ಶುಕ್ರವಾರ, ಫೆಬ್ರವರಿ 28, 2014

ಸೋಶಿಯಲ್ ರೀಡಿಂಗ್: ಒಟ್ಟಿಗೆ ಓದೋಣ!

ಟಿ. ಜಿ. ಶ್ರೀನಿಧಿ

ಪತ್ರಿಕೆಗಳಲ್ಲಿ ಬರುವ ಧಾರಾವಾಹಿಗಳನ್ನು ಓದಿ ಮಿತ್ರರೆಲ್ಲ ಸೇರಿದಾಗ ಅದರ ಬಗ್ಗೆ ಚರ್ಚಿಸುವ ಹವ್ಯಾಸ ಅನೇಕರಲ್ಲಿತ್ತು. ತಮ್ಮ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸವನ್ನು ಬೆಳೆಸಲು ಡಾ. ಬಿ. ಜಿ. ಎಲ್. ಸ್ವಾಮಿಯವರು ಒಂದೇ ಕೃತಿಯ ಹಲವು ಪ್ರತಿಗಳನ್ನು ಖರೀದಿಸಿ ಅವರಿಗೆಲ್ಲ ಕೊಡುತ್ತಿದ್ದರಂತೆ; ಓದಿದ ಮೇಲೆ ಎಲ್ಲರೂ ಸೇರಿ ಆ ಕೃತಿಯ ಬಗ್ಗೆ ವಿಚಾರವಿನಿಮಯ ಮಾಡಿಕೊಳ್ಳಬೇಕು ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಇಂದಿನ ಡಿಜಿಟಲ್ ಯುಗದಲ್ಲೂ ಇಂತಹ ಅಭ್ಯಾಸ ಇಟ್ಟುಕೊಳ್ಳುವುದನ್ನು ಸಾಧ್ಯವಾಗಿಸಿರುವುದು 'ಸೋಶಿಯಲ್ ರೀಡಿಂಗ್'ನ  ಪರಿಕಲ್ಪನೆ.

ನಾವು ಯಾವ ಪುಸ್ತಕ ಓದುತ್ತಿದ್ದೇವೆ, ಅದರ ಬಗ್ಗೆ ನಮ್ಮ ಅನಿಸಿಕೆ ಏನು ಎನ್ನುವುದರಿಂದ ಪ್ರಾರಂಭಿಸಿ ಎಷ್ಟು ಪುಟ ಓದಿಯಾಗಿದೆ, ಯಾವ ಪುಟದಲ್ಲಿ ಏನು ಇಷ್ಟವಾಯಿತು-ಇಷ್ಟವಾಗಲಿಲ್ಲ ಎನ್ನುವವರೆಗೆ ಹಲವು ವಿಷಯಗಳನ್ನು ಸಮಾಜ ಜಾಲಗಳಲ್ಲಿನ ನಮ್ಮ ಸ್ನೇಹಿತರೊಡನೆ ಹಂಚಿಕೊಳ್ಳಲು ಈ ಪರಿಕಲ್ಪನೆ ಸಹಾಯ ಮಾಡುತ್ತದೆ.

ಮುಂದೆ ಯಾವ ಪುಸ್ತಕ ಓದಬಹುದು ಎಂದು ನಮ್ಮ ಸ್ನೇಹಿತರಿಂದ ತಿಳಿದುಕೊಳ್ಳಲೂ ಸೋಶಿಯಲ್ ರೀಡಿಂಗ್ ಅಭ್ಯಾಸ ನೆರವಾಗಬಲ್ಲದು.

ಶುಕ್ರವಾರ, ಫೆಬ್ರವರಿ 21, 2014

ನಾವು, ನಮ್ಮ ತಂತ್ರಾಂಶ ಮತ್ತು ಬಳಕೆದಾರ

ಟಿ. ಜಿ. ಶ್ರೀನಿಧಿ

ನಾವು ಬರೆಯುವ ತಂತ್ರಾಂಶದ ಉದ್ದೇಶ ಏನೇ ಇರಬಹುದು, ಆದರೆ ಅದನ್ನು ಸಿದ್ಧಪಡಿಸುವುದರ ಹಿಂದೆ ತಂತ್ರಾಂಶದ ಬಳಕೆದಾರರಿಗೆ ಒಂದಲ್ಲ ಒಂದು ರೀತಿಯಲ್ಲಿ ನೆರವಾಗುವ ಸದುದ್ದೇಶವಂತೂ ಇರುತ್ತದೆ ಎನ್ನಬಹುದು (ಇತರರಿಗೆ ತೊಂದರೆಮಾಡುವ ವೈರಸ್‌ನಂತಹ ಕುತಂತ್ರಾಂಶಗಳ ಮಾತು ಇಲ್ಲಿ ಬೇಡ; ಅಂತಹ ತಂತ್ರಾಂಶಗಳ ರಚನೆ ತಪ್ಪು ಮಾತ್ರವೇ ಅಲ್ಲ, ಅಪರಾಧವೂ ಹೌದು!).

ಬಳಕೆದಾರರಿಗೆ ಉಪಯುಕ್ತವಾಗುವಂತಹ ತಂತ್ರಾಂಶ ಸಿದ್ಧಪಡಿಸುವಲ್ಲಿ ಅನೇಕ ಹೆಜ್ಜೆಗಳಿವೆ: ತಂತ್ರಾಂಶದ ಅಗತ್ಯಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು, ಆ ಅಗತ್ಯಗಳಿಗೆ ತಕ್ಕಂತೆ ಕ್ರಮವಿಧಿಗಳನ್ನು (ಪ್ರೋಗ್ರಾಮ್) ರಚಿಸುವುದು, ಹಾಗೆ ರಚಿಸಿದ ಕ್ರಮವಿಧಿಗಳಲ್ಲಿ ಯಾವುದೇ ತಪ್ಪುಗಳಿಲ್ಲದಂತೆ ನೋಡಿಕೊಳ್ಳುವುದು, ತಂತ್ರಾಂಶದ ಒಟ್ಟಾರೆ ಕಾರ್ಯವಿಧಾನ ಸಮರ್ಪಕವಾಗಿದೆಯೇ ಎಂದು ಪರೀಕ್ಷಿಸುವುದು - ಹೀಗೆ.

ಈ ಎಲ್ಲ ಹೆಜ್ಜೆಗಳಷ್ಟೇ ಮಹತ್ವದ ಇನ್ನೊಂದು ಭಾಗ, ಬಳಕೆದಾರನ ಮಟ್ಟಿಗೆ ತಂತ್ರಾಂಶದ ಬಳಕೆ ಸರಾಗವಾಗಿರುವಂತೆ ನೋಡಿಕೊಳ್ಳುವುದು. ನಾವು ರೂಪಿಸಿರುವ ತಂತ್ರಾಂಶ ಎಷ್ಟೇ ಸಮರ್ಥವಾಗಿದ್ದರೂ ಬಳಕೆದಾರರ ಮಟ್ಟಿಗೆ ಉಪಯೋಗಿಸಲು ಕಷ್ಟವಾಗುವಂತಿದ್ದರೆ ಆ ತಂತ್ರಾಂಶವನ್ನು ರೂಪಿಸಿದ ಮೂಲ ಉದ್ದೇಶವೇ ವಿಫಲವಾದಂತೆ.

ಹಾಗಾಗಿ ತಂತ್ರಾಂಶದ ತಾಂತ್ರಿಕ ವಿವರಗಳಷ್ಟೇ ಅದರ ಅಂತರ ಸಂಪರ್ಕ ಸಾಧನ (ಯೂಸರ್ ಇಂಟರ್‌ಫೇಸ್, ಯುಐ) ಕೂಡ ಮುಖ್ಯವಾಗುತ್ತದೆ. ಈ ಅಂತರ ಸಂಪರ್ಕ ಸಾಧನದ ವಿನ್ಯಾಸ (ಯುಐ ಡಿಸೈನ್), ಹಾಗಾಗಿಯೇ, ತಂತ್ರಾಂಶ ಅಭಿವೃದ್ಧಿಯ ಪ್ರಮುಖ ಭಾಗಗಳಲ್ಲೊಂದು.

ಭಾನುವಾರ, ಫೆಬ್ರವರಿ 16, 2014

ಡಾಟ್ ಕಾಮ್ ಕತೆಗೆ ಹೊಸದೊಂದು ತಿರುವು

ಟಿ. ಜಿ. ಶ್ರೀನಿಧಿ

ವಿಶ್ವವ್ಯಾಪಿ ಜಾಲ (ವರ್ಲ್ಡ್‌ವೈಡ್ ವೆಬ್) ನಮ್ಮ ಕಣ್ಣಮುಂದೆ ಮಾಹಿತಿಯ ಮಹಾಸಾಗರವನ್ನೇ ತಂದಿಟ್ಟಿದೆಯಲ್ಲ, ಅಷ್ಟೆಲ್ಲ ಮಾಹಿತಿ ನಮಗೆ ದೊರಕುವುದು ವೆಬ್‌ಸೈಟ್, ಅಂದರೆ ಜಾಲತಾಣಗಳ ಮೂಲಕ. ಈ ಜಾಲತಾಣಗಳನ್ನು ಬಹಳಷ್ಟು ಜನ ಗುರುತಿಸುವುದು ಡಾಟ್ ಕಾಮ್‌ಗಳೆಂದೇ.

'ಡಾಟ್ ಕಾಮ್' ಎನ್ನುವುದು ಜಾಲತಾಣಗಳ ಹೆಸರಿಗೆ ಪರ್ಯಾಯವಾಗಿ ಬೆಳೆದುಬಿಟ್ಟಿದ್ದರೂ ವಾಸ್ತವದಲ್ಲಿ ಅದು ಜಾಲತಾಣಗಳ ವಿಳಾಸದ ಒಂದು ಭಾಗವಷ್ಟೇ.

ವಿಶ್ವವ್ಯಾಪಿ ಜಾಲದಲ್ಲಿರುವ ಕೋಟ್ಯಂತರ ತಾಣಗಳನ್ನು ಪ್ರತ್ಯೇಕವಾಗಿ ಗುರುತಿಸುವ ವಿಳಾಸ - ಯೂನಿಫಾರ್ಮ್ ರಿಸೋರ್ಸ್ ಲೊಕೇಟರ್ (ಯುಆರ್‌ಎಲ್) - ಇರುತ್ತದಲ್ಲ, ಅದರ ಕೊನೆಯ ಭಾಗವನ್ನು ಜೆನೆರಿಕ್ ಟಾಪ್ ಲೆವೆಲ್ ಡೊಮೈನ್ (ಜಿಟಿಎಲ್‌ಡಿ) ಎಂದು ಕರೆಯುತ್ತಾರೆ.

ಡಾಟ್ ಕಾಮ್ ಎನ್ನುವುದು ಇಂತಹ ಜಿಟಿಎಲ್‌ಡಿಗಳಲ್ಲೊಂದು. ಡಾಟ್ ಕಾಮ್ ಅಲ್ಲದೆ .net, .org, .biz, .edu ಮುಂತಾದ ಇನ್ನೂ ಅನೇಕ ಜಿಟಿಎಲ್‌ಡಿಗಳು ಬಳಕೆಯಲ್ಲಿವೆ. ಇವಷ್ಟರ ಜೊತೆಗೆ ಜಾಲತಾಣ ಯಾವ ದೇಶದ್ದು ಎಂದು ಸೂಚಿಸುವ ಕಂಟ್ರಿ ಕೋಡ್ ಟಾಪ್ ಲೆವೆಲ್ ಡೊಮೈನ್(ಸಿಸಿಟಿಎಲ್‌ಡಿ)ಗಳೂ ಇವೆ - ಭಾರತಕ್ಕೆ .in, ಫ್ರಾನ್ಸಿನ ತಾಣಗಳಿಗೆ .fr, ಇಟಲಿಗೆ .it - ಹೀಗೆ.

