ಮಂಗಳವಾರ, ಆಗಸ್ಟ್ 30, 2016

ಭಾರತದ ಐಟಿ ಜಗತ್ತು

ಟಿ. ಜಿ. ಶ್ರೀನಿಧಿ


ಕಂಪ್ಯೂಟರ್ ವಿಜ್ಞಾನ ಹಾಗೂ ನಮ್ಮ ದೇಶದ ನಂಟು ಸಾಕಷ್ಟು ಹಳೆಯದು. ಭಾರತದ ವೈಜ್ಞಾನಿಕ ಕಾರ್ಯಕ್ರಮಗಳಿಗೆ ಭದ್ರ ಬುನಾದಿ ಹಾಕಿಕೊಟ್ಟ ಹೋಮಿ ಭಾಭಾರಂತಹ ದಾರ್ಶನಿಕರ ಪ್ರಯತ್ನಗಳನ್ನು ಈ ನಂಟಿನ ಹಿನ್ನೆಲೆಯಲ್ಲಿ ನಾವು ಕಾಣಬಹುದು. ಭಾರತೀಯ ಕಂಪ್ಯೂಟರ್ ವಿಜ್ಞಾನ ಕ್ಷೇತ್ರದ ಭೀಷ್ಮಪಿತಾಮಹ ಪ್ರೊ. ಆರ್. ನರಸಿಂಹನ್ ನೇತೃತ್ವದಲ್ಲಿ ನಮ್ಮ ಮೊದಲ ಕಂಪ್ಯೂಟರ್ TIFRAC ಸೃಷ್ಟಿಯ ಕೆಲಸ ೧೯೫೦ರ ದಶಕದಲ್ಲೇ ಪ್ರಾರಂಭವಾಗಿತ್ತು. ಸರಿಸುಮಾರು ಇದೇ ಸಮಯದಲ್ಲಿ ಭಾರತದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲೂ ಕಂಪ್ಯೂಟರ್ ವಿಜ್ಞಾನ ಅಧ್ಯಯನದ ವಿಷಯಗಳಲ್ಲೊಂದಾಗಿ ಪ್ರಚಲಿತವಾಯಿತು.

ಇದರ ಬೆನ್ನಲ್ಲೇ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳೂ ಸಕ್ರಿಯವಾದವು. ವಾಯುಯಾನ, ಬೃಹತ್ ಕೈಗಾರಿಕೆ ಮುಂತಾದೆಡೆಗಳಂತೆ ಐಟಿ ಕ್ಷೇತ್ರದಲ್ಲೂ ಟಾಟಾ ಸಂಸ್ಥೆ ಪ್ರಾರಂಭಿಕ ಹಂತದಲ್ಲೇ ಭಾಗಿಯಾಗಿದ್ದು ವಿಶೇಷ. ೧೯೬೦-೮೦ರ ಆಸುಪಾಸಿನಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಪಟ್ನಿ ಕಂಪ್ಯೂಟರ್ ಸಿಸ್ಟಮ್ಸ್, ಎಚ್‌ಸಿಎಲ್ ಟೆಕ್ನಾಲಜೀಸ್, ವಿಪ್ರೋ, ಇನ್‌ಫೋಸಿಸ್ -  ಹೀಗೆ ಹಲವು ಸಂಸ್ಥೆಗಳು ಕೆಲಸ ಪ್ರಾರಂಭಿಸಿದವು.

ನಮ್ಮಲ್ಲಿ ಲಭ್ಯವಿದ್ದ ಮಾನವ ಸಂಪನ್ಮೂಲವನ್ನೇ ಬಂಡವಾಳವನ್ನಾಗಿಟ್ಟುಕೊಂಡು ಬೆಳೆದ ಐಟಿ ಉದ್ದಿಮೆಯ ಪ್ರಾರಂಭಿಕ ಉದ್ದೇಶ ಹೊರದೇಶದ ಸಂಸ್ಥೆಗಳಲ್ಲಿ ಕೆಲಸಮಾಡಲು ಸಾಫ್ಟ್‌ವೇರ್ ತಂತ್ರಜ್ಞರನ್ನು ಒದಗಿಸುವುದಷ್ಟೇ ಆಗಿತ್ತು.

ಮಂಗಳವಾರ, ಆಗಸ್ಟ್ 23, 2016

ವರ್ಲ್ಡ್‌ವೈಡ್ ವೆಬ್: 25

ವಿಶ್ವವ್ಯಾಪಿ ಜಾಲದ (ವರ್ಲ್ಡ್‌ವೈಡ್ ವೆಬ್) ಇತಿಹಾಸದಲ್ಲಿ ೧೯೯೧ರ ಆಗಸ್ಟ್ ತಿಂಗಳಿಗೆ ಮಹತ್ವದ ಸ್ಥಾನವಿದೆ. ತಮ್ಮ ಆವಿಷ್ಕಾರದ ಕುರಿತು ಈ ಮಾಯಾಜಾಲದ ರೂವಾರಿ ಟಿಮ್ ಬರ್ನರ್ಸ್-ಲೀ ಮೊದಲಬಾರಿಗೆ ಬರೆದದ್ದು ಆ ತಿಂಗಳ ೬ರಂದು, ಮತ್ತು ವಿಶ್ವವ್ಯಾಪಿ ಜಾಲ ಇಡೀ ವಿಶ್ವಕ್ಕೆ ತೆರೆದುಕೊಂಡದ್ದು ೨೩ರಂದು. ಆ ಘಟನೆ ನಡೆದು ಇಂದಿಗೆ ೨೫ ವರ್ಷ. ಈ ಸಂದರ್ಭದಲ್ಲಿ ವಿಶ್ವವ್ಯಾಪಿ ಜಾಲದ ಹುಟ್ಟಿಗೆ ಕಾರಣವಾದ ಘಟನೆಗಳತ್ತ ಒಂದು ಹಿನ್ನೋಟ, ನಿಮಗಾಗಿ!

ಟಿ. ಜಿ. ಶ್ರೀನಿಧಿ
ನಮ್ಮ ಬದುಕಿನಲ್ಲಿ ಮಹತ್ವದ ಬದಲಾವಣೆಗಳನ್ನು ತಂದ ವಿಶ್ವವ್ಯಾಪಿ ಜಾಲ (ವರ್ಲ್ಡ್‌ವೈಡ್ ವೆಬ್) ನಮಗೆಲ್ಲರಿಗೂ ಡಬ್ಲ್ಯೂಡಬ್ಲ್ಯೂಡಬ್ಲ್ಯೂ ಅಂತಲೇ ಹೆಚ್ಚು ಪರಿಚಯ. ಈ ಡಬ್ಲ್ಯೂಡಬ್ಲ್ಯೂಡಬ್ಲ್ಯೂ ಎಂದರೇನು ಎಂದು ಕೇಳಿದಾಗ ಮಾತ್ರ ನಮ್ಮಲ್ಲಿ ಅನೇಕರಿಗೆ ಕೊಂಚ ಗೊಂದಲವಾಗುತ್ತದೆ. "ಡಬ್ಲ್ಯೂಡಬ್ಲ್ಯೂಡಬ್ಲ್ಯೂ ಎಂದರೆ ಇಂಟರ್‌ನೆಟ್ ತಾನೆ?" ಎನ್ನುವುದು ಅವರಲ್ಲಿ ಬಹಳಷ್ಟು ಜನ ಕೇಳುವ ಪ್ರಶ್ನೆ.

ಅಲ್ಲ, ಈ ವಿಶ್ವವ್ಯಾಪಿ ಜಾಲ ಅಂತರಜಾಲದ ಒಂದು ಅಂಗ ಮಾತ್ರ. ವಿಶ್ವವ್ಯಾಪಿ ಜಾಲ ಹುಟ್ಟುವ ಮೊದಲೇ ಅಂತರಜಾಲ ಇತ್ತು. ಆದರೆ ಅದು ಆಗ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ಮಾತ್ರವೇ ಹೆಚ್ಚಾಗಿ ಬಳಕೆಯಲ್ಲಿತ್ತು. ಸಾಮಾನ್ಯ ಜನತೆಗೆ ಆಗಿನ್ನೂ ಅದು ಅಷ್ಟಾಗಿ ಪರಿಚಿತವಾಗಿರಲಿಲ್ಲ.

ಇಂತಹ ಪರಿಸ್ಥಿತಿಯಿದ್ದಾಗ, ೧೯೮೦ರ ದಶಕದ ಪ್ರಾರಂಭದಲ್ಲಿ, ಟಿಮ್ ಬರ್ನರ್ಸ್ ಲೀ ಎಂಬ ತಂತ್ರಜ್ಞ ಸ್ವಿಟ್ಜರ್‌ಲೆಂಡಿನ ಜಿನೀವಾದಲ್ಲಿರುವ ಯೂರೋಪಿಯನ್ ಪಾರ್ಟಿಕಲ್ ಫಿಸಿಕ್ಸ್ ಲ್ಯಾಬೊರೇಟರಿಯಲ್ಲಿ (ಸರ್ನ್) ತಾತ್ಕಾಲಿಕವಾಗಿ ಕೆಲಸಕ್ಕೆ ಸೇರಿದರು.

ಶುಕ್ರವಾರ, ಆಗಸ್ಟ್ 19, 2016

ವಿಶ್ವ ಛಾಯಾಗ್ರಹಣ ದಿನ ವಿಶೇಷ: ಕ್ಲಿಕ್ ಮಾಡಿ ನೋಡಿ!

