ಸೋಮವಾರ, ಸೆಪ್ಟೆಂಬರ್ 18, 2017

ಕಸ ಕಹಾನಿ: ತ್ಯಾಜ್ಯದ ಸಮರ್ಥ ವಿಲೇವಾರಿಗಾಗಿ ನಾವೇನು ಮಾಡಲು ಸಾಧ್ಯ?

'ಮೈತ್ರಿ'


ಒಂದೆರಡು ದಶಕಗಳ ಹಿಂದೆ ನಮ್ಮ ಬೆಂಗಳೂರು ಗಾರ್ಡನ್ ಸಿಟಿ ಆಗಿತ್ತು. ಆ ಹೆಸರಿನ ಸ್ಪೆಲಿಂಗು ಕೊಂಚ ಬದಲಾಗಿ ನಮ್ಮೂರು ಗಾರ್ಬೇಜ್ ಸಿಟಿ ಆಗಿದ್ದು ಈಚೆಗೆ ಕೆಲವರ್ಷಗಳ ಹಿಂದೆಯಷ್ಟೇ.

ಹಾಗೆ ನೋಡಿದರೆ ಕಸದ ಸಮಸ್ಯೆ ನಮ್ಮ ಊರೊಂದಕ್ಕೇ ಸೀಮಿತವೇನಲ್ಲ. ನಮ್ಮ ಊರಷ್ಟೇ ಏಕೆ, ಇರು ಬರೀ ನಮ್ಮ ಗ್ರಹದ ಸಮಸ್ಯೆ ಮಾತ್ರವೂ ಅಲ್ಲ.
ಭೂಮಿಯ ಮೇಲಿನ ಸಾಗರಗಳಲ್ಲೆಲ್ಲ ಕಚಡಾ ಪ್ಲಾಸ್ಟಿಕ್ಕಿನ ದ್ವೀಪಗಳು ತೇಲುತ್ತಿರುವಂತೆ ಭೂಮಿಯಿಂದ ಆಚೆ ಬಾಹ್ಯಾಕಾಶದಲ್ಲೂ ಕಸದ ರಾಶಿ ತೇಲಾಡುತ್ತಿದೆಯಂತೆ. ರಾಕೆಟ್ ಚೂರುಗಳು, ಕೆಟ್ಟುಹೋದ ಉಪಗ್ರಹಗಳು, ಅವುಗಳಿಂದ ಕಳಚಿಕೊಂಡಿರುವ ಬಿಡಿಭಾಗಗಳು - ಹೀಗೆ ರಾಶಿರಾಶಿ ಕಸ ಕ್ಷುದ್ರಗ್ರಹಗಳಂತೆ ನಮ್ಮ ಭೂಮಿಯನ್ನು ಸುತ್ತುಹಾಕುತ್ತಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಈ ಬಗ್ಗೆ ನಾನು ಮೊದಲ ಬಾರಿಗೆ ಓದಿದ್ದು ತೊಂಬತ್ತರ ದಶಕದಲ್ಲಿರಬೇಕು. ಆಗ ನಾವು ಇದ್ದದ್ದು ಪಶ್ಚಿಮಘಟ್ಟಗಳ ತಪ್ಪಲಿನ ಪುಟ್ಟ ಹಳ್ಳಿಯೊಂದರಲ್ಲಿ. ಹಸಿರನ್ನೇ ಹಾಸಿ ಹೊದ್ದು ಮಲಗಿದ್ದ ಅಂದಿನ ನಮ್ಮ ಊರಿನಲ್ಲಿ ಇಂದು ಪಿಡುಗಾಗಿ ಪರಿಣಮಿಸಿರುವ ರೂಪದ ಕಸ ಕಾಣುತ್ತಿದ್ದುದೇ ಅಪರೂಪ. ಅಲ್ಲೊಂದು ಇಲ್ಲೊಂದು ಬೀಡಿ-ಸಿಗರೇಟಿನ ಖಾಲಿ ಪೊಟ್ಟಣ, ಶಾಲೆಯ ಸುತ್ತಮುತ್ತ ಒಂದಷ್ಟು ಚಾಕಲೇಟ್ ಕಾಗದ ಕಂಡರೆ ಅದೇ ಹೆಚ್ಚು.

