ಸೋಮವಾರ, ಜೂನ್ 23, 2014

ವಿಜ್ಞಾನ ಬರಹಗಾರರ ಸಂದರ್ಶನ ಸರಣಿ


ಕನ್ನಡದ ವಿಜ್ಞಾನ - ತಂತ್ರಜ್ಞಾನ ಸಂವಹನಕಾರರು ಅವರ ಬರವಣಿಗೆಯ ಮೂಲಕ ಬಹಳಷ್ಟು ಓದುಗರಿಗೆ ಪರಿಚಿತರು. ಆದರೆ ವೈಯಕ್ತಿಕವಾಗಿ ಅವರ ಪರಿಚಯ ಬಹಳಷ್ಟು ಓದುಗರಿಗೆ ಇರುವುದಿಲ್ಲ. ಈ ಕೊರತೆ ಹೋಗಲಾಡಿಸುವ ದೃಷ್ಟಿಯಿಂದ ವಿಜ್ಞಾನ ಬರಹಗಾರರನ್ನು ಓದುಗರಿಗೆ ಪರಿಚಯಿಸುವ ಸಂದರ್ಶನ ಸರಣಿ ಇಜ್ಞಾನ ಡಾಟ್ ಕಾಮ್‌ನಲ್ಲಿ ಮೂಡಿಬರಲಿದೆ. ಶೀಘ್ರದಲ್ಲೇ!

ಯಾವ ಲೇಖಕರನ್ನು ಮಾತನಾಡಿಸಬೇಕು, ಅವರನ್ನು ಏನೆಲ್ಲ ಕೇಳಬೇಕು ಎನ್ನುವ ಕುರಿತು ನಿಮ್ಮ ಸಲಹೆಗಳಿಗೂ ಸ್ವಾಗತವಿದೆ.

ಸೋಮವಾರ, ಜೂನ್ 16, 2014

ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶಸ್ತಿ ಪ್ರದಾನ ಸಮಾರಂಭ

ಇಜ್ಞಾನ ವಾರ್ತೆ

ಡಾ. ಪಿ. ಎಸ್. ಶಂಕರ್
ಇಂದು (ಜೂನ್ ೧೬) ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿಯ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನಮಾಡಲಾಗುವುದು. ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹದ ಕಳೆದೆರಡು ಸಾಲಿನ ಪ್ರಶಸ್ತಿಗಳನ್ನೂ ಇದೇ ಸಂದರ್ಭದಲ್ಲಿ ನೀಡಲಾಗುತ್ತಿದೆ.

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿ ನೀಡುವ ಸರ್. ಎಂ. ವಿಶ್ವೇಶ್ವರಯ್ಯ ಪ್ರಶಸ್ತಿಗೆ ಹಿರಿಯ ವೈದ್ಯವಿಜ್ಞಾನಿ, ವಿಜ್ಞಾನ ಸಂವಹನಕಾರ ಡಾ. ಪಿ. ಎಸ್. ಶಂಕರ್ ಹಾಗೂ ಡಾ. ರಾಜಾರಾಮಣ್ಣ ಪ್ರಶಸ್ತಿಗೆ ಪ್ರೊ. ಕೆ. ಚಿದಾನಂದಗೌಡ ಭಾಜನರಾಗಿದ್ದಾರೆ. ಅವರಿಗೆ ಹಾಗೂ ಇಂದು ಪ್ರಶಸ್ತಿ ಸ್ವೀಕರಿಸುತ್ತಿರುವ ಇತರ ಎಲ್ಲರಿಗೂ ಇಜ್ಞಾನ ಡಾಟ್ ಕಾಮ್ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.

ಶುಕ್ರವಾರ, ಜೂನ್ 6, 2014

ಪ್ರೋಗ್ರಾಮ್ ಬರೆಯುವುದು ಹೇಗೆ?

ಟಿ. ಜಿ. ಶ್ರೀನಿಧಿ

ಕಂಪ್ಯೂಟರಿಗೆ ಯಾವ ಕೆಲಸ ಮಾಡುವಂತೆ ಹೇಳಬೇಕಾದರೂ ಅದಕ್ಕೊಂದು ಪ್ರೋಗ್ರಾಮ್ ಬರೆಯಬೇಕು ತಾನೆ? ಪ್ರೋಗ್ರಾಮ್ ಬರೆಯಲು ಹೊರಟಾಗ ಅದರಲ್ಲಿ ಏನೆಲ್ಲ ಇರಬೇಕು (ಉದಾ: ಎರಡು ಸಂಖ್ಯೆಗಳನ್ನು ಕೂಡಿಸು ಎನ್ನುವ ಆದೇಶ) ಹಾಗೂ ಅದೆಲ್ಲ ಯಾವ ಅನುಕ್ರಮದಲ್ಲಿರಬೇಕು (ಉದಾ: ಮೊದಲು ಎರಡು ಅಂಕಿಗಳನ್ನು ಓದು, ಅವನ್ನು ಕೂಡಿಸು, ಉತ್ತರವನ್ನು ಪ್ರದರ್ಶಿಸು) ಎನ್ನುವುದನ್ನು ತೀರ್ಮಾನಿಸುವುದು ಮೊದಲ ಕೆಲಸ.

ಈ ಕೆಲಸದಷ್ಟೇ ಮುಖ್ಯವಾದ ಇನ್ನೊಂದು ಕೆಲಸವೆಂದರೆ ಇದನ್ನೆಲ್ಲ ಕಂಪ್ಯೂಟರಿಗೆ ಅರ್ಥವಾಗುವಂತೆ ಹೇಳುವುದು. ಸಹಜವಾಗಿಯೇ, ಈ ಕೆಲಸಕ್ಕೆ ಬೇಕಿರುವುದು ಒಂದು ಭಾಷೆ. ನಮ್ಮ ಪ್ರಪಂಚದಲ್ಲಿ ಕನ್ನಡ ಇಂಗ್ಲಿಷ್‌ಗಳೆಲ್ಲ ಇರುವಂತೆ ಕಂಪ್ಯೂಟರಿನ ಲೋಕದಲ್ಲೂ ಒಂದಷ್ಟು ಭಾಷೆಗಳಿವೆ. ಪ್ರೋಗ್ರಾಮಿಂಗ್ ಭಾಷೆಗಳೆಂದು ಕರೆಯುವುದು ಇದನ್ನೇ.

ನಾವು ಹೇಳಿದ್ದೆಲ್ಲ ಕಂಪ್ಯೂಟರಿಗೆ ಅರ್ಥವಾಗಬೇಕಾದರೆ ಅದು ಇಂತಹ ಯಾವುದೋ ಒಂದು ಪ್ರೋಗ್ರಾಮಿಂಗ್ ಭಾಷೆಯಲ್ಲೇ ಇರಬೇಕು. ಬೇಸಿಕ್, ಸಿ, ಸಿ++, ಜಾವಾ... ಹೀಗೆ ಸಾಗುವ ಪ್ರೋಗ್ರಾಮಿಂಗ್ ಭಾಷೆಗಳ ಪಟ್ಟಿಯಲ್ಲಿ ಒಂದೊಂದು ಭಾಷೆ ಒಂದೊಂದು ಕೆಲಸಕ್ಕೆ ಅನುಕೂಲಕರ. ಕೆಲವು ಬಗೆಯ ಪ್ರೋಗ್ರಾಮುಗಳನ್ನು ಕೆಲ ಭಾಷೆಗಳಲ್ಲಿ ಬರೆಯುವುದು ಸುಲಭ. ವೈಯಕ್ತಿಕವಾಗಿಯೂ ಅಷ್ಟೆ, ಒಂದೊಂದು ಭಾಷೆ ಒಬ್ಬೊಬ್ಬರಿಗೆ ಇಷ್ಟ.

ಪ್ರೋಗ್ರಾಮ್ ಸೃಷ್ಟಿಗೆ ಎಲ್ಲವೂ ಸಜ್ಜಾದ ಮೇಲೆ ಇಂತಹ ಯಾವುದೋ ಒಂದು ಭಾಷೆಯನ್ನು ಆಯ್ದುಕೊಂಡು ನಾವು ಪ್ರೋಗ್ರಾಮನ್ನು ಬರೆಯಬಹುದು. ಆದರೆ ಈಗಿನ್ನೂ ಕಲಿಕೆಯ ಹಂತದಲ್ಲಿರುವ ನಮಗೆ ಯಾವ ಪ್ರೋಗ್ರಾಮಿಂಗ್ ಭಾಷೆಯೂ ಗೊತ್ತಿರದಿದ್ದರೆ ಏನು ಮಾಡುವುದು?

ಶುಕ್ರವಾರ, ಮೇ 30, 2014

ಇ-ಕಸ

ಟಿ. ಜಿ. ಶ್ರೀನಿಧಿ

ಈಚಿನ ಕೆಲ ವರ್ಷಗಳಲ್ಲಿ ಇಲೆಕ್ಟ್ರಾನಿಕ್ ಉತ್ಪನ್ನಗಳು ನಮ್ಮ ಬದುಕಿನ ಅವಿಭಾಜ್ಯ ಅಂಗಗಳೇ ಆಗಿಬಿಟ್ಟಿವೆ. ಅವು ನಮ್ಮ ಬದುಕಿನ ಮೇಲೆ ಬೀರುವ ಪ್ರಭಾವಕ್ಕೆ ಮಾರುಹೋಗಿರುವ ನಾವು ಪ್ರತಿಕ್ಷಣವೂ ಒಂದಲ್ಲ ಒಂದು ಇಲೆಕ್ಟ್ರಾನಿಕ್ ಉತ್ಪನ್ನವನ್ನು - ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ - ಬಳಸುತ್ತಿರುತ್ತೇವೆ.