ನಮ್ಮ ಜಾಲತಾಣದ ಹೆಸರು ಏನೇ ಇದ್ದರೂ ವಿಳಾಸದ ಕೊನೆಯ ಭಾಗಕ್ಕೆ ಮೇಲೆ ಹೇಳಿದ ಯಾವುದೋ ಒಂದು ವಿಸ್ತರಣೆಯನ್ನು ಬಳಸಬೇಕಾದ್ದು ಇಲ್ಲಿಯವರೆಗೂ ಅನಿವಾರ್ಯವಾಗಿತ್ತು. ಹಲವಾರು ವರ್ಷಗಳಿಂದ ಹೆಚ್ಚು ಬದಲಾವಣೆಗಳಿಲ್ಲದೆ ನಡೆದುಕೊಂಡುಬಂದಿದ್ದ ಈ ವ್ಯವಸ್ಥೆಗೆ ಇದೀಗ ಬದಲಾವಣೆಯ ಸಮಯ ಬಂದಿದೆ.

ಶುಕ್ರವಾರ, ಫೆಬ್ರವರಿ 7, 2014

ತಂತ್ರಾಂಶ ಮತ್ತು ತಪ್ಪು!

ಟಿ. ಜಿ. ಶ್ರೀನಿಧಿ

ತಂತ್ರಾಂಶಗಳ ತಯಾರಿ ಹೆಚ್ಚುತ್ತ ಹೋದಂತೆ ಅವುಗಳ ಬಳಕೆಯೂ ಹೆಚ್ಚುವುದು ಸಹಜ. ಹೀಗೆ ತಂತ್ರಾಂಶಗಳ ಬಳಕೆ ಎಲ್ಲ ಕ್ಷೇತ್ರಗಳಲ್ಲೂ ಹೆಚ್ಚುತ್ತಿದ್ದಂತೆ ಅವು ಮಾಡುವ ಕೆಲಸಗಳ ಪ್ರಮಾಣವೂ ಜಾಸ್ತಿಯಾಗುತ್ತದೆ.

ಈಗ ಆಗಿರುವುದೂ ಅದೇ. ಶಾಲೆಯ ಹೋಮ್‌ವರ್ಕ್‌ನಿಂದ ದೇಶದ ಸುರಕ್ಷತೆಯವರೆಗೆ, ಬ್ಯಾಂಕ್ ವ್ಯವಹಾರದಿಂದ ವೈಜ್ಞಾನಿಕ ಸಂಶೋಧನೆಯವರೆಗೆ ಅದೆಷ್ಟೋ ಕ್ಷೇತ್ರಗಳಲ್ಲಿ ಅದೆಷ್ಟೋ ಕೆಲಸಗಳಿಗಾಗಿ ತಂತ್ರಾಂಶಗಳು ಬಳಕೆಯಾಗುತ್ತವೆ. ಅನೇಕ ಕಡೆಗಳಲ್ಲಂತೂ ಕಂಪ್ಯೂಟರ್ ಇಲ್ಲದೆ ಕೆಲಸವೇ ನಡೆಯದ ಪರಿಸ್ಥಿತಿ ಬಂದುಬಿಟ್ಟಿದೆ; ಆನ್‌ಲೈನ್ ಬ್ಯಾಂಕಿಂಗ್ ಬೇಡ, ಮನಿಯಾರ್ಡರ್ ಕಳುಹಿಸುತ್ತೇನೆಂದರೂ ಪೋಸ್ಟ್ ಆಫೀಸಿನ ಕಂಪ್ಯೂಟರ್ ನೆಚ್ಚಿಕೊಳ್ಳಬೇಕಾದ ಕಾಲ ಇದು!

ಪರಿಸ್ಥಿತಿ ಹೀಗಿರುವಾಗ ನಾವು ಬಳಸುವ ತಂತ್ರಾಂಶಗಳು ಅತ್ಯಂತ ಕರಾರುವಾಕ್ಕಾಗಿ ಕೆಲಸಮಾಡಬೇಕಾದ್ದು ಅನಿವಾರ್ಯವಾಗಿಬಿಡುತ್ತದೆ. ಆದರೆ ತಂತ್ರಾಂಶ ಸಿದ್ಧಪಡಿಸುವವರೂ ಮನುಷ್ಯರೇ ತಾನೆ, ಹಾಗಾಗಿ ಹಲವಾರು ಬಾರಿ ಅವರ ಕೆಲಸದಲ್ಲಿ ತಪ್ಪುಗಳು ನುಸುಳಿಬಿಡುತ್ತವೆ. ಉದಾಹರಣೆಗೆ ಒಂದು + ಒಂದು = ಎರಡು ಎನ್ನುವ ಬದಲು ಒಂದು + ಒಂದು = ಹನ್ನೊಂದು ಎಂದು ತಂತ್ರಾಂಶದಲ್ಲಿ ಹೇಳಿದ್ದರೆ ನಾವು ಒಂದು + ಒಂದು ಎಷ್ಟು ಎಂದಾಗ ಉತ್ತರ ಹನ್ನೊಂದು ಎಂದೇ ಬರುತ್ತದೆ.

ಕಂಪ್ಯೂಟರಿನ ಲೆಕ್ಕಾಚಾರದಲ್ಲಿ ಆಗುವ ಎಡವಟ್ಟುಗಳಿಗೆ ಇಂತಹ ತಪ್ಪುಗಳೇ ಕಾರಣ. ಕ್ರಮವಿಧಿಗಳನ್ನು ಸರಿಯಾಗಿ ಪರೀಕ್ಷಿಸದೆ ತಂತ್ರಾಂಶ ರೂಪಿಸಿ ಬಳಕೆದಾರರಿಗೆ ಕೊಟ್ಟಾಗ ಇಂತಹ ತಪ್ಪುಗಳು ಅವರಿಗೆ ಸಾಕಷ್ಟು ತೊಂದರೆಕೊಡುತ್ತವೆ, ಹೆಚ್ಚೂಕಡಿಮೆ ತಿಗಣೆಕಾಟದ ಹಾಗೆ. ಇದರಿಂದಲೇ ಈ ತಪ್ಪುಗಳನ್ನು 'ಬಗ್' ಎಂದು ಕರೆಯುತ್ತಾರೆ.

ಗುರುವಾರ, ಫೆಬ್ರವರಿ 6, 2014

ಆ ಕಸ ಇ ಕಸ!

ಟಿ. ಜಿ. ಶ್ರೀನಿಧಿ

ತಂತ್ರಜ್ಞಾನ ನಮ್ಮ ಬದುಕನ್ನು ಆವರಿಸಿಕೊಂಡಿರುವ ಪರಿ ಎಂಥದ್ದು ಎಂದು ತಿಳಿದುಕೊಳ್ಳಬೇಕಾದರೆ ಒಮ್ಮೆ ನಮ್ಮ ಸುತ್ತಮುತ್ತ ಕಣ್ಣಾಡಿಸಿದರೆ ಸಾಕು. ದಿವಾನಖಾನೆಯಲ್ಲಿ ಎಲ್‌ಇಡಿ ಟಿವಿ, ಒಳಗಿನ ಕೋಣೆಯಲ್ಲೊಂದು ಡೆಸ್ಕ್‌ಟಾಪ್ ಕಂಪ್ಯೂಟರ್, ಮೂಲೆಯಲ್ಲೊಂದು ಲ್ಯಾಪ್‌ಟಾಪ್, ಪಕ್ಕದಲ್ಲಿ ಟ್ಯಾಬ್ಲೆಟ್ಟು-ಇಬುಕ್ ರೀಡರ್, ಜೇಬಿನೊಳಗೊಂದು ಮೊಬೈಲು - ನಮ್ಮ ಮನೆಗಳಲ್ಲಿರುವ ಇಲೆಕ್ಟ್ರಾನಿಕ್ ಉಪಕರಣಗಳು ಒಂದೇ ಎರಡೇ!   

ಇದನ್ನೆಲ್ಲ ಒಂದುಸಾರಿ ಕೊಂಡು ತಂದಿಟ್ಟುಕೊಂಡರೆ ಮುಗಿಯುವುದಿಲ್ಲವಲ್ಲ, ಆರುತಿಂಗಳಿಗೋ ವರ್ಷಕ್ಕೋ ಎರಡುವರ್ಷಕ್ಕೋ ಮನೆಯಲ್ಲಿರುವ ಇಲೆಕ್ಟ್ರಾನಿಕ್ ಉಪಕರಣಗಳೆಲ್ಲ ಬದಲಾಗುವುದು ಈಗ ಟ್ರೆಂಡ್ ಅನಿಸಿಕೊಂಡುಬಿಟ್ಟಿದೆ.  ಇರುವುದರ ಜಾಗಕ್ಕೆ ಹೊಸದು ಬರುವುದಷ್ಟೇ ಅಲ್ಲ, ಹೊಸ ಉಪಕರಣಗಳೂ ಆಗಿಂದಾಗ್ಗೆ ಮನೆಯೊಳಕ್ಕೆ ಬರುತ್ತಲೇ ಇರುತ್ತವೆ.

ಹೊಸ ಉಪಕರಣ ಬಂದಮೇಲೆ ಹಳೆಯದಕ್ಕೇನು ಕೆಲಸ? ಎಕ್ಸ್‌ಚೇಂಜೋ, ಸೆಕೆಂಡ್ ಹ್ಯಾಂಡ್ ಮಾರಾಟವೋ ಯಾವುದೋ ಒಂದು ಮಾರ್ಗದಲ್ಲಿ ಹಳೆಯದನ್ನು ನಾವು ಮನೆಯಿಂದ ಆಚೆಹಾಕುತ್ತೇವೆ. ಉಪಯೋಗಿಸಿ ಬೇಸರವಾದ, ಆದರೆ 'ರೀಸೇಲ್ ವ್ಯಾಲ್ಯೂ' ಇಲ್ಲದ ಉಪಕರಣಗಳನ್ನು ಬೇರೆಯವರಿಗೆ ಕೊಟ್ಟು ಕೈತೊಳೆದುಕೊಳ್ಳುವುದೂ ಉಂಟು. ಹಾಗೊಮ್ಮೆ ಯಾವುದಾದರೂ ಹಳೆಯ ಉಪಕರಣ ಮನೆಯಲ್ಲೇ ಉಳಿದುಕೊಂಡರೂ ಶೀಘ್ರದಲ್ಲೇ ಅದಕ್ಕೆ ಗೇಟ್‌ಪಾಸ್ ಸಿಗುವುದು ಗ್ಯಾರಂಟಿ! 

ಹೇಗಾದರೂ ಮಾಡಿ ಹಳೆಯ ಇಲೆಕ್ಟ್ರಾನಿಕ್ ಉಪಕರಣಗಳನ್ನು ಒಮ್ಮೆ ಮನೆಯಿಂದಾಚೆಗೆ ಕಳುಹಿಸುತ್ತಿದ್ದಂತೆ ನಮಗೆ ನೆಮ್ಮದಿ. ಬೇಡದ ವಸ್ತು ಆಚೆಹೋದ ಸಮಾಧಾನ ಅಷ್ಟೇ ಅಲ್ಲ, ಔಟ್‌ಡೇಟೆಡ್ ವಸ್ತು ಮನೆಯಲ್ಲಿದ್ದದ್ದನ್ನು ನೋಡಿದರೆ ಯಾರೇನು ಅಂದುಕೊಳ್ಳುವರೋ ಎಂಬ ಅಂಜಿಕೆಯಿಂದಲೂ ಮುಕ್ತಿ ಸಿಗುತ್ತದಲ್ಲ! 