ಕಂಪ್ಯೂಟರ್ ಕ್ಷೇತ್ರದಲ್ಲಿ ಜನಪ್ರಿಯವಾಗಿರುವ 'ಓಪನ್ ಸೋರ್ಸ್' ಪರಿಕಲ್ಪನೆಯ ರೂಪವೊಂದನ್ನು ೧೭೭ ವರ್ಷಗಳ ಹಿಂದೆಯೇ ಪರಿಚಯಿಸಿದ್ದು ಡಿಗೇರೋಟೈಪ್ ತಂತ್ರಜ್ಞಾನ. ಲೂಯಿ ಡಿಗೇರ್ ರೂಪಿಸಿದ ಈ ತಂತ್ರಜ್ಞಾನದ ಹಕ್ಕುಸ್ವಾಮ್ಯವನ್ನು ೧೮೩೯ರಲ್ಲಿ ಫ್ರೆಂಚ್ ಸರಕಾರ ಕೊಂಡು ಅದನ್ನು "ಮನುಕುಲಕ್ಕೆ ಕೊಡುಗೆ"ಯಾಗಿ ಸಮರ್ಪಿಸಿದ ದಿನವೇ ಆಗಸ್ಟ್ ೧೯. ಇದೀಗ ವಿಶ್ವ ಛಾಯಾಗ್ರಹಣ ದಿನವೆಂದು ನಾವು ಗುರುತಿಸುವುದು ಇದೇ ದಿನವನ್ನು. ಛಾಯಾಗ್ರಹಣದ ವಿಕಾಸ ಕುರಿತು ನಾವು ಹಿಂದೊಮ್ಮೆ ಪ್ರಕಟಿಸಿದ್ದ ಲೇಖನವನ್ನು ಈ ಸಂದರ್ಭದಲ್ಲಿ ಮರುಪ್ರಕಟಿಸುತ್ತಿದ್ದೇವೆ.
ಟಿ. ಜಿ. ಶ್ರೀನಿಧಿ

ಮನುಷ್ಯ ತನ್ನ ಕಣ್ಣಮುಂದಿನ ದೃಶ್ಯವನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಉದ್ದೇಶದಿಂದ ಮಾಡದ ಪ್ರಯತ್ನವೇ ಇಲ್ಲ ಎನ್ನಬಹುದೇನೋ. ಶಿಲಾಯುಗದ ರೇಖಾಚಿತ್ರಗಳಿಂದ ಪರಿಣತರ ಕಲಾಕೃತಿಗಳವರೆಗೆ ಅನೇಕ ಸೃಷ್ಟಿಗಳ ಉದ್ದೇಶ ಇದೇ ಆಗಿರುವುದನ್ನು ನಾವು ಗಮನಿಸಬಹುದು.

ಆದರೆ ಇಂತಹ ಪ್ರಯತ್ನಗಳಿಗೆ ಒಂದು ದೊಡ್ಡ ಸಮಸ್ಯೆ ಅಡ್ಡಬರುತ್ತಿತ್ತು - ಕಂಡದ್ದನ್ನು ಕಂಡಂತೆ ಚಿತ್ರಿಸಲು ಎಲ್ಲರಿಗೂ ಬರುವುದಿಲ್ಲ, ಹಾಗೂ ನಮಗೆ ಬಂದಂತೆ ಚಿತ್ರಿಸಿದರೆ ಅದು ನಾವು ಕಂಡದ್ದನ್ನು ನಿಖರವಾಗಿ ಪ್ರತಿನಿಧಿಸುವುದಿಲ್ಲ!

ಹಾಗಾದರೆ ನಾವು ಕಂಡದ್ದನ್ನು ಕಂಡಹಾಗೆಯೇ ದಾಖಲಿಸಿಟ್ಟುಕೊಳ್ಳುವುದು ಹೇಗೆ? ಈ ನಿಟ್ಟಿನಲ್ಲಿ ನಡೆದ ಪ್ರಯತ್ನಗಳು ಒಂದೆರಡಲ್ಲ.

ಇಂತಹ ಪ್ರಯತ್ನಗಳಲ್ಲೊಂದಾದ 'ಕ್ಯಾಮೆರಾ ಅಬ್ಸ್‌ಕ್ಯೂರಾ' (Camera Obscura, ಪಿನ್‌ಹೋಲ್ ಕ್ಯಾಮೆರಾ ಎಂದೂ ಪರಿಚಿತ) ನಮ್ಮ ಎದುರಿನ ದೃಶ್ಯದ ತಲೆಕೆಳಗಾದ ರೂಪವನ್ನು ಪರದೆಯ ಮೇಲೆ ಚಿಕ್ಕದಾಗಿ ಮೂಡಿಸಿ ಚಿತ್ರಕಾರರಿಗೆ ಅದನ್ನು ನಕಲು ಮಾಡಿಕೊಳ್ಳಲು ನೆರವಾಗುತ್ತಿತ್ತು. ಬೇಕಾದ ದೃಶ್ಯವನ್ನು ಕ್ಷಿಪ್ರವಾಗಿ ಬರೆದುಕೊಳ್ಳುವ ಕಲಾವಿದರಿಗೇನೋ ಸರಿ, ಆದರೆ ಚಿತ್ರಬಿಡಿಸಲು ಬಾರದವರಿಗೆ ಇದರಿಂದ ಯಾವ ಉಪಯೋಗವೂ ಆಗುತ್ತಿರಲಿಲ್ಲ.

ಚಿತ್ರಬಿಡಿಸಲು ಬಾರದವರೂ ಈ ತಂತ್ರ ಬಳಸಬೇಕೆಂದರೆ ಪರದೆಯ ಮೇಲೆ ಮೂಡುವ ಚಿತ್ರ ತನ್ನಷ್ಟಕ್ಕೆ ತಾನೇ ಒಂದೆಡೆ ದಾಖಲಾಗುವಂತಿರಬೇಕು. ಹಾಗೆಂದು ಯೋಚಿಸಿ ಕಾರ್ಯಪ್ರವೃತ್ತನಾದವನು ಫ್ರಾನ್ಸಿನ ನಿಸೆಫೋರ್ ನಿಯಪ್ಸ್ ಎಂಬ ವ್ಯಕ್ತಿ. ಕ್ಯಾಮೆರಾ ಅಬ್ಸ್‌ಕೂರಾದಲ್ಲಿ ಚಿತ್ರಕಾರರಿಗಾಗಿ ಇದ್ದ ಪರದೆಯ ಜಾಗದಲ್ಲಿ ರಾಸಾಯನಿಕವಾಗಿ ಸಂಸ್ಕರಿಸಿದ ಲೋಹದ ಫಲಕವನ್ನು ತಂದು ಕೂರಿಸಿ 'ಹೀಲಿಯೋಗ್ರಫಿ' ಎಂಬ ತಂತ್ರಜ್ಞಾನವನ್ನು ರೂಪಿಸಿದ್ದು ಇವನ ಸಾಧನೆ.

ಗುರುವಾರ, ಆಗಸ್ಟ್ 11, 2016

ಹಾಲ್ದೊಡ್ಡೇರಿ ಹೇಳುತ್ತಾರೆ, "ಬದಲಾವಣೆಗಳು ನಮ್ಮ ಭಾಗವಾಗಬೇಕು"

ಇಜ್ಞಾನ ಡಾಟ್ ಕಾಮ್‌ ಸಹಯೋಗದಲ್ಲಿ ಮೈಸೂರಿನ ಭಾರತೀ ಪ್ರಕಾಶನ ಇತ್ತೀಚೆಗೆ ಪ್ರಕಟಿಸಿರುವ ಕೃತಿ 'ಟೆಕ್ಸ್ಟ್ ಬುಕ್ ಅಲ್ಲ, ಇದು ಟೆಕ್ ಬುಕ್!' ತಂತ್ರಜ್ಞಾನ ಕ್ಷೇತ್ರದ ಹತ್ತಾರು ವಿಷಯಗಳನ್ನು ಸರಳ ಭಾಷೆಯಲ್ಲಿ ತಿಳಿಸುವ ಈ ಪುಸ್ತಕಕ್ಕೆ ಹೆಸರಾಂತ ವಿಜ್ಞಾನ ಸಂವಹನಕಾರ, ವಿಜ್ಞಾನಿ ಹಾಲ್ದೊಡ್ಡೇರಿ ಸುಧೀಂದ್ರ ಬರೆದ ಮುನ್ನುಡಿಯ ಪೂರ್ಣಪಾಠ ಇಲ್ಲಿದೆ. ಟೆಕ್ ಬುಕ್ ಕೊಳ್ಳಲು ಭೇಟಿಕೊಡಿ: tinyurl.com/ejnanatechbook

ಸುಧೀಂದ್ರ ಹಾಲ್ದೊಡ್ದೇರಿ       

ಕನ್ನಡದಲ್ಲಿನ ವಿಜ್ಞಾನ ಬರವಣಿಗೆಗೆ ಸುದೀರ್ಘ ಇತಿಹಾಸವಿದೆ.  ಮೊದಲ ಪೀಳಿಗೆಯ ಬೆಳ್ಳಾವೆ ವೆಂಕಟನಾರಣಪ್ಪ- ಆರ್.ಎಲ್. ನರಸಿಂಹಯ್ಯ, ಎರಡನೆಯ ಪೀಳಿಗೆಯ ಜಿ.ಟಿ.ನಾರಾಯಣರಾವ್-ಜೆ.ಆರ್.ಲಕ್ಷ್ಮಣರಾವ್, ಮೂರನೆಯ ಪೀಳಿಗೆಯ ನಾಗೇಶ ಹೆಗಡೆ-ಟಿ.ಆರ್.ಅನಂತರಾಮು ... ಹೀಗೆ ಪರಂಪರಾಗತವಾಗಿ ವಿಜ್ಞಾನ ಸಾಹಿತ್ಯ, ಅದರಲ್ಲೂ ವಿಶೇಷವಾಗಿ ಇಂದು ಪ್ರಸ್ತುತವಾದ ತಂತ್ರಜ್ಞಾನ ಸಾಹಿತ್ಯವನ್ನು ಶ್ರೀಮಂತಗೊಳಿಸಿರುವ ಮಹನೀಯರಿವರು.  ಆಯಾ ಪೀಳಿಗೆಯಲ್ಲಿಯೇ ಅನೇಕ ಬರಹಗಾರರು ವಿಜ್ಞಾನ ಸಾಹಿತ್ಯದ ಅಭಿವೃದ್ಧಿಗೆ ಬಹುದೊಡ್ಡ ಕಾಣಿಕೆ ನೀಡಿದ್ದಾರೆ, ಪ್ರಾಸಂಗಿಕವಾಗಿ ಕೆಲವರ ಹೆಸರನ್ನು ಮಾತ್ರ ಇಲ್ಲಿ ಉಲ್ಲೇಖಿಸಿದ್ದೇನೆ.  ಈ ನಿಟ್ಟಿನಲ್ಲಿ ಹೊಸ ಬರಹಗಾರರೆಂದು ಹೇಳಲಾಗದಷ್ಟು ಹಳಬರಾಗಿರುವ, ತಮ್ಮ ಹುಲುಸಾದ ವಿಜ್ಞಾನ ಫಸಲಿನ ಮೂಲಕ ಕನ್ನಡ ಓದುಗರಿಗೆ, ಪ್ರಮುಖವಾಗಿ ಕನ್ನಡ ದಿನಪತ್ರಿಕೆಗಳ ವಾಚಕರಿಗೆ ಪರಿಚಿತರಾಗಿರುವವರು ಟಿ.ಜಿ.ಶ್ರೀನಿಧಿ.  ಹಿಂದಿನ ಶ್ರೇಷ್ಠ ಪರಂಪರೆಯನ್ನು ಸಮರ್ಥವಾಗಿ ಮುನ್ನಡೆಸಲು ಪಣ ತೊಟ್ಟವರಂತೆ ಅವರು ನಿಖರ, ಸ್ಪಷ್ಟ ಹಾಗೂ ಸರಳ ಭಾಷೆಯಲ್ಲಿ ವಿಜ್ಞಾನ ಕುರಿತು ನಿರಂತರವಾಗಿ ಬರೆಯುತ್ತಿದ್ದಾರೆ.

