ಸೋಮವಾರ, ಏಪ್ರಿಲ್ 27, 2015

ಸೂಪರ್‌ಕಂಪ್ಯೂಟರ್ ಸಮಾಚಾರ

ಟಿ. ಜಿ. ಶ್ರೀನಿಧಿ

ಕೆಲವು ದಿನಗಳ ಹಿಂದೆ ಭಾರತ ಸರಕಾರ 'ರಾಷ್ಟ್ರೀಯ ಸೂಪರ್‌ಕಂಪ್ಯೂಟಿಂಗ್ ಮಿಶನ್' ಎನ್ನುವ ಕಾರ್ಯಕ್ರಮವೊಂದನ್ನು ಘೋಷಿಸಿತು. ಒಟ್ಟು ನಾಲ್ಕೂವರೆ ಸಾವಿರ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಭಾರತದಾದ್ಯಂತ ಸೂಪರ್‌ಕಂಪ್ಯೂಟರುಗಳ ಜಾಲವನ್ನೇ ನಿರ್ಮಿಸುವುದು ಈ ಕಾರ್ಯಕ್ರಮದ ಉದ್ದೇಶ.

ಸರಿ, ಆದರೆ ಈ ಸೂಪರ್‌ಕಂಪ್ಯೂಟರ್ ಎಂದರೇನು?

ಪ್ರಪಂಚದಲ್ಲಿ ಅನೇಕ ಬಗೆಯ ಕಂಪ್ಯೂಟರುಗಳಿರುವುದು ನಮಗೆಲ್ಲ ಗೊತ್ತಿರುವ ವಿಷಯವೇ. ಅವುಗಳ ಪೈಕಿ ಅತಿ ಹೆಚ್ಚು ಸಂಸ್ಕರಣಾ ಸಾಮರ್ಥ್ಯ  ಇರುವ ಕಂಪ್ಯೂಟರುಗಳಿಗೆ ಸೂಪರ್‌ಕಂಪ್ಯೂಟರ್‌ಗಳೆಂದು ಹೆಸರು.

ಬಹಳ ಕ್ಲಿಷ್ಟ ಲೆಕ್ಕಾಚಾರಗಳ ಅಗತ್ಯವಿರುವ ಕ್ಷೇತ್ರಗಳಲ್ಲಿ ಇವು ಬಳಕೆಯಾಗುತ್ತವೆ. ವಿಶ್ವದ ಹುಟ್ಟಿನ ಬಗ್ಗೆ ತಿಳಿದುಕೊಳ್ಳುವುದಿರಲಿ, ಭೂಕಂಪ-ಚಂಡಮಾರುತಗಳಂತಹ ವಿದ್ಯಮಾನಗಳ ವಿಶ್ಲೇಷಣೆಯಿರಲಿ - ಉನ್ನತ ಮಟ್ಟದ ವೈಜ್ಞಾನಿಕ ಸಂಶೋಧನೆಗಳಲ್ಲಿ ಸೂಪರ್‌ಕಂಪ್ಯೂಟರುಗಳ ಬಳಕೆ ಸಾಮಾನ್ಯ. ಅಣ್ವಸ್ತ್ರಗಳ ಪರೀಕ್ಷೆಯಲ್ಲೂ ಸೂಪರ್‌ಕಂಪ್ಯೂಟರುಗಳ ಸಹಾಯ ಪಡೆದುಕೊಳ್ಳುವ ಪ್ರಯತ್ನಗಳು ನಡೆದಿವೆ. ಹವಾಗುಣ ಬದಲಾವಣೆಯಂತಹ ಪ್ರಕ್ರಿಯೆಗಳ ಅಧ್ಯಯನದಲ್ಲಿ ಕೂಡ ಸೂಪರ್‌ಕಂಪ್ಯೂಟರ್ ಪಾತ್ರವನ್ನು ನೋಡುವುದು ಸಾಧ್ಯ.

ವೈದ್ಯಕೀಯ ರಂಗದಲ್ಲೂ ಸೂಪರ್‌ಕಂಪ್ಯೂಟರುಗಳ ಬಳಕೆ ಇದೆ - ಪ್ರೋಟೀನುಗಳ ರಚನೆಯ ಬಗ್ಗೆ ತಿಳಿದುಕೊಂಡು, ಅವುಗಳಲ್ಲಾಗುವ ಬದಲಾವಣೆಗೂ ಮಾನವರಲ್ಲಿ ಕಾಣಿಸಿಕೊಳ್ಳುವ ರೋಗಗಳಿಗೂ ನಡುವಿನ ಸಂಬಂಧವನ್ನು ಅಧ್ಯಯನ ಮಾಡುತ್ತಿರುವ 'ಬ್ಲೂ ಜೀನ್' ಸೂಪರ್‌ಕಂಪ್ಯೂಟರ್ ಕಳೆದ ದಶಕದಲ್ಲಿ ಸಾಕಷ್ಟು ಸುದ್ದಿಮಾಡಿತ್ತು. ಮಾನವ ದೇಹದಲ್ಲಿ ರಕ್ತಸಂಚಾರದ ವಿವರವಾದ ವಿಶ್ಲೇಷಣೆಗೂ ಸೂಪರ್‌ಕಂಪ್ಯೂಟರುಗಳನ್ನು ಬಳಸಲಾಗುತ್ತಿದೆ.

ಹಂದಿಜ್ವರದಂತಹ ರೋಗಗಳು ಕಾಣಿಸಿಕೊಂಡಾಗ ಅವುಗಳ ಸ್ವರೂಪ ಮತ್ತು ಹರಡುತ್ತಿರುವ ವಿಧಾನವನ್ನು ಅಧ್ಯಯನ ಮಾಡಿ ಕ್ಷಿಪ್ರವಾಗಿ ಪರಿಹಾರ ಕಂಡುಕೊಳ್ಳುವಲ್ಲೂ ಸೂಪರ್‌ಕಂಪ್ಯೂಟರುಗಳು ನೆರವಾಗಬಲ್ಲವು.

ಮಂಗಳವಾರ, ಏಪ್ರಿಲ್ 21, 2015

ಮೇ ೧೬ರಂದು ಕನ್ನಡ ವಿಜ್ಞಾನ ಬರಹಗಾರರ ಕಾರ್ಯಾಗಾರ

ಇಜ್ಞಾನ ವಾರ್ತೆ

ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಶಾಸ್ತ್ರಗಳಲ್ಲಿ ಅಭೂತಪೂರ್ವ ಬೆಳವಣಿಗೆಗಳು ನಡೆಯುತ್ತಿವೆ. ಇವುಗಳನ್ನು ಕುರಿತು ಕನ್ನಡದಲ್ಲಿ ಬರೆಯುವವರ ಸಂಖ್ಯೆ ವಿರಳವಾಗಿದೆ.  ವಿಶ್ವಕೋಶಗಳು, ವಿಕಿಪೀಡಿಯಾ, ಪಠ್ಯಪುಸ್ತಕಗಳು,  ಇ-ಪುಸ್ತಕಗಳು, ವಿಜ್ಞಾನ ಪತ್ರಿಕೆಗಳು, ಜನಪ್ರಿಯ ಪತ್ರಿಕೆಗಳಲ್ಲಿ ವಿಜ್ಞಾನ ಲೇಖನಗಳು, ಬ್ಲಾಗ್ ಬರಹಗಳು, ವಿಜ್ಞಾನ ಕಥಾಸಾಹಿತ್ಯ, ... ಹೀಗೆ ವಿಜ್ಞಾನ ಬರಹಗಾರರಿಗೆ ಲಭ್ಯವಾಗಿರುವ ಮಾಧ್ಯಮಗಳು ಹಲವಾರು.

ಕನ್ನಡ ವಿಜ್ಞಾನ ಬರಹಗಾರರು ವ್ಯವಸ್ಥಿತವಾಗಿ ಕೆಲಸ ಮಾಡಿದರೆ ವಿಜ್ಞಾನ ಸಾಹಿತ್ಯವನ್ನು ಸರಿಯಾದ ರೀತಿಯಲ್ಲಿ ಬೆಳೆಸಲು ಸಾಧ್ಯ ಎಂಬ ಆಶಯದಿಂದ ಮೇ ೧೬ರಂದು ಬೆಂಗಳೂರಿನಲ್ಲಿ ಕನ್ನಡ ವಿಜ್ಞಾನ - ತಂತ್ರಜ್ಞಾನ ಬರಹಗಾರರ ಸಮ್ಮೇಳನ ಮತ್ತು ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ವಿಜ್ಞಾನ ಸಂವಹನ ಕ್ಷೇತ್ರದ ಪರಿಣತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಸಕ್ತರಿಗೆ ಮಾರ್ಗದರ್ಶನ ನೀಡಲಿದ್ದಾರೆ.

ಸೋಮವಾರ, ಏಪ್ರಿಲ್ 20, 2015

ನೆಟ್ ನ್ಯೂಟ್ರಾಲಿಟಿಯ ಸುತ್ತಮುತ್ತ

ಟಿ. ಜಿ. ಶ್ರೀನಿಧಿ

ಈಚೆಗೆ ಕೆಲದಿನಗಳಿಂದ ಎಲ್ಲೆಡೆಯೂ ನೆಟ್ ನ್ಯೂಟ್ರಾಲಿಟಿಯದೇ ಸುದ್ದಿ. ಜಾಲಲೋಕದಲ್ಲಿ ಸಮಾನತೆ ಇರಬೇಕು, ಏನೇ ಆದರೂ ಭೇದಭಾವಕ್ಕೆ ಅವಕಾಶ ಬೇಡ ಎನ್ನುವುದು ಈ ಕುರಿತು ಮಾತನಾಡುತ್ತಿರುವ ಬಹುತೇಕ ಜನರ ಅಭಿಪ್ರಾಯ.

ಅದೇನೋ ಸರಿ. ಏಕೆಂದರೆ ಜಾಲಲೋಕದ ಮೂಲ ಕಲ್ಪನೆಯೇ ಸಮಾನತೆ. ಕಂಪ್ಯೂಟರ್ ಮತ್ತು ಅಂತರಜಾಲ ಸಂಪರ್ಕ ಇರುವ ಎಲ್ಲರಿಗೂ ಇಲ್ಲಿನ ಅವಕಾಶಗಳು ಮುಕ್ತ. ಅಂತಹ ಯಾರು ಬೇಕಾದರೂ ತಮ್ಮ ಐಡಿಯಾಗಳನ್ನು ಜಾಲಲೋಕದಲ್ಲಿ ಸಾಕಾರಗೊಳಿಸುವುದು, ಪ್ರಪಂಚವನ್ನೇ ಬದಲಿಸುವುದು ಸಾಧ್ಯ.

ವಿಶ್ವವ್ಯಾಪಿ ಜಾಲ, ಅಂದರೆ ವರ್ಲ್ಡ್‌ವೈಡ್ ವೆಬ್ ಸೃಷ್ಟಿಯ ಹಿಂದೆ ಇದ್ದದ್ದೂ ಇಂತಹುದೇ ಒಂದು ಕಲ್ಪನೆ. ಎರಡು-ಮೂರು ದಶಕಗಳ ಹಿಂದೆ ಟಿಮ್ ಬರ್ನರ್ಸ್-ಲೀ ವಿಶ್ವವ್ಯಾಪಿ ಜಾಲವನ್ನು ರೂಪಿಸಿದರಲ್ಲ, ಅವರು ಅದಕ್ಕಾಗಿ ಯಾವ ಪೇಟೇಂಟನ್ನೂ ಪಡೆದುಕೊಂಡಿಲ್ಲ - ಸಂಭಾವನೆಯ ನಿರೀಕ್ಷೆಯನ್ನೂ ಇಟ್ಟುಕೊಂಡಿಲ್ಲ. ಮುಂದೆ ಅವರದೇ ನೇತೃತ್ವದಲ್ಲಿ ಸ್ಥಾಪನೆಯಾದ ವರ್ಲ್ಡ್‌ವೈಡ್ ವೆಬ್ ಕನ್ಸಾರ್ಷಿಯಂ ಕೂಡ ಅಷ್ಟೆ, ಮಾನಕಗಳನ್ನು ಶುಲ್ಕರಹಿತ ತಂತ್ರಜ್ಞಾನದ ಸುತ್ತಲೇ ರೂಪಿಸುತ್ತಿದೆ.

