ಶನಿವಾರ, ಫೆಬ್ರವರಿ 28, 2015

ವಿಜ್ಞಾನ ದಿನ ವಿಶೇಷ: ಜ್ವರಪೀಡಿತ, ಬರಪೀಡಿತರ ಮಧ್ಯೆ ವಿಜ್ಞಾನ ಹಬ್ಬ

ಪ್ರತಿ ವರ್ಷ ಫೆಬ್ರವರಿ ೨೮ನೇ ದಿನಾಂಕವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನದ ಕುರಿತು ಫೆ. ೨೬ರ ಪ್ರಜಾವಾಣಿಯಲ್ಲಿ ಪ್ರಕಟವಾದ ನಾಗೇಶ ಹೆಗಡೆಯವರ ಈ ಬರಹವನ್ನು ಲೇಖಕರ ಅನುಮತಿಯೊಡನೆ ಇಲ್ಲಿ ಪ್ರಕಟಿಸುತ್ತಿದ್ದೇವೆ.  
ನಾಗೇಶ ಹೆಗಡೆ

ನಮ್ಮ ದೇಶದಲ್ಲಿ ಪ್ರತಿದಿನ ಸುಮಾರು ೧೩೦೦ ಜನರು ಕ್ಷಯರೋಗದಿಂದ ಸಾವನ್ನಪ್ಪುತ್ತಿದ್ದಾರೆ. ಮಲೇರಿಯಾದಿಂದ ನಿತ್ಯವೂ ಸರಾಸರಿ ೩೨೫ ಜನರು ಇಹಲೋಕ ತ್ಯಜಿಸುತ್ತಿದ್ದಾರೆ. ಏಡ್ಸ್ ಸಾವು ಇನ್ನೂರರ ಆಸುಪಾಸು ಇದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ ಭೇದಿ- ಅತಿಸಾರದಿಂದ- (ಡಯಾರಿಯಾ) ಸುಮಾರು ಒಂದು ಸಾವಿರ ಮಕ್ಕಳು ಪ್ರತಿದಿನವೂ ಸಾಯುತ್ತಿದ್ದಾರೆ. ಒಂದು ಸಾವಿರ! ಆ ಯಾವವೂ ನಮಗೆ ಲೆಕ್ಕಕ್ಕಿಲ್ಲ. ಆದರೆ ಪ್ರತಿದಿನ ಸರಾಸರಿ ೨೦ ರೋಗಿಗಳ ಪ್ರಾಣ ಹೀರುತ್ತಿರುವ ಹಂದಿಜ್ವರದ ಬಗ್ಗೆ ಮಾತ್ರ ಹುಯಿಲು ಹೆಚ್ಚುತ್ತಿದೆ. ಕಳೆದ ಒಂದು ತಿಂಗಳಲ್ಲಿ ೬೦೦ ದಾಟಿತು,೭೦೦ ದಾಟಿತು, ೮೦೦ನ್ನೂ ದಾಟಿತು ಎಂದು ದಿಗಿಲುಗೊಳಿಸುವ ವರದಿಗಳು ಬರುತ್ತಿವೆ.  ‘ರೋಗ­ಪೀಡಿತರ ಸಂಖ್ಯೆ ೧೪ ಸಾವಿರ ತಲು­ಪಿದೆ’ ಎಂದು ಮೊನ್ನೆ ಸಂಸತ್ತಿನಲ್ಲೂ ಸಚಿವರು ಘೋಷಿಸಿ­ದ್ದಾರೆ. ಬೇಕೆಂದಷ್ಟು ಲಸಿಕೆ ಮಾತ್ರೆ, ಮುಖ­ವಾಡ ಎಲ್ಲ ಕಡೆ ಸಿಗುವಂತೆ ವ್ಯವಸ್ಥೆ ಮಾಡ­ಲಾ­ಗಿದೆಯಂತೆ. ಔಷಧ ಕಂಪೆನಿ­ಗಳು ತಮ್ಮ ಮುಖ­ವಾಡದ ಹಿಂದೆ ಮುಸುಮುಸು ನಗುತ್ತಿರ­ಬಹುದು.

ಕಂಗಾಲಾಗುವ ಸುದ್ದಿಯನ್ನೇ ಎಲ್ಲರೂ ಬಯಸುವ ಕಾಲ ಇದು. ಆದರೆ ಈ ಜ್ವರಕ್ಕೆ ಅಷ್ಟೊಂದು ಕಂಗಾಲು ಬೇಕಾಗಿಲ್ಲ. ಹಿಂದೆಲ್ಲ  ಇದು ಬರೀ ‘ಫ್ಲೂ’ ಅಥವಾ ‘ಇನ್‌ಫ್ಲುಯೆಂಝಾ’ ಹೆಸರಲ್ಲಿ ಬರುತ್ತಿತ್ತು. ಅಂಥ ಪ್ರಾಣಾಂತಿಕ ಏನಲ್ಲ. ಹಂದಿಗಳಿಗೂ ಬೆದರಬೇಕಾಗಿಲ್ಲ. ಜ್ವರ ಬಂದ ಹಂದಿಗಳಿಂದ ನಮಗೆ ಸೋಂಕು ತಗುಲು­ವುದು ಇಲ್ಲವೇ ಇಲ್ಲವೆಂಬಷ್ಟು ಅಪರೂಪ. ಅಕಸ್ಮಾತ್ ತಗುಲಿದರೂ ಆ ಒಬ್ಬರಿಂದ ಇನ್ನೊಬ್ಬ ವ್ಯಕ್ತಿಗೆ ದಾಟುವುದು ಇನ್ನೂ ಅಪ­ರೂಪ. ಯಾವುದೋ ದೇಶದಲ್ಲಿ ಹೇಗೋ ಇಬ್ಬರ ದೇಹದಲ್ಲಿ ಹೊಕ್ಕು -ಹೊರಟ ಹಂದಿ ವೈರಸ್ ತುಸು ಹೊಸರೂಪ ಧರಿಸಿ, ಒಬ್ಬರಿಂದೊ­ಬ್ಬರಿಗೆ ದಾಟಲು ಕಲಿತಿರುತ್ತದೆ. ಅಲ್ಲಿಂದ ಮುಂದೆ ಅದು ಸಾಂಕ್ರಾಮಿಕ ಎನಿಸು­ತ್ತದೆ. ಈಗ ಅಂಥದೊಂದು ಸಾಂಕ್ರಾಮಿಕ ಎಲ್ಲಿಂದಲೋ ಇಲ್ಲಿಗೆ ಬಂದಿದೆ. ತಾನಾಗಿ ಬಂತೋ ಅಥವಾ ಬೇಕಂತಲೇ ತಂದಿದ್ದೊ ಗೊತ್ತಿಲ್ಲ.

ಭಾನುವಾರ, ಫೆಬ್ರವರಿ 22, 2015

ಕಂಪ್ಯೂಟರಿನ ರೂಪಾಂತರ ಪರ್ವ

ಕಂಪ್ಯೂಟರ್ ಎಂದತಕ್ಷಣ ನಮ್ಮ ಮನಸ್ಸಿಗೆ ಬರುವ ಚಿತ್ರ ಮಾನಿಟರ್, ಕೀಬೋರ್ಡ್, ಮೌಸ್ ಹಾಗೂ ಪಕ್ಕದಲ್ಲೊಂದು ದೊಡ್ಡ ಕ್ಯಾಬಿನೆಟ್. ಇಂತಹ ದೊಡ್ಡ ಪರದೆಯ, ಮೇಜಿನ ಮೇಲೆ ಸ್ಥಾಪಿತವಾಗುವ ('ಡೆಸ್ಕ್‌ಟಾಪ್') ಕಂಪ್ಯೂಟರುಗಳ ಕಾಲ ಲ್ಯಾಪ್‌ಟಾಪು-ಟ್ಯಾಬ್ಲೆಟ್ಟುಗಳ ಭರಾಟೆಯಲ್ಲಿ ಇನ್ನೇನು ಮುಗಿದೇ ಹೋಯಿತು ಎನ್ನುವಷ್ಟರಲ್ಲಿ ಕಂಪ್ಯೂಟರಿನ ರೂಪಾಂತರ ಪರ್ವ ಪ್ರಾರಂಭವಾಗಿದೆ. ಮಿನಿ, ಮೈಕ್ರೋ ಹಾಗೂ ಆಲ್-ಇನ್-ಒನ್‌ಗಳ ಮೂಲಕ ಕಂಪ್ಯೂಟರ್ ಇಡಲು ಬೇಕಾದ ಜಾಗವನ್ನು ಕಡಿಮೆ ಮಾಡಲಾಗುತ್ತಿದೆ. ದಿವಾನಖಾನೆಯ ಟೀವಿಗೇ ಜೋಡಿಸಬಹುದಾದ ಸಾಧನಗಳು ದಶಕಗಳ ಹಿಂದಿನ ವಿನ್ಯಾಸವನ್ನು ಮತ್ತೆ ನೆನಪಿಸುತ್ತಿವೆ. ಕಂಪ್ಯೂಟರ್ ಜಗದ ಫ್ಯಾಶನ್ ಚಕ್ರ ಪೂರ್ತಿ ಒಂದು ಸುತ್ತು ಬಂದಿದೆ!
ಟಿ. ಜಿ. ಶ್ರೀನಿಧಿ

ಕಂಪ್ಯೂಟರಿಗೆ ನಮ್ಮ ಮನೆಗಳಲ್ಲಿ ಪ್ರಮುಖ ಸ್ಥಾನ ಸಿಕ್ಕಿದ್ದು ಮಾಹಿತಿ ತಂತ್ರಜ್ಞಾನದ ಪ್ರಭಾವ ಬೆಳೆಯಲು ಶುರುವಾದ ಸಮಯದಲ್ಲೇ ಇರಬೇಕು. ಅಲ್ಲಿಂದ ಈಚೆಗಿನ ದಶಕಗಳಲ್ಲಿ ಟೀವಿ ಫ್ರಿಜ್ಜು ಮಿಕ್ಸಿಗಳಂತೆ  ಕಂಪ್ಯೂಟರ್ ಕೂಡ ಮನೆಯಲ್ಲಿ ಸಾಮಾನ್ಯವಾಗಿ ಇರಬೇಕಾದ ಸಾಧನಗಳ ಪಟ್ಟಿಗೆ ಸೇರಿಕೊಂಡುಬಿಟ್ಟಿದೆ.

ಮನೆಯ ಕಂಪ್ಯೂಟರ್ ಎಂದಾಕ್ಷಣ ನಮ್ಮ ಮನಸ್ಸಿಗೆ ಬರುವ ಮೊದಲ ಚಿತ್ರ ಮಾನಿಟರ್, ಕೀಬೋರ್ಡ್, ಮೌಸ್, ಸ್ಪೀಕರ್ ಮತ್ತು ಅದೆಲ್ಲವನ್ನೂ ಸಂಪರ್ಕಿಸುವ - ಮದರ್‌ಬೋರ್ಡ್, ಹಾರ್ಡ್ ಡಿಸ್ಕ್, ರ್‍ಯಾಮ್ ಇತ್ಯಾದಿಗಳನ್ನೆಲ್ಲ ತುಂಬಿಟ್ಟುಕೊಂಡಿರುವ - ದೊಡ್ಡದೊಂದು ಪೆಟ್ಟಿಗೆ. ಡಬ್ಬ ಎಂದಾದರೂ ಕರೆಯಿರಿ, ಕ್ಯಾಬಿನೆಟ್ ಎಂದಾದರೂ ಹೆಸರಿಸಿ - ಅದಂತೂ ಆದರ್ಶ ಡೆಸ್ಕ್‌ಟಾಪ್ ಕಂಪ್ಯೂಟರಿನ ಅವಿಭಾಜ್ಯ ಅಂಗ. ಇನ್ನು ವಿದ್ಯುತ್ ಕೈಕೊಟ್ಟಾಗ ನೆರವಿಗೆ ಬರುವ ಚಿಕ್ಕದೊಂದು ಯುಪಿಎಸ್ ಹಾಗೂ ಕಂಪ್ಯೂಟರಿನ ಸಮಸ್ತ ಅಂಗಗಳಿಗೂ ಆಶ್ರಯನೀಡುವ ಕಂಪ್ಯೂಟರ್ ಟೇಬಲ್ ಕೂಡ ಬಹಳ ಮನೆಗಳಲ್ಲಿ ಇರುತ್ತವೆ.

