ಸೋಮವಾರ, ಫೆಬ್ರವರಿ 16, 2009

ಇನ್ನೂ ಒಂದು ಆಕ್ಸಿಡೆಂಟು!! ಹೀಗೂ ಉಂಟೆ!!!


ಟಿ ಜಿ ಶ್ರೀನಿಧಿ

ಮುಂದುವರೆದ ಅಪಘಾತಗಳ ಸರಮಾಲೆಯಲ್ಲಿ ಈ ಬಾರಿ ಎರಡು ಸಬ್‌ಮರೀನ್‌ ಗಳು ಪರಸ್ಪರ ಡಿಕ್ಕಿಹೊಡೆದಿವೆ.

ಅಟ್ಲಾಂಟಿಕ್ ಸಾಗರದಲ್ಲಿ ಈ ಅಪಘಾತ ಸಂಭವಿಸಿದ್ದು ಫ್ರಾನ್ಸ್ ಹಾಗೂ ಬ್ರಿಟನ್ನಿನ ಸಬ್‌ಮರೀನ್‌ಗಳು ಇದರಲ್ಲಿ ಭಾಗಿಯಾಗಿವೆ. ಎರಡೂ ಸಬ್‌ಮರೀನ್‌ಗಳು ಪರಮಾಣುಶಕ್ತಿ ಚಾಲಿತವಾದ್ದರಿಂದ ಈ ಅಪಘಾತ ಹಿಂದೆಂದಿಗಿಂತ ಹೆಚ್ಚಿನ ಪ್ರಾಮುಖ್ಯ ಪಡೆದುಕೊಂಡಿದೆ. ಎರಡೂ ಸಬ್‌ಮರೀನ್‌ಗಳಿಗೆ ಸಾಕಷ್ಟು ಘಾಸಿಮಾಡಿರುವ ಈ ಅಪಘಾತ ತೀವ್ರಪ್ರಮಾಣದ್ದೇ ಆದರೂ ಕೂಡ ಪರಮಾಣು ವಿಕಿರಣ ಹೊರಸೂಸುವಂತಹ ಯಾವುದೇ ತೊಂದರೆ ಸಂಭವಿಸಿಲ್ಲ ಎಂದು ಬ್ರಿಟನ್ ಸೇನಾಮೂಲಗಳು ತಿಳಿಸಿವೆ. ಇದಲ್ಲದೆ ಇವೆರಡೂ ಸಬ್‌ಮರೀನ್‌ಗಳಲ್ಲಿದ್ದ ಕ್ಷಿಪಣಿಗಳು ಹಾಗೂ ಇತರ ಶಸ್ತ್ರಾಸ್ತ್ರಗಳು ಕೂಡ ಕ್ಷೇಮವಾಗಿರುವ ಸುದ್ದಿ ಹೊರಬಂದಿದ್ದು ಅಂತಾರಾಷ್ಟ್ರೀಯ ಸಮುದಾಯ ನಿಟ್ಟುಸಿರಿಡುವಂತೆ ಮಾಡಿದೆ.

ಆಕಾಶದಲ್ಲಿ ಎರಡು ಉಪಗ್ರಹಗಳು ಒಂದಕ್ಕೊಂದು ಡಿಕ್ಕಿಯಾದ ಘಟನೆ ಯ ಬೆನ್ನಲ್ಲೇ ಈ ಘಟನೆ ಸಂಭವಿಸಿದ್ದು ಅಷ್ಟು ವಿಸ್ತಾರವಾದ ಸಾಗರದಲ್ಲಿ ಎರಡು ಸಬ್‌ಮರೀನ್‌ಗಳು ಅದುಹೇಗೆ ಡಿಕ್ಕಿಯಾದವು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿವೆ.

ಸಬ್‌ಮರೀನ್‌ಗಳು ತಮ್ಮ ಸುತ್ತಮುತ್ತ ಇರುವ ಇತರ ನೌಕೆ ಹಾಗೂ ಸಬ್‌ಮರೀನ್‌ಗಳನ್ನು ಗುರುತಿಸಲು ಅನುವುಮಾಡಿಕೊಡುವ ಸೋನಾರ್ ಉಪಕರಣ ಹೊಂದಿರುತ್ತವೆ. ಇದೇರೀತಿ ತಮ್ಮ ರಕ್ಷಣೆಗಾಗಿ ಇತರ ಸಬ್‌ಮರೀನ್‌ಗಳ ಸೋನಾರ್ ಕಣ್ಣಿಗೆ ಬೀಳದಿರಲು ಸೋನಾರ್ ವಿರೋಧಿ ಉಪಕರಣಗಳನ್ನೂ ಅಳವಡಿಸಿಕೊಂಡಿರುತ್ತವೆ. ಈ ಉಪಕರಣಗಳು "ಬಹಳ ಹೆಚ್ಚಿನ" ಕಾರ್ಯಕ್ಷಮತೆ ತೋರಿಸಿದ್ದು ಈ ಅಪಘಾತಕ್ಕೆ ಕಾರಣವಿರಬಹುದು ಎನ್ನಲಾಗಿದೆ.

ಗುರುವಾರ, ಫೆಬ್ರವರಿ 12, 2009

ಆಕ್ಸಿಡೆಂಟ್ ಆಗ್ಹೋಗಿದೆ!

ಟಿ ಜಿ ಶ್ರೀನಿಧಿ

ಕಳೆದ ವಾರದಲ್ಲಿ ಹೆಚ್ಚೂಕಡಿಮೆ ಪ್ರತಿ ದಿವಸವೂ ಕೇಳಿಬರುತ್ತಿರುವ ವಿಮಾನ ಅಪಘಾತ ಕೊಂಚದರಲ್ಲೇ ತಪ್ಪಿದ ಸುದ್ದಿಗಳ ನಡುವೆ ಈಗ ವಿಮಾನಗಳಿಗೂ ಮೇಲೆ ಹಾರಾಡುವ ಉಪಗ್ರಹಗಳು ಅಪಘಾತಕ್ಕೀಡಾದ ಸುದ್ದಿ ಕೇಳಿಬಂದಿದೆ.

ಕಳೆದ ಮಂಗಳವಾರ ಸಂಭವಿಸಿದ ಘಟನೆಯೊಂದರಲ್ಲಿ ಬಾಹ್ಯಾಕಾಶದಲ್ಲಿ ರೌಂಡು ಹೊಡೆಯುತ್ತಿದ್ದ ಅಮೆರಿಕಾ ಹಾಗೂ ರಷ್ಯಾದ ಉಪಗ್ರಹಗಳು ಮುಖಾಮುಖಿ ಡಿಕ್ಕಿಹೊಡೆದಿವೆ. ಅಂತರಿಕ್ಷದ ಇಂತಹ ಮೊದಲ ಅಪಘಾತ ಎಂದು ಗುರುತಿಸಲಾಗಿರುವ ಈ ಘಟನೆ ಸೈಬೀರಿಯಾದ ಮೇಲೆ ಭೂಮಿಯಿಂದ ಸುಮಾರು ೭೮೦ ಕಿಲೋಮೀಟರುಗಳ ಎತ್ತರದಲ್ಲಿ ಸಂಭವಿಸಿದೆ.

ಈಗಾಗಲೇ ನಿಷ್ಕ್ರಿಯವಾಗಿತ್ತು ಎನ್ನಲಾಗಿರುವ ಹೆಚ್ಚೂಕಡಿಮೆ ಸಾವಿರ ಕೆಜಿ ತೂಕದ ರಷ್ಯಾದ ಉಪಗ್ರಹ ೧೯೯೩ರಲ್ಲಿ ಉಡಾವಣೆಯಾಗಿತ್ತಂತೆ. ಅಪಘಾತದಲ್ಲಿ ಭಾಗಿಯಾಗಿರುವ ೫೬೦ಕಿಲೋ ತೂಕದ ಇನ್ನೊಂದು ಉಪಗ್ರಹ ಅಮೆರಿಕಾದ ಇರಿಡಿಯಂ ಸಂಸ್ಥೆಗೆ ಸೇರಿದ್ದು ೧೯೯೭ರಲ್ಲಿ ಉಡಾವಣೆಯಾಗಿತ್ತು. ಇದು ಇರಿಡಿಯಂ ಸಂಸ್ಥೆ ಒದಗಿಸುವ ಉಪಗ್ರಹ ದೂರವಾಣಿ ಸೇವೆಗಾಗಿ ಬಳಕೆಯಾಗುತ್ತಿದ್ದ ಅನೇಕ ಉಪಗ್ರಹಗಳಲ್ಲಿ ಒಂದು.

ಈ ಉಪಗ್ರಹಗಳು ಅಪಾರ ವೇಗದಲ್ಲಿ ಒಂದಕ್ಕೊಂದು ಡಿಕ್ಕಿ ಹೊಡೆದಿರುವುದರಿಂದ ಅವೆರಡೂ ನುಚ್ಚುನೂರಾಗಿದ್ದು ಧೂಳು ಹಾಗೂ ಚೂರುಗಳ ದೊಡ್ಡದೊಂದು ಮೋಡವೇ ಸೃಷ್ಟಿಯಾಗಿದೆ. ಈ ಚೂರುಗಳು ಭೂಮಿಯ ವಾತಾವರಣ ಪ್ರವೇಶಿಸಿ ಉರಿದು ಬೂದಿಯಾದರೆ ಪರವಾಗಿಲ್ಲ, ಹಾಗಾಗದೆ ಅವೇನಾದರೂ ಅಂತರಿಕ್ಷದಲ್ಲೇ ಉಳಿದುಕೊಂಡರೆ ಇತರ ಉಪಗ್ರಹಗಳು ಹಾಗೂ ಅಂತರಿಕ್ಷಯಾನಗಳಿಗೆ ತೊಂದರೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

೧೯೫೭ರಿಂದ ಈಚೆಗೆ ಉಡಾವಣೆಯಾಗಿರುವ ಉಪಗ್ರಹಗಳ ಸಂಖ್ಯೆ ಸುಮಾರು ಆರು ಸಾವಿರ ತಲುಪಿರುವುದು ಬಾಹ್ಯಾಕಾಶದ ಟ್ರಾಫಿಕ್ಕನ್ನು ಹೆಚ್ಚಿಸಿದ್ದು ಮುಂದಿನ ದಿನಗಳಲ್ಲಿ ಇಂತಹ ಅಪಘಾತಗಳು ಹೆಚ್ಚಾಗಲಿವೆಯೇ ಎಂಬ ಸಂಶಯ ಹುಟ್ಟುಹಾಕಿದೆ.

ಈ ಲೇಖನ ದಟ್ಸ್‌ಕನ್ನಡದಲ್ಲೂ ಪ್ರಕಟವಾಗಿದೆ. ಓದಲು ಇಲ್ಲಿ ಕ್ಲಿಕ್ ಮಾಡಿ!

ಮಂಗಳವಾರ, ನವೆಂಬರ್ 4, 2008

ಸ್ಪಾಮ್ - ಇಮೇಲ್ ಕಿರಿಕಿರಿಯ ಮೂರು ದಶಕ

ಟಿ ಜಿ ಶ್ರೀನಿಧಿ

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ 'ವಿಜ್ಞಾನ ಲೋಕ' ಪತ್ರಿಕೆ ನವೆಂಬರ್ ೨೦೦೮ರ ಸಂಚಿಕೆಯಲ್ಲಿ ಪ್ರಕಟವಾಗಿರುವ ಲೇಖನ

ಶುಕ್ರವಾರ, ಸೆಪ್ಟೆಂಬರ್ 5, 2008

ಸಾಫ್ಟ್‌ವೇರ್ ಕಂಪೆನೀಲಿ ಏನು ಮಾಡ್ತಾರೆ…?

ವಿಜಯ್ ರಾಜ್ ಕನ್ನಂತ

ಈ ಪ್ರಶ್ನೆಯನ್ನು ಇಲ್ಲಿಯವರೆಗೆ ಕಡಿಮೆಯೆಂದರೂ ನೂರು ಜನರಾದರೂ ನನ್ನ ಬಳಿ ಕೇಳಿದ್ದಾರೆ. ಅದೆಂತದೋ ಪ್ರಾಜೆಕ್ಟ್ ಅಂತಾರಲ್ಲ, ಕೋಡ್ ಬರೆಯೋದು ಹಾಗಂದ್ರೇನು, ಪ್ರೋಗ್ರಾಮ್ ಅಂದ್ರೆ ಏನು… ಹೀಗೆ ಸಾಫ್ಟ್‌ವೇರ್ ಜಗತ್ತಿನ ಬಗ್ಗೆ ಕುತೂಹಲದಿಂದ ಪ್ರಶ್ನೆ ಕೇಳಿದವರು ಅನೇಕ ಮಂದಿ ಇದ್ದಾರೆ. ಅಸಲಿಗೆ ಹಗಲು-ರಾತ್ರಿ ಕೆಲಸ ಕೆಲಸ ಅಂತ ಸಾಫ್ಟ್‌ವೇರ್ ಮಂದಿ ಮಾಡುವ ಕೆಲಸ ಯಾವ ಸ್ವರೂಪದ್ದು ಅನ್ನುವ ಕುರಿತಾದ ಬಹುತೇಕರ ಪ್ರಶ್ನೆಗೆ ಸರಳವಾಗಿ ವಿವರಿಸಲು ಯಾಕೆ ಪ್ರಯತ್ನಿಸಬಾರದೆಂದು ಇದನ್ನು ಬರೆಯಲು ಹೊರಟಿದ್ದೇನೆ. ಮುಂದೆ ಓದಿ

ಶುಕ್ರವಾರ, ಆಗಸ್ಟ್ 22, 2008

ಅಣು ಒಪ್ಪಂದ ಪೂರಕವೋ? ಮಾರಕವೋ?

ಮಹೇಶ್ ಮಲ್ನಾಡ್

ಆಣು ಒಪ್ಪಂದ, ಅಣು ಬಂಧ ..ಎಲ್ಲಿ ನೋಡಿದರೂ ಅದರದ್ದೇ ಮಾತು. ದಿನನಿತ್ಯ ಪತ್ರಿಕೆಗಳ ಮುಖಪುಟದ ಸುದ್ದಿ. ಈ ದೇಶದ ಸರ್ಕಾರವೇ ಅಣುಒಪ್ಪಂದಕ್ಕೆ ಬಲಿಯಾಗಿ ಬಿಡುವುದೇನೋ ಎಂಬ ಆತಂಕವೂ ಎದುರಾಗಿತ್ತು. ಇಷ್ಟಾದ ಮೇಲೂ ಈ ದೇಶದ ' ನಾಗರೀಕ ಪ್ರಭುಗಳಾದ ನಮಗೆ' ಅಣುಬಂಧದ ಕುರಿತು ಏನೂ ಅರಿವಿಲ್ಲ ಎಂದರೆ ತಪ್ಪಿಲ್ಲ. . ಮುಂದೆ ಓದಿ...

ಚೈತ್ರರಶ್ಮಿ ಮಾಸಪತ್ರಿಕೆಯ ಜುಲೈ ಸಂಚಿಕೆಯಲ್ಲಿ ಪ್ರಕಟಿತ ಲೇಖನ

ಶುಕ್ರವಾರ, ಜೂನ್ 27, 2008

ಶ್ರದ್ಧಾಂಜಲಿ

ಇಂದು ಮುಂಜಾನೆ ನಿಧನರಾದ ಕನ್ನಡದ ಹಿರಿಯ ವಿಜ್ಞಾನ ಬರಹಗಾರ ಪ್ರೊ। ಜಿ ಟಿ ನಾರಾಯಣ ರಾವ್ ಅವರಿಗೆ ಇ-ಜ್ಞಾನ ಬಳಗ ಹೃದಯಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತದೆ।

ಬುಧವಾರ, ಜೂನ್ 25, 2008

ಬೌದ್ಧಿಕ ಸಿರಿ ಹಕ್ಕು ರಕ್ಷಿಸುವ ಚಿಂತೆ ಏಕೆ?

