದು ಮಾಡುತ್ತಿದೆ. ಜ್ಞಾನಪರಂಪರೆಯಲ್ಲಿ, ನಮ್ಮ ಜನಪದದಲ್ಲಿ ಅಂತಸ್ಥವಾಗಿದ್ದ ದೇಸೀ ವಿಜ್ಞಾನವನ್ನು ಹುಡುಕಿ ತೆಗೆಯುವ, ಸಂಸ್ಕರಿಸಿ ಮತ್ತೆ ಪುಟಕ್ಕಿಡುವ ಕೆಲಸವನ್ನು ಕನ್ನಡ ವಿಶ್ವವಿದ್ಯಾಲಯ ಹೊಸದಾಗಿ ಈ ವರ್ಷ ಆರಂಭಿಸುತ್ತಿದೆ.

ಅದು ಹೊಸದಾಗಿದ್ದರಿಂದ ನಾಲ್ಕು ಮಾತು ಹೇಳಬೇಕಾಗಿದೆ.

ಶನಿವಾರ, ಡಿಸೆಂಬರ್ 21, 2013

ಅಂತರಜಾಲದ ವೇಗದ ಲೆಕ್ಕ

ಟಿ. ಜಿ. ಶ್ರೀನಿಧಿ

ಅಂತರಜಾಲ ಲೋಕದಲ್ಲಿ ಈಗ ಎಲ್ಲೆಲ್ಲೂ ಬ್ರಾಡ್‌ಬ್ಯಾಂಡ್ ಸಂಪರ್ಕಗಳದ್ದೇ ರಾಜ್ಯಭಾರ. ಡಯಲ್ ಅಪ್ ಸಂಪರ್ಕಗಳ ಹೋಲಿಕೆಯಲ್ಲಿ ಅದ್ಭುತವೆನಿಸುವಂತಹ ವೇಗದ ಅಂತರಜಾಲ ಸಂಪರ್ಕ ಕಲ್ಪಿಸಿಕೊಟ್ಟಿದ್ದು ಬ್ರಾಡ್‌ಬ್ಯಾಂಡ್‌ನ ಹಿರಿಮೆ. ಈ ಬಗೆಯ ಸಂಪರ್ಕಗಳ ವೇಗ ಕಳೆದ ಕೆಲ ವರ್ಷಗಳಲ್ಲಿ ಒಂದೇ ಸಮನೆ ಹೆಚ್ಚುತ್ತಲೇ ಇದೆ. ಇನ್ನು ಈಗ ಮೊಬೈಲಿನಲ್ಲಿ ಥ್ರೀಜಿ ಸಂಪರ್ಕ ಬಂದಮೇಲಂತೂ ಬ್ರಾಡ್‌ಬ್ಯಾಂಡ್ ಸಂಪರ್ಕವೇ ನಿಧಾನವೇನೋ ಎನ್ನಿಸುವಂತಹ ವೇಗಗಳೂ ಸಾಧ್ಯವಾಗಿವೆ.

ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ನಿಯಮದನ್ವಯ ಯಾವುದೇ ಅಂತರಜಾಲ ಸಂಪರ್ಕ ಬ್ರಾಡ್‌ಬ್ಯಾಂಡ್ ಎಂದು ಕರೆಸಿಕೊಳ್ಳಲು ಪ್ರತಿ ಸೆಕೆಂಡಿಗೆ ಕನಿಷ್ಠ ೨೫೬ ಕೆಬಿಪಿಎಸ್ ಡೌನ್‌ಲೋಡ್ ವೇಗ ಹೊಂದಿರಬೇಕು, ನಿಜ. ಆದರೆ ಹತ್ತಾರು ಎಂಬಿಪಿಎಸ್ ವೇಗದ ಸಂಪರ್ಕಗಳೂ ಲಭ್ಯವಿವೆ.

ಕೆಬಿ ಅಂದರೆ ಕಿಲೋಬೈಟ್, ಎಂಬಿ ಅಂದರೆ ಮೆಗಾಬೈಟ್ ಎನ್ನುವ ಲೆಕ್ಕವನ್ನೆಲ್ಲ ಕೇಳಿದ್ದೇವೆ, ಆದರೆ ಇದೇನಿದು ಕೆಬಿಪಿಎಸ್-ಎಂಬಿಪಿಎಸ್?

ಶುಕ್ರವಾರ, ಡಿಸೆಂಬರ್ 13, 2013

ತರ್ಕದ ಹರಿವಿಗೆ ಫ್ಲೋಚಾರ್ಟ್ ನೆರವು

ಟಿ. ಜಿ. ಶ್ರೀನಿಧಿ

ಕಂಪ್ಯೂಟರಿಗೆ ಏನಾದರೂ ಕೆಲಸ ಮಾಡುವಂತೆ ಹೇಳಬೇಕಾದರೆ ಕ್ರಮವಿಧಿ (ಪ್ರೋಗ್ರಾಮ್) ಬರೆಯಬೇಕು ತಾನೆ, ಹಾಗೆ ಬರೆಯುವಾಗ ನಮ್ಮ ಅಗತ್ಯಗಳನ್ನೆಲ್ಲ ಒಂದೇ ಬಾರಿಗೆ ಕಂಪ್ಯೂಟರಿನ ಭಾಷೆಯಲ್ಲೇ ಹೇಳುವುದು ಕೊಂಚ ಕಷ್ಟವಾಗಬಹುದು. ಹಾಗಾಗಿ ಕ್ರಮವಿಧಿ ರಚನೆಯ ಮೊದಲು ಅದರ ವಿವರಗಳನ್ನೆಲ್ಲ ಒಂದು ಕಡೆ ಬರೆದು, ವಿಶ್ಲೇಷಿಸಿ ಆನಂತರವಷ್ಟೇ ಪ್ರೋಗ್ರಾಮಿಂಗ್ ಕೆಲಸ ಕೈಗೆತ್ತಿಕೊಳ್ಳುವುದು ಐಟಿ ಜಗತ್ತಿನ ಸಂಪ್ರದಾಯ.

ಈ ಕೆಲಸದಲ್ಲಿ ಹಲವಾರು ತಂತ್ರಗಳನ್ನು ಬಳಸಲಾಗುತ್ತದೆ. ನಾವು ಬರೆಯಲಿರುವ ಕ್ರಮವಿಧಿಯ ಪ್ರತಿಯೊಂದು ಹೆಜ್ಜೆಯನ್ನೂ ಗುರುತಿಸುವುದು, ಹಾಗೂ ಪ್ರತಿ ಹೆಜ್ಜೆಯಲ್ಲೂ ನಮ್ಮ ಕ್ರಮವಿಧಿ ಹೇಗೆ ವರ್ತಿಸಬೇಕು ಎಂದು ತೀರ್ಮಾನಿಸಿಕೊಳ್ಳಲು ನೆರವಾಗುವುದು ಈ ತಂತ್ರಗಳೆಲ್ಲವುದರ ಸಮಾನ ಗುರಿ. ಇಂತಹ ತಂತ್ರಗಳಲ್ಲೊಂದು ಫ್ಲೋಚಾರ್ಟ್, ಅಂದರೆ ಪ್ರವಾಹನಕ್ಷೆ.


ಮೊದಲಿಗೆ ಒಂದು ಉದಾಹರಣೆಯನ್ನು ಗಮನಿಸೋಣ. ಶಾಲೆಯಿಂದ ಮನೆಗೆ ಬಂದ ವಿದ್ಯಾರ್ಥಿ ಏನೆಲ್ಲ ಮಾಡುತ್ತಾನೆ? ತಿಂಡಿ ತಿಂದು ಸ್ವಲ್ಪಹೊತ್ತು ಆಟವಾಡಿ ಆನಂತರ ಓದಿಕೊಳ್ಳಲು ಕೂರುತ್ತಾನೆ, ಓದಿ ಮುಗಿದಮೇಲೆ ಊಟಮಾಡಿ ಟೀವಿ ನೋಡಿ ನಿದ್ರಿಸುತ್ತಾನೆ - ಅಷ್ಟೇ ತಾನೆ?

ವಿವರಣೆಯ ದೃಷ್ಟಿಯಿಂದ ಸರಿಯೇ ಇರಬಹುದು, ಆದರೆ ಇಂತಹ ವಿವರಣೆಗಳು ಕಂಪ್ಯೂಟರಿಗೆ ಅರ್ಥವಾಗುವುದಿಲ್ಲ. ಹಾಗಾದರೆ ಕಂಪ್ಯೂಟರಿಗೆ ಅರ್ಥವಾಗಲು ಇನ್ನೇನೆಲ್ಲ ವಿವರಗಳು ಬೇಕು?

ಶನಿವಾರ, ಡಿಸೆಂಬರ್ 7, 2013

ಇಜ್ಞಾನ ವಿಶೇಷ: ನದಿ ತಿರುವು

ನಾಗೇಶ ಹೆಗಡೆ


'ಎದುರಾಳಿಯನ್ನು ನೇರಾನೇರ ಕೆಡವಲು ಸಾಧ್ಯವಿಲ್ಲದಿದ್ದರೆ ಆತನನ್ನು ಗೊಂದಲಕ್ಕೆ ಕೆಡವಿ' ಎಂಬುದೊಂದು ತಮಾಷೆಯ ಮಾತಿದೆ. ನೇತ್ರಾವತಿ (ಎತ್ತಿನ ಹೊಳೆ) ನದಿ ತಿರುವು ಯೋಜನೆಯ ಸಮರ್ಥಕರು ಇದನ್ನೇ ಮಾಡುತ್ತಿದ್ದಾರೆ.

ಎತ್ತಿನಹೊಳೆ ವಿವಾದ ನೆನೆಗುದಿಗೆ ಬಿದ್ದಿದೆ. ಇಡೀ ಯೋಜನೆ ನಿರರ್ಥಕವೆಂದು ಹೇಳುವ ಪರಿಸರಪ್ರೇಮಿಗಳು, ಕಾನೂನುತಜ್ಞರು, ನೀರಾವರಿ ಪರಿಣತರ ವಾದಗಳಿಗೆ ಸೂಕ್ತ ಉತ್ತರ ನೀಡಲಾರದೆ ಸರಕಾರ ಕಕ್ಕಾಬಿಕ್ಕಿಯಾಗಿದೆ. ಇದೇ ಸಂದರ್ಭದಲ್ಲಿ ಇನ್ನಷ್ಟು ಅಂಥದ್ದೇ ಯೋಜನೆಗಳನ್ನು ಜನತೆಯ ಮುಂದೆ ಛೂ ಬಿಟ್ಟು ಎಲ್ಲರನ್ನೂ ಗೊಂದಲಕ್ಕೆ ಕೆಡವಲಾಗುತ್ತಿದೆ. ಲಿಂಗನಮಕ್ಕಿಯಿಂದ ಕುಡಿಯುವ ನೀರನ್ನು ಬೆಂಗಳೂರಿಗೆ ಸಾಗಿಸುವ ಯೋಜನೆ ಬರುತ್ತದಂತೆ.ಲಿಂಗನಮಕ್ಕಿಗೆ ದೂರದ ಅಘನಾಶಿನಿಯಿಂದ ನೀರನ್ನು ಪಂಪ್ ಮಾಡಿ ತುಂಬಲು ಸಾಧ್ಯವಿದೆಯಂತೆ. ಅಂಥ ಭಾರೀ ಯೋಜನೆಗಳು ಜಾರಿಗೆ ಬಂದರೆ ಮಾತ್ರ ಬೆಂಗಳೂರಿನ ಜನರಿಗೆ ನೀರು ಪೂರೈಕೆ ಸಾಧ್ಯವಂತೆ. ಇಲ್ಲಾಂದರೆ ರಾಜಧಾನಿಯಲ್ಲಿ ಹಾಹಾಕಾರ ಏಳುತ್ತದಂತೆ....

ಶುಕ್ರವಾರ, ಡಿಸೆಂಬರ್ 6, 2013

ಸ್ಮೈಲಿ ಸಮಾಚಾರ

ಟಿ. ಜಿ. ಶ್ರೀನಿಧಿ

ಇಮೇಲಿನಲ್ಲಿ ನಗುವುದು ಹೇಗೆ ಅಂತಲೋ ಮೊಬೈಲಿನಲ್ಲಿ ಅಳುವುದು ಹೇಗೆ ಅಂತಲೋ ಕೇಳಿದರೆ ನಿಮ್ಮ ಉತ್ತರ ಏನಿರುತ್ತದೆ? "ಅದೇನು ಸುಲಭ - ಸ್ಮೈಲಿ ಇದೆಯಲ್ಲ!" ಎನ್ನುತ್ತೀರಿ ತಾನೆ?

ಹೌದು, ಸ್ಮೈಲಿಗಳ ಜನಪ್ರಿಯತೆಯೇ ಅಂಥದ್ದು. ಇಮೇಲಿನಲ್ಲೋ ಎಸ್ಸೆಮ್ಮೆಸ್ಸಿನಲ್ಲೋ ನಮ್ಮ ಭಾವನೆಗಳಿಗೊಂದು ರೂಪಕೊಡಲು ಅನುವುಮಾಡಿಕೊಟ್ಟ ಈ ಸಂಕೇತಗಳು ಜನಪ್ರಿಯವಾಗಿದ್ದರಲ್ಲಿ ಆಶ್ಚರ್ಯವೂ ಏನಿಲ್ಲ ಬಿಡಿ.

ಸಾಮಾನ್ಯ ಭಾಷೆಯಲ್ಲಿ ಸ್ಮೈಲಿಗಳೆಂದು ಕರೆಸಿಕೊಂಡರೂ ಭಾವನೆಗಳನ್ನು (ಎಮೋಶನ್) ವ್ಯಕ್ತಪಡಿಸಲು ನೆರವಾಗುವ ಈ ಸಂಕೇತಗಳಾದ (ಐಕನ್) ಇವನ್ನು ಎಮೋಶನ್, ಐಕನ್ ಎರಡೂ ಸೇರಿಸಿ 'ಎಮೋಟೈಕನ್'ಗಳೆಂದು ಗುರುತಿಸಲಾಗುತ್ತದೆ.

ಈ ಸಂಕೇತಗಳಿಗೆ ಮೂರು ದಶಕಗಳಿಗೂ ಮೀರಿದ ಇತಿಹಾಸವಿದೆ.

ಶುಕ್ರವಾರ, ನವೆಂಬರ್ 29, 2013

ಕಂಪ್ಯೂಟರ್ ಭಾಷೆ: ಭಾಗ ೩

ಟಿ. ಜಿ. ಶ್ರೀನಿಧಿ

ಭಾಗ ೧ ಓದಲು ಇಲ್ಲಿ ಕ್ಲಿಕ್ ಮಾಡಿ
ಭಾಗ ೨ ಓದಲು ಇಲ್ಲಿ ಕ್ಲಿಕ್ ಮಾಡಿ

ಯಂತ್ರಭಾಷೆಯಲ್ಲಿ ಪ್ರೋಗ್ರಾಮಿಂಗ್ ಕಷ್ಟವೋ ಕಷ್ಟ. ಇನ್ನು ಅದಕ್ಕೆ ಪರ್ಯಾಯವೆಂದು ಕರೆಸಿಕೊಳ್ಳುವ ಅಸೆಂಬ್ಲಿ ಭಾಷೆಯಲ್ಲಿ ಪ್ರೋಗ್ರಾಮ್ ಬರೆಯುವ ಕೆಲಸವೂ ಸುಲಭವೇನಲ್ಲ. ಹಾಗಾದರೆ ಪ್ರೋಗ್ರಾಮಿಂಗ್ ಕೆಲಸವನ್ನು ಸುಲಭಮಾಡಿಕೊಳ್ಳುವುದು ಹೇಗೆ?

ಈ ಉದ್ದೇಶಕ್ಕಾಗಿಯೇ ತಜ್ಞರು 'ಹೈ ಲೆವೆಲ್', ಅಂದರೆ ಮೇಲುಸ್ತರದ ಪ್ರೋಗ್ರಾಮಿಂಗ್ ಭಾಷೆಗಳನ್ನು ರೂಪಿಸಿದ್ದಾರೆ. ನಾವೆಲ್ಲ ಆಗಿಂದಾಗ್ಗೆ ಕೇಳುವ ಸಿ, ಸಿ++, ಜಾವಾ ಇತ್ಯಾದಿಗಳೆಲ್ಲ ಈ ಬಗೆಯ ಭಾಷೆಗಳೇ.

ಯಂತ್ರಭಾಷೆ, ಅಸೆಂಬ್ಲಿ ಭಾಷೆಗಳಿಗೆಲ್ಲ ಹೋಲಿಸಿದರೆ ಬರೆಯಲು ಹಾಗೂ ಅರ್ಥಮಾಡಿಕೊಳ್ಳಲು ಬಹಳ ಸುಲಭವಾಗಿರುವುದು ಹೈ ಲೆವೆಲ್ ಭಾಷೆಯಲ್ಲಿ ಬರೆದ ಕ್ರಮವಿಧಿಗಳ (ಪ್ರೋಗ್ರಾಮ್) ಹೆಚ್ಚುಗಾರಿಕೆ. ಇಲ್ಲಿ ಸಣ್ಣಪುಟ್ಟ ಕೆಲಸಗಳಿಗೂ ಸಾಲುಸಾಲು ನಿರ್ದೇಶನಗಳನ್ನು ಬರೆಯಬೇಕಾದ ಅನಿವಾರ್ಯತೆ ಇರುವುದಿಲ್ಲ.

ಶನಿವಾರ, ನವೆಂಬರ್ 23, 2013

ಕಂಪ್ಯೂಟರ್ ಭಾಷೆ: ಭಾಗ ೨

ಟಿ. ಜಿ. ಶ್ರೀನಿಧಿ

ಭಾಗ ೧ ಓದಲು ಇಲ್ಲಿ ಕ್ಲಿಕ್ ಮಾಡಿ

ನಿಮಗೆ ಮನೆಯಲ್ಲಿ ಯಾರಾದರೂ "ಗಾಡಿಗೆ ಪೆಟ್ರೋಲ್ ಹಾಕಿಸಿಕೊಂಡು ಬಾ" ಎಂದು ಹೇಳಿದರೆ ಏನುಮಾಡುತ್ತೀರಿ? ದ್ವಿಚಕ್ರ ವಾಹನ ತೆಗೆದುಕೊಂಡು ಪೆಟ್ರೋಲ್ ಬಂಕಿಗೆ ಹೋಗುತ್ತೀರಿ, ಸಾಮಾನ್ಯವಾಗಿ ಹಾಕಿಸುವಷ್ಟು ಪೆಟ್ರೋಲ್ ತುಂಬಿಸಿಕೊಳ್ಳುತ್ತೀರಿ, ದುಡ್ಡುಕೊಡುತ್ತೀರಿ, ವಾಪಸ್ ಬರುತ್ತೀರಿ. ಅಷ್ಟೇ ತಾನೆ? ಅಬ್ಬಬ್ಬಾ ಎಂದರೆ ಹೇಳಿದ ತಕ್ಷಣ ಹೋಗಲಿಲ್ಲ ಎಂದು ಒಂದೆರಡು ಸಾರಿ ಬೈಸಿಕೊಂಡಿರಬಹುದು ಅಷ್ಟೆ.

ನೀವೊಬ್ಬರೇ ಯಾಕೆ, ಬೇರೆ ಯಾರೇ ಆದರೂ ತಮಗೆ ಅಭ್ಯಾಸವಿರುವ ಕೆಲಸವನ್ನು ಅವರು ಇಷ್ಟೇ ಸುಲಭವಾಗಿ ಮಾಡಿಬಿಡುತ್ತಾರೆ. ಗೊತ್ತಿಲ್ಲದ ಕೆಲಸವಾದರೂ ಅಷ್ಟೆ, ಒಂದೆರಡು ಬಾರಿ ಅನುಭವವಾಗುತ್ತಿದ್ದಂತೆ ಅದೂ ಸುಲಭವೇ.

ಆದರೆ ಕಂಪ್ಯೂಟರಿಗೆ ಹೇಳಿ ಯಾವುದಾದರೂ ಕೆಲಸ ಮಾಡಿಸುವುದು ಇಷ್ಟು ಸುಲಭವಲ್ಲ. ಅದಕ್ಕೆ ಸ್ವಂತ ಬುದ್ಧಿಯಿಲ್ಲದಿರುವುದು ಮೊದಲ ಕಾರಣವಾದರೆ ನಮ್ಮ ಭಾಷೆ ಅರ್ಥವಾಗದಿರುವುದು ಎರಡನೆಯ, ಹಾಗೂ ಬಹುಮುಖ್ಯವಾದ ಕಾರಣ. ಕ್ರಮವಿಧಿ ರಚನೆ, ಅಂದರೆ ಪ್ರೋಗ್ರಾಮಿಂಗ್‌ಗೆ ಕಂಪ್ಯೂಟರ್ ವಿಜ್ಞಾನ ಕ್ಷೇತ್ರದಲ್ಲಿ ಎಲ್ಲಿಲ್ಲದ ಪ್ರಾಮುಖ್ಯ ದೊರಕಿರುವುದು ಇದರಿಂದಲೇ.

ಶನಿವಾರ, ನವೆಂಬರ್ 16, 2013

ಕಂಪ್ಯೂಟರ್ ಭಾಷೆ: ಭಾಗ ೧

ಟಿ. ಜಿ. ಶ್ರೀನಿಧಿ

ಕಂಪ್ಯೂಟರ್ ಏನು ಕೆಲಸ ಮಾಡಬೇಕಿದ್ದರೂ ಮೊದಲು ನಾವು ಅದನ್ನು ಕಂಪ್ಯೂಟರಿಗೆ ಹೇಳಿಕೊಡಬೇಕು ಎನ್ನುವ ವಿಷಯ ನಮಗೆ ಗೊತ್ತೇ ಇದೆ. ಎಷ್ಟಾದರೂ ಪ್ರೋಗ್ರಾಮಿಂಗ್‌ನ ಮುಖ್ಯ ಉದ್ದೇಶ ಇದೇ ತಾನೆ? ಕಂಪ್ಯೂಟರ್ ಮಾಡುವ ಪ್ರತಿಯೊಂದು ಕೆಲಸವೂ ಯಾವುದೋ ಒಂದು ಪ್ರೋಗ್ರಾಮ್, ಅಂದರೆ ಕ್ರಮವಿಧಿಯ ತರ್ಕಸರಣಿಯನ್ನೇ ಚಾಚೂತಪ್ಪದೆ ಅನುಸರಿಸುತ್ತಿರುತ್ತದೆ.

ಪ್ರೋಗ್ರಾಮ್ ಬರೆಯುವುದು, ಮತ್ತು ಆ ಮೂಲಕ ಕಂಪ್ಯೂಟರಿಗೆ ಪಾಠ ಹೇಳುವುದೇನೋ ಸರಿ. ಆದರೆ ನಾವು ಬರೆದ ಪ್ರೋಗ್ರಾಮ್ ಕಂಪ್ಯೂಟರಿಗೆ ಅರ್ಥವಾಗಬೇಕಲ್ಲ!

ಬಾಹ್ಯ ಜಗತ್ತಿನ ಸಂವಹನದಲ್ಲೇನೋ ನಮ್ಮ ಮಾತುಗಳನ್ನು ಬೇರೊಬ್ಬರಿಗೆ ಮುಟ್ಟಿಸಲು ನಾವು ಭಾಷೆಯನ್ನು ಬಳಸುತ್ತೇವೆ. ನಾವು ಉಪಯೋಗಿಸುತ್ತಿರುವ ಭಾಷೆ ಗೊತ್ತಿರುವವರಿಗೆ ನಮ್ಮ ಮಾತುಗಳು ಸುಲಭವಾಗಿ ಅರ್ಥವಾಗುತ್ತವೆ. ಭಾಷೆ ಗೊತ್ತಿಲ್ಲದವರ ಪಾಲಿಗೆ ನಮ್ಮ ಮಾತುಗಳು ಬರಿಯ ಶಬ್ದ, ಅಕ್ಷರಗಳು ಬರಿಯ ಆಕಾರಗಳು ಅಷ್ಟೆ!

ಬಾಹ್ಯ ಜಗತ್ತಿನ ಉದಾಹರಣೆಯನ್ನೇ ಪ್ರೋಗ್ರಾಮ್ ಬರೆಯುವ ಕೆಲಸಕ್ಕೂ ಅನ್ವಯಿಸುವುದಾದರೆ ಕಂಪ್ಯೂಟರಿಗೆ ಪಾಠಹೇಳುವುದಕ್ಕೂ ಯಾವುದೋ ಒಂದು ಭಾಷೆಯನ್ನು ಉಪಯೋಗಿಸಬಹುದು. ಆದರೆ ಆ ಭಾಷೆ ಯಾವುದಾಗಿರಬೇಕು ಎನ್ನುವುದೇ ದೊಡ್ಡ ಪ್ರಶ್ನೆ.

ಶುಕ್ರವಾರ, ನವೆಂಬರ್ 8, 2013

ಹಾರು ಕಾರು!

ಟಿ. ಜಿ. ಶ್ರೀನಿಧಿ


"ನನ್ನ ಮಾತು ನೆನಪಿಟ್ಟುಕೊಳ್ಳಿ, ವಿಮಾನ ಮತ್ತು ಮೋಟಾರುಕಾರುಗಳೆರಡೂ ಸೇರಿದಂತಹ ವಾಹನವೊಂದು ಬರಲಿದೆ. ಇದನ್ನು ಕೇಳಿ ನೀವು ನಗಬಹುದು, ಆದರೆ ಆ ವಾಹನ ಖಂಡಿತಾ ಬರಲಿದೆ!"

ಹೀಗೆಂದು ಹೇಳಿದ್ದು ಯಾರೋ ಅಂತಿಂಥ ವ್ಯಕ್ತಿಯಲ್ಲ. ಜನಸಾಮಾನ್ಯರೂ ಕಾರಿನ ಕನಸು ಕಾಣುವಂತೆ ಮಾಡಿದ ಮೊದಲ ವ್ಯಕ್ತಿ, ಹೆಸರಾಂತ ಉದ್ಯಮಿ ಹೆನ್ರಿ ಫೋರ್ಡ್ ಹೇಳಿದ ಮಾತುಗಳಿವು. ಹಾರುವ ಕಾರುಗಳ (ಫ್ಲೈಯಿಂಗ್ ಕಾರ್) ಬಗ್ಗೆ ಅವರು ಹಾಗೆಂದು ಹೇಳಿ ಇನ್ನೇನು ಮುಕ್ಕಾಲು ಶತಮಾನವಾಗುತ್ತ ಬಂತು.

ಈ ಸುದೀರ್ಘ ಅವಧಿಯಲ್ಲಿ ಮನುಷ್ಯ ಏನೇನನ್ನೆಲ್ಲ ಕಂಡುಹಿಡಿದಿದ್ದಾನೆ, ಎಷ್ಟೆಲ್ಲ ಅಸಾಧ್ಯಗಳನ್ನು ಸಾಧ್ಯವಾಗಿಸಿದ್ದಾನೆ. ಆದರೆ ವೈಯಕ್ತಿಕ ಉಪಯೋಗಕ್ಕೆ ಸುಲಭವಾಗಿ ಬಳಸಬಹುದಾದಂತಹ ಹಾರಾಡುವ ವಾಹನದ ಸೃಷ್ಟಿ ಮಾತ್ರ ಅವನಿಂದ ಈವರೆಗೂ ಸಾಧ್ಯವಾಗಿಲ್ಲ. ರಸ್ತೆಯ ಮೇಲಿನ ಸಂಚಾರದಲ್ಲಿ ಫೋರ್ಡ್ ಕಾರುಗಳು ತಂದ ಬದಲಾವಣೆಯಂತಹುದನ್ನು ಆಕಾಶಸಂಚಾರದಲ್ಲೂ ಯಾರಾದರೂ ತರಬಹುದೇನೋ ಎಂದು ಎಲ್ಲರೂ ಕಾಯುತ್ತಲೇ ಇದ್ದಾರೆ.