ಅಂದಿನ ಸಂದರ್ಭದಲ್ಲಿ  ನಮಗೆ ಕಾಣುತ್ತಿದ್ದ ಕಸವೆಂದರೆ ಮನೆಯೆದುರಿನ ಮರಗಿಡಗಳಿಂದ ಬಿದ್ದ ಎಲೆ, ಕಡ್ಡಿ - ಇಂಥವೇ. ಗುಡಿಸಿ ಒಂದುಕಡೆ ಹಾಕಿದರೆ ತನ್ನಷ್ಟಕ್ಕೆ ತಾನೇ ಕರಗಿ ಗೊಬ್ಬರವಾಗುತ್ತಿದ್ದ ನಿರುಪದ್ರವಿ ಕಸ ಅದು. ಒಮ್ಮೊಮ್ಮೆ ಕಸ ತೀರಾ ಜಾಸ್ತಿಯಾಯಿತು ಅನ್ನಿಸಿದಾಗ ಇದನ್ನೆಲ್ಲ ಒಂದುಕಡೆ ಒಟ್ಟುಸೇರಿಸಿ ಬೆಂಕಿಹೊತ್ತಿಸುವ ಕಾರ್ಯಕ್ರಮವೂ ನಡೆಯುತ್ತಿತ್ತು. ಏರ್ ಪಲ್ಯೂಶನ್ ಎನ್ನುವುದು ಪರೀಕ್ಷೆಯ ಪ್ರಬಂಧವಷ್ಟೇ ಆಗಿದ್ದ ಕಾಲದಲ್ಲಿ ಲಂಕಾದಹನದ ಈ ಕಾರ್ಯಕ್ರಮ ನಮ್ಮ ಪಾಲಿಗೆ ಸಂಜೆಯ ಮನರಂಜನೆ.

ಮುಂದಿನ ಕೆಲವರ್ಷಗಳಲ್ಲಿ ಮಾಡರ್ನ್ ಕಸದ ಪ್ರವಾಹ ನಮ್ಮೂರಿನತ್ತಲೂ ಬಂದಿರಬೇಕು. ಆದರೆ ಆ ಪ್ರವಾಹ ಅಲ್ಲೇನು ಬದಲಾವಣೆ ತಂದಿತೋ ಗೊತ್ತಾಗುವ ಮೊದಲೇ ನಾವು ಪಟ್ಟಣದತ್ತ ಬಂದುಬಿಟ್ಟಿದ್ದೆವು.

ಮೊದಮೊದಲು ಪಟ್ಟಣಗಳಲ್ಲೂ ಕಸದ ಸಮಸ್ಯೆ ನಿಯಂತ್ರಣದಲ್ಲೇ ಇತ್ತು. ಹಣ್ಣು-ತರಕಾರಿ ಸಿಪ್ಪೆ ತಿನ್ನಲು ಬರುತ್ತಿದ್ದ ಹಸುಗಳು ಮನೆಯ ಸದಸ್ಯರಂತೆ ಇದ್ದವು. ಮಿಕ್ಕ ಸಾರು - ಹುಳಿಯಾದ ಮೊಸರು ಪಡೆದು ಬೆಳೆಯಲು ಮನೆಯ ಆಚೀಚೆ ಗಿಡಮರಗಳಿದ್ದವು. ಇನ್ನು ಚೂರುಪಾರು ಕಾಗದ-ತೆಂಗಿನ ಕರಟಗಳಿಂದ ಬಚ್ಚಲ ಒಲೆ ಉರಿಯುತ್ತಿತ್ತು. ಹೀಗಾಗಿ ಆಗಷ್ಟೇ ಶುರುವಾಗಿದ್ದ ಕಸದಗಾಡಿಗೆ ಸೇರುತ್ತಿದ್ದ ಕೊಡುಗೆ ಕಡಿಮೆಯೇ ಇತ್ತು ಎನ್ನಬಹುದು.

