ಬುಧವಾರ, ಫೆಬ್ರವರಿ 28, 2018

ರಾಷ್ಟ್ರೀಯ ವಿಜ್ಞಾನ ದಿನ ವಿಶೇಷ: ವಿಜ್ಞಾನದ ಹಾದಿಯಲ್ಲಿ ಭಾರತದ ಹೆಜ್ಜೆಗುರುತುಗಳು

ಉದಯ ಶಂಕರ ಪುರಾಣಿಕ
ಟಿ. ಜಿ. ಶ್ರೀನಿಧಿ

ವಿಜ್ಞಾನ - ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆಗಳೇನು ಎನ್ನುವುದು ಪದೇಪದೇ ಕೇಳಸಿಗುವ ಪ್ರಶ್ನೆ. ಈ ಪ್ರಶ್ನೆಗೆ ದೊರಕುವ ಉತ್ತರ ಸನ್ನಿವೇಶಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ. "ಪಾಶ್ಚಿಮಾತ್ಯ ದೇಶಗಳ ಸಾಧನೆಗಳೆಲ್ಲ ಸಾಧ್ಯವಾಗಿರುವುದು ಭಾರತದಿಂದಾಗಿಯೇ" ಎನ್ನುವಂತಹ ವಾದಗಳಿಂದ ಪ್ರಾರಂಭಿಸಿ "ವಿಜ್ಞಾನ-ತಂತ್ರಜ್ಞಾನದ ಸಾಧನೆಗಳಷ್ಟೂ ಹೊರದೇಶಗಳಲ್ಲೇ ಆಗಿರುವುದು" ಎನ್ನುವುದರವರೆಗೆ ಈ ಉತ್ತರ ಹಲವು ಬಗೆಯದಾಗಿರುವುದು ಸಾಧ್ಯ.

ಈ ಕ್ಷೇತ್ರದಲ್ಲಿ ಭಾರತದ - ಭಾರತೀಯರ ಸಾಧನೆಗಳಿಗೆ ಉದಾಹರಣೆ ಕೊಡಿ ಎಂದು ಕೇಳಿದರೆ ಉದಾಹರಣೆಗಳ ಪಟ್ಟಿ ಚರಕ - ಸುಶ್ರುತ, ಆರ್ಯಭಟ - ಭಾಸ್ಕರರಿಂದ ಪ್ರಾರಂಭವಾಗಿ ಜಗದೀಶಚಂದ್ರ ಬೋಸ್ - ಸಿ ವಿ ರಾಮನ್‌ರ ಹೆಸರುಗಳೊಡನೆ ನಿಂತುಹೋಗುವುದೂ ಉಂಟು.

ಹೀಗೆಲ್ಲ ಇದೆ ಎಂದಮಾತ್ರಕ್ಕೆ ವಿಜ್ಞಾನ - ತಂತ್ರಜ್ಞಾನಗಳಲ್ಲಿ ಭಾರತದ ಸಾಧನೆ ಕಡಿಮೆಯೆಂದಾಗಲೀ ಕಳಪೆಯೆಂದಾಗಲೀ ಖಂಡಿತಾ ಅರ್ಥವಲ್ಲ. ಯಾರು ಏನೆನ್ನುತ್ತಾರೆ ಎನ್ನುವ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ನಮ್ಮ ದೇಶ ಈ ಕ್ಷೇತ್ರಗಳಲ್ಲಿ ಕೆಲಸಮಾಡುತ್ತಲೇ ಇದೆ. ಈ ಕೆಲಸದ ಪರಿಣಾಮವಾಗಿಯೇ ಅನೇಕ ಸಾಧನೆಗಳನ್ನು ಮಾಡಿದೆ, ತಲೆಕೆಡಿಸಿಕೊಳ್ಳದ ಕಾರಣದಿಂದ ಇನ್ನಷ್ಟು ಸಾಧನೆಗಳನ್ನು ಮಾಡದೆಯೂ ಉಳಿದಿದೆ.

ಗುರುವಾರ, ಫೆಬ್ರವರಿ 22, 2018

ನಮ್ಮ ಭಾಷೆ ಮತ್ತು ತಂತ್ರಜ್ಞಾನ

ಟಿ. ಜಿ. ಶ್ರೀನಿಧಿ

ತಂತ್ರಜ್ಞಾನ, ಅದರಲ್ಲೂ ಮಾಹಿತಿ ತಂತ್ರಜ್ಞಾನ ಎಂದಕೂಡಲೇ ಕೇಳಸಿಗುವ ಆರೋಪ: ಅದರಿಂದ ನಮ್ಮ ಭಾಷೆಗೆ ತೊಂದರೆಯಾಗಿದೆ ಅಥವಾ ಆಗುತ್ತಿದೆ ಎನ್ನುವುದು. ಇದು ಕೊಂಚಮಟ್ಟಿಗೆ ನಿಜವೂ ಹೌದು. ಪ್ರಪಂಚದಲ್ಲಿರುವ ಸಾವಿರಾರು ಭಾಷೆಗಳ ಪೈಕಿ ಶೇ. ೯೬ರಷ್ಟನ್ನು ಬಳಸುವವರು ನಮ್ಮ ಜನಸಂಖ್ಯೆಯ ಶೇ. ೪ರಷ್ಟು ಮಂದಿ ಮಾತ್ರ ಎಂದು ವಿಶ್ವಸಂಸ್ಥೆಯ ಜಾಲತಾಣವೇ ಹೇಳುತ್ತದೆ. ಇಂತಹ ಭಾಷೆಗಳಿಗೆ ಶಿಕ್ಷಣ ವ್ಯವಸ್ಥೆಯಲ್ಲೂ ಮಾಹಿತಿ ತಂತ್ರಜ್ಞಾನದ ಜಗತ್ತಿನಲ್ಲೂ ಪ್ರಾಮುಖ್ಯ ದೊರಕದಿದ್ದರೆ ಅವುಗಳ ಬಳಕೆ ಇನ್ನಷ್ಟು ಕಡಿಮೆಯಾಗುವುದು, ಬೆಳವಣಿಗೆ ಕುಂಠಿತವಾಗುವುದು ಸಹಜವೇ.

ಹೌದು, ಇಂದಿನ ಬದುಕಿನಲ್ಲಿ ಮಾಹಿತಿ ತಂತ್ರಜ್ಞಾನದ ಪಾತ್ರ ಮಹತ್ವದ್ದು. ಬೆಳಗಿನಿಂದ ರಾತ್ರಿಯವರೆಗೆ ಒಂದಲ್ಲ ಒಂದು ರೂಪದಲ್ಲಿ ಮಾಹಿತಿ ತಂತ್ರಜ್ಞಾನದ ಸವಲತ್ತುಗಳನ್ನು ನಾವೆಲ್ಲ ಬಳಸುತ್ತಲೇ ಇರುತ್ತೇವೆ. ಈ ವ್ಯವಹಾರವನ್ನೆಲ್ಲ ನಮ್ಮ ಭಾಷೆಯಲ್ಲೇ ನಡೆಸುವಂತಾದರೆ ಭಾಷೆ-ತಂತ್ರಜ್ಞಾನಗಳೆರಡರ ವ್ಯಾಪ್ತಿಯೂ ಹೆಚ್ಚುತ್ತದೆ, ಎರಡೂ ಪರಸ್ಪರ ಪೂರಕವಾಗಿ ಬೆಳೆಯುತ್ತವೆ.