ಮನೆ ದೊಡ್ಡದಾಗಿದ್ದರೆ ಇಂಥದ್ದೊಂದು ಕಂಪ್ಯೂಟರ್ ಕುಟುಂಬಕ್ಕೆ ಜಾಗ ಕೊಡುವುದರಲ್ಲಿ ಹೆಚ್ಚಿನ ಸಮಸ್ಯೆಯೇನೂ ಇರುವುದಿಲ್ಲ. ಆದರೆ ಈಗಿನ ಕಾಲದಲ್ಲಿ ಮನೆ ಕಟ್ಟಲು ಬೇಕಾಗುವ ರಿಯಲ್ ಎಸ್ಟೇಟ್ ಹಾಗೂ ನಾವು ಕೊಳ್ಳುವ ಅಸಂಖ್ಯ ವಸ್ತುಗಳಿಗೆ ಮನೆಯೊಳಗೆ ಒದಗಿಸಬೇಕಾದ ರಿಯಲ್ ಎಸ್ಟೇಟುಗಳೆರಡೂ ದುಬಾರಿ. ಹೀಗಿರುವಾಗ ಕಂಪ್ಯೂಟರಿಗೆ ಅಷ್ಟೆಲ್ಲ ಜಾಗ ಕೊಡುವುದೆಂದರೇನು ತಮಾಷೆಯೇ?

ಹಾಗಾಗಿಯೇ ಈಗ ಸ್ಮಾಲ್ ಈಸ್ ಬ್ಯೂಟಿಫುಲ್. ದಿನದಿಂದ ದಿನಕ್ಕೆ ಕಂಪ್ಯೂಟರಿನ ಮೂತಿ, ಅಂದರೆ ಪರದೆ, ಚಿಕ್ಕದಾಗುತ್ತ ಸಾಗುತ್ತಿದೆ. ಈ ವಿದ್ಯಮಾನದಿಂದ ಅದರ ಕೀರ್ತಿಗೇನೂ ಕುಂದು ಬಾರದಂತೆ ನೋಡಿಕೊಳ್ಳಲು ಇತರ ಅಂಗಗಳೂ ಗಾತ್ರದಲ್ಲಿ ಕುಗ್ಗುವುದನ್ನು ಕಲಿತುಬಿಟ್ಟಿವೆ.

ಕಂಪ್ಯೂಟರಿಗೆ ಟೇಬಲ್ ಬೇರೆ ಯಾಕೆ, ಕೆಲಸಮಾಡುವಷ್ಟು ಹೊತ್ತು ತೊಡೆಯ ಮೇಲಿಟ್ಟುಕೊಂಡಿದ್ದು ಆನಂತರ ಬ್ಯಾಗಿನೊಳಕ್ಕೆ ತೂರಿಸಿದರೆ ಆಯಿತು - ಈಗ ಲ್ಯಾಪ್‌ಟಾಪ್ ಕೃಪೆಯಿಂದ ಕುಳಿತ ಜಾಗವೇ ಆಫೀಸು. ಆಫೀಸು ಕೆಲಸ ಮುಗಿಸಿದ ಮೇಲೆ ಇಂಟರ್‌ನೆಟ್ಟಿನಲ್ಲಿ ಆರಾಮವಾಗಿ ಈಜಾಡಲು ಹೇಗೂ ಟ್ಯಾಬ್ಲೆಟ್ ಇದೆ. ಇನ್ನು ಇಪ್ಪತ್ತನಾಲ್ಕು ಗಂಟೆಯೂ ವಾಟ್ಸಾಪಿನಲ್ಲಿ ವಾಟ್ಸಪ್ ಎನ್ನಲು ಜೇಬಿನಲ್ಲೊಂದು ಸ್ಮಾರ್ಟ್ ಫೋನು, ಅದನ್ನು ಜೇಬಿನಿಂದಾಚೆ ತೆಗೆಯದೆಯೇ ಓದಬೇಕೆಂದರೆ ಮುಂಗೈಯ ವಾಚ್ ಕೂಡ ಸ್ಮಾರ್ಟು. ಇಷ್ಟಿದ್ದ ಮೇಲೆ ಸ್ವರ್ಗಕ್ಕೆ ಕಿಚ್ಚು ಹಚ್ಚುವುದೇ ಇನ್ನೇನು!

ಸೋಮವಾರ, ಫೆಬ್ರವರಿ 16, 2015

ಕ್ರಿಕೆಟ್ ಕಣದಲ್ಲಿ ತಂತ್ರಜ್ಞಾನದ ಆಟ

ಟಿ. ಜಿ. ಶ್ರೀನಿಧಿ

ವರ್ಷಗಳು ಕಳೆದಂತೆ ಕ್ರಿಕೆಟ್ ಆಟದ ಸ್ವರೂಪ ಬದಲಾಗುತ್ತಿದೆ. ಪಂದ್ಯಗಳು ಟೆಸ್ಟ್‌ನಿಂದ ಒನ್‌ಡೇಗೆ, ಒನ್‌ಡೇಯಿಂದ ಟ್ವೆಂಟಿ ಟ್ವೆಂಟಿಗೆ ರೂಪಾಂತರಗೊಂಡಿವೆ. ಪಂದ್ಯಗಳ ಕಾಲಾವಧಿಯಷ್ಟೇ ಅಲ್ಲ, ಆಟದ ಶೈಲಿಯಿಂದ ಆಟಗಾರರ ಜೀವನ ಶೈಲಿಯವರೆಗೆ ಎಲ್ಲೆಲ್ಲೂ ಬದಲಾವಣೆ ಕಾಣಸಿಗುತ್ತಿದೆ.

ತಂತ್ರಜ್ಞಾನದ ಅನುಕೂಲತೆಗಳನ್ನು ಅಳವಡಿಸಿಕೊಳ್ಳುವುದರಲ್ಲೂ ಕ್ರಿಕೆಟ್ ಸದಾ ಮುಂದೆ. ಅಂತಾರಾಷ್ಟ್ರೀಯ ಪಂದ್ಯಗಳಿಗೆ ಹರಿದು ಬರುವ ಹಣದ ಪ್ರವಾಹವೇ ಜೊತೆಗಿರುವಾಗ ಖರ್ಚಿನ ಚಿಂತೆಯೂ ಇಲ್ಲ. ಹಾಗಾಗಿ ಇಂದಿನ ಕ್ರಿಕೆಟ್ ಪಂದ್ಯಗಳಲ್ಲಿ ಆಟಗಾರರ ಜೊತೆಗೆ ತಂತ್ರಜ್ಞಾನವೂ ಆಟವಾಡುತ್ತದೆ.

ಕ್ರಿಕೆಟ್ ಆಟದಲ್ಲಿ ತಂತ್ರಜ್ಞಾನದ ಪಾತ್ರ ನಮ್ಮ ಗಮನಕ್ಕೆ ಬಂದದ್ದು ಬಹಳ ವರ್ಷಗಳ ಹಿಂದೆ: ಬ್ಯಾಟ್ಸ್‌ಮನ್ ರನೌಟ್ ಆಗಿದ್ದಾನೋ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಲು ಮೈದಾನದಲ್ಲಿದ್ದ ಅಂಪೈರ್ ಟೀವಿ ಮುಂದಿದ್ದ ಅಂಪೈರನ್ನು ಕೇಳಿದರಲ್ಲ, ಆಗಲೇ! ಮನೆಯ ಸೋಫಾ ಮೇಲಿನ ಆಲೂಗಡ್ಡೆಗಳಿಗಷ್ಟೆ ಸಿಗುತ್ತಿದ್ದ ಆಕ್ಷನ್ ರೀಪ್ಲೇ ಸೌಲಭ್ಯ ಆಟಗಾರರಿಗೂ ಸಿಗುವಂತಾದದ್ದು ಆಗಿನ ಕಾಲಕ್ಕೆ ಸಾಕಷ್ಟು ಕುತೂಹಲಕರ ಎನ್ನಿಸಿತ್ತು.

ಈಗ ಇನ್ನಷ್ಟು ಸಮಯ ಸರಿದಿದೆ, ತಂತ್ರಜ್ಞಾನ ಇನ್ನಷ್ಟು ಅಭಿವೃದ್ಧಿಯಾಗಿದೆ. ಕ್ರಿಕೆಟ್ ಕಣದ ಮೇಲೆ ಅದರ ಪ್ರಭಾವವೂ ಜಾಸ್ತಿಯಾಗಿದೆ. ಜಾಹೀರಾತು ಫಲಕಗಳಿಂದ ಪ್ರಾರಂಭಿಸಿ ಟೀವಿ ಪ್ರಸಾರದ ಕ್ಯಾಮೆರಾವರೆಗೆ, ಚೆಂಡು ತಗುಲಿದರೆ ದೀಪ ಮಿನುಗಿಸುವ ಹೈಟೆಕ್ ವಿಕೆಟ್ಟುಗಳಿಂದ ಚೆಂಡಿನ ವೇಗ ಅಳೆಯುವ ವ್ಯವಸ್ಥೆಯವರೆಗೆ ಇದೀಗ ಎಲ್ಲೆಲ್ಲೂ ತಂತ್ರಜ್ಞಾನದ್ದೇ ಭರಾಟೆ.

ಮಂಗಳವಾರ, ಫೆಬ್ರವರಿ 3, 2015

ಫೋನ್ ಬ್ಯಾಟರಿಗೆ ಬದಲಾವಣೆಯ ಸಮಯ

ಟಿ. ಜಿ. ಶ್ರೀನಿಧಿ

ಹದಿನೈದು-ಇಪ್ಪತ್ತು ವರ್ಷಗಳ ಹಿಂದೆ ಬಹುಶಃ ನಮ್ಮ ಕಲ್ಪನೆಗೂ ನಿಲುಕದಿದ್ದ ಮೊಬೈಲ್ ಫೋನು ಇಂದು ಜೀವನಾವಶ್ಯಕ ವಸ್ತು. ಮೊಬೈಲ್ ನೆಟ್‌ವರ್ಕ್ ಇಲ್ಲ ಅಥವಾ ಕರೆನ್ಸಿ ಖಾಲಿಯಾಗಿದೆ ಎಂದುಬಿಟ್ಟರೆ ಕೆಲವರಲ್ಲಿ ಏನನ್ನೋ ಕಳೆದುಕೊಂಡ ಭಾವನೆ ಉಂಟಾಗುವುದೂ ಅಪರೂಪವಲ್ಲ.

ನೆಟ್‌ವರ್ಕು-ಕರೆನ್ಸಿಗಳಿಗಿಂತ ಹೆಚ್ಚಿನ ತೊಂದರೆ ಕೊಡುವ ಸಂಗತಿಯೆಂದರೆ ಅದು ಮೊಬೈಲಿನ ಬ್ಯಾಟರಿ. ರಾಕ್ಷಸನ ಜೀವ ಏಳು ಸಮುದ್ರದಾಚೆ ಬಂಗಾರದ ಪಂಜರದಲ್ಲಿರುವ ಗಿಣಿಯಲ್ಲಿರುತ್ತಿತ್ತು ಎನ್ನುವ ಕತೆ ಕೇಳಿದ್ದೇವಲ್ಲ, ಈಗಿನ ಕಾಲದ ಮೊಬೈಲುಗಳ ಜೀವವೂ ಈ ಬ್ಯಾಟರಿಯೆನ್ನುವ ಪಂಜರದೊಳಗೇ ಇರುತ್ತದೆ. ಬ್ಯಾಟರಿ ಫೋನಿನೊಳಗೇ ಇರುವುದರಿಂದ ಏಳು ಸಮುದ್ರದಾಚೆ ಹೋಗುವ ಗೊಡವೆಯೆಲ್ಲ ಇರುವುದಿಲ್ಲ ಎನ್ನುವುದಷ್ಟೆ ವ್ಯತ್ಯಾಸ.

ಮೊಬೈಲುಗಳು ಎಷ್ಟೆಲ್ಲ ಸ್ಮಾರ್ಟ್ ಆದರೂ, ಬಳಕೆಯಾಗುವ ತಂತ್ರಜ್ಞಾನದಲ್ಲಿ ಏನೆಲ್ಲ ಬದಲಾವಣೆಗಳಾದರೂ ಅವುಗಳ ಬ್ಯಾಟರಿಗಳಲ್ಲಿ ಹಾಗೂ ಒಮ್ಮೆ ಚಾರ್ಜ್ ಮಾಡಿದಾಗ ಅವನ್ನು ಬಳಸಬಹುದಾದ ಕಾಲಾವಧಿಯಲ್ಲಿ ಮಾತ್ರ ಹೆಚ್ಚು ಬದಲಾವಣೆಯೇನೂ ಆಗಿಲ್ಲ.

ಸೋಮವಾರ, ಫೆಬ್ರವರಿ 2, 2015

ಹ್ಯಾಶ್‌ಟ್ಯಾಗ್ ಹೇಳುವ ಕತೆ

ಟಿ. ಜಿ. ಶ್ರೀನಿಧಿ

"ಚಳಿಗಾಲದ #ಬೆಂಗಳೂರು ಮತ್ತು ಬಿಸಿಬಿಸಿ #ಫಿಲ್ಟರ್‌ಕಾಫಿ - ಹೇಳಿ ಮಾಡಿಸಿದ ಜೋಡಿ!"