ಪಟ್ಟಣಗಳು ಇನ್ನಷ್ಟು ದೊಡ್ಡವಾಗಿ ಮನೆಗಳು ಮತ್ತಷ್ಟು ಸಣ್ಣವಾಗುತ್ತಿದ್ದಂತೆ ಕಸಾಸುರ ಬೆಳೆಯುತ್ತಲೇ ಹೋದ. ಕಸವೂ ಒಂದು ಸಮಸ್ಯೆ ಎನಿಸಲು ಶುರುವಾದದ್ದೇ  ಆಗ.

ಮಿಕ್ಕ ಆಹಾರವನ್ನು ಗೊಬ್ಬರವಾಗಿಸೋಣ ಎನ್ನಲು ಮನೆಯಲ್ಲಿ ಗಿಡವಿಲ್ಲ, ಮೂರನೆಯದೋ ಆರನೆಯದೋ ಮಹಡಿಗೆ ಯಾವ ಪ್ರಾಣಿಯೂ ಬರುವುದಿಲ್ಲ, ಕಾಗದವನ್ನೂ ಕರಟವನ್ನೂ ಉರಿಸಲು ಬಾತ್‌ರೂಮಿನಲ್ಲಿ ಒಲೆಯೇ ಇಲ್ಲ. ಹಾಗಾಗಿಯೇ ಕಸದ ಗಾಡಿ ಬಾರದಿದ್ದರೆ ನಿನ್ನೆ ಪ್ರಯಾಣಿಸಿದ ಬಸ್ಸಿನ ಟಿಕೇಟೂ ಮನೆಯಿಂದಾಚೆ ಹೋಗುವುದಿಲ್ಲ. ಇದು ನಮ್ಮ ನಗರಗಳ ಇಂದಿನ ಪರಿಸ್ಥಿತಿ. ಮಿತಿಮೀರಿದ ಪ್ಲಾಸ್ಟಿಕ್ ಬಳಕೆ ಹಾಗೂ ಕಸ ಸಮಸ್ಯೆ ಕುರಿತ ನಮ್ಮ ನಿರ್ಲಕ್ಷ್ಯಗಳೂ ಇದರೊಡನೆ ಸೇರಿಕೊಂಡು ಇಡೀ ಊರನ್ನೇ ಕಸದ ತೊಟ್ಟಿ ಮಾಡಿಬಿಟ್ಟಿವೆ.

ಹೌದು, ಕಸ ನಮ್ಮ ಮನೆಯಿಂದ ಆಚೆ ಹೋಗಬೇಕು ಎನ್ನುವುದಷ್ಟೇ ನಮ್ಮಲ್ಲಿ ಅನೇಕರ ಪರಮ ಗುರಿ. ಕಸದ ಗಾಡಿ, ಪಕ್ಕದ ಸೈಟು, ತೆರೆದ ಚರಂಡಿ - ಒಟ್ಟಿನಲ್ಲಿ ಕಸ ಮನೆಯಿಂದ ಆಚೆ ಹೋದರಾಯಿತು. ಆಮೇಲೆ ಅದು ಏನಾಗುತ್ತೋ ಅದಕ್ಕೂ ನಮಗೂ ಸಂಬಂಧವೇ ಇಲ್ಲದಂತೆ ಇದ್ದುಬಿಟ್ಟರಾಯಿತು! ಇಷ್ಟೆಲ್ಲ ಬೇಜವಾಬ್ದಾರರಲ್ಲದವರ ಕೊಡುಗೆಯೂ ಕಡಿಮೆಯೇನಲ್ಲ - "ಅಯ್ಯೋ, ನಾವು ಕಸ ವಿಂಗಡಿಸಿದರೂ ಅದನ್ನು ಗಾಡಿಯವರು ಒಟ್ಟಿಗೆಯೇ ತೊಗೊಂಡು ಹೋಗ್ತಾರೆ ಸುಮ್ನೆ ಟೈಮ್ ವೇಸ್ಟು ಸಾರ್" ಎನ್ನುತ್ತ ಕಸದ ಸಮಸ್ಯೆ ಮತ್ತಷ್ಟು ಬಿಗಡಾಯಿಸಲು ಕಾರಣರಾದವರು ಇವರು. ಬಿಡುವಿಲ್ಲದ ನಗರವಾಸಿಗಳಿಗೆ ನೆರವಾಗಲು ಬಂದಿವೆಯಲ್ಲ ಆನ್‍ಲೈನ್ ಅಂಗಡಿಗಳು, ಅವುಗಳ ಕೊಡುಗೆಯೂ ಕಡಿಮೆಯೇನಲ್ಲ. ಅಲ್ಲಿ ಕೊಳ್ಳುವ ವಸ್ತುಗಳಿಗೆ ಈಗಾಗಲೇ ಇರುವ ಪ್ಯಾಕಿಂಗಿನ ಮೇಲೆ ಇನ್ನೊಂದು ಪ್ಲಾಸ್ಟಿಕ್ ಚೀಲ, ಅದಷ್ಟನ್ನೂ ಇಡಲೊಂದು ರಟ್ಟಿನ ಡಬ್ಬ, ಡಬ್ಬದಲ್ಲಿ ಖಾಲಿಯಿರುವ ಜಾಗ ತುಂಬಲು ಗಾಳಿತುಂಬಿದ ಪ್ಲಾಸ್ಟಿಕ್ ಚೀಲ - ಹೀಗೆ ಶಾಪ್ ಮಾಡಿದ ವಸ್ತುಗಳ ಜೊತೆಗೆ ರಾಶಿರಾಶಿ ಕಸದ ಫ್ರೀ ಡೆಲಿವರಿಯನ್ನೂ ಕೊಡುತ್ತಿರುವವರು ಇವರು.