‘ಟೆಕ್ ಬುಕ್’ ಹೆಸರಿನ ‘ಟೆಕ್ಸ್ಟ್ ಬುಕ್’ ಅಲ್ಲದ ಈ ಪುಸ್ತಕವನ್ನು ಕೈಯ್ಯಲ್ಲಿ ಹಿಡಿದೊಡನೆ ನಮ್ಮ ಶ್ರೀನಿಧಿ ಅಪ್ಪಟ ಮೈಸೂರಿನವರೆನ್ನುವುದಕ್ಕೆ ನನಗೆ ಬೇರೆ ಸಾಕ್ಷಿ ಬೇಕಿರಲಿಲ್ಲ.  ಮನೆಯ ಥ್ರೀಡಿ ಪ್ರಿಂಟರು ಅವರ ಕಲ್ಪನೆಗೆ ಸಿಲುಕಿ ಕೇವಲ ಮೈಸೂರುಪಾಕನ್ನೇ ಮುದ್ರಿಸಿಕೊಡುತ್ತದೆ. ಚಾಲಕರಹಿತ, ಸ್ವನಿಯಂತ್ರಿತ, ಪುಟಾಣಿ ವಿಮಾನಗಳಾದ ‘ಡ್ರೋನ್’ಗಳ ಉಪಯೋಗದ ಬಗ್ಗೆ ಬರೆಯುವಾಗ ಅವರ ಕಣ್ಣಿಗೆ ಪೀಡ್ಝಾ ಕಾಣುವುದಿಲ್ಲ, ಮಸಾಲೆ ದೋಸೆ ಅವರ ದೃಷ್ಟಿಗೆ ಬೀಳುತ್ತದೆ.  ಹಾಗೆಯೇ ‘ಇಂಟರ್ ನೆಟ್ ಆಫ್ ಥಿಂಗ್ಸ್’ ಕುರಿತ ಲೇಖನದಲ್ಲಿ ಅವರ ಫ್ರಿಜ್ಜು ತರಿಸಿಕೊಳ್ಳುವುದು ಕೊತ್ತಂಬರಿ ಸೊಪ್ಪನ್ನೇ ಹೊರತು ಚೀಸ್ ಅಲ್ಲ.  ಈ ಮಾತುಗಳನ್ನಿಲ್ಲಿ ವಿಶೇಷವಾಗಿ ಹೇಳಲೇಬೇಕಾಯಿತು.  ಶ್ರೀನಿಧಿಯವರಿಗೆ ಎಲ್ಲ ವಿಷಯಗಳನ್ನೂ ‘ಲೋಕಲೈಸ್’ ಮಾಡಿಕೊಳ್ಳುವ ವಿಶೇಷ ಸಾಮರ್ಥ್ಯವಿದೆಯೆಂಬುದರ ಸಾಬೀತಿಗೆ ಮೇಲಿನ ಉದಾಹರಣೆಗಳೇ ಸಾಕು.

ಮಂಗಳವಾರ, ಆಗಸ್ಟ್ 9, 2016

ಸಿಮ್ ಕಾರ್ಡಿನ ಕಾಲು ಶತಮಾನ

ಟಿ. ಜಿ. ಶ್ರೀನಿಧಿ


ಮೊಬೈಲ್ ಸಂಪರ್ಕ ಪಡೆಯಲು ಏನೆಲ್ಲ ಬೇಕು? ಮೊದಲಿಗೆ ಒಂದು ಮೊಬೈಲ್ ಫೋನ್ ಬೇಕು, ಆಮೇಲೊಂದು ಸಿಮ್ ಕಾರ್ಡ್ ಬೇಕು!

ಹೌದು, ನಿಮ್ಮ ಮೊಬೈಲ್ ಫೋನು ಯಾವುದೇ ಇರಲಿ - ಸ್ಮಾರ್ಟ್ ಆಗಿರಲಿ ಇಲ್ಲದಿರಲಿ - ಜಿಎಸ್‌ಎಂ ತಂತ್ರಜ್ಞಾನ ಬಳಸುವುದಾದರೆ ಅದರಲ್ಲೊಂದು ಸಿಮ್ ಅಂತೂ ಇರಲೇಬೇಕು. 'ಸಿಮ್' ಎಂಬ ಹೆಸರು 'ಸಬ್‌ಸ್ಕ್ರೈಬರ್  ಐಡೆಂಟಿಫಿಕೇಶನ್ ಮಾಡ್ಯೂಲ್' (ಚಂದಾದಾರರನ್ನು ಗುರುತಿಸುವ ಘಟಕ) ಎನ್ನುವುದರ ಹ್ರಸ್ವರೂಪ. ಹೆಸರೇ ಹೇಳುವಂತೆ ಚಂದಾದಾರರನ್ನು ಗುರುತಿಸಿ ಮೊಬೈಲ್ ಜಾಲದೊಡನೆ ಅವರ ಸಂಪರ್ಕ ಏರ್ಪಡಿಸುವಲ್ಲಿ ಈ ಪುಟ್ಟ ಬಿಲ್ಲೆಯದು ಮಹತ್ವದ ಪಾತ್ರ.

ಈ ವಿಶಿಷ್ಟ ಸಾಧನ ಸೃಷ್ಟಿಯಾಗಿ ಇದೀಗ ಇಪ್ಪತ್ತೈದು ವರ್ಷ. ತಂತ್ರಜ್ಞಾನ ಲೋಕದ ಮಟ್ಟಿಗೆ ಇದೊಂದು ಬಹುದೊಡ್ಡ ಅವಧಿ. ಇಷ್ಟೆಲ್ಲ ಸಮಯದವರೆಗೂ ಚಾಲ್ತಿಯಲ್ಲಿ ಉಳಿದುಕೊಂಡಿರುವುದು ಸಿಮ್‌ನ ಹಿರಿಮೆಯೇ ಸರಿ!

ಶುಕ್ರವಾರ, ಜುಲೈ 22, 2016

ಗೋಧಿಯ ಕುರಿತು ಗೊಂದಲ ಬೇಕಿಲ್ಲ

ಡಾ. ಶರಣಬಸವೇಶ್ವರ ಅಂಗಡಿ

ಗೆಳೆಯ ಗೋವಿಂದ ಒಮ್ಮೆ ತಮಾಷೆಗೆ 'ಗೋಧಿ ಅದೇ ವ್ಹೀಟ್‌ನಲ್ಲಿ ಹೀಟ್ ಇದೆ, ರೈಸ್‌ನಲ್ಲಿ ಐಸ್ ಇದೆ, ಅದಕ್ಕೇ ಚಪಾತಿ ತಿಂದರೆ ಉಷ್ಣ, ಅನ್ನವುಂಡರೆ ತಂಪು' ಅಂದಿದ್ದ. ಮೊನ್ನೆ, ತಮ್ಮನ್ನು ಯೋಗಗುರು ಎಂದು ಕರೆದುಕೊಳ್ಳುವ ಅನಂತ್‌ಜಿ ಎನ್ನುವ ವ್ಯಕ್ತಿ ಗೋಧಿಯನ್ನು ನಿಂದಿಸುವುದಲ್ಲದೇ, ಅಕ್ಕಿಯನ್ನು ಅನಿಷ್ಟವೆಂದದ್ದು, ದೇಶದ ಕೃಷಿಯನ್ನು, ಹಸಿರು ಕ್ರಾಂತಿಯನ್ನು ನಿರಾಧಾರವಾಗಿ, ಅವೈಜ್ಞಾನಿಕವಾಗಿ ಹಿಗ್ಗಾಮುಗ್ಗಾ ಟೀಕಿಸಿದ್ದನ್ನು ಕೇಳಿದಾಗ ಗೋವಿಂದನ ಹಳೆಯ ಜೋಕ್ ನೆನಪಾಯ್ತು. ಹಿಂದೊಮ್ಮೆ ಇದೇ ಅನಂತ್‌ಜಿ ಗೋಧಿಯನ್ನು ದುಷ್ಟ ಧಾನ್ಯವೆಂದಿದ್ದು ಸುದ್ದಿಯಾಗಿತ್ತು. ಅದಕ್ಕೆ(ಅವರೇ ಹೇಳಿದ್ದು) ಬಂದ ಸಾವಿರಾರು ಫೋನ್ ಕರೆಗಳಿಗೆ, ಮತ್ತು ಮಿಸ್ಡ್‌ಕಾಲ್‌ಗಳಿಗೆ ಪ್ರತಿಕ್ರಿಯೆಯಾಗಿ ಸುಮಾರು ಅರ್ಧಗಂಟೆಯ ಒಂದು ಆಡಿಯೋ ಕ್ಲಿಪ್ ತೇಲಿಬಿಟ್ಟಿದ್ದಾರೆ. ಅದನ್ನು ವಾಟ್ಸಾಪ್‌ನಲ್ಲಿ ಕೇಳುವ ಅವಕಾಶ ನನಗೂ ಸಿಕ್ಕಿತು. ಅವರ ಆ 'ಜ್ಞಾನ'ದಲ್ಲಿ ಹೇರಳ ತಪ್ಪುಗಳಿವೆ. ಅದು ಜನಸಾಮಾನ್ಯರಿಗೆ ತಿಳಿದಿರಲಿ ಎಂದು ಈ ಲೇಖನದ ಉದ್ದೇಶ.

