ಮಂಗಳವಾರ, ಜುಲೈ 31, 2012

ಎಲ್ ನೋಡಿ ಕಾರ್ಡ್!

ಟಿ. ಜಿ. ಶ್ರೀನಿಧಿ

ಆಗತಾನೆ ಹುಟ್ಟಿದ ಮಗು ಜೊತೆಗಿನ ಆಸ್ಪತ್ರೆವಾಸ ಒಂದು ಅದ್ಭುತ ಅನುಭವ. ಊಟ-ನಿದ್ದೆ-ಓಡಾಟದ ಅಭ್ಯಾಸಗಳೆಲ್ಲ ದಿಢೀರನೆ ಬದಲಾಗಿ ನಮ್ಮ ಪ್ರತಿಯೊಂದು ಕೆಲಸವೂ ಪುಟ್ಟಮಗುವಿನ ಮೇಲೆ ಅವಲಂಬಿತವಾಗಲು ಶುರುವಾಗುವ ಸಮಯ ಅದು; ಎಂಟುಗಂಟೆ ನಿದ್ದೆಯ ನಂತರವೂ ಆಫೀಸಿನಲ್ಲಿ ತೂಕಡಿಸುತ್ತಿದ್ದವನು ಮೂರ್ನಾಲ್ಕು ಗಂಟೆಯ ಅರ್ಧಂಬರ್ಧ ನಿದ್ದೆ ಮಾಡಿಯೂ ಖುಷಿಯಾಗಿರುವ ಅಪರೂಪದ ಸನ್ನಿವೇಶ!

ಈ ಸಮಯದಲ್ಲಿ ಕ್ಯಾಮೆರಾಗಳಿಗೂ ಬಿಡುವಿಲ್ಲದ ಕೆಲಸ. ಪುಟ್ಟಮಕ್ಕಳ ಫೋಟೋ ತೆಗೆಯಬಹುದೋ ಇಲ್ಲವೋ ಎಂಬ ಹಿರಿಯರ ಜಿಜ್ಞಾಸೆಯ ನಡುವೆಯೇ ಮಗುವಿನ ಸಾಲುಸಾಲು ಛಾಯಾಚಿತ್ರಗಳು ಕ್ಯಾಮೆರಾಗಳಲ್ಲಿ ದಾಖಲಾಗಲು ಶುರುವಾಗುತ್ತವೆ. ಅತ್ತೆಯ ಮೊಬೈಲು, ತಾತನ ಪಾಯಿಂಟ್ ಆಂಡ್ ಶೂಟ್ ಕ್ಯಾಮೆರಾ, ಅಪ್ಪನ ಡಿಎಸ್‌ಎಲ್‌ಆರ್ - ಹೀಗೆ ಪಾಪು ಫೋಟೋಗಾಗಿ ಸಾಲುಗಟ್ಟಿ ನಿಲ್ಲುವ ಕ್ಯಾಮೆರಾಗಳು ಒಂದೆರಡಲ್ಲ.

ಹೀಗೆ ತೆಗೆದ ಚಿತ್ರಗಳನ್ನು ಕ್ಯಾಮೆರಾಗಳು ಉಳಿಸಿಡುವುದು ಮೆಮೊರಿ ಕಾರ್ಡಿನಲ್ಲಿ.

ಬುಧವಾರ, ಜುಲೈ 25, 2012

ಮತ್ತೆ ಮತ್ತೆ ಕ್ಲೌಡ್

ಟಿ. ಜಿ. ಶ್ರೀನಿಧಿ

ಮೈಕ್ರೋಸಾಫ್ಟ್ ಆಫೀಸ್ ಯಾರಿಗೆ ತಾನೇ ಗೊತ್ತಿಲ್ಲ! ವಿಂಡೋಸ್ ಕಾರ್ಯಾಚರಣ ವ್ಯವಸ್ಥೆ ಬಳಸುವವರೆಲ್ಲರೂ ಅದನ್ನು ಕನಿಷ್ಠ ಒಮ್ಮೆಯಾದರೂ ಬಳಸಿಯೇ ಇರುತ್ತಾರೆ ಎಂದರೂ ತಪ್ಪಾಗಲಾರದೇನೋ. ಇಪ್ಪತ್ತೊಂದು ವರ್ಷಗಳ ಹಿಂದೆ ಮೊದಲ ಬಾರಿಗೆ ಪರಿಚಯವಾದ, ಈಗಾಗಲೇ ಹಲವಾರು ಆವೃತ್ತಿಗಳನ್ನು ಕಂಡಿರುವ ಈ ತಂತ್ರಾಂಶ ಸಂಗ್ರಹದ ಜನಪ್ರಿಯತೆಯೇ ಅಂಥದ್ದು. ಈಗ ಪ್ರಪಂಚದಾದ್ಯಂತ ಸುಮಾರು ನೂರು ಕೋಟಿ ಜನರು ಮೈಕ್ರೋಸಾಫ್ಟ್ ಆಫೀಸ್ ಬಳಸುತ್ತಿದ್ದಾರಂತೆ.

ಇರಲಿ, ವಿಷಯ ಅದಲ್ಲ. ಮೊನ್ನೆ ಜುಲೈ ೧೬ರಂದು ಆಫೀಸ್ ತಂತ್ರಾಂಶ ಸಂಗ್ರಹದ ಹೊಸ ಆವೃತ್ತಿಯ ಘೋಷಣೆಯಾಯಿತು.

ಈ ಹೊಸ ಆವೃತ್ತಿಯನ್ನು ಟಚ್ ಸ್ಕ್ರೀನ್ ಇರುವ ಉಪಕರಣಗಳಲ್ಲೂ ಸುಲಭವಾಗಿ ಬಳಸುವಂತೆ ರೂಪಿಸಲಾಗಿದೆಯಂತೆ. ಮೈಕ್ರೋಸಾಫ್ಟ್ ಸಂಸ್ಥೆ ಇತ್ತೀಚೆಗಷ್ಟೆ 'ಸರ್ಫೇಸ್' ಹೆಸರಿನ ಹೊಸ ಟ್ಯಾಬ್ಲೆಟ್ ಕಂಪ್ಯೂಟರನ್ನು ಪರಿಚಯಿಸಿರುವುದರ, ಹಾಗೂ ವಿಂಡೋಸ್ ೮ ಕಾರ್ಯಾಚರಣ ವ್ಯವಸ್ಥೆಯನ್ನೂ ಟಚ್ ಸ್ನೇಹಿಯಾಗಿಸಿರುವ ಹಿನ್ನೆಲೆಯಲ್ಲಿ ಆಫೀಸ್ ತಂತ್ರಾಂಶ ಸಂಗ್ರಹದ ಈ ಹೊಸ ಅವತಾರ ಸಾಕಷ್ಟು ಕುತೂಹಲ ಮೂಡಿಸಿದೆ.

ಈ ಆವೃತ್ತಿಯ ಇನ್ನೊಂದು ಗಮನಾರ್ಹ ಅಂಶವೆಂದರೆ ಯಾವುದೇ ಆಫೀಸ್ ತಂತ್ರಾಂಶ ಬಳಸಿ ಸೃಷ್ಟಿಸಿದ ಕಡತವನ್ನು ತಕ್ಷಣವೇ ಕ್ಲೌಡ್‌ನಲ್ಲಿ ಉಳಿಸಿಡಲಾಗುತ್ತದಂತೆ. ಆಫೀಸಿನ ಲ್ಯಾಪ್‌ಟಾಪ್ ಬಳಸಿ ಸಿದ್ಧಪಡಿಸಿದ ವರ್ಡ್ ಡಾಕ್ಯುಮೆಂಟ್, ಮನೆಯ ಡೆಸ್ಕ್‌ಟಾಪ್ ಮುಂದೆ ಕುಳಿತಿದ್ದಾಗ ಸೃಷ್ಟಿಸಿದ ಎಕ್ಸೆಲ್ ಸ್ಪ್ರೆಡ್‌ಶೀಟ್ - ಈ ಯಾವುದನ್ನೇ ಆದರೂ ನಮಗೆ ಬೇಕಿದ್ದಾಗ ಬೇಕಾದ ಕಡೆ ಪಡೆದುಕೊಳ್ಳಲು ಈ ಹೊಸ ಸೌಲಭ್ಯ ಅನುವುಮಾಡಿಕೊಡಲಿದೆ.