ಇಷ್ಟೆಲ್ಲ ಸಂಗತಿಗಳ ಮಧ್ಯದಲ್ಲಿ ಕಸದ ಸಮಸ್ಯೆಯನ್ನು ತಮ್ಮ ಕೈಲಾದಷ್ಟು ಪರಿಹರಿಸಲು ಹೊರಡುವವರಿಗೆ ಸಾಕಷ್ಟು ವಿಶಿಷ್ಟ ಅನುಭವಗಳಾಗುತ್ತವೆ. "ಊರುತುಂಬ ಇದೇ ಪ್ರಾಬ್ಲಮ್ಮು, ನಾನು-ನೀವು ಏನ್ ಮಾಡಕ್ಕಾಗುತ್ತೆ ಬಿಡಿ" ಎನ್ನುವ ಬಿಟ್ಟಿ ಉಪದೇಶ ಕೇಳುವುದು ಇಂತಹ ಅನುಭವಗಳ ಪೈಕಿ ಅತ್ಯಂತ ಸಾಮಾನ್ಯವಾದದ್ದು. ಅಪಾರ್ಟ್‍ಮೆಂಟ್ ಅಸೋಸಿಯೇಶನ್ ಸದಸ್ಯರಿಂದ ಪ್ರಾರಂಭಿಸಿ ಮನೆಗೆಲಸದ ಶೋಭಕ್ಕನವರೆಗೆ ಈ ಉಪದೇಶವನ್ನು ಎಲ್ಲರೂ ಕೊಡುತ್ತಾರೆ. ಅವರ ಮಾತನ್ನು ಉಪೇಕ್ಷಿಸಿ ಕಸ ವಿಂಗಡಿಸಲು ಹೊರಟಿರೋ, ವಿಂಗಡಿಸಿದ ಕಸವನ್ನು ಎಲ್ಲಿಡುವುದು ಎಂಬ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಹಸಿಕಸದ ವಿಷಯವಂತೂ ಕಷ್ಟವೇ ಬಿಡಿ, ಮನೆಯಲ್ಲಿ ಕಾಂಪೋಸ್ಟ್ ಮಾಡಲು - ಆ ಪ್ರಕ್ರಿಯೆಯನ್ನು ಸೂಕ್ತವಾಗಿ ನಿಭಾಯಿಸಲು ಸಾಕಷ್ಟು ಸಮಯ, ಹಣ ಎಲ್ಲವೂ ಬೇಕು. ಉತ್ಪನ್ನವಾದ ಗೊಬ್ಬರವನ್ನು ವಿಲೇವಾರಿ ಮಾಡಲಿಕ್ಕೂ ಮಾರ್ಗಗಳನ್ನು ಹುಡುಕಿಕೊಳ್ಳಬೇಕು. ಬಾಲ್ಕನಿಯಲ್ಲಿ ಗಿಡ ಬೆಳೆಸಿದರೆ ಪಾರಿವಾಳದ ಕಾಟ - ಕೆಳಗಿನ ಮನೆಯವರ ಕಿರಿಕಿರಿಯನ್ನೂ ಸಹಿಸಿಕೊಳ್ಳಬೇಕು. ಇದೆಲ್ಲದರ ಜೊತೆಗೆ ಉಚಿತವಾಗಿ ದೊರಕುವ ನೆರೆಹೊರೆಯವರ, ಮನೆಯವರ ಅನುಕಂಪವನ್ನು ತಾಳಿಕೊಳ್ಳುವ ತಾಳ್ಮೆಯೂ ಇರಬೇಕು!