ಬುಧವಾರ, ಜುಲೈ 20, 2016

ಸಮಾಜ ಜಾಲಗಳ ಮೊಬೈಲ್ ಅವತಾರ

ಟಿ. ಜಿ. ಶ್ರೀನಿಧಿ

ಮೊಬೈಲ್ ದೂರವಾಣಿಗಳ ಬಳಕೆ ಹೆಚ್ಚಿದಂತೆ ನಮ್ಮ ಅದೆಷ್ಟೋ ಚಟುವಟಿಕೆಗಳು ಮೊಬೈಲ್ ಕೇಂದ್ರಿತವಾಗಿಬಿಟ್ಟಿವೆ. ಇಂತಹ ಚಟುವಟಿಕೆಗಳ ಸಾಲಿನಲ್ಲಿ ಸೋಶಿಯಲ್ ನೆಟ್‌ವರ್ಕ್‌ಗಳ ಬಳಕೆಗೂ ಪ್ರಮುಖ ಸ್ಥಾನವಿದೆ.

ಹೌದು, ಸೋಶಿಯಲ್ ನೆಟ್‌ವರ್ಕ್‌ಗಳು ಪರಿಚಯವಾದಾಗ ಕಂಪ್ಯೂಟರಿನಲ್ಲಿ ಮಾತ್ರವೇ ಅವನ್ನು ಬಳಸುತ್ತಿದ್ದ ನಾವು ಈಗ ಅವುಗಳ ಬಳಕೆಯನ್ನು ಹೆಚ್ಚೂಕಡಿಮೆ ಪೂರ್ತಿಯಾಗಿಯೇ ಮೊಬೈಲಿಗೆ ವರ್ಗಾಯಿಸಿಬಿಟ್ಟಿದ್ದೇವೆ. ಮೊಬೈಲುಗಳು ಸದಾಕಾಲ ನಮ್ಮ ಜೊತೆಗಿರುತ್ತವಲ್ಲ, ಹಾಗಾಗಿಯೋ ಏನೋ ಅವು ಸಮಾಜಜಾಲಗಳಲ್ಲಿ ನಮ್ಮ ಎಲ್ಲ ಚಟುವಟಿಕೆಗಳಿಗೂ ಸರಿಯಾದ ಜೋಡಿಯಾಗಿ ಬೆಳೆದಿವೆ.

ಮೊದಲಿಗೆ ಸಮಾಜಜಾಲಗಳ ವೆಬ್‌ಸೈಟನ್ನು ತೆರೆಯಲಷ್ಟೆ ಮೊಬೈಲ್ ಫೋನ್ ಬಳಕೆಯಾಗುತ್ತಿತ್ತು. ನಂತರ ನಮ್ಮ ಫೋನುಗಳು ಹೆಚ್ಚು ಸ್ಮಾರ್ಟ್ ಆದಂತೆ, ಆಪ್‌ಗಳ ಪ್ರಭಾವ ಜಾಸ್ತಿಯಾದಂತೆ ಸಮಾಜಜಾಲಗಳ ಆಪ್‌ಗಳು ನಮ್ಮ ಮೊಬೈಲಿಗೆ ಬಂದು ಕುಳಿತವು. ಫೇಸ್‌ಬುಕ್‌ನದೊಂದು ಆಪ್, ಟ್ವಿಟರ್‌ನದೊಂದು ಆಪ್ ಎಂದು ಸಮಾಜಜಾಲಗಳ ಆಪ್‌ಗಳು ಒಂದೊಂದಾಗಿ ನಮ್ಮ ಮೊಬೈಲನ್ನು ಸೇರಿಕೊಂಡವು.

ಸೋಮವಾರ, ಜುಲೈ 18, 2016

ನಾವು ಆಕಳಿಸುವುದೇಕೆ?

ಕೊಳ್ಳೇಗಾಲ ಶರ್ಮ

ಬಹುಶಃ ಶೀರ್ಷಿಕೆಯನ್ನು ಓದಿಯೇ ನೀವು ಆಕಳಿಸುವುದಕ್ಕೆ ಆರಂಭಿಸಿದ್ದೀರೆಂದರೆ ಅದು ಲೇಖನದ ತಪ್ಪಲ್ಲ. ಹಾಂ. ನೀವು ಮಹಿಳೆಯರಾಗಿದ್ದರೆ ಖಂಡಿತ ಆಕಳಿಸಿರುತ್ತೀರಿ. ಪುರುಷರಾದರೆ ಆ ಸಾಧ್ಯತೆ ಸ್ವಲ್ಪ ಕಡಿಮೆ. ಇದೇನಿದು? ಆಕಳಿಕೆಗೂ, ಗಂಡು-ಹೆಣ್ಣಿಗೂ ಸಂಬಂಧ ಯಾಕೆ ಕಲ್ಪಿಸುತ್ತಿದ್ದೀರಿ ಎಂದಿರಾ? ಇದು ಹೇಳಿದ್ದು ನಾನಲ್ಲ. ಇಟಲಿಯ ಪೀಸಾ ವಿಶ್ವವಿದ್ಯಾನಿಲಯದ ಮನಶ್ಶಾಸ್ತ್ರಜ್ಞೆ ಎಲಿಸಬೆಟ್ಟಾ ಪಲಾಜಿ ಮತ್ತು ಸಂಗಡಿಗರು ಹೀಗೊಂದು ಹೊಸ ತರ್ಕವನ್ನು ಮುಂದಿಟ್ಟಿದ್ದಾರೆ.

ಆಕಳಿಕೆ ಒಂದು ವಿಚಿತ್ರವಾದ ನಿಗೂಢ ವಿದ್ಯಮಾನ. ಬೇಸರವಾದಾಗ ಅಥವಾ ನಿದ್ರೆ ಬಂದಾಗಷ್ಟೆ ಆಕಳಿಕೆ ಬರುತ್ತದೆನ್ನುವುದು ಸಾಮಾನ್ಯ ನಂಬಿಕೆ. ಬಹುಮಟ್ಟಿಗೆ ಇದು ನಿಜವೂ ಹೌದು. ಇದಕ್ಕಾಗಿಯೇ ಆಕಳಿಕೆ ಎಂದರೆ ಬಹುಶಃ ಮಿದುಳಿಗೆ ಹೆಚ್ಚಿನ ಆಕ್ಸಿಜನ್ ಒದಗಿಸುವ ವಿದ್ಯಮಾನವಿರಬಹುದು ಎನ್ನುವ ನಂಬಿಕೆಯೂ ಇತ್ತು. ಏಕೆಂದರೆ ಆಕ್ಸಿಜನ್ ಕೊರತೆಯಾದಾಗ ಮಿದುಳು ತನ್ನಂತಾನೇ ನಿದ್ರೆಗೆ ಜಾರುತ್ತದೆ. ಅದನ್ನು ತಪ್ಪಿಸಲೆಂದು ಗಾಳಿಯನ್ನು ಹೆಚ್ಚಾಗಿ ಹೀರಿ, ಹೆಚ್ಚು ಆಕ್ಸಿಜನ್ನು ಒದಗುವಂತೆ ಮಿದುಳಿಗೆ ರಕ್ತದ ಸರಬರಾಜನ್ನು ಹೆಚ್ಚಿಸಲು ನಿಸರ್ಗ ಹೂಡಿರುವ ತಂತ್ರವೇ ಆಕಳಿಕೆ ಎನ್ನುವುದು ಬಲು ಹಿಂದಿನಿಂದ ಬಂದ ನಂಬಿಕೆ.

ಗುರುವಾರ, ಜುಲೈ 7, 2016

ಶ್ವಾನ ಸ್ವರ್ಗಾರೋಹಣ

ರೋಹಿತ್ ಚಕ್ರತೀರ್ಥ

೧೯೫೭ರ ಚಳಿಗಾಲ. ಅಮೆರಿಕ ಮತ್ತು ಸೋವಿಯೆಟ್ ರಷ್ಯದ ನಡುವೆ ಜಗತ್ತಿನ ದೊಡ್ಡಣ್ಣನಾಗಲು ಶೀತಲ ಸಮರ ಅರ್ಥಾತ್ ಕೋಲ್ಡ್ ವಾರ್ ನಡೆಯುತ್ತಿದ್ದ ಸಮಯ. ಸೋವಿಯಟ್ ರಷ್ಯದ ಅಧ್ಯಕ್ಷ ನಿಕಿಟ ಕ್ರುಶ್ಚೇವ್ ದೇಶದ ಎಲ್ಲ ರಾಕೆಟ್ ತಂತ್ರಜ್ಞರನ್ನು ಒಂದು ಔತಣ ಕೂಟಕ್ಕೆ ಕರೆದಿದ್ದರು. ಸ್ಪುಟ್ನಿಕ್ ೧ರ ಅಭೂತಪೂರ್ವ ಯಶಸ್ಸಿನ ವಿಜಯ ದುಂಧುಬಿಯಾಗಿತ್ತು ಈ ಔತಣ ಕೂಟ. ಸೋವಿಯೆಟ್ ಕೂಟದ ಅಂತರಿಕ್ಷ ಯೋಜನೆಗಳ ಪಿತಾಮಹ ಎಂದೇ ಕರೆಯಲ್ಪಟ್ಟ ಸೆರ್ಗಿ ಕೊರೊಲೆವ್ ಕೂಡ ಅಲ್ಲಿದ್ದರು. ನಿಕಿಟ ಕ್ರುಶ್ಚೇವ್, ನೆರೆದಿದ್ದ ಗಣ್ಯರನ್ನು ಅವರ ಸಾಧನೆಗಳಿಗಾಗಿ ಅಭಿನಂದಿಸಿ, ಸೋವಿಯೆಟ್ ಕೂಟದ ಅಂತರಿಕ್ಷ ಸಾಧನೆಗಳನ್ನು ಕೊಂಡಾಡಿ, ವೋಡ್ಕದ ಗ್ಲಾಸೆತ್ತಿ ಘೋಷಿಸಿದರು: ಇದೇ ವರ್ಷದ ನವೆಂಬರ್ ೭ರಂದು ನಾವು ಬೊಲ್ಶೆವಿಕ್ ಕ್ರಾಂತಿಯ ನಲವತ್ತನೆ ವರ್ಷದ ಸಂಭ್ರಮಾಚರಣೆ ಮಾಡುತ್ತಿದ್ದೇವೆ. ಅದರ ನೆನಪಿಗಾಗಿ ನಮ್ಮ ರಾಷ್ಟ್ರ ಇನ್ನೊಂದು ಸ್ಪುಟ್ನಿಕ್‌ನ್ನು ಅಂತರಿಕ್ಷಕ್ಕೆ ಹಾರಿಬಿಡಬೇಕು!

