ಬುಧವಾರ, ಫೆಬ್ರವರಿ 9, 2011

ಪುಟ್ಟ ವಿಳಾಸದ ದೊಡ್ಡ ವಿಲಾಸ

ಟಿ ಜಿ ಶ್ರೀನಿಧಿ

bit.ly/g9X0oN, goo.gl/FrX4, mcaf.ee/27f1a - ಈ ಬಗೆಯ ಪುಟ್ಟಪುಟ್ಟ ವೆಬ್ ವಿಳಾಸಗಳನ್ನು ನೀವು ನೋಡಿರಬಹುದು. 'ಶಾರ್ಟ್ ಯುಆರ್‌ಎಲ್' ಎಂದು ಕರೆಸಿಕೊಳ್ಳುವ ಇಂತಹ ಪುಟ್ಟ ವಿಳಾಸಗಳು ವಿಶ್ವವ್ಯಾಪಿ ಜಾಲದಲ್ಲಿ ಈಗ ಬಹಳ ಜನಪ್ರಿಯವಾಗಿವೆ.

ಯುಆರ್‌ಎಲ್ ಅಂದರೇನು?
ವಿಶ್ವವ್ಯಾಪಿ ಜಾಲದಲ್ಲಿ ಲಭ್ಯವಿರುವ ಕೋಟ್ಯಂತರ ಜಾಲತಾಣಗಳನ್ನು ಪ್ರತ್ಯೇಕವಾಗಿ ಗುರುತಿಸಲು ಅನುವುಮಾಡಿಕೊಡುವ ವಿಳಾಸಕ್ಕೆ ಯೂನಿಫಾರ್ಮ್ ರಿಸೋರ್ಸ್ ಲೊಕೇಟರ್ ಅಥವಾ ಯುಆರ್‌ಎಲ್ ಎಂದು ಹೆಸರು. ಪ್ರತಿಯೊಂದು ಜಾಲತಾಣಕ್ಕೂ ವಿಶಿಷ್ಟವಾದ ಯುಆರ್‌ಎಲ್ ಇರುತ್ತದೆ. ಇದು ಆ ಜಾಲತಾಣದ ವಿಳಾಸಕ್ಕೆ ಸಮಾನ.

ಆದರೆ ಇಂತಹ ವಿಳಾಸಗಳು ಕೆಲವೊಮ್ಮೆ ತೀರಾ ಉದ್ದವಾಗಿರುತ್ತವೆ, ಇಲ್ಲವೇ ನೆನಪಿಟ್ಟುಕೊಳ್ಳಲು ಕಷ್ಟವಾಗುವಂತಿರುತ್ತವೆ. ಉದಯವಾಣಿ ಡಾಟ್ ಕಾಮ್, ಗೂಗಲ್ ಡಾಟ್ ಕಾಂ ಮೊದಲಾದ ವಿಳಾಸಗಳನ್ನು ನೆನಪಿಟ್ಟುಕೊಂಡಷ್ಟು ಸುಲಭವಾಗಿ http://74.127.61.106/epaper/PDFList.aspx?Pg=H&Edn=BN&DispDate=2/1/2011ನಂತಹ ವಿಳಾಸವನ್ನು ನೆನಪಿಡಲು ಆಗುವುದಿಲ್ಲ.

ಪುಟ್ಟ ವಿಳಾಸಗಳ ಅಗತ್ಯ ಉಂಟಾಗುವುದೇ ಇಲ್ಲಿ. ಕಳೆದವಾರ ಈ ಅಂಕಣದಲ್ಲಿ ಪ್ರಕಟವಾಗಿದ್ದ ಬರೆಹವನ್ನು http://e-jnana.blogspot.com/2011/02/blog-post.html ಎಂಬ ವಿಳಾಸದಲ್ಲಿ ನೋಡಿ ಎಂದು ಹೇಳುವ ಬದಲು ಪುಟ್ಟದಾಗಿ goo.gl/eLnpG ನೋಡಿ ಎಂದು ಹೇಳಬಹುದು.

ಇಲ್ಲಿ goo.gl/eLnpG ಎನ್ನುವುದು ಪುಟ್ಟ ವಿಳಾಸಕ್ಕೊಂದು ಉದಾಹರಣೆ. ಮೂಲ ವಿಳಾಸವನ್ನು ದಾಖಲಿಸಿಕೊಂಡು ಅದರ ಬದಲಿಗೆ ಬಳಸಬಹುದಾದ ಇಂತಹ ಪುಟ್ಟ ವಿಳಾಸಗಳನ್ನು ಕೊಡುವ ಅನೇಕ ತಾಣಗಳು ವಿಶ್ವವ್ಯಾಪಿ ಜಾಲದಲ್ಲಿವೆ. bit.ly, ಗೂಗಲ್ ಸಂಸ್ಥೆಯ goo.gl, ಮೆಕಫಿ ಸಂಸ್ಥೆಯ mcaf.ee ಇವೆಲ್ಲ ಈ ಬಗೆಯ ಕೆಲ ತಾಣಗಳು.

ವಿಳಾಸ ಸಂಕ್ಷಿಪ್ತಗೊಳಿಸುವ (ಯುಆರ್‌ಎಲ್ ಶಾರ್ಟನಿಂಗ್) ಸೇವೆ ಒದಗಿಸುವ ಇಂತಹ ಯಾವುದೇ ಜಾಲತಾಣಕ್ಕೆ ಹೋಗಿ ನಿಮಗೆ ಉದ್ದವೆನಿಸುವ ಯಾವುದೇ ವಿಳಾಸವನ್ನು ದಾಖಲಿಸುತ್ತಿದ್ದಂತೆಯೇ ಅದಕ್ಕೆ ಪರ್ಯಾಯವಾದ ಶಾರ್ಟ್ ಯುಆರ್‌ಎಲ್ ಸಿದ್ಧವಾಗುತ್ತದೆ. ಇದನ್ನು ನೀವು ಎಲ್ಲಿ ಯಾರ ಜೊತೆಗೆ ಬೇಕಿದ್ದರೂ ಹಂಚಿಕೊಳ್ಳಬಹುದು. ಮೂಲ ವಿಳಾಸ ಹಾಗೂ ಪುಟ್ಟ ವಿಳಾಸ ಎರಡನ್ನೂ ನೆನಪಿಟ್ಟುಕೊಳ್ಳುವ ಯುಆರ್‌ಎಲ್ ಶಾರ್ಟನಿಂಗ್ ಸೇವೆ ಅವೆರಡನ್ನೂ ಹೊಂದಿಸಿ ಬಳಕೆದಾರರು ಪುಟ್ಟ ವಿಳಾಸ ದಾಖಲಿಸಿದಾಗೆಲ್ಲ ಅವರನ್ನು ಮೂಲ ವಿಳಾಸಕ್ಕೇ ಕರೆದೊಯ್ಯುತ್ತದೆ.

ಪುಟ್ಟ ವಿಳಾಸದ ಒಂದು ದಶಕ
ವಿಶ್ವವ್ಯಾಪಿ ಜಾಲದಲ್ಲಿ ಪುಟ್ಟ ವಿಳಾಸಗಳನ್ನು ಬಳಸುವ ಅಭ್ಯಾಸ ಇತ್ತೀಚಿನದೇನಲ್ಲ. 'ಮೇಕ್ ಎ ಶಾರ್ಟರ್ ಲಿಂಕ್' ಎಂಬ ಜಾಲತಾಣ ೨೦೦೧ರಷ್ಟು ಹಿಂದೆಯೇ ಯುಆರ್‌ಎಲ್ ಶಾರ್ಟನಿಂಗ್ ಸೇವೆ ಒದಗಿಸುತ್ತಿತ್ತು. ನಂತರದ ದಿನಗಳಲ್ಲಿ 'ಟೈನಿ ಯುಆರ್‌ಎಲ್' ಎಂಬ ತಾಣ ಕೂಡ ಸಾಕಷ್ಟು ಹೆಸರುಮಾಡಿತ್ತು.

೨೦೦೬ರಲ್ಲಿ ಕಾಣಿಸಿಕೊಂಡ ಟ್ವೀಟರ್‌ನಿಂದಾಗಿ ಪುಟ್ಟ ವಿಳಾಸಗಳ ಜನಪ್ರಿಯತೆ ಇನ್ನಷ್ಟು ಹೆಚ್ಚಿತು. ಇಲ್ಲಿ ನೂರಾ ನಲವತ್ತು ಅಕ್ಷರಗಳೊಳಗಾಗಿ ಸಂದೇಶಗಳನ್ನು ಬರೆಯಬೇಕಾದ ಅನಿವಾರ್ಯತೆ ಇದ್ದುದರಿಂದ ದೊಡ್ಡದೊಡ್ಡ ವಿಳಾಸಗಳಿಗೆ ಜಾಗವೇ ಇಲ್ಲದಂತಾಯಿತು.

ಇದೀಗ ಟ್ವೀಟರ್‌ನಲ್ಲಿ bit.ly ಎಂಬ ಯುಆರ್‌ಎಲ್ ಶಾರ್ಟನಿಂಗ್ ಸೇವೆ ವ್ಯಾಪಕವಾಗಿ ಬಳಕೆಯಾಗುತ್ತದೆ.

ಪುಟ್ಟದಲ್ಲ ಈ ಸಮಸ್ಯೆ
ಈ ಪುಟ್ಟ ವಿಳಾಸಗಳು ಯಾವ ಮೂಲ ವಿಳಾಸಕ್ಕೆ ಕರೆದೊಯ್ಯುತ್ತವೆ ಎಂದು ಮೇಲ್ನೋಟಕ್ಕೆ ಗೊತ್ತಾಗುವುದಿಲ್ಲ. ಹೀಗಾಗಿ ಇವುಗಳನ್ನು ವೈರಸ್ ಹರಡುವಂತಹ ಕೆಟ್ಟ ಉದ್ದೇಶಗಳಿಗಾಗಿಯೂ ಬಳಸಲಾಗುತ್ತಿದೆ. ಇತ್ತೀಚೆಗೆ ಟ್ವೀಟರ್‌ನಲ್ಲಿ ಕಾಣಿಸಿಕೊಂಡಿದ್ದ ಇಂಥದ್ದೊಂದು ಪುಟ್ಟ ವಿಳಾಸ ಸಾಕಷ್ಟು ತೊಂದರೆ ಉಂಟುಮಾಡಿತ್ತು; ಆ ವಿಳಾಸಕ್ಕೆ ಹೋದವರಿಗೆಲ್ಲ ನಿಮ್ಮ ಗಣಕಕ್ಕೆ ವೈರಸ್ ಬಂದಿದೆ ಎಂದು ಹೆದರಿಸಿ ಆಂಟಿ-ವೈರಸ್ ನೀಡುವ ನೆಪದಲ್ಲಿ ಯಾವುದೋ ಕುತಂತ್ರಾಂಶವನ್ನು ಅವರ ಗಣಕದಲ್ಲಿ ಅನುಸ್ಥಾಪಿಸಲಾಗುತ್ತಿತ್ತು. ಬೇಡದ ತಂತ್ರಾಂಶಕ್ಕೆ ದುಡ್ಡು ಬೇರೆ ಕೊಟ್ಟು ಆ ತಂತ್ರಾಂಶದಿಂದ ಆಗುವ ತೊಂದರೆಯನ್ನೂ ಅನುಭವಿಸುವ ಪಾಡು ಬಳಕೆದಾರರದು!

ಇಂತಹ ತೊಂದರೆ ತಪ್ಪಿಸಿಕೊಳ್ಳಲು ಇರುವ ಒಂದೇ ಮಾರ್ಗ ಅಪರಿಚಿತ ಮೂಲಗಳಿಂದ ಬಂದ, ಅಥವಾ ಸಂದೇಹಾಸ್ಪದ ಸಂದೇಶಗಳಲ್ಲಿರುವ ಪುಟ್ಟ ವಿಳಾಸಗಳ ಕೊಂಡಿಯ ಮೇಲೆ ಕ್ಲಿಕ್ಕಿಸದಿರುವುದು ಎಂದು ತಜ್ಞರು ಹೇಳುತ್ತಾರೆ. ನೀವು ನೋಡಹೊರಟಿರುವ ಪುಟ್ಟ ವಿಳಾಸ ಎಲ್ಲಿಗೆ ಕರೆದೊಯ್ಯಲಿದೆ ಎಂದು ಪರೀಕ್ಷಿಸಿನೋಡುವ ಸೌಲಭ್ಯ ಬಳಸಿಕೊಳ್ಳುವುದೂ ಒಳ್ಳೆಯ ಆಯ್ಕೆಯೇ. mcaf.ee ತಾಣ ಇಂತಹ ಸೌಲಭ್ಯ ಒದಗಿಸುತ್ತಿರುವ ಯುಆರ್‌ಎಲ್ ಶಾರ್ಟನಿಂಗ್ ಸೇವೆಗಳಿಗೊಂದು ಉದಾಹರಣೆ.

ಫೆಬ್ರುವರಿ ೮, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಮಂಗಳವಾರ, ಫೆಬ್ರವರಿ 1, 2011

ಕಂಟ್ರೋಲ್ ಆಲ್ಟ್ ಡಿಲೀಟ್!

ಟಿ ಜಿ ಶ್ರೀನಿಧಿ

ಗಣಕದಲ್ಲಿ ಕೆಲಸಮಾಡುತ್ತಿರುವಾಗ ಕೆಲವೊಮ್ಮೆ ನೀವು ಬಳಸುತ್ತಿದ್ದ ತಂತ್ರಾಂಶ ಇದ್ದಕ್ಕಿದ್ದಹಾಗೆ ದಿಕ್ಕುತೋಚದೆ ಹ್ಯಾಂಗ್ ಆಗುವುದನ್ನು ನೀವು ಗಮನಿಸಿಯೇ ಇರುತ್ತೀರಿ. ಆಗೆಲ್ಲ ನಿಮ್ಮ ಸಹಾಯಕ್ಕೆ ಬರುವುದು ಮೂರು ಬೆರಳಿನ ಸಲಾಮು, ಅರ್ಥಾತ್ ಕಂಟ್ರೋಲ್-ಆಲ್ಟ್-ಡಿಲೀಟ್!

ಗಣಕದ ಕೀಲಿಮಣೆಯಲ್ಲಿ ಕಂಟ್ರೋಲ್, ಆಲ್ಟ್ ಹಾಗೂ ಡಿಲೀಟ್ - ಈ ಮೂರೂ ಕೀಲಿಗಳನ್ನು ಒಟ್ಟಿಗೆ ಒತ್ತುವ ಆಯ್ಕೆಯನ್ನು ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯ ಬಳಕೆದಾರರು ಬಹಳ ವ್ಯಾಪಕವಾಗಿ ಬಳಸುತ್ತಾರೆ. ತಂತ್ರಾಂಶಗಳು ಹ್ಯಾಂಗ್ ಆದಾಗ ಅವುಗಳ ಕೆಲಸವನ್ನು ಬಲವಂತವಾಗಿ ಸ್ಥಗಿತಗೊಳಿಸಲು ಅಥವಾ ಯಾವ ತಂತ್ರಾಂಶವೂ ಪ್ರತಿಕ್ರಿಯೆ ನೀಡದ ಸಂದರ್ಭದಲ್ಲಿ ಗಣಕವನ್ನು ರೀಬೂಟ್ ಮಾಡಲು ಅನುವುಮಾಡಿಕೊಡುವ ರಾಮಬಾಣ ಈ ಕಂಟ್ರೋಲ್-ಆಲ್ಟ್-ಡಿಲೀಟ್.

ಅಷ್ಟೇ ಅಲ್ಲ, ಗಣಕಕ್ಕೆ ಲಾಗ್‌ಆನ್ ಆಗುವಾಗ, ಗುಪ್ತಪದ ಬದಲಿಸಲು, ಟಾಸ್ಕ್ ಮ್ಯಾನೇಜರ್ ತಂತ್ರಾಂಶವನ್ನು ತೆರೆಯಲು, ಲಾಗ್‌ಆಫ್ ಅಥವಾ ಶಟ್‌ಡೌನ್ ಮಾಡಲು - ಹೀಗೆ ಅನೇಕ ಕೆಲಸಗಳಿಗೂ ಇದೇ ಮೂರು ಕೀಲಿಗಳ ಸಂಯೋಜನೆ ಸಹಾಯಮಾಡುತ್ತದೆ. ಓಎಸ್/೨ ಹಾಗೂ ಲಿನಕ್ಸ್ ಕಾರ್ಯಾಚರಣ ವ್ಯವಸ್ಥೆ ಬಳಸುವ ಗಣಕಗಳಲ್ಲೂ ಕಂಟ್ರೋಲ್-ಆಲ್ಟ್-ಡಿಲೀಟ್ ಬಳಸಿ ರೀಬೂಟ್ ಮಾಡುವುದು ಸಾಧ್ಯ. ಇಷ್ಟೆಲ್ಲ ಕೆಲಸಗಳಿಗೆ ಸಹಾಯಮಾಡುವ ಈ ಸಂಯೋಜನೆಗೆ ಮೂರು ಬೆರಳಿನ ಸಲಾಮು ಅಥವಾ ಥ್ರೀ ಫಿಂಗರ್ ಸಲ್ಯೂಟ್ ಎಂಬ ಅಡ್ಡಹೆಸರೂ ಇದೆ.

ಯಾವುದೇ ಕೆಲಸ ಸಾಧಿಸಲು ಕೀಲಿಮಣೆಯಲ್ಲಿ ಮೂರು ಕೀಲಿಗಳನ್ನು ಒಟ್ಟಿಗೆ ಒತ್ತುವ ಕಲ್ಪನೆಯೇ ವಿಚಿತ್ರವಾದದ್ದು. ಅದರಲ್ಲೂ ಕೀಲಿಮಣೆಯ ಒಂದು ಮೂಲೆಯಲ್ಲಿರುವ ಕಂಟ್ರೋಲ್ ಹಾಗೂ ಆಲ್ಟ್ ಜೊತೆಗೆ ಇನ್ನೊಂದು ಮೂಲೆಯಲ್ಲಿರುವ ಡಿಲೀಟ್ ಕೀಲಿಯನ್ನು ಒತ್ತುವುದಂತೂ ಇನ್ನೂ ವಿಚಿತ್ರವಾದ ಕಲ್ಪನೆ. ಆದರೂ ವಿಶ್ವದೆಲ್ಲೆಡೆ ಕೋಟ್ಯಂತರ ಜನರು ಈ ಸಂಯೋಜನೆಯನ್ನು ಹೆಚ್ಚೂಕಡಿಮೆ ಮೂವತ್ತು ವರ್ಷಗಳಿಂದ ಬಳಸುತ್ತಿದ್ದಾರೆ.

ಕಂಟ್ರೋಲ್ ಆಲ್ಟ್ ಡಿಲೀಟ್ ಇಷ್ಟೆಲ್ಲ ಜನಪ್ರಿಯವಾಗುತ್ತದೆ ಎಂಬ ಕಲ್ಪನೆ ಅದರ ಸೃಷ್ಟಿಕರ್ತ ಡೇವಿಡ್ ಬ್ರಾಡ್ಲಿಗೂ ಇರಲಿಲ್ಲವಂತೆ. ೧೯೮೦ರಲ್ಲೋ ೮೧ರಲ್ಲೋ ಆದ ಈ ಸಂಯೋಜನೆಯ ಸೃಷ್ಟಿ ಅಂತಹ ಸ್ಮರಣಾರ್ಹ ಘಟನೆಯೇನೂ ಆಗಿರಲಿಲ್ಲ ಎಂಬುದು ಅವರ ಹೇಳಿಕೆ.

ಆಗ ಐಬಿಎಂ ಸಂಸ್ಥೆಯಲ್ಲಿ 'ಐಬಿಎಂ ಪಿಸಿ'ಯ ಮೇಲೆ ಕೆಲಸ ನಡೆಯುತ್ತಿತ್ತು. ಅದಕ್ಕಾಗಿ ತಂತ್ರಾಂಶಗಳನ್ನು ರೂಪಿಸಿ ಪರೀಕ್ಷಿಸುತ್ತಿದ್ದ ತಂತ್ರಜ್ಞರು ಅನೇಕಬಾರಿ ಗಣಕವನ್ನು ರೀಬೂಟ್ ಮಾಡಬೇಕಾಗುತ್ತಿತ್ತು. ಪ್ರತಿಬಾರಿಯೂ ಗಣಕವನ್ನು ಆರಿಸಿ ಪುನಃ ಚಾಲೂ ಮಾಡುವಾಗ ಪವರ್ ಆನ್ ಸೆಲ್ಫ್ ಟೆಸ್ಟ್(ಪೋಸ್ಟ್)ನಿಂದಾಗಿ ಕೆಲ ನಿಮಿಷಗಳಷ್ಟು ಸಮಯ ವ್ಯಯವಾಗುತ್ತಿತ್ತು. ಇದರ ಬದಲು ಗಣಕವನ್ನು ಆರಿಸದೆಯೇ ರೀಬೂಟ್ ಮಾಡಿದರೆ ಸಾಕಷ್ಟು ಸಮಯದ ಉಳಿತಾಯವಾಗಬಹುದು ಎಂಬ ಆಲೋಚನೆಯ ಪರಿಣಾಮವೇ ಕಂಟ್ರೋಲ್ ಆಲ್ಟ್ ಡಿಲೀಟ್ ಸಂಯೋಜನೆಯ ಸೃಷ್ಟಿ.

ಆಕಸ್ಮಿಕವಾಗಿ ಕೀಲಿಗಳನ್ನು ಒತ್ತುವ ಸಾಧ್ಯತೆ ತಪ್ಪಿಸುವ ಒಂದೇ ಕಾರಣದಿಂದ ಕೀಲಿಮಣೆಯ ವಿರುದ್ಧ ಮೂಲೆಗಳಲ್ಲಿರುವ ಕಂಟ್ರೋಲ್, ಆಲ್ಟ್ ಹಾಗೂ ಡಿಲೀಟ್ ಕೀಲಿಗಳನ್ನು ಈ ಉದ್ದೇಶಕ್ಕಾಗಿ ಆರಿಸಿಕೊಳ್ಳಲಾಯಿತಂತೆ. ಆ ಸಮಯದಲ್ಲಿ ನಮ್ಮನಿಮ್ಮಂತಹ ಗಣಕ ಬಳಕೆದಾರರಿಗೆ ಈ ಆಯ್ಕೆ ಒದಗಿಸುವ ಯಾವ ಉದ್ದೇಶವೂ ಇರಲಿಲ್ಲ ಎನ್ನುವುದು ತಮಾಷೆಯ ಸಂಗತಿ.

ಈ ಕೀಲಿಗಳ ಆಯ್ಕೆಗಾಗಲೀ ಅಥವಾ ಈ ಸಂಯೋಜನೆಯನ್ನು ಬಳಸಿದಾಗ ಗಣಕವನ್ನು ರೀಬೂಟ್ ಮಾಡುವ ತಂತ್ರಾಂಶದ ಸೃಷ್ಟಿಗಾಗಲೀ ಹೆಚ್ಚೇನೂ ಸಮಯ ಹಿಡಿಸಲಿಲ್ಲ ಎಂದು ಬ್ರಾಡ್ಲಿ ಹೇಳುತ್ತಾರೆ. ಗಣಕ ಕ್ಷೇತ್ರದಲ್ಲಿ ಮೂರು ದಶಕಕ್ಕೂ ಹೆಚ್ಚು ಕಾಲ ಕೆಲಸ ಮಾಡಿರುವ ಅವರು ತಮ್ಮ ಸಣ್ಣದೊಂದು ಸೃಷ್ಟಿ ಇಷ್ಟೆಲ್ಲ ಜನಪ್ರಿಯವಾಗುತ್ತದೆ ಎಂದು ಖಂಡಿತಾ ಅಂದುಕೊಂಡಿರಲಿಲ್ಲವಂತೆ.

ಫೆಬ್ರುವರಿ ೧, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಮಂಗಳವಾರ, ಜನವರಿ 25, 2011

ಅಂತರಜಾಲಕ್ಕೂ ಬೆನ್ನೆಲುಬು!

ಟಿ ಜಿ ಶ್ರೀನಿಧಿ

ಮಳೆಗಾಲದಲ್ಲಿ ವಿದ್ಯುತ್ ಹಾಗೂ ದೂರವಾಣಿ ತಂತಿಗಳ ಮೇಲೆ ಕೊಂಬೆಯೋ ಮರವೋ ಬಿದ್ದು ದಿನಗಟ್ಟಲೆ ಸಂಪರ್ಕ ತಪ್ಪಿಹೋಗುವುದು ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯ ಸಂಗತಿ. ಬರಿಯ ಗ್ರಾಮೀಣ ಪ್ರದೇಶಗಳೇ ಏಕೆ, ನಗರಗಳಲ್ಲೂ ಒಮ್ಮೊಮ್ಮೆ ಇಂತಹ ತೊಂದರೆ ಆಗುವುದುಂಟು. ತುಂಡಾದ ತಂತಿ ಸರಿಹೋಗುವ ತನಕ ವಿದ್ಯುತ್ತೂ ಇಲ್ಲ, ದೂರವಾಣಿಯೂ ಇಲ್ಲ. ದೂರವಾಣಿ ಸಂಪರ್ಕದ ತಂತಿ ಕಡಿದುಹೋದರೆ ಅಂತರಜಾಲ ಸಂಪರ್ಕಕ್ಕೂ ಕುತ್ತು.

ಆದರೆ ಇಂತಹ ಸಂದರ್ಭಗಳಲ್ಲಿ ತೊಂದರೆಯಾಗುವುದು ಬಹಳ ಸೀಮಿತ ಪ್ರದೇಶದಲ್ಲಿ ಮಾತ್ರ - ನಗರಪ್ರದೇಶವಾದರೆ ಒಂದೋ ಎರಡೋ ರಸ್ತೆ, ಗ್ರಾಮೀಣ ಪ್ರದೇಶದಲ್ಲಿ ಒಂದೋ ಎರಡೋ ಹಳ್ಳಿ ಅಷ್ಟೆ. ಆದರೆ ದೇಶದೇಶಗಳ ಅಂತರಜಾಲ ಸಂಪರ್ಕವೇ ತಪ್ಪಿಹೋಗುವುದರ ಬಗ್ಗೆ ಕೇಳಿದ್ದೀರಾ?

ಇದು ಖಂಡಿತಾ ತಮಾಷೆಯಲ್ಲ, ಅಂತರಜಾಲದ ಬೆನ್ನೆಲುಬಿಗೆ ತೊಂದರೆಯಾದಾಗ ಇಂತಹ ಸಮಸ್ಯೆ ನಿಜಕ್ಕೂ ಕಾಣಿಸಿಕೊಳ್ಳುತ್ತದೆ!

ಅಂತರಜಾಲದ ಬ್ಯಾಕ್‌ಬೋನ್
ನಮ್ಮ ಮನೆಗಳಿಗೆ ಅಂತರಜಾಲ ಸಂಪರ್ಕ ಒದಗಿಸುವ ಬಿಎಸ್‌ಎನ್‌ಎಲ್, ಏರ್‌ಟೆಲ್ ಮುಂತಾದ ಸಂಸ್ಥೆಗಳನ್ನು ಇಂಟರ್‌ನೆಟ್ ಸರ್ವಿಸ್ ಪ್ರೊವೈಡರ್ ಅಥವಾ ಐಎಸ್‌ಪಿಗಳೆಂದು ಕರೆಯುವುದು ನಿಮಗೆ ಗೊತ್ತೇ ಇದೆ.

ನಮಗೆ ಅಂತರಜಾಲ ಸಂಪರ್ಕ ಒದಗಿಸುವ ಇಂತಹ ಸಂಸ್ಥೆಗಳಿಗೆ ಅವಕ್ಕಿಂತ ದೊಡ್ಡದಾದ ಮತ್ತೊಂದು ಐ.ಎಸ್.ಪಿ.ಯ ಜೊತೆಗೆ ಸಂಪರ್ಕ ಇರುತ್ತದೆ. ಇಂತಹ ದೊಡ್ಡ ಐ.ಎಸ್.ಪಿ.ಗಳಿಗೆ, ಇನ್ನೂ ದೊಡ್ಡ ಐ.ಎಸ್.ಪಿ.ಗಳ ಜೊತೆಗೆ ಸಂಪರ್ಕ ಇರುತ್ತದೆ. ಇಂತಹ ಸಂಪರ್ಕವನ್ನು ಸಾಮಾನ್ಯವಾಗಿ ಉಪಗ್ರಹ ಸಂಕೇತಗಳ ಮೂಲಕ ಏರ್ಪಡಿಸಿಕೊಳ್ಳಲಾಗುತ್ತದೆ.

ಕೊನೆಗೆ ಜಾಗತಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಐ.ಎಸ್.ಪಿ.ಗಳು ತಮ್ಮ ನಡುವೆ ಫೈಬರ್ ಆಪ್ಟಿಕ್ ತಂತುಗಳ ಜಾಲವನ್ನು ನಿರ್ಮಿಸಿಕೊಂಡಿರುತ್ತವೆ. ಇದನ್ನು ಫೈಬರ್ ಆಪ್ಟಿಕ್ ಬ್ಯಾಕ್‌ಬೋನ್ ಎಂದು ಕರೆಯುತ್ತಾರೆ. ಜಾಗತಿಕ ಮಟ್ಟದ ಅಂತರಜಾಲದ ಬೆನ್ನೆಲುಬು ಇದು. ಇವೆಲ್ಲ ಸಂಪರ್ಕಗಳೂ ಒಟ್ಟಾಗಿ ಅಂತರಜಾಲದ ಮೂಲಕ ಇಡೀ ವಿಶ್ವವನ್ನೇ ಒಂದುಗೂಡಿಸುತ್ತವೆ.

ಆಪ್ಟಿಕಲ್ ಫೈಬರ್
ಅತ್ಯಂತ ಶುದ್ಧ ಗಾಜಿನಿಂದ ಪಾರದರ್ಶಕ ಸಲಾಕೆಗಳನ್ನು ತಯಾರಿಸಿ ಅವು ಬಳುಕುವಷ್ಟು ತೆಳ್ಳಗೆ, ಉದ್ದಕ್ಕೆ ಆಗುವ ತನಕ ಜಗ್ಗಿಸಿ ಎಳೆಯುವುದರಿಂದ ಆಪ್ಟಿಕಲ್ ಫೈಬರ್‌ಗಳು ತಯಾರಾಗುತ್ತವೆ. ನಾವು ರಸ್ತೆಬದಿಗಳಲ್ಲಿ ನೋಡುತ್ತೇವಲ್ಲ, ದೂರವಾಣಿ ಸಂಸ್ಥೆಗಳು ಅಳವಡಿಸುವ ಬಣ್ಣಬಣ್ಣದ ದಪ್ಪನೆಯ ಕೊಳವೆಗಳು, ಆ ಕೊಳವೆಗಳ ಒಳಗಿರುವುದು ಇಂತಹವೇ ಆಪ್ಟಿಕಲ್ ಫೈಬರ್‌ಗಳು.

ಈ ಆಪ್ಟಿಕಲ್ ಫೈಬರ್‌ಗಳ ಮೂಲಕ ಅಪಾರ ಪ್ರಮಾಣದ ಮಾಹಿತಿಯನ್ನು ಬೆಳಕಿನ ಕಿರಣಗಳ ರೂಪದಲ್ಲಿ ಅನೇಕ ಕಿಲೋಮೀಟರುಗಳಷ್ಟು ದೂರ ರವಾನಿಸುವುದು ಸಾಧ್ಯ. ಈ ಎಳೆಗಳನ್ನು ಅತ್ಯಂತ ಶುದ್ಧವಾದ ಗಾಜಿನಿಂದ ತಯಾರಿಸಲಾಗುವುದರಿಂದ ಅದರ ಮೂಲಕ ಸಾಗುವ ಬೆಳಕಿನ ಕಿರಣಗಳು ಸಂಪೂರ್ಣ ಆಂತರಿಕ ಪ್ರತಿಫಲನ (ಟೋಟಲ್ ಇಂಟರ್ನಲ್ ರಿಫ್ಲೆಕ್ಷನ್) ಕ್ಕೆ ಒಳಗಾಗುತ್ತವೆ - ಅಂದರೆ, ಬೆಳಕಿನ ಕಿರಣಗಳು ಸಂಪೂರ್ಣವಾಗಿ ಈ ಎಳೆಯೊಳಗೇ ಪ್ರತಿಫಲಿಸಲ್ಪಡುತ್ತದೆ. ಹೀಗಾಗಿ ಆಪ್ಟಿಕಲ್ ಫೈಬರ್‌ಗಳಲ್ಲಿ ಮಾಹಿತಿ ಸೋರಿಕೆ ಬಹಳ ಕಡಿಮೆ ಹಾಗೂ ಮಾಹಿತಿ ಸಂವಹನದ ನಿಖರತೆ ಬಹಳ ಹೆಚ್ಚಾಗಿರುತ್ತದೆ.