ಇಲೆಕ್ಟ್ರಾನಿಕ್ ಉತ್ಪನ್ನಗಳ ಜಗತ್ತಿನಲ್ಲಿ ಬದಲಾವಣೆಯೂ ಬಹು ಕ್ಷಿಪ್ರ. ಈ ವೇಗಕ್ಕೆ ಹೊಂದಿಕೊಳ್ಳಲು ನಾವೂ ಹೊಸಹೊಸ ಉಪಕರಣಗಳ ಹಿಂದೆಬೀಳುತ್ತೇವೆ, ಬಳಸಿ ಹಳೆಯದಾದದ್ದನ್ನು ಹೊರಗೆಸೆಯುತ್ತೇವೆ.

ಈ ಪ್ರಕ್ರಿಯೆಯಲ್ಲಿ ಪರಿಸರದ ಮೇಲೆ ಭಾರೀ ದುಷ್ಪರಿಣಾಮವನ್ನೂ ಉಂಟುಮಾಡುತ್ತೇವೆ!

ನಿಜ, ಮನೆಯಿಂದಾಚೆ ಹೋಗುವ ಇಲೆಕ್ಟ್ರಾನಿಕ್ ಉತ್ಪನ್ನಗಳು ಮುಂದೆ ಏನಾಗುತ್ತವೆ ಎನ್ನುವುದರ ಬಗ್ಗೆ ನಾವು ಯಾರೂ ತಲೆಕೆಡಿಸಿಕೊಳ್ಳುವುದೇ ಇಲ್ಲ. ನನ್ನ-ನಿಮ್ಮಂತಹ ಸಾಮಾನ್ಯರಷ್ಟೇ ಅಲ್ಲ, ಇಂತಹ ಉಪಕರಣಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಸುವ-ಬಿಸಾಡುವ ಸಂಸ್ಥೆಗಳೂ ಈ ಬಗ್ಗೆ ವಹಿಸುವ ಕಾಳಜಿ ಅಷ್ಟಕ್ಕಷ್ಟೇ.

ಹೀಗಾಗಿಯೇ ಇಂತಹ ಹಳೆಯ, ನಿರುಪಯುಕ್ತ ಇಲೆಕ್ಟ್ರಾನಿಕ್ ಉತ್ಪನ್ನಗಳು ಈಗೊಂದು ದೊಡ್ಡ ಸಮಸ್ಯೆಯಾಗಿ ಬೆಳೆದುನಿಂತಿವೆ: ಅನೇಕರ ಆರೋಗ್ಯ ಹಾಳುಮಾಡುತ್ತಿವೆ, ನಮ್ಮ ಭೂಮಿಗೇ ದೊಡ್ಡದೊಂದು ತಲೆನೋವು ತಂದಿಟ್ಟಿವೆ.

ಸೋಮವಾರ, ಮೇ 26, 2014

ಆನ್‌ಲೈನ್ ಶಾಪಿಂಗ್‌ನ ಹಿಂದೆಮುಂದೆ

ಟಿ. ಜಿ. ಶ್ರೀನಿಧಿ


ಪುಸ್ತಕ-ಪೆನ್‌ಡ್ರೈವ್‌ಗಳಿಂದ ಪ್ರಾರಂಭಿಸಿ ಸೋಪು-ಪೌಡರ್-ಶಾಂಪೂಗಳವರೆಗೆ, ಚಪ್ಪಲಿ-ಟೀಶರ್ಟ್-ಕೂಲಿಂಗ್ ಗ್ಲಾಸ್‌ನಿಂದ ಟೀವಿ-ಕಂಪ್ಯೂಟರುಗಳವರೆಗೆ ಸಮಸ್ತವನ್ನೂ ನಮ್ಮ ಕಂಪ್ಯೂಟರಿನ ಮುಂದೆಯೇ ಕುಳಿತು ಖರೀದಿಸುವುದನ್ನು ಸಾಧ್ಯವಾಗಿಸಿದ್ದು ಆನ್‌ಲೈನ್ ಶಾಪಿಂಗ್ ಎಂಬ ಪರಿಕಲ್ಪನೆ.

ತೊಂಬತ್ತರ ದಶಕದ ಕೊನೆಯ ವೇಳೆಗೆ ಡಾಟ್‌ಕಾಂ ಗಾಳಿ ಜೋರಾಗಿ ಬೀಸುತ್ತಿದ್ದ ಕಾಲದಲ್ಲಿ ರೂಪುಗೊಂಡ ಮಹತ್ವಾಕಾಂಕ್ಷಿ ಕಲ್ಪನೆ ಇದು. ಹೊಸದಾಗಿ ವ್ಯಾಪಾರಕ್ಕಿಳಿದಿರುವ ಸ್ಟಾರ್ಟ್‌ಅಪ್‌ಗಳಷ್ಟೇ ಅಲ್ಲದೆ ದೊಡ್ಡದೊಡ್ಡ ಸಂಸ್ಥೆಗಳೂ ಆನ್‌ಲೈನ್ ಶಾಪಿಂಗ್ ಕ್ಷೇತ್ರದತ್ತ ಮುಖಮಾಡಿರುವುದನ್ನು ನಾವಿಂದು ವ್ಯಾಪಕವಾಗಿ ಕಾಣಬಹುದು.

ಪ್ರಸ್ತುತ ನಮ್ಮ ದೇಶದಲ್ಲಿ ಹತ್ತು ಕೋಟಿಗಿಂತ ಹೆಚ್ಚಿನ ಅಂತರಜಾಲ ಬಳಕೆದಾರರಿದ್ದಾರೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಈ ಸಂಖ್ಯೆ ಬೆಳೆಯುತ್ತಿದ್ದಂತೆಯೇ ಆನ್‌ಲೈನ್ ಶಾಪಿಂಗ್‌ನತ್ತ ಆಸಕ್ತಿಯೂ ಹೆಚ್ಚುತ್ತಿದೆ. ಮಹಾನಗರಗಳಷ್ಟೇ ಅಲ್ಲ, ಸಣ್ಣ ಪಟ್ಟಣಗಳ ನಿವಾಸಿಗಳೂ ತಮ್ಮ ಖರೀದಿಗಳಿಗಾಗಿ ಅಂತರಜಾಲದತ್ತ ಮುಖಮಾಡುತ್ತಿದ್ದಾರೆ.

ಮಂಗಳವಾರ, ಮೇ 20, 2014

ನಿಮಗೂ ಒಂದು ವೆಬ್‌ಸೈಟ್ ಬೇಕೆ?

ಟಿ. ಜಿ. ಶ್ರೀನಿಧಿ

ವಿಶ್ವವ್ಯಾಪಿ ಜಾಲ (WWW) ಎಂದಾಕ್ಷಣ ಒಂದಲ್ಲ ಒಂದು ಜಾಲತಾಣದ (ವೆಬ್‌ಸೈಟ್) ಚಿತ್ರ ನಮ್ಮ ಕಣ್ಮುಂದೆ ಬರುತ್ತದೆ. ವಿಶ್ವವ್ಯಾಪಿ ಜಾಲಕ್ಕೂ ಜಾಲತಾಣಗಳಿಗೂ ಇರುವ ಸಂಬಂಧ ಅಂತಹುದು. ವಿಶ್ವವ್ಯಾಪಿ ಜಾಲದಲ್ಲಿರುವ ಮಾಹಿತಿಯೆಲ್ಲ ನಮಗೆ ದೊರಕುವುದು ಜಾಲತಾಣಗಳ ಮೂಲಕವೇ ತಾನೆ!

ಬೇರೆಯವರು ರೂಪಿಸಿದ ಜಾಲತಾಣಗಳನ್ನು ನೋಡುವಾಗ ನಾವೂ ಒಂದು ಜಾಲತಾಣ ರೂಪಿಸಿಕೊಂಡರೆ ಹೇಗೆ ಎನ್ನಿಸುವುದು ಸಹಜ. ನಮ್ಮ ವ್ಯಾಪಾರ-ವಹಿವಾಟುಗಳ ಜಾಹೀರಾತಿಗೆ, ಉದ್ದಿಮೆಯ ಅಭಿವೃದ್ಧಿಗೆ, ಅನಿಸಿಕೆ-ಅಭಿಪ್ರಾಯಗಳ ವಿನಿಮಯಕ್ಕೆ, ಹವ್ಯಾಸದ ಬೆಳವಣಿಗೆಗೆ ನಮ್ಮದೇ ಆದ ಜಾಲತಾಣ ಖಂಡಿತಾ ನೆರವಾಗಬಲ್ಲದು; ಹೊಸ ಅವಕಾಶಗಳ ಬಾಗಿಲನ್ನೂ ತೆರೆಯಬಲ್ಲದು.

ಹಾಗಾದರೆ ನಮ್ಮದೇ ಜಾಲತಾಣವನ್ನು ರೂಪಿಸಿಕೊಳ್ಳುವುದು ಹೇಗೆ?