ಆದರೆ ಈಚೆಗೆ ಜಾಲಲೋಕದ ವಾತಾವರಣದಲ್ಲಿ ಕೊಂಚ ಬದಲಾವಣೆ ಕಾಣುತ್ತಿದೆ. ಜಾಲಲೋಕದ ಸ್ವಾತಂತ್ರ್ಯವನ್ನು ಸರಕಾರಗಳು - ವಾಣಿಜ್ಯ ಸಂಸ್ಥೆಗಳು ನಿಯಂತ್ರಿಸಲು ಪ್ರಯತ್ನಿಸುತ್ತಿರುವುದೇ ಈ ಬದಲಾವಣೆಗೆ ಕಾರಣವಾಗಿರುವ ಅಂಶ. ಜಾಲಲೋಕದ ತಾಟಸ್ಥ್ಯ (ನೆಟ್ ನ್ಯೂಟ್ರಾಲಿಟಿ) ಕುರಿತ ಚರ್ಚೆಯನ್ನು ಹುಟ್ಟುಹಾಕಿರುವುದೂ ಇದೇನೇ.

ಸೋಮವಾರ, ಏಪ್ರಿಲ್ 13, 2015

ಆಕಾಶದಲ್ಲೂ ಅಂತರಜಾಲ

ಟಿ. ಜಿ. ಶ್ರೀನಿಧಿ


ಮನೆ-ಕಚೇರಿಗಳಲ್ಲಿ ವೈ-ಫಿ ಸಂಪರ್ಕ ಅಭ್ಯಾಸವಾದವರಿಗೆ, ನಗರಗಳಲ್ಲಿ ಸದಾಕಾಲ ಥ್ರೀಜಿ-ಫೋರ್‌ಜಿಗಳ ವ್ಯಾಪ್ತಿ ಪ್ರದೇಶದಲ್ಲೇ ಇರುವವರಿಗೆ ಅಂತರಜಾಲ ಸಂಪರ್ಕವೆನ್ನುವುದು ಜೀವನದ ಒಂದು ಅವಿಭಾಜ್ಯ ಅಂಗ. ಇಂತಹವರಿಗೆ ಪ್ರವಾಸದ ಸಂದರ್ಭದಲ್ಲೂ ನಿರಂತರವಾಗಿ ಅಂತರಜಾಲ ಸಂಪರ್ಕ ಇರಲೇಬೇಕು ಎನಿಸುತ್ತಿರುತ್ತದೆ.

ಹೋದ ಜಾಗದಲ್ಲೇನೋ ಸರಿ - ತೀರಾ ದೂರದ ಪ್ರದೇಶಗಳನ್ನು ಹೊರತುಪಡಿಸಿ ಬಹಳಷ್ಟು ಕಡೆ ಅಂತರಜಾಲ ಸಂಪರ್ಕ ಸಿಕ್ಕಿಬಿಡುತ್ತದೆ. ಕಾರಿನಲ್ಲೋ, ಬಸ್ಸು-ರೈಲಿನಲ್ಲೋ ಪ್ರಯಾಣಿಸುವಾಗಲೂ ಮೊಬೈಲ್ ಸಂಪರ್ಕ ಇದ್ದ ಬಹುತೇಕ ಕಡೆಗಳಲ್ಲೊ ಅಂತರಜಾಲಾಟ ಸಾಧ್ಯ.

"ಮೊಬೈಲ್ ಸಂಪರ್ಕ ಇದ್ದ ಕಡೆ" ಎನ್ನುವುದೇ ಇಲ್ಲಿನ ದೊಡ್ಡ ಸಮಸ್ಯೆ. ನಗರ ಪ್ರದೇಶಗಳಲ್ಲಿ, ಹೆದ್ದಾರಿಗಳಲ್ಲಿ ಮೊಬೈಲ್ ಸಂಪರ್ಕ ಸಮಸ್ಯೆಯೇನಲ್ಲ. ಆದರೆ ಹೆದ್ದಾರಿಗಳನ್ನು ಬಿಟ್ಟು ದೂರಹೋದಂತೆ ಮೊಬೈಲ್ ಸಂಪರ್ಕ ಸಿಗುವುದು ಕಷ್ಟವಾಗುತ್ತದೆ; ಅಂತರಜಾಲ ನಮ್ಮಿಂದ ದೂರವೇ ಉಳಿಯುತ್ತದೆ.

ಕಚೇರಿ ಜಂಜಾಟದಿಂದ ಬೇಸತ್ತು ಪ್ರವಾಸ ಹೊರಟವರಿಗೆ ಅಂತರಜಾಲದ ಕಾಟವಿಲ್ಲ ಎನ್ನುವುದು ಖುಷಿಯ ವಿಷಯವೇ ಇರಬಹುದು. ಆದರೆ ಪ್ರಯಾಣಿಸುತ್ತಿರುವುದು ಕೆಲಸದ ಮೇಲೆಯೇ ಆದರೆ? ಬೇಕೆಂದಾಗ ಅಂತರಜಾಲ ಸಂಪರ್ಕ ದೊರಕದಿದ್ದರೆ ಕೆಲಸವೂ ಹಾಳು, ಸಮಯವೂ ವ್ಯರ್ಥ.

ಹೌದು, ನಮ್ಮ ಇಂದಿನ ಪರಿಸ್ಥಿತಿ ಹೇಗಿದೆ ಎಂದರೆ ಒಂದಷ್ಟು ಕಾಲ ಅಂತರಜಾಲ ಸಂಪರ್ಕ ಇಲ್ಲದಿದ್ದರೆ ಕಚೇರಿಯ ಕೆಲಸವೇ ನಡೆಯುವುದಿಲ್ಲ. ಸಿಬ್ಬಂದಿ ಎಲ್ಲೇ ಇದ್ದರೂ ಸರಿ, ಅವರು ಬೇಕೆಂದಾಗ ಅಂತರಜಾಲ ಸಂಪರ್ಕಕ್ಕೆ ಸಿಗುವಂತಿರಬೇಕು ಎನ್ನುತ್ತವೆ ಸಂಸ್ಥೆಗಳು.

ಹೀಗಿರುವಾಗ ಕಚೇರಿ ಕೆಲಸದ ಮೇಲೆ ಪ್ರಯಾಣಿಸುವ ಉದ್ಯೋಗಿಗಳು ಅಥವಾ ವ್ಯಾಪಾರಸ್ಥರು ಸತತವಾಗಿ ಹಲವು ಗಂಟೆಗಳ ಕಾಲ ಅಂತರಜಾಲ ಸಂಪರ್ಕವಿಲ್ಲದೆ ಇರುವುದು ಎಲ್ಲಾದರೂ ಸಾಧ್ಯವೆ?

ಸೋಮವಾರ, ಏಪ್ರಿಲ್ 6, 2015

ಇಂದಿನ ಕನಸುಗಳ ಮುಂದಿನ ಪಯಣ

ಟಿ. ಜಿ. ಶ್ರೀನಿಧಿ


ತಂತ್ರಜ್ಞಾನ ಬೆಳೆದಂತೆ ನಮ್ಮ ದಿನನಿತ್ಯದ ಬದುಕಿನ ಹಲವು ಸಂಗತಿಗಳು ಬದಲಾಗಿವೆ. ಹೊಸಬಗೆಯ ಕಾರು-ಬಸ್ಸುಗಳು ಬಂದಿವೆ. ಅವುಗಳಿಗೆ ತಕ್ಕ ರಸ್ತೆಗಳೂ ಸಿದ್ಧವಾಗಿವೆ. ಹೊಸಹೊಸ ರೈಲುಗಳ ಮೂಲಕ ದೇಶದ ಮೂಲೆಮೂಲೆಗಳ ನಡುವೆ ಸಂಪರ್ಕ ಸಾಧ್ಯವಾಗಿದೆ. ಇಂದಿನ ವಿಮಾನಯಾನ ಹಿಂದಿನ ಬಸ್ ಪ್ರಯಾಣಗಳಿಗಿಂತ ಸುಲಭವಾಗಿದೆ.

ಪರಿಚಯವಾಗುತ್ತಿರುವುದು ಹೊಸಹೊಸ ವಾಹನಗಳಷ್ಟೆ ಅಲ್ಲ, ಅವುಗಳ ಕಾರ್ಯಕ್ಷಮತೆಯಲ್ಲೂ ಗಮನಾರ್ಹ ಬದಲಾವಣೆಗಳಾಗಿವೆ. ಜನರ ಆರ್ಥಿಕ ಮಟ್ಟ ಉತ್ತಮಗೊಳ್ಳುತ್ತಿರುವುದರ ಜೊತೆಗೆ ಉತ್ಪಾದನಾ ಕ್ಷೇತ್ರದ ಪ್ರಗತಿಯೂ ಸೇರಿಕೊಂಡು ವಾಹನಗಳ ಖರೀದಿ ಬಹುತೇಕ ಎಲ್ಲರಿಗೂ ಸಾಧ್ಯವಾಗುವಂತಾಗಿದೆ.

ವಿಷಯ ಇಷ್ಟೇ ಆಗಿದ್ದರೆ ಖುಷಿಪಡಬಹುದಿತ್ತೋ ಏನೋ. ಆದರೆ ಇದೇ ತಂತ್ರಜ್ಞಾನ ಆಧುನಿಕ ಜಗತ್ತಿನೆದುರು ದೊಡ್ಡ ಸವಾಲನ್ನೂ ಸೃಷ್ಟಿಸಿ ಇಟ್ಟುಬಿಟ್ಟಿದೆ.

ವಿಪರೀತವಾಗಿ ಹೆಚ್ಚುತ್ತಿರುವ ವಾಹನಗಳಿಂದಾಗಿ ಟ್ರಾಫಿಕ್ ಜಾಮ್ ಸಮಸ್ಯೆ ಜಗತ್ತಿನ ಬಹುತೇಕ ನಗರಗಳಲ್ಲಿ ಸಾಂಕ್ರಾಮಿಕ ಪಿಡುಗಿನಂತೆ ಹಬ್ಬುತ್ತಿದೆ. ಕಡಿಮೆ ಬೆಲೆಗೆ ವಾಹನಗಳನ್ನು ಸೃಷ್ಟಿಸುವ ಪೈಪೋಟಿ ಅಪಘಾತಗಳಿಗೆ, ಮಿತಿಮೀರಿದ ಮಾಲಿನ್ಯಕ್ಕೆ ಕಾರಣವಾಗಿದೆ. ಅತ್ಯಾಧುನಿಕ ಕಾರು-ಬಸ್ಸುಗಳ ಐಷಾರಾಮಿ ಸೌಲಭ್ಯಗಳು ಪ್ರಯಾಣಿಕರಿಗೆ ಟ್ರಾಫಿಕ್ ಜಾಮುಗಳಲ್ಲೇ ಹೆಚ್ಚಾಗಿ ಉಪಯೋಗಕ್ಕೆ ಬರುತ್ತಿವೆ!

ತಂತ್ರಜ್ಞಾನದ ಬಳಕೆಯಿಂದ ಹೊಸಬಗೆಯ ವಾಹನಗಳನ್ನು ಸೃಷ್ಟಿಸುವುದು - ಬೆಲೆ ಇಳಿಸುವುದು ಸಾಧ್ಯವಾದರೆ ಇಷ್ಟೆಲ್ಲ ವಾಹನಗಳು ಸೃಷ್ಟಿಸುವ ಅವಾಂತರವನ್ನು ತಪ್ಪಿಸುವುದೂ ಸಾಧ್ಯವಾಗಬೇಕಲ್ಲ!