ಆಪ್ಟಿಕಲ್ ಫೈಬರ್‌ಗಳ ಈ ವಿಶಿಷ್ಟ ಗುಣದಿಂದಾಗಿಯೇ ಅವು ಈಗ ಅಂತರಜಾಲ, ಸ್ಥಿರ ದೂರವಾಣಿ, ಮೊಬೈಲ್ ಸೇವೆಗಳು ಮುಂತಾದ ಎಲ್ಲ ಮಾಹಿತಿ ಮೂಲಗಳಿಗೂ ಬೆನ್ನೆಲುಬಿನಂತೆ ಆಗಿಬಿಟ್ಟಿವೆ. ಅಂತರಜಾಲ ಸಂಪರ್ಕಕ್ಕಾಗಿ ಬಳಕೆಯಾಗುವ ಫೈಬರ್ ಆಪ್ಟಿಕ್ ಬ್ಯಾಕ್‌ಬೋನ್‌ಗಳಂತೂ ವಿಶ್ವದ ಮೂಲೆಮೂಲೆಗಳನ್ನು ಸಂಪರ್ಕಿಸುತ್ತಿವೆ.

ಬೆನ್ನೆಲುಬಿನ ಸಮಸ್ಯೆ
ಫೈಬರ್ ಆಪ್ಟಿಕ್ ಬ್ಯಾಕ್‌ಬೋನ್‌ಗಳ ಮೂಲಕ ನಡೆಯುವ ಸಂವಹನಕ್ಕೆ ಸಬ್‌ಮರೀನ್ ಕಮ್ಯೂನಿಕೇಷನ್ಸ್ ಕೇಬಲ್‌ಗಳನ್ನು ಬಳಸಲಾಗುತ್ತದೆ; ಅಂದರೆ, ಈ ಕೇಬಲ್‌ಗಳು ಸಮುದ್ರದ ಆಳದಲ್ಲಿರುತ್ತವೆ. ಅಂತರರಾಷ್ಟ್ರೀಯ ದೂರವಾಣಿ ಕರೆಗಳಿಗೂ ಈ ಕೇಬಲ್‌ಗಳೇ ಬೇಕು. ವಿಶ್ವದ ಯಾವುದೋ ಮೂಲೆಯಲ್ಲಿರುವ ವ್ಯಕ್ತಿ ಇನ್ನಾವುದೋ ಮೂಲೆಯಲ್ಲಿರುವ ಮತ್ತೊಬ್ಬರನ್ನು ಸಂಪರ್ಕಿಸಬೇಕಾದರೆ ಆ ಸಂವಹನಕ್ಕೆ ಸಮುದ್ರದಾಳದ ಈ ಕೇಬಲ್ಲುಗಳೇ ಜೀವಾಳ. ಅನೇಕ ಸರಕಾರಗಳು ಹಾಗೂ ಖಾಸಗಿ ಸಂಸ್ಥೆಗಳ ಒಡೆತನದಲ್ಲಿ ಕಾರ್ಯನಿರ್ವಹಿಸುವ ಈ ಬಗೆಯ ಕೇಬಲ್ಲುಗಳ ಜಾಲ ಅಂಟಾರ್ಕ್‌ಟಿಕಾ ಹೊರತುಪಡಿಸಿ ಬೇರೆಲ್ಲ ಖಂಡಗಳನ್ನೂ ಪರಸ್ಪರ ಸಂಪರ್ಕಿಸುತ್ತದೆ.

ಹೀಗಾಗಿಯೇ ಈ ಕೇಬಲ್‌ಗಳಿಗೆ ಏನಾದರೂ ತೊಂದರೆಯಾದಾಗ ಬಹುದೊಡ್ಡ ಪ್ರದೇಶದ ಸಂಪರ್ಕವ್ಯವಸ್ಥೆಗೆ ಕುತ್ತುಬರುತ್ತದೆ. ೨೦೦೮ರಲ್ಲಿ ಎರಡು ಬಾರಿ ನಮ್ಮೆಲ್ಲರ ಅಂತರಜಾಲ ಸಂಪರ್ಕಗಳು ಏಕಾಏಕಿ ಕೈಕೊಟ್ಟಿದ್ದು ನಿಮಗೆ ನೆನಪಿರಬಹುದು, ಯುರೋಪ್ ಹಾಗೂ ಮಧ್ಯಪ್ರಾಚ್ಯದ ರಾಷ್ಟ್ರಗಳನ್ನು ಭಾರತಕ್ಕೆ ಸಂಪರ್ಕಿಸುವ ಸಬ್‌ಮರೀನ್ ಕೇಬಲ್ಲುಗಳಲ್ಲಿ ಕೆಲವು ಈಜಿಪ್ಟ್ ಸಮೀಪದಲ್ಲಿ ತುಂಡಾದದ್ದು ಈ ಘಟನೆಗೆ ಕಾರಣವಾಗಿತ್ತು. ತೀರಾ ಇತ್ತೀಚೆಗೆ, ೨೦೧೦ರ ಕೊನೆಯ ಭಾಗದಲ್ಲಿ ಕೂಡ ಇಂತಹವೇ ಕೆಲ ಕೇಬಲ್ಲುಗಳು ಕತ್ತರಿಸಿಹೋಗಿದ್ದರಿಂದ ಆಫ್ರಿಕಾ ಖಂಡದ ಬಹುಭಾಗದಲ್ಲಿ ಅಂತರಜಾಲ ಸಂಪರ್ಕ ಕಡಿದುಹೋಗಿತ್ತು.

ಸುಮಾರು ಎರಡೂಮುಕ್ಕಾಲು ಇಂಚು ಅಥವಾ ಅದಕ್ಕಿಂತ ಕಡಿಮೆ ವ್ಯಾಸದ, ಪ್ರತಿ ಮೀಟರ್ ಉದ್ದಕ್ಕೆ ಹೆಚ್ಚೂಕಡಿಮೆ ಹತ್ತು ಕಿಲೋಗ್ರಾಮ್ ತೂಕ ಹೊಂದಿರುವ ಈ ಕೇಬಲ್‌ಗಳ ಮಹತ್ವ ಅಂತರಜಾಲ ಲೋಕದ ಮಟ್ಟಿಗೆ ಅತ್ಯಂತ ಮಹತ್ವದ್ದು. ಇವುಗಳ ಮೂರ್ತಿ ಅಂಥಾ ಚಿಕ್ಕದೇನಲ್ಲ, ನಿಜ. ಆದರೆ ಕೀರ್ತಿ ಮಾತ್ರ ಬಹಳ ದೊಡ್ಡದು!

ಜನವರಿ ೨೫, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಶುಕ್ರವಾರ, ಜನವರಿ 21, 2011

ಸ್ನಾನ - ವಿಜ್ಞಾನ

ತುಂಬಾ ಹಿಂದೆ ಗ್ರೀಸ್ ದೇಶದಲ್ಲಿ ಒಬ್ಬ ರಾಜನಿದ್ದನಂತೆ. ಅವನು ಹೊಸದೊಂದು ಕಿರೀಟ ಮಾಡಿಸಿದ್ದ. ಆ ಕಿರೀಟ ಸಿದ್ಧವಾಗಿ ಬಂದ ಮೇಲೆ ಅವನಿಗೇಕೋ ಆ ಕಿರೀಟದ ಚಿನ್ನದಲ್ಲಿ ಕಲಬೆರಕೆ ಆಗಿರಬಹುದು ಎಂಬ ಸಂಶಯ ಬಂತು; ಈ ಸಂಶಯ ಯಾರು ನಿವಾರಿಸುತ್ತೀರೋ ಅವರಿಗೆ ಬಹುಮಾನ ಕೊಡುತ್ತೇನೆ ಎಂದು ಸವಾಲು ಹಾಕಿದ.

ಅವನ ಆಸ್ಥಾನದಲ್ಲಿ ಆರ್ಕಿಮಿಡಿಸ್ ಎಂಬ ವ್ಯಕ್ತಿ ಇದ್ದ. ಏನಾದರೂ ಮಾಡಿ ರಾಜನ ಸಂಶಯ ನಿವಾರಿಸಲೇಬೇಕು ಎಂದುಕೊಂಡ ಆತ ಅದರ ಬಗ್ಗೆ ಯೋಚಿಸಲು ಶುರುಮಾಡಿದ. ವಸ್ತುವಿನ ಸಾಂದ್ರತೆಗೆ ತಕ್ಕಂತೆ ಅದರ ಗಾತ್ರದಲ್ಲಿ ವ್ಯತ್ಯಾಸವಿರುತ್ತದೆ ಎನ್ನುವುದು ಅವನಿಗೆ ಗೊತ್ತಿತ್ತು. ಆದರೆ ಬೆರಕೆ ಲೋಹದಲ್ಲಿ ಯಾವ ಲೋಹ ಎಷ್ಟು ಮಿಶ್ರವಾಗಿದೆ ಎಂಬುದನ್ನು ಹೇಗೆ ಗುರುತಿಸಬೇಕು ಎನ್ನುವುದು ಗೊತ್ತಿರಲಿಲ್ಲ.

ಅವನು ಅದೇ ವಿಷಯದ ಬಗ್ಗೆ ಹಗಲೂ ರಾತ್ರಿ ಯೋಚಿಸುತ್ತಲೇ ಇದ್ದ. ಅವನ ಏಕಾಗ್ರತೆ ಎಷ್ಟರ ಮಟ್ಟಿಗೆ ಇತ್ತು ಎಂದರೆ ಸ್ನಾನ ಮಾಡುವಾಗಲೂ ಅದನ್ನೇ ಯೋಚಿಸುತ್ತ ಸ್ನಾನದ ತೊಟ್ಟಿಗೆ ಇಳಿದ.

ಅವನು ನೀರಿನ ತೊಟ್ಟಿಯೊಳಕ್ಕೆ ಇಳಿದ ತಕ್ಷಣ ಒಂದಷ್ಟು ನೀರು ಹೊರಚೆಲ್ಲಿತು. ಅದನ್ನು ನೋಡಿದ ತಕ್ಷಣ ಆರ್ಕಿಮಿಡಿಸ್‌ಗೆ ಅವನ ಗಾತ್ರ ಹಾಗೂ ತೊಟ್ಟಿಯಿಂದ ಹೊರಚೆಲ್ಲಿದ ನೀರಿನ ನಡುವೆ ಇರುವ ಸಂಬಂಧ ಹೊಳೆಯಿತು. ಈ ಖುಷಿಯಲ್ಲಿ ಆತ ಬಟ್ಟೆಯನ್ನೂ ಹಾಕಿಕೊಳ್ಳದೆ ಯುರೇಕಾ! ಯುರೇಕಾ!! (ನಾನು ಕಂಡುಹಿಡಿದೆ! ನಾನು ಕಂಡುಹಿಡಿದೆ!!) ಎಂದು ಕೂಗುತ್ತ ರಾಜನ ಹತ್ತಿರ ಓಡಿಹೋದನಂತೆ.

ಒಂದೇ ತೂಕದ ಚಿನ್ನದ ಗಾತ್ರಕ್ಕೂ ಕಲಬೆರಕೆಯಾಗಿದ್ದ ಲೋಹದ ಗಾತ್ರಕ್ಕೂ ವ್ಯತ್ಯಾಸವಿರುತ್ತದೆ. ಆರ್ಕಿಮಿಡಿಸ್ ಮೊದಲು ಕಿರೀಟದಷ್ಟೇ ತೂಕದ ಶುದ್ಧ ಚಿನ್ನ ತೆಗೆದುಕೊಂಡು ನೀರಿನಲ್ಲಿ ಮುಳುಗಿಸಿದಾಗ ಅದೆಷ್ಟು ನೀರನ್ನು ಹೊರಚೆಲ್ಲುತ್ತದೆ ಎನ್ನುವುದನ್ನು ಪತ್ತೆಮಾಡಿದ; ಆನಂತರ ಕಿರೀಟವನ್ನು ಮುಳುಗಿಸಿ ಅದು ಹೊರಚೆಲ್ಲಿದ ನೀರನ್ನು ಅಳೆದ. ಇದೆರಡರಲ್ಲೂ ವ್ಯತ್ಯಾಸ ಕಂಡುಬಂದಿದ್ದರಿಂದ ಕಿರೀಟದಲ್ಲಿ ಬಳಸಿದ ಚಿನ್ನ ಕಲಬೆರಕೆಯಾಗಿತ್ತು ಎನ್ನುವುದು ಆರ್ಕಿಮಿಡಿಸ್‌ಗೆ ಗೊತ್ತಾಯಿತು.

ಬಟ್ಟೆಹಾಕಿಕೊಳ್ಳದೆ ಸ್ನಾನದ ಮನೆಯಿಂದ ಓಡಿಹೋದ ಘಟನೆ ನಿಜವಾಗಿಯೂ ನಡೆದಿತ್ತೋ ಇಲ್ಲವೋ, ಆದರೆ ಆರ್ಕಿಮಿಡಿಸ್ ಈ ವಿಷಯದಲ್ಲಿ ಅನೇಕ ಸಂಶೋಧನೆಗಳನ್ನು ಮಾಡಿದ್ದಂತೂ ನಿಜ.

ನೀವು ಯಾವಾಗಲಾದರೂ ಕೆರೆ ಅಥವಾ ಬಾವಿಯೊಳಕ್ಕೆ ಕಲ್ಲೆಸೆದಿದ್ದೀರಾ? ಆ ಕಲ್ಲು ಎಷ್ಟೇ ಚಿಕ್ಕದಾಗಿದ್ದರೂ ತಕ್ಷಣ ಮುಳುಗಿಹೋಗುತ್ತದೆ ತಾನೆ? ಆದರೆ ಸಾವಿರಾರು ಕೆಜಿ ತೂಗುವ ಹಡಗುಗಳು ಮಾತ್ರ ನೀರಿನಲ್ಲಿ ಮುಳುಗದೆ ತೇಲುವುದು ಹೇಗೆ? ಈ ಪ್ರಶ್ನೆಗೆ ಆರ್ಕಿಮಿಡಿಸ್ ಸಿದ್ಧಾಂತ ಉತ್ತರ ನೀಡುತ್ತದೆ. ಹಡಗು ತನ್ನ ತೂಕಕ್ಕೆ ಸರಿಸಮನಾದಷ್ಟು ನೀರನ್ನು ಮಾತ್ರವೇ ತನ್ನ ಬುಡದಿಂದ ಆಚೀಚೆತಳ್ಳುವುದರಿಂದ ಅದು ಮುಳುಗದೆ ತೇಲುತ್ತದೆ ಎಂದು ಆತ ವಿವರಿಸಿದ.

ಆಯಾಸವಿಲ್ಲದೆ ಭಾರವಾದ ವಸ್ತುಗಳನ್ನು ಎತ್ತಲು ಅನುಕೂಲ ಮಾಡಿಕೊಡುವ ಸನ್ನೆ ತತ್ವವನ್ನೂ ಆತನೇ ಕಂಡುಹಿಡಿದದ್ದು ಎಂದು ಹೇಳುತ್ತಾರೆ. ಈ ಮಹಾನ್ ವ್ಯಕ್ತಿ ಕ್ರಿ. ಪೂ. ೨೮೭ರಿಂದ ೨೧೨ರ ನಡುವೆ ಜೀವಿಸಿದ್ದ.

ಚಿಣ್ಣರ ಚೇತನ ಗೋಡೆ ಪತ್ರಿಕೆಯ ೨೦೧೧ ಜನವರಿ ೧-೧೫ ಸಂಚಿಕೆಯಲ್ಲಿ ಪ್ರಕಟವಾದ ಲೇಖನ

ಮಂಗಳವಾರ, ಜನವರಿ 18, 2011

ಜಾಲಲೋಕದಲ್ಲಿ ಮೋಸದ ಗಾಳ

ಟಿ ಜಿ ಶ್ರೀನಿಧಿ

ನಿಮ್ಮ ಬ್ಯಾಂಕಿನ ಹೆಸರಿನಲ್ಲಿ ನಿಮಗೊಂದು ಇಮೇಲ್ ಸಂದೇಶ ಬರುತ್ತದೆ. ಇಂತಹ ಸಂದೇಶ ಸಾಮಾನ್ಯವಾಗಿ ಕೆಳಗಿರುವ ಲಿಂಕ್‌ನ ಮೇಲೆ ಕ್ಲಿಕ್ಕಿಸಿ ನಿಮ್ಮ ಖಾತೆಯ ವಿವರಗಳನ್ನು ದೃಢೀಕರಿಸಿ; ಇಲ್ಲದಿದ್ದರೆ ನಿಮ್ಮ ಖಾತೆಯನ್ನು ಮುಚ್ಚಿಬಿಡುತ್ತೇನೆ ಹುಷಾರ್! ಎಂಬ ಧಾಟಿಯಲ್ಲಿರುತ್ತದೆ. ಅದನ್ನು ನಂಬಿ ನೀವೇನಾದರೂ ನಿಮ್ಮ ವಿವರಗಳನ್ನು ಕೊಟ್ಟಿರೋ, ನಿಮ್ಮ ಖಾತೆಯಲ್ಲಿರುವ ಹಣವೆಲ್ಲ ಒಂದೇ ಬಾರಿಗೆ ಮಂಗಮಾಯವಾಗಿಬಿಡುತ್ತದೆ!

ಇದಕ್ಕೆ ಕಾರಣವಿಷ್ಟೆ: ನಿಮಗೆ ಬಂದ ಸಂದೇಶ ಮೇಲ್ನೋಟಕ್ಕೆ ನೈಜವಾಗಿಯೇ ಕಂಡರೂ ಅದನ್ನು ನಿಮ್ಮ ಬ್ಯಾಂಕು ಕಳುಹಿಸಿರುವುದೇ ಇಲ್ಲ. ಇಷ್ಟರಮೇಲೆ ಆ ಸಂದೇಶದಲ್ಲಿದ್ದ ಲಿಂಕ್‌ನ ಮೇಲೆ ಕ್ಲಿಕ್ಕಿಸಿ ನೀವು ಭೇಟಿಕೊಟ್ಟ ತಾಣ ನಿಮ್ಮ ಬ್ಯಾಂಕಿನದೂ ಆಗಿರುವುದಿಲ್ಲ.

ಇದೇ ಫಿಶಿಂಗ್ - ನಕಲಿ ಇಮೇಲ್ ಹಾಗೂ ಜಾಲತಾಣಗಳ ಸಹಾಯದಿಂದ ಅಂತರಜಾಲ ಬಳಕೆದಾರರ ಖಾಸಗಿ ಮಾಹಿತಿಯನ್ನು ಕದಿಯುವ ಭಾರೀ ಹಗರಣ.

ಈ ಹಗರಣಕ್ಕೆ ಫಿಶಿಂಗ್ (phishing) ಎಂಬ ನಾಮಕರಣವಾದದ್ದು ೧೯೯೬ರಲ್ಲಿ.  ಈ ಹಗರಣ ಗಾಳ ಹಾಕಿ ಮೀನು ಹಿಡಿಯುವ ಹಾಗೆಯೇ ನಡೆಯುವುದರಿಂದ ಇದಕ್ಕೆ ಫಿಶಿಂಗ್ ಎಂದು ಹೆಸರಿಡಲಾಯಿತು, ಈ ಹೆಸರನ್ನು ಪ್ರತ್ಯೇಕವಾಗಿ ಗುರುತಿಸಲು ಸ್ಪೆಲ್ಲಿಂಗ್‌ನಲ್ಲಿ ಮಾತ್ರ ಬದಲಾವಣೆ ಮಾಡಲಾಯಿತು ಎನ್ನುವುದು ಸಾಮಾನ್ಯ ನಂಬಿಕೆ. ಗಣಕಗಳ ಸಹಾಯದಿಂದ ಅನೇಕ ಬಗೆಯ ಅವ್ಯವಹಾರ ನಡೆಸುವ ಹ್ಯಾಕರ್‌ಗಳ ಸಮುದಾಯದಲ್ಲಿ  ಇಂತಹ ವಿಭಿನ್ನ ರೀತಿಯ ಸ್ಪೆಲ್ಲಿಂಗ್ ಬಳಕೆ ಸಾಮಾನ್ಯವಂತೆ.

ಫಿಶಿಂಗ್‌ನ ಸಮಸ್ಯೆ ಈಗ ಇಮೇಲ್‌ಗಳಿಗಷ್ಟೇ ಸೀಮಿತವಾಗಿ ಉಳಿದಿಲ್ಲ. ಎಸ್ಸೆಮ್ಮೆಸ್‌ಗಳು, ಇನ್ಸ್‌ಟೆಂಟ್ ಮೆಸೆಂಜರ್‌ಗಳು, ನಕಲಿ ಜಾಹಿರಾತುಗಳು - ಹೀಗೆ ಎಲ್ಲೆಡೆಗಳಲ್ಲೂ ಹರಡಿಕೊಂಡಿರುವ ಫಿಶಿಂಗ್ ಜಾಲ ಅಂತರಜಾಲ ಬಳಕೆದಾರರ ಖಾಸಗಿ ಮಾಹಿತಿಯನ್ನು ಕದಿಯಲು ಇನ್ನಿಲ್ಲದ ಪ್ರಯತ್ನಗಳನ್ನು ನಡೆಸುತ್ತಿದೆ. ಫಿಶಿಂಗ್‌ಗೆ ಬಲಿಯಾಗುವ ಮಾಹಿತಿಯಲ್ಲಿ ಹಣಕಾಸು ವ್ಯವಹಾರಗಳಿಗೆ ಸಂಬಂಧಪಟ್ಟ ಮಾಹಿತಿಯದೇ ಹೆಚ್ಚಿನ ಪಾಲು; ಆದರೆ ಈ ಮಾಹಿತಿಯ ಜೊತೆಗೆ ಸಮುದಾಯ ತಾಣಗಳು ಹಾಗೂ ಇಮೇಲ್ ಖಾತೆಯ ಪಾಸ್‌ವರ್ಡ್‌ಗಳಂತಹ ಅನೇಕ ಬಗೆಯ ಮಾಹಿತಿಗಳೂ ಫಿಶಿಂಗ್ ಬಲೆಗೆ ಬೀಳುತ್ತವೆ.

ನಿಮಗೆ ಆದಾಯತೆರಿಗೆಯ ಮರುಪಾವತಿ ಬರುವುದಿದೆ, ಅದನ್ನು ಯಾವ ಖಾತೆಗೆ ಕಳುಹಿಸಬೇಕು ಹೇಳಿ ಎನ್ನುವ ನೆಪದಲ್ಲಿ ಬಳಕೆದಾರರ ಬ್ಯಾಂಕ್ ಖಾತೆಯ ವಿವರಗಳನ್ನು ಕದ್ದ ಅನೇಕ ಘಟನೆಗಳು ಕಳೆದ ವರ್ಷ ವಿಶ್ವದ ವಿವಿಧೆಡೆಗಳಿಂದ ವರದಿಯಾಗಿದ್ದವು. ಇನ್ನು ಇಮೇಲ್ ಖಾತೆಯ ಪಾಸ್‌ವರ್ಡ್ ಕದ್ದು "ನಾನು ಲಂಡನ್‌ನಲ್ಲಿದ್ದೇನೆ, ನನ್ನ ಪರ್ಸ್ ಕಳೆದುಹೋಗಿದೆ, ಆದಷ್ಟು ಬೇಗ ಒಂದು ಸಾವಿರ ಪೌಂಡ್ ಕಳಿಸು" ಎಂಬಂತಹ ಸಂದೇಶಗಳನ್ನು ಕಳುಹಿಸುವುದೂ ಒಂದು ದೊಡ್ಡ ದಂಧೆಯೇ. ಈ ಕುತಂತ್ರಕ್ಕೆ ಬಲಿಯಾದವರ ಸುದ್ದಿಗಳು ಆಗಿಂದಾಗ್ಗೆ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತವೆ.

ಫಿಶಿಂಗ್ ಸಂದೇಶವನ್ನು ಪಡೆಯುವವರಲ್ಲಿ ಶೇಕಡಾ ಐದರಷ್ಟು ಜನ ಅಂತಹ ಸಂದೇಶಗಳನ್ನು ನಂಬಿ ವಂಚನೆಗೆ ಒಳಗಾಗುತ್ತಾರೆ ಎಂದು ಅಧ್ಯಯನವೊಂದು ತಿಳಿಸಿದೆ. ಹೀಗೆ ಫಿಶಿಂಗ್‌ನಿಂದ ವಂಚನೆಗೆ ಒಳಗಾಗುವುದು ಎಂದರೆ ಸಾಮಾನ್ಯವಾಗಿ ಭಾರೀ ಪ್ರಮಾಣದ ಆರ್ಥಿಕ ನಷ್ಟ ಅನುಭವಿಸುವುದು ಎಂದೇ ಅರ್ಥ. ಹೀಗಾಗಿ ಈ ಹಗರಣದ ಕುರಿತು ಎಚ್ಚರದಿಂದಿರಬೇಕಾದದ್ದು ಅಗತ್ಯ.

ಇಂತಹ ಯಾವುದೇ ಸಂಶಯಾಸ್ಪದ ಸಂದೇಶಗಳು ಬಂದಾಗ ತಟ್ಟನೆ ಪ್ರತಿಕ್ರಿಯಿಸುವ ಬದಲು ಸ್ವಲ್ಪ ಯೋಚಿಸುವುದು ಒಳ್ಳೆಯದು. ಬುದ್ಧಿವಂತಿಕೆಯ ಲಕ್ಷಣ. ಸಾಮಾನ್ಯವಾಗಿ ಯಾವುದೇ ಸಂಸ್ಥೆ ನಿಮ್ಮ ಪಾಸ್‌ವರ್ಡ್‌ಗಳನ್ನು ಕೊಡುವಂತೆ ಕೇಳುವುದಿಲ್ಲ ಎನ್ನುವ ವಿಷಯ ಸದಾ ನಿಮ್ಮ ನೆನಪಿನಲ್ಲಿರಲಿ.

ಆನ್‌ಲೈನ್ ಬ್ಯಾಂಕಿಂಗ್ ಸೇರಿದಂತೆ ಯಾವುದೇ ಬಗೆಯ ಖಾಸಗಿ ವ್ಯವಹಾರ ನಡೆಸುವಾಗ ವೆಬ್‌ತಾಣಗಳನ್ನು ತೆರೆಯಲು ಸಂದೇಶದಲ್ಲಿರುವ ಲಿಂಕ್‌ಗಳನ್ನು ಬಳಸಬೇಡಿ; ಇಂತಹ ಲಿಂಕ್‌ಗಳು ನಿಮ್ಮನ್ನು ನಕಲಿ ತಾಣಗಳಿಗೆ ಕೊಂಡೊಯ್ಯುವ ಸಾಧ್ಯತೆಯೇ ಹೆಚ್ಚು. ಬದಲಿಗೆ ಬ್ರೌಸರ್ ತಂತ್ರಾಂಶದಲ್ಲಿ ಜಾಲತಾಣದ ವಿಳಾಸ ಬೆರಳಚ್ಚಿಸಿಯೇ ತಾಣವನ್ನು ಪ್ರವೇಶಿಸಿ. ಲಿಂಕ್ ಮೂಲಕವೇ ತಾಣ ಪ್ರವೇಶಿಸಬೇಕಾಗಿ ಬಂದಾಗ ಬ್ರೌಸರ್‌ನ ವಿಳಾಸಪಟ್ಟಿಯಲ್ಲಿ ಸರಿಯಾದ ತಾಣದ ವಿಳಾಸವಿದೆಯೋ ಇಲ್ಲವೋ ಎನ್ನುವುದನ್ನು ಪರಿಶೀಲಿಸಿ.

ಜನವರಿ ೧೮, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಮಂಗಳವಾರ, ಜನವರಿ 11, 2011

ಬೆಳೆಯುತ್ತಿದೆ ಬ್ರೌಸರ್ ಲೋಕ

ಟಿ ಜಿ ಶ್ರೀನಿಧಿ

ಕಳೆದ ಡಿಸೆಂಬರ್‌ನಲ್ಲಿ ಗೂಗಲ್ ಸಂಸ್ಥೆ ತನ್ನ ಹೊಸ ಕೊಡುಗೆಯಾಗಿ ಕ್ರೋಮ್ ಒಎಸ್‌ನ ಪ್ರಾಯೋಗಿಕ ಆವೃತ್ತಿಯನ್ನು ಪರಿಚಯಿಸಿತು.

ಈ ಕ್ರೋಮ್ ಒಎಸ್ ಎನ್ನುವುದು ಒಂದು ಕಾರ್ಯಾಚರಣ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಂ). ಸರಳವಾಗಿ ಹೇಳಬೇಕಾದರೆ ಕಾರ್ಯಾಚರಣ ವ್ಯವಸ್ಥೆ ಎನ್ನುವುದು ಗಣಕದ ಪ್ರಾಥಮಿಕ ಚಟುವಟಿಕೆಗಳನ್ನು ನಿಯಂತ್ರಿಸುವ, ಹಾಗೂ ಅದರಲ್ಲಿರುವ ವಿವಿಧ ಸೌಲಭ್ಯಗಳನ್ನು ಬಳಸಿಕೊಳ್ಳಲು ನಮಗೆ ಸಹಾಯಮಾಡುವ ತಂತ್ರಾಂಶ. ವಿಂಡೋಸ್, ಲಿನಕ್ಸ್ ಇವೆಲ್ಲ ಕಾರ್ಯಾಚರಣ ವ್ಯವಸ್ಥೆಗಳೇ.

ಆದರೆ ಕ್ರೋಮ್ ಒಎಸ್ ನಮಗೆ ಗೊತ್ತಿರುವ ಬೇರೆಲ್ಲ ಕಾರ್ಯಾಚರಣ ವ್ಯವಸ್ಥೆಗಳಿಗಿಂತ ವಿಭಿನ್ನವಾದದ್ದು.

ಅದಕ್ಕೆ ಕಾರಣ ಇಷ್ಟೆ - ಕ್ರೋಮ್ ಒಎಸ್ ಕಾರ್ಯಾಚರಣ ವ್ಯವಸ್ಥೆ ಸಂಪೂರ್ಣವಾಗಿ ಬ್ರೌಸರ್ ತಂತ್ರಾಂಶವನ್ನೇ ಆಧರಿಸಿಕೊಂಡು ಕೆಲಸಮಾಡುತ್ತದೆ. ಪದಸಂಸ್ಕರಣಾ ತಂತ್ರಾಂಶ ಬಳಸಿ ಅರ್ಜಿ ಟೈಪಿಸಬೇಕಾಗಿರಲಿ, ಸ್ಪ್ರೆಡ್‌ಶೀಟಿನಲ್ಲಿ ಲೆಕ್ಕಾಚಾರ ಹಾಕುವ ಅಗತ್ಯವಿರಲಿ - ಯಾವುದೇ ಪ್ರತ್ಯೇಕ ತಂತ್ರಾಂಶವನ್ನು ಅನುಸ್ಥಾಪಿಸಿಕೊಳ್ಳುವ ಅಗತ್ಯವಿಲ್ಲದೆ ಎಲ್ಲವೂ ವಿಶ್ವವ್ಯಾಪಿ ಜಾಲದ ಮೂಲಕವೇ ಲಭ್ಯವಾಗುತ್ತದೆ. ಈ ಕಾರ್ಯಾಚರಣ ವ್ಯವಸ್ಥೆಯಲ್ಲಿ ಸಕಲ ಕೆಲಸಗಳಿಗೂ ಬ್ರೌಸರ್ ಬೇಕೇಬೇಕು!

ಬ್ರೌಸರ್ ಅಂದರೇನು?
ವಿಶ್ವವ್ಯಾಪಿ ಜಾಲದಲ್ಲಿರುವ ಜಾಲತಾಣಗಳನ್ನು ನಮ್ಮ-ನಿಮ್ಮ ಗಣಕಗಳಲ್ಲಿ ವೀಕ್ಷಿಸಲು ಬ್ರೌಸರ್ ಅಥವಾ ವೀಕ್ಷಕ ತಂತ್ರಾಂಶಗಳು ಬಳಕೆಯಾಗುತ್ತವೆ. ವಿಶ್ವವ್ಯಾಪಿ ಜಾಲದಲ್ಲಿರುವ ಮಾಹಿತಿಯನ್ನು ಪಡೆದುಕೊಳ್ಳಲು ಈ ತಂತ್ರಾಂಶ ಅತ್ಯಗತ್ಯ.

ಮೊಜಿಲ್ಲಾ ಫೈರ್‌ಫಾಕ್ಸ್, ಇಂಟರ್‌ನೆಟ್ ಎಕ್ಸ್‌ಪ್ಲೋರರ್, ಗೂಗಲ್ ಕ್ರೋಮ್ ಮೊದಲಾದವು ಈಗ ಪ್ರಚಲಿತದಲ್ಲಿರುವ ಬ್ರೌಸರ್‌ಗಳಲ್ಲಿ ಮುಖ್ಯವಾದವು. ವಿಶ್ವದ ಮೂಲೆಮೂಲೆಗಳಲ್ಲಿರುವ ಗಣಕಗಳಲ್ಲಿ ಶೇಖರವಾಗಿರುವ ವೆಬ್ ಪುಟಗಳನ್ನು ನಮ್ಮ ಗಣಕಗಳಲ್ಲಿ ವೀಕ್ಷಿಸಲು ಈ ತಂತ್ರಾಂಶಗಳು ಅನುವುಮಾಡಿಕೊಡುತ್ತವೆ. ವಿಶ್ವವ್ಯಾಪಿ ಜಾಲದಲ್ಲಿರುವ ಮಾಹಿತಿಯನ್ನು ನೋಡುವುದು ಮಾತ್ರವಲ್ಲ; ಆ ಮಾಹಿತಿಯನ್ನು ಉಳಿಸಿಕೊಳ್ಳುವುದು, ಮುದ್ರಿಸಿಕೊಳ್ಳುವುದು, ವಿವಿಧ ಪುಟಗಳ ನಡುವೆ ಹಿಂದೆಮುಂದೆ ಓಡಾಡುವುದು, ಅಚ್ಚುಮೆಚ್ಚಿನ ಪುಟಗಳ ವಿಳಾಸ ಸಂಗ್ರಹಿಸಿಟ್ಟುಕೊಳ್ಳುವುದು - ಇವೆಲ್ಲ ಸೌಲಭ್ಯಗಳೂ ಬ್ರೌಸರ್ ತಂತ್ರಾಂಶದಲ್ಲಿರುತ್ತವೆ.