ನಮ್ಮದೇ ಆದ ಜಾಲತಾಣವೊಂದನ್ನು ರೂಪಿಸಿಕೊಳ್ಳಲು ಹೊರಡುವವರ ಮುಂದೆ ಎರಡು ಆಯ್ಕೆಗಳಿರುತ್ತವೆ: ದುಡ್ಡು ಕೊಟ್ಟು ತಮ್ಮದೇ ಆದ ಯುಆರ್‌ಎಲ್ ಒಂದನ್ನು ಪಡೆದುಕೊಳ್ಳುವುದು, ಅಥವಾ ಉಚಿತ ಜಾಲತಾಣಗಳನ್ನು ಒದಗಿಸುವ ಸಂಸ್ಥೆಗಳ ಸೇವೆಯನ್ನು ಪಡೆದುಕೊಳ್ಳುವುದು.

www.ejnana.com, www.srinidhi.net.in ಮೊದಲಾದ ನಿಮ್ಮದೇ ಸ್ವಂತ ಡೊಮೈನ್ ಬೇಕು ಎನ್ನುವುದಾದರೆ ಮೊದಲಿಗೆ ನಿಮ್ಮ ಆಯ್ಕೆಯ ವಿಳಾಸಕ್ಕಾಗಿ (ಯುಆರ್‌ಎಲ್) ವಾರ್ಷಿಕ ಬಾಡಿಗೆ ನೀಡಬೇಕಾಗುತ್ತದೆ.

ಯುಆರ್‌ಎಲ್‌ಗಳನ್ನು ಒದಗಿಸುವ ಹಾಗೂ ಡೊಮೈನ್ ನೇಮ್ ಸರ್ವರ್‌ಗಳನ್ನು ನಿಭಾಯಿಸುವ ಕೆಲಸ ಮಾಡುವ ಸಂಸ್ಥೆಗಳಿಗೆ ರಿಜಿಸ್ಟ್ರಾರ್‌ಗಳೆಂದು ಹೆಸರು.

ಶುಕ್ರವಾರ, ಮೇ 9, 2014

ಪರ್‌ಫಾರ್ಮೆನ್ಸ್ ಇಂಜಿನಿಯರಿಂಗ್

ಟಿ. ಜಿ. ಶ್ರೀನಿಧಿ

ಯಾವುದೇ ತಂತ್ರಾಂಶದ ಉದ್ದೇಶವೇನು ಎಂದು ಕೇಳಿದರೆ "ಆ ತಂತ್ರಾಂಶವನ್ನು ಯಾವ ಕೆಲಸಕ್ಕೆಂದು ತಯಾರಿಸಲಾಗಿದೆಯೋ ಆ ಕೆಲಸವನ್ನು ಮಾಡುವುದು" ಎನ್ನಬಹುದೆ?

ಈ ಪ್ರಶ್ನೆಗೆ ಉತ್ತರವಾಗಿ "ಹೌದು ಮತ್ತು ಇಲ್ಲ" ಎಂದು ಹೇಳಬಹುದು. "ಹೌದು" ಏಕೆಂದರೆ ತಂತ್ರಾಂಶವನ್ನು ಯಾವ ಕೆಲಸಕ್ಕೆಂದು ತಯಾರಿಸಲಾಗಿದೆಯೋ ಆ ಕೆಲಸವನ್ನು ಮಾಡುವುದು ಅದರ ಮುಖ್ಯ ಉದ್ದೇಶ. "ಇಲ್ಲ" ಏಕೆಂದರೆ ತಂತ್ರಾಂಶದ ಉದ್ದೇಶ ಇಷ್ಟು ಮಾತ್ರವೇ ಅಲ್ಲ.

ಹಾಗಾದರೆ ತಂತ್ರಾಂಶಗಳು ಇನ್ನೇನೆಲ್ಲ ಮಾಡಬೇಕು?

ಒಂದು ಉದಾಹರಣೆ ನೋಡೋಣ. ನಿಮ್ಮ ಖಾತೆಯಲ್ಲಿ ಹಣವಿದೆಯೋ ಇಲ್ಲವೋ ಪರಿಶೀಲಿಸಿ, ನೀವು ಕೇಳಿದಷ್ಟು ಹಣ ಇದ್ದರೆ ಅದನ್ನು ನಿಮಗೆ ಕೊಟ್ಟು ನಿಮ್ಮ ಖಾತೆಯಿಂದ ಅಷ್ಟು ಮೊತ್ತವನ್ನು ಕಳೆಯುವುದು ಬ್ಯಾಂಕಿನ ಎಟಿಎಂನಲ್ಲಿರುವ ತಂತ್ರಾಂಶದ ಕೆಲಸ ನಿಜ. ಆದರೆ ಇದಿಷ್ಟು ಕೆಲಸವನ್ನು ಮುಗಿಸಲು ಆ ತಂತ್ರಾಂಶ ಮೂವತ್ತು ಸೆಕೆಂಡಿನ ಬದಲು ಮೂವತ್ತು ನಿಮಿಷ ತೆಗೆದುಕೊಂಡರೆ? ನಿಮ್ಮ ಪಿನ್ ಸಂಖ್ಯೆ ತಪ್ಪು ಎಂದು ಹೇಳಲು ಐದು ನಿಮಿಷ ಕಾಯಿಸಿದರೆ?

ಮೂವತ್ತು ಸೆಕೆಂಡೋ ಮೂವತ್ತು ನಿಮಿಷವೋ, ಅದು ಮಾಡಬೇಕಾದ ಕೆಲಸ ಮಾಡುತ್ತಿದೆಯಲ್ಲ ಎನ್ನಲು ಸಾಧ್ಯವೇ?

ಶುಕ್ರವಾರ, ಮೇ 2, 2014

ಕಪ್ಪು ಚೌಕಗಳ ಕ್ಯೂಆರ್ ಕೋಡ್

ಟಿ. ಜಿ. ಶ್ರೀನಿಧಿ

ಈಚೆಗೆ ಅನೇಕ ಜಾಹೀರಾತುಗಳಲ್ಲಿ, ಜಾಲತಾಣಗಳಲ್ಲಿ ನಮಗೊಂದು ವಿಶೇಷ ಅಂಶ ಕಾಣಸಿಗುತ್ತದೆ: ಹೆಚ್ಚಿನ ಮಾಹಿತಿಗಾಗಿ ಈ ಸಂಕೇತವನ್ನು ಸ್ಕ್ಯಾನ್ ಮಾಡಿ ಎನ್ನುವ ಸಂದೇಶದ ಜೊತೆಗೆ ಅಲ್ಲೊಂದು ಚಿತ್ರವಿಚಿತ್ರ ವಿನ್ಯಾಸದ ಕಪ್ಪನೆಯ ಚೌಕ ಇರುತ್ತದೆ. ಇಜ್ಞಾನ ಡಾಟ್ ಕಾಮ್‌ನಲ್ಲೇ ನೋಡಿ, ಪುಟದ ಬಲಭಾಗದಲ್ಲಿ "ನಿಮ್ಮ ಆಂಡ್ರಾಯ್ಡ್ ಮೊಬೈಲ್ ಅಥವಾ ಟ್ಯಾಬ್ಲೆಟ್‌ನಲ್ಲಿ ಇಜ್ಞಾನ ಆಪ್ ಇನ್‌ಸ್ಟಾಲ್ ಮಾಡಲು ಮೇಲಿನ ಕೋಡ್ ಸ್ಕ್ಯಾನ್ ಮಾಡಿ!" ಎನ್ನುವ ಸಂದೇಶ ಇದೆ!

ಅರೆ, ಇದೆಂತಹ ಸಂಕೇತ? ಇದನ್ನು ಸ್ಕ್ಯಾನ್ ಮಾಡುವುದು ಹೇಗೆ? ಸ್ಕ್ಯಾನ್ ಮಾಡಿದಾಗ ಏನಾಗುತ್ತದೆ? ಎನ್ನುವ ಪ್ರಶ್ನೆ ನಮ್ಮಲ್ಲಿ ಅನೇಕರನ್ನು ಕಾಡಿರಬಹುದು.

ಈ ಸಂಕೇತದ ಹೆಸರು ಕ್ಯೂಆರ್ ಕೋಡ್ ಎಂದು. ಇಲ್ಲಿ ಕ್ಯೂಆರ್ ಎನ್ನುವುದು 'ಕ್ವಿಕ್ ರೆಸ್ಪಾನ್ಸ್' ಎಂಬ ಹೆಸರಿನ ಹ್ರಸ್ವರೂಪ. ಅಂಗಡಿಯಲ್ಲಿರುವ ಪದಾರ್ಥಗಳ ಮೇಲೆ ನಾವೆಲ್ಲ ಬಾರ್‌ಕೋಡ್‌ಗಳನ್ನು ನೋಡುತ್ತೇವಲ್ಲ, ಕ್ಯೂಆರ್ ಕೋಡ್ ಅದರದೇ ಬೇರೆಯದೊಂದು ರೂಪ.

ಶನಿವಾರ, ಏಪ್ರಿಲ್ 26, 2014

ಇಜ್ಞಾನ ಎಂಬ ಏಳು ವರ್ಷಗಳ ಪಯಣ...

ಏಳು ವರ್ಷದ ವಿಶೇಷ: ಉಚಿತ ಇ-ಪುಸ್ತಕ 'ಸಪ್ತವರ್ಣ' ಓದಲು ಇಲ್ಲಿ ಕ್ಲಿಕ್ ಮಾಡಿ!


ಇಜ್ಞಾನ ಡಾಟ್ ಕಾಮ್ ಕತೆ ಶುರುವಾದದ್ದು ಏಳು ವರ್ಷಗಳ ಹಿಂದೆ, ೨೦೦೭ರ ಏಪ್ರಿಲ್‌ನಲ್ಲಿ. ಒಮ್ಮೆ ಹೀಗೆಯೇ ಮಾತನಾಡುತ್ತಿದ್ದಾಗ ವಿಜ್ಞಾನದ ಬರಹಗಳಿಗೇ ಒಂದು ಬ್ಲಾಗ್ ಮಾಡಬಹುದಲ್ಲ ಎಂದು ಐಡಿಯಾ ಕೊಟ್ಟವರು ಲೇಖಕ ಶ್ರೀ ಕೊಳ್ಳೇಗಾಲ ಶರ್ಮ. ಈ ಐಡಿಯಾ ಕುರಿತು ಯೋಚಿಸುತ್ತ ಬ್ಲಾಗಿನ ಹೆಸರೇನಿರಬೇಕು ಎಂದು ಕೇಳಿದಾಗ 'ಇಜ್ಞಾನ'ವೆಂಬ ನಾಮಕರಣ ಮಾಡಿದ್ದು ಗೆಳೆಯ ನಂದಕಿಶೋರ್.