ಹಾಗೆಂದಮಾತ್ರಕ್ಕೆ ಈ ಕಲ್ಪನೆ ಇನ್ನೂ ಕಲ್ಪನೆಯಾಗಿಯೇ ಉಳಿದಿದೆ ಎಂದೇನೂ ಅರ್ಥವಲ್ಲ.

ಶುಕ್ರವಾರ, ನವೆಂಬರ್ 1, 2013

ಮುಕ್ತ ಮುಕ್ತ ಶಿಕ್ಷಣ: ಓಪನ್ ಕೋರ್ಸ್‌ವೇರ್

ಟಿ. ಜಿ. ಶ್ರೀನಿಧಿ

ಸಾಧ್ಯವಾದಷ್ಟೂ ಒಳ್ಳೆಯ ಶಿಕ್ಷಣ ಪಡೆದುಕೊಳ್ಳಬೇಕು ಎನ್ನುವ ಆಸೆ ಎಲ್ಲರಲ್ಲೂ ಇರುತ್ತದೆ. ಆದರೆ ಎಲ್ಲರೂ ವಿಶ್ವವಿಖ್ಯಾತ ವಿದ್ಯಾಸಂಸ್ಥೆಗಳನ್ನೇ ಸೇರಲು ಆಗುವುದಿಲ್ಲವಲ್ಲ, ಹಾಗಾಗಿ ಶಿಕ್ಷಣದ ಗುಣಮಟ್ಟದ ಬಗ್ಗೆ ಅಸಮಾಧಾನ ಆಗಿಂದಾಗ್ಗೆ ಕೇಳಿಬರುತ್ತಲೇ ಇರುತ್ತದೆ.

ಇದರ ಬದಲಿಗೆ ದೊಡ್ಡದೊಡ್ಡ ವಿದ್ಯಾಸಂಸ್ಥೆಗಳೇ ನಮ್ಮ ಬಳಿ ಬರುವಂತಿದ್ದರೆ? ವಿಶ್ವವ್ಯಾಪಿ ಜಾಲ ಈ ರಮ್ಯ ಕಲ್ಪನೆಯನ್ನೂ ಸಾಕಾರಗೊಳಿಸಿದೆ. ವಿಶ್ವದ ಅನೇಕ ಹೆಸರಾಂತ ವಿದ್ಯಾಸಂಸ್ಥೆಗಳು ತಮ್ಮಲ್ಲಿ ಬಳಸುವ ಪಠ್ಯಸಾಮಗ್ರಿಯನ್ನು ಜಾಲತಾಣಗಳ ಮೂಲಕ ಮುಕ್ತವಾಗಿ ತೆರೆದಿಟ್ಟು ಎಲ್ಲರಿಗೂ ಸುಲಭವಾಗಿ ದೊರಕುವಂತೆ ಮಾಡಿವೆ.

ಹೀಗೆ ಸಾರ್ವಜನಿಕ ಬಳಕೆಗಾಗಿ ಸಂಪೂರ್ಣ ಮುಕ್ತವಾಗಿ ದೊರಕುವ ಪಠ್ಯಸಾಮಗ್ರಿಯನ್ನು ಓಪನ್ ಕೋರ್ಸ್‌ವೇರ್ ಎಂದು ಕರೆಯುತ್ತಾರೆ; ಯಾವುದೇ ಶುಲ್ಕವಿಲ್ಲದೆ ಮಾಹಿತಿಯ ಮುಕ್ತ ಪ್ರಸಾರ ಸಾಧ್ಯವಾಗಬೇಕು ಎನ್ನುವುದೇ ಈ ಪರಿಕಲ್ಪನೆಯ ಮೂಲ ಉದ್ದೇಶ. ತಂತ್ರಾಂಶಗಳು ಹಾಗೂ ಅದರ ಸೋರ್ಸ್ ಕೋಡ್ (ಆಕರ ಸಂಕೇತ) ಎಲ್ಲರಿಗೂ ಉಚಿತವಾಗಿ-ಮುಕ್ತವಾಗಿ ದೊರಕುವಂತಾಗಬೇಕು ಎಂಬ ಉದ್ದೇಶದೊಡನೆ ಸಾಫ್ಟ್‌ವೇರ್ ರಂಗದಲ್ಲಿ ಚಾಲ್ತಿಯಲ್ಲಿದೆಯಲ್ಲ, ಓಪನ್‌ಸೋರ್ಸ್ ಪರಿಕಲ್ಪನೆ, ಇದೂ ಹಾಗೆಯೇ.

ಬುಧವಾರ, ಅಕ್ಟೋಬರ್ 30, 2013

ಕಂಪ್ಯೂಟರಿಗೆ ಕನ್ನಡ ಕಲಿಸಿದ ಕತೆ

ಕಂಪ್ಯೂಟರಿಗೆ ಕನ್ನಡ ಕಲಿಸಿದ ಮೇಷ್ಟರು ಶ್ರೀ ಕೆ. ಪಿ. ರಾವ್ ಅವರಿಗೆ ೨೦೧೩ರ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ. ಇದು ಕಂಪ್ಯೂಟರ್ ಬಳಸುವ ಕನ್ನಡಿಗರೆಲ್ಲರಿಗೂ ಅತ್ಯಂತ ಖುಷಿಯ ಕ್ಷಣ. ಈ ಸಂದರ್ಭದಲ್ಲಿ ಕೆ. ಪಿ. ರಾವ್ ಜೀವನ-ಸಾಧನೆ ಕುರಿತ ಲೇಖನ.

ಟಿ. ಜಿ. ಶ್ರೀನಿಧಿ

ಈಗಷ್ಟೆ ಮಾರುಕಟ್ಟೆಗೆ ಬಂದ ಹೊಸ ಮೊಬೈಲ್ ಫೋನ್ ಇರಲಿ, ಲೇಟೆಸ್ಟ್ ಟ್ಯಾಬ್ಲೆಟ್ ಕಂಪ್ಯೂಟರ್ ಇರಲಿ, ಅಥವಾ ಕಂಪ್ಯೂಟರಿನ ಯಾವುದೋ ತಂತ್ರಾಂಶವೇ ಇರಲಿ, "ಇದರಲ್ಲಿ ಕನ್ನಡ ಬಳಸಬಹುದೇ?" ಎನ್ನುವ ಪ್ರಶ್ನೆ ನಮ್ಮೆದುರು ಆಗಿಂದಾಗ್ಗೆ ಬರುತ್ತಲೇ ಇರುತ್ತದೆ. ಆದರೆ ಈ ಪ್ರಶ್ನೆ ಯಾವುದೋ ನಿರ್ದಿಷ್ಟ ಯಂತ್ರಾಂಶ ಅಥವಾ ತಂತ್ರಾಂಶಕ್ಕಷ್ಟೆ ಸೀಮಿತವಾಗಿರುತ್ತದೆ; ಏಕೆಂದರೆ ಕಂಪ್ಯೂಟರಿನಲ್ಲಿ ಕನ್ನಡ ಮೂಡುವುದು ನಮ್ಮ ಪಾಲಿಗೆ ಹೊಸ ವಿಷಯವೇನೂ ಅಲ್ಲವಲ್ಲ!

ಆದರೆ ಕೆಲ ದಶಕಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಕಂಪ್ಯೂಟರುಗಳೇ ಅಪರೂಪವಾಗಿದ್ದ ಆ ಕಾಲದಲ್ಲಿ ಕಂಪ್ಯೂಟರ್ ಬಳಸಬೇಕು ಎಂದರೆ ಇಂಗ್ಲಿಷ್ ಗೊತ್ತಿರಲೇಬೇಕು ಎನ್ನುವಂತಹ ಪರಿಸ್ಥಿತಿ ಇತ್ತು. ಆ ಫೋನಿನಲ್ಲಿ ಕನ್ನಡ ಓದಬಹುದು, ಈ ಟ್ಯಾಬ್ಲೆಟ್ಟಿನಲ್ಲಿ ಕನ್ನಡ ಟೈಪುಮಾಡುವುದೂ ಸುಲಭ ಎಂದೆಲ್ಲ ವಿವರಿಸುವ ನಮಗೆ ಕಂಪ್ಯೂಟರ್ ಪ್ರಪಂಚದಲ್ಲಿ ಕನ್ನಡವೇ ಕಾಣಸಿಗದಿದ್ದ ದಿನಗಳನ್ನು ಊಹಿಸುವುದೇ ಕಷ್ಟ, ಅಲ್ಲವೆ?

ಅಂತಹ ದಿನಗಳಲ್ಲೂ ಕಂಪ್ಯೂಟರ್ ಪ್ರಪಂಚದಲ್ಲಿ ಸಕ್ರಿಯರಾಗಿದ್ದ ಕನ್ನಡದ ಭಗೀರಥರು ತಮ್ಮ ಅದಮ್ಯ ಉತ್ಸಾಹದಿಂದ ಕಂಪ್ಯೂಟರಿಗೂ ಅ-ಆ-ಇ-ಈ ಹೇಳಿಕೊಟ್ಟರು; ಡಿಜಿಟಲ್ ಲೋಕದಲ್ಲಿ ಕನ್ನಡ ಹುಲುಸಾಗಿ ಬೆಳೆಯಲು ಕಾರಣರಾದರು.

ಇಂಗ್ಲಿಷ್ ನಾಡಿನಿಂದ ಬಂದ ಕಂಪ್ಯೂಟರ್, ಇಂತಹ ಮೇಷ್ಟರೊಬ್ಬರ ನೆರವಿನಿಂದ ಕನ್ನಡ ಕಲಿತ ಕತೆ ಇಲ್ಲಿದೆ.

ಶುಕ್ರವಾರ, ಅಕ್ಟೋಬರ್ 25, 2013

ಕಂಪ್ಯೂಟರಿಗೆ ಪಾಠವ ಹೇಳಿ... [ಭಾಗ ೨]

ಟಿ ಜಿ ಶ್ರೀನಿಧಿ

ಭಾಗ ೧ ಓದಲು ಇಲ್ಲಿ ಕ್ಲಿಕ್ ಮಾಡಿ

ಕಂಪ್ಯೂಟರ್ ಏನು ಮಾಡಬೇಕು ಎಂದು ತಿಳಿಸಲು ಕ್ರಮವಿಧಿಯನ್ನು (ಪ್ರೋಗ್ರಾಮ್) ಬರೆಯುವುದೇನೋ ಸರಿ. ಆದರೆ ಅದರ ತರ್ಕ (ಲಾಜಿಕ್) ಸರಿಯಿಲ್ಲದಿದ್ದರೆ - ಅಂದರೆ, ನಾವು ಯಾವುದಾದರೂ ವಿವರವನ್ನು ಸರಿಯಾಗಿ ಕೊಡದಿದ್ದರೆ - ಆ ಕ್ರಮವಿಧಿಯನ್ನು ಬಳಸಿದಾಗ ನಮ್ಮ ನಿರೀಕ್ಷೆಯ ಫಲಿತಾಂಶ ಬರುವುದಿಲ್ಲ. ಕಂಪ್ಯೂಟರ್ ನಮ್ಮ ಅಪೇಕ್ಷೆಯಂತೆ ಕೆಲಸಮಾಡಬೇಕಾದರೆ ಅದು ಯಾವ ಕೆಲಸಮಾಡಬೇಕೋ ಆ ಕೆಲಸದ ಪೂರ್ಣ ವಿವರಗಳು ನಾವು ಬರೆಯುವ ಕ್ರಮವಿಧಿಯಲ್ಲಿ ಇರಲೇಬೇಕು.

ಈಗ ನಿಮ್ಮ ಮನೆಗೆ ಕೆಲ ಮಿತ್ರರು ಬರಬೇಕಿದೆ ಎಂದುಕೊಳ್ಳೋಣ. ಇದನ್ನು ನಾವು ಬರೆಯುತ್ತಿರುವ ಕ್ರಮವಿಧಿಯ ಉದ್ದೇಶಕ್ಕೆ ಹೋಲಿಸಬಹುದು. ಆದರೆ ಮನೆಗೆ ಬರಲು ನಿಮ್ಮ ಮಿತ್ರರಿಗೆ ದಾರಿ ಗೊತ್ತಾಗಬೇಕು ತಾನೆ?

ಮಂಗಳವಾರ, ಅಕ್ಟೋಬರ್ 22, 2013

ಜ್ವಾಲಾಮುಖಿ ಒಡಲಿನ ತಂಪು!

ಹಿರಿಯ ವಿಜ್ಞಾನ ಲೇಖಕ ಶ್ರೀ ಟಿ. ಆರ್. ಅನಂತರಾಮುರವರ 'ಭೂಮಿಯ ಟೈಂ ಬಾಂಬ್: ಜ್ವಾಲಾಮುಖಿ' ಕೃತಿಯ ಪರಿಚಯ

ಕೆ. ಎಸ್. ನವೀನ್

'ಭೂಮಿಯ ಟೈಂ ಬಾಂಬ್: ಜ್ವಾಲಾಮುಖಿ' ಹಿರಿಯ ವಿಜ್ಞಾನ ಲೇಖಕರಾದ ಶ್ರೀ ಟಿ. ಆರ್. ಅನಂತರಾಮು ಅವರ ಹೊಸ ಕೃತಿ. ಈ ಹಿಂದೆ ಜ್ವಾಲಾಮುಖಿ ಎಂಬ ಹೆಸರಿನ ಇವರದ್ದೇ ಪುಸ್ತಕ ಪ್ರಕಟವಾಗಿದ್ದರೂ ಇದು ಹೊಸತೇ ಆದ ಹೊತ್ತಗೆ.

ಒಟ್ಟು ಹದಿನೇಳು ಅಧ್ಯಾಯಗಳಿರುವ ಈ ಪುಸ್ತಕದಲ್ಲಿ ಜ್ವಾಲಾಮುಖಿಯ ವೈಜ್ಞಾನಿಕ ಕಥನ ಅಲೆ ಅಲೆಯಾಗಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಒಬ್ಬ ಅನುಭವಿ ಬರೆಹಗಾರ ಹೇಗೆ ಲೀಲಾಜಾಲವಾಗಿ ಪುಸ್ತಕದ ಎಲ್ಲ ವಿಭಾಗಗಳನ್ನು ಅಚ್ಚುಕಟ್ಟಾಗಿ  ಸಂಯೋಜಿಸಿ ಒಂದು ಕಲಾಕೃತಿಯನ್ನಾಗಿಸುತ್ತಾನೆ ಎಂಬುದಕ್ಕೆ ಈ ಪುಸ್ತಕ ಮಾದರಿ. ಶೀರ್ಷಿಕೆಗಳಿಂದಲೇ ಇದಕ್ಕೆ ಉದಾಹರಣೆ ಕೊಡಬಹುದು. "ಆಕಾಶದಲ್ಲಿ ಆತಂಕ", "ಜ್ವಾಲಾಮುಖಿಯ ಬಾಯಿಯೊಳಗೆ", "ವಾಯುನೆಲೆಯ ಮೇಲೆ ದಾಳಿ", "ಭೂಮಿಯೊಳಗೆ ಭೂತ", "ಭೂಗರ್ಭದಲ್ಲಿ ಏನಿದೆ?" ಹೀಗೆ ಓದುಗನನ್ನು ಸೆರೆಹಿಡಿಯುತ್ತವೆ. ಪುಸ್ತಕದ ನಡುವೆ ಇಪ್ಪತ್ತನಾಲ್ಕು ಪುಟಗಳ ವರ್ಣ ಚಿತ್ರ ಸಂಪುಟವಿದೆ. ಈ ಚಿತ್ರ ಸಂಪುಟ ಜ್ವಾಲಾಮುಖಿ ಜಗತ್ತಿನೊಳಗೊಂದು ಪಯಣ. ವಿಜ್ಞಾನ ಕೃತಿಗೆ ವರ್ಣಚಿತ್ರ ತರಬಹುದಾದ ಶೋಭೆಯನ್ನು ಇದು ಶ್ರುತ ಪಡಿಸಿದೆ. ಒಂದು ಪಠ್ಯಪುಸ್ತಕ ಅಥವಾ ಆಕರ ಗ್ರಂಥದ ಬಿಗುವಿನಿಂದ ಕೂಡಿರದೆ ಆಸಕ್ತ ಓದುಗ ಓದಲೇ ಬೇಕಾದ ಆಕರವಾಗಿ ಉಳಿಯುತ್ತದೆ.

ಶುಕ್ರವಾರ, ಅಕ್ಟೋಬರ್ 18, 2013

ಕಂಪ್ಯೂಟರಿಗೆ ಪಾಠವ ಹೇಳಿ... [ಭಾಗ ೧]

ಟಿ ಜಿ ಶ್ರೀನಿಧಿ

ನಮ್ಮಿಂದ ಹೇಳಿಸಿಕೊಳ್ಳದೆ ಕಂಪ್ಯೂಟರ್ ಯಾವ ಕೆಲಸವನ್ನೂ ಮಾಡುವುದಿಲ್ಲ ಎನ್ನುವ ಮಾತನ್ನು ನಾವು ಆಗಿಂದಾಗ್ಗೆ ಕೇಳುತ್ತಿರುತ್ತೇವೆ. ಕಂಪ್ಯೂಟರ್ ಏನು ಮಾಡುವುದಿದ್ದರೂ ನಾವು ಹೇಳಿದ್ದನ್ನಷ್ಟೆ, ಹೇಳಿದಂತೆಯೇ ಮಾಡುತ್ತದೆ ಎನ್ನುವುದೂ ನಮಗೆ ಗೊತ್ತು. ಆದರೆ ನಮಗೇನು ಬೇಕು ಎನ್ನುವುದನ್ನು ಕಂಪ್ಯೂಟರಿಗೆ ಹೇಳುವುದು ಹೇಗೆ?

ನಮಗೆ ಬೇಕಾದ ಕೆಲಸ ಮಾಡಿಕೊಡುವ ಸಾಫ್ಟ್‌ವೇರ್ (ತಂತ್ರಾಂಶ) ಕೊಂಡುಕೊಂಡರೆ ಆಯಿತು ಎಂದುಬಿಡಬಹುದು ನಿಜ. ಆದರೆ ಆ ತಂತ್ರಾಂಶವನ್ನು ಮೊದಲಿಗೆ ಯಾರೋ ಸಿದ್ಧಪಡಿಸಿರಬೇಕು ತಾನೆ?

ಹಾಗಾದರೆ ತಂತ್ರಾಂಶವನ್ನು ಸಿದ್ಧಪಡಿಸುವುದು ಎಂದರೇನು, ಮತ್ತು ಅದು ಸಾಧ್ಯವಾಗುವುದು ಹೇಗೆ?

ಏನು ಕೆಲಸ ಮಾಡಬೇಕು ಎನ್ನುವುದನ್ನು ಅತ್ಯಂತ ಸ್ಪಷ್ಟವಾಗಿ ಸಣ್ಣಸಣ್ಣ ಹೆಜ್ಜೆಗಳಲ್ಲಿ ಹೇಳಬೇಕು - ಇದು ಈ ಪ್ರಶ್ನೆಗೆ ಅತ್ಯಂತ ಸರಳ ಉತ್ತರ.

ಶುಕ್ರವಾರ, ಅಕ್ಟೋಬರ್ 11, 2013

ಬಿಗ್ ಡೇಟಾ ಬಗ್ಗೆ ಇನ್ನಷ್ಟು...

ಟಿ ಜಿ ಶ್ರೀನಿಧಿ

ಸರ್ಚ್ ಇಂಜನ್ ಹುಡುಕಾಟಗಳು, ಸಮಾಜಜಾಲಗಳಲ್ಲಿ ಹರಿದಾಡುವ ಸಂದೇಶಗಳು, ಆನ್‌ಲೈನ್ ಅಂಗಡಿಗಳಲ್ಲಿ ಮಾರಾಟವಾಗುವ ಸರಕುಗಳು - ಹೀಗೆ ಹಲವಾರು ಮೂಲಗಳಿಂದ ಹರಿದುಬರುವ ಅಗಾಧ ಪ್ರಮಾಣದ ದತ್ತಾಂಶವನ್ನು ನಾವು ಬಿಗ್ ಡೇಟಾ ಎಂದು ಕರೆಯುತ್ತೇವೆ ಎನ್ನುವುದೇನೋ ಸರಿ. ಆದರೆ ಇಷ್ಟೆಲ್ಲ ಭಾರೀ ಪ್ರಮಾಣದ ಮಾಹಿತಿಯಿಂದ ನಮಗೇನು ಉಪಯೋಗ? ಇದನ್ನು ವಿಶ್ಲೇಷಿಸಿ ಉಪಯುಕ್ತ ಮಾಹಿತಿ ಪಡೆದುಕೊಳ್ಳುವುದು ಹೇಗೆ?

ಸಾಂಪ್ರದಾಯಿಕ ದತ್ತಸಂಚಯಗಳಲ್ಲೇನೋ ನಮಗೆ ಏಕರೂಪದ ದತ್ತಾಂಶ ಸಿಗುತ್ತದೆ; ಆದರೆ ಬಿಗ್ ಡೇಟಾದಲ್ಲಿ ಹಾಗಲ್ಲವಲ್ಲ - ಇಲ್ಲಿ ವಿವಿಧ ಮೂಲಗಳಿಂದ ವಿವಿಧ ರೂಪಗಳಲ್ಲಿ ಬರುವ ದತ್ತಾಂಶವನ್ನು ಸಂಸ್ಕರಿಸುವುದೇ ಮೊದಲ ಸವಾಲು. ಹಲವಾರು ಬಾರಿ ಆ ಮಾಹಿತಿ ಒಂದೇ ಸ್ಥಳದಲ್ಲಿರುವುದೂ ಇಲ್ಲ.

ಹಿಂದೆ ಈ ಬಗೆಯ ದತ್ತಾಂಶವನ್ನು ಯಾರೂ ಸಂಸ್ಕರಿಸುತ್ತಲೇ ಇರಲಿಲ್ಲ. ಆದರೆ ಬಿಗ್ ಡೇಟಾ ಮಹತ್ವ ಸ್ಪಷ್ಟವಾಗುತ್ತ ಹೋದಂತೆ ಸಂಸ್ಥೆಗಳಿಗೆ ಈ ಬಗೆಯ ದತ್ತಾಂಶವನ್ನೂ ಸಂಸ್ಕರಿಸಿ ವಿಶ್ಲೇಷಿಸಬೇಕಾದ ಅಗತ್ಯ ಕಂಡುಬಂತು. ಆಗ ಶುರುವಾದದ್ದೇ ದತ್ತಾಂಶ ಸಂಸ್ಕರಣೆ-ವಿಶ್ಲೇಷಣೆಯ ಹೊಸ ಯುಗ. ಸಾಮಾನ್ಯ ವಿಧಾನಗಳಿಂದ ಸಂಪೂರ್ಣವಾಗಿ ಬೇರೆಯದೇ ಆದ ಈ ಬಗೆಯ ಸಂಸ್ಕರಣೆ-ವಿಶ್ಲೇಷಣೆಯಲ್ಲಿ ಬೇರೆಬೇರೆಡೆ ಇರುವ ಬೇರೆಬೇರೆ ಬಗೆಯ ದತ್ತಾಂಶವನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಸಂಸ್ಕರಿಸಲಾಗುತ್ತದೆ. ಇದರ ಫಲಿತಾಂಶವಾಗಿ ದೊರಕುವ ಮಾಹಿತಿ ಬಲು ಮಹತ್ವದ್ದಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ.

ಗುರುವಾರ, ಅಕ್ಟೋಬರ್ 10, 2013

ಕೌತುಕದ ಚುಚ್ಚುಮದ್ದು

ಇಂಜೆಕ್ಷನ್, ಸಿರಿಂಜ್ ಇವೆಲ್ಲ ಮಕ್ಕಳಲ್ಲಿ ಹುಟ್ಟುಹಾಕುವ ಭಾವನೆಗಳು ಅನೇಕ ಬಗೆಯವು: ಸಿರಿಂಜ್ ನೋಡಿದರೆ ಕುತೂಹಲ, ಇಂಜೆಕ್ಷನ್ ಎಂದರೆ ಭಯ!

ಇದೇ ಸಿರಿಂಜನ್ನು ಬಳಸಿಕೊಂಡು ವಿಜ್ಞಾನ ಕಲಿಕೆಯನ್ನು ಸಾಧ್ಯವಾಗಿಸಬಹುದೆ? ಈ ಉದ್ದೇಶದಿಂದ ಪ್ರಕಟವಾಗಿರುವ ಪುಸ್ತಕವೇ 'ಕೌತುಕದ ಚುಚ್ಚುಮದ್ದು! ...ಸೋಜಿಗದ ಸೂಜಿಮದ್ದು.' ಮಕ್ಕಳ ವಿಜ್ಞಾನ ಕಲಿಕೆಗೆ ಸಂತಸ ನೀಡುವ ಪ್ರಸಂಗಗಳ ಈ ಕೃತಿಯ ಲೇಖಕರು ಶ್ರೀ ನಾರಾಯಣ ಬಾಬಾನಗರ.

ನಮಗೆಲ್ಲ ಪರಿಚಿತವಾದ ಸಿರಿಂಜು ಈ ಪುಸ್ತಕದ ಕೇಂದ್ರಬಿಂದು. ಸಿರಿಂಜ್‌ಗಳನ್ನು ಬಳಸಿ ಮಾಡಬಹುದಾದ ಅನೇಕ ಚಟುವಟಿಕೆಗಳನ್ನು ಈ ಪುಸ್ತಕ ಪರಿಚಯಿಸುತ್ತದೆ. ಸಂದರ್ಭಕ್ಕೆ ತಕ್ಕಂತೆ ಹಲವಾರು ಪೂರಕ ಸಂಗತಿಗಳನ್ನೂ ಪರಿಚಯಿಸಲಾಗಿದೆ (ಉದಾ: ಕೆಲವು ಇಂಜೆಕ್ಷನ್‌ಗಳಲ್ಲಿ ನೀರು ಹಾಗೂ ಔಷಧಿಯ ಪುಡಿ ಪ್ರತ್ಯೇಕವಾಗಿರುವುದು ಏಕೆ?).

ಶುಕ್ರವಾರ, ಅಕ್ಟೋಬರ್ 4, 2013

ಬಿಗ್ ಡೇಟಾ ಬಗ್ಗೆ...

ಟಿ ಜಿ ಶ್ರೀನಿಧಿ

ಡೇಟಾ ಅಥವಾ ದತ್ತಾಂಶ ಎಂದತಕ್ಷಣ ನಮಗೆ ಹಲವಾರು ಸಂಗತಿಗಳು ನೆನಪಾಗುತ್ತವೆ. ಕಳೆದ ಒಂದು ವರ್ಷದಲ್ಲಿ ನಮ್ಮ ದೇಹದ ತೂಕ, ಆರು ತಿಂಗಳಿನಿಂದೀಚೆಗೆ ಮೊಬೈಲ್ ರೀಚಾರ್ಜಿಗೆ ಖರ್ಚುಮಾಡಿದ ಹಣ, ಪರೀಕ್ಷೆಯಲ್ಲಿ ಪಡೆದ ಅಂಕಗಳು, ಪಾಕೆಟ್ ಮನಿ ಖರ್ಚಿನ ಲೆಕ್ಕ - ಹೀಗೆ ಒಂದಲ್ಲ ಒಂದು ಬಗೆಯ ದತ್ತಾಂಶ ನಮ್ಮನ್ನು ಸದಾ ಆವರಿಸಿಕೊಂಡಿರುತ್ತದಲ್ಲ!