ಕ್ಷಯ ರೋಗದಂತಹ ರೋಗಗಳಿಗೆ ಔಷಧ ಶೋಧದ ಪ್ರಯತ್ನಗಳ ವಿಷಯದಲ್ಲಿ 'ಮುಕ್ತ ಆಕರ' ಮಾರ್ಗದಲ್ಲಿ ಭಾರತ ಏಕೆ ನಡೆಯಬೇಕು ಎಂದು ಪ್ರಖ್ಯಾತ ಭಾರತೀಯ ತಳಿವಿಜ್ಞಾನಿ ಸಮೀರ್ ಬ್ರಹ್ಮಚಾರಿ ಇಲ್ಲಿ ವಿವರಿಸುತ್ತಾರೆ.
೩೮ ರಾಷ್ಟ್ರೀಯ ಪ್ರಯೋಗಶಾಲೆಗಳ ಸಮೂಹವಾದ ವೈಜ್ಞಾನಿಕ ಹಾಗೂ ಔದ್ಯಮಿಕ ಸಂಶೋಧನಾ ಪರಿಷತ್ತಿನ ಮಹಾನಿರ್ದೇಶಕರೂ, ಭಾರತದ ಪ್ರಮುಖ ತಳಿವಿಜ್ಞಾನಿಗಳಲ್ಲಿ ಒಬ್ಬರೂ ಆದ ಸಮೀರ್ ಬ್ರಹ್ಮಚಾರಿ ಔಷಧ ಶೋಧಕ್ಕಾಗಿ 'ಮುಕ್ತ ಆಕರ' ಮಾರ್ಗವನ್ನು ತೆರೆದಿಡಲು ಬಯಸಿದ್ದಾರೆ. ಕ್ಷಯ ರೋಗ ಇವರ ಮೊದಲ ಗುರಿ. ವಿಶ್ವದ ಎಲ್ಲೆಡೆಯೂ ಔಷಧ ವಿನ್ಯಾಸ ಹಾಗೂ ಶೋಧದ (ಅದರಲ್ಲೂ ವಿಶ್ವದ ಬಡ ರಾಷ್ಟ್ರಗಳನ್ನು ಕಾಡುವ ಕ್ಷಯದಂತಹ ಸೋಂಕುರೋಗಗಳ) ವಿವಿಧ ಮಗ್ಗುಲುಗಳ ಸಂಶೋಧನೆಯಲ್ಲಿ ನಿರತರಾಗಿರುವ ವಿಜ್ಞಾನಿಗಳು ತಮ್ಮ ಶೋಧವಿವರಗಳನ್ನು ಮುಕ್ತನಿಧಿಯಲ್ಲಿ ದಾಖಲಿಸಬೇಕು. ಎಲ್ಲರೂ ಇದನ್ನು ವಿಮರ್ಶಿಸಿ, ಬಳಸಲಾಗುವಂತಹ ವ್ಯವಸ್ಥೆ ಇವರ ಪ್ರಸ್ತಾವ.
ಕ್ಷಯ ರೋಗವನ್ನುಂಟು ಮಾಡುವ ಮೈಕೊಬ್ಯಾಕ್ಟೀರಿಯಂ ಟ್ಯುಬರ್‌ಕುಲೆಯ ಜೀನೋಮ್ ಅನಾವರಣಗೊಂಡ ದಶಕವಾಗಿದೆ. ಆದರೂ ಅದರಿಂದ ಹೊಸ ಔಷಧ ದೊರಕುವ ಸುಳಿವಿಲ್ಲ. ವಿಶ್ವವು ಈ ಸಾಧನೆಯನ್ನು ಕೊಂಡಾಡುತ್ತಿರುವ ಸಂದರ್ಭದಲ್ಲಿ, ಔಷಧ ಶೋಧಕ್ಕಾಗಿ ಮುಕ್ತ ಆಕರಗಳ ಅವಶ್ಯಕತೆ, ಅದರ ಸಾಮರ್ಥ್ಯಗಳನ್ನು ಕುರಿತು ಡಾ. ಬ್ರಹ್ಮಚಾರಿಯವರೊಡನೆ ಟಿ.ವಿ. ಪದ್ಮ ನಡೆಸಿದ ಸಂಭಾಷಣೆಯ ತುಣುಕುಗಳು ಇಲ್ಲಿವೆ.
(ಅನುವಾದ: ಕೊಳ್ಳೇಗಾಲ ಶರ್ಮ. ಕೃಪೆ: http://www.scidev.net/)
- - - - -
ಮುಕ್ತ ಆಕರ ಔಷಧಿಗಳು ನಿಮ್ಮ ಮಹದಾಸೆ ಎಂದು ಒಮ್ಮೆ ನೀವು ಹೇಳಿದ್ದಿರಿ. ಅಭಿವೃದ್ಧಶೀಲ ರಾಷ್ಟ್ರಗಳಿಗೆ ಅದರ ಅವಶ್ಯಕತೆ ಇದೆ ಎಂಬ ಅನಿಸಿಕೆ ನಿಮಗೆ ಏಕೆ ಬಂತು?
ಮಾನವ ಜೀನೋಮ್‌ನ ಸರಣಿ ಅನಾವರಣಗೊಂಡಾಗ ಅದು ಆರೋಗ್ಯ ಸೇವೆಯಲ್ಲಿ ಮಹತ್ತರ ಬದಲಾವಣೆಗಳನ್ನು ತರಲಿದೆ ಎಂದು ವಿಜ್ಞಾನಿಗಳು ವಿಶ್ವದ ಜನತೆಗೆ ನಂಬಿಕೆ ಹುಟ್ಟಿಸಿದ್ದರು. ಮೈಕೊಬ್ಯಾಕ್ಟೀರಿಯಂ ಟ್ಯುಬರ್‌ಕುಲೋಸಿಸ್‌ನ ಜೀನೋಮ್ ಅನಾವರಣಗೊಂಡು ಹತ್ತು ವರ್ಷಗಳೇ ಕಳೆದಿವೆ. ಆದರೆ ನಾವಿನ್ನೂ ಕ್ಷಯದ ಸಮಸ್ಯೆಯನ್ನು ಪರಿಹರಿಸಿಲ್ಲ. ಹೀಗಾಗಿ ಇದು (ಮುಕ್ತ ಆಕರ) ನನ್ನಂತಹ ಜೀನೋಮ್ ವಿಜ್ಞಾನಿಯ ಕರ್ತವ್ಯವೂ ಆಗಿದೆ. ಕ್ಷಯದ ಸಮಸ್ಯೆಯನ್ನೇ ನಾವು ಬಗೆಹರಿಸಿಲ್ಲದಾಗ, ಮಾನವನ ಇತರೆ ರೋಗಗಳ ಸಮಸ್ಯೆಯನ್ನು ನಾವು ಹೇಗೆ ಬಗೆಹರಿಸಬಲ್ಲೆವು?
ಸಾರ್ವಜನಿಕ ಧನಸಹಾಯ ದೊರೆಯುವ ಹಲವಾರು ಸಂಶೋಧನಾ ಸಂಸ್ಥೆಗಳು ಜೀವವೈದ್ಯಕೀಯದಲ್ಲಿ ಬಹಳಷ್ಟು ಸಂಶೋಧನೆ ನಡೆಸುತ್ತಿವೆ. ಆದರೆ ಔಷಧ-ಶೋಧದ ಅಂತಿಮ ಹಂತವನ್ನು ಔಷಧ ಕಂಪೆನಿಗಳ ಪಾಲಿಗೆ ಬಿಡಲಾಗಿದೆ. ಇದು ಹೆಚ್ಚಿಗೆ ಗುಪ್ತ ಶೋಧ. ಅಗ್ಗದ ಔಷಧಗಳು ಎಲ್ಲರ ಹಕ್ಕು ಎನ್ನುವುದಾದರೆ, ಎಲ್ಲ ಔಷಧಗಳನ್ನೂ ಎಲ್ಲರಿಗೂ ದೊರಕುವಂತೆ ಮಾಡಬಹುದು ಎನ್ನುವುದು ನನ್ನ ಆಶಯ. ಕ್ಷಯ ಅಥವಾ ಬಡವರನ್ನು ಕಾಡುವ ರೋಗಗಳ ವಿಷಯಕ್ಕೆ ಬಂದಾಗ, ಇವುಗಳಲ್ಲಿನ ಲಾಭದ ಅಂಶ ಕಡಿಮೆ ಇರುವುದರಿಂದ ಇವುಗಳ ಬಗ್ಗೆ ಕೆಲಸ ಮಾಡುವಂತೆ ಔಷಧ ಕಂಪೆನಿಗಳನ್ನು ಒಪ್ಪಿಸುವುದು ಕಷ್ಟ. ಆದ್ದರಿಂದ ಇಂತಹ ಕೆಲಸಗಳಲ್ಲಿ ಪಾಲ್ಗೊಳ್ಳುವುದು ಸಾರ್ವಜನಿಕ ಸಂಸ್ಥೆಗಳ ಜವಾಬ್ದಾರಿಯೂ ಹೌದು.ಇಂತಹ ಸೋಂಕು ರೋಗಗಳು ಹಾಗೂ ಬಡವರ ರೋಗಗಳ ವಿಷಯದಲ್ಲಿ ನಾವು ಬೌದ್ಧಿಕ ಸಿರಿ ಹಕ್ಕುಗಳ ಬಗ್ಗೆ ಚಿಂತಿಸಬೇಕೇಕೆ? ಇಂಟರ್‌ನೆಟ್ ಮತ್ತು ಮಾನವ ಜೀನೋಮ್‌ನ ಅಭಿವೃದ್ಧಿಯಲ್ಲಿ ಮಾಡಿದಂತೆ ಈ ರೋಗಗಳ ಔಷಧಗಳ ಶೋಧಕ್ಕೆ ನಮ್ಮ ಕಲ್ಪನೆಗಳು ಮತ್ತು ಬುದ್ಧಿಮತ್ತೆಯನ್ನು ಹಂಚಿಕೊಂಡು, ಒಂದು ಮುಕ್ತ ಆಕರ ರಂಗವನ್ನು ಒದಗಿಸಬಾರದೇಕೆ? ಮುಕ್ತ ಆಕರ ಔಷಧ ಸಂಶೋಧನೆಗೆ ಶೋಧವಿವರಗಳನ್ನು ಒದಗಿಸುವಷ್ಟು, ಭಾರತ ಮತ್ತು ಇತರೇ ಅಭಿವೃದ್ಧಶೀಲ ರಾಷ್ಟ್ರಗಳನ್ನು ಇಂಟರ್‌ನೆಟ್ ಮತ್ತು ಮಾನವ ಜೀನೋಮ್ ಯೋಜನೆಗಳು ಸಬಲಗೊಳಿಸಿವೆ.
ಮುಕ್ತ ಆಕರ ಸಂಶೋಧನೆಯಲ್ಲಿ ಎಲ್ಲ ಔಷಧಗಳಿಗೂ ಅನ್ವಯಿಸಬೇಕು ಎನ್ನುತ್ತೀರೋ ಅಥವಾ ಆಯ್ದ ಕೆಲವು ಔಷಧಗಳಿಗಷ್ಟೆಯೋ?
ಮಾರುಕಟ್ಟೆಯಲ್ಲಿ ದೊರೆಯುವ ಲಾಭಾಂಶದಿಂದಾಗಿ ಕೆಲವು ಔಷಧಗಳನ್ನು ಗುರಿಯಿಡಲಾಗಿದೆ. ಇವು ಶ್ರೀಮಂತರಿಗಷ್ಟೆ ಲಭ್ಯ. ಇಂತಹ ಔಷಧಗಳ ಶೋಧವನ್ನು ಪೇಟೆಂಟು ರಕ್ಷಿತ ಮಾರ್ಗ ಅನುಸರಿಸಿ ನಡೆಸಬಹುದು. ಆದರೆ, ಮಾರುಕಟ್ಟೆಯ ಬೆಂಬಲವಿಲ್ಲದ, ಬಡವರಿಗೆ ಅವಶ್ಯಕವಾದ ಔಷಧಗಳಿಗೆ ಮುಕ್ತ ಆಕರ ಮಾರ್ಗ ಲಾಭದಾಯಕವಾಗುತ್ತದೆ.ಮಾರ್ಗದ ಆಯ್ಕೆ ಉತ್ಪನ್ನ ಯಾವುದೆನ್ನುವುದನ್ನು ಅವಲಂಬಿಸಿದೆ. ಭತ್ತದ ಗದ್ದೆ ಹಾಗೂ ಅತಿ ಬೆಲೆಯ ಉತ್ಪನ್ನವನ್ನು ತಯಾರಿಸುವ ಕಾರ್ಖಾನೆ ಇದೆ ಎಂದುಕೊಳ್ಳಿ. ಕಾರ್ಖಾನೆಯ ಸುತ್ತಲೂ ಗೋಡೆ ಕಟ್ಟಿ, ಯಾರೂ ಒಳನುಗ್ಗದ ಹಾಗೆ ರಕ್ಷಿಸುವುದರಲ್ಲಿ ಅರ್ಥವಿದೆ. ಆದರೆ ಬಡವರಿಗೂ ಅವಶ್ಯಕವಾದ ಭತ್ತವನ್ನು ಬೆಳೆಯುವ ಗದ್ದೆಯ ಸುತ್ತ ಬಲವಾದ ಗೋಡೆ ಕಟ್ಟುತ್ತೇವೆಯೇ? ಹಾಗೆ ಮಾಡಿದರೆ, ಗೋಡೆ ಕಟ್ಟುವ ವೆಚ್ಚ ಹಾಗೂ ಅದರ ನಿರ್ವಹಣಾ ವೆಚ್ಚವೆಲ್ಲವೂ ಅಕ್ಕಿಯ ಬೆಲೆಯಲ್ಲಿ ಸೇರಿಕೊಳ್ಳುತ್ತದೆ. ಬಡವರು ಅದನ್ನು ಕೊಳ್ಳಶಕ್ತರಾಗುವರು. ಮುಕ್ತ ಆಕರ ಮಾರ್ಗವು ಎಲ್ಲರಿಗೂ ಬೇಕಾದ 'ಭತ್ತದ ಗದ್ದೆ'ಗಳಿಗೆ, ಲಕ್ಸುರಿ ಉತ್ಪನ್ನಗಳಿಗೆ ಅಲ್ಲ.
ಮುಕ್ತ ಆಕರವೆನ್ನುವುದು ಪೇಟೆಂಟು ಹಕ್ಕುಗಳು ಹಾಗೂ ಬೌದ್ಧಿಕ ಸಿರಿ ಹಕ್ಕುಗಳನ್ನು ಭದ್ರಗೊಳಿಸಬೇಕೆನ್ನುವ ಜಾಗತಿಕ ಪ್ರವಾಹಕ್ಕೆ ವಿರುದ್ಧ ಈಜಿದಂತಲ್ಲವೆ? ಭಾರತದ ಒಳಗೂ, ಹೊರಗೂ, ಪ್ರಬಲವಾಗಿರುವ ಔಷಧ ಕಂಪೆನಿಗಳ ವಿರೋಧವನ್ನು ಎದುರಿಸಿ ಅದು ಉಳಿಯಬಲ್ಲುದೇ?
ಹಾಗೇನಿಲ್ಲ. ಉದಾಹರಣೆಗೆ, ಕ್ಷಯ ರೋಗದ ವಿಷಯದಲ್ಲಿ ಹಲವಾರು ಔಷಧ ಕಂಪೆನಿಗಳು ಈ ಮಾರ್ಗವನ್ನು ಅನುಸರಿಸುವತ್ತ ಆಸಕ್ತಿ ತೋರಿ, ನನ್ನ ಪ್ರಯತ್ನಗಳಿಗೆ ಪ್ರತಿಕ್ರಯಿಸಿವೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಇಂತಹ ಔಷಧಗಳ ಅವಶ್ಯಕತೆ ಇರುವ ರೋಗಿಗಳ ಸಂಖ್ಯೆ ಬೃಹತ್ ಆಗಿರುವುದರಿಂದ, ಹೊಸದೊಂದು ಔಷಧದ ಶೋಧವನ್ನು ಕಾಣುವ ಇಚ್ಛೆ ಅವುಗಳಿಗೂ ಇದೆ. ಅಲ್ಲದೆ ಇಂದು ಖಾಸಗಿ ಕ್ಷೇತ್ರವೂ ಕೂಡ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಚಿಂತಿಸುತ್ತಿವೆ. ಹಲವು ಖಾಸಗಿ ಕಂಪೆನಿಗಳು ತಮ್ಮ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಎಚ್ಚರಗೊಂಡಿವೆ. ಇನ್ನೂ ಹಲವು ಅವುಗಳ ಜೊತೆ ಸೇರಲಿವೆ. ಇದಲ್ಲದೆ ಸುಲಭ ಬೆಲೆಯ ಔಷಧಗಳಿಗೆ ಬೆಂಬಲ ನೀಡುವ ಬಿಲ್‌ಗೇಟ್ಸ್ ದತ್ತಿಯಂತಹ ಹಲವು ಖಾಸಗಿ ಧರ್ಮ ಸಂಸ್ಥೆಗಳೂ ಇವೆ.
ಮುಕ್ತ ಆಕರ ಶೋಧಗಳಿಂದಾಗಿ ಔಷಧ ಕಂಪೆನಿಗಳು ಔಷಧ ಸಂಶೋಧನೆಗೆ ತಾವು ಮಾಡುವ ವೆಚ್ಚವನ್ನು ಕಡಿತಗೊಳಿಸಬಹುದು ಎನ್ನುವ ಚಿಂತೆ ಬರಲಿಲ್ಲವೇ? ಅಲ್ಲದೆ ಸಾರ್ವಜನಿಕ ಧನ ಸಹಾಯ ಅವಶ್ಯಕವಾದಷ್ಟು ದೊರಕದಿದ್ದರೆ ಎನ್ನುವ ಚಿಂತೆ ಇಲ್ಲವೇ?
ಆ ಚಿಂತೆ ನನಗಿಲ್ಲ. ಖಾಸಗಿ ಕಂಪೆನಿಗಳು ಮುಂದೆ ಬಂದು ಅವಗಣನೆಗೆ ಒಳಗಾಗಿರುವ ರೋಗಗಳಿಗೆ ಔಷಧಗಳನ್ನು ಅಭಿವೃದ್ಧಿಪಡಿಸದಿದ್ದಲ್ಲಿ, ಆ ಬಗ್ಗೆ ಸಂಶೋಧನೆ ಮಾಡುವುದು ಸಾರ್ವಜನಿಕ ಸಂಸ್ಥೆಗಳ ಹೊಣೆ ಹಾಗೂ ಕರ್ತವ್ಯವಾಗುತ್ತದೆ. ಭಾರತ ಈಗ ಬಡರಾಷ್ಟ್ರವಾಗಿ ಉಳಿದಿಲ್ಲ. ಇಂತಹ ಸಂಶೋಧನೆಗಳ ವೆಚ್ಚವನ್ನು ಭಾರತ ಸರಕಾರ ಭರಿಸುವುದು ಸಾಧ್ಯ. ಕಳೆದ ಐವತ್ತು ವರ್ಷಗಳಲ್ಲಿ ವಿಜ್ಞಾನಿಗಳು ಕೈಗೆಟುಕಬಹುದಾದ ಬೆಲೆಯಲ್ಲಿ ಔಷಧ ತಯಾರಿಕೆಯ ತಂತ್ರಗಳನ್ನು ರೂಪಿಸಿದ್ದರಿಂದ ಭಾರತಕ್ಕೆ ಲಾಭವಾಗಿದೆ. ಉದಾಹರಣೆಗೆ, ಸಿಎಸ್‌ಐಆರ್‌ನ ಎರಡು ಪ್ರಯೋಗಾಲಯಗಳು ಒಟ್ಟಾಗಿ ಆರ್ಟಿಮಿಸಿನ್‌ನಿಂದ ಪಡೆದ ಮಲೇರಿಯಾ ಔಷಧ, ಈ-ಮಾಲ್ ಅನ್ನೇ ತೆಗೆದುಕೊಳ್ಳಿ. ಸಾರ್ವಜನಿಕ ಸಂಸ್ಥೆಗಳ ವಿಜ್ಞಾನಿಗಳಾದ ನಾವು ಇದನ್ನು ಎಲ್ಲರಿಗೂ ಕೈಗೆಟುಕುವಂತೆ ಮಾಡಿದ್ದೇವೆ. ಈವತ್ತು ಭಾರತದ ಮಾರುಕಟ್ಟೆ ಈ-ಮಾಲ್‌ನಿಂದ ತುಂಬಿ ತುಳುಕುತ್ತಿದೆ. ಇದಕ್ಕಾಗಿ ನಮಗೆ ಯಾವ ರಾಯಧನವೂ ಸಿಕ್ಕಿಲ್ಲ. ಅಂದರೆ, ಸಾರ್ವಜನಿಕ ಸಂಸ್ಥೆಗಳು ಈ ಕೆಲಸವನ್ನು ಮಾಡಬಹುದು ಅಲ್ಲವೇ?
ಹಾಗೇ ಸಿಎಸ್‌ಐಆರ್ ಆರಂಭಿಸಿದ ನ್ಯೂ ಮಿಲೆನಿಯಂ ಇಂಡಿಯನ್ ಟೆಕ್ನಾಲಜಿ ಲೀಡರ್‌ಶಿಪ್ ಇನಿಶಿಯೇಟಿವ್ ಯೋಜನೆಯನ್ನು ತೆಗೆದುಕೊಳ್ಳಿ. ತಂತ್ರಜ್ಞಾನದ ಬೆಳವಣಿಗೆಗಾಗಿ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳ ನಡುವಿನ ಸಹಕಾರವನ್ನು ಪ್ರೋತ್ಸಾಹಿಸಲು ೨೦೦೦ದ ಇಸವಿಯಲ್ಲಿ ಇದನ್ನು ಹಮ್ಮಿಕೊಳ್ಳಲಾಯಿತು. ಕ್ಷಯರೋಗ, ಪ್ಸೋರಿಯಾಸಿಸ್, ಡಯಾಬಿಟೀಸ್ (ಮಧುಮೇಹ) ಮತ್ತು ಆತ್ರೈಟಿಸ್ (ಕೀಲುವಾತ) ಇತ್ಯಾದಿಗಳ ವಿಷಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ವೆಚ್ಚವನ್ನು ಈ ಯೋಜನೆ ಕುಗ್ಗಿಸಿದೆ. ಖಾಸಗಿ ಹಾಗೂ ಸರ್ಕಾರಿ ಸಂಸ್ಥೆಗಳು ಖಂಡಿತವಾಗಿಯೂ ಒಟ್ಟಾಗಿ ಕೆಲಸ ಮಾಡಬಲ್ಲುವು.
ಈ ಬಗ್ಗೆ, ಸಿಎಸ್‌ಐಆರ್ ಹೊರತಾಗಿ, ಭಾರತದ ಇತರೇ ಉನ್ನತ ಸಂಶೋಧನಾ ಸಂಸ್ಥೆಗಳು ಹಾಗೂ ವಿದೇಶೀ ಸಂಸ್ಥೆಗಳ ಪ್ರತಿಕ್ರಿಯೆ ಏನು?
ಭಾರತದಲ್ಲಿ ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿದೆ. ಕ್ಷಯ ರೋಗದ ಈ ಮುಕ್ತ ಆಕರ ಸಂಶೋಧನೆಯಲ್ಲಿ ಪಾಲ್ಗೊಳ್ಳುವ ಆಸಕ್ತಿಯನ್ನು ಸೂಚಿಸಿ ವಿವಿಧ ಸಂಶೋಧನಾ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು ಮತ್ತು ಔಷಧ ಕಂಪೆನಿಗಳಿಂದ ನನಗೆ ಎಷ್ಟೊಂದು ಪತ್ರಗಳು ಬಂದಿವೆ. ಎಂದರೆ ಎಲ್ಲರನ್ನೂ ಕೂಡಿಸಿಕೊಳ್ಳುವುದು ಕಷ್ಟವಾಗಿದೆ. ಅಸ್ಟ್ರಾಜೆನೆಕಾದಂತಹ ಬೃಹತ್ ಕಂಪೆನಿಗಳು, ಬರ್ಕಲಿ ವಿಶ್ವವಿದ್ಯಾಲಯದಂತಹ ಸಂಸ್ಥೆಗಳು ಸಹಕಾರ ನೀಡುವುದಕ್ಕೆ ಆಸಕ್ತಿ ತೋರಿಸಿವೆ. ಮೈಕ್ರೊಸಾಫ್ಟ್‌ನ ಹಾಟಮೇಲ್ ಜನಕ ಸಬೀರ್ ಭಾಟಿಯ ಈ ಕಾರ್ಯಕ್ರಮಕ್ಕೆ ಒಂದು ತಂತ್ರಾಂಶ ಅಭಿವೃದ್ಧಿ ಮಾಡಿಕೊಡುವುದಾಗಿ ಹೇಳಿ ಬೆಂಬಲ ನೀಡಿದ್ದಾರೆ.
ತಂತ್ರಜ್ಞಾನದ ಉಳಿದ ಕ್ಷೇತ್ರಗಳಿಗೆ ಈ ಮುಕ್ತ ಆಕರ ಸಂಶೋಧನೆಯನ್ನು ಎಷ್ಟರ ಮಟ್ಟಿಗೆ ಅಳವಡಿಸಬಹುದು?
ಈ ಮುಕ್ತ ಆಕರ ಸಂಶೋಧನೆಯಲ್ಲಿ ಉತ್ಕೃಷ್ಟ ಮೇಧಾವಿಗಳು ಪಾಲ್ಗೊಳ್ಳುತ್ತಾರೆನ್ನುವುದು ಬಹಳ ಮುಖ್ಯವಾದ ಆದರೆ ಬಹಳಷ್ಟು ಜನ ಗಮನಿಸದೇ ಇರುವ ಅಂಶ. ಜ್ಞಾನ ಮುಕ್ತವಾಗಿರುವೆಡೆ, ಪ್ರತಿಭೆ ಬೆಳಗುತ್ತದೆ. ಶಕ್ತಿ, ನೀರು ಮತ್ತು ಆಹಾರಗಳಿಗೆ ಸಂಬಂಧಿಸಿದ ತಂತ್ರಜ್ಞಾನ ಕ್ಷೇತ್ರಗಳಿಗೂ ಮುಕ್ತ ಆಕರ ನೀತಿಯಿಂದ ಲಾಭವಾಗಲಿದೆ ಎನ್ನುವುದು ನನ್ನ ಅನಿಸಿಕೆ. ಶಕ್ತಿ ಪೂರೈಕೆಯ ವಿಷಯದಲ್ಲಿ ಸೌರ ಶಕ್ತಿ, ಪವನ ಶಕ್ತಿ, ಜಲಶಕ್ತಿ ಹಾಗೂ ಇತರೆ ಕ್ಷೇತ್ರಗಳಲ್ಲಿ ಪರಿಹಾರಗಳನ್ನು ನಾವು ಹುಡುಕಬಹುದು. ಇತರೆ ಕ್ಷೇತ್ರಗಳಿಗೂ ಇಂತಹುದೆ ತತ್ವ ಅನ್ವಯಿಸುತ್ತದೆ. ವೈದ್ಯಕೀಯ ನವಶೋಧ (ಇನ್ನೊವೇಶನ್ಸ್)ಗಳಿಗೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಕಟ್ಟಳೆಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ನೀವು ಬೆಂಬಲಿಸುವಿರಾ? ಉದಾಹರಣೆಗೆ, ಅಭಿವೃದ್ಧಶೀಲ ರಾಷ್ಟ್ರಗಳ ಅವಶ್ಯಕತೆಗೆ ಹೆಚ್ಚಿನ ಒತ್ತು ನೀಡುವಂತೆ ಪೇಟೆಂಟು ನಿಯಮಗಳನ್ನು ಇನ್ನಷ್ಟು ಸಡಿಲಿಸಬಹುದೇ?
ಆರೋಗ್ಯ ಸೇವೆಗಳು ಸರ್ವರಿಗೂ ಕೈಗೆಟುಕುವಂತೆ ಇರಬೇಕು ಎನ್ನುವುದನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ಸದಾ ಬೆಂಬಲಿಸಿದೆ. ಆದ್ದರಿಂದ ಬಡವರ ರೋಗಗಳಾದ ಸೋಂಕು ರೋಗಗಳ ವಿಷಯದಲ್ಲಿ ಬೌದ್ಧಿಕ ಸಿರಿಯ ರಕ್ಷಣೆಯೇ ಆದ್ಯತೆಯ ವಿಷಯವಾಗಬಾರದು. ಇದು ಒಂದು ಬಗೆಯ ಸಮರ. ಆರೋಗ್ಯದ ಹಕ್ಕುಗಳು ಹಾಗೂ ಕೈಗೆಟುಕುವ ಔಷಧಗಳಿಗಾಗಿ ಒಂದು ಯುದ್ಧ. ಅಗ್ಗದ ಔಷಧಿಗಳ ವಿಷಯ ಈಗ ಭಯೋತ್ಪಾದನೆಯಷ್ಟೆ ಬೃಹತ್ತಾದ ಜಾಗತಿಕ ಸಮಸ್ಯೆ.
ಭಾರತದ ಕುರಿತಂತೆ ಅಂತರರಾಷ್ಟ್ರೀಯ ಮಟ್ಟದ ಪೇಟೆಂಟು ನಿಯಮಗಳಲ್ಲಿ, ನಿಮಗೆ ಅತ್ಯಾವಶ್ಯವಾಗಿ ಆಗಲೇಬೇಕೆನ್ನಿಸಿದ ಒಂದು ಬದಲಾವಣೆ ಯಾವುದು?
ಸೋಂಕು ರೋಗಗಳ ವಿಷಯಕ್ಕೆ ಕುರಿತಂತೆ ಕಡ್ಡಾಯ ಲೈಸೆನ್ಸೀಕರಣ ನಿಯಮವನ್ನು, ಎಲ್ಲ ಔಷಧ ಪೇಟೆಂಟುಗಳ ಮೇಲೂ ಅನ್ವಯಿಸಬೇಕು. ತುರ್ತು ಸಂದರ್ಭದಲ್ಲಿ ಯಾವುದೇ ರಾಷ್ಟ್ರವೂ ತಮ್ಮ ಪೇಟೆಂಟು ಪಡೆದ ಔಷಧವನ್ನು ಅಗ್ಗದ ಬೆಲೆಯಲ್ಲಿ ತಯಾರಿಸುವಂತೆ ಔಷಧ ಕಂಪೆನಿಗಳು ಅನುಮತಿಸಬೇಕೆನ್ನುವ ನಿಯಮ ಇದು. ಹೀಗೆ ಮಾಡಿದರೆ ಅಗ್ಗದ ಬೆಲೆಯಲ್ಲಿ ಔಷಧವನ್ನು ತಯಾರಿಸಿ ಬಡವರಿಗೂ ಅದು ಕೈಗೆಟುಕುವಂತೆ ಮಾಡಬಹುದು.
ಜಾಗತಿಕ ಮಟ್ಟದಲ್ಲಿ ಇಂತಹ ಬದಲಾವಣೆಗಳನ್ನು ತರುವುದರಲ್ಲಿ ಭಾರತದ ಪಾತ್ರ ಏನು ಎನ್ನುತ್ತೀರಿ?
ಭಾರತ ಇದರ ನೇತೃತ್ವ ವಹಿಸಬೇಕು। ಸರ್ವರಿಗೂ ಆರೋಗ್ಯ ಸೇವೆ ದಕ್ಕುವಂತೆ ಮಾಡುವ ಹೊಣೆ ಹೊರಬೇಕು. ಇದರಿಂದ ಏಷ್ಯಾ ಮತ್ತು ಆಫ್ರಿಕಾದ ಬಡಜನತೆಯ ಜೊತೆಗೆ ಸುಮಾರು ಮುನ್ನೂರು ಕೋಟಿ ಜನರಿಗೆ ಅಗ್ಗದ ಔಷಧಿಯ ಲಾಭ ದೊರೆಯುತ್ತದೆ. ಆದ್ದರಿಂದ, ಈ ಹಿಂದೆ ಹಲವು ರಾಷ್ಟ್ರಗಳಿಗೆ ಅಗ್ಗದ ಬೆಲೆಯಲ್ಲಿ ಔಷಧಗಳನ್ನು ಒದಗಿಸಿದ ಅನುಭವ ಇರುವ ಭಾರತ ಇದರಲ್ಲಿ ತಾನೇ ಮುನ್ನುಗ್ಗಬೇಕು.