ಅಷ್ಟೇ ಅಲ್ಲ, ನಾವು ಉಪಯೋಗಿಸುತ್ತಿರುವ ಉಪಕರಣಗಳ ಕೆಟ್ಟುಹೋದ ಬಿಡಿಭಾಗಗಳೂ ಮನೆಯಿಂದಾಚೆ ಹೋಗಲೇಬೇಕು. ಇನ್ನು ಕೆಲಸಮಾಡದ ಬಲ್ಬು - ಟ್ಯೂಬ್‌ಲೈಟು, ಬೇಡದ ಸಿಡಿ - ಡಿವಿಡಿ ಇತ್ಯಾದಿ ಸಣ್ಣಪುಟ್ಟ ವಸ್ತುಗಳಂತೂ ಆಗಿಂದಾಗ್ಗೆ ಕಸದಬುಟ್ಟಿ ಸೇರುತ್ತಲೇ ಇರುತ್ತವೆ.

ಆದರೆ ಹೀಗೆ ಮನೆಯಿಂದಾಚೆ ಹೋಗುವ ಇಲೆಕ್ಟ್ರಾನಿಕ್ ಉತ್ಪನ್ನಗಳು ಮುಂದೆ ಏನಾಗುತ್ತವೆ ಎನ್ನುವುದರ ಬಗ್ಗೆ ನಾವು ಯಾರೂ ತಲೆಕೆಡಿಸಿಕೊಳ್ಳುವುದೇ ಇಲ್ಲ. ನನ್ನ-ನಿಮ್ಮಂತಹ ಸಾಮಾನ್ಯರಷ್ಟೇ ಅಲ್ಲ, ಇಂತಹ ಉಪಕರಣಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಸುವ-ಬಿಸಾಡುವ ಸಂಸ್ಥೆಗಳೂ ಈ ಬಗ್ಗೆ ವಹಿಸುವ ಕಾಳಜಿ ಅಷ್ಟಕ್ಕಷ್ಟೇ.

ಹೀಗಾಗಿಯೇ ಇಂತಹ ಹಳೆಯ, ನಿರುಪಯುಕ್ತ ಇಲೆಕ್ಟ್ರಾನಿಕ್ ಉತ್ಪನ್ನಗಳು ಈಗೊಂದು ದೊಡ್ಡ ಸಮಸ್ಯೆಯಾಗಿ ಬೆಳೆದುನಿಂತಿವೆ: ಅನೇಕರ ಆರೋಗ್ಯ ಹಾಳುಮಾಡುತ್ತಿವೆ, ನಮ್ಮ ಭೂಮಿಗೇ ದೊಡ್ಡದೊಂದು ತಲೆನೋವು ತಂದಿಟ್ಟಿವೆ.

ಇದು ಇಲೆಕ್ಟ್ರಾನಿಕ್ ವೇಸ್ಟ್, ಅಂದರೆ ಇ-ಕಸದ ಕತೆ.

ಶುಕ್ರವಾರ, ಜನವರಿ 31, 2014

ಸಾಫ್ಟ್‌ವೇರ್ ಜಗದ ಜೀವನಚಕ್ರ

ಟಿ. ಜಿ. ಶ್ರೀನಿಧಿ

ತಂತ್ರಾಂಶ ರಚನೆಯಲ್ಲಿ ಪಾಲಿಸಬೇಕಾದ ಕ್ರಮ, ನಿಯಮ-ನಿಬಂಧನೆಗಳ ರೂಪುರೇಷೆಯನ್ನು ಸಾಫ್ಟ್‌ವೇರ್ ಇಂಜಿನಿಯರಿಂಗ್ ಪರಿಕಲ್ಪನೆ ಮುಂದಿಡುತ್ತದೇನೋ ಸರಿ, ಆದರೆ ಆ ನಿಯಮ ನಿಬಂಧನೆಗಳು ಯಾವುವು, ಹಾಗೂ ಅವನ್ನು ಪಾಲಿಸುವುದು ಹೇಗೆ?

ಈ ಉದ್ದೇಶಕ್ಕಾಗಿ ಸಾಫ್ಟ್‌ವೇರ್ ಜಗತ್ತಿನಲ್ಲಿ ಹಲವು ಕಾರ್ಯವಿಧಾನ ಮಾದರಿಗಳನ್ನು (ಪ್ರಾಸೆಸ್ ಮಾಡೆಲ್) ಬಳಸಲಾಗುತ್ತದೆ. ಈ ಮಾದರಿಗಳು ತಂತ್ರಾಂಶ ರಚನೆಯ ವಿವಿಧ ಹಂತಗಳನ್ನು ಹಾಗೂ ಅಂತಹ ಪ್ರತಿಯೊಂದು ಹಂತದಲ್ಲೂ ಕೈಗೊಳ್ಳಬೇಕಾದ ನಿರ್ದಿಷ್ಟ ಚಟುವಟಿಕೆಗಳನ್ನು ನಮ್ಮ ಮುಂದಿಡುತ್ತವೆ. ಸರಳವಾಗಿ ಹೇಳುವುದಾದರೆ ತಂತ್ರಾಂಶ ರಚನೆ ಪ್ರಕ್ರಿಯೆಯ ಜೀವನ ಚಕ್ರವನ್ನೇ ನಿರ್ದೇಶಿಸುತ್ತವೆ.

ಮೂಲತಃ ಈ ಎಲ್ಲ ಮಾದರಿಗಳಲ್ಲೂ ಸಾಫ್ಟ್‌ವೇರ್ ಇಂಜಿನಿಯರಿಂಗ್ ಪರಿಕಲ್ಪನೆಯಲ್ಲಿರುವ ಮೂಲ ಹೆಜ್ಜೆಗಳೇ (ರಿಕ್ವೈರ್‌ಮೆಂಟ್ಸ್ ಅನಾಲಿಸಿಸ್, ಡಿಸೈನ್, ಡೆವೆಲಪ್‌ಮೆಂಟ್, ಟೆಸ್ಟಿಂಗ್ ಇತ್ಯಾದಿ) ಬಳಕೆಯಾಗುತ್ತವೆ. ಆದರೆ ಪ್ರತಿಯೊಂದು ಮಾದರಿಯಲ್ಲೂ ಈ ಹೆಜ್ಜೆಗಳ ಅನುಷ್ಠಾನ ಮಾತ್ರ ಭಿನ್ನವಾಗಿರುತ್ತದೆ.

ಒಂದು ಉದಾಹರಣೆ ನೋಡೋಣ.

ಬುಧವಾರ, ಜನವರಿ 29, 2014

ಸೋಶಿಯಲ್ ನೆಟ್‌ವರ್ಕ್‌ನಲ್ಲಿ ನೆಟ್ಟಗಿರೋಣ!

ಟಿ. ಜಿ. ಶ್ರೀನಿಧಿ


ಸೋಶಿಯಲ್ ನೆಟ್‌ವರ್ಕ್ ಅಥವಾ ಸಮಾಜಜಾಲಗಳು ಯಾರಿಗೆ ತಾನೆ ಗೊತ್ತಿಲ್ಲ? ಪುಟ್ಟಮಕ್ಕಳಿಂದ ಅಜ್ಜಿತಾತನವರೆಗೆ ಎಲ್ಲರೂ ಇಂದು ಫೇಸ್‌ಬುಕ್, ಟ್ವಿಟ್ಟರ್ ಮುಂತಾದ ಸಮಾಜಜಾಲಗಳಲ್ಲಿ ಕಾಣಸಿಗುತ್ತಾರೆ. ಚಾಟಿಂಗ್, ಫೋಟೋ-ವೀಡಿಯೋ ಹಂಚಿಕೆ, ಮಾಹಿತಿ ವಿತರಣೆ ಇವೆಲ್ಲ ಈ ತಾಣಗಳ ಮುಖ್ಯ ಉಪಯೋಗ.

ಸಮಾಜಜಾಲಗಳಿಂದ ಇನ್ನೂ ಬೇಕಾದಷ್ಟು ಪ್ರಯೋಜನಗಳಿವೆ. ಹೊಸಬರ ಪರಿಚಯ ಮಾಡಿಕೊಂಡು ನಮ್ಮ ನೆಟ್‌ವರ್ಕ್ ವಿಸ್ತರಿಸಿಕೊಳ್ಳುವುದು ಇಂತಹ ಪ್ರಯೋಜನಗಳಲ್ಲೊಂದು. ಲಿಂಕ್ಡ್‌ಇನ್‌ನಂತಹ ತಾಣಗಳಲ್ಲಿ ರೂಪುಗೊಳ್ಳುವ ಇಂತಹ ನೆಟ್‌ವರ್ಕ್ ನಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ನೆರವು ನೀಡಬಲ್ಲದು. ಇದಲ್ಲದೆ ನಮ್ಮ ಪ್ರಶ್ನೆಗಳಿಗೆ ಉತ್ತರ ಹುಡುಕುವುದರಿಂದ ಪ್ರಾರಂಭಿಸಿ ಯಾವುದೋ ಕೆಲಸಕ್ಕೆ ಅಗತ್ಯವಾದ ಮಾಹಿತಿ ಅಥವಾ ನೆರವು ಪಡೆದುಕೊಳ್ಳುವವರೆಗೆ ಅನೇಕ ಕೆಲಸಗಳಲ್ಲಿ ಸಮಾಜಜಾಲಗಳು ನೆರವಾಗುತ್ತವೆ. ನಮ್ಮ ಬಿಸಿನೆಸ್ ಬೆಳವಣಿಗೆಗೆ - ನಮ್ಮ ಗ್ರಾಹಕರೊಡನೆ ಸಂಪರ್ಕ ಬೆಳೆಸಿಕೊಳ್ಳುವುದಕ್ಕೂ ಸಮಾಜಜಾಲಗಳನ್ನು ಬಳಸಿಕೊಳ್ಳಬಹುದು. ಸಮಾಜಜಾಲಗಳನ್ನು ಸೂಕ್ತವಾಗಿ ಬಳಸಿಕೊಂಡರೆ ಹಣಕಾಸಿನ ಲಾಭ ಮಾಡಿಕೊಳ್ಳುವುದೂ ಸಾಧ್ಯ.

ಅಷ್ಟೇ ಏಕೆ, ಹೊಸ ವಿಷಯಗಳ ಹಾಗೂ ಹಳೆಯ ವಿಷಯದ ಹೊಸ ಆಯಾಮಗಳನ್ನು ಪರಿಚಯಿಸಿಕೊಳ್ಳಲೂ ಸಮಾಜಜಾಲಗಳು ಸಹಾಯಮಾಡುತ್ತವೆ. ನೂರೆಂಟು ವಿಷಯಗಳ ಬಗ್ಗೆ ಆರೋಗ್ಯಕರ ಚರ್ಚೆ ಕೂಡ ಇಲ್ಲಿ ಸಾಧ್ಯ. ಅದೆಷ್ಟೋ ಸಂದರ್ಭಗಳಲ್ಲಿ ಸುದ್ದಿಗಳು ಬೇರೆಲ್ಲ ಮಾಧ್ಯಮಗಳಿಗೆ ಮೊದಲು ಸಮಾಜಜಾಲಗಳಲ್ಲೇ ಕಾಣಿಸಿಕೊಳ್ಳುವುದೂ ಉಂಟು.