ಮಂಗಳವಾರ, ಫೆಬ್ರವರಿ 20, 2018

ಮೊಬೈಲ್ ಲೋಕದ ರೆಟ್ರೋ ಸವಾರಿ

ಟಿ. ಜಿ. ಶ್ರೀನಿಧಿ

ಮೊಬೈಲ್ ಫೋನ್ ಎಂದ ತಕ್ಷಣ ನಮ್ಮ ಗಮನ ಹೋಗುವುದು ಸ್ಮಾರ್ಟ್‌ಫೋನುಗಳ ಕಡೆಗೆ. "ಈಗೇನು ಎಲ್ಲ ಫೋನುಗಳೂ ಸ್ಮಾರ್ಟ್ ತಾನೇ?" ಎಂದು ಕೇಳುವವರೂ ಬೇಕಾದಷ್ಟು ಜನ ಇದ್ದಾರೆ.

ಪ್ರತಿವಾರವೂ ಮಾರುಕಟ್ಟೆಗೆ ಬರುವ ಹೊಸ ಸ್ಮಾರ್ಟ್‌ಫೋನುಗಳನ್ನೂ ಅವುಗಳಲ್ಲಿರುವ ನೂರೆಂಟು ವೈಶಿಷ್ಟ್ಯಗಳನ್ನೂ ನೋಡಿದವರಲ್ಲಿ ಫೋನ್ ಅಂದರೆ ಸ್ಮಾರ್ಟ್‌ಫೋನೇ ಎನ್ನುವ ಅಭಿಪ್ರಾಯ ಮೂಡುವುದು ಸಹಜವೇ. ಆದರೆ ಅಂಕಿ ಅಂಶಗಳ ಪ್ರಕಾರ ಭಾರತದ ಮೊಬೈಲ್ ಬಳಕೆದಾರರ ಪೈಕಿ ಅರ್ಧಕ್ಕಿಂತ ಹೆಚ್ಚುಮಂದಿ ಇಂದಿಗೂ ಸ್ಮಾರ್ಟ್ ಫೋನ್ ಬಳಕೆದಾರರಲ್ಲ!

ಇಷ್ಟೆಲ್ಲ ದೊಡ್ಡ ಸಂಖ್ಯೆಯ ಗ್ರಾಹಕರು ಬಳಸುವುದು, ಸ್ಮಾರ್ಟ್‌ಫೋನ್ ಬಳಕೆದಾರರ ಪಾಲಿಗೆ ಔಟ್‌ಡೇಟೆಡ್ ಎನ್ನಿಸುವ ಹಳೆಯಕಾಲದ ಫೋನುಗಳನ್ನು.

ಗುರುವಾರ, ಫೆಬ್ರವರಿ 15, 2018

ವಿಮಾನದಲ್ಲಿ ವೈ-ಫೈ

ಟಿ. ಜಿ. ಶ್ರೀನಿಧಿ

ಪ್ರವಾಸಕ್ಕೆಂದೋ ಕಚೇರಿ ಕೆಲಸಕ್ಕೆಂದೋ ವಿಮಾನಯಾನ ಕೈಗೊಳ್ಳುವವರ ಸಂಖ್ಯೆ ಈಚಿನ ಕೆಲವರ್ಷಗಳಲ್ಲಿ ಗಮನಾರ್ಹವಾಗಿ ಹೆಚ್ಚಿದೆ. ಅಂತಾರಾಷ್ಟ್ರೀಯ ವೈಮಾನಿಕ ಸಾರಿಗೆ ಒಕ್ಕೂಟ (ಐಎಟಿಎ), ಸಿಎಪಿಎ - ಸೆಂಟರ್ ಫಾರ್ ಏವಿಯೇಶನ್ ಮುಂತಾದ ಸಂಸ್ಥೆಗಳು ಪ್ರಕಟಿಸಿರುವ ಅಂಕಿ ಅಂಶಗಳಷ್ಟೇ ಅಲ್ಲ; ಭಾರತದ ನಗರಗಳನ್ನು ಪರಸ್ಪರ ಸಂಪರ್ಕಿಸುತ್ತಿರುವ ವಿಮಾನಗಳ ಸಂಖ್ಯೆ, ವಿಮಾನ ನಿಲ್ದಾಣಗಳಲ್ಲಿ ಕಾಣಸಿಗುವ ಪ್ರಯಾಣಿಕರ ದಟ್ಟಣೆ, ಕಡೆಗೆ ನಮ್ಮ ಫೇಸ್‌ಬುಕ್ ಪುಟದಲ್ಲಿ ಕಾಣಸಿಗುವ ಏರ್‌ಪೋರ್ಟ್ ಚೆಕ್-ಇನ್‌ಗಳ ಪ್ರಮಾಣ ಕೂಡ ಈ ಹೇಳಿಕೆಗೆ ಪುಷ್ಟಿಕೊಡುತ್ತಿವೆ!

ಬೆಂಗಳೂರು ವಿಮಾನ ನಿಲ್ದಾಣದಲ್ಲಿದ್ದೇನೆ ಎಂದು ಫೇಸ್ ಬುಕ್ ನಲ್ಲಿ ಹಾಕಿರುತ್ತಾರಲ್ಲ, ಅವರು ಮತ್ತೆ ಪೋಸ್ಟ್ ಮಾಡುವುದು ಮುಂದಿನ ವಿಮಾನ ನಿಲ್ದಾಣ ತಲುಪಿದ ಮೇಲೆಯೇ. ಇದೇಕೆ ಹೀಗೆ? ಏರ್‌ಪೋರ್ಟಿನಲ್ಲಿ ಸೆಲ್ಫಿ ತೆಗೆದು ಪೋಸ್ಟ್ ಮಾಡಿದವರು ವಿಮಾನದಲ್ಲಿ ತಿಂದ ತಿಂಡಿಯ ಫೋಟೋ ಏಕೆ ಹಾಕುವುದಿಲ್ಲ?

