ಸೋಮವಾರ, ಮಾರ್ಚ್ 7, 2016

ಇಮೇಲ್‌‌ಗೊಂದು ವಿಳಾಸ ಕೊಟ್ಟ ರೇ ಟಾಮ್ಲಿನ್‌ಸನ್

ಟಿ. ಜಿ. ಶ್ರೀನಿಧಿ
ಖ್ಯಾತ ಕಂಪ್ಯೂಟರ್ ತಜ್ಞ ರೇ ಟಾಮ್ಲಿನ್‌ಸನ್ ನಿಧನರಾಗಿದ್ದಾರೆ. ವಿವಿಧ ಮಾಧ್ಯಮಗಳಲ್ಲಿ ಕೇಳಿಬರುತ್ತಿರುವ ಅವರ ನಿಧನವಾರ್ತೆಯಲ್ಲಿ ಅವರನ್ನು "ಇಮೇಲ್ ಸೃಷ್ಟಿಕರ್ತ" ಎಂದು ಗುರುತಿಸುತ್ತಿರುವುದನ್ನೂ ನಾವು ನೋಡುತ್ತಿದ್ದೇವೆ.
ಇಮೇಲ್ ತಂತ್ರಜ್ಞಾನದ ವಿಕಾಸದಲ್ಲಿ ಬಹು ಮಹತ್ವದ ಪಾತ್ರ ವಹಿಸಿದ್ದವರು ಟಾಮ್ಲಿನ್‌ಸನ್. ಆದರೆ ಅವರು ಇಮೇಲ್ ಸೃಷ್ಟಿಕರ್ತರೇನೂ ಆಗಿರಲಿಲ್ಲ. ಹಾಗಾದರೆ ಇಮೇಲ್ ತಂತ್ರಜ್ಞಾನಕ್ಕೆ ಹೊಸ ತಿರುವು ಕೊಟ್ಟ ಅವರ ಸಾಧನೆ ಏನು? ಅಗಲಿದ ಹಿರಿಯರಿಗೆ 
ಈ ಲೇಖನದ ಮೂಲಕ  ನಮ್ಮ ಶ್ರದ್ಧಾಂಜಲಿ...
ಇಮೇಲ್ ಕಂಡುಹಿಡಿದದ್ದು ಯಾರು? ಕಂಪ್ಯೂಟರ್ ಪ್ರಪಂಚದಲ್ಲಿ ಕೇಳಸಿಗುವ ಅನೇಕ ಉತ್ತರವಿಲ್ಲದ ಪ್ರಶ್ನೆಗಳಲ್ಲಿ ಇದೂ ಒಂದು.

ಹೌದು, ಇಮೇಲ್ ತಂತ್ರಜ್ಞಾನವನ್ನು ಯಾರೋ ಒಬ್ಬ ವಿಜ್ಞಾನಿ ಯಾವುದೋ ಒಂದು ದಿನ ಇದ್ದಕ್ಕಿದ್ದಂತೆ ಕಂಡುಹಿಡಿಯಲಿಲ್ಲ; ಕಂಪ್ಯೂಟರ್ ಲೋಕದ ಅದೆಷ್ಟೋ ಆವಿಷ್ಕಾರಗಳಂತೆ ಸಾಕಷ್ಟು ದೀರ್ಘವಾದ ಅವಧಿಯಲ್ಲಿ ಅನೇಕ ತಂತ್ರಜ್ಞರ ಶ್ರಮದಿಂದ ವಿಕಾಸವಾದ ತಂತ್ರಜ್ಞಾನ ಅದು.

ಆದರೆ ಇಮೇಲ್ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದ ಅನೇಕ ಸಂಗತಿಗಳಿವೆ - ಇಮೇಲ್ ವಿಳಾಸಗಳಲ್ಲಿ @ ಚಿಹ್ನೆಯ ಬಳಕೆ ಪ್ರಾರಂಭವಾದದ್ದು ಇಂತಹ ಮೈಲಿಗಲ್ಲುಗಳಲ್ಲಿ ಅತ್ಯಂತ ಮಹತ್ವಪೂರ್ಣವಾದದ್ದು.

ಭಾನುವಾರ, ಮಾರ್ಚ್ 6, 2016

ಅಗ್ರಮಾನ್ಯ ಅಗ್ರಿಬ್ರಹ್ಮ ಡಾ. ಎಸ್. ಡಬ್ಲ್ಯು. ಮೆಣಸಿನಕಾಯಿ

ವಿಜ್ಞಾನಿಗಳ ಸಾಧನೆ ಕುರಿತು ಓದುವುದು ಕುತೂಹಲ ಹುಟ್ಟಿಸುವ ವಿಷಯ. ವಿಜ್ಞಾನಿಗಳ ಬದುಕಿನ ಬಗ್ಗೆ ತಿಳಿದುಕೊಳ್ಳುವುದು ಇನ್ನೂ ವಿಶಿಷ್ಟವಾದ ಅನುಭವ. ಅದರಲ್ಲೂ ವಿಜ್ಞಾನಿಯ - ಅವರ ಸಾಧನೆಯ ಬಗ್ಗೆ ಮೊದಲು ಕೇಳಿಯೇ ಇಲ್ಲದಿದ್ದರಂತೂ ಈ ಅನುಭವ ಇನ್ನೂ ವಿಶೇಷವಾಗಿರುತ್ತದೆ.

ಇಂತಹ ವಿಶೇಷ ಅನುಭವ ನೀಡುವ ಪುಸ್ತಕ 'ಸಂಗಮಾದರ್ಶ'. ಖ್ಯಾತ ಕೃಷಿವಿಜ್ಞಾನಿ ಡಾ. ಸಂಗಮನಾಥ ವಿರೂಪಾಕ್ಷ ಮೆಣಸಿನಕಾಯಿಯವರ ಜೀವನ ಚಿತ್ರಣ ನೀಡುವ ಈ ಕೃತಿಯನ್ನು ಮತ್ತೊಬ್ಬ ಕೃಷಿವಿಜ್ಞಾನಿ ಡಾ. ಶರಣಬಸವೇಶ್ವರ ಅಂಗಡಿಯವರು ಬರೆದಿದ್ದಾರೆ. ಅಸಾಧಾರಣ ಕೃಷಿವಿಜ್ಞಾನಿ ಹಾಗೂ ಶಿಕ್ಷಣತಜ್ಞರಾಗಿದ್ದ ಸಂಗಮನಾಥ ಮೆಣಸಿನಕಾಯಿಯವರು ಧಾರವಾಡ ಕೃಷಿ ಕಾಲೇಜು - ವಿಶ್ವವಿದ್ಯಾಲಯಗಳ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದರು.

ಸೋಮವಾರ, ಫೆಬ್ರವರಿ 29, 2016

ಕೆ. ಪಿ. ರಾಯರಿಗೆ ಹ್ಯಾಪಿ ಬರ್ತ್‌ಡೇ!

ಕಂಪ್ಯೂಟರಿಗೆ ಕನ್ನಡ ಕಲಿಸಿದ ಮೇಷ್ಟರು ಶ್ರೀ ಕೆ. ಪಿ. ರಾಯರಿಗೆ ಹ್ಯಾಪಿ ಬರ್ತ್‌ಡೇ ಹೇಳುವ ಅವಕಾಶ ನಮಗೆ ಸಿಗುವುದು ನಾಲ್ಕು ವರ್ಷಕ್ಕೊಮ್ಮೆ. ಇವತ್ತು (ಫೆ. ೨೯, ೨೦೧೬) ಅಂತಹ ಅವಕಾಶಗಳಲ್ಲೊಂದು ನಮ್ಮ ಪಾಲಿಗೆ ಸಿಕ್ಕಿದೆ. ಇಜ್ಞಾನದಲ್ಲಿ ಈ ಹಿಂದೆ ಪ್ರಕಟವಾಗಿದ್ದ ಕೆ. ಪಿ. ರಾವ್ ಜೀವನ-ಸಾಧನೆ ಕುರಿತ ಲೇಖನವನ್ನು ಈ ಸಂದರ್ಭದಲ್ಲಿ ಖುಷಿಯಿಂದ ಮರುಪ್ರಕಟಿಸುತ್ತಿದ್ದೇವೆ.

ಟಿ. ಜಿ. ಶ್ರೀನಿಧಿ

ಕಂಪ್ಯೂಟರಿನಲ್ಲಿರಲಿ, ಮೊಬೈಲ್-ಟ್ಯಾಬ್ಲೆಟ್ಟುಗಳಲ್ಲಿರಲಿ ಕನ್ನಡ ಸರಾಗವಾಗಿ ಮೂಡುವುದು ನಮ್ಮ ಪಾಲಿಗೆ ಹೊಸ ವಿಷಯವೇನೂ ಅಲ್ಲ. 
ಆದರೆ ಕೆಲ ದಶಕಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಕಂಪ್ಯೂಟರುಗಳೇ ಅಪರೂಪವಾಗಿದ್ದ ಆ ಕಾಲದಲ್ಲಿ ಕಂಪ್ಯೂಟರ್ ಬಳಸಬೇಕು ಎಂದರೆ ಇಂಗ್ಲಿಷ್ ಗೊತ್ತಿರಲೇಬೇಕು ಎನ್ನುವಂತಹ ಪರಿಸ್ಥಿತಿ ಇತ್ತು. 

ಫೋನಿನಲ್ಲಿ ಕನ್ನಡ ಓದಬಹುದು, ಕನ್ನಡ ಟೈಪುಮಾಡುವುದೂ ಸುಲಭ ಎಂದೆಲ್ಲ ವಿವರಿಸುವ ನಮಗೆ ಕಂಪ್ಯೂಟರ್ ಪ್ರಪಂಚದಲ್ಲಿ ಕನ್ನಡವೇ ಕಾಣಸಿಗದಿದ್ದ ದಿನಗಳನ್ನು ಊಹಿಸುವುದೇ ಕಷ್ಟ, ಅಲ್ಲವೆ?

ಅಂತಹ ದಿನಗಳಲ್ಲೂ ಕಂಪ್ಯೂಟರ್ ಪ್ರಪಂಚದಲ್ಲಿ ಸಕ್ರಿಯರಾಗಿದ್ದ ಕನ್ನಡದ ಭಗೀರಥರು ತಮ್ಮ ಅದಮ್ಯ ಉತ್ಸಾಹದಿಂದ ಕಂಪ್ಯೂಟರಿಗೂ ಅ-ಆ-ಇ-ಈ ಹೇಳಿಕೊಟ್ಟರು; ಡಿಜಿಟಲ್ ಲೋಕದಲ್ಲಿ ಕನ್ನಡ ಹುಲುಸಾಗಿ ಬೆಳೆಯಲು ಕಾರಣರಾದರು.

ಇಂಗ್ಲಿಷ್ ನಾಡಿನಿಂದ ಬಂದ ಕಂಪ್ಯೂಟರ್, ಇಂತಹ ಮೇಷ್ಟರೊಬ್ಬರ ನೆರವಿನಿಂದ ಕನ್ನಡ ಕಲಿತ ಕತೆ ಇಲ್ಲಿದೆ.

ಭಾನುವಾರ, ಫೆಬ್ರವರಿ 28, 2016

ರಾಷ್ಟ್ರೀಯ ವಿಜ್ಞಾನ ದಿನ

ಪ್ರತಿ ವರ್ಷ ಫೆಬ್ರವರಿ ೨೮ನೇ ದಿನಾಂಕವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ. ವಿಜ್ಞಾನ ಹಾಗೂ ನಮ್ಮ ಜೀವನದಲ್ಲಿ ಅದರ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ರಾಷ್ಟ್ರೀಯ ವಿಜ್ಞಾನ ದಿನ ಆಚರಣೆಯ ಉದ್ದೇಶ. ಉಪನ್ಯಾಸಗಳು, ಚರ್ಚಾಸ್ಪರ್ಧೆಗಳು, ರಸಪ್ರಶ್ನೆ, ವಸ್ತುಪ್ರದರ್ಶನ - ಹೀಗೆ ಅನೇಕ ಚಟುವಟಿಕೆಗಳನ್ನು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಂದರ್ಭದಲ್ಲಿ ದೇಶದ ವಿವಿಧೆಡೆ ಹಮ್ಮಿಕೊಳ್ಳಲಾಗುತ್ತದೆ. ಈ ಸಂದರ್ಭದಲ್ಲಿ  ರಾಷ್ಟ್ರೀಯ ವಿಜ್ಞಾನ ದಿನದ ಮಹತ್ವ ಕುರಿತ ಸಣ್ಣದೊಂದು ಲೇಖನ ಇಲ್ಲಿದೆ.
ಟಿ. ಜಿ. ಶ್ರೀನಿಧಿ

ಭಾರತದ ಹೆಮ್ಮೆಯ ವಿಜ್ಞಾನಿ ಸರ್ ಸಿ ವಿ ರಾಮನ್ ಅವರ ಅಪೂರ್ವ ಸಾಧನೆಯ ನೆನಪಿನಲ್ಲಿ ಈ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನ ಎಂದು ಗುರುತಿಸಲಾಗಿದೆ. ಅವರು ೧೯೨೮ರ ಫೆಬ್ರವರಿ ೨೮ರಂದು 'ರಾಮನ್ ಇಫೆಕ್ಟ್' ಎಂದೇ ಪ್ರಸಿದ್ಧವಾದ ತಮ್ಮ ಅಧ್ಯಯನದ ವಿವರಗಳನ್ನು ಜಗತ್ತಿಗೆ ತಿಳಿಸಿದ್ದರು.

ವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಏಷ್ಯಾದ ಮೊತ್ತಮೊದಲ ವಿಜ್ಞಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಸಿ ವಿ ರಾಮನ್ ಅವರ ಪೂರ್ಣ ಹೆಸರು ಚಂದ್ರಶೇಖರ ವೆಂಕಟರಾಮನ್ ಎಂದು. ಅವರು ಜನಿಸಿದ್ದು ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ, ೧೮೮೮ರ ನವೆಂಬರ್ ೭ರಂದು. ಅವರ ತಂದೆ ಚಂದ್ರಶೇಖರ ಅಯ್ಯರ್ ಗಣಿತ ಹಾಗೂ ಭೌತವಿಜ್ಞಾನದ ಶಿಕ್ಷಕರಾಗಿದ್ದರು. ನೋಬೆಲ್ ಪ್ರಶಸ್ತಿ ಪಡೆದ ಮತ್ತೋರ್ವ ವಿಜ್ಞಾನಿ ಸುಬ್ರಹ್ಮಣ್ಯಂ ಚಂದ್ರಶೇಖರ್ ಅವರು ಸಿ ವಿ ರಾಮನರ ಸ್ವಂತ ಅಣ್ಣನ ಮಗ.

ಗುರುವಾರ, ಫೆಬ್ರವರಿ 25, 2016

ಜೆನ್‌ಫೋನ್ ಮ್ಯಾಕ್ಸ್: ಮೊಬೈಲೂ ಹೌದು, ಪವರ್‌ಬ್ಯಾಂಕೂ ಹೌದು!

ಟಿ. ಜಿ. ಶ್ರೀನಿಧಿ


ಮೊಬೈಲ್ ಫೋನುಗಳು ಸ್ಮಾರ್ಟ್ ಆಗಿ ಕೆಲ ವರ್ಷ ಕಳೆದಿವೆಯಲ್ಲ, ಈ ಅವಧಿಯಲ್ಲಿ ಏನೆಲ್ಲ ಬದಲಾಗಿದೆ: ಕರೆ ಮಾಡಲು ಮತ್ತು ಎಸ್ಸೆಮ್ಮೆಸ್ ಕಳುಹಿಸಲಷ್ಟೆ ಸೀಮಿತವಾಗಿದ್ದ ಮೊಬೈಲುಗಳು ಇದೀಗ ಅಂಗೈ ಮೇಲಿನ ಕಂಪ್ಯೂಟರುಗಳೇ ಆಗಿಹೋಗಿವೆ. ಹೊಸ ಮಾದರಿಗಳು ಮಾರುಕಟ್ಟೆಗೆ ಬಂದಂತೆಲ್ಲ ಮೊಬೈಲಿನಲ್ಲಿ ಸಿಗುವ ಸೌಲಭ್ಯಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಅದರ ಜೊತೆಗೆ ಮೊಬೈಲುಗಳ ಬೆಲೆಯೂ ಕಡಿಮೆಯಾಗುತ್ತಿದೆ. ಕಳೆದ ವರ್ಷದ 'ಟಾಪ್-ಎಂಡ್' ಮಾಡೆಲಿನಲ್ಲಿ ದೊರಕುತ್ತಿದ್ದ ಸೌಲಭ್ಯ ಈ ವರ್ಷದ 'ಬಜೆಟ್' ಫೋನಿಗೇ ಸೇರಿರುವುದು ಇದೀಗ ಸರ್ವೇಸಾಮಾನ್ಯ.

ಅಂದಹಾಗೆ ಕಡಿಮೆಯಾಗುತ್ತಿರುವುದು ಮೊಬೈಲಿನ ಬೆಲೆಯಷ್ಟೇ ಅಲ್ಲ: ಪ್ರತಿ ಚಾರ್ಜಿನ ನಂತರ ಫೋನಿನ ಬ್ಯಾಟರಿ ಬಾಳಿಕೆಬರುವ ಸಮಯವೂ ಗಣನೀಯವಾಗಿ ಕಡಿಮೆಯಾಗಿದೆ.

ಮಂಗಳವಾರ, ಫೆಬ್ರವರಿ 23, 2016

ಮಾಹಿತಿ ತಂತ್ರಜ್ಞಾನ ಮತ್ತು ಬೆಂಗಳೂರು

ಟಿ. ಜಿ. ಶ್ರೀನಿಧಿ


ಜನಸಾಮಾನ್ಯರಿಗೆ ಮಾಹಿತಿ ತಂತ್ರಜ್ಞಾನದ ಪರಿಚಯವಾಗಿ ಹೆಚ್ಚು ಸಮಯವಾಗಿಲ್ಲ ಎನ್ನುವುದೇನೋ ನಿಜ. ಆದರೆ ಕಂಪ್ಯೂಟರ್ ವಿಜ್ಞಾನ ಹಾಗೂ ನಮ್ಮ ದೇಶದ ನಂಟು ಸಾಕಷ್ಟು ಹಳೆಯದು. ಭಾರತದ ವೈಜ್ಞಾನಿಕ ಕಾರ್ಯಕ್ರಮಗಳಿಗೆ ಭದ್ರ ಬುನಾದಿ ಹಾಕಿಕೊಟ್ಟ ಹೋಮಿ ಭಾಭಾರಂತಹ ದಾರ್ಶನಿಕರ ಪ್ರಯತ್ನಗಳನ್ನು ಇದರ ಹಿನ್ನೆಲೆಯಲ್ಲಿ ನಾವು ಕಾಣಬಹುದು. ಭಾರತದಲ್ಲಿ ಕಂಪ್ಯೂಟರ್ ವಿಜ್ಞಾನ ಕ್ಷೇತ್ರದ ಭೀಷ್ಮಪಿತಾಮಹ ಪ್ರೊ. ಆರ್. ನರಸಿಂಹನ್ ನೇತೃತ್ವದಲ್ಲಿ ನಮ್ಮ ಮೊದಲ ಕಂಪ್ಯೂಟರ್ TIFRAC ಸೃಷ್ಟಿಯ ಕೆಲಸ ೧೯೫೦ರ ದಶಕದಲ್ಲೇ ಪ್ರಾರಂಭವಾಗಿತ್ತು.

ಶುಕ್ರವಾರ, ಫೆಬ್ರವರಿ 19, 2016

ಸರ್ವಾಂತರ್ಯಾಮಿ ಯುಎಸ್‌ಬಿ

ಟಿ. ಜಿ. ಶ್ರೀನಿಧಿ

ಒಂದು ಕಾಲವಿತ್ತು, ಆಗ ಕಂಪ್ಯೂಟರಿನ ಪ್ರತಿಯೊಂದು ಪರಿಕರವನ್ನೂ ಬೇರೆಬೇರೆ ರೀತಿಯಲ್ಲಿ ಜೋಡಿಸಬೇಕಿತ್ತು. ಪ್ರಿಂಟರುಗಳಿಗೆ ಪ್ಯಾರಲಲ್ ಪೋರ್ಟಿನ ಸಂಪರ್ಕ, ಮೋಡೆಮ್‌ಗೆ ಸೀರಿಯಲ್ ಪೋರ್ಟಿನ ಸಂಪರ್ಕವೆಲ್ಲ ಆಗ ಸರ್ವೇಸಾಮಾನ್ಯವಾಗಿತ್ತು. ನಿರ್ದಿಷ್ಟ ಬಗೆಯ ಪೋರ್ಟ್‌ಗಳು ಇರುತ್ತಿದ್ದದ್ದೇ ಒಂದೋ ಎರಡೋ, ಅವು ಮುಗಿದ ಮೇಲೆ ಬೇರೊಂದು ಪರಿಕರವನ್ನು ಸಂಪರ್ಕಿಸುವುದೆಂದರೆ ಅದೊಂದು ತಲೆನೋವಿನ ಸಂಗತಿಯೇ ಆಗಿತ್ತು.

ಕಂಪ್ಯೂಟರಿನ ಮಾತು ಹಾಗಿರಲಿ, ಮೊಬೈಲ್ ಫೋನುಗಳ ಹಣೆಬರಹವೂ - ತೀರಾ ಇತ್ತೀಚಿನವರೆಗೆ - ಹೀಗೆಯೇ ಇತ್ತು: ಸೋನಿ ಎರಿಕ್ಸನ್ನಿನ ಕೇಬಲ್ಲು ನೋಕಿಯಾಗೆ ಆಗಿಬರದು, ಸ್ಯಾಮ್‌ಸಂಗ್‌ನದು ಮೋಟರೋಲಾಗೆ ಸರಿಹೊಂದದು. ಒಂದೊಂದು ಫೋನಿಗೆ ಒಂದೊಂದು ಬಗೆಯ ಕೇಬಲ್ ಸಂಪರ್ಕ, ಪ್ರತಿಯೊಂದಕ್ಕೂ ಬೇರೆಬೇರೆ ಚಾರ್ಜರ್!