- ಟ್ವಿಟ್ಟರ್, ಫೇಸ್‌ಬುಕ್ ಮುಂತಾದ ತಾಣಗಳಲ್ಲಿ ದಿನನಿತ್ಯವೂ ನಮ್ಮ ಕಣ್ಣಿಗೆ ಬೀಳುವ ಅಸಂಖ್ಯ ಸಂದೇಶಗಳಿಗೆ ಇದೊಂದು ಉದಾಹರಣೆ ಅಷ್ಟೆ. ಸಮಾಜ ಜಾಲಗಳಲ್ಲಿ (ಸೋಶಿಯಲ್ ನೆಟ್‌ವರ್ಕ್) ಸಂದೇಶಗಳನ್ನು ಪೋಸ್ಟಿಸುವಾಗ - ಈ ಉದಾಹರಣೆಯಲ್ಲಿರುವಂತೆ - ಪ್ರಾರಂಭದಲ್ಲೋ ನಡುವಿನಲ್ಲೋ ಕೊನೆಯಲ್ಲೋ ಹ್ಯಾಶ್ (#) ಚಿಹ್ನೆಯಿಂದ ಪ್ರಾರಂಭವಾಗುವ ಪದಗಳನ್ನು ಬಳಸುವುದು ಸಾಮಾನ್ಯ ಅಭ್ಯಾಸ. ಇಂತಹ ಪದಗಳನ್ನು 'ಹ್ಯಾಶ್‌‌ಟ್ಯಾಗ್'ಗಳೆಂದು ಕರೆಯುತ್ತಾರೆ.

ಸಂದೇಶ ಬರೆಯುವವರ ಭಾವನೆಯನ್ನು ಪ್ರತಿನಿಧಿಸುವುದರಿಂದ ಪ್ರಾರಂಭಿಸಿ ಸಂಸ್ಥೆಗಳ ಹೆಸರನ್ನೋ ಭಾಷೆಯ ವಿಷಯವನ್ನೋ ನಿರ್ದಿಷ್ಟ ಘಟನೆಯನ್ನೋ ನಿರ್ದೇಶಿಸುವವರೆಗೆ ಹ್ಯಾಶ್‌‌ಟ್ಯಾಗ್‍ಗಳು ಅನೇಕ ಉದ್ದೇಶಗಳಿಗಾಗಿ ಬಳಕೆಯಾಗುತ್ತವೆ. ಉದಯವಾಣಿಯಲ್ಲಿ ಪ್ರಕಟವಾದ ಸುದ್ದಿ ಎಂದು ಸೂಚಿಸಲು #Udayavani, ಬೆಂಗಳೂರಿಗೆ ಸಂಬಂಧಪಟ್ಟಿದ್ದು ಎಂದು ಹೇಳಲು #Bengaluru, ಕನ್ನಡದ ಮಾಹಿತಿ ಎನ್ನುವುದಕ್ಕೆ  #Kannada, ವಿಜ್ಞಾನದ ವಿಷಯಕ್ಕೆ #Science - ಹೀಗೆ ಯಾವ ವಿಷಯಕ್ಕೇ ಆದರೂ ನಾವು ಹ್ಯಾಶ್‌ಟ್ಯಾಗ್‌ಗಳನ್ನು ರೂಪಿಸಿಕೊಳ್ಳಬಹುದು, ಹಾಗೂ ಈಗಾಗಲೇ ಇರುವ ಟ್ಯಾಗ್‌ಗಳನ್ನು ನಮ್ಮ ಸಂದೇಶಗಳಲ್ಲಿ ಬಳಸಬಹುದು.

ಹ್ಯಾಶ್‌ಟ್ಯಾಗ್‌ನಲ್ಲಿ ಒಂದೇ ಪದ ಇರಬೇಕು, ಪ್ರಾರಂಭ '#'ನೊಡನೆ ಆಗಿರಬೇಕು ಎನ್ನುವುದು ನಿಯಮ. ಹ್ಯಾಶ್‌ಟ್ಯಾಗ್‌‌ನಲ್ಲಿ ಅಕ್ಷರ, ಅಂಕಿ ಹಾಗೂ ಅಂಡರ್‌ಸ್ಕೋರ್('_')ಗಳನ್ನು ಮಾತ್ರ ಬಳಸಬಹುದು. ಇತರ ಲೇಖನಚಿಹ್ನೆಗ‌ಳನ್ನು ಹಾಗೂ ಖಾಲಿಜಾಗಗಳಿಗೆ (ಸ್ಪೇಸ್) ಹ್ಯಾಶ್‌ಟ್ಯಾಗ್‌‌ನಲ್ಲಿ ಜಾಗವಿಲ್ಲ.

ಶನಿವಾರ, ಜನವರಿ 24, 2015

ಪ್ರಿಯ ಮಿತ್ರ ಅನಂತರಾಮು...

ತುಮಕೂರು ವಿವಿಯಿಂದ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ಹಿರಿಯ ವಿಜ್ಞಾನ ಲೇಖಕ, ವಿಜ್ಞಾನಿ ಟಿ. ಆರ್. ಅನಂತರಾಮು ಅವರಿಗೆ ಇನ್ನೊಬ್ಬ ಹಿರಿಯ ಲೇಖಕರಾದ ನಾಗೇಶ ಹೆಗಡೆಯವರು ಬರೆದ ಬಹಿರಂಗ ಪತ್ರ ಇಲ್ಲಿದೆ. ಇಂತಹುದೊಂದು ಅಪರೂಪದ ಪತ್ರ ಪ್ರಕಟಿಸಲು ನಮಗೆ ಹೆಮ್ಮೆ.
(ಚಿತ್ರ ಕೃಪೆ: ನವಕರ್ನಾಟಕ ಪ್ರಕಾಶನ)
ಪ್ರಿಯ ಮಿತ್ರ ಅನಂತರಾಮು,
ನಿಮಗೆ ತುಮಕೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿಯನ್ನು ನೀಡುವುದಾಗಿ ಘೋಷಿಸಿದ್ದು ತಿಳಿದು ಅತೀವ ಸಂತಸವಾಯಿತು. ವಿಜ್ಞಾನ ಸಾಹಿತ್ಯ ಕ್ಷೇತ್ರಕ್ಕೇ ಈಗ ಗೌರವ ಸಿಕ್ಕಂತಾಗಿದೆ. 30 ವರ್ಷಗಳ ಹಿಂದೆ ನಾನು 'ಸುಧಾ'ದಲ್ಲಿದ್ದಾಗ ನೀವು ದೂರದ ಮಿಝೊರಾಂನ ದಟ್ಟಡವಿಯಲ್ಲಿ ಭೂಸರ್ವೇಕ್ಷಣೆ ಮಾಡುತ್ತಲೇ ಅಲ್ಲಿನ ನಿಸರ್ಗ ಸಿರಿಯ ಬಗ್ಗೆ ಸೊಗಸಾದ ಲೇಖನವನ್ನು ಕಳಿಸಿದ್ದಿರಿ. ಕನ್ನಡ ಸಾಹಿತ್ಯ ಪರಂಪರೆಯ ಸೊಗಡು ನಿಮ್ಮ ಬರವಣಿಗೆಯಲ್ಲಿತ್ತು. ಅಂದಿನಿಂದ ಬರವಣಿಗೆಯಲ್ಲಿ ತೊಡಗಿಸಿಕೊಂಡು ಭೂವಿಸ್ಮಯಗಳ ಆಳಗಲಗಳನ್ನು ಕನ್ನಡಿಗರಿಗ ಪರಿಚಯಿಸುತ್ತ ಎತ್ತರಕ್ಕೆ ಬೆಳೆಯುತ್ತ ಹೋದಿರಿ. ನಿಮ್ಮ ಈ ಬೆಳವಣಿಗೆಗೆ ಆರಂಭದಲ್ಲಿ ಆಗೀಗ ಅಷ್ಟಿಷ್ಟು ನೀರೆರೆದ ನಾನು ಬೀಗುತ್ತ ಹೋದೆ. ನೀವು ಪ್ರೊ. ನಿಸಾರ್ ಅಹ್ಮದರ ಜೊತೆಯಲ್ಲೇ ಭೂವಿಜ್ಞಾನದ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದರೂ ನಿಮ್ಮ ಕಾವ್ಯಮಯ ಶೈಲಿಯನ್ನು ವಿಜ್ಞಾನ ಬರವಣಿಗೆಗೇ ಸೀಮಿತಗೊಳಿಸಿ ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ, ಕನ್ನಡ ವಿಜ್ಞಾನ ಸಾಹಿತ್ಯವನ್ನು ಶ್ರೀಮಂತಗೊಳಿಸಿದಿರಿ. ವಿಜ್ಞಾನ ಸಾಹಿತಿಗಳೆನಿಸಿದ ನಾವೆಲ್ಲ ಒಂದರ್ಥದಲ್ಲಿ ಅಳಿವಿನಂಚಿನ ಜೀವಿಗಳೆನಿಸಿದ್ದೇವೆ. ವಿಜ್ಞಾನ ವಿಷಯಗಳನ್ನು ಕನ್ನಡದಲ್ಲಿ ಸರಳವಾಗಿ ಬರೆಯಬಲ್ಲವರ ಸಂಖ್ಯೆ ದಿನದಿನಕ್ಕೆ ಕ್ಷೀಣವಾಗುತ್ತಿದೆ. ಸಾಹಿತ್ಯದ ಮೇರು ವಿಮಶ೯ಕರು ನಮ್ಮತ್ತ ನೋಡುವುದಿಲ್ಲ. 'ಕಡೆಗಣಿಸಲ್ಪಟ್ಟ ಸಾಹಿತ್ಯ'ಗಳ ಪಟ್ಟಿಯಲ್ಲೂ ನಮ್ಮ ಕೃತಿಗಳಿಗೆ ಸ್ಥಾನವಿಲ್ಲ. ಅಷ್ಟಾದರೂ ನಿಮ್ಮ ಶಿರಾ ತಾಲ್ಲೂಕಿನ ಜನರು ಪ್ರೀತಿಯಿಂದ ನಿಮ್ಮನ್ನು ಕಳೆದ ವಾರ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮೆರೆಸಿ ಗೌರವಿಸಿದ್ದಾರೆ. ಕತೆ, ಕಾದಂಬರಿ, ನಾಟಕ, ಕವನ ಬರೆದರೆ ಸಿಗುವ ಗೌರವ ಇತರ ಸಾಹಿತ್ಯ ಪ್ರಕಾರಗಳಿಗೆ ಸಿಗುವುದಿಲ್ಲ ಎಂಬ ಮಾತನ್ನು ಸುಳ್ಳಾಗಿಸಿ ಇದೀಗ ನಿಮಗೆ ಯಾವ ಲಾಬಿ ಇಲ್ಲದೆಯೂ ಡಾಕ್ಟರೇಟ್ ಸಿಕ್ಕಿದೆ. ಅಭಿನಂದನೆಗಳು- ನಿಮಗೊಂದೇ ಅಲ್ಲ, ತುಮಕೂರು ವಿಶ್ವವಿದ್ಯಾಲಯಕ್ಕೂ!
ನಾಗೇಶ ಹೆಗಡೆ

ಸೋಮವಾರ, ಜನವರಿ 19, 2015

ವ್ಯಾಲೆಟ್ ವ್ಯವಹಾರ

ಟಿ. ಜಿ. ಶ್ರೀನಿಧಿ

ಇವತ್ತು ನಮ್ಮ ಮೇಲೆ ಇಂಟರ್‌ನೆಟ್ ಪ್ರಭಾವ ಎಷ್ಟರಮಟ್ಟಿಗಿದೆ ಎನ್ನುವುದನ್ನು ತಿಳಿದುಕೊಳ್ಳಬೇಕೆಂದರೆ ಒಮ್ಮೆ ನಮ್ಮ ದೈನಂದಿನ ಕೆಲಸಗಳನ್ನು ನೆನಪಿಸಿಕೊಂಡರೆ ಸಾಕು. ಹೊಸ ಫ್ಯಾಶನ್ನಿನ ಬಟ್ಟೆಯಿಂದ ಸಾರಿಗೆ ಹಾಕುವ ಹುಣಸೇಹಣ್ಣಿನವರೆಗೆ ನಾವು ಪ್ರತಿಯೊಂದನ್ನೂ ಇದೀಗ ಆನ್‌ಲೈನ್ ಜಗತ್ತಿನಲ್ಲಿ ಕೊಳ್ಳುವುದು ಸಾಧ್ಯವಾಗಿದೆ. ಬಸ್ ಟಿಕೇಟು ಕಾದಿರಿಸುವುದರಿಂದ ಬಸ್ ಸ್ಟಾಂಡಿಗೆ ಹೋಗಲು ಆಟೋ ಕರೆಸುವವರೆಗೆ ಅದೆಷ್ಟೋ ಕೆಲಸಗಳನ್ನು ಮಾಡುವ ಶಕ್ತಿ ನಮ್ಮ ಅಂಗೈಲಿರುವ ಮೊಬೈಲ್ ದೂರವಾಣಿಗೆ ಬಂದುಬಿಟ್ಟಿದೆ.