ವೈಯಕ್ತಿಕ ವಿಷಯ ಹಾಗಿರಲಿ, ಸಣ್ಣ-ದೊಡ್ಡ ಸಂಸ್ಥೆಗಳಲ್ಲೂ ದತ್ತಾಂಶದ್ದೇ ಭರಾಟೆ. ಕಳೆದ ವರ್ಷದ ಲಾಭ-ನಷ್ಟ, ಮೂರುತಿಂಗಳಿನಲ್ಲಿ ಮಾರಾಟವಾದ ಉತ್ಪನ್ನಗಳ ಲೆಕ್ಕಾಚಾರ, ಶೇರು ಬೆಲೆಯ ಏರಿಳಿತ, ಉದ್ಯೋಗಿಗಳ ಬಗೆಗಿನ ವಿವರ - ಹೀಗೆ ಅಲ್ಲೂ ಭಾರೀ ಪ್ರಮಾಣದಲ್ಲಿ ದತ್ತಾಂಶದ ಶೇಖರಣೆ ನಡೆದಿರುತ್ತದೆ. ಕಂಪ್ಯೂಟರುಗಳು-ಅವುಗಳಲ್ಲಿನ ಡೇಟಾಬೇಸುಗಳೆಲ್ಲ ಇಂತಹ ದತ್ತಾಂಶದ ಸಂಗ್ರಹದಿಂದ ತುಂಬಿ ತುಳುಕುತ್ತಿರುತ್ತವೆ ಎಂದರೂ ಸರಿಯೇ!

ಬಹಳ ವರ್ಷಗಳಿಂದ ಕಂಪ್ಯೂಟರ್ ಪ್ರಪಂಚ ಬೆಳೆದುಬಂದಿರುವುದೂ ಹೀಗೆಯೇ. ಇದರಿಂದಾಗಿ ದತ್ತಾಂಶದ ಸಂಗ್ರಹ ಎಂದಾಕ್ಷಣ ಅದು ಯಾವುದೋ ಒಂದು ದತ್ತಸಂಚಯ, ಅಂದರೆ ಡೇಟಾಬೇಸ್‌ನಲ್ಲೇ ಆಗಿರಬೇಕು ಎನ್ನುವ ಅಭಿಪ್ರಾಯವೇ ಇನ್ನೂ ವ್ಯಾಪಕವಾಗಿದೆ.

ಆದರೆ ಕಂಪ್ಯೂಟರುಗಳು-ಅವುಗಳ ಜಾಲಗಳು ನಮ್ಮ ಬದುಕನ್ನು ಆವರಿಸಿಕೊಳ್ಳುತ್ತಹೋದಂತೆ ದತ್ತಾಂಶದ ಸಂಗ್ರಹವೂ ಅದೆಷ್ಟು ಪ್ರಮಾಣದಲ್ಲಿ ಹೆಚ್ಚಿದೆಯೆಂದರೆ ಅದು ಡೇಟಾಬೇಸ್‌ಗಳ ಮಿತಿಯನ್ನೆಲ್ಲ ಮೀರಿ ಬೆಳೆದುಬಿಟ್ಟಿದೆ. ಹೀಗಾಗಿಯೇ ಈಗ ದತ್ತಾಂಶವೆಂದರೆ ಡೇಟಾಬೇಸಿನ ಟೇಬಲ್ಲುಗಳು - ಅವುಗಳ ನಡುವಿನ ಸಂಬಂಧ (ರಿಲೇಶನ್) ಇಷ್ಟೇ ಅಲ್ಲ. ಪಠ್ಯ, ಧ್ವನಿ, ಚಿತ್ರ, ವೀಡಿಯೋಗಳೊಡನೆ ಶುರುವಾಗುವ ದತ್ತಾಂಶದ ಪಟ್ಟಿ, ಸರ್ಚ್ ಇಂಜನ್ ಹುಡುಕಾಟಗಳು, ಸಮಾಜಜಾಲಗಳಲ್ಲಿ ಹರಿದಾಡುವ ಸಂದೇಶಗಳು, ಆನ್‌ಲೈನ್ ಅಂಗಡಿಗಳಲ್ಲಿ ಮಾರಾಟವಾಗುವ ಸರಕುಗಳು - ಹೀಗೆ ಹಲವಾರು ಹೊಸ ಮೂಲಗಳನ್ನು ತನ್ನಲ್ಲಿ ಸೇರಿಸಿಕೊಳ್ಳುತ್ತಿದೆ. ದತ್ತಾಂಶ ನಿರ್ದಿಷ್ಟ ರೂಪದಲ್ಲಷ್ಟೆ ಇರಬೇಕು ಎನ್ನುವ ಅಘೋಷಿತ ನಿಯಮ ಕೂಡ ದೂರವಾಗುತ್ತಿದೆ.

ಹೀಗಿರುವಾಗ ಸಹಜವಾಗಿಯೇ ದತ್ತಾಂಶದ ಪ್ರಮಾಣದಲ್ಲೂ ಗಮನಾರ್ಹ ಪ್ರಮಾಣದ ಏರಿಕೆ ಕಂಡುಬಂದಿದೆ. ಗಿಗಾಬೈಟುಗಳ ಲೆಕ್ಕವೆಲ್ಲ ಹಳೆಯದಾಗಿ ದತ್ತಾಂಶದ ಪ್ರಮಾಣವನ್ನು ಇದೀಗ ಪೆಟಾಬೈಟ್-ಎಕ್ಸಾಬೈಟುಗಳಲ್ಲಿ ಅಳೆಯಲಾಗುತ್ತಿದೆ (ಒಂದು ಪೆಟಾಬೈಟ್ ಎನ್ನುವುದು ಹತ್ತು ಲಕ್ಷ ಗಿಗಾಬೈಟ್‌ಗಳಿಗೆ ಸಮ; ಎಕ್ಸಾಬೈಟ್ ಎಂದರೆ ಸಾವಿರ ಪೆಟಾಬೈಟ್). ಮಾಹಿತಿ ತಂತ್ರಜ್ಞಾನ ಪ್ರಪಂಚದಲ್ಲಿ ಬಿಗ್ ಡೇಟಾ ಎಂದು ಗುರುತಿಸುವುದು ಇದನ್ನೇ.

ಶನಿವಾರ, ಸೆಪ್ಟೆಂಬರ್ 28, 2013

ಯಂತ್ರದಲ್ಲಿ ತಂತ್ರದ ಮಂತ್ರ

ಟಿ. ಜಿ. ಶ್ರೀನಿಧಿ

ಬೂಲಿಯನ್ ತರ್ಕ ಹಾಗೂ ಅದು ನಮಗೆ ಪರಿಚಯಿಸಿದ ಲಾಜಿಕ್ ಗೇಟ್‌ಗಳನ್ನು ಬಳಸಿ ಲೆಕ್ಕಾಚಾರ ಮಾಡಬಲ್ಲ, ಮಾಡಿದ ಲೆಕ್ಕಾಚಾರ ನೆನಪಿಟ್ಟುಕೊಳ್ಳಬಲ್ಲ ಸರ್ಕ್ಯೂಟುಗಳನ್ನು ರೂಪಿಸಬಹುದು ಎಂದು ನಮಗೆ ಈಗಾಗಲೇ ಗೊತ್ತು. ಮೇಲ್ನೋಟಕ್ಕೆ ಸರಳವಾಗಿ ಕಂಡರೂ ಇಂತಹ ಸರ್ಕ್ಯೂಟುಗಳನ್ನು ರೂಪಿಸಬಹುದಾದ ಸಾಧ್ಯತೆಯೇ ಒಂದು ಕ್ರಾಂತಿಕಾರಕ ಸಂಗತಿ; ಏಕೆಂದರೆ ಕೇವಲ ಮನುಷ್ಯರಷ್ಟೇ ಮಾಡಬಹುದಾದ ಅದೆಷ್ಟೋ ಕೆಲಸಗಳನ್ನು ಯಂತ್ರಗಳೂ ಮಾಡುವಂತಾಗುವಲ್ಲಿ ಈ ಆವಿಷ್ಕಾರದ ಪಾತ್ರ ಬಹಳ ಮಹತ್ವದ್ದು.

ಸರ್ಕ್ಯೂಟುಗಳನ್ನು ಒಮ್ಮೆ ರೂಪಿಸುವುದು ಸಾಧ್ಯವಾಗುತ್ತಿದ್ದಂತೆ ಕೂಡುವ, ಕಳೆಯುವ, ಗುಣಿಸುವ, ಭಾಗಿಸುವ ಸರ್ಕ್ಯೂಟುಗಳೆಲ್ಲ ಸಿದ್ಧವಾಗುತ್ತವೆ. ಇಷ್ಟಾಗುತ್ತಿದ್ದಂತೆ ಒಂದು ಕ್ಯಾಲ್‌ಕ್ಯುಲೇಟರ್ ತಯಾರಾಗುವುದು ಇನ್ನೇನು ಕಷ್ಟವಲ್ಲ. ಸರ್ಕ್ಯೂಟಿನ ಸಂಕೀರ್ಣತೆಯನ್ನು ಇನ್ನಷ್ಟು ಹೆಚ್ಚಿಸುವುದು ಸಾಧ್ಯವಾದರೆ ಕಂಪ್ಯೂಟರಿನ ಸಿಪಿಯುವನ್ನೂ ಸಿದ್ಧಮಾಡಿಬಿಡಬಹುದು. ಆದರೆ ಇದು ಸಾಧ್ಯವಾಗುವುದು ಹೇಗೆ?

ಶುಕ್ರವಾರ, ಸೆಪ್ಟೆಂಬರ್ 20, 2013

ಫಿಲ್ಮ್ ಸ್ಟೋರಿ!

ಡಿಜಿಟಲ್ ಫೋಟೋಗ್ರಫಿ ತಂತ್ರಜ್ಞಾನ ಕುರಿತ ಕೃತಿ 'ಕ್ಲಿಕ್ ಮಾಡಿ ನೋಡಿ!' ಬರುವ ಭಾನುವಾರ (ಸೆ. ೨೨) ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ಛಾಯಾಗ್ರಹಣದ ಇತಿಹಾಸದಿಂದ ಡಿಜಿಟಲ್ ಕ್ಯಾಮೆರಾ ತಂತ್ರಜ್ಞಾನದ ಪಕ್ಷಿನೋಟದವರೆಗೆ, ಛಾಯಾಗ್ರಹಣದ ಪರಿಕಲ್ಪನೆಗಳ ಪರಿಚಯದಿಂದ ಕ್ಯಾಮೆರಾ ಕೊಳ್ಳುವ ಟಿಪ್ಸ್‌ವರೆಗೆ ಅನೇಕ ವಿಷಯಗಳತ್ತ ಗಮನಹರಿಸುವ ಈ ಪುಸ್ತಕದಿಂದ ಆಯ್ದ ಒಂದು ಭಾಗ ಇಲ್ಲಿದೆ. ಈ ಪುಸ್ತಕವನ್ನು ನವಕರ್ನಾಟಕ ಪ್ರಕಾಶನ ಪ್ರಕಟಿಸಿದೆ.

ಇದೇ ಪುಸ್ತಕದಿಂದ ಆಯ್ದ ಇನ್ನೊಂದು ಭಾಗ ಚುಕ್ಕು‌ಬುಕ್ಕು ಡಾಟ್ ಕಾಮ್‌ನಲ್ಲಿದೆ.

ಟಿ. ಜಿ. ಶ್ರೀನಿಧಿ

ಮೆಮೊರಿ ಕಾರ್ಡುಗಳ ಜೊತೆ ಕ್ಯಾಮೆರಾದ ಸಂಬಂಧ ಇಷ್ಟೊಂದು ಗಾಢವಾಗಿ  ಬೆಳೆಯುವ ಮುನ್ನ ಫಿಲ್ಮ್ ರೋಲುಗಳು ಛಾಯಾಗ್ರಹಣದ ಅವಿಭಾಜ್ಯ ಅಂಗಗಳಾಗಿದ್ದವು. ಫೋಟೋ ಕ್ಲಿಕ್ಕಿಸುವ ಮುನ್ನ ಕ್ಯಾಮೆರಾದಲ್ಲಿ ಫಿಲ್ಮ್ ಎಷ್ಟಿದೆ ಎಂದು ಪರೀಕ್ಷಿಸಿಕೊಳ್ಳುವುದು, ಎಲ್ಲ ಚಿತ್ರಗಳನ್ನೂ ಕ್ಲಿಕ್ಕಿಸಿದ ಮೇಲೆ ಫಿಲ್ಮ್ ರೋಲನ್ನು ಹುಷಾರಾಗಿ ಹೊರತೆಗೆದು ಸ್ಟೂಡಿಯೋಗೆ ಕೊಡುವುದು, ಚಿತ್ರಗಳು ಮುದ್ರಿತವಾಗಿ ಬರುವುದನ್ನು ಕಾತರದಿಂದ ಕಾಯುವುದು - ಇದು ಹವ್ಯಾಸಿ ಛಾಯಾಗ್ರಾಹಕರೆಲ್ಲರ ಜೀವನಕ್ರಮವೇ ಆಗಿತ್ತು ಎಂದರೂ ಸರಿಯೇ.

ಅತ್ಯಂತ ಸರಳವಾಗಿ ಹಾಗೂ ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಗಳನ್ನು ದಾಖಲಿಸಿಕೊಳ್ಳುವ ಸಾಮರ್ಥ್ಯವೇ ಫಿಲ್ಮ್ ರೋಲುಗಳಿಗೆ ದೊರೆತ ಈ ಪ್ರಾಮುಖ್ಯಕ್ಕೆ ಕಾರಣ ಎನ್ನಬಹುದು. ಸಣ್ಣದೊಂದು ಸುರುಳಿಯೊಳಗೆ ಅವಿತುಕೊಂಡಿರುವ ತೆಳು ಹಾಳೆಯೊಂದು ಬೆಳಕಿನ ಸಂಪರ್ಕಕ್ಕೆ ಬಂದತಕ್ಷಣ  ತನ್ನ ಎದುರಿನ ದೃಶ್ಯವನ್ನು ತನ್ನಲ್ಲಿ ಸೆರೆಹಿಡಿದಿಟ್ಟುಕೊಳ್ಳುವುದು ಸಣ್ಣ ವಿಷಯವೂ ಅಲ್ಲ ಬಿಡಿ.

ಶನಿವಾರ, ಸೆಪ್ಟೆಂಬರ್ 14, 2013

ಕ್ಲಿಕ್ ಮಾಡಿ ನೋಡಿ!


ಛಾಯಾಗ್ರಹಣದ ಸ್ವರೂಪವನ್ನೇ ಬದಲಿಸಿರುವ ಡಿಜಿಟಲ್ ಕ್ಯಾಮೆರಾಗಳು ನಮ್ಮ ಮುಂದಿಡುವ ಸಾಧ್ಯತೆಗಳು ಅಸಂಖ್ಯ. ಅವುಗಳಲ್ಲಿ ಕೆಲವನ್ನು ಪರಿಚಯಿಸುವ ಕೃತಿ 'ಕ್ಲಿಕ್ ಮಾಡಿ ನೋಡಿ!' ಸೆಪ್ಟೆಂಬರ್ ೨೨ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ.

ಟಿ. ಜಿ. ಶ್ರೀನಿಧಿ ಬರೆದಿರುವ, ನವಕರ್ನಾಟಕ ಪ್ರಕಾಶನ ಪ್ರಕಟಿಸುತ್ತಿರುವ ಈ ಕೃತಿ ಛಾಯಾಗ್ರಹಣ ನಡೆದುಬಂದ ದಾರಿಯ ಪರಿಚಯದಿಂದ ಡಿಜಿಟಲ್ ಕ್ಯಾಮೆರಾ ತಂತ್ರಜ್ಞಾನದ ಪಕ್ಷಿನೋಟದವರೆಗೆ, ಛಾಯಾಗ್ರಹಣಕ್ಕೆ ಸಂಬಂಧಪಟ್ಟ ಪರಿಕಲ್ಪನೆಗಳ ಪರಿಚಯದಿಂದ ಕ್ಯಾಮೆರಾ ಕೊಳ್ಳುವಾಗ ನೆನಪಿಟ್ಟುಕೊಳ್ಳಬೇಕಾದ ಅಂಶಗಳವರೆಗೆ ಅನೇಕ ವಿಷಯಗಳತ್ತ ಗಮನಹರಿಸುತ್ತದೆ.

ಶುಕ್ರವಾರ, ಸೆಪ್ಟೆಂಬರ್ 13, 2013

ಕಂಪ್ಯೂಟರಿನ ಮಿದುಳು ಮತ್ತು ಬೂಲಿಯನ್ ಲೆಕ್ಕಾಚಾರ

ಟಿ. ಜಿ. ಶ್ರೀನಿಧಿ

ಬೂಲಿಯನ್ ತರ್ಕದ ಗೇಟ್‌ಗಳನ್ನು ಬಳಸಿ ಹಲವು ಬಗೆಯ ಲೆಕ್ಕಾಚಾರಗಳನ್ನು ಮಾಡುವುದು ಸಾಧ್ಯ ಎನ್ನುವುದು ನಮಗೆ ಈಗಾಗಲೇ ಗೊತ್ತು. ಲೆಕ್ಕಾಚಾರ ಮಾಡಲು ಗೇಟ್‌ಗಳನ್ನು ಬಳಸಿದಂತೆ ಮಾಡಿದ ಲೆಕ್ಕಾಚಾರವನ್ನು ನೆನಪಿಟ್ಟುಕೊಳ್ಳಲೂ ಅವನ್ನೇ ಬಳಸುವುದು ಸಾಧ್ಯವೇ ಎಂದು ಕೇಳಿದರೆ ಖಂಡಿತಾ ಹೌದು ಎಂದೇ ಉತ್ತರಿಸಬೇಕಾಗುತ್ತದೆ. ಏಕೆಂದರೆ ಕಂಪ್ಯೂಟರಿನ ಜ್ಞಾಪಕಶಕ್ತಿಗೆ (ಮೆಮೊರಿ) ಬೇಕಾದ ಸರ್ಕ್ಯೂಟುಗಳು ರೂಪುಗೊಳ್ಳುವುದು ಲಾಜಿಕ್ ಗೇಟ್‌ಗಳ ಸಂಯೋಜನೆಯನ್ನು ಬಳಸಿಕೊಂಡೇ.

ವಿವಿಧ ಸರ್ಕ್ಯೂಟುಗಳಲ್ಲಿ ಬಳಕೆಯಾಗುವ ಲಾಜಿಕ್ ಗೇಟ್‌ಗಳಿರುತ್ತವಲ್ಲ, ಅವುಗಳನ್ನು ಸೂಕ್ತವಾಗಿ ಜೋಡಿಸಿದರೆ ಆ ಜೋಡಣೆ ತನಗೆ ಇನ್‌ಪುಟ್ ಆಗಿ ಬರುವ ಬಿಟ್ ಅನ್ನು ನೆನಪಿಟ್ಟುಕೊಳ್ಳಬಲ್ಲದು. ಇದನ್ನು ಸಾಧ್ಯವಾಗಿಸುವ ಒಂದು ಉಪಾಯವೆಂದರೆ ಆ ಸರ್ಕ್ಯೂಟಿನಿಂದ ದೊರಕುವ ಉತ್ತರವನ್ನು (ಔಟ್‌ಪುಟ್) ಮತ್ತೆ ಅದಕ್ಕೆ ಇನ್‌ಪುಟ್ ಆಗಿ ನೀಡುವುದು. ಈ ಪ್ರಕ್ರಿಯೆಯನ್ನೇ ಫೀಡ್‌ಬ್ಯಾಕ್ ಎಂದು ಕರೆಯುತ್ತಾರೆ. ಕಂಪ್ಯೂಟರ್ ಮೆಮೊರಿಯ ಪ್ರಮುಖ ಉದಾಹರಣೆಯಾದ ರ್‍ಯಾಂಡಮ್ ಆಕ್ಸೆಸ್ ಮೆಮೊರಿ (ರ್‍ಯಾಮ್) ರಚನೆಯಲ್ಲಿ ಬಳಕೆಯಾಗುವುದು ಇದೇ ಪರಿಕಲ್ಪನೆ.

ಹಾಗೆಂದು ಯಾವುದೋ ಗೇಟ್‌ನಿಂದ ದೊರೆತ ಉತ್ತರವನ್ನು ಸುಮ್ಮನೆ ಅದಕ್ಕೆ ಊಡಿಸಿಬಿಟ್ಟರೆ ಅದರಿಂದ ಏನೂ ಪ್ರಯೋಜನವಾಗುವುದಿಲ್ಲ. ಉದಾಹರಣೆಗೆ ನಾವೀಗ ಒಂದು ಬಿಟ್ ಮಾಹಿತಿಯನ್ನು ಉಳಿಸಿಡಲು ಬಯಸುತ್ತೇವೆ ಎನ್ನುವುದಾದರೆ ನಾವು ಬಳಸುವ ಗೇಟ್‌ಗಳ ಸಂಯೋಜನೆ ಆ ಕೆಲಸವನ್ನು ಸಮರ್ಪಕವಾಗಿ ಮಾಡುವಂತಿರಬೇಕು. ಈ ಕೆಲಸವನ್ನು ಮಾಡಬಲ್ಲ ಸರ್ಕ್ಯೂಟಿಗೆ 'ಫ್ಲಿಪ್-ಫ್ಲಾಪ್' ಒಂದು ಉದಾಹರಣೆ. ಕಂಪ್ಯೂಟರಿನ ಮಿದುಳಿನಂತೆ ಬಳಕೆಯಾಗುವ ಮೆಮೊರಿಯನ್ನು ರೂಪಿಸುವಲ್ಲಿ ಇವುಗಳದೇ ಮಹತ್ವದ ಪಾತ್ರ ಎಂದರೂ ತಪ್ಪಾಗಲಾರದು.

ಬುಧವಾರ, ಸೆಪ್ಟೆಂಬರ್ 11, 2013

ಹುಲಿ ಸಂರಕ್ಷಣೆಗೆ ಅಳವಡಿಸಬೇಕಾದ ವಿಜ್ಞಾನ

ಖ್ಯಾತ ವನ್ಯಜೀವಿ ವಿಜ್ಞಾನಿ ಡಾ. ಕೆ. ಉಲ್ಲಾಸ ಕಾರಂತರ 'The Science of Saving Tigers' ಕೃತಿಯ ಪರಿಚಯ

ಕೆ.ಎಸ್. ನವೀನ್

"ಹುಲಿ" ಎಂಬುದು ಒಂದು ಮಾಂತ್ರಿಕ ಪದ! ಅದು ಮೀಟುವ ಭಾವಗಳೇ ಬೇರೆ! ವನ್ಯಜೀವಿ ಸಂರಕ್ಷಕರಿಂದ ತೊಡಗಿ ಪ್ರವಾಸಿಗಳವರೆಗೆ (ಬೇಟೆಗಾರರಿಗೂ!) ಬೇರೆ ಬೇರೆ ಭಾವಸಂಚಾರವನ್ನು ತರುವ ಪ್ರಾಣಿ ಹುಲಿ. ಇದು ಭಾರತದ ರಾಷ್ಟ್ರೀಯ ಪ್ರಾಣಿ. ಕಾಡಿನ ಉಳಿವಿಗೆ ಹುಲಿ ಅಗತ್ಯ ಎಂಬುದು ಭಗವದ್ಗೀತೆಯಲ್ಲಿಯೂ ಹೇಳಿದೆ. ಇದೊಂದು ವೈಜ್ಞಾನಿಕ ಸತ್ಯ. ಇಂದು ಹುಲಿ ಜಗತ್ತಿನ ಕೈಬೆರಳೆಣಿಕೆಯ ರಾಷ್ಟ್ರಗಳಲ್ಲಿನ ಸಂಕುಚಿಸುತ್ತಿರುವ ವನ್ಯಪ್ರದೇಶಕ್ಕೆ ಸೀಮಿತವಾಗಿದೆ. ಇದನ್ನು ಉಳಿಸಲು ಜಾಗತಿಕ ಮಟ್ಟದಲ್ಲಿ ಸಾಕಷ್ಟು ಪ್ರಯತ್ನಗಳು ಸಾಗಿವೆ.

ಹುಲಿಯ ವೈಜ್ಞಾನಿಕ ಸಂರಕ್ಷಣೆ ಇಂದಿನ ಅಗತ್ಯ. ಇದು ಕೇವಲ ಘೋಷಣೆ ಕೂಗುವುದರಿಂದ ಅಥವಾ ಬೈನಾಕ್ಯುಲರ್ ತೂಗಿಕೊಂಡು ಬೆನ್ನುಚೀಲ ಹೊತ್ತು ನಡೆಯುವುದರಿಂದ ಸಾಧ್ಯವಿಲ್ಲ. ಅದಕ್ಕೆ ಶುದ್ಧವಿಜ್ಞಾನ, ತಂತ್ರಜ್ಞಾನದ ಹಾದಿ ಹಿಡಿಯಬೇಕಾಗುತ್ತದೆ. ಆ ದಾರಿಯನ್ನು ಈ ಪುಸ್ತಕ ಸಾಟಿಯಿಲ್ಲದಂತೆ ತೋರುತ್ತದೆ. ಇದರ ಲೇಖಕರುಗಳು ವೈಜ್ಞಾನಿಕ ವನ್ಯ ಸಂರಕ್ಷಣೆಯ ರೂವಾರಿಗಳು. ಇದರ ಪ್ರಧಾನ ಶಿಲ್ಪಿ ಕನ್ನಡದವರೆ ಆದ ಡಾ ಕೆ ಉಲ್ಲಾಸ ಕಾರಂತರು.ಇದು ನಮಗೆ ಹೆಮ್ಮೆಯ ವಿಷಯವೂ ಆಗಬೇಕು. ವೈಜ್ಞಾನಿಕ ವನ್ಯಜೀವಿ ವಿಜ್ಞಾನದ ಜಾಗತಿಕ ನಕಾಶೆಯಲ್ಲಿ ಭಾರತಕ್ಕೆ ಸ್ಥಾನ ಕಲ್ಪಿಸಿಕೊಟ್ಟವರಲ್ಲಿ ಪ್ರಮುಖರು ಡಾ ಕಾರಂತರು. ಇಲ್ಲಿನ ವೈಜ್ಞಾನಿಕ ಸಂರಕ್ಷಣಾ ವಿಧಾನಗಳ ಪರಿಚಯ, ಸಂರಕ್ಷಣೆಯಲ್ಲಿ ವಿಜ್ಞಾನದ ಅಗತ್ಯ ತಿಳಿಯವನನ್ನು ಎಚ್ಚರಿಸಿ ಹಾದಿ ಅದಲ್ಲ, ಇದು ಎಂದು ಸಂದೇಹಕ್ಕೆ ಎಡೆಮಾಡದಂತೆ ಮನದಟ್ಟು ಮಾಡಿಸುತ್ತದೆ. ಸಂರಕ್ಷಣೆಯಲ್ಲಿ ಇಷ್ಟೆಲ್ಲಾ ಇದೆಯೇ ಎಂದು ಅಚ್ಚರಿಪಡಿಸುತ್ತದೆ. ಪುಸ್ತಕ ಓದಿ ಕೆಳಗಿಡುವ ಹೊತ್ತಿಗೆ, ಓದುಗ ಜ್ಞಾನೋದಯವಾದ ಬುದ್ಧನಂತಾಗಿರುತ್ತಾನೆ.