ಹೀಗಿದ್ದರೂ ನಮ್ಮಂತಹ ಅದೆಷ್ಟೋ ಬಳಕೆದಾರರ ಪಾಲಿಗೆ ಸಮಾಜಜಾಲಗಳು ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವ ವೇದಿಕೆಗಳಾಗಿಯೇ ಮುಂದುವರೆದಿವೆ. ಗೆಳೆಯರೊಂದಿಗೆ ಸದಾಕಾಲ ಸಂಪರ್ಕದಲ್ಲಿರಲು, ಹೊಸಹೊಸ ಜನರನ್ನು ಪರಿಚಯ ಮಾಡಿಕೊಳ್ಳಲು, ನಮ್ಮ ಚಟುವಟಿಕೆಗಳ ಬಗೆಗೆ ಮಿತ್ರರಿಗೆಲ್ಲ ಹೇಳಲು, ಛಾಯಾಚಿತ್ರ-ವೀಡಿಯೋಗಳನ್ನು ಹಂಚಿಕೊಳ್ಳಲು, ಪಠ್ಯ-ಧ್ವನಿ-ವೀಡಿಯೋ ರೂಪದಲ್ಲಿ ಚಾಟ್ ಮಾಡಲು ಈ ತಾಣಗಳು ನೆರವಾಗುತ್ತಿವೆ.

ಈ ಸಹಾಯದ ಬೆನ್ನಹಿಂದೆಯೇ ಅವು ನಮ್ಮ ಮೇಲೊಂದು ಮಹತ್ವದ ಜವಾಬ್ದಾರಿಯನ್ನೂ ಹೊರೆಸುತ್ತಿವೆ. ಸಮಾಜಜಾಲಗಳಲ್ಲಿ ಇಷ್ಟೆಲ್ಲ ಬಗೆಯ ವೈಯಕ್ತಿಕ ಮಾಹಿತಿ ಹಂಚಿಕೊಳ್ಳುತ್ತೇವಲ್ಲ, ಅದರಮೇಲೆ ಒಂದಷ್ಟು ಮಟ್ಟದ ಸ್ವಯಂನಿಯಂತ್ರಣ ಇಟ್ಟುಕೊಳ್ಳಬೇಕಾದ್ದೇ ಈ ಜವಾಬ್ದಾರಿ.

ಶುಕ್ರವಾರ, ಜನವರಿ 24, 2014

ಆಪರೇಟಿಂಗ್ ಸಿಸ್ಟಂ

ಟಿ. ಜಿ. ಶ್ರೀನಿಧಿ

ಪ್ರೋಗ್ರಾಮ್ ಬರೆದು ಕಂಪ್ಯೂಟರಿಗೆ ಪಾಠಹೇಳುವುದೇನೋ ಸರಿ, ಆದರೆ ನಾವು ಪ್ರೋಗ್ರಾಮ್ ಬರೆಯಲಿಕ್ಕಾದರೂ ಒಂದು ಕಂಪ್ಯೂಟರ್ ಬೇಕಲ್ಲ. ಮೊದಲಿಗೆ ಅದು ಕೆಲಸಮಾಡುತ್ತಿದ್ದರೆ ತಾನೇ ನಾವು ಪ್ರೋಗ್ರಾಮ್ ಬರೆಯುವುದು?

ನಿಜ, ಯಾವ ಕಂಪ್ಯೂಟರೇ ಆದರೂ ಅದು ನಾವು ಹೇಳಿದ ಮಾತು ಕೇಳುವಂತೆ ಮಾಡುವ ವ್ಯವಸ್ಥೆಯೊಂದು ಬೇಕೇಬೇಕು. ಕೆಲವರು ತಮ್ಮ ಪ್ರೋಗ್ರಾಮುಗಳ ಮೂಲಕ ಅಂತಹ ವ್ಯವಸ್ಥೆಯನ್ನೇ ರೂಪಿಸುತ್ತಾರೆ ಬಿಡಿ, ಆದರೆ ಮಿಕ್ಕವರ ಕ್ರಮವಿಧಿಗಳು ಕೆಲಸಮಾಡಲು ಇಂತಹುದೊಂದು ವ್ಯವಸ್ಥೆ ಅತ್ಯಗತ್ಯ.

ಅಂತಹ ವ್ಯವಸ್ಥೆಯೇ ಆಪರೇಟಿಂಗ್ ಸಿಸ್ಟಂ, ಅಂದರೆ ಕಾರ್ಯಾಚರಣ ವ್ಯವಸ್ಥೆ. ಕಂಪ್ಯೂಟರಿನ ಪ್ರಾಥಮಿಕ ಚಟುವಟಿಕೆಗಳನ್ನು ನಿಯಂತ್ರಿಸುವ, ಅದರ ವಿವಿಧ ಸೌಲಭ್ಯಗಳನ್ನು ಬಳಸಿಕೊಳ್ಳಲು ನಮಗೆ ಸಹಾಯಮಾಡುವ, ನಮ್ಮ ಕ್ರಮವಿಧಿಗಳು ಕೆಲಸಮಾಡಲು ಅನುವುಮಾಡಿಕೊಡುವ ಈ ವ್ಯವಸ್ಥೆಯೂ ಒಂದು ತಂತ್ರಾಂಶವೇ. ನಮಗೆಲ್ಲ ಚಿರಪರಿಚಿತವಾದ ಮೈಕ್ರೋಸಾಫ್ಟ್ ವಿಂಡೋಸ್, ಲಿನಕ್ಸ್ ಮುಂತಾದವು ಕಾರ್ಯಾಚರಣ ವ್ಯವಸ್ಥೆಗೆ ಕೆಲ ಉದಾಹರಣೆಗಳು.

ಶುಕ್ರವಾರ, ಜನವರಿ 17, 2014

ಕಣ್ಣಮುಂದಿನ ಅದ್ಭುತಲೋಕ: ಆಗ್‌ಮೆಂಟೆಡ್ ರಿಯಾಲಿಟಿ

ಟಿ. ಜಿ. ಶ್ರೀನಿಧಿ
ಇದು 'ಸ್ವ-ತಂತ್ರ' ಅಂಕಣದ ಐವತ್ತನೇ ಸಂಚಿಕೆ. ಇಂದು ಪ್ರಕಟವಾಗಿರುವ ಅಂಕಣಬರಹದ ವಿಷಯವನ್ನು ಅಂತರಜಾಲದಲ್ಲಿ ನಡೆದ ಸ್ಪರ್ಧೆಯೊಂದರ ಮೂಲಕ ಓದುಗರೇ ಸೂಚಿಸಿರುವುದು ವಿಶೇಷ. ಈ ವಿಷಯ ಸೂಚಿಸಿ ಇಜ್ಞಾನ ಡಾಟ್ ಕಾಮ್‌ನಿಂದ ಬಹುಮಾನ ಗೆದ್ದಿರುವ ಶ್ರೀ ಅಶ್ವತ್ಥ್ ಸಂಪಾಜೆಯವರಿಗೆ ಅಭಿನಂದನೆಗಳು.
ಅಪರಿಚಿತ ಸ್ಥಳದಲ್ಲಿ ಹೋಟಲೊಂದರ ಮುಂದೆ ನಿಂತಾಗ ನಮ್ಮ ಕಣ್ಣಿಗೆ ಅದರ ಬೋರ್ಡಿನ ಬದಲು ಅಲ್ಲಿ ದೊರಕುವ ಊಟೋಪಚಾರದ ವಿಮರ್ಶೆ ಕಂಡರೆ ಹೇಗಿರುತ್ತದೆ? ಒಳಕ್ಕೆ ಹೋಗಿಬಂದು ಆಮೇಲೆ ಊಟ ಕೆಟ್ಟದಾಗಿತ್ತೆಂದು ಬೈದುಕೊಳ್ಳುವುದಾದರೂ ತಪ್ಪುತ್ತದಲ್ಲ! ಅದೇರೀತಿ ಪಠ್ಯಪುಸ್ತಕ ಓದಿ ಬೇಜಾರಾದಾಗ ಪುಟದಲ್ಲಿನ ಅಕ್ಷರಗಳ ಬದಲು ಪಾಠಕ್ಕೆ ಸಂಬಂಧಪಟ್ಟ ವೀಡಿಯೋ ಕಾಣಿಸಿಕೊಂಡರೆ? ಇತಿಹಾಸದ್ದೋ ವಿಜ್ಞಾನದ್ದೋ ಪುಟಗಟ್ಟಲೆ ಶುಷ್ಕ ನಿರೂಪಣೆ ಓದುವ ಬದಲು ಅದೆಲ್ಲ ಚಿತ್ರ ಮತ್ತು ಧ್ವನಿಯ ರೂಪದಲ್ಲಿ ಮೂಡಿಬರುವಂತಿದ್ದರೆ?

ಇದೊಳ್ಳೆ ಸಿನಿಮಾ ಕತೆ ಆಯಿತಲ್ಲ ಎನ್ನಬೇಡಿ. ಮೇಲ್ನೋಟಕ್ಕೆ ಕಾಲ್ಪನಿಕ ಕತೆಯಂತೆ ತೋರುವ ಈ ವಿಷಯಗಳೆಲ್ಲ ಈಗಾಗಲೇ ಸಾಧ್ಯವಾಗಿವೆ. ಇದನ್ನೆಲ್ಲ ಸಾಧ್ಯವಾಗಿಸಿರುವ ತಂತ್ರಜ್ಞಾನದ ಹೆಸರು ಆಗ್‌ಮೆಂಟೆಡ್ ರಿಯಾಲಿಟಿ, ಹ್ರಸ್ವವಾಗಿ 'ಎಆರ್'.

ತಂತ್ರಜ್ಞಾನದ ನೆರವಿನಿಂದ ನಮ್ಮ ಕಣ್ಣಮುಂದಿನ ವಾಸ್ತವ ದೃಶ್ಯಕ್ಕೆ ವರ್ಚುಯಲ್ ಅಂಶಗಳನ್ನು ಹೆಚ್ಚುವರಿಯಾಗಿ ಸೇರಿಸುವುದು ಈ 'ಎಆರ್'ನ ಹೆಚ್ಚುಗಾರಿಕೆ.

ಶುಕ್ರವಾರ, ಜನವರಿ 10, 2014

ಸಾಫ್ಟ್‌ವೇರ್ ಇಂಜಿನಿಯರಿಂಗ್

ಟಿ. ಜಿ. ಶ್ರೀನಿಧಿ

ಎರಡು ಸಂಖ್ಯೆಗಳನ್ನು ಕೂಡುವುದಕ್ಕೋ ಅವುಗಳ ಪೈಕಿ ದೊಡ್ಡ ಸಂಖ್ಯೆಯನ್ನು ಗುರುತಿಸುವುದಕ್ಕೋ ಪ್ರೋಗ್ರಾಮ್, ಅಂದರೆ ಕ್ರಮವಿಧಿ ಬರೆಯುವುದು ಸುಲಭದ ಕೆಲಸ. ಕೊಂಚ ತರಬೇತಿಯೊಡನೆ ಇಷ್ಟು ಕೆಲಸವನ್ನು ಯಾರು ಬೇಕಿದ್ದರೂ ಮಾಡಬಹುದು.