ಅಂತರಜಾಲ ಬಳಸಿ ಇಷ್ಟೆಲ್ಲ ಕೆಲಸಗಳನ್ನು ಸುಲಭವಾಗಿ ಮಾಡಿಕೊಳ್ಳಬಹುದು ಎನ್ನುವುದೇನೋ ಸರಿ. ಆದರೆ ಅದೆಲ್ಲ ಕೆಲಸಗಳಿಗಾಗಿ ಹಣ ಪಾವತಿಸುವುದು ಹೇಗೆ?

ಮೊದಮೊದಲು ಆನ್‌ಲೈನ್ ವ್ಯವಸ್ಥೆಗಳೆಲ್ಲ ಪರಿಚಯವಾದಾಗ ಅಲ್ಲಿನ ವ್ಯವಹಾರಗಳಿಗಾಗಿ ಹಣ ಪಾವತಿಸುವುದು ಬಹಳ ಕಷ್ಟದ ಕೆಲಸವಾಗಿತ್ತು. ಕ್ರೆಡಿಟ್ ಕಾರ್ಡ್ ಡೆಬಿಟ್ ಕಾರ್ಡ್ ನೆಟ್‌ಬ್ಯಾಂಕಿಂಗುಗಳೆಲ್ಲ ಅಂದು ಇಂದಿನಷ್ಟು ವ್ಯಾಪಕ ಬಳಕೆಯಲ್ಲಿರಲಿಲ್ಲವಲ್ಲ!

ಇದೀಗ ಪರಿಸ್ಥಿತಿ ಸಾಕಷ್ಟು ಬದಲಾಗಿದೆಯಾದರೂ ಆನ್‌ಲೈನ್ ಪಾವತಿಯ ಆಯ್ಕೆ ಎಲ್ಲರಲ್ಲೂ ಇದೆ ಎನ್ನುವಂತಿಲ್ಲ.

ಸೋಮವಾರ, ಜನವರಿ 5, 2015

ಯುಎಸ್‌ಎಸ್‌ಡಿ: ಗೊತ್ತಿದ್ದೂ ಅಪರಿಚಿತ ಈ ತಂತ್ರಜ್ಞಾನ!

ಟಿ. ಜಿ. ಶ್ರೀನಿಧಿ

ಮೊಬೈಲ್ ಫೋನ್ ಬಳಸಿ ಸಂವಹನ ನಡೆಸಲು ಆಯ್ಕೆಗಳು ಹಲವು. ಕರೆಮಾಡಿ ಮಾತನಾಡಿ, ಐವಿಆರ್‌ಎಸ್ ವ್ಯವಸ್ಥೆ ಬಳಸಿ, ಪಠ್ಯರೂಪದ ಸಂದೇಶ ಕಳುಹಿಸಿ ಇಲ್ಲವೇ ಸುಮ್ಮನೆ ಒಂದು ಮಿಸ್ಡ್ ಕಾಲ್ ಆದರೂ ಕೊಡಿ - ಬಳಸುವ ಪ್ರತಿಯೊಂದು ವಿಧಾನದಲ್ಲೂ ತಾಂತ್ರಿಕವಾಗಿ ಒಂದಲ್ಲ ಒಂದು ಬಗೆಯ ಸಂವಹನ ನಡೆದಿರುತ್ತದೆ.

ಇಂತಹ ಪ್ರತಿಯೊಂದು ವಿಧದ ಸಂವಹನದಲ್ಲೂ ಹಲವು ಸಾಧ್ಯತೆಗಳಿರುತ್ತವೆ. ಎಸ್ಸೆಮ್ಮೆಸ್ಸಿನ ಉದಾಹರಣೆಯನ್ನೇ ತೆಗೆದುಕೊಳ್ಳಿ. ಗುಡ್ ಮಾರ್ನಿಂಗ್ ಗುಡ್ ಈವನಿಂಗ್ ಸಂದೇಶಗಳನ್ನು ಕಳುಹಿಸುವ ಜೊತೆಗೆ ಸ್ಪರ್ಧೆಗಳಲ್ಲಿ ಭಾಗವಹಿಸುವ, ಬಸ್ಸು-ವಿಮಾನ ಇತ್ಯಾದಿಗಳ ಪ್ರಯಾಣ ವಿವರ ತಿಳಿಯುವ, ಬ್ಯಾಂಕಿಂಗ್ ಸೇವೆಗಳನ್ನು ಪಡೆದುಕೊಳ್ಳುವಂತಹ ಕೆಲಸಗಳಿಗೆಲ್ಲ ಎಸ್ಸೆಮ್ಮೆಸ್ಸುಗಳನ್ನು ಬಳಸಬಹುದು.

ಮೊಬೈಲಿನ ಪ್ರೀಪೇಯ್ಡ್ ಖಾತೆಯಲ್ಲಿ ದುಡ್ಡೆಷ್ಟಿದೆ ಎನ್ನುವುದನ್ನೋ ಪೋಸ್ಟ್‌ಪೇಯ್ಡ್ ಖಾತೆಯ ಇಂದಿನ ಬಾಕಿ ಎಷ್ಟು ಎನ್ನುವುದನ್ನೋ ತಿಳಿಯುವುದೂ ಸಾಧ್ಯ ತಾನೆ? ಈ ಉದ್ದೇಶಕ್ಕೆ ಬಳಸುವ ವ್ಯವಸ್ಥೆ ಎಸ್ಸೆಮ್ಮೆಸ್ಸಿಗಿಂತ ಕೊಂಚ ಭಿನ್ನವಾಗಿರುವುದನ್ನು ನಾವು ಗಮನಿಸಬಹುದು.

ಸ್ಪರ್ಧೆಯಲ್ಲಿ ಭಾಗವಹಿಸಲೋ ವಿಮಾನದ ಸಮಯ ತಿಳಿದುಕೊಳ್ಳಲೋ ನಾವು ಸಂಖ್ಯೆಯೊಂದಕ್ಕೆ ಎಸ್ಸೆಮ್ಮೆಸ್ ಕಳುಹಿಸುತ್ತೇವೆ; ಆದರೆ ಮೊಬೈಲ್ ಖಾತೆಯಲ್ಲಿ ದುಡ್ಡೆಷ್ಟಿದೆ ಎಂದು ತಿಳಿಯಲು ನಾವು ಬಳಸುವ ಸಂಖ್ಯೆಯಲ್ಲಿ *, # ಮುಂತಾದ ಚಿಹ್ನೆಗಳೆಲ್ಲ ಇರುತ್ತವೆ ಎನ್ನುವುದು ನಮ್ಮ ಗಮನಕ್ಕೆ ಬರುವ ಮೊದಲ ವ್ಯತ್ಯಾಸ.

ಗುರುವಾರ, ಜನವರಿ 1, 2015

ಡಿಜಿಟಲ್ ಲೋಕದ ಅಳು-ನಗು

ಟಿ. ಜಿ. ಶ್ರೀನಿಧಿ


ಸಂವಹನದಲ್ಲಿ ಮಾತಿಗೆಷ್ಟು ಮಹತ್ವವೋ ಅದರೊಡನೆ ವ್ಯಕ್ತವಾಗುವ ಭಾವನೆಗಳಿಗೂ ಅಷ್ಟೇ ಮಹತ್ವವಿದೆ. ಹೇಳುವ ಮಾತನ್ನು ನಗುತ್ತ ಹೇಳಿದರೆ ಒಂದು ಅರ್ಥವಿದ್ದರೆ ಸಿಟ್ಟಿನಲ್ಲಿದ್ದಾಗ ಅದೇ ಮಾತಿಗೆ ಬೇರೆಯದೇ ಅರ್ಥ ಹುಟ್ಟಿಕೊಂಡುಬಿಡುತ್ತದೆ.

ಮುಖಾಮುಖಿ ಸಂವಹನದಲ್ಲೇನೋ ಸರಿ, ಭಾವನೆಗಳನ್ನು ವ್ಯಕ್ತಪಡಿಸುವುದು ಸುಲಭ. ಆದರೆ ಈಚೆಗೆ ನಮ್ಮ ಸಂವಹನ ಎಸ್ಸೆಮ್ಮೆಸ್, ಇಮೇಲ್, ಸೋಶಿಯಲ್ ನೆಟ್‌ವರ್ಕ್‌ಗಳ ಮೂಲಕವೇ ಹೆಚ್ಚುಹೆಚ್ಚಾಗಿ ನಡೆಯುತ್ತಿದೆಯಲ್ಲ, ಅಲ್ಲಿ ಭಾವನೆಗಳನ್ನು ವ್ಯಕ್ತಪಡಿಸುವುದು ಹೇಗೆ?

ಈ ಪ್ರಶ್ನೆ ಇಂದು ನಿನ್ನೆಯದೇನೂ ಅಲ್ಲ.

ಸೋಮವಾರ, ಡಿಸೆಂಬರ್ 22, 2014

ಇದು 'ಅಲ್ಟ್ರಾ ಎಚ್‌ಡಿ' ಸಮಯ!

ಟಿ. ಜಿ. ಶ್ರೀನಿಧಿ

ಟೀವಿ ಕೊಳ್ಳಲು ಹೊರಟಾಗ ಅದು ಎಚ್‌ಡಿ ಚಿತ್ರಗಳನ್ನು ಪ್ರದರ್ಶಿಸಬಲ್ಲದೋ ಇಲ್ಲವೋ ಎಂಬ ಪ್ರಶ್ನೆ ಏಳುವುದು ಇಂದಿನ ತಂತ್ರಜ್ಞಾನ ಲೋಕದಲ್ಲಿ ಅತ್ಯಂತ ಸಾಮಾನ್ಯವಾಗಿರುವ ಸಂಗತಿ. 'ಎಚ್‌ಡಿ ರೆಡಿ', 'ಫುಲ್ ಎಚ್‌ಡಿ'ಗಳಿಂದ ಪ್ರಾರಂಭವಾದ ಈ ಎಚ್‌ಡಿ ಯಾನ ಇದೀಗ '೪ಕೆ', 'ಅಲ್ಟ್ರಾ ಎಚ್‌ಡಿ'ಗಳವರೆಗೂ ತಲುಪಿಬಿಟ್ಟಿದೆ.

ಇಷ್ಟೆಲ್ಲ ಸದ್ದುಮಾಡುತ್ತಿರುವ 'ಎಚ್‌ಡಿ' ಎನ್ನುವ ಈ ಹೆಸರು 'ಹೈ ಡೆಫನಿಷನ್' ಎನ್ನುವುದರ ಹ್ರಸ್ವರೂಪ. ಉತ್ತಮ ಗುಣಮಟ್ಟದ, ಹೆಚ್ಚು ಸ್ಪಷ್ಟವಾದ ವೀಡಿಯೋಗಳನ್ನು ಎಚ್‌ಡಿ ವೀಡಿಯೋ ಎಂದೇ ಗುರುತಿಸುವ ಅಭ್ಯಾಸ ಈಗ ವ್ಯಾಪಕವಾಗಿದೆ.

ಹಾಗೆಂದಮಾತ್ರಕ್ಕೆ ಸ್ಪಷ್ಟ ವೀಡಿಯೋಗಳೆಲ್ಲ ಎಚ್‌ಡಿ ಏನಲ್ಲ. ತಾಂತ್ರಿಕವಾಗಿ ಯಾವುದೇ ವೀಡಿಯೋ 'ಎಚ್‌ಡಿ' ಎಂದು ಕರೆಸಿಕೊಳ್ಳಬೇಕಾದರೆ ಅದಕ್ಕೆ ಕೆಲವು ನಿರ್ದಿಷ್ಟ ಅರ್ಹತೆಗಳು ಇರಬೇಕಾಗುತ್ತದೆ.