ಇದನ್ನು ಸಾಧ್ಯವಾಗಿಸಿರುವ ಪರಿಕಲ್ಪನೆಯ ಹೆಸರೇ ಕ್ಲೌಡ್ ಕಂಪ್ಯೂಟಿಂಗ್.

ಮಂಗಳವಾರ, ಜುಲೈ 17, 2012

ಬ್ರೌಸರ್ ಬೈಟ್ಸ್

ಟಿ. ಜಿ. ಶ್ರೀನಿಧಿ

ವಿಶ್ವವ್ಯಾಪಿ ಜಾಲದಲ್ಲಿರುವ ಜಾಲತಾಣಗಳನ್ನು ಕಂಪ್ಯೂಟರಿನಲ್ಲಿ ವೀಕ್ಷಿಸಲು ಬ್ರೌಸರ್ ಅಥವಾ ವೀಕ್ಷಕ ತಂತ್ರಾಂಶಗಳು ಬಳಕೆಯಾಗುತ್ತವೆ. ವಿಶ್ವವ್ಯಾಪಿ ಜಾಲದಲ್ಲಿರುವ ಮಾಹಿತಿಯನ್ನು ಪಡೆದುಕೊಳ್ಳಲು ಈ ತಂತ್ರಾಂಶ ಅತ್ಯಗತ್ಯ. ವಿಶ್ವದ ಯಾವುದೋ ಮೂಲೆಯ ಸರ್ವರ್‌ನಲ್ಲಿ ಕುಳಿತಿರಬಹುದಾದ ಜಾಲತಾಣದ ಪುಟಗಳನ್ನು ನಮ್ಮ ಕಂಪ್ಯೂಟರಿನಲ್ಲಿ ವೀಕ್ಷಿಸಲು ಬ್ರೌಸರ್ ತಂತ್ರಾಂಶ ಅನುವುಮಾಡಿಕೊಡುತ್ತದೆ.

೧೯೯೩ರಲ್ಲಿ ವಿಶ್ವದ ಮೊತ್ತಮೊದಲ ಬ್ರೌಸರ್ 'ಮೊಸಾಯಿಕ್' ಸಿದ್ಧವಾದ ನಂತರ ಅನೇಕ ಬ್ರೌಸರ್ ತಂತ್ರಾಂಶಗಳು ಬಂದುಹೋಗಿವೆ. ಈಗ ಪ್ರಚಲಿತದಲ್ಲಿರುವ ಬ್ರೌಸರ್‌ಗಳಲ್ಲಿ ಮೊಜಿಲ್ಲಾ ಫೈರ್‌ಫಾಕ್ಸ್, ಇಂಟರ್‌ನೆಟ್ ಎಕ್ಸ್‌ಪ್ಲೋರರ್, ಗೂಗಲ್ ಕ್ರೋಮ್ ಮೊದಲಾದವು ಮುಖ್ಯವಾದವು. ಕೆಲ ಬ್ರೌಸರ್‌ಗಳ ಕನ್ನಡ ಆವೃತ್ತಿಯೂ ಇದೆ.

ವಿಶ್ವವ್ಯಾಪಿ ಜಾಲದಲ್ಲಿರುವ ಮಾಹಿತಿಯನ್ನು ನೋಡುವುದು ಮಾತ್ರವಲ್ಲ; ಆ ಮಾಹಿತಿಯನ್ನು ಉಳಿಸಿಕೊಳ್ಳುವುದು, ಮುದ್ರಿಸಿಕೊಳ್ಳುವುದು, ವಿವಿಧ ಪುಟಗಳ ನಡುವೆ ಹಿಂದೆಮುಂದೆ ಓಡಾಡುವುದು, ಅಚ್ಚುಮೆಚ್ಚಿನ ಪುಟಗಳ ವಿಳಾಸ ಸಂಗ್ರಹಿಸಿಟ್ಟುಕೊಳ್ಳುವುದು - ಇವೆಲ್ಲ ಸೌಲಭ್ಯಗಳೂ ಬ್ರೌಸರ್ ತಂತ್ರಾಂಶದಲ್ಲಿರುತ್ತವೆ.

ಮಂಗಳವಾರ, ಜುಲೈ 10, 2012

ಫೋಟೋ ಮೇಕಪ್ ಬಗ್ಗೆ ಇನ್ನಷ್ಟು...

ಟಿ. ಜಿ. ಶ್ರೀನಿಧಿ

ಪ್ರವಾಸದ ಜೋಶ್‌ನಲ್ಲಿ ಕ್ಲಿಕ್ಕಿಸಿದ ಛಾಯಾಚಿತ್ರಗಳು ಮನೆಗೆ ಮರಳಿದ ಮೇಲೆ ಮೆಮೊರಿ ಕಾರ್ಡಿನಲ್ಲೋ ಹಾರ್ಡ್ ಡಿಸ್ಕಿನ ಮೂಲೆಯಲ್ಲೋ ಸುಮ್ಮನೆ ಉಳಿದುಬಿಡುವುದೇ ಹೆಚ್ಚು. ಕೆಲವೊಮ್ಮೆ ಸೋಮಾರಿತನದಿಂದ ಹೀಗಾದರೆ ಇನ್ನು ಕೆಲ ಸಾರಿ ಚಿತ್ರಗಳನ್ನು ಸೂಕ್ತವಾಗಿ ಬದಲಿಸಿಕೊಳ್ಳುವ ವಿಧಾನ ಕುರಿತ ಗೊಂದಲವೂ ಇದಕ್ಕೆ ಕಾರಣವಾಗಬಹುದು. ಆ ಗೊಂದಲವನ್ನು ಕೊಂಚಮಟ್ಟಿಗೆ ಹೋಗಲಾಡಿಸುವ ನಿಟ್ಟಿನಲ್ಲಿ ಕೆಲ ಸುಲಭ ಉಪಾಯಗಳನ್ನು ಕಳೆದವಾರದ ವಿಜ್ಞಾಪನೆ ಪರಿಚಯಿಸಿತು. ಕಳೆದ ವಾರದ ಲೇಖನದ ಮುಂದುವರಿಕೆಯಾಗಿ ಡಿಜಿಟಲ್ ಛಾಯಾಚಿತ್ರಗಳನ್ನು ನಿರ್ವಹಿಸುವ ಕುರಿತು ಇನ್ನಷ್ಟು ಮಾಹಿತಿ ಈ ಲೇಖನದಲ್ಲಿದೆ.

ಶುಕ್ರವಾರ, ಜುಲೈ 6, 2012

ಟೊರೆಂಟ್ ಪ್ರಪಂಚ

ಯಶಸ್ವಿನಿ, ಟಿ. ಜಿ. ಶ್ರೀನಿಧಿ

ಇತ್ತೀಚಿನ ಸೂಪರ್‌ಹಿಟ್ ಸಿನಿಮಾ ನೋಡಬೇಕು ಅಂತಲೋ ಮೊನ್ನೆಮೊನ್ನೆಯಷ್ಟೇ ಬಿಡುಗಡೆಯಾದ ತಂತ್ರಾಂಶ ಬಳಸಬೇಕು ಅಂತಲೋ ಹೇಳಿದಾಗ ಟೊರೆಂಟ್ಸ್‌ನಲ್ಲಿ ಉಚಿತವಾಗಿ ಸಿಗುತ್ತೆ ನೋಡಿ ಎನ್ನುವ ಸಲಹೆ ನಿಮಗೆ ದೊರೆತಿರಬಹುದು. ಏನಿದು ಟೊರೆಂಟ್ ಅಂದರೆ?