ನೆರೆದ ತಂತ್ರಜ್ಞರು ಮತ್ತು ವಿಜ್ಞಾನಿಗಳ ಬೆನ್ನುಹುರಿ ಆ ಚಳಿಯ ಕೊರೆತದಲ್ಲೂ 'ಚುಳ್' ಎಂದಿತು!

ಬುಧವಾರ, ಜೂನ್ 29, 2016

ಮನುಷ್ಯನೇಕೆ ಇಷ್ಟು ಬುದ್ಧಿವಂತ ಪ್ರಾಣಿ?

ಕೊಳ್ಳೇಗಾಲ ಶರ್ಮ

ಈ ವಿಶ್ವದಲ್ಲಿ ಇರುವ ಅತ್ಯಂತ ವಿಚಿತ್ರ ಪ್ರಾಣಿ ಯಾವುದು ಗೊತ್ತೇ? ಅದೇ ನಾವು. ನಾವು ಮನುಷ್ಯರಲ್ಲಿ ಇತರೆ ಪ್ರಾಣಿಗಳಿಗಳಿಗಿಲ್ಲದ ಎಷ್ಟೊಂದು ವಿಶೇಷ ಗುಣಗಳಿವೆ ಎಂದರೆ ಬಹುಶಃ ನಮ್ಮನ್ನು ಬೇರಾವುದೋ ಗ್ರಹದ ಜೀವಿಯಿರಬಹುದು ಎಂದು ವರ್ಗೀಕರಿಸಿದರೂ ತಪ್ಪಿಲ್ಲ. ಬೇರಾವುದೋ ಪ್ರಾಣಿ ಯಾಕೆ, ಮನುಷ್ಯನ ಕುಟುಂಬಕ್ಕೇ ಸೇರಿದ ವಾನರಗಳಿಗೂ ನಮಗೂ ಅಜಗಜಾಂತರ ವ್ಯತ್ಯಾಸವಿದೆ. ಎದ್ದು ಕಾಣುವ ಕೆಲವು ವ್ಯತ್ಯಾಸಗಳೆಂದರೆ ನಿರರ್ಗಳ ಮಾತು, ಸಂವಹನ ಕಲೆ, ಸಹಕಾರಿ ಪ್ರವೃತ್ತಿ, ಶಿಶುಪಾಲನೆಯ ಗುಣ, ನೇರ ನಡೆ ಮತ್ತು ಕುಶಲ ಬುದ್ಧಿವಂತಿಕೆ. ಇಷ್ಟೊಂದು ವಿಶಿಷ್ಟ ಗುಣಗಳು ಮಾನವನಿಗಷ್ಟೆ ಬಂದದ್ದೇಕೆ ಎನ್ನುವುದರ ಬಗ್ಗೆ ವಿಜ್ಞಾನಿಗಳಿಗೆ ಅವಿರತ ಕುತೂಹಲ. ಏಕೆಂದರೆ ಈ ಗುಣಗಳಿಂದಾಗಿಯೇ ಮನುಷ್ಯ ಇರುವುದೊಂದೇ ಪ್ರಪಂಚವನ್ನು ಆಳುವಷ್ಟು ಪ್ರಬಲನಾಗಿದ್ದಾನೆ ಎನ್ನಬಹುದು.

ಮತ್ತೊಂದು ದೃಷ್ಟಿಯಿಂದಲೂ ಮನುಷ್ಯ ಬಲು ವಿಶಿಷ್ಟ. ಇಡೀ ವಿಶ್ವವನ್ನೇ ಆಳುವ ಏಕೈಕ ಪ್ರಾಣಿಯೆನ್ನಿಸಿಕೊಂಡಿದ್ದರೂ ಇವನೇನು ಮಹಾ ಬಲಶಾಲಿಯಲ್ಲ.

ಸೋಮವಾರ, ಜೂನ್ 27, 2016

ಲೈಟ್ಸ್! ಆಕ್ಷನ್!! ಕ್ಯಾಮೆರಾ!!!

ಟಿ. ಜಿ. ಶ್ರೀನಿಧಿ 


ಪ್ರವಾಸ ಹೊರಟಾಗ ಜೊತೆಯಲ್ಲಿ ಕ್ಯಾಮೆರಾ ಕೊಂಡೊಯ್ಯುವ ಅಭ್ಯಾಸ ನಮಗೆಲ್ಲ ಗೊತ್ತಿರುವುದೇ. ಹೋದ ಜಾಗ, ಅಲ್ಲಿ ಕಂಡ ದೃಶ್ಯಗಳನ್ನೆಲ್ಲ ಛಾಯಾಚಿತ್ರ ಅಥವಾ ವೀಡಿಯೋ ರೂಪದಲ್ಲಿ ಸೆರೆಹಿಡಿದಿಟ್ಟುಕೊಳ್ಳಲು - ನೆನಪುಗಳನ್ನು ರೂಪಿಸಿಕೊಳ್ಳಲು ಈ ಅಭ್ಯಾಸ ನೆರವಾಗುತ್ತದೆ.

ಮೈಸೂರು ಅರಮನೆಯ ಮುಂದೆ ನಿಂತು, ತಾಜಮಹಲ್ ಎದುರಿನ ಬೆಂಚಿನ ಮೇಲೆ ಕುಳಿತು ಫೋಟೋ ತೆಗೆಸಿಕೊಳ್ಳುವುದು ಸುಲಭ. ಅಂತಹ ಸಂದರ್ಭಗಳಲ್ಲಿ ಮೊಬೈಲ್ ಕ್ಯಾಮೆರಾ ಅಷ್ಟೇ ಏಕೆ, ಇಷ್ಟುದ್ದ ಲೆನ್ಸಿನ ಭಾರೀ ಡಿಎಸ್‌ಎಲ್‌ಆರ್ ಬೇಕಾದರೂ ಜೊತೆಗಿಟ್ಟುಕೊಂಡಿರಬಹುದು.

ಆದರೆ ಕೆಲ ಸಂದರ್ಭಗಳಲ್ಲಿ ಫೋಟೋ ಕ್ಲಿಕ್ಕಿಸಲು ಅದೆಷ್ಟೇ ಆಸೆಯಾಗುತ್ತಿದ್ದರೂ ಕ್ಯಾಮೆರಾ ಹಿಡಿಯುವುದೇ ಸಾಧ್ಯವಾಗುವುದಿಲ್ಲ. ಬೆಟ್ಟದ ಮೇಲೆ ಕಡಿದಾದ ಹಾದಿಯಲ್ಲಿ ನಡೆಯುವುದೇ ಕಷ್ಟವಾದಾಗ ಕ್ಯಾಮೆರಾ ಹಿಡಿಯುವುದಾದರೂ ಹೇಗೆ? ಅದೂ ಒಂದೊಮ್ಮೆ ಸಾಧ್ಯವಾಗಬಹುದೇನೋ. ಆದರೆ ವಿಶ್ವದ ಅತಿ ಎತ್ತರದ ಹೆದ್ದಾರಿಯಲ್ಲಿ ಬೈಕು ಓಡಿಸುವಾಗ, ಹಾರುವ ವಿಮಾನದಿಂದ ಸ್ಕೈ‌ಡೈವಿಂಗ್ ಮಾಡುವಾಗ, ಸಮುದ್ರದಾಳದಲ್ಲಿ ಹವಳಗಳನ್ನು ನೋಡುವಾಗಲೆಲ್ಲ ಫೋಟೋ ತೆಗೆಯಬೇಕೆಂದರೆ??

ಶನಿವಾರ, ಜೂನ್ 25, 2016

ಯಾವ ಸ್ವರ್ಗದ ಹೂವೋ ಈ ಟೆರೆನ್ಸ್ ಟಾವೋ!