ಇಷ್ಟೆಲ್ಲ ತಲೆನೋವನ್ನು ಬಹುಮಟ್ಟಿಗೆ ತಪ್ಪಿಸಿದ ಶ್ರೇಯ ಒಂದು ಮಾನಕಕ್ಕೆ (ಸ್ಟಾಂಡರ್ಡ್) ಸಲ್ಲಬೇಕು.

ಬುಧವಾರ, ಫೆಬ್ರವರಿ 17, 2016

ರೂ. ೨೫೧ಕ್ಕೆ ಮೊಬೈಲ್ ಫೋನ್!

ಇಜ್ಞಾನ ವಾರ್ತೆ


ರಿಂಗಿಂಗ್ ಬೆಲ್ಸ್ ಎಂಬ ನೋಯ್ಡಾ ಮೂಲದ ಮೊಬೈಲ್ ತಯಾರಿಕಾ ಸಂಸ್ಥೆ 'ಫ್ರೀಡಂ ೨೫೧' ಎಂಬ ಹೊಸ ಮೊಬೈಲ್ ಫೋನನ್ನು ಪರಿಚಯಿಸಿದ್ದು ಅದನ್ನು ರೂ. ೨೫೧ಕ್ಕೆ ಮಾರುತ್ತೇನೆಂದು ಹೇಳುವ ಮೂಲಕ ಸಂಚಲನವನ್ನೇ ಸೃಷ್ಟಿಸಿದೆ. ೧.೩ ಗಿಗಾಹರ್ಟ್ಸ್‌ನ ಪ್ರಾಸೆಸರ್, ನಾಲ್ಕು ಇಂಚಿನ ಸ್ಪರ್ಶಸಂವೇದಿ ಪರದೆ, ೧ ಜಿಬಿ ರ್‍ಯಾಮ್, ೮ ಜಿಬಿ ಶೇಖರಣಾ ಸಾಮರ್ಥ್ಯ, ೩.೨ ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹಾಗೂ ೦.೩ ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾಗಳಿರುವ ಈ ಫೋನಿನ ಮುಂಗಡ ಬುಕಿಂಗ್ ನಾಳೆ (ಫೆಬ್ರುವರಿ ೧೮, ೨೦೧೬) ಬೆಳಿಗ್ಗೆ ೬ರಿಂದ ಶುರುವಾಗಲಿದೆಯಂತೆ.

ಮಂಗಳವಾರ, ಫೆಬ್ರವರಿ 16, 2016

ಮಕ್ಕಳಿಗೊಂದು ಅರಿವಿನ ವೇದಿಕೆ

ರಂಗಸ್ವಾಮಿ ಮೂಕನಹಳ್ಳಿ

ಬೆಂಗಳೂರಿನ ವಸಂತ ಪ್ರಕಾಶನ ಸಂಸ್ಥೆ 'ಪುಸ್ತಕ ಮಹಲ್ ' ಪ್ರಕಾಶನ ಸಂಸ್ಥೆಯ ಸಹಭಾಗಿತ್ವದಲ್ಲಿ  'ಮಕ್ಕಳ ಜ್ಞಾನಕೋಶ'ವನ್ನು ನಾಲ್ಕು ಸಂಪುಟಗಳಲ್ಲಿ ಹೊರತರಲಿದೆ. ಆ ಪೈಕಿ ಮೊದಲೆರಡು ಸಂಪುಟಗಳು ಇದೀಗ ಮಾರುಕಟ್ಟೆಗೆ ಬಂದಿದ್ದು, ಉಳಿದೆರಡು ಸದ್ಯದಲ್ಲೇ ಸಹೃದಯರ ಕೈಸೇರಲಿದೆ .

ಮಂಜುಗಡ್ಡೆ ನೀರಿನ ಮೇಲೆ ಏಕೆ ತೇಲುತ್ತದೆ? ನಾಲಿಗೆಗೆ ರುಚಿ ಹೇಗೆ ತಿಳಿಯುತ್ತದೆ? ಆಹಾರವಿಲ್ಲದೆ ಮನಷ್ಯ ಎಷ್ಟು ದಿನ ಬದುಕಿರಬಹುದು? ಶುಷ್ಕ ಹಿಮ ಎಂದರೇನು? ವಿಶ್ವವು ಹೇಗೆ ಆಸ್ತಿತ್ವಕ್ಕೆ ಬಂತು? ಇಂಗ್ಲಿಷ್ ಭಾಷೆ ಹೇಗೆ ಜನ್ಮ ತಾಳಿತು? ನಮಗೇಕೆ ಜ್ವರ ಬರುತ್ತದೆ? ಜನ ಮೊದಲು ಹಣವನ್ನು ಬಳಸಿದ್ದು ಯಾವಾಗ? ಪೈ ಏಕೆ ವಿಶಿಷ್ಟ ಸಂಖ್ಯೆ? - ಹೀಗೆ ವಿಜ್ಞಾನ  ತಂತ್ರಜ್ಞಾನ, ಸಸ್ಯ, ಪ್ರಾಣಿ, ವಿಶ್ವ, ಅಂತರಿಕ್ಷ, ವೈದ್ಯಕೀಯ, ಪ್ರಕೃತಿ ಪರಿಸರ, ವ್ಯಕ್ತಿ, ಅನ್ವೇಷಣೆ ಎಲ್ಲವನ್ನೂ ಕುರಿತು ಮಕ್ಕಳ ಮನದಲ್ಲಿ ಮೂಡಬಹುದಾದ ಎಲ್ಲಾ ರೀತಿಯ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ.

ಗುರುವಾರ, ಫೆಬ್ರವರಿ 11, 2016

ಫೆಬ್ರುವರಿ ೧೧-೧೨: ಮೋಟೊರೋಲಾ ಫೋನುಗಳ ಮೇಲೆ ವಿಶೇಷ ರಿಯಾಯಿತಿ


ಲೆನೋವೋ ಜೊತೆಸೇರಿ ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಮೂರನೆಯ ಸ್ಥಾನ ಪಡೆದಿರುವ ಮೋಟೊರೋಲಾ ಫೋನುಗಳ ಮೇಲೆ ಫ್ಲಿಪ್‌ಕಾರ್ಟ್ ವಿಶೇಷ ರಿಯಾಯಿತಿಗಳನ್ನು ಘೋಷಿಸಿದೆ.

ಈ ಕೊಡುಗೆ ಮೋಟೊರೋಲಾ ಫೋನುಗಳು (ಮೋಟೋ ಇ೨, ಮೋಟೋ ಜಿ೩, ಮೋಟೋ ಜಿ ಟರ್ಬೋ, ಮೋಟೋ ಎಕ್ಸ್ - ಪ್ಲೇ, ಸ್ಟೈಲ್ ಹಾಗೂ ಫೋರ್ಸ್) ಹಾಗೂ ಸ್ಮಾರ್ಟ್‌ವಾಚುಗಳಿಗೆ (ಮೋಟೋ ೩೬೦ ೨ನೇ ತಲೆಮಾರು) ಅನ್ವಯಿಸುತ್ತದೆ.

ಮಂಗಳವಾರ, ಫೆಬ್ರವರಿ 9, 2016

ಎಲ್‌ಇಡಿ ಬೆಳಗೋಣ ಬನ್ನಿ!

ಇಜ್ಞಾನ ವಾರ್ತೆ

ಸಂಪನ್ಮೂಲಗಳನ್ನು ಜವಾಬ್ದಾರಿಯುತವಾಗಿ ಬಳಸುವ ಅಗತ್ಯ ಈಗ ಹಿಂದೆಂದಿಗಿಂತಲೂ ಹೆಚ್ಚಿದೆ. ಈ ನಿಟ್ಟಿನಲ್ಲಿ ಕೆಲವು ಸರಳ ಆದರೂ ಪರಿಣಾಮಕಾರಿಯಾದ ಕ್ರಮಗಳನ್ನು ನಾವೂ ಕೈಗೊಳ್ಳಬಹುದು. ವಿದ್ಯುತ್ ಬಳಕೆಯನ್ನು ಮಿತಗೊಳಿಸುವುದು ಇಂತಹ ಕ್ರಮಗಳಲ್ಲೊಂದು. ಇದನ್ನು ಸಾಧ್ಯವಾಗಿಸುವ ಒಂದು ಮಾರ್ಗ ಎಲ್‌ಇಡಿ ಬಲ್ಬುಗಳ ಬಳಕೆ [ಎಲ್ಲೆಲ್ಲೂ ಎಲ್‌ಇಡಿ]. ಎಲ್‌ಇಡಿ ಬಲ್ಬುಗಳು ಹೆಚ್ಚಿನ ಪ್ರಕಾಶ ನೀಡುವುದಷ್ಟೇ ಅಲ್ಲ, ಕಡಿಮೆ ವಿದ್ಯುತ್ ಬಳಸುವ ಮೂಲಕ ಜೇಬಿನ ಮೇಲಿನ ಒತ್ತಡವನ್ನೂ ಕಡಿಮೆಮಾಡುತ್ತವೆ!

ಈ ವಿಷಯ ಗೊತ್ತಿದ್ದರೂ ಎಲ್‌ಇಡಿ ಬಲ್ಬುಗಳ ದುಬಾರಿ ಬೆಲೆಯಿಂದಾಗಿ ಅನೇಕರು ಅವುಗಳಿಂದ ದೂರವೇ ಉಳಿದಿದ್ದರು. ಈಗ, ಕೇಂದ್ರ ಸರಕಾರದ 'ಡೊಮೆಸ್ಟಿಕ್ ಎಫೀಶಿಯೆಂಟ್ ಲೈಟಿಂಗ್ ಪ್ರೋಗ್ರಾಮ್ (ಡಿಇಎಲ್‌ಪಿ)' ದೆಸೆಯಿಂದ ಎಲ್‌ಇಡಿ ಬಲ್ಬುಗಳ ಬೆಲೆ ಕೈಗೆಟುಕುವ ಮಟ್ಟಕ್ಕೆ ಬಂದು ತಲುಪಿದೆ. ಈ ಕಾರ್ಯಕ್ರಮದನ್ವಯ ಒಂಬತ್ತು ವ್ಯಾಟ್‌ನ ಎಲ್‌ಇಡಿ ಬಲ್ಬುಗಳನ್ನು ತಲಾ ನೂರು ರೂಪಾಯಿಯಂತೆ ಬಳಕೆದಾರರಿಗೆ ತಲುಪಿಸಲಾಗುತ್ತಿದೆ. ಅದೂ ಅಂತಿಂಥ ಚೀನಾ ಮಾಲಲ್ಲ, ಹೆಸರಾಂತ ಸಂಸ್ಥೆಗಳು ತಯಾರಿಸುವ ಬಲ್ಬನ್ನೇ!

ಈ ಯೋಜನೆಯ ಹಿಂದಿರುವುದು ಭಾರತ ಸರಕಾರದ ಎನರ್ಜಿ ಎಫಿಶಿಯೆನ್ಸಿ ಸರ್ವೀಸಸ್ ಲಿಮಿಟೆಡ್ (ಇಇಎಸ್ಎಲ್) ಎಂಬ ಸಂಸ್ಥೆ.

ಶನಿವಾರ, ಜನವರಿ 30, 2016

ಜೆನ್‌ಫೋನ್ ಜೂಮ್: ಡಿಜಿಟಲ್ ಕ್ಯಾಮೆರಾಗೆ ಮೊಬೈಲಿನ ಸವಾಲು

ಟಿ. ಜಿ. ಶ್ರೀನಿಧಿ


ಮೊಬೈಲ್ ಕ್ಯಾಮೆರಾ ಮಾಯಾಜಾಲದ ಕುರಿತು ಇಜ್ಞಾನದಲ್ಲಿ ಈ ಹಿಂದೆ ಪ್ರಕಟವಾದ ಲೇಖನ ನಿಮಗೆ ನೆನಪಿರಬಹುದು. "ಮೊಬೈಲ್ ಫೋನ್ ಬಂದ ಮೇಲೆ ತಮ್ಮ ಮಹತ್ವ ಕಳೆದುಕೊಂಡ ಸಾಧನಗಳ ಪೈಕಿ ಡಿಜಿಟಲ್ ಕ್ಯಾಮೆರಾಗೆ ಪ್ರಮುಖ ಸ್ಥಾನ" ಎನ್ನುವ ಅಂಶಕ್ಕೆ ಆ ಲೇಖನದಲ್ಲಿ ಒತ್ತು ಕೊಡಲಾಗಿತ್ತು.

ಈಗ ಮಾರುಕಟ್ಟೆಗೆ ಬರುತ್ತಿರುವ ಹೊಸ ಮೊಬೈಲುಗಳನ್ನು ನೋಡಿದರೆ ಈ ಅಂಶ ಇನ್ನಷ್ಟು ಸ್ಪಷ್ಟವಾಗುತ್ತ ಹೋಗುತ್ತದೆ. ಏಕೆಂದರೆ ಡಿಜಿಟಲ್ ಕ್ಯಾಮೆರಾಗಳಿಗೆ ಪೂರಕವಾಗಿ ರೂಪುಗೊಂಡ ಮೊಬೈಲ್ ಕ್ಯಾಮೆರಾಗಳು ಇದೀಗ ಅವುಗಳಿಗೆ ಸಶಕ್ತ ಪರ್ಯಾಯವಾಗಿಯೂ ಬೆಳೆಯುತ್ತಿವೆ.

ಈ ಅನಿಸಿಕೆಗೆ ಪುಷ್ಟಿಕೊಡುವಂತಹ ವಿಶಿಷ್ಟ ಮೊಬೈಲ್ ದೂರವಾಣಿಯೊಂದು ಇದೀಗ ಬಂದಿದೆ. ಏಸಸ್ ಸಂಸ್ಥೆ ರೂಪಿಸಿರುವ 'ಜೆನ್‌ಫೋನ್ ಜೂಮ್' ಎಂಬ ಈ ಮೊಬೈಲ್ ೨೦೧೬ರ ಜನವರಿ ೨೨ರಂದು ಆಗ್ರಾದಲ್ಲಿ ನಡೆದ ಕಾರ್ಯಕ್ರಮದ ಮೂಲಕ ಅಧಿಕೃತವಾಗಿ ಭಾರತೀಯ ಮಾರುಕಟ್ಟೆ ಪ್ರವೇಶಿಸಿತು. ಈ ಸಾಧನದ ಪರಿಚಯ ಇಗೋ ಇಲ್ಲಿದೆ ನಿಮಗಾಗಿ!

ಮಂಗಳವಾರ, ಜನವರಿ 26, 2016

ಜಾಲಲೋಕದಲ್ಲಿ ಸುಳ್ಳುಗಳ ಜಾಲ

ಟಿ. ಜಿ. ಶ್ರೀನಿಧಿ

ಇದು ಮಾಹಿತಿಯ ಯುಗ. ಎಲ್ಲ ಕಡೆಗಳಿಂದ ಎಲ್ಲ ಸಮಯದಲ್ಲೂ ನಮ್ಮತ್ತ ಮಾಹಿತಿಯ ಮಹಾಪೂರವೇ ಹರಿದು ಬರುತ್ತಿರುತ್ತದೆ.

ಒಂದು ನಿಮಿಷದ ಅವಧಿ ಬಹಳಷ್ಟು ಸಂದರ್ಭಗಳಲ್ಲಿ ನಮಗೆ ಕ್ಷುಲ್ಲಕವೆಂದು ತೋರುತ್ತದಲ್ಲ, ಇಷ್ಟೇ ಸಮಯ ಮಾಹಿತಿಯ ಲೋಕದಲ್ಲಿ ಅದೆಷ್ಟೋ ಚಟುವಟಿಕೆಗಳಿಗೆ ಸಾಕ್ಷಿಯಾಗಿರುತ್ತದೆ. ಫೇಸ್‌ಬುಕ್ ಗೋಡೆಯ ಮೇಲೆ ಒಂದು ನಿಮಿಷದ ಅವಧಿಯಲ್ಲಿ ಅದೆಷ್ಟೋ ಸಾವಿರ ಹೊಸ ಪೋಸ್ಟುಗಳು ಕಾಣಿಸಿಕೊಳ್ಳುತ್ತವೆ, ಹತ್ತಾರು ಲಕ್ಷ ಲೈಕುಗಳು ದಾಖಲಾಗುತ್ತವೆ. ಲಕ್ಷಗಟ್ಟಲೆ ಟ್ವೀಟುಗಳು, ವಾಟ್ಸ್‌ಆಪ್ ಸಂದೇಶಗಳು, ಇನ್ಸ್‌ಟಾಗ್ರಾಮಿನ ಚಿತ್ರಗಳು, ಯೂಟ್ಯೂಬ್ ವೀಡಿಯೋಗಳೆಲ್ಲ ಮಾಹಿತಿಯ ಈ ಮಹಾಪೂರಕ್ಕೆ ತಮ್ಮ ಕೊಡುಗೆ ಸಲ್ಲಿಸುತ್ತವೆ.

ಇಷ್ಟೆಲ್ಲ ಪ್ರಮಾಣದಲ್ಲಿ ಹರಿದುಬರುತ್ತದಲ್ಲ ಮಾಹಿತಿ, ಅದು ನಮ್ಮ ಬದುಕಿನಲ್ಲಿ ಗಮನಾರ್ಹ ಬದಲಾವಣೆಗಳನ್ನು ತಂದಿದೆ. ವಿಭಿನ್ನ ವಿಷಯಗಳನ್ನು ಕುರಿತ ಅರಿವು, ಹೊಸ ಒಳನೋಟಗಳನ್ನೆಲ್ಲ ಎಲ್ಲಿ ಯಾವಾಗ ಬೇಕಾದರೂ ಪಡೆದುಕೊಳ್ಳುವುದು ಸಾಧ್ಯವಾಗಿದೆ.

ಎಡೆಬಿಡದೆ ನಿರಂತರವಾಗಿ ಹರಿದುಬರುವ ಅಷ್ಟೂ ಮಾಹಿತಿ ಉಪಯುಕ್ತವಾದುದಾಗಿದ್ದರೆ ಹ್ಯಾಪಿ ಎಂಡಿಂಗ್ ಸಿನಿಮಾದಂತೆ ಒಳ್ಳೆಯದೇ ಆಯಿತು ಬಿಡಿ ಎನ್ನಬಹುದಿತ್ತು - ಜ್ಞಾನದ ಸಿರಿ ಎಷ್ಟಿದ್ದರೂ ಒಳ್ಳೆಯದೇ ತಾನೆ! ಆದರೆ ನೈಜ ಸ್ಥಿತಿ ಕೊಂಚ ಬೇರೆಯೇ:

ಮಂಗಳವಾರ, ಜನವರಿ 19, 2016

ಜಂತರ್ ಮಂತರ್ ಬಗೆಗೊಂದು ಪುಟಿಯುವ ಪುಟಗಳ ಪುಸ್ತಕ!

ಪ್ರಾಚೀನ ಭಾರತದಲ್ಲಿ ಏನಿತ್ತು ಏನಿರಲಿಲ್ಲ ಎನ್ನುವುದು ಸದಾಕಾಲ ಚರ್ಚೆಗೆ ಗ್ರಾಸವಾಗುವ ವಿಷಯ. ಒಂದು ಬಣ ನಮ್ಮಲ್ಲಿ ಎಲ್ಲವೂ ಇತ್ತು ಎಂದರೆ ಇನ್ನೊಂದು ಬಣ ಮೊದಲ ಬಣವನ್ನು ಹೀಗಳೆಯುವುದರಲ್ಲೇ ತೃಪ್ತಿ ಕಂಡುಕೊಳ್ಳುತ್ತದೆ. ಈ ಗಲಾಟೆಯಲ್ಲಿ ಪ್ರಾಚೀನ ಭಾರತದಲ್ಲಿ ನಿಜಕ್ಕೂ ಏನೆಲ್ಲ ಇತ್ತು ಎನ್ನುವ ಸಂಗತಿ, ಮತ್ತದರ ವಿವರಗಳು ಯಾವ ಬಣಕ್ಕೂ ಸೇರದ ನಮ್ಮಂತಹವರನ್ನು ತಲುಪುವುದೇ ಇಲ್ಲ.

ಈ ಕೊರತೆಯನ್ನು ಕೊಂಚಮಟ್ಟಿಗೆ ತುಂಬಿಕೊಡುವ ಅಪರೂಪದ ಕೆಲಸವೊಂದು ಇದೀಗ - ಅದೂ ಕನ್ನಡದಲ್ಲಿ - ನಡೆದಿದೆ, ಡಾ. ಬಿ. ಎಸ್. ಶೈಲಜಾ ಹಾಗೂ ಶ್ರೀ ವಿ. ಎಸ್. ಎಸ್. ಶಾಸ್ತ್ರಿಯವರ ಪರಿಕಲ್ಪನೆ 'ಜಂತರ್ ಮಂತರ್ - ಜೈಸಿಂಗ್ ವೀಕ್ಷಣಾಲಯಗಳು' ಎನ್ನುವ ಪುಸ್ತಕವಾಗಿ ಹೊರಬಂದಿದೆ. ಜೈಪುರ - ದೆಹಲಿಗಳಲ್ಲೆಲ್ಲ ಇರುವ ಪ್ರಾಚೀನ ಭಾರತದ ವೀಕ್ಷಣಾಲಯ ಜಂತರ್ ಮಂತರ್‌‌ನ ಬಗ್ಗೆ ನಾವೆಲ್ಲ ಕೇಳಿದ್ದೇವಲ್ಲ, ಈ ಪುಸ್ತಕ ಅಲ್ಲಿನ ಯಂತ್ರಗಳು ಹಾಗೂ ಅವುಗಳ ಕಾರ್ಯವೈಖರಿಯನ್ನು ವಿವರವಾಗಿ ಪರಿಚಯಿಸುತ್ತದೆ.