ಬಿಟ್‌ಟೊರೆಂಟ್ ಎನ್ನುವುದು ಅಂತರಜಾಲದಲ್ಲಿ ಕಡತಗಳನ್ನು ಹಂಚಿಕೊಳ್ಳಲಿಕ್ಕೆಂದೇ ರೂಪಿಸಲಾಗಿರುವ ಶಿಷ್ಟಾಚಾರ (ಪ್ರೋಟೋಕಾಲ್). ನಮಗೆ ಬೇಕಾದ ಕಡತವನ್ನು ಡೌನ್‌ಲೋಡ್ ಮಾಡಿಕೊಳ್ಳಲು ಈ ಶಿಷ್ಟಾಚಾರದ ಪ್ರಕಾರ ಯಾವುದೇ ಒಂದು ಸರ್ವರ್ ಅನ್ನು ಅವಲಂಬಿಸುವ ಅಗತ್ಯವಿಲ್ಲ; ಹಾಗಾಗಿ ದೊಡ್ಡಗಾತ್ರದ ಕಡತಗಳನ್ನು ಕ್ಷಿಪ್ರವಾಗಿ ಪಡೆದುಕೊಳ್ಳಲು ಈ ಶಿಷ್ಟಾಚಾರ ಬಹಳ ಉಪಯುಕ್ತ.

ವ್ಯಕ್ತಿಯಿಂದ ವ್ಯಕ್ತಿಗೆ (ಪರ್ಸನ್ ಟು ಪರ್ಸನ್, ಪಿ೨ಪಿ) ನಡೆಯುವ ಮಾಹಿತಿ ವಿನಿಮಯದಲ್ಲಿ ಇದೊಂದು ಬಹುಮುಖ್ಯ ಮಾಧ್ಯಮವೆಂದೇ ಹೇಳಬೇಕು. ಜನವರಿ ೨೦೧೨ರ ಅಂಕಿಅಂಶಗಳ ಪ್ರಕಾರ ಸುಮಾರು ಹದಿನೈದು ಕೋಟಿ ಜನ ಕಂಪ್ಯೂಟರ್ ಬಳಕೆದಾರರು ಬಿಟ್‌ಟೊರೆಂಟ್ ಶಿಷ್ಟಾಚಾರವನ್ನು ಬಳಸುತ್ತಿದ್ದಾರಂತೆ!

ಮಂಗಳವಾರ, ಜುಲೈ 3, 2012

ಫೋಟೋ ತೆಗೆದಾಯ್ತು, ಈಗ ಮೇಕಪ್ ಮಾಡುವ ಸಮಯ!

ಟಿ. ಜಿ. ಶ್ರೀನಿಧಿ

ಎಲ್ಲರ ಕೈಗೂ, ಎಲ್ಲ ಮೊಬೈಲಿಗೂ ಒಂದೊಂದು ಡಿಜಿಟಲ್ ಕ್ಯಾಮೆರಾ ಸೇರಿಕೊಂಡಮೇಲೆ ಫೋಟೋ ಕ್ಲಿಕ್ಕಿಸುವುದು ಬಲು ಸುಲಭದ ಕೆಲಸವಾಗಿಬಿಟ್ಟಿದೆ. ಮೆಮೊರಿ ಕಾರ್ಡುಗಳಲ್ಲಿ ಗಿಗಾಬೈಟ್‌ಗಟ್ಟಲೆ ಜಾಗ ನಮ್ಮ ಒಡೆತನದಲ್ಲೇ ಇರುವಾಗ ರೀಲಿದ್ದಷ್ಟೇ ಫೋಟೋ ತೆಗೆಯುವ ಅನಿವಾರ್ಯತೆಯೂ ಇಲ್ಲ. ಫೋಟೋ ತೆಗೆಯುವ ಉತ್ಸಾಹವೊಂದಿದ್ದರೆ ಸಾಕು, ಬ್ಯಾಟರಿಯಲ್ಲಿ ಜೀವ - ಕಾರ್ಡಿನಲ್ಲಿ ಜಾಗ ಇರುವ ತನಕ ನಿರಾತಂಕವಾಗಿ ಕ್ಲಿಕ್ಕಿಸುತ್ತಲೇ ಇರಬಹುದು. ಪ್ರವಾಸಕ್ಕೇನಾದರೂ ಹೋದರಂತೂ ಕ್ಯಾಮೆರಾಗೆ ಬಿಡುವೇ ಇಲ್ಲದಷ್ಟು ಕೆಲಸವಿರುತ್ತದೆ.

ಅಂತಹುದೊಂದು ಪ್ರವಾಸ ಮುಗಿಸಿಕೊಂಡು ಬಂದಮೇಲೆ ನೋಡಿದರೆ ನೂರಾರು ಚಿತ್ರಗಳು ಮೆಮೊರಿ ಕಾರ್ಡಿನಲ್ಲಿ ಬೆಚ್ಚಗೆ ಕುಳಿತಿರುತ್ತವೆ. ಅವನ್ನೆಲ್ಲ ಕಂಪ್ಯೂಟರಿಗೆ ವರ್ಗಾಯಿಸಿಕೊಂಡು ಮನೆಮಂದಿಯೆಲ್ಲ ನೋಡಲು ಕುಳಿತೆವೆಂದರೆ ತಕ್ಷಣ ಶುರುವಾಗುತ್ತದೆ ವಿಮರ್ಶೆಯ ಧಾರೆ - "ಅಯ್ಯೋ ಈ ಚಿತ್ರ ಯಾಕಿಷ್ಟು ಡಾರ್ಕ್ ಆಗಿ ಬಂದಿದೆ?", "ಗಂಡ ಹೆಂಡತಿ ತೆಗೆಸಿಕೊಂಡಿರುವ ಚಿತ್ರದಲ್ಲಿ ಇದ್ಯಾರೋ ಇದು ಅಂಕಲ್ ಬಂದುಬಿಟ್ಟಿದ್ದಾರೆ!", "ಈ ಕಾರಿನ ಚಿತ್ರ ಅದ್ಯಾಕೆ ಸೊಟ್ಟಗಿದೆ?" "ನಿನ್ನ ಕಣ್ಣು ಯಾಕೆ ಹೀಗೆ ಕೆಂಪು ಕೆಂಪಾಗಿ ಕಾಣ್ತಿದೆ?"... ಪ್ರಶ್ನೆಗಳಿಗೆ, ಉದ್ಗಾರಗಳಿಗೆ ಕೊನೆಯೇ ಇಲ್ಲ!

ಡಿಜಿಟಲ್ ಛಾಯಾಚಿತ್ರಗಳಲ್ಲಿ ಇರಬಹುದಾದ ಇವೆಲ್ಲ ಕೊರತೆಗಳನ್ನು ಸರಿಪಡಿಸುವುದು ಫೋಟೋ ಕ್ಲಿಕ್ಕಿಸಿದಷ್ಟೇ ಸುಲಭ. ಇದಕ್ಕಾಗಿ ನಮ್ಮ ಕಂಪ್ಯೂಟರಿನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಬಹುದಾದ, ಸುಲಭವಾಗಿ ಬಳಸಬಹುದಾದ ಅನೇಕ ತಂತ್ರಾಂಶಗಳಿವೆ.

ಇಂತಹ ತಂತ್ರಾಂಶಗಳ ಕಾರ್ಯವ್ಯಾಪ್ತಿ ಬಹಳ ದೊಡ್ಡದು. ಡಿಜಿಟಲ್ ಛಾಯಾಚಿತ್ರಗಳಿಗೆ ಸಾಮಾನ್ಯವಾಗಿ ಬೇಕಾಗುವ ಉಪಚಾರ, ಹಾಗೂ ಅದರಲ್ಲಿ ತಂತ್ರಾಂಶಗಳ ಪಾತ್ರದ ಕುರಿತ ಸಣ್ಣದೊಂದು ಪರಿಚಯ ಇಲ್ಲಿದೆ.