ಬ್ರೌಸರ್ ಇತಿಹಾಸ
ವಿಶ್ವವ್ಯಾಪಿ ಜಾಲದ ಪ್ರಾರಂಭಿಕ ದಿನಗಳಲ್ಲಿ ರೂಪಗೊಂಡ ಜಾಲತಾಣಗಳಲ್ಲಿ ಪಠ್ಯ ಮಾತ್ರವೇ ಇರುತ್ತಿತ್ತು. ಆದರೆ ಜಾಲತಾಣಗಳಲ್ಲಿ ಪಠ್ಯದ ಚಿತ್ರಗಳು ಕೂಡ ಇದ್ದು ಚಿತ್ರಾತ್ಮಕ ಸಂಪರ್ಕ ಸಾಧನ (ಗ್ರಾಫಿಕಲ್ ಯೂಸರ್ ಇಂಟರ್‌ಫೇಸ್) ಲಭ್ಯವಾಗುವಂತಾದಾಗ ಮಾತ್ರ ಈ ಅದ್ಭುತ ವ್ಯವಸ್ಥೆ ಸಾಮಾನ್ಯ ಜನರನ್ನೂ ತಲುಪುವಂತಾಗುತ್ತದೆ, ಎಲ್ಲರ ಆಸಕ್ತಿಯ ವಿಷಯಗಳಿಗೂ ಅಲ್ಲಿ ಸ್ಥಾನ ದೊರಕುತ್ತದೆ ಎಂಬ ಭಾವನೆ ಬಹಳಬೇಗ ಗಣಕತಜ್ಞರಲ್ಲಿ ಮೂಡಿತು.

ಹೀಗೆ ಲಭ್ಯವಾದ ಬಹುಮಾಧ್ಯಮ ಮಾಹಿತಿಯನ್ನು ಪಡೆದುಕೊಳ್ಳಲು ಹೊಸದೊಂದು ತಂತ್ರಾಂಶ ಅಗತ್ಯವಾಯಿತು. ಈಗ ನಮಗೆ ಪರಿಚಿತವಾಗಿರುವ ಬ್ರೌಸರ್ ತಂತ್ರಾಂಶದ ಪರಿಕಲ್ಪನೆ ಹುಟ್ಟಿದ್ದೇ ಆಗ.

ಅಮೆರಿಕಾದ ನ್ಯಾಷನಲ್ ಸೆಂಟರ್ ಫಾರ್ ಸೂಪರ್‌ಕಂಪ್ಯೂಟಿಂಗ್ ಅಪ್ಲಿಕೇಷನ್ಸ್‌ನಲ್ಲಿ ಅಧ್ಯಯನ ನಡೆಸುತ್ತಿದ್ದ ಮಾರ್ಕ್ ಆಂಡ್ರೀಸನ್ ಹಾಗೂ ಎರಿಕ್ ಬೀನಾ ಎಂಬ ವಿದ್ಯಾರ್ಥಿಗಳು ೧೯೯೩ರಲ್ಲಿ 'ಮೊಸಾಯಿಕ್' ಎನ್ನುವ ಬ್ರೌಸರ್ ಸಿದ್ಧಪಡಿಸಿದರು. ವಿಶ್ವವ್ಯಾಪಿ ಜಾಲಕ್ಕೆ ಮೊತ್ತಮೊದಲ ಬಾರಿಗೆ ಚಿತ್ರಾತ್ಮಕ ಸಂಪರ್ಕ ಸಾಧನವನ್ನು ಒದಗಿಸಿದ ಈ ತಂತ್ರಾಂಶ ಅದರ ಭವಿಷ್ಯವನ್ನೇ ಬದಲಾಯಿಸಿಬಿಟ್ಟಿತು.

ಮುಂದಿನ ದಿನಗಳಲ್ಲಿ
ಕ್ಲೌಡ್ ಕಂಪ್ಯೂಟಿಂಗ್‌ನ ವಿಕಾಸವಾಗುತ್ತಿದ್ದಂತೆ ಬ್ರೌಸರ್ ತಂತ್ರಾಂಶದ ಮಹತ್ವ ಹೆಚ್ಚುತ್ತಿದೆ. ಕ್ಲೌಡ್ ಕಂಪ್ಯೂಟಿಂಗ್‌ನಲ್ಲಿ ವಿವಿಧ ತಂತ್ರಾಂಶಗಳು ಹಾಗೂ ಸಂಬಂಧಿತ ಸೇವೆಗಳು ವಿಶ್ವವ್ಯಾಪಿ ಜಾಲದ ಮೂಲಕವೇ ಲಭ್ಯವಾಗುವುದರಿಂದ ಅವೆಲ್ಲವನ್ನೂ ಬ್ರೌಸರ್ ಮೂಲಕವೇ ಪಡೆದುಕೊಳ್ಳಬೇಕಾಗುತ್ತದೆ.

ಈ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯೋಗಗಳಲ್ಲಿ ಕ್ರೋಮ್ ಒಎಸ್ ಅಗ್ರಗಣ್ಯವಾದದ್ದು. ಗಣಕದಲ್ಲಿ ನಾವು ಬಳಸುವ ತಂತ್ರಾಂಶಗಳು ಹಾಗೂ ಅವನ್ನು ಬಳಸಿ ತಯಾರಿಸುವ ಮಾಹಿತಿ ಎರಡನ್ನೂ ವಿಶ್ವವ್ಯಾಪಿ ಜಾಲದ ಮೂಲಕ ಲಭ್ಯವಾಗಿಸಿ ಅಲ್ಲಿಯೇ ಶೇಖರಿಸಿಡುವ ಮಹತ್ವಾಕಾಂಕ್ಷೆ ಈ ಕಾರ್ಯಾಚರಣ ವ್ಯವಸ್ಥೆಯದ್ದು. ಒಂದುವೇಳೆ ಈ ಪ್ರಯೋಗ ಜನರ ಮೆಚ್ಚುಗೆ ಪಡೆಯುವಲ್ಲಿ ಯಶಸ್ವಿಯಾದರೆ ಮುಂದಿನ ವರ್ಷಗಳಲ್ಲಿ ನಾವೆಲ್ಲ ಗಣಕ ಬಳಸುವ ವಿಧಾನದಲ್ಲಿ ಅಪಾರ ಬದಲಾವಣೆಯಾಗುವ ನಿರೀಕ್ಷೆಯಿದೆ.

ಜನವರಿ ೧೧, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಮಂಗಳವಾರ, ಜನವರಿ 4, 2011

ಆಕಾಶದಿಂದ ಅಂತರಜಾಲ

ಟಿ ಜಿ ಶ್ರೀನಿಧಿ

೨೦೧೦ರ ಕೊನೆಯ ವಾರದಲ್ಲಿ ಕಾ-ಸ್ಯಾಟ್ ಎಂಬ ಯುರೋಪಿನ ಉಪಗ್ರಹ ಉಡಾವಣೆಯಾಯಿತು. ಉಪಗ್ರಹದ ಉಡಾವಣೆಯಲ್ಲೇನೂ ವಿಶೇಷವಿಲ್ಲವಾದರೂ ಈ ಉಪಗ್ರಹದ ಉದ್ದೇಶವೇ ವಿಶೇಷವಾದದ್ದು - ಯುರೋಪಿನ ಗ್ರಾಮೀಣ ಪ್ರದೇಶಗಳಿಗೆ ಈ ಉಪಗ್ರಹದ ಮೂಲಕ ಅಂತರಜಾಲ ಸೌಲಭ್ಯ ಒದಗಿಸಲಾಗುತ್ತದೆ.

ಇಂಟರ್‌ನೆಟ್ ಅಥವಾ ಅಂತರಜಾಲ ಎನ್ನುವುದು ಅಪಾರ ಸಂಖ್ಯೆಯ ಗಣಕಗಳನ್ನು ಒಂದುಗೂಡಿಸುವ ಒಂದು ಬೃಹತ್ ಜಾಲ. ಯಾವುದೇ ಒಂದು ಗಣಕ ಈ ಬೃಹತ್ ಜಾಲದ ಅಂಗ ಎನ್ನಿಸಿಕೊಳ್ಳಬೇಕಾದರೆ ಅದು ಅಂತರಜಾಲದೊಡನೆ ಸಂಪರ್ಕ ಹೊಂದಿರಬೇಕು. ಹಾಗಿದ್ದಾಗ ಮಾತ್ರ ಅದು ಅಂತರಜಾಲದ ಇತರ ಗಣಕಗಳೊಡನೆ ಸಂಪರ್ಕ ಏರ್ಪಡಿಸಿಕೊಳ್ಳಲು ಸಾಧ್ಯ. ಅಂತೆಯೇ ಆ ಗಣಕದ ಬಳಕೆದಾರರು - ಅಂದರೆ ನಾವು - ವಿಶ್ವದ ವಿವಿಧೆಡೆಗಳಲ್ಲಿ ಸಂಗ್ರಹವಾಗಿರುವ ಮಾಹಿತಿಯನ್ನು ವಿಶ್ವವ್ಯಾಪಿ ಜಾಲದ ಮೂಲಕ ಪಡೆದುಕೊಳ್ಳುವುದು ಕೂಡ ಸಾಧ್ಯವಾಗುತ್ತದೆ.

ಇಂತಹ ಅಂತರಜಾಲ ಸಂಪರ್ಕಗಳಲ್ಲಿ ಹಲವಾರು ಬಗೆ - ಬ್ರಾಡ್‌ಬ್ಯಾಂಡ್, ಡಯಲ್‌ಅಪ್, ಜಿಪಿಆರ್‌ಎಸ್ ಹೀಗೆ. ಈ ಸಾಲಿಗೆ ಹೊಸ ಸೇರ್ಪಡೆಯೇ ಮೇಲೆ ಹೇಳಿದ ಉಪಗ್ರಹ ಅಂತರಜಾಲ ಸಂಪರ್ಕ.

* * *

ಹೆಚ್ಚಿನ ಬ್ಯಾಂಡ್‌ವಿಡ್ತ್‌ನೊಡನೆ ಅತಿವೇಗದ ಅಂತರಜಾಲ ಸಂಪರ್ಕ ಒದಗಿಸುವ ಬ್ರಾಡ್‌ಬ್ಯಾಂಡ್ ಸೇವೆ ಸದ್ಯಕ್ಕೆ ಅಂತರಜಾಲ ಸಂಪರ್ಕಗಳಲ್ಲೆಲ್ಲ ಅತ್ಯಂತ ಪ್ರಸಿದ್ಧವಾದದ್ದು. ದೂರಸಂಪರ್ಕ ಕ್ಷೇತ್ರದ ಪ್ರಮುಖ ಸಂಸ್ಥೆಗಳಷ್ಟೇ ಅಲ್ಲದೆ ಹಲವಾರು ಕೇಬಲ್ ಟೀವಿ ಸಂಸ್ಥೆಗಳೂ ಇಂತಹ ಅತಿವೇಗದ ಅಂತರ ಜಾಲಸಂಪರ್ಕವನ್ನು ಒದಗಿಸುತ್ತಿವೆ.

ವೈರ್‌ಲೆಸ್ ಫಿಡೆಲಿಟಿ ಅಥವಾ 'ವೈ-ಫಿ' ಮಾನಕ ಆಧಾರಿತ ತಂತ್ರಜ್ಞಾನ ಬಳಸಿ ವೈರ್‌ಲೆಸ್ (ನಿಸ್ತಂತು) ಅಂತರಜಾಲ ಸಂಪರ್ಕ ಹೊಂದುವುದು ಕೂಡ ಸಾಧ್ಯವಿದೆ. ಬ್ರಾಡ್‌ಬ್ಯಾಂಡ್ ಸೇವೆ ಒದಗಿಸುವ ಸಂಸ್ಥೆಗಳ ಮೂಲಕ ಲಭ್ಯವಿರುವ ವೈ-ಫಿ ಮೋಡೆಮ್ ಬಳಸಿ ನಮ್ಮ ಮನೆಯಲ್ಲೇ ಇಂತಹ ಸಂಪರ್ಕ ದೊರಕುವಂತೆ ಮಾಡಿಕೊಳ್ಳಬಹುದು.

ದೂರವಾಣಿಯನ್ನು ಬಳಸಿ ಕೆಲಸಮಾಡುವ ಡಯಲ್-ಅಪ್ ಸಂಪರ್ಕ ತೀರಾ ಇತ್ತೀಚಿನವರೆಗೂ ವ್ಯಾಪಕ ಬಳಕೆಯಲ್ಲಿತ್ತು. ದೂರವಾಣಿ ತಂತಿಗಳ ಮೂಲಕ ಮಾಹಿತಿ ವಿನಿಮಯ ನಡೆಸುವ ಈ ಬಗೆಯ ಸಂಪರ್ಕ ಈಚೆಗೆ ತನ್ನ ಜನಪ್ರಿಯತೆ ಕಳೆದುಕೊಳ್ಳುತ್ತಿದೆ.

ಮೊಬೈಲ್ ದೂರವಾಣಿಗಳ ಮೂಲಕವೂ ಅಂತರಜಾಲ ಸಂಪರ್ಕ ಹೊಂದುವುದು ಸಾಧ್ಯ. ಈಗಂತೂ ಈ ತಂತ್ರಜ್ಞಾನವನ್ನು ಬಳಸಿ ಅಂತರಜಾಲ ಸಂಪರ್ಕ ಒದಗಿಸುವ ಅದೆಷ್ಟೋ ಬಗೆಯ ಮೊಬೈಲ್ ದೂರವಾಣಿಗಳು ಹಾಗೂ ನಿಸ್ತಂತು ಅಂತರಜಾಲ ಸಂಪರ್ಕ ಉಪಕರಣಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.

* * *

ಸಾಮಾನ್ಯವಾಗಿ ಲಭ್ಯವಿರುವ ಅಂತರಜಾಲ ಸಂಪರ್ಕಗಳ ಸಮಸ್ಯೆ ಎಂದರೆ ಅವುಗಳ ವ್ಯಾಪ್ತಿ. ಎಲ್ಲೆಲ್ಲಿ ದೂರವಾಣಿ ಅಥವಾ ಕೇಬಲ್ ಜಾಲ ಇಲ್ಲವೋ ಅಲ್ಲಿ ಅಂತರಜಾಲ ಸಂಪರ್ಕವೂ ಇರುವುದಿಲ್ಲ. ಇನ್ನು ಡಯಲ್-ಅಪ್ ಅಥವಾ ಮೊಬೈಲ್ ಅಂತರಜಾಲ ಸಂಪರ್ಕ ಕೆಲವೆಡೆಗಳಲ್ಲಿ ಇದ್ದರೂ ಸಂಪರ್ಕದ ವೇಗ ಬಹಳ ಕಡಿಮೆ ಇರುತ್ತದೆ.

ಈ ಕೊರತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ನಡೆದಿರುವ ಪ್ರಯತ್ನವೇ ಉಪಗ್ರಹ ಅಂತರಜಾಲ ಸಂಪರ್ಕ. ಗ್ರಾಮೀಣ ಪ್ರದೇಶದ ಬಳಕೆದಾರರಿಗೆ ಉಪಗ್ರಹದ ಮೂಲಕ ಅತಿವೇಗದ ಅಂತರಜಾಲ ಸಂಪರ್ಕ ಒದಗಿಸುವುದು ಇದರ ವೈಶಿಷ್ಟ್ಯ. ಇದು ನಮಗೆಲ್ಲ ಪರಿಚಿತವಾಗಿರುವ ಡಿಟಿಹೆಚ್ ಸೇವೆಯಂತೆಯೇ ಪುಟಾಣಿ ಡಿಷ್ ಆಂಟೆನಾ ಬಳಸಿಕೊಂಡು ಕೆಲಸಮಾಡುತ್ತದೆ. ಈ ಸಂಪರ್ಕ ಬೇರೆಲ್ಲ ಬಗೆಯ ಅಂತರಜಾಲ ಸಂಪರ್ಕಗಳಿಗಿಂತ ತುಸು ದುಬಾರಿಯಾದರೂ ನಾಗರಹೊಳೆ ಕಾಡಿನ ಮಧ್ಯದಲ್ಲಿರುವ ಹಳ್ಳಿಗೂ ಹೆಚ್ಚುವೇಗದ ಅಂತರಜಾಲ ಸಂಪರ್ಕ ದೊರಕುವಂತಾಗಲು ಇದೊಂದು ಉತ್ತಮ ಮಾರ್ಗ.

ಪ್ರಪಂಚದ ಅನೇಕ ಕಡೆಗಳಲ್ಲಿ ಉಪಗ್ರಹ ಅಂತರಜಾಲ ಈಗಾಗಲೇ ಲಭ್ಯವಿದೆ; ಯುರೋಪಿನಲ್ಲಿ ನಡೆದಿರುವ ಪ್ರಯತ್ನ ಇದರ ವ್ಯಾಪ್ತಿಯನ್ನು ಇನ್ನೂ ದೊಡ್ಡದಾಗಿ ವಿಸ್ತರಿಸಲು ಹೊರಟಿದೆ. ಈ ಪ್ರಯತ್ನ ಯಶಸ್ವಿಯಾದರೆ ನಮ್ಮ ಹಳ್ಳಿಗಳಲ್ಲಿ ಡಿಟಿಹೆಚ್ ಆಂಟೆನಾಗಳು ಕಾಣಿಸುವಷ್ಟೇ ಸಾಮಾನ್ಯವಾಗಿ ಉಪಗ್ರಹ ಅಂತರಜಾಲದ ಡಿಷ್ ಆಂಟೆನಾಗಳೂ ಕಾಣಸಿಗುವ ದಿನ ದೂರವಿಲ್ಲ!

ಜನವರಿ ೪, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಮಂಗಳವಾರ, ಡಿಸೆಂಬರ್ 28, 2010

ಜಾಲಲೋಕದ ಬೀದಿಜಗಳ

ಟಿ ಜಿ ಶ್ರೀನಿಧಿ

ಈಚಿನ ಕೆಲದಿನಗಳಲ್ಲಿ ಎಲ್ಲಿಲ್ಲಿ ನೋಡಿದರೂ ವಿಕಿಲೀಕ್ಸ್‌ನದೇ ಸುದ್ದಿ. ಈವರೆಗೂ ರಹಸ್ಯವಾಗಿಡಲಾಗಿದ್ದ ಸಾವಿರಾರು ಸಂಗತಿಗಳನ್ನು ಸಾರ್ವಜನಿಕವಾಗಿ ತಂದು ಸುರಿದಿರುವ ಈ ಜಾಲತಾಣ ಅತ್ಯಲ್ಪ ಸಮಯದಲ್ಲೇ ವಿಶ್ವದೆಲ್ಲೆಡೆ ಹೆಸರುಮಾಡಿಬಿಟ್ಟಿದೆ.

ಹೀಗೆ ಬಹಿರಂಗವಾಗಿರುವ ಸಂಗತಿಗಳು ಅದೆಷ್ಟು ಸುದ್ದಿಮಾಡಿವೆಯೋ ಅಷ್ಟೇ ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿ ವಿಕಿಲೀಕ್ಸ್ ತಾಣ ಕೂಡ ಸುದ್ದಿಯಲ್ಲಿದೆ. ವಿಶ್ವದೆಲ್ಲೆಡೆಯಿಂದ ವ್ಯಕ್ತವಾಗುತ್ತಿರುವ ಪರ-ವಿರೋಧವಾದ ಪ್ರತಿಕ್ರಿಯೆಗಳ ಜೊತೆಜೊತೆಯಲ್ಲೇ ಅಂತರಜಾಲ ಲೋಕದಲ್ಲೂ ವಿಕಿಲೀಕ್ಸ್ ಕುರಿತು ಸಾಕಷ್ಟು ಗಲಾಟೆಯಾಗುತ್ತಿದೆ.

ಇದೆಲ್ಲ ಪ್ರಾರಂಭವಾದದ್ದು ವಿಕಿಲೀಕ್ಸ್ ಜಾಲತಾಣಕ್ಕೆ ಹೋಸ್ಟಿಂಗ್ ಸೇವೆ ಒದಗಿಸಿದ್ದ ಅಮೆಜಾನ್ ಡಾಟ್ ಕಾಂ ಸಂಸ್ಥೆ ತನ್ನ ಸೇವೆಯನ್ನು ಹಿಂತೆಗೆದುಕೊಂಡಾಗ. ತಾನು ವಿಧಿಸಿರುವ ನಿಬಂಧನೆಗಳನ್ನು ವಿಕಿಲೀಕ್ಸ್ ಪಾಲಿಸುತ್ತಿಲ್ಲ ಎನ್ನುವುದು ಅಮೆಜಾನ್‌ನ ಆರೋಪ.

ಇದರ ನಂತರ ವಿಕಿಲೀಕ್ಸ್‌ಗೆ ಡೊಮೈನ್ ನೇಮ್ ಸರ್ವಿಸ್ ಒದಗಿಸುತ್ತಿದ್ದ ಸಂಸ್ಥೆ ಕೂಡ ತನ್ನ ಸೇವೆಯನ್ನು ನಿಲ್ಲಿಸಿಬಿಟ್ಟಿತು (ಯಾವುದೇ ತಾಣದ ಯುಆರ್‌ಎಲ್ ಅನ್ನು ಅದರ ಐ.ಪಿ. ವಿಳಾಸದೊಂದಿಗೆ ಹೊಂದಿಸಿಕೊಡುವ ಈ ವ್ಯವಸ್ಥೆ ಇಲ್ಲದಿದ್ದರೆ ಆ ತಾಣವನ್ನು ಯಾರೂ ನೋಡುವುದೇ ಸಾಧ್ಯವಿಲ್ಲ). ವಿಕಿಲೀಕ್ಸ್ ತಾಣದ ಮೇಲೆ ತೀವ್ರಪ್ರಮಾಣದ ಡಿಡಿಒಎಸ್ ದಾಳಿ ನಡೆಯುತ್ತಿದೆ ಹಾಗೂ ಇದರಿಂದ ತನ್ನ ವ್ಯವಸ್ಥೆಯೇ ಅಭದ್ರವಾಗುವ ಸಾಧ್ಯತೆಯಿದೆ; ಹೀಗಾಗಿ ಆ ತಾಣಕ್ಕೆ ನೀಡುತ್ತಿದ್ದ ಡೊಮೈನ್ ನೇಮ್ ಸರ್ವಿಸ್ ಅನ್ನು ನಿಲ್ಲಿಸುತ್ತಿದ್ದೇವೆ ಎನ್ನುವುದು ಆ ಸಂಸ್ಥೆ ನೀಡಿದ ಕಾರಣ.

ಏನಿದು ಡಿಡಿಒಎಸ್ ದಾಳಿ?
ಜಾಲತಾಣಗಳಿಗೆ ಅಸಂಖ್ಯಾತ ಕೃತಕ ಗ್ರಾಹಕರನ್ನು ಸೃಷ್ಟಿಸುವ ಬ್ಲ್ಯಾಕ್‌ಮೇಲ್ ತಂತ್ರಕ್ಕೆ ಡಿಸ್ಟ್ರಿಬ್ಯೂಟೆಡ್ ಡಿನಯಲ್ ಆಫ್ ಸರ್ವಿಸ್ ಅಥವಾ ಡಿಡಿಒಎಸ್ ದಾಳಿ ಎಂದು ಕರೆಯುತ್ತಾರೆ. ಇದು ಸೈಬರ್ ಭಯೋತ್ಪಾದನೆಯ ವಿಧಗಳಲ್ಲೊಂದು. ಇಂತಹ ದಾಳಿಗೆ ಈಡಾಗುವ ತಾಣದ ಸರ್ವರ್‌ಗೆ ಇದ್ದಕ್ಕಿದ್ದಂತೆ ಅಪಾರ ಪ್ರಮಾಣದ ಮಾಹಿತಿ ಹರಿದುಬರಲು ಪ್ರಾರಂಭವಾಗುತ್ತದೆ. ಇದರಿಂದಾಗಿ ಆ ಜಾಲತಾಣದ ಕಾರ್ಯಾಚರಣೆ ಬಲು ನಿಧಾನವಾಗಿಬಿಡುತ್ತದೆ. ಇಂತಹ ದಾಳಿಗಳು ಹೆಚ್ಚುಕಾಲ ಮುಂದುವರೆದದ್ದೇ ಆದರೆ ಮಾಹಿತಿಯ ಮಿತಿಮೀರಿದ ಒತ್ತಡದಿಂದಾಗಿ ದಾಳಿಗೀಡಾದ ಜಾಲತಾಣ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಸಾಧ್ಯತೆಯೂ ಇರುತ್ತದೆ.

ಸ್ಪಾಮ್ ಕಳುಹಿಸುವ ದಂಧೆಯಂತೆಯೇ ಈ ದಾಳಿಗಳಲ್ಲೂ ಸ್ಪೈವೇರ್‌ಗಳು ಹಾಗೂ ಬಾಟ್‌ನೆಟ್‌ಗಳ ಬಳಕೆ ಸಾಮಾನ್ಯ.

ಗೂಢಚಾರಿ ತಂತ್ರಾಂಶ ಅಥವಾ ಸ್ಪೈವೇರ್, ಗಣಕಲೋಕವನ್ನು ಕಾಡುವ ಕುತಂತ್ರಾಂಶಗಳಲ್ಲೊಂದು. ಇವು ಸಾಮಾನ್ಯವಾಗಿ ಉಪಯುಕ್ತ ತಂತ್ರಾಂಶಗಳ ಸೋಗಿನಲ್ಲಿ ಬಳಕೆದಾರರ ಗಣಕವನ್ನು ಪ್ರವೇಶಿಸುತ್ತವೆ. ಬಳಕೆದಾರರ ಗಣಕವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಅದನ್ನು ತಮ್ಮ ಕುಕೃತ್ಯಗಳಿಗೆ ಬಳಸಿಕೊಳ್ಳುವಲ್ಲಿ ಈ ತಂತ್ರಾಂಶಗಳು ಹ್ಯಾಕರ್‌ಗಳಿಗೆ ನೆರವಾಗುತ್ತವೆ. ಪ್ರತಿ ಬಾರಿ ಗಣಕವನ್ನು ಚಾಲೂ ಮಾಡಿದಾಗಲೂ ಸಕ್ರಿಯವಾಗುವ ಈ ತಂತ್ರಾಂಶ ಹ್ಯಾಕರ್‌ನ ಆದೇಶಗಳನ್ನು ಪಾಲಿಸಲು ಪ್ರಾರಂಭಿಸುತ್ತದೆ; ಅಂದರೆ ಆ ಗಣಕ ಒಂದು ಜಾಂಬಿ ಗಣಕ ಅಥವಾ 'ಬಾಟ್' ಆಗಿ ಬದಲಾಗುತ್ತದೆ (ಬಾಟ್ ಎನ್ನುವುದು ರೋಬಾಟ್ ಎಂಬ ಹೆಸರಿನ ಅಪಭ್ರಂಶ). ಪ್ರಪಂಚದಾದ್ಯಂತ ಇರುವ ಇಂತಹ ನೂರಾರು-ಸಾವಿರಾರು ಬಾಟ್‌ಗಳನ್ನು ಒಗ್ಗೂಡಿಸಿದ 'ಬಾಟ್‌ನೆಟ್'ಗಳೆಂಬ ಜಾಲಗಳೂ ಸಿದ್ಧವಾಗುತ್ತವೆ.

ಡಿಡಿಒಎಸ್ ದಾಳಿಗೆ ತುತ್ತಾಗುವ ತಾಣಗಳಿಗೆ ಅಪಾರ ಪ್ರಮಾಣದ ಮಾಹಿತಿ ಹರಿದುಬರುವುದು ಇವೇ ಬಾಟ್‌ನೆಟ್‌ಗಳಿಂದ. ಈ ಗಣಕಗಳು ಜಗತ್ತಿನ ಯಾವ ಮೂಲೆಯಲ್ಲಿ ಬೇಕಾದರೂ ಇರಬಹುದಾದ್ದರಿಂದ ಅನೇಕ ಸನ್ನಿವೇಶಗಳಲ್ಲಿ ನಿಜವಾದ ಅಪರಾಧಿಯ ಪತ್ತೆಯಾಗುವುದೇ ಇಲ್ಲ.

ವಿಕಿಲೀಕ್ಸ್ ವಾರ್
ವಿಕಿಲೀಕ್ಸ್ ವಿರೋಧಿಗಳು ಪ್ರಾರಂಭಿಸಿದ ಡಿಡಿಒಎಸ್ ದಾಳಿಗಳ ಬೆನ್ನಲ್ಲೇ ಡಿಎನ್‌ಎಸ್ ಸೇವೆಯೂ ನಿಂತುಹೋದದ್ದರಿಂದ ವಿಕಿಲೀಕ್ಸ್ ತಾಣ ತನ್ನ ವಿಳಾಸವನ್ನು ಬದಲಾಯಿಸಿಕೊಳ್ಳಬೇಕಾಗಿಬಂತು. ಇದರ ಬೆನ್ನಲ್ಲೇ ವಿಕಿಲೀಕ್ಸ್ ತಾಣಕ್ಕೆ ಬರುವ ದೇಣಿಗೆಗಳನ್ನು ನಾವು ಇನ್ನುಮುಂದೆ ಸಂಗ್ರಹಿಸುವುದಿಲ್ಲ ಎಂದು ವೀಸಾ, ಮಾಸ್ಟರ್‌ಕಾರ್ಡ್ ಹಾಗೂ ಪೇಪಾಲ್ ಸಂಸ್ಥೆಗಳೂ ಘೋಷಿಸಿಬಿಟ್ಟವು.

ಇಷ್ಟೆಲ್ಲ ಆದಾಗ ವಿಕಿಲೀಕ್ಸ್ ಬೆಂಬಲಿಗರಿಗೆ ಕೋಪಬಂತು. ತಮ್ಮ ಕೋಪ ತೋರಿಸಿಕೊಳ್ಳಲು ಅವರೂ ಡಿಡಿಒಎಸ್ ದಾಳಿಗಳ ಮೊರೆಹೋದರು. ಅಮೆಜಾನ್, ವೀಸಾ, ಮಾಸ್ಟರ್‌ಕಾರ್ಡ್ ಹಾಗೂ ಪೇಪಾಲ್ ತಾಣಗಳು ಅವರ ಕೋಪಕ್ಕೆ ಗುರಿಯಾಗಬೇಕಾಯಿತು.

ಹಬ್ಬುತ್ತಿರುವ ಹಾವಳಿ
ಹೀಗೆ ಡಿಡಿಒಎಸ್ ದಾಳಿಗಳನ್ನು ಮಾಡುವ ಮೂಲಕ ತಮ್ಮ ಸಿಟ್ಟುತೀರಿಸಿಕೊಳ್ಳುವ ಚಾಳಿ ಅಂತರಜಾಲ ಲೋಕದಲ್ಲಿ ವ್ಯಾಪಕವಾಗಿ ಬೆಳೆಯುತ್ತಿದೆ ಎಂದು ತಜ್ಞರು ಹೇಳುತ್ತಾರೆ.

ವಿವಿಧ ಸಂಘಸಂಸ್ಥೆಗಳ ಜಾಲತಾಣಗಳ ಮೇಲೆ ಅವರ ವಿರೋಧಿಗಳು ಡಿಡಿಒಎಸ್ ದಾಳಿ ನಡೆಸುವುದು ಸಾಮಾನ್ಯವಾಗಿಹೋಗಿದೆಯಂತೆ. ಯಾವುದೋ ಸಿದ್ಧಾಂತವನ್ನು ವಿರೋಧಿಸುವ ಸೋಗಿನಲ್ಲ್ಲಿ ತಮ್ಮ ದುರುದ್ದೇಶ ಈಡೇರಿಸಿಕೊಳ್ಳಲು ಪ್ರಯತ್ನಿಸುವ ಸೈಬರ್ ದುಷ್ಕರ್ಮಿಗಳೂ ಈ ತಂತ್ರ ಉಪಯೋಗಿಸುತ್ತಿರುವ ಸಂಶಯವೂ ಇದೆ. ಡಿಡಿಒಎಸ್ ದಾಳಿಗಳನ್ನು ನಡೆಸಲು ಅನುವುಮಾಡಿಕೊಡುವ ತಂತ್ರಾಂಶಗಳು ವಿಶ್ವವ್ಯಾಪಿ ಜಾಲದ ಮೂಲಕ ಸುಲಭವಾಗಿ ಲಭ್ಯವಾಗುತ್ತಿರುವುದೂ ಈ ದಾಳಿಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಅಭಿಪ್ರಾಯಪಡಲಾಗುತ್ತಿದೆ.