ಅವುಗಳಲ್ಲಿ ಮೊದಲನೆಯದು ರೆಸಲ್ಯೂಶನ್. ಯಾವುದೇ ವೀಡಿಯೋದ ಉದಾಹರಣೆ ತೆಗೆದುಕೊಂಡರೆ ಅದರ ಪ್ರತಿ ಫ್ರೇಮಿನಲ್ಲೂ ಒಂದಷ್ಟು 'ಪಿಕ್ಚರ್ ಎಲಿಮೆಂಟ್'ಗಳಿರುತ್ತವೆ; ಡಿಜಿಟಲ್ ಛಾಯಾಚಿತ್ರಗಳಲ್ಲಿ ಪಿಕ್ಸೆಲ್‌ಗಳಿರುತ್ತವಲ್ಲ, ಹಾಗೆಯೇ ಇಲ್ಲಿಯೂ ಪಿಕ್ಸೆಲ್‌ಗಳು ಅಥವಾ ಸಾಲುಗಳು ('ಲೈನ್') ವೀಡಿಯೋದ ಸ್ಪಷ್ಟತೆಯನ್ನು ತೀರ್ಮಾನಿಸುತ್ತವೆ.

ಗುರುವಾರ, ಡಿಸೆಂಬರ್ 11, 2014

ವಿಜ್ಞಾನಲೋಕದ ವಿದ್ಯಾಲಂಕಾರ

ಟಿ. ಆರ್. ಅನಂತರಾಮು 
ರೋಹಿತ್ ಚಕ್ರತೀರ್ಥ

"ತುಂಬ ಬೋರು ಹೊಡೆಯುತ್ತದೆ ಎನ್ನುವ ಕಾರಣಕ್ಕೆ ಮಿಸ್ಟರ್ ಟಾಂಪ್ಕಿನ್ಸ್ ಹತ್ತಿರದ ಕಟ್ಟಡವೊಂದರಲ್ಲಿ ನಡೆಯುತ್ತಿದ್ದ ಉಪನ್ಯಾಸ ಕೇಳಲು ಹೋದ. ಅದು ಹೇಳಿಕೇಳಿ ಸಾಪೇಕ್ಷ ಸಿದ್ಧಾಂತದ ಮೇಲೆ ನಡೆಯುತ್ತಿದ್ದ ಭೀಕರಭಾಷಣ! ಬಿಸಿಲುಗಾಲಕ್ಕೆ ಕಪ್ಪೆ ಬಂಡೆಯೇರಿ ಕೂತ ಹಾಗಾಯಿತು! ಈಗಾಗಲೇ ಬೋರಾಗಿದ್ದ ಟಾಂಪ್ಕಿನ್ಸ್ ಬೋರಲುಬಿದ್ದು ನಿದ್ದೆಗೆ ಜಾರಿದ. ಆಗ ಅವನಿಗೊಂದು ಕನಸು ಬಿತ್ತು. ಕನಸಿನಲ್ಲಿ ಅವನೊಂದು ಹೊಸಲೋಕಕ್ಕೆ ಪ್ರವೇಶ ಪಡೆದಿದ್ದ. ಸೆಕೆಂಡಿಗೆ ಮೂರುಲಕ್ಷ ಕಿಮೀಗಳನ್ನು ಕ್ರಮಿಸುತ್ತ ಯಮವೇಗದಲ್ಲಿ ಓಡಬೇಕಿದ್ದ ಬೆಳಕು ಈ ವಿಚಿತ್ರ ಜಗತ್ತಿನಲ್ಲಿ ಸೆಕೆಂಡಿಗೆ ಕೇವಲ ಹತ್ತು ಕಿಮೀ ಮಾತ್ರ ಸಾಗುತ್ತಿತ್ತು! ಇನ್ನೂ ಸ್ವಾರಸ್ಯದ ಸಂಗತಿಯೆಂದರೆ, ಅಲ್ಲಿನ ವಸ್ತುಗಳ ಗಾತ್ರ, ರಾಶಿ, ಗುರುತ್ವಗಳೆಲ್ಲ ಭೂಮಿಯ ಲೆಕ್ಕಾಚಾರಕ್ಕಿಂತ ಸಂಪೂರ್ಣ ಭಿನ್ನವಾಗಿದ್ದವು.." - ಹೀಗೆ ಶುರುವಾಗುತ್ತದೆ ಜಾರ್ಜ್ ಗ್ಯಾಮೋ ಎಂಬ ಜಗತ್ಪ್ರಸಿದ್ಧ ಭೌತವಿಜ್ಞಾನಿ, ಪ್ರೊಫೆಸರ್ ಮತ್ತು ವಿಜ್ಞಾನಲೇಖಕ ಬರೆದ ಕತೆ "ಮಿಸ್ಟರ್ ಟಾಂಪ್ಕಿನ್ಸ್ ಇನ್ ವಂಡರ್‌ಲ್ಯಾಂಡ್".

ವಿಜ್ಞಾನಾಸಕ್ತರ - ಅದರಲ್ಲೂ ಮುಖ್ಯವಾಗಿ ಸಾಪೇಕ್ಷ ಸಿದ್ಧಾಂತವೆಂಬ ಆ ಕಾಲದ ಕಬ್ಬಿಣದ ಕಡಲೆಯನ್ನು ಜಗಿದು ಹಲ್ಲು ಮುರಿದುಕೊಳ್ಳುತ್ತಿದ್ದವರನ್ನು ಆಕರ್ಷಿಸಿದ್ದ ಈ ಪುಸ್ತಕ ಹೋಗಿಹೋಗಿ ಒಬ್ಬರು ಕನ್ನಡಪಂಡಿತರ ಕೈಗೆ ಬಿತ್ತು. ಬೇರೆಯವರ ಉಡಿಗೆ ಬಿದ್ದಿದ್ದರೆ ಅದೆಲ್ಲಿ ಪಂಪಕುಮಾರವ್ಯಾಸರ ನಡುವೆ ಕಳೆದುಹೋಗುತ್ತಿತ್ತೋ. ಆದರೆ ಇವರು ಆಸಕ್ತಿಯಿಂದ ಓದತೊಡಗಿದ್ದೇ, ಸಾಲುಸಾಲುಗಳನ್ನು ಆಸ್ವಾದಿಸುತ್ತ ವಿಜ್ಞಾನಸಾಹಿತ್ಯದ ಕಚಗುಳಿರುಚಿಯನ್ನು ಚಪ್ಪರಿಸತೊಡಗಿದರು! "ಅಯ್ಯೋ, ಇಂತಹ ಪುಸ್ತಕ ಇದೆಯೆನ್ನುವುದೇ ಗೊತ್ತಿಲ್ಲದೆ ಕನ್ನಡಿಗ ಕೈಕಟ್ಟಿ ಕೂತಿದ್ದಾನಲ್ಲ!" ಎಂದು ಪಂಡಿತರ ಹೊಟ್ಟೆ ಚುರ್ ಅಂದಿತು. ತನ್ನ ಕಿರಿಯ ಮಿತ್ರರೊಬ್ಬರನ್ನು ಕರೆದು ದೀಕ್ಷೆ ಕೊಟ್ಟೇಬಿಟ್ಟರು. "ಈ ಪುಸ್ತಕ ಕನ್ನಡದಲ್ಲಿ ಬರಲಿಕ್ಕೇಬೇಕು. ವಿಚಿತ್ರ ಲೋಕದಲ್ಲಿ ವಿದ್ಯಾಲಂಕಾರ - ಅಂತ ಟೈಟಲ್ ಇಟ್ಟುಕೋ. ಪ್ರಕಟಿಸುವ ಜವಾಬ್ದಾರಿ ನನ್ನದು" ಎಂಬ ಆಗ್ರಹಪೂರ್ವಕ ಬಿನ್ನಹ ಮಾಡಿದರು.

ಇದು ೧೯೫೧ರ ಮಾತು. ಬಡಮೇಸ್ಟ್ರ ತಿಂಗಳ ಸಂಬಳ ಹೆಚ್ಚೆಂದರೆ ಅರುವತ್ತೆಪ್ಪತ್ತು ಇದ್ದ ಸಮಯ. ಹಾಗಿರುವಾಗ, ಗೆಳೆಯ ಬರೆದ ಪುಸ್ತಕ ಪ್ರಕಟಿಸಲು ೮೦೦ ರುಪಾಯಿ ತೊಡಗಿಸಿ ಕೈಸುಟ್ಟುಕೊಳ್ಳುವುದುಂಟೆ? "ಹಾಗೆ ಹಿಮ್ಮೆಟ್ಟುತ್ತ ಕೂತರೆ ಕನ್ನಡಕ್ಕೆ ವಿಜ್ಞಾನ ತರುವವರು ಯಾರು? ಈ ಸಹಾಯವನ್ನು ನಾನು ಮಾಡಿಲ್ಲವಾದರೆ ಬೇರಾರು ಮಾಡಬೇಕು?" ಎಂದ ಮೇಸ್ಟ್ರು ಎರಡನೇ ಯೋಚನೆಯನ್ನೇ ಮಾಡಲಿಲ್ಲ. ಪುಸ್ತಕ ಪ್ರಕಟವಾಯಿತು.

ಸೋಮವಾರ, ಡಿಸೆಂಬರ್ 8, 2014

ಜಿಪಿಎಸ್ ಎಂಬ ಮಾರ್ಗದರ್ಶಕ

ಟಿ. ಜಿ. ಶ್ರೀನಿಧಿ

ಸಿನಿಮಾಗೆ ಹೋದದ್ದು ಗೆಳೆಯರಿಗೆಲ್ಲ ಗೊತ್ತಾಗಲಿ ಎಂದು ಫೇಸ್‌ಬುಕ್‌ನಲ್ಲಿ 'ಚೆಕ್ ಇನ್' ಮಾಡಲು ಹೋದರೆ ನಾವು ಯಾವ ಮಲ್ಟಿಪ್ಲೆಕ್ಸಿನಲ್ಲಿದ್ದೇವೆ ಎಂದು ಅದೇ ತೋರಿಸಿಬಿಡುತ್ತದೆ. ಸಿನಿಮಾ ಮುಗಿದ ಮೇಲೆ ಊಟಕ್ಕೆಂದು ಹೋಟಲಿಗೆ ಹೋಗಬೇಕೆ? ಅದಕ್ಕೆ ಟ್ಯಾಕ್ಸಿ ಸಂಸ್ಥೆಯ ಮೊಬೈಲ್ ಆಪ್ ಬಳಸಿದರೆ ಸಾಕು - ಹತ್ತಿರದಲ್ಲಿ ಯಾವುದಾದರೂ ಟ್ಯಾಕ್ಸಿ ಇದೆಯೇ ಎನ್ನುವುದು ನಮಗೆ ಗೊತ್ತಾಗುತ್ತದೆ, ನಮ್ಮ ಸಾರಥಿಯಾಗಲಿರುವ ಟ್ಯಾಕ್ಸಿ ಚಾಲಕನಿಗೆ ನಾವೆಲ್ಲಿದ್ದೇವೆ ಎನ್ನುವುದೂ ತಿಳಿದುಬಿಡುತ್ತದೆ. ಇನ್ನು ಟ್ಯಾಕ್ಸಿ ಹತ್ತಿ ಹೊರಟಮೇಲೂ ಅಷ್ಟೆ, ಚಾಲಕನ ಮುಂದಿರುವ ಪರದೆಯಲ್ಲಿ ಟ್ಯಾಕ್ಸಿ ಸಾಗುತ್ತಿರುವ ದಾರಿಯ ಮ್ಯಾಪು ಸ್ಪಷ್ಟವಾಗಿ ಮೂಡಿಬರುತ್ತದೆ. ಆತನಿಗೆ ಸರಿಯಾದ ದಾರಿ ಗೊತ್ತಿಲ್ಲದಿದ್ದರೂ ಚಿಂತೆಯಿಲ್ಲ, ಏಕೆಂದರೆ ಮ್ಯಾಪ್ ತೋರಿಸುತ್ತಿರುವ ತಂತ್ರಾಂಶ ಆ ಹೋಟಲಿಗೆ ತಲುಪುವುದು ಹೇಗೆ ಎನ್ನುವುದನ್ನೂ ಹೇಳಿಕೊಡುತ್ತದೆ!