ರೋಹಿತ್ ಚಕ್ರತೀರ್ಥ


ಅಡಿಲೇಡ್ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಸ್ನಾತಕೋತ್ತರ ಗಣಿತ ತರಗತಿ. ಕ್ಯಾಲ್ಕುಲಸ್ಸಿನ ಮೇಲೆ ಯಾವುದೋ ಗಹನ ಪ್ರಶ್ನೆಯನ್ನು ಪ್ರೊಫೆಸರ್ ಬೋರ್ಡಿನ ಮೇಲೆ ಬಿಡಿಸುತ್ತಿದ್ದಾರೆ. ಗಣಿತದ ಸಿಕ್ಕುಸಿಕ್ಕಾದ ಸಾಲುಗಳನ್ನು ಒಡೆಯುತ್ತ ಒಂದೊಂದು ಹೆಜ್ಜೆ ಮುಂದುವರಿಯುತ್ತಲೇ ಅವರಿಗೆ ಹಾದಿ ತಪ್ಪಿದ ಅರಿವಾಗಿದೆ. ಜಿಂಕೆಯ ಹಿಂದೆ ಹೋಗಿ ದಾರಿ ತಪ್ಪಿದ ದುಷ್ಯಂತನಂತೆ ಬೆಪ್ಪಾಗಿ ನಿಂತಿದ್ದಾರೆ. ಅವರ ಲೆಕ್ಕದ ತಲೆಬುಡ ಅರ್ಥವಾಗದಿದ್ದರೂ ವಿದ್ಯಾರ್ಥಿಗಳು ಈ ಶೋಕದಲ್ಲಿ ನಾವೂ ಭಾಗವಹಿಸಬೇಕು ಎನ್ನುವಂತೆ ಜೋಲುಮುಖ ಮಾಡಿ ಕೂತಿದ್ದಾರೆ. ಅಷ್ಟರಲ್ಲಿ ಆ ನೀರವ ಮೌನವನ್ನು ಸೀಳಿಕೊಂಡು ಒಂದು ಪುಟಾಣಿ ಕೀರಲು ದನಿ ಬಂದಿದೆ. ಆ ಚೋಟುದ್ದದ ಹುಡುಗ ಎದ್ದುನಿಂತು ಗುರುಗಳು ಎಲ್ಲಿ ತಪ್ಪಿದ್ದಾರೆ ಎನ್ನುವುದನ್ನು ಕರಾರುವಾಕ್ಕಾಗಿ ತೋರಿಸಿ, ಮುಂದಿನ ಸಾಲುಗಳನ್ನು ಹೇಗೆ ಬರೆದರೆ ಈ ತೊಂದರೆಯಿಂದ ಪಾರಾಗಬಹುದು ಎನ್ನುವ ದಾರಿ ತೋರುತ್ತಾನೆ. ಕ್ಷಣಕಾಲ ಎಲ್ಲವನ್ನೂ ಮರೆತು ಅವನ ಮುಖವನ್ನೇ ನೆಟ್ಟದೃಷ್ಟಿಯಿಂದ ನೋಡುವ ಗುರುಗಳು "ವಾಹ್! ಎಂತಹ ಸುಂದರ ಪರಿಹಾರ! ಮತ್ತದಕ್ಕೆ ಎಷ್ಟೊಂದು ಅರ್ಥಪೂರ್ಣವಾದ ನಿರೂಪಣೆ!" ಎಂದು ಮನದುಂಬಿ ಹೇಳಿ ಚಪ್ಪಾಳೆ ತಟ್ಟಿಯೇಬಿಡುತ್ತಾರೆ. ಹುಡುಗನಿಗೆ ಕ್ಲಾಸಿನ ಮುಂದೆ ದೊಡ್ಡವನಾದೆನೆಂಬ ಮುಜುಗರ, ಹಿತವಾದ ರೋಮಾಂಚನ, ಎದೆಯಲ್ಲಿ ಖುಷಿಯ ತಬಲ.

ಯಾಕೆಂದರೆ ಅವನಿಗಿನ್ನೂ ಆಗ, ನಂಬಿದರೆ ನಂಬಿ, ಕೇವಲ ಒಂಬತ್ತು ವರ್ಷ!

ಮಂಗಳವಾರ, ಜೂನ್ 21, 2016

ಮೀನಿನ ಬ್ಯಾಟರಿ!

ಕೊಳ್ಳೇಗಾಲ ಶರ್ಮ


ಈ ವಾರ ಮೀನಿನದ್ದೇ ಸುದ್ದಿ. ಮೊನ್ನೆ ನಮ್ಮೂರ ಐಯಂಗಾರ್ ಬೇಕರಿಯಲ್ಲಿಯೂ ಮಂಗಳೂರಿನಿಂದ ಮೀನಿನ ಸರಬರಾಜು ಕಡಿಮೆಯಾಗಿರುವ ಬಗ್ಗೆ ಭಯಂಕರ ಚರ್ಚೆ ನಡೆದಿತ್ತು. ಈ ವರ್ಷ ಮಳೆರಾಯ ಕಾಲಿಡಲು ಹಿಂಜರಿಯುತ್ತಿರುವ ಕಾರಣ ಕಡಲಮೀನಿನ ಸಂತತಿಯೂ ಕಡಿಮೆಯಾಗಿದೆ ಎನ್ನುವುದು ಚರ್ಚೆ. ಇದರ ಬೆನ್ನಲ್ಲೇ ಇನ್ನೊಂದು ಸುದ್ದಿ. ಮೀನುಗಳು ಮನುಷ್ಯರ ಮುಖಚರ್ಯೆಯನ್ನು ಗುರುತಿಸಬಲ್ಲುವಂತೆ. ಅಂದರೆ ಅವು ನಮ್ಮನ್ನೂ, ನಿಮ್ಮನ್ನೂ ಬೇರೆ ಬೇರೆ ವ್ಯಕ್ತಿಗಳೆಂದು ಗುರುತಿಸಬಲ್ಲವು ಎನ್ನುವ ಸುದ್ದಿ. ಇದಷ್ಟೇ ಸಾಲದು ಎನ್ನುವಂತೆ ಇನ್ನೊಂದು ಸುದ್ದಿಯೂ ಬಂದಿದೆ. ಅದೆಂದರೆ ನಮ್ಮ, ನಿಮ್ಮ ಮೊಬೈಲು ಫೋನುಗಳನ್ನು ಚಾಲಿಸುವಂತಹ ಬ್ಯಾಟರಿ ತಯಾರಿಸುವುದು.

ಷಾಕ್ ಆಯಿತೇ! ಇದೇನು ‘ನಾನ್-ವೆಜ್’ ಬ್ಯಾಟರಿ ಎಂದಿರಾ?

ಸೋಮವಾರ, ಜೂನ್ 20, 2016

ವಿಜ್ಞಾನಲೋಕಕ್ಕೆ ಹತ್ತರ ಹರ್ಷ

ಟಿ. ಜಿ. ಶ್ರೀನಿಧಿ

ವಿಜ್ಞಾನ-ತಂತ್ರಜ್ಞಾನಗಳ ವಿಷಯಕ್ಕೆ ಬಂದರೆ ಅವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದು. ಆದರೆ ಮುಖ್ಯವಾಹಿನಿಯ ಪತ್ರಿಕೆಗಳಲ್ಲಿ ಈ ವಿಷಯಕ್ಕೆ ಎಷ್ಟು ತಾನೇ ಜಾಗ ನೀಡಲು ಸಾಧ್ಯ?

ಹಾಗೆಂದು ಸುಮ್ಮನಿರುವುದೂ ಸಾಧ್ಯವಿಲ್ಲವಲ್ಲ! ಈ ಕೊರತೆಯನ್ನು ತುಂಬಿಕೊಡಲು ವಿಜ್ಞಾನ ಪತ್ರಿಕೆಗಳು ಪ್ರಯತ್ನಿಸುತ್ತವೆ. ಸಾಮಾನ್ಯ ಪತ್ರಿಕೆಗಳಿಗಿಂತ ಹೆಚ್ಚು ಪ್ರಮಾಣದ ಮಾಹಿತಿಯನ್ನು ಆದಷ್ಟೂ ಹೆಚ್ಚು ವಿವರಗಳೊಡನೆ ನೀಡುವ ಸಾಧ್ಯತೆ ಈ ಪತ್ರಿಕೆಗಳ ವೈಶಿಷ್ಟ್ಯ. ವಿಷಯ ಕ್ಲಿಷ್ಟವೆಂದು ಸಾಮಾನ್ಯ ಪತ್ರಿಕೆಗಳಲ್ಲಿ ಜಾಗಪಡೆಯದ ಸಂಗತಿಗಳನ್ನೂ ಇವು ಓದುಗರಿಗೆ ತಲುಪಿಸಬಲ್ಲವು.

ಕನ್ನಡದಲ್ಲಿ ಅನೇಕ ವಿಜ್ಞಾನ ಪತ್ರಿಕೆಗಳು ಬಂದುಹೋಗಿವೆ. ಒಂದು ಶತಮಾನದಷ್ಟು ಹಿಂದೆ ಬೆಳ್ಳಾವೆ ವೆಂಕಟನಾರಣಪ್ಪನವರು ಪ್ರಾರಂಭಿಸಿ ನಡೆಸಿದ 'ವಿಜ್ಞಾನ'ದಿಂದ ಇತ್ತೀಚಿನವರೆಗೂ ಅನೇಕ ಪತ್ರಿಕೆಗಳು ಕನ್ನಡದ ಓದುಗರನ್ನು ತಲುಪಲು ಪ್ರಯತ್ನಿಸಿವೆ.

ಗುರುವಾರ, ಜೂನ್ 16, 2016

ಹೀಗೊಂದು ಗಣಿತದ ಕತೆ: ಶಿಷ್ಯರ ಬುದ್ಧಿವಂತಿಕೆ

ರೋಹಿತ್ ಚಕ್ರತೀರ್ಥ

ಛಲ ಬಿಡದ ತ್ರಿವಿಕ್ರಮನು, ಮತ್ತೆ, ಆ ಹಳೇ ಮರದ ಕೊಂಬೆಗೆ ಹಾರಿಹೋಗಿ ತಲೆಕೆಳಗಾಗಿ ನೇತುಬಿದ್ದಿದ್ದ ಬೇತಾಳವನ್ನು ಇಳಿಸಿ ಬೆನ್ನಿಗೆ ಹಾಕಿಕೊಂಡು ಕಾಡಿನ ದಾರಿಯಲ್ಲಿ ನಡೆಯತೊಡಗಿದನು. ಆಗ ಬೇತಾಳವು, "ರಾಜಾ, ಮರಳಿ ಯತ್ನವ ಮಾಡು ಎಂಬ ಮಾತಿನಲ್ಲಿ ನೂರಕ್ಕೆ ನೂರರಷ್ಟು ನಂಬಿಕೆ ಇಟ್ಟು ದೃಢ ಮನಸ್ಸಿನಿಂದ ಕೆಲಸ ಮಾಡುತ್ತಿರುವ ನಿನ್ನ ಅವಸ್ಥೆಯನ್ನು ಕಂಡಾಗ ಮೆಚ್ಚುಗೆಯೂ ಕನಿಕರವೂ ಒಟ್ಟಿಗೇ ಮೂಡುತ್ತವೆ. ಒಂದೇ ಕೆಲಸವನ್ನು ಮತ್ತೆಮತ್ತೆ ಮಾಡುವ ಸಂದರ್ಭ ಬಂದಾಗ, ಅದನ್ನು ಸರಳಗೊಳಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆಯಾದರೂ ನೀನು ಯೋಚಿಸುವುದು ಬೇಡವೇ? ಅದಕ್ಕೆ ತಕ್ಕ ಹಾಗೆ ಒಂದು ಕತೆ ನನಗೆ ನೆನಪಾಗುತ್ತಿದೆ. ಗಮನವಿಟ್ಟು ಕೇಳು" ಎಂದು ತನ್ನ ಕತೆಯ ಬುಟ್ಟಿ ಬಿಚ್ಚಿತು.