ಗುರುವಾರ, ಜನವರಿ 14, 2016

ಓಸಿಆರ್ ಎಂಬ ಅಕ್ಷರ ಜಾಣ

ಟಿ. ಜಿ. ಶ್ರೀನಿಧಿ

ಒಬ್ಬೊಬ್ಬರ ಕೈಬರಹ ಒಂದೊಂದು ರೀತಿ. ಕೆಲವರದ್ದು ಮುತ್ತು ಪೋಣಿಸಿದಷ್ಟು ಸುಂದರವಾಗಿದ್ದರೆ ಇನ್ನು ಕೆಲವರು ಬರೆದದ್ದು ಇಂಕಿನಲ್ಲಿ ಬಿದ್ದ ಜಿರಲೆ ಓಡಾಡಿದಂತೆ ಕಾಣುತ್ತದೆ.

ಇಷ್ಟೆಲ್ಲ ವಿವಿಧ ಬಗೆಯ ಕೈಬರಹಗಳನ್ನು ಓದುವುದು ದೊಡ್ಡ ಸವಾಲೇ ಸರಿ. ಚೆಂದದ ಬರಹಗಳನ್ನೇನೋ ಸರಾಗವಾಗಿ ಓದಬಹುದು; ಆದರೆ ಸುಸ್ಪಷ್ಟವಲ್ಲದ ಕೈಬರಹದಲ್ಲಿ ಏನು ಬರೆದಿದ್ದಾರೆ ಎಂದು ತಿಳಿಯುವುದೇ ಕಷ್ಟ. ಡಾಕ್ಟರು ಬರೆದದ್ದನ್ನೆಲ್ಲ ಸರಾಗವಾಗಿ ಓದಿಕೊಳ್ಳಲು ಎಲ್ಲರೂ ಮೆಡಿಕಲ್ ಸ್ಟೋರಿನವರೇ ಆಗಲು ಸಾಧ್ಯವೇ?

ಚಿಕ್ಕಂದಿನಿಂದಲೇ ಅಕ್ಷರಗಳ ಪರಿಚಯವಿದ್ದು, ಅವುಗಳ ಗಾತ್ರ-ವಿನ್ಯಾಸಗಳಲ್ಲಿನ ಬದಲಾವಣೆಗಳನ್ನು ಸುಲಭವಾಗಿ ಗುರುತಿಸುವ ಶಕ್ತಿಯೂ ಇರುವ ನಮ್ಮ ಕಥೆಯೇ ಹೀಗೆ. ಇನ್ನು ಯಾರೋ ಗೀಚಿದ ಬರಹವನ್ನು ಓದು ಎಂದು ಕಂಪ್ಯೂಟರಿಗೆ ಹೇಳಿದರೆ ಏನಾಗಬೇಡ? ಕೈಬರಹ ಹಾಗಿರಲಿ, ಮುದ್ರಿತ ಅಕ್ಷರಗಳನ್ನಾದರೂ ಓದಲು ಕಂಪ್ಯೂಟರಿಗೆ ಸಾಧ್ಯವೇ?

ಖಂಡಿತಾ ಸಾಧ್ಯ.

ಬುಧವಾರ, ಡಿಸೆಂಬರ್ 30, 2015

ಏಸಸ್ ಜೆನ್‌ಪ್ಯಾಡ್: ಮನರಂಜನೆಗೊಂದು ಹೊಸ ಟ್ಯಾಬ್ಲೆಟ್

ದೊಡ್ಡಗಾತ್ರದ ಮೊಬೈಲ್ ಫೋನುಗಳು ಸರ್ವೇಸಾಮಾನ್ಯವಾಗುತ್ತಿರುವ ಈ ದಿನಗಳಲ್ಲಿ ಟ್ಯಾಬ್ಲೆಟ್ಟುಗಳು ಪ್ರಸ್ತುತವೋ ಇಲ್ಲವೋ ಎನ್ನುವುದು ನಮಗೆ ಪದೇ ಪದೇ ಎದುರಾಗುವ ಪ್ರಶ್ನೆ. ಪರಿಸ್ಥಿತಿ ಹೀಗಿದ್ದರೂ ಮಾರುಕಟ್ಟೆಗೆ ಹೊಸ ಟ್ಯಾಬ್ಲೆಟ್ಟುಗಳು ಇನ್ನೂ ಬರುತ್ತಲೇ ಇವೆ, ಹೊಸ ಸೌಲಭ್ಯಗಳನ್ನೂ ಪರಿಚಯಿಸುತ್ತಿವೆ.

ಈಚೆಗೆ ಮಾರುಕಟ್ಟೆ ಪ್ರವೇಶಿಸಿರುವ ಏಸಸ್ ಸಂಸ್ಥೆಯ ಜೆನ್‌ಪ್ಯಾಡ್ ೭, ಇಂತಹುದೊಂದು ಟ್ಯಾಬ್ಲೆಟ್. ಅದರ ಪರಿಚಯ ಇಲ್ಲಿದೆ.


ಜೆನ್‌ಪ್ಯಾಡ್‌ನ ವಿನ್ಯಾಸ ಮೊದಲ ನೋಟಕ್ಕೇ ಗಮನಸೆಳೆಯುವಂತಿದೆ. ಹಿಂಬದಿ ರಕ್ಷಾಕವಚ ಪ್ಲಾಸ್ಟಿಕ್‌ನದೇ ಆದರೂ ಗೀರುಗಳಿರುವ (ಲೆದರ್‌/ರೆಗ್ಸಿನ್‌ನಂತಹ) ವಿನ್ಯಾಸದಿಂದಾಗಿ ಆಕರ್ಷಕವಾಗಿ ಕಾಣುತ್ತದೆ - ಜಾರುವುದಿಲ್ಲವಾದ್ದರಿಂದ ಹಿಡಿದುಕೊಳ್ಳಲೂ ಅನುಕೂಲಕರ.

ಮಂಗಳವಾರ, ಡಿಸೆಂಬರ್ 29, 2015

ಫ್ರೀ ಬೇಸಿಕ್ಸ್ ಎಂಬ ಗೊಂದಲದ ಸುತ್ತ

ಟಿ. ಜಿ. ಶ್ರೀನಿಧಿ

ಅಂತರಜಾಲವನ್ನು ಇನ್‌ಫರ್ಮೇಶನ್ ಸೂಪರ್‌ಹೈವೇ ಎಂದು ಕರೆಯುತ್ತಾರಲ್ಲ, ಅದನ್ನು ಒಂದು ರಸ್ತೆಯಾಗಿಯೇ ಕಲ್ಪಿಸಿಕೊಳ್ಳಿ. ಆ ರಸ್ತೆಯಲ್ಲಿ ಎಲ್ಲ ಜಾಲತಾಣ ಹಾಗೂ ಆಪ್ ಬಳಕೆದಾರರಿಗೆ ಸಂಬಂಧಪಟ್ಟ ಮಾಹಿತಿಯೂ ಓಡಾಡುತ್ತಿರುತ್ತದೆ. ಕೆಲವರದು ಎಸ್‌ಯುವಿ ಇರಬಹುದು, ಇನ್ನು ಕೆಲವರದು ಕಾರು-ಬೈಕು-ಬಸ್ಸು-ಲಾರಿಗಳಿರಬಹುದು, ಸೈಕಲ್ ಓಡಿಸುವವರೂ ಇರಬಹುದು. ಆದರೆ ರಸ್ತೆ ಮಾತ್ರ ಎಲ್ಲರಿಗೂ ಒಂದೇ. ಟೋಲ್ ಬಂದಾಗ ಟೋಲ್ ಪಾವತಿಸಿ, ಇಲ್ಲದಿದ್ದರೆ ಹಾಗೆಯೇ ಗಾಡಿ ಓಡಿಸುತ್ತಿರಿ.

ಇದ್ದಕ್ಕಿದ್ದ ಹಾಗೆ ಬಹುರಾಷ್ಟ್ರೀಯ ವಾಹನ ತಯಾರಿಕಾ ಸಂಸ್ಥೆಯೊಂದು ಆ ರಸ್ತೆಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡುಬಿಡುತ್ತದೆ; ತಾನು ತಯಾರಿಸುವ ಕಾರುಗಳಿಗೆ ಮಾತ್ರ ಆ ರಸ್ತೆಯಲ್ಲಿ ಪ್ರವೇಶ ಎಂದು ಹೇಳುತ್ತದೆ. ಅಷ್ಟೇ ಅಲ್ಲ, ಆ ರಸ್ತೆಯ ಮೂಲಕ ಯಾವ ಊರಿಗೆ ಹೋಗಬೇಕು, ದಾರಿಯಲ್ಲಿ ಎಲ್ಲಿ ನಿಲ್ಲಿಸಬೇಕು, ಕಾಫಿ ಎಲ್ಲಿ ಕುಡಿಯಬೇಕು, ಶೌಚಾಲಯಕ್ಕೆ ಎಲ್ಲಿ ಹೋಗಬೇಕು ಎನ್ನುವುದನ್ನೂ ತಾನೇ ನಿರ್ಧರಿಸುತ್ತದೆ. ಹಾಂ, ಇಷ್ಟು ಶರತ್ತುಗಳನ್ನು ಒಪ್ಪಿದರೆ ಸಾಕು, ರಸ್ತೆ ಬಳಸಲು ಟೋಲ್ ಕೊಡುವುದೇನೂ ಬೇಡ ನೋಡಿ!

ಇದೇನೋ ಅಸಂಬದ್ಧವಾಗಿದೆಯಲ್ಲ ಎನಿಸಿದರೆ ಒಂದು ಕ್ಷಣ ಆಚೀಚೆ ನೋಡಿ - ನಿಮ್ಮ ಮನೆಯ ದಿನಪತ್ರಿಕೆಯಲ್ಲಿ, ಟೀವಿ ಕಾರ್ಯಕ್ರಮದ ನಡುವೆ, ಪಕ್ಕದ ಬಸ್ ಸ್ಟಾಪ್ ಫಲಕದಲ್ಲಿ ನಿಮಗೆ 'ಫ್ರೀ ಬೇಸಿಕ್ಸ್'ನ ಜಾಹೀರಾತು ಕಾಣಸಿಗುತ್ತದೆ. ಇಂತಿಂಥವರು ಈ ಯೋಜನೆಯನ್ನು ಬೆಂಬಲಿಸಿದ್ದಾರೆ ಎನ್ನುವ ಮಾಹಿತಿಯಂತೂ ಫೇಸ್‌ಬುಕ್‌ನಲ್ಲಿ ಕಾಣಿಸುತ್ತಲೇ ಇರುತ್ತದೆ.

ಇಷ್ಟಕ್ಕೂ ಏನಿದು ಫ್ರೀ ಬೇಸಿಕ್ಸ್?

ಸೋಮವಾರ, ಡಿಸೆಂಬರ್ 28, 2015

ಕನಸುಗಳಿಗೆ ತಂತ್ರಜ್ಞಾನದ ರೆಕ್ಕೆ

ಟಿ. ಜಿ. ಶ್ರೀನಿಧಿ

ಮಿಕ್ಸರ್ ಗ್ರೈಂಡರಿನಿಂದ ಮಸಾಲೆ ದೋಸೆಯವರೆಗೆ, ದ್ವಿಚಕ್ರ ವಾಹನದಿಂದ ದ್ವಿದಳ ಧಾನ್ಯಗಳವರೆಗೆ ಈಗ ಪ್ರತಿಯೊಂದನ್ನೂ ಆನ್‌ಲೈನ್‌ನಲ್ಲೇ ಕೊಳ್ಳುವುದು ಸಾಧ್ಯ. ಮನೆಯಿಂದ ಹೊರಗೆ ಕಾಲಿಡಬೇಕಾದ ಅಗತ್ಯವಿಲ್ಲ, ಟ್ರಾಫಿಕ್ ಜಾಮ್ ಭಯವೂ ಇಲ್ಲ - ಕೈಲಿರುವ ಮೊಬೈಲಿನಲ್ಲೋ ಪಕ್ಕದ ಕಂಪ್ಯೂಟರಿನಲ್ಲೋ ಕ್ಷಣಾರ್ಧದಲ್ಲೇ ನಮಗೆ ಬೇಕಾದ ವಸ್ತುಗಳನ್ನು ಆರ್ಡರ್ ಮಾಡುವುದು, ಅದಕ್ಕಾಗಿ ಹಣಪಾವತಿಸುವುದು ಸಾಧ್ಯ. ಇಷ್ಟೆಲ್ಲ ಅನುಕೂಲದ ಜೊತೆಗೆ ಡಿಸ್ಕೌಂಟು-ಕ್ಯಾಶ್‌ಬ್ಯಾಕುಗಳ ಆಮಿಷ ಬೇರೆ!

ನಾವು ಕ್ಷಣಾರ್ಧದಲ್ಲಿ ಆರ್ಡರ್ ಮಾಡುವುದೇನೋ ಸರಿ, ಆದರೆ ಆರ್ಡರ್ ಮಾಡಿದ ವಸ್ತು ನಮ್ಮನ್ನು ತಲುಪುವುದು ಮಾತ್ರ ನಿಧಾನ. ದೋಸೆಯೂ ಪಿಜ್ಜಾ-ಬರ್ಗರ್‌ಗಳೂ ಅರ್ಧಗಂಟೆಯಷ್ಟು ಸಮಯ ತೆಗೆದುಕೊಂಡರೆ ಇತರ ವಸ್ತುಗಳು ನಮ್ಮನ್ನು ತಲುಪಲು ಅರ್ಧದಿನವೋ ಅರ್ಧವಾರವೋ ಬೇಕಾಗುತ್ತದೆ.

ಇದೇಕೆ ಹೀಗೆ? ಯಾವುದೋ ವಸ್ತು ಬೇಕೆಂದು ನಾವು ಸಲ್ಲಿಸಿದ ಬೇಡಿಕೆ ಸಂಕೇತಗಳ ರೂಪತಳೆದು ಅಂತರಜಾಲದಲ್ಲಿ ಹಾರಿಹೋಗುತ್ತದಲ್ಲ, ಅದೇ ರೀತಿ ಆ ವಸ್ತುವೂ ಹಾರಿಬಂದು ನಮ್ಮ ಕೈಸೇರುವುದು ಸಾಧ್ಯವಿಲ್ಲವೆ?

ಕಾಲ್ಪನಿಕ ಕತೆಯಂತೆ ಕಾಣುವ ಈ ಸನ್ನಿವೇಶವನ್ನು ನಿಜವಾಗಿಸಲು ಅನೇಕ ಪ್ರಯತ್ನಗಳು ಈಗಾಗಲೇ ನಡೆದಿವೆ. ಆ ಕುರಿತ ಸುದ್ದಿಗಳು ಹಳತೂ ಆಗಿಬಿಟ್ಟಿವೆ.

ಬುಧವಾರ, ಡಿಸೆಂಬರ್ 23, 2015

ಹೊಸ ಪುಸ್ತಕ: 'ಕಂಪ್ಯೂಟರ್‌ಗೆ ಪಾಠ ಹೇಳಿ...'

ನಮ್ಮಿಂದ ಹೇಳಿಸಿಕೊಳ್ಳದೆ ಕಂಪ್ಯೂಟರ್ ಯಾವ ಕೆಲಸವನ್ನೂ ಮಾಡುವುದಿಲ್ಲ; ಅದು ಏನು ಮಾಡುವುದಿದ್ದರೂ ನಾವು ಹೇಳಿದ್ದನ್ನಷ್ಟೆ, ಹೇಳಿದಂತೆಯೇ ಮಾಡುತ್ತದೆ ಎನ್ನುವುದು ನಮಗೆ ಗೊತ್ತು. ಆದರೆ ನಮಗೇನು ಬೇಕು ಎನ್ನುವುದನ್ನು ಕಂಪ್ಯೂಟರಿಗೆ ಹೇಳುವುದು ಹೇಗೆ?

ನಮಗೆ ಬೇಕಾದ ಕೆಲಸ ಮಾಡಿಕೊಡುವ ಸಾಫ್ಟ್‌ವೇರನ್ನು ಕೊಂಡುಕೊಂಡರೆ ಆಯಿತು ನಿಜ. ಆದರೆ ಅದನ್ನು ಮೊದಲಿಗೆ ಯಾರೋ ಸಿದ್ಧಪಡಿಸಿರಬೇಕು ತಾನೆ? ಹಾಗಾದರೆ ಸಾಫ್ಟ್‌ವೇರನ್ನು ಸಿದ್ಧಪಡಿಸುವುದು ಎಂದರೇನು, ಮತ್ತು ಅದು ಸಾಧ್ಯವಾಗುವುದು ಹೇಗೆ?

ಶುಕ್ರವಾರ, ನವೆಂಬರ್ 27, 2015

ಡಿಸೆಂಬರ್ ೧೯-೨೦: ಬೆಂಗಳೂರಿನಲ್ಲಿ ವಿಕಿಪೀಡಿಯ ಸಂಪಾದನೋತ್ಸವ

ಇಜ್ಞಾನ ವಾರ್ತೆ

ಕೆಲ ತಿಂಗಳ ಹಿಂದೆ ಬೆಂಗಳೂರಿನ ಟೆಕ್ಸಸ್ ಇನ್‌ಸ್ಟ್ರುಮೆಂಟ್ಸ್ ಸಂಸ್ಥೆಯಲ್ಲಿ ನಡೆದ ಕನ್ನಡ ವಿಜ್ಞಾನ ಲೇಖಕರ ಶಿಬಿರ ನಿಮಗೆ ನೆನಪಿರಬಹುದು. ಇದೀಗ ಕನ್ನಡ ಮತ್ತು ವಿಜ್ಞಾನ ಬರವಣಿಗೆಗೆ ಸಂಬಂಧಪಟ್ಟ ಇನ್ನೊಂದು ಕಾರ್ಯಕ್ರಮ ಟೆಕ್ಸಸ್ ಇನ್‌ಸ್ಟ್ರುಮೆಂಟ್ಸ್‌ನಲ್ಲಿ ನಡೆಯುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಬರಹಗಳನ್ನು ವಿಕಿಪೀಡಿಯಕ್ಕೆ ಸೇರಿಸುವುದು ಈ ಕಾರ್ಯಕ್ರಮದ ಉದ್ದೇಶ. ವಿಕಿಪೀಡಿಯ ಪರಿಚಯವಿಲ್ಲದವರಿಗೆ ಅಗತ್ಯ ತರಬೇತಿಯನ್ನೂ ನೀಡಲಾಗುವುದು.

ಗುರುವಾರ, ನವೆಂಬರ್ 12, 2015

ವಾಸ್ತವವಲ್ಲದ ವಾಸ್ತವ

ಟಿ. ಜಿ. ಶ್ರೀನಿಧಿ


ಈಗಿನ ಅಜ್ಜ-ಅಜ್ಜಿಯರು ಚಿಕ್ಕಮಕ್ಕಳಾಗಿದ್ದಾಗ ಜಾತ್ರೆ-ಸಂತೆಗಳಲ್ಲಿ ಬಯಾಸ್ಕೋಪ್ (ಅಥವಾ ಬಯೋಸ್ಕೋಪ್) ಎನ್ನುವುದೊಂದು ಆಕರ್ಷಣೆ ಇರುತ್ತಿತ್ತಂತೆ. ದಪ್ಪನೆಯದೊಂದು ಪೆಟ್ಟಿಗೆ, ಅದರೊಳಗೆ ಇಣುಕಲೊಂದು ಕಿಂಡಿ - ಇದು ಬಯಾಸ್ಕೋಪಿನ ಸ್ವರೂಪ. ನಾಲ್ಕಾಣೆಯನ್ನೋ ಎಂಟಾಣೆಯನ್ನೋ ಕೊಟ್ಟು ಆ ಪೆಟ್ಟಿಗೆಯೊಳಗೆ ಇಣುಕಿದರೆ ಮುಂಬಯಿ, ದೆಹಲಿ, ಆಗ್ರಾದ ದೃಶ್ಯಗಳೆಲ್ಲ ಕಣ್ಣೆದುರು ಮೂಡುತ್ತಿದ್ದವು. ಬಾಣಾವರದ ಸಂತೆಯಲ್ಲೇ ಭಾರತ ದರ್ಶನ!

ಕೆಲ ವರ್ಷಗಳ ನಂತರ ಇಂತಹವೇ ಪೆಟ್ಟಿಗೆಗಳು ಇನ್ನು ಸ್ವಲ್ಪ ಚಿಕ್ಕದಾಗಿ 'ವ್ಯೂ ಮಾಸ್ಟರ್' ಎಂಬ ಹೆಸರಿನೊಡನೆ ಮಕ್ಕಳ ಕೈಗೆ ಬಂದವು. ಗುಂಡನೆಯ ಡಿಸ್ಕುಗಳನ್ನು ಪುಟ್ಟದೊಂದು ಸಾಧನದೊಳಕ್ಕೆ ಸೇರಿಸಿ ಇಣುಕಿ ನೋಡಿದರೆ ಅದರಲ್ಲಿನ ಚಿತ್ರಗಳು ನಮ್ಮ ಕಣ್ಮುಂದೆ ಮೂಡುತ್ತಿದ್ದವು (ಈಗ ಇದರ ಥ್ರೀಡಿ ಆವೃತ್ತಿಯೂ ಲಭ್ಯ).

ಬುಧವಾರ, ನವೆಂಬರ್ 4, 2015

ಜೆನ್‌ಫೋನ್ ಲೇಸರ್: ಕೈಗೆಟುಕುವ ಬೆಲೆ, ಉತ್ತಮ ಗುಣಮಟ್ಟ


ಈಚಿನ ದಿನಗಳಲ್ಲಿ ಮೊಬೈಲ್ ಫೋನ್ ಮಾರುಕಟ್ಟೆಗೆ ಹೊಸ ಮಾದರಿಗಳು ಒಂದರ ಹಿಂದೊಂದರಂತೆ ಪ್ರವೇಶಿಸುತ್ತಲೇ ಇವೆ. ಆದಷ್ಟೂ ಹೆಚ್ಚಿನ ಸವಲತ್ತುಗಳನ್ನು ಸಾಧ್ಯವಾದಷ್ಟೂ ಕಡಿಮೆ ಬೆಲೆಯಲ್ಲಿ ಒದಗಿಸಲು ಇಲ್ಲಿ ಸ್ಪರ್ಧೆಯೇ ನಡೆದಿದೆ.