ಯಾವ ಉದ್ದೇಶಕ್ಕೇ ಆಗಲಿ, ಡಿಡಿಒಎಸ್ ದಾಳಿ ಅಥವಾ ಅದರಂತಹ ಇನ್ನಾವುದೇ ಸೈಬರ್ ದುಷ್ಕೃತ್ಯಗಳಲ್ಲಿ ಭಾಗಿಯಾಗುವುದು ಶಿಕ್ಷಾರ್ಹ ಅಪರಾಧವಾಗುತ್ತದೆ; ಹೀಗಾಗಿ ಇವೆಲ್ಲ ತಾಪತ್ರಯಗಳಿಂದ ದೂರವೇ ಇರಿ ಎನ್ನುವುದು ತಜ್ಞರ ಸಲಹೆ.

ಡಿಸೆಂಬರ್ ೨೮, ೨೦೧೦ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಮಂಗಳವಾರ, ಡಿಸೆಂಬರ್ 21, 2010

ಗ್ರಿಡ್ ಕಂಪ್ಯೂಟಿಂಗ್ ಮಾಯೆ

ಟಿ ಜಿ ಶ್ರೀನಿಧಿ

ಕಳೆದ ದಶಕದಲ್ಲಿ ಗಣಕಗಳ ಸಂಸ್ಕರಣಾ ಸಾಮರ್ಥ್ಯದಲ್ಲಿ ಆಗಿರುವ ಬದಲಾವಣೆ ಅಭೂತಪೂರ್ವವಾದದ್ದು. ನೂರಿನ್ನೂರು ಮೆಗಾಹರ್ಟ್ಸ್ ವೇಗದ ಪ್ರಾಸೆಸರ್, ಕೆಲವು ನೂರು ಎಂಬಿಗಳಷ್ಟು ರ್‍ಯಾಮ್ - ಏಳೆಂಟು ವರ್ಷಗಳ ಹಿಂದಿನ ಗಣಕಗಳಲ್ಲಿ ಇಷ್ಟೇ ಸಾಮರ್ಥ್ಯ ಇರುತ್ತಿದ್ದದ್ದು. ಆದರೆ ಈಗ? ಪ್ರಾಸೆಸರ್‌ಗಳ ವೇಗ ಗಿಗಾಹರ್ಟ್ಸ್ ತಲುಪಿ ಎಷ್ಟೋ ಕಾಲವಾಗಿದೆ, ಒಂದೆರಡು ಜಿಬಿಗಿಂತ ಕಡಿಮೆ ರ್‍ಯಾಮ್ ಇರುವ ಗಣಕ ಹುಡುಕಿದರೂ ಸಿಗುವುದು ಕಷ್ಟ.

ಆದರೆ ಇಷ್ಟು ದೊಡ್ಡ ಸಂಸ್ಕರಣಾ ಸಾಮರ್ಥ್ಯದ ಬಳಕೆ ನಮ್ಮನಿಮ್ಮ ಮನೆಗಳಲ್ಲಿ ಸಮರ್ಪಕವಾಗಿ ಆಗುತ್ತಿದೆಯೋ ಇಲ್ಲವೋ ಎಂದು ನೋಡಿದಾಗ ಇಲ್ಲ ಎಂಬ ಉತ್ತರ ದೊರಕುವ ಸಾಧ್ಯತೆಯೇ ಹೆಚ್ಚು. ಗಣಕಗಳ ತಾಂತ್ರಿಕ ವಿನ್ಯಾಸ ಬದಲಾಗಿರುವಷ್ಟು ಅವುಗಳ ಬಳಕೆ ಹೆಚ್ಚಾಗಿಲ್ಲ. ಮುನ್ನೂರು ಮೆಗಾಹರ್ಟ್ಸ್, ಅರವತ್ತನಾಲ್ಕು ಎಂಬಿ ಮೆಮೊರಿ ಇದ್ದಾಗ ಗಣಕ ಬಳಸಿ ಏನು ಮಾಡುತ್ತಿದ್ದೆವೋ ಈಗಲೂ ಹೆಚ್ಚೂಕಡಿಮೆ ಅದೇ ಕೆಲಸ ಮಾಡುತ್ತೇವೆ, ಹೆಚ್ಚೆಂದರೆ ತಂತ್ರಾಂಶಗಳ ಆವೃತ್ತಿಗಳು ಬದಲಾಗಿವೆ ಅಷ್ಟೆ. ಹೀಗಾಗಿ ಗಣಕ ಕೆಲಸಮಾಡುತ್ತಿದ್ದಷ್ಟು ಹೊತ್ತೂ ಪ್ರಾಸೆಸರ್‌ನ ಬಳಕೆ ಬಹಳ ಕೆಳಮಟ್ಟದಲ್ಲೇ ಇರುತ್ತದೆ.

ವಿಶ್ವದಾದ್ಯಂತ ಗಣಕ ಬಳಸುವ ಬಹುತೇಕ ಮನೆಗಳ ಪರಿಸ್ಥಿತಿ ಹೆಚ್ಚೂಕಡಿಮೆ ಹೀಗೆಯೇ ಇದೆ. ಇಷ್ಟೆಲ್ಲ ಗಣಕಗಳಲ್ಲಿ ಹೀಗೆ ಉಪಯೋಗಕ್ಕೆ ಬಾರದೆ ಹೋಗುವ ಸಂಸ್ಕರಣಾ ಸಾಮರ್ಥ್ಯವನ್ನೆಲ್ಲ ಒಟ್ಟುಸೇರಿಸಿದರೆ ಅದೆಷ್ಟು ದೊಡ್ಡ ಪ್ರಮಾಣದ ಸಂಪನ್ಮೂಲ ದೊರಕಬಹುದು ಎಂಬ ಆಲೋಚನೆಯ ಪರಿಣಾಮವಾಗಿ ಹುಟ್ಟಿಕೊಂಡಿರುವ ಕ್ಷೇತ್ರವೇ 'ಗ್ರಿಡ್ ಕಂಪ್ಯೂಟಿಂಗ್'.

ಅಂತರಜಾಲ ಸಂಪರ್ಕ ಹೊಂದಿರುವ ಗಣಕಗಳು ಕೆಲಸಮಾಡುತ್ತಿರುವಾಗ ಅವುಗಳಲ್ಲಿ ಲಭ್ಯವಿರುವ ಹೆಚ್ಚುವರಿ ಸಂಸ್ಕರಣಾ ಸಾಮರ್ಥ್ಯವನ್ನು ಒಟ್ಟುಗೂಡಿಸಿ ಬಳಸಿಕೊಳ್ಳುವುದು ಗ್ರಿಡ್ ಕಂಪ್ಯೂಟಿಂಗ್‌ನ ಉದ್ದೇಶ. ದೇಶದಲ್ಲೆಲ್ಲ ಹರಡಿರುವ ವಾಹಕ ತಂತಿಗಳ ಬಲೆಯನ್ನು ಬಳಸಿ ವಿದ್ಯುತ್ ಜಾಲಗಳು (ಗ್ರಿಡ್) ಕೆಲಸಮಾಡುವಂತೆ ಇಲ್ಲಿ ವಿಶ್ವದಾದ್ಯಂತ ಅಂತರಜಾಲದ ಬಲೆಯ ಮೂಲಕ ಸಂಪರ್ಕದಲ್ಲಿರುವ ಗಣಕಗಳನ್ನು ಅತ್ಯಂತ ಸಂಕೀರ್ಣವಾದ ಲೆಕ್ಕಾಚಾರಗಳು ಹಾಗೂ ಮಾಹಿತಿ ಸಂಸ್ಕರಣೆ ಕೈಗೊಳ್ಳಲು ಬಳಸಿಕೊಳ್ಳಲಾಗುತ್ತದೆ.

ಗ್ರಿಡ್ ಕಂಪ್ಯೂಟಿಂಗ್‌ನ ಕಲ್ಪನೆ ಮೊದಲಿಗೆ ಬಂದದ್ದು ಇಯಾನ್ ಫಾಸ್ಟರ್ ಹಾಗೂ ಕಾರ್ಲ್ ಕೆಸ್ಸೆಲ್‌ಮ್ಯಾನ್ ಎಂಬ ತಂತ್ರಜ್ಞರಿಗೆ, ೧೯೯೦ರ ಸುಮಾರಿನಲ್ಲಿ. ನಂತರ ಇವರ ಜೊತೆಗೂಡಿದ ಸ್ಟೀವ್ ಟ್ಯೂಕ್ ಎಂಬಾತನ ಜೊತೆಯಲ್ಲಿ ಇವರು ಗ್ರಿಡ್ ಕಂಪ್ಯೂಟಿಂಗ್ ಕುರಿತ ಕನಸುಗಳನ್ನು ವಾಸ್ತವಕ್ಕೆ ಬದಲಿಸಲು ಶ್ರಮಿಸಿದರು. ಹೀಗಾಗಿಯೇ ಈ ತ್ರಿವಳಿಯನ್ನು ಒಟ್ಟಾಗಿ ಗ್ರಿಡ್ ಪಿತಾಮಹರೆಂದು ಗುರುತಿಸಲಾಗುತ್ತದೆ.

ಭಾರೀ ಪ್ರಮಾಣದ ಸಂಸ್ಕರಣಾ ಸಾಮರ್ಥ್ಯ ಬೇಕಾಗುವ ಅನೇಕ ವೈಜ್ಞಾನಿಕ ಚಟುವಟಿಕೆಗಳಲ್ಲಿ ಗ್ರಿಡ್ ಕಂಪ್ಯೂಟಿಂಗ್ ಬಳಕೆಯಾಗುತ್ತಿದೆ. ಇದರಿಂದಾಗಿ ಸಂಶೋಧನಾಲಯಗಳಿಗೆ ಅಪಾರ ಉಳಿತಾಯ ಆಗುತ್ತಿದೆ; ಅಷ್ಟೇ ಅಲ್ಲ, ಹೆಚ್ಚುಹೆಚ್ಚು ಆಸಕ್ತರಿಗೆ ಈ ಸಂಶೋಧನೆಗಳಲ್ಲಿ ಸಹಾಯಮಾಡಿದ ಸಂತೋಷ ಕೂಡ ಸಿಗುತ್ತಿದೆ. ಸಂಸ್ಕರಿಸಬೇಕಾದ ದತ್ತಾಂಶವನ್ನು ವಿಶ್ವದೆಲ್ಲೆಡೆಯ ಗಣಕಗಳ ನಡುವೆ ಹಂಚಲು ಬಳಸಲಾಗುತ್ತಿರುವ ಬರ್ಕ್‌ಲಿ ಓಪನ್ ಇನ್‌ಫ್ರಾಸ್ಟ್ರಕ್ಚರ್ ಫಾರ್ ನೆಟ್‌ವರ್ಕ್ ಕಂಪ್ಯೂಟಿಂಗ್ ಅಥವಾ BOINC ಎಂಬ ತಂತ್ರಜ್ಞಾನವೂ ಉಚಿತವಾಗಿ ಲಭ್ಯವಿರುವಂಥದ್ದು (ಓಪನ್ ಸೋರ್ಸ್).

ರಸಾಯನಶಾಸ್ತ್ರದಲ್ಲಿ ಉನ್ನತ ಅಧ್ಯಯನಗಳನ್ನು ಕೈಗೊಂಡಿರುವ ಫೋಲ್ಡಿಂಗ್@ಹೋಮ್, ಕ್ಷೀರಪಥ ಗೆಲಾಕ್ಸಿಯ ಕುರಿತು ಕೆಲಸಮಾಡುತ್ತಿರುವ ಮಿಲ್ಕಿವೇ@ಹೋಮ್, ಭೂಮಿಯಾಚೆಗಿನ ಬದುಕಿಗಾಗಿ ಹುಡುಕಾಟ ನಡೆಸುವ ಸೆಟಿ@ಹೋಮ್, ನಕ್ಷತ್ರಗಳ ಕುರಿತು ಸಂಶೋಧನೆ ಮಾಡುತ್ತಿರುವ ಐನ್‌ಸ್ಟೈನ್@ಹೋಮ್ ಮುಂತಾದ ಅನೇಕ ಕಾರ್ಯಕ್ರಮಗಳು ಗ್ರಿಡ್ ಕಂಪ್ಯೂಟಿಂಗ್ ಬಳಸುತ್ತಿವೆ.

ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಸಕ್ತ ಬಳಕೆದಾರರು ಅವುಗಳ ಜಾಲತಾಣಕ್ಕೆ ಹೋಗಿ ಅಗತ್ಯ ತಂತ್ರಾಂಶವನ್ನು (ಉಚಿತವಾಗಿ) ಪಡೆದುಕೊಂಡು ತಮ್ಮ ಗಣಕದಲ್ಲಿ ಅನುಸ್ಥಾಪಿಸಿಕೊಳ್ಳಬೇಕಾಗುತ್ತದೆ. ಬಳಕೆದಾರರ ಗಣಕ ತನ್ನ ಪೂರ್ಣ ಸಂಸ್ಕರಣಾ ಸಾಮರ್ಥ್ಯವನ್ನು ಬಳಸುತ್ತಿಲ್ಲದ ಸಂದರ್ಭಗಳಲ್ಲಿ ಆ ತಂತ್ರಾಂಶ ತನಗೆ ಬೇಕಾದ ಲೆಕ್ಕಾಚಾರ ಮಾಡಿಕೊಳ್ಳುತ್ತದೆ; ಸಂಸ್ಕರಿಸಬೇಕಾದ ದತ್ತಾಂಶ ಪಡೆದುಕೊಳ್ಳಲು, ಸಂಸ್ಕರಿಸಿದ ನಂತರ ದೊರೆತ ಮಾಹಿತಿಯನ್ನು ತಿರುಗಿ ಕಳುಹಿಸಲು ಅಂತರಜಾಲ ಸಂಪರ್ಕ ಇರಬೇಕಾದ್ದು ಕಡ್ಡಾಯ.

ಮುಂಬರುವ ದಿನಗಳಲ್ಲಿ ವಿಜ್ಞಾನ ಪ್ರಪಂಚಕ್ಕೆ ಭಾರೀ ಕೊಡುಗೆ ನೀಡಲಿದೆಯೆಂದು ನಿರೀಕ್ಷಿಸಲಾಗಿರುವ ಗ್ರಿಡ್ ಕಂಪ್ಯೂಟಿಂಗ್‌ನ ಬಗೆಗೆ ಭಾರತದಲ್ಲೂ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ಕೇಂದ್ರ ಸರ್ಕಾರದ ನೆರವು ಹಾಗೂ ಸಿ-ಡ್ಯಾಕ್ ಸಂಸ್ಥೆಯ ನೇತೃತ್ವದಲ್ಲಿ ರೂಪುಗೊಂಡಿರುವ 'ಗರುಡ' ಭಾರತದ ಮೊದಲ ಕಂಪ್ಯೂಟರ್ ಗ್ರಿಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತ ಹಾಗೂ ಯುರೋಪಿನ ಸಂಶೋಧನಾಲಯಗಳ ನಡುವೆ ಸಂಪರ್ಕ ಕಲ್ಪಿಸುವ ಇಯು-ಇಂಡಿಯಾ ಗ್ರಿಡ್ ಕೂಡ ತನ್ನ ಕೆಲಸ ಪ್ರಾರಂಭಿಸಿದೆ.

ಡಿಸೆಂಬರ್ ೨೧, ೨೦೧೦ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಮಂಗಳವಾರ, ಡಿಸೆಂಬರ್ 14, 2010

ಸ್ಪಾಮ್ ಎಂಬ ಇಮೇಲ್ ಕಸ

ಟಿ ಜಿ ಶ್ರೀನಿಧಿ

ಈಚೆಗೆ ಅಮೆರಿಕಾದ ಎಫ್‌ಬಿಐ ರಷ್ಯಾದ ಯುವಕನೊಬ್ಬನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿತು. ಓಲೆಗ್ ನಿಕೋಲ್ಯಾಂಕೋ ಎಂಬ ಇಪ್ಪತ್ತಮೂರು ವರ್ಷದ ಈ ಯುವಕನ ಮೇಲೆ ಹೊರಿಸಲಾಗಿರುವ ಆರೋಪಗಳು ಸಾಬೀತಾದರೆ ಕನಿಷ್ಟ ಮೂರು ವರ್ಷ ಜೈಲುಶಿಕ್ಷೆಯ ಜೊತೆಗೆ ಎರಡೂವರೆ ಲಕ್ಷ ಡಾಲರುಗಳಷ್ಟು ದಂಡವನ್ನೂ ತೆರಬೇಕಾಗುತ್ತದೆ ಎಂದು ಪತ್ರಿಕಾ ವರದಿಗಳು ಹೇಳುತ್ತವೆ.

ಈತ ಎಲ್ಲೂ ಬಾಂಬ್ ಸಿಡಿಸಿಲ್ಲ, ಅಥವಾ ಇನ್ನಾವುದೇ ರೂಪದ ಭಯೋತ್ಪಾದನೆ ಮಾಡಿಲ್ಲ; ಆತನ ಮೇಲಿರುವುದು ಇಮೇಲ್ ಮೂಲಕ ಕೋಟಿಗಟ್ಟಲೆ ರದ್ದಿ ಸಂದೇಶಗಳನ್ನು ಕಳಿಸಿ ಜನರನ್ನು ವಂಚಿಸಿದ, ಹಾಗೂ ಆ ಮೂಲಕ ಅಂತರಜಾಲದ ದುರ್ಬಳಕೆ ಮಾಡಿಕೊಂಡ ಆರೋಪ. ಒಂದು ಸಮಯದಲ್ಲಿ ಅಂತರಜಾಲದ ಮೂಲಕ ಹರಿದಾಡುತ್ತಿದ್ದ ಇಮೇಲ್ ರದ್ದಿ ಸಂದೇಶಗಳಲ್ಲಿ ಮೂರನೇ ಒಂದರಷ್ಟಕ್ಕೆ ಈತನೇ ಕಾರಣನಾಗಿದ್ದನಂತೆ!

ಸ್ಪಾಮ್ ಬಂತು ಸ್ಪಾಮ್
ಇಮೇಲ್ ಮಾಧ್ಯಮದ ಮೂಲಕ ಅನಗತ್ಯ ಮಾಹಿತಿಯನ್ನು ಬಲವಂತವಾಗಿ ಹೊತ್ತು ತರುವ ಇಂತಹ ರದ್ದಿ ಸಂದೇಶಗಳ ಹೆಸರೇ ಸ್ಪಾಮ್.

ಲೈಂಗಿಕ ಶಕ್ತಿ ಹೆಚ್ಚಿಸುವ ಮಾಯಾ ಔಷಧಿ, ರೋಲೆಕ್ಸ್‌ನಂತೆಯೇ ಕಾಣುವ ನಕಲಿ ಕೈಗಡಿಯಾರ, ಸಾವಿರದೊಂದು ಬಗೆಯ ಹೊಸರುಚಿ ಕಲಿಸಿಕೊಡುವ ಸಿ.ಡಿ., ಸುಲಭವಾಗಿ ದುಡ್ಡುಮಾಡುವ ವಿಧಾನ ಮೊದಲಾದ ವಿವಿಧ ಬಗೆಯ ಜಾಹೀರಾತುಗಳನ್ನು ನಾವು ಸ್ಪಾಮ್ ಸಂದೇಶಗಳಲ್ಲಿ ಕಾಣಬಹುದು. ವೈದ್ಯರ ಸಲಹೆಯಿಲ್ಲದೆ ಮಾರಾಟ ಮಾಡಬಾರದಾದ ಔಷಧಗಳನ್ನು (ಪ್ರಿಸ್ಕ್ರಿಪ್ಷನ್ ಡ್ರಗ್ಸ್) ಅನಧಿಕೃತವಾಗಿ ಮಾರುವವರ ದಂಧೆಗಂತೂ ಸ್ಪಾಮ್ ಸಂದೇಶಗಳೇ ಜೀವಾಳ.

ಭಾರೀ ಮೊತ್ತದ ಹಣದ ಆಮಿಷ ಒಡ್ಡಿ ಜನರನ್ನು ವಂಚಿಸುವವರು ಕೂಡ ಸ್ಪಾಮ್ ಸಂದೇಶಗಳನ್ನೇ ಬಳಸುತ್ತಾರೆ. ನನ್ನ ಬಳಿ ಅದೆಷ್ಟೋ ಲಕ್ಷ ಡಾಲರ್‌ಗಳಷ್ಟು ಕಪ್ಪು ಹಣ ಇದೆ; ಅದನ್ನು ನನ್ನ ದೇಶದಿಂದ ಹೊರಕ್ಕೆ ತರಲು ಸಹಾಯ ಮಾಡಿದರೆ ನಿನಗೆ ಅದರಲ್ಲಿ ಅರ್ಧಪಾಲು ಕೊಡುತ್ತೇನೆ ಎಂದೋ, ನಿನಗೆ ನಮ್ಮ ಸಂಸ್ಥೆ ನಡೆಸುವ ಲಾಟರಿಯಲ್ಲಿ ಲಕ್ಷಾಂತರ ಡಾಲರುಗಳ ಬಹುಮಾನ ಬಂದಿದೆ ಎಂದೋ ಅಥವಾ ನಿನಗೆ ವಿದೇಶದಲ್ಲಿ ಉದ್ಯೋಗ ಕೊಡಿಸುತ್ತೇನೆ ಎಂದೋ ಹೇಳುವ ಸ್ಪಾಮ್ ಸಂದೇಶಗಳು ಇಂತಹ ವಂಚನೆಗಳಿಗೆ ನಾಂದಿಹಾಡುತ್ತವೆ.

ನಕಲಿ ಇಮೇಲ್ ಹಾಗೂ ಜಾಲತಾಣಗಳ ಸಹಾಯದಿಂದ ಬಳಕೆದಾರರ ಖಾಸಗಿ ಮಾಹಿತಿಯನ್ನು ಕದಿಯುವ ಫಿಶಿಂಗ್ ಹಗರಣದಲ್ಲೂ ಸ್ಪಾಮ್ ಸಂದೇಶಗಳು ಬಳಕೆಯಾಗುತ್ತವೆ. ಸಾಕಷ್ಟು ನೈಜವಾಗಿಯೇ ತೋರುವ ಈ ಸಂದೇಶಗಳು ಸಾಮಾನ್ಯವಾಗಿ ಬೇರೆಬೇರೆ ಬ್ಯಾಂಕುಗಳ ಹೆಸರಿನಲ್ಲಿ ಆಗಿಂದಾಗ್ಗೆ ಬರುತ್ತಿರುತ್ತವೆ. ಬ್ಯಾಂಕಿನ ಹೆಸರು ಹೇಳಿ ನಂಬಿಸಿ ಬ್ಯಾಂಕ್ ಖಾತೆಯ ಅಥವಾ ಕ್ರೆಡಿಟ್ ಕಾರ್ಡಿನ ವಿವರಗಳನ್ನು ಕದಿಯುವುದು ಇಂತಹ ನಕಲಿ ಸಂದೇಶಗಳ ಉದ್ದೇಶವಾಗಿರುತ್ತದೆ. ಇದೇ ರೀತಿಯಲ್ಲಿ ಇಮೇಲ್ ಖಾತೆಯ ಪಾಸ್‌ವರ್ಡ್ ಕದ್ದು ಅದನ್ನು ದುರ್ಬಳಕೆ ಮಾಡಿಕೊಂಡ ಉದಾಹರಣೆಗಳೂ ಇವೆ.

ಬಾಟ್ ಮತ್ತು ಬಾಟ್‌ನೆಟ್
ವಿಶ್ವದಾದ್ಯಂತ ಹರಿದಾಡುವ ಸ್ಪಾಮ್ ಸಂದೇಶಗಳಲ್ಲಿ ದೊಡ್ಡ ಪಾಲು ನಮ್ಮನಿಮ್ಮಂಥ ಸಾಮಾನ್ಯ ಬಳಕೆದಾರರ ಗಣಕಗಳಿಂದ ಬರುತ್ತಿದೆಯಂತೆ. ಗೂಢಚಾರಿ ತಂತ್ರಾಂಶಗಳ ಮೂಲಕ ಈ ಗಣಕಗಳನ್ನು 'ಹೈಜಾಕ್' ಮಾಡುವ ಹ್ಯಾಕರ್‌ಗಳು ಅವನ್ನು ಸ್ಪಾಮ್ ಸಂದೇಶಗಳ ರವಾನೆಗಾಗಿ ಬಳಸುತ್ತಾರೆ.

ಯಾವುದೋ ಉಪಯುಕ್ತ ತಂತ್ರಾಂಶದ ಸೋಗಿನಲ್ಲಿ ಗಣಕವನ್ನು ಪ್ರವೇಶಿಸುವ ಇಂತಹ ತಂತ್ರಾಂಶ ಗಣಕದ ಕಾರ್ಯಾಚರಣ ವ್ಯವಸ್ಥೆಗೆ ಅಂಟಿಕೊಳ್ಳುತ್ತದೆ. ಪ್ರತಿ ಬಾರಿ ಗಣಕವನ್ನು ಚಾಲೂ ಮಾಡಿದಾಗಲೂ ಈ ತಂತ್ರಾಂಶ ಸಕ್ರಿಯವಾಗುತ್ತದೆ; ಸ್ವಇಚ್ಛೆಯಿಲ್ಲದೆಯೇ ಹ್ಯಾಕರ್‌ನ ಆದೇಶಗಳನ್ನು ಪಾಲಿಸಲು ಪ್ರಾರಂಭಿಸುವ ಗಣಕ ಹ್ಯಾಕರ್‌ನ ಅಣತಿಯಂತೆ ಸ್ಪಾಮ್ ಸಂದೇಶಗಳನ್ನು ರವಾನಿಸುತ್ತಲೇ ಹೋಗುತ್ತದೆ. ಇಂತಹ ಗಣಕಗಳು ಬೇರೊಬ್ಬರ ಆದೇಶ ಪಾಲಿಸುವ ಯಂತ್ರಮಾನವನಂತೆ (ರೋಬಾಟ್) ಕೆಲಸಮಾಡುವುದರಿಂದ ಅವುಗಳನ್ನು ಬಾಟ್‌ಗಳೆಂದು ಕರೆಯುತ್ತಾರೆ. ಬಾಟ್ ಎನ್ನುವುದು ರೋಬಾಟ್ ಎಂಬ ಹೆಸರಿನ ಅಪಭ್ರಂಶ. ಇಂತಹ ನೂರಾರು-ಸಾವಿರಾರು ಬಾಟ್‌ಗಳನ್ನು ಒಗ್ಗೂಡಿಸಿ ರಚನೆಯಾಗುವ ಜಾಲಗಳಿಗೆ 'ಬಾಟ್‌ನೆಟ್'ಗಳೆಂದು ಹೆಸರು.

ಅತ್ಯಂತ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುವ ಈ ಜಾಲಗಳು ಸ್ಪಾಮ್ ಸಮಸ್ಯೆಯ ಕೇಂದ್ರಬಿಂದುಗಳೆಂದರೆ ತಪ್ಪಲ್ಲ. ಇದೀಗ ಎಫ್‌ಬಿಐ ಕೈಗೆ ಸಿಕ್ಕುಹಾಕಿಕೊಂಡಿರುವ ಓಲೆಗ್ ನಿಕೋಲ್ಯಾಂಕೋ ಕೂಡ ಇಂತಹುದೇ ಬಾಟ್‌ನೆಟ್ ಒಂದನ್ನು ನಿರ್ವಹಿಸುತ್ತಿದ್ದ. ಆತನ ಜಾಲ ದಿನಕ್ಕೆ ಹತ್ತು ಬಿಲಿಯನ್ ರದ್ದಿ ಸಂದೇಶಗಳನ್ನು ಕಳುಹಿಸಲು ಶಕ್ತವಾಗಿತ್ತು ಎಂದು ತಜ್ಞರು ಹೇಳಿದ್ದಾರೆ. ನಕಲಿ ವಾಚುಗಳು ಹಾಗೂ ಅನಧಿಕೃತ ಔಷಧಿ ಮಾರಾಟಗಾರರಿಂದ ಹಣ ಪಡೆದು ಆತ ಇಷ್ಟೆಲ್ಲ ರದ್ದಿ ಸಂದೇಶಗಳನ್ನು ಕಳುಹಿಸುತ್ತಿದ್ದನಂತೆ.

ಸ್ಪಾಮ್ ತಡೆ ಹೇಗೆ?
ಸ್ಪಾಮ್ ಕಾಟದಿಂದ ಪಾರಾಗಲು ಬಳಕೆದಾರರ ವಿವೇಚನೆಯೇ ಸೂಕ್ತ ಮಾರ್ಗ ಎನ್ನುವುದು ತಜ್ಞರ ಅಭಿಪ್ರಾಯ. ಸಂದೇಹಾಸ್ಪದ ಜಾಲತಾಣಗಳಲ್ಲಿ ನಿಮ್ಮ ಸಂಪರ್ಕ ವಿವರಗಳನ್ನು ದಾಖಲಿಸದಿರುವುದು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ. ಅಂತೆಯೇ ನಂಬಲಸಾಧ್ಯವೆಂದು ತೋರುವ ಸಂದೇಶಗಳನ್ನು ಕಡ್ಡಾಯವಾಗಿ ನಂಬದಿರುವುದು ಇನ್ನೊಂದು ಅತ್ಯಗತ್ಯ ಕ್ರಮ. ಯಾವುದೋ ದೇಶದಲ್ಲಿರುವ ಯಾರೋ ನಿಮಗೆ ಕೋಟ್ಯಂತರ ರೂಪಾಯಿ ಕೊಡುತ್ತೇವೆ ಎಂದೋ ನೀವು ಕೇಳಿಲ್ಲದೆಯೇ ವಿದೇಶದಲ್ಲಿ ಉದ್ಯೋಗಾವಕಾಶ ಕೊಡುತ್ತೇವೆ ಎಂದೋ ಹೇಳಿದರೆ ಅದರಲ್ಲಿ ಖಂಡಿತಾ ಏನೋ ಮೋಸವಿರುತ್ತದೆ ಎನ್ನುವುದು ನೆನಪಿರಲಿ. ಹಾಗೆಯೇ ಯಾವುದೇ ತಾಣ ನಿಮ್ಮ ಬ್ಯಾಂಕ್, ಕ್ರೆಡಿಟ್ ಕಾರ್ಡ್ ಅಥವಾ ಇಮೇಲ್ ಖಾತೆಯ ವಿವರಗಳನ್ನು ದಾಖಲಿಸಲು ಹೇಳಿದರೆ ಎಚ್ಚರವಹಿಸಿ, ಸುಖಾಸುಮ್ಮನೆ ಯಾವ ಸಂಸ್ಥೆಯೂ ನಿಮ್ಮ ವೈಯುಕ್ತಿಕ ವಿವರಗಳನ್ನು ಕೇಳುವುದಿಲ್ಲ ಎನ್ನುವ ವಿಷಯ ಸದಾ ನಿಮ್ಮ ನೆನಪಿನಲ್ಲಿರಲಿ.

ಡಿಸೆಂಬರ್ ೧೪, ೨೦೧೦ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಮಂಗಳವಾರ, ಡಿಸೆಂಬರ್ 7, 2010

ಮೌಸ್ ಪುರಾಣ

ಟಿ ಜಿ ಶ್ರೀನಿಧಿ

ಈ ವರ್ಷದ ಜುಲೈನಲ್ಲಿ ಆಪಲ್ ಸಂಸ್ಥೆ ತನ್ನ ಗಣಕಗಳ ಬಳಕೆದಾರರಿಗಾಗಿ ಮ್ಯಾಜಿಕ್ ಟ್ರ್ಯಾಕ್‌ಪಾಡ್ ಎಂಬುದೊಂದು ಹೊಸ ಸಾಧನವನ್ನು ಪರಿಚಯಿಸಿತು. ಲ್ಯಾಪ್‌ಟಾಪ್ ಗಣಕಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸ್ಪರ್ಶಸಂವೇದಿ ಟಚ್‌ಪ್ಯಾಡುಗಳನ್ನು ಡೆಸ್ಕ್‌ಟಾಪ್‌ಗಳಲ್ಲೂ ಬಳಸುವಂತೆ ಮಾಡುವ ಪ್ರಯತ್ನ ಇದು. ಕೀಬೋರ್ಡ್ ಪಕ್ಕದಲ್ಲಿ ಇಟ್ಟುಕೊಳ್ಳುವ ಈ ಪುಟ್ಟ ಗಾಜಿನ ತುಂಡಿನ ಮೇಲೆ ಬೆರಳುಗಳನ್ನು ಓಡಾಡಿಸುವ ಮೂಲಕ - ಥೇಟ್ ಟಚ್ ಸ್ಕ್ರೀನ್ ಮೊಬೈಲ್‌ನಂತೆಯೇ - ಗಣಕವನ್ನು ನಿಯಂತ್ರಿಸುವುದು ಸಾಧ್ಯ. ಕ್ಲಿಕ್ ಮಾಡುವುದು, ಸ್ಕ್ರಾಲ್ ಮಾಡುವುದು, ಪರದೆಯ ಮೇಲಿನ ಚಿತ್ರವನ್ನು ಹೇಗೆ ಬೇಕೋ ಹಾಗೆ ತಿರುಗಿಸುವುದು, ಇ-ಪುಸ್ತಕದ ಪುಟಗಳನ್ನು ಮಗುಚುವುದು - ಇವೆಲ್ಲ ಬೆರಳುಗಳ ಚಲನೆಯಿಂದಲೇ ಸಾಧ್ಯವಾಗುವಾಗ ಮೌಸ್‌ನ ಅಗತ್ಯವೇ ಇಲ್ಲ!