ಅದು ಮೂರನೇ ತರಗತಿ. ಕ್ಲಾಸಿನೊಳಗೆ ಬಂದ ಮೇಸ್ಟ್ರಿಗೆ ಅಂದೇಕೋ ಮಹಾಜಾಡ್ಯ ಆವರಿಸಿದಂತಿದೆ. ಈ ಮಕ್ಕಳಿಗೆ ಸುಲಭಕ್ಕೆ ಬಿಡಿಸಲಾಗದ ಲೆಕ್ಕ ಕೊಟ್ಟು ಅರ್ಧ-ಮುಕ್ಕಾಲು ಗಂಟೆ ಒದ್ದಾಡಿಸಿಬಿಟ್ಟರೆ ತನ್ನ ಪೀರಿಯಡ್ಡು ಮುಗಿಯುತ್ತದೆ ಎಂಬ ಹಂಚಿಕೆ ಹಾಕಿದವರೇ "ಒಂದರಿಂದ ನೂರರವರೆಗಿನ ಎಲ್ಲ ಸಂಖ್ಯೆಗಳ ಮೊತ್ತ ಎಷ್ಟು ಹುಡುಕಿ ನೋಡುವಾ" ಎಂದು ಸವಾಲು ಹಾಕಿ ಕುರ್ಚಿಯಲ್ಲಿ ಸುಖಾಸೀನರಾಗಿದ್ದಾರೆ. ಮೇಸ್ಟ್ರು ಕಾಲ ಅಂಗುಷ್ಠದಲ್ಲಿ ಹೇಳಿದ್ದನ್ನು ಭಕ್ತಿಯಿಂದ ಶಿರಸಾವಹಿಸಿ ಮಾಡುವ ಮಕ್ಕಳು ಕೂಡಲೇ ಹಲಗೆ ಬಳಪ ಎತ್ತಿಕೊಳ್ಳುತ್ತಾರೆ. ತಮ್ಮ ಶಕ್ತ್ಯಾನುಸಾರ ಪ್ರಶ್ನೆಯ ಚಕ್ರವ್ಯೂಹವನ್ನು ಭೇದಿಸಲು ಸನ್ನದ್ಧರಾಗುತ್ತಾರೆ.

ಮಂಗಳವಾರ, ಜೂನ್ 14, 2016

ಸೀನಿನ ಲೆಕ್ಕಾಚಾರ!

ಕೊಳ್ಳೇಗಾಲ ಶರ್ಮ


ನಾನು ಸೀನಿದಾಗಲೆಲ್ಲ ಕೇಳುತ್ತಿದ್ದ ಮಾತು. “ಅಯ್ಯೋ. ಒಂಟಿ ಸೀನು ಸೀನಿಬಿಟ್ಟೆಯಲ್ಲೋ? ಇನ್ನೊಂದು ಸೀನು ಸೀನಿಬಿಡು.” ಇದು ಅಮ್ಮ ಸೀನಿನಿಂದ ನಾನು ಪಡುತ್ತಿದ್ದ ಅವಸ್ಥೆಯನ್ನು ಕಂಡು ತಮಾಷೆ ಮಾಡಲು ಹೇಳುತ್ತಿದ್ದಳೋ, ಅಥವಾ ಸೀನಿದ್ದರಿಂದಾದ ಮುಜುಗರ ಕಡಿಮೆಯಾಗುವಂತೆ ಸಮಾಧಾನ ಮಾಡಲು ಹೇಳುತ್ತಿದ್ದಳೋ ಗೊತ್ತಿಲ್ಲ. ಒಟ್ಟಾರೆ ಸೀನುವುದು ಎಂದರೆ ಕಸಿವಿಸಿಯ ವಿಷಯ ಎನ್ನುವುದಂತೂ ಮನಸ್ಸಿನಲ್ಲಿ ಗಟ್ಟಿಯಾಗಿ ನೆಲೆಯಾಗಿ ಬಿಟ್ಟಿದೆ. ಅಮ್ಮ ಏನೋ ಇನ್ನೊಮ್ಮೆ ಸೀನು ಎಂದು ಬಿಡುತ್ತಿದ್ದಳು. ಆದರೆ ಹಾಗೆ ಬೇಕೆಂದ ಹಾಗೆ, ಬೇಕಾದಷ್ಟು ಬಾರಿ ಸೀನಲು ಆದೀತೇ? ಅದೇನು ನಮ್ಮ ಮಾತು ಕೇಳುವ ವಿದ್ಯಮಾನವೇ?

ಹೀಗೆಂದು ನಾವು ನೀವು ಹೇಳಿಬಿಡಬಹುದು. ಆದರೆ ಅಮೆರಿಕದ ತಂತ್ರಜ್ಞಾನದ ಕಾಶಿ ಮಸ್ಯಾಚುಸೆಟ್ಸ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಯಲ್ಲಿ ಭೌತವಿಜ್ಞಾನಿಯಾಗಿರುವ ಲಿಡಿಯಾ ಬೋರೊಯಿಬಾ ಹೀಗೆನ್ನುವುದಿಲ್ಲ. ಹಾಗಂತ ಆಕೆಗೆ ಸದಾ ಸೀನುವ ಖಾಯಿಲೆ ಇದೆ ಎನ್ನಬೇಡಿ. ಆಕೆ ಸೀನಿನ ಭೌತಶಾಸ್ತ್ರವನ್ನು ಲೆಕ್ಕ ಹಾಕುತ್ತಿರುವ ವಿಜ್ಞಾನಿ ಅಷ್ಟೆ. ಬೇಕೆಂದಾಗ ನಿಮಗೆ ಸೀನು ತರಿಸಿ, ನೀವು ಸೀನುವ ಸಂದರ್ಭದಲ್ಲಿ ನಡೆಯುವ ವಿದ್ಯಮಾನವನ್ನು ಕೂಲಂಕಷವಾಗಿ ಲೆಕ್ಕಾಚಾರ ಹಾಕುವ ಕೆಲಸದಲ್ಲಿ ಲಿಡಿಯಾ ನಿರತೆ. ಈಕೆಯ ಪ್ರಕಾರ ಸೀನುವ ಬಗ್ಗೆ ನಮಗೆ ಹೆಚ್ಚೇನೂ ತಿಳಿದಿಲ್ಲವಂತೆ.

ನಿಜ. ಮೂಗಿಗೆ ಒಂದಿಷ್ಟು ಕಿರಿಕಿರಿಯಾದಾಗ ಫಟಾರನೆ ಆಗುವ ಮಹಾಸ್ಫೋಟವೇ ಸೀನು.

ಬುಧವಾರ, ಜೂನ್ 8, 2016

ಗ್ಯಾಜೆಟ್ ಇಜ್ಞಾನ: ಹೊಸ ಲೆನೋವೋ‌ ಫೋನ್ ಸದ್ಯದಲ್ಲೇ ಮಾರುಕಟ್ಟೆಗೆ

ಟಿ. ಜಿ. ಶ್ರೀನಿಧಿ



ಅಪ್‌ಡೇಟ್: ಲೆನೋವೋ ವೈಬ್ K5 ರೂ. ೬,೯೯೯ರ ಮುಖಬೆಲೆಯೊಡನೆ ಬಿಡುಗಡೆಯಾಗಿದೆ. 

ಈಚಿನ ದಿನಗಳಲ್ಲಿ ನಮ್ಮ ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುವೇ ಇಲ್ಲ. ಹಲವು ಮೊಬೈಲ್ ನಿರ್ಮಾತೃಗಳ ಹತ್ತಾರು ಮಾದರಿಯ ಹೊಸ ಫೋನುಗಳು ಸದಾಕಾಲ ಸುದ್ದಿಮಾಡುತ್ತಲೇ ಇರುತ್ತವೆ.

ಈ ಬಿಡುವಿಲ್ಲದ ಚಟುವಟಿಕೆಯಿಂದಾಗಿ ಮೊಬೈಲ್ ಗ್ರಾಹಕರಿಗೆ ಲಭ್ಯವಿರುವ ಆಯ್ಕೆಗಳು ದಿನೇದಿನೇ ಹೆಚ್ಚುತ್ತಿವೆ. ಅಷ್ಟೇ ಅಲ್ಲ, ಮೊಬೈಲಿನಲ್ಲಿ ದೊರಕುವ ಸೌಲಭ್ಯಗಳೂ ಹೆಚ್ಚುತ್ತಿವೆ. ಮೊದಲಿಗೆ ದುಬಾರಿ ಫೋನುಗಳಲ್ಲಷ್ಟೆ ಕಾಣಿಸಿಕೊಂಡ ಅದೆಷ್ಟೋ ಅನುಕೂಲಗಳು ಅವುಗಳ ಹೋಲಿಕೆಯಲ್ಲಿ ಸಾಕಷ್ಟು ಕಡಿಮೆ ಬೆಲೆಯ ಮಾದರಿಗಳಲ್ಲೂ ಸಿಗುತ್ತಿವೆ. ಹಾಗಾಗಿಯೇ ಏನೋ, ಹತ್ತು ಸಾವಿರ ರೂಪಾಯಿಯ ಆಸುಪಾಸಿನಲ್ಲಿ ಸಾಕಷ್ಟು ಉತ್ತಮವಾದ ಫೋನ್ ಕೊಳ್ಳುವುದು ಇದೀಗ ಸಾಧ್ಯವಾಗಿದೆ.