(ಡಾ. ಸಮೀರ್ ಬ್ರಹ್ಮಚಾರಿ ಭಾರತದ ಬೃಹತ್ ಸಂಶೋಧನಾ ಸಂಸ್ಥೆಯಾದ ಸಿಎಸ್‌ಐಆರ್‌ನ ಮಹಾನಿರ್ದೇಶಕ. ಭಾರತದಲ್ಲಿ ಪ್ರತಿ ವರ್ಷವೂ ಅತಿ ಹೆಚ್ಚಿನ ಪೇಟೆಂಟುಗಳನ್ನು ದಾಖಲಿಸುವ ಸರ್ಕಾರಿ ಸಂಶೋಧನಾ ಸಂಸ್ಥೆ ಎನ್ನುವ ಹೆಗ್ಗಳಿಕೆ ಸಿಎಸ್‌ಐಆರ್‌ಗೆ ಇದೆ. ಡಾ. ಬ್ರಹ್ಮಚಾರಿಯವರಿಗೆ ಕನ್ನಡದ ನಂಟೂ ಇದೆ. ಇವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯಲ್ಲಿ ಮೂರು ದಶಕಗಳಿಗೂ ಮೀರಿ ಸಂಶೋಧನೆ ನಡೆಸಿದವರು. ಕನ್ನಡತಿಯನ್ನು ಒಲಿದು ಕೈ ಹಿಡಿದವರು. ವಿಜ್ಞಾನ ಅಭಿವೃದ್ಧಿಗೆ ಪೂರಕವಾಗಿರಬೇಕು ಎನ್ನುವ ಹಂಬಲದಿಂದ ಅಭಿವೃದ್ಧಿಗೆ ಅನುಕೂಲವಾಗುವ ವಿಜ್ಞಾನ ಹಾಗೂ ಅದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಸಂಗ್ರಹಿಸುವ ಅಂತರರಾಷ್ಟ್ರೀಯ ಸಂಘಟನೆ ಸೈನ್ಸ್ ಡೆವಲೆಪ್‌ಮೆಂಟ್ ನೆಟ್‌ಗೆ ಕಳೆದ ವಾರ ಅವರು ನೀಡಿದ ಸಂದರ್ಶನದ ಅನುವಾದ ಇದು. ಮೂಲ ಇಲ್ಲಿದೆ )