ಮೊಬೈಲ್ ದರಸಮರದಲ್ಲಿ ಅತ್ಯಂತ ಹೆಚ್ಚು ಲಾಭವಾಗಿರುವುದು ಹತ್ತು ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಯ ಫೋನುಗಳನ್ನು ಬಳಸುವವರಿಗೆ ಎನ್ನಬಹುದು. ಇಷ್ಟು ಬೆಲೆಯ ಮಿತಿಯೊಳಗೆ ಸಾಕಷ್ಟು ಉತ್ತಮ ಸೌಲಭ್ಯಗಳನ್ನು ನೀಡುವ ಹಲವು ಫೋನುಗಳು ಇದೀಗ ಮಾರುಕಟ್ಟೆಯಲ್ಲಿವೆ.

ಇಂತಹ ಫೋನುಗಳಲ್ಲೊಂದು ಏಸಸ್ ಸಂಸ್ಥೆಯ 'ಜೆನ್‌ಫೋನ್ ೨ ಲೇಸರ್'.

ಗುರುವಾರ, ಅಕ್ಟೋಬರ್ 22, 2015

ಆಟಗಳಲ್ಲಿ ಕನ್ನಡದ ಸೊಗಡು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ  [ಹಿಂದಿನ ಲೇಖನ]

ಕಂಪ್ಯೂಟರ್ ತಂತ್ರಾಂಶಗಳ ಪೈಕಿ ಆಟಗಳಿಗೆ ತಮ್ಮದೇ ಆದ ವಿಶಿಷ್ಟ ಸ್ಥಾನವಿದೆ. ಯಾವ ಭೇದವೂ ಇಲ್ಲದೆ ಎಲ್ಲರೂ ಬಳಸುವ ಸಾರ್ವತ್ರಿಕ ತಂತ್ರಾಂಶಗಳಲ್ಲವೆ ಅವು? ಇನ್ನು ಮೊಬೈಲಿನಲ್ಲಂತೂ ಕೇಳುವುದೇ ಬೇಡ, ಯಾವ ಆಪ್ ಅಂಗಡಿಯನ್ನೇ ನೋಡಿದರೂ ನಮಗೆ ಸಾವಿರಾರು ಸಂಖ್ಯೆಯ ಆಟಗಳು ಕಾಣಸಿಗುತ್ತವೆ.

ಇಷ್ಟೆಲ್ಲ ಜನಪ್ರಿಯವಾಗಿರುವ ಗೇಮ್ಸ್ ಲೋಕದಲ್ಲಿ ಕೊಂಚಮಟ್ಟಿಗೆ ಕನ್ನಡವೂ ಇದೆ.

ಬೌದ್ಧಿಕ ಕಸರತ್ತಿನ ಆಟಗಳ ಪೈಕಿ ಬಹುಕಾಲದಿಂದ ಜನಪ್ರಿಯವಾಗಿರುವ ಪದಬಂಧವನ್ನು 'ಇಂಡಿಕ್ರಾಸ್' ತಾಣದ ಮೂಲಕ ಆನ್‌ಲೈನ್‌ನಲ್ಲೂ ತುಂಬಿಸಬಹುದು.

ಶುಕ್ರವಾರ, ಅಕ್ಟೋಬರ್ 16, 2015

ಕನ್ನಡದಲ್ಲೇ ಪ್ರೋಗ್ರಾಮಿಂಗ್!

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ  [ಹಿಂದಿನ ಲೇಖನ]

ಕನ್ನಡದ ಬಳಕೆದಾರರಿಗೆ ತಂತ್ರಜ್ಞಾನದ ಇಷ್ಟೆಲ್ಲ ಸವಲತ್ತುಗಳನ್ನು ಒದಗಿಸಲು ಅನೇಕ ಪರಿಣತರು ಸಾಕಷ್ಟು ಪ್ರೋಗ್ರಾಮುಗಳನ್ನು ಬರೆದಿರುತ್ತಾರೆ.

ಮೂಲಭೂತವಾಗಿ ಕಂಪ್ಯೂಟರಿಗೆ ಅರ್ಥವಾಗುವುದು 'ಒಂದು'-'ಸೊನ್ನೆ'ಗಳ ಬೈನರಿ (ದ್ವಿಮಾನ ಪದ್ಧತಿ) ಭಾಷೆ ಮಾತ್ರ. ಕಂಪ್ಯೂಟರ್‌ನ ಮೆಮೊರಿಯಲ್ಲಿ ಏನು ಉಳಿಯಬೇಕಾದರೂ ಅದು ಒಂದು ಅಥವಾ ಸೊನ್ನೆಯ ರೂಪದಲ್ಲಷ್ಟೆ ಇರಲು ಸಾಧ್ಯ - ಪ್ರೋಗ್ರಾಮುಗಳಿಗೂ ಇದೇ ನಿಯಮ ಅನ್ವಯವಾಗುತ್ತದೆ. ಆದರೆ ಅಂಕಿಗಳ ಭಾಷೆಯಲ್ಲಿ ಪ್ರೋಗ್ರಾಮ್ ಬರೆಯುವುದು ಕಷ್ಟವಾದ್ದರಿಂದ ಅದಕ್ಕಾಗಿ ಪ್ರೋಗ್ರಾಮಿಂಗ್ ಭಾಷೆಗಳನ್ನು ಬಳಸುತ್ತಾರೆ. ಇಂತಹ ಬಹುತೇಕ ಭಾಷೆಗಳು (ಉದಾ: ಸಿ, ಸಿ++, ಜಾವಾ ಇತ್ಯಾದಿ) ಇಂಗ್ಲಿಷ್ ಲಿಪಿಯನ್ನೇ ಬಳಸುವುದು ಸಂಪ್ರದಾಯ.

ಮಂಗಳವಾರ, ಅಕ್ಟೋಬರ್ 13, 2015

ಪುಟ್ಟ ಮಕ್ಕಳಿಗೆ ಸಿಹಿ ಪೆಪ್ಪರ್‌ಮಿಂಟ್

ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎನ್ನುವುದು ನಮಗೆ ಗೊತ್ತೇ ಇದೆ. ಮಕ್ಕಳ ಕುರಿತು ಆ ಶಿಕ್ಷಕರಿಗೆ ಹೆಚ್ಚಿನ ಆಸಕ್ತಿಯಿದ್ದಷ್ಟೂ ಅವರು ನಮ್ಮ ಮುಂದಿನ ಪೀಳಿಗೆಯನ್ನು ಇನ್ನಷ್ಟು ಚೆನ್ನಾಗಿ ರೂಪಿಸಬಲ್ಲರು. ಮಕ್ಕಳಿಗೆ ಹೊಸ ವಿಷಯಗಳನ್ನು ತಿಳಿಸುವ, ಅವರಲ್ಲಿ ಕುತೂಹಲವನ್ನು ಹೆಚ್ಚಿಸುವ ಆಸಕ್ತಿಯಿರುವ ಶಿಕ್ಷಕರಲ್ಲಿ ಶ್ರೀ ನಾರಾಯಣ ಬಾಬಾನಗರ ಒಬ್ಬರು.

ಮೇಷ್ಟರ ಕೆಲಸದ ಜೊತೆಗೆ ವಿಜ್ಞಾನ ಸಂವಹನವನ್ನೂ ಸೊಗಸಾಗಿ ಮಾಡುವ ಬಾಬಾನಗರ ಅವರ ಹೊಸ ಕೃತಿ 'ಪೆಪ್ಪರ್‌ಮಿಂಟ್'. ಪುಟ್ಟಪುಟ್ಟ ಬರಹಗಳಲ್ಲಿ ಹೊಸ ವಿಷಯಗಳನ್ನು (ಕೇರಮ್ ಆಡುವಾಗ ಬೋರಿಕ್ ಪೌಡರ್ ಬಳಸುವುದು ಏಕೆ, ಕೃತಕ ಉಪಗ್ರಹಗಳ ಉಪಯೋಗ ಏನು, ಗೀಜಗನ ಗೂಡಿನ ವೈಶಿಷ್ಟ್ಯ ಏನು ಇತ್ಯಾದಿ) ಮಕ್ಕಳಿಗೆ ತಿಳಿಸಿಕೊಡುವ ವಿಶಿಷ್ಟ ಪ್ರಯತ್ನ ಇದು. ಓದು ಹೊರೆಯೆನಿಸುವುದಿಲ್ಲವಾದ್ದರಿಂದ ಇದು ಮಕ್ಕಳಿಗೂ ಇಷ್ಟವಾಗುತ್ತದೆ.

ಸೋಮವಾರ, ಅಕ್ಟೋಬರ್ 12, 2015

ಮೊಬೈಲ್ ಕ್ಯಾಮೆರಾ ಮಾಯಾಜಾಲ

ಟಿ. ಜಿ. ಶ್ರೀನಿಧಿ

ಮೊದಲಿಗೆ ಮೊಬೈಲ್ ಫೋನ್ ಸೃಷ್ಟಿಯಾದದ್ದು ಯಾವಾಗ ಎಲ್ಲಿಂದ ಬೇಕಿದ್ದರೂ ದೂರವಾಣಿ ಕರೆಮಾಡಿ ಮಾತನಾಡುವುದನ್ನು ಸಾಧ್ಯವಾಗಿಸುವ ಉದ್ದೇಶದಿಂದ. ಮುಂದಿನ ದಶಕಗಳಲ್ಲಿ ಮೊಬೈಲ್ ಜನಪ್ರಿಯತೆ ಹೆಚ್ಚಿದಂತೆ ಅದರಲ್ಲಿರುವ ಸೌಲಭ್ಯಗಳೂ ಹೆಚ್ಚಿದ್ದು ಈಗ ಇತಿಹಾಸ. ಎಸ್ಸೆಮ್ಮೆಸ್ ಕಳುಹಿಸುವುದರಿಂದ ಹಿಡಿದು ಆನ್‌ಲೈನ್ ಶಾಪಿಂಗ್ ಮಾಡುವವರೆಗೆ ಪ್ರತಿಯೊಂದಕ್ಕೂ ಈಗ ನಾವು ಮೊಬೈಲನ್ನೇ ಅವಲಂಬಿಸಿದ್ದೇವೆ. ಎಫ್‌ಎಂ ರೇಡಿಯೋ, ಎಂಪಿಥ್ರೀ ಪ್ಲೇಯರುಗಳನ್ನೆಲ್ಲ ಮೂಲೆಗುಂಪು ಮಾಡಿದ್ದು ಇದೇ ಮೊಬೈಲ್.

ಮೊಬೈಲ್ ಫೋನ್ ಬಂದ ಮೇಲೆ ತಮ್ಮ ಮಹತ್ವ ಕಳೆದುಕೊಂಡ ಸಾಧನಗಳ ಪೈಕಿ ಡಿಜಿಟಲ್ ಕ್ಯಾಮೆರಾಗೆ ಪ್ರಮುಖ ಸ್ಥಾನ. ಮೊಬೈಲ್ ಜಗತ್ತು ವಿಸ್ತರಿಸಿದಂತೆ ಅದು ಛಾಯಾಗ್ರಹಣಕ್ಕೆ ನೀಡಿರುವ - ನೀಡುತ್ತಿರುವ ಹೊಸ ಆಯಾಮಗಳ ಪರಿಚಯ ಇಲ್ಲಿದೆ.

ಗುರುವಾರ, ಅಕ್ಟೋಬರ್ 8, 2015

ಪಠ್ಯದಿಂದ ಧ್ವನಿಗೆ

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ  [ಹಿಂದಿನ ಲೇಖನ]

ಕನ್ನಡದ ಇಷ್ಟೆಲ್ಲ ಮಾಹಿತಿ ಕಂಪ್ಯೂಟರೀಕರಣವಾಗಿರುವ ಈ ಸಂದರ್ಭದಲ್ಲಿ ಅದು ಎಲ್ಲರಿಗೂ ದೊರಕುವಂತಿರಬೇಕಾದ್ದು ಅತ್ಯಗತ್ಯ. ಈ ನಿಟ್ಟಿನಲ್ಲಿ ಪಠ್ಯವನ್ನು ಧ್ವನಿಗೆ ಪರಿವರ್ತಿಸುವ (ಟೆಕ್ಸ್ಟ್ ಟು ಸ್ಪೀಚ್) ತಂತ್ರಾಂಶದ್ದು ಮಹತ್ವದ ಸ್ಥಾನ. ಕಂಪ್ಯೂಟರಿನಲ್ಲಿ ದಾಖಲಾಗಿರುವ ಪಠ್ಯವನ್ನು ಧ್ವನಿರೂಪದಲ್ಲಿ ನಮಗೆ 'ಓದಿಹೇಳುವುದು' ಈ ತಂತ್ರಾಂಶದ ವೈಶಿಷ್ಟ್ಯ. ಕಂಪ್ಯೂಟರಿನ ಪರದೆಯ ಮೇಲೆ ಪುಟಗಟ್ಟಲೆ ಪಠ್ಯವನ್ನು ಓದಲು ಬೇಜಾರು ಎನ್ನುವವರಿಂದ ಹಿಡಿದು ದೃಷ್ಟಿ ಸವಾಲಿನ ದೆಸೆಯಿಂದ ಓದಲು ಸಾಧ್ಯವಿಲ್ಲದವರ ತನಕ ಈ ತಂತ್ರಾಂಶ ಎಲ್ಲರಿಗೂ ನೆರವಾಗಬಲ್ಲದು.

ಬುಧವಾರ, ಸೆಪ್ಟೆಂಬರ್ 30, 2015

ಕನ್ನಡದ ಕೇಳುಪುಸ್ತಕಗಳು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ  [ಹಿಂದಿನ ಲೇಖನ]

ಓದುವ ಪುಸ್ತಕಗಳ ಜೊತೆಗೆ ಕನ್ನಡದ ಕೇಳು ಪುಸ್ತಕಗಳೂ ಇವೆ. ಹೆಸರಾಂತ ಲೇಖಕರ ಕತೆ - ಕಾದಂಬರಿಗಳ ಧ್ವನಿಮುದ್ರಣವನ್ನು ಇದೀಗ ವಿವಿಧ ಜಾಲತಾಣಗಳಲ್ಲಿ ಕೊಳ್ಳಬಹುದು; ಸಿಡಿ ರೂಪದಲ್ಲಿ ಅಥವಾ ಡೌನ್‌ಲೋಡ್ ಮಾಡಿಕೊಂಡು ಕೇಳಬಹುದು. ಮಾಸ್ತಿಯವರ 'ಸುಬ್ಬಣ್ಣ', ಭೈರಪ್ಪನವರ 'ಧರ್ಮಶ್ರೀ', ಬೀಚಿಯವರ 'ಮಾತನಾಡುವ ದೇವರುಗಳು', ವಸುಧೇಂದ್ರರ 'ನಮ್ಮಮ್ಮ ಅಂದ್ರೆ ನಂಗಿಷ್ಟ' ಸೇರಿದಂತೆ ಹಲವು ಕೃತಿಗಳು ಧ್ವನಿಮುದ್ರಿತ ರೂಪದಲ್ಲಿ ಪ್ರಕಟವಾಗಿವೆ. 'ಕೇಳಿ ಕಥೆಯ' ಎನ್ನುವ ಕೇಳುಪುಸ್ತಕದಲ್ಲಂತೂ ಕತೆಗಳ ಗೊಂಚಲೇ ಇದೆ!

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಮಗ್ರ ವಚನಸಾಹಿತ್ಯ ಹಾಗೂ ಸಮಗ್ರ ದಾಸಸಾಹಿತ್ಯ ತಾಣಗಳಲ್ಲಿ ವಚನಗಳು ಹಾಗೂ ದಾಸಸಾಹಿತ್ಯದ ಧ್ವನಿಮುದ್ರಣ ಲಭ್ಯವಿದೆ.

ಗುರುವಾರ, ಸೆಪ್ಟೆಂಬರ್ 24, 2015

ಅನುವಾದ

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ  [ಹಿಂದಿನ ಲೇಖನ]

ವಿಶ್ವವ್ಯಾಪಿ ಜಾಲದಲ್ಲಿರುವ ಮಾಹಿತಿಯ ಮಹಾಪೂರ ಇಂಗ್ಲಿಷಿನಲ್ಲೇ ಇರಬೇಕು ಎಂದೇನೂ ಇಲ್ಲವಲ್ಲ! ಫ್ರೆಂಚ್‌ನಲ್ಲೋ ಜರ್ಮನ್‌ನಲ್ಲೋ ಇರುವ ತಾಣದಲ್ಲೂ ನಮಗೆ ಬೇಕಾದ ಮಾಹಿತಿ ಇರಬಹುದು. ಹೀಗೆ ಬೇರಾವುದೋ ಭಾಷೆಯಲ್ಲಿ ಇರುವ ಮಾಹಿತಿಯನ್ನು ನಮ್ಮ ಭಾಷೆಗೆ ಅನುವಾದಿಸಿಕೊಳ್ಳುವ ಸೌಲಭ್ಯ 'ಗೂಗಲ್ ಟ್ರಾನ್ಸ್‌ಲೇಟ್' ಮೂಲಕ ಕನ್ನಡಕ್ಕೂ ಬಂದಿದೆ.

ಈ ಸೇವೆ ಬಳಸಿ ವಿವಿಧ ಭಾಷೆಗಳಲ್ಲಿರುವ ಮಾಹಿತಿಯನ್ನು - ತಕ್ಕಮಟ್ಟಿಗಿನ ನಿಖರತೆಯೊಂದಿಗೆ - ಕನ್ನಡಕ್ಕೆ ಅನುವಾದಿಸಿಕೊಳ್ಳಬಹುದು. ಅನುವಾದ ತಪ್ಪು ಎನಿಸಿದಾಗ ನಾವೇ ಅದನ್ನು ತಿದ್ದುವುದೂ ಸಾಧ್ಯ.

ಭಾನುವಾರ, ಸೆಪ್ಟೆಂಬರ್ 20, 2015

ಕನ್ನಡದ ಬ್ರೌಸರ್‌ಗಳು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ  [ಹಿಂದಿನ ಲೇಖನ]

ವಿಶ್ವವ್ಯಾಪಿ ಜಾಲದ (ವರ್ಲ್ಡ್‌ವೈಡ್ ವೆಬ್) ಬಳಕೆದಾರರೆಲ್ಲರೂ ಕಡ್ಡಾಯವಾಗಿ ಬಳಸುವ ತಂತ್ರಾಂಶವೆಂದರೆ ಬ್ರೌಸರ್. ವಿಶ್ವವ್ಯಾಪಿ ಜಾಲದಲ್ಲಿರುವ ತಾಣಗಳನ್ನು ತಮ್ಮ ಕಂಪ್ಯೂಟರಿನಲ್ಲಿ ವೀಕ್ಷಿಸಲು ಬಳಕೆದಾರರಿಗೆ ನೆರವಾಗುವುದು ಈ ತಂತ್ರಾಂಶದ ಕೆಲಸ. ಗೂಗಲ್ ಕ್ರೋಮ್, ಮೊಜಿಲ್ಲಾ ಫೈರ್‌ಫಾಕ್ಸ್, ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಸೇರಿದಂತೆ ಹಲವಾರು ಪ್ರಮುಖ ಬ್ರೌಸರುಗಳ ಕನ್ನಡ ಆವೃತ್ತಿ ಇದೀಗ ಲಭ್ಯವಿದೆ. ಇದರಿಂದಾಗಿ ಆ ಬ್ರೌಸರುಗಳಲ್ಲಿರುವ ಆಯ್ಕೆಗಳನ್ನೆಲ್ಲ ನಾವು ಕನ್ನಡದಲ್ಲಿ ನೋಡಬಹುದು, ಬಳಸಬಹುದು.

ಶುಕ್ರವಾರ, ಸೆಪ್ಟೆಂಬರ್ 11, 2015

ಪದಪರೀಕ್ಷೆ

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ  [ಹಿಂದಿನ ಲೇಖನ]

ಇಂಗ್ಲಿಷ್ ಪದಗಳನ್ನು ಟೈಪಿಸುವಾಗ ಏನಾದರೂ ಅಕ್ಷರದೋಷಗಳಿದ್ದರೆ ಅವನ್ನು ಕೆಂಪು ಅಡಿಗೆರೆಯ ಮೂಲಕ ಗುರುತಿಸುವ, ಸ್ಪೆಲಿಂಗ್ ಸರಿಪಡಿಸಲು ಸಹಾಯವನ್ನೂ ಮಾಡುವ ಸೌಲಭ್ಯಗಳನ್ನು ನಾವು ಹಲವು ತಂತ್ರಾಂಶಗಳಲ್ಲಿ, ಜಾಲತಾಣಗಳಲ್ಲಿ ಗಮನಿಸಿರುತ್ತೇವೆ. ಇಂತಹ ಸೌಲಭ್ಯ ಕನ್ನಡದಲ್ಲೂ ಇದೆ. ಪದಸಂಸ್ಕಾರಕಗಳ ಉದಾಹರಣೆ ನೋಡುವುದಾದರೆ 'ಪದ' ತಂತ್ರಾಂಶದಲ್ಲಿ ಟೈಪಿಸಿದ ನಮ್ಮ ಪಠ್ಯದಲ್ಲಿರುವ (ಬಹುತೇಕ) ತಪ್ಪುಗಳನ್ನು ಗುರುತಿಸುವುದು ಹಾಗೂ ಸರಿಯಾದ ರೂಪಗಳನ್ನು ನೋಡುವುದು ಸಾಧ್ಯ. ಅಷ್ಟೇ ಅಲ್ಲ, ಮೊದಲ ಕೆಲ ಅಕ್ಷರಗಳನ್ನು ಟೈಪಿಸುತ್ತಿದ್ದಂತೆ ಆ ಅಕ್ಷರಗಳಿಂದ ಪ್ರಾರಂಭವಾಗುವ ಪದವನ್ನು ಸೂಚಿಸುವ ಸೌಲಭ್ಯ ಕೂಡ ಇಲ್ಲಿದೆ.

ಶನಿವಾರ, ಸೆಪ್ಟೆಂಬರ್ 5, 2015

ಟೀವಿಯನ್ನು ಸ್ಮಾರ್ಟ್ ಮಾಡೋಣ ಬನ್ನಿ!