ಹೀಗಾಗಿಯೇ ಮ್ಯಾಜಿಕ್ ಟ್ರ್ಯಾಕ್‌ಪ್ಯಾಡ್‌ನ ಜೊತೆಗೆ ಹಳೆಯದೊಂದು ಪ್ರಶ್ನೆಯೂ ಗಣಕ ಲೋಕದತ್ತ ಮತ್ತೊಮ್ಮೆ ಹರಿದುಬಂತು - "ಕಂಪ್ಯೂಟರ್ ಮೌಸ್‌ಗೆ ವಿದಾಯ ಹೇಳುವ ಕಾಲ ಸಮೀಪಿಸಿದೆಯೆ?

ಇಲಿ ಇತಿಹಾಸ
ವಿಶ್ವದ ಗಣಕ ಬಳಕೆದಾರರ ಅಚ್ಚುಮೆಚ್ಚಿನ ಸಂಗಾತಿಯಾಗಿ ಸಾಗಿಬಂದಿರುವ ಸಾಧನ ಕಂಪ್ಯೂಟರ್ ಮೌಸ್. ಗಣಕ ಬಳಸಬೇಕಾದರೆ ಮೌಸ್ ಬೇಕೇಬೇಕು ಎನ್ನುವಷ್ಟರ ಮಟ್ಟದ್ದು ಈ ಸಾಧನದ ಜನಪ್ರಿಯತೆ. ನಾಲ್ಕು ದಶಕಗಳ ಹಿಂದೆ ಬಳಕೆಗೆ ಬಂದ ಈ ಸಾಧನದ ಸೃಷ್ಟಿ ಪ್ರಾಯಶಃ ಗಣಕ ಜಗತ್ತಿನ ಅತ್ಯಂತ ಪ್ರಮುಖ ಸಾಧನೆಗಳಲ್ಲೊಂದು.

ಕಂಪ್ಯೂಟರ್ ಮೌಸ್‌ನ ಇತಿಹಾಸ ಶುರುವಾಗುವುದು ೧೯೬೮ರಲ್ಲಿ. ಆಗಿನ್ನೂ ಕಂಪ್ಯೂಟರ್ ತಂತ್ರಜ್ಞಾನ ನಿಧಾನವಾಗಿ ಅಭಿವೃದ್ಧಿ ಹೊಂದುತ್ತಿತ್ತು. ಆ ವರ್ಷ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ನಡೆದ ಕಂಪ್ಯೂಟರ್ ತಂತ್ರಜ್ಞಾನ ಸಮ್ಮೇಳನದಲ್ಲಿ ಡಗ್ಲಾಸ್ ಎಂಗೆಲ್‌ಬಾರ್ಟ್ ಎಂಬಾತ 'ಎಕ್ಸ್-ವೈ ಪೊಸಿಷನ್ ಇಂಡಿಕೇಟರ್ ಫಾರ್ ಎ ಡಿಸ್ಪ್ಲೇ ಸಿಸ್ಟಮ್' ಎಂಬ ಸಾಧನವನ್ನು ಪ್ರದರ್ಶಿಸಿದ. ಇದೇ ಇಂದಿನ ಗಣಕಗಳ ಜೀವಾಳವಾಗಿರುವ ಮೌಸ್‌ನ ಪೂರ್ವಜ.

ಎಂಗೆಲ್‌ಬಾರ್ಟ್‌ನ ಮೊದಲ ಮೌಸ್ ಮರದಿಂದ ತಯಾರಿಸಿದ್ದಾಗಿತ್ತು. ಆತನ ಸಹಚರ ಬಿಲ್ ಇಂಗ್ಲಿಷ್ ಎಂಬಾತ ಇದನ್ನು ನಿರ್ಮಿಸಿದ್ದ. ಈ ಸಾಧನದ ತಳದಲ್ಲಿ ಎರಡು ಗಾಲಿಗಳಿದ್ದರೆ, ಮೇಲ್ಭಾಗದಲ್ಲಿ ಒಂದೇ ಒಂದು ಕೆಂಪು ಬಣ್ಣದ ಗುಂಡಿ ಇತ್ತು. ಎಂಗೆಲ್‌ಬಾರ್ಟ್‌ನ ಸಹೋದ್ಯೋಗಿಗಳಿಗೆ ಈ ವಿಚಿತ್ರ ಯಂತ್ರ ಇಲಿಯಂತೆ ಕಂಡಿದ್ದರಿಂದ ಅವರು ಅದನ್ನು ಮೌಸ್ ಎಂದು ಕರೆದರು ಎನ್ನುವುದು ಪ್ರತೀತಿ.

ಇದೇ ಎಂಗೆಲ್‌ಬಾರ್ಟ್ ಮುಂದೆ ಚಿತ್ರಾತ್ಮಕ ಸಂಪರ್ಕ ಸಾಧನ - ಗ್ರಾಫಿಕಲ್ ಯೂಸರ್ ಇಂಟರ್‌ಫೇಸ್ (ಜಿಯುಐ) - ಅನ್ನೂ ಸೃಷ್ಟಿಸಿದ. ಪಠ್ಯರೂಪದ ಆದೇಶಗಳ ಬದಲಿಗೆ ಮೌಸ್ ಕ್ಲಿಕ್‌ಗಳಿಂದ ಗಣಕಕ್ಕೆ ಆದೇಶ ನೀಡುವುದು ಈ ವ್ಯವಸ್ಥೆಯಿಂದಾಗಿ ಸಾಧ್ಯವಾಯಿತು. ಈ ವ್ಯವಸ್ಥೆಯನ್ನು ಆಧರಿಸಿ ರೂಪಗೊಂಡ ವಿಂಡೋಸ್ ಕಾರ್ಯಾಚರಣ ವ್ಯವಸ್ಥೆ ಗಣಕಗಳ ಬಳಕೆಯಲ್ಲಿ ಹೊಸದೊಂದು ಶಕೆಯನ್ನೇ ಪ್ರಾರಂಭಿಸಿತು. ಗಣಕಗಳಲ್ಲಿ ಚಿತ್ರಾತ್ಮಕ ಸಂಪರ್ಕ ಸಾಧನ ಹೊಂದಿರುವ ತಂತ್ರಾಂಶಗಳ ಬಳಕೆ ಹೆಚ್ಚುತ್ತಿದ್ದಂತೆ ಮೌಸ್‌ನ ಜನಪ್ರಿಯತೆಯೂ ಹೆಚ್ಚುತ್ತಾ ಹೋಯಿತು.

ಮೌಸ್ ಬದಲು ನೌಸ್
ಈಚಿನ ವರ್ಷಗಳಲ್ಲಿ ಹೊಸ ತಂತ್ರಜ್ಞಾನಗಳು ಅಭಿವೃದ್ಧಿ ಹೊಂದಿದಂತೆ ಕಂಪ್ಯೂಟರ್ ಮೌಸ್‌ಗೆ ಹಲವಾರು ಬದಲಿಗಳು ತಯಾರಾಗಿವೆ. ಸ್ಪರ್ಷವನ್ನು ಗ್ರಹಿಸಿ ಕೆಲಸಮಾಡುವ ಟಚ್ ಸ್ಕ್ರೀನ್ ತಂತ್ರಜ್ಞಾನವಂತೂ ಬಹಳ ಸಾಮಾನ್ಯವಾಗಿಹೋಗಿದೆ: ಮೊಬೈಲ್ ದೂರವಾಣಿ, ಎಟಿಎಂಗಳಿಂದ ಪ್ರಾರಂಭಿಸಿ ಗಣಕದ ಮಾನಿಟರ್‌ವರೆಗೆ ಎಲ್ಲೆಲ್ಲೂ ಟಚ್‌ಸ್ಕ್ರೀನ್ ಭರಾಟೆ ಕಾಣಸಿಗುತ್ತಿದೆ.

ಬಳಕೆದಾರರ ಮುಖಭಾವ, ಕಣ್ಣಿನ ದೃಷ್ಟಿ, ಹಾವಭಾವಗಳನ್ನು ಗ್ರಹಿಸಿ ಕೆಲಸಮಾಡುವ ಸಾಧನಗಳೂ ತಯಾರಾಗುತ್ತಿವೆ. ಗಣಕದ ಮುಂದೆ ಕುಳಿತ ಬಳಕೆದಾರನ ಮೂಗಿನ ಚಲನೆಯನ್ನು ಕ್ಯಾಮೆರಾ ಮೂಲಕ ಗಮನಿಸಿಕೊಂಡು ಅದಕ್ಕೆ ತಕ್ಕಂತೆ ಕೆಲಸಮಾಡುವ 'ನೌಸ್' ಎಂಬ ವಿಚಿತ್ರ ಸಾಧನ ಕೂಡ ಇದೆ - ನೋಸ್ ಬಳಸಿ ಉಪಯೋಗಿಸುವ ಮೌಸ್ ಇದು. ಬಳಕೆದಾರರ ಮೂಗು ಹೇಗೆಲ್ಲ ಚಲಿಸುತ್ತದೋ ಪರದೆಯ ಮೇಲಿನ ಮೌಸ್ ಪಾಯಿಂಟರ್ ಕೂಡ ಹಾಗೆಯೇ ಓಡಾಡುತ್ತದೆ. ಕ್ಲಿಕ್ ಮಾಡಲು ಕಣ್ಣು ಮಿಟುಕಿಸಿದರೆ ಸಾಕು!

ದಿನೇದಿನೇ ಬೆಳೆಯುತ್ತಿರುವ ಕಂಪ್ಯೂಟರ್ ಗೇಮ್ಸ್ ಮಾರುಕಟ್ಟೆ ಮತ್ತಷ್ಟು ಹೊಸ ಪ್ರಯೋಗಗಳಿಗೆ ಕೈಹಾಕಿದೆ. ಕೀಬೋರ್ಡ್, ಜಾಯ್‌ಸ್ಟಿಕ್ ಎಲ್ಲ ಬಿಟ್ಟು ಪುಟ್ಟದೊಂದು ಉಪಕರಣ ಹಿಡಿದುಕೊಂಡು ಕೈಯನ್ನು ಆಚೀಚೆ ಬೀಸುವ ಮೂಲಕವೇ ಆಟವನ್ನು ನಿಯಂತ್ರಿಸಲು ಅನುವುಮಾಡಿಕೊಟ್ಟ 'ನಿಂಟೆಂಡೋ ವೀ' ಈಗಾಗಲೇ ಅಪಾರ ಜನಪ್ರಿಯತೆ ಗಳಿಸಿದೆ. ಮೊಬೈಲ್‌ನಲ್ಲೂ ಅಷ್ಟೆ, ಚಲನೆಯನ್ನು ಪತ್ತೆಮಾಡುವ (ಮೋಷನ್ ಡಿಟೆಕ್ಷನ್) ತಂತ್ರಜ್ಞಾನದಿಂದಾಗಿ ಮೊಬೈಲ್ ದೂರವಾಣಿಯನ್ನು ಆಚೀಚೆ ಅಲುಗಾಡಿಸುವ ಮೂಲಕವೇ ಆಟವಾಡುವುದು ಸಾಧ್ಯವಾಗಿದೆ.

ಆಲೋಚನೆಗಳನ್ನು ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ವರ್ತಿಸುವ ಉಪಕರಣಗಳೂ ಇಷ್ಟರಲ್ಲೇ ತಯಾರಾಗಲಿವೆ ಎಂಬ ಸುದ್ದಿ ಕೂಡ ಇದೆ.

ಇವೆಲ್ಲ ಘಟನೆಗಳು ಮೌಸ್‌ನ ಅಂತ್ಯಕಾಲ ಸಮೀಪಿಸಿರುವುದರ ಸೂಚನೆಗಳು ಎಂದು ತಜ್ಞರು ಹೇಳುತ್ತಾರೆ. ಕಳೆದ ಐದಾರು ವರ್ಷಗಳಲ್ಲಿ ಕಾಣದಂತೆ ಮಾಯವಾದ ಫ್ಲಾಪಿಗಳ ಹಾಗೆಯೇ ಮೌಸ್ ಕೂಡ ಮುಂಬರುವ ವರ್ಷಗಳಲ್ಲಿ ಅಪರೂಪವಾಗಲಿದೆ ಎನ್ನುವುದು ಅವರ ಅಭಿಪ್ರಾಯ.

ಡಿಸೆಂಬರ್ ೭, ೨೦೧೦ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಮಂಗಳವಾರ, ನವೆಂಬರ್ 30, 2010

ಹುಡುಕಾಟದ ಎರಡು ದಶಕ

ಟಿ ಜಿ ಶ್ರೀನಿಧಿ

೧೯೯೦ನೇ ಇಸವಿ. ಅಂತರಜಾಲ ತನ್ನ ಬಾಲ್ಯಾವಸ್ಥೆಯಲ್ಲಿದ್ದ ಸಮಯ. ವಿಶ್ವವ್ಯಾಪಿ ಜಾಲವಂತೂ ಆಗತಾನೇ ಕಣ್ಣುಬಿಡುತ್ತಿತ್ತು. ಕೆನಡಾದ ಮೆಕ್‌ಗಿಲ್ ವಿಶ್ವವಿದ್ಯಾಲಯದಲ್ಲಿದ್ದ ಅಲಾನ್ ಎಮ್‌ಟೇಜ್ ಹಾಗೂ ಆತನ ಮಿತ್ರರು ಆ ವರ್ಷದಲ್ಲಿ 'ಆರ್ಚಿ' ಎಂಬ ತಂತ್ರಾಂಶ ಸೃಷ್ಟಿಸಿದರು. ಈ ತಂತ್ರಾಂಶ ಅಂದಿನ ಅಂತರಜಾಲದಲ್ಲಿ ಲಭ್ಯವಿದ್ದ ಕಡತಗಳ ಹೆಸರನ್ನೆಲ್ಲ ಪಟ್ಟಿಮಾಡಿಟ್ಟುಕೊಂಡು ಅವುಗಳಲ್ಲಿ ನಿಮಗೆ ಬೇಕಾದ್ದನ್ನು ಹುಡುಕಲು ಅನುವುಮಾಡಿಕೊಡುತ್ತಿತ್ತು.

ಅದೇ 'ಆರ್ಚಿ' ಇಂದಿನ ಸರ್ಚ್ ಇಂಜನ್‌ಗಳ ಪೂರ್ವಜ. ಪ್ರಪಂಚದ ಮೊದಲ ಸರ್ಚ್‌ಇಂಜನ್ ಎಂದು ಗುರುತಿಸಲಾಗುವ ಈ ತಂತ್ರಾಂಶ ಸೃಷ್ಟಿಯಾಗಿ ಇದೀಗ ಇಪ್ಪತ್ತು ವರ್ಷ.

ಸರ್ಚ್ ಇಂಜನ್ ಅಂದರೇನು?ವಿಶ್ವವ್ಯಾಪಿ ಜಾಲದಲ್ಲಿರುವ ಮಾಹಿತಿಯನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಹುಡುಕಲು ಸಹಾಯಮಾಡುವ ತಂತ್ರಾಂಶಕ್ಕೆ ಸರ್ಚ್ ಇಂಜನ್ ಅಥವಾ ಶೋಧನ ಚಾಲಕ ತಂತ್ರಾಂಶ ಎಂದು ಹೆಸರು. ನಮಗೆಲ್ಲ ಚಿರಪರಿಚಿತವಾದ ಗೂಗಲ್, ಬಿಂಗ್ ಮುಂತಾದವೆಲ್ಲ ಸರ್ಚ್ ಇಂಜನ್‌ಗೆ ಉದಾಹರಣೆಗಳು.

ಅಂತರಜಾಲದಲ್ಲಿದ್ದ ಕಡತಗಳನ್ನಷ್ಟೆ ಹುಡುಕುತ್ತಿದ್ದ 'ಆರ್ಚಿ' ತಂತ್ರಾಂಶಕ್ಕಿಂತ ಭಿನ್ನವಾಗಿ ಕೆಲಸಮಾಡುವ ಇವು ವಿಶ್ವವ್ಯಾಪಿ ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಹುಡುಕಿಕೊಡುತ್ತವೆ. ವಿವಿಧ ವಿಷಯಗಳಿಗೆ ಸಂಬಂಧಪಟ್ಟ ಪಠ್ಯವನ್ನಷ್ಟೆ ಅಲ್ಲದೆ ಚಿತ್ರಗಳು, ಸುದ್ದಿಗಳು, ಇ-ಪುಸ್ತಕಗಳು, ವೀಡಿಯೋಗಳು, ಭೂಪಟಗಳು ಮುಂತಾದವನ್ನೆಲ್ಲ ಈ ಸರ್ಚ್ ಇಂಜನ್‌ಗಳು ಹುಡುಕಿಕೊಡಬಲ್ಲವು.

ಎಲ್ಲಬಗೆಯ ಮಾಹಿತಿಯನ್ನೂ ಹುಡುಕಿಕೊಡುವ ಇಂತಹ ಸರ್ಚ್‌ಇಂಜನ್‌ಗಳ ಜೊತೆಗೆ ವಿಜ್ಞಾನ, ಪ್ರವಾಸ ಮುಂತಾದ ನಿರ್ದಿಷ್ಟ ವಿಷಯಗಳಿಗೆ ಮಾತ್ರವೇ ಸೀಮಿತವಾದ ವರ್ಟಿಕಲ್ ಸರ್ಚ್ ಇಂಜನ್‌ಗಳು ಕೂಡ ಇವೆ; ಯಾವುದೇ ವಿಷಯದ ಕುರಿತು ಸಮಗ್ರ ಮಾಹಿತಿ ಒದಗಿಸುವ ವುಲ್ಫ್‌ರಮ್ ಆಲ್ಫಾದಂತಹ ನಾಲೆಜ್ ಇಂಜನ್‌ಗಳೂ ರೂಪಗೊಂಡಿವೆ.

ಹುಡುಕುವ ಜೇಡವಿಶ್ವವ್ಯಾಪಿ ಜಾಲದಲ್ಲಿ ಮಾಹಿತಿಗಾಗಿ ಹುಡುಕಾಟ ನಡೆಸಲು ಸರ್ಚ್ ಇಂಜನ್‌ಗಳು ವೆಬ್ ಸ್ಪೈಡರ್‌ಗಳೆಂಬ ತಂತ್ರಾಂಶಗಳನ್ನು ಬಳಸುತ್ತವೆ. ಇವನ್ನು ನಾವು ಜೇಡಗಳೆಂದು ಕರೆಯೋಣ. ವಿಶ್ವವ್ಯಾಪಿ ಜಾಲದಲ್ಲಿರುವ ಲಕ್ಷಾಂತರ ಜಾಲತಾಣಗಳನ್ನು ಹಾಗೂ ಅವುಗಳಲ್ಲಿರುವ ಪುಟಗಳನ್ನು ಅವುಗಳ ಜನಪ್ರಿಯತೆಗೆ ಅನುಗುಣವಾಗಿ ವರ್ಗೀಕರಿಸಿ, ಆ ಪುಟಗಳಲ್ಲಿರುವ ಮಾಹಿತಿ ಯಾವ ವಿಷಯಗಳಿಗೆ ಸಂಬಂಧಿಸಿದ್ದು ಎಂಬ ಅಂಶವನ್ನು ದಾಖಲಿಸಿಕೊಳ್ಳುವುದು ಈ ಜೇಡಗಳ ಕೆಲಸ.

ಜಾಲತಾಣಗಳನ್ನು ರೂಪಿಸುವವರು ಜೇಡಗಳಿಗೆ ಸಹಾಯವಾಗಲೆಂದೇ ತಮ್ಮ ತಾಣದಲ್ಲಿರುವ ಪುಟಗಳ ಬಗ್ಗೆ ವಿವರಗಳನ್ನು ಮೆಟಾ ಟ್ಯಾಗ್‌ಗಳ ರೂಪದಲ್ಲಿ ಶೇಖರಿಸಿಟ್ಟಿರುತ್ತಾರೆ. ಜೇಡಗಳ ಹುಡುಕಾಟ ಇವೇ ಮೆಟಾ ಟ್ಯಾಗ್‌ಗಳನ್ನು ಆಧರಿಸಿರುತ್ತದೆ.

ಈ ಜೇಡಗಳು ಸಾಮಾನ್ಯವಾಗಿ ತಮ್ಮ ಹುಡುಕಾಟವನ್ನು ಅತ್ಯಂತ ಪ್ರಸಿದ್ಧ ಜಾಲತಾಣಗಳಿಂದ ಪ್ರಾರಂಭಿಸುತ್ತವೆ. ಅಲ್ಲಿಂದ ಮುಂದಕ್ಕೆ ಆ ಜಾಲತಾಣ ಹಾಗೂ ಅದರ ಸರ್ವರ್‌ನಲ್ಲಿರುವ ಇತರ ಎಲ್ಲ ಪುಟಗಳ ಮೇಲೂ ಒಮ್ಮೆ ಕಣ್ಣಾಡಿಸಿ ಅವುಗಳಲ್ಲಿರುವ ಮಾಹಿತಿಗೆ ಅನುಗುಣವಾಗಿ ಅವನ್ನು ವರ್ಗೀಕರಿಸಿಟ್ಟುಕೊಳ್ಳುವ ಕೆಲಸ ಶುರುವಾಗುತ್ತದೆ. ಒಂದು ಜಾಲತಾಣದಲ್ಲಿರುವ ಎಲ್ಲ ಲಿಂಕ್‌ಗಳನ್ನೂ ಈ ಜೇಡಗಳು ಹಿಂಬಾಲಿಸುವುದರಿಂದ ಅವುಗಳ ನಿಲುಕಿಗೆ ಸಿಗುವ ಪುಟಗಳ ಸಂಖ್ಯೆ ಬೆಳೆಯುತ್ತಲೇ ಹೋಗುತ್ತದೆ. ಹೀಗೆ ಸಂಗ್ರಹಿಸಲಾದ ಮಾಹಿತಿಯ ಅಧಾರದ ಮೇಲೆ ಒಂದು ಅಕಾರಾದಿಯನ್ನು (ಇಂಡೆಕ್ಸ್) ತಯಾರಿಸಿಕೊಳ್ಳುವ ಸರ್ಚ್ ಇಂಜನ್‌ಗಳು ನಮಗೆ ಬೇಕಾದದ್ದನ್ನು ಅತ್ಯಂತ ವೇಗವಾಗಿ ಹುಡುಕಿಕೊಳ್ಳಲು ಸಹಾಯ ಮಾಡುತ್ತವೆ.

ಹುಡುಕಾಟದ ವ್ಯವಹಾರನಮಗೆ ಬೇಕಾದ ಮಾಹಿತಿಯ ಪಕ್ಕದಲ್ಲೇ ಒಂದಷ್ಟು ಜಾಹೀರಾತುಗಳನ್ನೂ ಪ್ರದರ್ಶಿಸುವ ಮೂಲಕ ಸರ್ಚ್ ಇಂಜನ್‌ಗಳು ಹಣ ಸಂಪಾದಿಸುತ್ತವೆ. ಬಳಕೆದಾರ ಯಾವುದೋ ನಿರ್ದಿಷ್ಟ ಮಾಹಿತಿಗಾಗಿ ಹುಡುಕಿದಾಗ ಪ್ರಾಯೋಜಿತ ಲಿಂಕ್‌ಗಳನ್ನು ಪ್ರದರ್ಶಿಸುವ ಸರ್ಚ್ ಇಂಜನ್‌ಗಳೂ ಇವೆ. ಈ ಲಿಂಕ್‌ಗಳನ್ನು ತೋರಿಸಲು ಅವು ಜಾಹೀರಾತುದಾರರಿಂದ ಹಣ ಪಡೆದಿರುತ್ತವೆ.

ಮುಂದಿನ ಹಾದಿಪ್ರತಿಯೊಬ್ಬ ಬಳಕೆದಾರನೂ ಯಾವಯಾವ ತಾಣಗಳಿಗೆ ಭೇಟಿಕೊಡುತ್ತಾನೆ ಎಂಬುದನ್ನು ಗಮನಿಸಿಕೊಂಡು ಅದರ ಆಧಾರದ ಮೇಲೆ ಅಕಾರಾದಿ (ಇಂಡೆಕ್ಸ್) ಸಿದ್ಧಪಡಿಸಿಕೊಳ್ಳುವ ವಾವ್ಡ್ ಹಾಗೂ ಫಾರೂನಂತಹ ಸರ್ಚ್ ಇಂಜನ್‌ಗಳು ಇತ್ತೀಚೆಗೆ ಪ್ರಾರಂಭವಾಗಿವೆ. ಈ ಸರ್ಚ್ ಇಂಜನ್‌ಗಳು ಎಲ್ಲ ಬಳಕೆದಾರರ ಗಣಕದಲ್ಲೂ ಒಂದೊಂದು ಅಕಾರಾದಿಯನ್ನು ಇರಿಸುವ, ಹಾಗೂ ಅತಿ ಹೆಚ್ಚು ಬಳಕೆದಾರರನ್ನು ಆಕರ್ಷಿಸುವ ತಾಣಗಳನ್ನಷ್ಟೆ ತೋರಿಸುವ ಮೂಲಕ ಹುಡುಕಾಟವನ್ನು ಇನ್ನಷ್ಟು ಕ್ಷಿಪ್ರ ಹಾಗೂ ನಿಖರಗೊಳಿಸುವ ಮಹತ್ವಾಕಾಂಕ್ಷೆ ಹೊಂದಿವೆ.

ಯಾವುದೇ ವಿಷಯವನ್ನು ಕುರಿತ ಮಾಹಿತಿಯನ್ನು ಜನರ ನೆರವಿನಿಂದಲೇ ಒಟ್ಟುಗೂಡಿಸಿ ಹುಡುಕಾಟದ ಪ್ರಕ್ರಿಯೆಯನ್ನು ಸುಲಭಗೊಳಿಸುವ ಸಮುದಾಯ ಸರ್ಚ್‌ಇಂಜನ್‌ಗಳ ಸೃಷ್ಟಿಗಾಗಿ ಅನೇಕ ಪ್ರಯತ್ನಗಳು ಸಾಗಿವೆ. ಇಂತಹ ತಾಣಗಳು ಟ್ವೀಟರ್ ಹಾಗೂ ಫೇಸ್‌ಬುಕ್‌ನಂತಹ ತಾಣಗಳಲ್ಲಿ ಲಭ್ಯವಿರುವ ಸಂದೇಶಗಳನ್ನೂ ಹುಡುಕಿಕೊಡುವಂತಿರಬೇಕು ಎನ್ನುವ ಉದ್ದೇಶವೂ ಇದೆ.

ತನ್ನನ್ನು 'ಹೆಲ್ಪ್ ಇಂಜನ್' ಎಂದು ಗುರುತಿಸಿಕೊಳ್ಳುವ ಆರ್ಡ್‌ವರ್ಕ್ ಎಂಬ ತಾಣ ಬ್ಲಾಗುಗಳು, ಫೇಸ್‌ಬುಕ್ ಸಂದೇಶಗಳು ಹಾಗೂ ಟ್ವೀಟ್‌ಗಳನ್ನು ಜಾಲಾಡಿ ಅವುಗಳ ಲೇಖಕರಿಂದ ನಿಮಗೆ ಬೇಕಾದ ಮಾಹಿತಿ ಪಡೆದುಕೊಡುವ ಕೆಲಸವನ್ನು ಈಗಾಗಲೇ ಶುರುಮಾಡಿದೆ. ಇತರ ಬಳಕೆದಾರರಿಂದ ನಿಮ್ಮ ಪ್ರಶ್ನೆಗೆ ಉತ್ತರ ದೊರಕಿಸಿಕೊಳ್ಳುವ ಸೌಲಭ್ಯವನ್ನು ಫೇಸ್‌ಬುಕ್ ಕೂಡ ಪರಿಚಯಿಸಿದೆ.

ಇಷ್ಟೇ ಅಲ್ಲ, ಚಿತ್ರಗಳ ನೆರವಿನಿಂದ ಹುಡುಕಾಟವನ್ನು ಸಾಧ್ಯವಾಗಿಸುವ ಸರ್ಚ್ ಇಂಜನ್‌ಗಳು, ಆಡುಮಾತಿನ ಪ್ರಶ್ನೆಗಳಿಗೆ (ನ್ಯಾಚುರಲ್ ಲ್ಯಾಂಗ್ವೇಜ್ ಕ್ವೆರಿಯಿಂಗ್) ಉತ್ತರಿಸುವಂತಹ ಸರ್ಚ್ ಇಂಜನ್‌ಗಳು, ಅಷ್ಟೇ ಏಕೆ, ಧ್ವನಿಯ ರೂಪದಲ್ಲಿ ನಾವು 'ಕೇಳುವ' ಪ್ರಶ್ನೆಗಳಿಗೂ ಉತ್ತರಿಸಬಲ್ಲ ಸರ್ಚ್ ಇಂಜನ್‌ಗಳೂ ಸಿದ್ಧವಾಗುತ್ತಿವೆಯಂತೆ.

ಇಷ್ಟೆಲ್ಲ ಆದರೂ ಅಡುಗೆ ಮನೆ ಮೂಲೆಯಲ್ಲಿ ಅಡಗಿಕುಳಿತಿರುವ ಸಾಸಿವೆ ಡಬ್ಬ, ಪ್ಯಾಂಟಿನ ಜೇಬಿನಲ್ಲಿಟ್ಟು ಮರೆತ ಬೈಕಿನ ಕೀಲಿ ಇವನ್ನೆಲ್ಲ ಹುಡುಕಿಕೊಡುವ ಸರ್ಚ್ ಇಂಜನ್ ಮಾತ್ರ ಇದುವರೆಗೂ ತಯಾರಾಗಿಲ್ಲ. ಇಷ್ಟರಲ್ಲೇ ತಯಾರಾದರೂ ಆಗಬಹುದು, ಕಾದುನೋಡೋಣ!


ನವೆಂಬರ್ ೩೦, ೨೦೧೦ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಭಾನುವಾರ, ನವೆಂಬರ್ 28, 2010

ಮೊಬೈಲ್ ಬಗ್ಗೆ ಹೀಗೊಂದು ಬರಹ...

ಹಿಂದೊಮ್ಮೆ ಆಕಾಶವಾಣಿ ಮಡಿಕೇರಿಯ ಫೋನ್-ಔಟ್ ಕಾರ್ಯಕ್ರಮದಲ್ಲಿ ಮಾತನಾಡಲು ಬರೆದಿಟ್ಟಿದ್ದ ನೋಟ್ಸು ಇದು. ಬರೆವಣಿಗೆಯ ಬಗ್ಗೆ ನಿಮ್ಮ ಅನಿಸಿಕೆಗಳಿಗೆ ಸ್ವಾಗತ.

ಈಚಿನ ವರ್ಷಗಳಲ್ಲಿ ನಮ್ಮ ಬದುಕನ್ನು ತೀರಾ ಗಣನೀಯವಾಗಿ ಬದಲಿಸಿರುವ ವಸ್ತುಗಳಲ್ಲಿ ಮೊಬೈಲ್ ದೂರವಾಣಿಗೆ ಬಹಳ ಪ್ರಮುಖವಾದ ಸ್ಥಾನ. ಹೊಸದೊಂದು ವಸ್ತು ಮಾರುಕಟ್ಟೆಗೆ ಪರಿಚಯವಾದ ಕೆಲವೇ ವರ್ಷಗಳ ಅವಧಿಯಲ್ಲಿ ಇಷ್ಟೊಂದು ಜನಪ್ರಿಯವಾಗಿರುವ ಬೇರೆ ಯಾವುದೇ ಉದಾಹರಣೆ, ನಮ್ಮ ದೇಶದ ಮಟ್ಟಿಗಂತೂ, ಇಲ್ಲವೇ ಇಲ್ಲ ಅಂತ ಹೇಳಬೇಕಾಗುತ್ತದೆ.

ಮೊಬೈಲ್ ದೂರವಾಣಿಯ ಕಲ್ಪನೆ ಸುಮಾರು ಐವತ್ತು-ಅರವತ್ತು ವರ್ಷಗಳಷ್ಟು ಹಳೆಯದು. ಸಾಮಾನ್ಯ ದೂರವಾಣಿ - ಅಂದ್ರೆ ಲ್ಯಾಂಡ್‌ಲೈನು - ಆ ವೇಳೆಗಾಗ್ಲೇ ಸಾಕಷ್ಟು ವ್ಯಾಪಕವಾಗಿ ಬಳಕೆಯಾಗುತ್ತಿತ್ತು, ರೇಡಿಯೋ ಕಲ್ಪನೆ ಕೂಡ ಸುಮಾರು ಹಳೆಯದಾಗಿತ್ತು. ಒಬ್ಬರ ಮಾತನ್ನು ಇನ್ನೊಬ್ಬರಿಗೆ ತಲುಪಿಸುವ ಮಾಮೂಲಿ ಫೋನು ತಂತಿಗಳ ನೆರವಿಲ್ಲದೆ - ಅಂದರೆ ರೇಡಿಯೋ ರೀತಿಯಲ್ಲಿ - ಕೆಲಸ ಮಾಡಿದರೆ ಎಷ್ಟೊಂದು ಅನುಕೂಲ ಆಗುತ್ತಲ್ಲ ಎನ್ನುವ ಯೋಚನೆ ಮೊಬೈಲ್ ದೂರವಾಣಿಯ ಸೃಷ್ಟಿಗೆ ಕಾರಣವಾಯಿತು.