ಇಷ್ಟೆಲ್ಲ ತಾಕತ್ತಿಲ್ಲವೆಂದು ಒಣಕಸದ ಉಸಾಬರಿಗೆ ಹೋದಿರೋ, ಅಲ್ಲೂ ಸಮಸ್ಯೆ ತಪ್ಪಿದ್ದಲ್ಲ. ಬಾಲ್ಕನಿಯಲ್ಲಿ ಒಂದಷ್ಟು ಜಾಗ ಮಾಡಿ ಒಣಕಸ ಸಂಗ್ರಹಿಸಿಟ್ಟರೆ ಮನೆಗೆ ಬಂದವರೆಲ್ಲ ನಿಮಗೆ ಹೋರ್ಡಿಂಗ್ ಡಿಸಾರ್ಡರ್ (ನಿರುಪಯುಕ್ತ ವಸ್ತುಗಳನ್ನು ಕೂಡಿಡುವ ಕಾಯಿಲೆ) ಇದೆಯೇನೋ ಎನ್ನುವಂತೆ ನೋಡುತ್ತಾರೆ. ಸಂಗ್ರಹಿಸಿಟ್ಟ ಕಸವನ್ನು ತೆಗೆದುಕೊಂಡು ಹೋಗಪ್ಪ ಎಂದು ಹತ್ತು ಬಾರಿ ಕೇಳಿಕೊಂಡರೂ ಹಳೇಪೇಪರಿನ ಅಣ್ಣ ನಿಮ್ಮತ್ತ ತಿರುಗಿಯೂ ನೋಡುವುದಿಲ್ಲ.

ಇದೇನಿದು ಇಷ್ಟೊಂದು ನೆಗೆಟಿವಿಟಿ ಅಂದುಕೊಂಡಿರಾ? ಹನ್ನೊಂದನೆಯ ಸಾರಿಗೆ ಎಲ್ಲವೂ ಸರಿಹೋಗುತ್ತದೆ!