ಮಂಗಳವಾರ, ಮೇ 27, 2008

ಬ್ಲಾಗಿಂಗ್ - ಪರ್ಯಾಯ ಪತ್ರಿಕೋದ್ಯಮ

ಡಾ. ಯು. ಬಿ. ಪವನಜ

ಇತ್ತೀಚೆಗಿನ ದಿನಗಳಲ್ಲಿ ತುಂಬ ಕೇಳಿಬರುತ್ತಿರುವ ಪದ ಬ್ಲಾಗ್. ಅದರ ಹಲವು ಪ್ರತ್ಯಯಗಳೇ ಬ್ಲಾಗಿಂಗ್, ಬ್ಲಾಗರ್, ಇತ್ಯಾದಿ. ಈ ಬ್ಲಾಗ್ ಎಂದರೆ ಏನು? ಬ್ಲಾಗ್ ಎಂದರೆ ಒಂದು ರೀತಿಯಲ್ಲಿ ಸಾರ್ವಜನಿಕ ಸ್ವಗತ ಎನ್ನಬಹುದು. ಎಲ್ಲರಿಗೂ ಓದಲು ಅನುಕೂಲವಾಗುವಂತೆ ಅಂತರಜಾಲದಲ್ಲಿ (ಇಂಟರ್‌ನೆಟ್‌ನಲ್ಲಿ) ಇಟ್ಟಂತಹ ತೆರೆದ ದಿನಚರಿ ಅಥವಾ ಡೈರಿ ಎಂದೂ ಕರೆಯಬಹುದು. ಬ್ಲಾಗ್‌ನ ಕ್ರಿಯಾರೂಪವೇ ಬ್ಲಾಗಿಂಗ್ ಅಂದರೆ ಬ್ಲಾಗ್ ನಡೆಸುವ ಕ್ರಿಯೆ. ಬ್ಲಾಗರ್ ಎಂದರೆ ಬ್ಲಾಗ್ ಬರೆಯುವ ವ್ಯಕ್ತಿ.
ಬ್ಲಾಗ್ ಎನ್ನುವುದು ವೆಬ್‌ಲಾಗ್ (weblog) ಎನ್ನುವ ಪದದಿಂದ ವ್ಯುತ್ಪತ್ತಿಯಾಗಿದೆ. ಇದನ್ನು ಮೊತ್ತಮೊದಲು ಜಾನ್ ಬಾರ್ಗರ್ ಎಂದವರು ೧೯೯೭ರಲ್ಲಿ ಬಳಸಿದರು. ಪೀಟರ್ ಮರ್‌ಹೋಲ್‌ಝ್ ಅವರು ೧೯೯೯ರಲ್ಲಿ ಇದನ್ನು ವಿ ಬ್ಲಾಗ್ (we blog) ಎಂಬುದಾಗಿ ವಿಭಜಿಸಿದರು. ಎಂದರೆ ನಾವು ಬ್ಲಾಗ್ ಮಾಡುತ್ತಿದ್ದೇವೆ ಎಂಬ ಅರ್ಥ. ತದನಂತರ ಬ್ಲಾಗ್ ಎನ್ನುವುದು ನಾಮಪದ ಮತ್ತು ಕ್ರಿಯಾಪದವಾಗಿ ಬಳಕೆಯಾಗತೊಡಗಿತು. ೨೦೦೧ರ ನಂತರ ಬ್ಲಾಗ್ ಜನಪ್ರಿಯವಾಗತೊಡಗಿತಾದರೂ ೨೦೦೩ರಲ್ಲಿ ಹಲವು ಉಚಿತ ಬ್ಲಾಗಿಂಗ್ ತಾಣಗಳು ಅವತರಿಸಿ ಬ್ಲಾಗಿಂಗ್ ಮನೆಮಾತಾಗುವಂತಾಯಿತು. ಇದಿಷ್ಟು ಬ್ಲಾಗಿಂಗ್‌ನ ಇತಿಹಾಸದ ಬಗ್ಗೆ ಚುಟುಕಾದ ಮಾಹಿತಿ.
ಬ್ಲಾಗ್ ಬಗ್ಗೆ ಈಗ ಇನ್ನಷ್ಟು ವಿವರಗಳನ್ನು ನೋಡೋಣ. ಅಂತರಜಾಲದಲ್ಲಿ ಕೋಟಿಗಟ್ಟಲೆ ತಾಣಗಳಿವೆ (ವೆಬ್‌ಸೈಟ್). ಈ ತಾಣಗಳಿಗೂ ಬ್ಲಾಗ್‌ಗಳಿಗೂ ಇರುವ ವ್ಯತ್ಯಾಸವೇನು? ನಿಜವಾಗಿ ನೋಡಿದರೆ ಬ್ಲಾಗ್ ಕೂಡ ಒಂದು ಅಂತರಜಾಲ ತಾಣವೇ. ಆದರೆ ಒಂದು ವಿಧದ ತಾಣಗಳನ್ನು ಮಾತ್ರ ಬ್ಲಾಗ್ ಎಂದು ಕರೆಯಲಾಗುತ್ತದೆ. ಬ್ಲಾಗ್‌ನ ಲಕ್ಷಣಗಳು -ನಿಯಮಿತವಾಗಿ ಹೊಸ ಬರೆವಣಿಗೆಗಳನ್ನು ಸೇರಿಸುತ್ತಿರಬೇಕು, ಅವುಗಳನ್ನು ಸೇರಿಸಿದ ದಿನಾಂಕ ಪ್ರಕಾರ ಅಳವಡಿಸಿರಬೇಕು, ಕೊನೆಯ ಬರೆವಣಿಗೆ ಮೊದಲು ಲಭ್ಯವಾಗಿರುವಂತಿರುತ್ತದೆ, ಇತ್ಯಾದಿ. ಬ್ಲಾಗ್‌ನಲ್ಲಿ ಸೇರಿಸಲ್ಪಡುವ ಲೇಖನಕ್ಕೆ ಪೋಸ್ಟ್ ಅಥವಾ ಪೋಸ್ಟಿಂಗ್ ಎನ್ನುತ್ತಾರೆ. ಈ ಪೋಸ್ಟಿಂಗ್‌ಗೆ ಒಂದು ಶೀರ್ಷಿಕೆ, ಸೇರಿಸಿದ ದಿನಾಂಕ, ಮುಖ್ಯ ಬರಹ ಅಥವಾ ಲೇಖನ, ವಿಷಯ, ಇತ್ಯಾದಿ ಲಕ್ಷಣಗಳಿರುತ್ತವೆ. ಈ ಪೋಸ್ಟಿಂಗ್‌ನ ಕೆಳಗೆ ಓದುಗರು ತಮ್ಮ ಟೀಕೆ ಟಿಪ್ಪಣಿ ಸೇರಿಸುವ ಸೌಲಭ್ಯವಿದೆ. ಇಷ್ಟಲ್ಲದೆ ಈ ಬ್ಲಾಗ್‌ಗಳಿಗೆ ಆರ್‌ಎಸ್‌ಎಸ್ ಸೌಲಭ್ಯವಿದೆ. ಆರ್‌ಎಸ್‌ಎಸ್ ಎಂದರೆ ರಿಯಲಿ ಸಿಂಪಲ್ ಸಿಂಡಿಕೇಶನ್ ಎನ್ನುವುದರ ಸಂಕ್ಷಿಪ್ತ ರೂಪ. ಆರ್‌ಎಸ್‌ಎಸ್ ರೀಡರ್ ಎಂಬ ಹೆಸರಿನ ತಂತ್ರಾಂಶವನ್ನು (ಸಾಫ್ಟ್‌ವೇರ್) ಗಣಕಗಳಲ್ಲಿ (ಕಂಪ್ಯೂಟರ್) ಅಳವಡಿಸಿಕೊಂಡರೆ ಈ ಬ್ಲಾಗ್‌ಗಳನ್ನು ಗಣಕಕ್ಕೆ ಇ-ಮೈಲ್‌ಗಳನ್ನು ಇಳಿಸಿಕೊಂಡಂತೆ ಇಳಿಸಿಕೊಂಡು ಅಂತರಜಾಲ ಸಂಪರ್ಕ ಕಡಿದ ಮೇಲೂ ಓದಬಹುದು. ಬ್ಲಾಗ್ ಸುಲಭವಾಗಿ ಹೊಸ ಪುಟವನ್ನು ಸೇರಿಸುವ ಸೌಲಭ್ಯ ಹೊಂದಿದೆ. ಮಾಮೂಲಿ ಅಂತರಜಾಲ ತಾಣಗಳಿಗೆ ಈ ಸೌಲಭ್ಯವಿರುವುದಿಲ್ಲ. ಹೊಸ ಪೋಸ್ಟಿಂಗ್ ಸಾಮಾನ್ಯವಾಗಿ ಪುಟದ ಮೇಲೆ ತೋರುತ್ತದೆ. ಇನ್ನೊಂದು ಹೊಸ ಪೋಸ್ಟಿಂಗ್ ಬಂದಾಗ ಹಳೆಯ ಪೋಸ್ಟಿಂಗ್ ತಂತಾನೆ ಕೆಳಗೆ ತಳ್ಳಲ್ಪಡುತ್ತದೆ. ಟೀಕೆಯ ಕೆಳಗೆ ಇತರೆ ಓದುಗರು ಟೀಕೆಗೆ ಟೀಕೆ ಸೇರಿಸಬಹುದು. ಕೆಲವೊಮ್ಮೆ ಈ ಸರಪಣಿ ದೊಡ್ಡ ಚರ್ಚೆ ಅಥವಾ ವಾಗ್ವಾದವಾಗುವುದೂ ಇದೆ. ಎಲ್ಲ ಅಂತರಜಾಲ ತಾಣಗಳಿಗಿರುವಂತೆ ಬ್ಲಾಗ್‌ಗಳಿಗೂ ಇತರೆ ತಾಣ ಯಾ ಬ್ಲಾಗ್‌ಗಳಿಗೆ ಕೊಂಡಿ ನೀಡುವ ಸೌಲಭ್ಯವಿದೆ. ಸರಳವಾಗಿ ಹೇಳುಬೇಕೆಂದರೆ ಬ್ಲಾಗ್ ಒಬ್ಬ ವ್ಯಕ್ತಿಯ ವೈಯಕ್ತಿಕ ಅನಿಸಿಕೆಗಳನ್ನು ಜಗತ್ತಿಗೆಲ್ಲ ತಿಳಿಯುವಂತೆ ಸಾರ್ವಜನಿಕವಾಗಿ ಬರೆಯುವ ವ್ಯವಸ್ಥೆ.
ಯಾವ ಯಾವ ರೀತಿಯ ಬ್ಲಾಗ್‌ಗಳಿವೆ ಎಂಬುದನ್ನು ವೀಕ್ಷಿಸಿ ನೋಡಿದರೆ ನಮಗೆ ಅಂತರಜಾಲದಲ್ಲಿ ಎಷ್ಟು ವೈವಿಧ್ಯದ ತಾಣಗಳಿವೆಯೋ ಅಷ್ಟೂ ವೈವಿಧ್ಯ ಬ್ಲಾಗ್‌ಗಳಲ್ಲೂ ಇರುವುದು ಗೋಚರವಾಗುತ್ತದೆ. ಬ್ಲಾಗಿಗರಲ್ಲಿ ಬಹುಪಾಲು ಮಂದಿ ತಮ್ಮ ಹೊತ್ತು ಕಳೆಯಲು ಅಥವಾ ಏನಾದರೂ ಹೇಳಬೇಕು ಎನ್ನುವ ತುಡಿತ ತೀರಿಸಿಕೊಳ್ಳಲು ಬ್ಲಾಗಿಂಗ್ ಮಾಡುತ್ತಿದ್ದಾರೆ. ಹಾಗಿದ್ದರೂ ಇವರ ಬ್ಲಾಗ್‌ಗಳಲ್ಲಿ ಹಲವು ಉಪಯುಕ್ತ ಮಾಹಿತಿಗಳು ದೊರೆಯುವ ಸಾಧ್ಯತೆಗಳಿವೆ. ಬ್ಲಾಗ್ ಮಾಡುತ್ತಿರುವವರು ಕಥೆಗಾರ ಅಥವಾ ಸಾಹಿತಿಯಾಗಿದ್ದರಂತೂ ಓದುಗರಿಗೆ ಬೋನಸ್ ಎನ್ನಬಹುದು. ಪರಿಣತರಾದ ತಂತ್ರಜ್ಞರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಆಗುತ್ತಿರುವ ಹೊಸ ಸಂಶೋಧನೆಗಳ ಬಗ್ಗೆ ಪೂರ್ವಭಾವಿಯಾಗಿ ಬ್ಲಾಗ್ ಬರೆಯುವ ಮೂಲಕ ಈ ವಿಷಯಗಳಲ್ಲಿ ಆಸಕ್ತಿ ಇರುವವರಿಗೆ ಬೇಗನೆ ಮಾಹಿತಿ ಸಿಗುವಂತಾಗುತ್ತದೆ. ಉದಾಹರಣೆಗೆ ಮೈಕ್ರೋಸಾಫ್ಟ್ ಕಂಪೆನಿಯ ಹಲವು ಉದ್ಯೋಗಿಗಳು ಮುಂಬರುವ ತಂತ್ರಾಂಶಗಳ ಬಗ್ಗೆ ಬ್ಲಾಗಿಂಗ್ ಮಾಡುತ್ತಾರೆ. ಅಷ್ಟು ಮಾತ್ರವಲ್ಲ, ಈಗಿರುವ ತಂತ್ರಾಂಶಗಳ ಬಗ್ಗೆ ಸಲಹೆ ನೀಡುತ್ತಾರೆ. ಕೆಲವೊಮ್ಮೆ ಯಾವುದೇ ಗ್ರಾಹಕ ಕೈಪಿಡಿಯಲ್ಲೂ ಸಿಗದ ಮಾಹಿತಿ ಇಂತಹ ಬ್ಲಾಗ್‌ಗಳಲ್ಲಿ ದೊರೆಯುತ್ತವೆ. ಕೆಲವು ತಂತ್ರಜ್ಞರು ತಮ್ಮ ಕ್ಷೇತ್ರದಲ್ಲಿಯ ಕೆಲವು ಉಪಯುಕ್ತ ಸಲಹೆ ಕಿವಿಮಾತುಗಳನ್ನೂ ತಮ್ಮ ಬ್ಲಾಗ್‌ಗಳಲ್ಲಿ ನೀಡುತ್ತಿರುತ್ತಾರೆ. ನನ್ನ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ ಕನ್ನಡ ಮತ್ತು ಗಣಕ ಸಂಬಂಧಿ ಸಲಹೆ ಸೂಚನೆಗಳನ್ನು ನಾನು ಆಗಾಗ ನನ್ನ ಬ್ಲಾಗ್‌ನಲ್ಲಿ (http://vishvakannada.com/Blog) ನೀಡುತ್ತಿರುತ್ತೇನೆ. ಆದುದರಿಂದ ಎಲ್ಲ ಬ್ಲಾಗ್‌ಗಳನ್ನು ಕೆಲಸವಿಲ್ಲದವರ ಗಳಹುವಿಕೆ ಎಂದು ತುಚ್ಛೀಕರಿಸುವಂತಿಲ್ಲ.
ಬ್ಲಾಗ್‌ಗಳು ಸಾಮಾಜಿಕ ಆಲೋಚನೆ ಮತ್ತು ಒತ್ತಡ ರೂಪಿಸುವ ಸಾಧನವಾಗಿಯೂ ರೂಪುಗೊಳ್ಳತೊಡಗಿದ್ದು ಸುಮಾರು ಎರಡು ಮೂರು ವರ್ಷಗಳ ಹಿಂದೆ. ಜನರು ಬ್ಲಾಗಿಂಗ್ ಮೂಲಕವೇ ಅಮೇರಿಕದ ಚುನಾವಣೆಯಲ್ಲಿ ಜನಾಭಿಪ್ರಾಯ ರೂಪಿಸಿ ಕಣದಲ್ಲಿದ್ದ ಉಮೇದುವಾರರೊಬ್ಬರು ಹಿಂದೆ ಸರಿಯುವಂತೆ ಮಾಡಿದಲ್ಲಿಂದ ಬ್ಲಾಗ್ ಒಂದು ಪ್ರಮುಖ ಅಸ್ತ್ರವಾಗತೊಡಗಿತು. ಇದು ಸಾಧ್ಯವಾಗಿದ್ದು ಬ್ಲಾಗಿಗರು ಹೆಚ್ಚು ಹೆಚ್ಚು ಸುದ್ದಿಗಳನ್ನು ಯಾವುದೇ ಸಂಪಾದಕರ ಕತ್ತರಿಗೆ ಸಿಗದಂತೆ ತಮ್ಮ ಬ್ಲಾಗ್‌ಗಳಲ್ಲಿ ದಾಖಲಿಸತೊಡಗಿದುದರಿಂದ. ಆಗ ಈ ಬ್ಲಾಗ್ ಎನ್ನುವುದು ಒಂದು ಪರ್ಯಾಯ ಪತ್ರಿಕಾ ಮಾಧ್ಯಮವೇ ಆಗಿ ಹೊರಹೊಮ್ಮುವ ಸಾಧ್ಯತೆ ಜನರಿಗೆ ವೇದ್ಯವಾಯಿತು. ಬ್ಲಾಗಿಂಗ್ ಒಂದು ಪರ್ಯಾಯ ಪತ್ರಿಕೋದ್ಯಮವೇ? ಅಥವಾ ಬ್ಲಾಗಿಂಗ್‌ನ್ನು ಪರ್ಯಾಯ ಪತ್ರಿಕೋದ್ಯಮವಾಗಿ ನಡೆಸಿಕೊಂಡು ಬರಬಹುದೇ? ಹೌದು ಎಂದು ಹೇಳಬಹುದು. ಇದು ಹೇಗೆ ಸಾಧ್ಯ? ಈ ಪ್ರಶ್ನೆಗೆ ಉತ್ತರ ನೀಡುವ ಮೊದಲು ಪತ್ರಿಕೋದ್ಯಮ ಎಂದರೇನು ಎಂದು ತಿಳಿಯೋಣ. ಪತ್ರಿಕೋದ್ಯಮ ಎನ್ನುವುದು ಜರ್ನಲಿಸಂ ಎನ್ನುವ ಇಂಗ್ಲಿಶ್ ಪದಕ್ಕೆ ಪಾರಿಭಾಷಿಕ ಪದವಾಗಿ ಬಳಕೆಯಲ್ಲಿದೆ. ಜರ್ನಲಿಸಂ ಪದವು ಜರ್ನಲ್ ಎಂಬ ಪದದಿಂದ ವ್ಯುತ್ಪತ್ತಿಯಾಗಿದೆ. ದಿನಚರಿ ಎಂಬುದು ಜರ್ನಲ್ ಪದದ ಅರ್ಥ. ದಿನಚರಿ ಇಟ್ಟುಕೊಳ್ಳುವುದು ಎಂಬುದೇ ಜರ್ನಲಿಸಂ ಪದದ ಮೂಲ ಅರ್ಥ. ಬ್ಲಾಗಿಂಗ್ ಕೂಡ ಒಂದು ರೀತಿಯಲ್ಲಿ ದಿನಚರಿಯೇ. ಹೀಗೆ ಸೈದ್ಧಾಂತಿಕವಾಗಿ ವಾದಿಸಿದರೂ ಬ್ಲಾಗಿಂಗ್ ಅನ್ನು ಪತ್ರಿಕೋದ್ಯಮ ಎನ್ನಬಹುದು. ಬ್ಲಾಗಿಂಗ್ ಪತ್ರಿಕೋದ್ಯಮ ಯಾಕೆ ಎಂದು ವಿಚಾರಿಸುವ ಮೊದಲು ಮುಖ್ಯವಾಹಿನಿಯ ಪತ್ರಿಕೆಗಳ ತೊಂದರೆಗಳನ್ನು ವಿಶ್ಲೇಷಿಸೋಣ. ಒಳಿತುಗಳ ಬಗ್ಗೆ ಹಲವು ಕಡೆ ಹಲವು ಬಾರಿ ಪುನರುಚ್ಚರಿಸಿರುವುದರಿಂದ ಅವುಗಳನ್ನು ಇಲ್ಲಿ ಇನ್ನೊಮ್ಮೆ ದಾಖಲಿಸುವ ಅಗತ್ಯವಿಲ್ಲ. ಪತ್ರಿಕೆಗಳು ಬದುಕುವುದೇ ಜಾಹೀರಾತುಗಳಿಂದ. ಜಾಹೀರಾತು ನೀಡುವವರ ವಿರುದ್ಧ ಯಾವುದೇ ಲೇಖನ ಬರೆಯಬೇಕಾದರೆ ಪತ್ರಿಕೆಗಳು ಹಿಂಜರಿಯುತ್ತವೆ. ಅದೇ ರೀತಿ ಸರಕಾರದ ವಿರುದ್ಧವೂ ಪತ್ರಿಕೆಗಳು ಬರೆಯುವಾಗ ತಮ್ಮ ಲೇಖನಿಯ ತೀಕ್ಷ್ಣತೆಯನ್ನು ಕಡಿಮೆ ಮಾಡಿಕೊಳ್ಳುತ್ತವೆ. ಯಾವ ರಾಜಿಗೂ ಒಪ್ಪದ, ಯಾವ ಒತ್ತಡಕ್ಕೂ ಮಣಿಯದ ಪತ್ರಿಕೆಗಳು ಇಲ್ಲವೇ ಇಲ್ಲವೆಂದಲ್ಲ. ಪತ್ರಿಕೆಗಳಲ್ಲಿ ಜಾಗದ ಮಿತಿಯಿರುತ್ತದೆ. ಇದರಿಂದಾಗಿ ಹಲವು ಬಾರಿ ಪ್ರಾಮುಖ್ಯವಾದ ವಿಷಯಗಳೇ ಬಿಟ್ಟುಹೋಗುವುದು ಲೇಖನಗಳಲ್ಲಿ ಸರ್ವೇಸಾಮಾನ್ಯ. ದಿನಪತ್ರಿಕೆಯೇ ಆದರೂ ಲೇಖನ ತಯಾರಿಸಿ ಅದನ್ನು ಕಳುಹಿಸಿ ಸಂಪಾದಕರು ಅದನ್ನು ಅಂಗೀಕರಿಸಿ ಅದು ಮುದ್ರಣವಾಗಿ ಹೊರಬರುವಾಗ ಕೆಲವೊಮ್ಮೆ ತಿಂಗಳುಗಳೇ ಕಳೆದಿರುತ್ತವೆ. ಏತನ್ಮಧ್ಯೆ ಅದೇ ವಿಷಯದ ಬಗ್ಗೆ ಇನ್ನೊಂದು ಪತ್ರಿಕೆಯಲ್ಲಿ ಬೇರೊಬ್ಬ ಲೇಖಕರ ಲೇಖನ ಪ್ರಕಟವಾದರಂತೂ ಮುಗಿದೇ ಹೋಯಿತು. ಲೇಖನ ನೇರವಾಗಿ ಕಸದಬುಟ್ಟಿಗೇ ಸೇರಿದಂತೆ. ಬರೆದ ಲೇಖನದ ಪ್ರತಿಯೊಂದು ವಾಕ್ಯವೂ ಸಂಪಾದಕರ ಕತ್ತರಿಯಿಂದ ಪಾರಾಗಿ ಬರುತ್ತದೆ ಎಂಬ ಧೈರ್ಯವೂ ಇಲ್ಲ.
ಇತ್ತೀಚೆಗಂತೂ ಪತ್ರಿಕೆಗಳ ಮೇಲೆ ಜನರಿಗೆ ನಂಬಿಕೆ ಕಡಿಮೆಯಾಗುತ್ತಿದೆ. ಮಾಲಿಕರಿಗೆ ಬೇಕಾದವರಿಗೆ ಹೆಚ್ಚು ಪ್ರಚಾರ, ಮಾಲಿಕರ ಸಹ ಒಡೆತನದಲ್ಲಿರುವ ಇತರೆ ಕಂಪೆನಿಗಳ ತಯಾರಿಕೆಗಳಿಗೆ ಒತ್ತು ನೀಡುವುದು, ಸಂಪಾದಕರಿಗೆ ಇಷ್ಟವಾದವರಿಗೆ ಅಥವಾ ಅವರ ಸಾಧನೆಗಳಿಗೆ ಹೆಚ್ಚು ಒತ್ತು ನೀಡುವುದು -ಇವೆಲ್ಲ ಇತ್ತೀಚೆಗೆ ಸರ್ವೇಸಾಮಾನ್ಯವಾಗುತ್ತಿವೆ. ಪತ್ರಿಕೋದ್ಯೋಗಿಗಳ ಜ್ಞಾನದ ಮಟ್ಟ ಕುಸಿಯುತ್ತಿದೆ. ಅಧ್ಯಯನಾ ಪ್ರವೃತ್ತಿಯ ಕೊರತೆಯೂ ಇಂದಿನ ಪತ್ರಿಕೋದ್ಯೋಗಿಗಳಲ್ಲಿ ಹೆಚ್ಚುತ್ತಿದೆ.
ಪತ್ರಿಕಾ ಸಂಪಾದಕರ ಜ್ಞಾನದ ಮಟ್ಟ ಕುಸಿಯುತ್ತಿರುವುದಕ್ಕೆ ಸಾಕ್ಷಿಯಾಗಿ ಒಂದು ಉದಾಹರಣೆಯನ್ನು ಇಲ್ಲಿ ನೀಡಿದರೆ ಅಪ್ರಸ್ತುತವಾಗಲಾರದು. ಸುನಾಮಿ ಭಾರತಕ್ಕೆ ಅಪ್ಪಳಿಸಿ ಸಾವಿರಾರು ಜನರ ಪ್ರಾಣಹಾನಿ ಮಾಡಿದುದು ಎಲ್ಲರಿಗೂ ತಿಳಿದೇ ಇದೆ. ಸುನಾಮಿ ಸಂಭವಿಸಿ ಒಂದೆರಡು ವಾರಗಳಲ್ಲಿ ಯಾರೊ ಒಬ್ಬ ಕಿಡಿಗೇಡಿ ಒಂದು ಕುಚೋದ್ಯ ನಡೆಸಿದ. ಆತ ಅಮೇರಿಕಾದ ನಾಸಾ ಸಂಸ್ಥೆಯ ಜಾಲತಾಣದಿಂದ ಒಂದು ಚಂಡಮಾರುತದ ಉಪಗ್ರಹಚಿತ್ರವನ್ನು ಡೌನ್‌ಲೋಡ್ ಮಾಡಿಕೊಂಡು ಅದನ್ನೇ ಸುನಾಮಿಯ ಉಪಗ್ರಹಚಿತ್ರ ಎಂದು ಕೆಲವರಿಗೆ ಇಮೈಲ್ ಮೂಲಕ ಕಳುಹಿಸಿದ. ಇದು ಇಮೈಲ್ ಮೂಲಕ ಜನರಿಂದ ಜನರಿಗೆ ದಾಟಿ ಕೊನೆಗೆ ಕೆಲವು ಪತ್ರಿಕೆಗಳ ಸಂಪಾದಕರುಗಳಿಗೂ ತಲುಪಿತು. ಕನ್ನಡದ ಪತ್ರಿಕೆಯೊಂದು ಅದನ್ನು ತನ್ನ ಮುಖಪುಟದಲ್ಲೇ ಪ್ರಕಟಿಸಿತು. ಸುನಾಮಿ ಸಮುದ್ರದ ತಳದಲ್ಲಿ ನಡೆಯುವ ಪ್ರಕ್ರಿಯೆ. ಅದನ್ನು ಉಪಗ್ರಹದ ಮೂಲಕ ಚಿತ್ರಿಸಲು ಅಸಾಧ್ಯ. ಈ ಪ್ರಾಥಮಿಕ ಜ್ಞಾನ ಪತ್ರಿಕೆಯ ಸಂಪಾದಕರಿಗೆ ಇರಲಿಲ್ಲ ಎಂದರೆ ಎಷ್ಟು ಶೋಚನೀಯ ಅಲ್ಲವೇ? ಪತ್ರಿಕೆಗಳಿಗೆ ಈ ಬಗ್ಗೆ ತಿಳಿವಳಿಕೆ ನೀಡಿ ಪತ್ರ ಬರೆದರೆ ಸಂಪಾದಕರು ಅದನ್ನು ಪ್ರಕಟಿಸುವುದೇ ಇಲ್ಲ!
ಬ್ಲಾಗಿಂಗ್‌ಗೆ ಈ ಯಾವ ಸಮಸ್ಯೆಗಳೂ ಇಲ್ಲ. ಬ್ಲಾಗಿಂಗ್ ನಡೆಸುವುದು ಈಗಾಗಲೇ ತಿಳಿಸಿರುವಂತೆ ಅಂತರಜಾಲದಲ್ಲಿ. ಹೆಚ್ಚಿನ ಮಂದಿಯ ಬ್ಲಾಗ್‌ಗಳು ಇರುವುದು ಉಚಿತ ತಾಣಗಳಲ್ಲಿ. ಅಲ್ಲಿ ಜಾಗದ ಕೊರತೆ ಇಲ್ಲ. ಲೇಖನವೊಂದಕ್ಕೆ ಇಂತಿಷ್ಟೇ ಪದಗಳಿರಬೇಕೆಂಬ ಮಿತಿಯೂ ಇಲ್ಲ. ಸಂಪಾದಕರ ಅಂಕುಶ ಕತ್ತರಿಗಳಿಲ್ಲ. ಬರೆಯಬೇಕೆನಿಸಿದ್ದನ್ನು ನೇರವಾಗಿ ಜಾಲತಾಣದಲ್ಲೇ ದಾಖಲಿಸುವುದರಿಂದ ಬರೆದು ಅದು ಪ್ರಕಟವಾಗುವ ಮಧ್ಯದ ಸಮಯ ಉಳಿತಾಯವಾಗುತ್ತದೆ. ಇಲ್ಲಿ ಎಲ್ಲವೂ ಫಾಸ್ಟ್‌ಫುಡ್‌ಗಳಂತೆ. ಕ್ಷಣಕ್ಷಣದ ವ್ಯವಹಾರ. ಲೇಖನಕ್ಕೆ ಸಂಬಂಧಿಸಿದಂತೆ ಛಾಯಾಚಿತ್ರಗಳಿದ್ದರೆ ಅವುಗಳನ್ನೂ ಜಾಲತಾಣಕ್ಕೆ ಸೇರಿಸಬಹುದು. ನೇರವಾಗಿ ಘಟನೆ ನಡೆಯುತ್ತಿರುವ ಸ್ಥಳದಿಂದಲೇ ಲೇಖನವನ್ನು ಅಂತರಜಾಲಕ್ಕೆ ಸೇರಿಸಬಹುದು. ಲ್ಯಾಪ್‌ಟಾಪ್ ಮತ್ತು ಅಂತರಜಾಲ ಸಂಪರ್ಕ ಇದ್ದರೆ ಸಾಕು. ಈಗೀಗ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿರುವ ಕೆಲವು ಅತ್ಯಾಧುನಿಕ ಮೊಬೈಲ್ ಫೋನುಗಳಿಂದ ಕೂಡ ನೇರವಾಗಿ ಈ ಎಲ್ಲ ಕೆಲಸ ನಡೆಸಬಹುದು.
ಬ್ಲಾಗಿಂಗ್‌ಗೆ ಮುಖ್ಯವಾಹಿನಿಯ ಪತ್ರಿಕೆಗಳಿಗಿರುವ ಯಾವ ತೊಡಕುಗಳೂ ಇಲ್ಲ ಎಂದು ಹೇಳಿಯಾಗಿದೆಯಷ್ಟೆ? ಬ್ಲಾಗಿಂಗ್‌ಗಿರುವ ಇನ್ನೊಂದು ಅತಿ ಮುಖ್ಯವಾದ ಸವಲತ್ತೆಂದರೆ ಓದುಗರು ತಮ್ಮ ಟೀಕೆ ಟಿಪ್ಪಣಿ ಸೇರಿಸುವ ಸೌಲಭ್ಯ. ಇದು ಪ್ರತಿಸ್ಪಂದನಾತ್ಮಕ ಅಂತರಜಾಲದಲ್ಲಿ ಮಾತ್ರ ಸಾಧ್ಯ. ಮುದ್ರಿತ ಪತ್ರಿಕೆಗಳಲ್ಲಿ ಇದು ಅಸಾಧ್ಯ. ಒಬ್ಬ ತನಗಿಷ್ಟ ಬಂದಂತೆ ಬ್ಲಾಗ್ ಬರೆಯುತ್ತಾನೆಂದಿಟ್ಟುಕೊಳ್ಳಿ. ಈಗಾಗಲೇ ಹೇಳಿರುವಂತೆ ಬ್ಲಾಗ್‌ಗೆ ಯಾವ ಸಂಪಾದಕರಿಲ್ಲ. ಹಾಗಾಗಿ ಯಾರು ಏನು ಬೇಕಾದರೂ ಬರೆಯಬಹುದು ತಾನೆ? ಸುಳ್ಳು ಸುಳ್ಳೇ ಬರೆದರೆ? ಆಗ ಓದುಗರು ಸುಮ್ಮನೆ ಬಿಡುವುದಿಲ್ಲ. ಬ್ಲಾಗಿನ ಕೆಳಗೆಯೇ ತಮ್ಮ ಟಿಪ್ಪಣಿ ಸೇರಿಸುತ್ತಾರೆ. ನೀನು ಬರೆದುದು ಸುಳ್ಳೆಂದು ಎಲ್ಲರೂ ಝಾಡಿಸುತ್ತಾರೆ. ಓದುಗರ ಪ್ರತಿಕ್ರಿಯೆಯನ್ನು ದಾಖಲಿಸದಂತೆ ಮಾಡುವ ಸೌಲಭ್ಯವೂ ಬ್ಲಾಗ್‌ನಲ್ಲಿದೆ. ಹಾಗೆ ಯಾರಾದರು ಬ್ಲಾಗಿಗರು ಆಯ್ಕೆ ಮಾಡಿಟ್ಟರೆ ಅಂತಹ ಬ್ಲಾಗಿಗೆ ಯಾರೂ ಮೂರು ಕಾಸಿನ ಬೆಲೆಯನ್ನೂ ನೀಡುವುದಿಲ್ಲ. ಅದನ್ನು ಓದುವುದೂ ಇಲ್ಲ. ಆದುದರಿಂದ ಅಂತಹ ಬ್ಲಾಗ್‌ಗಳು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ.
ಮುಖ್ಯವಾಹಿನಿಯ ಪತ್ರಿಕೆಗಳಲ್ಲಿ ಪತ್ರಿಕೋದ್ಯೋಗಿಗಳು ಮತ್ತು ಓದುಗರು ಎರಡು ಧ್ರುವಗಳಲ್ಲಿರುತ್ತಾರೆ. ಪತ್ರಿಕೆಯವರು ನೀಡಿದ್ದನ್ನು ಓದುಗರು ಆಯ್ಕೆಯಿಲ್ಲದೆ ಓದಬೇಕಾಗುತ್ತದೆ. ಓದುಗರು ಪತ್ರಿಕೆಯಲ್ಲಿ ಪ್ರಕಟವಾಗುವ ಸುದ್ದಿಗಳನ್ನು ನೀಡುವುದು, ಅದನ್ನು ಪತ್ರಿಕೆಯವರು ಪ್ರಕಟಿಸುವುದು ಬಹು ವಿರಳ. ಬ್ಲಾಗ್‌ಗಳಲ್ಲಿ ಹಾಗಲ್ಲ. ಓದುಗರೂ ಭಾಗವಹಿಸುತ್ತಾರೆ. ಸುನಾಮಿಯಲ್ಲಿ ಸಂತ್ರಸ್ತರಾದವರಿಗೆ ಸಹಾಯ ಮಾಡಲೆಂದು ಒಬ್ಬರು ಬ್ಲಾಗ್ ತಾಣವನ್ನು ಪ್ರಾರಂಭಿಸಿದ್ದರು. ಕಳೆದುಹೋದವರ ಫೋಟೋಗಳನ್ನು ಅಲ್ಲಿ ಹಾಕಿ ಎಲ್ಲ ಓದುಗರಿಗೆ ಕಾಣುವಂತೆ ಮಾಡಿ ಹಲವು ಮಂದಿ ತಮ್ಮ ಕಳೆದುಹೋದ ಬಾಂಧವರನ್ನು ವಾಪಾಸು ಪಡೆಯುವಂತೆ ಮಾಡಿದ್ದರು. ಅವರ ಬ್ಲಾಗ್ ತಾಣಕ್ಕೆ ಹಲವು ಮಂದಿ ಮಾಹಿತಿ ಸೇರಿಸುವ ಮೂಲಕ ಸಹಾಯಹಸ್ತ ನೀಡಿದ್ದರು.
ಹಾಗಾದರೆ ಎಲ್ಲ ಬ್ಲಾಗ್‌ಗಳೂ ಪತ್ರಿಕೋದ್ಯಮವೇ? ಖಂಡಿತ ಅಲ್ಲ. ಕೆಲವು ಬ್ಲಾಗ್‌ಗಳನ್ನು ಮಾತ್ರ ಹೊಸ ರೀತಿಯ ಪತ್ರಿಕೋದ್ಯಮ ಎಂದುಕೊಳ್ಳಬಹುದು. ಅವು ಯಾವುವು? ವೃತ್ತಿನಿರತ ಪತ್ರಿಕೋದ್ಯೋಗಿಗಳು ಬರೆದವು, ಪರಿಣತ ವೃತ್ತಿನಿರತರು ತಮ್ಮ ತಮ್ಮ ವೃತ್ತಿ ಬಗ್ಗೆ ಬರೆದವು, ಯಾವುದಾದರೊಂದು ಪ್ರಮುಖ ಘಟನೆ ಬಗ್ಗೆ ಆ ಘಟನೆ ಜರುಗಿದ ಸ್ಥಳದಿಂದ ಯಾರದರೊಬ್ಬರು ನೇರವಾಗಿ ವರದಿ ರೂಪದಲ್ಲಿ ಬರೆದವು, ಅಂತರಜಾಲದಲ್ಲಿರುವ ಇತರೆ ಸುದ್ದಿಗಳಿಗೆ ಕೊಂಡಿ ನೀಡುವಂತವು -ಇವನ್ನೆಲ್ಲ ಬ್ಲಾಗ್ ಪತ್ರಿಕೋದ್ಯಮ ಎನ್ನಬಹುದು.
ಬ್ಲಾಗ್ ಬಗ್ಗೆ ಇನ್ನೊಂದು ಪ್ರಚಲಿತ ಪದ ಎಂದರೆ ಪಾರ್ಟಿಸಿಪೇಟರಿ ಜರ್ನಲಿಸಂ ಅರ್ಥಾತ್ ಭಾಗೇದಾರಿ ಪತ್ರಿಕೋದ್ಯಮ ಎಂದು ಕರೆಯಬಹುದು. ಏನು ಹಾಗೆಂದರೆ? ವಿಕಿಪೀಡಿಯಾ ನೀಡುವ ವಿವರಣೆ ಪ್ರಕಾರ ಭಾಗೇದಾರಿ ಪತ್ರಿಕೋದ್ಯಮ ಎಂದರೆ ಸುದ್ದಿ ಮತ್ತು ಸಂಬಂಧಿತ ಮಾಹಿತಿಯ ಸಂಗ್ರಹಣೆ, ವರದಿ, ವಿಶ್ಲೇಷಣೆ ಮತ್ತು ಹಂಚುವಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು. ಇವನ್ನೆಲ್ಲ ಮಾಡುವ ವೃತ್ತಿನಿರತ ಪತ್ರಿಕೋದ್ಯೋಗಿಯಲ್ಲದವರನ್ನು ಭಾಗೇದಾರಿ ಪತ್ರಿಕಾಕರ್ತ ಎನ್ನಬಹುದು. ಬ್ಲಾಗಿಂಗ್ ಬಾಗೇದಾರಿ ಪತ್ರಿಕೋದ್ಯೋಮದ ಪ್ರಮುಖ ಅಂಗ. ಸಾರ್ವಜನಿಕರೇ ವರದಿಗಾರರಾಗಿರುವ ತುಂಬ ಪ್ರಖ್ಯಾತವಾಗಿರುವ ಅಂತರಜಾಲ ತಾಣ ದಕ್ಷಿಣ ಕೊರಿಯಾದ ಓಹ್ ಮೈ ನ್ಯೂಸ್ (http://www.ohmynews.com/). ಸಿಟಿಝನ್ ಜರ್ನಲಿಸಂ ಎನ್ನುವ ಪದ ಈ ತಾಣದಿಂದ ಖ್ಯಾತಿಯನ್ನು ಪಡೆಯಿತು. ಭಾಗೇದಾರಿ ಪತ್ರಿಕಾಕರ್ತರಿಂದಲೇ ನಡೆಸಲ್ಪಡುವ ಸುದ್ದಿ ಮತ್ತು ವಿಶ್ಲೇಷಣೆಗಳ ಅಂತರಜಾಲ ತಾಣ ಇದಾಗಿದೆ.
ಭಾರತದಲ್ಲೂ ಬಾಗೇದಾರಿ ಪತ್ರಿಕಾಕರ್ತರಿದ್ದಾರೆ. ಇವರಲ್ಲಿ ಒಂದು ಪ್ರಮುಖ ವಿಭಾಗ ಎಂದರೆ ಮುಖ್ಯವಾಹಿನಿಯ ಪತ್ರಿಕೆಗಳ ಮೇಲೆ ಕಾವಲುನಾಯಿಯಂತೆ ಕೆಲಸ ಮಾಡುವವರು. ಕನ್ನಡ ಭಾಷೆಯ ನೂರೆಂಟುಸುಳ್ಳು (http://noorentusullu.blogspot.com/) ಇದಕ್ಕೆ ಒಂದು ಉದಾಹರಣೆ. ಈ ಬ್ಲಾಗ್‌ನಲ್ಲಿ ಮುಖ್ಯವಾಗಿ ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗುವ ತಪ್ಪುಗಳನ್ನು ಆಗಾಗ ಎತ್ತಿ ತೋರಿಸಲಾಗುತ್ತಿದೆ. ಕನ್ನಡ ಪತ್ರಿಕೆಗಳಲ್ಲಿ ಎಂದು ಹೇಳಿದರೂ, ಈ ಬ್ಲಾಗ್ ನಡೆಸುವವರೇ ಹೇಳಿಕೊಂಡಂತೆ, ಕನ್ನಡದ ಪ್ರಮುಖ ಪತ್ರಿಕೆಯೊಂದರಲ್ಲಿ ಪ್ರಕಟವಾಗುವ ನೂರೆಂಟುಮಾತು ಅಂಕಣವನ್ನು ವಿಶ್ಲೇಷಿಸಲೆಂದೇ ಈ ಬ್ಲಾಗ್ ಹುಟ್ಟಿಕೊಂಡದ್ದು. ನೂರೆಂಟುಮಾತು ಅಂಕಣಕಾರರೇನೋ ಈ ಬ್ಲಾಗನ್ನು ಸ್ಪೋರ್ಟಿವ್ ಆಗಿ ತೆಗೆದುಕೊಂಡದ್ದು ಮಾತ್ರವಲ್ಲ ತಮ್ಮ ಪತ್ರಿಕೆಯಲ್ಲಿ ಒಂದು ಹುದ್ದೆಯನ್ನೇ ಈ ಬ್ಲಾಗಿಗರಿಗಾಗಿ ಹುಟ್ಟು ಹಾಕಿ ಅವರನ್ನು ಆ ಹುದ್ದೆಯನ್ನು ಸ್ವೀಕರಿಸಲು ಆಹ್ವಾನಿಸಿದ್ದರು. ಅವರು ಅದನ್ನು ಸ್ವೀಕರಿಸಲಿಲ್ಲ ಎಂಬುದು ಬೇರೆ ವಿಷಯ.
ಆದರೆ ಭಾರತದ ಇಂಗ್ಲಿಶ್ ಪತ್ರಿಕೋದ್ಯಮದ ದೈತ್ಯ ಟೈಂಸ್ ಆಫ್ ಇಂಡಿಯಾ ಮಾತ್ರ ತಾನು ಯಾರನ್ನು ಬೇಕಾದರೂ ಟೀಕಿಸಬಹುದು ಅದರೆ ತನ್ನನ್ನು ಯಾರೂ ಟೀಕಿಸಬಾರದು ಎಂಬ ನಿಲುವನ್ನು ತಾಳಿದೆ. ಮೀಡಿಯಾಹ್ (http://mediaah.blogspot.com/) ಎಂಬ ಹೆಸರಿನಲ್ಲಿ ಪ್ರದ್ಯುಮ್ನ ಮಹೇಶ್ವರಿ ಎಂಬವರು ಒಂದು ಬ್ಲಾಗ್ ನಡೆಸುತ್ತಿದ್ದರು. ಅದರಲ್ಲಿ ಅವರು ತಮ್ಮನ್ನು ಟೀಕಿಸಿದ್ದಕ್ಕೆ ಟೈಂಸ್ ಆಫ್ ಇಂಡಿಯಾದವರು ವಕೀಲರ ಮೂಲಕ ನೋಟೀಸು ಜಾರಿ ಮಾಡಿದ್ದರು. ಟೈಂಸ್ ಆಫ್ ಇಂಡಿಯಾದಂತಹ ದೈತ್ಯನ ವಿರುದ್ಧ ಏಕಾಕಿಯಾಗಿ ಹೋರಾಡಲು ನನ್ನಿಂದ ಅಸಾಧ್ಯ ಎಂದು ಘೋಷಿಸಿದ ಪ್ರದ್ಯುಮ್ನರು ತಮ್ಮ ಬ್ಲಾಗನ್ನೇ ತೆಗೆದುಬಿಟ್ಟರು. ಆದರೆ ಭಾರತದ ಬ್ಲಾಗ್ ಮಂಡಲವನ್ನೇ ಈಸುದ್ದಿ ಅಲ್ಲಾಡಿಸಿಬಿಟ್ಟಿತು. ಪ್ರದ್ಯುಮ್ನರ ಪರವಾಗಿ ಎಲ್ಲ ಬ್ಲಾಗಿಗರು ಒಂದಾದರು. ಒಬ್ಬರು ಪ್ರದ್ಯುಮ್ನರ ಬ್ಲಾಗನ್ನು ನಕಲು ಮಾಡಿ ತಮ್ಮ ಬ್ಲಾಗಿನಲ್ಲಿ ಹಾಕಿದರು (http://mediaha.blogspot.com/). ಮತ್ತೊಬ್ಬರು ಅಂತರಜಾಲದಲ್ಲೇ ಟೈಂಸ್‌ನವರಿಗೆ ತಮ್ಮ ನೋಟೀಸು ವಾಪಾಸು ತೆಗೆದುಕೊಳ್ಳುವಂತೆ ಒಂದು ಮನವಿ ನಿರ್ಮಿಸಿದರು (http://www.petitiononline.com/mediaahp/petition.html). ಈ ಮನವಿಗೆ ೫೦೦ಕ್ಕೂ ಹೆಚ್ಚು ಬ್ಲಾಗಿಗರು ಸಹಿ ಹಾಕಿದರು. ಭಾರತೀಯ ಬ್ಲಾಗ್ ಮಂಡಲದಲ್ಲೇ ಇದೊಂದು ತುಂಬ ಪ್ರಚಾರವನ್ನು ಪಡೆದ ಘಟನೆ.
ಒಟ್ಟಿನಲ್ಲಿ ಹೇಳುವುದಾದರೆ ಮುಖ್ಯವಾಹಿನಿಯ ಪತ್ರಿಕೋದ್ಯಮಕ್ಕೆ ಒಂದು ರೀತಿಯಲ್ಲಿ ಪರ್ಯಾಯವಾಗಿ ಬ್ಲಾಗಿಂಗ್ ಬೆಳೆಯುತ್ತಿದೆ. ಮುಖ್ಯವಾಹಿನಿಯ ಮಾಧ್ಯಮಗಳು ಇದನ್ನು ಗಂಭೀರವಾಗಿ ಪರಿಗಣಿಸತೊಡಗಿವೆ.