ಆದರೆ ಎಲ್ಲ ಕ್ರಮವಿಧಿಗಳೂ ಇಷ್ಟು ಸರಳವಾಗಿರುವುದಿಲ್ಲ. ಬ್ಯಾಂಕಿನ ಹಣಕಾಸು ವ್ಯವಹಾರಗಳನ್ನು ನಿರ್ವಹಿಸುವಾಗ, ಕಚೇರಿಯಲ್ಲಿ ಸಂಬಳ ವಿತರಿಸುವಾಗ, ಆಸ್ಪತ್ರೆಯಲ್ಲಿ ವೈದ್ಯಕೀಯ ಯಂತ್ರೋಪಕರಣಗಳನ್ನು ನಿರ್ವಹಿಸುವಾಗ, ವಿಮಾನ ಹಾರಾಟವನ್ನು ನಿಯಂತ್ರಿಸುವಾಗೆಲ್ಲ ಬಹಳ ಸಂಕೀರ್ಣವಾದ ತಂತ್ರಾಂಶಗಳು ಬಳಕೆಯಾಗುತ್ತವೆ.

ಆ ತಂತ್ರಾಂಶಗಳಲ್ಲಿ ಬಹಳ ದೊಡ್ಡ ಸಂಖ್ಯೆಯ ಕ್ರಮವಿಧಿಗಳು ಅಲ್ಪಸ್ವಲ್ಪ ತಪ್ಪಿಗೂ ಜಾಗವಿಲ್ಲದಂತೆ ಒಟ್ಟಾಗಿ ಕೆಲಸಮಾಡಬೇಕಾದ್ದು ಅನಿವಾರ್ಯ. ವಿಮಾನ ಹಾರಾಟದ ಸಂದರ್ಭದಲ್ಲಿ ಅದನ್ನು ನಿಯಂತ್ರಿಸುವ ತಂತ್ರಾಂಶವೇನಾದರೂ ತಪ್ಪುಮಾಡಿದರೆ ಪರಿಣಾಮ ಏನಾಗಬಹುದು?

ಸಾಫ್ಟ್‌ವೇರ್ ಡೆವೆಲಪ್‌ಮೆಂಟ್ (ತಂತ್ರಾಂಶ ಅಭಿವೃದ್ಧಿ) ಕೆಲಸ ಮಹತ್ವ ಪಡೆದುಕೊಳ್ಳುವುದು ಇದೇ ಕಾರಣಕ್ಕಾಗಿ. ತಂತ್ರಾಂಶ ಅಭಿವೃದ್ಧಿಯೆಂದರೆ ಕ್ರಮವಿಧಿ ರಚನೆಯಷ್ಟೇ ಅಲ್ಲ ಎನ್ನುವುದೂ ಇದರಿಂದಾಗಿಯೇ.

'ಸಾಫ್ಟ್‌ವೇರ್ ಇಂಜಿನಿಯರಿಂಗ್'ನ ಪರಿಕಲ್ಪನೆ ಹುಟ್ಟುವುದೇ ಇಲ್ಲಿ.

ಗುರುವಾರ, ಜನವರಿ 9, 2014

ಪಾಠದಲ್ಲಿ ಆಟದ ವಿನೋದ ಕಾಣಬೇಕಾದರೆ...

ವಿಜ್ಞಾನದ ಕಲಿಕೆಯಲ್ಲಿ ಆಟಿಕೆಗಳನ್ನು ಬಳಸಬಹುದೆ? ಒಂದಷ್ಟು ಉದಾಹರಣೆಗಳ ಮೂಲಕ 'ಹೌದು!' ಎನ್ನುವ ಪುಸ್ತಕವೊಂದು ಇದೀಗ ಪ್ರಕಟವಾಗಿದೆ. ಶ್ರೀ ನಾರಾಯಣ ಬಾಬಾನಗರ ಅವರ 'ಆಹಾ! ಆಟಿಕೆಗಳು' ಕೃತಿಗೆ ಹಿರಿಯ ವಿಜ್ಞಾನ ಸಂವಹನಕಾರ ಪ್ರೊ. ಎಮ್. ಆರ್. ನಾಗರಾಜುರವರು ಬರೆದಿರುವ ಬೆನ್ನುಡಿ ಇಲ್ಲಿದೆ.

ಪಾಠ ಮತ್ತು ಆಟ ಎರಡೂ ತದ್ವಿರುದ್ಧ ಪದಗಳಾಗಿರುವುದು ಶಿಕ್ಷಣ ವ್ಯವಸ್ಥೆಯ ದುರಂತ. ಪಾಠದಲ್ಲಿ ಆಟದ ವಿನೋದ ಕಾಣಬೇಕಾದರೆ ಆಟಿಕೆಗಳು ಬೋಧನಾ ಸಾಮಗ್ರಿಗಳಾಗಬೇಕು. ಹಾಗೆಯೇ ಬೋಧನಾ ಸಾಮಗ್ರಿಗಳನ್ನು ಮಾರ್ಪಡಿಸಿ ಆಟಿಕೆಗಳಾಗಿಸಬೇಕು. ಆಗ ಆಟದ ಆನಂದ ಕಲಿಕೆಯ ಆನಂದ ಕೂಡಿ ಆಯಾಸವಿಲ್ಲದ ಸಂವಹನಕ್ಕೆ ದಾರಿಮಾಡಿಕೊಡುತ್ತದೆ.

ಹಾಗಾದರೆ ಮಾಡಬೇಕಾದ್ದಾದರೂ ಏನು? ಆಟಿಕೆಗಳನ್ನು ಗಮನಿಸುತ್ತಾ ಏಕ ಪರಿಕಲ್ಪನೆ ಲಕ್ಷಿತವಾಗುವಂತೆ ಅದನ್ನು ಮಾರ್ಪಡಿಸುವುದು. ಹಾಗೆಯೇ ಬೋಧನಾ ಸಾಮಗ್ರಿಗಳನ್ನು ಸ್ಥಳೀಯ ಲಭ್ಯ ಪರ್ಯಾಯಗಳೊಂದಿಗೆ ರೂಪಿಸಿ ಅದಕ್ಕೆ ರಂಜನೆಯ ಲೇಪವನ್ನು ಕೊಡುವುದು. ಈ ಕೆಲಸ, ಹೇಳಿದಷ್ಟು ಸುಲಭವಲ್ಲ. ಹಾಗೆ ಮಾಡಿ ಯಶಸ್ವಿಯಾದ ಮಾದರಿಗಳು ಇಲ್ಲಿವೆ. ಸಮಾನಾಂತರವಾಗಿ, ಸಾಹಸ ಕೈಗೊಳ್ಳುವವರಿಗೆ ಇವು ಪೂರಕ ಸಾಮಗ್ರಿಯಾಗಬಲ್ಲವು. ಇಂತಹ ಮಾದರಿಗಳ, ಆಟಿಕೆಗಳ ಬೆಳವಣಿಗೆಗೆ ಈ ಪುಸ್ತಕ ವೇಗವರ್ಧಕವಾಗಬಲ್ಲದು.

ಅರ್ಥಪೂರ್ಣ ವಿಜ್ಞಾನದ ಕಲಿಕೆಗೆ... ಆಹಾ! ಆಟಿಕೆಗಳು
ಲೇಖಕರು: ನಾರಾಯಣ ಬಾಬಾನಗರ
೫೨ ಪುಟಗಳು, ಬೆಲೆ ರೂ. ೪೦/-
ಪ್ರಕಾಶಕರು: ಬೆನಕ ಬುಕ್ಸ್ ಬ್ಯಾಂಕ್

ಶುಕ್ರವಾರ, ಜನವರಿ 3, 2014

ಆಲ್ಗರಿದಮ್ ಅಂದರೇನು?

ಟಿ. ಜಿ. ಶ್ರೀನಿಧಿ

ಕಂಪ್ಯೂಟರ್ ವಿಜ್ಞಾನದ ಪ್ರಾಥಮಿಕ ಪಾಠಗಳನ್ನು ಕಲಿಯಲು ಹೊರಟವರು ಮೊದಲಿಗೆ ಕೇಳುವ ಹೆಸರುಗಳಲ್ಲಿ 'ಆಲ್ಗರಿದಮ್' ಪ್ರಮುಖವಾದದ್ದು. ಇದನ್ನು ಕನ್ನಡದಲ್ಲಿ 'ಕ್ರಮಾವಳಿ' ಎನ್ನೋಣ.

ನಾವೀಗ ಯಾವುದೋ ಒಂದು ಪ್ರೋಗ್ರಾಮ್ (ಕ್ರಮವಿಧಿ) ಬರೆಯುತ್ತಿದ್ದೇವೆ ಎನ್ನುವುದಾದರೆ ಅದರಲ್ಲಿ ಪ್ರತಿಯೊಂದು ಹೆಜ್ಜೆಯನ್ನೂ ಪ್ರತ್ಯೇಕವಾಗಿ ವಿವರಿಸಬೇಕು ತಾನೆ, ಅಷ್ಟೆಲ್ಲ ಹೆಜ್ಜೆಗಳ ಸರಣಿಯೇ ಆಲ್ಗರಿದಮ್, ಅಂದರೆ ಕ್ರಮಾವಳಿ. ಆಲ್ಗರಿದಮ್ ಎನ್ನುವ ಪದ ಕ್ರಿ.ಶ. ೮೨೫ರ ಸುಮಾರಿಗೆ ಪರ್ಶಿಯಾದಲ್ಲಿದ್ದ ಅಲ್-ಖೋವಾರಿಜ್ಮಿ (al Khowarizmi) ಎನ್ನುವ ಗಣಿತಜ್ಞನ ಹೆಸರಿನಿಂದ ರೂಪುಗೊಂಡಿತು ಎಂದು ಇತಿಹಾಸ ಹೇಳುತ್ತದೆ.

ಕಂಪ್ಯೂಟರಿಗೆ ನೀಡುವ ಇನ್‌ಪುಟ್ ಅನ್ನು ಸೂಕ್ತವಾಗಿ ಸಂಸ್ಕರಿಸಿ ನಮಗೆ ಬೇಕಾದ ರೂಪದ ಔಟ್‌ಪುಟ್ ನೀಡುವಂತೆ ನಿರ್ದೇಶಿಸುವುದು ಆಲ್ಗರಿದಮ್, ಅಂದರೆ ಕ್ರಮಾವಳಿಯ ಕೆಲಸ. ಇದು ಪ್ರೋಗ್ರಾಮಿಂಗ್ ಕ್ಷೇತ್ರದ ಪ್ರಾಥಮಿಕ ಪಾಠ ಎಂದರೂ ಸರಿಯೇ.

ಕ್ರಮಾವಳಿಯ ಪ್ರಾಮುಖ್ಯ ಏನು ಎಂದು ವಿವರಿಸುವುದು ಬಹಳ ಸುಲಭ. ಏಕೆಂದರೆ ನಮ್ಮ ಬದುಕಿನ ಬಹುತೇಕ ಕೆಲಸಗಳೆಲ್ಲ ಒಂದಲ್ಲ ಒಂದು ಕ್ರಮಾವಳಿಯನ್ನು ಆಧರಿಸಿರುತ್ತವೆ. ಮನೆಗೆ ಇನ್ಸ್‌ಟಂಟ್ ನೂಡಲ್ಸ್ ತಂದಿರುತ್ತೇವಲ್ಲ, ಆ ಪೊಟ್ಟಣದ ಹಿಂಭಾಗ ನೋಡಿ: ಎಷ್ಟು ನೀರು ಹಾಕಬೇಕು, ಎಷ್ಟು ಹೊತ್ತು ಬೇಯಿಸಬೇಕು, ಮಸಾಲೆ ಯಾವಾಗ ಹಾಕಬೇಕು ಎಂಬ ಪ್ರತಿಯೊಂದು ವಿವರವನ್ನೂ ಅದರಲ್ಲಿ ಒಂದಾದಮೇಲೆ ಒಂದರಂತೆ ಪಟ್ಟಿಮಾಡಿರುತ್ತಾರೆ.