ಶನಿವಾರ, ಫೆಬ್ರವರಿ 10, 2018

ವಾರಾಂತ್ಯ ವಿಶೇಷ: ಸ್ಮಾರ್ಟ್ ಸಹಾಯಕರ ಸುತ್ತಮುತ್ತ

ಟಿ. ಜಿ. ಶ್ರೀನಿಧಿ

ಒಬ್ಬರು ಹೇಳಿದ ಕೆಲಸವನ್ನು ಇನ್ನೊಬ್ಬರು ಮಾಡುವುದಿಲ್ಲ ಎನ್ನುವುದು ಬಹುತೇಕ ಮನೆಗಳಲ್ಲಿ ವಾಗ್ವಾದಕ್ಕೆ, ಜಗಳಕ್ಕೆ ಕಾರಣವಾಗುವ ವಿಷಯ. ಕುಡಿಯಲು ನೀರು ಬೇಕು, ಬುಟ್ಟಿಯಲ್ಲಿ ಹಾಲಿನ ಕೂಪನ್ ಇಡಬೇಕು, ದಿನಸಿ ತರಿಸಬೇಕು, ಬೆಳಿಗ್ಗೆ ಏಳಲು ಅಲಾರಂ ಇಡಬೇಕು... ಹೀಗೆ ಇಂತಹ ಕೆಲಸಗಳಲ್ಲಿ ಹಲವಾರು ವಿಧಗಳಿರುವುದು ಸಾಧ್ಯ. ಈ ಪೈಕಿ ಕೆಲವು ಕೆಲಸಗಳಿಗೆ ಓಡಾಟ ಬೇಕು, ಇನ್ನು ಕೆಲವನ್ನು ಕಂಪ್ಯೂಟರಿನಲ್ಲೋ ಮೊಬೈಲಿನಲ್ಲೋ ಮಾಡಿಕೊಳ್ಳಬಹುದು.

ಓಡಾಡಿ ಮಾಡಬೇಕಿರುವ ಕೆಲಸಗಳು ಹಾಗಿರಲಿ, ಮೊಬೈಲಿನಲ್ಲೋ ಕಂಪ್ಯೂಟರಿನಲ್ಲೋ ಮಾಡಬೇಕಾದ ಕೆಲಸಗಳನ್ನಾದರೂ ಯಾರಾದರೂ ಮಾಡಿಕೊಡುವಂತಿದ್ದರೆ? ಜೀವನ ಸ್ವಲ್ಪವಾದರೂ ಸರಳವಾಗುತ್ತದೆ - ಮನೆಯ ಜಗಳ ಕೊಂಚಮಟ್ಟಿಗೆ ಕಡಿಮೆಯಾಗುತ್ತದೆ ಅಲ್ಲವೇ? 'ಸ್ಮಾರ್ಟ್ ಸಹಾಯಕ'ರ ಸೃಷ್ಟಿಯ ಹಿಂದಿರುವುದು ಇದೇ ಆಲೋಚನೆ.

ಇಷ್ಟಕ್ಕೂ ಸ್ಮಾರ್ಟ್ ಸಹಾಯಕರೆಂದರೆ ಯಾರು? ಬುದ್ಧಿವಂತ ಮನೆಕೆಲಸದವರೇ?

ಶುಕ್ರವಾರ, ಫೆಬ್ರವರಿ 2, 2018

ತಂತ್ರಾಂಶ ರಚನೆಗೆ ಇಂಗ್ಲಿಷ್ ಭಾಷೆಯೇ ಬೇಕೇ?

ಟಿ. ಜಿ. ಶ್ರೀನಿಧಿ

ಗೃಹೋಪಯೋಗಿ ಸಾಮಗ್ರಿಗಳಿಂದ ಪ್ರಾರಂಭಿಸಿ ಅಂತರ್-ಗ್ರಹ ವಾಹನಗಳವರೆಗೆ ಎಲ್ಲೆಡೆಯೂ ತಂತ್ರಾಂಶಗಳ  ಕೈವಾಡವನ್ನು ನಾವು ಕಾಣಬಹುದು. ಇಂತಹ ಪ್ರತಿಯೊಂದು ಉದಾಹರಣೆಯಲ್ಲೂ ಆಯಾ ಯಂತ್ರಕ್ಕೆ ಹೀಗೆ ಮಾಡೆಂದು ನಿರ್ದೇಶಿಸುವುದು ತಂತ್ರಾಂಶಗಳೇ.

ಯಾವುದೇ ತಂತ್ರಾಂಶವನ್ನು (ಸಾಫ್ಟ್‌ವೇರ್) ತೆಗೆದುಕೊಂಡರೂ ಅದರಲ್ಲಿ ಒಂದು ಅಥವಾ ಹೆಚ್ಚಿನ ಸಂಖ್ಯೆಯ  ಕ್ರಮವಿಧಿಗಳು (ಪ್ರೋಗ್ರಾಮ್) ಇರುತ್ತವೆ. ಎರಡು ಅಂಕಿಗಳನ್ನು ಕೂಡಿಸುವ ಸರಳ ಕೆಲಸವಿರಲಿ, ಯಾರಿಗೂ ಡಿಕ್ಕಿಹೊಡೆಯದಂತೆ ವಾಹನವನ್ನು ಮುನ್ನಡೆಸುವ ಕ್ಲಿಷ್ಟ ಸವಾಲೇ ಇರಲಿ - ಇಂತಿಂತಹ ಕೆಲಸಗಳನ್ನು ಇಂಥದ್ದೇ ರೀತಿಯಲ್ಲಿ ಮಾಡು ಎಂದು ಹೇಳುವುದು ಈ ಕ್ರಮವಿಧಿಗಳ ಕೆಲಸ.

ಹೀಗೆ ಯಾವಾಗ ಏನನ್ನು ಯಾವ ಕ್ರಮದಲ್ಲಿ ಮಾಡಬೇಕೆಂದು ಕಂಪ್ಯೂಟರಿನಲ್ಲಿ ಬರೆದಿಡುವ ಕೆಲಸವಿದೆಯಲ್ಲ, ಅದಕ್ಕೆ ಪ್ರೋಗ್ರಾಮಿಂಗ್ ಎಂದು ಹೆಸರು. ಈ ಕೆಲಸ ಮಾಡುವವರು ಪ್ರೋಗ್ರಾಮರ್‌ಗಳು.

ಬುಧವಾರ, ಜನವರಿ 31, 2018

ಮೊಬೈಲ್ ಸಿಗ್ನಲ್ ಸುತ್ತಮುತ್ತ

ಟಿ. ಜಿ. ಶ್ರೀನಿಧಿ


ಮೊಬೈಲ್ ಫೋನ್ ಯಾರಿಗೆ ತಾನೇ ಗೊತ್ತಿಲ್ಲ? ಹಿರಿಯ-ಕಿರಿಯ, ಬಡವ-ಶ್ರೀಮಂತರೆಂಬ ಯಾವುದೇ ಭೇದಭಾವವಿಲ್ಲದೆ ಎಲ್ಲರೂ ಯಾವಾಗಲೂ ಬಳಸುವ ಸಾಧನ ಅದು. ಇಂತಹ ಸರ್ವಾಂತರ್ಯಾಮಿ ಮೊಬೈಲನ್ನು ಹಲವಾರು ಮಂದಿ ಸೆಲ್ ಫೋನ್ ಎಂದು ಕರೆಯುತ್ತಾರೆ. ಕೆಲವರಂತೂ ಈ ಹೆಸರನ್ನು ಇನ್ನೂ ಹ್ರಸ್ವಗೊಳಿಸಿ 'ಸೆಲ್' ಎಂದಷ್ಟೇ ಕರೆಯುವುದೂ ಉಂಟು.

ಈ ಅಭ್ಯಾಸಕ್ಕೆ ಕಾರಣ ಮೊಬೈಲ್ ಜಾಲಗಳ (ನೆಟ್‌ವರ್ಕ್) ವಿನ್ಯಾಸ.