ಅಲ್ಲಿಂದ ಇಲ್ಲಿಯವರೆಗೆ, ಕಳೆದ ಏಳು ವರ್ಷಗಳ ಇಜ್ಞಾನದ ಹಾದಿಯಲ್ಲಿ ಹಲವು ಮೈಲಿಗಲ್ಲುಗಳು ಹಾದುಹೋಗಿವೆ: ಇಜ್ಞಾನ 'ಡಾಟ್ ಕಾಮ್' ಆದದ್ದು, ವಿದ್ಯುನ್ಮಾನ ಪತ್ರಿಕೆಯೊಂದನ್ನು ಪ್ರಾಯೋಗಿಕವಾಗಿ ಪ್ರಕಟಿಸಿದ್ದು, 'ತಿನ್ನಲಾಗದ ಬಿಸ್ಕತ್ತು...' ಕೃತಿಯ ಮೂಲಕ ಪ್ರಕಾಶನವನ್ನೂ ಪ್ರಯತ್ನಿಸಿದ್ದು, ಓದುಗರಿಗಾಗಿ ಒಂದೆರಡು ಸ್ಪರ್ಧೆ ಏರ್ಪಡಿಸಿದ್ದು, 'ಶಾಪಿಂಗ್ ಸಂಗಾತಿ' ಪ್ರಾರಂಭಿಸಿದ್ದು... ಹೀಗೆ.

ಇಷ್ಟೆಲ್ಲ ಪ್ರಯತ್ನಗಳಲ್ಲಿ ಇಜ್ಞಾನ ಡಾಟ್ ಕಾಮ್ ಜೊತೆಯಲ್ಲಿ ನಿಂತವರು ಅನೇಕ ಮಂದಿ. ಈ ಅವಧಿಯಲ್ಲಿ ಡಾ. ಪಿ. ಎಸ್. ಶಂಕರ್, ಶ್ರೀ ನಾಗೇಶ ಹೆಗಡೆ, ಶ್ರೀ ಟಿ. ಆರ್. ಅನಂತರಾಮು, ಡಾ. ಯು. ಬಿ. ಪವನಜ, ಶ್ರೀ ಶ್ರೀವತ್ಸ ಜೋಶಿ, ಶ್ರೀ ಬೇಳೂರು ಸುದರ್ಶನ, ಶ್ರೀ ಕೊಳ್ಳೇಗಾಲ ಶರ್ಮ, ಶ್ರೀ ಟಿ. ಎಸ್. ಗೋಪಾಲ್ ಸೇರಿದಂತೆ ಅನೇಕ ಮಹನೀಯರ ಲೇಖನಗಳನ್ನು ಪ್ರಕಟಿಸುವ - ಹಲವು ಲೇಖಕರ ಪುಸ್ತಕಗಳನ್ನು ಪರಿಚಯಿಸುವ ಅವಕಾಶ ಇಜ್ಞಾನಕ್ಕೆ ದೊರಕಿತು. ಇಜ್ಞಾನದ ಪ್ರಯೋಗಗಳಿಗೆ ಓದುಗರ - ಪತ್ರಿಕೆಗಳ - ಕನ್ನಡ ಜಾಲತಾಣಗಳ ಬೆಂಬಲವೂ ಒದಗಿಬಂತು.

ಇಂದು, ಇಜ್ಞಾನ ಪ್ರಾರಂಭವಾಗಿ ಏಳು ವರ್ಷ. ನಮ್ಮ ಈ ಪಯಣದಲ್ಲಿ ನಿಮ್ಮ ಬೆಂಬಲ ಸದಾ ನಮ್ಮ ಜೊತೆಯಲ್ಲಿದೆ, ಮುಂದೆಯೂ ಹಾಗೆಯೇ ಇರಲಿ.

ಹುಟ್ಟುಹಬ್ಬದ ಈ ಖುಷಿಯಲ್ಲಿ ನಿಮಗೆ ನಮ್ಮ ಉಡುಗೊರೆಯಾಗಿ 'ಸಪ್ತವರ್ಣ' ಎಂಬ ಇ-ಪುಸ್ತಕವನ್ನು ಉಚಿತವಾಗಿ ನೀಡುತ್ತಿದ್ದೇವೆ. ಕಳೆದ ಏಳು ವರ್ಷಗಳಲ್ಲಿ ಹೆಚ್ಚು ಜನರನ್ನು ತಲುಪಿದ ಏಳು ಲೇಖನಗಳ ಈ ಸಂಕಲನವನ್ನು ಇಂದು ಪ್ರಕಟಿಸಲು ನಾವು ಹರ್ಷಿಸುತ್ತೇವೆ.

ಈ ಪುಸ್ತಕದಲ್ಲಿ ಪ್ರಕಟಿಸಲು ತಮ್ಮ ಅನಿಸಿಕೆಗಳನ್ನು ನೀಡಿರುವ ಶ್ರೀ ವಸುಧೇಂದ್ರ, ಶ್ರೀ ಬೇಳೂರು ಸುದರ್ಶನ, ಶ್ರೀ ನಂದಕಿಶೋರ್ ಹಾಗೂ ಶ್ರೀ ವಿಕಾಸ್ ಹೆಗಡೆಯವರಿಗೆ ನಮ್ಮ ವಿಶೇಷ ಕೃತಜ್ಞತೆಗಳು.

ನಿಮ್ಮ ಪ್ರೋತ್ಸಾಹಕ್ಕೆ ಮತ್ತೊಮ್ಮೆ ಧನ್ಯವಾದಗಳು!

ಶುಕ್ರವಾರ, ಏಪ್ರಿಲ್ 25, 2014

ಸಾಫ್ಟ್‌ವೇರ್ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್

ಟಿ. ಜಿ. ಶ್ರೀನಿಧಿ

ತಂತ್ರಾಂಶವನ್ನು ಸಿದ್ಧಪಡಿಸುವ ಕೆಲಸವೆಂದರೆ ಬರಿಯ ಪ್ರೋಗ್ರಾಮಿಂಗ್ ಅಷ್ಟೇ ಅಲ್ಲವೆಂದು ಸಾಫ್ಟ್‌ವೇರ್ ಇಂಜಿನಿಯರಿಂಗ್ ಪರಿಕಲ್ಪನೆ ನಮಗೆ ತಿಳಿಸಿಕೊಡುತ್ತದೆ. ತಂತ್ರಾಂಶ ಅಭಿವೃದ್ಧಿಯ ಈ ಪೂರ್ಣ ಪ್ರಕ್ರಿಯೆ ಸಾಕಷ್ಟು ಕ್ಲಿಷ್ಟವೇ ಸರಿ.

ಮಹತ್ವದ ಕೆಲಸಗಳಲ್ಲಿ ಬಳಕೆಗೆಂದು ತಂತ್ರಾಂಶಗಳನ್ನು ರೂಪಿಸುವಾಗ ಕೆಲಸದ ಅಗಾಧತೆ, ಸಂಕೀರ್ಣ ವಿನ್ಯಾಸ ಇವೆಲ್ಲ ಸೇರಿ ತಂತ್ರಾಂಶ ಅಭಿವೃದ್ಧಿಯ ಕೆಲಸ ಇನ್ನಷ್ಟು ಕ್ಲಿಷ್ಟವಾಗಿಬಿಡುತ್ತದೆ. ನಿಗದಿತ ಅವಧಿಯೊಳಗೆ ನಿರ್ದಿಷ್ಟ ವೆಚ್ಚದಲ್ಲಿ ಬಳಕೆದಾರರ ಅಗತ್ಯಗಳಿಗೆ ಸರಿಹೊಂದುವಂತಹ ತಂತ್ರಾಂಶವನ್ನು ಅಭಿವೃದ್ಧಿಪಡಿಸಬೇಕಾದ ಸವಾಲನ್ನು ಎದುರಿಸುವ ಈ ಕೆಲಸ ಸುಲಭವೇನಲ್ಲ.

ಇಂತಹ ಸನ್ನಿವೇಶಗಳಲ್ಲಿ ತಂತ್ರಾಂಶ ಅಭಿವೃದ್ಧಿಯ ಕೆಲಸ ಒಂದು ನಿರ್ದಿಷ್ಟ ಯೋಜನೆಗೆ ಅನುಗುಣವಾಗಿ ನಡೆದರೆ ಮಾತ್ರ ಅದು ಯಶಸ್ವಿಯಾಗುವುದು ಸಾಧ್ಯ. ಹಾಗೊಂದು ಯೋಜನೆಯನ್ನು ರೂಪಿಸಿ ಅದರಂತೆ ತಂತ್ರಾಂಶ ಅಭಿವೃದ್ಧಿಯ ಕೆಲಸ ಕೈಗೊಳ್ಳಲು ನೆರವಾಗುವುದು 'ಸಾಫ್ಟ್‌ವೇರ್ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್' ಎಂಬ ಪರಿಕಲ್ಪನೆ.