ಸೋಮವಾರ, ಮಾರ್ಚ್ 30, 2015

ಟ್ಯಾಬ್ಲೆಟ್‌ಗೊಂದು ಕಾಲ ಫ್ಯಾಬ್ಲೆಟ್‌ಗೊಂದು ಕಾಲ

ಟಿ. ಜಿ. ಶ್ರೀನಿಧಿ

ಹಿಂದಾನೊಂದು ಕಾಲದಲ್ಲಿ ಮೊಬೈಲ್ ಫೋನುಗಳ ಗಾತ್ರ ಬಹಳ ಸಣ್ಣದಾಗಿರುತ್ತಿತ್ತು. ಅದರಲ್ಲೂ ಅರ್ಧಕ್ಕಿಂತ ಹೆಚ್ಚಿನ ಭಾಗವನ್ನು ಕೀಪ್ಯಾಡ್ ಆಕ್ರಮಿಸಿಕೊಳ್ಳುತ್ತಿದ್ದುದರಿಂದ ಪರದೆಯ ಗಾತ್ರ ಒಂದೆರಡು ಇಂಚುಗಳಷ್ಟಿದ್ದರೆ ಅದೇ ಹೆಚ್ಚು. ಮೊಬೈಲ್ ಫೋನಿನ ಬಳಕೆ ದೂರವಾಣಿ ಕರೆ, ಎಸ್ಸೆಮ್ಮೆಸ್ ಹಾಗೂ ಸರಳವಾದ ಆಟಗಳನ್ನು ಆಡುವುದಕ್ಕಷ್ಟೇ ಸೀಮಿತವಾಗಿದ್ದ ಕಾಲದಲ್ಲಿ ಇದೊಂದು ಕೊರತೆ ಎಂದೇನೂ ಎನಿಸುತ್ತಿರಲಿಲ್ಲ.

ಈ ಪರಿಸ್ಥಿತಿ ಬದಲಾದದ್ದು ಸ್ಮಾರ್ಟ್ ಫೋನುಗಳು ಮಾರುಕಟ್ಟೆಗೆ ಬಂದಾಗ. ಕಂಪ್ಯೂಟರಿನಲ್ಲಿ ಮಾಡುವ ಹೆಚ್ಚೂಕಡಿಮೆ ಎಲ್ಲ ಕೆಲಸಗಳನ್ನೂ ಮೊಬೈಲಿನಲ್ಲಿ ಮಾಡಬಹುದು ಎಂದಾಗ ನಮಗೆ ಮೊಬೈಲಿನ ಪರದೆಯ ಗಾತ್ರ ದೊಡ್ಡದಿರಬೇಕು ಎನಿಸಲು ಶುರುವಾಗಿರಬೇಕು. ಆವರೆಗೂ ಒಂದೆರಡು ಇಂಚಿನಷ್ಟೇ ಇದ್ದ ಮೊಬೈಲ್ ಪರದೆ ಮೂರು-ನಾಲ್ಕು ಇಂಚಿಗೆ ಬಡ್ತಿ ಪಡೆದದ್ದು ಆಗಲೇ.

ಸ್ಮಾರ್ಟ್ ಫೋನ್ ಬಳಕೆ ಹೆಚ್ಚಿದಂತೆ ಅವುಗಳನ್ನು ವಿವಿಧ ಉದ್ದೇಶಗಳಿಗಾಗಿ ಬಳಸುವುದು ಶುರುವಾಯಿತು. ಇಮೇಲ್ ಕಳುಹಿಸಲು, ಮೆಸೇಜ್ ಮಾಡಲು, ವೀಡಿಯೋ ನೋಡಲು, ಜಾಲತಾಣಗಳನ್ನು ಬ್ರೌಸ್ ಮಾಡಲು, ಇ-ಪುಸ್ತಕ ಓದಲಿಕ್ಕೆಲ್ಲ ಮೊಬೈಲ್ ಫೋನ್ ಬಳಸಬಹುದು ಎನ್ನುವಾಗ ನಾಲ್ಕಲ್ಲ, ನಾಲ್ಕೂವರೆ-ಐದು ಇಂಚಿನ ಪರದೆಯೂ ಸಾಲದಾಯಿತು.

ಅಷ್ಟರಲ್ಲಿ ಪ್ರಚಲಿತಕ್ಕೆ ಬಂದಿದ್ದ ಟ್ಯಾಬ್ಲೆಟ್‌ಗಳು ಈ ಸಮಸ್ಯೆಯನ್ನು ತಕ್ಕಮಟ್ಟಿಗೆ ಬಗೆಹರಿಸಿದವು. ದೂರವಾಣಿ ಕರೆ ಮಾಡುವುದರ ಜೊತೆಗೆ ಇಮೇಲ್-ಮೆಸೇಜ್ ಇತ್ಯಾದಿ ಕಳುಹಿಸಲಿಕ್ಕೆ, ಚೂರುಪಾರು ಬ್ರೌಸಿಂಗ್ ಮಾಡಲಿಕ್ಕಷ್ಟೆ ಮೊಬೈಲ್ ಬಳಸಿ; ವೀಡಿಯೋ ನೋಡುವುದಕ್ಕೆ ಪುಸ್ತಕ ಓದುವುದಕ್ಕೆ ಆಟ ಆಡುವುದಕ್ಕೆಲ್ಲ ಟ್ಯಾಬ್ಲೆಟ್ ಬಳಸಿದರಾಯಿತು ಎನ್ನುವ ಅಭಿಪ್ರಾಯವೂ ಮೂಡಿತು. ನಾಲ್ಕಿಂಚಿನ ಫೋನಿನೊಡನೆ ಹೋಲಿಸಿದಾಗ ಟ್ಯಾಬ್ಲೆಟ್ಟಿನ ಏಳು-ಎಂಟು ಇಂಚಿನ ಪರದೆ ಬಹಳ ಅನುಕೂಲಕರ ಎನಿಸಿದ್ದರಲ್ಲಿ ತಪ್ಪೂ ಇಲ್ಲ ಬಿಡಿ.

ಆದರೆ ಇಲ್ಲೊಂದು ಸಮಸ್ಯೆಯಿತ್ತು.

ಸೋಮವಾರ, ಮಾರ್ಚ್ 23, 2015

ನಮ್ಮ ನಗರ ಸ್ಮಾರ್ಟ್ ನಗರ!

ಟಿ. ಜಿ. ಶ್ರೀನಿಧಿ

ಮೊಬೈಲ್ ಫೋನು, ಮನೆಯ ಟೀವಿಗಳೆಲ್ಲ ಸ್ಮಾರ್ಟ್ ಆಗಿರುವುದು ಈಗಾಗಲೇ ಹಳೆಯ ಸಂಗತಿ. ಇದೀಗ ಸ್ಮಾರ್ಟ್ ಆಗುವ ಸರದಿ ನಮ್ಮ ನಗರಗಳದು. ದಿನ ಬೆಳಗಾದರೆ ಸಾಕು, ಪತ್ರಿಕೆಗಳಲ್ಲಿ ಉದ್ದೇಶಿತ 'ಸ್ಮಾರ್ಟ್ ಸಿಟಿ'ಗಳದೇ ಸುದ್ದಿ: ಸ್ಮಾರ್ಟ್ ನಗರಿಗಳಾಗಿ ಯಾವೆಲ್ಲ ಊರುಗಳು ಆಯ್ಕೆಯಾಗಿವೆ, ಅವುಗಳ ಅಭಿವೃದ್ಧಿಗೆ ಸರಕಾರ ಎಷ್ಟು ಹಣ ಮೀಸಲಿಟ್ಟಿದೆ - ಒಂದರ ಹಿಂದೊಂದರಂತೆ ವರದಿಗಳಿಗೆ ಬಿಡುವೇ ಇಲ್ಲ.

ಇಷ್ಟಕ್ಕೂ 'ಸ್ಮಾರ್ಟ್ ಸಿಟಿ' ಎಂದರೇನು? ಒಂದು ನಗರ ಸ್ಮಾರ್ಟ್ ಆಗಲು ಅರ್ಹತೆಗಳೇನಾದರೂ ಇವೆಯೇ? ಬಹಳ ಜನರನ್ನು ಕಾಡುವ ಪ್ರಶ್ನೆ ಇದು.

ತಮಾಷೆಯ ವಿಷಯವೆಂದರೆ ಈ ಪ್ರಶ್ನೆಗೆ ನಿರ್ದಿಷ್ಟವಾದ ಉತ್ತರವೇ ಇಲ್ಲ. 'ಸ್ಮಾರ್ಟ್' ಎಂಬ ಹಣೆಪಟ್ಟಿಗೆ ಒಂದೊಂದು ನಗರದ ಮಟ್ಟಿಗೆ ಒಂದೊಂದು ಅರ್ಥವಿರುವುದು ಸಾಧ್ಯ.

ಮಂಗಳವಾರ, ಮಾರ್ಚ್ 17, 2015

ವರ್ಚುಯಲ್ ರಿಯಾಲಿಟಿ: ಇಲ್ಲದ್ದು ಇದ್ದಹಾಗೆ ಇಲ್ಲಿಯೇ ಇದ್ದಹಾಗೆ!

ಟಿ. ಜಿ. ಶ್ರೀನಿಧಿ

ಆಸ್ಟ್ರೇಲಿಯಾ ಸಮುದ್ರತೀರದಲ್ಲಿರುವ ಹವಳದ ದಂಡೆಗಳನ್ನು ನೋಡಬೇಕೆನ್ನುವುದು ಬಹುದಿನಗಳ ಆಸೆ. ಆದರೆ ಕಚೇರಿಗೆ ರಜೆ ಸಿಗಬೇಕಲ್ಲ! ಹಾಗೊಮ್ಮೆ ಸಿಕ್ಕಿದರೂ ಹೆಂಡತಿಯನ್ನು ಒಪ್ಪಿಸುವುದು - ಶಾಲೆ ತಪ್ಪಿಸುವಂತೆ ಮಗಳ ಮನವೊಲಿಸುವುದೆಲ್ಲ ಕಷ್ಟ. ದುಡ್ಡು ಹೊಂದಿಸುವ ಚಿಂತೆಯೇನಿದ್ದರೂ ಆಮೇಲಿನ ವಿಷಯ.

ಇಂತಹ ಸಂದರ್ಭದಲ್ಲಿ ಏನು ಮಾಡಬೇಕು? ಮೇಜಿನ ಮೇಲಿರುವ ಮೊಬೈಲ್ ಫೋನ್ ಕೈಗೆತ್ತಿಕೊಳ್ಳಬೇಕು; ಸಾಲ ಕೊಡುವ ಸಂಸ್ಥೆಗೋ ಟಿಕೆಟ್ ಏಜೆಂಟಿಗೋ ಫೋನ್ ಮಾಡಲಿಕ್ಕಲ್ಲ, ಕುಳಿತ ಕಡೆಯೇ ಆಸ್ಟ್ರೇಲಿಯಾ ದರ್ಶನ ಮಾಡಲು!


ಕೇಳಲು ವಿಚಿತ್ರವೆನಿಸುವ ಈ ವಿದ್ಯಮಾನವನ್ನು ಸಾಧ್ಯವಾಗಿಸಿರುವ ಪರಿಕಲ್ಪನೆಯ ಹೆಸರೇ ವರ್ಚುಯಲ್ ರಿಯಾಲಿಟಿ, ಅಂದರೆ ಛಾಯಾವಾಸ್ತವ. ಇಲ್ಲದ್ದನ್ನು ಇರುವ ಹಾಗೆ ತೋರಿಸಿ ನಮ್ಮನ್ನು ಭ್ರಮಾಲೋಕಕ್ಕೆ ಕರೆದೊಯ್ಯುವ ಮಾಯಾಜಾಲ ಇದು.

ನಮ್ಮ ಸುತ್ತಲೂ ಬೇರೆಯದೇ ಸನ್ನಿವೇಶ ಇರುವಂತಹ ಭ್ರಮೆ ಸೃಷ್ಟಿಸಲು ಕನ್ನಡಕದಂತಹ ಸಾಧನಗಳನ್ನು ಬಳಸುವುದು ಹೊಸ ವಿಷಯವೇನೂ ಅಲ್ಲ.