ಸೋಮವಾರ, ಜನವರಿ 29, 2018

ಟೆಕ್ ಸಂತೆಯಲ್ಲಿ ಬ್ಯಾಟರಿಯದೇ ಚಿಂತೆ!

ಟಿ. ಜಿ. ಶ್ರೀನಿಧಿ


ದಸರಾ ಸಂದರ್ಭದಲ್ಲಿ ಮೈಸೂರಿನಲ್ಲಿ ವಸ್ತುಪ್ರದರ್ಶನ ನಡೆಯುತ್ತದಲ್ಲ, ಅದೇ ರೀತಿ ಅಮೆರಿಕಾದ ಲಾಸ್ ವೇಗಾಸ್‌ ನಗರದಲ್ಲೂ ವರ್ಷಕ್ಕೊಂದು ಬಾರಿ ವಿಶೇಷ ಪ್ರದರ್ಶನವೊಂದನ್ನು ಏರ್ಪಡಿಸಲಾಗುತ್ತದೆ. ಟೆಕ್ ಲೋಕದಲ್ಲಿ ಬಹಳ ಜನಪ್ರಿಯವಾದ ಈ ಸಂತೆಯ ಹೆಸರು 'ಕನ್ಸ್ಯೂಮರ್ ಇಲೆಕ್ಟ್ರಾನಿಕ್ಸ್ ಶೋ', ಸಂಕ್ಷಿಪ್ತವಾಗಿ ಸಿಇಎಸ್.

ಮೊಬೈಲ್ ಫೋನ್, ಕಂಪ್ಯೂಟರ್, ಕ್ಯಾಮೆರಾ, ರೋಬಾಟ್, ಡ್ರೋನ್ - ಹೀಗೆ ನೂರೆಂಟು ಬಗೆಯ ವಿದ್ಯುನ್ಮಾನ ಸಾಧನಗಳಿಗೆ ಸಂಬಂಧಪಟ್ಟಂತೆ ಕಳೆದೊಂದು ವರ್ಷದಲ್ಲಿ ಏನೆಲ್ಲ ಹೊಸತು ಘಟಿಸಿದೆ ಎನ್ನುವುದನ್ನು ಜಗತ್ತಿಗೆ ಪರಿಚಯಿಸುವುದು ಸಿಇಎಸ್‌ನ ಉದ್ದೇಶ. ಜನವರಿ ೭ರಿಂದ ೧೨ರವರೆಗೆ ನಡೆದ ಈ ವರ್ಷದ ಸಿಇಎಸ್‌ನಲ್ಲೂ ಇಂತಹ ಹಲವಾರು ಹೊಸ ಬೆಳವಣಿಗೆಗಳು ಬೆಳಕಿಗೆ ಬಂದವು, ವಿಶ್ವದೆಲ್ಲೆಡೆ ಸುದ್ದಿಯಾದವು.

ಬೆಳಕಿಗೆ ಬಂದ ಸುದ್ದಿಗಳ ಜೊತೆಗೆ ಪ್ರದರ್ಶನದ ಸಭಾಂಗಣವೊಂದರಲ್ಲಿ ಬೆಳಕಿಲ್ಲದಂತಾಗಿದ್ದೂ ಸುದ್ದಿಯಾಗಿದ್ದು ಈ ವರ್ಷದ ವಿಶೇಷ. ವಿದ್ಯುನ್ಮಾನ ಸಾಧನಗಳ ಪ್ರದರ್ಶನದಲ್ಲಿ ಅವುಗಳ ಜೀವಾಳವಾದ ವಿದ್ಯುತ್ ಸಂಪರ್ಕ ಕೈಕೊಟ್ಟ ಈ ಘಟನೆ, ಸಹಜವಾಗಿಯೇ, ಸಾಕಷ್ಟು ಚರ್ಚೆಗೆ ಕಾರಣವಾಯಿತು.

ಮಂಗಳವಾರ, ಜನವರಿ 23, 2018

'ಮೆಲ್ಟ್‌ಡೌನ್' ಮತ್ತು 'ಸ್ಪೆಕ್ಟರ್': ಲೇಟೆಸ್ಟ್ ಸುದ್ದಿ ಏನು?

ವಿದ್ಯುನ್ಮಾನ ಸಾಧನಗಳ ಸೆಂಟ್ರಲ್ ಪ್ರಾಸೆಸಿಂಗ್ ಯುನಿಟ್‌ (ಸಿಪಿಯು) ವಿನ್ಯಾಸದಲ್ಲಿ ಪತ್ತೆಯಾಗಿರುವ ಎರಡು ದೋಷಗಳು - 'ಮೆಲ್ಟ್‌ಡೌನ್' ಮತ್ತು 'ಸ್ಪೆಕ್ಟರ್' - ಟೆಕ್ ಲೋಕದಲ್ಲಿ ಸಂಚಲನವನ್ನೇ ಸೃಷ್ಟಿಸಿವೆ. ಈ ಸಮಸ್ಯೆಯನ್ನು ಪರಿಚಯಿಸುವ ವಿಶೇಷ ಲೇಖನ ಇಜ್ಞಾನ ಡಾಟ್ ಕಾಮ್‌ನಲ್ಲಿ ಕಳೆದ ವಾರ ಪ್ರಕಟವಾಗಿತ್ತು. 'ಮೆಲ್ಟ್‌ಡೌನ್' ಮತ್ತು 'ಸ್ಪೆಕ್ಟರ್' ಸುತ್ತಲಿನ ಸದ್ಯದ ಪರಿಸ್ಥಿತಿ ಏನು? ಈ ಕುರಿತು ಟೆಕ್ ಲೋಕದಲ್ಲಿ ಏನೆಲ್ಲ ನಡೆದಿದೆ? ವಿವರಗಳು ಇಲ್ಲಿವೆ.

ಉದಯ ಶಂಕರ ಪುರಾಣಿಕ


ಸ್ಪೆಕ್ಟರ್ ಮತ್ತು ಮೆಲ್ಟ್‌ಡೌನ್ ಲೋಪಗಳನ್ನು ಸರಿಪಡಿಸಲು ಅಗತ್ಯವಾದ ತಂತ್ರಾಂಶ ಪ್ಯಾಚುಗಳನ್ನು ಅಭಿವೃದ್ಧಿಪಡಿಸಿ, ಗ್ರಾಹಕರಿಗೆ ಬಿಡುಗಡೆ ಮಾಡಲು ಹಲವಾರು ಸಂಸ್ಥೆಗಳು ಕೆಲಸ ಮಾಡುತ್ತಿವೆ. ಆದರೆ ಇದು ಅಂದುಕೊಂಡಷ್ಟು ಸುಲಲಿತವಾಗಿ ನೆಡೆಯದಿರುವುದು ವಿವಿಧ ಸಂಸ್ಥೆಗಳ ನಡುವೆ ಆರೋಪ - ಪ್ರತ್ಯಾರೋಪಗಳಿಗೆ ಎಡೆ ಮಾಡಿಕೊಡುತ್ತಿದೆ. ಈ ನಡುವೆ ಸೈಬರ್ ಅಪರಾಧಿಗಳು, ನಕಲಿ ಪ್ಯಾಚ್ ಬಿಡುಗಡೆ ಮಾಡಿ, ಮಾಲ್‌ವೇರ್‌ಗಳನ್ನು ಬಳಸಲು ಮುಂದಾಗಿರುವುದು ಆತಂಕ ಸೃಷ್ಟಿಸಿದೆ.