ಗುರುವಾರ, ಏಪ್ರಿಲ್ 24, 2014

ಆಕಾಶದಲ್ಲೊ೦ದು ಮನೆ

ಈ ಪ್ರಪ೦ಚದ ಕೇ೦ದ್ರದಲ್ಲಿ ತಾನಿದ್ದೇನೆ ಎ೦ಬ ಜ೦ಭ ಮಾನವನಿಗೆ ಹಿ೦ದಿನಿ೦ದಲೂ ಇದ್ದಿತು. ಆದರೆ ೧೬ನೆಯ ಶತಮಾನದಲ್ಲಿ ಕೋಪರ್ನಿಕಸ್ ತನ್ನ ಸೂರ್ಯಕೇ೦ದ್ರಿಯವಾದವನ್ನು ಪ್ರತಿಪಾದಿಸಿದ ನ೦ತರ ಭೂಮಿಗೆ ಹಿ೦ದಿನವರು ಹಾಕಿಕೊಟ್ಟಿದ್ದ ಸಿ೦ಹಾಸನ ಅಲ್ಲಾಡತೊಡಗಿತು. ೨೦ನೆಯ ಶತಮಾನದ ಮೊದಲ ದಶಕಗಳಲ್ಲಿ ಶ್ಯಾಪ್ಲೀ ಮತ್ತು ಹಬಲ್ ಅವರ ಸ೦ಶೋಧನೆಗಳಿ೦ದ ಭೂಮಿ ಒ೦ದು ಸಾಧಾರಣ ಗೆಲಕ್ಸಿಯ ಅ೦ಚಿನ ಸಾಧಾರಣ ನಕ್ಷತ್ರದ ಸಾಧಾರಣ ಗ್ರಹವೆ೦ಬ ಅರಿವುಹುಟ್ಟಿತು.

ಇದರ ಪರಿಣಾಮವಾಗಿ ಈ ಪ್ರಪ೦ಚದಲ್ಲಿ ನಾನು ಒಬ್ಬನೇ ಇದ್ದೇನೆಯೋ ಎನ್ನುವ ಅನುಮಾನ ಮನುಷ್ಯನಲ್ಲಿ ಮೂಡಿತು. ಹಿ೦ದಿನ ಶತಮಾನದ ಅನೇಕ ಆವಿಷ್ಕಾರಗಳ ನ೦ತರ ಎಲ್ಲೋ ಆಚೆ ನಮ್ಮ ಭೂಮಿಯ ತರಹವೇ ಗ್ರಹಗಳು ಇರಬಹುದು ಮತ್ತು ನಮ್ಮ೦ತೆಯೋ ಅಥವಾ ಇನ್ನು ಯಾವ ರೂಪದಲ್ಲೋ ಜನರು ಇರಬಹುದು ಎನ್ನುವ ಊಹೆಗೆ ಹೆಚ್ಚಿನ ಬಲ ಸಿಗುತ್ತಿದೆ. ಇದಕ್ಕೆ ಸ೦ಬ೦ಧ ಪಟ್ಟ೦ತೆ ಅನ್ಯಗ್ರಹ ಜೀವಿಗಳು, ಹಾರಾಡುವ ತಟ್ಟೆಗಳು ಇತ್ಯಾದಿ ವರದಿಗಳು ಪತ್ರಿಕೆಗಳಲ್ಲಿ ಬರುತಲೇ ಇರುತ್ತವೆ; ಅವುಗಳ ಬಗ್ಗೆ ಅನೇಕ ವೈಜ್ಞಾನಿಕ ಕಥಾ ಕಾದ೦ಬರಿಗಳು ರಚಿಸಲ್ಪಟ್ಟಿರುವುದಲ್ಲದೆ ಚಲನಚಿತ್ರಗಳೂ ಮನುಷ್ಯನ ಕುತೂಹಲವನ್ನು ಹೆಚ್ಚಿಸಿವೆ. ಹಾಗಾಗಿಯೇ ಈ ವಿಷಯಗಳು ವಿಜ್ಞಾನಿಗಳನ್ನಲ್ಲದೆ ಸಾಮಾನ್ಯ ಜನತೆಯನ್ನೂ ತಮ್ಮತ್ತ ಸೆಳೆಯುತ್ತವೆ.

ಈ ವಿಷಯದ ಕುರಿತು ಗಮನಹರಿಸುವ ಹೊಸ ಪುಸ್ತಕವೊಂದು ಇದೀಗ ಮಾರುಕಟ್ಟೆಯಲ್ಲಿದೆ.

ಶುಕ್ರವಾರ, ಏಪ್ರಿಲ್ 18, 2014

ಕಮೆಂಟ್ ಮಾಡಿ!

ಟಿ. ಜಿ. ಶ್ರೀನಿಧಿ

ಪ್ರೋಗ್ರಾಮಿಂಗ್ ಮುಗಿದ ತಕ್ಷಣ ತಂತ್ರಾಂಶ ಅಭಿವೃದ್ಧಿಯ ಕೆಲಸವೇನೂ ಮುಗಿಯುವುದಿಲ್ಲ. ತಂತ್ರಾಂಶ ಪರೀಕ್ಷೆಯ (ಟೆಸ್ಟಿಂಗ್) ಕಾರಣದಿಂದಲೋ, ನಂತರದ ದಿನಗಳಲ್ಲಿ ನಿರ್ವಹಣೆಗಾಗಿಯೋ (ಮೇಂಟೆನೆನ್ಸ್) ಪ್ರೋಗ್ರಾಮುಗಳನ್ನು ಬದಲಾಯಿಸುವ ಕೆಲಸ ನಡೆದೇ ಇರುತ್ತದೆ. ಈ ಪ್ರಕ್ರಿಯೆ ಸಾಕಷ್ಟು ದೀರ್ಘಕಾಲ ನಡೆಯುವಂಥದ್ದು: ಏಕೆಂದರೆ ತಂತ್ರಾಂಶಗಳು ದಶಕಗಳ ಕಾಲ ಬಳಕೆಯಲ್ಲಿ ಉಳಿದುಕೊಳ್ಳುವುದು ಕಂಪ್ಯೂಟರ್ ಪ್ರಪಂಚದಲ್ಲಿ ಅಪರೂಪದ ಸಂಗತಿಯೇನಲ್ಲ.

ಇಷ್ಟೆಲ್ಲ ದೀರ್ಘಕಾಲ ತಂತ್ರಾಂಶಗಳು ಬಳಕೆಯಾಗುತ್ತವೆ ಎಂದರೆ ಆ ಅವಧಿಯಲ್ಲಿ ಯಾವಾಗ ಬೇಕಾದರೂ ತಂತ್ರಾಂಶದಲ್ಲಿನ ಪ್ರೋಗ್ರಾಮುಗಳನ್ನು ಬದಲಿಸಬೇಕಾಗಿ ಬರಬಹುದು. ಆದರೆ ಇಷ್ಟೆಲ್ಲ ದೀರ್ಘಕಾಲ ಒಬ್ಬನೇ ವ್ಯಕ್ತಿ ಆ ಬದಲಾವಣೆಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಾನೆ ಎನ್ನುವಂತಿಲ್ಲ.

ಅರೆ, ಪ್ರೋಗ್ರಾಮನ್ನು ಬದಲಿಸಬೇಕಾದ ಅಗತ್ಯಕ್ಕೂ ಆ ಬದಲಾವಣೆಗಳನ್ನು ಯಾರು ಮಾಡುತ್ತಾರೆ ಎನ್ನುವುದಕ್ಕೂ ಏನು ಸಂಬಂಧ?

ಸಂಬಂಧ ಬಹಳ ಸರಳವಾದದ್ದು.

ಶನಿವಾರ, ಏಪ್ರಿಲ್ 12, 2014

ತಂತ್ರಾಂಶ ನಿರ್ವಹಣೆಯೂ ಬಹುಮುಖ್ಯ!

ಟಿ. ಜಿ. ಶ್ರೀನಿಧಿ

ಕಂಪ್ಯೂಟರ್ ವ್ಯವಸ್ಥೆಗಳೆಂದಮೇಲೆ ಅವುಗಳ ನಿರ್ವಹಣೆಗೂ ಸಾಕಷ್ಟು ಸಮಯ-ಹಣ ಬೇಕು ಎನ್ನುವ ವಿಷಯ ನಮಗೆ ಗೊತ್ತೇ ಇದೆ. ಆದರೆ ಕಂಪ್ಯೂಟರಿನ ನಿರ್ವಹಣೆಯೆಂದ ತಕ್ಷಣ ಹೆಚ್ಚಾಗಿ ನಮ್ಮ ಮನಸ್ಸಿಗೆ ಬರುವುದು ಯಂತ್ರಾಂಶದ (ಹಾರ್ಡ್‌ವೇರ್) ನಿರ್ವಹಣೆಯ ವಿಷಯವೇ. ಮೌಸ್ ಕೆಲಸಮಾಡುತ್ತಿಲ್ಲವೆಂದೋ ಮೋಡೆಮ್ ಕೆಟ್ಟಿದೆಯೆಂದೋ ಇನ್ನಾವುದೋ ಭಾಗ ಹಳೆಯದಾಗಿದೆಯೆಂದೋ ಸಾಕಷ್ಟು ಖರ್ಚುಮಾಡಿರುವ ವಿಷಯ ನಮ್ಮೆಲ್ಲರ ನೆನಪಿನಲ್ಲೂ ಇರುತ್ತದಲ್ಲ!

ಆದರೆ ನಿರ್ವಹಣೆ ಬೇಕಿರುವುದು ಕೇವಲ ಯಂತ್ರಾಂಶಕ್ಕೆ ಮಾತ್ರವಲ್ಲ, ನಾವು ಬರೆಯುವ ತಂತ್ರಾಂಶವನ್ನು (ಸಾಫ್ಟ್‌ವೇರ್) ನಿರ್ವಹಿಸುವುದೂ ಸಾಕಷ್ಟು ದೊಡ್ಡ ಕೆಲಸವೇ.