(೨೦೦೬ನೆ ಇಸವಿಯ ನವಂಬರ್ ೧೯ ರಂದು ಬರೆದದ್ದು)

ಸೋಮವಾರ, ಮಾರ್ಚ್ 17, 2008

ಇ-ಕಸ ಎಂಬ ಹೈಟೆಕ್ ಕಸಾಸುರ

ಮಹೇಶ್ ಮಲ್ನಾಡ್

ಬೆಂಗಳೂರು ಬೆಳೆದಂತೆಲ್ಲಾ ಐಟಿ ಉದ್ಯಮ,ಎಲೆಕ್ಟ್ರಾನಿಕ್ ಉದ್ಯಮ ಬೆಳೆಯುತ್ತಾ ಹೋಯಿತು. ಅದರ ಜೊತೆಗೆ ಈ ಉದ್ಯಮಗಳಿಂದ ಬಿಸಾಕಲ್ಪಟ್ಟ ಎಲೆಕ್ಟ್ರಾನಿಕ್ ಸಾಮಾಗ್ರಿಗಳು 'ಇ-ಕಸ' ಎಂಬ ಸಂತತಿಗೆ ನಾಂದಿ ಹಾಡಿತು.
ಏನಿದು ಇ-ಕಸ? ಮುಂದೆ ಓದಿ

ಭಾನುವಾರ, ಫೆಬ್ರವರಿ 24, 2008

ಶುಕ್ರವಾರ, ಫೆಬ್ರವರಿ 22, 2008

ವಿಜ್ಞಾನ ಗಂಗೆಯ ಬಿಂದುಸಾರ

ಸುವರ್ಣ ಕರ್ನಾಟಕ ಸಂಭ್ರಮಾಚರಣೆಯ ನೆನಪಿಗಾಗಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೂರು ಕನ್ನಡ ಪುಸ್ತಕಗಳನ್ನು ಪ್ರಕಟಿಸಿದೆ. 'ಸುವರ್ಣ ಸಾಹಿತ್ಯ ಗ್ರಂಥಮಾಲೆ' ಎಂಬ ಹೆಸರಿನ ಈ ಸರಣಿಯ ಭಾಗವಾಗಿ ಹೊರಬಂದಿರುವ ವಿಜ್ಞಾನ ಬರಹಗಳ ಸಂಕಲನ 'ವಿಜ್ಞಾನ ಗಂಗೆಯ ಬಿಂದುಸಾರ'. ಕಳೆದ ಐವತ್ತು ವರ್ಷಗಳ ಸುದೀರ್ಘ ಅವಧಿಯ ಕನ್ನಡ ವಿಜ್ಞಾನ ಸಾಹಿತ್ಯವನ್ನು ಪ್ರಾತಿನಿಧಿಕವಾಗಿ ಸಂಕಲಿಸುವ ಈ ಪುಟ್ಟ ಯತ್ನದ ಅಷ್ಟೇ ಪುಟ್ಟ ಪರಿಚಯ ಇಲ್ಲಿದೆ, ಓದಿ!

ವಿಜ್ಞಾನ ಗಂಗೆಯ ಬಿಂದುಸಾರ, ಸಂಪಾದಕರು: ನಾಗೇಶ ಹೆಗಡೆ
೨೨೪ ಪುಟಗಳು, ಬೆಲೆ ಇಪ್ಪತ್ತೈದು ರೂಪಾಯಿಗಳು
ಪ್ರಕಾಶಕರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಭವನ, ಜೆ ಸಿ ರಸ್ತೆ, ಬೆಂಗಳೂರು

ಮಂಗಳವಾರ, ಫೆಬ್ರವರಿ 19, 2008

ನಿಷೇಧಿತ ಪುರಾತತ್ತ್ವ : ಏನಿದರ ಮಹತ್ವ?