ಬುಧವಾರ, ಜನವರಿ 17, 2018

ಪಾಠ ಹೇಳುವ ಯಂತ್ರ, ಪಾಠ ಕಲಿಯುವ ಯಂತ್ರ

ಟಿ. ಜಿ. ಶ್ರೀನಿಧಿ


ಮಾಹಿತಿ ತಂತ್ರಜ್ಞಾನದ ಸವಲತ್ತುಗಳ ಮಾತು ಬಂದಾಗಲೆಲ್ಲ ಶಿಕ್ಷಣ ಕ್ಷೇತ್ರದಲ್ಲಿ ಅವುಗಳ ಉಪಯುಕ್ತತೆ ಕುರಿತು ಚರ್ಚೆಯಾಗುವುದು ಸಾಮಾನ್ಯ. ಐಟಿ ಬಳಕೆಯಿಂದ ಶಿಕ್ಷಣದ ಗುಣಮಟ್ಟವನ್ನು ಬದಲಿಸಬಹುದು ಎಂಬ ಹೇಳಿಕೆಗಳು, ಅಂತಹ ಹೇಳಿಕೆಗಳಿಗೆ ಬೆಂಬಲವಾಗಿ ನಿಲ್ಲುವ ನೈಜ ಉದಾಹರಣೆಗಳು ನಮ್ಮ ಗಮನಕ್ಕೆ ಬರುವುದೂ ಅಪರೂಪವೇನಲ್ಲ. "ಕಂಪ್ಯೂಟರು - ಮೊಬೈಲು ಬಂದು ವಿದ್ಯಾರ್ಥಿಗಳೆಲ್ಲ ಹಾಳಾಗಿ ಹೋದ್ರು" ಎಂದು ಬೈಯುವವರೂ ಅವುಗಳ ಪರಿಣಾಮಕಾರಿ ಬಳಕೆ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರಬಲ್ಲದು ಎಂದು ಒಪ್ಪುವಂತಹ ಪರಿಸ್ಥಿತಿ ಇದೀಗ ನಿರ್ಮಾಣವಾಗುತ್ತಿದೆ.

ಇಂತಹ ಉದಾಹರಣೆಗಳು ವಿದ್ಯಾರ್ಥಿಗಳ ಬುದ್ಧಿಮತ್ತೆಯನ್ನು ಪೋಷಿಸುವ ಅನೇಕ ಹೊಸ ಮಾರ್ಗಗಳನ್ನು ತೋರಿಸುತ್ತವೆ, ನಿಜ. ಆದರೆ ಬುದ್ಧಿಮತ್ತೆಯೆನ್ನುವುದೇನು ಬರೀ ಮನುಷ್ಯರ ಸ್ವತ್ತೇ? ಜೀವವೇ ಇಲ್ಲದ ಯಂತ್ರಗಳಲ್ಲೂ ಬುದ್ಧಿಮತ್ತೆಯನ್ನು ವಿಕಾಸಗೊಳಿಸಲು ಇದೇ ಮಾಹಿತಿ ತಂತ್ರಜ್ಞಾನದ ಸವಲತ್ತುಗಳನ್ನು ಬಳಸಲಾಗುತ್ತಿದೆ.

ಶನಿವಾರ, ಜನವರಿ 13, 2018

ಇಜ್ಞಾನ ವಿಶೇಷ: 'ಮೆಲ್ಟ್‌ಡೌನ್' ಮತ್ತು 'ಸ್ಪೆಕ್ಟರ್' ಸುತ್ತ ಇಷ್ಟೆಲ್ಲ ಭಯ ಏಕೆ?

ಉದಯ ಶಂಕರ ಪುರಾಣಿಕ


ಜನವರಿ ೧, ೨೦೧೮ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಜಗತ್ತು ಮುಳುಗಿತ್ತು. ವರ್ಷ ೨೦೧೭ರ ಅಂತ್ಯದಲ್ಲಿ ನಿರೀಕ್ಷಿಸಲಾಗಿದ್ದ ಸುನಾಮಿ, ಪ್ರಳಯ, ಪರಮಾಣು ಯುದ್ಧ ಮೊದಲಾದ ಯಾವುದೂ ಸಂಭವಿಸದಿರುವುದು ಜನರಿಗೆ ನೆಮ್ಮದಿ ತಂದಿತ್ತು.

ಇದಾದ ಎರಡೇ ದಿನಕ್ಕೆ - ಜನವರಿ ೩, ೨೦೧೮ರಂದು ಗೂಗಲ್‌ನ 'ಪ್ರಾಜೆಕ್ಟ್ ಜೀರೋ' ಮತ್ತು ಇನ್ನಿತರ ಯೋಜನೆಗಳಲ್ಲಿ ಕೆಲಸ ಮಾಡುವ ತಂತ್ರಜ್ಞರು, ಸೆಂಟ್ರಲ್ ಪ್ರಾಸೆಸಿಂಗ್ ಯುನಿಟ್‌ಗಳ (ಸಿಪಿಯು) ವಿನ್ಯಾಸದಲ್ಲಿ ಕಂಡು ಬಂದ ಮೂರು ದೋಷಗಳ ಮಾಹಿತಿಯನ್ನು ಬಿಡುಗಡೆ ಮಾಡಿದರು.

ಸೋಮವಾರ, ಜನವರಿ 8, 2018

ಕಂಪ್ಯೂಟರ್ ಜೊತೆ ಮಾತು-ಕತೆ!

ಟಿ. ಜಿ. ಶ್ರೀನಿಧಿ


ಕಂಪ್ಯೂಟರಿನೊಡನೆ ನಮ್ಮ ಒಡನಾಟದ ಬಹುಪಾಲು ಕೀಲಿಮಣೆ ಹಾಗೂ ಮೌಸ್ ಮೂಲಕವೇ ನಡೆಯುವುದು ಸಾಮಾನ್ಯ. ಮೊಬೈಲ್ ಫೋನುಗಳಲ್ಲೂ ಅಷ್ಟೇ: ಕರೆಮಾಡಬೇಕಾದ ಸಂಖ್ಯೆಯನ್ನು ಒತ್ತಲು, ಸಂದೇಶಗಳನ್ನು ಟೈಪ್ ಮಾಡಲು, ಆಪ್ ಬಳಸಲು ನಾವು ಕೀಲಿಮಣೆಯನ್ನೇ ಹೆಚ್ಚಾಗಿ ಬಳಸುತ್ತೇವೆ. ಕೀಲಿಮಣೆಯಿಲ್ಲದ ಸ್ಮಾರ್ಟ್‌ವಾಚ್‌ನಂತಹ ಸಾಧನಗಳಲ್ಲೂ ನಮ್ಮ ಕೆಲಸ ಸಾಗಬೇಕಾದರೆ ಪರದೆಯನ್ನು ಸ್ಪರ್ಶಿಸುವುದು, ಬೇಕಾದ ಸೌಲಭ್ಯವನ್ನು ಆಯ್ದುಕೊಳ್ಳುವುದು ಅನಿವಾರ್ಯ.