ಒಂದು ಕಾಲವಿತ್ತು, ಬೀದಿಗೊಂದು ಟೀವಿ ಇದ್ದರೆ ಆಗ ಅದೇ ಹೆಚ್ಚು. ಶುಕ್ರವಾರದ ಚಿತ್ರಮಂಜರಿ - ಭಾನುವಾರದ ಚಲನಚಿತ್ರಗಳನ್ನೆಲ್ಲ ನೋಡಲು ಬರುವವರನ್ನು ಸಂಭಾಳಿಸುವ ಹೆಚ್ಚುವರಿ ಜವಾಬ್ದಾರಿ ಆಗಿನ ಟೀವಿ ಮಾಲೀಕರಿಗೆ ಉಚಿತವಾಗಿ ದೊರಕುತ್ತಿತ್ತು. ಟೀವಿ ನೋಡಲು ನೆರೆಮನೆಗೆ ಹೋಗುವ ವ್ಯವಸ್ಥೆ ಅಂದಿನ ಕಾಲದ ಸೋಶಿಯಲ್ ನೆಟ್‌ವರ್ಕ್ ಆಗಿತ್ತು ಎಂದರೂ ಸರಿಯೇ!

ಮುಂದೆ ಟೀವಿಯ ಜನಪ್ರಿಯತೆ ಹಾಗೂ ಅದನ್ನು ಕೊಳ್ಳುವ ಶಕ್ತಿಗಳೆರಡೂ ಹೆಚ್ಚಿದಂತೆ ಎಲ್ಲ ಮನೆಗಳಿಗೂ ಟೀವಿಯ ಆಗಮನವಾಯಿತು. ಕಪ್ಪು ಬಿಳುಪು ಹೋಗಿ ಬಣ್ಣದ ಟೀವಿ ಬಂತು, ಫ್ಲ್ಯಾಟ್ ಸ್ಕ್ರೀನ್ - ಎಲ್‌ಸಿಡಿ - ಎಲ್‌ಇಡಿ ಟೀವಿಗಳ ಪರಿಚಯವಾಯಿತು, ನೈಜ ದೃಶ್ಯದಷ್ಟೇ ಸುಸ್ಪಷ್ಟವಾಗಿ ಚಿತ್ರಗಳನ್ನು ಪ್ರದರ್ಶಿಸುವ ಹೈ ಡೆಫನಿಶನ್ (ಎಚ್‌ಡಿ) ಟೀವಿಗಳೂ ಬಂದವು.

ಬುಧವಾರ, ಸೆಪ್ಟೆಂಬರ್ 2, 2015

ಯುನಿಕೋಡ್

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ  [ಹಿಂದಿನ ಲೇಖನ]


ಹಿಂದಿನ ಕನ್ನಡ ಪದಸಂಸ್ಕಾರಕಗಳನ್ನು ಬಳಸುವಾಗ ನಾವು ನಿರ್ದಿಷ್ಟ ಫಾಂಟುಗಳನ್ನು ಅವಲಂಬಿಸಬೇಕಾದ್ದು ಅನಿವಾರ್ಯವಾಗಿತ್ತು. ಟೈಪಿಸುವುದು ಹಾಗಿರಲಿ, ಫಾಂಟ್ ಇನ್‌ಸ್ಟಾಲ್ ಮಾಡಿಕೊಳ್ಳದೆ ಕನ್ನಡದ ಪಠ್ಯ ಓದುವುದೂ ಆಗ ಸಾಧ್ಯವಾಗುತ್ತಿರಲಿಲ್ಲ.

ಈ ಪರಿಸ್ಥಿತಿ ಬದಲಾದದ್ದು ಯುನಿಕೋಡ್ ಸಂಕೇತ ವಿಧಾನ ಬಳಕೆಗೆ ಬಂದಾಗ (ನೆನಪಿಡಿ, ಯುನಿಕೋಡ್ ಒಂದು ಸಂಕೇತ ವಿಧಾನ - ತಂತ್ರಾಂಶ ಅಲ್ಲ). ಈ ಸೌಲಭ್ಯವಿರುವ ತಂತ್ರಾಂಶಗಳಲ್ಲಿ ಬೆರಳಚ್ಚು ಮಾಡಿದ ಮಾಹಿತಿಯನ್ನು ನೇರವಾಗಿ ಯುನಿಕೋಡ್‌ನಲ್ಲೇ ಸಂಗ್ರಹಿಸಿಡಲಾಗುತ್ತದೆ, ಹಳೆಯ ತಂತ್ರಾಂಶಗಳಂತೆ ಅಕ್ಷರಶೈಲಿಯ (ಫಾಂಟ್) ಸಂಕೇತಗಳಲ್ಲಿ ಅಲ್ಲ. ಹಾಗಾಗಿ ಯುನಿಕೋಡ್‌ನಲ್ಲಿರುವ ಮಾಹಿತಿಯನ್ನು ಬೇರೊಬ್ಬರು ಓದಲು ಕನ್ನಡದ ಯಾವುದೇ ಯುನಿಕೋಡ್ ಅಕ್ಷರಶೈಲಿ (ಓಪನ್‌ಟೈಪ್ ಫಾಂಟ್) ಇದ್ದರೆ ಸಾಕು.

ಗುರುವಾರ, ಆಗಸ್ಟ್ 27, 2015

ಫಿಕಾಮ್ ಎನರ್ಜಿ 653: ಕಡಿಮೆ ಬೆಲೆಯ ಉತ್ತಮ ಮೊಬೈಲ್

ದೇಶದಲ್ಲಿರುವ ಜನರ ಸಂಖ್ಯೆಯ ಜೊತೆಗೆ ಮೊಬೈಲುಗಳ ಸಂಖ್ಯೆಯಲ್ಲೂ ವಿಶ್ವದ ರಾಷ್ಟ್ರಗಳಲ್ಲಿ ಭಾರತಕ್ಕೆ ಮುಂಚೂಣಿ ಸ್ಥಾನ. ಜೀವನಾವಶ್ಯಕ ವಸ್ತುಗಳ ಸಾಲಿನಲ್ಲಿ ಊಟ-ಬಟ್ಟೆ-ಸೂರಿನ ಜೊತೆಗೆ ಮೊಬೈಲ್ ದೂರವಾಣಿಯನ್ನು ಸೇರಿಸುವವರನ್ನೂ ನಾವಿಲ್ಲಿ ಕಾಣಬಹುದು.

ಕಾಲ ಬದಲಾದಂತೆ ತಂತ್ರಜ್ಞಾನವೂ ಬದಲಾಗುವುದು ಸಾಮಾನ್ಯ ತಾನೆ, ಅಂತಹ ಬದಲಾವಣೆಗಳಿಗೆ ಹೊಂದಿಕೊಳ್ಳುವುದರಲ್ಲೂನಾವು ಸದಾ ಮುಂದೆ. ಮೊದಲಿಗೆ ಮೊಬೈಲ್ ಫೋನುಗಳ ಪರಿಚಯವಾದಾಗ, ಸ್ಮಾರ್ಟ್‌ಫೋನುಗಳು ಮಾರುಕಟ್ಟೆಗೆ ಬಂದಾಗ, 2G ಹೋಗಿ 3Gಯ ಆಗಮನವಾದಾಗ - ಇಂತಹ ಎಲ್ಲ ಸಂದರ್ಭಗಳಲ್ಲೂ ಕಾಣಿಸಿದ ನಮ್ಮ ಉತ್ಸಾಹ ಮೊಬೈಲ್ ಸಂಸ್ಥೆಗಳ ಮಾರುಕಟ್ಟೆಯನ್ನು ವಿಸ್ತರಿಸಿತ್ತು; ತಂತ್ರಜ್ಞಾನದ ಬೆಳವಣಿಗೆಯನ್ನು ಇನ್ನಷ್ಟು ಪ್ರೋತ್ಸಾಹಿಸಿತ್ತು.

ಇದರಿಂದಾಗಿಯೇ ಏನೋ ಹೊಸ ಉತ್ಪನ್ನಗಳು ಒಂದರ ಹಿಂದೊಂದರಂತೆ ನಮ್ಮ ಮಾರುಕಟ್ಟೆಗೆ ಬರುತ್ತಲೇ ಇರುತ್ತವೆ.

ಬುಧವಾರ, ಆಗಸ್ಟ್ 26, 2015

ಕಂಪ್ಯೂಟರಿನಲ್ಲಿ ಕನ್ನಡ ಅಕ್ಷರ

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ  [ಹಿಂದಿನ ಲೇಖನ]

'ಸೇಡಿಯಾಪು' ತಂತ್ರಾಂಶ
ಕಂಪ್ಯೂಟರ್ ಪ್ರಪಂಚದಲ್ಲಿ ಕನ್ನಡ ಮೊದಲಿಗೆ ಬಳಕೆಯಾಗಿದ್ದು ಇಂಗ್ಲಿಷ್ ಲಿಪಿಯ ಮೂಲಕ. ಇಂಗ್ಲಿಷ್ ಅಕ್ಷರಗಳಲ್ಲಿ ಕನ್ನಡವನ್ನು ಮೂಡಿಸುವ ಈ ವಿಧಾನ 'ಕಂಗ್ಲಿಷ್' ಭಾಷೆ ಎಂದೇ ಜನಪ್ರಿಯ. ಕನ್ನಡದ 'ನಮಸ್ಕಾರ'ವನ್ನು ಇಂಗ್ಲಿಷಿನಲ್ಲಿ 'namaskaara' ಎಂದು ಲಿಪ್ಯಂತರ ಮಾಡಿ ಬರೆಯುವ ಈ ವಿಧಾನವನ್ನು ಇನ್ನೂ ಇಮೇಲ್-ಚಾಟ್-ಎಸ್ಸೆಮ್ಮೆಸ್ ಇತ್ಯಾದಿಗಳಲ್ಲಿ ಬಳಸಲಾಗುತ್ತದೆ.

ಕನ್ನಡದ ಪದಸಂಸ್ಕಾರಕ, ಅಂದರೆ ವರ್ಡ್ ಪ್ರಾಸೆಸರ್ ತಂತ್ರಾಂಶಗಳು ಬಂದಾಗ ಕಂಪ್ಯೂಟರ್ ಪ್ರಪಂಚದಲ್ಲಿ ಕನ್ನಡದ ಬಳಕೆಗೆ ಮೊದಲ ಪ್ರೋತ್ಸಾಹ ದೊರಕಿತು. ಈ ತಂತ್ರಾಂಶಗಳಿಂದಾಗಿ ಕಂಪ್ಯೂಟರಿನಲ್ಲಿ ಕನ್ನಡ ಅಕ್ಷರಗಳನ್ನು ಮೂಡಿಸುವುದು, ಕಂಪ್ಯೂಟರ್ ಸಹಾಯದಿಂದ ಅವನ್ನು ಮುದ್ರಿಸಿಕೊಳ್ಳುವುದು ಸಾಧ್ಯವಾಯಿತು.

ಶುಕ್ರವಾರ, ಆಗಸ್ಟ್ 21, 2015

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ

ಕಂಪ್ಯೂಟರ್ ಪ್ರಪಂಚದಲ್ಲಿ ಕನ್ನಡದ ಸಾಧ್ಯತೆಗಳು 

ಆಧುನಿಕ ಕಂಪ್ಯೂಟರುಗಳಿಗೆ, ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚೆಂದರೆ ಒಂದು ಶತಮಾನದಷ್ಟು ಇತಿಹಾಸವಿದೆ. ಜನಸಾಮಾನ್ಯರು ಮಾಹಿತಿ ತಂತ್ರಜ್ಞಾನದ ಸಂಪರ್ಕಕ್ಕೆ ಬಂದದ್ದಂತೂ ಈಚೆಗೆ, ಕೆಲ ದಶಕಗಳ ಹಿಂದೆಯಷ್ಟೆ. ಇಷ್ಟು ಕಡಿಮೆ ಅವಧಿಯಲ್ಲಿ, ಪ್ರಾಯಶಃ ಬೇರಾವ ಕ್ಷೇತ್ರಕ್ಕೂ ಸಾಧ್ಯವಾಗದಷ್ಟು ಪ್ರಮಾಣದಲ್ಲಿ, ನಮ್ಮ ಬದುಕಿನಲ್ಲಿ ಗಮನಾರ್ಹ ಬದಲಾವಣೆಗಳನ್ನು ತಂದದ್ದು ಮಾಹಿತಿ ತಂತ್ರಜ್ಞಾನದ ಹೆಗ್ಗಳಿಕೆಯೆಂದೇ ಹೇಳಬೇಕು.

ಮಾಹಿತಿ ತಂತ್ರಜ್ಞಾನ ಕ್ಷೇತ್ರ ಬೆಳೆಯುತ್ತಿದ್ದ ಸಮಯದಲ್ಲಿ ಅದರ ವ್ಯಾಪ್ತಿ ದೊಡ್ಡದೊಡ್ಡ ಸಂಸ್ಥೆಗಳಿಗೆ, ವಿಶ್ವವಿದ್ಯಾಲಯ-ಸಂಶೋಧನಾ ಕೇಂದ್ರಗಳಿಗಷ್ಟೆ ಸೀಮಿತವಾಗಿತ್ತು. ಅಂತಹ ಸಮಯದಲ್ಲಿ ಕಂಪ್ಯೂಟರುಗಳಿಂದ ಏನು ಕೆಲಸವಾಗಬಲ್ಲದು ಎನ್ನುವುದು ಮುಖ್ಯವಾಗಿತ್ತೇ ಹೊರತು ಆ ಕೆಲಸಕ್ಕೆ ಯಾವ ಭಾಷೆಯ ಮಾಧ್ಯಮ ಬಳಕೆಯಾಗಬೇಕು ಎನ್ನುವುದಕ್ಕೆ ಅಷ್ಟೇನೂ ಮಹತ್ವವಿರಲಿಲ್ಲ. ಆ ಸಮಯದಲ್ಲಿ ಕಂಪ್ಯೂಟರ್ ಪ್ರಪಂಚದ ಬಹುಪಾಲು ವ್ಯವಹಾರವೆಲ್ಲ ಇಂಗ್ಲಿಷಿನಲ್ಲೇ ನಡೆಯುತ್ತಿತ್ತು ಎನ್ನಬಹುದು.

ಆನಂತರದ ಸಮಯದಲ್ಲಿ ಮಾಹಿತಿ ತಂತ್ರಜ್ಞಾನದ ಹರವು ಇನ್ನಷ್ಟು ವಿಸ್ತರಿಸಿದಂತೆ ಅದು ಜನಸಾಮಾನ್ಯರ ಸಮೀಪಕ್ಕೂ ಬಂತು. ತಂತ್ರಜ್ಞಾನ ಸಾಮಾನ್ಯರಿಗೂ ಆಪ್ತವಾಗಬೇಕಾದರೆ ಅದು ಜನರ ಭಾಷೆಯನ್ನು ಕಲಿಯಬೇಕೇ ಹೊರತು ಜನರು ತಂತ್ರಜ್ಞಾನದ ಭಾಷೆ ಕಲಿಯುವಂತಾಗಬಾರದು ಎಂಬ ಅಭಿಪ್ರಾಯ ರೂಪುಗೊಂಡಿತು.

ಬುಧವಾರ, ಆಗಸ್ಟ್ 5, 2015

ಕಳೆದುಹೋದ ಕತ್ತಲು

ಮಾಲಿನ್ಯದ ಕಾಟ ಈಗ ಬರಿಯ ನೀರು-ಗಾಳಿಗಷ್ಟೇ ಸೀಮಿತವಾಗಿ ಉಳಿದಿಲ್ಲ. ಕೃತಕ ಬೆಳಕಿನ ಮಿತಿಮೀರಿದ ಬಳಕೆ ನಮ್ಮೆದುರಿಗೆ ಬೆಳಕಿನ ಮಾಲಿನ್ಯವೆಂಬ ಹೊಸದೊಂದು ಸಮಸ್ಯೆಯನ್ನು ತಂದಿಟ್ಟಿದೆ. ಈ ಕುರಿತು ಅತ್ಯಂತ ಮಾಹಿತಿಪೂರ್ಣವಾದ ಒಂದು ವೀಡಿಯೋ ಇಲ್ಲಿದೆ. ನೋಡಿ, ಹಂಚಿಕೊಳ್ಳಿ!


Video by International Dark-Sky Association
ಕನ್ನಡ ಅವತರಣಿಕೆ: ಜವಾಹರ್ ಲಾಲ್ ನೆಹರು ತಾರಾಲಯ

ಈ ವೀಡಿಯೋ ಅನ್ನು ಹಂಚಿಕೊಂಡಿದ್ದಕ್ಕಾಗಿ ಡಾ. ಬಿ. ಎಸ್. ಶೈಲಜಾ ಅವರಿಗೆ ವಿಶೇಷ ಕೃತಜ್ಞತೆಗಳು.

ಸೋಮವಾರ, ಆಗಸ್ಟ್ 3, 2015

ಸೆಲ್ಫಿ ಸಮಾಚಾರ



ಫೋಟೋ ಕ್ಲಿಕ್ಕಿಸುವ ಹವ್ಯಾಸವಿರುವವರಿಗೆ ಯಾವಾಗಲೂ ಒಂದು ಸಮಸ್ಯೆ: ಅವರು ಎಷ್ಟೇ ಒಳ್ಳೆಯ ಛಾಯಾಗ್ರಾಹಕರಾಗಿದ್ದರೂ ಅವರ ಫೋಟೋವನ್ನು ಬೇರೊಬ್ಬ ಛಾಯಾಗ್ರಾಹಕನೇ ಕ್ಲಿಕ್ಕಿಸಬೇಕು. ಅವರ ಕಲ್ಪನಾಶಕ್ತಿಯೇನಿದ್ದರೂ ಬೇರೆಯವರ ಚಿತ್ರಗಳನ್ನು ಕ್ಲಿಕ್ಕಿಸಲಷ್ಟೇ ಸೀಮಿತವಾಗಿರಬೇಕು, ಇಲ್ಲವೇ ಕ್ಯಾಮೆರಾವನ್ನು ತನ್ನತ್ತ ತಿರುಗಿಸಿಕೊಂಡು ಬೇಕಾದಂತೆ ಫೋಟೋ ಕ್ಲಿಕ್ಕಿಸಲು ತಿಣುಕಬೇಕು.

ಮೊಬೈಲ್ ಫೋನ್ ಕ್ಯಾಮೆರಾಗಳು ಜನಪ್ರಿಯವಾಗುವವರೆಗೆ ಈ ಸಮಸ್ಯೆ ಸಾಕಷ್ಟು ವ್ಯಾಪಕವಾಗಿಯೇ ಇತ್ತು. ಮೊಬೈಲಿನಲ್ಲೇ ಕ್ಯಾಮೆರಾ ಬಂದಮೇಲೆ ಸ್ವಂತಚಿತ್ರವನ್ನು ಕ್ಲಿಕ್ಕಿಸಿಕೊಳ್ಳಲು ದೊಡ್ಡ ಕ್ಯಾಮೆರಾವನ್ನು ತಿರುವುಮುರುವಾಗಿ ಹಿಡಿದುಕೊಂಡು ತಿಣುಕುವುದು ತಪ್ಪಿತು!

ಶುಕ್ರವಾರ, ಜುಲೈ 31, 2015

ಸ್ಮಾರ್ಟ್‌ಫೋನ್ ಮುಖ ೧೦: ಟಿಕ್‌ಟಿಕ್ ಗೆಳೆಯ

ಮೊಬೈಲ್ ಬಳಸಲು ಶುರುಮಾಡಿದ ಮೇಲೆ ವಾಚ್ ಕಟ್ಟುವುದನ್ನೇ ಬಿಟ್ಟುಬಿಟ್ಟಿದ್ದೇನೆ ಎನ್ನುವ ಅನೇಕರನ್ನು ನಾವು ನೋಡಬಹುದು. ಕೈಗಡಿಯಾರ ಮಾತ್ರವೇ ಏಕೆ, ಹಾಸಿಗೆ ಪಕ್ಕದಲ್ಲಿರುತ್ತಿದ್ದ ಅಲಾರಂ ಗಡಿಯಾರಕ್ಕೆ ನಿವೃತ್ತಿ ಕೊಟ್ಟದ್ದೂ ಮೊಬೈಲ್ ದೂರವಾಣಿಯೇ. ಅಷ್ಟೇ ಅಲ್ಲ, ಅಲಾರಂ ಗಡಿಯಾರಕ್ಕೆ ಆಧುನಿಕತೆಯ ಸ್ಪರ್ಶ ಕೊಟ್ಟದ್ದೂ ಮೊಬೈಲಿನ ಹೆಚ್ಚುಗಾರಿಕೆ. ಒಮ್ಮೆ ಹೊಂದಿಸಿದ ಅಲಾರಂ ಪ್ರತಿದಿನವೂ ಹೊಡೆಯುವಂತೆ ನೋಡಿಕೊಳ್ಳುವುದು, ವಾರದ ಬೇರೆಬೇರೆ ದಿನ ಬೇರೆಬೇರೆ ಸಮಯಕ್ಕೆ ಅಲಾರಂ ಹೊಂದಿಸುವುದು ಮುಂತಾದ ಕೆಲಸಗಳೆಲ್ಲ ಮೊಬೈಲಿನಲ್ಲಿ ಬಲು ಸುಲಭ. ಅರ್ಧನಿದ್ದೆಯಲ್ಲಿ ಎದ್ದು, ಅಲಾರಂ ಗಡಿಯಾರದ ತಲೆಯ ಮೇಲೆ ಮೊಟಕಿ ಮತ್ತೆ ಮಲಗುತ್ತಿದ್ದೆವಲ್ಲ - ಅಂತಹ ಸನ್ನಿವೇಶಗಳನ್ನು ತಪ್ಪಿಸಲು ಬೇಕಾದ ಸೌಲಭ್ಯಗಳನ್ನೂ ಆಪ್‌ಗಳ ಮೂಲಕ ಪಡೆದುಕೊಳ್ಳಬಹುದು. ಪೂರ್ತಿಯಾಗಿ ಎಚ್ಚರಮಾಡಿಕೊಂಡು ಸಣ್ಣದೊಂದು ಪ್ರಶ್ನೆಗೆ ಉತ್ತರಿಸುವವರೆಗೂ ಅಲಾರಂ ನಿಲ್ಲದಿರುವ ವ್ಯವಸ್ಥೆ ಇಂತಹ ಕೆಲ ಆಪ್‌ಗಳಲ್ಲಿರುತ್ತದೆ.