ಹೊಸ ಊರಿಗೆ ಪ್ರವಾಸ ಹೋದಾಗ, ಹಳೆಯ ಊರಿನಲ್ಲಿ ಅಡ್ರೆಸ್ ಸಿಗದೆ ಪರದಾಡುವಾಗಲೆಲ್ಲ ನಾವು ಈ ಹಿಂದೆಯೂ ಮೊಬೈಲ್ ಬಳಸುತ್ತಿದ್ದದ್ದುಂಟು. ಆದರೆ ಅದು ಆ ಪ್ರದೇಶದ ಪರಿಚಯವಿರುವವರಿಂದ ಸಹಾಯ ಕೇಳಲು ಮಾತ್ರವೇ ಆಗಿರುತ್ತಿತ್ತು. ಈಗಿನ ಪರಿಸ್ಥಿತಿ ಹಾಗಿಲ್ಲ, ಯಾವ ಹೋಟಲಿನಲ್ಲಿದ್ದೇವೆ ಎಂದು ಫೇಸ್‌ಬುಕ್ ಅಪ್‌ಡೇಟ್ ಹಾಕುವುದರಿಂದ ಹಿಡಿದು ನಾವು ತಲುಪಬೇಕಿರುವ ವಿಳಾಸಕ್ಕೆ ಹೋಗಬೇಕಾದ ಮಾರ್ಗ ತಿಳಿದುಕೊಳ್ಳುವವರೆಗೆ ಅದೆಷ್ಟೋ ಸಂದರ್ಭಗಳಲ್ಲಿ ಮೊಬೈಲ್ ಫೋನ್ ನಮ್ಮ ನೆರವಿಗೆ ಬರುತ್ತದೆ. ಅಷ್ಟೇ ಅಲ್ಲ, ಆ ಎಲ್ಲ ಸಂದರ್ಭಗಳಲ್ಲೂ ನಾವು ಇರುವ ಸ್ಥಳವನ್ನು ಅದು ಬಹುತೇಕ ಸರಿಯಾಗಿಯೇ ಗುರುತಿಸಿರುತ್ತದೆ.

ಮೊಬೈಲ್ ಫೋನ್ ಇರುವ ಜಾಗವನ್ನು ಗುರುತಿಸಿ ಅದರ ಆಧಾರದ ಮೇಲೆ ಇಷ್ಟೆಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಲು ನೆರವಾಗುವ ತಂತ್ರಜ್ಞಾನವೇ ಜಿಪಿಎಸ್, ಅಂದರೆ ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ.

ಶುಕ್ರವಾರ, ಡಿಸೆಂಬರ್ 5, 2014

ಯಂತ್ರಮಾನವ ಮಾನವಯಂತ್ರ

ಟಿ. ಜಿ. ಶ್ರೀನಿಧಿ

ಇಪ್ಪತ್ತನೇ ಶತಮಾನದ ಪ್ರಾರಂಭದ ಕಾಲವನ್ನು ಯಂತ್ರಯುಗವೆಂದು ಕರೆಯುವ ಅಭ್ಯಾಸವಿದೆ. ಬೃಹತ್ ಕಾರ್ಖಾನೆಗಳು ವಸ್ತುಗಳ ತಯಾರಿಕೆಯನ್ನು ಸುಲಭವಾಗಿಸಿದ್ದು, ಹೊಸ ಯಂತ್ರಗಳು ಮನುಷ್ಯನ ದೈಹಿಕ ಶ್ರಮವನ್ನು ಕಡಿಮೆಮಾಡಿದ್ದು, ಕಲ್ಪಿಸಿಕೊಳ್ಳಲೂ ಕಷ್ಟವಾಗಿದ್ದ ಸಂಗತಿಗಳು ತಂತ್ರಜ್ಞಾನದ ನೆರವಿನಿಂದ ಸಾಕಾರಗೊಳ್ಳಲು ಪ್ರಾರಂಭವಾದದ್ದು ಇದೇ ಅವಧಿಯಲ್ಲಿ. ಇಂದು ತಂತ್ರಜ್ಞಾನ ನಮ್ಮ ಜೀವನದ ಎಲ್ಲ ಆಯಾಮಗಳನ್ನೂ ಪ್ರಭಾವಿಸಿದೆಯಲ್ಲ, ಆ ಅದ್ಭುತ ಬೆಳವಣಿಗೆಯ ಮೂಲವನ್ನು ನಾವು ಈ ಯಂತ್ರಯುಗದಲ್ಲಿ ಕಾಣಬಹುದು.

ಮನುಷ್ಯ ಹಾಗೂ ಯಂತ್ರಗಳ ನಡುವಿನ ಒಡನಾಟ ಹೆಚ್ಚಲು ಶುರುವಾದದ್ದೂ ಇದೇ ಸಮಯದಲ್ಲಿ. ಯಂತ್ರಗಳ ನೆರವಿನಿಂದ ಮನುಷ್ಯನ ಬದುಕಿನ ಗುಣಮಟ್ಟ ಗಮನಾರ್ಹವಾಗಿ ಹೆಚ್ಚಿತು; ಅದರ ಜೊತೆಗೆ "ಯಂತ್ರಗಳು ಮನುಷ್ಯನ ಕೆಲಸವನ್ನು ತಾವೇ ಮಾಡಿ ಕೆಲಸಗಾರರನ್ನು ಬೀದಿಗೆ ತರುತ್ತವೆ", "ತಂತ್ರಜ್ಞಾನ ಹೀಗೆಯೇ ಬೆಳೆಯುತ್ತ ಹೋದರೆ ಮುಂದೊಂದು ದಿನ ಯಂತ್ರಗಳೇ ನಮ್ಮನ್ನು ಆಳಬಹುದು" ಮುಂತಾದ ಭಾವನೆಗಳೂ ವ್ಯಾಪಕವಾಗಿ ಕಾಣಿಸಿಕೊಂಡವು. ಮನುಷ್ಯ ಹಾಗೂ ಯಂತ್ರಗಳ ನಡುವೆ ಒಂದು ರೀತಿಯ ಸ್ಪರ್ಧೆಯೇ ಉಂಟಾಯಿತು ಎಂದರೂ ಸರಿಯೇ.

ಅಲ್ಲಿಂದ ಮುಂದಕ್ಕೆ ತಂತ್ರಜ್ಞಾನ ಬೆಳೆದುಬಂದಿರುವ ಪರಿ ನಮಗೆಲ್ಲ ಗೊತ್ತೇ ಇದೆ. ನಮ್ಮ ಕೆಲಸಗಳನ್ನು ಸುಲಭಗೊಳಿಸುವುದಿರಲಿ, ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕ್ಷೇತ್ರದಲ್ಲಿ ನಡೆದಿರುವ ಬೆಳವಣಿಗೆಗಳು ಯಂತ್ರಗಳಿಗೆ ಸ್ವತಃ ಯೋಚಿಸುವ - ಆ ಯೋಚನೆಗಳಿಗೆ ತಕ್ಕಂತೆ ಕೆಲಸಮಾಡುವ ಶಕ್ತಿಯನ್ನೂ ನೀಡಲು ಪ್ರಯತ್ನಿಸುತ್ತಿವೆ.

ಯಂತ್ರಗಳು ಇಷ್ಟೆಲ್ಲ ಅಭಿವೃದ್ಧಿಯಾಗಿ ಮಾನವರಂತೆಯೇ ಆಗುವುದಾದರೆ ಮನುಷ್ಯರು ಕೊಂಚಮಟ್ಟಿಗಾದರೂ ಯಂತ್ರಗಳಾಗುವುದರಲ್ಲಿ ಏನು ತಪ್ಪು?

ಮಂಗಳವಾರ, ಡಿಸೆಂಬರ್ 2, 2014

ಕನ್ನಡನಾಡಿನ ಐಟಿ ಜಗತ್ತು

ಕನ್ನಡನಾಡಿನ ಇತಿಹಾಸದಿಂದ ಪರಿಸರದವರೆಗೆ, ಕನ್ನಡದ ಸಾಹಿತ್ಯ-ಸಂಸ್ಕೃತಿಯಿಂದ ಆಹಾರ ವೈವಿಧ್ಯದವರೆಗೆ ಪ್ರತಿಯೊಂದು ಅಂಶವೂ ವಿಶಿಷ್ಟವೇ. ಹಿಂದಿನ ಕಾಲದಿಂದಲೂ ನಮ್ಮ ನಾಡಿನೊಡನೆ ಬಂದಿರುವ ಈ ಹೆಚ್ಚುಗಾರಿಕೆಗಳ ಸಾಲಿಗೆ ಕಳೆದ ಕೆಲ ದಶಕಗಳಲ್ಲಿ ಸೇರಿದ್ದು ಮಾಹಿತಿ ತಂತ್ರಜ್ಞಾನದ ತವರು ಎನ್ನುವ ಇನ್ನೊಂದು ಹಿರಿಮೆ. ಈ ಸಂಗತಿ ಅದೆಷ್ಟು ಜನಪ್ರಿಯ ಎಂದರೆ ಪ್ರಪಂಚದ ಯಾವುದೋ ಮೂಲೆಯಲ್ಲಿ, ಹೆಸರು ಹೇಳಲೂ ಕಷ್ಟವಾಗುವಂತಹ ಊರಿನಲ್ಲಿರುವವರಿಗೂ ಬೆಂಗಳೂರಿನ ಪರಿಚಯವಿರುತ್ತದೆ. ಕನ್ನಡನಾಡಿನೊಳಗೊಂದು ಐಟಿ ಜಗತ್ತು ರೂಪುಗೊಂಡ, ಬೆಳೆದುನಿಂತ ಈ ಪ್ರಕ್ರಿಯೆಯ ಒಂದು ಸಿಂಹಾವಲೋಕನ ಇಲ್ಲಿದೆ.

ಟಿ. ಜಿ. ಶ್ರೀನಿಧಿ

ಚಿತ್ರಕೃಪೆ: bangaloreitbt.in
ನಮ್ಮ ದೇಶದಲ್ಲಿ ಐಟಿ ಉದ್ದಿಮೆಯ ಪ್ರಾರಂಭವಾದದ್ದು ಸುಮಾರು ಎಪ್ಪತ್ತರ ದಶಕದಲ್ಲಿರಬೇಕು. ಆಗಿನ ಕಾಲದಲ್ಲಿ ಹೆಚ್ಚೂಕಡಿಮೆ ಎಲ್ಲ ಸಂಸ್ಥೆಗಳೂ ಮುಂಬಯಿಯಿಂದಲೇ ಕಾರ್ಯನಿರ್ವಹಿಸುತ್ತಿದ್ದವು ಎಂದು ತೋರುತ್ತದೆ. ತಂತ್ರಜ್ಞಾನದಲ್ಲಿ ಪರಿಣತರಾದವರನ್ನು ಅಂತಹವರ ಅಗತ್ಯವಿದ್ದ ಸಂಸ್ಥೆಗಳಿಗೆ ಕಳುಹಿಸಿಕೊಡುವುದು, ಹಾಗೂ ಆ ಸೇವೆಯನ್ನು ಒದಗಿಸಿಕೊಟ್ಟದ್ದಕ್ಕೆ ತಮ್ಮ ಶುಲ್ಕ ಪಡೆದುಕೊಳ್ಳುವುದು - ಇದು ಇಂತಹ ಬಹಳಷ್ಟು ಸಂಸ್ಥೆಗಳ ಪ್ರಾಥಮಿಕ ಚಟುವಟಿಕೆಯಾಗಿತ್ತು ಎನ್ನಬಹುದು.

ಮೊದಲಿಗೆ ಸೀಮಿತ ಪ್ರಮಾಣದಲ್ಲೇ ನಡೆಯುತ್ತಿದ್ದ ಈ ಸಂಸ್ಥೆಗಳ ವಹಿವಾಟು ಕಂಪ್ಯೂಟರ್ ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಜಾಸ್ತಿಯಾಗುತ್ತ ಬಂತು. ಹೆಚ್ಚುಹೆಚ್ಚು ಸಂಸ್ಥೆಗಳು ಐಟಿ ಕ್ಷೇತ್ರ ಪ್ರವೇಶಿಸಿ ಅಲ್ಲಿ ಸ್ಪರ್ಧೆ ಹೆಚ್ಚುತ್ತಿದ್ದಂತೆ ಮುಂಬಯಿಯಷ್ಟೇ ಉತ್ತಮವಾದ ಸೌಕರ್ಯಗಳನ್ನು ಹೊಂದಿರುವ, ಸಾಧ್ಯವಾದರೆ ಅದಕ್ಕಿಂತ ಹೆಚ್ಚೇ ಅನುಕೂಲಕರವಾದ ಊರಿಗಾಗಿ ಹುಡುಕಾಟ ಪ್ರಾರಂಭವಾಯಿತು.

ಆಗ ಆಯ್ಕೆಯಾದದ್ದೇ ನಮ್ಮ ಬೆಂಗಳೂರು.