ಇದೆಲ್ಲ ಆಗಿದ್ದು ೧೯೪೦-೫೦ರ ದಶಕದಲ್ಲಿ. ಆದರೆ ಅವತ್ತಿನ ಮೊಬೈಲ್ ತಂತ್ರಜ್ಞಾನ ಇವತ್ತಿನಷ್ಟು ಮುಂದುವರೆದಿರಲಿಲ್ಲ. ಫೋನುಗಳು ತೀರಾ ದೊಡ್ಡದಾಗಿದ್ದವು, ಬೆಲೆ ವಿಪರೀತ ಜಾಸ್ತಿ ಇತ್ತು, ಹೋಗಲಿ ಅಂದರೆ ಅದರಲ್ಲಿ ಆಡುವ ಮಾತುಗಳಿಗೆ ಒಂಚೂರೂ ಪ್ರೈವಸಿ ಅನ್ನೋದೇ ಇರಲಿಲ್ಲ. ನೀವು ನಿಮ್ಮ ಹೆಂಡ್ತಿ ಜೊತೇನೋ ಬಾಸ್ ಜೊತೇನೋ ಗರ್ಲ್‌ಫ್ರೆಂಡ್ ಜೊತೇನೋ ಮೊಬೈಲಲ್ಲಿ ಮಾತಾಡ್ತಾ ಇದ್ರೆ ಅದ್ನ ಮೊಬೈಲ್ ಫೋನ್ ಇರುವ ಬೇರೆ ಯಾರು ಬೇಕಾದರೂ ಕೇಳಿಸಿಕೊಳ್ಳುವಂಥ ಪರಿಸ್ಥಿತಿ ಇತ್ತು. ಹೀಗಾಗಿ ಮೊಬೈಲ್ ಫೋನುಗಳಿಗೆ ಒಂದು ಭವಿಷ್ಯ ಇದೆ ಅಂತಲೇ ಯಾರೂ ನಂಬಿರಲಿಲ್ಲ.

ಆದರೆ ಎಲ್ಲಿಂದ ಎಲ್ಲಿಗೆ ಯಾವಾಗ ಬೇಕಾದರೂ ಕರೆಮಾಡುವ ಸೌಲಭ್ಯ ಒದಗಿಸ್ತಲ್ಲ ಈ ಮೊಬೈಲ್ ದೂರವಾಣಿ, ಆ ಅನುಕೂಲ ಮಾತ್ರ ಎಲ್ಲರ ನಿರೀಕ್ಷೆಯನ್ನೂ ಮೀರಿ ಜನಪ್ರಿಯವಾಯ್ತು. ಆದರೆ ಈ ಜನಪ್ರಿಯತೆ ಬರೋದಕ್ಕೆ ಸುಮಾರು ಐವತ್ತು ವರ್ಷ ಕಾಯಬೇಕಾಯ್ತು ಅಷ್ಟೆ.

ನಮ್ಮ ದೇಶದ ಉದಾಹರಣೆಯನ್ನೇ ತೊಗೊಂಡ್ರೆ ನಮ್ಮ ಮಾರುಕಟ್ಟೆಗೆ ಮೊಬೈಲ್ ದೂರವಾಣಿ ಬಂದಿದ್ದು ಸುಮಾರು ಹದಿನೈದು ವರ್ಷಗಳ ಹಿಂದೆ. ಆಗ ಇದ್ದ ಹ್ಯಾಂಡ್‌ಸೆಟ್ಟುಗಳು ಹೆಚ್ಚೂಕಡಿಮೆ ಇವತ್ತಿನ ಕಾರ್ಡ್‌ಲೆಸ್ ಫೋನುಗಳಷ್ಟು ದೊಡ್ಡದಾಗಿದ್ದವು. ಹ್ಯಾಂಡ್‌ಸೆಟ್ ಹೋಗಲಿ, ಮೊಬೈಲ್ ಬಳಸಿ ಮಾತಾಡಬೇಕು ಅಂದರೆ ನಿಮಿಷಕ್ಕೆ ಹದಿನೈದು ಇಪ್ಪತ್ತು ರುಪಾಯಿ ಕೊಡಬೇಕಿತ್ತು. ಔಟ್‌ಗೋಯಿಂಗ್‌ಗೂ ಅಷ್ಟು ದುಡ್ಡು, ಇನ್‌ಕಮಿಂಗ್‌ಗೂ ಅಷ್ಟೇ ದುಡ್ಡು!

ಯಾವಾಗ ಮೊಬೈಲ್ ಕ್ಷೇತ್ರದ ಮೇಲೆ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಅಥವಾ ಟ್ರಾಯ್ ಸಂಸ್ಥೆಯ ನಿಯಂತ್ರಣ ಬಂತೋ, ಅಲ್ಲಿಂದ ಪರಿಸ್ಥಿತಿ ನಿಧಾನಕ್ಕೆ ಬದಲಾಯ್ತು. ಮಾರುಕಟ್ಟೆಯಲ್ಲಿ ಸ್ಪರ್ಧೆ ಜಾಸ್ತಿ ಆಯ್ತು, ಹೊಸಹೊಸ ಸಂಸ್ಥೆಗಳು ಮೊಬೈಲ್ ಸಂಪರ್ಕ ಕೊಡೋದಕ್ಕೆ ಪ್ರಾರಂಭಿಸಿದವು. ಇದರಿಂದ ಮೊಬೈಲ್‌ಗಾಗಿ ಮಾಡಬೇಕಾದ ಖರ್ಚು ಕೂಡ ಗಣನೀಯವಾಗಿ ಕಡಿಮೆಯಾಯ್ತು. ತುಂಬಾ ಕಡಿಮೆ ಖರ್ಚಿನಲ್ಲಿ ದೂರವಾಣಿ ಸಂಪರ್ಕ ಸಿಗತ್ತೆ ಅಂತ ಆದ ತಕ್ಷಣ ಜನಪ್ರಿಯತೆನೂ ಜಾಸ್ತಿಯಾಯ್ತು.

ಇದೆಲ್ಲದರ ಪರಿಣಾಮ - ಪ್ರಪಂಚದಲ್ಲೇ ಅತಿ ಹೆಚ್ಚು ಮೊಬೈಲ್ ಸಂಪರ್ಕ ಹೊಂದಿರುವ ದೇಶಗಳಲ್ಲಿ ಭಾರತಕ್ಕೆ ಈಗ ಎರಡನೇ ಸ್ಥಾನ. ಮೊಬೈಲ್ ಸೇವೆಯ ಬೆಲೆ ಅತ್ಯಂತ ಕಡಿಮೆಯಿರುವ ದೇಶಗಳ ಸಾಲಿನಲ್ಲೂ ನಮಗೆ ಪ್ರಮುಖ ಸ್ಥಾನ ಇದೆ.

ಬಳಕೆದಾರರು ಜಾಸ್ತಿ ಆದ ಹಾಗೆ ಮೊಬೈಲ್ ಮೂಲಕ ಲಭ್ಯವಾಗ್ತಾ ಇರುವ ಸೌಲಭ್ಯಗಳೂ ಹೆಚ್ಚುತ್ತಿವೆ. ಮೊಬೈಲಲ್ಲಿ ಕರೆ ಮಾಡಿ ಮಾತಾಡಬಹುದು ಅನ್ನುವ ದಿನಗಳು ಹೋಗಿ ಇತರ ನೂರೆಂಟು ಕೆಲಸಗಳ ಜೊತೆಗೆ ದೂರವಾಣಿ ಕರೆಯನ್ನು ಕೂಡ ಮಾಡಬಹುದು ಅನ್ನುವಂತಹ ಸಂದರ್ಭ ಬಂದಿದೆ. ಎಸ್ಸೆಮ್ಮೆಸ್, ಎಮ್ಮೆಮ್ಮೆಸ್, ವಾಯ್ಸ್‌ಮೇಲ್ ಮುಂತಾದ ಸೌಲಭ್ಯಗಳಿಂದ ಪ್ರಾರಂಭಿಸಿ ಇಮೇಲ್ ಕಳಿಸೋದು, ಇಂಟರ್‌ನೆಟ್ ಬ್ರೌಸಿಂಗ್ ಮಾಡೋದು, ಟೀವಿ ನೋಡೋದು, ವೀಡಿಯೋಕಾನ್ಫರೆನ್ಸಿಂಗ್ - ಹೀಗೆ ನೂರೆಂಟು ಹೊಸ ಸಾಧ್ಯತೆಗಳು ನಮ್ಮ ಮುಂದೆ ಬಂದಿವೆ.

ಮೊಬೈಲ್ ಮೂಲಕ ಅಂತರಜಾಲ ಸಂಪರ್ಕ ಕಲ್ಪಿಸಿಕೊಳ್ಳೋದು ಸಾಧ್ಯ ಆದ ಮೇಲಂತೂ ಕಂಪ್ಯೂಟರ್ ಬಳಸಿ ಏನೇನು ಮಾಡ್ತೀವೋ ಅದೆಲ್ಲವನ್ನೂ ಮೊಬೈಲ್ ಮೂಲಕವೇ ಮಾಡಿಮುಗಿಸೋದು ಸಾಧ್ಯವಾಗಿದೆ. ಬ್ಯಾಂಕಿಂಗ್ ವ್ಯವಹಾರ, ಸಿನಿಮಾ ಟಿಕೆಟ್ ಬುಕಿಂಗ್ ಮಾಡೋದು, ಬೇರೆಬೇರೆ ವೆಬ್‌ಸೈಟುಗಳಲ್ಲಿ ನಮಗೆ ಬೇಕಾದ ಮಾಹಿತಿಗಾಗಿ ಹುಡುಕಾಟ ನಡೆಸೋದು ಇದೆಲ್ಲ ಸಾಧ್ಯವಾಗಿದೆ. ಥ್ರೀ-ಜಿ ಬಂದಮೇಲಂತೂ ನೀವು ಯಾರ ಜೊತೆ ಮಾತಾಡ್ತೀರೋ ಅವರನ್ನ ನಿಮ್ಮ ಫೋನಿನ ಪರದೆಯ ಮೇಲೆ ನೋಡಿಕೊಂಡೇ ಮಾತಾಡುವುದು ಸಾಧ್ಯವಾಗಿದೆ.
ಇನ್ನು ಮೌಲ್ಯವರ್ಧಿತ ಸೇವೆ ಅಥವಾ ವ್ಯಾಲ್ಯೂ ಆಡೆಡ್ ಸರ್ವಿಸ್ - ವಿಎಎಸ್. ಕ್ರಿಕೆಟ್ ಸ್ಕೋರ್ ಇಂದ ಪ್ರಾರಂಭಿಸಿ ದಿನಭವಿಷ್ಯದ ತನಕ ಏನೆಲ್ಲ ಮಾಹಿತಿಯಲ್ಲಿ ನಿಮಗೆ ಆಸಕ್ತಿ ಇದೆಯೋ ಅದೆಲ್ಲ ಎಸ್ಸೆಮ್ಮೆಸ್ ಮಾಧ್ಯಮದಲ್ಲಿ ಸಿಗ್ತಾ ಇದೆ. ಬಿಡುವಿನ ವೇಳೆಯಲ್ಲಿ ಕೇಳಲು ಹಾಡುಗಳನ್ನ ಆಟಾಡೋದಕ್ಕೆ ಗೇಮ್‌ಗಳನ್ನ ಡೌನ್‌ಲೋಡ್ ಮಾಡಿಕೊಳ್ಳೋದು, ರಿಂಗ್‌ಟೋನ್ ಕಾಲರ್ ಟ್ಯೂನ್ ಇವನ್ನೆಲ್ಲ ಇಷ್ಟಬಂದಹಾಗೆ ಇಷ್ಟಬಂದಷ್ಟು ಸಲ ಬದಲಾಯಿಸೋದು ಎಲ್ಲ ಚಿಟಿಕೆ ಹೊಡೆದಷ್ಟು ಸುಲಭ ಆಗಿಬಿಟ್ಟಿದೆ.

ಮೊಬೈಲ್ ಕ್ಷೇತ್ರದಲ್ಲಿ ಆಗಿರುವ ಇಷ್ಟೆಲ್ಲ ಬದಲಾವಣೆಗಳು ಇನ್ನೂ ಅದೆಷ್ಟೋ ಬಗೆಯ ಹೊಸಹೊಸ ಸೌಲಭ್ಯಗಳನ್ನ ನಾವೆಲ್ಲ ನಿರೀಕ್ಷಿಸುವ ಹಾಗೆ ಮಾಡಿವೆ. ಏನೇನಾಗುತ್ತೋ, ಕಾದು ನೋಡೋಣ!

ಮಂಗಳವಾರ, ನವೆಂಬರ್ 23, 2010

ಕುತಂತ್ರ ತಡೆಗೆ ಕ್ಯಾಪ್ಚಾ

ಟಿ ಜಿ ಶ್ರೀನಿಧಿ

ವಿಶ್ವವ್ಯಾಪಿ ಜಾಲದಲ್ಲಿ ಅನುಕೂಲಗಳೆಷ್ಟಿವೆಯೋ ಅಷ್ಟೇ ಅನಾನುಕೂಲಗಳೂ ಇವೆ. ಇಮೇಲ್ ಅದ್ಭುತ ಸಂಪರ್ಕ ಮಾಧ್ಯಮ; ಆದರೆ ಅದರಲ್ಲಿ ಅನಗತ್ಯ 'ಸ್ಪಾಮ್' ಸಂದೇಶಗಳ ಹಾವಳಿ ವಿಪರೀತ. ವಿಚಾರವಿನಿಮಯಕ್ಕೆ ಪರಿಣಾಮಕಾರಿ ವೇದಿಕೆ ಬ್ಲಾಗಿಂಗ್; ಆದರೆ ಬ್ಲಾಗುಗಳಲ್ಲಿ ಅನಪೇಕ್ಷಿತ ಪ್ರತಿಕ್ರಿಯೆಗಳು ಸಾಕಷ್ಟು ತೊಂದರೆಕೊಡುತ್ತವೆ. ಅಷ್ಟೇ ಅಲ್ಲ, ಎಲ್ಲೆಲ್ಲಿ ಬಳಕೆದಾರರು ಮಾಹಿತಿ ದಾಖಲಿಸುವ ನಮೂನೆಗಳಿರುತ್ತವೋ ಅಲ್ಲೆಲ್ಲ ದುರುದ್ದೇಶಪೂರಿತ ತಂತ್ರಾಂಶಗಳು ಅನಗತ್ಯವಾಗಿ ಹಸ್ತಕ್ಷೇಪಮಾಡುತ್ತವೆ; ಸ್ವಯಂಚಾಲಿತವಾಗಿ ಯದ್ವಾತದ್ವಾ ಮಾಹಿತಿ ಪೂರೈಸುತ್ತವೆ. ಸೌಲಭ್ಯಗಳ ದುರುಪಯೋಗ, ಜಾಲತಾಣದ ಕಾರ್ಯಾಚರಣೆಗೆ ಅಡ್ಡಿಪಡಿಸುವುದು, ಸ್ಪಾಮ್ ಸಂದೇಶಗಳನ್ನು ಕಳಿಸುವುದು, ವೈರಸ್-ವರ್ಮ್‌ಗಳನ್ನು ಹರಡುವುದು - ಈ ತಂತ್ರಾಂಶಗಳಿಗೆ ಇಂತಹ ಯಾವುದೇ ದುರುದ್ದೇಶ ಇರಬಹುದು. ನಮ್ಮ ಇಮೇಲ್ ಇನ್‌ಬಾಕ್ಸ್‌ಗೆ ಹರಿದುಬರುವ ನೂರಾರು ಸ್ಪಾಮ್ ಸಂದೇಶಗಳು ಇಂತಹವೇ ತಂತ್ರಾಂಶಗಳ ಸೃಷ್ಟಿ.

ಈ ಮಾಹಿತಿ ಪ್ರವಾಹವನ್ನು ನಿಲ್ಲಿಸಿ, ಕುತಂತ್ರಗಳನ್ನು ಸೋಲಿಸಬೇಕಾದರೆ ಯಾವುದೇ ಸೌಲಭ್ಯವನ್ನು ಬಳಸಲು ಪ್ರಯತ್ನಿಸುತ್ತಿರುವವರು ನಿಜಕ್ಕೂ ನಮ್ಮನಿಮ್ಮಂತಹ ಬಳಕೆದಾರರೋ ಅಥವಾ ಸ್ವಯಂಚಾಲಿತವಾಗಿ ಮಾಹಿತಿ ಪೂರೈಸುತ್ತಿರುವ ದುರುದ್ದೇಶಪೂರಿತ ತಂತ್ರಾಂಶಗಳೋ ಎನ್ನುವುದನ್ನು ಪತ್ತೆಮಾಡಬೇಕಾಗುತ್ತದೆ. ಒಂದುವೇಳೆ ಸ್ವಯಂಚಾಲಿತ ತಂತ್ರಾಂಶವೇನಾದರೂ ನಕಲಿ ಮಾಹಿತಿ ಪ್ರವಾಹ ಸೃಷ್ಟಿಸಲು ಪ್ರಯತ್ನಿಸುತ್ತಿದ್ದರೆ ಅದನ್ನು ತಡೆಯುವುದೂ ಅಗತ್ಯ. ಈ ಉದ್ದೇಶಕ್ಕಾಗಿಯೇ 'ಕ್ಯಾಪ್ಚಾ'ಗಳು ಬಳಕೆಯಾಗುತ್ತವೆ.

ಕ್ಯಾಪ್ಚಾ ಎನ್ನುವ ಹೆಸರು 'ಕಂಪ್ಲೀಟ್‌ಲಿ ಆಟೋಮೇಟೆಡ್ ಪಬ್ಲಿಕ್ ಟ್ಯೂರಿಂಗ್ ಟೆಸ್ಟ್ ಟು ಟೆಲ್ ಕಂಪ್ಯೂಟರ್ಸ್ ಆಂಡ್ ಹ್ಯೂಮನ್ಸ್ ಅಪಾರ್ಟ್' ಎಂಬುದರ ಹ್ರಸ್ವರೂಪ. ಈ ನಾಮಕರಣವಾದದ್ದು ೨೦೦೦ದಲ್ಲಿ. ಯಾವುದೇ ಪ್ರಶ್ನೆಗೆ ಉತ್ತರಿಸುತ್ತಿರುವುದು ಸ್ವಯಂಚಾಲಿತ ತಂತ್ರಾಂಶವಲ್ಲ, ಮಾನವ ಬಳಕೆದಾರರೇ ಎಂದು ಖಾತರಿಪಡಿಸಿಕೊಳ್ಳುವ ಉದ್ದೇಶದಿಂದ ಕ್ಯಾಪ್ಚಾಗಳ ಬಳಕೆ ಪ್ರಾರಂಭವಾಯ್ತು.

ಪರದೆಯ ಮೇಲೆ ತೋರಿಸುವ ಚಿತ್ರದಲ್ಲಿನ ಅಕ್ಷರ ಅಥವಾ ಅಂಕಿಗಳನ್ನು ಗುರುತಿಸುವಂತೆ, ಅಥವಾ ಸರಳ ಪ್ರಶ್ನೆಗಳಿಗೆ ಉತ್ತರಿಸುವಂತೆ ಬಳಕೆದಾರರನ್ನು ಕೇಳುವುದು ಕ್ಯಾಪ್ಚಾಗಳ ಲಕ್ಷಣ.

ಹತ್ತಕ್ಕೆ ಮೂರು ಸೇರಿಸಿದರೆ ಎಷ್ಟು, ಅಥವಾ ಆಕಾಶದ ಬಣ್ಣ ಯಾವುದು ಎನ್ನುವಂತಹ ಸರಳ ಪ್ರಶ್ನೆಗಳಿಂದ ಪ್ರಾರಂಭಿಸಿ ತಿರುಚಾದ ಅಕ್ಷರ ಅಥವಾ ಅಂಕಿಗಳನ್ನು ಗುರುತಿಸಿ ಎಂದು ಕೇಳುವವರೆಗೆ ಕ್ಯಾಪ್ಚಾಗಳು ಅನೇಕ ಬಗೆಯವಾಗಿರಬಹುದು. ಒದಗಿಸಲಾಗುವ ಶ್ರವ್ಯ ಸಂದೇಶವನ್ನು ಕೇಳಿ ಅದನ್ನು ದಾಖಲಿಸಿ ಎಂದು ಕೇಳುವ ಕ್ಯಾಪ್ಚಾಗಳೂ ಇವೆ.

ಹೊಸ ಇಮೇಲ್ ಖಾತೆ ತೆರೆಯುವಾಗ, ಬ್ಲಾಗ್‌ನಲ್ಲಿ ಪ್ರತಿಕ್ರಿಯೆ ದಾಖಲಿಸುವಾಗ, ಆನ್‌ಲೈನ್ ಪಾವತಿ ಸಂದರ್ಭದಲ್ಲಿ - ಹೀಗೆ ಅನೇಕ ಕಡೆ ಕ್ಯಾಪ್ಚಾಗಳ ಬಳಕೆಯಾಗುತ್ತದೆ. ಕ್ಯಾಪ್ಚಾ ಕೇಳಿದ ಪ್ರಶ್ನೆಗೆ ಸರಿಯಾದ ಉತ್ತರ ನೀಡಿದಾಗಲಷ್ಟೆ ಬಳಕೆದಾರರಿಗೆ ತಮ್ಮ ಪ್ರಯತ್ನದಲ್ಲಿ ಮುಂದುವರೆಯಲು ಅನುಮತಿ ಸಿಗುತ್ತದೆ. ಸಾಮಾನ್ಯವಾಗಿ ಕ್ಯಾಪ್ಚಾ ಕೇಳುವ ಪ್ರಶ್ನೆಗೆ ಉತ್ತರಿಸಲು ತಂತ್ರಾಂಶಗಳು ಅಸಮರ್ಥವಾಗಿರುತ್ತವೆ; ಹೀಗಾಗಿ ಕ್ಯಾಪ್ಚಾ ಬಳಕೆಯಿಂದ ದುರುದ್ದೇಶಪೂರಿತ ತಂತ್ರಾಂಶಗಳ ಹಾವಳಿಯನ್ನು ಕಡಿಮೆಮಾಡಬಹುದು.

ಆದರೆ ಇದರಲ್ಲಿ ಕ್ಯಾಪ್ಚಾಗಳು ಸಂಪೂರ್ಣವಾಗಿ ಯಶಸ್ವಿಯಾಗಿವೆ ಎಂದು ಹೇಳುವುದು ಕಷ್ಟ. ದುರುದ್ದೇಶಪೂರಿತ ತಂತ್ರಾಂಶ ನಿರ್ಮಾತೃಗಳು ಕ್ಯಾಪ್ಚಾಗಳನ್ನು ಸೋಲಿಸುವ ದಾರಿಗಳನ್ನು ಹುಡುಕಿಕೊಳ್ಳುತ್ತಿದ್ದಾರೆ. ಕೆಲವೆಡೆ ಅವರು ತಮ್ಮ ತಂತ್ರಾಂಶವನ್ನು ಇನ್ನಷ್ಟು ಉತ್ತಮಪಡಿಸಿದ್ದರೆ ಇನ್ನು ಕೆಲ ಸಂದರ್ಭಗಳಲ್ಲಿ ಕ್ಯಾಪ್ಚಾ ಬಳಸುವ ತಾಣದಲ್ಲಿನ ಸುರಕ್ಷತಾ ನ್ಯೂನತೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.

ಹೀಗಾಗಿ ಕ್ಯಾಪ್ಚಾಗಳೂ ಸತತವಾಗಿ ಸುಧಾರಣೆಹೊಂದಬೇಕಾದ ಅಗತ್ಯ ಎದುರಾಗಿದೆ. ಈ ನಿಟ್ಟಿನಲ್ಲಿ ನಡೆದಿರುವ ಒಂದು ಪ್ರಯತ್ನ ವೀಡಿಯೋ ರೂಪದ ಕ್ಯಾಪ್ಚಾ ಬಳಕೆ. ಪುಟ್ಟದೊಂದು ವೀಡಿಯೋ ತೋರಿಸಿ ಅದರಲ್ಲಿ ಬರುವ ಅಕ್ಷರಗಳನ್ನು ಗುರುತಿಸಿ ದಾಖಲಿಸಿ ಎಂದು ಕೇಳುವುದು ಈ ಕ್ಯಾಪ್ಚಾದ ವೈಶಿಷ್ಟ್ಯ. ಸುಮ್ಮನೆ ಯಾವುದೋ ವೀಡಿಯೋ ತೋರಿಸುವ ಬದಲಿಗೆ ಜಾಹೀರಾತುಗಳನ್ನು ತೋರಿಸಿದರೆ ತಾಣಗಳು ಅದರಲ್ಲೂ ಹಣಸಂಪಾದನೆ ಮಾಡಬಹುದು ಎಂದು ಇದರ ಸೃಷ್ಟಿಕರ್ತರು ಹೇಳುತ್ತಾರೆ.

ಚಿತ್ರಗಳ ದೊಡ್ಡದೊಂದು ಸಂಗ್ರಹದಿಂದ ನಾಲ್ಕಾರನ್ನು ಆಯ್ದು ತೋರಿಸಿ ಅವುಗಳಲ್ಲಿ ಒಂದನ್ನು ಗುರುತಿಸುವಂತೆ ಕೇಳುವುದು ಕ್ಯಾಪ್ಚಾದ ಇನ್ನೊಂದು ರೂಪ. ಹಣ್ಣು, ಹೂವು, ಮನೆ, ವಿಮಾನ, ನಾಯಿ - ಹೀಗೆ ಐದು ಚಿತ್ರಗಳನ್ನು ಒಟ್ಟಿಗೆ ತೋರಿಸಿ ವಿಮಾನದ ಚಿತ್ರದ ಮೇಲೆ ಕ್ಲಿಕ್ ಮಾಡಿ ಎಂದರೆ ನಾನು-ನೀವು ಗುರುತಿಸುವಷ್ಟು ಸುಲಭವಾಗಿ ತಂತ್ರಾಂಶಗಳು ಗುರುತಿಸಲಾರವು. ಇದೇ ಈ ಕ್ಯಾಪ್ಚಾದ ಹೈಲೈಟ್. ಆದರೆ ಈ ವಿಧಾನ ಇನ್ನೂ ವ್ಯಾಪಕವಾಗಿ ಬಳಕೆಗೆ ಬಂದಿಲ್ಲ.

ಹಳೆಯ ಕ್ಯಾಪ್ಚಾ ಕಲ್ಪನೆಯನ್ನೇ ಉಳಿಸಿಕೊಂಡು ಅದರಲ್ಲೇ ವಿಶಿಷ್ಟ ಸುಧಾರಣೆಗಳನ್ನು ಮಾಡಿರುವುದು 'ರೀಕ್ಯಾಪ್ಚಾ'. ಇದರ ನಿರ್ವಹಣೆ ಗೂಗಲ್ ಸಂಸ್ಥೆಯದು. ಇಲ್ಲಿ ಬಳಕೆದಾರರಿಗೆ ಎರಡು ಪದಗಳನ್ನು ತೋರಿಸಿ ಅವನ್ನು ಗುರುತಿಸುವಂತೆ ಕೇಳಲಾಗುತ್ತದೆ. ಆದರೆ ಅವುಗಳಲ್ಲಿ ಒಂದು ಪದ ಮಾತ್ರ 'ರೀಕ್ಯಾಪ್ಚಾ' ವ್ಯವಸ್ಥೆಗೆ ಪರಿಚಿತವಾಗಿರುತ್ತದೆ; ಎರಡನೆಯ ಪದ ಯಾವುದೋ ಹಳೆಯ ಪತ್ರಿಕೆಯಿಂದಲೋ ಪುಸ್ತಕದಿಂದಲೋ ಬಂದಿರುತ್ತದೆ! ಅದು ಹೇಗೆ ಎಂದಿರಾ, ಗೂಗಲ್ ಸಂಸ್ಥೆ ಲಕ್ಷಾಂತರ ಮುದ್ರಿತ ಪುಸ್ತಕ-ಪತ್ರಿಕೆಗಳ ಗಣಕೀಕರಣದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಆದರೆ ಮುದ್ರಿತ ಪಠ್ಯವನ್ನು ಗುರುತಿಸಿ ಗಣಕೀಕರಣಗೊಳಿಸುವ ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ (ಒಸಿಆರ್) ತಂತ್ರಾಂಶಗಳಿಗೆ ಎಲ್ಲ ಪದಗಳನ್ನೂ ಸರಿಯಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ. ಅಂತಹ ಪದಗಳ ಚಿತ್ರವನ್ನು ರೀಕ್ಯಾಪ್ಚಾ ವ್ಯವಸ್ಥೆಗೆ ಕಳುಹಿಸಿಕೊಡಲಾಗುತ್ತದೆ.

ಬಳಕೆದಾರರು ರೀಕ್ಯಾಪ್ಚಾಗೆ ಪರಿಚಿತವಾದ ಪದವನ್ನು ಸರಿಯಾಗಿ ಗುರುತಿಸಿದರೆ ಅಪರಿಚಿತವಾದ ಇನ್ನೊಂದು ಪದವನ್ನೂ ಸರಿಯಾಗಿ ಗುರುತಿಸಿರುವ ಸಾಧ್ಯತೆ ಹೆಚ್ಚು. ಯಾವುದೇ ಪದವನ್ನು ಒಬ್ಬರಿಗಿಂತ ಹೆಚ್ಚು ಜನ ಒಂದೇ ರೀತಿ ಗುರುತಿಸಿದ ಮೇಲೆ ಅದು ಸರಿಯೇ ತಾನೆ!

ಲಕ್ಷಾಂತರ ಜನ ಪ್ರಪಂಚದ ಮೂಲೆಮೂಲೆಗಳಿಂದ ರೀಕ್ಯಾಪ್ಚಾ ಪ್ರಶ್ನೆಗಳಿಗೆ ಉತ್ತರಿಸುವಾಗ ಎಷ್ಟೆಲ್ಲ ಪದಗಳನ್ನು ಅತ್ಯಂತ ಕಡಿಮೆ ಸಮಯದಲ್ಲಿ ಗುರುತಿಸುವುದು ಸಾಧ್ಯವಾಗುತ್ತಿದೆ; ಸ್ಪಾಮ್ ತಡೆಯಲು ರೂಪಗೊಂಡ ಕ್ಯಾಪ್ಚಾ ವ್ಯವಸ್ಥೆ ತನ್ನ ಹೊಸ ಅವತಾರದಲ್ಲಿ ನಮ್ಮ ಇತಿಹಾಸವನ್ನು ಗಣಕೀಕರಣಗೊಳಿಸಲು ನೆರವುನೀಡುತ್ತಿದೆ.

ನವೆಂಬರ್ ೨೩, ೨೦೧೦ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಮಂಗಳವಾರ, ನವೆಂಬರ್ 16, 2010

ಟ್ಯಾಬ್ಲೆಟ್ ಕದನ

ಟಿ ಜಿ ಶ್ರೀನಿಧಿ

ಈಚಿನ ಕೆಲ ತಿಂಗಳುಗಳಿಂದ ಗಣಕ ಲೋಕದಲ್ಲೆಲ್ಲ ಟ್ಯಾಬ್ಲೆಟ್‌ಗಳದ್ದೇ ಸುದ್ದಿ. ಮೊದಲಿಗೆ ಈ ಸಂಚಲನ ಹುಟ್ಟುಹಾಕಿದ್ದು ವರ್ಷದ ಪ್ರಾರಂಭದಲ್ಲಿ ಮಾರುಕಟ್ಟೆಗೆ ಬಂದ ಆಪಲ್ ಸಂಸ್ಥೆಯ ಐಪ್ಯಾಡ್. ಆಮೇಲಂತೂ ಸಾಲುಸಾಲಾಗಿ ಟ್ಯಾಬ್ಲೆಟ್‌ಗಳು ಸುದ್ದಿಯಲ್ಲಿವೆ - ಬ್ಲಾಕ್‌ಬೆರಿಯ ಪ್ಲೇಬುಕ್, ಎಚ್‌ಪಿ ಸ್ಲೇಟ್, ಸ್ಯಾಮ್‌ಸಂಗ್ ಗೆಲಾಕ್ಸಿ ಟ್ಯಾಬ್ ಎಲ್ಲ ಸೇರಿಕೊಂಡು ದೊಡ್ಡಪ್ರಮಾಣದ ಟ್ಯಾಬ್ಲೆಟ್ ಸಮರಕ್ಕೆ ನಾಂದಿಹಾಡಿವೆ.