ಮೊಬೈಲ್ ಫೋನುಗಳು ಕೈಗಡಿಯಾರದ ಕಾಲವನ್ನು ಇನ್ನೇನು ಮುಗಿಸಿಯೇಬಿಟ್ಟವು ಎನ್ನುವಷ್ಟರಲ್ಲಿ ಸ್ಮಾರ್ಟ್ ವಾಚುಗಳು ಮಾರುಕಟ್ಟೆಗೆ ಬಂದಿವೆ. ಸಮಯ ತೋರಿಸುವ ಹಾಗೂ ಅಲಾರಂ ಹೊಡೆಯುವ ಕೆಲಸಗಳಿಗಷ್ಟೇ ಸೀಮಿತವಾಗದೆ ಈ ಹೊಸಬಗೆಯ ವಾಚುಗಳು ಆರೋಗ್ಯದ ಮೇಲೆ ನಿಗಾ ಇಡುವುದನ್ನು, ಮೊಬೈಲಿನ ವಿಸ್ತರಣೆಯಂತೆ ಕೆಲಸಮಾಡುವುದನ್ನೆಲ್ಲ ಕಲಿತುಬಿಟ್ಟಿವೆ (ಸ್ಮಾರ್ಟ್‌ವಾಚ್ ಬಳಸಿ ಮೊಬೈಲಿಗೆ ಬರುವ ಸಂದೇಶವನ್ನು ಓದುವುದು, ಕರೆಗಳಿಗೆ ಉತ್ತರಿಸುವುದು ಸಾಧ್ಯ; ಹೃದಯದ ಬಡಿತ-ದೇಹದ ಉಷ್ಣತೆಯನ್ನು, ನಾವು ಮಾಡುತ್ತಿರುವ ವ್ಯಾಯಾಮದ ಪ್ರಮಾಣವನ್ನು ಗಮನಿಸಿಕೊಳ್ಳುವ ಸಾಮರ್ಥ್ಯವೂ ಕೆಲ ವಾಚುಗಳಲ್ಲಿರುತ್ತವೆ). ಮೊದಲಿಗೆ ಮೊಬೈಲ್ ಫೋನಿನ ಜೊತೆಗಷ್ಟೆ ಬಳಕೆಯಾಗುತ್ತಿದ್ದ ಈ ಸ್ಮಾರ್ಟ್ ಕೈಗಡಿಯಾರಗಳು ಮುಂದೊಮ್ಮೆ ಮೊಬೈಲಿಗೆ ಪರ್ಯಾಯವಾಗಿ ಬೆಳೆದರೂ ಆಶ್ಚರ್ಯವಿಲ್ಲ ಎಂದು ತಜ್ಞರು ಹೇಳುತ್ತಾರೆ. 

ತಂತ್ರಜ್ಞಾನದ ಪ್ರಪಂಚವೆಂದರೆ ಹಾಗೆಯೇ ತಾನೆ? ಬದಲಾವಣೆಯೇ ಈ ಜಗದ ನಿಯಮ!

ಪ್ರಸ್ತುತ ಬರಹದೊಡನೆ ಈ ಸರಣಿ ಮುಕ್ತಾಯವಾಯಿತು | ಈವರೆಗಿನ ಮುಖಗಳು

ಶುಕ್ರವಾರ, ಜುಲೈ 24, 2015

ಸ್ಮಾರ್ಟ್‌ಫೋನ್ ಮುಖ ೯: ಸ್ಮಾರ್ಟ್ ಮನೆಯ ಸ್ಮಾರ್ಟ್ ಕೀಲಿ

ಎಲ್ಲ ಸಾಧನಗಳೂ ಒಂದೊಂದಾಗಿ ಸ್ಮಾರ್ಟ್ ಆಗುತ್ತಿದ್ದಂತೆ ಒಟ್ಟಾರೆಯಾಗಿ ನಮ್ಮ ಮನೆಯೇ ಸ್ಮಾರ್ಟ್ ಆಗಿಬಿಟ್ಟಿದೆಯಲ್ಲ, ಈ ಸ್ಮಾರ್ಟ್ ಮನೆಯೊಡನೆ ಸುಲಭವಾಗಿ ವ್ಯವಹರಿಸಲು ಮೊಬೈಲ್ ಫೋನನ್ನು ಬಳಸಬಹುದು. ಮೊಬೈಲ್ ಫೋನ್ ಸಹಾಯದಿಂದ ತೆರೆಯಬಹುದಾದ ಸ್ಮಾರ್ಟ್ ಬೀಗಗಳು ಈಗಾಗಲೇ ತಯಾರಾಗಿವೆ. ಮನೆಯ ಸ್ವಿಚ್ಚುಗಳನ್ನು ಮೊಬೈಲ್ ಬಳಸಿಯೇ ಹೊತ್ತಿಸುವುದು - ಆರಿಸುವುದು, ಮನೆಯಲ್ಲಿ ನಡೆಯುತ್ತಿರುವ ಘಟನೆಗಳ ಮೇಲೆ ಮೊಬೈಲ್ ಮೂಲಕವೇ ಕಣ್ಣಿಡುವುದು ಸಾಧ್ಯವಾಗಿದೆ. ಬಿಸಿಲಿನಲ್ಲಿ ನಿಂತಿರುವ ಕಾರಿನ ಬಳಿ ಹೋಗುವಷ್ಟರಲ್ಲೇ ಅದರ ಏಸಿ ಪ್ರಾರಂಭವಾಗುವಂತೆ ಮಾಡುವ ವ್ಯವಸ್ಥೆ ಕೂಡ ಇದೆ. ಕಂಪ್ಯೂಟರಿನ ಪ್ರೆಸೆಂಟೇಶನ್ ಇರಲಿ, ಟೀವಿಯ ಚಾನೆಲ್ ಇರಲಿ - ಎಲ್ಲವನ್ನೂ ಮೊಬೈಲ್ ಬಳಸಿಯೇ ನಿಯಂತ್ರಿಸುವುದು ಇದೀಗ ಸಾಧ್ಯ. ಇಂಟರ್‌ನೆಟ್ ಸೌಲಭ್ಯ ಕೈಕೊಟ್ಟರೆ ಮೊಬೈಲ್ ಫೋನನ್ನೇ ವೈ-ಫಿ ಹಾಟ್‌ಸ್ಪಾಟ್ ಆಗಿ ಬದಲಿಸಿ ಹಲವು ಸಾಧನಗಳಿಗೆ ಅಂತರಜಾಲ ಸಂಪರ್ಕ ಒದಗಿಸಿಕೊಡುವುದಂತೂ ಈಗಾಗಲೇ ಹಳೆಯ ಸಂಗತಿ!

ಮುಂದಿನ ವಾರ: ಟಿಕ್‌ಟಿಕ್ ಗೆಳೆಯ | ಈವರೆಗಿನ ಮುಖಗಳು

ಶನಿವಾರ, ಜುಲೈ 18, 2015

ಸ್ಮಾರ್ಟ್‌ಫೋನ್ ಮುಖ ೮: ಡಿಜಿಟಲ್ ಸಹಾಯಕ

ದೊಡ್ಡ ಹುದ್ದೆಯಲ್ಲಿರುವ ಅಧಿಕಾರಿಗಳಿಗೆ ಅವರ ಕೆಲಸದಲ್ಲಿ ನೆರವಾಗಲು ಸಹಾಯಕರಿರುತ್ತಾರಲ್ಲ, ಅದೇ ರೀತಿಯಲ್ಲಿ ಮೊಬೈಲ್ ದೂರವಾಣಿ ನಮ್ಮೆಲ್ಲರಿಗೂ ಸಹಾಯಕನಂತೆ ಕೆಲಸಮಾಡುತ್ತಿದೆ ಎನ್ನಬಹುದು. ಮಾಡಬೇಕಿರುವ ಕೆಲಸದ ಬಗ್ಗೆ ನೆನಪಿಸುವುದು, ಹುಟ್ಟುಹಬ್ಬದಂತಹ ಸಂದರ್ಭಗಳನ್ನು ನೆನಪಿಟ್ಟುಕೊಳ್ಳುವುದು, ಮುಂಬರುವ ಪ್ರಯಾಣದ ವಿವರಗಳನ್ನು ನೀಡುವುದು, ಹವಾಮಾನದ ವಿವರಗಳನ್ನು ಕೊಡುವುದು - ಎಲ್ಲವನ್ನೂ ಮೊಬೈಲ್ ಫೋನ್ ಮಾಡುತ್ತದೆ. ಬೇಕಾದಾಗ ಆಟೋ-ಟ್ಯಾಕ್ಸಿಗಳನ್ನು ಕರೆಸುತ್ತದೆ, ಹೋಟಲಿನಿಂದ ಊಟ ತರಿಸಿಕೊಡುತ್ತದೆ. ಮುಖ್ಯವಾದ ಮಾಹಿತಿಯನ್ನು ಗುರುತುಹಾಕಿಕೊಳ್ಳುವುದಕ್ಕೆ, ದಾಖಲೆಗಳನ್ನು ಸ್ಕ್ಯಾನ್ ಮಾಡಿ ಸೂಕ್ತವಾಗಿ ವಿಂಗಡಿಸಿಟ್ಟುಕೊಳ್ಳುವುದಕ್ಕೂ ಮೊಬೈಲ್ ಫೋನ್ ಬಳಸುವುದು ಸಾಧ್ಯ. ಹೀಗೆ ಶೇಖರಿಸಿಟ್ಟುಕೊಂಡ ಮಾಹಿತಿ ನಾವು ಉಪಯೋಗಿಸುವ ಎಲ್ಲ ಸಾಧನಗಳಲ್ಲೂ (ಕಂಪ್ಯೂಟರ್, ಟ್ಯಾಬ್ಲೆಟ್ ಇತ್ಯಾದಿ) ದೊರಕುವಂತೆ ಕೂಡ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲ, ನಾವು ನಿದ್ರಿಸುತ್ತಿರುವ ಸಂದರ್ಭದಲ್ಲಿ ಯಾರೂ ನಮಗೆ ಕರೆಮಾಡಿ ತೊಂದರೆಕೊಡದಂತೆ, ಆಫೀಸಿನಲ್ಲಿದ ಸೈಲೆಂಟ್ ಮೋಡ್ ಅಲ್ಲಿಂದ ಹೊರಬಂದ ತಕ್ಷಣ ಬದಲಾಗುವಂತೆಲ್ಲ ಮಾಡುಕೊಳ್ಳಲು ಕೂಡ ಮೊಬೈಲ್ ಸಹಾಯಕನ ಮೊರೆಹೋಗುವುದು ಸಾಧ್ಯ.

ಮುಂದಿನ ವಾರ: ಸ್ಮಾರ್ಟ್ ಮನೆಯ ಸ್ಮಾರ್ಟ್ ಕೀಲಿ | ಈವರೆಗಿನ ಮುಖಗಳು

ಭಾನುವಾರ, ಜುಲೈ 12, 2015

ಸ್ಮಾರ್ಟ್‌ಫೋನ್ ಮುಖ ೭: ಜೇಬಿನೊಳಗಿನ ಪರ್ಸು

ಅಂಗಡಿಯಲ್ಲಿ ಏನಾದರೂ ಕೊಂಡರೆ ಅದಕ್ಕೆ ನೋಟು-ನಾಣ್ಯಗಳ ರೂಪದ ಪಾವತಿ ನೀಡಬೇಕಿದ್ದ ಪರಿಸ್ಥಿತಿಯನ್ನು ಕ್ರೆಡಿಟ್ ಕಾರ್ಡ್ - ಡೆಬಿಟ್ ಕಾರ್ಡುಗಳು ಬದಲಿಸಿದವಲ್ಲ, ಈಗ ಮೊಬೈಲ್ ಫೋನುಗಳು ಕಾರ್ಡುಗಳನ್ನೇ ಹಳತಾಗಿಸಲು ಹೊರಟಿವೆ. ಬ್ಯಾಂಕ್ ಖಾತೆಯ ಮೂಲಕ ಹಣ ವರ್ಗಾವಣೆ ಇರಲಿ, ಮೊಬೈಲ್ ರೀಚಾರ್ಜ್ ಅಥವಾ ಬಿಲ್ ಪಾವತಿ ಇರಲಿ - ಎಲ್ಲವೂ ಈಗ ಮೊಬೈಲಿನಲ್ಲೇ ಸಾಧ್ಯ. ಮನೆಯ ಟೀವಿಯಿಂದ ಹಲ್ಲುಜ್ಜುವ ಬ್ರಶ್‌ವರೆಗೆ, ದ್ವಿಚಕ್ರ ವಾಹನದಿಂದ ದ್ವಿದಳ ಧಾನ್ಯಗಳವರೆಗೆ ಸಮಸ್ತವನ್ನೂ ಮೊಬೈಲಿನಲ್ಲೇ ಕೊಳ್ಳಬಹುದು. ಬಸ್ಸು-ರೈಲು-ವಿಮಾನಗಳಲ್ಲಿ ಟಿಕೇಟು ಕಾಯ್ದಿರಿಸಬಹುದು. ಮೊಬೈಲ್ ರೀಚಾರ್ಜ್, ಟ್ಯಾಕ್ಸಿ, ಆನ್‌ಲೈನ್ ಶಾಪಿಂಗ್ ಮುಂತಾದ ಅನೇಕ ಸೇವೆಗಳನ್ನು ಬಳಸಲು 'ವ್ಯಾಲೆಟ್'ಗಳಲ್ಲಿ ಹಣ ಇಟ್ಟು ಬೇಕಾದಾಗ ಬೇಕಾದಷ್ಟು ಮೊತ್ತವನ್ನು ಮೊಬೈಲಿನಿಂದಲೇ ಪಾವತಿಸುವ ಅಭ್ಯಾಸವೂ ಬೆಳೆಯುತ್ತಿದೆ. ಅಷ್ಟೇ ಅಲ್ಲ, ಒಂದೇ ವ್ಯಾಲೆಟ್ ಅನ್ನು ಹಲವು ಸೇವೆಗಳಿಗಾಗಿ ಬಳಸುವ ಯೋಚನೆಗಳೂ ಕಾರ್ಯರೂಪಕ್ಕೆ ಬಂದಿವೆ. ಅಂಗಡಿಯಲ್ಲಿ ಕಾರ್ಡ್ ಉಜ್ಜುವ ಬದಲು ಮೊಬೈಲನ್ನೇ ಸ್ಕ್ಯಾನ್ ಮಾಡಿ ಹಣ ಪಾವತಿಸುವ ರೋಚಕ ಕಲ್ಪನೆ ನಿಯರ್ ಫೀಲ್ಡ್ ಕಮ್ಯುನಿಕೇಶನ್‌ನಂತಹ (ಎನ್‌ಎಫ್‌ಸಿ) ತಂತ್ರಜ್ಞಾನಗಳಿಂದ ಸಾಕಾರವಾಗುತ್ತಿದೆ.

ಮುಂದಿನ ವಾರ: ಡಿಜಿಟಲ್ ಸಹಾಯಕ | ಈವರೆಗಿನ ಮುಖಗಳು

ಬುಧವಾರ, ಜುಲೈ 8, 2015

ಕಂಪ್ಯೂಟರ್ ಬಳಕೆಯ ಹೊಸದೊಂದು ಆಯಾಮ

ಕಂಪ್ಯೂಟರ್ ಬಳಕೆ ಬಹಳ ಸಾಮಾನ್ಯವಾದ ಸಂಗತಿ. ಪುಟ್ಟ ಮಕ್ಕಳಿಂದ ಅಜ್ಜ-ಅಜ್ಜಿಯರವರೆಗೆ ಬಹುತೇಕ ಎಲ್ಲರೂ ತಮ್ಮತಮ್ಮ ಅಗತ್ಯಗಳಿಗಾಗಿ ಕಂಪ್ಯೂಟರನ್ನು ಸರಾಗವಾಗಿ ಬಳಸುತ್ತಾರೆ.

ಆದರೆ ಕಂಪ್ಯೂಟರಿನ ನಿರ್ವಹಣೆ ಮಾತ್ರ ನಮ್ಮಲ್ಲಿ ಅನೇಕರಿಗೆ ತಲೆನೋವು ತರಿಸುವ ಸಂಗತಿ. ತಂತ್ರಾಂಶಗಳನ್ನು ಇನ್‌ಸ್ಟಾಲ್ ಮಾಡುವುದು, ಅವುಗಳನ್ನು ನವೀಕರಿಸುವುದು (ಅಪ್‌ಗ್ರೇಡ್), ವೈರಸ್ ಇತ್ಯಾದಿ ಬರದಂತೆ ನೋಡಿಕೊಳ್ಳುವುದು - ಇದನ್ನೆಲ್ಲ ಇಷ್ಟಪಟ್ಟು ಮಾಡುವವರು ಬಹಳ ಕಡಿಮೆ ಎಂದೇ ಹೇಳಬೇಕು.

ಈ ಸಮಸ್ಯೆಗೆ ಪರಿಹಾರ ಏನು? ಇನ್‌ಸ್ಟಾಲ್-ಅಪ್‌ಗ್ರೇಡುಗಳ ತಲೆಬಿಸಿಯಿಲ್ಲದೆ ಕಂಪ್ಯೂಟರನ್ನು ಬಳಸುವುದು ಸಾಧ್ಯವಿಲ್ಲವೆ?

ಕಂಪ್ಯೂಟರ್ ಬಳಕೆಯ ಹೊಸದೊಂದು ಆಯಾಮ ಕುರಿತ ವಿಶೇಷ ಲೇಖನ ಇಲ್ಲಿದೆ. ಓದಿ, ಪ್ರತಿಕ್ರಿಯೆ ನೀಡಿ.

ಈ ಲೇಖನದಲ್ಲಿ ಬಳಸಲಾಗಿರುವ ಹೊಸಬಗೆಯ ವಿನ್ಯಾಸ ಹೇಗಿದೆ? ನಿಮ್ಮ ಅನಿಸಿಕೆ ತಿಳಿಯುವ ಕುತೂಹಲ ನಮ್ಮದು.

ಶುಕ್ರವಾರ, ಜುಲೈ 3, 2015

ಸ್ಮಾರ್ಟ್‌ಫೋನ್ ಮುಖ ೬: ದಾರಿತೋರುವ ಮಾರ್ಗದರ್ಶಕ

ಪ್ರಯಾಣದ ಸಂದರ್ಭದಲ್ಲಿ ಸಾಗಬೇಕಾದ ದಾರಿಯ ಕುರಿತು ಗೊಂದಲವಾಗುವುದು ಅದೆಷ್ಟೋ ಬಾರಿ. ನಾವು ಹೋಗಬೇಕಿರುವ ಸ್ಥಳ ಎಷ್ಟು ದೂರದಲ್ಲಿದೆ, ಅಲ್ಲಿಗೆ ಹೋಗಬೇಕಿರುವ ದಾರಿ ಯಾವುದು, ಮಾರ್ಗಮಧ್ಯೆ ಯಾವ ರಸ್ತೆಯಲ್ಲಿ ತಿರುಗಬೇಕು - ಇದೆಲ್ಲ ಸಾಕಷ್ಟು ಗೊಂದಲಮೂಡಿಸುವ ಸಂಗತಿಗಳು. ಇಂತಹ ಗೊಂದಲಗಳಿಂದ ಪಾರಾಗಲು ನಾವು ಮೊಬೈಲ್ ಮೊರೆಹೋಗುವುದು ಸಾಧ್ಯ. ಈಗಿನ ಬಹುತೇಕ ಎಲ್ಲ ಫೋನುಗಳಲ್ಲೂ ಜಿಪಿಎಸ್ ಸೌಲಭ್ಯ ಇರುತ್ತದಲ್ಲ, ನಮ್ಮ ಮಾರ್ಗದರ್ಶಕನಂತೆ ಕೆಲಸಮಾಡಲು ಮೊಬೈಲ್ ಫೋನ್ ಅದೇ ತಂತ್ರಜ್ಞಾನವನ್ನು ಬಳಸುತ್ತದೆ. ನಾವು ಎಲ್ಲಿದ್ದೇವೆ ಎಂದು ಮ್ಯಾಪಿನಲ್ಲಿ ನೋಡಲು, ಹೋಗಬೇಕಾದ ದಾರಿಯನ್ನು ಗುರುತುಹಾಕಿಕೊಳ್ಳಲು 'ಗೂಗಲ್ ಮ್ಯಾಪ್ಸ್'ನಂತಹ ಹಲವು ಆಪ್‌ಗಳನ್ನು ಬಳಸುವುದು ಸಾಧ್ಯ. ಟ್ಯಾಕ್ಸಿ-ಆಟೋಗಳನ್ನು ಮೊಬೈಲ್ ಮೂಲಕವೇ ಕರೆಸುವ ಸೌಲಭ್ಯ ನೀಡುವ ಆಪ್‌ಗಳಲ್ಲಿ ವಾಹನ ಎಲ್ಲಿದೆ ಎಂದು ನಮಗೆ ತೋರಿಸುವುದಕ್ಕೆ, ನಾವೆಲ್ಲಿದ್ದೇವೆ ಎಂದು ಚಾಲಕರಿಗೆ ತಿಳಿಸುವುದಕ್ಕೂ ಇದೇ ತಂತ್ರಜ್ಞಾನ ಬಳಕೆಯಾಗುತ್ತದೆ. ಅಂದಹಾಗೆ ದಾರಿತೋರುವುದು ಎಂದರೆ ಮ್ಯಾಪ್ ತೋರಿಸುವುದಷ್ಟೇ ಏನೂ ಅಲ್ಲವಲ್ಲ, ಸುತ್ತಮುತ್ತ ಕತ್ತಲೆಯಿದ್ದಾಗ ಮೊಬೈಲ್ ಫೋನನ್ನೇ ಟಾರ್ಚಿನಂತೆ ಬಳಸುವುದು ಕೂಡ ಸಾಧ್ಯ. ಫ್ಲ್ಯಾಶ್ ಇಲ್ಲದ ಫೋನುಗಳಲ್ಲಿ ಬಳಸಲು ಪರದೆಯನ್ನೇ ಟಾರ್ಚಿನಂತೆ ಬೆಳಗಬಲ್ಲ ಆಪ್‌ಗಳೂ ಇವೆ.