ಮಂಗಳವಾರ, ಜೂನ್ 26, 2012

ವೆಬ್ ಯುದ್ಧಕ್ಕೆ ಫ್ಲೇಮ್ ಕಿಚ್ಚು

ಟಿ. ಜಿ. ಶ್ರೀನಿಧಿ



ಇನ್ನೊಂದು ಮಹಾಯುದ್ಧವೇನಾದರೂ ಶುರುವಾದರೆ ಹೇಗಿರಬಹುದು? "ಅಣುಬಾಂಬುಗಳು ಸಿಡಿದು ಭೂಮಿಯೇ ನರಕವಾಗಬಹುದು, ಅಳಿವು-ಉಳಿವಿನ ಮಧ್ಯೆ ನಾವು ಸುದೀರ್ಘ ಸೆಣಸಾಟ ನಡೆಸಬೇಕಾಗಬಹುದು" ಎನ್ನುತ್ತೀರಾ?

ಇದು ಹಳೆಯ ಕಲ್ಪನೆ ಎನ್ನುತ್ತಾರೆ ತಜ್ಞರು. ಅವರ ಮಾತನ್ನು ಕೇಳುವುದಾದರೆ ಈಗ ವಿಶ್ವಸಮರದ ಪರಿಕಲ್ಪನೆಯೇ ಬದಲಾಗಿಬಿಟ್ಟಿದೆ.

ಮಂಗಳವಾರ, ಜೂನ್ 19, 2012

ಅಲನ್ ಟ್ಯೂರಿಂಗ್ ನೆನಪಿನಲ್ಲಿ...

ಟಿ. ಜಿ. ಶ್ರೀನಿಧಿ
ಕಂಪ್ಯೂಟರ್ ಕಂಡುಹಿಡಿದದ್ದು ಇಂಥವರೇ ಎಂದು ಹೇಳಲಾಗುವುದಿಲ್ಲ ನಿಜ. ಆದರೆ ಕಂಪ್ಯೂಟರ್ ತಂತ್ರಜ್ಞಾನದ ಬೆಳೆವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ ಅನೇಕರು ಇತಿಹಾಸದಲ್ಲಿ ಕಾಣಸಿಗುತ್ತಾರೆ. ಅಂತಹ ಮೇಧಾವಿಗಳಲ್ಲೊಬ್ಬರು ಅಲನ್ ಟ್ಯೂರಿಂಗ್. ಮುಂದಿನ ಶನಿವಾರ (ಜೂನ್ ೨೩) ಅವರ ನೂರನೇ ಜನ್ಮದಿನ. ಈ ವಿಶೇಷ ಲೇಖನ, ಆ ಮಹನೀಯನ ನೆನಪಿಗೆ ಸಮರ್ಪಿತ.
ಎರಡನೇ ವಿಶ್ವಸಮರ ಎಂದಾಕ್ಷಣ ನಮಗೆ ಅದರಿಂದಾದ ಅನಾಹುತಗಳೇ ನೆನಪಿಗೆ ಬರುತ್ತವಲ್ಲ, ಆ ಮಹಾಯುದ್ಧ ಈಗ ನಮ್ಮ ಬದುಕನ್ನೆಲ್ಲ ಆವರಿಸಿಕೊಂಡಿರುವ ಕಂಪ್ಯೂಟರ್ ತಂತ್ರಜ್ಞಾನದ ಬೆಳೆವಣಿಗೆಗೂ ಕಾರಣವಾಯಿತು. ಯುದ್ಧದ ಸಂದರ್ಭದಲ್ಲಿ ಬೆಳೆವಣಿಗೆ ಕಂಡಿತು ಎಂದಾಗಲೇ ಆ ಬೆಳೆವಣಿಗೆ ಲೋಕಕಲ್ಯಾಣಾರ್ಥವಾಗಿಯೇನೂ ಆಗಿರಲಾರದು ಎಂಬ ಅಂಶ ನಮ್ಮ ಮನಸ್ಸಿಗೆ ಬರುತ್ತದೆ. ಅದು ನಿಜವೂ ಹೌದು. ಆ ಸಮಯದಲ್ಲಿ ಬ್ರಿಟನ್ನಿನಲ್ಲಿ ಆದ ಬೆಳೆವಣಿಗೆಯೆಲ್ಲ ಜರ್ಮನಿಯ ಯುದ್ಧತಂತ್ರವನ್ನು ಅರಿಯಲು - ಮುರಿಯಲೇ ಆಯಿತು ಎಂದರೂ ತಪ್ಪಾಗಲಾರದು.

ಜರ್ಮನಿಯ ಸೇನೆ ರಹಸ್ಯವಾಗಿ ಕಳುಹಿಸುತ್ತಿದ್ದ ಸಂದೇಶಗಳು ಅಮೆರಿಕಾ-ಬ್ರಿಟನ್ ನೇತೃತ್ವದ ಮಿತ್ರರಾಷ್ಟ್ರಗಳ ಕೈಗೆ ಸಿಕ್ಕರೂ ಅವನ್ನು ಅರ್ಥಮಾಡಿಕೊಳ್ಳಲು ಪರದಾಡಬೇಕಾಗಿತ್ತು. ಹಾಗೆಯೇ ಮಿತ್ರರಾಷ್ಟ್ರಗಳ ಸೇನೆಯ ಸಂದೇಶಗಳು ಜರ್ಮನ್ನರ ಕೈಗೆ ಸಿಗದಂತೆಯೂ ಎಚ್ಚರವಹಿಸಬೇಕಿತ್ತು. ಈ ಉದ್ದೇಶಕ್ಕಾಗಿ ಕಟ್ಟಲಾಗುತ್ತಿದ್ದ ತಜ್ಞರ ತಂಡಕ್ಕೆ ಸೇರಿಕೊಂಡವರಲ್ಲಿ ಅಲನ್ ಟ್ಯೂರಿಂಗ್ ಒಬ್ಬರು.

ಮಂಗಳವಾರ, ಜೂನ್ 12, 2012

ಕಂಪ್ಯೂಟರ್ ಪರಿಣತ ಎನಿಸಿಕೊಳ್ಳಬೇಕೆ? ಸಾಫ್ಟ್‌ವೇರ್ ಪರಿಣತಿಯಷ್ಟೆ ಸಾಲದು!

ಟಿ. ಜಿ. ಶ್ರೀನಿಧಿ

ಕಂಪ್ಯೂಟರ್ ಬಳಕೆಯಲ್ಲಿ ಪರಿಣತಿ ಗಳಿಸಿಕೊಳ್ಳುವುದಷ್ಟೆ ಅಲ್ಲ, ಕಂಪ್ಯೂಟರ್ ಬಳಕೆಯ ಸರಿಯಾದ ವಿಧಾನ ತಿಳಿದುಕೊಳ್ಳುವುದು ಕೂಡ ಬಹಳ ಮುಖ್ಯ. ಕಂಪ್ಯೂಟರ್ ಬಳಸುವ ಸರಿಯಾದ ವಿಧಾನ ಎಂದಮಾತ್ರಕ್ಕೆ ಅದು ಕಂಪ್ಯೂಟರ್ ಬಳಸಿ ಮಾಡುವ ಕೆಲಸಗಳಿಗಷ್ಟೆ ಸಂಬಂಧಪಟ್ಟ ವಿಷಯವಲ್ಲ; ಕಂಪ್ಯೂಟರ್ ಬಳಸುವಾಗ ನಾವು ಕುಳಿತಿರುವ ಭಂಗಿ, ಬಳಸುವ ಪೀಠೋಪಕರಣಗಳ ವಿನ್ಯಾಸವೂ ಅದರ ವ್ಯಾಪ್ತಿಗೆ ಬರುತ್ತವೆ.