ಪ್ರತಿ ಹಾಳೆಯಲ್ಲಿ, ಪ್ರತಿ ಪದದಲ್ಲಿ ವಿಜ್ಞಾನ ತುಂಬಿಕೊಂಡಿರುವ ಈ  ಸುಮಾರು ಮುನ್ನೂರೈವತ್ತು ಪುಟಗಳ ಈ ಪುಸ್ತಕ ಡಾ|| ಕಾರಂತರು ಸೇರಿದಂತೆ ಅನೇಕ ಜಾಗತಿಕ ಮಟ್ಟದ ವಿಜ್ಞಾನಿಗಳು ಕಳೆದ ಮುವ್ವತ್ತು ವರ್ಷಗಳಿಂದ ನಡೆಸುತ್ತಿರುವ ಸಂಶೋಧನೆಗಳ ಸಾರ.

ಭಾನುವಾರ, ಸೆಪ್ಟೆಂಬರ್ 8, 2013

ಪಾಸ್‌ವರ್ಡ್ ಜೋಪಾನ!

ಟಿ. ಜಿ. ಶ್ರೀನಿಧಿ

ಮೇಜಿನ ಮೇಲಿನ ಕಂಪ್ಯೂಟರಿನಿಂದ ಪ್ರಾರಂಭಿಸಿ ಇಂಟರ್‌ನೆಟ್ ಸಂಪರ್ಕ, ಇಮೇಲ್, ಬ್ಯಾಂಕ್ ಖಾತೆ, ಕ್ರೆಡಿಟ್ ಕಾರ್ಡ್, ಸಮಾಜ ಜಾಲ ಇತ್ಯಾದಿಗಳವರೆಗೆ ನಮ್ಮ ಬದುಕಿಗೆ ಸಂಬಂಧಪಟ್ಟ ಸಮಸ್ತ ಮಾಹಿತಿಯೂ ತನ್ನ ಸುರಕ್ಷತೆಗಾಗಿ ಒಂದು ಪದವನ್ನು ನೆಚ್ಚಿಕೊಂಡಿರುತ್ತದೆ. ಈ ಹೇಳಿಕೆ ಓದಲು ವಿಚಿತ್ರವಾಗಿ ಕಂಡರೂ ಖಂಡಿತಾ ಸತ್ಯ.

ಇಷ್ಟೆಲ್ಲ ಮಹತ್ವದ ಪಾತ್ರ ವಹಿಸುವ ಆ ಪದವೇ ಪಾಸ್‌ವರ್ಡ್. ಡಿಜಿಟಲ್ ಪ್ರಪಂಚದಲ್ಲಿ ನಮ್ಮ ಮಾಹಿತಿಯನ್ನೆಲ್ಲ ಸುರಕ್ಷಿತವಾಗಿಡಲು, ಅದು ಅಪಾತ್ರರ ಕೈಗೆ ಸಿಗದಂತೆ ನೋಡಿಕೊಳ್ಳಲು, ನಮ್ಮ ಮಾಹಿತಿ ನಮಗಷ್ಟೆ ಗೊತ್ತು ಎಂಬ ಸಮಾಧಾನದ ಭಾವನೆ ಮೂಡಿಸಲು ಪಾಸ್‌ವರ್ಡ್ ಬೇಕೇ ಬೇಕು.

ಕಂಪ್ಯೂಟರ್ ಪ್ರಪಂಚದಲ್ಲಿನ ನಮ್ಮ ಚಟುವಟಿಕೆಗಳನ್ನೆಲ್ಲ ಸುರಕ್ಷಿತವಾಗಿಡುವ ಒಂದು ಬೀಗ ಇದೆ ಎಂದು ಭಾವಿಸಿಕೊಂಡರೆ ಪಾಸ್‌ವರ್ಡುಗಳನ್ನು ಆ ಬೀಗದ ಕೀಲಿಕೈ ಎಂದೇ ಕರೆಯಬಹುದು. ನಮ್ಮದೇ ಬೇಜವಾಬ್ದಾರಿಯಿಂದಲೋ ಕಳ್ಳರ ಕೈಚಳಕದಿಂದಲೋ ಕೀಲಿಕೈ ಕಳೆದುಹೋದರೆ ತೊಂದರೆಯಾಗುವುದು ನಮ್ಮ ಸುರಕ್ಷತೆಗೇ ತಾನೆ! ಹೀಗಾಗಿ ಬಾಹ್ಯ ಪ್ರಪಂಚದಲ್ಲಿರುವಂತೆ ಕಂಪ್ಯೂಟರಿನ ವರ್ಚುಯಲ್ ಲೋಕದಲ್ಲೂ ಪಾಸ್‌ವರ್ಡ್ ರೂಪದ ಕೀಲಿಕೈಗಳನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕಾದ್ದು ಅನಿವಾರ್ಯ.

ನಮ್ಮ ಮಾಹಿತಿಯನ್ನು ಸುರಕ್ಷಿತವಾಗಿಡುವ ದೃಷ್ಟಿಯಿಂದ ಇಷ್ಟೆಲ್ಲ ಪ್ರಮುಖ ಪಾತ್ರ ವಹಿಸುವ ಪಾಸ್‌ವರ್ಡುಗಳನ್ನು
ಜೋಪಾನಮಾಡುವುದು ಹೇಗೆ? ಅವುಗಳ ಆಯ್ಕೆ-ಬಳಕೆಯಲ್ಲಿ, ಗೌಪ್ಯತೆ ಕಾಪಾಡಿಕೊಳ್ಳುವುದರಲ್ಲಿ ನಾವು ಅನುಸರಿಸಬೇಕಾದ ಕ್ರಮಗಳೇನು?

ಶನಿವಾರ, ಆಗಸ್ಟ್ 31, 2013

ಲಾಜಿಕ್ ಮತ್ತು ಲೆಕ್ಕ

ಟಿ. ಜಿ. ಶ್ರೀನಿಧಿ

ಜಾರ್ಜ್ ಬೂಲ್ ರೂಪಿಸಿದ ಬೂಲಿಯನ್ ತರ್ಕ ನಮಗೆ ಅನೇಕ ಬಗೆಯ ಲಾಜಿಕ್ ಗೇಟ್‌ಗಳನ್ನು ಪರಿಚಯಿಸುತ್ತದಲ್ಲ, ಅವು ಕಂಪ್ಯೂಟರ್ ಪ್ರಪಂಚದ ಆಧಾರಸ್ತಂಭಗಳಂತೆ ಕೆಲಸಮಾಡುತ್ತವೆ ಎನ್ನುವ ಹೇಳಿಕೆಯನ್ನು ನಾವು ಅನೇಕಬಾರಿ ಕೇಳುತ್ತೇವೆ. ಆದರೆ ಅದು ಸಾಧ್ಯವಾಗುವುದು ಹೇಗೆ?

ಉದಾಹರಣೆಗೆ ಎರಡು ಅಂಕಿಗಳನ್ನು ನಾವೀಗ ಕೂಡಬೇಕಿದೆ ಎಂದುಕೊಳ್ಳೋಣ. ಇದಕ್ಕೆ ಬೇಕಾದ ಸರ್ಕ್ಯೂಟನ್ನು ರೂಪಿಸುವಲ್ಲಿ ಲಾಜಿಕ್ ಗೇಟ್‌ಗಳು ನಮಗೆ ಖಂಡಿತಾ ಸಹಾಯಮಾಡಬಲ್ಲವು. ೦+೦=೦, ೦+೧=೧, ೧+೦=೧,... ಈ ಉತ್ತರಗಳನ್ನು ಎಕ್ಸ್‌ಆರ್ (XOR) ಗೇಟ್ ಕೊಡಬಲ್ಲದು ಎಂದು ನಮಗೆ ಗೊತ್ತೇ ಇದೆಯಲ್ಲ!

ಆದರೆ ೧+೧ ಎಂಬ ಲೆಕ್ಕ ಬಂದಾಗ ಮಾತ್ರ ಕೊಂಚ ಸಮಸ್ಯೆಯಾಗುತ್ತದೆ. ೧+೧=೨ ಎನ್ನುವುದೇನೋ ಸರಿ. ಆದರೆ ದ್ವಿಮಾನ ಪದ್ಧತಿಯ ಲೆಕ್ಕಾಚಾರದಲ್ಲಿ ೨ ಎಂದರೆ ೧೦ ಆಗುತ್ತದಲ್ಲ, ಇದಕ್ಕೆ ಎಕ್ಸ್‌ಆರ್ ಗೇಟ್ ಸಾಕಾಗುವುದಿಲ್ಲ: ಅದು ೧+೧ ಎಂದಾಗ ೦ ಎಂದಷ್ಟೇ ಹೇಳಿ ಸುಮ್ಮನಾಗುತ್ತದೆ. ಅದರ ಹಿಂದಿನ ೧ ಇದೆಯಲ್ಲ (ದಶಕ, ಅಥವಾ 'ಕ್ಯಾರಿ ಬಿಟ್') ಅದನ್ನು ಪ್ರತಿನಿಧಿಸುವುದು ಹೇಗೆ?

ಶನಿವಾರ, ಆಗಸ್ಟ್ 24, 2013

ಸಿಂಪಲ್ ಲಾಜಿಕ್, ಕಾಂಪ್ಲೆಕ್ಸ್ ಕೆಲಸ!

ಟಿ. ಜಿ. ಶ್ರೀನಿಧಿ

ಕಂಪ್ಯೂಟರುಗಳು ಹತ್ತಾರು ಬಗೆಯ ಕೆಲಸಗಳನ್ನು ಸಮರ್ಥವಾಗಿ ಮಾಡಬಲ್ಲವು ಎನ್ನುವುದು ನಮಗೆ ಗೊತ್ತೇ ಇದೆ. ಅವುಗಳಿಗೆ ನಮ್ಮ ಭಾಷೆ ಅರ್ಥವಾಗುವುದಿಲ್ಲ ಎನ್ನುವುದೂ ಗೊತ್ತು; ನಾವು ಹೇಳಿದ್ದು ಕಂಪ್ಯೂಟರಿಗೆ ಗೊತ್ತಾಗುವುದು ಅದೆಲ್ಲ ದ್ವಿಮಾನ ಪದ್ಧತಿಯ ಅಂಕಿಗಳಾಗಿ ಬದಲಾದಾಗ ಮಾತ್ರವೇ ತಾನೆ!

ಆದರೆ ಇಲ್ಲಿ ಇನ್ನಷ್ಟು ವಿಷಯಗಳೂ ಇವೆ - ಮೊದಲಿಗೆ ನಾವು ಹೇಳಿದ್ದು ಕಂಪ್ಯೂಟರಿಗೆ ಅರ್ಥವಾಗುವ ರೂಪಕ್ಕೆ ಬದಲಾಗಬೇಕು, ಹಾಗೆ ಬದಲಾದ ಮೇಲೆ ನಮಗೆ ಉತ್ತರ ಸಿಗಬೇಕೆಂದರೆ ಬೇರೆಬೇರೆ ಲೆಕ್ಕಾಚಾರಗಳು ಆಗಬೇಕು, ಲೆಕ್ಕಾಚಾರವೆಲ್ಲ ಆದಮೇಲೆ ಬಂದ ಫಲಿತಾಂಶ ಒಂದುಕಡೆ ಉಳಿದುಕೊಂಡು ನಮಗೆ ಬೇಕಾದಾಗ ಬೇಕಾದ ರೂಪದಲ್ಲಿ ಸಿಗಬೇಕು.

ಕಂಪ್ಯೂಟರಿನಲ್ಲಿ ಇಷ್ಟೆಲ್ಲ ಕೆಲಸಗಳು ಆಗುವುದು ಹೇಗೆ? ಹಣಕಾಸಿನ ಲೆಕ್ಕಾಚಾರ ಮಾಡುವುದಿರಲಿ, ಚೆಸ್‌ನಂತಹ ಆಟಗಳನ್ನು ಆಡುವುದೇ ಇರಲಿ - ಕಂಪ್ಯೂಟರಿನಂತಹ ನಿರ್ಜೀವ ವಸ್ತುವಿಗೆ ಇದೆಲ್ಲ ಹೇಗೆ ಸಾಧ್ಯವಾಗುತ್ತದೆ?

ಕಂಪ್ಯೂಟರಿನಲ್ಲೊಂದು ಚಿಪ್ ಇರುತ್ತದೆ, ಅದು ಈ ಕೆಲಸಗಳನ್ನೆಲ್ಲ ಮಾಡುತ್ತದೆ ಎನ್ನುವುದು ಈ ಪ್ರಶ್ನೆಗೆ ದೊರಕುವ ಅತ್ಯಂತ ಸಾಮಾನ್ಯ ಉತ್ತರ ಇರಬೇಕು. ಆದರೆ ಈ ಉತ್ತರವೂ ಪರಿಪೂರ್ಣವಲ್ಲ. ಸಿಲಿಕಾನ್‌ನಿಂದಲೋ ಮತ್ತೊಂದರಿಂದಲೋ ತಯಾರಾದ ಸಣ್ಣದೊಂದು ಬಿಲ್ಲೆ ಇಷ್ಟೆಲ್ಲ ಕೆಲಸ ಮಾಡುವುದು ಹೇಗೆ?

ಸೋಮವಾರ, ಆಗಸ್ಟ್ 19, 2013

ಕಂಪ್ಯೂಟರ್ ಬಳಸುವವರಿಗೆ ಒಂದಿಷ್ಟು ಟಿಪ್ಸ್

ಟಿ. ಜಿ. ಶ್ರೀನಿಧಿ

ಈಗಂತೂ ಕಂಪ್ಯೂಟರ್ ಬಳಕೆ ಎಲ್ಲ ವಯಸ್ಸಿನವರಿಗೂ ಸರ್ವೇಸಾಮಾನ್ಯವಾದ ವಿಷಯ. ಡೆಸ್ಕ್‌ಟಾಪ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್ - ಹೀಗೆ ಯಾವುದೋ ಒಂದು ಬಗೆಯ ಕಂಪ್ಯೂಟರನ್ನು ನಾವೆಲ್ಲರೂ ಆಗಿಂದಾಗ್ಗೆ ಬಳಸುತ್ತಲೇ ಇರುತ್ತೇವೆ. ಕಾಲೇಜಿನಲ್ಲಿ, ಆಫೀಸಿನಲ್ಲಿ, ಮನೆಯಲ್ಲಿ - ಎಲ್ಲಿ ನೋಡಿದರೂ ಕಂಪ್ಯೂಟರಿನದೇ ರಾಜ್ಯಭಾರ!

ಕಂಪ್ಯೂಟರ್ ಬಳಸಲು ಅದರ ಕುರಿತ ತಾಂತ್ರಿಕ ಜ್ಞಾನವೇನೋ ಬೇಕು ನಿಜ. ಆದರೆ ಅಷ್ಟೇ ಸಾಕೇ ಎಂದು ಕೇಳಿದರೆ ಖಂಡಿತಾ ಸಾಲದು ಎಂದೇ ಹೇಳಬೇಕಾಗುತ್ತದೆ. ಏಕೆಂದರೆ ಕಂಪ್ಯೂಟರ್ ಬಳಸುವಾಗಿನ ನಮ್ಮ ಭಂಗಿ ನಮ್ಮ ತಾಂತ್ರಿಕ ಜ್ಞಾನದಷ್ಟೇ ಪ್ರಮುಖ. ಕಂಪ್ಯೂಟರ್ ದೊಡ್ಡದಾಗಿರಲಿ ಅಥವಾ ಸಣ್ಣದೇ ಇರಲಿ, ಸುದೀರ್ಘ ಅವಧಿಯವರೆಗೆ ಅಸಮರ್ಪಕ ಭಂಗಿಯಲ್ಲಿ ಕುಳಿತು ಅಥವಾ ಮಲಗಿ ಕಂಪ್ಯೂಟರ್ ಬಳಸುವುದು ಆರೋಗ್ಯಕ್ಕೆ ಹಾನಿಕರ.

ಇಂತಹ ದುಷ್ಪರಿಣಾಮಗಳನ್ನು ತಪ್ಪಿಸುವ ಕುರಿತು ಒಂದಷ್ಟು ಟಿಪ್ಸ್ ಇಲ್ಲಿವೆ:

ಶನಿವಾರ, ಆಗಸ್ಟ್ 10, 2013

ಸರಿ, ತಪ್ಪು ಮತ್ತು ಕಂಪ್ಯೂಟರ್

ಟಿ. ಜಿ. ಶ್ರೀನಿಧಿ

ಕಂಪ್ಯೂಟರಿಗೂ ತರ್ಕಕ್ಕೂ (ಲಾಜಿಕ್) ಅವಿನಾಭಾವ ಸಂಬಂಧ. ಅಲ್ಲಿ ಏನನ್ನೇ ಪ್ರತಿನಿಧಿಸಬೇಕಾದರೂ ಅದು ತರ್ಕಬದ್ಧವಾಗಿಯೇ ಇರಬೇಕು.

ಶಾಲೆಯ ವಿದ್ಯಾರ್ಥಿಯೊಬ್ಬ ಪ್ರತಿ ಶನಿವಾರ ಶಾಲೆಗೆ ಬೇರೆಯ ಸಮವಸ್ತ್ರ ಧರಿಸಿ ಹೋಗಬೇಕು ಎಂದುಕೊಳ್ಳೋಣ. ಹಾಗಾದರೆ ಪ್ರತಿ ದಿನ ಇವತ್ತು ಯಾವ ದಿನ ಎಂಬ ಆಲೋಚನೆ ಆತನ ಮನಸ್ಸಿಗೆ ಬರುತ್ತದೆ ತಾನೆ? ಶನಿವಾರವಾದರೆ ವಿಶೇಷ ಸಮವಸ್ತ್ರ, ಇಲ್ಲದಿದ್ದರೆ ಸಾಮಾನ್ಯ ಸಮವಸ್ತ್ರ.

ಇವತ್ತು ಶನಿವಾರವೇ? ಎಂದು ಆತ ತನ್ನನ್ನು ತಾನೇ ಕೇಳಿಕೊಂಡರೆ ಅದಕ್ಕೆ 'ಹೌದು' ಅಥವಾ 'ಇಲ್ಲ' ಎನ್ನುವುದರಲ್ಲಿ ಯಾವುದೋ ಒಂದು ಉತ್ತರ ದೊರಕುತ್ತದೆ. ವಿದ್ಯಾರ್ಥಿಯ ಶನಿವಾರದ ಸಮವಸ್ತ್ರವಷ್ಟೇ ಏಕೆ, ನಮ್ಮ ಬದುಕಿನ ಇನ್ನೂ ಹಲವಾರು ಸನ್ನಿವೇಶಗಳನ್ನು ಪ್ರಶ್ನೆಗಳನ್ನಾಗಿ ರೂಪಿಸಿಕೊಂಡರೂ 'ಹೌದು' ಅಥವಾ 'ಇಲ್ಲ' - ಇವೆರಡಲ್ಲಿ ಒಂದು ಉತ್ತರ ಬರುವುದು ಸಾಮಾನ್ಯ: ಶಾಲೆಗೋ ಕಚೇರಿಗೋ ಹೊರಡುವ ಸಮಯ ಆಯಿತೆ? ಊಟಮಾಡಲು ಹಸಿವೆ ಆಗಿದೆಯೆ? ನಮಗೆ ಬೇಕಾದ ಕಾಲೇಜಿನಲ್ಲಿ ಸೀಟು ಸಿಗಲು ಬೇಕಾದಷ್ಟು ಅಂಕ ಬಂದಿದೆಯೆ? ಮೊಬೈಲ್ ಬಳಸಲು ಬೇಕಾದಷ್ಟು ಕರೆನ್ಸಿ ಇದೆಯೆ? ಹೀಗೆ. ಇಂತಹ ಪ್ರಶ್ನೆಗಳಿಗೆ ದೊರಕುವ ಉತ್ತರವನ್ನೇ ನಮ್ಮ ಮುಂದಿನ ಕ್ರಿಯೆ ಅವಲಂಬಿಸಿರುತ್ತದೆ. ಕೆಲವೊಮ್ಮೆ ಇಂತಹ ಪ್ರಶ್ನೆಗಳ ಸರಣಿಯೇ ನಮ್ಮೆದುರು ನಿಲ್ಲುವುದುಂಟು: ಮೊದಲ ಪ್ರಶ್ನೆಯ ಉತ್ತರ ಆಧರಿಸಿ ಎರಡನೇ ಪ್ರಶ್ನೆ; ಅದರ ಉತ್ತರವನ್ನು ಅವಲಂಬಿಸಿ ಮೂರನೆಯ ಪ್ರಶ್ನೆ, ಹೀಗೆ ಈ ಸರಣಿ ಬೆಳೆಯುತ್ತ ಹೋಗುತ್ತದೆ.

ಸೋಮವಾರ, ಆಗಸ್ಟ್ 5, 2013

ಎಕ್ಸ್ - ಕಿರಣಗಳ ಅದೃಶ್ಯಲೋಕ

ಭೌತ ವಿಜ್ಞಾನದ ಶಿಕ್ಷಕಿಯಾಗಿ ಬೋಧನೆ ಮಾಡಿದ ಅಪಾರ ಅನುಭವದ ಹಿನ್ನೆಲೆಯಲ್ಲಿ ಶ್ರೀಮತಿ ಗಾಯತ್ರಿ ಮೂರ್ತಿಯವರದು ವಿಜ್ಞಾನ ಸಂವಹನೆಯಲ್ಲಿ ದೊಡ್ಡ ಹೆಸರು. ಅವರ ಇತ್ತೀಚಿನ ಕೃತಿ 'ಎಕ್ಸ್ - ಕಿರಣಗಳ ಅದೃಶ್ಯಲೋಕ'ದ ಪರಿಚಯ ಇಲ್ಲಿದೆ.

ಡಾ| ಪಿ. ಎಸ್. ಶಂಕರ್ 

ಎಕ್ಸ್ - ಕಿರಣಗಳ ಶೋಧನೆಯ ಕಥೆ ಎಂದೆಂದಿಗೂ ರೋಚಕವಾದುದು. ತನ್ನ ವಿದ್ಯಾರ್ಥಿ ಜೀವನದಲ್ಲಿ ಕೀಟಲೆ ವಿದ್ಯಾರ್ಥಿ ಎನಿಸಿಕೊಂಡಿದ್ದ ರಾಂಜೆನ್, ಪ್ರಯೋಗಾಲಯಗಳಲ್ಲಿ ಅತ್ಯುತ್ಸಾಹದಿಂದ ಕೆಲಸ ಮಾಡಿ ವಿಶ್ವವಿಖ್ಯಾತಿ ಪಡೆದ ಕತೆ ಸಾರ್ವಕಾಲೀನ ಆಕರ್ಷಣೆಯನ್ನು ಹೊಂದಿದೆ.

ಕ್ರೂಕನ್ ವಿದ್ಯುತ್ ವಿಸರ್ಜನ ನಳಿಗೆಯೊಡನೆ ಕಾರ್ಯ ಮಾಡುತ್ತಿದ್ದಾಗ ಶರೀರವನ್ನು ಭೇದಿಸಿಕೊಂಡು ಹೋಗುವ ಅಗೋಚರ ಕಿರಣಗಳನ್ನು ಆತ ಕಂಡು ಹಿಡಿದ. ಹಿಂದೆಂದೂ ಕಾಣದಿದ್ದ ಆ ಕಿರಣಗಳು ಎಕ್ಸ್ - ಕಿರಣಗಳೆನಿಸಿದವು. ಅವುಗಳ ಮಹತ್ವವನ್ನು ಅರಿಯಲು ಸಮಯ ಹಿಡಿಯಲಿಲ್ಲ. ಅದರ ಪ್ರಕಟಣೆ ಜರ್ಮನ್ ಭಾಷೆಯಲ್ಲಿದ್ದರೂ, ಅದರ ಉಪಯುಕ್ತತೆ ಖಂಡಾಂತರವಾಗಿ ಸಾಗಿ ಜಗತ್ತಿನ ಗಮನ ಸೆಳೆಯಿತು. ವರುಷ ಕಳೆಯುವುದರಲ್ಲಿ ಸಾವಿರಾರು ಲೇಖನಗಳು ಅದರ ಬಗ್ಗೆ ಪ್ರಕಟವಾದವು. ಒಬ್ಬ ವ್ಯಕ್ತಿಯ ಮೇಲೆಯೇ ರೇಡಿಯಾಲಜಿಯು ರಾಂಜೆನಾಲಜಿ ಎಂದು ಅಭೂತ ಪೂರ್ವ ಬೆಳವಣಿಗೆಯನ್ನು ಪಡೆಯಿತು. ಈ ಕಥೆಯನ್ನು ಸ್ವಾರಸ್ಯಕರವಾಗಿ ನಿರೂಪಿಸುವಲ್ಲಿ ಲೇಖಕಿ ಶ್ರೀಮತಿ ಗಾಯತ್ರಿ ಮೂರ್ತಿಯವರು ಯಶಸ್ವಿಯಾಗಿದ್ದಾರೆ.

ಈ ಕಥೆಯ ಹಿನ್ನೆಲೆಯಲ್ಲಿ ಶ್ರೀಮತಿ ಗಾಯತ್ರಿ ಮೂರ್ತಿಯವರು ಎಕ್ಸ್-ಕಿರಣಗಳ ಉತ್ಪಾದನೆ, ಅದರ ಬೇರೆ ಬೇರೆ ವಿಧಗಳು, ಅವುಗಳ ಸ್ವರೂಪವನ್ನು ವಿವರಿಸಿ ಅವು ಹೊರಹಾಕುವ ವಿಕಿರಣ ಪ್ರಮಾಣದ ಅಳೆಯುವಿಕೆ, ಅವುಗಳ ಬಗ್ಗೆ ವಿಸ್ತಾರವಾಗಿ ವಿಜ್ಞಾನದ ಪರಿಚಯವಿಲ್ಲದವರಿಗೂ ಅರ್ಥವಾಗುವ ರೀತಿಯಲ್ಲಿ ವಿವರಿಸಿದ್ದಾರೆ.

ಶುಕ್ರವಾರ, ಆಗಸ್ಟ್ 2, 2013

ಕಂಪ್ಯೂಟರ್ ಕಡೆಗೊಂದು ಮರುನೋಟ

ಟಿ. ಜಿ. ಶ್ರೀನಿಧಿ

ನಮ್ಮ ದಿನನಿತ್ಯದ ಬದುಕಿನ ಹತ್ತಾರು ಕೆಲಸಗಳಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವು ಕಂಪ್ಯೂಟರುಗಳನ್ನು ಬಳಸುತ್ತೇವೆ. ನಮ್ಮಲ್ಲಿ ಅನೇಕರ ಮನೆಗಳಲ್ಲಿ ಕನಿಷ್ಠ ಒಂದಾದರೂ ಕಂಪ್ಯೂಟರ್ ಇರುವುದು ತೀರಾ ಸಾಮಾನ್ಯ. ಅಷ್ಟೇ ಏಕೆ, ನಮ್ಮೆಲ್ಲರ ಕೈಯಲ್ಲಿರುವ ಮೊಬೈಲುಗಳೂ ಸ್ಮಾರ್ಟ್ ಆಗುತ್ತ ಆಗುತ್ತ ತಾವೂ ಕಂಪ್ಯೂಟರುಗಳೇ ಆಗಿಬಿಟ್ಟಿವೆ!