ಮುಂದಿನ ವಾರ: ಜೇಬಿನೊಳಗಿನ ಪರ್ಸು | ಈವರೆಗಿನ ಮುಖಗಳು

ಸೋಮವಾರ, ಜೂನ್ 29, 2015

ಸ್ಮಾರ್ಟ್‌ಫೋನ್ ಮುಖ ೫: ಮಾಹಿತಿಯ ಮಹಾಮಳಿಗೆ

ವಿಶ್ವವ್ಯಾಪಿ ಜಾಲದಲ್ಲಿ (ವರ್ಲ್ಡ್‌ವೈಡ್ ವೆಬ್) ಮಾಹಿತಿಯ ಮಹಾಪೂರವೇ ಇದೆಯಲ್ಲ, ಅಲ್ಲಿಗೆ ಪ್ರವೇಶಿಸಲು ಮೊಬೈಲ್ ದೂರವಾಣಿಯೇ ನಮ್ಮ ಹೆಬ್ಬಾಗಿಲು. ಸರ್ಚ್ ಇಂಜನ್‌ಗಳನ್ನು ಬಳಸಿ ಮಾಹಿತಿಯನ್ನು ಹುಡುಕಲು, ಹುಡುಕಿದ ಮಾಹಿತಿಯಲ್ಲಿ ನಮಗೆ ಬೇಕಾದ್ದನ್ನು ಉಳಿಸಿಟ್ಟುಕೊಳ್ಳಲು, ಹಾಗೆ ಉಳಿಸಿಟ್ಟದ್ದನ್ನು ಸುಲಭವಾಗಿ ಮತ್ತೆ ತೆರೆದು ಓದಲು ಬೇಕಾದ ಅನೇಕ ಸೌಲಭ್ಯಗಳನ್ನು ಸ್ಮಾರ್ಟ್‌ಫೋನುಗಳು ನಮಗೆ ಒದಗಿಸುತ್ತವೆ. ವಿಕಿಪೀಡಿಯದಂತಹ ವಿಶ್ವಕೋಶಗಳು ಇದೀಗ ಮೊಬೈಲ್ ಆಪ್ ಮೂಲಕ ನಮ್ಮ ಅಂಗೈಯಲ್ಲೇ ದೊರಕುತ್ತವೆ. ಕ್ಷಣಕ್ಷಣದ ಸುದ್ದಿಗಳನ್ನು ಬಿತ್ತರಿಸುವ ಅದೆಷ್ಟೋ ಸೌಲಭ್ಯಗಳು ಇಂದು ಮೊಬೈಲಿನಲ್ಲಿವೆ. ಪತ್ರಿಕೆಗಳೂ ಅಷ್ಟೆ, ಯಾವ ದೇಶದಲ್ಲಿ ಪ್ರಕಟವಾಗುವ ಪತ್ರಿಕೆಯೇ ಆದರೂ ಅದು ಪ್ರಕಟವಾಗುತ್ತಿದ್ದಂತೆಯೇ ನಮ್ಮ ಮೊಬೈಲಿನಲ್ಲಿ ಪ್ರತ್ಯಕ್ಷವಾಗುವಂತೆ ಮಾಡಿಕೊಳ್ಳುವುದು ಸಾಧ್ಯ. ಇನ್ನು ಪುಸ್ತಕಗಳಂತೂ ಸಾವಿರಾರು ಸಂಖ್ಯೆಯಲ್ಲಿ ನಮ್ಮ ಮೊಬೈಲಿನಲ್ಲೇ ದೊರಕಬಲ್ಲವು. ಅಪರಿಚಿತ ಭಾಷೆಯ ಪಠ್ಯ ಅಥವಾ ಚಿತ್ರವನ್ನು ನಮ್ಮ ಭಾಷೆಗೆ ಅನುವಾದಿಸಿಕೊಳ್ಳುವುದರಿಂದ ಪ್ರಾರಂಭಿಸಿ ಹೊಸ ಭಾಷೆಯನ್ನು ಕಲಿಯುವತನಕ ಸ್ಮಾರ್ಟ್‌ಫೋನುಗಳು ನಮಗೆ ಹಲವು ಬಗೆಯಲ್ಲಿ ನೆರವಾಗುತ್ತವೆ. ಪ್ರವಾಸಿ ತಾಣಗಳ, ಹೋಟಲ್ಲುಗಳ ಬಗ್ಗೆ ತಿಳಿಯಬೇಕೆಂದರೆ ಅದಕ್ಕೂ ಮೊಬೈಲ್ ಫೋನ್ ಮೊರೆಹೋಗಬಹುದು.

ಮುಂದಿನ ವಾರ: ದಾರಿತೋರುವ ಮಾರ್ಗದರ್ಶಕ | ಈವರೆಗಿನ ಮುಖಗಳು

ಮಂಗಳವಾರ, ಜೂನ್ 23, 2015

ಕನ್ನಡದಲ್ಲಿ ವಿಜ್ಞಾನ ತಂತ್ರಜ್ಞಾನ ಸಾಹಿತ್ಯ : ವಿಶ್ವಾಸಾರ್ಹತೆ ಹೆಚ್ಚಿಸಿಕೊಂಡ ಕಸಾಪ

ಬೇಳೂರು ಸುದರ್ಶನ

ಕನ್ನಡ ಸಾಹಿತ್ಯ ಪರಿಷತ್ತಿಗೆ ನೂರು ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ (ಸ್ಥಾಪನೆ: ಕ್ರಿಶ ೧೯೧೫) ಪ್ರಕಟಿಸಲು ಉದ್ದೇಶಿಸಿರುವ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯ ೧೭ ಸಂಪುಟಗಳಲ್ಲಿ ೧೪ನೇ ಸಂಪುಟವೇ ಮೊಟ್ಟಮೊದಲನೆಯದಾಗಿ ಬಿಡುಗಡೆಯಾಗಿದೆ. ಇತ್ತೀಚೆಗೆ ಶ್ರವಣಬೆಳಗೊಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾದ ಈ `ವಿಜ್ಞಾನ ತಂತ್ರಜ್ಞಾನ’ ಸಂಪುಟವು ಅತ್ಯಂತ ಹೊಣೆಗಾರಿಕೆಯಿಂದ ಪ್ರಕಟಿಸಿದ ಸಂಪಾದಿತ ಕೃತಿಯಾಗಿದೆ. ವಿಜ್ಞಾನ ತಂತ್ರಜ್ಞಾನ ಕುರಿತು ಕನ್ನಡದಲ್ಲಿ ನಡೆದ ಸಾಹಿತ್ಯಕ ಪ್ರಯತ್ನಗಳ ಸಮಗ್ರ ಚಿತ್ರಣವನ್ನು ಅಚ್ಚುಕಟ್ಟಾಗಿ ಮತ್ತು ಕೊನೇಕ್ಷಣದ ಬೆಳವಣಿಗೆಗಳನ್ನೂ ಸೇರಿಸಿ ಪ್ರಕಟಿಸಿರುವುದು ಅಭಿನಂದನೀಯ. ಸ್ವತಃ ವಿಜ್ಞಾನ ಲೇಖಕರಾಗಿ ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವ, ವಿವಿಧ ಸಂಪಾದಿತ ಕೃತಿಗಳಲ್ಲಿ ಹೊಣೆಗಾರಿಕೆ ಹೊತ್ತುಕೊಂಡು ಸಂಪೂರ್ಣಗೊಳಿಸಿರುವ ಹಿರಿಯರಾದ ಟಿ ಆರ್ ಅನಂತರಾಮು ಈ ಸಂಪುಟದಲ್ಲೂ ತಮ್ಮ ವೃತ್ತಿಪರತೆ ತೋರಿದ್ದಾರೆ. ಕನ್ನಡದ ವಿಜ್ಞಾನ ಲೇಖಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಯಕ್ಕೆ ಸರಿಯಾಗಿ ಸಂಪುಟವನ್ನು ಮುದ್ರಿಸಿಕೊಟ್ಟ ಅವರು ಕೃತಿಯ ಮೂಲಕವೇ ವೈಜ್ಞಾನಿಕ ಮನೋಭಾವ ಪ್ರದರ್ಶಿಸಿದ್ದಾರೆ!

ಕರ್ನಾಟಕದ ವಿಜ್ಞಾನ ಬರವಣಿಗೆಯೂ ಸರಿಸುಮಾರು ಕಸಾಪದಷ್ಟೇ ಹಳತು. ೧೯ನೇ ಶತಮಾನದಲ್ಲಿ ಚಿಗುರೊಡೆದು ೨೦ನೇ ಶತಮಾನದ ಆರಂಭದಲ್ಲಿ ಯೌವ್ವನಾವಸ್ಥೆಗೆ ಬಂದ ವಿಜ್ಞಾನ ಸಾಹಿತ್ಯವು ಈಗ ಪ್ರೌಢತೆಯ ಹೆಜ್ಜೆಗಳನ್ನು ಇಡುತ್ತಿದೆ. ಭಾರತೀಯ ವಿಜ್ಞಾನ ಸಂಸ್ಥೆ ಸೇರಿದಂತೆ ಹಲವು ವಿಜ್ಞಾನ ತಂತ್ರಜ್ಞಾನ ಸಂಸ್ಥೆಗಳನ್ನು ಹೊಂದಿರುವ ಕನ್ನಡ ನಾಡಿನಲ್ಲಿ ವಿಜ್ಞಾನ ಸಾಹಿತ್ಯ ವಿಪುಲವಾಗಿದೆ; ಹಲವು ರಂಗಗಳನ್ನು ವ್ಯಾಪಿಸಿದೆ; ವೈಜ್ಞಾನಿಕ ಪರಿಭಾಷೆಯನ್ನು ರೂಪಿಸಿದೆ; ನಿಘಂಟು, ವಿಶ್ವಕೋಶಗಳು ಪ್ರಕಟವಾಗಿವೆ; ವಿಜ್ಞಾನ ಆಧಾರಿತ ಹೋರಾಟಗಳು ನಡೆದಿವೆ.

ಇಂಥ ವೈವಿಧ್ಯಮಯ ಹಿನ್ನೆಲೆಯನ್ನು ಶಿಸ್ತಿನಿಂದ ದಾಖಲಿಸುವುದು ಸವಾಲಿನ ಕೆಲಸ. ಆದರೆ ಟಿ ಆರ್ ಅನಂತರಾಮು ವಿಜ್ಞಾನ ಲೇಖಕರ ಪಡೆಯನ್ನೇ ಕಟ್ಟಿಕೊಂಡು ಈ ಸವಾಲನ್ನು ಯಶಸ್ವಿಯಾಗಿ ಎದುರಿಸಿದ್ದಾರೆ. ವಿಜ್ಞಾನ ಸಾಹಿತ್ಯ, ತಾಂತ್ರಿಕ ಸಾಹಿತ್ಯ, ಮಾಹಿತಿ ತಂತ್ರಜ್ಞಾನ – ಹೀಗೆ ಮೂರು ಕವಲುಗಳಲ್ಲಿ ವಿಷಯವಸ್ತುಗಳನ್ನು ಹರವಿಕೊಂಡ ಅವರು ವಿಜ್ಞಾನ ಸಾಹಿತ್ಯ ವಿಭಾಗದಲ್ಲಿ ಕನ್ನಡ ವಿಜ್ಞಾನ ಸಾಹಿತ್ಯದ ಎಲ್ಲ ಆಯಾಮಗಳನ್ನು ಒಂದೊಂದಾಗಿ ಪರಿಚಯಿಸಿದ್ದಾರೆ.

ಶುಕ್ರವಾರ, ಜೂನ್ 19, 2015

ಸ್ಮಾರ್ಟ್‌ಫೋನ್ ಮುಖ ೪: ಮನರಂಜನೆಯ ಸಾಧನ

ಪ್ರಯಾಣದ ಸಂದರ್ಭದಲ್ಲಿ ಹಾಡು ಕೇಳಬೇಕು ಎಂದರೆ ವಾಕ್‌ಮನ್ ಅನ್ನೋ ಎಫ್‌ಎಂ ರೇಡಿಯೋವನ್ನೋ ಜೊತೆಗೆ ಕೊಂಡೊಯ್ಯುವ ಅಭ್ಯಾಸ ಒಂದು ಕಾಲದಲ್ಲಿತ್ತು. ಮೊಬೈಲ್ ಬಳಕೆ ವ್ಯಾಪಕವಾದಂತೆ ವಾಕ್‌ಮನ್ ಮಾತ್ರವೇ ಏಕೆ, ಇದೀಗ ಐಪಾಡ್ ಕೂಡ ಮೂಲೆಗುಂಪಾಗಿದೆ. ಹಾಗೆಂದಮಾತ್ರಕ್ಕೆ ಮೊಬೈಲ್ ನೀಡುವ ಮನರಂಜನೆ ಹಾಡು ಕೇಳಿಸುವುದಕ್ಕಷ್ಟೇ ಸೀಮಿತವೇನೂ ಆಗಿಲ್ಲ. ಇಂದಿನ ಫೋನುಗಳಲ್ಲಿ ಅತ್ಯಾಧುನಿಕ ಆಟಗಳನ್ನು ಆಡುವುದು ಸಾಧ್ಯ. ಇಂತಹ ಆಟಗಳು ಫೋನಿನಲ್ಲಿರುವ ವಿವಿಧ ಸೆನ್ಸರುಗಳನ್ನು ಬಳಸುವುದರಿಂದ ಫೋನನ್ನು ಆಚೀಚೆ ತಿರುಗಿಸುವಷ್ಟರಿಂದಲೇ ಆಟದ ನಿಯಂತ್ರಣಗಳೆಲ್ಲ ನಮ್ಮ ಕೈವಶವಾಗಿಬಿಡುತ್ತವೆ; ಅಂದರೆ ಕಾರ್ ರೇಸಿನ ಆಟದಲ್ಲಿ ನಮ್ಮ ಮೊಬೈಲನ್ನೇ ಸ್ಟೀರಿಂಗ್ ಚಕ್ರವಾಗಿ ಬಳಸುವುದು ಸಾಧ್ಯವಾಗುತ್ತದೆ. ಇನ್ನು ಮೊಬೈಲಿನಲ್ಲಿ ಅತಿವೇಗದ ಅಂತರಜಾಲ ಸಂಪರ್ಕ (೩ಜಿ, ೪ಜಿ ಇತ್ಯಾದಿ) ಸಿಗುತ್ತಿರುವುದರಿಂದ ಟೀವಿ ಕಾರ್ಯಕ್ರಮ, ಸಿನಿಮಾ ಇತ್ಯಾದಿಗಳನ್ನು ನೋಡುವುದಕ್ಕೂ ನಾವು ಮೊಬೈಲನ್ನೇ ಬಳಸುವುದು ಸಾಧ್ಯವಾಗಿದೆ. ಅತ್ಯುತ್ತಮ ಸ್ಪಷ್ಟತೆಯ ಮೊಬೈಲ್ ಪರದೆಯ ಮೇಲೆ ಉತ್ತಮ ಗುಣಮಟ್ಟದ ವೀಡಿಯೋ ಮೂಡಿಬಂದಿತೆಂದರೆ ನಾವು ಕುಳಿತ ಜಾಗವೇ ದಿವಾನಖಾನೆಯಾಗುತ್ತದೆ, ಮೊಬೈಲೇ ಟೀವಿಯಾಗುತ್ತದೆ!

ಮುಂದಿನ ವಾರ: ಮಾಹಿತಿಯ ಮಹಾಮಳಿಗೆ | ಈವರೆಗಿನ ಮುಖಗಳು

ಬುಧವಾರ, ಜೂನ್ 17, 2015

ಸ್ಮಾರ್ಟ್ ಪೆನ್ನು ಸ್ಮಾರ್ಟ್ ಕಾಗದ!

ಟಿ. ಜಿ. ಶ್ರೀನಿಧಿ

"ಎಲ್ಲಕಡೆಯೂ ಕಂಪ್ಯೂಟರುಗಳು ಬಂದಮೇಲೆ ಕಾಗದ ಬಳಸುವ ಅಗತ್ಯವೇ ಇರುವುದಿಲ್ಲ" - ಎನ್ನುವ 'ಪೇಪರ್‌ಲೆಸ್' ಪ್ರಪಂಚದ ಕಲ್ಪನೆ ಕಂಪ್ಯೂಟರುಗಳು ಪರಿಚಯವಾದ ಕಾಲದಿಂದಲೇ ಚಾಲ್ತಿಯಲ್ಲಿದೆ. ಕಾಗದದ ಮೇಲಿನ ನಮ್ಮ ಅವಲಂಬನೆ ಕೆಲವೇ ವರ್ಷಗಳಲ್ಲಿ ಕಡಿಮೆಯಾಗಲಿದೆ ಎಂದು ಹೇಳಲು ಶುರುಮಾಡಿ ದಶಕಗಳೇ ಕಳೆದಿವೆ.

ಆದರೆ ಕಾಗದದ ಬೆಲೆ ಕಡಿಮೆಯಿರುವುದರಿಂದಲೋ, ಡಿಜಿಟಲ್ ರೂಪಕ್ಕಿಂತ ಕಾಗದವೇ ನಮ್ಮ ಮನಸ್ಸಿಗೆ ಹೆಚ್ಚು ಆಪ್ತವೆನಿಸುವುದರಿಂದಲೋ ಕಾಗದದ ಬಳಕೆ ಇಷ್ಟೆಲ್ಲ ಸಮಯದ ನಂತರವೂ ಮುಂದುವರೆದಿದೆ. ಕೆಲವು ಸಂದರ್ಭಗಳಲ್ಲಿ ಕಾಗದಕ್ಕೆ ಪೆನ್ನು ಜೋಡಿಯಾಗಿದ್ದರೆ ಇನ್ನು ಕೆಲವು ಬಾರಿ ಕಂಪ್ಯೂಟರಿನಲ್ಲಿರುವ ಮಾಹಿತಿಯೇ ಪ್ರಿಂಟರ್ ಮಾರ್ಗವಾಗಿ ಕಾಗದದ ಮೇಲಿಳಿಯುತ್ತದೆ. ಹೇಗೋ, ಪ್ರಪಂಚ ಮಾತ್ರ ಇನ್ನೂ 'ಪೇಪರ್‌ಲೆಸ್' ಆಗಿಯೇ ಇಲ್ಲ.

ಹಾಗೆಂದಮಾತ್ರಕ್ಕೆ ಕಾಗದದ ಬಳಕೆಯ ಮೇಲೆ ತಂತ್ರಜ್ಞಾನ ಪ್ರಭಾವವನ್ನೇ ಬೀರಿಲ್ಲ ಎನ್ನುವಂತಿಲ್ಲ.

ಸೋಮವಾರ, ಜೂನ್ 15, 2015

ಸಂವಹನಕ್ಕೆ ಸಿದ್ಧತೆ: ತಂತ್ರಜ್ಞಾನದ ಸವಲತ್ತುಗಳು

ಮೇ ೧೬, ೨೦೧೫ರಂದು ಬೆಂಗಳೂರಿನಲ್ಲಿ ನಡೆದ 'ಕನ್ನಡ ವಿಜ್ಞಾನ ಮತ್ತು ತಂತ್ರಜ್ಞಾನ ಬರಹಗಾರರ ಸಮ್ಮೇಳನ/ಕಾರ್ಯಾಗಾರ'ದಲ್ಲಿ ಮಾಡಿದ ಭಾಷಣದ ಪಠ್ಯರೂಪ
ಸುಧೀಂದ್ರ ಹಾಲ್ದೊಡ್ಡೇರಿ

ನಾನಿಂದು ಮಾತನಾಡುತ್ತಿರುವ ವಿಷಯ ಕೇವಲ ಸಂವಹನಕ್ಕಷ್ಟೇ ಸೀಮಿತವಾಗಿಲ್ಲ, ನಮ್ಮ ಇಡೀ ಜೀವನಶೈಲಿಗೇ ಅನ್ವಯಿಸುವಂಥದ್ದು. ಕಾರಣ, ತಂತ್ರಜ್ಞಾನ ನೀಡುತ್ತಿರುವ ಸವಲತ್ತುಗಳ ಹೊರತಾಗಿ ನಾವು ಏನನ್ನೂ ಊಹಿಸಿಕೊಳ್ಳಲಾರದ ಸ್ಥಿತಿಯಲ್ಲಿದ್ದೇವೆ. ಹಾಗೆಂದ ಮಾತ್ರಕ್ಕೆ "ನಮ್ಮ ಕಾಲದಲ್ಲಿ ಎಷ್ಟೆಲ್ಲಾ ಕಷ್ಟ ಪಡುತ್ತಿದ್ದೆವು, ಈಗಿನವರಿಗೆ ಅನುಕೂಲಗಳು ಜಾಸ್ತಿ, ಶ್ರದ್ಧೆ ಕಡಿಮೆ, ಕಾರ್ಯಭಾರವೂ ಹೆಚ್ಚಿಲ್ಲ" ಎಂದು ಹಳಿಯಲು ಹೊರಟಿಲ್ಲ. ನಿಗದಿತ ಹಳಿಯ ಮೇಲೆ ನನ್ನ ಯೋಚನಾ ಲಹರಿಯ ಬೋಗಿಗಳನ್ನು ಕೂಡಿಸಲು ಹೊರಟಿದ್ದೇನೆ.