ಯಂತ್ರಾಂಶದಲ್ಲೇನೋ ಸರಿ, ಬೇಕಾದಷ್ಟು ಬಿಡಿಭಾಗಗಳಿರುತ್ತವೆ - ಉಪಯೋಗಿಸುತ್ತ ಹೋದಂತೆ ಹಾಳಾಗುವ ಸಾಧ್ಯತೆಯೂ ಇರುತ್ತದೆ. ಆದರೆ ತಂತ್ರಾಂಶದ ನಿರ್ವಹಣೆ ಎಂದರೇನು?

ಕೇಳಲು ವಿಚಿತ್ರವೆಂದು ತೋರಿದರೂ ತಂತ್ರಾಂಶಕ್ಕೆ ನಿರ್ವಹಣೆಯ (ಮೇಂಟೆನೆನ್ಸ್) ಅಗತ್ಯ ಬರುವುದು ಅಪರೂಪವೇನಲ್ಲ.

ಶುಕ್ರವಾರ, ಏಪ್ರಿಲ್ 4, 2014

ತಂತ್ರಜ್ಞಾನದ ಒಗ್ಗರಣೆ - ಅಕ್ಷರಗಳ ಚಿತ್ರಾನ್ನ!

ಟಿ. ಜಿ. ಶ್ರೀನಿಧಿ


ಹೊಸ ಇಮೇಲ್ ಖಾತೆ ತೆರೆಯುವಾಗ, ಬ್ಲಾಗ್ ಬರಹಕ್ಕೆ ಕಮೆಂಟ್ ಮಾಡುವಾಗ, ಬ್ಯಾಂಕಿನ ಆನ್‌ಲೈನ್ ವ್ಯವಹಾರದಲ್ಲಿ, ಕಡೆಗೆ ರೈಲಿನ ಟಿಕೇಟು ಬುಕ್ ಮಾಡುವಾಗಲೂ ನಮ್ಮ ಮುಂದೆ ಅಕ್ಷರಗಳ ಕಲಸುಮೇಲೋಗರದಂತೆ ಕಾಣುವ ವಿಚಿತ್ರ ಚಿತ್ರವೊಂದು ಕಾಣಿಸಿಕೊಳ್ಳುತ್ತದೆ. ಜೊತೆಗೆ "ನೀವು ರೋಬಾಟ್ ಅಲ್ಲ ಎಂಬುದನ್ನು ಸಾಬೀತುಪಡಿಸಲು ಈ ಪಠ್ಯವನ್ನು ಟೈಪ್ ಮಾಡಿ" ಎಂಬ ಸಂದೇಶವೂ! ಆ ಅಕ್ಷರಗಳನ್ನೆಲ್ಲ ಸರಿಯಾಗಿ ಗುರುತಿಸಿ ಟೈಪಿಸಿದಾಗಷ್ಟೇ ನಾವು ಮಾಡುತ್ತಿರುವ ಕೆಲಸದಲ್ಲಿ ಮುಂದುವರೆಯುವುದು ಸಾಧ್ಯ.

ದುರುದ್ದೇಶಪೂರಿತ ತಂತ್ರಾಂಶಗಳ ಅನಗತ್ಯ ಹಸ್ತಕ್ಷೇಪ ತಪ್ಪಿಸಿ ಸೌಲಭ್ಯಗಳ ದುರುಪಯೋಗವನ್ನು ತಡೆಯುತ್ತದಲ್ಲ ಈ ವಿಧಾನ, ಇದಕ್ಕೆ 'ಕ್ಯಾಪ್ಚಾ' ಎಂದು ಹೆಸರು. ಕ್ಯಾಪ್ಚಾ ಎನ್ನುವ ಹೆಸರು 'ಕಂಪ್ಲೀಟ್‌ಲಿ ಆಟೋಮೇಟೆಡ್ ಪಬ್ಲಿಕ್ ಟ್ಯೂರಿಂಗ್ ಟೆಸ್ಟ್ ಟು ಟೆಲ್ ಕಂಪ್ಯೂಟರ್ಸ್ ಆಂಡ್ ಹ್ಯೂಮನ್ಸ್ ಅಪಾರ್ಟ್' ಎಂಬುದರ ಹ್ರಸ್ವರೂಪ. ಈ ನಾಮಕರಣವಾದದ್ದು ೨೦೦೦ದಲ್ಲಿ. ಯಾವುದೇ ಪ್ರಶ್ನೆಗೆ ಉತ್ತರಿಸುತ್ತಿರುವುದು ಸ್ವಯಂಚಾಲಿತ ತಂತ್ರಾಂಶವಲ್ಲ, ಮಾನವ ಬಳಕೆದಾರರೇ ಎಂದು ಖಾತರಿಪಡಿಸಿಕೊಳ್ಳುವ ಉದ್ದೇಶದಿಂದ ಕ್ಯಾಪ್ಚಾಗಳ ಬಳಕೆ ಪ್ರಾರಂಭವಾಯ್ತು.

ಪರದೆಯ ಮೇಲೆ ತೋರಿಸುವ ಚಿತ್ರದಲ್ಲಿನ ಅಕ್ಷರ ಅಥವಾ ಅಂಕಿಗಳನ್ನು ಗುರುತಿಸುವಂತೆ, ಅಥವಾ ಸರಳ ಪ್ರಶ್ನೆಗಳಿಗೆ ಉತ್ತರಿಸುವಂತೆ ಬಳಕೆದಾರರನ್ನು ಕೇಳುವುದು ಕ್ಯಾಪ್ಚಾಗಳ ಲಕ್ಷಣ.

ಬುಧವಾರ, ಏಪ್ರಿಲ್ 2, 2014

ರಜೆಯಲ್ಲಿ ಕಂಪ್ಯೂಟರಿನ ಗೆಳೆತನ ಬೆಳೆಸಿ!

ಟಿ. ಜಿ. ಶ್ರೀನಿಧಿ

ಕಳೆದ ಶತಮಾನದ ಅತ್ಯಂತ ಮಹತ್ವದ ಆವಿಷ್ಕಾರಗಳಲ್ಲಿ ಕಂಪ್ಯೂಟರಿನದು ಪ್ರಮುಖ ಸ್ಥಾನ. ಬಹುಶಃ ನಾವೆಲ್ಲ ಈ ಮಾತನ್ನು ಬೇಜಾರು ಬರುವಷ್ಟು ಬಾರಿ ಕೇಳಿಬಿಟ್ಟಿದ್ದೇವೆ. ಬಹಳ ಕಡಿಮೆ ಅವಧಿಯಲ್ಲಿ ಮಾಹಿತಿ ತಂತ್ರಜ್ಞಾನ ನಮ್ಮ ಬದುಕನ್ನೆಲ್ಲ ಆವರಿಸಿಕೊಂಡಿರುವ ಪರಿಯ ಬಗೆಗೆ ಕೇಳುವುದು-ಓದುವುದು ಹಾಗಿರಲಿ, ಅದರ ಅನುಭವವನ್ನೇ ನಾವೆಲ್ಲರೂ ಪಡೆದಾಗಿದೆ.

ನಿಜ, ಉದ್ಯೋಗದಿಂದ ಮನರಂಜನೆಯವರೆಗೆ ಎಲ್ಲೆಲ್ಲೂ ಕಂಪ್ಯೂಟರಿನದೇ ಭರಾಟೆ. ಕಚೇರಿಯ ಕೆಲಸ ಮಾಡಲು, ಪ್ರವಾಸಕ್ಕೆ ಟಿಕೇಟು ಕಾದಿರಿಸಲು, ಬ್ಯಾಂಕಿನದೋ ಶೇರು ಮಾರುಕಟ್ಟೆಯದೋ ವ್ಯವಹಾರ ನಡೆಸಲು, ಗೆಳೆಯರೊಡನೆ ಹರಟೆಹೊಡೆಯಲು, ಕಡೆಗೆ ಆಟವಾಡಲೂ ನಮಗೆ ಕಂಪ್ಯೂಟರ್ ಬೇಕು.

ಶಾಲೆ ಕಾಲೇಜಿನ ರಜಾದಿನಗಳ ಮಾತನ್ನಂತೂ ಕೇಳುವುದೇ ಬೇಡ, ಹೊರಗಿನ ಬಿರುಬಿಸಿಲನ್ನು ತಪ್ಪಿಸಿಕೊಳ್ಳಲು ಮನೆಯೊಳಗೆ ಕಂಪ್ಯೂಟರ್ ಇದೆಯಲ್ಲ! ಪರೀಕ್ಷೆಮುಗಿಸಿದ ವಿದ್ಯಾರ್ಥಿಗಳಿಗೆ ಕಂಪ್ಯೂಟರೇ ಈಗ ಆಪ್ತಮಿತ್ರ.

ಆದರೆ ಕಂಪ್ಯೂಟರೆಂಬ ಈ ಮಿತ್ರನ ಒಡನಾಟ ಯಾವಾಗಲೂ ನಮಗೆ ಒಳ್ಳೆಯದನ್ನೇ ಮಾಡಬೇಕು ಎಂದೇನೂ ಇಲ್ಲ. ಒಳಿತಿನ ಪ್ರಮಾಣದಷ್ಟೇ ಕೆಡುಕನ್ನೂ ಮಾಡಬಲ್ಲ ಈ ಯಂತ್ರದ ಒಡನಾಟದಿಂದ ಗರಿಷ್ಠ ಪ್ರಮಾಣದ ಲಾಭ ಪಡೆದುಕೊಳ್ಳುವುದು, ಮತ್ತು ಅದೇ ಸಮಯದಲ್ಲಿ ಕೆಟ್ಟದುದರಿಂದ ದೂರವಿರುವುದು ಸಂಪೂರ್ಣವಾಗಿ ನಮ್ಮ ವಿವೇಚನೆಯನ್ನೇ ಅವಲಂಬಿಸಿರುತ್ತದೆ.