ಹೀಗಿರುವಾಗ ಕಂಪ್ಯೂಟರುಗಳನ್ನು ಯಾರಿಗೂ ವಿಶೇಷವಾಗಿ ಪರಿಚಯಿಸುವ ಅಗತ್ಯ ಬೀಳುವುದು ತೀರಾ ಅಪರೂಪ ಅಂತಲೇ ಹೇಳಬೇಕು. ನಿಮಗೆ ಕಂಪ್ಯೂಟರ್ ಗೊತ್ತಾ ಎಂದು ಯಾರನ್ನಾದರೂ ಕೇಳಿದರೆ ಪ್ರತಿಕ್ರಿಯೆಯಾಗಿ "ಓ, ಅಷ್ಟೂ ಗೊತ್ತಿಲ್ಲವೇ?" ಎಂಬ ಉದ್ಗಾರ ಕೇಳಸಿಗುವ ಸಾಧ್ಯತೆಯೇ ಹೆಚ್ಚು. ನಮಗೆ ಯಾರಾದರೂ ಈ ಪ್ರಶ್ನೆ ಹಾಕಿದರೆ ನಾವೂ ಇದೇ ಉತ್ತರ ಕೊಡುತ್ತೇವೇನೋ.

ಇರಲಿ, ಸುಮ್ಮನೆ ವಾದಕ್ಕಾಗಿ, ನಾವೀಗ ಕಂಪ್ಯೂಟರ್ ಎಂದರೇನು ಎಂಬ ಪ್ರಶ್ನೆಗೆ (ಮರುಪ್ರಶ್ನೆಯ ರೂಪದಲ್ಲಲ್ಲ!) ಉತ್ತರ ಹೇಳಬೇಕಿದೆ ಎಂದುಕೊಳ್ಳೋಣ. ಅಂತಹ ಸಂದರ್ಭದಲ್ಲಿ ನಮ್ಮ ಉತ್ತರ ಏನಿರಬಹುದು?

ಶುಕ್ರವಾರ, ಜುಲೈ 26, 2013

ಕ್ಯಾಮೆರಾ ಕತೆಗಳು : ೩

ಟಿ. ಜಿ. ಶ್ರೀನಿಧಿ

[ಮೊದಲ ಭಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ]
[ಎರಡನೇ ಭಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ]

೧೮೭೦ರ ಸುಮಾರಿಗೆ ರೂಪುಗೊಂಡ 'ಡ್ರೈ ಪ್ಲೇಟ್' ತಂತ್ರಜ್ಞಾನದಿಂದಾಗಿ ನೆಗೆಟಿವ್‌ಗಳನ್ನು ಮುಂಚಿತವಾಗಿಯೇ ಸಿದ್ಧಪಡಿಸಿಟ್ಟುಕೊಳ್ಳುವುದು ಹಾಗೂ ಚಿತ್ರ ಸೆರೆಹಿಡಿದ ನಂತರ ಅದನ್ನು ನಿಧಾನವಾಗಿ ಸಂಸ್ಕರಿಸಿಕೊಳ್ಳುವುದು ಸಾಧ್ಯವಾಯಿತು. ಅಷ್ಟೇ ಅಲ್ಲ, ಈ ಬಗೆಯ ನೆಗೆಟಿವ್‌ಗಳ ಬಳಕೆಯಿಂದ ಚಿತ್ರಗಳನ್ನು ಸೆರೆಹಿಡಿಯಲು ದೀರ್ಘಸಮಯದವರೆಗೆ ಕಾಯಬೇಕಾದ ಹಾಗೂ ಟ್ರೈಪಾಡ್ ಅನ್ನು ಅವಲಂಬಿಸಬೇಕಾದ ಅನಿವಾರ್ಯತೆ ಕೂಡ ನಿವಾರಣೆಯಾಯಿತು.

ಕೈಯಲ್ಲಿ ಹಿಡಿದುಕೊಳ್ಳಬಹುದಾದಂತಹ (ಹ್ಯಾಂಡ್-ಹೆಲ್ಡ್) ಕ್ಯಾಮೆರಾಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲೂ ಇದೇ ಕಾರಣವಾಯಿತು. ಆ ಸಂದರ್ಭದ ಒಂದು ಬೆಳವಣಿಗೆ ಮುಂದೆ ಛಾಯಾಗ್ರಹಣ ಕ್ಷೇತ್ರದ ರೂಪುರೇಷೆಯನ್ನೇ ಬದಲಿಸಿಬಿಟ್ಟಿತು.

ಈ ಬೆಳವಣಿಗೆಗೆ ಕಾರಣನಾದ ವ್ಯಕ್ತಿಯ ಹೆಸರು ಜಾರ್ಜ್ ಈಸ್ಟ್‌ಮನ್. ಡ್ರೈ ಪ್ಲೇಟ್ ತಂತ್ರಜ್ಞಾನ ಹಾಗೂ ಕಾಗದದ ನೆಗೆಟಿವ್ ಪರಿಕಲ್ಪನೆ ಎರಡನ್ನೂ ಒಟ್ಟುಸೇರಿಸಿದ ಈತ ನೆಗೆಟಿವ್ ಸುರುಳಿಗಳನ್ನು ರೂಪಿಸಿದ. ತನ್ನ ಆವಿಷ್ಕಾರಗಳನ್ನು ಮಾರುಕಟ್ಟೆಗೆ ಪರಿಚಯಿಸಲೆಂದು ಆತ ಹುಟ್ಟುಹಾಕಿದ ಸಂಸ್ಥೆಯೇ ಕೊಡಕ್.

ಸಣ್ಣಗಾತ್ರದ ಕ್ಯಾಮೆರಾ ಹಾಗೂ ಅದರೊಳಗೆ ನೂರು ಚಿತ್ರಗಳಿಗೆ ಸಾಲುವಷ್ಟಿದ್ದ ನೆಗೆಟಿವ್ ಸುರುಳಿ ಎರಡೂ ಸೇರಿ ಮೊತ್ತಮೊದಲ ಕೊಡಕ್ ಕ್ಯಾಮೆರಾ ೧೮೮೮ರಲ್ಲಿ ಸಿದ್ಧವಾಯಿತು. ಛಾಯಾಗ್ರಹಣ ಪರಿಣತರಷ್ಟೇ ಮಾಡುವ ಕೆಲಸ ಎನ್ನುವ ಅಭಿಪ್ರಾಯ ಅಲ್ಲಿಗೆ ಅಂತ್ಯವಾಗಿ ಕ್ಯಾಮೆರಾಗಳು - ನಿಜ ಅರ್ಥದಲ್ಲಿ - ಜನಸಾಮಾನ್ಯರ ಕೈಗೆ ಬಂದವು.

ಶನಿವಾರ, ಜುಲೈ 20, 2013

ಏನು? ಗಣಿತ ಅಂದ್ರಾ?

ಪ್ರತಿಯೊಬ್ಬರೂ ಶಾಲೆಯಲ್ಲಿ ಗಣಿತ ಕಲಿತೇ ಇರುತ್ತಾರೆ. ಪಾಸು ಎನ್ನುವುದು ಅನಿವಾರ್ಯ; ಆದ್ದರಿಂದ ಪಾಸೂ ಮಾಡಿರುತ್ತಾರೆ. ಆದರೆ ಶಾಲೆಯಲ್ಲಿ ಕಲಿತ ಗಣಿತದ ಎಷ್ಟು ಭಾಗ ಹಲವಾರು ವರ್ಷಗಳ ನಂತರವೂ ನೆನಪಿನಲ್ಲಿ ಉಳಿದಿದೆ ಎಂದು ಪ್ರಶ್ನೆ ಕೇಳಿದಾಗ ಅವರ ವೃತ್ತಿಗೆ ಅನುಗುಣವಾಗಿ ವೈವಿಧ್ಯಮಯ ಉತ್ತರಗಳು ದೊರಕುತ್ತವೆ. ಬಹುಶಃ ಗಣಿತ ಇಷ್ಟ ಎನ್ನುವವರಿಗಿಂತ ಗಣಿತ ಕಷ್ಟ ಎನ್ನುವವರ ಸಂಖ್ಯೆಯೇ ಜಾಸ್ತಿಯೇನೋ.

ಇದಕ್ಕೆ ಕಾರಣ ಏನು ಎಂದು ಹುಡುಕುತ್ತ ಹೋದರೆ ಎದುರಿಗೆ ನಿಲ್ಲುವುದು ನಮ್ಮ ಶಿಕ್ಷಣ ವ್ಯವಸ್ಥೆ. ಈ ವರ್ಷದ ಸಿಲಬಸ್ ಇಷ್ಟು, ಇಷ್ಟನ್ನು ನೀನು ಕಲಿಯಲೇಬೇಕು ಎನ್ನುವ ಶಿಕ್ಷಣಕ್ರಮ ಮಕ್ಕಳನ್ನು ಹೆದರಿಸಬಹುದೇ ಹೊರತು ಅವರಲ್ಲಿ ಕಲಿಕೆಯ ಬಗ್ಗೆ ಪ್ರೀತಿ ಮೂಡಿಸಲಾರದು. ನಮ್ಮ ಶಾಲಾದಿನಗಳ ಗಣಿತದ ಪಾಠಗಳು ಸವಿನೆನಪನ್ನೇನೂ ಉಳಿಸದೆಹೋದದ್ದಕ್ಕೆ ಇದೇ ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ.

ಉದಾಹರಣೆಗೆ ನಮ್ಮ ಗಣಿತದ ಪಾಠದಲ್ಲಿದ್ದ ಲ.ಸಾ.ಅ. ಮತ್ತು ಮ.ಸಾ.ಅ. (Highest Common Factor (H.C.F) and Lowest Common Multiple (L.C.M)). ಅದನ್ನೆಲ್ಲ ಶಾಲೆಯಲ್ಲಿ ನಮಗೆ ಕಲಿಸಿಕೊಟ್ಟರು, ನಾವು ಕಲಿತೆವು, ಪರೀಕ್ಷೆ ಪಾಸಾಗಿ ಗೆದ್ದೆವು. ಆದರೆ ನಮಗೆ ಅವನ್ನೆಲ್ಲ ಲೆಕ್ಕಹಾಕುವುದು ಗೊತ್ತಾಯಿತೇ ಹೊರತು ಅದರ ಉಪಯೋಗ ಏನು ಎಂದು ಮಾತ್ರ ತಿಳಿಯಲಿಲ್ಲ.

ಇಂತಹ ಅಂಶಗಳನ್ನೆಲ್ಲ ಸರಳವಾಗಿ ಹೇಳಿಕೊಡುವವರು ಯಾರಾದರೂ ಸಿಕ್ಕಿದ್ದರೆ ಗಣಿತದ ಬಗ್ಗೆ ಭೀತಿಯ ಜಾಗದಲ್ಲಿ ನಮಗೂ ಪ್ರೀತಿ ಬಂದಿರುತ್ತಿತ್ತೋ ಏನೋ.

ಶುಕ್ರವಾರ, ಜುಲೈ 19, 2013

ಕ್ಯಾಮೆರಾ ಕತೆಗಳು : ೨

ಟಿ. ಜಿ. ಶ್ರೀನಿಧಿ

೧೮೪೪ರಲ್ಲಿ ತೆಗೆದ
ಕ್ಯಾಲೋಟೈಪ್ ಚಿತ್ರ
[ಮೊದಲ ಭಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ]
[ಮೂರನೆಯ ಭಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ]

೧೮೩೦ರ ಸುಮಾರಿಗೆ ಫ್ರಾನ್ಸಿನಲ್ಲಿ ರೂಪುಗೊಂಡ ಡಿಗೇರೋಟೈಪ್ ತಂತ್ರಜ್ಞಾನ ಫೋಟೋಗ್ರಫಿಯನ್ನು ಪ್ರಾಯೋಗಿಕವಾಗಿ ಸಾಧ್ಯವಾಗಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಿತು ಎನ್ನುವುದೇನೋ ನಿಜ. ಆದರೆ ಛಾಯಾಗ್ರಹಣವನ್ನು ನಿಜಕ್ಕೂ ಸರಳಗೊಳಿಸಿ ಚಿತ್ರಗಳನ್ನು ಸುಲಭವಾಗಿ ಪಡೆದುಕೊಳ್ಳುವಲ್ಲಿ ಈ ತಂತ್ರಜ್ಞಾನದಿಂದ ಹೆಚ್ಚಿನ ಸಹಾಯವೇನೂ ಆಗಲಿಲ್ಲ. ಕ್ಷಿಪ್ರವಾಗಿ ಚಿತ್ರ ಪಡೆಯಲು ಸಾಧ್ಯವಿಲ್ಲದೆ ಇದ್ದದ್ದು, ಚಿತ್ರ ಮೂಡಿಸಲು ಲೋಹದ ಫಲಕ ಬಳಸಬೇಕಿದ್ದದ್ದು, ಒಂದೇ ಚಿತ್ರದ ಹೆಚ್ಚುವರಿ ಪ್ರತಿಗಳನ್ನು ಪಡೆದುಕೊಳ್ಳಲು ಕಷ್ಟಪಡಬೇಕಾದ್ದು - ಇವೆಲ್ಲ ಈ ತಂತ್ರಜ್ಞಾನದ ಪ್ರಮುಖ ಕೊರತೆಗಳಾಗಿದ್ದವು.

ಛಾಯಾಗ್ರಹಣ ಇನ್ನಷ್ಟು ಸುಲಭವಾಗಬೇಕಾದರೆ ಈ ಕೊರತೆಗಳು ನೀಗಬೇಕಲ್ಲ, ಹಾಗಾಗಿ ಆ ದಿಕ್ಕಿನಲ್ಲಿ ಪ್ರಯತ್ನಗಳು ಶುರುವಾದವು. ಇಂತಹ ಹಲವು ಪ್ರಯತ್ನಗಳಿಗೆ ಸ್ವತಃ ಡಿಗೇರೋಟೈಪ್ ತಂತ್ರಜ್ಞಾನವೇ ಆಧಾರವಾಗಿತ್ತು. ಇಂತಹ ಹಲವು ಪ್ರಯತ್ನಗಳಿಂದಾಗಿ ಕೆಲವೇ ನಿಮಿಷಗಳಲ್ಲಿ ಚಿತ್ರಗಳನ್ನು ಸೆರೆಹಿಡಿಯುವುದು ಕೂಡ ಸಾಧ್ಯವಾಯಿತು; ಹಾಗಾಗಿ ಭಾವಚಿತ್ರಗಳನ್ನು ತೆಗೆಯುವ-ತೆಗೆಸಿಕೊಳ್ಳುವ ಅಭ್ಯಾಸ ಕೂಡ ಪ್ರಾರಂಭವಾಯಿತು. ಈ ಅಂಶ ಮೊದಲ ಬಾರಿಗೆ ಛಾಯಾಗ್ರಹಣವನ್ನು ಜನರತ್ತ ಕರೆತಂದಿತು ಎಂದರೂ ತಪ್ಪಾಗಲಾರದೇನೋ.

ಈ ನಡುವೆ ಛಾಯಾಗ್ರಹಣದಲ್ಲಿ ಲೋಹದ ಫಲಕ ಬಳಕೆಗೆ ಪರ್ಯಾಯದ ಹುಡುಕಾಟವೂ ಮುಂದುವರೆದಿತ್ತು. ಈ ನಿಟ್ಟಿನಲ್ಲಿ ವಿಲಿಯಂ ಟ್ಯಾಲ್‌ಬಟ್ ಎಂಬಾತನ ಕೊಡುಗೆ ಬಹಳ ಮಹತ್ವದ್ದು; ಛಾಯಾಗ್ರಹಣದಲ್ಲಿ ನೆಗೆಟಿವ್ ಬಳಕೆಯ ಪರಿಕಲ್ಪನೆಯನ್ನು ಪರಿಚಯಿಸಿದ್ದು ಈತನೇ. ೧೮೪೦ರ ಸುಮಾರಿಗೆ ಈತ ಬಳಕೆಗೆ ತಂದ ಕ್ಯಾಲೋಟೈಪ್ ತಂತ್ರಜ್ಞಾನದಲ್ಲಿ ಸಿಲ್ವರ್ ಅಯೊಡೈಡ್ ಲೇಪನವಿರುವ ಕಾಗದವನ್ನು ನೆಗೆಟಿವ್‌ನಂತೆ ಬಳಸಲಾಗುತ್ತಿತ್ತು. ನಮಗೆ ಬೇಕಾದ ದೃಶ್ಯದ ಛಾಯೆ ಕಾಗದದ ಈ ಹಾಳೆಯ ಮೇಲೆ ಮೂಡಿದ ನಂತರ ಅದನ್ನು ರಾಸಾಯನಿಕವಾಗಿ ಸಂಸ್ಕರಿಸಿ ಬೇರೊಂದು ಕಾಗದದ ಮೇಲೆ ಚಿತ್ರವನ್ನು ಮುದ್ರಿಸಿಕೊಳ್ಳುವುದು ಸಾಧ್ಯವಿತ್ತು.

ಈ ವಿಧಾನ ಕಾಗದದ ಬಳಕೆಯ ಸಾಧ್ಯತೆಯನ್ನು ತೋರಿಸಿಕೊಟ್ಟಿದ್ದರಿಂದ ಛಾಯಾಗ್ರಹಣದಲ್ಲಿ ಲೋಹದ ಫಲಕಗಳನ್ನೇ ಬಳಸಬೇಕಾದ ಅನಿವಾರ್ಯತೆ ದೂರವಾಯಿತು.

ಗುರುವಾರ, ಜುಲೈ 18, 2013

ರಂಜಕ ಪ್ರಸಂಗ

ನಾಗೇಶ ಹೆಗಡೆ

ಕೊಳ್ಳಿದೆವ್ವ ಅಂದರೆ ಬಾಲ್ಯದಲ್ಲಿ ನಮಗೆಲ್ಲ ಭಯ ಇತ್ತು. ಶವವನ್ನು ದಫನ ಮಾಡಿ ಬೆಂಕಿಯೆಲ್ಲ ಪೂರ್ತಿ ಆರಿದ ನಂತರ ಮೂರನೆಯ ರಾತ್ರಿಯಲ್ಲೂ ಶವದ ಮೂಳೆಗಳು ನಿಗಿನಿಗಿ ಮಿನುಗುತ್ತಿದ್ದರೆ ಭಯವೇ ತಾನೆ? ಆಗ ನಮಗೆ ಗೊತ್ತಿರಲಿಲ್ಲ, ಒಬ್ಬೊಬ್ಬ ಮನುಷ್ಯನ ಮೂಳೆಗಳಲ್ಲಿ ಸರಾಸರಿ ಆರುನೂರು ಗ್ರಾಮ್ ರಂಜಕ ಇರುತ್ತದೆ ಅಂತ, ರಂಜಕಕ್ಕೆ ಕತ್ತಲಲ್ಲಿ ಮಿನುಗುವ ಗುಣ ಇದೆ ಅಂತ. ಈಗಲೂ ರಂಜಕ ಅಂದರೆ ಕೊಂಚ ಭಯ ಆಗುತ್ತದೆ ಅದರ ಭವಿಷ್ಯದ ಚಿತ್ರಣವನ್ನು ಕಲ್ಪಿಸಿಕೊಂಡಾಗ.

ಆಧುನಿಕ ಕೃಷಿಕರಿಗೆಲ್ಲ ರಂಜಕ ಬೇಕೇಬೇಕು. ಸಾರಜನಕ, ರಂಜಕ ಮತ್ತು ಪೊಟ್ಯಾಶ್ ಇವು ಮೂರು ಮೂಲವಸ್ತುಗಳನ್ನು ಕೃಷಿಯ ಮೂಲಮಂತ್ರವೆಂತಲೇ ವಿಜ್ಞಾನಿಗಳು ಹೇಳುತ್ತ ಬಂದಿದ್ದಾರೆ. ಇವು ಎಲ್ಲಿಂದ ಬರುತ್ತವೆ? ಸಾರಜನಕವೇನೊ ಸುಲಭ. ವಾಯುಮಂಡಲದ ಶೇಕಡಾ ೭೮ ಪಾಲು ಸಾರಜನಕವೇ ಇದೆ; ಅದು ಎಂದೂ ಮುಗಿಯುವಂಥದ್ದಲ್ಲ. ಪೊಟ್ಯಾಶ್ ಕೂಡ ಅನಂತ ಪ್ರಮಾಣದಲ್ಲಿದೆ. ಸಮುದ್ರವಿದ್ದಷ್ಟು ಕಾಲ ಪೊಟ್ಯಾಶ್‌ಗೆ ತೊಂದರೆ ಇಲ್ಲ. ಆದರೆ ರಂಜಕ ಹಾಗಲ್ಲ. ಅದು ಸೀಮಿತ ಸಂಪನ್ಮೂಲ. ಚೀನಾ, ಅಮೆರಿಕ ಮತ್ತೊ ಮೊರೊಕ್ಕೊದಂಥ ಎಲ್ಲೋ ಕೆಲವು ದೇಶಗಳಲ್ಲಿ ಮಾತ್ರ ದೊಡ್ಡ ನಿಕ್ಷೇಪಗಳ ರೂಪದಲ್ಲಿ ಇರುವ ಶಿಲಾರಂಜಕವನ್ನು ವರ್ಷಕ್ಕೆ ೧೫ಕೋಟಿ ಟನ್‌ಗಳಷ್ಟು ಪ್ರಮಾಣದಲ್ಲಿ ಎತ್ತುತ್ತಿದ್ದಾರೆ. ಬೇಡಿಕೆ ವರ್ಷವರ್ಷಕ್ಕೆ ಹೆಚ್ಚುತ್ತಲೇ ಇದೆ. ಹೀಗೆ ನಿರಂತರ ಗಣಿಗಳಿಂದ ಮೇಲೆತ್ತಿ ಖಾಲಿ ಮಾಡಿದರೆ ಅದು ಮತ್ತೆ ಭರ್ತಿಯಾಗುವಂಥದ್ದಲ್ಲ. ಒಂದು ಅಂದಾಜಿನ ಪ್ರಕಾರ ಮುಂದಿನ ೭೦-೮೦ ವರ್ಷಗಳಿಗೆ ಸಾಲುವಷ್ಟು ರಂಜಕ ಮಾತ್ರ ಈ ಭೂಮಿಯ ಮೇಲಿದೆ. ಆಮೇಲೆ ಏನು? ತೀರ ಆಳದಲ್ಲಿ, ತೀರ ಕಷ್ಟಪಟ್ಟು ತೆಗೆಯಬಹುದಾದ ಕಳಪೆ ಗುಣಮಟ್ಟದ ರಂಜಕದ ನಿಕ್ಷೇಪ ಇದೆ. ಅದನ್ನೂ ತೆಗೆದು ಮುಂದಿನ ಹತ್ತು ವರ್ಷ ಬಳಸುತ್ತಾರೆ ಎನ್ನೋಣ. ಮುಂದೇನು?

ಸೋಮವಾರ, ಜುಲೈ 15, 2013

ದೈತ್ಯಪ್ರತಿಭೆಗಳ ಹೆಗಲ ಮೇಲೆ

ಖ್ಯಾತ ವಿಜ್ಞಾನ ಲೇಖಕ ಶ್ರೀ ಟಿ. ಆರ್. ಅನಂತರಾಮುರವರ 'ದೈತ್ಯಪ್ರತಿಭೆಗಳ ಹೆಗಲ ಮೇಲೆ', ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ. ಈ ಪುಸ್ತಕದ ಪರಿಚಯ ಇಲ್ಲಿದೆ. 

ಟಿ. ಎಸ್. ಗೋಪಾಲ್

ಕನ್ನಡ ಸಾಹಿತ್ಯದ ವಿದ್ಯಾರ್ಥಿಯಾದ ನನ್ನನ್ನು ಮೊದಲಿನಿಂದಲೂ ಬಹುವಾಗಿ ಆಕರ್ಷಿಸಿದ ಪ್ರಕಾರವೆಂದರೆ ಗದ್ಯಸಾಹಿತ್ಯ. ವಡ್ಡಾರಾಧನೆಯ ಶಿವಕೋಟ್ಯಾಚಾರ್ಯನಿಂದ ಮುದ್ದಣನವರೆಗೆ, ಗಳಗನಾಥ, ವಾಸುದೇವಾಚಾರ್ಯರಿಂದ ಮೂರ್ತಿರಾಯರವರೆಗೆ, ಕುವೆಂಪುರವರಿಂದ ದೇವನೂರು, ಕುಂವೀವರೆಗೂ ವಿಸ್ತರಿಸಿಕೊಂಡಿರುವ ಈ ಸಾಹಿತ್ಯಲೋಕ ಕನ್ನಡವನ್ನು ಬಹುಶ್ರೀಮಂತವಾಗಿಸಿದೆ. ಬೆಳ್ಳ್ಳಾವೆ, ಶಿವರಾಮ ಕಾರಂತ, ಜಿ.ಟಿ.ನಾರಾಯಣರಾವ್, ಬಿ.ಜಿ.ಎಲ್.ಸ್ವಾಮಿಯಂತಹವರಿಂದ ಆಧುನಿಕರಿಗೆ ತೆರೆದುಕೊಂಡ ಕನ್ನಡ ವಿಜ್ಞಾನಸಾಹಿತ್ಯವೂ ಇದೇ ಜಾಡುಹಿಡಿದು ಜನಪ್ರಿಯವೂ ಜ್ಞಾನಬೋಧಕವೂ ಆಗಿರುವುದೊಂದು ವಿಶೇಷವೇ.

ಈಚಿನ ದಶಕಗಳಲ್ಲಿ ದಿನಪತ್ರಿಕೆಗಳೂ ನಿಯತಕಾಲಿಕೆಗಳೂ ವಿಜ್ಞಾನಸಾಹಿತ್ಯವನ್ನು ನಿಯಮಿತ ಅಂಕಣಗಳ ಮೂಲಕವೂ ಜನಪ್ರಿಯ ಲೇಖನಗಳ ಮೂಲಕವೂ ಪ್ರಚುರಪಡಿಸಹೊರಟಿರುವುದೂ ಸ್ವಾಗತಾರ್ಹವೇ. ಇಂತಹ ಬರಹಗಳ ಮೂಲಕ ಆಧುನಿಕ ಕನ್ನಡ ಸಾಹಿತ್ಯಕ್ಕೆ ಮಿಗಿಲಾದ ಸೇವೆ ಸಲ್ಲಿಸುತ್ತಿರುವ ನಾಗೇಶ ಹೆಗಡೆ, ಹಾಲ್ದೊಡ್ಡೇರಿ, ಕೊಳ್ಳೇಗಾಲ ಶರ್ಮ, ಹೆಚ್ಚಾರ್ಕೆ ಮೊದಲಾದ ಮಹನೀಯರ ಸಾಲಿಗೆ ಟಿ.ಆರ್. ಅನಂತರಾಮುರವರೂ ಸೇರುತ್ತಾರೆ.

ಅನಂತರಾಮುರವರ ಬರಹ ಮೊದಲಿಗೆ ನನ್ನ ಗಮನ ಸೆಳೆದದ್ದು ಎಂಬತ್ತರ ದಶಕದಲ್ಲಿ ಪ್ರಕಟವಾದ ಅವರ 'ಹಿಮದ ಸಾಮ್ರಾಜ್ಯದಲ್ಲಿ' ಪುಸ್ತಕದ ಮೂಲಕ. ವಿಜ್ಞಾನದ ಬರಹ, ಶೈಲಿ ಇತರ ಜನಪ್ರಿಯ ಗದ್ಯಪ್ರಕಾರಗಳಂತೆ ಆಕರ್ಷಕವಾಗಿರಬಹುದೆಂದು ನನಗೆ ಈ ಪುಸ್ತಕ ತೋರಿಸಿಕೊಟ್ಟಿತು. ಇದೇ ಆಸಕ್ತಿಯಿಂದ ಅವರ ಈಚಿನ ಕೃತಿ 'ದೈತ್ಯಪ್ರತಿಭೆಗಳ ಹೆಗಲ ಮೇಲೆ' ಪುಸ್ತಕವನ್ನು ಕೈಯಲ್ಲಿ ಹಿಡಿದು ಓದಲು ತೊಡಗಿದಾಗ ಮೊದಲ ಅಧ್ಯಾಯವೇ ಅಚ್ಚರಿ ಮೂಡಿಸಿತು. ಇದೇನು ಗಂಭೀರವಿಜ್ಞಾನದ ಬರಹವೋ ಮತ್ತೇನೋ ಅನ್ನಿಸುವಂತಾಯಿತು.