ಅಸಮರ್ಪಕ ಭಂಗಿ ಅಥವಾ ಹೊಂದಿಕೊಳ್ಳದ ಪೀಠೋಪಕರಣದ ಬಳಕೆ ನಮ್ಮ ಆರೋಗ್ಯದ ಮೇಲೆ ನೇರ ಪರಿಣಾಮ ಬೀರಬಲ್ಲದು. ಅಂತಹ ದುಷ್ಪರಿಣಾಮಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಪಾಲಿಸಬಹುದಾದ ಕೆಲ ನಿಯಮಗಳು ಇಲ್ಲಿವೆ.

ಮಂಗಳವಾರ, ಜೂನ್ 5, 2012

ಕ್ರೌಡ್‌ಫಂಡಿಂಗ್

ಟಿ. ಜಿ. ಶ್ರೀನಿಧಿ

"ನನ್ನ ಹತ್ತಿರ ಎಂತಹ ಬಿಸಿನೆಸ್ ಐಡಿಯಾ ಇದೆ ಗೊತ್ತಾ? ಇನ್‌ವೆಸ್ಟ್ ಮಾಡೋದಕ್ಕೆ ಯಾರಾದ್ರೂ ಸಿಕ್ಕಿದ್ರೆ ಅದರಿಂದ ಲಕ್ಷ ಲಕ್ಷ ದುಡಿಯಬಹುದು!" ಎಂದೆಲ್ಲ ಹೇಳುವವರನ್ನು ನೀವೂ ನೋಡಿರಬಹುದು. ಬಹಳಷ್ಟು ಸಾರಿ ಇವು ಬಂಡವಾಳವಿಲ್ಲದ ಬಡಾಯಿಗಳಾಗಿರುತ್ತವಾದರೂ ಕೆಲವೊಮ್ಮೆ ಒಳ್ಳೆಯ ಐಡಿಯಾಗಳು ಕೂಡ ಇನ್ವೆಸ್ಟ್‌ಮೆಂಟ್ ಸಮಸ್ಯೆಯಿಂದ ಬಳಲುತ್ತವೆ. ಬಂಡವಾಳದ ಕೊರತೆಯಿಂದ ಅದೆಷ್ಟು ಒಳ್ಳೆಯ ಐಡಿಯಾಗಳು ಅಪರಿಚಿತವಾಗಿಯೇ ಉಳಿದುಬಿಟ್ಟಿವೆಯೋ!

ಒಳ್ಳೆಯ ಬಿಸಿನೆಸ್ ರೂಪಿಸಿಕೊಳ್ಳಲು ಸಖತ್ತಾಗಿರುವ ಐಡಿಯಾ ಎಷ್ಟು ಮುಖ್ಯವೋ ಅದಕ್ಕೆ ಬೇಕಾದಷ್ಟು ಬಂಡವಾಳ ಹೂಡುವುದೂ ಅಷ್ಟೇ ಮುಖ್ಯ. ಆದರೆ ಐಡಿಯಾ ದೊಡ್ಡದಾದಂತೆ ಅದಕ್ಕೆ ಬೇಕಾದ ಬಂಡವಾಳದ ಪ್ರಮಾಣವೂ ದೊಡ್ಡದೇ ಆಗುತ್ತದೆ; ಅಲ್ಲೇ ಸಮಸ್ಯೆಯೂ ಶುರುವಾಗುತ್ತದೆ. ಬಿಸಿನೆಸ್‌ಗೆ ಬೇಕಾದ ಬಂಡವಾಳ ಹೊಂದಿಸಿಕೊಳ್ಳುವುದು ಬಹಳಷ್ಟು ಸಾರಿ ದೊಡ್ಡ ಸಮಸ್ಯೆಯೇ. ವ್ಯವಹಾರ ಲಾಭದಾಯಕವಾಗಬಹುದು ಎಂದು ಹೂಡಿಕೆದಾರರಿಗೆ ಅನಿಸದಿದ್ದರೆ ಬಂಡವಾಳ ಹುಟ್ಟುವುದೇ ಇಲ್ಲ. ತೀರಾ ಕ್ರಾಂತಿಕಾರಕ ಎನಿಸುವಂತಹ ಐಡಿಯಾಗಳು ಈ ಕಾರಣದಿಂದಾಗಿಯೇ ಹಲವು ಸಾರಿ ಬಂಡವಾಳಕ್ಕಾಗಿ ಪರದಾಡಬೇಕಾಗುತ್ತದೆ.

ಅಂತರಜಾಲದ ಲೋಕದಲ್ಲಿ ಇದಕ್ಕೊಂದು ಯಶಸ್ವಿ ಪರ್ಯಾಯ ಇದೆ. ಅದು ಬಹಳ ಸರಳವೂ ಹೌದು - ಒಬ್ಬನೇ ಹೂಡಿಕೆದಾರನಿಂದ ಒಂದು ಲಕ್ಷ ರೂಪಾಯಿ ಕೇಳುವುದಕ್ಕಿಂತ ನೂರು ಜನರಿಂದ ತಲಾ ಸಾವಿರ ರೂಪಾಯಿ ಪಡೆದುಕೊಳ್ಳುವುದು ಸುಲಭ ಎನ್ನುವ ಅಂಶವನ್ನು 'ಕ್ರೌಡ್‌ಫಂಡಿಂಗ್' ಹೆಸರಿನ ಈ ಪರಿಕಲ್ಪನೆ ಬಳಸಿಕೊಳ್ಳುತ್ತದೆ.

ಗುರುವಾರ, ಮೇ 31, 2012

ಚಿತ್ರಗಳಲ್ಲಿ ಶುಕ್ರ ಸಂಕ್ರಮದ ಕತೆ!

ಬರುವ ಜೂನ್ ೬ರ ಶುಕ್ರ ಸಂಕ್ರಮದ ಬಗ್ಗೆ ಕೇಳಿದ್ದೀರಲ್ಲ? ಪುಣೆಯ ನ್ಯಾಶನಲ್‌ ಸೆಂಟರ್‌ ಫಾರ್‌ ರೇಡಿಯೋ ಆಸ್ಟ್ರೋಫಿಸಿಕ್ಸ್‌ ಸಂಸ್ಥೆ ಇದೀಗ ಈ ವಿಷಯ ಕುರಿತ ಚಿತ್ರಮಯ ಪುಸ್ತಕವೊಂದನ್ನು (ಗ್ರಾಫಿಕ್ ನಾವೆಲ್) ಕನ್ನಡದಲ್ಲಿ ಹೊರತಂದಿದೆ. ಅಷ್ಟೇ ಅಲ್ಲ, ಅದನ್ನು ಎಲ್ಲರೊಡನೆಯೂ ಮುಕ್ತವಾಗಿ ಹಂಚಿಕೊಂಡಿದೆ.

ಈ ಶ್ಲಾಘನೀಯ ಕೆಲಸಕ್ಕಾಗಿ ಇಜ್ಞಾನ ಡಾಟ್ ಕಾಮ್ ಆ ಸಂಸ್ಥೆಯನ್ನು ಅಭಿನಂದಿಸುತ್ತದೆ, ಹಾಗೂ ಆ ಪುಸ್ತಕವನ್ನು ಇಲ್ಲಿ ಹಂಚಿಕೊಳ್ಳಲು ಹರ್ಷಿಸುತ್ತದೆ.

ಮಂಗಳವಾರ, ಮೇ 22, 2012

ನೂರು ಬಿಲಿಯನ್ ಲೈಕುಗಳು!?

ಫೇಸ್‌ಬುಕ್ ಮೌಲ್ಯ ನೂರು ಬಿಲಿಯನ್ ಅಂತೆ...