ಸಿದ್ಧತೆಯೆಂಬುದು ನಮ್ಮೆಲ್ಲ ಕೆಲಸಗಳಿಗೆ ಅತ್ಯಗತ್ಯವಾದದ್ದು. ಸಿದ್ಧತೆಯಿಲ್ಲದ ಯಾವುದೇ ಕಾರ್ಯ ಅಪೂರ್ಣವಾಗಬಲ್ಲದ್ದು. ಸಂವಹನವೆಂದೊಡನೆ ಅದು ಪತ್ರಿಕೆಗಳ ಮೂಲಕ ಇರಬಹುದು ಅಥವಾ ರೇಡಿಯೊ ಮೂಲಕ ಇರಬಹುದು, ಟೀವಿ ಚಾನೆಲ್ ಮೂಲಕ ಇರಬಹುದು ಅಥವಾ ಇಂಟರ್‌ನೆಟ್ ಮೂಲಕ ನಡೆಸುವ ಬಹು-ಮಾಧ್ಯಮ ಅಭಿವ್ಯಕ್ತಿಯಿರಬಹುದು. ಮೊದಲ ಸಿದ್ಧತೆ ವಿಷಯವೊಂದರ ಕುರಿತು ಮಾಹಿತಿ ಟಿಪ್ಪಣಿ ಸಂಗ್ರಹಣೆ.

ಶುಕ್ರವಾರ, ಜೂನ್ 12, 2015

ಸ್ಮಾರ್ಟ್‌ಫೋನ್ ಮುಖ ೩: ಛಾಯಾಗ್ರಹಣದ ಸಂಗಾತಿ

ಚಿತ್ರಗಳನ್ನು ಕ್ಲಿಕ್ಕಿಸುವುದು ಹಾಗೂ ವೀಡಿಯೋ ಸೆರೆಹಿಡಿಯುವ ಕೆಲಸ ಈಚೆಗೆ ಮೊಬೈಲ್ ಫೋನಿನ ಪ್ರಮುಖ ಜವಾಬ್ದಾರಿಗಳಲ್ಲೊಂದಾಗಿ ಬೆಳೆದುಬಿಟ್ಟಿದೆ. ಮೊಬೈಲಿನಲ್ಲೂ ಫೋಟೋ ತೆಗೆಯಬಹುದು ಎನ್ನುವ ಕಾಲ ಹೋಗಿ ಮೊಬೈಲೇ ನಮ್ಮ ಕ್ಯಾಮೆರಾ ಎಂದು ಹೇಳುವ ಪರಿಸ್ಥಿತಿ ಬಂದಿದೆ ಎಂದರೂ ಸರಿಯೇ. ಮೊಬೈಲ್ ಕ್ಯಾಮೆರಾಗಳ ಸಾಮರ್ಥ್ಯವೂ ಇದಕ್ಕೆ ತಕ್ಕಂತೆ ಬೆಳೆಯುತ್ತಿದೆ. ಸುಮ್ಮನೆ ಮೆಗಾಪಿಕ್ಸೆಲ್‌ಗಳ ಲೆಕ್ಕ ತೋರಿಸುವ ಬದಲಿಗೆ ನಿಜಕ್ಕೂ ಉತ್ತಮ ಗುಣಮಟ್ಟದ ಛಾಯಾಚಿತ್ರ-ವೀಡಿಯೋಗಳನ್ನು ಸೆರೆಹಿಡಿಯುವ ಕ್ಯಾಮೆರಾಗಳನ್ನು ನಾವು ಇಂದಿನ ಫೋನುಗಳಲ್ಲಿ ನೋಡಬಹುದು. ಮಾರುಕಟ್ಟೆಯಲ್ಲಿರುವ ಕೆಲ ಫೋನುಗಳನ್ನು ಗಮನಿಸಿದರೆ ಕಡಿಮೆ ಬೆಳಕಿನಲ್ಲೂ ಉತ್ತಮ ಗುಣಮಟ್ಟದ ಚಿತ್ರಗಳನ್ನು ಕ್ಲಿಕ್ಕಿಸುವ ಸಾಮರ್ಥ್ಯ ಅದರ ಕ್ಯಾಮೆರಾಗಳಲ್ಲಿರುವುದನ್ನು ನಾವು ನೋಡಬಹುದು. ಎಸ್‌ಎಲ್‌ಆರ್ ಕ್ಯಾಮೆರಾಗಳಲ್ಲಿರುವಂತೆ ವಿವಿಧ ವಿವರಗಳನ್ನೆಲ್ಲ ನಾವೇ ಹೊಂದಿಸುವ (ಮ್ಯಾನ್ಯುಯಲ್ ಸೆಟ್ಟಿಂಗ್ಸ್) ಸೌಲಭ್ಯವೂ ಹಲವು ಫೋನುಗಳಲ್ಲಿರುತ್ತದೆ. ಇಷ್ಟೆಲ್ಲ ಸಮರ್ಥವಾದ ಕ್ಯಾಮೆರಾ ಜೊತೆಗೆ ಕ್ಲಿಕ್ಕಿಸಿದ ಚಿತ್ರವನ್ನು ಚೆಂದಗಾಣಿಸುವ - ವೀಡಿಯೋ ಅನ್ನು ಸಂಪಾದಿಸುವ ಸೌಲಭ್ಯವೂ ಮೊಬೈಲಿನಲ್ಲೇ ಸಿಗುತ್ತಿರುವುದರಿಂದ ಇಂದಿನ ಮೊಬೈಲ್ ಫೋನುಗಳು ನಿಜಕ್ಕೂ ನಮ್ಮ ಛಾಯಾಗ್ರಹಣದ ಸಂಗಾತಿಗಳಾಗಿ ಬೆಳೆದುಬಿಟ್ಟಿವೆ ಎನ್ನಬಹುದು.

ಮುಂದಿನ ವಾರ: ಮನರಂಜನೆಯ ಸಾಧನ | ಈವರೆಗಿನ ಮುಖಗಳು

ಬುಧವಾರ, ಜೂನ್ 10, 2015

'ಕಾಲ್ ಡ್ರಾಪ್' ಕಾಲ

ಕಳೆದ ಕೆಲದಿನಗಳಿಂದ ಮಾಧ್ಯಮಗಳಲ್ಲಿ 'ಕಾಲ್ ಡ್ರಾಪ್' ಕುರಿತ ಸುದ್ದಿ ನಮಗೆ ಪದೇಪದೇ ಕಾಣಸಿಗುತ್ತಿದೆ. ಇಷ್ಟಕ್ಕೂ ಈ 'ಕಾಲ್ ಡ್ರಾಪ್' ಎಂದರೇನು? ಕಾಲ್‌ಗಳೇಕೆ ಡ್ರಾಪ್ ಆಗುತ್ತವೆ? ಇದರ ಬಗ್ಗೆ ಸರಕಾರ ತಲೆ ಕೆಡಿಸಿಕೊಂಡಿರುವುದೇಕೆ?
ಟಿ. ಜಿ. ಶ್ರೀನಿಧಿ

ಬಸ್ಸಿನಲ್ಲೋ ಕಾರಿನಲ್ಲೋ ಕುಳಿತು ಮೊಬೈಲಿನಲ್ಲಿ ಮಾತನಾಡುತ್ತಿರುವಾಗ ಇದ್ದಕ್ಕಿದ್ದಂತೆ ಆ ಕರೆ ಸ್ಥಗಿತಗೊಳ್ಳುವುದು ಮೊಬೈಲ್ ಬಳಕೆದಾರರೆಲ್ಲರ ಸಾಮಾನ್ಯ ಅನುಭವವೆಂದೇ ಹೇಳಬೇಕು. ಹೊರಗಡೆಯ ಮಾತು ಹಾಗಿರಲಿ, ಮೊಬೈಲಿನಲ್ಲಿ ಮಾತನಾಡುತ್ತ ಮನೆಯೊಳಗೆ ಓಡಾಡುವಾಗಲೂ ಕೆಲವೊಮ್ಮೆ ಈ ಅನುಭವ ಆಗುವುದುಂಟು.

"ಅರೆ, ಈಗಷ್ಟೆ ಸರಿಯಾಗಿ ಕೇಳಿಸುತ್ತಿದ್ದದ್ದು ಇದ್ದಕ್ಕಿದ್ದಂತೆ ಸ್ಥಗಿತವಾಗಿಬಿಟ್ಟಿತಲ್ಲ, ಸಿಗ್ನಲ್ ಕೂಡ ಚೆನ್ನಾಗಿಯೇ ಇದೆ. ಇದೆಂಥದಿದು ವಿಚಿತ್ರ!" ಎನ್ನುವುದು ಇಂತಹ ಸನ್ನಿವೇಶಗಳಲ್ಲಿ ನಮ್ಮ ಪ್ರತಿಕ್ರಿಯೆಯಾಗಿರುತ್ತದೆ. ಎರಡು ಹೆಜ್ಜೆಯೂ ದಾಟಿಲ್ಲ, ಮೊಬೈಲ್ ಕರೆ ತನ್ನಷ್ಟಕ್ಕೆ ತಾನೇ ಸ್ಥಗಿತವಾಗಿಬಿಟ್ಟಿದೆ; ದೊಡ್ಡ ಬದಲಾವಣೆಯೇನೂ ಇಲ್ಲದಿದ್ದರೂ ಇದೇನು ಹೀಗೆ ಎಂದು ನಾವು ಕೇಳುತ್ತೇವೆ.

ಮೊಬೈಲ್ ಫೋನ್ ಏನಾದರೂ ತನ್ನ ಅಭಿಪ್ರಾಯ ಹೇಳುವಂತಿದ್ದರೆ ಅದು ನಮ್ಮ ಅಭಿಪ್ರಾಯಕ್ಕೆ ಸಂಪೂರ್ಣ ವಿರುದ್ಧವಾಗಿರುತ್ತದೆ. ಏಕೆಂದರೆ ನಾವು ಎರಡು ಹೆಜ್ಜೆಯ ದೂರ ಕ್ರಮಿಸುತ್ತಿರುವಾಗ ಆ ಫೋನಿನ ದೃಷ್ಟಿಯಲ್ಲಿ ದೊಡ್ಡ ಬದಲಾವಣೆಗಳೇ ಆಗಿರುತ್ತವೆ!

ಮೊಬೈಲ್ ಫೋನನ್ನು ಸೆಲ್ ಫೋನ್ ಎಂದು ಕರೆಯುತ್ತೇವಲ್ಲ, ಅದಕ್ಕೆ ಕಾರಣ ಮೊಬೈಲ್ ನೆಟ್‌ವರ್ಕುಗಳ ವಿನ್ಯಾಸ.

ಸೋಮವಾರ, ಜೂನ್ 8, 2015

ವಿಜ್ಞಾನ ಬರವಣಿಗೆಗೆ ಸಿದ್ಧತೆ

ಮೇ ೧೬, ೨೦೧೫ರಂದು ಬೆಂಗಳೂರಿನಲ್ಲಿ ನಡೆದ 'ಕನ್ನಡ ವಿಜ್ಞಾನ ಮತ್ತು ತಂತ್ರಜ್ಞಾನ ಬರಹಗಾರರ ಸಮ್ಮೇಳನ/ಕಾರ್ಯಾಗಾರ'ದಲ್ಲಿ ಮಾಡಿದ ಭಾಷಣದ ಪಠ್ಯರೂಪ
ಸಿ ಪಿ ರವಿಕುಮಾರ್

ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನ ಬರೆಯಲು ಹಲವು ಸಿದ್ಧತೆಗಳು ಬೇಕು: ಕನ್ನಡದಲ್ಲಿ ಬರೆಯಬೇಕೆಂಬ ಮಾನಸಿಕ ಸಿದ್ಧತೆ, ವಿಜ್ಞಾನ ಬರವಣಿಗೆಗೆ ಬೇಕಾದ ಹಿನ್ನೆಲೆ, ಓದು ಹಾಗೂ ಭಾಷಾಸಿದ್ಧತೆ.

ಮಾನಸಿಕ ಸಿದ್ಧತೆ ಕನ್ನಡದಲ್ಲಿ ವಿಜ್ಞಾನದ ಬರವಣಿಗೆಯನ್ನು ತಂದ ದಿಗ್ಗಜರು ಹಲವರು. ಡಾ| ಕೋಟ ಶಿವರಾಮ ಕಾರಂತರು ಮಕ್ಕಳಿಗಾಗಿ ಬರೆದ, ಸಂಪಾದಿಸಿದ ವಿಜ್ಞಾನ ಸಂಬಂಧಿ ಪುಸ್ತಕಗಳನ್ನು ನಾನು ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗ ಓದಿದೆ. ನಿರಂಜನ ಅವರ ಸಂಪಾದಕತ್ವದಲ್ಲಿ ಸಿದ್ಧವಾದ ಜ್ಞಾನಗಂಗೋತ್ರಿ ವಿಶ್ವಕೋಶ ಸಂಪುಟಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕಾಗಿ ಒಂದು ಇಡೀ ಸಂಪುಟವನ್ನು ಮೀಸಲಾಗಿಟ್ಟಿದ್ದರು. ತಮ್ಮ ನವಿರುಹಾಸ್ಯ ಬೆರೆತ ಶೈಲಿಯಲ್ಲಿ ಸಸ್ಯಗಳ ಬಗ್ಗೆ ಬರೆದ ಪ್ರೊ| ಬಿಜಿಎಲ್ ಸ್ವಾಮಿ ಅವರ ಭಾಷಣ ಕೇಳುವ ಸದವಕಾಶ ನನಗೆ ನ್ಯಾಷನಲ್ ಕಾಲೇಜ್ ವಿದ್ಯಾರ್ಥಿಯಾಗಿದ್ದಾಗ ದೊರಕಿತ್ತು. ಪ್ರೊ| ಜಿ.ಟಿ. ನಾರಾಯಣರಾವ್ ಅವರ ಅನೇಕ ಪುಸ್ತಕಗಳನ್ನು ನಾನು ಓದಿದ್ದೇನೆ. ನನ್ನ ‘ಕಂಪ್ಯೂಟರ್ ಗೊಂದು ಕನ್ನಡಿ’ ಪುಸ್ತಕ ಪ್ರಕಟವಾದಾಗ ಅವರು ನನಗೆ ಮೆಚ್ಚುಗೆಯ ಮಾತು ಬರೆದು ಪ್ರೋತ್ಸಾಹಿಸಿದರು.

ಶುಕ್ರವಾರ, ಜೂನ್ 5, 2015

ಸ್ಮಾರ್ಟ್‌ಫೋನ್ ಮುಖ ೨: ಕಂಪ್ಯೂಟರಿಗೊಂದು ಪುಟ್ಟ ಪರ್ಯಾಯ

ಒಂದು ಕಾಲದ ಕಂಪ್ಯೂಟರುಗಳಲ್ಲಿ ಏನೆಲ್ಲ ಸಾಧ್ಯವಾಗುತ್ತಿತ್ತೋ ಅದಕ್ಕಿಂತ ಹೆಚ್ಚಿನ ಕೆಲಸಗಳನ್ನು ಇಂದಿನ ಮೊಬೈಲ್ ಫೋನ್ ಬಳಸಿ ಸಾಧಿಸಿಕೊಳ್ಳಬಹುದು. ಜೊತೆಗೆ ಎಲ್ಲಿಗೆ ಬೇಕಿದ್ದರೂ ಸುಲಭವಾಗಿ ಕೊಂಡೊಯ್ಯುವ ಸೌಲಭ್ಯ ಬೇರೆ ಸಿಗುತ್ತದಲ್ಲ! ಹಾಗಾಗಿ ಮೊಬೈಲ್ ಫೋನುಗಳು ಕಂಪ್ಯೂಟರಿಗೆ ಪುಟ್ಟದೊಂದು ಪರ್ಯಾಯವಾಗಿ ರೂಪುಗೊಳ್ಳುತ್ತಿವೆ. ಸ್ಮಾರ್ಟ್‌ಫೋನುಗಳ ಪರದೆಯ ಗಾತ್ರ, ಪ್ರಾಸೆಸರಿನ ಸಂಸ್ಕರಣಾ ಸಾಮರ್ಥ್ಯ ಹಾಗೂ ಲಭ್ಯವಿರುವ ರ್‍ಯಾಮ್ ಪ್ರಮಾಣ ದಿನೇ ದಿನೇ ಹೆಚ್ಚುತ್ತಿರುವುದನ್ನು ನೋಡಿದರೆ ಫೋನಿಗೂ ಕಂಪ್ಯೂಟರಿಗೂ ಹೆಚ್ಚಿನ ವ್ಯತ್ಯಾಸವೇ ಇಲ್ಲದ ಪರಿಸ್ಥಿತಿ ಬರುತ್ತಿದೆಯೇನೋ ಎನ್ನಿಸದಿರದು. ಕಂಪ್ಯೂಟರಿನಲ್ಲಿ ದೊರಕುವ ಬಹುಪಾಲು ತಂತ್ರಾಂಶಗಳು ಆಪ್‌ಗಳ ರೂಪದಲ್ಲಿ ಈಗ ಮೊಬೈಲಿನಲ್ಲೂ ಸಿಗುತ್ತವೆ. ಹಾಗಾಗಿ ಕಚೇರಿಯ ಕೆಲಸವನ್ನೂ ಮೊಬೈಲಿನಲ್ಲೇ ಮಾಡಿಕೊಳ್ಳುವುದು ಸಾಧ್ಯವಾಗಿದೆ. ಟಚ್‌ಸ್ಕ್ರೀನಿನಲ್ಲಿ ಟೈಪಿಸುವುದು ಕಷ್ಟ ಎನ್ನುವವರಿಗೆ ಮೊಬೈಲ್ ಜೊತೆ ಬಳಸಲು ಪುಟ್ಟ ಕೀಬೋರ್ಡುಗಳೂ ಸಿಗುತ್ತಿವೆ!

ಮುಂದಿನ ವಾರ: ಛಾಯಾಗ್ರಹಣದ ಸಂಗಾತಿ | ಈವರೆಗಿನ ಮುಖಗಳು

ಸೋಮವಾರ, ಜೂನ್ 1, 2015

ವಿಜ್ಞಾನ ವಿಷಯಗಳನ್ನು ವರದಿ ಮಾಡುವುದು ಹೇಗೆ?

ಮೇ ೧೬, ೨೦೧೫ರಂದು ಬೆಂಗಳೂರಿನಲ್ಲಿ ನಡೆದ 'ಕನ್ನಡ ವಿಜ್ಞಾನ ಮತ್ತು ತಂತ್ರಜ್ಞಾನ ಬರಹಗಾರರ ಸಮ್ಮೇಳನ/ಕಾರ್ಯಾಗಾರ'ದಲ್ಲಿ ಮಾಡಿದ ಭಾಷಣದ ಪಠ್ಯರೂಪ
ಬೇಳೂರು ಸುದರ್ಶನ
  • ಭೂಕಂಪ, ಚಂಡಮಾರುತ, ಸುನಾಮಿ; ಎಬೋಲಾ, ಏಯ್ಡ್ಸ್‌; ನಕ್ಷತ್ರಪುಂಜ, ಗ್ರಹಣ; ಮಾಲಿನ್ಯ, ಕಸ, ಹವಾಗುಣ, ಬಿಸಿಯಾಗುತ್ತಿರುವ ಭೂಮಿ...
  • ದಕ್ಷಿಣಕನ್ನಡದಲ್ಲಿ ಎಂಡೋಸಲ್ಫಾನ್‌ ದುರಂತ, ಗೋಗಿಯಲ್ಲಿ ಯುರೇನಿಯಂ ಗಣಿಗಾರಿಕೆ ಅಪಾಯ, ಕೂಡಗಿಯಲ್ಲಿ ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ವಿದ್ಯುತ್‌ ಸ್ಥಾವರ, ಬೆಂಗಳೂರಿನಲ್ಲಿ ಮರಗಳ ಸರ್ವನಾಶ, ರೈತರಿಂದ ಬಿಟಿ ಬೆಳೆಗಳ ನಾಶ, ಅಣ್ಣಿಗೇರಿಯ ತಲೆಬುರುಡೆಗಳು...
ಹೀಗೆ ನೀವು ಹುಡುಕಿದಲ್ಲೆಲ್ಲ ವಿಜ್ಞಾನದ ವರದಿಗಾರಿಕೆಗೆ ಸುದ್ದಿಗಳಿವೆ. ಬಚ್ಚಿಡಲಾಗದ ಸತ್ಯಗಳಿವೆ. ಸರ್ಕಾರದ ಪ್ರತಿನಿಧಿಗಳು, ಸಾರ್ವಜನಿಕರು, ಸಾಮಾಜಿಕ ಕಾರ್ಯಕರ್ತರು ಪ್ರತಿದಿನವೂ ವಿಜ್ಞಾನ ವರದಿಗಾರಿಕೆಗೆ ಸಾಕಷ್ಟು ಸರಕುಗಳನ್ನು ಒದಗಿಸುತ್ತಲೇ ಇರುತ್ತಾರೆ. ನೋಡುವ ಕಣ್ಣು, ಬರೆಯುವ ಆಸಕ್ತಿ, ಹುಡುಕುವ ಮನಸ್ಸು ಇದ್ದರೆ ವಿಜ್ಞಾನ ವರದಿಗಾರಿಕೆ ಸುಲಭ!

`ವಿಜ್ಞಾನ ವರದಿಗಾರಿಕೆ' (Science Reporting) ಎಂದರೆ ಯಾವುದು ಎಂಬ ನಿರ್ದಿಷ್ಟತೆ ಇಟ್ಟುಕೊಳ್ಳಬೇಕು. ನೇಪಾಳದ ಭೂಕಂಪವು ಒಂದು ದುರಂತವೂ ಹೌದು; ವಿಜ್ಞಾನದ ವರದಿಗಾರಿಕೆಗೆ ಸಿಕ್ಕ ಅವಕಾಶವೂ ಹೌದು. ಇಲ್ಲಿ ಭೂಕಂಪದ ಹಿಂದಿದ್ದ ಕಾರಣಗಳನ್ನು ಗುರುತಿಸುವುದು, ಭೂಕಂಪದಲ್ಲಿ ಖಚಿತವಾಗಿ ಏನಾಯ್ತು ಎಂದು ಬರೆಯುವುದು, ಮುಂದೆ ಏನಾಗಬಹುದು ಎಂದು ವೈಜ್ಞಾನಿಕವಾಗಿ ಊಹಿಸುವುದು - ಇವು ವರದಿಗಾರಿಕೆಗೆ ಇರುವ ಅವಕಾಶಗಳು.
badge