ಬುಧವಾರ, ಮಾರ್ಚ್ 11, 2015

ಬಾಹ್ಯಾಕಾಶಕ್ಕೆ ಪ್ರವಾಸ

ಟಿ. ಜಿ. ಶ್ರೀನಿಧಿ

ಕಳೆದ ಕೆಲ ತಿಂಗಳುಗಳಲ್ಲಿ ಬಾಹ್ಯಾಕಾಶಕ್ಕೆ ಸಂಬಂಧಪಟ್ಟ ಘಟನೆಗಳು ಸಾಕಷ್ಟು ಸುದ್ದಿಮಾಡಿವೆ. ಮೊದಲ ಯತ್ನದಲ್ಲೇ ಯಶಸ್ಸುಪಡೆದ ಮಂಗಳಯಾನ, ಚಂದಿರನ ಭೇಟಿ ಮುಗಿಸಿ ಮರಳಿದ ಚೀನಾದ ಆಕಾಶನೌಕೆ, ಧೂಮಕೇತುವಿನ ಮೇಲಿಳಿದ ಯೂರೋಪಿನ 'ಫೈಲಿ', ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಹೊರಡುವಷ್ಟರಲ್ಲೇ ಸುಟ್ಟುಹೋದ ಅಮೆರಿಕಾದ ರಾಕೆಟ್ಟು, ಹಾರಾಟದ ನಡುವೆ ಅಪಘಾತಕ್ಕೀಡಾದ ವರ್ಜಿನ್ ಗೆಲಾಕ್ಟಿಕ್ ಅಂತರಿಕ್ಷವಾಹನ - ಎಲ್ಲದರ ಸುದ್ದಿಯೂ ನಮ್ಮನ್ನು ತಲುಪಿದೆ.


ಪ್ರತ್ಯೇಕ ಸಂದರ್ಭಗಳಲ್ಲಿ ನಡೆದ ಈ ಘಟನೆಗಳ ನಡುವೆ ಮೇಲ್ನೋಟಕ್ಕೆ ಯಾವುದೇ ಸಂಬಂಧವಿಲ್ಲವೆಂದು ತೋರಿದರೂ ಈ ಎಲ್ಲ ಪ್ರಯತ್ನಗಳ ಉದ್ದೇಶ ಹೆಚ್ಚೂಕಡಿಮೆ ಒಂದೇ ಆಗಿರುವುದನ್ನು ನಾವು ನೋಡಬಹುದು. ಗ್ರಹ-ಉಪಗ್ರಹಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳುವುದು, ಅಂತರಿಕ್ಷದ ನಿಲ್ದಾಣದಲ್ಲಿ ಉಳಿದುಕೊಂಡು ಸಂಶೋಧನೆಗಳನ್ನು ನಡೆಸುವುದು, ಬಾಹ್ಯಾಕಾಶಕ್ಕೆ ಪ್ರಯಾಣಿಸುವ ಸುಲಭ ವಿಧಾನಗಳನ್ನು ರೂಪಿಸುವುದು - ಎಲ್ಲದರ ಹಿಂದೆಯೂ ಇರುವ ಆಶಯ ಒಂದೇ: ಮಾನವ ಚಟುವಟಿಕೆಗಳ ವ್ಯಾಪ್ತಿಯನ್ನು ಭೂಮಿಯಿಂದಾಚೆಗೂ ವಿಸ್ತರಿಸುವುದು!

ಭಾನುವಾರ, ಮಾರ್ಚ್ 8, 2015

ಪ್ರಾಣಿಪ್ರಪಂಚದಲ್ಲಿ ಸ್ವಾಮಿ

ಡಿವಿಜಿಯವರ ಪುತ್ರ ಡಾ. ಬಿ. ಜಿ. ಎಲ್. ಸ್ವಾಮಿ ಅಂತಾರಾಷ್ಟ್ರೀಯ ಖ್ಯಾತಿಯ ಸಸ್ಯವಿಜ್ಞಾನಿ. ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದ ಸ್ವಾಮಿಯವರು ಕೆಲವು ಸಂದರ್ಭಗಳಲ್ಲಿ ಸಸ್ಯಗಳ ಸಹವಾಸ ಬಿಟ್ಟು ಪ್ರಾಣಿಗಳೊಡನೆಯೂ ಒಡನಾಡಬೇಕಾಗಿ ಬಂದಿತ್ತು. ಆ ಸಂದರ್ಭಗಳ ಹಾಸ್ಯಮಯ ವಿವರಣೆಯನ್ನು ನಾವು ಅವರ ಬರಹಗಳಲ್ಲೇ ನೋಡಬಹುದು. ಅಂತಹ ಎರಡು ಪ್ರಸಂಗಗಳು ಇಲ್ಲಿವೆ.
ಟಿ. ಜಿ. ಶ್ರೀನಿಧಿ

ಪುಸ್ತಕ ಕೊಳ್ಳಲು ಕ್ಲಿಕ್ ಮಾಡಿ
ಡಾ. ಬಿ. ಜಿ. ಎಲ್. ಸ್ವಾಮಿಯವರು ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಸಮಯ. ಸಸ್ಯವಿಜ್ಞಾನದ ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಅಧ್ಯಯನ ಪ್ರವಾಸಕ್ಕೆಂದು ಅವರು ಪ್ರತಿವರ್ಷವೂ ಅರಣ್ಯಪ್ರದೇಶಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಹೀಗೆ ಪ್ರವಾಸ ಹೋದಾಗಲೆಲ್ಲ ವಿವಿಧ ಬಗೆಯ ಸಸ್ಯಗಳ ಮಾದರಿ ಸಂಗ್ರಹಿಸಿಕೊಂಡು ಬರುವುದು ಸಂಪ್ರದಾಯ. ಒಣ ಸಸ್ಯ ಸಂಗ್ರಹಾಲಯಕ್ಕೆ, ತರಗತಿಗಳ ಉಪಯೋಗಕ್ಕೆ, ಸಸ್ಯವಿಜ್ಞಾನ ಹಾಗೂ ರಸಾಯನ ವಿಜ್ಞಾನ ಸಂಬಂಧಿತ ಸಂಶೋಧನೆಗಳಿಗೆಲ್ಲ ಈ ಸಂಗ್ರಹ ಬಳಕೆಯಾಗುತ್ತಿತ್ತು.

ಹೀಗೊಂದು ವರ್ಷ ಪ್ರವಾಸದ ಸಂದರ್ಭದಲ್ಲಿ ಸಾಮಾನ್ಯಕ್ಕಿಂತ ಹೆಚ್ಚೇ ಎನ್ನಿಸುವಷ್ಟು ಪ್ರಮಾಣದ ಸಸ್ಯಸಾಮಗ್ರಿ ಸಂಗ್ರಹವಾಯಿತು. ಸಂಗ್ರಹವಾದದ್ದನ್ನೆಲ್ಲ ಹೊರುವ ಕೆಲಸವಿತ್ತಲ್ಲ, ಅದಕ್ಕಾಗಿ ಇಬ್ಬರು ಕೂಲಿಗಳ ಜಾಗದಲ್ಲಿ ನಾಲ್ವರನ್ನು ಗೊತ್ತುಮಾಡಿಕೊಳ್ಳುವ ಅನಿವಾರ್ಯತೆ ಬಂತು. ಇದರಿಂದಾಗಿ ಸಸ್ಯಸಂಗ್ರಹವೇನೋ ಸಮಸ್ಯೆಯಿಲ್ಲದೆ ಕಾಲೇಜಿಗೆ ಬಂತು; ಆದರೆ ಪ್ರವಾಸದಿಂದ ಮರಳಿದ ಸ್ವಾಮಿಯವರಿಗೆ ಸಮಸ್ಯೆ ಶುರುವಾಯಿತು.

ಬುಧವಾರ, ಮಾರ್ಚ್ 4, 2015

ಮೊಬೈಲ್ ರೀಚಾರ್ಜ್ ಹೊಸ ಅವತಾರ

ಟಿ. ಜಿ. ಶ್ರೀನಿಧಿ

ದೂರವಾಣಿ ಕರೆಯಿಂದ ಪ್ರಾರಂಭಿಸಿ ವಾಟ್ಸ್‌ಆಪ್‌ವರೆಗೆ, ಇಮೇಲ್ ಬಳಸುವುದರಿಂದ ಫೋಟೋ ತೆಗೆಯುವವರೆಗೆ, ಆನ್‌ಲೈನ್ ಶಾಪಿಂಗಿನಿಂದ ಶೇರು ವ್ಯವಹಾರದವರೆಗೆ ಇಂದು ಪ್ರತಿಯೊಂದಕ್ಕೂ ನಮಗೆ ಮೊಬೈಲ್ ಬೇಕು. ಒಂದಷ್ಟು ಸಮಯ ಮೊಬೈಲ್ ಫೋನ್ ಬಳಸದೆ ಇರಲು ಸಾಧ್ಯವೇ ಎಂದು ಕೇಳಿದರೆ ಬಹಳಷ್ಟು ಜನ ಖಂಡಿತಾ ಇಲ್ಲ! ಎಂದೇ ಹೇಳುತ್ತಾರೇನೋ.

ಮೊಬೈಲ್ ಮಾಯೆ ನಮ್ಮನ್ನು ಆವರಿಸಿಕೊಂಡಿರುವ ಪರಿಯೇ ಅಂಥದ್ದು. ಊಟ ಬಟ್ಟೆ ಹೊಂದಿಸಿಕೊಳ್ಳುವ ಜೊತೆಗೆ ಮೊಬೈಲ್ ರೀಚಾರ್ಜ್ ಮಾಡಿಸುವುದೂ ಇಂದಿನ ಬದುಕಿನ ಅಗತ್ಯಗಳಲ್ಲೊಂದು.

ಹೌದು ಮತ್ತೆ, ಎಷ್ಟು ಸಾವಿರದ ಹ್ಯಾಂಡ್‌ಸೆಟ್ ಆದರೇನಂತೆ - ಸರಿಯಾದ ಸಮಯಕ್ಕೆ ರೀಚಾರ್ಜ್ ಮಾಡಿಸಲಿಲ್ಲ ಅಥವಾ ಬಿಲ್ ಪಾವತಿಸಲಿಲ್ಲ ಎಂದರೆ ಅದು ಬದುಕಿದ್ದೂ ಸತ್ತಂತೆಯೇ ಲೆಕ್ಕ. ಮೊಬೈಲ್ ಕೆಲಸಮಾಡುತ್ತಿಲ್ಲ ಎಂದರೆ ಫೋನ್ ಮಾಡುವುದು ಹೇಗೆ, ಮೆಸೇಜ್ ಕತೆಯೇನು, ಫೇಸ್‌ಬುಕ್ಕಿನ ವೀಡಿಯೋಗಳನ್ನು ನೋಡುವುದು-ಹಂಚಿಕೊಳ್ಳುವುದಾದರೂ ಹೇಗೆ!?

ಕೆಲ ವರ್ಷಗಳ ಹಿಂದೆ ಮೊಬೈಲ್ ರೀಚಾರ್ಜ್ ಮಾಡಿಸಬೇಕೆಂದರೆ ಅಂಗಡಿಗಳನ್ನು ಹುಡುಕಿಕೊಂಡು ಅಲೆಯಬೇಕಿತ್ತು. ಆ ಕಂಪನಿಯ ಕಾರ್ಡು ಸ್ಟಾಕಿಲ್ಲ ನಾಳೆ ಬನ್ನಿ ಎನ್ನುವಂತಹ ಮಾತನ್ನೂ ಕೇಳುವ ಸಾಧ್ಯತೆಯಿತ್ತು. ಪೋಸ್ಟ್‌ಪೇಡ್ ಬಿಲ್ ಪಾವತಿಸಲು ಸರದಿಯ ಸಾಲಿನಲ್ಲಿ ನಿಲ್ಲುತ್ತಿದ್ದದ್ದೂ ಉಂಟು.