ಟಿ. ಜಿ. ಶ್ರೀನಿಧಿ

ಮೇ ೧೮ ಬಂದು ಹೋಗಿದೆ. ಅಮೆರಿಕಾದ ನ್ಯಾಸ್‌ಡಾಕ್ ಶೇರು ವಿನಿಮಯ ಕೇಂದ್ರದಲ್ಲಿ ಫೇಸ್‌ಬುಕ್ ಶೇರುಗಳ ವಹಿವಾಟು ಶುರುವಾದದ್ದೂ ಆಗಿದೆ.

ವಹಿವಾಟು ಶುರುವಾದ ದಿನವೇ ಫೇಸ್‌ಬುಕ್ ಶೇರುಗಳ ಬೆಲೆ ಗಗನಕ್ಕೇರಲಿದೆ, ಮಂಕುಬಡಿದಂತಿರುವ ಪ್ರಪಂಚದ ಮಾರುಕಟ್ಟೆಗಳಿಗೆ ಈ ಘಟನೆ ಹೊಸ ಚೈತನ್ಯ ತುಂಬಲಿದೆ ಎಂದೆಲ್ಲ ಆಸೆಯಿಟ್ಟುಕೊಂಡಿದ್ದವರ ನಿರೀಕ್ಷೆಗಳು ಮಾತ್ರ ನಿಜವಾಗಿಲ್ಲ. ಶೇರು ಮಾರುಕಟ್ಟೆ ಪ್ರವೇಶದೊಡನೆ ಫೇಸ್‌ಬುಕ್ ಮೌಲ್ಯ ನೂರು ಬಿಲಿಯನ್ ಡಾಲರ್ ದಾಟಿದೆಯಾದರೂ ಅದು ನಿಜಕ್ಕೂ ಅಷ್ಟೊಂದು ಬೆಲೆಬಾಳುತ್ತದೆಯೇ ಎನ್ನುವ ಪ್ರಶ್ನೆಗೂ ಉತ್ತರ ಸಿಕ್ಕಿಲ್ಲ.

ಎಂಟು ವರ್ಷ ಎಳೆಯ ಸಂಸ್ಥೆಯೊಂದು ನಮ್ಮೆಲ್ಲರ ವೈಯಕ್ತಿಕ ಮಾಹಿತಿಯನ್ನೇ ಬಂಡವಾಳವಾಗಿಟ್ಟುಕೊಂಡು ತನ್ನ ಮೌಲ್ಯವನ್ನು ನೂರು ಬಿಲಿಯನ್ ಡಾಲರುಗಳಾಚೆ ಕೊಂಡೊಯ್ದಿರುವ ಕತೆ ಇದು.

ಮಂಗಳವಾರ, ಮೇ 15, 2012

ಕಂಪ್ಯೂಟರ್ ಕುಟುಂಬ

ಟಿ. ಜಿ. ಶ್ರೀನಿಧಿ

ಹದಿನಾಲ್ಕು ಹದಿನೈದು ವರ್ಷಗಳ ಹಿಂದಿನವರೆಗೂ ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಕಂಪ್ಯೂಟರ್ ಒಂದು ಅಪರೂಪದ ವಸ್ತುವಾಗಿಯೇ ಇತ್ತು. ಅದಕ್ಕಿಂತ ಐದು-ಹತ್ತು ವರ್ಷಗಳ ಮೊದಲು ನಗರಪ್ರದೇಶಗಳಲ್ಲೂ ಇದೇ ಸ್ಥಿತಿ ಇದ್ದಿರಬೇಕು. ಒಂದಷ್ಟು ಜನಕ್ಕೆ ಕಂಪ್ಯೂಟರ್ ಪರಿಚಯವಿತ್ತು ಎಂದೇ ಇಟ್ಟುಕೊಂಡರೂ ಇಂಟರ್‌ನೆಟ್-ಇಮೇಲುಗಳೆಲ್ಲ ಇಂದಿನಷ್ಟು ವ್ಯಾಪಕವಾಗಿ ನಮ್ಮನ್ನು ಆವರಿಸಿಕೊಂಡಿರಲಿಲ್ಲ.

ಆದರೆ ಈಗ, ಕೆಲವೇ ವರ್ಷಗಳ ಅವಧಿಯಲ್ಲಿ ಪರಿಸ್ಥಿತಿ ಎಷ್ಟೊಂದು ಬದಲಾಗಿಬಿಟ್ಟಿದೆ! ನಾಗರಹೊಳೆ ಕಾಡಿನ ಪಕ್ಕದೂರಿನಲ್ಲಿರುವ ಶಾಲೆಗೂ ಈಗ ಕಂಪ್ಯೂಟರ್ ಬಂದಿದೆ. ಬ್ರಹ್ಮಗಿರಿ ಬೆಟ್ಟದ ಮೇಲೆ ನಿಂತಿದ್ದಾಗಲೂ ನಮ್ಮ ಕೈಲಿರುವ ಮೊಬೈಲಿಗೆ ಬೇಕಾದ ಡಾಟ್ ಕಾಮ್ ಅನ್ನು ಬರಮಾಡಿಕೊಳ್ಳುವುದು ಸಾಧ್ಯವಾಗಿದೆ. ಕೈತೋರಿದಲ್ಲಿ ನಿಲ್ಲುವ ಬಸ್ಸಿನ ನಿರ್ವಾಹಕರ ಕೈಯಿಂದ ಹಿಡಿದು ಸರಕಾರಿ ಕಚೇರಿಯ ಮೇಜಿನವರೆಗೆ ವಿವಿಧ ಗಾತ್ರ-ರೂಪದ ಕಂಪ್ಯೂಟರುಗಳು ಎಲ್ಲೆಲ್ಲೂ ಕಾಣಸಿಗುತ್ತವೆ.

ಹೌದಲ್ಲ, ಈ ಕಂಪ್ಯೂಟರುಗಳಲ್ಲಿ ಅದೆಷ್ಟು ವಿಧ!

ಮಂಗಳವಾರ, ಮೇ 8, 2012

QWERTY ಕಥನ

ಎಲ್ಲಿಂದ ಬಂತು ಈ ವಿಚಿತ್ರ ಏರ್ಪಾಡು?

ಟಿ. ಜಿ. ಶ್ರೀನಿಧಿ


ಲ್ಯಾಪ್‌ಟಾಪ್ ಆಗಲಿ ಡೆಸ್ಕ್‌ಟಾಪ್ ಆಗಲಿ ನೀವು ಬಳಸುವ ಕಂಪ್ಯೂಟರಿನ ಕೀಲಿಮಣೆಯನ್ನೊಮ್ಮೆ ಗಮನವಿಟ್ಟು ನೋಡಿ: Q - W - E - R - T - Y ಎಂದು ಶುರುವಾಗುವ ಅಕ್ಷರಗಳ ವಿಚಿತ್ರ ಜೋಡಣೆ ನಿಮ್ಮ ಕಣ್ಣಿಗೆ ಬೀಳುತ್ತದೆ. ವಿಶ್ವದೆಲ್ಲೆಡೆ ಕೋಟ್ಯಂತರ ಜನಕ್ಕೂ ಅವರ ಬೆರಳುಗಳಿಗೂ ಈ ಜೋಡಣೆ ಚಿರಪರಿಚಿತ. ಎ ಪಕ್ಕದಲ್ಲಿ ಎಸ್, ಬಿ ಮೊದಲು ವಿ, ಇ ಆದಮೇಲೆ ಆರ್ - ಇದೆಲ್ಲ ನಮಗೆ ಅದೆಷ್ಟು ಅಭ್ಯಾಸವಾಗಿಹೋಗಿದೆ ಎಂದರೆ ಅದು ವಿಚಿತ್ರವಾಗಿದೆಯೆಂದು ತೋರುವುದೇ ಅಪರೂಪ!