ಹೋಮ್ ಮೇಡ್ ಗೊಬ್ಬರದಿಂದ ಪೋಷಣೆ ಪಡೆದ ಬಾಲ್ಕನಿಯ ಪುಟ್ಟ ಕೈತೋಟ ನಳನಳಿಸಲು ಶುರುವಾಗುತ್ತದೆ, ನಿಮ್ಮ ಕಾಟ ತಾಳಲಾರದ ಹಳೇಪೇಪರಿನ ಅಣ್ಣ ಒಣಕಸವನ್ನು ಕೊಂಡೊಯ್ಯಲು ಶುರುಮಾಡುತ್ತಾನೆ - ಅಷ್ಟಿಷ್ಟು ದುಡ್ಡನ್ನೂ ನಿಮ್ಮ ಕೈಗಿಡುತ್ತಾನೆ. ಹಾಲಿನ ಕವರನ್ನು ನೀರಿನಲ್ಲಿ ತೊಳೆದಿಟ್ಟರೆ ವಾಸನೆ ಬರುವುದಿಲ್ಲ, ಪ್ಲಾಸ್ಟಿಕ್ಕಿನ ಚೀಲಗಳನ್ನು ಚಿಕ್ಕದಾಗಿ ಮಡಚಿ ತುಂಬಿಟ್ಟರೆ ಜಾಸ್ತಿ ಜಾಗ ಬೇಕಾಗುವುದಿಲ್ಲ, ರಟ್ಟಿನ ಪೆಟ್ಟಿಗೆಗಳಿಂದ ಗಮ್‍ಟೇಪ್ ಕಿತ್ತರೆ ಅದನ್ನು ಮಡಚಿ ಹಳೆಪೇಪರ್ ಜೊತೆಯಲ್ಲೇ ಇಡಬಹುದು, ನೀರಿನ ಬಾಟಲಿ ಕೊಳ್ಳದಿದ್ದರೆ ಏನೂ ನಷ್ಟವಿಲ್ಲ ಎನ್ನುವಂತಹ ವಿಷಯಗಳೂ ನಮಗೆ ಅರ್ಥವಾಗುತ್ತವೆ. ಟೂವೀಲರಿನಲ್ಲಿ, ಕಾರಿನ ಡಿಕ್ಕಿಯಲ್ಲಿ, ಆಫೀಸಿನ ಕಬೋರ್ಡಿನಲ್ಲಿ ಒಂದೆರಡು ಬಟ್ಟೆಯ ಚೀಲ ಇಟ್ಟಿದ್ದರೆ ಪ್ಲಾಸ್ಟಿಕ್ ಚೀಲ ಮನೆಗೆ ಬರುವುದೇ ಇಲ್ಲವೆನ್ನುವುದೂ ತಿಳಿಯುತ್ತದೆ. ಎಟಿಎಂ‍ನಿಂದ ಹಣ ತೆಗೆದಾಗ ಕಾಗದದ ರಸೀತಿ ಬೇಡವೆಂದರೆ, ಬಿಲ್ಲುಗಳು ಇಮೇಲಿನ ಮೂಲಕವಷ್ಟೇ ಬಂದರೆ ಸಾಕು ಎಂದರೆ ಅದನ್ನೆಲ್ಲ ಹರಿದು ಬಿಸಾಡಲು ವ್ಯರ್ಥವಾಗುವ ಸಮಯ ಕೂಡ ಉಳಿಯುತ್ತದೆ. ಕ್ರೆಡಿಟ್ ಕಾರ್ಡ್-ಡೆಬಿಟ್ ಕಾರ್ಡ್ ಬಳಸಿದಾಗ ನನಗೆ ರಸೀತಿ ಬೇಡ ಎಂಬ ಮೂರೇ ಪದಗಳನ್ನು ಉಚ್ಚರಿಸಿದರೆ ಸಾಕು, ಅಂಗಡಿಯವರ ಮುಗುಳ್ನಗೆಯೂ ಉಚಿತವಾಗಿ ದೊರಕುತ್ತದೆ!