ಹಾಗೆಂದಮಾತ್ರಕ್ಕೆ ಈ ಕಂಪ್ಯೂಟರ್-ಇಂಟರ್‌ನೆಟ್ ಇತ್ಯಾದಿಗಳ ಸಹವಾಸವೇ ಬೇಡ, ಅದರಿಂದ ದೂರವೇ ಉಳಿದುಬಿಡೋಣ ಎನ್ನುವುದು ಖಂಡಿತಾ ತಪ್ಪಾಗುತ್ತದೆ.

ಶುಕ್ರವಾರ, ಮಾರ್ಚ್ 28, 2014

ರಿಕ್ವೈರ್‌ಮೆಂಟ್ಸ್ ಇಂಜಿನಿಯರಿಂಗ್

ಟಿ. ಜಿ. ಶ್ರೀನಿಧಿ

ತಂತ್ರಾಂಶ ಸಿದ್ಧಪಡಿಸಲು ಹೊರಡುವವರ ಮುಂದಿನ ಅತಿದೊಡ್ಡ ಸವಾಲು ಯಾವುದು ಎಂದು ಕೇಳಿದರೆ ಅದಕ್ಕೆ ನಿಮ್ಮ ಉತ್ತರ ಏನಿರಬಹುದು? ಪ್ರೋಗ್ರಾಮಿಂಗ್ ಭಾಷೆಯಲ್ಲಿನ ಪರಿಣತಿಯೆ? ಸಾಫ್ಟ್‌ವೇರ್ ಇಂಜಿನಿಯರಿಂಗ್ ಜ್ಞಾನವೆ? ಅಥವಾ ತಪ್ಪುಗಳಾಗದಂತೆ ಎಚ್ಚರವಹಿಸಬೇಕಾದ ಅಗತ್ಯವೆ?

ಇವೆಲ್ಲವೂ ಸವಾಲುಗಳೇ ನಿಜ. ಆದರೆ ಬಳಕೆದಾರರ ಅಗತ್ಯಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದಿದೆಯಲ್ಲ, ಆ ಕೆಲಸ ಇವೆಲ್ಲವುದಕ್ಕಿಂತ ಅದೆಷ್ಟೋ ಪಾಲು ಹೆಚ್ಚು ಕಷ್ಟಕರವಾದದ್ದು.

ಮೇಲ್ನೋಟಕ್ಕೆ ಈ ಕೆಲಸ ಅಷ್ಟೇನೂ ಕ್ಲಿಷ್ಟವೆಂದು ತೋರುವುದಿಲ್ಲ. ತಂತ್ರಾಂಶದ ಅಗತ್ಯವಿರುವುದು ಬಳಕೆದಾರರಿಗೆ; ಆ ತಂತ್ರಾಂಶ ಏನು ಮಾಡಬೇಕು, ಅದರ ಕಾರ್ಯಾಚರಣೆ ಹೇಗಿರಬೇಕು ಎಂದೆಲ್ಲ ತಿಳಿದಿರಬೇಕಾದ್ದೂ ಅವರಿಗೇ. ಅಷ್ಟನ್ನು ಅವರು ಹೇಳಿದರೆ ಅದನ್ನು ಅರ್ಥಮಾಡಿಕೊಳ್ಳಲು ನಾವೇಕೆ ಕಷ್ಟಪಡಬೇಕು?

ಭಾನುವಾರ, ಮಾರ್ಚ್ 23, 2014

ಪದಗಳ ಆಟದ ಒಂದು ಶತಮಾನ

ಪದಗಳ ಆಟ ಪದಬಂಧ ಈಗಷ್ಟೆ ತನ್ನ ಅಸ್ತಿತ್ವದ ಒಂದು ಶತಮಾನ ಮುಗಿಸಿ ಮುಂದಡಿಯಿಟ್ಟಿದೆ. ಈ ಸುದೀರ್ಘ ಅವಧಿಯಲ್ಲಿ ಪದಬಂಧದ ಸ್ವರೂಪ ಹೆಚ್ಚು ಬದಲಾಗದಿದ್ದರೂ ಬದಲಾದ ಕಾಲಮಾನಕ್ಕೆ ಅದು ಹೊಂದಿಕೊಂಡಿರುವ ರೀತಿ ಅನನ್ಯವಾದದ್ದು. ಆ ಕುರಿತ ಒಂದು ಪರಿಚಯ ಇಲ್ಲಿದೆ.
ಟಿ. ಜಿ. ಶ್ರೀನಿಧಿ

ವಿಕಿಪೀಡಿಯ ಚಿತ್ರ
ಇಂದಿಗೂ ಜನಪ್ರಿಯವಾಗಿರುವ ನೂರು ವರ್ಷ ಹಳೆಯ ಆಟದ, ನಾಲ್ಕಕ್ಷರದ, ಹೆಸರೇನು? ಬಹುಶಃ ಈ ಪ್ರಶ್ನೆ ಕೇಳಿ ಮುಗಿಸುವಷ್ಟರಲ್ಲೇ 'ಪದಬಂಧ' ಎಂಬ ಹೆಸರು ನಿಮ್ಮ ಮನಸ್ಸಿನಲ್ಲಿ ಮೂಡಿಬಿಟ್ಟಿರುತ್ತದೆ.

ನಿಜ, ಪದಬಂಧದ ಜನಪ್ರಿಯತೆಯೇ ಅಂಥದ್ದು. ಹಿರಿಯರು-ಕಿರಿಯರೆಂಬ ಭೇದಭಾವವಿಲ್ಲದೆ ಎಲ್ಲ ವಯಸ್ಸಿನವರಿಗೂ ಅಚ್ಚುಮೆಚ್ಚಿನ ಈ ಆಟ ಜಗತ್ತಿನ ಬಹುತೇಕ ಎಲ್ಲ ಪತ್ರಿಕೆಗಳಲ್ಲೂ ಪ್ರಕಟವಾಗುತ್ತದೆ.

ಪದಬಂಧದ ಕತೆ ಶುರುವಾದದ್ದು ಅಮೆರಿಕಾದಲ್ಲಿ, ನಿಖರವಾಗಿ ಹೇಳಬೇಕಾದರೆ ಈಗ ನೂರು ವರ್ಷಗಳ ಹಿಂದೆ, ೧೯೧೩ರ ಡಿಸೆಂಬರ್ ೨೧ರಂದು. ಆ ದಿನದ 'ನ್ಯೂಯಾರ್ಕ್ ವರ್ಲ್ಡ್' ಪತ್ರಿಕೆಯಲ್ಲಿ 'ವರ್ಡ್-ಕ್ರಾಸ್' ಎನ್ನುವ ವಿಶೇಷವೊಂದು ಪ್ರಕಟವಾಗಿತ್ತು. ಕೊಟ್ಟಿದ್ದ ಸುಳಿವುಗಳಿಗೆ ಅನುಸಾರವಾಗಿ ವಜ್ರಾಕೃತಿಯ ವಿನ್ಯಾಸವೊಂದರಲ್ಲಿ ಪದಗಳನ್ನು ಜೋಡಿಸಬೇಕಿದ್ದ ಈ ಆಟವನ್ನು ರೂಪಿಸಿದ್ದ ವ್ಯಕ್ತಿಯ ಹೆಸರು ಆರ್ಥರ್ ವಿನ್ ಎಂದು.

ಕೆಲ ಸಮಯದ ನಂತರ, ಬಹುಶಃ ಮೊಳೆಜೋಡಿಸುವವರ ತಪ್ಪಿನಿಂದ, 'ವರ್ಡ್-ಕ್ರಾಸ್' ಎನ್ನುವ ಹೆಸರು 'ಕ್ರಾಸ್-ವರ್ಡ್' ಎಂದು ಬದಲಾಯಿತು ಎನ್ನಲಾಗಿದೆ. ಮುಂದೆ ಈ ಹೆಸರು ಗಳಿಸಿಕೊಂಡ ಜನಪ್ರಿಯತೆ ಅಭೂತಪೂರ್ವವಾದದ್ದು.

೧೯೨೦ರ ದಶಕದಲ್ಲಿ ಬೇರೆ ದೇಶಗಳ ಪತ್ರಿಕೆಗಳಲ್ಲೂ ಪದಬಂಧಗಳು ಕಾಣಿಸಿಕೊಂಡವು.

ಶನಿವಾರ, ಮಾರ್ಚ್ 22, 2014

ಜಾಲಲೋಕದ ಸಿಲ್ವರ್ ಜ್ಯೂಬಿಲಿ!

ಟಿ. ಜಿ. ಶ್ರೀನಿಧಿ

ಈ ತಿಂಗಳು ವಿಶ್ವವ್ಯಾಪಿ ಜಾಲಕ್ಕೆ (ವರ್ಲ್ಡ್‌ವೈಡ್ ವೆಬ್) ಇಪ್ಪತ್ತೈದು ವರ್ಷ ತುಂಬಿದ ಸಂಭ್ರಮ. ನಮ್ಮ ಬದುಕಿನಲ್ಲಿ ಮಹತ್ವದ ಬದಲಾವಣೆಗಳನ್ನು ತಂದ ಈ ವ್ಯವಸ್ಥೆಯ ಹೆಸರು ನಮಗೆಲ್ಲರಿಗೂ ಡಬ್ಲ್ಯೂಡಬ್ಲ್ಯೂಡಬ್ಲ್ಯೂ ಅಂತಲೇ ಹೆಚ್ಚು ಪರಿಚಯ ಎನ್ನಬೇಕು.