ಮಂಗಳವಾರ, ಡಿಸೆಂಬರ್ 31, 2013

ಹೊಸವರ್ಷಕ್ಕೊಂದು ಹೊಸ ತಾಣ

ಶಾಪಿಂಗ್ - ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗ. ಇಷ್ಟವೋ ಕಷ್ಟವೋ, ಅದು ಅನಿವಾರ್ಯವೂ ಹೌದು.

ಅನಿವಾರ್ಯ ಎಂದಮಾತ್ರಕ್ಕೆ ಶಾಪಿಂಗ್ ಸುಲಭದ ಕೆಲಸವೇನೂ ಅಲ್ಲ. ಯಾವುದೇ ವಸ್ತುವಿಗಾಗಿ ಶಾಪಿಂಗ್ ಮಾಡಲು ಹೊರಟಾಗ ಮಾರುಕಟ್ಟೆಯಲ್ಲಿ ಕಾಣಸಿಗುವ ಆಯ್ಕೆಗಳು ನಮ್ಮ ಮನಸಿನಲ್ಲಿ ಹುಟ್ಟುಹಾಕುವ ಗೊಂದಲವೇನು ಸಾಮಾನ್ಯದ್ದೇ?

ಇಂತಹ ಗೊಂದಲದ ಕೆಲವು ಕ್ಷಣಗಳಲ್ಲಿ ನಿಮಗೆ ನೆರವಾಗುವ ಸಣ್ಣದೊಂದು ಪ್ರಯತ್ನವನ್ನು ಇಜ್ಞಾನ ಡಾಟ್ ಕಾಮ್ ಮಾಡುತ್ತಿದೆ. ೨೦೧೪ರ ಮೊದಲ ದಿನ, ಹೊಸವರ್ಷದ ಶುಭಾಶಯಗಳೊಂದಿಗೆ, 'ಇಜ್ಞಾನ ಶಾಪಿಂಗ್ ಸಂಗಾತಿ'ಯ ಪ್ರಾಯೋಗಿಕ ಆವೃತ್ತಿ ಇಗೊಳ್ಳಿ ನಿಮ್ಮ ಮುಂದಿದೆ.

ಸೋಮವಾರ, ಡಿಸೆಂಬರ್ 30, 2013

ನಿಮ್ಮ ಅನಿಸಿಕೆ ನಮ್ಮ ಬಹುಮಾನ!

ಪ್ರತಿ ವಾರದ ಕೊನೆಗೆ ಇಜ್ಞಾನ ಡಾಟ್ ಕಾಮ್‌ನಲ್ಲಿ ಪ್ರಕಟವಾಗುವ ತಂತ್ರಜ್ಞಾನ ಲೇಖನಗಳನ್ನು ನೀವು ಗಮನಿಸಿದ್ದೀರಿ. ಪ್ರತಿ ಶುಕ್ರವಾರ ಉದಯವಾಣಿ ಮಂಗಳೂರು ಆವೃತ್ತಿಯ 'ಯುವ ಸಂಪದ' ಪುರವಣಿಯಲ್ಲಿ, 'ಸ್ವ-ತಂತ್ರ' ಎನ್ನುವ ಹೆಸರಿನಲ್ಲಿ ಮೂಡಿಬರುವ ಈ ಅಂಕಣದ ಐವತ್ತನೆಯ ಕಂತು ಇನ್ನು ಕೆಲವೇ ವಾರಗಳಲ್ಲಿ ಪ್ರಕಟವಾಗಲಿದೆ.

ಈ ಸರಣಿಯ ಐವತ್ತನೇ ಕಂತಿನಲ್ಲಿ ನೀವು ಯಾವ ವಿಷಯದ ಕುರಿತು ಓದಲು ಇಷ್ಟಪಡುತ್ತೀರಿ?

ನಿಮ್ಮ ಅನಿಸಿಕೆಯನ್ನು ಜನವರಿ ೫, ೨೦೧೪ರೊಳಗೆ ನಮಗೆ ತಿಳಿಸಿ.

ಶುಕ್ರವಾರ, ಡಿಸೆಂಬರ್ 27, 2013

ದಾರಿತೋರುವ ತಂತ್ರಜ್ಞಾನ ಜಿಪಿಎಸ್

ಟಿ. ಜಿ. ಶ್ರೀನಿಧಿ

ಹೀಗೊಂದು ಸನ್ನಿವೇಶ ಕಲ್ಪಿಸಿಕೊಳ್ಳಿ: ಹವಾನಿಯಂತ್ರಿತ ರೈಲಿನಲ್ಲಿ, ಮೇಲಿನ ಬರ್ತ್‌ನಲ್ಲಿ ಮಲಗಿ ಪ್ರಯಾಣಿಸುತ್ತಿದ್ದೀರಿ. ರೈಲು ಮಧ್ಯರಾತ್ರಿ ಯಾವುದೋ ನಿಲ್ದಾಣದಲ್ಲಿ ನಿಲ್ಲುತ್ತದೆ, ನಿಮಗೆ ಎಚ್ಚರವೂ ಆಗುತ್ತದೆ. ಇದ್ಯಾವ ನಿಲ್ದಾಣವೋ ತಿಳಿದುಕೊಳ್ಳುವ ಕುತೂಹಲ ಒಂದುಕಡೆ, ಬೆಚ್ಚನೆಯ ಹೊದಿಕೆ ತೆಗೆದು ಇಳಿಯಲು ಸೋಮಾರಿತನ ಇನ್ನೊಂದು ಕಡೆ.

ಕಡೆಗೆ ಸೋಮಾರಿತನವೇ ಗೆದ್ದಾಗ ಮೊಬೈಲ್ ಫೋನ್ ಕೈಗೆತ್ತಿಕೊಂಡು ಗೂಗಲ್ ಮ್ಯಾಪ್ಸ್ ತೆರೆಯುತ್ತೇವೆ, ನಾನೆಲ್ಲಿದ್ದೇನೆ ಎಂದು ಅದನ್ನು ಕೇಳುತ್ತಿದ್ದಂತೆ ಫೋನಿನಲ್ಲಿರುವ ಭೂಪಟದಲ್ಲಿ ನಾವು ಇರುವ ಊರು ಕಾಣಿಸಿಕೊಳ್ಳುತ್ತದೆ!

ಇದನ್ನು ಸಾಧ್ಯವಾಗಿಸುವುದು ಜಿಪಿಎಸ್, ಅಂದರೆ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ. ಅಪರಿಚಿತ ಜಾಗಗಳಲ್ಲಿದ್ದಾಗ ಆ ಸ್ಥಳದ ಕುರಿತ ಮಾಹಿತಿಯನ್ನು ಪಡೆದುಕೊಳ್ಳಲಷ್ಟೇ ಅಲ್ಲ, ವಾಹನ ಚಲಾಯಿಸುವಾಗ ನಮಗೆ ಮಾರ್ಗದರ್ಶನ ನೀಡುವ ಯಂತ್ರಗಳಲ್ಲಿ ಬಳಕೆಯಾಗುವುದೂ ಇದೇ ತಂತ್ರಜ್ಞಾನ. ಬಹುತೇಕ ಮೊಬೈಲ್ ಫೋನುಗಳಲ್ಲಿ ಲಭ್ಯವಿರುವ ಸೌಲಭ್ಯವಂತೂ ಈ ತಂತ್ರಜ್ಞಾನವನ್ನು ನಮ್ಮ ಅಂಗೈಗೇ ತಂದಿಟ್ಟುಬಿಟ್ಟಿದೆ!

ಅಂದಹಾಗೆ ನಾವೆಲ್ಲಿದ್ದೇವೆ ಎಂದು ಈ ತಂತ್ರಜ್ಞಾನಕ್ಕೆ ಗೊತ್ತಾಗುವುದು ಹೇಗೆ?

ಮಂಗಳವಾರ, ಡಿಸೆಂಬರ್ 24, 2013

ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ -ಅಂದು, ಇಂದು, ಮುಂದು

ಡಿಸೆಂಬರ್ ೨೧, ೨೦೧೩ರಂದು ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ೨೦೧೩ರ 'ಕನ್ನಡ ಮತ್ತು ಅವಕಾಶ' ಗೋಷ್ಠಿಯಲ್ಲಿ ಡಾ. ಯು. ಬಿ. ಪವನಜ ಮಾಡಿದ ಭಾಷಣದ ಪೂರ್ಣಪಾಠ.

ಡಾ| ಯು. ಬಿ. ಪವನಜ

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಎಂಬುದು ಆರಂಭದ ದಿನಗಳಲ್ಲಿ ಗಣಕಗಳಲ್ಲಿ ಕನ್ನಡದ ಬಳಕೆಯಿಂದ ಪ್ರಾರಂಭವಾಯಿತು. ಇದು  ಸುಮಾರು ಮೂರು ದಶಕಗಳ ಹಿಂದಿನ ಕಥೆ. ಪದಸಂಸ್ಕರಣವು ಇದರಲ್ಲಿಯ ಮೊದಲನೆಯದು. ಪತ್ರ, ಲೇಖನ, ದಾಖಲೆಗಳನ್ನು ಬರೆಯಲು, ತಿದ್ದಲು ಇವುಗಳ ಬಳಕೆ ಆಗುತ್ತಿದೆ. ಪದಸಂಸ್ಕರಣದ ಮುಂದುವರೆದ ಸೌಕರ್ಯವೇ ಡಿ.ಟಿ.ಪಿ. ಅಂದರೆ ಪಠ್ಯದ ಜೊತೆ ಚಿತ್ರಗಳನ್ನು ಸೇರಿಸಿ ಪುಟವಿನ್ಯಾಸ ಮಾಡುವುದು. ಈಗ ಎಲ್ಲ ಪುಸ್ತಕಗಳು ಮತ್ತು ಪತ್ರಿಕೆಗಳು ಇದೇ ವಿಧಾನದಿಂದ ತಯಾರಾಗುತ್ತಿವೆ.