ಟಿ.ಆರ್. ಅನಂತರಾಮು

ನಿಮ್ಮ ಹಳೆಯ ಮನೆಯಲ್ಲಿ ಮುತ್ತಾತನ ಒಂದು ಚಿತ್ರವಿದೆಯೆನ್ನಿ. ಅದನ್ನು ನೀವು ಬಾಲ್ಯದಿಂದಲೇ ನೋಡುತ್ತ ಬಂದಿದ್ದೀರಿ. ಅಪ್ಪನನ್ನು ಕೇಳಿ, ಅವರ ತಾತ ಬದುಕಿದ್ದ ಪರಿ, ಅವರ ಆರೋಗ್ಯ, ವರ್ತನೆ, ದೈಹಿಕ ಚಹರೆಗಳು, ಬದುಕಿದ್ದಾಗ ಅವರು ಮಾಡಿದ ಸಾಧನೆ, ಅವರ ಒಡನಾಡಿಗಳು ಇಂಥ ಹತ್ತು ಹಲವು ಕುತೂಹಲಕಾರಿ ವಿಚಾರಗಳ ಬಗ್ಗೆ ನಿಮಗೊಂದು ಕಲ್ಪನೆ ಬಂದಿರುತ್ತದೆ. ವಾಸ್ತವವಾಗಿ ನಿಮ್ಮ ಅಪ್ಪ ಕೂಡ ಅವರ ತಾತನನ್ನು ನೋಡಿರಲಿಲ್ಲ. ಅವರಪ್ಪ ಹೇಳಿದ್ದನ್ನು ಕೇಳಿಸಿಕೊಂಡು ಒಂದಷ್ಟು ಸೇರಿಸಿ ಒಂದು ಚಿತ್ರಣವನ್ನು ನಿಮ್ಮ ಮುಂದೆ ಕೊಟ್ಟಿದ್ದಾರೆ ಎಂದು ಭಾವಿಸೋಣ. ಏನೇ ಇರಲಿ, ಮುತ್ತಾತನ ಬಗ್ಗೆ ಒಂದು ಬಗೆಯ ಪ್ರೀತಿ, ಗೌರವ, ಆದರ ಎಲ್ಲವೂ ನಿಮ್ಮ ಭಾವನೆಯಲ್ಲಿ ಬೆರೆತಿರುತ್ತದೆ.
ಹೀಗೆಯೇ ಇರುವ ಮನೋಸ್ಥಿತಿಯಲ್ಲಿ ಒಂದು ದಿನ ನಿಮ್ಮ ಹಳೇ ಮನೆಯ ಮೂಲೆ ಮಡುಕು ತಡಕುತ್ತೀರಿ. ದೂಳಾಗಿರುವ ಬಾಗಿಲವಾಡವನ್ನು ಒರೆಸುತ್ತೀರಿ. ಅಲ್ಲಿ ಮೋಡಿ ಅಕ್ಷರದಲ್ಲಿ ಸುಬ್ಬಣ್ಣ ಎಂದಿರುತ್ತದೆ. ಕೆತ್ತಿದ್ದು ೧೭೯೯ರಲ್ಲಿ ಎಂದು ಬರೆದಿರುತ್ತದೆ. ಬಾಗಿಲುವಾಡದ ಮೇಲೆ ಅವರದೇ ಆದ ಶೈಲಿಯಲ್ಲಿ ಹೂವು ಅರಳುತ್ತಿರುವುದನ್ನು ಕೆತ್ತಿದ್ದಾರೆ, ಬಳ್ಳಿಗೆ ಎಲೆಗಳಿವೆ, ನೀವು ವಿಸ್ಮಯಪಡುತ್ತೀರಿ. ೧೭೯೯ ಎಂಬುದು ನಿಮ್ಮ ಮನಸ್ಸಿಗೆ ನಾಟುತ್ತದೆ. ಏಕೆಂದರೆ ಅದು ಟಿಪ್ಪು ಸುಲ್ತಾನ್ ಸತ್ತ ವರ್ಷ. ಇದರರ್ಥ? ಆ ಹೊತ್ತಿಗೆ ನಿಮ್ಮ ಮುತ್ತಾತ ಬದುಕಿದ್ದರು. ಅಂದರೆ ೧೮ನೇ ಶತಮಾನದಲ್ಲೇ ಇದ್ದರು. ಅದೇಗೆ ಸಾಧ್ಯ? ಒಂದೊಂದು ತಲೆಮಾರಿಗೂ ಸಾಧಾರಣ ೩೦ ವರ್ಷ ಎಂದು ನೀವು ನಿಮ್ಮದೇ ಆದ ಲೆಕ್ಕಾಚಾರದಿಂದ ಹಿಮ್ಮುಖವಾಗಿ ಲೆಕ್ಕ ಹಾಕುತ್ತ ಹೋಗುವಿರಿ. ಅಂದರೆ ೯೦ ವರ್ಷಗಳಷ್ಟು ಹಿಂದಕ್ಕೆ ಹೋದರೆ ನಿಮ್ಮ ಮುತ್ತಾತ ಯೌವನಾವಸ್ಥೆಯಲ್ಲಿದ್ದ ಕಾಲ ಎನ್ನೋಣ. ಆದರೆ ಏಕೋ ಈ ಲೆಕ್ಕಾಚಾರವೇ ತಾಳೆಯಾಗುತ್ತಿಲ್ಲವಲ್ಲ. ಹಿಂದಿನ ಒಂದು ನೂರು ವರ್ಷವನ್ನು ಹೇಗೆ ಭರ್ತಿ ಮಾಡುವುದು? ಮುತ್ತಾತ ಬದುಕಿದ್ದು ಸುಳ್ಳೆ? ಮತ್ತೆ ಅಲ್ಲಿ ಕೆತ್ತಿರುವುದು? ನಿಮ್ಮ ವಿಶ್ವಾಸ ಅಲ್ಲಾಡುತ್ತದೆ. ಲೆಕ್ಕಾಚಾರದಲ್ಲಿ ಏನೋ ಎಡವಟ್ಟಾಗಿದೆ ಎಂದು ಮನಸ್ಸು ಒತ್ತಿ ಒತ್ತಿ ಹೇಳುತ್ತದೆ. ಇದರಿಂದ ಕುತೂಹಲ ತಳೆದು ಇನ್ನಷ್ಟು ತಡಕಾಡುತ್ತೀರಿ. ನಿಮ್ಮ ಮುತ್ತಾತನ ಕಾಲದ ಸಾಮಾನು ಸರಂಜಾಮುಗಳಿಗಾಗಿ ಹುಡುಕುತ್ತೀರಿ. ಮುತ್ತಾತ ಬಳಸಿದ ಜರ್ಮನ್ ಲಾಟೀನೊಂದು ಸಿಗುತ್ತದೆ. ಅದರಲ್ಲೂ ೧೭೮೦ ಎಂದು ಇದೆ. ಸಂದೂಕದ ಮೇಲೆ ಯಾವುದೋ ದೇವರ ಚಿತ್ರವನ್ನು ಬಿಡಿಸಿದ್ದಾರೆ. ಕೆಳಗೆ ಅಲ್ಲೂ ಸುಬ್ಬಣ್ಣ ಎಂದಿದೆ. ಇಸವಿ ೧೭೭೫ ಎಂದಿದೆ. ಈಗ ನೀವು ಸಂಪೂರ್ಣವಾಗಿ ಗೊಂದಲಗೊಳ್ಳುತ್ತೀರಿ. ಅಪ್ಪ ಹೇಳಿದ್ದು ಸುಳ್ಳೆ? ಇಷ್ಟಾದರೂ ಅವರ ತಾತನ ಬಗ್ಗೆ ಸುಳ್ಳು ಹೇಳಿದರೆ ಏನು ಅವರಿಗೆ ಲಾಭ? ಯೋಚಿಸುತ್ತ ಹೋದಂತ ಗಲಿಬಿಲಿಯೇ ಹೆಚ್ಚಾಗುತ್ತದೆ. ಕೊನೆಗೆ ಸತ್ಯ ಶೋಧನೆಗೆಂದು ನೀವೇ ಇಳಿದು ವಂಶವೃಕ್ಷದ ಎಲ್ಲ ಹಂತಗಳನ್ನೂ ಕೂಲಂಕಷವಾಗಿ ನೋಡುತ್ತೀರಿ. ನಿಮ್ಮ ವಂಶಸ್ಥರಲ್ಲಿ ಅದೆಷ್ಟೋ ಸುಬ್ಬಣ್ಣರಿರಬಹುದೆ? ಈ ಸುಬ್ಬಣ್ಣ ಮುತ್ತಾತನ ಅಪ್ಪ ಕೂಡ ಸುಬ್ಬಣ್ಣ ಆಗಿರಬಹುದೆ. ಯಾರು ನಿಜವಾದ ಸುಬ್ಬಣ್ಣ. ಹಾಗಿದ್ದಲ್ಲಿ ಅಪ್ಪನ ತಾತ ಸುಬ್ಬಣ್ಣ ಇವರಾಗಿದ್ದರೆ ಅಪ್ಪ ಯಾಕೆ ಕನಿಷ್ಠ ಅವರು ಬದುಕಿದ್ದ ಕಾಲವನ್ನು ಗಮನಿಸದೆ ನಿರ್ಲಕ್ಷಿಸಿದ್ದಾರೆ. ತನ್ನ ವಂಶಸ್ಥರ ಬಗ್ಗೆ ಹೀಗೆ ನಿರ್ಲಕ್ಷಿಸಬಹುದೆ?
ಇಂಥ ಒಂದು ಪರಿಸ್ಥಿತಿಯನ್ನು ಕಲ್ಪಿಸಿಕೊಂಡರೆ ಮೈಕೇಲ್ ಕ್ರೆಮೋ ಮತ್ತು ರಿಚರ್ಡ್ ಥಾಮ್ಪ್‌ಸನ್ ಅವರು ಬರೆದಿರುವ ‘ಫರ್‌ಬಿಡನ್ ಆರ್ಕಿಯಾಲಜಿ’ ಕೃತಿಯ ಹೂರಣ ಮನನವಾಗುತ್ತದೆ. ೧೯೯೩ರಲ್ಲಿ ಈ ಲೇಖಕರು ಇದನ್ನು ಪ್ರಕಟಿಸಿದಾಗ ವಿಜ್ಞಾನ ವಲಯದಲ್ಲಿ ಕಾವೇರಿತ್ತು; ಒಂದು ರೀತಿಯ ಷಾಕ್ ನೀಡಿತ್ತು. ನಮ್ಮ ಗ್ರಹಿಕೆಯ ಬುಡವನ್ನೇ ಅಲ್ಲಾಡಿಸಿದೆ ಎಂದು ವೃತ್ತಿಪರರು ಹೇಳತೊಡಗಿದರು. ಅವರು ಪ್ರತಿಪಾದಿಸಿದ್ದಾದರೂ ಏನು? ಮೂಲತಃ ಮಾನವ ವಿಕಾಸದ ಕಾಲಘಟ್ಟಗಳನ್ನೇ ಅವರು ಪ್ರಶ್ನಿಸಿದ್ದರು. ಇಬ್ಬರ ಪೈಕಿ ರಿಚರ್ಡ್ ಥಾಮ್ಪ್‌ಸನ್ ಗಣಿತಜ್ಞ, ಅದರಲ್ಲೂ ಜೀವಿ ವಿಜ್ಞಾನಕ್ಕೆ ಗಣಿತ ಅನ್ವಯಿಸುವ ಪರಿಣತ. ದೂರಗ್ರಾಹಿ ತಂತ್ರ, ಭೂವಿಜ್ಞಾನ, ಭೌತವಿಜ್ಞಾನದಲ್ಲಿ ತನಗೆ ಪರಿಶ್ರಮವಿದೆಯೆಂದು ಆತ್ಮವಿಶ್ವಾಸದಿಂದ ಹೇಳುವಾತ. ಮೈಕೇಲ್ ಕ್ರೆಮೋ ಕ್ಯಾಲಿಫೋರ್ನಿಯ ವಾಸಿ. ೧೯೭೭ರಿಂದಲೂ ಲಾಸ್‌ಏಂಜಲೀಸ್‌ನ ಭಕ್ತಿವೇದಾಂತ ಬುಕ್ ಪಬ್ಲಿಷಿಂಗ್ ಟ್ರಸ್ಟ್‌ನಲ್ಲಿ ಸಂಪಾದಕ ಮತ್ತು ಲೇಖಕ. ಈ ಇಬ್ಬರು ಕೈಹಾಕಿದ್ದು ಬಲು ಕ್ಲಿಷ್ಟವಾದ, ಸಂಕೀರ್ಣವಾದ, ಗೊಂದಲ ಗೊಜಲುಗಳಿಂದ ತುಂಬಿದ್ದ, ಅರಿವಿಗೆ ಸವಾಲು ಹಾಕುವ ಮಾನವ ವಿಕಾಸಕ್ಷೇತ್ರಕ್ಕೆ. ಸಂಕ್ಷಿಪ್ತದಲ್ಲಿ ಅದು ‘ಸುಬ್ಬಣ್ಣ ಮುತ್ತಾತನ ಕಥೆ’ ಇದ್ದಂತೆ.
‘ಫರ್‌ಬಿಡನ್ ಆರ್ಕಿಯಾಲಿಜಿ’ಯಲ್ಲಿ ಇವರು ಮಂಡಿಸಿರುವ ವಿಚಾರ ಸರಣಿಗಳೇನು? ಹೊರನೋಟಕ್ಕೆ ಇವು ಬರೀ ಮೇಲುಸ್ತರದವು ಎನ್ನಿಸಬಹುದು. ಆದರೆ ಅವರು ಎತ್ತುವ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರ ಕೊಡಲು ವಿಜ್ಞಾನಿಗಳು ತಿಣುಕಿರುವುದೂ ಉಂಟು, ತಿರುಗೇಟು ಕೊಟ್ಟಿರುವುದೂ ಉಂಟು.
‘ಫರ್‌ಬಿಡನ್ ಆರ್ಕಿಯಾಲಜಿ’ ಕೃತಿಯನ್ನು ಬಹುಮಂದಿಗೆ ತಲಪಿಸಲು, ಅದರ ಬಾಹುಳ್ಯವನ್ನು ಇನ್ನಷ್ಟು ಹ್ರಸ್ವಗೊಳಿಸಿ ಈಗ ‘ದಿ ಹಿಡನ್ ಹಿಸ್ಟರಿ ಆಫ್ ದಿ ಹ್ಯೂಮನ್ ರೇಸ್’ ಎಂಬ ಕೃತಿಯನ್ನು ಅವರೇ ತಂದಿದ್ದಾರೆ. ಮೂಲ ಆವೃತ್ತಿಯಂತೆ ಇದೂ ಕೂಡ ವಿವಾದದ ಸುಳಿಗಳನ್ನು ಎಬ್ಬಿಸಿದೆ; ಇಂದಿಗೂ ಎಬ್ಬಿಸುತ್ತಿದೆ. ಈ ಕೃತಿಯಲ್ಲಿ ಅವರು ಬೊಟ್ಟು ಮಾಡುವ ಸಂಗತಿಗಳ ಒಂದಷ್ಟು ಮಾದರಿಗಳನ್ನು ನೋಡಬಹುದು. ಕೃತಿಯ ಪ್ರವೇಶದಲ್ಲೇ ಅವರು ಕಾಣಿಸಿರುವ ವಾಕ್ಯಗಳಿವು :
‘೧೯೭೯ರಲ್ಲಿ ಪೂರ್ವ ಆಫ್ರಿಕದ ತಾಂಜೇನಿಯದ ಲೆತೊಲಿ ಎಂಬ ತಾಣದಲ್ಲಿ ಸಂಶೋಧಕರು ಮಾನವ ಹೆಜ್ಜೆ ಗುರುತುಗಳನ್ನು ಜ್ವಾಲಾಮುಖಿಯ ಬೂದಿಯಲ್ಲಿ ಪತ್ತೆಹಚ್ಚಿದರು. ವಿಶೇಷವೆಂದರೆ ಈ ಬೂದಿ ಗಟ್ಟಿಯಾಗಿದ್ದು ೩೬ ಲಕ್ಷ ವರ್ಷಗಳ ಹಿಂದೆ. ಇವಕ್ಕೂ ಆಧುನಿಕ ಮಾನವನ ಹೆಜ್ಜೆ ಗುರುತುಗಳಿಗೂ ಅಂಥ ವ್ಯತ್ಯಾಸವೇನಿಲ್ಲವೆಂದು ಮಾನವ ಶಾಸ್ತ್ರ ಪರಿಣತರು ಅಧ್ಯಯನದ ಮೂಲಕ ದೃಢಪಡಿಸಿದರು. ಅಂದರೆ? ಅದರ ಅರ್ಥ ಸುಸ್ಪಷ್ಟ. ೩೬ ಲಕ್ಷ ವರ್ಷಗಳ ಹಿಂದೆಯೇ ಈಗಿನಂತೆ ಪಾದಗಳಿದ್ದ ಮಾನವ ಆ ಜಾಗದಲ್ಲೇ ಅಡ್ಡಾಡಿದ್ದ. ಚಿಕಾಗೋ ವಿಶ್ವವಿದ್ಯಾಲಯದ ಆರ್. ಎಚ್. ಟಟಲ್ ಎಂಬಾತ ೩೬ ಲಕ್ಷ ವರ್ಷಗಳ ಹಿಂದಿನ ಅಸ್ಟ್ರಲೋಪಿತಿಕಸ್ ಎಂಬ ವಾನರನ ಕಾಲಿನ ಮೂಳೆಗಳನ್ನು ಅಧ್ಯಯನ ಮಾಡಿ ಅವು ನಿಚ್ಚಳವಾಗಿ ಏಪ್ ತರಹದ ಜೀವಿಗಳಷ್ಟೇ ಹೊರತು ಲೆತೊಲಿಯದನ್ನು ಇವಕ್ಕೆ ಹೋಲಿಸಲಾಗುವುದಿಲ್ಲ ಎಂದು ಹೇಳಿದ್ದ. ಆದರೆ ೧೯೯೦ರಲ್ಲಿ ನ್ಯಾಚುರಲ್ ಹಿಸ್ಟರಿ ಎಂಬ ಸಂಶೋಧನಾ ಪತ್ರಿಕೆಗೆ ಬರೆಯುತ್ತ ‘ಏಕೋ ಒಂದು ಬಗೆಯ ಗೊಂದಲವಾಗುತ್ತಿದೆ’ ಎಂದು ಹೇಳಿದ್ದ. ಈ ಎರಡೂ ಅಭಿಪ್ರಾಯಗಳನ್ನು ಬದಿಗಿಟ್ಟು ಇನ್ನೊಂದು ಅಭಿಪ್ರಾಯವನ್ನು ನಾವು ಪರಿಗಣಿಸಲು ಸಾಧ್ಯವಿಲ್ಲವೆ? ಪೂರ್ವ ಆಫ್ರಿಕಾದಲ್ಲಿ ೩೬ ಲಕ್ಷ ವರ್ಷಗಳ ಹಿಂದೆ ಅಂಗರಚನೆಯ ದೃಷ್ಟಿಯಿಂದ ಆಧುನಿಕ ಮಾನವನನ್ನು ಹೋಲುವ ಜೀವಿಗಳು ಏಕೆ ಇದ್ದಿರಬಾರದು? ಏಪ್ ತರಹದ ಜೀವಿಗಳೊಂದಿಗೆ ಅವು ಸಹ ಜೀವನ ನಡೆಸಿರಬಾರದೇಕೆ? ಈ ಸಾಧ್ಯತೆಯನ್ನು ಏಕೆ ಪರಿಗಣಿಸಬಾರದು? ಒಂದೇ ಒಂದು ಅಡ್ಡ ಬರುವುದೆಂದರೆ ಮಾನವ ವಿಕಾಸದ ಬಗ್ಗೆ ಈಗಿರುವ ನಮ್ಮ ಗ್ರಹಿಕೆ ಇಂಥ ಸತ್ಯವನ್ನು ನಿಷೇಧಿಸಿಬಿಡುತ್ತದೆ.
ಹಾಗಾದರೆ ಡಾರ್ವಿನ್ ಪ್ರತಿಪಾದಿಸಿದ ‘ವಿಕಾಸ ಸಿದ್ಧಾಂತ’ ಹುಸಿ ಪರಿಕಲ್ಪನೆಯೆ? ಈ ಇಬ್ಬರೂ ಹೌದು ಎನ್ನುತ್ತಾರೆ. ಅದು ವಸ್ತುನಿಷ್ಠವಲ್ಲ ಎಂದು ಹೇಳುವ ಧೈರ್ಯ ತೋರುತ್ತಾರೆ. ಅವರು ಅನೇಕ ಸಾಕ್ಷಿಗಳತ್ತ ಬೊಟ್ಟು ಮಾಡುತ್ತಾರೆ. ೧೮೮೦ರಲ್ಲಿ ಜೇಡಿ ವಿಟ್ನಿ ಎಂಬ ಕ್ಯಾಲಿಫೋರ್ನಿಯ ರಾಜ್ಯದ ಭೂವಿಜ್ಞಾನಿ ಅಲ್ಲಿನ ಚಿನ್ನದ ಗಣಿಯಿಂದ ಸಂಗ್ರಹಿಸಿದ ಪ್ರಾಚ್ಯವಸ್ತುಗಳನ್ನು ಕುರಿತು ತಪಶೀಲು ವರದಿ ತಯಾರಿಸಿ ಟಿಪ್ಪಣಿ ಬರೆದ. ಗಣಿಯ ಕೂಪದೊಳಗೆ ಕಲ್ಲು ಅರೆಯುವ ಕುಟಾಣಿ, ಒರಳು, ಭರ್ಜಿ ರೂಪದ ಶಿಲೆ ದೊರೆತಿದ್ದವು. ಅವನ್ನು ಆತ ಬಗೆದು ತೆಗೆದದ್ದು ಕೆನೆಗಟ್ಟಿದ ಲಾವಾರಸದ ಸ್ತರದಿಂದ. ಈ ಸ್ತರಗಳ ವಯೋಮಾನ ಒಂಬತ್ತು ದಶಲಕ್ಷ ವರ್ಷಗಳಿಂದ ಹಿಡಿದು ೫೫ ದಶಲಕ್ಷ ವರ್ಷಗಳವರೆಗೆ. ಸ್ಮಿತ್‌ಸೋನಿಯನ್ ಸಂಸ್ಥೆಯ ಹೋಮ್ಸ್ ಎಂಬ ತಜ್ಞ ಇದನ್ನು ಕುರಿತು ಬರೆದ ಮಾತುಗಳಿವು :
‘ನಾವು ಇಂದು ಮಾನವ ವಿಕಾಸವನ್ನು ಅರ್ಥೈಸಿಕೊಂಡಿರುವ ಬಗೆಯನ್ನೇ ವಿಟ್ನಿ ಅನುಸರಿಸಿದ್ದರೆ ಬಹುಶಃ ತಾನು ಪತ್ತೆ ಹಚ್ಚಿದ ಈ ಸಾಕ್ಷಿಗಳನ್ನು ಬಹಿರಂಗಪಡಿಸಲು ಆತ ಹಿಂಜರಿಯುತ್ತಿದ್ದ.’
ಇದರ ಅರ್ಥ ಏನು? ನಾವು ನಂಬಿರುವ ಸಾಕ್ಷಿಗಳಿಗೆ ವಾಸ್ತವ ಸಾಕ್ಷಿಗಳು ತಾಳೆಯಾಗದಿದ್ದಾಗ ಅವು ಎಷ್ಟೇ ಪ್ರಬಲ ಸಾಕ್ಷಿಗಳಾಗಿರಲಿ ಅವುಗಳನ್ನು ದೂರ ತಳ್ಳಿಬಿಡುವುದೋ, ಮರೆಮಾಚಿಬಿಡುವುದೋ ವಿಜ್ಞಾನಿಗಳ ಸ್ವಭಾವ. ಇದನ್ನೇ ಕ್ರೆಮೋ ಮತ್ತು ಥಾಮ್ಪ್‌ಸನ್ ತಮ್ಮ ಕೃತಿಯಲ್ಲಿ ‘ಜ್ಞಾನವನ್ನು ಸೋಸುವ’ ಕೈಚಳಕ ಎಂದು ಕರೆದಿದ್ದಾರೆ.
‘ಫರ್‌ಬಿಡನ್ ಆರ್ಕಿಯಾಲಜಿ’ಯ ಸಾರಸಂಗ್ರಹವಾದ ‘ದಿ ಹಿಡನ್ ಹಿಸ್ಟರಿ ಆಫ್ ದಿ ಹ್ಯೂಮನ್ ರೇಸ್’ ಹೊರತಂದಾಗಿನಿಂದ ವಿಜ್ಞಾನಿಗಳಲ್ಲೇ ಎರಡು ಬಣವಾಗಿದೆ. ಈ ಕೃತಿಯುದ್ದಕ್ಕೂ ಮಾನವ ವಿಕಾಸದ ಬಗ್ಗೆ ನಮ್ಮ ಗ್ರಹಿಕೆಯೇ ಅಪೂರ್ಣ ಎಂದು ವಾದಿಸುತ್ತ ಅದಕ್ಕೆ ಪೂರಕವಾಗಿ ಹಲವು ಸಾಕ್ಷಿಗಳನ್ನು ನೀಡುತ್ತಾರೆ. ಈ ಸಾಕ್ಷಿಗಳ ಬಗ್ಗೆಯೇ ವಿಜ್ಞಾನಿಗಳಲ್ಲಿ ಭಿನ್ನ ಮತವಿದೆ. ವಿಕಾಸ ವಾದದ ಬುಡಕ್ಕೇ ಕೈಹಾಕಿರುವ ಲೇಖಕರು ತಮ್ಮ ವಾದ ಸರಣಿಯನ್ನು ಎಷ್ಟು ಕೌಶಲವಾಗಿ ಬೆಳೆಸುತ್ತಾರೆ ಎಂದು ಅರಿಯುವ ಮೊದಲು ವಿಕಾಸವಾದ ಕುರಿತು ಪ್ರಚಲಿತವಿರುವ ನಮ್ಮ ಗ್ರಹಿಕೆಯ ಬಗ್ಗೆ ಕೆಲವು ಅಂಶಗಳನ್ನು ಸ್ಥೂಲವಾಗಿ ಪರಿಗಣಿಸಬಹುದು.