ಏನಿದು ಟ್ಯಾಬ್ಲೆಟ್?
ಸ್ಪರ್ಶ ಸಂವೇದನೆ ಹೊಂದಿರುವ ಒಂದೇ ಫಲಕದಲ್ಲಿ (ಟಚ್-ಸ್ಕ್ರೀನ್) ಅಡಕವಾಗಿರುವ ಸಂಪೂರ್ಣ ಗಣಕವೇ ಟ್ಯಾಬ್ಲೆಟ್. ಸಾಮಾನ್ಯ ಗಣಕಗಳನ್ನು ಬಳಸಿ ಏನೆಲ್ಲ ಮಾಡಬಹುದೋ ಅದನ್ನೆಲ್ಲ ಟ್ಯಾಬ್ಲೆಟ್ ಕೂಡ ಮಾಡಬಲ್ಲದು. ಸಾಮಾನ್ಯವಾಗಿ ಇವುಗಳಲ್ಲಿ ಕೀಲಿಮಣೆ ಇರುವುದಿಲ್ಲ; ಕೈಬೆರಳು ಅಥವಾ ಸ್ಟೈಲಸ್ ಕಡ್ಡಿ ಉಪಯೋಗಿಸಬೇಕಾಗುತ್ತದೆ. ನಾವೆಲ್ಲ ಚಿಕ್ಕವಯಸ್ಸಿನಲ್ಲಿ ಉಪಯೋಗಿಸಿದ್ದ ಸ್ಲೇಟನ್ನು ನೆನಪಿಸಿಕೊಳ್ಳಿ. ಟ್ಯಾಬ್ಲೆಟ್ ಗಣಕವನ್ನು ಅದರ ಮಾಡರ್ನ್ ಅವತಾರ ಎಂದು ಕರೆಯಬಹುದು.

ಆಪಲ್ ಐಪ್ಯಾಡ್ ಈ ವರ್ಷ ಮಾರುಕಟ್ಟೆಗೆ ಬಂತು ಎಂದಮಾತ್ರಕ್ಕೆ ಟ್ಯಾಬ್ಲೆಟ್ ತಂತ್ರಜ್ಞಾನ ನಿನ್ನೆಮೊನ್ನೆ ಹುಟ್ಟಿದ್ದೇನೂ ಅಲ್ಲ. ಕೈಯಲ್ಲಿ ಹಿಡಿದುಕೊಳ್ಳಬಹುದಾದ (ಹ್ಯಾಂಡ್‌ಹೆಲ್ಡ್) ಗಣಕಗಳ ಸೃಷ್ಟಿಗೆ ಸುಮಾರು ನೂರು ವರ್ಷಗಳಿಂದ ಪ್ರಯತ್ನ ನಡೆಯುತ್ತಿದ್ದ ಬಗ್ಗೆ ದಾಖಲೆಗಳಿವೆ. ಆದರೆ ಟ್ಯಾಬ್ಲೆಟ್ ಗಣಕಕ್ಕೆ ನಾಮಕರಣವಾದದ್ದು ಮಾತ್ರ ೨೦೦೦ದಲ್ಲಿ, ಮೈಕ್ರೋಸಾಫ್ಟ್ ಸಂಸ್ಥೆ ತನ್ನ 'ಟ್ಯಾಬ್ಲೆಟ್ ಪಿಸಿ'ಯನ್ನು ಪರಿಚಯಿಸಿದಾಗ. ಆದರೆ ಮುಂದಿನ ಹತ್ತು ವರ್ಷಗಳಲ್ಲಿ ಟ್ಯಾಬ್ಲೆಟ್‌ಗಳು ಹೆಚ್ಚಿನ ಜನಪ್ರಿಯತೆ ಕಾಣಲಿಲ್ಲ. ಹೆಚ್ಚಿನ ತೂಕ, ಬಳಕೆದಾರ ಸ್ನೇಹಿಯಲ್ಲದ ತಂತ್ರಾಂಶಗಳು - ಹೀಗೆ ಅನೇಕ ಕಾರಣಗಳಿಂದ ಟ್ಯಾಬ್ಲೆಟ್ ಮಾರುಕಟ್ಟೆ ಅಷ್ಟಾಗಿ ಬೆಳೆದಿರಲಿಲ್ಲ.

ಟ್ಯಾಬ್ಲೆಟ್ ಸಮರ
ಆದರೆ ೨೦೧೦ರಲ್ಲಿ ಆಪಲ್ ಐಪ್ಯಾಡ್ ಮಾರುಕಟ್ಟೆಗೆ ಬಂದಾಗ ಈ ಪರಿಸ್ಥಿತಿ ಬಹುಮಟ್ಟಿಗೆ ಬದಲಾಗಿತ್ತು. ಸುಲಭವಾಗಿ ಬಳಸಬಹುದಾದ ತಂತ್ರಾಂಶಗಳು, ಉತ್ತಮ ಗುಣಮಟ್ಟದ ಟಚ್-ಸ್ಕ್ರೀನ್, ಕಡಿಮೆ ತೂಕ, ಜೊತೆಗೆ ಆಪಲ್‌ನ ಬ್ರಾಂಡ್ ನೇಮ್ ಎಲ್ಲ ಸೇರಿಕೊಂಡು ಟ್ಯಾಬ್ಲೆಟ್‌ಗಳಿಗೊಂದು ಪುನರ್ಜನ್ಮ ದೊರೆಯಿತು.

ಐಪ್ಯಾಡ್ ಜನಪ್ರಿಯವಾಗುತ್ತಿದ್ದಂತೆಯೇ ಹೊಸ ಟ್ಯಾಬ್ಲೆಟ್ಟುಗಳು ಸಾಲುಸಾಲಾಗಿ ಮಾರುಕಟ್ಟೆಗೆ ಬರುವುದು ಪ್ರಾರಂಭವಾಗಿದೆ. ಬ್ಲಾಕ್‌ಬೆರಿ ನಿರ್ಮಾತೃಗಳಾದ ರೀಸರ್ಚ್ ಇನ್ ಮೋಷನ್ ಸಂಸ್ಥೆ ತನ್ನ 'ಪ್ಲೇಬುಕ್' ಅನ್ನು ಈಗಾಗಲೇ ಪ್ರದರ್ಶಿಸಿದೆ. ಸ್ಯಾಮ್‌ಸಂಗ್‌ನ ಗೆಲಾಕ್ಸಿ ಟ್ಯಾಬ್ ಮತ್ತು ಎಚ್‌ಪಿ ಸ್ಲೇಟ್ ಟ್ಯಾಬ್ಲೆಟ್‌ಗಳು ಇಷ್ಟರಲ್ಲೇ ಮಾರುಕಟ್ಟೆಗೆ ಬರಲಿವೆ.

ಬಡವರ ಟ್ಯಾಬ್ಲೆಟ್
ಟ್ಯಾಬ್ಲೆಟ್‌ಗಳದು ಹೆಚ್ಚಿನ ಯಂತ್ರಾಂಶ ಅಗತ್ಯವಿಲ್ಲದ ಸರಳ ವಿನ್ಯಾಸ; ಜೊತೆಗೆ ಅವುಗಳನ್ನು ಉಪಯೋಗಿಸುವುದೂ ಸುಲಭ. ಇದೀಗ ಗೂಗಲ್‌ನ ಆಂಡ್ರಾಯ್ಡ್ ಕಾರ್ಯಾಚರಣ ವ್ಯವಸ್ಥೆ ಕೂಡ ಲಭ್ಯವಿರುವುದರಿಂದ ತಂತ್ರಾಂಶಗಳೂ ದುಬಾರಿಯಲ್ಲ. ಹೀಗಾಗಿ ಅಭಿವೃದ್ಧಿಶೀಲ ದೇಶಗಳ ಮಕ್ಕಳಿಗೆ ಆಧುನಿಕ ಶಿಕ್ಷಣ ಒದಗಿಸಲು ಟ್ಯಾಬ್ಲೆಟ್‌ಗಳೇ ಸರಿಯಾದ ಮಾಧ್ಯಮ ಎಂಬ ಅಭಿಪ್ರಾಯ ಮೂಡಿದೆ.

ಸುಲಭ ಬೆಲೆಯ ಲ್ಯಾಪ್‌ಟಾಪ್‌ಗಳನ್ನು ತಯಾರಿಸುವ ಉದ್ದೇಶದೊಡನೆ ಕೆಲಸಮಾಡುತ್ತಿರುವ 'ಒನ್ ಲ್ಯಾಪ್‌ಟಾಪ್ ಪರ್ ಚೈಲ್ಡ್' ಕಾರ್ಯಕ್ರಮ (ಒಎಲ್‌ಪಿಸಿ) ಇದೀಗ ಟ್ಯಾಬ್ಲೆಟ್ ಗಣಕವನ್ನೂ ಸೃಷ್ಟಿಸಲು ಹೊರಟಿದೆ. ಎಕ್ಸ್‌ಒ-೩ ಹೆಸರಿನ ಈ ಟ್ಯಾಬ್ಲೆಟ್ ಅನ್ನು ಐದು ಸಾವಿರ ರೂಪಾಯಿಗಳ ಒಳಗೆ ಲಭ್ಯವಾಗುವಂತೆ ಮಾಡುವುದು ಒಎಲ್‌ಪಿಸಿ ಉದ್ದೇಶ.

ಭಾರತ ಕೂಡ ಈ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಇದೇ ವರ್ಷ ಅನಾವರಣಗೊಂಡ 'ಸಾಕ್ಷಾತ್' ವಿಶ್ವದ ಅತ್ಯಂತ ಕಡಿಮೆ ಬೆಲೆಯ ಟ್ಯಾಬ್ಲೆಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಂದೂವರೆ ಸಾವಿರ ರೂಪಾಯಿ ವೆಚ್ಚದಲ್ಲಿ ಸಿದ್ಧವಾಗಿರುವ ಈ ಟ್ಯಾಬ್ಲೆಟ್ ಅನ್ನು ಭಾರತೀಯ ವಿಜ್ಞಾನ ಮಂದಿರ ಹಾಗೂ ಐಐಟಿಗಳು ಜಂಟಿಯಾಗಿ ರೂಪಿಸಿವೆ. ಎರಡು ಗಿಗಾಬೈಟ್ ಮೆಮೊರಿ, ಅಂತರಜಾಲ ಸಂಪರ್ಕ, ಸ್ಪರ್ಶಸಂವೇದಿ ಪರದೆಗಳನ್ನು ಹೊಂದಿರುವ ಸಾಕ್ಷಾತ್‌ಗಾಗಿಯೇ ಐಐಟಿಗಳು ಅನೇಕ ಶೈಕ್ಷಣಿಕ ತಂತ್ರಾಂಶಗಳನ್ನು ರೂಪಿಸಿವೆ.

ಮುಂದಿನ ವರ್ಷದ ವೇಳೆಗೆ ಇಂತಹ ಹತ್ತು ಲಕ್ಷ ಟ್ಯಾಬ್ಲೆಟ್‌ಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗುವುದು ಎಂದು ಕೇಂದ್ರ ಸರಕಾರ ಹೇಳಿದೆ. ಇವುಗಳ ಉತ್ಪಾದನೆ ಹೆಚ್ಚಿದಂತೆ ಬೆಲೆ ಇನ್ನೂ ಕಡಿಮೆಯಾಗಬಹುದು ಎಂಬ ನಿರೀಕ್ಷೆಯೂ ಇದೆ.

ನವೆಂಬರ್ ೧೬, ೨೦೧೦ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಬುಧವಾರ, ನವೆಂಬರ್ 10, 2010

ಕಲ್ಪನೆಯ ಯಾತ್ರೆಗೆ ಸಿದ್ಧರಾಗಿ!

'ಕಲ್ಪನೆಯ ಯಾತ್ರೆ ೨೦೧೦' ಹೆಸರಿನ ಖಗೋಳ ಉತ್ಸವ ಬರುವ ನವೆಂಬರ್ ೨೬ರಿಂದ ಡಿಸೆಂಬರ್ ೫ರವರೆಗೆ ಬೆಂಗಳೂರಿನ ಜವಾಹರ್‌ಲಾಲ್ ನೆಹರು ತಾರಾಲಯದಲ್ಲಿ ನಡೆಯಲಿದೆ.

ಈ ವಿಶಿಷ್ಟ ಕಾರ್ಯಕ್ರಮದ ವಿವರಗಳಿಗೆ ಕೆಳಗಿನ ಚಿತ್ರಗಳ ಮೇಲೆ ಕ್ಲಿಕ್ ಮಾಡಿ, ಅಥವಾ ಕಲ್ಪನೆಯ ಯಾತ್ರೆಯ ಜಾಲತಾಣ ನೋಡಿ.


ಮಂಗಳವಾರ, ನವೆಂಬರ್ 9, 2010

ಗಣಕ ಲೋಕದಿಂದ ಮೇಘ ಸಂದೇಶ

ಟಿ ಜಿ ಶ್ರೀನಿಧಿ


ಕ್ಲೌಡ್ ಕಂಪ್ಯೂಟಿಂಗ್ - ಗಣಕ ಲೋಕದಲ್ಲಿ ಹೊಸ ಸಂಚಲನ ಮೂಡಿಸಿರುವ ಪರಿಕಲ್ಪನೆ. ಗೂಗಲ್, ಅಮೆಜಾನ್ ಮುಂತಾದ ಅಂತರಜಾಲ ಸಂಸ್ಥೆಗಳು ಈಗಾಗಲೇ ಬಳಸುತ್ತಿರುವ ಕ್ಲೌಡ್ ಕಂಪ್ಯೂಟಿಂಗ್ ತಂತ್ರಜ್ಞಾನವನ್ನು ತಾವೂ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಮೈಕ್ರೋಸಾಫ್ಟ್, ಎಚ್‌ಪಿ, ಡೆಲ್ ಮುಂತಾದ ಸಂಸ್ಥೆಗಳು ಈಗಾಗಲೇ ದೊಡ್ಡಪ್ರಮಾಣದ ಪ್ರಯತ್ನಗಳನ್ನು ಶುರುಮಾಡಿವೆ. ಗ್ರಾಹಕ ಸಂಪರ್ಕ ನಿರ್ವಹಣೆ ವ್ಯವಸ್ಥೆಯನ್ನು ಕ್ಲೌಡ್ ಮೂಲಕ ಒದಗಿಸುತ್ತಿರುವ ಸೇಲ್ಸ್‌ಫೋರ್ಸ್ ಡಾಟ್ ಕಾಮ್‌ನಂತಹ ಸಂಸ್ಥೆಗಳು ಈಗಾಗಲೇ ಅದ್ಭುತ ಯಶಸ್ಸು ಸಾಧಿಸಿವೆ. ಈಗ ವಾರ್ಷಿಕ ೨.೪ ಬಿಲಿಯನ್ ಡಾಲರುಗಳಷ್ಟು ವಹಿವಾಟು ನಡೆಸುತ್ತಿರುವ ಕ್ಲೌಡ್ ಕಂಪ್ಯೂಟಿಂಗ್ ಕ್ಷೇತ್ರ ಮುಂದಿನ ಮೂರು ವರ್ಷಗಳಲ್ಲಿ ನಾಲ್ಕು ಪಟ್ಟು ದೊಡ್ಡದಾಗಿ ಬೆಳೆಯಲಿದೆ ಎಂದು ಅಂದಾಜಿಸಲಾಗಿದೆ. ಗಣಕ ಲೋಕದ ಭವಿಷ್ಯವೇ ಈ ಕ್ಲೌಡ್ ಕಂಪ್ಯೂಟಿಂಗ್‌ನಲ್ಲಿದೆ ಎನ್ನುವ ಧಾಟಿಯ ಮಾತುಗಳೂ ಬೇಕಾದಷ್ಟು ಕೇಳಿಬರುತ್ತಿವೆ.

ಇಲ್ಲಿ ಕ್ಲೌಡ್ ಎಂದರೆ ಮೋಡವಲ್ಲ. ಕ್ಲೌಡ್ ಕಂಪ್ಯೂಟಿಂಗ್ ಬಳಕೆದಾರರು ಮೋಡದ ಮೇಲೆ ಕುಳಿತಿರಬೇಕಾದ ಅಗತ್ಯವೂ ಇಲ್ಲ. ಹಾಗಾದರೆ ಈ ಕ್ಲೌಡ್ ಕಂಪ್ಯೂಟಿಂಗ್ ಅಂದರೆ ಏನು?

ತಂತ್ರಾಂಶ, ಶೇಖರಣಾ ಸಾಮರ್ಥ್ಯ, ದುಬಾರಿ ಯಂತ್ರಾಂಶ - ಹೀಗೆ ಗಣಕದಲ್ಲಿ ನಿಮಗೆ ಅಗತ್ಯವಾದ ಯಾವುದೇ ಸೇವೆಯನ್ನು ಅಂತರಜಾಲದ ಮೂಲಕ ಒದಗಿಸುವ ಪರಿಕಲ್ಪನೆಯ ಹೆಸರೇ ಕ್ಲೌಡ್ ಕಂಪ್ಯೂಟಿಂಗ್. ಯಾವುದೇ ಸಂಸ್ಥೆ ತನ್ನ ಅಗತ್ಯಗಳಿಗೆ ಬೇಕಾದ ಗಣಕ ವ್ಯವಸ್ಥೆಯನ್ನು ಸ್ವತಃ ಸ್ಥಾಪಿಸಿಕೊಂಡು ನಿರ್ವಹಿಸುವ ಬದಲು ಬೇರೊಂದು ಸಂಸ್ಥೆಗೆ ಗುತ್ತಿಗೆ ಕೊಟ್ಟುಬಿಡುವುದು ಕ್ಲೌಡ್ ಕಂಪ್ಯೂಟಿಂಗ್‌ನ ಮೂಲಮಂತ್ರ.

ಉದಾಹರಣೆಗೆ ಇಪ್ಪತ್ತೈದು ಉದ್ಯೋಗಿಗಳಿರುವ ಒಂದು ಸಂಸ್ಥೆಯನ್ನೇ ತೆಗೆದುಕೊಳ್ಳಿ. ಆ ಸಂಸ್ಥೆ ತನ್ನ ಎಲ್ಲ ನೌಕರರಿಗೆ ಇಮೇಲ್ ಸೌಲಭ್ಯ ಕೊಡಲು ತನ್ನದೇ ಆದ ಸರ್ವರ್ ಸ್ಥಾಪಿಸಿಕೊಂಡು ಅದರ ನಿರ್ವಹಣೆಗೆ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಹೊರಟರೆ ದೊಡ್ಡ ಪ್ರಮಾಣದ ಖರ್ಚು ಬರುತ್ತದೆ. ಅದರ ಬದಲು ಆ ಸಂಸ್ಥೆ ಗೂಗಲ್‌ನ ಎಂಟರ್‌ಪ್ರೈಸ್ ಇಮೇಲ್ ಸೌಲಭ್ಯವನ್ನು ಕೊಳ್ಳುತ್ತದೆ ಎಂದುಕೊಳ್ಳೋಣ. ಸರ್ವರ್ ಬೇಡ, ತಂತ್ರಾಂಶ ಬೇಡ, ಹೆಚ್ಚುವರಿ ಸಿಬ್ಬಂದಿಯೂ ಬೇಡ; ಆ ಖರ್ಚಿನ ಸಣ್ಣದೊಂದು ಭಾಗದಲ್ಲಿ ಸಂಸ್ಥೆಯ ಎಲ್ಲ ನೌಕರರಿಗೂ ಇಮೇಲ್ ಸೌಲಭ್ಯ ದೊರಕಿಬಿಡುತ್ತದೆ. ಜೊತೆಗೆ ನೌಕರರು ವಿಶ್ವದ ಯಾವುದೇ ಮೂಲೆಯಲ್ಲಿ - ಕಚೇರಿಯಲ್ಲಿ, ಮನೆಯಲ್ಲಿ, ಪ್ರವಾಸದಲ್ಲಿ ಎಲ್ಲೇ ಇದ್ದರೂ ತಮ್ಮ ಸಹೋದ್ಯೋಗಿಗಳ ಜೊತೆ ಸಂಪರ್ಕದಲ್ಲಿರುವುದು ಸಾಧ್ಯವಾಗುತ್ತದೆ.

ಬಳಕೆದಾರರ ಸಂಸ್ಥೆಯ ಹೊರಗೆ, ಬೇರೊಬ್ಬರ ಸಂಪೂರ್ಣ ಉಸ್ತುವಾರಿಯಲ್ಲಿ ಕ್ಲೌಡ್ ಕಂಪ್ಯೂಟಿಂಗ್ ವ್ಯವಸ್ಥೆ ಕೆಲಸಮಾಡುತ್ತದೆ. ಹೀಗಾಗಿ ಗಣಕ ವ್ಯವಸ್ಥೆಗಳನ್ನು ಚಿತ್ರದಲ್ಲಿ ಪ್ರತಿನಿಧಿಸುವಾಗ ಈ ಭಾಗವನ್ನು ಮೋಡದ ಆಕಾರದಲ್ಲಿ ತೋರಿಸುತ್ತಾರೆ; ಅದು ನಮ್ಮ ವ್ಯವಸ್ಥೆಯಿಂದ ಹೊರಗಿದೆ ಎಂದು ತೋರಿಸುವುದು ಅದರ ಉದ್ದೇಶ. ಈ ಮೋಡದ ಆಕಾರವೇ 'ಕ್ಲೌಡ್' ಎಂಬ ಹೆಸರಿನ ಮೂಲ.

ಕ್ಲೌಡ್ ಕಂಪ್ಯೂಟಿಂಗ್ ತೀರಾ ಹೊಸ ಪರಿಕಲ್ಪನೆಯೇನಲ್ಲ. ನಮ್ಮ ನಿಮ್ಮಂತಹ ಸಾಮಾನ್ಯ ಬಳಕೆದಾರರು ಬ್ಲಾಗರ್, ಫ್ಲಿಕರ್, ಫೇಸ್‌ಬುಕ್, ಹಾಟ್‌ಮೇಲ್ ಮುಂತಾದ ಯಾವುದೋ ರೂಪದಲ್ಲಿ ಈಗಾಗಲೇ ಇದನ್ನು ಬಳಸುತ್ತಿದ್ದೇವೆ. ಆದರೆ ಸಂಸ್ಥೆಗಳ ದೃಷ್ಟಿಯಿಂದ ಇದಿನ್ನೂ ಈಗ ಬೆಳೆಯುತ್ತಿರುವ ಕ್ಷೇತ್ರ. ಇಮೇಲ್ ವ್ಯವಸ್ಥೆಯಿಂದ ಪ್ರಾರಂಭಿಸಿ ದತ್ತಸಂಚಯಗಳು, ಇಆರ್‌ಪಿ, ಥ್ರೀಡಿ ಮಾಡೆಲಿಂಗ್ ಇತ್ಯಾದಿಗಳವರೆಗೆ ಅನೇಕಬಗೆಯ ಸೇವೆಗಳು ಈಗ ಕ್ಲೌಡ್ ಕಂಪ್ಯೂಟಿಂಗ್ ಮೂಲಕ ದೊರಕುತ್ತಿವೆ. ಅವೆಲ್ಲವೂ ಅಂತರಜಾಲದ ಮೂಲಕವೇ ಲಭ್ಯವಾಗುತ್ತಿರುವುದರಿಂದ ಬಳಕೆದಾರರು ಗಣಕೀಕರಣಕ್ಕೆ ಮಾಡಬೇಕಾದ ವೆಚ್ಚದಲ್ಲಿ ಗಮನಾರ್ಹ ಉಳಿತಾಯ ಸಾಧ್ಯವಾಗುತ್ತಿದೆ.

ಕ್ಲೌಡ್ ಕಂಪ್ಯೂಟಿಂಗ್ ಸೇವೆ ಒದಗಿಸುವ ಸಂಸ್ಥೆಗಳು ಅನೇಕ ಬಳಕೆದಾರರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತವೆ. ಇಲ್ಲಿ ಒಂದೆರಡು ಸರ್ವರ್‌ಗಳಲ್ಲ, ಅನೇಕ ಸರ್ವರ್‌ಗಳ ತೋಟವೇ (ಸರ್ವರ್ ಫಾರ್ಮ್) ಇರುತ್ತದೆ. ಹೀಗಾಗಿ ಒಬ್ಬೊಬ್ಬರಿಗೂ ಬೇರೆಬೇರೆಯಾಗಿ ಯಂತ್ರಾಂಶಗಳನ್ನು ಕೊಳ್ಳುವ, ಸ್ಥಾಪಿಸುವ ಅಥವಾ ನಿರ್ವಹಿಸುವ ಅಗತ್ಯ ಇರುವುದಿಲ್ಲ; ಇದರ ಪರಿಣಾಮ ಬಳಕೆದಾರರಿಗೆ ಕಡಿಮೆ ವೆಚ್ಚದಲ್ಲಿ ಬೇಕಾದ ಸೇವೆಗಳೆಲ್ಲ ದೊರಕಿಬಿಡುತ್ತವೆ. ಯಂತ್ರಾಂಶ ನಿರ್ವಹಣೆ, ಆಗಿಂದಾಗ್ಗೆ ಅದರಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುವುದು, ಇದಕ್ಕೆಲ್ಲ ಬೇಕಾದ ನೌಕರರ ಸಂಬಳ... ಈ ರೀತಿಯ ಯಾವ ತಲೆನೋವೂ ಇಲ್ಲ; ಬಿಲ್ ಬಂದಾಗ ದುಡ್ಡು ಕೊಟ್ಟರೆ ಮುಗಿಯಿತು - ನೀರಿನದೋ ಕರೆಂಟಿನದೋ ಕೇಬಲ್‌ದೋ ಬಿಲ್ ಕಟ್ಟಿದ ಹಾಗೆ! ಹೀಗಾಗಿಯೇ ಕ್ಲೌಡ್ ಕಂಪ್ಯೂಟಿಂಗ್ ಅನ್ನು ಐಟಿ-ಆಸ್-ಎ-ಸರ್ವಿಸ್ ಎಂದೂ ಕರೆಯುತ್ತಾರೆ.

ಈ ವ್ಯವಸ್ಥೆಯಲ್ಲಿ ಬಳಕೆದಾರರ ಮಾಹಿತಿಯೆಲ್ಲ ಬೇರೊಬ್ಬರ ಗಣಕದಲ್ಲಿ ಶೇಖರವಾಗುವುದರಿಂದ ಕ್ಲೌಡ್ ಕಂಪ್ಯೂಟಿಂಗ್ ಸುರಕ್ಷಿತವೇ ಎಂಬ ಪ್ರಶ್ನೆ ಈಗಾಗಲೇ ಕೇಳಿಬಂದಿದೆ. ಆದರೆ ನಾವು ಅತ್ಯುನ್ನತ ಮಟ್ಟದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತೇವೆ; ಅಷ್ಟೆಲ್ಲ ಹೆಚ್ಚಿನ ಸುರಕ್ಷತೆ ಸಣ್ಣಪುಟ್ಟ ಸಂಸ್ಥೆಗಳ ಗಣಕ ವ್ಯವಸ್ಥೆಯಲ್ಲಿ ಖಂಡಿತಾ ಇರುವುದಿಲ್ಲ ಎಂದು ಕ್ಲೌಡ್ ಕಂಪ್ಯೂಟಿಂಗ್ ಸೇವೆ ಒದಗಿಸುತ್ತಿರುವ ಸಂಸ್ಥೆಗಳು ವಾದಿಸಿವೆ.

ಅದೆಲ್ಲ ಏನೇ ಇರಲಿ, ಗಣಕ ಲೋಕದಲ್ಲೊಂದು ಕ್ರಾಂತಿಕಾರಕ ಬದಲಾವಣೆ ತರಲು ರಂಗಸಜ್ಜಿಕೆ ಸಿದ್ಧವಾಗಿದೆ ಎನ್ನುವುದಂತೂ ನಿಜ.

ನವೆಂಬರ್ ೯, ೨೦೧೦ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಮಂಗಳವಾರ, ನವೆಂಬರ್ 2, 2010

ಬೂಟ್ ಮಾಡಲು ಅರೆಕ್ಷಣ ಸಾಕು

ಟಿ ಜಿ ಶ್ರೀನಿಧಿ

ಗಣಕ ಉಪಯೋಗಿಸುವವರೆಲ್ಲ ಆಪರೇಟಿಂಗ್ ಸಿಸ್ಟಂ ಅಥವಾ ಕಾರ್ಯಾಚರಣ ವ್ಯವಸ್ಥೆ ಎಂಬ ಹೆಸರು ಕೇಳಿಯೇ ಇರುತ್ತಾರೆ. ಗಣಕದ ಪ್ರಾಥಮಿಕ ಚಟುವಟಿಕೆಗಳನ್ನು ನಿಯಂತ್ರಿಸುವ ಜೊತೆಗೆ ಅದರ ವಿವಿಧ ಸೌಲಭ್ಯಗಳನ್ನು ಬಳಸಿಕೊಳ್ಳಲು ನಮಗೆ ಸಹಾಯಮಾಡುವ ತಂತ್ರಾಂಶ ಇದು. ಮೈಕ್ರೋಸಾಫ್ಟ್ ವಿಂಡೋಸ್, ಲಿನಕ್ಸ್ ಮುಂತಾದವು ಕಾರ್ಯಾಚರಣ ವ್ಯವಸ್ಥೆಗೆ ಕೆಲ ಉದಾಹರಣೆಗಳು.

ಗಣಕದಲ್ಲಿ ಯಾವುದೇ ಯಂತ್ರಾಂಶ ಅಥವಾ ತಂತ್ರಾಂಶ ಬಳಸಬೇಕಾದರೂ ಕಾರ್ಯಾಚರಣ ವ್ಯವಸ್ಥೆ ಇರಲೇಬೇಕು. ಅಷ್ಟೇ ಅಲ್ಲ, ಇವುಗಳಲ್ಲಿ ಏನನ್ನು ಬಳಸಬೇಕಾದರೂ ಮೊದಲಿಗೆ ಕಾರ್ಯಾಚರಣ ವ್ಯವಸ್ಥೆ ಪ್ರಾರಂಭವಾಗಿರಬೇಕು.

ನೀವು ಗುಂಡಿ ಒತ್ತಿದ ತಕ್ಷಣವೇ ಗಣಕ ತನ್ನಲ್ಲಿ ಈ ಕಾರ್ಯಾಚರಣ ವ್ಯವಸ್ಥೆ ಎಲ್ಲಿ ಶೇಖರವಾಗಿದೆ ಎಂದು ಹುಡುಕಿ ಅದನ್ನು ಪ್ರಾರಂಭಿಸುತ್ತದೆ. 'ಬೂಟ್' ಮಾಡುವುದು ಎನ್ನುವುದು ಇದಕ್ಕೇ.

ಬೂಟ್ ಮಾಡುವುದು ಬಯಾಸ್ ಎಂಬ ತಂತ್ರಾಂಶದ ಕೆಲಸ. ಬಯಾಸ್ ಎನ್ನುವುದು 'ಬೇಸಿಕ್ ಇನ್‌ಪುಟ್/ಔಟ್‌ಪುಟ್ ಸಿಸ್ಟಂ'ನ ಹ್ರಸ್ವರೂಪ.

ಗಣಕ ಲೋಕದಲ್ಲಿ ಎಲ್ಲವೂ ಅತ್ಯಂತ ಕ್ಷಿಪ್ರವಾಗಿ ಬದಲಾಗುತ್ತಿರುತ್ತವೆ; ಇವತ್ತು ಅತ್ಯಾಧುನಿಕ ಎಂದು ಕರೆಸಿಕೊಳ್ಳುವುದು ನಾಳೆಗಾಗಲೇ ಹಳತಾಗಿರುತ್ತದೆ. ಆದರೆ ಇದಕ್ಕೆ ಅಪವಾದದಂತಿರುವುದು ಈ ಬಯಾಸ್. ಇಪ್ಪತ್ತೈದು ವರ್ಷಗಳ ಹಿಂದೆ ಸೃಷ್ಟಿಯಾದ ಈ ತಂತ್ರಾಂಶ ಇಲ್ಲಿಯವರೆಗೂ ಅಬಾಧಿತವಾಗಿ ಬಳಕೆಯಾಗುತ್ತಾ ಬಂದಿದೆ.

ಬಯಾಸ್ ಸೃಷ್ಟಿಯಾದಾಗ ಅದರ ಆಯುಷ್ಯದ ಬಗೆಗೆ ಹೆಚ್ಚಿನ ನಿರೀಕ್ಷೆಯೇನೂ ಇರಲಿಲ್ಲ. ಹೆಚ್ಚೆಂದರೆ ಎರಡು ಎರಡೂವರೆ ಲಕ್ಷ ಗಣಕಗಳಲ್ಲಷ್ಟೆ ಬಳಕೆಯಾಗಬಹುದು ಎನ್ನಲಾಗಿದ್ದ ಬಯಾಸ್ ೧೯೭೯ರಿಂದ ಇಲ್ಲಿಯವರೆಗೂ ಗಣಕಗಳ ಅವಿಭಾಜ್ಯ ಅಂಗವಾಗಿ ಸಾಗಿಬಂದಿದೆ.

ಆದರೆ ಈ ಸುದೀರ್ಘ ಅವಧಿಯಲ್ಲಿ ಇತರ ತಂತ್ರಾಂಶ-ಯಂತ್ರಾಂಶಗಳು ಆಮೂಲಾಗ್ರವಾಗಿ ಬದಲಾದಂತೆ ಬಯಾಸ್ ಬದಲಾಗಿಲ್ಲ. ಹೀಗಾಗಿ ಹತ್ತು ವರ್ಷಗಳ ಹಿಂದಿನ ಗಣಕ ಬೂಟ್ ಆಗಲು ಎಷ್ಟು ಸಮಯ ತೆಗೆದುಕೊಳ್ಳುತ್ತಿತ್ತೋ ಇಂದಿನ ಅತ್ಯಾಧುನಿಕ ಗಣಕವೂ ಹೆಚ್ಚೂಕಡಿಮೆ ಅಷ್ಟೇ ಸಮಯ ತೆಗೆದುಕೊಳ್ಳುತ್ತಿದೆ.