ಕೆ.ಪಿ. ರಾವ್ ಮತ್ತು ಅವರ ಸೇಡಿಯಾಪು ತಂತ್ರಾಂಶ ಕನ್ನಡ ಭಾಷೆ ಮಾತ್ರವಲ್ಲ, ಸಮಗ್ರ ಭಾರತೀಯ ಭಾಷೆಗಳನ್ನೇ ಗಣಕದಲ್ಲಿ ಅಳವಡಿಸುವ ವಿಷಯದಲ್ಲಿ ಎಲ್ಲರಿಂದ ಮೊದಲು ಆಲೋಚಿಸಿ ಕಾರ್ಯಗತರಾದವರು ನಮ್ಮ ಕನ್ನಡಿಗರೇ ಆದ ಶ್ರೀ ಕೆ. ಪಿ. ರಾವ್ ಅವರು. ೭೦ರ ದಶಕದಲ್ಲಿ ಅವರು ಮುಂಬಯಿಯ ಟಾಟಾ ಪ್ರೆಸ್‌ನಲ್ಲಿ ತಂತ್ರಜ್ಞರಾಗಿದ್ದಾಗ ಪ್ರಪ್ರಥಮ ಬಾರಿಗೆ ಫೋಟೋಟೈಪ್‌ಸೆಟ್ಟಿಂಗ್ ಯಂತ್ರದಲ್ಲಿ ಭಾರತೀಯ ಭಾಷೆಗಳನ್ನು ಅಳವಡಿಸುವ ಕೆಲಸವನ್ನು ಪ್ರಾರಂಭಿಸಿದರು. ಇವರು ಆ ಕಾಲಕ್ಕೆ ಲಭ್ಯವಿದ್ದ ಸೀಮಿತ ತಂತ್ರಜ್ಞಾನಗಳನ್ನೇ ಬಳಸಿ ಸುಂದರವಾದ ಕಂಪ್ಯೂಟರ್ ಫಾಂಟ್‌ಗಳನ್ನು (ಅಕ್ಷರಶೈಲಿಗಳು) ಕನ್ನಡ ಮತ್ತು ಇತರೆ ಭಾಷೆಗಳಿಗೆ ನಿರ್ಮಿಸಿದರು. ಅಂತಹ ಕನ್ನಡ ಲಿಪಿಯ ಫಾಂಟ್‌ನ್ನು ಸುಲಭವಾಗಿ ಕಂಪ್ಯೂಟರ್‌ನಲ್ಲಿ ಮೂಡಿಸಲು ಸರಳ ಹಾಗೂ ತರ್ಕಬದ್ಧವಾದ ಕೀಲಿಮಣೆ (ಕೀಬೋರ್ಡ್) ವಿನ್ಯಾಸವನ್ನು ರಚಿಸಿದ ಕೀರ್ತಿ ಶ್ರೀ ಕೆ.ಪಿ ರಾವ್‌ರವರಿಗೆ ಸಲ್ಲುತ್ತದೆ. ಭಾರತೀಯ ಭಾಷೆಗಳಿಗೆ ಮೊದಲ ಬಾರಿಗೆ ಧ್ವನ್ಯಾತ್ಮಕ ಕೀಲಿಮಣೆಯ ವಿನ್ಯಾಸ ಮಾಡಿದವರು ಇವರೇ.

ಸೋಮವಾರ, ಡಿಸೆಂಬರ್ 23, 2013

ಕಳೆದ ಹಾರ್ಡ್‌ಡಿಸ್ಕ್ ನೆಪದಲ್ಲಿ ಕಾಣದ ದುಡ್ಡಿನ ಕುರಿತು...

ಈಗ ಒಂದಷ್ಟು ದಿನಗಳಿಂದ ಇಂಟರ್‌ನೆಟ್‌ ತುಂಬೆಲ್ಲ ಬಿಟ್‌ಕಾಯಿನ್‌ನದೇ ಸುದ್ದಿ. ಬಿಟ್‌ಕಾಯಿನ್ ಹಾಗಂತೆ ಹೀಗಂತೆ ಚಿನ್ನಕ್ಕಿಂತ ದುಬಾರಿಯಂತೆ... ಅಂತೆಕಂತೆಗಳಿಗೆ ಕೊನೆಯೇ ಇಲ್ಲ. ಈ ವಿಶಿಷ್ಟ ಪರಿಕಲ್ಪನೆಯನ್ನು ಕನ್ನಡದ ಓದುಗರಿಗೆ ವಿವರವಾಗಿ ಪರಿಚಯಿಸುವ ಪ್ರಯತ್ನವನ್ನು ಇಜ್ಞಾನ ಡಾಟ್ ಕಾಮ್ ಮಾಡಿದೆ. ಓದಿ, ಪ್ರತಿಕ್ರಿಯೆ ನೀಡಿ. ಈ ಲೇಖನವನ್ನು ಡಿಸೆಂಬರ್ ೨೨, ೨೦೧೩ರ 'ಸಾಪ್ತಾಹಿಕ ಸಂಪದ'ದಲ್ಲಿ ಪ್ರಕಟಿಸಿದ ಉದಯವಾಣಿಗೆ ನಮ್ಮ ಕೃತಜ್ಞತೆಗಳು. 

ಟಿ. ಜಿ. ಶ್ರೀನಿಧಿ


ಹಳೆಯ, ಕೆಟ್ಟುಹೋದ ಕಂಪ್ಯೂಟರಿನಿಂದ ತೆಗೆದಿಟ್ಟ ಹಾರ್ಡ್‌ಡಿಸ್ಕ್ ಬೆಲೆ ಎಷ್ಟಿರಬಹುದು? ಗುಜರಿ ಅಂಗಡಿಯವನು ಅಬ್ಬಬ್ಬಾ ಎಂದರೆ ಐನೂರು ರೂಪಾಯಿಗೆ ಕೊಳ್ಳಬಹುದೇನೋ.

ಬ್ರಿಟನ್ನಿನ ಜೇಮ್ಸ್ ಹವೆಲ್ಸ್ ಎಂಬಾತನಲ್ಲೂ ಇಂತಹುದೇ ಒಂದು ಹಾರ್ಡ್‌ಡಿಸ್ಕ್ ಇತ್ತು, ಬಹುಶಃ ಸುಮಾರು ಮೂರು-ನಾಲ್ಕು ವರ್ಷ ಹಳೆಯದು. ಹೀಗೆಯೇ ಒಂದು ದಿನ ಮನೆ ಸ್ವಚ್ಛಗೊಳಿಸುವಾಗ ಮತ್ತೆ ಕೈಗೆ ಸಿಕ್ಕ ಅದನ್ನು ಆತ ಸೀದಾ ಕಸದಬುಟ್ಟಿಗೆ ಸೇರಿಸಿದ. ನಂತರದ ದಿನಗಳಲ್ಲಿ ಅದು ಊರ ಕಸವೆಲ್ಲ ಸೇರುವ ಲ್ಯಾಂಡ್‌ಫಿಲ್ ಎಂಬ ಕಸಸಾಗರದೊಳಗೆ ಲೀನವಾಯಿತು. ಇದೆಲ್ಲ ಆಗಿ ಕೆಲವು ತಿಂಗಳು ಕಳೆದ ಮೇಲೆ ಜೇಮ್ಸ್‌ಗೆ ಜ್ಞಾನೋದಯವಾಗಿ ತಾನೆಂತಹ ಕೆಲಸಮಾಡಿಬಿಟ್ಟೆನಲ್ಲ ಎಂದು ಕೊರಗಲು ಶುರುಮಾಡಿದ.

ಬೇಡದ ಹಾರ್ಡ್ ಡಿಸ್ಕನ್ನು ಕಸಕ್ಕೆ ಹಾಕಿದ ಮೇಲೆ ಅದನ್ನು ನೆನಪಿಸಿಕೊಂಡು ಕೊರಗುವುದು ಯಾಕೆ? ಇಲ್ಲೇನೋ ವಿಚಿತ್ರವಿದೆ ಅನ್ನಿಸುತ್ತಿದೆ, ಅಲ್ಲವೆ?

ವಿಚಿತ್ರವೇನೂ ಇಲ್ಲ - ಜೇಮ್ಸ್ ಬಿಸಾಡಿದ ಹಾರ್ಡ್‌ಡಿಸ್ಕ್‌ನಲ್ಲಿ ಸುಮಾರು ಏಳೂವರೆಸಾವಿರ ಬಿಟ್‌ಕಾಯಿನ್‌ಗಳಿದ್ದವು, ಮತ್ತು ನವೆಂಬರ್ ೨೦೧೩ರ ಅಂತ್ಯದಲ್ಲಿ ಅವುಗಳ ಒಟ್ಟು ಮೌಲ್ಯ ಸುಮಾರು ಏಳೂವರೆ ಲಕ್ಷ ಅಮೆರಿಕನ್ ಡಾಲರುಗಳಷ್ಟಿತ್ತು. ರೂಪಾಯಿ ಲೆಕ್ಕದಲ್ಲಿ ೪೬ ಕೋಟಿಗಿಂತ ಹೆಚ್ಚು!

ಅರೆ, ಇಷ್ಟೆಲ್ಲ ಬೆಲೆಬಾಳುವ ವಸ್ತು ಹಳೆಯ ಹಾರ್ಡ್‌ಡಿಸ್ಕ್‌ನೊಳಗೇಕಿತ್ತು? ಇಷ್ಟಕ್ಕೂ ಈ ಬಿಟ್ ಕಾಯಿನ್ ಎಂದರೇನು?

ಭಾನುವಾರ, ಡಿಸೆಂಬರ್ 22, 2013

ಇಜ್ಞಾನ ವಿಶೇಷ: ನಾಗೇಶ ಹೆಗಡೆ ಹೇಳುತ್ತಾರೆ...

ಡಿಸೆಂಬರ್ ೨೧, ೨೦೧೩ರಂದು ನಡೆದ ಕನ್ನಡ ವಿಶ್ವವಿದ್ಯಾನಿಲಯದ ನುಡಿಹಬ್ಬದಲ್ಲಿ ನಾಗೇಶ ಹೆಗಡೆಯವರು ಮಾಡಿದ ಭಾಷಣದ ಪೂರ್ಣಪಾಠ 

ಕನ್ನಡ ವಿಶ್ವವಿದ್ಯಾಲಯದ ಆವರಣಕ್ಕೆ ಬಂದಾಗಲೆಲ್ಲ ನಮ್ಮ ಮನಸ್ಸು ಪ್ರಫುಲ್ಲಿತವಾಗುತ್ತದೆ. ಇಲ್ಲಿನ ಬಂಡೆಗಳು, ಇಲ್ಲಿ ಮರುಹುಟ್ಟು ಪಡೆದ ಸಸ್ಯಗಳು, ಇಲ್ಲಿನ ಸಹಜ ನೈಸರ್ಗಿಕ ಸೌಂದರ್ಯ ಜತೆಜತೆಗೆ ಕನ್ನಡದ ಕಲೆ, ಸಂಸ್ಕೃತಿ ಪರಂಪರೆಗಳನ್ನು ಬಿಂಬಿಸುವ ಶಿಲ್ಪ, ವಾಸ್ತುಶಿಲ್ಪ -ಹೀಗೆ ಇಲ್ಲಿನ ಒಂದೊಂದೂ ಕನ್ನಡ ಲೋಕದ ಅನನ್ಯತೆಯನ್ನು ಮೆರೆಯುವ ಪ್ರತೀಕಗಳಾಗಿವೆ.

ನಮ್ಮಲ್ಲಿ ಎರಡು ಕನ್ನಡ ನಾಡುಗಳಿವೆ: ಒಂದು ಬೆಂಗಳೂರಿನ ಬಹಿರ್ಮುಖಿ ಕನ್ನಡ: 'ವಿಜ್ಞಾನದ ರಾಜಧಾನಿ' ಎಂದು ಕರೆಸಿಕೊಂಡು ವಿಶ್ವವನ್ನು ಬೆಸೆಯುವ ಕನ್ನಡ. ಅದು ಕಾರ್ಪೊರೇಟ್ ವಲಯಗಳ ಥಳಕಿನ ಕನ್ನಡ. ರಾಷ್ಟ್ರದ ನಾಯಕರು, ವಿದೇಶೀ ಗಣ್ಯರು, ಉದ್ಯಮಿಗಳನ್ನು ಆಕರ್ಷಿಸುವ ಕನ್ನಡ. ಅದು ನಂದನ ನೀಲೇಕಣಿಯವರನ್ನು, ಶಕುಂತಲಾ ದೇವಿಯವರನ್ನು, ದೇವಿಪ್ರಸಾದ್ ಶೆಟ್ಟಿಯವರನ್ನು, ಮಾಲತಿ ಹೊಳ್ಳರನ್ನು, ಅನಿಲ್ ಕುಂಬ್ಳೆಗಳನ್ನು, ಉಲ್ಲಾಸ ಕಾರಂತರನ್ನು, ಸಿಎನ್‌ಆರ್ ರಾವ್, ಯುಆರ್ ರಾವ್‌ರವರನ್ನು, ನಾರಾಯಣ ಮೂರ್ತಿ- ಅನಂತಮೂರ್ತಿಯಂಥವರನ್ನು ನಾಡಿನಾಚೆ ಪ್ರದರ್ಶಿಸುವ ಕನ್ನಡ. ಅದು ಕ್ಯಾಲಿಫೋರ್ನಿಯಾಕ್ಕೆ ಕಂಪ್ಯೂಟರ್ ಪರಿಣತರನ್ನು, ಬಾಹ್ಯಾಕಾಶಕ್ಕೆ ಉಪಗ್ರಹಗಳನ್ನು, ಮಂಗಳಲೋಕಕ್ಕೆ ಪ್ರೋಬ್‌ಗಳನ್ನೂ ಕಳಿಸಬಲ್ಲ ಧೀರರ ಕನ್ನಡ. ಅದು ಹೆಬ್ಬಾಗಿಲ ಕನ್ನಡ.