ಗುರುವಾರ, ನವೆಂಬರ್ 27, 2014

ಪಾಸ್‌ವರ್ಡ್: ಕಂಪ್ಯೂಟರ್ ಲೋಕದ ಕೀಲಿಕೈ

ಡಿಜಿಟಲ್ ಪ್ರಪಂಚದಲ್ಲಿ ನಮ್ಮ ಮಾಹಿತಿಯನ್ನೆಲ್ಲ ಸುರಕ್ಷಿತವಾಗಿಡಲು, ಅದು ಅಪಾತ್ರರ ಕೈಗೆ ಸಿಗದಂತೆ ನೋಡಿಕೊಳ್ಳಲು, ನಮ್ಮ ಮಾಹಿತಿ ನಮಗಷ್ಟೆ ಗೊತ್ತು ಎಂಬ ಸಮಾಧಾನದ ಭಾವನೆ ಮೂಡಿಸಲು ಪಾಸ್‌ವರ್ಡ್ ಬೇಕೇಬೇಕು. ಇಷ್ಟೆಲ್ಲ ಶಕ್ತಿಶಾಲಿಯಾದ ಈ ಪಾಸ್‌ವರ್ಡ್‌ನ ಕುರಿತು ಡಿಸೆಂಬರ್ ೨೦೧೪ರ 'ಉತ್ಥಾನ' ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ ಇಲ್ಲಿದೆ. 
ಟಿ. ಜಿ. ಶ್ರೀನಿಧಿ

ಆಲಿಬಾಬನ ಕತೆ ಗೊತ್ತಲ್ಲ, ಅದರಲ್ಲಿ ನಲವತ್ತು ಮಂದಿ ಕಳ್ಳರು ತಾವು ಕದ್ದು ತಂದ ಸಂಪತ್ತನ್ನೆಲ್ಲ ಒಂದು ಗುಹೆಯಲ್ಲಿ ಅವಿಸಿಡುತ್ತಿರುತ್ತಾರೆ. ಮತ್ತೆ ಕಳ್ಳತನಕ್ಕೆ ಹೋದಾಗ ಬೇರೆ ಕಳ್ಳರು ಬಂದು ಇವರ ಸಂಪತ್ತನ್ನೇ ಕದ್ದುಬಿಡಬಾರದಲ್ಲ, ಅದಕ್ಕಾಗಿ 'ಬಾಗಿಲು ತೆರೆಯೇ ಸೇಸಮ್ಮ' ಎಂದು ಹೇಳದ ಹೊರತು ಗುಹೆಯೊಳಕ್ಕೆ ಯಾರೂ ಹೋಗಲಾಗದಂತಹ ವ್ಯವಸ್ಥೆಯನ್ನೂ ರೂಪಿಸಿಕೊಂಡಿರುತ್ತಾರೆ.

ಕಳ್ಳರ ಬಂದೋಬಸ್ತು ಜೋರಾಗಿಯೇ ಇತ್ತು ನಿಜ. ಆದರೆ ಆಲಿಬಾಬ ಯಾವಾಗ ಅವರ ಗುಪ್ತಸಂಕೇತವನ್ನು ಕೇಳಿಸಿಕೊಂಡನೋ ಅಲ್ಲಿಂದ ಸೇಸಮ್ಮ ಆಲಿಬಾಬನಿಗೂ ಬಾಗಿಲು ತೆರೆಯಲು ಶುರುಮಾಡಿದಳು!

ಆಲಿಬಾಬನ ಈ ಕತೆ ಕಲ್ಪನೆಯದೇ ಇರಬಹುದು. ಆದರೆ ಅಂತರಜಾಲದ ಪ್ರಪಂಚದಲ್ಲಿ ಈ ಕತೆಯಲ್ಲಿ ನಡೆದಂತಹ ಸನ್ನಿವೇಶಗಳು ಈಗ ತೀರಾ ಸಾಮಾನ್ಯವಾಗಿಬಿಟ್ಟಿವೆ. ಕತೆಯ ಆಲಿಬಾಬ ಕಳ್ಳರಿಂದ ಕದ್ದರೆ ಅಂತರಜಾಲದ ಖದೀಮರು ಸಿಕ್ಕಸಿಕ್ಕವರನ್ನೆಲ್ಲ ದೋಚಲು ಹೊರಟಿದ್ದಾರೆ.

ಇಂತಹ ಪರಿಸ್ಥಿತಿಯನ್ನು ತಂದಿಟ್ಟಿರುವುದು ಕೇವಲ ಒಂದು ಪದ ಎಂದರೆ ನಮಗೆ ಆಶ್ಚರ್ಯವೇನೂ ಆಗಲಿಕ್ಕಿಲ್ಲ. ಏಕೆಂದರೆ ಜಾಲಜಗತ್ತಿನ ಅದೆಷ್ಟೋ ಬಾಗಿಲುಗಳನ್ನು ತೆರೆಯುವ ಪಾಸ್‌ವರ್ಡ್ ಎಂಬ ಶಕ್ತಿಶಾಲಿ ಶಬ್ದ ಆಲಿಬಾಬ ಕತೆಯ ಸೇಸಮ್ಮನಂತೆಯೇ ತಾನೆ!

ನಿಜ, ಡಿಜಿಟಲ್ ಪ್ರಪಂಚದಲ್ಲಿ ನಮ್ಮ ಮಾಹಿತಿಯನ್ನೆಲ್ಲ ಸುರಕ್ಷಿತವಾಗಿಡಲು, ಅದು ಅಪಾತ್ರರ ಕೈಗೆ ಸಿಗದಂತೆ ನೋಡಿಕೊಳ್ಳಲು, ನಮ್ಮ ಮಾಹಿತಿ ನಮಗಷ್ಟೆ ಗೊತ್ತು ಎಂಬ ಸಮಾಧಾನದ ಭಾವನೆ ಮೂಡಿಸಲು ಪಾಸ್‌ವರ್ಡ್ ಬೇಕೇ ಬೇಕು.

ಕಂಪ್ಯೂಟರ್ ಪ್ರಪಂಚಕ್ಕೆ ಪಾಸ್‌ವರ್ಡುಗಳು ಪಾದಾರ್ಪಣೆ ಮಾಡಿದ್ದು ಸುಮಾರು ೧೯೬೦ರ ಆಸುಪಾಸಿನಲ್ಲಿ.

ಬುಧವಾರ, ನವೆಂಬರ್ 26, 2014

ಐಟಿ ಜಗದಲ್ಲಿ ಕನ್ನಡದ ಬಾವುಟ

ಕಂಪ್ಯೂಟರಿನಲ್ಲಿ ಕನ್ನಡವೆಂದರೆ ಟೈಪಿಂಗ್ ಅಷ್ಟೇ ಅಲ್ಲ. ಇಂಗ್ಲಿಷಿನಲ್ಲೋ ಬೇರೊಂದು ಭಾಷೆಯಲ್ಲೋ ಕಂಪ್ಯೂಟರ್ ಬಳಸಿ ಏನೆಲ್ಲ ಸಾಧಿಸಬಹುದೋ ಅವನ್ನೆಲ್ಲ ಕನ್ನಡದಲ್ಲೂ ಸಾಧ್ಯವಾಗಿಸುವ ದಿನ ದೂರವಿಲ್ಲ. ಈ ನಿಟ್ಟಿನಲ್ಲಿ ನಡೆಯುತ್ತಿರುವ ಕೆಲವು ಬೆಳವಣಿಗೆಗಳನ್ನು ಪರಿಚಯಿಸುವ ಲೇಖನ ಇಲ್ಲಿದೆ. ಇಂತಹ ಇನ್ನೂ ಹಲವಾರು ಪ್ರಯತ್ನಗಳನ್ನು ಮುಂದಿನ ದಿನಗಳಲ್ಲಿ ಕನ್ನಡದ ಓದುಗರಿಗೆ ಪರಿಚಯಿಸುವ ಉದ್ದೇಶ ಇಜ್ಞಾನ ಡಾಟ್ ಕಾಮ್‌ ತಾಣಕ್ಕಿದೆ. ನಿಮ್ಮ ಗಮನಕ್ಕೆ ಬಂದ ಕನ್ನಡ ತಂತ್ರಾಂಶಗಳನ್ನು (ಕಂಪ್ಯೂಟರಿನ ತಂತ್ರಾಂಶಗಳು - ಮೊಬೈಲ್ ಆಪ್‌ಗಳೆರಡೂ ಸೇರಿದಂತೆ) ಇಜ್ಞಾನ ಫೇಸ್‌ಬುಕ್ ಪುಟದ ಮೂಲಕ ನಮಗೂ ಪರಿಚಯಿಸಿ!
ಟಿ. ಜಿ. ಶ್ರೀನಿಧಿ

ಹಿರಿಯ ವಿದ್ವಾಂಸ ಪ್ರೊ. ಜಿ. ವೆಂಕಟಸುಬ್ಬಯ್ಯನವರು ಯಾವುದೋ ಸಂದರ್ಭದಲ್ಲಿ ನಿರ್ದಿಷ್ಟ ಪದ್ಯವೊಂದನ್ನು ಉದಾಹರಿಸಬೇಕಾಗಿ ಬಂದಿತ್ತು. ಆಗ ಅದರ ಪೂರ್ಣಪಾಠವನ್ನು ಒಮ್ಮೆ ನೋಡಿಬಿಡೋಣ ಎಂದು ಅವರು ತಮ್ಮ ಪುಸ್ತಕ ಸಂಗ್ರಹದಲ್ಲಿ ಹುಡುಕುತ್ತಿದ್ದರು. ಅಷ್ಟರಲ್ಲಿ ಅಲ್ಲಿಗೆ ಬಂದ ಅವರ ಮೊಮ್ಮಗಳು ಆ ಪದ್ಯವನ್ನು ಅಂತರಜಾಲದ ಮೂಲಕ ಕೆಲವೇ ಕ್ಷಣಗಳಲ್ಲಿ ಹುಡುಕಿಕೊಟ್ಟರಂತೆ!

ನಮ್ಮ ಬದುಕನ್ನು ಮಾಹಿತಿ ತಂತ್ರಜ್ಞಾನ ಹೇಗೆ ಬದಲಿಸುತ್ತಿದೆ ಎನ್ನುವ ಕುರಿತು ಮಾತನಾಡುವಾಗ ಜೀವಿಯವರು ಹೇಳಿದ ಉದಾಹರಣೆ ಇದು. ನಿಜ, ಕೆಲವೇ ವರ್ಷಗಳ ಹಿಂದೆ ಯೋಚಿಸಿಕೊಳ್ಳಲೂ ಕಷ್ಟವಾಗುವಂತಿದ್ದ ಕೆಲಸಗಳು ಇಂದು ಮಾಹಿತಿ ತಂತ್ರಜ್ಞಾನದಿಂದಾಗಿ ಬಹಳ ಸುಲಭವಾಗಿಬಿಟ್ಟಿವೆ. ಅಷ್ಟೇ ಅಲ್ಲ, ಮಾಹಿತಿ ತಂತ್ರಜ್ಞಾನದ ಅನುಕೂಲಗಳನ್ನು ಪಡೆಯಲು ಇದ್ದ ಭಾಷೆಯ - ತಾಂತ್ರಿಕ ಜ್ಞಾನದ ಅಡೆತಡೆಗಳೂ ನಿಧಾನಕ್ಕೆ ದೂರವಾಗುತ್ತಿವೆ.

ಸೋಮವಾರ, ನವೆಂಬರ್ 24, 2014

ಎಲ್ಲೆಲ್ಲೂ ಎಲ್‌ಇಡಿ

ಟಿ. ಜಿ. ಶ್ರೀನಿಧಿ

೨೦೧೪ನೇ ಸಾಲಿನ ಭೌತವಿಜ್ಞಾನ ನೊಬೆಲ್ ಪ್ರಶಸ್ತಿಯನ್ನು ಮೂವರು ವಿಜ್ಞಾನಿಗಳಿಗೆ ನೀಡಲಾಗಿದೆ. ಅವರಿಗೆ ಈ ಗೌರವ ದೊರೆತದ್ದು ನೀಲಿ ಬಣ್ಣದ ಎಲ್‌ಇಡಿಗಳನ್ನು ರೂಪಿಸಿದ್ದಕ್ಕಾಗಿ.

ಎಲ್‌ಇಡಿ, ಅಂದರೆ ಲೈಟ್ ಎಮಿಟಿಂಗ್ ಡಯೋಡ್‌ಗಳ ಪರಿಚಯ ನಮ್ಮೆಲ್ಲರಿಗೂ ಇದೆ. ಮಕ್ಕಳ ಆಟಿಕೆ - ಅಲಂಕಾರದ ಸೀರಿಯಲ್ ಸೆಟ್ - ಬಸ್ಸು, ರೈಲಿನ ಬೋರ್ಡು ಇತ್ಯಾದಿಗಳಿಂದ ಪ್ರಾರಂಭಿಸಿ ಅತ್ಯಾಧುನಿಕ ಟೀವಿ - ಮೊಬೈಲುಗಳವರೆಗೆ ಎಲ್‌ಇಡಿಗಳು ಎಲ್ಲೆಲ್ಲೂ ಬಳಕೆಯಾಗುತ್ತಿರುವುದೂ ನಮಗೆ ಗೊತ್ತು.