ಹಾಗೆಂದು ಎಲ್ಲಾದರೂ ಸುಮ್ಮನಿರುವುದು ಸಾಧ್ಯವೇ, ಉತ್ತಮ ಮೊಬೈಲ್ ಫೋನುಗಳನ್ನು ಅದಕ್ಕಿಂತ ಕಡಿಮೆ ಬೆಲೆಯಲ್ಲಿ ನೀಡುವ ಪ್ರಯತ್ನಗಳೂ ಸಾಗಿವೆ. ಕಳೆದ ವರ್ಷ ಮಾರುಕಟ್ಟೆಗೆ ಬಂದು ಭಾರೀ ಜನಪ್ರಿಯತೆ ಗಳಿಸಿಕೊಂಡಿದ್ದ ಲೆನೋವೋ A6000 ಹಾಗೂ A6000 ಪ್ಲಸ್ ಇಂತಹ ಫೋನುಗಳಿಗೆ ಉತ್ತಮ ಉದಾಹರಣೆಗಳು.

ಈ ಪ್ರಯತ್ನದ ಮುಂದುವರೆದ ಅಂಗವಾಗಿ ಲೆನೋವೋ ಸಂಸ್ಥೆ ತನ್ನ 'ವೈಬ್ K5' ಮಾದರಿಯನ್ನು ಈ ತಿಂಗಳು (ಜೂನ್ ೨೦೧೬) ಭಾರತೀಯ ಮಾರುಕಟ್ಟೆಗೆ ಬಿಡುಗಡೆಮಾಡುವ ನಿರೀಕ್ಷೆಯಿದೆ.

ಮಂಗಳವಾರ, ಜೂನ್ 7, 2016

ಪ್ರಣಯದಾಟವೂ ಕಾಂತಶಕ್ತಿಯೂ

ಕೊಳ್ಳೇಗಾಲ ಶರ್ಮ

ಪ್ರಣಯದಾಟ ಕಾಂತ-ಕಾಂತೆಯರ ನಡುವೆ ನಡೆಯುತ್ತದೆ. ಅದರಲ್ಲನೇನು ವಿಶೇಷ? ಎಂದಿರಾ? ನಿಜ. ಪ್ರಣಯದಾಟ ಗಂಡು-ಹೆಣ್ಣಿನ ನಡುವಿನ ಆಕರ್ಷಣೆಯ ಫಲ. ಗಂಡು ಹೆಣ್ಣನ್ನು ಆಕರ್ಷಿಸುತ್ತದೋ, ಹೆಣ್ಣು ಗಂಡನ್ನು ಆಕರ್ಷಿಸುತ್ತದೋ, ಗೊತ್ತಿಲ್ಲ. ಒಟ್ಟಾರೆ ಸಂತಾನಾಭಿವೃದ್ಧಿಯಲ್ಲಿ ಪ್ರಣಯದಾಟಗಳು ಪ್ರಮುಖ ಪಾತ್ರ ವಹಿಸುತ್ತವೆನ್ನುವುದು ಮಾತ್ರ ನಿಜ. ಈ ಆಟ ಕೇವಲ ಹೆಣ್ಣು, ಗಂಡಿನ ನಡುವಿನ ಆಕರ್ಷಣೆಯಲ್ಲ. ಇದರಲ್ಲಿ ಈ ಭೂಮಿಯ ಕಾಂತ ಶಕ್ತಿಯ ಪ್ರಭಾವವೂ ಇದೆಯಂತೆ.

ಗಂಡು-ಹೆಣ್ಣಿನ ನಡುವೆ ನಡೆಯುವ ಪ್ರಣಯಕೇಳಿಯನ್ನು ವಿದ್ಯುತ್ ಅಥವಾ ಅಯಸ್ಕಾಂತ ಶಕ್ತಿಯು ಪ್ರಭಾವಿಸುತ್ತದೆನ್ನುವ ಸ್ವಾರಸ್ಯಕರ (ಶಾಕಿಂಗ್ ಸುದ್ದಿ ಅಂದರೂ ಸರಿಯೇ. ಆಕರ್ಷಕ ಸುದ್ದಿ ಅಂದರೂ ಸರಿಯೇ!) ಸುದ್ದಿಯನ್ನು ತೈವಾನಿನ ಚಾಂಗ್ ಗುನ್ ವಿವಿಯ ವಿಜ್ಞಾನಿ ಚಿಯಾಲಿನ್ ವೂ ಮತ್ತು ಸಂಗಡಿಗರು ಇತ್ತೀಚಿನ ಪಿಎಲ್ಓಎಸ್ ಒನ್ ಪತ್ರಿಕೆಯಲ್ಲಿ ವರದಿ ಮಾಡಿದ್ದಾರೆ.

ಗುರುವಾರ, ಜೂನ್ 2, 2016

ಗತಿಸಿಹೋದವು ಆ ದಿನಗಳು!

ರೋಹಿತ್ ಚಕ್ರತೀರ್ಥ

"ನಮ್ ಕಾಲದಲ್ಲಿ ನೋಡಬೇಕಿತ್ತು!" ಎಂದೇ ಹಲವು ಹಿರಿಯರ ಕತೆಗಳು ಶುರುವಾಗುವುದು. ಹಿಂದಿನ ಕಾಲದಲ್ಲಿ ಏನಿತ್ತು? ಫಾಸ್ಟ್ ಟ್ರೇನು, ಏರೋಪ್ಲೇನುಗಳು ಇರಲಿಲ್ಲ. ಕಾಗದ, ತಂತಿ ಬಿಟ್ಟರೆ ಬೇರಾವ ಸಂವಹನ ಮಾಧ್ಯಮವೂ ಇರಲಿಲ್ಲ. ಕಪ್ಪುಬಿಳುಪು ಟಿವಿಯಲ್ಲಿ ದೂರದರ್ಶನ ಹಾಕಿದ್ದನ್ನೇ ಮೂರು ಹೊತ್ತು ನೋಡುತ್ತ ಕೂರಬೇಕಿತ್ತು. ಫೇಸ್‌ಬುಕ್ ಬಿಡಿ, ಈಗಿನವರಿಗೆ ಪರಿಚಯವಿಲ್ಲದ ಮೈಸ್ಪೇಸ್, ಆರ್ಕುಟ್ ಮುಂತಾದ ಪಳೆಯುಳಿಕೆಗಳು ಕೂಡ ಇರದ ಕಾಲ ಅದು. ಅಂಥಾದ್ದರಲ್ಲಿ ಯಾವ ಸುಖ-ಸೌಕರ್ಯ ಇಲ್ಲದ ಆ ಶಿಲಾಯುಗವನ್ನು ಗೋಲ್ಡನ್ ಏಜ್ ಅಂತೀರಲ್ಲ, ತಲೆ ಕೆಟ್ಟಿದೆಯೇ ಎಂದು ಈಗಿನವರು ಕೇಳಿಯಾರು. ತಡೆಯಿರಿ, ಇನ್ನೈವತ್ತು ವರ್ಷಗಳು ಹೋದರೆ ಇದೇ ಮಂದಿ "ನಮ್ಮ ಕಾಲದಲ್ಲಿ ಎಷ್ಟೊಂದು ಚೆನ್ನಿತ್ತು! ಸಂವಹನಕ್ಕೆ ಸ್ಮಾರ್ಟ್ ಫೋನ್ ಬಿಟ್ಟರೆ ಬೇರೇನಿರಲಿಲ್ಲ!" ಎನ್ನುವ ಕಾಲ ಬರುತ್ತದೆ.

ಮಂಗಳವಾರ, ಮೇ 31, 2016

ಅಪ್ಪನ ಬೆಲೆ ಏನು ಗೊತ್ತೇ?

ಕೊಳ್ಳೇಗಾಲ ಶರ್ಮ

Frédéric SALEIN / Wikimedia Commons

ಮನೆ ಜಗಳದ ವಿಷಯ ಅಲ್ಲ ಬಿಡಿ. ಇದು ಜೀವಿವಿಜ್ಞಾನದ ವಿಸ್ಮಯ. ಹೌದು. ಜೀವಿಗಳಲ್ಲಿ ಗಂಡು ಹೆಣ್ಣು ಎನ್ನುವ ಭೇದವನ್ನು ಯಃಕಶ್ಚಿತ್ ಕೀಟಗಳಿಂದ ಮಾನವನವರೆಗೂ ಕಾಣುತ್ತೇವೆ. ಜೀವಿಗಳ ಬೆಳೆವಣಿಗೆ, ಉಳಿವಿಗೆ ಹೆಣ್ಣಿನ ಕೊಡುಗೆ ಏನೆಂಬುದನ್ನು ವಿವರಿಸಬೇಕಿಲ್ಲ. ನೂರಾರು ಸಂತಾನವನ್ನು ಹೆರುವ ಹೊಣೆ ಹೆಣ್ಣಿನದ್ದೇ. ಅದಕ್ಕೇ ಅದಕ್ಕೆ ಅಮ್ಮನ ಪಟ್ಟ. ಹಾಗಿದ್ದರೆ ಗಂಡಿನ ಪಾತ್ರವೇನು? ಕೇವಲ ಸಂತಾನಾಭಿವೃದ್ಧಿ ಮಾಡಲಿ ಎಂದು ಹೆಣ್ಣಿಗೆ ವೀರ್ಯಾಣುವನ್ನು ಕೊಡುವುದಷ್ಟೆ ಗಂಡಿನ ಕೆಲಸವೆ? ಅಥವಾ ಅದಕ್ಕಿಂತಲೂ ಹೆಚ್ಚಿನದೇನಾದರೂ ಇದೆಯೋ? ಇದು ಪ್ರಶ್ನೆ.

ಈ ಪ್ರಶ್ನೆಯೊಳಗೆ ಅಡಗಿದೆ ಅಪ್ಪನ ಕುರಿತ ಇನ್ನೊಂದು ಪ್ರಶ್ನೆ.
badge