ಶುಕ್ರವಾರ, ಜುಲೈ 12, 2013

ಕ್ಯಾಮೆರಾ ಕತೆಗಳು : ೧

ಟಿ. ಜಿ. ಶ್ರೀನಿಧಿ

[ಎರಡನೇ ಭಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ]
[ಮೂರನೆಯ ಭಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ]

ಹಂಪೆಯ ವಿರೂಪಾಕ್ಷ ದೇವಾಲಯದಲ್ಲಿ ದರ್ಶನ ಮುಗಿಸಿ ಹೊರಬರುವ ಹಾದಿಯಲ್ಲಿ ನಮಗೊಂದು ವಿಶಿಷ್ಟ ದೃಶ್ಯ ಕಾಣಸಿಗುತ್ತದೆ: ಸಣ್ಣ ಕಿಂಡಿಯೊಂದರ ಮೂಲಕ ಹಾದುಬರುವ ಬೆಳಕಿನ ಕಿರಣಗಳು ಎದುರಿನ ಗೋಡೆಯ ಮೇಲೆ ರಾಜಗೋಪುರದ ಚಿತ್ರವನ್ನು ಮೂಡಿಸುತ್ತವೆ.

ಸಣ್ಣದೊಂದು ಕಿಂಡಿಯ ಮೂಲಕ ಬೆಳಕು ಹಾಯುವಂತೆ ಮಾಡಿ ಎದುರಿನ ಗೋಡೆಯ ಮೇಲೆ ಹೊರಗಿನ ದೃಶ್ಯವನ್ನು - ತಲೆಕೆಳಗಾಗಿ - ಮೂಡಿಸುವ ಈ ತಂತ್ರವಿದೆಯಲ್ಲ, ಇದೇ ಇಂದಿನ ಛಾಯಾಗ್ರಹಣದ ಮೂಲರೂಪ ಎಂದು ತಜ್ಞರು ಹೇಳುತ್ತಾರೆ. ಪಿನ್‌ಹೋಲ್ ಕ್ಯಾಮೆರಾ, ಕ್ಯಾಮೆರಾ ಅಬ್ಸ್‌ಕೂರಾ (Camera Obscura) ಎಂದೆಲ್ಲ ಕರೆಯುವುದು ಶತಮಾನಗಳಷ್ಟು ಹಳೆಯ ಈ ತಂತ್ರವನ್ನೇ.


ಆದರೆ ಈ ತಂತ್ರಕ್ಕೂ ಇಂದಿನ ಫೋಟೋಗ್ರಫಿಗೂ ಒಂದು ಮುಖ್ಯ ವ್ಯತ್ಯಾಸವಿತ್ತು. ಇದರಲ್ಲಿ ಚಿತ್ರ ಒಂದೆಡೆ (ಉದಾಹರಣೆಗೆ, ಗೋಡೆಯ ಮೇಲೆ) ಮೂಡುತ್ತಿತ್ತೇ ಹೊರತು ಇಂದಿನ ಕ್ಯಾಮೆರಾಗಳಂತೆ ಎಲ್ಲೂ ದಾಖಲಾಗುತ್ತಿರಲಿಲ್ಲ. ಚಿತ್ರರಚನೆ ಗೊತ್ತಿದ್ದವರು ಬೇಕಿದ್ದರೆ ಗೋಡೆಯ ಮೇಲೆ ಮೂಡಿದ ಚಿತ್ರವನ್ನು ಪ್ರತಿಮಾಡಿಕೊಳ್ಳಬಹುದಿತ್ತು ಅಷ್ಟೆ.

ಭಾನುವಾರ, ಜುಲೈ 7, 2013

ಮೌಸ್ ಜನಕನ ನೆನಪಿನಲ್ಲಿ

ಟಿ. ಜಿ. ಶ್ರೀನಿಧಿ

ವಿಕಿಪೀಡಿಯಾ ಚಿತ್ರ
ಕಂಪ್ಯೂಟರ್ ಬಳಕೆದಾರರೆಲ್ಲರ ಅಚ್ಚುಮೆಚ್ಚಿನ ಸಂಗಾತಿಯೆಂದರೆ ಮೌಸ್. ಅದಿಲ್ಲದೆ ಕಂಪ್ಯೂಟರ್ ಬಳಸುವುದನ್ನು ನಮ್ಮಲ್ಲಿ ಅನೇಕರಿಗೆ ಕಲ್ಪಿಸಿಕೊಳ್ಳುವುದೂ ಕಷ್ಟವೇ. ಕಂಪ್ಯೂಟರ್ ಸಾಧನಗಳ ಪೈಕಿ ಮೌಸ್ ಗಳಿಸಿಕೊಂಡಿರುವ ಜನಪ್ರಿಯತೆ ಅಂಥದ್ದು. ಈವರೆಗೆ ಪ್ರಪಂಚದಲ್ಲಿ ನೂರು ಕೋಟಿಗೂ ಹೆಚ್ಚು ಸಂಖ್ಯೆಯ ಮೌಸ್‌ಗಳು ಮಾರಾಟವಾಗಿವೆಯಂತೆ.

ಆದರೆ ಕಂಪ್ಯೂಟರ್ ಪ್ರಪಂಚದ ವೈಚಿತ್ರ್ಯ ನೋಡಿ, ಇಲ್ಲಿನ ಆವಿಷ್ಕಾರಗಳು ಅದೆಷ್ಟೇ ಜನಪ್ರಿಯವಾದರೂ ಅವುಗಳನ್ನು ಸೃಷ್ಟಿಸಿದವರಿಗೆ ಹೇಳಿಕೊಳ್ಳುವಂತಹ ಪ್ರಸಿದ್ಧಿ ಬಂದಿರುವುದೇ ಇಲ್ಲ. ಕಂಪ್ಯೂಟರ್ ಮೌಸ್ ಸೃಷ್ಟಿಸಿದವರು ಯಾರು ಎಂದು ಕೇಳಿದರೆ ನಮ್ಮಲ್ಲಿ ಬಹುತೇಕರಿಗೆ ಅದರ ಉತ್ತರ ಗೊತ್ತಿರಲಿಕ್ಕಿಲ್ಲ.

ಈ ಪ್ರಶ್ನೆಗೆ ಉತ್ತರರೂಪವಾಗಿದ್ದ ವಿಜ್ಞಾನಿಯ ಹೆಸರು ಡಗ್ಲಸ್ ಎಂಗೆಲ್‌ಬಾರ್ಟ್. ಬರಿಯ ಮೌಸ್ ಅಷ್ಟೇ ಅಲ್ಲ, ಇಂದು ಕಂಪ್ಯೂಟರ್ ಪ್ರಪಂಚದ ಅವಿಭಾಜ್ಯ ಅಂಗಗಳಾಗಿರುವ ಅನೇಕ ಆವಿಷ್ಕಾರಗಳ ಹಿಂದೆ ಅವರ ಪರಿಶ್ರಮವಿತ್ತು. ಒಂದು ಅರ್ಥದಲ್ಲಿ ನೋಡಿದರೆ ಕಂಪ್ಯೂಟರ್ ಪ್ರಪಂಚದ ಬೆಳೆವಣಿಗೆಯನ್ನು ದಶಕಗಳಷ್ಟು ಹಿಂದೆಯೇ ಅಂದಾಜಿಸಿ ಆ ನಿಟ್ಟಿನಲ್ಲಿ ಕೆಲಸಮಾಡಿದ ಕೀರ್ತಿಯೂ ಅವರಿಗೇ ಸಲ್ಲಬೇಕು. ಕೋಣೆಗಾತ್ರದ ಕಂಪ್ಯೂಟರುಗಳ, ಪಂಚ್ಡ್ ಕಾರ್ಡುಗಳ ಕಾಲದಲ್ಲೇ ಇಂದಿನ ಐಟಿ ಜಗತ್ತನ್ನು ಮುಂಗಾಣಲು ಅವರಿಗೆ ಸಾಧ್ಯವಾಗಿದ್ದು ನಿಜಕ್ಕೂ ಅಚ್ಚರಿಯ ಸಂಗತಿ.

ಶುಕ್ರವಾರ, ಜೂನ್ 28, 2013

ಆನ್‌ಲೈನ್ ಸಹಾಯಹಸ್ತ

ಟಿ. ಜಿ. ಶ್ರೀನಿಧಿ

ಉತ್ತರಾಖಂಡದ ಪ್ರವಾಹ ಅಕ್ಷರಶಃ ಕಣ್ಣೀರಿನ ಪ್ರವಾಹವೇ ಆಗಿಬಿಟ್ಟಿದೆ. ವರ್ಷಗಳಿಂದ ನಡೆದ ವ್ಯವಸ್ಥಿತ ಪರಿಸರನಾಶ ದೊಡ್ಡ ಕಾರಣವೋ, ಪರಿಹಾರ ಕಾರ್ಯದಲ್ಲಿ ಸರಕಾರ ತೋರಿದ ಬೇಜವಾಬ್ದಾರಿತನ ದೊಡ್ಡ ಕಾರಣವೋ ಎಂದು ಯೋಚಿಸಲೂ ಆಗದಷ್ಟು ಪ್ರಮಾಣದ ಹಾನಿ ಇಡೀ ದೇಶವನ್ನೇ ಗಾಬರಿಗೊಳಿಸಿದೆ. ನಮ್ಮ ಸೇನಾಪಡೆಗಳು ತಮ್ಮ ಎಂದಿನ ಸಮರ್ಪಣಾಭಾವದೊಡನೆ ಮಾಡುತ್ತಿರುವ ಕೆಲಸವೊಂದೇ ಈ ಸನ್ನಿವೇಶದ ಏಕೈಕ ಆಶಾಕಿರಣ ಎನ್ನಬಹುದೇನೋ.

ಇಂತಹ ಸನ್ನಿವೇಶದಲ್ಲಿ ಉತ್ತರಾಖಂಡದಿಂದ ನೂರಾರು ಮೈಲಿ ದೂರವಿರುವ ನಮ್ಮನಿಮ್ಮಂಥವರು ಹೇಗೆ ನೆರವಾಗಬಹುದು ಎನ್ನುವುದು ದೊಡ್ಡ ಪ್ರಶ್ನೆ. ತೊಂದರೆಯಲ್ಲಿ ಸಿಲುಕಿರುವವರು ಆದಷ್ಟೂ ಬೇಗ ಪಾರಾಗಿ ಬರಲಿ ಎನ್ನುವ ಹಾರೈಕೆಯೇನೋ ಸರಿ, ಆದರೆ ಅಲ್ಲಿನ ಪರಿಸ್ಥಿತಿ ಸುಧಾರಿಸಲು ಅಷ್ಟೇ ಸಾಕಾಗುವುದಿಲ್ಲವಲ್ಲ!

ಈ ನಿಟ್ಟಿನಲ್ಲಿ ಇಂಟರ್‌ನೆಟ್ ಲೋಕ ತನ್ನ ಕೈಲಾದಷ್ಟು ಮಟ್ಟದ ನೆರವು ನೀಡಲು ಹೊರಟಿರುವುದು ವಿಶೇಷ.

ಶುಕ್ರವಾರ, ಜೂನ್ 21, 2013

ಎಲ್ಲೆಲ್ಲೂ ಇಂಟರ್‌ನೆಟ್!

ಟಿ. ಜಿ. ಶ್ರೀನಿಧಿ


ನೀವು ಯಾವ ಬಗೆಯ ಇಂಟರ್‌ನೆಟ್ ಸಂಪರ್ಕ ಉಪಯೋಗಿಸುತ್ತೀರಿ ಎಂದು ಕೇಳಿದರೆ ಬೇರೆಬೇರೆ ಸನ್ನಿವೇಶಗಳಲ್ಲಿ ಬೇರೆಬೇರೆ ರೀತಿಯ ಉತ್ತರಗಳು ಕೇಳಸಿಗುತ್ತವೆ: ಕಚೇರಿಗಳಲ್ಲಿ ಒಂದು ರೀತಿ, ನಗರಪ್ರದೇಶದ ಮನೆಗಳಲ್ಲಿ ಇನ್ನೊಂದು ರೀತಿ, ಗ್ರಾಮೀಣ ಪ್ರದೇಶಗಳಲ್ಲಿ ಬೇರೆಯದೇ ರೀತಿ. ಹೆಚ್ಚುಕಾಲ ಪ್ರಯಾಣದಲ್ಲೇ ಇರುವವರು ಬೇರೆಯದೇ ಉತ್ತರ ನೀಡುತ್ತಾರೇನೋ, ಇರಲಿ.

ಈ ಪೈಕಿ ಹೆಚ್ಚಿನ ಬ್ಯಾಂಡ್‌ವಿಡ್ತ್‌ನೊಡನೆ ಅತಿವೇಗದ ಸಂಪರ್ಕ ಒದಗಿಸುವ ಬ್ರಾಡ್‌ಬ್ಯಾಂಡ್ ಸೇವೆ ಸಾಕಷ್ಟು ಜನಪ್ರಿಯ. ದೂರಸಂಪರ್ಕ ಕ್ಷೇತ್ರದ ಪ್ರಮುಖ ಸಂಸ್ಥೆಗಳಷ್ಟೇ ಅಲ್ಲದೆ ಹಲವಾರು ಕೇಬಲ್ ಟೀವಿ ಸಂಸ್ಥೆಗಳೂ ಇಂತಹ ಅತಿವೇಗದ ಅಂತರಜಾಲ ಸಂಪರ್ಕವನ್ನು ಒದಗಿಸುತ್ತಿವೆ.

ವೈರ್‌ಲೆಸ್ ಫಿಡೆಲಿಟಿ ಅಥವಾ 'ವೈ-ಫಿ' ಮಾನಕ ಆಧಾರಿತ ತಂತ್ರಜ್ಞಾನ ಬಳಸಿ ವೈರ್‌ಲೆಸ್ (ನಿಸ್ತಂತು) ಅಂತರಜಾಲ ಸಂಪರ್ಕವನ್ನೂ ಕಲ್ಪಿಸಿಕೊಳ್ಳಬಹುದು. ಬ್ರಾಡ್‌ಬ್ಯಾಂಡ್ ಸೇವೆ ಒದಗಿಸುವ ಸಂಸ್ಥೆಗಳ ನೀಡುವ ವೈ-ಫಿ ಮೋಡೆಮ್ ಬಳಸಿ ನಮ್ಮ ಮನೆಯಲ್ಲೇ ಇಂತಹ ಸಂಪರ್ಕ ದೊರಕುವಂತೆ ಕೂಡ ಮಾಡಿಕೊಳ್ಳಬಹುದು.

ನಮ್ಮ ಕೈಲಿರುವ ಮೊಬೈಲುಗಳೆಲ್ಲ ಸ್ಮಾರ್ಟ್‌ಫೋನುಗಳಾಗುತ್ತಿದ್ದಂತೆ ಅವುಗಳ ಮೂಲಕ ಅಂತರಜಾಲ ಸಂಪರ್ಕ ಬಳಸುವುದು ಕೂಡ ಜನಪ್ರಿಯವಾಗಿದೆ. ಜಿಪಿಆರ್‌ಎಸ್, ಥ್ರೀಜಿ ಹೀಗೆ ಮೊಬೈಲ್ ಜಾಲ ಬಳಸಿ ಅಂತರಜಾಲ ಸಂಪರ್ಕ ಒದಗಿಸಿಕೊಡುವ ಅದೆಷ್ಟೋ ಬಗೆಯ ಹ್ಯಾಂಡ್‌ಸೆಟ್ಟುಗಳು ಹಾಗೂ ನಿಸ್ತಂತು ಅಂತರಜಾಲ ಸಂಪರ್ಕ ಉಪಕರಣಗಳು (ಡಾಂಗಲ್) ಮಾರುಕಟ್ಟೆಯಲ್ಲಿವೆ.

ಇನ್ನು ಸಾಮಾನ್ಯ ದೂರವಾಣಿ ಬಳಸಿ ಕೆಲಸಮಾಡುವ ಡಯಲ್-ಅಪ್ ಸಂಪರ್ಕ ತೀರಾ ಇತ್ತೀಚಿನವರೆಗೂ ವ್ಯಾಪಕ ಬಳಕೆಯಲ್ಲಿತ್ತು. ದೂರವಾಣಿ ತಂತಿಗಳ ಮೂಲಕ ಮಾಹಿತಿ ವಿನಿಮಯ ನಡೆಸುವ ಈ ಬಗೆಯ ಸಂಪರ್ಕ ಈಚೆಗೆ ನೇಪಥ್ಯಕ್ಕೆ ಸರಿಯುತ್ತಿದೆ.

ಅಂತರಜಾಲ ಸಂಪರ್ಕಗಳಲ್ಲಿ ಇಷ್ಟೆಲ್ಲ ವೈವಿಧ್ಯವಿದ್ದರೂ ಅವುಗಳ ವ್ಯಾಪ್ತಿಯೇ ದೊಡ್ಡದೊಂದು ಸಮಸ್ಯೆ. ಎಲ್ಲೆಲ್ಲಿ ದೂರವಾಣಿ ಅಥವಾ ಕೇಬಲ್ ಜಾಲ ಇಲ್ಲವೋ ಅಲ್ಲಿ ಅಂತರಜಾಲ ಸಂಪರ್ಕವೂ ಇರುವುದಿಲ್ಲ. ಇನ್ನು ಡಯಲ್-ಅಪ್ ಅಥವಾ ಮೊಬೈಲ್ ಅಂತರಜಾಲ ಸಂಪರ್ಕ ಕೆಲವೆಡೆಗಳಲ್ಲಿ ಇದ್ದರೂ ಸಂಪರ್ಕದ ವೇಗ ಬಹಳ ಕಡಿಮೆ ಇರುತ್ತದೆ.

ಇಂತಹ ಕಡೆಗಳಲ್ಲಿ ಅಂತರಜಾಲ ಸಂಪರ್ಕ ಒದಗಿಸುವುದು ಹೇಗೆ?

ಶುಕ್ರವಾರ, ಜೂನ್ 14, 2013

ಬದುಕು ಮತ್ತು ತಂತ್ರಜ್ಞಾನ

ಟಿ. ಜಿ. ಶ್ರೀನಿಧಿ

ನಮ್ಮ ಬದುಕಿನಲ್ಲಿ ತಂತ್ರಜ್ಞಾನದ ಪಾತ್ರ ಈಚಿನ ಕೆಲವರ್ಷಗಳಲ್ಲಿ ತೀವ್ರವೇ ಎನಿಸುವ ಮಟ್ಟದ ಬದಲಾವಣೆ ಕಂಡಿದೆ. ತಂತ್ರಜ್ಞಾನ ಅಂದಾಕ್ಷಣ ಕಂಪ್ಯೂಟರ್, ಫೋನ್, ಟ್ಯಾಬ್ಲೆಟ್ ಎಂದೆಲ್ಲ ಬೇರೆಬೇರೆ ಗ್ಯಾಜೆಟ್‌ಗಳತ್ತ ಕೈತೋರಿಸುತ್ತಿದ್ದ ನಮ್ಮ ಮೈಮೇಲೆಯೇ ಈಗ ತಂತ್ರಜ್ಞಾನದ ಹೊಸ ಆವಿಷ್ಕಾರಗಳು ಕಾಣಿಸಿಕೊಳ್ಳುತ್ತಿವೆ. ಬಟ್ಟೆ-ಚಪ್ಪಲಿ-ಬೆಲ್ಟುಗಳಷ್ಟೇ ಸಹಜವಾಗಿ ನಮ್ಮ ಉಡುಪಿನ ಅಂಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನದ ಈ ಆವಿಷ್ಕಾರಗಳದು 'ವೇರಬಲ್ ಟೆಕ್' ಎಂಬ ಹೊಸದೇ ಆಗ ಗುಂಪು.

ಸದಾಕಾಲವೂ ನಮ್ಮೊಂದಿಗೇ ಇದ್ದು ಬೇರೆಬೇರೆ ರೀತಿಯಲ್ಲಿ ನಮ್ಮ ಬದುಕಿನ ಕುರಿತ ಮಾಹಿತಿಯನ್ನು ಸಂಗ್ರಹಿಸಿಕೊಳ್ಳುವುದು ಈ ಸಾಧನಗಳ ಮೂಲ ಉದ್ದೇಶ. ಬೆಳಗಿನಿಂದ ರಾತ್ರಿಯವರೆಗೆ ನಾವು ಏನೇನೆಲ್ಲ ಮಾಡುತ್ತೇವೆ ಎನ್ನುವುದನ್ನು ಚಿತ್ರಗಳಲ್ಲೋ ವೀಡಿಯೋ ರೂಪದಲ್ಲೋ ದಾಖಲಿಸಿಕೊಳ್ಳುವುದರಿಂದ ಪ್ರಾರಂಭಿಸಿ ರಾತ್ರಿ ಮಲಗಿದಾಗ ನಮಗೆ ಗಾಢನಿದ್ರೆ ಬರುತ್ತದೋ ಇಲ್ಲವೋ ಎಂದು ಗಮನಿಸುವುದರ ತನಕ ವೇರಬಲ್ ಟೆಕ್ ಸಾಧನಗಳ ಕಾರ್ಯವ್ಯಾಪ್ತಿ ವಿಸ್ತರಿಸಿಕೊಂಡಿರುತ್ತದೆ. ಬೆಳಗಿನಿಂದ ಸಂಜೆಯವರೆಗೆ ನಾನು ಎಷ್ಟು ದೈಹಿಕ ಚಟುವಟಿಕೆಗಳಲ್ಲಿ ತೊಡಗಿದ್ದೆ, ಆ ಚಟುವಟಿಕೆಗಳಿಂದಾಗಿ ಎಷ್ಟು ಕ್ಯಾಲರಿ ಖರ್ಚಾಯಿತು ಎಂದೆಲ್ಲ ಗಮನಿಸಿ ಹೇಳುವ ಸಾಧನಗಳೂ ಇವೆ. ವೇರಬಲ್ ಟೆಕ್ನಾಲಜಿ ಕ್ಷೇತ್ರದ ಈವರೆಗಿನ ಅತ್ಯುನ್ನತ ಆವಿಷ್ಕಾರ ಎಂದು ಹೊಗಳಿಸಿಕೊಂಡಿರುವ ಗೂಗಲ್ ಗ್ಲಾಸ್ ಅಂತೂ ಸದಾ ಸುದ್ದಿಮಾಡುತ್ತಲೇ ಇರುತ್ತದೆ.

ಇಷ್ಟಕ್ಕೂ ಈ ಸಾಧನಗಳು ಸಂಗ್ರಹಿಸುವ ಮಾಹಿತಿಯೆಲ್ಲ ನಮಗೆ ಯಾಕಾದರೂ ಬೇಕು ಎನ್ನುವುದು ಒಳ್ಳೆಯ ಪ್ರಶ್ನೆ.

ಶುಕ್ರವಾರ, ಜೂನ್ 7, 2013

ಬ್ರೌಸರ್ ಕಿಟಕಿಯಲ್ಲಿ ಕನ್ನಡದ ಕಂಪು

ಟಿ. ಜಿ. ಶ್ರೀನಿಧಿ

ವಿಶ್ವವ್ಯಾಪಿ ಜಾಲವನ್ನು ನಾವೆಲ್ಲ ಬಳಸುತ್ತೇವಾದರೂ ಬಳಕೆಯ ಉದ್ದೇಶ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಲೇ ಇರುತ್ತದೆ. ಶಾಲೆಯ ವಿದ್ಯಾರ್ಥಿಗೆ ವೆಬ್ ವಿಹಾರವೆಂದರೆ ಆಟವಾಡುವ ಅಥವಾ ಹೋಮ್‌ವರ್ಕ್‌ಗೆ ಬೇಕಾದ ಮಾಹಿತಿ ಹುಡುಕುವ ಮಾರ್ಗ; ಅದೇ ವೃತ್ತಿಪರನೊಬ್ಬನಿಗೆ ವಿಶ್ವವ್ಯಾಪಿ ಜಾಲವೆಂದರೆ ಕಚೇರಿಯ ಕೆಲಸಕ್ಕೆ ಮನೆಯಿಂದಲೇ ಕಿಟಕಿ ತೆರೆದುಕೊಡುವ ಕೊಂಡಿಯಿದ್ದಂತೆ. ಇನ್ನು ಮಕ್ಕಳು ಮೊಮ್ಮಕ್ಕಳೆಲ್ಲ ವಿದೇಶದಲ್ಲಿರುವ ಅಜ್ಜಿ-ತಾತನ ಪಾಲಿಗೆ ವಿಶ್ವವ್ಯಾಪಿ ಜಾಲ ಜೀವನಾಡಿಯೇ ಇದ್ದಂತೆ!

ಇವರೆಲ್ಲ ವಿಶ್ವವ್ಯಾಪಿ ಜಾಲವನ್ನು ಸಂಪರ್ಕಿಸುವ ವಿಧಾನ ಕೂಡ ವಿಭಿನ್ನವೇ. ಒಬ್ಬರು ತಮ್ಮ ಮೊಬೈಲಿನ ಥ್ರೀಜಿ ಸಂಪರ್ಕ ಬಳಸಿದರೆ ಇನ್ನೊಬ್ಬರ ಮನೆಯಲ್ಲಿ ಬ್ರಾಡ್‌ಬ್ಯಾಂಡ್, ವೈ-ಫಿ ಇತ್ಯಾದಿಗಳೆಲ್ಲ ಇರುತ್ತದೆ. ಇನ್ನು ಕೆಲವೆಡೆ ಹಳೆಯಕಾಲದ ಡಯಲ್ ಅಪ್ ಸಂಪರ್ಕವೂ ಬಳಕೆಯಾಗುತ್ತಿರುತ್ತದೆ.

ಇಷ್ಟೆಲ್ಲ ವೈವಿಧ್ಯಗಳ ನಡುವೆ ವಿಶ್ವವ್ಯಾಪಿ ಜಾಲದ ಎಲ್ಲ ಬಳಕೆದಾರರೂ ಕಡ್ಡಾಯವಾಗಿ ಉಪಯೋಗಿಸುವ ಅಂಶವೊಂದಿದೆ. ಅದೇ ಬ್ರೌಸರ್‌ಗಳ ಬಳಕೆ.