ಇಲ್ಲೊಂದು ಎಚ್ಚರಿಕೆಯ ಅಗತ್ಯವೂ ಇದೆ: ಇಷ್ಟೆಲ್ಲ ಮಾಡಿದಾಕ್ಷಣ ಕಸದ ಸಮಸ್ಯೆ ಏಕಾಏಕಿ ಕರಗಿಹೋಗುತ್ತದೆ ಎಂದೇನೂ ಇಲ್ಲ. ಏಕೆಂದರೆ ನಮ್ಮ ಇಂದಿನ ವ್ಯವಸ್ಥೆಯ ಬಹುದೊಡ್ಡ ಪಾಲು ನಿಂತಿರುವುದೇ ಕಸ ಉತ್ಪಾದನೆಯ ಮೇಲೆ. ಬಿಸ್ಕತ್ ಪೊಟ್ಟಣದಿಂದ ಮೊಬೈಲ್ ಫೋನಿನವರೆಗೆ ಸಕಲವನ್ನೂ ತಯಾರಿಸುತ್ತಿರಬೇಕು, ಬಳಸುತ್ತಿರಬೇಕು, ಬಳಸಿ ಎಸೆಯುತ್ತಿರಬೇಕು - ಆಗಷ್ಟೇ ಉದ್ದಿಮೆಗಳು ನಡೆಯುವುದು, ಉದ್ಯೋಗಾವಕಾಶಗಳು ಸೃಷ್ಟಿಯಾಗುವುದು, ಹೊಸ ಮಾದರಿಯ ಬಿಸ್ಕತ್ತನ್ನೂ ಮೊಬೈಲ್ ಫೋನನ್ನೂ ಕೊಳ್ಳಲು ದುಡ್ಡು ಸಿಗುವುದು. ಈ ವ್ಯವಸ್ಥೆಯನ್ನು ತಜ್ಞರು ಲೀನಿಯರ್ ಇಕಾನಮಿ ಎಂದು ಕರೆಯುತ್ತಾರೆ. ಈ ಅರ್ಥವ್ಯವಸ್ಥೆಯಲ್ಲಿರುವುದು ಒಂದೇ ರೇಖೆ - ಕಾರ್ಖಾನೆಯಿಂದ ಹೊರಟು ಗ್ರಾಹಕನನ್ನು ಹಾದು ಕಸದ ಬುಟ್ಟಿ ಸೇರುವುದೇ ಆ ರೇಖೆಯ ಗುರಿ. ಕಸವನ್ನು ಸಂಪೂರ್ಣವಾಗಿ ನಿವಾರಿಸಲು ಪ್ರಯತ್ನಿಸುವುದು ಇದಕ್ಕೆ ತದ್ವಿರುದ್ಧ ಪರಿಸ್ಥಿತಿ: ಸುಲಭಕ್ಕೆ ಹಾಳಾಗದ ವಸ್ತುಗಳನ್ನು ತಯಾರಿಸುವುದು, ಅನಗತ್ಯ ವಸ್ತುಗಳ ಉತ್ಪಾದನೆ ತಡೆಯುವುದು, ಆ ಮೂಲಕ ಕಸ ಶೇಖರವಾಗದಂತೆ ನೋಡಿಕೊಳ್ಳುವುದು - ಇದು ಅಂತಹ ಪರಿಸ್ಥಿತಿಯ ಸ್ವರೂಪ. ಇದನ್ನೇ ತಜ್ಞರು ಸರ್ಕ್ಯುಲರ್ ಇಕಾನಮಿ ಎನ್ನುವುದು - ಇಲ್ಲಿ ಸಕಲ ವಸ್ತುಗಳೂ ಮೆರ್‍ರಿ-ಗೋ-ರೌಂಡಿನಂತೆ ಸುತ್ತುತ್ತಿರುವುದರಿಂದ ಅವಕ್ಕೆ ಕಸದ ಬುಟ್ಟಿಯತ್ತ ಬರಲು ಪುರುಸೊತ್ತೇ ಇರುವುದಿಲ್ಲ.

ಕಸದಬುಟ್ಟಿಯೇ ಪರಮಗುರಿಯಾಗಿರುವ ಇಂದಿನ ಪರಿಸ್ಥಿತಿಯಿಂದ ಕಸದಬುಟ್ಟಿಯನ್ನೇ ಇಲ್ಲವಾಗಿಸುವ ಈ ಪರಿಸ್ಥಿತಿಗೆ ಹೋಗುವುದು ಸುಲಭದ ಕೆಲಸವೇನಲ್ಲ. ಹಾಗಾಗಿ ಇಲ್ಲೊಂದು ಮಧ್ಯಮಮಾರ್ಗವೂ ಇದೆ. ಆ ಮಾರ್ಗವೇ ಮರುಬಳಕೆ, ಅಂದರೆ ರೀಸೈಕ್ಲಿಂಗ್. ಉಳಿದ ಆಹಾರ ಪದಾರ್ಥವನ್ನು ಗೊಬ್ಬರವಾಗಿಸಿ ಸೊಪ್ಪು-ತರಕಾರಿ ಬೆಳೆಯುವುದು,  ಪ್ಲಾಸ್ಟಿಕ್ಕು-ಪೇಪರುಗಳನ್ನು ಹಳೇಪೇಪರಿನ ಅಣ್ಣನಿಗೆ ಕೊಟ್ಟುಕಳಿಸುವುದೆಲ್ಲ ಇದೇ ಮಾರ್ಗದಲ್ಲಿ ಸಿಗುವ ಮೈಲಿಗಲ್ಲುಗಳು.