ಚಾರ್ಲ್ಸ್ ಡಾರ್ವಿನ್ ‘ಆರಿಜನ್ ಆಫ್ ದಿ ಸ್ಪೀಸೀಸ್’ (ಜೀವಿಸಂಕುಲಗಳ ಉಗಮ) ಎಂಬ ಕೃತಿಯನ್ನು ೧೮೫೯ರಲ್ಲಿ ಬರದಾಗ ಮಾನವ ವಿಕಾಸದ ಬಗ್ಗೆ ಆತ ದೀರ್ಘವಾಗಿ ಏನೂ ಚರ್ಚಿಸಿರಲಿಲ್ಲ. ೧೮೭೧ರಲ್ಲಿ ‘ಡಿಸೆಂಟ್ ಆಫ್ ಮ್ಯಾನ್’ ಎಂಬ ಕೃತಿ ಬರೆದು ಅದರಲ್ಲಿ ಮಾನವ ವಿಕಾಸವನ್ನು ಕುರಿತೇ ಹೆಚ್ಚು ಚರ್ಚಿಸಿದ್ದ. ಮನುಷ್ಯನಿಗೆ ಇಲ್ಲಿ ಅಂದರೆ ವಿಕಾಸದ ದೃಷ್ಟಿಯಿಂದ ವಿಶೇಷ ಸ್ಥಾನವನ್ನೇನೂ ಕಲ್ಪಿಸಲಾಗುವುದಿಲ್ಲ ಎಂದು ಹೇಳಿದ್ದ. ಏಪ್ ತರಹದ ಜೀವಿಯ ಮೂಲದಿಂದ ಒಂದು ಕವಲೊಡೆದು ಮಾನವ ವಿಕಾಸವಾಗಿದೆ ಎಂದು ಸ್ಪಷ್ಟವಾಗಿ ತಿಳಿಸಿದ್ದ. ಅದೇ ತಿಳಿವಿನ ಹಿನ್ನೆಲೆಯಲ್ಲಿ ಮಾನವ ವಿಕಾಸದ ಬೇರೆ ಬೇರೆ ಕಾಲಘಟ್ಟಗಳನ್ನು ಮಾನವ ಶಾಸ್ತ್ರಜ್ಞರು ಗುರುತಿಸಿದ್ದರು. ಇವರ ಅಧ್ಯಯನದ ರೀತ್ಯ ಏಪ್ ತರಹದ ಜೀವಿ ೩೮ ದಶಲಕ್ಷ ವರ್ಷಗಳ ಹಿಂದೆ ಅಂದರೆ ಭೂವಿಜ್ಞಾನದ ಕಾಲಪಟ್ಟಿಯ ರೀತ್ಯ ಆಲಿಗೋಸೀನ್ ಎಂಬ ಕಾಲದಲ್ಲಿ ಭೂಮಿಯ ಮೇಲೆ ಕಾಣಿಸಿಕೊಂಡಿತ್ತು. ಸ್ವಲ್ಪಮಟ್ಟಿಗೆ ಮನುಷ್ಯನನ್ನು ಹೋಲುವ ಏಪ್ ಕಾಣಿಸಿಕೊಂಡದ್ದು ಮಯೋಸೀನ್ ಕಾಲದಲ್ಲಿ. ಅಂದರೆ ಈಗಿನಿಂದ ಹಿಂದಕ್ಕೆ ಐದು ದಶಲಕ್ಷ ವರ್ಷಗಳಿಂದ ಪ್ರಾರಂಭಿಸಿ, ೨೫ ದಶಲಕ್ಷ ವರ್ಷಗಳವರೆಗೆ. ಇಂಥ ಜೀವಿಯನ್ನು ಮಾನವ ಶಾಸ್ತ್ರಜ್ಞರು ಡ್ರಯೋಪಿತಿಕಸ್ ಎನ್ನುತ್ತಾರೆ. ಶಿಲಾಸ್ತರಗಳಲ್ಲಿ ಹುದುಗಿರುವ ಜೀವ್ಯವಶೇಷಗಳನ್ನು ಅಧ್ಯಯನ ಮಾಡಿದ ತಜ್ಞರು ಹೇಳುವುದೆಂದರೆ ‘ಮಾನವನನ್ನು ಹೋಲುವ ಏಪ್‌ಗಳು (ಪ್ರೈಮೇಟ್ಸ್) ನೆಟ್ಟಗೆ ನಿಂತು ನಡೆದಾಡುವುದನ್ನು ಪ್ರಾರಂಭಿಸಿದ್ದು ಪ್ಲಿಯೋಸೀನ್ ಕಾಲದಲ್ಲಿ ಅಂದರೆ ಈಗ್ಗೆ ಐದು ದಶಲಕ್ಷ ವರ್ಷಗಳ ಹಿಂದೆ. ಈ ಜೀವಿಯೇ ಅಸ್ಟ್ರಲೋಪಿತಿಕಸ್. ನಾಲ್ಕರಿಂದ ಐದು ಅಡಿ ಎತ್ತರದ, ೩೦೦ ರಿಂದ ೬೦೦ ಸಿ.ಸಿ. ಕಪಾಲ ಸಾಮರ್ಥ್ಯದ, ಮಾನವನಿಗೆ ಬಹು ಸಮೀಪದ ಅಸ್ಟ್ರಲೋಪಿತಿಕಸ್‌ನ ಲಕ್ಷಣವೆಂದರೆ ಅದು ಕತ್ತಿನಿಂದ ಕೆಳಕ್ಕೆ ಮನುಷ್ಯನಂತಿತ್ತು, ಶಿರ ಮಾತ್ರ ಏಪ್ ಹೋಲುತ್ತಿತ್ತು ಎನ್ನುತ್ತಾರೆ. ಅಸ್ಟ್ರಲೋಪಿತಿಕಸ್, ವಿಕಾಸವಾಗುತ್ತಿದ್ದ ಒಂದು ಮಜಲಿನಲ್ಲಿ ಒಂದು ಕವಲು ಹೋಮೋ ಹ್ಯಾಬಿಲಿಸ್ ಎನ್ನುವ ಪ್ರಭೇದಕ್ಕೆ ಅವಕಾಶ ನೀಡಿತು - ೨೦ ಲಕ್ಷ ವರ್ಷಗಳ ಹಿಂದೆ. ಅಂದರೆ ಪ್ಲಿಯಿಸ್ಟೋಸಿನ್ ಯುಗದ ಆರಂಭದಲ್ಲಿ. ಹೋಮೋ ಹ್ಯಾಬಿಲಿಸ್ ಸ್ವಲ್ಪಮಟ್ಟಿಗೆ ಅಸ್ಟ್ರಲೋಪಿತಿಕಸ್‌ನನ್ನು ಹೋಲುತ್ತಿತ್ತು. ಆದರೆ ಕಪಾಲದ ಸಾಮರ್ಥ್ಯ ೬೦೦ರಿಂದ ೭೦೦ ಸಿ.ಸಿ. ೧೫ ಲಕ್ಷ ವರ್ಷಗಳ ಹಿಂದೆ ಹೋಮೋ ಹ್ಯಾಬಿಲಿಸ್‌ನಿಂದ ಇನ್ನೊಂದು ಪ್ರಭೇದ ಹೋಮೋ ಎರಕ್ಟಸ್ ವಿಕಾಸವಾಯಿತು. ಇದನ್ನೇ ನಾವು ಜಾವಾ ಮನುಷ್ಯ, ಪೀಕಿಂಗ್ ಮನುಷ್ಯ ಎಂದು ಕರೆಯುತ್ತೇವೆ. ಐದರಿಂದ ಆರು ಅಡಿ ಎತ್ತರದ ಜೀವಿ, ೭೦೦ರಿಂದ ೧೩೦೦ ಸಿ.ಸಿ. ಕಪಾಲ ಸಾಮರ್ಥ್ಯ. ನೆಟ್ಟಗೆ ನಿಂತು ಎರಡೂ ಕಾಲಿನ ಮೇಲೆ ನಿಲ್ಲಬಲ್ಲ ಶಕ್ತಿ ಹೋಮೋ ಎರಕ್ಟಸ್‌ಗೆ ಇತ್ತು. ಕಳೆದ ಎರಡುಲಕ್ಷ ವರ್ಷಗಳ ಹಿಂದಿನವರೆಗೆ ಇವು ಆಫ್ರಿಕ, ಏಷ್ಯ, ಯೂರೋಪಿನಲ್ಲಿ ನೆಲೆಯಾಗಿದ್ದುವು. ಪ್ರಾಗ್ ಮಾನವ ಶಾಸ್ತ್ರಜ್ಞರ ಊಹೆಯಂತೆ ಆಧುನಿಕ ಮಾನವ ಹೋಮೋಸೇಪಿಯನ್(ಮತಿವಂತ ಮಾನವ), ಹೋಮೋ ಎರಕ್ಟಸ್‌ನಿಂದ ವಿಕಾಸಗೊಂಡ ಜೀವಿ. ಅಂದಾಜು ಕಾಲ ೩,೦೦,೦೦೦ ದಿಂದ ೪,೦೦,೦೦೦ ವರ್ಷಗಳ ಹಿಂದಿನವರೆಗೆ. ಆಧುನಿಕ ಮಾನವ ನೇರವಾಗಿ ವಿಕಾಸವಾದದ್ದು ನಿಯಾಂಡ್ರತಲ್ ಮಾನವನಿಂದ ಎನ್ನುತ್ತಾರೆ. ಇವನು ಬಾಳಿದ್ದು ಪ್ಲಿಸ್ಟೋಸೀನ್ ಯುಗದ ಉತ್ತರಾರ್ಧದಲ್ಲಿ; ಕೊನೆಯ ಹಿಮಯುಗ ಪ್ರಾರಂಭವಾಗುವ ಮೊದಲು. ೫೦,೦೦೦ ವರ್ಷಗಳ ಹಿಂದೆ ಈ ಪ್ರಭೇದ ಗತವಂಶಿಯಾಯಿತು. ಇವನ ನಂತರದ ಪೀಳಿಗೆ ಕ್ರೋ ಮ್ಯಾಗ್ನಾನ್ - ಶರೀರ ರಚನೆಯಿಂದ ಇನ್ನಷ್ಟು ವಿಕಾಸವಾದ ಜೀವಿ. ೪೦,೦೦೦ ವರ್ಷಗಳ ಹಿಂದೆ ಇವನ ಬಾಳು.
ಕ್ರೆಮೋ ಮತ್ತು ಥಾಮ್ಪ್‌ಸನ್ ಹೇಳುತ್ತಾರೆ : ಅಸ್ಟ್ರಲೋಪಿತಿಕಸ್‌ನಿಂದ ಹೋಮೋ ಹ್ಯಾಬಿಲಿಸ್, ಇದರಿಂದ ಹೋಮೋ ಎರಕ್ಟಸ್, ಅದರಿಂದ ಆಧುನಿಕ ಹೋಮೋಸೇಪಿಯನ್ ಹೇಗೆ ಹಂತ ಹಂತಗಳಲ್ಲಿ ವಿಕಾಸವಾದುವು ಎಂಬುದನ್ನು ಯಾವ ಮಾನವ ಶಾಸ್ತ್ರಜ್ಞರು ನಿಚ್ಚಳವಾಗಿ ಗುರುತಿಸಿಲ್ಲ. ನಮ್ಮ ಪಳೆಯುಳಿಕೆಯ ದಾಖಲೆಯೇ ಅಪೂರ್ಣ. ಮಯೋಸೀನ್ ಯುಗದ ಏಪ್‌ಗಳನ್ನು ಪ್ಲಿಯೋಸೀನ್ ತಲೆಮಾರಿನೊಡನೆ ಕೊಂಡಿಕೂಡಿಸಲಾಗಿಲ್ಲ. ಕೇವಲ ನಾಲ್ಕರಿಂದ ಎಂಟು ದಶಲಕ್ಷ ವರ್ಷಗಳ ಅವಧಿಯ ಚರಿತ್ರೆಯನ್ನು ಪುನಾರಚಿಸಲು ತಿಣುಕಾಡುತ್ತಿದ್ದೇವೆ. ಇದು ಜೀವಿ ವಿಜ್ಞಾನದ ಮಿತಿಯೂ ಹೌದು. ವಿಕಾಸವಾದ ಸಂಪೂರ್ಣವಾಗಿ ಸತ್ಯವಲ್ಲ. ಅದು ಶಿಥಿಲ ಬುನಾದಿಯ ಮೇಲೆ ನಿಂತಿದೆ ಎನ್ನುತ್ತಾರೆ. ಮಾನವ ನಿರ್ಮಿತ ವಸ್ತುಗಳ ವಯೋನಿರ್ಧಾರಕ್ಕೆ ಬಳಸುವ ಕಾರ್ಬನ್-೧೪ ತಂತ್ರಜ್ಞಾನ ಕೂಡ ದೋಷಪೂರಿತ. ಮಾದರಿಗಳು ಕಲುಷಿತವಾಗಿರುವುದನ್ನು ಬಹುಮಂದಿ ಕಡೆಗಣಿಸುತ್ತಾರೆ. ಹೀಗಾಗಿ ಪಡೆಯುವ ಫಲಿತಾಂಶವೇ ವೈಪರೀತ್ಯದಿಂದ ಕೂಡಿರುತ್ತದೆ. ಎಂದೇ ವಯೋಮಾನದ ಅಂಕೆಅಂಶಗಳು ನಿಜಕ್ಕೂ ನಂಬುವಂತಹದಲ್ಲ. ಪ್ರಾಚೀನ ಮಾನವ ಶಾಸ್ತ್ರ ಅಧ್ಯಯನದ ಬಹುದೊಡ್ಡ ಕೊರತೆ ಎಂದರೆ ಅದು ವಸ್ತುನಿಷ್ಠವಲ್ಲ, ಬದಲು ವರದಿನಿಷ್ಠ.
ಇಂದಿನ ವಿಜ್ಞಾನದ ಪ್ರಗತಿಯನ್ನು ಬಹು ಗಂಭೀರವಾಗಿಯೇ ಪ್ರಶ್ನಿಸುವ ಕ್ರೆಮೋ ಮತ್ತು ಥಾಮ್ಪ್‌ಸನ್ ಯಾವ ಬಗೆಯ ಮಾಹಿತಿಗಳತ್ತ ಬೊಟ್ಟು ಮಾಡುತ್ತಾರೆ ಎನ್ನುವುದು ಕುತೂಹಲಕರವೇ. ಅಂಗರಚನ ಶಾಸ್ತ್ರದನ್ವಯ ಆಧುನಿಕ ಮಾನವ ಹತ್ತು ಲಕ್ಷ ವರ್ಷಗಳ ಹಿಂದೆ ಬದುಕಿದ್ದ ಎಂದು ಭಾವಿಸಿದರೂ ಅಂದರೆ ಡ್ರಯೋಪಿತಿಕಸ್ ನಿರ್ವಂಶವಾಗಿ ೪೦ ಲಕ್ಷ ವರ್ಷಗಳು ಕಳೆದ ಮೇಲೆ ಎಂದು ಒಪ್ಪಿಕೊಂಡರೂ ಇದಿಷ್ಟೇ ಸಾಕು ಮಾನವ ವಿಕಾಸದ ಬಗ್ಗೆ ಅವೆಷ್ಟು ಗೊಂದಲಗಳಿವೆ ಎಂದು ಸಾರಲು. ಡಾರ್ವಿನ್ ‘ಜೀವಿ ಸಂಕುಲಗಳ ಉಗಮ’ ಕೃತಿಯನ್ನು ಬರೆದ ಮೇಲೆ ಅನೇಕ ಹೊಸ ಸಾಕ್ಷಿಗಳು ದೊರೆಯುತ್ತಿವೆ. ಆದರೆ ವಿಜ್ಞಾನಿಗಳ ಅವಜ್ಞೆ ವಾಸ್ತವತೆಯನ್ನು ಮರೆಮಾಡುತ್ತಲೇ ಬಂದಿದೆ. ಸಿಕ್ಕ ಅಪೂರ್ವ ಸಾಕ್ಷಿಗಳು ತಮ್ಮ ಲೆಕ್ಕಾಚಾರಕ್ಕೆ ತಾಳೆಯಾಗದಿದ್ದರೆ ಅವನ್ನು ಆಚೆಗೆ ತಳ್ಳಿಬಿಡುವುದೇ ಒಂದು ವಂಚನೆ. ಬಹುಶಃ ಮನುಷ್ಯನ ಸ್ವಭಾವವೇ ಇದು ಎಂದು ಕಾಣುತ್ತದೆ. ಸರಳ ಸತ್ಯ ಜಾಹೀರು ಮಾಡಲು ಪ್ರಾಗ್ ಮಾನವ ಶಾಸ್ತ್ರಜ್ಞರು ಎಂಥೆಂಥವೋ ಜಟಿಲ ವಿಜ್ಞಾನ ಅನುಸರಿಸುತ್ತಾರೆ. ಇಷ್ಟಾದರೂ ಸಮಸ್ಯೆಗೆ ಪೂರ್ಣ ಪರಿಹಾರ ದೊರೆಯುತ್ತದೆಯೆ? ಎಂದಿಗೂ ಇಲ್ಲ, ಅದು ಮತ್ತಷ್ಟು ಜಟಿಲವಾಗುತ್ತಲೇ ಹೋಗುತ್ತದೆ. ಹಾಗಾದರೆ ಸತ್ಯಾನ್ವೇಷಣೆಗೆ ಬೇರೆ ಮಾರ್ಗವಿಲ್ಲವೆ? ಇದೆ. ಅದು ಬೇರೆ ಬೇರೆ ವರದಿಗಳನ್ನು ನಿಷ್ಪಕ್ಷಪಾತವಾಗಿ ಬಗೆಗಣ್ಣಿನಿಂದ ನೋಡಿ ತೌಲನಿಕವಾಗಿ ಅಧ್ಯಯನ ಮಾಡುವುದರಿಂದ ಸಾಧ್ಯ. ಅಲ್ಲಿನ ಸಾಕ್ಷಿಗಳ ಸಾತತ್ಯವನ್ನು ಪೂರ್ವಗ್ರಹವಿಲ್ಲದೆ ನೋಡುವುದು.
ಪ್ರಾಣಿಗಳ ಮೂಳೆಗಳನ್ನು ಕತ್ತರಿಸಿರುವ ಅನೇಕ ಮಾದರಿಗಳು ಮಾನವನ ಇರುವಿಗೆ ಸಾಕ್ಷಿಯಾಗಿವೆ. ೧೯ನೇ ಶತಮಾನದಿಂದ ಮೊದಲುಗೊಂಡು ಸತತವಾಗಿ ನಡೆಸಿದ ಸಂಶೋಧನೆ ಈ ನಿಟ್ಟಿನಲ್ಲಿ ಹೊಸ ಬೆಳಕನ್ನು ನೀಡಿತು. ಡಾರ್ವಿನ್ನನ ‘ಜೀವಿ ಸಂಕುಲಗಳ ಉಗಮ‘ ಕೃತಿ ಹೊರಬಂದ ನಂತರ ಅನೇಕ ವಿಜ್ಞಾನಿಗಳು ಇಂಥ ಹೊಸ ಪರಿಕರಗಳನ್ನು ಅರಸುತ್ತಾ ಹೊರಟರು. ಪ್ಲಿಯೋಸೀನ್, ಮಯೋಸೀನ್ ಮತ್ತು ಅದಕ್ಕೂ ಹಿಂದಿನ ಇಂಥ ಸಾಕ್ಷಿಗಳು ಏನು ಹೇಳುತ್ತವೆ - ವಿಜ್ಞಾನಿಗಳ ಬಣ ಹೇಳುವುದೇ ಬೇರೆ. ಮಾಂಸಾಹಾರಿ ಪ್ರಾಣಿಗಳು - ಷಾರ್ಕ್ ಮುಂತಾದವು ಈ ಮೂಳೆಗಳನ್ನು ಕತ್ತರಿಸಿರುವ ಸಾಧ್ಯತೆ ಇದೆ. ಭೂಮಿಯಲ್ಲಾಗುವ ಅನೇಕ ಬಗೆಯ ಚಲನೆಗಳು ಮೂಳೆಗಳ ಮೇಲೆ ಸಾಕಷ್ಟು ಪರಿಣಾಮ ಬೀರಿ ಎಂಥೆಂಥವೋ ಗುರುತುಗಳನ್ನು ಮೂಡಿಸುತ್ತವೆ ಎನ್ನುತ್ತಾರೆ ವಿಜ್ಞಾನಿಗಳು. ಆದರೆ ನಿಜಸ್ಥಿತಿ ಏನು? ಇಂಥ ಕತ್ತರಿಸಿದ ಮೂಳೆಗಳು ಸಿಕ್ಕಿರುವೆಡೆ ನಿಸ್ಸಂಶಯವಾದ ಕಲ್ಲಿನ ಆಯುಧಗಳೂ ಸಿಕ್ಕಿವೆ. ಸೂಕ್ಷ್ಮದರ್ಶಕದಲ್ಲಿ ನೋಡಿದಾಗ ಇವು ಮಾನವಕೃತವೆಂದು ದೃಢಪಟ್ಟಿವೆ. ಹಾಗಿದ್ದಲ್ಲಿ ಮಾನವ ೨೫ ದಶಲಕ್ಷ ವರ್ಷಗಳ ಹಿಂದೆ ಮುಂದುವರಿದಿದ್ದ ಎನ್ನುವ ಈ ಸಾಕ್ಷಿಗಳನ್ನು ವಿಜ್ಞಾನಿಗಳು ಏಕೆ ಕಡೆಗಣಿಸುತ್ತಾರೆ. ಫ್ರಾನ್ಸಿನ ಸೇಂಟ್ ಪ್ರಸ್ಟ್, ಕೆನಡದ ಓಲ್ಡ್ ಕ್ರೋ ನದಿ, ಕ್ಯಾಲಿಫೋರ್ನಿಯದ ಅಂಝ - ಬೊರೆಗೋ ಮರುಭೂಮಿ, ಇಟಲಿಯ ಅರ್ನೋ ನದಿದಡ, ಗ್ರೀಸ್‌ನ ಪಿಕೆರ್ಮಿ, ಟರ್ಕಿಯ ಡಾರ್ಡನೆಲಿಸ್ - ಈ ಎಲ್ಲ ಕಡೆಯೂ ಈ ಬಗೆಯ ಸಾಕ್ಷಿಗಳೇ ದೊರೆತಿವೆ ಎಂದರೆ ವಿಜ್ಞಾನಿಗಳ ನಿರ್ಲಕ್ಷ್ಯ ಎದ್ದುಕಾಣುತ್ತವೆ. ಏಕೆಂದರೆ ಮಧ್ಯ ಪ್ಲಿಯೋಸೀನ್ ಕಾಲದಲ್ಲಿ ಮನುಷ್ಯ ಇರಲಿಲ್ಲವೆಂದೇ ಪೂರ್ವಗ್ರಹವಾಗಿ ತೀರ್ಮಾನಿಸಿದರೆ ಸಾಕ್ಷಿಗಳ ಹುಡುಕಾಟವೆಲ್ಲಿರುತ್ತದೆ? ದಿವ್ಯ ನಿರ್ಲಕ್ಷ್ಯ ಹೇಗೆ ಒಂದು ಜ್ಞಾನ ಸಂಪತ್ತನ್ನೇ ಕಡೆಗಣಿಸಿಬಿಡುತ್ತದೆ!
ಕ್ರೆಮೋ ಮತ್ತು ಥಾಮ್ಪ್‌ಸನ್ ಉಲ್ಲೇಖಿಸಿರುವ ಮತ್ತೊಂದು ಪ್ರಸಂಗ ನಮ್ಮ ಗ್ರಹಿಕೆಯನ್ನೇ ಗೇಲಿಮಾಡುತ್ತದೆ. ಅಷ್ಟೇ ಅಲ್ಲ, ಗಾಬರಿ ಹುಟ್ಟಿಸುತ್ತದೆ. ಇಲ್ಲಿ ಉಲ್ಲೇಖಿಸುವ ಪ್ರಸಂಗದ ಸತ್ಯಾಸತ್ಯತೆಯನ್ನು ಅನೇಕ ಮಂದಿ ವಿಜ್ಞಾನಿಗಳು ಪ್ರಶ್ನಿಸಿದ್ದಾರೆ. ಅದು ಹೀಗಿದೆ : ಇಲಿನಾಯ್ಸ್‌ನ ಮಾರಿಜನ್‌ವಿಲೇ ಎನ್ನುವ ಬಳಿ ಕಾರ್ಬಾನಿಫೆರಸ್ ಯುಗದ ಅಂದರೆ ೩೬೦ ದಶಲಕ್ಷ ವರ್ಷ ಹಿಂದಿನ ಕಲ್ಲಿದ್ದಲಿನಲ್ಲಿ ಚಿನ್ನದ ಸರ ದೊರೆತ ಪ್ರಸಂಗ.
೧೮೯೧ರ ಜುಲೈ ೧೧, ಮಾರಿಜನ್‌ವಿಲೇ ಟೈಮ್ಸ್ ಪತ್ರಿಕೆ ಪ್ರಕಟಿಸಿದ ವರದಿ : ಶ್ರೀಮತಿ ಕಲ್ ಎಂಬಾಕೆ ವಿಸ್ಮಯಕಾರಿ ವಸ್ತುವೊಂದನ್ನು ಬೆಳಕಿಗೆ ತಂದಿದ್ದಳು. ಒಲೆಗೆ ಕೆಂಡ ಮಾಡಲು ಒಂದು ತುಂಡು ಕಲ್ಲಿದ್ದಲನ್ನು ಹಾಕಬೇಕೆಂದು ಒಡೆದಾಗ ಅದು ಕೈ ಜಾರಿ ಬಿದ್ದುಹೋಯಿತು. ಅತ್ಯಂತ ಕುಸುರಿ ಕೆಲಸ ಮಾಡಿದ, ಹತ್ತು ಅಂಗುಲ ಉದ್ದದ ಚಿನ್ನದ ಸರವೊಂದು ಧೊಪ್ಪನೆ ಅದರೊಳಗಿಂದ ಬಿತ್ತು. ಬಹುಶಃ ಕಲ್ಲಿದ್ದಲು ಗಣಿ ಕಾರ್ಮಿಕರ ಅಚಾತುರ್ಯದಿಂದ ಇದನ್ನು ಬೀಳೀಸಕೊಂಡಿರಬಹುದೆ? ಆಕೆ ಮೊದಲು ಯೋಚನೆ ಮಾಡಿದ್ದು ಹೀಗೆ. ಆದರೆ ಸರ ಇದ್ದ ಭಾಗದಲ್ಲಷ್ಟೇ ಕಲ್ಲಿದ್ದಲು ಸೀಳಿಕೊಂಡಿತ್ತು. ಅದರ ಅರ್ಥ ಬೇಕೆಂದೇ ಯಾರೂ ಅದರಲ್ಲಿ ಹಾಕಿರಲಿಲ್ಲ. ಮಧ್ಯದ ಭಾಗ ಮಾತ್ರ ಕಿತ್ತುಬಂದಿತ್ತು. ಸರದ ಎರಡೂ ಕೊನೆಗಳು ಕಲ್ಲಿದ್ದಲಿಗೇ ಅಂಟಿಕೊಂಡಿದ್ದವು. ಇಲಿನಾಯ್ಸ್ ಸ್ಟೇಟ್ ಜಿಯಾಲಜಿಕಲ್ ಸರ್ವೆ ಈ ಕಲ್ಲಿದ್ದಲು ೨೬೦ - ೩೨೦ ಮಿಲಿನಯ್ ವರ್ಷ ಹಳೆಯದೆಂದು ದೃಢಪಡಿಸಿತು. ಸಾಂಸ್ಕೃತಿಕವಾಗಿ ಲೋಹಜ್ಞಾನವುಳ್ಳ ಮುಂದುವರಿದ ಜನಾಂಗ ಉತ್ತರ ಅಮೆರಿಕದಲ್ಲಿ ಆ ಹೊತ್ತಿಗೆ ಇದ್ದಿತು ಎನ್ನಲು ಇದಕ್ಕಿಂತ ಸಾಕ್ಷಿ ಬೇಕೆ ಎನ್ನುತ್ತಾರೆ ಈ ಲೇಖಕರು.
ನಿವೇಡಾದ ಶಿಲೆಯಲಿ ಬೂಟಿನ ಪಾದದ ಗುರುತು
೧೯೨೨ರ ಅಕ್ಟೋಬರ್ ೮, ನ್ಯೂಯಾರ್ಕ್ ಸಂಡೇ ಸಾಪ್ತಾಹಿಕ ವಿಭಾಗದ ಅಮೆರಿಕನ್ ವೀಕ್ಲಿ ಎಂಬುದರಲ್ಲಿ ಒಂದು ಪ್ರಸಂಗ ವರದಿಯಾಗಿತ್ತು. ಅದರ ಶೀರ್ಷಿಕೆ ‘೫೦ ಲಕ್ಷ ವರ್ಷಗಳ ಹಿಂದಿನ ಶಿಲೆಯಲ್ಲಿ ಬೂಟಿನ ಪಾದದ ಗುರುತು’.
ಕೆಲವು ದಿನಗಳ ಹಿಂದೆ ನಿವೇಡದಲ್ಲಿ ಜೀವ್ಯವಶೇಷ ಸಂಗ್ರಹಮಾಡುತ್ತಿದ್ದ ಟೀ. ರೀಡ್ ಎಂಬ ಖ್ಯಾತ ಭೂವಿಜ್ಞಾನಿಯ ಕಾಲಬಳಿ ವಿಚಿತ್ರವಾದ ಗುರುತುಳ್ಳ ಕಲ್ಲು ಕಾಣಿಸಿತು. ಶಿಲೆಯ ಮುಕ್ಕಾಲು ಭಾಗ ಮಾನವ ಪಾದದ ಗುರುತು; ಅಚ್ಚುಹೊತ್ತಿದಂತೆ. ಕಣ್ಣಲ್ಲಿ ಕಣ್ಣಿಟ್ಟು ನೋಡಿದಾಗಲೂ ಅದು ಸ್ಪಷ್ಟವಾಯಿತು. ಪಾದದ ಗುರುತಿನಲ್ಲಿ ಹಿಮ್ಮಡಿಯ ಭಾಗವಿತ್ತು. ಬೆರಳು ಕಡೆಯ ಭಾಗ ಗೈರಾಗಿತ್ತು. ಅಷ್ಟೇ ಅಲ್ಲ, ಗುರುತಿನ ಅಂಚಿನಲ್ಲಿ ಭದ್ರವಾಗಿ ಹೆಣೆದಿದ್ದ ದಾರದ ಗುರುತೂ ಇತ್ತು. ಆ ಶಿಲೆಯ ವಯಸ್ಸು ೫೦ ಕ್ಷ ವರ್ಷ. ರೀಡ್ ಇಡೀ ಮಾದರಿಯನ್ನೇ ನ್ಯೂಯಾರ್ಕಿಗೆ ಎತ್ತುಕೊಂಡು ಬಂದ. ಕೊಲಂಬಿಯ ವಿಶ್ವವಿದ್ಯಾಲಯದ ಭೂವಿಜ್ಞಾನದ ಅಧ್ಯಾಪಕರಿಗೆ ತೋರಿಸಿದ. ಜೊತೆಗೆ ಅಮೆರಿಕನ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿ ಪರಿಣತರು ಕೂಲಂಕಷವಾಗಿ ಪರೀಕ್ಷಿಸಿದರು. ಅದರಲ್ಲೊಬ್ಬ ಪರಿಣತ ‘ನಿಸರ್ಗ ಎಷ್ಟರಮಟ್ಟಿಗೆ ಅನುಕರಣೆ ತೋರಿಸುತ್ತದೆ ಎಂಬುದಕ್ಕೆ ಭವ್ಯ ಸಾಕ್ಷಿ ಇದು. ಇದು ಮನುಷ್ಯಕೃತ ಅಲ್ಲ’ ಎಂದು ಹೇಳಿದ. ರೀಡ್ ಹಠವಾದಿಯಂತೆ ಮತ್ತಷ್ಟು ಶೋಧಕ್ಕೆ ಹೊರಟ. ಸೂಕ್ಷ್ಮ ಛಾಯಾಚಿತ್ರ ತೆಗಿಸಿದ. ವಿಶ್ಲೇಷಣೆ ಮಾಡಿಸಿದ. ಅದು ಮನುಷ್ಯಕೃತವೆಂದು ಖಚಿತಪಡಿಸಿದ. ಇಂಥ ಸಾಕ್ಷಿಗಳನ್ನೇಕೆ ವಿಜ್ಞಾನಿಗಳು ಅಲ್ಲಗಳೆಯುತ್ತಾರೆ. ಹೀಗೆ ಕ್ರೆಮೋ ಮತ್ತು ಥಾಮ್ಪ್‌ಸನ್ ತಮ್ಮ ವಾದವನ್ನು ಮಂಡಿಸಲು ನೂರಾರು ಪ್ರಸಂಗಗಳನ್ನು ಉಲ್ಲೇಖಿಸಿದ್ದಾರೆ. ಎಲ್ಲಿ ತಾರತಮ್ಯ ಇದೆ ಎನ್ನಿಸುತ್ತದೆಯೋ ಅಂಥವುಗಳ ಬಗ್ಗೆ ಮತ್ತಷ್ಟು ವಿವರಗಳನ್ನು ನೀಡುತ್ತಾರೆ. ಪಿಲ್ಟ್ ಡೌನ್ ಮಾನವ ಎಂದೇ ಕುಖ್ಯಾತವಾದ ಮೋಸದ ಪ್ರಸಂಗವನ್ನೂ ತಮ್ಮ ವಾದಕ್ಕೆ ಬಳಸಿಕೊಳ್ಳುತ್ತಾರೆ. ಮನುಷ್ಯನ ತಲೆಬುರುಡೆ ಆದರೆ ಏಪ್‌ಗಿರುವಂತೆ ದವಡೆ; ಹಿಂದಿನ ಏಪ್ ತರಹದ ಜೀವಿಗೂ ಆಧುನಿಕ ಹೋಮೋಸೇಪಿಯನ್‌ಗೂ ನಡುವಿನ ಕೊಂಡಿಯೆಂದೇ ಇದನ್ನು ಕೊಂಡಾಡಲಾಗಿತ್ತು. ೧೯೦೮-೧೧ರ ನಡುವೆ ಚಾರ್ಲ್ಸ್ ಡಾವ್‌ಸನ್ ಎಂಬಾತ ಬೇಕೆಂದೇ ಕೈಚಳಕದಿಂದ ಇಂಥ ಒಂದು ಮಾದರಿಯನ್ನು ಬಚ್ಚಿಟ್ಟು ಅದನ್ನು ಬಗೆದು ನಂಬಿಸಿದ ಪರಿ ಮುಂದೆ ದೊಡ್ಡ ಹಗರಣವೆಂದೇ ಖ್ಯಾತವಾಯಿತು. ಆ ಹಗರಣದ ವಿವರಗಳ ಎಳೆಗಳನ್ನು ಚಾಚೂ ಬಿಡದ ಹಾಗೆ ದಾಖಲಿಸಿರುವ ಈ ಲೇಖಕರು ಹೇಳುತ್ತಾರೆ ‘ಇಡೀ ಆ ಮೋಸದಾಟವನ್ನು ಬದಿಗಿಟ್ಟು ಒಂದು ಅಂಶವನ್ನು ನಾವು ಸ್ಪಷ್ಟವಾಗಿ ಮನಗಾಣಬೇಕಾಗಿದೆ. ಯಾವ ಜಾಗದಲ್ಲಿ ಪಿಲ್ಟ್ ಡೌನ್ ಮಾನವನ ಬುರುಡೆಯನ್ನು ಉತ್ಖನನ ಮಾಡಲಾಯಿತೋ ಅಲ್ಲೇ ನಿಜವಾದ ಮಾನವ ಬುರುಡೆಯೂ ಸಿಕ್ಕಿದೆ. ಅದು ಮಧ್ಯ ಪ್ಲಿಯೋಸೀನ್ ಕಾಲದ ಶಿಲೆಯಲ್ಲಿ - ೨೦ ಲಕ್ಷ ವರ್ಷಗಳ ಹಿಂದಿನ ತಲೆ ಬುರುಡೆ ಅದು’. ಈ ಬಗೆಯ ಸಾಕ್ಷಿಗಳನ್ನು ವೈಜ್ಞಾನಿಕವಾಗಿ ಕ್ರೋಡೀಕರಿಸಿ ಮಾನವ ವಿಕಾಸದ ಇತಿಹಾಸವನ್ನು ಮತ್ತಷ್ಟು ಹಿಂದಕ್ಕೆ ಒಯ್ಯಲು ಏಕೆ ಮಾನವ ಶಾಸ್ತ್ರಜ್ಞರಿಗೆ ಹಿಂಜರಿಕೆ?