ವಿಶ್ವವ್ಯಾಪಿ ಜಾಲದಲ್ಲಿರುವ ತಾಣಗಳನ್ನು ತಮ್ಮ ಕಂಪ್ಯೂಟರಿನಲ್ಲಿ ವೀಕ್ಷಿಸಲು ಬಳಕೆದಾರರಿಗೆ ಅನುವುಮಾಡಿಕೊಡುವುದು ಈ ತಂತ್ರಾಂಶದ ಕೆಲಸ. ಹಾಗಾಗಿಯೇ ಬಳಸುತ್ತಿರುವ ಕಂಪ್ಯೂಟರ್, ಸಂಪರ್ಕದ ವಿಧಾನ, ಬಳಕೆಯ ಉದ್ದೇಶ ಇವೆಲ್ಲ ಏನೇ ಆದರೂ ವಿಶ್ವವ್ಯಾಪಿಜಾಲದ ಬಳಕೆದಾರರೆಲ್ಲರೂ ಬ್ರೌಸರ್ ತಂತ್ರಾಂಶವನ್ನು ಬಳಸಲೇಬೇಕು. ಲ್ಯಾಪ್‌ಟಾಪ್-ಡೆಸ್ಕ್‌ಟಾಪ್‌ಗಳಿಗಷ್ಟೆ ಅಲ್ಲ, ಟ್ಯಾಬ್ಲೆಟ್ಟು-ಮೊಬೈಲುಗಳಲ್ಲೂ ಬ್ರೌಸರ್ ತಂತ್ರಾಂಶ ಬೇಕು. ಕ್ಲೌಡ್ ಕಂಪ್ಯೂಟಿಂಗ್ ವಿಷಯಕ್ಕೆ ಬಂದರಂತೂ ಅದೆಷ್ಟೋ ಕೆಲಸಗಳಿಗೆ ಬ್ರೌಸರ್ ತಂತ್ರಾಂಶವೇ ಜೀವಾಳ.

ಶುಕ್ರವಾರ, ಮೇ 31, 2013

ಮೊದಲ ವೆಬ್‌ಪುಟದ ಹುಡುಕಾಟದಲ್ಲಿ...

ಟಿ. ಜಿ. ಶ್ರೀನಿಧಿ

ವರ್ಲ್ಡ್‌ವೈಡ್ ವೆಬ್, ಅಂದರೆ ವಿಶ್ವವ್ಯಾಪಿ ಜಾಲ, ಈಗ ನಮ್ಮ ಜೀವನದ ಭಾಗವೇ ಆಗಿಹೋಗಿದೆ. ವೆಬ್ ಪುಟಗಳನ್ನು ತೆರೆಯುವುದು, ವಿವಿಧ ಉದ್ದೇಶಗಳಿಗಾಗಿ ಅವನ್ನು ಬಳಸುವುದು - ಇದೆಲ್ಲ ಎಷ್ಟು ಸಾಮಾನ್ಯವೆಂದರೆ ಅದರಲ್ಲಿ ನಮಗೆ ಯಾವ ವಿಶೇಷತೆಯೂ ಕಾಣಸಿಗುವುದಿಲ್ಲ.

ಸುಮಾರು ಎರಡು ದಶಕಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ, ಏಕೆಂದರೆ ಆಗಿನ್ನೂ ವಿಶ್ವವ್ಯಾಪಿ ಜಾಲ ಹುಟ್ಟಿಯೇ ಇರಲಿಲ್ಲ.

ಆ ಸಂದರ್ಭದಲ್ಲಿ ಟಿಮ್ ಬರ್ನರ್ಸ್-ಲೀ ಎಂಬ ವಿಜ್ಞಾನಿಯೊಬ್ಬರು ಸ್ವಿಟ್ಸರ್‌ಲೆಂಡಿನ ಯೂರೋಪಿಯನ್ ಪಾರ್ಟಿಕಲ್ ಫಿಸಿಕ್ಸ್ ಲ್ಯಾಬೊರೇಟರಿಯಲ್ಲಿ (ಸರ್ನ್) ಕೆಲಸಮಾಡುತ್ತಿದ್ದರು. ತಾವು ಬಳಸುತ್ತಿದ್ದ ಮಾಹಿತಿ ಬೇಕೆಂದಾಗ ಬೇಕಾದಕಡೆ ದೊರಕುವಂತೆ ಮಾಡಿಕೊಳ್ಳಲು ಅವರು ನಡೆಸಿದ ಪ್ರಯತ್ನಗಳ ಫಲವೇ ವಿಶ್ವವ್ಯಾಪಿ ಜಾಲದ ಹುಟ್ಟಿಗೆ ಕಾರಣವಾಯಿತು.

ಮೊತ್ತಮೊದಲ ವೆಬ್‌ಸೈಟ್, ಅಂದರೆ ಜಾಲತಾಣ ರೂಪುಗೊಂಡದ್ದೂ ಇದೇ ಸಂದರ್ಭದಲ್ಲಿ.

ಶನಿವಾರ, ಮೇ 25, 2013

ಬರಿಯ ಫೋಟೋಗ್ರಫಿಯಷ್ಟೆ ಅಲ್ಲ, ಇದು ಲೋಮೋಗ್ರಫಿ!


ಟಿ. ಜಿ. ಶ್ರೀನಿಧಿ

ಸ್ಮಾರ್ಟ್‌ಫೋನ್ ಬಳಸುವವರಲ್ಲಿ ಅನೇಕರಿಗೆ ಇನ್ಸ್‌ಟಾಗ್ರಾಮ್ ಗೊತ್ತು. ನಾವು ಕ್ಲಿಕ್ಕಿಸುವ ಚಿತ್ರಗಳನ್ನು ನಮ್ಮ ಇಷ್ಟದಂತೆ ಬದಲಿಸುವ, ರೆಟ್ರೋ ಇಫೆಕ್ಟ್ ಕೊಡುವ ಆಪ್ (app) ಇದು; ಬಹಳ ಜನಪ್ರಿಯವೂ ಹೌದು. ಸುಮಾರು ಒಂದು ವರ್ಷದ ಹಿಂದೆ ಫೇಸ್‌ಬುಕ್ ಸಂಸ್ಥೆ ಒಂದು ಬಿಲಿಯನ್ ಡಾಲರ್ ಕೊಟ್ಟು ಇನ್ಸ್‌ಟಾಗ್ರಾಮ್ ಅನ್ನು ಕೊಂಡ ಸುದ್ದಿ ಬಂತಲ್ಲ, ಆಗ ಅದೆಷ್ಟು ಸುದ್ದಿಯಾಯಿತೆಂದರೆ ಸ್ಮಾರ್ಟ್‌ಫೋನ್ ಬಳಕೆದಾರರಲ್ಲದವರು ಕೂಡ ಇನ್ಸ್‌ಟಾಗ್ರಾಮ್ ಹೆಸರು ಕೇಳುವಂತಾಗಿತ್ತು!

ಫೋಟೋಗಳಿಗೆ ಹೀಗೆ ಸ್ಪೆಶಲ್ ಇಫೆಕ್ಟುಗಳನ್ನು ಸೇರಿಸುವುದು ಬಹಳ ಜನಪ್ರಿಯ ಅಭ್ಯಾಸ ಎಂದೇ ಹೇಳಬೇಕು. ಈಗಂತೂ ಡಿಜಿಟಲ್ ಚಿತ್ರಗಳಿಗೆ ಬಹಳ ಸುಲಭವಾಗಿ ನಮಗೆ ಬೇಕಾದ ಇಫೆಕ್ಟುಗಳನ್ನೆಲ್ಲ ಸೇರಿಸಿಬಿಡಬಹುದು. ಹಿಂದೆ ಬ್ಲಾಕ್ ಆಂಡ್ ವೈಟ್ ಕಾಲದಲ್ಲಿ ಚಿತ್ರಗಳಿಗೆ ಬಣ್ಣ ಹಾಕುತ್ತಿದ್ದದ್ದೂ ಸ್ಪೆಶಲ್ ಇಫೆಕ್ಟೇ!

ಇದೇನೋ ಚಿತ್ರ ಕ್ಲಿಕ್ಕಿಸಿದ ನಂತರದ ಮಾತಾಯಿತು. ಕ್ಲಿಕ್ಕಿಸಿದ ಚಿತ್ರ ಕ್ಯಾಮೆರಾದಲ್ಲಿ ಸೆರೆಯಾಗುವಾಗಲೇ ನಮಗೆ ಬೇಕಾದ ಇಫೆಕ್ಟುಗಳೆಲ್ಲ ಅದರಲ್ಲಿ ಸೇರಿಕೊಳ್ಳುವಂತಿದ್ದರೆ ಹೇಗಿರುತ್ತಿತ್ತು?

ಶುಕ್ರವಾರ, ಮೇ 17, 2013

ಓದುವ ಹವ್ಯಾಸಕ್ಕೆ ಆಪ್ ನೆರವು!


ಟಿ. ಜಿ. ಶ್ರೀನಿಧಿ

ಒಂದೆರಡು ದಶಕಗಳ ಹಿಂದಿನ ಬಾಲ್ಯ ನೆನಪಿಸಿಕೊಳ್ಳಿ. ಮಕ್ಕಳ ಇತರೆಲ್ಲ ಚಟುವಟಿಕೆಗಳ ಜೊತೆಗೆ ಪುಸ್ತಕಗಳೂ ಅವರ ಜೊತೆಗಾರರಾಗಿರುತ್ತಿದ್ದವು. ಓದಲು ಕಲಿಯುವ ಮುನ್ನ ಅಪ್ಪ-ಅಮ್ಮ ಹೇಳುವ ಕತೆಗಳಿಂದಲೇ ಪುಸ್ತಕಗಳ ಈ ಒಡನಾಟ ಪ್ರಾರಂಭವಾಗುತ್ತಿತ್ತು. ಹಾಗೆ ಪುಸ್ತಕಗಳ ರುಚಿ ಹತ್ತಿತೆಂದರೆ ಅಲ್ಲಿಂದ ಮುಂದಕ್ಕೆ ಪುಸ್ತಕಗಳ ಒಡನಾಟ ಮುಂದುವರೆಯುತ್ತಿದ್ದದ್ದು ಗ್ಯಾರಂಟಿ!

ಮುಂದಿನ ಕೆಲ ವರ್ಷಗಳಲ್ಲಿ ಪುಸ್ತಕಗಳ ಪ್ರಾಮುಖ್ಯವನ್ನು ಟೀವಿ ಒಂದಷ್ಟುಮಟ್ಟಿಗೆ ಕಡಿಮೆಮಾಡಿತು, ಆಮೇಲೆ ಟೀವಿಯ ಜೊತೆಗೆ ಕಂಪ್ಯೂಟರ್ ಕೂಡ ಬಂತು. ಅದೇನು ಅಷ್ಟು ಹೊತ್ತಿಂದ ಅದರ ಮುಂದೆ ಕೂತಿದ್ದೀಯಲ್ಲ, ಸ್ವಲ್ಪಹೊತ್ತು ಹೋಗಿ ಏನಾದರೂ ಓದಬಾರದೇ ಎಂದು ಮಕ್ಕಳು ಬೈಸಿಕೊಳ್ಳುವುದು ಸರ್ವೇಸಾಮಾನ್ಯವೂ ಆಯಿತು. ಡೆಸ್ಕ್‌ಟಾಪ್-ಲ್ಯಾಪ್‌ಟಾಪ್‌ಗಳ ಜೊತೆಗೆ ಸೇರಿಕೊಂಡ ಮೊಬೈಲ್ ಹಾಗೂ ಟ್ಯಾಬ್ಲೆಟ್ಟುಗಳಿಗೂ ಇದೇ ಕುಖ್ಯಾತಿ ಸಂದಿತು.

ಆದರೆ ಪ್ರಪಂಚವೆಲ್ಲ ಕಂಪ್ಯೂಟರ್ ಹಾಗೂ ಮೊಬೈಲಿನ ಹಾದಿಯಲ್ಲಿ ಸಾಗಿದಂತೆ ಅವುಗಳ ನೆರವಿನಿಂದ ಮಾಡಬಹುದಾದ ಕೆಲಸಗಳ ಪ್ರಮಾಣ ಹೆಚ್ಚಿತು. ಕಂಪ್ಯೂಟರಿನ ಮುಂದೆ ಕುಳಿತುಕೊಳ್ಳುವುದು ಸಮಯ ವ್ಯರ್ಥಮಾಡಲಿಕ್ಕಷ್ಟೆ ಅಲ್ಲ, ಅದು ಜ್ಞಾನಾರ್ಜನೆಯ ಮಾರ್ಗವೂ ಆಗಬಹುದು ಎಂಬ ಅರಿವು ಬೆಳೆಯಿತು. ಪುಸ್ತಕಗಳಿಂದ ಮಕ್ಕಳನ್ನು (ಹಾಗೂ ಕೆಲವೊಮ್ಮೆ ದೊಡ್ಡವರನ್ನೂ) ದೂರ ಕೊಂಡೊಯ್ದ ಆಪಾದನೆಯನ್ನು ಹೋಗಲಾಡಿಸಿಕೊಳ್ಳಲು ಇದೇ ಸುಸಮಯ ಎಂಬ ಆಲೋಚನೆಯೂ ಹುಟ್ಟಿಕೊಂಡಿತು!

ವಿದ್ಯುನ್ಮಾನ ಪುಸ್ತಕಗಳ (ಇ-ಬುಕ್) ಪರಿಕಲ್ಪನೆಯ ಬೆಳವಣಿಗೆಗೆ ನೆರವಾದದ್ದು ಇದೇ ಅಂಶ.

ಶುಕ್ರವಾರ, ಮೇ 10, 2013

ಕಲ್ಪನೆಗಳಿಗೆ ರೆಕ್ಕೆಕಟ್ಟುವ ಫೋಟೋಶಾಪ್


ಟಿ. ಜಿ. ಶ್ರೀನಿಧಿ

ನೂರು ಪದಗಳು ಹೇಳಲಾರದ್ದನ್ನು ಒಂದು ಚಿತ್ರ ಪರಿಣಾಮಕಾರಿಯಾಗಿ ಹೇಳುತ್ತದಂತೆ. ನಮ್ಮ ಸುತ್ತ ಇರುವ ಮಾಹಿತಿಯಲ್ಲಿ ದೊಡ್ಡದೊಂದು ಪಾಲು ಚಿತ್ರರೂಪದಲ್ಲೇ ಇರುವುದನ್ನು ನೋಡಿದಾಗ ಈ ಹೇಳಿಕೆಯ ಹಿನ್ನೆಲೆ ನಮಗೆ ಸ್ಪಷ್ಟವಾಗಿಬಿಡುತ್ತದೆ. ಏಕೆಂದರೆ ಪಠ್ಯರೂಪದ ಮಾಹಿತಿಯಿಂದ ಸಾಧ್ಯವಾಗುವ, ಅಥವಾ ಅದಕ್ಕಿಂತ ಹೆಚ್ಚು ಸಮರ್ಥವಾದ ಸಂವಹನ ಅದರ ಜತೆಗಿರುವ ಚಿತ್ರದ ಮೂಲಕ ಸಾಧ್ಯವಾಗುತ್ತದೆ.

ಚಿತ್ರ ಇಷ್ಟೆಲ್ಲ ಪರಿಣಾಮಕಾರಿಯಾದ ಮಾಧ್ಯಮ ಎಂದಮೇಲೆ ಚಿತ್ರಗಳ ಸೃಷ್ಟಿ ಹಾಗೂ ಚೆಂದಗಾಣಿಸುವ ಪ್ರಕ್ರಿಯೆಗಳೂ ಬಹಳ ಮುಖ್ಯವೇ ಆಗಿಬಿಡುತ್ತವಲ್ಲ. ಇವುಗಳ ಪ್ರಾಮುಖ್ಯ ಎಷ್ಟರಮಟ್ಟದ್ದು ಎಂದರೆ ಕಲಾವಿದರ ಕೈಚಳಕದಿಂದ ಸೃಷ್ಟಿಯಾದ ಚಿತ್ರಗಳನ್ನೂ ಬಹಳಷ್ಟು ಸಾರಿ ನಾವೆಲ್ಲ ನೈಜವೆಂದೇ ನಂಬಿಬಿಡುತ್ತೇವೆ.

ಈಚಿನ ವರ್ಷಗಳ ವಿಷಯಕ್ಕೆ ಬಂದರೆ ಇಂತಹ ಚಿತ್ರಗಳ ಹಿಂದೆ ಸ್ಪಷ್ಟವಾಗಿ ಕಾಣಸಿಗುವುದು ಕಂಪ್ಯೂಟರಿನ ಕೈವಾಡ. ಹೌದು, ಕಂಪ್ಯೂಟರ್ ಸಹಾಯದಿಂದ ಅತ್ಯಂತ ಉತ್ಕೃಷ್ಟ ಗುಣಮಟ್ಟದ ಚಿತ್ರಗಳನ್ನು ಸೃಷ್ಟಿಸುವುದು ಹಾಗೂ ಈಗಾಗಲೇ ಇರುವ ಚಿತ್ರಗಳನ್ನು ಸುಳಿವೇ ಸಿಗದಂತೆ ಬದಲಿಸಿಬಿಡುವುದು ಸಾಧ್ಯ.

ಇದನ್ನು ಸಾಧ್ಯವಾಗಿಸುವ ತಂತ್ರಾಂಶಗಳಲ್ಲಿ ಅತ್ಯಂತ ಪ್ರಮುಖ ಹೆಸರು ಫೋಟೋಶಾಪ್‌ನದು.

ಶುಕ್ರವಾರ, ಮೇ 3, 2013

ಇಂಟರ್‌ನೆಟ್ಟಿನ ಪಬ್ಲಿಕ್ ಪೊಲೀಸ್


ಟಿ. ಜಿ. ಶ್ರೀನಿಧಿ

ಜಾಲಲೋಕದ ಸಾಧ್ಯತೆಗಳು ಅಪಾರ. ವಿಶ್ವವ್ಯಾಪಿ ಜಾಲವೆಂಬ ಈ ಮಹಾಸಮುದಾಯ ಅಲ್ಲಿರುವ ನನ್ನ ನಿಮ್ಮಂತಹವರಿಗೂ ವಿಶಿಷ್ಟ ಶಕ್ತಿಗಳನ್ನು ನೀಡುತ್ತದೆ. ಕೆಲವೇ ದಿನಗಳಲ್ಲಿ ನಿಘಂಟು ಸಿದ್ಧಪಡಿಸಬೇಕೇ, ಯಾವುದೋ ತಂತ್ರಾಂಶವನ್ನು ಸುಧಾರಿಸಬೇಕೇ, ವೈಜ್ಞಾನಿಕ ಸಮಸ್ಯೆಯೊಂದಕ್ಕೆ ಉತ್ತರ ಹುಡುಕಬೇಕೇ ಅಥವಾ ಸಿನಿಮಾ ನಿರ್ಮಾಣಕ್ಕೆ ಕಾಸು ಕೂಡಿಸಬೇಕೇ - ಸಮುದಾಯದಲ್ಲಿರುವ ಎಲ್ಲರೂ ನಮ್ಮನಮ್ಮ ಕೈಲಾದ ಅಲ್ಪಸ್ವಲ್ಪ ಸಹಾಯವನ್ನಷ್ಟೇ ಮಾಡುವ ಮೂಲಕ ಒಟ್ಟಾರೆಯಾದ ಬೃಹತ್ ಸಾಧನೆಯೊಂದನ್ನು ಮಾಡಿತೋರಿಸುವ ಈ ಮಾಯಾಜಾಲ ಸಾಮಾನ್ಯವಾದುದೇನಲ್ಲ.

ಹನಿಗೂಡಿದರೆ ಹಳ್ಳ ಎನ್ನುವಂತೆ ಸಣ್ಣಸಣ್ಣ ವೈಯಕ್ತಿಕ ಕೊಡುಗೆಗಳ ಮೂಲಕ ದೊಡ್ಡ ಕೆಲಸಗಳನ್ನು ಸಾಧಿಸಿಕೊಳ್ಳುವ ಈ ವಿಶಿಷ್ಟ ಪರಿಕಲ್ಪನೆಯ ಹೆಸರೇ 'ಕ್ರೌಡ್‌ಸೋರ್ಸಿಂಗ್'. ಸಮುದಾಯದ ಸಾಮರ್ಥ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಈ ಪರಿಕಲ್ಪನೆಯ ಉದ್ದೇಶ.

ಸಮುದಾಯದ ಸಾಮರ್ಥ್ಯ ಎಂದಮೇಲೆ ಮುಗಿದೇ ಹೋಯಿತು, ಅದಕ್ಕೆ ನಾವು ಯಾವ ಮಿತಿಯನ್ನೂ ಕಲ್ಪಿಸಿಕೊಳ್ಳುವಂತೆಯೇ ಇಲ್ಲ. ಅನ್ಯಗ್ರಹ ಜೀವಿಗಳ ಹುಡುಕಾಟದಂತಹ ಕ್ಲಿಷ್ಟ ವೈಜ್ಞಾನಿಕ ಶೋಧಗಳಲ್ಲೇ ಸಮುದಾಯದ ಪಾಲ್ಗೊಳ್ಳುವಿಕೆ ಇದೆ ಎಂದಮೇಲೆ ಭೂಮಿಯ ಮೇಲಿನ ಪಾತಕಿಗಳ ಪತ್ತೆಯನ್ನೂ ಕ್ರೌಡ್‌ಸೋರ್ಸ್ ಮಾಡಬಹುದಲ್ಲ!

ಶುಕ್ರವಾರ, ಏಪ್ರಿಲ್ 26, 2013

ಮೊಬೈಲ್‌ನಲ್ಲಿ ಫೋಟೋ ಮೇಕಪ್


ಟಿ. ಜಿ. ಶ್ರೀನಿಧಿ


ಡಿಜಿಟಲ್ ಕ್ಯಾಮೆರಾಗಳ ಆವಿಷ್ಕಾರ ಫಿಲಂ ಕ್ಯಾಮೆರಾಗಳ ಕಾಲದಲ್ಲಿದ್ದ ಹಲವು ಅಭ್ಯಾಸಗಳನ್ನು ಬದಲಿಸಿತು. ಡೆವೆಲಪ್ ಮಾಡಿಸುವುದು, ಪ್ರಿಂಟು ಹಾಕಿಸುವುದು ಮೊದಲಾದ ತಾಪತ್ರಯಗಳನ್ನು ದೂರಮಾಡಿದ್ದು ಇದೇ ಡಿಜಿಟಲ್ ತಂತ್ರಜ್ಞಾನ ತಾನೆ!

ಆದರೆ ಡಿಜಿಟಲ್ ಕ್ಯಾಮೆರಾಗಳನ್ನೂ ಒಂದಷ್ಟು ಕಾಲ ಬಳಸಿದ ಮೇಲೆ ಅದರ ಜೊತೆಗೆ ಬಂದ ಕೆಲ ಅಭ್ಯಾಸಗಳೂ ತಾಪತ್ರಯ ಎನಿಸಲು ಶುರುವಾಯಿತು. ಫೋಟೋ ಕ್ಲಿಕ್ಕಿಸಿದ ತಕ್ಷಣ ಕ್ಯಾಮೆರಾದ ಪುಟಾಣಿ ಪರದೆಯಲ್ಲಿ ಕಾಣಿಸುತ್ತದೇನೋ ಸರಿ, ಆದರೆ ಚಿತ್ರವನ್ನು ಪೂರ್ಣಗಾತ್ರದಲ್ಲಿ ನೋಡಲು - ಅಗತ್ಯ ಬದಲಾವಣೆಗಳನ್ನು ಮಾಡಲು ಕಂಪ್ಯೂಟರಿಗೆ ವರ್ಗಾಯಿಸಲೇಬೇಕು. ನಾವು ಹೋದಕಡೆ ಕಂಪ್ಯೂಟರ್-ಇಂಟರ್‌ನೆಟ್ ಇತ್ಯಾದಿಗಳೆಲ್ಲ ಇಲ್ಲದಿದ್ದರೆ? ನಾವು ತೆಗೆದ ಚಿತ್ರಗಳನ್ನೆಲ್ಲ ಮಿತ್ರವೃಂದಕ್ಕೆ ತೋರಿಸಲು ಫೇಸ್‌ಬುಕ್ಕಿಗೋ ಇನ್ನಾವುದೋ ತಾಣಕ್ಕೋ ಸೇರಿಸುವುದು ಹೇಗೆ?

ಈ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಿರುವುದು ಕ್ಯಾಮೆರಾ ಫೋನುಗಳ ಹೆಚ್ಚುಗಾರಿಕೆ. ಈಗಂತೂ ದೊಡ್ಡದೊಂದು ಕ್ಯಾಮೆರಾ ಹಿಡಿದುಕೊಂಡು ಓಡಾಡುವವರು ಕ್ಲಿಕ್ಕಿಸುವಂತಹುದೇ ಚಿತ್ರಗಳನ್ನು ಜೇಬಿನಲ್ಲಿ ಮೊಬೈಲ್ ಫೋನ್ ಇಟ್ಟುಕೊಂಡವರೂ ಕ್ಲಿಕ್ಕಿಸುವುದು ಸಾಧ್ಯವಾಗಿದೆ.

ಕ್ಯಾಮೆರಾ ಫೋನುಗಳಲ್ಲಿ ಇನ್ನೂ ಒಂದು ವೈಶಿಷ್ಟ್ಯವಿದೆ: ಫೋಟೋ ಕ್ಲಿಕ್ಕಿಸಿದ ನಂತರ ಅದನ್ನು ಬೇರೆಯವರೊಡನೆ ಹಂಚಿಕೊಳ್ಳಲು ಕಂಪ್ಯೂಟರಿನತ್ತ ಮುಖಮಾಡುವುದನ್ನೇ ಅವು ತಪ್ಪಿಸುತ್ತವೆ.

ಶುಕ್ರವಾರ, ಏಪ್ರಿಲ್ 19, 2013

ಅಂತರಜಾಲದ ಅಂಚೆವ್ಯವಸ್ಥೆ


ಟಿ. ಜಿ. ಶ್ರೀನಿಧಿ

ನೂರು ಮನೆಗಳಿರುವ ಒಂದು ಊರಿದೆ ಎಂದುಕೊಳ್ಳೋಣ. ಬಹಳ ಕಾಲದಿಂದಲೂ ಅಲ್ಲಿರುವ ಮನೆಗಳ ಸಂಖ್ಯೆ ಅಷ್ಟೇ ಇರುವುದರಿಂದ ಊರಿನ ಎಲ್ಲ ವ್ಯವಸ್ಥೆಗಳೂ ನೂರು ಮನೆಗಳಿಗಷ್ಟೆ ಸರಿಯಾಗಿ ಕೆಲಸಮಾಡುವಂತೆ ರೂಪುಗೊಂಡುಬಿಟ್ಟಿವೆ. ನೂರು ಮನೆಗಳಿಗೆ ಸಾಲುವಷ್ಟು ನೀರು-ವಿದ್ಯುತ್ ಪೂರೈಕೆ, ನೂರು ಮನೆಗಳಿಗೆ ಬೇಕಾದಷ್ಟು ಅಂಗಡಿಗಳು, ನೂರು ಮನೆಗಳನ್ನಷ್ಟೆ ನಿಭಾಯಿಸಲು ಶಕ್ತವಾದ ಅಂಚೆ ವ್ಯವಸ್ಥೆ, ನೂರೇ ನೂರು ದೂರವಾಣಿ ಸಂಪರ್ಕ; ಯಾರಿಗೂ ಯಾವುದರಲ್ಲೂ ಕೊರತೆಯಿಲ್ಲ.

ಊರಿನಲ್ಲಿ ವ್ಯವಸ್ಥೆ ಇಷ್ಟೆಲ್ಲ ಸಮರ್ಪಕವಾಗಿದೆ ಎನ್ನುವ ಸುದ್ದಿ ಕೇಳಿದ ಅನೇಕ ಜನರು ಆ ಊರಿನತ್ತ ಆಕರ್ಷಿತರಾದರು. ಪರಿಣಾಮವಾಗಿ ಅಲ್ಲಿನ ರಿಯಲ್ ಎಸ್ಟೇಟ್ ಉದ್ದಿಮೆ ದೊಡ್ಡದಾಗಿ ಬೆಳೆಯಿತು. ದೊಡ್ಡ ಸಂಖ್ಯೆಯಲ್ಲಿ ಹೊಸ ಮನೆಗಳು, ಅಪಾರ್ಟ್‌ಮೆಂಟುಗಳೆಲ್ಲ ಸೃಷ್ಟಿಯಾದವು. ಒಂದೊಂದಾಗಿ ಹೊಸ ಕುಟುಂಬಗಳೂ ಆ ಮನೆಗಳಿಗೆ ಬಂದು ಸೇರಿಕೊಂಡವು.

