ಮಂಗಳವಾರ, ಜುಲೈ 24, 2018

ಜುಲೈ ೨೯: ಇಜ್ಞಾನ ಟ್ರಸ್ಟ್‌ನಿಂದ ಬೆಂಗಳೂರಿನಲ್ಲಿ ಹಲವು ಕಾರ್ಯಕ್ರಮ

ಇಜ್ಞಾನ ವಾರ್ತೆ

ಬೇರೆಬೇರೆ ಕ್ಷೇತ್ರಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಕನ್ನಡದಲ್ಲೇ ಒದಗಿಸುವ ತನ್ನ ಪ್ರಯತ್ನಗಳ ಮುಂದುವರಿಕೆಯಾಗಿ ಇಜ್ಞಾನ ಟ್ರಸ್ಟ್ ಬರುವ ಜುಲೈ ೨೯ರಂದು 'ಕನ್ನಡ ನೆಲ-ಜಲ : ನಾಳಿನ ಅರಿವು' ವಿಚಾರ ಸಂಕಿರಣವನ್ನು ಏರ್ಪಡಿಸಿದೆ. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ವಿವಿಧ ವಿಷಯತಜ್ಞರು ಇಂದಿನ ಮಹತ್ವದ ವಿಷಯಗಳಾದ ಪರಿಸರ, ಇಂಧನ ಹಾಗೂ ಆಹಾರ ಕುರಿತು ಕನ್ನಡದಲ್ಲಿ ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ.

ವಿವಿಧ ವಿಷಯಗಳನ್ನು ಕುರಿತ ಶೈಕ್ಷಣಿಕ ಪುಸ್ತಕಗಳನ್ನು ಶಾಲಾ ಗ್ರಂಥಾಲಯಗಳಿಗೆ ನೀಡುವ ಇಜ್ಞಾನ ಟ್ರಸ್ಟ್ ಯೋಜನೆ 'ಕಲಿಕೆಗೆ ಕೊಡುಗೆ'ಯ ಎರಡನೇ ವರ್ಷದ ಚಟುವಟಿಕೆಗಳನ್ನೂ ಈ ಸಂದರ್ಭದಲ್ಲಿ ಉದ್ಘಾಟಿಸಲಾಗುವುದು. ಕಳೆದಬಾರಿ ಈ ಯೋಜನೆಯಡಿ ಕನ್ನಡ ಕಲಿಕೆಗೆ ಸಂಬಂಧಿಸಿದ ಪುಸ್ತಕಗಳನ್ನು ೧೫೦ಕ್ಕೂ ಹೆಚ್ಚು ಶಾಲೆಗಳಿಗೆ ನೀಡಿಲಾಗಿತ್ತು. ಅದೇ ರೀತಿ ಈ ಬಾರಿ ಕನ್ನಡ ಭಾಷೆ,  ಸಂಸ್ಕೃತಿ ಹಾಗೂ ವಿಜ್ಞಾನ - ತಂತ್ರಜ್ಞಾನ ವಿಷಯಗಳಿಗೆ ಸಂಬಂಧಪಟ್ಟ ವಿವಿಧ ಕೃತಿಗಳನ್ನು ಒಂದು ನೂರಕ್ಕೂ ಹೆಚ್ಚು ಮಾಧ್ಯಮಿಕ ಹಾಗೂ ಪ್ರೌಢಶಾಲಾ ಗ್ರಂಥಾಲಯಗಳಿಗೆ ಕೊಡುಗೆಯಾಗಿ ನೀಡಲಾಗುವುದು.

ವಿವಿಧ ಪ್ರಕಾಶಕರು ಪ್ರಕಟಿಸಿರುವ ಹಲವು ಹೊಸ ಪುಸ್ತಕಗಳನ್ನು ಇದೇ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಲಾಗುವುದು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ. ಪದ್ಮಾಶೇಖರ್ ಪುಸ್ತಕಗಳ ಲೋಕಾರ್ಪಣೆ ನೆರವೇರಿಸಲಿದ್ದಾರೆ.

ಈ ಕಾರ್ಯಕ್ರಮವನ್ನು ನವಕರ್ನಾಟಕ ಪ್ರಕಾಶನ, ಭಾರತೀ ಪ್ರಕಾಶನ, ಹೆಮ್ಮರ ಪ್ರಕಾಶನ ಹಾಗೂ ಸಹಬಾಳ್ವೆ ಸಂಸ್ಥೆಗಳ ಸಹಯೋಗದಲ್ಲಿ ಇಜ್ಞಾನ ಟ್ರಸ್ಟ್ ಆಯೋಜಿಸಿದೆ. ಈ ಎಲ್ಲ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಇಜ್ಞಾನದ ಟ್ರಸ್ಟೀಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

ವಿಚಾರ ಸಂಕಿರಣದಲ್ಲಿ ಭಾಗವಹಿಸುವ ಪರಿಣತರು:
  • ಜಲ ಮತ್ತು ಅರಣ್ಯ - ಶ್ರೀ ಎಚ್. ಎನ್. ಎ. ಪ್ರಸಾದ್, ಪರಿಸರ ಸಂರಕ್ಷಣಾವಾದಿ ಹಾಗೂ ಸಾಮಾಜಿಕ ಕಾರ್ಯಕರ್ತರು
  • ಇಂಧನ - ಶ್ರೀ ವೈ. ಬಿ. ರಾಮಕೃಷ್ಣ, ಅಧ್ಯಕ್ಷರು, ರಾಷ್ಟ್ರೀಯ ಜೈವಿಕ ಇಂಧನ ಕೋಶ, ನವದೆಹಲಿ
  • ಆಹಾರ - ಡಾ. ನಾ. ಸೋಮೇಶ್ವರ, ವೈದ್ಯರು ಹಾಗೂ ಖ್ಯಾತ ಲೇಖಕರು
ಸಮಯ: ಜುಲೈ ೨೯, ೨೦೧೮ ಭಾನುವಾರ ಬೆಳಿಗ್ಗೆ ೧೦:೩೦ಕ್ಕೆ
ಸ್ಥಳ: ಶ್ರೀ ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು

badge