ಈಗ ಕಡೆಗೂ ಬಯಾಸ್‌ಗೆ ಬದಲಾವಣೆಯ ಸಮಯ ಬಂದಿದೆ. ಯೂನಿಫೈಡ್ ಎಕ್ಸ್‌ಟೆನ್ಸಿಬಲ್ ಫರ್ಮ್‌ವೇರ್ ಇಂಟರ್‌ಫೇಸ್ (ಯುಇಎಫ್‌ಐ) ಎಂಬ ಹೊಸ ತಂತ್ರಜ್ಞಾನ ಮುಂದಿನ ವರ್ಷದಿಂದ ಗಣಕಗಳಲ್ಲಿ ಬಯಾಸ್‌ನ ಬದಲಿಗೆ ಕಾಣಿಸಿಕೊಳ್ಳಲಿದೆಯಂತೆ. ಈ ತಂತ್ರಜ್ಞಾನದ ಸಹಾಯದಿಂದ ಗಣಕಗಳನ್ನು ಕೆಲವೇ ಸೆಕೆಂಡುಗಳಲ್ಲಿ ಬೂಟ್ ಆಗುವಂತೆ ಮಾಡಬಹುದು ಎಂದು ಅವರು ಹೇಳಿದ್ದಾರೆ.

ಬಯಾಸ್‌ನಲ್ಲಿದ್ದ ಅನೇಕ ಸಮಸ್ಯೆಗಳನ್ನು ಈ ಹೊಸ ತಂತ್ರಜ್ಞಾನ ಹೋಗಲಾಡಿಸಲಿದೆ. ಬಯಾಸ್ ಬಳಸುವ ಗಣಕಗಳಲ್ಲಿ ಎರಡು ಟೆರಾಬೈಟ್‌ಗಿಂತ ಹೆಚ್ಚಿನ ಸಾಮರ್ಥ್ಯದ ಹಾರ್ಡ್‌ಡಿಸ್ಕ್‌ಗಳನ್ನು ಬಳಸುವುದು ಸಾಧ್ಯವಿಲ್ಲ. ಮಾರುಕಟ್ಟೆಯಲ್ಲಿ ಅಷ್ಟೊಂದು ಹೆಚ್ಚಿನ ಸಾಮರ್ಥ್ಯದ ಹಾರ್ಡ್‌ಡಿಸ್ಕ್‌ಗಳು ದೊರಕುತ್ತಿರಲಿಲ್ಲವಾದ್ದರಿಂದ ಈ ಸಮಸ್ಯೆ ಯಾರಿಗೂ ಅಷ್ಟೊಂದು ದೊಡ್ಡದಾಗಿ ಕಂಡಿರಲಿಲ್ಲ. ಆದರೆ ತೀರಾ ಈಚೆಗೆ ವೆಸ್ಟರ್ನ್ ಡಿಜಿಟಲ್ ಸಂಸ್ಥೆ ವಿಶ್ವದ ಮೊದಲ ಮೂರು ಟೆರಾಬೈಟ್ ಹಾರ್ಡ್ ಡಿಸ್ಕ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಹಾರ್ಡ್ ಡಿಸ್ಕ್ ಬಳಸಬೇಕಾದರೆ ಗಣಕದಲ್ಲಿ ಯುಇಎಫ್‌ಐ ಇರಲೇಬೇಕು (ಈಗಿನ ಗಣಕದಲ್ಲೇ ಇದನ್ನು ಬಳಸಬೇಕು ಎನ್ನುವ ವಿಂಡೋಸ್ ವಿಸ್ತಾ ಅಥವಾ ವಿಂಡೋಸ್ ೭ ಬಳಕೆದಾರರು ಅದಕ್ಕೊಂದು ಪ್ರತ್ಯೇಕ ಅಡಾಪ್ಟರ್ ಕೊಳ್ಳಬೇಕಾಗುತ್ತದೆ).

ಮೊದಲಿಗೆ ಇಂಟೆಲ್ ಸಂಸ್ಥೆಯ ಆಶ್ರಯದಲ್ಲಿ ರೂಪಗೊಂಡ ಯುಇಎಫ್‌ಐ ಇದೀಗ ಒಂದು ಮಾನಕವಾಗಿ ಬೆಳೆಯುತ್ತಿದೆ. ೨೦೧೧ರ ವೇಳೆಗೆ ಪ್ರಪಂಚದಾದ್ಯಂತ ಮಾರಾಟವಾಗುವ ಗಣಕಗಳಲ್ಲಿ ಬಹುಪಾಲು ಈ ತಂತ್ರಜ್ಞಾನವನ್ನೇ ಬಳಸುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ. ಆದರೆ ಯುಇಎಫ್‌ಐ ತಂತ್ರಜ್ಞಾನ ಈಗಾಗಲೇ ಸಾಕಷ್ಟು ಸಮಯದಿಂದ ಅಭಿವೃದ್ಧಿಯಲ್ಲಿರುವುದನ್ನು ಗಮನಿಸಿದರೆ ಈ ಹೇಳಿಕೆಯನ್ನು ಸಂಪೂರ್ಣವಾಗಿ ನಂಬುವುದು ಕಷ್ಟ ಎಂಬ ಅಭಿಪ್ರಾಯವೂ ಇದೆ.

ಈ ತಂತ್ರಜ್ಞಾನದ ಬಗೆಗಿನ ಹೆಚ್ಚಿನ ವಿವರಗಳು ಯೂನಿಫೈಡ್ ಎಕ್ಸ್‌ಟೆನ್ಸಿಬಲ್ ಫರ್ಮ್‌ವೇರ್ ಇಂಟರ್‌ಫೇಸ್ ಫೋರಂನ ಜಾಲತಾಣದಲ್ಲಿ ಲಭ್ಯವಿವೆ.

ನವೆಂಬರ್ ೨, ೨೦೧೦ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಮಂಗಳವಾರ, ಅಕ್ಟೋಬರ್ 26, 2010

ವರ್ಮಾಘಾತ!

ಟಿ ಜಿ ಶ್ರೀನಿಧಿ

ಆರ್ಕುಟ್ ಡಾಟ್ ಕಾಮ್ - ವಿಶ್ವವ್ಯಾಪಿ ಜಾಲದಲ್ಲಿ ಗೆಳೆಯರೊಡನೆ ಸಂಪರ್ಕದಲ್ಲಿರಲು ಅನುವುಮಾಡಿಕೊಡುವ ತಾಣಗಳಲ್ಲೊಂದು; ವಿಶ್ವವೆಲ್ಲ ಫೇಸ್‌ಬುಕ್ ಜಪ ಮಾಡುತ್ತಿರುವಾಗಲೂ ಭಾರತ ಹಾಗೂ ಬ್ರೆಜಿಲ್‌ನಂತಹ ದೇಶಗಳಲ್ಲಿ ಸಾಕಷ್ಟು ಜನಪ್ರಿಯವಾಗಿರುವ ಸಾಮಾಜಿಕ ಜಾಲತಾಣ. ಈಚೆಗೊಂದು ದಿನ ಈ ತಾಣದಲ್ಲೆಲ್ಲ 'ಬಾಮ್ ಸಬಾಡೋ'ದೇ ಸುದ್ದಿ; ಎರಡು ಪದಗಳ ಈ ಸಂದೇಶವನ್ನು ಕಂಡ ಬಳಕೆದಾರರೆಲ್ಲ ಬೆಚ್ಚಿಬೀಳುವ ಪರಿಸ್ಥಿತಿ.

ಬಾಮ್ ಸಬಾಡೋ ಅಂದರೆ ಪೋರ್ಚುಗೀಸ್ ಭಾಷೆಯಲ್ಲಿ ಶುಭ ಶನಿವಾರ ಎಂದರ್ಥ. ಆರ್ಕುಟ್ ಬಳಕೆದಾರರ ಸ್ಕ್ರಾಪ್‌ಬುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಸಂದೇಶ ಅವರ ಗೆಳೆಯರ ಹೆಸರಿನಲ್ಲೇ ಬಂದಿರುತ್ತಿತ್ತು; ಅಷ್ಟೇ ಅಲ್ಲ, ಅದರಲ್ಲೊಂದು ಕೊಂಡಿ (ಹೈಪರ್‌ಲಿಂಕ್) ಕೂಡ ಇರುತ್ತಿತ್ತು. ಅಪ್ಪಿತಪ್ಪಿ ಅದರ ಮೇಲೇನಾದರೂ ಕ್ಲಿಕ್ ಮಾಡಿದ್ದೇ ಆದರೆ ಆ ಸಂದೇಶ ಅವರ ಮಿತ್ರರೆಲ್ಲರ ಸ್ಕ್ರಾಪ್‌ಬುಕ್‌ಗೂ ತಲುಪುತ್ತಿತ್ತು. ಜೊತೆಗೆ ಬಳಕೆದಾರರ ಖಾತೆಗೆ ಯಾವ್ಯಾವುದೋ ಕಮ್ಯೂನಿಟಿಗಳು ತನ್ನಷ್ಟಕ್ಕೇ ಸೇರಿಕೊಳ್ಳುತ್ತಿದ್ದವು. ಈ ಸಂದೇಶ ಪಡೆದ ಮಿತ್ರರ ಖಾತೆಯಲ್ಲೂ ಇದೇ ಘಟನಾವಳಿ ರಿಪೀಟ್. ಕೆಲವೇ ಗಂಟೆಗಳಲ್ಲಿ ಇದರ ಹಾವಳಿ ತಡೆಯಲಾರದೆ ಇಡೀ ಆರ್ಕುಟ್ ತಾಣ ಅಲ್ಲಾಡಿಹೋಗಿತ್ತು.

ಇಷ್ಟೆಲ್ಲ ಹಾವಳಿ ಮಾಡಿದ ಬಾಮ್ ಸಬಾಡೋ ಒಂದು ವರ್ಮ್, ಕಂಪ್ಯೂಟರ್‌ಗಳನ್ನು ಕಾಡುವ ಕುತಂತ್ರಾಂಶಗಳಲ್ಲೊಂದು.

ಗಣಕದಲ್ಲಿರುವ ಮಾಹಿತಿಯನ್ನು ಅಳಿಸಿಹಾಕುವುದು, ತಂತ್ರಾಂಶಗಳು ಕೆಲಸಮಾಡದಂತೆ ಮಾಡುವುದು, ಕಡತಗಳನ್ನು ತೆರೆಯಲಾಗದಂತೆ ಮಾಡಿ ಅವುಗಳಲ್ಲಿರುವ ಮಾಹಿತಿ ನಮಗೆ ಸಿಗದಂತೆ ಮಾಡುವುದು, ಅಂತರ್ಜಾಲದ ಸಂಪನ್ಮೂಲಗಳನ್ನು ಸುಖಾಸುಮ್ಮನೆ ಬಳಸಿಕೊಂಡು ನಿಜವಾದ ಬಳಕೆದಾರರಿಗೆ ತೊಂದರೆ ಉಂಟುಮಾಡುವುದು - ಹೀಗೆ ನೂರೆಂಟು ಬಗೆಯಲ್ಲಿ ತೊಂದರೆಕೊಡುವ ದುರುದ್ದೇಶಪೂರಿತ ತಂತ್ರಾಂಶಗಳನ್ನು ಮಾಲ್‌ವೇರ್‌ಗಳೆಂದು ಕರೆಯುತ್ತಾರೆ.

ವರ್ಮ್‌ಗಳು ಈ ಮಾಲ್‌ವೇರ್‌ನ ಒಂದು ವಿಧ. ಈ ತಂತ್ರಾಂಶಗಳು ಗಣಕ ಜಾಲಗಳ ಮೂಲಕ ಹರಡುತ್ತ ಹೋಗಿ ಗಣಕಗಳ ನಡುವಿನ ಮಾಹಿತಿ ಸಂಚಾರಕ್ಕೆ ತಡೆಯೊಡ್ಡುತ್ತವೆ. ವೆಬ್‌ಸರ್ವರ್‌ಗಳ ಮೇಲೆ ದಾಳಿಮಾಡಿ ಅಲ್ಲಿ ಶೇಖರವಾಗಿರುವ ಜಾಲತಾಣದ ಪುಟಗಳನ್ನು ವಿರೂಪಗೊಳಿಸುವ ಉದ್ದೇಶ ಕೂಡ ಕೆಲ ವರ್ಮ್‌ಗಳಿಗಿರುತ್ತದೆ. ಒಂದೇ ಸಮಯದಲ್ಲಿ ಒಂದೇ ಜಾಲತಾಣಕ್ಕೆ ಸಾವಿರಾರು ಗಣಕಗಳಿಂದ ಮಾಹಿತಿಗಾಗಿ ಕೋರಿಕೆ ಕಳುಹಿಸಿ ಆ ತಾಣವನ್ನು ನಿಷ್ಕ್ರಿಯಗೊಳಿಸುವ ಕಾನ್ಸರ್ಟೆಡ್ ಅಟ್ಯಾಕ್‌ಗಳೆಂಬ ದಾಳಿ ನಡೆಸುವುದು ಕೂಡ ವರ್ಮ್‌ಗಳ ಉದ್ದೇಶವಾಗಿರುವುದು ಸಾಧ್ಯ.

ಇನ್ನು ಬಾಮ್ ಸಬಾಡೋನಂತಹ ವರ್ಮ್‌ಗಳು ಜಾಲತಾಣಗಳಲ್ಲಿರುವ ಸುರಕ್ಷತಾ ದೌರ್ಬಲ್ಯಗಳನ್ನು ದುರುಪಯೋಗಪಡಿಸಿಕೊತ್ತವೆ. ಸಾಮಾನ್ಯ ಕೊಂಡಿಯಂತೆಯೇ ಕಾಣುವ ಹೈಪರ್‌ಲಿಂಕ್ ಮೇಲೆ ಕ್ಲಿಕ್ಕಿಸಿದಾಗ ಬೇರೊಂದು ದುರುದ್ದೇಶಪೂರಿತ ತಾಣಕ್ಕೆ ಕೊಂಡೊಯ್ಯುವುದು, ಬಳಕೆದಾರರ ಖಾಸಗಿ ಮಾಹಿತಿ ಕದಿಯುವುದು ಇವೆಲ್ಲ ಈ 'ಕ್ರಾಸ್-ಸೈಟ್ ಸ್ಕ್ರಿಪ್ಟಿಂಗ್' ವರ್ಮ್‌ಗಳ ಕೆಲಸ. ಆರ್ಕುಟ್ ಮಾತ್ರವಲ್ಲದೆ ಫೇಸ್‌ಬುಕ್, ಟ್ವಿಟರ್ ಮುಂತಾದ ಹಲವಾರು ಸಾಮಾಜಿಕ ಜಾಲತಾಣಗಳು ಈಗಾಗಲೇ ಈ ವರ್ಮ್‌ಗಳಿಂದ ತೊಂದರೆ ಅನುಭವಿಸಿವೆ.

ಈವರೆಗೆ ವರ್ಮ್‌ಗಳ ಹಾವಳಿ ಕೇವಲ ವೈಯುಕ್ತಿಕ ಗಣಕ ಅಥವಾ ಪರ್ಸನಲ್ ಕಂಪ್ಯೂಟರ್‌ಗಳಿಗೆ ಮಾತ್ರ ಸೀಮಿತವಾಗಿತ್ತು. ಸಿಡಿ, ಪೆನ್‌ಡ್ರೈವ್ ಮೂಲಕವೋ ವಿಶ್ವವ್ಯಾಪಿ ಜಾಲದಲ್ಲೋ ಹರಡುವ ಇಂತಹ ವರ್ಮ್‌ಗಳಿಂದ ಉಂಟಾಗುವ ತೊಂದರೆ ದೊಡ್ಡಪ್ರಮಾಣದ್ದೇ ಆದರೂ ಅವುಗಳಿಂದ ಪಾರಾಗುವ ವಿಧಾನ ಸುಲಭ. ವೈರಸ್ ವಿರೋಧಿ ತಂತ್ರಾಂಶಗಳ (ಆಂಟಿ ವೈರಸ್) ಬಳಕೆ, ಅಪರಿಚಿತ ಜಾಲತಾಣಗಳಿಂದ ತಂತ್ರಾಂಶಗಳನ್ನು ಡೌನ್‌ಲೋಡ್ ಮಾಡದಿರುವುದು, ಸಂಶಯಾಸ್ಪದ ಇಮೇಲ್‌ಗಳನ್ನು ತೆರೆಯದಿರುವುದು, ಸಿಕ್ಕಸಿಕ್ಕ ಹೈಪರ್‌ಲಿಂಕ್‌ಗಳ ಮೇಲೆಲ್ಲ ಕ್ಲಿಕ್ ಮಾಡದಿರುವುದು ಮುಂತಾದ ಕೆಲ ಸರಳ ಕ್ರಮಗಳನ್ನು ಪಾಲಿಸುವುದರಿಂದ ವರ್ಮ್‌ಗಳನ್ನು ದೂರವಿಡುವುದು ಸಾಧ್ಯ.

ಆದರೆ ಇದೀಗ ವರ್ಮ್‌ಗಳ ವ್ಯಾಪ್ತಿ ನಮ್ಮ ನಿಮ್ಮ ಗಣಕಗಳಿಂದಾಚೆಗೆ ಬೆಳೆಯುತ್ತಿದೆ. ಸಂಶೋಧನಾ ಸಂಸ್ಥೆಗಳು, ವಿದ್ಯುತ್ ಉತ್ಪಾದನಾ ಘಟಕಗಳು, ಅಣುಶಕ್ತಿ ಕೇಂದ್ರಗಳು, ಕಾರ್ಖಾನೆಗಳು ಮುಂತಾದ ಕಡೆ ಪ್ರಮುಖ ಚಟುವಟಿಕೆಗಳಲ್ಲಿ ಬಳಕೆಯಾಗುವ ಗಣಕೀಕೃತ ಯಂತ್ರೋಪಕರಣಗಳನ್ನು ಬಾಧಿಸುವ ಸ್ಟಕ್ಸ್‌ನೆಟ್ ಎಂಬ ಕಂಪ್ಯೂಟರ್ ವರ್ಮ್ ಇತ್ತೀಚೆಗೆ ಬೆಳಕಿಗೆ ಬಂದಿದೆ.

ಔದ್ಯಮಿಕ ಕೇಂದ್ರಗಳನ್ನೇ ಗುರಿಯಾಗಿಸಿಕೊಂಡ ಇಂತಹ ವರ್ಮ್‌ಗಳನ್ನು ಸೈಬರ್ ಬ್ರಹ್ಮಾಸ್ತ್ರಗಳೆಂದು ಕರೆಯಬಹುದು. ದೇಶದ ಅತ್ಯಂತ ಮಹತ್ವದ ಕೇಂದ್ರಗಳ ಚಟುವಟಿಕೆಯನ್ನೇ ಹಾಳುಗೆಡವಬಲ್ಲ ಇಂತಹ ವರ್ಮ್‌ಗಳಿಂದ ಉಂಟಾಗಬಹುದಾದ ತೊಂದರೆ ಅಗಾಧ ಪ್ರಮಾಣದ್ದು. ಅತ್ಯುನ್ನತ ಮಟ್ಟದ ತಾಂತ್ರಿಕತೆ ಬಳಸುವ ಈ ಬಗೆಯ ವರ್ಮ್‌ಗಳನ್ನು ವೈರಿದೇಶಗಳು ತಮ್ಮ ಶತ್ರುಗಳಿಗೆ ತೊಂದರೆಕೊಡಲು ಬಳಸುತ್ತಿವೆ ಎಂದು ನಂಬಲಾಗಿದೆ.

ಸ್ಟಕ್ಸ್‌ನೆಟ್ ಹಾವಳಿಯ ಬಗೆಗೆ ಮೊದಲ ಗಂಭೀರ ಸುದ್ದಿ ಬಂದದ್ದು ಇರಾನ್ ದೇಶದಿಂದ. ಅಲ್ಲಿನ ಅಣುಶಕ್ತಿ ಕೇಂದ್ರವೊಂದರ ಯಂತ್ರೋಪಕರಣಗಳು ಈ ವರ್ಮ್‌ನಿಂದ ಬಾಧಿತವಾಗಿರುವ ಸಮಾಚಾರ ವಿಶ್ವದೆಲ್ಲೆಡೆ ಗಾಬರಿ ಮೂಡಿಸಿದೆ. ಇರಾನ್ ಮಾತ್ರವಲ್ಲದೆ ಚೀನಾ, ಇಂಡೋನೇಶಿಯಾ ಮೊದಲಾದೆಡೆಗಳಲ್ಲೂ ಈ ವರ್ಮ್ ಹರಡುತ್ತಿದೆಯಂತೆ.

ಭಾರತದಲ್ಲೂ ಈ ವರ್ಮ್ ಹಾವಳಿ ಕಾಣಿಸಿಕೊಂಡಿದೆ ಎಂದು ಗಣಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ಜುಲೈನಲ್ಲಿ ಇದ್ದಕ್ಕಿದ್ದಂತೆ ತೊಂದರೆಗೀಡಾಗಿ ಈಗ ಭಾಗಶಃ ನಿಷ್ಕ್ರಿಯವಾಗಿರುವ ಇನ್‌ಸ್ಯಾಟ್-೪ಬಿ ಉಪಗ್ರಹದ ವೈಫಲ್ಯಕ್ಕೆ ಇದೇ ವರ್ಮ್ ಕಾರಣವಿರಬಹುದು ಎಂದು ಜೆಫ್ರಿ ಕಾರ್ ಎಂಬ ತಜ್ಞ ಹೇಳಿದ್ದಾನೆ. ಈ ಉಪಗ್ರಹದ ವೈಫಲ್ಯದಿಂದಾಗಿ ಭಾರತದ ಎರಡು ಪ್ರಮುಖ ಡಿಟಿಎಚ್ ಸಂಸ್ಥೆಗಳು ಚೀನಾದೇಶದ ಉಪಗ್ರಹವೊಂದರ ಸೇವೆಯನ್ನು ಕೊಳ್ಳಬೇಕಾಯಿತು. ಬಾಹ್ಯಾಕಾಶ ವಿಜ್ಞಾನದಲ್ಲಿ ಹೆಚ್ಚುಹೆಚ್ಚಿನ ಸಾಧನೆ ಮಾಡಲು ಭಾರತ ಹಾಗೂ ಚೀನಾದ ನಡುವೆ ಏರ್ಪಟ್ಟಿರುವ ಸ್ಪರ್ಧೆಯ ಹಿನ್ನೆಲೆಯಲ್ಲಿ ಈ ಘಟನೆಯನ್ನು ಗಮನಿಸಿದರೆ ಸೈಬರ್ ಯುದ್ಧದ ಇನ್ನೂ ಕುತೂಹಲಕರ ಅಂಶಗಳು ಹೊರಬರಬಹುದೇನೋ!

ಅಕ್ಟೋಬರ್ ೨೬, ೨೦೧೦ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಗುರುವಾರ, ಅಕ್ಟೋಬರ್ 21, 2010

ಟಾಕಿನ್ ಎಂಬ ವಿಶಿಷ್ಟಜೀವಿ

ಟಿ ಜಿ ಶ್ರೀನಿಧಿ

"ಹದಿನೈದನೇ ಶತಮಾನದಲ್ಲಿ ಭೂತಾನಿನಲ್ಲೊಬ್ಬ ಸಂತನಿದ್ದನಂತೆ. ಆತ ಚಿತ್ರವಿಚಿತ್ರ ಪವಾಡಗಳನ್ನು ಮಾಡಬಲ್ಲ ಎಂಬ ನಂಬಿಕೆ ವ್ಯಾಪಕವಾಗಿತ್ತು. ಆತ ಎಲ್ಲಿಯೇ ಹೋದರೂ ಆತನ ಪವಾಡಗಳನ್ನು ನೋಡಲು ಜನರು ಮುಗಿಬೀಳುತ್ತಿದ್ದರು.

ಇಂಥದ್ದೇ ಒಂದು ಸಂದರ್ಭದಲ್ಲಿ ಆ ಸಂತನನ್ನು ಮುತ್ತಿಕೊಂಡ ಜನರು ತಮಗೇನಾದರೂ ಪವಾಡ ಮಾಡಿ ತೋರಿಸಿ ಅಂತ ದುಂಬಾಲುಬಿದ್ದರು. ಸರಿ ಅದಕ್ಕೇನಂತೆ ಅಂದ ಸಂತ ಮೊದಲು ನನಗೊಂದು ಮೇಕೆ ಮತ್ತೊಂದು ಹಸು ತಂದುಕೊಡಿ ಅಂದರು. ಓಹೋ ಇದೇನೋ ಭಾರೀ ಪವಾಡವೇ ಇರಬೇಕು ಅಂದುಕೊಂಡ ಜನ ಎಲ್ಲಿಂದಲೋ ಒಂದು ಹಸು, ಮೇಕೆ ಎರಡನ್ನೂ ಹಿಡಿದುಕೊಂಡು ಬಂದರೆ ಆ ಸಂತ ಎರಡನ್ನೂ ಹಿಡಿದು ತಿಂದೇಬಿಟ್ಟರು. ಮಿಕ್ಕಿದ್ದು ಬರಿಯ ಮೂಳೆ ಮಾತ್ರ.

ಜನರೆಲ್ಲ ಇದೊಳ್ಳೆ ಕಥೆಯಾಯಿತಲ್ಲ ಅಂದುಕೊಳ್ಳುತ್ತಿರುವಷ್ಟರಲ್ಲೇ ಹಸುವಿನ ದೇಹದ ಮೂಳೆಗಳಿಗೆ ಮೇಕೆಯ ತಲೆಬುರುಡೆ ಅಂಟಿಸಿದ ಸಂತ ಅದಕ್ಕೆ ಜೀವಕೊಟ್ಟರಂತೆ. ತಕ್ಷಣ ಮೇಲೆದ್ದ ಹಸುವಿನ ದೇಹ, ಮೇಕೆಯ ತಲೆಯ ಆ ವಿಚಿತ್ರ ಪ್ರಾಣಿ ಓಡಿಹೋಗಿ ಕಾಡುಸೇರಿತಂತೆ" - ಇದು ಟಾಕಿನ್ ಎಂಬ ವಿಚಿತ್ರಪ್ರಾಣಿ ಸೃಷ್ಟಿಯಾದ ಬಗೆಗೆ ಭೂತಾನಿನಲ್ಲಿ ಪ್ರಚಲಿತದಲ್ಲಿರುವ ಜಾನಪದ ಕತೆ.

ಹಸುವಿನ ದೇಹ, ಮೇಕೆಯ ತಲೆಯ ಟಾಕಿನ್ (Budorcas taxicolor) ಈ ಕಥೆಯಷ್ಟೇ ವಿಚಿತ್ರವಾಗಿರುವುದು ತಮಾಷೆಯ ಸಂಗತಿ. ಜೀವವಿಜ್ಞಾನಿಗಳಿಗೂ ಇದರ ವೈಚಿತ್ರ್ಯ ವಿಶೇಷವಾಗಿ ಕಾಣಿಸಿರುವುದರಿಂದ ಅವರೂ ಈ ಪ್ರಾಣಿಯನ್ನು ತನ್ನದೇ ಆದ ವಿಶೇಷ ಗುಂಪಿಗೆ ಸೇರಿಸಿಬಿಟ್ಟಿದ್ದಾರೆ. ಇನ್ನು ಭೂತಾನ್ ದೇಶವಂತೂ ಟಾಕಿನ್ ಅನ್ನು ತನ್ನ ರಾಷ್ಟ್ರೀಯ ಪ್ರಾಣಿಯಾಗಿ ಗುರುತಿಸಿದೆ.
ಹಿಮಾಲಯದ ಆಸುಪಾಸಿನ ಪ್ರದೇಶ ಹಾಗೂ ಚೀನಾದ ಪಶ್ಚಿಮ ಭಾಗಗಳು ಟಾಕಿನ್‌ಗಳ ನೆಲೆ. ನಾಲ್ಕುಸಾವಿರ ಅಡಿಗೂ ಎತ್ತರದ ಪರ್ವತಪ್ರದೇಶಗಳಲ್ಲಿ ಮಾತ್ರವೇ ಕಂಡುಬರುವ ಟಾಕಿನ್ ತನ್ನ ವಿಶಿಷ್ಟ ರೂಪ ಹಾಗೂ ದಟ್ಟ ತುಪ್ಪಳದಿಂದಾಗಿ ಗಮನಸೆಳೆಯುತ್ತದೆ. ಪರ್ವತ ಪ್ರದೇಶದಲ್ಲಿ ಚಳಿ ತೀವ್ರವಾದಾಗ ಮಾತ್ರ ಇವು ಕೆಳಗಿನ ಕಣಿವೆಗಳತ್ತ ವಲಸೆಹೋಗುತ್ತವೆ.

ಸುಮಾರು ನಾಲ್ಕು ಅಡಿಯಷ್ಟು ಎತ್ತರ ಹಾಗೂ ಐದಾರುನೂರು ಕೆಜಿ ತೂಕದವರೆಗೂ ಬೆಳೆಯುವ ಈ ಪ್ರಾಣಿ ಅಪ್ಪಟ ಸಸ್ಯಾಹಾರಿ. ಗಂಡು ಹೆಣ್ಣು ಎರಡರ ತಲೆ ಮೇಲೂ ಕೊಂಬು ನೋಡಬಹುದು. ತಮ್ಮ ನಿಲುಕಿಗೆ ಸಿಗಬಲ್ಲ ಯಾವುದೇ ಗಿಡ-ಮರದ ಸೊಪ್ಪು ಇವುಗಳ ಮುಖ್ಯ ಆಹಾರ. ಎಲೆಗಳು ಸುಲಭಕ್ಕೆ ನಿಲುಕದಿದ್ದರೆ ಎರಡು ಕಾಲುಗಳ ಮೇಲೆ ನಿಂತು ಅಥವಾ ಇನ್ನು ಕೆಲ ಸಂದರ್ಭಗಳಲ್ಲಿ ಗಿಡವನ್ನೇ ಬೀಳಿಸಿ ಮೇಯುವ ಅಭ್ಯಾಸ ಕೂಡ ಇದೆ.

ಹಗಲುಹೊತ್ತಿನಲ್ಲಿ ಚುರುಕಾಗಿರುವ ಈ ಪ್ರಾಣಿಗಳದು ಗುಂಪುಗಳಲ್ಲಿ ಮೇಯುವ ಅಭ್ಯಾಸ. ಒಂದೇ ಗುಂಪಿನಲ್ಲಿ ಮುನ್ನೂರು ಟಾಕಿನ್‌ಗಳನ್ನು ನೋಡಿರುವವರೂ ಇದ್ದಾರೆ. ಆದರೆ ವಯಸ್ಸಾದ ಗಂಡುಗಳು ಮಾತ್ರ ಒಬ್ಬಂಟಿಯಾಗಿರುತ್ತವೆ.

ಬೇಸಿಗೆಕಾಲ, ಟಾಕಿನ್‌ಗಳ ಸಂತಾನೋತ್ಪತ್ತಿಯ ಸಮಯ. ಏಳೆಂಟು ತಿಂಗಳ ನಂತರ ಹುಟ್ಟುವ ಮರಿ ಮೂರೇ ದಿನದಲ್ಲಿ ತಾಯಿಯೊಡನೆ ಸರಾಗವಾಗಿ ಓಡಾಡಲು ಕಲಿತುಬಿಡುತ್ತದೆ. ಹುಲಿಮರಿಯನ್ನು ಕಬ್ ಎಂದು ಕರೆಯುವಂತೆ ಟಾಕಿನ್ ಮರಿಯನ್ನು ಕಿಡ್ ಎನ್ನುತ್ತಾರೆ.

ಕರಡಿ, ಹಿಮಚಿರತೆ ಹಾಗೂ ತೋಳ ಟಾಕಿನ್‌ನನ್ನು ಕಾಡುವ ಪ್ರಮುಖ ಬೇಟೆಗಾರ ಪ್ರಾಣಿಗಳು. ಮಾನವ ಬೇಟೆಗಾರರ ಉಪಟಳವೂ ಇಲ್ಲದಿಲ್ಲ. ಜೊತೆಗೆ ಅರಣ್ಯಗಳಲ್ಲಿ ಮಾನವನ ಹಸ್ತಕ್ಷೇಪ ಹೆಚ್ಚುತ್ತಿರುವುದರಿಂದ ಇವುಗಳ ನೆಲೆ ದಿನೇದಿನೇ ಕ್ಷೀಣಿಸುತ್ತಿದೆ; ಮೇವಿಗಾಗಿ ಸಾಕುಪ್ರಾಣಿಗಳೊಡನೆ ಸ್ಪರ್ಧಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.  ಹೀಗಾಗಿ ಇವನ್ನು ಸಂರಕ್ಷಣಾ ದೃಷ್ಟಿಯಿಂದ ತೊಂದರೆಗೊಳಗಾಗಿರುವ ಪ್ರಭೇದ (ವಲ್ನರಬಲ್ ಸ್ಪೀಷೀಸ್) ಎಂದು ಗುರುತಿಸಲಾಗಿದೆ.

ನವೆಂಬರ್ ೨೦೧೦ರ ವಿಜ್ಞಾನ ಲೋಕದಲ್ಲಿ ಪ್ರಕಟವಾದ ಲೇಖನ
badge