ಈ ಪರಿಸ್ಥಿತಿ ನಿಧಾನಕ್ಕೆ ಬದಲಾದಾದಂತೆ ಮೊಬೈಲ್ ರೀಚಾರ್ಜ್ ಎನ್ನುವುದು ಒಂದು ಕಾಲಕ್ಕೆ ಅಂಗಡಿಯಲ್ಲಿ ಸಿಗುತ್ತಿದ್ದ ಭೌತಿಕ ವಸ್ತುವಾಗಿತ್ತು ಎನ್ನುವುದೇ ಮರೆತುಹೋಗುತ್ತಿದೆ. ಹಳೆಯ ಕಡತಗಳಲ್ಲಿ ಸೇರಿಕೊಂಡಿದ್ದು ಯಾವಾಗಲೋ ಕೈಗೆ ಸಿಗುವ ಬಣ್ಣಬಣ್ಣದ ರೀಚಾರ್ಜ್ ಕಾರ್ಡುಗಳು ಮ್ಯೂಸಿಯಂ ಪೀಸುಗಳಂತೆ ಕಾಣಲು ಶುರುವಾಗಿವೆ.

ಸೋಮವಾರ, ಮಾರ್ಚ್ 2, 2015

ಖುಲ್‌ಜಾ ಸಿಮ್ SIM!

ಟಿ. ಜಿ. ಶ್ರೀನಿಧಿ

ನಿಮ್ಮ ಮೊಬೈಲ್ ಫೋನು ಯಾವುದೇ ಇರಲಿ, ಸ್ಮಾರ್ಟ್ ಆಗಿರಲಿ ಇಲ್ಲದಿರಲಿ, ಜಿಎಸ್‌ಎಂ ತಂತ್ರಜ್ಞಾನ ಬಳಸುವುದಾದರೆ ಅದರಲ್ಲೊಂದು ಸಿಮ್ ಅಂತೂ ಇದ್ದೇ ಇರುತ್ತದೆ. ಹಾಗೆ ನೋಡಿದರೆ ಮೊಬೈಲ್ ಫೋನಿಗೆ ಜೀವತುಂಬುವುದೇ ಈ ಸಿಮ್ಮು. ಕರೆಮಾಡಲು, ಎಸ್ಸೆಮ್ಮೆಸ್ ಕಳುಹಿಸಲು, ಹೋದಲ್ಲೆಲ್ಲ ಅಂತರಜಾಲ ಸಂಪರ್ಕ ಪಡೆದುಕೊಳ್ಳಲು - ಎಲ್ಲದಕ್ಕೂ ಸಿಮ್ ಬೇಕೇ ಬೇಕು.

ಸಿಮ್ ಎನ್ನುವುದು ಒಂದು ನಾಮಪದದಂತೆಯೇ ನಮ್ಮ ಶಬ್ದಭಂಡಾರಕ್ಕೆ ಸೇರಿಕೊಂಡುಬಿಟ್ಟಿದೆ. ಆದರೆ ನಿಜಕ್ಕೂ ಅದೊಂದು ಸಂಕ್ಷೇಪ (ಅಬ್ರೀವಿಯೇಶನ್). 'ಸಬ್‌ಸ್ಕ್ರೈಬರ್  ಐಡೆಂಟಿಫಿಕೇಶನ್ ಮಾಡ್ಯೂಲ್', ಅಂದರೆ ಚಂದಾದಾರರನ್ನು ಗುರುತಿಸುವ ಘಟಕ, ಎನ್ನುವುದು ಇದರ ಪೂರ್ಣರೂಪ.

ಶನಿವಾರ, ಫೆಬ್ರವರಿ 28, 2015

ವಿಜ್ಞಾನ ದಿನ ವಿಶೇಷ: ಜ್ವರಪೀಡಿತ, ಬರಪೀಡಿತರ ಮಧ್ಯೆ ವಿಜ್ಞಾನ ಹಬ್ಬ

ಪ್ರತಿ ವರ್ಷ ಫೆಬ್ರವರಿ ೨೮ನೇ ದಿನಾಂಕವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನದ ಕುರಿತು ಫೆ. ೨೬ರ ಪ್ರಜಾವಾಣಿಯಲ್ಲಿ ಪ್ರಕಟವಾದ ನಾಗೇಶ ಹೆಗಡೆಯವರ ಈ ಬರಹವನ್ನು ಲೇಖಕರ ಅನುಮತಿಯೊಡನೆ ಇಲ್ಲಿ ಪ್ರಕಟಿಸುತ್ತಿದ್ದೇವೆ.  
ನಾಗೇಶ ಹೆಗಡೆ

ನಮ್ಮ ದೇಶದಲ್ಲಿ ಪ್ರತಿದಿನ ಸುಮಾರು ೧೩೦೦ ಜನರು ಕ್ಷಯರೋಗದಿಂದ ಸಾವನ್ನಪ್ಪುತ್ತಿದ್ದಾರೆ. ಮಲೇರಿಯಾದಿಂದ ನಿತ್ಯವೂ ಸರಾಸರಿ ೩೨೫ ಜನರು ಇಹಲೋಕ ತ್ಯಜಿಸುತ್ತಿದ್ದಾರೆ. ಏಡ್ಸ್ ಸಾವು ಇನ್ನೂರರ ಆಸುಪಾಸು ಇದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ ಭೇದಿ- ಅತಿಸಾರದಿಂದ- (ಡಯಾರಿಯಾ) ಸುಮಾರು ಒಂದು ಸಾವಿರ ಮಕ್ಕಳು ಪ್ರತಿದಿನವೂ ಸಾಯುತ್ತಿದ್ದಾರೆ. ಒಂದು ಸಾವಿರ! ಆ ಯಾವವೂ ನಮಗೆ ಲೆಕ್ಕಕ್ಕಿಲ್ಲ. ಆದರೆ ಪ್ರತಿದಿನ ಸರಾಸರಿ ೨೦ ರೋಗಿಗಳ ಪ್ರಾಣ ಹೀರುತ್ತಿರುವ ಹಂದಿಜ್ವರದ ಬಗ್ಗೆ ಮಾತ್ರ ಹುಯಿಲು ಹೆಚ್ಚುತ್ತಿದೆ. ಕಳೆದ ಒಂದು ತಿಂಗಳಲ್ಲಿ ೬೦೦ ದಾಟಿತು,೭೦೦ ದಾಟಿತು, ೮೦೦ನ್ನೂ ದಾಟಿತು ಎಂದು ದಿಗಿಲುಗೊಳಿಸುವ ವರದಿಗಳು ಬರುತ್ತಿವೆ.  ‘ರೋಗ­ಪೀಡಿತರ ಸಂಖ್ಯೆ ೧೪ ಸಾವಿರ ತಲು­ಪಿದೆ’ ಎಂದು ಮೊನ್ನೆ ಸಂಸತ್ತಿನಲ್ಲೂ ಸಚಿವರು ಘೋಷಿಸಿ­ದ್ದಾರೆ. ಬೇಕೆಂದಷ್ಟು ಲಸಿಕೆ ಮಾತ್ರೆ, ಮುಖ­ವಾಡ ಎಲ್ಲ ಕಡೆ ಸಿಗುವಂತೆ ವ್ಯವಸ್ಥೆ ಮಾಡ­ಲಾ­ಗಿದೆಯಂತೆ. ಔಷಧ ಕಂಪೆನಿ­ಗಳು ತಮ್ಮ ಮುಖ­ವಾಡದ ಹಿಂದೆ ಮುಸುಮುಸು ನಗುತ್ತಿರ­ಬಹುದು.

ಕಂಗಾಲಾಗುವ ಸುದ್ದಿಯನ್ನೇ ಎಲ್ಲರೂ ಬಯಸುವ ಕಾಲ ಇದು. ಆದರೆ ಈ ಜ್ವರಕ್ಕೆ ಅಷ್ಟೊಂದು ಕಂಗಾಲು ಬೇಕಾಗಿಲ್ಲ. ಹಿಂದೆಲ್ಲ  ಇದು ಬರೀ ‘ಫ್ಲೂ’ ಅಥವಾ ‘ಇನ್‌ಫ್ಲುಯೆಂಝಾ’ ಹೆಸರಲ್ಲಿ ಬರುತ್ತಿತ್ತು. ಅಂಥ ಪ್ರಾಣಾಂತಿಕ ಏನಲ್ಲ. ಹಂದಿಗಳಿಗೂ ಬೆದರಬೇಕಾಗಿಲ್ಲ. ಜ್ವರ ಬಂದ ಹಂದಿಗಳಿಂದ ನಮಗೆ ಸೋಂಕು ತಗುಲು­ವುದು ಇಲ್ಲವೇ ಇಲ್ಲವೆಂಬಷ್ಟು ಅಪರೂಪ. ಅಕಸ್ಮಾತ್ ತಗುಲಿದರೂ ಆ ಒಬ್ಬರಿಂದ ಇನ್ನೊಬ್ಬ ವ್ಯಕ್ತಿಗೆ ದಾಟುವುದು ಇನ್ನೂ ಅಪ­ರೂಪ. ಯಾವುದೋ ದೇಶದಲ್ಲಿ ಹೇಗೋ ಇಬ್ಬರ ದೇಹದಲ್ಲಿ ಹೊಕ್ಕು -ಹೊರಟ ಹಂದಿ ವೈರಸ್ ತುಸು ಹೊಸರೂಪ ಧರಿಸಿ, ಒಬ್ಬರಿಂದೊ­ಬ್ಬರಿಗೆ ದಾಟಲು ಕಲಿತಿರುತ್ತದೆ. ಅಲ್ಲಿಂದ ಮುಂದೆ ಅದು ಸಾಂಕ್ರಾಮಿಕ ಎನಿಸು­ತ್ತದೆ. ಈಗ ಅಂಥದೊಂದು ಸಾಂಕ್ರಾಮಿಕ ಎಲ್ಲಿಂದಲೋ ಇಲ್ಲಿಗೆ ಬಂದಿದೆ. ತಾನಾಗಿ ಬಂತೋ ಅಥವಾ ಬೇಕಂತಲೇ ತಂದಿದ್ದೊ ಗೊತ್ತಿಲ್ಲ.

ಭಾನುವಾರ, ಫೆಬ್ರವರಿ 22, 2015

ಕಂಪ್ಯೂಟರಿನ ರೂಪಾಂತರ ಪರ್ವ

ಕಂಪ್ಯೂಟರ್ ಎಂದತಕ್ಷಣ ನಮ್ಮ ಮನಸ್ಸಿಗೆ ಬರುವ ಚಿತ್ರ ಮಾನಿಟರ್, ಕೀಬೋರ್ಡ್, ಮೌಸ್ ಹಾಗೂ ಪಕ್ಕದಲ್ಲೊಂದು ದೊಡ್ಡ ಕ್ಯಾಬಿನೆಟ್. ಇಂತಹ ದೊಡ್ಡ ಪರದೆಯ, ಮೇಜಿನ ಮೇಲೆ ಸ್ಥಾಪಿತವಾಗುವ ('ಡೆಸ್ಕ್‌ಟಾಪ್') ಕಂಪ್ಯೂಟರುಗಳ ಕಾಲ ಲ್ಯಾಪ್‌ಟಾಪು-ಟ್ಯಾಬ್ಲೆಟ್ಟುಗಳ ಭರಾಟೆಯಲ್ಲಿ ಇನ್ನೇನು ಮುಗಿದೇ ಹೋಯಿತು ಎನ್ನುವಷ್ಟರಲ್ಲಿ ಕಂಪ್ಯೂಟರಿನ ರೂಪಾಂತರ ಪರ್ವ ಪ್ರಾರಂಭವಾಗಿದೆ. ಮಿನಿ, ಮೈಕ್ರೋ ಹಾಗೂ ಆಲ್-ಇನ್-ಒನ್‌ಗಳ ಮೂಲಕ ಕಂಪ್ಯೂಟರ್ ಇಡಲು ಬೇಕಾದ ಜಾಗವನ್ನು ಕಡಿಮೆ ಮಾಡಲಾಗುತ್ತಿದೆ. ದಿವಾನಖಾನೆಯ ಟೀವಿಗೇ ಜೋಡಿಸಬಹುದಾದ ಸಾಧನಗಳು ದಶಕಗಳ ಹಿಂದಿನ ವಿನ್ಯಾಸವನ್ನು ಮತ್ತೆ ನೆನಪಿಸುತ್ತಿವೆ. ಕಂಪ್ಯೂಟರ್ ಜಗದ ಫ್ಯಾಶನ್ ಚಕ್ರ ಪೂರ್ತಿ ಒಂದು ಸುತ್ತು ಬಂದಿದೆ!
ಟಿ. ಜಿ. ಶ್ರೀನಿಧಿ

ಕಂಪ್ಯೂಟರಿಗೆ ನಮ್ಮ ಮನೆಗಳಲ್ಲಿ ಪ್ರಮುಖ ಸ್ಥಾನ ಸಿಕ್ಕಿದ್ದು ಮಾಹಿತಿ ತಂತ್ರಜ್ಞಾನದ ಪ್ರಭಾವ ಬೆಳೆಯಲು ಶುರುವಾದ ಸಮಯದಲ್ಲೇ ಇರಬೇಕು. ಅಲ್ಲಿಂದ ಈಚೆಗಿನ ದಶಕಗಳಲ್ಲಿ ಟೀವಿ ಫ್ರಿಜ್ಜು ಮಿಕ್ಸಿಗಳಂತೆ  ಕಂಪ್ಯೂಟರ್ ಕೂಡ ಮನೆಯಲ್ಲಿ ಸಾಮಾನ್ಯವಾಗಿ ಇರಬೇಕಾದ ಸಾಧನಗಳ ಪಟ್ಟಿಗೆ ಸೇರಿಕೊಂಡುಬಿಟ್ಟಿದೆ.