ಈ ಡಬ್ಲ್ಯೂಡಬ್ಲ್ಯೂಡಬ್ಲ್ಯೂ ಎಂದರೇನು ಎಂದು ಕೇಳಿದಾಗ ಮಾತ್ರ ನಮ್ಮಲ್ಲಿ ಅನೇಕರಿಗೆ ಕೊಂಚ ಗೊಂದಲವಾಗುತ್ತದೆ. "ಡಬ್ಲ್ಯೂಡಬ್ಲ್ಯೂಡಬ್ಲ್ಯೂ ಎಂದರೆ ಇಂಟರ್‌ನೆಟ್ ತಾನೆ?" ಎನ್ನುವುದು ಅವರಲ್ಲಿ ಬಹಳಷ್ಟು ಜನ ಕೇಳುವ ಪ್ರಶ್ನೆ.

ಅಲ್ಲ, ಈ ವಿಶ್ವವ್ಯಾಪಿ ಜಾಲ ಅಂತರಜಾಲದ ಒಂದು ಅಂಗ ಮಾತ್ರ. ವಿಶ್ವವ್ಯಾಪಿ ಜಾಲ ಹುಟ್ಟುವ ಮೊದಲೇ ಅಂತರಜಾಲ ಇತ್ತು. ಆದರೆ ಅದು ಆಗ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ಮಾತ್ರವೇ ಹೆಚ್ಚಾಗಿ ಬಳಕೆಯಲ್ಲಿತ್ತು. ಸಾಮಾನ್ಯ ಜನತೆಗೆ ಆಗಿನ್ನೂ ಅದು ಅಷ್ಟಾಗಿ ಪರಿಚಿತವಾಗಿರಲಿಲ್ಲ.

ಇಂತಹ ಪರಿಸ್ಥಿತಿಯಿದ್ದಾಗ, ೧೯೮೦ರ ದಶಕದ ಪ್ರಾರಂಭದಲ್ಲಿ, ಟಿಮ್ ಬರ್ನರ್ಸ್ ಲೀ ಎಂಬ ತಂತ್ರಜ್ಞ ಸ್ವಿಟ್ಜರ್‌ಲೆಂಡಿನ ಜಿನೀವಾದಲ್ಲಿರುವ ಯೂರೋಪಿಯನ್ ಪಾರ್ಟಿಕಲ್ ಫಿಸಿಕ್ಸ್ ಲ್ಯಾಬೊರೇಟರಿಯಲ್ಲಿ (ಸರ್ನ್) ತಾತ್ಕಾಲಿಕವಾಗಿ ಕೆಲಸಕ್ಕೆ ಸೇರಿದರು.

ಸೋಮವಾರ, ಮಾರ್ಚ್ 17, 2014

ಸಮರತಂತ್ರದ ಹೈಟೆಕ್ ಮಂತ್ರ

ಟಿ. ಜಿ. ಶ್ರೀನಿಧಿ

ಉಕ್ರೇನಿನ ಪ್ರಕ್ಷುಬ್ಧ ವಾತಾವರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸುತ್ತಿರುವ ವಿಷಯ ನಮಗೆಲ್ಲ ಗೊತ್ತೇ ಇದೆ. ಯುರೋಪಿಯನ್ ಒಕ್ಕೂಟ ಸೇರುವುದೋ ಅಥವಾ ರಷ್ಯಾವನ್ನು ಬೆಂಬಲಿಸುವುದೋ ಎನ್ನುವ ಗೊಂದಲ ಇಡೀ ದೇಶವನ್ನೇ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.

ಈ ನಡುವೆ ಉಕ್ರೇನಿನ ಕಂಪ್ಯೂಟರ್ ಜಾಲಗಳು ಹಾಗೂ ದೂರಸಂಪರ್ಕ ವ್ಯವಸ್ಥೆಯನ್ನು ಬೇರೆಯದೇ ಒಂದು ಬಗೆಯ ಸಮಸ್ಯೆ ಕಾಡುತ್ತಿದೆ ಎಂದು ಪತ್ರಿಕಾವರದಿಗಳು ಹೇಳುತ್ತಿವೆ. ಉಕ್ರೇನಿನ ಮೊಬೈಲ್ ಹಾಗೂ ಕಂಪ್ಯೂಟರ್ ಜಾಲಗಳ ಮೇಲೆ ಹೊರಗಿನ ಯಾವುದೋ ಶಕ್ತಿ ದಾಳಿಮಾಡುತ್ತಿದೆ ಎನ್ನುವುದು ಈ ವರದಿಗಳ ಸಾರಾಂಶ. ಬಿಬಿಸಿ ವರದಿಯ ಪ್ರಕಾರ ಈ ದಾಳಿಗಳ ಹಿಂದೆ ರಷ್ಯಾದ ಕೈವಾಡವಿದೆ ಎನ್ನುವುದು ಉಕ್ರೇನಿನ ರಕ್ಷಣಾಪಡೆಗಳ ಆರೋಪವಂತೆ.

ಈ ಆರೋಪ ನಿಜವೋ ಸುಳ್ಳೋ ಅದು ನಮಗೆ ಬೇಕಿಲ್ಲ. ಆದರೆ ಅದು ದೇಶದೇಶಗಳ ನಡುವಿನ ಸಮರದ ಹೊಸ ಮುಖವೊಂದನ್ನಂತೂ ಜಗತ್ತಿಗೆ ಪರಿಚಯಿಸುತ್ತಿದೆ.

ಶುಕ್ರವಾರ, ಮಾರ್ಚ್ 7, 2014

ಟೆಸ್ಟಿಂಗ್: ಏನು, ಏಕೆ, ಹೇಗೆ?

ಟಿ. ಜಿ. ಶ್ರೀನಿಧಿ

ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ತಂತ್ರಾಂಶ ಸಿದ್ಧಪಡಿಸುವುದು ಎಷ್ಟು ಮುಖ್ಯವೋ ಹಾಗೆ ಸಿದ್ಧವಾದ ತಂತ್ರಾಂಶ ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ರೂಪುಗೊಂಡಿದೆಯೋ ಇಲ್ಲವೋ ಎಂದು ಪರೀಕ್ಷಿಸುವುದೂ ಅಷ್ಟೇ ಮುಖ್ಯ. ಎಷ್ಟಾದರೂ ತಂತ್ರಾಂಶ ಹೇಗಿರಬೇಕು ಎಂದು ನಿರ್ಧರಿಸುವವರು ಅದರ ಬಳಕೆದಾರರೇ ಆದ್ದರಿಂದ ನಾವು ರೂಪಿಸುವ ತಂತ್ರಾಂಶ ಅವರ ನಿರೀಕ್ಷೆಗಳನ್ನು ಪೂರೈಸುವಂತಿರಬೇಕು. ತಂತ್ರಾಂಶ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಟೆಸ್ಟಿಂಗ್ ಹಂತಕ್ಕೆ ಎಲ್ಲಿಲ್ಲದ ಮಹತ್ವ ದೊರಕುವುದು ಇದೇ ಕಾರಣಕ್ಕಾಗಿ.

ಟೆಸ್ಟಿಂಗ್ ಮಾಡುವುದೇನೋ ಸರಿ, ಆದರೆ ತಂತ್ರಾಂಶದಲ್ಲಿ ನಾವು ಪರೀಕ್ಷಿಸಬೇಕಾದ್ದು ಏನನ್ನು? ಅದನ್ನೆಲ್ಲ ಸೂಕ್ತವಾಗಿ ಪರೀಕ್ಷಿಸುವ ವಿಧಾನ ಯಾವುದು? ಈ ವಿಷಯದ ಕುರಿತು ತಂತ್ರಾಂಶ ಅಭಿವೃದ್ಧಿಪಡಿಸುವ ಪ್ರತಿಯೊಬ್ಬರೂ ಯೋಚಿಸಲೇಬೇಕು. ಏಕೆಂದರೆ ತಂತ್ರಾಂಶದ ಪರೀಕ್ಷೆ ಕ್ರಮಬದ್ಧವಾಗಿ ಆಗದಿದ್ದರೆ ಅದರಿಂದ ಅನೇಕ ಅನೇಕ ಬಗೆಯ ತೊಂದರೆಗಳಾಗಬಹುದು: ನಂತರದ ಹಂತಗಳಲ್ಲಿ ತಪ್ಪು ಸರಿಪಡಿಸಲು ಸಮಯ ವ್ಯರ್ಥವಾಗಬಹುದು, ಅನಗತ್ಯವಾಗಿ ಹಣ ವೆಚ್ಚವಾಗಬಹುದು ಅಥವಾ ತಂತ್ರಾಂಶದಲ್ಲಿ ತಪ್ಪುಗಳು ಹಾಗೆಯೇ ಉಳಿದುಕೊಂಡು ಬಳಕೆದಾರರಿಗೆ ದೊಡ್ಡ ತೊಂದರೆಯೂ ಆಗಬಹುದು.

ಇಂತಹ ತೊಂದರೆಗಳನ್ನೆಲ್ಲ ತಪ್ಪಿಸಿಕೊಳ್ಳಲು ನೆರವಾಗುವಂತಹ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಸಾಫ್ಟ್‌ವೇರ್ ಇಂಜಿನಿಯರಿಂಗ್ ಪರಿಕಲ್ಪನೆಯಲ್ಲಿ ನಾವು ಕಾಣಬಹುದು.
badge