ಇನ್ನೊಂದು ಒಳಮನೆಯ ಕನ್ನಡ, ಅಂತರ್ಮುಖಿ ಕನ್ನಡ. ಈ ಒಳಮನೆಯ ಕನ್ನಡ ಏನಿದೆ ಅದು ನಮ್ಮ ಸ್ವಂತದ ಕನ್ನಡ. ಅಲ್ಲಿ ಹಾಡು ಹಸೆಗಳಿವೆ. ಲಾವಣಿ ಪದ್ಯಗಳಿವೆ, ವಚನಗಳಿವೆ, ದಾಸರ ಪದಗಳಿವೆ, ಹಸೆ ಚಿತ್ರಗಳಿವೆ, ಕಾಷ್ಠಶಿಲ್ಪಗಳಿವೆ, ಗುಮಟೆ ಪಾಂಗುಗಳಿವೆ, ಪಣತ, ಹಗೇವು, ಬೀಸುಗಲ್ಲು, ಮನೆಮದ್ದುಗಳಿವೆ, ಕಜ್ಜಾಯ- ಕಷಾಯಗಳಿವೆ. ಅದು ರೈತ ಮಕ್ಕಳ, ಬುಡಕಟ್ಟಿನವರ ಖಾಸಾ ಕನ್ನಡ. ಅದು ಜಾಯಮಾನದ ಕನ್ನಡ.

ಈ ಒಳಮನೆಯ ಕನ್ನಡದ ಉಸ್ತುವಾರಿಯ, ಪರಿಚಾರಿಕೆಯ ಕೆಲಸ ಮಾಡುವ ಕನ್ನಡ ವಿಶ್ವವಿದ್ಯಾಲಯ ನಮ್ಮೆಲ್ಲರ ಹೆಮ್ಮೆಯ ಸಂಸ್ಥಾನವೆನಿಸಿದೆ. ಕನ್ನಡ ಜ್ಞಾನ ಮತ್ತು ಕೌಶಲ ಪರಂಪರೆಯನ್ನು ಕೆಡದಂತೆ ಕಾಯುವ ಉತ್ತಮ ಕೆಲಸವನ್ನು ಅದು ಮಾಡುತ್ತಿದೆ. ಜ್ಞಾನಪರಂಪರೆಯಲ್ಲಿ, ನಮ್ಮ ಜನಪದದಲ್ಲಿ ಅಂತಸ್ಥವಾಗಿದ್ದ ದೇಸೀ ವಿಜ್ಞಾನವನ್ನು ಹುಡುಕಿ ತೆಗೆಯುವ, ಸಂಸ್ಕರಿಸಿ ಮತ್ತೆ ಪುಟಕ್ಕಿಡುವ ಕೆಲಸವನ್ನು ಕನ್ನಡ ವಿಶ್ವವಿದ್ಯಾಲಯ ಹೊಸದಾಗಿ ಈ ವರ್ಷ ಆರಂಭಿಸುತ್ತಿದೆ.

ಅದು ಹೊಸದಾಗಿದ್ದರಿಂದ ನಾಲ್ಕು ಮಾತು ಹೇಳಬೇಕಾಗಿದೆ.

ಶನಿವಾರ, ಡಿಸೆಂಬರ್ 21, 2013

ಅಂತರಜಾಲದ ವೇಗದ ಲೆಕ್ಕ

ಟಿ. ಜಿ. ಶ್ರೀನಿಧಿ

ಅಂತರಜಾಲ ಲೋಕದಲ್ಲಿ ಈಗ ಎಲ್ಲೆಲ್ಲೂ ಬ್ರಾಡ್‌ಬ್ಯಾಂಡ್ ಸಂಪರ್ಕಗಳದ್ದೇ ರಾಜ್ಯಭಾರ. ಡಯಲ್ ಅಪ್ ಸಂಪರ್ಕಗಳ ಹೋಲಿಕೆಯಲ್ಲಿ ಅದ್ಭುತವೆನಿಸುವಂತಹ ವೇಗದ ಅಂತರಜಾಲ ಸಂಪರ್ಕ ಕಲ್ಪಿಸಿಕೊಟ್ಟಿದ್ದು ಬ್ರಾಡ್‌ಬ್ಯಾಂಡ್‌ನ ಹಿರಿಮೆ. ಈ ಬಗೆಯ ಸಂಪರ್ಕಗಳ ವೇಗ ಕಳೆದ ಕೆಲ ವರ್ಷಗಳಲ್ಲಿ ಒಂದೇ ಸಮನೆ ಹೆಚ್ಚುತ್ತಲೇ ಇದೆ. ಇನ್ನು ಈಗ ಮೊಬೈಲಿನಲ್ಲಿ ಥ್ರೀಜಿ ಸಂಪರ್ಕ ಬಂದಮೇಲಂತೂ ಬ್ರಾಡ್‌ಬ್ಯಾಂಡ್ ಸಂಪರ್ಕವೇ ನಿಧಾನವೇನೋ ಎನ್ನಿಸುವಂತಹ ವೇಗಗಳೂ ಸಾಧ್ಯವಾಗಿವೆ.

ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ನಿಯಮದನ್ವಯ ಯಾವುದೇ ಅಂತರಜಾಲ ಸಂಪರ್ಕ ಬ್ರಾಡ್‌ಬ್ಯಾಂಡ್ ಎಂದು ಕರೆಸಿಕೊಳ್ಳಲು ಪ್ರತಿ ಸೆಕೆಂಡಿಗೆ ಕನಿಷ್ಠ ೨೫೬ ಕೆಬಿಪಿಎಸ್ ಡೌನ್‌ಲೋಡ್ ವೇಗ ಹೊಂದಿರಬೇಕು, ನಿಜ. ಆದರೆ ಹತ್ತಾರು ಎಂಬಿಪಿಎಸ್ ವೇಗದ ಸಂಪರ್ಕಗಳೂ ಲಭ್ಯವಿವೆ.

ಕೆಬಿ ಅಂದರೆ ಕಿಲೋಬೈಟ್, ಎಂಬಿ ಅಂದರೆ ಮೆಗಾಬೈಟ್ ಎನ್ನುವ ಲೆಕ್ಕವನ್ನೆಲ್ಲ ಕೇಳಿದ್ದೇವೆ, ಆದರೆ ಇದೇನಿದು ಕೆಬಿಪಿಎಸ್-ಎಂಬಿಪಿಎಸ್?

ಶುಕ್ರವಾರ, ಡಿಸೆಂಬರ್ 13, 2013

ತರ್ಕದ ಹರಿವಿಗೆ ಫ್ಲೋಚಾರ್ಟ್ ನೆರವು

ಟಿ. ಜಿ. ಶ್ರೀನಿಧಿ

ಕಂಪ್ಯೂಟರಿಗೆ ಏನಾದರೂ ಕೆಲಸ ಮಾಡುವಂತೆ ಹೇಳಬೇಕಾದರೆ ಕ್ರಮವಿಧಿ (ಪ್ರೋಗ್ರಾಮ್) ಬರೆಯಬೇಕು ತಾನೆ, ಹಾಗೆ ಬರೆಯುವಾಗ ನಮ್ಮ ಅಗತ್ಯಗಳನ್ನೆಲ್ಲ ಒಂದೇ ಬಾರಿಗೆ ಕಂಪ್ಯೂಟರಿನ ಭಾಷೆಯಲ್ಲೇ ಹೇಳುವುದು ಕೊಂಚ ಕಷ್ಟವಾಗಬಹುದು. ಹಾಗಾಗಿ ಕ್ರಮವಿಧಿ ರಚನೆಯ ಮೊದಲು ಅದರ ವಿವರಗಳನ್ನೆಲ್ಲ ಒಂದು ಕಡೆ ಬರೆದು, ವಿಶ್ಲೇಷಿಸಿ ಆನಂತರವಷ್ಟೇ ಪ್ರೋಗ್ರಾಮಿಂಗ್ ಕೆಲಸ ಕೈಗೆತ್ತಿಕೊಳ್ಳುವುದು ಐಟಿ ಜಗತ್ತಿನ ಸಂಪ್ರದಾಯ.

ಈ ಕೆಲಸದಲ್ಲಿ ಹಲವಾರು ತಂತ್ರಗಳನ್ನು ಬಳಸಲಾಗುತ್ತದೆ. ನಾವು ಬರೆಯಲಿರುವ ಕ್ರಮವಿಧಿಯ ಪ್ರತಿಯೊಂದು ಹೆಜ್ಜೆಯನ್ನೂ ಗುರುತಿಸುವುದು, ಹಾಗೂ ಪ್ರತಿ ಹೆಜ್ಜೆಯಲ್ಲೂ ನಮ್ಮ ಕ್ರಮವಿಧಿ ಹೇಗೆ ವರ್ತಿಸಬೇಕು ಎಂದು ತೀರ್ಮಾನಿಸಿಕೊಳ್ಳಲು ನೆರವಾಗುವುದು ಈ ತಂತ್ರಗಳೆಲ್ಲವುದರ ಸಮಾನ ಗುರಿ. ಇಂತಹ ತಂತ್ರಗಳಲ್ಲೊಂದು ಫ್ಲೋಚಾರ್ಟ್, ಅಂದರೆ ಪ್ರವಾಹನಕ್ಷೆ.


ಮೊದಲಿಗೆ ಒಂದು ಉದಾಹರಣೆಯನ್ನು ಗಮನಿಸೋಣ. ಶಾಲೆಯಿಂದ ಮನೆಗೆ ಬಂದ ವಿದ್ಯಾರ್ಥಿ ಏನೆಲ್ಲ ಮಾಡುತ್ತಾನೆ? ತಿಂಡಿ ತಿಂದು ಸ್ವಲ್ಪಹೊತ್ತು ಆಟವಾಡಿ ಆನಂತರ ಓದಿಕೊಳ್ಳಲು ಕೂರುತ್ತಾನೆ, ಓದಿ ಮುಗಿದಮೇಲೆ ಊಟಮಾಡಿ ಟೀವಿ ನೋಡಿ ನಿದ್ರಿಸುತ್ತಾನೆ - ಅಷ್ಟೇ ತಾನೆ?

ವಿವರಣೆಯ ದೃಷ್ಟಿಯಿಂದ ಸರಿಯೇ ಇರಬಹುದು, ಆದರೆ ಇಂತಹ ವಿವರಣೆಗಳು ಕಂಪ್ಯೂಟರಿಗೆ ಅರ್ಥವಾಗುವುದಿಲ್ಲ. ಹಾಗಾದರೆ ಕಂಪ್ಯೂಟರಿಗೆ ಅರ್ಥವಾಗಲು ಇನ್ನೇನೆಲ್ಲ ವಿವರಗಳು ಬೇಕು?
badge