ಮನೆಯ ಕಂಪ್ಯೂಟರ್ ಎಂದಾಕ್ಷಣ ನಮ್ಮ ಮನಸ್ಸಿಗೆ ಬರುವ ಮೊದಲ ಚಿತ್ರ ಮಾನಿಟರ್, ಕೀಬೋರ್ಡ್, ಮೌಸ್, ಸ್ಪೀಕರ್ ಮತ್ತು ಅದೆಲ್ಲವನ್ನೂ ಸಂಪರ್ಕಿಸುವ - ಮದರ್‌ಬೋರ್ಡ್, ಹಾರ್ಡ್ ಡಿಸ್ಕ್, ರ್‍ಯಾಮ್ ಇತ್ಯಾದಿಗಳನ್ನೆಲ್ಲ ತುಂಬಿಟ್ಟುಕೊಂಡಿರುವ - ದೊಡ್ಡದೊಂದು ಪೆಟ್ಟಿಗೆ. ಡಬ್ಬ ಎಂದಾದರೂ ಕರೆಯಿರಿ, ಕ್ಯಾಬಿನೆಟ್ ಎಂದಾದರೂ ಹೆಸರಿಸಿ - ಅದಂತೂ ಆದರ್ಶ ಡೆಸ್ಕ್‌ಟಾಪ್ ಕಂಪ್ಯೂಟರಿನ ಅವಿಭಾಜ್ಯ ಅಂಗ. ಇನ್ನು ವಿದ್ಯುತ್ ಕೈಕೊಟ್ಟಾಗ ನೆರವಿಗೆ ಬರುವ ಚಿಕ್ಕದೊಂದು ಯುಪಿಎಸ್ ಹಾಗೂ ಕಂಪ್ಯೂಟರಿನ ಸಮಸ್ತ ಅಂಗಗಳಿಗೂ ಆಶ್ರಯನೀಡುವ ಕಂಪ್ಯೂಟರ್ ಟೇಬಲ್ ಕೂಡ ಬಹಳ ಮನೆಗಳಲ್ಲಿ ಇರುತ್ತವೆ.

ಮನೆ ದೊಡ್ಡದಾಗಿದ್ದರೆ ಇಂಥದ್ದೊಂದು ಕಂಪ್ಯೂಟರ್ ಕುಟುಂಬಕ್ಕೆ ಜಾಗ ಕೊಡುವುದರಲ್ಲಿ ಹೆಚ್ಚಿನ ಸಮಸ್ಯೆಯೇನೂ ಇರುವುದಿಲ್ಲ. ಆದರೆ ಈಗಿನ ಕಾಲದಲ್ಲಿ ಮನೆ ಕಟ್ಟಲು ಬೇಕಾಗುವ ರಿಯಲ್ ಎಸ್ಟೇಟ್ ಹಾಗೂ ನಾವು ಕೊಳ್ಳುವ ಅಸಂಖ್ಯ ವಸ್ತುಗಳಿಗೆ ಮನೆಯೊಳಗೆ ಒದಗಿಸಬೇಕಾದ ರಿಯಲ್ ಎಸ್ಟೇಟುಗಳೆರಡೂ ದುಬಾರಿ. ಹೀಗಿರುವಾಗ ಕಂಪ್ಯೂಟರಿಗೆ ಅಷ್ಟೆಲ್ಲ ಜಾಗ ಕೊಡುವುದೆಂದರೇನು ತಮಾಷೆಯೇ?

ಹಾಗಾಗಿಯೇ ಈಗ ಸ್ಮಾಲ್ ಈಸ್ ಬ್ಯೂಟಿಫುಲ್. ದಿನದಿಂದ ದಿನಕ್ಕೆ ಕಂಪ್ಯೂಟರಿನ ಮೂತಿ, ಅಂದರೆ ಪರದೆ, ಚಿಕ್ಕದಾಗುತ್ತ ಸಾಗುತ್ತಿದೆ. ಈ ವಿದ್ಯಮಾನದಿಂದ ಅದರ ಕೀರ್ತಿಗೇನೂ ಕುಂದು ಬಾರದಂತೆ ನೋಡಿಕೊಳ್ಳಲು ಇತರ ಅಂಗಗಳೂ ಗಾತ್ರದಲ್ಲಿ ಕುಗ್ಗುವುದನ್ನು ಕಲಿತುಬಿಟ್ಟಿವೆ.

ಕಂಪ್ಯೂಟರಿಗೆ ಟೇಬಲ್ ಬೇರೆ ಯಾಕೆ, ಕೆಲಸಮಾಡುವಷ್ಟು ಹೊತ್ತು ತೊಡೆಯ ಮೇಲಿಟ್ಟುಕೊಂಡಿದ್ದು ಆನಂತರ ಬ್ಯಾಗಿನೊಳಕ್ಕೆ ತೂರಿಸಿದರೆ ಆಯಿತು - ಈಗ ಲ್ಯಾಪ್‌ಟಾಪ್ ಕೃಪೆಯಿಂದ ಕುಳಿತ ಜಾಗವೇ ಆಫೀಸು. ಆಫೀಸು ಕೆಲಸ ಮುಗಿಸಿದ ಮೇಲೆ ಇಂಟರ್‌ನೆಟ್ಟಿನಲ್ಲಿ ಆರಾಮವಾಗಿ ಈಜಾಡಲು ಹೇಗೂ ಟ್ಯಾಬ್ಲೆಟ್ ಇದೆ. ಇನ್ನು ಇಪ್ಪತ್ತನಾಲ್ಕು ಗಂಟೆಯೂ ವಾಟ್ಸಾಪಿನಲ್ಲಿ ವಾಟ್ಸಪ್ ಎನ್ನಲು ಜೇಬಿನಲ್ಲೊಂದು ಸ್ಮಾರ್ಟ್ ಫೋನು, ಅದನ್ನು ಜೇಬಿನಿಂದಾಚೆ ತೆಗೆಯದೆಯೇ ಓದಬೇಕೆಂದರೆ ಮುಂಗೈಯ ವಾಚ್ ಕೂಡ ಸ್ಮಾರ್ಟು. ಇಷ್ಟಿದ್ದ ಮೇಲೆ ಸ್ವರ್ಗಕ್ಕೆ ಕಿಚ್ಚು ಹಚ್ಚುವುದೇ ಇನ್ನೇನು!

ಸೋಮವಾರ, ಫೆಬ್ರವರಿ 16, 2015

ಕ್ರಿಕೆಟ್ ಕಣದಲ್ಲಿ ತಂತ್ರಜ್ಞಾನದ ಆಟ

ಟಿ. ಜಿ. ಶ್ರೀನಿಧಿ

ವರ್ಷಗಳು ಕಳೆದಂತೆ ಕ್ರಿಕೆಟ್ ಆಟದ ಸ್ವರೂಪ ಬದಲಾಗುತ್ತಿದೆ. ಪಂದ್ಯಗಳು ಟೆಸ್ಟ್‌ನಿಂದ ಒನ್‌ಡೇಗೆ, ಒನ್‌ಡೇಯಿಂದ ಟ್ವೆಂಟಿ ಟ್ವೆಂಟಿಗೆ ರೂಪಾಂತರಗೊಂಡಿವೆ. ಪಂದ್ಯಗಳ ಕಾಲಾವಧಿಯಷ್ಟೇ ಅಲ್ಲ, ಆಟದ ಶೈಲಿಯಿಂದ ಆಟಗಾರರ ಜೀವನ ಶೈಲಿಯವರೆಗೆ ಎಲ್ಲೆಲ್ಲೂ ಬದಲಾವಣೆ ಕಾಣಸಿಗುತ್ತಿದೆ.

ತಂತ್ರಜ್ಞಾನದ ಅನುಕೂಲತೆಗಳನ್ನು ಅಳವಡಿಸಿಕೊಳ್ಳುವುದರಲ್ಲೂ ಕ್ರಿಕೆಟ್ ಸದಾ ಮುಂದೆ. ಅಂತಾರಾಷ್ಟ್ರೀಯ ಪಂದ್ಯಗಳಿಗೆ ಹರಿದು ಬರುವ ಹಣದ ಪ್ರವಾಹವೇ ಜೊತೆಗಿರುವಾಗ ಖರ್ಚಿನ ಚಿಂತೆಯೂ ಇಲ್ಲ. ಹಾಗಾಗಿ ಇಂದಿನ ಕ್ರಿಕೆಟ್ ಪಂದ್ಯಗಳಲ್ಲಿ ಆಟಗಾರರ ಜೊತೆಗೆ ತಂತ್ರಜ್ಞಾನವೂ ಆಟವಾಡುತ್ತದೆ.

ಕ್ರಿಕೆಟ್ ಆಟದಲ್ಲಿ ತಂತ್ರಜ್ಞಾನದ ಪಾತ್ರ ನಮ್ಮ ಗಮನಕ್ಕೆ ಬಂದದ್ದು ಬಹಳ ವರ್ಷಗಳ ಹಿಂದೆ: ಬ್ಯಾಟ್ಸ್‌ಮನ್ ರನೌಟ್ ಆಗಿದ್ದಾನೋ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಲು ಮೈದಾನದಲ್ಲಿದ್ದ ಅಂಪೈರ್ ಟೀವಿ ಮುಂದಿದ್ದ ಅಂಪೈರನ್ನು ಕೇಳಿದರಲ್ಲ, ಆಗಲೇ! ಮನೆಯ ಸೋಫಾ ಮೇಲಿನ ಆಲೂಗಡ್ಡೆಗಳಿಗಷ್ಟೆ ಸಿಗುತ್ತಿದ್ದ ಆಕ್ಷನ್ ರೀಪ್ಲೇ ಸೌಲಭ್ಯ ಆಟಗಾರರಿಗೂ ಸಿಗುವಂತಾದದ್ದು ಆಗಿನ ಕಾಲಕ್ಕೆ ಸಾಕಷ್ಟು ಕುತೂಹಲಕರ ಎನ್ನಿಸಿತ್ತು.

ಈಗ ಇನ್ನಷ್ಟು ಸಮಯ ಸರಿದಿದೆ, ತಂತ್ರಜ್ಞಾನ ಇನ್ನಷ್ಟು ಅಭಿವೃದ್ಧಿಯಾಗಿದೆ. ಕ್ರಿಕೆಟ್ ಕಣದ ಮೇಲೆ ಅದರ ಪ್ರಭಾವವೂ ಜಾಸ್ತಿಯಾಗಿದೆ. ಜಾಹೀರಾತು ಫಲಕಗಳಿಂದ ಪ್ರಾರಂಭಿಸಿ ಟೀವಿ ಪ್ರಸಾರದ ಕ್ಯಾಮೆರಾವರೆಗೆ, ಚೆಂಡು ತಗುಲಿದರೆ ದೀಪ ಮಿನುಗಿಸುವ ಹೈಟೆಕ್ ವಿಕೆಟ್ಟುಗಳಿಂದ ಚೆಂಡಿನ ವೇಗ ಅಳೆಯುವ ವ್ಯವಸ್ಥೆಯವರೆಗೆ ಇದೀಗ ಎಲ್ಲೆಲ್ಲೂ ತಂತ್ರಜ್ಞಾನದ್ದೇ ಭರಾಟೆ.