‘ದಿ ಹಿಡನ್ ಹಿಸ್ಟರಿ ಆಫ್ ದಿ ಹ್ಯೂಮೆನ್ ರೇಸ್’ ಕೃತಿಯಲ್ಲಿ ಕಂಡುಬರುವ ಮಾಹಿತಿಗಳ ಮಹಾಪೂರ ಹೆಸರಿಸಲೇ ಬೇಕಾದ್ದು. ಈಗಿನ ಸಿದ್ಧಾಂತಗಳನ್ನು ಅಲ್ಲಗಳೆಯುವ ನೂರಾರು ಪ್ರಸಂಗಗಳನ್ನು ಒಂದೆಡೆ ರಾಶಿ ಮಾಡಿರುವುದೇ ಈ ಕೃತಿಯ ಸೊಬಗು. ಇಂಥ ಸಾಕ್ಷಿಗಳನ್ನೆಲ್ಲ ಲೇಖಕರು ವೈಪರೀತ್ಯಗಳು ಎಂದು ವರ್ಗೀಕರಿಸುತ್ತಾರೆ. ಕೃತಿಯ ಕೊನೆಯಲ್ಲಿ ನೀಡಿರುವ ೨೦ ಪುಟಗಳಷ್ಟು ಸಾಕ್ಷಿಗಳನ್ನು ಗಮನಿಸಿದರೆ ಈ ವೈಪರೀತ್ಯದ ಪರಿಮಾಣ ಅರ್ಥವಾದೀತು. ೨೮೦೦ ಮಿಲಿಯನ್ ವರ್ಷಗಳ ಹಿಂದಿನ ಶಿಲೆಯಲ್ಲಿ ದಕ್ಷಿಣ ಆಫ್ರಿಕದಲ್ಲಿ ೧೯೮೨ರಲ್ಲಿ ಪತ್ತೆಹಚ್ಚಿತು ಎನ್ನಲಾದ ಲೋಹದಿಂದ ತಯಾರಿಸಿದ ಭರ್ಜಿಯ ಉಲ್ಲೇಖವಿದೆ. ೧೮೫೨ರಲ್ಲಿ ಸೈಂಟಿಫಿಕ್ ಅಮೆರಿಕನ್ ಪತ್ರಿಕೆಯಲ್ಲಿ ೬೦೦ ಮಿಲಿಯನ್ ವರ್ಷಗಳ ಹಿಂದಿನ ಶಿಲೆಯಲ್ಲಿ ಲೋಹದ ಹೂದಾನಿ ಪತ್ತೆಯಾದುದರ ಉಲ್ಲೇಖವಿದೆ. ಈ ಜಗತ್ತಿನಲ್ಲಿ ಮತ್ಸ್ಯ ಸಾಮ್ರಾಜ್ಯವೆನ್ನಿಸಿದ ೩೬೦ - ೪೦೮ ದಶಲಕ್ಷ ವರ್ಷಗಳ ಹಿಂದಿನ ಡಿವೋನಿಯನ್ ಕಾಲದ ಕಲ್ಲುಗಣಿಯೊಂದರಿಂದ ಕಬ್ಬಿಣದ ಮೊಳೆಯನ್ನು ೧೮೪೪ರಲ್ಲೇ ಸಂಗ್ರಹಿಸಿದ ಬಗ್ಗೆ ಮತ್ತೊಂದು ಉಲ್ಲೇಖವಿದೆ. ೨೮೦ ರಿಂದ ೩೨೦ ದಶಲಕ್ಷ ವರ್ಷಗಳ ಶಿಲೆಯಲ್ಲಿ ಅಕ್ಲಾಹೋಮ್‌ನಲ್ಲಿ ಪತ್ತೆಹಚ್ಚಿದ ಬೆಳ್ಳಿವಸ್ತುವಿನ ಬಗ್ಗೆ ಉಲ್ಲೇಖವಿದೆ. ಪೆಡಂಭೂತಗಳ ಸುವರ್ಣಕಾಲ ಎನ್ನಲಾದ ೫೫ ದಶಲಕ್ಷ ವರ್ಷಗಳ ಹಿಂದಿನ ಶಿಲೆಗಳಲ್ಲಿ ಕಂಡುಬಂದ ಶಿಲಾಯುಧಗಳ ಬಗ್ಗೆ ವರದಿ ಇದೆ. ಹೀಗೆ ಇಡೀ ಕೃತಿಯಲ್ಲಿ ಬೇರೆ ಬೇರೆ ಮೂಲದಿಂದ ದೊರೆತ ಮಾಹಿತಿಗಳನ್ನು ಅತ್ಯಂತ ಕ್ರಮಬದ್ಧವಾಗಿ ದಾಖಲೆ ಮಾಡಲಾಗಿದೆ. ಶುದ್ಧ ವೈಜ್ಞಾನಿಕ ತಿಳಿವಿನ ಹಿನ್ನೆಲೆ ಇರುವವರಿಗೆ ಈ ಮಾಹಿತಿ ಗೊಂದಲ ಉಂಟುಮಾಡುವುದಂತೂ ನಿಜ. ಲಾಲ್‌ಬಾಗ್ ಕಲ್ಲನ್ನು ಪರೀಕ್ಷೆ ಮಾಡುತ್ತಿರುವಾಗ ದಿಢೀರ್ ಎಂದು ಹುಲಿಯ ಮೂಳೆಗಳು ಅದರಲ್ಲಿ ಅಂಟಿಕೊಂಡು ಸಿಕ್ಕಿದರೆ ಪಡುವ ಗಾಬರಿಯಂತೆ ಈ ಸಾಕ್ಷಿಗಳು.
ಕ್ರೆಮೋ ಮತ್ತು ಥಾಮ್ಪ್‌ಸನ್ ಅವರ ಇರಾದೆಯಾದರೂ ಏನು? ಎನನ್ನೂ ಒತ್ತಿಹೇಳಲು ಅವರು ಬಯಸಿದ್ದಾರೆ ತಮ್ಮ ಈ ವಿವಾದಿತ ಪುಸ್ತಕದಲ್ಲಿ? ಅವರ ಮಾತಿನಲ್ಲೇ : ‘ಬಹು ಪ್ರಾಚೀನ ಕಾಲದಲ್ಲಷ್ಟೇ ಅಲ್ಲ, ಈಗಲೂ ನಮ್ಮ ಎದುರಿಗೇ ಇರುವ ಸತ್ಯವೊಂದನ್ನು ಮನಗಾಣಬಹುದು. ಆದಿಮ ಮಾನವರೂಪಿ ಜೀವಿ(ಹೋಮಿನಿಡ್) ಹಾಗೂ ಅಂಗರಚನೆಯ ದೃಷ್ಟಿಯಿಂದ ಈಗಿನ ಆಧುನಿಕ ಮಾನವ ಸಹಬಾಳ್ವೆ ಮಾಡಿದ್ದರು ಎಂಬುದಕ್ಕೆ ಇಲ್ಲಿನ ಸಾಕ್ಷಿಗಳೇ ಸಾಕು. ಜೈಂಗಾಟೋಪಿತಿಕಸ್, ಅಸ್ಟ್ರಲೋಪಿತಿಕಸ್, ಹೋಮೋಎರಕ್ಟಸ್ ಮತ್ತು ನಿಯಾಂಡ್ರತಲ್ ಮಾನವ ಈಗಲೂ ದಟ್ಟ ಅರಣ್ಯಗಳಲ್ಲಿ ಭೂಮಿಯ ಬೇರೆ ಬೇರೆ ಭಾಗದಲ್ಲಿ ಬಾಳಿದ್ದಾರೆ. ಉತ್ತರ ಅಮೆರಿಕದಲ್ಲಿ ಈ ಬಗೆಯ ಪ್ರಾಣಿಗಳನ್ನು ಸ್ಯಾಸ್ಕ್ವಾಚ್ ಎಂದರೆ ಮಧ್ಯ ಏಷ್ಯದಲ್ಲಿ ಅವನ್ನು ಅಲ್ಮಾಸ್ ಎನ್ನುತ್ತಾರೆ. ಆಫ್ರಿಕ, ಚೀನ, ಆಗ್ನೇಯ ಏಷ್ಯ, ಮಧ್ಯ ಅಮೆರಿಕ, ದಕ್ಷಿಣ ಅಮೆರಿಕ ಇಲ್ಲೂ ಈ ಬಗೆಯ ಜೀವಿಗಳಿಗೆ ಬೇರೆ ಬೇರೆ ಹೆಸರಿದೆ. ಕಾಡು ಮನುಷ್ಯ ಎಂಬ ಹೆಸರಿನಿಂದ ಇವನ್ನೆಲ್ಲ ಕೆಲವು ತಜ್ಞರು ಗುರುತಿಸುತ್ತಾರೆ. ಈಗಿನ ವಿಜ್ಞಾನ ಹೇಳುವಂತೆ ಮನುಷ್ಯನ ಅವತಾರ ಭೂ ಇತಿಹಾಸದಲ್ಲಿ ತೀರ ಇತ್ತೀಚಿನ ವಿದ್ಯಮಾನವಲ್ಲ; ಬಹು ಪುರಾತನವಾದ್ದು. ಭಾರತದ ಪುರಾಣಗಳು ಹೇಳುವಂತೆ ಏಪ್ ತರಹದ ಅಥವಾ ಮನುಷ್ಯ ಚಹರೆಯ ಕಪಿಗಳು ಮನುಷ್ಯರೊಡನೆ ಸಹಬಾಳ್ವೆ ಮಾಡಿರುವುದೂ ಉಂಟು. ಇವಕ್ಕೆ ವೈಜ್ಞಾನಿಕ ಆಧಾರ ಒದಗಿಸುವುದು ನಮ್ಮ ಈ ಪ್ರಯತ್ನದ ಗುರಿ.’
ಬೌದ್ಧಿಕ ಜಗತ್ತು ಇವರ ಈ ಪ್ರಯತ್ನವನ್ನು ಹೇಗೆ ಸ್ವೀಕರಿಸಿದೆ. ಈ ಹಂತದಲ್ಲಿ ಅದನ್ನು ಕಾಣಿಸುವುದೂ ಇಲ್ಲಿ ಅತ್ಯವಶ್ಯ.
ಬಹುಮಂದಿ ವಿದ್ವಾಂಸರು ಈ ಕೃತಿಯನ್ನು ಕಣ್ಣು ತೆರೆಸುವ ಕೃತಿ ಎಂದಿದ್ದಾರೆ. ವಿಕಾಸವಾದದ ವಿರುದ್ಧ ಅವೆಷ್ಟೋ ಬಗೆಯ ಪುಸ್ತಕಗಳು ಬಂದಿವೆ. ವಿಕಾಸವಾದಕ್ಕೆ ತಿರುಗಿಬಿದ್ದ ಸೃಷ್ಟಿವಾದಿಗಳ ವಿಚಾರಸರಣಿಯೇ ಬೇರೆ. ಇಲ್ಲಿನ ಪ್ರತಿಪಾದನೆಯಾಗಲಿ, ಶೈಲಿಯಾಗಲಿ, ಲೇಖಕರು ಮಾಹಿತಿಯನ್ನು ಕಲೆಹಾಕಿ ಅದನ್ನು ಒಪ್ಪಿಸಿರುವ ರೀತಿಯಾಗಲಿ ಅನನ್ಯ. ಮೂಲವಿಜ್ಞಾನ, ಪುರಾತತ್ತ್ವ ಮಾಹಿತಿಗಳನ್ನು ವಿಶ್ಲೇಷಿಸುತ್ತಲೇ ತಮ್ಮ ವಾದ ಸರಣಿಯನ್ನು ಮಂಡಿಸುತ್ತಾರೆ. ವಿವಾದಿತ ಅಂಶವನ್ನು ಇಷ್ಟೊಂದು ಪರಿಪಕ್ವವಾಗಿ ನಿಭಾಯಿಸಿರುವುದು ವಿಸ್ಮಯವೇ ಸರಿ. ಯಾವುದಕ್ಕಾದರೂ ಈ ಬಗೆಯ ಮಾಹಿತಿಗಳನ್ನು ಬಳಸಿಕೊಳ್ಳಬಹುದು. ಇಲ್ಲಿ ಎತ್ತಿರುವ ಮೂಲ ಪ್ರಶ್ನೆಗಳು ಮತ್ತು ಸಾಕ್ಷಿಗಳ ವಿಚಾರ ಬಂದಾಗ ಇನ್ನಾದರೂ ಅಂಥವನ್ನು ಕಡೆಗಣಿಸುವುದು ಬೇಡ ಎಂದು ಬರೆದಿದ್ದಾನೆ ಸ್ಕಾಟ್‌ಲೆಂಡಿನ ರಾಯಲ್ ಮ್ಯೂಸಿಯಂನ ನೈಸರ್ಗಿಕ ಚರಿತ್ರೆಯ ಪರಿಣತ.
ಮಾನವ ಚರಿತ್ರೆಯನ್ನು ಒಂದು ಬೃಹತ್ ಮ್ಯೂಸಿಯಂ ಎಂದು ಭಾವಿಸುವುದಾದರೆ ಇಡೀ ಕಟ್ಟಡವೇ ಜ್ಞಾನದಿಂದ ತುಂಬಿದೆ ಎನ್ನುವುದಾದರೆ ಈಗಿನ ಸ್ಥಿತಿ ಹೇಗಿದೆಯೆಂದರೆ ಇಂಥ ಮ್ಯೂಸಿಯಂನ ಕೊಠಡಿಗಳ ಬಾಗಿಲಿಗೆ ಬೀಗ ಜಡಿದಿದ್ದಾರೆ. ವಿಜ್ಞಾನಿಗಳು ಸ್ವಯಂಪ್ರೇರಿತರಾಗಿ ಆ ಸಾಕ್ಷಿಗಳನ್ನು ತೆರೆದಿಡಬೇಕಾಗಿತ್ತು. ಬದಲು ಬೀಗ ಹಾಕುವುದರಲ್ಲೇ ಕೃತಕೃತ್ಯರಾಗಿರುವುದು ಇಂದಿನ ದುರಂತ. ತಾವು ನಂಬಿದ ಸಾಮಾನ್ಯ ನಂಬಿಕೆಗಳ ವಿರುದ್ಧ ಯಾರು ದನಿ ಎತ್ತಿದರೂ ಅವರಿಗಾಗದು. ಕ್ರೆಮೋ ಮತ್ತು ಥಾಮ್ಪ್‌ಸನ್ ಜ್ಞಾನಭಂಡಾರದ ಕೊಠಡಿಗಳಿಗೆ ಹಾಕಿದ್ದ ಬೀಗಗಳನ್ನು ಒಡೆಯುವ ಧೈರ್ಯ ತೋರಿದ್ದಾರೆ. ಇದರ ಲಾಭವೆಂದರೆ ವಿಜ್ಞಾನಿಗಳಿಗಷ್ಟೇ ಅಲ್ಲ, ಈಗ ಶ್ರೀಸಾಮಾನ್ಯನಿಗೂ ಜ್ಞಾನದ ಕೊಠಡಿಗೆ ಪ್ರವೇಶ ದೊರೆತಂತಾಗಿದೆ. ‘ದಿ ಹಿಡನ್ ಹಿಸ್ಟರಿ ಆಫ್ ದಿ ಹ್ಯೂಮರ್ ರೇಸ್’ ಕೃತಿ ವಿಜ್ಞಾನಕ್ಕೆ ಆಹ್ವಾನವನ್ನು ನೀಡಿ ಹೊಸ ದಿಗಂತವನ್ನು ಪ್ರವೇಶಿಸಿ ಎಂದು ಬೊಟ್ಟುಮಾಡಿ ತೋರಿಸುತ್ತಿದೆ. ಮನುಷ್ಯನ ಉಗಮದ ಬಗ್ಗೆ ಪೂರ್ವಗ್ರಹವನ್ನು ತಿದ್ದಿಕೊಳ್ಳಿ ಎನ್ನುತ್ತದೆ ಆಫ್ರಿಕದ ‘ಪ ದ ಮ್ಯಾಗಜೈನ್’. ಇಂಥ ಅಭಿಪ್ರಾಯಗಳು ನೂರಾರಿವೆ. ಇದು ವಿಜ್ಞಾನಿಗಳನ್ನು ವಿಶೇಷವಾಗಿ ಮಾನವ ಶಾಸ್ತ್ರಜ್ಞರನ್ನು ಕೆಣಕಿದೆ, ಕೆರಳಿಸಿದೆ ಕೂಡ. ಆ ಕ್ಷೇತ್ರದಿಂದ ಟೀಕೆಗಳ ಮಹಾಪೂರವೇ ಹರಿದು ಬಂದದ್ದೂ ಉಂಟು. ಅದಕ್ಕೆ ಉತ್ತರವಾಗಿ ಇದೇ ಲೇಖಕರು ‘ಫರ್‌ಬಿಡನ್ ಆರ್ಕಿಯಾಲಜೀಸ್ ಇಂಪ್ಯಾಕ್ಟ್’ ಎನ್ನುವ ಇನ್ನೊಂದು ಹೊತ್ತಿಗೆಯನ್ನೇ ಹೊರತಂದಿದ್ದಾರೆ. ವಿಜ್ಞಾನಿಗಳ ಬಣ ಇಲ್ಲಿ ಎತ್ತಿರುವ ಪ್ರಶ್ನೆಗಳನ್ನೆಲ್ಲ ಸಾರಾಸಗಟಾಗಿ ತಿರಸ್ಕರಿಸದಿದ್ದರೂ ಮಾನವನ ಉಗಮವನ್ನು ಕ್ರೆಮೋ ಮತ್ತು ಥಾಮ್ಪ್‌ಸನ್ ೨೮೦೦ ದಶಲಕ್ಷ ವರ್ಷ ಹಿಂದಕ್ಕೆ ಒಯ್ಯುವುದನ್ನು ಸರ್ವಥಾ ಒಪ್ಪುವುದಿಲ್ಲ. ಭೂಮಿಯಲ್ಲಿ ಜೀವಿಯ ಉಗಮದ ಬಗ್ಗೆ ಪೃಥ್ವಿ ಪ್ರಾಥಮಿಕ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದ ಪ್ರಿಕೇಂಬ್ರಿಯನ್ ಕಲ್ಪದಲ್ಲಿ ಮೊದಲು ಕಾಣಿಸಿಕೊಂಡಿದ್ದು ಬ್ಯಾಕ್ಟರೀಯ ಮತ್ತು ಪಾಚಿಯಂತಹ ಕೆಳವರ್ಗದ ಜೀವಿಗಳೇ. ನಿಜವಾದ ಅರ್ಥದಲ್ಲಿ ಇವೇ ಜೀವದ ಉಗಮದ ಪ್ರಾರಂಭಿಕ ಪ್ರತಿನಿಧಿಗಳು. ಮನುಷ್ಯರಂತಿರಲಿ, ಕೆಳವರ್ಗದ ಜೀವಿಗಳು ಹುಟ್ಟುವ ಸುಳಿವೂ ಇರಲಿಲ್ಲ. ಆದ್ದರಿಂದ ಮನುಷ್ಯನ ಪ್ರಾಚೀನತೆಯನ್ನು ಆ ಕಾಲಕ್ಕೆ ಒಯ್ಯುವುದು ಅಪರಿಪಕ್ವತೆಯ ಸಂಕೇತ. ವಿಜ್ಞಾನಿಗಳು ಹೇಳುತ್ತಾರೆ ಈ ಕೃತಿಯನ್ನು ಓದುವುದು ಒಂದು ವಿಶಿಷ್ಟ ಅನುಭವವಾಗಬೇಕಾಗಿತ್ತು ಬದಲು ಪುಟಪುಟದಲ್ಲೂ ನಿರಾಶೆ ಎದುರಾಗುತ್ತದೆ. ವೇದಶಾಸ್ತ್ರದ ಹಿನ್ನೆಲೆ ಪಡೆದು ಪುರಾತತ್ತ್ವ, ಪ್ರಾಗ್ ಮಾನವ ಶಾಸ್ತ್ರ ಕ್ಷೇತ್ರಗಳಿಂದ ಅಸಂಗತ ಸಾಕ್ಷಿಗಳನ್ನು ಉಲ್ಲೇಖಿಸುತ್ತ ವಿಕಾಸವನ್ನು ವಿವರಿಸುವ ಪರಿ ಬಾಲಿಶವಾಗಿ ಕಾಣುತ್ತದೆ. ವಿಚಿತ್ರವೆಂದರೆ ಅತ್ಯಂತ ಕೌಶಲದಿಂದ ವಿಜ್ಞಾನಿಗಳ ಸಂಶೋಧನೆಗಳನ್ನು ಧಾರಾಳವಾಗಿ ಅಲ್ಲಲ್ಲಿ ಉಲ್ಲೇಖಿಸುತ್ತಾರೆ. ವಾಸ್ತವವಾಗಿ ವಿಜ್ಞಾನಿಗಳ ಮೂಲ ಆಶಯವನ್ನು ಇವರೇ ಬೇರೆಡೆಗೆ ತಿರುಗಿಸಿದ್ದಾರೆ. ಸಾಕ್ಷಿಗಳನ್ನು ಒದಗಿಸುವ ಅಮಿತೋತ್ಸಾಹದಲ್ಲಿ ಈ ಲೇಖಕರು ಎಲ್ಲೆಲ್ಲಿ ಮಾನವ ವಿಕಾಸದಲ್ಲಿ ವೈಪರೀತ್ಯ ಎಂಬ ನಿಲವು ತಳೆಯುತ್ತಾರೋ, ಅಂಥ ಸಂದರ್ಭಗಳಲ್ಲಿ ಇದು ಹೀಗಿರಬೇಕಿತ್ತು ಎಂದು ಪರ್ಯಾಯ ಸೂಚಿಸದೆ ತೇಲಿಸಿಬಿಡುತ್ತಾರೆ. ಇದೊಂದು ಅನುಕೂಲಸಿಂಧು ಸಾಹಿತ್ಯ. ನಿಜವಾಗಿ ಪುರಾತತ್ತ್ವ ಕ್ಷೇತ್ರಕ್ಕೆ ಹೊಸ ಕೊಡುಗೆ ಕೊಟ್ಟಿದೆಯೇ ಎಂದು ಒಳಹೊಕ್ಕು ನೋಡಿದರೆ ಈ ಲೇಖಕದ್ವಯರಿಗೆ ಪುರಾತತ್ತ್ವದ ಬಗ್ಗೆಯಾಗಲಿ, ಮಾನವ ಶಾಸ್ತ್ರದ ಬಗ್ಗೆಯಾಗಲಿ ಪ್ರಾಥಮಿಕ ತಿಳಿವಳಿಕೆಯೇ ಇಲ್ಲ.
೧೭೮೬-೮೮ರ ನಡುವೆ ಫ್ರಾನ್ಸಿನ ಸುಣ್ಣಶಿಲೆಯ ಗಣಿಯೊಂದರಲ್ಲಿ ಸುತ್ತಿಗೆ, ನಾಣ್ಯ ಹಾಗೂ ಇತರ ಮಾನವಕೃತ ವಸ್ತುಗಳು ದೊರೆತುವೆಂದು ೧೮೨೦ರ ‘ಅಮೆರಿಕನ್ ಜರ್ನಲ್ ಆಫ್ ಸೈನ್ಸ್’ ನಲ್ಲಿ ಪ್ರಕಟಿಸಲಾಗಿದೆ ಎಂದು ಇಲ್ಲಿ ಉಲ್ಲೇಖಿಸುತ್ತಾರೆ. ಅದಷ್ಟು ಮಾತ್ರಕ್ಕೆ ಮಹತ್ವ ಬರುತ್ತದೆಯೆ? ಇಂದು ಅಂಥ ಸಂಗತಿಗಳನ್ನು ಯಾವ ವಿಜ್ಞಾನ ಪತ್ರಿಕೆಗಳು ಪ್ರಕಟಿಸುತ್ತಿವೆ? ೧೮೦೦ರ ಸುಮಾರಿನಲ್ಲಿ ಇನ್ನೂ ಎಂಥೆಂಥ ಸುದ್ದಿಗಳೋ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದವು. ಸಾಗರಕನ್ಯೆ, ಸಮುದ್ರಸರ್ಪ, ನೀರು ಪತ್ತೆ ಮಾಡಲು ಬಳಸುತ್ತಿದ್ದ ಕವೆಕಡ್ಡಿ, ಇಂಥ ಸಂಗತಿಗಳಿಗೆಲ್ಲ ಪುಟ ಕೊಡುತ್ತಿದ್ದುದೂ ಉಂಟು. ಈಗ ಸಾಧ್ಯವೆ? ಜೀವಂತ ಏಪ್ ಮಾನವ ಎಂಬುದಕ್ಕೆ ಕೃತಿಯಲ್ಲಿ ಇಡೀ ಅಧ್ಯಾಯವನ್ನೇ ಮೀಸಲಾಗಿಟ್ಟಿದ್ದಾರೆ. ಬೃಹತ್‌ಪಾದಿ ಇರುವುದಾಗಿ ಈ ಲೇಖಕರು ಮತ್ತೆ ಮತ್ತೆ ವಾದಿಸುತ್ತಾರೆ. ಒಂದುವೇಳೆ ಇದ್ದರೂ ಮನುಷ್ಯನ ವಿಕಾಸ ಕುರಿತು ಅವು ಹೊಸ ಅಂಶವನ್ನು ಸಾರುತ್ತವೆಯೆ? ಇನ್ನು ೨೦೦ ಮಿಲಿಯನ್ ವರ್ಷಗಳ ಹಳೆಯ ಶಿಲೆಯಲ್ಲಿ ಬೂಟಿನ ತಳದ ಗುರುತು ಸಿಕ್ಕಿದೆ ಎಂದು ಬೊಟ್ಟುಮಾಡುವ ಈ ಲೇಖಕರಿಗೆ ಭೂವಿಜ್ಞಾನ ಅರ್ಥವಾಗಿಲ್ಲ. ಶಿಲೆಗಳು ಶಿಥಿಲಗೊಂಡರೆ ಎಂಥೆಂಥವೋ ಆಕೃತಿಗಳು ಮೈದಳೆಯುತ್ತವೆ. ಯಾವುದೋ ಕಲ್ಲು ಆನೆಯ ತರಹ ಕಾಣಿಸಬಹುದು, ತಿಮಿಂಗಿಲದ ತರಹ ಕಾಣಬಹುದು, ಮನುಷ್ಯ, ಬೆಕ್ಕಿನ ರೂಪದಲ್ಲೂ ಕಾಣಬಹುದು. ನಾವು ಚೋದ್ಯ ಪಡಬೇಕಾದುದು ನಿಸರ್ಗದ ಶಿಲ್ಪಕಲೆಗೆ. ಅವನ್ನು ತಪ್ಪಾಗಿ ಅರ್ಥೈಸಿದರೆ ಇಂಥ ಅಧ್ವಾನದ ವಿವರಣೆಯಲ್ಲಿ ಪರ್ಯಾವಸಾನವಾಗುತ್ತದೆ. ಈ ದಾಟಿಯಲ್ಲಿ ವಿಜ್ಞಾನಿಗಳ ಒಂದು ಬಣ ವಾದಿಸುತ್ತಿದೆ.
ಹಾಗಿದ್ದಲ್ಲಿ ಒಬ್ಬ ಸಾಮಾನ್ಯ ಓದುಗನಿಗೆ ಏನಿದೆ ಆಯ್ಕೆ? ಬಹುಶಃ ಹೀಗೆ ಕೇಳುವುದೇ ಅಬದ್ಧ ಎನ್ನಿಸುತ್ತದೆ. ಏಕೆಂದರೆ ಆಯ್ಕೆಗಳು ನೂರಾರಿವೆ. ಭಗವದ್ಗೀತೆಯನ್ನು ಓದಬಹುದು, ಬೈಬಲ್ಲನ್ನು ಓದಬಹುದು, ಕುರ್ ಆನ್ ಅನ್ನೂ ಓದಬಹುದು. ಡಾರ್ವಿನ್ನನ ವಿಕಾಸವಾದವನ್ನು ಓದಿ ತಲೆದೂಗಬಹುದು, ಸೃಷ್ಟಿವಾದಿಗಳ ವಾದಸರಣಿಯನ್ನು ಮೆಚ್ಚಬಹುದು. ಯಾವ ವಿಚಾರವನ್ನು ತರ್ಕಬದ್ಧವಾಗಿ ಮನಸ್ಸಿಗೊಪ್ಪುವಂತೆ ಪ್ರತಿಪಾದಿಸಲಾಗುತ್ತದೆಯೋ ಅಂಥವು ಬೇಗ ಮನದಾಳದಲ್ಲಿ ನೆಲೆಯಾಗಿಬಿಡುತ್ತವೆ. ಈ ಹಿನ್ನೆಲೆಯಲ್ಲಿ ‘ದಿ ಹಿಡನ್ ಹಿಸ್ಟರಿ ಆಫ್ ದಿ ಹ್ಯೂಮನ್ ರೇಸ್’ ಓದಬಹುದು. ಇಲ್ಲಿ ವೈಜ್ಞಾನಿಕ ಸಂಶೋಧನೆಗಳ ಉಲ್ಲೇಖವಿದೆ, ಚರಿತ್ರೆ ಇದೆ, ಮಾನವ ಶಾಸ್ತ್ರವಿದೆ, ಪುರಾತತ್ತ್ವವಿದೆ, ಭೂವಿಜ್ಞಾನವಿದೆ. ಆದರೆ ಇವು ಸ್ಪಂದಿಸುವ ಮಜಲುಗಳು ಮಾತ್ರ ಬೇರೆಯದೇ ಆಗಿದೆ. ‘ನೂರಾರು ಮತವಿಹುದು ಲೋಕದುಗ್ರಾಣದಲಿ, ಆರಿಸಿಕೋ ನಿನ್ನ ರುಚಿಗೊಪ್ಪುವುದನದರೊಳ್’ ಡಿ.ವಿ.ಜಿ. ಅವರ ಈ ಸಾಲುಗಳೇ ನಿಮ್ಮ ಓದಿನ ಆಯ್ಕೆಗೂ ಅನ್ವಯಿಸುತ್ತದೆ.
badge