ಅದೆಲ್ಲ ಸರಿ, ಈ ವಿಚಿತ್ರ ಏರ್ಪಾಡು ನಮ್ಮೆಲ್ಲರ ಬದುಕುಗಳಿಗೆ ಸೇರಿಕೊಂಡದ್ದು ಯಾವಾಗ?

ಈ ಕತೆ ಶುರುವಾಗುವುದು ಸುಮಾರು ಎರಡು ಶತಮಾನಗಳ ಹಿಂದೆ.

ಗುರುವಾರ, ಮೇ 3, 2012

ಶುಕ್ರ ಗ್ರಹದ ಸಂಕ್ರಮಣ

ಸೂರ್ಯ ಹಾಗೂ ಭೂಮಿಯ ನಡುವೆ ಚಂದ್ರ ಬಂದು ಗ್ರಹಣಕ್ಕೆ ಕಾರಣವಾಗುವ ಸಂಗತಿ ನಮಗೆಲ್ಲ ಗೊತ್ತು. ಚಂದ್ರನಷ್ಟೇ ಅಲ್ಲ, ಬುಧ ಹಾಗೂ ಶುಕ್ರಗ್ರಹಗಳೂ ಸೂರ್ಯ ಮತ್ತು ಭೂಮಿಯ ನಡುವೆ ಬರುವುದು ಸಾಧ್ಯವಿದೆ. ಈ ಘಟನೆಯನ್ನು ಸಂಕ್ರಮಣ ಎಂದು ಕರೆಯುತ್ತಾರೆ.

ಬರುವ ಜೂನ್ ೬ರಂದು ಶುಕ್ರ ಸಂಕ್ರಮಣ. ಇದರ ಹಿಂದಿನ ಸಂಕ್ರಮಣ ನಡೆದದ್ದು ೨೦೦೪ರಲ್ಲಿ. ಮುಂದಿನದಕ್ಕೆ ಕಾಯುತ್ತೇವೆ ಎನ್ನುವಂತಿಲ್ಲ. ಯಾಕೆ ಗೊತ್ತಾ?

ಬುಧವಾರ, ಮೇ 2, 2012

ಇವರು ಗಾರ್ಸಿನಿಯಾ ಸೋದರರು!

ಹೆಸರಷ್ಟೇ ಅಲ್ಲ, ಇಡೀ ಪುಸ್ತಕವೇ ವಿಶಿಷ್ಟವಾಗಿದೆ. ನಮ್ಮ ಕುಟುಂಬದವರ ಗ್ರೂಪ್ ಫೋಟೋ ನಮ್ಮನೇಲಿ ಇರಲೇ ಇಲ್ಲ ಎಂದು ಮುನ್ನುಡಿ ಶುರುಮಾಡುವ ಕೆನರಾ ಸೀಮೆಯ ಉಪ್ಪಾಗೆಯೆಂಬ ಹಿರಿಯಣ್ಣನ ಮಾತಿರಲಿ, ಸಿಯಾಟಲ್ ಏರ್‌ಪೋರ್ಟ್‌ನಲ್ಲಿ ಏನಾಯ್ತು ಗೊತ್ತಾ ಎಂದು ಕೇಳುವ ಲೇಖಕರ ನುಡಿಯಿರಲಿ, ಗಾರ್ಸಿನಿಯಾ ಎಂಬ ಪರದೇಸಿ ಪಿತೃನಾಮವಿರುವ ನಾಲ್ಕು ಜನ ಅಣ್ಣತಮ್ಮಂದಿರ ಪರಿಚಯವಿರಲಿ - ಇಡೀ ಪುಸ್ತಕ ಬಹಳ ಕುತೂಹಲಕರವಾಗಿ ಮೂಡಿಬಂದಿದೆ.

ಮಂಗಳವಾರ, ಮೇ 1, 2012

ಬೇಗನೆ ಎದ್ದ ಹಕ್ಕಿಯೂ, ತಡವಾಗಿ ಬಂದ ಇಲಿಯೂ...

ತಂತ್ರಜ್ಞಾನ ಲೋಕದ ಕೆಲ ಇಂಟರೆಸ್ಟಿಂಗ್ ಕತೆಗಳು

ಟಿ. ಜಿ. ಶ್ರೀನಿಧಿ

ಇಂಗ್ಲಿಷಿನಲ್ಲೊಂದು ಹೇಳಿಕೆಯಿದೆ, "ಅರ್ಲಿ ಬರ್ಡ್ ಗೆಟ್ಸ್ ದ ವರ್ಮ್" ಅಂತ. ಯಾವ ಹಕ್ಕಿ ಮಿಕ್ಕೆಲ್ಲವಕ್ಕಿಂತ ಬೇಗ ಎದ್ದು ಹೊರಡುತ್ತದೋ ಅದಕ್ಕೆ ಹೆಚ್ಚು ಹುಳುಗಳು ಆಹಾರವಾಗಿ ಸಿಗುತ್ತವೆ ಎನ್ನುವುದು ಅದರ ಅರ್ಥ. ಬೇಗನೆ ಎದ್ದ ಹುಳುವಿನ ಕತೆ ಏನಾದರೂ ಆಗಲಿ, ನೀವು ಬೇಗನೆ ಎದ್ದು ಹೊರಟ ಹಕ್ಕಿಯಾದರೆ ನಿಮಗೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಈ ಮಾತಿನ ಸಾರಾಂಶ.

ಹಾಗಾದರೆ ಈ ಮಾತಿನ ಆಧಾರದ ಮೇಲೆ ಯಾವುದೇ ಕೆಲಸವನ್ನು ಯಾರು ಬೇಗನೆ ಪ್ರಾರಂಭಿಸಿರುತ್ತಾರೋ ಅವರಿಗೇ ಹೆಚ್ಚಿನ ಅಡ್ವಾಂಟೇಜು ಎನ್ನಬಹುದೆ? ಕಾಮನ್ ಸೆನ್ಸ್ ಪ್ರಕಾರ ಹೇಳುವುದಾದರೆ ಬಹುತೇಕ ಸಂದರ್ಭಗಳಲ್ಲಿ ಅದೇ ಸರಿ.

ಆದರೆ ತಂತ್ರಜ್ಞಾನ ಲೋಕದಲ್ಲಿ ಎಲ್ಲವೂ ಯಾವಾಗಲೂ ಕಾಮನ್ ಆಗಿರುವುದಿಲ್ಲ. ಅದು ಹೇಗೆ ಎನ್ನುವುದಕ್ಕೆ ಇಲ್ಲೊಂದಷ್ಟು ಉದಾಹರಣೆಗಳಿವೆ. ಓದಿ.

ಮಂಗಳವಾರ, ಏಪ್ರಿಲ್ 17, 2012

ಇಮೇಲ್: ಪರಿಣಾಮಕಾರಿ ಬಳಕೆಗೆ ಎಂಟು ಸೂತ್ರಗಳು

ಟಿ. ಜಿ. ಶ್ರೀನಿಧಿ

ಇಮೇಲ್ ಯಾರಿಗೆ ತಾನೆ ಗೊತ್ತಿಲ್ಲ! ಅತ್ಯಂತ ಸುಲಭವಾಗಿ ಬಳಸಬಹುದಾದ ಈ ಮಾಧ್ಯಮವನ್ನು ಇತ್ತೀಚೆಗಷ್ಟೆ ಕಂಪ್ಯೂಟರ್ ಬಳಸಲು ಕಲಿತವರೂ ಸುಲಭವಾಗಿ ಬಳಸುತ್ತಾರೆ.