ಕಸವೇ ಇಲ್ಲದ 'ಜೀರೋ ವೇಸ್ಟ್' ಪರಿಕಲ್ಪನೆಯ ಅನುಷ್ಠಾನ ಸಾಧ್ಯವಾದಿದ್ದರೆ ಹೋಗಲಿ, ಉತ್ಪಾದನೆಯಾಗುವ ಕಸದ ಪ್ರಮಾಣವನ್ನಾದರೂ ಕಡಿಮೆಮಾಡಬಹುದಲ್ಲ ಎನ್ನುವ ಭರವಸೆ ಮೂಡುವುದು ಈ ಮೈಲಿಗಲ್ಲುಗಳನ್ನು ದಾಟಿದಾಗಲೇ. ಊರತುಂಬಾ ಕಸದ ರಾಶಿ ಹರಡಿಕೊಂಡಿರುವುದು ಅನಿವಾರ್ಯವೇನಲ್ಲ, ಪಟ್ಟಣದ ಸುತ್ತಮುತ್ತಲ ಹಳ್ಳಿಗಳಿರುವುದು ನಮ್ಮ ಕಸವನ್ನು ತುಂಬಿಸಿಕೊಳ್ಳುವುದಕ್ಕೇ ಅಲ್ಲ ಎನ್ನುವುದೆಲ್ಲ ಈ ಪಯಣ ಮುಂದುವರೆದಂತೆ ಸ್ಪಷ್ಟವಾಗುತ್ತ ಹೋಗುತ್ತದೆ. ನಮ್ಮ ಮನೆಯಿಂದ ಆಚೆ ಹೋದರೆ ಸಾಕು ಎಂದು ಬೇಕಾಬಿಟ್ಟಿಯಾಗಿ ಎಸೆದ ಕಸ ನಮ್ಮ ಮಕ್ಕಳ ಶಾಲೆಯೆದುರೇ ರಾಶಿಬೀಳಬಹುದು, ಅವರ ಆರೋಗ್ಯಕ್ಕೇ ತೊಂದರೆಮಾಡಬಹುದು ಎನ್ನುವುದೂ ಅರ್ಥವಾಗುತ್ತದೆ.

ಅಷ್ಟೇ ಅಲ್ಲ, ಕೊಂಚವೇ ಶ್ರಮ ಬೇಡುವ ಇಂತಹ ಸಣ್ಣಸಣ್ಣ ಕೆಲಸಗಳನ್ನು ಮಾಡುವುದರಿಂದ ಮನೆಯ ಮಕ್ಕಳಲ್ಲಿ ಕಸ ನಿರ್ವಹಣೆ ಒಂದು ಸಹಜ ಪ್ರಕ್ರಿಯೆ ಎನ್ನುವ ಭಾವನೆ ಮೂಡುತ್ತದೆ. ಗಾರ್ಬೇಜ್ ಸಿಟಿಯ ಸ್ಪೆಲಿಂಗು ಮತ್ತೊಮ್ಮೆ ಬದಲಾಗಿ ಬೆಂಗಳೂರು ಮತ್ತೊಮ್ಮೆ ಗಾರ್ಡನ್ ಸಿಟಿ ಆಗಬಹುದೇನೋ ಎಂಬ ಆಶಾಭಾವನೆ, ಬಾಲ್ಕನಿಯ ಹೂಕುಂಡದಲ್ಲಿ ತಲೆಯೆತ್ತಿದ ಮೆಂತ್ಯದ ಗಿಡದಂತೆ, ಮತ್ತೊಮ್ಮೆ ಚಿಗುರುತ್ತದೆ!

ಜುಲೈ ೧, ೨೦೧೭ರ 'ಹಸಿರುವಾಸಿ'ಯಲ್ಲಿ ಪ್ರಕಟವಾದ ಲೇಖನ

1 ಕಾಮೆಂಟ್‌:

Chinnamma baradhi ಹೇಳಿದರು...

Very good article.Thanks.
Instead of 'use and throw',if "Repair and use" practice cultivated,there is no E-waste.

badge