ಇದರ ಅರ್ಥ ಇಷ್ಟೇ, ಯಂತ್ರಗಳ ಜೊತೆಗಿನ ನಮ್ಮ ಸಂವಹನ ಇಂದಿಗೂ ಮೌಖಿಕವಲ್ಲದ (ನಾನ್-ವರ್ಬಲ್) ಮಾರ್ಗಗಳನ್ನೇ ಹೆಚ್ಚಾಗಿ ಅವಲಂಬಿಸಿದೆ. ಕೀಲಿಮಣೆಯ ಕೀಲಿಗಳನ್ನು ಒತ್ತುವುದು, ಟಚ್ ಸ್ಕ್ರೀನ್ ಮೇಲಿನ ಸಂಕೇತಗಳನ್ನು ಸ್ಪರ್ಶಿಸುವುದೆಲ್ಲ ಈ ಬಗೆಯ ಸಂವಹನದ್ದೇ ಉದಾಹರಣೆಗಳು.

ಹೀಗೇಕೆ? ಇತರ ಮನುಷ್ಯರೊಡನೆ ಮಾತನಾಡುವಂತೆ ನಾವು ಯಂತ್ರಗಳೊಡನೆ ಮಾತನಾಡುವುದು ಸಾಧ್ಯವಿಲ್ಲವೇ?

ಶುಕ್ರವಾರ, ಜನವರಿ 5, 2018

ಮೊಬೈಲ್ ಒಳಗಿನ ಸೆನ್ಸರ್ ಸಾಮ್ರಾಜ್ಯ

ಟಿ. ಜಿ. ಶ್ರೀನಿಧಿ


ಬೈಕಿನ ಕೀಲಿ ತಿರುಗಿಸುತ್ತಿದ್ದಂತೆಯೇ ಅದರಲ್ಲಿ ಎಷ್ಟು ಪೆಟ್ರೋಲ್ ಇದೆ ಎಂಬ ಮಾಹಿತಿ ನಮ್ಮ ಕಣ್ಣಿಗೆ ಬೀಳುತ್ತದೆ. ದೊಡ್ಡ ಹೋಟಲಿನಲ್ಲಿ ಊಟ ಮುಗಿಸಿ ಕೈತೊಳೆಯಲು ಹೋದರೆ ಅಲ್ಲಿನ ನಲ್ಲಿ ನಾವು ಕೈಯೊಡ್ಡಿದ ಕೂಡಲೇ ಸ್ವಯಂಚಾಲಿತವಾಗಿ ನೀರು ಬಿಡುತ್ತದೆ. ರಿವರ್ಸ್ ಗೇರಿನಲ್ಲಿದ್ದಾಗ ಯಾವುದಾದರೂ ವಸ್ತುವೋ ವ್ಯಕ್ತಿಯೋ ಅಡ್ಡಬಂದರೆ ಸದ್ದುಮಾಡಿ ಎಚ್ಚರಿಸುವ ವ್ಯವಸ್ಥೆ ಕೆಲ ಕಾರುಗಳಲ್ಲಿರುವುದೂ ನಮಗೆ ಗೊತ್ತು.

ಇದನ್ನೆಲ್ಲ ಸಾಧ್ಯವಾಗಿಸುವುದು ಸೆನ್ಸರ್ ಎಂಬ ವಸ್ತು. ಸೆನ್ಸರುಗಳನ್ನು ಕನ್ನಡದಲ್ಲಿ 'ಸಂವೇದಿ'ಗಳೆಂದು ಕರೆಯುತ್ತಾರೆ. ನಿರ್ದಿಷ್ಟ ಸಂಗತಿಗಳನ್ನು ಗ್ರಹಿಸಿ ಅದಕ್ಕೆ ಪೂರ್ವನಿರ್ಧಾರಿತ ಪ್ರತಿಕ್ರಿಯೆ ನೀಡುವುದು (ಉದಾ: ಬೈಕಿನಲ್ಲಿರುವ ಪೆಟ್ರೋಲ್ ಪ್ರಮಾಣವನ್ನು ಮಾಪಕದಲ್ಲಿ ತೋರಿಸುವುದು) ಇವುಗಳ ಕೆಲಸ.

ನಾವು ಪ್ರತಿದಿನವೂ ಬಳಸುವ ಸ್ಮಾರ್ಟ್‌ಫೋನುಗಳಲ್ಲೂ ಇಂತಹ ಅನೇಕ ಸೆನ್ಸರುಗಳಿರುತ್ತವೆ, ಮತ್ತು ನಮಗೆ ಗೊತ್ತಿಲ್ಲದೆಯೇ ನಾವು ಅವುಗಳ ಪ್ರಯೋಜನ ಪಡೆಯುತ್ತಿರುತ್ತೇವೆ.

ಸೋಮವಾರ, ಜನವರಿ 1, 2018

ಕಾರ್ಡ್ ಕತೆ

ಟಿ. ಜಿ. ಶ್ರೀನಿಧಿ


'ಕ್ಯಾಶ್‌ಲೆಸ್' ಎಂದಕೂಡಲೇ ನಮಗೆ ನೆನಪಾಗುವ ಸಂಗತಿಗಳಲ್ಲಿ ಕಾರ್ಡುಗಳಿಗೆ ಮೊದಲ ಸ್ಥಾನ. ಎಟಿಎಂ ಕಾರ್ಡ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ - ಹೀಗೆ ಒಂದಲ್ಲ ಒಂದು ಬಗೆಯ ಕಾರ್ಡಿನ ಪರಿಚಯ ನಮ್ಮೆಲ್ಲರಿಗೂ ಉಂಟಲ್ಲ!

'ಪ್ಲಾಸ್ಟಿಕ್ ಹಣ' ಎಂದು ಕರೆಸಿಕೊಳ್ಳುವ ಈ ಕಾರ್ಡುಗಳ ಕಾರ್ಯವೈಖರಿ ಮೇಲ್ನೋಟಕ್ಕೆ ಬಹಳ ಸರಳ ಎನ್ನಿಸುತ್ತದೆ: ನಿಮ್ಮ ಕಾರ್ಡ್ ವಿವರವನ್ನೂ ಹಣ ಪಡೆದುಕೊಳ್ಳಲು ದೃಢೀಕರಣವನ್ನೂ ನೀವು ಅಂಗಡಿಯವರಿಗೆ ನೀಡುತ್ತೀರಿ, ಅವರು ಅದನ್ನು ಬ್ಯಾಂಕಿಗೆ ಕಳಿಸಿ ನಿಮ್ಮ ಖಾತೆಯಿಂದ ತಮ್ಮ ಖಾತೆಗೆ ಹಣ ಪಡೆದುಕೊಳ್ಳುತ್ತಾರೆ.