ಇಮೇಲ್ ಮಾಧ್ಯಮದ ಬಳಕೆ ವ್ಯಾಪಕವಾಗುತ್ತಿದ್ದಂತೆ ಇಮೇಲ್ ಸಂದೇಶಗಳ ಮೂಲಕ ನಡೆಯುವ ಸಂವಹನಕ್ಕೆ ನೀಡಲಾಗುತ್ತಿರುವ ಮಹತ್ವವೂ ಹೆಚ್ಚುತ್ತಿದೆ. ಗೆಳೆಯರ ನಡುವಿನ ಹರಟೆ, ಗಂಡ ಹೆಂಡಿರ ಮಾತುಕತೆಯಿಂದ ಪ್ರಾರಂಭಿಸಿ ವ್ಯಾಪಾರ ವಹಿವಾಟು, ಕಚೇರಿ ವ್ಯವಹಾರಗಳವರೆಗೆ ಪ್ರತಿಯೊಂದಕ್ಕೂ ಇಮೇಲ್ ಬಳಕೆಯಾಗುತ್ತಿದೆ. ಒಂದು ದಿನದಲ್ಲಿ ವಿಶ್ವದಾದ್ಯಂತ ಹದಿನಾಲ್ಕು ಸಾವಿರ ಕೋಟಿಗಿಂತ ಹೆಚ್ಚು ಇಮೇಲ್ ಸಂದೇಶಗಳನ್ನು ವಿನಿಮಯಮಾಡಿಕೊಳ್ಳಲಾಗುತ್ತದೆಯೆಂದು ಅಂಕಿಅಂಶಗಳು ಹೇಳುತ್ತವೆ. ಇವೆಲ್ಲ ಕಾರಣಗಳಿಂದಾಗಿ ಇಮೇಲ್ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಬೇಕಾದ್ದು ಇಂದಿನ ಅಗತ್ಯಗಳಲ್ಲೊಂದು.

ಇಮೇಲ್ ಕಳುಹಿಸಲು ಬರುತ್ತದೆ ಎನ್ನುವುದಕ್ಕೂ ಇಮೇಲ್ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಬಲ್ಲೆ ಎನ್ನುವುದಕ್ಕೂ ಏನಾದರೂ ವ್ಯತ್ಯಾಸವಿದೆಯೆ? ಖಂಡಿತಾ ಇದೆ. ಕೆಲವು ಸಣ್ಣಪುಟ್ಟ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದರಿಂದ ನಮ್ಮ ಇಮೇಲ್ ಸಂದೇಶ ಪರಿಣಾಮಕಾರಿಯಾಗಿರುವಂತೆ ಮಾಡಬಹುದು.

ಅಂತಹ ಕೆಲ ಸರಳ ಸೂತ್ರಗಳು ಇಲ್ಲಿವೆ.

ಭಾನುವಾರ, ಏಪ್ರಿಲ್ 15, 2012

ಟೈಟಾನಿಕ್ ನೆನಪಿನ ಲೇಖನ: ಐಸ್‌ಬರ್ಗ್ ಎಂಬ ಸಾಗರದೈತ್ಯ

ಟಿ. ಜಿ. ಶ್ರೀನಿಧಿ


"ಮುಳುಗಲಾಗದ" ಹಡಗು ಟೈಟಾನಿಕ್ ಮರೆಯಲಾಗದ ದುರಂತಕ್ಕೆ ಗುರಿಯಾಗಿ ಇದೀಗ ನೂರು ವರ್ಷ. ತಂತ್ರಜ್ಞಾನದ ಸಾಮರ್ಥ್ಯದ ಬಗೆಗೆ ಒಂದು ತಲೆಮಾರು ಇಟ್ಟಿದ್ದ ನಂಬಿಕೆಯನ್ನೇ ಅಲುಗಾಡಿಸಿದ ಈ ದುರಂತಕ್ಕೆ ಕಾರಣವಾದದ್ದು ನೀರ್ಗಲ್ಲು, ಅಥವಾ ಐಸ್‌ಬರ್ಗ್.

ಟೈಟಾನಿಕ್ ದುರಂತದ ನಂತರ ಕಳೆದಿರುವ ಒಂದು ಶತಮಾನದಲ್ಲಿ ಅದೆಷ್ಟೋ ನೀರ್ಗಲ್ಲುಗಳು ಸಾಗರಗಳಲ್ಲಿ ತೇಲಿವೆ. ತಂತ್ರಜ್ಞಾನವೂ ಕಡಿಮೆಯೇನಲ್ಲ, ಅದೂ ನಾಗಾಲೋಟದಿಂದಲೇ ಮುನ್ನಡೆದಿದೆ.

ಆದರೆ ಇವರಿಬ್ಬರ ನಡುವೆ ಗೆದ್ದವರಾರು ಎಂಬುದು ಮಾತ್ರ ಇನ್ನೂ ತೀರ್ಮಾನವಾಗಿಲ್ಲ. ಒಂದು ಕ್ಷಣ ತಂತ್ರಜ್ಞಾನವೇ ಗೆದ್ದಿತು ಎನಿಸುವಷ್ಟರಲ್ಲಿ ಅದ್ಯಾವುದೋ ಸಮುದ್ರದಲ್ಲಿ ಸಾಗುತ್ತಿದ್ದ ಹಡಗಿಗೆ ನೀರ್ಗಲ್ಲು ಬಡಿದ ಸುದ್ದಿ ಕೇಳಿಬರುತ್ತದೆ.

ನಿಸರ್ಗ ಹಾಗೂ ಮಾನವನ ನಡುವಿನ ಈ ಟೆಸ್ಟ್ ಮ್ಯಾಚ್‌ನ ಇತ್ತೀಚಿನ ಸ್ಕೋರ್ ಎಷ್ಟು? ಒಂದು ಒಳನೋಟ ಇಲ್ಲಿದೆ.

ಗುರುವಾರ, ಏಪ್ರಿಲ್ 12, 2012

ಗಣಿತದ ಪದ್ಯ-ಪ್ರಬಂಧ

ಗಣಿತದ ಪರಿಕಲ್ಪನೆಗಳನ್ನು ರೋಚಕವಾಗಿ, ಮಕ್ಕಳಿಗೆ ಆಕರ್ಷಕವೆನಿಸುವಂತೆ ಹೇಳಲು ಸಾಧ್ಯವಾಗಬಹುದೆ? ಈ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಹಿರಿಯ ಸಂವಹನಕಾರರಾದ ಶ್ರೀ ವಿ. ಎಸ್. ಎಸ್. ಶಾಸ್ತ್ರಿಯವರು ಹೊಸದೊಂದು ಪುಸ್ತಕ ಬರೆದಿದ್ದಾರೆ.

'ಗಣಿತ - ಮಕ್ಕಳಿಗಾಗಿ ಪದ್ಯ, ಪ್ರಬಂಧ, ಪರಿಕಲ್ಪನೆ' ಎಂಬ ಹೆಸರಿನ ಈ ಕೃತಿಯಲ್ಲಿ ಏಳನೆಯ ತರಗತಿಯವರೆಗಿನ ಪಠ್ಯಕ್ರಮದಲ್ಲಿರುವ ಗಣಿತ ವಿಷಯಗಳನ್ನು ಕುರಿತ ಪದ್ಯ-ಕತೆ-ಪ್ರಬಂಧಗಳಿವೆ. ಪೂರಕ ಚಿತ್ರಗಳನ್ನು ಶಾಸ್ತ್ರಿಯವರೇ ಬರೆದಿರುವುದು ವಿಶೇಷ.
ಗಣಿತ - ಮಕ್ಕಳಿಗಾಗಿ ಪದ್ಯ, ಪ್ರಬಂಧ, ಪರಿಕಲ್ಪನೆ
ಲೇಖಕರು: ಶ್ರೀ ವಿ. ಎಸ್. ಎಸ್. ಶಾಸ್ತ್ರಿ
೮೮ ಪುಟಗಳು, ಬೆಲೆ: ರೂ. ೪೦
ಪ್ರಕಾಶಕರು: ಡಿವಿಜಿ ಪ್ರತಿಷ್ಠಾನ, ಕೋಲಾರ
badge