ಮಂಗಳವಾರ, ಫೆಬ್ರವರಿ 3, 2015

ಫೋನ್ ಬ್ಯಾಟರಿಗೆ ಬದಲಾವಣೆಯ ಸಮಯ

ಟಿ. ಜಿ. ಶ್ರೀನಿಧಿ

ಹದಿನೈದು-ಇಪ್ಪತ್ತು ವರ್ಷಗಳ ಹಿಂದೆ ಬಹುಶಃ ನಮ್ಮ ಕಲ್ಪನೆಗೂ ನಿಲುಕದಿದ್ದ ಮೊಬೈಲ್ ಫೋನು ಇಂದು ಜೀವನಾವಶ್ಯಕ ವಸ್ತು. ಮೊಬೈಲ್ ನೆಟ್‌ವರ್ಕ್ ಇಲ್ಲ ಅಥವಾ ಕರೆನ್ಸಿ ಖಾಲಿಯಾಗಿದೆ ಎಂದುಬಿಟ್ಟರೆ ಕೆಲವರಲ್ಲಿ ಏನನ್ನೋ ಕಳೆದುಕೊಂಡ ಭಾವನೆ ಉಂಟಾಗುವುದೂ ಅಪರೂಪವಲ್ಲ.

ನೆಟ್‌ವರ್ಕು-ಕರೆನ್ಸಿಗಳಿಗಿಂತ ಹೆಚ್ಚಿನ ತೊಂದರೆ ಕೊಡುವ ಸಂಗತಿಯೆಂದರೆ ಅದು ಮೊಬೈಲಿನ ಬ್ಯಾಟರಿ. ರಾಕ್ಷಸನ ಜೀವ ಏಳು ಸಮುದ್ರದಾಚೆ ಬಂಗಾರದ ಪಂಜರದಲ್ಲಿರುವ ಗಿಣಿಯಲ್ಲಿರುತ್ತಿತ್ತು ಎನ್ನುವ ಕತೆ ಕೇಳಿದ್ದೇವಲ್ಲ, ಈಗಿನ ಕಾಲದ ಮೊಬೈಲುಗಳ ಜೀವವೂ ಈ ಬ್ಯಾಟರಿಯೆನ್ನುವ ಪಂಜರದೊಳಗೇ ಇರುತ್ತದೆ. ಬ್ಯಾಟರಿ ಫೋನಿನೊಳಗೇ ಇರುವುದರಿಂದ ಏಳು ಸಮುದ್ರದಾಚೆ ಹೋಗುವ ಗೊಡವೆಯೆಲ್ಲ ಇರುವುದಿಲ್ಲ ಎನ್ನುವುದಷ್ಟೆ ವ್ಯತ್ಯಾಸ.

ಮೊಬೈಲುಗಳು ಎಷ್ಟೆಲ್ಲ ಸ್ಮಾರ್ಟ್ ಆದರೂ, ಬಳಕೆಯಾಗುವ ತಂತ್ರಜ್ಞಾನದಲ್ಲಿ ಏನೆಲ್ಲ ಬದಲಾವಣೆಗಳಾದರೂ ಅವುಗಳ ಬ್ಯಾಟರಿಗಳಲ್ಲಿ ಹಾಗೂ ಒಮ್ಮೆ ಚಾರ್ಜ್ ಮಾಡಿದಾಗ ಅವನ್ನು ಬಳಸಬಹುದಾದ ಕಾಲಾವಧಿಯಲ್ಲಿ ಮಾತ್ರ ಹೆಚ್ಚು ಬದಲಾವಣೆಯೇನೂ ಆಗಿಲ್ಲ.

ಸೋಮವಾರ, ಫೆಬ್ರವರಿ 2, 2015

ಹ್ಯಾಶ್‌ಟ್ಯಾಗ್ ಹೇಳುವ ಕತೆ

ಟಿ. ಜಿ. ಶ್ರೀನಿಧಿ

"ಚಳಿಗಾಲದ #ಬೆಂಗಳೂರು ಮತ್ತು ಬಿಸಿಬಿಸಿ #ಫಿಲ್ಟರ್‌ಕಾಫಿ - ಹೇಳಿ ಮಾಡಿಸಿದ ಜೋಡಿ!"

- ಟ್ವಿಟ್ಟರ್, ಫೇಸ್‌ಬುಕ್ ಮುಂತಾದ ತಾಣಗಳಲ್ಲಿ ದಿನನಿತ್ಯವೂ ನಮ್ಮ ಕಣ್ಣಿಗೆ ಬೀಳುವ ಅಸಂಖ್ಯ ಸಂದೇಶಗಳಿಗೆ ಇದೊಂದು ಉದಾಹರಣೆ ಅಷ್ಟೆ. ಸಮಾಜ ಜಾಲಗಳಲ್ಲಿ (ಸೋಶಿಯಲ್ ನೆಟ್‌ವರ್ಕ್) ಸಂದೇಶಗಳನ್ನು ಪೋಸ್ಟಿಸುವಾಗ - ಈ ಉದಾಹರಣೆಯಲ್ಲಿರುವಂತೆ - ಪ್ರಾರಂಭದಲ್ಲೋ ನಡುವಿನಲ್ಲೋ ಕೊನೆಯಲ್ಲೋ ಹ್ಯಾಶ್ (#) ಚಿಹ್ನೆಯಿಂದ ಪ್ರಾರಂಭವಾಗುವ ಪದಗಳನ್ನು ಬಳಸುವುದು ಸಾಮಾನ್ಯ ಅಭ್ಯಾಸ. ಇಂತಹ ಪದಗಳನ್ನು 'ಹ್ಯಾಶ್‌‌ಟ್ಯಾಗ್'ಗಳೆಂದು ಕರೆಯುತ್ತಾರೆ.

ಸಂದೇಶ ಬರೆಯುವವರ ಭಾವನೆಯನ್ನು ಪ್ರತಿನಿಧಿಸುವುದರಿಂದ ಪ್ರಾರಂಭಿಸಿ ಸಂಸ್ಥೆಗಳ ಹೆಸರನ್ನೋ ಭಾಷೆಯ ವಿಷಯವನ್ನೋ ನಿರ್ದಿಷ್ಟ ಘಟನೆಯನ್ನೋ ನಿರ್ದೇಶಿಸುವವರೆಗೆ ಹ್ಯಾಶ್‌‌ಟ್ಯಾಗ್‍ಗಳು ಅನೇಕ ಉದ್ದೇಶಗಳಿಗಾಗಿ ಬಳಕೆಯಾಗುತ್ತವೆ. ಉದಯವಾಣಿಯಲ್ಲಿ ಪ್ರಕಟವಾದ ಸುದ್ದಿ ಎಂದು ಸೂಚಿಸಲು #Udayavani, ಬೆಂಗಳೂರಿಗೆ ಸಂಬಂಧಪಟ್ಟಿದ್ದು ಎಂದು ಹೇಳಲು #Bengaluru, ಕನ್ನಡದ ಮಾಹಿತಿ ಎನ್ನುವುದಕ್ಕೆ  #Kannada, ವಿಜ್ಞಾನದ ವಿಷಯಕ್ಕೆ #Science - ಹೀಗೆ ಯಾವ ವಿಷಯಕ್ಕೇ ಆದರೂ ನಾವು ಹ್ಯಾಶ್‌ಟ್ಯಾಗ್‌ಗಳನ್ನು ರೂಪಿಸಿಕೊಳ್ಳಬಹುದು, ಹಾಗೂ ಈಗಾಗಲೇ ಇರುವ ಟ್ಯಾಗ್‌ಗಳನ್ನು ನಮ್ಮ ಸಂದೇಶಗಳಲ್ಲಿ ಬಳಸಬಹುದು.

ಹ್ಯಾಶ್‌ಟ್ಯಾಗ್‌ನಲ್ಲಿ ಒಂದೇ ಪದ ಇರಬೇಕು, ಪ್ರಾರಂಭ '#'ನೊಡನೆ ಆಗಿರಬೇಕು ಎನ್ನುವುದು ನಿಯಮ. ಹ್ಯಾಶ್‌ಟ್ಯಾಗ್‌‌ನಲ್ಲಿ ಅಕ್ಷರ, ಅಂಕಿ ಹಾಗೂ ಅಂಡರ್‌ಸ್ಕೋರ್('_')ಗಳನ್ನು ಮಾತ್ರ ಬಳಸಬಹುದು. ಇತರ ಲೇಖನಚಿಹ್ನೆಗ‌ಳನ್ನು ಹಾಗೂ ಖಾಲಿಜಾಗಗಳಿಗೆ (ಸ್ಪೇಸ್) ಹ್ಯಾಶ್‌ಟ್ಯಾಗ್‌‌ನಲ್ಲಿ ಜಾಗವಿಲ್ಲ.

ಶನಿವಾರ, ಜನವರಿ 24, 2015

ಪ್ರಿಯ ಮಿತ್ರ ಅನಂತರಾಮು...