ಅದೆಲ್ಲ ಸರಿ, ಆದರೆ ಇಷ್ಟೇ ಅಗಲದ ಆ ಕಾರ್ಡು ಇಷ್ಟೆಲ್ಲ ಮಾಡುವುದು ಹೇಗೆ?

ಗುರುವಾರ, ಡಿಸೆಂಬರ್ 28, 2017

ಮೊಬೈಲ್ ಫೋನ್: ಇನ್ನೂ ಮುಗಿದಿಲ್ಲ ಬದಲಾವಣೆಯ ಸಮಯ!

ಟಿ. ಜಿ. ಶ್ರೀನಿಧಿ

ಅತ್ಯಂತ ಕಡಿಮೆ ಅವಧಿಯಲ್ಲಿ ಅತ್ಯಂತ ಹೆಚ್ಚು ಬದಲಾವಣೆಗಳನ್ನು ಕಂಡಿರುವ, ಕಾಣುತ್ತಿರುವ ಸಾಧನಗಳ ಪೈಕಿ ದೂರವಾಣಿಗೆ ಪ್ರಮುಖ ಸ್ಥಾನವಿದೆ. ರಸ್ತೆಗೊಂದು, ಊರಿಗೊಂದು ಇರುತ್ತಿದ್ದ ಫೋನುಗಳು ಪ್ರತಿ ಮನೆಗೆ, ಪ್ರತಿ ಕೈಗೂ ತಲುಪಿರುವುದು ಎಷ್ಟು ದೊಡ್ಡ ಸಾಧನೆಯೋ ದೂರವಾಣಿಯ ರೂಪರೇಷೆಯಲ್ಲಿ ಆಗಿರುವ ಬದಲಾವಣೆಯೂ ಅಷ್ಟೇ ಮಹತ್ವದ ಸಾಧನೆ.

ನಾವೆಲ್ಲ ಚಿಕ್ಕವರಾಗಿದ್ದಾಗ ನಮ್ಮ ದೊಡ್ಡಪ್ಪನ ಮನೆಯಲ್ಲೊಂದು ದೂರವಾಣಿ ಇತ್ತು. ಫೋನನ್ನು ನೋಡುವುದೇ ಅಪರೂಪವಾಗಿದ್ದ  ಆ ಕಾಲದಲ್ಲಿ ಕೇಜಿ ತೂಕದ ಆ ಫೋನಿನ ರಿಸೀವರ್ ಎತ್ತಿ ಮಾತನಾಡುವುದೇ ಒಂದು ವಿಶೇಷ ಅನುಭವ. ಯಾವುದಾದರೂ ಕರೆಬಂದಾಗ ಅದನ್ನು ರಿಸೀವ್ ಮಾಡುವವರು ಯಾರು ಎನ್ನುವುದನ್ನು ತೀರ್ಮಾನಿಸಲು ಮಕ್ಕಳ ನಡುವೆ ಜಗಳ ನಡೆಯುತ್ತಿದ್ದದ್ದೂ ಉಂಟು.

ಈಗ, ನೂರು ಗ್ರಾಮ್ ಆಸುಪಾಸು ತೂಗುವ - ಕೆಲವೇ ಮಿಲೀಮೀಟರ್ ದಪ್ಪದ ಮೊಬೈಲುಗಳನ್ನು ನೋಡಿದಾಗ ದೂರವಾಣಿಯ ರೂಪಾಂತರ ಪರ್ವ ಸಂಪೂರ್ಣವಾಗಿದೆ ಎನ್ನಿಸದಿರದು. ಬರಿಯ ಮಾತನಾಡಲಷ್ಟೇ ಬಳಸಬಹುದಾಗಿದ್ದ ಅಷ್ಟುದೊಡ್ಡ ಯಂತ್ರದಿಂದ ಅಂಗೈ ಮೇಲಿನ ಕಂಪ್ಯೂಟರಿನಂತಹ ಇಂದಿನ ಗ್ಯಾಜೆಟ್‌ವರೆಗೆ ದೂರವಾಣಿ ಸಾಗಿಬಂದಿರುವ ಹಾದಿಯನ್ನು ನೋಡಿದಾಗ ಇನ್ನೇನು ತಾನೇ ಬದಲಾಗಲು ಸಾಧ್ಯ ಎಂಬ ಪ್ರಶ್ನೆ ಮೂಡಿದರೆ ಅದರಲ್ಲಿ ತಪ್ಪೂ ಇಲ್ಲ ಬಿಡಿ. ಆದರೆ ದೂರವಾಣಿಯ ಸ್ವರೂಪ ಬದಲಾಗುವ ಈ ಪ್ರಕ್ರಿಯೆ ಇನ್ನೂ ಮುಗಿದಿಲ್ಲ!

ಸೋಮವಾರ, ಡಿಸೆಂಬರ್ 25, 2017

ಮುಂದಿನ ಗುರಿ ಸ್ವಚ್ಛ ಬಾಹ್ಯಾಕಾಶ!

ಟಿ. ಜಿ. ಶ್ರೀನಿಧಿ


ಬೆಳಿಗ್ಗೆ ಟ್ಯಾಕ್ಸಿ ಹಿಡಿದು ಆಫೀಸಿಗೆ ಹೋಗುವುದರಿಂದ ಪ್ರಾರಂಭಿಸಿ ಸಂಜೆ ಮನೆಯಲ್ಲಿ ಕುಳಿತು ಧಾರಾವಾಹಿ ನೋಡುವವರೆಗೆ ದಿನನಿತ್ಯದ ಅದೆಷ್ಟೋ ಕೆಲಸಗಳು ಕೃತಕ ಉಪಗ್ರಹಗಳನ್ನು ಅವಲಂಬಿಸಿರುವ ವಿಷಯ ನಮಗೆಲ್ಲ ಗೊತ್ತೇ ಇದೆ. ಬಾಹ್ಯಾಕಾಶ ವಿಜ್ಞಾನದ ಹೊಸ ಸಾಧನೆಗಳ ಬಗೆಗೂ ನಾವು ಆಗಿಂದಾಗ್ಗೆ ಕೇಳುತ್ತಿರುತ್ತೇವೆ. ಹೊಸ ಉಪಗ್ರಹಗಳು ಗಗನಕ್ಕೆ ಚಿಮ್ಮಿದಂತೆಲ್ಲ ಹೊಸ ಸಾಧ್ಯತೆಗಳು ನಮ್ಮೆದುರು ತೆರೆದುಕೊಳ್ಳುತ್ತಲೇ ಹೋಗುತ್ತವೆ ಎನ್ನುವುದು ನಮ್ಮಲ್ಲಿ ಅನೇಕರ ಅಭಿಪ್ರಾಯ.

ಗುರುವಾರ, ಡಿಸೆಂಬರ್ 21, 2017

ಜಿಯೋಫೋನ್ ಬಂದಿದೆ, ಅದರಲ್ಲಿ ಏನಿದೆ?

ಅಭಿಷೇಕ್ ಜಿ. ಎಸ್.