ವಿವಿಧ ಸಾಧನಗಳಲ್ಲಿ ಬೇರೆಬೇರೆ ಬಣ್ಣದ ಎಲ್‌ಇಡಿಗಳು ಬಳಕೆಯಾಗುತ್ತವೆ. ಕೆಂಪು ಹಾಗೂ ಹಸಿರು ಬಣ್ಣದ ಎಲ್‌ಇಡಿಗಳಂತೂ ಹಲವು ದಶಕಗಳಿಂದಲೇ ನಮಗೆಲ್ಲ ಪರಿಚಿತವಾಗಿವೆ. ಬಲ್ಬು-ಟ್ಯೂಬ್‌ಲೈಟ್-ಸಿಎಫ್‌ಎಲ್‌ಗಳಿಗೆಲ್ಲ ಪರ್ಯಾಯವಾಗಿ ಬಳಸಬಹುದಾದ ಬಿಳಿಯ ಎಲ್‌ಇಡಿಗಳೂ ಇದೀಗ ಮಾರುಕಟ್ಟೆಗೆ ಬಂದಿವೆ.

ಮಿಕ್ಕ ಬಣ್ಣಗಳ ಎಲ್‌ಇಡಿಗಳಿಗೆ ಹೋಲಿಸಿದರೆ  ಬಿಳಿಯ ಬಣ್ಣದವುಗಳಿಗೆ ಹೆಚ್ಚಿನ ಮಹತ್ವವಿದೆ. ಅವನ್ನು ಬೆಳಕಿನ ಮೂಲಗಳಾಗಿ ಬಳಸಬಹುದಾದ ಸಾಧ್ಯತೆಯೇ ಈ ಮಹತ್ವಕ್ಕೆ ಕಾರಣ. ಅದೂ ಸರಿಯೇ ಅನ್ನಿ, ಮನೆಯನ್ನು ಬೆಳಗುವ ದೀಪ ಬಿಳಿಯ ಬಣ್ಣದ್ದಾಗಿರದೆ ಕೆಂಪನೆಯದೋ ಹಸಿರು ಬಣ್ಣದ್ದೋ ಆಗಿರಲು ಸಾಧ್ಯವೆ?

ಇರಲಿ, ವಿಷಯ ಅದಲ್ಲ. ಹಿಂದಿನಿಂದಲೇ ನಮಗೆ ಪರಿಚಿತವಾಗಿರುವ ಕೆಂಪು-ಹಸಿರು ಎಲ್‌ಇಡಿಗಳಿಗೋ ಇದೀಗ ಮಾರುಕಟ್ಟೆಯಲ್ಲಿ ವಿಜೃಂಭಿಸುತ್ತಿರುವ ಬಿಳಿ ಎಲ್‌ಇಡಿಗಳಿಗೋ ದೊರೆಯದ ನೊಬೆಲ್ ನೀಲಿಯ ಎಲ್‌ಇಡಿಗಳಿಗೆ ದೊರೆಯಲು ಕಾರಣವೇನು?

ಶುಕ್ರವಾರ, ನವೆಂಬರ್ 7, 2014

ಜಿ. ವಿ. ನಿರ್ಮಲ ಹೇಳುತ್ತಾರೆ... "ವಿಷಯಗಳನ್ನು ನೀರಸವಾಗಿ ಓದುಗರ ಮುಂದಿರಿಸಿದರೆ ಸಾಲದು"

ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗ ಶಾಲೆಯಲ್ಲಿ ವಿಜ್ಞಾನಿಯಾಗಿ ಸೇವೆಸಲ್ಲಿಸಿ ನಿವೃತ್ತರಾಗಿರುವ ಶ್ರೀಮತಿ ಜಿ. ವಿ. ನಿರ್ಮಲ ವಿಜ್ಞಾನ ಹಾಗೂ ತಂತ್ರಜ್ಞಾನ ವಿಷಯಗಳ ಕುರಿತು ಕನ್ನಡದಲ್ಲಿ ಬರೆಯುತ್ತಿರುವ ಲೇಖಕಿಯರಲ್ಲೊಬ್ಬರು. ಮೈಸೂರು ವಿವಿಯಿಂದ ಭೌತವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಿರ್ಮಲರ ಲೇಖನಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 'ಕಂಪ್ಯೂಟರ್ ಪದವಿವರಣ ಕೋಶ'ದ ತಯಾರಿಕೆಯಲ್ಲಿ ಸಹಸಂಪಾದಕಿಯಾಗಿ, 'ಇತಿಹಾಸದಲ್ಲಿ ವಿಜ್ಞಾನ' ಮಾಲಿಕೆಯ ಅನುವಾದಕರಲ್ಲೊಬ್ಬರಾಗಿ, 'ವಿಜ್ಞಾನ ಸಿರಿ' ಸಂಕಲನದ ಸಂಪಾದಕರಲ್ಲೊಬ್ಬರಾಗಿ ಕೆಲಸಮಾಡಿದ್ದಾರೆ. 'ಮಾಹಿತಿ ಸಂಪತ್ತು ಡಿಜಿಟಲ್ ಜಗತ್ತು' ಕೃತಿಯ ಲೇಖಕರು. 'ಅದ್ಭುತ ಯಂತ್ರ ಗಣಕ', 'ಗಣಕ ಲೋಕದೊಳಗೆ ಒಂದು ಪಯಣ' ಮುಂತಾದ ಕೃತಿಗಳ ಸಹಲೇಖಕರು. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ..  
ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ಮೈಸೂರು ವಿಶ್ವವಿದ್ಯಾಲಯದಿಂದ ಭೌತ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ನಂತರ ಕೆಲವು ವರ್ಷ ಅಧ್ಯಾಪಕಿಯಾಗಿಯೂ, ಆನಂತರ ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗ ಶಾಲೆಯಲ್ಲಿ ವಿಜ್ಞಾನಿಯಾಗಿಯೂ ಸೇವೆ ಸಲ್ಲಿಸಿದೆ. ನಮ್ಮ ತಂದೆ ದಿವಂಗತ ಡಾ.ಜಿ.ವರದರಾಜರಾವ್‌ರವರು ದಾಸ ಸಾಹಿತ್ಯದಲ್ಲಿ ವಿದ್ವಾಂಸರು ಹಾಗೂ ಸಾಹಿತಿಗಳು. ಆದ್ದರಿಂದ ಮನೆಯಲ್ಲಿ ಸಾಹಿತ್ಯಿಕ ವಾತಾವರಣವಿತ್ತು. ಕಾಲೇಜು ಪತ್ರಿಕೆಗಳಲ್ಲಿ ಬರೆಯುತ್ತಿದ್ದೆ. ನನ್ನ ವೃತ್ತಿ ಜೀವನದುದ್ದಕ್ಕೂ ವೈಜ್ಞಾನಿಕ ವಿಷಯಗಳನ್ನು ತಿಳಿದುಕೊಳ್ಳುವ ಅನೇಕ ಸಂದರ್ಭಗಳು ಮತ್ತು ಅವಕಾಶಗಳಿದ್ದವು. ವಿಶೇಷವಾಗಿ ರಾ.ವೈ.ಪ್ರ ಕನ್ನಡ ಸಂಘದಿಂದ ಪ್ರಕಟವಾಗುವ 'ಕಣಾದ' ವಿಜ್ಞಾನ ಪತ್ರಿಕೆ ವಿಜ್ಞಾನ ಲೇಖನಗಳನ್ನು ಬರೆಯಬೇಕೆಂಬ ಆಸೆಯನ್ನು ನನ್ನಲ್ಲಿ ಜಾಗೃತಗೊಳಿಸಿತು.

ಸೋಮವಾರ, ನವೆಂಬರ್ 3, 2014

ಡ್ರೋನ್ ಡೆಲಿವರಿ!

ಟಿ. ಜಿ. ಶ್ರೀನಿಧಿ

ಈಚೆಗೆ ಒಂದೆರಡು ವರ್ಷಗಳಿಂದ 'ಡ್ರೋನ್' ಎಂಬ ಹೆಸರು ಸಾಕಷ್ಟು ಸುದ್ದಿಮಾಡುತ್ತಿದೆ. ಪಾಕಿಸ್ತಾನದಲ್ಲೋ ಅಫಘಾನಿಸ್ಥಾನದಲ್ಲೋ ಭಯೋತ್ಪಾದಕರ ಅಡಗುದಾಣಗಳ ಮೇಲೆ ಡ್ರೋನ್ ದಾಳಿ ಆಯಿತಂತೆ ಎನ್ನುವಂತಹ ಸುದ್ದಿಗಳನ್ನು ನಾವು ಆಗಿಂದಾಗ್ಗೆ ನೋಡುತ್ತಿರುತ್ತೇವೆ.

ಚಾಲಕರ ಅಗತ್ಯವಿಲ್ಲದ, ದೂರದಿಂದಲೇ ನಿಯಂತ್ರಿಸಬಹುದಾದ ಈ ಸಣ್ಣ ವಿಮಾನಗಳು ಮಿಲಿಟರಿ ಕ್ಷೇತ್ರದಲ್ಲಿ ಸಾಕಷ್ಟು ಸಮಯದಿಂದ ಬಳಕೆಯಲ್ಲಿವೆ.  ಆಧುನಿಕ ಯುದ್ಧವಿಮಾನಗಳಲ್ಲಿರುವ ಬಹುತೇಕ ಸೌಲಭ್ಯಗಳು ಈ ಡ್ರೋನ್‌ಗಳಲ್ಲೂ ಇವೆಯಂತೆ.

ಯುದ್ಧರಂಗದಲ್ಲಿ, ಸಂಶೋಧನಾ ಕ್ಷೇತ್ರದಲ್ಲೆಲ್ಲ ಕೆಲಸ ಮಾಡಿರುವ ಡ್ರೋನ್‌ಗಳು ಇದೀಗ ನಮ್ಮ ಮನೆಗಳತ್ತ ಹೊರಡಲು ತಯಾರಾಗುತ್ತಿವೆ ಎನ್ನುವುದು ಇತ್ತೀಚಿನ ಸುದ್ದಿ. ಹಾಗೆಂದ ತಕ್ಷಣ ಗಾಬರಿಯಾಗಬೇಕಾದ ಅಗತ್ಯವೇನೂ ಇಲ್ಲ. ಡ್ರೋನ್‌ಗಳು ಬರುತ್ತಿರುವುದು ನಮ್ಮ ಮೇಲೆ ಬಾಂಬ್ ಹಾಕಲಿಕ್ಕಲ್ಲ, ಆನ್‌ಲೈನ್ ಶಾಪಿಂಗ್ ತಾಣದಲ್ಲಿ ನಾವು ಕೊಂಡ ವಸ್ತುಗಳನ್ನು ತಲುಪಿಸಲಿಕ್ಕೆ!

'ಥ್ರೀ ಇಡಿಯಟ್ಸ್' ಚಿತ್ರದಲ್ಲಿ ಅಮೀರ್ ಖಾನ್ ಹಾರಿಸುತ್ತಾನಲ್ಲ, ಅಂತಹವೇ ಹಾರುವ ಯಂತ್ರಗಳು ಇವು. ಆನ್‌ಲೈನ್ ಅಂಗಡಿಯಲ್ಲಿ ಕೊಂಡ ಮೊಬೈಲ್ ಫೋನ್ ಇರಲಿ, ಪಕ್ಕದ ರಸ್ತೆಯ ಅಂಗಡಿಯಿಂದ ಬರಬೇಕಿರುವ ಪಿಜ್ಜಾ ಇರಲಿ - ಅದನ್ನೆಲ್ಲ ಇವು ನೇರಾನೇರ ನಮ್ಮ ಕೈಗೇ ತಂದೊಪ್ಪಿಸಲಿವೆಯಂತೆ.

ಶನಿವಾರ, ನವೆಂಬರ್ 1, 2014

ಶಿಕ್ಷಣ ಮಿತ್ರ

'ಕಂಪ್ಯೂಟರ್ ಮತ್ತು ಕನ್ನಡ' ಕೃತಿಯ ಆನ್‌ಲೈನ್ ಆವೃತ್ತಿಯನ್ನು ಪ್ರಕಟಿಸುವ ಮೂಲಕ ಇಜ್ಞಾನ ಶಿಕ್ಷಣ ಮಿತ್ರ ಜಾಲತಾಣ ಇದೀಗ ನಿಮ್ಮ ಮುಂದೆ ಬಂದಿದೆ. ಓದಿ, ಪ್ರತಿಕ್ರಿಯೆ ನೀಡಿ, ನಿಮ್ಮ ಆಪ್ತರಿಗೂ ತಿಳಿಸಿ. ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

ಇಜ್ಞಾನ ಶಿಕ್ಷಣ ಮಿತ್ರ ಜಾಲತಾಣಕ್ಕೆ ಭೇಟಿನೀಡಲು ಇಲ್ಲಿ ಕ್ಲಿಕ್ ಮಾಡಿ

badge