ತುಮಕೂರು ವಿವಿಯಿಂದ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ಹಿರಿಯ ವಿಜ್ಞಾನ ಲೇಖಕ, ವಿಜ್ಞಾನಿ ಟಿ. ಆರ್. ಅನಂತರಾಮು ಅವರಿಗೆ ಇನ್ನೊಬ್ಬ ಹಿರಿಯ ಲೇಖಕರಾದ ನಾಗೇಶ ಹೆಗಡೆಯವರು ಬರೆದ ಬಹಿರಂಗ ಪತ್ರ ಇಲ್ಲಿದೆ. ಇಂತಹುದೊಂದು ಅಪರೂಪದ ಪತ್ರ ಪ್ರಕಟಿಸಲು ನಮಗೆ ಹೆಮ್ಮೆ.
(ಚಿತ್ರ ಕೃಪೆ: ನವಕರ್ನಾಟಕ ಪ್ರಕಾಶನ)
ಪ್ರಿಯ ಮಿತ್ರ ಅನಂತರಾಮು,
ನಿಮಗೆ ತುಮಕೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿಯನ್ನು ನೀಡುವುದಾಗಿ ಘೋಷಿಸಿದ್ದು ತಿಳಿದು ಅತೀವ ಸಂತಸವಾಯಿತು. ವಿಜ್ಞಾನ ಸಾಹಿತ್ಯ ಕ್ಷೇತ್ರಕ್ಕೇ ಈಗ ಗೌರವ ಸಿಕ್ಕಂತಾಗಿದೆ. 30 ವರ್ಷಗಳ ಹಿಂದೆ ನಾನು 'ಸುಧಾ'ದಲ್ಲಿದ್ದಾಗ ನೀವು ದೂರದ ಮಿಝೊರಾಂನ ದಟ್ಟಡವಿಯಲ್ಲಿ ಭೂಸರ್ವೇಕ್ಷಣೆ ಮಾಡುತ್ತಲೇ ಅಲ್ಲಿನ ನಿಸರ್ಗ ಸಿರಿಯ ಬಗ್ಗೆ ಸೊಗಸಾದ ಲೇಖನವನ್ನು ಕಳಿಸಿದ್ದಿರಿ. ಕನ್ನಡ ಸಾಹಿತ್ಯ ಪರಂಪರೆಯ ಸೊಗಡು ನಿಮ್ಮ ಬರವಣಿಗೆಯಲ್ಲಿತ್ತು. ಅಂದಿನಿಂದ ಬರವಣಿಗೆಯಲ್ಲಿ ತೊಡಗಿಸಿಕೊಂಡು ಭೂವಿಸ್ಮಯಗಳ ಆಳಗಲಗಳನ್ನು ಕನ್ನಡಿಗರಿಗ ಪರಿಚಯಿಸುತ್ತ ಎತ್ತರಕ್ಕೆ ಬೆಳೆಯುತ್ತ ಹೋದಿರಿ. ನಿಮ್ಮ ಈ ಬೆಳವಣಿಗೆಗೆ ಆರಂಭದಲ್ಲಿ ಆಗೀಗ ಅಷ್ಟಿಷ್ಟು ನೀರೆರೆದ ನಾನು ಬೀಗುತ್ತ ಹೋದೆ. ನೀವು ಪ್ರೊ. ನಿಸಾರ್ ಅಹ್ಮದರ ಜೊತೆಯಲ್ಲೇ ಭೂವಿಜ್ಞಾನದ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದರೂ ನಿಮ್ಮ ಕಾವ್ಯಮಯ ಶೈಲಿಯನ್ನು ವಿಜ್ಞಾನ ಬರವಣಿಗೆಗೇ ಸೀಮಿತಗೊಳಿಸಿ ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ, ಕನ್ನಡ ವಿಜ್ಞಾನ ಸಾಹಿತ್ಯವನ್ನು ಶ್ರೀಮಂತಗೊಳಿಸಿದಿರಿ. ವಿಜ್ಞಾನ ಸಾಹಿತಿಗಳೆನಿಸಿದ ನಾವೆಲ್ಲ ಒಂದರ್ಥದಲ್ಲಿ ಅಳಿವಿನಂಚಿನ ಜೀವಿಗಳೆನಿಸಿದ್ದೇವೆ. ವಿಜ್ಞಾನ ವಿಷಯಗಳನ್ನು ಕನ್ನಡದಲ್ಲಿ ಸರಳವಾಗಿ ಬರೆಯಬಲ್ಲವರ ಸಂಖ್ಯೆ ದಿನದಿನಕ್ಕೆ ಕ್ಷೀಣವಾಗುತ್ತಿದೆ. ಸಾಹಿತ್ಯದ ಮೇರು ವಿಮಶ೯ಕರು ನಮ್ಮತ್ತ ನೋಡುವುದಿಲ್ಲ. 'ಕಡೆಗಣಿಸಲ್ಪಟ್ಟ ಸಾಹಿತ್ಯ'ಗಳ ಪಟ್ಟಿಯಲ್ಲೂ ನಮ್ಮ ಕೃತಿಗಳಿಗೆ ಸ್ಥಾನವಿಲ್ಲ. ಅಷ್ಟಾದರೂ ನಿಮ್ಮ ಶಿರಾ ತಾಲ್ಲೂಕಿನ ಜನರು ಪ್ರೀತಿಯಿಂದ ನಿಮ್ಮನ್ನು ಕಳೆದ ವಾರ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮೆರೆಸಿ ಗೌರವಿಸಿದ್ದಾರೆ. ಕತೆ, ಕಾದಂಬರಿ, ನಾಟಕ, ಕವನ ಬರೆದರೆ ಸಿಗುವ ಗೌರವ ಇತರ ಸಾಹಿತ್ಯ ಪ್ರಕಾರಗಳಿಗೆ ಸಿಗುವುದಿಲ್ಲ ಎಂಬ ಮಾತನ್ನು ಸುಳ್ಳಾಗಿಸಿ ಇದೀಗ ನಿಮಗೆ ಯಾವ ಲಾಬಿ ಇಲ್ಲದೆಯೂ ಡಾಕ್ಟರೇಟ್ ಸಿಕ್ಕಿದೆ. ಅಭಿನಂದನೆಗಳು- ನಿಮಗೊಂದೇ ಅಲ್ಲ, ತುಮಕೂರು ವಿಶ್ವವಿದ್ಯಾಲಯಕ್ಕೂ!
ನಾಗೇಶ ಹೆಗಡೆ

ಸೋಮವಾರ, ಜನವರಿ 19, 2015

ವ್ಯಾಲೆಟ್ ವ್ಯವಹಾರ

ಟಿ. ಜಿ. ಶ್ರೀನಿಧಿ

ಇವತ್ತು ನಮ್ಮ ಮೇಲೆ ಇಂಟರ್‌ನೆಟ್ ಪ್ರಭಾವ ಎಷ್ಟರಮಟ್ಟಿಗಿದೆ ಎನ್ನುವುದನ್ನು ತಿಳಿದುಕೊಳ್ಳಬೇಕೆಂದರೆ ಒಮ್ಮೆ ನಮ್ಮ ದೈನಂದಿನ ಕೆಲಸಗಳನ್ನು ನೆನಪಿಸಿಕೊಂಡರೆ ಸಾಕು. ಹೊಸ ಫ್ಯಾಶನ್ನಿನ ಬಟ್ಟೆಯಿಂದ ಸಾರಿಗೆ ಹಾಕುವ ಹುಣಸೇಹಣ್ಣಿನವರೆಗೆ ನಾವು ಪ್ರತಿಯೊಂದನ್ನೂ ಇದೀಗ ಆನ್‌ಲೈನ್ ಜಗತ್ತಿನಲ್ಲಿ ಕೊಳ್ಳುವುದು ಸಾಧ್ಯವಾಗಿದೆ. ಬಸ್ ಟಿಕೇಟು ಕಾದಿರಿಸುವುದರಿಂದ ಬಸ್ ಸ್ಟಾಂಡಿಗೆ ಹೋಗಲು ಆಟೋ ಕರೆಸುವವರೆಗೆ ಅದೆಷ್ಟೋ ಕೆಲಸಗಳನ್ನು ಮಾಡುವ ಶಕ್ತಿ ನಮ್ಮ ಅಂಗೈಲಿರುವ ಮೊಬೈಲ್ ದೂರವಾಣಿಗೆ ಬಂದುಬಿಟ್ಟಿದೆ.

ಅಂತರಜಾಲ ಬಳಸಿ ಇಷ್ಟೆಲ್ಲ ಕೆಲಸಗಳನ್ನು ಸುಲಭವಾಗಿ ಮಾಡಿಕೊಳ್ಳಬಹುದು ಎನ್ನುವುದೇನೋ ಸರಿ. ಆದರೆ ಅದೆಲ್ಲ ಕೆಲಸಗಳಿಗಾಗಿ ಹಣ ಪಾವತಿಸುವುದು ಹೇಗೆ?

ಮೊದಮೊದಲು ಆನ್‌ಲೈನ್ ವ್ಯವಸ್ಥೆಗಳೆಲ್ಲ ಪರಿಚಯವಾದಾಗ ಅಲ್ಲಿನ ವ್ಯವಹಾರಗಳಿಗಾಗಿ ಹಣ ಪಾವತಿಸುವುದು ಬಹಳ ಕಷ್ಟದ ಕೆಲಸವಾಗಿತ್ತು. ಕ್ರೆಡಿಟ್ ಕಾರ್ಡ್ ಡೆಬಿಟ್ ಕಾರ್ಡ್ ನೆಟ್‌ಬ್ಯಾಂಕಿಂಗುಗಳೆಲ್ಲ ಅಂದು ಇಂದಿನಷ್ಟು ವ್ಯಾಪಕ ಬಳಕೆಯಲ್ಲಿರಲಿಲ್ಲವಲ್ಲ!

ಇದೀಗ ಪರಿಸ್ಥಿತಿ ಸಾಕಷ್ಟು ಬದಲಾಗಿದೆಯಾದರೂ ಆನ್‌ಲೈನ್ ಪಾವತಿಯ ಆಯ್ಕೆ ಎಲ್ಲರಲ್ಲೂ ಇದೆ ಎನ್ನುವಂತಿಲ್ಲ.

ಸೋಮವಾರ, ಜನವರಿ 5, 2015

ಯುಎಸ್‌ಎಸ್‌ಡಿ: ಗೊತ್ತಿದ್ದೂ ಅಪರಿಚಿತ ಈ ತಂತ್ರಜ್ಞಾನ!

ಟಿ. ಜಿ. ಶ್ರೀನಿಧಿ

ಮೊಬೈಲ್ ಫೋನ್ ಬಳಸಿ ಸಂವಹನ ನಡೆಸಲು ಆಯ್ಕೆಗಳು ಹಲವು. ಕರೆಮಾಡಿ ಮಾತನಾಡಿ, ಐವಿಆರ್‌ಎಸ್ ವ್ಯವಸ್ಥೆ ಬಳಸಿ, ಪಠ್ಯರೂಪದ ಸಂದೇಶ ಕಳುಹಿಸಿ ಇಲ್ಲವೇ ಸುಮ್ಮನೆ ಒಂದು ಮಿಸ್ಡ್ ಕಾಲ್ ಆದರೂ ಕೊಡಿ - ಬಳಸುವ ಪ್ರತಿಯೊಂದು ವಿಧಾನದಲ್ಲೂ ತಾಂತ್ರಿಕವಾಗಿ ಒಂದಲ್ಲ ಒಂದು ಬಗೆಯ ಸಂವಹನ ನಡೆದಿರುತ್ತದೆ.

ಇಂತಹ ಪ್ರತಿಯೊಂದು ವಿಧದ ಸಂವಹನದಲ್ಲೂ ಹಲವು ಸಾಧ್ಯತೆಗಳಿರುತ್ತವೆ. ಎಸ್ಸೆಮ್ಮೆಸ್ಸಿನ ಉದಾಹರಣೆಯನ್ನೇ ತೆಗೆದುಕೊಳ್ಳಿ. ಗುಡ್ ಮಾರ್ನಿಂಗ್ ಗುಡ್ ಈವನಿಂಗ್ ಸಂದೇಶಗಳನ್ನು ಕಳುಹಿಸುವ ಜೊತೆಗೆ ಸ್ಪರ್ಧೆಗಳಲ್ಲಿ ಭಾಗವಹಿಸುವ, ಬಸ್ಸು-ವಿಮಾನ ಇತ್ಯಾದಿಗಳ ಪ್ರಯಾಣ ವಿವರ ತಿಳಿಯುವ, ಬ್ಯಾಂಕಿಂಗ್ ಸೇವೆಗಳನ್ನು ಪಡೆದುಕೊಳ್ಳುವಂತಹ ಕೆಲಸಗಳಿಗೆಲ್ಲ ಎಸ್ಸೆಮ್ಮೆಸ್ಸುಗಳನ್ನು ಬಳಸಬಹುದು.

ಮೊಬೈಲಿನ ಪ್ರೀಪೇಯ್ಡ್ ಖಾತೆಯಲ್ಲಿ ದುಡ್ಡೆಷ್ಟಿದೆ ಎನ್ನುವುದನ್ನೋ ಪೋಸ್ಟ್‌ಪೇಯ್ಡ್ ಖಾತೆಯ ಇಂದಿನ ಬಾಕಿ ಎಷ್ಟು ಎನ್ನುವುದನ್ನೋ ತಿಳಿಯುವುದೂ ಸಾಧ್ಯ ತಾನೆ? ಈ ಉದ್ದೇಶಕ್ಕೆ ಬಳಸುವ ವ್ಯವಸ್ಥೆ ಎಸ್ಸೆಮ್ಮೆಸ್ಸಿಗಿಂತ ಕೊಂಚ ಭಿನ್ನವಾಗಿರುವುದನ್ನು ನಾವು ಗಮನಿಸಬಹುದು.

ಸ್ಪರ್ಧೆಯಲ್ಲಿ ಭಾಗವಹಿಸಲೋ ವಿಮಾನದ ಸಮಯ ತಿಳಿದುಕೊಳ್ಳಲೋ ನಾವು ಸಂಖ್ಯೆಯೊಂದಕ್ಕೆ ಎಸ್ಸೆಮ್ಮೆಸ್ ಕಳುಹಿಸುತ್ತೇವೆ; ಆದರೆ ಮೊಬೈಲ್ ಖಾತೆಯಲ್ಲಿ ದುಡ್ಡೆಷ್ಟಿದೆ ಎಂದು ತಿಳಿಯಲು ನಾವು ಬಳಸುವ ಸಂಖ್ಯೆಯಲ್ಲಿ *, # ಮುಂತಾದ ಚಿಹ್ನೆಗಳೆಲ್ಲ ಇರುತ್ತವೆ ಎನ್ನುವುದು ನಮ್ಮ ಗಮನಕ್ಕೆ ಬರುವ ಮೊದಲ ವ್ಯತ್ಯಾಸ.
badge