ಮೂಲ ಊರಿನ ಸುತ್ತ ಬೇಕಾದಷ್ಟು ಜಾಗವೇನೋ ಇತ್ತು, ರಿಯಲ್ ಎಸ್ಟೇಟ್ ಉದ್ಯಮಿಗಳು ಅಲ್ಲೆಲ್ಲ ಮನೆ ಕಟ್ಟಿ ಮಾರಿಬಿಟ್ಟರು. ಆದರೆ ಅಷ್ಟೆಲ್ಲ ಸಂಖ್ಯೆಯ ಹೊಸ ಮನೆಗಳಿಗೆ ನೀರು-ವಿದ್ಯುತ್-ದೂರವಾಣಿ ಸಂಪರ್ಕಗಳನ್ನು ಕೊಡುವಷ್ಟು ಸಾಮರ್ಥ್ಯ ಅಲ್ಲಿನ ವ್ಯವಸ್ಥೆಗೆ ಇಲ್ಲ; ಬೇರೆಲ್ಲ ಹೋಗಲಿ ಎಂದರೆ ಹೊಸ ಮನೆಗಳವರ ಅಗತ್ಯಗಳನ್ನು ಪೂರೈಸುವಷ್ಟು ಸಾಮರ್ಥ್ಯವೂ ಊರಿನ ಅಂಗಡಿಗಳಿಗಿಲ್ಲ.

ನೂರು ಮನೆಗಳಿದ್ದಾಗ ಯಾವ ಕೊರತೆಯೂ ಇಲ್ಲದ ಊರು ಅತಿ ಶೀಘ್ರದಲ್ಲೇ ಸಮಸ್ಯೆಗಳ ಆಗರವಾಗುವುದು ಎಷ್ಟು ಸುಲಭ ಅಲ್ಲವೆ? ಸ್ವಲ್ಪ ಹೆಚ್ಚೂಕಡಿಮೆಯಾದರೆ ನಮ್ಮ ಅಂತರಜಾಲವೂ ಇಂತಹುದೇ ಪರಿಸ್ಥಿತಿಯತ್ತ ಹೋಗಬಹುದು ಎಂದು ತಜ್ಞರು ಹೇಳುತ್ತಾರೆ.

ಸೋಮವಾರ, ಏಪ್ರಿಲ್ 15, 2013

ಮಾತು ಮಾತುಗಳನು ದಾಟಿ...

ಟಿ. ಜಿ. ಶ್ರೀನಿಧಿ

ಕಳೆದ ಕೆಲ ದಶಕಗಳಲ್ಲಿ ನಮ್ಮ ಬದುಕನ್ನು ತೀರಾ ಗಣನೀಯವಾಗಿ ಬದಲಿಸಿರುವ ವಸ್ತುಗಳಲ್ಲಿ ಮೊಬೈಲ್ ದೂರವಾಣಿಯದು ಪ್ರಮುಖ ಸ್ಥಾನ. ಬಹಳ ಕಡಿಮೆ ಸಮಯದಲ್ಲಿ ಅಪಾರ ಜನಪ್ರಿಯತೆ ಗಳಿಸಿದ ಹೆಚ್ಚುಗಾರಿಕೆ ಈ ಮೊಬೈಲ್ ಫೋನಿನದು.

ಮೊಬೈಲ್ ದೂರವಾಣಿಯ ಕಲ್ಪನೆ ಸುಮಾರು ಐವತ್ತು-ಅರವತ್ತು ವರ್ಷಗಳಷ್ಟು ಹಳೆಯದು. ಸಾಮಾನ್ಯ ದೂರವಾಣಿ, ಅಂದರೆ ಲ್ಯಾಂಡ್‌ಲೈನ್, ಆ ವೇಳೆಗಾಗಲೇ ಸಾಕಷ್ಟು ವ್ಯಾಪಕವಾಗಿ ಬಳಕೆಯಾಗುತ್ತಿತ್ತು; ರೇಡಿಯೋ ಕಲ್ಪನೆ ಕೂಡ ಸುಮಾರು ಹಳೆಯದಾಗಿತ್ತು. ಒಬ್ಬರ ಮಾತನ್ನು ಇನ್ನೊಬ್ಬರಿಗೆ ತಲುಪಿಸುವ ಸಾಮಾನ್ಯ ಫೋನು ತಂತಿಗಳ ನೆರವಿಲ್ಲದೆ, ಅಂದರೆ ರೇಡಿಯೋ ರೀತಿಯಲ್ಲಿ, ಕೆಲಸ ಮಾಡಿದರೆ ಎಷ್ಟೊಂದು ಅನುಕೂಲ ಎನ್ನುವ ಯೋಚನೆ ಮೊಬೈಲ್ ದೂರವಾಣಿಯ ಸೃಷ್ಟಿಗೆ ಕಾರಣವಾಯಿತು.

ಆದರೆ ಅವತ್ತಿನ ಮೊಬೈಲ್ ತಂತ್ರಜ್ಞಾನ ಇವತ್ತಿನಷ್ಟು ಮುಂದುವರೆದಿರಲಿಲ್ಲ. ಮೊಬೈಲ್ ಕರೆಗಳ ದರ ವಿಪರೀತ ಜಾಸ್ತಿಯಿದ್ದದ್ದಷ್ಟೇ ಅಲ್ಲ, ಫೋನುಗಳೂ ತೀರಾ ದೊಡ್ಡದಾಗಿದ್ದವು. ಅವುಗಳ ಗಾತ್ರ ಎಷ್ಟು ದೊಡ್ಡದಿತ್ತೆಂದರೆ ಮೊದಮೊದಲು ಬಂದ ಮೊಬೈಲ್ ಫೋನುಗಳನ್ನು ಕಾರುಗಳಲ್ಲಷ್ಟೇ ಇಟ್ಟುಕೊಳ್ಳಲು ಸಾಧ್ಯವಿತ್ತು.

ಇದನ್ನೆಲ್ಲ ನೋಡುತ್ತಿದ್ದ ಮಾರ್ಟಿನ್ ಕೂಪರ್ ಎಂಬ ತಂತ್ರಜ್ಞರಿಗೆ ಒಂದು ಯೋಚನೆ ಬಂತು; ದೂರವಾಣಿಯನ್ನು ಒಂದು ಮನೆಗೆ, ಕಚೇರಿಗೆ ಅಥವಾ ಈಗ ವಾಹನಕ್ಕೆ ಸೀಮಿತಗೊಳಿಸಿಬಿಟ್ಟಿದ್ದೇವಲ್ಲ, ಅದರ ಬದಲು ದೂರವಾಣಿಗಿರುವ ಭೌಗೋಳಿಕ ಮಿತಿಯನ್ನು ಸಂಪೂರ್ಣವಾಗಿ ಹೋಗಲಾಡಿಸಿ ಒಬ್ಬ ವ್ಯಕ್ತಿಗೆ ಒಂದು ದೂರವಾಣಿ ಸಂಖ್ಯೆ ಕೊಡುವಂತಿದ್ದರೆ ಹೇಗೆ?

ಮಂಗಳವಾರ, ಏಪ್ರಿಲ್ 9, 2013

ತಿರುಗಿ ನೋಡುವ ಸಮಯ

ಉದಯವಾಣಿಯ 'ಜೋಶ್' ಪುರವಣಿಯಲ್ಲಿ ಕಳೆದ ೧೨೨ ವಾರಗಳಿಂದ ಪ್ರಕಟವಾಗುತ್ತಿದ್ದ 'ವಿಜ್ಞಾಪನೆ' ಅಂಕಣ ಇಂದಿನ ಲೇಖನದೊಡನೆ ಮುಕ್ತಾಯವಾಗುತ್ತಿದೆ. ಈ ಅಂಕಣವನ್ನು ಮೆಚ್ಚಿಕೊಂಡು ಪ್ರೋತ್ಸಾಹಿಸಿದ ಎಲ್ಲ ಓದುಗರಿಗೂ ಉದಯವಾಣಿಯ ಸಂಪಾದಕವರ್ಗಕ್ಕೂ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು. ಉದಯವಾಣಿ ಮಂಗಳೂರು ಆವೃತ್ತಿಯ 'ಯುವ ಸಂಪದ'ದಲ್ಲಿ ಪ್ರಕಟವಾಗುತ್ತಿರುವ ಅಂಕಣ 'ಸ್ವ-ತಂತ್ರ' ಸದ್ಯಕ್ಕೆ ಹಾಗೆಯೇ ಮುಂದುವರೆಯುತ್ತದೆ. ಇತರ ಹೊಸ ಬರಹಗಳು ಇಜ್ಞಾನ ಡಾಟ್ ಕಾಮ್‌ನಲ್ಲಿ ಎಂದಿನಂತೆ ಪ್ರಕಟವಾಗುತ್ತವೆ.
ಟಿ. ಜಿ. ಶ್ರೀನಿಧಿ

"ಈಗ ನಾವಿದ್ದೇವಲ್ಲ ಪರಿಸ್ಥಿತಿ, ತಂತ್ರಜ್ಞಾನ ಈಗಲೇ ಎಷ್ಟೊಂದು ಬೆಳೆದುಬಿಟ್ಟಿದೆ! ಮುಂದೆಯೂ ಹೀಗೆಯೇ ಬೆಳೆಯುತ್ತ ಹೋದರೆ ಏನು ಗತಿ?" ಎಂಬಂತಹ ಮಾತುಗಳು ನಾಗರೀಕತೆಯ ಪ್ರತಿಯೊಂದು ಹಂತದಲ್ಲೂ ಕೇಳಿಬಂದಿವೆ. ಕಳೆದೊಂದು ಶತಮಾನದಲ್ಲಂತೂ ಮಾಹಿತಿ ತಂತ್ರಜ್ಞಾನ ಬೆಳೆಯುತ್ತಹೋದಂತೆ ನಮ್ಮ ಸುತ್ತಲೂ ಸೃಷ್ಟಿಯಾಗುತ್ತಿರುವ ಮಾಹಿತಿಯ ಮಹಾಪೂರದ ಬಗ್ಗೆ ಕಾಳಜಿ ವ್ಯಕ್ತವಾಗುತ್ತಲೇ ಇದೆ.

೧೯೭೧ರಲ್ಲಿ ಪ್ರಕಟವಾದ ಲೇಖನವೊಂದು ಈಗಾಗಲೇ ನಮ್ಮಲ್ಲಿ ಐದಾರು ಟೀವಿ ಚಾನೆಲ್ಲುಗಳಿವೆ, ಇದು ಹೀಗೆಯೇ ಬೆಳೆಯುತ್ತ ಹೋಗಿ ಮುಂದೆ ನೂರಾರು ಚಾನೆಲ್ಲುಗಳಾದರೆ ಏನು ಗತಿ? ಎಂದು ಆತಂಕ ವ್ಯಕ್ತಪಡಿಸಿತ್ತಂತೆ. ತಮಾಷೆಯ ವಿಷಯವೆಂದರೆ, ಕೆಲವೇ ದಶಕಗಳ ನಂತರ, ಈಗ ನೂರಾರು ಚಾನೆಲ್ಲುಗಳು ಇರುವುದಷ್ಟೇ ಅಲ್ಲ, ನಮಗೆ ಅದು ವಿಶೇಷ ಎನಿಸುತ್ತಲೂ ಇಲ್ಲ!

ಬೇರೆಯವರ ವಿಷಯವೆಲ್ಲ ಏಕೆ, ಕಂಪ್ಯೂಟರ್ ವಿಜ್ಞಾನದ ಆದ್ಯ ತಜ್ಞರಲ್ಲೊಬ್ಬರಾದ ಅಲನ್ ಟ್ಯೂರಿಂಗ್ ಕೂಡ ೧೯೫೦ರಲ್ಲಿ ಇಂತಹುದೇ ಒಂದು ಮಾತು ಹೇಳಿದ್ದರಂತೆ. ಮುಂದಿನ ಐವತ್ತು ವರ್ಷಗಳಲ್ಲಿ ಕಂಪ್ಯೂಟರಿನ ಮೆಮೊರಿ ನೂರು ಕೋಟಿ ಬಿಟ್‌ಗಳನ್ನು ಉಳಿಸಿಕೊಳ್ಳುವ ಮಟ್ಟಕ್ಕೆ ಬೆಳೆಯಲಿದೆ ಎನ್ನುವುದು ಅವರ ಮಾತಿನ ಸಾರಾಂಶವಾಗಿತ್ತು. ನೂರು ಕೋಟಿ ಎನ್ನುವ ಸಂಖ್ಯೆ ಬಹಳ ದೊಡ್ಡದೇ, ನಿಜ. ಆದರೆ ಅದು ೧೨೮ ಎಂಬಿಗಿಂತ ಕೊಂಚ ಕಡಿಮೆಯೇ ಎನ್ನುವುದನ್ನು ಗಮನಿಸಿದಾಗ ಕಳೆದ ಐವತ್ತು-ಅರವತ್ತು ವರ್ಷಗಳಲ್ಲಿ ತಂತ್ರಜ್ಞಾನ ಹೇಗೆ ಬೆಳೆದಿದೆ ಎನ್ನುವುದು ನಮ್ಮ ಗಮನಕ್ಕೆ ಬರುತ್ತದೆ. ೧೨೮ಎಂಬಿ ಎಲ್ಲಿ, ಇಂದಿನ ಟೆರಾಬೈಟುಗಳೆಲ್ಲಿ!

ನಮ್ಮ ಸುತ್ತ ಇರುವ ಮಾಹಿತಿಯ ಪ್ರಮಾಣ ಹಾಗೂ ಕಂಪ್ಯೂಟರ್ ಮೆಮೊರಿಯ ಮಾತೆಲ್ಲ ಹಾಗಿರಲಿ. ಇದೆಲ್ಲದರ ಬೆಳವಣಿಗೆಗೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಕಾರಣವಾಗಿರುವುದು ಸಂಸ್ಕರಣಾ ಸಾಮರ್ಥ್ಯ, ಅಂದರೆ ಪ್ರಾಸೆಸಿಂಗ್ ಪವರ್ ಬೆಳೆದಿರುವ ರೀತಿ. ಬಹಳ ಹಿಂದಿನ ಮಾತೆಲ್ಲ ಏಕೆ, ಈ ಶತಮಾನದ ಪ್ರಾರಂಭದಲ್ಲೂ ಇನ್ನೂರು-ಮುನ್ನೂರು ಮೆಗಾಹರ್ಟ್ಸ್ ಆಸುಪಾಸಿನಲ್ಲೇ ಇದ್ದ ಪ್ರಾಸೆಸರ್ ಸಾಮರ್ಥ್ಯ ಗಿಗಾಹರ್ಟ್ಸ್‌ಗಳನ್ನು ದಾಟಿ ಅದೆಷ್ಟೋ ಕಾಲವಾಗಿದೆ. ಒಂದರ ಜಾಗದಲ್ಲಿ ಪ್ರಾಸೆಸರ್ ಒಳಗೆ ನಾಲ್ಕು ತಿರುಳುಗಳು (ಕ್ವಾಡ್-ಕೋರ್) ಬಂದು ಕುಳಿತುಬಿಟ್ಟಿವೆ!

ಕಂಪ್ಯೂಟರ್ ತಂತ್ರಜ್ಞಾನ ಈ ಪರಿಯ ಬೆಳವಣಿಗೆ ಕಾಣಲಿದೆ ಎಂದು ಬಹಳ ಹಿಂದೆಯೇ ಅನೇಕರು ಸರಿಯಾಗಿ ಊಹಿಸಿದ್ದರು.

ಶುಕ್ರವಾರ, ಏಪ್ರಿಲ್ 5, 2013

ಇಂಟರ್‌ನೆಟ್ ಲೋಕದ ಟ್ರಾಫಿಕ್ ಜಾಮ್


ಟಿ. ಜಿ. ಶ್ರೀನಿಧಿ

ನಮ್ಮ ಬೆಂಗಳೂರಿನ ಟ್ರಾಫಿಕ್ ಜಾಮ್‌ಗಳ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ? ಐಬಿಎಂ ಗ್ಲೋಬಲ್ ಕಮ್ಯೂಟರ್ ಪೇನ್ ಸರ್ವೆ ಪ್ರಕಾರ ದಿನನಿತ್ಯದ ಪ್ರಯಾಣಿಕರು ಅತ್ಯಂತ ಹೆಚ್ಚು ಕಿರಿಕಿರಿ ಅನುಭವಿಸುವ ಪ್ರಪಂಚದ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೂ ಸ್ಥಾನವಿದೆಯಂತೆ.

ಇದೇ ಬೆಂಗಳೂರು ಮಾಹಿತಿ ತಂತ್ರಜ್ಞಾನದ ತವರೂ ಹೌದು. ಇಲ್ಲಿನ ಪುಟ್ಟ ಮಕ್ಕಳೂ ಬಹುಶಃ ಡಾಟ್ ಕಾಮ್ ಭಾಷೆಯನ್ನೇ ಮಾತನಾಡುತ್ತಾರೇನೋ! ಕುತೂಹಲದ ಸಂಗತಿಯೆಂದರೆ ಬೆಂಗಳೂರು ಅಥವಾ ಇನ್ನಾವುದೇ ನಗರದಲ್ಲಿರುವಂತೆ ಅಂತರಜಾಲದ ಲೋಕದಲ್ಲೂ ರಸ್ತೆಗಳಿವೆ; ಅಡ್ಡರಸ್ತೆ-ಮುಖ್ಯರಸ್ತೆ-ರೋಡ್‌ಹಂಪು-ಪಾಟ್‌ಹೋಲು ಎಲ್ಲವೂ ಆನ್‌ಲೈನ್ ಲೋಕದಲ್ಲೂ ಇವೆ. ಆಟೋ ಕಾರು ಬಸ್ಸು ಲಾರಿಗಳ ಬದಲಿಗೆ ಅಲ್ಲಿ ಮಾಹಿತಿ ಹರಿದಾಡುತ್ತದೆ ಎನ್ನುವುದೊಂದೇ ವ್ಯತ್ಯಾಸ ಅಷ್ಟೆ. ಹೀಗಾಗಿಯೇ ಇದನ್ನು 'ಇನ್‌ಫರ್ಮೇಶನ್ ಸೂಪರ್‌ಹೈವೇ' ಎಂದು ಕರೆಯಲಾಗುತ್ತದೆ.

ಕಚೇರಿಗೆ ಹೋಗುವ ಧಾವಂತದಲ್ಲಿ ಹೆಚ್ಚುಹೆಚ್ಚು ಕಾರು-ಬಸ್ಸು-ಬೈಕುಗಳು ರಸ್ತೆಗಿಳಿದಾಗ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಆಗುತ್ತದಲ್ಲ, ಆನ್‌ಲೈನ್ ಪ್ರಪಂಚದಲ್ಲೂ ರಸ್ತೆಗಳಿವೆ ಎನ್ನುವುದಾದರೆ ಅಲ್ಲೂ ಟ್ರಾಫಿಕ್ ಜಾಮ್ ಆಗುವುದು ಸಾಧ್ಯವೆ?

ಗುರುವಾರ, ಏಪ್ರಿಲ್ 4, 2013

ಕಂಪ್ಯೂಟರ್ ಪ್ರಪಂಚ

ಟಿ. ಜಿ. ಶ್ರೀನಿಧಿಯವರ ಹೊಸ ಪುಸ್ತಕ 'ಕಂಪ್ಯೂಟರ್ ಪ್ರಪಂಚ' ನವಕರ್ನಾಟಕ ಪ್ರಕಾಶನದ ಮೂಲಕ ಇದೀಗ ಮಾರುಕಟ್ಟೆಗೆ ಬಂದಿದೆ. 

ಈ ಪುಸ್ತಕದಲ್ಲಿ ಏನಿದೆ? ಹಿರಿಯ ವಿಜ್ಞಾನ ಲೇಖಕ ಶ್ರೀ ಟಿ. ಆರ್. ಅನಂತರಾಮುರವರು ಬರೆದಿರುವ ಮುನ್ನುಡಿಯ ಕೆಲ ಸಾಲುಗಳು ಇಲ್ಲಿವೆ:

"ಕಂಪ್ಯೂಟರ್ ಚರಿತ್ರೆಯಿಂದ ತೊಡಗಿ ಕ್ಯೂಆರ್ ಕೋಡ್‌ವರೆಗೆ ವಿಸ್ತರಿಸಿರುವ `ಕಂಪ್ಯೂಟರ್ ಪ್ರಪಂಚ' ಕಲಿಯಲು ಪ್ರೇರೇಪಿಸುವ ಹೊಸ ಮಾರ್ಗವೊಂದನ್ನು ಅನಾವರಣಗೊಳಿಸಿದೆ. ಬ್ಲಾಗ್ ತೆರೆಯಬೇಕೆ? ಇಮೇಲ್ ಮಾಡಬೇಕೆ? ಇಂಟರ್‌ನೆಟ್ ಬಗ್ಗೆ ಇಣುಕು ನೋಟಬೇಕೆ? ಕುರ್ಚಿಯಲ್ಲಿ ಅಲ್ಲಾಡದೆ ಕುಳಿತು ಕಂಪ್ಯೂಟರ್ ಪ್ರಪಂಚದಲ್ಲಿ ವಿಹರಿಸಲು ನೆರವಾಗುವ ಆತ್ಮೀಯ ಧಾಟಿಯಲ್ಲಿ ನಿಮಗೆ ಇನ್‌ಸ್ಟ್ರಕ್ಷನ್ಸ್‌ಗಳನ್ನು ಕೊಡುವ ಕೃತಿ `ಕಂಪ್ಯೂಟರ್ ಪ್ರಪಂಚ'.

ಖುಷಿಕೊಡುವ ಒಂದು ವಿಚಾರ - ಅನೇಕ ಅಧ್ಯಾಯಗಳಲ್ಲಿ ನಿಮಗೆ ಟಿಪ್ಸ್‌ಗಳಿವೆ. ವಿಶೇಷ ಮಾಹಿತಿಗಳಿವೆ. ಮೌಸ್ ಜನ್ಮತಾಳಿದ್ದು ಯಾವ ಘಳಿಗೆಯಲ್ಲಿ? ಕವಿ ಬೈರನ್ ಮಗಳು - ಅಡ, ಮೊದಲ ಕಂಪ್ಯೂಟರ್ ಪ್ರೋಗ್ರಾಮರ್ ಆದದ್ದು, ಮಾರ್ಕ್ ೨ ಕಂಪ್ಯೂಟರ್ ಪರೀಕ್ಷೆಯಲ್ಲಿ ನಿಜವಾದ ಮೊದಲ ಜೀವಂತ ಬಗ್ ಕಂಡದ್ದು; ಇಂಥ ಅಪರೂಪದ ಕುತೂಹಲಕಾರಿ ಮಾಹಿತಿಗಳಿವೆ."

ದೊಡ್ಡ ಗಾತ್ರದ (೧/೪ ಕ್ರೌನ್) ೧೧೨ ಪುಟಗಳಿರುವ ಈ ಪುಸ್ತಕದ ಬೆಲೆ ರೂ. ೧೨೦.

ಮಂಗಳವಾರ, ಏಪ್ರಿಲ್ 2, 2013

ಸ್ಪಾಮ್ ಅಲ್ಲ, ಇದು ಬೇಕನ್!


ಟಿ. ಜಿ. ಶ್ರೀನಿಧಿ

ಸ್ಪಾಮ್ ಬಗ್ಗೆ ಎಲ್ಲರಿಗೂ ಗೊತ್ತು. ಬೇಡದ ಮಾಹಿತಿಯ ಕಸವನ್ನು ಅನುಮತಿಯಿಲ್ಲದೆ ನಮ್ಮ ಇಮೇಲ್ ಖಾತೆಯೊಳಗೆ ತಂದು ಸುರಿಯುವ ಈ ಕೆಟ್ಟ ಅಭ್ಯಾಸದ ವಿರುದ್ಧ ಇಡೀ ಅಂತರಜಾಲವೇ ಹೋರಾಡುತ್ತಿದೆ ಎಂದರೂ ಸರಿಯೇ. ಸ್ಪಾಮ್ ಸಂದೇಶಗಳನ್ನು ಎಡೆಬಿಡದೆ ಕಳುಹಿಸುವ ಬಾಟ್‌ನೆಟ್‌ಗಳನ್ನು ಹುಡುಕಿ ಮಟ್ಟಹಾಕುವ ಹಾಗೂ ಆ ಬಾಟ್‌ನೆಟ್‌ಗಳು ರಕ್ತಬೀಜಾಸುರರಂತೆ ಮತ್ತೆ ತಲೆಯೆತ್ತುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ.

ಹೀಗಿರುವಾಗ ಇಮೇಲ್ ಲೋಕಕ್ಕೆ ಹೊಸದೊಂದು ಉಪದ್ರವದ ಪ್ರವೇಶವಾಗಿದೆ. ಅತ್ತ ಸ್ಪಾಮ್‌ನಂತೆ ಸಂಪೂರ್ಣ ಅನಪೇಕ್ಷಿತವೂ ಅಲ್ಲದ, ಇತ್ತ ನಾವು ನಿರೀಕ್ಷಿಸುವ ಉಪಯುಕ್ತ ಸಂದೇಶವೂ ಅಲ್ಲದ ಹೊಸಬಗೆಯ ಈ ತಾಪತ್ರಯ ಈಗಾಗಲೇ ಅನೇಕ ಬಳಕೆದಾರರಿಗೆ ಕಿರಿಕಿರಿಮಾಡುತ್ತಿದೆ.

ಇದಕ್ಕೆ ತಜ್ಞರು ಇಟ್ಟಿರುವ ಹೆಸರು ಬೇಕನ್. ಇಂಗ್ಲಿಷಿನಲ್ಲಿ 'ಬಾಡಿಸಿದ ಅಥವಾ ಉಪ್ಪುಹಚ್ಚಿದ ಹಂದಿಯ ಮಾಂಸ' ಎಂದು ಅರ್ಥಕೊಡುವ ಈ ಪದವೇ ಇಮೇಲ್ ಪೆಟ್ಟಿಗೆಯ ಈ ತಾಪತ್ರಯಕ್ಕೆ ನಾಮಕಾರಣವಾಗಿದೆ; ಮೂಲದಿಂದ ಪ್ರತ್ಯೇಕವಾಗಿ ಗುರುತಿಸಲೋ ಏನೋ ಈ ಹೊಸ ಹೆಸರಿನ ಸ್ಪೆಲಿಂಗ್ ಮಾತ್ರ ಕೊಂಚ ಬದಲಾಗಿ bacon ಬದಲು bacn ಆಗಿದೆ ಅಷ್ಟೆ.

ಸ್ಪಾಮ್ ಅಂದರೇನು ಎನ್ನುವುದು ನಮಗೆಲ್ಲ ಗೊತ್ತು. ಯಾವುದೋ ವಿಷಯ ಕುರಿತ ಜಾಹೀರಾತು, ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ನೆರವಾಗುವ ಆಮಿಷ, ಮೋಸದ ಗಾಳ - ಹೀಗೆ ಅಪಾರ ವಿಷಯ ವೈವಿಧ್ಯ ಇಂತಹ ಸಂದೇಶಗಳಲ್ಲಿರುತ್ತದೆ. ಆದರೆ ಈ ಬೇಕನ್ ಅಂದರೇನು?
badge