ರಿಲಯನ್ಸ್‌ ಸಂಸ್ಥೆಯ ಜಿಯೋ ಉಚಿತ ಅಂತರ್ಜಾಲ ಸೇವೆಗಳನ್ನು ನೀಡುವುದರ ಮೂಲಕ ಬಹು ಬೇಗನೆ ಬಳಕೆದಾರರನ್ನು ತಲುಪಿದ್ದು ನಮಗೆಲ್ಲ ಗೊತ್ತೇ ಇದೆ. ಭಾರತದಾದ್ಯಂತ ಕೋಟ್ಯಂತರ ಬಳಕೆದಾರರು ಇದೀಗ ಜಿಯೋ ಸೇವೆಗಳನ್ನು ಬಳಸುತ್ತಿದ್ದಾರೆ.

ಇತರ ಸಂಸ್ಥೆಗಳಂತೆ ಮೊಬೈಲ್ ಸೇವೆಗಳಿಗೆ ಮಾತ್ರ ಸೀಮಿತವಾಗಿ ಉಳಿಯಲು ಬಯಸದ ಜಿಯೋ ಈಚೆಗೆ 'ಇಂಡಿಯಾದ ಸ್ಮಾರ್ಟ್‌ಫೋನ್' ಎಂಬ ಘೋಷಣೆಯೊಂದಿಗೆ ತನ್ನ ಮೊದಲ ಮೊಬೈಲ್ ಫೋನ್ ಆದ 'ಜಿಯೋಫೋನ್' ಅನ್ನು ಮಾರುಕಟ್ಟೆಗೆ ತಂದಿದೆ.

ಸೋಮವಾರ, ಡಿಸೆಂಬರ್ 18, 2017

ತೂಕ - ಕೌತುಕ!

ವಿನಾಯಕ ಕಾಮತ್


ಒಂದು ಸರಳ ಪ್ರಶ್ನೆ.

ಎರಡು ವಸ್ತುಗಳಿವೆ. ಒಂದು ಭೂಮಿಯ ಮೇಲಿದ್ದರೆ, ಇನ್ನೊಂದು ಚಂದ್ರನ ಮೇಲಿದೆ. ಆದರೆ ಎರಡೂ ವಸ್ತುಗಳ ತೂಕ (weight) ಒಂದೇ! ಹಾಗಿದ್ದರೆ, ಯಾವುದಕ್ಕೆ ಹೆಚ್ಚಿನ ದ್ರವ್ಯರಾಶಿ (mass) ಇರುತ್ತದೆ? ಮೇಲಿನ ಪ್ರಶ್ನೆಗೆ ನಿಮ್ಮ ಉತ್ತರ, 'ತೂಕ ಒಂದೇ ಎಂದ ಮೇಲೆ ದ್ರವ್ಯರಾಶಿಯೂ ಒಂದೇ ಇರಬೇಕಲ್ಲವೇ?' ಅಥವಾ 'ತೂಕ ಮತ್ತು ದ್ರವ್ಯರಾಶಿಯ ನಡುವೆ ವ್ಯತ್ಯಾಸ ವಿದೆಯೇ?' ಎಂಬುದಾಗಿದ್ದರೆ, ನೀವು ಈ ಲೇಖನವನ್ನು ಖಂಡಿತ ಓದಬೇಕು!

ಗುರುವಾರ, ಡಿಸೆಂಬರ್ 14, 2017

ಸೈಬರ್‍ ಅಪರಾಧಗಳ ಲೋಕದಲ್ಲಿ

ಉದಯ ಶಂಕರ ಪುರಾಣಿಕ


ಇ-ಮೇಲ್‍, ಜಾಲತಾಣ, ಮೊಬೈಲ್ ಫೋನ್‍, ಬ್ಯಾಂಕು ಖಾತೆ, ಖಾಸಗಿ ದಾಖಲೆಗಳು, ವೈಯಕ್ತಿಕ ಮಾಹಿತಿ, ಹೀಗೆ ವಿವಿಧ ರೀತಿಯ ಸೈಬರ್‍ ಅಪರಾಧಗಳನ್ನು ಕುರಿತು ಸುದ್ದಿಗಳನ್ನು ಮಾಧ್ಯಮಗಳು ಪ್ರಕಟಿಸುತ್ತಿವೆ. ಈ ಕೆಲಸ ಮಾಡಿದ ಪಡ್ಡೆ ಹುಡುಗರು ಚೀನಾದಲ್ಲಿದ್ದಾರೆ, ಅವರು ಮನಸ್ಸು ಮಾಡಿದರೆ ಇಡೀ ಭಾರತವನ್ನು ಹ್ಯಾಕ್‍ ಮಾಡಬಲ್ಲರು ಎನ್ನುವಂತಹ ಮಾಹಿತಿಯನ್ನೆಲ್ಲ ಹೆಸರು ಹೇಳಲು ಇಚ್ಛಿಸದ ಸರ್ಕಾರಿ ಅಧಿಕಾರಿ ನೀಡಿದರು, ಸೈಬರ್‍ ಕ್ರೈಂ ವಿಭಾಗದ ಹಿರಿಯ ಅಧಿಕಾರಿ ಹೇಳಿದರು ಎನ್ನುವಂತಹ ವರದಿಗಳೂ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿವೆ.

ಸೋಮವಾರ, ಡಿಸೆಂಬರ್ 11, 2017

ಡೂಪ್ಲಿಕೇಟ್ ಡಾಟ್ ಕಾಮ್!

ಟಿ. ಜಿ. ಶ್ರೀನಿಧಿ


ಬಹುಮಾನದ ಆಮಿಷವನ್ನೋ ಖಾತೆ ಸ್ಥಗಿತಗೊಳಿಸುವ ಬೆದರಿಕೆಯನ್ನೋ ಒಡ್ಡಿ ನಮ್ಮ ಖಾಸಗಿ ಮಾಹಿತಿ ಕದಿಯಲು ಪ್ರಯತ್ನಿಸುವವರ ಹಲವು ಕತೆಗಳನ್ನು ನಾವು ಕೇಳಿದ್ದೇವೆ. ಇಂತಹ ಕುತಂತ್ರಿಗಳ ಗಾಳಕ್ಕೆ ಸಿಲುಕಿ ಮೋಸಹೋದವರ ಬಗೆಗೂ ಪತ್ರಿಕೆಗಳಲ್ಲಿ ಓದಿದ್ದೇವೆ.

ಇವರೆಲ್ಲ ಮೋಸಹೋದದ್ದು ಹೇಗೆಂದು ಹುಡುಕಿಕೊಂಡು ಹೊರಟರೆ ಸಿಗುವ ಉತ್ತರಗಳ ಪೈಕಿ ಅತ್ಯಂತ ಸಾಮಾನ್ಯವಾದದ್ದು - ಇಮೇಲ್ ಅಥವಾ ಎಸ್ಸೆಮ್ಮೆಸ್‌ನಲ್ಲಿ ಬಂದ ಕೊಂಡಿಯನ್ನು ಕ್ಲಿಕ್ ಮಾಡಿದ್ದು, ಆಗ ತೆರೆದುಕೊಂಡ ತಾಣದಲ್ಲಿ ಅದು ಕೇಳಿದ ಮಾಹಿತಿಯನ್ನೆಲ್ಲ ಭರ್ತಿಮಾಡಿದ್ದು!
badge